ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 3, 2016

"ಏರ್ ಲಿಫ್ಟ್ ನಲ್ಲಿ ಸಿಕ್ಕಾಪಟ್ಟೆ ಅಸಹಿಷ್ಣುತೆಯಿದೆ!"



 "ಏರ್ ಲಿಫ್ಟ್ ನಲ್ಲಿ ಸಿಕ್ಕಾಪಟ್ಟೆ ಅಸಹಿಷ್ಣುತೆಯಿದೆ!"

 "ಏರ್ ಲಿಫ್ಟ್ ನಲ್ಲಿ ಸಿಕ್ಕಾಪಟ್ಟೆ ಅಸಹಿಷ್ಣುತೆಯಿದೆ!" ಹೀಗೆ ಹೇಳಿದಾಗ ನೀವೆಲ್ಲ ಆಶ್ಚರ್ಯ ಪಡಬಹುದು. ಆದರೆ ಇದು ಸತ್ಯ. ಸತ್ಯ ಹೇಗೆಂಬುದು ನಿಮಗೆ ಈ ಕಥೆಯ ಕೊನೆಯಲ್ಲಿ ಗೊತ್ತಾಗ್ತದೆ. ಅಲ್ಲೀತನಕ ನೀವು ಸಹಿಷ್ಣುತೆಯಿಂದ ಹಿಂಬಾಲಿಸಲೇಬೇಕು.

ನೋಡಿ, ನಾವೀಗ ಮಾತಾಡ್ತಿರೋದು ಏರ್ ಲಿಫ್ಟ್ ಸಿನಿಮಾದ ಬಗ್ಗೆ.  ಭಾರತವೆಂಬ ಭಾರತದಲ್ಲಿ ಎಲ್ಲೆಲ್ಲೂ ಫೆಬ್ರಿಕೇಟೆಡ್ ಇಂಟಾಲರನ್ಸ್ ಹುಟ್ಟಿಕೊಂಡಾಗಲೇ ಈ ಸಿನಿಮಾ ನಿರ್ಮಾಣವಾಯಿತು. ಅವನ್ಯಾವನೋ ದನದ ಮಾಂಸ ತಿನ್ನಲು ಹೋಗಿ ಸತ್ತ ಎಂಬಲ್ಲಿಂದ ಹೊತ್ತಿಕೊಂಡದ್ದು ಬುದ್ಧಿಜೀವಿ ರೂಪದ ಹಲವಾರು ಸಾಹಿತಿಗಳು ಪ್ರಶಸ್ತಿಗಳನ್ನು ಮರಳಿಸುವವರೆಗೂ ನಡೆಯಿತು. ಪಾಕಿಸ್ತಾನಕ್ಕೆ ನಡೆದುಕೊಳ್ಳುವ ಕೆಲವು ಭಕ್ತರು ಈ ದೇಶ ತಮಗೆ ವಾಸಯೋಗ್ಯವಲ್ಲ ಎನ್ನುವವರೆಗೂ ನಡೀತು. ಇಲ್ಲಿನ ಉಪ್ಪು-ಅನ್ನ ತಿಂದ ಜನ ಅಲ್ಲೊಂದು ದೇಶವುಂಟು ಅದೇ ಲಾಯಕ್ಕೆಂದು ಹೇಳುವಾಗ ಹಡೆದವ್ವೆಗೆ ಮುಖ-ಮೂತಿ ನೋಡದೆ ಹೊಡೆಯುವ ಹುಡುಗನ ದೃಶ್ಯಾವಳಿ ಕಣ್ಣೆದುರು ಬಂತು; ಆದರೇನು ಮಾಡ್ತೀರಿ? ಹೇಳಿದವರು ತೀರಾ ಯಾರೋ ಬಾಲಕರು ಎಂದುಕೊಳ್ಳೋ ಹಾಗಿಲ್ಲ; ಅವರೆಲ್ಲ ಪ್ರಬುದ್ಧ ನಟರು, ನಿರ್ದೇಶಕರು ಎನಿಸಿಕೊಂಡು ಇದೇ ನೆಲದಲ್ಲಿ ಕೋಟಿ ಕೋಟಿ ಹಣವನ್ನು ಸಂಭಾವನೆಯಾಗಿ ಪಡೆದವರು. ದೇಶಕ್ಕೇನು ಕೊಟ್ಟರು?? ಛೆ, ಅದನ್ನೆಲ್ಲ ಕೇಳಲೇ ಬಾರದು. ದೊಡ್ಡವ್ಯಕ್ತಿಗಳ ವಿಷಯ! ಅವರೆಲ್ಲ ತೆರಿಗೆ ಕಟ್ಟದಿದ್ದರೂ ನಡೀತದೆ!!     

ಈಗ ಕೆಲವೊಂದು ಶಬ್ದಗಳನ್ನು ಗಮನಿಸೋಣ: ಮ್ಯಾನ್ಮಾರ್, ಯೆಮೆನ್, ನೇಪಾಳ, ಆಪರೇಷನ್ ಮೈತ್ರಿ ಎಂಬೆಲ್ಲ ಶಬ್ದಗಳನ್ನು ನೆನಪಿಸಿಕೊಳ್ಳುವಾಗ ಅಮೆರಿಕ ಸೇರಿದಂತೆ ವಿಶ್ವದ 27 ದೇಶಗಳು ರಕ್ಷಣೆಯ ಸಹಾಯಕ್ಕಾಗಿ ಭಾರತಕ್ಕೆ ಮೊರೆ ಇಟ್ಟಿದ್ದು ಈಗ ಹಳೆಯ ಸುದ್ದಿಯಾಗಿ ಮರೆತುಹೋಗಿದೆ, ಯಾರಿಗೆ? ಅಸಹಿಷ್ಣುತೆ ಎಂದು ಹಲುಬುತ್ತಿರುವವರಿಗೆ ಮತ್ತು ಅವರನ್ನು ಬೆಂಬಲಿಸುತ್ತಿರುವವರಿಗೆ. ’ಕಂಡರಾಗದ ಗಂಡನಿಗೆ ಮೊಸರಲ್ಲೂ ಕಲ್ಲು’ ಎಂಬುದೊಂದು ಜಾಣ್ನುಡಿ ಇದೆಯಲ್ಲವೇ? ಮೋದಿಯ ಸಮರ್ಥ ಆಡಳಿತದಿಂದ ತಮ್ಮ ಬೇಳೆ ಬೇಯದೆ ಕಂಗಾಲಾದ ಜನ ಅಸಹಿಷ್ಣುತೆಯನ್ನು ಹುಟ್ಟುಹಾಕಿದ್ದಾರೆ. ದಿನಬೆಳಗಾದರೆ ಕ್ಷುಲ್ಲಕ ಕಾರಣಗಳಿಗೆ ಮಾಧ್ಯಮಗಳ ಅಬ್ಬರದ ಪ್ರಚಾರಕೊಟ್ಟು ಈ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿಬಿಟ್ಟಿದೆ ಎಂಬಂತೆ ಬಿಂಬಿಸುತ್ತಾರೆ. ಅಲ್ಯಾರೋ ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ರಾಹುಲ್ ಓಡಿಬಂದು ಮಾತನಾಡಿಸುವ ನಾಟಕ ನಡೆಯುತ್ತದೆ. ಅವರದ್ದೇ ಸರಕಾರದ ಆಡಳಿತವಿರುವ ಕರ್ನಾಟಕದಲ್ಲಿ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಗಮನಿಸುವವರೇ ಇಲ್ಲ. ಅಸಹಿಷ್ಣುತೆಯ ಜನರೆಲ್ಲ ಆಗ ಪರಮ ಸಹಿಷ್ಣುಗಳಾಗಿ ಮಲಗಿರುತ್ತಾರೆ. ಯಾವಾಗ ಬಿಟ್ಟಿ ಕಾಸು-ಕೂಳು ಸಿಗುತ್ತದೋ ಆಗ ಬೀದಿ ನಾಯಿಯಂತೆ ಮತ್ತೆ ಬೊಗಳಲು ಆರಂಭಿಸುತ್ತಾರೆ. ಅಂಥವರನ್ನೆಲ್ಲ ಹೇಗೆ ಬಳಸಿಕೊಳ್ಳಬೇಕೆಂಬುದಕ್ಕೆ ನುರಿತ 'ಹಸ್ತ'ರಿಗೆ ಕಲಿಸಿಕೊಡುವುದೇನೂ ಬೇಕಾಗಿಲ್ಲ.

ಪತ್ರಕರ್ತ ವಿಶ್ವೇಶ್ವರ ಭಟ್ಟರು ಪ್ರಶಸ್ತಿಗಳನ್ನು ಹೊಡೆದುಕೊಳ್ಳುವುದರ ಬಗ್ಗೆ ಒಮ್ಮೆ ಬರೆದಿದ್ದರು;ಅದು ಯಾವುದೋ ರಾಮಾಯಣ ಕಾಲದ ಮಹಾನ್ವೇಷಣೆಯಲ್ಲಿ ಅವರು ತೊಡಗಿಕೊಂಡ ಸಂದರ್ಭ ಅಂತ ಕಾಣುತ್ತದೆ. ಪ್ರಶಸ್ತಿಗಳನ್ನು ಪಡೆದುಕೊಳ್ಳುವುದು ಬೇರೆ ಮತ್ತು ಹೊಡೆದುಕೊಳ್ಳುವುದು ಬೇರೆ ಎಂದವರು ಹೇಳಿದ್ದರು. ಪ್ರಶಸ್ತಿಗಳನ್ನು ಹೊಡೆದುಕೊಳ್ಳುವುದರ ಹಿಂದೆ ನಡೆಯುವ ಕಸರತ್ತುಗಳ ಬಗ್ಗೆ ಸಂಶೋಧಕ ಚಿದಾನಂದ ಮೂರ್ತಿಗಳು ಬಹಳ ಬರೆದಿದ್ದಾರೆ. ಶಿಫಾರಸ್ಸು ಮಾಡಿಸಲು ಯಾರ್ಯಾರು ಯಾರ್ಯಾರಿಗೆಲ್ಲ ಫೋನ್ ಮಾಡಿಸುತ್ತಾರೆ ಎಂಬುದಕ್ಕೆ ಜ್ವಲಂತ ವಿವರಣೆ ನೀಡಿದ್ದಾರೆ. ಅಂದರೆ, ಹೊಡೆದುಕೊಳ್ಳುವುದು ಎಂಬುದು ಇದೆಯೆಂದಾಯ್ತಲ್ಲವೇ?  ಪ್ರಶಸ್ತಿಗಳನ್ನು ಹೊಡೆದುಕೊಂಡವರಿಗೆ ಪಡೆದುಕೊಳ್ಳುವಾಗ ವ್ಯಯಿಸುವ ನಿಜವಾದ ಶ್ರಮದ,ಬೆವರಿನ ಬೆಲೆ ಅರ್ಥವಾಗುವುದಿಲ್ಲ. ಹಾಗೆ ಬಂದದ್ದು ಹೀಗೆ ಹೋಯ್ತು ಎಂಬರ್ಥದಲ್ಲಿ ಮರಳಿಸಿರಬಹುದು. ಪ್ರಶಸ್ತಿಯ ಜೊತೆಗೆ ಸಿಕ್ಕ ಹಮ್ಮಿಣಿಗಿಂತ ಈಗ ಅಕೌಂಟಿಗೆ ಬೀಳುವ ಭಕ್ಷೀಸು ಹೆಚ್ಚಿಗೆ ಇದ್ದಿರಬಹುದೇ?ಗೊತ್ತಿಲ್ಲ.

ಇವೆಲ್ಲ ಹಾಗಿರಲಿ, ಇಲ್ಲಿಯವರೆಗೆ ಪೀಠಿಕೆಯೇ ಆಯ್ತು, ಈಗ ನಿಧಾನವಾಗಿ ಸಿನಿಮಾದತ್ತ ಸಾಗೋಣ. ಜೀವ ಕೈಯ್ಯಲ್ಲಿ ಹಿಡಿದುಕೊಂಡು ಯುದ್ಧಭೂಮಿಯಿಂದ ನಮ್ಮ ಜನರನ್ನು ಅಲ್ಲಿಂದ ಯಶಸ್ವಿಯಾಗಿ ಕರೆತಂದ ಯೋಧರು, ಅವರಿಗೆ ಬೆನ್ನೆಲುಬಾಗಿ ಸಹಕರಿಸಿ ಧೈರ್ಯ ತುಂಬಿದ ಸದ್ಯದ ಕೇಂದ್ರ ಸರಕಾರ ಇಂಥದ್ದನ್ನೆಲ್ಲ ಅಸಹಿಷ್ಣುಗಳು ಗಮನಿಸುವುದಿಲ್ಲ. ಯಾಕೆಂದರೆ ಅಲ್ಲಿ ’ಹಸ್ತ’ಕ್ಷೇಪ ಮಾಡಲು ಅವಕಾಶ ಸಿಗಲಿಲ್ಲ! ಹಾಗಾದರೆ ಯಾವುದೋ ಕಾರಣಕ್ಕಾಗಿ ಒಮ್ಮಿಂದೊಮ್ಮೆಲೇ ರಣರಂಗವಾಗಿ ಮಾರ್ಪಡುವ ದೂರದ ಕೊಲ್ಲಿರಾಷ್ಟ್ರಗಳಲ್ಲಿ ಅಂತಹ ವತಾವರಣ ನಿರ್ಮಾಣವಾದಾಗಿನ ಪರಿಸ್ಥಿತಿ ಹೇಗಿದ್ದೀತು? ಆಗ ಅಲ್ಲಿನ ನಮ್ಮ ಜನರ ಎದೆಬಡಿತ ಹೇಗಿರಬೇಡ! ಅಂತಹ ಸನ್ನಿವೇಶಗಳಲ್ಲಿ ಹೃದಯವಂತ ಅಧಿಕಾರಿಗಳು ಹೇಗೆ ವರ್ತಿಸುತ್ತಾರೆ, ಅಸಹಿಷ್ಣುಗಳು ಅಲ್ಲಿಯೂ ಹೇಗೆ ಕೊಸರಾಡುತ್ತಾರೆ ಎಂಬುದೆಲ್ಲವನ್ನೂ ಅಡಕಮಾಡಿಕೊಂಡ ಕಥೆ ಏರ್ ಲಿಫ್ಟ್ ಎಂಬ ಸಿನಿಮಾದ್ದು. ರಾಜಾ ಕೃಷ್ಣ ಮೆನನ್ ನಿರ್ದೇಶಿಸಿ, ಅಕ್ಷಯ್ ಕುಮಾರ್, ನಿಮ್ರತ್ ಕೌರ್, ಪ್ರಕಾಶ್ ಬೆಳವಾಡಿ, ಇನಾಮುಲ್ಲಖ್, ಪೂರಬ್ ಕೊಹ್ಲಿ ಮೊದಲಾದವರು ಅಭಿನಯಿಸಿದ ಚಿತ್ರ.

1990ರ ಇರಾಕ್-ಕುವೈತ್ ಯುದ್ಧ ಭಾರತೀಯರು ಮರೆಯಲಾಗದ ಘಟನೆ. ಯುದ್ಧಗ್ರಸ್ತ ಕುವೈತ್’ನಲ್ಲಿ ಅಕ್ಷರಶಃ ಬೀದಿಪಾಲಾಗಿದ್ದ ತನ್ನ 1,700 ಮಂದಿಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರುವ ಬಹುದೊಡ್ಡ ಸವಾಲು ದೇಶದ ಮುಂದಿತ್ತು. ಅದು ಅಂತಾರಾಷ್ರ್ರೀಯ ರಾಜಕೀಯ ಸೌಹಾರ್ದ ಸಂಬಂಧದ ವಿಚಾರ. ಅಂತಾರಾಷ್ಟ್ರೀಯ ಮಾತುಕತೆ, ಸಂಪರ್ಕ ತೊಡಕುಗಳು ಮತ್ತು ಇರಾಕ್ ಮೇಲೆ ಪ್ರಬಲ ರಾಷ್ಟ್ರಗಳು ಹೇರಿದ ದಿಗ್ಬಂಧನ ಮುಂತಾದ ಸವಾಲುಗಳಿಂದಾಗಿ ರಾಜತಾಂತ್ರಿಕ ಪ್ರಕ್ರಿಯೆಗಳು ನಿರೀಕ್ಷಿತ ವೇಗದಲ್ಲಿ ನಡೆಯಲಿಲ್ಲ. ಕುವೈತ್ ನಲ್ಲಿದ್ದ ನಮ್ಮವರಿಗೆ ಅದೆಷ್ಟು ತೊಂದರೆಯಾಗಿತ್ತೆಂಬುದು ವರ್ಣಿಸಲಸಾಧ್ಯ. ಅನಿರೀಕ್ಷಿತವಾಗಿ ಕುವೈತ್’ನಲ್ಲಿ ಭಾರತೀಯರ ರಕ್ಷಣೆಗೆ ದೇವರು ಬಂದಹಾಗೆ ಬಂದವರು ಭಾರತೀಯ ಮೂಲದ ಉದ್ಯಮಿಗಳಾದ ಸನ್ನಿ ಮಾಥ್ಯೂ ಮತ್ತು ವೇದಿ ಎಂಬ ಹೃದಯವಂತ ಸಾಹಸಿಗಳು.

ಒಂದುಕಡೆ ಇರಾಕಿ ಪಡೆಗಳ ಅಟ್ಟಹಾಸ ಮತ್ತು ಇನ್ನೊಂದೆಡೆ ಭಾರತೀಯ ಆಡಳಿತಾತ್ಮಕ ಕಚೇರಿಗಳು ತೋರಿದ ಆರಂಭಿಕ ನಿರಾಸಕ್ತಿ ಇವೆರಡರ ನಡುವೆ ತಮ್ಮ ಜೀವ ಪಣಕ್ಕಿಟ್ಟು ಲಕ್ಷಾಂತರ ದೇಶಬಾಂಧವರ ರಕ್ಷಣೆಗೆ ಅವರಿಬ್ಬರು ನಡೆಸಿದ್ದ ಹೋರಾಟವೇ ಏರ್’ಲಿಫ್ಟ್ ಸಿನಿಮಾಕ್ಕೆ ಮೂಲಸ್ರೋತ ಇಂಧನ. ಇಂದಿಗೆ ಇಪ್ಪತ್ತೈದು ವರ್ಷಗಳ ಹಿಂದೆ ಘಟಿಸಿದ್ದ  ಸೌದಿ ರಾಷ್ಟ್ರಗಳ ಯುದ್ಧ, ದೇಶ-ದೇಶಗಳ ನಡುವಿನ ಬಿಕ್ಕಟ್ಟು, ಹಲವು ಮಜಲುಗಳ ವೈಮನಸ್ಯಗಳ ನಡುವೆ ಸಿಕ್ಕ ವಲಸಿಗರ ಅಸಹಾಯಕತೆ ಎಲ್ಲವನ್ನೂ ಸಿನಿಮಾ ಮಾಡುವುದು ಸುಲಭವೇನೂ ಆಗಿರಲಿಲ್ಲ. ಬೇರೆ ಏನನ್ನಾದರೂ ಮಾಡಿಬಿಡಬಹುದು ಆದರೆ ಯುದ್ಧದ ದೃಶ್ಯಗಳನ್ನು ತೋರಿಸುವುದೇ ಹರಸಾಹಸ. ಘನತರವಾದ ಆ ಸವಾಲನ್ನು ನಿಭಾಯಿಸುವಲ್ಲಿ ನಿರ್ದೇಶಕ ರಾಜಾ ಕೃಷ್ಣ ಮೆನನ್ ಪ್ರಯತ್ನಿಸಿ ಯಶ್ವಿಯಾಗಿದ್ದು ಅಭಿನಂದನಾರ್ಹ.

ವಿದೇಶೀ ನೆಲ ಕುವೈತ್’ನಲ್ಲಿ ಯಶಸ್ವೀ ಉದ್ಯಮಿಯಾಗಿ ಐಷಾರಾಮಿ ಜೀವನದಲ್ಲಿ ಮುಳುಗಿದ್ದ ರಂಜಿತ್ ಕಟಿಯಾಲ್ ಅರ್ಧ ರಾತ್ರಿಯ ಫೋನ್ ಕರೆಯಿಂದ ಬೆಚ್ಚಿಬಿದ್ದಂತೆಯೇ ಬದುಕಿನಲ್ಲೂ ಬೆಚ್ಚಿಬಿದ್ದು ಹೊಸ ಆಘಾತಕ್ಕೆ ತೆರೆದುಕೊಳ್ಳುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಬದುಕೆಂದರೆ ಕೇವಲ ಉದ್ಯಮವಲ್ಲ; ತಾನು ತನ್ನವರು ಮತ್ತು ತನ್ನನ್ನು ನಂಬಿಕೊಂಡವರ ಸುರಕ್ಷತೆ ಎಷ್ಟು ಎಂಬುದರ ಅರಿವು ಮೂಡುತ್ತದೆ. ತನ್ನದೇ ಜೀವವನ್ನು ಪಣಕ್ಕಿಟ್ಟು ಲಕ್ಷಾಂತರ ಮಂದಿಯ ಜೀವ ಉಳಿಸುವ ಮಾನವೀಯ ಸಾಹಸಕ್ಕೆ ಮುಂದಾಗುತ್ತಾನೆ. ಅದೆಂತಹ ಸಾಹಸ? ಹೇಗೆಲ್ಲ ಹೋರಾಡಿ ಗೆಲ್ಲಬೇಕಾಯಿತು ಎಂಬುದು ಸಿನಿಮಾ ಕಥೆ.

ಈ ಸಿನಿಮಾದಲ್ಲಿ ಅತಿರಂಜಿತ ಹಾಡು ನರ್ತನಗಳು ಇಲ್ಲವೇ ಇಲ್ಲ. ಅನಾವಶ್ಯಕ ಬಡಿದಾಟಗಳೂ ಇಲ್ಲ. ಯಾವೊಂದು ದೃಶ್ಯವೂ ಅನಗತ್ಯ ಎನಿಸದಷ್ಟು ಸಹಜತೆಯಿಂದ ಕೂಡಿದೆ. ಆದರೂ ಪ್ರೀತಿ-ಪ್ರೇಮದ ದೃಶ್ಯಗಳಿವೆ, ಚಿಲ್ಲರೆ ನರ್ತನವೂ ಸೇರಿಕೊಂಡಿದೆ, ತೀರಾ ಮನದೊಳಗೆ ಗುನುಗುನಿಸುವಂಥದ್ದಲ್ಲವಾದರೂ ಇಂಪಾಗಿವೆ ಎನ್ನಬಹುದಾದ ಹಾಡುಗಳಿವೆ, ಕೌಟುಂಬಿಕ ಸಂಬಂಧಗಳು ಪ್ರಮುಖವಾಗಿ ಮಾನವೀಯ ಮೌಲ್ಯಗಳು ಎದ್ದು ಕಾಣುತ್ತವೆ. ರಂಜಿತ್ ಕಟಿಯಾಳ್ ಎಂಬ ಹೀರೋ[ಅಕ್ಷಯ್ ಕುಮಾರ], ತನ್ನ ಡ್ರೈವರ್ ಕೊಲೆಗೀಡಾಗಿದ್ದನ್ನು ಮಡದಿ[ನಿಮ್ರತ್ ಕೌರ್]ಗೆ ಹೇಳುವಾಗ ಕುಸಿದು ಕೂರುತ್ತಾನೆ. ಎಲ್ಲಿ ನೋಡಿದರೂ ಗುಂಡಿನ ಮೊರೆತ, ಬೆಂಕಿಯ ಜ್ವಾಲೆಗಳು, ಜನರ ಆಕ್ರಂದನ, ಜೀವಭಯದ ನಡುವೆಯೂ ಡ್ರೈವರ್ ನ ಕುಟುಂಬವನ್ನು ನೆನಪಿಟ್ಟುಕೊಂಡು ಅವರನ್ನೂ ಕರೆತರಲು ಮರೆಯುವುದಿಲ್ಲ.   

ಹಾಗಾದರೆ ಬಹಳ ಗಡುಸಾಗಿರಬಹುದಾದ ಈ ಸಿನಿಮಾದಲ್ಲಿ ಹಾಸ್ಯವೇ ಇಲ್ಲವೇ? ಇಲ್ಲ ಅಂದೋರ್ಯಾರು? ಇದ್ದಾರಲ್ಲ ಅಸಹಿಷ್ಣು ಜಾರ್ಜ್ ಕುಟ್ಟಿ[ಪ್ರಕಾಶ್ ಬೆಳವಾಡಿ]! ಎಲ್ಲರಿಗೂ ಜೀವಭಯ ಹುಟ್ಟಿದ್ದರೆ ಜಾರ್ಜ್ ಕುಟ್ಟಿಗೆ ಮಾತ್ರ ಇಲ್ಲದ ಸಮಸ್ಯೆ ಕಾಡುತ್ತದೆ. ಭಾರತೀಯ ಮೂಲದ ಉದ್ಯಮಿಯಾಗಿರುವ ರಂಜಿತ್ ಎಂಬವರ ಕಚೇರಿಯಲ್ಲಿ ಐದುನೂರಕ್ಕೂ ಅಧಿಕ ಜನ ಅವಿತುಕೊಂಡು, ಇರುವ ಆಹಾರಗಳನ್ನು ಹಂಚಿಕೊಂಡು ದಿನದೂಡುತ್ತಿರುವಾಗ ಜಾರ್ಜ್ ಕುಟ್ಟಿ ಕಕ್ಕಸು ದುರ್ಗಂಧಮಯವಾಗಿದೆ ಎಂದು ತಗಾದೆ ತೆಗೆಯುತ್ತಾನೆ. ತಾತ್ಕಾಲಿಕ ವಸತಿ ಮಾಡಬೇಕಾದ ಜಾಗಗಳಲ್ಲೆಲ್ಲ ತನ್ನ ಕುಟುಂಬಕ್ಕೆ ಪ್ರತ್ಯೇಕ ಕೊಠಡಿ ಬೇಕೆಂದು ಹಠ ಹಿಡೀತಾನೆ. ಕುವೈತ್ ನಿಂದ ತಪ್ಪಿಸಿಕೊಂಡು ಹೊರಡುವ ಸಂದರ್ಭದಲ್ಲಿ ತಮ್ಮನ್ನು ಮೊದಲು ವಾಹನಗಳಿಗೆ ಹತ್ತಿಸಲಿಲ್ಲವೆಂದು ತಕರಾರು ಮಾಡ್ತಾನೆ. ಆ ಸಂದರ್ಭದಲ್ಲಿ ಅವನ ಮುಖ, ಕಣ್ಣುಗಳು, ಭಾವನೆ, ಮಾತುಕತೆ ಎಲ್ಲವೂ ಪ್ರಸಕ್ತ ಭಾರತದ ಅಸಹಿಷ್ಣುಗಳ ಪಾತ್ರವನ್ನೇ ಬಿಂಬಿಸುತ್ತವೆ. ಅವನ ಅಸಹಿಷ್ಣುತೆಯನ್ನು ರಂಜಿತ್ ಕಟಿಯಾಳ್ ಹೇಗೆ ನಿಭಾಯಿಸಿದ ಎಂಬುದೇ ಇಂದಿನ ಇಲ್ಲಿನ ಅಸಹಿಷ್ಣುಗಳಿಗೂ ದೊರೆಯುವ ಉತ್ತರ ಎಂದರೆ ತಪ್ಪಾಗಲರದು. ಪ್ರಕಾಶ್ ಬೆಳವಾಡಿಯವರ ಅಭಿನಯವೂ ಅತ್ಯಂತ ಸಹಜವಾಗಿದ್ದು ನೀವು ನಕ್ಕು ಹೊಟ್ಟೆ ಹುಣ್ಣಾಗಬಹುದು.....ಎಚ್ಚರ.    

ರಂಜನೆ, ಭಾವೋದ್ವೇಗದ ಪಾತ್ರಗಳಷ್ಟೇ ಹೆಚ್ಚಾಗಿ ಅಭಿನಯಿಸಿದ್ದ ಅಕ್ಷಯ್’ಕುಮಾರ್ ಏರ್’ಲಿಫ್ಟ್ ಮೂಲಕ ತಮ್ಮೊಳಗಿನ ನಟನ ಹೊಸ ಆಯಾಮವನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ. ಅಲ್ಲಿ ಹೀರೋ ನಾಟಕೀಯ ಹೀರೋ ಆಗಿರದೆ ಅಸಲೀ ಹೀರೋ ಆಗಿರುವ್ಂತೆ ತಮ್ಮ ನಟನಾ ಚಾತುರ್ಯ ತೋರಿಸಿದ್ದಾರೆ. ಪ್ರಾಯಶಃ ಆ ಪಾತ್ರವನ್ನು ಇನ್ನಾರೋ ನಿರ್ವಹಿಸಿದ್ದರೆ ಅದು ಅಷ್ಟು ಸುಪಿಷ್ಟವಾಗಿ ಮೂಡಿಬರುತ್ತಿರಲಿಲ್ಲವೇನೋ. ಇಡೀ ಸಿನಿಮಾವೇ ಕಥಾನಾಯಕನ ಹೆಗಲ ಮೇಲಿದೆ.  ಸಿನಿಮಾ ಎಂದಮೇಲೆ ಸಾಕಷ್ಟು ಕುಂದುಕೊರತೆಗಳು ಇರುವುದು ಸಹಜವೇ. ಆದರೆ ಇಲ್ಲಿನ ಅವರ ನಟನೆಯಿಂದ ಈ ಸಿನಿಮಾದ ಕೊರತೆಗಳೆಲ್ಲ ಮರೆತುಹೋಗುತ್ತವೆ. ಅವರೊಂದಿಗೆ ಸದ್ದಾಂ ಸೇನಾಧಿಕಾರಿಯಾಗಿ ಇನಾಮುಲ್ಲಖ್, ಕನ್ನಡಿಗ ಪ್ರಕಾಶ್ ಬೆಳವಾಡಿ, ನಿಮ್ರತ್ ಕೌರ್ ಕೂಡ ಪ್ರಬುದ್ಧ ಅಭಿನಯ ನೀಡಿದ್ದಾರೆ. ಕುಮುದ್ ಮಿಶ್ರಾ ಹಾಗೂ ಪೂರಬ್ ಕೊಹ್ಲಿ ಕೂಡ ಮೆಚ್ಚುಗೆಗೆ ಅರ್ಹರು.

ಪ್ರಿಯಾ ಸೇಠ್ ಛಾಯಾಗ್ರಹಣ ಮೆಚ್ಚುವಂತಿದೆ. ಅಂಕಿತ್ ತಿವಾರಿ- ಅಮಾಲ್ ಮಲ್ಲಿಕ್ ಜೋಡಿಯ ಸಂಗೀತ ಚೆನ್ನಾಗಿಲ್ಲ ಎನ್ನೋದಕ್ಕಿಂತ ಈ ಸಿನಿಮಾಕ್ಕೆ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಸಂಗೀತದ ಅಗತ್ಯ ಕಂಡು ಬರೋದಿಲ್ಲ. ಸಿನಿಮಾ ನೋಡುತ್ತಿದ್ದರೆ ಯಾವುದೋ ಒಂದು ಮನಮಿಡಿಯುವ ಡಾಕ್ಯುಮೆಂಟರಿ ನೋಡಿದಂತಿರುತ್ತದೆ. ಇತ್ತೀಚೆಗೆ ಬಂದ ಸಿನಿಮಾಗಳ ಪೈಕಿ ಐತಿಹಾಸಿಕ ವಿಷಯಾಧಾರಿತ ಯಶಸ್ವೀ ಸಿನಿಮಾಗಳಲ್ಲಿ ಇದೂ ಒಂದಾಗಿದ್ದು ಕಾಸು ಕೊಟ್ಟು ನೋಡುವ ಪ್ರೇಕ್ಷಕನ ಪೈಸೆಗೆ ಮೌಲ್ಯ ದೊರೆಯುತ್ತದೆ.