ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 19, 2010

ಗುರು ತತ್ವ



ಹಿಂದೊಮ್ಮೆ ಗುರುವಿನ ಬಗ್ಗೆ ಬರೆದಿದ್ದೆ, ಇಂದು ಜಗದಮಿತ್ರ ಮತ್ತೊಮ್ಮೆ ತನ್ನ ಶೈಲಿಯಲ್ಲಿ ಸದ್ಗುರುವಿನ ವರ್ಣನೆ ಮಾಡಹೊರಟಿದ್ದಾನೆ. ಗುರುವಿನ ಬಗ್ಗೆ ಬರೆದಷ್ಟೂ ಕಮ್ಮಿಯೇ ಯಾಕೆಂದರೆ ಆ ತತ್ವವೇ ಹಾಗೆ;ಆ ಪದವೇ ಒಂದು ಬ್ರಹ್ಮ ಬೋಧ ಪದ. ಗುರು ಅಂದರೆ ಯಾರು ಎಂತ ತಿಳಿಯ ಹೊರಟರೆ ಅದು ಮೂಲ ಪರಬ್ರಹ್ಮನನ್ನು ತಲುಪುತ್ತದೆ, ಆ ಪರಬ್ರಹ್ಮನೇ ಗುರು! ಹಾಗಾದರೆ ನಾವು ನೋಡುವ ಗುರುಗಳೆನಿಸಿದವರೆಲ್ಲ ಪರಬ್ರಹ್ಮರೇ ? ಅವರೆಲ್ಲ ಪರಬ್ರಹ್ಮನ ಅವತರಣಿಕೆ ಕಂಡುಕೊಳ್ಳ ಹೊರಟ ಅವನ ಸಂಪೂರ್ಣ ಅನುಯಾಯಿಗಳು.

ಒಂದು ಶ್ಲೋಕ ನೋಡಿ --

ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣಂಚ ವಶಿಷ್ಠಕಂ |
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂಚ ಶ್ರೀಧರಂ ||

ಆದಿನಾರಾಯಣನಿಂದ ಪ್ರಾರಂಭವಾಗಿ ಬ್ರಹ್ಮಾಣ ಮತ್ತು ವಶಿಷ್ಠರಿಂದ ಮುಂದುವರಿಸಲ್ಪಟ್ಟು ಶ್ರೀರಾಮ ಮತ್ತು ಮಾರುತಿಯಿಂದಲೂ ಆಚರಿಸಲ್ಪಟ್ಟು ಸಮರ್ಥ ರಾಮದಾಸರಿಂದಲೂ ಮತ್ತು ಶ್ರೀಧರ ಸ್ವಾಮಿಗಳಿಂದಲೂ ಹಾಗೇ ಮುಂದುವರಿಯಿತು. ಇದು ಒಂದು ಪರಂಪರೆ.

ಇನ್ನೊಂದು ನೋಡಿ --

ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||





ಗುರು ತತ್ವ

ಇಹದ ಬದುಕಿನ ಬವಣೆ ಕಿತ್ತೊಗೆಯ ಬಯಸುತ್ತ
ಗಹನವಾಗಿಹ ನಿರ್ವಿಷಯ ಧ್ಯಾನಿಸುತ
ಸಹನ ಮೂರುತಿಯಾಗಿ ಅರಿಗಳಂ ನಿಗ್ರಹಿಸಿ
ಬಹಳ ತ್ಯಾಗವ ಗೈವ | ಜಗದಮಿತ್ರ

ತನ್ನಾಪ್ತರಂ ತಂದೆ-ತಾಯ್ಗಳಂ ತೊರೆಯುತ್ತ
ಮುನ್ನ ಎಲ್ಲರನೊಮ್ಮೆ ಮನದಿ ಧ್ಯಾನಿಸುತ
ಘನ್ನ ಮಹಿಮನ ನೋಳ್ಪ ಹೊಸದಾದ ಒಸಗೆಯಲಿ
ತನ್ನತನವನು ತೊರೆವ | ಜಗದಮಿತ್ರ

ಆಟಪಾಠದ ದಿನವ ಬದಿಗಿರಿಸಿ ನೋಂಪಿಯಲಿ
ಕಾಟಕಾಂಬರನ ರೂಪವ ನಿಲಿಸಿ ಮನದಿ
ಕೋಟಿ ಹಲವನು ಮೀರಿ ತನ್ನಾತ್ಮ ವೀಣೆಯಂ

ಮೀಟಿ ತಂತಿಯ ಮೆರೆವ | ಜಗದಮಿತ್ರ


ಬಣ್ಣ ದಿರಿಸುಗಳೆಲ್ಲ ಬದಿಗಿರಿಸಿ ಸಣ್ಣನೆಯ
ಚಣ್ಣ ಕೌಪೀನ ಕಾವಿಯ ಶಾಟಿ ಧರಿಸಿ

ಕಣ್ಣನೀರನು ಒರೆಸೆ ಜಗದಿ ಹಲವರಿಗಾಗಿ

ಅಣ್ಣ ತೆರೆದನು ಶಾಲೆ | ಜಗದಮಿತ್ರ


ಸತತ ಓಂಕಾರವನು ಹೃದಯಕಮಲದಿ ಹುದುಗಿ
ಪತಿತ ಪಾವನ ಪದವ ನಿತ್ಯ ನೋಡುತಲಿ

ಕಥಿತ ದೃಷ್ಟಾಂತಗಳ ಸಾಕಾರತೋರ್ಪಡಿಸಿ

ಮಥಿತ ಮೊಸರಿನ ತೆರದಿ | ಜಗದಮಿತ್ರ


ನಿಜದ ನೆಲೆ ಅರಿವೆಡೆಗೆ ಸುಜನಹೃದಯದಿ ಯತ್ನ
ರಜ ಸತ್ವ ತಾಮಸದ ಗಡಿಯ ಮೀರುತಲಿ
ಅಜ ಹರಿ ಹರರನ್ನು ಭಜಿಸಿ ಒಂದೇ ಪದದಿ

ಸಜೆಯ ಬಿಡಿಸುವ ನೋಡ | ಜಗದಮಿತ್ರ


ಗುರುವು ತನದೇ ಅರಿವು ನಿರ್ವಿಣ್ಣ ರೂಪದಲಿ
ಧರೆಯ ಹಂಗನು ತೊರೆವ ಭವದ ಬದುಕಿನಲಿ
ಪರಮಹಂಸ ಎಂಬ ಸ್ಥಿತಿಯ ಭುಂಜಿಸತೊಡಗಿ

ಹರಸಿ ಎಲ್ಲರ ಪೊರೆವ | ಜಗದಮಿತ್ರ