ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 21, 2010

ಎಂಥ ದಿವ್ಯ ಸ್ಪರ್ಶ

ಮಗುವಿನ ಬಗ್ಗೆ ಬರೆಯಲು ಹೊರಟೆ, ಕಾರಣ ಇಷ್ಟೇ, ಮಗನಿಗೆ ಹುಷಾರಿರದೆ ೩ ದಿನಗಳಾದವು, ವಿಪರೀತ ಜ್ವರ, ಯಾವ ಔಷಧವನ್ನೂ ಲೆಕ್ಕಿಸದ ಜ್ವರ, ಮಗುವಿನ ಮುಖದ ನಗೆ ಮಾಯವಾದಾಗ ಅದು ನಮ್ಮ ಮುಖ-ಮನಗಳ ಸಂಪೂರ್ಣ ಅಂತಃಸ್ಸತ್ವವನ್ನು ಎಳೆದು ಹಾಕಿದ ಹಾಗೇ.ಈ ಮಧ್ಯೆ ನಿನ್ನೆ ಒಂದು ಕ್ಷಣ ಆಚೆ ಬಂದು ಮಗನಕಡೆ ಹೋಗುವಷ್ಟರಲ್ಲಿ ತನ್ನ ಬಾಲ್ಯ ಸಹಜ ಕುತೂಹಲದಿಂದ ಕಂಕುಳಲ್ಲಿಟ್ಟ ಥರ್ಮಾಮೀಟರ್ ತೆಗೆದು ಬಾಯಲ್ಲಿ ಇಟ್ಟುಕೊಂಡು ಕಚ್ಚಿ, ಅದರ ಪಾದರಸವಿರುವ ಭಾಗ ಬಾಯಲ್ಲಿ ಒಡೆದುಹೋಯಿತು, ಪಾದರಸವೆಂಬುದು ತುಂಬಾ ವಿಷವಾದ್ದರಿಂದ ನಾವು ಸುತ್ತದ ಆಸ್ಪತ್ರೆಗಳಿಲ್ಲ, ಭಾನುವಾರವಾದ್ದರಿಂದ ಎಲ್ಲಾ ಆಸ್ಪತ್ರೆಗಳಲ್ಲೂ ಗೊತ್ತಿರುವ ತಜ್ಞ ವೈದ್ಯರಿಲ್ಲ! ದೇವರಮೇಲೆ ಭಾರಹಾಕಿ ರಾತ್ರಿ ಕಳೆದಿದ್ದೇವೆ. ಇದರ ಬಗ್ಗೆ ಬಹಳ ಬರೆಯಲು ಇಂದು ಸಮಯವಿರದ ಕಾರಣ ತಮ್ಮಲ್ಲಿ ಕ್ಷಮೆ ಕೇಳಿ ಬರೇ ಒಂದು ಚಿಕ್ಕ ಹಾಡನ್ನು ಬರೆದಿದ್ದೇನೆ


ಎಂಥ ದಿವ್ಯ ಸ್ಪರ್ಶ

ಎಂಥ ದಿವ್ಯ ಸ್ಪರ್ಶ ನಿನದು ಮಂತ್ರ ಮುಗ್ಧ ಮಾಡಿತು !
ಬಂತು ಯಾಕೆ ತಾಪ ಜ್ವರವು ನಗುವ ನುಂಗಿ ಹಾಕಿತು?

ಕಾರಣವೇ ಇಲ್ಲ ಅದಕೆ ಬರಿದೇ ಬಂದು ನೂಕಿತು
ವಾರವಿಡೀ ನಮ್ಮ ಬದುಕು ಹೊರಳಿ ಬಾಡಿ ನರಳಿತು

ದೇವನಿತ್ತ ಶರೀರ ಪಂಚಭೂತ ಪರಿಧಿಯೋಳ್
ಭಾವದಟ್ಟ ಕಟ್ಟಳೆಗಳ ಗೂಡಿದು ವಿಶ್ರಮಿಸುವೋಲ್

ನಿನ್ನ ಮುಗುಳು ನಗೆಯು ತಂತು ಹಲವುಶಕ್ತಿ ಪೂರಕ
ಮೊನ್ನೆಯಿಂದ ನಗುವೇ ಇಲ್ಲ ಯಾವುದು ಮಾರಕ

ನಮ್ಮ ದುಃಖವ ದುಮ್ಮಾನವ ಕಳೆದೆವು ನಿನ್ನ ನೋಡುತ
ಒಮ್ಮೆ ಮತ್ತೆ ನಗೋ ಮಗುವೆ ಪುನಃ ಚೇತರಿಸುತ