ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, May 1, 2010

ಕನಸು

ಕನ್ನಡದ ಇಂದಿನ ಪ್ರಖ್ಯಾತ ಕವಿಗಳಲ್ಲಿ ಶ್ರೀ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಒಬ್ಬರು. ನಾನು ಇಷ್ಟಪಡುವ ಕವಿಗಳಲ್ಲಿ ಅವರೂ ಒಬ್ಬರು. ನವೋದಯ ಸಾಹಿತ್ಯ ಮತ್ತು ನವ್ಯಕಾವ್ಯಗಳ ಭರಾಟೆಯಿಂದ ತತ್ತರಿಸಿದ ಕನ್ನಡ ಸಾಹಿತ್ಯ ಲೋಕಕ್ಕೆ ಸದಭಿರುಚಿಯ ಸರಾಗವಾಗಿ ಹಾಡಬಲ್ಲ ಕವನ ಸಾಹಿತ್ಯವನ್ನು ಒದಗಿಸಿದ ಮಹಾನುಭಾವ ಅವರು. ಅವರ ಅನೇಕ ಭಾವಗೀತೆಗಳು ರಾಗಬದ್ಧವಾಗಿದ್ದು ಹಲವು ಸಂಗೀತಗಾರರಿಂದ ಸಂಗೀತ ಸಂಯೋಜನೆಗೊಂಡು ಬಹುತೇಕ ಪ್ರತಿಯೊಂದು ಸಂಗೀತ ಗೋಷ್ಠಿಯಲ್ಲಿ ಹಾಡಲ್ಪಡುವಷ್ಟು ಜನಪ್ರಿಯವಾಗಿವೆ. ಅನೇಕ ಧ್ವನಿ ಸುರುಳಿಗಳರೂಪದಲ್ಲಿ ನಮ್ಮ ಮಧ್ಯೆಯಲ್ಲಿ ಅನುರಳಿಸುತ್ತಿವೆ. ಆಲೈಸಿದಾಗ ತುಂಬಾ ಇಂಪಾಗಿ ಕೇಳಿ ಬಹಳ ಮುದನೀಡುತ್ತವೆ! ಮೇಲಾಗಿ ಅವರ ಕವನಗಳು ಅವರೇ ಎದುರು ನಿಂತು ಅರ್ಥ ಹೇಳಿದರೇನೋ ಎನ್ನುವಷ್ಟು ಸರಳ ಶಬ್ಧಗಳಿಂದ ಕೂಡಿವೆ. ಓದುಗರ ಮನಸ್ಸಿನಲ್ಲಿ ಭಾವತರಂಗಗಳನ್ನೆಬ್ಬಿಸುವ ಅವು ಕವಿ ನಮಗಾಗೇ ಬರೆದರೇನೋ ಎಂಬಷ್ಟು ನಮಗೆ-ನಮ್ಮ ಹೃದಯಕ್ಕೆ ಹತ್ತಿರವಾಗುತ್ತವೆ. ಪ್ರತೀ ಕವನದಲ್ಲೂ ಏನೋ ಆಪ್ತತೆ, ಏನೋ ಅಪ್ಯಾಯಮಾನ ಅನಿಸಿಕೆ, ಏನೋ ಅನನ್ಯ ಭಾವನೆ ! ಈ ಕವಿ ನಮ್ಮ ಮನೆಯ ಸದಸ್ಯರೇ ಆಗಿದ್ದಾರೆ ಎಂಬಷ್ಟು ಮಾಂತ್ರಿಕತೆ, ಮಾಯದ ಮೋಡಿಗಾರನಂತೆ ತನ್ನತ್ತ ಸೆಳೆಯುವ ಕಾಂತತ್ವ []ಶ್ರೀಯುತರ ’ ದೀಪಿಕಾ ’ ಕವನ ಸಂಕಲವನ್ನು ಬಹಳ ಹಿಂದೆಯೇ ಓದಿದ್ದೆ. ಅದರಲ್ಲಿನ ಕವನಗಳು ಬಹಳ ಜನಪ್ರಿಯವಾಗಿವೆ. ಅವುಗಳಲ್ಲೊಂದು ’ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ !...’ ಇದನ್ನು ಬಹಳ ಸಮಯ ನನ್ನ ಮನಸ್ಸು ಗುನುಗುನಿಸುತ್ತಲೇ ಇರುತ್ತದೆ.

ಮೊನ್ನೆ ಅನಿರೀಕ್ಷಿತವಾಗಿ ಮೊದಲು ಬಿದ್ದ ಬೇಸಿಗೆ ಮಳೆಗೆ ಹಾಗೇ ರಸ್ತೆಯಲ್ಲಿ ನೆನೆದಿದ್ದೆ. ಆ ದಿನ ಗುಡುಗು ಸಿಡಿಲಿನ ಆರ್ಭಟ ಬಹಳವಾಗಿತ್ತು. ರಾತ್ರಿ ಮಲಗಿದ ಮೇಲೆ ಕೂಡ ಮಳೆ ಹನಿಯುತ್ತಿತ್ತು. ವಿದ್ಯುದ್ದೀಪ ಇರಲಿಲ್ಲ. ಆ ರಾತ್ರಿ ಕನಸುಕಂಡೆ. ಕನಸಿನಲ್ಲಿ ಎಲ್ಲಿಂದಲೋ ಹಾರುವ ತಟ್ಟೆಯೊಂದು ಬಂದು ನನ್ನ ಮೈಗೆ ಸೋಕಿ ನಿಂತಹಾಗೆ, ಅದರ ಥಳುಕಿನ ಬಣ್ಣಗಳು,ಬಣ್ಣದ ದೀಪಗಳು ಕಣ್ಣುಕೋರೈಸುವ ವೈಭವದಿಂದ ಕೂಡಿದ್ದವು. ಅದರಲ್ಲಿನ ವ್ಯಕ್ತಿಗಳಾಗಲೀ,ಬೇರೆ ಯಾವುದೇ ಥರದ ಜೀವಿಗಳಾಗಲೀ ಕಾಣುತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ಯಾವುದೋ ಮಾಧ್ಯಮದಲ್ಲಿ ಆಗಾಗ ಕಾಣುವ ಆದರೆ ಗುರುತಿಸಿ ಹಿಡಿಯಲು, ಸಂಶೋಧಿಸಲು ಸಿಗದ ಹಾರುವ ತಟ್ಟೆಗಳು ಮತ್ತು ಅವುಗಳು ವಿದೇಶಗಳಲ್ಲಿ ನೆಲಕ್ಕಿಳಿದು ಹೊಲಗದ್ದೆಗಳಲ್ಲಿ ಮೂಡಿಸಿದ ನಕ್ಷೆ-ಚಿತ್ತಾರಗಳು ಬಿತ್ತರಗೊಳ್ಳುವಾಗ ನೋಡಿದ್ದೆ. ಅದರ ಪ್ರತಿಫಲಿತ ಪರಿಣಾಮವೋ ಏನೋ ಕನಸಿನ ರೂಪದಲ್ಲಿ ಬಂದಿತ್ತು. ನಾನು ಆ ತಟ್ಟೆಯನ್ನು ಕನಸಲ್ಲೂ ಅಷ್ಟು ದೂರದಿಂದ ನೋಡುತ್ತಿದ್ದೆ. ತಟ್ಟೆಯ ಜೊತೆ ಒಬ್ಬನೇ ಇರುವುದರಿಂದ ತುಂಬಾ ಭಯ ಹುಟ್ಟಿಸಿತ್ತು, ಯಾಕೆಂದರೆ ಅದರಲ್ಲಿ ಯಾರಿರಬಹುದು, ಏನುಮಾಡಬಹುದು ಎಂಬುದು ತಿಳಿಯುತ್ತಿರಲಿಲ್ಲ!ಆದರೂ ಅದನ್ನು ನೋಡಿದಾಗ ಮೈಮನವೆಲ್ಲ ಪುಳಕಗೊಂಡಿತ್ತು,ಬಹಳ ಖುಷಿಯಾಗಿತ್ತು. ಆ ಭಯಮಿಶ್ರಿತ ಖುಷಿ ಹಾಗೇ ಸುಮಾರು ಹೊತ್ತು ಮುಂದುವರಿದಿರಬೇಕು ! ಕೊನೆಗೊಮ್ಮೆ ಯಾಕೋ ಎಚ್ಚರವಾಗಿಬಿಟ್ಟಿತು, ಗಡಿಯಾರ ನಾಲ್ಕುಗಂಟೆ ತೋರಿಸುತ್ತಿತ್ತು. ಅದನ್ನು ನಮ್ಮ ಲಕ್ಷ್ಮೀನಾರಾಯಣಭಟ್ಟರ ಶೈಲಿಯಲ್ಲಿ ಕವನಿಸಿ ನಿಮ್ಮ ಮುಂದಿಡುತ್ತಿದ್ದೆನೆ---


ಕನಸು

ಎಲ್ಲೋ ನಡೆಯಿತೋ ಮನಸು
ತಲ್ಲಣಿಸಿತೋ !
ಹುಲ್ಲೆಯಂತೆ ಹಾರಿ ಹೆದರಿ
ಒಲ್ಲೆನೆಂದಿತೋ


ದೂರದೊಂದು ಲೋಕದಿಂದ
ಹಾರುವಾ ತಟ್ಟೆಯಲೀ ಬಂದ
ಯಾರೋ ತಾಕಿ ನನ್ನಾ ಮೈಗೆ
ಭಾರೀ ಭಯವ ತಂದರಿಲ್ಲಿ


ಹಸಿರು ಕೆಂಪು ನೀಲಿ ಹಳದಿ
ಹೊಸತು ದೀಪ ರಾಶಿಗಳಲಿ
ಮಿಸುನಿ ಮೆರುಗು ಥಳುಕು ಬಣ್ಣ
ಎಸೆದು ಕೋರೈಸಿಹುದು ಕಣ್ಣ


ಎಂದೂ ನೋಡದಂಥಾ ಕನಸು
ಇಂದು ನನ್ನ ಮನದಾ ತುಂಬಾ
ಮಿಂದೆ ಅದರ ಸೆಳವಿನಲ್ಲಿ
ಚಂದದಿಂದ ನಲಿಯುತಲ್ಲಿ


ನೌಕೆಯಷ್ಟೇ ಕಂಡೆ ನಾನು
ನೂಕಿದವರು ಕಾಣಲಿಲ್ಲ
ಬಾಕಿಯಿತ್ತು ಹಲವು ಸಂಗ್ತಿ
ನಾಕು ಗಂಟೆಗೆಚ್ಚರವಾಗಿ