ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 11, 2012

ಭೋಗಷಟ್ಪದಿಯ ವೈಭೋಗದ ಅರಮನೆಯಲ್ಲಿ

ಚಿತ್ರಕೃಪೆ : ಅಂತರ್ಜಾಲ

ಭೋಗಷಟ್ಪದಿಯ ವೈಭೋಗದ ಅರಮನೆಯಲ್ಲಿ

ಮೂಗು ಮುರಿಯುವಂಥಾದ್ದು ಏನೂ ಇಲ್ಲ! ಕನ್ನಡನಾಡು ಕಂಡ ಅಪ್ರತಿಮ ಪ್ರತಿಭೆಗಳು ಒಂದು ಕಾಲಕ್ಕೆ ನಾಡುನುಡಿಯನ್ನು ಕಟ್ಟುವುದಕ್ಕಾಗಿ ಎಷ್ಟೆಲ್ಲಾ ಹರಸಾಹಸ ಪಟ್ಟರು ಎಂಬುದಕ್ಕೆ ಕನ್ನಡ ಕಾವ್ಯ ಶೈಲಿ ಅದ್ಭುತ ಉದಾಹರಣೆಯಾಗುತ್ತದೆ! ಜನಪದ ಕಾವ್ಯದಿಂದ ಹಿಡಿದು ರಾಗವಾಗಿ ಮುಕ್ತವಾಗಿ ಹಾಡಬಲ್ಲ ಎಲ್ಲಾ ಗೇಯಗೀತೆಗಳಿಗೂ ಒಂದೊಂದು ಛಂದಸ್ಸು ಇದ್ದೇ ಇರುತ್ತದೆ! ಅದು ನಮಗೆ ಗೊತ್ತಿರಲಿ ಬಿಡಲಿ ಕಾವ್ಯಗತಿಯಲ್ಲಿ ಅದರ ಒಳಹರಿವು ಕೆಲಸಮಾಡುತ್ತದೆ. ನಮ್ಮ ಸಂಸ್ಕೃತ ವೇದಮೂರ್ತಿಗಳು ಮಂತ್ರಪುಷ್ಪವನ್ನು ಹೇಳುವಾಗ "ಅಷ್ಟಾಪದೇ ನವಪದೇ ಬಭೂವಷೀ" ಎಂದು ಉಚ್ಚರಿಸಿದಾಗೆಲ್ಲಾ ನನಗೆ ನೆನಪಾಗುತ್ತಿದ್ದುದು ನಮ್ಮ ಕನ್ನಡದ ತ್ರಿಪದಿ, ಚೌಪದಿ, ಷಟ್ಪದಿ ಮೊದಲಾದವುಗಳು. ಮದುವೆಗೆ ಬೆಳೆದು ನಿಂತ ಹುಡುಗಿಯನ್ನೋ ಹುಡುಗನನ್ನೋ ಪರಸ್ಪರ ನೋಡದೇ ಮದುವೆಮಾಡಿಬಿಡುವುದು ನ್ಯಾಯವೇ? ಅದೇರೀತಿ ಮದುವಣಗಿತ್ತಿಗೆ ಆಭರಣಗಳು, ವಿವಿಧ ಹೂಗಳಮಾಲೆ, ಕಾಡಿಗೆ, ಮದರಂಗಿ, ರೇಷ್ಮೆ ಸೀರೆ ಇತ್ಯಾದಿಗಳಿಂದ ಅಲಂಕರಿಸಿದಾಗ ಹೇಗೆ ಒಳ್ಳೇ ಒಡ್ಡಾಗಿ ಕಾಣುವುದೋ ಅದೇ ರೀತಿಯಲ್ಲಿ ಕಾವ್ಯಕ್ಕೆ ಛಂದಸ್ಸನ್ನು ಬಳಸಿದರೆ ಅದು ಸಮರ್ಪಕವಾಗಿ ಸಿದ್ಧಗೊಳ್ಳುತ್ತದೆ.

ಛಂದಸ್ಸು, ಪ್ರಾಸ, ಉಪಮೆ, ಪ್ರತಿಮೆ ಇವೆಲ್ಲವುಗಳನ್ನೂ ಮೇಳವಿಸುತ್ತಾ ಕವನ ಬರೆಯುವುದು ಇವತ್ತಿನ ಗದ್ಯಕಾವ್ಯ ಬರೆದಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಪದಪುಂಜಗಳ ರಾಶಿ ಮನದ ಬತ್ತಳಿಕೆಯಲ್ಲಿರಬೇಕು, ಬಳಸುವ ಪದಗಳ ಅರ್ಥಗಳ ಬಗ್ಗೆ ಯಾವುದೇ ಸಂದೇಹವಿರಕೂಡದು, ಲಘು-ಗುರು ಮನದಲ್ಲೇ ಗುಣಿಸಿಕೊಳ್ಳುವ ಪರಿಜ್ಞಾನ ಇರಬೇಕು, ಸಾಮಾನ್ಯವಾಗಿ ಯಾವ ಶೈಲಿಯಲ್ಲಿ ಬರೆಯುತ್ತೇನೆ ಎಂಬ ಬಗ್ಗೆ ಲಕ್ಷ್ಯವಿರಬೇಕು ಇವೆಲ್ಲದರ ಜೊತೆಗೆ ಕವನದಲ್ಲಿ ಹೇಳಬೇಕಾದ ಸಂಗತಿಗೆ ತೊಡಕಾಗಬಾರದು, ಉಪಮಾಲಂಕಾರ ಮತ್ತು ರೂಪಕಾಲಂಕಾರಗಳನ್ನು ಸೇರಿಸುವ ಕಲೆ ಸಿದ್ಧಿಸಿರಬೇಕು, ವ್ಯಾಕರಣದ ಪರಿಭಾಷೆಯಲ್ಲಿ ಲಿಂಗ, ವಿಭಕ್ತಿ-ಪ್ರತ್ಯಯ, ವಚನ, ಕಾಲ, ಸಂಧಿ, ಸಮಾಸ ಇವೆಲ್ಲವುಗಳ ನಡಾವಳಿ ಸರಿಯಿರಬೇಕು! ಆಗ ಮಾತ್ರ ಕವನ ಸರಿಯಾಗಿ ರೂಪುಗೊಳ್ಳುತ್ತದೆ; ಹೇಳಲಿಕ್ಕೂ ಕೇಳಲಿಕ್ಕೂ ಬಹಳ ಪಸಂದಾಗಿರುತ್ತದೆ.

ಆದಿಕವಿಗಳೆಲ್ಲ ಇದನ್ನು ಅನುಸರಿಸಿದ್ದರು. ಅದರಿಂದಲೇ ಅವರ ಮಹಾಕಾವ್ಯಗಳನ್ನೂ ಕೂಡ ಗಮಕಿಗಳು ಲಯಬದ್ಧವಾಗಿ ವಾಚಿಸಲು ಸಾಧ್ಯವಾಗುತ್ತದೆ. ನಾವು ಸರಿಯಾಗಿ ಮನೆಗೆಲಸ [ಹೋಮ್ ವರ್ಕ್] ಪೂರೈಸದೇ ಹಾಗೇ ತೆರಳಿದ್ದರೆ "ಬರುಬರುತ್ತಾ ರಾಯರ ಕುದುರೆ ಕತ್ತೆಯಾಯಿತು" ಎಂದು ಶಾಲಾ ಮಾಸ್ತರರು ಹೇಳುತ್ತಿದ್ದುದುಂಟು. ಅದೇರೀತಿ ಇವತ್ತಿನ ’ಕವಿ’ಗಳು ಇವಾವ ಬಂಧನಕ್ಕೂ ಸಿಲುಕದೇ ನೇರವಾಗಿ ಒಂದಷ್ಟು ಗೀಚುತ್ತಾರೆ. ಓದಿ ಎನ್ನುತ್ತಾರೆ. ಓದುವುದಾದರೂ ಹೇಗೆ? ಹೀಗೆ ಬರೆದ ಅವರ ಕೃತಿಗಳನ್ನು ಹಾಡಿಕೊಳ್ಳಲು ಸಾಧ್ಯವಿಲ್ಲ; ಓದಿಕೊಂಡರೆ ಗದ್ಯಕ್ಕೂ ಪದ್ಯಕ್ಕೂ ಬಹಳ ವ್ಯತ್ಯಾಸ ಇರುವುದಿಲ್ಲ! ಇದನ್ನೆಲ್ಲಾ ಗಮನಿಸಿದ್ದು ಹಿರಿಯರಾದ ಪ್ರೊ.ಅ.ರಾ.ಮಿತ್ರ ಅವರು. " ಇಲ್ಲಾ ಇದನ್ನು ಹೀಗೇ ಬಿಟ್ಟರೆ ಕನ್ನಡ ಕುಲಗೆಟ್ಟು ಹೋಗುತ್ತದೆ" ಎಂಬ ತುಡಿತದಿಂದ, ಹಳೆಯ ಮತ್ತು ನಮ್ಮಂಥವರಿಗೆ ಸುಲಭವಾಗಿ ’ಜೀರ್ಣವಾಗದ’ ಛಂದಸ್ಸಿನ ಕುರಿತಾದ ಹೊತ್ತಗೆಗಳನ್ನು ಆಧಾರವಾಗಿ ಬಳಸಿಕೊಂಡು ’ಛಂದೋಮಿತ್ರ’ ಎಂಬ ಮನನೀಯ ಪುಸ್ತಕವೊಂದನ್ನು ಹೊರತಂದರು.

ಅ.ರಾ. ಮಿತ್ರರ [ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ೧೯೩೫ ರಲ್ಲಿ ಜನಿಸಿದರು, ಕನ್ನಡದಲ್ಲಿ ಎಂ. ಏ ಮುಗಿಸಿಕೊಂಡ ಶ್ರೀಯುತರು ಬೆಂಗಳೂರು, ತುಮಕೂರು, ಮಡಿಕೇರಿ ಕಾಲೇಜುಗಳಲ್ಲಿ ಕೆಲಸಮಾಡಿದರು, ಕೊನೆಯದಾಗಿ ಬೆಂಗಳೂರಿನ ಮಾಹಾರಾಣೀ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಸಮಗ್ರ ಲಲಿತ ಪ್ರಬಂಧಗಳು, ವಚನಕಾರರು, ಶಬ್ದ ಕಲ್ಪ, ಒಳನೋಟಗಳು, ಛಂದೋಮಿತ್ರ, ಕೈಲಾಸಂ, ಪ್ರೇಮನದಿಯ ದಡಗಳಲ್ಲಿ-ಇವು ಅವರ ಪ್ರಮುಖ ಕೃತಿಗಳು. ಎಲ್ಲವೂ ಕನ್ನಡದ ಉತ್ಕೃಷ್ಟ ಸಾಹಿತ್ಯ ಶೈಲಿಯಲ್ಲಿವೆ. ’ಈಟೀವಿ’ಯಲ್ಲಿ ಸುಮಾರು ನಾಲ್ಕುವರ್ಷಗಳಿಗೂ ಅಧಿಕಕಾಲ ಕುಮಾರವ್ಯಾಸನ ಬಗ್ಗೆ ಧಾರಾವಾಹಿಯ ರೂಪದಲ್ಲಿ ತಿಳಿಸಿಕೊಟ್ಟ ಕಾರ್ಯಕ್ರಮ ನಡೆದು ಅಪಾರ ಜನಮೆಚ್ಚುಗೆಗೆ ಕಾರಣವಾಯ್ತು, ಈ ಸಂದರ್ಭದಲ್ಲೇ ಸುಮಾರು ೩೦೦೦ಕ್ಕೂ ಅಧಿಕ ಪುಟಗಳಷ್ಟು ಮಾಹಿತಿಯನ್ನು ಕುಮಾರವ್ಯಾಸನ ಕುರಿತು ಅವರು ಬರೆದರು, ಇದರಿಂದಾಗಿ ಜನ ಅವರನ್ನು ’ಅಭಿನವ ಕುಮಾರವ್ಯಾಸ ಮಲ್ಲಿನಾಥ’ ಎಂದು ಕರೆದಿದ್ದಾರೆ. ] ಬಗ್ಗೆ ಪರಿಚಯದ ಅವಶ್ಯಕತೆ ಇಲ್ಲವೆನಿಸುತ್ತದೆ.

ಹಾಸ್ಯಸಾಹಿತಿಗಳಲ್ಲಿ ಅದರಲ್ಲೂ ಗಂಭೀರ ಹಾಸ್ಯಸಾಹಿತಿಯಾಗಿ ಅ.ರಾ.ಮಿತ್ರ ಖ್ಯಾತರು. ಮೂಗಿನ ಬಗ್ಗೆ ಅವರು ಬರೆದ ಲೇಖನವನ್ನು ಓದಿದ್ದ ನಾನು ಇಂದಿಗೂ ಕೆಲವೊಮ್ಮೆ ನನ್ನ ಮೂಗನ್ನೇ ನೆನಪಿಸಿಕೊಂಡು ನಗುವುದಿದೆ. ಅತ್ಯಂತ ಮನೋಜ್ಞವಾಗಿ ಹಾಸ್ಯದ ಪ್ರತಿಮೆಗಳನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟ ಮಿತ್ರರು ಕನ್ನಡಕ್ಕೆ ’ಛಂದೋಮಿತ್ರ’ದಂತಹ ಅಪೂರ್ವ ಕಾಣಿಕೆಯನ್ನೂ ಕೊಟ್ಟಿದ್ದಾರೆ. ಅದರಲ್ಲಿ ಛಂದಸ್ಸುಗಳ ಬಳಕೆ ಹೇಗೆ ಎಂಬ ಕುರಿತಾಗಿ ಬಹಳ ಲಘುವಾಗಿ ಕಲಿಸುವ ಗುರು ಅವರಾಗುತ್ತಾರೆ! ’ಹಾಡೀ ಹಾಡೀ ರಾಗ ಉಗಳೀ ಉಗಳೀ ರೋಗ’ ಎಂಬ ಗಾದೆಯಂತೇ ಪ್ರಯತ್ನಿಸಿ ಕಲಿಯಬೇಕೇ ವಿನಃ ಕೇವಲ "ಅಯ್ಯೋ ಛಂದಸ್ಸು ಕಬ್ಬಿಣದ ಕಡಲೆಯಪ್ಪಾ" ಎಂದು ಕೂತರೆ ಅದನ್ನು ಅರ್ಥವಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ತಮಾಷೆಯೊಂದನ್ನು ಹೇಳುತ್ತೇನೆ ಕೇಳಿ: ನನಗೆ ನಾನು ಕಾಲೇಜಿಗೆ ಹೋದರೂ ಆಂಗ್ಲ ಭಾಷೆ ಬಳಕೆಗೆ ಬರುತ್ತಿರಲಿಲ್ಲ! ಯಾಕೆಂದರೆ ನಾವೆಲ್ಲಾ ಕಲಿತಿದ್ದು ಕನ್ನಡ ಮಾಧ್ಯಮದ ಶಾಲೆಗಳಲ್ಲಿ. ಇಂಗ್ಲೀಷ್ ಎಂಬ ಭಾಷೆಯನ್ನು ಅಲ್ಲಿ ಕಲಿಸಿಕೊಡುವ ಶಿಕ್ಷಕರೇ ’ಗೈಡ್’ ನೋಡಿಕೊಂಡು ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಿಸಿಬಿಡುತ್ತಿದ್ದರು. ನಮಗೆ ಅಂದು ಅದು ಹೇಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಕಾಯ್ತೋ ಗೊತ್ತಿಲ್ಲ.

ಹೊರಗಡೆ ಬಂದ್ರೆ ಎಲ್ಲರೂ ಆಂಗ್ಲಭಾಷೆಯಲ್ಲಿ ನಮ್ಮೆದುರು ಮಾತನಾಡುವಾಗ ನಮ್ಮದು ಕಾಳೀದಾಸನ ವಾಕ್ಯ "ಹೇಳುವುದಕ್ಕೂ ಕೇಳುವುದಕ್ಕೂ ಈಗ ಸಮಯವಲ್ಲಾ" ! ಇಂಗ್ಲೀಷ್ ಬರದಿದ್ದ ಕಾರಣ ’ಕನ್ನಡ ಸಂಘ’ವನ್ನೂ ನಾವು ಕಟ್ಟಿದ್ದೂ ಇದೆ! ’ಕತ್ತೆ ಬಲ್ಲುದೆ ತಾನು ಕತ್ತುರಿಯ ಪರಿಮಳವ’ ಎನ್ನುತ್ತಾ ತಿರುಗಿದ್ದೂ ಇದೆ ! ಭಾಷೆ ಬೇಕು ನಿಜ, ಭಾಷೆಯ ದುರಭಿಮಾನ ಸಲ್ಲ ಅಲ್ಲವೇ? ಆಮೇಲೆ ಧೈರ್ಯಮಾಡಿ ಆಂಗ್ಲ ಕಲಿಯಲು ಸ್ವಪ್ರಯತ್ನದಿಂದ ಮುಂದಾಗಿದ್ದಾಯ್ತು. ಮುಂದೆ ಕಲಿತ ತಾಂತ್ರಿಕ ಪುಸ್ತಕಗಳೆಲ್ಲಾ ಆಂಗ್ಲದಲ್ಲೇ ಇದ್ದುದರಿಂದಲೂ ಅವು ಬಹಳ ಕಠಿಣ ಪದಗಳಿಂದ ಕೂಡಿದ್ದವಾಗಿದ್ದರಿಂದಲೂ ಅನಿವಾರ್ಯವಾಗಿ ಪದಗಳನ್ನೂ ಜೋಡಣೆಗಳನ್ನೂ ನೋಡುತ್ತಾ ನೋಡುತ್ತಾ ಪ್ರಯತ್ನಿಸಿ ಈಗ ಆಂಗ್ಲವೆಂದರೆ ನಿದ್ದೆಯಲ್ಲೂ ಸರಾಗ. ಆಗ ನಮಗೆ ಆಂಗ್ಲಭಾಷೆ ಕಲಿಸಿದ ಶಿಕ್ಷಕರನ್ನೂ " ಇದು ಬಾಳಾ ಕಠಿಣದೆ ಹಾಂ .. ಕಂಠಪಾಠ ಮಾಡ್ಬಿಡಿ" ಎಂದು ಅವರು ಹೇಳಿದ್ದನ್ನೂ ನೆನೆದರೆ ನಗು ಉಕ್ಕಿಬರುತ್ತದೆ. ಇದೇ ತೆರನಾಗಿ ಛಂದಸ್ಸಿನ ಉದಾಹರಣೆಗಳನ್ನು ಅವಲೋಕಿಸುತ್ತಾ ನಡೆದರೆ ಅವಲಕ್ಕಿ ತಿಂದಷ್ಟೇ ಹಗುರವಾಗಿ ಅವುಗಳನ್ನು ಬಳಸಲು ಸಾಧ್ಯವಾಗುತ್ತದೆ, ಪ್ರಯತ್ನಿಸಿ ಎಂಬುದು ಇಂದಿನ ಯುವ ’ಕವಿ’ಗಳಿಗೆ ನನ್ನ ಸಲಹೆ.


ಹಿಂದೊಮ್ಮೆ ಭೋಗಷಟ್ಪದಿಯ ಬಗ್ಗೆ ಒಂಚೂರು ಬರೆದಿದ್ದೆ. ರಾಗವಾಗಿ ಹಾಡಿಕೊಳ್ಳಬಲ್ಲ ಈ ಭೋಗ ನಿಜಕ್ಕೂ ಈ ಧರೆಯ ವೈಭೋಗ ! ಅಕ್ಕಿಯಲ್ಲಿ ಅದೇನೋ ’ರಾಜ್ ಭೋಗ್’ ಅಂತಲೋ ಏನೋ ಯಾರೋ ಅಂಗಡಿಯಾತ ಹೇಳಿದ ನೆನಪು, ಅದೇ ರೀತಿ ಭೋಗಷಟ್ಪದಿಯನ್ನು ಕಲಿತು ಗುನುಗುನಿಸಿದರೆ ನಮ್ಮ ನಿತ್ಯದ ವ್ಯವಹಾರಗಳ ನಡುವೆಯೇ ಹಲವು ಕಾವ್ಯಗಳು ಸೃಜಿಸಲ್ಪಡುತ್ತವೆ. ಕೆಲವು ಉದಾಹರಣೆಗಳನ್ನು ನೋಡೋಣ:

ಕುಡುಕರ ಚಾಳಿ ಒಮ್ಮೆ ಜಾಸ್ತಿಯಾದಾಗ ಎಲ್ಲಾಕಡೆ ಅದೇ ಸುದ್ದಿ, ಯಾವ ಪತ್ರಿಕೆ ತೆರೆದರೂ ಅದೇ ಚಿತ್ರಣವಾಗಿತ್ತು. ರಾತ್ರಿ ಎಣ್ಣೆಪಾರ್ಟಿ ಮುಗಿಸಿಕೊಂಡು ಮನೆಗೆ ಮರಳುವಾಗ ಅಲ್ಲಲ್ಲಿ ಅಪಘಾತಗಳನ್ನು ನಡೆಸಿ ಪರಾರಿಯಾಗಲು ಯತ್ನಿಸುವ ಅನೇಕ ಪಡ್ಡೆಗಳು ಪೋಲೀಸರ ಕೈಗೆ ಸಿಕ್ಕಿಬೀಳುತ್ತಿದ್ದರು. ಬಾರ್‍ಗಳಲ್ಲಿ ನರ್ತನ ಮಾಡುವ ಹುಡುಗಿಯರನ್ನು ಕಂಡು ಹಲವು ಪಡ್ಡೆಗಳು ಒಬ್ಬರ ಹಿಂದೆ ಇನ್ನೊಬ್ಬರಂತೇ ಹೋಗುತ್ತಿದ್ದರು; ಹಣ ಪೋಲುಮಾಡುತ್ತಿದ್ದರು. ಆಗ ಆಂಗ್ಲಪದವೂ ಸೇರಿದ ಒಂದು ಭೋಗಷಟ್ಪದಿ ಹುಟ್ಟಿದ್ದು ಹೀಗೆ:

ಗಲ್ಲಿಗಲ್ಲಿಗೊಂದು ಬಾರು
ಇಲ್ಲದಿದ್ರು ಜನಕೆ ಸೂರು
ಬಲ್ಲ ಜನರೆ ನಡೆಸುತಾರೆ ಬಹಳ ವಿಪ್ಲವ |
ಚೆಲ್ಲು ಹುಡುಗಿಯರನು ಕಂಡು
ಹಲ್ಲುಕಿರಿದು ಹಾಳುಬಿದ್ದ
ಎಲ್ಲ ಪಡ್ಡೆಗಳಿಗೆ ಅಡ್ಡೆ ‘ನಡೆಪರೆಲ್ಲವ’ ||

ಹಣಕ್ಕಾಗಿ ಪಡ್ಡೆಗಳು ಕ್ರಿಕೆಟ್ ಬೆಟ್ಟಿಂಗ್ ಆರಂಭಿಸಿದ್ದರು. ಬಿಡ್ಡಿನ ಹಣ ಕೊಡಲಾಗದಿದ್ದ ಸಂದರ್ಭದಲ್ಲಿ ಕೆಲವರಲ್ಲಿ ರೌಡಿಸಂ ನಡೆದಿದ್ದೂ ಕಂಡುಬರುತ್ತದೆ. ಹಲವು ಸಂದರ್ಭಗಳಲ್ಲಿ ಹೀಗೇ ಒಳಗೊಳಗೇ ಬಿಡ್ಡಿಂಗ್‍ಗಳು ನಡೆಯುತ್ತಿದ್ದವು ಎಂದು ಕೇಳಿಬಂದಾಗ ಹುಟ್ಟಿದ್ದು :

ಪಡ್ಡೆಹುಡುಗರೆಲ್ಲ ಸೇರಿ
ಬಿಡ್ಡಿನಾಟವಾಡಿ ದಣಿದು
ಸಡ್ಡುಹೊಡೆದು ನಿಲ್ಲುತಾರೆ ಖಡ್ಗ ಹಿಡಿಯುತ |
ವಡ್ಡತನದ ಹಿರಿಯರೆಲ್ಲ
ಒಡ್ಡುತವರ ಒಟ್ಟುಬಲವ
ಖೆಡ್ಡವಾಯ್ತು ರಸ್ತೆ ರಸ್ತೆ ಬದುಕು ದುಷ್ಕೃತ ||


ಟೀವಿ ಮಾಧ್ಯಮದ ಮುಖಾಂತರ ಪೂರ್ವಜನ್ಮಗಳನ್ನು ತೋರಿಸುತ್ತೇವೆ ಎಂಬ ಜನ ಹುಟ್ಟಿಕೊಂಡು ಕಾಸುಮಾಡಲಾರಂಭಿಸಿದಾಗ ಅವರನ್ನು ಲೇವಡಿಮಾಡಲು ಹುಟ್ಟಿದ ಭೋಗ :

ಕಾಸುಕೊಟ್ರೆ ಪೂರ್ವಜನ್ಮ
ಪೋಸು ತೋರ್ವೆವೆಂದು ಹೇಳಿ
ವಾಸುದೇವನಾಣೆ ಹಿಡಿದು ಬೊಗಳೆ ಬಿಟ್ಟರು |
ಬೀಸುತಿರುವ ’ಗಾಳಿಯಲ್ಲಿ’
ಸೋಸಿಕೊಂಡು ’ತಮ್ಮ ಧಾನ್ಯ’
ಲೇಸು ಹರಸುತೇವೆಯೆನುತ ಕಳಿಸಿ ಕೊಟ್ಟರು ||

ಸಾಮಾನ್ಯವಾಗಿ ಇಂದಿನ ಹೈಟೆಕ್ ಆಸ್ಪತ್ರೆಗಳಿಗೆ ರೋಗಿ[ಗಿರಾಕಿ!] ಸಿಕ್ಕಿದರೆ ಏನುಮಾಡುತ್ತಾರೆ ಎಂಬುದು ನಮಗೆ ತಿಳಿದೇ ಇದೆ. ಮೆಡಿಕಲ್ ಸರ್ವಿಸ್ ಈಸ್ ನೋ ಮೋರ್ ಏ ಸರ್ವಿಸ್ ಬಟ್ ಇಟ್ ಹ್ಯಾಸ್ ಬಿಕಂ ಏ ಬ್ಯುಸಿನೆಸ್ ಫಾರ್ ಮೆನಿ! ಆರೋಗ್ಯದಿಂದಿರುವ ವ್ಯಕ್ತಿಯೂ ಸುಮ್ನೇ ತಮಾಷೆಗೆ ಅನಾರೋಗ್ಯ ಎಂದು ಹೇಳಿಕೊಂಡು ಹೋದರೆ, ದಾಖಲುಮಾಡಿ ಮಲಗಿಸಿ ಚಿಕಿತ್ಸೆ ನೀಡುವ ಕಾಲ ಇದಾಗಿದೆ:

ಸೇವೆಯೆಂಬ ಸೋಗಿನಲ್ಲಿ
ಯಾವರೋಗವೆಂದು ತಿಳಿದು
ತಾವೆ ವಾಸಿ ಮಾಳ್ಪೆವೆಂದು ಬೀಗುತ್ತಿದ್ದರು|
ಆವರೋಗವಿಲ್ಲದವನ
ಜಾವತನಕ ಮಲಗಿಸಿಟ್ಟು
ನೋವುಮರೆಯಲೊಮ್ಮೆ ದೊಡ್ಡ ಬಿಲ್ಲು ಕೊಟ್ಟರು ||

ಇನ್ನು, ಹುಟ್ಟುವ ಶಿಶುವಿಗೆ ತೊಟ್ಟಿಲಲ್ಲಿರುವಾಗಲೇ ಸ್ಕೂಲು ಗೊತ್ತುಮಾಡಿ ಕ್ವಿಂಟಾಲುಗಟ್ಟಲೇ ಕಂತೆ ಎಣಿಸಿ ಹೆಸರು ನೋಂದಾಯಿಸಿಕೊಳ್ಳುವ ಕಾಲ ಬಂದಿದೆ. ನಾವೆಲ್ಲಾ ಕಲಿತಾಗ ನಮಗೆ ಬಹುತೇಕ ಇಡೀ ೭ನೇ ಈಯತ್ತೆ ವರೆಗೆ ಖರ್ಚು ಬಂದಿದ್ದು ಬರೀ ನೂರು ರೂಪಾಯಿ ಇದ್ದಿರಬಹುದು! ಈಗ ನೋಡಿ ಕೊಡುವಾತ ಕೋಡಂಗಿ ಇಸಿದುಕೊಳ್ಳುವಾತ ಈರಭದ್ರ ! ಕೊಡೋದಿಲ್ವಾ ನಿಮ್ ಮಗೂಗೆ ಎಡ್ಮಿಶನ್ ಇಲ್ಲ ಹೋಗಿ ಅಂತಾರೆ :

ವಿದ್ಯೆಕಲಿಸುತೇವೆವೆನುತ
ಗದ್ಯಪದ್ಯಕಿಂತ ಮೊದಲು
ಅಧ್ಯಯನಕೆ ರಾಶಿ ಹಣವ ತೆಗೆದುಕೊಂಡರು |
ವಾದ್ಯ-ನಾಟ್ಯ-ಗೀತ-ಚಿತ್ರ
ಖಾದ್ಯ-ಆಟ- ನೋಟವೆನುತ
ಸಾಧ್ಯವಾದಯೆಲ್ಲರೀತಿ ಮೊಗೆದುಕೊಂಡರು ||


ಬೆಂಗಳೂರಿನಲ್ಲೂ ಸುತ್ತಮುತ್ತಲ ಹಳ್ಳಿಗಳಲ್ಲೂ ವರದಿಯಾಗುವ ವರದಕ್ಷಿಣೆ ಸಾವು ಅಪಾರ. ಯಾಕೆ ನಮ್ಮ ವಿದ್ಯಾವಂತ ಜನಾಂಗದ ಗಂಡುಗಳಿಗೆ ಬುದ್ಧಿ ಎಂಬುದು ಇಲ್ಲವೇ ? ಪಾಪದ ಹೆಣ್ಣುಮಕ್ಕಳು ರಸ್ತೆಯಲ್ಲಿ ಹೆಗ್ಗಣ ಸತ್ತಷ್ಟೇ ಸಸಾರವಾಗಿ ಅನಾಥರಾಗಿ ಅನ್ಯಾಯವಾಗಿ ಸಾಯುತ್ತಿದ್ದಾರಲ್ಲಾ ಎನಿಸಿದಾಗ ಹುಟ್ಟಿದ್ದು ಈ ಭೋಗ:

ಅಳೆದು ಸುರಿದು ತೂಗಿ ನೋಡಿ
ಘಳಿಗೆ ಫಲವ ತಿರುಗಿ ನೋಡಿ
ತೊಳೆದು ಪಾದ ಹರುಷದಿಂದ ಮಗಳಕೊಟ್ಟರು |
ಕಳೆಯದಿರಲು ಕೆಲವು ವರುಷ
ಅಳಿಯದಿರಲು ನೆನೆಪು ನಿಮಿಷ
ಹಳಿದು ನಗವ ತರಲು ಮನೆಗೆ ಕಳಿಸಿಬಿಟ್ಟರು ||

ಹೀಗೇ ಭೋಗದ ವೈಭೋಗ ಹೇಳುತ್ತಾ ಹೋದರೆ ಅದು ಹುಟ್ಟದೇ ಇರುವ ಸನ್ನಿವೇಶಗಳೇ ಕಡಿಮೆ. ಯಾವಾಗ ಎಲ್ಲಿಬೇಕಾದರೂ ಗಂಭೀರ ಹಾಸ್ಯವನ್ನು ಪಡೆಯಲಾಗಿ ಕನ್ನಡ ಛಂದೋಬದ್ಧ ಕಾವ್ಯಗಳನ್ನು ಬಳಸಿಕೊಳ್ಳಬಹುದಾಗಿದೆ. ಎರಡು ವರ್ಷಗಳ ಕೆಳಗೆ ಒಮ್ಮೆ ಭೋಗಷಟ್ಪದಿಯಲ್ಲಿ ಕುಂಟುವ ಕುರಿಗಳು ಎಂದು ಇವನ್ನು ಹೆಸರಿಸಿದ್ದೆ. ಇವುಗಳಲ್ಲಿ ಕೆಲವು ಒತ್ತುಗಳೂ ಪದಗಳೂ ಅಲ್ಲಲ್ಲಿ ಛಂದಸ್ಸಿಗೆ ಭಂಗ ತರುತ್ತಿದ್ದವು. ಅವುಗಳನ್ನೆಲ್ಲಾ ಸ್ವಲ್ಪ ಟ್ರಿಮ್ ಮಾಡಿ ಇನ್ನೊಮ್ಮೆ ನಿಮ್ಮೆದುರು ಪ್ರಸ್ತಾವಿಸುವ ಮಾತನ್ನೂ ಹೇಳಿದ್ದು ಬಾಕಿ ಇತ್ತು. ಹಾಗೇ ಬಿಟ್ಟರೆ ದಶರಥನಲ್ಲಿ ಕೈಕೇಯಿ ವರ ಕೇಳಿದಂತೇ ಯಾವತ್ತೋ ನೀವು ಕೇಳಿಬಿಟ್ಟರೆ ಕಷ್ಟ ಅದಕ್ಕಾಗಿ ಇಂದೇ ಅದನ್ನು ಪೂರೈಸಿದ್ದೇನೆ! ನಿಮ್ಮೆಲ್ಲರ ಪ್ರೀತಿಯ ಕುರಿತು ಒಂದು ’ಆರುಕಾಲಿ’ನ ಭೋಗ ಬರೆಯುವ ಮೂಲಕ ಈ ಭೋಗದ ವೈಭೋಗದ ಅರಮನೆಯ ಅಡ್ಡಾಟದಿಂದ ನಿಮ್ಮನ್ನು ಬೀಳ್ಕೊಡುತ್ತೇನೆ :


ನಿಮ್ಮ ಜೊತೆಗೆ ನಾನು ಸೇರಿ
ಹಮ್ಮುಬಿಮ್ಮುಗಳನು ತೊರೆದು
ಒಮ್ಮೆನಕ್ಕರಾಯ್ತಲದುವೆ ಯೋಗರಿಂಗಣ |
ಚಿಮ್ಮಿಸಲ್ಕೆ ನಗೆಯ ಬುಗ್ಗೆ
ಹೊಮ್ಮಿಬಂದಿತಾರುಕಾಲು
ಹೆಮ್ಮೆಯಂಥದೇನುವಿದುವೆ ಭೋಗರಿಂಗಣ ||