ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, December 28, 2014

ಪಿಕೆ ಮತ್ತು ಸೋನಿಯಾ ಕೇಬಲ್‌ಗಳು ಸೃಜನಶೀಲತೆಯನ್ನು ತೋರಿಸುತ್ತವೆ





'ಪಿಕೆ' ಮತ್ತು 'ಸೋನಿಯಾ ಕೇಬಲ್‌'ಗಳು ಸೃಜನಶೀಲತೆಯನ್ನು ತೋರಿಸುತ್ತವೆ

ಸಿನಿಮಾ ನೋಡುವುದು ನನ್ನ ದೊಡ್ಡ ಹವ್ಯಾಸವೇನಲ್ಲ; ನೋಡುವುದಿಲ್ಲ ಎಂದೇನೂ ಇಲ್ಲ. ಆಗೀಗ ಅನುಕೂಲವಾದಾಗ ಸಿನಿಮಾ ನೋಡುವುದುಂಟು; ಬಿಡುಗಡೆಗೊಳ್ಳುವ ಸಾವಿರಾರು ಪುಸ್ತಕಗಳಲ್ಲಿ ಯಾವುದು ಉತ್ತಮವೆಂದು ಆಯ್ದುಕೊಳ್ಳುವುದೆಷ್ಟು ಕಷ್ಟವೋ ಬಿಡುಗಡೆಗೊಳ್ಳುವ ಸಿನಿಮಾಗಳ ಆಯ್ಕೆಯೂ ಅಷ್ಟೇ ಕಷ್ಟ. ಸಂಗೀತ, ಸಾಹಿತ್ಯ ಮತ್ತು ಕಲೆಗಳಲ್ಲಿ ಯಾವುದನ್ನಾದರೂ ಆಗಾಗ ಆಸ್ವಾದಿಸುವುದು ಸಂಸಾರಿಗಳಿಗೆ ಒಳಿತೇ; ಜೀವನದ ಜಂಜಡಗಳಿಂದುಂಟಾದ ಮಾನಸಿಕ ಕ್ಲೇಶಗಳನ್ನು ಕಳೆಯಲು ಅವು ಸಹಕಾರಿ. ಕಾಲಮಾನ ಮಾತ್ರ ವಿಚಿತ್ರವಾಗಿದೆಯಲ್ಲ; ಕೆಲವೊಮ್ಮೆ ತಲೆನೋವಿಗೆ ತೆಗೆದುಕೊಂಡ ಮಾತ್ರೆಯ ಸೈಡ್ ಇಫೆಕ್ಟ್ ಜಾಸ್ತಿಯಿದ್ದು ಇನ್ನಾವುದೋ ತೊಂದರೆ ಕಾಣಿಸಿಕೊಳ್ಳಬಹುದು; ಅಂತೆಯೇ ಮನರಂಜನೆಗಾಗಿ ನೋಡುವ ಸಿನಿಮಾಗಳಿಂದ ಮನೋವ್ಯಾಕುಲ, ಮನೋವ್ಯಾಧಿ ಉಂಟಾಗಲೂ ಬಹುದು! ಯಾಕೆಂದರೆ ಇವತ್ತಿನ ಕೆಲಸಗಳೆಲ್ಲವೂ ಹಣಗಳಿಕೆಯ ಒಂದೇ ಉದ್ದೇಶದಿಂದ ನಡೆಯುವಂತವು; ಅಲ್ಲಲ್ಲಿ ಕೆಲವು ಮಾತ್ರ ಭಿನ್ನವಾಗಿ ನಿಲ್ಲುತ್ತವೆ.   

ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು: ಎಲ್ಲರಿಗೆ ಎಲ್ಲವೂ ಹಿಡಿಸುವುದು ಸಾಧ್ಯವಿಲ್ಲ, ವ್ಯಕ್ತಿ ಬೆಳೆದುಬಂದ ಪರಿಸರಕ್ಕೆ, ಸಂಸ್ಕೃತಿಗೆ, ಜಾಯಮಾನಕ್ಕೆ ಅವನದ್ದೇ ಆದ ಆಯ್ಕೆಗಳಿರುತ್ತವೆ. ಬಹುತೇಕರು ಮೆಚ್ಚುವ ಉತ್ತಮ ಸಾಮಾನ್ಯ ಅಂಶಗಳನ್ನೊಳಗೊಂಡ ಕೃತಿಗಳನ್ನು ನಾವೆಲ್ಲರೂ ಅರಿವಿಲ್ಲದೆಯೇ ಮೆಚ್ಚುತ್ತೇವೆ; ಇದಕ್ಕೊಂದು ಉದಾಹರಣೆ ಕೊಡುವುದಾದರೆ ಮೈಕ್ರೋಸಾಫ್ಟ್ ಆಫೀಸ್; ಮೈಕ್ರೋಸಾಫ್ಟ್ ಆಫೀಸ್ನಲ್ಲಿ ಜನಸಾಮಾನ್ಯರ ದಿನನಿತ್ಯದ ಲಿಖಿತ ಸಂವಹನಕ್ಕೆ ಬೇಕಾದ ಬಹುತೇಕ ಆಯ್ಕೆಗಳನ್ನು ಕೊಡಲಾಗಿದೆ-ಇದು ಗಣಕಯಂತ್ರ ಬಳಸುವವರಿಗೆಲ್ಲ ಗೊತ್ತಿರುವ ಸಂಗತಿ. ಅದೇ ವಿಧದಲ್ಲಿ ಇಂದು ತಯಾರಾಗುವ ಅನೇಕ ದಿನಬಳಕೆ ವಸ್ತುಗಳಲ್ಲಿ, ದಿರಿಸುಗಳಲ್ಲಿ ಅಂಥದ್ದೇ ಸಾಮಾನ್ಯ ಅಂಶಗಳು ಅಡಕವಾಗಿರುತ್ತವೆ; ಎಲ್ಲಿಯೋ ಸಿದ್ಧಗೊಳ್ಳುವ ಉಡುಪು ನನ್ನನ್ನೂ ಮೆಚ್ಚಿಸುವುದರ ಜೊತೆಗೆ ನನ್ನಂತಹ ಅನೇಕರನ್ನು ಮೆಚ್ಚಿಸಬಹುದು; ಇನ್ನೆಲ್ಲಿಯೋ ತಯಾರಾದ ತಿನಿಸೊಂದು ಹಲವರಿಗೆ ಇಷ್ಟದ ಖಾದ್ಯವಾಗಬಹುದು. ಕೆಲವೊಮ್ಮೆ ಇಂತಹ ಆಯ್ಕೆಗಳು ಮನದಲ್ಲಿ ಅಚ್ಚೊತ್ತಿದಾಗ ಅದದೇ ತಯಾರಿಕಾ ಸಂಸ್ಥೆಗಳನ್ನು ನಾವು ಆಧರಿಸುವಷ್ಟರ ಮಟ್ಟಿಗೆ ನಮ್ಮ ಮನಸ್ಸು ಹೊಂದಿಕೊಂಡುಬಿಡುತ್ತದೆ. ಅದೇ ಕಾರಣಕ್ಕಾಗಿ ಬೀಗವೆಂದರೆ ಗಾಡ್ರೆಜ್ ಮತ್ತು ಟೂತ್ ಪೇಸ್ಟ್ ಎಂದರೆ ಕಾಲ್ಗೇಟ್ ನಮಗೆ ನೆನಪಾಗಿಬಿಡುತ್ತದೆ!

ಕನ್ನಡದ ಕಾದಂಬರಿಗಳ ಸರದಿಗೆ ಬಂದರೆ ಭೈರಪ್ಪನವರು ಆದ್ಯತೆಯಲ್ಲಿ ಇರುತ್ತಾರೆ; ಇದರರ್ಥ ಮಿಕ್ಕುಳಿದವರ ಕಾದಂಬರಿಗಳು ತಿರಸ್ಕೃತವೆಂದಲ್ಲ-ಅವುಗಳಲ್ಲೂ ಅನೇಕರ ಕೃತಿಗಳು ಉತ್ತಮವಾಗಿರಬಹುದು. ಕಾಲು ಶತಮಾನದ ಹಿಂದಿನ ಕಾದಂಬರಿಗಳಲ್ಲಿರುವ ಗುಣಮಟ್ಟ ಅಧುನಿಕ ಯುವ ಬರಹಗಾರರ ಕಾದಂಬರಿಗಳಲ್ಲಿ ಕಾಣಿಸುವುದಿಲ್ಲ.  ಬರವಣಿಗೆ ಸಹಜವಾದ ಶೈಲಿಯಲ್ಲಿ ಜನಜೀವನದ ಹಲವು ಮಜಲುಗಳನ್ನು ಅಡಕಮಾಡಿಕೊಂಡು ಮೂಡಿದರೆ ಆಗ ಅದು ಜನರಿಗೆ ಇಷ್ಟವಾಗುತ್ತದೆ. ತುಂಬಾ ಸ್ಟ್ರಿಕ್ಟ್ ಆದ ಸಂಗೀತ ಲಯಗಳಿಗೆ ಹೊಂದಿಸಿಕೊಂಡು ಹಾಡುವಾಗ ಅರ್ಥಕೆಡದಂತೆ, ರಸಭಾವಗಳಿಗೆ ಕೊರತೆಯಾಗದಂತೆ ಹಾಡಿದರೆ ಮಾತ್ರ ಇಷ್ಟವಾಗುತ್ತದೆ; ರಾಗದ ತಿಟ್ಟು-ತಿಲ್ಲಾನಗಳನ್ನು ಮಾತ್ರ ಗಮನಿಸುತ್ತ ಕೇ-ಶವನ ಎಂದು ಪದವನ್ನು ಒಡೆದುಬಿಟ್ಟರೆ ಆಗ ಅರ್ಥಗೆಡುತ್ತದೆ; ಎಷ್ಟೋ ಸಮಯ ಸಂಗೀತ ಅಭ್ಯಸಿಸಿದವರಲ್ಲಿ ಈ ವಿಧದ ವ್ಯತ್ಯಯಗಳು ಕಾಣುವುದುಂಟು; ಅದಕ್ಕಾಗಿಯೇ ಔಪಚಾರಿಕ ಸಂಗೀತದ ತರಬೇತಿಯಿಲ್ಲದಿದ್ದರೂ ಮನೆಯೆದುರು ನಿಂತು ತಂಬೂರಿ ಮೀಟಿ ಹಾಡುವ ಅನಾಮಿಕ ಭಿಕ್ಷುಕನ ಹಾಡೂ ಸಹ ಕೆಲವೊಮ್ಮೆ ಇಷ್ಟವಾಗುತ್ತದೆ, ಪುಟ್ಟ ಚಾ ದುಖಾನಿನಲ್ಲಿ ಅಭ್ಯಾಸ ಬಲದಿಂದ ಗಿರ್ರನೆ ಹೊಯ್ದೆತ್ತಿ ಕೊಡುವ ಬಿಸಿಬಿಸಿ ಮಸಾಲೆದೋಸೆಯೂ ಇಷ್ಟವಾಗುತ್ತದೆ. ಕೆಲಸಮಾಡುವ ವ್ಯಕ್ತಿಗೆ ಮಾಡುವ ಕೆಲಸದಲ್ಲಿ ಸಂತೃಪ್ತಿ ಮತ್ತು ತಾದಾತ್ಮ್ಯತೆ ಇರಬೇಕಷ್ಟೆ.  

ಹುಟ್ಟಿದ ಜೀವಿಗೆ ಅನುಗಾಲವೂ ಒಂದಲ್ಲೊಂದು ಚಿಂತೆ ಇದ್ದಿದ್ದೇ, ಮನುಷ್ಯರ ಚಿಂತೆಯನ್ನಷ್ಟೇ ನಾವರ್ಥಮಾಡಿಕೊಂಡಿರಬಹುದು ಯಾಕೆಂದರೆ ಮಿಕ್ಕ ಜೀವ ಪ್ರಭೇದಗಳ ಬೌದ್ಧಿಕದ ಬಗೆಗೆ ನಮಗೆ ಸ್ಪಷ್ಟತೆಯಿಲ್ಲ.

ಒಮ್ಮೆ ಹೂದೋಟದಲಿ ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲಿ ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ-ಮಂಕುತಿಮ್ಮ

ಮಹಾತ್ಮ ಡಿವಿಜಿ ಹೇಳಿದಂತೆ ಬದುಕಿನ ಏಕತಾನತೆಯನ್ನು ಕಳೆದುಕೊಳ್ಳಲು ಉದ್ಯಾನ ವಿಹಾರವೂ ಬೇಕು, ಗೆಳೆಯರೊಡನೆ ಹರಟೆಯೂ ಬೇಕು, ಸಂಗೀತ-ಶಾಸ್ತ್ರಗಳೂ ಬೇಕು, ಸಂಸಾರದ ಕೆಲಸವೂ ಬೇಕು, ಮೌನವೂ ಬೇಕು. ಸಪ್ತಸ್ವರಗಳು ಸೇರಿದಾಗಲೇ ಸಂಗೀತ ಸುಲಲಿತವಾಗಿ ಕೇಳಲು ಹಿತವಾಗಿರುತ್ತದೆ; ಕೇವಲ ಒಂದೇ ಸ್ವರವನ್ನು ದೀರ್ಘಕಾಲ ಅನುಭವಿಸಿನೋಡಿ-ಗೊತ್ತಾಗುತ್ತದೆ. ಬೆಳ್ಳನ ಬೆಳಕಿನಲ್ಲಿ ಸಪ್ತ ವರ್ಣಗಳಿವೆಯೆಂಬುದು ನಮಗೀಗ ಗೊತ್ತಿದೆ, ಪ್ರಾಯಶಃ ಸೂರ್ಯನಿಗೆ ಅದೇ ಕಾರಣದಿಂದ ಸಪ್ತಾಶ್ವ ಎಂದಿರಲಿಕ್ಕೂ ಸಾಕು.  ಇಂತಹ ಏಳಂಕಿಯ ಏಳರಾಟಗಳು ವ್ಯಕ್ತಿ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿರುವುದರಿಂದ ಇರುವುದರಲ್ಲೇ ನೆಮ್ಮದಿಯನ್ನು ಗಳಿಸಿಕೊಳ್ಳಲು ಮನಸ್ಸನ್ನು ಕೆಲಹೊತ್ತು ಅನ್ಯಾನ್ಯ ವಿಷಯಗಳೆಡೆಗೆ ತೊಡಗಿಸುವುದು ಅನಿವಾರ್ಯ; ಇದನ್ನೆಲ್ಲ ಬಿಟ್ಟು ಮನಸ್ಸನ್ನು ಸ್ವನಿಯಂತ್ರಣಕ್ಕೆ ತೆಗೆದುಕೊಂಡು, ಜಿತೇಂದ್ರಿಯನಾಗಿ, ಧ್ಯಾನಾಸಕ್ತನಾಗಿ ಜೀವನ್ಮುಕ್ತನಾಗುವವನೇ ಯೋಗಿ. 

ಯುಗಧರ್ಮದಂತೆ ಕಲಿಯುಗದಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ಮೌಢ್ಯಗಳನ್ನು ನಮ್ಮಲ್ಲಿ ಕೆಲವರು ಮಾತ್ರ ಮನಗಾಣುತ್ತಾರೆ. ದೇವರು-ಧರ್ಮಗಳ ಹೆಸರಿನಲ್ಲಿ ಕೆಲವರು ಹೇಗೆ ಮೋಸಮಾಡುತ್ತಾರೆ ಎಂಬ ಕಥಾವಸ್ತುವನ್ನು ಹಾಸ್ಯಮಯವಾಗಿ ತೋರಿಸಿದ್ದು ‘ಪಿಕೆ’ ಸಿನಿಮಾ. ಅಮೀರ್ ಖಾನ್ ನಟಿಸಿರುವ ‘ಪಿಕೆ’ ಸಿನೆಮಾವನ್ನು ಜಾಣ ಸಿನೆಮಾ ಎಂದಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, ಧರ್ಮ ಎಂಬ ಗಂಭೀರ ವಿಷಯವನ್ನು  ಸೂಕ್ಷವಾಗಿ ಮತ್ತು ನಾಜೂಕಾಗಿ ಹಾಸ್ಯಮಯವಾಗಿ ಚಲನಚಿತ್ರದಲ್ಲಿ ನಿಭಾಯಿಸಿರುವುದಕ್ಕೆ ರಾಜಕುಮಾರ್ ಹಿರಾನಿಯೊಬ್ಬ "ಧೈರ್ಯವಂತ ನಿರ್ದೇಶಕ" ಎಂದು ಹೇಳಿದ್ದು ನಿಜವೆನ್ನಿಸಿತು. ಅಲ್ಲಲ್ಲಿ ಕೆಲವರು "ಹಿಂದೂ ಸಂಪ್ರದಾಯಗಳನ್ನು ಗೇಲಿ ಮಾಡಲಾಗಿದೆ" ಎಂದು ದೂಷಿಸುತ್ತಿರುವುದನ್ನು ಕಂಡಾಗ  ಸಂಪ್ರದಾಯದ ಹೆಸರಿನಲ್ಲಿ ನಡೆಯುವ ದಗಲ್ಬಾಜಿ ವಹಿವಾಟುಗಳನ್ನು ಪ್ರಶ್ನಿಸಲೇ ಬಾರದೇ ಎಂದೆನಿಸುತ್ತದೆ; ಯಾಕೆಂದರೆ ಇಂದು, ನೂರು ಕುರಿಗಳಲ್ಲಿ ಒಂದು ಕುರಿ ಹೋದರೆ ತಲೆಕೆಡಿಸಿಕೊಳ್ಳಬೇಕಿಲ್ಲ-ಮಿಕ್ಕಿದ ತೊಂಬತ್ತೊಂಬತ್ತು ಕುರಿಗಳು ನಮ್ಮೆಡೆಯಲ್ಲೇ ಇವೆ ಎಂದು ಲೆಕ್ಕಹಾಕುವ ಮತ್ತು ಅಂತಹ ಅಂಧಶ್ರದ್ಧಾಳುಗಳ ಮುಂದೆ ದರ್ಬಾರ್ ನಡೆಸುವ ಸ್ವಾಮಿಗಳು, ಬಾಬಾಗಳು ಹಲವರು ಕಾಣಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಅಂಥದ್ದೊಂದು ಬಾಬಾನ ‘ದರ್ಬಾರ್’ಗೆ ಹೋಗಬೇಕೆಂದರೆ ೨,೫೦೦ ರೂಪಾಯಿಗಳನ್ನು  ಮೊದಲೇ ರವಾನಿಸಿ ರಸೀದಿ ಇರಿಸಿಕೊಳ್ಳಬೇಕಾಗುತ್ತದೆ. ದರ್ಬಾರ್ ನಲ್ಲಿ ಬಾಬಾ ತನ್ನನ್ನು ನಂಬಿಬಂದವರು ಹೇಳುವ ಸಮಸ್ಯೆಗಳನ್ನೂ ಮತ್ತು ಅಂಥವರಿಗೆ ಬಾಬಾ ನೀಡುವ ಸಲಹೆಗಳನ್ನು ಗಮನಿಸಿದರೆ  ಎಂಥಾ ಬಕರಾಗಳೂ ಇಲ್ಲಿದ್ದಾರಲ್ಲಾ ಎನಿಸುತ್ತದೆ. ಸಮೂಹಸನ್ನಿಯಂತೆ ಮೈಕ್ ಹಿಡಿದು ಬಾಬಾನನ್ನು ಹೊಗಳುವ ಜನ ಹಿಂದಿನ ಭೇಟಿಗಳಲ್ಲಿ ಬಾಬಾ ಹೇಳಿದ ಸಲಹೆಗಳಿಂದ ಪರಿಹಾರ ಸಿಗದಿದ್ದರೂ, ಯಾವುದೋ  ಪ್ರಲೋಭನೆಯಿಂದ  ಬಾಬಾನನ್ನು ಹೊಗಳೇ ಹೊಗಳುತ್ತಾರೆ!!  

ಧರ್ಮದ ಆಚರಣೆಗಳು ಆದರ್ಶಮಯವಾಗಿರಬೇಕೇ ಹೊರತು ಅಂಧಾನುಕರಣೆಗಳಾಗಬಾರದು. ಇಂದು ಧರ್ಮಾಚರಣೆಗಳಲ್ಲಿ ಸೇರಿಕೊಂಡಿರುವ ಅಥವಾ ಅಧುನಿಕ ‘ಬಾಬಾ’ಗಳು, ‘ಸಂನ್ಯಾಸಿ’ಗಳು ಸೃಷ್ಟಿಸಿರುವ ಕೆಲವು ಆಚರಣೆಗಳು ಅರ್ಥಹೀನವಾಗಿವೆ ಎಂಬುದನ್ನು ಜನ ಮನಗಾಣಬೇಕು. ಕಲಿಯುಗದಲ್ಲಿ ಕೆಲವರಿಗೆ ದುಡ್ಡುಮಾಡಲು ಸುಲಭದ ದಾರಿಯೆಂದರೆ ‘ಬಾಬಾ’ಗಳಾಗುವುದು.   ಧರ್ಮದ ಹೆಸರಿನಲ್ಲಿ ಹಣಮಾಡುವ ಬಾಬಾವರ್ಗ ಮತ್ತವರ ಬೆಂಬಲಿಗರು ಇಂತಹ ಸಿನಿಮಾಗಳ ಬಗ್ಗೆ ಅಪಸ್ವರ ಎತ್ತುತ್ತಾರೆ.

ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಈ ಸಿನೆಮಾವನ್ನು ಮುಕ್ತಕಂಠದಿಂದ ಪ್ರಶಂಸಿಸಿರುವುದನ್ನು ಗಮನಿಸಿದಾಗ ಅವರಿಗೆ ನಿಜವಾಗಿಯೂ ಈ ಸಿನಿಮಾದ ಕಥೆ ಅರ್ಥವಾಗಿದೆ ಎನ್ನಿಸಿತು. “ ನಿರ್ಭೀತಿಯಿಂದ ತಯಾರಿಸಿದ ಅದ್ಭುತವಾದ ಸಿನಿಮಾ ಇದು. ಎಲ್ಲರೂ ನೋಡಲೇಬೇಕು.  ಇಂತಹ ವಿಶಾಲವಾದ ವೈವಿಧ್ಯಮಯ ದೇಶವಾದ ಭಾರತದಲ್ಲಿ ಜನ್ಮ ನೀಡಿರುವುದು ನಮ್ಮ ಪುಣ್ಯ. ಜಾತಿಯಾಗಲೀ, ಜನಾಂಗವಾಗಲೀ, ಭಾಷೆಯಾಗಲೀ, ಪ್ರಾದೇಶಿಕತೆಯಾಗಲೀ ಮತ್ತು ಧರ್ಮವಾಗಲೀ ನಮ್ಮ ದೇಶದ ಐಕ್ಯತೆಯನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು ಎಲ್ಲ ರಾಷ್ಟ್ರಭಕ್ತರ ಕರ್ತವ್ಯ" ಎಂದಿದ್ದಾರೆ ಅವರು.

ಸಿನಿಮಾದಲ್ಲಿ ಧರ್ಮದ ಅಥವಾ ದೇವರ ಅವಹೇಳನವೇನೂ ಇಲ್ಲ; ಮೌಢ್ಯವನ್ನು ಸಂಕೇತಿಸುವ ಹಲವು ದೃಶ್ಯಗಳನ್ನು ಕಾಣಬಹುದಾಗಿದೆ. ರಾಜ್ ಕುಮಾರ್ ಹಿರಾನಿ, ವಿಧು ವಿನೋದ್ ಚೋಪ್ರಾ ಮತ್ತು ಅಮೀರ್ ಖಾನ್ ಇವರೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಷ್ಟು ಒಳ್ಳೆಯ ಸಿನಿಮಾ ಮಾಡಲು ಸಾಧ್ಯವಾಯಿತು ಎನ್ನಬಹುದು. ಮಾನವೀಯತೆ ಮತ್ತು ವಾಸ್ತವಿಕ ಅಂಶಗಳು ಈ ಸಿನಿಮಾದಲ್ಲಿವೆ. ಆದ್ದರಿಂದಲೇ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಮತ್ತು ಗಲ್ಲಿಗಲ್ಲಿಗಳಲ್ಲೂ ಈ ಮಟ್ಟದ ಗುಲ್ಲೆಬ್ಬಿಸುವಲ್ಲಿ ಯಶಸ್ವಿಯಾಗಿದೆ. 

‘ಸೋನಾಲಿ ಕೇಬಲ್’ ಎಂಬ ಇನ್ನೊಂದು ಸಿನಿಮಾದಲ್ಲಿರುವ ಪ್ರಮುಖ ಕಲಾವಿದರು ಹೊಸಬರು. ವಾಸ್ತವವಾಗಿ ಹೊಸಬರ ಸಿನಿಮಾಗಳನ್ನು ನೋಡುವಾಗ ಎರಡನೇ ಧೋರಣೆಯೇ ಹೆಚ್ಚಿಗೆ ಇರುತ್ತದೆ. ಸಿನಿಮಾ ಸಾಗುವ ಜಾಡು ಹಿಡಿದು ಕೆಲನಿಮಿಷದಲ್ಲೇ ಅದರ ನಾಡಿಮಿಡಿತವನ್ನು ಅರಿಯಬಲ್ಲ ಜನ ಇದ್ದಾರೆ. ಜಾಗತೀಕರಣದಿಂದ ದೇಶದ ಚಿಕ್ಕ-ಪುಟ್ಟ ಉದ್ಯಮಿಗಳಿಗೆ, ವ್ಯಾಪಾರ-ವಹಿವಾಟುದಾರರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತದೆ ಎಂಬುದು ಈ ಸಿನಿಮಾ ಕಥೆಯ ಥೀಮ್ ಆಗಿದೆ. ಬೃಹತ್ ಮಟ್ಟದ ಟಿವಿಕೇಬಲ್ ಮತ್ತು ಇಂಟರ್ನೆಟ್ ಸರ್ವಿಸ್ ಪ್ರೊವೈಡಿಂಗ್ ಕಂಪನಿ ಬಾಗಿಲು ತೆರೆದು, ಸಣ್ಣ ಮತ್ತು ಪ್ರಾದೇಶಿಕ ಕೇಬಲ್ ಉದ್ಯಮಗಳನ್ನು  ತನ್ನ ಕಬಂಧ ಬಾಹುಗಳಲ್ಲಿ ಹಿಡಿದು ಹೇಗೆ ಆಪೋಶನ ತೆಗೆದುಕೊಳ್ಳುತ್ತದೆ ಎಂಬುದು ಕಥೆಯ ಮುಖ್ಯಪಾಠ. ಭಾರತದಂಥ ದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದು, ಭೂಭಾಗ ಕಮ್ಮಿ ಇರುವಲ್ಲಿ, ಬಡತನ ಹೆಚ್ಚಿದ್ದು ಧನಿಕರು ಕಮ್ಮಿ ಇದ್ದಾರೆ. ಅಖಂಡ ಭಾರತದಲ್ಲಿ ಮಧ್ಯಮವರ್ಗದವರೇ ಹೆಚ್ಚಿಗೆ ಇದ್ದಾರೆ. ತಮ್ಮ ನಿತ್ಯದ ಅಗತ್ಯಕ್ಕೆ ಅನುಕೂಲವಾಗುವ ಹಲವಾರು ಸೇವೆಗಳನ್ನು ಇಲ್ಲಿನ ಜನ ಬಯಸುತ್ತಾರೆ. ಅದರಲ್ಲಂತೂ ಕನ್ಸ್ಯೂಮರ್ ಡ್ಯೂರೇಬಲ್ಸ್ ವಸ್ತುಗಳ ಖರೀದಿಸಿ ನಂತರದಲ್ಲಿ ಮಾರಾಟದ ನಂತರ ಬೇಕಾಗುವ ಸರ್ವಿಸ್ [ಸೇವೆ]ಯನ್ನು ಬಯಸುವ ಮಂದಿಯೇ ಇಲ್ಲಿ ಹೆಚ್ಚಿಗೆ ಇದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿನ ಜನರಷ್ಟು ಸಮಯವಾಗಲೀ, ಆರ್ಥಿಕ ಅನುಕೂಲವಾಗಲೀ ಇಲ್ಲದ ಜನರಿಗೆ ಸೇವೆಗಾಗಿ ಕಾಲ್ ಸೆಂಟರ್ಗೆ ಕಾಲ್ ಮಾಡಿಕೊಂಡು,  “ ಕ್ಕಾ॒ಗಿ ಒಂದನ್ನು ಒತ್ತಿ, ॒॒ಕ್ಕಾ॒ಗಿ ಎರಡನ್ನು ಒತ್ತಿ, ಅದಕ್ಕಾಗಿ ಮೂರನ್ನು ಒತ್ತಿ” ಎಂಬುದನ್ನು ಕೇಳಿಸಿಕೊಳ್ಳುವ ವ್ಯವಧಾನ ಇರುವುದು ಸಾಧ್ಯವಿಲ್ಲ. 

ಕಾರಿರುಳೊಳಾಗಸದಿ ತಾರೆ ನೂರಿದ್ದೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ ಮಾನುಷಸಖನ
ಕೋರುವುದು ಬಡಜೀವ-ಮಂಕುತಿಮ್ಮ

ರಾತ್ರಿಯ ಕತ್ತಲ ಹಾದಿಯಲ್ಲಿ ಕೇವಲ ತಾರೆಗಳ ಬೆಳಕು ನಮಗೆ ಮಹತ್ತರ ಗುರುತಾಗಲು ಸಾಧ್ಯವಿಲ್ಲ. ದೂರದ ದೇವರು ಸಹಾಯ ಮಾಡುತ್ತಾನೆಂದುಕೊಂಡರೂ, ಆ ಕ್ಷಣದಲ್ಲಿ ಅತ್ಯಂತ ತ್ವರಿತವಾಗಿ ನಮ್ಮ ಕಣ್ಣಿಗೆ ಮನೆಯಲ್ಲಿ ಬೆಳಗುವ ಬೆಳಕೊಂದು ಬಿದ್ದಾಗಲೇ ಸಮಾಧಾನ. ಅದೇ ವಿಧವಾಗಿ ಬಹುದೊಡ್ಡ ತಾಜ್ಮಹಲ್ ಹೋಟೆಲ್ನಂಥ ಸ್ಟಾರ್ಹೋಟೆಲ್ ಒದಗಿಸುವ ಹೈ ಟೀ ಆತಿಥ್ಯವನ್ನು ಅನುಭವಿಸುವ ಆರ್ಥಿಕ ಮಟ್ಟ ಎಲ್ಲರದ್ದಲ್ಲ, ಕಾಕಾ ಅಂಗಡಿಯ ಅರ್ಧ ಕಪ್ ಚಾ ಕುಡಿದು ತೃಪ್ತಗೊಳ್ಳುವ ಮಧ್ಯಮ, ಕೆಳಮಧ್ಯಮ, ಬಡಜನರೇ ಹೆಚ್ಚಾಗಿರುವ ಈ ಭಾರತದಲ್ಲಿ ಕಾಲ್ ಸೆಂಟರ್ ವ್ಯವಸ್ಥೆ ಬಂದಾಗಿನಿಂದ ಪ್ರಾದೇಶಿಕ ಸರ್ವಿಸ್ ಉದ್ಯಮಿಗಳ ಮತ್ತು ಗ್ರಾಹಕರ ನಡುವಿರುತ್ತಿದ್ದ ಆತ್ಮೀಯ ವಾತಾವರಣ ಹೊರಟುಹೋಗಿದೆ; ಸರ್ವಿಸ್ ಪಡೆದುಕೊಳ್ಳಲು ಜನತೆ, ಅದರಲ್ಲೂ ವಯೋವೃದ್ಧ ಗ್ರಾಹಕರು ಪರದಾಡಬೇಕಾಗಿದೆ ಎಂಬ ಸಂದೇಶವನ್ನು ಈ ಸಿನಿಮಾ ರವಾನಿಸುತ್ತದೆ. ತರುಣಿಯೋರ್ವಳ ಸ್ವಂತ ಉದ್ಯಮ, ಸಾಹಸ, ಉತ್ಸಾಹ ಅಥವಾ ಜೋಶ್, ಎಳವೆಯಿಂದ ಅಮ್ಮನಿಲ್ಲದೆ ಕುಡುಕ ಅಪ್ಪನ ಗರಡಿಯಲ್ಲಿ ಬೆಳೆದ ಅವಳ ಬದುಕು, ಅವಳ ಪ್ರೇಮ, ಉದ್ಯಮದ ಸೋಲು, ಹತಾಶೆ, ಮತ್ತೆ ಉದ್ಯಮದಲ್ಲಿ ಗೆಲ್ಲುವ ವೈಖರಿ ಎಲ್ಲವನ್ನೂ ಸಹಜವಾಗಿ ಕ್ರೋಡೀಕರಿಸಲಾಗಿದೆ. ಪ್ರತಿಯೊಂದು ಪಾತ್ರವೂ ಸಿನಿಮಾದ ಪಾತ್ರವಾಗಿರದೇ ಎದುರು ಘಟಿಸುವ ಘಟನೆಯಷ್ಟು ನೈಜ  ಅನುಭವವನ್ನು ನೀಡುತ್ತದೆ. ಪಾತ್ರಗಳ ಜೀವಂತಿಕೆ, ಯುವ ಜೀವಗಳ ಲವಲವಿಕೆ ಇಡೀ ಸಿನಿಮಾವನ್ನು ಮತ್ತೊಮ್ಮೆ ನೋಡುವಂತೆ ಮಾಡುತ್ತದೆ.

ಮಚ್ಚು-ಲಾಂಗು  ಸಾಂಗು ಎನ್ನುವ ಕನ್ನಡದ ಸಿನಿಮಾ ಮಂದಿಗೆ ಇಂತಹ ಚಿತ್ರಕಥೆಗಳು ಹೊಳೆಯುವುದೇ ಇಲ್ಲ ಎಂಬುದು ವಿಪರ್ಯಾಸ. ಬೇಡದ ಹಲವು ಸಿನಿಮಾಗಳ ಮಧ್ಯೆ ಉತ್ತಮ ಸಂದೇಶಗಳಿರುವ ಇಂತಹ ಸಿನಿಮಾಗಳು ರಂಜಿಸುತ್ತಲೇ ಭಿನ್ನವೆಂದು ಎತ್ತರದ ಸ್ತರದಲ್ಲಿ ನಿಲ್ಲುತ್ತವೆ. ನೀವೂ ಒಮ್ಮೆ ನೋಡುವ ಮನಸ್ಸು ಮಾಡಿ; ನೋಡುತ್ತ ಮನಸ್ಸನ್ನು ನಿರುಮ್ಮಳ ಮಾಡಿ.

Tuesday, December 23, 2014

ಯೋಗಿಯೋ ಭೋಗಿಯೋ ಹೇಳುವೆಡೆ ಆತ್ಮವಂಚನೆ ಬೇಡ!




ಯೋಗಿಯೋ ಭೋಗಿಯೋ ಹೇಳುವೆಡೆ ಆತ್ಮವಂಚನೆ ಬೇಡ!


ಬಹಳ ವರ್ಷಗಳ ಹಿಂದೆಯೇ ಹಿಮಾಲಯದ ಸಂತ ಸ್ವಾಮಿ ರಾಮ ಬರೆದ ‘ಲಿವಿಂಗ್ ವಿತ್ ದಿ ಹಿಮಾಲಯನ್ ಮಾಸ್ಟರ್ಸ್’ ಎಂಬ ಅವರ ಆತ್ಮಕಥೆಯನ್ನು ಓದಿದ್ದೆ. ತೀರಾ ಇತ್ತೀಚೆಗೆ ಯುವ ಲೇಖಕ ಚೇತನ್ ಭಗತ್ ಬರೆದ ‘ಹಾಫ್ ಗರ್ಲ್ಫ್ರೆಂಡ್’ ಎಂಬ ಕಾದಂಬರಿಯನ್ನೂ ಓದಿದ್ದೇನೆ. ಮೊದಲನೆಯದು ಆಧ್ಯಾತ್ಮಿಕ ಶಿಖರಗಾಮಿಗಳ ರೋಚಕ-ತ್ಯಾಗಮಯ ಬದುಕನ್ನು ಸಾಲಾಗಿ ತೆರೆದಿಡುತ್ತ, ಮನುಷ್ಯ ಜೀವಿತದ ಘನ ಉದ್ದೇಶಗಳ ಬಗೆಗೆ ಸಾರಿದರೆ, ಎರಡನೆಯದು ಲೌಕಿಕ ಬದುಕಿನ ಭಾವಶೃಂಖಲೆಗಳನ್ನು ಬಣ್ಣಿಸುತ್ತ ಐಹಿಕ ಬದುಕಿನ ಕ್ಷಣಿಕ ಆನಂದವನ್ನು ನೀಡುತ್ತದೆ. ಇವೆರಡೂ ಪರಸ್ಪರ ವಿರುದ್ಧ ದಿಸೆಯಲ್ಲಿ ಸಾಗುವ ವಿಷಯವಸ್ತುಗಳ ಕಥಾ ಹಂದರಗಳನ್ನು ಒಳಗೊಂಡಿದ್ದು, ಎರಡೂ ಆಪ್ತವಾಗುತ್ತವೆ.

ನಿಜವಾದ ತ್ಯಾಗಿಯಾರು? ಯೋಗಿ ಯಾರು? ಆತನ ಜೀವನ ವೈಖರಿಯ ದಿನಚರಿಯೆಂಥದ್ದು? ಆತ ಎದುರಿಸುವ ಸವಾಲುಗಳೆಂಥವು? ಲೌಕಿಕವಾದ ಭಾವನಾತ್ಮಕ ಸಂಬಂಧಗಳನ್ನು ಆತ ಹೇಗೆ ಕಳೆದುಕೊಳ್ಳುತ್ತಾನೆ ಎಂಬುದರ ಬಗೆಗೆ ಸ್ವಾಮಿ ರಾಮ ಚೆನ್ನಾಗಿ ಹೇಳಿದ್ದಾರೆ. ಯೋಗಿಯಾಗುವ ಮೊದಲಿನ ಹಂತದಲ್ಲಿ ಉಡಾಫೆಮಾಡುವ ಹುಡುಗನಾಗಿ ತನ್ನ ಗುರುವಿಗೆ ವಿರುದ್ಧವಾಗಿ ಹೇಗೆಲ್ಲಾ ನಡೆದುಕೊಂಡೆ ಮತ್ತು ಅದರ ಪರಿಣಾಮವೇನಾಯ್ತೆಂಬುದರ ಬಗೆಗೂ ವಿಶದವಾಗಿ ವಿವರಿಸಿದ್ದಾರೆ. ಅರಿಷಡ್ವರ್ಗಮುಕ್ತ ಯೋಗಿಗಳನ್ನು ಕಾಣಲು ಆಯ್ಕೆಯೇ ಅನಿವಾರ್ಯ ಎಂಬುದೂ ಸಹ ಗೊತ್ತಾಗುತ್ತದೆ. ಯೋಗಿಯ ಮೊದಲ ಹಂತವೇ ಅಹಂಕಾರದ ದಮನ[‘ನಾನು’ ಎಂಬುದರ ನಾಶ] ನಾನು ಎಂಬುದನ್ನು ಅನಂತದಲ್ಲಿ ಅಡಕವಾಗಿಸುವುದೇ ಯೋಗಿಯ ಗುರಿ-ಅದೇ ಮೋಹ ಕ್ಷಯ ಅಥವಾ ಮೋಕ್ಷ. ಸಾಧನಾ ಪಥದಲ್ಲಿ ಒಂದೊಂದು ಸಾಧುವಿಗೂ, ಒಬ್ಬೊಬ್ಬ ಸಂತನಿಗೂ ಸಹಜವಾಗಿ ಅಂಟಿರುವ ವೈಶಿಷ್ಟ್ಯವನ್ನು ಮತ್ತು ಅದರ ಮಹತ್ವಗಳನ್ನೂ ಸ್ವಾಮಿ ರಾಮ ಉದಾಹರಿಸಿದ್ದಾರೆ. ತನ್ನ ಗುರುವಿನ ಔದಾರ್ಯದಿಂದ ತಾನು ನೇರವಾಗಿ ಸಂದರ್ಶಿಸಿದ ಅನೇಕ ಸಂತರನ್ನು ಆ ಹೊತ್ತಗೆಯುದ್ದಕ್ಕೂ ಓದುಗರಿಗೆ ಪರಿಚಯಿಸುತ್ತಲೇ ನಡೆಯುತ್ತಾರೆ. ಸಂತ ಊರೊಳಗಿದ್ದರೆ ಹೇಗೆ? ಮತ್ತು ಊರಾಚೆಯ ಬೆಟ್ಟ-ಗುಡ್ಡ-ಪರ್ವತ-ಗುಹೆ-ಗಹ್ವರಗಳಲ್ಲಿ ಇದ್ದರೆ ಹೇಗೆ? ಎಂಬುದನ್ನೂ ತೋರಿಸುತ್ತಾರೆ. ನಿವೃತ್ತಿ ಪಥ-ಪಥಿಕರಾದ ಸಂತರಲ್ಲಿ ಕುಂಡಲಿನಿ ಶಕ್ತಿಯ ಸಕಾರಾತ್ಮಕ ಬಳಕೆ ಹೇಗಾಗುತ್ತದೆ ಎಂಬುದನ್ನೂ ಅಲ್ಲಿ ಕಾಣಬಹುದಾಗಿದೆ.   

ಮುದ್ದಿಗೆ-ಪ್ರೀತಿಗೆ ಅಂಟಿಕೊಂಡ ಹಿಮಕರಡಿಯೊಂದು ಹಿಮಾಲಯದ ಗುಹೆಯ ಹೊರಗೆ ಸದಾ ಇರತೊಡಗಿದಾಗ, “ಸಾಧಕನಿಗೆ ಯಾವುದೇ ನಂಟು-ಮೋಹ ಇರಕೂಡದು” ಎಂದು  ಸ್ವಾಮಿರಾಮರಿಗೆ ಅವರ ಗುರು ಆದೇಶಿಸಿದ್ದು ನೆನಪಿಗೆ ಬರುತ್ತದೆ. ಭಾರತದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳಪ್ರದೇಶಗಳಲ್ಲಿ ಅಥರ್ವಣ ವೇದದ ಭಾಗಗಳನ್ನು ‘ಬ್ಲ್ಯಾಕ್ ಮ್ಯಾಜಿಕ್’ ಮಾಡಲು ದುರುಪಯೋಗ ಮಾಡುವುದನ್ನು ಲೇಖಕರು ಸಾಕ್ಷಾತ್ಕರಿಸಿ ತೋರಿಸುತ್ತಾರೆ. ಕರವೀರಮಠದ ಶಂಕರಾಚಾರ್ಯ ಪೀಠ ತನಗೊಲಿದು ಬಂದರೂ, ತನ್ನಾತ್ಮ ಸಾಧನೆಗೆ ಸಮಯವೇ ಸಿಗುವುದಿಲ್ಲವೆಂಬ ಕಾರಣಕ್ಕೆ, ಹೇಳದೇ ಕೇಳದೇ ಪೀಠತ್ಯಾಗ ಮಾಡಿದ್ದನ್ನೂ ಅವರು ದಾಖಲಿಸಿದ್ದಾರೆ. ಮನುಷ್ಯ ಸಹಜ ಭಾವನೆಗಳು, ತುಮುಲ-ಗೊಂದಲಗಳು, ದ್ವಂದ್ವ-ಇಬ್ಬಂದಿತನಗಳು, ದ್ವೇಷಾಸೂಯೆಗಳು, ಕೋಪ-ವಿಕೋಪಗಳು, ಇಷ್ಟಾನಿಷ್ಟಗಳು, ಹಲವಿಧ ಸೆಂಟಿಮೆಂಟ್ಸ್ ಎಲ್ಲ ಮಜಲುಗಳೂ ಅತ್ಯಂತ ಸಹಜಗತಿಯಲ್ಲಿ ಆಯಾಯ ಕಾಲದಲ್ಲಿ ತನ್ನಲ್ಲಿ ಹೇಗೆ ಸ್ಫುರಿಸಿದವು ಎಂಬುದರ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. 

ಹರೆಯದ ಹುಡುಗರಿಗೆ ಹಸಿವಿನ ಬಾಧೆ ಬಹಳ; ಅದು ದೇಹದ ಬೆಳವಣಿಗೆಯ ಕಾಲ. ದಿವಸಕ್ಕೊಮ್ಮೆ ಮಾತ್ರ ಒಂದೋ ಎರಡೋ ಚಪಾತಿ-ಪಲ್ಯ ತಿಂದು ಬದುಕುತ್ತಿದ್ದ ಸಂತರ ಗುಹೆಯಲ್ಲಿ ವಾಸಿಸುತ್ತಿದ್ದ ಸ್ವಾಮಿ ರಾಮರಿಗೆ ಒಮ್ಮೆ, “ನಾಲ್ಕಾರು ದಿನಗಳಿಂದ ಏನನ್ನೂ ತಿಂದಿರದ ಸಂತರೊಬ್ಬರು ಗುಹೆಗೆ ಬರುತ್ತಿದ್ದಾರೆ, ಇಂದಿನ ನಿನ್ನ ಆಹಾರವನ್ನು ಅವರಿಗೆ ಕೊಟ್ಟುಬಿಡು” ಎಂದು ಹೊರಗಿನಿಂದ ಬಂದ ತನ್ನ ಗುರು ಹೇಳಿದಾಗ, ಹಸಿವನ್ನು ತಡೆದುಕೊಳ್ಳಲಾರದೇ, ತನ್ನ ಆಹಾರ ಯಾರಿಗೂ ಕೊಡೆನೆಂದು ಗುರುವಿನೊಡನೆ ಜಗಳವಾಡಿ, ನಂತರ ನಿಧಾನವಾಗಿ ನಡುಗುತ್ತ ಬಂದು ಕುಳಿತ ವಯೋವೃದ್ಧ ಸಂತನ ಪಾದ ತೊಳೆದು, ತನ್ನ ಪಾಲಿನ ಭೋಜನವನ್ನು ಅವರಿಗೆ ನೀಡುವ ಸ್ವಾಮಿ ರಾಮರಿಗೆ, “ಮಗೂ, ಮುಂದೆಂದೂ ನೀನೇ ಇಚ್ಛಿಸಿ ಆಹಾರ ಸ್ವೀಕರಿಸುವವರೆಗೆ ನಿನಗೆ ಹಸಿವು ಬಾಧಿಸದು” ಎಂದು ಆಶೀರ್ವದಿಸಿದ ಘಟನೆ ನೆನೆದು ನನ್ನ ಕಣ್ಣಾಲಿಗಳು ಆನಂದಬಾಷ್ಪ ಹರಿಸಿದವು; ಆ ಸಂತನ ಆಶೀರ್ವಾದ ನಿಜವಾಗಿದ್ದನ್ನು ಸ್ವಾಮಿ ರಾಮ ನೆನೆದಿದ್ದಾರೆ.    

 ಇತ್ತೀಚೆಗೆ “ಸಶಕ್ತ ಯೋಗ ಮುದ್ರೆಗಳು” ಮತ್ತು “ಚೈತನ್ಯ ಚಕ್ರಗಳು” ಎಂಬೆರಡು ಯೋಗಾಧಾರಿತ ಹೊತ್ತಗೆಗಳನ್ನು ಬರೆದು ಮುದ್ರಣಕ್ಕೆ ಕಳುಹಿಸಿದ್ದೇನೆ. ಯೋಗದ ಬಗೆಗೆ ಅಧ್ಯಯನಕ್ಕೆ ತೊಡಗಿದಾಗ ಮಹರ್ಷಿ ಪತಂಜಲಿಯ ಅಷ್ಟಾಂಗಯೋಗ ಮತ್ತು ಪಾತಂಜಲ ಯೋಗಸೂತ್ರಗಳಂತಹ ಹಲವು ಆಕರಗಳನ್ನು ಓದಿಕೊಳ್ಳುವ ಅನಿವಾರ್ಯತೆಯಿತ್ತು ಮತ್ತು ಆ ಓದು ಇಷ್ಟವೂ ಆಗಿತ್ತು. “ಯೋಗಃ ಚಿತ್ತವೃತ್ತಿ ನಿರೋಧ” ಎಂದು ಪತಂಜಲಿ ತಮ್ಮ ಗ್ರಂಥದಲ್ಲಿ ಹೇಳಿದ್ದಾರೆ. ಮನುಷ್ಯನಿಗೆ ಚಿತ್ತವೃತ್ತಿಯನ್ನು ಹದ್ದುಬಸ್ತಿನಲ್ಲಿಡುವುದು ಸುಲಭ ಸಾಧ್ಯವಲ್ಲ; ಚಿತ್ತವೃತ್ತಿ ನಿರೋಧಿಸುವುದಕ್ಕೆ ಪೂರಕ ಆಹಾರ ಮತ್ತು ಯೋಗದ ಸಮನ್ವಯ ಆಗಬೇಕಾಗುತ್ತದೆ. ಯೋಗವೆಂದರೆ ಕೇವಲ ಯೋಗಾಸನಗಳಲ್ಲ; ಯಮ, ನಿಯಮ, ಅಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ  ಧ್ಯಾನ, ಸಮಾಧಿಗಳೆಂಬ ಎಂಟು ಅಂಗಗಳನ್ನೊಳಗೊಂಡ ಆಚರಣೆಯೇ ಯೋಗ ಮತ್ತು ಅದನ್ನು ತನ್ನದಾಗಿಸಿಕೊಳ್ಳುವುದೇ ಸಾಧಕನ ಯೋಗಾಯೋಗ! ಎಲ್ಲವನ್ನೂ ನೋಡಿಯೂ ಯಾವ ಭಾವನೆಗಳಿಗೂ ಕಟ್ಟುಬೀಳದೇ, ತನ್ನನ್ನೇ ತಾನು ನಿಗ್ರಹಿಸಿಕೊಳ್ಳುವ ಕಲೆ ಯೋಗದಿಂದ ಕರಗತವಾಗುತ್ತದೆ. ಅಷ್ಟಾಂಗ ಯೋಗದ ಮೊದಲ ನಾಲ್ಕು ಅಂಗಗಳು ಮುಗಿದ ಮೇಲೆ ಸಾಧಕನಿಗೆ ಎರಡು ಮಾರ್ಗಗಳು ಕಾಣ ಸಿಗುತ್ತವೆ: ಒಂದು ಮುಮುಕ್ಷುತ್ವವನ್ನು ಹೊಂದುವುದು-ಯೋಗಿಯಾಗುವುದು, ಇನ್ನೊಂದು ಮಂತ್ರಗಳನ್ನು ಯಂತ್ರರಚನೆಗಳಲ್ಲಿ ಬಂದಿಸುವ ತಾಂತ್ರಿಕ-ಮಾಂತ್ರಿಕನಾಗುವುದು. ತಾಂತ್ರಿಕ-ಮಾಂತ್ರಿಕನಿಗೆ ಕೆಲವು ಸಿದ್ಧಿಗಳು ಪ್ರಾಪ್ತವಾಗಿದ್ದರೂ ಸಿದ್ಧಿಗಳ ದುರುಪಯೋಗದಿಂದ ಆತ ತನ್ನ ಜೀವನವನ್ನು ತಾನೇ ಹಾಳುಮಾಡಿಕೊಳ್ಳುತ್ತ ಕ್ಷಣಿಕ ಧನ-ಕನಕ-ವಶೀಕರಣ-ವ್ಯಾಮೋಹದಿಂದ ಐಹಿಕ ಸುಖಲೋಲುಪನಾಗುತ್ತಾನೆ. ಸಾಧನಾಪಥದ ಆರಂಭಿಕ ಹಂತಗಳಲ್ಲಿ ಸಿದ್ಧಿಸುವ ಇಂತಹ ಶಕ್ತಿಗಳನ್ನು ಉಪಯೋಗಿಸದೇ ಮುನ್ನಡೆದರೆ ಯೋಗಿ ಮೋಕ್ಷವನ್ನು ಪಡೆಯುತ್ತಾನೆ.  

ಭವ್ಯ ಭಾರತದಲ್ಲಿ, ಅದರಲ್ಲೂ ಸನಾತನ ಧರ್ಮದ ಪುನರುತ್ಥಾನ ಮಾಡಿದ ಅದಿಶಂಕರ ಪರಂಪರೆಯಲ್ಲಿ ಸಂನ್ಯಾಸಿಗಳಾಗುವ ವ್ಯಕ್ತಿಗೆ, ಸಂಸ್ಕೃತ ಭಾಷಾ ವಿದ್ವತ್ತಿನ ಜೊತೆಗೆ,   ಚತುರ್ವೇದಗಳು, ಅಷ್ಟಾದಶ ಪುರಾಣಗಳು, ಷಟ್ ಶಾಸ್ತ್ರಗಳು, ಭಗವದ್ಗೀತೆ, ಬ್ರಹ್ಮಸೂತ್ರ ಮೊದಲಾದ ಹಲವು ಪಾರಮಾರ್ಥಿಕ ಜ್ಞಾನದಾಯಿಗಳು ಕಂಠಸ್ಥವಾಗಿ-ಹೃದ್ಗತವಾಗಿರಬೇಕು. ಆ ವ್ಯಕ್ತಿಯ ಜನ್ಮಜಾತ ಸ್ವಭಾವ ಸದಾ ನಿವೃತ್ತಿ ಮಾರ್ಗಕ್ಕಾಗಿ ಹಾತೊರೆಯುವಂಥದ್ದಾಗಿರಬೇಕು. ರಾಗ-ದ್ವೇಷಗಳು ಯಾರಲ್ಲಿ ಲುಪ್ತವಾಗಿವೆಯೋ ಆತನೇ ವೈರಾಗಿ, ಅಥವಾ ಬೈರಾಗಿ. ಅಂತಹ ಬೈರಾಗಿಗೆ ಈ ಲೋಕದ ಯಾವುದೇ ಚರಾಚರ ವಸ್ತು-ವಿಷಯಗಳಲ್ಲಿ ಖಾಸಗಿಯಾದ ಯಾವುದೇ ಹಿತಾಸಕ್ತಿಗಳೂ ಇರಕೂಡದು. ಧರ್ಮಮಾರ್ಗವನ್ನು ಶಿಷ್ಯರಿಗೆ ಪ್ರಬೋಧ ಮಾಡುವುದು ಮಾತ್ರ ಆತನ ಕರ್ತವ್ಯ.

ಆದಿಶಂಕರ ಪರಂಪರಯನ್ನೇ ಅನುಮೋದಿಸಿದ್ದು ಸಮರ್ಥ ಪರಂಪರೆ. ಅಂತಹ ಪರಂಪರೆಯಲ್ಲಿ ಕಳೆದ ಶತಮಾನದಲ್ಲಿ ನಾವು ಭಾಗವಾನ್ ಶ್ರೀಧರ ಸ್ವಾಮಿಗಳನ್ನು ಕಂಡಿದ್ದೇವೆ. ಶ್ರೀಧರ ಸ್ವಾಮಿಗಳ ಭಕ್ತರೊಬ್ಬರ ಮನೆಯಲ್ಲಿ ಪಾದಪೂಜೆ ನಡೆದಿದೆ. ತೀರ್ಥವನ್ನು ತೆಗೆದುಕೊಳ್ಳಲು ಹೊರಟ ಮನೆಯೊಡತಿಯ ಕಣ್ಣಲ್ಲಿ ಕಣ್ಣೀರು ಕಂಡ ಸ್ವಾಮಿಗಳು "ಯಾಕಮ್ಮಾ ಕಣ್ಣೀರು?" ಎಂದು ಕೇಳುತ್ತಾರೆ. ಅದಕ್ಕೆ ಆ ಮನೆಯೊಡತಿ, “ಗುರುಗಳೇ, ತಾವು ನಮ್ಮ ಮನೆಗೆ ಪಾದಾರ್ಪಣೆ ಮಾಡಿರುವ ಈ ಸಂದರ್ಭದಲ್ಲಿ, ನನ್ನ ಮಗ ತಮ್ಮ ಕೈಯ್ಯಿಂದ ತೀರ್ಥ ತೆಗೆದುಕೊಳ್ಳುವ ಅವಕಾಶದಿಂದ ವಂಚಿತನಾದನಲ್ಲಾ ಎಂದು ದುಃಖವಾಗುತ್ತಿದೆ” ಎನ್ನುತ್ತಾ ಕಣ್ಣೀರಿಡುತ್ತಾಳೆ. ಆಗ ಶ್ರೀಧರ ಸ್ವಾಮಿಗಳು ಹೇಳುತ್ತಾರೆ, “ಅಷ್ಟಕ್ಕೆ ಕಣ್ಣೀರೇಕೆ? ಇಗೋ ನೋಡು ನಿನ್ನ ಮಗನಿಗೆ ತೀರ್ಥಕೊಟ್ಟಿದ್ದಾಯ್ತು” ಎಂದು ಹೇಳಿ, ಒಂದು ಉದ್ಧರಣೆ ತೀರ್ಥವನ್ನು ಅರ್ಘ್ಯಪಾತ್ರೆಗೆ ಬಿಡುತ್ತಾರೆ. “ಈಗ ನೀನು ತೀರ್ಥ ತೆಗೆದುಕೊ” ಎಂದು ಆ ತಾಯಿಗೆ ತೀರ್ಥಕೊಡುತ್ತಾರೆ. ಕೆಲವೇ ದಿನಗಳಲ್ಲಿ ಕಾಶಿಯಲ್ಲಿ ಓದುತ್ತಿದ್ದ ಮಗನಿಂದ ಪತ್ರವೊಂದು ಬರುತ್ತದೆ; ಅದರಲ್ಲಿ ಅವನು ಈ ರೀತಿ ಬರೆದಿರುತ್ತಾನೆ: “ಕಾಶಿಯ ವಿಶ್ವನಾಥನ ದೇವಾಲಯಕ್ಕೆ ಹೋಗಿದ್ದೆ. ಅಲ್ಲಿ ಎಲ್ಲರಿಗೂ ಗಂಗೆಯ ತೀರ್ಥವನ್ನು ಕೊಡುತ್ತಿದ್ದರು. ನಾನೂ ಕೈ ಒಡ್ಡಿದೆ, ಆಶ್ಚರ್ಯವಾಯ್ತು, ನನ್ನ ಕೈಗೆ ಬಂದದ್ದು ಪಂಚಾಮೃತ." ಘಟನೆಯನ್ನು ಕೇಳುವಾಗ ಭಕ್ತರಿಗೆ ರೋಮಾಂಚನವಾಗುತ್ತದೆ. ಅಂದು ಭಗವಾನ್ ಶ್ರೀಧರಸ್ವಾಮಿಗಳು ಅರ್ಘ್ಯಪಾತ್ರೆಗೆ ಹಾಕಿದ ಪಂಚಾಮೃತತೀರ್ಥವು ಕಾಶಿಯಲ್ಲಿದ್ದ ಆ ತಾಯಿಯ ಮಗನಕೈಗೆ ಬಿದ್ದಿತ್ತು!

ಇಂದು ನಮ್ಮಲ್ಲಿನ ಅಧುನಿಕ ‘ಸಂನ್ಯಾಸಿ’ಗಳಲ್ಲಿ ಕೆಲವರು ಐಪ್ಯಾಡ್-ಐಫೋನ್ ಮೂಲಕ ವಾಟ್ಸಾಪ್ ಬಳಸಿ ತೀರ್ಥಕೊಡುವ ಚಿತ್ರವನ್ನು ಕಳುಹಿಸುತ್ತಾರೆಯೇ ಶಿವಾಯಿ ಇವರಲ್ಲಿ ಅಂತಹ ಯಾವ ಯೋಗ್ಯತೆಯೂ ಎಳ್ಳಿನಷ್ಟೂ ಇರುವುದಿಲ್ಲ; ಇದಕ್ಕೆ ಕಾರಣಗಳನ್ನು ಹುಡುಕಿದಾಗ ಯಾವ ಘನ ಆರ್ಹತೆಯಾಗಲೀ, ಸಾಧನೆಯಾಗಲೀ, ಜನ್ಮಜಾತ ವೈರಾಗ್ಯವಾಗಲೀ ಅವರಲ್ಲಿ ಇರುವುದಿಲ್ಲ ಎಂಬುದು ಸ್ಪಷ್ಟವಾಗುವುದರ ಜೊತೆಗೆ, ಕಳ್ಳಬೆಕ್ಕು ಕಣ್ಮುಚ್ಚಿ ಹಾಲುಕುಡಿದಂತೆ  ಈ ಲೋಕದ ಸಕಲ ಸುಖೋಪಭೋಗಗಳನ್ನು ಸಂಸಾರಿಗಿಂತಲೂ ಅಧಿಕವಾಗಿ ಅನುಭವಿಸುವವರಾಗಿರುವುದು ಕಂಡುಬರುತ್ತದೆ. ಮೇಲಾಗಿ ಸಮಾಜದಲ್ಲಿ ಅಲ್ಲಲ್ಲಿರುವ ಸಾಂಸಾರಿಕ ದುರುಳರು ತಮ್ಮ ವೈರಿನಿಗ್ರಹಕ್ಕಾಗಿ ಪ್ರಯೋಗಿಸುವ ವಾಮಾಚಾರಗಳಂಥದ್ದನ್ನು ಇವರೂ ಬಳಸಿಕೊಂಡು “ಶಾಪ” ಎಂದು ಭೋಂಗು ಬಿಡುವುದೂ ನಡೆಯುತ್ತಿದೆ.

ಇಂಥವರನ್ನು ಕಂಡಾಗ ಚೇತನ್ ಭಗತ್ ಅವರ ‘ಹಾಫ್ ಗರ್ಲ್ಫ್ರೆಂಡ್’ ಕಾದಂಬರಿಯ ಹಲವು ಅಂಶಗಳು ನನಗೆ ನೆನಪಿಗೆ ಬರುತ್ತವೆ. ರಿಯಾ ಸೋಮನಿ ಮತ್ತು ಮಾಧವ್ ಝಾ ಎಂಬಿಬ್ಬರ ನಡುವಿನ ಪ್ರೇಮ್ ಕಹಾನಿ ಹೇಗೆ ಆರಂಭ ಗೊಂಡಿತು, ಹೇಗೆಲ್ಲ ತಿರುವು ಪಡೆದುಕೊಂಡಿತು, ಹೇಗೆ ಸುಖಾಂತ್ಯ ಕಂಡಿತು ಎಂಬುದು ಮನದಟ್ಟಾಗುತ್ತದೆ. ಸಹಜಗತಿಯಲ್ಲಿ ಸಾಗುವ ಅಧುನಿಕ ನಗರ ಜನಜೀವನ ವಿಧಾನದಲ್ಲಿ ಘಟಿಸಿಹೋಗಬಹುದಾದ ಕಥೆಯೊಂದರಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ವ್ಯಾವಸಾಯಿಕ, ಆಹಾರ್ಯಕ, ದಾನ-ದತ್ತಿ, ಪ್ರೇಮ-ಭಗ್ನಪ್ರೇಮ-ಕಾಮ, ಅಸಹಾಯಕತೆ, ಭಾಷಾಬಳಕೆಯ ವೈಕಲ್ಯ ಸ್ಥಿತಿ ಎಲ್ಲಾ ವಿಷಯಗಳನ್ನೂ ಹಿತಮಿತವಾಗಿ ಬೆರೆಸಿ ಹದಪಾಕ ಇಳಿಸಿದ ಕಾದಂಬರಿಯಲ್ಲಿ, ಭಾವನೆಗಳ ಎಳೆಎಳೆಗಳನ್ನು ಅನುಭವಿಸುವುದೇ ಒಂದು ಕ್ಷಣಿಕಾನಂದ. “ಏ ಲೋ ಕ್ಲಾಸ್ ಕ್ಯಾನ್ ಸ್ಮೆಲ್ ಲೋ ಕ್ಲಾಸ್ ”, “ಗವರ್ನಮೆಂಟ್ ಎಂಪ್ಲಾಯೀಸ್ ಆರ್ ದಿ ಲೋವೆಸ್ಟ್ ರಿಸ್ಕ್ ಟೇಕರ್ಸ್ ಆನ್ ದಿ ಅರ್ಥ್” ಎಂಬ ಕೆಲವು ಹೇಳಿಕೆಗಳು ಹಾದುಹೋಗುವಾಗ ನಮಗರಿವಿರದಂತೆಯೇ ನಗು ಉಮ್ಮಳಿಸುತ್ತದೆ. ಕಾದಂಬರಿಯಲ್ಲಿ ಲೇಟೆಸ್ಟ್ ತಂತ್ರಜ್ಞಾನದ ಹಲವು ಸಾಧನ-ಸಲಕರಣೆಗಳನ್ನೂ ಅಂತರ್ಜಾಲ ಮತ್ತು ಯೂಟ್ಯೂಬ್ ಮೊದಲಾದ ವಿಷಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ದತ್ತಿ ಪ್ರತಿಷ್ಠಾನವನ್ನು ಹೆಸರಿಸಿದ್ದು ಬಿಲ್ ಗೇಟ್ಸ್ ಬಂದುಹೋಗುವ ಸನ್ನಿವೇಶ ಮತ್ತು ಅದಕ್ಕಾಗಿ ಮಾಧವ್ ಝಾನ ಇಂಗ್ಲೀಷ್ ಕಲಿಕೆ ಇವೆಲ್ಲವೂ ಓದುಗನನ್ನು ರಂಜಿಸುತ್ತವೆ. ನಡುಗಾಲದ ಕೃತಿಗಳಲ್ಲಿರುವಷ್ಟು  ಸೆಂಟಿಮೆಂಟ್ಸ್ ಇಟ್ಟುಕೊಳ್ಳದ, ನವಕಾಲದ ತರುಣ-ತರುಣಿಯರ ಹಾವ-ಭಾವ-ಬಾಂಧವ್ಯಗಳ ಸಮ್ಮೇಲನಗಳು ಕಮರ್ಷಿಯಲ್ ಸಿನಿಮಾ ಒಂದಕ್ಕೆ ಸರಿಯೆನಿಸುತ್ತವೆ. ಮುದ್ದಣ-ಮನೋರಮೆಯರ ಸರಸ-ಸಲ್ಲಾಪದ ನಡುವೆ ಚೇಟ-ಚೇಟಿಯರು ಬಂದು ಹೋಗುವಂತೆ, ಕಾದಂಬರಿಯ ನಡುನಡುವೆ ಕೃತಿಕಾರ ಚೆತನ್ ಭಗತ್ ಸ್ವತಃ ಪಾತ್ರವಾಗಿಬಿಡುತ್ತಾರೆ. ಇದನ್ನೆಲ್ಲ ಓದುವಾಗ, ಓದುವಷ್ಟು ಹೊತ್ತು ನಗರ ನಾಗರಿಕರಿಗೆ ಒಂಥರಾ ಖುಷಿ ಕೊಡುವುದು ಸುಳ್ಳಲ್ಲ.  ಆದರೆ ಇದೊಂದು ಸಂಪೂರ್ಣ ಅಪರ ಅಥವಾ ಲೌಕಿಕ-ಪ್ರಾಪಂಚಿಕ ಜೀವನ ವ್ಯಾಪಾರದ ಕಥೆಯೇ ಹೊರತು ಆತ್ಮೋದ್ಧಾರದ ಮಾತು ಇಲ್ಲಿ ಎಲ್ಲಿಯೂ ಬರುವುದಿಲ್ಲ.

ಓದುವ ಸಾಹಿತ್ಯಗಳಲ್ಲಿ ಪ್ರಬೋಧ ಸಾಹಿತ್ಯ,  ಪ್ರಮೋದ ಸಾಹಿತ್ಯ ಮತ್ತು ಪ್ರಮಾದ ಸಾಹಿತ್ಯ ಎಂಬ ಮೂರು ಪ್ರಕಾರಗಳಿರುತ್ತವೆಂದು ನಾನು ಹಲವೆಡೆ ವದರಿದ್ದಿದೆ. ರಾಜಾಜ್ಞೆಯಂತೆ ಹೀಗೇ ನಡೆದುಕೊಳ್ಳತಕ್ಕದ್ದು ಎಂದು ಬೋಧಿಸುವುದು ಪ್ರಬೋಧ ಸಾಹಿತ್ಯ[ಉದಾಹರಣೆಗ: ವೇದಗಳು, ದರ್ಶನಗಳು], ಜನಜೀವನದಲ್ಲಿ ಹೀಗೆ ಬದುಕಬೇಕೆಂಬ ಲೌಕಿಕ ಜ್ಞಾನ-ಅಮೋದಗಳನ್ನು ನೀಡುವುದು ಪ್ರಮೋದ ಸಾಹಿತ್ಯ[ಉತ್ತಮ ಕಥೆ, ಕವನ, ಕಾದಂಬರಿ ಮೊದಲಾದವು], ಪ್ರಾಚೀನ ಸತ್ಪರಂಪರೆಗೆ ವಿರೋಧಾಭಾಸ ಹುಟ್ಟಿಸಿ ಮಾನಸಿಕ ಕ್ಲೇಶ, ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುವುದು ಪ್ರಮಾದ ಸಾಹಿತ್ಯ[ಪೀತ ಪತ್ರಿಕೆಗಳು, ‘ಬುದ್ಧಿಜೀವಿಗಳ’ ಬರಹಗಳು ಮೊದಲಾದವು ಇದಕ್ಕೆ ಉದಾಹರಣೆಗಳು] ಮುದುಡಿ ಚಾದರ ಎಳೆದುಕೊಂಡು ಮಲಗಿದ ಮನಸ್ಸಿಗೆ ಮುದನೀಡುವ ಸ್ನೇಹಿತನ ಚೇತರಿಕೆಯ ಮಾತಿನ ಸರಣಿಯಂತಿರುವ ‘ಹಾಫ್ ಗರ್ಲ್ ಫ್ರೆಂಡ್ ’ ಒಂದು ಪ್ರಮೋದ ಸಾಹಿತ್ಯ ಎನ್ನಬಹುದಾಗಿದೆ.      

ವಾಗರ್ಥಾವಿವ ಸಂಪ್ರಕ್ತೌ ವಾಗರ್ಥಪ್ರತಿಪತ್ತಯೇ|
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ||

-೨೪ಕ್ಕೂ ಅಧಿಕ ಛಂದಸ್ಸುಗಳನ್ನು ಬಳಸಿ ಬರೆದ ತನ್ನ ರಘುವಂಶ ಮಹಾಕಾವ್ಯದ ಆರಂಭದಲ್ಲಿ ಈ ಮಹಾಕವಿ ಕಾಳಿದಾಸ ಹೀಗೆ ಜಗನ್ನಿಯಾಮಕ ಶಕ್ತಿಯನ್ನು ವಂದಿಸಿದ್ದಾನೆ. ಮಾತು ಮತ್ತು ಅರ್ಥ ಇವೆರಡರ ಸಂಬಂಧ ಪಾರ್ವತಿ-ಪರಮೇಶ್ವರಂತೆ ಬೇರ್ಪಡಿಸಲು ಸಾಧ್ಯವಾಗದ್ದು ಎಂಬುದನ್ನು ಇದೇ ಹೇಳಿಕೆಯಲ್ಲಿ ಸಂಧಿ, ಸಮಾಸ, ವಿಭಕ್ತಿ ಪ್ರತ್ಯಯಗಳ ಜೋಡಣೆಯಲ್ಲಿಯೂ ವೈಶಿಷ್ಟ್ಯ ಮೆರೆದು, ಪದವಿನ್ಯಾಸಗಳ ಮೂಲಕ ವಾಕ್ ಮತ್ತು ಅರ್ಥಗಳ ಅನ್ಯೋನ್ಯತೆಯನ್ನು ವಿವರಿಸಿದ್ದಾನೆ. ಪದಪ್ರಯೋಗಗಳಲ್ಲಿ ಕವಿಯು ತನ್ನ ಜಾಣ್ಮೆ, ಸಮಯೋಚಿತತೆಗಳನ್ನು ತೋರಿಸಬೇಕು ಎಂಬುದು ಇಲ್ಲಿ ಗೊತ್ತಾಗುತ್ತದೆ. ‘ಹಾಡಿ ಹಾಡಿ ರಾಗ ಉಗುಳಿ ಉಗುಳಿ ರೋಗ’ ಎಂಬುದು ವಾಡಿಕೆಯ ಮಾತು; ಅದೇ ವಿಧವಾಗಿ ಅಧ್ಯಯನಶೀಲತೆಯಲ್ಲಿ ಆಳವಾಗಿ ತೊಡಗಿಕೊಂಡು ತನ್ನ ನಿರಂತರ ಪ್ರಯತ್ನದಿಂದ ಪ್ರಾಪ್ತವಾಗುವ ಶೈಲಿಯಿಂದ ಓದುಗನಿಗೆ ಕಾವ್ಯ ರುಚಿಸುವಂತೆ ಮಾಡುವುದರ ಜೊತೆಗೆ ಕವಿಯ ಮನದಾಶಯ, ಅನುಭವಿಸಿದ ಆನಂದವನ್ನು ಓದುಗ-ಸಹೃದಯನಿಗೂ ವೇದ್ಯವಾಗುವಂತೆ ಕಾವ್ಯರಚನೆ ಸಾಧ್ಯವಾಗಬೇಕು. ಶೈಲಿ, ಛಂದಸ್ಸು, ವಸ್ತುವಿನ ಆಯ್ಕೆ, ಕವಿಸಮಯದ ಔಚಿತ್ಯ, ಸಮಯೋಚಿತ ಪದಪುಂಜಗಳ ಜೋಡಣೆ ಇವೆಲ್ಲವೂ ಕಾವ್ಯ ಪ್ರಯತ್ನದಿಂದ ಮಾತ್ರ ಕವಿಗೆ ಲಭಿಸುವಂಥವು.

ಸಂಸ್ಕೃತ ಕವಿಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಸಂಸ್ಕೃತಿ-ಪರಂಪರೆಗಳ ಅರಿವಿನ ಬಗ್ಗೆ ಅವರ ಕೃತಿಗಳು ನೀಡುವ ಜ್ಞಾನ ಅಪಾರ; ಹೀಗಾಗಿಯೇ, ವೈದಿಕ ವಾಙ್ಮಯದಲ್ಲಿ ಇಲ್ಲಿನ ಸಾಹಿತ್ಯಗಳ ಬಳಕೆಯಾಗುತ್ತ ಬಂದಿರುವುದು ಕಾಣುತ್ತದೆ. ಆದಿಕವಿ ವಾಲ್ಮೀಕಿ, ರಾಮಾಯಣ ಮಹಾ-ಕಾವ್ಯವನ್ನು ಬರೆದಿದ್ದರೂ, ದಶರಥನನ್ನುಳಿದು ರಾಮನ ಪೂರ್ವಜರ ಬಗೆಗೆ ನಮಗೆ ಮಾಹಿತಿ ಸಿಗುವುದಿಲ್ಲ; ಅದರಂತೆಯೇ ರಾಮನ ಮಕ್ಕಳು ಲವ-ಕುಶರು ಆಳ್ವಿಕೆಗೆ ಬರುವ ಹೊತ್ತಿಗೆ ರಾಮಾಯಣ ಕಥಾನಕ ಮುಗಿದುಬಿಡುತ್ತದೆ. ಆದರೆ ರಘುವಂಶದಲ್ಲಿ ಸ್ವಯಂಭೂ ಮನುವಿನಿಂದ ಆರಂಭಗೊಂಡು ಅಗ್ನಿವರ್ಣನ ವರೆಗಿನ ತಲೆಗಳಿಗಳನ್ನು ನಾವು ಕಾಣಬಹುದಾಗಿದೆ. ಶ್ರೀರಾಮನ ವಂಶಸ್ಥರೆಲ್ಲರೂ ಪುಣ್ಯಪುರುಷರೇ ಆಗಿದ್ದರು. ಆದರೆ, ಶ್ರೀರಾಮನ ನಂತರದಲ್ಲಿ ಆ ವಂಶದಲ್ಲಿ ಜನಿಸಿದ ‘ಅಗ್ನಿವರ್ಣ’ನೆಂಬೊಬ್ಬಾತ ಮಾತ್ರ ಇದಕ್ಕೆ ವಿರುದ್ಧವಾದ ಅವಗುಣಗಳನ್ನು ಹೊಂದಿದ್ದು ಐಹಿಕ ಸುಖಲೋಲುಪನೂ, ಲಂಪಟನೂ ಆಗಿದ್ದನೆಂದು ತಿಳಿದುಬರುತ್ತದೆ. ತಾನೇ ದೇವರೆಂಬಂತೆ ಬಿಂಬಿಸುತ್ತ ತನ್ನ ಪಾದಪೂಜೆಯನ್ನೇ ಮಾಡಿ ಎಂದು ಹೇಳುತ್ತಿದ್ದ ಎನ್ನಲಾಗಿದೆ. ಹೀಗಿದ್ದ ಅಗ್ನಿವರ್ಣನ ಪಾಪಕೃತ್ಯಗಳಿಂದ ರಘುವಂಶ ಅಂತ್ಯಗೊಂಡಿತು ಎಂಬುದು ವಿಷಾದ.  

ಪ್ರತೀ ವ್ಯಕ್ತಿಯೊಳಗೂ ಆತ್ಮನಲ್ಲಿ ಪರಮಾತ್ಮ ಅಂಶಾಂಶ ರೂಪದಿಂದ ನೆಲೆಸಿದ್ದಾನೆಂದು ಗೀತೆಯಲ್ಲಿ ಹೇಳಿದ್ದಾನೆ. ನಮ್ಮ ಶರೀರದಲ್ಲಿರುವ ಕಾವು, ಬಿಸಿ, ಆಹಾರ ಜೀರ್ಣವಾಗುವಿಕೆ, ತ್ಯಾಜ್ಯ ವಿಲೇವಾರಿ ಇವುಗಳನ್ನೆಲ್ಲ ಗಮನಿಸಿದಾಗ ವ್ಯಕ್ತಿ ಕೇವಲ ಶರೀರವಲ್ಲ, ಶರೀರದೊಳಗಿನ ಅವ್ಯಕ್ತ ಶಕ್ತಿಯೂ ಸೇರಿದ ಸ್ಥಿತಿ ಎಂಬುದು ಅರಿವಿಗೆ ಬರುತ್ತದೆ. ಕಳ್ಳನ ಮನದೊಳಗಿನ ಅತ್ಮ ಕಳ್ಳನನ್ನು “ನೀನೊಬ್ಬ ಕಳ್ಳ” ಎಂದು ಸದಾ ಹಂಗಿಸುತ್ತದೆ, ಸುಳ್ಳನ / ದ್ರೋಹಿಯ ಮನದೊಳಗಿನ ಆತ್ಮ “ನೀನೊಬ್ಬ ಸುಳ್ಳ, ನೀನೊಬ್ಬ ದ್ರೋಹಿ” ಎಂದು ಜರೆಯುತ್ತದೆ, ಕೊಲೆಗಡುಕನೊಳಗೆ ಸ್ಥಿತವಾದ ಆತ್ಮ “ನೀನೊಬ್ಬ ಪಾತಕಿ” ಎಂದು ಆಗಾಗ ಆತನ ಪಾತಕ ಕೃತ್ಯಗಳನ್ನು ಕನಸಿನ ರೂಪದಲ್ಲಿ ತೋರಿಸಿ ಭಯ ಹುಟ್ಟಿಸುತ್ತಲೇ ಇರುತ್ತದೆ, ಕಾಮುಕನ ಶರೀರಾಂತರ್ಗತ ಆತ್ಮ “ನೀನೊಬ್ಬ ಲಂಪಟ” ಎಂದು ಬಡಬಡಿಸುತ್ತಲೇ ಇರುತ್ತದೆ. ನಾವು ನಡೆಸಿದ ಕುಕೃತ್ಯಗಳನ್ನು ಆತ್ಮ ಸಮ್ಮತಿಸುವುದಿಲ್ಲ. ಆತ್ಮ ಸಮ್ಮತಿಸದ ಕೃತ್ಯಗಳನ್ನು ನಡೆಸಿದಾಗ ನಾವೇ ನಮ್ಮಾತ್ಮ ಘಾತುಕರಾಗಿ ಬೆಳೆಯುತ್ತೇವೆ. ಆತ್ಮವಂಚನೆ ಮಾಡಿಕೊಳ್ಳುತ್ತ ಹತ್ತುಹರದಾರಿ ಹೇಗೋ ಸಾಗಬಹುದು; ಆದರೆ ಅಲ್ಲಿಂದ ಮುಂದಕ್ಕೆ ಆತ್ಮವಂಚನೆಗೆ ತಕ್ಕ ಶಾಸ್ತಿ ಶತಸ್ಸಿದ್ಧ ಎಂಬುದು ಹಲವು ಪ್ರಬೋಧ ಸಾಹಿತ್ಯಗಳ ಅನುಭವ ಸಿದ್ಧಾಂತ.  ಜಗತ್ತನೇ ಗೆದ್ದ ಅಲೆಕ್ಸಾಂಡರ್, ಸರ್ವಾಧಿಕಾರ ಧೋರಣೆಯ ಹಿಟ್ಲರ್, ನೆಪೋಲಿಯನ್ ಮತ್ತು ಇತ್ತೀಚಿನ ಸದ್ದಾಂ ಹುಸೇನ್ ಮೊದಲಾದವರ ಕಥೆಗಳನ್ನು ನೋಡಿದಾಗ ಇದು ಸತ್ಯವೆಂಬ ಅರಿವುದೊರೆಯುತ್ತದೆ. ಯಾವ ಸ್ಥಾನಕ್ಕೆ ನಾವು ಅರ್ಹರೋ ಅಂತಹ ಸ್ಥಾನವನ್ನು ಮಾತ್ರ ನಾವು ಅಲಂಕರಿಸಬಹುದು, ಅನುಭವಿಸಬಹುದು, ಅದರ ಹೊರತಾಗಿ ಅರ್ಹತೆಗೂ ಮೀರಿದ ಸ್ಥಾನವನ್ನು ಅಧಿಕಾರಬಲದಿಂದ ಅತಿಕ್ರಮಿಸಿ, ಸ್ಥಾನದ ಮೌಲ್ಯಗಳನ್ನು ಕಳೆಯತೊಡಗಿದರೆ ಆಪತ್ತು ಸಂಭವಿಸುತ್ತದೆ. ಗಿಂಡಿಮಾಣಿಯಿಲ್ಲದೇ 'ಕಮಂಡಲಿಗೆ' ಹೋಗಲೂ, ಹಸ್ತೋದಕ ಸಿಗದೇ ಊಟ ಮಾಡಲೂ ಕರ್ಮಾಧಿಕಾರ ಇಲ್ಲದ ಸಂನ್ಯಾಸಿ ಎನಿಸಿಕೊಂಡವ, ಯೂಟ್ಯೂಬ್ ವೀಡಿಯೋ ನೋಡಬಹುದೇ? ಫೇಸ್ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ವಿಹರಿಸಬಹುದೇ? ಐಫೋನ್, ಐಪ್ಯಾಡ್, ವಾಟ್ಸ್ಯಾಪ್ಗಳ ಮೂಲಕ ಗುಪ್ತವಾಗಿ ಸಂವಹಿಸಬಹುದೇ?-ಎಂಬುದನ್ನು ಇಂದಿನ ಕೆಲವು ‘ಸಂನ್ಯಾಸಿ’ಗಳು ಅರಿತುಕೊಳ್ಳಬೇಕು.  

ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಪಿತಿ ರತಿಃ ಆಜ್ಞಾಪರಾಃ ಸೇವಕಾಃ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸನೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||

[ಅರ್ಥ: ಆನಂದ ತುಂಬಿದ ಮನೆ, ಬುದ್ಧಿವಂತ ಮಕ್ಕಳು, ಎದುರು ವಾದಿಸದ ಪತ್ನಿ, ಹಿತೈಷಿಗಳಾದ ಸ್ನೇಹಿತರು, ಧರ್ಮಮಾರ್ಗದಲ್ಲಿ  ಆರ್ಜಿಸಿದ ಧನ, ಸ್ವಪತ್ನಿಯಲ್ಲಿ ನಲಿಯುವಿಕೆ, ಆಜ್ಞೆಯನ್ನು ಮೀರದ ಸೇವಕರು, ಅತಿಥಿ ಸತ್ಕಾರ, ಅನುದಿನ ಭಗವದಾರಾಧನೆ, ಇಷ್ಟವಾದ ಅನ್ನ ಪಾನಾದಿಗಳು, ಸಾಧ್ಯವಾದಷ್ಟು ಸದಾ ಸಾಧು-ಸಂತರ ಸತ್ಸಂಗ, ಸೇವೆ- ಇವಿಷ್ಟು ಇದ್ದರೆ ಗೃಹಸ್ಥಾಶ್ರಮವು ಧನ್ಯವಾಗುತ್ತದೆ].

ಅಧುನಿಕ ದಿನಮಾನದಲ್ಲಿಯೂ ಸಂತರಂತೆ ಬದುಕಿದ ಸಂಸಾರಿಗಳಿದ್ದಾರೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಎಂವ ಚತುರಾಶ್ರಮಗಳಲ್ಲಿ ಗೃಹಸ್ಥಾಶ್ರಮ ಮಾತ್ರ ಉಳಿದ ಮೂರೂ ಆಶ್ರಮಗಳಿಗೆ ಆಧಾರವಾಗಿದೆ. ಗೃಹಸ್ಥ ಭಕ್ತರ-ಶಿಷ್ಯರ ಅನ್ನ-ಅನುಪಾನದಿಂದ ಮಿಕ್ಕವರಿಗೆ ಅನುಕೂಲವಾಗುತ್ತದೆ; ಆದರಿಲ್ಲೊಂದು ಧರ್ಮಸೂಕ್ಷ್ಮವಿದೆ- ವ್ರತನಿಷ್ಠ ಬ್ರಹ್ಮಚಾರಿಯೂ, ವಾನಪ್ರಸ್ಥನೂ, ಸಂನ್ಯಾಸಿಯೂ ಗೃಹಸ್ಥರನ್ನು ಮನದುಂಬಿ ಆಶೀರ್ವದಿಸುತ್ತಾರೆ-ಅವರ ಆಶೀರ್ವಾದದ ಬಲದಿಂದಲೇ ಗೃಹಸ್ಥ ಅವರಿಗೆ ಪುನರಪಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಆಶ್ರಮ ಧರ್ಮಕ್ಕೆ ಯಾವಾಗ ಕುತ್ತುಂಟಾಗುತ್ತದೋ ಆಗ ಅಲ್ಲಿ ಅಧರ್ಮ ಕಾಲಿಡುತ್ತದೆ. ಅದು ಧರ್ಮದ ನ್ಯೂನತೆಯಲ್ಲ; ಆಚರಿಸುವ ವ್ಯಕ್ತಿಗಳಲ್ಲಿರುವ ಐಬು!

ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕು; ಅದರಲ್ಲೂ ಸಂನ್ಯಾಸಿಯಾದವನು ತಾನು ಯೋಗಿಯೋ ಅಥವಾ ಭೋಗಿಯೋ ಎಂಬುದನ್ನು ಮೊದಲು ಅರಿತುಕೊಳ್ಳಬೇಕು.  

ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿ-ಪಿಪೀಲಿಕಾಂತ-ತನುಷು ಪ್ರೋತಾ ಜಗತ್ಸಾಕ್ಷಿಣೇ |
ಸೈವಾಹಂ ನ ಚ ದೃಶ್ಯ ವಸ್ತ್ವಿತಿ ದೃಢಾಪ್ರಜ್ಞಾಪಿ ಯಸ್ಯಾಸ್ತಿಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ ||

ಕಾಶಿಯಲ್ಲಿ ಭಗವತ್ಪಾದ ಶ್ರೀಶಂಕರರು ಚಾಂಡಾಲನಲ್ಲೂ ದೈವದರ್ಶನ ಮಾಡಿದೆ ಎಂದು ತಮ್ಮ ಮನೀಷಾ ಪಂಚಕದಲ್ಲಿ ಹೇಳಿದ್ದಾರೆ. ಯಾವುದೋ ಐಹಿಕ ಲಾಭದ ದುರುದ್ದೇಶದಿಂದ ಹೊರಗೆ ಯೋಗಿಯಂತೆ ದಿರಿಸು ಧರಿಸಿ ಒಳಗೆ ಭೋಗಿಯಾದರೆ ಅದು ಆತ್ಮವಂಚನೆಯ ಪರಮಾವಧಿಯಾಗುತ್ತದೆ. ಕಾವಿ ಬಟ್ಟೆಯನ್ನು ಧರಿಸಿದ ಕೆಲವರು ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ಹೀರೋ ಆಗಿ ನಟಿಸಿದ್ದಾರಂತೆ, ಮಾಂಸಾಹಾರವನ್ನು ಭುಂಜಿಸಿದ್ದಾರಂತೆ, ನಟೀಮಣಿಯರೊಂದಿಗೆ ಡ್ಯಾನ್ಸ್ ಆಡಿದ್ದಾರಂತೆ; ಅವರ ಪಂಥ ಬೇರೆ ಇರಬಹುದು, ಆದರೆ ಇದು ಕಾವಿ ಬಟ್ಟೆಗೂ ಮತ್ತು ಹಿಂದೂ ಧರ್ಮಕ್ಕೂ ಮಾಡಿದ ಅಪಚಾರವೆಂಬುದು ಖಚಿತ. ಗೀತೆಯಲ್ಲಿ ಹೇಳಿದ ಚಾತುರ್ವರ್ಣಗಳಿಗೆ ಅತೀತವಾದ ಹಂತ ಯೋಗಿ/ಸಂನ್ಯಾಸಿಯದ್ದು. ‘ಯೋಗಿ’ಯೆನಿಸಿ ಗೊತ್ತಿದ್ದೂ ತಪ್ಪು ಮಾಡಿದರೆ ಅದಕ್ಕೆ ಪ್ರಾಯಶ್ಚಿತ್ತವೂ ಅದೇ ಪ್ರಮಾಣದಲ್ಲಿ ವಿಪರೀತ ಹೆಚ್ಚಿಗೆ ಇರುತ್ತದೆ ಎಂದು ಶಾಸ್ತ್ರ ಸಾರುತ್ತದೆ; ಕಾಲಘಟ್ಟದಲ್ಲಿ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತೆ, ಅವರವರು ಮಾಡಿದ್ದನ್ನು ಅವರವರೇ ಉಣ್ಣಬೇಕಾಗುತ್ತದೆ.  

Tuesday, May 13, 2014

ದೀಪಕ ರಾಗದ ಬೆನ್ನತ್ತಿ ಭಾಗ-೨

ದೀಪಕ ರಾಗದ ಬೆನ್ನತ್ತಿ ಭಾಗ-೨

ದೀಪಕರಾಗದ ಮೂಲವನ್ನು ಆಳವಾಗಿ ಹುಡುಕುತ್ತಾ ಹೊರಟ ನನಗೆ ಮಧ್ಯೆ ಕೆಲವು ಕಾಲ ಆ ಕೆಲಸ ವಿಳಂಬ ಗತಿಯಲ್ಲಿ ಸಾಗಿದ್ದಕ್ಕೆ ನನ್ನಮೇಲೇ ನನಗೆ ಬೇಸರ ಬಂದಿತ್ತು. ಅನಿವಾರ್ಯವಾಗಿ ಹಾಗೆ ಸಹಿಸಿಕೊಂಡಿದ್ದೆ. ಸಮಸ್ಯೆಯ ಮೂಲದಲ್ಲಿ ಎದ್ದ ಪ್ರಶ್ನೆಗಳು ಇಂತಿದ್ದವು:

೧. ದೀಪಕ ರಾಗ ಎಂದು ಹುಟ್ಟಿತು?

೨. ಚಕ್ರವರ್ತಿ ವಿಕ್ರಮಾದಿತ್ಯ ಯಾವ ಶತಮಾನದಲ್ಲಿ ಜೀವಿಸಿದ್ದ?

೩. ವಿಕ್ರಮಾದಿತ್ಯನ ಕಾಲದಲ್ಲಿ ಆತನ ಆಸ್ಥಾನ ವಿದ್ವಾನ್ ಆಗಿ ಕಾಳಿದಾಸ ಸಹ ಇದ್ದನೇ?

೪. ವಿಕ್ರಮಾರ್ಕ ಶಕೆಯ ಆರಂಭಕ್ಕೂ ವಿಕ್ರಮಾದಿತ್ಯನಿಗೂ ಸಂಬಂಧವಿದೆಯೇ?

೫. ಭಾರತದಲ್ಲಿ ಹಲವು ವಿಕ್ರಮಾದಿತ್ಯರು ಆಗಿ ಹೋಗಿದ್ದಾರೆ, ಆದರೆ ನಮಗೆ ಬೇಕಾದ ಅಥವಾ ನಾವು ಹುಡುಕುತ್ತಿರುವ ವಿಕ್ರಮಾದಿತ್ಯ ಅವರಲ್ಲಿ ಯಾರು?

೬. ಯಾವ ವಿಕ್ರಮಾದಿತ್ಯನಿಂದ ದೀಪಕ ರಾಗ ಪ್ರಚುರಗೊಂಡಿತು ?

೭. ಹಿಂದೂಸ್ಥಾನೀ ಸಂಗೀತಕ್ಕೆ ಮುಸಲ್ಮಾನರ ಕೊಡುಗೆಗಳು ಕಾರಣವೇ?

೮.  ಬೇತಾಳ-ವಿಕ್ರಮಾದಿತ್ಯರ ಕಥೆಗಳಲ್ಲಿ ಬರುವ ವಿಕ್ರಮಾದಿತ್ಯ ಯಾರು ? ಅವನಿಗೂ  ನಾವು ಹುಡುಕುತ್ತಿರುವ ವಿಕ್ರಮಾದಿತ್ಯನಿಗೂ ಸಾಮ್ಯವಿದೆಯೇ?

೯. ವಿಕ್ರಮಾದಿತ್ಯ ಶನಿಪೀಡಿತನಾಗಿದ್ದನೆಂಬುದಕ್ಕೆ ಶಾಸನಗಳ ಆಧಾರವೇನಾದರೂ ಸಿಗುತ್ತದೆಯೇ?

೧೦. ವಿಕ್ರಮನ ಐತಿಹಾಸಿಕ ನ್ಯಾಯ-ನಿರ್ಣಯ ಸಿಂಹಾಸನಕ್ಕೂ ನಾವು ಹುಡುಕುತ್ತಿರುವ ವಿಕ್ರಮಾದಿತ್ಯನಿಗೂ ಸಂಬಂಧವಿದೆಯೇ?

ಈ ಸಮಸ್ಯೆಗೆ ಉತ್ತರ ಅಷ್ಟು ಸುಲಭದಲ್ಲಿ ದೊರೆಯುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು, ಆದರೆ ಬ್ರಿಟಿಷರು ಮತ್ತು ಮೊಘಲರು ಭಾರತದಲ್ಲಿದ್ದಾಗ, ತಮಗೆ ಬೇಕಾದ ಅನುಕೂಲತೆಗಳನ್ನು ಕಲ್ಪಿಸಿಕೊಳ್ಳುವ ದುರುದ್ದೇಶದಿಂದ, ಭಾರತೀಯರು ನಿಜವಾದ ಇತಿಹಾಸ ಅರಿಯಲಾರದಂತೆ ಇಲ್ಲಿನ ಐತಿಹಾಸಿಕ ಉದ್ಗ್ರಂಥಗಳನ್ನು ಸುಟ್ಟುಹಾಕಿದರು! ಹೀಗಾಗಿ ಅನೇಕ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಕೊಂಡಿಗಳು ನಮಗೆ ದಕ್ಕುವುದಿಲ್ಲ. ಅಳಿದುಳಿದ ಐತಿಹಾಸಿಕ ಗ್ರಂಥಗಳಲ್ಲಿ ನಮಗೆ ಬೇಕಾದ  ವಿಕ್ರಮಾದಿತ್ಯ ಮತ್ತು ಆತನ ಆಸ್ಥಾನದ ’ನವರತ್ನ’ಗಳ ಬಗ್ಗೆ ಮಾಹಿತಿ ದೊರೆಯುವುದಿಲ್ಲ. 

ಪ್ರಶ್ನೆಗಳನ್ನು ಮ್ಮನದಲ್ಲಿ ಧರಿಸಿದ ಮೇಲೆ ಅವಿರತವಾಗಿ ಶ್ರಮಿಸಿದ್ದಾಯ್ತು. ಮಿತ್ರರಾದ ಶತಾವಧಾನಿಗಳನ್ನು ಕೇಳಿದ್ದಾಯ್ತು. ಅವರ ಪ್ರಕಾರ ಆಗಿಹೋದ ವಿಕ್ರಮಾದಿತ್ಯರಲ್ಲಿ ಚಂದ್ರಗುಪ್ತ-ವಿಕ್ರಮಾದಿತ್ಯನೇ ಅತ್ಯಂತ ಪ್ರಭಾವೀ ವ್ಯಕ್ತಿಯಾಗಿದ್ದಾನೆ. ವಿಕ್ರಮಶಕೆ ಎಂಬುದು ಮಾಲವ ವಂಶಜರು ಹೂಣರನ್ನು ಸೋಲಿಸಿ ಮೆರೆದ ವಿಕ್ರಮವನ್ನು ಸೂಚಿಸುವ ಕಾಲಮಾನ ಎಂಬುದು ಅವಧಾನಿ ಗಣೇಶರ ಅಂಬೋಣ; ಅದಕ್ಕೂ ವಿಕ್ರಮಾದಿತ್ಯ ಎಂಬ ವ್ಯಕ್ತಿಗೂ ಸಂಬಂಧವನ್ನವರು ನಿರಾಕರಿಸುತ್ತಾರೆ. ಇನ್ನು ಅತ್ಯಂತ ಅಗಾಧ ಓದಿನ ಆಗರವಾದ ಅವರೇ ಹೇಳುವಂತೆ ವಿಕ್ರಮನ ಆಸ್ಥಾನದ ನವರತ್ನಗಳಲ್ಲಿ ಹಲವರ ಪರಿಚಯ ಯಾರಿಗೂ ಮತ್ತು ಎಲ್ಲೂ ಸಿಗುವುದಿಲ್ಲ!! 

    ಧನ್ವಂತರಿ ಕ್ಷಪಣಕೋಮರಸಿಂಹಶಂಕು
    ವೇತಾಲಭಟ್ಟ ಘಟಕರ್ಪರ ಕಾಳಿದಾಸಃ |
    ಖ್ಯಾತೋ ವರಾಹಮಿಹಿರೋ ನೃಪತೇ ಸಭಾಯಾಂ
    ರತ್ನಾನಿ ವೈ ವರರುಚಿರ್ನವ ವಿಕ್ರಮಸ್ಯ ||

೧. ಧನ್ವಂತರಿ
೨. ಕ್ಷಪಣಕ
೩. ಅಮರ ಸಿಂಹ
೪. ಶಂಕು
೫. ವೇತಾಲ ಭಟ್ಟ
೬. ಘಟ ಕರ್ಪರ
೭. ಕಾಳಿದಾಸ
೮. ವರಾಹ ಮಿಹಿರ
೯. ವರರುಚಿ

ಈ ಅಸ್ಥಾನ ವಿದ್ವಾನ್ ನವರತ್ನಗಳಲ್ಲಿ ಧನ್ವಂತರಿ ಯಾರು?  ಕ್ಷಪಣಕ ಯಾರು? ಶಂಕು ಯಾರು ? ವೇತಾಲ ಭಟ್ಟ ಯಾರು?  ಈ ಎಲ್ಲಾ ಹೆಸರುಗಳು ಅವರ ಅಂಕಿತನಾಮಗಳೇ?  ಅಥವಾ ಕಾವ್ಯನಾಮಗಳೇ?  ಗೊತ್ತಿಲ್ಲ, ಎಲ್ಲೂ-ಸಮರ್ಪಕವಾದ ಯಾವ ದಾಖಲೆಗಳೂ ಸಿಗುವುದಿಲ್ಲ. 

ಕಾಳಿದಾಸನ ಕಾಲಮಾನದ ಬಗೆಗೆ  ವಿದ್ವಾನ್ ರಾಮಚಂದ್ರ ತಿವಾರಿಯಂತಹ ಅನೇಕರು ಸಂಶೋಧನೆ ನಡೆಸಿದರು. ’ಕಾಳಿದಾಸ ತಿಥಿ ಸಮೃದ್ಧಿ’ ಮೊದಲಾದ ಹೊತ್ತಗೆಗಳೇ ರೂಪುಗೊಂಡವು. ಕೆಲವರಂತೂ ಕಾಳಿದಾಸ ಇಂಥಾದ್ದೇ ಶತಮಾನದಲ್ಲಿದ್ದ-ಅದು ಸುಳ್ಳೆಂದು ಯಾರಾದರೂ ಸಾಬೀತು ಪಡಿಸಿದರೆ ತಮಗೆ ನೀಡಲ್ಪಟ್ಟ ಡಿ.ಲಿಟ್ ಮೊದಲಾದ ಪದವಿಗಳನ್ನೇ ಹಿಂದಿರುಗಿಸುವ ಸವಾಲು ಒಡ್ಡಿದರು. ಆದರೂ ಕಾಳಿದಾಸನ ಕಾಲ ನಿರ್ಣಯ ಯಾಕೋ ಕಗ್ಗಂಟಾಗಿ ಕಾಡುತ್ತದೆ! ಎಂಟನೇ ಶತಮಾನದಲ್ಲಿದ್ದರೆಂದು ಹೇಳಲ್ಪಟ್ಟ ಆದಿಶಂಕರರ ಜೀವಿತಾವಧಿಯ ಇಸವಿಗಳ ಬಗೆಗೇ ನಿರ್ಣಯ ಕಷ್ಟವೆನಿಸಿರುವಾಗ ಅದಕ್ಕೂ ಹಿಂದಿನದೆನಿಸುವ ಕಾಳಿದಾಸನ ಜೀವಿತಾವಧಿಯನ್ನು ನಿರ್ಣಯಿಸುವುದು ಅಷ್ಟು ಸುಲಭವೇ?  ಕೆಲವೊಂದು ಆಧಾರಗಳ ಪ್ರಕಾರ ಕಾಳಿದಾಸ ಗುಪ್ತರಕಾಲದವನೇ ಅಂದರೆ ೩ನೇ ಶತಮಾನದಿಂದ ೬ನೇ ಶತಮಾನದ ಅವಧಿಯಲ್ಲಿ ಆಳಿದ ಗುಪ್ತ ಸಾಮ್ರಾಜ್ಯದಲ್ಲೇ ಇದ್ದ ಮಹಾಕವಿ ಎಂಬುದು ತಿಳಿದುಬರುತ್ತದೆ. ಕಾಳಿದಾಸನನ್ನು ಆಸ್ಥಾನ ವಿದ್ವಾನ್ ಆಗಿ ಹೊಂದಿದ್ದ ವಿಕ್ರಮಾದಿತ್ಯ ಎಂದಾದರೆ ಆ ವಿಕ್ರಮಾದಿತ್ಯ ಬೇರಾರೂ ಅಲ್ಲ; ಚಂದ್ರಗುಪ್ತ-ವಿಕ್ರಮಾದಿತ್ಯನೇ ಆಗಿದ್ದಾನೆ!  ಹಾಗಾದರೆ ಭವಿಷ್ಯ ಪುರಾಣದಲ್ಲಿ ಹೇಳಲ್ಪಟ್ಟ ವಿಕ್ರಮಾದಿತ್ಯನ ಕಾಲಮಾನ ಕ್ರಿಸ್ತಪೂರ್ವಕ್ಕೆ ಹೋಗುತ್ತದೆ!  ಆ ವಿಕ್ರಮಾದಿತ್ಯನಿಗೆ ಶನಿಪೀಡೆ ತಗುಲಿತ್ತೆಂದೂ, ಶನಿಯಿಂದ ಪೀಡಿತನಾದ ಆತ ಕೈಕಾಲುಗಳನ್ನು ಕಳೆದುಕೊಂಡು, ನಂದಿ ಶೆಟ್ಟಿಯ ಎಣ್ಣೆಯ ಗಾಣದ ನೊಗದಮೇಲೆ ಕುಳಿತು, ನಿಶ್ಚೇಷ್ಟಿತನಾಗಿ-ನೊಂದವನಾಗಿ, ದೀಪಕರಾಗವನ್ನು ಹಾಡಿದನೆಂದು ಹೇಳಲಾಗಿದೆ. ಹಾಗಾದರೆ ಚಂದ್ರಗುಪ್ತ-ವಿಕ್ರಮಾದಿತ್ಯ ಮತ್ತು ದೀಪಕರಾಗದ ವಿಕ್ರಮಾದಿತ್ಯ ಬೇರೆ ಬೇರೇಯೇ? -ಎಂಬ ಸಂದೇಹ ಉಳಿದುಹೋಗುತ್ತದೆ!

ಅವಧಾನಿ ಗಣೇಶರಲ್ಲಿ ಎರಡು ಗಂಟೆಗಳ ಕಾಲ ನಿಷ್ಕರ್ಶಿಸಿದಾಗ ಕೆಲವೊಂದು ಮಾಹಿತಿಗಳು ದೊರೆತವು, ಆಧಾರ ರಹಿತವಾಗಿ, ಜನಪದ ಕಥೆಯಂತಿರುವ, ಪುರಾಣೋಕ್ತ ಕಥೆಯ ವಿಕ್ರಮಾದಿತ್ಯನ ಕಾಲಮಾನವನ್ನು ನಿರ್ಧರಿಸುವ ಯಾವುದೇ ಮಾಪನಗಳು ಸಿಗದ ಕಾರಣ,  ಚಂದ್ರಗುಪ್ತ-ವಿಕ್ರಮಾದಿತ್ಯನ ಆಸ್ಥಾನ ವಿದ್ವಾಂಸರು ಮತ್ತು ಕವಿಗಳು ಆತನಮೇಲಿನ ಅತಿಶಯ ಪ್ರೇಮ ಮತ್ತು ಅಭಿಮಾನದಿಂದ ಅನೇಕ ಹೊತ್ತಗೆಗಳನ್ನೂ ಕಥಾನಕಗಳನ್ನೂ ರಚಿಸಿದರು ಎಂಬುದನ್ನು ನಿರ್ಧರಿಸಿದೆವು. ವರರುಚಿಯ ಬಗ್ಗೆ ಸ್ಥೂಲವಾಗಿ ವ್ಯಾಖ್ಯಾನಿಸಿದ ಅವಧಾನಿಗಳು, ವರರುಚಿಯನ್ನು ಕಾತ್ಯಾಯನ ಎಂದೂ ಕರೆಯಲಾಗಿದ್ದನ್ನು ಹೇಳಿ, ಪಾಂಡಿತ್ಯದಿಂದ ವಿದ್ವತ್ ಸಾಮ್ರಾಜ್ಯದಲ್ಲಿ ’ರಾಕ್ಷಸ’ನೆಂದು ಗುರುತಿಸಲ್ಪಟ್ಟ ವ್ಯಕ್ತಿಯೇ ವರರುಚಿ ಎಂಬುದನ್ನು ಬಣ್ಣಿಸಿದರು. ’ಘಟಕರ್ಪರ ಸಂದೇಶಕಾವ್ಯ’ವನ್ನು ಕಾಳಿದಾಸನೇ ಬರೆದಿದ್ದು,  ಪ್ರೇಮಿಗಳಿಬ್ಬರ ನಡುವಿನ ಸಂವಹನವನ್ನು ಬಣ್ಣಿಸುವ ಆತನ ಕೃತಿ ಮೇಘಸಂದೇಶ ಅಥವಾ ಮೇಘದೂತ ಎಂದು ಹೆಸರಾಗಿದೆ. ಒಡೆದು ಹೋದ ಹೂಜೆಯೊಂದರ ಬಗೆಗೆ ಅತೀವ ಕಳವಳ ವ್ಯಕ್ತಪಡಿಸುವ ಹೆಂಡತಿಯೊಬ್ಬಳು, ದೂರದಲ್ಲಿರುವ ತನ್ನ ಗಂಡನಿಗೆ ಸಂದೇಶ ತಲ್ಪಿಸುವಂತೆ ಮೇಘಗಳನ್ನೂ, ಮರಗಳನ್ನೂ ಕೇಳಿಕೊಳ್ಳುವ ಅತ್ಯದ್ಭುತ ರಮಣೀಯ ಕಥಾನಕ ’ಘಟಕರ್ಪರ’  ಹಾಗಾದರೆ ಘಟಕರ್ಪರನೆಂಬ ಬೇರೊಬ್ಬ ಕವಿಯಿದ್ದನೇ?ಹೌದು, ಆತನ ಬಗೆಗೂ ಚರ್ಚೆಗಳು ನಡೆದವು. ಮಂದಾಕ್ರಾಂತ ಛಂದಸ್ಸಿನಲ್ಲಿರುವ ಆತನ ಬರಹಗಳ ಸುದ್ದಿಯೊಂದಿಗೆ ’ಮಂದ್ರ’ ಕಾದಂಬರಿಯನ್ನು ಬರೆಯುವ ಮುನ್ನ ಸಂಗೀತ-ರಾಗಗಳ ಬಗೆಗೆ ಆಳವಾಗಿ ಸಂಶೋಧಿಸಿದ ಎಸ್.ಎಲ್.ಭೈರಪ್ಪನವರ ಅಭಿಪ್ರಾಯಗಳನ್ನೂ ಗಣನೆಗೆ ತೆಗೆದುಕೊಳ್ಳಲಾಯ್ತು. 

ಸಂಗೀತ ಸಾಮ್ರಾಜ್ಯವನ್ನು ಬೆರಗುಗಣ್ಣುಗಳಿಂದ ನೋಡಿ, ಆ ಕುರಿತು ಆಳವಾಗಿ ಅಧ್ಯಯನ ನಡೆಸಿದ ಮೈಸೂರಿನ ವಿದ್ವಾನ್ ರಾ.ಸತ್ಯನಾರಾಯಣ ಅವರ ಪ್ರಸ್ತಾಪವೂ ಬಂತು. ಮೊದಲಾಗಿ ಭಾರತೀಯ ಸಂಗೀತದಲ್ಲಿ ಹಿಂದೂಸ್ಥಾನಿ-ಉತ್ತರಾದಿಯೆಂದೋ  ಅಥವಾ ಕರ್ನಾಟಕ-ದಕ್ಷಿಣಾದಿಯೆಂದೋ ಭಿನ್ನತೆಗಳಿರಲಿಲ್ಲವೆಂಬುದು ಸಂಶೋಧಕರ ಅಭಿಪ್ರಾಯ. ಆದರೆ ಸಂಗೀತವೆಂಬುದು ಮೌಖಿಕ ಮಾಧ್ಯಮವಾದುದರಿಂದ ಸುಮಾರು ೬೦-೭೦ ಕಿ.ಮೀ ಅಂತರದಲ್ಲಿ  ಸಂಗೀತದ ರಾಗಗಳಲ್ಲಿ, ಅವುಗಳಲ್ಲಿ ಆಲಾಪನೆಗಳಲ್ಲಿ ಭಿನ್ನತೆಗಳು ಇದ್ದವು ಎಂಬುದು ತಿಳಿದುಬರುತ್ತದೆ. ಹೀಗಾಗಿ ವಿಭಿನ್ನ ಘರಾಣಾಗಳು ಬಳಕೆಯಲ್ಲಿದ್ದವು. ೧೪ನೇ ಶತಮಾನದಿಂದೀಚೆಗೆ ಸಂಗೀತದಲ್ಲಿ ಎರಡು ಪ್ರಕಾರಗಳು ಒಡಮೂಡಿದವಾದರೂ ಹಿಂದೂಸ್ಥಾನಿಯಲ್ಲಿ "ದ್ರುಪದ್" [ಹಿಂದೂಸ್ಥಾನೀ ಸಂಗೀತ ಪರಿಕರವಾದ ಸಾರಂಗಿಯನ್ನೂ ದ್ರುಪದ್ ಎಂದು ಕರೆಯುವುದಿದೆ]ಎನಿಸುವುದನೇ ಕರ್ನಾಟಕಿಯಲ್ಲಿ "ಪಲ್ಲವಿ" ಎನ್ನುವುದನ್ನು ಕಾಣಬಹುದು. ಅಂತೆಯೇ ಬಹುತೇಕ ರಾಗಗಳ ಹೆಸರುಗಳಲ್ಲಿ-ಆಲಾಪನಾ ವಿಧಾನಗಳಲ್ಲಿ ವ್ಯತ್ಯಾಸವಿರಬಹುದೇ ಹೊರತು ಎರದೂ ಪ್ರಕಾರಗಳಲ್ಲಿರುವ ರಾಗಗಳಲ್ಲಿ ಸಾಮ್ಯತೆಯುಂಟು. 

ಹಿಂದೂಸ್ಥಾನೀ ಸಂಗೀತಕ್ಕೆ ಅಪ್ರತಿಮ ಕೊಡುಗೆಗಳನ್ನು ಕೊಟ್ಟ ತಾನ್ ಸೇನ್ ಮೂಲತಃ ಅಪ್ಪಟ ಭಾರತೀಯ ಹಿಂದೂ ಬ್ರಾಹ್ಮಣನಾಗಿದ್ದಾತ! ಇಸ್ಲಾಂ ಪ್ರಭಾವದಿಂದ ಮತ್ತು ಮೊಘಲರ ಆಳ್ವಿಕೆಯಲ್ಲಿನ ಬಲವಂತಿಕೆಯಿಂದ ಆತ ಮುಸ್ಲಿಂ ಆಗಿ ಮತಾಂತರಗೊಂಡಿದ್ದು ತಿಳಿದುಬರುತ್ತದೆ. ದೀಪಕರಾಗವನ್ನು ಇನ್ನಷ್ಟು ಪ್ರಚುರಪಡಿಸಿದ ಖ್ಯಾತಿ ಇದೇ ತಾನ್ ಸೇನನದು.  ಮಧ್ಯಪ್ರಾಚ್ಯ ಮತ್ತು ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ವಲಸೆಬಂದ ಮುಸಲ್ಮಾನರಲ್ಲಿ ಹಿಂದೆ ಭಾರತದಲ್ಲಿದ್ದಂತಹ ಸುಂದರ ಸಂಗೀತ ಸ್ವರಮೇಳಗಳ ಬಳಕೆ ಊರ್ಜಿತದಲ್ಲಿರಲಿಲ್ಲ. ಭಾರತೀಯ ಸಂಗೀತಕ್ಕೆ ಮನಸೋತ ಅವರು ಇಲ್ಲಿಗೆ ಬಂದನಂತರ ತಮ್ಮಲ್ಲಿನ ಕೆಲವು ರಾಗಗಳನ್ನು ಬದಲಿಸಿ ಭಾರತೀಯ ಪದ್ಧತಿಯಲ್ಲೇ ಅದನ್ನು ಹಾಡಲು ಆರಂಭಿಸಿದರು ಎಂಬುದು ಇತಿಹಾಸ. ಅಂತಹ ಒಂದು ರಾಗ: ಯಮನ್ ಅಥವಾ ಯಮನ್ ಕಲ್ಯಾಣ್. "ಅದು ಯಮನ್ ಅಲ್ಲ ಯವನ ಕಲ್ಯಾಣ್ ಎಂದು, ಅದನ್ನೇ ಮ್ಲೇಚ್ಛ ಕಲ್ಯಾಣ್ ಎಂದೂ ಹೇಳುತ್ತಾರೆ" ಎಂಬುದು ಶತಾವಧಾನಿ ಗಣೇಶರ ಹೇಳಿಕೆ. ಅಮೀರ ಖುಸ್ರು ಎಂಬ ಹೆಸರನ್ನು ಹಲವರು ವಿಚಿತ್ರವಾಗಿ ಬಳಸಿಕೊಂಡಿದ್ದಾರೆಯೇ ಹೊರತು ಆತ ಹಿಂದೆ ಇಂದಿನ ಕಾಬೂಲ್ ಕಡೆಗೆ ಬದುಕಿದ್ದವ ಎನ್ನುತ್ತಾರೆ ಗಣೇಶರು. ಅಮೀರ್ ಖುಸ್ರು ಭಾರತೀಯ ಸಂಗೀತಕ್ಕೆ ಒದೆರಡು ವಾದ್ಯ ಪರಿಕರಗಳನ್ನು ಕೊಟ್ಟಿದ್ದನ್ನು ಬಿಟ್ಟರೆ,  ಮುಸಲ್ಮಾನ ಜನಾಂಗದಿಂದ  ಹಿಂದೂಸ್ಥಾನೀ ಸಂಗೀತಕ್ಕೆ ಕೊಡುಗೆಗಳು ನೀಡಲ್ಪಟ್ಟಿವೆ ಎಂಬುದು ಸುಳ್ಳು ಎಂಬುದನ್ನು ಸಾಧಾರವಾಗಿ ವಿವರಿಸಿದರು.

ಬೇತಾಳ-ತ್ರಿವಿಕ್ರಮರ ಕಥೆಯನ್ನು ಪ್ರಾಯಶಃ ವೇತಾಲ ಭಟ್ಟನೇ ರಚಿಸಿರಬೇಕೆಂಬುದು ಸಂಶೋಧಕರ ಅನಿಸಿಕೆ; ಅದು ಇನ್ನೂ ನಿರ್ಧರಿತವಲ್ಲ. ಅದಕ್ಕೂ ಮುನ್ನ ಅಂತಹ ಯಾವುದೇ ಕೃತಿ ನಮಗೆ ಕಂಡು ಬರುವುದಿಲ್ಲ.  ಮಹಾಪಂಡಿತನಾಗಿದ್ದ ವೇತಾಲ ಭಟ್ಟ, ಆಶ್ರಯದಾತನಾದ ರಾಜಾ ವಿಕ್ರಮಾದಿತ್ಯನನ್ನು ಪ್ರಶಂಸಿಸುವ ಸಲುವಾಗಿ, ಇಪ್ಪತ್ತೈದು ಅದ್ಭುತ ಕಥೆಗಳನ್ನು ಹೊಂದಿರುವ ’ವೇತಾಲ ಪಂಚವಿಂಶತಿ’ಯನ್ನು ರಚಿಸಿರಬೇಕು.  ಕವಿ-ಪಂಡಿತ-ಕಲಾವಿದ-ಸಂಗೀತಜ್ಞ-ನ್ಯಾಯತತ್ಪರ-ಪ್ರಜಾರಂಜಕ-ಆಡಳಿತ ಸಮರ್ಥ-ಶೂರ-ಧೀರ-ಮಹಾಪರಾಕ್ರಮಿಯಾಗಿದ್ದ ಚಕ್ರವರ್ತಿ ಚಂದ್ರಗುಪ್ತ-ವಿಕ್ರಮಾದಿತ್ಯನ ಬಗೆಗೆ ಆ ಕಾಲಘಟ್ಟದಲ್ಲಿ ಅನೇಕ ದಂತಕಥೆಗಳು ಹುಟ್ಟಿದವಂತೆ! ವಿಶಾಖದತ್ತನೆಂಬ ಪಂಡಿತ ’ದೇವಿಚಂದ್ರಗುಪ್ತ’ಸಂಸ್ಕೃತ ನಾಟಕವನ್ನೂ ಬರೆದಿದ್ದು ಗೋಚರವಾಗುತ್ತದೆ. ರಾಜಾ ವಿಕ್ರಮನ ನ್ಯಾಯ ಸಿಂಹಾಸನವೆಂಬುದು ಈ ದೇಶ ಕಂಡ ಇನ್ನೊಂದು ಬೆರಗು!   ವಿಕ್ರಮಾದಿತ್ಯನ ನ್ಯಾಯದಾನದ ಹಲವು ಕಥೆಗಳು ಇಂದಿಗೂ ನಮಗೆ ಲಭ್ಯವಿದ್ದು, ಆತ ಕೈಗೊಂಡ ನಿರ್ಣಯಗಳು ಚಕಿತರನ್ನಾಗಿ ಮಾಡುತ್ತವೆ.

ದೀಪಕ ರಾಗ ಎಂದು ಹುಟ್ಟಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ! ಭಾರತೀಯ ಸಂಗೀತದಲ್ಲಿ ಸಂಧ್ಯಾ ಅಥವಾ ಸಂಜೆಯ ವೇಳೆಗೆ ದೀಪ ಮುಡಿಸುವ ಹೊತ್ತಿನಲ್ಲಿ ಹಾಡುವ ಅನೇಕ ರಾಗಗಳಿವೆ. ಅವುಗಳಲ್ಲಿ ಪೂರ್ವಿ ಥಾಟ್ ನಿಂದ ಆರಂಭಗೊಳ್ಳುವ ರಾಗಗಳೂ ಸೇರಿವೆ. ಸಂಜೆಯ  ಅಥವ ಸಂಧ್ಯಾ ರಾಗಗಳನ್ನೇ ದೀಪ ಹೊತ್ತಿಸುವ ವೇಳೆಯ ರಾಗಗಳಾದುದರಿಂದ "ದೀಪಕ ರಾಗ" ಎಂದು ಹೇಳಿದ್ದಿರಬೇಕೆ ಎಂಬುದು ಅವಧಾನಿಗಳ ಅನಿಸಿಕೆ. ತಾನ್ ಸೇನ್ನ ನಂತರದ ತಲೆಮಾರುಗಳಲ್ಲಿ ದೀಪಕ ರಾಗವೆಂದು ಪ್ರತ್ಯೇಕವಾಗಿ ಗುರುತಿಸಲ್ಪಟ್ಟ ರಾಗದ ಪ್ರಸ್ತಾವನೆಯಾಗಲೀ, ಹಾಡುವಿಕೆಯಾಗಲೀ ಅಷ್ಟಾಗಿ ನಡೆಯಲಿಲ್ಲ. ೬ನೇ ಶತಮಾನದಿಂದ ಸಿಗುವ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳಲ್ಲಿ ದೀಪಕ ರಾಗದ ಪ್ರಸ್ತುತಿ ಅಲ್ಲಲ್ಲಿ ಕಾಣುತ್ತದೆಯೇ ವಿನಃ, "ಅದು ಇದೇ ರಾಗ" ಎಂಬುದನ್ನು  ನಿರ್ದಿಷ್ಟವಾಗಿ ಹೇಳಲು ಯಾವ ಆಧಾರಗಳೂ ಸಿಗುವುದಿಲ್ಲ!!  ಆಳವನ್ನು  ಅಗೆಯುತ್ತ ಹೋದರೆ ಭಾರತೀಯ ಸಂಗೀತವೆಂಬುದು ಕ್ರಿಸ್ತಪೂರ್ವ ೨೫೦೦ರಲ್ಲೂ ಬಳಕೆಯಲ್ಲಿದ್ದುದು ತಿಳಿದುಬರುತ್ತದೆ! ೧೯೬೩ರಲ್ಲಿ, ರಾಮಕೃಷ್ಣ ಮಠದ ಪ್ರಜ್ಞಾನಾನಂದ ಸ್ವಾಮಿಗಳು 'A History of Indian Music: Ancient period'  ಎಂಬ ಗ್ರಂಥವನ್ನು ಬರೆದಿದ್ದಾರೆ.  The Classical Music of North India  ಎಂಬ ಪುಸ್ತಕವನ್ನು ೭೫ ತಂತಿಗಳ ಸರೋದ್ ವಾದಕನೆಂದೇ ಖ್ಯಾತನಾದ ಅಲಿ ಅಕ್ಬರ್ ಖಾನ್ ಬರೆದಿದ್ದಾರೆ.


ಅಜಂತಾ ಗುಹೆ ೯ ರಲ್ಲಿನ ಗೋಡೆಯಲ್ಲಿರುವ ಚಿತ್ರ

ಸಂಗೀತವೆಂಬುದು ಭಾರತೀಯ ಮೂಲದಲ್ಲಿ ಯಾವಾಗ ಮತ್ತು ಎಲ್ಲಿ ಆರಂಭವಾಯ್ತೆಂಬುದು ಯಾರಿಗೂ ಸ್ಪಷ್ಟವಿಲ್ಲ! ಆದರೆ, ಕ್ರಿಸ್ತ ಪೂರ್ವ ೨೫೦೦ ವರ್ಷಗಳ ಹಿಂದೆಯೇ ಸಂಗೀತ ಬಳಕೆಯಲ್ಲಿತ್ತು ಎಂಬುದಕ್ಕೆ ಕಲವು ಆಧಾರಗಳು ದೊರೆಯುತ್ತವೆ. ಸಾಮವೇದದ ಸಾಮಗಾಯನವೇ ಸಂಗೀತಕ್ಕೆ ಮೂಲಾಧಾರ ಎನ್ನಲಾಗುತ್ತದೆ. ಸಾಮವೇದದ ಪದೋಚ್ಚರಣೆಗಳಲ್ಲಿ ಅನುದತ್ತ[ದೀರ್ಘ], ಉದತ್ತ[ಶೀಘ್ರ] ಮತ್ತು ಸ್ವರಿತ [ಮಧ್ಯಮ] ಪ್ರಕಾರದ ಉಚ್ಚರಣೆಗಳಿವೆ ಎಂಬುದನ್ನು ಕಾಣಬಹುದು. ಈ ವ್ಯವಸ್ಥೆಗೆ ಮುಂದೆ ಸ ರಿ ಗ ಮ ಪ ದ ನಿ ಎಂಬ ಸ್ವರಗಳ ಸಮ್ಮಿಲನ ಮಾತ್ರ ಯಾವಾಗ ಅಳವಡಿಸಲ್ಪಟ್ಟಿತು ಎಂಬುದು ತಿಳಿದುಬರುವುದಿಲ್ಲ! ಮಹಾರಾಷ್ಟ್ರದ ಅಜಂತಾ ಗುಹೆಗಳ ಪೈಕಿ ೯ನೇ ಗುಹೆಯೈ ಗೋಡೆಯಲ್ಲಿ, ಅಜಮಾಸು  ಕ್ರಿಸ್ತಪೂರ್ವ ೫೦೦ ರಲ್ಲಿ ಚಿತ್ರಿತವಾದ  ಚಿತ್ರವೊಂದರಲ್ಲಿ ಸಂಗೀತದ ಪರಿಕರಗಳೊಟ್ಟಿಗೆ ಹಾಡುತ್ತಿರುವ ಮಹಿಳೆಯರ ಗಾಯವ್ನವನ್ನು ಆಲಿಸುತ್ತಿರುವ ರಾಜನೊಬ್ಬನ ಚಿತ್ರವೊಂದಿದೆ!  ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಭಾರತೀಯ ಸಂಗೀತದ ಬಗೆಗೆ ಹೇಳಿಕೆಯಿರುವುದು ಇನ್ನೊಂದು ದಾಖಲೆ. ಋಷಿ ವಾತ್ಸಾಯನನ ಹೇಳಿಕೆಯ ಪ್ರಕಾರ ಸಂಗೀತವೆಂಬುದು ಗೀತಂ, ವಾದ್ಯಂ, ನೃತ್ಯಂ ಎಂಬ ಮೂರು ಅಂಗಗಳಿಂದ ಕೂಡಿದೆ. ಸಾರಂಗದೇವನ ’ಸಂಗೀತ ರತ್ನಾಕರ’ ಎಂಬ ಹೊತ್ತಗೆಯನ್ನು ಬಿಟ್ಟರೆ ಅದಕ್ಕೂ ಆದಿಯಲ್ಲಿ ಯಾವ ಗ್ರಂಥಗಳೂ ಕಾಣಿಸುವುದಿಲ್ಲ. ೬ನೇ ಶತಮಾನದ ನಂತರ ಒಂದು ಲಿಖಿತ ರೂಪವಿರುವುದಕ್ಕೆ ಮತ್ತು ೭ನೇ ಶತಮಾನದಿಂದ ಆಳಿದ ರಾಜರುಗಳ ಆಸ್ಥಾನದಲ್ಲಿ ಸಂಗೀತಗಾರರು ಹಾಡುತ್ತಿದ್ದುದಕ್ಕೆ ಆಧಾರಗಳು ಸಿಗುತ್ತವೆ. ಸಿಂಧೂ ನಾಗರಿಕತೆ ಎಂದು ಇತಿಹಾಸ ತಜ್ಞರು ಹೇಳುವ ಕಾಲಘಟ್ಟದ ಸಾಮಗ್ರಿಗಳೆಂದು ಪರಿಗಣಿತವಾದವುಗಳಲ್ಲಿ, ಲಂಕೆಯಲ್ಲಿ ಸಂಗೀತ ವಿದ್ವಾಂಸ ರಾವಣನಿಂದ ರೂಪಿತವಾಯ್ತೆಂಬ ’ರಾವಣಾಹತ’ವೆಂಬ ವಾದ್ಯವೂ ಸೇರಿದೆ! ಇಷ್ಟೆಲ್ಲಾ ಇದ್ದರೂ ಭಾರತೀಯ ಸಂಗೀತವೆಂಬುದು, ಬಹುಶತಮಾನಗಳ ಕಾಲ ಗುರುವಿನಿಂದ ಶಿಷ್ಯನಿಗೆ [ಗುರು-ಶಿಷ್ಯ ಪರಂಪರೆ]ಬಾಯಿಂದ ಬಾಯಿಗೆ ಹೇಳಿಕೊಡಲ್ಪಟ್ಟು ಬಳಕೆಯಲ್ಲಿತ್ತಷ್ಟೆ. ಈ ಪರಂಪರೆ ಸುಮಾರು ೧೮ನೇ ಶತಮಾನದ ವರೆಗೂ ಮುಂದುವರಿಯಿತು ಎಂಬುದು ಕಾಣುತ್ತದೆ.


ಭಾರತೀಯ ಬಹುಪ್ರಾಚೀನ ಸಂಗೀತ ವಾದ್ಯ:  ರಾವಣಾಹತ

೧೮ನೇ ಶತಮಾನದಲ್ಲಿ ಭಾರತಕ್ಕೆ ಬ್ರಿಟಿಷರ ಆಗಮನವಾದಮೇಲೆ, ಬ್ರಿಟಿಷರು ಭಾರತದ ಈ ಪರಂಪರೆಯನ್ನು ವಿರೋಧಿಸಿ ಅಪರಾಧವೆಂಬಂತೆ ಕಂಡಿದ್ದರಿಂದ,  ಸಂಗೀತ ವಿದ್ವತ್ತುಳ್ಳವರು ತಮ್ಮ ಮನೆಯ ಮುಂದಿನ ಪೀಳಿಗೆಗಳಲ್ಲಿನ ಸಂಗೀತಾಸಕ್ತರಿಗೆ ಮಾತ್ರ ಸಂಗೀತವನ್ನು ಕಲಿಸಿಕೊಡುವುದು ಸಾಧ್ಯವಾಯ್ತು! ಸಂಗೀತವೆಂಬುದು ಕೇವಲ ಮನೋರಂಜನೆಯ ಮಾಧ್ಯಮವೆಂದು ಬ್ರಿಟಿಷ್ ಪ್ರೇರಿತ ಅನ್ಯ ರಾಜ್ಯಗಳವರು ಹೇಳುತ್ತಿದ್ದಾಗ, ಗ್ವಾಲಿಯರ್, ಬರೋಡಾ ಮತ್ತು ಅಯೋಧ್ಯಾ ರಾಜ್ಯಗಳು ಮಾತ್ರ ಸಂಗೀತವನ್ನು ಪುರಸ್ಕರಿಸುತ್ತಲೇ ಬಂದವು. ೧೯ನೇ ಶತಮಾನದಲ್ಲಿ ಬದುಕಿದ್ದ ಪಂಡಿತ್ ವಿಷ್ಣು ನಾರಾಯಣ ಭಾತ್‍ಖಂಡೆ [ಆಗಸ್ಟ್ ೧೦, ೧೮೬೦-ಸೆಪ್ಟೆಂಬರ್ ೧೯, ೧೯೩೬]  ಎಂಬವರು ಆಧುನಿಕ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತದ ಬಗ್ಗೆ ನಿಖರವಾಗಿ ಪುಸ್ತಕವೊಂದನ್ನು ಬರೆಯುವವ ವರೆಗೂ ಸಂಗೀತ ಬಳಲುತ್ತಲೇ-ತೆವಳುತ್ತಲೇ ಬಂತು. ಮುಂಬೈಯ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಭಾತ್‍ಖಂಡೆ, ಆದಿಯಲ್ಲಿ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಓದಿದವರು. ಆಗಲೇ ಸಂಗೀತದಲ್ಲಿ ಆಸಕ್ತಿ ತಳೆದು ಸಿತಾರ್ ನುಡಿಸತೊಡಗಿದ್ದರು. ಮುಂದೆ, ಅನಿರೀಕ್ಷಿತವಾಗಿ ತನ್ನ ಹೆಂಡತಿ ಮತ್ತು ಮಗಳ ಸಾವನ್ನು ಕಂಡ ಅವರು, ಹಿಂದೂಸ್ಥಾನಿ ಸಂಗೀತಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟರು. ಬ್ರಿಟಿಷರ ಸೊಕ್ಕಿನಿಂದ ಸೊರಗಿದ್ದ ಭಾರತೀಯ ಹಿಂದೂಸ್ಥಾನೀ ಪ್ರಕಾರದ ಸಂಗೀತದ ಅಳಿದುಳಿದ  ಭಾಗಗಳನ್ನು ಕಲೆಹಾಕಿ ಅದಕ್ಕೊಂದು ನಿರ್ದಿಷ್ಟ ಸ್ವರೂಪ ಪರಿಕಲ್ಪಿಸುವಲ್ಲಿ ಮುಂದಾದ ಅವರು ವಕೀಲಿ ವೃತ್ತಿಯನ್ನೂ ತೊರೆದುಬಿಟ್ಟರು.  ಹಲವು ಸಂಶೋಧನೆಗಳನ್ನು ಕೈಗೊಂಡ ಅವರ ಪ್ರಬಂಧ ’ಸ್ವರ ಮಾಲಿಕಾ’ ಮೊದಲು ಪ್ರಕಟವಾಯ್ತು. ನಂತರ ೧೯೦೯ ರಲ್ಲಿ, ’ಶ್ರೀ ಮಲ್ಲಕ್ಷಯ ಸಂಗೀತಂ’ ಎಂಬ ಸಂಸ್ಕೃತ ಭಾಷೆಯ ಗ್ರಂಥವನ್ನು ಹೊರತಂದರು; ನಂತರ ಜನಸಾಮಾನ್ಯರಿಗೆ ಅದು ಅರ್ಥವಾಗುವಂತೆ ಅವರ ಈ ಕೃತಿಗೆ ಅವರೇ ಭಾಷ್ಯ[ಅರ್ಥ ವಿವರಣೆ]ಗಳನ್ನು ಬರೆದರು. 


ಭಾತ್‍ಖಂಡೆಯವರ ಗ್ರಂಥದಲ್ಲಿ ದೀಪಕ ರಾಗದ ಬಗೆಗೆ ಶ್ಲೋಕ ವೊಂದು ಈ ರೀತಿ ಇದೆ:

ಪೂರ್ವೀ ಮೇಲ ಸಮುತ್ಪನ್ನೋ ದೀಪಕೋ ಗುನಿ ಸಮ್ಮತಃ
ಆರೋಹಣೇ ರಿ-ವರ್ಜ್ಯಂಸ್ಯಾದ್ ಅವರೋಹೇ ನಿ-ವರ್ಜಿತಂ |
ಷಡ್ಜ ಸ್ವರೋ ಭವೇದ್ವಾದಿ ಕೈಶ್ಚಿತ್ ಪಂಚಮರ್ಹರಿತಃ
ಗಾನಂ ಸುಸಮ್ಮತಂ ಚಾಸ್ಯ ದಿನೇ ಯಾಮೇ ತುರೀಯಕೇ ||

ಆರೋಹಣದಲ್ಲಿ ’ರಿ’ ಸ್ವರವನ್ನೂ ಮತ್ತು ಮತ್ತು ಅವರೋಹಣದಲ್ಲಿ ’ನಿ’ಸ್ವರವನ್ನೂ  ಬಳಸಬಾರದು. ಷಡ್ಜವನ್ನು ವಾದಿಯನ್ನಾಗಿಯೂ ಪಂಚಮವನ್ನು ಸಂವಾದಿಯನ್ನಾಗಿಯೂ ಬಳಸಬೇಕು [ಇದಕ್ಕೆ ವ್ಯತ್ಯಯದ ಹೇಳಿಕೆಗಳೂ ಕೆಲವರಲ್ಲಿವೆ!] ಎಂಬುದು ಶ್ಲೋಕದ ತಾತ್ಪರ್ಯ.

ದೀಪಕರಾಗದ ಜಾಡನ್ನು ಹಿಡಿಯಲು ಹೊರಟಾಗ ಕೆಲವು ಸಂಗೀತ ವಿದ್ವಾಂಸರನ್ನು ನಾನು ಕೇಳಿಕೊಂಡೆ. ಆ ಪೈಕಿ ಕೆರೆಮನೆ ರಾಮ ಹೆಗಡೆಯವರು ಮಾತ್ರ ಸ್ಪಂದಿಸಿ ಕೆಲವು ಮಾಹಿತಿ ನೀಡಿದರು; ಉಳಿದವರಿಗೆ ಈ ರಾಗದ ಬಗ್ಗೆ ಯಾವ ಆಸಕ್ತಿಯೂ ಇರದಿರಬಹುದು ಅಥವಾ ನನ್ನ ಕೋರಿಕೆ ಅವರ ಗಮನಕ್ಕೆ ಬಾರದೇ ಇದ್ದಿರಬಹುದು. ರಾಮ ಹೆಗಡೆಯವರಿಂದಲೂ ಕೆಲವು ಪ್ರಶ್ನಾವಳಿಗಳು ಹೊರಟಾಗ  ಅವಧಾನಿಗಳೆಡೆಗೆ ಮುಖಮಾಡಿದೆ, ಅಲ್ಲೊಂದಷ್ಟು ಮಾಹಿತಿ ದೊರೆಯಿತು. ಹಲವು ಹೊತ್ತಗೆಗಳನ್ನು ತಡಕಾಡಿದ ನಂತರವೂ ಬೇತಾಳ-ತ್ರಿವಿಕ್ರಮನೆನಿಸಿದ ವಿಕ್ರಮಾದಿತ್ಯ, "ನನ್ನ ಪರಾಕ್ರಮದ ಮುಂದೆ ನೀನೇನು? ಯತ್ನಿಸುತ್ತಲೇ ಇರು" ಎಂಬಂತೆ ಚಂದ್ರಗುಪ್ತ-ವಿಕ್ರಮಾದಿತ್ಯ  ಮತ್ತು ಭವಿಷ್ಯ ಪುರಾಣದಲ್ಲಿ ಕಂಡ ವಿಕ್ರಮಾದಿತ್ಯರಲ್ಲಿ ಇಬ್ಬರೂ ಅವರೇ ಆಗಿರಬಹುದೋ ಅಥವಾ ಇಬ್ಬರೂ ಬೇರೆ ಬೇರೆಯೋ ಎಂಬುದು ಖಂಡಿತ ಅರ್ಥವಾಗಲಿಲ್ಲ!

ಹೀಗೇ, ದೀಪಕ ರಾಗದ ಬೆನ್ನತ್ತಿ ಹೊರಟಾಗ, ಅಖಂಡ ಭಾರತೀಯ ಸಂಗೀತದ ಆಮೂಲಾಗ್ರ ದರ್ಶನವನ್ನು ಪಡೆಯುವಂತಾಯ್ತು. ಇಂದು ನಮ್ಮಲ್ಲಿನ ಉತ್ತರಾದಿ-ದಕ್ಷಿಣಾದಿ ಎಂಬೆರಡೂ ಸಂಗೀತ ಪ್ರಕಾರಗಳ ಕುರಿತಾಗಿ ಹಲವು ವಿದ್ವಾಂಸರು ಬರೆದ ಪುಸ್ತಕಗಳಿವೆ. ಸಾವಿರಾರು ವರ್ಷಗಳ ಇತಿಹಾಸದಲ್ಲೆಲ್ಲೋ ದೀಪಕರಾಗ ಅಡಗಿಹೋಗಿದೆ! "ಅದು ಇದೇ" ಎಂದು ನಿಖರವಾಗಿ, ನಿಚ್ಚಳವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲದಂತಾಗಿದೆ. ಅನ್ಯ ದೇಶಗಳವರು ತಮ್ಮ ತಮ್ಮ ಸಂಸ್ಕೃತಿ-ಪರಂಪರೆಗೆ ಆದ್ಯತೆಗಳನ್ನು ಕೊಟ್ಟು, ರಕ್ಷಿಸಿಕೊಂಡರೆ,  ಪರಕೀಯರ ದಾಳಿ-ಆಳ್ವಿಕೆಗಳಿಂದ ಪ್ರಕ್ಷುಬ್ಧಗೊಂಡ, ಮಲಿನಗೊಂಡ ಭಾರತೀಯರ ಮನಸ್ಸುಗಳಲ್ಲಿ ನಿಜದ ಅರಿವಿರದೇ ಇರುವುದನ್ನು ಕಂಡಾಗ ಖೇದವಾಗುತ್ತದೆ.  ಅನ್ಯರ ಒಡೆದಾಳುವ ನೀತಿಗೆ ಬಲಿಯಾದ ನಾವು ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಅಮೂಲ್ಯ ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳಬೇಕಾಗಿದೆ, ನಮಸ್ಕಾರ.