ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 27, 2010

ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರೀಗೆ

ಚಿತ್ರ ಋಣ : ಅಂತರ್ಜಾಲ

ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರೀಗೆ


ತನ್ನ ತಂದೆ-ತಾಯಿಗಳನ್ನು ಮಗಳು ನೆನೆಸಿಕೊಂಡಷ್ಟು ಮಗ ನೆನೆಸಿಕೊಳ್ಳಲಾರ! ಮದುವೆ ಆಗುವವರೆಗೆ ಮಗ ಎಲ್ಲದಕ್ಕೂ " ಅಮ್ಮ" " ಅಮ್ಮ" " ಅಮ್ಮ" ಎನ್ನುತ್ತಿದ್ದವನು ಮದುವೆಯಾದ ಘಳಿಗೆಯಿಂದ ಅಮ್ಮನನ್ನು ದೂರವಿಡಲು ಪ್ರಾರಂಭಿಸುತ್ತಾನೆ. ವಾಸ್ತವವಾಗಿ ಮದುವೆಯ ಹೊಸ್ತಿಲಲ್ಲಿ ನಿಂತ ಮಗನನ್ನು ನೋಡಿದಾಗ ಅಮ್ಮನಿಗೆ ಆತನ ಪ್ರೀತಿ ತನಗಿನ್ನೆಲ್ಲಿ ಸಿಗುವುದೋ ಎಂಬಭಾವ ಉದ್ಬವಿಸುವುದೋ ಏನೋ! ಯಾಕೆಂದರೆ ಮದುವೆಯಾದ ನಂತರ ಮಗ ಮೊದಲಿನ ಪ್ರೀತಿಯಿಂದ ಇರಲು ಬಂದ ಇನ್ನೊಂದು ಹೆಣ್ಣು ಬಿಡಬೇಕಲ್ಲ.

ಇದು ಒಂದು ವಾದವಾದರೆ, ಬಂದ ಹೆಣ್ಣಿಗೆ ಒಂಚೂರೂ ಸೌಲಭ್ಯ ಕಲ್ಪಿಸದೆ, ಮನೆಯ ಆಳಿನಂತೇ ನಡೆಸಿಕೊಳ್ಳುವ ಅತ್ತೆಯೊಂದಿಗೆ ಸೇರಿಕೂಳ್ಳುವ ಗಂಡ ತನ್ನನ್ನು ಲೆಕ್ಕಿಸುವುದೇ ಇಲ್ಲ --ಎನ್ನುವ ವಾದ ಇನ್ನೊಂದೆಡೆ.

ಈ ಎರಡರ ನಡುವೆ ದಿನಬೆಳಗಾದರೆ ವರದಕ್ಷಿಣೆಯ ಗೋಳು ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮಗಳು, ಪತ್ರಿಕೆಗಳು ಇವುಗಳ ವಾರ್ತೆಗಳ ಒಂದು ಭಾಗವಾಗಿಹೋಗಿವೆ! ಒಂದುಕಡೆ ಭಯೋತ್ಪಾದಕರು, ನಕ್ಸಲೈಟ್ಸ್ ವಿಭಾಗ, ಇನ್ನೊಂದು ಕಡೆ ಅಪಘಾತಗಳ ವಿಭಾಗ ಮತ್ತೊಂದು ಕಡೆ ಕೊಲೆ,ಸುಲಿಗೆ,ದರೋಡೆ,ಡಕಾಯಿತಿ ಮತ್ತು ವರದಕ್ಷಿಣೆ ವಿಭಾಗ ಹೀಗೇ ಪತ್ರಿಕೆ ಮತ್ತು ಮಾಧ್ಯಮಗಳವರು ಇವುಗಳನ್ನೆಲ್ಲ ಬೆಳಿಗ್ಗೆ ಬೆಳಿಗ್ಗೆ ಮನವನ್ನು ಹಿಂಡುವ ಈ ಥರದ ವಾರ್ತೆಗಳನ್ನು ಕೊನೆಯ ಪುಟಕ್ಕೋ ದೃಶ್ಯದಲ್ಲಾದರೆ ಸ್ವಲ್ಪ ಹಿತಮಿತವಾಗೋ ಪ್ರಕಟಪಡಿಸುವುದು ಒಳ್ಳೆಯದು ಅನಿಸುತ್ತಿದೆ.

ಇತ್ತೀಚೆಗೆ ನಾವು ಕಾಣುತ್ತಿರುವ ಮನುಷ್ಯರ ರಾಕ್ಷಸೀ ಪ್ರವೃತ್ತಿ ಬಹಳ ಖೇದವನ್ನುಂಟುಮಾಡುತ್ತದೆ. ಹೆಣ್ಣಿನ ಬಾಳ್ವೆ ಕಷ್ಟ. ಹುಟ್ಟುವುದು ಒಂದುಕಡೆ, ಬದುಕುವುದು ಇನ್ನೊಂದು ಕಡೆ. ಗಂಡನಿಗಾಗಿ ತನ್ನ ತಂದೆ-ತಾಯಿ, ಅಣ್ಣ-ತಮ್ಮ[ಇದ್ದರೆ,ಯಾಕೆಂದರೆ ಈಗೆಲ್ಲ ಒಂಟಿ ಮಕ್ಕಳಾದರೆ ಅವರೆಲ್ಲ ಎಲ್ಲಿ!] ಇವರನ್ನೆಲ್ಲ ತೊರೆದು ಗಂಡನ ಮನೆ ಸೇರುತ್ತಾಳೆ. ನಾಳೆಯ ಬದುಕಿನ ಸುಂದರ ಕನಸುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತ, ಒಡಲೊಳಗಾಡುವ ಕರುಳಬಳ್ಳಿಯನು ನೆನೆಸುತ್ತ, ತಂದೆ-ತಾಯಿ, ಅಣ್ಣ-ತಮ್ಮಂದಿರನ್ನು ಆಗಾಗ ಜ್ಞಾಪಿಸಿ ಕೊಳ್ಳುತ್ತ ಕಾಲಹಾಕುತ್ತಾಳೆ. ಹೆಣ್ಣೆಂಬ ಈ ಜೀವ ಬಯಸುವುದು ಕೇವಲ ಪ್ರೀತಿಯ ಆಸರೆ!

ಇತ್ತ ಹಲವು ಗಂಡಸರು ಬಯಸುವುದು ಕದ್ದೋ ಮುಚ್ಚೋ ಒಟ್ಟಿನಲ್ಲಿ ವರದಕ್ಷಿಣೆ! ಅವರಿಗೆ ಪ್ರೀತಿಯನ್ನೀಯುವ ಆ ಜೀವಕ್ಕಿಂತ ಆ ಜೀವವನ್ನು ಆಟದ ದಾಳವಾಗಿಟ್ಟುಕೊಂಡು ಬೇಕಾದಾಗ, ಹಾರಿಸಿದಾಗ ಅವಳ ತವರು ಮನೆಯಿಂದ ಬರುವ ದುಡ್ಡು-ಬಂಗಾರ-ಆಸ್ತಿ ಇವುಗಳೇ ಮುಖ್ಯ! ನಾಟ್ ದಾಟ್ ಎವರಿಒನ್ ಈಸ್ ಸೇಮ್ ಬಟ್ ಇಟ್ ಈಸ್ ಇನ್ಕ್ರೀಸಿಂಗ್ ಇನ್ ಆರ್ಡರ್!

ಹಿಂದೊಂದು ಕಾಲವಿತ್ತು ಅಂದುಬಿಟ್ಟರೆ ಸಾಕು ಕಥೆ ಕೊರೆಯಲು ಹೊರಟ ಅಂದುಕೊಂಡುಬಿಡುತ್ತೀರಿ. ಆದರೆ ಹಿಂದಾಗಿದ್ದು ಇಂದು ಇತಿಹಾಸ, ಅದು ಕಥೆ, ಅದು ಹಲವು ಕಾವ್ಯ-ಸಾಹಿತ್ಯಕ್ಕೆ, ಕಾದಂಬರಿಗೆ ಜೀವೆಜೀವಾಳ! ಇರ್ಲಿ, ವಿಷಯಕ್ಕೆ ಮರಳೋಣ. ಆ ಕಾಲದಲ್ಲಿ ಮನುಷ್ಯ ಮನುಷ್ಯನಾಗಿ ಬದುಕಿದ್ದ! ಅಲ್ಲಿ ’ಮಾನವೀಯ ಮೌಲ್ಯ’ ಎಂಬೊಂದು ಅಪರೂಪದ ವಿಷಯವಿತ್ತು, ಅದಕ್ಕೆ ಧಕ್ಕೆಬಾರದ ರೀತಿಯಲ್ಲಿ ಘನತೆ,ಗೌರವದಿಂದ ಬದುಕೂ ಸಾಗುತ್ತಿತ್ತು. ಅಲ್ಲಿ ಕೇವಲ ಹಣಕ್ಕಾಗಿ, ಆಸ್ತಿಗಾಗಿ ಜನ ಸಂಬಂಧಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಇಂದಿನ ಕಲುಷಿತ, ಕುತ್ಸಿತ ರಾಜಕೀಯ ಅಲ್ಲಿನ ಬದುಕಿಗೆ ಪ್ರವೆಶಿಸಿರಲಿಲ್ಲ! ಜನ ತಮ್ಮಷ್ಟಕ್ಕೆ ತಾವು ಗ್ರಾಮ್ಯ ಶೈಲಿಯಲ್ಲಿ ಬದುಕುತ್ತ ಹಾಯಾಗಿದ್ದರು, ಅಷ್ಟೇಅಲ್ಲ ಹಬ್ಬ-ಹುಣ್ಣಿಮೆಗಳನ್ನು ಬಹಳ ಗಡದ್ದಾಗಿ ಜನಪದ ಶೈಲಿಯ ಆಚರಣೆಗಳಿಂದ ಪ್ರೇರಿತರಾಗಿ ಅನುಭವಿಸುತ್ತಿದ್ದರು.

ಪಂಚ್ಮಿ ಹಬ್ಬ ಉಳಿದಾವು ದಿನ ನಾಕ....
ಅಣ್ಣ ಬರಲಿಲ್ಲ ಯಾಕ ಕರಿಲಾಕ....?

ಎಂಥಾ ಹಾಡು ಅಂತೀರಿ. ಇದನ್ನು ನಾಗರ ಪಂಚಮಿಯ ಸಲುವಾಗಿ ನಮ್ಮ ಜನ ಬಳಸುತ್ತಿದ್ದರು. ಇದೊಂದೇ ಏನು ? ಹಲವು ಹತ್ತು. ರಾಗಿ ಬೀಸುವಾಗ, ಹಿಟ್ಟು ರುಬ್ಬುವಾಗ, ಮಕ್ಕಳನ್ನು ರಮಿಸುವಾಗ, ಪೂಜೆ-ಪುನಸ್ಕಾರ ನಡೆಸುವಾಗ, ಹೊಲದಲ್ಲಿ ಬಿತ್ತನೆ ಕಾರ್ಯವೇ ಮೊದಲಾಗಿ ಕೆಲ್ಸ ನಡೆಸುವಾಗ...ಎಲ್ಲೆಲ್ಲೂ ಆ ಹಾಡುಗಳ ಆಪ್ಯಾಯಮಾನ ಅವಲಂಬನೆ ಮತ್ತು ಅದರ ಅರ್ಥ ಬದುಕಿನ ಏಕತಾನತೆಯನ್ನು ಬದಲಿಸುತ್ತಿದ್ದವು. ಯವುದೋ ಒಂದು ರಿಧಮ್ ಅನುಸರಿಸಿಕೊಂಡು ಹಾಡುವ ಪ್ರತೀ ಹಾಡು ಕೂಡ ಕೆಲ್ಸ-ಕಾರ್ಯಗಳಿಂದ ಆಗಬಹುದಾದ ದಣಿವನ್ನು ನಿವಾರಿಸುತ್ತಿತ್ತು, ಪರಸ್ಪರರಲ್ಲಿ ಬಾಂಧವ್ಯ-ಆಪ್ತತೆ ಹೆಚ್ಚುವಂತೆ ಮಾಡುತ್ತಿತ್ತು. ಮತ್ತೊಮ್ಮೆ ಅದೇ ಕೆಲ್ಸ ಮಾಡಲು ಉತ್ಸಾಹ ಕುಂದದಂತೇ ತಡೆಯುತ್ತಿತ್ತು. ಇವತ್ತು ಪಂಚ್ಮಿ ಹಬ್ಬದ ಹಾಡೇ ಇರಲಿ ಮತ್ತೊಂದೇ ಇರಲಿ ಯಾರಾದರೂ ಜನಪದ ಕಲಾವಿದರನ್ನು ಕರೆಸಿ ಹಾಡಿಸಬೇಕಾಗಿದೆಯೇ ಹೊರತು ಅವುಗಳು ಜನಸಾಮಾನ್ಯನ ದೈನಂದಿನ ಚಟುವಟಿಕೆಗಳಿಂದ ಬೇರ್ಪಟ್ಟಿವೆ.

ಕಾಡೀಗಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು
ಮಾವೀನ ಹೋಳು ನಿನ ಕಣ್ಣು ...
ಮಾವೀನ ಹೋಳು ನಿನ ಕಣ್ಣು ಕಂದಮ್ಮ ಮಾವ ಬಣ್ಣೀಸಿ ಕರೆದಾನ ....

ಎಲ್ಲಿದೆ ಮಗುವನ್ನು ರಮಿಸುವ ಈ ಪದ್ಯ? ಇಂದು ಇದನ್ನೆಲ್ಲಾ ನಾವು ತೊರೆದಿದ್ದೇವೆ, ಬೆಳಗಾದರೆ ದೃಶ್ಯಮಾಧ್ಯಮದ ಮುಂದೆ! ದೇವರು-ದಿಂಡರು ಏನೂ ಬೇಕಾಗಿಲ್ಲ. ಅಷ್ಟೂ ಬೇಕೆಂದರೆ ಎರಡು ಊದಿನಕಡ್ಡಿಯನ್ನು ಟಿವಿಗೇ ಹಚ್ಚಿಬಿಟ್ಟರೆ ಮುಗಿಯಿತಲ್ಲ! ಸುಬ್ಬಲಕ್ಷ್ಮಿಯವರ ಸುಪ್ರಭಾತ ದೇವಸ್ಥಾನಕ್ಕೆ ಮಾತ್ರ! ನಮಗೆಲ್ಲ ಅದ್ಯಾಕೆ ? ದಿನಾಲೂ ಕೇಳೀ ಕೇಳೀ ಬೇಜಾರು !

ನಮ್ಮನೆಯ ಪಕ್ಕದ್ಮನೆ ಪಡ್ಡೆಗೆ ಬೆಳಗಿನ ಜಾವವೇ ’ಕಣ್ ಕಣ್ ಕಣ್ ಹೊಡಿತಾಳೆ .....ಗಲ್ ಗಲ್ ಗಲ್ ಎಂತೈತೆ ...’ ಹಾಡು ಬೇಕು! ಹಾಸಿಗೆ ಬಿಟ್ಟು ಏಳುವುದೇ ೯ ಘಂಟೆಗೆ. ಅಲ್ಲೀವರೆಗೂ ಅವೇ ಸಿನಿಮಾ ಹಾಡುಗಳು. ಎಪ್ಫೆಮ್ಮು ಎಪ್ಫೆಮ್ಮು! ಮಕ್ಕಳಿಗೆ ತಿಳಿಹೇಳಬೇಕಾದ ಹಿರಿಯರೇ ಅದನ್ನು ಅನುಗ್ರಹಿಸಿರುವಾಗ ಇನ್ನು ಮಕ್ಕಳ ತಪ್ಪೇನು?

ಇವತ್ತಿನ ಢಾಂಬಿಕತನ,ಢೋಂಗಿಮನ ನಮಗೆ ಹಲವು ಹತ್ತು ಆಸೆಗಳನ್ನು ಹೊತ್ತು ತಂದಿದೆ. ಮಾಧ್ಯಮಗಳ ಅತಿರಂಜಿತ ಕಥಾ ಹಂದರಗಳಿಂದಲೂ, ಸಿನಿಮಾಗಳ ಬಟ್ಟೆ ರಹಿತ ಎಲ್ಲಾ ಓಪನ್ ದೃಶ್ಯಗಳ ಹದಿಹರೆಯದವರ ಮನಗೆದರುವ ಕಾಮ ಸಂಬಂಧೀ ದೃಶ್ಯಾವಳಿ ಮತ್ತು ಕಥೆಗಳಿಂದಲೂ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ನಿನ್ನೆಯವರೆಗೆ ಅಪ್ಪಾ ಅಪ್ಪಾ ....ಎಂದು ಅಪ್ಪ ಹೇಳಿದ ಹಾಗೇ ಕೇಳುತ್ತಿದ್ದ ಹುಡುಗಿ ಇಂದು ಅಪ್ಪನ ವಿರುದ್ಧ ದೃಶ್ಯಮಾಧ್ಯಮದಲ್ಲಿ ಹೇಳಿಕೆ ಕೊಡುತ್ತಾಳೆ. ಅಪ್ಪ ತನ್ನ ಪ್ರೇಮಿಯನ್ನು ಅಗಲಿಸಲು ಪ್ರಯತ್ನಿಸುತ್ತಾನೆ ಎಂದು ರಂಪಮಾಡುತ್ತಾಳೆ. ಆದರೆ ಮುಂದಾಗುವ ಪರಿಣಾಮವನ್ನು ನೆನೆದ ಅಪ್ಪ-ಅಮ್ಮ ಕಣ್ಣೀರಲ್ಲಿ ಕೈತೊಳೆಯುತ್ತ ಕೈಕೈ ಹಿಸುಕಿಕೊಳ್ಳುತ್ತ ಕೂರುವಂತೆ ಮಾಡುತ್ತಾರೆ. ಮಠದಲ್ಲಿದ್ದ ವೈರಾಗ್ಯಮಾತೆ ಎಳೆವೆಯ ಹುಡುಗನನ್ನು ಬಯಸಿ ತನಗೆ ಪ್ರೀತಿ ಕೊಡುವವರಿಲ್ಲಾ ಎನ್ನುತ್ತ ಆತನನ್ನೇ ವರಿಸಿ ಆತನ ತಾಯಿಯ ಮನಸ್ಸನ್ನು ತಲ್ಲಣಗೊಳಿಸುತ್ತಾಳೆ! ಇವೆಲ್ಲ ಇಂದಿನ ಮುಂದುವರಿದ ನಮ್ಮ ಸಂಸ್ಕೃತಿಯ ಸ್ವೇಚ್ಛಾಚಾರದ ಮನೋವಾಂಛೆ ಅನ್ನೋಣವೇ ?

ಹಾಗಾದರೆ ನಮಗೆಲ್ಲಾ ಏನಾಗಿದೆ ? ಅದನ್ನೇ ನಾವು ಅರ್ಥೈಸಿಕೊಳ್ಳುತ್ತಿಲ್ಲ. ಅರ್ಥೈಸಿಕೊಂಡರೆ ಧುತ್ತನೆ ನಮಗೆದುರಾಗುವ ಪ್ರಶ್ನೆ>> ಹೀಗೂ ಉಂಟೇ ? .....

ಅತಿ ಆಸೆಗೆ ಬಲಿಯಾಗಿದ್ದೇವೆ, ಢಾಂಬಿಕರಾಗಿದ್ದೇವೆ, ನಮಗೇ ನಾವು ಮೋಸಗಾರರಾಗಿದ್ದೇವೆ, ದೈವ ಭಕ್ತಿ ಕೇವಲ ಆಚರಣೆಗೆ ಸೀಮಿತವಾಗಿದೆ, ಹಿರಿ-ಕಿರಿಯ ಭೇದಭಾವವಿಲ್ಲ, ವಕೀಲರು ಗೆದ್ದಿದ್ದೇ ನ್ಯಾಯ, ಸರಿಯಾದ ಗುರುವನ್ನು ಗುರುತಿಸಿಕೊಳ್ಳುವ ಶಕ್ತಿ ನಮಗಿಲ್ಲ, ವಿದೇಶೀ ಕಂಪನಿಗಳು ದುಡ್ಡುಮಾಡಲು ಬಂದು ಪ್ರಾರಂಭಿಸಿದ ಮಾಲ್ ಕಲ್ಚರ್ ಗೆ ನಾವು ಒಣ ಪ್ರತಿಷ್ಠೆ ಮೆರೆಯಲು ಹೋಗುತ್ತೇವೆ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಬೇಕು ಎಂಬಂತೇ ಕಂಡಿದ್ದನ್ನೆಲ್ಲ ಕೊಳ್ಳುವ,ಖರೀದಿಸುವ ಕೊಳ್ಳುಬಾಕರಾಗಿದ್ದೇವೆ, ಕ್ಷಣಿಕ ವ್ಯಾಮೋಹಕ್ಕಾಗಿ-ಕಾಮತೀಟೆಗಾಗಿ ಮಡದಿಯನ್ನೇ ಮರೆತು ಬೇರೊಂದು ಹೆಂಗಸನ್ನೋ ಹುಡುಗಿಯನ್ನೋ ಹುಡುಕುವ ದುರಾಚಾರಿಗಳಾಗಿದ್ದೇವೆ, ಕೆಲಸಬೇಡ-ಹಣಬೇಕು ಎಂಬ ಸೂತ್ರಕ್ಕೆ ಅಂಟಿಕೊಂಡಿದ್ದೇವೆ--ಇವೆಲ್ಲ ಅದಕ್ಕೆ ಕಾರಣ! ಇರುಳಲ್ಲಿ ಕಂಡ ಬಾವಿಗೆ ಹಗಲಲ್ಲಿ ಬಿದ್ದಿರುವುದೇ ಇದಕ್ಕೆ ಕಾರಣ. ನಮಗರ್ಥವಾಗದ ಸಂಸ್ಕೃತಿಯ ಜಾಡು ಹಿಡಿದು ನಮ್ಮತನವನ್ನು ತೊರೆಯುತ್ತಿರುವುದೇ ಇದಕ್ಕೆಲ್ಲಾ ಕಾರಣ! ಈ ಒಂದು ಗಾಡಾಂಧಕಾರದಲ್ಲಿ ನಾವು ಮಾನವರಾಗಿರುವ ಬದಲು ದಾನವರಾಗುತ್ತಿದ್ದೇವೆ, ತಾಮಸರಾಗುತ್ತಿದ್ದೇವೆ.

ನಮ್ಮಲ್ಲಿ ಹೆಣ್ಣುಮಕ್ಕಳು ಮಣ್ಣಿನ ಬಳೆಗಳನ್ನು ಇಡುವುದು ಬಿಟ್ಟು ಬಹಳಕಾಲವಾಯಿತು. ಹಿಂದಕ್ಕೆ ಬಳೆಗಾರ ಮನೆಬಾಗಿಲಿಗೇ ಬರುತ್ತಿದ್ದ. ಬಳೆಯ ಮಲಾರವನ್ನು ಹೊತ್ತು ತರುತ್ತಿದ್ದ ಆತನ ಉದರಂಭರಣೆಯ ಜೊತೆಜೊತೆಗೇ ಆತ ಬಳೆಗಾರ ಚೆನ್ನಯ್ಯನ [ಕೇಳಿದ್ದೀರಲ್ಲ? ನರಸಿಂಹಸ್ವಾಮಿಗಳ ಕವನದಲ್ಲಿ]ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಬೇಕಾದ ಬಳೆಗಳನ್ನು ಕೊಡುವುದರ ಜೊತೆಗೆ ಹಳ್ಳಿಯಿಂದ ಹಳ್ಳಿಗೆ ಹರಿಕಾರರಾಗಿ ಕೆಲಸಮಾಡುತ್ತಿದ್ದರು. ಅಂದಿನ ಆ ಬದುಕಿನಲ್ಲಿ ಈ ಥರದ ದ್ವೇಷ-ವೈಷಮ್ಯವಿರಲಿಲ್ಲ, ಸಿರಿವಂತಿಕೆಯ ಸೋಗಿರಲಿಲ್ಲ, ಪಟ್ಟಣದ ಬದುಕಿನ ಥಳುಕುಬಳುಕು-ಒಳಗೆಲ್ಲಾ ಹುಳುಕಿನ ವ್ಯವಹಾರವಿರಲಿಲ್ಲ. ಅಂದಿನ ಬಾಣಂತಿ ತನ್ನ ತವರನ್ನು ನೆನೆಸಿ ಹೊರಟಾಗ ಬರುವ ಹಾಡು ನೋಡಿ--

ತೌರೂರ ದಾರಿಯಲಿ ನವಿಲ ಬಣ್ಣದ ಪಕ್ಷಿ
ತಲಿಬ್ಯಾನಿ ಎದ್ದು ಅಳುತಿತ್ತ....
ತಲಿಬ್ಯಾನಿ ಎದ್ದು ಅಳತಿತ್ತ ಕಂದನ ನಗುವೀಕಿ ನೋಡಿ ನಲಿತಿತ್ತ...

ಎಂತಹ ಆಪ್ತತೆ ತುಂಬಿದೆ ನೋಡಿ. ಹಾದಿಯಲ್ಲಿ ನವಿಲೊಂದು ತಲೆನೋವಿನಿಂದ ಬಳಲುತ್ತಿದ್ದುದಾಗಿಯೂ ಆಕೆಯ ಕಂದನನ್ನು ನೋಡಿ ಅದರ ನೋವು ಮರೆಯಿತೆಂದೂ ಬರೆದ ಜನಪದ ಮಹಾಶಯ ಯಾರಿರಬಹುದು ?

ಅದೇ ರೀತಿ ಬಳೆಗಾರ ತನ್ನ ಗಂಡನ ಮನೆಯಲ್ಲಿದ್ದಾಗ ಬಂದರೆ ಅವನನ್ನು ತನ್ನ ತಾಯಿಗೂ, ಅಕ್ಕ-ತಂಗಿಯರಿಗೂ ಬಳೆಸಿಗಲಿ ಎನ್ನುವ ಸಲುವಾಗಿ, ಗರತಿ ಆತನಲ್ಲಿ ವಿನಂತಿಸುತ್ತಿದ್ದುದು " ಅಯ್ಯಾ ಭಾಗ್ಯದ ಲಕ್ಷಣವಾದ ಬಳೆಯನ್ನು ಮಾರುವ ಬಳೆಗಾರನೇ ನನ್ನ ತವರಿಗೂ ಸ್ವಲ್ಪ ಹೋಗಿಬಾರಪ್ಪಾ" ಎಂದು.
ಈ ಹಿನ್ನೆಲೆಯಲ್ಲಿ ಆ ಬಳೆಗಾರನ ಕೂಡ ಹಾಡುವ ಹಾಡು--

ಭಾಗ್ಯದ ಬಳೆಗಾರ ಹೋಗಿಬಾ ನನ್ ತವರೀಗೆ

ಹಂಚಿನ ಮನೆ ಕಾಣೋ..ಕಂಚಿನ ಕದ ಕಾಣೋ....

ಎಷ್ಟೆಲ್ಲಾ ಗುರುತು, ಬಣ್ಣನೆ ತನ್ನ ತೌರಬಗೆಗೆ. ಇದು ಆ ತಂಗಿಯ, ಆ ಅಕ್ಕನ, ಆ ಗರತಿಯ ತೌರಿನ ಬಗೆಗಿದ್ದ ಪ್ರೀತಿಯನ್ನು ತೋರಿಸುತ್ತದೆ. ’ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂದು ಯಾವಾತನೋ ಗಾದೆ ಮಾಡಿರಬಹುದು ಆದರೆ ಅದು ನಿಜವಾಗಿ ಅನ್ಯಾಯ. ಕೇವಲ ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ಆಕೆ ತನ್ನೆಲ್ಲಾ ಆಪ್ತರ-ಹುಟ್ಟಿದ ಮನೆಯವರ ಔದಾರ್ಯದಿಂದ ವಂಚಿತಳಾಗಬೇಕೆ? ಹಾಗಂತ ತವರಿನ ಮೇಲೆಯೇ ವಿಪರೀತ ಒತ್ತಡ ಹೇರಿ ವಸೂಲಿ ಕೆಲ್ಸವನ್ನೂ ಅವಳು ಮಾಡಲಾರಳು. ಈ ಇಕ್ಕಟ್ಟಿನಲ್ಲಿ ಆ ಕಡೆ ಗಂಡನಮನೆಯವರ ಕಿರುಕುಳ ಈ ಕಡೆ ತವರುಮನೆಗೆ ಹೇಳಲಾಗದ ತಳಮಳ-ಇಲ್ಲೆಲ್ಲೋ ನಡುವೆ ಒಂದು ಆಳ ಕಮರಿಯಲ್ಲಿ ಸಿಲುಕಿದ ಆ ಮಹಾತಾಯಿ ನಿಟ್ಟುಸಿರುಬಿಡುತ್ತಾಳೆ, ತನ್ನನ್ನು ಮುಗಿಸಿಕೊಳ್ಳುವ ಹಂತಕ್ಕೆ ಮಾನಸಿಕ ಸಿದ್ಧತೆ ನಡೆಸುತ್ತಾಳೆ, ಅಥವಾ ಏನಾದರಾಗಲಿ ಎಂದು ಗಂಡನ ಮನೆಯಲ್ಲೇ ಇದ್ದು ಅಲ್ಲಿನವರಿಂದ ಕೊಲ್ಲಲ್ಪಡುತ್ತಾಳೆ! ಇದು ನಮ್ಮ ಇಂದಿನ ಸಿರಿವಂತಿಕೆಯ ದ್ಯೋತಕವಾಗಿಬಿಟ್ಟಿದೆ. ಆಮೇಲೆ ಸ್ವಲ್ಪಕಾಲ ರಾಜಕೀಯ ಮಾಡಿ ಕೊಲೆಗಡುಕರು ತಪ್ಪಿಸ್ಕೊಂಡು ಆ ಹುಡುಗನಿಗೆ ಇನ್ನೊಂದು ಮದುವೆಗೆ [ಇನ್ನೊಂದು ’ಕುರಿ ಬಲಿಗೆ’] ತಯಾರಿ ನಡೆಸುತ್ತಾರೆ. ಇದು ಮೂರ್ನಾಲ್ಕು ಹುಡುಗಿಯರನ್ನು ಆತ ಹಾಗೆ ಮದುವೆಯಾಗಿ ಸಾಯಿಸುವವರೆಗೂ ತೀರಾ ಬೆಳಕಿಗೆ ಬರುವುದೇ ಇಲ್ಲ!

ಇಂತಹದ್ದನ್ನೆಲ್ಲ ಅರಿತೇ ಇಂದು ಹೆಣ್ಣು ಮಗುವೇ ಬೇಡ ಎಂಬ ಹಂತಕ್ಕೆ ಪಾಲಕರು ಬಂದಿದ್ದಾರೆ. ಇದರ ಸಲುವಾಗೇ ಅನೇಕ ವರ್ಷಗಳ ಕಾಲ ಗೌಪ್ಯವಾಗಿ ಸ್ಕ್ಯಾನಿಂಗ್ ಯಂತ್ರಗಳ ಮೂಲಕ ಭ್ರೂಣದ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣಾಗಿದ್ದರೆ ಅದನ್ನು ಆಬಾರ್ಷನ್ ಮಾಡಿಬಿಡುತ್ತಿದ್ದರು.ನೋಡಿ ಎಲ್ಲಿಗೆ ಹೋಗಿ ಎಲ್ಲಿಗೆ ಬಂತು ಕಾಲ! ನಮ್ಮ ಹಿರಿಯರು ಇದನ್ನೆಲ್ಲ ತಿಳಿದೇ ಭ್ರೂಣ ಹತ್ಯೆ ಮಹಾಪಾಪ ಅದೊಂದು ಕೊಲೆಯಷ್ಟೇ ಪಾಪದ ಕೆಲಸ, ಪಾತಕ ಎಂದು ಹೇಳಿದ್ದಾರೆ.

ನಮ್ಮಷ್ಟಕ್ಕೆ ನಾವು ಅಲ್ಪ ತೃಪ್ತರಾಗಿ ಅಂದಿನ ದಿನಗಳಂತೇ ದೇವರು ಕೊಟ್ಟದ್ದರಲ್ಲಿ, ಪ್ರಾಮಾಣಿಕವಾಗಿ ಗಳಿಸಿದ್ದರಲ್ಲಿ ತೃಪ್ತಿ ಕಂಡಿದ್ದರೆ ಈ ರೀತಿ ಬವಣೆಗಳು ಬರುತ್ತಿರಲಿಲ್ಲ. ಒತ್ತಡಗಳು ಉದ್ಭವವಾಗುತ್ತಿರಲಿಲ್ಲ, ಮಾನವೀಯ ಮೌಲ್ಯಗಳು ಕುಸಿಯುತ್ತಿರಲಿಲ್ಲ, ಜೀವಗಳು ಬಲಿಯಾಗುತ್ತಿರಲಿಲ್ಲ. ಇದನ್ನೆಲ್ಲಾ ಬರೆಯುವಾಗ ಕೊನೆಗೊಮ್ಮೆ ನಾನು ಕೇಳಿದ ಹಾಡು

ಭಾಗ್ಯದ ಬಳೆಗಾರ ಹೋಗಿಬಾ ನನ್ ತೌರೀಗೆ.....

ಆ ಗರತಿ, ಆ ಭಾರತಿ ಮತ್ತೆ ಜನಿಸಲಿ, ಸುಖದ ಕಾಲ ನಮಗೆ ಮತ್ತೆ ಸಿಗುವಂತಾಗಲಿ, ಮಾನವೀಯ ಮೌಲ್ಯಗಳು ಮತ್ತೆ ಚಿಗಿತು ಬೆಳೆಯಲಿ, ಅನ್ಯಾಯ-ಅಧರ್ಮ ಅಳಿದು ಮಾನವ ಪ್ರೇಮ ಎಲ್ಲೆಡೆಗೆ ಅನುರಳಿಸಲಿ ಎಂಬ ಸದಾಶಯದೊಂದಿಗೆ ನಿಮ್ಮಕೈಗೀಲೇಖನ, ನಮಸ್ಕಾರ.