ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, January 13, 2011

ನೀನಿಲ್ಲದೇ ನನಗೇನಿದೇ ?


ನೀನಿಲ್ಲದೇ ನನಗೇನಿದೇ ?

ಸೂರ್ಯನ ಮೇಲೊಂದು ಕವನ ಬರೆಯಲು ಹೊರಟೆ
ಆ ಯಾರಲ್ಲಿ ? ಪೆನ್ನು ಕಾಗದ ಕೊಂಡು ಬನ್ನಿ
ಯಾರೂ ಬರಲಿಲ್ಲ! ಅರ್ಥವಾಯಿತು ನಾನು ರಾಜನಲ್ಲವಲ್ಲ
ರಾತ್ರಿಯೂ ಸುಮಾರೇ ಆಗಿಹೋಗಿತ್ತು ಹೇಗೂ ಇದೆ
ನಾಳೆ ಬೆಳಿಗ್ಗೆ ಬರೆದರಾಯಿತೆಂದು
ಮುಸುಕೆಳೆದು ಮಲಗಿದರೆ ಬೆಳಿಗ್ಗೆ ಕೆಟ್ಟ ಚಳಿ
ಕಟಕಟ ಕಟಕಟ ಎನ್ನುವ ಹಲ್ಲುಗಳನ್ನು
ಹೊತ್ತು ಅದು ಹೇಗೆ ಬರೆಯಲಿ ?

ಬಂದೇ ಬಿಡುತ್ತಾನಪ್ಪ ಅಷ್ಟು ಬೇಗ
ಆತನಿಗೆ ಚಳಿಯೇ ಇಲ್ಲವೇ ?
ಚಾದರ ಕಂಬಳಿ ಯಾವುದೂ ಇಲ್ಲ
ಲುಂಗಿ ಉಟ್ಟಿದ್ದೂಕಾಣೆ ಅಂಗಿ ಹಾಕಿದ್ದೂ ಕಾಣೆ
ದುಂಡಗೇ ಇರುತ್ತಾನೆ
ಬೆಳಿಗ್ಗೆನೇ ಹೀಗೆ ಹೇಳಿದ್ದು ಕೇಳಿ
ಕೆಂಪಗೆ ಮುಖ ಊದಿಸಿಕೊಂಡ ಹಾಗಿದ್ದನಪ್ಪ !

ಹೊತ್ತಾಯಿತು ಇನ್ನಾದರೂ ಬರೆಯೋಣ
ಹತ್ತು ಹೋಗಿ ಹನ್ನೆರಡು ಹೊಡೆದರೂ
ಮತ್ತದೇ ಕೊಸರುವಿಕೆ: ಸ್ವಲ್ಪ ತಡೆದು ಬರೆಯುವ !
ತಲೆಬಾಗಿಲಲ್ಲಿ ನಿಂತು ನೋಡುತ್ತೇನೆ
ಆತ ನನ್ನನ್ನೇ ದಿಟ್ಟಿಸಿ ನೋಡುತ್ತಾ
ಮೇಲೆ ಮೇಲೆ ಬಂದು ಕೋಪದಿಂದ
ಬುಸುಗುಟ್ಟುವ ಹಾಗಿದ್ದ: ಬಾಯಿಕಾಣಲಿಲ್ಲ
ಹಲ್ಲೂ ತೋರಲಿಲ್ಲ ಕಣ್ಣು ದೊಡ್ಡದುಮಾಡಿದನೋ
ಚಿಕ್ಕದು ಮಾಡಿದನೋ ಕಣ್ಣಿದೆಯೋ ಇಲ್ಲವೋ
ಯಾವುದೂ ತಿಳಿಯದಾಯಿತಲ್ಲ !
ನನ್ನ ಕಣ್ಣುಮಾತ್ರ ಆತನನ್ನು ನೋಡದಾಯ್ತು!
ಹೋಗಲಿ ಬಿಡಿ ಇನ್ನೂ ಸಮಯವಿದೆ
ನಮಗೇನು ೩ ಘಂಟೆಯ ಪರೀಕ್ಷೆಯೇ ?



ಮೂಡು ಬರಲೇ ಇಲ್ಲ!
ಏನಂತ ಬರೆಯುವುದು ? ’ರೊಟ್ಟಿಯ ಹಾಗೇ
ಗುಂಡಗೆ ಇರುವ ಹಳದಿ ಬಣ್ಣದ’ ಎಂದಷ್ಟೇ
ಬರೆದಿದ್ದೆ ಮತ್ತೆ ಕಂಡೆ ಆತನ ಬಣ್ಣ ಕೆಂಪು!
ಈಗ ಆತ ನನಗೆ ಕಣ್ಣು ಬಿಟ್ಟು
ತನ್ನ ಕಣ್ಣೇ ನೋಯ್ದಾಗ ಸಣ್ಣಗಾಗಿ ಹೋಗಿದ್ದ
ಸಾಕು ಎಂದುಕೊಂಡು ದೂರ ಸಾಗುತ್ತಿದ್ದ
ಸೀತಾರಾಮ ಭಟ್ಟರ ತೋಟದ ಆಚೆ
ಶಂಕರ ಶೆಟ್ರ ಶೇಂಗಾ ಬೇಣದ ಇಳಿಜಾರ
ಸಂದಿಯಲ್ಲಿ ಮತ್ತೆ ಸಾಗುವಾನಿ ಮರಗಳ
ಗುಂಪಿನ ಹಿಂದೆ ಇಳಿದಿಳಿದು ಅಡಗುತ್ತಿದ್ದ!
ಅವಿತೂ ಕಂಡೂ ಕೂಕಿಯಾಡುತ್ತಿದ್ದ!
ಕವನ ಬರೆಯಬೇಕೆನ್ನುವಷ್ಟರಲ್ಲಿ
ಕೈಬೀಸಿದರೂ ನಿಲ್ಲದೇ ಓಡಿಹೋದ!
ಮತ್ತೆ ಆತನಿಲ್ಲದ ರಾತ್ರಿ ಅದುಹೇಗೆ ಬರೆಯಲಿ ?