ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 21, 2013

ಗಾಯತಿ ವನಮಾಲೀ ಮಧುರಂ....

ಚಿತ್ರಗಳ ಋಣ : ಅಂತರ್ಜಾಲ 
ಗಾಯತಿ ವನಮಾಲೀ ಮಧುರಂ....
                                             
ನಗ್ನಬೈರಾಗಿಯೊಬ್ಬ ಆ ಪ್ರದೇಶದಲ್ಲಿ ಕಾಣಿಸಿಕೊಂಡು ಮುಸ್ಲಿಂ ನವಾಬನ ಅಂತಃಪುರಕ್ಕೆ ನುಗ್ಗಿಬಿಟ್ಟ. ಅಂತಃಪುರದ ಕಾವಲುಗಾರರು ನೋಡನೋಡುತ್ತಿರುವಂತೆಯೇ ಆತ ಅಂತಃಪುರದಲ್ಲೆಲ್ಲಾ ಸುತ್ತುತ್ತಲೇ ಇದ್ದ. ಸುದ್ದಿ ತಿಳಿದ ನವಾಬ, ತನ್ನ ಕಾವಲುಗಾರರಿಗೆ ಆತನನ್ನು ತಡೆದು ನಿಲ್ಲಿಸಿ ಶಿಕ್ಷಿಸಲು ಹೇಳಿದ. ನವಾಬನ  ಕಾವಲುಪಡೆಯವರು ನಗ್ನಸಂನ್ಯಾಸಿಯನ್ನು ಬೆನ್ನಟ್ಟಿ ಕೈಗಳನ್ನು ಕತ್ತರಿಸಿಹಾಕಿದರು. ಅಷ್ಟಾದರೂ ತಟ್ಟಿಸಿಕೊಳ್ಳದ ನಗ್ನ ಸಂನ್ಯಾಸಿ ಜನಾನಾದಲ್ಲಿ ಈಕಡೆಯಿಂದ ಆಕಡೆಗೂ ಆ ಕಡೆಯಿಂದ ಈ ಕಡೆಗೂ ಸುತ್ತುತ್ತಿರುವಾಗ ನವಾಬನಿಗೆ ಬಹಳ ವಿಚಿತ್ರವಾಗಿ ಕಂಡಿತು. ತುಂಡಾಗಿ ಕೆಳಗೆ ಬಿದ್ದಿದ್ದ ಕೈಗಳನ್ನು ಸ್ವತಃ ನವಾಬನೇ ಎತ್ತಿತಂದು ಸಂನ್ಯಾಸಿಯ ಮುಂದೆ ಹಿಡಿದು ತೆಗೆದುಕೊಳ್ಳುವಂತೇ ವಿನಂತಿಸಿದ. ನಗ್ನಸಂನ್ಯಾಸಿ ಕೈಗಳನ್ನು ತೆಗೆದುಕೊಂಡು ಅವುಗಳ ಜಾಗಗಳಲ್ಲಿ ಇಟ್ಟುಕೊಳ್ಳುತ್ತಿರುವಂತೆಯೇ ಅವು ಮೊದಲಿನಂತಾದವು! ಮಾತಿಲ್ಲ ಕತೆಯಿಲ್ಲ-ಸಂನ್ಯಾಸಿ ಹೊರಟೇ ಹೋದ!!

ಬ್ರಹ್ಮಜ್ಞಾನಿಯಾದಾತನಿಗೆ ಎಲ್ಲವೂ ಬ್ರಹ್ಮಮಯವೇ ಹೊರತು ಅಲ್ಲಿ ಜಾತಿ-ಮತ-ಪಂಥ-ಪ್ರಾಣಿ-ಪಕ್ಷಿ-ಕಲ್ಲು-ನೆಲ್ಲುಗಳೆಂಬ ಭೇದವೇ ಇರುವುದಿಲ್ಲ! ಎಲ್ಲೆಂದರಲ್ಲಿ ಅಲೆದಾಡುತ್ತಿದ್ದ ಸದಾಶಿವ ಬ್ರಹ್ಮೇಂದ್ರರನ್ನು ಕೆಲವುಕಾಲಾನಂತರ ಜನ ಮರೆತುಬಿಟ್ಟರು ಎಂದುಕೊಳ್ಳುವಾಗಲೇ ಮೇಲಿನ ಘಟನೆ ನಡೆಯಿತಂತೆ!! ಶೀರ್ಷಿಕೆಗೂ-ಬ್ರಹ್ಮಜ್ಞಾನಿಗೂ-ನಗ್ನ ಸಂನ್ಯಾಸಿಗೂ-ನೀವೀಗ ಓದುತ್ತಿರುವ ಕಥೆಗೂ ಏನು ಸಂಬಂಧವೆಂದು ತಿಳಿದುಕೊಳ್ಳಬೇಕಾದರೆ ಲೇಖನದ ಕೊನೆಯಸಾಲಿನವರೆಗೂ ಪೂರ್ವಾಗ್ರಹವಿಲ್ಲದ ನಗ್ನಮನಸ್ಸಿನಿಂದ ನೀವು ನಡೆದು ಬರುತ್ತೀರಿ!  

ಶುದ್ಧಸಾವೇರಿ ರಾಗದಲ್ಲಿ ಗಾಯಕಿ ವಾರಿಜಶ್ರೀಯವರು ಹಾಡಿದ ಹಾಡನ್ನು ಕೇಳಲು ಆರಂಭಿಸಿದಾಗ ಆಗಿನ್ನೂ ಬೆಳಗಿನ ಪೂಜೆಯನ್ನು ಮುಗಿಸಿದ್ದ ನಾನು ಧನ್ಯಾಲೋಕದಲ್ಲಿ ವಿಹರಿಸತೊಡಗಿದ್ದೆ! ಭಕ್ತಿರಸ ಉಕ್ಕಿ ಹರಿಯುವ ಕೆಲವು ರಾಗಗಳು ಮತ್ತು ಅವುಗಳನ್ನು ತಮ್ಮ ಧ್ವನಿಯಲ್ಲಿ ಧೇನಿಸುವ ಕೆಲವು ಸಿರಿಕಂಠಗಳಿಗೆ  ಪರಮಹಂಸರಾಗಿಯೇ ಜನಿಸಿದ ಜನ ಸಾಹಿತ್ಯವನ್ನೊದಗಿಸಿದರೆ ಅದು ನಿಜಕ್ಕೂ ಪಾಯಸಕ್ಕೆ ಕಲ್ಲುಸಕ್ಕರೆ ಹಾಕಿ ತಿನ್ನುವ ರಸದೌತಣ; ಸನ್ನಿವೇಶ ಹೇಗಿದೆಯೆಂದರೆ ರಾಗವನ್ನು ಹೊಗಳಬೇಕೋ, ರಾಗದ ಭೋಗವನ್ನುಣಿಸುವ ಸಂಗೀತಗಾರರ ಕಂಠವನ್ನು ಶ್ಲಾಘಿಸಬೇಕೋ ಅಥವಾ ಶ್ರೇಷ್ಠ ಸಾಹಿತ್ಯವನ್ನೊದಗಿಸಿದ ಮಹಾಪುರುಷರನ್ನು ಸ್ಮರಿಸಿ ನಮಸ್ಕರಿಸಬೇಕೋ ತಿಳಿಯದ ಅತ್ಯಾನಂದದ ಸಮಯ. ಹಾಡುಗಳದೆಷ್ಟು ಕೋಟಿಗಳಿವೆಯೋ ಲೆಕ್ಕಕ್ಕಿಲ್ಲ. ಆದರೆ ಇರುವ ಹಾಡುಗಳ ಸಾಹಿತ್ಯಕ-ಸಾಂಸ್ಕೃತಿಕ-ಸಾಂಸಾರಿಕ-ಸಾಂಗತ್ಯಕ-ಸಾರಸ್ವತಿಕ-ಸಾತ್ವಿಕ ಗುಣಮಟ್ಟಗಳಲ್ಲಿ ವ್ಯತ್ಯಾಸವಿದೆ. ಅದ್ಭುತ ಪದಪುಂಜಗಳನ್ನೊಳಗೊಂಡ ಹಾಡುಗಳು ಸಾಹಿತ್ಯಕವಾಗಿ ಎಷ್ಟೇ ಚೆನ್ನಾಗಿದ್ದರೂ ಸಾಂಸ್ಕೃತಿಕವಾಗಿ ಉತ್ತಮವಾಗಿವೆ ಎನ್ನಲು ಸಾಧ್ಯವಾಗುವುದಿಲ್ಲ. ಉನ್ನತ ಮನಸ್ಕರ ಉತ್ತಮ ಮನೋಜವದಲ್ಲಿ ಹುಟ್ಟಿದ ಸಾಹಿತ್ಯಕ್ಕೊಂದು ವಿಶಿಷ್ಟ ಶಕ್ತಿ ಇರುತ್ತದೆ. ಅಂತಹ ಹಾಡುಗಳನ್ನು ಸಂಸ್ಕೃತಭಾಷೆಯಲ್ಲಿ ನಮಗೆ ಕರುಣಿಸಿದವರು ಅವಧೂತ ಶ್ರೀ ಸದಾಶಿವ ಬ್ರಹ್ಮೇಂದ್ರರು.

ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಕೆಲವರು ಇನ್ನೂ ಬದುಕಿದ್ದ 17-18ನೇ ಶತಮಾನದಲ್ಲೇ ತಮಿಳುನಾಡಿನ ತಿರುವಿಸೈನಲ್ಲೂರಿನಲ್ಲಿ, ಮೋಕ್ಷಸೋಮಸುಂದರ ಅವಧಾನಿ-ಪಾರ್ವತಿ ದಂಪತಿಯ ಮಗನಾಗಿ ಜನಿಸಿ, ಶಿವರಾಮಕೃಷ್ಣನೆಂಬ ಜನ್ಮನಾಮವನ್ನು ಪಡೆದುಕೊಂಡಿದ್ದ ಸದಾಶಿವ ಬ್ರಹ್ಮೇಂದ್ರರಿಗೆ ಎಳವೆಯಲ್ಲೇ ಬ್ರಹ್ಮಾನಂದದೆಡೆಗೆ-ಪಾರಮಾರ್ಥದೆಡೆಗೆ ಒಲವು. ಸಂಪ್ರದಾಯ ಶರಣ ಕುಟುಂಬದ ಅಂದಿನಕಾಲಘಟ್ಟದ ಆಚಾರದಂತೇ 17ನೇ ವಯಸ್ಸಿಗೇ ಮದುವೆಯಾಗಿ, ಮುಂದಿನ ತನ್ನ ಬದುಕನ್ನು ಕೊಂಭಕೋಣಂನಲ್ಲಿ ಕಳೆಯತೊಡಗಿದ ಅವರಿಗೆ ಐಹಿಕ ಸುಖೋಪಭೋಗಗಳಲ್ಲಿ ಆಸಕ್ತಿಯೇ ಇರಲಿಲ್ಲ. ಸಂಸಾರವನ್ನಿಷ್ಟಪಡದೇ ಮನೆಯನ್ನು ತೊರೆದ ಅವರು ಕಾಂಚೀಪುರವನ್ನು ಸೇರಿ ಅಲ್ಲಿದ್ದ ಉಪನಿಷತ್ ಬ್ರಹ್ಮ ಮಠದ ಶ್ರೀ ಪರಮಶಿವ ಬ್ರಹ್ಮೇಂದ್ರ ಸರಸ್ವತೀ ಸ್ವಾಮಿಗಳ ಶಿಷ್ಯರಾದರು. ಅವರಲ್ಲೇ ಸಂನ್ಯಾಸದೀಕ್ಷೆ ಸ್ವೀಕರಿಸಿದ ಶಿವರಾಮಕೃಷ್ಣ ಸದಾಶಿವ ಬ್ರಹ್ಮೇಂದ್ರರೆಂಬ ದೀಕ್ಷಾನಾಮವನ್ನು ಪಡೆದರು. ಕಾಲಾನಂತರ ನಗ್ನವಾಗಿ ಅಥವಾ ಅರೆನಗ್ನವಾಗಿ ಎಲ್ಲೆಂದರಲ್ಲಿ ಅಲೆದಾಡುತ್ತಾ, ಧ್ಯಾನದಲ್ಲಿ ಲೀನವಾಗುತ್ತಾ ತುರ್ಯಾವಸ್ಥೆಯ ಮನದಲ್ಲೇ ಇರುತ್ತಿದ್ದರು. ಅವರ ಜೀವಿತದಲ್ಲಿ ಅನೇಕ ಪವಾಡಗಳು ತಂತಾನೇ ಘಟಿಸಿದವು.

ಅದ್ವೈತ ತತ್ತ್ವಜ್ಞಾನ ಮೂರ್ತಿವೆತ್ತಂತಿದ್ದ ಸದಾಶಿವ ಬ್ರಹ್ಮೇಂದ್ರರು ಕರ್ನಾಟಕ ಸಂಗೀತಕ್ಕೆ ಅನೇಕ ಕೃತಿಗಳನ್ನು ಕೊಟ್ಟಿದ್ದು, ಒಂದೊಂದೂ ಸ್ವಾತಿಮುತ್ತಿನಂತೇ, ಅಪ್ಪಟ ವಜ್ರದಂದೇ ಇಂದಿಗೂ ನಳನಳಿಸುತ್ತಿವೆ. ಸಾಮಾನ್ಯವಾಗಿ ಕರ್ನಾಟಕ ಸಂಗೀತ ಕಚೇರಿಗಳು ನಡೆದಾಗ ಅವರ ಒಂದಾದರೂ ಹಾಡು ಅಲ್ಲಿ ಕೇಳಿಬರುತ್ತದೆ. ಹಾಡುಗಳು ರಚಿತವಾದ ರಾಗ, ಅವುಗಳಲ್ಲಿನ ಸಾಹಿತ್ಯ ಕೇಳುಗರಮನವನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ! ಮೋಹನರಾಗದ ’ಭಜ ರಘುವಿರಾಮಂ’, ಹಿಂದೋಳರಾಗದ ’ಭಜರೇ ಗೋಪಾಲಂ’, ಸಾಮರಾಗದ ’ಮಾನಸ ಸಂಚರರೇ’, ಅಹಿರ ಭೈರವೀರಾಗದ ’ಪಿಬರೇ ರಾಮರಸಂ’ ಮೊದಲಾದ ಹಾಡುಗಳು ಜನಮಾನಸದಲ್ಲಿ ನಲಿದಾಡುತ್ತಾ, ಸಹಜಗತಿಯಲ್ಲಿ ಜನರ ಮನಸ್ಸಿಗೆ ಉನ್ನತ ಸಂಸ್ಕಾರಗಳನ್ನು ಕೊಡುತ್ತಾ ಆಪ್ಯಾಯಮಾನವಾಗಿವೆ. ’ಗಾಯತಿ ವನಮಾಲೀ ಮಧುರಂ’ ಎಂಬ ಹಾಡಿನ ದಿವ್ಯಾನುಭೂತಿಯನ್ನು [ಕನ್ನಡಾನುವಾದದೊಂದಿಗೆ] ಅದರ ಪಲ್ಲವಿ ಮತ್ತು ಚರಣಗಳಲ್ಲಿ ಗಮನಿಸೋಣ:

ಗಾಯತಿ ವನಮಾಲೀ- ಮಧುರಂ - ಗಾಯತಿ ವನಮಾಲೀ || ಪ ||

[ಹಾಡುವ ವನಮಾಲೀ ಮಧುರ ಹಾಡುವ ವನಮಾಲೀ]

ಪುಷ್ಪ ಸುಗಂಧ ಸುಮಲಯ ಸಮೀರೇ
ಮುನಿ ಜನ ಸೇವಿತ ಯಮು
ನಾ ತೀರೇ || ೧ ||

[ಪುಷ್ಪ ಸುಗಂಧವ ಮಾರುತ ಬೀರೇ  
 ಮುನಿಜನ ಸೇವಿಪ ಯಮುನಾ ತಟದಿ ]

ಕೂಜಿತ ಶುಕ ಪಿಕ ಮುಖ ಖಗ ಕುಂಜೇ
ಕುಟಿಲಾಲಕ ಬಹು ನೀರದ ಪುಂಜೇ || ೨ || 

[ಕೂಗುವ ಶುಕ ಪಿಕ ಮುಖ ಖಗ ಮರದೊಳ್
 ರಾಜಿಪ ಭಾರದ ಮೇಘ ಮುಂಗುರುಳೊಳ್ ] 

ತುಲಸಿ ದಾಮ ವಿಭೂಷಿತ ಹಾರೀ
ಜಲಜ ಭವ ಸ್ತುತ ಸದ್ಗುಣ ಶೌರೀ || ೩ ||

[ತುಳಸೀ ಹಾರದಿ ಭೂಷಿತನಾಗೀ
 ಕಮಲಜ ಭಜಿಸಿದ ಸದ್ಗುಣ ಬೀಗೀ ]

ಪರಮಹಂಸ ಹೃದಯೋತ್ಸವ ಕಾರೀ
ಪರಿಪೂರಿತ ಮುರಲೀರವ ಧಾರೀ || ೪ ||

[ಪರಮಹಂಸ ಹೃದಯೋತ್ಸವ ಕಾರೀ
ಪರಿಪೂರಿತ ಮುರಲೀರವ ಧಾರೀ ] 

ಕೊನೆಯ ಚರಣ ಕನ್ನಡದ್ದೋ ಸಂಸ್ಕೃತದ್ದೋ ಎಂಬಷ್ಟು ಸಂಸ್ಕೃತ-ಕನ್ನಡಗಳು ಅಮ್ಮ-ಮಗುವಿನ ಬಾಂಧವ್ಯವನ್ನು ಹೊಂದಿವೆ, ಹೀಗಾಗಿ ಅನುವಾದ ಬೇಕಾಗಿಯೇ ಇಲ್ಲ!  ಸುಗಂಧಭರಿತವಾದ ತಂಗಾಳಿ ತೀಡುತ್ತಿರುವ ಯಮುನೆಯ ತಟದಲ್ಲಿ, ಸುತ್ತ ನೆರೆದ ಮುನಿಜನರ ಸೇವೆಗಳನ್ನು ಸ್ವೀಕರಿಸುತ್ತಾ ವನಮಾಲಿ ಸುಶ್ರಾವ್ಯವಾಗಿ ಹಾಡುತ್ತಿದ್ದಾನೆ. ಕೋಗಿಲೆ, ಗಿಳಿ, ನವಿಲಾದಿಯಾಗಿ ಹಲವು ಪಕ್ಷಿಗಳು ಕೂಗುತ್ತಾ ನಲಿದಾಡುತ್ತಿರುವ ಆ ಪ್ರದೇಶದಲ್ಲಿ ನಿಂತ ಅವನ ಮುಂಗುರುಳು ಭಾರದ ಮೋಡಗಳನ್ನು ಹೊತ್ತಂತೇ ಭಾಸವಾಗುತ್ತಿದೆ. ತುಳಸೀಹಾರವನ್ನು ಧರಿಸಿಕೊಂಡು ಬ್ರಹ್ಮನಿಂದ ಹೊಗಳಿಕೆಯ ನುಡಿಗಳನ್ನು ಸ್ವೀಕರಿಸಿ, ಎಲ್ಲದರಿಂದ ಮುದಗೊಂಡು ಶೂರತನದಿಂದ ಬೀಗುತ್ತಾ ವನಮಾಲಿ ಹಾಡುತ್ತಾನೆ. ಮುನಿಜನರ ಹೃದಯದಲ್ಲಿ ಸಂತಸಕ್ಕೆ ಕಾರಣನಾಗಿದ್ದಾನೆ, ಕರ್ಣಾನಂದಕರವಾದ ವೇಣುಗಾನದಿಂದ ಜಗದ ಜನರನ್ನೆಲ್ಲಾ ರಂಜಿಸುತ್ತಾನೆ.

ಇಂತಹ ಅನೇಕ ಭಾವನಾತ್ಮಕ ಹಾಡುಗಳನ್ನು ಸದ್ಗುರು ಸದಾಶಿವ ಬ್ರಹ್ಮೇಂದ್ರರು ಭಾರತೀಯರಿಗೆ ಅನುಗ್ರಹಿಸಿದ್ದಾರೆ. ಬರೇ ಹಾಡುಗಳಷ್ಟೇ ಅಲ್ಲಾ, ’ಆತ್ಮವಿದ್ಯಾವಿಲಾಸ’, ’ಬ್ರಹ್ಮಸೂತ್ರ ವೃತ್ತಿ’, ’ಯೋಗ ಸುಧಾಕರ’, ’ಕೈವಲ್ಯ ಅಮೃತ ಬಿಂದು’ [ಉಪನಿಷತ್ತುಗಳನ್ನಾಧರಿಸಿ], ’ಸಿದ್ಧಾಂತ ಕಲ್ಪವಲ್ಲಿ’[ ಅಪ್ಪಯ್ಯ ದೀಕ್ಷಿತರ ಕೃತಿಗಳ ಮೇಲೆ ಕವಿತ್ವದ ಹೇಳಿಕೆಗಳು], ’ಅದ್ವೈತ ರಸಮಂಜರಿ’, ’ಬ್ರಹ್ಮ ತತ್ತ್ವ ಪ್ರಕಾಶಿಕಾ’, ’ಮನೋ_ನಿಯಮನ’, ’ನವಮಣಿ_ಮಾಲಾ’, ’ಗುರುರತ್ನ ಮಾಲಿಕಾ’, ’ದಕ್ಷಿಣಾಮೂರ್ತಿ ಧ್ಯಾನ’-ಎಂಬೆಲ್ಲಾ ಪುಸ್ತಕಗಳನ್ನು ಸದಾಶಿವ ಬ್ರಹ್ಮೇಂದ್ರರು ಬರೆದಿದ್ದಾರೆ.  ಅವರ ಜೀವಿತ ಕಾಲದಲ್ಲಿ ನಡೆದ ಕೆಲವು ಘಟನೆಗಳನ್ನು ಅವಲೋಕಿಸೋಣ:

1. ಮಹದಾನಪುರದಲ್ಲಿ ಕಾವೇರೀನದೀ ತೀರದಲ್ಲಿ ಅವರು ವಿಹರಿಸುತ್ತಿದ್ದಾಗ, ಕೆಲವು ಮಕ್ಕಳು ತಮ್ಮನ್ನು ನೂರು ಕಿ.ಮೀಗೂ ಹೆಚ್ಚು ದೂರವಿರುವ ಮಧುರೈಯಲ್ಲಿ ನಡೆಯುತ್ತಿದ್ದ ಜಾತ್ರೆಗೆ ಕರೆದೊಯ್ಯಲು ಹೇಳಿದರು. ಸದಾಶಿವ ಬ್ರಹ್ಮೇಂದ್ರರು ಮಕ್ಕಳಿಗೆ ಕಣ್ಮುಚ್ಚಿಕೊಳ್ಳುವಂತೇ ಹೇಳಿದರು. ಒಂದೆರಡು ಸೇಕಂದುಗಳ ನಂತರ ಕಣ್ತೆರೆಯಲು ಹೇಳಿದಾಗ ಮಕ್ಕಳಿಗೆ ಆಶ್ಚರ್ಯ ಕಾದಿತ್ತು! ಮಕ್ಕಳೆಲ್ಲಾ ಅದಾಗಲೇ ಮಧುರೈಯಲ್ಲಿ ನಿಂತಿದ್ದರು! ಇದನ್ನು ಕೇಳಿದ ಯುವಕನೊಬ್ಬ ಮಾರನೇದಿನ ತನ್ನನ್ನೂ ಮಧುರೈಗೆ ಹಾಗೆ ತಲ್ಪಿಸಬೇಕು ಎಂದು ಪರೀಕ್ಷಾರ್ಥವಾಗಿ ಕೇಳಿದ. ಒಪ್ಪಿದ ಸದಾಶಿವ ಬ್ರಹ್ಮೇಂದ್ರರು ಅವನನ್ನು ಅರೆಕ್ಷಣದಲ್ಲಿ ಮಧುರೈಗೆ ಬಿಟ್ಟರು. ಹಿಂದಿರುಗುವಾಗ ಮಾತ್ರ ಆ ಯುವಕನಿಗೆ ಅಲ್ಲೆಲ್ಲೂ ಸದಾಶಿವ ಬ್ರಹ್ಮೇಂದ್ರರು ಕಾಣಿಸಲೇ ಇಲ್ಲ! ಆತ ತಾನೇ ನಡೆಯುತ್ತಾ ಮರಳಿ ಊರು ಸೇರಿಕೊಳ್ಳಬೇಕಾಯ್ತು.

2.ಬೆಳೆದುನಿಂತು ಫಸಲುತುಂಬಿದ ಹೊಲದ ಬುಡದಲ್ಲಿ ಒಮ್ಮೆ ಸದಾಶಿವ ಬ್ರಹ್ಮೇಂದ್ರರು ಧ್ಯಾನಮಗ್ನರಾಗಿಬಿಟ್ಟರು; ಅಲ್ಲಿಗೆ ಬಂದ ಹೊಲದ ರೈತ-ಮಾಲೀಕ ಅವರನ್ನು ಕಳ್ಳನೆಂದೇ ಭಾವಿಸಿ ಜಗಳವಾಡಿದ. ಹೊಡೆಯಲು ದೊಣ್ಣೆ ಎತ್ತಿದ್ದ ರೈತ-ಮಾಲೀಕ ನಿಂತಲ್ಲೇ ವಿಗ್ರಹವಾಗಿ ನಿಂತುಹೋದ! ಮಾರನೇ ಬೆಳಿಗ್ಗೆ ಸದಾಶಿವ ಬ್ರಹ್ಮೇಂದ್ರರು ಧ್ಯಾನದಿಂದ ವಿಮುಖರಾಗಿ ವಿಗ್ರಹದತ್ತ ನೋಡಿ ಮುಗುಳ್ನಗುವವರೆಗೆ ಆತ ವಿಗ್ರಹವಾಗೇ ನಿಂತಿದ್ದ! ಮಾಮೂಲಿ ಸ್ಥಿತಿಗೆ ಮರಳಿಸಿದ ಸದಾಶಿವ ಬ್ರಹ್ಮೇಂದ್ರರ ಶಕ್ತಿಯನ್ನರಿತ ರೈತ-ಮಾಲೀಕ ಅವರಲ್ಲಿ ಕ್ಷಮೆಯಾಚಿಸಿದ.

3.ಇನ್ನೊಮ್ಮೆ ತಪಸ್ಸಿಗೆ ಕುಳಿತಾಗ, ಕಾವೇರಿ ನದಿಯ ಪ್ರವಾಹ ಅವರನ್ನು ಕೊಚ್ಚಿಕೊಂಡು ಹೋಗಿಬಿಟ್ಟಿತ್ತು. ಯಾವುದೋ ಹಳ್ಳಿಯ ಮಣ್ಣುದಿಣ್ಣೆಯನ್ನು ಅಲ್ಲಿನ ರೈತರು ಅಗೆಯುತ್ತಿರುವಾಗ ಆಯುಧಗಳು ಶರೀರಕ್ಕೆ ಸೋಕಿ ಎಚ್ಚೆತ್ತ ಸದಾಶಿವ ಬ್ರಹ್ಮೇಂದ್ರರು ಅಲ್ಲಿಂದ ಎದ್ದುನಡೆದರು.   

ಪೊದುಕೊಟ್ಟೈನ ರಾಜಾ ತೊಂಡೈಮನ್ ಎಂಬಾತನಿಗೆ ದಕ್ಷಿಣಾಮೂರ್ತಿ ಮಂತ್ರವನ್ನು ಮರಳಿನಲ್ಲಿ ಬರೆದು ಉಪದೇಶಿದರು. ಆ ಕುಟುಂಬದವರು ಇಂದಿಗೂ ಆ ಮರಳನ್ನು ಪೂಜಿಸುತ್ತಾ ಹಾಗೇ ಇಟ್ಟುಕೊಂಡಿದ್ದಾರೆ.

4.ತಂಜಾವೂರಿನ ಸಮೀಪದ ಪುನ್ನೈನಲ್ಲೂರಿನಲ್ಲಿ ಮಾರಿಯಮ್ಮನನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದು ಇದೇ ಸದಾಶಿವ ಬ್ರಹ್ಮೇಂದ್ರರು. ನಂತರ ದೇವದಾನಪಟ್ಟಿ ಎಂಬಲ್ಲಿ ಕಾಮಾಕ್ಷಿದೇವಿಯನ್ನು ಸ್ಥಾಪಿಸುವಂತೇ ಜನರಿಗೆ ತಿಳಿಸಿದವರೂ ಅವರೇ. ಕಾಲಾನಂತರದಲ್ಲಿ ಮೂರು ಪ್ರಾಂತಗಳ ಮೂರು ಜಾಗಗಳಲ್ಲಿ ಸದಾಶಿವ ಬ್ರಹ್ಮೇಂದ್ರರು ಸಜೀವಸಮಾಧಿಯನ್ನು ಏಕಕಾಲಕ್ಕೆ ಪಡೆದು ದಾಖಲೆಮಾಡಿದ್ದಾರೆ! ತಿರುಚಿರಾಪಲ್ಲಿಗೆ ನೂರು ಕಿ.ಮಿ.ದೂರದಲ್ಲಿ, ನೆರೂರಿನಲ್ಲಿ[ತಮಿಳುನಾಡು], ಮಧುರೈಯಿಂದ ಅರ್ವತ್ತು ಕಿ.ಮಿ. ದೂರದಲ್ಲಿರುವ ಮನಮಧುರೈಯ್ಯಲ್ಲಿ ಇವೆ. ಮನಮಧುರೈ ಸೋಮನಾಥ ದೇವಸ್ಥಾನ ಸಮುಚ್ಚಯದಲ್ಲಿ ಅವರ ಸಮಾಧಿ ಇರುವುದನ್ನು ಪತ್ತೆಹಚ್ಚಿದವರು ಕಂಚಿ ಪರಮಾಚಾರ್ಯರು. 


ಅವಧೂತ-ಬ್ರಹ್ಮಜ್ಞಾನಿಗಳನೇಕರ ಭೌತಿಕ ಅವತರಣಿಕೆಯನ್ನು ಗಮನಿಸಿದರೆ ಅಲ್ಲೆಲ್ಲವೂ ವಿಚಿತ್ರಗಳೇ! ತಮ್ಮ ಬಗ್ಗೆ ಅವರು ಏನನ್ನೂ ಹೇಳಿಕೊಳ್ಳುವುದಿಲ್ಲ, ಏನೇ ಅನಾನುಕೂಲವಾದರೂ ವಿಷಾದಿಸುವುದಿಲ್ಲ, ಜನಪ್ರಿಯತೆಯನ್ನು ಎಂದಿಗೂ ಬಯಸುವವರಲ್ಲ, ರಾಜಕಾರಣದಲ್ಲಿ ತೊಡಗುವುದಿಲ್ಲ, ಧನ-ಕನಕಗಳ ಆಸೆಯಿಲ್ಲ, ಭೋಗಭಾಗ್ಯಗಳ ಬಗ್ಗೆ ತಲೆಕೆಡಿಸಿಕೊಂಡವರಲ್ಲ, ಹೀಗೇ ಇರಬೇಕು ಎಂಬ ನಿಯಮಗಳೂ ಕೂಡ ಇರುವುದಿಲ್ಲ. ಬಟ್ಟೆಯಿದ್ದರೂ ಸರಿಯೇ ನಗ್ನವಾಗಿದ್ದರೂ ಸರಿಯೇ, ಉಂಡರೂ ಸರಿಯೇ ಉಪವಾಸವೇ ಇದ್ದರೂ ಸರಿಯೇ, ಅಳು-ನಗುಗಳಲ್ಲಿ ಅಂತರ ಕಾಣದ ಸ್ವಂತಿಕೆ ಅವರದಾದರೂ ಈ ಲೋಕದ ಜಂಜಡಗಳಲ್ಲಿ ಜೀವನದ ಮಜಲುಗಳನ್ನು ಹಮ್ಮಿಕೊಂಡು ಹೆಣಗಾಡುತ್ತಿರುವ ಜನಸಾಮಾನ್ಯರಿಗಾಗಿ ಅಂತಹ ಮಹಾತ್ಮರು ಬರುತ್ತಾರೆ-ಬರುತ್ತಲೇ ಇರುತ್ತಾರೆ-ತಮ್ಮ ಕೆಲಸ ಮುಗಿದ ತಕ್ಷಣ ಬಂದಷ್ಟೇ ವೇಗದಲ್ಲಿ ಸಾಗಿಹೋಗುತ್ತಾರೆ. ನಮ್ಮ ಲೋಕವನ್ನೇನೋ ಅವರು ಬಲ್ಲರು! -ಇಲ್ಲಿನ ಆಗುಹೋಗುಗಳನ್ನು ಅವರು ತಿಳಿವರು, ನಮಗೆ ಮಾತ್ರ ಅವರ ಮೂಲನೆಲೆಯ ರೇಖು-ಆ ಶಕ್ತಿಯ ಉಗಮಗೊಳ್ಳುವ ಚಿಲುಮೆ-ಅನಂತದ ನೆಂಟಸ್ತಿಕೆಯ ಕುರುಹು ದೊರೆವುದೇ ಇಲ್ಲ. ಆದರೆ ಅಂಥಾ ಮಹನೀಯರ, ಮಹಾತ್ಮರ, ಸಾಧಕರ ಜೀವನಗಾಥೆಯನ್ನು ತನ್ಮೂಲಕ ಅವರು ಕೊಟ್ಟುಹೋದ ಬಳುವಳಿಗಳನ್ನು ಮರೆಯುವ ಹಾಗಿಲ್ಲ, ಅಂಥಾ ಅವಧೂತ ಪರಂಪರೆಗೆ ಚಾತುರ್ಮಾಸ್ಯ ಸಮಯದಲ್ಲಿ ಸಾಷ್ಟಾಂಗ ನಮಸ್ಕಾರಗಳು. 



Friday, July 19, 2013

ಪಾರ್ವತಿ ವಿಗ್ರಹ ಪಾತಾಳಕ್ಕೆ ಇಳಿದು ಹೋದ ಕಥೆಯು!

 ಚಿತ್ರ ಋಣ : ಅಂತರ್ಜಾಲ
ಪಾರ್ವತಿ ವಿಗ್ರಹ ಪಾತಾಳಕ್ಕೆ ಇಳಿದು ಹೋದ ಕಥೆಯು!

ಪಂಚತಂತ್ರದ ಕಥೆಗಳಂತೇ ಇಂದೂ ಕೂಡ ಆಗಾಗ ಹೊಸ ಹೊಸ ಕಥೆಗಳನ್ನು ನಾವು ಬರೆಯುತ್ತಲೇ ಇರಬಹುದು! ಹೊಸ ಕಥೆಗಳನ್ನು ಹುಟ್ಟಿಸುವಲ್ಲಿ ನನ್ನಂಥವರ ಸಹಾಯಕ್ಕೆ ವಸ್ತುವಾಗುವವರು ಕಾಗೆ ಹಾರಿಸುವ ಟಿವಿ ಜ್ಯೋತಿಷಿಗಳು. ಕಾಗೆ ಕೂರುವುದಕ್ಕೂ ಕೋಲು ಮುರಿಯುವುದಕ್ಕೂ ಸಂಬಂಧವನ್ನು ಕಲ್ಪಿಸಿ ಹಲವರ ಬದುಕನ್ನು ಹಡಾಲೆಬ್ಬಿಸುವ ಜನರೇ ಟಿವಿ ಜ್ಯೋತಿಷಿಗಳು. Vedanga Jyotishya is much of an astronomical subject rather than an astrological.ವೇದಾಂಗ ಜ್ಯೋತಿಷ್ಯವೆಂಬುದು ಖಗೋಳ ಶಾಸ್ತ್ರ. ಅದರಲ್ಲಿ ಗ್ರಹ-ತಾರೆಗಳನ್ನು ಗುರುತಿಸುವ, ಅವುಗಳ ನಡೆಯನ್ನು ಗುಣಿಸುವ ಲೆಕ್ಕಾಚಾರಗಳೇ ತುಂಬಿವೆ. ಆಕಾಶಕಾಯಗಳ ಮತ್ತವುಗಳ ಚಲನವಲನಗಳ ಬಗೆಗಿನ ಅಂದಿನ ಆಳವಾದ ಅಧ್ಯಯನವದು. ಫಲ ಜ್ಯೋತಿಷ್ಯವೆಂಬುದು ನಂತರ ಹುಟ್ಟಿಕೊಂಡ ತುಲನಾತ್ಮಕ ಕಥೆ! ಫಲಜ್ಯೋತಿಷ್ಯವನ್ನು ನನ್ನಂಥವರು ಎಳ್ಳಷ್ಟೂ ನಂಬುವುದಿಲ್ಲ. ಫಲ ಜ್ಯೋತಿಷಿಗಳ ಹೇಳಿಕೆ ಕೆಲಮಟ್ಟಿಗೆ ಪರಿಣಾಮಕಾರಿಯಾಗುವುದು ಅವರ ವೈಯ್ಯಕ್ತಿಕ ಧ್ಯಾನ-ಅನುಷ್ಠಾನ ಇವುಗಳ ಮೇಲೆ ಎನ್ನಬಹುದು.

ಫಲ ಜ್ಯೋತಿಷ್ಯವನ್ನು ಅತಿಯಾಗಿ ನಂಬಿದರೆ ಜೀವನ ಹಾಳಾಗಿ ಹೋಗುತ್ತದೆ ಎಂಬುದಕ್ಕೆ ನೂರಾರು ಉದಾಹರಣೆ ಕೊಡಬಹುದು. ಭವಿಷ್ಯವನ್ನು ಮೊದಲೇ ಅರಿಯುವ ಕೆಟ್ಟ ಹವ್ಯಾಸ ಮಾನವನನ್ನು ಈ ಕೆಲಸಕ್ಕೆ ಹಚ್ಚಿಕೂತಿದೆ. ಕೇದಾರನಾಥದಲ್ಲಿ ಜಲಪ್ರಳಯ ನಡೆಯುತ್ತದೆ ಎಂದು ತಾನು ಮೊದಲೇ ಹೇಳಿದ್ದಾಗಿ ಜ್ಯೋತಿಷಿಯೊಬ್ಬ ಕೊಚ್ಚಿಕೊಳ್ಳುತ್ತಿದ್ದಾನೆ. ಆತ ಕಾಗೆ ಹಾರಿಸಿದ್ದು ಎಲ್ಲರಿಗೂ ಗೊತ್ತಿದೆ. ಹಾಗೇನಾದರೂ ಆತನಿಗೆ ಕಣ್ಣಿಗೆ ಕಟ್ಟುವಹಾಗೆ ಭವಿಷ್ಯ ಕಾಣಿಸಿದ್ದರೆ ಸರಕಾರವನ್ನು ಎಚ್ಚರಿಸಬಹುದಿತ್ತಲ್ಲಾ? ವರ್ಷ ಭವಿಷ್ಯವನ್ನು ಮೊದಲೇ ಹೇಳುವ ಕೆಲಜನ "ಈ ಸರ್ತಿ ಹಿರಿಯ ರಾಜಕಾರಣಿಯೊಬ್ಬರು ಸಾಯುತ್ತಾರೆ. ಮತ್ತು ದೇಶದಲ್ಲಿ ಅಲ್ಲಲ್ಲಿ ಅವಘಡಗಳು ಕಾಣಿಸುತ್ತವೆ" ಎಂದು ಕಾಗೆ ಹಾರಿಸುತ್ತಾರೆ! ಅದು ಹೊಸದೇನೂ ಅಲ್ಲ ನಡೆಯುತ್ತಲೇ ಇರುವ ವಿಷಯ!! ಅದನ್ನೇನು ಅವರೇ ಹೇಳಬೇಕೆ? ನಾನೂ ಹೇಳಬಲ್ಲೆ. ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದಷ್ಟೂ ಅವರಿಗೆ ಖಾಲೀ ಸಮಯವನ್ನು ನಿಭಾಯಿಸುವುದು ಕಷ್ಟವಾಯ್ತು; ಖಾಲೀ ಬಿದ್ದ  ಕೆಲವು ಸಮಯದ-ಸ್ಲಾಟ್ ಗಳಲ್ಲಿ ಕಾಗೆಹಾರಿಸುವ ಜ್ಯೋತಿಷಿಗಳು ಬಂದು ಕೂತುಬಿಟ್ಟರು! ಭವಿಷ್ಯ ಹೇಳಿದ್ದು ಸರಿಯಾಗದಿದ್ದರೆ "ಅದಕ್ಕೆ ಪಾರ್ವತಿ ಶಾಪವಿದೆ" ಎಂದು ಭೋಂಗು ಬಿಡುತ್ತಾರೆ! ಪಾರ್ವತಿ-ಪರಮೇಶ್ವರರು ರತಿಕ್ರೀಡೆಯಲ್ಲಿ ತೊಡಗಿದ್ದಾಗ, ಕೈಲಾಸಕ್ಕೆ ಭೇಟಿಯಿತ್ತ ಭೃಗು ಮಹರ್ಷಿ ಅದನ್ನು ಭವಿಷ್ಯದ ಕಣ್ಣಿನಿಂದ ಅರಿತನಂತೆ! ಈ ವಿಷಯ ಪಾರ್ವತಿಗೆ ಅರಿವಾಗಿ "ಜ್ಯೋತಿಷ್ಯ ಸುಳ್ಳಾಗಲಿ" ಎಂದುಬಿಟ್ಟಳಂತೆ ಮಾರಾಯ್ರೆ! ಇದು ಜ್ಯೋತಿಷಿಗಳು ಪಾರ್ವತೀದೇವಿಯಮೇಲೆ ಗೂಬೆ ಕೂರಿಸಿದ ಕಥೆ!! 

ಕಾಕತಾಳೀಯಗಳನ್ನೇ ಬಂಡವಾಳಗಳನ್ನಾಗಿ ಮಾಡಿಕೊಂಡು ಕೋಟಿಗಟ್ಟಲೆ ಹಣಮಾಡಿದ ವಿವಿಐಪಿ ಜ್ಯೋತಿಷಿಗಳೂ ಇದ್ದಾರೆ! "ಕಾಗೆ ತಲೆಯಮೇಲೆ ಕೂತರೆ ಮುಂದೆ ಗಂಡಾಂತರ ಕಾದಿದೆ." ಎಂದು ಯಾವುದೋ ಜ್ಯೋತಿಷಿ ಕಾಗೆ ಹಾರಿಸಿದ್ದನ್ನು ಕಂಡಿದ್ದ ವ್ಯಕ್ತಿಯೊಬ್ಬ ಆತನ ತಲೆಯಮೇಲೆ ಕಾಗೆ ಕುಳಿತು ಹೋಯ್ತು ಎಂಬ ಕಾರಣಕ್ಕಾಗಿ ಹೆದರಿ ಆತ್ಮಹತ್ಯೆಮಾಡಿಕೊಂಡಿದ್ದಾನೆ. ನಗರಗಳ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ಮರಗಳ ಮೇಲೆ ಕಾಗೆಗಳು ಗೂಡು ಕಟ್ಟುತ್ತವೆ. ಮರಿಹಾಕಿದಾಗ ಮರಿಗಳಮೇಲಿನ ಮಮತೆ ಅವುಗಳಲ್ಲಿ ಅದೆಷ್ಟು ಇರುತ್ತದೆ ಎಂದರೆ ಸುತ್ತಲ ಅರ್ಧಫರ್ಲಾಂಗಿನಲ್ಲಿ ಬರುವ ಯಾವುದೇ ದೊಡ್ಡ ಜೀವಿಯನ್ನೂ ಕಾಗೆಗಳು ಅಟ್ಟಿಸಿ ಓಡಿಸುತ್ತವೆ. ಕರಾವಳಿಯ ಆಡುಭಾಷೆಯಲ್ಲಿ ಇದಕ್ಕೆ "ಕಾಗೆ ಸೊಣೆಯುವುದು" ಎಂದು ಹೆಸರು. ಬಹಳ ಹಿಂದೆ ಕಾಗೆಗಳು ನನಗೂ ಕೆಲವಾರು ಸರ್ತಿ ಸೊಣೆದಿದ್ದಿದೆ, ಆದರೆ ನನಗೇನೂ ಆಗಲೇ ಇಲ್ಲ. ಕಾಗೆ ಸೊಣೆದಿದ್ದಕ್ಕೆ ನಾನು ಯಾರಲ್ಲೂ ಏನೂ ಹೇಳಲಿಲ್ಲ, ಯಾವ ಶಾಂತಿಯನ್ನೂ-ಹೋಮವನ್ನೂ ಮಾಡಿಸಲೇ ಇಲ್ಲ. ಮುಖ್ಯವಾಗಿ ವಿಷಯವನ್ನು ಕಾಗೆ ಹಾರಿಸುವ ಕಳ್ಳಜ್ಯೋತಿಷಿಗಳ ಕಿವಿಗೆ ಹಾಕಲೇ ಇಲ್ಲ! ಟಿವಿ ಜ್ಯೋತಿಷಿಗಳ ಕೆಟ್ಟ ಹೇಳಿಕೆಗಳ ಫಲವಾಗಿ ಅನ್ಯಾಯವಾಗಿ ಮುಗ್ಧನೊಬ್ಬ ಆತ್ಮಹತ್ಯೆ ಮಾಡಿಕೊಂಡ.

ಅಷ್ಟಮಂಗಲವೆಂಬ ಮತ್ತೊಂದು ತಂತ್ರವೂ ಅಷ್ಟೇ. ನನಗೆ ಗೊತ್ತಿರುವ, ಈಗ ನವೀಕರಣಗೊಳ್ಳುತ್ತಿರುವ ದೇವಸ್ಥಾನವೊಂದರಲ್ಲೂ ಅಷ್ಟಮಂಗಲ ಕೇಳಿದ್ದರು. ಅಲ್ಲಿಗೆ ಬಂದವನೂ ಈಶ್ವರನ ಪಕ್ಕದಲ್ಲಿ ಅಮ್ಮನವರ ಗುಡಿ ಇತ್ತೆಂದು ಹೇಳಿದ್ದ. ದೇವಸ್ಥಾನದ ಪ್ರಾಕಾರದಲ್ಲೇ ಭೂಮಿಯಲ್ಲಿ ಆ ವಿಗ್ರಹ ಹುದುಗಿದೆ, ಅಗೆದು ತೆಗೆದು ಪ್ರತಿಷ್ಠಾಪನೆ ಮಾಡಬೇಕು ಎಂದು ಹೇಳಿ ಮರಳಿ ಹೋದ; ಜನ ಕೆಲಸ ಆರಂಭಿಸಿ ಅಗೆದೇ ಅಗೆದರು, ಅಗೆದೇ ಅಗೆದರು. ಎಷ್ಟು ಅಗೆದರೂ ಅಮ್ಮನವರ ವಿಗ್ರಹಮಾತ್ರ ಸಿಗಲೇ ಇಲ್ಲ! ಸುಸ್ತಾಗಿ ಅಷ್ಟಮಂಗಲದವನಿಗೆ ಫೋನು ಹಚ್ಚಿದರು. "ಅದು ನಿಮಗೆ ಲಭ್ಯವಿಲ್ಲ, ಈಗ ಪಾತಾಳಕ್ಕೆ ಹೋಗಿಬಿಟ್ಟಿದೆ. ಹೊಸದಾಗಿ ಒಂದು ವಿಗ್ರಹವನ್ನು ಮಾಡಿಸಿ ಪ್ರತಿಷ್ಠಾಪಿಸಿ" ಎಂದಿದ್ದಾನಂತೆ! ಅದೇ ದೇವಸ್ಥಾನದ ಸರೀ ಎದುರುಭಾಗದಲ್ಲಿ, ಒಂದು ಫರ್ಲಾಂಗಿನಷ್ಟು ದೂರದಲ್ಲಿ ಮಜಭೂತಾದ ಅಮ್ಮನವರ ದೇವಸ್ಥಾನವಿದೆ ಮತ್ತು ಅಲ್ಲಿನ ಆಡಳಿತವೂ ಮೊದಲು ಹೇಳಿದ ದೇವಸ್ಥಾನದ ಆಡಳಿತ ಸಮಿತಿಗೇ ಒಳಪಟ್ಟಿದೆ. ಹೀಗಿದ್ದೂ ಅಷ್ಟಮಂಗಲದವ ಇನ್ನೊಂದು ಅಮ್ಮನವರ ವಿಗ್ರಹದ ಪ್ರಸ್ತಾಪವನ್ನೇಕೆ ಮಾಡಿದ? ಮತ್ತು ಸಿಗದಾದಾಗ ಪಾತಾಳಕ್ಕೆ ಹೋಯ್ತೆಂದು ಯಾಕೆ ಹೇಳಿದ? ಉತ್ತರ ಹೇಳುವುದಕ್ಕೆ ಇನ್ನಷ್ಟು ಅಷ್ಟಮಂಗಲದವರನ್ನೇ ಕರೆತರಬೇಕಾಗಬಹುದು!

ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಇಂದು ಅಷ್ಟಮಂಗಲ ಹೇಳುವವರು ಬಹಳ ಹುಟ್ಟಿಕೊಂಡಿದ್ದಾರೆ! ದೊಡ್ಡ ದೊಡ್ಡ ವಾಹನಗಳನ್ನು ಖರೀದಿಸಿ ಮೆರೆಯಲು ತೊಡಗಿದ್ದಾರೆ!  ಮಂತ್ರಿಮಹೋದಯರಿಗಾದರೂ ಸಮಯವಿರಬಹುದು ಅಷ್ಟಮಂಗಲದವರಿಗೆ ಮಾತ್ರ ಸಮಯ ಸಿಗುವುದೇ ಕಷ್ಟ! ಏನೂ ಇಲ್ಲದ ಜಾಗದಲ್ಲಿ ಏನೇನನ್ನೋ ಸೃಷ್ಟಿಸಲು ಹೇಳುವ ಜಾಯಮಾನ ಅಷ್ಟಮಂಗಲದವರದ್ದು. ಹಾಗೆ ನೋಡಿದರೆ ಅಷ್ಟಮಂಗಲವೊಂದು ಶಕುನ ಶಾಸ್ತ್ರ. ಅಲ್ಲಿ ಕರೆಯಲು ಬರುವ ವ್ಯಕ್ತಿ, ಆತ ತೊಟ್ಟ ಬಟ್ಟೆ, ಆತನ ಮೈಮೇಲಿನ ಆಭರಣ, ಆತನ ಮುಖಚಹರೆ, ಆತ ಬಂದ ಸಮಯ, ಆತ ವಿನಂತಿಸಿದ ರೀತಿ, ಆಮೇಲೆ ಅಷ್ಟಮಂಗಲದವ ಕರೆಸಿಕೊಂಡ ಜಾಗಕ್ಕೆ ಬಂದಿಳಿದ ಸಮಯ, ಅಲ್ಲಿನ ಭೂಭೌತಿಕ ಲಕ್ಷಣ, ಜನರ ನಡಾವಳಿ, ಅಲ್ಲಿನ ಜನರಲ್ಲಿ ಇರುವ ಮೌಢ್ಯ, ದೇವಸ್ಥಾನಗಳಾದರೆ ಅಲ್ಲಿ ಹೇಗೆ ಮತ್ತು ಯಾರು ಪೂಜೆ ಸಲ್ಲಿಸುತ್ತಿದ್ದಾರೆ ಎಂಬ ಅಂಶ, ದೇವಸ್ಥಾನದ ಗರ್ಭಗುಡಿಯಲ್ಲಿ ಇರುವ ಪೂಜಾ ಪರಿಕರಗಳ ಮತ್ತು ಅವುಗಳ ಗುಣಮಟ್ಟದ ಲೆಕ್ಕಾಚಾರ ಹೀಗೇ ಇವುಗಳನ್ನೆಲ್ಲಾ ಮನಸ್ಸಿನಲ್ಲಿ ಗ್ರಹಿಸಿ, ಕೆಲವನ್ನು ಅಲ್ಲಿನವರ ಬಾಯಿಂದಲೇ ತಿಳಿದುಕೊಂಡು ಹಲವನ್ನು ಊಹಿಸಿ ಹೇಳುವುದು ಅಷ್ಟಮಂಗಲ!!

ಅಷ್ಟಮಂಗಲ ಫಲಕಾರಿಯಾಗಬೇಕಾದರೆ ಹೇಳುವ ವ್ಯಕ್ತಿ ದೈವತ್ವ ಹೊಂದಿರಬೇಕು-ಬಹಳ ಅನುಷ್ಠಾನನಿಷ್ಠನಾಗಿರಬೇಕು. ಆಚಾರವಿಚಾರಗಳಲ್ಲಿ ಆತ ಪರಿಶುದ್ಧ ಬ್ರಾಹ್ಮಣನಾಗಿರಬೇಕು. ಹಣಕ್ಕಾಗಿ ಅಷ್ಟಮಂಗಲವನ್ನು ಹೇಳುವ ಇರಾದೆ ಇಟ್ಟುಕೊಂಡವನಾಗಿರಬಾರದು; ಗೌರವವಾಗಿ ಕೊಟ್ಟದ್ದನ್ನು ಸ್ವೀಕರಿಸುವ ಮನೋಭಾವವುಳ್ಳವನಾಗಿರಬೇಕು. ಬಹಳ ಅಧ್ಯಯನ ಶೀಲನಾಗಿರಬೇಕು, ವೇದ-ಶಾಸ್ತ್ರಗಳಲ್ಲಿ ಪಾರಂಗತನಾಗಿರಬೇಕು. ಈಗೀಗ ಇದಾವುದೂ ಇರದ ಜನ ಅಷ್ಟಮಂಗಲ ಹೇಳಲು ಹೊರಟಿದ್ದಾರೆ. ಕಾಂಚಾಣದ ಹೊರತಾಗಿ ಅವರಿಗೆ ಯಾವ ಉಪಾಸನೆಯೂ ಇಲ್ಲ! ಯಾವ ಜಪ-ತಪದ ಫಲವೂ ಅವರ ಹೇಳಿಕೆಗಳಿಗೆ ದೊರೆಯುವುದಿಲ್ಲ; ಹೀಗಾಗಿಯೇ ಪಾರ್ವತಿ ವಿಗ್ರಹ ಪಾತಾಳಕ್ಕೆ ಹೋಗುತ್ತದೆ! ಅಷ್ಟಮಂಗಲ ಹೇಳಿದವ ಕಾರುಹತ್ತಿ ಹಾರಿಹೋಗುತ್ತಾನೆ! ಅಂದಹಾಗೆ, ಕುಲದ ಪೂರ್ವಜರು ಎಸಗಿದ್ದ ತಪ್ಪಿನಿಂದ ತಾಪ-ತ್ರಯಗಳಲ್ಲಿ ಒಂದಾದ  ಆಧ್ಯಾತ್ಮಿಕ ತೊಂದರೆಯಲ್ಲಿ ಸಿಲುಕಿದ್ದು, ಪರಿಹಾರವನ್ನು ಹುಡುಕಲು ಪುರ್ಸೊತ್ತಿರುವವರು ಅಷ್ಟಮಂಗಲ, ಹಕ್ಕಿ ಶಕುನ ಎಲ್ಲವನ್ನೂ ಕೇಳುತ್ತಾರೆ; ’ವಾಸ್ತುತಜ್ಞ’ರೆಂದು ಬೋರ್ಡು ಹಾಕಿಕೊಂಡು ಮಾಡಲಾಗದ ಬದಲಾವಣೆಗಳನ್ನೇ ಸೂಚಿಸುತ್ತಾ ಇರುವ ಜನರಂತೇ ಅಷ್ಟಮಂಗಲದವರೂ ಏನೇನೋ ಹೇಳುತ್ತಾರೆ.

ಎರಡುವಾರಗಳ ಹಿಂದೆ ಜ್ಯೋತಿಷಿಯೊಬ್ಬ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲೇ ಅಸುನೀಗಿದ ಸುದ್ದಿ ಮತ್ತು ಸದರೀ ಜ್ಯೋತಿಷಿ ನಿಮಿಷದಲ್ಲೇ ಆ ಜಾಗದಿಂದ ಪರಾರಿಯಾದ ಸುದ್ದಿ ಟಿವಿಯಲ್ಲಿ ಬಿತ್ತರಗೊಂಡಿತ್ತು; ಆ ಜ್ಯೊತಿಷಿಯ ತಲೆಯಮೇಲೆ ಕಾಗೆಯೋ ಗೂಗೆಯೋ [ಗೂಬೆ] ಒಮ್ಮೆ ಕೂತಿರಬೇಕಲ್ಲವೇ? ಜ್ಯೋತಿಷಿಗೆ ಅವರ ಅಂದಿನ ಗ್ರಹಗತಿಯ ಬಗ್ಗೆ ತಿಳಿದಿರಲಿಲ್ಲವೇ? ತಿಳಿದಿದ್ದರೂ ತಮ್ಮ ಚಾಲಕ ಬಲಿಯಾದರೆ ಆಗಲಿ ಎಂದು ಪ್ರಯಾಣ ಹೊರಟರೇ?-ಇಂಥಲ್ಲೇ ಢೋಂಗಿ ಜ್ಯೋತಿಷ್ಯ ಮಸಲತ್ತುಗಳು ಕಣ್ಣಿಗೆ ರಾಚುತ್ತವೆ. ಮುಪ್ಪಡರಿದ ಹೆಸರಾಂತ ಸಿನಿಮಾ ಕಲಾವಿದನೊಬ್ಬನ ಸಾಮಾನ್ಯ ನಾಯಕ ನಟ-ಮಗನಿಗೆ ಹೊಂದಬಹುದಾದ ಹೆಣ್ಣೊಬಳ ಅಗತ್ಯವಿತ್ತು; ಗೋತಾ ಹೊಡೆಯುತ್ತಿರುವ ಸಿನಿಮಾಗಳಿಂದ ವರ್ಚಸ್ಸು ಕಳೆದುಕೊಳ್ಳತೊಡಗಿದ್ದ ನಾಯಕ ನಟಿಯೊಬ್ಬಳಿಗೆ ಆರ್ಥಿಕ ಭದ್ರತೆಯಿರುವ ಹುಡುಗನೊಬ್ಬನ ಅಗತ್ಯತೆಯೂ ಇತ್ತು. ಇದನ್ನು ಕಂಡ ’ವಿವಿಐಪಿ ರಾಜಜ್ಯೋತಿಷಿ’ಯೊಬ್ಬ ಗುತ್ತಿಗೆ ಹಿಡಿದು ಮದುವೆ ಮಾಡಿಸಿ ಎರಡೂ ಕೈಯ್ಯಲ್ಲೂ ಚೆನ್ನಾಗಿ ಮೆದ್ದ! ಅದೇ ಜ್ಯೋತಿಷಿಯ ಜಾಗದಲ್ಲಿ ನಾವು-ನೀವು ಇದ್ದರೂ ಆ ಕಾರ್ಯ ನೆರವೇರುತ್ತಿತ್ತು. ಜ್ಯೋತಿಷಿ ಅಲ್ಲಿ ಬೇಕಾದ್ದು ನೆಪಮಾತ್ರಕ್ಕೆ! 

ಇತ್ತೀಚೆಗೆ ಹೇಳಿದ್ದ ತಿಮ್ಮಗುರುವಿನ ಕಗ್ಗವನ್ನೇ ಮತ್ತೊಮ್ಮೆ ಪುನರುಚ್ಚರಿಸುತ್ತೇನೆ:  

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?
ವಿಹಿತವಾಗಿಹುದದರ ಗತಿ ಸೃಷ್ಟಿ ವಿಧಿಯಿಂ
ಸಹಿಸದಲ್ಲದೆ ಮುಗಿಯದಾವದೆಶೆ ಬಂದೊಡಂ
ಸಹನೆ ವಜ್ರದ ಕವಚ-ಮಂಕುತಿಮ್ಮ

ನನ್ನ ಸಲಹೆ ಇಂತಿದೆ: ಫಲಜ್ಯೋತಿಷ್ಯವನ್ನೋ ಅಷ್ಟಮಂಗಲವನ್ನೋ ನಂಬಿಕೂರಬೇಡಿ; ಅದರಲ್ಲಿ ಬಹಳಷ್ಟು ಕಾಕತಾಳೀಯ, ಅದು ಚೆಸ್ ಆಟದಂತೇ ಎಂಬುದು ಅನುಭವೀ ವಿದ್ವಾಂಸರೊಬ್ಬರ ಸದಭಿಪ್ರಾಯ. ಬೆರಳೆಣಿಕೆಯ ಕೆಲವರು ಹೇಳಿದ್ದು ಬಹುಭಾಗ ಸತ್ಯವಾದರೆ-ಅದು ಆವರ ಅನುಷ್ಠಾನ ಬಲ. ಅಂತಹ ಅನುಷ್ಠಾನ ಬಲ ಇರುವ ಮಂದಿಯನ್ನು ಗುರ್ತಿಸಲು ನಾವೇ ಮೊದಲು ಅಷ್ಟಮಂಗಲದವರಾಗಬೇಕಾದ ಅನಿವಾರ್ಯತೆ ಇದೆ!

ನಂಬದಿರ್ದನು ತಂದೆ ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವಿಬ್ಬಂದಿ ನೀನು
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು
ಸಿಂಬಳದಿ ನೊಣ ನೀನು-ಮಂಕುತಿಮ್ಮ

ದೇವರು ಎಂಬ ಶಕ್ತಿಯನ್ನು ನಾವು ನಂಬಿಯೂ ನಂಬದವರಂತಿದ್ದೇವೆ. ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸಲಾರ ಎಂಬಾಗಲೇ ’ಹುಲ್ಲನ್ನು ಮೇಯಿಸಬೇಕೆಂದೇ ಹಣೆಬರಹವಿದ್ದರೆ ಆತನೇನು ಮಾಡಬಲ್ಲ?’ ಎಂಬ ಸಂಶಯವನ್ನು ಮನದಲ್ಲಿ ಧಾರಣೆಮಾಡಿರುತ್ತೇವೆ. ಶ್ರೀಕೃಷ್ಣನ ಯುಧಿಷ್ಠಿರನಲ್ಲಿ "ಅಶ್ವತ್ಥಾಮೋ ಹತಃ ಕುಂಜರಃ" ಎಂದು ಹೇಳೆಂದಾಗ ಭಗವಂತನ ಆಜ್ಞೆಯನ್ನು ನಡೆಸುವ ಮೊದಲು ತಾನು ಘಟನೆಯನ್ನು ಕಣ್ಣಾರೆ ಕಾಣಬೇಕೆಂದ-ಧರ್ಮರಾಯ. ಸಂಶಯದ ಭೂತ ಮನಹೊಕ್ಕ ಆ ಕ್ಷಣದಲ್ಲಿ ಪ್ರಥಮ ಪಾಂಡವನ ರಥ ಗಾಳಿಯಲ್ಲಿ ತೇಲುತ್ತಿದ್ದುದು ಚಣಕಾಲ ಧರೆಗುರುಳಿತ್ತು! ನಂಬಿದವರ ಸಹಾಯಕ್ಕೆ ಕಂಬದಿಂದಲೋ ಬಿಂಬದಿಂದಲೋ ಸಮಯಬಂದಾಗ ಪ್ರಕಟಗೊಳ್ಳುವುದು ಜಗನ್ನಿಯಾಮಕ ಶಕ್ತಿ. ಜನರನ್ನು ನಂಬುವ ಬದಲು ಜನಾರ್ದನನನ್ನು ನಂಬಿದರೆ ಯಾವ ವಿಪತ್ತೂ ಬಾಧಿಸುವುದಿಲ್ಲ. ಅರ್ಧನಂಬಿದರೆ, ಕಾಲುಭಾಗ ನಂಬಿದರೆ, ಪರ್ಸಂಟೇಜ್ ಲೆಕ್ಕದಲ್ಲಿ ನೂರಕ್ಕಿಂತಾ ಒಂದಂಶ ಕಮ್ಮಿ ನಂಬಿದರೆ ಕಾವ ದೇವ ನಮ್ಮನ್ನು ಕಾಯಲಾರ! ಅದೇ ಆತನ ನೀತಿ. "ಸಕಲಗ್ರಹಬಲ ನೀನೆ ಸರಸಿಜಾಕ್ಷ" ಎಂದು ಭಗವಂತನಲ್ಲೇ ಅನನ್ಯ ಶರಣಾಗತಿ ಇಟ್ಟುಕೊಂಡು ದಿನದಲ್ಲಿ ಕೊನೇಪಕ್ಷ ಅರ್ಧಗಂಟೆಯನ್ನು ಧ್ಯಾನ-ಪ್ರಾರ್ಥನೆಗಳಲ್ಲಿ ಕಳೆಯುವವರಿಗೆ ಯಾವ ಜ್ಯೋತಿಷ್ಯವೂ ಬೇಕಾಗಿಲ್ಲ, ಹಣೆಯಲ್ಲಿ ಒಮ್ಮೆ ಬರೆದದ್ದನ್ನು ತಪ್ಪಿಸಲು ಯಾವ ಜ್ಯೋತಿಷಿಯೂ ಅರ್ಹನಲ್ಲ, ಆಗುವುದು ಆಗಲೇ ಬೇಕು. ಜರುಗುವುದು ಜರುಗಲೇ ಬೇಕು. ಶುಭದಿನ.               

Thursday, July 11, 2013

ಕುವೆಂಪುವಿನ ಅದೃಷ್ಟ ಎಲ್ಲರದಾಗಲಿ ಎನ್ನುತ್ತದೆ ಮನಸ್ಸು.

 ಚಿತ್ರ ಋಣ : ಅಂತರ್ಜಾಲ 
 ಕುವೆಂಪುವಿನ ಅದೃಷ್ಟ ಎಲ್ಲರದಾಗಲಿ ಎನ್ನುತ್ತದೆ ಮನಸ್ಸು.

ಕವಿ-ಸಾಹಿತಿ-ಬರಹಗಾರರಿಗೆ ಅವರದ್ದೇ ಆದ ಲೋಕವೊಂದಿರುತ್ತದೆ. ಸಂನ್ಯಾಸಿಗಳು ಮೋಕ್ಷದ ಜಾಡುಹಿಡಿದು ಏಕಾಂಗಿಯಾಗಿ ಮುನ್ನುಗ್ಗಿದಂತೇ, ಬರಹಗಾರರು ಮನದಮೂಸೆಯಲ್ಲಿ ಟಿಸಿಲೊಡೆದ ಹೊಸ ಚಿಗುರ ಹಗುರ ಮೃದುಮಧುರ ಭಾವಗಳನ್ನಾತು ಬರಹದ ವ್ಯವಸಾಯದಲ್ಲಿ ಬೆಳೆತೆಗೆಯಲು ಏಕಾಂಗಿಯಾಗಿರಬೇಕೆಂಬುದು ಬರಹಗಾರರ ಮನದ ಬಯಕೆ. ಕುವೆಂಪು ಬರೆಯುವಾಗ ಮನೆಗೆ ಕಳ್ಳನುಗ್ಗಿ ಕೈಗೆಸಿಕ್ಕಿದ್ದನ್ನು ಕದ್ದೊಯ್ದ ಕಥೆ ನಿಮಗೆ ತಿಳಿದೇ ಇರಬಹುದು; ಆಮೇಲೆ ಕಂಪ್ಲೇಂಟು ಕೊಟ್ಟರು-ಕಾಲ ಟೆಕ್ನಾಲಜಿಯಲ್ಲಾಗಲೀ ಸಾಗಾಟದಲ್ಲಾಗಲೀ ಇಂದಿನಷ್ಟು ಮುಂದುವರಿದಿರಲಿಲ್ಲ; ಕಳ್ಳ ಸಿಕ್ಕಿಬಿದ್ದ. ಸಿಕ್ಕಿಬಿದ್ದ ಕಳ್ಳ ಪೋಲೀಸರಲ್ಲಿ ಹೇಳಿದ್ದು: "ತಾತ ಬರೆಯುತ್ತಲೇ ಇದ್ದರು ನಾನು ಬಂದಿದ್ದನ್ನು ನೋಡಿಯೂ ಅವರಿಗೆ ನಾನು ಬಂದಿದ್ದೆನೆಂಬ ಪರಿವೆಯೇ ಇರಲಿಲ್ಲ!"  ಇದು ಕುವೆಂಪು ಅವರಿಗಿದ್ದ ತಾದಾತ್ಮ್ಯತೆ.

ಸದ್ದಿರದ ಪಸುರುಡೆಯೆ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ ......

ಎಂದು ಕುವೆಂಪು ಹೇಳಿದ ಸಾಲುಗಳನ್ನು ನೆನೆದುಕೊಂಡರೆ ಮಲೆನಾಡಿಗರೇ ಧನ್ಯರು ಎನಿಸುತ್ತದೆ. ಮುಂಗಾರು ಮಳೆಬಿದ್ದು, ನೆಲವೆಲ್ಲ ಹಸಿರುಟ್ಟು-ಭೂಮಿ ಮತ್ತು ವಾತಾವರಣ ತಂಪಾಗಿ-ಸೋನೆ ಹನಿವ ಮಳೆಯಲ್ಲಿ ಗದ್ದೆ-ತೋಟಗಳಲ್ಲಿ ಕೆಲಸಕ್ಕೆ ಹೋಗಿ-ನೆನೆದುಬಂದು, ಮರದಕುಂಟೆ ಹೆಟ್ಟಿದ ಬಚ್ಚಲು ಒಲೆಯೆದುರು ಮೈಕಾಯಿಸಿಕೊಳ್ಳುತ್ತಾ ಇದ್ದ ಆ ಕಾಲಘಟ್ಟ ಅಷ್ಟೊಂದುಮಟ್ಟಿಗೆ ಈಗ ಅಲಭ್ಯವಾದರೂ, ಸಹ್ಯಾದ್ರಿಯ ಕೆಲವು ಭಾಗಗಳಲ್ಲಿ ಅನೇಕ ಕಡೆಗಳಲ್ಲಿ ತುಂಬಿಹರಿವ ತೊರೆಗಳು, ಅವುಗಳು ಧುಮ್ಮಿಕ್ಕಿದಾಗ ಜನಿಸುವ ಜಲಪಾತಗಳು, ಸುತ್ತ ಕಾನನದಲ್ಲಿ ಕೂಗುವ ಗಿಳಿ-ಗೊರವಂಕವೇ ಮೊದಲಾದ ಕಾಡುಹಕ್ಕಿಗಳು, ಜನವಿರಳ ಜಾಗದಲ್ಲಿ ಒಂಟಿ ಗುಡಿಸಲು-ಹೀಗೇ ಅದೊಂದು ಪ್ರಕೃತಿರಂಜಿತ ಶೃಂಗಾರಕಾವ್ಯ; ಮಳೆಗಾಲದ ಮಲೆನಾಡು ನಿಜಕ್ಕೂ ಸ್ವರ್ಗ. ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿ ಹುಟ್ಟಿ ಮಲೆನಾಡ ಸೊಬಗನ್ನು ಸಂಪೂರ್ಣ ಆಸ್ವಾದಿಸುವ ಅವಕಾಶ ಕುವೆಂಪು ಅವರಿಗಿತ್ತು. ತುತ್ತಿನ ಚೀಲ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಯೇನೂ ಇರದಿದ್ದರೂ ||ಉದ್ಯೋಗಂ ಪುರುಷ ಲಕ್ಷಣಂ||--ಎಂಬ ಮಾತಿನಂತೇ ಉದ್ಯೋಗಕ್ಕಾಗಿ ಮೈಸೂರಿನಲ್ಲಿ ಕುವೆಂಪು ನೆಲೆಸಿದರೂ, ಮಲೆನಾಡ ಭೂಮಿಯಲ್ಲಿ ಹುಟ್ಟಿದ ಮನದ ಮೂಲ ಕಸುವು ಅವರ ಸಾಹಿತ್ಯಕ ಜೀವನದುದ್ದಕ್ಕೂ ಅವರಿಗೆ ಬಹಳ ಅನುಕೂಲ ಕಲ್ಪಿಸಿತು.   

ಉತ್ತಮ ಬರಹಗಳು ತಾದಾತ್ಮ್ಯತೆಯುಳ್ಳ ಮನದ ತಪದ ಫಲ. ಒಂದು ಕೈಯ್ಯಲ್ಲಿ ರಿಂಗಣಿಸುವ ಮೊಬೈಲು ಹಿಡಿದು ಉತ್ತರಿಸುತ್ತಾ, ಇನ್ನೊಂದು ಕೈಯ್ಯಲ್ಲಿ ಇನ್ನೆನನ್ನೋ ಹುಡುಕಲು ಯತ್ನಿಸುತ್ತಾ ಏಕವ್ಯಕ್ತಿ-ಅನೇಕವ್ಯಕ್ತಿಗಳಾಗಿ ಬದುಕಬೇಕಾದ ಯಾಂತ್ರಿಕ ಜೀವನ ನಮ್ಮದಾಗಿದೆ; ನಾವೆಲ್ಲಾ ಇಂದು ಬರೆಯುವ ಬರಹಗಳು ತಪಸ್ಸಿಲ್ಲದೇ ಸೊರಗಿದ ಬರಹಗಳಾಗಿ ಹೊರಬರುವಂತಾಗಿದೆ. ಬರಹವೊಂದು ಕಲೆ ಎಂಬುದರ ಜೊತೆಗೆ ಬರಹವೊಂದು ತಪಸ್ಸುಕೂಡ! ವಿಫಲ ತಪಸ್ಸಿನಿಂದ ವಿಪರ್ಯಾಸವೆನಿಸುವ ಬರಹಗಳೇ ಹುಟ್ಟುತ್ತವೆ! ಬರಹದ ಮೂಲ ಉದ್ದೇಶ ಸುತ್ತಲ ಸಮಾಜವನ್ನು ಓದುಗರನ್ನು ನಮ್ಮ ಸಂಸ್ಕೃತಿಯತ್ತ ಜರುಗುವಂತೇ ಸಂಭಾಳಿಸುವುದು. ಅಸಂಸ್ಕೃತರನ್ನೂ ಸುಸಂಸ್ಕೃತರನಾಗಿ ಮಾಡಬಲ್ಲ ಚಾತುರ್ಯ ಉತ್ತಮ ಬರಹಕ್ಕಿರುತ್ತದೆ; ಸುಸಂಸ್ಕೃತರಿಗೆ ಒಂದಷ್ಟು ರಂಜನೆಯೊದಗಿಸುವುದರ ಜೊತೆಗೆ ಅಸಂಸ್ಕೃತರನ್ನು ತಿದ್ದುವ ವಿಷಯವಿಸ್ತಾರ ಬರಹಕ್ಕಿರಬೇಕು. ಅದಕ್ಕೆಂದೇ  ನಮ್ಮ ಹಿರಿಯರು ’ದೇಶ ತಿರುಗು ಇಲ್ಲಾ ಕೋಶ ಓದು’ ಎಂದಿದ್ದಾರೆ.

ಪಶ್ಚಿಮದ ದೇಶಗಳಿಗೆ ಅದೆಷ್ಟೋ ಜನ ಹೋಗಿಬರುತ್ತಾರೆ, ಹೋಗಿಬಂದಿದ್ದಾರೆ. ಆದರೆ ಕಾರಂತರು ಕಂಡ ಪಶ್ಚಿಮವೇ ವಿಶಿಷ್ಟವಾಗಿತ್ತು; ಅದನ್ನವರು ’ಅಪೂರ್ವ ಪಶ್ಚಿಮ’ದಲ್ಲಿ ಹೇಳಿಕೊಂಡಿದ್ದಾರೆ-ಅದೊಂದು ಅನುಭವದ ರಸಗಟ್ಟಿ. ಅನೆ ನಡೆದದ್ದೇ ದಾರಿ ಎಂದ ಹಾಗೇ ಕಾರಂತರು ತಮ್ಮ ಬರಹಗಳಲ್ಲಿ ತಾವು ನಡೆದದ್ದನ್ನೇ ದಾರಿಯನ್ನಾಗಿಸಿಕೊಂಡವರು. ಅಂತಹ ಕಾರಂತರು, ಇಂದಿರಾಗಾಂಧಿ ಮೀಸಾಕಾಯ್ದೆಯಲ್ಲಿ ಅನೇಕ ರಾಷ್ಟ್ರಪ್ರೇಮಿಗಳನ್ನು ಬಂಧಿಸಿ ಒಳಗಿಟ್ಟ ಸಂದರ್ಭದಲ್ಲಿ, ಕೇಂದ್ರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲು ಮುಂದಾದಾಗ "ನಿಮ್ಮ ಪ್ರಶಸ್ತಿಗಳು ನಿಮ್ಮಲ್ಲೇ ಇರಲಿ, ನನಗದರ ಅವಶ್ಯಕತೆಯಿಲ್ಲ, ದೇಶಪ್ರೇಮಿಗಳನ್ನು ಮೊದಲು ಬಂಧಮುಕ್ತಗೊಳಿಸಿ" ಎನ್ನುತ್ತಾ ವಾಪಸು ಕಳಿಸಿದರು! ಕಾರಂತರ ’ಬೆಟ್ಟದಹೂವು’ ಅರಳಿದ್ದು ಕೊಡಗಿನ ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆಯಲ್ಲಿ. ಅದನ್ನು ಅರಳಿಸುವಾಗ ಎರಡು ತಿಂಗಳುಗಳಕಾಲ ಕಾರಂತರು ಅಲ್ಲೇ ಸತತವಾಗಿ ಉಳಿದುಬಿಟ್ಟಿದ್ದರಂತೆ! ಮಂಜುನಾಥಯ್ಯನವರು ತೀರಿಕೊಂಡ ಸಂದರ್ಭದಲ್ಲಿ ಅವರನ್ನು ನೆನೆಯುತ್ತಾ, ಆಗಿನ್ನೂ ಬದುಕಿದ್ದ ಕಾರಂತರು,ಬಹಳ ಭಾವಪೂರ್ಣವಾಗಿ ನುಡಿನಮನ ಲೇಖನವೊಂದನ್ನು ಬರೆದಿದ್ದುದನ್ನು ಬಲ್ಲೆ. ’ಮೂಕಜ್ಜಿಯ ಕನಸುಗಳು’, ’ಹುಚ್ಚುಮನಸ್ಸಿನ ಹತ್ತು ಮುಖಗಳು’ ಎಂಬ ಅನುಭವ ಕಥನಗಳನ್ನೇ ಕಾದಂಬರಿಗಳನ್ನಾಗಿಸಿದ ಕಾರಂತರು ’ಚೋಮನ ದುಡಿ’ಯಿಂದ ಸದ್ದನ್ನೂ ಹೊರಡಿಸಿದವರು. ಮೇಲಾಗಿ ’ಈ ಜಗತ್ತು’ ಎಂಬ ಐದು ಬೃಹತ್ ಸಂಪುಟಗಳ ಖಗೋಲ ಗ್ರಂಥವನ್ನು ಸಮಾಜಕ್ಕೆ ಕರುಣಿಸಿದವರು. ಕಾರಂತರ ಆ ಕೃತಿಗಳಲ್ಲಿ ನನ್ನನ್ನೇ ನಾನು ಮರೆತಿದ್ದೆ.

ವ್ಯಕ್ತಿ ಉತ್ತಮನಾಗುತ್ತಾ ಲೋಕದ ಚಿಲ್ಲರೆ ಜಂಜಾಟದ ವಿಷಯಗಳನ್ನು ಆದಷ್ಟೂ ಮರೆಯಬೇಕು; ಅದು ಅಧೋಲೋಕ, ಅಲ್ಲಿಯೇ ಇದ್ದುಬಿಡುವುದರಿಂದ ನಮ್ಮ ಮನಸ್ಸು ಹಾಳಾಗಿಹೋಗುತ್ತದೆ. ಸಂಸ್ಕಾರಯುತ ಜೀವನಕ್ರಮದಿಂದ ಸಹಬಾಳ್ವೆ ಸಾಧ್ಯವಾಗುತ್ತದೆ. ಸಮಾಜವೇ ಎದ್ದುನಿಂತು ಸಂಸ್ಕಾರವಂತನನ್ನು ಗೌರವಿಸುತ್ತದೆ. ನಾಲ್ಕುಜನ ಸಂಸ್ಕಾರವಂತನ ಮಾತಿಗೆ ಓ ಗೊಡುತ್ತಾರೆ, ಕೆಲವೊಮ್ಮೆ ಸಲಹೆಗಳನ್ನೂ ಕೇಳುತ್ತಾರೆ. ಸಂಸ್ಕಾರಗೊಂಡ ಮನಸ್ಸು ಆತ್ಮೋನ್ನತಿಗೆ ಕಾರಣವಾಗುತ್ತದೆ. ಸಂಕೀರ್ಣತೆ ತೊಲಗಿ ಸರಳತೆ ಮೈಗೂಡುತ್ತದೆ. ಯಾವುದರ ಮೇಲೂ, ಯಾರಮೇಲೂ ಅವಲಂಬಿತ ಬದುಕು ಅದಾಗಿರುವುದಿಲ್ಲ! ಕಾರು ಇದ್ದರೂ ಸರಿ, ಬಸ್ಸು ಇದ್ದರೂ ಸರಿ, ಏನೇ ಇರದೇ ’ವಿನೋಬಾ ಸರ್ವಿಸ್ಸಾ’ದರೂ ಸರಿ!-ಯಾವುದಕ್ಕಾದರೂ ವ್ಯಕ್ತಿ ಸಿದ್ಧ; ಪ್ರಯಾಣಿಸಿ ಗಮ್ಯ ತಲ್ಪಬೇಕು ಎಂಬುದಷ್ಟೇ ಗುರಿ. ಶತಾವಧಾನಿ ಡಾ|ಗಣೇಶರು ಇವತ್ತಿಗೂ ಸ್ವಂತಕ್ಕಾಗಿ ಒಂದು ವಾಹನ ಇಟ್ಟುಕೊಂಡಿಲ್ಲ. ಎಷ್ಟೇ ಕಾರ್ಯಕ್ರಮಗಳ ಒತ್ತಡವಿದ್ದರೂ ಸಮಯ ಪರಿಪಾಲಿಸುವುದರಲ್ಲಿ ತಪ್ಪಿಲ್ಲ. ಹಾಗೆನೋಡಿದರೆ ಅವರಿಗೆ ದಿನದ ೨೪ ಗಂಟೆಯೂ ಸಾಲುತ್ತಿಲ್ಲ! ಜ್ಞಾನದ ಗಣಿಯಾದ ಅವರ ಸರಳ ಬದುಕನ್ನು ನೆನೆಯುವಾಗ ನಾವೆಲ್ಲಾ ಎಳ್ಳಿನಷ್ಟೂ ಪ್ರಯೋಜನಕಾರಿಗಳಲ್ಲವೆನಿಸುತ್ತದೆ. ಗಣೇಶರು ಯಾಕೆ ಹಾಗಿದ್ದಾರೆ ಎಂದರೆ ಅದೊಂದು ತುಂಬಿದಕೊಡ! ವಿಶ್ವದ ಅನೇಕ ಭಾಷೆಯ, ಭಾರತದ ಬಹುಭಾಷೆಯ ಉತ್ತಮೋತ್ತಮ ಪುಸ್ತಕಗಳನ್ನೆಲ್ಲಾ ಓದುತ್ತಾ, ಆ ಹಸಿರು ಹುಲ್ಲುಗಾವಲಿನಲ್ಲಿ ಮೆಂದ ಅವರ ಮನಸ್ಸು ಪಕ್ವವಾಗಿಬಿಟ್ಟಿದೆ; ಸರಳತೆ ಮೈಗೂಡಿಬಿಟ್ಟಿದೆ.

ಉತ್ತಮ ಕೃತಿಗಳ ಓದು ನಮ್ಮನ್ನು ಸಂಸ್ಕಾರವಂತರನ್ನಾಗಿಸುತ್ತದೆ. ಉತ್ತಮರೊಡನಾಟ ನಮ್ಮನ್ನು ಮೇಲಕ್ಕೆತ್ತುತ್ತದೆ-ಅದು ಊರ್ಧ್ವಲೋಕ! ಅಧೋಲೋಕ ಎಂಬುದು ತಿಪ್ಪೆಯ ಜೀವನ, ಊರ್ಧ್ವಲೋಕವೆಂಬುದು ಉಪ್ಪರಿಗೆಯ ಜೀವನ. ಭಾರತದ ಹಿರಿಯ ಕವಿ-ಸಾಹಿತಿಗಳೆಲ್ಲಾ ಅದರಲ್ಲೂ ಸಂಸ್ಕೃತ ಕವಿಗಳೆಲ್ಲಾ ಸ್ವತಃ ದಾರ್ಶನಿಕರಾಗಿದ್ದಾರೆ. ಅಂಥವರ ಕೃತಿಗಳನ್ನು ಓದುತ್ತಿರುವಂತೇ ನಮ್ಮ ಬುದ್ಧಿ-ನಮ್ಮ ಅಪಕ್ವ ಮನಸ್ಸು ಎಷ್ಟು ಸಂಕುಚಿತ ಮತ್ತು ದುರ್ಬಲ ಎಂಬುದು ಗೊತ್ತಾಗುತ್ತದೆ. ಬರಹಗಾರರು ಎಂದುಕೊಳ್ಳುವ ನಾವು ನಿಜವಾಗಿಯೂ ಅವರಷ್ಟು ಜ್ಞಾನವಂತರೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕುವೆಂಪು ಅವರ ಕಾಲದ, ಕಾರಂತರ ಕಾಲದ ಮಲೆನಾಡಿನ ಯಾ ಕರಾವಳಿಯ ರಮ್ಯಮನೋಹರ ದೃಶ್ಯಾವಳಿಗಳು ನಗರದಲ್ಲೆಲ್ಲೋ ಇಂದು ಬರೆಯುತ್ತ ಕೂರುವ ನಮಗೆ ಸಿಗುವುದು ಕಷ್ಟ. ಈ ಇಬ್ಬರ ಕಾಲದಲ್ಲೇ ಪ್ರಕೃತಿ ಹೀಗಿತ್ತೆಂದರೆ ಇನ್ನು ರಾಜರುಗಳ ಕಾಲದಲ್ಲಿ ಕವಿ-ಸಾಹಿತಿಗಳಿಗೆ ಬೆಂಬಲವೆಷ್ಟಿದ್ದಿರಬಹುದು? ಧಾರಾನಗರಿಯ ರಾಜಾ ಭೋಜನ ಆಸ್ಥಾನದಲ್ಲಿ ಮಹಾಕವಿ ಕಾಳಿದಾಸನಿದ್ದ; ತನ್ನ ಕಾವ್ಯ-ಕೃತಿಗಳಿಂದ ಭೋಜರಾಜನನ್ನೇ ತನ್ನ ಸ್ನೇಹಿತನನ್ನಾಗಿ ಪಡೆದ ಅದೃಷ್ಟ ಕಾಳಿದಾಸನದ್ದು! ಭಾರತದ ಭವ್ಯ ಇತಿಹಾಸದಲ್ಲಿ ಸಂಸ್ಕೃತದ ದಂಡಿ, ಮಾಘ, ಅಶ್ವಘೋಷ, ವರಾಹಮಿಹಿರ, ಸಾಯಣ, ಬಾಣ, ಮೊದಲಾದವರೂ ಕನ್ನಡದಲ್ಲಿ ಪಂಪ, ರನ್ನ, ಪೊನ್ನ, ಜನ್ನ, ರಾಘವಾಂಕ, ಹರಿಹರ, ಲಕ್ಷ್ಮೀಶ, ಕುಮಾರವ್ಯಾಸಾದಿ ಅನೇಕ ಮಹಾಕವಿಗಳ, ಕೃತಿಕಾರರ ಸಾಲು ಕಾಣಸಿಗುತ್ತದೆ.  

ಆವ ಜನ್ಮದ ಋಣವೊ ಮತ್ತಿ
ನ್ನಾವ ಪುಣ್ಯದ ಫಲವೊ ಭೂಮಿಯ
ಭಾವ ಬಂಧನ ಸೆಳೆದುತಂದಿತು ಕನ್ನಡಕೆ ನನ್ನಂ|
ಜೀವತಂತುಗಮೃತ ಜ್ಞಾನವ
ನೀವ ಸಖ ಗುರುಹಿರಿಯರೆಲ್ಲರ
ಸೇವಿಪುದು ಡಾರಾಗಣೇಶರನೆಲ್ಲದಕು ಮುನ್ನಂ ||   [--ಸ್ವರಚಿತ ]

ಇಂದಿನ ಕಲುಷಿತ ರಾಜಕೀಯದಲ್ಲಿ, ಬರೆದದ್ದೇ ಸಾಹಿತ್ಯವೆಂದು ಕೂಗುವ ಕುರಿಮೆಂದೆಯಲ್ಲಿ ನಿಜವಾದ ಬರಹಗಾರರಿಗೆ, ಡಾ|ಗಣೇಶರಂತಹ ಪ್ರಾತಃಸ್ಮರಣೀಯರಿಗೆ ಸರಕಾರದ ಬೆಂಬಲವಿರುವುದಿಲ್ಲ. ’ಜಾತಿಯಾಧಾರಿತ ಮೀಸಲಾತಿಯುಳ್ಳ ಜಾತ್ಯಾತೀತವೆಂಬ ಘನ ಸರಕಾರ’ದಲ್ಲಿ ಪ್ರತಿಭೆ ಲೆಕ್ಕಕ್ಕಿಲ್ಲ, ಜಾತಿಯಷ್ಟೇ ಆಧಾರ. ಕಂಡಿದ್ದನ್ನು ಹೇಳುವ ಮನಸ್ಸಾಗುತ್ತದೆ, ಹೇಳಿದರೆ ಕೆಲವರಿಗೆ ಬೇಸರವಾಗಲೂಬಹುದು. ಗಣೇಶರಂತಹ ಪ್ರತಿಭೆ ವಿದೇಶಗಳಲ್ಲಿದ್ದರೆ ಅವರ ಮೆದುಳಿನಮೇಲೆ ಅದೆಷ್ಟು ಸಂಶೋಧನೆಗಳು ನಡೆಯುತ್ತಿದ್ದವೋ ಅರಿಯೆ! ಇಂಥವರು ಅಲ್ಲಿದ್ದರೆ ಅಲ್ಲಿನ ಸರಕಾರ ಬೇಕಷ್ಟು ಸವಲತ್ತುಗಳನ್ನು ಕಲ್ಪಿಸುವುದರ ಜೊತೆಗೆ ಉಪಜೀವಿತದ ಯಾವುದೇ ಸಮಸ್ಯೆಗಳಿಂದಲೂ ಅವರ ಜ್ಞಾನಯಜ್ಞಕ್ಕೆ ಅಡ್ಡಿಯಾಗದಂತೇ ನೋಡಿಕೊಳ್ಳುತ್ತಿತ್ತು. ಮಹಾನಗರಿಯ ಕಾಂಕ್ರೀಟ್ ಕಾಡುಗಳಲ್ಲೇ ’ಸದ್ದಿರದ ಪಸುರುಡೆ ಮಲೆನಾಡ ಬನ’ದಂತಹ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಅವರು ನಡೆಸುವ ಕಾವ್ಯಕೃಷಿ ಅನ್ಯಾದೃಶ. ನಡೆದಾಡುವ ವಿಶ್ವಕೋಶದಂತಿರುವ ಅವರು ಸರಕಾರಕ್ಕೆ ಕಾಣಲೇ ಇಲ್ಲ! ಸರಕಾರ ಗಣಿಸಿಲ್ಲವೆಂದು ಗಣೇಶರು ಯಾರಲ್ಲೂ ಹೇಳಿದ್ದಿಲ್ಲ, ಹೇಳುವುದೂ ಇಲ್ಲ; ನಾನು ಇಲ್ಲಿ ಹೀಗೆ ಬರೆದಿದ್ದನ್ನು ಕಂಡರೂ/ತಿಳಿದುಕೊಂಡರೂ ಆಕ್ಷೇಪಿಸಿಯಾರು. 

ಶರೀರದಲ್ಲಿ ಎಲ್ಲಾ ಅಂಗಗಳೂ ಬೇಕು. ಬರೇ ಕಣ್ಣು, ಬರೇ ಮೂಗು, ಬರೇ ಬಾಯಿ, ಬರೇ ಕಿವಿ ಇದ್ದರೆ ಸಾಲುತ್ಯೇ? ಕೆಲಸಮಾಡಲು ಕೈಯ್ಯಿರಬೇಕು, ನಡೆದಾಡಲು ಕಾಲಿರಬೇಕು..ಹೀಗೇ ಆಯಾಯ ಅವಯವಗಳು ಆಯಾ ಕೆಲಸಗಳಿಗೆ ಬೇಕೇ ಬೇಕು. ಸಮಾಜವೆಂಬ ಶರೀರಕ್ಕೆ ಅದರ ಅವಯವಗಳಾದ ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗ ಇವೆಲ್ಲಾ ಇರುವಂತೇ ಸಂಗೀತ-ಸಾಹಿತ್ಯ-ಕಲೆಗಳೂ ಬೇಕು. ||ಸಂಗೀತ ಸಾಹಿತ್ಯ ಕಲಾ ವಿಹೀನಾಂ ಸಾಕ್ಷಾತ್ ಪಶೂನಾಂ ಪರ ಪುಚ್ಚ ವಿಹೀನಃ|| -ಎಂದು ನಮ್ಮ ಪೂರ್ವಜರು ಹೇಳಿದ್ದೇಕೆಂದರೆ, ಸಂಗೀತ-ಸಾಹಿತ್ಯ-ಕಲೆಗಳಿಂದ ನಮ್ಮ ಬದುಕು ಅಧೋಲೋಕದಿಂದ ಊರ್ಧ್ವಲೋಕದೆಡೆಗೆ ತೆರಳಲು ಅನುಕೂಲವಾಗುತ್ತದೆ. ಸಮಾಜ ಉತ್ತಮ ಸಂಸ್ಕಾರವನ್ನು ಪಡೆಯಲಿಕ್ಕೆ ಸಹಕರಿಸುವುದರ ಜೊತೆಗೆ ಒತ್ತಡದ ಬೇನೆಗಳನ್ನು ನಿವಾರಿಸುವಲ್ಲಿ ಅವು ಫಲಕಾರಿಯಾಗಿವೆ. ಕುವೆಂಪು ಅವರು ಪಡೆದ ನೈಸರ್ಗಿಕ ದೃಶ್ಯಾವಳಿಗಳು, ಅಷ್ಟೊಂದು ಸಮಸ್ಯಾರಹಿತ  ಸ್ವಾತಂತ್ರ್ಯ ಇಂದಿನ ಕವಿಗಳಿಗೆ ಸಿಗುತ್ತಿಲ್ಲ; ಅಂತಹ ಅದೃಷ್ಟ ಬರಹಗಾರರಿಗೂ, ಬರಹಗಳನ್ನು ಪ್ರೀತಿಯಿಂದ ಓದುವವರಿಗೂ ಲಭಿಸಲಿ ಎಂಬುದು ಇಂದಿನ ಹಾರೈಕೆ, ಶುಭದಿನ.     


Friday, July 5, 2013

ಮೊಟ್ಟೆಯೊಡೆದಷ್ಟುದಿನ


ಮೊಟ್ಟೆಯೊಡೆದಷ್ಟುದಿನ
ರಥವಿಳಿದು ನಡೆತಂದು ಭಕ್ತಿಯೊ
ಳತಿಶಯದಿ ನಮಿಸುತಲಿ ಪದತಲ
ನುತಿಪೆ ಭಾರತ ಕವಿಜನಂಗಳ ಸತತವಾದಿಯಲಿ |
ಅತುಳಭುಜಬಲ ಕಾಳಿದಾಸನ
ಚತುರಮತಿಯಾ ನಾರಣಪ್ಪನ
ಪಥಿಕ ನಾನೆನೆಸುತ್ತ ಬೇಡುವೆ ಮತಿಯ ವೇದಿಯಲಿ || 

[ಸ್ವರಚಿತ ಭಾಮಿನಿಯೊಂದಿಗೆ ಭಾರತದ ಕವಿಪರಂಪರೆಯನ್ನು ನೆನೆಸಿಕೊಳ್ಳುತ್ತಿದ್ದೇನೆ. ಸಾಂಪ್ರದಾಯಿಕ ಕಾವ್ಯರಥವನ್ನೇರಿಯೇ ಇರುವ ನಾನು, ಆಗಾಗ ಆ ರಥವಿಳಿದು ಬಂದು, ಅಲ್ಲಿಂದ ನಾನೆಸೆವ ಕಾವ್ಯಬಾಣಗಳು ಕಾವ್ಯಾಸಕ್ತರಿಗೆ ನಾಟಿ-ಮುದವೀಯಲಿ ಎಂಬ ಪ್ರಾರ್ಥನೆಯನ್ನು ಆದಿಕವಿಗಳಿಂದ ಹಿಡಿದು ಇಂದಿನ ಸಾಂಪ್ರದಾಯಿಕ ಹಿರಿಯ ಕವಿಗಳ ಪದತಲದಲ್ಲಿ ಅರ್ಪಿಸಿ, ಕಾವ್ಯ ರಚನೆಗೆ ಸು-ಮತಿಯನ್ನು ಬೇಡುತ್ತಿದ್ದೇನೆ ಎಂಬುದು ಮೇಲಿನ ಪದ್ಯದ ಅರ್ಥ. 

ಕಾವಿಕಾವ್ಯ ಪರಂಪರೆಯಲ್ಲಿ, ತನ್ನ ಅಮೋಘವಾದ ಪರಿಕಲ್ಪನೆಗಳಲ್ಲಿ, ೨೪ಕ್ಕೂ ಅಧಿಕ ಛಂದಸ್ಸುಗಳನ್ನು ಬಳಸಿ, ಉಪಮೆ-ಪ್ರತಿಮೆ ಮತ್ತು ಪ್ರತಿಕೃತಿಗಳಿಂದ ಜನಮನಸೂರೆಗೊಂಡ ಮಹಾಕವಿ ಕಾಳಿದಾಸನಿಗೆ ಅನಂತ ನಮನಗಳು. ಇಂದಿನ ಕಾವ್ಯವಿನೋದಿಗಳಿಗೆ ಛಂದಸ್ಸು-ವ್ಯಾಕರಣ-ಪ್ರಾಸ ಇವೆಲ್ಲ ರುಚಿಸದ ಅಡುಗೆ. ನವ್ಯ, ನವ್ಯೋತ್ತರ ಮತ್ತು ನವೋದಯ ಕಾವ್ಯಗಳ ಭಯಂಕರ ಚಂಡಮಾರುತ ಬೀಸಿದರೂ ಕನ್ನಡಮ್ಮ ತನ್ನತನವನ್ನು ಉಳಿಸಿಕೊಳ್ಳಲು ಅಲ್ಲಲ್ಲಿ ತನ್ನ ಸ್ವಸ್ವರೂಪದ ಅಭಿಮಾನಿಗಳನ್ನು ಉಳಿಸಿಕೊಂಡೇ ಇರುತ್ತಾಳೆ. ಅಂತಹ ಅಪ್ಪಟ ಕನ್ನಡಾಭಿಮಾನಿ ಬಳಗವನ್ನು ನಾನು ಆಗಾಗ ನೆನೆದುಕೊಳ್ಳುವುದಿದೆ. ಶತಾವಧಾನಿ ಡಾ|ರಾ.ಗಣೇಶರ ಮಾರ್ಗದರ್ಶನದಲ್ಲಿ ’ಪದ್ಯಪಾನ’ದಲ್ಲಿ [http://padyapaana.com] ಪದ್ಯ)ಪಾನಮತ್ತರನೇಕರು ವಿಜೃಂಭಿಸುತ್ತಲೇ ಇರುವುದು ಖುಷಿಕೊಟ್ಟ ವಿಚಾರ. ಅವಧಾನಿ ಗಣೇಶರಿಗೆ ಸಾಷ್ಟಾಂಗ ನಮಸ್ಕಾರಗಳು ಮತ್ತು ಹೊಸಪೀಳಿಗೆಯ ಸಾಂಪ್ರದಾಯಿಕ ಕವಿಗಳೆಲ್ಲರಿಗೂ ನನ್ನ ಅಭಿನಂದನೆಗಳು.  

ಪ್ರಾಸಬದ್ಧ ಕವನಗಳನ್ನು ಬರೆಯುವ ಮನಕ್ಕೆ ಎಟಕುವ ವಿಷಯವಸ್ತುಗಳು ಹಲವು; ಅಂಥವುಗಳಲ್ಲಿ ಒಂದೊಂದು ವಿಷಯ ಒಂದೊಂದು ವಿಧದ ಭಾವದಿಂದ ಕೂಡಿರುತ್ತದೆ. ಹಡೆದಮ್ಮನಿಗೆ ತನ್ನ ಮಗುವನ್ನು ರಕ್ಷಿಸುವುದು ದೇವರೊಪ್ಪಿಸಿದ ಜವಾಬ್ದಾರಿ! ಹಲವು ಸಂಕಷ್ಟ ಮತ್ತು ಸಂದಿಗ್ಧಗಳ ನಡುವೆಯೂ ಪ್ರತಿಯೊಂದೂ ಜೀವಪ್ರಭೇದಕ್ಕೂ ಸಂತಾನದ ಪಾಲನೆ ಪೋಷಣೆಯ ವ್ಯಾಮೋಹ ಸಹಜ. ಹಸಿದ ತನ್ನ ಮರಿಗಳಿಗೆ ಹದ್ದು-ಗಿಡುಗಗಳು ಸಣ್ಣ ಹಕ್ಕಿಯ ಮೊಟ್ಟೆ-ಮರಿ, ಇಲಿ ಇವೇ ಮೊದಲಾದವುಗಳನ್ನು ಆಹಾರವಾಗಿ ಕೊಡುತ್ತವೆ. ಸಣ್ಣ ಹಕ್ಕಿಗಳು ತಮ್ಮ ಮರಿಗಳಿಗೆ ಹುಳ-ಹುಪ್ಪಟೆ-ಜಿರಲೆ ಇತ್ಯಾದಿಗಳನ್ನು ಆಹಾರವಾಗಿ ನೀಡುತ್ತವೆ. ಹುಳ-ಹುಪ್ಪಟ-ಜಿರಲೆಗಳಿಗೆ ಇನ್ನೂ ಸಣ್ಣಗಿನ ಕೆಲವು ಜೀವ ಪ್ರಭೇದಗಳು ಆಹಾರವಾಗಿರುತ್ತವೆ. ಇಲ್ಲಿ ಪ್ರತಿಯೊಂದೂ ವರ್ಗದ ಅಮ್ಮನಿಗೆ ತನ್ನ ಕಂದಮ್ಮಗಳ ಹಸಿವು ಮಾತ್ರ ಗೊತ್ತು, ಬೇರೆ ಯಾವುದೇ ಜೀವವರ್ಗ ಬದುಕಲಿ ಅಥವಾ ಸಾಯಲಿ ಆ ಬಗೆಗೆ ಅವು ಚಿಂತಿಸುವುದಿಲ್ಲ! ಸಣ್ಣ ಹಕ್ಕಿಯ ಮರಿಯನ್ನು ತಿಂದರೆ ಅದರ ಅಮ್ಮನಿಗೆ ಆಗುವ ನೋವು ಹದ್ದು-ಗಿಡುಗಗಳಿಗೆ ತಿಳಿಯದು! ಒಂದೊಮ್ಮೆ ತಿಳಿದರೂ, ಕ್ರೌರ್ಯವೇ ಅವುಗಳ ಜೀವನ. ನವ್ಯ-ನವೋದಯ-ನವ್ಯೋತ್ತರಗಳೆಂಬ ಕಾವ್ಯರಣಹದ್ದುಗಳು ಸಾಂಪ್ರದಾಯಿಕ ಕಾವ್ಯಹಕ್ಕಿಯ ಮರಿಗಳನ್ನು ಕುಕ್ಕುತ್ತಲೇ ಇದ್ದರೂ ಕಾವ್ಯಹಕ್ಕಿಗಳ ವಂಶಕ್ಕೆ ಅಳಿವೇನೂ ಇಲ್ಲವೆಂಬುದು ಇಲ್ಲಿನ ಹೋಲಿಕೆ. ಇಂಥಾದ್ದೊಂದು ಚಿತ್ರಣ ಮನದಲ್ಲಿ ಮೂಡಿದಾಗ ನನ್ನೊಳಗಿನ ಕವಿ ಬರೆದ ಕವನ ಇಲ್ಲಿದೆ, ದಯಮಾಡಿ ಒಪ್ಪಿಸಿಕೊಳ್ಳಿ:]

ಮೊಟ್ಟೆಯೊಡೆದಷ್ಟುದಿನ ಮರಿಯೆಂಬ ಕರುಣೆಯಲಿ
ಹೊಟ್ಟೆ ತುಂಬಿಸಿ ಹೊತ್ತು ಹೊತ್ತಿನಲ್ಲಿ
ರಟ್ಟೆ ಬಲಿಯುವೊಲಿನಿತು ಬಲುಕಷ್ಟದಲಿ ಬೆಳೆಸಿ
ಜಟ್ಟಿ ಹದ್ದುಗಳಟ್ಟಿ ಕುತ್ತಿನಲ್ಲಿ

ಅಟ್ಟಹಾಸದಿ ಹಾಯ್ವ ಗಿಡುಗ ಗೂಬೆಗಳನ್ನು
ಮಟ್ಟಸದಿ ಬೆವರಿಳಿಸಿ ಎವೆಯಿಕ್ಕದೇ
ಬೆಟ್ಟದಲಿ ಬಣಿವೆಯಲಿ ಥಟ್ಟನಿಳಿದೇಳುತ್ತ
ಪುಟ್ಟನಿಗೆ ಗುಟುಕಿಡುತ ಕಹಿಕಕ್ಕದೇ

ಸಟ್ಟನೇ ಹಾವೊಂದು ಸದ್ದುಮಾಡದೆ ಬರಲು
ಕುಟ್ಟಿ ಕೊಕ್ಕಿನೊಳದರ ಒದ್ದೋಡಿಸಿ
ದಟ್ಟಮಳೆ ಸುರಿವಂದು ರೆಕ್ಕೆಮಾಡನು ಹಿಡಿದು
ಗಟ್ಟಿಗಾಳಿಯ ಭಯದ ಸದ್ದಡಗಿಸಿ ! 

ಕಟ್ಟೆ ಕೆರೆಗಳು ತುಂಬಿ ಭೋರ್ಗರೆವ ನೀರುಕ್ಕಿ
ನಟ್ಟಿರುಳು ನಿಡುಸುಯ್ದು ದಿನವಗಳೆದು
ಹುಟ್ಟಿಸಿದ ಪರಮಾತ್ಮ ಭುವಿಯ ಬಂಧನವಿಕ್ಕಿ
ಪುಟ್ಟ ಅಮ್ಮನ ಋಣದ ಗೆರೆಯನೆಳೆದು  


Tuesday, July 2, 2013

ಗುಟ್ಟೊಂದು ಹೇಳುವೆ-’’ಟೆಕ್ಕಾಣಿ’’ ತಿಳಿಯುವರೇ!


ಗುಟ್ಟೊಂದು ಹೇಳುವೆ-’’ಟೆಕ್ಕಾಣಿ’’ ತಿಳಿಯುವರೇ!

ಪುಟ್ಟಾಣಿ ಮಕ್ಕಳಿಗೆ ಗುಟ್ಟನ್ನು ಹೇಳುವ ಕಾಲ ಹೊರಟ್ಹೋಯ್ತು!! ಕಾಲದ ಮಹಿಮೆ ಹೇಗಿದೆಯೆಂದರೆ ಎಷ್ಟೋ ಮನೆಯಲ್ಲಿ ಪುಟ್ಟಾಣಿ ಮಕ್ಕಳೇ ಅಪ್ಪ-ಅಮ್ಮಂದಿರಿಗೆ ಕೆಲವನ್ನು ಹೇಳಿಕೊಡುತ್ತಾರೆ. ನಂಬುವುದಾದರೆ ನಂಬಿ ಬಿಟ್ಟರೆ ಬಿಡಿ-7 ವರ್ಷದ ನನ್ನ ಮಗ ಯಾವ ಮೊಬೈಲ್ ಹ್ಯಾಂಡ್ಸೆಟ್ ತೆಗೆದುಕೊಂಡರೂ ಕ್ಷಣಾರ್ಧದಲ್ಲಿ ಆಪರೇಟ್ ಮಾಡುತ್ತಾನೆ; ಆದರೆ ನನಗೆ ಅಷ್ಟುಬೇಗ ಅವು ಆಪ್ತವಾಗುವುದಿಲ್ಲ. "ಅಪ್ಪಾ, ಹಾಗಲ್ಲಾ..ಹೀಗೆ" ಎಂದು ಆತ ತೋರಿಸಿಕೊಡುವಾಗ ಆತನ ತಲೆ ಎಷ್ಟು ಓಡುತ್ತಿದೆ ಎಂದುಕೊಂಡರೂ ಓದಿಗಿಂತ ಇತರ ಚಟುವಟಿಕೆಗಳಲ್ಲಿ ಮಕ್ಕಳು ಜಾಸ್ತಿ ಆಸಕ್ತರಾಗುತ್ತಿದ್ದಾರೆ ಎಂಬ ವಿಷಯ ಮನದಮೂಸೆಯಲ್ಲಿ ರಿಂಗಣಿಸುತ್ತದೆ. ದಿನಮಾನ ಹೇಗಿದೆ ಎಂದರೆ ಎಲ್ಲೆಲ್ಲೂ ಗಣಕ ತಂತ್ರಾಂಶದ್ದೇ ಆಳ್ವಿಕೆ, ತಂತ್ರಾಂಶವಿಲ್ಲದೇ ಯಾವ ಕೆಲಸ ಮಾಡಿಕೊಳ್ಳಹೋದರೂ ಅದು ಅಪೂರ್ಣವಾಗುತ್ತದೆ ಎನ್ನಬಹುದು. ಎಲ್ಲಾ ವೈಜ್ಞಾನಿಕ ಆವಿಷ್ಕಾರಗಳಂತೇ ತಂತ್ರಾಂಶ ಪೂರಕವೂ ಹೌದು ಮತ್ತು ಮಾರಕವೂ ಹೌದು! ಉದಾತ್ತ ಧ್ಯೇಯಗಳಿಂದ ಬಳಸುವಾಗ ಪೂರಕವಾಗಿದ್ದರೆ ದುರುದ್ದೇಶಗಳಿಂದ ಬಳಸುವಾಗ ಮಾರಕವಾಗುತ್ತದೆ. ತಂತ್ರಾಂಶಗಳನ್ನವಲಂಬಿಸಿ ನಡೆಯುವ ಗಣಕಯಂತ್ರಗಳ ಮಾಮೂಲಿ ನಡೆಯನ್ನೇ ಬದಲಿಸಬಹುದಾದ ಸಾಧ್ಯಾಸಾಧ್ಯತೆಗಳ ಗುಟ್ಟನ್ನು ರಟ್ಟುಮಾಡುವುದೇ ಈ ಕಥೆ:

ಬಹುದಿನಗಳ ಕಾಲ ಅನಾಥವಾಗಿ ಬಿದ್ದಿದ್ದ ಈ ಕಥೆಯ ನಿಜನಾಮಧೇಯ ‘’ಎಥಿಕಲ್ ಹ್ಯಾಕಿಂಗ್’’ ಎಂದು; ಯಾಕೋ ಹ್ಯಾಕಿಂಗ್ ಎಂಬ ಹೆಸರೇ ಹಲವರನ್ನು ಹೆದರಿಸುತ್ತಿರುವುದರಿಂದ ಅನಾಮತ್ತಾಗಿ ಅದಕ್ಕೆ ಬೇರೇ ಶೀರ್ಷಿಕೆ ಕೊಟ್ಟು ಪೂರ್ವಾಶ್ರಮದ ಹೆಸರು ’ಎಥಿಕಲ್ ಹ್ಯಾಕಿಂಗ್’ ಎಂದಿತ್ತು ಎಂಬುದನ್ನು ನಿಮಗೆ ಈಗಷ್ಟೇ ಹೇಳುತ್ತಿದ್ದೇನೆ. ಜೊತೆಗೆ ಇನ್ನಷ್ಟು ಊರೊಟ್ಟಿನ ಗೊಜ್ಜು-ಚಟ್ನಿ ಎಲ್ಲಾ ಇಟ್ಟಿರುವುದರಿಂದ ಇದಕ್ಕೆ ಬರೇ ’ಎಥಿಕಲ್ ಹ್ಯಾಕಿಂಗ್’ ಹೆಸರೂ ಸರಿಹೊಂದುವುದಿಲ್ಲ ಬಿಡಿ. ಇರಲಿ, ವಿಷಯಕ್ಕೆ ಬಂದುಬಿಡೋಣ. ನಮ್ಮಲ್ಲಿ ಗಣಕಯಂತ್ರದ ಸಾಮಾನ್ಯ ಬಳಕೆದಾರರನೇಕರಿಗೆ ವೈರಸ್ ಎಂದರೇನು ಎಂಬುದರ ಬಗ್ಗೇನೆ ಸರಿಯಾದ ಮಾಹಿತಿಯಿಲ್ಲ! ಮನುಷ್ಯರಿಗೆ  ಹುಷಾರಿಲ್ಲದಾಗ, ಜ್ವರಬಂದಾಗ ಕೆಲವೊಮ್ಮೆ ’ವೈರಲ್ ಫೀವರ್’ ಎಂದೆಲ್ಲಾ ಮಾತನಾಡುತ್ತೇವಲ್ಲಾ ಅದರಂತೇ ಕಂಪ್ಯೂಟರಿಗೆ ಯಾವುದೋ ರೀತಿಯ ಜ್ವರಹತ್ತುತ್ತದೆ ಎಂದುಕೊಳ್ಳುವವರೇ ಬಹಳಜನ ಇದ್ದಾರೆ! "ವೈರಸ್ ಬಂದರೆ ಏನೇನು ತಿಂದುಹಾಕಿಬಿಡುತ್ತದೋ ಯಾರಿಗೆ ಗೊತ್ತು?" ಎಂದು ಅದೆಷ್ಟೋ ಜನ ನನ್ನಲ್ಲಿ ಹೇಳಿದ್ದುಂಟು. ವೈರಸ್ ಎಂದರೆ ಕಣ್ಣಿಗೆ ಕಾಣದ ಕೀಟಾಣು ಎಂದುಕೊಂಡು ಕಥೆ ಕೊರೆಯಲು ಆರಂಭಿಸಿದವರ ಮಾತುಗಳನ್ನು ನೆನೆಸಿಕೊಂಡರೆ ಏಕದಮ್ 72 ಗಂಟೆಗಳ ಸತತ ನಗುವನ್ನು ಏಕಾಏಕಿಯಾಗಿ ತಂದುಕೊಳ್ಳಬಹುದು! ಸದ್ಯ, ಅಂಥವರು ಮೆಡಿಕಲ್ ಶಾಪ್ ನಿಂದ ಯಾವ ಮಾತ್ರೆಗಳನ್ನು ತರಬೇಕೆಂದು ಮಾತ್ರ ಕೇಳಲಿಲ್ಲ. 

ವೈರಸ್ ಎಂಬುದಕ್ಕೆ ಆಂಗ್ಲಭಾಷೆಯಲ್ಲಿ ಒಂದೇ ವಾಕ್ಯದಲ್ಲಿ ಸರಳವಾಗಿ ತಿಳಿಸುವುದಾದರೆ:Virus is also a software, destructive in nature[ವೈರಸ್ ಎಂಬುದು ಕೂಡ ಒಂದು ತಂತ್ರಾಶ, ಹಾಳುಗೆಡಹುವುದೇ ಅದರ ಉದ್ದೇಶ.] ಮನುಷ್ಯ ಶರೀರಕ್ಕೆ ದಾಳಿ ಇಡುವ ವೈರಾಣುವಿಗೂ ಕಂಪ್ಯೂಟರ್ ವೈರಸ್ಸಿಗೂ ಭೌತಿಕ ಹೋಲಿಕೆಯಿಲ್ಲ. ಇದನ್ನು ಮನದಟ್ಟು ಮಾಡಿಸುವಾಗ ನನ್ನನ್ನೇ ಹಣ್ಣುಗಾಯಿ ನೀರುಗಾಯಿ ಮಾಡಿದ ಮಹಾಶಯರಿದ್ದಾರೆ! ಆದರೂ ಗಣಕಯಂತ್ರಗಳ ಬಗ್ಗೆ ಮತ್ತು ಅವುಗಳ ಕಾರ್ಯವೈಖರಿ ಬಗ್ಗೆ ಉಪನ್ಯಾಸಕೊಡುವ ಆಸೆ ನನ್ನನ್ನು ಬಿಟ್ಟುಹೋಗಲೇ ಇಲ್ಲ. ಗಣಕಯಂತ್ರದ ಮತ್ತು ತಂತ್ರಜ್ಞಾನ, ತಂತ್ರಾಶ ಈ ಎಲ್ಲವುಗಳ ಮತ್ತು ಅವುಗಳನ್ನಾಧರಿಸಿದ ನನ್ನ ವೃತ್ತಿಯ ಕುರಿತು ತಮಾಷೆಯಾಗಿ ಕೆಲವೊಮ್ಮೆ ಹಾಸ್ಯ ಕಷಾಯಗಳನ್ನೋ ರಸಾಯನಗಳನ್ನೋ ನನ್ನ ಮಿತ್ರರಲ್ಲಿ ಹಂಚಿಕೊಂಡಿದ್ದಿದೆ. ಶಾಲೆಯಲ್ಲಿ ಮಕ್ಕಳಿಗೆ ಮಿಸ್ ಹೇಳಿದ್ದೇ ಸತ್ಯವಾದಂತೇ ನಮ್ಮ ಗಣಕಯಂತ್ರಗಳ ಜನಸಾಮಾನ್ಯ ಬಳಕೆದಾರರಿಗೆ ಗಣಕಯಂತ್ರಗಳ ಬಗೆಗೆ ಅವರು ಊಹಿಸಿದ್ದೇ ಸತ್ಯ!  

ಅಯ್ಯಾ ಮಹಾಜನಗಳೇ, ಉಪಕಥೆಯೊಂದನ್ನು ಕೇಳುವಂಥವರಾಗಿ: ಒಂದಾನೊಂದು ಕಾಲದಲ್ಲಿ ಕೆಂಪೇಗೌಡ ಕಟ್ಟಿಸಿದ ಈ ಬೆಂದಕಾಳೂರಿನ ಪ್ರದೇಶವೊಂದರಲ್ಲಿ, ಗಣಕಯಂತ್ರವನ್ನು ಮನೆಯಲ್ಲೇ ಇಟ್ಟುಕೊಂಡು ಅಕೌಂಟ್ಸ್ ಮಾಡಿಕೊಡುತ್ತಿದ್ದ ಬ್ರಹ್ಮಚಾರಿಯೊಬ್ಬನ ಮನೆಗೆ ಅವನ ರೂಮ್ ಮೇಟ್ ಆಗಿರುವ ವ್ಯಕ್ತಿಯ ತಂದೆ ಹಳ್ಳಿಯಿಂದ ಬಂದಿದ್ದರು. ರಾತ್ರಿಯ ಊಟವೆಲ್ಲಾ ಮುಗಿದು ಹಳ್ಳಿಯಕಡೆಗಿನ ಸುದ್ದಿಗಳು-ಲೋಕಾಭಿರಾಮವಾಗಿ ಹರಿದು, ಇನ್ನೇನು ಮಲಗಬೇಕು ಎಂಬ ಹೊತ್ತಿಗೆ, ಅಗೋ ಕಂಡಿತು: ಪೊಲ್ಲಂಬಲಮೇಡುವಿನಲ್ಲಿ ದಿವ್ಯಜ್ಯೋತಿ!! ಹಳ್ಳಿಯಿಂದ ಬಂದಿದ್ದ ವ್ಯಕ್ತಿ ಎಲೆಯಡಿಕೆ ಹಾಕಿಕೊಂಡು ತನ್ನ ಗೊರಗೊರ ಮಾತಿನಲ್ಲೇ ಮಗನಲ್ಲಿ ಕೇಳಿದರು:"ತಮ್ಮಾ, ಅದ್ಯಾಕ ಅಂವ ಅಲ್ಲಿ ಒಬ್ಬನೇ ಟಿವಿ ನೋಡ್ತಾನಲ?" ಹಳ್ಳಿಯಾತ ’ಟಿವಿ’ ಎಂದು ಹೇಳಿದ್ದು ಯಾವುದಕ್ಕೆ ಗೊತ್ತೇ? ಅಕೌಂಟ್ಸ್ ಮಾಡುತ್ತಿದ್ದ ಬ್ರಹ್ಮಚಾರಿ ಇನ್ನೊಂದು ಕೋಣೆಯಲ್ಲಿ ಗಣಕಯಂತ್ರ ಹಚ್ಚಿಕೊಂಡು[ಆಗ ಕಲರ್ ಮಾನಿಟರ್ ಇರಲಿಲ್ಲ, ಬ್ಲಾಕ್ ಅಂಡ ವ್ಹೈಟ್ ಅಥವಾ ಎಸ್.ವಿ.ಜಿ.ಏ ಮೊನೊಕ್ರೋಮ್ ಮಾನಿಟರ್ ಬಳಕೆಯಲ್ಲಿತ್ತು]ಮಾನಿಟರ್ ನೋಡಿಕೊಂಡು ಕೆಲಸಮಾಡುತ್ತಿದ್ದುದನ್ನು ಕಂಡು!! ಅಂದಿನವರೆಗೆ ಗಣಕಯಂತ್ರವನ್ನು ಚಿತ್ರದಲ್ಲೂ ಸರಿಯಾಗಿ ಗಮನಿಸಿರದ ಹಳ್ಳಿಯ ವ್ಯಕ್ತಿಗೆ ಮಾನಿಟರ್ ಎಂಬ್ದು ಟಿವಿಯಂತೇ ಗೋಚರವಾಗಿತ್ತು. ಇಂತಹ ತಮಾಷೆಯ ಪ್ರಸಂಗಗಳು ಒಂದೆರಡಲ್ಲ.        

ಗಣಕಯಂತ್ರಗಳು ಬಳಕೆಗೆ ಬಂದ ಹೊಸದರಲ್ಲಿ, ಮಹಾನಗರದಲ್ಲಿ ನಾನು ನೋಡಿದ ಅನೇಕ ಅಪ್ಪ-ಅಮ್ಮಂದಿರಿಗೆ ತಮ್ಮ ಮಕ್ಕಳಿಂದ ಕಂಪ್ಯೂಟರ್ ಹೇಳಿಸಿಕೊಳ್ಳಲು ಮರ್ಯಾದೆಯಾಗುತ್ತಿತ್ತು, ಕಲಿಕಾಕೇಂದ್ರಗಳಿಗೆ ಹೋದರೆ ಅಲ್ಲಿ ಪಕ್ಕದಲ್ಲಿರುವ ಜ್ಯೂನಿಯರ್ ಗಳ ಜೊತೆ ನಮ್ಮ ಸೀನಿಯರ್ ಮಂದಿಗೆ ಕೂತು ಕಲಿಯಲು ಒಂಥರಾ ಮುಜುಗರವಾಗುತ್ತಿತ್ತು. ರಾತ್ರಿಶಾಲೆಯಲ್ಲಿ ಅಕ್ಷರ ಕಲಿಯುವವರಲ್ಲಿರುವ ಮುಖಭಾವ ಹೊತ್ತು ಅಳುಕುತ್ತಲೇ ಕೀಬೋರ್ಡು ಅದುಮಿದವರು-ಆ ನಮ್ಮ ಸೀನಿಯರುಗಳು. ಹಳೆಯ ಸಿನೆಮಾವೊಂದರಲ್ಲಿ ಇರುಳುಗಣ್ಣನ ಪಾತ್ರದಲ್ಲಿ ನಟ ದಿನೇಶ್ "ಆ ಒಂದು ಆ ಎರಡು ಆ ಮೂರು" ಎಂದುಕೊಳ್ಳುತ್ತಾ ಕೂರಲುಹೋಗಿ ಜಾರಿಬೀಳುವ ಸನ್ನಿವೇಶದಂತೇ, ಬಳಕೆಯ ಕ್ರಮ ಪಕ್ಕಾ ಗೊತ್ತಾಗದಿದ್ದರೂ ಗೊತ್ತಾಯ್ತೆಂದು ಬಾಯ್ತುಂಬ ಹಲಬುತ್ತಲೇ ಇರುತ್ತಿದ್ದವರು ಹಲವರು! ಕಚೇರಿಗಳಲ್ಲಿ ಅದಾಗತಾನೇ ಒಂದೊಂದೋ ಎರಡೆರಡೋ ಬಂದು ಕುಂತಿದ್ದ ಗಣಕಯಂತ್ರಗಳನ್ನು ಕಂಡರೆ, ಸರ್ಕಸ್ಸಿನ ಹುಲಿಗೆ ರಿಂಗ್ ಮಾಸ್ಟರ್ ಕಂಡಾಗ ಉಂಟಾಗುವ ಅಸಹಾಯ ಭಾವ ನಮ್ಮ ಸೀನಿಯರುಗಳಲ್ಲಿ! ಗಣಕಯಂತ್ರ ಯಾರಾದರೂ ಚಾಲೂಮಾಡಿಕೊಳ್ಳಲಿ ಎಂದುಕೊಂಡು ನೋಡಿಯೂ ನೋಡದಂತೇ ದೂರನಿಲ್ಲುತ್ತಿದ್ದವರು ಕೆಲವರಾದರೆ, ಚಾಲೂ ಮಾಡಿದಮೇಲೆಯೇ ತಲುಪಬೇಕೆಂಬ ಧೋರಣೆಯಿಂದ ಹತ್ತು ನಿಮಿಷ ತಡವಾಗೇ ಕಚೇರಿಗೆ ಬರುತ್ತಿದ್ದವರು ಇನ್ನೂ ಕೆಲವರು.

ಇಂಥಾ ಕಾಲಘಟ್ಟದಲ್ಲಿ, ಇಂದಿನ ಇನ್ಫೋಸಿಸ್ಸಿನ ನಾರಾಯಣ ಮೂರ್ತಿಗಳು, "ಸಾಫ್ಟ್ ವೇರ್ ಕಂಪನಿ ಮಾಡುವುದಕ್ಕೆ ಸಾಲಕೊಡಿ" ಎಂದು ಬ್ಯಾಂಕುಗಳಿಗೆ ಹೋದಾಗ, [ಸಾರಿ, ಆಗ ’ಸಾಫ್ಟ್ ವೇರ್’ ಎಂಬ ಪದ ಇನ್ನೂ ಕನ್ನಡೀಕೃತವಾಗಿರಲಿಲ್ಲ.] "ಸಾಫ್ಟ್ ವೇರ್ ಎಂದರೇನು?" ಎಂಬ ಬ್ಯಾಂಕಿನವರ ಪ್ರಶ್ನೆಗೆ ನಾರಾಯಣ ಮೂರ್ತಿಗಳು ತಮ್ಮ ಅಷ್ಟೂ ಎನರ್ಜಿಯನ್ನು ಉಪಯೋಗಿಸಿ ವಿವರಿಸಿದರೂ, ಬ್ಯಾಂಕಪ್ಪಗಳ ’’ಟ್ಯೂಬ್ ಲೈಟ್’’ ಹತ್ತಲೇ ಇಲ್ಲ! ಕಣ್ಣಿಗೆ ಕಾಣದ ಯಾವುದನ್ನೋ ‘ಸಾಫ್ಟ್ ವೇರ್’ ಎನ್ನುತ್ತಾ ಬಂದರೆ ಅವರಾದರೂ ಹೇಗೆ ಒಪ್ಪಬೇಕು ಪಾಪ! ನಮ್ಮದೇ ಅಕೌಂಟಿನಲ್ಲಿ ನಮ್ಮದೇ ಹಣ ಕಣ್ಣಿಗೆ ಕಂಡರೂ ಕೊಡುವಮೊದಲು ಹತ್ತತ್ತು ಸರ್ತಿ ಪರಾಂಬರಿಸಿ ನೋಡುವ ಜನ ಅವರು-ಹಣಕಾಸಿನ ವ್ಯವಹಾರ ನೋಡಿ, ಸುಲಭವಲ್ಲ! ಕಣ್ಣಿಗೆ ಕಾಣದ ವ್ಯವಹಾರ ಎಂದಮೇಲೆ ಏನೋ ಗಿಲ್ಮಿಟ್ಟು ಇರಲೇಬೇಕು ಎಂದುಕೊಂಡ ಬ್ಯಾಂಕಪ್ಪಗಳು "ಮಿಸ್ಟರ್ ಮೂರ್ತಿ, ವಿ ಆರ್ ಸಾರಿ" ಎಂದು ಕೈಚೆಲ್ಲಿದಾಗ ನಾರಾಯಣ ಮೂರ್ತಿಗಳು ಕೈಕೈ ಹೊಸಕಿಕೊಂಡು ಹೊರಬರಬೇಕಾಯ್ತು. ದಶಕಗಳ ನಂತರ ಇದೇ ನಾರಾಯಣಮೂರ್ತಿಗಳು ಅಂತಹ ಬ್ಯಾಂಕುಗಳಿಗೇ ಬ್ಯಾಂಕಿಂಗ್ ಸಾಫ್ಟ್ ವೇರ್ ಮಾಡಿಸಿಕೊಟ್ಟಾಗಲಾದರೂ ’ಸಾಫ್ಟ್ ವೇರ್ ಎಂದರೇನು’  ಎಂಬುದಕ್ಕೆ ಬ್ಯಾಂಕಪ್ಪಗಳಿಗೆ ಉತ್ತರ ಸಿಕ್ಕಿತೋ ಇಲ್ಲವೋ ದೇವರಾಣೆ ನನಗಂತೂ ಗೊತ್ತಿಲ್ಲ! ಆದರೆ, ಅದಾಗಲೇ ಮೂರ್ತಿಗಳ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ಸಾವಿರಾರು ಎಂಜಿನೀಯರುಗಳಿಗೆ ಬಹುರಾಷ್ಟ್ರೀಯ ಬ್ಯಾಂಕುಗಳು ಸಾಲನೀಡಿದ್ದವು ಎಂಬುದು ನಿಮ್ಮಾಣೆಗೂ ಸತ್ಯ.            

ಬ್ಯಾಂಕುಗಳು ಸಾಫ್ಟ್ ವೇರ್ ಮಾಡಿಸಿಕೊಂಡಿದ್ದು ನಿಜ. ಬಳಕೆ ಆರಂಭಗೊಂಡಿದ್ದೂ ನಿಜ. ಆದರೆ ತಂತ್ರಾಂಶ ಅಳವಡಿಸಿಕೊಂಡ ಕೆಲವು ಬಹುರಾಷ್ಟ್ರೀಯ ಬ್ಯಾಂಕುಗಳು ಗಿರಾಕಿಗಳನ್ನು ಆಕರ್ಷಿಸಲು,  ಕೋರ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಎ.ಟಿ.ಎಂ ಮೊದಲಾದ ಸವಲತ್ತುಗಳನ್ನು ಆರಂಭಿಸಿಯೇಬಿಟ್ಟವು. ಸೌಲಭ್ಯವಂಚಿತರಾಗುತ್ತೇವೆ ಎನಿಸಿದರೆ ಗಿರಾಕಿಗಳು ಬರದೇ ಉಳಿದಾರು ಎಂದುಕೊಂಡ ಭಾರತೀಯ ಬ್ಯಾಂಕುಗಳೂ ಕೂಡ ಅಂತಹ ಸವಲತ್ತುಗಳನ್ನು ಕೊಡುವಲ್ಲಿ ತಯಾರಾದವು. ಸಂಬಂಧಿತ ಯಂತ್ರೋಪಕರಣಗಳೆಲ್ಲಾ ಪ್ರತಿಷ್ಠಾಪಿತವಾಗಿ ವ್ಯವಹಾರ ಆರಂಭಗೊಂಡಮೇಲೆ ಕೆಲವರ ಅಕೌಂಟ್ ’ಹ್ಯಾಕ್’ ಆಗಿದ್ದುದು ತಿಳಿದುಬಂತು. ಭಾರೀಮೊತ್ತವಿದ್ದ ಅಕೌಂಟಿನಲ್ಲಿ ಹಣವೇ ಇಲ್ಲದಿರುವುದು ಅಥವಾ ಹಣ ಕಡಿಮೆ ಆಗಿರುವುದು ಕಂಡುಬಂತು. ಆಗಲೇ ಗೊತ್ತಾಗಿದ್ದು ಬ್ಯಾಂಕಿಂಗ್ ಸಾಫ್ಟ್ ವೇರ್ ಗಳಲ್ಲೇ ತೊಂದರೆ ಇದೆ ಎಂಬುದು! ಸಾಫ್ಟ್ ವೇರ್ ತಂತ್ರಜ್ಞರನ್ನು ಕರೆಸಿ ಕೇಳಿದಾಗಲೇ, ’ಹ್ಯಾಕಿಂಗ್’ ಎಂಬ ಪದ ಮತ್ತು ಪ್ರಕ್ರಿಯೆಗಳ ಬಗ್ಗೆ ಮೊದಲಾಗಿ ತಿಳಿದಿದ್ದು. ಹಾಗಾದರೆ ಹ್ಯಾಕಿಂಗ್ ಎಂದರೇನು ಎಂಬ ಅವರ ಪ್ರಶ್ನೆಗೆ ತಂತ್ರಜ್ಞರು ವಿವರಿಸಿ ಹೇಳಿದರು.                     

’ಹ್ಯಾಕಿಂಗ್’ ಎಂದರೆ ಅತಿಕ್ರಮಣವಿದ್ದಂತೆ. ಅನುಮತಿಯಿಲ್ಲದೇ, ಕಳ್ಳತನದಿಂದ ಇನ್ನೊಬ್ಬರ ಖಾತೆಯನ್ನು ಬಳಸಿ ಲಾಭ ಪಡೆಯುವುದು ಹ್ಯಾಕಿಂಗ್ ಎನಿಸುತ್ತದೆ. ಅದು ಇಮೇಲ್ ಖಾತೆಯಿರಬಹುದು, ಬ್ಯಾಂಕ ಖಾತೆಯಿರಬಹುದು ಅಥವಾ ಇನ್ನಿತರ ಸಾಮಾಜಿಕ ತಾಣಗಳಲ್ಲಿನ ಖಾತೆಯಿರಬಹುದು. ಹ್ಯಾಕಿಂಗ್ ಬಗ್ಗೆ ಜಾಸ್ತಿ ತೆಲೆಕೆಡಿಸಿಕೊಳ್ಳುವುದೆಲ್ಲಪ್ಪಾ ಅಂದರೆ ಬ್ಯಾಂಕ್ ಖಾತೆಗಳು ಹ್ಯಾಕ್ ಆದಾಗ! ಮಾಹಿತಿತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಾ ನಡೆದಾಗ, ತಮ್ಮ ಕಚೇರಿಗಳಲ್ಲಿನ ಸರದಿಯ ಸಾಲನ್ನು ಕಮ್ಮಿಗೊಳಿಸಲು ’ನೆಟ್ ಬ್ಯಾಂಕಿಂಗ್’ ಎಂಬ ಸೌಲಭ್ಯವನ್ನು ಬ್ಯಾಂಕುಗಳು ಕೊಡಮಾಡಿದವು. ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳುತ್ತಾ ಆನ್ ಲೈನ್ ನಲ್ಲಿ ಕೆಲಸಮಾಡುತ್ತಿರುವ ಜನರಬಗೆಗೆ ಮಾಹಿತಿ ಕಲೆಹಾಕುವ ಹ್ಯಾಕರ್ ಗಳು ತಯಾರಾಗೇಬಿಟ್ಟರು. ಜೊತೆಗೆ ಮ್ಯಾಗ್ನೆಟಿಕ್ ಕೋಡ್ ಇರುವ ಸ್ವೈಪಿಂಗ್ ಕಾರ್ಡ್ [ಕ್ರೆಡಿಟ್, ಡೆಬಿಟ್ ಕಾರ್ಡ್]ಗಳಲ್ಲಿನ ಇಲೆಕ್ಟ್ರಾನಿಕ್ ಚಿಪ್ ಗಳಲ್ಲಿ ಅಡಕವಾಗಿರುವ ಮಾಹಿತಿಗಳನ್ನು ಕಲೆಹಾಕುವ ಕೆಲಸ ಅಲ್ಲಲ್ಲಿ ನಡೆಯಿತು. ಅಂತಹ ಕಳ್ಳರೇ ಸೇರಿಕೊಂಡು ಹ್ಯಾಕ್ ಮಾಡುವ ಬಗ್ಗೆ ತರಬೇತಿ ನೀಡುವುದಕ್ಕೇ ಕೆಲವು ಜಾಲತಾಣಗಳನ್ನು ಆರಂಭಿಸಿದರು.  ಸಂಗ್ರಹಿಸಿದ ಮಾಹಿತಿಗಳ ಮೂಲಕ ನಕಲೀ ಕಾರ್ಡುಗಳನ್ನು ತಯಾರಿಸಿ ಬಳಸುವ ಮಟ್ಟಕ್ಕೆ ಹ್ಯಾಕರ್ಸ್ ಪಡೆಗಳು ತಯಾರಾದವು. ಕಾರ್ಡುಗಳ ಬಳಕೆದಾರರ ಜೊತೆಗೆ ಬ್ಯಾಂಕುಗಳ ಆಡಳ್ತೆಗಳಿಗೂ ಅಂತಹ ಹ್ಯಾಕರ್ ಗಳು ದುಃಸ್ವಪ್ನವಾಗಿ ಕಾಡಿದರು. ಅಂತಹ ಹ್ಯಾಕರ್ಸ್ ಗಳನ್ನು ನಿಭಾಯಿಸಲು ಬ್ಯಾಂಕ್ ಆಡಳ್ತೆಗಳೂ ಮತ್ತು ಮಾಹಿತಿ ತಂತ್ರಜ್ಞಾನಕ್ಷೇತ್ರಗಳವರೂ ಚಿಂತನಮಂಥನ ನಡೆಸಿದರು.

ವಿಪರ್ಯಾಸವೆಂದರೆ ಯಾರು ಮಾಹಿತಿ ತಂತ್ರಜ್ಞಾನವನ್ನು ಬಲ್ಲವರೋ ಅಂಥವರಲ್ಲೇ ಕೆಲವು ದುಷ್ಟರು ಹ್ಯಾಕರ್ಸ್ ಗಳಾಗಿದ್ದರು. ಅವರನ್ನು ನಿಭಾಯಿಸುವುದು ಮನೆಯೊಳಗೆ ಹೊಕ್ಕ ಇಲಿಯನ್ನು ನಿಭಾಯಿಸಿದಂತೇ ಆಗಿತ್ತು; ಇಲಿಗಾದರೂ ತನ್ನನ್ನು ಹಿಡಿಯುತ್ತಾರೋ ಹೊಡೆಯುತ್ತಾರೋ ಎಂಬ ಮುಂದಿನ ಬೆಳವಣಿಗೆಗಳ ಬಗೆಗಿನ ಮಾಹಿತಿ ಸಿಗುವುದಿಲ್ಲ, ಆದರೆ ಇಲ್ಲಿ ಹಾಗಲ್ಲ! ಹ್ಯಾಕರ್ಸ್ ವಿರುದ್ಧ ಜನಿಸುವ ಬ್ರಹ್ಮಾಸ್ತ್ರಗಳ ಬಗೆಗೆ  ಪ್ರತಿನಿತ್ಯದ, ಪ್ರತೀಹಂತದ ಮಾಹಿತಿ ಹ್ಯಾಕರ್ಸ್ ಗಳಿಗೆ ರವಾನೆಯಾಗುತ್ತಿತ್ತು! ಯಾರು ಗೂಢಚಾರರು, ಯಾಹು ಬೇಹುಗಾರಿಕೆಯವರು ಮತ್ತು ಯಾರು ಸಂಭಾವಿತರು ಎಂದು ಗುರುತಿಸುವುದೇ ಬಹಳ ತ್ರಾಸದಾಯಕ ಕೆಲಸವಾಗಿತ್ತು. ಅಂತಹ ಸನ್ನಿವೇಶದಲ್ಲಿ, ಜಾಗತಿಕ ಮಟ್ಟದಲ್ಲಿ ಹಾರ್ಡ್ ವೇರ್ ತಯಾರಕ ಸಂಸ್ಥೆಯಾಗಿ ಕಂಪ್ಯೂಟರನ್ನು ಜನಪ್ರಿಯಗೊಳಿಸಿದ ’ಐಬಿಎಂ’ ಸಂಸ್ಥೆ ’ಎಥಿಕಲ್ ಹ್ಯಾಕಿಂಗ್’ ಎಂಬ ಹೊಸಮಾರ್ಗವನ್ನು ಕಂಡುಕೊಂಡಿತು. ದುರ್ಬಲವಾದ ಶರೀರದಲ್ಲಿ ವೈರಾಣುಗಳು ಪ್ರವೇಶಿಸಿ ಬಹುಬೇಗ ತಮ್ಮ ಅಸ್ತಿತ್ವವನ್ನು ಸ್ಥಾಪಿಸುತ್ತವೆ ಹೇಗೋ ಹಾಗೆಯೇ ದುರ್ಬಲವಾದ ತಂತ್ರಾಂಶದಲ್ಲಿ ಹ್ಯಾಕರ್ಸ್ ಸೇರಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬ ತೀರ್ಮಾನಕ್ಕೆ ಬಂದ ’ಐಬಿಎಂ’ ಸಂಸ್ಥೆಯ ತಜ್ಞರು ತಂತ್ರಜ್ಞಾನದ ದೌರ್ಬಲ್ಯವನ್ನು ಪತ್ತೆ ಹಚ್ಚುವುದಕ್ಕಾಗಿ ತಮ್ಮಲ್ಲೇ ಕೆಲವರು, ಬಳಕೆದಾರರ ಪರವಾನಗಿಯನ್ನು ಪಡೆದುಕೊಂಡು, ಪರೀಕ್ಷಾರ್ಥವಾಗಿ ಹಾರ್ಡ್ ವೇರ್ ಮತ್ತು ತಂತ್ರಾಂಶಗಳ ಹ್ಯಾಕಿಂಗ್ ನಡೆಸಲು   ಪ್ರಯತ್ನಿಸಿದರು.    

’ಎಥಿಕಲ್ ಹ್ಯಾಕಿಂಗ್’ ಎಂಬ ಕಾರ್ಯ ಹ್ಯಾಕಿಂಗಿನ ಅಣುಕು. ಅದು ತಂತ್ರಾಂಶ ತಯಾರಕರ ಅಥವಾ ಬಳಕೆದಾರರ ಅನುಮತಿಯನ್ನು ಪಡೆದು ನಡೆಸುವಂತಹ ಕಾರ್ಯ. ಯಾವೆಲ್ಲಾ ರೀತಿಯಿಂದ ಹ್ಯಾಕಿಂಗ್ ನಡೆಸಲು ಸಾಧ್ಯವೋ ಅಷ್ಟೂ ವಿಧಗಳಲ್ಲಿ ಗಣಕಯಂತ್ರಗಳನ್ನು ಪರೀಕ್ಷೆಗೆ ಒಡ್ಡುವುದು ಎಥಿಕಲ್ ಹ್ಯಾಕಿಂಗ್. ಎಥಿಕಲ್ ಹ್ಯಾಕಿಂಗ್ ನಡೆಸುವ ನಿಪುಣ, ಒಮ್ಮೆ ಹ್ಯಾಕ್ ಮಾಡಿನೋಡಿ ಮತ್ತೆ ತಾನು ಹ್ಯಾಕ್ ಮಾಡಿದ ಯಂತ್ರಕ್ಕೋ ತಂತ್ರಾಂಶಕ್ಕೋ ಹ್ಯಾಕ್ ಮಾಡಿದ್ದು ಗೊತ್ತಾಗದಂತೇ ತೇಪೆಹಾಕುತ್ತಾನೆ. ಯಾವುದೇ ವಿಧದಲ್ಲೂ ಹ್ಯಾಕ್ ಮಾಡಲು ಬರುತ್ತಿಲ್ಲವೆಂದಾದರೆ ತಂತ್ರಾಂಶ ಚೆನ್ನಾಗಿದೆ ಎಂದು ತಿಳಿಯಬಹುದು. ಹಾರ್ಡ್ ವೇರಿಗೆ ಸಂಬಂಧಿಸಿದಂತೇ ಅದರ ಸಂಪೂರ್ಣ ನಿಗ್ರಹ ಸಾಧ್ಯವಾಗಿಲ್ಲವಾದರೂ, ಹ್ಯಾಕಿಂಗ್ ತಡೆಗಟ್ಟುವಲ್ಲಿ-ಗಣನೀಯ ಪ್ರಮಾಣದಲ್ಲಿ ಎಥಿಕಲ್ ಹ್ಯಾಕಿಂಗ್ ಎಂಬ ಕಾರ್ಯ ಸಹಾಯಮಾಡಿದೆ. ಎಥಿಕಲ್ ಹ್ಯಾಕಿಂಗನ್ನು ಕರಗತಮಾಡಿಕೊಳ್ಳಲು ಕೆಲವು ನಿಯಮ-ನಿಬಂಧನೆಗಳು ಹೇಳಲ್ಪಟ್ಟಿವೆ.  ಬಳಕೆದಾರರು ತಮ್ಮ ಖಾಸಗೀ ಕಂಫ್ಯೂಟರನ್ನು ಹ್ಯಾಕ್ ಮಾಡಿನೋಡಲೂ ಎಥಿಕಲ್ ಹ್ಯಾಕಿಂಗ್ ನಿಪುಣರನ್ನು ಒಡಂಬಡಿಕೆಯ ಮೇಲೆ ಕರೆಯಿಸಿಕೊಳ್ಳಬಹುದಾಗಿದೆ. ಎಥಿಕಲ್ ಹ್ಯಾಕಿಂಗ್ ಮಾಡುವ ಮಂದಿ ಹ್ಯಾಕರ್ಸ್ ಆಗಿರುವುದಿಲ್ಲ ಎಂಬುದನ್ನು ಗಮನಿಸಬೇಕು. ಉದಾಹರಣೆಗೆ ಎಥಿಕಲ್ ಹ್ಯಾಕಿಂಗ್ ನಿಪುಣರನ್ನು ಕರೆಸಿಕೊಂಡ ಬ್ಯಾಂಕೊಂದು ತನ್ನಲ್ಲಿನ ಕೆಲವು ಅಕೌಂಟುಗಳನ್ನು ಹ್ಯಾಕ್ ಮಾಡಲು ಪರವಾನಗಿ ನೀಡುತ್ತದೆ, ಹಾಗೊಮ್ಮೆ ಹ್ಯಾಕ್ ಮಾಡಲು ಸಾಧ್ಯವಾದರೆ ತಾನು ಬಳಸುವ ತಂತ್ರಾಂಶದಲ್ಲಿ ಸುರಕ್ಷತೆ ಸಾಲುತ್ತಿಲ್ಲ ಎಂಬುದು ಬ್ಯಾಂಕಿನ ಗಮನಕ್ಕೆ ಬರುತ್ತದೆ ಮತ್ತು ಬದಲಾಯಿಸಿಕೊಳ್ಳಲು ಅನುಕೂಲವಾಗುತ್ತದೆ. ಹ್ಯಾಕ್ ಮಾಡಲು ಸಾಧ್ಯವೇ ಆಗುವುದಿಲ್ಲ ಎಂದಾದರೆ ತಂತ್ರಾಂಶ ಚೆನ್ನಾಗಿದೆ ಎಂದು ತಿಳಿದುಬರುತ್ತದೆ. ಈ ಚೆಕ್-ಅಪ್ ಸೇವೆಗೆ ಎಥಿಕಲ್ ಹ್ಯಾಕಿಂಗ್ ನಿಪುಣರಿಗೆ ಸೇವೆಪಡೆದುಕೊಂಡ ಬ್ಯಾಂಕಿನವರು ಸೇವಾಶುಲ್ಕ ನೀಡುತ್ತಾರೆ.     

ಹಾಗಾದರೆ ಹ್ಯಾಕಿಂಗ್ ಯಾವ ಯಾವ ಮಟ್ಟದಲ್ಲಿ ನಡೆಯುತ್ತದೆ ಎಂಬ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದರೆ ಒಳ್ಳೆಯದು. ಹ್ಯಾಕರ್ಸ್ ಗಳಲ್ಲಿ ಮೂರು ವಿಧ: 1.] ವ್ಹೈಟ್ ಹ್ಯಾಟ್ ಹ್ಯಾಟ್ ಹ್ಯಾಕರ್ಸ್, 2] ಗ್ರೇ ಹ್ಯಾಕರ್ಸ್ ಮತ್ತು 3]ಬ್ಲ್ಯಾಕ್ ಹ್ಯಾಟ್ ಹ್ಯಾಕರ್ಸ್. ಇವರ ಕಾರ್ಯವಿಧಾನಗಳು ಆರಂಭವಾಗುವ ಮೂಲವನ್ನು ಗಮನಿಸೋಣ: ಗಣಕಯಂತ್ರ ಮಾನವ ನಿರ್ಮಿತವೇ ಆಗಿರುವುದರಿಂದ, ಅದರ ಕಾರ್ಯಾರಂಭ ನಿಗದಿತ ರೀತಿಯಲ್ಲಿ ನಡೆಯುತ್ತದೆ. ಆನ್ ಮಾಡಿದಾಗ ಇಂತಿಂಥಾ ಮಾಹಿತಿ ಇಂತಿಂಥಾ ಜಾಗಗಳಿಗೆ ರವಾನೆ ಆಗಬೇಕೆಂಬುದು ಮೊದಲೇ ಫೀಡ್ ಆಗಿರುತ್ತದೆ. ಅಗತ್ಯವಾದ ಆರಂಭಿಕ ಮಾಹಿತಿ ರವಾನೆಯಾಗುವ ಜಾಗವನ್ನೇ ಹ್ಯಾಕರ್ಸ್ ಗಳು ತಮ್ಮ ಪ್ರಯೋಗಕ್ಕೆ ಬಳಸಿಕೊಳ್ಳುತ್ತಾರೆ. ಗಣಕಯಂತ್ರದ ಮಾಹಿತಿಯಲ್ಲಿ ಪ್ರಮುಖವಾಗಿ ಎರಡು ಭಾಗಗಳು: ಒಂದು ಡಾಟಾ ಇನ್ನೊಂದು ಸಂಜ್ಞೆ[ಇನಸ್ಟ್ರಕ್ಷನ್]. ಈ ಮಾಹಿತಿ ಬೈನರಿ ಭಾಷೆಯ ಒಂದೊಂದೇ ’ಬಿಟ್’[ಬೈನರಿ ಅಂಕೆ]ಗಳ ಮೂಲಕ ವರ್ಗಾವಣೆಗೊಳ್ಳುತ್ತದೆ. ಉದಾಹರಣೆಗೆ: ಒಂದು ಗಣಕಯಂತ್ರದಲ್ಲಿರುವ ಆರಂಭಿಕ ಸ್ಥಿರಮಾಹಿತಿಯ ಪ್ರಕಾರ, ಮೊದಲನೇ ಸರ್ತಿ 8ಬಿಟ್ ಡಾಟಾ ಮತ್ತು 2ಬಿಟ್ ಸಂಜ್ಞೆಗಳನ್ನು ಮತ್ತು ಎರಡನೇ ಸರ್ತಿ ಉಳಿದ 8ಬಿಟ್ ಡಾಟಾ ಮತ್ತು 2ಬಿಟ್ ಸಂಜ್ಞೆಗಳನ್ನು ಮುಂದಿನಕಾರ್ಯಕ್ಷೇತ್ರಕ್ಕೆ ಲಭ್ಯವಾಗುವಂತೇ ಪ್ರಧಾನ ನೆನಪಿನ ಕೋಶಗಳಿಗೆ[ಮೇನ್ ಮೆಮೊರಿ] ವರ್ಗಾವಣೆಗೊಳಿಸಬೇಕಾಗಿರುತ್ತದೆ.

8ಬಿಟ್ ಡಾಟಾ ಬದಲಿಗೆ 9ಬಿಟ್ ಅಥವಾ 10ಬಿಟ್ ಡಾಟಾ ಕಳಿಸಲು ಹ್ಯಾಕರ್ಸ್ ಆಗಿರುವವರು ಪ್ರಯತ್ನಿಸುತ್ತಾರೆ! ಗಣಕಯಂತ್ರಕ್ಕೆ ಸರಿಯಾದ ಸಮಯಕ್ಕೆ ಸಮರ್ಪಕವಾದ ಡಾಟಾ ಮತ್ತು ಸಂಜ್ಞೆ ಸಿಗದ ಕಾರಣ "ಮುಂದೇನು?"-ಎಂಬುದನ್ನು ಚಿಂತಿಸಲೂ ಆಗದೇ ಗಣಕಯಂತ್ರ ತನ್ನ ಕೆಲಸದಗತಿಯನ್ನು ನಿಲ್ಲಿಸಿ ’ಆಪರೇಟಿಂಗ್ ಸಿಸ್ಟಮ್’ ಎಂಬ ತಂತ್ರಾಂಶದ ಸಲಹೆಯನ್ನು ಪಡೆಯಲು ಮುಂದಾಗುತ್ತದೆ. ಇದನ್ನು ತಾಂತ್ರಿಕ ಪರಿಭಾಷೆಯಲ್ಲಿ ’ಬಫರ್ ಓವರ್ ಫ್ಲೋ’ ಎಂದು ಕರೆಯುತ್ತಾರೆ. ನುಸುಳುಕೋರರಿಗೆ ಗಡಿಯಲ್ಲಿ ಅವಕಾಶ ಸಿಕ್ಕಿ ಅವರು ಒಳನುಗ್ಗಿ ಕೆಲವು ಪ್ರದೇಶಗಳನ್ನೋ ವಸಾಹತುಗಳನ್ನೋ ವ್ಯಾಪಿಸಿಕೊಂಡು ತಾತ್ಕಾಲಿಕವಾಗಿ ಅಧಿಕಾರ ಚಲಾಯಿಸಿದಂತೇ, ಹ್ಯಾಕರ್ಸ್ ಗಳು ಗಣಕಯಂತ್ರಗಳಲ್ಲಿ ಇಂಥಾದ್ದೇ ಅವಕಾಶಕ್ಕಾಗಿ ಕಾಯುತ್ತಾರೆ. ಮುಂದಿನ ಸಂಜ್ಞೆಗಳನ್ನು ತಮಗೇ ಬೇಕಾದ ರೀತಿಯಲ್ಲಿ ಕೊಡತೊಡಗುವುದರಿಂದ ಗಣಕಯಂತ್ರ ಅವರ ಸಂಜ್ಞೆಗಳಂತೇ ವರ್ತಿಸುತ್ತದೆ.

ದಿನಗಟ್ಟಲೇ ಕುಳಿತು ಹೇಗಾದರೂ ಮಾಡಿ ಗಣಕಯಂತ್ರಗಳನ್ನು ಹಾಳುಗೆಡಹುವುದು ’ವ್ಹೈಟ್ ಹ್ಯಾಟ್ ಹ್ಯಾಕರ್ಸ್’ ಎಂಬ ಮಾದರಿಯ ಹ್ಯಾಕರುಗಳ ಕಾರ್ಯವೈಖರಿಯಾದರೆ, ಗ್ರೇ ಹ್ಯಾಟ್  ಹ್ಯಾಕರ್ಸ್ ಎಂಬ ಗುಂಪು ಕೂಡ ಹೀಗೇ ಮಾಡುವ ಮೂಲಕ ಹೊಸ ಹೊಸ ದಾರಿಯಲ್ಲಿ ಯಂತ್ರಗಳನ್ನು ಕೆಡಿಸಲು ನೋಡುತ್ತದೆ ಮತ್ತುಅದರಿಂದ ತನಗೆ ಆದಾಯ ಬರುವಂತೇ ನೋಡಿಕೊಳ್ಳುತ್ತದೆ. ಇನ್ನೊಬ್ಬರ ಪರವಾಗಿ ಯಂತ್ರಗಳನ್ನು ಕೆಡಿಸುವಂತಹ ಕೆಲಸಗಳನ್ನು ಮಾಡುವ ಈ ಗುಂಪು ಯಾರು ಯಂತ್ರಗಳನ್ನು ಹಾಳುಮಾಡಲು ಹೇಳುತ್ತಾರೋ ಅವರಿಂದ ’ಸುಪಾರಿ’ ಪಡೆಯುತ್ತದೆ! ಇಷ್ಟೇ ಅಲ್ಲದೇ ಹ್ಯಾಕ್ ಮಾಡುವ ಯಂತ್ರಗಳಿಂದ ಹೆಚ್ಚಿನ ಆರ್ಥಿಕ ಸಂಪತ್ತು ತಮಗೆ ದೊರೆಯುತ್ತದೋ ಎಂದೂ ಪರಿಶೀಲಿಸುತ್ತದೆ. ಗಣಕಯಂತ್ರಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಆರ್ಥಿಕ ಲಾಭ ಪಡೆಯುವುದರೊಟ್ಟಿಗೆ ಯಾವಯಾವ ಯಂತ್ರಗಳನ್ನು ಹೇಗೆ ಹೇಗೆ ಹ್ಯಾಕ್ ಮಾಡಬೇಕೆಂಬ ’ಕೋಡ್’ಗಳನ್ನು ಬರೆದುಕೊಟ್ಟು ಹಣಗಳಿಸುವುದು ಬ್ಲ್ಯಾಕ್ ಹ್ಯಾಟ್ ಹ್ಯಾಕರ್ಸ್ ಗಳ ದಾರಿಯಾಗಿದೆ. ಮೂರೂ ಗುಂಪುಗಳ ಸಾಮಾನ್ಯ ಉದ್ದೇಶ ಒಂದೇ: ಯಂತ್ರಗಳನ್ನು ಹ್ಯಾಕ್ ಮಾಡುವುದು. ಹ್ಯಾಕ್ ಮಾಡಿದ ಯಂತ್ರಗಳಿಂದ ಲಭಿಸುವ ಮಾಹಿತಿಗಳನ್ನಾಧರಿಸಿ ಅವರ ಮುಂದಿನ ಕೆಲಸಗಳು ನಿರ್ಧಾರವಾಗುತ್ತವೆ. ಈ ಮೂರೂ ಗುಂಪುಗಳ ಕೆಲಸ ಕಾನೂನಿನ ಪ್ರಕಾರ ಅಪರಾಧವಾಗಿರುತ್ತದೆ. ಇಂತಹ ಅಪರಾಧಿಗಳು ಸಿಕ್ಕಿಬಿದ್ದಲ್ಲಿ ಕನಿಷ್ಠ ಎರಡು ವರ್ಷಗಳ ಜೈಲುವಾಸ ಮತ್ತು ದಂಡ ಅಥವಾ ಗರಿಷ್ಠ ಹತ್ತುವರ್ಷಗಳ ಸೆರೆವಾಸ ಮತ್ತು ಜುಲ್ಮಾನೆಯನ್ನು ವಿಧಿಸಲಾಗುತ್ತದೆ.      

ಒಟ್ಟಾರೆಯಾಗಿ ಹೇಳಬೇಕೆಂದರೆ ಹ್ಯಾಕಿಂಗ್ ಎಂಬುದು ಹೈಜಾಕಿಂಗ್ ಆಫ್ ಕಂಪ್ಯೂಟರ್ ಆಪರೇಶನ್ಸ್. ಹ್ಯಾಕಿಂಗ್ ನಡೆಸುವ ಮಂದಿ ಸದಾ ಆನ್ ಲೈನ್ ನಲ್ಲೇ ಗಾಳಬಿಟ್ಟುಕೊಂಡು ಕೂತುಕೊಳ್ಳುತ್ತಾರೆ! ಮೊಬೈಲುಗಳ ಮೂಲಕ, ಇಮೇಲ್ ಗಳ ಮೂಲಕ ಹಲವಾರು ಜನರಿಗೆ ಆಕರ್ಷಕ ಸಂದೇಶ ಕಳುಹಿಸಿ, ಅವರೆಲ್ಲರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ. ’ಪುಕ್ಕಟ್ಟೆಯಾಗಿ ಲಾಟರಿ ಹೊಡೆದಿದೆ’ ಎಂದರೆ ಬಿಡಲಾರದ ಕಡುಲೋಭಿಗಳು ಅಂಥವರಿಗೆ ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಯಾರಿಗೂ ತಿಳಿಯದಂತೇ ಗುಪ್ತವಾಗಿ ಕಳಿಸುತ್ತಾರೆ! ಲೋಭಿಗಳ ಅಥವಾ ಜಾಸ್ತಿ ಹಣಮಾಡಿಕೊಳ್ಳುವವರ/ ಹಣದ್ವಿಗುಣ ಮಾಡಿಕೊಳ್ಳಬಯಸುವರ ಬ್ಯಾಂಕ್ ಖಾತೆಗಳ ಮಾಹಿತಿ ತಮಗೆ ದೊರೆಯುತ್ತಲೇ ಹ್ಯಾಕರ್ಸ್ ಪಡೆ ಜಾಗೃತವಾಗಿಬಿಡುತ್ತದೆ; ಕೆಲವೇ ಗಂಟೆಗಳಲ್ಲಿ ಮಾಹಿತಿ ಕಳಿಸಿದವರ ಬ್ಯಾಂಕ್ ಖಾತೆಗಳು ಹ್ಯಾಕ್ ಆದರೂ ಆಗಿಬಿಡಬಹುದು!! 

ಕೆಲವೊಮ್ಮೆ ಕಂಪನಿಗಳ ಸೀಕ್ರೆಟ್ಟುಗಳನ್ನು ತಿಳಿದುಕೊಳ್ಳಲೂ ಹ್ಯಾಕಿಂಗ್ ನಡೆಯುತ್ತದೆ. ಆ ಸೀಕ್ರೆಟ್ಟುಗಳನ್ನು ಬೇರೇ [ಕಾಂಪಿಟೀಟರ್ಸ್]ಜನರಿಗೆ ಹಂಚುವುದರಿಂದ ಹ್ಯಾಕರ್ಸ್ ಗಳಿಗೆ ಆರ್ಥಿಕ ಲಾಭ ದೊರೆಯುತ್ತದೆ. ಅಂತರ್ಜಾಲದ ಮೂಲಕ ಬರುವ ಹ್ಯಾಕರ್ಸ್ ಕೆಲವರಾದರೆ ಇನ್ನೂ ಕೆಲವರು ’ರೇಡಿಯೋ ಫ್ರೀಕ್ವೆನಿ ಐಡೆಂಟಿಫಿಕೇಶನ್’[ಆರ್.ಎಫ್.ಐಡಿ] ಎಂತ ತಂತ್ರಜ್ಞಾನದ ಸಹಾಯದಿಂದ ಹ್ಯಾಕ್ ಮಾಡುತ್ತಾರೆ. ಮ್ಯಾಗ್ನೆಟಿಕ್ ಬಾರ್ ಕೋಡ್ ಸಿಗ್ನಾಲ್ ಗಳಿರುವ ಕಾರ್ಡುಗಳ ನ್ನು ಖಾತೆಗಳಲ್ಲಿ ಚಲಾಯಿಸಲು ಕನಿಷ್ಠ 29 ಸೇಕಂದು ಸಮಯ ಹಿಡಿಯುತ್ತದೆ; ಅದೇ ಆರ್.ಎಫ್.ಐಡಿ ಕಾರ್ಡುಗಳಾದರೆ 16 ಸೇಕಂದುಗಳು ಸಾಕು. 13 ಸೇಕಂದುಗಳ ಸಮಯ ಉಳಿತಾಯ ಆಗುತ್ತದೆ ಎಂಬ ಉದ್ದೇಶದಿಂದ ವಿದೇಶಗಳಲ್ಲಿ ಆರ್.ಎಫ್.ಐಡಿ ಕಾರ್ಡುಗಳು ಜಾರಿಗೆ ಬಂದಿವೆ. ಆದರೆ ಆರ್.ಎಫ್.ಐಡಿ ಕಾರ್ಡುಗಳ ಮೂಲಕ ಮಾಹಿತಿ ಸೋರಿಕೆ ಬಹಳ ತ್ವರಿತವಾಗಿ ಮತ್ತು ಇನ್ನೂ ಸುಲಭವಾಗಿ ನಡೆಯುತ್ತದೆ ಎಂಬ ಆಧಾರಸಹಿತ ಆಕ್ಷೇಪಣೆ ಎದ್ದಿದೆ. ಹೀಗಾಗಿ ಆರ್.ಎಫ್.ಐಡಿ ತಂತ್ರಜ್ಞಾನಕ್ಕೆ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಹೇಳಿಕೆ ಜಾಗತಿಕ ಮಟ್ಟದಲ್ಲಿ ಪ್ರಚಲಿತಗೊಂಡಿದೆ.

ಎಷ್ಟೋ ಸಲ ಅಂತರ್ಜಾಲದಲ್ಲಿ ಯಾವುದೋ ಕಾರಣಕ್ಕೆ ಸಂಪರ್ಕಿಸುವ ಅಪರಿಚಿತರು ಬಹಳ ಮಾನವೀಯತೆ ತೋರುವಂತೇ ನಟಿಸುತ್ತಾ, ಸ್ಲೋ ಆಗಿರುವ ನಿಮ್ಮ ಗಣಕಯಂತ್ರದ ಸ್ಪೀಡ್ ಹೆಚ್ಚಿಸಿಕೊಡುವ ನೆಪದಲ್ಲಿ, ಗಣಕಯಂತ್ರದ ಕಂಟ್ರೋಲನ್ನು ತಮಗೆ ವರ್ಗಾಯಿಸುವ ತಂತ್ರಾಂಶದ ಮೂಲಕ ಒಪ್ಪಿಗೆ ಸೂಚಿಸುವಂತೇ ಕೋರಬಹುದು. ಇನ್ನೂ ಕೆಲವೊಮ್ಮೆ ನಿಮ್ಮ ಯಂತ್ರಗಳ, ಖಾತೆಗಳ ಐಡಿ, ಪಾಸ್ ವರ್ಡ್ ಮೊದಲಾದ ಮಾಹಿತಿಗಳನ್ನು ನಿಮ್ಮನ್ನು ಕೇಳಿಯೇ ಪಡೆದುಕೊಳ್ಳಬಹುದು. ನಿಮ್ಮ ಅನುಮತಿಯಿಂದಲೇ ಅವರಿಗೆ ಸಿಗುವ ಮಾಹಿತಿ ನಿಮಗೇ ಮಾರಕವಾಗಿಬಿಡಬಹುದು. ನಿಮ್ಮ ಅನುಮತಿಯಿಂದ ಸಿಕ್ಕ ಮಾಹಿತಿಯಾದುದರಿಂದ ಅಪರಾಧ ಎಸಗಿದವರು ತಪ್ಪಿಸಿಕೊಳ್ಳಲು ಆವರಿಗದು ಸಹಾಯಕವಾಗಬಹುದು. ಅನೇಕ ಕಚೇರಿಗಳಲ್ಲಿ ನೆಟ್ ವರ್ಕ್ ಪ್ರಿಂಟರುಗಳನ್ನು ಬಳಸುತ್ತಿದ್ದಾರೆ. ಗಣಕಯಂತ್ರಕ್ಕಿರುವಂತೇ ಅದಕ್ಕೂ ಒಂದು ಪ್ರತ್ಯೇಕ ಐಪಿ ಎಡ್ರೆಸ್ [ಇಂಟರ್ನೆಟ್ ಪ್ರೊಟೊಕಾಲ್ ಎಡ್ರೆಸ್] ಇರುತ್ತದೆ. ಅಂತಹ ಮಾಹಿತಿ ಹ್ಯಾಕರ್ಸ್ ಗಳಿಗೆ ದೊರಕಿದರೆ ಅವರು ಆ ಮೂಲಕ ನೆಟ್ ವರ್ಕ್ ಪ್ರವೇಶ ಪಡೆಯಬಲ್ಲರು! ಹೀಗಾಗಿ ನೆಟ್ ವರ್ಕ್ ಪ್ರಿಂಟರ್ ಅಥವಾ ಯಾವುದೇ ಗಣಕಯಂತ್ರದ ಐಪಿ ಎಡ್ರೆಸ್ ಗಳನ್ನು  ಅಥವಾ ಯಂತ್ರಗಳ ಯಾವುದೇ ಪೋರ್ಟುಗಳ ವಿವರಗಳನ್ನು [ಈ ಬಗ್ಗೆ ಮಾಹಿತಿಯಿರುವ ಸಿಬ್ಬಂದಿ ಅಥವಾ ಮ್ಯಾಂಟೆನನ್ಸ್ ಮಾಡುವ ಸಿಸ್ಟಮ್ ಎಡ್ಮಿನಿಸ್ಟ್ರೇಟರ್ ಗಳು] ಬೇಜವಾಬ್ದಾರಿಯಿಂದ ಪರಭಾರೆ ಮಾಡುವುದು ಹ್ಯಾಕಿಂಗಿಗೆ ಅನುಕೂಲ ಕಲ್ಪಿಸಬಹುದು.   

ಭಾರತದಲ್ಲಿ ನಗರಗಳಲ್ಲಿ, ಪಟ್ಟಣಗಳಲ್ಲಿ, ಮೇಲಾಗಿ ಹಳ್ಳಿಗಳಲ್ಲಿಯೂ ಸಹ ಕಂಪ್ಯೂಟರುಗಳ ಬಳಕೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ನಗರಗಳಲ್ಲಿ ಗಲ್ಲಿಗಲ್ಲಿಗೆ ಎಟಿಎಂ ಗಳು ಬಂದಿವೆ. ಭರಪೂರ ಮಾಹಿತಿಯ ಮಹಾಪ್ರವಾಹ ಅಂತರ್ಜಾಲದ ಮೂಲಕ ಹರಿದಾಡುತ್ತಿದೆ. ಮಾಹಿತಿಗಳನ್ನು ಒದಗಿಸುವವರಲ್ಲಿ ಮತ್ತು ಪಡೆದುಕೊಳ್ಳುವವರಲ್ಲಿ ಪರಸ್ಪರ ಪರಿಚಯ, ನೇರಸಂಪರ್ಕ ಇರದೇ ಇದ್ದಪಕ್ಷದಲ್ಲಿ ಮಾಹಿತಿ ಕೊಡುವ ಜನ ಹತ್ತಾರುಸರ್ತಿ ಹಿನ್ನೆಲೆ ಮುನ್ನೆಲೆ ವಿಚಾರಿಸಿಕೊಂಡು, ಮಾಹಿತಿಕೇಳಿದವರಿಗೆ ಕೊಡುವುದು ಉತ್ತಮ. ಇಲ್ಲದಿದ್ದರೆ ಹ್ಯಾಕ್ ಆಗಿದೆಯೆಂದು ತಲೆಯಮೇಲೆ ಕೈಹೊತ್ತುಕೊಳ್ಳುವ ಸಂದರ್ಭ ಎದುರಾಗಬಹುದು, ಜೋಕೆ. ನಗುನಗುತ್ತಾ ಓದಲಾರಂಭಿಸಿದ ’’ಟೆಕ್ಕಾಣಿ’’ಯ ಕಥೆ ಬಹಳ ಗಂಭೀರವಾಗಿರುವುದನ್ನು ಈಗ ಕಂಡಿರಲ್ಲವೇ? ಹೇಗಿದೆ ಗುಟ್ಟು? ಜಾಗರೂಕರಾಗಿರುತ್ತೀರಲ್ಲವೇ ನೆನಪಿನಲ್ಲಿಟ್ಟು?