ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, November 22, 2012

ಪುರುಷೋತ್ತಮ ಪುರಿಯ ರಹಸ್ಯ-೨


ಪುರುಷೋತ್ತಮ ಪುರಿಯ ರಹಸ್ಯ-೨

[ಮುಂದುವರಿದು ಈಗ ಇದು ಎರಡನೇ ಭಾಗ ]

ಪ್ರಮಾದ [ಪೀತ] ಸಾಹಿತ್ಯವನ್ನು ಓದುವುದು ಕ್ಷಣಿಕವಾಗಿ ಮುದವನ್ನು ನೀಡಬಹುದಾದರೂ ಅಂತ್ಯದಲ್ಲಿ ಅದರಿಂದ ಮನೋವೈಕಲ್ಯತೆ ಉಂಟಾಗುತ್ತದೆ; ಹಲವು ವಿಕಾರಗಳು ಮನದ ತುಂಬೆಲ್ಲಾ ತುಂಬಿಕೊಳ್ಳುತ್ತವೆ. ಕಾಲದ ಮಹಿಮೆಯಿಂದ ಬೇಡದ್ದು ಬೇಕಾಗುವುದು, ದುಷ್ಟರೇ ಶಿಷ್ಟರಂತೇ ವಿಜೃಂಭಿಸುವುದು, ಮದ್ಯ-ಮಾಂಸ-ಮಾನಿನಿಯರ ಸಹವಾಸ ಇರುವವರೇ ಸಂಭಾವಿತರಾಗಿಯೂ ನಾಗರಿಕರೆನಿಸಿಯೂ ಬದುಕುವುದು ಇಂದಿನ ವಿಧಿನಿಯಮ. ಮಾಧ್ಯಮಗಳಲ್ಲಿ ಪ್ರತೀ ಹಗಲು ಪ್ರತೀ ರಾತ್ರಿ ಕೊಲೆ-ಸುಲಿಗೆ-ದರೋಡೆ-ಮಾನಭಂಗ-ಪರಸ್ತ್ರೀ ಸಂಗ ಮೊದಲಾದ ಹಲವು ಸಲ್ಲದ ಘಟನಾವಳಿಗಳ ಮಹಾಪೂರವೇ ಹರಿದುಬರುತ್ತಿದೆ. ಘಟನೆಗಳನ್ನು ಪುನರ್ಸೃಷ್ಟಿಗೊಳಿಸಿ ವೈಭವೀಕರಿಸಿ ತನ್ಮೂಲಕ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದನ್ನೇ ಉದ್ದೇಶವಾಗಿಸಿಕೊಂಡವರು ಮೌಲ್ಯಗಳಿಗೆ ಆದ್ಯತೆ ನೀಡುತ್ತಿಲ್ಲ. ಎಷ್ಟೋ ಕಡೆ ಅಬಾಲವೃದ್ಧರಾದಿಯಾಗಿ ಮನೆಯವರೆಲ್ಲರೂ ಕುಳಿತು ನೋಡುವ ಕೆಟ್ಟಪರಿಪಾಠ ಬೆಳೆದುಬಿಟ್ಟಿದೆ. ಭಜನೆ, ಕೀರ್ತನೆ-ಸಂಕೀರ್ತನೆ, ಪ್ರವಚನ, ಅಥವಾ ಜೀವನದ ಉನ್ನತ ಮೌಲ್ಯಗಳ ಬಗೆಗೆ ಯಾವುದೇ ಕಾರ್ಯಕ್ರಮಗಳಿದ್ದರೆ ಅವುಗಳನ್ನು ನೋಡುವವರು ಕಮ್ಮಿಯಾಗಿದ್ದಾರೆ. ನಾವು ಸೇವಿಸುವ ಆಹಾರ ಕೂಡ ನಮ್ಮ ಮನದಮೇಲೆ ಪರಿಣಾಮ ಬೀರುತ್ತದೆ ಎಂಬ ವೈಜ್ಞಾನಿಕ ನಿಲುವನ್ನು ಅನೇಕರು ಅಲ್ಲಗಳೆಯುತ್ತಾರೆ. ಅಧುನಿಕ ವಿಜ್ಞಾನದ ಆವಿರ್ಭಾವ ಆಗಿರದ ಆ ಕಾಲದಲ್ಲೇ ಬೆಳಿಗ್ಗೆ ಎದ್ದೊಡನೆ [ಶುದ್ಧ ಆಮ್ಲಜನಕವನ್ನು  ಹೇರಳವಾಗಿ ಹೊರಸೂಸುವ] ಅಶ್ವತ್ಥವೃಕ್ಷವನ್ನು ಸುತ್ತಬೇಕೆಂದರು ನಮ್ಮ ಪೂರ್ವಜರು, ಕೊನೇಪಕ್ಷ ಅಂಗಳದಲ್ಲಿರುವ [ಕಾಮಹಾರಿಣಿಯಾದ] ತುಳಸಿಯನ್ನಾದರೂ ಸುತ್ತಬೇಕು ಎಂದರು. ಆಹಾರದಲ್ಲಿ ಸ್ವಾಭಾವಿಕವಾಗಿ ಕೆಲಮಟ್ಟಿಗೆ ಕಾಮೋತ್ತೇಜಕ ಪದಾರ್ಥಗಳು ಸೇರಿರುತ್ತವೆ.

ಕಾಂದಾಬಜೆ ಅಥವಾ ಈರುಳ್ಳಿ ಬಜ್ಜಿ-ಪಕೋಡ ಕರಿಯುವಾಗ ಮೈಲಿಗಟ್ಟಲೇ ಅದರ ಪರಿಮಳ ಹರಡಿ ಜಿಹ್ವಾಚಾಪಲ್ಯದವರನ್ನು ತಿನ್ನಲು ಕರೆಯುತ್ತದೆ! ಈರುಳ್ಳಿ-ಬೆಳ್ಳುಳ್ಳಿ ಇಂಥವೂ ಕೂಡ ಕಾಮೋತ್ತೇಜಕಗಳಾಗಿವೆ. ಅಡಿಗೆ ಮಾಡಿ ತೋರಿಸುವಾಗ ಜನ ರುಚಿಗೆ ತಕ್ಕಷ್ಟು ಉಪ್ಪು ಎಂಬುದು ವಾಡಿಕೆ, ಅದರಂತೇ ಜೀವನಕ್ಕೆ ಧರ್ಮ, ಅರ್ಥ, ಕಾಮ, ಮೋಕ್ಷದ ಜೊತೆಗಿರುವ ಕಾಮ ಇರಬೇಕಾದುದು ಸಂಸಾರಿಗಳಿಗೆ ಸಹಜ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸಾಲಿನಲ್ಲಿರುವ ಕಾಮ ಅಂಟಿಕೊಂಡಾಗ ಜೀವನ  ಇಲ್ಲದ್ದನ್ನು ಬಯಸುತ್ತದೆ! ಧರ್ಮದ ಮೇರೆಮೀರಿ ಕಾಮ ವಿಕಾರಗಳು ಉದ್ಭವವಾಗುತ್ತವೆ. ಪೀತ ಸಾಹಿತ್ಯ ಕೂಡ ಕೆಟ್ಟ ಕೆಲಸಕ್ಕೆ ಅನುಮೋದನೆ ನೀಡುತ್ತದೆ! ಉತ್ತಮವಾದುದನ್ನು ಓದಿದಾಗ ಮನಸ್ಸು ಉತ್ತಮ ನಡೆಯಲ್ಲೇ ಹೆಜ್ಜೆ ಹಾಕುತ್ತದೆ. ನಿಮ್ನವಾದುದನ್ನು ಓದಿದರೆ, ನೋಡಿದರೆ ಮನಸ್ಸು ಆ ಕಡೆಗೇ ವಾಲುತ್ತದೆ. ಕೊಳೆಗೇರಿಯಲ್ಲೇ ಹುಟ್ಟಿ ಅಲ್ಲೇ ಬೆಳೆಯುವ ವ್ಯಕ್ತಿಗೆ ಅದರಿಂದಾಚೆ ಬಂದರೂ ಅದೇ ಸುಖವೆನಿಸುತ್ತದೆ! ಜನ್ಮದಾರಭ್ಯ ಶುಭ್ರವಾದ ಬಟ್ಟೆಗಳನ್ನೋ ಶ್ವೇತವರ್ಣದ ಬಟ್ಟೆಗಳನ್ನೋ ಧರಿಸಿ ಬೆಳೆದ ವ್ಯಕ್ತಿಗೆ ಕೊಂಚ ಕೊಳೆ ತಗುಲಿದರೂ ಅದನ್ನು ತೊಳೆದುಕೊಳ್ಳುವ ವರೆಗೆ ಮನಸ್ಸು ಚಡಪಡಿಸುತ್ತದೆ! ಆಚಾರವಂತ ಬ್ರಾಹ್ಮಣರನೇಕರು ಇಂದಿಗೂ ಈರುಳ್ಳಿ-ಬೆಳ್ಳುಳ್ಳಿಯನ್ನು ಈ ಕಾರಣದಿಂದ ತಿನ್ನುವುದಿಲ್ಲ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಊಟವಾದಮೇಲೆ ಅವರು "ಸುಮನಸಃ ಅಸ್ತು  ಸೌಮನಸ್ಯಂ" ಎಂದುಚ್ಚರಿಸುತ್ತಾ ತುಳಸೀ ದಳಗಳನ್ನು ತಿನ್ನುತ್ತಾರೆ. ತುಳಸಿಯಲ್ಲಿ ಕಾಮವಿಕಾರಗಳನ್ನು ತಡೆಗಟ್ಟುವ ಗುಣವಿದೆ. ತುಳಸಿಯ ಸುತ್ತಲ ಹವೆಯಲ್ಲಿ ಕಾಮನಿಗ್ರಹದ ಗುಣವಿರುತ್ತದೆ! ಅದಕ್ಕೆಂದೇ ಋಷಿಗಳಾದಿಯಾಗಿ ಪೂರ್ವಜರು ತುಳಸಿಯನ್ನು ಬಳಸಿದರು. ಕಂಡ ಕಂಡ ಕಾಡುಗಿಡಗಳಿಗೆಲ್ಲಾ ಹಾಗೆ ಆದ್ಯತೆ ನೀಡಲಾಗುವುದೇ? ತುಳಸಿಯಲ್ಲಿ ಹಲವು ಔಷಧೀಯ ಗುಣಗಳನ್ನು ಅವರು ಕಂಡುಕೊಂಡಿದ್ದರು; ತುಳಸಿ ನಿತ್ಯ ಪೂಜನೀಯ ಎಂದರು, ಮನೆಯಮುಂದೆ ಬಲಪಾರ್ಶ್ವದಲ್ಲಿ ಇದ್ದರೆ ಒಳಿತು ಎಂದರು; ದೇವರಿಗೆ ಅತಿ ಪ್ರೀತಿ ಎಂದರು. ಕಾಮಹಾರಿಣಿಯಾದ ತುಳಸಿ ಸನ್ಯಾಸಿಗಳಿಗೂ ಬಹಳ ಇಷ್ಟ. ಅದಕ್ಕೆಂದೇ ಸನ್ಯಾಸಿಗಳಿಗೆ ಬೇರೆಲ್ಲಾ ಹಾರಗಳಿಗಿಂತಾ ತುಳಸೀಕೊಂಬೆಗಳ ಹಾರವನ್ನು ಹಾಕುತ್ತಾರೆ. ಪ್ರಪಂಚದಲ್ಲಿ ಯಾವ ಧರ್ಮ ಶ್ರೇಷ್ಠ ಎಂಬ ಪ್ರಶ್ನೆ ಬಂದಾಗ ಯಾವ ಧರ್ಮ ಆಚರಿಸುವ ವ್ಯಕ್ತಿಯ ಒಳಿತನ್ನೂ ಮತ್ತು ಸುತ್ತಲ ಸಮಾಜದ ಒಳಿತನ್ನೂ ಏಕಕಾಲಕ್ಕೆ ಎತ್ತಿಹಿಡಿಯುತ್ತದೋ ಅಂತಹ ಧರ್ಮ ಶ್ರೇಷ್ಠ ಮಾನವಧರ್ಮವಾಗುತ್ತದೆ; ಈ ಪ್ರಪಂಚದಲ್ಲಿ ಹಾಗಿರುವುದು ಸನಾತನ ಜೀವನಧರ್ಮ ಮಾತ್ರ ಎಂಬುದನ್ನು ಮರೆಯಬಾರದು-ಅದಕ್ಕೇ ’ಧರ್ಮೋ ರಕ್ಷತಿ ರಕ್ಷಿತಃ’ ಎಂದು ಪ್ರಾಜ್ಞರು ತಿಳಿಸಿದ್ದಾರೆ[ಈ ವಿಷಯವನ್ನು ಪ್ರತ್ಯೇಕವಾಗಿ ಸವಿವರವಾಗಿ ಮುಂದೊಮ್ಮೆ ತಿಳಿಯೋಣ.]   

ಪಂಚತಂತ್ರದ ಅಪರೀಕ್ಷಿತಕಾರಕ ಭಾಗದಲ್ಲಿ ತಿರುಕನ ಕನಸು ಎಂಬ ಕಥೆಯೊಂದು ಬರುತ್ತದೆ. ತಿರುಕನ ಕನಸಿನ ಬಗ್ಗೆ ಕನ್ನಡದ ಕವಿಯೋರ್ವರು ಬರೆದ ಹಾಡನ್ನು ನಾವೆಲ್ಲಾ ಕೇಳಿದ್ದೇವಲ್ಲವೇ?   

ತಿರುಕನೋರ್ವನೂರಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸು ಕಂಡನಂತೇನೆ
.
.
.
.
ಬಿಡದೆ ಯಾರ ಕೊರಳಿನಲ್ಲಿ
ತೊಡರಿಸುವುದೊ ಅವರ ಪಟ್ಟ
ಪೊಡವಿಯಾಳ್ವೆನೆಂದು ಮನದಿ ಹಿಗ್ಗುತಿರ್ದನು
.
.
.
ಮುನಿದ ನೃಪರ ದಂಡುಬಂದು
ಮನೆಯಮುತ್ತಿದಂತೆಯಾಗಿ
ಕನಸುಕಾಣುತೆದ್ದು ಹೆದರಿ ಕಣ್ಣುತೆರೆದನು 


ಅಲ್ಲವೇ ? ಈ ಕಥೆಗೆ ತುಸು ಭಿನ್ನವಾಗಿ ಕಾಣುವ ತಿರುಕನ ಕಥೆ ಭಿಕ್ಷುಕರಲ್ಲೂ ಲೋಭಿಗಳು ಇರುತ್ತಾರೆ ಎಂಬುದನ್ನು ಹೇಳುವುದರ ಜೊತೆಗೆ ಕನಸಿನ ಸೌಧ ಕಟ್ಟುವ ಮನಸ್ಸಿಗೆ  ಯಾವುದೇ ಇತಿಮಿತಿಗಳಿರುವುದಿಲ್ಲ ಎಂಬುದನ್ನೂ ಸೂಚಿಸುತ್ತದೆ. ಆ ಕಥೆ ಹೀಗಿದೆ: ಓಬೀರಾಯನ ಕಾಲದ ನಗರವೊಂದರಲ್ಲಿ ರಂಗಣ್ಣನೆಂಬ ತಿರುಕ ಮಹಾಕೃಪಣನಾಗಿದ್ದು, ದಿನಾ ಬೇಡಿತಂದ ಹಿಟ್ಟಿನಲ್ಲಿ ಅಲ್ಪಸ್ವಲ್ಪವನ್ನು ಉಳಿಸಿ ಒಂದು ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿ ಅದನ್ನು ಆತ ನೆಲೆಸಿದ್ದ ಮುರುಕಲು ಮನೆಯ ಗೋಡೆಯ ಗೂಟಕ್ಕೆ ನೇತು ಬಿಟ್ಟಿದ್ದ. ಹರಕುಮುರುಕು ಮಂಚದಲ್ಲಿ ಅಂಗಾತ ಮಲಗಿ ನಿತ್ಯವೂ ಬಹಳ ಹೊತ್ತು ಅದನ್ನೇ ದಿಟ್ಟಿಸುತ್ತಾ ಒರಗಿರುತ್ತಿದ್ದ. ಒಮ್ಮೆ ಹೀಗೇ ಒರಗಿರುತ್ತಾ ಕನಸುಕಂಡು ಈಗೇನಾದರೂ ಕ್ಷಾಮಬಂದರೆ ಹಿಟ್ಟಿನಿಂದ ತುಂಬಿಹೋಗಿರುವ ಮಡಿಕೆಯನ್ನು ಯೋಗ್ಯ ಬೆಲೆಗೆ ಮಾರಾಟಮಾಡಿ ಎರಡು ಆಡುಗಳನ್ನು ಕೊಂಡುಕೊಳ್ಳುತ್ತೇನೆ ಎಂದುಕೊಂಡ. ಕನಸು ಮುಂದುವರಿಯಿತು. ಆಡುಗಳು ಮರಿಹಾಕಿದವು, ಅವುಗಳನ್ನೆಲ್ಲಾ ಮಾರಿ ಹಸುಗಳನ್ನು ಕೊಂಡ, ಹಸುಗಳ ಹೈನವನ್ನೆಲ್ಲಾ ಮಾರಿ ಎಮ್ಮೆಗಳನ್ನು ಕೊಂಡ, ಎಮ್ಮೆಗಳನ್ನೆಲ್ಲಾ ಮಾರಿ ಕುದುರೆಗಳನ್ನು ಕೊಂಡ. ಕುದುರೆಗಳ ಸಂತಾನಾಭಿವೃದ್ಧಿಯಿಂದ ಅವುಗಳ ಸಂಖ್ಯಾವೃದ್ಧಿಯಾಗಿ, ಅವುಗಳನ್ನೆಲ್ಲಾ ಮಾರಿ ಭಾರೀ ಶ್ರೀಮಂತನಾಗಿ ಬಂಗಲೆಯೊಂದನ್ನು ಕಟ್ಟಿಸಿದ. ಊರಿನ ದೊಡ್ಡ ಶ್ರೀಮಂತರು ಬಂದು ತಮ್ಮ ಮಗಳನ್ನು ಕೊಡುತ್ತೇವೆ ಮದುವೆಯಾಗು ಎಂದು ಒತ್ತಾಯಿಸಿದರು. ಸುರಸುಂದರಾಂಗಿಯೋರ್ವಳನ್ನು ಮದುವೆಯಾದ ಆತನಿಗೆ ಗಂಡುಮಗುವೊಂದು ಜನಿಸಿ, ಮಗುವಿಗೆ ಪೂರ್ಣಚಂದ್ರನೆಂದು ನಾಮಕರಣವನ್ನೂ ಮಾಡಿದ. ಮಗುವು ಅಂಬೆಗಾಲಿಡುತ್ತಾ, ಆತ ಸವಾರಿ ಮಾಡುವ ಕುದುರೆ ಲಾಯದೆಡೆಗೆ ಹೋದಾಗ, ಮೋಹನಾಂಗಿಯಾದ ಅರ್ಧಾಂಗಿಯನ್ನು ಕರೆದು, " ಎಲಗೇ, ಪಾಪು ಕುದುರೆಬಳಿ ಹೋಗುತ್ತಿದ್ದಾನೆ, ಜೋಕೆ, ನೋಡಿಕೋ" ಎಂದು ಗತ್ತಿನಿಂದ ಆಜ್ಞಾಪಿಸಿಯೂ ಬಿಟ್ಟ. ಆಕೆ ಸಲಿಗೆಯಿಂದ "ನಿಮಗೇನು ಧಾಡಿ? ನಾನು ಒಂಬತ್ತು ತಿಂಗಳು ಹೊತ್ತು ಹೆತ್ತು ಸುತ್ತಿದುದು ಸಾಲದೇ? ನಿಮ್ಮ ಕೂಸನ್ನು ನೀವೇ ನೋಡಿಕೊಳ್ಳಿ" ಎಂದೇನಾದರೂ ಅಂದರೆ ತಕ್ಷಣ ಹೆಂಡತಿಗೆ ಹೀಗೆ ಒದೆಯುತ್ತೇನೆ ಎನ್ನುತ್ತಾ ಗೂಟಕ್ಕೆ ನೇತುಬಿಟ್ಟಿದ್ದ ಹಿಟ್ಟಿನ ಕುಡಿಕೆಗೆ ಚೆನ್ನಾಗಿ ಒದ್ದೇಬಿಟ್ಟ. ಗಡಿಗೆ ಇಬ್ಭಾಗವಾಯ್ತು ಕನಸೂ ಹಾರಿಹೋಯ್ತು! ತಿರುಕ ವಾಸ್ತವಕ್ಕೆ ಬಂದ.  

ಕನಸುಕಾಣುವುದ ತಪ್ಪಲ್ಲ, ಆದರೆ ಕಾಣುವ ಕನಸೆಲ್ಲಾ ನನಸಾಗಲೇಬೇಕೆಂದೇನೂ ಇಲ್ಲ. ಕನಸಿನಲ್ಲೂ ವಿಧಗಳಿವೆ. ದೈವಿಕವಾದ ಅಥವಾ ಅಲೌಕಿಕವಾದ ಕನಸು, ಲೌಕಿಕವಾದ ಅಥವಾ ಪ್ರಾಪಂಚಿಕ ವ್ಯವಹಾರಗಳ ಕನಸು, ಹಗಲುಗನಸು ಹೀಗೆ ಅವುಗಳನ್ನು ಹೆಸರಿಸಬಹುದಾಗಿದೆ. ಭೌತಿಕ ಶರೀರಕ್ಕೂ ಕೂಡ ಮೂರು ಆಯಾಮಗಳು: ಅವು ಜಾಗೃತ್, ಸುಷುಪ್ತ ಮತ್ತು ಸ್ವಪ್ನ. ಎಚ್ಚರವಾಗಿರುವುದು ಜಾಗೃತಾವಸ್ಥೆ, ಗಾಢವಾಗಿ ನಿದ್ರಿಸುವುದು ಸುಷುಪ್ತಾವಸ್ಥೆ ಮತ್ತು ಕನಸುಕಾಣುವುದು ಸ್ವಪ್ನಾವಸ್ಥೆ. ದೈವೀಭಕ್ತರು, ಸಾಧಕರು ಸ್ವಪ್ನಾವಸ್ಥೆಯಲ್ಲಿ ಅಲೌಕಿಕವಾದ ಕನಸನ್ನೇ ಕಾಣುತ್ತಾರೆ. ಸಂಸಾರಿಗಳು, ಜನಸಾಮಾನ್ಯರು ಲೌಕಿಕವಾದ ಕನಸುಗಳನ್ನು ಕಾಣುತ್ತಾರೆ. ಅರಿಷಡ್ವರ್ಗಗಳನ್ನು ಅನವರತ ಆರಾಧಿಸಿ ತಮ್ಮಲ್ಲೇ ಹುದುಗಿಸಿಕೊಂಡವರು ಹಗಲುಗನಸನ್ನು ಬಹುವಾಗಿ ಕಾಣುತ್ತಾರೆ: ಉದಾಹರಣೆಗೆ ನಮ್ಮ ರಾಜಕಾರಣಿಗಳು: ಪಾಕಿಸ್ತಾನ-ಭಾರತ ಯುದ್ಧದಲ್ಲಿ, ಪಾಕಿಗಳು ಸೋತು, ಭಾರತದ ಸೈನ್ಯಕ್ಕೆ ಸೆರೆಸಿಕ್ಕ ಸಹಸ್ರಾರು ಪಾಕೀ ಸೈನಿಕರನ್ನು ತಮ್ಮ ಸ್ವಾರ್ಥ ಸಾಧನೆಯ ಹಗಲುಗನಸುಕಂಡು ಬಿಡುಗಡೆಗೊಳಿಸಿದವರು ಇಂದಿರಾಗಾಂಧಿಯವರು. ಅದೇ ಇಂದಿರಾ ಅವರು ಭಾರತೀಯರೇ ತನ್ನ ವಿರುದ್ಧ ಸಿಡಿದೆದ್ದಾಗ ಮೀಸಾಕಾಯ್ದೆಯನ್ನು ಜಾರಿಗೊಳಿಸಿ ಹಲವರನ್ನು ಬಂಧಿಸಿದರು. ಭಾರತ ತನ್ನ ಸಂತತಿಯ ಕಾಂಗ್ರೆಸ್ ಸಾಮ್ರಾಜ್ಯವೇ ಅಗಿರಬೇಕೆಂಬ ಹಗಲುಗನಸು ಅವರದಾಗಿತ್ತು! ವಿಮಾನ ಸಾರಿಗೆಯ ಅನುಭವವಿಲ್ಲದ ಉದ್ಯಮಿ ಮಲ್ಯ ಸಾವಿರ ಸಾವಿರ ಕೋಟಿಗಳನ್ನು ಬಾಚಿಕೊಳ್ಳುವ ಹಗಲುಗನಸು ಕಂಡಿದ್ದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರಾಗೈತಿಹಾಸದಲ್ಲಿ ಕಂಸನಿಗೆ ಹಳಸ್ಲು ಅನ್ನವನ್ನುಂಡು ಕತ್ತೆಯನ್ನಡರಿ ದಕ್ಷಿಣದಿಕ್ಕಿಗೆ ಹೋದಂತೇ ದುಃಸ್ವಪ್ನ ಕಾಣಿಸಿತ್ತು, ಸಹಿಸಲಾರದ ತಲೆನೋವುಬಂದಿತ್ತು; ಅದಾದ ಕೆಲದಿನಗಳಲ್ಲೇ ಕೃಷ್ಣ ಕಂಸನನ್ನು ವಧಿಸಿದ- ಇದು ದೈವಿಕ ದಾಳಿಯ ಮುನ್ಸೂಚನೆಯ ಕನಸು. ಇಂದು ಸಮಾಜದಲ್ಲಿ ಹಲವು ಮಂದಿ ಕಂಸರಿದ್ದಾರೆ-ಕೃಷ್ಣರುಗಳ ಬರುವಿಕೆಗೆ ನಾವೆಲ್ಲಾ ಕಾದಿದ್ದೇವೆ!      

ದಶಾವತಾರಗಳಲ್ಲಿ ಒಂದಾದ ಶ್ರೀರಾಮಾವತಾರದ ಕಥೆಯೇ ವಾಲ್ಮೀಕಿ ರಾಮಾಯಣ; ಅದು ಸೂರ್ಯವಂಶದವರ ಕಥೆಯಾಗಿದ್ದು ದೈವತ್ವವನ್ನೇ ಮೈವೆತ್ತ ರಾಮನೇ ಅಲ್ಲಿ ಕಥಾನಾಯಕ. ಧರ್ಮಾಧರ್ಮಗಳ ನಿಷ್ಕರ್ಷೆಯಲ್ಲಿ ರಾಜರುಗಳ ಜೊತೆಗೆ ಮಿಕ್ಕವರು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಅಲ್ಲಿ ಸಿಗದ ವಿವರಗಳನ್ನು ತಿಳಿಸಿಕೊಡುವುದಕ್ಕಾಗಿ ಮಹರ್ಷಿ ವೇದವ್ಯಾಸರು ಭಾರತವನ್ನು ಬರೆದರು; ಅದು ಚಂದ್ರವಂಶದವರ ಕಥೆ. ಭಾರತ ಭಾರತದ ಕಥೆ-ಅದು ನಂತರ ಮಹಾಭಾರತವೆಂದೂ ಪಂಚಮವೇದವೆಂದೂ ಪ್ರಸಿದ್ಧವಾಯ್ತು. ರಾಜನೀತಿಯನ್ನು ವಿಶದವಾಗಿ ತಿಳಿದುಕೊಳ್ಳಲು ಇಂದಿಗೂ ಅದು ಆಕರವಾಗುತ್ತದೆ; ಆಧಾರವಾಗುತ್ತದೆ. ರಾಜನೀತಿಯಲ್ಲಿ ನಾವು ನಡೆಯುವುದಾದರೆ ಪಾಕಿಸ್ತಾನದ ಕಥೆ ಅದೆಂದೋ ಮುಗಿದುಹೋಗಬೇಕಿತ್ತು; ಸಾಮ, ದಾನ, ದಂಡ, ಭೇದ ಯಾವ ನೀತಿಗೂ ನಿಲುಕದ ಪಾತಕಿಗಳೇ ತುಂಬಿರುವ ಪಾಕಿಸ್ತಾನ ಆಮೂಲಾಗ್ರ ನಿರ್ನಾಮವಾಗದ ಹೊರತು ಭಾರತವಷ್ಟೇ ಅಲ್ಲ, ಜಗತ್ತಿಗೇ ನೆಮ್ಮದಿಯಿಲ್ಲ, ಸುಖವಿಲ್ಲ; ಯಾವ ಕ್ಷಣದಲ್ಲೂ ಎಲ್ಲಾದರೂ ಉಗ್ರರು ಯಾವುದೋ ಸೋಗಿನಲ್ಲಿ ಬಂದು ಮಾರಣಹೋಮ ನಡೆಸುಬಹುದಾದ ಚಾಲ್ತಿ ಖಾತೆ ಅದು! ಗಾಂಧಾರ[ಈಗಿನ ಕಂದಹಾರ] ದೇಶ ಮೊದಲಿನಿಂದಲೂ ಅಂತಹ ಜನಗಳನ್ನೇ ಹೆತ್ತಿದ್ದಕ್ಕೆ ದಾಖಲೆಗಳಿವೆ; ಅಲ್ಲಿ ಜನಿಸುವವರೆಲ್ಲಾ ರಕ್ಕಸ ಸ್ವಭಾವದವರೇ. ಸೆರೆಸಿಕ್ಕ ಉಗ್ರರನ್ನು ವಿಚಾರಣೆಗಾಗಿ ಇಟ್ಟುಕೊಳ್ಳಲು ತಗಲುವ ವೆಚ್ಚದ ಹಣ ದೇಶದ ಬಡವರ ಭಾಗ್ಯನಿಧಿಯಾಗಿ ವಿನಿಯೋಗಿಸಲ್ಪಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಸೆರೆಸಿಕ್ಕ ಪಾಪಿಗಳನ್ನು ನಿರ್ದಾಕ್ಷಿಣ್ಯವಾಗಿ ವಾರವೊಪ್ಪತ್ತರಲ್ಲಿ [ಅವರಿಂದ ಮಾಹಿತಿಗಳನ್ನು ಪಡೆದು] ಮುಗಿಸಿಬಿಟ್ಟರೆ ಉಗ್ರರ ಅಟ್ಟಹಾಸಕ್ಕೆ ಅದೇ ತಕ್ಕಮದ್ದಾಗುತ್ತದೆ. ಮನೆಯಲ್ಲೇ ಇರುವ ಹೊಸ ಹೊಸ ಉಗ್ರ ಸಂಘಟನೆಗಳು ಮದರಸಾದಲ್ಲಿ ತಯಾರಾಗುತ್ತವೆ! ದೇಶವ್ಯಾಪಿ ಅಕ್ಟೋಪಸ್ ರೀತಿಯಲ್ಲಿ ಹಬ್ಬಿರುವ ಅಂಥಾ ಸಂಘಟನೆಗಳನ್ನು ಬೇರುಸಹಿತ ಕಿತ್ತೆಸೆಯದ ಹೊರತು ಭಾರತೀಯತೆಗೆ ಉಳಿಗಾಲವಿಲ್ಲ; ಜಿಹಾದಿಗಳು ಸಭ್ಯರಲ್ಲ. ಒತ್ತಾಯದಿಂದ ಹೊಡೆದು, ಬಡಿದು ಮಾಡಿಯಾದರೂ ಧರ್ಮವನ್ನು ವಿಸ್ತರಿಸು ಎಂಬ ಹೇಳಿಕೆಯಿರುವ ಧರ್ಮಗ್ರಂಥವನ್ನಾಧರಿಸಿದ ಧರ್ಮ ಅದೆಂಥದ್ದು ಎಂದು ಪ್ರತ್ಯೇಕ ಹೇಳಬೇಕಿಲ್ಲ; ಜಿಹಾದಿಗಳ ಸಂಖ್ಯೆ ವಿಪರೀತಕ್ಕೆ ಏರುವ ಮೊದಲು ಅವರನ್ನು ಮಟ್ಟಹಾಕದಿದ್ದರೆ ನಮ್ಮ ವಿನಾಶಕ್ಕೆ ನಾವೇ ಪರೋಕ್ಷ ಕಾರಣರಾಗುತ್ತೇವೆ. ಈ ನಿಟ್ಟಿನಲ್ಲಿ ಒಂದಂತೂ ಸ್ಪಷ್ಟ: ಪಾಕಿಸ್ತಾನಕ್ಕೆ ಬಹಳಕಾಲದ ಭವಿಷ್ಯವಿಲ್ಲ, ಹಿಂದೂಸ್ಥಾನದಲ್ಲಿದ್ದೇ ಒಳಗಿನಿಂದ ಆ ಪಾಕಿಸ್ತಾನವನ್ನು ಅನುಮೋದಿಸುವ ದೇಶದ್ರೋಹಿಗಳಿಗೂ ಕೂಡ ಬಹಳಕಾಲದ ಗಡುವು ಇರುವುದಿಲ್ಲ.

ಇರಲಿ, ಪಂಚತಂತ್ರದ ಲಬ್ಧಪ್ರಣಾಶ ವಿಭಾಗದಲ್ಲಿ ಸಿಂಹಸಾಕಿದ ನರಿಯ ಕಥೆ ಬರುತ್ತದೆ. ಆ ಕಥೆಯನ್ನು ಸ್ವಲ್ಪ ತಿಳಿದುಕೊಳ್ಳುವುದು ಮುದನೀಡುತ್ತದೆ ಎನಿಸಿತು [ಕಥೆಗಳ ಸಾರವನ್ನಷ್ಟೇ ಹೇಳುತ್ತಿದ್ದೇನೆ]: ಕಾಡೊಂದರಲ್ಲಿ ಸಿಂಹ-ಸಿಂಹಿಣಿ ವಾಸವಾಗಿದ್ದರು. ಮಾಮೂಲಿಯಾಗಿ ಹಸಿದಾಗ ಬೇಟೆಯಾಡುತ್ತಿದ್ದರು. ಒಂದುದಿನ ಬೇಟೆಗೆ ತೆರಳಿದ ಸಿಂಹಕ್ಕೆ ಯಾವುದೂ ಸಿಗಲಿಲ್ಲ; ನರಿಯ ಮರಿಯೊಂದು ಹತ್ತಿರಕ್ಕೆ ಬಂತು. ಅದನ್ನೇ ನಡೆಸಿಕೊಂಡು ಸಿಂಹಿಣಿಯಿದ್ದ ಗುಹೆಗೆ ಸಿಂಹ ನಡೆದ. "ಪ್ರಿಯೆ, ಇದು ನರಿಯಮರಿ, ಈ ಮೃಗಶಾಬಕನನ್ನು ಕೊಲ್ಲುವುದು ನನಗೆ ಸರಿಕಾಣಲಿಲ್ಲ. ಇದು ಆಹಾರದಿಂದ ನಮ್ಮ ಜಾತಿಗೆ ಹತ್ತಿರದ ಪ್ರಾಣಿ. ನೀತಿಸಾರ ಹೀಗಿದೆ: ಸ್ತ್ರೀಯರನ್ನೂ, ಬಾಲಕ-ಬಾಲಕಿಯರನ್ನೂ, ಯತಿಗಳನ್ನೂ ಎಂತಹ ಪ್ರಸಂಗದಲ್ಲೂ ಕೊಲ್ಲಬಾರದು ಎಂದು." ಗಂಡನ ಹೇಳಿಕೆಗೆ ಉತ್ತರಿಸಿದ ಸಿಂಹಿಣಿ ಪ್ರಾಣಹೋಗುವ ಕಾಲದಲ್ಲೂ ಅಕೃತ್ಯವನ್ನು ಎಸಗಬಾರದೆಂದೂ ತಾನೂ ಕೂಡ ನರಿಮರಿಯನ್ನು ಕೊಲ್ಲುವುದಿಲ್ಲವೆಂದು ತಿಳಿಸಿದಳು. ಸಿಂಹ ಸಿಂಹಿಣಿ ಆ ಮರಿಯನ್ನು ಬೆಳೆಸಲಾರಂಭಿಸಿದರು. ಕಾಲಕ್ರಮದಲ್ಲಿ ಸಿಂಹಿಣಿ ಗರ್ಭವತಿಯಾಗಿ ಎರಡು ಮರಿಸಿಂಹಗಳಿಗೆ ಜನ್ಮವಿತ್ತಳು. ಮರಿಗಳು ಆಡುತ್ತಾ ಬೆಳೆಯತೊಡಗಿದವು. ಒಂದು ದಿನ ಕಾಡಾನೆಯೊಂದು ಆ ಮಾರ್ಗವಾಗಿ ಧಾವಿಸಿ ಬಂತು. ಅಟ್ಟಿಸಿಕೊಂಡು ಹೋದ ಸಿಂಹದ ಮರಿಗಳ ಮುಂಚೂಣಿಯಲ್ಲಿದ್ದ ನರಿಮರಿ"ತಮ್ಮಂದಿರೇ ಅದು ನಮ್ಮವಂಶದ ವೈರಿ, ಅದರ ಬಳಿಗೆ ಹೋಗುವುದು ಒಳಿತಲ್ಲ" ಎನ್ನುತ್ತಾ ಹಿಂದಿರುಗಿ  ಗುಹೆಯೆಡೆಗೆ ಓಡಿತು. ತುಸುಹೊತ್ತು ತಡೆದು ಸಿಂಹದ ಮರಿಗಳು ಗುಹೆಗೆ ಮರಳಿ ನಗುತ್ತಾ ನಡೆದ ಘಟನೆಯನ್ನು ಅಮ್ಮನಿಗೆ ಅರುಹಿದವು. ಕೋಪಗೊಂಡ ಸೃಗಾಲವು ಹುಬ್ಬುಗಂಟಿಕ್ಕಿ ಕಠಿಣವಾಗಿ ಅವುಗಳನ್ನು ನಿಂದಿಸಿತು. ಆಗ ಸಿಂಹಿಣಿ ಆ ಸೃಗಾಲವನ್ನು ಪಕ್ಕಕ್ಕೆ ಕರೆದು" ಅಪ್ಪಾ ಮಗನೇ, ನೀನು ಹಾಗೆಲ್ಲಾ ಮಾಡಲಾಗದು, ಅವರು ನಿನ್ನ ತಮ್ಮಂದಿರಿರಬಹುದು, ಆದರೆ ಅವರು ಮಹಾ ಸತ್ವಶಾಲಿಗಳು." ನರಿಮರಿಗೆ ಇನ್ನಷ್ಟು ಕೋಪ ಉಕ್ಕಿ " ಅಮ್ಮಾ, ನಾನೇನು ರೂಪದಲ್ಲಿ, ಶೌರ್ಯದಲ್ಲಿ, ವಿದ್ಯಾಭ್ಯಾಸದಲ್ಲಿ, ಜಾಣತನದಲ್ಲಿ ಇವರಿಗಿಂತ ಕಡಿಮೆಯವನೇ? ಅವರು ನನ್ನನ್ನು ಇನ್ನೊಮ್ಮೆ ಹಾಸ್ಯಮಾಡಿದರೆ ನಾನು ಅವರನ್ನು ಕಚ್ಚಿ ಕೊಂದೇ ಬಿಡುವೆನು." ಇದನ್ನೆಲ್ಲಾ ನೋಡಿದ ಸಿಂಹಿಣಿಗೆ ಮುಂದೆ ಸೃಗಾಲಪುತ್ರನಿಗೆ ಒದಗಬಹುದಾದ ಆಪತ್ತಿನ ಅರಿವಾಗಿ " ಹಾಂಗಲ್ಲ ಅಪ್ಪಯ್ಯೋ, ನನ್ನ ಮುದ್ದು ಕಂದಾ ನೀನು ಬಹಳ ಜಾಣ, ಬಹಳ ಗಟ್ಟಿಗ, ನೀನು ಚಟುವಟಿಕೆಯಲ್ಲಿ ಸಮರ್ಥ, ತಂತ್ರ ಪಾರಾವಾರ ನಿಜ. ನೀನು ಸೃಗಾಲಿಯ ಪುತ್ರ. ನಾನು ನಿನ್ನ ಸಾಕುತಾಯಿ, ನಿನಗೆ ಎದೆಹಾಲು ಕೊಟ್ಟು ಮಮತೆಯಿಂದ ಸಾಕಿದವಳು ನಾನು. ನನ್ನ ಕುವರರಿಗೆ ನರಿಯೆಂದು ತಿಳಿದರೆ ಅವರು ನಿನ್ನನ್ನು ಶಿಕ್ಷಿಸದೇ ಬಿಡರು. ಅವರು ಅರಿಯುವ ಮುನ್ನ ನೀನು ಸಜಾತಿ ಬಾಂಧವರನ್ನು ಸೇರುವುದು ವಿಹಿತ." ಜಂಭುಕಸೂನು ವಿಷಯವನ್ನು ಕೇಳಿ ಭಯದಿಂದ ತಳಮಳಗೊಂಡಿತು. ಸಿಂಹಿಣಿಗೆ ವಂದಿಸಿ ಮೆಲ್ಲನೆ ನುಸುಳಿ ತನ್ನ ಜಾತಿಬಾಂಧವರನ್ನು ಸೇರಿಕೊಂಡು ಹರ್ಷಗೊಂಡಿತು.  

ಈ ಕಥೆಯಲ್ಲಿ ಭಾರತಮಾತೆ ಸಿಂಹಿಣಿ, ಸನಾತನ ಜೀವನಧರ್ಮವೇ ದೇವರು ಅರ್ಥಾತ್ ದೇವರೇ ಸಿಂಹ; ಸಿಂಹಿಣಿಯ ಯಜಮಾನ. ನಾವೆಲ್ಲಾ ಸಿಂಹ-ಸಿಂಹಿಣಿಯ ಮಕ್ಕಳು. ದೇಶವನ್ನು ಸೇರಿಕೊಂಡ ಸೃಗಾಲದ ಮರಿ ಯಾವುದೆಂದು ಹೇಳಬೇಕೇ? ಆ ಸೃಗಾಲದ ಮರಿ ಅದರ ಸ್ವಸ್ಥಾನಕ್ಕೆ ವಾಪಸ್ಸು ಹೋದರೆ ಅದಕ್ಕೇ ಒಳಿತು. ಒಂದೊಮ್ಮೆ ಹೋಗದೇ ಇಲ್ಲೇ ಇರುವುದಾದರೆ ಇಲ್ಲಿನ ಜೀವನಧರ್ಮಕ್ಕೆ ತೊಂದರೆಯಾಗದಂತೇ ನಡೆದುಕೊಳ್ಳಬೇಕು. ಅದುಬಿಟ್ಟು ಬಾಲಬಿಚ್ಚಿ ಸಿಂಹದಮರಿಗಳ ಜೊತೆ ಸೆಣಸಾಟಕ್ಕಿಳಿದರೆ ಸೃಗಾಲ ಬದುಕಿ ಉಳಿಯುವುದಿಲ್ಲ! ಹಾಗಾಗಿ ಈ ದೇಶವಾಸೀ ಗುಪ್ತ-ಜಿಹಾದಿಗಳು ಈ ಕುರಿತು ಚಿಂತಿಸಬೇಕು. ಈ ಕಥೆಯ ಸಾರ್ವಕಾಲಿಕತೆಯನ್ನು ನೋಡಿ: ಕೆಲಸಕ್ಕೆ ಬಾರದವರು ಕೆಲಸಕ್ಕೆ ಸೇರಿಕೊಂಡರೆ ಆಗ ಎದುರಾಗಬಹುದಾದ ಸನ್ನಿವೇಶಕ್ಕೂ ಈ ಕಥೆ ಉದಾಹರಣೆಯಾಗುತ್ತದೆ; ಅರ್ಹತೆಯಿಲ್ಲದೇ ಗಳಿಸಿದ ಪದವಿ, ಸ್ಥಾನಮಾನ ಕೊನೆಗೊಮ್ಮೆ ಬಹಿರಂಗಗೊಳ್ಳುತ್ತದೆ! ಸಿಂಹದ ವೇಷದಲ್ಲಿ ನರಿ ಎಷ್ಟುದಿನವೇ ಇದ್ದರೂ ಅದರ ಒಳಗಿನ ಕುಬುದ್ಧಿ, ಅಧೈರ್ಯ ಇವೆಲ್ಲಾ ಅಳಿಸಿಹೋಗದಲ್ಲಾ?   

ಧರ್ಮಾರ್ಥ ಕಾಮ ಮೋಕ್ಷಾಣಾಂ ಉಪದೇಶ ಸಮನ್ವಿತಂ |
ಪೂರ್ವವೃತ್ತಂ ಕಥಾಯುಕ್ತಂ ಇತಿಹಾಸಂ ಪ್ರಚಕ್ಷತೇ ||

ಪುರುಷೋತ್ತಮ ಪುರಿಯ ರಹಸ್ಯಮಾತ್ರ ಹಾಗೇ ಉಳಿಯಿತು, ಅದನ್ನು ತಿಳಿಯಲು ಬಹುದೂರ ಕ್ರಮಿಸಬೇಕಾಗುತ್ತದೆಂಬ ಸಂಜ್ಞೆಯನ್ನು ನಾನು ತಮಗೆಲ್ಲಾ ಕೊಟ್ಟುಬಿಟ್ಟಿದ್ದೇನಲ್ಲಾ ? ಹೀಗಾಗಿ ಮೂರನೆಯ ಕಂತಿನಲ್ಲಿ ಅದರಬಗ್ಗೆ ತಿಳಿಸಲು ಉದ್ಯುಕ್ತನಾಗಿ ಸದ್ಯಕ್ಕೆ ನಿಮ್ಮನ್ನು ಬೀಳ್ಕೊಡುತ್ತೇನೆ,

ನಮಸ್ತೇ ಸದಾ ವತ್ಸಲೇ ಮಾತೃಭೂಮೇ
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್ |
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ ||