ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, December 11, 2010

ಏನಾದರೂ ಆಗು ಮೊದಲು ಮಾನವನಾಗು

ಚಿತ್ರ ಕೃಪೆ : ಅಂತರ್ಜಾಲ
ಏನಾದರೂ ಆಗು ಮೊದಲು ಮಾನವನಾಗು

ಹುಟ್ಟಿದ ಎಲ್ಲಾ ಪ್ರಾಣಿಗಳೂ ಬದುಕುತ್ತವೆ, ಬದುಕಿಗಾಗಿ ಹೋರಾಡುತ್ತವೆ, ತಿನ್ನುತ್ತವೆ-ವಿಶ್ರಾಂತಿ ಪಡೆಯುತ್ತವೆ-ಸಂತತಿ ವೃದ್ಧಿಸುತ್ತವೆ ಹೀಗೇ ಬದುಕಿ ಒಂದು ದಿನ ಸಾಯುತ್ತವೆ. ಇದರ ಪುನರಾವರ್ತನೆ ಸೃಷ್ಟಿಯ ನಿಯಮ. ಆದರೆ ಜೀವಿಗಳಲ್ಲಿ ಅತಿ ಹೆಚ್ಚು ವಿಕಸಿತ ಬುದ್ಧಿಮಟ್ಟದ ಮೆದುಳನ್ನು ಹೊಂದಿದ ಜೀವಿಯೆಂದರೆ ಮನುಷ್ಯ. ಹುಟ್ಟಿನಿಂದ ಮಾನವನೆನ್ನಿಸಿಕೊಳ್ಳುವುದಕ್ಕೂ ಸಂಸ್ಕಾರದಿಂದ ಮಾನವನೆನಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. || ಮನುಷ್ಯ ರೂಪೇಣ ಮೃಗಾಶ್ಚರಂತಿ || ಎಂಬ ಹಾಗೇ ಕೆಲವರು ಮನುಷ್ಯ ರೂಪದಲ್ಲೇ ಇದ್ದರೂ ಮೃಗಗಳಂತೇ ವರ್ತಿಸುತ್ತಾರೆ. ಹುಟ್ಟಿನಿಂದ ಎಲ್ಲರೂ ಸಂಸ್ಕಾರವಂತರಾಗಿರುವುದಿಲ್ಲ. ಇಲ್ಲಿ ವ್ಯಕ್ತಿಯೊಬ್ಬ ಹುಟ್ಟಿ ಬೆಳೆದ ಪರಿಸರವೂ ವ್ಯಕ್ತಿಯ ಮೇಲೆ ಹಲವು ಪರಿಣಾಮ ಬೀರುತ್ತದೆ.

ಬಾಲ್ಯದಲ್ಲಿ ಮಗುವಿಗೆ ತಂದೆ-ತಾಯಿ ಮತ್ತು ಪರಿಸರ ಕೊಡುವ ಸಂಸ್ಕಾರ ಬಹಳ ಮುಖ್ಯ. ಮಗುವಿನ ಮನಸ್ಸು ಹಸಿಮಣ್ಣಿನ ಗೋಡೆಯಿದ್ದಂತೇ. ಹಸಿಮಣ್ಣಿನ ಗೋಡೆಗೆ ದೂರದಿಂದ ಚಿಕ್ಕ ಕಲ್ಲುಗಳನ್ನು ಎಸೆದರೆ ಹೇಗೆ ಅಂಟಿಕೊಳ್ಳುವುದೋ ಹಾಗೇ ಚಿಕ್ಕ ಮಗುವಿಗೆ ಗ್ರಾಹಕ ಶಕ್ತಿ ಜಾಸ್ತಿಯಿರುತ್ತದೆ. ತಾನು ಗ್ರಹಿಸಿದ್ದನ್ನು ನೆನಪಿನಲ್ಲಿಟ್ಟು ಅನುಕರಿಸುವ ಮನಸ್ಸೂ ಕೂಡ ಇರುತ್ತದೆ. ಕೂಡುಕುಟುಂಬದ ಪದ್ಧತಿಯನ್ನು ಕಳೆದುಕೊಂಡಿದ್ದೇವೆ. ಇಡೀ ಸಮಾಜ ಆಧುನಿಕೀಕರಣಕ್ಕೆ ಮೊರೆಹೋಗಿ ಎಲ್ಲಾ ಅಪ್ಪ-ಅಮ್ಮ-ಮಗು ಇಷ್ಟೇ. ಎಲ್ಲೋ ಅಪ್ಪಿ-ತಪ್ಪಿ ಇಬ್ಬರು ಮಕ್ಕಳಿದ್ದರೆ ಆಶ್ಚರ್ಯ. ಮಕ್ಕಳು ಜಾಸ್ತಿ ಬೇಕು ಎಂದು ಹೇಳುತ್ತಿಲ್ಲ, ಆದರೆ ಹಿಂದಿನ ದಿನಗಳಲ್ಲಿ ಹುಟ್ಟಿದ ಮಗುವಿಗೆ ಸುತ್ತಮುತ್ತ ಹತ್ತಾರು ಜನ ಎತ್ತಿ ಆಡಿಸುವವರಿರುತ್ತಿದ್ದರು. ಮನೆಯಲ್ಲಿ ಹಿರಿಯರು, ಅನುಭವಿಕರು ಇರುತ್ತಿದ್ದು ಮಕ್ಕಳಿಗೆ ರಾಮಾಯಣ-ಮಹಾಭಾರತಗಳಿಂದ ಹಾಗೂ ಇತರ ಅನೇಕ ನೀತಿಕಥೆಗಳಾದ ಪಂಚತಂತ್ರ ಮೊದಲಾದವುಗಳಿಂದಲೂ ಇದಲ್ಲದೇ ಜನಪದರು ಹೊಸೆದ ಗ್ರಾಮೀಣ ಕಥೆಗಳಿಂದಲೂ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಆ ಮೂಲಕ ತಿಳುವಳಿಕೆಯ ಮಾರ್ಗವನ್ನು ತೋರಿಸುತ್ತಿದ್ದರು, ಒಳ್ಳೆಯತನವನ್ನು ಬೋಧಿಸುತ್ತಿದ್ದರು. ಇಂದು ಇವೆಲ್ಲಾ ನೆನೆಸಲೂ ಸಾಧ್ಯವಿಲ್ಲದಷ್ಟು ನಾವೆಲ್ಲಾ ಬಿಡುವಿಲ್ಲದ ಕೆಲಸಗಳಲ್ಲಿ ನಿರತರು! ಹೀಗಾಗಿ ಮಕ್ಕಳು ಎಂದಿದ್ದರೂ ಮಕ್ಕಳೇ ಆಗಿರುವುದರಿಂದ ಅವರಿಗೆ ಸರಿಯಾಗಿ ತಿಳಿಹೇಳುವವರಾರು ಎಂಬುದು ಪ್ರಶ್ನೆಯಾಗಿದೆ.

ಸುಮಾರು ೪೦ ವರ್ಷಗಳ ಹಿಂದೆಯೇ ’ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ, ಜನಾನುರಾಗಿಯಾಗಿದ್ದ ದಿ| ಶ್ರೀ ಸಿದ್ಧಯ್ಯ ಪುರಾಣಿಕರು ತಮ್ಮ ಕಾವ್ಯದಲ್ಲಿ ಹೇಳುತ್ತಾರೆ:

ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಆಗು ನಿನ್ನಿಚ್ಛೆಯಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು

ಇವತ್ತಿನ ದಿನಮಾನದಲ್ಲಿ ನಾವು ನಮ್ಮ ಸುತ್ತಲ ಪರಿಸರದಲ್ಲಿ ನೋಡಿದಾಗ, ನಡೆಯುತ್ತಿರುವ ಕೊಲೆ-ಸುಲಿಗೆ-ದರೋಡೆಗಳು, ಅನ್ಯಾಯ-ಅತ್ಯಾಚಾರ-ಅನಾಚಾರ-ಮೋಸ ಇತ್ಯಾದಿ ಹೇಸಿಗೆಯ ಕೃತ್ಯಗಳು ಇವೆಲ್ಲಾ ಕಣ್ಣಿಗೆ ಬಿದ್ದಾಗ, ಸುದ್ದಿ ತಿಳಿದು ಮನಸ್ಸು ನೋವನ್ನು ಅನುಭವಿಸುತ್ತದೆ. ಎಷ್ಟೋ ಪ್ರಾಣಿಗಳು ಅವುಗಳಿಗೆ ಬುದ್ಧಿ ಕಮ್ಮಿ ಇದ್ದರೂ ಸಂಕೇತಗಳಿಂದಲೇ ತಮ್ಮ ತಮ್ಮ ತೊಂದರೆಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಅರ್ಥಮಾಡಿಕೊಂಡು ಬದುಕುತ್ತವೆ. ಇರುವೆಗೆ ಸಾಲಾಗಿ ಹೋಗಲು ಯಾರು ಹೇಳಿಕೊಟ್ಟರು, ಮೀನಿಗೆ ಈಜಲು ಯಾರು ಕಲಿಸಿದರು, ಹಕ್ಕಿಗೆ ಹಾರಲು ಯಾರು ತರಬೇತಿಕೊಟ್ಟರು....ಇವೆಲ್ಲಾ ನಿಸರ್ಗದ ನಿಯಮಗಳು. ದಯಾಮಯಿಯಾದ ಜಗನ್ನಿಯಾಮಕ ಮನುಷ್ಯನಿಗೆ ವಿಕಸಿತ ಮನಸ್ಸನ್ನು ಕೊಟ್ಟು ಅದರ ಕೀಲಿಯನ್ನೂ ನಮಗೇ ಕೊಟ್ಟ. ಆದರೆ ಆ ಕೀಲಿಯನ್ನು ನಾವೀಗ ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಕವಿ ಮುಂದುವರಿದು ಹೇಳುತ್ತಾರೆ :

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು ದುಡಿದು ಗಳಿಸಿ

ನಾವು ಇಚ್ಛಿಸಿದಂತೇ ನಮ್ಮ ವೃತ್ತಿ. ನಮ್ಮ ವೃತ್ತಿಯಿಂದಲೇ ನಮ್ಮ ಜಾತಿ. || ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ. ನಾವು ಯಾವ ಯಾವ ಕೆಲಸವನ್ನು ಮಾಡುತ್ತೇವೋ ಅದರಿಂದಲೇ ನಾವು ಆಯಾ ಜಾತಿಗೆ ಸೇರಿದವರೇ ವಿನಃ ಜಾತಿ ಜನ್ಮಜಾತವಲ್ಲ ಎಂದನಲ್ಲವೇ ? ಚೆನ್ನಾಗಿ ಓದು, ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸು; ಈ ಮೂಲಕ ನೀನು ಬ್ರಾಹ್ಮಣನಾಗುತ್ತೀಯ. ದೇಶದ ರಕ್ಷಣೆಗಾಗಿ ಯೋಧನಾಗಿ ಮೆರೆ ನೀನಾಗ ಕ್ಷತ್ರಿಯನಾಗುತ್ತೀಯ. ವ್ಯಾಪಾರಮಾಡಿದಾಗ ವೈಶ್ಯನೂ ಹೊಲದಲ್ಲಿ ದುಡಿದಾಗ ಶೂದ್ರನೂ ಆಗುತ್ತೀಯ. ಅಂದರೆ ಈ ನಾಲ್ಕೂ ಅಂಶಗಳು ಒಬ್ಬ ವ್ಯಕ್ತಿಯಲ್ಲೇ ಇರಲು ಸಾಧ್ಯವಷ್ಟೇ ? ಸಮಯಕ್ಕೆ ತಕ್ಕಂತೆ ಒಬ್ಬನೇ ವ್ಯಕ್ತಿ ಈ ನಾಲ್ಕೂ ವರ್ಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಕವಿ ಮತ್ತೆ ಸಾರುತ್ತಾರೆ:

ಹಿಂದೂ ಮುಸ್ಲಿಮನಾಗು ಬೌದ್ಧ ಕ್ರೈಸ್ತನೇ ಆಗು
ಚಾರುವಾಕನೆ ಆಗು ಭೋಗ ಬಯಸಿ

ನೀನೊಬ್ಬ ಹಿಂದೂವೋ ಮುಸ್ಲಿಮನೋ ಬೌಧ್ಧನೋ ಕ್ರೈಸ್ತನೋ ಆಗು ಅಥವಾ ಭೋಗ ಬಯಸುವ ಚಾರ್ವಾಕನೇ ಆಗು ಆದರೆ ಅದೆಲ್ಲಕ್ಕೂ ಮೊದಲು ನೀನು ಮಾನವನಾಗು --ಎಷ್ಟು ಚೆನ್ನಾಗಿದೆ ನೋಡಿ !

ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು

ರಾಜಕಾರಣಿಯಾದರೂ ಆಗಬಹುದು, ದೇಶಭಕ್ತನಾಗಿ ಹಲವಾರು ರೀತಿಯಲ್ಲಿ ಸೇವೆಸಲ್ಲಿಸಬಹುದು, ಶಿಲ್ಪಿ-ಕಲೆಗಾರ-ವಿಜ್ಞಾನಿ-ವೈದ್ಯ ಇತ್ಯಾದಿ ಯಾವುದೇ ಉದ್ಯೋಗಲ್ಲೂ ತೊಡಗಬಹುದು...ಆದರೆ ಇದೆಲ್ಲಕ್ಕೂ ಮೊದಲು ಮಾನವರಾಗುವುದನ್ನು ಕಲಿಯಬೇಕು ಎಂಬುದು ಕಾವ್ಯದ ಸಾರ, ಸಂದೇಶ.

ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತು ಒಬ್ಬ ನಾಪಿಕ ಈ ಮೂರು ಜನರಿದ್ದರೆ ಯಾವ ವ್ಯಕ್ತಿಯೂ ಹೊರಗಿನಿಂದ ಸಿಂಗಾರಗೊಂಡು ಚೆನ್ನಾಗಿ ಕಾಣಬಹುದು. ಆದರೆ ಅದೇ ಆತನ ನಡವಳಿಕೆಗೆ ಇವರಾರೂ ಏನೂ ಮಾಡಲಾರರು. ಹರುಕು ಬಟ್ಟೆಯನ್ನೇ ತೊಟ್ಟಿದ್ದರೂ ಉತ್ತಮ ಗುಣನಡತೆ ಹೊಂದಿದ್ದರೆ ಆತ ಮಾನ್ಯನೇ ಸರಿ. ಏನೋ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಧನಿಕನಾಗದವನು ಹೃದಯಶ್ರೀಮಂತಿಕೆಯಲ್ಲಿ ಕೊರತೆ ಹೊಂದಿದವನಾಗಿರಲೇ ಬೇಕೆಂದೇನಿಲ್ಲ.

ಇವತ್ತಿನ ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಬೇಡದ ಪ್ರಸಂಗಗಳನ್ನು, ಮನಕಲಕುವ ದೃಶ್ಯಗಳನ್ನೂ ಮಕ್ಕಳು ನೋಡುತ್ತಿರುತ್ತಾರೆ. ನಾವು ಒಳ್ಳೆಯ ಸಂಸ್ಕಾರವನ್ನು ಪಡೆದಮೇಲೆ ಮಕ್ಕಳನ್ನೂ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೇ ತಿದ್ದಬೇಕಲ್ಲವೇ? ಮೊನ್ನೆ ದೀಪಾವಳಿಯ ಸಡಗರದಲ್ಲಿ ದೇಶವೇ ನಲಿಯುತ್ತಿದ್ದರೆ ಒಂದು ಹಳ್ಳಿಯ ಒಬ್ಬರ ಮನೆಯಲ್ಲಿ ಹುಡುಗನೋರ್ವ ಅಡುಗೆ ಮನೆಗೆ ಬಂದ. ಅಮ್ಮ ಮಾಡುತ್ತಿದ್ದ ಹೋಳಿಗೆ ಪಡೆದು ತಿಂದ. ಅಮ್ಮ ಕೆಲಸದಲ್ಲಿ ನಿರತರಾಗಿರುವಾಗ ಈ ಹುಡುಗ ಮಹಡಿಯೇರಿ ಹೋಗಿ ಅಲ್ಲಿ ಮೊದಲೇ ತಾನು ತಂದಿಟ್ಟಿದ್ದ ನೇಣನ್ನು ಹಾಕಿಕೊಂಡು ನೇತಾಡಿದ ! ಏನಾಗುತ್ತದೆ ಎಂಬುದನ್ನು ಅನುಭವಿಸಿ ನೋಡಲು ಆತ ಹಾಗೆ ಮಾಡಿದ್ದು. ಹುಡುಕುತ್ತಾ ಅಮ್ಮ ಮತ್ತು ಮಿಕ್ಕುಳಿದವರು ಬರುವಷ್ಟರಲ್ಲಿ ಆತ ಶಿವನಪಾದ ಸೇರಿದ್ದ. ಇದು ಇಂದಿನ ಧಾರಾವಾಹಿ ಹಾಗೂ ಚಲನಚಿತ್ರಗಳ ಒಂದು ಮುಖದ ಪರಿಣಾಮ.

ದಿನಾಲೂ ಅನೇಕ ಮನೆಗಳಲ್ಲಿ ಮಲಗುವ ಮುನ್ನ ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಕೊಲೆಸುಲಿಗೆಯ ದೃಶ್ಯಗಳ ವಿವರಣೆಗಳನ್ನು ನೋಡುತ್ತಾರೆ. ಇದರಿಂದ ಮನಸ್ಸಿಗೆ ಋಣಾತ್ಮಕ ಭಾವಗಳು ಆವರಿಸಿಕೊಂಡು ಒಳಗೊಳಗೇ ಮನಸ್ಸು ಚಡಪಡಿಸುತ್ತದೆ. ಪೂರ್ವಜರು ಹಿಂದಕ್ಕೆ ರಾಮಾಯಣದಂತಹ ಕಥೆಯ ರಾಮನಿರ್ಯಾಣ, ಮಹಾಭಾರತದ ಕರ್ಣಾವಸಾನ ಇಂಥದ್ದನ್ನೆಲ್ಲಾ ಕೂಡ ರಾತ್ರಿ ಮಲಗುವ ಮುನ್ನ ಓದುವುದೋ, ಕೇಳುವುದೋ, ಗಮಕವಾಚಿಸುವುದೋ ಮಾಡುತ್ತಿರಲಿಲ್ಲ. ರಾತ್ರಿ ಮಲಗುವ ಮುನ್ನ ಮನಸ್ಸಿಗೆ ಧನಾತ್ಮಕ ಸಂದೇಶಗಳನ್ನು ಕೊಡಬೇಕು. ಬೆಳಿಗ್ಗೆ ಎದ್ದಾಗಲೂ ಅಷ್ಟೇ. ಇದೆಲ್ಲವನ್ನೂ ಕಡ್ಡಾಯವಾಗಿ ಅನುಸರಿಸಲಿ ಎಂಬ ದೃಷ್ಟಿಯಿಂದ ಕೆಲವು ಸಂಪ್ರದಾಯಗಳನ್ನೂ ಕಟ್ಟುಪಾಡುಗಳನ್ನೂ ಆ ಕಾಲದ ಜನ ಜಾರಿಯಲ್ಲಿಟ್ಟುಕೊಂಡಿದ್ದರು. ಆದರೆ ಇಂದು ಅಂತಹ ಯಾವುದೇ ಸಂಪ್ರದಾಯವನ್ನು ನಾವು ಪಾಲಿಸುತ್ತಿಲ್ಲ. ಎಲ್ಲದಕ್ಕೂ ನಮ್ಮ ಕುತ್ಸಿತ ಬುದ್ಧಿ ಕಡ್ಡಿಹಾಕಿ ವೈಜ್ಞಾನಿಕವಾಗಿ ನೋಡತೊಡಗುತ್ತದೆ. ವಿಜ್ಞಾನ ಶಾಸ್ತ್ರ ಕೂಡ ಮಾನವನೇ ಮಾಡಿರುವುದರಿಂದ ಅದಕ್ಕೆ ಗೋಚರವಾಗದ ಎಷ್ಟೋ ಕ್ರಿಯೆ-ಪ್ರಕ್ರಿಯೆಗಳಿವೆ ! ಮನಸನ್ನು ಶುದ್ಧೀಕರಿಸಲು ವಿಜ್ಞಾನದಲ್ಲಿ ಯಾವುದೇ ಯಂತ್ರಗಳಿಲ್ಲ. ಬದಲಾಗಿ ಧ್ಯಾನವೇ ನಾವು ಮನಸ್ಸಿಗೆ ಮಾಡಿಸಬಹುದಾದ ಸ್ನಾನವಾಗಿರುತ್ತದೆ.

ಇದನ್ನೆಲ್ಲಾ ಅರಿತೇ ಪ್ರಾಜ್ಞರು ಹೇಳಿದ್ದು : ’ ಸಜ್ಜನರ ಸಂಗವದು ಹೆಜ್ಜೇನು ಸವಿದಂತೇ ’ ಎಂದು. ಉತ್ತಮ ಸಂಸ್ಕಾರವನ್ನು ಪಡೆಯಬೇಕಾದರೆ ಉತ್ತಮರನ್ನು ಹುಡುಕಿಕೊಳ್ಳಬೇಕು. ಅಂಥವರ ಸಮಯವನ್ನು ನಿರೀಕ್ಷಿಸಿ ಅವರಿಂದ ಹಲವನ್ನು ಕಲಿಯಬೇಕು, ಅಂಥವರು ತಿಳಿಸುವ ಉತ್ತಮ ಪುಸ್ತಕಗಳನ್ನು ಓದಬೇಕು, ಸತ್ಯ, ಅಹಿಂಸೆ, ಪ್ರಾಮಾಣಿಕತೆಗಳೇ ಮೊದಲಾದ ಅಂಶಗಳನ್ನು ಸಕ್ರಿಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋಗಬೇಕು. ನಾವು, ನಮ್ಮ ನಾಲಿಗೆ, ನಮ್ಮ ನಡತೆ ಒಳ್ಳೆಯದಾದಾಗ ನಾಡೆಲ್ಲಾ ಒಳ್ಳೆಯದಾಗುತ್ತಾ ಹೋಗುತ್ತದೆ. ಇದಕ್ಕೆಂತಲೇ ಮಹಾತ್ಮರಾದ ಸ್ವಾಮೀ ವಿವೇಕಾನಂದರು ಹೇಳಿದರು : ’ ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು’ ನಾವು ನಮ್ಮ ನ್ಯೂನತೆಗಳನ್ನು, ದೌರ್ಬಲ್ಯಗಳನ್ನು ಅರಿಯೋಣ, ಸನ್ಮಾರ್ಗದಲ್ಲಿ ನಡೆಯೋಣ, ಮಾನವರಾಗೋಣ.