ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, April 21, 2011

ಓದು ಒಕ್ಕಾಲು ಬುದ್ಧಿ ಮುಕ್ಕಾಲು


ಓದು ಒಕ್ಕಾಲು ಬುದ್ಧಿ ಮುಕ್ಕಾಲು

ಚಿಕ್ಕವರಿರುವಾಗ ನಮಗೆ ಈ ನಾಣ್ನುಡಿ ಮಗ್ಗಿ ಪುಸ್ತಕದ ಪುಟವೊಂದರ ಕೆಳಭಾಗದಲ್ಲಿ ಓದಸಿಗುತ್ತಿತ್ತು. ಅದರ ಅರ್ಥಮಾತ್ರ ಖಂಡಿತಾ ಆಗಿರಲಿಲ್ಲ. ’ ಓದು ಒಕ್ಕಾಲು’ ಎಂದರೆ ಓದುವುದನ್ನು ಒಂದೇ ಕಾಲಿನಲ್ಲಿ ನಿಂತು ಮಾಡಬೇಕೇನೋ ಆಗ ’ಬುದ್ಧಿ ಮುಕ್ಕಾಲು’ ಎಂದರೆ ಬುದ್ಧಿ ಪೂರ್ತಿ ಇಲ್ಲ, ಒಟ್ಟಾರೆ ನಮಗರ್ಥವಾಗಿದ್ದು ಒಂದೇ ಕಾಲಲ್ಲಿ ನಿಂತು ಓದಿದರೆ ಬುದ್ಧಿ ಹನ್ನೆರಡಾಣೆ [ಈಗ ಆಧುನಿಕ ಕಂಗ್ಲೀಷ್‍ನಲ್ಲಿ ’ಲೂಸು’ ಅಂತೇವಲ್ಲ] ಆಗುತ್ತದೆ. ಆದರೆ ತಡವಾಗಿ ಅದಕ್ಕಿರುವ ಅರ್ಥ ಮತ್ತದರ ಮೌಲ್ಯ ಎರಡೂ ಅರ್ಥವಾಗಿ ಈಗ ನೆನೆದರೆ ನಗು ಬರುತ್ತದೆ.

ಮನುಷ್ಯ ಬೆಳೆಯಲು ಕೇವಲ ಉನ್ನತ ವ್ಯಾಸಂಗವಷ್ಟೇ ಕಾರಣವಲ್ಲ. ಓದು ಕೇವಲ ನಮ್ಮ ತಿಳುವಳಿಕೆಗೆ ಮಾತ್ರ. ಹಾಗಾದರೆ ಶಿಲಾಯುಗದ ಮಾನವನಿಂದ ಇಲ್ಲಿಯವರೆಗೆ ನಡೆದು ಬಂದ ನಮ್ಮ ಸಹಸ್ರಮಾನದ ದಿನಗಳಲ್ಲಿ ಈಗಿರುವ ವಿಶ್ವವಿದ್ಯಾಲಯಗಳು ಮತ್ತು ವಿವಿಧ ವೃತ್ತಿಪರ ವ್ಯಾಸಂಗಗಳು ಇದ್ದವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಆಗ ಸಿಗುವುದು ಸಮರ್ಪಕ ಉತ್ತರ. ಮಾನವ ದಿನಗಳೆದಂತೇ ಹಲವು ವಿದ್ಯೆಗಳನ್ನು ಕಲಿಯುತ್ತ ಬಂದ. ಆರಂಭಿಕ ದಿನಗಳಲ್ಲಿ ಕೇವಲ ಬಾಯಿಂದ ಬಾಯಿಗೆ ವರ್ಗಾವಣೆಯಾಗಬೇಕಾಗಿದ್ದ ಮಾಹಿತಿಗಳು ಎಲ್ಲರಿಗೂ ತಲುಪಲು ಕಷ್ಟವಾಗುತ್ತಿತ್ತು. ಸಂಪರ್ಕ ಕ್ರಾಂತಿ ವಿಸ್ತಾರವಾಗುತ್ತಾ ಬಂದಾಗ ತಾಡವೋಲೆಗಳಲ್ಲಿ ಬರೆಯಲು ಕಲಿತ. ನಂತರ ಕಾಗದಗಳು ಹುಟ್ಟಿಕೊಂಡವು. ಕಲಿತದ್ದನ್ನು ಹಲವರು ಬರಹರೂಪಕ್ಕಿಳಿಸಲು ಪ್ರಯತ್ನಿಸಿದರು. ವಿಶ್ವದಲ್ಲಿ ಹಲವು ಜನರಿಗೆ ಅನುಕೂಲವಾಗುವುದನ್ನು ಒತ್ತಟ್ಟಿಗೆ ಸೇರಿಸುವ ಕಲೆ ಪ್ರಚುರಗೊಂಡಿತು. ಮೂಲಭೂತ ವ್ಯಾಸಂಗಕ್ಕಾಗಿ ಪ್ರಾಥಮಿಕ, ಮಾಧ್ಯಮಿಕ ಕಲಿಕೆ ಆರಂಭವಾಯಿತು. ಸಮಾನಮನಸ್ಕ ಪ್ರಬುದ್ಧರನೇಕರು ಸೇರಿ ಹಲವು ವಿಷಯಗಳನ್ನು ಕ್ರೋಢೀಕರಿಸಿ ಅವುಗಳನ್ನು ಅಭ್ಯಸಿಸುವ ಕ್ರಮವನ್ನೂ ಮತ್ತು ಅವುಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಸಂಸ್ಥೆಗಳನ್ನೂ ಸ್ಥಾಪಿಸಿದರು. ಅವೇ ಇಂದಿನ ವಿಶ್ವವಿದ್ಯಾನಿಲಯಗಳಾಗಿವೆ. ಅಂದರೆ ಹಲವರ ಅನುಭವಗಳೇ ಹೊತ್ತಗೆಯ ರೂಪದಲ್ಲಿ ಬರೆಯಲ್ಪಟ್ಟು ವಿಷಯಗಳಾಗಿ ಸೇರ್ಪಡೆಗೊಂಡು, ಸಂಬಂಧಿತ ಕೆಲವು ವಿಷಯಗಳನ್ನು ಅಭ್ಯಾಸ ಮಾಡುವುದಕ್ಕೆ ’ಪದವಿ’ ಎಂದು ಕರೆದರು. ಪದವಿಯನ್ನು ಮುಗಿಸಿ ಇನ್ನೂ ಆಳವಾಗಿ ಅಧ್ಯಯನ ಮಾಡುವವರನ್ನು ’ಸ್ನಾತಕೋತ್ತರ ಪದವಿ’ಗಳಿಂದ ಗುರುತಿಸಲಾಯಿತು. ಇದು ಓದಿನ ಬೆಳವಣಿಗೆ.

ಮಾನವನಲ್ಲಿ ಸಹಜವಾಗಿ ಹಲವು ಚಟುವಟಿಕೆಗಳು ಇರುತ್ತವೆ. ಕಾಡಿನಲ್ಲಿದ್ದ ಮಾನವ ನಾಡನ್ನು ಕಟ್ಟಿದ್ದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅದೇ ನಾಡು ಜಾಸ್ತಿಯಾಗಿ ಕಾಡು ಕಮ್ಮಿಯಾಗುತ್ತಿರುವುದಕ್ಕೆ ಮರುಕವೂ ಆಗುತ್ತದೆ! ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಹಿಂದೆ ನುರಿತ ಮಾನವನ ಸತತ ಅಭ್ಯಾಸದ ಮಾರ್ಗವಾದ ವಿಜ್ಞಾನದ ಕೊಡುಗೆ ಇದೆ. ವಸ್ತುವಿನ ಬಗೆಗೆ ಜ್ಞಾನವನ್ನು ಗಳಿಸುವುದೇ ವಿಜ್ಞಾನ ಅಲ್ಲವೇ? ಉದಾಹರಣೆಗೆ ಈಗ ನಾನು ಬರೆಯುತ್ತಿರುವ ಲೆಕ್ಕಣಿಕೆ[ಪೆನ್ನು]-ಒಂದು ಪೆನ್ನು ತಯಾರಾಗುವಾಗ ಅದರ ಒಳಗಿನ ಬರೆಯುವ ಮಸಿ[ಇಂಕು] ಅದರ ತಾಳಿಕೆ, ಬಾಳಿಕೆ ಮತ್ತು ಹರಿಯುವಿಕೆ, ಅದನ್ನು ಶೇಖರಿಸುವ ಕೊಳವೆ. ಕೊಳವೆಯ ತುದಿಯಲ್ಲಿ ಬರೆಯುವಂತಹ ಸಲಕರಣೆ.[ನಿಬ್ಬು ಅಥವಾ ಬಾಲ್ ಪಾಯಿಂಟು] ಕೊಳವೆಯ ಹೊರಕವಚ ಮತ್ತು ಅದಕ್ಕೆ ಮೇಲೆ ಮುಚ್ಚಳ. ಮುಚ್ಚಳಕ್ಕೊಂದು ಕ್ಲಿಪ್ ಮಾದರಿಯ ಜೋಡಣೆ-ಈ ಎಲ್ಲವುಗಳಿಗೂ ಒಂದು ಸ್ಪಷ್ಟ ಆಕಾರ ಅಳತೆ--ಇವೆಲ್ಲಾ ನಮ್ಮ ವಿಜ್ಞಾನದ ಪರಿಮಾಣಗಳಿಂದ ಗೊತ್ತಾಗಿದ್ದಲ್ಲವೇ?

ಹೀಗೇ ಲೆಕ್ಕಮಾಡುವುದಕ್ಕೆ ಗಣಿತ, ಆಯ ಅಳತೆಗಳಿಗೆ ವಿಜ್ಞಾನ, ಸಾರ್ವಜನಿಕ ಸಹಜೀವನ ಕಲಿಯಲು ಸೋಶಿಯಲ್ ಸೈನ್ಸ್---ಹೀಗೆಲ್ಲಾ ಬೇರೆ ಬೇರೆ ವಿಷಯಗಳು ಪ್ರಸ್ತುತಗೊಂಡವು. ಬುದ್ಧಿ ವಿಕಸನಗೊಂಡಂತೆ ವಿಜ್ಞಾನದ ಇನ್ನೊಂದು ಮುಖ ತಂತ್ರಜ್ಞಾನ ಬೆಳೆಯಿತು. ಬದುಕಿಗಾಗಿ ಮೊಟ್ಟ ಮೊದಲು ಆರಂಭಗೊಂಡ ಮೂರು ಶಾಖೆಗಳು ಸಿವಿಲ್. ಇಲೆಕ್ರಿಕಲ್ ಮತ್ತು ಮೆಕಾನಿಕಲ್. ಕಾಲ ಸಂದಂತೆ ಮತ್ತೆ ಆವಿಷ್ಕಾರಗಳಾಗಿ ಇಲೆಕ್ಟ್ರಿಕಲ್ ನಲ್ಲಿ ಮತ್ತೆ ಭಾಗಗಳಾದವು-- ವಿದ್ಯುನ್ಮಾನ ಶಾಖೆಯ ಜನನವಾಯಿತು. ನಂತರ ಗಣಕಯಂತ್ರ ಸಂಶೋಧನೆಯಾಗಿ ಆ ಮೂಲಕ ಇನ್ನೂ ಹಲವು ಶಾಖೆಗಳು ಉದ್ಭವಿಸಲು ಗಣಕಯಂತ್ರವೇ ಕಾರಣವಾಯಿತು!ವಿಜ್ಞಾನದ ಇನ್ನೊಂದು ಮುಖವಾದ ಜೀವವಿಜ್ಞಾನದಲ್ಲಿ ರೋಗನಿವಾರಣೆ ಮತ್ತು ಚಿಕಿತ್ಸೆಗಳ ಕುರಿತಾಗಿ ಮೆಡಿಕಲ್ ಸೈನ್ಸ್ ಜನನವಾಯಿತು. ಅದು ಮುಂದೆ ಮತ್ತೆ ಆವಿಷ್ಕಾರಗೊಂಡು ಅದರಲ್ಲೇ ಹಲವು ವಿಭಾಗಗಳು ಹುಟ್ಟಿಕೊಂಡವು. ಹಿಂದಿನ ಭಾರತದಲ್ಲೂ ರಾಜರ ಕಾಲದಲ್ಲಿ ನಳಂದಾ ತಕ್ಷಶಿಲೆ ಮೊದಲಾದ ಹಲವೆಡೆಗಳಲ್ಲಿ ವಿಶ್ವವಿದ್ಯಾಲಯಗಳಿದ್ದವು ಎಂಬುದು ನಮಗೆ ಸಮಾಜವಿಜ್ಞಾನದಿಂದ-ಇತಿಹಾಸದಿಂದ ತಿಳಿದುಬಂದ ವಿಷಯ.

ಕಲಿಯುವ ವಿದ್ಯಾರ್ಥಿಗೆ ಯಾವುದನ್ನು ಆಯ್ದುಕೊಳ್ಳಲಿ ಎಂಬಷ್ಟು ರಂಗಗಳು/ವಿಷಯಗಳು ಈಗ ಲಭ್ಯವಾಗುತ್ತಿವೆ. ಆದರೆ ಕಲಿಯುವವರು ಮಾತ್ರ ಕೇವಲ ಪದವಿ/ಸ್ನಾತಕೋತ್ತರ ಪದವಿಯ ಗಳಿಕೆಗಾಗಿ ಮಾತ್ರ ಕಲಿಯುವ ಮನಸ್ಸಿನವರಾಗಿ ಆ ಯಾ ವಿಷಯಗಳಲ್ಲಿರುವ ಹುರುಳನ್ನು ಮನದಟ್ಟುಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಯಾರೋ ಕಲಿಯುತ್ತಾರೆ ಅಂತ ತಾನೂ ಅದನ್ನೇ ಕಲಿಯುವ ಅಥವಾ ಕೇವಲ ಹಣಗಳಿಕೆಯ ದುರಾಸೆಯಿಂದ ಕೇವಲ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಎರಡನ್ನೇ ಆಯ್ದುಕೊಳ್ಳುವ ಮಟ್ಟಿಗೆ ನಮ್ಮ ಜನ ತಯಾರಾದರು!-ಇದೂ ಒಂದು ವಿಕಸನವೇ ಸರಿ! ಆದರೆ ವಿಪರ್ಯಾಸ ಎನಿಸಿಕೊಳ್ಳುವ ವಿಕಸನ. ಹಿಂದೆ ಕೇವಲ ಹಣದ ಘಮಲಿನಲ್ಲಿ-ಅಮಲಿನಲ್ಲಿ ಯಾವುದನ್ನೂ ಮಾಡುತ್ತಿರಲಿಲ್ಲ; ಈಗ ಹಣವಿದ್ದವರು ಮತ್ತು ಹಣಗಳಿಕೆಯೇ ಮುಖ್ಯವಾಗುಳ್ಳವರು ಈ ಎರಡೇ ಕ್ಷೇತ್ರಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಯಾರನ್ನಾದರೂ ಕೇಳಿದರೆ " ನಮ್ಮಗ ಈ ಸರ್ತಿ ಪಿ.ಯೂ ಮುಗೀತು....ಮೆಡಿಕಲ್ ಓದಿಸ್ಬುಟ್ರೆ ಜೀವನ ಸೆಟ್ಲು " ಇಂಥದ್ದೇ ಮಾತು. ನನಗೆ ಗೊತ್ತಿರುವ ಒಬ್ಬ ಆಸಾಮಿಯ ಮಗ ಹತ್ತನೇ ತರಗತಿಯ ಪರೀಕ್ಷೆಯನ್ನು ಎಂಟೋ ಹತ್ತೋ ಸಲ ಬರೆದಿದ್ದಾನೆ, ದ್ವಿತೀಯ ಪಿಯೂಸಿ ಮುಗಿದ ತಕ್ಷಣ ಅಪ್ಪ ಯಾವ ಜಾದುಮಾಡಿದನೋ ಗೊತ್ತಿಲ್ಲ; ಖಾಸಗೀ ಮೆಡಿಕಲ್ ಕಾಲೇಜಿನಲ್ಲಿ ಓದಿ ಲಂಚಕೊಟ್ಟು ಬೇಕಾದ ರೀತಿ ಪದವಿ ಪಡೆದು ಈಗ ಸರಕಾರೀ ಆಸ್ಪತ್ರೆಯಲ್ಲಾತ ವೈದ್ಯ! ನೆಟ್ಟಗೆ ಚುಚ್ಚುಮದ್ದು ಕೊಡಲೂ ಗೊತ್ತಾಗದ ದಡ್ಡ ವ್ಯಕ್ತಿ ಯಾವರೀತಿ ಚಿಕಿತ್ಸೆ ನೀಡಬಹುದು ಅಂತೀರಿ ? --ಇದು ಇಂದಿನ ಜಗತ್ತು! ಯಾಕೆ ಇದನ್ನು ಹೇಳಿದೆನೆಂದರೆ ಇವತ್ತಿನ ನಮ್ಮ ವೃತ್ತಿಗಳಿಗೆ ಮಾಪುಗೋಲಾಗಿರುವುದು ಮೂಲಭೂತವಾಗಿ ವ್ಯಾಸಂಗದ ಪದವಿ ಪತ್ರಗಳು.

ನಮ್ಮ ಸುತ್ತಮುತ್ತಲ ಹಲವು ರಂಗಗಳಲ್ಲಿ ಹಲವು ಉತ್ಕೃಷ್ಟ ವ್ಯಕ್ತಿಗಳನ್ನು ನೋಡುತ್ತೇವೆ. ಆದರೆ ಅವರಲ್ಲಿ ಎಲ್ಲರೂ ಕೇವಲ ಪದವಿಯನ್ನು ಪಡೆದವರಲ್ಲ. ಆರ್. ಎನ್ ಶೆಟ್ಟರೇ ಇರಲಿ, ಡಾ|ರಾಜ್‍ಕುಮಾರ್ ಇರಲಿ ಕಲಾವಿದ ಬಿ,ಕೆ,ಎಸ್. ವರ್ಮಾ ಇರಲಿ ಎಲ್ಲರೂ ಅವರವರ ವೃತ್ತಿಯಲ್ಲಿ ಉನ್ನತ ಹಂತವನ್ನು ತಲುಪಿದವರು. ಅವರಿಗೆ ಪದವೀ ವ್ಯಾಸಂಗ ಬೇಕಾಗಲೇ ಇಲ್ಲ. ಅವರಲ್ಲಿನ ತುಡಿತ ಅವರುಗಳನ್ನು ಆ ಮಟ್ಟಕ್ಕೆ ಏರಿಸಿತು. ಅಂದರೆ ಪ್ರತೀ ವ್ಯಕ್ತಿಗೂ ತಾನು ಸಾಧಿಸಬೇಕೆಂಬ ಚಲವಿರಬೇಕು. ಇಷ್ಟಪಡುವ ವೃತ್ತಿಪರ ವಿಷಯದ ಕುರಿತು ಅಧ್ಯಯನ ಮಾಡಿಕೊಂಡರೆ ಅದು ಉನ್ನತಿಗೇರಲು ದಾರಿಯಾಗುತ್ತದೆ. ಉನ್ನತಿಯ ಹಿಂದೆ ಪ್ರತೀವ್ಯಕ್ತಿಯ ಅವಿರತ ಪರಿಶ್ರಮ ಅಡಗಿರುತ್ತದೆ. ಆ ಪಟ್ಟ ಕುಂತಲ್ಲೇ ಬರುವುದಿಲ್ಲ. ದೀರ್ಘಕಾಲದ ತಪಸ್ಸಿನಂತೇ ಅದನ್ನು ಮಾಡಿದಾಗ ಆ ರಂಗದಲ್ಲಿ ಯಶಸ್ಸು ಸಿಗುತ್ತದೆ.

ಆರ್.ಎನ್ ಶೆಟ್ಟರು ಚಿಕ್ಕ ಪುಟ್ಟ ಕಂತ್ರಾಟುಗಳನ್ನು ಪಡೆದು ಊರೂರು ಅಲೆಯುವಾಗ ಅವರಿಗೆ ಉಳಿದುಕೊಳ್ಳಲು ಮನೆ ಇರಲಿಲ್ಲ! ಕೆಲಸ ನಡೆಯುತ್ತಿರುವ ಪ್ರದೇಶದ ಹತ್ತಿರದಲ್ಲಿಯೇ ಯಾರದ್ದಾದರೂ ಬಾಡಿಗೆಮನೆ ಪಡೆದು ವಾಸಿಸುತ್ತಿದ್ದರು. ಕಾಲಕ್ರಮೇಣ ಅವರು ಸಿವಿಲ್ ಕನ್ಸ್‍ಟ್ರಕ್ಷನ್ ನಲ್ಲಿ ತನ್ನದೇ ಆದ ದಾರಿಯಲ್ಲಿ ಯಾವ ಎಂಜಿನೀಯರಿಗೂ ಕಮ್ಮಿ ಇರದ ರೀತಿಯಲ್ಲಿ ಜ್ಞಾನ ಪಡೆದರು-ಅನುಭವದಿಂದ. ಡಾ| ರಾಜ್ ಕುಮಾರ್ ನಾಟಕ ಕಂಪನಿಗಳಲ್ಲಿ ಕೆಲಸಮಾಡುತ್ತಿರುವಾಗ ಹೊಟ್ಟೆಗೆ ಬಟ್ಟೆಗೆ ಹಣಸಿಗುವುದು ಅವರಿಗೆ ಗೊತ್ತಿತ್ತೇ ವಿನಃ ದೊಡ್ಡ ಮೊತ್ತದ ಸಂಬಳವೇನೂ ಸಿಗುವರಂಗ ಅದಾಗಿರಲಿಲ್ಲ. ಚಿತ್ರರಂಗಕ್ಕೆ ಅನಿರೀಕ್ಷಿತವಾಗಿ ನಡೆದುಬಂದ ಅವರು ಮೊದಲಾಗಿ ತನಗೆ ಪಾತ್ರಪೋಷಣೆ ಮಾಡಲು ಬರುವುದೇ ಎಂಬುದನ್ನು ಅರಿಯತೊಡಗಿದ್ದರು. ಪೌರಾಣಿಕ ಕಥಾಭಾಗಗಳಲ್ಲಿನ ಪಾತ್ರಗಳನ್ನು ನೆನೆಯುತ್ತಾ ಅದರೊಳಗೇ ತನ್ನನ್ನು ಅಭಿನಯಿಸುವತ್ತ ತೊಡಗಿಸಿಕೊಂಡು ನಿಮಗ್ನರಾಗುತ್ತಿದ್ದರು. ’ಈ ಪಾತ್ರವನ್ನು ಹೀಗೇ ಮಾಡಬೇಕು’ ಎಂದು ಅವರಂತರಾತ್ಮ ಹೇಳುತ್ತಿತ್ತು. ಪಾತ್ರಗಳಲ್ಲಿನ ಭಾವಗಳನ್ನು ತಾನೇ ಆ ವ್ಯಕ್ತಿಯೆಂಬಂತೇ ಅನುಭವಿಸಿ ಅಭಿನಯಿಸಿದ್ದರಿಂದ ಅವರ ಆ ಕಲೆ ಜನಮೆಚ್ಚುಗೆ ಪಡೆಯಿತು; ಅವರು ಉನ್ನತಿಯನ್ನು ಪಡೆದರು.

ಚಿತ್ರಕಲಾವಿದ ಬಿ.ಎಕ್.ಎಸ್. ವರ್ಮಾ ಅವರು ಚಿಕ್ಕವರಿರುವಾಗ ಚಿತ್ರಬಿಡಿಸುವದರ ಹೊರತು ಇನ್ಯಾವ ಗೀಳನ್ನೂ ಅಂಟಿಸಿಕೊಳ್ಳಲಿಲ್ಲ. ತಂದೆ ಕೋಪದಿಂದ ಬೈದರೂ ಸಹಿಸಿಕೊಂಡು ಬೆಂಗಳೂರಿನ ಕಲಾಸಿಪಾಳ್ಯದಂತಹ ರಸ್ತೆಗಳಲ್ಲಿ ಚಿತ್ರ ಬರೆಯುವುದು, ಜನ ಅದನ್ನು ಮೆಚ್ಚುವುದು, ಅದನ್ನೇ ತಾನೂ ನೋಡುತ್ತಾ ಅಲ್ಲಿ ಫೂಟ್‍ಪಾತ್ ಮೇಲೆ ಮಲಗುವ ಕೂಲಿಜನರೊಟ್ಟಿಗೆ ಮಲಗಿಬಿಡುವುದು ಹೀಗೇ ಹಲವಾರು ವರ್ಷ ಅವರಿಗೆ ಅದೇ ಬದುಕಾಗಿತ್ತು. ತಮ್ಮೊಳಗಿನ ಆಂತರ್ಯ ಅವರಿಗೆ ಚಿತ್ರಬಿಡಿಸುವುದಕ್ಕೆ ಮಾತ್ರ ಆಸ್ಪದಕೊಡುತ್ತಿತ್ತು. ತಮ್ಮ ನೆಚ್ಚಿನ ಕಲಾವಿದನಾದ ರಾಜಾ ರವಿವರ್ಮನ ನೆನಪಿಗಾಗಿ ತಮ್ಮ ಹೆಸರಿನ ಕೊನೆಗೆ ’ವರ್ಮಾ’ ಎಂಬುದನ್ನು ಸೇರಿಸಿಕೊಂಡಿದರು. ಈಗ ಬೆರಳಾಡಿಸಿದರೂ ಬಹುಸುಂದರ ಚಿತ್ರಗಳು ಮೂಡುವಷ್ಟು ನುರಿತಕಲಾವಿದರಾಗಿ ಸಾವಿರಾರು ಕೃತಿಗಳನ್ನು ತಯಾರಿಸಿದರು. ಹಾಡುತ್ತಿರುವಾಗಲೇ ೫ ನಿಮಿಷಗಳಲ್ಲಿ ಅದಕ್ಕೆ ಪೂರಕವಾದ ಇಡೀ ಚಿತ್ರವನ್ನು ವೇದಿಕೆಯಲ್ಲೇ ರಚಿಸುವ ಸಿದ್ಧಿ ಅವರಿಗೆ ಬಂತು. ಇದು ಯಾವ ಯೂನಿವರ್ಸಿಟಿಯಲ್ಲಿ ಹೇಳಿಕೊಟ್ಟ ವಿದ್ಯೆಯಲ್ಲ!

ಹಿರಿಯಮಿತ್ರರಾದ ಸಹಸ್ರಾವಧಾನಿ ಡಾ| ಆರ್. ಗಣೇಶ್ ಹತ್ತು ವರ್ಷಗಳ ಹಿಂದೊಮ್ಮೆ ಅವರ ಮನೆಯಲ್ಲಿ ನನ್ನ ಕೈಗೊಂದು ಪುಸ್ತಕ ಕೊಟ್ಟರು. ’ಅವಧಾನ ಕಲೆ’ ಎಂದು ಬರೆದಿತ್ತು. ಅದು ಅವರ ಥೀಸಿಸ್ ಎಂಬುದು ಗೊತ್ತಾಯಿತು. ಅಳಿದು ಹೋಗುತ್ತಿದ್ದ ಭಾರತೀಯ ಅವಧಾನ ಕಲೆಯನ್ನು ಮುಂದಿನ ಪೀಳಿಗೆಗಳಿಗೆ ತಿಳಿಸುವ ಸಲುವಾಗಿ ಹಾಗಂದರೇನು ಎಂಬುದನ್ನು ಬಹುದೊಡ್ಡ ಪುಸ್ತಕರೂಪದಲ್ಲಿ ಬರೆದಿದ್ದರು. ಅದನ್ನು ಪರಿಗ್ರಹಿಸಲು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಯಾರೂ ಪಂಡಿತರಿರಲಿಲ್ಲ! ಆಗ ಹಿರಿಯ ವಿದ್ವಾಂಸರಾದ ಎನ್. ರಂಗನಾಥ ಶರ್ಮಾ ಮತ್ತು ಸಾಹಿತಿಗಳಾದ ಎಲ್.ಎಸ್. ಶೇಷಗಿರಿರಾಯರು ಸೇರಿ ಅದನ್ನು ಓದುತ್ತಾ ತಿಂಗಳಾನುಗಟ್ಟಲೆ ಸಮಯದಲ್ಲಿ ಅದನ್ನು ಒಪ್ಪಿ ವಿಶ್ವವಿದ್ಯಾನಿಲಯಕ್ಕೆ ತಿಳಿಸಿ ಗೌರವಪೂರ್ವಕವಾಗಿ ಡಾಕ್ಟರೇಟ್ ಕೊಡಮಾಡಿದರು. ಮೆಕಾನಿಕಲ್ ಎಂಜಿನೀಯರ್ ಆಗಿರುವ ಗಣೇಶ್ ಸಾಹೇಬರು ಅದನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳಲಿಲ್ಲ; ಒಂದೊಮ್ಮೆ ಹಾಗೆ ಮಾಡಿದ್ದರೆ ದೇಶ ಒಬ್ಬ ಅಪ್ರತಿಮ ಮೇಧಾವಿಯನ್ನು ಬರೇ ಆ ರಂಗಕ್ಕೆ ಮಾತ್ರ ಸೀಮಿತವಾಗಿಸುತ್ತಿತ್ತು. ಅವರಲ್ಲಿನ ತುಡಿತ ಅವರು ಒಂದೇ ಕಡೆನಿಂತು ಆ ವೃತ್ತಿಯನ್ನು ಮಾಡಬಿಡಲಿಲ್ಲ, ಅವರು ಹಲವಾರು ವ್ಯಕ್ತಿಗಳಿಗೆ ಮಾರ್ಗದರ್ಶಕರಾದರು, ಬೋಧಕರಾದರು. ಯಾವುದೇ ವಿಷಯವನ್ನು ಆಳವಾಗಿ ಇಣುಕಿ ಯಾವುದೇ ಪ್ರಶ್ನೆ ಕೇಳಿದರೂ ಅದನ್ನು ಸಬೂಬುಕೊಟ್ಟು ಮಗುಚದೇ ನೇರವಾಗಿ ಮತ್ತು ಸ್ಫುಟವಾಗಿ ಉತ್ತರಿಸಬಲ್ಲ ’ಮಾನವ ಕಂಪ್ಯೂಟರ್’ ಎಂಬ ಖ್ಯಾತಿಗಳಿಸಿದ ಅವರು ನೂರು ಜನ ಪ್ರಚ್ಛಕರಿಗೆ[ಪ್ರಶ್ನೆ-ಸಮಸ್ಯೆಗಳನ್ನು ಮುಂದಿಡುವವರು] ಒಂದೇವೇದಿಕೆಯಲ್ಲಿ ಉತ್ತರಿಸುವಾಗ ನೋಡಿದವರಿಗೆ ಇದು ಇಂದ್ರಜಾಲವೋ ಮಹೇಂದ್ರಜಾಲವೋ ಅನಿಸುವಷ್ಟು ಆಶ್ಚರ್ಯಕರ ಮತ್ತು ಸಂತೋಷಕರವಾಗಿರುತ್ತದೆ. ಪ್ರಚ್ಛಕರೂ ಕೂಡ ವಿದ್ವಾಂಸರೇ ಆಗಿದ್ದು ಸಮಸ್ಯೆಗಳು ಬಹಳ ಕ್ಲಿಷ್ಟವಾಗಿರುತ್ತವೆ. ಸಮಯದ ಸಂಕೋಲೆ ಇರುತ್ತದೆ. ಮಧ್ಯೆ ಮಧ್ಯೆ ಅವರ ಮನಸ್ಸನ್ನು ದಾರಿತಪ್ಪಿಸಲು ಅಪ್ರಸ್ತುತ ಪ್ರಸ್ತುತಿಯನ್ನು ತರುವ ವ್ಯಕ್ತಿಯಿರುತ್ತಾನೆ. ಆದರೂ ಅವರು ನಿಭಾಯಿಸುವ ಆ ಕಲೆ ಯಾವ ವಿಶ್ವವಿದ್ಯಾಲಯದಲ್ಲಿ ಎಲ್ಲಿ ಹೇಳಲ್ಪಟ್ಟಿದೆ? ದೇಶದ/ಜಗತ್ತಿನ ಹದಿನೈದು-ಹದಿನಾರು ಭಾಷೆಗಳಲ್ಲಿ ಪ್ರೌಢಿಮೆ ಪಡೆದಿರುವ ಅವರು ಶತಾಯುಷಿಯಾಗಿ ಹಲವು ಅವಧಾನಿಗಳನ್ನು ಸೃಜಿಸಲಿ ಎಂದು ಹಾರೈಸೋಣ.

ಇನ್ನು ಅನಿಲ್ ಅಗರವಾಲ್ ಸರದಿ. ಬಿಹಾರದಲ್ಲಿ ಬಡಕುಟುಂಬದಲ್ಲಿ ಜನಿಸಿದ ಅನಿಲ್ ಅವರ ತಂದೆ ಒಬ್ಬ ಹಳೇ ಪಾತ್ರೆ-ಮೆಟಲ್ ವ್ಯಾಪಾರಿಯಾಗಿದ್ದರು. ಮಗನ ಓದಿಗೆ ಅಂತ ಸೈಕಲ್ ಒಂದನ್ನು ಕೊಡಿಸಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮಗ ೧೦ ಕೀ.ಮೀ ದೂರದ ಶಾಲೆಯೊಂದಕ್ಕೆ ಸೈಕಲ್‍ನಲ್ಲಿ ತೆರಳಿ ಕಲಿತ. ಮತ್ತೆ ಕಾಲೇಜು ವ್ಯಾಸಂಗಕ್ಕೆ ಹಣವಿರಲಿಲ್ಲ, ತಂದೆ ಹೋಗಗೊಡಲೂ ಇಲ್ಲ. ಹತ್ತನೇ ತರಗತಿ ಕಲಿತ ನಂತರ ಆಯ್ದುಕೊಂಡಿದ್ದು ಅದೇ ಹಳೇ ಮೆಟಲ್ ಸ್ಕ್ರ್ಯಾಪ್ ವ್ಯಾಪಾರ. ಸ್ವಲ್ಪದಿನಗಳಲ್ಲೇ ಕೈಲಿ ಸ್ವಲ್ಪ ಹಣಕೂಡಿದಮೇಲೆ ಅಲ್ಲಿಂದ ಸೀದಾ ಬಂದದ್ದು ಮುಂಬೈಗೆ. ಯಾರೂ ಪರಿಚಿತರಿಲ್ಲ, ಗಾಡ್‍ಫಾದರ್ ಇಲ್ಲ, ಇಂಗ್ಲೀಷಂತೂ ಬರುತ್ತಲೇ ಇರಲಿಲ್ಲ. ಮುಂಬೈಗೆ ಬಂದಿಳಿದ ಬಾಲಕ ಅಲ್ಲಿಯೂ ಅದೇ ಹಳೇ ಮೆಟಲ್ ಸ್ಕ್ರ್ಯಾಪ್ ವ್ಯಾಪಾರ ಮುಂದುವರಿಸಿ ಕೆಲವಾರು ವರ್ಷಗಳಲ್ಲಿ ಹಣಗಳಿಸುತ್ತಾ ಹೋದ. ನಂತರ ತಾನು ಮಾರುತ್ತಿದ್ದ ಮೆಟಲ್‍ಗಳ ಬಗ್ಗೆ ತಿಳಿದುಕೊಂಡ. ಸೊರಗುತ್ತಿದ್ದ ಕೆಲವು ಚಿಕ್ಕ ಮೆಟಲ್ ಕಂಪನಿಗಳನ್ನು ಕೊಂಡುಕೊಂಡ. ದಂಧೆ ಬೆಳೆಯಿತು. ಮತ್ತಷ್ಟು ದೊಡ್ಡ ಮೆಟಲ್ ಕಂಪನಿಗಳು ಅನಿಲ್ ತೆಕ್ಕೆಗೆ ಬಂದವು. ಕೆಲವು ಅದಿರು ಗಣಿಗಳೂ ದೊರೆತವು. ಅನಿಲ್ ಬೆಳೆಯುತ್ತಲೇ ನಡೆದ. ಭಾರತದಲ್ಲಿ ’ಲೈಸೆನ್ಸ್’ ಸಲುವಾಗಿ ಸ್ವಲ್ಪ ಬೇಸರಗೊಂಡ ಆತ ಲಂಡನ್‍ಗೆ ತೆರಳಿದ. ಅಲ್ಲಿ ಯಾವುದೋ ಪತ್ರಿಕೆಯ ಮೂಲಕ ಬ್ರ್ಯಾನ್ ಗಿಲ್ಬರ್ಟ್ ಎಂಬಾತನ ಪರಿಚಯವಾಯಿತು. ಮೆಟಲ್ ವಿಷಯಮಾತನಾಡುತ್ತಾ ತನ್ನ ಸೈಕಲ್ ಪ್ರಿಯತೆಯನ್ನೂ ಅನಿಲ್ ಗಿಲ್ಬರ್ಟ್‍ಗೆ ಹೇಳಿದ. ಸ್ವಭಾವತಃ ಸೈಕಲ್ ಪ್ರೇಮಿಯಾಗಿದ್ದ ಗಿಲ್ಬರ್ಟ್ ಅನಿಲ್‍ಗೆ ಸನೇಹಿತನಾಗಿಬಿಟ್ಟ ಮಾತ್ರವಲ್ಲ ಲಂಡನ್ ಮೆಟಲ್ ಉದ್ಯಮಿಗಳ ಜೊತೆಗೆ ಗಿಲ್ಬರ್ಟ್ ಚೆನ್ನಾಗಿ ಒಡನಾಟ ಇಟ್ಟುಕೊಂಡವನಾಗಿದ್ದ. ಆತ ಅನಿಲ್‍ಗೆ ಲಂಡನ್‍ನ ಒಳ್ಳೊಳ್ಳೆಯ ಕಂಪನಿಗಳ ಸಂಪರ್ಕವನ್ನು ಕಲ್ಪಿಸಿದ. ಅಲ್ಲಿಂದ ಅನಿಲ್ ಗ್ರಹಗತಿಯೇ ಬದಲಾಗಿ ಹೋಯಿತು. ಅನಿಲ್ ಬಿಲಿಯನೈರ್ ಆದ; ಭಾರತದಲ್ಲಿ ಧೀರೂಭಾಯ್ ಅಂಬಾನಿ ಮತ್ತು ಲಕ್ಷ್ಮಿ ಮಿತ್ತಲ್ ಅವರನ್ನೂ ಹಿಂದಿಕ್ಕಿ ತಾನೇ ಶ್ರೀಮಂತ ಸ್ಥಾನಕ್ಕೆ ಏರಿದ್ದಾರೆ ಅನಿಲ್. ಒಂದುಕಾಲಕ್ಕೆ ಸಹಪಾಠಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ರಾಜಕರಣದಲ್ಲಿದ್ದರೂ ಕಷ್ಟದಲ್ಲಿದ್ದಾಗಲೂ ಅವರ ಸಹಾಯ ಅಪೇಕ್ಷಿಸಿರಲಿಲ್ಲ ಅನಿಲ್. ಈಗ ಎರಡು ದೊಡ್ಡ ಆಸ್ಪತ್ರೆಗಳನ್ನು ಧರ್ಮಾರ್ಥ ನಿರ್ಮಿಸಿದ್ದಾನೆ, ಇಸ್ಕಾನ್ ದೇವಾಲಯ ನಿರ್ಮಿಸಿದ್ದಾನೆ, ಸುಮಾರು ೫ ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ವ್ಯವಸ್ಥೆ ಕಲ್ಪಿಸಿದ್ದಾನೆ. ಗಣಿಗಾರಿಕೆಯ ವಿರುದ್ಧ ಜನ ಸಿಡಿದೇಳದಿರಲಿ ಎಂಬ ಕಾರಣಕ್ಕೆ ಕಣ್ಣೊರೆಸುವ ತಂತ್ರ ಇದೆಂದು ಕೆಲವರು ಹೇಳಿದರೂ ಹಳ್ಳಿಯ ಹೈದನೊಬ್ಬ ಲಂಡನ್ ತಲುಪಿ ಅಲ್ಲೂ ಸೈ ಎನ್ನಿಸಿಕೊಂಡು ಜಾಗತಿಕ ಮಟ್ಟದಲ್ಲಿ ಬೆಳೆಯುವಾಗ ಅವನ ವಿದ್ಯಾರ್ಹತೆ ಅಡ್ಡಿಬರಲಿಲ್ಲ. ಈ ವ್ಯವಹಾರ ಚಾತುರ್ಯವನ್ನು ಯಾರು ಆತನಿಗೆ ಕಲಿಸಿದರು?

ಬೆಳೆಯಬೇಕೇ ? ತತ್ವ ಅರಿಯಬೇಕು. ನಾವು ಮಾಡುವ ವೃತ್ತಿಯಲ್ಲಿ ನೈಪುಣ್ಯತೆ ಗಳಿಸಬೇಕು. ಸತತ ಪರಿಶ್ರಮ ಬೇಕು. ನಿರಂತರ ಹೊಸ ಹೊಸ ಉತ್ತಮ ವಿಚಾರಗಳನ್ನು ಬೇರೆಯವರಿಂದ ಅರಿಯುವ ಸ್ವಭಾವವಿರಬೇಕು. ವಿನಯ-ವಿಧೇಯತೆ ಇರಲೇಬೇಕು. ವೃತ್ತಿ ಪರಿಪೂರ್ಣತೆಯೆಡೆಗೆ ಸದಾ ಅಡಿಯಿಡುವ ಆಸಕ್ತಿಯಿರಬೇಕು. ಮಾಡಿದ ಕೆಲಸ ನಮಗೂ ಸಮಾಜಕ್ಕೂ ದೇವರಿಗೂ ತೃಪ್ತಿತರುವಂಥದಾಗಿರಬೇಕೆಂಬ ಅನಿಸಿಕೆಯಿರಬೇಕು. ಅಂದಮಾತ್ರಕ್ಕೆ ಉನ್ನತ ವ್ಯಾಸಂಗ ಬೇಡವೆಂದಲ್ಲ, ಕಲಿತ ಆ ವಿದ್ಯೆಯೂ ಕಾಲು ಭಾಗವಷ್ಟೇ ಎಂದುಕೊಂಡು ಮುಕ್ಕಾಲುಭಾಗ ನಮ್ಮ ಮುಂದಿನ ಸಾಧನೆಗಳಲ್ಲಿ ಸಾಬೀತುಪಡಿಸಬೇಕು. ದೇವರಲ್ಲಿ ಅದುಕೊಡು ಇದುಕೊಡು ಎಂದು ಬೇಡುವ ಬದಲು ಬುದ್ಧಿಗೆ ಒಳ್ಳೆಯ ಪ್ರೇರೇಪಣೆ ಕೊಡು ಎನ್ನುವ ಪ್ರಾರ್ಥನೆಯಿರಬೇಕು. ಆಗಮಾತ್ರ ’ಓದು ಒಕ್ಕಾಲು ಬುದ್ಧಿ ಮುಕ್ಕಾಲು’ ಎಂದರೇನೆಂದು ಅರ್ಥವಾದೀತು.

Friday, April 15, 2011

ಹನಿ ಹನಿ ನೀರ ಹನಿಯಾ ಸಿಂಚನಾ.......


ಹನಿ ಹನಿ ನೀರ ಹನಿಯಾ ಸಿಂಚನಾ.......

ಇವತ್ತು ಮತ್ತೇನೂ ಬರೆಯಲಾರದ ಕೆಲಸದೊತ್ತಡ. ಅದಕ್ಕೇ ಬಹಳದಿನಗಳಿಂದ ಪೆಂಡಿಂಗ್ ಇದ್ದ ನಮ್ಮ ಕಂಗ್ಲೀಷ್ ಹನಿಗವನದ ಡುಂಡಿರಾಜರ ಹನಿಗವನವೊಂದನ್ನು ಬೇರೇ ಬೇರೇ ವ್ಯಕ್ತಿಗಳಿಗೆ ಅಳವಡಿಸಿ ಸ್ವಲ್ಪ ಮಜಾ ತಗೊಳ್ಳೋಣ ಬನ್ನಿ -

ಕಾಮುಕ ಶಿಕ್ಷಕನಿಗೆ ಕೊಟ್ಟಾಗ ಅದು ಮಾರ್ಪಾಟಾಗಿದ್ದು ಹೀಗೆ:

ಕ್ಲಾಸಿನಲ್ಲಿ ಸಿಕ್ಕಳು
ಪಾಠಕೇಳಿ ನಕ್ಕಳು
ಏನೇನೋ ಅಂತಾವೆ ಮಾಧ್ಯಮದ ನನ್ಮಕ್ಕಳು !


ಹುಣಿಸೆ ಮುಪ್ಪಾದರೂ ಹುಳಿ ಮುಪ್ಪಲ್ಲ ಅಂತಾರಲ್ಲ ಅದ್ಕೇ ನೋಡೋಣ ಅಂತ ಎಮ್. ಎಫ್. ಹುಸೇನ್ ಎಂಬ ಹುಚ್ಚುಕಲಾವಿದನಿಗೆ ಕೊಟ್ಟಾಗ :

ಕುಂಚಕೆಂದು ಸಿಕ್ಕಳು
ಕೊಂಚ ಬಿಚ್ಚಿ ನಿಂತಳು
ಮಂಚನೆನೆದು ಬಾ ಎನ್ನಲು ಮಿಂಚಿ ಮಾಯವಾದಳು !


ದಾರಿಯಲ್ಲಿ ಸಿಕ್ಕ ಕಂಜೂಸಿ ಅಂಗಡಿಯಾತನಿಗೆ ಕೇಳಿದಾಗ :

ಮೊನ್ನೆ ತಾನೇ ಸಿಕ್ಕಳು
ಎರಡು ಮೂರು ಮಕ್ಕಳು
ಸಾವಿರ್ ರೂಪಾಯ್ ಸಾಲ ಪಡೆದು ನಂಗೇ ಕೈಕೊಟ್ಟಳು !


ನಿಂತಿದ್ದ ಕ್ಯಾಬ್ ಡ್ರೈವರ್ ಹತ್ತಿರ ಕೇಳಿದಾಗ :

ಎಂಥಾ ಫಿಗರು ಸಿಕ್ಕಳು !
ಕುಂತು ನೋಡಿ ನಕ್ಕಳು
ನಿಂತಾಗ ಲೋ ಜೀನ್ಸಗೆ ಕಾಣಿಸ್ತದೆ ಹೊಕ್ಕಳು !


ಟೆಂಟಿನ ಹುಡುಗನ ವ್ಯವಹಾರ ನೋಡಿ :

ಟೆಂಟಿನಲ್ಲಿ ಸಿಕ್ಕಳು
ಸೊಂಟ ಕುಣಿಸಿ ನಕ್ಕಳು
ನೆಂಟಸ್ತಿಕೆಮಾಡೋಕ್ಮುಂಚೆಕಟ್ಟು ತಾಳಿಎಂದಳು


ಪಂಕ್ಚರ್ ಶಾಪ್ ಹುಡುಗನ ಅಹವಾಲು :

ಪಂಕ್ಚರ್ ಹಾಕ್ವಾಗ್ ಸಿಕ್ಕಳು
ಬಾಗಿ ನಿಂತು ನಕ್ಕಳು
೨೦ರ ನೋಟು ಕೊಟ್ಟು ಥ್ಯಾಂಕ್ಸ್ ಎಂದುಬಿಟ್ಟಳು


[ಅಹಾಹಾಹಾ ಎಂಥೆಂಥಹಾ ಅತಿರಥರಯ್ಯ ನಮ್ಮ ಮೌಲ್ಯಯುತ ಶೈಕ್ಷಣಿಕ ರಂಗದಲ್ಲಿ, ದಿನಕ್ಕೊಂದು ಹೊಸ ವಾರ್ತೆ! ಇದಕ್ಕೆಲ್ಲಾಕಾರಣ ಅಪಾತ್ರರಿಗೆ ಕೇವಲ ವಿದ್ಯಾರ್ಹತೆ ಅವಲಂಬಿಸಿ ಸ್ಥಾನ ಕೊಟ್ಟಿದ್ದು ಅನಿಸುವುದಿಲ್ಲವೇ?] ಯಲಹಂಕ ಬಿ.. ತಿಮ್ಮೇಗೌಡನಕಥೆ :

ಬೆಳ್ಳಬೆಳ್ಳಗಿದ್ದಳು
ವಿಧವೆಯೆಂದು ಹೇಳ್ದಳು
ಒಳ್ಳೆದಾಯ್ತು ಬಾಎಂದರೆ ಹೋಗಿ ದೂರು ಕೊಟ್ಟಳು !


ನಿಮ್ಮೆಲ್ಲರಗೌರವಕ್ಕೆ ಅದಾಗಲೇ ಪಾತ್ರನಾದ ಬಿಡದಿ ನಿತ್ಯಾನಂದ ಉವಾಚ :

ರಂಜಿತಾ ಇಲ್ಲಿದ್ದಳು
ಅಂಜುತಲೇ ನಕ್ಕಳು
ನಂಜಿಲ್ಲದೆಸೇವೆ’ ’ಮುಕ್ತವಾಗಿ’ ನಡೆಸಿಕೊಟ್ಟಳು !


ಬ್ರಾಡ್ ಮೈಂಡೆಡ್ಎನಿಸಿಕೊಂಡ ಬಿ.ಪಿ. ದವರಿಗೆ :

ಬಿ.ಪಿ. ದಲ್ಲಿ ಸಿಕ್ಕಳು
ಒಪಿನಿಯನ್ನು ಕೊಟ್ಟಳು
ಅಪರೂಪಕ್ಕೊಮ್ಮೆಅದಕೆಅನುವುಮಾಡಿಕೊಟ್ಟಳು.


ನೆಟ್ಟಿನ ಮಹಿಮೆ :

ನೆಟ್ಟಿನಲ್ಲಿ ಸಿಕ್ಕಳು
ಭೆಟ್ಟಿಯಾಗುತಿದ್ದಳು
ಹೊಟ್ಟೆಬರಿಸಿ ಬಿಟ್ಟಮೇಲೆ ಇನ್ನೊಬ್ಬಳು ಸಿಕ್ಕಳು !


ಮತ್ತೆ ಸಿಗೋಣ ಬಾಯ್ ಬಾಯ್ !!!

Thursday, April 14, 2011

ಗಾಲಿ ಉರುಳಿದಂತೇ ಕಾಡಿನ ದಾರಿ ಹೊರಳಿದಂತೇ .......


ಗಾಲಿ ಉರುಳಿದಂತೇ ಕಾಡಿನ ದಾರಿ ಹೊರಳಿದಂತೇ.....

ಒಂದಲ್ಲಾ ಒಂದೂರಿನಲ್ಲಿ ಬಡ ಬ್ರಾಹ್ಮಣನೊಬ್ಬ ಯಾರದೋ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದ. ಅಲ್ಲಿ ಉಂಡೆದ್ದು ಮನಗೆ ಹೊರಟ ಆತನಿಗೆ ಮನೆಯಲ್ಲಿರುವ ಇತರರಿಗೆ ಕೊಡಲು ಸ್ವಲ್ಪ ಸುಟ್ಟೇವನ್ನು ಕಟ್ಟಿಕೊಟ್ಟರು. ಅದನ್ನು ತೆಗೆದುಕೊಂಡ ಆತ ಕಾಡಿನ ದಾರಿಯಲ್ಲಿ ಬರುತ್ತಿರುವಾಗ ಘೋರವಾದ ದನಿ ಕೇಳಿ ಬೆಚ್ಚಿಬಿದ್ದ. ನೋಡುತ್ತಾನೆ - ಪರ್ವತದಂತಹ ರಾಕ್ಷಸ. ...ಇಷ್ಟನ್ನ ಕೇಳುತ್ತಿರುವಾಗಲೇ ಬಾಲಕರಾದ ನಮ್ಮ ಪ್ರಸಾದ ಒಣಗಿಹೋದದ್ದಿದೆ.

ನಮ್ಮನೆಯಲ್ಲಂತೂ ಮಾಳಿಗೆಯಿತ್ತು. ಅದಕ್ಕೊಂದು ಏಣಿಯಿತ್ತು ಈಗಲೂ ಇದೆ. ಹುಲಿಕಥೆಯಲ್ಲಿ ಏಣಿಯ ಸುದ್ದಿ ಬರುತ್ತದೆ. ಅದು ಉದ್ದಿನ ದೋಸೆ ಕಥೆ. ಗಂಡಾ ಹೆಂಡ್ತೀ ಇಬ್ಬರೂ ಬಡವರಾಗಿದ್ದರು. ಅವರಿಗೆ ದೋಸೆ ತಿನ್ನುವ ಆಸೆಯಾಯಿತು. ಅವರ ಹತ್ತಿರ ದುಡ್ಡಿರಲಿಲ್ಲ. ಸಾಮಾನು ತರಬೇಕಲ್ಲ ? ಹೀಗಾಗಿ ಗಂಡ ಮೈಗೆಲ್ಲಾ ಎಣ್ಣೆ ಬಳಿದುಕೊಂಡು ಶೆಟ್ಟರ ಅಂಗಡಿಯ ನೆಲದಲ್ಲಿ ಸ್ವಲ್ಪ ಹೊರಳಾಡಿ ಬಂದ. ಅಲ್ಲಿ ಮಾರಾಟಮಾಡುವಾಗ ಎಲ್ಲಾ ಅಲ್ಲಿ-ಇಲ್ಲಿ ಚೆಲ್ಲಿರ್ತದಲ್ಲ ? ಅದೆಲ್ಲಾ ಮೈಗೆ ಅಂಟಿತ್ತು. ಮೈಗೆ ಅಂಟಿದ್ದ ಉದ್ದು ಅಕ್ಕಿಗಳನ್ನು ಗಂಡಾ ಹೆಂಡ್ತಿ ಒಟ್ಟುಮಾಡಿದರು. ಹೀಗೇ ಒಂದಷ್ಟು ದಿನ ಮಾಡಿದಮೇಲೆ ದೋಸೆಗೆ ಸಾಕಾಗುವಷ್ಟು ಆಯ್ತು. ಒಲೆಗೆ ಸೌದೆ ಬೇಕಲ್ಲ. ಗಂಡ ಸೌದೆ ತರಲು ಕಾಡಿಗೆ ಹೋದ. ಕಾಡಿನಲ್ಲಿ ಒಣಗಿದ ಸೌದೆ ಕಡಿಯುತ್ತಿರುವಾಗ ದೂರದಲ್ಲಿ ಏನೋ ಕೂಗುವುದು ಕೇಳಿ ಬೆಚ್ಚಿಬಿದ್ದ. ನೋಡುತ್ತಾನೆ ಅದು ಹುಲ್ಯಣ್ಣ! ಹುಲ್ಯಣ್ಣ ಹತ್ತಿರ ಬಂದೇ ಬಿಟ್ಟಿತು. ಹೇಗೂ ತನ್ನನ್ನು ತಿಂದುಹಾಕುತ್ತದೆ ಎಂದು ತಿಳಿದವ್ನೇ ಹುಲ್ಯಣ್ಣನಿಗೆ ಕೈಮುಗಿದು ಪ್ರಾರ್ಥನೆಮಾಡ್ದ " ಹುಲ್ಯಣ್ಣಾ ಹುಲ್ಯಣ್ಣಾ ನನ್ ತಿನ್ಬೇಡ ನಿಂಗೆ ಉದ್ದಿನ ದೋಸೆ ಕೊಡ್ತೆ "

" ಯಾವಾಗ ಬರಲಿ ? " ಹುಲಿ ಪ್ರಶ್ನಿಸಿತು. " ನಾನು ಮನೆಗೆ ಹೋಗಿ ದೋಸೆ ಮಾಡಿದಮೇಲೆ ಜೋರಾಗಿ ಕೂ [ನಮ್ಮಲ್ಲಿನ ವಿಶಿಷ್ಟವಾದ ಕರೆಯುವ/ಮಾರುತ್ತರ ನೀಡುವ ಸಾಂಕೇತಿಕ ಕೂಗು]ಹಾಕ್ತೇನೆ ಆಗ ಬಾ " ಎಂದ. ಶರ್ತಕ್ಕೆ ಹುಲ್ಯಣ್ಣ ಒಪ್ಪಿತು. ಜೀವ ಕೈಲಿ ಹಿಡ್ಕಂಡು ಮನೆಗೆ ಬಂದವ್ನೇ ಹೆಂಡ್ತಿಗೆ ನಡ್ದ ಸಂಗ್ತಿ ಎಲ್ಲಾ ಹೇಳ್ದ. ಬೇಗ ದೋಸೆ ಮಾಡು, ನಾವು ತಿಂದು ಮುಗಿಸಿ ಅಟ್ಟ ಹತ್ತಿ ಕೂತು ಹುಲ್ಯಣ್ಣಂಗೆ ಕೂ ಹಾಕಬೇಕು ಅಂದ. ಗಂಡಾ ಹೆಂಡ್ತೀ ಇಬ್ರೂ ಸೇರಿ ಬೇಗ ದೋಸೆ ಮಾಡಿ ತಿಂದರು. ಮೊದಲೇ ಹಿಟ್ಟು ಕಮ್ಮಿ ಇದ್ದು ಅವರಿಬ್ರಿಗೇ ಜಾಸ್ತಿ ದೋಸೆ ಇರ್ಲಿಲ್ಲ ಇನ್ನು ಹುಲ್ಯಣ್ಣಂಗೆ ಕೊಡೂದ್ ಹೆಂಗೆ ? ಹೆದರ್ತಾ ಹೆದರ್ತಾ ಇಬ್ರೂ ಅಟ್ಟ ಹತ್ತಿದರು. ಹುಲ್ಯಣ್ಣಂಗೆ ಕೂ ಹಾಕದಿದ್ರೆ ಅದು ಯಾವಗ್ಲಾದ್ರೂ ಸಿಟ್ಟಿನಿಂದ ಬಂದ್ರೆ ಕಷ್ಟ. ಅದ್ಕೇ ಕೂ ಹಾಕ್ಲೇ ಬೇಕಾಗಿತ್ತು. ಗಂಡ ಒಂದ್ ಉಪಾಯ ಮಾಡ್ದ. ಅಟ್ಟದ ಏಣಿ ಮೆಟ್ಲಿಗೆಲ್ಲಾ ಎಣ್ಣೆ ಹಚ್ಚಿಟ್ಟ. ಇಬ್ರೂ ಅಟ್ಟ ಹತ್ತಾದ್ ಮೇಲೆ ಕೂ ಹಾಕ್ದ.

ಹುಲ್ಯಣ್ಣ ದಸೋಬುಸೋ ಶ್ವಾಸ ತೆಗೀತಾ ಓಡೋಡ್ ಬಂತು. ಬಂದದ್ದೇ ಇಡೀ ಮನೇಲೆಲ್ಲಾ ಹುಡಕ್ತು. ಯಾರೂ ಕಾಣ್ಲೇ ಇಲ್ಲ. ಜೋರಾಗಿ ಕೂಗ್ತು. ಅಟ್ಟದ ಏಣಿ ಹತ್ಲಿಕ್ಕೆ ಬಂತು. ಒಂದ್ ಹರೆ [ಮೆಟ್ಟಿಲು] ಹತ್ತತು ಜಾರ್ಜಾರ್ ಬಿತ್ತು. ಎರಡ್ ಹರೆ ಹತ್ತತು ಜಾರ್ಜಾರ್ ಬಿತ್ತು. ಮೂರ್ ಹರೆ ಹತ್ತತು ಜಾರ್ಜಾರ್ ಬಿತ್ತು. ಏನ್ಮಾಡ್ವ ಹೇಳಿ ಯೋಚ್ನೇ ಮಾಡ್ತಾ ಇತ್ತು. ಅಟ್ಟದ ಮೇಲೆ ಹಳೇಕಾಲದ ತಾಮ್ರದ ದೊಡ್ಡ ದಳ್ಳೆ ಇತ್ತು. ಅದರಲ್ಲಿ ಗಂಡಾ ಹೆಂಡ್ತಿ ಹೆದರ್ತಾ ಕೂತಿದ್ರು. ಹುಲ್ಯಣ್ಣ ಕೂಗಿದ್ದೇ ಕೂಗಿದ್ದು ಗಂಡ್ನಿಗೆ ಪ್ರಾಣವೇ ಹೋದಷ್ಟು ಹೆದ್ರಿಕೆ ಆಯ್ತು. ಏಣಿ ಹತ್ತಿ ಅಟ್ಟಕ್ಕೆ ಬಂದ್ರೆ ನಮ್ಗತಿ ಏನು ಎಂಬ ಚಿಂತೆ ಆಯ್ತು. ಅದೇ ಸಮಯಕ್ಕೆ ಸರಿಯಾಗಿ ಅವಂಗೆ ಹೊಟ್ಟೇಲಿ ವಾಯು ಪ್ರಕೋಪ ಶುರುವಾಯ್ತು. ಹೆಂಡ್ತೀ ಹತ್ರ " ವಾಯು ತೊಂದ್ರೆ" ಅಂದ. " ಹೇಗೂ ಹೋಗೂದ್ ಹೋಗೂದೇ ಬಿಟ್ಬುಡಿ " ಅಂದ್ಳು. ಗಂಡ ಬಿಟ್ಟ ಅಬ್ಬರಕ್ಕೆ ವಾಯು ಶಬ್ದ ತಾಮ್ರದ ಪಾತ್ರೆಯೊಳಗೇ ಅತೀ ದೊಡ್ದಾಗಿ ಬಂದಿದ್ರಿಂದ ಅಟ್ಟದ ಕೆಳಗೆ ನಿಂತ ಹುಲ್ಯಣ್ಣಂಗೆ ವಿಚಿತ್ರವಾಗಿ ಕೇಳಿ ಹೆದ್ರಿಕೆಯಾಗಿ ಒಂದೇ ಉಸ್ರಿಗೆ ಅದು ಓಡಿ ಪರಾರಿ [ಹೋಯ್ತು]!

ಕಥೆಯ ಅಂತ್ಯಕೇಳಿ ನಗುಬಂದರೂ ಈ ಕಥೆ ಕೇಳಿದ ಕೆಲವಾರು ದಿನ ಏಣಿ ನೆನಪಾದಾಗೆಲ್ಲಾ ಹುಲ್ಯಣ್ಣನ ನೆನಪಾಗಿ ಬಹಳ ತ್ರಾಸಾಗ್ತಾ ಇತ್ತು. ಅದೊಂದು ಹೇಳಲಾಗದ ಒಳಗಿನ ಭಯ! ರಾತ್ರಿಯಾದರೆ ಸಾಕು ಹುಲ್ಯಣ್ಣನ ನೆನಪು ನಮ್ಮನ್ನು ಹುರಿದು ಮುಕ್ಕುತ್ತಿತ್ತು. ಎಲ್ಲಾದರೂ ನಾವು ಮಲಗಿರುವಾಗ ಬಂದುಬಿಟ್ಟರೆ. ಪುಣ್ಯಕ್ಕೆ ನಾವು ಬರೇ ಬಣ್ಣದ ಚಿತ್ರಗಳಲ್ಲಿ ಮಾತ್ರ ಹುಲ್ಯಣ್ಣನನ್ನು ನೋಡಿದ್ದಿತ್ತು. ಇವತ್ತಿನಂತೇ ಟಿವಿ ಗೀವಿ ಇರ್ಲಿಲ್ಲ ಹೀಗಾಗಿ ಬಚಾವು! ಒಕ್ಕಣ್ಣಿನ ರಾಕ್ಷಸನ ಕಥೆ, ಗೋಕರ್ಣಜ್ಜಿ ಕಥೆ, ಗುಬ್ಬಿ ನೆಂಟರೂಟದ ಕಥೆ... ಒಂದೋ ಎರಡೋ ತರಾವರಿ ಕಥೆಗಳು. ಅದ್ರಲ್ಲಂತೂ ಕಥೆ ಕೇಳಲು ನನ್ನಷ್ಟು ಪೀಡಿಸುತ್ತಿದ್ದ ಮಕ್ಕಳು ಬೇರಾರೂ ಇರ್ಲಿಲ್ವೇನೋ ಅಂದ್ಕೋತೀನಿ. ಇದೆಲ್ಲದರ ಜೊತೆಗೆ ಹಿರಿಯರ ಕೃಪೆಯಿಂದ ಆಗಾಗ ’ಚಂದಮಾಮ’ ಸಿಗುತ್ತಿತ್ತು. ಚಂದಮಾಮ ಬಂದ ದಿನ ಹುಲಿ ತಾನು ಹಿಡಿದ ಜಿಂಕೆಯನ್ನು ಎತ್ತಿಕೊಂಡು ಬೇರಾರಿಗೂ ಕೊಡದೇ ಮರವೇರಿ ಕುಳಿತು ತಿನ್ನುವಹಾಗೇ ಆ ದಿನಪೂರ್ತಿ ಅದು ನನಗೇ ಸಿಗಬೇಕು ! ನಾನು ಓದಿ ಹೊಟ್ಟೆ ತುಂಬಿದಮೇಲೆ ಬಾಕಿ ಜನ್ರಿಗೆ. ಕಥೆಯ ಮೇಲಿನ ಕಳಕಳಿ ನೋಡಿ ಚಿಕ್ಕಪ್ಪಂದಿರು ಆಗಾಗ ಪ್ರೀತಿಯಿಂದ ’ಅಮರಚಿತ್ರ ಕಥೆ’ ತಂದುಕೊಡುತ್ತಿದ್ದರು. ಅದರಲ್ಲಿ ರಾಮಾಯಣ ಮಹಾಭಾರತಗಳ ಕಥೆಗಳನ್ನು ದಿ| ಶಿವರಾಮ ಕಾರಂತರು ಅನುವಾದಿಸಿ ಬರೆಯುತ್ತಿದ್ದರು. ಸಚಿತ್ರಕಥೆಗಳಾದುದರಿಂದ ಅವುಗಳಲ್ಲಿನ ಭೀಮ, ಧುರ್ಯೋಧನ, ಶಕುನಿ ರಾಮ, ಲಕ್ಷ್ಮಣ ಮುಂತಾದವರ ಚಿತ್ರಗಳನ್ನು ನೋಡುತ್ತಾ ನೋಡುತ್ತಾ ಯಾವಯಾವ ಕೋನದಲ್ಲಿ ಅವರು ಹೇಗೆ ಕಾಣುತ್ತಿದ್ದರು ಎಂದು ಮನದಟ್ಟಾಗುವವರೆಗೂ ಓದಿ ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ಹಲವು ಪುಸ್ತಕಗಳು ಒಟ್ಟಿಗೇ ಸಿಕ್ಕಾಗ ಎಲ್ಲವನ್ನೂ ಗುಪ್ಪೆಹಾಕಿಕೊಂಡು ಓದುವ ಹೆಬ್ಬಾಶೆ. ಅದಕ್ಕೇ ಮಿಕ್ಕವರೆಲ್ಲಾ ನನ್ನ ’ಅಭಲಾಷೆ [ನಮ್ಮಲ್ಲಿ ಅತಿ ಆಸೆಗೆ ಈ ಪದ ಬಳಸುವುದಿದೆ] ಪೋರ’ ಎನ್ನುತ್ತಿದ್ದರು.

ರಜಾದಿನಗಳಲ್ಲಿ ನಾವು ಆಡಿದ ಆಟಗಳಿಗೇನೂ ಕಮ್ಮಿ ಇಲ್ಲ. ಮಾವಿನ ಮರಕ್ಕೆ ಕಲ್ಲೆಸೆದು ಹಣ್ಣು ಬೀಳುವವರೆಗೂ ಬಿಡುತ್ತಿರಲಿಲ್ಲ. ರಟ್ಟೆನೋವಾದರೂ ಬೇಸರವಿರಲಿಲ್ಲ; ಹಣ್ಣೋ ಕಾಯೋ ಬೀಳ್ಲೇ ಬೇಕು. " ಮಾಯ್ನ ಮಾಯ್ನ ಮಂಕಾಳಿ ಮಾಯ್ನತುಂಕೆ ತುಂಕಾಳಿ ನಂಗೊಂದ್ ಹಣ್ಣು ನಿಂಗೊಂದ್ ಕಾಯಿ ದಡೋ ಬುಡೋ " -ಇದು ನಮ್ಮಲ್ಲಿನ ಹುಡುಗರ ಹಾಡು. ಮರಕೋತಿ ಆಟ ಆಡುವುದರ ಜೊತೆಗೆ ಹಣ್ಣು-ಕಾಯಿ ತಿಂದು ಸಂಭ್ರಮಿಸಿದ ಆ ದಿನಗಳು ಅವರ್ಣನೀಯ. ರಜಾ ಮುಗಿಯುವುದೇ ಬೇಡ ಎಂಬ ಬಯಕೆ. ಹಳ್ಳದ ನೀರಲ್ಲಿ[ನೈಸರ್ಗಿಕ ಸ್ವಿಮ್ಮಿಂಗ್ ಪೂಲ್] ಈಜಾಡುವುದು, ಗುಡ್ಡದಲ್ಲಿ ಯಕ್ಷಗಾನ ನಡೆಸುವುದು, ಕಚ್ಚಾಡುವುದು-ಮತ್ತೆ ಒಂದಾಗುವುದು, ಮದುವೆ-ಮುಂಜಿಗಳಲ್ಲಿ ನೀರು/ಕುಡಿಯುವ ಸಾರು/ಮಜ್ಜಿಗೆ/ಪಾನಕ ಬಡಿಸಲು ಹೋಗುವುದು, ಅವಕಾಶಕ್ಕಾಗಿ ಬೇಡಿ ಮೈಕ್ ಸಿಕ್ಕರೆ ಹಾಡುವುದು ಇವೆಲ್ಲಾ ನಮ್ಮಲ್ಲಿನ ರಜಾದ ಮಜಾದಿನಗಳಾಗಿದ್ದವು. " ಯಾರಮನೆ ತಮ್ನೋ ನೀನು ಚಲೋ ಹಾಡ್ತೆ ಮಾರಾಯ" ಅಂತ ಯಾರಾದ್ರೂ ಬೆನ್ನು ತಟ್ಟಿದ್ರೆ ಅಂದಿಗೆ ಅದೇ ನಮಗೆ ’ಪದ್ಮವಿಭೂಷಣ’! ಅಲ್ಲೆಲ್ಲೋ ಯಾರೋ ಅವರವರಲ್ಲೇ " ಆ ತಮ್ಮ ಬಾಳ ಚುರ್ಕಿದ್ದ " ಎಂದಿದ್ದನ್ನು ದೂರದಿಂದಲೇ ಕೇಳದ್ರೂ ಸಾಕು ಅದು ’ಭಾರತರತ್ನ’ !

ಛೇ ಛೇ ನೀವೇನೂ ಅಂದ್ಕೋಬೇಡಿ ನಾವು ಉಪವಾಸ ಸತ್ಯಾಗ್ರಹ ಮಾಡಿದ್ದೂ ಇದೆ. ಆದ್ರೆ ಅಣ್ಣಾ ಹಜಾರೆಯವರಾಗಲೀ ಗಾಂಧೀಜಿಯವರಾಗಲೀ ಇಟ್ಟುಕೊಂಡ ಉದ್ದೇಶವಲ್ಲ! ನಮ್ಮದೆಲ್ಲಾ ಸಣ್ಣ ಸಣ್ಣ ಉದ್ದೇಶಗಳು. ಪಾಲಕರು ಅವುಗಳನ್ನು ಈಡೇರಿಸುವ ವರೆಗೂ ನಮ್ಮ ಉಪವಾಸ ನಿಲ್ಲುವುದಿಲ್ಲ. ನಮಗೆ ಗೊತ್ತಿತ್ತು: ಪಾಲಕರು ಹೇಗಾದ್ರೂ ಬಂದೇ ಬರ್ತಾರೆ ಅಂತ. ಆದರೂ ತಡವಾಗಿಬಿಟ್ಟರೆ ನಮ್ಮೊಳಗೇ ನಾವು ಅಂದುಕೊಳ್ಳುವುದು

ವಿದ್ಯೆ ಕಲಿಸದ ತಂದೆ ಬುದ್ಧಿಹೇಳದ ಗುರುವು
ಬಿದ್ದಿರಲು ಬಂದು ತಾ ನೋಡದಾ ತಾಯಿಯು
ಶುದ್ಧ ವೈರಿಗಳು | ಸರ್ವಜ್ಞ

[ಅಲ್ಲಿಲ್ಲಿ ಸ್ವಲ್ಪ ಸರ್ವಜ್ಞನ ವಚನಗಳೆಲ್ಲಾ ಓದಸಿಕ್ಕಿದ್ದವಲ್ಲ! ಅದರ ಅರ್ಥ ನಮಗೆ ಬೇಕಾದ ರೀತಿಯಲ್ಲಿ ನಾವು ಮಾಡಿಕೊಳ್ಳುತ್ತಿದ್ದೆವಪ್ಪ] ಇದರಲ್ಲಿ ಬಿದ್ದಿರಲು ಬಂದು ನೋಡದಾ ತಾಯಿಯು ಎಂಬುದನ್ನು ಬಹಳವಾಗಿ ಬಳಸಿಕೊಂಡ ಜನ ನಾವು! ಪಾಪ, ಪಾಲಕರ ಕಷ್ಟ ಅವರಿಗೇ ಗೊತ್ತು. ಆದರೂ ಮಕ್ಕಳಾದ ನಮ್ಮನ್ನು ಅವರು ಮರೆತಾರೆಯೇ ? ಮಗುವೊಂದು ಹೊತ್ತಿನ ಊಟ ಮಾಡಿಲ್ಲ ಎಂದರೆ ಅವರಿಗಾಗುವ ನೋವು ಇಂದಿಗೆ ನಾವೂ ಪಾಲಕರಾದಾಗಲೇ ಅರ್ಥವಾಗಿದ್ದು! ಸಿಟ್ಟಿನಲ್ಲಿ " ಹೋಗು ಹೋಗು ಹಾಗೇ ಮಲಕ್ಕೋ ಮಕ್ಳಿಗೆ ಬೆಕ್ಕಿಗೆ ನಾವು ಸಾಕ್ದಾಂಗಿರ್ತದೆ, ಹುಟ್ಟಿ ಮೂರು ಶನವಾರ ಆಗ್ಲಿಲ್ಲ ಹಠನೋಡು " ಎಂದು ಬೈಯ್ಯುತ್ತಿದ್ದರೂ ಉಣ್ಣದ ಮಕ್ಕಳನ್ನು ನೋಡಿ ಸುಮ್ಮನಿರಲಾರದೇ ಚಡಪಡಿಸುವ ಅವರ ಮನಸ್ಸು ರಾಜಿಪಂಚಾಯ್ತಿಗೆ ಬರುವಂತೇ ಮಾಡುತ್ತಿತ್ತು. ಇದು ನಮಗೆ ತಿಳಿದ ವಿಷಯವೇ ಆಗಿದ್ದರಿಂದ ನಮ್ಮ ಡಿಮಾಂಡುಗಳನ್ನು ಪೂರೈಸುವವರೆಗೂ ನಮ್ಮ ಉಪವಾಸ ಮುಂದುವರಿಯುತ್ತಿತ್ತು. ಅಂತೂ ಸೀಇಟಿಯ ಸಮಯದಲ್ಲೇ ಪದವೀಪೂರ್ವ ಕಾಲೇಜುಗಳ ಉಪನ್ಯಾಸಕರು ಧರಣಿ ಕೂತು ಪರಿಹಾರ ಪಡೆದಂತೇ ಇಲ್ಲೂ ನಾವೇ ಗೆಲ್ಲುತ್ತಿದ್ದೆವು!

ನಮ್ಮಲ್ಲಿ ಯುದ್ಧವೇನೂ ಆಗುತ್ತಿರಲಿಲ್ಲ ಎಂದುಕೊಂಡರೆ ಅದು ಶುದ್ಧತಪ್ಪು. ಅಪ್ಪ-ಅಮ್ಮ ಮತ್ತು ಅವರ ಮಹತ್ವವನ್ನು ತಿಳಿಯದ ಆ ದಿನಗಳಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿಬಿಟ್ಟರೆ ಅವರೊಂದಿಗೆ ಯುದ್ಧವೇ ನಡೆಯುತ್ತಿತ್ತು. ಕೊನೆಗೆ ನಾಕು ಲತ್ತೆ [ಪೆಟ್ಟು] ತಿಂದರೂ ಬೇಜಾರಿಲ್ಲ. ಲತ್ತೆ ತಿಂದು ಪೆಚ್ಚಾಗಿ ಕೂತಾಗಲೂ ಅಮ್ಮ ಬಂದು ಸಮಾಧಾನಮಾಡುತ್ತಿದ್ದಳು. ನೀವೇ ಬೇಕಾದರೆ ನೋಡಿ : ಚಿಕ್ಕಮಕ್ಕಳು ಬಿದ್ದ ತಕ್ಷಣ ಅವರಿಗೆ ನೋವಾದರೂ ಎದ್ದು ಸುಮ್ಮನಾಗಿಬಿಡುತ್ತಾರೆ, ಅದೇ ಯಾರಾದರೂ ಕಂಡುಬಿಟ್ಟರೆ " ಬೋ " ಎಂದು ಮುಸಲಧಾರೆ ಸುರಿದ ಹಾಗೇ ಅಳಲು ಆರಂಭಿಸುತ್ತಾರೆ. ಇಲ್ಲಿ ಅವರಿಗೆ ಸ್ವಾಭಿಮಾನಕ್ಕೆ ಬೀಳುವ ಪೆಟ್ಟು ಅದಾಗಿರುತ್ತದೆ. ನಮ್ಮಲ್ಲಿ ಚಿಕ್ಕಪ್ಪ ನುಕ್ಕಿ [ಲಕ್ಕಿ ಗಿಡದ ಕೋಲು]ಬಡ್ರು ರೆಡಿ ಇಟ್ಟುಕೊಳ್ಳುತ್ತಿದ್ದರು. ನಮ್ಮ ಆಟ ಜಾಸ್ತಿಯಾಯ್ತು ಎನಿಸಿದರೆ ಕಿವಿಹಿಂಡಿ ನುಕ್ಕಿಬಡ್ರಿನಲ್ಲಿ ಎರಡು ಬಿಡುತ್ತಿದ್ದರು. ಅದಕ್ಕೇ ಚಿಕ್ಕಪ್ಪ ಇಲ್ಲದಾಗಲೇ ನಮ್ಮ ಆಟ ನಡೆಸಿಕೊಳ್ಳುತ್ತಿದ್ದೆವು. ಆಗಾಗ ಅವರು ತಯಾರಿಸಿ ಇಟ್ಟುಕೊಳ್ಳುತ್ತಿದ್ದ ನುಕ್ಕಿಬಡ್ರು ನಾಪತ್ತೆಯಾಗಿಬಿಡುತ್ತಿತ್ತು!

ಹಾಗಂತ ನಾವು ಕೆಲಸಮಾಡದೇ ಬರೇ ಹುಡುಗಾಟ ಮಾತ್ರ ನಡೆಸಿದವರಲ್ಲ. ಮನೇಲಿ ಹಾಲು ಕಮ್ಮಿಯಾದಾಗ ಊರಲ್ಲಿ ಬೇರೇ ಮನೆಯಿಂದ ಹಾಲು ತರಬೇಕಾಗುತ್ತಿತ್ತು. ಅಂಗಡಿಗೆ ಹೋಗಿ ಚಿಲ್ಲರೆ ಸಾಮಾನು : ಲಿಂಬೆಹಣ್ಣು, ಶುಂಠಿ, ಹಸಿಮೆಣಸು ಇತ್ಯಾದಿ ತರೋದು, ಬಟ್ಟೆ ಹೊಲಿಸಲು ಕೊಟ್ಟಿದ್ರೆ ಅದು ರೆಡಿ ಆಗಿದ್ಯಾ ವಿಚಾರ್ಸ್ಕೊಂಡು ಬರೋದು, ತೋಟಗಳಿಗೆ ನೀರು ಹಾಯಿಸುವಾಗ ಸಹಾಯಮಾಡೋದು. ಎಮ್ಮೆ-ದನಗಳ ಮೈತೊಳೆಯುವಾಗ ಸಹಾಯಮಡುವುದು; ಅವು ನಮ್ಮ ಮಾತುಕೇಳಿದರೆ ನಾವೇ ಸ್ನಾನಮಾಡಿಸುವುದು, ಬಚ್ಚಲು ಒಲೆಯಲ್ಲಿ ಬೆಂಕಿ ಹಾಕುವುದು, ಬಟ್ಟೆ ಒಣಗಿಸಿದ್ದನ್ನು ಎತ್ತುಕೊಂಡು ಬಂದು ಒಳಗಿಡುವುದು, ದೇವಸ್ಥಾನಕ್ಕೆ ಹೋಗಿ ಬೆಳಿಗ್ಗೆ ಒಡೆಯಲು ಕೊಟ್ಟಿದ್ದ ಕಾಯಿ-ಪ್ರಸಾದ ತರುವುದು ಹೀಗೇ ಕಾಣದ ಹಲವು ಕೆಲಸಗಳು ನಮಗಿರುತ್ತಿದ್ದವು.

ನಮ್ಮೂರಲ್ಲಿ ಒಬ ಕ್ರೈಸ್ತ ಧರ್ಮದ ’ಗೇಬ್ರಿಯಲ್’ ಎಂಬಾತ ದರ್ಜಿಯಾಗಿದ್ದ. ಆತ ಮನೆಗೇ ಬಂದು ಅಳತೆ ತೆಗೆದುಕೊಂಡು ಹೋಗುತ್ತಿದ್ದ. ಬಟ್ಟೆ ಹೊಲಿದು ಮುಗಿಸುವುದು ಮಾತ್ರ ಬಹಳ ನಿಧಾನವಾಗಿ. ಊರಜನ ಅವನನ್ನು ’ಗಾಬ್ರಿಲ್ಲ’ ಎಂದು ಕರೆಯುತ್ತಿದ್ದರು. ’ಗಾಬ್ರಿಲ್ಲ’ ಎಂದರೆ ಗಾಭರಿಯಿಲ್ಲ, ಗಡಿಬಿಡಿಯಿಲ್ಲ, ನಿಧಾನವಾದರೂ ಪರವಾಗಿಲ್ಲ ಎಂಬರ್ಥವೂ ಆಗುತ್ತಿತ್ತು. ಆತ ನಿಧಾನವಾಗಿ ಕೆಲಸಮಡುವುದಕ್ಕೆ ಆತನಿಗೆ ಹಾಗೆ ಹೇಳುತ್ತಾರೇನೋ ಅಂದುಕೊಂಡಿದ್ದೆ! ಆದರೆ ಆತನ ಹೆಸರು ’ಗೇಬ್ರಿಯಲ್’ ಎಂದೂ ಅದನ್ನು ಆಡುವಾಗ ಚಿಕ್ಕದಾಗಿ ಆರೀತಿ ತಿರುಚಿ[ ಉದಾ : ಸತ್ಯನಾರಾಯಣ -ಸತ್ನಾರಣ ಅನ್ನುವುದಿಲ್ಲವೇ ?] ಹೇಳುತ್ತಾರೆಂದೂ ಬಹಳದಿನಗಳ ನಂತರ ತಿಳಿಯಿತು. ಬೇರೇ ಕೆಲವರು ಇದ್ದರೂ ಅವರೆಲ್ಲರ ಪೈಕಿ ಈ ಮನುಷ್ಯ ಹೊಲಿಗೆ ಸ್ವಲ್ಪ ಸರಿಯಾಗಿ ಮಾಡುತ್ತಿದ್ದ. ಬಾಕಿ ಜನ ಎಲ್ಲಾ ನಂಗೆ ಚಡ್ಡಿ ಹೊಲಿದರೆ [ಅದು ಕಾಲೇಜಿಗೆ ಹೋಗುವವರೆಗೂ ಇರಲೆಂದು ಹಾರೈಸುತ್ತಿದ್ದರೋ ಏನೋ!]ಅದು ನನ್ನಂತಹ ಇಬ್ಬರು ಕಾಲುತೂರಿಸಿ ಹಾಕಿಕೊಳ್ಳುವಷ್ಟು ದೊಗಳೆಯಾಗಿರುತ್ತಿತ್ತು. ಅದಕ್ಕೇ ಗಾಬ್ರಿಲ್ಲ ಅಂದ್ರೆ ನಮಗೆಲ್ಲಾ ಒಂಥರಾ ಖುಷಿ ನೀಡುವ ವ್ಯಕ್ತಿಯಾಗಿದ್ದ.

ನಾವು ಅತೀ ಚಿಕ್ಕವರಿರುವಾಗ ಮಾಯ್ನಕುರಿ {ಮಾವಿನಕುರ್ವಾ ನಾರಾಯಣ] ನಾರಣ ಆಗಾಗ ನಮ್ಮ ಮನೆ ಹಿಂದಿನ ಗುಡ್ಡದ ಮೇಲ್ಭಾಗದಲ್ಲಿ ಬಂದು ಕೂ ಹಾಕುತ್ತಿದ್ದ. ತೆಂಗಿನ ಗೆರಟೆ[ಕರಟ]ದಲ್ಲಿ ನೀರು ತೆಗೆದುಕೊಂಡು ನಾವೆಲ್ಲಾ ಹೋದರೆ ಅಲ್ಲಿ ಆತ ಒಂದು ಕಲ್ಲಮೇಲೆ ಕೂತಿರುತ್ತಿದ್ದ. ಎದುರಿಗೆ ಇನ್ನೊಂದು ಸಪಾಟು ಕಲ್ಲು. ಆ ಕಲ್ಲಿನಮೇಲೆ ನಮ್ಮನ್ನು ಒಬ್ಬೊಬ್ಬರನ್ನೇ ಕೂರಿಸಿ ಕೂದಲು ಕತ್ತರಿಸುತ್ತಿದ್ದ. ಆತನ ಬಡ್ಡು ಕತ್ತರಿ ನೀಡುವ ನೋವು ನಮಗೆ ಆತ ಬಂದರೇ ತೆನ್ನಾಲಿಯ ಬೆಕ್ಕಿಗೆ ಹಾಲುಕಂಡ ಅನುಭವವಗುತ್ತಿತ್ತು! ಸಾಲದ್ದಕ್ಕೆ ಅಂದು ಚಾಕುವಿನಂತಹ ತೆಳ್ಳಗಿನ ಕತ್ತಿಯೊ[ಕೂಪು]ಂದನ್ನು ’ಕಿಚ್ಮಿಚ್ ಕಿಚ್ಮಿಚ್ ಕಿಚ್ಮಿಚ್ ಕಿಚ್ಮಿಚ್’ ಎಂದು ಎಂಥದೋ ಕಪ್ಪು ಕಲ್ಲಿನ ಥರದ ನುಣುಪಾದ ವಸ್ತುವಿಗೆ ಉಜ್ಜಿ ಅದನ್ನು ಹರಿತಗೊಳಿಸಿಕೊಂಡು ನಮ್ಮ ಕಿವಿಯ ಮೇಲ್ಭಾಗ ಮತ್ತು ಕತ್ತಿನ ಹಿಂಭಾಗದಲ್ಲೆಲ್ಲಾ ಇರುವ ಕೂದಲನ್ನು ಹೆರೆಯುತ್ತಿದ್ದ. ಕೆಲಸಿ ಎಂಬ ಆ ವೃತ್ತಿಗೆ ಆ ದಿನಗಳಲ್ಲಿ ಭತ್ತ/ಅಕ್ಕಿ, ಕಾಯಿ, ಬಟ್ಟೆ ಈ ರೀತಿಯ ಏನಾದರೂ ಜೀವನಾವಶ್ಯಕ ವಸ್ತುಗಳನ್ನು ಕೊಡುವುದಿತ್ತು. ಆತ ಮುದುಕಾದ ನಂತರ ಬರುವುದು ನಿಲ್ಲಿಸಿದ. ಊರ ಹತ್ತಿರದ ಸಣ್ಣ ಪೇಟೆ ಬೀದಿಯಲ್ಲಿ ದಾಸ ಎಂಬ ಇನ್ನೊಬ್ಬ ಆ ತರುವಾಯ ಕೆಲಸಿ ಅಂಗಡಿಯನ್ನೇ ತೆರೆದ. ಅಲ್ಲಿ ಆರಂಭದಲ್ಲಿ ಕೊಂಯ್ಕು ಕೊಂಯ್ಕು ಸದ್ದುಮಾಡುವ ಹಳೆಯ ಮರದ ಖುರ್ಚಿ ಇತ್ತು. ಹಿಂದೆ ಮುಂದೆ ಎಲ್ಲಾ ಗೋಡೆಗೆ ಸ್ವಲ್ಪದೊಡ್ಡ ಕನ್ನಡಿಗಳಿದ್ದವು. ಖುರ್ಚಿಯಮೇಲೆ ಕುಳಿತಾಗ ಕನ್ನಡಿಯೊಳಗೆ ಇನ್ನೊಂದು ಕನ್ನಡಿ ಅದರೊಳಗಿನ್ನೊಂದು ಹೀಗೇ ನಮ್ಮ ಪ್ರತಿಬಿಂಬ ನಮಗೆ ಹಲವು ಕನ್ನಡಿಗಳಲ್ಲಿ ಕಾಣುತ್ತಿತ್ತು. [ಡಾ| ರಾಜ್ ಕುಮಾರ್ ಕಾಳಿದಾಸನಾಗಿ "ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ " ಎಂದು ಕುಣಿದಿದ್ದು ನೆನಪಾಗುತ್ತದೆ !] ಆತ ಸ್ವಲ್ಪ ಹರಿತವಾದ ಕತ್ತರಿಯನ್ನೂ ಕೂಪನ್ನೂ ಬಳಸುತ್ತಿದ್ದ. ಎಂಥಾ ಸವಲತ್ತು! ಆ ಕಾಲಕ್ಕೆ ನಾವೆಂದುಕೊಂಡಿದ್ದು " ಓ ದೇವರೇ ನೀನೆಷ್ಟು ಕರುಣಾಮಯಿ " ಎಂದು.

ಈಗ ಊರಿನಲ್ಲಿ ಜಾಗ ಕಿರಿದಾಗುತ್ತಾ ಜನಸಂಖ್ಯೆ ಜಾಸ್ತಿಯಾಗುತ್ತಾ ನಡೆದಿದೆ. ಅಂದಿನ ಎಷ್ಟೋ ಮರಗಳು ನೆಲಕಚ್ಚಿವೆ. ರಸ್ತೆ ಅಗಲವಾಗಿದೆ. ಹಲವರು ವಾಹನಗಳು ಓಡಾಡುತ್ತವೆ. ಊರಿನ ಹಿರಿಯ ತಲೆಗಳೆಲ್ಲಾ ಮುದುಕಾಗಿವೆ, ಕೆಲವರು ಆಗಲೇ ಬಿಜಯಂಗೈದಿದ್ದಾರೆ! ಅಲ್ಲಿನ ಇಂದಿನ ಮಕ್ಕಳಿಗೆ ಕ್ರಿಕೆಟ್ ಬಿಟ್ಟರೆ ಬೇರಾವ ಆಟವೂ ಹಿಡಿಸುವುದಿಲ್ಲ. ಎಲ್ಲರ ಮನೆಗಳಲ್ಲೂ ಬಹುತೇಕ ಟಿವಿ ಬಂದಿದೆ. ಮಕ್ಕಳಿಗೆ ಸಿಗಬೇಕಾದ ’ಕಥಾರೂಪ ಇತಿಹಾಸ’ವೆಂಬ ಪುಸ್ತಕವನ್ನು ಕೈಬಿಡಲಾಗಿದೆ. ಕಥೆ ಹೇಳಲು ಹಿರಿಯರು ಕಮ್ಮಿ ಇದ್ದಾರೆ, ಇದ್ದವರಿಗೆ ಕಥೆ ಹೇಳುವ ಕಲೆ ಗೊತ್ತಿಲ್ಲ; ಆಸಕ್ತಿಯೂ ಇಲ್ಲ. ಸಿನಿಮಾ ಬಂದಮೇಲೆ ಯಕ್ಷಗಾನ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ರಾಮಾಯಣ ಮಹಭಾರತಗಳಂಥಾ ನೀತಿಬೋಧಕ ಕಥಾನಕಗಳಿಗೆ ಎಲ್ಲೂ ಮನ್ನಣೆ ಕಾಣುತ್ತಿಲ್ಲ. ಇವತ್ತಿನ ತಾಯಂದಿರಿಗಾಗಲೀ ಮಕ್ಕಳಿಗಾಗಲೀ ಅದರ ಗಂಧಗಾಳಿಯೂ ಇಲ್ಲವೆಂದರೆ ತಪ್ಪಲ್ಲ. ನಮ್ಮ ಜನ ಮಾಧ್ಯಮಗಳಲ್ಲಿ ಬರಲು ಹಾತೊರೆಯುತ್ತಾರೆ! ಮಕ್ಕಳಿಗೆ ಸಂಗೀತವನ್ನು ರಿಯಾಲಿಟಿ ಶೋ ಸಲುವಾಗಿ ಕಲಿಸುತ್ತಾರೆ. ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಗ್ರಾಮೀಣ ಕ್ರೀಡೆಗಳಾಗಲೀ ಆಚರಣೆಗಳಾಗಲೀ ಇಲ್ಲವೇ ಇಲ್ಲ. ಅಲ್ಲೂ ಈಗೀಗ ಹೆಚ್ಚು ಅಂಕಗಳನ್ನು ತೆಗೆಯುವ ’ಮಶಿನ್’ ಗಳನ್ನು ತಯಾರಿಸಲು ತೊಡಗಿದ್ದಾರೆ. ಜೀವನದ ಮೌಲ್ಯಗಳಾಗಲೀ ಬದುಕುವ ಕಲೆಯನ್ನಾಗಲೀ ಕಲಿಸುವವರಿಲ್ಲವಾಗಿದ್ದಾರೆ. ಮನೆಗಳಲ್ಲಿ ಅಂತಸ್ತಿನ ಪ್ರಶ್ನೆ ಕಾಡುತ್ತಿದೆ. ಪರಸ್ಪರರಲ್ಲಿ ಮೊದಲಿನ ಪ್ರೀತಿ-ವಾತ್ಸಲ್ಯ, ವಿಶ್ವಾಸ ಉಳಿದಿಲ್ಲ. ಕಾಲದ ಮಹಿಮೆ !

ಬೇಸಿಗೆ ಬಂದೇಬಿಟ್ಟಿದೆ. ವಸಂತನ ಆಗಮನದಿಂದ ಬೆವರಿಳಿಸುವ ಬೇಸಿಗೆಯಲ್ಲೂ ಮರಗಿಡಗಳು ಚಿಗುರಿವೆ. ೯ ತಿಂಗಳುಗಳ ಕಾಲ ಶಾಲೆಯ ಓದಿನ ಒತ್ತಡಗಳಲ್ಲಿ ತೊಡಗಿದ್ದ ಬಾಲಕ/ಬಾಲಕಿಯರಿಗೆ ಈಗ [ಕೇಂದ್ರೀಯ ವಿದ್ಯಾಲಯಗಳನ್ನು ಹೊರತುಪಡಿಸಿ] ಬಹುತೇಕ ಬಿಡುವು. ಬಿಡುವು ಸಿಕ್ಕರೆ ಸಾಕು ಎಲ್ಲಾದರೂ ಹೋಗೋಣ ಏನಾದರೂ ಆಟ ಆಡೋಣ ಅಥವಾ ಅವರದೇ ಭಾಷೆಯಲ್ಲಿ ಹೇಳುವುದಾದರೆ ಮಜಾ ಉಡಾಯಿಸೋಣ ಎಂಬ ಬಹುದಿನಗಳಿಂದ ರಜಾದಿನಗಳು ಯಾವಾಗ ಬಂದಾವು ಎಂದು ಲೆಕ್ಕಹಾಕುತ್ತಿದ್ದವರಿಗೆ ಈ ವೇಳೆ ಆಕಾಶವೇ ಕೈಗೆಟುಕಿದಷ್ಟು ಖುಷಿಯಾಗಿರುತ್ತದೆ. ಹಳ್ಳಿಯ ಮೂಲದ ಸಂಪರ್ಕವನ್ನು ಹೊಂದಿರುವವರಿಗೆ ಅವರ ಅಜ್ಜನಮನೆಗೋ ಅತ್ತೆಯಮನೆಗೋ ಅಂತೂ ಹೋಗಿ ಒಂದಷ್ಟುದಿನ ಕುಣಿದು ಕುಪ್ಪಳಿಸಲು ಅವಕಾಶವಿರುತ್ತದೆ. ನಗರವಾಸಿಗಳಿಗೆ ಬೇಸಿಗೆ ಶಿಬಿರಗಳು, ಟ್ರೆಕ್ಕಿಂಗ್, ಸಂಗೀತ-ನೃತ್ಯ ಮೊದಲಾದ ಕಲಿಕೆಗಳಿಗೆ ಅನೇಕ ಸಂಸ್ಥೆಗಳು ಏರ್ಪಾಟುಮಾಡುತ್ತಾರೆ. [ ಹಾಗಂತ ಮಕ್ಕಳನ್ನು ಜವಾಬ್ದಾರಿ ಇಲ್ಲದೇ ಕಳಿಸಬೇಡಿ, ಜೀವಕ್ಕೆ ಅಪಾಯ ತರುವಂಥಾಬೇಜವಾಬ್ದಾರಿ ಏರ್ಪಾಟುಗಳೂ ಇರುತ್ತವೆ. ] ಮಕ್ಕಳ ಬದುಕಿನ ಏಕತಾನತೆಯನ್ನು ಕಳೆಯಲು ಅವರಿಗೆ ಬಣ್ಣಬಣ್ಣದ ಕಥೆಗಳುಬೇಕು, ಚಿಕ್ಕ 'ಥ್ರಿಲ್ಲಿಂಗ್ ಇಫೆಕ್ಟ್ ' ನೀಡುವ ಕಥೆಗಳಾದರೆ ಒಳ್ಳೆಯದು.

ಮಕ್ಕಳ ಬೆಳವಣಿಗೆ ಎಂದರೆ ಕೇವಲ ಹೆಚ್ಚಿನ ಅಂಕಗಳನ್ನು ತೆಗೆಯುವುದು ಮಾತ್ರವಲ್ಲ. ಬದುಕುವ ಕಲೆ ಗೊತ್ತಿರುವ ವ್ಯಕ್ತಿ ಎಲ್ಲೂ ಬದುಕಬಲ್ಲ. ಹಿಂದಿನ ಶತಮಾನದ ನಮ್ಮ ಕನ್ನಡದ ಹಲವು ಜನ ಜಾಸ್ತಿ ಓದಿರದಿದ್ದರೂ ದೇಶವಿದೇಶಗಳಲ್ಲಿ ಹಲವಾರು ವೃತ್ತಿಗಳನ್ನು ನಡೆಸಿದರು. ಈಗ ಬಹಳ ಅಂಕಗಳನ್ನು ಪಡೆದ ವ್ಯಕ್ತಿಗಳೂ ಕೂಡ ಬದುಕಿನ ಸೂತ್ರ ಅರಿಯದೇ ತೊಳಲಾಡುತ್ತಾರೆ. ಶಿಕ್ಷಣವೇನೋ ಇದೆ; ಸಂಸ್ಕಾರವಿಲ್ಲ. ಜಂಗಮವಾಣಿ, ಗಣಕಯಂತ್ರದಲ್ಲೇ ಸಂಪರ್ಕವೇ ಹೊರತು ನೇರವಾದ ಒಡನಾಟವಿಲ್ಲ. ಪಾಲಕರ ಜೊತೆಗೆ ಕಳೆಯಲು ಬಹಳ ಜನರಿಗೆ ಸಮಯವಿರುವುದಿಲ್ಲ; ಇದ್ದರೂ ಮನಸ್ಸಿಲ್ಲ. ಮೊದಲಿದ್ದ ಬೆಚ್ಚಗಿನ ಹಚ್ಚಗಿನ ವಾತಾವರಣ, ಆ ಆಪ್ತತೆ ಈಗ ಉಳಿದಿಲ್ಲ. ಇವತ್ತು ಲವ್ವು ನಾಳೆ ಮದುವೆ ನಾಡಿದ್ದು ವಿಚ್ಛೇದನ! --ಇದು ನಮ್ಮ ಆಧುನಿಕ ಸಮಾಜ ಹಿಡಿಯುತ್ತಿರುವ ದಾರಿ. ಇದನ್ನ ನೆನೆದಾಗ ಮನಸ್ಸಿಗೆ ಬೇಸರವಾಗಿ ಹೊರಬಂದಿದ್ದೇ ಈ ಲೇಖನ.

ಮಕ್ಕಳು ಮುದ್ದು ಕೃಷ್ಣನ ರೂಪ. ಅವರನ್ನು ತಿದ್ದಿ ಕಲಿಸಬೇಕಾದ ಬುದ್ಧಿ ನಮಗಿರಬೇಕು. ರಾಮನ ಆದರ್ಶಗಳನ್ನೂ ಕೃಷ್ಣನ ಜಾಣ್ಮೆಯನ್ನೂ ಸೇರಿಸಿ ತಿಳಿಸಿ ಹೇಳಿಕೊಟ್ಟರೆ ಅವರ ಎಳೆಮನದಲ್ಲಿ ಕಲಿಯುವ ಆಸಕ್ತಿ ಬೆಳೆಯುತ್ತದೆ. ಕವಿ ಮನದಲ್ಲಿ ಹಲವನ್ನು ಕೇವಲ ಒಳ್ಳೆಯ ಕಲ್ಪನೆಯಿಂದಲೇ ಬರೆಯುವ ತಾಕತ್ತಿರುತ್ತದೆ. ಅಂತಹ ದಾಂಪತ್ಯಗೀತೆಗಳನ್ನು ಬರೆದ ಕವಿ ದಿ| ನರಸಿಂಹ ಸ್ವಾಮಿಯವರ ಗೀತೆಯೊಂದರ ಆರಂಭಿಕ ಸಾಲಿನೊಂದಿಗೆ ನಿಮ್ಮಕೈಗೀ ಲೇಖನ.

Monday, April 11, 2011

ರಾಮಾ ರಾಮಾ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ


ರಾಮಾ ರಾಮಾ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ

ಮಲೆನಾಡ ಮತ್ತು ಕರಾವಳಿಯ ಪ್ರಾಂತಗಳಲ್ಲಿ ಇಂದಿಗೂ ಆಗಾಗ ತಂಬೂರೀ ಹಿಡಿದು ಸಂಭಾವನೆಗೆ ಬರುವ ಬಯಲನಾಡ ಜನರಿದ್ದಾರೆ. ಅವರು ಭಿಕ್ಷುಕರಲ್ಲ, ನಿರ್ಗತಿಕರೂ ಅಲ್ಲ. ಅವರಿಗೂ ಅಷ್ಟಿಷ್ಟು ಹೊಲಗದ್ದೆಗಳಿವೆ. ಮಳೆಗಾಲದಲ್ಲಿ ಬೇಸಾಯಮಾಡಿ ಭೂಮಿತಾಯಿ ನೀಡುವ ಫಲವನ್ನು ಪಡೆದು ಅದನ್ನಷ್ಟು ತಮ್ಮ ಜೀವನೋಪಾಯಕ್ಕೆ ಬಳಸುತ್ತಾ ಬೇಸಿಗೆಯಲ್ಲಿ ನಮ್ಮ ಪ್ರಾಂತಗಳೆಡೆಗೆ ದೇವರನಾಮಗಳನ್ನು ಹಾಡಿಕೊಂಡು ತಂಬೂರೀ ಮೀಟುತ್ತಾ ಬರುತ್ತಾರೆ. ರಾಗಬದ್ಧವಾಗಿ ಲಯಶುದ್ಧವಾಗಿ ಹಾಡುವ ಅವರು ಯಾವ ಉತ್ತಮ ಕಲಾವಿದರಿಗೂ ಕಮ್ಮಿ ಇರುವುದಿಲ್ಲ! ಉರುಟು ತಳಿಯ ಹಾಲುಸೋರೆಕಾಯಿಯನ್ನು ಒಂದೆಡೆ ತೂತುಮಾಡಿ ಅದರ ಹೊರಕವಚವನ್ನು ಬಿಸಿಲಿಗೆ ಒಣಗಿಸಿ ಮಾಡಿದ ಬುರುಡೆ ತಂಬೂರಿಗೆ ಬಳಕೆಯಾಗುತ್ತದೆ.

ಬೆಂಗಳೂರಿಗೆ ಬಂದ ಹಲವುವರ್ಷಗಳ ತರುವಾಯ ನಾಕಾರು ವರ್ಷಗಳ ಹಿಂದೆ ಒಮ್ಮೆ ಈ ಸಮಯದಲ್ಲಿ ಊರಿನಕಡೆಗೇ ಇದ್ದೆ. ಊರಲ್ಲಿ ಮಧ್ಯಾಹ್ನ ಊಟಮುಗಿಸಿ ಹೀಗೇ ಲೋಕಾಭಿರಾಮ ಮಾತನಾಡುತ್ತಾ ಕುಳಿತಿರುವಾಗ ಪಕ್ಕದ ಮನೆಯಲ್ಲಿ ಯಾರೋ ಹಾಡಿದ ಅನುಭವ! ಸಂಗೀತ-ಸಾಹಿತ್ಯಕ್ಕೆ ಮನಸೋಲುವ ಜಾಯಮಾನದ ಮನಸ್ಸನ್ನು ಆ ಹಾಡು ಹಿಡಿದೆಳೆಯಿತು. ಹಾಡಿದ್ದು ಮತ್ತದೇ ಹೇಳಿದೆನಲ್ಲ ಬಯಲನಾಡ ಕಲಾವಿದರು. ಆ ಮನೆಯಲ್ಲಿ ಯಾವುದೋ ಹಾಡು ಹಾಡಿ ನಮ್ಮನೆಗೆ ಬಂದರು. ದಾಸರಪದಗಳನ್ನು ಹಾಡುತ್ತಿದ್ದರು. ಅನಿರೀಕ್ಷಿತವಾಗಿ "ರಾಮಾ ರಾಮಾ ಎನ್ನಿರೋ ....." ಎನ್ನುವ ಹಾಡನ್ನು ಹಾಡಿದರು. ಅವರು ಹಾಡಿದಷ್ಟೂ ಮತ್ತೆ ಮತ್ತೆ ಬೇಕೆಂಬ ಬಯಕೆ ನನ್ನನ್ನು ಕಾಡುತ್ತಿತ್ತು. ಅವರ ಕಂಠಕೂಡ ಅಷ್ಟೇ ಚೆನ್ನಾಗಿತ್ತು. ಹೊರಗೆ ಬಿಸಿಲ ಬೇಗೆ ಇದ್ದರೂ ಸೆಕೆಯಿಂದ ಬರಿಮೈ ಕೂಡ ಬೆವರುತ್ತಿದ್ದರೂ ಅವರ ಹಾಡಿನಿಂದ ಇಡೀ ವಾತಾವರಣವೇ ತಂಪಾದ ಹಾಗೆ ಅನಿಸುತ್ತಿತ್ತು. ಹಾಡು ಮುಗಿಯುವ ಮುನ್ನ ನಾನೊಮ್ಮೆ ಸಾಕ್ಷಾತ್ ಶ್ರೀರಾಮನನ್ನೇ ಹಾಡಿನಲ್ಲಿ ದರ್ಶಿಸಿ ಬಂದ ಭಾವಸಮಾಧಿ ಕೇವಲ ಆ ಐದೇ ನಿಮಿಷ ನನಗೆ ಲಭಿಸಿತ್ತು! ಸಹೋದರ ಕೊಟ್ಟ ಸಂಭಾವನೆಯನ್ನು ಪಡೆದು ಅವರು ಮುಂದಿನ ಮನೆಗೆ ಪಯಣ ಬೆಳೆಸಿದ್ದರೂ ನಾನು ಬಾಯಿಬಿಟ್ಟು ಅವರು ಹಾಡಿದ ಹಾಡನ್ನು ದಿನಗಟ್ಟಲೆ ಗುನುಗುನಿಸುತ್ತಿದ್ದೆ. ಹೆಚ್ಚಿನ ವಾದ್ಯ ಪರಿಕರಗಳಿಲ್ಲದೆಯೂ ಕೇವಲ ತಮ್ಮ ಶಾರೀರ ಶುದ್ಧಿಯನ್ನು ಮತ್ತು ಸ್ಫುಟವಾದ ಸಾಹಿತ್ಯವನ್ನು ಬಳಸುವ ಆ ಮೂಲಕ ಜನರಿಗೆ ಮುದನೀಡುವ ಅವರು ಬಹಳ ಹಿಡಿಸುತ್ತಾರೆ.

ಅದಕ್ಕೆ ರಾಮನ ವಿಷಯವಾಗಿ ಅವರು ಹಾಡಿದ್ದೂ ಕೂಡ ಕಾರಣವಿರಬಹುದು. ಬೇಕಾದ ಎಲ್ಲವೂ ಲಭಿಸುತ್ತಿದ್ದರೂ, ಅನಾಯಾಸವಾಗಿ ಪಟ್ಟಾಧಿಕಾರ ದೊರೆಯುತ್ತಿದ್ದರೂ ತಂದೆಯಮೇಲಿನ ಪ್ರೀತಿಗೆ ಆ ವ್ಯಾಮೋಹಕ್ಕೆ, ಅವರ ಮಾತಿಗೆ ಸಲ್ಲಬೇಕಾದ ಗೌರವಕ್ಕೆ ರಾಮ ಕಾಡಿಗೆ ಹೋದ. ಬೇಡವೆಂದರೂ ಬರುವ ತಮ್ಮ ಲಕ್ಷಣನನ್ನೂ ನೆರಳಂತೇ ಹಿಂಬಾಲಿಸುವ ಸತಿ ಸೀತೆಯನ್ನೂ ಒಲ್ಲದ ಮನಸ್ಸಿನಿಂದಲೇ ಜೊತೆಮಾಡಿಕೊಂಡ. ತನ್ನ ಸಲುವಾಗಿ ಅವರ್ಯಾರೂ ನೋವುಪಡುವುದು ಬೇಡಾ ಎಂಬುದೇ ರಾಮನ ಇಚ್ಛೆಯಾಗಿತ್ತು. ಸರಯೂ ನದಿಯ ದಡದವರೆಗೂ ನಡೆದುಬಂದ ಪುರಜನಸ್ತೋಮಕ್ಕೆ ರಾಮ ಕೈಮುಗಿದು ಇಲ್ಲಿಂದಲೇ ಹಿಂದಿರುಗಿರೆಂದು ವಿನಂತಿಸಿದ. ನದಿಯನ್ನು ದಾಟಿ ಘೋರವಾದ ದಂಡಕಾರಣ್ಯವನ್ನು ಸೇರಿದ. ಹೇಳೀ ಕೇಳೀ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬೇಕಾದ ರಾಜಕುಮಾರ ಕಾಡಿನಲ್ಲಿ ಕಲ್ಲುಮುಳ್ಳುಗಳಮೇಲೇ ಕಾಲಿಡುತ್ತಾ ನಡೆಯುತ್ತಿದ್ದ. ಜೊತೆಗಿರುವ ಇಬ್ಬರನ್ನೂ ಸಂತೈಸುತ್ತಾ ಕಾಡಿಗೆ ಅಟ್ಟಿದ ಚಿಕ್ಕಮ್ಮನಲ್ಲಿ ಕಿಂಚಿತ್ತೂ ದೋಷವೆಣಿಸದೇ ಅದು ತಾನೇ ಪಡೆದುಬಂದ ಭಾಗ್ಯವೆಂದು ನಂಬಿನಡೆದ ಶ್ರೀರಾಮ.

ಕಾಡಿನಲ್ಲಿ ಇರಲು ಗುಡಿಸಲಿಲ್ಲ, ಉಡಲು ಹೇರಳ ಬಟ್ಟೆಬರೆಗಳಿಲ್ಲ, ಅಡುಗೆಗೆ ಬೇಕಾದ ಪಾತ್ರೆಗಳಿಲ್ಲ, ಅಡುಗೆಯ ಪರಿಕರಗಳಾಗಲೀ ಬೇಳೇ ಕಾಳುಗಳಾಗಲೀ ಇರಲಿಲ್ಲ. ಹೊಸದಾಗಿ ಆರಂಭಗೊಳ್ಳಬೇಕಾಗಿದ್ದ ’ವನವಾಸ’. ಕಂದಮೂಲ ಫಲಗಳನ್ನು ಸಂಶೋಧಿಸಿ ಅವುಗಳಲ್ಲಿ ತಿನ್ನಲು ಯೋಗ್ಯವಾದ ಕೆಲವನ್ನು ತರಬೇಕಾಗಿತ್ತು, ಸ್ನಾನಾದಿಗಳನ್ನು ಪೂರೈಸಿ, ತಂದ ಅವುಗಳನ್ನು ಶುಚಿಗೊಳಿಸಿ, ಕತ್ತರಿಸಿಯೋ ಜಜ್ಜಿಯೋ ದೈವಾರ್ಪಣೆಗೈದು ತಿನ್ನಬೇಕಿತ್ತು. ಎಲ್ಲವನ್ನೂ ತನ್ನ ಔದಾರ್ಯದಿಂದಲೇ ಸಹಿಸಿ ಬದುಕಿದ ಕೌಸಲ್ಯಾರಾಮ. ಕಾಡಿನ ರಕ್ಕಸರ ಉಪಟಳ ಎಲ್ಲಿ ಯಾವಾಗ ಹೇಗೆ ಎಂಬುದು ತಿಳಿಯುತ್ತಿರಲಿಲ್ಲ. ಹಿಂಸ್ರ ಪಶುಗಳ ದಾಳಿಯನ್ನೂ ಅಲ್ಲಗಳೆಯುವಂತಿರಲಿಲ್ಲ. ಆದರೂ ಅವೆಲ್ಲವನ್ನೂ ಮರೆತು ಕಾಡಿನಲ್ಲೇ ಹುಟ್ಟಿಬೆಳೆದ ಜನಾಂಗದವರಂತೇ ಜೀವಿಸಿದ ಆ ರಾಮ. ತಾನು ಹೊರಟಾಗ ತಂದೆ ಅಳುತ್ತಿದ್ದುದನ್ನು ಕಂಡಿದ್ದ ರಾಮನಿಗೆ ಕಾಡಿಗೆ ಬಂದ ಬಹಳದಿನಗಳವರೆಗೂ ತಂದೆಯ ಚಿಂತೆಯೇ ಕಾಡುತ್ತಿತ್ತು. ಅಪ್ಪ ಈಗ ಏನುಮಾಡುತ್ತಿರಬಹುದು ? ತನ್ನನ್ನು ಕಾಡಿಗೆ ಕಳಿಸಿದ ನೋವನ್ನು ಮರೆತಿರಬಹುದೇ ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಸದಾ ಉದ್ಭವಿಸುತ್ತಿದ್ದವು.

ಸೈನ್ಯದೊಟ್ಟಿಗೆ ಬಂದ ಭರತನನ್ನು ದೂರದಿಂದಲೇ ಈಕ್ಷಿಸಿದ ಲಕ್ಷ್ಮಣ ಯುದ್ಧಕ್ಕೇ ಬಂದರೆಂಬ ಅಪಾರ್ಥದಿಂದ ದೊಡ್ಡ ರಂಪವನ್ನೇ ಶುರುವಿಟ್ಟ. ಲಕ್ಷ್ಮಣನನ್ನು ಸುಮ್ಮನಾಗಿಸಿ ಬಂದ ಭರತನನ್ನು ಬಿಗಿದಪ್ಪಿ ಅಯೋಧ್ಯೆಯ ಆಗು-ಹೋಗುಗಳನ್ನು ಕೇಳುತ್ತಾ ತನ್ನ ವಿಯೋಗದ ನಂತರ ಕೆಲವೇ ದಿನಗಳಲ್ಲಿ ತನ್ನ ಹಂಬಲದಲ್ಲೇ ಕೊರಗಿ ಕೊರಗಿ ಬಳಲಿ ಗತಿಸಿದ ತಂದೆ ದಶರಥನ ಅಂತ್ಯ ಕೇಳಿ ರಾಮನ ಕಣ್ಣಾಲಿಗಳು ಮಡುಗಟ್ಟಿ ತೊಟ್ಟಿಕ್ಕಿದವು. ಕಂಡರೂ ಕಾಣದಹಾಗೇ ಸಾವರಿಸಿಕೊಂಡು ಮಿಕ್ಕೆಲ್ಲರಿಗೂ ಸಾಂತ್ವನಹೇಳುತ್ತಾ ರಾಮ ಮುಂದಿನ ಪಿತೃತರ್ಪಣಾದಿ ಕಾರ್ಯಕ್ಕೆ ಅನುವಾದ. ಅಲ್ಲೇ ಹರಿಯುತ್ತಿದ್ದ ತೊರೆಯೊಂದರಲ್ಲಿ ಸ್ನಾನಮಾಡಿ ಅಣ್ಣ-ತಮ್ಮಂದಿರು ಲಭ್ಯವಿದ್ದ ಪರಿಕರಗಳಿಂದಲೇ ಪಿಂಡಪ್ರದಾನ ಮಾಡಿದರು. ದೂರದಲ್ಲಿ ಇದನ್ನೆಲ್ಲಾ ಗಮನಿಸುತ್ತಾ ನಿಂತ ಊರಜನತೆ ಕಣ್ಣೀರ್ಗರೆದರು. ಎಲ್ಲರನ್ನೂ ಸಂತೈಸಿದ ರಾಮ ಭರತನೂ ಮತ್ತು ಬಳಗವೂ ತನ್ನನ್ನು ಕರೆದೊಯ್ಯಲು ಬಂದುದನ್ನು ಕೇಳಿ ಚಕಿತನಾದ. "ಪಟ್ಟಾಧಿಕಾರವನ್ನು ನೀನೇ ವಹಿಸಿಕೊಳ್ಳಬೇಕು" ಎಂಬ ಭರತನ ಹಠಕ್ಕೆ ಈಕ್ಷಣ ಅದು ಸಾಧ್ಯವಿಲ್ಲವೆಂದೂ ಮುಂದೆ ೧೪ ವರುಷಗಳು ಮುಗಿದಮೇಲೆ ತಾನು ಬರುವೆನೆಂದೂ ಅಲ್ಲಿಯತನಕ ಭರತನೇ ಆಳಲೆಂದೂ ಹೇಳಿದ. ಆಗಲೂ ಭರತ ಸಮ್ಮತಿಸದೇ ತನಗೆ ಅಣ್ಣನ ಪಾದುಕೆಯೇ ಸಾಕೆಂದೂ ಅದನ್ನೇ ಸಿಂಹಾಸನದಲ್ಲಿಟ್ಟು ರಾಮ ಬರುವವರೆಗೆ ರಾಜ್ಯಭಾರನಡೆಸುವೆನೆಂದೂ ತಿಳಿಸಿದಾಗ ಅನಿವಾರ್ಯವಾಗಿ ಪಾದುಕಾಪ್ರದಾನ ಮಾಡಿದ ಶ್ರೀರಾಮ.

ಮುಂದೆ ನಡೆದ ಪ್ರತೀ ಘಟನೆಗಳೂ ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದಿರಬಹುದಾದ ಸಂಬಂಧದ-ಐಹಿಕ ವ್ಯಾಮೋಹದ, ಸತ್ಯ-ತತ್ವ ನಿಷ್ಠೆಯ, ಮನೋನಿಗ್ರಹದ ಭಾವನಾತ್ಮಕ ಎಳೆಗಳನ್ನು ನರಮಂಡಲದಂತೇ ವಿಶಿಷ್ಟವಾಗಿ ಮತ್ತು ರುಚಿಕಟ್ಟಾಗಿ ಹೆಣೆದು ರಾಮಕಥೆಯನ್ನು ಉಣಬಡಿಸಿದ ಕವಿ ಕೋಗಿಲೆ ವಾಲ್ಮೀಕಿಯನ್ನು ನೆನೆದಾಗ ಕೈಗಳೆರಡೂ ಜೋಡುತ್ತವೆ, ಶಿರಬಾಗುತ್ತದೆ.

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||

ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ||

ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ |
ಅತೃಪ್ತಸ್ತಂ ಮುನಿಂ ವಂದೇ ಪ್ರಾಚೇತಸಮಕಲ್ಮಷಮ್ ||

ಆಹಾ ತಾಯಿ ಸಂಸ್ಕೃತದ ಉಪಮೆಗಳನ್ನು ನೋಡಿ! ಸಂಸ್ಕೃತಿಯನ್ನು ಕಲಿಸಿಕೊಡುವ ಆ ಮಾತೆ ನಿಜಕ್ಕೂ ಸ್ತುತ್ಯಾರ್ಹಳು. ಒಂದುಕಾಲಕ್ಕೆ ಬೇಡನಾಗಿದ್ದ ಮನುಜನೊಬ್ಬ ಕೇವಲ ರಾಮ ಜಪದಿಂದ ಪರಮಸಿದ್ಧಿಯನ್ನು ಪಡೆದ! ಗೊತ್ತಿಲ್ಲದ ’ಮರಾ’ ಶಬ್ದವನ್ನೇ ಪುನರಪಿ ಉಚ್ಚರಿಸಿದಾಗ ಅದು ರಾಮ ರಾಮ ರಾಮ ಎಂದಾಗಿ, ಏಕೋಭಾವದಿಂದ ತಪಗೈದ ಅವನ ಸುತ್ತ ಹುತ್ತ[ವಲ್ಮೀಕ]ವೇ ಬೆಳೆದುನಿಂತಿತು. ಕವಿತೆಯೆಂಬ ವನದಲ್ಲಿ ವಿಹರಿಸುವ ಸಿಂಹವಾದ ವಾಲ್ಮೀಕಿಮುನಿಗೆ ರಾಮನಾಮವನ್ನು ಕುಡಿದಷ್ಟೂ ಮತ್ತೂ ಕುಡಿಯಬೇಕೆಂಬ ಆಸೆಯಂತೆ. ಆದಕ್ಕೇ ಅತೃಪ್ತನೆಂದಿದ್ದಾರೆ. ವಾಲ್ಮೀಕಿ ಸಂತೃಪ್ತರೇ ಸರಿ ಆದರೂ ರಾಮನಾಮ ಜಪಿಸಿದಷ್ಟೂ ಮತ್ತೂ ಜಪಿಸಬೇಕೆಂಬ ಅವರ ಹಪಹಪಿಕೆಯನ್ನು ಮೇಲಿನ ಶ್ಲೋಕಗಳು ತೋರಿಸುತ್ತವೆ.

ತ್ರೇತಾಯುಗದಲ್ಲಿ ನಡೆದ ಕಥೆಗೆ ಇಂದಿಗೂ ಜೀವಂತಸಾಕ್ಷಿಯಾಗಿ ಹನುಮನಿದ್ದಾನೆ.

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪ ವಾರಿಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ರಾಮನ ಸೊಲ್ಲೆತ್ತಿದರೂ ಹನುಮ ಅಲ್ಲಿರುತ್ತಾನೆ ಎಂಬುದೊಂದು ಐತಿಹ್ಯ. ಇವತ್ತಿಗೂ ರಾಮಕಥೆಗಳು ನಡೆಯುವ ಸಭೆಗಳ ವೇದಿಕೆಯಲ್ಲಿ ಹನುಮನಿಗೆ ಒಂದು ಆಸನವನ್ನು ಇಡುವುದು ಅಭ್ಯಾಸ ಮತ್ತು ಗೌರವ ಸೂಚಕ. ಎಲ್ಲೇ ರಾಮಕಥೆ ನಡೆಯಲಿ ಅಲ್ಲಿಗೆ ಬಿಜಯಂಗೈಯ್ಯುವ ಮಾರುತಿ ಆ ಕಥೆಯನ್ನು ಕೇಳುತ್ತಾ ಶಿರಭಾಗಿ ಕೈಗಳಂಜಲಿಯಲ್ಲಿ ಆನಂದಬಾಷ್ಪವನ್ನು ಸುರಿಸುತ್ತಾನಂತೆ. ರಾಮನಾಗಿ ಮಹಾವಿಷ್ಣು ಬಂದರೆ ಹನುಮನಾಗಿ ಮಹಾರುದ್ರ ಶಿವ ಆತನ ಸೇವೆಗೆ ಬಂದಿದ್ದ! ದೈವೀ ಶಕ್ತಿ ಹಲವು ರೂಪಗಳಲ್ಲಿ ತನ್ನನ್ನೇ ಹೇಗೆ ಪ್ರಕಟಗೊಳಿಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಕಥೆ ಕೇಳಿದವರಲ್ಲೊಬ್ಬನನ್ನು ಯಾರೋ ಪ್ರಶ್ನಿಸಿ "ರಾಮನಿಗೆ ಸೀತೆ ಅಕ್ಕ ಆಗಬೇಕು" ಎಂದಿದ್ದನಂತೆ ಎಂಬುದು ನಾವು ನಮ್ಮ ಲಘುಹಾಸ್ಯಕ್ಕೆ ಬಳಸುವ ಹೇಳಿಕೆ. ಆದರೆ ನಿಜವಾಗಿ ನೋಡಿದರೆ ರಾಮನ ಜೀವನದಲ್ಲಿ ಆತ ಅನುಭವಿಸಿದ ಆತಂಕ ಬಹಳ. ಇಬ್ಬಂದಿತನವೂ ಬಹಳ. ಸಮೃದ್ಧವಾದ ಕೋಸಲದೇಶದ ಅಯೋಧ್ಯಾನಗರಕ್ಕೆ ಕಾಲಪುರುಷ ಬಂದಾಗ ಇಂತಹ ಸುಖದ ನಾಡಿನ ಜೀವನಕ್ಕೆ ತಾನು ಕುತ್ತು ತರುವುದೇ ಎಂದುಕೊಂಡನಂತೆ! ಆದರೂ ಆತನ ಕರ್ತವ್ಯ ಆತ ಮಾಡಲೇಕೇಕಿತ್ತು. ಪಟ್ಟಾಭಿರಾಮನ ರಾಜಸಭೆ ನಡೆಯುತ್ತಿರುವಾಗ ಎದುರಿಗೆ ದೂರದಲ್ಲಿ ಕಾಣಿಸಿಕೊಂಡ ಕಾಲ ರಾಮನ ಅಪ್ಪಣೆಗಾಗಿ ಕಾದನಂತೆ! ಅಂತೂ ಯಾರನ್ನೂ ತಿರಸ್ಕರಿಸದ ರಾಮ ಅನುಮತಿಸಿದಾಗ ಆ ಅರಮನೆಗೆ ಆತನ ಪ್ರವೇಶವಾಯ್ತು. ಕಾಲನ ಪ್ರವೇಶವಾದಾಗ ದೂರ್ವಾಸರೂ ಬಂದರು, ಕಾವಲುನಿಂತ ತಮ್ಮ ಲಕ್ಷ್ಮಣನನ್ನು ಹೂಂಕರಿಸಿ ಅವರು ಒಳನುಗ್ಗಿ ಏಕಾಂತ ಮಾತುಕತೆಗೆ ಭಂಗತಂದಾಗ ಮೊದಲೇ ಒಪ್ಪಿದ ಕರಾರಿನಂತೇ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವಾಗ ರಾಮನ ಮನಸ್ಸು ಇನ್ನಿಲ್ಲದ ನೋವನ್ನು ಅನುಭವಿಸಿತು. ಹಾದಿಹೋಕ ಅಗಸನೊಬ್ಬ ಅಣಕವಾಡಿ " ಬಿಟ್ಟ ಹೆಂಡತಿಯನ್ನು ಕಟ್ಟಿಕೊಳ್ಳಲು ನಾನೇನು ರಾಮನಲ್ಲ" ಎಂಬುದು ಕಾರಣವಾಗಿ ಸಮಾಜದಲ್ಲಿ ತನ್ನಮೇಲೆ ಅಪಸಂಶಯ ಬಾರದಿರಲೆಂಬ ಅನಿಸಿಕೆಯಿಂದ ತುಂಬುಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸುವಾಗ ಆದ ವೇದನೆಯನ್ನು ಹೇಳಿಕೊಳ್ಳಲು ಯಾರೂ ಇರಲಿಲ್ಲ; ಹಾಗೆ ಹೇಳಿಕೊಂಡು ಅಭ್ಯಾಸವೂ ಇದ್ದ ಜನ ರಾಮನಲ್ಲ. ಕಾಡಿಗೆ ತೆರಳಿದ ಸೀತೆಯ ಗತಿ ಏನಾಯ್ತು ಎಂಬ ಕಸಿವಿಸಿ ಮನೋವ್ಯಾಕುಲ ಬಹಳ ಸಮಯ ಕಾಡಿದರೂ ತನ್ನ ನಿತ್ಯ ಪ್ರಾರ್ಥನೆಯಲ್ಲಿ ಸೀತೆಯ ರಕ್ಷಣೆಯನ್ನು ನಂಬಿದ ದೈವಕ್ಕೆ ಒಪ್ಪಿಸಿಬಿಟ್ಟಿದ್ದ ರಾಜಾರಾಮ. ಆದರೂ ಪತಿಸಹಜ ಭಾವನೆಗಳು ಮನವನ್ನು ಮುತ್ತಿಕೊಳ್ಳದಷ್ಟು ಕ್ರೂರಿಯಾಗಿರಲಿಲ್ಲ ರಾಮ.

ಸೀತೆ ಸುರಕ್ಷಿತವಾಗಂತೂ ಇದ್ದಾಳೆ ಎಂಬ ಅನಿಸಿಕೆ ಮನಸ್ಸಿಗೆ ದೃಢವಾಗಿತ್ತು. ಬಸುರಿ ಸೀತೆ ಎಲ್ಲಿರಬಹುದು ? ಮಗು ಜನಿಸಿರಬಹುದೇ ? ಜನಿಸಿದ್ದರೆ ಆ ಮಗು ಹೆಣ್ಣೋ ಗಂಡೋ ? ಈಗ ಆ ಮಗು ಏನುಮಾಡುತ್ತಿರಬಹುದು ಎಂಬಿತ್ಯಾದಿ ಕುತೂಹಲಗಳು ಮನದಲ್ಲಿ ಇದ್ದೇ ಇದ್ದವು. ಹೀಗೇ ಜೀವನದುದ್ದಕ್ಕೂ ತನ್ನ ಹಾಗೂ ಹೆಂಡತಿ-ಮಕ್ಕಳ ವೈಯ್ಯಕ್ತಿಕ ಬದುಕನ್ನೇ ಮುಖ್ಯವಾಗಿ ಪರಿಗಣಿಸದೇ ಪ್ರಜೆಗಳೆಲ್ಲರ ಜೀವನವನ್ನೂ ತನ್ನ ಜೀವನವೆಂಬ ತುಂಬು ಹಂಬಲದಿಂದ ರಾಜ್ಯಭಾರನಡೆಸಿದ ಶ್ರೀರಾಮ ಅವರೆಲ್ಲರ ಮುಖದ ಮಂದಹಾಸದಲ್ಲೇ ಸುಖವನ್ನು ಕಾಣುತ್ತಿದ್ದ. ಕೇವಲ ಅಧಿಕಾರಕ್ಕಾಗಿ ಸಿಂಹಾಸನವನ್ನು ಬಯಸದೇ ಪ್ರಜೆಗಳ ಹಿತಕ್ಕಾಗಿ ರಾಜನಾಗಿದ್ದ ರಾಜಾರಾಮ ಕಾಲನ ಅಣತಿಯಮೇರೆಗೆ ಅವತಾರದ ಪರಿಸಮಾಪ್ತಿಮಾಡಿ ವೈಕುಂಠಕ್ಕೆ ಹೊರಡುವ ಘಳಿಗೆಯಲ್ಲೂ ಅಯೋಧ್ಯೆಯ ಸತ್ಪ್ರಜೆಗಳನ್ನು ಅಗಲಿ ಇನ್ನಿರಲಾರದ ಮನಸ್ಸು ಅವನದಾಗಿತ್ತು; ಅಷ್ಟಾಗಿ ಲೌಕಿಕ ಪ್ರಜಾ ವ್ಯಾಮೋಹ ಅವನಲ್ಲಿ ತುಂಬಿತ್ತು. ರಾಜರುಗಳು ಹಲವು ಹೆಂಡಿರನ್ನು/ರಾಣಿಯರನ್ನು ಹೊಂದಿರಬಹುದಾದ ಸನ್ನಿವೇಶದಲ್ಲಿಯೂ ರಾಮಮಾತ್ರ ಕಾಯಾ ವಾಚಾ ಮನಸಾ ಸೀತೆಯೊಬ್ಬಳನ್ನೇ ಹೆಂಡತಿಯನ್ನಾಗಿ/ ರಾಣಿಯನ್ನಾಗಿ ಪಡೆದು ಏಕಪತ್ನೀ ವ್ರತಸ್ಥನಾಗಿದ್ದ. ತನ್ನ ರಾಜ್ಯಭಾರದಲ್ಲಿ ಪಶು-ಪಕ್ಷಿಗಳ ಅಳಲನ್ನೂ ರಾಮ ಆಲೈಸುವಷ್ಟು ಸರ್ವಭೂತ ನಿವಾಸಿಯಾಗಿದ್ದ; ಸಹಾನುಭೂತಿ ಹೊಂದಿದ್ದ.

ರಾಮ ಸೇತುವೆ ಕಟ್ಟುವಾಗ ಚಿಕ್ಕ ಅಳಿಲೊಂದು ತಾನೂ ಸೇವೆಯಲ್ಲಿ ತೊಡಗಿತ್ತಂತೆ. ಪ್ರಾಯಶಃ ಅದಕ್ಕೆ ಭಗವಂತನ ಅವತಾರದ ಯಾವುದೋ ಕಲ್ಪನೆ ಬಂದಿತ್ತೋ ಏನೋ. ಸಮುದ್ರದ ನೀರಲ್ಲಿ ಮೈನೆನೆಸಿಕೊಂಡು ದಡಕ್ಕೆ ಬಂದು ಮರಳು-ಮಣ್ಣಿನಲಿ ಹೊರಳಾಡಿ ಮತ್ತೆ ಮರಳಿ ಸೇತುವೆ ಕಟ್ಟುವ ಜಾಗಕ್ಕೆ ಹೋಗಿ ನೀರಲ್ಲಿ ದೇಹವನ್ನು ಅದ್ದುತ್ತಿತ್ತಂತೆ. ಅದರಿಂದ ಮೈಗೆ ಅಂಟಿರುವ ಮಣ್ಣು-ಮರಳು ಸಾಗಿ ನೀರಲ್ಲಿ ಬೀಳುವುದಲ್ಲ ಎಂಬ ಸಣ್ಣ ಅನಿಸಿಕೆ ಅದರದ್ದಿತ್ತು. ಹಾಗೆ ಸೇವೆಮಾಡುತ್ತಿದ್ದ ಅಳಿಲನ್ನು ರಾಮ ಅಂತಹ ಗಡಿಬಿಡಿಯಲ್ಲೂ ಕೈಯ್ಯಲ್ಲೆತ್ತಿಕೊಂಡು ಅದರ ಬೆನ್ನಮೇಲೆ ಮೂರು ಬೆರಳಿನಲ್ಲಿ ಬಂಗಾರದ ರೇಖೆ ಬರೆದನಂತೆ. ಬಂಗಾರದ ಆಸೆಗೆ ಅದರ ಯಾರಾದರೂ ಅದರ ಜೀವವನ್ನು ತೆಗೆದಾರು ಎಂದುಕೊಂಡು ಕಲಿಯುಗದಲ್ಲಿ ಅದು ಬರೇ ರೇಖೆಗಳ ರೀತಿ ಗೋಚರಿಸುವಂತೇ ಆಗಿದೆಯಂತೆ. ಹೀಗೊಂದು ಜನಪ್ರಿಯ ಕಥೆಯಿದ್ದು ಚಿಕ್ಕ ಪ್ರಮಾಣದ ಸೇವೆಗೆ ’ಅಳಿಲು ಸೇವೆ’ ಎಂಬುದಾಗಿ ಉದಾಹರಿಸುತ್ತೇವೆ.

ದಶರಥನ ಆಸ್ಥಾನಕ್ಕೆ ಆಗಮಿಸಿದ ಗುರು ವಿಶ್ವಾಮಿತ್ರರು ಎಳೆಯ ಮಕ್ಕಳಾದ ರಾಮ-ಲಕ್ಷ್ಮಣರನ್ನು ಗುರುಕುಲ ವಿದ್ಯಾಭ್ಯಾಸಕ್ಕೆ ಕಳುಹಿಸಲು ದಶರಥನಲ್ಲಿ ಕೇಳಿದಾಗ ರಾಜಾ ದಶರಥನಿಗೆ ಅಷ್ಟು ಚಿಕ್ಕಮಕ್ಕಳನ್ನು ಕಾಡಿಗೆ ಹೇಗೆ ಕಳುಹಿಸುವುದೆಂಬ ಕಳವಳ. ಅದನ್ನರಿತ ವಿಶ್ವಾಮಿತ್ರರು ರಾಮ ಸಾಮಾನ್ಯದವನಲ್ಲ, ಆತನ ಸಾಮರ್ಥ್ಯ ಬೆಳಗಲು ಆತ ಈಗಲೇ ವಿದ್ಯಾಭ್ಯಾಸ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿದಾಗ ಮನಸ್ಸೇಕೋ ಹಿಂದೇಟು ಹಾಕುತ್ತಿದ್ದರೂ ಜೊತೆಗೆ ಇರುವವರು ವಿಶ್ವಾಮಿತ್ರರು ಎಂಬ ಅಭಿಪ್ರಾಯ ತಳೆದು ಕಳುಹಿಸಿದ್ದ. ವಿಶ್ವಾಮಿತ್ರರ ಜೊತೆಗೆ ಕಾಡಿಗೆ ನಡೆದ ಅಣ್ಣ-ತಮ್ಮಂದಿರು ಕಾಡ ದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿಯುತ್ತಾ ಏದುಸಿರು ಬಿಡುತ್ತಾ ಕ್ರಮಿಸಿದ ಹಾದಿ ಬಹುದೂರ.ನಡೆದೂ ನಡೆದೂ ನಡೆದೂ ದಣಿವಾಗಿ ಸರಿರಾತ್ರಿ ವಿಶಾಲವಾದ ಬಂಡೆಯೊಂದರಮೇಲೆ ಮಲಗಿದ ಮೂವರಲ್ಲಿ ವಿಶ್ವಾಮಿತ್ರರು ಬೆಳಗಿನ ಬ್ರಾಹ್ಮೀಮುಹೂರ್ತದಲ್ಲೇ ಇನ್ನೂ ಗಾಢ ನಿದ್ದೆಯಲ್ಲಿದ್ದ ಮುದ್ದು ಬಾಲಕ ಶ್ರೀರಾಮನನ್ನು ಕುರಿತು

ಕೌಸಲ್ಯಾ ಸುಪ್ರಜಾ ರಾಮಾ
ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವಮಾಹ್ನಿಕಂ ||

ಎಂದು ಎಬ್ಬಿಸುವ ಆ ದೃಶ್ಯ ಮಕ್ಕಳಿರುವ ಯಾವ ಪಾಲಕರ ಕಣ್ಣಲ್ಲೂ ನೀರುತರಿಸದೇ ಇರುವಂತಹುದಲ್ಲ. ಜಗದ ಜೀವರಾಶಿಗಳ ದುಃಖವನ್ನು ತೊಡೆಯುವ ಇಂತಹ ಶ್ರೀರಾಮ ಜನಿಸಿದ್ದು ಚೈತ್ರ ಶುದ್ಧ ನವಮಿಯಂದು ಬೆಳಗಿನ ಜಾವದಲ್ಲಿ. ಪ್ರಜಾರಂಜಕ ಗುಣವೂ ಸೇರಿದಂತೇ ಸಕಲ ಸದ್ಗುಣಗಳ ಗಣಿಯಾಗಿದ್ದ ಶ್ರೀರಾಮ ಅದಕ್ಕೇ ಇಂದಿಗೂ ಸರ್ವಜನಾನುರಾಗಿ. ರಾಮನಿಗೆ ಕ್ಷುದ್ರ ಶಕ್ತಿಗಳು ನಿಶಾಚರ ಶಕ್ತಿಗಳು ಹೆದರುತ್ತವಂತೆ. ರಾಮ ಹೆಜ್ಜೆಯಿಟ್ಟಲ್ಲಿ ಅವುಗಳು ನಾಶಹೊಂದುತ್ತವಂತೆ. ಅದಕ್ಕೇ

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯ ರತ್ನದೀಪಮ್ |
ಆಜಾನುಬಾಹುಮ್ ಅರವಿಂದದಳಾಯತಾಕ್ಷಮ್
ರಾಮಂ ನಿಶಾಚರವಿನಾಶಕರಮ್ ನಮಾಮಿ ||

--ಹೀಗೆ ಧ್ಯಾನಿಸುತ್ತಾರೆ.

ಸುಖ ಸಂಪತ್ತಿನ ಪ್ರಾಪ್ತಿಗಾಗಿ :

ಆಪದಾಮಪ ಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||

--ಈ ರೀತಿ ಸ್ತ್ರೋತ್ರಮಾಡುತ್ತಾರೆ.

ಶ್ರೀರಾಮನ ಬಗ್ಗೆ ಹೇಳುವುದನ್ನು ಕೇಳುವುದೇ ಚಂದ. ಚಂದಕ್ಕೆ ಮತ್ತೊಂದು ಹೆಸರೇ ಶ್ರೀರಾಮಚಂದ್ರ. ವಿದ್ವಾಂಸರು ರಾಮಕಥೆಯನ್ನು ಪ್ರಸ್ತಾಪಿಸಿದಾಗ ಆ ಕಲ್ಲುಸಕ್ಕರೆಯನ್ನು ಮತ್ತಷ್ಟು ಕೊಳ್ಳುವಾಸೆ. ರಾಮನ ಬಗ್ಗೆ ತದನಂತರದಲ್ಲಿ ಹಲವು ರಾಮಾಯಣಗಳು ಬರೆಯಲ್ಪಟ್ಟವು. ಆದರೂ ಮಹರ್ಷಿ ವಾಲ್ಮೀಕಿ ಬರೆದ ’ವಾಲ್ಮೀಕಿ ರಾಮಾಯಣ’ ಎಲ್ಲದಕ್ಕೂ ಶೃಂಗವಾಗಿದೆ. ’ಪಿಬರೇ ರಾಮರಸಂ ಮಾನಸ ......’ ಹಾಡು ಅದ್ಭುತವೂ ಕರ್ಣಾನಂದಕರವೂ ಆಗಿದೆ.

ಸಂತಸದಿಂದ ಶ್ರೀರಾಮನ ಕಥೆಯ ಕೆಲವಂಶಗಳನ್ನು ನಿಮ್ಮೊಡನೆ ಹಂಚಿಕೊಂಡ ನಂತರದಲ್ಲಿ ಜಗತ್ತಿನ ಸಮಸ್ತರಿಗೂ ಶುಭವನ್ನು ಕೋರುತ್ತಾ, ಸಮೃದ್ಧಿಯನ್ನು ಪ್ರಾರ್ಥಿಸುತ್ತಾ , ರಘುವೀರನಿಗೂ ಆತನ ಪರಿವಾರಕ್ಕೂ ಹನುಮನಿಗೂ ನಮಿಸುತ್ತಾ ಕಥೆಗೆ ಮಂಗಳ ಹಾಡುತ್ತೇನೆ.

ನೇಮವೆನಗೆ ಇರಲೀ ರಾಮಾ ನಾಮ ನೆನೆಯಬರಲೀ
ಸೋಮಸುಂದರನೆ ರಾಮಚಂದಿರನೆ ಬಾಳನೌಕೆಯಲ್ಲೀ
ರಾಮಾ ಬಾಳನೌಕೆಯಲ್ಲೀ || ಪ ||

ಕ್ಷೇಮದಿ ಪ್ರಜೆಗಳ ರಂಜಿಸಿ ಅನುದಿನ
ಕಾಮಿತಾರ್ಥಗಳ ಕರುಣಿಸಿದಾತನೆ
ರೋಮರೋಮದಲು ರಾಮನಾಮವದು ತುಂಬಿಹರಿಯುತಿರಲೀ
ರಾಮಾ ತುಂಬಿ ಹರಿಯುತಿರಲೀ || ೧ ||

ಆಮಹಾಮಹಿಮ ಗುರು ವಶಿಷ್ಠರು
ಸಾಮಗಾನದಷ್ಟಾಕ್ಷರಿಯೊಳ ’ರಾ’
ಆಮಂತ್ರಿಸಿ ಪಂಚಾಕ್ಷರಿಯೊಳ ’ಮ’ ಸೇರಲಾಯ್ತು ಶುಭನಾಮ
ರಾಮಾ ಸೇರಲಾಯ್ತು ಶುಭನಾಮ || ೨ ||

ಹೇಮಕಂಕಣ ಕೇಯೂರ ಕಿರೀಟಿಯೆ
ಪ್ರೇಮಮೂರ್ತಿ ಕರುಣಾರ್ದೃ ಹೃದಯಿಯೇ
ಭೀಮರಕ್ಷೆ ನಿನ್ನ ನಾಮದ ಬಲವದು ಹಾಡಲು ಕೇಳಲು ಹಿತಕರ
ರಾಮಾ ಹಾಡಲು ಕೇಳಲು ಹಿತಕರವು || ೩ ||

ಮಂಗಲಂ ಕೋಸಲೇಂದ್ರಾಯ ಮಹನೀಯಗುಣಾಬ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್||

Sunday, April 10, 2011

ಅಣ್ಣಾ ಹಜಾರೆ ಮತ್ತು ಸಾಯಿಬಾಬಾರಂಥ ಕೆಲಜನ



ಅಣ್ಣಾ ಹಜಾರೆ ಮತ್ತು ಸಾಯಿಬಾಬಾರಂಥ ಕೆಲಜನ

ವಿಷಯ ನಿಮಗೆಲ್ಲ ಗೊತ್ತಿರುವುದೇ ಆದರೂ ಅದನ್ನು ಮತ್ತೊಮ್ಮೆ ನಿಮ್ಮೊಡನೆ ಹರಟುವ ಜಿಹ್ವಾಚಾಪಲ್ಯದಿಂದ ಹೀಗೆ ಪ್ರಸ್ತಾಪಿಸುತ್ತಿದ್ದೇನೆ. ಪುಟ್ಟಪರ್ತಿಯ ಸಾಯಿಬಾಬಾ ಅವರು ತಾನೇ ಶಿರಡಿಯಲ್ಲಿ ಅವತಾರ ಮುಗಿಸಿ ಅಲ್ಲಿಗೆ ಬಂದೆನೆಂದೂ ಮುಂದೆ ಕರ್ನಾಟಕದಲ್ಲಿ ಮತ್ತೆ ಜನಿಸುವೆನೆಂದೂ ಹೇಳಿದ್ದರಂತೆ ಎಂಬುದು ಹಲವು ಮೂಲಗಳು ಹೇಳುವ ವಿಚಾರ. ಅವರು ದೇವರೋ ದೇವಮಾನವರೋ ಅದು ನನಗೆ ಬಾಧಿತವಲ್ಲ. ಅವರನ್ನು ಯಾವ ರೀತಿಯಲ್ಲೇ ಸ್ವೀಕರಿಸಿದರೂ ಅವರು ಮಾಡಿದ ಸೇವೆಯನ್ನು ಜನ ಮರೆಯಲಾಗುವುದಿಲ್ಲ.

ಭಜನೆಯ ಹುಡುಗನೊಬ್ಬ ಚೇಳುಕುಟುಕಿದಾಗಿನಿಂದ ಬದಲಾಗಿಹೋಗಿ ಹಲವು ಹೊಸದನ್ನು ಕಾಣುತ್ತಾ ಹೇಳುತ್ತಾ ಸಾವಿರಾರು ಜನರ ನೋವನ್ನು ಮರೆಸಿದ್ದು, ಸಿಗದಿದ್ದ ಯಾವುದೋ ಅನುಕೂಲವನ್ನು ಸಿಗುವಂತೇಮಾಡಿದ್ದು, ನಂಬಿಬಂದವರ ಜನಸಾಮಾನ್ಯರನ್ನೂ ತನಗೆ ಯಾರೂ ಹೆಚ್ಚು ಅಥವಾ ಯಾರೂ ಕಮ್ಮಿ ಅಲ್ಲ ಎಂಬ ಏಕೋಭಾವದಿಂದ ಕಂಡಿದ್ದು, ನೀರಿಲ್ಲದ ಆಂಧ್ರದ ಜಿಲ್ಲೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಬಡಜನರ ಭೌತಿಕ ಕಾಯಿಲೆಗಳಿಗೆ ಧರ್ಮಾರ್ಥ ಉನ್ನತ ದರ್ಜೆಯ ಆಸ್ಪತ್ರೆ ಕಟ್ಟಿಸಿದ್ದು ಇದೆಲ್ಲಾ ಮಾತ್ರ ಬಹಳ ವಿಶೇಷವಾಗಿಯೂ ಮತ್ತು ಆಶ್ಚರ್ಯವಾಗಿಯೂ ಕಾಣುತ್ತದೆ. ಅವರು ಮಾಡಿದ ಹಲವು ಕೆಲಸಗಳನ್ನು ನಾವೂ ನೀವೂ ಸಂಕಲ್ಪಿಸಲೂ ಆಗುತ್ತಿತ್ತೋ ಇಲ್ಲವೋ ! ಬಾಬಾ ದುಡಿದು ಜನರಿಗೆ ಕೊಟ್ಟರೇ ? ಅಲ್ಲ ಅದರೆ ತನ್ನ ದರ್ಶನ ಸ್ಪರ್ಶನಕ್ಕೆ ಕಾಣಿಕೆಯಾಗಿ ಬಂದ ಹಣದ ಬಹುಭಾಗವನ್ನು ಅವರು ಸಮಾಜಕ್ಕೇ ಮರಳಿಸಿದ್ದಾರೆ.

ಸಾರ್ವಜನಿಕರ ಹಣವನ್ನು ಗುಳುಂ ಸ್ವಾಹಾ ಮಾಡುವ ರಾಜಕಾರಣಿಗಳು ನಡೆಸುವ ಸರಕಾರ ಮಾಡಲಾಗದ ಮಹತ್ತರ ಯೋಜನೆಗಳನ್ನು ತ್ವರಿತಗತಿಯಲ್ಲಿ ಬಾಬಾ ಮಾಡಿತೋರಿಸಿದ್ದಾರೆ. ಬಹುತೇಕ ಭಾರತದ ಸಾಧು-ಸಂತರ ಮೂಲ ಧ್ಯೇಯೋದ್ದೇಶಗಳೇ ಇವಾಗಿವೆ. ಇದ್ದವರಿಂದ ಬಂದ ಕಾಣಿಕೆಗಳನ್ನು ಕ್ರೋಢೀಕರಿಸಿ ಇರದಿದ್ದವರಿಗೆ ಹಂಚಿ ಎಲ್ಲರನ್ನೂ ಸುಖಿಗಳನ್ನಾಗಿ ಮಾಡುವುದಾಗಿದೆ. ನಾನು ಓದಿತಿಳಿದ ಪ್ರಕಾರ ಶಿರಡಿಯಲ್ಲೂ ಒಮ್ಮೆ ಆಗರ್ಭ ಶ್ರೀಮಂತನೊಬ್ಬ ಬಾಬಾರಿಗೆ ಕಾಣಿಕೆ ಕೊಟ್ಟಾಗ ಅದನ್ನು ಅವರು ನೇರವಾಗಿ ಬಹಳ ಆಪತ್ತಿನಲ್ಲಿರುವ ಇನ್ನೊಬ್ಬ ಬಡವನಿಗೆ ನೀಡಿದ್ದರಂತೆ. ಇನ್ನೂ ಸ್ವಲ್ಪ ಮುಂದುವರಿದು ಹೇಳುವುದಾದರೆ ವರದಹಳ್ಳಿಯ ಶ್ರೀಧರಸ್ವಾಮಿಗಳಲ್ಲಿ ಹೊನ್ನಾವರ ತಾಲೂಕಿನ ಹಳದೀಪುರದ ವ್ಯಕ್ತಿಯೊಬ್ಬರು ತಮ್ಮ ಮಗನ ವಿದ್ಯಾಭ್ಯಾಸಕ್ಕೆ ಆರ್ಥಿಕ ಮುಗ್ಗಟ್ಟು ತೊಂದರೆಕೊಡುತ್ತಿದೆ ಎಂದು ತೋಡಿಕೊಂಡಾಗ ಸ್ವತಃ ಕೈಯ್ಯಿಂದ ದುಡ್ಡನ್ನು ಮುಟ್ಟದ ಸ್ವಾಮಿಗಳು ತಮಗೆ ಕಾಣಿಕೆ ಬಂದಿದ್ದನ್ನು ಪೇರಿಸಿ ಇಟ್ಟಿದ್ದ ಸಣ್ಣ ಪೆಠಾರಿಯನ್ನು ಶಿಷ್ಯನಮೂಲಕ ತರಿಸಿ ಪ್ರಾರ್ಥನೆಮಾಡಿ ನಿಂತಿದ್ದ ಹಳದೀಪುರದ ವ್ಯಕ್ತಿಯ ಶಾಲಿನಲ್ಲಿ ಸಂಪೂರ್ಣ ಹಾಕಿಬಿಡುವಂತೇ ಹೇಳಿದರಂತೆ. ಆ ಶಿಷ್ಯ ಹಾಗೆ ಹಾಕಿದಮೇಲೆ ಅದರಮೇಲೆ ಮಂತ್ರಾಕ್ಷತೆ ಎರಚಿ " ಮಗಾ ಈ ದುಡ್ಡು ನಿನ್ನ ಮಗನ ವಿದ್ಯಾಭ್ಯಾಸಕ್ಕೆ ಸಾಕಾಗುತ್ತದೆ ಚಿಂತೆಮಾಡಬೇಡಾ " ಎಂದಿದ್ದರಂತೆ. ಅದರಂತೇ ಹಳದೀಪುರದ ಆ ವ್ಯಕ್ತಿಯ ಮಗ ಚೆನ್ನಾಗಿ ಓದಿ ಈಗ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕಿವಿ-ಮೂಗು-ಗಂಟಲು ವೈದ್ಯರಾಗಿ ಕೆಲಸಮಾಡುತ್ತಿದ್ದಾರೆ.

ಹೀಗೇ ಭಾರತದುದ್ದಗಲಕ್ಕೂ ಹಾಗೂ ಭಾರತದ ಇತಿಹಾಸದುದ್ದಕ್ಕೂ ಹಲವು ವ್ಯಕ್ತಿಗಳು ಆಗಿಹೋಗಿದ್ದಾರೆ, ಇನ್ನೂ ಆಗಾಗ ಜನಿಸಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಂದೆಯ ಬಡತನದಲ್ಲಿ ಓದಿಸಲಾಗದ ಅನಾನುಕೂಲತೆಗೆ ಅತ್ತೆ ಕರೆದಾಗ ಹಳ್ಳಿಯಿಂದ ಮುಂಬೈ ಶಹರಕ್ಕೆ ಬಂದು ಅಲ್ಲಿ ೭ನೇ ತರಗತಿಯವರೆಗೆ ಓದಿ ಅದೂ ಸಾಕೆನಿಸಿ ಮರಳಿ ಹಳ್ಳಿಗೆ ಹೋಗಲೂ ಇಷ್ಟವಾಗದೇ ತಂದೆಯ ಬದುಕಿಗೆ ಭಾರವಾಗಬಾರದೆಂದು ಹೂಮಾರುವ ಹುಡುಗನಾಗಿ ಬದುಕಿದ ಅಣ್ಣಾ ಹಜಾರೆ ಕಾಲಾನಂತರದಲ್ಲಿ ಭಾರತೀಯ ಸೈನ್ಯಕ್ಕೆ ಸೇರಿ ೧೫ ವರ್ಷಗಳಕಾಲ ಸೈನಿಕನಾಗಿದ್ದರೂ ಕೇವಲ ತನ್ನ ಸ್ವಾರ್ಥಕ್ಕಾಗಿ ಬದುಕದ ಆ ಮನಸ್ಸು ಚಡಪಡಿಸಿ ಆ ಕೂಡಲೇ ರಾಜೀನಾಮೆ ನೀಡಿ ಹೊರಬಂದು ದೇವಸ್ಥಾನದ ಕೋಣೆಯೊಂದರಲ್ಲಿ ಇಡೀ ಜೀವಿತವನ್ನು ಕಳೆಯುತ್ತಾ ಸಮಾಜಸೇವೆಗಾಗಿ ತನ್ನನ್ನು ಸಮರ್ಪಿಸಿಕೊಂಡ ಅಣ್ಣಾ ಹಜಾರೆ ಎಂಬ ಸರಳ ಜೀವಿ ಬ್ರಷ್ಟಾಚಾರ ರೋಗಮುಕ್ತ ಭಾರತದ ಕನಸು ಕಂಡರು ಮತ್ತು ಅದಕ್ಕಾಗಿ ಶ್ರಮಿಸುತ್ತಲೇ ಬಂದರು. ಬೆಂಗಳೂರಿನಲ್ಲಿ ಶಿಕ್ಷಣತಜ್ಞ ಡಾ| ಎಚ್.ನರಸಿಂಹಯ್ಯನವರ ಜೀವನ ಕೂಡ ಇದೇ ರೀತಿ ಸರಳಜೀವನ ನಡೆಸಿದ್ದರು ಮತ್ತು ಹಲವರ ಅನುಕೂಲಕ್ಕಾಗಿ ’ನ್ಯಾಷನಲ್ ಎಜ್ಯುಕೇಶನ್ ಟ್ರಸ್ಟ್’ ಹುಟ್ಟುಹಾಕಿ ಡೊನೇಶನ್ ರಹಿತ ಶಾಲಾಕಾಲೇಜುಗಳನ್ನು ನಡೆಸಿಬಂದಿದ್ದರು ಎಂಬುದು ಸ್ಮರಣೆಗೆ ಬರುವ ವಿಚಾರ. ಸರಳ ಜೀವನ ಎಂದು ಬೋಧಿಸುವುದು ಸುಲಭ; ಆಚರಿಸುವುದು ಕಷ್ಟ. ಐಶಾರಾಮೀ ಸವಲತ್ತುಗಳನ್ನೆಲ್ಲಾ ಪಡೆದೂ ’ಸರಜೀವಿ’ ಎಂಬ ಬೋರ್ಡು ಹಾಕಿಕೊಳ್ಳುವವರೇ ಬಹಳಜನ. ಸಂಸಾರಿಗಳು ಸರಳಜೀವಿಗಳಾಗಲು ಕಷ್ಟಸಾಧ್ಯ! ಹೀಗಾಗಿ ಸಂಸಾರವನ್ನೇ ಕಟ್ಟಿಕೊಳ್ಳದೇ ದೇಶವೇ ತನ್ನ ಮನೆ ದೇಶವಾಸಿಗಳೇ ತನ್ನ ಸಂಸಾರ ಎಂಬ ಭಾವನೆ ಇಟ್ಟು ಬದುಕುವ, ತನಗೆ ದೊರೆಯಬಹುದಾದ ಎಲ್ಲಾ ಐಹಿಕ ಸುಖೋಪಭೋಗಗಳನ್ನು ತೊರೆಯುವ ಜನ ನಿಜಕ್ಕೂ ಒಂದರ್ಥದ ತಪಸ್ವಿಗಳಾಗುತ್ತಾರೆ. ಅವರ ಆ ನೈತಿಕ ನಿಷ್ಠೆಗೆ ದೇಶವಾಸಿಗಳ, ಸಮಾಜದ ಸಾತ್ವಿಕ ಬೆಂಬಲ ಸಿಗುತ್ತದೆ ಎಂಬುದಕ್ಕೆ ಮೊನ್ನೆ ನಡೆದ ಆಂದೋಲನವೇ ಸಾಕ್ಷಿ.

ಭವ್ಯಭಾರತವೆಂದು ಕರೆಸಿಕೊಳ್ಳುವುದಕ್ಕೆ ನಮ್ಮಲ್ಲಿನ ಈ ವೈಶಿಷ್ಟ್ಯವೇ ಕಾರಣವಾಗಿದೆ. ಪವಾಡಗಳನ್ನು ನಾವು ನಂಬದೇ ಇದ್ದರೂ ಎಲ್ಲಾ ಪವಾಡಗಳೂ ಕೇವಲ ರಹಸ್ಯ ಕಾರ್ಯಾಚರಣೆಯಿಂದ ಆಗುವುದಿಲ್ಲ. ನಾನು ಸಾಯಿಬಾಬಾ ಭಕ್ತನಲ್ಲ;ಆದರೆ ಕಾಣುವುದನ್ನು ಹೇಳಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಸಾಯಿಬಾಬಾ ಶಿವಲಿಂಗವೊಂದಕ್ಕೆ ಕಾಲೀ ಬಿಂದಿಗೆಯೊಳಗೆ ಕೈಯ್ಯಾಡಿಸುತ್ತಾ ಭಸ್ಮದ ಅಭಿಷೇಕ ಮಾಡುತ್ತಾರಲ್ಲಾ. ಅದೂ ಅಲ್ಪ ಸ್ವಲ್ಪವಲ್ಲ, ಕ್ವಿಂಟಾಲುಗಟ್ಟಲೇ ಭಸ್ಮ! ಅದು ಅಲ್ಲಿ ಹೇಗೆ ಬಂತು ? ಹಾಗಂತ ಛಾಯಾಚಿತ್ರಗಳಲ್ಲಿ ಭಸ್ಮ ಮತ್ತು ಜೇನುತುಪ್ಪ ಉದುರುತ್ತದೆ ಎಂಬುದನ್ನು ನಾನು ನಂಬಲಾರೆ. ಆದರೂ ಯೋಗ ಹೇಳುತ್ತದೆ-- ಮುಮುಕ್ಷುವಾಗ ಹೊರಟ ಮಾರ್ಗದ ಆದಿಯಲ್ಲಿ ಒಂದುಹಂತದ ಸಾಧನೆ ಆದಾಗ ಪವಾಡಗಳು ಘಟಿಸಲು ಸಾಧ್ಯ ಅಂತ. ಆದರೆ ಪವಾಡಗಳನ್ನೇ ನೆಚ್ಚಿಕೊಂಡು ಕುಳಿತುಕೊಳ್ಳಬೇಡಿ ಎಂಬುದಾಗಿಯೂ ಸಾಕ್ಷಾತ್ಕಾರ ಪಡೆದವರು ಹೇಳುತ್ತಾರೆ. ಆದರೂ ಕೆಲವೊಮ್ಮೆ ಅದೇಕೆ ಕೆಲವು ಸಾಧು-ಸಂತರು ಸಮಾಜದ ಕೆಲವರಿಗೆ ಅವರ ಲೌಕಿಕ ಬದುಕಿನಲ್ಲಿ ಪವಾಡನಡೆಸಿ ಸಹಕರಿಸುತ್ತಾರೋ ತಿಳಿಯದಾಗಿದೆ! ಏನೇ ಇದ್ದರೂ ಬಂದ ಹಣವನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸದ್ವಿನಿಯೋಗಮಾಡುವ ಆ ಪವಾಡವಿದೆಯಲ್ಲಾ ಅದಕ್ಕಿಂತಾ ಹೆಚ್ಚಿನ ಪವಾಡ ಬೇಕಾಗಿಲ್ಲ. ಹೀಗಾಗಿ ಇಂಥಾ ಬಾಬಾಗಳು ಸಾವಿರಾರು ವರ್ಷ ಬಾಳಿದರೂ ಬೇಡ ಎನಿಸುವುದಿಲ್ಲ. ಇದೇ ಸಮಯದಲ್ಲಿ ಪುಟ್ಟಪರ್ತಿ ಸಾಯಿಬಾಬಾ ಗುಣಮುಖರಾಗಲಿ ಎಂದು ಹಾರೈಸೋಣ.

ಸಾಧು-ಸಂತರ ವೇಷಗಳನ್ನು ತೊಟ್ಟ ನಿತ್ಯಾನಂದಾದಿ ಕೆಲವರಿಂದ ಆಗಬಾರದ ಅನಾಹುತಗಳು ಆಗುತ್ತಲಿವೆ. ಇದರಿಂದ ಯಾರು ಸಾಧು ಯಾರು ವೇಷಧಾರೀ ಸಾಧು ಎಂಬುದನ್ನು ಹುಡುಕುವುದು ಸಹಜವಾದರೂ ತೀರ್ಮಾನಕ್ಕೆ ಬರಲು ಕಷ್ಟವಾಗುತ್ತದೆ. ಇದಕ್ಕೆಲ್ಲಾ ಜನತೆಯಲ್ಲಿ ನಂಬಿಕೆ, ವಿಶ್ವಾಸ ಭಂಗವಾಗಿರುವುದೇ ಕಾರಣವಾಗಿದೆ. ಮೊದಮೊದಲು ಬ್ಯಾಂಕ್‍ಗಳಲ್ಲಿ ಖಾತೆ ತೆರೆಯಲಾಗಲೀ ರೇಶನ್ ಕಾರ್ಡ್ ಮಾಡಿಸಲಾಗಲೀ ಛಾಯಾಚಿತ್ರಗಳ ಅನಿವಾರ್ಯತೆ ಇರಲಿಲ್ಲ. ಈಗೀಗ ಅವೂ ಸಾಲದಾಗಿ ಬೇರೇ ಬ್ಯಾಂಕುಗಳಲ್ಲಿನ ಖಾತೆಯ ವಿವರ, ವಾಸ್ತವ್ಯದ ವಿಳಾಸಕ್ಕೆ ಅಧಿಕೃತ ಮಾಹಿತಿ, ಪಾನ್ ನಂಬರು ಹೀಗೇ ಹಲವಾರು ಮಾಹಿತಿಗಳ ಅವಶ್ಯಕತೆ ಕಾಣಬಂದಿದ್ದು ಹಲವರು ಅವುಗಳನ್ನು ದುರುಪಯೋಗ ಪಡಿಸಿಕೊಳ್ಳಲು ತೊಡಗಿದಮೇಲೆ. ಜನಸಂಖ್ಯೆ ಜಾಸ್ತಿಯಾದಂತೇ ಕೂಡುಕುಟುಂಬಗಳು ಮರೆಯಾಗಿ ಎಲ್ಲೆಲ್ಲೂ ಸ್ವಾರ್ಥವೇ ಮೆರೆಯುತ್ತಿರುವಾಗ ಪ್ರತೀ ವ್ಯಕ್ತಿ ತನ್ನ ಸ್ವಾರ್ಥದ ನೇರಕ್ಕೇ ನೋಡಿಕೊಳ್ಳುತ್ತಾ ಸಾಮಾಜಿಕ ಅನ್ಯಾಯಕ್ಕೆ ಕಾರಣನಾಗುತ್ತಿರುವುದರಿಂದ ಅದನ್ನು ಹತೋಟಿಗೆ ತರಲು ಹಲವು ಪ್ರಯತ್ನಗಳು ನಡೆದಿವೆ. ಮೊನ್ನೆಯಷ್ಟೇ ಇಂಧನ ಇಲಾಖೆ ಗ್ರಾಹಕರಿಗೆ ಅಡಿಗೆ ಅನಿಲವನ್ನು ಪೂರೈಸಲು ಅಧಿಕೃತ ನಾಗರಿಕ ಸರಬರಾಜು ಪಟ್ಟಿಯ ಮಾಹಿತಿ ಮತ್ತು ವಿದ್ಯುತ್ ಹಾಸಲು ಪಟ್ಟಿಯನ್ನು ಹಾಜರುಪಡಿಸುವಂತೇ ಕೋರಿದ್ದು ನಮಗೆ ತಿಳಿದುಬಂದಿದೆಯಲ್ಲವೇ ? ಇಲ್ಲೆಲ್ಲಾ ನೋಡಿದಾಗ ಅನಿಸುವುದು ’ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖ[ಬ್ರಷ್ಟಾಚಾರಿಯ]ನ ಸಂಖ್ಯೆ ಕಡಿಮೆಯಾದೀತು’ ಎಂಬ ಸ್ವಾಮೀ ವಿವೇಕಾನಂದರ ವಾಣಿ.

ಇಲ್ಲೀವರೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದ ಜನರಿಗೆ ಈಗೀಗ ಇದರಲ್ಲಿನ ಲೋಪದೋಷಗಳು ಕಾಣುತ್ತಿವೆ. ರಾಜನ ಆಳ್ವಿಕೆಯೇ ವಾಸಿಯಾಗಿತ್ತು ಎಂಬಷ್ಟರ ಮಟ್ಟಿಗೆ ಮನಸ್ಸು ರೋಸಿಹೋಗಿದೆ. ದಿನವೂ ಹಲವಾರು ರಾಜಕೀಯ ರಂಪಾಟಗಳು, ಅಪ್ಪ-ಮಕ್ಕಳದ್ದೇ ಒಂದು ಪಕ್ಷ, ಹಲವಾರು ಖೂಳರು ಸೇರಿ ದೋಚಿದ್ದನ್ನು ಹಂಚಿಕೊಳ್ಳುವ ಹಾಗೂ ಹಂಚಿಕೆಯಲ್ಲಿ ಪಾಲು ಕಮ್ಮಿಯಾದಾಗ ಅಥವಾ ವ್ಯತ್ಯಾಸ ಕಂಡುಬಂದಾಗ ಭಿನ್ನರಾಗಿ ಕಾಣಿಸಿಕೊಳ್ಳುವ ದೊಂಬರಾಟಗಳು ಜಾಸ್ತಿಯಾಗುತ್ತಿವೆ. ಹಾಡಹಗಲೇ ಶಾಸಕನೊಬ್ಬ ಆಡಳಿತ ಯಂತ್ರವಿರುವ ಜಾಗದಲ್ಲೇ ಲಂಚಪಡೆದರೂ ವಿಚಾರಣೆಗೆ ಒಳಪಡಿಸುವಾಗ ಆತನಿಗೆ ಎಂದೂಬರದಿದ್ದ ’ಎದೆನೋವು’ ಕಾಣಿಸಿಕೊಳ್ಳುತ್ತದೆ! ಸ್ನೇಹಿತನ ಹೆಂಡತಿಯನ್ನೇ ಭೋಗಿಸಲು ಹೋಗಿ ಬಲೆಯಲ್ಲಿ ಸಿಕ್ಕು ಒದ್ದಾಡಿ ಎಲ್ಲಾ ಮಾಧ್ಯಮದವರ ಸುದ್ದಿಗೆ ಆಹಾರವಾಗಿ ಕೊನೆಗೆ ಮಂತ್ರಿಗಿರಿಗೆ ಅನಿವಾರ್ಯವಾಗಿ ರಾಜೀನಾಮೆ ಸರಬರಾಜುಮಾಡಿದಾತನೊಬ್ಬ ವಿಚಾರಣೆಗೆ ಒಳಪಡಬೇಕಾದಾಗ ಇಲ್ಲದ ರೋಗ ಉಲ್ಬಣಿಸಿ ಆಸ್ಪತ್ರೆಯಲ್ಲಿ ಮಲಗುವುದು ಅದೂ ಸರಕಾರೀ ಆಸ್ಪತ್ರೆಯಲ್ಲೇ ಅಡ್ಡಡ್ಡ ಮಲಗಿ ನಿದ್ದೆಮಾಡಿದ ದೃಶ್ಯ ಜನರ ಕಣ್ಣಿಗೆ ಪೂರೈಕೆಯಾಗಿದೆ. ನೋಟಿಫೈ ಮತ್ತು ಡಿನೋಟಿಫೈ ಎಂಬ ಆಂಗ್ಲ ಶಬ್ದಗಳು ರೇಜಿಗೆ ಹುಟ್ಟಿಸಿವೆ. ಕಾಸಿದ್ದರೆ ಏನೂ ಮಾಡಬಹುದೆಂಬ ಕಾರಣದಿಂದ ರೈತರ ಭೂಮಿ-ಮನೆಗಳನ್ನು ರಸ್ತೆಗೆ ಅಂತ ಸ್ವಾಹಾಕಾರ ಮಾಡಿ ಅವರನ್ನೆಲ್ಲಾ ಒಕ್ಕಲೆಬ್ಬಿಸಿದ್ದು ಮರೆಯಲಾರದ ಕಹಿ ಅನುಭವ. ದೇಶ ತಮ್ಮಿಂದ ಮಾತ್ರವೇ ಉದ್ಧಾರವಾಗಲು ಸಾಧ್ಯ ಎಂಬ ಅಪ್ಪ-ಮಕ್ಕಳ ಹಾಗೂ ಅವರ ತಲೆಹಿಡುಕ ಕಾರ್ಯದರ್ಶಿಗಳ ಅಂಬೋಣವನ್ನು ನೋಡಿ ಜನ ನಗಬೇಕೋ ಅಳಬೇಕೋ ತಿಳಿಯದಾಗಿದ್ದಾರೆ. ಹೇಗಾದರೂ ಮಾಡಿ ಖುರ್ಚಿಗೆ ಬರಬೇಕಲ್ಲಾಎಂಬುದು ಹಲವು ’ಕೈ’ಗಳ ಒಗ್ಗೂಡುವಿಕೆಯ ಪ್ರಯತ್ನವಾಗಿದೆ!

ಮತ್ತೆ ಚುನಾವಣೆ, ಮತ್ತೆ ಮರುಚುನಾವಣೆ, ಮತ್ತೆ ಯಾರಿಗೂ ಬಹುಮತ ಇಲ್ಲದೇ ಅನೈತಿಕ ಹೊಂದಾಣಿಕೆ. ಹೊಟ್ಟೆಗೆ ’ಆಹಾರ’ ಸಿಗದಾಗ ಮತ್ತೆ ಬೆಂಬಲ ಹಿಂಪಡೆಯುವ ಮಸಲತ್ತು! ಕುದುರೆ ವ್ಯಾಪಾರ!-ಅದೂ ದೂರದ ಐಶಾರಾಮೀ ಪಂಚತಾರಾ ಹೋಟೆಲ್‍ಗಳಲ್ಲಿ. ಅಪ್ರಬುದ್ಧ ದಿವಾನಗಿರಿ. ದಿನವೂ ಹಲವು ರಾಜಕೀಯ ಖೂಳರು ದಿವಾನಖಾನೆಗೆ ಅನಾವಶ್ಯಕ ನುಗ್ಗುವುದು, ಇಲ್ಲದ ಸೂತ್ರ ಹೆಣೆದು ಸರಕಾರ ಉರುಳಿಸುವುದು, ಆಳುವ ಪಕ್ಷದಲ್ಲಿ ಬಿಕ್ಕಟ್ಟು ಮೂಡುವಂತೇ ಕುತಂತ್ರಮಾಡುವುದು. ಇದನ್ನೆಲ್ಲಾ ನೋಡಿದಾಗ ಕರ್ನಾಟಕದಲ್ಲೂ ಬ್ರಷ್ಟಾಚಾರ ಬಹಳ ಹೆಚ್ಚಾಗಿದೆ ಎಂಬುದು ಎಂಥಾ ಮೂರ್ಖನಿಗಾದರೂ ತಿಳಿಯುತ್ತದೆ. ಆದರೂ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾರ್ಥಿಯಾಗಿ ತನ್ನ ’ಕಾರ್ಯ ಸಾಧನೆಗಾಗಿ’ ಕಲಿಸಿದ ಲಂಚವೆಂಬ ಅಗ್ನಿ ಈಗ ಸಮಾಜವನ್ನೇ ಆಹುತಿ ತೆಗೆದುಕೊಳ್ಳುತ್ತಿದೆ. ಸರಕಾರದಿಂದಾಗಬೇಕಾದ ಯಾವ ಕೆಲಸವೂ ಕಾಸಿಲ್ಲದೇ ಆಗುವುದಿಲ್ಲ! ಸರಕಾರದ ಆಯಕಟ್ಟಿನ ಹುದ್ದೆಗಳಲ್ಲಿ ಕುಳಿತ ’ಗುಳುಂ’ ರಕ್ಕಸರು ಲಂಚಪಡೆಯುವುದು ಅವರ ಉಳಿವಿಗೆ! ಲಂಚದ ಮರದ ಬೇರು ಇರುವುದೇ ಆಡಳಿತ ಯಂತ್ರದಲ್ಲಿ. ಅಲ್ಲಿರುವ ತಾಯಿಬೇರು ಮತ್ತು ತಂತುಬೇರುಗಳು ಕಾಣಸಿಗುವುದಿಲ್ಲ. ಆ ಬೇರುಗಳಿಗೆ ಧನದ ದಾಹ ಇಂಗುವುದೇ ಇಲ್ಲ. ಸದಾ ಹಸಿವಿನಲ್ಲೇ ಇರುವ ಅವು ಉದ್ಯೋಗಿಗಳ ಮೂಲಕ ಹಾಗೂ ಸಾರ್ವಜನಿಕರ ಮೂಲಕ ಮತ್ತು ಕಂತ್ರಾಟುದಾರರ ಮೂಲಕ ಹೀಗೇ ಹಲವು ಮಾರ್ಗಗಳಲ್ಲಿ ಕಾಸನ್ನು ಹೀರುತ್ತವೆ. ಉದ್ಯೋಗಿಗಳು ತಮ್ಮ ಉಳಿವಿಗೆ ತಾವು ಕೊಟ್ಟ ಮೂರುಪಟ್ಟನ್ನು ಸಾರ್ವಜನಿಕರಿಂದ ಪಡೆಯುತ್ತಾರೆ! ಕಂತ್ರಾಟುದಾರರು ತಾವು ಕೊಟ್ಟ ಹಣವನ್ನು ಕಳಪೆ ಕಾಮಗಾರಿಯಿಂದ ಮರಳಿಪಡೆಯುತ್ತಾರೆ. ಮತ್ತು ಸಾರ್ವಜನಿಕರು ತಮ್ಮ ಕೆಲಸ ಸಾಧ್ಯವಾಗುವುದೆಂಬ ಬಿಸಿಲುಗುದುರೆಯೇರಿ ಕೆಲವೊಮ್ಮೆ ಕೊಟ್ಟಿದ್ದನ್ನು ಕಳೆದುಕೊಳ್ಳುತ್ತಾರೆ, ಅಪರೂಪಕ್ಕೊಮ್ಮೆ ಕೆಲಸವಾದರೂ ಮತ್ತೆಲ್ಲಾದರೂ ಅವರ ಬಾಲ ಸಿಕ್ಕಿಕೊಂಡಿರುತ್ತದೆ!

ಪ್ರತಿಯೊಬ್ಬ ರಾಜಕಾರಣಿಯೂ ಒಂದೊಂದು ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆ ಇತ್ಯಾದಿ ನಿತ್ಯ ಹರಿದ್ವರ್ಣ ಕಾಡಿನೋಪಾದಿಯಲ್ಲಿ ಸದಾ ಕಾಸು ಬರುವ ’ಹಸಿರು ಉದ್ಯಾನ’ದಂಥಾ ಉದ್ಯಮವನ್ನು ನಡೆಸುತ್ತಾರೆ! ಕಾಮನ್ ಎಂಟ್ರನ್ಸ್ ಟೆಸ್ಟ್‍ನಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಾದರೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಕ್ಕೆ ’ಡೊನೇಶನ್’ ಕೊಡುವುದು ಅನಿವಾರ್ಯವಾಗುತ್ತದೆ. ಅದರಲ್ಲಂತೂ ಮ್ಯಾನೇಜ್‍ಮೆಂಟ್ ಖೋಟಾದಲ್ಲಿನ ಸೀಟುಗಳು ಹರಾಜಾಗುತ್ತವೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಸರಕಾರೀ ಶೈಕ್ಷಣಿಕ ಸಂಸ್ಥೆಗಳಲ್ಲಿ ಸವಲತ್ತುಗಳಿಲ್ಲ, ಅನೇಕ ಕಡೆ ಒಳ್ಳೆಯ ಶಿಕ್ಷಕರಿಲ್ಲ, ಸರಕಾರೀ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ಬಡವರಿಗೆ ಸಿಗಬೇಕಾದ ಯಾವ ಅನುಕೂಲಗಳೂ ದೊರೆಯುತ್ತಿಲ್ಲ. ಯಾವನೋ ಕಂಪನಿಯಾತ ಯಾವುದೋ ಖಾಸಗೀ ಶೈಕ್ಷಣಿಕ ಸಂಸ್ಥೆಗೆ ಉದಾರ ಧನಸಹಾಯ ಮಾಡುತ್ತಾನೆ!-ಅದೇ ಆತ ಸರಕಾರೀ ಸಂಸ್ಥೆಗೆ ಕೊಡುವುದಿಲ್ಲ ಯಾಕೆ ಎಂಬುದು ತಿಳಿಯದಾಗಿದೆ. ಗಾದಿಯಿಂದ ಕೆಳಗೆ ಬಿದ್ದರೂ ಶಾಶ್ವತವಾಗಿ ಮೇಯಲು ಅನುಕೂಲವಾಗುವ ಎಲ್ಲಾ ಅಂಶಗಳ ಕಾರ್ಯಕ್ರಮವನ್ನು ಒಮ್ಮೆ ಮಂತ್ರಿಯಾದಾಗಲೇ ಮಾಡಿಮುಗಿಸಿಕೊಳ್ಳುವ ಜನ ಇವತ್ತಿಗೆ ನಮ್ಮನ್ನಾಳುವವರು ಎಂಬುದು ನೆನಪಾದಾಗ ಮೈತುಂಬಾ ತುರಿಕೆಯಾದಹಾಗೆ ಉರಿಯುತ್ತದೆ.

ಲಂಚದ ಪ್ರಕರಣಗಳನ್ನು ಪರಿಶೀಲಿಸಲು ಆಯೋಜಿತವಾದ ಲೋಕಾಯುಕ್ತರಿಗೆ ಪೂರ್ಣಪ್ರಮಾಣದ ಅಧಿಕಾರವೂ ಇಲ್ಲ, ಅವರು ಹಿಡಿದುಕೊಟ್ಟ ತಿಮಿಂಗಿಲಗಳಿಗೆ/ಭಕಾಸುರರಿಗೆ ಯಾವ ಶಿಕ್ಷೆಯೂ ಆಗದೇ ಕೇಸು ಖುಲಾಸೆಗೊಳ್ಳುತ್ತದೆ ! ಯಾಕೆಂದರೆ ಆ ತಿಮಿಂಗಿಲಗಳನ್ನು ಸರಿಯಾಗಿ ವಿಚಾರಿಸಿದರೆ ’ಬೇರು’ ಎಲ್ಲಿದೆ ಎಂಬುದನ್ನು ಹೇಳಿಯೇ ಬಿಡುತ್ತಾರೆ! ಹೀಗಾಗಿ ತಮ್ಮನ್ನು ರಕ್ಷಿಸಿಕೊಳ್ಳುವ ತಾಯಿ-ತಂತುಬೇರುಗಳು ತಮಗೆ ’ಆಹಾರ’ ಒದಗಿಸಿದ ಭಕಾಸುರರ ರಕ್ಷಣೆಗೆ ತಡೆಗೋಡೆಯಾಗಿ ನಿಲ್ಲುತ್ತವೆ! ಇದೊಂದು ಹಗಲೂ-ರಾತ್ರಿ ನಡೆಯುವ ನಾಟಕವೇ ಹೊರತು ಯಾವುದೂ ಇತ್ಯರ್ಥಗೊಳ್ಳುವ ಪ್ರಶ್ನೇಯೇ ಇಲ್ಲ.

ಇಂತಹ ಅಸಹನೀಯ ಲಂಚಬಡಕುತನವನ್ನು ನಿವಾರಿಸಬೇಕು- ಇದು ನಮಗೆ ಎಂದಿದ್ದರೂ ಮಾರಕವೇ ಹೊರತು ಪೂರಕವಲ್ಲ ಎಂಬುದು ಪ್ರಜಾತಂತ್ರವನ್ನು ನೆಚ್ಚಿನಿಂತ ಹಲವು ನಾಗರಿಕರ ಅನಿಸಿಕೆಯಾಗಿದೆ. ಆ ಅನಿಸಿಕೆಗೆ ಮಹಾರಾಷ್ಟ್ರದ ಅಣ್ಣಾಹಜಾರೆಯವರು ತಮ್ಮ ಕ್ರಿಯಾಶೀಲ ವೈಖರಿಯಿಂದ ಒಂದು ಆಂದೋಲನದ ರೂಪಕೊಟ್ಟು ಸ್ವತಃ ತಾನೇ ಉಪವಾಸ ಸತ್ಯಾಗ್ರಹ ನಡೆಸುತ್ತಾರೆ. ಅಸಂಬದ್ಧ ಪ್ರಸ್ತುತಿಗಳಿರುವ ಅಗತ್ಯ ಅಧಿಕಾರಗಳಿಲ್ಲದಿರುವ ’ಲೋಕಪಾಲ ವಿಧೇಯಕ ಮಸೂದೆ’ಎಂಬ ಕಣ್ಣೊರೆಸುವ ತಂತ್ರದ ಬದಲಾಗಿ ಸಮರ್ಪಕವಾದ ರೂಪುರೇಷೆಗಳುಳ್ಳ ಮತ್ತು ಅಧಿಕಾರಗಳೂ ತಿಳಿಸಲ್ಪಟ್ಟಿರುವ ’ಜನ ಲೋಕಪಾಲ ವಿಧೇಯಕ ಮಸೂದೆ’ಯನ್ನು ಜಾರಿಗೆ ತನ್ನಿ ಎಂಬುದು ಹಜಾರೆಯವರ ವಾದವಾಗಿದೆ; ವಾದ ದಿಟವೂ ಆಗಿದೆ. ಅಪರೂಪಕ್ಕೊಮ್ಮೆ ಇಂತಹ ಕೆಲಸಗಳನ್ನು ಮಾಡುವ ಜನ ನಮ್ಮ ಮಧ್ಯೆ ಸಿಗುತ್ತಾರೆ. ಇಂತಹ ಲಕ್ಷಾಂತರ ಹಜಾರೆಗಳು ಪ್ರತೀ ಆಡಳಿತ ಕೇಂದ್ರಗಳ ಹಜಾರದಲ್ಲಿ ಸದಾ ನಿಂತು ಕಣ್ಣಿಟ್ಟು ಕಾದರೆ ಆಗಮಾತ್ರ ಸ್ವಲ್ಪ ಮಟ್ಟಿಗೆ ಬ್ರಷ್ಟಾಚಾರ ನಿಯಂತ್ರಣಕ್ಕೆ ಬಂದೀತು. ಒಬ್ಬ ಹಜಾರೆ ಹಲವಾರು ಹಜಾರೆಗಳನ್ನು ರೂಪಿಸುವಲ್ಲಿ ದಿನ ಬಹಳ ದೂರವಿಲ್ಲ. ಸೇವೆಯನ್ನು ಬಹುದೊಡ್ಡ ಮಟ್ಟದಲ್ಲಿ ಮಾಡಿದ ಬಾಬಾರಿಗೂ ಹಾಗೂ ಹಜಾರೆಯವರಿಗೂ ನಮ್ಮ ನಮನಗಳನ್ನು ಸಲ್ಲಿಸೋಣ. ಸಮಾಜಕ್ಕೆ ಸೇವೆ ಸಲ್ಲಿಸುವ ಮನೋಭಾವವಿರುವ ಹಜಾರೆಯಂತಹ ಲಕ್ಷೋಪಲಕ್ಷ ಜನ ನಮ್ಮಲ್ಲಿ ತಯಾರಾಗಲಿ, ಬ್ರಷ್ಟಾಚಾರ ಬೇರನ್ನು ಕಳೆದುಕೊಳ್ಳಲಿ ಎಂಬ ಆಶಯದೊಂದಿಗೆ ನಾವೆಲ್ಲಾ ಆ ದಿಸೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗಿದೆ.

Wednesday, April 6, 2011

ಯುಗಾದಿಯ ಹಿಂದಿನ ಅರ್ಥಪೂರ್ಣ ಅನಿಸಿಕೆ


ಯುಗಾದಿಯ ಹಿಂದಿನ ಅರ್ಥಪೂರ್ಣ ಅನಿಸಿಕೆ

ಆತ್ಮೀಯ ಮಿತ್ರರೇ, ತಮಗೆಲ್ಲಾ ವಸಂತೋತ್ಸವದ, ಯುಗಾದಿಯ ಹಾಗೂ ಖರ ಸಂವತ್ಸರದ ಹಾರ್ದಿಕ ಶುಭಾಶಯಗಳು. ನಮ್ಮ ಹಬ್ಬಗಳಲ್ಲಿ ನಮ್ಮ ಆಚರಣೆಗಳಲ್ಲಿ ವಿಜ್ಞಾನ ಅಡಗಿದೆ ಎಂಬುದನ್ನು ನಾವನೇಕರು ಅರಿಯದೇ ಅವುಗಳನ್ನು ಕೇವಲ ಸಾಂಪ್ರದಾಯಿಕ ಹಬ್ಬಗಳೆಂದು ಕರೆದೆವು ಮತ್ತು ಅವುಗಳ ಮಹತ್ವವನ್ನು ಅರಿಯದಾದೆವು. ಪ್ರಾಜ್ಞರಾಗಿದ್ದ ನಮ್ಮ ಋಷಿಮುನಿಗಳು ಅಂದಿನ ಆ ಕಾಲದಲ್ಲಿ ತಮ್ಮ ತಪಸ್ಸಿನ ಕೆಲಭಾಗವನ್ನು ನಿಸರ್ಗದ ಅರಿಯುವಿಕೆಗೂ ಮೀಸಲಿಡುತ್ತಿದ್ದರು. ಆ ಕಾಲಕ್ಕೆ ಗಡಿಯಾರಗಳ ಆವಿಷ್ಕಾರ ಆಗಿತ್ತೋ ಇಲ್ಲವೋ ಅದು ತಿಳಿದಿಲ್ಲ, ’ಘಳಿಗೆ ಬಟ್ಟಲು’ ಎಂಬ ಸಮಯವನ್ನು ತಿಳಿಯುವ ಸಾಧನವನ್ನು ನಮ್ಮ ನಿಕಟಪೂರ್ವ ಶತಮಾನಗ ಹಿರಿಯರು ಹೊಂದಿದ್ದರು ಎಂಬುದು ಎಲ್ಲರಿಗೂ ವಿದಿತವಾದ ವಿಷಯ. ಒಂದು ಘಳಿಗೆ ಎಂದರೆ ಇಂದಿನ ೨೪ ನಿಮಿಷಗಳು. ಅಂತಹ ಹಲವಾರು ಘಳಿಗೆಗಳು ಸೇರಿ ದಿನದಲ್ಲಿನ ಸಮಯದ ಲೆಕ್ಕ ಸಾಗುತ್ತಿತ್ತು. ಘಳಿಗೆ-ಲಿಪ್ತಿ ಇವತ್ತಿಗೂ ನಮ್ಮ ಆರ್ಷೇಯ ಪಂಚಾಂಗದಲ್ಲಿ ಚಾಲ್ತಿಯಲ್ಲಿರುವ ವಿಚಾರ. ನಮ್ಮಲ್ಲಿ ಬಹುತೇಕರಿಗೆ ಅದರ ಮೇಲೆ ಅಸಡ್ಡೆ ಇದ್ದರೂ ಸಮಯದ ಲೆಕ್ಕಹಾಕುವಲ್ಲಿ ಆ ಅಳತೆ ಕೂಡ ಅತ್ಯಂತ ಸಮಂಜಸ. ಧಾರವಾಡದ ಜಿಲ್ಲೆಯೊಂದರಲ್ಲಿ ಘಳಿಗೆ ಬಟ್ಟಲು ಯಾರದೋ ಮನೆಯಲ್ಲಿ ಈಗಲೂ ಬಳಕೆಯಿಲ್ಲದೇ ಬಿದ್ದಿದ್ದನ್ನು ಸಂಶೋಧಕ ಚಿದಾನಂದ ಮೂರ್ತಿಯವರು ಮೊನ್ನೆ ಮೊನ್ನೆ ಸಂಗ್ರಹಿಸಿದ್ದಾರೆ.

ನಾವು ಪಂಚಭೂತಗಳನ್ನು ಪರಿಗಣಿಸುವುದೆಷ್ಟು? ಭೂಮಿಯೊಂದನ್ನು ಬಿಟ್ಟು ನಮಗೆ ಮಿಕ್ಕುಳಿದವು ತೀರಾ ಅಗತ್ಯವಿಲ್ಲದವು ಅಂದುಕೊಳ್ಳುತ್ತೇವೆ. ಭೂಮಿಯ ಬೆಲೆ ಮಾತ್ರ ದಿನವೂ ನಮಗೆ ಗೋಚರವಾಗುತ್ತದೆ! ಇದಕ್ಕೆ ಕಾರಣ ಆಳುವ ದೊರೆಗಳ ಹಾಗೂ ಮಾಜೀ ದೊರೆಗಳ ಭೂಮಿ ನುಂಗುವ ಕಸರತ್ತೂ ಇರಬಹುದು. ನೀರು ಉಕ್ಕೇರಿ ಬಂದರೆ ಅಥವಾ ಕುಡಿಯಲು ನೀರು ಸಿಗದೇ ಹೋದರೆ ಆಗಮಾತ್ರ ನಾವು ನೀರನ್ನು ಹುಡುಕುತ್ತೇವೆ. [ನೀರಿನ ಬೆಲೆಯನ್ನು ಕಳಪೆ ಬಾಟಲುಗಳಲ್ಲಿ ತುಂಬಿ ಐ.ಎಸ್. ಐ. ಮುದ್ರಿತ ನಕಲೀ ಪತ್ರವನ್ನು ಅದಕ್ಕೆ ಅಂಟಿಸಿ ಮಾರುವವರು ಮಾತ್ರ ಚೆನ್ನಾಗಿ ಅರಿತಿದ್ದಾರೆ!] ಎಲ್ಲಾದರೂ ಬೆಂಕಿಯಿಂದ ಅಪಘಾತ ಸಂಭವಿಸಿದರೆ ಆಗ ನಮ್ಮ ಮನಸ್ಸು ಜಾಗ್ರತಗೊಳ್ಳುತ್ತದೆ. ಆಕಾಶದ ತುಂಬಾ ಮೋಡ ತುಂಬಿದರೆ ಮಾತ್ರ ಎಲ್ಲೋ ಒಮ್ಮೆ ನೋಡುತ್ತೇವೆಯೇ ಹೊರತು ಅಲ್ಲಿ ನಮಗೇನು ಕೆಲಸ? ಗಾಳಿ ಹೇಗೂ ಬೀಸುತ್ತದೆ, ಸ್ವಲ್ಪ ಜೋರಾಗಿ ಅಬ್ಬರಿಸಿದರೆ ಮಾತ್ರ ಆಗ ತಲೆಕೆಡಿಸಿಕೊಳ್ಳುವ ಜಾಯಮಾನ! ಒಟ್ಟಾರೆ ನಿತ್ಯವೂ ಪಂಚಮಹಾಭೂತಗಳ ಪ್ರಸ್ತುತಿ ನಮಗೆ ಅನಿವಾರ್ಯವಾದರೂ ನಮ್ಮ ಗಡಿಬಿಡಿಯಲ್ಲಿ ಅನ್ನಬೇಯಿಸಿಕೊಂಡು ತಿಂದರೆ ಸಾಕು ಎಂಬ ಮನೋಭಾವದವರು ನಾವು-ಹೀಗಾಗಿ ನೋಡುವ, ತಿಳಿಯುವ ಗೋಜಿಗೇ ಹೋಗುವುದಿಲ್ಲ.

ಹಾಗಂತ ಆಯಾಯ ಸಮಯಕ್ಕೆ ಸಿಗುವ ಹಣ್ಣು-ಹಂಪಲುಗಳನ್ನು ಮೆಲ್ಲುತ್ತೇವೆ, ಹೂವುಗಳನ್ನು ಬಳಸುತ್ತೇವೆ -ಇದಕ್ಕೆಲ್ಲಾ ಅಡ್ಡಿಯಿಲ್ಲ. ನಾವು ಗುರುತಿಸಲಿ ಗುರುತಿಸದೇ ಇರಲಿ ಪ್ರಕೃತಿ ತನ್ನ ಕರ್ತವ್ಯವನ್ನು ಸದಾ ಪಾಲಿಸುತ್ತಲೇ ಇರುತ್ತದೆ. ಆ ನಿಯಮದಂತೇ ಸಮಯವನ್ನವಲಂಬಿಸಿ ಪ್ರಕೃತಿಯಲ್ಲಿ ಮಾರ್ಪಾಡುಗಳು ನಡೆಯುತ್ತಲೇ ಇರುತ್ತವೆ. ಬರೇ ಬಿಸಿಲು, ಬರೇ ಮಳೆ, ಬರೇ ಚಳಿ ಯಾರಿಗೂ ವಿಹಿತವಲ್ಲ. ಆಗಾಗ ಈ ಕ್ರಿಯೆಗಳಲ್ಲಿ ಮಾರ್ಪಾಡು ನಡೆದಾಗ ಮಾತ್ರ ನಮಗೆ ಜೀವನದ ಗತಿಯಲ್ಲಿ ಹೊಸ ಹುರುಪು-ಆಸಕ್ತಿ ಬರುತ್ತದೆ. ಈಗೀಗ ನಮ್ಮ ಸ್ವಯಂಕೃತ ದಾಳಿ ಪ್ರಕೃತಿಯಮೇಲೆ ಆಗಿರುವುದರಿಂದ ಕಾಲಗಳೂ ಸಮ್ಮಿಶ್ರಸರಕಾರಗಳಂತೇ ದಿನಕ್ಕೊಂದು ವರಾತ ತೆಗೆಯುವುದು ಸಾಮಾನ್ಯವಾಗಿದೆ! ಇಲ್ಲದಿದ್ದರೆ ಭೌಗೋಳಿಕವಾಗಿ ಭಾರತದಲ್ಲಿ ೩ ಕಾಲಗಳೂ ಸಮರ್ಪಕವಾಗಿ ಘಟಿಸುತ್ತವೆ.

ಆ ಕಾಲಕ್ಕೇ ನಮಗಿಂತಾ ಅಧಿಕ ತಿಳುವಳಿಕೆ ಹೊಂದಿದ್ದ ಋಷಿಗಳು ವಿಮಾನವನ್ನೂ ಸೃಜಿಸಿದ್ದರು, ಹಲವು ಉಪಕರಣಗಳನ್ನು ತಯಾರಿಸಿದ್ದರು. ಆದರೆ ಯಾವುದೂ ಪ್ರಕೃತಿಯ ವಿರುದ್ಧ ನಡೆಯುವ ಸಂಚಾಗಿರಲಿಲ್ಲ. ಪಕೃತಿಯನ್ನು ಹಾಳುಗೆಡಹುವ ಕೆಲಸಗಳು ನಡೆಯುತ್ತಿರಲಿಲ್ಲ. ಗಣಿಗಳನ್ನು ನಿರ್ಮಿಸಿ ನುಂಗುವ ಭಕಾಸುರರಿರಲಿಲ್ಲ! ತ್ಯಾಜ್ಯಗಳನ್ನು ಹರಿಯುವ ನೀರಿಗೂ ಬೀಸುವ ಗಾಳಿಗೂ ಚೆಲ್ಲಿ ಕೈತೊಳೆದುಕೊಳ್ಳುವ ಮೂಕಾಸುರರಿರಲಿಲ್ಲ. ಅರಣ್ಯದ ಗಿಡಮರಗಳನ್ನು ಹಣಕ್ಕಾಗಿ ಕಡಿದು ಮಾರಿಕೊಳ್ಳುವ ಮಾಗಧರಿರಲಿಲ್ಲ. ಹೆಚ್ಚೇಕೆ ’ಹಣವೇ ಎಲ್ಲವೂ’ ಎಂಬ ಮನೋವೈಕಲ್ಯ ಅಂದಿಗಿರಲಿಲ್ಲ. ಅಂದಿನ ಜನ ಪ್ರತಿಯೊಂದರಲ್ಲೂ ಪರಮಾತ್ಮನನ್ನು ಕಂಡರು. ಅಣುರೇಣು ತೃಣಕಾಷ್ಠಗಳಲ್ಲಿಯೂ ಆ ದಿವ್ಯಶಕ್ತಿಯೊಂದು ಆವಿರ್ಭವಿಸುವುದನ್ನು ತಿಳಿದರು. ಅದಕ್ಕೇ ಅವುಗಳನ್ನೆಲ್ಲಾ ಪೂಜಿಸಿದರು. ಬಳಸುವ ಪ್ರತಿಯೊಂದನ್ನೂ ಪೂಜನೀಯ ವಾಗಿಸಿದರು. ಉದಾಹರಣೆಗೆ -ತಿನ್ನುವ ಅನ್ನಕ್ಕೂ " ಕೇವಲ ನನ್ನ ಭೌತಿಕ ಅಸ್ಥಿತ್ವಮಾತ್ರಕ್ಕಾಗಿ ನಿನ್ನನ್ನು ಸ್ವಾಹಾಕಾರ ಮಾಡುತ್ತಿದ್ದೇನೆ, ಕ್ಷಮಿಸು " ಎಂಬರ್ಥದಲ್ಲಿ ಕೈಮುಗಿದು ಪ್ರಾರ್ಥಿಸುವ ಕಳಕಳಿ ಇತ್ತು. ಅವರು ತಿನ್ನುವುದಕ್ಕಾಗಿ ಬದುಕುವ ಬದಲು ಬದುಕುವುದಕ್ಕಾಗಿ ತಿನ್ನುತ್ತಿದ್ದರು! ಸಾರ್ವಜನಿಕರು ಬಳಸಬಹುದಾದ ನದಿ/ತೊರೆಗಳನ್ನು ತಮ್ಮ ತ್ಯಾಜ್ಯಗಳಿಂದ ಮಲಿನಗೊಳಿಸುತ್ತಿರಲಿಲ್ಲ. ಹವೆಯನ್ನು ದೂಷಿತಗೊಳಿಸುತ್ತಿರಲಿಲ್ಲ. ಹೀಗೇ ಎಲ್ಲದರಲ್ಲೂ ಹದವರಿತು ನಡೆಯುವ ನಡತೆ ಅವರದಾಗಿತ್ತು.

ಅಂತಹ ಮನುಜಶ್ರೇಷ್ಠರು ತಮ್ಮ ಸುತ್ತಲ ಜಗತ್ತಿನ ಆಗೊಹೋಗುಗಳನ್ನು ಅವಲೋಕಿಸಿ ತಮ್ಮ ಬದುಕಿಗೂ ಮುಂದಿನ ತಮ್ಮ ಜನಾಂಗಕ್ಕೂ ಬೇಕಾಗಿ ನೈಸರ್ಗಿಕವಾಗಿರುವ ಹಲವು ಸೂತ್ರಗಳನ್ನು ಸಂಶೋಧಿಸಿದರು, ಅಭ್ಯಸಿಸಿದರು. ಅದನ್ನೇ ತಮ್ಮ ಹೊತ್ತಗೆಗಳಲ್ಲಿ ದಾಖಲಿಸಿದರು, ಮಂತ್ರಗಳೋಪಾದಿಯಲ್ಲಿ ಬಾಯಿಂದ ಬಾಯಿಗೆ ಅದು ತೆರಳಿ ಎಲ್ಲರಿಗೂ ಸಿಗುವಂತೇ ಅನುವುಮಾಡಿಕೊಟ್ಟರು. ಪರಿಸರದಲ್ಲಿ ಪಂಚಮಹಭೂತಗಳನ್ನೂ ಪರಿವೀಕ್ಷಿಸಿ, ತುಲನೆಮಾಡಿ ಕಾಲಗಣನೆಗೆ ’ಪಂಚಾಂಗ’ವೆಂಬ ಗಣಿತವನ್ನು ಜಾರಿಯಲ್ಲಿ ತಂದರು. ಐತಿಹಾಸಿಕವಾಗಿ ನೋಡುವುದಾದರೆ ಆರ್ಯಭಟ, ವರಾಹಮಿಹಿರ ಇವರೆಲ್ಲರ ಕೊಡುಗೆ ಅಪಾರವಾಗಿದೆ. ಯಾವುದೇ ದೂರದರ್ಶಕ ಯಂತ್ರಗಳ ಪ್ರಲೋಭನೆಯಿಲ್ಲದೇ ಗ್ರಹಗಳನ್ನೂ ನಕ್ಷತ್ರಗಳನ್ನೂ ಆಕಾಶ ಕಾಯಗಳನ್ನೂ ಗುರುತಿಸಿ, ಹೆಸರಿಸಿ ಅವುಗಳ ಚಲನವಲನೇತ್ಯಾದಿ ರೂಢಪ್ರಕ್ರಿಯೆಗಳನ್ನು ತಮ್ಮ ನಿರಂತರ ತೊಡಗುವಿಕೆಯಿಂದ ಅರಿತುಕೊಂಡರು. ಎಲ್ಲದಕ್ಕೂ ಪ್ರಮಾಣೀಕೃತವಾಗಿ ಕರಾರುವಾಕ್ಕಾಗಿ ಲೆಕ್ಕಮಾಡುವ ಸಲುವಾಗಿ ಅದು ಹೇಗೆ ಆ ಗಣಿತವನ್ನು ಬರೆದರೋ ತಿಳಿಯಹೊರಟರೆ ಆಶ್ಚರ್ಯವಾಗುತ್ತದೆ--ಆದರೂ ಸತ್ಯವನ್ನು ಒಪ್ಪಲೇಬೇಕಾಗುತ್ತದೆ. ಇವತ್ತಿಗೂ ಪಂಚಾಂಗಗಳು ಇದೇ ಗಣಿತಪದ್ಧತಿಯನ್ನಾಧರಿಸಿ ಸಿದ್ಧಗೊಳ್ಳುತ್ತವೆ ಮತ್ತು ಎಲ್ಲರಿಗೂ ಗೋಚರಿಸಬಹುದಾದ ಪ್ರಾದೇಶಿಕ ಗ್ರಹಣೇತ್ಯಾದಿಗಳನ್ನೂ ಅವುಗಳ ಸಮಯವನ್ನೂ ಸೂಚಿಸಿ ತಿಳಿಸುತ್ತಾರೆ.

ಪ್ರಕೃತಿಯಲ್ಲಿ ನಡೆಯುವ ಕಾಲಾನುಸಂಧಾನಕ್ಕೆ ವರ್ಷಂಪ್ರತಿ ಮರುಕಳಿಸುವ ಘಟನೆಗಳನ್ನವಲಂಬಿಸಿ ಇಡೀ ವರ್ಷದಲ್ಲಿ ಇಂತಿಂತಹ ಗ್ರಹ ನಕ್ಷತ್ರಗಳು ಎಲ್ಲೆಲ್ಲಿ ಎಷ್ಟುದಿನ ವಿಹರಿಸುತ್ತವೆ ಎಂಬುದನ್ನೂ ಗುಣಿಸಿದರು. ವರ್ಷಕ್ಕೆ ಹನ್ನೆರಡು ಮಾಸಗಳು[ತಿಂಗಳುಗಳು] ೨೪ ಪಕ್ಷಗಳು,ದ್ವಾದಶ ರಾಶಿಗಳು, ದಿನದ ಗುರುತಿಗೆ ತಿಥಿ-ನಕ್ಷತ್ರಗಳು, ೬ ಋತುಗಳನ್ನೂ ಹೆಸರಿಸಿದರು. ಅಂತಹ ಆರು ಋತುಗಳ ಪೈಕಿ ಮೊದಲ ಋತುವಾಗಿ ವಸಂತ ಆಗಮಿಸುತ್ತದೆ. ಋತುಗಳನ್ನು ವ್ಯಕ್ತಿಗಳಂತೇ ಹೇಳಿಕೊಳ್ಳುವುದು ಒಂದು ಸಂಭ್ರಮ. ಆ ಕಾರಣಕ್ಕಾಗಿ ವಸಂತವನ್ನು ವಸಂತನೆಂದೂ ವಸಂತರಾಜನೆಂದೂ ಹೇಳಿದ ಕವಿಗಳು ವಸಂತನ ವೈಭವವನ್ನು ಹಾಡಿಹೊಗಳಿದರು.

ಬಿರುಬೇಸಿಗೆಯಲ್ಲೂ ಬಹುತೇಕ ಎಲ್ಲಾ ಗಿಡಮರಗಳು ಹಳೆಯ ಎಲೆಗಳನ್ನು ಉದುರಿಸಿ ಬೋಳಾಗಿ ಮತ್ತೆ ಚಿಗುರುವ, ಚಿಗುರಿದ ಅವುಗಳಲ್ಲಿ ಬಣ್ಣಬಣ್ಣದ ಹೂಗಳರಳುವ ಅರಳಿದ ಹೂಗಳು ಜೊತೆಗೇ ಮಿಡಿಕಚ್ಚಿ ಕಾಯಿಗಳಾಗಿ ಹಣ್ಣುಗಳಾಗಿ ಎಲ್ಲಾ ಗಿಡ-ಮರಗಳು ವಿಜೃಂಭಿಸುವ ಕಾಲ ವಸಂತಕಾಲ. ಮಾವು, ಹಲಸು, ದಾಳಿಂಬೆ, ಕರಬೂಜ, ಅನಾನಸು, ಕಿತ್ತಳೆ, ನೇರಳೆ, ಸೀಬೆ, ಚಕ್ಕೋತ....ಯಾವುದನ್ನು ಹೇಳಲಿ ಯಾವುದನ್ನು ಬಿಡಲಿ ಎಲ್ಲಾವಿಧದ ಹಣ್ಣುಗಳೂ ಮರಗಳಲ್ಲಿ ಕಾಣಸಿಗುವ ಏಕೈಕ ಋತು ವಸಂತ. ಅರಳಿದ ಹೂಗಳ ಮಕರಂದವನ್ನು ಹೀರಿ ಹೊಟ್ಟೆತುಂಬಿಸಿಕೊಳ್ಳುವ ದುಂಬಿಗಳು ಪರೋಕ್ಷ ಪರಾಗಸ್ಪರ್ಶಕ್ಕೆ ಕಾರಣವಾಗಿ ಮರಗಳು ಫಲಭರಿತವಾಗುವ ಈ ನಿಸರ್ಗದ ವಿಸ್ಮಯ ಸಂತಸಕ್ಕೆ ಕಾರಣವಾಗುತ್ತದೆ. ಬೆಳೆವ ಭೂಮಿಯೊಂದೇ ಆದರೆ ಬೆಳೆಯುವ ಗಿಡ-ಮರಗಳಲ್ಲಿ ವೈಖರಿ, ಹೂವುಗಳಲ್ಲಿ- ಅವುಗಳ ಪರಿಮಳಗಳಲ್ಲಿ ಭಿನ್ನತೆ, ಕಾಯಿಗಳಲ್ಲಿ-ಹಣ್ಣುಗಳಲ್ಲಿನ ವೈವಿಧ್ಯ ಇದನ್ನೆಲ್ಲಾ ನೋಡುವಾಗ ನಮಗನಿಸುವುದು ಮೂಲವಾಅಗಿ ಇವೆಲ್ಲಾ ಹೇಗೆ ಜನಿಸಿದವು. ಈ ವಾದ ’ವೃಕ್ಷಮೊದಲೋ ಬೀಜಮೊದಲೋ’ ಎಂಬ ಕುತೂಹಲಕ್ಕೆ ನಾಂದಿಹಾಡುತ್ತದೆಯಾದರೂ ಇಂದಿಗೂ ಅದರ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ! ಋತುಮಾನದ ಈ ಬದಲಾವಣೆಯನ್ನು ಕಂಡಾಗ ಮೈಮನಸ್ಸು ಮುದಗೊಳ್ಳುತ್ತದೆಯಲ್ಲವೇ-- ಅದಕ್ಕೇ ಈ ವಸಂತೋತ್ಸವ.

ಕಾಲಚಕ್ರಕ್ಕೆ ಅದರ ಬುನಾದಿಯ ಹೆಜ್ಜೆಗುರುತನ್ನು ಋಷಿಗಳು ಗುರುತಿಸಿದರು. ಬೃಹತ್ ಕಾಲಖಂಡವನ್ನು ಯುಗವೆಂದು ಕರೆದರು. ನಾಲ್ಕು ಯುಗಗಳು ಪರಿಭ್ರಮಣಗೊಳ್ಳುತ್ತವೆ ಎಂಬುದನ್ನು ತಿಳಿಸಿದರು. ಅಂತಹ ಯುಗಗಳಲ್ಲಿ ನಾಲ್ಕನೇಯುಗವಾದ ಕಲಿಯುಗದ ಪ್ರಥಮಪಾದದಲ್ಲಿ ನಾವಿದ್ದೇವೆ. ಮುಂದೆ ಇನ್ನೂ ಮೂರು ಪಾದಗಳು ಬಾಕಿ ಇರುವುದರಿಂದಲೂ ಮೊದಲನೇ ಪಾದವೇ ಇನ್ನೂ ಬಹಳ ಕಾಲ ಇರುವುದರಿಂದಲೂ ಕ್ರಿಸ್ತ ಶಕ ೨೦೧೨ಕ್ಕೆ ಜಗತ್ ಪ್ರಳಯ ಸಂಭವಿಸುತ್ತದೆ ಎಂಬ ಅಮೇರಿಕಾ ಮೂಲದ ವದಂತಿಗಳಿಗೆ ಕಿವಿಗೊಡುವುದು ಹಾಸ್ಯಾಸ್ಪದವಾಗಿದೆ. ಇದನ್ನೇ ಮಾಧ್ಯಮಗಳಲ್ಲಿ ಮತ್ತೆ ಉಗುಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಢೋಂಗಿ ’ಗುರೂಜಿ’ ಗಳು ಹೆಚ್ಚಾಗಿರುವುದೂ ಮತ್ತು ಅವರನ್ನು ಮಾಧ್ಯಮಗಳವರು ಪ್ರೋತ್ಸಾಹಿಸುತ್ತಿರುವುದು ನಮ್ಮ ಮೌಢ್ಯಕ್ಕೆ ಹಿಡಿದ ಕನ್ನಡಿಯಾಗಿದೆ!

ಯುಗದ ಆದಿ ಯಾವತ್ತು ಆಯಿತೋ ಆ ದಿನಕ್ಕೆ ಯುಗಾದಿ ಎಂಬ ಹೆಸರುಬಂತು. ಇದು ಯುಗದ ಜಯಂತಿ ಎಂದರೂ ತಪ್ಪಲ್ಲ. ವರ್ಷಂಪ್ರತಿ ಹುಟ್ಟುಹಬ್ಬಗಳು ಬರುವಂತೇ ಯುಗಕ್ಕೂ ಹುಟ್ಟಿದದಿನವಿದೆ ಎಂದು ಜ್ಞಾನಿಗಳು-ತಪೋಧನರು ಗುರುತಿಸಿದರು. ವರುಷಕ್ಕೊಮ್ಮೆ ಬರುವ ಈ ಯುಗಾದಿ ವಸಂತನನ್ನೂ ಕರೆತರುತ್ತದೆ. ಚಂದ್ರನನ್ನು ಪ್ರಧಾನವಾಗಿ ಹಿಡಿದು ಗುಣಿಸುವ ಈ ಪದ್ಧತಿ ಚಾಂದ್ರಮಾನವೆನಿಸಿಕೊಳ್ಳುತ್ತದೆ. ಸೂರ್ಯನನ್ನು ಪ್ರಧಾನವಾಗಿಟ್ಟು ಲೆಕ್ಕಿಸುವ ಪದ್ಧತಿ ಸೌರಮಾನವೆನಿಸುತ್ತದೆ. ವಾಡಿಕೆಯಲ್ಲಿ ಚಾಂದ್ರಮಾನ ಪದ್ಧತಿಗೂ ಋತುಮಾನಗಳ ಪರಿವರ್ತನೆಗೂ ಇರುವ ಸಾಮ್ಯ ಸೌರಮಾನದಲ್ಲಿ ವ್ಯತ್ಯಸ್ತವಾಗಿ ಕಾಣುವುದರಿಂದ ಚಾಂದ್ರಮಾನ ಪದ್ಧತಿ ಹೆಚ್ಚಾಗಿ ಬಳಕೆಯಲ್ಲಿದೆ. ಮಕರ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಮೆದ್ದ ನಾವು ಯುಗಾದಿಯಲ್ಲಿ ಬೇವು-ಬೆಲ್ಲವನ್ನು ಮೇಯುತ್ತೇವೆ. ಜೀವನದಲ್ಲಿ ಕಷ್ಟ-ಸುಖಗಳು ಸಹಜವೇ. ಬರೇ ಕಷ್ಟವಾಗಲೀ ಸುಖವಾಗಲೀ ಯಾರಿಗೂ ಇರುವುದಿಲ್ಲ. ಹುಟ್ಟಿದ ಪ್ರತೀ ಜೀವಿಗೂ ಕಷ್ಟ-ಸುಖದ ಮಜಲುಗಳು ಇದ್ದೇ ಇರುತ್ತವೆ. ಮುಂಬರುವ ನಮ್ಮ ಈ ಸಂವತ್ಸರದಲ್ಲಿ ಕಷ್ಟಗಳನ್ನು ಸಹಿಸುವ ಸುಖವನ್ನು ಅನುಭವಿಸುವ ಶಕ್ತಿ-ಅನುಕೂಲ ನಮಗಿರಲಿ ಎಂಬ ಸಾಂಕೇತಿಕ ಪ್ರಾರ್ಥನೆಯನ್ನು ಜಗನ್ನಿಯಾಮಕ ಶಕ್ತಿಗೆ ಬೇವು-ಬೆಲ್ಲ ಸಮರ್ಪಿಸಿವುದರ ಮೂಲಕ ಅದನ್ನೇ ಪ್ರಸಾದವಾಗಿ ಸ್ವೀಕರಿಸುತ್ತೇವೆ.

ಆಡುತಲಾಡುತ ಬಂದ ವಸಂತ
ನಾಡಿನ ಕಾಡಿನ ಗಿಡಗಳಲೀ
ನೀಡಿದ ಬಹುವಿಧ ಸುಫಲಪುಷ್ಪಗಳ
ಆಡಿಸಿ ಮನ ಮುದ ಗೊಳಿಸುತಲೀ

ಯುಗಗಳು ಕಳೆದರೂ ಆತ ನಿರಂತರ
ನಗುಮೊಗ ತೋರುವ ಮೆಚ್ಚುತಲೀ
ಬಗೆಬಗೆ ಗಿಡಗಂಟಿಗಳಾ ಚಿಗುರಿಸಿ
ಅಗರು ಬಣ್ಣಗಳ ಹಚ್ಚುತಲೀ

ಮಾವಿನ ಚಿಗುರಿಗೆ ಕೋಗಿಲೆ ಕೂಗಿಗೆ
ಆವನು ಕಾರಣವೀ ಜಗದಿ ?
ಕಾವನ ಕಾಂಬೆನು ಬಿರುಬೇಸಿಗೆಯಲು
ಆ ವನರಾಶಿಗಳಾ ಜಲಧಿ !

ಸಾಕೆನಿಸುವ ಬೇಸರ ಬೇಗುದಿಗಳ
ತಾಕಾಣುತ ನಿವಾರಿಸುತಾ
ನಾಕವ ಸೃಜಿಸುವ ನಮ್ಮೀ ನೆಲದಲಿ
ಬೇಕಾದ್ದೆಲ್ಲವ ತೋರಿಸುತಾ

ಯುಗದಾದಿಯ ಈ ದಿನದಲಿ ಹಬ್ಬವು
ಜಗೆಯುತಾ ಬೇವು-ಬೆಲ್ಲಗಳಾ
ಮೊಗೆಯುತ ನೀಡಲಿ ಸುಖ-ಸಮೃದ್ಧಿಗಳ
ಮಗುದನೇಕ ಯುಗಾದಿಗಳಾ

ಇದು ಸಾಂಕೇತಿಕವಾಗಿ ಹಿಂದೂ ಹಬ್ಬವೆನಿಸಿದರೂ ನಿಸರ್ಗದ ಹಬ್ಬ. ನಿಸರ್ಗ ನೋಂಪಿಯ ಪರ್ವ. ಈ ಹಬ್ಬ ಎಲ್ಲರದಾಗಲಿ, ಸರ್ವಜನಾಂಗಕೂ ಶುಭತರಲಿ, ಎಲ್ಲರ ಜೀವನವೂ ಆಯುಷ್ಯ-ಆರೋಗ್ಯ-ಐಶ್ವರ್ಯ-ಸುಖ-ಸಮೃದ್ಧಿಗಳಿಂದ ತುಂಬಿರಲಿ ಎಂದು ಮನದುಂಬಿ ಹಾರೈಸುತ್ತಾ ಸದ್ಯಕ್ಕೆ ನಿಮ್ಮನ್ನು ಬೀಳ್ಕೊಡುತ್ತಿದ್ದೇನೆ,

|| ಸರ್ವೇ ಜನಾಃ ಸುಖಿನೋ ಭವಂತು || || ಸಮಸ್ತ ಸನ್ಮಂಗಳಾನಿ ಭವಂತು ||

Friday, April 1, 2011

ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ !

ಕಾಲ್ಪನಿಕ ಚಿತ್ರ ಕೃಪೆ: ಅಂತರ್ಜಾಲ

ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ !

ಕುಸಿದುಬಿದ್ದ ಹುಡುಗಿಯ ಸುತ್ತ ಎಲ್ಲಾ ತರಗತಿಗಳ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ಬೋಧಕರೂ ಸೇರಿಕೊಂಡರು. ಹಲವರು ಆಕೆಗೆ ಗಾಳಿ ಬೀಸಲಾರಂಭಿಸಿದರು. ಇನ್ನೂ ಕೆಲವರು ನೀರನ್ನು ಹೊತ್ತು ತಂದರು. [ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಅಕಸ್ಮಾತ್ ಬೇಕಾದರೆ ಶಿಕ್ಷಕರು ಅಕ್ಕಪಕ್ಕದ ಮನೆಗಳಿಂದ ತರಿಸುತ್ತಿದ್ದರು.] ಸಹಪಾಠಿಗಳನೇಕರು ಚಿಂತಾಕ್ರಾಂತರಾಗಿದ್ದರು. ಹುಡುಗಿ ಸತ್ತೇ ಹೋಗಿದ್ದಾಳೇನೋ ಎಂಬ ಭಯವೂ ಕಾಡದಿರಲಿಲ್ಲ. ೮ ವಯಸ್ಸಿನ ಆ ಹುಡುಗಿಯನ್ನು ಕೆಲವು ವಿದ್ಯಾರ್ಥಿಗಳ ಸಹಾಯದೊಂದಿಗೆ ಶಿಕ್ಷಕರು ಎತ್ತಿ ಶಾಲೆಯ ಬೋಧನಾಕೊಠಡಿಗೆ ಕೊಂಡೊಯ್ದು ಕುಳಿತುಕೊಳ್ಳುವ ಹಲಗೆಯೊಂದರ ಮೇಲೆ ಮಲಗಿಸಿದರು. ಕೆಲವರು ಕೈಹಿಡಿದು ಅಲ್ಲಾಡಿಸಿದರು. ಕೆಲವರು ಲಿಂಬೇಹಣ್ಣು ಕಿವುಚಿ ಮೂಗಿನ ಹತ್ತಿರ ಹಿಡಿದರು. ಕೆಲವರು ಹೆಸರು ಹಿಡಿದು ಜೋರಾಗಿ ಕೂಗಿದರು. ಏನು ಮಾಡಿದರೂ ಊಹೂಂ.... ಸಹ ಶಿಕ್ಷಕರೊಬ್ಬರು ಮೂಗಿನ ಹತ್ತಿರ ಬೆರಳಿಟ್ಟು ನೋಡಿ "ಶ್ವಾಸವೇ ಆಡುತ್ತಿಲ್ಲಾ ಅನುಮಾನ" ಎಂದುಬಿಟ್ಟರು !

ಆಗ ಬೆಳಿಗ್ಗೆ ೭:೪೫ರ ಸಮಯ. ನಮ್ಮೂರ ಸರಕಾರೀ ಶಾಲೆಯಲ್ಲಿ ’ಜನ ಗಣ ಮನ ....’ ಪ್ರಾರ್ಥನೆ ನಡೆಯುತ್ತಿತ್ತು. ಬೇಸಿಗೆಯ ಬಿಸಿಲಿನ ಬೇಗೆ ಬೆಳ್ಳಂಬೆಳಿಗ್ಗೆಯೇ ಶುರುವಾಗಿಬಿಟ್ಟಿತ್ತು. ಅದು ಹೇಳೀ ಕೇಳೀ ಕರಾವಳಿ-ಮಲೆನಾಡು.[ಅತ್ತ ಪೂರ್ಣ ಕರಾವಳಿಯೂ ಅಲ್ಲದ ಇತ್ತ ಪೂರ್ಣ ಮಲೆನಾಡೂ ಅಲ್ಲದ ಪ್ರದೇಶ.] ಆದರೆ ಭೌಗೋಳಿಕವಾಗಿ ಅದನ್ನು ಕರಾವಳಿ ಎಂದೇ ಕರೆಯುತ್ತಾರೆ. ಕರಾವಳಿಯ ಶಾಲೆಗಳಲ್ಲಿ ಶಿಸ್ತು ಸಂಯಮಕ್ಕೆ ಬಹಳ ಆದ್ಯತೆ. ವಿದ್ಯಾರ್ಜನೆಗೆ ಬರುವವರೆಲ್ಲಾ ಮುಗ್ಧ ಮಕ್ಕಳು. ಪಟ್ಟಣದ ಮಕ್ಕಳಂತೆಲ್ಲಾ ಅತೀ ಬುದ್ಧಿವಂತಿಕೆಯನ್ನಾಗಲೀ ಆಡಂಬರವನ್ನಾಗಲೀ ಮೆರೆದವರಲ್ಲ. ತಾವಾಯಿತು ತಮ್ಮ ಕರ್ತವ್ಯವಾಯಿತು ಅಷ್ಟೇ ಅವರ ಕಥೆ. ಬೆಳಿಗ್ಗೆ ಗಡಿಬಿಡಿಯಲ್ಲಿ ತಿಂಡಿ ತಿಂದು ಹೊರಟರೆ ಮತ್ತೆ ೧೧ ಗಂಟೆಗೆ ಶಾಲೆಯ ಬೆಳಗಿನ ಬೋಧನಾವೇಳೆ ಮುಗಿದು ಮಧ್ಯಾಹ್ನ ೧೧ ರಿಂದ ೨ ಗಂಟೆಯ ವರೆಗೆ ವಿರಾಮವಿರುತ್ತಿತ್ತು. ಮನೆಗೆ ಬಂದು ಸ್ನಾನ ಊಟ ಇತ್ಯಾದಿ ಪೂರೈಸಿ ಮರಳಿದರೆ ಪುನಃ ತೆರೆದುಕೊಳ್ಳುವ ಶಾಲೆ ಸಂಜೆ ೫:೩೦ಕ್ಕೆ ಮುಗಿಯುತ್ತಿತ್ತು.


ಬೋಧಕರೂ ಸಹ ತಮ್ಮಲ್ಲಿ ಕಲಿಯುವವರನ್ನು ಮುಂದೆ ಪ್ರತಿಭಾವಂತರನ್ನಾಗಿ ಬೆಳೆಸಬೇಕೆಂಬ ಸಾಮಾಜಿಕ ಕಳಕಳಿಯುಳ್ಳ ಪ್ರಾಮಾಣಿಕರಾಗಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳನ್ನು ತಮ್ಮ ಮಕ್ಕಳಂತೇ ಹಚ್ಚಿಕೊಳ್ಳುತ್ತಿದ್ದರು; ಪ್ರೀತಿಸುತ್ತಿದ್ದರು. ಮನೆಯಲ್ಲಿ ಅಮ್ಮ-ಅಪ್ಪನ ಜೊತೆ ಜಗಳವಾಡಿ ಟೂ ಬಿಟ್ಟರೆ ಹೇಗೋ ಹಾಗೇ ಶಾಲೆಯಲ್ಲಿ ಅವರುಗಳು ಶಿಕ್ಷಿಸಿದಾಗ ಒಂದೆರಡು ದಿನ ಅವರುಗಳ ಮುಖ ಸರಿಯಾಗಿ ನೋಡದಿದ್ದರೂ ಮೂರೋ ನಾಲ್ಕೋ ದಿನದಲ್ಲಿ ಅವರ ಯಾವುದೋ ಪ್ರೀತಿಯ ಮಾತಿನ ಮೋಡಿ ರಾಜಿಗೆ ನಾಂದಿಹಾಡುತ್ತಿತ್ತು. ಊರ ಮಧ್ಯದಲ್ಲಿ ಇರುವ ಜಾಗದಲ್ಲಿ ಊರ ಬ್ರಾಹ್ಮಣರ ಸಂಸ್ಥೆಯೊಂದು ಕಟ್ಟಡವನ್ನು ಕಟ್ಟಿ ನಾಲ್ಕು ಜನರಿಗೆ ಓದಲು ಉಪಕಾರವಾಗಲಿ ಎಂಬ ಕಾರಣವಾಗಿ ಉದಾರವಾಗಿ ಅದನ್ನು ಶಾಲೆಗೆ ನೀಡಿತ್ತು. ಇದು ಕೂಡ ಗೊತ್ತಾಗಿದ್ದು ಮಳೆಗಾಲದಲ್ಲಿ ಏನೋ ತಗುಲಿ ಹಂಚುಗಳು ಒಡೆದರೆ ನೀರು ಸುರಿಯಲು ಆರಂಭಿಸಿದಾಗ ಪ್ರಧಾನ ಶಿಕ್ಷಕರು ಚೀಟಿಯೊಂದನ್ನು ಬರೆದು ನಮ್ಮಂಥವರ ಮೂಲಕ ಸಂಬಂಧಿಸಿದ ಆ ಸಂಸ್ಥೆಯ ಪದಾಧಿಕಾರಿಗಳಿಗೆ ಕಳಿಸುತ್ತಿದ್ದರು ಮತ್ತು ಅವರು ಶೀಘ್ರವೇ ಬಂದು ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದರು.


ಊರಲ್ಲಿ ಹಿಂದೂ ಮುಸ್ಲಿಮ್ ಕ್ರೈಸ್ತರೆಲ್ಲರೂ ಬಹಳ ಅನ್ಯೋನ್ಯತೆಯಿಂದ ಇದ್ದರು. ಇಡೀ ಊರಿಗೆ ಇರುವುದು ಒಂದೇ ಶಾಲೆಯಾಗಿರುವುದರಿಂದ ಶಾಲೆಗೆ ಬೇಕಾದ ಚಿಕ್ಕಪುಟ್ಟ ಸವಲತ್ತುಗಳನ್ನು ಸರಕಾರದ ಸಹಾಯಕ್ಕೆ ಕಾಯದೇ ಊರವರೇ ನಡೆಸಿಕೊಡುತ್ತಿದ್ದರು. ಶಾಲೆಯ ಶಿಕ್ಷಕರನ್ನು ಕಂಡರೆ ಸಮಾಜದಲ್ಲಿ ಗೌರವವಿತ್ತು. ಆಗಾಗ ಬೋಧಕವರ್ಗಕ್ಕೆ ಬೇಕಾಗುವ ಉಪಕರಣಗಳು ಸೀಮೇಸುಣ್ಣದ ಕಡ್ಡಿಗಳು, ಪೀಠೋಪಕರಣಗಳು, ಚಿತ್ರ ಪಟಗಳೇ ಮೊದಲಾದವುಗಳನ್ನೂ ಮತ್ತು ಅವರ ದೈನಂದಿನ ಬೋಧನಾ ಕಾರ್ಯಕ್ಕೆ ಬೇಕಾಗುವ ಯಾವುದೇ ವಸ್ತುಗಳನ್ನೇ ಆಗಲಿ ಒದಗಿಸುವ ಸಲುವಾಗಿ ಊರ ಪ್ರಮುಖರು ಸೇರಿ ’ಶಾಲಾಭಿವೃದ್ಧಿ ಸ್ಥಾನಿಕ ಸಮಿತಿ’[ಸ್ಕೂಲ್ ಬೆಟರ‍್ಮೆಂಟ್ ಲೋಕಲ್ ಕಮಿಟಿ]ಎಂಬುದನ್ನು ಸ್ಥಾಪಿಸಿದರು. ಪಂಚಾಯತದ ಅಧ್ಯಕ್ಷರು ಈ ಸಮಿತಿಗೂ ಅಧ್ಯಕ್ಷರಾಗಿರುತ್ತಿದ್ದರು. ಹೀಗಾಗಿ ಶಾಲೆಯ ಕುಂದುಕೊರತೆಗಳನ್ನು ಸರಕಾರ ಆಲಿಸುವ ಬದಲು ಊರಜನರೇ ಆಲಿಸುತ್ತಿದ್ದರು. ಇಷ್ಟೆಲ್ಲಾ ಇದ್ದರೂ ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲವೇ ಎಂಬ ಪ್ರಶ್ನೆ ನೀವು ಕೇಳುವುದು ಸಹಜವಾಗಿದೆ. ಹೌದು ಕುಡಿಯುವ ನೀರಿಗೆ ಯಾರಿಂದಲೂ ಬೇಡಿಕೆ ಬರುತ್ತಿರಲಿಲ್ಲ. ಆಗಾಗ ಬಿಡುವಿನಲ್ಲಿ ಒಂದೈದು ನಿಮಿಷ ಮೂತ್ರವಿಸರ್ಜಿಸಲು [ಇದಕ್ಕೂ ಕೂಡ ಶಾಲೆಯ ಸುತ್ತಮುತ್ತಲ ಪ್ರದೇಶಗಳೇ ಆಸರೆಯಾಗಿದ್ದವೇ ಹೊರತು ಶೌಚಾಲಯಗಳ ಅಗತ್ಯ ಕಂಡಿರಲಿಲ್ಲ. ಮೂತ್ರಕ್ಕೆ ಅವಸರವಾದರೆ ಕೃಷ್ಣ ಗೋವರ್ಧನವೆತ್ತಿದಂತೇ ಕಿರುಬೆರಳೆತ್ತಿ ತೋರಿಸಿದರೆ ನಮ್ಮ ಶಿಕ್ಷಕರು ಅನುಮತಿಸುವ ಔದಾರ್ಯ ಹೊಂದಿದ್ದರು. ನಾವು ನಿಜಕ್ಕೂ ನಿಸರ್ಗದ ಮಕ್ಕಳಾಗಿ ಅದರೊಡನೆಯೇ ಅನ್ಯಾದೃಶ ಸುಖವನ್ನು ಪಡೆದವರು ಬಿಡಿ!] ಆಚೆ ಹೋದಾಗ ನೀರನ್ನು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದೆವು. ಸಮೃದ್ಧವಾದ ಅತಿ ಶುದ್ಧ ನೈಸರ್ಗಿಕ ತಾಜಾ ನೀರನ್ನು ನಾರಾಯಣ ಹೆಗಡೆ[ ಈ ಪುಣ್ಯಾತ್ಮ ಈಗ ದಿವಂಗತರು, ಇನ್ನೂ ಜೀವಿತದಲ್ಲಿದ್ದರೆ " ನೀವು ಸಾವಿರಾರು ಮಂದಿಗೆ ನೀರುಕುಡಿಸಿದವರು ಬಿಡಿ" ಎಂದು ತಮಾಷೆಮಾಡಬಹುದಿತ್ತೇನೋ, ನಿಜಕ್ಕೂ ಅವರು ಆ ವಿಷಯದಲ್ಲಿ ಪುಣ್ಯವಂತರು] ಎಂಬವರ ಮನೆಯಲ್ಲಿ ಧಾರಾಳವಾಗಿ ಕೊಡುತ್ತಿದ್ದರು. ನೀರಿನ ಜೊತೆಗೆ ಕೆಲವೊಮ್ಮೆ ಅವರ ತೋಟದ ಬಿಂಬಲಕಾಯಿ, ಅವರ ಮನೆ ಬೆಲ್ಲ ಹೀಗೆಲ್ಲಾ ನಮ್ಮ ಕುಡಿಯುವ ನೀರಿನ ವೈಭೋಗಕ್ಕೇನೂ ಕಡಿಮೆ ಇರಲಿಲ್ಲ -ಅದು ಇವತ್ತಿನ ನಗರದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹೊತ್ತುಯ್ಯುವ ಅವಾಂತರದ್ದೂ ಆಗಿರಲಿಲ್ಲ.

ಎಷ್ಟು ಮಜಾ ಅಂತೀರಿ! ಊರಲ್ಲಿ ದೇವಸ್ಥಾನದ ಪಲ್ಲಕ್ಕಿ ಜಾತಿ-ಧರ್ಮಭೇದವರಿಯದೇ ಎಲ್ಲರ ಮನೆಗಳ ಸಮ್ಮುಖದಲ್ಲೂ ಹಾದುಹೋಗುತ್ತಿತ್ತು. ಕ್ರೈಸ್ತರು ಮತ್ತು ಮುಸ್ಲಿಮರು ಹಣ್ಣು-ಕಾಯಿ ಸಮರ್ಪಿಸಿದ್ದನ್ನು ನಾನೇ ಕಂಡಿದ್ದೇನೆ. ಹಲವು ಹಿಂದೂಗಳು ಕ್ರೈಸ್ತರ ಇಗರ್ಜಿಗೂ ಮುಸ್ಲಿಮರ ಮಸೀದಿಗೂ ಭೇಟಿಕೊಟ್ಟು ಅಲ್ಲಿ ನಡೆಯುವ ಫೀಸ್ಟ್ [ ನಮಗಾಗ ಫೀಸ್ಟ್ ಎನ್ನಲು ಬರುತ್ತಿರಲಿಲ್ಲ-ಪೇಸ್ತು ಎಂದು ಯಾರೋ ಹೇಳಿಕೊಟ್ಟಿದ್ದರು, ’ಪೇಸ್ತು’ ಎಂದರೆ ಹಿಂದೂ ಜಾತ್ರೆಯಂತೇ ಇರುತ್ತದೆಯೆಂಬುದು ನಾವು ನೋಡಿದಾಗ ತಿಳಿದಿದ್ದು.]ಮತ್ತು ಉರುಸ್ ಗಳಿಗೆಲ್ಲಾ ಹೋಗುತ್ತಿದ್ದರು. ಗೇರುಸೊಪ್ಪೆಯ ಬಾಪೂ ಸಾಬರು ನಮ್ಮನೆಯ ಹಸುವಿನ ತುಪ್ಪಕ್ಕೆ ಮಾರುಹೋಗಿದ್ದರು! ಆಗಾಗ ಬಂದು ಅಜ್ಜನೊಡನೆ ಮಾತಾಡಿಕೊಂಡು ಚಾ ಕುಡಿದು ಆಮೇಲೆ ತುಪ್ಪ ತೆಗೆದುಕೊಂಡು ಹೋಗುತ್ತಿದ್ದರು. ಡಿಯೇಗ್ ಗೊನ್ಸಾಲ್ವಿಸ್ ಎನ್ನುವವರು ಸಾಮಾಜಿಕ ನಾಟಕದಲ್ಲಿ ಉತ್ತಮ ರೀತಿಯಲ್ಲಿ ಪಾತ್ರನಿರ್ವಹಿಸುತ್ತಿದ್ದರು. ನಮ್ಮೂರಕಡೆ ಯಕ್ಷಗಾನದ ಭೋಗಸಿರಿ ಬಹಳವಾಗಿರುವುದರಿಂದಲೂ ಅಂದಿನ ಆ ದಿನಗಳಲ್ಲಿ ಯಕ್ಷಗಾನದಲ್ಲಿ ಪಾತ್ರ ಮಾಡುವುದು ಅತ್ಯಂತ ಹೆಮ್ಮೆಯ ವಿಷಯವಾಗಿರುವುದರಿಂದಲೂ ಅನೇಕ ಹವ್ಯಾಸಿಗಳು ಸೇರಿ ಊರಲ್ಲಿ ಆಗಾಗ ಪೂರ್ಣರಾತ್ರಿ ಯಕ್ಷಗಾನ ನಡೆಸುತ್ತಿದ್ದರು. ಅಂತಹ ’ಗದಾಯುದ್ಧ’ ಪ್ರಸಂಗದಲ್ಲಿ ಶರೀರದಲ್ಲೂ ಬರೋಬ್ಬರಿ ಇದ್ದ ಸದ್ರಿ ಡಿಯೇಗ್ ಗೊನ್ಸಾಲ್ವಿಸರು ಭೀಮನ ಪಾತ್ರವನ್ನು ಠಾಕುಠೀಕಾಗಿ ನಿರ್ವಹಿಸಿದ್ದನ್ನು ನೋಡಿ ಬಹಳ ಆಶ್ಚರ್ಯವಾಯಿತು! ಯಕ್ಷಗಾನದ ಪಾತ್ರಧಾರಿಗಳು ಸಂಭಾಷಣೆಯನ್ನು ಗಟ್ಟುಮಾಡಿಕೊಂಡು ಹೇಳುವಂಥದ್ದಿಲ್ಲ, ಆ ಯಾ ಸಮಯಕ್ಕೆ ಉಚಿತವಾಗಿ ಮೂಲ ಕಥಾನಕಕ್ಕೆ ಧಕ್ಕೆಬಾರದ ರೀತಿಯಲ್ಲಿ ಪಾತ್ರಪೋಷಣೆ ಮಾಡುವುದು ಅಲ್ಲಿನ ಔಚಿತ್ಯ. ಅಂಥಾ ಕಲೆಯೊಂದರ ಭಾಗವಾಗಿ ಕಥೆಯ ಮೂಲರೂಪವನ್ನು ತಿಂಗಳಾನುಗಟ್ಟಲೇ ಓದಿ ತಿಳಿದು ಅವರು ಪಾತ್ರ ನಿರ್ವಹಿಸಿದ್ದರು. ಇದು ನಮ್ಮ ಊರಿನ ಉಭಯ ಕುಶಲೋಪರಿ.

ಹುಡುಗಿ ಬಿದ್ದ ಸುದ್ದಿ ಸುತ್ತಲ ಹತ್ತುಮನೆಗಳಿಗೆ ಬಾಯಿಂದ ಬಾಯಿಗೆ ಬಾಯಿಂದ ಬಾಯಿಗೆ ಹಬ್ಬಿ ಊರ ಹಲವರು ಶಾಲೆಗೆ ಓಡೋಡುತ್ತಾ ಬಂದರು. ಹುಡುಗಿಯ ಪಾಲಕರೂ ಉಸಿರು ಬಿಗಿಹಿಡಿದು ಏದುಸಿರು ಬಿಡುತ್ತಾ ಕಣ್ಣೀರು ಸುರಿಸುತ್ತಾ ಬಂದರು. ಎಲ್ಲರ ಮುಖದಲ್ಲೂ ಹೇಳಿಕೊಳ್ಳಲಾಗದ ದುಗುಡ. ಮಕ್ಕಳು ಯಾರವೇ ಆದರೂ ಊರಲ್ಲಿ ಯಾರೂ ಹಾಗೆಲ್ಲಾ ಬಿಟ್ಟುಕೊಡುವವರಲ್ಲ. ಅಲಿನ ನಮ್ಮ ಸಭ್ಯತೆಯೇ ನಮಗೆ ರಕ್ಷಣೆ ನೀಡುತ್ತದೆ. ಊರಲ್ಲಿ ಯಾರೋ ಒಬ್ಬರ ಮನೆಯಲ್ಲಿ ದುಃಖದ ವಾತಾವರಣವಿದ್ದರೂ ಪರೋಕ್ಷವಾಗಿ ಇಡೀ ಊರು ಅದರಲ್ಲಿ ಸಹಭಾಗಿತ್ವ ಹೊಂದಿರುತ್ತದೆ; ಆ ಸಮಯದಲ್ಲಿ ಇರುವ ಯಾವುದೇ ವಿಶೇಷ ಕಾರ್ಯಕ್ರಮಗಳೂ ಮುಂದೂಡಲ್ಪಡುತ್ತವೆ ಇಲ್ಲಾ ರದ್ದಾಗಲ್ಪಡುತ್ತವೆ. ಇದು ಹಿಂದಿಗೂ ಇಂದಿಗೂ ಅನ್ವಯವಾದ ವಿಚಾರ. ಒಟ್ಟೂ ಪಾಪದ ಹುಡುಗಿಗೆ ಏನಾಯಿತು ಎಂಬುದೇ ಅಲ್ಲರ ಮನದಲ್ಲಿ ಎದ್ದ ಪ್ರಶ್ನೆ. ತಲೆಗೊಂದರಂತೇ ಸಲಹಗಳಿಗೇನೂ ಕಮ್ಮಿ ಇರಲಿಲ್ಲ. ಎಲ್ಲರೂ ಅವರವರಿಗೆ ಅನಿಸಿದ್ದನ್ನು ಮಾಡುತ್ತಲೇ ಇದ್ದರು.
ಶಿಕ್ಷಕರು ಊರ ವೈದ್ಯರನ್ನು ಕರೆತರಲು ಯಾರನ್ನೋ ಕಳಿಸಿದ್ದರು. ಹಳ್ಳಿಯಲ್ಲವೇ ಅಲ್ಲಿ ಮಧ್ಯದಲ್ಲೆಲ್ಲಾ ಡಾಮರು ರಸ್ತೆಯಿರುವುದಿಲ್ಲ, ಕೆಲವೊಮ್ಮೆ ರಸ್ತೆಯೇ ಇರುವುದಿಲ್ಲ, ಕಾಲುಹಾದಿಯೇ ಗತಿ. ಗದ್ದೆ ತೋಟಗಳ ಬದುವಿನಲ್ಲಿ ಹಾದು ಹೋಗುವ ಕಾವಿನಾಕಾರದ ಕಾಲು ಹಾದಿಯಲ್ಲಿ ನಾವು ನಡೆಯುತ್ತಿದ್ದೆವು. ಮಂಜ ಮುಂಜಾನೆಗಳ ಎಳೆಬಿಸಿಲಿನಲ್ಲಿ ಆ ದಾರಿಯಲ್ಲಿ ನಮ್ಮ ಪ್ರಭಾತಪೇರಿ ನಡೆಯುತ್ತಿತ್ತು-ಅದು ಮರೆಯಲಾಗದ ನಿತ್ಯ ನೂತನ ಮನೋವೈಭವ!

ಇರಲಿ, ಅಂತೂ ವೈದ್ಯರನ್ನು ಕರೆತರುವಾತ ಓಡುತ್ತಲೇ ಹೋದ. ಊರಲ್ಲಿರುವುದು ಒಂದೇ ಚಿಕಿತ್ಸಾಲಯ-ಇಂದಿನಂತೇ ಮೂರುಜನರಿಗೆ ನೂರು ವೈದ್ಯರು ಎನ್ನುವ ಪರಿಸ್ಥಿತಿಯಲ್ಲ! ವೈದ್ಯರು ಸ್ನಾನಕ್ಕೆ ಇಳಿದಿದ್ದರಂತೆ. ವೈದ್ಯರ ಮನೆಯಲ್ಲಿ ಪರದೆ ಸರಿಸಿ ಹೊರಕೋಣೆಗೆ ಬಂದರೆ ಅದೇ ಚಿಕಿತ್ಸಾಲಯ ಹೀಗಾಗಿ ಅದೊಂದು ೨೪/೭ ಚಿಕಿತ್ಸಾಲಯ ಅನ್ನಿ! ಹೋದಾತ ಹೊರಗಿನಿಂದಲೇ ಕೂಗಿಕೊಂಡಿದ್ದು ಒಳಗೆ ಬಚ್ಚಲುಮನೆಯಲ್ಲಿರುವ ವೈದ್ಯರಿಗೆ ಕೇಳಿಸಿತು. ಸರಳ ಸಜ್ಜನರಾದ ಅವರೂ ತಾವೂ ಕೂಗಿ "ಬೇಗ ಬಂದೇ" ಎಂದರಂತೆ. ಆತ ಅಲ್ಲೇ ನಿಂತ. ಗಡಿಬಿಡಿಯಲ್ಲಿ ಸ್ನಾನ ಮುಗಿಸಿದ ವೈದ್ಯರು ದೇವರಪಟಗಳಿಗೆ ಕೈಮುಗಿದ ಶಾಸ್ತ್ರಮಾಡಿ ಪ್ಯಾಂಟು ಸಿಗಿಸಿಕೊಂಡು ಓಡುತ್ತಲೇ ಬಂದರು. ಮುಂದೆ ವೈದ್ಯರು-ಅವರ ಹಿಂದೆ ಕರೆಯಲು ಹೋದಾತ, ಆತನ ಕೈಯ್ಯಲ್ಲಿ ವೈದ್ಯರ ಚಿಕಿತ್ಸೆಯ ಬ್ಯಾಗು. ಶಾಲೆಯ ಮುಂದೆ ಗದ್ದೆ ಇದ್ದುದರಿಂದ ಗದ್ದೆಯ ಬದುವಿನ ಕಿರುದಾರಿಯಲ್ಲಿ ಅವರುಗಳು ಓಡುತ್ತಾ ಬರುವ ಚಿತ್ರಣ ಕಾಣುತ್ತಿತ್ತು. ಎಲ್ಲರೂ ಕಣ್ ಕಣ್ ಬಿಡುತ್ತಾ ನಿಂತಿದ್ದರು.

ವೈದ್ಯರು ಬಂದವರೇ ತಮ್ಮ ಸಂಚಿಯೊಳಗಿನಿಂದ ಸ್ಟೆಥಾಸ್ಕೋಪ್[ ನಮಗೆ ಆಗೆಲ್ಲಾ ಹೇಳಲು ಬರುತ್ತಿರಲಿಲ್ಲ ಬಿಡಿ ಕಿವಿಗಿಟ್ಟ್ಕೊಂಡು ಹೊಟ್ಟೆ ಪರೀಕ್ಷೆ ಮಾಡೋದು ಎನ್ನುತ್ತಿದ್ದೆವು!]ತೆಗೆದು ಹುಡುಗಿಯನ್ನು ಪರೀಕ್ಷಿಸ ಹತ್ತಿದರು. ಹುಡುಗಿ ಸತ್ತಿಲ್ಲ ಮೂರ್ಚೆಹೋಗಿದ್ದಾಳೆ ಬಹುಶಃ ಬಿಸಿಲಲ್ಲಿ ತಲೆಸುತ್ತು ಬಂದಿರಬೇಕು ಎಂದರು. ಬ್ಯಾಗಿನಿಂದ ಏನೆನನ್ನೋ ತೆಗೆದು ಚುಚ್ಚು ಮದ್ದು ಕೊಡುವ ತಯಾರಿ ನಡೆಸಿದರು. ಇದನ್ನೆಲ್ಲಾ ಮಲಗಿದಲ್ಲಿಂದಲೇ ಸಣ್ಣ ಕಣ್ಣಂಚಿನಿಂದ ನೋಡುತ್ತಾ ಇದ್ದ ಆ ಹುಡುಗಿ ನಗುತ್ತಾ "ಅದೇನೂ ಬೇಡಾ ಡಾಕ್ಟ್ರೇ ನನಗೀಗ ಎಲ್ಲಾ ಆರಾಮಾಯ್ತು" ಎಂದು ನಗುತ್ತಾ ಎದ್ದು ಕುಳಿತಳು! ವೈದ್ಯರಿಗೆ ಇದೇನು ಕನಸೋ ನಿಜವೋ ಅರಿವಾಗಲಿಲ್ಲ. ಸೇರಿದ ಊರ ಹತ್ತು ಸಮಸ್ತರು ಬಹಳ ಕೌತುಕದಿಂದ ವೀಕ್ಷಿಸಿದರು. ಯಾರಿಗೂ ಏನೂ ಅರ್ಥವಾಗಲಿಲ್ಲ. ಎಲ್ಲರೂ ತಬ್ಬಿಬ್ಬು. ವೈದ್ಯರಿಗೆ ಇಂಥಾದ್ದು ಹೊಸ ಅನುಭವ! ತಿರುಗಿ ಬಿದ್ದ ಹುಡುಗಿ ಸುಧಾರಿಸಿಕೊಂಡರೆ ಆ ಥರ ಸಟಕ್ಕನೇ ಮಾತನಾಡಲಾಗುತ್ತಿರಲಿಲ್ಲ, ಆಡಿದರೂ ತಾನೆಲ್ಲಿದ್ದೇನೆ-ಯಾಕೆಲ್ಲಾ ಹೀಗಾಯಿತು ಎಂಬೆಲ್ಲಾ ಪ್ರಶ್ನೆಗಳು ಆಕೆಯನ್ನು ಕಾಡಬೇಕಾಗಿತ್ತು. ಆದರೆ ಇಲ್ಲಿ ಆಕೆ ಮಾಮೂಲಿ ಇರುವವರ ಹಾಗೇ " ಏನೂ ಆಗಿಲ್ಲಾ " ಎನ್ನುತ್ತಾ ಸಲೀಸಾಗಿ ಎದ್ದುಕುಳಿತು ನಗುತ್ತಿದ್ದಾಳೆ! ವೈದ್ಯರು ಅರೆಕ್ಷಣ ತಮ್ಮನ್ನೇ ತಾವು ಸುಧಾರಿಸಿಕೊಳ್ಳಬೇಕಾಯಿತು.

ಸಮಸ್ಯೆಯ ಹುರುಳು ಯಾರ ಅರಿವಿಗೂ ಬರಲಿಲ್ಲ. ಅದಕ್ಕೆಲ್ಲಾ ಕಾರಣ ಶಾಲೆಯ ಇಬ್ಬರು ಶಿಕ್ಷಕರು. ಪ್ರಧಾನ ಶಿಕ್ಷಕರು ಮತ್ತು ಮತ್ತೊಬ್ಬರು ಸಹಶಿಕ್ಷಕರು. ಮಾರ್ಚ್ ತಿಂಗಳ ಕೊನೆಗೆ ಪರೀಕ್ಷೆಗಳೆಲ್ಲಾ ಮುಗಿದು ನಿರುಮ್ಮಳರಾಗುವ ಹೊತ್ತಿಗೆ ಏಪ್ರಿಲ್ ಬರುತ್ತದಲ್ಲಾ ಆಗ ಏಪ್ರಿಲ್ ಹತ್ತನೇ ತಾರೀಖಿನವರೆಗೂ ಕೇವಲ ಉತ್ತರಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿರುತ್ತದೆ. ಆಗ ಬೇಸರಬಾರದಿರಲಿ ಎಂಬ ಕಾರಣಕ್ಕೆ ಮಕ್ಕಳನ್ನೂ ಶಾಲೆಗೆ ಕೆಲವು ಗಂಟೆಗಳ ಕಾಲ ಬರಹೇಳುತ್ತಿದ್ದರು. ಎಂದಿನಂತೇ ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಮಾಡಿ ನಂತರ ಮಕ್ಕಳು ಆಟವಾಡಿಕೊಳ್ಳುವಾಗ ಶಿಕ್ಷಕರು ಮೌಲ್ಯಮಾಪನ ಮಾಡುತ್ತಿದ್ದರು. ಏಪ್ರಿಲ್ ಹತ್ತಕ್ಕೆ ಫಲಿತಾಂಶ ಘೋಷಿಸಿ ಮನೆಗೆ ಸಾಗಿದರೆ ಮುಂದಿನ ಎರಡು ತಿಂಗಳು ಮಕ್ಕಳ-ಶಿಕ್ಷಕರ ಭೇಟಿ ಇರುತ್ತಿರಲಿಲ್ಲ. ಹೀಗಾಗಿ ತಮಾಷೆಗಾಗಿ ಶಿಕ್ಷಕರು ’ಏಪ್ರಿಲ್ ಫೂಲ್ ’ ಕಾರ್ಯಕ್ರಮ ರೂಪಿಸಿದ್ದರು. ಇದು ಮಿಕ್ಕುಳಿದ ಶಿಕ್ಷಕ/ಶಿಕ್ಷಕಿಯರಿಗೂ ತಿಳಿದಿರಲಿಲ್ಲ. ಬೀಳುವ ಹುಡುಗಿಯನ್ನು ಪ್ರತ್ಯೇಕ ಕರೆದು ಅವಳಿಗೆ ತರಬೇತಿ ನೀಡಿ ಯಾರಿಗೂ ತಿಳಿಯದ ಹಾಗೇ ನಿರೂಪಿಸಿದ ಅವರ ಜಾಣ್ಮೆ ಮೆಚ್ಚುವಂಥದ್ದಾಗಿತ್ತು. ಮೊದಲೇ ಆಯೋಜಿಸಿದಂತೇ ಎಲ್ಲರಿಗೂ ಬೆಲ್ಲ-ನೀರು, ಲಿಂಬೂ ಪಾನಕದ ವಿತರಣೆಯಾಯಿತು. ವೈದ್ಯರಾದಿಯಾಗಿ ಸೇರಿದ್ದ ಊರಜನತೆ, ಮಕ್ಕಳು ಮತ್ತು ಬೋಧಕವರ್ಗ ಎಲ್ಲರೂ ಖುಷಿಪಟ್ಟರು ಎಂಬಲ್ಲಿಗೆ ಈ ಕಥೆಗೆ ಮಂಗಳವಪ್ಪುದು!

Thursday, March 31, 2011

ಚಂದಿರೆಯ ನೋಟದಲಿ !

ನೆನಕೆಗಳು : ರಾಜಾ ರವಿವರ್ಮರಿಗೆ
ಚಂದಿರೆಯ ನೋಟದಲಿ !

ಬೆಳಕಿನುತ್ಸವದಲ್ಲಿ ಗೆಳತಿಯರ ಹಿಂಡಿನಲಿ
ಥಳುಕುಬಳುಕಿನ ನೀಳ ಚಂದಿರೆಯ ಕಂಡೆ
ಪುಳಕಗೊಂಡಾ ಮನಸು ನನ್ನೊಳಗೇ ನಾಚುತ್ತಾ

ಸೆಳೆತದಲಿ ನನ್ನನ್ನೇ ನಾ ಕಳೆದುಕೊಂಡೆ!

ನಳಿನ ಮುಖಿ ನಗುವಾಗ ದಾಳಿಂಬೆ ಬೀಜಗಳು

ಚಳಿಯನೆಬ್ಬಿಸುವಂಥಾ ನಳಿದೋಳುಗಳನು

ಗುಳಿಯಿರುವ ಕೆನ್ನೆಗಳು ಕಪ್ಪುನೇರಳೆ ಕಣ್ಣು
ಬಿಳಿಯ ಬಟ್ಟೆಯನುಟ್ಟು ತೊನೆದಾಡುವಳನು


ಇಳೆಯೊಳಗೆ ಹದಬೆಳೆದ ಬಾಳೆಯಾ ದಿಂಡುಗಳ
ಎಳೆದು ನಿಲ್ಲಿಸಿದಂಥ ದುಂಡುತೊಡೆಗಳವು

ಬಳೆಗಳೆರಡಾಡುವಾ ಕೈಗಳಲಿ ಕಿಂಕಿಣಿರು

ಕೊಳೆಯಿರದ ನುಣುಪಾದ ಪಾದ ತೋರಿದಳು


ಎಳೆಯಮಗುವಿನ ಮುಗ್ಧ ಸ್ನಿಗ್ಧ ಸೌಂದರ್ಯವತಿ
ಎಳೆಗರುವಿನಾ ತೆರದಿ ಜಿಗಿಜಿಗಿದು ಓಡಿ

ಎಳೆದೊಯ್ದಳೆನ್ನ ಮನ ಅವಳೊಡನೆ ಎಲ್ಲೆಲ್ಲೋ

ಎಳೆನಡುವ ಕುಲುಕಿಸುತ ಬೆಂಬಿಡದೆ ಕಾಡಿ


ಹಳೆಯದೇಗುಲದಲ್ಲಿ ಹೊಸವಿಗ್ರಹದ ರೀತಿ

ಹೊಳೆಯುತ್ತ ನಿಂತವಳ ಕದ್ದು ನೋಡುವೊಲು

ಕಳೆಯಂಥದದು ಮೊಗದಿ ರತಿದೇವಿ ಭೂಮಿಯಲಿ!
ಅಳೆಯುತಿಹಳಲ್ಲಲ್ಲೇ ಓರೆನೋಟದಲಿ !

ಕಳಕಳಿಯು ನನ್ನದಿದೆ ಓದೇವ ನಿನ್ನಲ್ಲಿ

ಸೆಳೆತಂದು ಕೊಡಮಾಡು ಬಾಳರಥದಲ್ಲಿ

ಕಳೆಕಟ್ಟಲೆನ್ನ ಜೀವನದಾಕೆ ನಡೆಬರಲಿ
ಬೆಳಗುವೆನು ಸಾವಿರದ ಹಣತೆ ನಿತ್ಯದಲಿ !

Wednesday, March 30, 2011

ದಂಡಂ ದಶಗುಣಂ!


ದಂಡಂ ದಶಗುಣಂ!

ಹೇಳಲೇಬೇಕಾದ ಕೆಲವು ಮಾತುಗಳು ಉಳಿದುಹೋಗಿ ಆಮೇಲೆ ಆ ವಿಷಯಗಳು ಮರೆತುಹೋಗುತ್ತವೆ. ಅದನ್ನು ಸಮಯದಲ್ಲೇ ಹೇಳಿದರೆ ಹಲವರಿಗೆ ಅದರ ಸತ್ಯಾಸತ್ಯತೆಯ ಪರಾಮರ್ಶೆಗೆ ಅನುಕೂಲವಾಗುತ್ತದೆ. ಬರಬೇಕಾದ ಹಣ ಸಮಯದಲ್ಲಿ ಸಿಕ್ಕರೆ ಎಷ್ಟೋ ಅನುಕೂಲವಾಗುತ್ತದೆ. ಆ ಹಣ ತಡವಾಗಿ ಬಂದರೆ ಅದರಿಂದ ಆಗುವ ಅನಾನುಕೂಲ ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ. ಪೀಠಿಕೆ ಹಾಕುತ್ತಿರುವುದು ಯಾವುದೋ ಪಕ್ಷ ವಹಿಸಿಕೊಂಡು ಅವರನ್ನು ಅನುಮೋದಿಸಲಲ್ಲ. ಬದಲಾಗಿ ನಾಗರಿಕ ಬದುಕಿನ ಕೆಲವು ಮಜಲುಗಳನ್ನು ವಿವೇಚಿಸುವುದು ಉದ್ದೇಶವಾಗಿದೆ.

ಇವತ್ತು ಮೋಹಾಲಿಯಲ್ಲಿ ಭಾರತ-ಪಾಕಿಸ್ತಾನಗಳ ನಡುವೆ ಕ್ರಿಕೆಟ್ ಆಟ ನಡೆಯಲಿದೆ. ಜನಮಳ್ಳೊ ಜಾತ್ರೆಮಳ್ಳೋ ಅನ್ನೋ ಹಾಗೇ ಮಂದಿರ ಮಸೀದಿಗಳಲ್ಲಿ ಹೋಮ-ಹವನ,ಪೂಜೆ, ಪ್ರಾರ್ಥನೆ ಮೊದಲಾದ ಕಾರ್ಯಗಳು ನಡೆಯುತ್ತಿರುವುದನ್ನು ನಾವು ವೀಕ್ಷಿಸುತ್ತಿದ್ದೇವೆ. ಆಪ್ಟರ್ ಆಲ್ ನಡೆಯುತ್ತಿರುವುದು ಕೇವಲ ಕ್ರಿಕೆಟ್! ನಮ್ಮ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಕೊಡುವ ಸವಲತ್ತುಗಳು ಮತ್ತು ಗೌರವಗಳು ಅತಿಯೆನಿಸುವುದಿಲ್ಲವೇ? ಯಾವ ಲೆಕ್ಕದಲ್ಲಿ ಅವರು ದೇಶಕ್ಕೆ ಉಪಕಾರವಾಗುವಂತಹ ಘನಕಾರ್ಯವನ್ನು ಮಾಡಿದ್ದಾರೆ ಅಥವಾ ಮಾಡುತ್ತಾರೆ? ಒಬ್ಬೊಬ್ಬ ಕ್ರಿಕೆಟ್ ಆಟಗಾರನ ಖರ್ಚುವೆಚ್ಚ ಬಿಳೀ ಆನೆಸಾಕಿದಷ್ಟೇ ಅಥವಾ ಅದಕ್ಕೂ ದುಬಾರಿ ಎಂದರೆ ಬೆರಗಾಗಬೇಕಾಗಿಲ್ಲ. ಯಾವ ಪುರುಷಾರ್ಥವನ್ನು [ಹೆಂಗಸರು ಕ್ರಿಕೆಟ್‍ನಲ್ಲಿ ಜಾಸ್ತಿ ಇರದ್ದರಿಂದ ಈ ಶಬ್ದ ಪ್ರಯೋಗ! ಹೆಂಗಳೆಯರು ಓದುವಾಗ ’ಯಾವ ಮಹಿಳಾರ್ಥಕ್ಕೆ’ ಎಂದು ಸೇರಿಸಿಕೊಳ್ಳುವುದು]ಸಾಧಿಸುವ ಹೀರೋಗಳು ಅವರು ಎಂಬುದು ಮಾತ್ರ ಓದುಗರಿಗೆ ಬಿಟ್ಟಿದ್ದು.

ಹೇಳೀ ಕೇಳೀ ಈ ಕ್ರಿಕೆಟ್ ಸಂಭ್ರಮ ಬರುವುದಕ್ಕೂ ಇತ್ತ ವಿದ್ಯಾರ್ಜನೆಯಲ್ಲಿ ತೊಡಗಿರುವವರ ಪರೀಕ್ಷಾ ಸಮಯ ಹತ್ತಿರಬರುವುದಕ್ಕೂ ಯಾವುದೋ ಅವಿನಾಭಾವ ಸಂಬಂಧವೋ ಏನೋ ಅಂತೂ ಕ್ರಿಕೆಟ್ ಹೆಚ್ಚಾಗಿ ಈ ವೇಳೆಗೇ ಬರುತ್ತದೆ! ವಿದ್ಯಾರ್ಥಿ/ವಿದ್ಯಾರ್ಥಿನಿಯರು ಓದುವುದನ್ನು ಮರೆತು ಮಾಧ್ಯಮವಾಹಿನಿಗಳ ಮುಂದೆ ಠಿಕಾಣಿ ಹೂಡಿ ಕ್ರಿಕೆಟ್ ಟೂರ್ನಿಯೋ ಪಂದ್ಯವೋ ನೋಡುತ್ತಾ ಓದಬೇಕಾದ ಅಮೂಲ್ಯ ಸಮಯವನ್ನು ಅಲ್ಲಿ ಕಳೆದುಕೊಳ್ಳುತ್ತಾರೆ. ಕೆಲವರಿಗಂತೂ ಕ್ರಿಕೆಟ್ ಜ್ವರ ಬಂದಿರುತ್ತದೆ ಎಂದು ಕೇಳಿದ್ದೇನೆ! ದೇಶದಲ್ಲಿ ಅಳಿದುಳಿದ ಕೃಷಿಕ ಯುವಕರೂ ಕೂಡ ಕ್ರಿಕೆಟ್ ನೋಡಬಯಸಿ ತಮ್ಮ ಹಲವು ಕೆಲಸಗಳನ್ನು ಮುಂದೂಡುತ್ತಾರೆ. ಮಹಿಳೆಯರು ಕ್ರಿಕೆಟ್ ನೋಡುವುದರಲ್ಲಿ ಸಾಧನೆ ಸಾಧಿಸಿದ್ದು ನಮಗೆ ಕಾಲಗರ್ಭದಲ್ಲಿ ಕಂಡುಬಂದಿದೆ. ನಟೀಮಣಿಗಳು ತಮ್ಮ ಜೀವನದಲ್ಲಿ ಬ್ಯಾಟಿಂಗ್ ಮಾಡಲು ಇರಲಿ ಎಂಬ ಕಾರಣಕ್ಕೆ ಕ್ರಿಕೆಟಿಗರನ್ನು ಬೆನ್ನುಹತ್ತಿ ಸ್ಪರ್ಧೆಗಳು ನಡೆಯುವಲ್ಲಿ ಹಾಜರಾಗುವುದು ಮತ್ತು ಬೇಕಾದ ಆಟಗಾರರನ್ನು ಆತುಕೊಳ್ಳುವುದು ಸಂಗೀತಾ ಬಿಜಲಾನಿ-ಮಹಮ್ಮದ ಅಜರುದ್ದೀನ್ ಆಣೆಯಾಗಿಯೂ ಸತ್ಯ!

ಕ್ರೀಡೆಗಳು ಉಲ್ಲಾಸದಾಯಕ, ದೇಹಾರೋಗ್ಯಕ್ಕೆ ಅವುಗಳು ಬೇಕು--ಇವೆಲ್ಲಾ ಸರಿ. ಆದರೆ ಕ್ರೀಡೆಗಳೇ ಜಗತ್ತಿನ ಸಾಮಾಜಿಕ ಸ್ಥಿತಿಯನ್ನು, ಆರ್ಥಿಕತೆಯನ್ನು ನಿರ್ಧರಿಸುವ ಮಾಪನಗಳಲ್ಲವಲ್ಲ? ಕ್ರೀಡೆಗಳಿಂದ ವಿನೋದ ವಿಹಾರ ಮೋದವೇನೋ ಸಿಗಬಹುದು ಆದರೆ ಕ್ರೀಡೆಗಳು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ಹಲವರ ಕೆಲಸಗಳಿಗೆ ಕಡಿವಾಣಹಾಕುವ, ಹೆಚ್ಚಿನ ಖರ್ಚುವೆಚ್ಚಗಳಿಗೆ ಹಣವನ್ನು ದೇಶದ ಬೊಕ್ಕಸದಿಂದ ಇಸಿದುಕೊಳ್ಳುವ ಕಾಲ ಇದಾಗಿದೆ. ಒಂದುಕಡೆ ದುಡಿಮೆಯಲ್ಲಿ ಆಲಸ್ಯ ಉಂಟುಮಾಡಿ ಆ ಮೂಲಕ ಅಲ್ಲಿ ಜನಸಾಮಾನ್ಯರ ಆದಾಯ ಕುಂಠಿತವಾಗುವುದು ಮತ್ತೊಂದುಕಡೆ ದೇಶಕ್ಕೆ ತೆರಿಗೆಯ ಮೂಲಕ ಸಂದ ಜನರ ಹಣವನ್ನು ಇದಕ್ಕಾಗಿ ಪೋಲುಮಾಡುವುದು ಅಷ್ಟಾಗಿ ಬೇಕಿತ್ತೇ ಎಂಬುದು ಪ್ರಶ್ನೆ.

ದೇಶವನ್ನು ಗಡಿಯಲ್ಲಿ ನಿಂತು ಕಾಯುವ ಯೋಧನಿಗಾಗಲೀ ದೇಶದ ವೈಜ್ಞಾನಿಕ ರಂಗದಲ್ಲಿ ಪ್ರಗತಿ ಸಾಧಿಸಿದ ಡಾ| ಅಬ್ದುಲ್ ಕಲಾಂ ಥರದ ವ್ಯಕ್ತಿಗಳಿಗಾಗಲೀ ಸಿಗದ ಪ್ರತಿಷ್ಠೆಯ ಗೌರವ ಪುರಸ್ಕಾರಗಳು ಕ್ರಿಕೆಟಿಗರಿಗೆ ಸಲ್ಲುತ್ತಿರುವುದು ನಿಜಕ್ಕೂ ಖಂಡನೀಯ. ಕ್ರಿಕೆಟಿಗರ ಹೆಸರನ್ನು ಪ್ರಮುಖ ರಸ್ತೆಗಳಿಗೆ ಅಲ್ಲಿನ ವೃತ್ತಗಳಿಗೆ ಇಡುವುದು, ಅವರಿಗೆ ಪದ್ಮ ಪ್ರಶಸ್ತಿಗಳನ್ನೆಲ್ಲಾ ಕೊಡಮಾಡುವುದು ಯಾಕಾಗಿ ನಡೆಯುತ್ತದೋ ತಿಳಿಯದಾಗಿದೆ. ಆಟಗಾರರಿಗೆ ನಗರಗಳಲ್ಲಿ ವಸತಿ ನಿವೇಶನಗಳು, ಎಲ್ಲಾ ಸೌಲಭ್ಯಗಳೂ ಮೊದಲ ಆದ್ಯತೆಯಲ್ಲಿ ಸಿಗುವುದಾದರೆ ಈ ದೇಶಕಂಡ ಕೆಲವು ಸಜ್ಜನರು ಮಡಿದಾಗ ಅವರ ಅಂತ್ಯ ಸಂಸ್ಕಾರಕ್ಕೂ ಅವರ ಖಾತೆಯಲ್ಲಿ ಕಿಂಚಿತ್ತೂ ಹಣ ಇರದಿರುವುದಕ್ಕೆ ದಿ|ಲಾಲ್ ಬಹಾದ್ದೂರ್ ಶಾಸ್ತ್ರಿ ಉದಾಹರಣೆಯಾಗಿದ್ದಾರೆ. ಕರ್ನಾಟಕದ ರಾಜಕಾರಣದಲ್ಲೂ ತಮ್ಮ ವಂಶಕ್ಕೇ ಎಲ್ಲಾ ಇರಲಿ ಎಂಬುದನ್ನು ಬಿಟ್ಟು ನಿಸ್ವಾರ್ಥರಾಗಿ ನಿಸ್ಪೃಹರಾಗಿ ಆಡಳಿತ ನಡೆಸಿದ ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ ಈ ಥರದ ಬೆರಳೆಣಿಕೆಯಷ್ಟು ಜನ ಸಿಗುತ್ತಾರೆ!

ಜನಜೀವನಕ್ಕೆ ಸಂಗೀತ, ಸಾಹಿತ್ಯ, ಕಲೆ ಮೊದಲಾದ ಎಲ್ಲಾ ರಂಗಗಳೂ ಕ್ರಿಕೆಟ್ಟಿಗಿಂತ ಹೆಚ್ಚಿನ ಕೊಡುಗೆಗಳನ್ನು ಕೊಟ್ಟ ದಾಖಲೆ ಸಿಗುತ್ತದೆ. ಅಲ್ಲಿಯೂ ಕೂಡ ಚಲನಚಿತ್ರ ರಂಗದ ನಟ/ನಟಿಯರಿಗೆ ಸಿಗುವ ಗೌರವ/ಪುರಸ್ಕಾರಗಳನ್ನು ಅವಲೋಕಿಸಿದರೆ ಅವರೇನು ಸ್ವರ್ಗದಿಂದ ಧರೆಗಿಳಿದು ಸಮಾಜಸೇವೆಗೆ ಬಂದರೇ ಎಂಬುದು ಕಾಡುತ್ತದೆ. ಬೇರೇ ರಂಗಗಳಲ್ಲಿ ದುಡಿಯುವ ವ್ಯಕ್ತಿಗಳಿಗೆ ಗಣನೀಯವಾದ ಯಾವುದೇ ಮಾನ್ಯತೆಯೇ ಕಾಣಸಿಗುವುದಿಲ್ಲ. ಮೊನ್ನೆ ಒಂದು ಚಲಚಿತ್ರದ ಹಾಡುಗಳ ಧ್ವನಿಫಲಕದ ಬಿಡುಗಡೆಯ ಸಲುವಾಗಿ ನಿರ್ಮಾಪಕ ಮತ್ತು ನಟೀಮಣಿಯ ನಡುವೆ ನಡೆದ ಪ್ರಹಸನ ಎಲ್ಲಿಯವರೆಗೆ ಪ್ರಚಾರಪಡೆಯಿತು ಎಂಬುದು ಎಲ್ಲರಿಗೂ ತಿಳಿದದ್ದೇ ಆಗಿದೆ. ಕೈಲಾಗದ ನಿರ್ಮಾಪಕರಿಗೆ ಸಾಲಮಾಡಿ ಚಿತ್ರಮಾಡು ಎಂದು ಯಾರು ಹೇಳುತ್ತಾರೆ ? ರಾಜಕೀಯದ ಹಿನ್ನೆಲೆಯುಳ್ಳ ನಟ/ನಟಿಯರಿಗೆ ಕೇವಲ ಶೋಕಿಗಾಗಿ ನಟಿಸಲು ಬಂದವರಿಗೆ ನಿರ್ಮಾಪಕನನ್ನು ಉದ್ಧಾರಮಾಡಲು ಸಹಾಯಮಾಡು ಎಂದು ಯಾರಾದರೂ ಹೇಳಿದ್ದಾರಾ ? ದಶಗುಣಗಳನ್ನು ತನ್ನ ದಶಾವತಾರಗಳ ಮೂಲಕ ಆಗಾಗ ಹೊರಹೊಮ್ಮಿಸಿ ಯಾವಾಗಲೂ ಪ್ರಚಾರ ಗಿಟ್ಟಿಸುವ ವೈಖರಿ ಹೊಂದಿರುವ ನಟಿಯನ್ನೂ ಹೇಗೋ ಒಂದು ಹಂತಕ್ಕೆ ತಂದು ನಿಲ್ಲಿಸಿ ತನ್ನ ಸಿನಿಮಾ ವಿತರಣೆಯಾದ ಬಳಿಕ ಬಂದ ಹಣದಲ್ಲಿ ಸಾಲವನ್ನು ತೀರಿಸಿದರಾಯ್ತು ಎಂದುಕೊಂಡು ತಿರುಗುತ್ತಿದ್ದ ನಿರ್ಮಾಪಕನಿಗೆ ಆಕೆ ವಿಧಿಸಿದ ’ದಂಡ’ವನ್ನೂ ನೋಡಿ ನಿಜಕ್ಕೂ ಆ ಸಿನಿಮಾಗೆ ಹೆಸರು ಅನ್ವರ್ಥವಾಗಿದೆ ಎನಿಸಲಿಲ್ಲವೇ?

ಒಟ್ಟರೆಯಾಗಿ ನಾವು ತಿಳಿಯಬೇಕಾದ ವಿಚಾರ ಇಷ್ಟು: ಕ್ರಿಕೆಟಿಗರಾಗಲೀ ಕಲಾವಿದರಾಗಲೀ ದೇವಲೋಕದಿಂದ ಧರೆಗಿಳಿದವರಲ್ಲ. ಅವರೆಲ್ಲಾ ನಮ್ಮ ನಿಮ್ಮಂತೆಯೇ ಇರುವವರು. ಜೀವನೋಪಾಯಕ್ಕಾಗಿ ಆ ರಂಗಗಳಲ್ಲಿ ತೊಡಗಿಕೊಂಡವರಿಗೆ ಹಣೆಬರಹ ಗಟ್ಟಿ ಇದ್ದು ಆದ್ಯತೆ/ಮಾನ್ಯತೆ ಗಳಿಸಿದವರು ಅವರಾಗಿದ್ದಾರೆ/ಗುತ್ತಾರೆ. ಒಮ್ಮೆ ಹೆಸರು ಪಡೆದರೆ ಅವರು ತಾವು ಆಡಿದ್ದೇ ಆಟ ಎನ್ನುವದನ್ನು ಸಮಾಜದಲ್ಲಿ ನಾವು ಈಗ ಕಾಣುತ್ತಿದ್ದೇವೆ. ಜೀವನೋಪಾಯಕ್ಕಾಗಿ ಆಸಕ್ತ ವಿಷಯದಲ್ಲಿ ತೊಡಗಿಕೊಂಡರೆ ಅದೂ ಕೂಡ ಅವರ ವೃತ್ತಿಯೇ ಹೊರತು ಅದು ದೇಶಕ್ಕೆ ಅವರು ಸಲ್ಲಿಸುವ ಸೇವೆ ಎನಿಸುವುದಿಲ್ಲ! ನಮ್ಮದೊಂದು ಪರಿಪಾಟ--ಯಾವನೋ ಏನನ್ನೋ ಮಾಡಲಿ " ಅವರ ಕೊಡುಗೆ ಅಪಾರ " ಎನ್ನುವ ಸ್ವಭಾವ ನಮ್ಮದು. ಕೊಡುಗೆ ಏನು ? ಸಚಿನ್ ಸೆಂಚುರಿ ಬಾರಿಸಿದ್ದೇ ? ಅದರಿಂದ ದೇಶದ ಬಡತನದ ನಿರ್ಮೂಲನೆಯಾಯಿತೇ? ಜನರಿಗೆ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡಲ್ಪಟ್ಟಿತೇ ?

ಐಶ್ವರ್ಯ ರೈ ಜಗದೇಕ ಸುಂದರಿ ಎಂಬ ಪಟ್ಟವನ್ನು ಪಡೆದಾಗ ಕೇವಲ ಮಾಧ್ಯಮದೆದುರು ಅನಾಥಮಕ್ಕಳೊಡನೆ ನಿಂತು ಛಾಯಾಚಿತ್ರ ತೆಗೆಸಿಕೊಂಡಿದ್ದು ಬಿಟ್ಟರೆ ಆಕೆ "ಸಕ್ರಿಯವಾಗಿ ಅನಾಥ ಮಕ್ಕಳ ಸೇವೆಮಾಡುತ್ತೇನೆ " ಎಂದಿದ್ದು ಜಗತ್ತಿನ ಅದ್ಭುತ ಸುಳ್ಳುಗಳಲ್ಲಿ ಒಂದಾಗಿದೆ. ತಮ್ಮ ತೀಟೆ ತೀರಿಸಿಕೊಳ್ಳುವ ಕೆಲವು ಇಂತಹ ಸೆಲೆಬ್ರಿಟಿಗಳೆನಿಸಿದವರು ಆನೆ ಹೂಸು ಬಿಟ್ಟಹಾಗೇ ಆಡುವ ಮಾತುಗಳು ಮಾತ್ರ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲೇ ಇರುತ್ತವೆ. ಆನೆ ಯಾವಾಗ ಬಂತು ಎಲ್ಲಿ ಹೂಸು ಬಿಟ್ಟಿತು ಎಂಬುದು ನಮಗೆ ಗೊತ್ತೇ ಆಗುವುದಿಲ್ಲ! ಕೇವಲ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಹೆಚ್ಚಿನ ಗಳಿಕೆಗಾಗಿ, ತಮಗೆ ಹೆಚ್ಚಿನ ಮಾನ ಸನ್ಮಾನ ಬಿರುದು ಬಾವಲಿ ಅಬ್ಬರದ ಪ್ರಚಾರ ಸಿಗಲಾಗಿ ಮಾಡುವ ಇಂತಹ ಸೆಲೆಬ್ರಿಟಿಗಳ ’ಗಿಮಿಕ್ಸ್’ ನಮ್ಮಂತಹ ಪೆದ್ದುಗಳಿಗೆ ನಿಜವೇನೋ ಅನ್ನಿಸಿಬಿಡುತ್ತದೆ. ಕನ್ನಡದ ಬಗ್ಗೆ ಕಿಂಚಿತ್ ಆಸಕ್ತಿಯನ್ನೂ ಇಟ್ಟುಕೊಳ್ಳದ ಐಶ್ವರ್ಯ ರೈಯ್ಯನ್ನು ವಿಶ್ವಕನ್ನಡ ವೇದಿಕೆಯಲ್ಲಿ ಪಕ್ಕದಲ್ಲೇ ಕೂರಿಸಿಕೊಂಡು ನೇತಾರರು ಪ್ರಪುಲ್ಲರಾಗುತ್ತಿದ್ದರೆ, ಸಭೆಯಲ್ಲಿ ಅಮ್ಮನಿಂದ ಮೊನ್ನೆಯ ಸಮ್ಮೇಳನಕ್ಕಾಗಿಯಷ್ಟೇ ಕಲಿತ ಒಂದೆರಡು ಗಿಣಿಪಾಠವನ್ನು ಉಲಿದ ಆಕೆಯನ್ನು ನೋಡುತ್ತಾ ನಗಬೇಕೋ ಅಳಬೇಕೋ ಎಂದು ತಿಳಿಯದ ಸ್ಥಿತಿ ನಮ್ಮಲ್ಲಿ ಕೆಲವರದಾಗಿತ್ತು.

ಅಸಾಮಾನ್ಯ ರಾಜಕಾರಣಿಗಳೇ,[ ನಮಗೆ ಗೊತ್ತು: ನಿಮಗೆ ಅಸಾಮಾನ್ಯರು ಎಂಬ ಪದವೇ ಯೋಗ್ಯವೆಂಬುದು!] ದೇಶದ ಒಳಿತಿಗಾಗಿ, ದೇಶದ ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಹಾಗೂ ಇನ್ನಿತರ ರಂಗಗಳಲ್ಲಿ ತೊಡಗಿಸಿಕೊಂಡವರಿಗೆ, ಕಷ್ಟವೋ ಸುಖವೋ ತನ್ನನ್ನು ತೊಡಗಿಸಿಕೊಂಡು ಮಳೆಬಿಸಿಲುಚಳಿಯೆನ್ನದೇ ಪ್ರಕೃತಿಯನ್ನೇ ಅವಲಂಬಿಸಿ ಬಿತ್ತಿ ಬೆಳೆದು ಜನತೆಗೆ ನಿಜವಾಗಿ ಅನ್ನವನ್ನು ನೀಡುವ ಮೇಟಿವಿದ್ಯೆಯ ಸಾಧಕರಿಗೆ ಆದ್ಯತೆ ಸಿಗಲಿ, ಸನ್ಮಾನ ಸಿಗಲಿ. ದೇಶಕ್ಕೆ ದೇಶವೇ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದರೆ ಮುನ್ನುಗ್ಗುವವರು ಇಂಥವರೇ ಹೊರತು ಆಟಗಾರರೋ ಕಲಾವಿದರೋ ಸೆಲೆಬ್ರಿಟಿಗಳೋ ಅಲ್ಲ. ಯಾವುದಕ್ಕೆ ಎಷ್ಟು ಮಹತ್ವವನ್ನು ಕೊಡಬೇಕೆಂಬುದನ್ನು ಚಾಣಕ್ಯ ನೀತಿಯಿಂದ ಕಲಿತುಕೊಳ್ಳಿ. ನಮ್ಮ ಭಾರತದಲ್ಲಿ ಪೂರ್ವಜರು ತಮ್ಮ ಮುಂದಿನ ಜನಾಂಗಕ್ಕೆ ಉಳಿಸಿಹೋದ ಪಂಚತಂತ್ರದಂಥ ಕಥೆಗಳಿವೆ, ನೀತಿ ಪಾಠಗಳಿವೆ, ಅವುಗಳಲ್ಲೇ ಅಡಗಿರುವ ’ದಂಡ ದಶಗುಣಂ’ ಜನಸಾಮಾನ್ಯರಿಗೆ ದಂಡವಿಧಿಸುವ ಸ್ಥಿತಿ ಬಾರದಿರಲಿ. ಕ್ರಿಕೆಟ್ ಕೇವಲ ಒಂದು ಆಟವಾಗಿರಲಿ, ಅದು ಯುದ್ಧವೂ ಅಲ್ಲ, ಅವರು ಯೋಧರೂ ಅಲ್ಲ, ಆ ಆಟಗಾರರಿಗೆ ಸ್ವಲ್ಪ ಮಾನ್ಯತೆ ಕಮ್ಮಿ ಮಾಡಿ ಇತರ ರಂಗಗಳನ್ನೂ ಲೆಕ್ಕಿಸಿ ಎಂಬುದು ಜನಸಾಮಾನ್ಯನ ಆಡದೇ ಉಳಿದ ಮಾತಾಗಿದೆ.

Monday, March 28, 2011

ನಾ ನಿನ್ನ ಧ್ಯಾನದೊಳಿರಲು ಸದಾ........


ನಾ ನಿನ್ನ ಧ್ಯಾನದೊಳಿರಲು ಸದಾ........

ಮಾನವ ಶರೀರ ಎಷ್ಟು ಅದ್ಭುತವಾಗಿದೆಯೆಂಬುದರ ತಿಳುವಳಿಕೆ ನಮಗೆಲ್ಲಾ ಬರುವುದೇ ಇಲ್ಲ. ನಮ್ಮ ಇವತ್ತಿನ ಯಾವ ಮಾಧ್ಯಮದ ಜ್ಯೋತಿಷಿಗಳಿಗಾಗಲೀ ವಿಜ್ಞಾನಿಗಳಿಗಾಗಲೀ ನಿಲುಕದ ಅತ್ಯುನ್ನತ ಮನೋಸ್ತರವೊಂದಿದೆ ಎಂಬುದು ನೈಷ್ಠಿಕ ತಪೋಬಲದಿಂದ ಮತ್ತು ಸ್ವಾನುಭವದಿಂದ ಗುರುಸ್ಥಾನವನ್ನು ಅಲಂಕರಿಸಿದ ಕೆಲವು ಸನ್ಯಾಸಿಗಳು ಹೇಳುವ ಮಾತು. ಅಷ್ಟಾಂಗಯೋಗದ ಪ್ರಮುಖ ಘಟ್ಟವಾದ ’ಧಾರಣ’ ಹಂತದಲ್ಲಿ ಇಂದ್ರಿಯಗಳು ಮತ್ತು ಮನಸ್ಸನ್ನು ತನ್ನ ಕೈಯ್ಯಲ್ಲಿ ಮಾನವ ಬಂಧಿಯಾಗಿಸಿ ಇಹದ ಹಲವು ಕಾಮನೆಗಳನ್ನು ದಮನಮಾಡಿ ಕೇವಲ ಧ್ಯಾನದಲ್ಲಿ ತನ್ನ ಪ್ರಾಣವಾಯು ಅಥವಾ ಪ್ರಾಣಶಕ್ತಿಯನ್ನು ತಲ್ಲೀನಗೊಳಿಸುತ್ತಾನೆ.

ಧ್ಯಾನವೆಂಬುದುಕ್ಕೆ ಲೌಕಿಕ ವ್ಯವಹಾರದ ಕೆಲವು ಉದಾಹರಣೆಗಳನ್ನು ಕೊಡಬಹುದು. ವಿಜ್ಞಾನಿಯೊಬ್ಬನಿಗೆ ತನ್ನ ಸಂಶೋಧನೆಯಲ್ಲಿ ತಾದಾತ್ಮ್ಯತೆ ಬೇಕಾಗುತ್ತದೆ. ಹಿಡಿದ ಗುರಿಯನ್ನು ತಲ್ಪುವಾಗ ಮಧ್ಯೆ ಬಾಧಕಗಳು ಸಹಜವೇ. ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ನಿವಾರಿಸಿಕೊಂಡು ಮತ್ತೆ ತನ್ನ ಹಾದಿಯಲ್ಲಿ ಮುಂದುವರಿಯುವ ಛಲ ಮತ್ತು ತೊಡಗಿಕೊಳ್ಳುವಿಕೆ ಬೇಕಾಗುತ್ತದೆ. ಕೆಲವೊಮ್ಮೆ ಅದು ಎಷ್ಟರಮಟ್ಟಿಗೆ ಎಂದರೆ ಸಂಶೋಧನೆಯ ಪರಮೋಚ್ಛ ಸ್ಥಿತಿಯಲ್ಲಿ ಹಗಲು-ರಾತ್ರಿ,ಊಟ,ನಿದ್ರೆ ಯಾವುದರ ಪರಿವೆಯೂ ಇರುವುದೇ ಇಲ್ಲ. ಸದಾಕಾಲ ಹಿಡಿದ ಆ ಸೂತ್ರದಮೇಲೇ ಕೆಲಸ! ಕೊನೆಗೂ ಗುರಿ ಸಮರ್ಪಕವಾಗಿದ್ದರೆ, ಸೂತ್ರ ಸಮಂಜಸವಾಗಿದ್ದರೆ ಆ ವ್ಯಕ್ತಿ ಹೊಸದೊಂದು ವಿಷಯವನ್ನು ಜಗತ್ತಿಗೆ ತೋರಿಸಿಕೊಡುವಲ್ಲಿ ಸಫಲನಾಗುತ್ತಾನೆ. ಇದೊಂದು ಧ್ಯಾನವೇ ಸರಿ. ಅದೇ ರೀತಿ ಅಬಾಕಸ್ ಕಲಿತ ಹುಡುಗ/ಹುಡುಗಿ ರಸ್ತೆಯಲ್ಲಿ ಓಡುವ ವಾಹನಗಳ ಮೇಲಿನ ಸಂಖ್ಯೆಗಳನ್ನು ಕೂಡಿಸಿ ಒಟ್ಟೂ ಮೊತ್ತವನ್ನು ಹೇಳಬಲ್ಲರು, ಸಾಮಾನ್ಯರು ಕ್ಯಾಲ್ಕ್ಯುಲೇಟರ್ ಬಳಸಿ ಮಾಡುವ ಗುಣಲಬ್ಧಗಳನ್ನು ಸೇಕಂದಿನಲ್ಲಿ ಅದಕ್ಕೂ ಮೊದಲೇ ತಿಳಿಸಬಲ್ಲರು--ಇದು ಅವರ ಧ್ಯಾನ!

ಪಾಕಶಾಸ್ತ್ರಿಯೊಬ್ಬನಿಗೆ ಬುಂದಿಲಾಡು ಮಾಡುವಾಗಾಗಲೀ ಮೈಸೂರುಪಾಕ ಮಾಡುವಾಗಾಗಲೀ ಅವುಗಳಿಗೆ ಬೇಕಾದ ಮೂಲವಸ್ತುಗಳನ್ನು ಹುರಿದೋ ಕರಿದೋ ಯಾವ ಹದದಲ್ಲಿ ಹೇಗೆ ನಿಲ್ಲಿಸಬೇಕು ಎಂಬುದರ ನಿರೀಕ್ಷೆಯಿರುತ್ತದೆ. ಸ್ವಲ್ಪ ಹೆಚ್ಚುಕಮ್ಮಿಯಾದರೆ ತಯಾರಿಸುವ ಸಿಹಿತಿಂಡಿಯ ರುಚಿ,ಬಣ್ಣ, ಆಕಾರ ಅಥವಾ ವಾಸನೆ ಬದಲಾಗಿಹೋಗುತ್ತದೆ. ಇಲ್ಲಿ ಆಡುಗೆಯಾತ ಆ ವಿಷಯದಲ್ಲಿ ಧ್ಯಾನಾಸಕ್ತನಾಗಿರುತ್ತಾನೆ. ಆಲೆಮನೆಯಲ್ಲಿ ಬೆಲ್ಲವನ್ನು ತಯಾರಿಸುವಾಗ ಕಬ್ಬಿನ ಹಾಲು ಕುದಿದು ಅದರೊಳಗಿನ ನೀರಿನ ಅಂಶ ಆವಿಯಾಗಿ, ನಂತರ ಸಿಹಿಯಂಶ ಬೆಲ್ಲವಾಗಿ ಮಾರ್ಪಡುವ ಸಮಯಬರುತ್ತದೆ; ಈ ಸಮಯದಲ್ಲಿ ಬೆಲ್ಲದ ಪಾಕವನ್ನು ನಿರೀಕ್ಷಿಸುವಾತ ಎತ್ತಲೋ ನೋಡುತ್ತಿದ್ದರೆ ಅದು ಹಾಳಾಗಿ ಹೋಗುತ್ತದೆ. ವಿದ್ಯಾರ್ಜನೆಗೆ ಇಳಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಮ್ಮ ಮನಸ್ಸನ್ನು ಮೊಬೈಲ್ ಕಡೆಗೋ ಫೇಸ್‍ಬುಕ್/ಆರ್ಕುಟ್ ಕಡೆಗೋ ಹರಿಸುತ್ತಾ ಸ್ನೇಹಿತ/ಸ್ನೇಹಿತೆಯರ ಬಳಗದಲ್ಲಿ ಮಜಾ ಉಡಾಯಿಸುತ್ತಿದ್ದರೆ ಪರೀಕ್ಷೆ ಹತ್ತಿರಕ್ಕೆ ಬಂದಾಗ ದಿಗಿಲು ಆವರಿಸುತ್ತದೆ. ಇತ್ತಕಡೆ ಓದಲೂ ಆರದೇ, ಅರ್ಥಮಾಡಿಕೊಳ್ಳಲೂ ಆಗದೇ ಅತ್ತಕಡೆ ಓದದೇ ಇರಲೂ ಆಗದೇ ಮಾನಸಿಕ ಉದ್ವಿಗ್ನತೆಗೆ ಕಾರಣವಾಗುತ್ತದೆ. ಅವರು ಓದುವ ಆ ಧ್ಯಾನಕಾರ್ಯದಲ್ಲಿ ಸಮರ್ಪಕವಾಗಿ ತೊಡಗಿದ್ದರೆ ಹಾಗಾಗುವುದಿಲ್ಲ. ಆದರೆ ಓದುವ ಪುಸ್ತಕಗಳಿಗಿಂತಾ ಮೊಬೈಲ್ ಮತ್ತು ಫೇಸ್‍ಬುಕ್/ಗೆಳೆಯರ ಹರಟೆ ಇವೇ ಇಷ್ಟವಾಗುತ್ತವೆ; ಧ್ಯಾನ ಕೆಟ್ಟುಹೋಗುತ್ತದೆ!

ಕಲಾವಿದ ತನ್ಮಯನಾಗಿ ಚಿತ್ರಬಿಡಿಸಿದರೆ ಕಲೆ ನಮ್ಮನ್ನು ಬೆರಗುಗೊಳಿಸುತ್ತದೆ; ಇಲ್ಲವಾದರೆ ಕಲಾವಿದನಿಗೆ ಬೇಸರವಾಗಬಾರದೆಂಬ ಕಾರಣಕ್ಕೆ ’ಚೆನ್ನಾಗಿದೆ’ ಎಂದು ಹೇಳುವ ಪ್ರಸಂಗ ಬರುತ್ತದೆ!ಸಂಗೀತಗಾರ ಕೊಡುವ ಸಂಭಾವನೆಗೆ ಎಂದು ಹಾಡಹೊರಟರೆ ಒಟ್ಟಾರೆ ಅದು ಸಂಗೀತವಾಗುತ್ತದೆಯೇ ಹೊರತು ಜನ ಮನದಣಿಯೇ ಆಸ್ವಾದಿಸುವ ಸಂಗೀತವಾಗಿರುವುದಿಲ್ಲ. ಮಾಧ್ಯಮಗಳಲ್ಲಿ ಹಾಸ್ಯವನ್ನು ಉಣಬಡಿಸುವ ಇಂತಹ ಹಲವು ಕಲಾವಿದರನ್ನು ನಾವು ನೋಡಿದ್ದೇವೆ; ಅವರು ಹೇಳಿದ್ದನ್ನೇ ಮತ್ತೆ ಹೇಳುತ್ತಾ ಸಾಗುತ್ತಾರೆ-ಅದು ಬೇಸರ ತರಿಸುತ್ತದೆ. ಅಲ್ಲಿ ಧ್ಯಾನವಿರುವುದಿಲ್ಲ; ಹಾಸ್ಯ ಯಾಂತ್ರಿಕವಾಗಿ ಹೊರಹೊಮ್ಮುತ್ತಿರುತ್ತದೆ-ಅವರಲ್ಲಿ ಬೇರೇ ಸರಕು ಇರುವುದಿಲ್ಲ ನಮಗೆ ಅದನ್ನೇ ಕೇಳದೇ ವಿಧಿಯಿಲ್ಲ!

ಧ್ಯಾನದಲ್ಲಿ ತೊಡಗಿ ಫಲಪಡೆದ ಕೆಲವು ಜನರನ್ನು ಹೇಳಿದರೆ ಉತ್ತಮವೆನಿಸುತ್ತದೆ. ಕನ್ನಡಭಾಷೆಗೆ ಆಂಗ್ಲಭಾಷಿಕನೊಬ್ಬ ಶಬ್ದಕೋಶ ರಚಿಸುವುದೆಂದರೆ ಬಹುಶಃ ಅದು ಕಷ್ಟಸಾಧ್ಯದ ಕೆಲಸ; ಬಹುತೇಕರಿಗೆ ಇಷ್ಟವಾಗುವ ಕಾರ್ಯವಲ್ಲ. ಕಿಟೆಲ್ ಎನ್ನುವ ವ್ಯಕ್ತಿ ಭಾರತಕ್ಕೆ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು ತನ್ನ ಸತತ ಧ್ಯಾನದಿಂದ ಅಂತಹ ಕಾರ್ಯವನ್ನು ಸಂಪನ್ನಗೊಳಿಸಿದ್ದಾರೆ ಎಂಬುದು ಇತಿಹಾಸದ ದಾಖಲೆ! ಇವತ್ತು ಗಿನ್ನೆಸ್ ದಾಖಲೆಗೋಸ್ಕರ ಯಾರ್ಯಾರೋ ಬೇಡದ್ದನ್ನೆಲ್ಲಾ ಮಾಡುತ್ತಾರೆ. ಆದರೆ ಕೇವಲ ದಾಖಲೆ-ಪುರಸ್ಕಾರಗಳಿಗಾಗಿಯಲ್ಲದೇ ಸಮಾಜದ ಹಿತಕ್ಕಾಗಿ ಇಂತಹ ಸಾಧನೆಗಳನ್ನು ಮಾಡುವವರು ಅತಿವಿರಳ.

ಹಾಗಾದರೆ ಧ್ಯಾನ ಇಷ್ಟು ಸುಲಭವಾಗಿದ್ದರೆ ಮತ್ತೇತಕ್ಕೆ ಅಂತಹ ಇಂದ್ರಿಯ ನಿಗ್ರಹದಂತಹ ಕಷ್ಟದ ಕೆಲಸ ಎಂಬ ಪ್ರಶ್ನೆ ಕಾಡುತ್ತದೆಯಲ್ಲವೇ? ಆದರೆ ಲೌಕಿಕವಾದ ಈ ಧ್ಯಾನ ಕೇವಲ ಆ ಯಾ ಗುರಿಗೆ ಸೀಮಿತವಾಗಿರುತ್ತದೆ. ಆದರೆ ಮನಸ್ಸನ್ನು ಎಲ್ಲೂ ಹೋಗದಂತೇ ಅಂದರೆ ಯಾವ ಆಲೋಚನೆಗೂ ಒಳಗಾಗದಂತೇ ತಹಂಬದಿಗೆ ತಂದುಕೊಂಡು ತದೇಕಚಿತ್ತನಾಗಿ ಅಲೌಕಿಕವಾಗಿ ನಿರ್ವಿಷಯವಾಗಿ ಧ್ಯಾನಮಾಡುವುದು ಸ್ವಲ್ಪ ಮಹತ್ತರ ಕೆಲಸ. ಈ ಸ್ಥಾನಕ್ಕೆ ವ್ಯಕ್ತಿ ಏರಿದಾಗ ಜಗತ್ತಿನಲ್ಲಿ ಆತನಿಗೆ ದ್ವೇಷಿಕರಿಲ್ಲ, ದೇಶಕಾಲದ ಗಡಿಮಿತಿಯಿಲ್ಲ, ಬಂಧು-ಭಗಿನಿ ಎಂಬ ಭಾವ ಬಂಧುರವಿಲ್ಲ! ಹಾಗಂತ ಆತ ಇಡೀ ವಿಶ್ವಕ್ಕೇ ಇಡೀ ಮನುಕುಲಕ್ಕೇ ಒಳಿತನ್ನು ಬಯಸುವ ವ್ಯಕ್ತಿಯಾಗುತ್ತಾನೆ. ಈ ಹಂತವನ್ನು ತಲ್ಪುವಾಗ ಆತನಿಗೇ ಅರಿವಿಲ್ಲದೇ ಹಲವು ಪವಾಡಗಳು ಅತನಿಂದ ಘಟಿಸುತ್ತವೆ. ಹಾಗೆ ಘಟಿಸುವ ಪವಾಡಗಳಿಗೆ ಆತ ಆಕರ್ಷಿತನಾಗಿಬಿಟ್ಟರೆ ಅಲ್ಲಿಗೆ ಆ ಧ್ಯಾನ ನಿಂತುಹೋಗುತ್ತದೆ. ಅಲ್ಲಿಯೂ ಮಧ್ಯೆ ಮಧ್ಯೆ ಬರಬಹುದಾದ ಇಂತಹ ಪವಾಡಗಳೇ ಮೊದಲಾದ ಅಡೆತಡೆಗಳನ್ನು ಕಡೆಗಣಿಸಿ ಧ್ಯಾನದಲ್ಲಿ ಮುನ್ನಡೆದರೆ ಆತ ಸಾಧಕನಾಗುತ್ತಾನೆ, ಸಿದ್ಧಪುರುಷನಾಗುತ್ತಾನೆ, ಸನ್ಯಾಸಿಯಾಗುತ್ತಾನೆ. ಇದಕ್ಕೆ ಯಾವುದೇ ಧರ್ಮ,ಮತಗಳ ಲೇಪವಿಲ್ಲ, ಲೋಪವೂ ಇಲ್ಲ. ಧ್ಯಾನಾಸಕ್ತನಾದ ವ್ಯಕ್ತಿ ಕ್ರಮೇಣ ತನ್ನ ಸತತ ಪರಿಕ್ರಮದಿಂದ ಸಮಾಧಿ ಸ್ಥಿತಿಗೆ ತಲುಪುತ್ತಾನೆ!

ಸಮಾಧಿ ಎಂದರೆ ಗೋರಿಯಲ್ಲ! ಇಲ್ಲಿ ’ಸಮಾಧಿ’ ಎಂಬುದು ಯೋಗದ ಕೊನೆಯ ಹಂತ. ಸಮಾಧಿ ಸ್ಥಿತಿಯಲ್ಲಿ ವ್ಯಕ್ತಿಗೆ ಬಾಹ್ಯ ಪ್ರಪಂಚದ ಅರಿವಿರುವುದಿಲ್ಲ. ಆತ ಕುಳಿತಿರಲಿ/ಮಲಗಿರಲಿ ಆತನ ಶರೀರ ನಿಶ್ಚಲವಾಗಿರುತ್ತದೆ-ನೋಡುಗರಿಗೆ ವ್ಯಕ್ತಿ ಸತ್ತಿರುವಂತೇ ಭಾಸವಾಗುತ್ತದೆ. ಆದರೆ ವಿಚಿತ್ರವೆಂದರೆ ಸಮಾಧಿ ಸ್ಥಿತಿಯಲ್ಲಿರುವ ವ್ಯಕ್ತಿಯ ಭೌತಿಕ ಶರೀರವನ್ನು ಪರಿಸರವೇ ಸಂರಕ್ಷಿಸುತ್ತದೆ. ಆತನಿಗೆ ಹಸಿವು,ನೀರಡಿಕೆ, ಆಯಾಸ, ನಿದ್ದೆ, ಬಹಿರ್ದೆಶೆಗಳ ಗಣನೆ ಇರುವುದಿಲ್ಲ- ಬೇಕಾಗಿರುವುದೂ ಇಲ್ಲ. ಆ ಕಾಲದಲ್ಲಿ ಆತ ’ಆನಂದಲೋಕ’ದ ದ್ವಾರದಲ್ಲಿ ನಿಂತಿರುತ್ತಾನೆ. ಒಂದೊಮ್ಮೆ ಆತನ ಸಾಧನೆ ಅತ್ಯುನ್ನತವಾಗಿದ್ದರೆ ಆ ಸ್ಥಿತಿಯಲ್ಲೇ ಆತ ಪರಮಾನಂದವನ್ನು ಪಡೆಯಲು ಆರಂಭಿಸುತ್ತಾನೆ.

ಪರಮಾನಂದವೆಂದು ಅಂದುಕೊಳ್ಳುವ ಹಲವು ನಮ್ಮ ಲೌಕಿಕ ಘಟನೆಗಳು ನಿಜಕ್ಕೂ ಆ ಶಬ್ದದ ಬಳಕೆಗೆ ಅರ್ಹವಲ್ಲ! " ಎಂಥಾ ಬಿಸಿಲು ಮಾರಾಯಾ ದಾರಿಯಲ್ಲಿ ಒಳ್ಳೇ ಕಬ್ಬಿನಹಾಲು ಎಳೆನೀರು ಎಲ್ಲಾ ಸಿಕ್ತು...ಕುಡಿದುಬಿಟ್ಟೆ..ಪರಮಾನಂದವಾಯ್ತು" ಎಂದು ನಾವಂದುಕೊಳ್ಳುವುದಾಗಲೀ, " ನಮ್ಮ ಮಗ-ಮಗಳು ಎಲ್ಲಾ ಚೆನ್ನಾಗಿ ಓದಿ ಅಮೇರಿಕಾದಲ್ಲಿ ಸೆಟ್ಲ್ ಆಗಿದ್ದು ನಮಗೆ ಪರಮಾನಂದ " ಎನ್ನುವ ತಂದೆ-ತಾಯಿಗಳದ್ದಾಗಲೀ, " ಈ ಸರ್ತಿ ನಮ್ಮ ಸ್ಕೂಲ್‍ಗೇ ಪ್ರಥಮ ಬಹುಮಾನ ಬಂದಿದ್ದು ನಮಗೆ ಪರಮಾನಂದ ತಂದಿದೆ " ಎಂಬ ಶಾಲೆಯ ಸಮಿತಿಯದಾಗಲೀ ನಿಜವಾದ ಪರಮಾನಂದವಲ್ಲ. ಇಲ್ಲಿರುವ ಎಲ್ಲಾ ಆನಂದಕರ ಸನ್ನಿವೇಶಗಳೂ ಘಟನೆಗಳೂ ಕೇವಲ ಕ್ಷಣಿಕ! ಗಿನ್ನೆಸ್ ದಾಖಲೆಯ ವೀರನೊಬ್ಬನ ’ಪರಮಾನಂದ’ ಇನ್ನೊಬ್ಬ ಆ ದಾಖಲೆಯನ್ನು ಮುರಿಯುವವರೆಗೆ, ಜಪಾನಿನಲ್ಲಿ ನೆಲೆಸಿರುವ ಮಕ್ಕಳನ್ನು ಕಂಡು ಅನಿಭವಿಸುವ ’ಪರಮಾನಂದ’ ಭೂಕಂಪ ಸಂಭವಿಸುವವರೆಗೆ, ತಾನೇ ಸುಂದರಿ ಎಂದು ’ಡ್ರೀಮ್ ಗರ್ಲ್’ ಪಟ್ಟಪಡೆದ ಹೆಣ್ಣಿನ ’ಪರಮಾನಂದ’ ಮುಖದ ಚರ್ಮ ಸುಕ್ಕುಗಟ್ಟುವವರೆಗೆ,ಮೊನ್ನೆ ಮೊನ್ನೆಯವರೆಗೆ ನಾಯಕಿಯಾಗಿ ನಾಚುತ್ತಾ ಬಳುಕುತ್ತಾ ಬಿಂಕದ ಬೆಡಗು ಮೆರೆದ ನಟಿಯ ’ಪರಮಾನಂದ’ ಅಮ್ಮನ ಪಾತ್ರವನ್ನು ಅನಿವಾರ್ಯವಾಗಿ ಒಪ್ಪಿ ಮಾಡಬೇಕಾದ ನೈಜಸ್ಥಿತಿ ತಲುಪುವವರೆಗೆ, ೧೯೮೫-೮೬ ರಲ್ಲಿ ಹೆಮ್ಮೆಯಿಂದ ಪರರಿಗೆ ತೋರಿಸಲು ತಮ್ಮ ಶ್ರೀಮಂತಿಕೆಯ ದ್ಯೋತಕವಾಗಿ ’ಪ್ರೀಮಿಯರ್ ಪದ್ಮಿನಿ’ ಕರೀದಿಸಿದಮ್ ’ಪರಮಾನಂದ’ಇದ್ದಿದ್ದು ಅಕ್ಕ-ಪಕ್ಕದವರು ಸ್ಯಾಂಟ್ರೋ,ಫೋರ್ಡ್, ಸ್ಕಾರ್ಪಿಯೋ,ಇನ್ನೊವಾ, ಇನ್ಯಾವುದೊ ನೋವಾ ಕೊಳ್ಳುವವರೆಗೆ! ತನ್ನನ್ನು ಬಿಟ್ಟರೆ ಇನ್ನೊಬ್ಬ ಉದ್ದಿಮೆದಾರನಿಲ್ಲ ಎಂಬ ಬೆಳವಣಿಗೆ ಮತ್ತೊಬ್ಬ ಉದ್ದಿಮೆದಾರ ಮೊದಲಿನಾತನಿಗಿಂತ ಹೆಚ್ಚಿಗೆ ಬೆಳೆಯುವವರೆಗೆ---ಹೀಗೇ ಲೌಕಿಕದ ಯಾವುದೇ ಸಾಧನೆ ತೆಗೆದುಕೊಳ್ಳಿ ಅದು ಶಾಶ್ವತವಲ್ಲ! ಇದು ಕೇವಲ ಲೌಕಿಕಾನಂದವೇ ಹೊರತು ಪರಮಾನಂದವಲ್ಲ.

ಪರಮಾನಂದದ ಸ್ಥಿತಿ ತಲುಪಿದ ವ್ಯಕ್ತಿಯ ಸಾಧನೆಯನ್ನು ಮುರಿಯುವ ಮತ್ತೊಬ್ಬ ಹುಟ್ಟುವುದಿಲ್ಲ! ಅಲ್ಲಿ ಯಾವುದೇ ವಿಷಯಕ್ಕೂ ಪೈಪೋಟಿಯಿಲ್ಲ; ವಿಷಯವಸ್ತುಗಳೇ ಇಲ್ಲ! ಅಂತಹ ಪರಮಾನಂದ ಸ್ಥಿತಿಯನ್ನು ತಲುಪುವುದು ಸಾಧಾರಣ ಧ್ಯಾನದಿಂದ ಸಾಧ್ಯವಿಲ್ಲ. ಪ್ರಯತ್ನಿಸಿ ಪ್ರಯತ್ನಿಸಿ ಪ್ರಯತ್ನಿಸಿ ಧ್ಯಾನವನ್ನು ಅಂತಹ ಮಟ್ಟಕ್ಕೆ ಬೆಳೆಸಿದರೆ, ನಡೆಸಿದರೆ ಬಹಳ ನಿಧಾನಗತಿಯಲ್ಲಿ ಸಿಗುವ ಅತ್ಯುತ್ಕೃಷ್ಟ ಫಲ ಅದು. ಆ ಸಾಧಕ ಜಗತ್ತಿನ ಯಾವುದೇ ಭಾಷೆಯನ್ನೂ ಅಧ್ಯಯನ ಮಾಡದೇ ಬಳಸಬಲ್ಲ! ಯಾವ ಧರ್ಮಗ್ರಂಥವನ್ನಾದರೂ ಓದದೇ ಹೇಳಬಲ್ಲ! ಯಾವ ತಂತ್ರಜ್ಞಾನವನ್ನಾದರೂ ಕುಳಿತಲ್ಲೇ ನಿಯೋಜಿಸಬಲ್ಲ-ನಿಯಂತ್ರಿಸಬಲ್ಲ! ಅಂತಹ ಅಸಾಧಾರಣ ಶಕ್ತಿ ಒದಗಿಬರುತ್ತದೆ. ಅಂತಹ ಶಕ್ತಿಯನ್ನು ಪಡೆದ ಸನ್ಯಾಸಿಗಳು ಲೌಕಿಕವಾಗಿ ಇತರರ ಬಳಲುವಿಕೆಗಳನ್ನು ಪರಿಗಣಿಸಿ, ಅವರ ನೋವುಗಳನ್ನು ತಾವು ಸ್ವೀಕರಿಸಿ ಅನುಭವಿಸಿ ತಮ್ಮ ಧ್ಯಾನದ ಶಕ್ತಿಯ ಫಲದಿಂದ ಜನಸಾಮಾನ್ಯರನೇಕರ ರೋಗರುಜಿನ-ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ನಿಗ್ರಹಾನುಗ್ರಹ ಸಮರ್ಥರು ಎನ್ನುತ್ತೇವೆ.

ಧ್ಯಾನದ ಸ್ಥಿತಿ ಎಣ್ಣೆಗಂಬ ಏರಿದಂತೇ ಇರುತ್ತದೆ. ಅದನ್ನು ನಾವು ಏರಿದಷ್ಟೂ ಯಾರೋ ನಮಗೆ ಮತ್ತಷ್ಟು ಎಣ್ಣೆಯನ್ನು ಸುರಿದು ಜಾರುವಂತೇ ಮಾಡುತ್ತಿದ್ದಾರೆನ್ನುವಂತಹ ಭಾಸವಾಗುತ್ತದೆ. ಜಾರುಗಂಬವನ್ನು ಮಲ್ಲಯುದ್ಧ ಪರಿಣತರು ಬಿಟ್ಟೂ ಬಿಡದೇ ಏರುವಂತೇ ಧ್ಯಾನವೆಂದ ಮಲ್ಲಗಂಬವನ್ನು ನಾವು ಏರಲು ಪ್ರಯತ್ನಿಸುವುದೇ ನಮ್ಮೊಳಗೆ ಕುಳಿತ ಪ್ರಾಣವಾಯುವಿನ ಅಥವಾ ಪ್ರಾಣಶಕ್ತಿಯ ಅರಿಯುವಿಕೆಗಾಗಿ! ಇಂತಹ ಪ್ರಾಣಶಕ್ತಿಯ ಪರಿಪೂರ್ಣ ಅರಿವು ನಮಗಾದರೆ ಅದೇ ಆತ್ಮಸಾಕ್ಷಾತ್ಕಾರ. ಈ ಧ್ಯಾನದ ಮಾರ್ಗ ಎಲ್ಲರಿಗೂ ಹಿಡಿಸುವುದಿಲ್ಲ. ಯಾಕೆಂದರೆ ಅದು ಕ್ಷಣಿಕಸುಖವನ್ನು ನೀಡುವ ಮಾರ್ಗವಲ್ಲ. ಧ್ಯಾನ ಆಯುರ್ವೇದದಂತೇ ಬಹಳ ಪರಿಣಾಮಕಾರಿ. ಆದರೆ ಅಲೋಪಥಿ ಚಿಕಿತ್ಸೆಯ ಕ್ಷಣಿಕ ಪರಿಣಾಮವನ್ನು ಮೆಚ್ಚಿಕೊಂಡವರಿಗೆ ಆಯುರ್ವೇದದ ಮಹತ್ವ ಅರಿವಿಗೆ ಬಾರದಲ್ಲಾ ಹೀಗಾಗಿ ’ನಮಗೆ ಪೂಜೆ ಧ್ಯಾನ ಅಂದ್ರೆಲ್ಲಾ ಆಸಕ್ತಿಯಿಲ್ಲ... ನಮ್ಮ ಕೆಲ್ಸಾಯ್ತು ನಾವಾಯ್ತು...ನಾವು ಮಾಡೋ ಕೆಲ್ಸದಲ್ಲೇ ದೇವರು ಇದ್ದಾನೆ’ ಎನ್ನುವವರಿದ್ದಾರೆ. ಅದೂ ಸರಿಯೇ ಆದರೆ ಅವರು ಪರಮಾನಂದಕ್ಕೆ ಅರ್ಹರಲ್ಲ. ಅವರು ಮಾಡುವ ಕೆಲಸದಲ್ಲಿ ದೇವರು ಎಂಬ ಶಕ್ತಿ ಮೆಚ್ಚುವಂತೇ ನಡೆದರೆ ಆ ಕೆಲಸದಲ್ಲಿ ಅವರಿಗೆ ಔನ್ನತ್ಯ ಬರಬಹುದೇ ವಿನಃ ಅದಕ್ಕೂ ಮೀರಿದ ಸಾಧನೆ ಅವರದಾಗುವುದಿಲ್ಲ. ಮೇರೆ ಮೀರಿದ ನಿಜವಾದ ಆನಂದದ ಅನುಭೂತಿಗೆ ಅವರು ಪಾತ್ರರಾಗುವುದಿಲ್ಲ.

ಲೌಕಿಕವಾಗಿ ನಾವು ಯಾವುದೇ ಕೆಲಸದಲ್ಲಿ ತೊಡಗಿದ್ದರೂ ಒಮ್ಮೆ ಯೋಚಿಸಿ ನೋಡಿ: ಅದು ನಮ್ಮ ಜನ್ಮಾಂತರದ ಕರ್ಮಬಂಧನವೇ ಹೊರತು ನಾವಾಗಿ ನಾವು ಆಯ್ದುಕೊಂಡ ಪ್ರದೇಶ ಇದಲ್ಲ. ಯಾರೋ ಒಬ್ಬಾತ ಬಡವನಾಗಿ ಇನ್ನೊಬ್ಬ ಸಿರಿವಂತನಾಗಿ ಬದುಕುವುದು ಕೇವಲ ಲೌಕಿಕದ ಪರಿಣಾಮವಲ್ಲ. ಭಿಕ್ಷುಕ ಹಾಗೆ ಭಿಕ್ಷಾಟನೆ ಮಾಡಲು ಆತನ ಜನ್ಮಾಂತರದ ಕರ್ಮಫಲ ಕಾರಣವಾಗಿರುತ್ತದೆ. ಬಡ ಮನೆತನದಲ್ಲೇ ಹುಟ್ಟಿದ ವ್ಯಕ್ತಿಯೊಬ್ಬ ಜಗತ್ತಿನಲ್ಲೇ ಸಿರಿವಂತನಾಗಿ ಮೆರೆಯುವುದು ಶ್ರೀಮಂತನೊಬ್ಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳುವುದು ಅವರವರ ವಿಧಿ. ಇಂತಹ ಜನ್ಮಗಳೆಷ್ಟನ್ನೋ ಪೂರೈಸಿದರೂ ನಮಗೆ ’ಪರಮಾನಂದದ’ ಸ್ಥಿತಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಹಿಂದೆಮಾಡಿದ ಪಾಪ-ಪುಣ್ಯಗಳನ್ನು ಈ ಜನ್ಮದಲ್ಲೂ ಇಂದು ಮಾಡುತ್ತಿರುವುದನ್ನು ಮುಂದಿನ ಜನ್ಮದಲ್ಲೂ ಅನುಭವಿಸುವವರಾಗಿ ಜನನ-ಮರಣಗಳ ಚಕ್ರದಲ್ಲಿ ಸುತ್ತುತ್ತಿದ್ದೇವೆ. ಒಂದರೆಕ್ಷಣ ಆ ಬಗ್ಗೆ ಆಲೋಚಿಸಿದರೆ ಧ್ಯಾನದ ಮಹತ್ವ ಅರಿವಿಗೆ ಬರುತ್ತದೆ. ಧ್ಯಾನದಲ್ಲಿ ಸ್ವಲ್ಪವೇ ತೊಡಗಿಕೊಂಡರೂ ರಕ್ತದೊತ್ತಡದ ವ್ಯತ್ಯಾಸ, ಹಲವು ಕಾಯಿಲೆಗಳು ನಿವಾರಣೆಯಾದ ದಾಖಲೆಗಳು ಸಿಗುತ್ತವೆ. ನಮ್ಮ ಸುತ್ತ ಯಾರೋ ಏನೋ ಹೇಳಿದರು ಎಂಬುದನ್ನು ಮರೆತು ಧ್ಯಾನಾಸಕ್ತರಾದರೆ ಮನದ ಕ್ಲೇಶಗಳು ನಾಶವಾಗುತ್ತವೆ. ಇದ್ದನ್ನರಿತ ದಾಸರು ಇತರರಿಗೂ ಹೇಳಿದರು...

ನಾ ನಿನ್ನ ಧ್ಯಾನದೊಳಿರಲು ಸದಾ .....ಮಿಕ್ಕ ಹೀನಮಾನವರಿಂದ


ಜಗತ್ತಿಗೇ ಅನ್ವಯಿಸುವ ನಿಜಾರ್ಥದ ಮಾನವ ಧರ್ಮವನ್ನು ತನ್ನ ಅತೀ ಕಮ್ಮೀ ವಯದಲ್ಲೇ ತಿಳಿಸಿಕೊಟ್ಟು ಜಗದ್ಗುರುವೆನಿಸಿದ ಆದಿಶಂಕರರೂ ಇದನ್ನೇ ಹೇಳಿದರು

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಂ |
ಇಹ ಸಂಸಾರೇ ಬದುದುಸ್ತಾರೇ
ಕೃಪಯಾ ಪಾರೇ ಪಾಹಿ ಮುರಾರೇ ||

ಇಲ್ಲಿ ಮುರಾರಿ ಎಂದಿದ್ದಾರೆ ಎಂದಾಕ್ಷಣ ಕೇವಲ ಹಿಂದೂ ದೇವರೆಂಬ ಭಾವನೆ ಬೇಡ. ಆಯಾಯ ಧರ್ಮಗಳವರೌ ಅವರವರ ದೇವರುಗಳನ್ನು ಆರಾಧಿಸಿಬಹುದು. ಸೂರ್ಯನ ಕಿರಣಗಳ ಮೂಲವನ್ನು ಹುಡುಕುತ್ತಾ ನಡೆದರೆ ಹಲವು ಕೋಟಿ ಕಿರಣಗಳು ಸೇರುವುದು ಕೇವಲ ಸೂರ್ಯನೊಬ್ಬನನ್ನೇ ! ಅದರಂತೇ ಯಾವುದೇ ದೇವರನ್ನು ನೆನೆದರೂ ಅದು ಸಲ್ಲುವುದು ಜಗನ್ನಿಯಾಮಕ ಶಕ್ತಿಯೊಂದಕ್ಕೇ. ಇಂತಹ ಧ್ಯಾನದೆಡೆಗೆ ಒಮ್ಮೆ ಗಮನ ಹರಿಸೋಣ. ಮೇರೇ ಮೀರಿದ ಪರಮಾನಂದ ಎಲ್ಲರಿಗೂ ಸಿಗುವಂತಾಗಲಿ ಎಂದು ಪ್ರಾರ್ಥಿಸೋಣ,


|| ಶುಭಂ ಭ್ರೂಯಾತ್ ||