ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, December 9, 2011

ಗುರು ಶ್ರೀಧರನ ಕಾಣುವಾ ಭಕುತರ ಬವಣೆ ರೋಗವ ಕಳೆಯುವಾ ....


ಗುರು ಶ್ರೀಧರನ ಕಾಣುವಾ ಭಕುತರ ಬವಣೆ ರೋಗವ ಕಳೆಯುವಾ ....

ಅನೇಕಜನ್ಮ ಸಂಪ್ರಾಪ್ತ ಕರ್ಮಬಂಧವಿದಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||

ಶ್ರೀಧರ ಭಗವಾನರ ಬಗ್ಗೆ ಸಾಕಷ್ಟು ಇದೀಗಾಗಲೇ ಬರೆದಿದ್ದೇನೆ, ಬರೆದಷ್ಟೂ ಮೊಗೆದಷ್ಟೂ ಸಿಗುವ ದಾಖಲೆಗಳು ಮತ್ತು ಘಟನೆಗಳು ಮತ್ತೆ ಮತ್ತೆ ಬರೆಯುವಂತೇ ಪ್ರೇರೇಪಿಸುತ್ತವೆ. ಆಧುನಿಕ ವಿಜ್ಞಾನ ಕಂಡರಿಯದ ಈ ಜಗತ್ತಿನಲ್ಲಿ ಹಾಸುಹೊಕ್ಕಾಗಿರುವ ಅದೆಷ್ಟೋ ವಿಷಯಗಳು ತಪಸ್ಸಿದ್ಧಿಯಿಂದ ಹೇಗೆ ಅವರಿಗೆ ಲಭ್ಯವಾಗುತ್ತಿದ್ದವು ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಜಗದೋದ್ಧಾರಕ್ಕಾಗಿ ಜನಿಸಿದ ಹಲವು ಮಹಾತ್ಮರಲ್ಲಿ ಶ್ರೀಧರರು ಒಬ್ಬರಷ್ಟೇ? ಮನೆ ತೊರೆದು ಹೊರಟು ಅದಾಗಲೇ ಹನ್ನೆರಡು ವರ್ಷಗಳು ಗತಿಸಿಹೋಗಿದ್ದವು. ತನ್ನೊಳಗಿನ ಚೈತನ್ಯವನ್ನು ಒರೆಹಚ್ಚಿ ಮುಂದೆ ಏನುಮಾಡಬೇಕೆಂಬುದನ್ನು ಗುರು ಸಮರ್ಥ ರಾಮದಾಸರಿಂದ ಅಪ್ಪಣೆಯ ರೂಪದಲ್ಲಿ ಪಡೆಯಬೇಕೆಂದು ನಿರ್ಧರಿಸಿ ಸಜ್ಜನಗಡಕ್ಕೆ ನಡೆದಿದ್ದ ಶ್ರೀಗಳು ಸಮರ್ಥರ ಸಮಾಧಿಗೆ ವಂದಿಸಿ ಅಲ್ಲಿಂದ ಉತ್ತರ ದಿಕ್ಕಿಗೆ ಸುಮಾರು ನಾಲ್ಕು ಕಿ.ಮೀ ದೂರವಿರುವ ಕಾಡಿಗೆ ತೆರಳಿದ್ದರು. ಹುಲಿಗಳ ಆರ್ಭಟ ಬಹಳ ಇದ್ದುದರಿಂದ ರಾತ್ರಿಯಿರಲಿ ಹಗಲೇ ಆ ಕಾಡಿಗೆ ಯಾರೂ ಹೋಗಲು ಹಿಂಜರಿಯುತ್ತಿದ್ದರು.

ಕಾಡಿನ ಮಧ್ಯದಲ್ಲಿ ಒಂದು ಕೋಡುಗಲ್ಲಿನ ಮೇಲೆ ಕೂತು ತಪಸ್ಸಿಗೆ ತೊಡಗಿದ ಶ್ರೀಧರರಲ್ಲಿ ಇರುವುದು ಎರಡೇ ಆಯ್ಕೆಗಳು. ಸಮರ್ಥರು ದರ್ಶನ ಕೊಟ್ಟರೆ ಅವರು ಹೇಳಿದಂತೇ ಮಾಡುವುದು ಅಥವಾ ಸಮರ್ಥರ ದರ್ಶನ ಆಗದಿದ್ದರೆ ಹಿಮಾಲಯಕ್ಕೆ ತೆರಳಿ ಅಲ್ಲಿಯೇ ತಪಸ್ಸುಮಾಡುತ್ತಾ ಇದ್ದುಬಿಡುವುದು. ದಿನವೊಂದು ಎರಡು ಮೂರು ಕಳೆದುಹೋದವು. ಕೋಡುಗಲ್ಲಿನ ಕುಳಿತ ಜಾಗವನ್ನು ಅವಲೋಕಿಸಿದರೆ ತುಸು ಜಾರಿದರೂ ಪ್ರಪಾತವಿತ್ತು. ಕೇವಲ ಒಬ್ಬರೇ ಕುಳಿತುಕೊಳ್ಳಬಹುದಾದ ಅತಿಕಿರಿದಾದ ಜಾಗದಲ್ಲಿ ಅಹೋರಾತ್ರಿ ಮೂರುದಿನಗಳ ಕಾಲ ಶ್ರೀಧರರು ತಪಗೈದ ಮೇಲೆ ಅವರ ಹೃದಯಾಕಾಶದಲ್ಲಿ ಒಂದು ದೃಶ್ಯ ಕಂಡುಬಂತು. ಅದು ಮನಸ್ಸಿನ ಕಲ್ಪನೆಯಾಗಿರದೇ ಆತ್ಮ ಸಾಕ್ಷಾತ್ಕಾರ ಶ್ರೀಧರರಿಗೆ ಲಭಿಸಿತ್ತು. " ಇಲ್ಲಿಯೇ ಭಗವಾನ್ ಶ್ರೀಧರರು ಇದ್ದಾರೆ ಅವರನ್ನು ಮೊದಲು ಪೂಜೆಮಾಡಿ ನಂತರ ತನ್ನ ಪೂಜೆಗೆ ಬನ್ನಿ " ಎಂದು ಸಮರ್ಥರು ಅಪ್ಪಣೆಕೊಡಿಸಿದ್ದಾರೆ ಎನ್ನುತ್ತಾ ಸಮರ್ಥರ ಅರ್ಚಕರಾದ ಸಖಾರಾಮ ಭಟ್ಟರು ಗಡದ ಹಲವು ಯಾತ್ರಿಕರೊಡನೆ ಕಾಡಿಗೆ ಶ್ರೀಧರರನ್ನು ಹುಡುಕುತ್ತಾ ಬಂದಿದ್ದರು ! ಸಮರ್ಥರು ತಮಗೆ ಬಹು ಇಷ್ಟವಾದ ಭಗವಾನ್ ಶಬ್ದವನ್ನು ಶ್ರೀಧರರಿಗೆ ದಯಪಾಲಿಸಿ ತಮ್ಮ ಅರ್ಚಕರ ಬಾಯಿಂದ ಹೇಳಿಸಿದ್ದರು. ಶ್ರೀಧರರ ಬಗ್ಗೆ ಅಷ್ಟಾಗಿ ಏನೂ ಅರಿಯದ ಅರ್ಚಕರು ಹಾಗೆ ಹೇಳುತ್ತಾ ನಡೆದು ಬಂದಿದ್ದರು!

" ಶಿಷ್ಯನ ಮೇಲಿನ ವಾತ್ಸಲ್ಯದಿಂದ ಶಿಷ್ಯನ ಮಹಿಮೆಯನ್ನು ಪ್ರಕಟಗೊಳಿಸುವುದಕ್ಕಾಗಿ ಗುರುಗಳು ಹಾಗೆ ಹೇಳಿದ್ದಾರೆ, ಅವರು ನಮಗೆಲ್ಲರಿಗೂ ಗುರುಗಳು. ಅವರನ್ನೇ ಪೂಜೆ ಮಾಡೋಣ ಬನ್ನಿ " ಎನ್ನುತ್ತಾ ಕೋಡುಗಲ್ಲಿನಿಂದ ಇಳಿದು ಶ್ರೀಧರರು ಸಜ್ಜನಗಡಕ್ಕೆ ಎಲ್ಲರ ಜೊತೆ ಮರಳಿ ಸಮಾಧಿಯಲ್ಲಿ ಸೇವೆ ಸಲ್ಲಿಸಿದರು.

೧೯೪೪ ರಲ್ಲಿ ಶ್ರೀಗಳು ಮಂಗಳೂರಿನ ಕೊಂಕಣಿ ಸಾರಸ್ವತ ಬ್ರಾಹ್ಮಣರಾದ ಶೆಣೈಯವರ ಮನೆಯಲ್ಲಿ ಚಾತುರ್ಮಾಸ್ಯ ನಡೆಸುತ್ತಿದ್ದರು. ಚಾತುರ್ಮಾಸ್ಯ ಸಮಯದಲ್ಲಿ ಯಾರಿಗೂ ದರ್ಶನವಿರುತ್ತಿರಲಿಲ್ಲ. ಹತ್ತಿರದ ಒಬ್ಬರು ಶಿಷ್ಯರು ಯಾರಾದರೂ ಹಣ್ಣು -ಹಾಲು ಇಂತಹ ಅಲ್ಪ ಆಹಾರವನ್ನು ಅವರು ಸ್ನಾನಕ್ಕೆ ತೆರಳಿದಾಗ ಅವರ ಕೋಣೆಗೆ ಹೋಗಿ ಇಟ್ಟುಬರಬೇಕಾಗಿತ್ತು ಬಿಟ್ಟರೆ ಮೌಖಿಕ ಸಂಭಾಷಣೆಯಾಗಲೀ ದರ್ಶನವಾಗಲೀ ಆಗುತ್ತಿರಲಿಲ್ಲ. ಈ ರೀತಿಯಾಗಿ ಎರಡುತಿಂಗಳು ಕಠಿಣ ತಪಸ್ಸಿನ ನಂತರ ವಿಜಯದಶಮಿಯ ಹೊತ್ತಿಗೆ ಗುರುಗಳು ಕೆಲವರಿಗೆ ದರ್ಶನ ನೀಡುತ್ತಿದ್ದರು. ಚಾತುರ್ಮಾಸ್ಯದ ಸಮಯವಾದ್ದರಿಂದ ಜನ ನಾಮುಂದು ತಾಮುಂದು ಎಂದು ಸೇವೆಮಾಡಲು ಹಾತೊರೆಯುತ್ತಿದ್ದರು.

ಇಂತಹ ಸಮಯದಲ್ಲಿ ಶ್ರೀನಿವಾಸ ರಾವ್ ಎಂಬ ಸಾರಸ್ವತ ಬ್ರಾಹ್ಮಣರ ಹೆಂಡತಿಯ ಅಕ್ಕನಮಗಳಾದ ರುಕ್ಮಾಬಾಯಿ ಕ್ಷಯರೋಗದಿಂದ ಹತ್ತು ವರ್ಷಗಳಿಂದಲೂ ನರಳುತ್ತಿದ್ದಳು. ಔಷಧೋಪಚಾರದಿಂದ ವಾಸಿಯಾಗದಾಗ ಶಸ್ತ್ರ ಚಿಕಿತ್ಸೆ ಕೂಡ ನಡೆದುಹೋಯಿತು. ಆದರೂ ವಾಸಿಯಾಗದ್ದರಿಂದ ಬದುಕುವುದಿಲ್ಲವೆಂದು ನಿರ್ಧರಿಸಿದ ವೈದ್ಯರು ಆಕೆಯನ್ನು ಮನೆಗೆ ಕಳುಹಿಸಿಕೊಟ್ಟರು. ಆ ವಿಧವೆ ಮರಣ ಸಂಕಟದಲ್ಲಿ " ನನಗೆ ಇಹಲೋಕ ಯಾತ್ರೆಯ ಕೊನೇ ಘಳಿಗೆ ಇದು, ಶ್ರೀ ಭಗವಾನ್ ಶ್ರೀಧರ ಸ್ವಾಮಿಗಳ ದರ್ಶನ ಲಭಿಸಿದ್ದರೆ ಕೃತಜ್ಞಳಾಗಿ ಇಹಲೋಕಯಾತ್ರೆ ಮುಗಿಸುತ್ತಿದ್ದೆ " ಎಂದು ಹಲುಬತೊಡಗಿದ್ದಳು. ಆಗ ಅಲ್ಲಿಯೇ ಇದ್ದ ಲಕ್ಷ್ಮೀದೇವಿ ಎಂಬಾಕೆ ಆ ಸುದ್ದಿಯನ್ನು ಎರಡು ಮೈಲಿ ದೂರದಲ್ಲಿದ್ದ ಶ್ರೀಧರರಲ್ಲಿಗೆ ತೆರಳಿ ಸನ್ನಿಧಿಯಲ್ಲಿ ಬಿನ್ನವಿಸಿದಳು. ಕೂಡಲೇ ಹೊರಟು ಅಲ್ಲಿಗೆ ತೆರಳಿದ ಶ್ರೀಧರರು ರುಕ್ಮಾಬಾಯಿಗೆ ದರ್ಶನವಿತ್ತು " ನಿನಗೆ ಮುಕ್ತಿ ಕೊಡಲೇ ? " ಎಂದು ಮೂರುಬಾರಿ ಕೇಳಿದರು. ಆಕೆ " ನನಗೀಗ ಮುಕ್ತಿ ಬೇಡ, ಬಂದ ಆಪತ್ತು ನಿವಾರಿಸಿಕೊಡಿ " ಎಂದು ಬೇಡಿದಳು; ಅಜ್ಞಾನದ ಮಾನವ ಮನಸ್ಸು ಹೀಗೇ ಲೌಕಿಕವಾಗಿರುತ್ತದೆ ನೋಡಿ! " ತಥಾಸ್ತು, ಇನ್ನು ಇಪ್ಪತೆರಡು ವರ್ಷ ಬದುಕಿರು " ಎಂದು ಶ್ರೀಧರರು ಆಶೀರ್ವದಿಸಿದರು. ಆಕೆಯೆ ಬಂಧುಗಳಿಗೆ " ಗಾಬರಿಯಾಗಬೇಡಿರಿ, ತೀರ್ಥವನ್ನು ಕೊಡುತ್ತಿರಿ " ಎಂದು ಸ್ವಸ್ಥಾನಕ್ಕೆ ಮರಳಿಬಿಟ್ಟರು.

ಗುರುಗಳು ತೆರಳಿದ ಚಣಕಾಲದ ನಂತರ ಅವಳ ಪ್ರಾಣ ಹೋದಂತಾಯ್ತು. ನಿಶ್ಚೇಷ್ಟಿತಳಾಗಿ ಬಿದ್ದಿದ್ದ ಆಕೆಗೆ ಶ್ರೀಗಳ ಅಪ್ಪಣೆಯಂತೇ ತೀರ್ಥ ಕುಡಿಸುತ್ತಲೇ ಇದ್ದರು. ಸ್ವಲ್ಪ ಹೊತ್ತಿನಲ್ಲೇ ಆಕೆಗೆ ಎಚ್ಚರವಾಯ್ತು. ತೀರ್ಥವೇ ಔಷಧವಾಗಿ ಕೆಲವೇ ದಿನಗಳಲ್ಲಿ ಆಕೆ ಸಂಪೂರ್ಣ ಗುಣಮುಖಳಾಗಿ ೨೨ ವರ್ಷಗಳ ಕಾಲ ಬದುಕಿದಳು!

ನಮ್ಮೂರಕಡೆ ಕೂಲಿಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ವಿಪರೀತ ಕಾಯಿಲೆಯಾಗಿತ್ತು. ಅದು ಯಾರಿಗೂ ಮಾಹಿತಿ ಇರದ ’ಗಾಂಡಗುದ್ಗೆ’ ರೋಗ ! ಕೆಲಸಮಾಡಿ ಜೀವನ ಸಾಗಿಸುತ್ತಿದ್ದ ಆತನ ಕುಟುಂಬದಲ್ಲಿ ಆತನನ್ನೇ ಅವಲಂಬಿಸಿದ್ದ ಮೂರ್ನಾಕು ಜನ ಇದ್ದರು. ಗಟ್ಟಿಮುಟ್ಟಾಗಿ ಮಟ್ಟಸವಾದ ದೇಹವನ್ನು ಹೊಂದಿದ್ದ ಆತ ಕೆಲಸಮಾಡುವುದಿರಲಿ ಬದುಕುವುದೇ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದ. ಶ್ರೀಧರರು ಬಂದಿದ್ದಾರೆ ಎಂದು ಯಾರೋ ಹೇಳಿದ್ದನ್ನು ಕೇಳಿ ಕಷ್ಟಪಟ್ಟು ಅವರಿವರ ಹೆಗಲ ಆಸರೆಪಡೆದು ಅವರಲ್ಲಿಗೆ ಬಂದ. " ಸ್ವಾಮೀ ನನ್ನ ಗತಿ ಹೀಗಾಗಿದೆ" ಎಂದ; ಜಾಸ್ತಿ ಮಾತನಾಡಲಾರ. ಏನಾಗಿದೆ ಎಂದು ತಿಳಿದೂ ಇಲ್ಲ. ಆದರೆ ವಿಪರೀತ ತೊಂದರೆ. ಮೂತ್ರಕೋಶದ ಭಾಗ ವಿಪರೀತ ಊದಿತ್ತು. ಶರೀರದಲ್ಲೂ ಇಳಿದುಹೋಗಿದ್ದ. ಗುರುಗಳು ಅವನನ್ನು ನಖ ಶಿಖಾಂತ ಒಮ್ಮೆ ನೋಡಿದರು. ಕಮಂಡಲದಿಂದ ತೀರ್ಥ ತೆಗೆದು ಪ್ರೋಕ್ಷಿಸಿ " ತಮ್ಮಾ , ಈ ಕ್ಷಣದಿಂದ ನಿನಗೆ ಆ ರೋಗವಿಲ್ಲ ಹೋಗಿ ಬಾ ನಿನಗೆ ಒಳ್ಳೇದಾಗಲಿ " ಎಂದು ಹರಸಿ ಮಂತ್ರಾಕ್ಷತೆಯನ್ನಿತ್ತರು. ಬರುವಾಗ ಹೆಗಲ ಆಸರೆ ಪಡೆದು ಬಂದಿದ್ದ ಆತ ಮರಳುವಾಗ ತಾನೇ ನಡೆದುಹೋದ! ಕೆಲವೇ ದಿನಗಳಲ್ಲಿ ಕ್ವಿಂಟಾಲು ತೂಕದ ಸಾಮಾನು ಚೀಲಗಳನ್ನು ಹೊತ್ತ! ಅನೇಕ ವರ್ಷಗಳ ಕಾಲ ಅವನ ಆಯುಷ್ಯವಿರುವವರೆಗೊ ನೆಮ್ಮದಿಯಿಂದ ಬದುಕಿದ.

ಇಂದು ಶ್ರೀಧರ-ದತ್ತ ಜಯಂತಿ! ಅಂದು ದತ್ತಜಯಂತಿಯ ದಿನ ದೇಗಲೂರು ನಾರಾಯಣರಾಯರು-ಕಮಲಮ್ಮ ದಂಪತಿಯ ಮಗನಾಗಿ ದತ್ತನ ವರಪುತ್ರನಾಗಿ, ದತ್ತಪಲ್ಲಕ್ಕಿಯು ಲಾಡ್ ಚಿಂಚೋಳಿಯ ಮನೆಯೆದುರು ಬಂದಾಗಲೇ ಜನಿಸಿದ್ದ ಶ್ರೀಧರರು ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಮಾನವ ಸಹಜದ್ದಲ್ಲ! ಮಹಾತ್ಮರ ಜನ್ಮ ಮತ್ತು ಉದ್ದೇಶ ಇದರಿಂದಲೇ ವ್ಯಕ್ತವಾಗುತ್ತದೆ; ಅವರ ಜೀವನವೇ ಒಂದು ಸಂದೇಶವಾಗುತ್ತದೆ. ಸಾಕ್ಷಾತ್ ದತ್ತಾವತಾರಿಯಾದ ಶ್ರೀಗಳ ಭಾವಚಿತ್ರವೊಂದರಲ್ಲಿ ಕಿವಿಯಲ್ಲಿ ಈಶ್ವರ, ಹಣೆಯ ಭಾಗದಲ್ಲಿ ಶಂಖ, ಕೈಲಿ ತ್ರಿಶೂಲ ಇತ್ಯಾದಿ ಕುರುಹುಗಳು ಕಾಣಿಸುವುದನ್ನು ಗುರುತಿಸಬಹುದಾಗಿದೆ. ಗುರುಗಳು ಅಂದು ಹೇಳಿಕೊಟ್ಟ ಗುರುಮಂತ್ರದೊಂದಿಗೆ ಒಮ್ಮೆ ನಿಮ್ಮೆಲ್ಲರ ಪರವಾಗಿ ನಮಿಸುತ್ತೇನೆ :

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ |
ಸ್ವಾನಂದಾಮೃತತೃಪ್ತಾಯ ಶ್ರೀಧರಾಯ ನಮೋ ನಮಃ ||