ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, January 26, 2011

ಮರೆಯಲಾಗದ ಎರಡು ವಿಷಯಗಳು



ಮರೆಯಲಾಗದ ಎರಡು ವಿಷಯಗಳು

ನಾವು ಮರೆತರೂ ಮರೆಯಲಾಗದ ಕೆಲವು ವಿಷಯಗಳು ಮಾನವ ಲೋಕದ ಭಾವನಗಳಿಂದ ಪೂರಿತವಾಗಿರುತ್ತವೆ. ಕೆಲವನ್ನು ನಾವು ಬೇಡವೆಂದರೂ ಅವು ನಮ್ಮಲ್ಲೇ ಸದಾ ಐಕ್ಯವಾಗಿದ್ದು ಆಗಾಗ ಆಗಾಗ ಜಾಗೃತವಾಗುತ್ತವೆ. ಹೀಗೆ ಬರೆದಾಗ ನೀವೆಲ್ಲ ಕೇಳಬಹುದು : ಮೊನ್ನೆ ಅಸ್ತಂಗತರಾದ ಶ್ರೀ ಭೀಮಸೇನ್ ಜೋಶಿಯವರ ಬಗ್ಗೆ ನಾನು ಏನೂ ಬರೆಯಲಿಲ್ಲವೆಂದು. ಆದರೆ ವಸ್ತುಸ್ಥಿತಿ ಅದಲ್ಲ. ಬರೆದ ಅತ್ಯಂತ ಹೃದಯಂಗಮ ಕವನವೊಂದು ತಂತ್ರಾಂಶದ ಇನ್ನೊಂದು ರೂಪವಾದ ವೈರಾಣುವಿನ ಪಾಲಾದಾಗ ಮತ್ತೆ ಬರೆಯಲು ಮನಸ್ಸೂ ಬರಲಿಲ್ಲ, ಅಂತಹ ಭಾವಪೂರಿತ ಕಾವ್ಯ ಮತ್ತೆ ಹುಟ್ಟಿಬರುತ್ತೋ ಇಲ್ಲವೋ ತಿಳಿಯದಾಯ್ತು. ಬರೆಯಬೇಕು ಎಂಬುದೇನೋ ನಿಜವೇ ಆದರೂ ಬರೆಯುವಾಗ ಮನೋವೇದಿಕೆ ಅದಕ್ಕೆ ಸಿದ್ಧವಗಬೇಕಲ್ಲ? ಮನಸ್ಸು ದೇಹಕ್ಕೆ ವಿರುದ್ಧದಿಸೆಯಲ್ಲಿ ಹೆಜ್ಜೆಹಾಕಿದಾಗ ಬರಹಗಳ ಸೃಷ್ಟಿಯಾದರೆ ಆ ಬರಹಗಳನ್ನು ಒಂದೋ ಯಾರೂ ಓದಲಾಗುವುದಿಲ್ಲ, ಅಥವಾ ಅಂತಹ ಬರಹಗಳು ತೀರಾ ಕಮರ್ಷಿಯಲ್ ಸಿನಿಮಾಗಳ ಥರ ಕೇವಲ ಕೆಲವು ಜನರಿಗೆ ಸೀಮಿತವಾಗುತ್ತವೆ.

ಇವತ್ತಿನ ಎರಡು ವಿಷಯಗಳು ಇಂತಿವೆ: ಮೊದಲನೆಯದು ಭೀಮಸೇನರಿಗೆ ಶ್ರದ್ಧಾಂಜಲಿ ಎಂಬುದು ನಿರ್ವಿವಾದ. ಎರಡನೆಯದು ತಾಯಿ ಭಾರತಿಯ ಅಗಾಧತೆಯ ನೆನಪು. ಬನ್ನಿ ಒಂದೊಂದಾಗಿ ಕೂತು ಮಾತಾಡೋಣ-

ಕರ್ನಾಟಕವೆಂಬ ಮಗಳು ಭಾರತವೆಂಬ ಮಾತೆಗೆ ಹೆತ್ತುಕೊಟ್ಟ ಸುಪುತ್ರರಲ್ಲಿ ಅನೇಕ ರತ್ನಗಳು ಅಡಕವಾಗಿವೆ. ಅಂತಹ ರತ್ನಗಳಲ್ಲಿ ಒಂದು ಮೊನ್ನೆ ಕಾಣದಾಯಿತು ಎಂದರೆ ಇದು ಬರೇ ಬಣ್ಣನೆಗೆ ಬಳಸಿದ ಪದವೆಂದು ಯಾರೂ ಹೇಳಲಾರಿರಿ. ಭೀಮಸೇನ್ ಜೋಶಿಯ ವ್ಯಕ್ತಿತ್ವ ಹಾಗಿತ್ತು! ದೇವರು ಎಂಬ ನಮಗೆ ಗೋಚರವಲ್ಲದ ಮಹಾನ್ ಶಕ್ತಿ ಈ ವಿಶ್ವಕ್ಕೆ ಆಗಾಗ ಆಗಾಗ ಏನಾದರೂ ಅಪರೂಪದ ಕೊಡುಗೆಗಳನ್ನು ಕೊಡುತ್ತಲೇ ಹೋಗುತ್ತದೆ. ಅಂತಹ ಕೊಡುಗೆಗಳು ಮಾನವ ಕೊಡುಗೆಗಳಲ್ಲವಾದ್ದರಿಂದ ಅವುಗಳ ಬೆಳಕು,ಪ್ರಕಾಶ ಹಲವೆಡೆ ಪಸರಿಸುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ’ಸಂಭವಾಮಿ ಯುಗೇ ಯುಗೇ’ ಎನ್ನುವ ಮಾತು ಸದಾ ಮನದಲ್ಲಿ ಹಸಿರಾಗಿರುವಂಥದ್ದು. ಯುಗಯುಗಗಳಲ್ಲೂ ಕಾಲಕಾಲಗಳಲ್ಲೂ ಹಲವು ರೂಪಗಳಲ್ಲಿ ಭಗವಂತ ಅಂಶ, ಅಂಶಾಂಶ ಅವತಾರಿಯಾಗಿ ಭೂಮಿಗೆ ಬರುತ್ತಾನೆ. ಕೆಲವೊಮ್ಮೆ ಆತನನ್ನು ಆತನೇ ಮನುಷ್ಯ ರೂಪದಲ್ಲಿ ಹುಟ್ಟಿ ಸೇವೆ ಮಾಡುವುದೂ ಕಾಣುತ್ತದೆ. ಇಂತಹ ಹಲವು ಜನ್ಮಗಳು ದಾಸಪರಂಪರೆಯವರದ್ದು. ಹರಿದಾಸರೆಲ್ಲ ಹರದಾಸರೂ ಹೌದು, ಅವರು ಭಗವಂತನ ನಿರ್ವ್ಯಾಜ ಪ್ರೀತಿಯನ್ನು ಮೊಗೆದು ತಾವೂ ಉಂಡು ನಮಗೂ ಉಣಬಡಿಸಿದವರು. ಅಂತಹ ದಾಸರುಗಳು ಬರೆದ ಹಾಡುಗಳನ್ನು ಹಾಡುವದಕ್ಕಾಗಿ ಕೆಲವು ವಿಷಿಷ್ಟ ವ್ಯಕ್ತಿಗಳನ್ನೂ ಅದೇ ಆ ದೇವರು ಹುಟ್ಟಿಸುತ್ತಾನೆ. ಹೀಗೆ ಆ ದಿಸೆಯಲ್ಲಿ ಧಾರವಾಡದ ಹಳ್ಳಿಯಲ್ಲಿ ಜನ್ಮವೆತ್ತಿದವರು ಶ್ರೀ ಭೀಮಸೇನರು. ಮತ್ತದೇ ಹಳೆಯ ಸಂಪ್ರದಾಯಗಳನ್ನು ನೆಚ್ಚಿನಿಂತ ಬಡ ಶಿಕ್ಷಕರ ಮಗನಾಗಿ ಜನಿಸಿದ ಶ್ರೀಯುತರಿಗೆ ಶಾಲೆಯಲ್ಲಿ ಕಲಿಸುವ ವಿದ್ಯೆಗಿಂತ ಇಂಪಾಗಿ ಹಾಡುವ ಹಾಡುಗಳು ಇಷ್ಟವಾದವು. ಸಂಗೀತಕ್ಕಾಗಿ ಮನೆಜನರ ಕಣ್ತಪ್ಪಿಸಿ ಕಂಡಲ್ಲೆಲ್ಲಾ ಅಲೆಯುವುದು ಆರಂಭವಾದ ದಿನಗಳಲ್ಲಿ ಮನೆಯ ಹಿರಿಯರು ನಿರ್ಧರಿಸಿದ್ದು ಈತನನ್ನು ಹೇಗೆ ಸರಿದಾರಿಗೆ ತರುವುದಪ್ಪಾ ಎಂದು. ಆದರೆ ಅದು ತಪ್ಪುದಾರಿಯೇನೂ ಆಗಿರಲಿಲ್ಲ, ಬದಲಾಗಿ ಅದೊಂದು ವಿಶಿಷ್ಟ ಮಹತ್ವವುಳ್ಳ ಹಾದಿಯಾಗಿತ್ತು. ಆ ಹಾದಿ ಎಲ್ಲರಿಗೂ ರುಚಿಸುವುದಾಗಿರಲಿಲ್ಲ. ಕೆಲವರಿಗೆ ಸಂಗೀತವನ್ನು ಕೇಳುವುದಷ್ಟೇ ಇಷ್ಟವಾಗುತ್ತಿತ್ತು ಹೊರತು ಅಭ್ಯಸಿಸುವುದಲ್ಲ.

ತನ್ನ ಸುತ್ತಲ ಜಗತ್ತು ತನಗೆ ಪೂರಕವಾಗಿರದ ವಿಷಮಸ್ಥಿತಿಯಲ್ಲೇ ಗುರುವನ್ನು ಹುಡುಕುತ್ತಾ ನಡೆದು ಕಾಣದ ಊರು ಜಾಗಗಳಲ್ಲೆಲ್ಲಾ ಸುತ್ತುತ್ತಾ ಕೊನೆಗೊಮ್ಮೆ ತನ್ನಿಚ್ಛೆಯನ್ನು ನೆರವೇರಿಸುವ ಮುಸ್ಲಿಂ ಗಾಯಕರೊಬ್ಬರನ್ನು ಪ್ರಥಮ ಗುರುವಾಗಿಸಿಕೊಂಡು ಹಿಂದೂಸ್ಥಾನೀ ಸಂಗೀತವನ್ನು ಗುರುಕುಲ ಮಾದರಿಯಲ್ಲಿ ಕಲಿಯಲು ಆರಂಭಿಸಿದ ಭೀಮಸೇನರು ನಂತರ ಸವಾಯಿ ಗಂಧರ್ವರನ್ನು ಗುರುವನ್ನಾಗಿ ಸ್ವೀಕರಿಸಿ ಮುನ್ನಡೆದರು. ಕಲಿಕೆ ಕೇವಲ ನೆಪಮಾತ್ರ. ಹುಟ್ಟುಪ್ರತಿಭೆಗೆ ಕಲಿಕೆ ಬೇಕೆ? ಆದರೂ ಜನ್ಮಾಂತರದಲ್ಲಿ ಮರೆತುಹೋದ ಸಂಗೀತದ ಮಜಲುಗಳನ್ನು ಮತ್ತೊಮ್ಮೆ ಎತ್ತಿ ನೆನಪಿಸುವ ಕಾರಣಕ್ಕಾಗಿ ಗುರುವಿನ ಅವಶ್ಯಕತೆಯಿತ್ತು;ಕಲಿತರು. ಹಾಡುವ ಪ್ರತೀ ಹಾಡು ಜನರನ್ನು ಮೋಡಿಮಾಡಲು ತೊಡಗಿದ್ದು ಅವರ ಸುಶ್ರಾವ್ಯ ಕಂಠಮಾಧುರ್ಯದಿಂದ. ಆ ಕಂಠಶಾರೀರದಲ್ಲಿ ಅದೆಂತಹ ಅದ್ಭುತ ಚೈತನ್ಯದ ಚಿಲುಮೆಯಿದೆಯೆಂದರೆ ಕೇಳುತ್ತಾ ಕೇಳುತ್ತಾ ಅದಕ್ಕೆ ಮಾರುಹೋಗದವರು ವಿರಳ.

ಆನೆ ನಡೆದದ್ದೇ ದಾರಿ ಅಂತಾರಲ್ಲ ಅದೇ ರೀತಿ ಭೀಮಸೇನರು ಇಟ್ಟಿದ್ದೇ ಭೀಮಗಾತ್ರದ ಹೆಜ್ಜೆಗಳನ್ನು. ಅವರು ಹೇಗೇ ಆಲಾಪಿಸಿದರೂ ಅದೊಂದು ರಾಗವೇ ಆಯಿತು. ಹೊಸ ರಾಗಗಳು ಅವರಿಂದ ಸೃಜಿಸಲ್ಪಟ್ಟವು. ಪಕ್ಕ ವದ್ಯಗಳಿರಲಿ ಬಿಡಲಿ ಆ ಧ್ವನಿಗೆ ಅವುಗಳ ಅನಿವಾರ್ಯತೆ ತೀರಾ ಕಮ್ಮಿ. ವಾದ್ಯಗಳೇ ಹಾಡುಗಾರರನ್ನು ಮರೆಮಾಚುವ ಇವತ್ತಿನ ದಿನಗಳಲ್ಲಿ ಕೇವಲ ಹಾರ್ಮೋನಿಯಂ ಮತ್ತು ತಾಳ, ತಬಲಾಗಳೊಂದಿಗೆ ಅವರು ಭಜನೆಗಳನ್ನು ಹಾಡಿದರು. ದೇವರ ನಾಮಗಳನ್ನು ಹೇಳಿದರು. ಅಭಂಗಗಳನ್ನು ಭಂಗವಿಲ್ಲದೇ ಸತತ ಹಾಡಿದರು. ಕರ್ನಾಟಕದಲ್ಲಿ ಅವರ ವಿದ್ಯೆಗೆ ತಕ್ಕುದಾದ ವ್ಯವಸ್ಥೆ ಸಿಗದೇ ಇದ್ದಾಗ ಮಹಾರಾಷ್ಟ್ರದ ಪುಣೆಗೆ ಅವರು ವಲಸೆಹೋದರು. ಅಲ್ಲೇ ನೆಲೆನಿಂತರೂ ಅವರು ಕನ್ನಡ ತಾಯಿಯನ್ನು ಮರೆಯಲಿಲ್ಲ! ಕನ್ನಡದಲ್ಲಿ ಅನೇಕ ಹಾಡುಗಳನ್ನು ಹಾಡಿದರು. ಮಹಾರಾಷ್ಟ್ರಕ್ಕೆ ಅವರು ತೆರಳಿದ ಮೇಲೆ ಅಲ್ಲಿಂದ ಅವರು ದೇಶವ್ಯಾಪೀ ಗುರುತಿಸಿಕೊಂಡರು. ದೇಶದಲ್ಲೇ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ದೇಶದ ಆಸ್ತಿಯಾಗಿ ಬೆಳೆದರು.

ಪಂಚಮವೇದವೆನಿಸಿದ ಸಂಗೀತ ಮೂಲ ಮಹಾಭಾರತದ ಕಾವ್ಯವನ್ನು ಓದುವಾಗ ಜಾಸ್ತಿ ಪ್ರಚುರಗೊಂಡಿತು ಎಂಬ ಐತಿಹ್ಯವೊಂದಿದೆ. ಅದು ಹೌದೋ ಅಲ್ಲವೋ ಅಂತೂ ಸಂಗೀತವೊಂದು ಚಿಕಿತ್ಸೆ ಎಂಬುದಂತೂ ನಿಜವೇ. ಅರೆಕ್ಷಣದ ಇಂಪಾದ ಸಂಗೀತದಿಂದ ತೇಲಿಬರುವ ಆಹ್ಲಾದ ಎಂತೆಂತಹ ಕುಪಿತವ್ಯಕ್ತಿಗಳ ಮನೋಸ್ಥಿತಿಯನ್ನು ತಕ್ಷಣಕ್ಕೆ ತಣಿಸುತ್ತದೆ. ನರಗಳ ಸಂವೇದನೆಯ ಮೂಲಕ ಸಾಗುವ ಸಂದೇಶಗಳು ಆಯಾ ಭಾಗಗಳಿಗೆ ಸಮರ್ಪಕವಾಗಿ ತಲುಪದಾದಾಗ ಕಾಯಿಲೆಗಳ ಜನನವಾಗುತ್ತದೆ. ಸೂಕ್ತ ಸಂದೇಶಗಳ ಬದಲಾಗಿ ವ್ಯತ್ಯಸ್ತ ಸಂದೇಶಗಳು ಪ್ರವಹಿಸಿದರೂ ಕಾರ್ಯವ್ಯತ್ಯಾಸವಾಗುತ್ತದೆ. ಯಥೋಚಿತ ಸಂದೇಶಗಳು ಸಕಾಲಕ್ಕೆ ಸರಿಯಾಗಿ ಪ್ರವಹಿಸಲು ಸಂಗೀತದ ಹಲವು ರಾಗಗಳು ಕಾರಣವಾಗುತ್ತವೆ ಎಂಬುದು ಈಗ ವೈಜ್ಞಾನಿಕವಾಗಿ ನಿರೂಪಿಸಲ್ಪಟ್ಟ ಸಂಗತಿ. ಉತ್ತಮ ಸಂದೇಶಗಳು ನಮ್ಮ ನರನಾಡಿಗಳಲ್ಲಿ ಹರಿಯುತ್ತ ವೈರುಧ್ಯಭಾವಗಳು ದೂರವಾಗಲು ಸಂಗೀತ ಕಾರಣವಾದರೆ ಅದನ್ನು ನಮಗೆ ತಲುಪಿಸುವ ಕೆಲಸವನ್ನು ತಮ್ಮ ಶಾರೀರದಿಂದ ನಡೆಸಿಕೊಡುವವರು ಗಾಯಕರಾಗಿರುತ್ತಾರೆ.

ದೇಶವೊಂದು ತನ್ನ ಖಾಸಾ ಪ್ರತಿಭೆಗೆ ಮನ್ನಣೆಯನ್ನು ನೀಡಬೇಕಾದ್ದು ಸಹಜವೇ. ಆದರೂ ಸಂಗೀತದಲ್ಲಿ ಅಸಾಮಾನ್ಯತೆಯನ್ನು ಮೆರೆದ ಅಪ್ಪಟ ಪ್ರತಿಭೆಗೆ ೨೦೦೮ ರ ವರೆಗೂ ಭಾರತರತ್ನ ಪುರಸ್ಕಾರ ದೊರೆತಿರಲಿಲ್ಲ. ಅಂತೂ ಅದು ಭೀಮಸೇನರನ್ನು ತಾನಾಗೇ ಅರಸಿಬಂದಿದ್ದು ೨೦೦೮ರಲ್ಲಿ. ಇದರ ಹೊರತು ಮಿಕ್ಕುಳಿದ ಮಾನ-ಸನ್ಮಾನಗಳ ಮತ್ತು ಬಿರುದುಬಾವಲಿಗಳ ಪಟ್ಟಿ ನಿಮಗೇ ಚೆನ್ನಾಗಿ ತಿಳಿದಿರುತ್ತದೆ. ಯಾವುದನ್ನೇ ಕೊಟ್ಟರೂ ಅದು ಕಮ್ಮಿ ಎನಿಸುವ ಸಂಗೀತ ಸಾಮ್ರಾಟನ ಸೇವೆ ಅಮೋಘ ಮತ್ತು ಅನನ್ಯ ಕೂಡ. ಅನೇಕರು ಅನೇಕ ಮಾರ್ಗಗಳಿಂದ ಅಮರರಾದರೆ ಭೀಮಸೇನರು ಸಂಗೀತಕ್ಷೇತ್ರದ ಮರೆಯಲಾಗದ ಧ್ರುವತಾರೆಯಾಗಿದ್ದಾರೆ. ಅವರಿಗೆ ನಮ್ಮೆಲ್ಲರ ನುಡಿನಮನಗಳನ್ನು ಹೇಳುವ ಸಮಯ ಇದಾಗಿದೆ, ಹಾಗೆ ಸ್ಮರಿಸೋಣ: ದಿವಂಗತ ಮಹಾನುಭಾವ ಶ್ರೀ ಭೀಮಸೇನ ಜೋಶಿಯವರೇ ತಮ್ಮ ಆತ್ಮ ಚಿರಶಾಂತಿಯನ್ನು ಪಡೆಯಲಿ. ಮತ್ತೆ ಬರುವುದಾದರೆ ಇದೇ ಈ ನಮ್ಮ ಕನ್ನಡನೆಲಕ್ಕೆ ಮರಳಲಿ ಎಂದು ತಮಗೆ ಹೃತ್ಪೂರ್ವಕವಾಗಿ ತಮಗೆ ಭಾಷ್ಪಾಂಜಲಿಗಳನ್ನು ಅರ್ಪಿಸುತ್ತಿದ್ದೇವೆ.

ಇನ್ನು ಎರಡನೇ ವಿಚಾರ ಅಮ್ಮ ಭಾರತಿಯದ್ದು. ನಾವು ಏನೇ ಕೊಡಲಿ ಬಿಡಲಿ ಅವಳುಮಾತ್ರ ಸತತವಾಗಿ ನಮ್ಮನ್ನು ಅತ್ಯಂತ ಕಾಳಜಿಯಿಂದ ನಡೆಸುತ್ತಾಳೆ. ನಮ್ಮಿಂದ ಯಾವುದನ್ನೂ ಅಪೇಕ್ಷಿಸುವುದಿಲ್ಲ. ಗಲಭೆ, ದೊಂಬಿ ರಾದ್ಧಾಂತಗಳೇನೆ ಇದ್ದರೂ "ಛೆ ಮಕ್ಕಳು, ಇಂದು ಜಗಳವಾಡುತ್ತಾರೆ ನಾಳೆ ಮತ್ತೆ ಒಂದಾಗುತ್ತಾರೆ" ಎಂಬ ಭಾವದಿಂದ ಸುಮ್ಮನಾಗುತ್ತಾಳೆ. ನಾವು ಮಾತ್ರ ಅಮ್ಮನ ಮನಸ್ಸಿಗೆ ತಿಳಿಯದ ರೀತಿಯಲ್ಲಿ ಮತ್ತೆ ಮತ್ತೆ ಇಲ್ಲಸಲ್ಲದ್ದನ್ನು ನಡೆಸುತ್ತಲೇ ಇರುತ್ತೇವೆ.

ನೀವೇ ವಿಚಾರಿಸಿ ನೋಡಿ--ಅಲ್ಲೆಲ್ಲೋ ಸಿಂಗಾಪುರವೋ ಅಮೇರಿಕಾವೋ ಇನ್ನೂ ಯಾವುದೋ ರಾಷ್ಟ್ರದ ಪ್ರಜೆಯೂ ನೀವಾಗಬಹುದು. ಆದರೆ ಭಾರತದ ಅನನ್ಯ ಸಂಸ್ಕೃತಿ ನಿಮಗಲ್ಲಿ ದೊರಯುವುದಿಲ್ಲ. ಹಾಗಾದರೆ ನಮ್ಮಲ್ಲಿನ ಹೆಚ್ಚುಗಾರಿಕೆಯೇನೆಂದರೆ ನಮ್ಮಲ್ಲಿಯ ವಿಭಿನ್ನ ಸಂಸ್ಕೃತಿ ಆಚಾರವಿಚಾರಗಳ ಜನರನ್ನೂ ಅಲ್ಲದೇ ಭಾರತ ಹಲವು ದೇಶಗಳ ಜನರನ್ನೂ ಮತ್ತವರ ಸಂಸ್ಕೃತಿಯನ್ನೂ ಆದರಿಸಿದೆ. ಯಾವುದೇ ಸಂಸ್ಕೃತಿ ಬಂದರೂ ತನ್ನ ಮೂಲ ಸಂಸ್ಕೃತಿಯನ್ನು ಕಳೆಯಗೊಡದೇ ಹೊಸ ಹೊಸ ಜಾಯಮಾನಗಳ ಜನರನ್ನು ಏಕೋ ಭಾವದಿಂದ ನೋಡುತ್ತಿದೆ. ’ವಸುಧೈವ ಕುಟುಂಬಕಮ್’ ಎಂಬ ಆರ್ಷೇಯ ವಾದದಿಂದ ಜಗತ್ತಿನ ಸಕಲಜನೋಪಕಾರಿಯಾಗಿ ಎಲ್ಲರಿಗೂ ಹಿತವಾಗುವ ಮಾನವ ಸಹಜ ಧರ್ಮವನ್ನು, ಬದುಕುವ ಕಲೆಯನ್ನು ತೋರಿಸುತ್ತಿದೆ.

ಹೆಚ್ಚಿನ ಆದ್ಯತೆಗಾಗಿ, ಹಣಕ್ಕಾಗಿ ನಮ್ಮಲ್ಲಿ ಎಷ್ಟೋ ಜನ ದೇಶಬಿಟ್ಟು ವಿದೇಶಗಳಲ್ಲಿ ನೆಲೆಸುತ್ತಾರೆ. ಅಲ್ಲಿ ಹಾಗಿದೆ ಇಲ್ಲಿ ಹೀಗಿದೆ ಎಂದೆಲ್ಲಾ ಇಲ್ಲಿಗೆ ಬಂದಾಗ ಹೇಳುವುದನ್ನು ಕೇಳುತ್ತೇವೆ. ಎಲ್ಲಿ ಹೇಗೇ ಇದ್ದರೂ ನಮಗೆ ನಮ್ಮ ಭಾರತ ಸಾಕು. ಅಮ್ಮ ಹಳೆಯ ಮಾಸಲು ಸೀರೆಯನ್ನುಟ್ಟ ಮಾತ್ರಕ್ಕೆ ಅವಳನ್ನು ಅಮ್ಮ ಎನ್ನಲು ಅಸಹ್ಯ ಪಡುವ ಮನೋಧರ್ಮ ನಮ್ಮದಾಗಬಾರದು. ಅಮ್ಮ ನಮಗೆ ಜನ್ಮವಿತ್ತವಳಲ್ಲವೇ? ನಮಗಿಂತ ಎಷ್ಟೋ ಹಿರಿಯಳಲ್ಲವೇ ? ಅವಳಲ್ಲಿ ಅವಳ ಸೀರೆಯನ್ನೋ ಬಟ್ಟೆಯನ್ನೋ ಒಗೆದುಕೊಳ್ಳುವ ಯಾ ಹೊಸದನ್ನು ಕೊಂಡುಕೊಳ್ಳುವ ತಾಕತ್ತು ಇರದೇ ಇರಬಹುದು. ಅದನ್ನು ಮನದಂದು ಅವಳಿಗೆ ಕಾಲಕಾಲಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಬೇಕಾದ್ದು ಮಕ್ಕಳಾದ ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ನಡೆಸಬೇಕು.

ಇನ್ನು ಹಣವನ್ನೇ ನಂಬಿ ಅದರ ಹಿಂದೆ ಬಿದ್ದು, ಕೇವಲ ತಮ್ಮ ಸ್ವಾರ್ಥದ ಬದುಕಿಗಾಗಿ, ಸ್ವೇಚ್ಛಾಚಾರಕ್ಕಾಗಿ ದೇಶದ್ರೋಹದ ಹಲವಾರು ಕೆಲಸಗಳನ್ನು ಮಾಡುವವರನ್ನು ಕಾಣುತ್ತಿದ್ದೇವೆ. ಆ ಗುಂಪಿನಲ್ಲಿ ಕೆಲವು ಭಾರತೀಯ ರಾಯಭಾರೀ ಕಚೇರಿಗಳಲ್ಲಿನ ಅಧಿಕಾರಿಗಳೂ ತೊಡಗುತ್ತಾರೆ ಎಂಬುದು ಖಂಡನೀಯ ಮತ್ತು ವಿಷಾದನೀಯ. ಇಲ್ಲೇ ಹುಟ್ಟಿ ಇಲ್ಲಿನ ಉಪ್ಪನ್ನವನ್ನೇ ಉಂಡು ಇಂದು ಪಾಕಿಗಳ ಜೊತೆ ಕೈಜೋಡಿಸಿರುವ ದಾವೂದ್, ಚೋಟಾ ರಾಜನ್, ರವಿ ಪೂಜಾರಿ ಇಂತಹವರನ್ನೆಲ್ಲಾ ರಕ್ಕಸರಸಾಲಿಗೆ ಸೇರಿಸಲು ಯಾವುದೇ ಹಿಂಜರಿಕೆ ಬೇಡ. ಇದೂ ಅಲ್ಲದೇ ದೇಶದ ಆರ್ಥಿಕ ವ್ಯವಸ್ಥೆಯನ್ನು ತಲ್ಲಣಗೊಳಿಸುವ ಹರ್ಷದ್ ಮೆಹ್ತಾ ಅಥವಾ ಸತ್ಯಂ ಸಂಸ್ಥೆಯ ಮಾಜಿ ಅಧ್ಯಕ್ಷ ರಾಮಲಿಂಗ ರಾಜು ಥರದ ವ್ಯಕ್ತಿಗಳೂ ಕೂಡ ಇಲ್ಲಿದ್ದೇ ದೇಶದ್ರೋಹವನ್ನೆಸಗಿದವರು ಎಂದರೆ ತಪ್ಪಲ್ಲ. ಇಂತಹ ಕುಖ್ಯಾತರ ಸಂತತಿ ನಶಿಸ.

ದೇಶದಲ್ಲಿ ಮದ್ಯ ಮಾನಿನಿ ಮತ್ತು ಮಾಂಸದ ಮಾರಾಟ ಸರಾಗ ನಡೆದೇ ಇದೆ. ಮಾಂಸಾಹಾರಿಗಳಿಗೆ ಮಾಂಸ ಅನಿವಾರ್ಯವಾದರೂ ಹಾಲು ಕೊಡುವ ಹಸುವನ್ನು ಮಾಂಸಕ್ಕೆ ಬಳಸುವ ಕ್ರಮ ಅತ್ಯಂತ ಖೇದಕರ. ಯಾವ ರಾಷ್ಟ್ರದಲ್ಲಿ ಮಾನಿನಿಯರಿಗೆ ಸರಿಯಾದ ರಕ್ಷಣೆ ಇರುವುದಿಲ್ಲವೋ ಅಥವಾ ಅವರನ್ನೇ ಪರೋಕ್ಷವಾಗಿ ಬಳಸಿ ಹಣದ ವ್ಯವಹಾರ ನಡೆಸುತ್ತಾರೋ ಆ ದೇಶ ಉದ್ಧಾರವಾಗಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ. ಮೊನ್ನೆ ಯಷ್ಟೇ ದಕ್ಷಿಣ ಭಾರತದ ಸ್ಫುರದ್ರೂಪೀ ತಾರೆಯೊಬ್ಬಳ ಲೈಂಗಿಕ ಹಗರಣವನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಸಿನಿಮಾ ಹಾಗೂ ರಂಗಭೂಮಿ ಕಲಾವಿದರ ಬಳಗದಲ್ಲಿ ಎಲ್ಲೋ ಮಧ್ಯ್ ಮಧ್ಯೆ ಕೆಲವರು ’ಕಾಸ್ಟಿಂಗ್ ಕೌಚ್’ ಎಂಬ ಕಾಮದಾಟವನ್ನು ನಡೆಸುತ್ತಾರೆಂಬುದು ಎಲ್ಲರಿಗೂ ತಿಳಿದಿರುವ ಅಂತರಂಗ! ಈ ವ್ಯವಸ್ಥೆಯಲ್ಲಿ ತನ್ನ ಶೀಲ ಕಳೆದುಕೊಳ್ಳುವ ಹೆಣ್ಣು ಆಮೇಲೆ ಯಾರು ಎಲ್ಲೇ ಏನೇ ಮಾಡಿದರೂ ಸಹಿಸಿಕೊಳ್ಳುವ ಮನೋಭಾವಕ್ಕೆ ಒಗ್ಗಿಕೊಳ್ಳುತ್ತಾಳೆ ಎನಿಸುತ್ತದೆ. ಕಾಲಸಂದುತ್ತಾ ಅವಕಾಶಗಳು ಕಡಿಮೆಯಾದಾಗ ಹೈಟೆಕ್ ವೇಶ್ಯಾವಾಟಿಕೆಯನ್ನು ಆರಂಭಿಸುತ್ತಾಳೆ ಎಂಬುದು ಇತ್ತೀಚೆಗೆ ಎರಡು ಮೂರು ಪ್ರಕರಣಗಳಿಂದ ಕಂಡುಬಂದ ಅಭಿಪ್ರಾಯ. ಭಾರತೀಯ ಶಾಸ್ತ್ರದಲ್ಲಿ ರಂಗನಟಿ/ನಟಿಗೆ ಪರ್ಯಾಯವಾಗಿ ಸೂಳೆ ಎಂದೇ ಕರೆದಿದ್ದಾರೆ. ಹಲವಾರು ಗಂಡುಗಳ ಸಂಪರ್ಕಕ್ಕೆ ಬರುವ ಹೆಣ್ಣು ಹಲವಾರು ಸಂದರ್ಭಗಳಲ್ಲಿ ತನ್ನತನವನ್ನು ಕಳೆದುಕೊಳ್ಳಬೇಕಾಗಿ ಬರುವುದರಿಂದ ಈ ಹೆಸರು. ಇಂದು ನಟಿಸುವುದಕ್ಕೂ ಪ್ರಾಧಾನ್ಯತೆಯಿರುವುದರಿಂದಲೂ ದೃಶ್ಯಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಹೆಣ್ಣು ಹಲವರ ಕಣ್ಮನ ತಣಿಸುವುದರಿಂದಲೂ ಆ ಹೆಣ್ಣುಗಳಿಗೆ ಎಲ್ಲಿಲ್ಲದ ಪ್ರಚಾರ ದೊರೆಯುತ್ತದೆ. ತುಂಡುಡುಗೆ ಉಟ್ಟ ನಟೀಮಣಿ ಪ್ರಾಯ ಸಲ್ಲುವವರೆಗೆ ಅದರಿಂದಲೇ ಹಲವರ ಎದೆಗೆ ಬಾಣ ಎಸೆಯುತ್ತಾಳೆ ಮತ್ತು ಅವರನ್ನು ಗೆಲ್ಲುವುದರಲ್ಲೂ ಯಶಸ್ವಿಯಾಗುತ್ತಾಳೆ!

ಒಂದು ಅಂಬೋಣದ ಪ್ರಕಾರ ಯುವ ಜನಾಂಗದಲ್ಲಿ ಈಗೀಗ ಯಾವುದೇ ಸಂಕೃತಿಯಾಧಾರಿತ ಜೀವನ ಕಂಡುಬರುತ್ತಿಲ್ಲ. ಹುಡುಗ/ಹುಡುಗಿ ಹಲವು ಸಂಪರ್ಕಗಳನ್ನು ಸಂಬಂಧಗಳನ್ನು ಇಟ್ಟುಕೊಳ್ಳುವುದು ಹಿಂದಿಯ ’ಬಿಗ್ ಬಾಸ್’ ಥರದ ರಿಯಾಲಿಟಿ ಶೋ ಗಳಲ್ಲಿ ಜಗಜ್ಜಾಹೀರುಗೊಂಡಿದೆ. ಒಂದೊಮ್ಮೆ ಅಮೇರಿಕಾದ ರೀತಿಯ ಜೀವನವೇ ನಮ್ಮದಾದರೆ ನಮ್ಮ ನಾಳೆಗಳಲ್ಲಿ ಭಾರತೀಯ ಭಾವನೆಗಳು ಇರಲು ಸಾಧ್ಯವೇ? ಇಲ್ಲಿನ ದಾಂಪತ್ಯದ ಆ ಆನ್ಯೋನ್ಯ ಭಾವ ಬರಲು ಸಾಧ್ಯವೇ? ಹುಟ್ಟುವ ಮಕ್ಕಳಿಗೆ ಅಪ್ಪಯಾರೋ ಅಮ್ಮ ಯಾರೋ ಆದರೆ ಅವರುಗಳ ಗತಿಯೇನು? ಇದೇ ಕಾರಣವಾಗಿ ನಗರದ ಬೀದಿಗಳಲ್ಲಿ ಅಲ್ಲಲ್ಲಿ ಶಿಶುಗಳನ್ನು ಎಸೆದು ಹೋಗುವುದು ಕಾಣಸಿಗುತ್ತಿದೆ. ಇಂತಹ ಕೃತ್ಯಗಳನ್ನು ನಡೆಸುವಾಗ ಅವರ ಹೃದಯ ಕೆಲಸಮಾಡುವುದಿಲ್ಲವೇ ? ಅಥವಾ ಯಾವ ಮಾನಸಿಕ ಧೈರ್ಯದಿಂದ ಅಂತಹ ಘೋರಕೃತ್ಯವೆಸಗುತ್ತಾರೆ ಎಂಬುದು ತಿಳಿಯದಾಗಿದೆ. ಅಂತೂ ಇವಕ್ಕೆಲ್ಲಾ ಬಹುಮುಖ್ಯವಾಗಿ ಮದುವೆಗೂ ಮೊದಲಿನ ಸಂಬಂಧವೇ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ.

ಹೀಗೇ ಹಲವಾರು ಸಾಮಾಜಿಕ ಜ್ವಲಂತ ಸಮಸ್ಯೆಗಳಿದ್ದರೂ ತನ್ನ ಮಕ್ಕಳ ತಪ್ಪುಗಳನ್ನೆಲ್ಲಾ ಕ್ಷಮಿಸಿ ತಾಯಿ ಭಾರತಿ ಮುನ್ನಡೆದಿದ್ದಾಳೆ;ಮುನ್ನಡೆಸಿದ್ದಾಳೆ. ಇಂದೊಮ್ಮೆ ಅವಳನ್ನು ಸ್ಮರಿಸುವುದು ಯೋಗ್ಯವೆಂಬುದು ನನ್ನ ಭಾವನೆ. ಎರಡನ್ನೂ ನಿಮ್ಮಲ್ಲಿ ನಿವೇದಿಸಿ ಕೊಂಡಿದ್ದೇನೆ. ಮತ್ತೊಮ್ಮೆ ಸಿಗುತ್ತೇನೆ, ಹಾರ್ದಿಕ ಶುಭಾಶಯಗಳು.