ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 18, 2010

ಸೂರ್ಯ ನಿಷ್ಠೆ


ಸೂರ್ಯ ನಿಷ್ಠೆ

ಸಪ್ತಾಶ್ವದ ರಥವನೇರಿ
ಸೂರ್ಯನುದಿಸಿ ಬರುವ ವೇಳೆ
ಹಾಡೊಂದಕೆ ದೇಹರಚಿಸಿ
ಭಾವತುಂಬಿ ಜೀವಬಂತು
ನವನವೀನ ಕಲ್ಪನೆ ನೂರು ವಿಧದ ಯೋಚನೆ

ಸಕಲ ಜೀವರಾಶಿಗಳಿಗೆ
ಬದುಕನೀವ ಬೆಳಕನಿತ್ತು
ವ್ಯಥಿತ ಮನದ ವ್ಯಾಕುಲಗಳ
ಕಳೆವನಾತ ಮೌನದಲ್ಲಿ
ಚಕಿತರಾಗಿ ನೋಡಿರಿ ನಿಷ್ಠೆ ನೆನೆದು ನಲಿಯಿರಿ

ಕಾಯಿಸಲೋ ಬೇಯಿಸಲೋ
ಕೆಲಸ ಕಾರ್ಯ ನಡೆಯಿಸಲೋ
ಆತ ಬಾರದಿದ್ದರೊಮ್ಮೆ
ಬೆಳೆಯುತಿತ್ತೇ ಬದುಕುಬಳ್ಳಿ ?
ರವಿಯು ಇರದ ಜಾಗವು ರೋಗಗಳಿಗೆ ಹಾರವು

ರಜೆಯ ಹಾಕಲಿಲ್ಲ ಗೆಳೆಯ
ವಿಜಯನಗೆಯ ಬೀರಲಿಲ್ಲ !
ಸುಜನ ಕುಜನ ಭೇದ ಭಾವ
ಅಳವಡಿಸುತ ನಡೆಯಲಿಲ್ಲ
ಸರ್ವರಿಗೂ ಸರಿಸಮಾನ ತತ್ವದಲ್ಲಿ ಇರಿಸಿ ಗಮನ

ಬಾಡಿಗೆಯ ಕೊಡುವೆವೇನು ?
ಬಾಳತುಂಬ ಬೆಳಗುವುದಕೆ
ಹಾಳುಮನದ ನಮಗೆ ಒಮ್ಮೆ
ಸ್ಮರಿಸದಂಥ ನಂಜುನಮದು
ನಾಳೆಗಳನು ನಡೆಸಲು ನೆನೆಯಿರಿಂದು ಮನದೊಳು