ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, June 26, 2010

ಬಾಡೀ ಲ್ಯಾಂಗ್ವೇಜ್


ಬಾಡೀ ಲ್ಯಾಂಗ್ವೇಜ್

ಹಿಂದೊಮ್ಮೆ ಹೇಳಿದ್ದೆ, ಬಾಡೀ ಲ್ಯಾಂಗ್ವೇಜ್ ಬಹಳ ಮುಖ್ಯ ಎಂದು, ತಮಗೆಲ್ಲ ನೆನಪಿರಬಹುದು. ಇದನ್ನು ಸಹಜವಾಗಿ ತಿಳಿಯಬೇಕಾದರೆ ಟಿ.ವಿ ಪೋಗೋ ವಾಹಿನಿಯಲ್ಲಿ 'ಮಿಸ್ಟರ್ ಬೀನ್' ನ ಒಂದೆರಡು ಕಂತುಗಳನ್ನಾದರೂ ನೋಡಿ! ಅಲ್ಲಿ ಹಾಸ್ಯವೂ, ತರಲೆ ಪ್ಲಾನುಗಳೂ, ಜನಸಾಮಾನ್ಯನ ಮನಸ್ಸಲ್ಲಿ ಉದ್ಭವವಾಗುವ ಎಲ್ಲ ಮನೋ ತರಂಗಗಳು ಕಾಣಸಿಗುತ್ತವೆ! ಮನುಷ್ಯ ಇನ್ನೊಬ್ಬ ಅಥವಾ ಒಂದು ಜನರ ಗುಂಪಿನ ಮಧ್ಯೆ ತನ್ನ ಶಾರೀರಿಕ ಚರ್ಯೆಗಳಿಂದ ಮೇಲಾಗಿ, ಕೀಳಾಗಿ ಅಥವಾ ಸಮಾನವಾಗಿ ಕಾಣುತ್ತಾನೆ !

ಮುಖದ ಬಗ್ಗೆ ಕೂಡ ಹಿಂದೆ ಬರೆದಿದ್ದೇನೆ. ಮನುಷ್ಯನ ಯವ್ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು, ದೊಡ್ಡವರೆದುರು,ಚಿಕ್ಕವರೆದುರು, ಕಚೇರಿಯಲ್ಲಿ ತನಗಿಂತ ಉನ್ನತ ದರ್ಜೆಯಲ್ಲಿರುವವರೆದುರು, ಕಂಪನಿಯ ಮುಖ್ಯಸ್ಥರ ಎದುರು, ತನ್ನ ಕಂಪನಿಅಯನ್ನು ಪ್ರತಿನಿಧಿಸಿ ಬೇರೆ ಕಚೇರಿಗೆ ಹೋದಾಗ ಅವರೆದುರು ಹೀಗೇ ವಿವಿಧ ಸ್ಥಳ,ಕಾಲ,ದೇಶ,ಭಾಷೆ ಇವುಗಳನ್ನೆಲ್ಲ ನೋಡಿಕೊಂಡು ಅಲ್ಲಿಗೆ ತಕ್ಕುದಾಗಿ ನಡೆಯಲು ಶಾರೀರಿಕವಾಗಿ ನಮ್ಮ ಭಾವನೆಗಳನ್ನು ಮೂಕ ಅಭಿನಯದ ಮೂಲಕ ಅಭಿವ್ಯಕ್ತಗೊಳಿಸುವುದು ಬಾಡಿ ಲ್ಯಾಂಗ್ವೇಜ್.

ಇದನ್ನು ಅಭ್ಯಸಿಸಲು ಮೊದಲು ತುಂಬಾ ಸುಲಭ ಉಪಾಯವೆಂದರೆ ಮೂಕರೊಟ್ಟಿಗೆ ವ್ಯವಹರಿಸುವುದು. ಅಲ್ಲಿ ಅವರಿಗೆ ಅನೇಕ ಘಟನೆಗಳನ್ನು ವಿವರಿಸುವಾಗ ಹಲವು ರೀತಿಯ ಆಂಗಿಕಾಭಿನಯಮಾಡಿ ತೋರಿಸಬೇಕಾಗುತ್ತದೆ. ಚೂರು ತಪ್ಪಿದರೂ ಅವರಿಗೆ ಬೇರೆಯೇ ಆದ ರೀತಿಯಲ್ಲಿ ಅರ್ಥವಾಗಿರುತ್ತದೆ. ಹೀಗಾಗಿ ಬಹಳ ಕಾಳಜಿಯಿಂದ ವ್ಯವಹರಿಸಬೇಕಾಗುವುದರಿಂದ ಆ ಜವಾಬ್ದಾರಿಯೇ ಸಹಜವಾಗಿ ನಮಗೆ ಮೂಕಾಭಿನಯವನ್ನು ಅಥವಾ ಬಾಡಿ ಲ್ಯಾಂಗ್ವೇಜ್ ಅನ್ನು ಕಲಿಯಲು ಸಹಕಾರಿಯಾಗುತ್ತದೆ.

ಮನುಷ್ಯನಿಗೆ ದೇವರುಕೊಟ್ಟ ಅತ್ಯಪೂರ್ವ ಸಂಪರ್ಕ ಮಾಧ್ಯಮವೇ ಬಾಡಿಲ್ಯಾಂಗ್ವೇಜ್. ಕಣ್ಣು,ಮೂಗು,ಬಾಯಿ ಇವುಗಳ ಜೊತೆಗೆ ಕೈಗಳನ್ನೂ ಇನ್ನೂ ಕೆಲವೊಮ್ಮೆ ಕಾಲುಗಳನ್ನೂ ಸೇರಿಸಿ ಅಭಿನಯದ ಮೂಲಕ ಅಭಿವ್ಯಕ್ತಗೊಳಿಸಲ್ಪಡುವ ವಿಷಯಕ್ಕೆ ಯಾವುದೇ ಭಾಷೆಯ ಗಡಿಮಿತಿ,ಪರಿಮಿತಿ ಇಲ್ಲ. ಉದಾಹರಣೆಗೆ ನಿದ್ದೆ ಮಾಡು ಎನ್ನುವುದನ್ನು ತೋರಿಸುವಾಗ ಕೈಯನ್ನು ತಲೆಯ ಪಕ್ಕಕ್ಕೆ ಹಿಡಿದು ತಲೆಯನ್ನು ಕೈಯ ಮೇಲೆ ಆನಿಸಿತೋರಿಸುತ್ತೇವೆ, ಜಗತ್ತಿನ ಯಾವ ಮೂಲೆಗೆ ಹೋದರೂ ಇದೇ ಪದ್ಧತಿ ಬಳಸಲ್ಪಡುತ್ತದೆ.

ಅಳುವುದು, ನಗುವುದು, ಕೆಮ್ಮುವುದು, ಬಾಯಲ್ಲಿ ಕೈಯಿಟ್ಟು ಸೀಟಿಹಾಕುವುದು ಇವೆಲ್ಲ ಭಾಷೆಯನ್ನು ಆಧರಿಸದ ಪ್ರಕ್ರಿಯೆಗಳು. ಈ ಅಳು-ನಗುಗಳಲ್ಲೇ ವೈವಿಧ್ಯತೆ ಇದ್ದು ಅವುಗಳನ್ನೂ ಹತೋಟಿಯಲ್ಲಿಡಲು ಏನು ಮಾಡಬೇಕು ಎಂಬುದನ್ನು ಈ ಶರೀರ ಪ್ರಕ್ರಿಯಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಕೆಲವರು ಚಪ್ ಚಪ್ ಚಪ್ ಎಂದು ಶಬ್ಢಮಾಡುತ್ತ ತಿಂದುಂಡು ಮಾಡುತ್ತಾರೆ, ಇದು ನಾಗರಿಕ ಸಮಾಜದಲ್ಲಿ ಅಸಹನೀಯವೆನಿಸುತ್ತದೆ, ಕೆಲವರು ವಿಪರೀತ ಗೊರಕೆ ಹೊಡೆಯುತ್ತಾರೆ, ಕೆಲವರು ತಮ್ಮ ವಸ್ತುಗಳನ್ನು ಬೇರೆಯವರ ತಾಬಾ ವಹಿಸಿ ಬಹಳ ಹೊತ್ತು ಅವರು ಮರಳಿಬರುವುದೇ ಇಲ್ಲ, ಕೆಲವರು ಪಕ್ಕದ ಮನೆಯವರಿಗೆ ತೊಂದರೆಯಾಗುವಷ್ಟು ಸಂಗೀತದ ಧ್ವನಿಯನ್ನು ದೊಡ್ಡದಾಗಿಮಾಡಿ ಕೇಕೇ ಹಾಕುತ್ತಾರೆ, ಇನ್ನು ಕೆಲವರು ತಮ್ಮ ಮನೆಯ ನಾಯಿಯನ್ನು ಪಕ್ಕದ ಮನೆಯ ಗೇಟಿನ ಎದುರಿಗೆ ನಿಲ್ಲಿಸಿ ಮಲ-ಮೂತ್ರ ವಿಸರ್ಜಿಸಲು ಅನುಕೂಲ ಕಲ್ಪಿಸಿಕೊಡುತ್ತಾರೆ, ಕೆಲವರು ಸಂಜೆಯಾಯಿತೆಂದರೆ ಹತ್ತಿರದ ಮನೆಗಳಿಗೆ ಸಂಚಾರಹೊರಟು ದಿನಾ ಉಪದ್ರವ ಅಥವಾ ಉಪಗ್ರಹವಾಗಿ ಕಾಡುತ್ತಾರೆ! ---ಹೀಗೆಲ್ಲ ಹಲವು ಹತ್ತು ಆಭಾಸದ ಪ್ರಕ್ರಿಯೆಗಳು ನಮಗೆ ಅರಿಯದೇ ಸಮಾಜದಲ್ಲಿ ನಡೆದೇ ಇವೆ. ಮನುಷ್ಯ ಹೇಗಾದರೂ ಇರಬಹುದು ಬಿಡಿ ತೊಂದರೆ ಏನಿಲ್ಲ-ಅದು ಆತ ಹಳ್ಳಿಯಲ್ಲಿ ಅವನ ಸ್ವಂತದ ಜಮೀನಿನಲ್ಲಿ ಇರುವಾಗ, ಅವನದೇ ಮನೆಯಲ್ಲಿ ಅವನ ಹೆಂಡತಿ-ಮಕ್ಕಳು ಆತನ ಬೆವರಿನ ನಾತ ಸಹಿಸಲಾರರು, ಆತ ಕಂಡಲ್ಲಿ ಉಗುಳುವುದನ್ನು ಇಷ್ಟಪಡಲಾರರು, ಆತ ವಿನಾಕಾರಣ ಹರಿಹಾಯುವುದನ್ನು ನೆನಪಿಸಿಕೊಳ್ಳಲೂ ಆರರು!

ವ್ಯಕ್ತಿ ಅರಮನೆಯಲ್ಲಿ ಹೇಗಿರಬೇಕು, ಗುರುಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದೆಲ್ಲ ಒಂದು ತರ್ಕಬದ್ಧ ನಿರ್ಧಾರಿತ ವಿಷಯ. ಇದನ್ನೇ ಉದಹರಿಸುವುದಾದರೆ ನಮ್ಮ ಪೋಲೀಸಣ್ಣಗಳು ಎಲ್ಲಾದರೂ ಯಾರದರೂ ಮಡಿದ ಜಾಗಕ್ಕೆ ಬಂದರೆ ತಮ್ಮ ಟೋಪಿ ತೆಗೆಯುತ್ತಾರೆ-ಯಾಕೆಂದರೆ ಅದು ಅವರಿಂದ ಸತ್ತವರಿಗೆ ಸಿಗುವ ಗೌರವ! ಟಕ್ ಟಕ್ ಟಕ್ ಅಂತ ನಡೆದು ಬಂದು ಸೆಲ್ಯೂಟ್ ಹೊಡೆದು ಪುರಸ್ಕಾರ ಸ್ವೀಕರಿಸುತ್ತಾರೆ--ಅದು ಅಲ್ಲಿನ ಕರ್ತವ್ಯ ನಿಷ್ಠೆಯ ಪ್ರದರ್ಶನ.

ಇತ್ತೀಚೆಗೆ ಅಮೇರಿಕಾದಲ್ಲಿ ನ್ಯೂ ಈಯರ್ ದಿನ ನಮ್ಮ ಪುರೋಹಿತರಿಂದ ಶಾಲುಹೊದೆಸಿಕೊಂಡು ತೃಪ್ತಿಪಟ್ಟ ಅಮೇರಿಕಾ ಅಧ್ಯಕ್ಷ ಒಬಾಮಾ, ಭಾರತೀಯ ಸಂಜಾತರ ಸಂಸ್ಕೃತಿಗೆ ಮತ್ತು ಬಿಹೇವಿಯರಲ್ ಸೈನ್ಸ್ ಗೆ ಮಾರುಹೋದವರು! ಅಂದರೆ ನಮ್ಮಲ್ಲಿ ಉಚ್ಚಮಟ್ಟದ ಸಂಸ್ಕೃತಿ ಇದೆ-ಆದರೆ ನಾವು ಬಹುತೇಕರು ಅದನ್ನು ಅಳವಡಿಸಿಕೊಳ್ಳುತ್ತಿಲ್ಲ ಅಲ್ಲವೇ? ನಿಜವಾಗಿಯೂ ಇದು ಅಪ್ಪಟ ಸತ್ಯ, ಬಾಡೀ ಲ್ಯಾಂಗ್ವೇಜ್ ಅನ್ನುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ!

ಕೊಲೆಗಡುಕ ನಗುಮುಖವನ್ನು ಹೊತ್ತಿರುವುದಿಲ್ಲ, ನಗೆಹೊನಲಿನ ಮಧ್ಯೆ ಯಾರೂ ಅಳುತ್ತಕೂರುವುದಿಲ್ಲ, ಪೋಲೀಸಣ್ಣ ಕೆಂಗಣ್ಣು ಬಿಡದೇ ಇದ್ದರೆ ಕಳ್ಳನ ಬಾಯಿಂದ ಸತ್ಯಹೊರಬೀಳುವುದಿಲ್ಲ, ಬಾಂಬು ಹಾಕುವವರು ತಮ್ಮಲ್ಲಿ ಬಾಂಬಿದೆ ಎಂದು ಹೇಳುತ್ತ ತಿರುಗುವುದಿಲ್ಲ, ಮಂತ್ರಿಗಿರಿಯಲ್ಲಿರುವವರು ಸಾದಾ ಸೈಕಲ್ ನಲ್ಲಿ ಓಡಾಡುವುದಿಲ್ಲ, ಉಪಾಧ್ಯಾಯರು ಮರೆಗುಳಿಯಾಗಿರುವುದಿಲ್ಲ, ಜ್ಯೋತಿಷ್ಕರು ಪೆದ್ದರಾಗಿರುವುದಿಲ್ಲ ಇವೆಲ್ಲ ಅವರವರ ವೃತ್ತಿ ಅಥವಾ ಕೆಲಸಕ್ಕೆ ತಕ್ಕುದಾಗಿ ಅವರು ನಡೆಯುವ ರೀತಿಗಳು.

ವಿದ್ಯೆಗೆ ವಿನಯವು ಪೂರಕ ಅಥವಾ ತುಂಬಿದ ಕೊಡ ತುಳುಕುವುದಿಲ್ಲ ಎಂದು ನಾವು ಹೇಳುತ್ತೇವೆ-ಅರ್ಥ ಏನೆಂದರೆ ವಿದ್ಯೆ ಸರಿಯಾಗಿ ಕಲಿತವರು ವಿನಯವಂತರಾಗಿರುತ್ತಾರೆ. ಸಮರ್ಪಕವಾಗಿ ಕಲಿಸದ ಗುರುಗಳಿಂದ ಅಥವಾ ಸಂಸ್ಕಾರ ರಹಿತ ಗುರುಗಳಿಂದ ಪಡೆದ ವಿದ್ಯೆ ವಿನಯವನ್ನು ಕೊಡುವುದರ ಬದಲು ಇನ್ನೇನನ್ನೋ ಕೊಡುತ್ತದೆ. ಗುಣ-ಸ್ವಭಾವ ಒಳ್ಳೆಯದಾದರೆ ಅವರನ್ನು ತುಂಬಿದ ಬಿಂದಿಗೆಗೆ ಹೋಲಿಸುತ್ತಾರೆ-ತುಂಬಿದ ಬಿಂದಿಗೆ ತುಳುಕುವುದಿಲ್ಲ ಅದು ಅರ್ಧ ಅಥವಾ ಕಾಲುಭಾಗ ತುಂಬಿದ್ದರೆ ಆಗ ಎತ್ತಿಕೊಂಡು ಹೋಗುವಾಗ ತುಳುಕುತ್ತದೆ ಹೇಗೋ ಅದೇ ರೀತಿಯಲ್ಲಿ ಅಲ್ಪವನ್ನು ತಿಳಿದವ ಜ್ಞಾನಿಗಿಂತ ಮಿಗಿಲಾಗಿ ಆಡುತ್ತಾನೆ, ಜ್ಞಾನಿ ತಾನು ಬಹಳ ತಿಳಿದುಕೊಂಡವನೆಂದು ಬಡಾಯಿ ಕೊಚ್ಚಿಕೊಳ್ಳಲಾಗಲೀ, ಪ್ರದರ್ಶಿಸಲಾಗಲೀ ಹೋಗುವುದಿಲ್ಲ. ಕೆಲವೊಮ್ಮೆ ಕೆಲವರು ತಮ್ಮ ಢಾಂಬಿಕತೆಯನ್ನು ಹೊರಜಗತ್ತಿಗೆ ಪ್ರದರ್ಶಿಸುತ್ತಿರುತ್ತಾರೆ, ಅಲ್ಲಿ ಅವರ ನಡಾವಳಿಯನ್ನು ನೋಡಿದರೆ ಅವರೇನು ಕುಬೇರನ ಮಕ್ಕಳೇ ಇರಬೇಕೇನೋ ಎಂಬಂತಿರುತ್ತದೆ, ಅಸಲಿಗೆ ಮನೆಗೆ ಹೋದರೆ ಕುಳಿತುಕೊಳ್ಳಲು ಸರಿಯಾದ ಖುರ್ಚಿಗಳಿರುವುದಿಲ್ಲ! ಬೂಟಾಟಿಕೆಗಿಂತ ನೈಜ ಸ್ಥಿತಿಯಲ್ಲಿರುವುದು ಬಹಳ ಉತ್ತಮ ಮತ್ತು ಸಂತೃಪ್ತಿದಾಯಕ.

ಒಬ್ಬ ನಿಜವಾದ ಸಾಧುವನ್ನು, ಒಬ್ಬ ಸಹಜ ಸನ್ಯಾಸಿಯನ್ನು, ಒಬ್ಬ ನಿಜವಾದ ದೊಡ್ಡವ್ಯಕ್ತಿಯನ್ನು ಕಂಡಾಗ ನಮ್ಮ ಮನದೊಳಗೆ ನಮ್ಮ ಆಂತರ್ಯವೇ ಹೇಳಿಬಿಡುತ್ತದೆ---ಇವರು ನಿಸ್ಪೃಹರು, ಇವರು ಸದಾಚಾರಿಗಳು, ಇವರು ಗೌರವಿಸಲು ಯೋಗ್ಯರು--ಎಂದು ಅದು ನಿರ್ಧರಿಸಿಬಿಡುತ್ತದೆ. ಪ್ರತೀ ವ್ಯಕ್ತಿಯ ದೇಹದ ಹೊರಗೆ ನಮ್ಮ ಕಣ್ಣಿಗೆ ಕಾಣದ ಒಂದು ಪ್ರಭಾವಳಿ ಇದೆ, ಅದು ಪ್ರಕಾಶಮನ್ವಾಗಿರುತ್ತದೆ, ಅದರ ಗಾತ್ರ ಹೆಚ್ಚಿದ್ದಷ್ಟೂ ವ್ಯಕ್ತಿ ಬಹಳ ಎತ್ತರಕ್ಕೇರಿದವನು ಎಂದರ್ಥ, ಅದು ಕಮ್ಮಿ ಇದ್ದಷ್ಟೂ ವ್ಯಕ್ತಿ ಕೆಳಮಟ್ಟದವನು ಎಂದು ತಿಳಿಯಬೇಕು. ನಮ್ಮ ಜೀವ ವಿಜ್ಞಾನ ಇನ್ನೂ ಅದನ್ನು ಸಂಶೋಧಿಸುತ್ತಿದೆ ಆದರೆ ನಮ್ಮ ವೇದ ಅದನ್ನು ಪ್ರಸ್ತುತಪಡಿಸಿದೆ!ಈ ಪ್ರಭಾವಳಿ ನಮ್ಮ ಪೂರ್ವ ಜನ್ಮದ ಸುಕೃತದಿಂದ ಲಭಿಸಿರುತ್ತದೆ! ನಾವು ನಮ್ಮ ದೇಹ ಮತ್ತು ಮನಸ್ಸನ್ನು ಒಳ್ಳೆಯ ಸಂಸ್ಕಾರದವರಲ್ಲಿ ಪಳಗಿಸಿದರೆ ಅದು ಪಳಗಿಸಿದ ಆನೆಯಂತೆ ಒಂದು ಹದಕ್ಕೆ ಬರುತ್ತದೆ! ನಮ್ಮ ಸಮರ್ಪಕ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಸಮರ್ಪಕ ವ್ಯಕ್ತಿಗಳಿಂದ ಸರಿಯಾದ ಬಾಡೀ ಲ್ಯಾಂಗ್ವೇಜ್ ಹೊರಡುತ್ತದೆ!

ಒಬ್ಬ ಮುತ್ಸದ್ಧಿಯನ್ನು ಮಾತನಾಡಿಸಿ ನೋಡಿ ಅಬ್ಬಾ ಎಂತಹ ಮುತ್ಸದ್ಧಿ ಇನ್ನೊಮ್ಮೆ ಅವರೊಡನೆ ಮಾತಾಡಬೇಕು ಎನಿಸುತ್ತದೆ ಅಲ್ಲವೇ? ಅಲ್ಲಿಗೆ ಕಾರಣ ಇಷ್ಟೇ- ಆತ ಮುತ್ಸದ್ಧಿಯಾಗಿದ್ದು ಅವರ ಜ್ಞಾನಲಹರಿ ಅವರ ಭಾವಾಭಿನಯದೊಂದಿಗೆ ನಮ್ಮ ಶರೀರದ ಪ್ರಭಾವಳಿಯನ್ನೂ ಮೀರಿ ನಮ್ಮನ್ನು ತಲ್ಪಿದೆ, ಮಿಕ್ಕುಳಿದವರದ್ದು ಮೇಲಿಂದ ಮೇಲೆ ತೇಪೆ ಹಾಕಿದ ಹಾಗೇ ಇರುತ್ತದೆ!

ಕೆಲವರಿಗೆ ಎಲ್ಲಿ ಮಲಗಬಾರದು, ಯಾವುದರ ಮೇಲೆ ಕೂರಬಾರದು, ಯಾವುದನ್ನು ಮುಟ್ಟಬಾರದು, ಯಾವುದನ್ನು ಕೀಳಬಾರದು, ಯಾವುದನ್ನು ತುಳಿಯಬಾರದು ಇವೆಲ್ಲ ಅರಿವಿಗಿರುವುದಿಲ್ಲ, ರಸ್ತೆಯಲ್ಲಿ ನಡೆಯುವಾಗ ಪಿಚಕ್ ಪಿಚಕ್ ಅಂತ ಅಸಭ್ಯವಾಗಿ ಉಗುಳುವವರು,ಬಸ್ಸಿನಲ್ಲಿ ಕುಳಿತು ಕೆಳಗಡೆ ನೋಡದೇ ಪಕ್ಕದ ಕಿಟಕಿಯಲ್ಲಿ ಉಗುಳುವವರು, ರಸ್ತೆಯಲ್ಲಿ ಬಾಳೆಹಣ್ಣಿನ ಸಿಪ್ಪೆ ಬಿಸಾಡುವವರು, ಮೂಸಂಬಿ-ಕಿತ್ತಳೆ ಇತ್ಯಾದಿ ಹಣ್ಣು ತಿಂದಿ ಸಿಪ್ಪೆ ಎಲ್ಲೆಂದರಲ್ಲಿ ತೂರುವವರು, ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕಂಡಲ್ಲಿ ಬಿಸಾಡುವವರು, ಸಿಗರೇಟು-ಬೀಡಿಗಳನ್ನು ಬೆಂಕಿಸಮೇತ ಹಾಗೇ ಕಂಡಕಂಡಲ್ಲಿ ಬಿಸಾಡುವವರು ಈ ಥರ ಹಲವಾರು ವ್ಯಕ್ತಿಗಳನ್ನು ಕಾಣುತ್ತೇವಲ್ಲ, ಮಾತನಾಡಿದರೆ " ನಾವೇನಾದ್ರೂ ಮಾಡ್ಕೋತೀವಿ ನಿಮಗೇನೀವಾಗ? " ಅಂತ ಎಗರಿಬರುವವರಿಗೆ ಏನೆನ್ನಬೇಕು? ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಿ ಅಸಹ್ಯ ವಾಸನೆ ಹುಟ್ಟಿಸುವವರು ಹಲವರಿರುತ್ತಾರೆ. ಕೈಯ್ಯನ್ನು ತಲೆಯ ಹಿಂದಕ್ಕೆ ಕಟ್ಟಿ ಆಕಳಿಸುವವರು, ಟಪ್ ಟಪ್ ಟಿಪ್ ಎಂದು ಕೈಯ ನೆಟ್ಟಿಗೆ ತೆಗೆಯುವವರು ಅನೇಕರಿದ್ದಾರೆ. ಆದರೆ ಇವರಿಗೆಲ್ಲ ಯಾವ ಗುರು ಬೋಧಿಸಿದನೋ ಶಿವನೇ ಬಲ್ಲ!

ಒಳ್ಳೆಯದನ್ನು ತರುವ ಶರೀರ ಪ್ರಕ್ರಿಯೆಗಳನ್ನು ಸರಿಯಾದ ಗುರುವಿನಿಂದ ಅರಿಯೋಣ, ಜಗದಲ್ಲಿ ಒಳ್ಳೆಯ ವ್ಯಕ್ತಿತ್ವ ಪಡೆದು ಆದಷ್ಟು ಉನ್ನತಿಯನ್ನು ಪಡೆಯೋಣ ಎಂಬ ಸದಾಶಯದೊಂದಿಗೆ ಸದ್ಯಕ್ಕೆ, ಇಂದಿಗೆ ಈ ಲೇಖನದಿಂದ ಬೀಳ್ಕೊಡಲೇ ?