ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 30, 2011

ಹತ್ತಾರು ಜನ ಸೇರಿ ಮನೆಯೊಂದ ಕದ್ದರು ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !


ಹತ್ತಾರು ಜನ ಸೇರಿ ಮನೆಯೊಂದ ಕದ್ದರು
ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !

ನಿಮ್ಮ ಹತ್ತಿರ ಹೇಳಲೇಬೇಕಾದ ಕೆಲವು ಅಂಶಗಳು ಇದ್ದವು. ಹೇಳದೇ ಇದ್ದರೂ ಎಂದಾದರೂ ನಿಮ್ಮ ಗಮನಕ್ಕೆ ಬರಬಹುದು, ಆದರೆ ತಡವಾಗಿ ಗಮನಕ್ಕೆ ಬಂದಾಗ ಸ್ವಲ್ಪ ಪಶ್ಚಾತ್ತಾಪವಾಗಬಹುದು. ಕೋತಿ ಬೆಣ್ಣೆಯನ್ನು ತಿಂದುಕೊಂಡು ಮೇಕೆಬಾಯಿಗೆ ಒರೆಸಿದ ಕತೆ ಇದು. ಹೀಗೇ ಚಿಂತಿಸುತ್ತಿದ್ದಾಗ ಮನದಲ್ಲಿ ಕೆಲವು ರಾಜಕೀಯದ ದುಗುಡಗಳು ರಕ್ಕಸರೂಪ ತಳೆದವು. ರೂಪತಳೆದ ರಕ್ಕಸರು ತಾವು ತಾವೇ ಹೊಡೆದಾಡಲು ನಿಂತಾಗ ತಡೆಯುವವರೇ ಇಲ್ಲವಾಗಿ ನಿತ್ರಾಣನಾಗುವ ಸ್ಥಿತಿಯಿತ್ತು. ಹಾಗಾಗುವ ಮುನ್ನ ನನ್ನನ್ನು ಬಚಾವ್ ಮಾಡ್ಕೊಳ್ಳುವುದಕ್ಕೆ ದಾರಿ ಹುಡುಕುತ್ತಿರುವಾಗ ನನಗೆ ದಕ್ಕಿದ ಅಂಶಗಳು ಇಷ್ಟು:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಉದ್ಭವವಾಗಿದ್ದು ನಮ್ಮ ಮತದಾರರ ತಪ್ಪು ಮುಂಧೋರಣೆಯ ಪರಿಣಾಮವೇ. ಅದರಲ್ಲೂ ನಮ್ಮ ಸಂವಿಧಾನದಲ್ಲಿನ ಲೋಪದೋಷಗಳು ಮೆರವಣಿಗೆ ಹೊರಟಾಗ ಪ್ರಜಾಪ್ರಭುತ್ವವೇ ಬಸವಳಿಯುತ್ತದೆ! ಅಂಬೇಡ್ಕರ್ ಕಾಲದ ಸಂವಿಧಾನದ ಕರಡನ್ನು ಇನ್ನೂ ತಿದ್ದದೇ ಇರುವುದು ಮೊದಲ ತಪ್ಪಾಗಿದೆ. ಇವತ್ತಿನ ನೂರಿಪ್ಪತ್ತು ಕೋಟಿ ಜನಸಂಖ್ಯೆಯನ್ನು ಏಕಛತ್ರದಡಿಯಲ್ಲಿ ನಿಭಾಯಿಸುವಲ್ಲಿ ಈಗಿರುವ ಸಂವಿಧಾನದ ಕೆಲವು ಕಟ್ಟುಪಾಡುಗಳು ನ್ಯೂನತೆ ಹೊಂದಿರುವುದು ಕಂಡುಬರುತ್ತದೆ.

ಕರ್ನಾಟಕದಲ್ಲಿ ಬಿಜೆಪಿ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿರುವಂತೇ ಗಂಜಿಯಲ್ಲಿ ಬಿದ್ದ ನೊಣದ ರೀತಿ ಆಗಿಬಿಟ್ಟಿತ್ತು. ಆರಕ್ಕೇಳದ ಮೂರಕ್ಕಿಳಿಯದ ಬಿಜೆಪಿಯ ಶಾಸಕರ ಸಂಖ್ಯೆಯಲ್ಲಿ ಯಡ್ಯೂರಪ್ಪ ಪಕ್ಷವನ್ನು ಸಂಭಾಳಿಸುತ್ತಾ ವಿರೋಧ ಪಕ್ಷದ ನಾಯಕ್ ಸ್ಥಾನದಲ್ಲಿ ಕೊತು ಭಜನೆಯಲ್ಲಿ ಕಾಲ ಕಳೆದಿದ್ದು ಬಹಳ ಸಮಯವಾಗಿತ್ತು. ಪ್ರತೀಬಾರಿ ತಾಳತಂಬೂರಿ ಕೈಯೊಳಗೆ ವಿಠಲನ ಭಜನೆ ಮನದೊಳಗೆ ಎಂದುಕೊಂಡು ನಾವು ಯಾವುದಕ್ಕೂ ಅಡ್ಡಿಪಡಿಸುವವರಲ್ಲ, ನಮಗೆ ಸಂಖ್ಯಾಬಲ ಕಮ್ಮಿ ಇದೆ, ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂತುಕೊಳ್ಳುತ್ತೇವೆ ಎಂಬ ಮಾತನ್ನು ಉದ್ಗರಿಸುತ್ತಾ ಸೈಲೆಂಟಾಗಿ ವಿಧಾನಸಭೆಯಲ್ಲಿ ಕೂತ ಜನ ಬಿಜೆಪಿಯವರು. ಆಳುವ ಪಕ್ಷಗಳ ತಪ್ಪುಗಳನ್ನು ಅತಿಸೂಕ್ಷ್ಮವಾಗಿ ಗಮನಿಸುವ ಬುದ್ಧಿಮತ್ತೆಯಾಗಲೀ ನುಂಗಣ್ಣಗಳ ಜಾಡನ್ನು ಹಿಡಿದು ಜಾಲಾಡಿ ಅವರನ್ನು ಹಣ್ಣುಗಾಯಿ-ನೀರುಗಾಯಿ ಮಾಡುವ ಜಾಯಮಾನವಾಗಲೀ ಬಿಜೆಪಿಯ ಜನಕ್ಕಿರಲಿಲ್ಲ.

ಕೆಲವೊಮ್ಮೆ ಅಪರೂಪಕ್ಕೆ ಎಲ್ಲೋ ಕತ್ತಲಲ್ಲಿ ಯಾರೋ ದಾರಿಹೋಕನನ್ನು ಕಂಡು ಬೊಗಳುವ ನಾಯಿಗಳಂತೇ ವಿಧಾನ ಸಭೆಯಲ್ಲಿ ಅಡ್ಡಡ್ಡ ಮುಖಹಾಕಿ ಕೂಗಿದ್ದು ಬಿಟ್ಟರೆ ದಾಖಲೆ ಸಮೇತ ಯಾರನ್ನೂ ಹಿಡಿಯುವ ದಾರ್ಷ್ಟ್ಯತನ ಯಾರಲ್ಲೂ ಕಾಣಲಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕೆಳಗಿಳಿದ ನಂತರ ಯಾವೆಲ್ಲಾ ಮುಖ್ಯಮಂತ್ರಿಗಳು ಬಂದರೋ ಎಲ್ಲರೂ ಬೇಕಷ್ಟು ಆಸ್ತಿಗಳನ್ನು ಮಾಡಿಕೊಂಡವರೇ. ಯಾರೂ ಸಂಭಾವಿತರೇನಲ್ಲ. ಕನ್ನಡದ ನಟ ರಾಜ್‍ಕುಮಾರ್ ರ ಬಿಡುಗಡೆಗೆ ವೀರಪ್ಪನ್‍ಗೆ ಕೊಡಲು ಹೊಂದಿಸಿದ ಹಣ ಎಲ್ಲಿಂದ ಬಂತು ಎಂಬುದು ಇನ್ನೂವರೆಗೂ ನಿಗೂಢ! ಎಸ್ಸೆಮ್ ಕೃಷ್ಣ ಸರಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರನ್ನು ಸಿಂಗಪೂರ್ ಮಾಡಲು ಹೊರಟವರು-ಗಾಡಿ ಮುಗ್ಗರಿಸಿಬಿಟ್ಟಿತ್ತು; ಆದರೆ ದಾಖಲಾತಿಗಳಲ್ಲಿ ಖರ್ಚುಗಳು ಕಮ್ಮಿಯೇನಿರಲಿಲ್ಲ! ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಪಡಾಬಿದ್ದ ಜಮೀನುಗಳು ರೆಕ್ಕೆ-ಪುಕ್ಕ ಬಲಿತ ಹಕ್ಕಿಗಳಂತೇ ಗರಿಗೆದರಿ ಮೈಕೊಡವಿಕೊಂಡು ಸೈಟುಗಳಾಗಿ ಬದಲಾದವು, ಬದಲಾದ ಸೈಟುಗಳು ಯಾರ್ಯಾರದೋ ಕೈವಶವಾದವು !

ಯಾವುದೇ ಕಳ್ಳತಂತ್ರಗಳು ನಡೆದು ಆಳುವ ಜನ ತಿಮಿಂಗಲಗಳ ಥರಾ ಕಬಳಿಸುತ್ತಾ ಸಾಗಿದ್ದರೂ ಯಡ್ಯೂರಪ್ಪ ಕಂಬಳಿಹೊದ್ದು ಮಲಗಿಬಿಟ್ಟಿದ್ದರು. ಆಗ ದಾಖಲಾತಿಗಳು ಆಳುವವರ ಅದೃಷ್ಟಕ್ಕೋ ಎನ್ನುವಂತೇ ಗಣಕೀಕೃತವಾಗಿರಲಿಲ್ಲ. ರೈಟ್ ಟು ಇನ್ಫಾರ್ಮೇಷನ್ ಕಾಯಿದೆ ಜಾರಿಗೆ ಬಂದಿರಲಿಲ್ಲ! ಹೀಗಾಗಿ ಸಮರ್ಪಕವಾದ ಸರ್ಕಾರೀ ದಾಖಲಾತಿಗಳ ಕ್ರೋಢೀಕರಣವೂ ಅಷ್ಟು ಸಲೀಸಾಗಿರಲಿಲ್ಲ. ಮಣ್ಣಿನ ಮಗನಾಗಿ ಭೂಮಿಯನ್ನೇ ಅತಿಯಾಗಿ ಪ್ರೀತಿಸುವ ಗೌಡರ ಕುಟುಂಬದ ಮೂಲಮಂತ್ರ ಭೂಮಿಯನ್ನು ವಶಕ್ಕೆ ಪಡೆಯುವುದು, ಬೇನಾಮಿ ಹೆಸರಲ್ಲಿ ಅದನ್ನು ಖಾತೆಬರೆಸಿಕೊಳ್ಳುವುದು ಆಗಿತ್ತು. ತಮ್ಮ ಅನುಕೂಲಕ್ಕೆ ಹೇಗೆಲ್ಲಾ ಬೇಕೋ ಹಾಗೆಲ್ಲಾ ಆಳುವ ಪಕ್ಷದೊಳಗೇ ತೂರಿಕೊಂಡು ಕೆಲಸಮಾಡಲು ನೋಡಿದ ಕುತ್ಸಿತ ರಾಜಕೀಯ ಅವರದ್ದು. ಯಾವ ಪಕ್ಷಬಂದರೂ ಅವರೊಂದಿಗೆ ತಾವಿದ್ದೇವೆ ಎನ್ನುವ ಹೇಳಿಕೆಕೊಡುತ್ತಾ ಸಮಯ ಸಿಕ್ಕಾಗಲೆಲ್ಲಾ ದುರುಪಯೋಗ ಪಡಿಸಿಕೊಂಡ ಜನ ಅವರು.

ಇಂತಹ ಸಮಯದಲ್ಲಿ ಜನತಾದಳ ಇಬ್ಭಾಗವಾದಾಗ ಹುಟ್ಟಿಕೊಂಡ ಜನತಾದಳ [ಸೆಕ್ಯೂಲರ್] ಎಂಬ ಹೆಸರಿನ ಪಕ್ಷಕ್ಕೆ ರಾಷ್ಟ್ರೀಯ ಪಕ್ಷವೆಂದು ಸ್ವಘೋಷಣೆ ಮಾಡಿಕೊಂಡಿದ್ದೂ ಅಲ್ಲದೇ ಮುಂದೆ ಅದರಲ್ಲಿ ತಮ್ಮ ಅನುಕೂಲಕ್ಕಾಗಾಗಿ ಎಳೆದು ಸೇರಿಸಿಕೊಂಡಿದ್ದ ಸಿದ್ಧರಾಮಯ್ಯ, ಸಿಂಧ್ಯಾ ಮೊದಲಾದವರನ್ನು ಬೇಷರತ್ತಾಗಿ ಓಡಿಸಿ ಅಪ್ಪ ರಾಷ್ಟ್ರಾಧ್ಯಕ್ಷ ಮಗ ರಾಜ್ಯಾಧ್ಯಕ್ಷ ಆಗಿ ಮನೆಯ ಪಕ್ಷವೆಂದು ಜಗಜ್ಜಾಹೀರು ಪಡಿಸಿದ ಏಕಮೇವಾದ್ವಿತೀಯ ಸಾಹಸ ಗೌಡರದು. ತಾನು ಜನಾನುರಾಗಿ ಮಣ್ಣಿನ ಮಕ್ಕಳ ಆರೈಕೆ ಮಾಡುತ್ತೇನೆನ್ನುತ್ತಾ ತಿರುಗಿದ ದೊಡ್ಡ ಗೌಡರು ಅದೃಷ್ಟ ಖುಲಾಯಿಸಿ ಪ್ರಧಾನ ಮಂತ್ರಿಯಾದಾಗ ೧೫-೨೦ ಬಾರಿ ಇಡೀ ಬೆಂಗಳೂರಿಗೆ ಮಾವಿನ ತೋರಣ ಹಾಕಿಸಿ ಟ್ರಾಫಿಕ್ ಜಾಮ್ ಮಾಡಿಸಿ ಭೇಟಿಕೊಟ್ಟಿದ್ದು ಬಿಟ್ಟರೆ ತಮ್ಮ ತವರು ಜಿಲ್ಲೆ ಹಾಸನದ ಅಭಿವೃದ್ಧಿಗೂ ಕಡ್ಡೀಕೆಲಸ ಮಾಡಿದವರಲ್ಲ!

ಚುನಾವಣೆಯಲ್ಲಿ ಗೆದ್ದವರು ಅತಂತ್ರರಾದಾಗ ತಾವು ಸಪೋರ್ಟ್ ಕೊಡುತ್ತೇವೆ ಎಂದು ಸೂಟ್ ಕೇಸ್ ವ್ಯವಹಾರ ಆರಂಭಿಸಿದ ಗೌರವಕ್ಕೆ ಪಾತ್ರವಾದುದೂ ಅದೇ ಪಕ್ಷ. ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರಕಾರ ರಚಿಸಿ ಅಲ್ಲಿ ತಮ್ಮ ಬೇಳೆ ಬೇಯಲು ತಡವಾದಾಗ ಕಳ್ಳ ದಾರಿ ಹುಡುಕಿ " ಮಗನೇ ಹೀಗೆ ಮಾಡಿಬಿಡೋಣ " ಎಂದು ಕುಮಾರನಿಗೆ ಕಿವಿಯೂದಿ ತಾನು ಮುಖದ ಮೇಲೆ ಟವೆಲ್ ಹಾಕಿಕೊಂಡವರ ರೀತಿ ಏನೂ ಕಾಣಲಿಲ್ಲ ಎಂದುಕೊಳ್ಳುತ್ತಾ ಇತ್ತ ಮಗನನ್ನು ಬಿಜೆಪಿಯವರ ಜೊತೆ ಕಳಿಸಿ ಮತ್ತೆ ಹೊಸ ಸಮ್ಮಿಶ್ರ ಸರಕಾರ ತಂದು ಕಾಂಗ್ರೆಸ್‍ನ್ನು ದೇಶದಿಂದಲೇ ಉಚ್ಛಾಟಿಸಲು ಹೊರಟಿದ್ದ ನಿಸ್ಸೀಮ ಗೌಡರು ತಮ್ಮ ದಾಳವನ್ನು ಪ್ರಯೋಗಿಸುತ್ತಲೇ ಇದ್ದರು. ಯಾವಾಗ ತಾನು ಹೇಳಿದ್ದನ್ನು ಸಖ್ಯದಲ್ಲಿರುವ ಇತರ ಪಕ್ಷಗಳು ಕೇಳುವುದಿಲ್ಲವೋ ಆಗೆಲ್ಲಾ ಭೂತೋಚ್ಛಾಟನೆ ಮಾಡಿದಂತೇ ಅವರನ್ನು ಉಚ್ಛಾಟಿಸುವ ಮನೋಧರ್ಮ ಬೆಳೆಸಿಕೊಂಡ ಅಪ್ಪ-ಮಕ್ಕಳು ಹರದನ ಹಳ್ಳಿಯ ೧೧ ಎಕರೆ ಕೃಷಿ ಜಮೀನಷ್ಟೇ ಮೂಲವಾಗಿ ಹೊಂದಿದ್ದವರು ಇಂದು ಸಾವಿರಾರು ಎಕರೆ ಕೃಷಿಭೂಮಿ, ಕೋಟಿಗಟ್ಟಲೆ ಆಸ್ತಿಮಾಡಿರುವುದು ಜನರ ಕಣ್ಣಿಗೆ ಕಂಡರೂ ಲೋಕಾಯುಕ್ತರಿಗೆ ಸಿಗುವ ಕಡತಗಳು ಮಾಯವಾಗಿವೆ! ಅಸಲಿಗೆ ಅವರು ಗುಳುಂ ಮಾಡುವ ಹೊತ್ತಿಗೆ ಲೋಕಾಯುಕ್ತರಿಗೆ ಅಷ್ಟು ಸ್ವಾತಂತ್ರ್ಯವೇ ಇರಲಿಲ್ಲ!

ಬಿಜೆಪಿಯ ಅಳಿವು ಉಳಿವೇ ಪ್ರಶ್ನೆಯಾಗಿದ್ದಾಗ ತಾವು ಅದನ್ನು ಬಲಪಡಿಸಿದರೆ ಅದರಿಂದ ಅಧಿಕಾರವೂ ಆ ಮೂಲಕ ಎಲ್ಲಾ ಲಾಭವೂ ತಮದಾಗಬಹುದೆಂಬ ಮುಂಧೋರಣೆ ತಳೆದಿದ್ದ ರೆಡ್ಡಿ ಬ್ರದರ್ಸ್ ಬಿಜೆಪಿಯ ಬಾಗಿಲು ತಟ್ಟಿದ್ದರು. ರೋಗಿ ಬಯಸಿದ್ದೂ ಹಾಲು ವೈದ್ಯರು ಹೇಳಿದ್ದೂ ಹಾಲು ಎನ್ನುವ ಹಾಗೇ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬಿಜೆಪಿಗೆ ಆರ್ಥಿಕ ಸ್ವಾತಂತ್ರಬರುವಂತೇ ಫಂಡಿಂಗ್ ಮಾಡಿಕೊಂಡು ನಿಧಾನವಾಗಿ ಬಿಜೆಪಿಯೊಳಗೆ ಕುಕ್ಕರಿಸಿದವರೇ ರೆಡ್ಡಿಬ್ರದರ್ಸ್ ! ಅಂದಿನ ದಿನಗಳಲ್ಲಿ ಆಗಷ್ಟೇ ಇನ್ನೂ ಕೋಟಿಗಳ ಲೆಕ್ಕದಲ್ಲಿ ಚಿಗಿತಿದ್ದ ಗಣಿದೊರೆಗಳು ಮುಂದೆ ಸಾವಿರಕೋಟಿ ಲಕ್ಷಕೋಟಿ ಎಣಿಸಬಹುದೆಂಬ ಕಾರಣಕ್ಕೆ ಹಾಗೆ ಬಂದರು ಎಂಬುದು ಬಿಜೆಪಿಗೂ ಮೊದಲು ತಿಳಿಯಲಿಲ್ಲ! ಅದು ’ ಆ ಮಟ್ಟಕ್ಕಿದೆ ’ ಎಂದು ಅರ್ಥವಗುವಾಗ ತಡವಾಗಿ ಹೋಗಿತ್ತು ! ಆಕ್ಟೋಪಸ್‍ನಂತೇ ಅವರು ಬಿಜೆಪಿಯನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಸೋತವ ಸತ್ತ ಅನ್ನುವ ಕಾಲ ಇದಾದ್ದರಿಂದ ಗೆಲ್ಲುವ ತಂತ್ರವನ್ನು ಹೆಣೆಯುವಲ್ಲಿ ಬೆಕ್ಕಿಗೆ ಬೆಣ್ಣೆ ತೂಗಲು ಬಂದ ಮಂಗಗಳು ಅವರಾದರು! ಹೊಸದಾಗಿ ಮದುವೆಯಾದ ದಂಪತಿ ತಮ್ಮಲ್ಲಿನ ದೌರ್ಬಲ್ಯಗಳ ಅರಿವಿರದೇ ಅನ್ಯೋನ್ಯವಾಗಿರುವಂತೇ ಈ ಮೈತ್ರಿ ಬೆಳೆಯುತ್ತಲೇ ಸಾಗಿತು.

ತಮಗೆ ಎರಡು ವರ್ಷಗಳ ನಂತರ ಅಧಿಕಾರ ಕೊಡುವುದಾಗಿ ನಂಬಿದ್ದ ಯಡ್ಯೂರಪ್ಪನವರಿಗೆ ಯಾವಾಗ ಭ್ರಮನಿರಸನವಾಯಿತೋ, ಎರಡು ವರ್ಷಗಳು ಮುಗಿದರೂ " ಯಡ್ಯೂರಪ್ಪನವರಿಗೆ ಮುಖ್ಯಮಂತ್ರಿಯಾಗುವ ಯೋಗವೇ ಇಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ " ಎಂಬ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಾ ತಾನೇ ಮುಂದುವರಿಯಲು ಹಪಹಪಿಸಿದ ಅಧಿಕಾರದಾಹೀ ಜನ ಕುಮಾರಸ್ವಾಮಿ. ಕುಮಾರಸ್ವಾಮಿಯ ಕಾಲಘಟ್ಟದಲ್ಲಿಯೇ ಗಣಿರಾಜಕರಣ ತಾರಕ್ಕಕ್ಕೇರಿತ್ತು ಎಂಬುದು ಸುಳ್ಳಲ್ಲ. ಪಡೆಯುವ ಕಪ್ಪುಹಣ ಸಾಲದಾಗಿ ರೆಡ್ಡಿಗಳ ಜತೆ ವೈರತ್ವ ಕಟ್ಟಿಕೊಂಡು ಅನಿಲ್ ಲಾಡು-'ಕೇಸ್ರೀಬಾತು' ಮುಂತಾದ ಜನರನ್ನು ಬೆನ್ನುತಟ್ಟಿ ಬೆಳೆಸಿದ [ಅಪ]ಖ್ಯಾತಿ ಆ ಸರಕಾರಕ್ಕೆ ಸಲ್ಲಬೇಕು. ಜನರೊಂದಿಗೆ ಹಳ್ಳಿಗಳಲ್ಲೇ ರಾತ್ರಿಕಳೆಯುತ್ತೇನೆ ಎಂಬ ಹೊಸ ಪ್ರಹಸನ ಆರಂಭಿಸಿ ಉತ್ತರಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಏನೇನೂ ಅನುಕೂಲವಿಲ್ಲದ ಮನೆಗಳಲ್ಲಿ ವಿಶ್ವಾಮಿತ್ರ ಸೃಷ್ಟಿಯಂತೇ ಹೊಸದಾಗಿ ಎಲ್ಲಾ ಅನುಕೂಲಗಳನ್ನೂ ತನ್ನ ಬರುವಿಕೆಯೊಳಗೆ ನಿರ್ಮಿಸಲು ಆದೇಶಿಸಿ, ತನಗೆ ಬೇಕಾದ ಜನ ಆ ಕೆಲಸವನ್ನು ಪೂರೈಸಿದಾಗ ಅಲ್ಲಿಗೆ ಹೋಗಿದ್ದು ಮಾಧ್ಯಮಕ್ಕೆ ಪೋಸುಕೊಟ್ಟು ಅಲ್ಲಿಂದ ಹೊರಟುಹೋದಮೇಲೆ ಮಡಗಿದ್ದ ಎಲ್ಲಾ ಸವಲತ್ತುಗಳನ್ನೂ ಆ ಮನೆಗಳ ಬಡಪಾಯಿಗಳಿಂದ ಕಿತ್ತುಕೊಂಡ ಹೆಗ್ಗಳಿಕೆ ಕುಮಾರಣ್ಣನಿಗೆ ಸಲ್ಲಬೇಕು !

ಚುನಾವಣೆ ಹೇಗೂ ಇರಲಿ, ಯಾರು ಬಂದರೂ ಅಧಿಕಾರ ನಮ್ಮ ಕೈಯ್ಯಲ್ಲೇ ಎಂಬ ಹಿಂಬಾಗಿಲ ತಂತ್ರ ಆರಂಭಿಸಿದ ಜೆಡಿಎಸ್ ಎಂಬ ಅಪ್ಪ-ಮಕ್ಕಳ ಪಕ್ಷ ಅಧಿಕಾರಕ್ಕಾಗಿ ಏನೇನು ಮಾಡಬೇಕೋ ಅಷ್ಟನ್ನೂ ಮಾಡಿ ಆ ಕಸರತ್ತು ಫಲಕೊಡದಾದಾಗ ಆಳುವ ಪಕ್ಷವನ್ನು ಉರುಳಿಸುವ ಕುತಂತ್ರವನ್ನು ಹೆಣೆಯತೊಡಗಿದರು. ಇಂತಹ ಸಮಯದಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಸನ್ನಿವೇಶದಲ್ಲಿ ಕಮಲಪಾಳಯಕ್ಕೆ ’ಆಪರೇಶನ್ ಕಮಲ’ ಎಂಬ ಹೊಸ ಸರ್ಕಸ್ಸು ಆರಂಭಿಸಬೇಕಾಗಿ ಬಂತು. ಕುಮಾರಣ್ಣ ಕಲಿಸಿದ ಕುದುರೆವ್ಯಾಪಾರದ ’ನೀತಿ’ಯನ್ನು ಸಹೋದ್ಯೋಗಿಗಳಾಗಿ ಇವರೂ ಕಲಿತಿದ್ದರಲ್ಲಾ ಅದು ಇಲ್ಲಿ ಉಪಕಾರಕ್ಕೆ ಬಂತು! ಆ ಕೆಲಸಕ್ಕೆ ಉಪಯೋಗಿಸಿದ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಸಮೇತ ವಸೂಲಾಗಬೇಕು---ಅದಕ್ಕಾಗಿ ತಮಗೆ ಗಣಿಗಳಲ್ಲಿ ಏನಾದರೂ ಮಾಡಲು ಬಿಡಿ ಎಂದು ’ ಬ್ಲ್ಯಾಕ್ ಮೇಲ್’ ತಂತ್ರ ಆರಂಭಿಸಿದ್ದೂ ಅದೇ ಜನ[ರೆಡ್ಡಿ ಬ್ರದರ್ಸ್ ].

ಯಡ್ಯೂರಪ್ಪ ಗಣಿಗಳ ಬಗ್ಗೆ ಅಷ್ಟು ಆಸಕ್ತಿ ತಳೆದವರಾಗಿರಲಿಲ್ಲ. ತನ್ನ ಕುರ್ಚಿಯ ಭದ್ರೆತೆಗಾಗಿ ಗಣಿಧಣಿಗಳು ಹೇಳುವ ಮಾತುಗಳನ್ನು ಅಕ್ಷರಶಃ ಪಾಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಯಡ್ಯೂರಪ್ಪರದಾಗಿತ್ತು. ಸದಾ ತಮ್ಮಮಾತು ನಡೆಯಬೇಕೆಂಬ ಅಪೇಕ್ಷೆಯಲ್ಲಿರುವ ಅನಂ‍ಕುಮಾರ್ ಪಕ್ಷದೊಳಗೇ ತನಗೆ ಪ್ರತ್ಯೇಕ ಬಣವನ್ನೂ ಸೃಷ್ಟಿಸಿಕೊಂಡಿದ್ದ ಜನ. ಹೊರಗಿನಿಂದ ಯಡ್ಯೂರಪ್ಪನವರಿಗೆ ಬೆಂಬಲ ಕೊಟ್ಟರೂ " ನಾವೆಲ್ಲಾ ಸೇರಿ ಬಿಜೆಪಿ ಸರಕಾರವನ್ನು ಯಶಸ್ವಿಗೊಳಿಸಬೇಕು " ಎಂದು ಮೇಜು ಮುರಿಯುವಷ್ಟು ಗುದ್ದಿ ಹೇಳಿದರೂ ಆ ಗುದ್ದು ಯಡ್ಯೂರಪ್ಪನವರಿಗೇ ಪರೋಕ್ಷವಾಗಿ ಬೀಳುತ್ತಿತ್ತು. ಹೀಗೇ ಆ ಕಡೆ ಕುಮಾರ ಈ ಕಡೆ ಅನಂತ ಇನ್ನೊಂದು ಕಡೆ ರೆಡ್ಡಿಬ್ರದರ್ಸ್ ಈ ಮೂರೂ ದಿಕ್ಕುಗಳಿಂದ ಥರಥರದ ಮಹಾಮಹಾ ಅಸ್ತ್ರಗಳು ಪ್ರಯೋಗಿಸಲ್ಪಟ್ಟಾಗಲೆಲ್ಲಾ ದೇವರು-ಹೋಮ-ತೀರ್ಥಯಾತ್ರೆ ಅಂತ ಹೆಗಲಿಗೆ ಶಾಲು ಹೊದ್ದು ಕೈಮುಗಿದುಕೊಂಡು ದೇವರನ್ನು ಮೋರೆಹೋದ ಜನ ಯಡ್ಯೂರಪ್ಪ !

ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವ ಚಿಂತನೆಯಲ್ಲಿದ್ದ ಯಡ್ಯೂರಪ್ಪರ ಹೃದಯದ ಬಾಗಿಲು ತಟ್ಟಿದ ವ್ಯಕ್ತಿ ಶೋಭಾ. ಅವರ ವೈಯ್ಯಕ್ತಿಕ ವಿಷಯ ಏನೇ ಇದ್ದರೂ ವ್ಯವಹಾರದಲ್ಲಿ ಚಾಣಾಕ್ಷೆ ಮತ್ತು ಸಾಕಷ್ಟು ಓದಿಕೊಂಡಿದ್ದು, ಆರೆಸ್ಸೆಸ್ ಮೂಲದ ಸಂಸ್ಕೃತಿಯನ್ನು ಹೊಂದಿದ್ದರಿಂದ ಮಿಕ್ಕೆಲ್ಲಾ ಧೂರ್ತರಿಗಿಂತ ಆವಳೇ ವಾಸಿ ಎಂಬುದೂ ಯಡ್ಯೂರಪ್ಪನವರಿಗೆ ಸ್ವಲ್ಪ ಕಷ್ಟವನ್ನೇ ತಂದಿತು. ಶೋಭಾ ಚೆನ್ನಾಗೇ ಕೆಲಸ ನಿರ್ವಹಿಸಿದರೂ ಧೂರ್ತರಾಜಕಾರಣಿಗಳನ್ನು ನಿಯಂತ್ರಿಸುವಲ್ಲಿ ’ಒಳಗಿನಿಂದ’ ಕೆಲಸಮಾಡುತ್ತಿದ್ದಳು. ಇದು ರೇಣುಕಾಚಾರ್ಯ, ಬೇಳೂರು ಮುಂತಾದ ಹಲವಾರು ಹಗಲುದರೋಡೆ ಶಾಸಕರಿಗೆ ನುಂಗಲಾರದ ತುತ್ತಾಗಿತ್ತು. ಈ ಸಮಯವನ್ನೇ ಕತ್ತೆಕಿರುಬ ಎಂಬ ಪ್ರಾಣಿ ದೂರದಿಂದ ಕೈಲಾಗದ ಪ್ರಾಣಿಯನ್ನು ಕಂಡು ಬೆನ್ನತ್ತು ಬರುವಂತೇ ಕುಮಾರಣ್ಣ ಬಳಸಿಕೊಂಡ! ಮತ್ತೆ ಕುದುರೆ ವ್ಯಾಪಾರ ಜೋರಾಗಿ ನಡೆಯಿತು. ಯಾವಾಗಲೆಲ್ಲಾ ಸಾಧ್ಯವಾಗುವುದೋ ಆವಾಗೆಲ್ಲಾ ನಾನಾವಿಧದ ಸರ್ಕಸ್ಸು ಮಾಡಿ ಕುರ್ಚಿ ಹಿಡಿಯಲು ನೋಡಿದಾತ ಕುಮಾರ.

ರಾಜಕೀಯ ಬರೇ ಸಂಬಳದ್ದಾದರೆ ಯಾರೂ ಆ ಕೆಲಸ ಮಾಡಲು ಹಿಂದೆಮುಂದೆ ನೋಡುತ್ತಿದ್ದರೇನೋ ! ಆದರೆ ರಾಜಕೀಯ ಇವತ್ತಿಗೆ ಒಂದು ಉದ್ಯಮ! it is an industry by all means ! ರಾಜಕೀಯ ಪ್ರಜಾಸೇವೆಗೆ ಎಂಬುದು ಗಾಂಧೀಜಿಯ ಕಾಲಕ್ಕೇ ಮುಗಿದುಹೋದ ವಿಷಯ. ನೆಹರೂ ಕಾಲದಿಂದಲೇ ರಾಜಕೀಯ ಹದಗೆಟ್ಟುಹೋಯಿತು. ಪಾರ್ಟಿ ಫಂಡಿಂಗ್ ವ್ಯವಹಾರ ಆಗಿನಿಂದಲೇ ಆರಂಭಗೊಂಡಿದ್ದು! ಫಂಡಿಂಗ್ ಮಾಡುವವರಿಗೆ ಅದರ ನಾಲ್ಕುಪಟ್ಟು ಇನ್ನೂ ಕೆಲವರಿಗೆ ಹತ್ತಾರುಪಟ್ಟು ಮರಳಿಪಡೆಯಬಹುದೆಂಬ ಅನಿಸಿಕೆಯೂ ಶುರುವಾಯ್ತು! ಯಾವಾಗ ಈ ಫಂಡಿಂಗ್ ದಂಧೆಯಲ್ಲಿಯೇ ಪೈಪೋಟಿ ಆರಂಭವಾಯಿತೋ ಆಗ ಪ್ರತಿಯೊಬ್ಬರೂ ತಂತಮ್ಮ ಉಳಿವಿಗಾಗಿ ಶಾಸಕ, ಸಂಸದ ಸ್ಥಾನದ ಭದ್ರತೆಗಾಗಿ ಜಾಸ್ತಿ ಜಾಸ್ತಿ ಇನ್ವೆಷ್ಟ್ ಮಾಡಲೇಬೇಕಾಯಿತು.

ಈಗಂತೂ ರಾಜಕೀಯ ಹೇಗಾಗಿದೆಯೆಂದರೆ ಖೂಳರು, ರಕ್ಕಸರು ಮಾತ್ರ ರಾಜಕೀಯ ನಡೆಸುವಂತಾಗಿದೆ ಎಂಬುದು ಪ್ರಜಾಪ್ರಭುತ್ವದ ಅಥವಾ ಪ್ರಜಾಸತ್ತೆ ಸತ್ತನಂತರ ಭೂತವಾಗಿ ಕಾಡುತ್ತಿದೆ ! ಹಾಗನಿಸಿದಾಗಲೆಲ್ಲಾ ನಮಗನಿಸುವುದು ಹಿಂದಿನ ರಾಜರ ಆಳ್ವಿಕೆಗಳೇ ಎಷ್ಟೋ ವಾಸಿಯಾಗಿತ್ತೆಂಬುದು. ಹಣವಿದ್ದರೇ ಸಾಕು- ಕ್ರಿಮಿನಲ್ ಆದರೂ ಪರವಾಗಿಲ್ಲ, ಅರೆಹುಚ್ಚನಾದರೂ ಪರವಾಗಿಲ್ಲ, ಅವಿದ್ಯಾವಂತನಾದರೂ ಪರವಾಗಿಲ್ಲ, ಒಂದೆರಡು ಕೊಲೆಸುಲಿಗೆ ದರೋಡೆ ಮಾಡಿ ತನ್ನ ಸುತ್ತಲ ಸಮಾಜವನ್ನು ಹೆಸರಿಸಿ ಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಆ ಮೂಲಕ ಅಧರ್ಮದಿಂದ ಅನ್ಯಾಯದಿಂದ ವಾಮಮಾರ್ಗದಿಂದ ಗಳಿಸಿದ ಹಣಚೆಲ್ಲಿ ಚುನಾವಣೆಗೆ ನಿಲ್ಲುವುದು, ಆರಿಸಿಬರುವುದು, ಅಧಿಕಾರ ಹಿಡಿದು ನಮ್ಮನ್ನು ಆಳುವುದು, ಆಳುವಾಗ ಸರಕಾರದ ಹಣ/ಆಸ್ತಿಗಳಲ್ಲಿ ತಮಗೆ ಸಿಗುವಷ್ಟನ್ನೂ ಕಬಳಿಸುವುದು---ಮತ್ತೆ ಮುಂದಿನ ಚುನಾವಣೆಗೆ ವಿರೋಧೀ ಸ್ಥಾನದಲ್ಲಿ ನಿಲ್ಲುವವರನ್ನು ಬಡಿಯಲು ಬೇಕಾಗುವ ಎಲ್ಲಾ ’ವ್ಯವಸ್ಥೆ’ಗಳನ್ನೂ ಮಾಡಿಕೊಳ್ಳುವುದು--ಹೀಗೇ ಇದೊಂದು ಅಧಿಕಾರ ದಾಹೀ ವರ್ತುಲ ನಡೆದೇ ಇದೆ.

ಇಲ್ಲಿ ಯಾರೂ ಸಮಾಜ ಸೇವಕರಿಲ್ಲ. ಪಕ್ಷಾತೀತವಾಗಿ ಎಲ್ಲರೂ ಒಂದೇ. ಹೊರಗೆ ವಿರುದ್ಧವಾಗಿ ಹೇಳಿಕೆಕೊಡು ಜನ ಒಳಗೆ ಒಂದೇ ಮೇಜಿನಮೇಲೆ ಕೈಯ್ಯೂರಿ ಕುಳಿತು ತಿಂದು-ಕುಡಿದು ಮಾಡುತ್ತಾರೆ. ’ರಾಜಕಾರಣಿಗಳಿಗೆ ಆಟ ಪ್ರಜೆಗಳಿಗೆ ಪ್ರಾಣಸಂಕಟ ’ ಎಂಬಂತಾಗಿದೆ. ಇಷ್ಟಾದರೂ ನಮ್ಮ ಜನ ಸಮಾಜದಲ್ಲಿ ಹುಳುಕು ರಾಜಕೀಯದವರು ಮತ್ತೆ ಚಿಗುರಿಸುವ ಜಾತಿ, ಮತಗಳ ವೈಷಮ್ಯಗಳನ್ನು ನಾವೆಲ್ಲಾ ಲಕ್ಷ್ಯಿಸುವುದೇ ಇಲ್ಲ. ಜಾತಿಗೊಬ್ಬ ಸ್ವಾಮಿ, ಮತಕ್ಕೊಬ್ಬ ಗುರು-- ಜಾತೀವಾರು ಪಡೆಯಬೇಕಾದ ಸೌಲಭ್ಯಗಳಿಗೂ ಅಲ್ಲದೇ ಪಡೆಯಲು ಅನರ್ಹವಾದ ಸವಲತ್ತುಗಳೂ ಬೇಕೆಂದು ವಿಧಾನಸಭೆಯ ಮುಂದೆ ಧರಣಿ ಕೂರಲು ಅಂತಹ ಸ್ವಾಮೀ ವೇಷದವರನ್ನು ಸೃಜಿಸಿಕೊಂಡಿದ್ದಾರೆ ! ಸಂಖ್ಯಾಬಲವನ್ನು ತೋರಿಸಲು ಜಾತೀವಾರು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೂ ಇಲ್ಲಿನ ಮರ್ಮವಾಗಿದೆ ! ಒಂದುಕಾಲಕ್ಕೆ ಹಾಗೆ ಕರೆಸಿಕೊಂಡಿದ್ದ ಅಲ್ಪಸಂಖ್ಯಾತರು ನಿಯಂತ್ರಣವಿಲ್ಲದೇ ದೇಶಕ್ಕೆ ಸಮರೋಪಾದಿಯಲ್ಲಿ ಮಕ್ಕಳನ್ನು ಹೆತ್ತುಗೊಡುತ್ತಾ ಇದ್ದರೂ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಅಪ್ಲೈ ಆಗುತ್ತಿಲ್ಲ ! ಇಲ್ಲೂ ವೋಟ್ ಬ್ಯಾಂಕ್ ರಾಜಕಾರಣದ ಹಾವು ಹೆಡೆಯೆತ್ತುತ್ತದೆ!

ಆರ್ಥಿಕವಾಗಿ ಬಡವರು / ಹಿಂದುಳಿದವರು ಎಲ್ಲಾ ಜಾತಿಗಳಲ್ಲೂ ಎಲ್ಲಾ ವರ್ಗಗಳಲ್ಲೂ ಇದ್ದಾರೆ. ನಿಜವಾದ ಬಡತನದ ತೊಳಲಾಟದಲ್ಲಿರುವ ಜನರಿಗೆ ಸಿಗಬೇಕಾದ ಸವಲತ್ತುಗಳು ಕೇವಲ ಮೀಸಲಾತಿಗಳೆಂಬ ಸ್ಲ್ಯಾಬ್‍ಗಳಿಂದ ಕೈತಪ್ಪಿ ಹೋಗಿ ಅವರು ಪರದಾಡುವುದನ್ನು ನೋಡಿದಾಗ ಪಶ್ಚಾತ್ತಾಪವಾಗುತ್ತದೆ. ವಿಧಿಯಿಚ್ಛೆಯೇ ಹೀಗಿರುವಾಗ ಪ್ರಜೆಗಳೇನು ಮಾಡಲು ಸಾಧ್ಯ ಎಂಬುದು ಉತ್ತರ ಸಿಗದ ಸಿಕ್ಕಾಗಿದೆ. ಹೀಗಾಗಿ ರಾಜಕಾರಣದಲ್ಲಿ ಯಾರೂ ಸಂಭಾವಿತರಲ್ಲ. ಸಂಭಾವಿತರಾಗಿರುವ ಕೆಲವೇ ಜನ ಒಬ್ಬ ಸುರೇಶ್ ಕುಮಾರ್ ರಂತೇ, ಒಬ್ಬ ಕಾಗೇರಿಯಂತೇ, ಒಬ್ಬ ವಿ.ಎಸ್ ಆಚಾರ್ಯರಂತೇ ’ಕೆಲಸಕ್ಕೆಬಾರದವರು’ ಎನಿಸಿಕೊಳ್ಳುತ್ತಾರೆ. ಯಾಕೆಂದರೆ ಅವರು ಹಣಪಡೆದು ಸರ್ಕಸ್ಸು ತೋರಿಸುವ ಜನವಲ್ಲ! ಹೀಗಾಗಿ ಇಂದಿನ ರಾಜಕೀಯದ ನಾಟಕಕ್ಕೆ ಬಲಿಯಾದ ಯಡ್ಯೂರಪ್ಪ ಕೇವಲ ಒಂದು ಸ್ಯಾಂಪಲ್ಲು! ಹತ್ತಾರು ಜನ ಸೇರಿ ಕದ್ದಮನೆಯಲ್ಲಿ ಹಿಡಿಯಲು ಯಾರೋ ಬಂದಾಗ ಸಿಕ್ಕಿಬಿದ್ದೊಬ್ಬಾತ ಮಾತ್ರ ಶಿಕ್ಷೆಗೊಳಗಾದ ಪರಿ ಇದಾಗಿದೆ ಅಂತ ನಿಮಗನಿಸುವುದಿಲ್ಲವೇ ?

ಈ ಹಿಂದೆ ಕರ್ನಾಟಕದ ಯಾವುದೇ ಮುಖ್ಯಮಂತ್ರಿ ಇದುವರೆಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪರದಾಡದಷ್ಟು ಒದ್ದಾಟವನ್ನು ಯಡ್ಯೂರಪ್ಪ ನಡೆಸುತ್ತಲೇ ಅಪ್ಪ-ಮಕ್ಕಳಾಗಲೀ ಇಡೀ ಕಾಂಗ್ರೆಸ್ ತಳಿಯಾಗಲೀ ಕೊಡಲಾಗದ ಪ್ರಗತಿಯನ್ನು ಈ ರಾಜ್ಯದ ಜನತೆಗೆ ಅದರಲ್ಲೂ ಬೆಂಗಳೂರಿಗೆ ಮೂರೇ ವರ್ಷದಲ್ಲಿ ಕೊಟ್ಟಿರುವುದು ಕಣ್ಣಿಗೆ ಕಾಣುವ ಅಂಶವಾಗಿದೆ. ಆ ಮಟ್ಟಿಗೆ ವೈಯ್ಯಕ್ತಿಕವಾಗಿ ಅವರಿಗೆ ನಾನು ಆಭಾರಿ, ಬಹುಶಃ ತಾವೂ ಕೂಡಾ ! ಅವರ ಮುಂದಿನ ನಡೆಗೆ ಶುಭಕೋರೋಣ.

Thursday, July 28, 2011

ಸತ್ತ ಬಾಳಿಗೆ ಮತ್ತೆ ಅಮೃತವೆರೆದೂ ಕತ್ತಲಾಳಗಳಲ್ಲಿ ದೀಪವುರಿದೂ

ಸಾಂಕೇತಿಕ ಚಿತ್ರ ಕೃಪೆ : ಅಂತರ್ಜಾಲ

ಸತ್ತ ಬಾಳಿಗೆ ಮತ್ತೆ ಅಮೃತವೆರೆದೂ
ಕತ್ತಲಾಳಗಳಲ್ಲಿ ದೀಪವುರಿದೂ


" ಹಲೋ "

ದೂರವಾಣಿಯಲ್ಲಿ ಅತ್ತ ಕಡೆಯ ಧ್ವನಿ ಕೇಳಿ ಪ್ರಕಾಶನಿಗೆ ಮನಸ್ಸಿನಲ್ಲಿ ಸಾವಿರ ಮೊಂಬತ್ತಿ ಬೆಳಗಿದಷ್ಟು ಸಂತಸವಾಯ್ತು. ಅದು ಚಿರಪರಿಚಿತ ದನಿಯೇ. ಆ ದನಿಯಲ್ಲಿ ಇರುವ ಮಾರ್ದವತೆ, ಇಂಪು, ನಾಜೂಕು ಬೇರೆಲ್ಲೂ ಸಿಗಲೇ ಇಲ್ಲ! ಆ ಕಂಠ ಶಾರೀರವನ್ನು ಆಲಿಸದೇ ಹದಿನೈದು ವರ್ಷಗಳೇ ಕಳೆದಿವೆ; ಆದರೂ ಆ ಕಂಠ ಮರೆತು ಹೋಗುವುದಲ್ಲ, ತನ್ನ ಜೀವವಿರುವವರೆಗೂ ಅದು ಶಾಶ್ವತ ಎಂಬ ಅನಿಸಿಕೆ ಎಂದೋ ಆತನಲ್ಲಿ ನೆಲೆನಿಂತುಬಿಟ್ಟಿದೆ. ಬದುಕಿನಲ್ಲಿ ಹಲವು ಚೌಪದಿಗಳನ್ನೂ ಷಟ್ಪದಿಗಳನ್ನೂ ಹಾಡಿದ ಸಿರಿಕಂಠದ ಮರೆವು ಅದು ಹೇಗೆತಾನೇ ಸಾಧ್ಯ ?

ಅಂದಿನ ದಿನಗಳಲ್ಲಿ ತಾನು ಮತ್ತು ಸುಮಾ ಚಾಮರಾಜಪೇಟೆಯ ವಿದ್ವಾನ್ ಕೃಷ್ಣಮೂರ್ತಿಗಳಲ್ಲಿ ಒಟ್ಟಿಗೇ ಸಂಗೀತವನ್ನು ಅಭ್ಯಸುತ್ತಿದ್ದುದು ಪರಿಚಯಕ್ಕೆ ಮೂಲ ಕಾರಣ. ಕರ್ನಾಟಕ ಸಂಗೀತದ ಹಲವು ಪಲಕುಗಳನ್ನು ಯುಗಳವಾಗಿ ಹಾಡಿ ತೋರಿಸಿ ಗುರುಗಳಿಂದ ಶಹಭಾಷ್ ಗಿಟ್ಟಿಸಿದವರು ಪ್ರಕಾಶ್-ಸುಮಾ. ಆರೋಹಣ ಅವರೋಹಣದ ಕಾಲದಲ್ಲಿ ಲೀಲಾಜಾಲವಾಗಿ ಹೊರಹೊಮ್ಮುವ ವಿಶಿಷ್ಟ ಅನನ್ಯ ಕಂಠ ಮಾರ್ದವವನ್ನು ಕಂಡು ಕೃಷ್ಣಮೂರ್ತಿಗಳು ಸುಮಾರಾಣಿಯನ್ನು ಬಹಳವಾಗಿ ಹೊಗಳುತ್ತಿದ್ದರು. ಆ ಕಾಲಘಟ್ಟದಲ್ಲೇ ಪ್ರಕಾಶನ ಹೃದಯದ ಬಾಗಿಲನ್ನು ತಟ್ಟಿದವಳು ಸುಮಾ. ಅಲ್ಲೀವರೆಗೂ ಕೇವಲ ಸಂಗೀತದ ಸಹಪಾಠಿಯಾಗಿದ್ದ ಸುಮಾ ಆ ದಿನಗಳಲ್ಲಿ ಇನ್ನೂ ಹಲವು ರೂಪಗಳಲ್ಲಿ ಕಂಡಳು.

ಕಾರ್ಯೇಷು ದಾಸಿ ಶಯನೇಷು ರಂಭಾ ....ಮೊದಲಾಗಿ ಬರದ ಆ ಶ್ಲೋಕವನ್ನು ಮನದಲ್ಲೇ ಬರೆದುಕೊಳ್ಳುತ್ತಾ ಆ ಎಲ್ಲಾ ಪಾತ್ರಗಳಲ್ಲಿ ಸುಮಾ ತನಗೊದಗಿಬಿಟ್ಟರೆ ಬ್ರಹ್ಮಾಂಡದಲ್ಲೇ ತನ್ನಷ್ಟು ಸುಖಿ ಬೇರೇ ಯಾರೂ ಇಲ್ಲ ಎಂಬ ಭಾವ ಸ್ಫುರಿಸಲು ಹತ್ತಿತ್ತು. ಪ್ರತಿದಿನವೂ ಭೇಟಿಯಾಗುತ್ತಿದ್ದರೂ ಒಟ್ಟಿಗೇ ಹಲವು ರಾಗಗಳನ್ನು ಹಂಚಿಕೊಂಡು ಹಾಡುತ್ತಿದ್ದರೂ ತನ್ನ ಮನದಿಂಗಿತವನ್ನು ಅವಳಲ್ಲಿ ನಿವೇದಿಸುವ ತಾಕತ್ತು ಯಾಕೋ ಬಂದಿರಲೇ ಇಲ್ಲ! ಆನಂದಭೈರವೀ ರಾಗದ ಆಲಾಪಗಳನ್ನು ಅಭ್ಯಸಿಸುವಾಗ ಆನಂದಭೈರವೀ ಸಿನಿಮಾ ನಾಯಕಿಯ ನೆನಪಾಗಿ ಮತ್ತೆ ಆತನ ಹೃದಯ ಕೋಗಿಲೆ ಹಾಡತೊಡಗಿದ್ದರೂ, ಹೃದಯಕದ್ದ ಕಳ್ಳಿ ಪಕ್ಕದಲ್ಲೇ ಕುಳಿತಿದ್ದರೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಆತನಿದ್ದ. ಹೇಳಿದಮೇಲೆ ಒಂದೊಮ್ಮೆ ಏನಾದರೂ ಆಕೆ ಬೈದು ಬಿಟ್ಟರೆ ಅಥವಾ ತಮ್ಮನಡುವಿನ ಸ್ನೇಹ ಬಾಂಧವ್ಯ ಆ ಕಾರಣದಿಂದ ಮುರಿದುಹೋಗಿಬಿಟ್ಟರೆ ಎಂಬಿತ್ಯಾದಿ ಹಲವು ಆಲೋಚನೆಗಳು ನಾಮೇಲು ತಾಮೇಲು ಎಂದು ಮನದ ಮೂಸೆಯಲ್ಲಿ ಹಾರಿ ಕುಪ್ಪಳಿಸಿ ಆ ವಿಷಯದಲ್ಲಿ ಆತ ನಿತ್ರಾಣನಾಗಿಬಿಡುತ್ತಿದ್ದ. ಜೊತೆಗೆ ಸತ್ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದ ತನಗೆ ಜಾತಕ-ಗೀತಕ ಹೊಂದಾಣಿಕೆಯಾಗದೇ ಅವಳನ್ನು ಮದುವೆಯಾಗಲು ಮನೆಯವರು ಬಿಡುತ್ತಾರೆಯೇ ಎಂಬ ಪ್ರಶ್ನೆ ಕೂಡ ಕಾದ ಬಾಣಲಿಗೆ ನೀರೆರಚಿದಂತೇ ಆಗಾಗ ಆಗಾಗ ಹೊಡೆತಕೊಡುತ್ತಿತ್ತು.

ಹತ್ತಾರು ತಿಂಗಳು ಕಳೆಯುತ್ತಿದ್ದಂತೇ ಒಂದೆರಡು ದಿನ ಸುಮಾ ಪಾಠಕ್ಕೆ ಬಂದಿರಲಿಲ್ಲ. ಗುರುಗಳಿಗೆ ಆಕೆ ವಿಷಯ ತಿಳಿಸಿದ್ದರೂ ಆತನಿಗೆ ಯಾಕೆ ಎಂಬುದೇ ತಿಳಿಯಲಿಲ್ಲ. ಅಂದಿನ ಪಾಠಗಳು ಮುಗಿದಮೇಲೆ ಮನದಲ್ಲಿನ ತುಮುಲ ತಡೆಯಲಾರದೇ ಮನೆಗೆ ಹೋದಮೇಲೆ ಮಂಕಾಗಿ ಮಲಗಿಬಿಟ್ಟಿದ್ದ ಪ್ರಕಾಶ. ಊಟಬೇಡ, ತಿಂಡಿಬೇಡ, ಟಿವಿ ನೋಡುವುದು-ಎಫ್.ಎಮ್ ರೇಡಿಯೋ ಕೇಳುವುದು ಯಾವುದೂ ಊಹೂಂ. ಮನದಲ್ಲಿ ಸುಮಾ ಹಾಡಿದ ಕೆಲವು ಗೀತೆಗಳೇ ಮೊಳಗುತ್ತಿದ್ದವು. ಹಾಗೆ ಅವು ಮೊಳಗುವಾಗ ಆಕೆಯೇ ಭರತನಾಟ್ಯಗೈದಂತೇ ಭಾಸವಾಗಿ ತನ್ನೊಳಗೇ ಅದೇನೋ ಒಂಚೂರು ಆನಂದವೂ ಆಯಿತು. ಮರುಕ್ಷಣ ಮತ್ತೆ ಆಕೆ ಯಾಕೆ ಬರಲಿಲ್ಲಾ ಎಂಬಾ ಚಿಂತೆ.

ಮಗಯಾಕೆ ಮಬ್ಬಾದ ಎಂದು ತಾಯಿ ಮಂಗಳಮ್ಮ ತಿರುತಿರುಗಿ ನೋಡಿದರು. ಯಾವಾಗಲೂ ಹಾಲ್‍ನಲ್ಲಿ ಕೂತು ಹರಟುತ್ತಿದ್ದ ಮಗ ಹಾಗೆ ಏಕಾಏಕಿ ಮಲಗಿದ್ದೇ ಇರಲಿಲ್ಲ. ಜ್ವರವಿಲ್ಲ-ಶೀತವಿಲ್ಲ, ಹೊಟ್ಟೆನೋವಂತೂ ಇರಲಿಕ್ಕಿಲ್ಲ

" ಯಾಕೆ ಮಗನೇ ಏನಾಯ್ತು ಹೆತ್ತ ಅಮ್ಮನಲ್ಲಿಯೋ ಹೇಳಲು ಸಂಕೋಚವೇನೋ ? " ಕೇಳಿದರು.

" ಏನೂ ಇಲ್ಲಮ್ಮ ಸುಮ್ನೇ ಯಾಕೋ ಬೇಜಾರಾಗಿತ್ತು ಅದ್ಕೇ ಮಲಗಿದ್ದೆ "

" ಊಟ ಮಾಡುಬಾರೋ ಅವರೇಕಾಳಿನ ಹುಳಿ ಮಾಡಿದೀನಿ ನಿನ್ನಿಷ್ಟದ್ದು ಮಾಡದೇ ತುಂಬಾ ದಿನ ಆಗಿತ್ತಲ್ವಾ ? "

" ಯಾಕೋ ಹಸಿವೇನೇ ಇಲ್ಲಮ್ಮಾ ಆಮೇಲೆ ಮಾಡ್ತೀನಿ "

ಅಮ್ಮ ಕರೆಕರೆದು ಸೋತರು. ಅಪ್ಪ ವೆಂಕೋಬರಾಯರು ಸ್ವಲ್ಪ ನಯವಾಗಿಯೇ ಗದರಿಕೊಂಡರು. ಯಾವುದೂ ಫಲಿಸಲಿಲ್ಲ. ಅನೇಕಾವರ್ತಿ ಪ್ರಯತ್ನಿಸಿದಮೇಲೆ ಶಾಸ್ತ್ರಕ್ಕೆ ಊಟಮಾಡಿ ಎದ್ದು ಕೈತೊಳೆದು ಮತ್ತೆ ಮಲಗಿಬಿಟ್ಟ ಪ್ರಕಾಶ.

ದಿನವೊಪ್ಪತ್ತಿನಲ್ಲಿ ಸೋದರಮಾವ ಯಾವುದೋ ಕೆಲಸಕ್ಕೆ ಮನೆಗೆ ಬಂದರು. ಬಂದವರೇ ವಿಷಯ ತಿಳಿದು ಖಾಡಾಖಾಡಿ

" ನಿನ್ನ ಮನಸ್ಸಲ್ಲೇನಿದೆ ಎಂದು ಹೇಳಲೇಬೇಕು " ಹಠಹಿಡಿದು ಕೂತುಬಿಟ್ಟರು.
ಮುಳುಗುವಾತನಿಗೆ ಯಾವುದೋ ಮರದ ಬೀಳಲೊಂದು ಕೈಗೆ ಸಿಕ್ಕು ಬದುಕುವ ಅವಕಾಶ ಲಭ್ಯವಾಗುವಂತೇ ಮಾವನನ್ನು ಬಿಟ್ಟರೆ ಇನ್ನು ಹೇಗೂ ಯಾರಲ್ಲಿಯೂ ಹೇಳಲಾಗದ ಮನೋವ್ಯಾಕುಲತೆಯಿಂದ ತನ್ನ ಮನಸ್ಸಿನ ತುಮುಲವನ್ನು ಅದು ಹೇಗೋ ಸ್ವಲ್ಪ ಹೇಳಿಬಿಟ್ಟ.

ಮಗನ ಆಂತರ್ಯವನ್ನು ಅರಿತ ಮಂಗಳಮ್ಮ-ವೆಂಕೋಬರಾಯ ದಂಪತಿ
" ಮಗಾ ಅದು ಶ್ರೀಮಂತರ ಮನೆ ವಸ್ತು, ನಮಗೆ ದಕ್ಕುವಂಥದ್ದಲ್ಲ, ಸುಮ್ನೇ ಯಾಕೆ ಅದಕ್ಕೆ ಹಂಬಲಿಸಿ ಆಕಾಶಕ್ಕೆ ಏಣಿಹಾಕ್ತೀಯಾ ? ಶೀಘ್ರದಲ್ಲೇ ಸುಂದರ ಹುಡುಗಿಯೊಂದನ್ನು ನೋಡಿ ನಿನಗೆ ಮದುವೆಮಾಡಿಸುತ್ತೇವೆ. ಆಕೆಯನ್ನು ಮರೆತುಬಿಡು " ಎಂದು ಹೇಳಿದರು.

ಆತ ನಿರುತ್ತರಿಯಾಗಿದ್ದ, ಹಿಮಾಲಯದಂತೇ ತನ್ನ ನಿರ್ಧಾರದಲ್ಲಿ ಅಚಲನಾಗಿದ್ದ, ಅಲ್ಲಿರುವ ತಪಸ್ವಿಗಳಂತೇ ಮಹಾಮೌನ ಧರಿಸಿ ಕುಳಿತಿದ್ದ! ಮಗನ ಈ ಸ್ಥಿತಿಕಂಡು ಸಹಿಸಲಾರದ ಪಾಲಕರು ಮಾರನೇ ಬೆಳಿಗ್ಗೆ ಹೂವು-ಹಣ್ಣುಗಳನ್ನು ಹಿಡಿದುಕೊಂಡು ಜಯನಗರದಲ್ಲಿರುವ ದ್ವಾರಕಾನಾಥರ ಮನಗೆ ದೌಡಾಯಿಸಿದರು.

ಬೆಲ್ ಮಾಡಿದಾಗ ಬಾಗಿಲು ತೆರೆದವರೇ ನೀರಜಮ್ಮ.

" ಬನ್ನಿ , ಕೂತ್ಕೊಳಿ ತಾವು ಯಾರೆಂದು ಗೊತ್ತಾಗ್ಲಿಲ್ಲ ? ಯಜಮಾನ್ರು ಬಾತ್‍ರೂಮ್‍ನಲ್ಲಿದ್ದಾರೆ ಇನ್ನೇನು ಬರ್ತಾರೆ ಕೂತಿರಿ " ಎಂದರು.

ಮಗಳು ಅಲ್ಲೆಲ್ಲೂ ಕಾಣಲಿಲ್ಲ. ಸ್ನಾನಮುಗಿಸಿದ ದ್ವಾರಕಾನಾಥರು " ಶುಕ್ಲಾಂಬರಧರಂ ...." ಶ್ಲೋಕಗಳನ್ನೆಲ್ಲಾ ಹೇಳಿಕೊಳ್ಳುತ್ತಾ ಬಂದರು. " ಬಂದೆ ಒಂದ್ನಿಮಿಷ " ಎನ್ನುತ್ತಾ ದೇವರಕೋಣೆಗೆ ಹೋಗಿ ಕಡ್ಡಿಹಚ್ಚಿ ಹೂವಿಟ್ಟು ಕೈಮುಗಿದು ಆಚೆ ಬಂದರು.

" ತಮ್ಮ ಪರ್ಚಯ ಸಿಗ್ಲಿಲ್ಲಾ ? "

" ನಾನು ವೆಂಕೋಬರಾಯ ಈಕೆ ನನ್ನ ಹೆಂಡ್ತಿ ಮಂಗಳ "

" ಏನ್ಕುಡಿತೀರಿ ಕಾಫೀ ಟೀ ? "

" ಏನೂ ಬೇಡ ನಮ್ದಾಗಲೇ ತಿಂಡಿ-ತೀರ್ಥ ಎಲ್ಲಾ ಪೂರೈಸಿದೆ "

" ಅಬ್ಯಂತರವಿಲ್ಲಾಂದ್ರೆ ತಾವು ಬಂದ ಕಾರಣ ಕೇಳ್ಬಹುದೇ ? "

" ನಮ್ಮ ಮಗ ಪ್ರಕಾಶ ......." ಎಂದು ಆರಂಭಿಸಿ ವೃತ್ತಾಂತವನ್ನು ಅರುಹಿದರು.

ಎಲ್ಲವನ್ನೂ ಕೇಳಿಸಿಕೊಂಡ ದ್ವಾರಕಾನಾಥರು " ಸದ್ಯಕ್ಕೆ ಆಕೆಯ ಮದುವೆಯ ಬಗ್ಗೆ ಆಲೋಚನೆ ಇಲ್ಲ ಮಾಡೋ ವಿಚಾರ ಬಂದಾಗ ತಿಳಿಸ್ತೇನೆ " ಎಂದುಬಿಟ್ಟರು. ಅಡ್ಡಗೋಡೆಯಮೇಲೆ ದೀಪವಿಟ್ಟಂತಾಗಿ ವೆಂಕೋಬರಾಯ ದಂಪತಿ ಬಡಾ ಮುಖ ಮಾಡಿಕೊಂಡು ಮನೆ ಕಡೆ ಹೊರಟರು.

ಅದಾದ ಹದಿನೈದಿಪ್ಪತ್ತು ದಿನಗಳಲ್ಲೇ ದ್ವಾರಕಾನಾಥರು ಸುಮಾಗೆ ತಮ್ಮ ಅಂತಸ್ತಿಗೆ ತಕ್ಕ ಶ್ರೀಮಂತ ವರನೊಬ್ಬನನ್ನು ನೋಡಿದರು. ಈ ವಿಷಯ ಪಾಠದ ಮನೆಗೂ ಹೇಗೋ ತಿಳಿಯಿತು. ಗುರು ಕೃಷ್ಣಮೂರ್ತಿಗಳು

" ಏನಮ್ಮಾ ಮದುವೇನಂತೆ? ಮದುವೆ ಆಗೋಕ್ಮುಂಚೆ ಎಲ್ಲಾ ರಾಗಗಳನ್ನೂ ಸಂಪೂರ್ಣ ಅಭ್ಯಾಸ ಮಾಡಿಕೊಂಡು ಬಿಡು. ಆಮೇಲೆ ಅಂದ್ರೆ ನಿಧಾನ ಆಗೋಗುತ್ತೆ, ಆಗ್ದೇ ಹೋದ್ರೂ ಹೋಯ್ತೆ " ಎಂದುಬಿಟ್ಟರು.

ಪಕ್ಕದಲ್ಲೇ ಕುಳಿತಿದ್ದ ಪ್ರಕಾಶನಿಗೆ ಎಲ್ಲವೂ ಕೇಳಿಸಿಬಿಟ್ಟಿತು. ಆದರೂ ಆತ ಸುಮಾಳಲ್ಲಿ ಆ ವಿಷಯ ಮಾತನಾಡಲಿಲ್ಲ. ಒಳಗೊಳಗೇ ನೋವನ್ನು ತಿಂದ. ತಿಂಗಳು ಕಳೆಯುವಷ್ಟರಲ್ಲಿ ಒಂದುದಿನ ಪ್ರಕಾಶನಿಗೆ ಲಗ್ನದ ಆಮಂತ್ರಣ ಪತ್ರಿಕೆ ಸಿಕ್ಕಿತು. ಅಸಾಧ್ಯ ಮನೋಮಂಡಿಗೆಯನ್ನು ಅನುಭವಿಸಿದ ಆತ ಪ್ರೀತಿಸಿದ ಹುಡುಗಿ ಸುಖವಾಗಿದ್ದರೇನೆ ಸಾಕು ಎಂಬ ಅಂತಿಮ ತೀರ್ಮಾನಕ್ಕೆ ಬಂದುಬಿಟ್ಟ! ಪ್ರೀತಿ ನಲುಗಬಾರದು. ಕೇವಲ ಆಕೆ ತನ್ನ ಮಡದಿಯಾಗಿ ಬರಲಿಲ್ಲವೆಂಬ ಕಾರಣಕ್ಕೆ ಆಕೆಗೆ ಹಿಂಸೆ ಕೊಡುವುದಾಗಲೀ ಅಥವಾ ಆಕೆಯ ಲಗ್ನಕ್ಕೆ ತೊಂದರೆ ಕೊಡುವುದಾಗಲೀ ಸರಿಯಲ್ಲ ಎಂಬ ವಿವೇಚನೆ ಆತನಲ್ಲಿತ್ತು. ಎಷ್ಟೆಂದರೂ ಆತ ಸಂಗೀತವನ್ನೂ ಕಲಿತ ಸುಸಂಸ್ಕೃತ ಸದ್ಗುಣಿ.

ವೆಂಕೋಬರಾಯರ ಮನೆಗೆ ಪ್ರತ್ಯೇಕ ಆಮಂತ್ರಣ ಬರಲೇ ಇಲ್ಲ. ಮದುವೆ ಜಯನಗರ ಸೌತೆಂಡ್ ಸರ್ಕಲ್ ಹತ್ತಿರದ ’ ಪೈ ವಿಸ್ಟಾ ’ ಹಾಲ್‍ನಲ್ಲಿ ನಡೆದುಹೋಯಿತು. ಭಾರೀ ಜನಸ್ತೋಮ. ಬಂದವರೆಲ್ಲಾ ಮಿನುಗುವ ದಿರಿಸುಗಳನ್ನು ತೊಟ್ಟವರೇ. ಅಲಂಕಾರದಲ್ಲಿ ತಾವೇನೋ ಕಮ್ಮಿ ಇಲ್ಲ ಎಂಬುದು ಎಲ್ಲರ ಮುಖದಲ್ಲೂ ಕಾಣುತ್ತಿತ್ತು! ಬಗೆಬಗೆಯ ಬ್ಯಾಗ್‍ಗಳು, ವೂಡ್ ಲ್ಯಾಂಡ್ ಶೂ ಚಪ್ಪಲಿಗಳು ಅತ್ತರು-ಪರಿಮಳಗಳ ಘಾಟು, ನಗುವಲ್ಲದ ನಗುವಿನಿಂದ " ಆರಾಮೇನ್ರೀ ? " ಎಂದುಕೊಳ್ಳುತ್ತಾ ಪರಸ್ಪರ ಕೈಕುಲುಕಿ ಮಾತನಾಡಿಕೊಳ್ಳುತ್ತಿದ್ದವರು. ಊಟೋಪಚಾರಕ್ಕೆ ಮೆನು ಬಹಳದೊಡ್ಡ ರೀತಿಯಲ್ಲಿ ಆಯೋಜಿಸಲ್ಪಟ್ಟಿತ್ತು. ನಾಕು ಬಗೆಯ ಸಿಹಿತಿನುಸುಗಳು, ಥರಥರದ ಭಕ್ಷ್ಯ ಭೋಜ್ಯಗಳು, ತಂಪು ಪಾನೀಯಗಳು, ವಿವಿಧ ರೀತಿಯ ಐಸ್ ಕ್ರೀಮ್‍ಗಳು ಹೀಗೇ ಒಂದೇ ಎರಡೇ? ಕೇವಲ ಸುಮಾಳ ಕರೆಗೆ ಮನ್ನಿಸಿ ಮತ್ತು ಅವಳ ಬದುಕು ಹಸನಾಗಲೆಂದು ಅಳುವ ಹೃದಯದಿಂದಲೇ ಹಾರೈಸಿ ಶುಭಕೋರಲು ಪ್ರಕಾಶ ಕೂಡ ಆ ಮದುವೆಗೆ ಬಂದಿದ್ದ.

ಮದುವೆ ಮುಗಿದು ಸುಮಾ ಮುಂಬೈ ಸೇರಿದಳು. ಅಲ್ಲಿ ಎಲ್ಲಿರುವಳೋ ಹೇಗಿರುವಳೋ ಎಂದು ತಿಳಿದುಕೊಳ್ಳುವ ತುಡಿತ ಉಂಟಾದರೂ ಹಾಗೆ ಮಾಡಲು ಯಾಕೋ ಮನ ಅಳುಕುತ್ತಿತ್ತು ಪ್ರಕಾಶನಿಗೆ. ಯಾರಲ್ಲಿ ಕೇಳುವುದು? ಏನೂಂತ ಕೇಳುವುದು ? ಅಲ್ಲವೇ? ತಾನು ಹೇಗೂ ಮದುವೆಯಾಗುವುದಿಲ್ಲವೆಂಬ ನಿರ್ಧಾರವನ್ನು ಪ್ರಕಟಿಸಿಬಿಟ್ಟಿದ್ದ ಮನೆಯಲ್ಲಿ. ಇದ್ದೊಬ್ಬ ಮಗನೂ ಈ ರೀತಿ ಮಾಡುವುದನ್ನು ಸಹಿಸದ ಪಾಲಕರು ಹೈರಾಣಾಗಿದ್ದರು.
" ನೋಡೋ ಪ್ರಕಾಶು, ನಮಗೂ ವಯಸ್ಸಾಗುತ್ತಾ ಬಂತು. ಮುಂದೆ ನಿನ್ನನ್ನು ನೋಡಿಕೊಳ್ಳಲು ನಿನ್ನವರು ಅಂಥ ಯಾರು ಬರ್ತಾರಪ್ಪಾ, ಒಳ್ಳೇ ಮಗ ಕಣೋ ನೀನು ನಮಗಾಗಿಯಾದರೂ ಮದುವೆಯಾಗು " ಎಂದು ಬಹುವಿಧದಲ್ಲಿ ತಿಳಿಹೇಳೀ ಹೇಳೀ ಸೋತುಹೋಗಿದ್ದರು. ತಿರುಪತಿಯಲ್ಲಿ ಶ್ರೀನಿವಾಸನನ್ನು ಕಂಡು

" ಅಪ್ಪಾ ನನ್ನ ಮಗನಿಗೆ ಮದುವೆಯಾದ್ರೆ ಇಲ್ಲಿಗೆ ಕರ್ಕೊಂಡು ಬಂದು ಕಲ್ಯಾಣೋತ್ಸವ ನಡೆಸಿಕೊಡ್ತೇವಪ್ಪಾ ಅನುಗ್ರಹಿಸು " ಎಂದೂ ಬೆಟ್ಟಹತ್ತಿ ಬೇಡಿಕೊಂಡರು.

ಹದಿನೈದು ವರ್ಷಗಳ ತಪಸ್ಸಿನ ಫಲವೋ ಎಂಬಂತೇ ಆ ಹಣ್ಣು ಜೀವಗಳು ಇನ್ನೂ ಬದುಕಿರುವಾಗ ತಿಮ್ಮಪ್ಪ ಕಣ್ಣುತೆರೆದನೋ ನಿಸರ್ಗ ಕರೆಯಿಟ್ಟಿತೋ ಅಂತೂ ಪ್ರಕಾಶ ಮೆತ್ತಗಾಗಿದ್ದ. ಕಾಲಚಕ್ರದ ಹಲ್ಲು ತುಸುಮುಂದೆ ಜಾರಿದಾಗ ಏನೂ ಇಲ್ಲದ ತನ್ನ ಬದುಕು ವಿಧವೆಯೊಬ್ಬಳಿಗೆ ಆಸರೆಯಾದರೆ ಅದೆಷ್ಟೋ ಪುಣ್ಯ ತನ್ನದಾಗಬಹುದೆಂಬ ಅನಿಸಿಕೆ ಆತನಲ್ಲಿ ಒಡಮೂಡಿತ್ತು. ತನ್ನ ಮನದಿಚ್ಛೆಯನ್ನು ನೊಂದ ಪಾಲಕರಿಗೆ ಅರುಹಿದ್ದ ಕೂಡ. ಕಟ್ಟಾ ಸಂಪ್ರದಾಯವಾದಿಗಳಾಗಿದ್ದರೂ ಮಗನ ಮನದ ಹೊಯ್ದಾಟವನ್ನು ನೋಡಿ ಸಹಿಸಲಾಗದೇ ಹಾಗಾದ್ರೂ ಸುಖವಾಗಿರ್ಲಿ ಎಂದು ಅವರಂದುಕೊಂಡಿದ್ದರು.

ನಿತ್ಯವೂ ದಿನಪತ್ರಿಕೆಯಲ್ಲಿ ವಿಧವೆಯರ ಬಗ್ಗೆ ಜಾಹೀರಾತು ಬಂದಾಗ ತೆಗೆದು ಓದುತ್ತಾ ಇದ್ದ ಪ್ರಕಾಶ ಅಂದು ಭಾನುವಾರ ಬೆಳಿಗ್ಗೆ ಹಾಗೇ ಸಿಕ್ಕಿದ ಜಾಹೀರಾತನ್ನು ಕೆಲಹೊತ್ತು ನೋಡುತ್ತಲೇ ಇದ್ದ. ಅದರಲ್ಲಿ ಸುಮಾ ಎಂಬ ಹೆಂಗಸು ತನಗೆ ಅಲಯನ್ಸ್ ಬೇಕು ಎಂಬುದಾಗಿ ತಿಳಿಸಿ ತನ್ನ ನಂಬರನ್ನೂ ನಮೂದಿಸಿದ್ದಳು. ಯಾಕೋ ’ಸುಮಾ’ ಎಂಬ ಆ ಹೆಸರಿನಮೇಲೇ ಅಷ್ಟು ಮಮತ್ಕಾರವಿರುವ ಪ್ರಕಾಶನಿಗೆ ಆ ಹೆಂಗಸಿಗೆ ಕರೆಮಾಡುವ ಮನಸ್ಸು ಉಂಟಾಯಿತು. ಮೊಬೈಲ್ ಹಿಡಿದು ಕರೆಮಾಡಿದಾಗ .......ಹೌದು ಅದೇ ಆ ಚಿರಪರಿಚಿತ ಧ್ವನಿ. ತನ್ನ ಸುಮಾಳೇ ಅವಳು!

ದೂರವಾಣಿಯಲ್ಲಿ ವಿಷಯ ಕೇಳಿ ಒಮ್ಮೆ ಸ್ತಂಭೀಭೂತನಾದರೂ ಮನದ ಯಾವುದೋ ಆಸೆ ಈಡೇರಿದ ತೃಪ್ತಿಯೂ ಮತ್ತು ವಿಧವೆಗೆ ಆಸರೆಕೊಡುವ ಪುಣ್ಯಕೆಲಸಮಾಡುವೆನೆಂಬ ಬದುಕಿನ ಸಾರ್ಥಕ್ಯವೂ ಏಕಕಾಲಕ್ಕೆ ಘಟಿಸಿದಂತಾಗಿ ಖುಶಿಪಟ್ಟ. ದೊಡ್ಡ ಕಂಪನಿಯಲ್ಲಿ ನೌಕರಿಯಲ್ಲಿದ್ದ ಸುಮಾಳ ಗಂಡ ವರ್ಷದ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದ. ಬಹಳಕಾಲ ಮಕ್ಕಳಾಗದಿದ್ದ ಅವರಿಗೆ ಕೊನೆಗೊಮ್ಮೆ ಒಂದು ಹೆಣ್ಣು ಮಗು ಜನಿಸಿತ್ತು. ೪ ವರ್ಷದ ಮಗಳನ್ನು ನೋಡಿಕೊಳ್ಳುತ್ತಾ ಏಕಾಂಗಿಯಾಗಿ ಮುಂದಿನ ಜೀವನ ಸಾಗಿಸುವುದು ಸುಮಾಗೆ ಇಷ್ಟವಿರಲಿಲ್ಲ. ಪಾಲಕರು " ಬೇಡಾ ನಮ್ಮ ಸರ್ಕಲ್ಲಿನಲ್ಲೇ ಎಲ್ಲಾದರೂ ಹುಡುಕೋಣ " ಎಂದರೂ ಕೇಳದೇ ಆಕೆ ಜಾಹೀರಾತು ನೀಡಿದ್ದಳು!ಮಾತುಕತೆ ಮುಂದುವರಿದು ಇಬ್ಬರ ಕಣ್ಣಾಲಿಗಳೂ ಆನಂದಭಾಷ್ಪ ಸುರಿಸಿದವು.

ವಿಷಯ ತಿಳಿದ ದ್ವಾರಕಾನಾಥ ದಂಪತಿ ಶ್ರೀನಗರದ ಹತ್ತಿರದ ಬ್ಯಾಂಕ್ ಕಾಲೋನಿಯಲ್ಲಿರುವ ವೆಂಕೋಬರಾಯರ ಮನೆಗೆ ಹೂವು-ಹಣ್ಣು ಹಿಡಿದು ಬಂದರು. ಬಾಗಿಲು ತೆರೆದ ಮಂಗಳಮ್ಮ ಆದರದಿಂದ ಸ್ವಾಗತಿಸಿದರು. ದ್ವಾರಕಾನಾಥ ದಂಪತಿಗೆ ಮುದಿವಯಸ್ಸಿನ ಆ ದಂಪತಿ ಸತ್ಕರಿಸಿದರು. ಮಧ್ಯಮವರ್ಗದ ಸಾದಾ ಸೀದಾ ಜೀವನವಾದರೂ ಅತ್ಯಂತ ಸುಸಂಸ್ಕೃತರಾದ ವೆಂಕೋಬರಾಯ ದಂಪತಿಯನ್ನೂ ಅವರ ಮಗನನ್ನೂ ನೋಡಿ ದ್ವಾರಕಾನಾಥ ದಂಪತಿಯ ಕಣ್ಣಲ್ಲಿ ನೀರು ಉಕ್ಕಿತು.

" ನಮ್ಮ ಮಗಳನ್ನು ನೀವೇ ಕೇಳಿದಾಗ ನಾವಾಗಿಯೇ ಕೊಡಲಿಲ್ಲ, ಇಂದು ನಾವೇ ಕೇಳುತ್ತಿದ್ದೇವೆ ನಮ್ಮ ಮಗಳನ್ನು ಸೊಸೆಯಾಗಿ ಸ್ವೀಕರಿಸಿ ಅವಳಿಗೆ ನಿಮ್ಮಲ್ಲಿ ಆಶ್ರಯ ಕೊಡುವಿರೇ ? "

" ನೀವು ಬೇಡವೆಂದರೂ ಶ್ರೀನಿವಾಸನ ಮನಸಲ್ಲಿ ಅನುರೂಪ ಹುಡುಗ-ಹುಡುಗಿಯಿವರನ್ನು ಸೇರಿಸಬೇಕೆಂಬ ಸಂಕಲ್ಪವಿದ್ದರೆ ಅದಕ್ಕೆ ನಾವೆಲ್ಲಾ ಕೇವಲ ಆತನ ನಾಟಕದ ಪಾತ್ರಧಾರರಷ್ಟೇ ತಾನೇ ? ಶುಭಸ್ಯ ಶೀಘ್ರಂ " ಎಂದುಬಿಟ್ಟರು ವೆಂಕೋಬರಾಯರು !

ಕಾರಿನ ಹಿಂದುಗಡೆಯ ಸೀಟಿನಿಂದ ಚಿಕ್ಕ ಮಗಳ ಜೊತೆಗೆ ಜರತಾರೀ ಸೀರೆಯುಟ್ಟ ಸ್ಫುರದ್ರೂಪಿ ಸುಮಾ ರಂಭೆಯನ್ನೂ ನಾಚಿಸುವ ಸೌಂದರ್ಯವನ್ನು ಇನ್ನೂ ಹಾಗೇ ಕಾಪಿಟ್ಟುಕೊಂಡು ಕಂಗೊಳಿಸುತ್ತಾ ನಡೆದುಬಂದು ವೆಂಕೋಬರಾಯರ ಮನೆ ಪ್ರವೇಶಿಸಿದಳು. ಒಳಗಡೆ ಕೋಣೆಯಲ್ಲಿ ಯಾವುದೋ ಕಾದಂಬರಿ ಓದಲು ತೊಡಗಿದ್ದ ಶ್ರೀರಾಮಚಂದ್ರನ ಥರದ ಸುಂದರ ಪ್ರಕಾಶ ಹೊರಬಂದು ತನ್ನ ಸದ್ಗುಣದ ತೋಳುಗಳನ್ನು ಚಾಚಿ ಆಕೆಯನ್ನು ಸ್ವಾಗತಿಸಿದ. ಅಪ್ಪನಿಲ್ಲದ ಮಗಳಿಗೆ

" ಇವರೇ ನಿನ್ನ ಅಪ್ಪ ನೋಡಮ್ಮಾ " ಎಂದರು ದ್ವಾರಕಾನಾಥರು. ಚಿಕ್ಕ ಮಗು ಓಡೋಡಿ ತನ್ನ ಅಪ್ಪನನ್ನು ತಬ್ಬಿಕೊಂಡಿತು!

ಕಡಿದುಹೋಗಿದ್ದ ಸಂಬಂಧವೊಂದು ಮರಳಿ ಬೆಸೆದುಕೊಂಡಿತ್ತು. ಒಣಗಿದ ಮರವೊಂದು ಅನಿರೀಕ್ಷಿತವಾಗಿ ಚಿಗಿತುಕೊಂಡಿತ್ತು! ಮನೆಯಲ್ಲಿ ಸಣ್ಣಗೆ ಹಾಕಿದ್ದ ಎಫ್. ಎಮ್ ರೇಡಿಯೋದಲ್ಲಿ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ " ಯಾವುದೀ ಹೊಸಸಂಚು ....." ಹಾಡು ಕರ್ಣಾನಂದಕರವಾಗಿ ತೇಲಿಬರುತ್ತಿತ್ತು.

Wednesday, July 27, 2011

ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ !


ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ !

ತಮಾಷೆಯ ಪ್ರಸಂಗಗಳು ನಮ್ಮನ್ನು ದಿಗಿಲುಗೊಳಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇರುವುದು ಜೀವನದ ಸ ರಿ ಗ ಮ ಪಗಳಲ್ಲಿ ಒಂದು. ಹಾಗಿಲ್ಲದಿದ್ದರೆ ಜಗನ್ನಿಯಾಮಕನಿಗೆ ಜಗತ್ತಿನ ಸೂತ್ರದ ತಾಳ ತಪ್ಪಿಹೋಗುತ್ತದೋ ಏನೋ. ಯಾರೋ ಯಾರಿಗೋ ಬಯ್ಯುವುದು, ಇನ್ನೆಲ್ಲೋ ಜಗಳ ದೊಂಬಿ, ರಸ್ತೆ ಮಧ್ಯೆ ಗಲಾಟೆ, ಮನೆಯೆದುರು ಮಾರಾಮಾರಿ ! ಯಾರೋ ಪಕ್ಕದಮನೆ ಹುಡುಗಿ ಜತೆ ಪರಾರಿ ! ಅಲ್ಲೆಲ್ಲೋ ಲಾಜಿನಲ್ಲಿ ಸಿನಿಮಾ ನಟಿಯ ಮೈವ್ಯವಹಾರ ! ಹೇಗೆ ಮನೆಗಳಲ್ಲಿ ಊಟ ತಿಂಡಿ ರನ್ನಿಂಗ್ ಅಕೌಂಟೋ ಹಾಗೇ ಸಮಾಜದಲ್ಲಿ ಇವೆಲ್ಲಾ ಆಗಾಗ ಘಟಿಸುತ್ತಲೇ ಇರುತ್ತವೆ. ಆಳುವ ದೊರೆಗಳು-ವಂದಿಮಾಗಧರು ನಡೆಸುವ ಅಹೋರಾತ್ರಿ ದಗಲ್‍ಬಾಜಿ ನಾಟಕ ಹೊಸದೇನಲ್ಲ ಬಿಡಿ-ಯಾಕೇಂದ್ರೆ ಈಗ ರಾಜಕೀಯ ಅಂದ್ರೇ ಹಾಗೆ ಅನ್ನಿಸುವಷ್ಟು ಮೈಗೊಂಡುಹೋದ ವೈಖರಿ ಅದು.

ನಾನೂ ಒಂದು ದಿನ ಮಂತ್ರಿಯಾಗಬೇಕು ಎಂಬ ಕನಸು ಕಂಡಿದ್ದೆ! ನೀವು ಹಾಗೆಲ್ಲಾ ಆಡಿಕೊಳ್ಳೋವಷ್ಟು ಪುಕ್ಕಲು ಅಂದ್ಕೋಬೇಡಿ. ಸಂಕಲ್ಪ ಎಲ್ಲಾ ಸರಿಯಾಗೇ ಮಾಡಿದ್ದೆ, ಎಲ್ಲಿ ಎಡವಟ್ಟಾಯ್ತೋ ಗೊತ್ತಾಗ್ಲೇ ಇಲ್ಲ. ಮಂತ್ರಿ ಖುರ್ಚಿಯ ನೆನಪಿನಲ್ಲೇ ಮಲಗಿಕೊಂಡ ದಿನ ಕನಸೊಂದು ಬಿತ್ತು. ಆ ಕನಸಿನಲ್ಲಿ ಯಾರೋ ಕಂಡರು. ನನಗೆ ರಾಜಕೀಯ ಗುರು ಬೇರೇ ಯಾರೂ ಇರಲಿಲ್ಲ. ಏಕಲವ್ಯನ ರೀತಿ ಒದ್ದಾಡಿಕೊಂಡಿದ್ದ ನನಗೆ ಕಂಬಳಿಹೊದ್ದು ಮುಖ ತೋರಿಸದ ಯಾವುದೋ ಆಕೃತಿ ಕಂಡು ಬಿಟ್ಟಿತು. " ನನ್ಮಗನೇ ರಾಜಕೀಯಕ್ಕೆ ನೀನು ಬರ್ಬೇಕಾದ್ರೆ ಕನಿಷ್ಠ ಒಂದು ಕೊಲೆ ಮೂರು ದರೋಡೆ ಹತ್ತಾರು ಸುಲಿಗೆಗಳಲ್ಲಿ ಪರೋಕ್ಷವಾಗಿಯಾದ್ರೂ ಭಾಗವಹಿಸಿರ್ಬೇಕು, ಕಂಡಲ್ಲೆಲ್ಲಾ ತಿನ್ನುವ ಜಾಯಮಾನ ಇಟ್ಕೊಂಡಿರ್ಬೇಕು. ಬೆಳಿಗ್ಗೆ ಎದ್ದು ಧೋಬಿ ಕೊಟ್ಟ ಗರ್ಗರಿ ಖಾದಿ ಧರಿಸಿ ನಾಮ ಎಳೆದುಕೊಂಡು ಹೊರಟುಬಿಟ್ಟರೆ ಹೊತ್ತುಗೊತ್ತಿನ ಅರಿವಿಲ್ಲದೇ ಎಲ್ಲೆಡೆಯೂ ’ನಾಮ’ದ ಬಲವನ್ನು ಸಾರಬೇಕು. "

ಒಮ್ಮೆಲೇ ಅದೇ ೩೦ ನಿಮಿಷದ ಕನಸಲ್ಲಿ ಮಧ್ಯೆಮಧ್ಯೆ ಹತ್ತತ್ತು ನಿಮಿಷ ಬಂದ ಜಾಹೀರಾತು ದಾಸರ ಪದವೊಂದು ನೆನಪಿಗೆ ಬಂದೂ ಹೋಯ್ತು! ನೀನೇಕೋ ನಿನ್ನ ಹಂಗೇಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ. ಈಗ ದೇವರ ಹತ್ತಿರ ಅದನ್ನು ಹೇಳಿದರೆ ಜನರ ಹತ್ತಿರ ಹೇಳುವಾಗ ಸ್ವಲ್ಪ ಕಾಲಕ್ಕೆ ತಕ್ಕ ಬದಲಾವಣೆ ಅಗತ್ಯ ಬಿಡಿ. ನೀನೇಕೋ ನಿನ್ನ ಹಂಗೇಕೋ ನಿನಗೆ ನಾಮಹಾಕುವ ಬಲವೊಂದಿದ್ದರೆ ಸಾಕೋ ! ನಾಮಹಾಕುವ ಬಲ ನನ್ನಲ್ಲಿದೆಯೇ ? ನನ್ನನ್ನೇ ಪ್ರಶ್ನಿಸಿಕೊಳ್ಳುವ ಮೊದಲೇ ಆ ಕಡೆ ಈ ಕಡೆ ಮೈಕೈ ವದರಿಕೊಂಡೆ; ಝಂಡೂ ಬಾಮ್ ಝಂಡೂ ಬಾಮ್ ಪೀಡಾಹಾರಿ ಬಾಮ್ ಝಂಡೂ ಬಾಮ್ .....ಇನ್ನೂ ಮುಗಿದಿರಲಿಲ್ಲ ಅಷ್ಟರಲ್ಲೇ ದಮ್ ಫಾರ್ಮ್ಯುಲಾ ಸಹಿತದ ಹತ್ತು ತಲೆಯ ರಾವಣ ಇಮಾಮಿಯ ನಾಮ ಎಳೆಯಲು ಬಂದುಬಿಟ್ಟ ! ದಾಸರು ಹೇಳುವುದಕ್ಕಿಂತಾ ನಾನೇ ಹೇಳುತ್ತೇನೆ ಕೇಳಿ -- ನಾಮದ ಮಹಿಮೆಯೇ ನಿಜಕ್ಕೂ ಅಗಾಧ. ಅದನ್ನು ನಾವು ಬೆಂಗಳೂರಿನಲ್ಲಂತೂ ನೋಡುತ್ತಲೇ ಇರ್ತೀವಿ.

ಯಾವುದೋ ಒಂದು ಜಾಹೀರಾತು ಮುಗಿದಾಗ ಕಾವಿ9 ನವರು ಮೈಕ್ ಹಿಡಿದು ಬಂದರು ! " ಸ್ವಾಮೀ ನಿತ್ಯಾನಂದನ ಬಗ್ಗೆ ನೀವೇನು ಹೇಳ್ತೀರಿ ? " ಎಂದ್ರು. ನನಗೇ ಸ್ವಾಮಿ ಅಂದ್ರೋ ಅವನಿಗೆ ಸ್ವಾಮಿ ಅಂದ್ರೋ ತಿಳೀಲಿಲ್ಲ. ನನಗೆ ಆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ನಾನು ಧರ್ಮರಾಯನ ರೀತಿಯಲ್ಲೇ " ಯಾವುದಕ್ಕೂ ನೋಡದೆಯೇ ಹೇಳುವುದಿಲ್ಲ " ಎಂದುಬಿಟ್ಟೆ. ಬಂದದಾರಿಗೆ ಸುಂಕವಿಲ್ಲ ಎಂದುಕೊಂಡು ಒಣಮುಖದಲ್ಲಿ ಮೈಕು ಬೇರೇ ಕಡೆ ಹೋಯ್ತು. ಕಾವಿ9 ವಾಹಿನಿಯ ವಾಹನ ಆಕಡೆ ಹೋಯ್ತೋ ಇಲ್ವೋ ೪ನೇ ಮುಖ್ಯರಸ್ತೆಯ ಪದ್ಮಾವತಮ್ಮ ಓಡೋಡಿ ಬಂದ್ರು. ನನ್ನ ಹೆಂಡ್ತಿ ಹತ್ರ ಹೇಳ್ತಾ ಇದ್ದಾಗ ನಾನು ಕೇಳಿಸಿಕೊಂಡಿದ್ದು ಇಷ್ಟು--ಅದ್ಯಾವುದೋ ಹೆಡ್ ಕಾನಸ್ಟೇಬಲ್ ರಾಮಯ್ಯನಂತೆ ಆತನ ಹೆಂಡ್ತಿ ಚೀಟಿ ಮಾಡಿದ್ಲಂತೆ. ಪದ್ಮಾವತಮ್ಮ ಏನಾದ್ರೂ ಆಪತ್ತಿಗಿರ್ಲಿ ಅಂತ ಸಲ್ಸಲ್ಪ ಹಣ ಕೂಡಿಸಿ ಚೀಟಿ ಕಟ್ಟುತ್ತಿದ್ದರಂತೆ. ಆ ಚೀಟಿರಾಣಿ ರಾತ್ರೋರಾತ್ರಿ ಗಂಡಂಗೂ ಹೇಳ್ದೇ ಮನೆಬಿಟ್ಟು ಹೋಗಿದ್ದಾಳಂತೆ!

ಜಾಹೀರಾತುಗಳು ಒಟ್ಟೂ ೨೦ ನಿಮಿಷ ಪ್ರಸಾರವಾಗುವಾಗ ಮುಖ್ಯ ಕಥಾನಕ ೧೦ ನಿಮಿಷ ಮಾತ್ರ ಪ್ರಸಾರವಾಯ್ತು. ಯಾಕೋ ಸಲ್ಪ ಕಾಲು ಹಿಡಿದುಕೊಂಡ ಹಾಗಾಗಿ ಕನಸಿನ ಕತ್ತಲಲ್ಲೇ ಕೈಯ್ಯಾಡಿಸಿ ಮೂವ್ ಎಳೆದುಕೊಂಡೆ, ಥೂ ಯಾವುದನ್ನು ಹಚ್ಚಿಕೊಂಡ್ರೂ ಹೋಗೋದೇ ಇಲ್ಲ ಹಾಳಾದ್ದು. ಇನ್ನೇನು ವಿಷ್ಯ ಮುಗೀಬೇಕು ಅನ್ನೋವಷ್ಟರಲ್ಲೇ ಮತ್ತೆ ಎಂಟ್ರಿಕೊಟ್ಟಿದ್ದು ಅದೇ ಕಂಬಳಿ ಹೊದ್ದ ವ್ಯಕ್ತಿ " ಯಾಕಪ್ಪಾ ಏನಾಯ್ತು? ಸವರ್ಕೋತಾ ಇದ್ದೀಯಾ ನೀನೇ ಸವರ್ಕೋತಾ ಇದ್ರೆ ಬೇರೆಯವರನ್ನು ಸವ್ರೋದು ಯಾವಾಗ ? ರೆಡಿನಾ ಎಲ್ಲಾದಕ್ಕೂ ತಯಾರಿದ್ರೆ ಹೇಳು ನಾಳೇನೇ ....ನಾಳೇನೇ ನಿನ್ನ ಮಂತ್ರಿ ಮಾಡ್ತೀನಿ. " ಅಂದ. ಯಾಕೋ ಆಗದು ಅನಸ್ತು. ಕನಸು ಕರಗೇಹೋಯ್ತು.

ಅದಾಗಿ ಒಂದುವಾರ ಕೂಡ ಆಗಿರ್ಲಿಲ್ಲ. ಹಾಗೇ ಕೂದ್ಲು ಜಾಸ್ತಿ ಬೆಳ್ಕೊಂಡಿದೆ ಅಂತ ಕಟ್ ಮಾಡಿಸಲು ಹಜಾಮನ ಹತ್ರ ಹೋಗಿದ್ದೆ. ಹಜಾಮ ಅನ್ಕೋಬಾರ್ದುರೀ ಈಗೆಲ್ಲಾ ಎಲ್ಲರಿಗೂ ಸುಸಂಸ್ಕೃತವಾಗಿ ಹೇಳಬೇಕಂತೆ ಅದ್ಕೇ ಹಜಾಮ, ನಾಯಿಂದ, ನಾಪಿಕ, ಕೆಲಸಿ ಈ ಕನ್ನಡದ ಹೆಸರುಗಳೆಲ್ಲಾ ಮಾಯವಾಗಿ ಶಿಸ್ತಾಗಿ ಜೆಂಟ್ಸ್ ಬ್ಯೂಟಿಶಿಯನ್ನು ಅನ್ಬೇಕು. ಸುಮ್ನೇ ಮಾತಾಡ್ತಾ ಮಾತಾಡ್ತಾ ರಾಶಿಬಿದ್ದ ತೆಲುಗು ದಿನಪತ್ರಿಕೆಗಳಲ್ಲಿ ಕನ್ನಡದ ಅಕ್ಷರವನ್ನೇ ಹೋಲುತ್ತಿರುವ ಅಕ್ಷರಗಳುಳ್ಳ ಒಂದನ್ನು ಎತ್ತುಕೊಂಡು ಓದಲು ಪ್ರಯತ್ನಿಸಿದೆ. ತೆಲುಗು ಕನ್ನಡದಿಂದಲೇ ಹುಟ್ಟಿದ್ದು ಅಂತ ಗಾಢವಾದ ಅನುಭವ ಸಿಕ್ಕಿತು. ತಮಿಳು ಮತ್ತು ಎಂಗಳ ಮಲಯಾಳಂ ಕೂಡ ಕನ್ನಡಮ್ಮ ಕೊಸರಿಕೊಂಡಾಗ ಹುಟ್ಟಿದ್ದ ಕೂಸುಗಳೇ ಆಗಿದ್ದವು ಅಂತಾರೆ ಕೆಲವ್ರು, ನೋ ಕಾಮೆಂಟ್ಸ್...ಹೇಳುವುದಕ್ಕೂ ಕೇಳುವುದಕ್ಕೂ ಈಗ ಸಮಯವಲ್ಲ.

ಜೆಂಟ್ಸ್ ಬ್ಯೂಟಿಶಿಯನ್ನರ ಪಾರ್ಲರಿನಲ್ಲಿ ಕೂತಿದ್ನಾ ನನ್ನ ಸರದಿಗೆ ಇನ್ನೂ ಸಮಯವಿತ್ತು. ಅಷ್ಟೊತ್ತಿಗೆ ಯಾರೋ ದಂಪತಿ ೫ ವರ್ಷದ ಮಗನನ್ನು ಕರ್ಕೊಂಡು ಬಂದ್ರು. " ಸಾರ್ ಇವ ಬಾಳ ತರ್ಲೆಮಾಡ್ತಾನೆ, ಕಟ್ ಮಾಡಸಕೇ ಬಿಡಲ್ಲ...ಸ್ವಲ್ಪ ಅಡ್ಜಷ್ಟ್ ಮಾಡಿ ಮಾಡ್ಬಿಡಿ ಸಾರ್ " ಎಂದ್ರು. ಎಷ್ಟಂದ್ರೂ ಮಗು ನೋಡಿ.. ನಾವೆಲ್ಲಾ ತಗಾದೆ ತೆಗೀಲಿಲ್ಲ. ಸರದಿ ತಪ್ಪಿಸಿ ಮಧ್ಯೆ ಆ ಹುಡುಗನನ್ನು ಕೂರಿಸಿಕೊಂಡರು. ಆತ ಕಿಲಾಡಿ ಎಂದ್ರೆ ಜಗತ್ ಕಿಲಾಡಿ! ಬಂದಾಗಿನಿಂದ ೪-೫ ನಿಮಿಷಗಳಲ್ಲೇ ಮುಂದೆ ರಾಜಕೀಯಕ್ಕೆ ಸೇರುವ ಎಲ್ಲಾ ಲಕ್ಷಣಗಳನ್ನೂ ತೋರಿಸಿಬಿಟ್ಟಿದ್ದ! ಮಗುವಿನ ಕಿಲಾಡಿ ನೋಡಿ ಬ್ಯೂಟಿಶಿಯನ್ನರಿಗೆ ಸ್ವಲ್ಪ ರೇಗ್ತು. ಅವರು ಯಾವುದೋ ಪ್ಲಾನ್ ಮಾಡಿ ಅಪ್ಪ-ಅಮ್ಮನ ಹತ್ರ ನೀವು ಹೊರಗೆ ನಿಂತ್ಕೊಳಿ, ನಾನು ಸ್ವಲ್ಪ ಹೆದರ್ಸಿ ನೋಡ್ತೀನಿ ಅಂದ್ರು. ಮಗುವಿನ ಅಪ್ಪ-ಅಮ್ಮ ಆಚೆಕಡೆ ನಿಂತಾಗ ಮಗುವಿನ ಹತ್ರ ಬ್ಯೂಟಿಶಿಯನ್ನು ಸ್ವಲ್ಪ ಗೇರ್ ಚೇಂಜ್ ಮಾಡಿ ಮಾತಾಡದ್ರು ನೋಡಿ. " ಸುಮ್ನೇ ಕುತ್ಗೋ ಇಲ್ಲಾಂದ್ರೆ ಕಿವಿ ಕತ್ತರ್ಸ್ಬುಡ್ತೀನಿ ನೋಡು ನನ್ಮಗನೆ ! " ಮಗು ಸ್ತಬ್ಧವಾಗಿ ಕುಳಿತು ಆರಾಮಾಗಿ ಕೆಲಸಕ್ಕೆ ಅನುಕೂಲಮಾಡಿಕೊಟ್ಟಿತು.

ಮಗುವಿನ ಮೂಲ ಭಾಷೆಯೇ ಅದಾಗಿರುವಾಗ ನಿಧಾನಗತಿಯಲ್ಲಿ ಹೇಳಿದ್ರೆ ಅದು ಅದಕ್ಕೆ ಹೇಳಿದ ಹಾಗೇ ಇರ್ತಾ ಇರ್ಲಿಲ್ಲ. ನಮ್ಮ ಉತ್ತರ ಕರ್ನಾಟಕದಲ್ಲಿ " ಬಾರಲೇ ಸೂಳಾಮಗನ ಅಲ್ಲೇನ್ ಮಾಡಾಕತ್ತೀಯೋ ನನ್ಮಗನ ? " ಅಂತಾರೆ. ಅವರಿಗೆ ಅದೇ ಅಭ್ಯಾಸ. ಆ ’ಸಂಸ್ಕೃತ’ ಪದ ಬರಲಿಲ್ಲ ಎಂದರೆ ಉಪ್ಪಿಟ್ಟಿಗೆ ಉಪ್ಪೇ ಹಾಕಿಲ್ಲದ ರೀತಿ ಮಜಾನೇ ಇರೋದಿಲ್ಲ! ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲಾ ಅನ್ನೋ ಗಾದೇನ ಕನ್ನಡದ ಉಪೇಂದ್ರನ ಅಭಿಮಾನಿಗಳು ಅರ್ಥಾಮಾಡ್ಕೊಂಡಿರೋ ರೀತೀನೇ ಬೇರೇ ಇತ್ತು. ಆದ್ರೆ ಈಗ ಮೊನ್ನೆ ಅಡ್ಡಕಸಬಿ ಥರ ಅದ್ಯಾವ್ದೋ ಶ್ರೀಮತಿ ಅನ್ನೋ ಮಸಾಲೆ ಮಾಡೋಕೋಗಿ ಈಗ ಅದೂ ಯಡವಟ್ಟಾಗೋಗಿದೆ.

ನಮ್ಮ ಕಛೇರಿಗೆ ಕೆಲವು ವಿದ್ಯುನ್ಮಾನ ಯಂತ್ರಗಳನ್ನು ದೆಹಲಿಯಿಂದ ತರಿಸಲಾಗಿತ್ತು. ಅವುಗಳಲ್ಲಿ ಮೂರು ಗ್ಯಾರಂಟೀ ಸಮಯದೊಳಗೇ ಕೈಕೊಟ್ಟಿದ್ದವು. ಫೋನಾಯಿಸಿದರೆ ಯಾವುದೇ ಸಮರ್ಪಕ ಉತ್ತರ ಸಿಗಲಿಲ್ಲ. ಮೇಲ್ ಮಾಡಿದ್ರೆ ತಲ್ಪಲೇ ಇಲ್ಲಾ ಅನ್ನೋ ರೀತಿ ಇರ್ತಾ ಇದ್ರು. ನಾನೂ ಸ್ವಲ್ಪ ಗೇರ್ ಚೇಂಜ್ ಮಾಡ್ದೆ.. ಆಂಗ್ಲ ಹಿಂದಿ ಎಲ್ಲಾ ಮಿಕ್ಸ ಹೊಡ್ದು " ನಿಮ್ಹತ್ರ ಆಗ್ದೇ ಹೋದ್ರೆ ಹೇಳಿ ಮುಂದೇನ್ಮಾಡ್ಬೇಕು ನೋಡ್ಕೋತೀವಿ " ಅಂತ ಮೇಲ್ ಕಳಿಸಿದೆ, ಫ್ಯಾಕ್ಸೂ ಮಾಡ್ದೆ. ಗಂಟೆ ಅರ್ಧಕೂಡ ಕಳೀಲಿಲ್ಲ. ದಿಲ್ಲಿಯಿಂದ ಬಾಂಬೆಯಿಂದ ಬೆಂಗಳೂರಿಂದ ಎಲ್ಲೆಲ್ಲೆಲ್ಲಾ ಅವರ ಬ್ರ್ಯಾಂಚುಗಳಿವೆಯೋ ಅಲ್ಲೆಲ್ಲಾ ಕಡೆಗಿಂದ್ಲೂ ಕಾಲೂ ಕಾಲು. " Sir, no issues we will solve your problem " ಮಾರ್ನೇ ದಿವ್ಸ ಬೆಳಿಗ್ಗೆ ಬೆಳಿಗ್ಗೇನೇ ಪ್ರಾಬ್ಲಮ್ಮು ಇದ್ದಿದ್ದು ನೋ ಪ್ರಾಬ್ಲಮ್ಮು !

ನಂಗನ್ಸಿದ್ದೇನು ಗೊತ್ತೇ ? ನಮ್ಮ ವಿದ್ಯುನ್ಮಾನದಲ್ಲಿ ಥ್ರಿಶೋಲ್ಡ್ ವೋಲ್ಟೇಜ್ ಅಂತ ಕರೀತೀವಿ--ಕೆಲವೊಂದು ಇಂಟಿಗ್ರೇಟೆಡ್ ಸರ್ಕಿಟ್ ಕೆಲಸಮಾಡಲು ನಿಗದಿಪಡಿಸಿದ ವೋಲ್ಟೇಜ್ ಸಪ್ಲೈ ಆದರೆ ಮಾತ್ರ ಅದು ಕೆಲಸವನ್ನು ಆರಂಭಿಸ್ತದೆ. ಅದೇ ರೀತಿ ಅನೇಕ ಜನರಿಗೆ ಅವರವರ ಲೆವೆಲ್ಲಿಗೆ ತಕ್ಕನಾಗಿ ಮಾತಿನ ದಾಟಿಯನ್ನು ಬದಲಿಸಿದರೇ ಕೆಲ್ಸ ಆಗೋದು! ಎಲ್ಲಿ ’ಸ್ವಾಮೀ’ ಅನ್ಬೇಕೋ ಅಲ್ಲಿ ಹೇಯ್ ಅಂದ್ರೆ ಕೆಲ್ಸ ಕೆಟ್ಟೋಗುತ್ತೆ! ಎಲ್ಲಿ ’ಹೋಗಲೇ’ ಅನ್ಬೇಕೋ ಅಲ್ಲಿ ’ಸ್ವಾಮೀ’ ಅಂತಾನೇ ಇದ್ರೂ ಆ ’ಸ್ವಾಮಿ’ ಕಮಕ್ ಕಿಮಕ್ ಅನ್ನದೇ ಪ್ರತಿಷ್ಠಾಪಿಸಿದ ವಿಗ್ರಹದ ಥರ ಕುಳಿತ್ಬಿಟ್ಟಿರುತ್ತೆ. ಹೀಗಾಗಿ ಯಾವಾಗ ಎಲ್ಲಿ ಯಾರಮುಂದೆ ಯಾವ ಶಬ್ದ ಪ್ರಯೋಗ ಸರಿ ಎಂಬುದರ ಮೇಲೆ ಥೀಸಿಸ್ ಬರೆದು ಡಾಕ್ಟರೇಟ್ ಪಡೆಯೋಣ ಅಂತಿದೀನಿ. ಅದ್ರಿಂದ ನಿಮ್ಗೂ ಸಹಾಯವಾಗ್ಬೌದು. ಅಂದಹಾಗೇ ನಿಮಗೀಗ ಯಾವ ಶಬ್ದ ಪ್ರಯೋಗಿಸಲಿ ? ಗೊತ್ತಾಯ್ತು ಬಿಡಿ...ನೀವಿಲ್ಲಿಗೆ ಬಂದು ಓದೋಮಟ್ಟಕ್ಕೆ ಇದೀರೀಂದ್ರೆ ಸ್ವಲ್ಪನಾರು ಆಸಕ್ತಿ ಇದ್ದೋರೇ ಇರ್ಬೇಕಲ್ವೇ ? ಅದಕೇ ನಿಮಗೆಲ್ಲಾ ಗೇರ್ ಚೇಂಜ್ ಮಾಡೋಕಾಗುತ್ಯೇ ಸ್ವಾಮೀ ? ಬರಲೇ ? ಬ ಬಾಯ್!

Tuesday, July 26, 2011

ಜಾವದ ಅಪ್ಸರೆ


ಜಾವದ ಅಪ್ಸರೆ

ಮುಂಜಾವಿನ ಘಳಿಗೆಯಲ್ಲಿ ಮಂಜು ಕವಿದ ಕಣಿವೆಯಲ್ಲಿ
ರಂಜಿಸಿಹುದು ಹಕ್ಕಿಯದರ ಸುಪ್ರಭಾತವು
ಅಂಜುತಲೇ ಮುಂದೆ ಸಾಗೆ-ನಂಜುಸುರಿದ ಮನಸಿನಲ್ಲಿ
ಸಿಂಜಿನಿಗಳ ಘಲಿರುನಾದ ಸೆಳೆಯುತಿದ್ದಿತು

ಬಡಿತ ತೀವ್ರಗೊಂಡ ಎದೆಯ ಕದವ ತಟ್ಟಿ ಬಂದೆನೆನುತ
ಕಡಿತವಿರದ ಪ್ರೀತಿ ಬಯಸಿ ನನ್ನ ಮುಂದಕೆ
ಹಿಡಿತ ತಪ್ಪಿ ಮನವದಲ್ಲಿ ಕುಡಿದ ಮಂಗನಂತೆ ಕುಣಿದು
ನಡತೆ ಸರಿಯೆ ನೋಳ್ಪ ಪರಿಯ ಮರೆತು ಹಿಂದಕೆ

ಕಮಲಮುಖಿಯ ಮೊಗದಲೆರಡು ಚಿಕ್ಕಚಿಕ್ಕ ಕಮಲವರಳಿ
ವಿಮಲ ಮನದ ಭಾವಬಣ್ಣ ಹೊರಗೆ ಸೂಸುತ
ಸುಮಲತೆಗಳು ಬಾಗಿ ಬಳುಕಿ ಮರವನಾತು ಬದುಕಬಯಸಿ
ಅಮಲುತರುವ ಸನ್ನಿವೇಶ ಬೆಳಗಿನಲ್ಲಿಯೇ !

ಯಾವ ಶಿಲ್ಪಿ ಕಡೆದನವಳ ಜೀವಸವೆದು ಜೀವತುಂಬಿ
ದೇವಲೋಕದಿಂದ ಇಳಿದ ಚಲುವಿನಪ್ಸರೆ
ಮಾವ ನಿನ್ನ ಮಗಳು ನನಗೆ ಎನಲು ಮನದಿ ಭಯವುತುಂಬಿ
ಜಾವದಲ್ಲೆ ಕದ್ದು ನಡೆವ ನೇಮದಕ್ಕರೆ !

ಮೂರುಲೋಕಕೆಲ್ಲ ಗಂಡ ಭಾರಿ ಮಲ್ಲ ಆಕೆಯೆದುರು
ಪಾರಿಜಾತ ತರುವ ಗೊಲ್ಲ ತಾನು ಎನುತಲಿ
ಸೂರೆಹೊಡೆಯೆ ಮೈಯ್ಯ ಸುಖವ ದೂರದಲ್ಲಿ ಯಾರೊ ಕಂಡು
ಹಾರಿಬಿದ್ದ ಮಂಚದಲ್ಲಿ ಕನಸು ನಗುತಲಿ !

Sunday, July 24, 2011

|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ|||


|| ಅಹಂ ಏಕಂ ಶತಂ ವ್ಯಾಘ್ರಂ
ಸಪ್ತದೀ ಕುಂಜರಂ ಬಲಂ ||


" ಮಗನೇ ಆ ಕುಂಟು ಕುರಿ ಏನು ಹೇಳ್ತು ಬಲ್ಲೆಯಾ ? "

ಹೀಗೆಂದಾಗ ಅತ್ಯಂತ ಧೈರ್ಯದಿಂದಲೂ ಅತೀವ ಸಂತೋಷದಿಂದಲೂ ಕಣ್ಣರಿಳಿಸಿ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿರುವ ನಾನು ಅಜ್ಜಿಯನ್ನು ಕುಳಿತಲ್ಲೇ ತಿರುಗಿ ತಿರುಗಿ ನೋಡುತ್ತಲೇ ಇದ್ದೆ. ಅಜ್ಜಿ ಒತ್ತಾಸೆಯಿಂದ ಹೇಳುತ್ತಿದ್ದ ಆ ಸಂಗತಿ ನನ್ನಲ್ಲಿರುವ ಭಯವನ್ನು ನಿವಾರಿಸಿಕೊಳ್ಳುವಲ್ಲಿ ಅಂದು ನನಗೆ ನೆರವಾಗಿತ್ತು. ಕನ್ನಡ ಪ್ರಾಥಮಿಕ ಶಾಲೆಯ ಒಂದನೆಯ ತರಗತಿಯಲ್ಲಿ ಕಲಿಯುತ್ತಿದ್ದ ನನಗೆ ೨ ಕಿಲೋ ಮೀಟರ್ ದೂರದ ಶಾಲೆಗೆ ಓಡಾಡುವಾಗ ಸಹಪಾಠಿಗಳು ಜೊತೆಗಿರದೇ ಇರುವ ಸಂಭವ ಇರುತ್ತಿತ್ತು. ಏಕಾಕಿಯಾಗಿ ಗುಡ್ಡದ ಕಾಲು ದಾರಿಗಳಲ್ಲಿ ಪಾಟಿಚೀಲ ಹೆಗಲಿಗೇರಿಸಿಕೊಂಡು ನಡೆದೇ ಹೋಗುವ ನನಗೆ ಸರಿಯಾದ ಚಪ್ಪಲಿಯೂ ಇರಲಿಲ್ಲ. ಆಗಿನ ಕಾಲವೇ ಹಾಗಿತ್ತು. ನಮಗೆಲ್ಲಾ ನಿತ್ಯವೂ ಹೊಸ ಯುನಿಫಾರ್ಮ ದಿರಿಸುಗಳು ಅಂತೆಲ್ಲಾ ಇರಲಿಲ್ಲ. ಮನೆಯಲ್ಲಿ ಬೇರೇ ಶಾಲೆಗೇ ಬೇರೆ ಎಂಬ ತೀರಾ ಮಡಿವಂತಿಕೆಯ ಜನ ನನ್ನ ಹಿರಿಯರಾಗಿರಲಿಲ್ಲ. ಕೊಳೆಯಾದಾಗ ತೊಳೆದು ಹಾಕಿಕೊಳ್ಳುವ ಎರಡೇ ಸೆಟ್ಟು ಅಂಗಿ ಚಡ್ಡಿಗಳು; ಅವೂ ದೊಗಳೆಗಳೇ !

ಅಂದಿನ ದಿನ ನಾವು ಏನನ್ನು ತೀರಾ ಪಡೆದಿರಲಿಲ್ಲವೋ ಅದಕ್ಕೆ ಹಳ್ಳಿಯ ಜೀವನ ವೈಖರಿಯೂ ಕಾರಣವಾಗಿದ್ದಿರಬಹುದು. ಪಡೆಯದೇ ಇದ್ದ ಆ ಸೌಕರ್ಯಗಳಿಗಿಂತ ಪಡೆದುಕೊಂಡ ಅನನ್ಯ ಅನುಭೂತಿ ಇದೆಯಲ್ಲಾ ಅದು ಇಂದಿನ ಜನಾಂಗಕ್ಕೆ ದುಡ್ಡುಕೊಟ್ಟರೂ ಸಿಗುವಂಥದ್ದಲ್ಲ. ಅವಿಭಕ್ತ ಕುಟುಂಬಗಳಲ್ಲಿ ಹುಟ್ಟಿಬೆಳೆದ ನಾನು ಮತ್ತು ನನ್ನೋರಗೆಯ ಜನರಿಗೆ, ನಮಗಿಂತಾ ಹಿಂದಿನ ಪೀಳಿಗೆಯವರಿಗೆ ಅದು ಸಿಕ್ಕಿರಬಹುದು. ಮನೆಯಲ್ಲಿ ಹಿರಿಯರು ನೀಡುವ ಪ್ರೀತ್ಯಾದರಗಳು, ವಾತ್ಸಲ್ಯ ಪೂರಿತ ನಡೆಗಳು ನಮಗೆ ಬೇಕಾದ್ದಕ್ಕಿಂತ ತುಸು ಜಾಸ್ತಿಯೇ ಲಭಿಸಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಮಳೆಗಾಲದಲ್ಲಿ ಎಲ್ಲೆಲ್ಲೂ ನಿಂತ ಮಳೆನೀರು. ತುಂಬಿ ಹರಿವ ತೊರೆ ಹಳ್ಳ ಕೆರೆ ಕಟ್ಟೆಗಳ ನೈಸರ್ಗಿಕ ಪುಟ್ಟ ಪುಟ್ಟ ಜಲಪಾತಗಳು. ಎಲ್ಲೆಲ್ಲೂ ಹಸಿರುಟ್ಟ ಭೂಮಿಯ ಅಂದ. ಸ್ವಲ್ಪ ಚಳಿಮಿಶ್ರಿತ ಹವೆಯಲ್ಲಿ ಮನೆಯೊಳಗೆ ಕುಳಿತು ಸೌದೆಯ ಒಲೆಯಲ್ಲಿ ಸುಟ್ಟು, ಕೊಬ್ಬರಿ ಎಣ್ಣೆ ಸವರಿದ ಹಲಸಿನ ಹಪ್ಪಳ ತಿನ್ನುತ್ತಾ ನಾವು ಕೇಳದ ಕಥೆಗಳಿಲ್ಲ. ಈಗ ಕಥೆ ಕೇಳಿ --

ಒಂದಾನೊಂದು ಕಾಲದಲ್ಲಿ ಒಬ್ಬ ಕುರಿಗಳನ್ನು ಸಾಕಿದ್ದನಂತೆ. ಅಮ್ಮಕುರಿ-ಅಪ್ಪಕುರಿ-ತಮ್ಮಕುರಿ-ಅಣ್ಣಕುರಿ-ಅಕ್ಕಕುರಿ-ಚಿಕ್ಕಪ್ಪಕುರಿಯೋ ಎಂಬಿತ್ಯಾದಿ ಹಲವು ಕುರಿಗಳು ಆತನ ಕೊಟ್ಟಿಗೆಯಲ್ಲಿದ್ದವು. ಅವು ದಿನಾಲೂ ತಾವೇ ಮನೆಯಿಂದ ಕೂಗಳತೆ ದೂರದಲ್ಲಿರುವ ಕಾಡಿಗೆ ಮೇಯಲು ಹೋಗ್ತಾ ಇದ್ವು. ಕಾಡಲ್ಲಿ ಅಲ್ಲಿ ಇಲ್ಲಿ ಒಟ್ಟಿಗೇ ಆ ಮಂದೆ ತಿರುಗಾಡ್ತಾ ಮೇಯ್ತಾ ಇದ್ವು. ಹೀಗೇ ಒಂದಿನ ಮಳೆಗಾಲದಲ್ಲಿ ಮೇಯ್ತಾ ಮೇಯ್ತಾ ಸಮಯ ಕಳ್ದಿದ್ದೇ ಗೊತ್ತಾಗ್ಲಿಲ್ಲ. ಸುಮಾರು ದೂರವೂ ಸಾಗಿಬಿಟ್ಟಿದ್ದವು. ಯಾಕೋ ಜೋರಾಗಿ ಗಾಳಿಬೀಸಿದಂತಾಗಿ ಕಪ್ಪುಗಟ್ಟಿದ ಮೋಡ್ದಿಂದ ಮಳೆ ಬರೋ ಹಾಗಾಯ್ತು. ಎಲ್ಲಾ ಕುರಿಗಳೂ ಓಡಿ ಮನೆಕಡೆ ನಡೆದುಬಿಟ್ಟವು. ಓಡುವ ಗಡಿಬಿಡಿಯಲ್ಲಿ ಕುಂಟುಕುರಿಯನ್ನು ಮರೆತುಬಿಟ್ಟವು. ತಾನೆಷ್ಟೇ ಓಡಿದರೂ ಶಾರೀರಿಕ ದೌರ್ಬಲ್ಯದಿಂದ ಆ ಕುಂಟು ಕುರಿಗೆ ಜಾಸ್ತಿ ಓಡಲಿಕ್ಕೆ ಆಗ್ತಾ ಇರಲಿಲ್ಲ. ಹೀಗಾಗಿ ಗುಂಪು ಮುಂದೆ ದೂರ ಓಡುವಾಗ ಇದ್ಕೆ ದಾರಿತಪ್ಪಿಹೋಯ್ತು !

ಮೊದ್ಲೇ ಕಾಡು ಹುಲಿ-ಸಿಂಹ-ಕರಡಿ ಇತ್ಯಾದಿ ಕ್ರೂರ ಪ್ರಾಣಿಗಳು ಇರೋ ಜಾಗ. [ಅಜ್ಜಿ ಇಷ್ಟನ್ನು ಹೇಳುತ್ತಿರುವಾಗ ನಮಗೆ ಮೈಯ್ಯೆಲ್ಲಾ ರೋಮಾಂಚನ ] ಕೇಳಬೇಕೇ ? ಪಾಪ ಈ ಕುಂಟುಕುರಿ [ನೋಡಿ ಅಜ್ಜಿ ಕುಂಟುಕುರಿ ಪಕ್ಷ! ಹೋದ ಕುರಿಮಂದೆಯನ್ನು ’ಆ’ ಎಂದರು, ಕುಂಟುಕುರಿಗೆ ’ಈ ’ ಎಂದರು-ನಮ್ಮ ಕನ್ನಡದಲ್ಲಿ ಹತ್ತಿರ ಇರುವ ವ್ಯಕ್ತಿ-ವಸ್ತು-ಪ್ರದೇಶಕ್ಕೆ ’ಈ’ ಕಾರ ಬಳಸುತ್ತೇವೆ, ದೂರವಿದ್ದರೆ ’ಆ’ ಕಾರ ಬಳಕೆಯಾಗುತ್ತದೆ] ಹಾಗೇ ಕುಂಟ್ತಾ ಕುಂಟ್ತಾ ಸ್ವಲ್ಪ ಮುನ್ನಡೀತು. ಅಷ್ಟರಲ್ಲೇ ಕತ್ತಲಾಗೇ ಹೋಯ್ತು. ಮಂದಬೆಳಕಿನಲ್ಲಿ ಹತ್ರದಲ್ಲೇ ಅದ್ಕೊಂದು ಗುಹೆ ಕಾಣಿಸ್ತು. ಹೇಗೂ ತಾನಂತೂ ಇವತ್ತು ಮನೆಗೆ ಹೋಗೋದಕ್ಕೆ ಸಾಧ್ಯವಿಲ್ಲಾ ಇಲ್ಲೇ ರಾತ್ರಿ ಕಳಿವಾ ಅಂತೇಳಿ ಕುಂಟುಕುರಿ ಆ ಗುಹೆಯೊಳಗೆ ಹೋಯ್ತು. ಹಗಲಿಡೀ ತಿರುಗಿ ಸುಸ್ತಾಗಿದ್ದ ಅದಕ್ಕೆ ಹೊಟ್ಟೆಯಂತೂ ತುಂಬಿತ್ತು. ಗುಹೆಯ ಒಳಗೆ ಹೋಗ್ತಾ ಹೋಗ್ತಾ ಅಲ್ಲೇ ಒಂದು ಜಾಗ ಹಿಡ್ದು ಮಲಗಿಬಿಡ್ತು. ಮಲ್ಗಿದ ಅದ್ಕೆ ಅಲ್ಲೇ ಜೋಂಪು ಹತ್ತತು.

ರಾತ್ರಿ ಹನ್ನೆರಡು ಹೊಡೆದಿರಬಹುದು. [ನಮ್ಮ ಕಣ್ಣು ಆಗ ಗೋಡೆಯಮೇಲೆ ಅಲ್ಲಾಡಿಸಿಕೊಂಡಿರುತ್ತಿದ್ದ ಸೊಕ್ಕಿನ ಗಡಿಯಾರದ ಮೇಲೆ ಹೋಗುತ್ತಿತ್ತು. ಎಲ್ಲಾ ಕಲ್ಪನೆ ತಾನೇ ಹನ್ನೆರಡು ಹೊಡೀವಾಗ ನಾವು ಮಲ್ಗಿರ್ತೀವಿ, ರಾತ್ರಿ ಅಷ್ಟೊತ್ತು ಎದ್ದಿದ್ದು ದಾಖ್ಲೇನೇ ಇಲ್ಲ. ಅಕಸ್ಮಾತ್ ಎಲ್ಲೋ ಕೃಷ್ಣಾಷ್ಟಮಿಯಂಥಾ ದಿನ ಇದ್ರೆ ಮನೆಯ ಒಳಗೇ ಇದ್ದು ಗೊತ್ತು ಬಿಟ್ರೆ ರಾತ್ರಿ ಹೊರಗೆ ಕಾಡಿಗೆಲ್ಲಾ ಹೋಗಿ ಗೊತ್ತಿದ್ದವರಲ್ಲ. ] ಗುಹೆಯ ಹೊರಗೆ " ಘಾಂವ್ ಘಾಂವ್ ಘಾಂವ್ " ಸಿಂಹ ಘರ್ಜನೆ! ಪಾಪ ಕುರಿಗೆ ಎಚ್ಚರಿಕೆಯಾಗೋಯ್ತು. ಒಬ್ಬನೇ ಅದೂ ಗುಹೆಯೊಳಗೆ ಇದೆಯಲ್ಲಾ ಅದರ ಫಜೀತಿ ಯಾರಿಗೂ ಬೇಡ. ಮೈಯ್ಯೆಲ್ಲಾ ಥರಥರ ನಡುಗ್ತಾ ಇತ್ತು. ಇನ್ನೇನು ಸಿಂಹ ಒಳಗೆ ಬಂದ್ರೆ ಕೊಂದು ತಿನ್ನೋದು ನಿಕ್ಕಿ. ಕುರಿ ಇರೋಬರೋ ಧೈರ್ಯಾನೆಲ್ಲಾ ಸೇರ್ಸ್ಕೊಂಡು ಮನಸ್ನಲ್ಲೇ ಎಲ್ಲಾ ದೇವ್ರನ್ನೂ ಸ್ಮರಣೆಮಾಡ್ಕೊಂಡು [ನೋಡಿ ಈ ಕಥೇಲಿ ಕುರಿಗೂ ದೇವರಿದ್ದಾನೆ !] ಸ್ವಲ್ಪ ಗಂಟ್ಲನ್ನ ಸರಿಮಾಡ್ಕೊಂಡ್ತು. ಹೇಗೂ ಸಾಯೂದ್ ಸಾಯೂದೇ ಬದಕ್ಲಿಕ್ಕೆ ಆದ್ರೆ ನೋಡ್ವ ಹೇಳಿ ಯಾವ್ದೋ ಹೊಸ ಭಯಂಕರ ಕಾಡು ಪ್ರಾಣಿ ಸ್ವರದಲ್ಲಿ ಹೇಳ್ತು " ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ. "

[ಆ ಸಮಯದಲ್ಲಿ ಕುತೂಹಲ ಹೇಗಿತ್ತು ನಮ್ಗೆ ಅಂದ್ರೆ ನಿಜಕ್ಕೂ ಅದನ್ನು ಶಬ್ದಗಳಲ್ಲಿ ಹೇಳೋದಕ್ಕೆ ಸಾಧ್ಯಾವಾಗ್ತಾ ಇಲ್ಲ, ಅಜ್ಜಿ ಮುಂದುವರಿಸಿದ್ರು ] ಅಂಥಾ ಮಾದೊಡ್ಡ ಸಿಂಹಕ್ಕೆ ಗುಹೆಯ ಒಳಗಿನ ವಿಚಿತ್ರ ಪ್ರಾಣಿಯ ಆ ಕೂಗು ಕೇಳಿ ಎದೇಲಿ ಪುಕುಪುಕು ನಡುಕ ಶುರುವಾಯ್ತಂತೆ. ಈ ಕುಂಟುಕುರಿ ಹೇಳ್ತಲ್ಲಾ ಹಾಗಂದ್ರೇನು ಗೊತ್ತೇ ? ನಾನು ಒಬ್ಬನೇ ನೂರಾರು ಹುಲಿಗಳನ್ನೂ ಮತ್ತು ಆನೆಗಳನ್ನೂ ಒಟ್ಟಿಗೆ ಸೇರ್ಸಿದ್ರೆ ಎಷ್ಟು ಶಕ್ತಿ ಇರ್ತದೋ ಅಷ್ಟು ಶಕ್ತಿ ಹೊಂದಿದ್ದೇನೆ ಅಂತ. ಈ ಕೂಗಿಗೇ ಸಿಂಹ ಒಂದೇ ಸಲಕ್ಕೆ ಹೆದರಿಬಿಡ್ತಂತೆ! ಗುಹೆಯೊಳಗೆ ಪ್ರವೇಶಮಾಡೋ ಬದ್ಲು ಅಲ್ಲಿಂದ ಬೇಗ ಬೇಗ ಜಾಗ ಖಾಲಿ ಮಾಡ್ತಂತೆ! ಕುಂಟುಕುರಿ ಅಂತೂ ಬದ್ಕಿದ್ನಲ್ಲಪ್ಪಾ ಅಂದ್ಕೊಂಡು ರಾತ್ರಿ ಅಲ್ಲೇ ಇದ್ದು ಮಾರ್ನೇ ದಿವ್ಸ ಬೆಳಿಗ್ಗೆ ಹೊರಗೆ ಬಂತಂತೆ. ನಿಧಾನಕ್ಕೆ ತಿರುಗ್ತಾ ತನ್ನ ಗುಂಪನ್ನು ಹುಡುಕಿ ಸೇರ್ಕೊಂಡ್ತಂತೆ.

--ಇದು ಪೂರ್ಣಕಥೆ. ಇಂತಹ ಹಲವಾರು ಕಥೆಗಳು ನಮ್ಮನ್ನೆಲ್ಲಾ ಅಂದು ಸ್ವಲ್ಪವಾದರೂ ಸಂಸ್ಕಾರವಂತರನ್ನಾಗಿ, ಸುಸ್ವಭಾವ ಉಳ್ಳವರನ್ನಾಗಿ ಮಾಡಲು ಕಾರಣವಾಯ್ತು ಎಂಬುದು ಇಂದಿನ ನನ್ನೋರಗೆಯ ಹಲವರ ಅಭಿಪ್ರಾಯ. ಇಂದು ಕೂಡುಕುಟುಂಬಗಳೂ ಇಲ್ಲ, ಕಥೆಹೇಳುವ ಹಿರಿಯರೂ ಇಲ್ಲ. ಎಲ್ಲರಿಗೂ ಟಿವಿಯೇ ಪರದೈವ! ಇರೋ ಸ್ವಲ್ಪ ಸಮಯವನ್ನು ಅದರ ಮುಂದೇ ಕಳೆಯುವ ಬಯಕೆ. ಇನ್ನು ಮಕ್ಕಳು ಹೇಗೆ ಸಂಸ್ಕಾರವಂತರಾಗಬೇಕು? ಮುಂದಿನೆ ಪೀಳಿಗೆ ಯಾವ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯ? ಭಗವದ್ಗೀತೆಯಂತಹ ಒಳಿತನ್ನು ಮತ್ತು ಸರಳ ಸುಖ ಜೀವನ ಸೂತ್ರಗಳನ್ನು ಬೋಧಿಸುವ ಗ್ರಂಥಗಳನ್ನು ಮಕ್ಕಳಿಗೆ ಬೋಧಿಸಲು ತಿಳಿಸಿದರೆ ನಾಗರಿಕತೆ ಅತಿ ಹೆಚ್ಚಾದ ನಮ್ಮಲ್ಲೇ ಕೆಲವರಿಗೆ ಅದು ಧರ್ಮಪ್ರಚಾರವಾಗಿ ಕಾಣುತ್ತದೆ. ಕಾಮಾಲೆಯ ಕಣ್ಣಿಗೆ ಲೋಕವೆಲ್ಲಾ ಹಳದಿ ಎಂಬಂತೇ ಕಂಡಿದ್ದೆಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಂಡರೆ ವಿಷಮಪರಿಸ್ಥಿತಿ ಉದ್ಭವಿಸುತ್ತದೆ. ಒಳ್ಳೆಯದು ಯಾವ ಮತದ ಮೂಲದಿಂದ ಬಂದರೇನು ಅದನ್ನು ಸ್ವೀಕರಿಸೋಣ. ಮತಗಳೆಲ್ಲದರ ಕುರುಡು ನಂಬಿಕೆಗಳನ್ನು ಬಿಟ್ಟುಬಿಡೋಣ ಅಲ್ಲವೇ ?

ಸತ್ಯವನ್ನು ಹೇಳುವುದಾದರೆ ಭಗವದ್ಗೀತೆಯ ಆಂಗ್ಲ ಅನುವಾದವನ್ನೂ, ಅದರ ವ್ಯಾಖ್ಯಾನಗಳನ್ನೂ ಇಡೀ ವಿಶ್ವದ ಎಲ್ಲೆಡೆಯ ಜನ ಒಪ್ಪುತ್ತಾರೆ; ಆದರೂ ಹೊರಗಿನಿಂದ ತಾವು ಅದನ್ನು ಅಳವಡಿಸಿಕೊಂಡಿದ್ದನ್ನು ಹೇಳುವುದಿಲ್ಲ, ತೋರಗೊಡುವುದಿಲ್ಲ. ಎಲ್ಲೋ ಒಬ್ಬಿಬ್ಬರು ಒಬಾಮಾ ಥರದವರು ಹೊರಗಿನಿಂದಲೂ ಒಪ್ಪುತ್ತಾರೆ. ಮನುಷ್ಯ ಹುಟ್ಟುವುದು ಸಾಯುವುದು ನಡೆದೇ ಇರುತ್ತದೆ. ತೀರಾ ಆಧ್ಯಾತ್ಮಿಕವಾಗಿ ನೋಡುವುದಾದದರೆ ಯಾರೂ ಯಾರಿಗೂ ಏನೂ ಅಲ್ಲ ! ಯಾವ ಸಂಬಂಧವೂ ಇಲ್ಲ. ಆದರೂ ಲೌಕಿಕವಾಗಿ ಬದುಕಿರುವವರೆಗೆ ಇಲ್ಲಿರುವ ಸುಖವನ್ನು ಅನುಕೂಲತೆಗಳನ್ನು ಪಡೆಯುವುದು ಜನಸಾಮಾನ್ಯರ ಇಚ್ಛೆಯಾಗಿರುತ್ತದೆ. ವೈಜ್ಞಾನಿಕವಾಗಿ ಇಷ್ಟೆಲ್ಲಾ ಮುಂದುವರಿದ ವಿಶ್ವದ ಜನತೆ ವಿಶ್ವಮಾನವ ತತ್ವವನ್ನು ಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿದೆ!

ಹೀಗೆ ನಾವೊಮ್ಮೆ ಯೋಚಿಸೋಣ. ನಮಗೆಲ್ಲಾ ತಿಳಿದಿರುವಂತೇ ವೈದ್ಯಕೀಯ ಚಿಕಿತ್ಸೆಗಳಿಗೆ ಪ್ರಯೋಗಶಾಲೆ, ಪರಿಕರಗಳು, ಯಂತ್ರಗಳು ಬೇಕು. ಹೊಟ್ಟೆಯೊಳಗಡೆ ಕರುಳಿನಲ್ಲಿ ಏನಾಗುತ್ತಿದೆ ಎಂದು ನೋಡುವುದೇ ಅಲೋಪಥಿ ಚಿಕಿತ್ಸೆಯಲ್ಲ, ಅದು ಆಯುರ್ವೇದವೂ ಅಲ್ಲ, ಹೋಮಿಯೋಪಥಿಯೂ ಅಲ್ಲ. ಏನಾಗಿದೆ ಎಂಬುದನ್ನು ವೈಜ್ಞಾನಿಕ ಉಪಕರಣಗಳ ಮೂಲಕ ತಿಳಿದುಕೊಳ್ಳುವುದು ಆ ಹಂತ. ನಂತರದ ಉಪಚಾರ ಪ್ರಕ್ರಿಯೆಮಾತ್ರ ಆ ಯಾ ಚಿಕಿತ್ಸಾ ಕ್ರಮಗಳಿಗೆ ಬದ್ಧವಾಗಿದ್ದು. ಅದೇ ರೀತಿ ಹಿಂದೂ ಧರ್ಮದಲ್ಲಿ ಬಳಕೆಯಾದ ಭಗವದ್ಗೀತೆ ಕೆಲವು ವೈಜ್ಞಾನಿಕ ಉಪಕರಣಗಳು ಮತ್ತು ಪ್ರಯೋಗಾಲಯವನ್ನು ಬಿಂಬಿಸಿದರೆ ಹೋಮ/ಹವನ/ಪೂಜೆ/ಪುನಸ್ಕಾರಗಳು ಹಿಂದೂ ಮತಕ್ಕಷ್ಟೇ ಮೀಸಲಾದ ಕೈಂಕರ್ಯಗಳಾಗಿರುತ್ತವೆ. ಹೀಗಾಗಿ ಭಗವದ್ಗೀತೆ ಎಂಬಮಾತ್ರಕ್ಕೆ ಜಗತ್ತಿಗೆ ಯಾವನೋ ಮಹಾಜ್ಞಾನಿ ಒದಗಿಸಿಕೊಟ್ಟ ಈ ಮಹಾಯಂತ್ರದ ಪ್ರಯೋಗ ಪರಿವೀಕ್ಷಣಾ ಪಟ್ಟಿ ಸಿಗದೇ ಹೋದರೆ ಅದು ಮನುಕುಲಕ್ಕೆ ನಾವೆಸಗುವ ಅಪಚಾರ ಎಂದರೆ ತಪ್ಪಾಗುವುದಿಲ್ಲ.

ನಿನ್ನೆ ನಾನು ಒಂದು ಹರಟೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದ ಕಾರ್ಯಕ್ರಮ. ಹರಟೆಯ ವಿಷಯ ಹೀಗಿತ್ತು-- ಸಂಸಾರ, ಸಂಸ್ಕಾರ ಮತ್ತು ಸಮಾಚಾರ. ಅನೇಕ ವಿದ್ವಾಂಸರು ವೇದಿಕೆಯ ಮೇಲೂ ಕೆಳಗೂ ಇದ್ದರು. ಅದೊಂದು ಸಾಮಾಜಿಕ ಕಾರ್ಯವಾಗಿದ್ದರಿಂದ ಎಲ್ಲಾ ಮತಗಳವರೂ ಅಲ್ಲಿದ್ದರು. ಸಂಸಾರದ ಸರಿಗಮವನ್ನು ನಿಭಾಯಿಸುವ ಕಲೆ, ಆಧುನಿಕ ಜೀವನದಲ್ಲಿ ಮಕ್ಕಳಿಗೆ ಯಾವ ರೀತಿಯಲ್ಲಿ ಸಂಸ್ಕಾರ ಕೊಡಬೇಕು ಹೀಗೆಲ್ಲಾ ಲೋಕಾಭಿರಾಮವಾಗಿ ನಾಕುಜನ ಕಲೆತು ಮಾತನಾಡುವ ಕ್ರಿಯೆ ಒಂದು ರೀತಿಯ ಹರಟೆ. ಅಲ್ಲಿ ಮುಕ್ತವಾಗಿ ಯಾರೂ ಏನನ್ನೂ ಸಂವಹಿಸಬಹುದಿತ್ತು. ಆಗ ವ್ಯಕ್ತವಾಗಿದ್ದೇ ಮನೆಯಲ್ಲಿ ಹಿರಿಯರ, ಅಜ್ಜ-ಅಜ್ಜಿಯರ ಕೊರತೆ ಕಾಣುವುದರಿಂದಲೂ ಮತ್ತು ಅಪ್ಪ-ಅಮ್ಮ ಇಬ್ಬರೂ ಕೆಲಸದ ನಿಮಿತ್ತ ಮಕ್ಕಳನ್ನು ದಾದಿಯರ ಕೈಗೋ ಇನ್ನಾರಕೈಗೋ ಕೊಟ್ಟು ಇಡೀ ದಿನದಲ್ಲಿ ಒಂದಾವರ್ತಿಯೂ ಮಕ್ಕಳನ್ನು ಸರಿಯಾಗಿ ಗಮನಿಸಲಾರದ್ದೇ ಹೋಗುವುದೂ ಹಲವು ನ್ಯೂನತೆಗಳಿಗೆ ಕಾರಣವಾಗುತ್ತದೆ ಎಂಬುದು.

ಪೂರಕ ನೀರು,ಗೊಬ್ಬರ, ಫಲವತ್ತಾದ ಮಣ್ಣು ಇವಿಷ್ಟಿದ್ದಲ್ಲಿ ಒಂದು ಸಸ್ಯ ಹೇಗೆ ಲೀಲಾಜಾಲವಾಗಿ ಬೆಳೆಯುವುದೋ ಹಾಗೇ ಸರಿಯಾದ ಮಾಹಿತಿ, ಪ್ರೀತಿ,ವಾತ್ಸಲ್ಯ, ಹೊತ್ತಿಗೆ ಸರಿಯಾದ ಆಹಾರ, ನಿದ್ರೆ, ವಿದ್ಯೆ ಇವುಗಳನ್ನೆಲ್ಲಾ ಒದಗಿಸಿದಾಗ ಮಾತ್ರ ಹುಟ್ಟಿದ ಮಗು ಸಮರ್ಪಕವಾಗಿ ಬೆಳೆಯುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ’ಕ್ಯಾಲ್ಶಿಯಮ್ ಡೆಫೀಶಿಯೆನ್ಸಿ’ ಅಂತಲೋ ಇನ್ನೇನೋ ಕೊರತೆ ಅಂತಲೋ ಹೇಳುವಂತೇ ಸಲ್ಲಬೇಕಾದ ಹಲವು ಉಪಚಾರಗಳಲ್ಲಿ ಯಾವುದೇ ವ್ಯತ್ಯಯವಾದರೂ ಮಗು ಅದರ ಫಲವನ್ನು ಉಣ್ಣಬೇಕಾಗುತ್ತದೆ-ಪರೋಕ್ಷ ಪಾಲಕರೂ ಅದರ ಫಲಿತ ಫಲವನ್ನು ಅನುಭವಿಸಬೇಕಾಗುತ್ತದೆ. ಎಲ್ಲವೂ ಯಾಂತ್ರಿಕವಾಗಿಯೇ ನಡೆದರೆ ನಮ್ನಮ್ಮಲ್ಲಿ ಆತ್ಮೀಯತೆ ಎಲ್ಲಿ ಬರುತ್ತದೆ ? ಈರುಳ್ಳಿಯ ಒಳಪದರದಲ್ಲಿರುವ ಪಾರದರ್ಶಕ ಸಿಪ್ಪೆಯಂತೇ ಒಂದು ಆತ್ಮಕ್ಕೂ ಇನ್ನೊಂದು ಆತ್ಮಕ್ಕೂ ಇರಬೇಕಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಕೇವಲ ಹತ್ತಿರದ ತೊಡಗಿಕೊಳ್ಳುವಿಕೆಯಿಂದ. ಇವತ್ತು ನಮ್ಮಲ್ಲಿ ಅಪ್ಪ-ಅಮ್ಮ [ ಬೆಟರ್ ಮಾಮ್ ಅಂಡ್ ಡ್ಯಾಡ್ !] ಮಕ್ಕಳನ್ನು ದಿನಕ್ಕೊಂದಾವರ್ತಿಯಾದರೂ ಅಪ್ಪಿಕೊಂಡು ಮುದ್ದಿಸುತ್ತಾರೆಯೇ ? ಅಥವಾ ಮಕ್ಕಳು ಪಾಲಕರನ್ನು ಹಾಗೆ ಪ್ರೀತಿಸುತ್ತಾರೆಯೇ ? -ಕೇಳಿಕೊಳ್ಳಬೇಕಾಗಿದೆ!

ಮಕ್ಕಳೇ ಇರುವ ಸಭೆಯಲ್ಲಿ ಸುಮ್ನೇ ಒಬ್ಬೊಬ್ಬರಿಗೂ ಪ್ರತ್ಯೇಕ ಕಾಗದ ಕೊಟ್ಟು ಹೆಸರು, ವಿಳಾಸ [ಐಡೆಂಟಿಟಿ] ಬರೆಯದೇ ನಿಮ್ಮಪ್ಪ ಅಮ್ಮನ ಬಗ್ಗೆ ಏನಾದರೂ ದೂರುಗಳಿದ್ದರೆ ದಾಖಲಿಸಿ ಎಂದರೆ ಪ್ರತೀ ಮಗುವೂ ಕೊಟ್ಟ ಸಮಯವನ್ನೂ ಮೀರಿ ಬರೆಯುತ್ತಿರುತ್ತದೆ ಮತ್ತು ಮತ್ತೊಂದು ಖಾಲೀ ಹಾಳೆಗೆ ಬೇಡಿಕೆ ಇಡುತ್ತದೆ! ಅಂದಮೇಲೆ ಪಾಲಕರ-ಮಕ್ಕಳ ನಡುವೆ ಹೇಳಿಕೊಳ್ಳಲಾಗದ ದುಗುಡಗಳು ಇರುತ್ತವೆ ಎಂದಾಯಿತಲ್ಲ. ಅಷ್ಟೆಲ್ಲಾ ದುಗುಡಗಳನ್ನು ಮಡುಗಟ್ಟಿಸಿಕೊಂಡೇ ಬೆಳೆವ ಮಗುವಿಗೆ ಸಹಜವಾಗಿ ಪ್ರಾಪ್ತವಯಸ್ಸು ಬಂದಮೇಲೆ ಪಾಲಕರ ಮೇಲೆ ಪ್ರೀತಿ-ಮಮತ್ಕಾರ ಇರಲೇಬೇಕೆಂದೇನೂ ಇಲ್ಲ. ಅಪವಾದಕ್ಕೆ ಕೆಲವರಿಗೆ ಇರಬಹುದು. ಬಹುತೇಕರು ವಯಸ್ಸಾದ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ಬಿಡುವವರೇ ಆಗುತ್ತಾರೆ !

ಅರ್ಧ ಶತಮಾನದ ಹಿಂದಿನವರೆಗೂ ನಮ್ಮ ಕನ್ನಡದ ಮನೆಗಳಲ್ಲಿ ಕೆಲವು ಶಿಷ್ಟಾಚಾರಗಳಿದ್ದವು. ಬೆಳಿಗ್ಗೆ ಹೀಗೀಗೆ, ಮಧ್ಯಾಹ್ನ ಹೀಗೀಗೆ, ಸಾಯಂಕಾಲ ಹೀಗೀಗೆ ಎಂದೆಲ್ಲಾ ಒಂದು ನಿಯಮಿತ ಜೀವನ ಕ್ರಮ ಅಳವಡಿಕೆಯಾಗಿತ್ತು. ಅಲ್ಲಿ ’ದೇವರ ಹೆಸರಿ’ನಲ್ಲಿ ಆ ಭಯದಲ್ಲಿ ಹಲವು ವೈಜ್ಞಾನಿಕ ಶುದ್ಧಾಚರಣೆಗಳು ನಡೆಸಲ್ಪಡುತ್ತಿದ್ದವು. ಮಕ್ಕಳಿಗೆ ಸಾಯಂಕಾಲವಾದರೆ ಕೈಕಾಲು ಮುಖತೊಳೆದು ದೇವರಿಗೆ ದೀಪ ಮುಡಿಸಿ, ಅಜ್ಜಿಯೋ ಅಜ್ಜನೋ ಇನ್ಯಾರೋ ಹಿರಿಯರ ಜೊತೆ ನೆಲದಮೇಲೆ ಕುಳಿತು ಕೋಷ್ಟಕಗಳು, ಮಗ್ಗಿ, ಸುಭಾಷಿತಗಳು, ಶ್ಲೋಕಗಳೇ ಆದಿಯಾಗಿ ಹಲವಾರು ಮಾಹಿತಿಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ತಿನ್ನುವುದಕ್ಕಾಗಿ ಬದುಕುವುದೋ ಬದುಕುವುದಕ್ಕಾಗಿ ತಿನ್ನುವುದೋ ಎಂಬುದರ ಅರ್ಥವನ್ನು ಹಿರಿಯರು ಬಿಡಿಸಿ ಹೇಳುತ್ತಿದ್ದರು. ಎಂತಹ ಆಹಾರ ಹೇಗೆ ಯಾವಾಗ ಎಲ್ಲಿ ಯಾವರೀತಿ ಸ್ವೀಕರಿಸಬೇಕು ಎಂಬುದನ್ನೂ ಕೂಡ ಕಲಿಸಿಕೊಡುತ್ತಿದ್ದರು. ನಶಿಸಿಹೋದ ರಾಜವಂಶದಂತೇ ಇಂದು ಅಂತಹ ಅಪ್ರತಿಮ ಮೇಧಾವಿ ಹಿರಿಯರೂ, ಪಂಡಿತರೂ ನಮ್ಮೊಡನೆ ಸಿಗುತ್ತಿಲ್ಲ, ಎಲ್ಲವೂ ಕನಸಲ್ಲಿ ಕಂಡ ದೃಶ್ಯಗಳಂತೇ ಕಾಣುತ್ತವೆ; ಕನ್ನಡಿಯಲ್ಲಿನ ಗಂಟಾಗಿ ಪರಿಣಮಿಸಿವೆ.

ಸಮಾಜದಲ್ಲಿ ಸ್ವೇಚ್ಛಾಚಾರ, ಸ್ವೈರವರ್ತನೆ ಜಾಸ್ತಿಯಾದಾಗ, ಗುರು-ಹಿರಿಯ ಮಾರ್ಗದರ್ಶಕರು ಇಲ್ಲದೇ ಇರುವಾಗ, ಯಾವುದೇ ಕಟ್ಟುಪಾಡುಗಳಾಗಲೀ ದೈವಭಯವಾಗಲೀ ಇಲ್ಲದೇ ಹೋದಾಗ ನಡೆಯಬಾರದ್ದು ನಡೆಯುತ್ತದೆ, ಘಟಿಸಬಾರದ್ದು ಘಟಿಸುತ್ತದೆ. ಅದರ ಫಲವೇ ಏನೋ ಎಂಬಂತೇ ನಾವಿಂದು ಅತ್ಯಾಧುನಿಕ ಲೈಫ್ ಸ್ಟೈಲ್ ಎಂದುಕೊಳ್ಳುತ್ತಾ ಲಿವ್-ಇನ್ ರಿಲೇಶನ್‍ಶಿಪ್, ಗಂಡನಿಲ್ಲದೇ ಮಗುಪಡೆಯುವ ಕ್ರಿಯೆ ಇನ್ನೂ ಮುಂತಾದ ಹಲವು ತೆರನಾದ ಬದುಕನ್ನು ಕಾಣುತ್ತಿದ್ದೇವೆ. ಒಬ್ಬ ಹುಡುಗನೋ ಹುಡುಗಿಯೋ ತನ್ನನ್ನು ಇನ್ನೊಬ್ಬರೊಂದಿಗೆ ಶಾರೀರಿಕ ಸಂಬಂಧದಲ್ಲಿ ಸಂಪರ್ಕಗಳಲ್ಲಿ ತೊಡಗಿಸಿಕೊಳ್ಳುವಾಗ ಅಲ್ಲಿ ಕೇವಲ ’ ಆ ಯಂತ್ರ ’ ಮಾತ್ರ ಕೆಲಸಮಾಡುವುದೇ ? ಯಾವುದೇ ಭಾವನೆಗಳು ಇಲ್ಲದೇ ಹೋದರೆ ’ ಆ ಕೆಲಸಕ್ಕೆ ಸಿಗಬಹುದಾದ ಯಂತ್ರಗಳ’ನ್ನೇ ಉಪಯೋಗಿಸಬಹುದಿತ್ತಲ್ಲಾ! ಒಬ್ಬ ಹುಡುಗ ಯಾ ಹುಡುಗಿ ಹಲವಾರು ವ್ಯಕ್ತಿಗಳೊಡನೆ ಆ ರೀತಿಯ ಸಂಬಂಧ ಇಟ್ಟುಕೊಳ್ಳಬಹುದೇ ? ಅದರಿಂದ ತೊಂದರೆಯೇನೂ ಇಲ್ಲವೇ? ಮುಂದೆ ಪ್ರಾಯ ಕಳೆದಮೇಲೆ ಮುದುಕಾದಾಗ ಮಕ್ಕಳೂ ಇರದಿದ್ದರೆ ಆಗ ಯಾವ ಲಿವ್-ಇನ್ ಸೌಲಭ್ಯ ಅವರಿಗೆ ದೊರೆಯಬಹುದು? ಎಲ್ಲರೂ ಚಿಂತಿಸಬೇಕಾದ ವಿಷಯ ಎಂದುಕೊಂಡಿದ್ದೇನೆ.

ಹಾದರಕ್ಕೆ ಹುಟ್ಟುವ ಮಕ್ಕಳು ಹಾದಿಯಲ್ಲೇ ಬಿಸುಡಲ್ಪಡುವ ಹಗಲುರಹಸ್ಯ ಪಾಪದ ಆ ಶಿಶುಗಳ ಮಾರಣಹೋಮ ನೋಡಿದರೆ ನಿಜಕ್ಕೂ ನಾಗರಿಕ ಸಮಾಜ ಎಷ್ಟು ಕ್ರೂರಿ ಎನಿಸುತ್ತದೆ. ಬೇಡದ ಮಗುವನ್ನು ಎಲ್ಲೆಲ್ಲೋ ಯಾರಿಗೋ ಸಿಗುವಂತೇ ಕಾಣಿಸಿ ಬಿಟ್ಟು ಕಣ್ಮರೆಯಾಗುವುದೂ ಕಂಡುಬರುತ್ತದೆ. ಇನ್ನು ಕೆಲವರು ನೇರವಾಗಿ ಬೇನಾಮಿ ಹೆಸರಿನಲ್ಲಿ ಅನಾಥಾಶ್ರಮಕ್ಕೆ ಬಿಟ್ಟುಬರುವುದು ತಿಳಿದುಬಂದಿದೆ. ನಾಳೆ ಆ ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯಿಂದ ವಂಚಿಸಿದ ಸಾಮಾಜಿಕ ಪಾಪ ಆ ಹಾದರದ ಪಾಲಕರದಾಗಲಿಕ್ಕಿಲ್ಲವೇ? ಕಾಲೇಜಿಗೆ ಹೋಗುವ ಹುಡುಗನಿಗೆ ಏಕಾಂತದಲ್ಲಿ ಮಜಾ ಉಡಾಯಿಸಲು ’ಅವಳು’ ಬೇಕು ಆದರೆ ತಾನು ಮದುವೆಯಾಗುವಾಗ ತನಗೆ ’ಕನ್ಯಾಪೊರೆಹರಿಯದ ಕನ್ಯೆಯೇ ಬೇಕು’ ಎಂಬುದು ಎಷ್ಟು ಧೂರ್ತತನ ಅಲ್ಲವೇ? ಪಾಲಕರ ಕಣ್ತಪ್ಪಿಸಿ ಪಾರ್ಕಿನಲ್ಲೋ ಸಿನಿಮಾ ಟಾಕೀಸಿನಲ್ಲೋ ಮತ್ತೆಲ್ಲೋ ಕುಳಿತು ಚಕ್ಕಂದವಾಡುವ ಹುಡುಗಿಗೆ ಎಲ್ಲಾಮುಗಿದು ಮದುವೆಯಾಗುವಾಗ ’ಸರಿಯಿರುವ ಗಂಡು’ ಬೇಕು; ಸರಿಯಿರುವ ಗಂಡು ಎಲ್ಲಾ ಆಟ ಮುಗಿಸಿನಿಂತ ಹುಡುಗಿಗೆ ಸಿಗಲು ಏನವರಪ್ನಮನೆ ಆಸ್ತಿಯೇ ? ಅಂಥಾ ಜನ ಮದುವೆಯಾದಮೇಲೂ ಮೊದಮೊದಲು ಕೀಲಿ ತಿರುಗಿಸಿದ/ತಿರುಗಿಸಿಕೊಂಡ ಹಳೇ ಕೊಂಡಿಗಳ ನೆನಪಾಗಿ ಮತ್ತೆ ಅವರ ಸಂಪರ್ಕವನ್ನು ಪಡೆಯುವ ಕಳ್ಳಮಾರ್ಗವನ್ನು ಹಿಡಿಯುದಿಲ್ಲವೇ?

ಇದನ್ನೆಲ್ಲಾ ತಿಳಿದೇ ನಮ್ಮ ಪೂರ್ವಜರು ಭಾರತೀಯ ಸಂಸ್ಕಾರವನ್ನು ನಮಗೆ ಕೊಟ್ಟರು ಎನ್ನುವುದಕ್ಕಿಂತ ಅನುಗ್ರಹಿಸಿದರು ಎನ್ನುವುದು ಸರಿಯೆನಿಸುತ್ತದೆ. ರಾಮಾಯಣ ಮಹಾಭಾರತಗಳೆಲ್ಲಾ ಕೇವಲ ಪುಸ್ತಕದ ಕಥೆಗಳೆಂದೂ ಅವು ನಡೆಯಲೇ ಇಲ್ಲಾ ಎಂದೂ ವಾದಿಸುವ ಅರ್ತಂಡ ವಿಜ್ಜಾನಿಗಳೂ ಸಮಾಜದ ದಿಕ್ಕುತಪ್ಪಿಸುವಲ್ಲಿ ಮುಂದಿದ್ದಾರೆ. ನೀವು ಹಿಂದೂ ಮುಸ್ಲಿಮ್ ಕ್ರೈಸ್ತ ಬೌದ್ಧ, ಜೈನ ಯಾವುದೇ ಮತದವರಾಗಿರಲಿ ಪ್ರಾಥಮಿಕವಾಗಿ ಜೀವನದ ಸ್ವಾಸ್ಥ್ಯಸಂಹಿತೆಯನ್ನು ನೋಡಿ. ಮಾನವ ಜೀವನಕ್ಕೆ ಬೇಕಾಗುವ ಅಮೂಲ್ಯ ಆದರ್ಶಗಳು ಕೇವಲ ಭಗದ್ಗೀತೆಯಲ್ಲಿ ಹೇಳಲ್ಪಟ್ಟಿವೆ ಎಂಬುದನ್ನು ಎದೆತಟ್ಟಿಹೇಳುತ್ತಿದ್ದೇನೆ. ಅದು ಭಗವಂತ ಹೇಳಿದ್ದೋ ಇನ್ಯಾರೋ ಹೇಳಿದ್ದೋ ಆಗಿರಲಿ, ಪರವಾಗಿಲ್ಲ; ಆದರೆ ಜಗತ್ತಿನಲ್ಲಿ ಅಂತಹುದೇ ಮತ್ತೊಂದು ಮ್ಯಾನೇಜ್‍ಮೆಂಟ್ ಬೋಧಿಸುವ ಗ್ರಂಥದ ಅಸ್ಥಿತ್ವ ಇಲ್ಲ! ಜಗತ್ತಿಗೆ ಅದನ್ನು ನೀಡಿದಾತ ಹೇಳುತ್ತಾನೆ --ನೀವು ನಿಮ್ಮ ನಿಮ್ಮ ಧರ್ಮದಲ್ಲೇ, ನಿಮ್ಮ ನಿಮ್ಮ ವೃತ್ತಿಯಲ್ಲೇ ಇದ್ದುಕೊಂಡು ಭಗವಂತನನ್ನು ಕಾಣಲು ಸಾಧ್ಯವಿದೆ--ಎಂದು. ಮಾಡುವ ಕೆಲಸಗಳನ್ನು ಹೇಗೆ ಮಾಡಬೇಕು, ಕೈಸೋತಾಗ ಹೇಗೆ ಧೃತಿಗೆಡಬಾರದು ಎಂಬಿತ್ಯಾದಿ ಸುಖೀ ಸಮಾಜದ ಸುಖಬೋಧೆಗಳು ಕೇವಲ 'ಮತಪ್ರಚಾರ'ವೆಂದು ರಾಜಕೀಯದವರಿಂದ ಪರಿಗಣಿಸಲ್ಪಟ್ಟಿರುವುದರಿಂದಲೇ ಇಂದು ಭಾರತದ ಜನರ ಜನನಾಯಕರ ಗುಣಗಳು ಈ ರೀತಿ ಅವನತಿಯ ಹಾದಿ ಹಿಡಿಯುತ್ತಿವೆ.

ಯಾಕೆ ಹೀಗೆಲ್ಲಾ ಆಗುತ್ತಿದೆ? ಯಾರು ಇದನ್ನು ಹಾಳುಮಾಡಿದರು? ಯಾರು ಇದನ್ನು ಸರಿಪಡಿಸುವವರು ಎಂದು ಒಮ್ಮೆ ಆಲೋಚಿಸಿ. ಪಾಶ್ಚಾತ್ಯರು ಎಲ್ಲಾ ಸೌಲಭ್ಯಗಳನ್ನೂ ಶ್ರೀಮಂತಿಕೆಯ ಸುಪ್ಪತ್ತಿಗೆಯನ್ನೂ ಅನುಭವಿಸಿ ಅಲ್ಲೆಲ್ಲೂ ’ಶಾಂತಿ’ ಎಂಬುದು ಸಿಗದೇ ಹುಡುಗಾಟ ಬಿಟ್ಟು ’ಶಾಂತಿ’ಗಾಗಿ ಹುಡುಕಾಟ ನಡೆಸಿ ಭಾರತಕ್ಕೆ ಬರುತ್ತಾರೆ. ಯಾರೋ ಒಬ್ಬಾಕೆ ಶ್ರೀ ಸಾಯಿಬಾಬಾರಿಗೆ ಐನೂರು ಕೋಟಿ ರೂಪಾಯಿಗಳ ಚೆಕ್ ಬರೆದ ಕಥೆಯನ್ನು ಹಿಂದೊಮ್ಮೆ ಹೇಳಿದ್ದೆ. ಇವತ್ತು ನೀವು ಸುದ್ದಿ ಮಾಧ್ಯಮಗಳಲ್ಲಿ ’ಎಲ್ಲಾ ಇದ್ದರೂ ಸಾಯಿಬಾಬಾರವರು ಏನನ್ನೂ ಬಳಸುತ್ತಿರಲಿಲ್ಲ’ ಎಂಬುದನ್ನು ಓದುತ್ತಿದ್ದೀರಿ. ತನ್ನ ದರ್ಶನಕ್ಕೆ, ತನ್ನ ಹತ್ತಿರಕ್ಕೆ ಬರುವ ಭಕ್ತರಿಗೆ ತನ್ನ ಭೌತಿಕ ಕಾಯದ ಬೆವರು, ಎಂಜಲು ಇತ್ಯಾದಿ ಯಾವುದೇ ವಾಸನೆಯು ತಲುಪಬಾರದೆಂಬ ಕಾಳಜಿಯಿಂದ ಅತ್ಯುತ್ಕೃಷ್ಟ ಸುಗಂಧ ದ್ರವ್ಯಗಳನ್ನು ಅವರು ಬಳಸುತ್ತಿದ್ದರು-ಇದನ್ನು ಕೆಲವು ಮಠಾಧಿಪತಿಗಳೂ ಬಳಸುತ್ತಾರೆ ; ಮನುಜ ಸಹಜ-ತಪ್ಪೇನಿದೆ ?

’ಶಾಂತಿ’ ಎಂಬುದು ಕೊಳ್ಳುವ ಆಸ್ತಿಯಲ್ಲ, ಅದು ನಮ್ಮೊಳಗೇ ಉದ್ಭವವಾಗುವ ಒಂದು ಮನೋದೈಹಿಕ ಸ್ಥಿತಿ ಅಲ್ಲವೇ ? ಕುರುಬರ ಕಾಳ[ಕಾಳಿದಾಸ]ನಂತೇ ಮರದ ಕೊಂಬೆಯಮೇಲೆ ನಿಂತು ಬುಡವನ್ನು ಕಡಿದರೆ ಏನಾಗಬಹುದು ? ಸಮಾಜದ ಸ್ವಾಸ್ಥ್ಯ ಹದಗೆಟ್ಟಾಗ ಅದರಮೇಲೇ ನಿಂತ ನಮ್ಮ ಸ್ಥಿತಿ ಏನಾಗಬಹುದು? ಯೋಚಿಸುವ ಕಾಲ ಬಂದುಬಿಟ್ಟಿದೆ. ರಸ್ತೆಯಲ್ಲಿ ಓಡಾಡುವಾಗ ಮುಸುಕುಹಾಕಿಕೊಂಡು ಹುಡುಗರನ್ನು ಅಪ್ಪಿಹಿಡಿದು ಓಡಾಡುವ ಹುಡುಗಿಯರನ್ನು ಕಂಡಾಗ ಯಾರೂ ಪ್ರಶ್ನಿಸುವ ಅವಕಾಶವಿಲ್ಲ; ಹಾಗೇನಾದರೂ ಮಾಡಿದರೆ ಮಾಡಿದವನಿಗೆ ಕಠಿಣ ಸಜೆಯಾಗಬಹುದು! ಹೆಣ್ಣುಮಕ್ಕಳನ್ನು ಹೆತ್ತ ಪಾಲಕರೇ ತಮ್ಮ ಅಳಿಯನಾಗುವ ಹುಡುಗನಿಗೆ ಅಪ್ಪ-ಅಮ್ಮ ಸತ್ತಿರಬೇಕು ಅಥವಾ ಬದುಕಿದ್ದರೆ ಜೊತೆಗಿರಬಾರದು ಎಂದು ನಿರ್ಧರಿಸುವುದು, ಅಕ್ಕ-ತಂಗಿ-ಅಣ್ಣ-ತಮ್ಮ ಇವರುಗಳು ಇದ್ದರೆ ಪದೇ ಪದೇ ಅವರು ಬಂದುಹೋಗಿ ಮಾಡಬಾರದು ಎಂಬಿತ್ಯಾದಿಯೆಲ್ಲಾ ಕರಾರುಗಳನ್ನು ಮಗಳಿಗೆ ಕಲಿಸಿಕೊಡುವುದರಿಂದ ’ಅವಿಭಕ್ತ ಕುಟುಂಬ’ ವೆಂಬ ಶಬ್ದ ಇತಿಹಾಸದ ಪುಟಗಳನ್ನು ಸೇರುತ್ತಿದೆ!

ಭೂಮಿ ಯಾರಿಗೂ ಶಾಶ್ವತವಲ್ಲ. ಎಲ್ಲರೂ ಬಂದುಹೋಗುವವರೇ! ಆದರೂ ನಾವೇ ಏರಿಕೊಳ್ಳುವ ಚಲಿಸುತ್ತಿರುವ ರೈಲಿನಲ್ಲಿ ಬೋಗಿಗಳು ಗಲೀಜಾಗಿದ್ದರೆ, ತುಕ್ಕು ಹಿಡಿದು ಕೊಂಡಿ ಕಳಚಿಕೊಳ್ಳುವ ಹಂತ ತಲ್ಪಿದ್ದರೆ ಯಾರಿಗಾದರೂ ಏರಿಕೊಳ್ಳಲು ಇಷ್ಟವಾಗುವುದೇ? ನಾಟಕವೊಂದನ್ನು ಮಾಡಲು ಹೊರಟಾಗ ಪ್ರತಿಯೊಬ್ಬ ಪಾತ್ರಧಾರಿಯೂ ತನ್ನ ಪಾತ್ರವನ್ನು ಹೇಗೆ ಸಮರ್ಪಕವಾಗಿ ನಿಭಾಯಿಸಲು ಪ್ರಯತ್ನಿಸುವನೋ/ಳೋ ಹಾಗೇ ಭಗವಂತ ಕೊಟ್ಟ ಜೀವನನಾಟಕದ ಪಾತ್ರಧಾರಿಗಳಾದ ನಮಗೆ ಕೊಟ್ಟ ಪಾತ್ರವನ್ನು ನಿಭಾಯಿಸಲು ಬರುತ್ತಿಲ್ಲವಲ್ಲ! ಈ ನಾಟಕದಲ್ಲಿ ಯಾರೂ ಯಾರಿಗೂ ಸಂಬಂಧವಲ್ಲ, ಆದರೆ ನಾಟಕ ಮುಗಿಯುವವರೆಗೂ ಅಣ್ಣನೋ ಅಪ್ಪನೋ ಸ್ನೇಹಿತೆಯೋ ಗಂಡನೋ ಹೆಂಡತಿಯೋ ಮತ್ತಿನ್ಯಾರೋ ಆಗಿ ಪಾತ್ರ ನಿರ್ವಹಿಸುವ ಅನಿವಾರ್ಯತೆ ಇದೆ. ನಾಟಕ ನಡೆಯುತ್ತಿರುವಾಗಲೇ ಅದನ್ನು ಕೆಡಿಸುವ [ಬಾಂಬ್ ಅಟ್ಯಾಕ್, ಹೈಜಾಕ್, ಮತಾಂತರ ಮೊದಲಾದ] ಕೆಲಸ ಎಷ್ಟು ಸಮಂಜಸ?

ಆರ್ಷೇಯ ಋಷಿವರ್ಯರುಗಳು ತಮ್ಮ ದಿವ್ಯಜ್ಞಾನಕ್ಕೆ ಲಭಿಸಿದ ಉತ್ತಮ ಅಂಶಗಳನ್ನು ಜಗತ್ತಿನ ಎಲ್ಲರ ಒಳಿತಿಗಾಗಿ ತಮ್ಮ ಔದಾರ್ಯದಿಂದ ಹಂಚಿಹೋದರು. ವೇದಗಳು ಪುರಾಣಗಳು ಉಪನಿಷತ್ತುಗಳು ಹೀಗೇ ಹಲವಾರು ಜ್ಞಾನನಿಧಿಗಳು ನಮಗೆ ಇಂದಿಗೂ ಲಭಿಸುತ್ತಿವೆ. ಸಾವಿರ ಸುತ್ತುಗಳನ್ನು ಹಾಕಿದರೂ ಗಂಟು ಒಂದೇ ಎಂಬ ತತ್ವದಂತೇ ಅವೆಲ್ಲವೂ ಕೊನೆಗೊಮ್ಮೆ ಸಾರುವುದು : ಮನುಜಮತ-ವಿಶ್ವಪಥ ! |ವಸುಧೈವ ಕುಟುಂಬಕಮ್ | ಎನ್ನುವುದು ಹೊಸದಾಗಿ ಮತಾಂಧರ ದಾಂಧಲೆ ಆರಂಭವಾದ ಮೇಲೆ ಜೋಡಿಸಿದ ವ್ಯಾಖ್ಯೆಯಲ್ಲವಲ್ಲ! ಶ್ರೀಸೂಕ್ತ ಸಾರುತ್ತದೆ --

|| ಪ್ರಾದುರ್ಭೂತೋಸ್ಮಿರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ ||

'ಉತ್ತಮವಾದ ದೇಶದಲ್ಲಿ ಜನಿಸಿರುವ ನನ್ನ ಪ್ರಾರ್ಥನೆ : ನನ್ನ ರಾಷ್ಟ್ರಕ್ಕೆ ಕೀರ್ತಿಯನ್ನೂ ಸಮೃದ್ಧಿಯನ್ನೂ ಕೊಡು' ಎಂದು. ಯಾವನೋ ಒಬ್ಬ ವ್ಯಕ್ತಿಯೋ ಬ್ರಾಹ್ಮಣನೋ ಎಲ್ಲೋ ಒಂದುಕಡೆ ಕುಳಿತು ಗಾಯತ್ರಿಯನ್ನು ಪಠಿಸಿದರೆ ಅದರಲ್ಲಿ

’ಧೀಯೋ’

ಎಂಬ ಶಬ್ದವನ್ನು ಉಚ್ಚರಿಸುತ್ತಾನೆ-ಅದು ಸಂಸ್ಕೃತ ವ್ಯಾಕರಣದ ಪ್ರಕಾರ ಬಹುವಚನ ಸೂಚಕವಾಗಿದೆ. ಕೇವಲ ತನಗೆ ಮಾತ್ರವಲ್ಲದೇ ನಮಗೆ ಅಥವಾ ಹಲವರಿಗೆ ಎಂಬ ಅರ್ಥವನ್ನು ಕೊಡುತ್ತದೆ. ಹೀಗಿರುವಾಗ ಕಬ್ಬಿಣದ ಕಡಲೆಯೆಂದು ಭ್ರಮಿಸಿ ಓದದೇ ಹೀಗಳೆಯುವ [ದ್ರಾಕ್ಷಿತಿನ್ನಲಾರದ ನರಿಯಂತೇ] ನಮ್ಮ ಯುವಜನಾಂಗ ನಮ್ಮ ಆರ್ಷೇಯ ವಾದಗಳನ್ನೂ ಸೂತ್ರಗಳನ್ನೂ ದೂರೀಕರಿಸಿದೆ. ಕೇವಲ ಅಲ್ಪಕಾಲದಲ್ಲಿ ಸಿಗಬಹುದಾದ ಕ್ಷಣಿಕ ಸುಖವೈಭೋಗಗಳಿಗೆ ಮಾರುಹೋಗಿ ನಿಜವಾದ ಆನಂದವನ್ನೂ ಸುಖವನ್ನೂ ಕಳೆದುಕೊಳ್ಳುತ್ತಿದ್ದಾರೆ. life is short, enjoy the fullest ಎಂದು ಯಾರೋ ರಾಬರ್ಟೋ ಲೋಬೋವೋ ಅಮೇರಿಕಾದಲ್ಲಿ ಹೇಳಿದ್ದನ್ನು ಇಲ್ಲಿನ ನಮ್ಮ ಪಡ್ಡೆಗಳು ನಿತ್ಯವೂ ಪಠಿಸುತ್ತಾರೆ. ಮೊಬೈಲ್ ನಲ್ಲಿ ಎಸ್ಸೆಮ್ಮೆಸ್ಸು ಕಳಿಸುತ್ತಾರೆ ! ಇನ್ನು ನೋಡಬಾರದ ಎಸ್ಸೆಮ್ಮೆಸ್ಸುಗಳು ಎಮ್ಮೆಮ್ಮೆಸ್ಸುಗಳು ಹುಡುಗ-ಹುಡುಗಿಯರು ಕದ್ದುಮುಚ್ಚಿನೋಡುವುದೂ ಪ್ರಸರಿಸುವುದೂ ನಡೆದೇ ಇದೆ. ತಮಾಷೆಗೆ ಕೆಲವರು ಹೇಳುವುದಿದೆ- ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆಯನ್ನು ಮಾತ್ರ ಇಲ್ಲೇ ಬಿಟ್ಟುಹೋದರು-ಎಂದು, ಈಗ ಅದಕ್ಕೆ ಇನ್ನೊಂದನ್ನೂ ಸೇರಿಸಬೇಕು, ’ಆಂಗ್ಲರು ಎಲ್ಲವನ್ನೂ ಭಾರತದಿಂದ ಹೊತ್ತುಕೊಂಡು ಹೋದರು, ಆದರೆ ಅವರ ಭಾಷೆ ಮತ್ತು ಸಂಸ್ಕೃತಿಗಳ ಬೀಜಗಳನ್ನು ಮಾತ್ರ ಇಲ್ಲೇ ಬಿತ್ತುಹೋದರು ’ !


’ನಾವು ನಾವೇ ನಾವು ಅವರಲ್ಲ’ ಎಂದು ನಿನ್ನೆ ಬ್ಲಾಗಿಗ ಮಿತ್ರರೊಬ್ಬರು ಬರೆದಿದ್ದರು, ಅದು ನಿಜವೇ. ನಾವು ನಾವಾಗಿರಬೇಕೇ ಹೊರತು ನಾವು ಅವರಾಗಬಾರದು. ಖ್ಯಾತ ಬರಹಗಾರ ಯಂಡಮೂರಿ ವೀರೇಂದ್ರನಾಥ್ ತಮ್ಮ ’ಮೈಂಡ್ ಪವರ್ ’ ಎಂಬ ಹೊತ್ತಗೆಯಲ್ಲಿ ಬರೆಯುತ್ತಾರೆ [ತುಂಬಾ ಉತ್ತಮ ಪುಸ್ತಕ-ಅಂಥದ್ದನ್ನು ನೀವೆಲ್ಲಾ [ಓದಿರದವರು] ಓದಬೇಕು]-- ಪ್ರತಿಯೊಬ್ಬರ ಜೀವನವೂ ಅವರವರಿಗೆ ಮುಖ್ಯವೇ. ನೀವು ನೀವಾಗಿ ಇಷ್ಟಪಡುವ ವೃತ್ತಿಯನ್ನು ಆಯ್ದುಕೊಳ್ಳಿ ಮತ್ತು ಆ ವೃತ್ತಿಯಲ್ಲಿ ನೀವೇ ಎಲ್ಲರಿಗಿಂತಲೂ ಉತ್ತಮ ಎಂಬುದನ್ನು ನಿಮ್ಮ ಕೃತಿಯಿಂದ ತೋರಿಸಿ. ಆಗ ನಿಮ್ಮ ಜೀವನವೆಂಬ ಸಿನಿಮಾದ ಹೀರೋ ನೀವೇ ಆಗಿರುತ್ತೀರಿ--ಎಂದು. ಭಗವದ್ಗೀತೆ ’ಕರ್ಮಯೋಗ’ದಲ್ಲಿ ಇದನ್ನೇ ಹೇಳುತ್ತದಲ್ಲಾ ! ಬಹುತೇಕ ಅವರ ಆ ಪುಸ್ತಕದ ಬರಹಗಳು ಭಗವದ್ಗೀತೆಯ ಸಾರವನ್ನೇ ಒಳಗೊಂಡಿವೆ. ಜಗತ್ತಿನಲ್ಲಿಯೇ ಅತ್ಯುತ್ತಮ ಪುಸ್ತಕವೆನಿಸಬಲ್ಲ ಆ ಅಂತಹ ಪುಸ್ತಕಗಳಿಗೂ ಆಧಾರವಾಗಿ ಭಗವದ್ಗೀತೆ ನಿಲ್ಲುತ್ತದೆ, ಸಲ್ಲುತ್ತದೆ ಎಂದಾದಾಗ ನಮಗೆ ಮಾತ್ರ ಅದು ಯಾಕೆ ವರ್ಜ್ಯವೋ ತಿಳಿಯದಾಗಿದೆ.

ಓ ನನ್ನ ರಾಷ್ಟ್ರಬಂಧುಗಳೇ, ನೀವು ಯಾವುದೇ ಮತದ ಅನುಯಾಯಿಗಳಾಗಿದ್ದರೂ ಅಡ್ಡಿಯಿಲ್ಲ, ನೀವು ಹಿಂದೂಗಳಾಗಬೇಕೆಂಬ ಆಗ್ರಹವಾಗಲೀ ಬೇಡಿಕೆಯಾಗಲೀ ಇರುವುದಿಲ್ಲ. ಎಲ್ಲಾ ಪೂರ್ವಾಗ್ರಹಗಳನ್ನು ಕಿತ್ತೊಗೆದು ಒಮ್ಮೆ ಮುಕ್ತ ಮನಸ್ಸಿನಿಂದ ಗೀತಾಮೃತವನ್ನು ಪಾನಮಾಡಿ, ಅದರ ರುಚಿಯನ್ನು ಒಮ್ಮೆ ಅರಿತಿರಾದರೆ ಮತ್ತೆ ಆವಾಗ ನಿಮಗೇ ಅದರ ಮಹತ್ವದ ಅರಿವಾಗುತ್ತದೆ. ಯಾರೂ ಜೀವನದಲ್ಲಿ ಸೋಲಬಾರದು, ಜೀವನ ಕೇವಲ ನಾಟಕ, ಯಾವ ಯಾವ ಮಾರ್ಗಗಳಿಂದ ಹೇಗೆ ಹೇಗೆ ಗೆಲ್ಲಬೇಕೆಂಬ ಸುಲಭ ಸೂತ್ರಗಳನ್ನು ಲೇಖಕ ಕೊಟ್ಟಿದ್ದಾನೆ. ಲೇಖಕ ’ಶ್ರೀಕೃಷ್ಣ’ ಎನ್ನುವುದನ್ನೂ ಅದು ’ಭಗವದ್ಗೀತೆ’ ಎಂಬುದನ್ನೂ ಮುಚ್ಚಿಟ್ಟು ಅದೊಂದು ಬರೇ ಉತ್ತಮ ಪುಸ್ತಕವೆಂದು ತಿಳಿದು ಓದಿನೋಡಿ. ನನ್ನ ದೇಶವಾಸಿಗಳು ಬದುಕಿನಲ್ಲಿ ಸಕಲ ಸುಖ ಶಾಂತಿ ಸಮೃದ್ಧಿ ಓಜಸ್ಸು ತೇಜಸ್ಸು ಧೈರ್ಯ ಹೀಗೇ ಎಲ್ಲವನ್ನೂ ಪಡೆದು ತಮ್ಮ ಜೀವನ ನಾಟಕದ ಪಾತ್ರವನ್ನು ಹೀರೋ ಆಗಿ ನಿರ್ವಹಿಸಬೇಕು ಮತ್ತು ಅದನ್ನೇ ಮುಂದಿನ ನಮ್ಮ ದೇಶವಾಸಿಗಳಿಗೆ ಕಲಿಸಬೇಕೆಂಬ ಕಳಕಳಿಯಿಂದ ಇವತ್ತೀ ಲೇಖನ ಬರೆದೆ. ಜಗತ್ತಿನ ಎಲ್ಲರೂ ಸುಖದಿಂದಿರಲಿ ಎಂದು ಪ್ರಾರ್ಥಿಸಿ ಅದನ್ನೇ ಹಾರೈಸಿ ಸದ್ಯ ವಿರಮಿಸುವುದಕ್ಕೆ ತಮ್ಮಲ್ಲಿ ಅಪ್ಪಣೆ ಕೇಳುತ್ತಿದ್ದೇನೆ, ನಮಸ್ಕಾರಗಳು.

Thursday, July 21, 2011

ಭಾವಾಂತರಂಗದಲ್ಲಿ .........


ಭಾವಾಂತರಂಗದಲ್ಲಿ .........

ಕೆಲವೊಮ್ಮೆ ಮನಸ್ಸಿನಲ್ಲಿ ಉದ್ಭವವಾಗುವ ಭಾವಗಳನ್ನು ಹಿಡಿದಿಡಲು ಶಬ್ದಗಳು ಸಿಗುವುದೇ ಇಲ್ಲ. ಯಾಕೆಂದರೆ ನಾವೇನು ಹೇಳಬೇಕೆಂದಿರುವೆವೋ ಅದನ್ನು ನಮಗಿಂತ ಚೆನ್ನಾಗಿ ಇನ್ನೊಬ್ಬರು ಹೇಳಿರುವಾಗ ಅದನ್ನು ಓದುವಲ್ಲಿ, ಆಲಿಸುವಲ್ಲಿ ಇರುವ ಆನಂದ ಮತ್ತೆ ಅದನ್ನೇ ಬೇರೇ ಪದಗಳಲ್ಲಿ ಬರೆಯಲು ಹೊರಟಾಗ ಸಿಗುವುದಿಲ್ಲ. ಅದರಲ್ಲಂತೂ ಹಾಡುಗಳು ಘಮ್ಮನೆ ಹೊಮ್ಮಿ ಅರಳಿಸುವ ಆನಂದ ಮನದಲ್ಲಿ ಅಂತಹ ಭಾವಗಳ ಸ್ಫುರಣೆ ಜಾಸ್ತಿಯಾಗಿ ಯಾವುದೋ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುವಲ್ಲಿ ಯಶಸ್ಸು ಪಡೆದುಬಿಡುತ್ತವೆ!

ಆಗಾಗ ಅಲ್ಲಲ್ಲಿ ಓಡಾಡುವಾಗ ಇಂದಿನ ಫ್ರೀಕ್ವೆನ್ಸಿ ಮಾಡ್ಯುಲೇಟೆಡ್ ರೇಡಿಯೋಗಳಲ್ಲಿ, ಆಟೋ ಚಾಲಕನಲ್ಲಿ ಡ್ರಾಪ್ ತೆಗೆದುಕೊಳ್ಳುವಾಗ, ಕೂದಲು ಕತ್ತರಿಸಲು ಹೋಗಿ ಕ್ಯೂನಲ್ಲಿ ಕುಳಿತಾಗ/ಬ್ಯೂಟಿ ಪಾರ್ಲರಿನಲ್ಲಿ ಐಬ್ರೋ ಮಾಡಿಸಲು ಹೋದಾಗ, ಬಸ್ಸಿನಲ್ಲಿ ಪಕ್ಕದವನ ಮೊಬೈಲ್‍ನಲ್ಲಿ ಅಂತಹ ಹಾಡುಗಳು ಕೇಳಿದಾಗ, ದೂರದ ಯಾವುದೋ ಕಾರ್ಯಕ್ರಮದವರು ಧ್ವನಿವರ್ಧಕದಲ್ಲಿ ಹಾಕಿದ ಹಾಡು ಕೇಳಿದಾಗ [ಇವರು ಉತ್ತಮ ಹಾಡುಗಳನ್ನು ಹಾಕುವುದು ಅಪರೂಪ, ಇರಲಿ] , ಯಾರೋ ಚಿಕ್ಕಮಕ್ಕಳು ಶಾಲೆಗಳಲ್ಲಿ ಹಾಡುಗಳಿಗೆ ನೃತ್ಯರೂಪ ಕೊಟ್ಟಾಗ, ಭವ್ಯವೇದಿಕೆಗಳಲ್ಲಿ ಅತಿಥಿಗಳು ಆಗಮಿಸುವುದಕ್ಕೂ ಮೊದಲು ಸಭಿಕರ ಕಾಲಕ್ಷೇಪಕ್ಕಾಗಿ ಅಂತಹ ಹಾಡುಗಳನ್ನು ಹಾಕಿರುವಾಗ..... ಹೀಗೇ ಒಂದಲ್ಲ ಎರಡಲ್ಲ ಯಾಂತ್ರಿಕ ಜೀವನದ ಹಲವಾರು ಸಂದಿಗೊಂದಿಗಳಲ್ಲಿ ಅಲ್ಲಲ್ಲೇ ಬೈಟು ಟೀ ಕುಡಿದಂತೇ ಎರಡೆರಡು ಕೆಲಸಗಳನ್ನು ಒಟ್ಟಿಗೇ ಮಾಡುವ ಪರಿಪಾಟ ನಮ್ಮಂತಹ ಬಹುತೇಕರದು.

ಶಾಸ್ತ್ರೀಯ ಸಂಗೀತಗಳು ನಮ್ಮ ಮಾನಸಿಕ ನೋವನ್ನು ಕಳೆಯುತ್ತವೆ ಎಂಬುದು ಅಪ್ಪಟ ಸತ್ಯ ಮತ್ತು ಹಲವು ರಾಗಗಳು ಅನೇಕ ಕಾಯಿಲೆಗಳು ಬರದಂತೇ ತಡೆಯಲು ಪೂರಕ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ವಿಷಯ. ಇದನ್ನು ಪದ್ಮಪಾಣಿಯಂತಹ ಸಂಗೀತ ನಿರ್ದೇಶಕರು ಅಳವಡಿಸಿ ತೋರಿಸಿದ್ದಾರೆ. ಆದರೂ ಎಲ್ಲಾ ಸರ್ತಿನೂ ಸಂಗೀತ ಕಚೇರಿಯಲ್ಲಿ ಕೂತು ಗಂಟೆಗಟ್ಟಲೆ ಕೇಳುವ ವ್ಯವಧಾನವಾಗಲೀ ಅವಕಾಶವಾಗಲೀ ಎಲ್ಲರಿಗೂ ಸಿಗುವ ಸಂಭವ ಕಡಿಮೆ. ಇರುವ ಸಮಯದಲ್ಲೇ ಹಾಗೆ ಮನರಂಜಿಸಲು ಬೇಕಾಗಿ ಹುಟ್ಟಿಕೊಂಡ ಸಂಗೀತ ಮಾರ್ಗವೇ ’ಸುಗಮ ಸಂಗೀತ.’ ಪ್ರಾಯಶಃ ಸುಗಮ ಸಂಗೀತದ ಬಳಕೆಯಾಗದಿದ್ದರೆ ಇಂದು ನಾವು ಹಲವು ಇಂತಹ ಗೀತೆಗಳನ್ನು ಇಷ್ಟು ಸುಲಲಿತವಾಗಿ ಕೇಳಲು ಆಗುತ್ತಿರಲಿಲ್ಲವೇನೋ ! ಸುಗಮ ಸಂಗೀತವೆಂಬುದು ಕನ್ನಡಕ್ಕೆ ಸಿಕ್ಕ ವರವೆಂದರೆ ತಪ್ಪಾಗಲಾರದು.

" ನಾವೆಂದೋ ಕೇಳಬೇಕೆಂದು ಬಯಸಿದ್ದ ಆ ಹಾಡು ಇಂದು ಬಂತಲ್ಲಾ " ಎಂದು ಸಹಜವಾಗಿ ಉದ್ಗಾರ ಹೊರಡುವ ಸನ್ನಿವೇಶಗಳೂ ಇವೆ. ಕೆಲವೇ ಕೆಲವು ಸೀಡಿ [ಧ್ವನಿ ಫಲಕ] ಮಾಧ್ಯಮಗಳಲ್ಲಿ ಅವುಗಳನ್ನು ಶೇಖರಿಸಿಟ್ಟು ನಾವೇ ನಾವಾಗಿ ಹಾಕಿಕೊಂಡು ಕೇಳುವಾಗ ಸಿಗದ ಮಜಾ ಅಲ್ಲಲ್ಲಿ ಚೂರುಪಾರು ಯಾರೋ ಹಾಕಿದ ಹಾಡುಗಳನ್ನು ಕೇಳಿದಾಗ ಸಿಗುತ್ತದೆ-ಅದಕ್ಕೆ ಕಾರಣ ನಮ್ಮ ಮನದ ತುಡಿತ. ಭಾವಜೀವಿಯಾದ ಮನುಜನಿಗೆ ದುಡಿಯುವ ಹಲವಾರು ದಿನಗಳಲ್ಲಿ ಕೆಲವೊಮ್ಮೆ ’ಇವತ್ತು ಏನೂ ಮಾಡುವ ಮನಸ್ಸಿಲ್ಲಾ’ ಎಂದಾಗಿರುತ್ತದೆ ಅಥವಾ ಇನ್ಯಾವುದೋ ಕಾರಣಕ್ಕೆ ಕೆಲಸಗಳಲ್ಲಿ ಜಿಗುಪ್ಸೆ ಬಂದಿರುತ್ತದೆ. ಬದುಕಿನ ಆತಂಕ, ಬೇಸರ, ಕಷ್ಟ, ನೋವು, ಭಯ ಮುಂತಾದ ಹಲವು ಸನ್ನಿವೇಶಗಳಲ್ಲಿ ಯಾವುದೋ ಕವಿ ಬರೆದ ಇಂಪಾದ ಹಾಡೊಂದು ಕಿವಿಯಮೇಲೆ ಹಾದುಹೋದರೆ ಅದು ಕೊಡುವ ಅಲ್ಪ ತೃಪ್ತಿ ಮರೆಯಲಾಗದ್ದಾಗಿರುತ್ತದೆ.

ಬೆಳಗಿನ ಜಾವ ಬೀಳುವ ಸಿಹಿಗನಸಿನಂತೇ, ನಮಗೆ ಪ್ರಿಯರಾದ ವ್ಯಕ್ತಿಗಳು ಬಂದು ಚುಂಬಿಸಿದ ಘಳಿಗೆಯಂತೇ, ಮುದ್ದಾದ ಮಗುವೊಂದು ಅಂಬೆಗಾಲಿಡಲು ಆರಂಭಿಸಿದಾಗ ಅದರ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುವ ಅಮ್ಮನಂತೇ, ಚಿತ್ರಬರೆದ ಕಲಾಕಾರ ದೂರನಿಂತು ಅದನ್ನೇ ಮತ್ತೆ ಮತ್ತೆ ನೋಡಿ ಆನಂದಿಸುವಂತೇ, ಗಾಯಕನೊಬ್ಬ ತನ್ನ ಗಾಯನವನ್ನೇ ಮತ್ತೆ ಮತ್ತೆ ಕೇಳಿ ಇದು ಚೆನ್ನಾಗಿ ಬಂತೆಂದು ಅಂದುಕೊಳುವಂತೇ, ದೊಡ್ಡ ವಾಣಿಜ್ಯ ಸಂಸ್ಥೆಯೊಂದನ್ನು ಕಟ್ಟಿ ಅದು ಹೆಮ್ಮರವಾಗುವುದನ್ನು ಕಂಡ ಸಂಸ್ಥೆಯ ಮೂಲಪುರುಷ/ಸ್ತ್ರೀ ಯಂತೇ ಇಲ್ಲಿನ ಸಂತಸ ಅವರ್ಣನೀಯ, ಅನಿರ್ವಚನೀಯ !

ಇಂತಹ ಅನಿಸಿಕೆಗಳನ್ನು ಹೇಳಬೇಕೆಂದರೂ ಹೇಳಲು ಸಾಧ್ಯವಾಗುವುದೇ ಇಲ್ಲ ! ತಿರುಪತಿ ನೋಡಿದ ಹಲವರು ದೇವರ ವಿಗ್ರಹ ಹೇಗಿತ್ತೆಂದು ನೇರವಾಗಿ ಹೇಳಲು ತಡಕಾಡುತ್ತಾರೆ ಹೇಗೋ, ಪ್ರಿಯತಮನ ಸುಂದರ ವದನವನ್ನು ಕದ್ದು ನೋಡಿದ ಪ್ರಿಯತಮೆಗೆ ತನ್ನ ಸಖಿಯರ ಕೂಡ ಆತನ ರೂಪಲಾವಣ್ಯವನ್ನು ವಿವರಿಸಲಾಗುವುದಿಲ್ಲ ಹೇಗೋ ಹಾಗೇ ಈ ಭಾವನೆಗಳಿಗೆ ಕಟ್ಟುಹಾಕಿ ಅವುಗಳನ್ನು ಬಂಧಿಸುವುದು ಸಾಧ್ಯವಾಗುವ ಮಾತಲ್ಲ. ಹಾಗಂತ ಅವು ನಗಣ್ಯವೆನಿಸಿದರೂ ಅವುಗಳ ವ್ಯುತ್ಫತ್ತಿಯಿಂದ ಸಿಗುವ ರಂಜನೆ ಟಿಕೆಟ್ಟು ಖರೀದಿಸಿ ಕುಳಿತು ಮೂರು ಗಂಟೆಯೋ ಆರು ಗಂಟೆಯೋ ನೋಡಿದ ಮನೋರಂಜನಾ ಕಾರ್ಯಕ್ರಮಗಳಲ್ಲಿ ಸಿಗುವಂಥದ್ದಲ್ಲ!

ಭಾವುಕರಲ್ಲಿ ಕೆಲವು ಜನ ಕವಿಗಳೂ ಇರುತ್ತಾರಲ್ಲವೇ? ತಮ್ಮ ಯಾವುದೋ ದಿನಗಳ ಯಾವುದೋ ಘಳಿಗೆಗಳ ಯಾವ್ಯಾವುದೋ ಸನ್ನಿವೇಶಗಳಲ್ಲಿ ಅಲ್ಲಿ ಹುಟ್ಟಿದ ಭಾವಗಳಿಗೆ ಜೀವ ತುಂಬುವ ಕೆಲಸವನ್ನು ಅವರು ಮಾಡಿರುತ್ತಾರೆ. ನಾನು ಈ ಮೊದಲೇ ಹೇಳಿರುವಂತೇ ಕೂಸು ಹುಟ್ಟುವ ವರೆಗೆ ಅದು ಅಮ್ಮನ ಹೊಟ್ಟೆಯೊಳಗೆ ಅಮ್ಮನಿಗೆ ಮಾತ್ರ ಸಂಬಂಧಿಸಿದ್ದು ಎನ್ನುವ ಹಾಗಿರುತ್ತದೆ- ಯಾವಾಗ ಕೂಸು ಜನಿಸಿತೋ ಅದು ಅಪ್ಪನಿಗೂ ಸುತ್ತಲ ಬಂಧುಗಳಿಗೂ ಸಂಬಂಧಿಸುತ್ತದೆ ಅಲ್ಲವೇ ? ಅದೇ ರೀತಿ ಇಂತಹ ಭಾವಗಳಿಂದ ಕವಿಯ ಮನ ಬಸಿರಾಗಿ ಕವನ ಜನಿಸುವವರೆಗೆ ಅದು ಕವಿಯ ಸ್ವಸಂತೋಷದ್ದಾಗಿರುತ್ತದೆ, ಯಾವಾಗ ಕವನ ಬರೆದು ಪ್ರಕಟಿಸಲ್ಪಟ್ಟಿತೋ ಆಗ ಆ ಕವನ ಹತ್ತಾರು ಜನರಿಗೆ ತಲುಪುತ್ತದೆ-ಸಂಬಂಧ ಬೆಳೆಯುತ್ತದೆ.

ಇಂತಹ ಕೆಲವು ಕವಿಗಳು ಬರೆದ ಕೆಲವು ಗೀತೆಗಳಂತೂ ನಿಜಕ್ಕೂ ಒಂದನ್ನೊಂದು ಮೀರಿಸುವ ಪೈಪೋಟಿಗಿಳಿಯುತ್ತವೆ. ಈ ಸಾಲಿನಲ್ಲಿ ದಿ| ಅಡಿಗರು, ದಿ| ನರಸಿಂಹ ಸ್ವಾಮಿಗಳು, ಇಂದು ನಮ್ಮ ಮಧ್ಯೆ ಇರುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು, ಎಚ್.ಎಸ್.ವೆಂಕಟೇಶ್ ಮೂರ್ತಿಗಳು, ಬಿ.ಆರ್ ಲಕ್ಷ್ಮಣರಾಯರು, ಕೆ.ಜಿ. ಶಿವಪ್ಪನವರು .....ಹೀಗೇ ಕೆಲವರನ್ನು ಮಾತ್ರ ನಾನು ಹೆಸರಿಸಿದ್ದೇನೆ...ಇನ್ನೂ ಹಲವರನ್ನು ಹೆಸರಿಸಬಹುದಾಗಿದೆ. ಅನೇಕ ಕವಿಗಳು, ಗಾಯಕ/ಗಾಯಕಿಯರು ಎಲೆಮರೆಯ ಕಾಯಿಯಂತಿದ್ದು ಕಾಣದಂತೇ ತಮ್ಮ ಕಲೆಯನ್ನು ಹಳ್ಳಿಗಳ ಮಟ್ಟದಲ್ಲೋ ತಾಲೂಕು ಮಟ್ಟದಲ್ಲೋ ಪ್ರದರ್ಶಿಸಿ ಹಾಗೇ ಅಲ್ಲಿಗೇ ನಿಂತುಬಿಡುತ್ತಾರೆ ಅಥವಾ ನಿರ್ಗಮಿಸಿಬಿಡುತ್ತಾರೆ. ಸೃಷ್ಟಿಯೊಡೆಯ ಎಲ್ಲರಿಗೂ ಸಮಾನ ಅವಕಾಶ ಕೊಡುವುದಿಲ್ಲವಲ್ಲ..ಅಂತಹ ಅವಕಾಶ ವಂಚಿತರು ತಮಗೆ ಅವಕಾಶ ಕೊಡಿ ಎಂದು ಬಡಿದಾಡುವ ಮನೋವೃತ್ತಿ ಇಲ್ಲಿ ಕಂಡುಬರುವುದಿಲ್ಲ.

ಶಿವಪ್ಪನವರೂ ಚೆನ್ನಾಗಿ ಬರೆಯುತ್ತಾರೆ ಎಂಬುದು ನನಗೆ ಮೊದಲು ಲಕ್ಷ್ಯಕ್ಕೇ ಬಂದಿರಲಿಲ್ಲ. ಅದೇರೀತಿ ಗರ್ತಿಕೆರೆ ರಾಘಣ್ಣನವರು ಚೆನ್ನಾಗಿ ಹಾಡುತ್ತಾರೆ ಎಂಬುದೂ ಸಹ ತಿಳಿದಿರಲಿಲ್ಲ. ಇತ್ತೀಚೆಗೆ ಮಲ್ಲೇಶ್ವರದಲ್ಲಿ ಡಾ | ಗಣೇಶರ ಅವಧಾನ ಕಾರ್ಯಕ್ರಮದಲ್ಲಿ ಅವರು ಬಂದು ಜಾಗವಿರದಿದ್ದ ಕಾರಣ ವೇದಿಕೆಯ ಹಿಂಭಾಗ ಕುಳಿತಿದ್ದುದು ಕಂಡಿತು. ಮಧ್ಯೆ ಯಾವುದೋ ಕರೆಬಂದು ಅವರು ಎದ್ದು ಹೋಗಬೇಕಾಯಿತು-ಮಾತನಾಡಲು ಕಾದೆ ಅಂದು ಅವರು ಸಿಗಲಿಲ್ಲ. ಮತ್ತೆಂದೋ ಅವರು ಪುರಭವನದ ಪಕ್ಕ ರಸ್ತೆ ದಾಟುವಾಗ ನಾನು ಬಸ್ಸಿನೊಳಗಿದ್ದೆ-ಆಗಲಿಲ್ಲ. ಆದರೂ ಅವರನ್ನೊಮ್ಮೆ ಕಂಡು ಮಾತನಾಡುವ ಇಚ್ಛೆ ಮಾತ್ರ ಬಲವಾಗಿದೆ. ರಾಘಣ್ಣ ರಾಗವಾಗಿ ಹಾಡುವಾಗ ಬರೇ ಹಾರ್ಮೋನಿಯಂ ಮತ್ತು ತಬಲಾ ಸಾತ್ ಸಾಕು. ಅದಷ್ಟೇ ಇದ್ದರೆ ಚಂದ. ಇಂದಿನ ಕೆಲವು ಸಂಗೀತ ಕಚೇರಿಗಳಲ್ಲಿ ಹಾಡುವವರ ಸ್ವರಮಾಧುರ್ಯಕ್ಕಿಂತ ಪಕ್ಕ ವಾದ್ಯಗಳೇ ಜಾಸ್ತಿಯಾಗಿಬಿಟ್ಟಿರುತ್ತವೆ- ಹೀಗಾಗಿ ಸಂಗೀತದೊಳಗಣ ಸಾಹಿತ್ಯ ಸ್ಪಷ್ಟವಾಗಿ ಕೇಳಿಸುವುದೇ ಇಲ್ಲ. ಸಂಗೀತದ ಸಾಹಿತ್ಯವೂ ನಮ್ಮ ಕಿವಿಗೆ ತಲ್ಪಿದಾಗ ಸಿಗುವ ಪ್ರಸನ್ನ ಮನಸ್ಕ ಸ್ಥಿತಿ ಬರೇ ವಾದ್ಯಪರಿಕರಗಳಿಂದ ಸಿಗುವುದಿಲ್ಲವಲ್ಲ !

ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಎದ್ದು ಏನೋ ಕೆಲ್ಸಮಾಡುವಾಗಲೋ ಅಥವಾ ಯಾವುದೋ ಹಬ್ಬದ ಸಡಗರದ ತಯಾರಿಯಲ್ಲಿ ಬಹುಬೇಗನೇ ಎದ್ದಿರುವಾಗಲೋ ಇಂತಹ ಹಾಡುಗಳು ಉತ್ಸಾಹವನ್ನು ದ್ವಿಗುಣಗೊಳಿಸುತ್ತವೆ. ಯಾರೂ ಇಲ್ಲಾ ನೀರವ ಮೌನ ಯಾಕೋ ಬೋರು ಎಂದಾದಾಗ ಯಾರೋ ಸ್ನೇಹಿತರು ಜೊತೆಗಿದ್ದಂತೇ ಈ ಭಾವಗೀತೆಗಳು ನಮ್ಮ ಜೊತೆಯಾಗುತ್ತವೆ. ದೂರದೂರಿಗೆ ಪ್ರಯಾಣ ಹೊರಟಾಗ ದಾರಿಯುದ್ಧ ಸಾಗುವ ಸಮಯ ಪರಿಸರದ ಮಾಧುರ್ಯವನ್ನು ಅವಲೋಕಿಸುವಾಗ ಈ ಹಾಡುಗಳು ನಮ್ಮೊಡನೆ ತಂತಾನೇ ತಾಳಹಾಕುತ್ತಾ ನರ್ತಿಸುತ್ತವೆ! ಮದುವೆ, ಮುಂಜಿ ಮುಂತಾದ ಹಲವು ಸಮಾರಂಭಗಳಲ್ಲಿ ಇಂತಹ ಭಾವಗೀತೆಗಳು ತೇಲಿಬಂದರೇ ಸಂಭ್ರಮ ಕಳೆಕಟ್ಟುತ್ತದೆ. ಯಾರೋ ನಮ್ಮಂಥವರು ಹಾಡುಗಳ ಬಗ್ಗೆ ಪ್ರತ್ಯೇಕವಾಗಿ ಹೇಳಿದರೂ ಹೇಳದೆಯೇ ಇದ್ದು ಆನಂದಾನುಭೂತಿ ಪಡೆವವರೇ ಅನೇಕರಿದ್ದಾರೆ; ಅದೇ ಈ ಹಾಡುಗಳಲ್ಲಿರುವ ಆಕರ್ಷಣೆ.

ನಾನು ನನ್ನ ಅನೇಕ ಮಿತ್ರರಲ್ಲಿ ಒಂದು ಮಾತು ಹೇಳಿದ್ದಿದೆ ಏನೆಂದರೆ ಹಾಡುಗಳಿಲ್ಲದ ಸಮಾರಂಭಗಳು ಎಣ್ಣೆಕಾಣದ ಕೂದಲಿರುವ ತಲೆಯಂತೇ ಬಣಬಣ ಎಂಬುದಾಗಿ. ಇನ್ನು ಸಾಯುವಾಗ ನನ್ನಲ್ಲಿ ಯಮ ನನ್ನ ಕೊನೆಯ ಆಸೆ ಕೇಳಿದರೆ ಒಂದೋ ನಾಕುದಿನ ಗಡುವು ವಿಸ್ತರಿಸು- ಕನ್ನಡದ ಒಂದಷ್ಟು ಇಂಪಾದ ಹಾಡುಗಳನ್ನು ಕೇಳಿ ಬರುತ್ತೇನೆ ಎನ್ನುತ್ತೇನೆ ಅಥವಾ ನನ್ನ ಜೊತೆಗೇ ಹಲವು ಕನ್ನಡದ ಹಾಡುಗಳ ಸೀಡಿಗಳನ್ನೂ ಮತ್ತು ಕೇಳುವ ಉಪಕರಣಗಳನ್ನೂ ತೆಗೆದುಕೊಂಡು ಹೋಗಲು ಪರ್ಮಿಶನ್ ಕೇಳುತ್ತೇನೆ! ಯಾಕೋ ನನಗೆ ಡೌಟು : ಡ್ಯೂಟಿ ಸಮಯದಲ್ಲಿ ಅದೂ ಇದೂ ಸಬೂಬು ಹೇಳಿ ಯಜಮಾನರ ಕಣ್ತಪ್ಪಿಸಿ ಮಜಾಪಡೆಯುವ ಸಂಬಳದ ಕೆಲಸಗಾರರಂತೇ ಯಮನ ದೂತರು ಭೂಮಿಗೆ ಬಂದವರು ಕೆಲಕಾಲ ಇಲ್ಲೇ ಎಲ್ಲೋ ಠಿಕಾಣಿ ಹೂಡಿ ಅಲ್ಲಿಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ನಮ್ಮ ಕನ್ನಡದ ಭಾವಗೀತೆಗಳನ್ನು ಮನಸಾರೆ ಕೇಳಿ ಆನಂದಿಸಿ ಆಮೇಲೆ ತಡವಾಗಿದ್ದಕ್ಕೆ ಯಮನಿಗೆ ಇನ್ಯಾವುದೋ ಕಾರಣಕೊಡುತ್ತಾರೆ ಅನ್ನಿಸುತ್ತಿದೆಯಪ್ಪ ! ನಿಜಕ್ಕೂ ಸತ್ತವ್ಯಕ್ತಿಯೂ ಎದ್ದು ಕುಳಿತು ಕಿವಿನಿಮಿರಿಸಿ ಒಮ್ಮೆ ಕೇಳಲಿಷ್ಟಪಡುವ ಹಾಡುಗಳು ನಮ್ಮಲ್ಲಿವೆ! ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಈ ಕನ್ನಡ ದೇಶಮಂ !

ಈ ಹಾಡನ್ನು ಕೇಳಿ -- ಶಿವಪ್ಪ ಕೃಷ್ಣನ ಒಳಹೊಕ್ಕು ಮಾಮರದ ಎಲೆಯಲೆಯಲ್ಲೂ ರಾಧೆಯನ್ನು ಕಾಣುವ ಪರಿ ನಿಜಕ್ಕೂ ಮನದುಂಬುತ್ತದೆ. ಅಲ್ಲೆಲ್ಲೋ ಆ ರಾಧೆ ಅವಿತುಕೊಂಡೇ ಇರಬಹುದೇನೋ ಎಂಬ ಭಾವನೆ ಉಮ್ಮಳಿಸುತ್ತದೆ.



ಅಲ್ಲಲ್ಲಿ ಕೆಲವು ಸಿನಿಮಾ ಸಾಹಿತಿಗಳೂ ಒಳ್ಳೊಳ್ಳೆಯ ಗೀತೆಗಳನ್ನು ಬರೆದಿದ್ದಾರೆ. ಆದರೂ ಯಾಕೋ ಭಾವಗೀತೆಗಳು ನೀಡುವ ವಿಶಿಷ್ಟ ಸಂತೋಷವನ್ನು ಸಿನಿಮಾ ಹಾಡುಗಳು ನೀಡುವುದಿಲ್ಲ. ಭಾವಗೀತೆಗಳು ನಮ್ಮ ಬದುಕಿನ ಮಜಲುಗಳಲ್ಲೇ ಇದ್ದು ಮನೆ ಊಟದಂತೇ ಇರುತ್ತವೆ, ಸಿನಿಮಾ ಹಾಡುಗಳು ಒಂಥರಾ ಹೋಟೆಲ್ ಊಟದ ರೀತಿ ಇದ್ದು ಯಾವಕಾಲಕ್ಕೂ ಇರುವ ಸಂಭವನೀಯತೆ ಕಡಿಮೆ! ಮನ ಗುನಗುನಿಸಲು ಇಷ್ಟಪಡುವ ಭಾವಗೀತೆಗಳಲ್ಲಿ ಅಡಿಗರ ’ಇಂದು ಕೆಂದಾವರೆಯ’, ಡೀವೀಜಿಯವರ 'ನೀಮಹಾನಂದವೇ' , ಲಕ್ಷ್ಮೀನಾರಾಯಣ ಭಟ್ಟರ 'ಯಾವುದೀ ಹೊಸಸಂಚು', 'ಮಲಗೋ ಮಲಗೆನ್ನ ಮಗುವೆ', 'ಎಲ್ಲೆ ಜಾರಿತೋ ಮನವು', ಲಕ್ಷ್ಮಣರಾಯರ 'ಅಮ್ಮಾ ನಿನ್ನ ಎದೆಯಾಳದಲ್ಲಿ', ವೆಂಕಟೇಶಮೂರ್ತಿಗಳ 'ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ', ಇನ್ನು ನರಸಿಂಹ ಸ್ವಾಮಿಗಳ ಇಡೀ ಮೈಸೂರು ಮಲ್ಲಿಗೆ ಸಂಕಲನದ ಹಾಡುಗಳು, ವರಕವಿ ಬೇಂದ್ರೆಗಳ ಹಲವು ಹಾಡುಗಳು,ಕುವೆಂಪುರವರ ಮತ್ತು ಶಿವರುದ್ರಪ್ಪನವರ ಹಲವು ಹಾಡುಗಳು ನಮಗೆ ತರುವ ಆನಂದ ಅಸದಳ. ನಮ್ಮನ್ನು ಮತ್ತೆ ಮತ್ತೆ ರಂಜಿಸುವ ಎಲ್ಲಾ ಕವಿಗಳಿಗೂ ಸಾಹಿತಿಗಳಿಗೂ ನಮಿಸುತ್ತಾ [ಸಂಬಂಧಪಟ್ಟ ಕಲಾವಿದರು, ತಾಂತ್ರಿಕವರ್ಗ, ಹಿನ್ನೆಲೆವಾದ್ಯಮೇಳ, ಸಂಗೀತ ನಿರ್ದೇಶಕರು ಎಲ್ಲರಿಗೂ ನಮ್ಮನೆನಕೆಗಳು] ಇಂಪಾದ ಎರಡು ಕವನಗಳೊಂದಿಗೆ ಇಂದಿನ ಈ ’ಭಾವಾಂತರಂಗದಲ್ಲಿ .....’ ಅನಿಸಿಕೆಗಳನ್ನು ನಿಮ್ಮ ಕೈಗಿಟ್ಟು ಕೈಮುಗಿಯುತ್ತಿದ್ದೇನೆ, ನಮಸ್ಕಾರ.



Sunday, July 17, 2011

ಆರಂಭ ಮುಕ್ತಕಗಳು


ಆರಂಭ ಮುಕ್ತಕಗಳು

ಜಗದಮಿತ್ರನ ಕಗ್ಗ ಒಂದು ಆಕಸ್ಮಿಕ ದೈವೀ ಸ್ಫುರಣೆ. ಇದರಲ್ಲಿ ನನ್ನದು ಅಂಚೆಯವನ ಕೆಲಸದ ರೀತಿ. ನನ್ನೂಳಗೆ ಕುಳಿತು ಬರೆಸುವ ಪರಮಾತ್ಮ ಅರಿವಾಗಿ, ಗುರುವಾಗಿ, ನೆರೆಕೆರೆಯ ಸ್ನೇಹಿತನಂತೇ ಕಂಡ ಆ ಅದ್ಭುತ ಶಕ್ತಿಯ ಸರಳತೆ ಕೂಡ ಅನುಭವಕ್ಕೆ ನಿಲುಕಿದ ವಿಷಯ. ಹಗ್ಗದಂತೇ ಹೊಸೆಯುವ ಕಗ್ಗದ ಆರಂಭದಲ್ಲಿ ನಾ ಬಳಸಿದ ಕೆಲವು ಆರಂಭ ಮುಕ್ತಕಗಳ ಭಾಗ ಇಲ್ಲಿದೆ, ತಮ್ಮ ಆವಗಾಹನೆಗಾಗಿ-


ಹಡಗಿನಲಿ ನಾನೊಂಟಿ ಗುರುತು ಪರಿಚಯವಿರದು
ಹೊಡೆವ ಬಿರುಗಾಳಿ ಜಡಿಮಳೆಗೆ ಅಂಜುವೆನು
ನಡೆವ ಮಾರ್ಗವ ತೋರ್ವನೊಡೆಯ ಇಡಗುಂಜಿಪತಿ
ಬಿಡದೆ ನೆನೆಯುತ್ತ ನಡೆ | ಜಗದಮಿತ್ರ

ನಾಕುಮುಖದಾ ಬೊಮ್ಮ ಬಣ್ಣದರಿವೆಯ ಹರಿಯ
ಸಾಕೇತ ಸಿರಿರಾಮ ವೀಣೆ ಸರಸತಿಯ
ಸಾಕೆನುವವರೆಗು ನೆನೆ ಶಂಭು ಉಮಾಪತಿಯ
ಬೇಕವರು ಜೊತೆಯೊಳಗೆ | ಜಗದಮಿತ್ರ

ಗುರುವ್ಯಾಸ ವಾಲ್ಮೀಕಿ ಆಚಾರ್ಯ ಪೀಠಗಳ
ಕರೆದು ಹರಸಿರಿ ಎನುತ ನ್ಯಾಸಪೂರ್ವದಲಿ
ಬರೆಹ ಓದುಗಳೆಮಗೆ ಅವರಿಚ್ಛೆಯಲಿ ನಡಿಗೆ
ಅರಿವು ಗುರುವಿನ ಕರುಣೆ | ಜಗದಮಿತ್ರ

ಭಾಷೆ ಸಾವಿರವಿರಲಿ ಕೋಶ ಮತ್ತಷ್ಟಿರಲಿ
ದೇಶಗಳು ಹಲವಾರು ಜಗದ ಗುಡಿಯೊಳಗೆ
ವೇಷಭೂಷಣ ವಿವಿಧ ಹಾರ ಪದ್ಧತಿಯಿರಲು
ದೋಷ ಮಾನವ ಸಹಜ | ಜಗದಮಿತ್ರ

ನರನು ನರಕಾಸುರನು ನರವ ಹಿಂಡುತ ಬದುಕೆ
ಹರನ ಗಣಗಳ ಗುಣವ ಹೊತ್ತುಕೊಳಲೇಕೆ ?
ಶಿರಬಾಗಿ ಕರಹಿಡಿಯೆ ಬೆಳೆವುದದು ಬ್ರಾತೃತ್ವ
ವರವು ಮಾನವ ಜನುಮ | ಜಗದಮಿತ್ರ

ವಿಸ್ತರದ ಈ ಗುಡಿಯ ವಿಸ್ತರದಿ ನೀ ನಿಂತು
ಸ್ವಸ್ತಮನದಲಿ ಬಯಸು ಜಗದ ಒಳಿತುಗಳ
ಹಸ್ತಶುದ್ಧಿಯು ನಿನದು ಕೊನೆಗೊಳಿಸು ಕ್ರೌರ್ಯವನು
ಅಸ್ಥಿರವು ಜೀವನವು | ಜಗದಮಿತ್ರ

ಅವರಿವರ ನೋಡಿ ಕಲಿ ಮಾಡಿ ತಿಳಿ ಕೆಲಸಗಳ
ಬೆವರು ಹರಿಯಲಿ ನೊಸಲ ತುದಿಯಿಂದ ಧರೆಗೆ
ಸವಿಯೂಟ ಕೆನೆಮೊಸರು ನಿನ್ನ ಕೈ ಕೆಸರಾಗೆ
ಭುವಿಯು ಕರ್ಮಠರಿಂಗೆ | ಜಗದಮಿತ್ರ

ಮಗುವು ಶೈಶವದಲ್ಲಿ ಆಟಿಕೆಯ ಹಿಡಿದೆತ್ತಿ
ನಗುವುದತಿ ಸಂತಸದಿ ಬಲು ತೃಪ್ತಿಯಿಂದ
ಬಿಗುವಿದೀ ಜೀವನವು ಮಗುಬೆಳೆದು ದುಡಿಯುವೊಲು
ನಗುವಳುವು ಬದಲುವಿಕೆ | ಜಗದಮಿತ್ರ

Friday, July 15, 2011

’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣವು’!


ರಂಜೂ ಹಾಲುಕುಡಿಸುವ ಸ್ವಲ್ಪ ಮುನ್ನ ’ಜಗದೊದ್ಧಾರಕ ನಿತ್ಯಾನಂದ ಸಿಸು’

’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣವು’!

[ಮೂಡಲಪಾಯ ಪ್ರಾಕಾರದಲ್ಲಿ ಸುಮ್ನೇ ತಮಾಷೆಗಾಗಿ ಬರೆದ ಒಂದು ಪ್ರಹಸನ]

ಹಿಮ್ಮೇಳ:

ಮೊದಲೊಂದಿಸೋಣ ಇಗ್ನ ರಾಜಗೇ ರವಿತೇಜಗೇ
ಇದಕೊಮ್ಮೆ ನೀಡು ಮನಸುಮಾಡು ನಿನ್ನ ಮಕ್ಕಳು
ಬದುಕೆಂಬ ರಂಗದಲ್ಲಿ ಹಾಡಿ ನಲಿದು ಕುಣಿವೆವು......
ಬದುಕೆಂಬ ರಂಗದಲ್ಲಿ ಹಾಡಿ ನಲಿದು ಕುಣಿವೆವು.....
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಮಗನೇ ಸಿದ್ಲಿಂಗ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "


" ಒಂದಾನೊಂದು ಕಾಲದಲ್ಲಿ ಕರ್ಣಾಟ ದೇಶದಲ್ಲೀ ಯಡ್ಯೂರಣ್ಣನೆಂಬ ರಾಜನಿದ್ದ. ಸಿಷ್ಟಾಚಾರ ಸಹಿತವಾಗಿ ಬ್ರಷ್ಟಾಚಾರವನ್ನು ಅಭಿವೃದ್ಧಿ ಪಡಿಸಿದ ರಾಜನ ಆಸ್ಥಾನದಲ್ಲಿ ಹಾಲಪ್ಪ ಗೂಳಪ್ಪ ರೇಣುಕ ಎಂಬೆಲ್ಲಾ ಪಂಚರತ್ನಗಳಿದ್ದರು. ಘನ ವಿದ್ವನ್ಮಣಿಗಳಾದ ಈ ಪಂಚರತ್ನಗಳ ಜೊತೆಗೆ ಸಂಪಂಗಿ ಕೆಂಪಂಗಿ ಕಾಡಿಗೆ ಟೊಪ್ಪಿಗೆ ಎಂಬೆಲ್ಲಾ ಕಟ್ಟಾ ಪಂಡಿತರಿದ್ದರು. ಜನತೆಗೆ ಅದು ಕೊಡುವೆ ಇದು ಕೊಡುವೆ ಎಂದೆನ್ನುತ್ತಾ ದೇವಾಲಯ ತಿರುಗುತ್ತಾ ಆಕಾಸ ನೋಡಿ ಕೈಮುಗೀತಿದ್ದ ರಾಜನ ಕಂಡು ಇರೋಧಿಗಳು ತಂ ೩೨ರಲ್ಲಿ ಮಿಕ್ಕುಳ್ದಿರೋ ೨೩ ಹಲ್ಲನ್ನೂ ಕಿವಿ ಹಿಂದ್ಗಡೀ ತಂಕ ಎಳೀತಾ ಇದ್ರು ಶಿವನೇ ಸಿದ್ಲಿಂಗ ಇದು ಯಾಕೆ ಬಲ್ಲೆಯಾ ....? ಹೇಳಿದ ಕೆಲ್ಸ ಆಗ್ದುದ್ದಕ್ಕೆ ಸಲ್ಪ ಗರಮ್ಮಾಗಿ ಏನಾರಾ ಮಾಧ್ಯಮದಗೆ ಕೂತು ಮಾತಾಡುದ್ರೆ ಪಾಲ್ಟಿ ಹೊಂಟ್ಬುಡೋದು.

ಇಂತಿಪ್ಪ ಕರ್ನಾಟ ದೇಶದಲ್ಲೀ ಸಿದ್ಧೂ ಕುಮಾರಣ್ಣ ಎಂಬಿತ್ಯಾದಿ ರಾಜ ವೈರಿಗಳು ವಾಸಸ್ತಾ ಇದ್ರು. ರಾಜಂಗೆ ಭೂಮಿ ಕಂಡ್ರೆ ಭೋ ಆಸೆ. ಹಿಂದಕ್ಕೊಮ್ಮೆ ಕುಮಾರಣ್ಣ ರಾಜ ಆಗಿದ್ಕಾಲ್ಕೆ ಈ ವಯ್ಯ ಯುವರಾಜನ ಥರಾ ಇತ್ತು. ಹಳೇ ರಾಜ ಕುಮಾರಣ್ಣ ಭೂಮಿ ಪಿರೂತಿ ಮಾಡ್ಕಂಬಾಗ ಇದೂ ಜಾಗಾನೆಲ್ಲಾ ಕಂಡ್ಕಬುಟ್ಟಿತ್ತು. ಅದಕ್ಕೇ ತಾನೇ ರಾಜ ಆದಂತಾ ಈ ಸಮಯ ಗೇಣಿಗ್ ಕೊಟ್ರೆಲ್ಲಾ ಆಗತಕ್ಕಂತದಲ್ಲಾ ಅಂತ ನಿರ್ಧಾರ ತಕ್ಕಂಡು ಖೇಣಿ ಲೆಕ್ಕಕ್ಕೆ ರಾಜ ಖಾತೆ ಬರ್ದಾಯ್ತು. ಸಿಂಹಾಸನದ ಮೇಲೆ ಕೂರ್ತಿದ್ದಂಗೆ ಮನೆಜನ ಮಕ್ಳು-ಮರಿ ಹೆಂಡ್ತೀಕಡೆ ಸಂಬಂಧ ಮಕ್ಳಕಡೆ ಸಂಬಂಧ ಎಲ್ಲಾ ನೆನಪಾಯ್ತು. ಇರೋ ಬರೋ ಭೂಮಿನಲ್ಲಿ ಆದಷ್ಟೂ ಅವ್ರಿಗೇ ಇರ್ಲಿ ಅಂತಂಬೋ ಕರ್ತವ್ಯ ಬಹುಬೇಗ ಪೂರೈಸಿದ ರಾಜ ಆ ಕೂಡ್ಲೇ ಇರೋಧಿಗಳ್ನ ಎದುರಿಸಬೇಕಾಗಿ ಬಂತು !

ಕಳ್ ಹಣ ಮಾಡಕಾಗ್ದಲೇ ಬೋಳೋರು ಕಾಳೂರು ಹೊಸ್ನೋಟಸ್ನರ ಎಲ್ಲಾ ಕತಕತ ಒಳಗೊಳ್ಗೇ ಕುದೀತಾ ಇದ್ರು. ತಿರುವನಂತ ಪುರದ ಕಡೆ ತಲೆಹಾಕಿ ಕೆರ್ಕಂಡು ಕೆರ್ಕಂಡು ಅನಂತು ಕೂತಿದ್ರೆ ಮಾರೀ ಕೋಣನ ಬಲೀ ಕೋಡೋ ಸಮ್ಯಕ್ಕೆ ಈಶ್ರಣ್ಣ ಕಾದಿತ್ತು.

ಹೀಗಿರ್ತಾ ಒಂದಿನ ಕುಮಾರಣ್ಣ ಸಡೆನ್ನಾಗಿ ಆಡಳಿತ ಯಂತ್ರದ ನಟ್ಟು ಬೋಲ್ಟು ಸರಿ ಐತೋ ನೋಡತಕ್ಕಂತವನಾದ. ಕೆಲವು ಸಡ್ಲಾಗಿತ್ತು, ಇನ್ಕೆಲವು ಮುರ್ಯೋ ಹಂತದಾಗಿತ್ತು, ಮತ್ತೂ ಕೆಲವು ಜಾಮಾಗಿಬಿಟ್ಟಿತ್ತು! ಮತ್ತೊಂದೆರಡಗೆ ಆಯಿಲ್ ಬಿಟ್ಟು ಲೂಸ್ ಆಗುತ್ತಾ ನೋಡುವಂತವನಾದ ಕುಮಾರಣ್ಣ ಪ್ರಜೆಗಳ ಹಿತಾರ್ಥ ಈ ನಟ್ ಬೋಲ್ಟ್ನೆಲ್ಲಾ ಚೀಲ ತುಂಬ್ಕೆಂಡು ರಿಪೇರಿಗೆ ತಗಂಡೋಯ್ತು. ಯಾರ್ಯಾರೋ ಏನೇನೋ ಮಾತಾಡ್ಕೆಂಡ್ರು. ಇಮಾನ ಅಂದ್ರು, ರಿಸಾರ್ಟು ಅಂದ್ರು ಡ್ಯಾನ್ಸ್ ಮಾಡದ್ರು, ಯಾಯಾಮ ಮಾಡದ್ರು ಅಂತೂ ಕತ್ತೆಗೊಳೆಲ್ಲಾ ಕುದುರೆವೇಷ ಹಾಕ್ಕೊಂಡು ವೇದಿಕೆಮೇಲೆ ಬಂದ್ವು!

ಮುಂದಿಂದೆಲ್ಲಾ ನಾಳೆ ಸೀನ್ನಾಗ್ ವಿಚಾರ್ಸೋಣ ಮಗನೇ !

ಇತ್ಲಾಕಡೀಗೆ ಜನಾ ಸುಮ್ಕೇ ಕೂರ್ಲಿಲ್ಲ. ಆಡಳಿತ ಹಾಳಾಗದೆ ನಮಗೆ ಅದ್ಕೊಡಿ ಇದ್ಕೊಡಿ ಅನ್ನುವಂತವರಾದ್ರು. ರಾಜನ ದರ್ಬಾರ್ ಹಾಲ್ನಲ್ಲಿ ನಿತ್ಯಾ ಕಸ-ಕೊಳೆ ಬಂದು ಬೀಳಾಕ್ ಶುರುವಾಯ್ತು. ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಸೋಬವ್ವಾ ನಿತ್ಯ ಕಣ್ಣೀರಾದ್ಲು. ಆಕೆಗೆ ರಾಜನೆಂದ್ರೆ ಭೋ ಪ್ರೀತಿ ಅಂತಾ ಜನ ಅಂದ್ಕಂಡ್ರು. ದರ್ಬಾರ್ ಹಾಲನ್ನು ದಿನವೂ ಆ ಸೋಬವ್ವಾ ಎಂಬಾಕೆ ಒನಕೆ ಓಬವ್ವಾ ತಾನೇ ಅನ್ನೋ ಥರಾ ಕಸಾಗುಡಿಸಿ, ರಂಗೋಲಿಬಿಟ್ಟು ಕೆಮ್ಮಣ್ಣು ತುಂಬಿ ಎಲ್ಲಾರ ಕಣ್ಣಿಗೆ ಚಂದಾ ಕಾಣ್ವಂತೇ ಮಾಡದ್ಲು. ಮಾಡ್ದಷ್ಟೂ ಆ ಕುರಿ ನನ್ಮಕ್ಳು ಗಲೀಜು ಮಾಡ್ಕತಿದ್ವು !

ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಗಪ್ಪಾ "

ಹಿಮ್ಮೇಳ:

ಚೆಲ್ವ ಸಿಸು ಬಿಡದಿಯೋಳ್ ಬಂದು ದೇಸಿಗನಾಗಿ
ಮೆಲ್ಲಗೆ ಹಳೆಯ ಹೆಂಗೆಳೆಯರನು ಕರೆಯೇ
’ಸೊಲ್ಲು ಸೊಲ್ಲು’ ಎನುತ ಬಂದಿಳಿದು ರಂಜಿತಾ
ಚೆಲ್ಲಾಟ ಶುರುವಿಟ್ಟು ಕುಳಿತಲ್ಲೆ ಕುಣಿದೂ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಅಣ್ಣಾ ಹೇಳುವಂತವನಾಗಪ್ಪಾ "

" ಇಂತಿಪ್ಪ ಪಾಳುಬಿದ್ದ ದೇಸದಾಗೆ ಬಿಡದಿ ಎಂಬೊಂದೂರು. ಅಲ್ಲಿ ಖಾಲೀ ಜಾಗ ಬೇಜಾನ್ ಬಿದ್ದಿತ್ತು. ಸಿಸುನಂತಾ ಸಿಸು ನಿತ್ಯಾನಂದ ಸಿಸು ತಮಿಳ್ನಾಡಲ್ಲಿ ತಪಸ್ ಮಾಡಿ ಇಲ್ಲೀಗ್ ಬಂತು. ಅದಕೂ ಈ ಹಾಳಬಿದ್ ರಾಜ್ಯ ನೋಡಿ ಶಾನೆ ಬೇಜಾರಾಗಿತ್ತು. ಯಾಕೋ ರಾಜ್ಯದ ದೆಸೆ ಸರೀಗಿಲ್ಲಾ ಸ್ತ್ರೀನಿವಾಸ ಕಲ್ಯಾಣ ಮಾಡಿ ಆಮೇಲೆ ಪಂಚ್ಗಾಗ್ನಿ ತಪಸ್ಸು ಮಾಡಿ ಅದ್ಕೂ ನಂತ್ರ ಕುಂಡೆಯೋಗ ಜಾಗ್ರತಿ ಮಾಡುದ್ರೆ ಎಲ್ಲಾ ಸರಿಹೋತೈತೆ ಎಂಬುದಾಗಿ ಗ್ಯಾನದಾಗೆ ಹೊಳೀತು. ಮೇಲಾಗಿ ರಂಜೂ ಎಂಬ ರಮಣಿಯನ್ನು ’ಸ್ತ್ರೀನಿವಾಸ ನಿತ್ಯಕಲ್ಯಾಣ’ ವೆಂಬ ಟಚ್ಚಿಂಗ್ ಟಚ್ಚಿಂಗ್ ಯೋಗದ ಮೂಲಕ ಎಲ್ಲವೂ ಸಾಧ್ಯ ಎಂಬುದ್ನ ಅರಿತ ಸಿಸು ತಡ ಮಾಡ್ಲೇ ಇಲ್ಲ. "

ಹಿಮ್ಮೇಳ :

ರಂಜು ಎಂಬಾ ಹೆಣ್ಣು ರಂಭೆಗಿಂತಲು ಮಿಗಿಲು
ನಂಜಿರದ ಮನಸಿನೊಳು ಸಿಸುವ ಆದರಿಸಿ
ಅಂಜಿಕೆಯ ಬದಿಗಿಟ್ಟು ಪೂರ್ಣಚಂದ್ರನ ಕಂಡು !
ಗಿಂಜಿದಳು ಬಿಳಿಹಲ್ಲು ’ನಿತ್ಯ’ನರ್ತನದಿ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

" ರಂಜೂ ಎಂಬ ರಂಭೆಯನ್ನು ಕಂಡುಕೊಂಡಿದ್ದ ಸಿಸು ಇದ್ದಕ್ಕಿದ್ದಂತೆ ಅವಳ ಕಡೆ ತಿರುಗಿ ನಕ್ಕಿತು. ಬರೋಬ್ಬರಿ ೭೦ ಕೆಜಿ ತೂಗುವ ಸಿಸುವನ್ನೂ ಅದರ ಬಿಳಿಯ ಹಲ್ಲುಗಳನ್ನೂ ಕಂಡು ರಂಜೂ ನಕ್ಕಳು. ಸಿಸುವಿಗೆ ತುಂಬಾ ಬಾಯಾರಿಕೆಯಾಯ್ತು. ರಂಜೂ ಹಾಲುಕುಡಿಸುವಂತವಳಾದಳು. ಇಂತಹ ಸಿಸುವನ್ನು ಅಲ್ಲಿದ್ದ ’ಕೆಟ್ಟ ಜನ’ ಅಪಾರ್ಥಮಾಡಿಕೊಂಡ್ರು. ಗೊತ್ತಿಲ್ದಂಗೆ ಈಡಿಯೋ ಹಿಡ್ದಿಟ್ಟು ಎಡವಟ್ಟಾಗೋಯ್ತು! ಮಾಧ್ಯಮದೋರು ಬಂದ್ರು. ಸಿಸು ಆಗಲೂ ನಗ್ತಾನೇ ಇತ್ತು. ಮತ್ಯಾರೋ ಬಂದ್ರು: ಆಗ್ಲೂ ಸಿಸು ಹಾಗೇ ನಗ್ತಿತ್ತು. ಮಾಧ್ಯಮದೋರು ಏನೇನೋ ಹೇಳಾಕೆ ಸುರುವಿಟ್ರು. ಇದ್ನೆಲ್ಲಾ ನೋಡ್ತಿದ್ದ ಜನ ಯಾರೋ ಮೂಗರ್ಜಿ ಕೊಟ್ರು. ’ಕೆಟ್ಟ ಜನ’ ’ಡೀಲ್ ಇದ್ಯಾ ?’ ಅಂದ್ರು. ಸಿಸು ಆಗ್ಲೂ ನಿರ್ವಿಕಾರವಾಗಿ ನಗ್ತಾನೇ ಇತ್ತು. ಹೀಗೇ ದಿನ ಕಳೀತಾ ಕಳೀತಾ ಒಂದಿನ ಅದ್ಯಾರೋ ಆರಕ್ಸಕರಂತೆ ಬಂದ್ರು. ಅಷ್ಟ್ರೊಳಗೆ ಸಿಸು ನಡ್ಯೋದ್ ಬಿಟ್ಟು ಹಾರಾಡೋಕ್ ಕಲ್ತಿತ್ತು. ರಾತ್ರೋರಾತ್ರಿ ಹಾರಿದ ಸಿಸು ಹಿಮಾಲಯ ಹತ್ಬುಡ್ತು. "

ಅಡಗಿ ಹಿಮಾಲಯದಿ ಬೆಡಗನ್ನು ಮರೆಮಾಚಿ
ಮಡಗಿ ಹೊಸ ಸಿಮ್ಮುಗಳ ಸಂಪರ್ಕಕೆಂದು
ಬಿಡದಿ ತೊರೆಯುತಲೋಡಿ ಕಾಣದಾದರು ಮತ್ತೆ
ಹುಡುಗಾಟ ಹುಡುಕುತ್ತ ಬಂದವರ ನೆನೆದೂ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

" ಪೋಲೀಸರೆಂಬ ಪೋಲೀಸರು ಒಬ್ಬೊಬ್ರೂ ಹತ್ತತ್ತು ಟವೆಲಲ್ಲಿ ಬೆವರು ಒರೆಸಿಕೊಳ್ಳುತ್ತಾ ಹಗಲಲ್ಲೇ ಬ್ಯಾಟ್ರಿ ಹಾಕಿ ಹುಡುಕಿದರೂ ಸಿಸುವಿನ ಸುಳಿವೇ ಇಲ್ಲ! ಕೈಕೈ ಹಿಸುಕಿಕೊಂಡ ಪೋಲೀಸರು ದೊಡ್ಡ ಗಣಪತಿಗೆ ಕಡುಬಿನ ಹಾರದ ಸೇವೆ ಕೊಡ್ತೀವಪ್ಪಾ ಕೆಲ್ಸದಿಂದ ಎತ್ತಾಕ್ ಬುಡ್ತರೆ ಕಾಪಾಡು ಅಂತಂದಿದ್ದೇ ಯಾರೋ ಸೂಚ್ನೆ ಕೊಟ್ರು. ಪೋಲೀಸ್ರು ಹಿಮಾಲಯ ಹತ್ತದ್ರು. ಅಲ್ಲೊಂದ್ ಮನೆತಾವ ಕಾವೀಬಟ್ಟೆ ನೀಲಿಬಟ್ಟೆ ಮತ್ತೆಂತದೋ ಬಟ್ಟೆ ಒಣಗಿಸಿದ್ದು ಕಾಣಸ್ತು. ಯಾರೂ ಮಾತಾಡ್ಲಿಲ್ಲ. ಕರದ್ರೂ ಮಾತಿಲ್ಲ! ನಮ್ ಪೋಲೀಸ್ನೋರ್ಗೆ ಮಾತಾಡ್ಬುಟ್ರೆ ಆಗೋಗ್ತಾ ಇತ್ತು. ಅಲ್ಲೇ ಎಡವಟ್ಟಾಗಿದ್ದು. ಒಬ್ಬ ಪೋಲೀಸ ಸಿಸು ಐತಾ ದರ್ಸ್ನ ಮಾಡ್ಬೇಕಾಗಿತ್ತು ಅಂತ ಸಂದೇಅ ಬರ್ದಂಗೆ ಹೋದ. ಸಿಸು ಕಂಡಿದ್ದೇ ಮಿಕ್ದೋರ್ಗೆ ಕಣ್ ಹೊಡ್ದ! ಎಲ್ಲಾ ಪೋಲೀ[ಸ್] ಹೈಕ್ಳೂ ಸೇರಿ ಸಿಸುನ ಕರ್ಕಂಬಂದ್ರು. ಆಗ್ಲೂ ಅದೇ ನಿರ್ವಿಕಾರ ನಗೆ !

ಅದಾದ ಕೆಲವೇ ದಿನದಲ್ಲಿ ಸುಸುಮ್ಕೇ ಸಿಕ್ಷೆ ಅಂತಾ ಕೊಟ್ರು. ಸಿಸು ಕೆಲು ದಿನ ಜೈಲ್ನಲ್ಲಿ ನಗ್ತಾ ಇತ್ತು. ಅಮೇಲೆ ಅದ್ಯಾರೋ ಪುಣ್ಯಾತ್ಮರು ’ಅದು ಸಿಸು ಥರಾ ಅದೆ ಬಿಟ್ಟಾಕಿ’ ಅಂದ್ರು. ಅದ್ಕೇ ಕೋರ್ಟು ಪೋಲೀಸರಿಗೆ ಹೇಳಿ ಬಿಟ್ಟಾಕ್ತು. ವಾಪಸ್ ಬಂದ ಸಿಸುನ ವೈಭವದ ಮೆರವಣಿಗೇಲಿ ಬಿಡದಿ ಅದರ ತೊಟ್ಲಿಗೆ ಅದೇ ಆ ಬೆಡ್ಡಿಗೆ ಕರ್ಕಂಬಂದೋರು ಮುಂದೆ ಬೇರ್ಬೇರೇ ನಿತ್ಯಾಶ್ರಮ ಕಟ್ಟೋ ನಿತ್ಯಕಾಮಾನಂದ್ರು, ಪೂರ್ಣ ಕಾಮಾನಂದ್ರು..ಇತ್ಯಾದಿ.
ಮುಂದೇನಾಯ್ತು ಕೇಳುವಂತವನಾಗು "

ಹಿಮ್ಮೇಳ :

ಸೀಮೆ ಎಣ್ಣೆಯ ಸುರಿದು ’ಪಂಚಾಗ್ನಿ’ಯಂ ಉರಿಸಿ
ಸೀಮೆಗಿಲ್ಲದ ಯಾಗ ಮಾಡಿತೋರಿಸುತ
ನೇಮವಿದುಯೆಗೆಂದು ಸೋಮಪಾನವಮಾಡಿ
ಕಾಮುಕರು ಬೆಳಗಿದರು ಮಂಗಳಾರತಿಯಾ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "

ರಾಮಾಯಣದಲ್ಲಿ ತಾನು ಶೀಲವಂತೆ ಅಂತ ತೋರ್ಸೋಕೆ ಸೀತೆ ಅಗ್ನಿ ಪ್ರವೇಶ ಮಾಡಿದ್ಲಲ್ಲಾ ಅದೇ ರೀತೀಲಿ ಅಂತರ್ಜಾಲವೆಲ್ಲಾ ತಡಕಾಡಿ ’ಪಂಚಾಗ್ನಿ ತಪಸ್ಸು’ ಎಂಬುದ್ನ ಹುಡ್ಕುದ್ರು. ದೋಡ್ದಾದ ವೃತ್ತಾಕಾರ್ದ ಗುಳಿಮಾಡಿ, ಅದ್ರಲ್ಲಿ ಕಟ್ಗೆ ಪೀಸು ಅದು ಇದು ತುಂಬಿ ಮ್ಯಾಕಿಂದ ಸೀಮೆ ಎಣ್ಣೆ ಸುರುದ್ರು. ಬೆಂಕಿ ಹಚ್ತಿದ್ದಂಗೆ ಸಿಸುನ ಮಧ್ಯೆ ತಂದು ಕೂರ್ಸುದ್ರು. ಕೆಲವು ಕಡೆ ಮಾತ್ರ ಚಿಕ್ದಾಗಿ ಬೆಂಕಿ ಇದ್ದು ಉಳಕಿದ್ ಕಡೆ ಹೊಗೆ ಬರ್ತಾ ಇತ್ತು. ಮಧ್ಯೆ ತಂಗಾಳೀಲಿ ಸಿಸು ಧ್ಯಾನ ಮಾಡ್ತಾ ಇತ್ತು.

ಧ್ಯಾನಾ ಮುಗ್ಸಿ ಈಚೆ ಬಂದ್ಮೇಲೆ ಮತ್ತೆ ಮಾಧ್ಯಮದೋರು ಬಂದ್ರು. ಆವತ್ತು ನಿತ್ಯಕಾಮಾನಂದ್ರು, ಪೂರ್ಣಕಾಮಾನಂದ್ರು, ನಿತ್ಯಕಾಮಿನಿ, ದೈತ್ಯಕಾಮಿನಿ...ಹೀಗೇ ಇವ್ರೆಲ್ಲಾ ಸೇರಿ ಮತ್ತೆ ಮಂಗ್ಳಾರ್ತಿ ಜೋರು. ಸಿಸು ಮತ್ತೆ ನಗೋಕೆ ಹಿಡೀತು!

ಹಿಮ್ಮೇಳ :

ನ್ಯಾಯವಾದಿಯ ಕಟ್ಟಿ ತಳ್ಳಿ ಝಣಝಣ ಬುಟ್ಟಿ
ಮಾಯಕದಿ ನೂರು ಮಂತ್ರಂಗಳನು ಪಠಿಸಿ
ಕಾಯವಿದು ೬-೭ ವರ್ಷಗಳ ಸಿಸುವಿನದು
ಧ್ಯೇಯವಿಲ್ಲಿದಕೆ ಯಾರೊಡನೆ ಕಾಮಿಪುದು ..
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಅಣ್ಣಾ ಹೇಳುವಂತವನಾಗಪ್ಪಾ "

ಸಿಸುವಿನ ಮನೆಯೋರು ವಕೀಲರನ್ನು ಕಟ್ಟಿದ್ರು. ವಕೀಲರ ಜೊತೆ ಕೂತು ಮಂತ್ರ ಪಠಿಸಿದ್ರು. ಕತ್ತೆಗೋ ಕುರಿಗೋ ಮದ್ಕೊಡೋ ಡಾಕ್ಟರ್ ಹಿಡ್ಕಂಡು ಒಂದು ಪ್ರಮಾಣ ಪತ್ರ ಮಾಡ್ಸುದ್ರು. ನಿತ್ಯಾನಂದ ೬-೭ ವರ್ಷದ ಸಿಸು. ಈ ಶರೀರದಲ್ಲಿ ಕಾಮಕ್ಕೆ ಬೇಕಾದ ಅಂಗಾಂಗ ಕೆಲಸನಿರತವಾಗಿಲ್ಲ! ಸ್ವಾಮಿ ’ಒಂಬತ್ತ’ಂತೂ ಅಲ್ಲ ! ಅಂದ್ಮೇಲೆ ೭೦ಕೆಜಿ ತೂಕದ್ದು ಅದು ಹೇಗೆ ಸಿಸು ಎಂಬೋದು ಹಲವರ ಪ್ರಸ್ನೆ. ಪ್ರಸ್ನೆ ಹೀಗೇ ಹಲವಾರು ಇರ್ತದೆ ಆದರೆ ಸಿಸು ಅನ್ನೋದನ್ನು ಗಟ್ಟಿಮಾಡೋ ತಾಕತ್ತೈತಲ್ಲಾ ಅದ್ಕೇ ಅನ್ನೋದು ಈ ಲೋಕದಾಗೆ ಏನೇ ಬೇಕಾದ್ರೂ ಮಾಡ್ಕಬೌದು, ಕಾಸ್ ಮಾತ್ರ ಮಡೀಕಂಡಿರಬೇಕು. ಕೋರ್ಟು ಏನಾರಾ ಮಾಡ್ಕಳ್ಳಿ ಸದ್ಯಕ್ಕಂತೂ ತಾನು ಸಿಸು ಅಂತಿಪ್ಪ ನಿತ್ಯಂಗೆ ಮುಂದೇನಾಯ್ತು ನೋಡೋಣವಾಗಲೀ....

ಕುಂಡೆಯೆತ್ತುತ ಹಾರಿ ತಕತಕನೆ ತಾವ್ ಕುಣಿದರ್
ಮಂಡೆಯಿಲ್ಲದ ನಾರೀಮಣಿಯರತಿ ಭರದಿ
ಗಂಡು ಮೇಲಾಗಿ ಬರಲಲ್ಲಿಗದುವೇ ಯೋಗ !
ಭಂಡಜನ ಹದಗೆಡಿಸಿ ಮುನಿ ಪತಂಜಲಿಯಾ...
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ .......

" ಎಲವೆಲವೋ ಮಗನೇ ಮುಂದೆ ಕೇಳುವಂತವನಾಗು "

" ಗೆಳೆಯಾ ಹೇಳುವಂತವನಾಗಪ್ಪಾ "


" ಮಗನೇ ಸಿಸುವಿನ ಮಹಾತ್ಮೆಯ ಬಗ್ಗೆ ಎಷ್ಟು ಹೇಳಿದರೂ ಸಾಲದಪ್ಪಾ. ಅನಾದಿ ಕಾಲದಲ್ಲಿ ಪತಂಜಲಿ ಎಂಬೊಬ್ಬ ಋಷಿ ಇದ್ನಂತೆ. ಆತ ಯೋಗದ ಕುರಿತು ಹೀಂಗಿಂಗೆಲ್ಲಾ ಬರದ. ಅಂತಾ ಯೋಗದ ಭಾಗದಲ್ಲಿ ಕುಂಡಲಿನೀ ಯೋಗ ಒಂದು ಅಂತ ಹೇಳಿದ್ನಂತೆ. ಅದನ್ನೇ ತಾವು ಪ್ರಾಕ್ಟಿಕಲ್ ಆಗಿ ಮಾಡ್ತೀವಿ ಅಂತ ರಂಜೂನು ಸೇರ್ದಂತೇ ಸಾವ್ರಾರು ಜನ ಹುಡ್ಗೀರ್ನ ಕಂಡು ಸಿಸು ಮತ್ತೆ ನಗ್ತಾ ಇತ್ತು. ಅದೇ ’ನಿರ್ವಿಕಾರ’! ಹುಡ್ಗೀರು ಹೆಂಗಸ್ರು ಕುಂಡೆ ಎತ್ತಿ ಹಾರ್ಸಿ ಹಾರ್ಸಿ ಕುಣ್ದಿದ್ ನೋಡದ್ರೆ ನಾಳೆ ಬಿಡದಿ ಕಡೆಗೆ ಹೋಗೋ ವಾಹನ ಚೆಕ್ ಮಾಡಿ ಅದ್ರಲ್ಲಿ ಪೇನ್ ಕಿಲ್ಲರ ಮಾತ್ರೆಗಳು ಅರ್ಧ ಕ್ವಿಂಟಾಲು, ಝಂಡು ಬಾಮು ಇತ್ಯಾದಿ ಸಿಗೋದು ಗ್ಯಾರಂಟಿಯಪ್ಪಾ. ಎಲ್ಲಾ ಆ ೬-೭ ವರ್ಷದ ಸಿಸುವಿನ ಪವಾಡ!

ಅಂತೂ ’ಸ್ತ್ರೀನಿವಾಸ ನಿತ್ಯಾರಂಜಿತ ಕಲ್ಯಾಣ’ ಕಥೆಯನ್ನು ಕೇಳಿದೆಯಲ್ಲಾ ಈಗ ಸರ್ವರಿಗೂ ಮಂಗಲಪಾಡೋಣ...

" ಅಣ್ಣಾ ನಿನ್ನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನೂ ಕ್ವಾರ್ಟರು ಏರಿಸಿಗೊಂಡು ಬಿಡದಿಕಡೆ ಹೋಗಬೇಕೆಂಬ ಮನಸ್ಸಾಗುತ್ತಿದ್ದೆಯಣ್ಣಾ ...ತಾವು ಹೇಳಿದಂತೇ ಮಂಗಲಪಾಡೋಣ "

ಹಿಮ್ಮೇಳ:

ಜಯಜಯ ಮಂಗಲ ಜಗದ ದೇವರಿಗೆ
ಭಯವನು ನೀಗುವ ಕಾಲಭೈರವಗೆ
ನಿಯಮದಿ ’ನಿತ್ಯ’ನ ಕಥೆಯನು ಕೇಳಿದ
ವಯದಲಿ ಹಿರಿಕಿರಿಯರಾಗಿಹ ಜನಕೆ
ತತೋಂ ತ ಧಿಕುತಕತಾಂ ತತೋಂ ತ ಧಿಕುತಕತಾಂ ತೈಯ್ಯ ತೈಯ್ಯ
ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ಗಿಡ್ತಕ ಗಿಡ್ತಕ ಧೀಂ ......

ತಿರುಮಲ ತಿರುಪತೀ ತಿಮ್ಮಪ್ಪ ವರದ ಗೋವಿಂದಾ ....ಗೋವಿಂದ
ಏಳುಕುಂಡಲವಾಡ ಗೋವಿಂದಾ .....ಗೋವಿಂದ
ಸುರಗಿರಿ ಚರಗಿರಿ ಕರಿಗಿರಿ ಹರಿಗಿರಿ ಪುರಗಿರಿ ಆರುಮಲೆ ಏಳುಮಲೆ ಇಪ್ಪತ್ನಾಕು ಮಲೆಗಳಲ್ಲಾಡೋ ಮಲೈಮಾದೇಶ್ವರನಿಗೇ ಜಯ ಜಯ ಜಯ ಜಯ
ಹರನಮಸ್ಪಾರ್ವತೀ ಪತೆ.....ಹರ ಹರ ಮಹಾದೇವ


Thursday, July 14, 2011

ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ


ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ

ಸಾಮಾನ್ಯರಾದ ನಮಗೆ ಕಾವ್ಯವನ್ನು ಬರೆಯುವಾಗ ಹಲವೊಮ್ಮೆ ಯಾವುದೇ ವಿವೇಚನೆ ಇರುವುದಿಲ್ಲ. ಆದರೆ ಮಹರ್ಷಿಗಳು, ಮಹಾಕವಿಗಳು ಕಾವ್ಯವನ್ನು ತಮ್ಮ ತಪಸ್ಸಿನಿಂದ ಬಸಿದು ಕೊಟ್ಟಿದ್ದಾರೆ ಅರ್ಥಾತ್ ಅವುಗಳ ಬಳಕೆಯಿಂದ ಓದುಗರಲ್ಲಿ, ಸಮಾಜದಲ್ಲಿ ಒಳಿತಾಗಬೇಕು, ಜನಜೀವನದಲ್ಲಿ ಇಹ-ಪರಗಳ ತಿಳುವಳಿಕೆಗಳು ಸಮರ್ಪಕವಾಗಿ ಮೂಡಿ ಸಮಾಜ ತಪ್ಪು ಹಾದಿಯಲ್ಲಿ ನಡೆಯದಂತಾಗಬೇಕು ಎಂಬುದು ಅವರ ಅಪೇಕ್ಷೆಯಾಗಿರುತ್ತಿತ್ತು. ಅದರಿಂದ ಅವರಿಗೆ ಯಾವ ಪ್ರಯೋಜನವಾಗದಿದ್ದರೂ ಲೋಕದ ಹಿತಾರ್ಥ ಅದನ್ನವರು ನಡೆಸಿಬಂದಿದ್ದರು.

ಆ ಮಹಾಕಾವ್ಯಗಳ ಸರಹದ್ದಿನಲ್ಲಿ ಹಿಂದಕ್ಕೆ ಹಿಂದಕ್ಕೆ ಹೋಗುತ್ತಾ ಹೋದರೆ ಆಸಕ್ತರಿಗೆ ಕಾಣಸಿಗುವುದೇ ಮಹಾಭಾರತ. ತಪಸ್ಸಿನಿಂದ ವಿಮುಖರಾಗಿ ಲೌಕಿಕವಾಗಿ ಚಿಂತನ-ಮಂಥನ ನಡೆಸುತ್ತಿದ್ದ ಮಹಾ ಋಷಿ ಕೃಷ್ಣದ್ವೈಪಾಯನರಿಗೆ ಜಲೌಘದಂತೇ ತಂತಾನೇ ಒಂದು ಕಾವ್ಯ ಬಾಯಿಂದ ಹೊರಡಹತ್ತಿತು. ಹಾಗೆ ಹೊರಬಂದ ಆ ಕಾವ್ಯವನ್ನು ತಾನೇ ಹೇಳಿಕೊಂಡು ಬರೆಯಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಆ ಕುರಿತು ಹಾಗೇ ಜಂಜಾಟದಲ್ಲಿರುವಾಗ ದೇವರ್ಷಿ ನಾರದರು ಆ ಜಾಗಕ್ಕೆ ಬಿಜಯಂಗೈಯ್ಯುತ್ತಾರೆ, ಅದು ದೈವೀ ಸಂಕಲ್ಪ! ಬಂದ ನಾರದರಿಗೆ ಮಹರ್ಷಿಗಳ ಮುಖದಲ್ಲಿರುವ ಅವ್ಯಕ್ತ ಚಿಂತೆಯ ಅರಿವಾಗುತ್ತದೆ. ಲೋಕಾಭಿರಾಮವಾಗಿ ಉಭಯ ಕುಶಲೋಪರಿಗಳು ನಡೆದ ಬಳಿಕ ನಾರದರೇ ಅದನ್ನು ನೇರವಾಗಿ ಪ್ರಸ್ತಾಪಿಸುತ್ತಾರೆ. ತನ್ನಲ್ಲಿ ಒಡ ಮೂಡಿದ ಮಹಾಕಾವ್ಯವನ್ನು ಅಕ್ಷರ ರೂಪಕ್ಕೆ ತರಲಾಗದ ಪೀಕಲಾಟವನ್ನು ಮಹರ್ಷಿ ದೇವರ್ಷಿಗೆ ಹೇಳುತ್ತಾರೆ.

ಕೃತಿಗೆ ಲಿಪಿಕಾರನಾಗಿ ಒಬ್ಬಾತ ಬೇಕು, ಆತ ಬರೇ ಬೆರಳಚ್ಚು ತಜ್ಞನಾಗಿರದೇ ’ತಲೆ’ಯಿರುವಾತನಾಗಿ ತಾನು ಹೇಳುತ್ತಿರುವುದನ್ನು ಅರ್ಥವಿಸಿಕೊಂಡು ವೇಗದಲ್ಲಿ ಅದನ್ನು ಬರೆಯಬಲ್ಲವನಾಗಿರಬೇಕು ಎಂಬುದು ಮಹರ್ಷಿಗಳ ಆಶಯವಾಗಿರುತ್ತದೆ. ಅದಕ್ಕೆ ತಕ್ಕನಾದ ವ್ಯಕ್ತಿ ಈಶಸುತನೆನಿಸಿದ ಪರಬ್ರಹ್ಮ ಸ್ವರೂಪಿ ಗಣೇಶನೆಂಬುದು ನಾರದರ ಅಂಬೋಣ. ಗಣೇಶನನ್ನು ಒಲಿಸಿ ಕರೆಯಲು ಇರುವ ಸೂತ್ರಗಳಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆಗಳೇ ಮೊದಲಾದ ಚರ್ಚೆಗಳು ನಡೆಯುತ್ತವೆ. ಕೊನೆಗೊಮ್ಮೆ ಇಬ್ಬರೂ ಧ್ಯಾನಾಸಕ್ತರಾಗಿ ಸ್ತುತಿಗೈದು ಗಣೇಶನನ್ನು ಪ್ರಸನ್ನಗೊಳಿಸಿ ಪ್ರತ್ಯಕ್ಷ ಕಾಣುವಲ್ಲಿ ಸಫಲರಾಗುತ್ತಾರೆ.

ಅಭ್ಯುತ್ಥಾನಂ ಸು ಆಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ |
ಸ್ನಾನಂ ವಾಸೋ ಭೂಷಣಾಂಗಂಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ ||

ಬಂದ ಗಣೇಶನಿಗೆ ಸುಆಸನ[ ಕುಳಿತುಕೊಳ್ಳುವ ಪೀಠ-ಖುರ್ಚಿ] ಅರ್ಘ್ಯ [ಕೈತೊಳೆಯಲು ನೀರು] ಪಾದ್ಯ[ಕಾಲುತೊಳೆಯಲು ನೀರು]ಮಧು-ಪರ್ಕವೇ ಮೊದಲಾಗಿ ಷೋಡಶೋಪಚಾರವನ್ನು ನೆರವೇರಿಸಿದ ಬಳಿಕ ವಿಷಯ ಪ್ರಸ್ತಾವನೆಯಾಗುತ್ತದೆ. ಮಹರ್ಷಿಗಳು ಮಹಾಕಾವ್ಯದ ಹೇಳುವಿಕೆಯನ್ನು ಆರಂಭಿಸುತ್ತಾರೆ. ಗಣೇಶ ಅವರು ಹೇಳಿದ್ದನ್ನು ಅತಿ ಶೀಘ್ರವಾಗಿ ಬರೆದುಬಿಡುತ್ತಾನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ಬರೆಯುತ್ತಿರುವ ಲೆಕ್ಕಣಿಕೆ[ಪೆನ್ನು] ಬಿಸುಟು ತಾನು ಹೊರಟುಹೋಗುತ್ತೇನೆ ಎಂಬ ಕರಾರು ಗಣೇಶನದ್ದಿರುತ್ತದೆ. ಆಗ ಮಹರ್ಷಿಗಳು ತಾನು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವಂತೇ ಗಣೇಶನಿಗೆ ಪ್ರತಿಕರಾರು ಹಾಕುತ್ತಾರೆ. ಗಣೇಶ ಒಪ್ಪಿ ಕಾವ್ಯದ ಬರಹ ಮುನ್ನಡೆಯುತ್ತದೆ.

ಮಹರ್ಷಿಗಳು ಹೇಳಿದ ಆ ಕಾವ್ಯದಲ್ಲಿ ಅಲ್ಲಲ್ಲಿ ತನಗೆ ಸಂದೇಹ ಬಂದಾಗ ಗಣೇಶ ಅದನ್ನು ಪರಿಹರಿಸುವಂತೇ ಮಹರ್ಷಿಗಳನ್ನು ಕೇಳುತ್ತಾನೆ, ಋಷಿಗಳು ಹಾಗೇ ಸಮಜಾಯಿಷಿ ಕೊಟ್ಟು ಸಂದೇಹ ನಿವಾರಣೆಯಾದಮೇಲೆ ಮತ್ತೆ ಲೆಕ್ಕಣಿಕೆ ಮುನ್ನಡೆಯುತ್ತದೆ. ಒಮ್ಮೆ ಹೀಗಾಗುತ್ತದೆ ಕಾವ್ಯದಲ್ಲಿರುವ ಕಥಾನಕ ಮಹಾಭಾರತ, ಭಾರತ ಕಥೆಯಲ್ಲಿ ಧರ್ಮರಾಯನ ರಥ ನೆಲದಿಂದ ಎತ್ತರಕ್ಕೆ ಗಾಳಿಯಲ್ಲಿ ಹಾರುತ್ತಿರುತ್ತದೆ. ಹಾರುತ್ತಿರುವ ರಥ ಒಮ್ಮೆ ಕುಸಿದು ಬೀಳುತ್ತದೆ. ಮಹಾ ಧರ್ಮಿಷ್ಠನಾದ ಯುಧಿಷ್ಠಿರನ ರಥವೇ ಹೀಗಾಗಲು ಕಾರಣವೇನು ? ಎಂಬ ಗಣೇಶನ ಪ್ರಶ್ನೆಗೆ ಋಷಿಗಳ ಉತ್ತರ - ಶ್ರೀಕೃಷ್ಣ " ಅಶ್ವತ್ಥಾಮೋ ಹತಃ ಕುಂಜರಃ " ಎಂದು ಘೋಷಿಸುವಂತೇ ಧರ್ಮರಾಯನಿಗೆ ಆಜ್ಞಾಪಿಸಿದಾಗ ಸತ್ಯಸಂಧನಾದ ಧರ್ಮರಾಯ " ಪ್ರತ್ಯಕ್ಷ ನೋಡದೆಯೇ ಹೇಳಲಾರೆ " ಎಂದುಬಿಡುತ್ತಾನೆ. ಸ್ವತಃ ಭಗವಂತನೇ ಆದ ಶ್ರೀಕೃಷ್ಣನ ಆಜ್ಞೆಯನ್ನು ಅವಗಣನೆಮಾಡಿದ್ದರ /ಉಲ್ಲಂಘನೆಮಾಡಿದ್ದರ ಪರಿಣಾಮವಾಗಿ ಧರ್ಮರಾಯನ ರಥ ಒಮ್ಮೆ ಹಾಗೆ ಧರೆಗುರುಳುತ್ತದೆ. " ಯಾರು ಭಗವಂತನನ್ನೇ ಸಂಶಯಿಸುತ್ತಾರೋ ಅವರಿಗೆ ಉಳಿಗಾಲವಿಲ್ಲ [ಸಂಶಯಾತ್ಮಾ ವಿನಶ್ಯತಿ] " ಎಂದು ಶ್ರೀಕೃಷ್ಣನೇ ಸಾರುತ್ತಾನೆ. --ಈ ಉತ್ತರ ಬರುತ್ತಿರುವಂತೆಯೇ ತನ್ನ ಶುಂಡ[ಸೊಂಡಿಲು]ವನ್ನೊಲೆದು ಹೂಂ ಹೂಂ ಎನ್ನುತ್ತಾ ಬಹಳ ಸಂತೋಷದಿಂದ ಭಾರತಕಥೆಯನ್ನು ಕಾವ್ಯರೂಪದಲ್ಲಿ ಬರೆದುಮುಗಿಸಿದನಂತೆ ಗಣೇಶ. ಗಣೇಶ ’ಗೀರ್ವಾಣ ಲಿಪಿ’ಯಲ್ಲಿ ಈ ಕಾವ್ಯವನ್ನು ಬರೆದ. ಛಂದಸ್ಸು-ವ್ಯಾಕರಣ, ಅಲಂಕಾರ, ಉಪಮೆ ಇತ್ಯೇತ್ಯಾದಿ ಸರ್ವಾಭರಣ ಸುಂದರಿಯಾದ ಈ ಮಹಾಕಾವ್ಯ [ಅದರ ಸಂಸ್ಕೃತದ ಆವೃತ್ತಿ] ಇಂದಿಗೂ ಸಾಹಿತ್ಯಾಸಕ್ತರಿಗೆ ಅತ್ಯುತ್ತಮ ’ಕಾವ್ಯ’ಳೆನಿಸಿದ್ದಾಳೆ!

ಬರೆಯುವಾಗ ಓದಿದ್ದಕ್ಕಿಂತ ಹತ್ತುಪಟ್ಟು ಹೆಚ್ಚಿನ ಅರ್ಥವಾಗುತ್ತದೆ ಎನ್ನುವುದು ಹಲವರ ಅನಿಸಿಕೆ ಅಲ್ಲವೇ? ಇನ್ನು ಕೆಲವರಿಗೆ ಬರೆಯುವಾಗಲೂ ತಲೆ ಎಲ್ಲೋ ಇರುತ್ತದೆ, ಹಾಗಾಗಿ ಅವರು ಬರೆದರೂ ಒಂದೇ ಬಿಟ್ಟರೂ ಒಂದೇ. ಗಣೇಶನಿಗೆ ಹೊಸದಾಗಿ ಅರ್ಥವಿವರಣೆಯೇನೂ ಬೇಕಾಗಿರಲಿಲ್ಲ, ಆದರೂ ಲೋಕದ ಹಿತಾರ್ಥ ರಚಿತವಾಗುವ ಅದಕ್ಕೆ ಲೋಕಕ್ಕೆ ತಿಳಿಯುವ ಹಾಗೇ ಆತ ಕಾರಣ ಕೇಳಿದ್ದಾನೆ. ಹೇಗೂ ಬರೆಯುವಾಗಲೇ ಅದರ ಪರಿಪೂರ್ಣ ಹುರುಳನ್ನು ಅರಿತಿದ್ದ ಗಣೇಶ ಬರೆದು ಮುಗಿಸಿ ನಿಂತು ಈ ಕೃತಿ ನಿಜಕ್ಕೂ ಮಹಾನ್ ಕಾವ್ಯವೇ ಸರಿ, ಇದು ಚತುರ್ವೇದಗಳ ನಂತರ ಜನಿಸಿದ್ದರಿಂದ ಪಂಚಮವೇದ ಎನಿಸಲಿ ಎಂದು ಹರಸಿ ಮಹರ್ಷಿಗಳಿಂದ ಬೀಳ್ಕೊಂಡನಂತೆ. ಈ ಮಹಾಕಾವ್ಯದ ಭಾಗವಾಗಿಯೇ ಸಂಗೀತದ ಸ್ವರ-ಲಯ-ತಾಳಗಳೂ ಹುಟ್ಟಿದ್ದರಿಂದ ಸಂಗೀತವನ್ನೂ ಇದೇ ಹೆಸರಿನಿಂದ ಕರೆಯುತ್ತಾರೆ. ಕೃತಿಯ ಕರ್ತೃವಾದ ಮಹರ್ಷಿ ಜಗತ್ತಿಗೇ ಒಳಿತಾಗಬಲ್ಲ ಹಲವು ಕೃತಿಗಳನ್ನು ಕೊಟ್ಟಿರುವುದರಿಂದ ವಿಶ್ವಬಂಧುವಾದ ಅವರನ್ನು ’ವ್ಯಾಸ’ ಎಂದು ಸಮಾಜ ಗೌರವಿಸುತ್ತದೆ.

ಚತುರ್ವೇದಗಳನ್ನೂ ಭಾಗವತ ಪುರಾಣವನ್ನೂ ವಾಣಿ ಮತ್ತು ವಾಙ್ಮಯಗಳನ್ನು ಸಮೀಕರಿಸಿ ಕೃತಿರೂಪಕ್ಕಿಳಿಸಿರುವುದರಿಂದ ವೈಶ್ವಿಕರಾದ [ವಿಶ್ವಬಂಧುವಾದ] ವ್ಯಾಸರಿಗೂ ಮೊದಲಾಗಿ ಯಾರೂ ಅಂತಹ ಮೇರು ಕೆಲಸಗಳನ್ನು ಮಾಡಿರಲಿಲ್ಲ. ವೇದವೆಂದರೇ ಜ್ಞಾನ. ತಾನು ಪಡೆದ ಜ್ಞಾನವನ್ನು ಜಗದ ಇತರರಿಗೂ ಹಂಚುವ ಹಂಬಲದಿಂದ ಇಂತಹ ಮಹತ್ಕಾರ್ಯವನ್ನು ಮಾಡಿ ಜ್ಞಾನಚಕ್ಷುವನ್ನು ಕರುಣಿಸಿದ ಮಹರ್ಷಿ ಗುರುಗಳೆಲ್ಲರ ಗುರುಗಳೆನಿಸಿದ್ದಾರೆ. ಈ ಕಾರಣಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುವಾಗ ವ್ಯಾಸರನ್ನು ನೆನೆಯುವುದಾಗುತ್ತದೆ.

ಮಳೆಗಾಲದ ನಾಲ್ಕು ತಿಂಗಳು ಭೂಮಿಯಲ್ಲಿ ಹಲವು ಜೀವಿಗಳ ಸಂತಾನೋತ್ಫತ್ತಿ ಪ್ರಕ್ರಿಯೆ ಜಾಸ್ತಿಯಿರುತ್ತದೆ. ಹುಳ-ಹುಪ್ಪಟೆಗಳು, ಏಡಿಗಳು, ಸರೀಸೃಪಗಳೇ ಮೊದಲಾದ ಎಲ್ಲಾ ಜೀವಕೋಟಿಗಳ ಓಡಾಟ ಬಹಳ ಹೆಚ್ಚಿರುತ್ತದೆ. ಸರ್ವ ಸಂಗವನ್ನೂ ತ್ಯಜಿಸಿ ಜೀವನ್ಮುಕ್ತ ಸ್ಥಿತಿಯನ್ನು ಗಳಿಸುವತ್ತ ಹೆಜ್ಜೆಹಾಕುವ ಅಹಿಂಸೆಯನ್ನು ಅನುಸರಿಸುವ, ಬೋಧಿಸುವ ತಾಪಸಿಗಳು ಈ ಕಾಲದಲ್ಲಿ ಓಡಾಡಿದರೆ ಅವರ ಮರದ ಹಾವುಗೆಗಳಿಗೆ ಅರಿವಿಲ್ಲದೇ ಸಿಕ್ಕ ಜೀವಜಂತುಗಳು ಕೊಲ್ಲಲ್ಪಡುತ್ತವಲ್ಲಾ ಎಂಬ ಕಾರಣಕ್ಕೆ ಸನ್ಯಾಸಿಗಳಾದವರು ಕುಂಭದ್ರೋಣ ಮಳೆಯ ಸಮಯವಾದ ಅಷಾಢ ಹುಣ್ಣಿಮೆಯಿಂದ ಕಾರ್ತೀಕ ಹುಣ್ಣಿಮೆಯ ವರೆಗೆ ಒಂದೇ ಕಡೆಗೆ ಆಶ್ರಯಪಡೆದಿದ್ದು ತಮ್ಮ ತಪಸ್ಸನ್ನೂ ಏಕಾಂತವನ್ನೂ ಹೆಚ್ಚಿಸಿ ಜಗತ್ಕಲ್ಯಾಣಕ್ಕೆ ಪರೋಕ್ಷ ಕಾರಣೀಭೂತರಾಗುತ್ತಾರೆ. ನಾಲ್ಕು ಮಾಸಗಳ ಈ ಕಾಲವನ್ನು ಚಾತುರ್ಮಾಸವೆಂದೂ ನಡೆಯುವ ವೃತವನ್ನು ಚಾತುರ್ಮಾಸ್ಯವೆಂದೂ ಕರೆಯುತ್ತಾರೆ.


ಸಜ್ಜನರೂ ತಪೋನಿಷ್ಠರೂ ಆದ ಸಾಧು-ಸಂತರನ್ನು ಅವರ ಚಾತುರ್ಮಾಸ್ಯದ ವೇಳೆ ದರ್ಶಿಸಿ ಅವರಿಗೆ ಭಿಕ್ಷೆಯನ್ನು ನಡೆಸುವುದು, ಅವರ ಪಾದಪೂಜೆ ನಡೆಸುವುದು ಮತ್ತು ಅವರು ನಡೆಸಬಹುದಾದ ಸಂಕೀರ್ತನೆಗಳಲ್ಲಿ ಭಾಗಿಗಳಾಗುವುದು ಪುಣ್ಯತಮ ಕೆಲಸವಾಗಿರುತ್ತದೆ. ಲೌಕಿಕವಾಗಿ ಉದಾಹರಿಸಬಹುದಾದರೆ ತಾವೂ ಹೊರಟ ನೌಕೆಯಲ್ಲಿ ತಮಗೆ ಗೊತ್ತಿರುವ ಹಲವರನ್ನೂ ಜ್ಞಾನಮಾರ್ಗದಲ್ಲಿ ಕರೆದುಕೊಂಡು ಹೋಗುವ ಇಚ್ಛೆಯುಳ್ಳ ನಿಸ್ಪೃಹರು ಅವರಾಗಿರುತ್ತಾರೆ. ಜನನ-ಮರಣಗಳೆಂಬ ಚಕ್ರವ್ಯೂಹದಿಂದ ಹೊರಬರಲು ಸರಿಯಾದ ಆಯೋಜನೆ ಅಂಥಾ ತಪಸ್ವಿಗಳಿಂದ ಲಭಿಸಬೇಕೇ ವಿನಃ ಅದು ಕ್ರಯಕ್ಕೆ ಸಿಗುವಂಥದ್ದಲ್ಲ! ಜನಿಸಿದ ಪ್ರತೀವ್ಯಕ್ತಿಗೆ ಉತ್ತಮ ಗುರುವಿನ ದರ್ಶನವಾಗಬೇಕಾದರೆ ಅದೂ ಒಂದು ವಿಧಿಯಿಚ್ಛೆಯೇ ಆಗಿರುತ್ತದೆ. ಸಿಕ್ಕಿದ ಸದ್ಗುರುವನ್ನು ಸಮರ್ಪಕವಾಗಿ ಸೇವಿಸುವ ಬುದ್ಧಿ ಬರುವುದೂ ಕೂಡ ಆ ಯಾ ವ್ಯಕ್ತಿಯ ವಿಧಿಯೇ ಸರಿ.

ಯುಗಧರ್ಮಕ್ಕನುಗುಣವಾಗಿ ಕಲಿಯುಗದಲ್ಲಿ ಕಪಟ ಸನ್ಯಾಸಿಗಳು ಬಹಳವೇ ಇರುವುದರಿಂದ ಸನ್ಯಾಸಿಗಳಾದವರಿಗೆ ಕಾಲಹಾಕುವುದು ಕಷ್ಟವಾಗಿದೆ! ಸನ್ಯಾಸಿಗೂ ಸನ್ಯಾಸಿಯ ವೇಷಕ್ಕೂ ಹೊರನೋಟದಿಂದ ಸಾಮ್ಯತೆ ಕಾಣುವುದರಿಂದ ಅನೇಕ ಜನ ಸತ್ಯಾಸತ್ಯತೆಯ ಪರಾಮರ್ಷೆಗೆ ನಿಲುಕದ ವಿಷಯವೆಂದು ನಿಜ ಸನ್ಯಾಸಿಗಳನ್ನೂ ಮರೆತುಬಿಡುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ. ಆದ್ಯ ಶಂಕರರು ಈ ರೀತಿ ಅಪ್ಪಣೆಕೊಡಿಸಿದ್ದಾರೆ --

ಅಸ್ಮತ್ ಪೀಠೇ ಸಮಾರೂಢಃ ಪರಿವ್ರಾಡುಕ್ತ ಲಕ್ಷಣಃ |
ಅಹಮೇವೇತಿ ವಿಜ್ಞೇಯ ಯಸ್ಯ ದೇವ ಇತಿ ಶ್ರುತೇ ||

-ಪರಿವ್ರಾಜಕ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ತನ್ನ ಪೀಠದಲ್ಲಿ ಆಸೀನನಾದರೆ ಅವನನ್ನು ತಾನೇ ಅಂತ ತಿಳಿಯಿರಿ. ಅರಿಷಡ್ವರ್ಗಗಳಿಂದ ಮುಕ್ತರಾದ, ಹೊಗಳುವಿಕೆ-ತೆಗಳುವಿಕೆಯಲ್ಲಿ ಸ್ಥಿತಪ್ರಜ್ಞರಾದ, ಮೋಕ್ಷವನ್ನುಳಿದು ಇನ್ನುಳಿದ ಆಸೆಗಳನ್ನು ಪರಿತ್ಯಜಿಸಿದ, ಯಾರದೇ ಸಂಗವನ್ನೂ ಬಯಸದ, ತ್ರಿಕಾಲ ಸ್ನಾನ-ಸಂಧ್ಯಾ ತಪಃ ಪೂಜಾದಿ ಕೈಂಕರ್ಯನಿರತರಾದ, ಬಾಹ್ಯಾಸಕ್ತಿಯನ್ನು ವಿಜೃಂಭಿಸದ, ಜನರಿಗೆ ತ್ರಿಕರಣ ಪೂರ್ವಕ ಸನ್ಮಾರ್ಗ ಬೋಧಿಸುವ, ಸಾತ್ವಿಕ-ಸಸ್ಯಾಹಾರಿಗಳಾದ, ಅಹಿಂಸಾ ತತ್ಪರರಾದ, ಹೃದಯ ಸರೋವರದಲ್ಲಿ ಬೆಳಗುತ್ತಿರುವ ಪರಮಾತ್ಮನೆಂಬ ಸೂರ್ಯನನ್ನೇ ನೋಡುವ ಹಂಸದ ರೀತಿ ಪರಮಹಂಸರಾಗಿರುವ ವ್ಯಕ್ತಿಗಳು ಸನ್ಯಾಸಿಗಳು ಎನಿಸಿಕೊಳ್ಳುತ್ತಾರೆಯೇ ಹೊರತು ವಿಧಾನ ಸೌಧದಲ್ಲಿ ರಾಜಕೀಯ ಕಣಕ್ಕೆ ಮುನ್ನುಗ್ಗುವ, ವಿಷಯ ಪ್ರೇರಿತರಾಗಿ ಕಣ್ಣುಮುಚ್ಚಾಲೆಯಾಡುವ ವ್ಯಕ್ತಿಗಳಲ್ಲ. ಸನ್ಯಾಸಿಗಳ ನಡತೆಯನ್ನವಲೋಕಿಸಿ ಪರಿವ್ರಾಜಕರಾದವರನ್ನು ಮಾತ್ರ ಗುರುವೆಂದು ಪರಿಗಣಿಸು ಎಂದು ಆಚಾರ್ಯರು ಹೇಳಿದ್ದಾರಲ್ಲವೇ ? ಭಗವತ್ಪಾದ ಶಂಕರರಿಗೆ ಅಷ್ಟು ಹಿಂದೆಯೇ ಕಪಟ ಸನ್ಯಾಸಿಗಳ ಬಗ್ಗೆ ಅರಿವಿತ್ತು ಎಂಬುದು ಸ್ಪಷ್ಟವಾಗುತ್ತದೆ!

ಮನುಷ್ಯ ಎಷ್ಟೇ ತಾನರಿತರೂ ಅದು ಲೌಕಿಕ ವಿದ್ಯೆಯೇ ಹೊರತು ಪಾರಮಾರ್ಥಿಕವಲ್ಲ. ವಿಶ್ವವಿದ್ಯಾಲಯಗಳು ಕೊಡಮಾಡುವ ಪದವಿಗಳು ಕೇವಲ ಇಲ್ಲಿನ ವಿಷಯಗಳಿಗೆ ಸಂಬಂಧಿಸಿದ್ದೇ ಹೊರತು ಕಾಣದ ಲೋಕದ ಉನ್ನತ ಗಮ್ಯಸ್ಥಾನಕ್ಕೆ, ಗಹನವಾದ ಆ ವಿಷಯಗಳಿಗೆ ಸಂಬಂಧಿಸಿದ್ದಲ್ಲ. ವಿಜ್ಞಾನಮಯ ಲೋಕದಿಂದಾಚೆಗೆ ಏನಾದರೂ ಮಾಹಿತಿ ಲಭ್ಯವಾಗುವುದಾದರೆ ಅದು ಶುದ್ಧ ಸನ್ಯಾಸಿಗಳಿಗೇ ಹೊರತು ಸಾಮಾನ್ಯರಿಗಲ್ಲ. ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ತಮ್ಮ ತಪೋಬಲದಿಂದ ತಾರ್ಕಿಕವಾಗಿ ನಿರ್ಣಯಿಸಬಹುದಾದ ತಾಕತ್ತು ಇರುವುದು ಕೇವಲ ತಾಪಸರಿಗೇ ಹೊರತು ಬೇರಾರಿಗೂ ಅಲ್ಲ.

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

ಹುಟ್ಟಿಸಿದ ಆ ಶಕ್ತಿ ಮೂಕನನ್ನೇ ವಾಚಾಳಿಯನ್ನಾಗಿಯೂ ಹೆಳವನನ್ನೇ ಶಿಖರಗಾಮಿಯನ್ನಾಗಿಯೂ ಮಾಡಬಲ್ಲ ಸಾಮರ್ಥ್ಯ ಉಳ್ಳದ್ದಾಗಿದೆ ಎಂಬ ಸತ್ಯದ ಅರಿವು ನಿಜದ ಅರಿವು ಕೂಪಮಂಡೂಕಗಳಾದ ನಮಗೆ ಸಹಜವಾಗಿ ಪ್ರಾಪ್ತವಲ್ಲ. ಯಾವಾಗ ಯುದ್ಧದಲ್ಲಿ ನಮ್ಮ ಕುದುರೆ ಸೋಲುತ್ತದೋ, ಯಾವಾಗ ಪರೀಕ್ಷೆಯಲ್ಲಿ ನಮ್ಮ ಅನುತ್ತೀರ್ಣತೆ ಘೋಷಿಸಲ್ಪಡುತ್ತದೋ, ಯಾವಾಗ ಇಲ್ಲದ ಕಾಯಿಲೆ ನಮಗೆ ಅಡರಿಕೊಂಡು ಹಿಂಸಿಸುತ್ತದೋ, ಯಾವಾಗ ಇರುವ ಬೊಕ್ಕಸ ಬರಿದಾಗಿ ನಡೆವ ಮಾರ್ಗವೇ ಗತಿಯಾಗಿ ಪರಿಣಮಿಸುತ್ತದೋ ಅಂತಹ ದಯನೀಯ ದಿನಗಳಲ್ಲಿ ಮಾತ್ರ ನಮಗೆ ಆ ಇನ್ನೊಂದು ಶಕ್ತಿಯ ಅರಿವು ಸ್ವಲ್ಪ ಮಟ್ಟಿಗೆ ಆಗುತ್ತದೆ! ಆದರೂ ’ಅಡಿಗೆ ಬಿದ್ದರೂ ಮೂಗು ಮೇಲೇ ಇದೆ’ ಎನ್ನುವ ನಮ್ಮ ಅಹಂ ಅಲ್ಲೂ ಕೆಲಸಮಾಡುತ್ತಲೇ ಇರುತ್ತದೆ! ಯಾವಾಗ ಅಹಂ ಎಂಬ ಗಡಿಯಾರ ನಿಷ್ಕ್ರಿಯವಾಗುತ್ತದೋ ಆಗ ಪರಾಶಕ್ತಿಯೆಂಬ ಯಂತ್ರ [ವಿದ್ಯುತ್ತು ಹೋದಾಗ ಯೂ.ಪಿ.ಎಸ್ ಅಥವಾ ಜನರೇಟರ್ ಇರುವಂತೇ]ಚಾಲೂ ಆಗುತ್ತದೆ. ಇಲ್ಲಿ ಯೂ.ಪಿ.ಎಸ್ ಮತ್ತೆ ನಾವೇ ತಯಾರಿಸಿದ ಯಂತ್ರವಾಗಿರುವುದರಿಂದ ಇತಿ-ಮಿತಿ ಸಹಿತವಾಗಿದೆ, ಆದರೆ ಪರಾಶಕ್ತಿ ಇತಿಮಿತಿ ರಹಿತದ್ದಾಗಿದೆ ಎಂಬುದನ್ನು ನಾವು ಅರಿಯಬೇಕು. ಅದು ಕರಗದ ಶಕ್ತಿ. ಇದಕ್ಕೆ ಉದಾಹರಣೆ ದ್ರೌಪದೀ ವಸ್ತ್ರಾಪಹರಣ. ಅಸಾಮಾನ್ಯ ಶೂರರೂ ಮೂರುಲೋಕದ ಗಂಡ ಎಂದೆಲ್ಲಾ ಬಿರುದು ಪಡೆದವರೂ ಸೇರಿದ ಪಂಚಪಾಂಡವರಲ್ಲಿ ಕೇವಲ ಒಬ್ಬನೇ ಒಬ್ಬ ಗಂಡ ಕೂಡ ದ್ರೌಪದಿಯ ಮಾನ ಕಾಪಾಡಲು ಸಮರ್ಥರಾಗಿರಲಿಲ್ಲ. ತುಂಬಿದ ಸಭೆಯಲ್ಲಿ ಮಾನಹೋಗುವಾಗಲೂ ಒಂದೇ ಕೈ ಎತ್ತಿ ಇನ್ನೊಂದರಲ್ಲಿ ಮಾನಮುಚ್ಚಿಕೊಂಡಾಗಲೂ ಪರಾಶಕ್ತಿ ಚಾಲೂ ಆಗಲಿಲ್ಲ. ಯಾವಾಗ ತನ್ನಿಂದಾಗದೆಂದು ಎರಡೂ ಕೈ ಮೇಲೆತ್ತಿ ಗೋಳಿಟ್ಟಳೋ ಆಗ ಅಕ್ಷಯಾಂಬರದ ಕೃಪೆಗೆ ಪಾತ್ರಳಾದಳು. ಆದರೆ ನಮ್ಮ ಯಾವ ಮಾನಕಗಳಿಗೂ ನಿಲುಕದ್ದು ಆ ಅದ್ಭುತ ಶಕ್ತಿ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ.

ಕಣ್ಣಿಗೆ ಕಾಣುವ ಆಕಾಶದ ಬುಡ-ತುದಿಗಳನ್ನಾಗಲೀ ಆಳ-ಅಗಲಗಳನಾಗಲೀ ಅಳೆಯಲಾಗದ ವಿಜ್ಞಾನ ನಮ್ಮದು! ಗುರುತ್ವ ಪೊಳ್ಳುಗಳ [ಬ್ಲ್ಯಾಕ್ ಹೋಲ್ಸ್]ಬಗ್ಗೆ ಅರಿವು ಬಂದರೂ ಅದರಾಚೆ ಏನಿದೆಯೆಂದಾಗಲೀ ಅದು ಹೇಗೆ ಹೋದ ವಸ್ತು-ವ್ಯಕ್ತಿಗಳನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ ಎಂಬುದರ ಬಗ್ಗೆಯಾಗಲೀ ಇದುವರೆಗೆ ಅರಿಯಲಾಗದ ವಿಜ್ಞಾನ ನಮ್ಮದು! ಹಾಡಹಗಲೇ ನುಗ್ಗಿ ಜೀವಸಂಕುಲಗಳಿಗೆ ಪ್ರತ್ಯಕ್ಷ ದೈವತ್ವವನ್ನು ಕಣ್ತುಂಬ ಕಾಣಗೊಡುವ ಸೂರ್ಯನಲ್ಲಿ ಏನಿದೆಯೆಂಬ ಪರಿಪೂರ್ಣ ಮಾಹಿತಿ ಸಿಗದೇ ಅಂದಾಜುಕಟ್ಟಿದ ವಿಜ್ಞಾನ ನಮ್ಮದು! ನಿಯಮಬದ್ಧವಾಗಿ ಕೆಲಸ ನಿರ್ವಹಿಸುವ ಆಕಾಶ ಕಾಯಗಳ ನಿಯಂತ್ರಣ ಎಲ್ಲಿದೆ ಎಂಬುದನ್ನು ಅರಿಯದ ವಿಜ್ಞಾನ ನಮ್ಮದು! ಹೋಗಲಿ ದೇಹವೆಂಬ ಹಾರ್ಡ್ವೇರ್ ನಲ್ಲಿರುವ ಆತ್ಮವೆಂಬ ’ತಂತ್ರಾಂಶ’ ಹುಟ್ಟುವುದಕ್ಕಿಂತಾ ಮೊದಲು ಎಲ್ಲಿತ್ತು ಅಥವಾ ಸತ್ತಮೇಲೆ ಎಲ್ಲಿಗೆ ಹೇಗೆ ಹೋಯ್ತು ಎಂದು ಅರಿಯಲಾಗದ ಅತಂತ್ರ ವಿಜ್ಞಾನ ವೈಭೋಗ ನಮ್ಮದು! ಈ ಎಲ್ಲದನ್ನೂ ನಿರೂಪಿಸಿ, ನಿರ್ವಹಿಸುವ ನಮ್ಮ ಮೇರೆಗೂ ಮೀರಿದ ಇನ್ನೊಂದು ಯಾವುದೋ ಶಕ್ತಿಯ ಆವಾಸವನ್ನು ಅಲ್ಲಗಳೆಯುತ್ತೀರೇನು ? ಸಾಧ್ಯವೇ ನೀವೇ ಅವಲೋಕಿಸಿ.

ಹೀಗಾಗಿ ನಮಗಿಂತ ಹಿರಿದಾದ ಆ ದಿವ್ಯಶಕ್ತಿಯ ಸಾನ್ನಿಧ್ಯವನ್ನು ಸದಾ ಸಂಸ್ಮರಣೆಗೈದು ಅದರ ಹತ್ತಿರ ಹತ್ತಿರಕ್ಕೆ ನಮ್ಮನ್ನು ಸೆಳೆದೊಯ್ಯುವ ಪರಲೋಕದ ನಮ್ಮ ಗೈಡ್ ಈ ’ಗುರು.'

’ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ’

ಎಂದು ಸಂಕಲ್ಪಿಸಿ ಸತತ ಜಗದ ಜನರ ಅಹವಾಲುಗಳನ್ನು ಜಗನ್ನಿವಾಸನ ಬಳಿಗೆ ತನ್ನ ತಪಸ್ಸಿನ ಮೂಲಕ ಒಯ್ಯುವ, ರವಾನಿಸುವ ಈ ಗುರುವೆಂಬ ಸಂದೇಶಕಾರನಿಗೆ, ಈ ನಮ್ಮ ಹಿತೈಷಿಗೆ, ಈ ನಮ್ಮ ಬಂಧುವಿಗೆ ನಮಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗೆ ನಾವು ಮನಸ್ಸುಮಾಡಿ ಮುನ್ನಡೆಯೋಣ, ಗುರುದರ್ಶನಮಾಡಿ ಕೃತಾರ್ಥರಾಗೋಣ-ನಿಜದ ನೆಲೆಯನ್ನು ಅರಿಯುವತ್ತ ಅಂಬೆಗಾಲಿಡಲು ಪ್ರಯತ್ನಿಸೋಣ ಎಂಬ ಸದಾಶಯದೊಂದಿಗೆ ಜಗದ ಎಲ್ಲರ ಪರವಾಗಿ ಗುರುವಂದನೆ ಮಾಡುತ್ತಿದ್ದೇನೆ -

Justify Fullಅಜ್ಞಾನತಿಮಿರಾಂಧಸ್ಯ ಜ್ಞಾನಾಂಜಲಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಸ್ಠಾವರಂ ಜಂಗಮಂ ವ್ಯಾಪ್ತಂ ಯತ್ಕಿಂಚಿತ್ ಸಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಜ್ಞಾನಶಕ್ತಿಸಮಾರೂಢಃ ತತ್ವಮಾಲಾವಿಭೂಷಿತಃ |
ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ ||

ಕಾಷಾಯವಸ್ತ್ರಂ ಕರದಂಡಧಾರಿಣಂ ಕಮಂಡಲಂ ಪದ್ಮಕರೇಣ ಶಂಖಂ |
ಚಕ್ರಂ ಗದಾ ಭೂಷಿತ ಭೂಷಣಾಢ್ಯಂ ಶ್ರೀಪಾದರಾಜಂ ಶಿರಸಾ ನಮಾಮಿ ||

ಹಂಸ ಹಂಸಾಯ ವಿದ್ಮಹೇ ಪರಮಹಂಸಾಯ ಧೀಮಹಿ |
ತನ್ನೋ ಹಂಸಃ ಪ್ರಚೋದಯಾತ್ ||

|| ಓಂ ಸ್ವಸ್ತಿ ||

Tuesday, July 12, 2011

ಬೇಕು ಮುಂಗಡ !


ಬೇಕು ಮುಂಗಡ !

ಜೀವ ಜಡದ ಹೃದಯವನ್ನು ಒಮ್ಮೆ ಸಾರಿಸಿ
ದೇವ ದೇಹದೊಳಗೆ ನಿನ್ನ ಕರೆದು ಕೂರಿಸಿ |
ಭಾವಮಿಳಿತ ಮನಸದೆಂಬ ಹೂವ ಏರಿಸಿ
ಜಾವಜಾವಕೊಮ್ಮೆ ಪೂಜೆ ಭಕುತಿ ಪೇರಿಸಿ ||

ರಾಮ ಕೃಷ್ಣ ಬುದ್ಧ ಕಲ್ಕಿ ಹಲವು ರೂಪದಿ
ನೇಮ ನಡೆಸಿ ಮೆರೆವೆ ಹರಿಯೇ ಜಗದ ಕೂಪದಿ |
ನಾಮ ನೆನೆಯಲೆಮಗೆ ಸಮಯವಿರದು ತಾಪದಿ !
ಹೇಮ ಗಿರಿಗಳವನು ಬಯಸಿ ಆಡೆ ಚೌಪದಿ !!

ಬಲಿಗೆ ಒಲಿದೆ ದಾನ ಪಡೆದು ಹಿಂದೆ ಭುವಿಯಲಿ
ಕಲಿಯನೊಲಿದು ತಂದು ಜಡಿದೆ ಭವಕೆ ಕಹಿಯಲಿ !
ಸುಲಿಗೆ ಮೋಸ ಚೋರತನಗಳಧಿಕ ದಿನದಲಿ
ಒಲವು ಪ್ರೀತಿ ನಲುಗಿನಿಂತು ನೋಡುತಿರುವಲಿ ||

ಧರ್ಮ ಜಾತಿ ಮತಗಳೆಂಬನೇಕ ಪಂಗಡ
ಕರ್ಮವೆಮಗೆ ಸಾಗಬೇಕು ಅದರ ಸಂಗಡ |
ಮರ್ಮವರಿಯದಾದೆವಯ್ಯ ತತ್ವ ಹಿಂಗಡ
ಶರ್ಮ ಶೇಖ ಪೌಲಿಗೆಲ್ಲ ಬೇಕು ಮುಂಗಡ !