ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, November 26, 2011

ಶಿಖರಗಾಮಿಗಳ ಶಿಖರಗಮನದ ಶಕೆಯೊಳಕ್ಕೆ ಇಳಿದು


ಶಿಖರಗಾಮಿಗಳ ಶಿಖರಗಮನದ ಶಕೆಯೊಳಕ್ಕೆ ಇಳಿದು

ಒತ್ತಡದಲ್ಲಿ ಬರೆಯುವ ಮನಸ್ಸು ಕೆಲವೊಮ್ಮೆ ಬರುವುದೇ ಇಲ್ಲ; ಆದರೂ ಬರೆಯುವ ತೆವಲು ಕಮ್ಮಿಯಾಗುವುದಿಲ್ಲ. ಇದೊಂಥರಾ ಬಸ್ಸಿಗೆ ಹೋಗುವ ಮಲಬದ್ಧತೆ ಪ್ರಕೃತಿಯವರಿಗೆ ಆಗುವ ಸಂಕಟ ! ಇಷ್ಟಂತೂ ಸತ್ಯ, ಹೊರಗೆಹೋದಾಗ ಅವರಿಗೆಷ್ಟು ಖುಷಿಯಾಗುತ್ತದೋ ಅದರ ದುಪ್ಪಟ್ಟು ದಿಪ್ಪಟ್ಟು ಖುಷಿ ಬರೆದಾಗ ಆಗುತ್ತದೆ!ಆಮೇಲೆ ಒಂದಷ್ಟು ಹೊತ್ತು ಮನಸ್ಸು ಮತ್ತೆ ಬಸಿರುಗಟ್ಟುವವರೆಗೆ ನಿರಾಳ. ಇದ್ದಿದ್ದೇ ಬಿಡಿ ಮತ್ತದೇ ತೆವಲು, ಮತ್ತದೇ ಬರೆಯುವ ಗೋಳು ಗೀಳು ಎಲ್ಲಾ; ಬೀಡಿ ಚಟದವರಿಗೆ ಯಾವುದೂ ಸಿಗದಿದ್ದರೆ ಸೇದಿಬಿಸಾಕಿದ ಮೋಟು ಬೀಡಿಯಾದರೂ ಸರಿಯೇ ಅಂತೂ ಆ ಹೊತ್ತಿಗೆ ಆಗಬೇಕು; ಸಿಕ್ಕಿದ ಮೋಟುಬೀಡಿ ಕೊಡುವ ಚಣಕಾಲದ ಪರಮಾನಂದ ಸಿಕ್ಕುವ ತುಸುಸಮಯದ ಬರವಣಿಗೆ ಕೊಡುವ ಮಹದಾನಂದಂತೆಯೇ ಏನೋ. ಕೇಳಿ ಗೊತ್ತಷ್ಟೇ ಬಿಟ್ಟರೆ ಸದ್ಯ ಬೀಡಿ ಸಿಗರೇಟಿನ ’ಅಂಟುರೋಗ’ವಿಲ್ಲ; ಬಳಕೆ ಮಾಡಿಯೇ ಗೊತ್ತಿಲ್ಲ. ಅದಕ್ಕೇ ತಮಾಷೆಗೆ ಮಿತ್ರರೊಬ್ಬರು ಹೇಳುತ್ತಿದ್ದರು " ಸಿಗರೇಟು ಸೇದುವುದರಿಂದ ಹೊಟ್ಟೆಯೊಳಗಿನ ಕ್ರಿಮಿಗಳೆಲ್ಲಾ ನಾಶವಾಗುತ್ತವೆ " ಎಂದು ! ಆಂಗ್ಲ ಸಂಶೋಧಕರು ಅದನ್ನೂ ಒಂದು ದಿನ ಸಮ್ಮತಿಸಲೂ ಬಹುದು ಯಾರಿಗ್ಗೊತ್ತು ?

ನನ್ನ ಓದಿನ ಹರದಾರಿಯಲ್ಲಿ ಕರ್ನಾಟಕ ಸರಕಾರ ಪಠ್ಯವಾಗಿ ರೂಪಿಸಿದ ’ಶಿಖರಗಾಮಿಗಳು’ ಮಾತ್ರ ಮರೆಯಲಾಗದ ಉತ್ತಮ ಪುಸ್ತಕಗಳಲ್ಲಿ ಒಂದು. ಅದು ನೀಡಿದ ಕಿಕ್ಕು ಇಂದಿಗೂ ನೆನಪಾಗುತ್ತದೆ. ಮೊದಲೇ ನನಗೆ ಶಿಖರಗಳು ಅವುಗಳ ಮಜಲುಮಜಲುಗಳಲ್ಲಿ ಇರಬಹುದಾದ ಬಹುಥರದ ಜೀವಿಗಳು, ಅಲ್ಲಿನ ತರುಲತೆಗಳು, ಕಾಣಬಹುದಾದ ವಿವಿಧ ಆಕಾರಗಳು ಹೀಗೆಲ್ಲಾ ತಿಳಿಯಬೇಕೆಂಬ ಬಹುಮುಖದ ಆಸಕ್ತಿ. ಡಾಕ್ಟರು ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು ಅನ್ನೋ ಹಾಗೇ ನಾನು ಸಹಜವಾಗಿಯೇ ಓದಲು ಆಸೆ ಪಟ್ಟಿದ್ದ ಶಿಖರಗಳ ಕುರಿತಾದ ಕಿರು ಹೊತ್ತಗೆ ಅದಾಗಿತ್ತು. ನೀವೆಲ್ಲಾ ಸಾಧ್ಯವಾದರೆ ಓದಬೇಕು, ಕೆಲವರು ಓದಿರಲೂ ಸಾಕು. ಅದರಲ್ಲಿ ಹಿಲರಿ ಮತ್ತು ತೇನಸಿಂಗ್ ಇಬ್ಬರ ಮೌಂಟ್ ಎವರೆಸ್ಟ್ ಆರೋಹಣದ ಸಾಹಸಗಾಥೆಯನ್ನು ಸಾದ್ಯಂತ ವರ್ಣಿಸಲಾಗಿದೆ. ಮಾಗಿಯ ಚಳಿಯಲ್ಲಿ ಮಲೆನಾಡ ನೆಲದಲ್ಲಿ ಬಚ್ಚಲುಮನೆಯ ಒಲೆಯ ಮುಂದೆ ರಗ್ಗು ಹೊದೆದು ಕೂತು ಬಿಸಿ ಕಾಫೀ ಗುಟುಕರಿಸುತ್ತಾ ಅದನ್ನೇ ಪಕ್ಕವಾದ್ಯಗಳಂತೇ ಇಟ್ಟುಕೊಂಡು ’ಶಿಖರಗಾಮಿಗಳ’ನ್ನು ಓದುತ್ತಿದ್ದರೆ ಜಗತ್ತೆಲ್ಲಾ ಸುಂದರ, ಸುಮನೋಹರ!

ಮನುಷ್ಯರ ಜೀವನದಲ್ಲಿ ಅಂಥಾ ಸುಖವೆಂಬುದು ಬೇರೆಲ್ಲೂ ಇಲ್ಲ ಕಣ್ರೀ ! ಅದು ನಮ್ಮ ಮನೋಭಾವನೆಯ ಮೇಲೆ ಅವಲಂಬಿತವಾಗಿರ್ತದೆ. ಹತ್ತುಸಾವಿರ ಕೋಟಿ ಇದ್ದವನಿಗೂ ಹತ್ತೇ ರೂಪಾಯಿ ಇದ್ದವನಿಗೂ ಚಿಂತೆ ತಪ್ಪೋದಿಲ್ಲ; ಅದು ಮಾನವ ಜನ್ಮ ಸಹಜ. ಬುದ್ಧ ಹೇಳಿದನಂತೆ " ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ " ಅಂತ. ಹುಟ್ಟು-ಸಾವು ಹೇಗೆ ಸಹಜವೋ ಕಷ್ಟ-ಸುಖ-ಚಿಂತೆ-ನಿದ್ದೆ- ನೀರವ ಮೌನ-ದುಗುಡ-ಆಯಾಸ ಇವೆಲ್ಲವುಗಳೂ ಕೂಡ. ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಗೂ ಇವುಗಳ ಬಾಧ್ಯತೆ ತಪ್ಪಿದ್ದಲ್ಲ. ಎಂದಮೇಲೆ ಬದುಕಿನಲ್ಲಿ ಗೆಲುವಾಗಿರಲು ಕೆಲವು ಸಮಯ-ಸಂದರ್ಭಗಳನ್ನು ಬೇರೇಯವರಿಗೆ, ಜಗತ್ತಿಗೆ ತೊಂದರೆಯಾಗದ ರೀತಿಯಲ್ಲಿ ನಾವೇ ನಿರ್ಮಾಣಮಾಡಿಕೊಳ್ಳಬೇಕಾಗುತ್ತದೆ.’ ಇದು ಲೈಫ್ ಈಸ್ ಶಾರ್ಟ್ ಎಂಜಾಯ್ ಟು ದ ಬೆಸ್ಟ್’ ಹುಚ್ಚು ತತ್ವವಲ್ಲ, ಬದಲಾಗಿ ಹಂಚಿತಿನ್ನುವ, ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಸಾಮರಸ್ಯದೊಂದಿಗೆ ಊಟದಲ್ಲಿ ಉಪ್ಪಿನಕಾಯಿ, ಗೊಜ್ಜು, ಪಲ್ಯ, ಚಿತ್ರಾನ್ನ ತಿಂದ ಹಾಗೇ; ಇನ್ ಕಾಂಟ್ರಾಸ್ಟ್ ಇಲ್ಲಿ ವಿಕಾರವಿಲ್ಲ, ವಿಕಾರದಿಂದ ಹುಟ್ಟುವ ವಿನೋದವೂ ಇಲ್ಲ, ಜಗತ್ತು ಈ ನಮ್ಮ ನಡವಳಿಕೆಯಿಂದ ಹಾಳಾಗುವುದೂ ಇಲ್ಲ-ಇದು ಜಗವ ಕಟ್ಟಿದವರ ಮತ್ತು ಜಗವ ಕಟ್ಟುವವರ ಕಥೆ.

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ
ಜನರೆಲ್ಲರಾಗುಡಿಯ ಕೆಲಸದಾಳುಗಳು
ಮನೆಯೇನು ಮಠವೇನು ಹೊಲವೇನು ನೆಲವೇನು
ಎಣಿಸೆಲ್ಲವದೆಯದನು | ಮಂಕುತಿಮ್ಮ

ತಿಮ್ಮಗುರು ಹೇಳಿದ್ದಾರಲ್ಲ ..ಯೋಚಿಸಿ ನೋಡಿ : ಈ ಇಡೀ ಪ್ರಪಂಚದಲ್ಲಿ ಸದಾ ಎಲ್ಲೆಲ್ಲೂ ಏನೇನೋ ಕೆಲಸಗಳು ನಡೆಯುತ್ತಲೇ ಇರುತ್ತವೆ. ಇಡೀ ಪ್ರಪಂಚದ ಜನ ಒಂದೇ ದಿನವೆಂದು ಕರೆಯುವ ದಿನವೇ ಇಲ್ಲ ಯಾಕೆಂದು ನಿಮಗೇ ತಿಳಿದಿದೆ. ಒಪಕ್ಷ ಒಂದೇ ದಿನ ಎಂಬುದು ಸಿಕ್ಕಿತು ಎಂದುಕೊಳ್ಳಿ-ಎಲ್ಲರೂ ರಜೆಹಾಕಿ ಕೂತುಬಿಟ್ಟರೆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲ, ಹಾಲು-ಮೊಸರು ಇತ್ಯಾದಿ ನಿತ್ಯದ ಸಾಮಾನುಗಳು ಸಿಗುವುದಿಲ್ಲ ಅಥವಾ ಇನ್ನೂ ಏನೇನೋ; ಅದು ಊಹೆಗೇ ನಿಲುಕದ್ದು. ಕಟ್ಟುವವರು ಕಟ್ಟುತ್ತಾರೆ. ಕೆಲವರು ಗುಡಿ ಕಟ್ಟುತ್ತಾರೆ, ಇನ್ನು ಕೆಲವರು ಮಸೀದಿ ಕಟ್ಟುತ್ತಾರೆ, ಮತ್ತೆ ಕೆಲವರು ಇಗರ್ಜಿ ಕಟ್ಟುತ್ತಾರೆ, ಮತ್ತಿನ್ಯಾರೋ ಮನೆಕಟ್ಟುತ್ತಾರೆ, ಸರ್ಕಾರ-ಸಾರ್ವಜನಿಕ ಸಂಸ್ಥೆಗಳವರು ತಂತಮ್ಮ ಕಟ್ಟಡಗಳನ್ನೋ ಸೇತುವೆ, ಮೇಲ್ಸೇತುವೆಗಳನ್ನೋ ನಿರ್ಮಿಸುತ್ತಾರೆ. ಹಳತನ್ನು ಕೆಡವಿ ಮತ್ತೆ ಹೊಸತನ್ನು ಕಟ್ಟುತ್ತಾರೆ. ಹೊಲಿಗೆಯವರು, ವೈದ್ಯರು, ಬಡಗಿಗಳು, ಕಮ್ಮಾರರು, ಶಿಕ್ಷಕರು. ಬ್ಯಾಂಕ ನೌಕರರು ಹೀಗೇ ಅವರವರ ಉಪಜೀವನದ ದಂಧೆಗಳಲ್ಲಿ ಎಲ್ಲರೂ ನಿರತರಾಗಿರುತ್ತಾರೆ. ಹೀಗಾಗಿ ಎಲ್ಲವೂ ಆಗಿಬಿಡಲಿ ಆಮೇಲೆ ತಾನು ಆರಾಮಾಗಿ ಕೂತು ವಿರಮಿಸುತ್ತೇನೆ, ವಿಹರಿಸುತ್ತೇನೆ ಎಂದರೆ ಅದು ಸಾಧ್ಯವಾಗುವುದೇ ಇಲ್ಲ. ಮತ್ತೂರು ಕೃಷ್ಣಮೂರ್ತಿಗಳು ಹೇಳಿದ ಹಾಗೇ ಕಾಣದ ದೈವ ಕಷ್ಟವನ್ನೇ ಕೊಡುತ್ತಿದ್ದರೆ ಆ ಕಷ್ಟವೇ ಸುಖವೆಂದು ತಿಳಿದು ಅನುಭವಿಸುವ, ಅದರಲ್ಲೂ ಆನಂದ ಪಡುವ ಮನೋಭಾವ ಬರಬೇಕಾಗಿದೆ. ಒಮ್ಮೆ ಅದು ಬಂದರೆ ಅಂತಸ್ತಿನ/ ಡಂಬಾಚಾರದ /ಆಡಂಬರದ ಮಾನವರ ಬದುಕಿಗೊಂದು ನೆಲೆ ಸಿಗುತ್ತದೆ. ಓಹೋ ಅದಿಲ್ಲಾ ಇವತ್ತು ಓಹೋ ಇದು ಖಾಲಿಯಾಗಿದೆ, ಅಯ್ಯೋ ಡಿಸ್ಕೌಂಟ್ ಸೇಲು ನಾವು ಹೋಗುವವರೆಗೆ ಮುಗಿದೇ ಹೋಗುತ್ತದೆ, ಅವರಮನೇಲಿರೋ ಸ್ಕೋಡಾ ಕಾರಿಗಿಂತಾ ಉತ್ತಮವಾದ ಲೇಟೆಸ್ಟ್ ಮಾಡೆಲ್ ಕಾರನ್ನು ನಾವು ಖರೀದಿಸಬೇಕು---ಹೀಗೇ ಈ ರೀತಿಯ ಪಕ್ಕಾ ಲೌಕಿಕ ವ್ಯವಹಾರಗಳು ತಹಬಂದಿಗೆ ಬರುತ್ತವೆ.

ಇನ್ನೂ ಒಂದು ಮಾತು ನೆನಪಾಯ್ತು: ಸಿನಿಮಾ ಕವಿತೆಗಳನ್ನು ಬರೆದ ಕೆ.ಕಲ್ಯಾಣ್ ಒಬ್ಬ ಪುರೋಹಿತರ ಮಗ. ಸಿನಿಮಾ ಪ್ರಪಂಚದಲ್ಲಿ ಗುರುತಿಸಿಕೊಳ್ಳುವ ಮೊದಲು ಅವರ ಪಟ್ಟ ಪಾಡು ಅವರು ಹೇಳಿದ್ದು ಜ್ಞಾಪಕಕ್ಕೆ ಬರುತ್ತಿದೆ. ಮನೆಯಲ್ಲಿ ಬಡತನ. ಯಾರಲ್ಲೂ ಹೇಳಿಕೊಳ್ಳಲಾಗದ ಸಾಂಪ್ರದಾಯಿಕ ವ್ಯವಸ್ಥೆ, ಮೇಲಾಗಿ ಮಡಿ-ಆಚರಣೆ ಬೇರೆ. ಓರಗೆಯ ಹುಡುಗರು, ಸ್ನೇಹಿತರು ಎಲ್ಲಾ ಅಲ್ಲಲ್ಲಿ ಹೋಟೆಲ್‍ಗಳಲ್ಲಿ ಕೂತು ತಿಂಡಿ-ತೀರ್ಥ ನಡೆಸುತ್ತಿದ್ದರೆ ಕಲ್ಯಾಣ್‍ಗೆ ಮಾತ್ರ ಅದು ಸಾಧ್ಯವಿಲ್ಲ. ಅಪ್ಪನ ದುಡಿಮೆಯಲ್ಲಿ ಸಂಸಾರ ಸಾಗಿಸುವುದೇ ಕಷ್ಟ ಅಂಥದ್ದರಲ್ಲಿ ಹೋಟೆಲ್ಲು ಸಿನಿಮಾ ಅಂತೆಲ್ಲಾ ಖರ್ಚುಮಾಡಿದರೆ ಉಳಿಯಲು ಸಾಧ್ಯವೇ ? ಕಿಲೋಮೀಟರು ನಡೆದೇ ಹೋಟೆಲ್‍ಗೆ ಹೋಗುವುದು, ಅಲ್ಲಿ ನಿಂತು ಒಂದುಗ್ಲಾಸು ನೀರು ಪಡೆದು ಅದನ್ನೇ ಕಾಫೀ ಕುಡಿದ ಹಾಗೇ ಗುಟುಕರಿಸುವುದು; ಯಾಕೆಂದರೆ ಕಾಫಿಗೆ ಕಾಸಿಲ್ಲ! ಮನದಲ್ಲಿ ಮಾತ್ರ ಕಾಫಿ ಕುಡಿದ ಅದೇ ತೃಪ್ತಿ! ಆ ಭಾವವೇ ಕಲ್ಯಾಣ್ ಅವರನ್ನು ಭಾವುಕನನ್ನಾಗಿ ಹಾಡುಗಳನ್ನು ಬರೆಸಿತು. ಅದೇ ಭಾವ ಕಲ್ಯಾಣ್‍ಗೆ ವೃತ್ತಿಯೊಂದನ್ನು ಒದಗಿಸಿತು, ಅದೇ ಮುಂದೆ ಜೀವನಕ್ಕೆ ಆಧಾರವಾಯ್ತು. ಜೀವನ ಶಿಖರವನ್ನು ಹಂತಹಂತವಾಗಿ ಏರುವಾಗ ಎದುರಾಗಬಹುದಾದ ಅಡೆತಡೆಗಳನ್ನು ಹೇಗೆ ಸ್ವೀಕರಿಸಬೇಕು ಎಂಬುದಕ್ಕೆ ಈ ಮೇಲಿನ ಇಬ್ಬರ ಉದಾಹರಣೆಗಳು ಸಾಕು.

’ಶಿಖರಗಾಮಿಗಳ’ನ್ನು ಓದುವಾಗ ಶೆರ್ಪಾ ಜನಾಂಗ, ಯಾಕ್ ಪ್ರಾಣಿ, ಯೇತಿ ಎಂಬ ವಿಚಿತ್ರ ದೈತ್ಯ ಪ್ರಾಣಿ ಇವುಗಳ ವಿವರ ಸಿಗುತ್ತಾ ಹೋಗುತ್ತದೆ. ಅಂದಿನ ಆ ಕಾಲದಲ್ಲಿ ಮೌಂಟೇನೀಯರಿಂಗ್‍ಗೆ ಅಷ್ಟೊಂದು ಸೌಲಭ್ಯಗಳಾಗಲೀ ಸಲಕರಣೆಗಳಾಗಲೀ ಇರಲಿಲ್ಲ. ಇದ್ದುದರಲ್ಲೇ ಸಾಧಿಸುವ ಕಲೆ ಮಾತ್ರ ಜನರಿಗೆ ಗೊತ್ತಿತ್ತು. ಈ ಮಾತು ಹೇಳುವಾಗ ಹಳ್ಳಿಯ ವೈದ್ಯರುಗಳ ನೆನಪಾಗುತ್ತದೆ. ಇಂದು ನಗರ/ಪಟ್ಟಣಗಳಲ್ಲಿ ಹೊಟ್ಟೆನೋವು ಎಂದರೆ ಸಾಕು ರಕ್ತ, ಮಲ-ಮೂತ್ರದಿಂದ ಹಿಡಿದು ಎಲ್ಲಾ ಚೆಕ್-ಅಪ್ ಮಾಡಿಸಿ ಎಕ್ಸ್‍ರೇ, ಸ್ಕ್ಯಾನಿಂಗು ಹಾಳು ಮೂಳು ಅಂತ ಇಲ್ಲದ್ದನ್ನೆಲ್ಲಾ ಒಂದಾದಮೇಲೊಂದರಂತೇ ದಿಢೀರನೆ ಮಾಡಿಮುಗಿಸುತ್ತಾರೆ. ಅದೇ ಹಳ್ಳಿಯ ವೈದ್ಯರುಗಳು ಇವತ್ತಿಗೂ ಹೊಟ್ಟೆ ನೋವೆಂದು ಹೋದರೆ ರೋಗ ಲಕ್ಷಣಗಳನ್ನು ಅವಲೋಕಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ರೋಗಿಯನ್ನು ಚೆನ್ನಾಗಿ ಮಾತನಾಡಿಸಿ ಮೈದಡವಿ ಕಳುಹಿಸುತ್ತಾರೆ. ರೋಗಿಗೆ ಅರ್ಧ ಶೀಕು ಪರಿಹಾರವಾಗೋದೇ ವೈದ್ಯರ ಮಾತಿನ ಉಪಚಾರದಿಂದ! ಕಾಯಿಲೆಗಳ ತಾಯಿಬೇರು ಇರುವುದು ಮನೋರೋಗದಲ್ಲಿ. ಮನಸ್ಸಿನಲ್ಲಿ ರೋಗವಿಲ್ಲದಿದ್ದರೆ, ಮನಸ್ಸು ನಿಶ್ಕಲ್ಮಶವಾಗಿದ್ದರೆ ಮಾನವರಿಗೆ ರೋಗಗಳು ತೀರಾ ಕಮ್ಮಿ. ಆದರೆ ನೂರಕ್ಕೆ ಎಷ್ಟು ಜನ ನಿಶ್ಕಲ್ಮಶ ಮನದವರು? ಎಲ್ಲಾ ಎದುರಿಗೊಂದು ಹಿಂದೊಂದು! " ಊಟ ಚೆನ್ನಾಗಿತ್ತು " ಎಂದು ಹೊಗಳಿದ ಅದೇ ವ್ಯಕ್ತಿ ಆ ಕಡೆಗೆ ಹೋದ ಮೇಲೆ " ಅವರ ಮನೆಗೆ ಊಟಕ್ಕೆ ಹೋಗಿದ್ದೆ ಮಾರಾಯಾ ಊಟವಾ ಅದು ? " ಎನ್ನುತ್ತಾರೆ ! ಹೋಗ್ಲಿ ಬಿಡಿ. ಆಗೆಲ್ಲಾ ರೀಬುಕ್ ವುಡ್‍ಲ್ಯಾಂಡ್ ಕಂಪನಿಗಳ ಮೊಹರು ಹೊತ್ತ ಮೌಂಟೇನ್ ಶೂಗಳಿರಲಿಲ್ಲ. ಈಗ ನೋಡಿ : ನಡೆಯಲೊಂದು. ಓಡಲು ಇನ್ನೊಂದು, ಟ್ರೆಕ್ಕಿಂಗಿಗೆ ಮತ್ತೊಂದು, ಕೂತುಕೊಳ್ಳಲೂ ಇನ್ನೊಂದು, ಜಾಗಿಂಗಿಗೆ ಬೇರೇನೇ ಒಂದು, ಕಚೇರಿಗೆ ಹೊಸದೊಂದು, ಪಿಕ್ನಿಕ್ ಹೋಗಲು ವಿಭಿನ್ನವಾಗಿದ್ದೊಂದು --ಇದೆಲ್ಲದರ ಅವಶ್ಯಕತೆ ನಿಜವಾಗಿಯೂ ಇದೆಯೇ ? 'ಕುಣಿಯಲಾರದ ಸೂಳೆ ಅಂಗಳವೇ ಡೊಂಕು ಎಂದಳಂತೆ' ಎಂಬುದೊಂದು ಗಾದೆ. ಹಿಂದಕ್ಕೆ ಸೂಳೆಯರು ಮಾತ್ರ ಕುಣಿಯುತ್ತಿದ್ದರು. 'ಜೊಲ್ಲು' ಜೋರಾಗಿ ಹರಿಯುವವರು ನೋಡುತ್ತಿದ್ದರು! ಇವತ್ತೂ ಕುಣಿಯುವವರ ರೂಪ ಮತ್ತು ವೇಷಗಳಲ್ಲಿ ಬದಲಾವಣೆಯಾಗಿದೆ, ಆದರೆ ಸಾರ್ವಜನಿಕವಾಗಿ ಅದೂ ಸಿನಿಮಾರಂಗದಲ್ಲಿ ಕುಣಿಯುವ ಹೆಣ್ಣುಗಳಿಗೂ ಹಿಂದಿನ ಆ ಕುಣಿಯುವ ಜನಗಳಿಗೂ ಒಂದೇ ವ್ಯತ್ಯಾಸ ಎಂದರೆ ಅದು ಲೋ ಪ್ರೊಫೈಲು --ಇದು ಹೈಪ್ರೊಫೈಲು!

ಯೇತಿ ಎಂಬ ಅದ್ಭುತ ಮತ್ತು ವಿಚಿತ್ರ ಪ್ರಾಣಿಯ ಬಗ್ಗೆ ನೀವು ಕೇಳಿರಲೂ ಸಾಕು. ಕೆಲವರು ವಿಜ್ಞಾನಿಗಳೆಂದು ಬೋರ್ಡು ಹಾಕಿಕೊಂಡವರು ಯೇತಿಯ ಇರುವಿಕೆಯನ್ನೇ ಅಲ್ಲಗಳೆಯುತ್ತಾರೆ. ಆದರೆ ಯೇತಿ ಎಂಬ ಪ್ರಾಣಿ ಹಿಮಾಲಯದ ಶಿಖರಗಳ ನಡುವಿನ ತಪ್ಪಲುಗಳಲ್ಲಿ ಅಲ್ಲಲ್ಲಿ ವಾಸವಾಗಿದೆ. ಸುಮಾರಾಗಿ ಚಿಂಪಾಂಜಿಯನ್ನು ಹೋಲುವ ಈ ಪ್ರಾಣಿ ಮಾನವ ದೇಹಕ್ಕೆ ಹತ್ತಿರವಾದ ಹೋಲಿಕೆಯುಳ್ಳಂಥದು. ಎರಡೇ ಕಾಲಿನಲ್ಲಿ ಓಡಾಡುತ್ತದೆ, ಮರವೇರುತ್ತದೆ, ಬೆಟ್ಟ ಹತ್ತಿ-ಇಳಿಯುತ್ತದೆ. ಪರ್ವತಗಳಲ್ಲಿ ಇರುವ ಹಣ್ಣುಹಂಪಲುಗಳನ್ನು, ಕಾಯಿ-ಸೊಪ್ಪು ಮೊದಲಾದವನ್ನು ತಿಂದು ಬದುಕುತ್ತದೆ. ಕರಡಿಯಂತೇ ಮಾನವನನ್ನು ಕಂಡರೆ ದಾಳಿ ನಡೆಸಬಹುದು, ಆದರೆ ಮಾನವರಿಗೆ ಕಾಣಿಸುವುದು ಅಪರೂಪ ಎನ್ನುತ್ತಾರೆ ಶೆರ್ಪಾ ಜನಗಳು. ಅಲಲ್ಲಿ ಓಡಾಡುವಾಗ ಯೇತಿಯ ಲದ್ದಿಗಳನ್ನು ಕಾಣಬಹುದಾಗಿದೆ. ಸಿಳ್ಳೆ ಹಾಕುತ್ತಾ ಮೇಲಕ್ಕೆ ಹತ್ತಿ ಹೋಗುತ್ತಿದ್ದ ಯೇತಿಯೊಂದನ್ನು ದೂರದಿಂದ ಕಂಡಬಗ್ಗೆ ತೇನ್‍ಸಿಂಗ್ ಹೇಳಿದ್ದಾರೆ.

ಹಿಮಾಚ್ಛಾದಿತ ಹಿಮಾಲಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಇಂದಿಗೆ ನಾವು ಭಾಗ್ಯವಂತರು ಯಾಕೆಂದ್ರೆ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ ಮೊದಲಾದ ಚಾನೆಲ್‍ಗಳಲ್ಲಿ ಹಿಮಶಿಖರಗಳ ಬಗ್ಗೆ ಅಲ್ಲಿನ ಸಾಹಸಗಾಥೆಗಳ ಬಗ್ಗೆ ವಿಸ್ತೃತ ವರದಿಗಳನ್ನು ಕುಳಿತಲ್ಲೇ ನೋಡುತ್ತೇವೆ. ಹಿಮಕರಡಿ, ಹಿಮಕುರಿ, ಬಿಳೀ ಹುಲಿ ಇನ್ನಿತರ ಹಿಮಪರ್ವತನಿವಾಸಿ ಪ್ರಾಣಿಗಳನ್ನೂ ಅವುಗಳ ಜೀವನ ಶೈಲಿಯನ್ನೂ ತಿಳಿದುಕೊಳ್ಳುತ್ತೇವೆ. ಅಪರೂಪಕ್ಕೆ ಕಾಡಿಗೆ ಹೋದವರಿಗೆ ಎಲ್ಲಿ ಹುಲಿ ಬಂದೀತು ಎಂಬ ಭಯವಾಗುತ್ತದೆ. ಆದರೆ ಸ್ಥಾನಿಕವಾಗಿ ಅಲ್ಲಲ್ಲೇ ಬದುಕು ಕಟ್ಟಿಕೊಂಡಿರುವ ಜನರಿಗೆ ಅದು ವಿಶೇಷವೇ ಅಲ್ಲ. ಕಾಡಾನೆಗಳು ಬೆಂಕಿಗೆ ತುಂಬಾ ಹೆದರುತ್ತವೆ. ಹಲವು ಜನರಿಗೆ ಅವು ಬೆಂಕಿಗೆ ಹೆದರುತ್ತವೆ ಎಂಬ ಅಂಶ ತಿಳಿದಿಲ್ಲ! ಕೆಲವು ಹಿಲಾಲು ಹಿಡಿದು ಕೂಗಿದರೆ ಅವು ಹೆದರಿ ಓಡುತ್ತವೆ. ಇದೇ ರೀತಿ ಪ್ರತೀ ಜೀವಿಗೂ ಅದರದ್ದೇ ಆದ ಪ್ರಾಣಭಯವಿದೆ. ಅದರ ನಾಡಿಮಿಡಿತವನ್ನು ಅರಿತ ಜನ ಆಲ್ಲಲ್ಲಿನ ಪರಿಸರಕ್ಕೆ ಹೊಂದಿಕೊಂಡಿರುತ್ತಾರೆ.

ಹಿಮಾಲಯದ ಚಳಿಗೆ ಮೈಒಡ್ಡೀ ಒಡ್ಡೀ ರೂಢಿಯಾಗಿಹೋದ ಶೆರ್ಪಾ ಜನಗಳಿಗೆ ಅಂಥಾ ಜಾಕೀಟು ಪಾಕೀಟು ಇಲ್ಲದಿದ್ದರೂ ಅವರು ಇರಬಲ್ಲರು. ಭಾರದ ಮೂಟೆಗಳನ್ನು ಬೆನ್ನಮೇಲೇರಿಸಿಕೊಂಡು ಪರ್ವತಗಳ ಕಡಿದಾದ ಕಾಲು ದಾರಿಯಲ್ಲಿ ನಿರಾತಂಕವಾಗಿ ಸಾಗಬಲ್ಲರು. ಆಮ್ಲಜನಕದ ಕೊರತೆ ಬಾಧಿಸಿದರೂ ನಮ್ಮೆಲ್ಲರಿಗಿಂತಾ ಜಾಸ್ತಿ ಹೊತ್ತು ತಡೆದುಕೊಳ್ಳಬಲ್ಲರು. ಕಾಲಿಗೆ ಇಂಥಾದ್ದೇ ಬ್ರಾಂಡಿನ ಶೂ ಕೊಡಿ ಎಂದು ಕೇಳರು! ಒಟ್ಟಾರೆ ಹೇಳುವುದಾದ್ರೆ ಕಷ್ಟವಾನಿಗಳು. ಹುಟ್ಟಿದಾರಭ್ಯ ಪರ್ವತಗಳ ಮಗ್ಗುಲಲ್ಲೇ ಬೆಳೆಯುವುದರಿಂದ ಪರ್ವತಗಳನ್ನು ಏರುವ ಬಗ್ಗೆ, ಹಿಮಪಾತವಾಗುವ ಬಗ್ಗೆ, ಸಾಗುವಾಗ ತೆಗೆದುಕೊಳ್ಳಬೇಕಾದ ಜಾಗರೂಕತೆಯ ಬಗ್ಗೆ ಅವರಿಗೆ ಬಹಳ ಆಳವಾದ ಜ್ಞಾನವಿದೆ. ತಂತ್ರಜ್ಞನೊಬ್ಬ ತನ್ನ ಸಂದೇಶದಿಂದಲೋ, ಅಥವಾ ಯಾವುದೋ ಉಪಕರಣದಿಂದಲೋ ಯಂತ್ರಗಳನ್ನು ನಿಯಂತ್ರಿಸುವಂತೇ/ನಿರ್ವಹಿಸುವಂತೇ ತಮ್ಮ ಚಾಕಚಕ್ಯತೆಯಿಂದ ಪರ್ವತಾರೋಹಣ ನಡೆಸುವಾಗ ಪರ್ವತದೊಡನೆ ಅದರ ಭಾಗವೇ ಆಗಿಬಿಡುವ ಶೆರ್ಪಾಗಳಿಂದ ಮಾರ್ಗದರ್ಶನ ಪಡೆದರೆ ಶಿಖರಗಾಮಿಗಳಿಗೆ ಅನುಕೂಲವಾಗುತ್ತದೆ. ಅಂದಹಾಗೇ ತೇನ್‍ಸಿಂಗ್ ಕೂಡಾ ಒಬ್ಬ ಶೆರ್ಪಾ ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ಕೊರೆವ ಚಳಿ, ಬೀಸುವ ಕುಳಿರ್ಗಾಳಿ, ಜಾರುವ ಹಿಮಬಂಡೆಗಳ ನಡುವೆ ಏಗುತ್ತಾ ಏಗುತ್ತಾ ಸಾಗುವ ಹಾದಿಯಲ್ಲಿ ಬಿಡಾರ ಹೂಡುವುದು, ಗುಡಾರದ ಬಿಡಾರದಲ್ಲಿ ಅಗ್ಗಿಷ್ಟಿಕೆಯ ಮುಂದೆ ಕೂತು ಅದರ ಬಿಸಿಯನ್ನು ಅನುಭವಿಸುವುದು, ಅಲ್ಲೇ ಹಿತವಾಗುವಂತೇ ಚಹಾ ಕುಡಿಯೋದು, ಒಂದಷ್ಟು ಅಡಿಗೆಮಾಡಿ ತಿಂದು ರಾತ್ರಿ ಬೆಚ್ಚನ ಚೀಲಗಳೊಳಗೆ ಹುದುಗಿಕೊಂಡು ಮಲಗಿ ಬೆಳಿಗ್ಗೆಗಾಗಿ ಕಾಯುವುದು, ವಾತಾವರಣದ ವೈಪರೀತ್ಯವಿದ್ದರೆ ಅದರ ಅಂದಾಜು ತೆಗೆದು ಮುಂದಿನ ಸಾಗಾಟವನ್ನು ನಿರ್ಧರಿಸುವುದು, ನಿತ್ಯವೂ ೫-೬ ಕಿ.ಮೀ ಪ್ರಯಾಣಿಸಿ ಮತ್ತೆ ಅಲ್ಲಲ್ಲಿ ಲಂಗರುಹಾಕಿ ತಂಬು ಹೂಡುವುದು, ಅನಾರೋಗ್ಯ ಕಾಡಿದರೆ ಇದ್ದ ಪರಿಕರಗಳಲ್ಲೇ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಮಿಸುವುದು, ಹಿಂದೆ ಹೋಗಿದ್ದ ಶಿಖರಗಾಮಿಗಳ ರೋಚಕ ಕಥೆಗಳನ್ನು ಇಂಚಿಂಚಾಗಿ ತಿಳಿದು ಅಂಥದ್ದೇ ಕೆಲವು ಸನ್ನಿವೇಶಗಳನ್ನು ನಿಭಾಯಿಸುವುದು....ಒಂದಲ್ಲಾ ಎರಡಲ್ಲಾ.

ಶಿಖರವನ್ನೇರಿ ಇನ್ನೇನು ತುತ್ತ ತುದಿ ತಲುಪುವಾಗಿನ ಅಸದೃಶ, ಅದಮ್ಯ ಅನುಭವ ನಿಜಕ್ಕೂ ಅವರ ಮಾತುಗಳಲ್ಲೇ ಕೇಳಬೇಕಾದ್ದು. ಬಹುಶಃ ಜಗತ್ತನ್ನೇ ಗೆದ್ದರೂ ಸಿಗದ ಸಂತೋಷ ಎವರೆಸ್ಟ್ ಶಿಖರವನ್ನು ಪೂರ್ತಿಯಾಗಿ ಏರಿದವರಿಗೆ ಸಿಗುತ್ತದೆ ಅನಿಸುತ್ತದೆ. ಯಾವುದೋ ಚಿಕ್ಕ ಸಾಮಾನ್ಯ ಬೆಟ್ಟವನ್ನೇರಿದ ನಮ್ಮ ಆನಂದವನ್ನೇ ನಾವು ಛಾಯಾಚಿತ್ರಗಳಲ್ಲಿ ಸೆರೆಹಿಡಿದು, ಅವುಗಳನ್ನು ಅಂತರ್ಜಾಲದ ಮೂಲಕವೋ ಆಲ್ಬಮ್ಮುಗಳ ಮೂಲಕವೋ ಸ್ನೇಹಿತರುಗಳಿಗೆ ತೋರಿಸುತ್ತಾ ಹೇಳಲಾಗದ ಖುಷಿಯನ್ನು ಅನುಭವಿಸುತ್ತೇವೆ ಎಂದಮೇಲೆ ಅಂತಹ ಎತ್ತರದ ಶಿಖರದ ತುತ್ತ ತುದಿಯಮೇಲೆ ನಿಂತು ಸುತ್ತಲ ಜಗತ್ತನ್ನು ನೋಡಿದಾಗ ಅವರಿಗೇನನ್ನಿಸಿರಬಹುದು? ಕಣ್ಣಿಗೆ ಕಾಣುವಷ್ಟು ದೂರ ಅವರಿಗೆ ಏನು ಕಾಣಿಸಿರಬಹುದು ? ಪರ್ವತವನ್ನೇರಿ ಮುಗಿದು ತಿರುಗಿ ಕೆಳಗಿಳಿದಾದಮೇಲೆ ಪರಸ್ಪರರನ್ನು ಬೀಳ್ಕೊಡುವಾಗ ಅಷ್ಟುದಿನ ಒತ್ತಟ್ಟಿಗೆ ಇದ್ದ ಅನುಭವ ಪ್ರಾಯಶಃ ಒಂದೇ ಶಾಲೆಯಲ್ಲಿ ಒತ್ತಟ್ಟಿಗೇ ಬಹುಕಾಲ ಕಲಿತು ಮುಂದಿನ ಓದಿಗಾಗಿ ದೂರವಾಗುವ ಸಹಪಾಠೀ ಸ್ನೇಹಿತರುಗಳ ಮನದಲ್ಲಿನ ಅಗಲಿರಲಾರದ ಭಾವ ಇರಬಹುದೇ? ಮನೆಗೆ ಹಿಂದಿರುಗಿ ವರ್ಷಗಳು, ದಶಕಗಳು ಕಳೆದಾದಮೇಲೊಂದು ದಿನ ನೆನಪಾದಾಗ ಆ ಭಾವ ಹೇಗಿರಬಹುದು ? ಅದೊಂದು ಅನಿರ್ವಚನೀಯ ಆನಂದವಲ್ಲವೇ ? ತೇನ್‍ಸಿಂಗ್ ಅದೇ ಭಾವದಲ್ಲಿ ಕೊನೆಯವರೆಗೂ ಇದ್ದರು. ಅಂತರ್ಜಾಲವಿಲ್ಲದ ಆ ಕಾಲದಲ್ಲಿ ನಾವೆಲ್ಲಾ ಸೇರಿ ನಮ್ಮ ಶಿಕ್ಷಕರೊಬ್ಬರ ಸಹಾಯದೊಂದಿಗೆ ತೇನ್‍ಸಿಂಗ್ ವಿಳಾಸ ಹುಡುಕಿ ಪತ್ರಿಸಿದ್ದೆವು. ಮರಳಿ ಉತ್ತರ ಕಳುಹಿಸಿದ ಪುಣ್ಯಾತ್ಮ ಜೊತೆಗೆ ತಮ್ಮ ಒಂದು ಪಾಸ್‍ಪೋರ್ಟ್ ಫೋಟೋ ಕೂಡ ಕಳಿಸಿದ್ದರು! ಆ ದಿನಗಳನ್ನು ನೆನೆಸಿಕೊಂಡಾಗ ಮತ್ತೆ ಹೈಸ್ಕೂಲಿಗೆ ಹೋಗುವ ಮನಸ್ಸಾಗುತ್ತದೆ, ’ಶಿಖರಗಾಮಿಗಳ’ನ್ನು ಓದುವ ಬಯಕೆ ಮೂಡುತ್ತದೆ, ಪರ್ವತಗಳು ದೂರದಲ್ಲಿ ನಿಂತು " ಬಾ " ಎಂದವೇನೋ ಎಂಬ ಪರ್ವತಾರೋಹಣದ ಹುಚ್ಚು ಒಮ್ಮೆನೋಡಿಬಿಡುವಾ ಎಂಬ ಮನೋಗತ ಕುದುರೆಯನ್ನೇರಿಬಿಡುತ್ತದೆ! ಅಷ್ಟಕ್ಕೂ ಪ್ರಕೃತಿಯ ಮುಂದೆ ಅದರ ಸೌಂದರ್ಯ ಸಿರಿಯ ಮುಂದೆ ಹುಲುಮಾನವ ಯಾವ ಲೆಕ್ಕ ಅಲ್ಲವೇ ? ನಮಸ್ಕಾರ.