ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, December 4, 2010

"ಡಾಕ್ಟರೇ, ಕೇಸರೀಬಾತು ತಿನ್ನಬೇಕು " !


"ಡಾಕ್ಟರೇ, ಕೇಸರೀಬಾತು ತಿನ್ನಬೇಕು " !

ಹಳ್ಳಿಗಳಲ್ಲಿ ವೈದ್ಯಕೀಯ ವ್ಯವಹಾರವಾಗಿಲ್ಲ. ಅಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲವು ವೈದ್ಯರುಗಳು ಸ್ನೇಹಿತರಂತೇ ಇರುತ್ತಾರೆ. ನನಗೆ ತಿಳಿದ ಒಂದೆರಡು ವೈದ್ಯರುಗಳ ಬಗ್ಗೆ ಹೇಳುತ್ತೇನೆ. ಒಮ್ಮೊಮ್ಮೆ ಅನಿಸುವುದು ಅವರನ್ನು ಸ್ಮರಿಸದೇ ಇದ್ದರೆ ಅವರಿಗೆ ಕೃತಘ್ನನಾದಂತೇ ಎಂದು. ಯಾಕೇ ಎಂತು ಎಂಬುದನ್ನು ಓದುತ್ತಾ ತಿಳಿಯುತ್ತೀರಿ.

ಸುಮಾರು ೨೫-೩೦ ವರ್ಷಗಳ ಹಿಂದೆ ನಮ್ಮ ಹಳಿಗಳಲ್ಲಿ ಇಂಗ್ಲೀಷ್ ಮೆಡಿಸಿನ್ ಓದಿದ ಅಷ್ಟೊಂದು ವೈದ್ಯರು ಇರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆರ್.ಎಂ.ಪಿ. [ರಜಿಸ್ಟರ್ಡ್ ಮೆಡಿಕಲ್ ಪ್ರಾಕ್ಟೀಶನರ್] ಎಂಬ ಚಿಕ್ಕ ತರಬೇತಿಯನ್ನು ಮುಗಿಸಿಕೊಂಡ ವೈದ್ಯರೇ ನಮಗೆ ದೊಡ್ಡ ಡಾಕ್ಟರು. ಆಗತಾನೇ ಆಂಗ್ಲ ಔಷಧ ಪದ್ದತಿ ಜಾರಿಗೆ ಬರುತ್ತಿತ್ತು. ಅದು ಬಿಟ್ಟರೆ ನಮ್ಮ ಆಯುರ್ವೇದದ ತಜ್ಞರೇ ಜಾಸ್ತಿ. ಆಯುರ್ವೇದ ಪದ್ದತಿ ಜಗತ್ತಿನಲ್ಲಿಯೇ ಅತಿ ಶ್ರೇಷ್ಠ ಪದ್ದತಿ. ಅದರಲ್ಲಿ ಔಷಧ ಸೇವನೆಯಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ. ಆದರೆ ಅದೊಂದು ವ್ಯವಸ್ಥಿತವಾದ ಪದವಿ ಇಲ್ಲದ ಪದ್ದತಿಯಾಗಿತ್ತಾಗಿ ಅಲ್ಲಲ್ಲಿ ಔಷಧ ಮೂಲಿಕೆಗಳ ಬಗ್ಗೆ ತಿಳಿದಿರದ ಅಳಲೇಕಾಯಿ ಪಂಡಿತರೂ ಬಹಳ ಇದ್ದರು! ಅವರ ದೆಸೆಯಿಂದ ಆಯುರ್ವೇದಕ್ಕೇ ಪರಿಣಾಮಕಾರಿಯಲ್ಲ ಎಂಬ ಕೆಟ್ಟ ಹೆಸರು ಬಂತು. ನಿಜವಾಗಿ ಇವತ್ತಿಗೂ ಗುಣಪಡಿಸಲಾಗದ ನರರೋಗಗಳನ್ನು ಹಾಗೂ ಚರ್ಮವ್ಯಾಧಿಗಳನ್ನು ಆಯುರ್ವೇದವೇ ಪರಿಹರಿಸಬಲ್ಲದು. ಇದೂ ಅಲ್ಲದೇ ಆಯುರ್ವೇದದ ತಜ್ಞರಾಗಿದ್ದ ಚರಕ ಹಾಗೂ ಸುಶ್ರುತರು ಆ ಕಾಲದಲ್ಲೇ ಶಸ್ತ್ರಚಿಕಿತ್ಸೆಮಾಡಿ ಯಶಸ್ಸುಪಡೆದ ದಾಖಲೆಗಳು ಸಿಗುತ್ತವೆ! ಇರಲಿ ನಾವೀಗ ಇಬ್ಬರು ವೈದ್ಯರನ್ನು ತಿಳಿಯೋಣ.

ಡಾ| ಭಟ್ಟರು

ವಂಶದ ಹೆಸರು [ಸರ್ ನೇಮ್] ನನ್ನಂತೇ ಭಟ್ಟ ಎಂದಾದ್ದರಿಂದ ಎಲ್ಲರೂ ಅವರನ್ನು ಡಾ|ಭಟ್ಟರು ಎಂದೇ ಕರೆಯುತ್ತಿದ್ದರು. ದೂರ್ವಾಸರ ಅಪರಾವತಾರದಂತಿದ್ದರು. ಹೊಟ್ಟೆಯಲ್ಲಿ ಹುಳುಕಿರಲಿಲ್ಲ. ಎದುರಿಗೆ ಬಂದ ರೋಗಿಗೆ ಚೆನ್ನಾಗಿ ಬೈದರೆ ರೋಗ ಗುಣವಾ[ವಾಸಿಯಾ]ದ ಹಾಗೇ ! ಇದೇ ಅವರ ಮಹಿಮೆ. ಯಾವೊಬ್ಬ ರೋಗಿಯನ್ನೂ ಬೈಯ್ಯದೇ ಮನೆಗೆ ಕಳಿಸಿದ್ದಿಲ್ಲ. ಓದಿದ್ದು ಆರ್.ಎಂ.ಪಿ. ಆದರೆ ದಿನವೂ ಹತ್ತಾರು ರೋಗಿಗಳನ್ನು ನೋಡೀ ನೋಡೀ ಹಲವು ಪ್ರಾಥಮಿಕ ಚಿಕಿತ್ಸೆಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ರೋಗಿಗೆ ಒಂದು ಬಾರಿಸುವುದೂ ಇತ್ತು. ಆದರೂ ಜನ ಅವರನ್ನೇ ಬಯಸುತ್ತಿದ್ದರು. ಅವರ ಶಖೆ ಹೇಗಿತ್ತಪ್ಪಾ ಅಂದರೆ ಒಂದೊಮ್ಮೆ ಡಾ| ಭಟ್ಟರು ಬೈಯ್ಯಲಿಲ್ಲಾ ಎಂದರೆ ರೋಗಿಗೆ ಕಡಿಮೆಯಾಗುವುದೋ ಇಲ್ಲವೋ ಎಂಬಷ್ಟು ಅಧೈರ್ಯ!

" ಇವತ್ಯಾಕೋ ಡಾಕ್ಟರು ಸರಿಯಾಗಿ ಮಾತಾಡ್ಲೇ ಇಲ್ಲ " ಎಂದುಕೊಳ್ಳುತ್ತಿದ್ದರು. ಡಾ| ಬೈದರೆ ಅವರು ಪ್ರೀತಿತೋರಿಸಿದಹಾಗೇ. ಯಾರದರೂ ಹೊತ್ತು ಮೀರಿ ಬಂದರೆ

" ಏನೋ ಈಗ್ ಬಂದೆ ? ರಾತ್ರಿ ಹನ್ನೆರ್ಡಕ್ಕೆ ಬರ್ಬೇಕಾಗಿತಲ್ಲ ನೀನು ? ಡಾಕ್ಟರಿಗೂ ಮನೆ-ಮಠ ಅದೆ ಅಂತ ಗೊತ್ತಿಲ್ವಾ ? ಬಂದ್ಬುಟ ನೆಟ್ಗೆ "

ಇಷ್ಟು ಹೇಳುತ್ತಲೇ ಚಿಕಿತ್ಸೆ ಆರಂಭಿಸುತ್ತಿದ್ದ
ರೇ ಹೊರತು ರೋಗಿಯನ್ನು ವಾಪಸ್ ಕಳಿಸುತ್ತಿರಲಿಲ್ಲ. ಪ್ರತಿಯೊಬ್ಬ ರೋಗಿಗೂ ಎಷ್ಟೇ ಹೊತ್ತಾದರೂ ಔಷಧ ಕೊಟ್ಟೇ ಕಳಿಸುತ್ತಿದ್ದರು. ಕೆಲವೊಂದು ರೋಗಿಗಳಿಗೆ ಡಾಕ್ಟರನ್ನು ನೋಡಿದ ಕೂಡಲೇ ಅರ್ಧವಾಸಿಯಾಗಿಬಿಡುತ್ತಿತ್ತು. ಡಾಕ್ಟರು ಚೆನ್ನಾಗಿ ಬೈದರೆ ಕೆಲವೊಮ್ಮೆ ಮುಕ್ಕಾಲು ರೋಗವೇ ವಾಸಿ! ನಿಮಗೊಂದು ಗುಟ್ಟು ಹೇಳುತ್ತೇನೆ ಕೇಳಿ ---ರೋಗದ ಮೂಲವೇ ಮನಸ್ಸು. ಈ ವಿಷಯ ಸಾಕಷ್ಟು ಸಲ ನಿಷ್ಕರ್ಷೆ ಮಾಡಿದ್ದೇನೆ. ರೋಗಗ್ರಸ್ತ ಮನಸ್ಸೇ ಶರೀರಕ್ಕೂ ರೋಗವನ್ನು ಬರಿಸುತ್ತದೆ; ಆದರೆ ನಮಗದರ ಅರಿವಿರುವುದಿಲ್ಲ. ಬಹುತೇಕ ಕಾಯಿಲೆಗಳು ವಾಸಿಯಾಗದಿರುವುದಕ್ಕೆ ಮನಸ್ಸಿನೊಳಗಿರುವ ಕಲ್ಮಶವೇ ಕಾರಣವಾಗಿರುತ್ತದೆ. ಮನಸ್ಸು ತಿಳಿಯಿದ್ದಷ್ಟೂ, ಶುಚಿಯಾಗಿದ್ದಷ್ಟೂ ರೋಗ ಕಮ್ಮಿ ಇರುತ್ತದೆ. ಯೋಗಮಾಡುವವರಿಗೆ ರೋಗ ಕಮ್ಮಿ ಯಾಕೆಂದರೆ ಅವರ ಮನಸ್ಸು ಯೋಗದಿಂದ ಸ್ವಲ್ಪ ಮಟ್ಟಿಗೆ ಅವರ ಹಿಡಿತಕ್ಕೆ ಬಂದಿರುತ್ತದೆ. ಅದೇ ಯೋಗಮಾಡದ ನಾವು ಮನಸ್ಸಿನ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ಮನಸ್ಸಿನ ಕೈಯ್ಯಲ್ಲಿ ನಮ್ಮನ್ನು ನಾವು ಕೊಡುವುದೆಂದರೆ ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೇ !

ನಿಮಗೆ ಆರೋಗ್ಯ ಬೇಕೋ ಆದಷ್ಟು ಯೋಗ ಕಲಿತು ಅನುಸರಿಸಿ, ದಿನವೂ ಕನಿಷ್ಠ ಅರ್ಧಗಂಟೆ ಕಾಲ ನಿಮ್ಮ ನಿಮ್ಮ ಇಷ್ಟದ ದೇವರನ್ನು [ ಕೃಷ್ಣನೋ ಕ್ರಿಸ್ತನೋ ಅಲ್ಲಾಹುವೋ ಮಹಾವೀರನೋ ಬುದ್ಧನೋ ಯಾರೇ ಇರಲಿ ] ಕುರಿತು ಧ್ಯಾನಮಾಡಿ. ಪ್ರಾರಂಭದಲ್ಲಿ ದೇವರೆಂಬ ಆ ಅದ್ಬುತ ಶಕ್ತಿ ಕೇವಲ ನಮ್ಮ ನಮ್ಮ ಧರ್ಮದ ಚೌಕಟ್ಟಿನಲ್ಲಿ ಕಾಣುತ್ತಾನೆ. ದೃಷ್ಟಿಕೋನ ವಿಶಾಲವಾದಾಗ ದೇವರೆಂಬ ಶಕ್ತಿಗೆ ಧರ್ಮದ ಹಂಗಿರುವುದಿಲ್ಲ. ಆಗ ಎಲ್ಲಾ ದೇವರುಗಳೂ ಒಂದೊಂದು ಮುಖ ಎಂಬುದು ಗೊತ್ತಾಗತೊಡಗುತ್ತದೆ. ಮೇಲೇರುತ್ತಾ ದೇವರು ನಿರಾಕಾರ ಎಂಬ ಅಂಶ ನಿಮ್ಮನುಭವಕ್ಕೆ ನಿಲುಕಲು ಸಾಧ್ಯವಾಗುತ್ತದೆ. ಇದೆಲ್ಲಾ ದುಡ್ಡುಕೊಟ್ಟು ಖರೀದಿ ಮಾಡಲು ಬರುವುದಿಲ್ಲ ಸ್ವಾಮೀ ...ಬದಲಾಗಿ ಸ್ವಪ್ರಯತ್ನ ಬೇಕು. ನಂಬಿಕೆಬೇಕು. ಛಲಬೇಕು. ತಾದಾತ್ಮ್ಯತೆ ಬೇಕು. ಹೀಗೊಮ್ಮೆ ನೀವು ಮನಸ್ಸನ್ನು ತಕ್ಕಮಟ್ಟಿಗೆ ತಹಬಂದಿಗೆ ತಂದಿರೋ ಆಗ ಅರ್ಧರಾಜ್ಯವನ್ನು ಗೆದ್ದಂತೇ ! ಅರ್ಥಾತ್ ಕಾಯಿಲೆಗಳು ನಿಮ್ಮ ಶರೀರಕ್ಕೆ ಅತಿಥಿಗಳಾಗಿ ಬರುವುದು ಕಮ್ಮಿಯಾಗುತ್ತದೆ ಅಥವಾ ಬರುವುದೇ ಇಲ್ಲ ! ಇದನ್ನು ಕರಾರುವಾಕ್ಕಾಗಿ ಹೇಳುತ್ತಿದ್ದೇನೆ.

ನಾವೀಗ ಡಾಕ್ಟರ್ ಕಥೆಗೆ ವಾಪಸ್ ಬರೋಣ. ಅಂದಹಾಗೇ ಡಾ| ಭಟ್ಟರಿಗೆ ಅಸಾಧ್ಯ ಗುಣಸ್ವಭಾವಗಳ ರೋಗಿಗಳು ಬರುತ್ತಿದ್ದರು. ಅವರ ದವಾಖಾನೆಯಲ್ಲಿ ಒಂದು ಗಂಟೆ ಕೂತರೆ ಸಿನಿಮಾ ನೋಡಿದ್ದಕ್ಕಿಂತ ಮಜಾ ಸಿಗುತ್ತಿತ್ತು! ಒಮ್ಮೆ ಒಬ್ಬಾತ ಬಂದ

" ಡಾಕ್ಟ್ರೇ ನಂಗೆ ಹೊಟ್ಟೆನೋವು ಆದ್ರೆ ಇವತ್ತು ಅಗ್ದಿ ಬೇಕಾದವ್ರ ಮನೇಲಿ ಕಾರ್ಯಕ್ರಮ ಇದೆ....ಮಧ್ಯಾಹ್ನ ಕೇಸರೀಬಾತ್ ತಿನ್ಲೇಬೇಕು...ಏನಾದ್ರೂ ಮಾಡಿ....ಇಂದಿಕ್ಸನ್ ಹಾಕ್ದ್ರೂ ಅಡ್ಡಿಲ್ಲ "

ಮಾತಿಲ್ಲ ಮೌನ, ದೂರ್ವಾಸರು ಗಾಡಿ ಗೇರ್ ಬದಲಾಯಿಸುತ್ತಿದ್ದರು! ಒಂದು ಕೊಟ್ಟರು ನೋಡಿ ! ರೋಗಿ ತಬ್ಬಿಬ್ಬು.

" ಹೊಟ್ಟೆ ನೋವಿಗೆ ಚಿಕಿತ್ಸೆ ಮಾಡು ಅಂತೇಳಿ ಬಂದವಂಗೆ ಕೇಸರೀಬಾತ್ ತಿನ್ನು ಚಟವಾ ಯಾವ ಮನೆಹಾಳ ಡಾಕ್ಟ್ರು ನಿಮ್ಗೆಲ್ಲಾ ಔಷಧೀ ಕೊಡುದು...ಅದೇನ್ನಿಂದು ಹೊಟ್ಟೆಯೋ ಅಲ್ಲಾ ಕೊಟ್ಟೆಯೋ ? "

ರೋಗಿಗೆ ಕೇಸರೀಬಾತ್ ಜನ್ಮದಲ್ಲೂ ಬೇಡ! ಪಾಪ ಬೆವರು ನೀರು ಇಳಿಸಿಬಿಟ್ರು. ಇದೇ ಡಾಕ್ಟ್ರು ಧೈರ್ಯಮಾಡಿ ಕೆಲವೊಮ್ಮೆ ಹೊಸಾ ಇಂಗ್ಲೀಷ್ ಮೆಡಿಸಿನ್ ’ಟೆಟ್ರಾಸೈಕ್ಲಿನ್’ ಈ ಥರದ್ದನ್ನೆಲ್ಲಾ ಬಳಸುತ್ತಿದ್ದರು. ಬಹಳಸರ್ತಿ ಅದರ ಹೆಸರು ಹೇಳುತ್ತಲೇ ಇರುತ್ತಿದ್ದರು ಹೀಗಾಗಿ ನಮಗೆಲ್ಲಾ ಅದರ ಪರಿಣಾಮದ ಅರಿವಿರದಿದ್ದರೂ ಹೆಸರುಮಾತ್ರ ಅಚ್ಚಳಿಯದೇ ಉಳಿದಿದೆ. ನಮ್ಮೂರಲ್ಲಿ ನಾವು ಅತೀ ಚಿಕ್ಕವರಿದ್ದಾಗ ಟೈಫಾಯ್ಡ್ ಜ್ವರದ ಬಾಧೆ ಕಾಣಿಸಿತು. ಹಲವರು ಅನುಭವಿಸದೇ ಇದ್ದರೂ ಕೆಲವರಿಗೆ ತಾಗೇಬಿಟ್ಟಿತ್ತು. ಇಬ್ಬರಿಗಂತೂ ಜೀವ ಉಳಿಯುವುದೇ ಕಷ್ಟವಾಗಿತ್ತು. ಆಗ ಧೈರ್ಯಮಾಡಿ ಚಿಕಿತ್ಸೆ ನೀಡಿದವರು ಇದೇ ವೈದ್ಯರು. ಇವರು ಏನೇನೋ ಮಾಡಿ ಅಂತೂ ರೋಗಿಗಳನ್ನು ಬದುಕಿಸಿಟ್ಟರು. ಜ್ವರದಲ್ಲಿ ಬಳಲಿದ ಇಬ್ಬರಲ್ಲಿ ಒಬ್ಬರ ಎರಡೂ ಕಣ್ಣುಗಳು ಹೋದರೆ ಮತ್ತೊಬ್ಬರ ಬುದ್ಧಿಶಕ್ತಿಯಮೇಲೆ ಔಷಧಿಯ ಅಡ್ಡಪರಿಣಾಮ ಅಡರಿ ಅದು ಕ್ಷೀಣವಾಗಿಹೋಯಿತು. ಇಬ್ಬರೂ ಇಂದಿಗೂ ಬದುಕಿದ್ದಾರೆ, ಆದರೆ ಆ ವೈದ್ಯರು ಈಗ ದಿವಂಗತರು.

ಹೈಗುಂದ ಡಾಕ್ಟರು !

ಆಯುರ್ವೇದದಲ್ಲಿ ಅತ್ಯಂತ ಒಳ್ಳೆಯ ಅನುಭವವನ್ನು ಪಡೆದ ವೈದ್ಯರಾಗಿದ್ದರು. ಮಾತು ಕಡಿಮೆ. ಎಲ್ಲಾ ಥರದ ಕಾಯಿಲೆಗಳಿಗೂ ಔಷಧಿಗಳನ್ನು ಪುಡಿಗಳ ರೂಪದಲ್ಲಿ ಕಟ್ಟಿಕೊಡುತ್ತಿದ್ದರು. ನಿಗರ್ವಿ, ಸಾತ್ವಿಕ. ಇವರು ಮೂಲತಃ ದಕ್ಷಿಣ ಕನ್ನಡದಿಂದ ನಮ್ಮ ಉತ್ತರಕನ್ನಡಕ್ಕೆ ವಲಸೆ ಬಂದವರಾಗಿದ್ದರು. ಹೆಸರು ಪದ್ಮನಾಭಯ್ಯ ಎಂದಾದರೂ ಅವರು ವೃತ್ತಿ ಆರಂಭಿಸಿದ್ದು ಹೈಗುಂದದಲ್ಲಾದ್ದರಿಂದ ಹೈಗುಂದ ಡಾಕ್ಟರು ಎಂದೇ ಪ್ರಸಿದ್ಧರಾಗಿದ್ದರು. ಅತಿ ಕಡಿಮೆ ಹಣಕ್ಕೆ ಔಷಧ ಸಿಗುತ್ತಿತ್ತಲ್ಲದೇ ಅಡ್ಡ ಪರಿಣಾಮಗಳೂ ಇರುತ್ತಿರಲಿಲ್ಲ. ಹೀಗಾಗಿ ಜನ ಅವರಲ್ಲಿಗೆ ಮುಗಿಬೀಳುತ್ತಿದ್ದರು.

ಇವರ ಮಹತ್ವವೆಂದರೆ ಡಾಕ್ಟರು ಕೆಲವೊಮ್ಮೆ ಸಿಗುವುದೇ ಕಷ್ಟ! ಯಾಕೆಂದರೆ ಇವರಿಗೆ ಯಕ್ಷಗಾನ ತಾಳಮದ್ದಲೆ ಎಂದರೆ ಎಲ್ಲಿಲ್ಲದ ಪ್ರೀತಿ. ಸ್ವತಃ ಅರ್ಥದಾರಿಯಾದ ಇವರು ರೋಗಿಗಳ ಕೂಡ ಜಾಸ್ತಿ ಮಾತನಾಡದಿದ್ದರೂ ತಾಳಮದ್ದಲೆಯಲ್ಲಿ ಅವರನ್ನು ಮೀರಿಸುವ ಖುಳ ಇರಲಿಲ್ಲ! ಯಾವುದೇ ಪಾತ್ರವನ್ನು ಕೊಡಿ ಹೈಗುಂದ್ ಡಾಕ್ಟರು ಮಾಡಿದ ಪಾತ್ರ ಅಷ್ಟು ಕಳೆಕಟ್ಟುತ್ತಿತ್ತು. ತುಂಬಾ ಹಾಸ್ಯಪ್ರವೃತ್ತಿಯವರಾದ ಇವರ ಮಾತುಗಳನ್ನು ಕೇಳಲು ಸುತ್ತ ಹತ್ತಾರು ಹಳ್ಳಿಗಳ ಜನ ಜಮಾಯಿಸುತ್ತಿದ್ದರು. ಒಮ್ಮೊಮ್ಮೆ ರಾತ್ರಿಯಿಂದ ಬೆಳತನಕ ಪ್ರಸಂಗ ನಡೆದು ಮಾರನೇ ದಿನ ಸ್ವಲ್ಪ ವಿಶ್ರಾಂತಿ ಬೇಕಲ್ಲ--ಹೀಗಾಗಿ ಆದಿನ ರೋಗಿಗಳಿಗೆ ವೈದ್ಯರು ಸ್ವಲ್ಪಕಾಲ ಅಲಭ್ಯರಾಗುತ್ತಿದ್ದರು. ರೋಗಿಗಳನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುವ ಸ್ವಭಾವದವರಾದ ಇವರು ಬಡ ರೋಗಿಗಳಿಗೆ ಹಣವಿರದಿದ್ದರೂ ಚಿಕಿತ್ಸೆನೀಡಿದ ದಾಖಲೆಗಳಿವೆ. ಕೆಲವೊಮ್ಮೆ ಡಾ| ಭಟ್ಟರ ಇಂಗ್ಲೀಷ್ ಮೆಡಿಸಿನ್ ಕೆಲಸಮಾಡದಿದ್ದಾಗ ಅಲ್ಲಿಂದಲೂ ರೋಗಿಗಳು ಹೈಗುಂದ ಡಾಕ್ಟರನ್ನು ಹುಡುಕಿಕೊಂಡು ಹೋಗುತ್ತಿದ್ದರು! ಅನೇಕ ಜನರಿಗೆ ಉಪಕಾರ ನೀಡಿದ ಈ ವೈದ್ಯ ಈಗ ಕೀರ್ತಿಶೇಷರು...ಆದರೆ ಇಂದಿಗೂ ಅವರ ಮಗ ಔಷಧ ನೀಡುತ್ತಾರೆ. ತಂದೆಯ ಸ್ಥಾನ ಮಗನಿಗೆ ಬಂದಿದೆ. ಆದರೆ ಮಗನಿಗೆ ತಾಳಮದ್ದಲೆಯಲ್ಲಿ ಆಸಕ್ತಿಯಿಲ್ಲ.

ಈಗ ನಿಮ್ಮಲ್ಲಿ ಒಂದು ಪ್ರಶ್ನೆ ಉಳಿದಿರುತ್ತದೆ! ಅದೇನೆಂದರೆ ಯೋಗದಿಂದ ಪಕ್ವವಾದ ಮನಸ್ಸಿನವರಿಗೆ ರೋಗವೇ ಇಲ್ಲವಾಗುವುದೆಂದಮೇಲೆ ಆಯುರ್ವೇದ ಯಾಕೆ ಹುಟ್ಟಿಕೊಂಡಿತು ಎಂಬುದು, ಅಲ್ಲವೇ ? ಕೆಲವು ಘಟನೆಗಳ ಅವಲೋಕನದಿಂದ ಹೇಳುವುದಾದರೆ ಅಲ್ಲಲ್ಲಿ ಕೆಲವು ಕಾಯಿಲೆಗಳು ನಮ್ಮ ಜನ್ಮಾಂತರ ಕರ್ಮಫಲದಿಂದಲೂ ಬರುತ್ತವೆ. ಕುಂಟನೋ, ಕುರುಡನೋ, ಕಿವುಡನೋ, ಮೂಗನೋ ಅಥವಾ ಪೋಲಿಯೋ ಪೀಡಿತನೋ ಆತ ಹಾಗಾಗುವುದಕ್ಕೆ ಆತನ ಪೂರ್ವಜನ್ಮದ ಪಾಪ ಕೃತ್ಯವೇ ಕಾರಣವಾಗುತ್ತದೆ. ಇದನ್ನು ಬಗೆಹರಿಸಲು ವೈದ್ಯಮಾತ್ರರಿಂದ ಸಾಧ್ಯವಿಲ್ಲ. ಜಗನ್ನಿಯಾಮಕ, ಸೃಷ್ಟಿಯಲ್ಲಿ ಹಲವು ವೈಚಿತ್ರ್ಯಗಳನ್ನು ತೋರಿಸಿ ಗುಟ್ಟನ್ನು ತನ್ನಲ್ಲೇ ಇಟ್ಟುಕೊಂಡಿದ್ದಾನೆ. ಅದನ್ನಾತ ಯಾರಿಗೂ ಹೇಳುವುದಿಲ್ಲ. ನಾವು ಬಾಯಿಮಾತಿನಲ್ಲಿ ಹಣೆಬರಹವೆನ್ನುತ್ತೇವೆ ನಮ್ಮಲ್ಲಿ ಎಷ್ಟುಮಂದಿಗೆ ಹಣೆಬರಹವಿರುವುದು ತಿಳಿದಿದೆ ? ಸತ್ತವ್ಯಕ್ತಿಯ ತಲೆಯಭಾಗದ ಮೂಳೆಗಳು ಹೂತ/ಸುಟ್ಟ ನಂತರ ಹಾನಿಯಾಗಿರದೇ ಹಾಗೇ ಸಿಕ್ಕರೆ ಆಗ ಹಣೆಯಭಾಗದಲ್ಲಿ ಅದನ್ನು ಸರಿಯಾಗಿ ವೀಕ್ಷಿಸಿದರೆ ಓದಲು ಬರದ ಯಾವುದೋ ಲಿಪಿ ನೋಡಸಿಗುತ್ತದೆ! ಇದೇ ಬ್ರಹ್ಮ ಲಿಪಿ. ಇದು ಆತನ ಇಡೀ ಜನ್ಮವನ್ನು ಹೇಳುತ್ತದೆ! ಆದರೆ ಇಲ್ಲೀವರೆಗೆ ಅದನ್ನು ಓದಿದವರಾಗಲೀ, ಸಂಶೋಧಿಸಿದವರಾಗಲೀ ಇಲ್ಲ. ಹೀಗಾಗಿ ಪ್ರಾರಬ್ಧಕರ್ಮದಿಂದ ಪಡೆದುಬಂದ ದೌರ್ಭಾಗ್ಯದಿಂದ ಅನುಭವಿಸಬೇಕಾಗಿ ಬಂದ ಕಾಯಿಲೆಗಳಿಗೆ ದಯಾಮಯಿಯಾದ ದೇವರು ಧನ್ವಂತರಿಯಾಗಿ ತಾನೇ ಬಂದು ಆಯುರ್ವೇದವನ್ನೂ ತಂದ. ಪ್ರತೀವರ್ಷ ಸರಿಸುಮಾರು ಈ ವೇಳೆಯಲ್ಲಿ ಧನ್ವಂತರೀ ಜಯಂತಿ ಬರುತ್ತದೆ. ಮೊನ್ನೆ ಮೊನ್ನೆ ಅದು ನಡೆದುಹೋಯಿತು. ಧನ್ವಂತರಿಯನ್ನು ನೆನೆದಾಗ ಊರಲ್ಲಿ ಉಪಕರಿಸಿದ ಹಳೆಯತಲೆಮಾರಿನ ಎರಡು ಜೀವಗಳ ನೆನಪಾಗಿ ಈ ಲೇಖನ ಬರೆದೆ.

ಕ್ಷೀರೋದಮಥನೋದ್ಭೂತಂ ದಿವ್ಯಗಂಧಾನುಲೇಪಿತಂ |
ಸುಧಾಕಲಶ ಹಸ್ತಂ ತಂ ವಂದೇ ಧನ್ವಂತರಿಂ ಹರಿಂ ||

ಕ್ಷೀರಸಾಗರ ಮಥನವಾದಾಗ ಲಕ್ಷ್ಮಿಯ ಉದ್ಭವವಾದ ಹಾಗೇ ಶ್ರೀಹರಿಯೂ ಧನ್ವಂತರಿಯಾಗಿ ಭೂಮಿಗೆ ಬಂದ. ಬರುವಾಗ ಜಗದಲ್ಲಿ ತನ್ನ ಲೀಲಾನಾಟಕದಲ್ಲಿ ನೋವನುಭವಿಸುವ ನತದೃಷ್ಟರ ಪಾಲಿಗೆ ಹಲವು ಗಿಡಮೂಲಿಕೆಗಳಿಂದ ಪರಿಹಾರ ಹೇಳುವ ಆಯುರ್ವೇದ ಶಾಸ್ತ್ರವನ್ನೂ ತಂದ. ಸ್ನೇಹಿತರೇ, ಭಾರತೀಯರದಾದ ಈ ಆಯುರ್ವೇದ ವಿದೇಶೀಯರ ಕೈವಶವಾಗಿ ಅಮೇರಿಕನ್ನರು ಹಲವಕ್ಕೆ ಪೇಟೆಂಟ್ ಪಡೆಯುತ್ತಿದ್ದರು. ಅಷ್ಟರಲ್ಲಿ ಸುದೈವವಶಾತ್ ಬಾಬಾ ರಾಮ್‍ದೇವ್ ಥರದ ಕೆಲವು ಜನರ ಪ್ರಯತ್ನದಿಂದ ಅದು ಸ್ವಲ್ಪ ನಿಂತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ಭಾರತದಲ್ಲಿ ಹುಟ್ಟಿದ ಯಾವುದೇ ಶಾಸ್ತ್ರವಾಗಲಿ ಅದಕ್ಕೊಂದು ಭದ್ರ ಬುನಾದಿ ಇರುತ್ತದೆ. ಅದನ್ನರಿತ ಬೇರೇ ದೇಶದ ಜನತೆ ನಮ್ಮ ಹಕ್ಕುಗಳನ್ನೂ ಮೀರಿ ಶಾಸ್ತ್ರಗಳೇ ತಮ್ಮದು ಎಂದರೆ ಕಷ್ಟವಾಗುತ್ತದೆ. ಶಾಸ್ತ್ರಗಳಿಂದ ಸಿಗುವ ಲಾಭವನ್ನು ಅವರೂ ಪಡೆಯಲಿ ಅದಕ್ಕೆ ತೊಂದರೆಯಿಲ್ಲ, ಬಾಡಿಗೆಯವರೇ ಮಾಲೀಕರೆಂಬ ಸುಳ್ಳನ್ನು ಸತ್ಯಮಾಡುವ ಕೆಲಸಕ್ಕೆ ಅವಕಾಶ ಬೇಡ. ಮೇಲಿನ ಶ್ಲೋಕವನ್ನು ಒಮ್ಮೆ ಹೇಳಿ ಧನ್ವಂತರಿಗೆ ಒಮ್ಮೆ ನಮಿಸಿ, ನಮ್ಮ-ನಿಮ್ಮಲ್ಲಿರಬಹುದಾದ ಎಲ್ಲಾ ಕಾಯಿಲೆಗಳನ್ನೂ ಆತ ದೂರಮಾಡಲಿ.