ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 7, 2010

ತಾಂಬೂಲಾನಂದ ’ಟಿ.ವಿ.’ ನೋಡಿದ ಕಥೆ !!



ತಾಂಬೂಲಾನಂದ 'ಟಿ.ವಿ.' ನೋಡಿದ ಕಥೆ !

ಸುಮಾರು ೧೯೯೬-೯೭ರ ಸಮಯ. ಗಣಪತಿ, ಶ್ರೀಧರ ಮತ್ತು ಕೃಷ್ಣ ಮೂರು ಮಂದಿ ಬೆಂಗಳೂರಿನಲ್ಲಿ ಬೇರೆ ಬೇರೆ ಜಾಬ್ ಹಿಡಿದು ಎಲ್ಲರೂ ಸೇರಿ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಅಪರೂಪಕ್ಕೊಮ್ಮೆ ಊರಿಂದ ಅವರು ಇವರು ಅಂತ ಯಾರಾದರೂ ಬರುತ್ತಿರುತ್ತಿದ್ದರು. ಬಂದವರು ವಾರಗಟ್ಟಲೆ ಉಳಿಯುತ್ತಿದ್ದರು. ಹೈ ಕೋರ್ಟ್ ಕೆಲಸಕ್ಕೆ ಅಂತ ಬಂದವರು, ದೊಡ್ಡ ಆಸ್ಪತ್ರೆಗೆ ಅಂತ ಬಂದವರು, ಯಾವುದೋ ಸಂದರ್ಶನಕ್ಕೆ ಬಂದವರು, ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಬಂದವರು ಇತ್ಯಾದಿ ಇತ್ಯಾದಿ ಎಲ್ಲರೂ ಬಂದು ಠಿಕಾಣಿ ಹೂಡುತ್ತಿದ್ದರು. ಅದರಲ್ಲಂತೂ ಬ್ಯಾಚುಲರ್ ರೂಮ್ ಅಂದ್ರೆ ಕೆಲವರಿಗೆ ತುಂಬಾ ಒಳ್ಳೇ ಆಸರೆ; ಯಾಕೇಂದ್ರೆ ಹೆಂಗಸರು-ಮಕ್ಕಳು ಇದ್ದ ಮನೆಯಾದರೆ ಅವರ ಸಂಸಾರದ ರಗಳೆಗಳೆಲ್ಲ ಇವರಿಗೂ ಸ್ವಲ್ಪ ತಾಗುತ್ತಿದ್ದವು, ಹೀಗಾಗಿ ಇಂಥವರ ರೂಮ್ ಗೆ ಬರುವುದು ಮಾಮೂಲಿ. ಬರುವಾಗ ರೂಮ್ ನಲ್ಲಿರುವ ಹುಡುಗರಿಗೆ ತಾವು ಖಾಲಿ ಕೈಲಿ ಬರಲಿಲ್ಲ ಎಂದು ತೋರಿಸಲು ಅದೂ ಇದೂ ತಿನ್ನಲು ಮನೆಯಲ್ಲಿ ಮಾಡಿದ ಏನಾದರೂ ಐಟೆಮ್ ಗಳನ್ನು ಚೂರು ಪಾರು ತರುತ್ತಿದ್ದರು!

ಗಣಪತಿಯ ಅಣ್ಣ ರಾಮಚಂದ್ರ ತುಂಬಾ ವಾಚಾಳಿ. ಊರಲ್ಲಿ ಎಲೆಅಡಿಕೆ ಬಾಯಿ ತುಂಬಾ ತುರುಕಿಕೊಂಡು ಅಚೀಚೆ ಜಾರಿ ಬರುವ ಎಂಜಲನ್ನು ಕೈಯ್ಯಿಂದ ಪುಸಕ್ಕನೆ ಒರೆಸಿ ಮಾತಾಡಲಿಕ್ಕೆ ಶುರುವಿಟ್ಟರೆ ಮುಂದಿರುವ ಕವಳ[ತಾಂಬೂಲ ಅಥವಾ ಎಲೆಅಡಿಕೆಯ ಬಟ್ಟಲು] ಬರಿದಾಗುವವರೆಗೂ ವೃತ-ಕಥೆ ಜಾಗರಣೆಯಲ್ಲಿರುತ್ತದೆ ! ಯತಾನ್ ಶಕ್ತಿ ತಾಂಬೂಲವನ್ನು ಮೆದ್ದು ಆನಂದತುಂದಿಲನಾಗುವುದರಿಂದ ಶ್ರೀಯುತರಿಗೆ ಊರಲ್ಲೆಲ್ಲ 'ತಾಂಬೂಲಾನಂದ' ಎಂಬ ’ಬಿರುದು’ ಕೊಟ್ಟಿದ್ದರು! ಕೆಲಸವಿಲ್ಲದವರು ಸಿಕ್ಕಿಬಿಟ್ಟರೆ ಪಟ್ಟಾಂಗ-ಪ್ರಸಂಗಕ್ಕೆ ಕೊನೆ ಎಂಬುದೇ ಇರುತ್ತಿರಲಿಲ್ಲ. ಇದು ಯವುದೇ ಪೇಪರ್ನಲ್ಲಿ ಬರದಿದ್ದರೂ ಸುಮಾರಾಗಿ ಕೇಳಿತಿಳಿದ ಸುತ್ತ ಮುತ್ತಲ ಹಳ್ಳಿಯ ಹತ್ತಾರು ಜನರಿಗೆ, ಅವರಿಂದ ಬಾಯಿಗೆ->ಬಾಯಿಗೆ->ಬಾಯಿಗೆ ಹಬ್ಬಿ ’ಹಬ್ಬ’ವಾಗಿಬಿಟ್ಟಿತ್ತು!

ಇಂತಹ ಪುಣ್ಯಾತ್ಮ ಆಗಾಗ ’ನಮ್ಮನೆ ಬ್ರಾಂಚು’ ’ನಮ್ಮನೆ ಬ್ರಾಂಚು’ ಎನ್ನುತ್ತ ಇಲ್ಲಿ ಬೆಂಗಳೂರಿಗೆ ಬಂದು ಕುಳಿತುಕೊಳ್ಳುವುದಿತ್ತು. ಬರುವಾಗ ಸುಮ್ಮನೆ ಬಂದರಲ್ಲವೋ ? ಕೈಯ್ಯಲ್ಲೊಂದು ಕಪ್ಪು ಬ್ಯಾಗು, ಅದರಲ್ಲಿ ಒಂದು ದೊಡ್ಡ ಕಟ್ಟು ವೀಳ್ಯದೆಲೆ, ಪಲ್ಯಕ್ಕೆ ಬೀನ್ಸ್ ಹೆಚ್ಚಿದ ಥರದ ತಂಬಾಕಿನ ಕಟ್ಟು, ೫೦-೬೦ ಅಡಿಕೆ, ಸುಣ್ಣದ ಕರಡಿಗೆ[ಚಿಕ್ಕ ಬಾಕ್ಸ್] ಇವಿಷ್ಟರ ಜೊತೆಗೆ ನೂರೆಂಟು ಜನರ ದೂರವಾಣಿ ನಂಬರುಗಳಿರುವ ಒಂದು ಚೀಟಿ ಇರುತ್ತಿತ್ತು. ಬಂದಮೇಲೆ ಸಿಕ್ಕ ಎಲ್ಲ ನಂಬರಿಗೂ ಫೋನ್ ಮಾಡಿ ಏನಾದರೂ ಮಾತಾಡುವುದು. ಕೆಲವರು 'ತಾಂಬೂಲ' ಅಂತ ತಿಳಿದರೆ ಸಾಕು ನಂತರ ಒಂದೆರಡು ದಿನ ಕರೆ ಸ್ವೀಕರಿಸುವ ಗೋಜಿಗೇ ಹೋಗುತ್ತಿರಲಿಲ್ಲ! ಒಮ್ಮೊಮ್ಮೆ ಅಂಥವರ ಮನೆಗೆ ಹೋಗಬೇಕು ಇಂಥವರ ಮನಗೆ ಹೋಗಬೇಕು ಕರೆದುಕೊಂಡು ಹೋಗಿ ಅಂತ ಮೂವರಲ್ಲಿ ಒಬ್ಬರನ್ನು ಹಿಡಿದುಕೊಳ್ಳುತ್ತಿದ್ದ. ಹಿಡಿದುಬಿಟ್ಟರೆ ಒಳ್ಳೇ ಹಲಸಿನ ಮೇಣದ ಥರ !

ಬಂದ ಮೇಲೆ ಸುಮ್ಮನೇ ಅಂತ ಇದ್ದರೆ ಅವರು 'ಅವರೇ' ಅಲ್ಲ! ಒಳ್ಳೆ ವಂಡರಗಪ್ಪೆ ಥರ ವಟ ವಟ ವಟ ವಟ ಅಂತ ಒಂದು ನಿಮಿಷವಾದರೂ ಬಾಯಿಮುಚ್ಚದೇ ’ತಮ್ಮತನ’ ಮೆರೆಯುತ್ತಿದ್ದರು. ಹೀಗಾಗಿ ಅಣ್ಣನ ಬರುವಿಕೆಯ ಸುದ್ದಿ ತಿಳಿದಾಗಲೇ ತಮ್ಮ ಗಣಪತಿ ’ಸಣ್ಣ’ಗಾಗಿಬಿಡುತ್ತಿದ್ದ ! ಅವನ ಜೊತೆಗಾರರು ಎಲ್ಲಾದರೂ ಪರಸ್ಪರ ಬೇರೆ ಬೇರೆ ದೋಸ್ತರ ರೂಮ್ ಗಳಿಗೆ ಹೋಗಿರಲು ಪ್ರಯತ್ನಿಸುತ್ತಿದ್ದರು. ಹೇಳಲಾರರು-ಹೇಳದೇ ಇರಲಾರರು ಇದು ಒಂಥರಾ ಬಿಸಿತುಪ್ಪದ ಕಥೆಯ ಥರಾ ಆಗಿಬಿಟ್ಟಿತ್ತು!ಮೊದಲೇ ತಾಂಬೂಲಾನಂದ ಬರುವ ಸೂಟು ಸಿಕ್ಕರೆ ಕೆಲವೊಮ್ಮೆ ತಪ್ಪಿಸಿಕೊಳ್ಳಲು ರಜಗುಜರಾಯಿಸಿ ಬೇರೆಲ್ಲಿಗೋ ಹೋಗಿದ್ದುಬಿಡುತ್ತಿದ್ದರು ಪಾಪ! ಬೆಂಗಳೂರಲ್ಲಿ ಊರಿನ ಥರ ಕವಳ ಉಗಿಯಲು ಕಂಡ ಕಂಡಲ್ಲೆಲ್ಲ ಆಗುವುದೇ ? ಆದರೂ ನಮ್ಮ ತಾಂಬೂಲಾನಂದರು ಶಿಸ್ತಾಗಿ ಪಿಕಿ ಪಿಕಿ ಪ್ಸೊ ಪ್ಸೊ ಪ್ಸೊ ಪಿಚಕ್ ಅಂತ ಟಾಯ್ಲೆಟ್ ತುಂಬೆಲ್ಲ ತರಾವರಿ ರಂಗೋಲಿ ಹಾಕುತ್ತಿದ್ದರು! ನೀರನ್ನು ಹಾಕುವ ಅಭ್ಯಾಸ ಗೊತ್ತೇ ಇರಲಿಲ್ಲ, ಗಣಪತಿ ಹೇಳಲಾರ,ಅಣ್ಣ ಕಲಿಯಲಾರ-ಜೊತೆಗಿದ್ದವರು ತಾಳಲಾರರು ! 'ತಾಂಬೂಲ'ಸವಾರಿ ಬಂತೆಂದರೆ ಸಾಕು ಯಮಯಾತನೆ ಅನುಭವಿಸುತ್ತಿದ್ದರು.

ಹೀಗೇ ಒಂದುದಿನ ತಾಂಬೂಲದ ಸವಾರಿ ಬೆಂಗಳೂರಿಗೆ ಚಿತ್ತೈಸಿತು. ಶ್ರೀಧರ ಅಕೌಂಟಂಟ್ ಆಗಿರುವುದರಿಂದ ಮನೆಯಲ್ಲಿಯೂ ಕೆಲಸವಿರುತ್ತಿತ್ತು. ಅದೂ ಇದೂ ಫೈಲನ್ನು ಮನೆಗೆ ತಂದುಕೊಂಡು ಕೆಲಸ ಮಾಡುತ್ತಿದ್ದ. ಆ ದಿನ ಶ್ರೀಧರ ಸಾಯಂಕಾಲ ಬಂದವನೇ ಇನ್ನೊಂದುಕಡೆಗಿರುವ ಚಿಕ್ಕರೂಮ್ ನಲ್ಲಿ ಕೆಲಸ ಮಾಡುತ್ತ ಕುಳಿತ. ತಾಂಬೂಲದವರ ಕಥೆ ಪ್ರಾರಂಭವಾಗಿತ್ತು. ಶ್ರೀಧರ ಸ್ವಲ್ಪ ತಲೆಬಿಸಿ ಹೋಗಲಿ ಅಂತ ಒಳಗಡೆ ರೂಮಿನ ಬಾಗಿಲನ್ನು ಸ್ವಲ್ಪ ಹಾಕಿದಹಾಗೆ ಮಾಡಿ ಕೆಲಸದಲ್ಲಿ ನಿರತನಾಗಿದ್ದ. ಬೇಸರ ಕಳೆಯಲು ಸಣ್ಣಗೆ ಹಾಡು ಹಾಕಿಕೊಂಡಿದ್ದ. "ಈ ಸಮಯ ಆನಂದಮಯ..." ಸ್ವಲ್ಪ ನಮ್ಮ ತಾಂಬೂಲಕ್ಕೂ ಕೇಳುತ್ತಿತ್ತು. ಬಹಳ ಹೊತ್ತು ತುಂಬ ಕುತೂಹಲ ತಡೆದುಕೊಂಡ ತಾಂಬೂಲದವರು ತಮ್ಮ ಬರುತ್ತಿದ್ದಂತೆ ಕೇಳಿದರು " ಗಣ್ಪತಿ, ಶ್ರೀಧರ ಅದ್ಯಾಕೊ ಒಬ್ನೇ ರೂಮ್ ಹೊಕ್ಕೊಂಡು ಟಿ.ವಿ.ನೋಡ್ತಾ ಇದಾನಲ್ಲ, ನನ್ನ ಕರೀಲೇ ಇಲ್ಲ"

ಗಣಪತಿ ತಲೆಕೆರೆದುಕೊಂಡ ! ರೂಮ್ ನಲ್ಲಿ ಟಿ.ವಿ. ಇರಲೇಇಲ್ಲ, ಮತ್ತೆ ಶ್ರೀಧರ ಒಬ್ನೇ ನೋಡುವುದು ಅಂದರೇನು? ಆದ್ರೂ ಶ್ರೀಧರನ ಹತ್ತಿರ ಕೇಳಲಿಲ್ಲ, ಯಾಕೆಂದ್ರೆ 'ತಾಂಬೂಲ' ಬಂದಾಗ ಅವರೆಲ್ಲ ಮಾತಾಡದೇ ಸುಮ್ಮನಾಗಿಬಿಡುತ್ತಿದ್ದರು. ಹೀಗೇ ದಿನ ಒಂದೆರಡು ಕಳೆಯಿತು. ಗಣಪತಿ ಜಾಣ ಕಿವುಡರ ಥರಾ ಇದ್ದು ಬಿಟ್ಟಿದ್ದ. ಕೊನೆಗೊಮ್ಮೆ ಏನೋ ವಿಚಾರ ನೆನಪುಮಾಡಿಕೊಳ್ಳುವಾಗ ಯಾಕೋ ಡೌಟು ಬಂತು, ಅಣ್ಣನನ್ನು ಕರೆದು ಶ್ರೀಧರ ನೋಡುತ್ತಿದ್ದ ಟಿ.ವಿ. ಎಲ್ಲಿತ್ತು ಅಂತ ತೋರಿಸುವಂತೆ ಕೇಳಿದ. ತಾಂಬೂಲದವರು ಎದ್ದು ಬಂದು ಒಳಗಡೆ ರೂಮ್ ನಲ್ಲಿರುವ
ಟಿ.ವಿ. ಥರ ಕಾಣುವ ಬಾಕ್ಸ್ ತೋರಿಸಿದ! ಅದುವೇ ಶ್ರೀಧರ ಉಪಯೋಗಿಸುತ್ತಿದ್ದ ಕಂಪ್ಯೂಟರ್ ಮಾನಿಟರ್!