ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 10, 2011

ನಿಯಂತ್ರಣವೇ ಇಲ್ಲದ ಮನೋರಂಜನಾ ಪ್ರಯೋಗಗಳು


ನಿಯಂತ್ರಣವೇ ಇಲ್ಲದ ಮನೋರಂಜನಾ ಪ್ರಯೋಗಗಳು

" ಅಮ್ಮಾ ನಂಗೆ ಭಯ ಆಗ್ತಿದೆ....ಯಾರಿದ್ದೀರ ಅಲ್ಲಿ ಪ್ಲೀಸ್ ಹೆಲ್ಪ್ ಮಿ.......ಆಯ್ ಕಾಂಟ್ ಡು ಎನಿಮೋರ್.....ಪ್ಲೀಸ್....ನಾನು ಹೆಲ್ಪ್ ಸಿಗ್ಲಿಲ್ಲಾ ಅಂದ್ರೆ ಸತ್ತೇ ಹೋಗ್ತೀನಿ " ---ಇದು ಹರೆಯದ ಹುಡುಗಿಯೊಬ್ಬಳ ಸ್ಮಶಾನರೋದನ ! ಇದೇ ರೀತಿ ವಿದೇಶೀಯರ ಪಾದಸೇವೆ ಮಸ್ಸಾಜು, ಹಳ್ಳಿಗಳಲ್ಲಿ ಎಮ್ಮೆ ಸಗಣಿ ತಿನ್ನುವುದು ಪೂರ್ತಿ ಒಂದು ಲೋಟ ಗಂಜಳ ಕುಡಿಯುವುದು, ಹೊಲದಲ್ಲಿ ಟ್ರಾಕ್ಟರುಗಳನ್ನು ಓಡಿಸುವುದು,ಗುಡ್ಡಗಾಡು ವಾಸಿಗಳಾದ ಸಿದ್ಧಿ ಜನಾಂಗದ ಹುಡುಗರನ್ನು ತಂದು ನಗರಗಳಲ್ಲಿ ಅವರ ಗೋಳು ಹುಯ್ದು ಕೊಳ್ಳುವುದು ಇತ್ಯಾದಿ ಹಲವು ಹುಚ್ಚು ಕ್ರೀಡೆಗಳನ್ನು ನೀವೆಲ್ಲಾ ನೋಡಿರುತ್ತೀರಿ. ಇದು ಯಾವ ತಲೆಹಿಡುಕ ಮಹಾಶಯನ ಕ್ರಿಯೇಟಿವಿಟಿಯ ಫಲವೋ ಗೊತ್ತಿಲ್ಲ. ಆದರೆ ಒಂದಾದಮೇಲೊಂದು ಮಾಧ್ಯಮ ವಾಹಿನಿಗಳು ಇಂಥದಕ್ಕೆ ಎಡತಾಕಿರುವುದು ಬಹಳ ಬೇಸರ ತರಿಸುವ ವಿಷಯ.

ನಗರಗಳಲ್ಲಿ ಹಾಯಾಗಿ ತಮ್ಮ ಸ್ಕೂಲು-ಕಾಲೇಜುಗಳು ಅಭ್ಯಾಸ,ಗೆಳೆಯ/ಗೆಳತಿಯರು ಅಂತ ನಲಿದುಕೊಂಡಿದ್ದ ಪ್ರಾಯದ ಹುಡುಗಿಯರ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ತೆವಲಿಗೆ ಆ ಹುಡುಗಿಯರು ಇಂತಹ ಬೆಲೆ ತೆರುತ್ತಿದ್ದಾರೆ. ಹುಟ್ಟಿದಾರಭ್ಯ ಇದುವರೆಗೆ ತಂದೆ-ತಾಯಿಯ ಪಾದಪೂಜೆ ಮಾಡದ ಇಂಥಾ ಕ್ಷುದ್ರ ಜೀವಿಗಳು ತಾವೂ ಕಮ್ಮಿಯಿಲ್ಲಾ ಎಂದು ಹೇಳಿಸಿಕೊಳ್ಳುವ ಸಲುವಾಗಿ ’ರಿಯಾಲಿಟಿ ಶೋ’ ನಿರ್ಮಾಪಕ/ನಿರ್ದೇಶಕರು ಹೇಳಿದ್ದೆಲ್ಲವನ್ನೂ ಚಾಚೂತಪ್ಪದೇ ಮಾಡುತ್ತಿದ್ದಾರೆ. ಮನೆಯಲ್ಲಿ ಮೊಬೈಲಿಗೆ ಮತ್ತು ಲ್ಯಾಪ್‍ಟಾಪಿಗೆ ಅಂಟಿಕೊಂಡು ಇಡೀ ದಿನದಲ್ಲಿ ಕಡ್ಡಿ ಕೆಲಸ ಹಂದದ ಇಂಥಾ ನಫರದಂಡ ಹುಡುಗಿಯರಿಗೆ ಮಾಡಲು ಬೇರೇ ಕೆಲಸವಿಲ್ಲವೇ ? ಅಥವಾ ಅಂಥಾ ಕಚಡಾ ಶೋ ಗಳಿಗೆ ಕಳಿಸುವ ಅವರ ಮಾತಾ-ಪಿತೃಗಳಿಗೆ ತಲೆ ಸರಿಯಿಲ್ಲವೋ ತಿಳಿಯದಾಗಿದೆ! ಎಲ್ಲವೂ ಪ್ರಚಾರದ ಪ್ರಶ್ನೆ !

ಆಯ್ತು ಬಿಡಿ ಹೋಗಲಿ, ಬಾಕಿ ಎಲ್ಲಾ ಕೆಲಸಗಳಿಗೂ ತಲೆಹಾಕುವ ಸರಕಾರೀ ಹ್ಯೂಮನ್ ರೈಟ್ಸ್ ಸಂಸ್ಥೆಯವರು ಇಂಥಾ ಅಸಂಬದ್ಧ ಕೆಲಸಗಳನ್ನು ಮಾಡಿಸುವ ಮಾಧ್ಯಮ ಧಾರಾವಾಹಿಗಳ ನಿರ್ಮಾಪಕ/ನಿರ್ದೇಶಕರತ್ತ ನೋಡುವುದೇ ಇಲ್ಲವಲ್ಲ ! ಹಿಂದಿಯಲ್ಲಿ ಮಾಡಿದರು ಎಂದು ಕನ್ನಡದಲ್ಲಿ ಇಲ್ಲಾ ಮತ್ತೊಂದು ಭಾಷೆಯಲ್ಲಿ ಹೀಗೇ ಇತ್ತೀಚೆಗೆ ಸತತವಾಗಿ ಇಂಥಾ ಕೆಟ್ಟ ಶೋಗಳು ನಡೆದೇ ಇವೆಯಲ್ಲಾ ಇವುಗಳಿಗೆ ಕಡಿವಾಣ ಹಾಕುವವರ್ಯಾರೂ ಕಾಣುತ್ತಿಲ್ಲ. ಪ್ರಾಯಶಃ ನಾಗರಿಕರೆನಿಸಿದ ನಾಗರಿಕರಿಗೂ ಆಗಾಗ ಬದಲಾವಣೆಗಾಗಿ ರಕ್ಕಸ ಮನೋರಂಜನೆ ಬೇಕೆನಿಸುತ್ತದೆ ! ಚಲನಚಿತ್ರಗಳಲ್ಲಿ ಐಟಮ್ ಸಾಂಗ್‍ಗಳಲ್ಲಿ ಬಿಚ್ಚುಡುಗೆ ಅಂದಗಾತಿಯರನ್ನು ಬಯಸುವ ಸಮಾಜದ ಕೆಲವು ಮುಖಗಳು ಮಾಧ್ಯಮವಾಹಿನಿಗಳಲ್ಲೂ ಮಸಾಲೆಯನ್ನೇ ಬಯಸುತ್ತಾರೆಯೋ ಎಂಬ ಅನುಮಾನ ಉದ್ಭವವಾಗುತ್ತದೆ.

ಸೃಜನಶೀಲತೆ ಸಮಾಜವನ್ನು ದಿಕ್ಕು ತಪ್ಪಿಸುವ ದಿಸೆಯಲ್ಲಿ ನಡೆಯಬೇಕೇ ? ಇಂತಹ ಎಡಬಿಡಂಗಿಗಳಿಗೆ ಮಾಡಲು ಬೇರೇ ಯಾವುದೂ ತೋಚದಿದ್ದರೆ ಹಿಂದಿಯವರನ್ನೋ ಮತ್ಯಾರನ್ನೋ ಅನುಕರಿಸುತ್ತಾ ಅದನ್ನೇ ಭಾರೀ ವಿಶೇಷವೆನ್ನುವ ರೀತಿಯಲ್ಲಿ ಪ್ರಚುರಪಡಿಸುವುದು ನಿಜಕ್ಕೂ ವಿಷಾದನೀಯ. ವಾಹಿನಿಯೊಂದೆರಡು ಮದುವೆ ಮಾಡಿಸಲು ಹೊರಟವು...ಮಧ್ಯದಲ್ಲೇ ಮಗುಚಿಬಿದ್ದವು! ಹಿಂದೀ ಮಾಧ್ಯಮವಾಹಿನಿಗಳಲ್ಲಿ ಕಾಣುವ, ಹಣಕ್ಕಾಗಿ ಏನಾನ್ನಾದರೂ ಮಾಡಲೂ ತಮ್ಮನ್ನೇ ಮಾರಿಕೊಳ್ಳಲೂ ಸಿದ್ಧರಿರುವ ಬೆಕ್ಕಿನ ಕಣ್ಣಿನ ಗಂಡುಬೀರಿ ಹುಡುಗಿಯರು ನಡೆಸಿಕೊಟ್ಟ ಅಂಥಾ ಶೋಗಳು ಕನ್ನಡದ ಸಂಸ್ಕೃತಿಗೆ ಒಗ್ಗುತ್ತಿತ್ತೇ ಎಂಬುದೂ ಕಾಡುವ ಪ್ರಶ್ನೆಯಾಗಿದೆ. ನೇರವಾಗಿ ವ್ಯವಹರಿಸಿ, ಜಾತಕ-ಮೇಳಾಮೇಳಿ ಮೊದಲಾದವುಗಳನ್ನೆಲ್ಲಾ ಪರಿಗಣಿಸಿ ಆದಮೇಲೂ ಕೊಡುಕೊಳ್ಳುವಿಕೆಯ [ಮುಸುಕಿನಲ್ಲಿ ನಡೆಯುವ ವರದಕ್ಷಿಣೆ ವ್ಯವಹಾರ]ಮಾತುಕತೆಯಿಂದಲೋ ಅಥವಾ ಹುಡುಗ-ಹುಡುಗಿಯ ವೈಯ್ಯಕ್ತಿಕ ಪ್ರೀತಿ-ಪ್ರೇಮಗಳ ಹಿಂದಿನ ಅಧ್ಯಾಯಗಳನ್ನು ಅವರು ಹಂಚಿಕೊಂಡಮೇಲೋ ಸಂಬಂಧ ನಿಂತುಹೋಗುವುದಿದೆ!ಸಮಾಜಕ್ಕೆ ಗೊತ್ತಿರಲಿ ಬಿಡಲಿ ’ಲಿವ್-ಇನ್ ರಿಲೇಶನ್’ ಎಂಬ ಹೊಸಮಾದರಿಯ ಜೀವನಕ್ರಮಕ್ಕೆ ಅದಾಗಲೇ ಒಗ್ಗಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು, ಕಾಲ್‍ಸೆಂಟರ್ ಕಾರ್ಯಾನುವರ್ತಿಗಳು ಆಗಾಗ ಆಗಾಗ ದೋಸೆ ಮಗುಚಿದ ಹಾಗೇ ಸಂಬಂಧಗಳನ್ನು ಬದಲಾಯಿಸಿಕೊಳ್ಳುತ್ತಾ ನಡೆಯುತ್ತಿರುವ ಈ ದಿನಗಳಲ್ಲಿ ಅದನ್ನೇ ಪುಷ್ಟೀಕರಿಸುವ ಧಾರಾವಾಹಿಗಳೂ ಬಂದಿವೆ-ಬರುತ್ತಲಿವೆ.

ಕಳೆದ ಕೆಲವು ದಿನಗಳ ಹಿಂದೆ ಮಾಧ್ಯಮವಾಹಿನಿಗಳು ಕನ್ನಡದಲ್ಲಿ ಕೆಲವು ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ ನಟಿಯೊಬ್ಬಳ ಕಾಮಕಾಂಡದ ಬಗ್ಗೆ ವಿಶ್ಲೇಷಿದವು. ಅದೂ ಕೂಡಾ ತುಂಬಾ ಮಹತ್ವಕೊಟ್ಟು ಪದೇ ಪದೇ ಅದನ್ನು ತೋರಿಸುತ್ತಲೇ ಇದ್ದವು. ನಿಜ ಹೇಳುತ್ತೇನೆ ಕೇಳಿ ನಮಗೆ-ನಿಮಗೆ ಗೊತ್ತಿರುವ ಆದರೂ ಬಹಿರಂಗವಾಗಿ ನಾವು ಹಾಗೆ ನೋಡದ ಹಾದರಗಿತ್ತಿಯರೇ ನಟಿಯರು! ನಟಿಯರು ಒಂದಿಲ್ಲೊಂದು ಸಮಯದಲ್ಲಿ ತಮ್ಮ ಶೀಲವನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ ಎಂದು ಚಾಣಕ್ಯನೇ ಹೇಳುತ್ತಾನೆ! ಇನ್ನು ರೂಪವನ್ನೇ ಬಳಸಿಕೊಂಡು ಹಣಮಾಡುವ ನಟಿ/ಹುಡುಗಿಯರಿಗೇನೂ ಕಮ್ಮಿ ಇಲ್ಲ. ಸಾಮಾಜಿಕವಾಗಿ ಸಾಮೂಹಿಕ ಸಂಪರ್ಕಕ್ಕೆ ಬಂದ ಬಹುಸಂಖ್ಯಾಕ ಹೆಣ್ಣುಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ತಮ್ಮ ಶೀಲವನ್ನು ಕಾಪಾಡಿಕೊಂಡಿರಬಹುದೇ ಹೊರತು ಆ ರಂಗದಲ್ಲಿ ಅದನ್ನು ಹಾಗೇ ಜೋಪಾನ ಮಾಡುವುದು ಹಿಮಪಾತವಾಗುವಾಗ ಮೌಂಟ್‍ಎವರೆಸ್ಟ್ ಏರುವಷ್ಟು ಕಷ್ಟ! ಇತ್ತೀಚೆಗಂತೂ ಕಲಿಕಾ ಕೇಂದ್ರಗಳಲ್ಲಿ ಜ್ಞಾನದೇಗುಲಗಳಲ್ಲಿ ಉಪನ್ಯಾಸಕರೆನಿಸಿದ ಗಂಡುಗೂಳಿಗಳು ತಮ್ಮ ತೆವಲನ್ನು ತೀರಿಸಿಕೊಳ್ಳಲು ವಿದ್ಯಾರ್ಜನೆಗೆ ಬರುವ ಹುಡುಗಿ/ಹೆಂಗಸರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ತಾವು ಕಾಣುತ್ತಿದ್ದೀರಿ. ಎಂತಹ ಆಭಾಸ !

ಮಹಿಳೆಯರ ಬಗ್ಗೆ ವಾದಮಂಡಿಸುವ/ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಹಲವರಿದ್ದಾರೆ. ಆದರೆ ಇಂತಹ ’ರಿಯಾಲಿಟಿ ಶೋ’ಗಳ ಬಗ್ಗೆ ಅವರು ಚಕಾರ ಎತ್ತುವುದಿಲ್ಲವಲ್ಲ--ಆಶ್ಚರ್ಯವಾಗುತ್ತದೆ. ೨೨ನೇ ಶತಮಾನದಲ್ಲಿದ್ದೇವೆ ಇದೆಂತಹ ಹಳಸಲು ವಿಷಯವೆಂದು ಮೂಗು ಮುರಿಯುವ ಮಹಾನುಭಾವರಿಗೆ ಒಂದು ಪ್ರಶ್ನೆ-- ನೀವೇ ಆ ಗಂಡೋ/ಹೆಣ್ಣೋ ಅಥವಾ ಪಾಲಕರೋ ಆಗಿದ್ದರೆ ಪೂರ್ವದಲ್ಲಿ ಹಲವು ಸಂಬಂಧಗಳನ್ನು ಇರಲಿ ಒಂದೇಒಂದು ಸಂಬಂಧವನ್ನು ಇಟ್ಟುಕೊಂಡಿದ್ದ ವ್ಯಕ್ತಿಯೊಡನೆ ಶಾಶ್ವತ ಸಂಬಂಧ ಕಲ್ಪಿಸಿಕೊಂಡು ಜೀವನನಡೆಸಲು ಒಪ್ಪುತ್ತೀರಾ ? ತಮ್ಮ ಕಾಲಬುಡಕ್ಕೆ ಬಂದಾಗ ತಮಗೆ ಮಾತ್ರ ಯಾವುದೇ ತೊಂದರೆಯಾಗದಿರಲಿ ಎನ್ನುವ ಜನ ಬೇರೆಯವರ ವಿಷಯಗಳಲ್ಲಿ ಅದು ಸಹಜ ಎಂದು ನಡೆದುಕೊಳ್ಳುವುದು ಎಷ್ಟು ಸಮಂಜಸ ? ಇಂತಹ ಲಿವ್-ಇನ್‍ಗಳು ಜಾಸ್ತಿಯಾದರೆ ಮುಂದೆ ಭಾರತದಲ್ಲಿ ಸ್ವಸ್ತ ಸಮಾಜ ಇರಬಹುದೇ? ಅಥವಾ ಐರೋಪ್ಯ ರಾಷ್ಟ್ರಗಳ/ಅಮೇರಿಕದ ರೀತಿ ಶಾಂತಿಯನ್ನು ಅರಸುತ್ತಾ ನಾವೂ ಮತ್ಯಾವುದಾದರೂ ದೇಶಕ್ಕೆ ಹೋಗಬೇಕಾಗಬಹುದೇ ಎಂಬುದು ಗಹನವಾಗಿ ಚಿಂತಿಸಬೇಕಾದ ವಿಚಾರ.

ಇದಕ್ಕೆ ಪೂರಕವಾಗಿ ೧೬ನೇ ವಯಸ್ಸು ಆಗುತ್ತಿದ್ದಂತೇ ಸ್ವೇಚ್ಛೆಯಿಂದ ಹೆಣ್ಣು-ಗಂಡುಗಳು ಸೇರಬಹುದು ಎಂಬ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತರುವುದನ್ನು ಕೇಳುತ್ತಿದ್ದೇವೆ. ಈಗಾಗಲೇ ಗೌಪ್ಯವಾಗಿದ್ದೇ ಅನಿಯಂತ್ರಿತವಾಗಿದೆ. ಬೀದಿಗಳಲ್ಲಿ, ಕಸದಗುಡ್ಡೆಗಳ ಪಕ್ಕದಲ್ಲಿ ಬೇಡದ ಸಂಬಂಧದ ಫಲವಾದ ಪಾಪದ ಕೂಸುಗಳು ಬಿಸುಡಲ್ಪಟ್ಟು ಬೀದಿನಾಯಿಗಳಿಗೆ ಆಹಾರವಾಗುತ್ತಿರುವ ದೃಶ್ಯವನ್ನು ಕಾಣುತ್ತಿದ್ದೇವೆ. ಇಂತಹ ಎಲ್ಲದರ ನಡುವೆ ಆ ಕಾಯ್ದೆಯೂ ಬಂದರೆ ಅಪ್ಪ-ಅಮ್ಮನ ಎದುರೇ ಪ್ರಿಯಕರ ಬಂದು ಮಗಳನ್ನು ಎಳೆದೊಯ್ದರೂ ಅವರು ಬೆಪ್ಪರಾಗಬೇಕಾದ ಪರಿಸ್ಥಿತಿ ಇದೆ. ಆಮೇಲಾಮೇಲೆ ನಾಯಿಗೋತ್ರ ! ಅಪ್ಪ ಯಾರೋ- ಅಮ್ಮ ಯಾರೋ ! ಹಲೋ ಎನ್ನುತ್ತಿದಂತೇ ಪ್ರೀತಿ, ಹಾಯ್ ಎನ್ನುತ್ತಿದ್ದಂತೇ ಮಕ್ಕಳು, ಬಾಯ್ ಎನ್ನುತ್ತಿದಂತೇ ವಿಚ್ಛೇದನ!

ರಿಯಾಲಿಟಿ ಶೋವೊಂದರಲ್ಲಿ ವೀಣಾ ಮಾಲಿಕ್ ಎಂಬ ಪಾಕಿಸ್ತಾನೀ ಯುವತಿ ಮತ್ತು ಅಶ್ಮಿತ್ ಪಟೇಲ್ ಪರಸ್ಪರ ಚುಂಬಿಸಿದರು ತಬ್ಬಿಕೊಂಡರು. ಇಂತಹ ರಿಯಾಲಿಟಿ ಶೋಗಳನ್ನು ಹಿರಿಯರು ನೋಡುವಾಗ ಅದನ್ನೇ ನೋಡುತ್ತಿರುವ ಕಿರಿಯರ ಮನಸ್ಸಿನ ಮೇಲೆ ಯಾವ ಪರಿಣಾಮವಾಗಬಹುದು? ಒಳ ಉಡುಗೆಗಳ ಜಾಹೀರಾತನ್ನು ಕೊಡುವ ಜನ ಒಂದಿಂಚು ಜಾಗ ಬಿಟ್ಟು ಇಡೀ ಶರೀರವನ್ನೂ ತೋರಿಸುತ್ತಾರೆ! ಕಾಂಡೋಮ್‍ಗಳ ವ್ಯಾಪಕ ಪ್ರಚಾರದ ಭಾರಾಟೆಯೇ ಇದೆ. ಇದನ್ನೆಲ್ಲಾ ಅವಲೋಕಿಸುವ ಕಿರಿಯರಿಗೆ ಅರ್ಥವಾಗದ್ದೇನು ? ಓಮ್ದು ಕಾಲಕ್ಕೆ ನಾರಿಯ ಸೀರೆಯ ಸೆರಗು ಜಾರಿದರೇ ಜನ ವಿಚಿತ್ರವಾಗಿ ನೋಡುತ್ತಿದ್ದರು. ಇಂದು ಸೆರಗೇ ಇಲ್ಲದ ಪ್ರದರ್ಶನ! ಇದೂ ನಮ್ಮ ಸಂಸ್ಕೃತಿಯಲ್ಲಾದ ಬದಲಾವಣೆ ಎನ್ನೋಣವೇ ? ಕಾಲೇಜುಗಳಿಗೆ ಜೀನ್ಸ್ ಮತ್ತು ಟೀ ಶರ್ಟ್ ಹಾಕಿ ಬರಬೇಡಿ ಎಂದು ಹುಡುಗಿಯರಿಗೆ ತಾಕೀತು ಮಾಡಿದರೆ ದಂಗೆಯೇ ಆರಂಭ! ಅಸಹ್ಯಕರ ಬರಹಗಳನ್ನು ಹೊತ್ತ ಟೀಶರ್ಟ್‍ನ್ನು ಅವರು ಧರಿಸಿ ಬರುವಾಗ ಕೆಲವರಿಗಾದರೂ ನೋಡಲು ಮುಜುಗರವೆನಿಸಬಹುದಲ್ಲ ? ಹೀಗೇ ಚಿತ್ರ ವಿಚಿತ್ರ ದಿರಿಸುಗಳ ಮೂಲಕ ಪರೋಕ್ಷ ಹರೆಯದ ಹುಡುಗರ ಮನಸೆಳೆಯುವ ಹುಡುಗಿಯರು ಮುಂದಿನ ಅಧ್ಯಾಯಕ್ಕೆ ನಾಂದಿಹಾಡಲು ಕಾರಣರು ಎಂದರೆ ತಪ್ಪೇ ?

ಇಂದಿನ ಧಾರಾವಾಹಿಗಳಲ್ಲಿ ತಲೆಬೋಳಿಸಿಕೊಂಡು ಪಾತ್ರಮಾಡುವುದಕ್ಕಾದರೂ ಸೈ ಎನ್ನುವ ನಮ್ಮ ಹುಡುಗಿಯರನೇಕರು ಗ್ರಾಮೀಣಭಾಗದಲ್ಲಿ ಕೈತುಂಬಾ ಕೆಲಸಗಳಿದ್ದರೂ ತೊರೆದು ನಗರಕ್ಕೆ ಬಂದು ನೆಲೆಸಿ ಮಾಧ್ಯಮಗಳಿಗೆ ಅಂಟಿಕೊಂಡಿರುವುದು ಒಂದು ವಿಪರ್ಯಾಸ ಎಂದರೆ "ನಾವು ಕಲಾವಿದರು ನಮಗೆ ಹಳ್ಳಿಗಳಲ್ಲಿ ಬೆಲೆಯಿಲ್ಲಾ" ಎನ್ನುವ ಅವರ ಉತ್ತರ ಬರಬಹುದು ಆದರೆ ಹಳ್ಳಿಗಳಲ್ಲಿ ಅವರಿಗಿಂತಾ ಉತ್ತಮ ಕಲಾವಿದರು ನೆಲೆಸಿದ್ದಾರೆ; ಅವರೆಂದೂ ತಮ್ಮತನ ಕಳೆದುಕೊಳ್ಳುವ ಗೋಜಿಗೆ ಹೋದವರಲ್ಲ, ಮಾಧ್ಯಮದ ಅನಿವಾರ್ಯತೆಗಾಗಿ ಯಾವನೋ ಹುಡುಗನ ಜೊತೆಗೆ ಕ್ರತ್ರಿಮವಾಗಿ ನಗುತ್ತಾ ಕಾರ್ಯಕ್ರಮಗಳನ್ನು ನಡೆಸುವ ಬಣ್ಣದಬೊಂಬೆಗಳು ಒಂದೆರಡೇ ? ಆರ್ಥಿಕ ಸ್ವಾತಂತ್ರ್ಯವೆಂಬ ಏಕಮುಖೀ ಧೋರಣೆಯಲ್ಲಿ ಇಂಥವರೇ ಬಹಳಮಂದಿ ’ಇವ್-ಇನ್ ರಿಲೇಶನ್’ನಲ್ಲಿ ಇರುತ್ತಾರೆ ಎಂದರೆ ಇಲ್ಲವೆನ್ನುತ್ತೀರೇ? ಇನ್ನು ತಾಂತ್ರಿಕ ಮತ್ತು ಔಷಧೀಯ ವಿಷಯಗಳನ್ನೂ ಸೇರಿದಂತೇ ಹಲವು ಉನ್ನತ ವಿದ್ಯೆಗಳನ್ನು ಕಲಿಯಲು ಊರು ತೊರೆದು ನಗರಕ್ಕೆ ತೆರಳುವ ಹುಡುಗಿಯರು ಇಂತಹ ಸಂಬಂಧಗಳನ್ನು ಅಪ್ಪಿರುವುದೂ ಕಾಣಬರುವ ಸತ್ಯಸಂಗತಿಯಾಗಿದೆ.

ತಂತ್ರಜ್ಞಾನದ ಕ್ರಾಂತಿಯಿಂದ ತಳ್ಳುವಗಾಡಿಯ ವ್ಯಾಪಾರಿಯೂ ಬೀದಿಗುಡಿಸುವವರೂ ಸೇರಿದಂತೇ ಎಲ್ಲರೂ ಮೊಬೈಲ್ ಬಳಸುತ್ತಿರುವುದು ಕಾಣುತ್ತದೆ. ಆಗಲಿ ಬಿಡಿ. ಪ್ರಗತಿ ಒಳ್ಳೆಯದಕ್ಕಾದರೆ ಬೇಸರವಿಲ್ಲ. ಇಅದೇ ತಂತ್ರಜ್ಞಾನವೇ ಅನೈತಿಕ ಸಂಬಂಧಗಳನ್ನು ಕುದುರಿಸಿಕೊಳ್ಳುವಲ್ಲಿ, ನಡೆಸುವಲ್ಲಿ ಸಹಕಾರಿಯಾಗುತ್ತಿರುವುದು ಖೇದತರುವ ವಿಷಯ. ಸೋಶಿಯಲ್ ನೆಟವರ್ಕಿಂಗ್ ಸೈಟ್‍ಗಳಲ್ಲಿ ಇಂದು ಪರಿಚಯವಾದ ಹುಡುಗ-ಹುಡುಗಿ ನಾಳೆ ಉದ್ಯಾನದಲ್ಲಿ ಕೈಕೈ ಹಿಡಿದು ಅಲೆಯುವಷ್ಟು ಪ್ರಗತಿ ನಮ್ಮದು ! ಈ ಸಂಬಂಧಗಳೆಲ್ಲಾ ಸ್ಥಿರವೇ ? ಇವುಗಳಿಂದ ಯಾವುದೇ ಆಘಾತ ಇಲ್ಲವೇ ? ಹಾಗಾದ್ರೆ ಯಾವುದೇ ತಪ್ಪು ಮಾಡಿರದ ಸ್ಪುರದ್ರೂಪೀ ತಂತ್ರಾಂಶ ಅಭಿಯಂತರ[ಗಿರೀಶ್]ನನ್ನು ಮದುವೆಯ ನಿಶ್ಚಿತಾರ್ಥದವರೆಗೂ ಕಮಕ್ ಕಿಮಕ್ ಎನ್ನದೇ ಒಪ್ಪಿ ನಡೆದಿದ್ದ ಅನುರೂಪೀ ಹುಡುಗಿ ಶುಭಾ ಕರೀ ಜಿರಲೆಯ ಮರಿಯಂತಿದ್ದ ಅದ್ಯಾವುದೋ ತಮಿಳು ಹುಡುಗನನ್ನು ಮೊಬೈಲ್ ಸಂದೇಶದ ಮೂಲಕ ಕರೆದು ಬಲಿಹಾಕಿರುವುದು ಯಾಕೆ ? ತನಗೆ ಈ ಮದುವೆ ಇಷ್ಟವಿಲ್ಲಾ ಎಂದರೆ ಅವಳ ಗಂಟೇನು ಹೋಗುತ್ತಿತ್ತು. ಮಾಡಿದ್ದನ್ನು ಮಾಡಿಕೊಂಡೂ ತನ್ನದೇನೂ ತಪ್ಪಿಲ್ಲಾ ಎಂದು ಸರ್ವೋಚ್ಚ ನ್ಯಾಯಾಲಯದ ಮೊರೆಹೋಗುವ ಆಕೆಗೆ ಆತನ ಹೆತ್ತ ಪಾಲಕರು ಯಾವ ಶಿಕ್ಷೆ ವಿಧಿಸಬೇಕು? ಸಮಾಜ ಕಂಡೂ ಕಂಡೂ ಇಂಥಾದ್ದನ್ನು ಪುರಸ್ಕರಿಸಬೇಕೇ ?

ನಮ್ಮೂರಲ್ಲಿ ಒಂದು ಗಾದೆ ಇದೆ-- ಹೆಣ್ಣು ತಿರುಗಿ ಕೆಟ್ಟಳು ಗಂಡು ಕೂತು ಕೆಟ್ಟ-ಅಂತ. ಇದರರ್ಥ ಸೃಷ್ಟಿ ಸಹಜ ನಿಯಮದಂತೇ ಮಾನವರಲ್ಲಿ ಸಹಜವಾಗಿ ಹುಡುಗಿಯರೇ ಸುಂದರವಾಗಿರುತ್ತಾರೆ. ಅಂತಹ ಹುಡುಗಿಯರು ಉದ್ಯೋಗಕ್ಕೋ, ಕಲಿಕೆಗೋ, ವ್ಯವಹಾರಕ್ಕೋ ತಿರುಗಾಡುವುದು ಜಾಸ್ತಿಯಾದಾಗ ಸಹಜವಾಗಿ ಹುಡುಗರ ದೃಷ್ಟಿಗೆ ಬೀಳುತ್ತಾರೆ. ಮುಂದೆ ಹುಡುಗರು ಅವರ ಹಿಂದೆ ಬಿದ್ದು ಅವರನ್ನು ಹೇಗಾದರೂ ಪಡೆಯಲು ಪ್ರಯತ್ನಿಸುತ್ತಾರೆ. ಆಗ ಇಷ್ಟವೋ ಅನಿಷ್ಟವೋ ಹುಡುಗಿಯರನೇಕರು ಜಾರುತ್ತಾರೆ! ಗಂಡಿನ ಸೌಂದರ್ಯ ಆತನ ಗಡುಸುತನ ಮತ್ತು ಸಮರ್ಪಕ ಕೆಲಸ ನಿರ್ವಹಣೆಯಲ್ಲಿರುತ್ತದೆ. ಹೀಗಾಗಿ ಶಾರೀರಿಕವಾಗಿ ಮಾಸಿಕ ಸ್ರಾವಾದಿ ತೊಂದರೆಗಳಾಗಲೀ ಮಕ್ಕಳನ್ನು ಹಡೆದು ಪೋಷಿಸುವ ಅಮ್ಮಂದಿರ ಪಾತ್ರವಾಗಲೀ ಗಂಡಸಿಗೆ ಬರುವುದಿಲ್ಲವಾದ್ದರಿಂದ ಆತ ದುಡಿಮೆಗೆ ಯೋಗ್ಯ ಎಂಬ ಹಿತಾರ್ಥದಿಂದ ಗಂಡು ಎಂದೂ ಕೂತು ಉಣ್ಣಬಾರದು ಎಂದಿದ್ದಾರೆ. ಆದರೆ ಇಂದು ಇದನ್ನೆಲ್ಲಾ ಪರಿಗಣಿಸುವವರೇ ಇಲ್ಲ. ಮಹಿಳಾ ಸಬಲೀಕರಣ ಮಹಿಳಾ ಸಬಲೀಕರಣ...ಇವತ್ತಿಗೂ ನಾನೊಂದು ಪ್ರಶ್ನೆ ಕೇಳುತ್ತೇನೆ-ಗಂಡಸರ ಯಾವ ಹಂಗೂ ಇಲ್ಲದೇ ಮಹಿಳೆಯರೇ ಯಾವುದನ್ನಾದರೂ ಸ್ವತಂತ್ರವಾಗಿ ನಡೆಸುತ್ತಾರೆಯೇ ? ಆಗುವುದಿಲ್ಲ, ಬರೀ ಆಡುವುದಷ್ಟೇ!

ಕೇವಲ ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರ ಹೆಣ್ಣು ಸಬಲಳಾದರೆ ಸಾಲದು ಅದಕ್ಕೆ ಪೂರಕ ಸಂಸ್ಕಾರ ಬೇಕು. ವಿನಾಕಾರಣ ಗಂಡಸರು ತಮ್ಮನ್ನು ಹಾಗೆ ಮಾಡುತ್ತಾರೆ ಹೀಗೆ ಮಾಡುತ್ತಾರೆ ಎನ್ನುವ ಬದಲು ತಮ್ಮ ಮಡಿವಂತಿಕೆಯ[ಸ್ವೇಚ್ಛಾಚಾರ ರಹಿತವಾಗಿರುವುದ]ನ್ನು ಸ್ವಲ್ಪವಾದರೂ ಅವರು ಉಳಿಸಿಕೊಂಡರೆ ಆಗ ಅವರು ಸಬಲರಾಗುತ್ತಾರೆ. ಮಾಧ್ಯಮಗಳಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಅಪೇಕ್ಷೆಯಿಂದ ಯಾರೋ ವಿದೇಶೀಯನ ಕಾಲು ಉಜ್ಜುವುದು, ಪಾದಸೇವೆ ಮಾಡುವುದು, ಪಡ್ಡೆಗಳ ಜೊತೆ ನಾಟ್ಯವಾಡುವುದು ಇದನ್ನೆಲ್ಲಾ ಮಾಡಹೊರಟ ಯುವತಿಯರೇ ನಿಮಗಾದರೂ ಕೊಂಚ ಬುದ್ಧಿಬೇಡವೇ ? ನಿಮ್ಮ ಜೀವನದ ಯಾವ ಅನಿವಾರ್ಯತೆಗೆ ಇಂತಹ ಕೆಲಸಕ್ಕೆ ಇಳಿಯುತ್ತೀರಿ ? ಓದುಗ ಮಿತ್ರರೇ ಈ ಬಗ್ಗೆ ನೀವೇನನ್ನುತ್ತೀರಿ?

Wednesday, March 9, 2011

ಸ್ವಚ್ಛ ಕನ್ನಡ

ಸ್ವಚ್ಛ ಕನ್ನಡ
[ವಿಶ್ವ ಕನ್ನಡ ಸಮ್ಮೇಳನದಲ್ಲಿ ಖುದ್ದಾಗಿ ಭಾಗವಹಿಸಲು ಆಗದ ಕಾರಣ ಇಲ್ಲಿಂದಲೇ ಕನ್ನಡಮಾತೆಯನ್ನು ನೆನೆಸಿಕೊಳ್ಳುವ ಪ್ರಯತ್ನಮಾಡಿದ್ದೇನೆ ]

ನಂದನದ ಸಿರಿ ಭೋಗ ತುಂಬಿದ
ನಮ್ಮ ನಾಡಿದು ಕನ್ನಡ
ಚಂದನದ ಪರಿಮಳವ ತೀಡಿದ
ಹೆಮ್ಮೆಯಾ ಸಿರಿಗನ್ನಡ

ಭರತಭೂಮಿಯ ಕುವರಿಯಾಗಿ
ದಕ್ಷಿಣದಿ ನೆಲೆನಿಂತಿದೆ
ತರತರದ ಪ್ರತಿಭೆಗಳನೀಯುತ
ದಶದಿಸೆಯಲೂ ಚಲಿಸಿದೆ!

ಕಲೆಯು ಸಂಗೀತಗಳು ಸಾಹಿತ್ಯಾ
-ಭಿರುಚಿಯನು ಹೊಂದಿದಾ
ನೆಲೆಯು ನಿಪುಣರ ಬೀಡು ಸುಮಧುರ
ಸಂಸ್ಕೃತಿಯು ಬಲು ಚಂದದಾ

ಕೋಶಬರೆದಾ ದೇಶಕಟ್ಟಿದ
ಹಲವು ಹೈದರ ಅಂಗಳ
ಶೇಷವಿರದರೂ ಕೀರ್ತಿಮೆರೆದಿಹ
ಭಾಷೆ ನಿರತಗೆ ಮಂಗಳ

ಅಚ್ಚ ಕನ್ನಡ ಸ್ವಚ್ಛ ಕನ್ನಡ
ಅಚ್ಚುಮೆಚ್ಚಿನ ಕನ್ನಡ
ತುಚ್ಛವಾದವು ಉಳಿದ ಭಾಷೆಗಳ್
ಪಚ್ಚೆ ನಮ್ಮಯ ಕನ್ನಡ


Tuesday, March 8, 2011

ಜಾರಕೀಯ ಹೊಳಿಯಲ್ಲಿ ಲಿಂಬೀಹುಳಿ ತೊಳೆದಾಂಗ !


ಜಾರಕೀಯ ಹೊಳಿಯಲ್ಲಿ ಲಿಂಬೀಹುಳಿ ತೊಳೆದಾಂಗ !


ದೇಶವ್ಯಾಪಿ ನಡೆಯುತ್ತಿರುವ ಹಲವು ಸಂಗತಿಗಳಲ್ಲಿ ಮಾಧ್ಯಮಗಳು ರಾಜಕೀಯದವರವೇ ಆಗುತ್ತಿರುವ ಸಂಗತಿ ಎದ್ದು ತೋರುತ್ತಿರುವುದು ಹೊಸವಿದ್ಯಮಾನ. ಅಂತೆಯೇ ನಮ್ಮ ಶಾಸಕರಲ್ಲಿ ಬಹುತೇಕರು ಅನೇಕ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವುದು ಜನಸಾಮಾನ್ಯನಿಗೆ ತಿಳಿಯದ ವಿಷಯವೇನಲ್ಲ! ಈ ಹಿಂದೆ ಮಣ್ಣಿನಮಕ್ಕಳು ಆಸ್ಪತ್ರೆ ಮಾಡಿದ್ದು, ಪೆಟ್ರೋಲ್ ಬಂಕ್ ಮಾಡಿದ್ದು ಎಲ್ಲಾ ಆಗಾಗ ಸುದ್ದಿಗೆ ಬಂದಿದ್ದವು. ಇವತ್ತಿನ ಹೊಸ ಹೆಜ್ಜೆಯೆಂದರೆ ಕಾಲಬಂದಾಗ ತಮ್ಮ ಬಗ್ಗೆ ತಮ್ಮ ಪಕ್ಷದಬಗ್ಗೆ ಪ್ರಚಾರಮಾಡಲಾಗಿ ಮಾಧ್ಯಮಗಳನ್ನು ನಡೆಸುವುದು. ಟಿ.ಆರ್.ಪಿ ದರಹೆಚ್ಚಿಸಿಕೊಂಡು ಸಾಕಷ್ಟು ಜಾಹೀರಾತು ಗಿಟ್ಟಿಸಿ ಉಣ್ಣುವುದರ ಜೊತೆಗೆ ಚುನಾವಣೆಗಳಂತಹ ಸಮಯದಲ್ಲಿ ಮತದಾರರನ್ನು ಕೊಂಡುಹೋಗಲು ಮಾಧ್ಯಮಗಳ ಪ್ರಚಾರ ವೈಖರಿ ಪ್ರಭಾವಶಾಲಿಯಾಗುತ್ತದೆ.

ಒಂದುಕಾಲದಲ್ಲಿ ಮಾಧ್ಯಮ ಪೈಪೋಟಿ ಕಮ್ಮಿಯಿದ್ದಾಗ ರಾಜನಗೆ ನಕ್ಕ ಪತ್ರಿಕೆಗಳು ತಮ್ಮ ಎಂದಿನ ಹಳೇ ಹಳಸಿದ ಗಂಜಿಮುಖವನ್ನೇ ಹೊತ್ತು ನಡೆಯುತ್ತಾ, ಹೊಸ ಪತ್ರಿಕೆಗಳ ಹಾಗೂ ಅವುಗಳನ್ನು ನಡೆಸುವ ಯುವ ಪತ್ರಕರ್ತರ ಹೊಸ ಆಯಾಮಗಳ ಆವಿಷ್ಕಾರಗಳ ಎದುರು ಸೋತು ಪೇಲವ ನಗೆ ನಗುವಾಗ ಅಂತಹ ಪತ್ರಿಕಾ ಸಮೂಹ ಅಥವಾ ಮಾಧ್ಯಮಗುಚ್ಛವನ್ನೇ ಖರೀದಿಸಿ ಅವುಗಳಿಗೆ ಬಣ್ಣ-ಸುಣ್ಣಬಳಿಯಲು ಒಳ್ಳೇ ಕಲಾಕಾರ ಪತ್ರಿಕಾಕರ್ತರನ್ನು ಸೆಳೆದರೆ ಹಾಗೆ ಮಾಡಬಹುದೆಂಬುದು ಕೆಲವು ರಾಜಕೀಯ ಮುಖಂಡರ ಅಂಬೋಣ ! ಅದನ್ನು ಕಾರ್ಯರೂಪಕ್ಕೆ ಇಳಿಸಿದವರನ್ನು ನಾವೀಗ ಕಾಣಬಹುದಾಗಿದೆ.

ಒಂದು ಕಾಲದಲ್ಲಿ ಅತಿಯಾದ ಮೌಢ್ಯಹಿಡಿದ ಸಂಪಾದಕರುಗಳು ತಮ್ಮ ಮೂಗಿನ ನೇರಕ್ಕೇ ಬರೆಯಿರಿ ಇಲ್ಲವೆಂದರೆ ಉದ್ಯೋಗಬಿಟ್ಟು ತೊಲಗಿ ಎಂಬ ಬೋರ್ಡನ್ನು ಹಾಕಿ ಪತ್ರಿಕೆಗಳನ್ನು ನಡೆಸುತ್ತಿದ್ದರು. ಅಂತಹ ಪತ್ರಿಕೆಗಳಲ್ಲಿ ’ಎಮ್ಮೆ ಕಳೆದಿರುವುದೂ’ ಮುಖ್ಯ ಸುದ್ದಿಯಾಗುತ್ತಿತ್ತು! ಅಂತಹ ’ಘನತವೆತ್ತ’ ಸಂ.ಗಳು ತಾವ್ಯ್ ಕುಳಿತ ಖುರ್ಚಿ ಸವೆದುಹೋದಮೇಲೋ ತಮಗೆ ವಯಸ್ಸಿನ ಅನಾನುಕೂಲ ಕಾಡಿದಮೇಲೋ ಆ ಖುರ್ಚಿಗಳನ್ನು ಬಿಟ್ಟುಕೊಟ್ಟಾಗ ಅದುವರೆಗೆ ಅವರ ಕೈಕೆಳಗೆ ಅಚ್ಚಿನಬೊಂಬೆಯಂತೇ ತಯಾರಾದ ಮಹಾಪುರುಷರು ಆ ಜಾಗಗಳಿಗೆ ಬರುತ್ತಿದ್ದರು! ಇದು ಓದುಗನ ದೌರ್ಭಾಗ್ಯವೋ ಅಥವಾ ಇನ್ನೇನೋ. ಗುರುವಿನ ಗರಡಿಯಲ್ಲಿ ಪಳಗಿದ ಆ ಶಿಷ್ಯಂದಿರು ಮತ್ತದೇ ಮೌಢ್ಯದ ಪಡಿಯಚ್ಚಿನ ಮೌಲ್ಯವರ್ಧನೆ ಮಾಡುತ್ತಿದ್ದರು.

ಉದಾಹರಣೆಗೆ ನಾನು ಬರೆದ ಯಾವುದೋ ಲೇಖನವನ್ನು ತೆಗಳಿದ ಸಂ. ಒಬ್ಬರು ಹೇಳುವಂತೆ ’ಅವ’ ಮತ್ತು ’ಆತ’ ಈ ಶಬ್ದಗಳಲ್ಲಿ ಅಜಗಜಾಂತರವಂತೆ! ಗದ್ಯದಲ್ಲಿ ಸಾಲುಗಳ ಕೊನೆಯಲ್ಲಿ ಪ್ರಾಸದ ಶಬ್ದಗಳು ಕಣ್ತಪ್ಪಿಯೂ ಬರಬಾರದಂತೆ. ಇನ್ನು ವಿಶೇಷಣಗಳನ್ನು ಉಪಯೋಗಿಸಿದರೆ ಆ ಮಹನೀಯ ಹೇಳುವುದು " ಏನ್ರೀ ನಾಟಕಗಳ ಶಬ್ದ ಬಳಸಿಬಿಟ್ಟಿದ್ದೀರಿ " ಎಂದು, ವಿಶೇಷಣಗಳಿಲ್ಲದೇ ಬರೆದರೆ " ಇದರಲ್ಲಿ ಏನೂ ಇಲ್ಲ, ಎಲ್ಲಾ ಸಪ್ಪೆ ಸಪ್ಪೆ ಕನ್ನಡಶಾಲೆಯ ಮಕ್ಕಳ ಪಠ್ಯದಂಥಿದೆ " ಎನ್ನುತ್ತಿದ್ದರು. ಹೇಗೆ ಬರೆಯಬೇಕೆಂಬುದನ್ನು ಅವರಿಂದಲೇ ಕೇಳೋಣವೆಂದರೆ ಅಲ್ಲಿಪ್ರತೀ ಶಬ್ದದಲ್ಲೂ ತಪ್ಪನ್ನೇ ಕಾಣುವ ಜಾಯಮಾನ ಆ ಮನುಷ್ಯನದ್ದು. " ಸ್ವಾಮೀ ನಾನು ನನ್ನ ಸಹಜಶೈಲಿಯಲ್ಲಿ ಬರೆಯುತ್ತೇನೆ, ಬೇಕಾದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಬಿಟ್ಹಾಕಿ " ಎಂದು ಹೇಳಿಬಿಟ್ಟಿದ್ದೇನೆ. ಸಂಪಾದಕರಲ್ಲಿ ಬಹುತೇಕರು ಬರಹಗಾರರಲ್ಲ. ಅವರದೇನಿದ್ದರೂ ಕೂಡಿ-ಕಳೆಯುವ ಕೆಲಸ. ಇನ್ನು ಕೆಲವು ಸಂ.ಗಳಿಗೆ ಇನ್ಯಾವುದೋ ಪತ್ರಿಕೆಯಲ್ಲಿ ಬರೆದ ಲೇಖಕರ ಕೃತಿಗಳು ಸಿಕ್ಕಿಬಿಟ್ಟರೆ ಅವುಗಳಲ್ಲಿ ತಪ್ಪಿದ್ದರೂ ಸರಿಯೇ ಅದು ನೇರ ಪ್ರಕಟಣೆ ಕಾಣಬೇಕಾದ ವಿಷಯ! ಹೇಗಿದೆ ನೋಡಿ.

ಸಂಪಾದಕರುಗಳೂ ಕಲಿಯಬೇಕಾದ ವಿಷಯಗಳು ಹಲವಿವೆ. ಅವುಗಳನ್ನು ಕಾಲಾನಂತರದಲ್ಲಿ ವಿವೇಚಿಸೋಣ. ಕೆಲವು ಸಂ.ಗಳು ಬರೆದ/ಅನುವಾದಿಸಿದ ಪುಸ್ತಕಗಳು ನಿಜವಾಗಿಯೂ ಅವರುಗಳೇ ಮಾಡಿದ ಕೃತಿಗಳಲ್ಲ. ಇಲ್ಲಿ ’ಹೆಸರು ಯಾರದ್ದೋ ಬಸಿರು ಇನ್ಯಾರದ್ದೋ’ ಅನ್ನೋ ವ್ಯವಹಾರ! ಆದರೂ ಅಂತಹ ಸಂಗಳಿಗೆ ತಾವು ಬರಹಗಾರರು ಎನಿಸಿಕೊಳ್ಳುವ ಅಪೇಕ್ಷೆ! ಪತ್ರಿಕಾಕರ್ತರೆಲ್ಲಾ ಸಾಹಿತಿಗಳಲ್ಲ. ನಮ್ಮ ಯಕ್ಷಗಾನದ ಮಾತಿನ ದಾಟಿಯಂತೇ ಪತ್ರಿಕಾಕರ್ತರದೂ ಒಂದು ದಾಟಿಯಿದೆ. ಆ ದಾಟಿಯಲ್ಲಿ ಬರೆದರೆಮಾತ್ರ ಅದು ಸುದ್ದಿ ಎನಿಸಿಕೊಳ್ಳುತ್ತದೆ. ಹೀಗಾಗಿ ಅಲ್ಲಿ ಅವರಿಗೆ ಸ್ವಾತಂತ್ರ್ಯ ಇರುವುದಿಲ್ಲ. ಕವಿ/ಸಾಹಿತಿಗಳು ಸ್ವತಂತ್ರ ಬರಹಗಾರರಾಗಿರುತ್ತಾರೆ. ಯಾರೋ ಹಾಕಿದ ತಾಳಕ್ಕೆ ಅವರು ಕುಣಿಯುವುದಿಲ್ಲ. ಸಾಹಿತ್ಯದ ಎರಡು ಮಗ್ಗಲುಗಳಾದ ಗದ್ಯ-ಪದ್ಯಗಳು ಸಾಹಿತಿಗೆ ಮಾನಸ ಕೂಸುಗಳು. ’ಕುರಿಯನ್ನು ಕೇಳಿ ಸಾಂಬಾರ್ ಹುರಿಯುವುದಿಲ್ಲ’ ಎನ್ನೋದು ಮಾಂಸಾಹಾರೀ ಮಿತ್ರರುಗಳ ಅಭಿಪ್ರಾಯ, ಅದೇ ರೀತಿ ಸಾಹಿತಿ ಇನ್ಯಾರನ್ನೋ ಕೇಳಿ ತಾನು ಬರೆಯುವುದಿಲ್ಲ; ಬದಲಾಗಿ ತನಗೆ ತೋಚಿದ್ದನ್ನು ತನ್ನ ಭಾವನೆಗಳನ್ನು ತನ್ನ ಬಳಗದಲ್ಲಿ/ಓದುಗರಲ್ಲಿ ಹಂಚಿಕೊಳ್ಳುತ್ತಾನೆ/ಳೆ.

ಈಗ ವಾಪಸ್ಸು ನಮ್ಮ ಮುಖ್ಯ ವಿಷಯಕ್ಕೆ ಬರೋಣ: ಪತ್ರಿಕೋದ್ಯಮ ಅಂದಿನಂತಿರದೇ ಲಾಭದಾಯಕವಾಗಿದೆ ಈಗ. ಯಾರೋ ಚಿಲ್ಲರೆ ಪತ್ರಿಕೆಯವರು ಕೆಲಸಕ್ಕೆ ಬಾರದ ಬರಹಗಳನ್ನು ಒತ್ತಾಯದ ಮೇರೆಗೆ ಪ್ರಕಟಿಸಿ ಪ್ರತಿಗಳನ್ನು ಕೊಳ್ಳುವವರಿಲ್ಲದೇ ನಷ್ಟ ಅನುಭವಿಸಿರಬಹುದು. ಆದರೆ ಒಳ್ಳೆಯ ಪತ್ರಿಕೆಗಳೆಂದು ಹೆಸರುಗಳಿಸಿಕೊಂಡ ಪತ್ರಿಕೆಗಳವರು ಸಾಕಷ್ಟು ಹಣಗಳಿಸಿದ್ದಾರೆ-ಗಳಿಸುತ್ತಿದ್ದಾರೆ. ಇಂತಹ ಕೆಲವು ಪತ್ರಿಕೆಗಳು ಪೈಪೋಟಿಯಲ್ಲಿ ಲೇಖನಗಳನ್ನು ಪ್ರಕಟಿಸುವಾಗ ಅಲ್ಲಿನ ಸಂ. ತಮಗೆ ಡೊಗ್ಗುಸಲಾಮು ಹಾಕುವವರ ಲೇಖನಗಳನ್ನು ಪುಸಕ್ಕನೇ ಮಧ್ಯೆ ಮಧ್ಯೆ ಪ್ರಕಟಿಸುವುದಿದೆ. ಒಳ್ಳೆಯ ಲೇಖಕರಿಗೆ ಸೌಜನ್ಯಕ್ಕಾದರೂ ನೀಡಬೇಕಾದ ಸಂಭಾವನೆಯ ಮಾತೂ ಎತ್ತದ ಸಂ.ಗಳೂ ಇದ್ದಾರೆ! ಅವರ ಲೆಕ್ಕದಲ್ಲಿ ಅದು ರಾಷ್ಟ್ರೀಯ ಉಳಿತಾಯವಿರಬಹುದು. ಇನ್ನು ಪತ್ರಿಕಾಕರ್ತರ ರಾಗ-ದ್ವೇಷಗಳನ್ನು ಬಹಿರಂಗವಾಗಿ ಮೊನ್ನೆ ಮೊನ್ನೆಯಷ್ಟೇ ಸಾಕಷ್ಟು ಪ್ರಹಸನಗಳ ಮೂಲಕ ನೋಡಿದ್ದೀರಿ.

ದೇಶದಲ್ಲಿ ಪ್ರಜಾಪ್ರಭುತ್ವದ ಸರಕಾರ ಸರಿಯಾಗಿ ನಡೆಯಬೇಕಾದಾಗ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕಷ್ಟೇ ? ಹಿಂದೆ ನಾವು ಪಠ್ಯಗಳಲ್ಲಿ ಓದಿದ್ದೆವು ಚುನಾವಣೆಗೆ ನಿಲ್ಲುವವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರಬಾರದು ಎಂಬುದಾಗಿ. ಆದರೆ ಇಂದು ಪರಿಸ್ಥಿತಿ ಕೈಮೀರಿಹೋಗಿದೆ! ಇರುವವರಲ್ಲಿ ಬಹುತೇಕರು ಅವರೇ ಆಗಿದ್ದಾರೆ. ಕಾನೂನುಗಳು ಸಮಾಜದ ಅನುಕೂಲಕ್ಕಾಗಿರಬೇಕೇ ಹೊರತು ಸಮಾಜದಲ್ಲಿ ಬೇಕಾದವರಿಗೆ ಒಂದುರೀತಿ ಬೇಡದವರಿಗೆ ಇನ್ನೊಂದು ರೀತಿ ಮಾಡಲಲ್ಲ. ಆದರೆ ಇಂದಿನ ಕಾಯ್ದೆಗಳಲ್ಲಿ ಹಲವಕ್ಕೆ ಲೋಪದೋಷಗಳಿವೆ. ಅವುಗಳನ್ನು ಬಳಸಿಕೊಂಡು ತಮ್ಮ ಬೇಳೇ ಬೇಯಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಿದ್ದಾರೆ. ಕಾರ್ಯಾಂಗದ ಬಗ್ಗೆ ಜಾಸ್ತಿ ಹೇಳುವುದೇ ಬೇಡ, ಇದು ಎಲ್ಲರಿಗೂ ಕಾಣುವ ನಿತ್ಯ ರಾಜಕೀಯ ಪ್ರಹಸನ ! ನ್ಯಾಯಾಂಗ ಕಾರ್ಯಾಂಗಗಳು ಶಾಸಕಾಂಗದ ರಾಜಕೀಯ ಪ್ರೇರಿತವಾಗಿರದೇ ನಿರ್ಭಿಡೆಯ ಮತ್ತು ನಿರ್ದಾಕ್ಷಿಣ್ಯ ಧೋರಣೆಯಲ್ಲಿ ಕೆಲಸಮಾಡಬೇಕೆಂಬುದು ಒಂದು ನೀತಿ. ಯಾವನೋ ಮಂತ್ರಿ ತನಗೆ ಬೇಕಾದ ಯಾವನೋ ಅರಣ್ಯಲೂಟಿಮಾಡುವ ಆಸಾಮಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಮಾತನಾಡಿ ಬಿಡಿಸಿಕಳಿಸುತ್ತಾನೆ! ಬಾರ್ ಒಂದರಲ್ಲಿ ರಾತ್ರಿ ಕುಡಿದ ಮತ್ತಿನಲ್ಲಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಅಸಹ್ಯಕರವಾಗಿ ಜಗಳವಾಡಿ ಕಿಟಖಿ ಗಾಜುಗಳನ್ನೆಲ್ಲಾ ಪುಡಿಪುಡಿ ಮಾಡಿದ ಮಣ್ಣಿನ ಮೊಮ್ಮಗ ಯಾವುದೇ ಗುನ್ನೆಯಿಲ್ಲದೇ ಪಾರಾಗಿಹೋಗುತ್ತಾನೆ !

ಇಂತಹ ಯಾವುದೇ ಬೇಡದ ಘಟನೆಗಳನ್ನು ಮತ್ತೆ ನಡೆಯದಂತೇ ನೋಡಿಕೊಳ್ಳಲು. ನ್ಯೂನತೆಗಳನ್ನು ಸರಿಪಡಿಸಲು ಇರುವ ಮಾರ್ಗ ಮಾಧ್ಯಮ. ಆದರೆ ಆಳುವ ಜನರಕೈಗೇ ಮಾಧ್ಯಮಗಳು ಸಿಕ್ಕಾಗ ಅಲ್ಲಿಂದ ಯಾವ ನ್ಯಾಯಯುತ ವರದಿ/ವಿಶ್ಲೇಷಣೆಗಳನ್ನು ನಾವು ಪಡೆಯಲು ಸಾಧ್ಯ? ’ಕಳ್ಳನ ಕೈಗೇ ಬೀಗ ಕೊಟ್ಟರೆ ಆಗ ಆತನಿಗೇ ಜವಾಬ್ದಾರಿ ಬರುತ್ತದೆ’ ಎಂಬುದು ಹಳೆಯ ಗಾದೆ. ಆದರೆ ಈ ಕಳ್ಳರು ಸಾಮಾನ್ಯದ ಕಳ್ಳರಲ್ಲ. ಸಮಾಜದಲ್ಲಿ ಯಾವ ಜನಸಾಮಾನ್ಯನಿಗೂ ಇವರನ್ನು ಹಿಡಿಯುವ ತಾಕತ್ತಿಲ್ಲ! ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಹೆಣ್ಣಿನ ಮನದ ಜಾಡನ್ನಾದರೂ ಹಿಡಿಯಬಹುದು ಆದರೆ ಧೂರ್ತ ರಾಜಕಾರಣಿಗಳ ನಡೆಯನ್ನು ಊಹಿಸಲಾಗಲೀ ನಿರೀಕ್ಷಿಸಲಾಗಲೀ ಸಾಧ್ಯವೇ ಇಲ್ಲ. ಹಾಗೊಮ್ಮೆ ಸಾಧ್ಯವಿದ್ದರೆ ಸ್ವಿಸ್ ಬ್ಯಾಂಕಿನಲ್ಲಿ ಅಷ್ಟೊಂದು ಕಪ್ಪುಹಣ ಇರುತ್ತಿರಲಿಲ್ಲ! ಯೋಚನೆಗಳಿಗೆ ಕಡಿವಾಣ ಹಾಕದಿದ್ದರೆ ಇಂತಹ ಹಲವು ಹತ್ತು ವಿದ್ಯಮಾನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಉತ್ತಮಪಾತ್ರ ನಿರ್ವಹಿಸಬೇಕಾದ ಮಾಧ್ಯಮಗಳು ರಾಜಕೀಯದವರ ಕೈವಶವಾಗುತ್ತಿರುವುದು ಮತ್ತು ರಾಜಕೀಯದಲ್ಲಿರುವವರಿಗೆ ಅದಕ್ಕೆ ಅವಕಾಶ ಕೊಟ್ಟಿರುವುದು ಜಾರುವ ಜಾರಕೀಯ ಹೊಳೆಯಲ್ಲಿ ಲಿಂಬೇ ಹುಳಿಹಿಂಡಿ ಪಾನಕ ತಯಾರಿಸಲು ಹೊರಟ ಹಾಗಿದೆ. ಅದು ಸಾಧ್ಯವೇ ?

Saturday, March 5, 2011

ಭಾವದಪ್ಸರೆ !

ಚಿತ್ರಕೃಪೆ : ಅಂತರ್ಜಾಲ

ಭಾವದಪ್ಸರೆ !

ಬರೆಯಲು ಕುಳಿತಾ ಆ ಕ್ಷಣದಿ
ಭಾವಗಳಾ ಬುಗ್ಗೆಗಳ್ ತಕ್ಷಣದಿ
ತಾನೇ ಮೊದಲು ತಾ ಮೊದಲೆನ್ನುವ ಪೈಪೋಟಿಯೊಳು ಕ್ಷಣಕ್ಷಣದಿ

ಬೆತ್ತಲೆ ನಿಂತಾ ಭಾವಗಳು
ಮತ್ತಲ್ಲೇ ಕತ್ತನು ಆಡಿಸುತಾ
ಹುತ್ತದೊಳಿಹ ಹಾವಿನ ತಲೆಯಾಪರಿ ಹೊರಸುಳಿದವು ತುಸು ನಸುನಗುತಾ

ಮನದಾ ವೇದಿಕೆ ಏರಿದವು
ತಮ್ಮೊಳಗೇ ಹಿರಿಹಿರಿ ಹಿಗ್ಗಿದವು
ರೂಪದರ್ಶಿಗಳ ಬೆಕ್ಕಿನ ನಡತೆಯ ಅನುಕರಿಸುತ ಹಾರೋಡಿದವು !

ಒಂದಕ್ಕಿಂತಲೂ ಇನ್ನೊಂದು
ಅದು ಬರದೇ ಹೋದರೆ ಮತ್ತೊಂದು
ಬಣ್ಣಹಲವಿರುವ ದಿರಿಸನು ಧರಿಸುತ ಸಣ್ಣನೆ ನಡುವನು ಕುಣಿಸಿದವು

ಒಂದರ ಕೆನ್ನೆ ಬಲು ನುಣುಪು
ಇನ್ನೊಂದರ ಕೂದಲು ಬಲು ಸೊಂಪು
ಹಂದರದೊಳಗಿಹ ಮದುವಣಗಿತ್ತಿಯ ನಾಚಿಕೆ ಇರುವಳು ನರುಗೆಂಪು

ಯಾವುದು ಚೆಂದವು ನಿರ್ಧರಿಸೆ
ಮನಕಾಗದು ಮಂಕು ಆವರಿಸೆ
ತಾವೆಲ್ಲರು ತೂಗುತ ತೀರ್ಮಾನಿಸಿ ಆವಳು ಈ ಜಗದಪ್ಸರೆಯು !

Thursday, March 3, 2011

ಆಯುರ್ಭಾವ


ಆಯುರ್ಭಾವ

ನವರಸಗಳು ತುಂಬಿದ ಬೇರುಗಳಾ
ನವವಿಧದಾ ಭಾವದ ನಾರುಗಳಾ
ಹವಣಿಸಿ ತಂದೂ ನೆನೆಸೀ ಕಾಸಿ
ಹವೆಯಾಡಿಳಿಸಿದ ಪಾನಕ ಸೋಸಿ

ಭವದೊಳಗಿರುವುದು ಆರುದಿನ
ಅವ ಇವ ಎನ್ನುತ ಮೂರುದಿನ
ಯುವಜನತೆಯು ಕಣ್ತೆರೆಯುವ ಹೊತ್ತಿಗೆ
ಜವ ತೆರೆವನು ತನ್ಹೊತ್ತಗೆ ಮೆತ್ತಗೆ

ಹವನಿಸಿ ಮನಸಿನ ಮೆಣಸುಗಳಾ
ಭವಣೆಯು ತುಂಬಿದ ಕನಸುಗಳಾ
ನವೆಯಾಗಲಿ ಉಸಿರಾಡಲೂ ಆಗದೆ
ಅವನೋಡಲಿ ಮತ್ತೆಂದಿಗೂ ಬಾರದೆ !

ಕವನದ ಕಷಾಯ ಕುಡಿಯುತಿರಿ
ಚ್ಯವನಪ್ರಾಶವ ಜಡಿಯುತಿರಿ
ನವಯೌವ್ವನ ನಮದಾಗಿಸೆ ಸತತವು
ಅವು ಕೊಡುವಾ ಖುಷಿಯಪರಿಮಿತವು

Wednesday, March 2, 2011

ಶಿವ ಎಂದರೆ ಶುಭ


ಶಿವ ಎಂದರೆ ಶುಭ

ಜಗನ್ನಿಯಾಮಕನ ಹಲವು ಸಾಕಾರ-ರೂಪಗಳಲ್ಲಿ ಶಿವನಾಗಿಯೂ ಒಂದುರೂಪ ಕಾಣುತ್ತದೆ. ಸಮಷ್ಟಿಯಿಂದ ನೋಡುವವರಿಗೆ ಹರಿ ಹರ ಬ್ರಹ್ಮಾದಿಗಳಲ್ಲಿ ಭೇದ ಕಾಣಸಿಗುವುದಿಲ್ಲ. ವಾದಕ್ಕೆ ಕೆಲವರು ಬ್ರಹ್ಮನ ಮಗಳಾದ ಶಾರದೆಯನ್ನೇ ಬ್ರಹ್ಮ ಮದುವೆಯಾಗಿರುವುದು ತೀರಾ ಹಾಸ್ಯಾಸ್ಪದ ಮತ್ತು ಖಂಡನಾರ್ಹ ಎಂದು ಹೇಳಿದರೂ ನಮಗೆ ಕಾಣದ ಆ ಆನಂದಲೋಕದಲ್ಲಿ ಯಾವ ಬ್ರಹ್ಮನೂ ಇಲ್ಲ, ಶಾರದೆಯೂ ಇಲ್ಲ, ವಿಷ್ಣುವಾಗಲೀ ಶಿವನಾಗಲೀ ಇಲ್ಲ. ಅಥವಾ ಎಲ್ಲರೂ ಇದ್ದಾರೆ ಎಂಬುದಾಗಿ ತೋರಿಸುವ ಕೈವಾಡ ಮೂಲ ಪರಬ್ರಹ್ಮನದ್ದು. ಒಂದು ಕಡೆ ಕೈಲಾಸ ಇನ್ನೊಂದು ಕಡೆ ವೈಕುಂಠ ಅಲ್ಲೇ ಕಮಲವುದ್ಭವಿಸಿ ಮೇಲೆದ್ದು ಬ್ರಹ್ಮಲೋಕ. ಒಟ್ಟಾರೆ ನಮ್ಮ ಮಾನವೀಯ ಸಂಪರ್ಕ-ಸಂಬಂಧ-ಕ್ಲೀಷೆ-ಭಾವನೆ ಎಲ್ಲವನ್ನೂ ತುಂಬಿ ನಾವು ಕಾಣಬಹುದಾದ ಎಲ್ಲಾ ರೂಪಗಳಲ್ಲೂ ಭಗವಂತನನ್ನು ಕಂಡಿದ್ದೇವೆ, ಚಿತ್ರಿಸಿದ್ದೇವೆ.

ಹಾಗೆ ಚಿತ್ರಿಸಿರುವುದು ತಪ್ಪೆಂದು ಹೇಳುವುದಕ್ಕಿಂತಾ ಆದ್ಯ ಋಷಿಮುನಿಗಳು ಅ ಥರದ ಹಲವು ರೂಪಗಳಲ್ಲಿ ಪರಬ್ರಹ್ಮನ ಅನುಸಂಧಾನ ಮಾಡಿದರು. ಮೂಲಶಕ್ತಿ ತನ್ನನ್ನೇ ಹಲವು ರೂಪಗಳಲ್ಲಿ ಪ್ರಕಟಪಡಿಸಿಕೊಂಡು ಹಲವು ದೇವಾನುದೇವತೆಗಳ ಮುಖಹೊತ್ತು ಅಲ್ಲಿಯೂ ಭಾವ ಮಾವ ಅಣ್ಣ-ತಮ್ಮ ತಂದೆ-ತಾಯಿ ಇಂತಹ ಸಂಬಂಧಗಳಲ್ಲಿ ವಿಜೃಂಭಿಸಿ ತೋರಿಸಿತು. ಹೀಗೆ ನೋಡುವಾಗ ಶಾರದೆ ಬ್ರಹ್ಮನ ಮಗಳೂ ಅಲ್ಲ, ಬ್ರಹ್ಮ ಶಾರದೆಗೆ ಗಂಡನೂ ಅಲ್ಲ. ’ಏಕೋ ದೇವಃ ಕೇಶವೋವಾಂ ಶಿವೋವಾಂ’ ಎಂಬುದನ್ನು ನೆನೆದರೆ ದೇವನೊಬ್ಬನೇ ನಾಮ ಹಲವು ಎಂಬುದು ಸ್ಪಷ್ಟವಾಗುತ್ತದೆ. ಈ ಹಲವು ನಾಮಗಳನ್ನು ಉಪಯೋಗಿಸಿಕೊಂಡೇ ಇಂದಿನ ಮಾಧ್ಯಮಚಾಲಿತ ಜ್ಯೋತಿಷಿಗಳು ಎಲ್ಲರಿಗೂ ನಾಮ ಎಳೆಯುವ ಕೆಲಸಮಾಡುತ್ತಿದ್ದಾರೆ ಎಂಬುದೂ ಕೂಡ ಅಷ್ಟೇ ವಿಷಾದನೀಯ.

ಮುನಿಜನ ಕಂಡ ಪರಬ್ರಹ್ಮನ ಹಲವು ರೂಪವಿನ್ಯಾಸಗಳಲ್ಲಿ ಶಿವನರೂಪವೂ ಒಂದು. ಅಲಂಕಾರದ ದೇವರಾಗಿ ವಿಷ್ಣುವನ್ನು ಗುರುತಿಸಿದ ನಮ್ಮ ಜನ ನಿರಾಡಂಬರ ಸರಳರೂಪದಲ್ಲಿ ಶಿವನನ್ನು ಕಂಡರು. ಸೃಷ್ಟಿಗೆ ಬ್ರಹ್ಮನೆಂದೂ ಪಾಲನೆಗೆ ವಿಷ್ಣುವೆಂದೂ ಲಯಕರ್ತ ಶಿವನೆಂದೂ ತಿಳಿದ ಕೆಲವರು ಶಿವನು ತಮ್ಮನ್ನು ನಾಶಗೊಳಿಸುವಾತನೆಂದು ತಿಳಿದು ಆತನನ್ನು ದೂರವೇ ಇಟ್ಟರು; ದ್ವೇಷಿಸಿದರು. ಹಲವು ಪೌರಾಣಿಕ ಕಥೆಗಳಲ್ಲಿ ಸಮಸ್ಯೆಗಳನ್ನು ತಾನೇ ಸೃಜಿಸಿಕೊಂಡು ಅವುಗಳ ಸುಳಿಯೊಳಗೆ ತಾನೇ ಸಿಲುಕಿ ಒದ್ದಾಡುವ ಶಿವನನ್ನು ಕಂಡು ಜನ ’ಬೋಳೇ ಶಂಕರ’ ’ಬೋಲೇನಾಥ್’ ಎಂದು ಕರೆದರು. ಲಯಕರ್ತನೆಂಬ ತಿಳುವಳಿಕೆಯಿಂದ ಆತ ಸ್ಮಶಾನವಾಸಿ ಎಂದರು, ಬೂದಿಬಡಕ ಎಂದರು. ಆದರೆ ಆತ ಲೋಕದ ಕಂಟಕವನ್ನು ನಾಶಮಾಡುವ ಸಲುವಾಗಿ ತನ್ನನ್ನೇ ಸಂಕಷ್ಟಕ್ಕೆ ಸಿಲುಕಿಸಿಕೊಂಡು ಪರೋಕ್ಷವಾಗಿ ಉಪಕರಿಸಿದ. ಸಮುದ್ರಮಥನದಲ್ಲಿ ಪ್ರಪ್ರಥಮವಾಗಿ ಲಭಿಸಿದ ಹಾಲಾಹಲವನ್ನು ಕುಡಿದು ನಂಜುಡಿಯಾದ. ತನ್ನದೇ ಇನ್ನೊಂದು ರೂಪ ಪಾರ್ವತಿ ಓಡಿಬಂದು ಕುಡಿದ ನಂಜು ಶರೀರದ ಒಳಗೆ ಇಳಿಯದಂತೇ ಗಂಟಲನ್ನು ನಾಗನಿಂದ ಬಂಧಿಸಿದಾಗ ನೀಲಿಯಾದ ಕಂಠಕಾಣಿಸಿ ನೀಲಕಂಠನಾದ. ನಾಗನನ್ನು ಮನಸಾರೆ ಧರಿಸಿ ನಾಗಾಭರಣನಾದ. ಚಂದದ ಚಂದ್ರಮನನ್ನು ಶಿರದಲ್ಲಿ ಧರಿಸಿ ಚಂದ್ರಮೌಳಿಯಾದ. ಹರಿಯುವ ಗಂಗೆಯನ್ನು ಮುಡಿಯಲ್ಲಿ ಜೋಪಾನವಾಗಿಸಿ ಗಂಗಾಧರನಾದ.

ಇದೇ ಬೋಳೇ ಶಂಕರ ನಂದಿಯನ್ನೇ ವಾಹನವನ್ನಾಗಿಸಿಕೊಂಡು ಪಶುಪತಿಯಾದ. ಮೃತ್ಯುವಿನ ದವಡೆಯಲ್ಲಿ ಸಿಲುಕಿದ್ದ ಭಕ್ತ ಮಾರ್ಕಾಂಡೆಯನಿಗೆ ಜೀವದಾನ ನೀಡಿ ಮೃತ್ಯುಂಜಯನಾದ! ತಿಳಿಯದೇ ಬೇಡನೊಬ್ಬ ಪ್ರದೋಷಕಾಲದಿಂದ ಬೆಳಗಿನತನಕ ನಡೆಸಿದ ಬಿಲ್ವಾರ್ಚನೆಗೆ ಒಲಿದ ಪರಮಶಿವನಾದ. ಮಾಂಸವನ್ನೇ ಉಣಬಡಿಸಿ ತನ್ನ ಕಣ್ಣನ್ನೇ ಕಿತ್ತು ಲಿಂಗಕ್ಕೆ ಅಂಟಿಸಿದ ಭಕ್ತ ಬೇಡರ ಕಣ್ಣಪ್ಪನಿಗೆ ಪ್ರತ್ಯಕ್ಷನಾದ. ಒಂದೇ ಎರಡೇ ....ಹೇಳುತ್ತಾ ಹೋದರೆ ತಿಂಗಳುಗಟ್ಟಲೇ ಹೇಳುವಂತಹ ಸ್ವಾರಸ್ಯಕರ ಘಟನೆಗಳು ನಮ ಶಿವನ ಸುತ್ತ ಇವೆ.

ಕೈಲಾಗದ ಮನುಜರಿಗೆ ಕುಳಿತಲ್ಲೇ ಹೃದಯದಲ್ಲೇ ಮನಸ್ಸಿನಲ್ಲೇ ಪೂಜಿಸಲು ಅನುವಾಗಲೆನ್ನುವ ಅರ್ಥದಲ್ಲಿ ಪರಶಿವನ ಲೌಕಿಕದ ಮೂರ್ತರೂಪವಾದ ಶ್ರೀಆದಿ ಶಂಕರರು ಒಂದು ಸ್ತುತಿಗೀತೆಯನ್ನು ರಚಿಸಿದರು. ಅದೇ ’ಶಿವ ಮಾನಸ ಪೂಜಾ’ ಎಂಬ ಹೆಸರಲ್ಲಿ ಜನಜನಿತವಾಯಿತು.

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ
ನಾನಾರತ್ನ-ವಿಭೂಷಿತಂ ಮೃಗಮದಾ-ಮೋದಾಂಕಿತಂ ಚಂದನಂ |
ಜಾತೀ-ಚಂಪಕ-ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ
ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ || ೧ ||

ತಾತ್ಪರ್ಯ ---

ಹೇ ಪರಶಿವನೇ, ರತ್ನಖಚಿತ ಸಿಂಹಾಸನದಲ್ಲಿ ನಿನ್ನನ್ನು ಕೂರಿಸಿ ಶುದ್ಧವಾದ ಹಿಮಜಲದಿಂದ ಅಭಿಷೇಚಿಸಿ ದಿವ್ಯ ಪೀತಾಂಬರವನ್ನು ಅರ್ಪಿಸುತ್ತಿದ್ದೇನೆ, ನಾನಾ ವಿಧದ ರತ್ನಾಭರಣಗಳಿಂದ ಅಲಂಕರಿಸಿ ಕಸ್ತೂರೀಯುಕ್ತ ಚಂದನವನ್ನು ಪೂಸಿ ತಿಲಕವನ್ನು ಹಚ್ಚಿದ್ದೇನೆ. ಜಾತೀ ಚಂಪಕಾದಿ ಹಲವು ಪುಷ್ಪಗಳಿಂದಲೂ ಬಿಲ್ವಪತ್ರೆಯಿಂದಲೂ ಅರ್ಚಿಸಿ ಸುಗಂಧಭರಿತ ಧೂಪವನ್ನು ಬೆಳಗಿದ್ದೇನೆ, ಸುಂದರ ದೀಪವನ್ನು ಉರಿಸಿ ಆರತಿಮಾಡುತ್ತಿದ್ದೇನೆ. ಈ ಎಲ್ಲವನ್ನೂ ನನ್ನ ಹೃದಯದಲ್ಲಿಯೇ ಮನಸಾ ನಿನಗೆ ಅರ್ಪಿಸುತ್ತಿದ್ದೇನೆ....ಸ್ವೀಕರಿಸು.

ಎಲ್ಲವನ್ನೂ ಕೇವಲ ಪರಿಶುದ್ಧ ಮನದಿಂದ ಕಲ್ಪಿಸಿಕೊಂಡು ನಡೆಸಬಹುದಾದ ಈ ಪೂಜೆಯಲ್ಲಿ ಶಿವನಿಗೆ ಅವರು ಸಲ್ಲಿಸಿದ ವೈಭವೋಪೇತ ಪೂಜೆಯನ್ನು ನಾವು ಕಾಣಬೇಕು.

ಮುಂದುವರಿದು ಶಂಕರರು ಹೇಳಿದ್ದಾರೆ....

ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ
ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ|
ಶಾಖಾನಾಮಯುತಂ ಜಲಂ ರುಚಿಕರಂ ಕರ್ಪೂರ-ಖಂಡೋಜ್ವಲಂ
ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || ೨ ||

ನವರತ್ನ ಖಚಿತವಾದ ಬಂಗಾರದ ಪಾತ್ರೆಗಳಲ್ಲಿ ತುಪ್ಪಸಹಿತ ಪಾಯಸವನ್ನು ನೀಡುತ್ತಿದ್ದೇನೆ, ಹಾಲು ಮೊಸರು ಬಳಸಿದ ಸೇರಿದಂತೇ ಪಂಚ ಭಕ್ಷ್ಯವನ್ನು ನೀಡುತ್ತಿದ್ದೇನೆ, ಬಾಳೇಹಣ್ಣುಗಳನ್ನು ಕೊಡುತ್ತಿದ್ದೇನೆ, ಕುಡಿಯಲು ಪಚ್ಚಕರ್ಪೂರಭರಿತ ಸ್ವಾದಿಷ್ಟ ಪಾನಕವನ್ನು ನೀಡುತ್ತಿದ್ದೇನೆ, ಯಾಲಕ್ಕೀ-ಲವಂಗಾದಿ ಪಚ್ಚಕರ್ಪೂರ ಮಿಶ್ರಿತ ನಾಗವಲ್ಲೀ ವೀಳ್ಯದೆಲೆಯ ತಾಂಬೂಲವನ್ನು ಮೆಲ್ಲಲು ಮನಸಾರೆ ಕಲ್ಪಿಸಿಕೊಂಡು ನೀಡುತ್ತಿದ್ದೇನೆ ಪ್ರಭೋ ನೀನು ಸ್ವೀಕರಿಸುವಂಥವನಾಗು.

ಮತ್ತೆ ಹೇಗೆಲ್ಲಾ ಶಿವನನ್ನು ಸೇವಿಸಬೇಕೆಂಬುದನ್ನು ಶಂಕರರು ಮುಂದೆ ಹೇಳುತ್ತಾರೆ....

ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ
ವೀಣಾ-ಭೇರಿ-ಮೃದಂಗ-ಕಾಹಲ-ಕಲಾ ಗೀತಂ ಚ ನೃತ್ಯಂ ತಥಾ |
ಸಾಷ್ಟಾಂಗ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ ಸಮಸ್ತಂ ಮಯಾ
ಸಂಕಲ್ಪೇನ ಸಮರ್ಪಿತ ತವ ವಿಭೋ ಪೂಜಾಂ ಗೃಹಾಣ ಪ್ರಭೋ || ೩ ||

ಚತ್ರಿಯನ್ನು ಹಿಡಿದ್ದೇನೆ, ಚಾಮರದಿಂದ ಗಾಳಿಬೀಸುತ್ತಿದ್ದೇನೆ, ಪಲ್ಲಂಗವೇ ಮೊದಲಾದ ಎಲ್ಲವನ್ನೂ ಸಮರ್ಪಿಸುತ್ತಿದ್ದೇನೆ, ಹೊಳೆಯುವ ದರ್ಪಣವನ್ನು ತೋರಿಸಿದ್ದೇನೆ, ವೀಣೆ ಭೇರಿ ಮೃದಂಗವೇ ಮೊದಲಾದ ಸಂಗೀತವಾದ್ಯಗಳನ್ನು ನುಡಿಸಿ/ಬಾರಿಸಿ ಹಾಡುಗಳನ್ನು ಹಾಡಿ ನರ್ತಿಸುತ್ತಿದ್ದೇನೆ. ಹಲವು ವಿಧ ಸ್ತುತಿಗಳನ್ನು ಹೇಳಿ ಸಾಷ್ಟಾಂಗವೆರಗುವ ಈ ಎಲ್ಲಾ ಕಾರ್ಯಗಳನ್ನೂ ಸಂಕಲ್ಪಮಾತ್ರದಲ್ಲೇ ಮನದಲ್ಲಿ ಕಲ್ಪಿಸಿಕೊಂಡು ಕೊಡುತ್ತಿದ್ದೇನೆ ಪ್ರಭುವೇ ದಯಮಾಡಿ ನನ್ನ ಪೂಜೆಯನ್ನು ಗ್ರಹಿಸು.

ಇನ್ನೇನು ಮಾಡಲಾದೀತು ಎಂಬುದನ್ನು ಶಿವನಲ್ಲೇ ಕೇಳುತ್ತಾರೆ ...

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ |
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ || ೪ ||

ವಿಷಯೋಪಭೋಗಗಳಲ್ಲಿ ನಿರತವಾದ ಪ್ರಾಣಭರಿತ ಈ ಮನುಜ ಶರೀರದಲ್ಲಿ ಪಾದಗಳಿಂದ ಸಂಚರಿಸುವುದೇ ಪ್ರದಕ್ಷಿಣವಿಧಿಯೆಂದು ತಿಳಿದು ನಡೆಸುತ್ತಿರುವ ಈ ಪೂಜೆಯನ್ನು ಆತ್ಮರೂಪದಲ್ಲಿ ಗಿರಿಜಾ ಸಹಿತನಾಗಿ ಒಳಗೊಳಗೇ ಸಂಚರಿಸುತ್ತಿರುವ/ಕುಳಿತಿರುವ ನಿನ್ನ ಆರಾಧನೆಯ ಕರ್ಮ ನನ್ನಿಂದ ನಡೆಯಿತೆಂದು ತಿಳಿಯುತ್ತೇನೆ.

ಇದೆಲ್ಲವೂ ಮುಗಿದಮೇಲೆ ಬೇಡುವುದೇ ಅಪರಾಧ ಕ್ಷಮಾಪಣೆಗಾಗಿ .....

ಕರಚರಣಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವ ಶಂಭೋ || ೫ ||

ಹೇ ಮಹಾದೇವ ಶಂಭೋ, ನನ್ನ ಕೈ-ಕಾಲುಗಳಿಂದ ದೇಹದಿಂದ ನಡೆದ ಕರ್ಮದಿಂದ, ಕಣ್ಣು-ಕಿವಿ-ಮೂಗು-ಬಾಯಿ-ಚರ್ಮ ಈ ಪಂಚೇಂದ್ರಿಯಗಳಿಂದ, ಮನಸ್ಸಿನಿಂದ ವಿಹಿತವೋ ಅವಿಹಿತವೋ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದ ಅಪರಾಧಗಳನ್ನೆಲ್ಲಾ ಕ್ಷಮಿಸು.

ಸಂಸ್ಕೃತಭಾಷೆಯ ರಸಪಾಕದೊಂದಿಗೆ ಸರಳಪೂಜೆಯ ಸುಲಭಮಾರ್ಗವನ್ನು ಶಂಕರರೆಂಬ ಪಾಕಶಾಸ್ತ್ರ ಪಂಡಿತ ’ಶಿವ ಮಾನಸ ಪೂಜಾ’ ಎಂಬ ಶಿರೋನಾಮೆಯಡಿ ಎರಕವೆರೆದು ಜನಸಾಮಾನ್ಯರಿಗೆ ಉಪಕರಿಸಿದರು. ಕೃತಿಕಾರರಿಗೆ ನಮಿಸುವುದೂ ಒಂದೇ ಸಾಕ್ಷಾತ್ ಶಂಭುವಿಗೆ ವಂದಿಸುವುದೂ ಒಂದೇ ಆಗಿರುವುದರಿಂದ ಈ ಸ್ತುತಿಯನ್ನು ಓದುತ್ತಿರುವಂತೆಯೇ ನಾವು ಅಸದೃಶ ಆನಂದಕ್ಕೆ ಒಳಗಾಗಿ ತಂತಾನೇ ಅವರೀರ್ವರಿಗೂ ನಮಿಸಿರುತ್ತೇವೆ; ಪರಮಾತ್ಮನಿಗೆ ಮಣಿದಿರುತ್ತೇವೆ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುತ್ತಾರಲ್ಲಾ ಹಾಗೇ ಕಂಠಸ್ಥವಾಗಿ ಈ ಮಾನಸ ಪೂಜೆಯನ್ನು ಹಾಡಿದಾಗ/ಹಾಡಿದ್ದನ್ನು ಕೇಳಿದಾಗ ಸಿಗುವ ಆನಂದ ಸ್ಥಿತಿಯನ್ನು ಅನುಭವಿಸಿದವರೇ ಬಲ್ಲರು!

ಅರಿತವರಿಗೆ ಹರಿಯೂ ಒಂದೇ ಹರನೂ ಒಂದೇ. ಕವಿ ದಿ| ಪು.ತಿ. ನರಸಿಂಹಾಚಾರ್ಯರು ಸಾರಿದರು---

ಹರಿಯ ಹೃದಯದಿ ಹರನ ಕಂಡೆನು
ಹರನ ಹೃದಯದಿ ಹರಿಯನು
ಸಿರಿಯ ಹೃದಯದಿ ಶಿವೆಯ ಕಂಡೆನು
ಶಿವೆಯ ಹೃದಯದಿ ಸಿರಿಯನೂ

ಇದರರ್ಥ ತಮಗೆಲ್ಲಾ ವಿದಿತವಷ್ಟೇ ? ಬೇಡನೊಬ್ಬ ರಾತ್ರಿಹೊತ್ತು ಕಾಡಲ್ಲಿ ದಾರಿತಪ್ಪಿ, ಹಸಿದ ಹೆಂಡತಿ-ಮಕ್ಕಳನ್ನು ನೆನೆಯುತ್ತಾ ಶೋಕಭರಿತನಾಗಿ, ಪ್ರಾಣಭೀತಿಯಿಂದ ಕಾಡುಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ರಾತ್ರಿಕಳೆಯುವ ಸಲುವಾಗಿ ಗೊತ್ತಿಲ್ಲದೇ ಬಿಲ್ವದಮರವನ್ನೇರಿ ಕುಳಿತು, ಬೇಸರ ಕಳೆಯಲು ಆಗಾಗ ಬಿಲ್ವದಳಗಳನ್ನು ಕಿತ್ತು ಕೆಳಗೆ ಬಿಸುಟಿದ್ದು ಮರದಡಿಯಲ್ಲಿ ಯಾವುದೋ ಕಾಲಘಟ್ಟದಲ್ಲಿ ಸ್ಥಾಪಿತವಾಗಿದ್ದ ಲಿಂಗದಮೇಲೆ ಅದು ಬೀಳುತ್ತಿದ್ದು, ಕೇವಲ ಈ ಪೂಜೆಯಿಂದಲೇ ಪ್ರಸನ್ನನಾದ ಭಕ್ತಾಗ್ರೇಸರ ಬೋಳೇ ಶಂಕರನನ್ನು ಮೈಸೂರಿನ ಕಡೆಯ ಜನ ಅಪ್ಪಟ ಕನ್ನಡದಲ್ಲಿ ರಾಗವಾಗಿ

ಮಲ್ಲೀಗಿ ಹೂವಿರಿಸಿ ಮಣ್ಣ ಹಣತೆಯ ಬೆಳಗಿ

........ಸ್ವಾಮೀ ನಂಜುಂಡೂ ಮನಗಂಡೂ

-ಎಂದು ನಮ್ಮ ಜನಪದರು ಕಟ್ಟಿದ ಹಾಡನ್ನು ಹಾಡುವಾಗ ಕೂಡ ಸ್ವಾಮಿ ನಂಜುಂಡು ಇವರೆಲ್ಲಾ ಹೇಳುತ್ತಿರುವುದನ್ನು ನಂಜನಗೂಡಿನಲ್ಲಿ ಕೂತು ಆಲೈಸುತ್ತಿದ್ದಾನೇನೋ ಅನಿಸುವಷ್ಟು ಭಾವನೆ ಉಕ್ಕಿ ಹರಿಯುತ್ತದೆ. ಜನತೆ ತಮ್ಮ ಕಷ್ಟ-ಸುಖಗಳನ್ನು ಸಖನಾದ/ಗೆಳೆಯನಾದ/ ರಕ್ಷಕನಾದ ಶಿವನಲ್ಲಿ ಹೇಳಿಕೊಳ್ಳುವ ಪರಿ ಇದೆಯಲ್ಲಾ ಅದನ್ನೊಮ್ಮೆ ಕೇಳಿದರೆ ಭಾವುಕರ ಕಣ್ಣು ತೇವವಾಗಿ ಆನಂದಭಾಷ್ಪ ಉದುರುವುದರಲ್ಲಿ ಯಾವುದೇ ಸಂಶಯವಿಲ್ಲ.

ಶಿವವೆಂದರೆ ಶುಭವೇ ಹೊರತು ಶಿವ ಎನ್ನುವುದು ಕೇವಲ ಪರಶಿವ ಎಂಬರ್ಥದಲ್ಲಲ್ಲ. ಶುಭವೆಲ್ಲವೂ ಶಿವನಿಂದಲೇ ಘಟಿಸುವುದರಿಂದ ಅವನಿಗೆ ಅದು ಅನ್ವರ್ಥನಾಮ. ಇಂತಹ ಶಿವನಿಗೆ ಇಂಥದ್ದೇ ರೂಪವೆಂದಿಲ್ಲ.

ಶಿವಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ |
ಮಮ ಶತ್ರು ಹಿತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

--ಎನ್ನುತ್ತೇವೆ. ಇಲ್ಲಿಯೂ ’ಶಿವಂ’ ಎಂಬ ಹೆಸರು ಬಂತು. ಶುಭವನ್ನುಂಟು ಮಾಡುವ, ಆರೋಗ್ಯವನ್ನೂ ಧನಕನಕ ಸಂಪತ್ತನ್ನೂ ತರುವ ಜ್ಯೋತಿಯೇ ನನ್ನ ಶತ್ರುವಿನ ಒಳಿತಿಗಾಗಿಯೂ ಕೂಡ ಸಂಜೆಹೊತ್ತಲ್ಲಿ ನಿನ್ನನ್ನು ಬೆಳಗಿ ಪ್ರಾರ್ಥಿಸುತ್ತೇನೆ--ಎಂತಹ ಆದರ್ಶ ತತ್ವ-ಸಂಪ್ರದಾಯ. ಇಂತಹ ಜ್ಯೋತಿಸ್ವರೂಪನೂ ಶಿವನೇ ಆಗಿರುವಾಗ ಪರ್ವಕಾಲದಲ್ಲಿ ಹಲವು ದೀಪಗಳನ್ನು/ಜ್ಯೋತಿಗಳನ್ನು ಬೆಳಗಿ ಪ್ರಾರ್ಥಿಸುವುದರಿಂದ ನಮ್ಮ ಅಂಧಕಾರ ತೊಲಗುತ್ತದೆ ಎಂಬುದು ನಮ್ಮ ಪೂರ್ವಿಕರು ಕಂಡ ಸತ್ಯ. ಶಿವರಾತ್ರಿಯ ಈ ದಿನ/ಈ ಸಂಜೆ ಹಲವು ಜ್ಯೋತಿಗಳನ್ನು ಬೆಳಗೋಣ ಮತ್ತು ಶಿವನನ್ನು ಧ್ಯಾನಿಸೋಣ, ಜಗದ ಎಲ್ಲರ ಒಳಿತಿಗಾಗಿ ಪ್ರಾರ್ಥಿಸೋಣ ಅಲ್ಲವೇ ?

Tuesday, March 1, 2011

ವಸುಧೈವ ಕುಟುಂಬಕಮ್


ವಸುಧೈವ ಕುಟುಂಬಕಮ್

ಹೃದಯವರಿತಮೇಲೆ ನಮ್ಮ ನಿಮ್ಮ ನಡುವೆ ಭೇದವೇ?
ಅದುವೆ ಮಂತ್ರವಾಗಲೊಮ್ಮೆ ಜಗದ ತುಂಬಾ ನಾದವೇ

ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದ ಮರಿಗಳು
ತಿಂದು ಬೆಳೆದು ತಿಳಿಯದಾಗ ಜಗಳಮಾಳ್ಪ ಕುರಿಗಳು !

ಗರುವದಿಂದ ಹರಿದು ದೇಶ ಕೋಶ ರಾಜ್ಯಂಗಳ
ಮೆರೆದರೆಲ್ಲ ಮಣ್ಣಾದರು ಕರಗುತ ವ್ಯಾಜ್ಯಂಗಳ

ನಡೆವ ನಡತೆ ನುಡಿವ ನುಡಿಯು ಉತ್ತಮವಿರೆ ಯೋಗವ
ಒಡವೆ ವಸ್ತ್ರ ಕಡೆಗೆ ಕೀರ್ತಿ ಪಡೆವರೆಲ್ಲ ಭೋಗವ


ಹುಂಡು ಹೆಚ್ಚು-ಕಮ್ಮಿ ಇರಲು ಸಹಿಸಿ ನಡೆಯೆ ಮಾನವ
ತಂಡ ಕಟ್ಟಿ ಭುಜವ ತಟ್ಟಿ ಹೋರಲಾತ ದಾನವ

ಮುಂದೆ ನಮ್ಮ ಅಂತ್ಯವೆಂತೋ ಯಾರು ಅದನು ಬಲ್ಲರು ?
ಇಂದು ಇರುವ ಜಾಗದಲ್ಲಿ ಸುಖದಿ ಬದುಕಲೆಲ್ಲರು

Monday, February 28, 2011

ಈ 'ಸಮಯ' ಆನಂದಮಯ’ !


ಈ 'ಸಮಯ' ಆನಂದಮಯ !
ತೀಟೆ ತಾಳಲಾರದ ಆತ
ಸಣ್ಣ ನಡುವಿನ ಸುಂದರಿಯ
ಬಳುಕುವ ವಯ್ಯಾರಕ್ಕೆ ಮನಸೋತು
"ನಾ ದುಷ್ಯಂತ ನೀ ಶಕುಂತಲೆ "ಎಂದ !

ಮಸಿಮಂಗನಂತೇ ಬಾಗಿ ಮುಸಿಮುಸಿ ನಗುತ್ತಾ
ಹಲ್ಕಿರಿದು ನಿಂತ ತೊಳೆದಿಟ್ಟ
ಮಸಿಕೆಂಡದಂಥಾ ದುಷ್ಯಂತನನ್ನು
ಸಿವನೇ ಸಂಭುಲಿಂಗವೆನ್ನುತ್ತಾ
ಕಡೆಗಣ್ಣಿನಿಂದಲೇ ನೋಡಿ ಎಚ್ಚರತಪ್ಪುತ್ತಾ
ನೀರೆ " ನಾ ಒಲ್ಲೆ " ಎಂದಳಾದರೂ
ಕಣ್ವರಿರದ ತಾಣ ಅದಾಗಿರುವುದರಿಂದ
ಕೈ ಹಿಡಿದು ಬೆನ್ನು ಸವರಿ ಸೊಂಟ ಬಳಸಿ
ಕುವರ ತೋರಿದ ನಾನಾ ವಿಧ ಭಂಗಿಯ
ಕಾಸಿನ ಕರಾಮತ್ತು ಕುವರಿಯ ಕಣ್ಣುಕೋರೈಸಿತ್ತು !

ಅಕಟಕಟಾ ಮನೆಯೊಂದಷ್ಟು ಸಾವಿರ ಸೈಟು
ಇಡೀ ರಾಜ್ಯಾಧಿಪತ್ಯವನ್ನು ಗುತ್ತಿಗೆ ಹಿಡಿದಂತೇ
ಕೃಷ್ಣ ಕಿರುಬೆರಳಲ್ಲಿ ಗೋವರ್ಧನವೆತ್ತಿದಂತೇ
ಕನ್ನಡ ಜನತೆಗಾಗಿ ತನ್ನನ್ನೇ ’ಕೊಟ್ಟುಕೊಂಡೆ’
ಎಂದು ಸಾರುವ ಆ ಗಂಡು ಅಪ್ಪ ಹಾಕಿದ ಚಿನ್ನದ
ಬೇಲಿಯನ್ನು ನಸುಕಿನಲ್ಲಿ ಮುಸುಕಿನಲ್ಲಿ ದಾಟಿಹೋದ
ಅಪ್ಪ ಕಣ್ಣಿದ್ದೂ ಕಾಣದಾದ ತ..ತ...ತಡೆಯದಾದ !

ಈ ಕಾಲಕ್ಕೆ ಮರ್ಯಾದಿತವಾಗಿ ಮಾಡಿಕೊಂಡರೆ
ನ್ಯಾಯಲಯ ಕಟ್ಟು ಕಟ್ಟಳೆ
ಗೋವಿಂದ ಕಲಾವಿದರಿಗೆ ವಯಸ್ಸಿನ ಗಡುವಿಲ್ಲ ಅದಕ್ಕೇ
"ನನಗೇನು ಬೇಕೋ ಅದನು ಕೊಟ್ಟು ನಿನಗೇನು ಬೇಕೋ
ಅದನು ಪಡೆಯುವಂಥವಳಾಗು ಮುಗುದೇ" ಎಂದಾಗ
ನಾಗಮಂಡಲಕ್ಕೆ ಹೋಗಿಬಂದ ಮರುದಿನವೇ
ಗರ್ಭಾದಾನವಾಗಿ ’ಮೋಹಿನಿ’ ಜನಿಸಿದಳು !

ಮಾಧ್ಯಮದ ಮಂದಿ ಆ ಸುದ್ದಿ ಕೇಳುತ್ತಲೇ
ನಿಸ್ತಂತು ದೂರವಾಣಿ " ಆ ವಿಷಯದ ಬಗ್ಗೆ
ನಾನೇನೂ ಹೇಳಲಾರೆನೆನ್ನುತ್ತಾ" ನೆಗೆದುಬಿದ್ದು ಹೋಗುತ್ತಿತ್ತು !

ಮಾಟವನ್ನೇ ನಂಬಿ ಬದುಕಿದ
ಮನೆಯಲ್ಲಿ ಮಡದಿ ಮತ್ತುಳಿದವರು
ಕೇಳಿದಾಗ ಯಾರೋ ಜ್ಯೋತಿಷ್ಕರು
"ಹೆಣ್ಣುಮಗುವಾದರೆ ನೀನೇ ಎಂದೆಂದೂ
ರಾಜನೆಂದರು ನಿಮ್ಮ ಕುಟುಂಬವೇ
ರಾಜ್ಯಭಾರ ನಡೆಸುತ್ತದೆಂದರು" ಎಂಬ
ಮಂತ್ರ ದಂಡವನ್ನು ಪ್ರಯೋಗಿಸಿಬಿಟ್ಟ !

’ಕಸ್ತೂರಿ’ಯ ಪರಿಮಳದಂತೇ ತನಗೂ ಇರಲೆಂದ
ಕುವರಿಯ ಒತ್ತಾಸೆಯನು ಕಂಡ ಮುದ್ದಣ
’ಸಮಯ’ಕ್ಕೆ ಸರಿಯಾಗಿ ಕೈಹಾಕುವ
ಮನಸ್ಸುಮಾಡಿದ ’ಮನೋರಮೆ’ಗಾಗಿ

ನೋಡಿರೈ ಅಣ್ಣಂದಿರೇ ತಮ್ಮಂದಿರೇ
ಅಕ್ಕತಂಗಿಯರೇ ಮದುವೆ ಎರಡಾಗುವುದು ನಿಷೇಧ
ಹಲವಾರು ಆದರೆ ಅದು ನಿರ್ವ್ಯಾಜ
ಅಂಕೆಯನ್ನು ಆಪಸ್ನಾತಿಯಲ್ಲಿ ಡೈರಿಯಲ್ಲಿ
ಬರೆದಿಟ್ಟು ವಿಕಸನ ಬಯಸಿದಾಗೆಲ್ಲಾ
ಪುಸಕ್ಕನೇ ಅಲ್ಲಿಲ್ಲಿ ಹೋಗಿ ಅಡ್ಡಡ್ಡ ಉದ್ದುದ್ದ
ಮಲಗಿಬಿಟ್ಟರೆ ಬರುವ ಸಂತಾನಗೋಪಾಲರೆಲ್ಲಾ
ನಮ್ಮವರೇ ಅಲ್ಲವೇ ? ಮುಪ್ಪಿನ ವಯಸ್ಸಿಗೆ
ಆ ಮುದಿ ಅಮ್ಮಂದಿರು ’ಅಪ್ಪಕಟ್ಟಿದ ಪಕ್ಷ’
ಎನ್ನಲು ಆ ಮಕ್ಕಳೆಲ್ಲಾ ಬಂದೇ ಬರುವರಲ್ಲವೇ?

ಯಾವ ಜ್ಞಾನಿಯೂ ವಿಜ್ಞಾನಿಯೂ ಕಾಣದ
ರಸಮಯ ಸಂಶೋಧನೆ ಆ ಕುವರನಿಗೆ
ನಿಜವಾಗಿಯೂ ಕೊಡಬೇಕು ಗೌರವ ಡಾಕ್ಟರೇಟು !
"ಯಾರಲ್ಲೀ...? ವಿದೇಶೀ
ವಿಶ್ವವಿದ್ಯಾಲಯಗಳವರೇ
ನಮ್ಮ ಕರಿದುಷ್ಯಂತನ ವಂಶಾಭಿವೃದ್ಧಿ
’ಜನಪ್ರಗತಿ’ಗೆ ನೀವಾರಾದರೂ ಅದನ್ನು ಕೊಡುವಿರೇ?"
ಕೊಡದಿದ್ದರೆ ಬಿಡಿ ನಮಗೆ ಗೊತ್ತು ಅದೂ ಕೂಡ
ಈಗ ಕಾಸಿಗೆ ಸಿಗುವ ಕಾಗದದ ಸುರುಳಿ!

Friday, February 25, 2011

ಜನ್ಮಾಂತರಗಳ ಫಲ ಸುಳ್ಳಾಗದಲ್ಲ !


ಜನ್ಮಾಂತರಗಳ ಫಲ ಸುಳ್ಳಾಗದಲ್ಲ !

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಂ
ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ೧

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾದಿಕಾಪದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ೨

ಸಮಸ್ತಲೋಕಶಂಕರಂ ನಿರಸ್ತದೈತ್ಯ ಕುಂಜರಂ
ದರೇತರೋದರಂ ವರಂ ವರೇಭ-ವಕ್ತ್ರಮಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ೩

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ ೪

ನಿತಾಂತ-ಕಾಂತದಂತ- ಕಾಂತಿಮಂತಕಾಂತಕಾಂತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯ ಕೃಂತನಂ
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ೫

ಮಹಾಗಣೇಶಪಂಚರತ್ನಮಾದರೇಣ ಯೋನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್ ೬


ಅದ್ಭುತ ಸಂಸ್ಕೃತ ಸಾಹಿತ್ಯದ ಪುಷ್ಕಳ ಭೋಜನಕ್ಕೆ ಭಾಜನರಾದ ನಿಮಗೆಲ್ಲಾ ಅಭಿನಂದನೆಗಳು. ಹೀಗೆ ಹೇಳುವುದಕ್ಕೆ ಕಾರಣ ನಿಮಗೆ ತಿಳಿದೇ ಇದ್ದರೆ ಆಶ್ಚರ್ಯವೇನಿಲ್ಲ. ತಿಳಿಯದೇ ಇದ್ದವರಿಗೆ ತಿಳಿದಿರಲಿ ಎಂಬ ಕಾರಣಕ್ಕಾಗಿಯೂ ಮತ್ತು ’ಗಣೇಶ ಪಂಚರತ್ನ’ ವೆಂಬ ಈ ಪಂಚಕದ ಪ್ರಾರ್ಥನೆಯ ಪರಿಣಾಮ ಬಹಳ ಉತ್ತಮವಿರುವುದರಿಂದಲೂ ಇದನ್ನು ನಿಮಗೆಲ್ಲಾ ಹೇಳುವ ಮನಸ್ಸುಮಾಡಿದೆ. ಅಂದಹಾಗೇ ಇದರ ಕರ್ತೃ ಶ್ರೀ ಆದಿಶಂಕರರು. ಎಂತಹ ಪ್ರಾಸಬದ್ಧ ಪಂಚಕವೆಂದರೆ ಇಷ್ಟು ಸರಳ ಶಬ್ದಗಳಲ್ಲಿ ಅಗಾಧವಾದ ಮಹಿಮೆಯುಳ್ಳ ಪರಬ್ರಹ್ಮನ ವರ್ಣನೆ ಮಾಡಿದ್ದಾರೆ. ಗಣಗಳಿಗೆ ನಾಯಕನಾದ ಒಂದು ಶಕ್ತಿಯನ್ನು ಗಣನಾಯಕ ಅಥವಾ ಗಣಾಧಿಪ ಅಥವಾ ಗಣೇಶ್ವರ ಎಂದು ಕರೆದರಲ್ಲಾ ಅಂತಹ ಗಣಗಳು ಯಾವವೆಂದು ತಿಳಿಯಲಿಕ್ಕೆ ಹೊರಟಾಗ ಎಲ್ಲವೂಗಣಗಳೇ ಆಗಿವೆ. ಮನುಷ್ಯಗಣ, ಪಶುಗಣ, ಪಕ್ಷಿಗಣ ಹೀಗೇ ಲೌಕಿಕವಾಗಿ ಜೀವಿಗಳ ಗಣಗಣಗಳನ್ನು ನಾವು ಗುರುತಿಸಿದರೆನಿರ್ಜೀವಿಗಳೆಂದು ಗುರುತಿಸಲ್ಪಟ್ಟ ಅನೇಕ ಲೋಹಗಳು, ಅದಿರುಗಳು, ಕಲ್ಲು-ಮಣ್ಣುಗಳು, ಮಾನವ ನಿರ್ಮಿತ ವಸ್ತುಗಳು ಹೀಗೇಪ್ರತಿಯೊಂದೂ ಗಣಗಳೇ.

ಗಣಗಳಿಗೆ ನಾಯಕನಾದವನು ಕೇವಲ ಒಂದೇರೂಪದಲ್ಲಿರಲು ಸಾಧ್ಯವೇ? ಅಂತಹ ವಿಶ್ವಂಭರ ಸ್ವರೂಪವನ್ನು ಭಗವತ್ಪಾದರು ವಿಶಿಷ್ಟವಾದ ಶಬ್ದಗಳಲ್ಲಿ ಬಣ್ಣಿಸಿದ್ದಾರೆ. ಪ್ರಪಂಚವನ್ನು ಸೃಷ್ಟಿಸುವ, ಪೊರೆಯುವ ಮತ್ತು ವಿನಾಶಮಾಡುವ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳ ರೂಪವನ್ನೂ ಸೇರಿದಂತೇ ಹಲವು ಅಗಾಧ ಶಕ್ತಿಗಳನ್ನೊಳಗೊಂಡ ನಿರಾಕಾರ ಪರಬ್ರಹ್ಮನನ್ನುಸದಾಕಾರವಾಗಿಯೂ ಹೀಗೆ ಆರಾಧಿಸುವುದರಲ್ಲಿ ತಪ್ಪಿಲ್ಲವೆಂಬ ಅವರ ಅನುಭವಾಮೃತವನ್ನು ಆಸ್ತಿಕರಿಗೆ ಈ ಪಂಚಕದ ಮೂಲಕ ಉಣಬಡಿಸಿದರು. ಸುಶ್ರಾವ್ಯವಾಗಿ ಹಾಡಬಲ್ಲ ಈ ಪಂಚಕದ ಪಠನೆಯಿಂದ ಉಚ್ಛಾರ ಶುದ್ಧಿ ಮತ್ತು ಭಾಷಾಶುದ್ಧಿ ಘಟಿಸುತ್ತದೆ. ಅವರೇಹೇಳಿದಂತೇ ಇದನ್ನು ಪಠಿಸಿದವರು ಉತ್ತಮ ಸಾಹಿತಿಯಾಗಿ ಬಾಳಲಿ ಎಂದೂ ಅವರು ಹರಸಿದ್ದಾರೆ.

ಸಾಹಿತ್ಯಕ್ಕೆ ಭಾಷೆಗಳ ಗಡಿಮಿತಿಯನ್ನು ಹಾಕಬಾರದು. ಉತ್ತಮವಾದ ಸಾಹಿತ್ಯ ಯಾವ ಭಾಷೆಯಲ್ಲಿದ್ದರೂ ಅದು ಪ್ರಶಂಶನೀಯವೇ ಸರಿ. ಅದರಲ್ಲಂತೂ ಇತ್ತೀಚೆಗೆ ಕೆಲವು ಭಾಷಾಂಧರು ಎಲ್ಲಭಾಷೆಗಳ ಮಾತೃಸ್ವರೂಪಿಣಿಯಾದ ದೇವನಾಗರೀ ಅಥವಾ ಸಂಸ್ಕೃತಭಾಷೆಯನ್ನು ದೂರುತ್ತಿದ್ದಾರೆ. ಸಂಸ್ಕೃತಭಾಷೆ ಯಾವ ಭಾಷೆಗೂ ಯಾವ ಒತ್ತಡವನ್ನೂ ಹೇರಲಿಲ್ಲ. ಬದಲಾಗಿ ಮೂಲಮಹಾಕವಿಗಳೆಲ್ಲಾ ಸಂಸ್ಕೃತ ಭಾಷೆಯಲ್ಲೇ ಬರೆದರು. ವೇದ-ವೇದಾಂತಗಳು, ಶ್ರುತಿ ಸ್ಮೃತಿ ಪುರಾಣಗಳು, ರಾಮಾಯಣ ಮಹಾಭಾರತ ಭಾಗವತವೇ ಮೊದಲಾದ ಕೃತಿಗಳು ಮೊದಲಾಗಿ ರಚಿತವಾಗಿದ್ದು ದೇವನಾಗರಿಯಲ್ಲೇ. ಈ ಪ್ರಪಂಚಕ್ಕೆ, ಭಾರತಕ್ಕೆಮಾನವೀಯ ಮೌಲ್ಯವುಳ್ಳ ಅತ್ಯುತ್ತಮ ಕೃತಿಗಳನ್ನು ಕೊಟ್ಟ ಜಗತ್ತಿನ ಏಕೈಕ ಭಾಷೆ ಸಂಸ್ಕೃತ ಎಂದು ಹೇಳಲು ಯಾವಹಿಂಜರಿಕೆಯೂ ಇಲ್ಲ.

ಕನ್ನಡದಲ್ಲೇ ಪೂಜೆಯನ್ನೂ ಮಾಡಬಹುದು. ಅಥವಾ ಅವರವರ ಭಾಷೆಯಲ್ಲೇ ಆರಾಧನೆ ನಡೆಸಬಹುದು. ಆದರೂ ಸ್ವರಬದ್ಧವಾದ ವೇದಮಂತ್ರಗಳನ್ನು ದೇವನಾಗರಿಯ ಆ ಲಯತರಂಗಗಳಲ್ಲಿ ಕೇಳಿದಾಗ ಸಿಗುವ ಅಲೌಕಿಕ ಆನಂದ ಬೇರೇ ಯಾವ ಭಾಷೆಯಲ್ಲೂ ಸಿಗುವುದಿಲ್ಲ . ಪೂಜೆ ಮಾಡಿದ ಖುಷಿ ಸಿಗುವುದು ಆ ಸಂತೃಪ್ತಿ ದೊರೆಯುವುದು ಕೇವಲ ಕೇವಲ ಸಂಸ್ಕೃತದ ಸ್ವರಬದ್ಧ ವ್ಯಾಕರಣಶುದ್ಧ ಮಂತ್ರೋಚ್ಛಾರಣೆ ಕೇಳಿದಾಗ ಮಾತ್ರ. ಇತ್ತೀಚೆಗೆ ನಾವು ಸಂಗೀತದಿಂದಲೂ ನಮ್ಮ ಮಾನಸಿಕ ಒತ್ತಡಗಳಿಂದಮುಕ್ತರಾಗಬಹುದು, ಹೈ/ಲೋ ಬಿ.ಪಿ, ಶುಗರ್, ಹೃದಯ ಸಂಬಂಧೀ ತೊಂದರೆ ಮೊದಲಾದವುಗಳಿಗೆ ಸಂಗೀತದ ಆಲಾಪನೆಯನ್ನು ಆಲೈಸುತ್ತಿದ್ದರೆ ಅವುಗಳನ್ನು ತಹಬಂದಿಗೆ ತರಬಹುದು ಎಂದು ತಿಳಿದಿದ್ದೇವೆ. ಸಂಗೀತಕ್ಕೂ ಮೂಲ ಸಾಮವೇದವೇ ಕಾರಣ. ಗೇಯರೂಪದ ಈ ವೇದವೇ ಮೂಲವಾಗಿ ಭಾರತೀಯ ಸಂಗೀತದ ಜನನವಾಯಿತು. ಹೀಗೆ ಜನಿಸಿದ ನಮ್ಮ ಶಾಸ್ತ್ರೀಯ ಸಂಗೀತವಿದೇಶೀಯರನ್ನೂ ಕೈಬೀಸಿ ಸೆಳೆಯಿತು ಎಂದರೆ ಇದರಲ್ಲಿ ಲವಲೇಶವೂ ತಪ್ಪಿಲ್ಲ.

ಯಾರೋ ಓದುಗರೊಬ್ಬರು ನನ್ನಲ್ಲಿ ಕೇಳಿದ್ದರು, ತನಗೆ ಕಾಳಿದಾಸ, ಬಾಣ, ದಂಡಿ ಇಂತಹ ಕವಿ-ಸಾಹಿತಿಗಳ ಕೃತಿಗಳು ಬೇಕಾಗಿವೆ, ಕನ್ನಡದಲ್ಲಿ ಅವು ಎಲ್ಲಿ ಸಿಗುತ್ತವೆ? --ಎಂಬುದಾಗಿ. ಅಂತಹ ಸಾರಸ್ವತರ ಕೃತಿಗಳನ್ನು ಮೂಲ ಭಾಷೆಯಾದ ಸಂಸ್ಕೃತದಲ್ಲೇಓದಿದಾಗ ಸಿಗುವ ಆನಂದ ತರ್ಜುಮೆಗೊಂಡ ಕೃತಿಯನ್ನು ಓದಿದಾಗ ಸಿಗುವುದಿಲ್ಲ. ಅವರುಗಳ ಕೃತಿಗಳೆಲ್ಲಾ ದೇವನಾಗರಿಯಲ್ಲೇಇವೆ. ಸಂಸ್ಕೃತ ಬಾರದವರು ಏನುಮಾಡುವುದು ಎಂಬುದಕ್ಕೆ ಉತ್ತರ, ಸಂಸ್ಕೃತದ ಉತ್ತಮ ತಜ್ಞರನ್ನು ಕಂಡು ಭಾಷೆಯನ್ನುಅಭ್ಯಸಿಸುವುದು ಅಥವಾ ಸಂಸ್ಕೃತ ವಾಗ್ಮಿಗಳನ್ನು ಪಂಡಿತರನ್ನು ಕಂಡು ಬಿಡುವಿನಲ್ಲಿ ಅವರಿಂದ ಅಂತಹ ಕೃತಿಗಳನ್ನು ವಾಚಿಸಿಕೊಂಡು ಅರ್ಥಗ್ರಹಣಮಾಡಿ ಆನಂದಿಸುವುದು.

ಸಂಸ್ಕೃತದ ಈ ಆಕರ್ಷಣೆಯಿಂದಲೇ ಕನ್ನಡದ ವರಕವಿ ಬೇಂದ್ರೆಯವರ ಕಾವ್ಯಗಳಲ್ಲಿ ಅದರ ಪ್ರಭಾವವನ್ನು ಕಾಣಬಹುದಾಗಿದೆ. ಕಾವ್ಯವನ್ನು ಮೇಲ್ನೋಟಕ್ಕೆ ಓದುವ ಬದಲು ಆಳವಾಗಿ ಅರ್ಥೈಸುವ ಹಲವು ಕಾವ್ಯಗಳಿರುತ್ತವೆ. ಅಂತಹ ಆಳ ನಮ್ಮನ್ನು ಮೂಲವೇದಾಂತದೆಡೆಗೆ ಕರೆದೊಯ್ಯುತ್ತದೆ ಎನ್ನುವುದು ಅನುಭವಿಸಿದವರ ಅಭಿಪ್ರಾಯವಾಗಿದೆ. ಅನೇಕರಿಗೆ ಬೇಂದ್ರೆಯವರ ಕೆಲವುಕವನಗಳು ಕಗ್ಗಂಟಾಗಿ ಕಾಣುವುದು ಇದೇ ಕಾರಣಕ್ಕಾಗಿ. ನಾಟ್ಯದಲ್ಲಿ ಚಿತ್ರಕಲೆಯಲ್ಲಿ ಕಲಾವಿದರು ತನ್ಮಯರಾಗಿತೊಡಗಿಕೊಂಡಂತೇ ಬೇಂದ್ರೆಯವರು ಕವನ ರಚನೆಯಲ್ಲಿ ತೊಡಗಿದಾಗ ತನ್ನನ್ನೇ ಮರೆಯುತ್ತಿದ್ದರು.ಸಾವಿರ ಜನಸಂದಣಿ ತುಂಬಿದಸಭೆಯಲ್ಲೇ ಇದ್ದರೂ ಸುತ್ತಲ ಜಗತ್ತಿನ ಪ್ರಭಾವದಿಂದ ದೂರವಾಗಿ ಏಕಾಗ್ರತೆಯಿಂದ ಕವನ ಬರೆಯ ಹೊರಟರೆ ಆ ಕವನಸರಾಗವಾಗಿ ಹೊರಬರುವಷ್ಟು ಶಬ್ದಗಳು ಅವರ ಬಾಯಲ್ಲಿ ನುಲಿಯುತ್ತಿದ್ದವು; ನಲಿಯುತ್ತಿದ್ದವು. ಡೀವೀಜಿ ಸಂಸ್ಕೃತದಮಹಾಮೇಧಾವಿಯಾಗಿದ್ದುದರಿಂದಲೇ ಕಗ್ಗದ ಮಗ್ಗ ಉತ್ತಮ ಸಂಸ್ಕೃತಿಯ ಸಮಾಜವನ್ನು ನೇಯುವಲ್ಲಿ ಕನ್ನಡದ ಭಗವದ್ಗೀತೆಎನಿಸಿತು. ಹೆಚ್ಚೇಕೆ ಕನ್ನಡವೂ ಸೇರಿದಂತೇ ಅನೇಕ ಭಾಷೆಗಳ ಹಲವಾರು ಶಬ್ದಗಳು ಸಂಸ್ಕೃತ ಮೂಲದಿಂದಲೇ ಬಂದವು. ಹೀಗಾಗಿಸಂಸ್ಕೃತವನ್ನು ಜರಿದರೆ ಉಂಡಮನೆಗೆ ಎರಡುಬಗೆಯುವ ತಪ್ಪನ್ನು ಮಾಡಿದಂತಾಗುವುದರಲ್ಲಿ ಸಂಶಯವಿಲ್ಲ.

ಭಾರತೀಯ ಸಂಸ್ಕೃತಿಯ ಕೊಡುಗಗಳಾದ ಸಂಸ್ಕೃತ, ಯೋಗ, ಆಯುರ್ವೇದ ಇವೆಲ್ಲಾ ವಿದೇಶೀಯರ ಪಾಲಾಗಿ ಅಲ್ಲಿ ಅವರುಅದನ್ನು ತಮದೆಂದು ಹಕ್ಕುಸಾಧಿಸಹೊರಟ ಈ ಸನ್ನಿವೇಶದಲ್ಲಾದರೂ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವೊಂದುಸ್ಥಾಪಿತವಾಗಿರುವುದು ಹೆಮ್ಮೆಯ ಸಂಗತಿ. ಸಮಾಜದ ಕೆಲವರಾದರೂ ಇದರ ಬಗ್ಗೆ ಕಳಕಳಿ ಉಳ್ಳವರು ಎಂಬುದಕ್ಕೆ ಕೆಲವು ತಿಂಗಳಹಿಂದೆ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ಸಮಯ ಲಕ್ಷಾಂತರ ಜನ ಭಾಗವಹಿಸಿದ್ದು ಸಾಕ್ಷಿಯಾಗಿದೆ. ನಮ್ಮ ತಾಯಿ ಕನ್ನಡವಾದರೆನಮ್ಮ ತಾಯಿಯ ತಾಯಿ ಅಂದರೆ ಅಜ್ಜಿ ಸಂಸ್ಕೃತ. ಅಜ್ಜಿಗೆ ಅಪಚಾರಮಾಡುವುದು ಸರಿಯೇ. ನಮಗೆ ಅಮ್ಮ ಹೇಗೆ ಅಷ್ಟೊಂದುಇಷ್ಟವೋ ಆ ಅಮ್ಮನಿಗೆ ಅವಳ ಅಮ್ಮ ಎಂದರೆ ಅಷ್ಟೇ ಇಷ್ಟ. ಅಮ್ಮ ಚೆನ್ನಾಗಿರಬೇಕೆಂದರೆ ಅಮ್ಮನಿಗೆ ಅಡಿಗೆಗೋ ಮನೆವಾರ್ತೆಗೋಮತ್ತಿನ್ನೇತಕ್ಕೋ ಅನುಭವಿಯಾಗಿ ಮಾರ್ಗದರ್ಶಿಸಲು ಅಜ್ಜಿ ಹೇಗೆ ಸಹಕರಿಸುವಳೋ ಹಾಗೇ ಕನ್ನಡ ಚೆನ್ನಾಗಿರಬೇಕಾದರೆಸಂಸ್ಕೃತವೂ ಜೊತೆಗಿರಲೇಬೇಕು. ಇದು ಒಂದು ಕೂಡುಕುಟುಂಬದ ವ್ಯವಸ್ಥೆ, ದಯಮಾಡಿ ಅನ್ಯಥಾ ಭಾವಿಸಬೇಡಿ.

ಇನ್ನು ನಿನ್ನೆಯ ಒಂದು ಘಟನೆ ನನ್ನ ಮನಸ್ಸನ್ನು ಕಲಕಿತು. ನನಗೆ ಗೊತ್ತಿರುವ ನಮ್ಮೂರ ಕಡೆಯ ಒಳ್ಳೆಯ ವ್ಯಕ್ತಿ ತನ್ನಮಧ್ಯವಯಸ್ಸಿನಲ್ಲೇ[೪೭-೪೮] ಇಲಿಜ್ವರ ಪೀಡಿತನಾಗಿ ಮರಣಿಸಿದ. ಕೇವಲ ವಾರದ ಹಿಂದೆ ಹಲವಾರು ಕೆಲಸಗಳಲ್ಲಿತೊಡಗಿಕೊಂಡಿದ್ದ ಆತ ಸರಳ ಜೀವನವನ್ನು ನಡೆಸಿಬಂದ ತುಂಬುಕುಟುಂಬದ ಬಡಜೀವಿಯಾಗಿದ್ದ. ಊರಲ್ಲಿ ಯಾರೇ ಆಗಲಿಆತನನ್ನು ಮೆಚ್ಚುತ್ತಿದ್ದರು. ಎಂದೂ ಯಾರನ್ನೂ ಆಡಿಕೊಂಡವನಲ್ಲ, ಯಾರೊಂದಿಗೂ ಜಗಳ-ದೊಂಬಿ ಇರಲಿಲ್ಲ. ಎಲ್ಲರ ಜೊತೆ ಇದ್ದುಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಡತನದಲ್ಲಿ ತನ್ನ ಉಪಜೀವಿತಕ್ಕೆ ಬೇಕಾಗಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ. ಹೆಂಡತಿ ಮತ್ತುಇಬ್ಬರು ಹೆಣ್ಣುಮಕ್ಕಳು ಹಾಗೂ ಮುಪ್ಪಿನ ತಂದೆ-ತಾಯಿಯರೊಟ್ಟಿಗೆ ಇರುವುದರಲ್ಲೇ ತೃಪ್ತನಾಗಿದ್ದ. ೪-೫ ದಿನಗಳ ಹಿಂದೆಕಾಣಿಸಿಕೊಂಡ ಜ್ವರ ಶೀಘ್ರ ಉಲ್ಬಣಿಸಿತು. ಕಳೆದ ವಾರಾಂತ್ಯದಲ್ಲಿ ಮಂಗಳೂರಿನ ದೊಡ್ಡ ಖಾಸಗೀ ಆಸ್ಪತ್ರೆಯೊಂದಕ್ಕೆಕರೆದೊಯ್ದರೂ ಅಲ್ಲಿ ಅವರು ಹೇಳಿದ್ದು ಯಕೃತ್ತು ೮೦ ಪ್ರತಿಶತ ಹಾಳಾಗಿದೆ-ಬದುಕುವುದು ಕಷ್ಟವೆಂದು. ಅಲ್ಲಿಗೆ ತೆರಳಿದಮಾರನೇದಿನವೇ ಆತ ಕಣ್ಣುಗಳನ್ನು[ದೃಷ್ಟಿ] ಕಳೆದುಕೊಂಡ. ನಂತರ ಒಂದೊಂದೇ ಅಂಗಾಂಗಗಳ ಕ್ರಿಯೆಗಳು ನಿಧಾನವಾಗಿನಿಲ್ಲಲು ಆರಂಭಿಸಿದವು. ನಿನ್ನೆ ಸುಮಾರು ಬೆಳಗಿನ ೧೦:೩೦ಕ್ಕೆ ಆತ ಇಹಲೋಕ ಯಾತ್ರೆಗೆ ವಿದಾಯಹೇಳಿದ. ಊರ ಜನರೆಲ್ಲಾಹಿರಿಕಿರಿಯ ಭೇದಭಾವವಿಲ್ಲದೇ ಸೇರಿ ಕಣ್ಣೀರ್ಗರೆದು ಆತನ ಭೌತಿಕ ದೇಹವನ್ನು ಕವ್ಯಾಗ್ನಿಗೆ ಅರ್ಪಿಸಿದರು. ಈ ಜನ್ಮದಲ್ಲಿ ಆತಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಆಲೋಚಿಸುವಾಗ ಆತಮಾಡಿದ ಯಾವತಪ್ಪೂ ಕಾಣಲಿಲ್ಲ. ಪಡೆದು ಬಂದ ವಿಧಿಲಿಖಿತವೇಹಾಗಿರುವಾಗ ಯಾವ ವೈದ್ಯರು ಏನುಮಾಡಲಾದೀತು ? ವಿಶ್ವನಾಥನೆಂಬ ಗತಿಸಿದ ಆ ಒಳ್ಳೆಯ ವ್ಯಕ್ತಿಗೆ ವಿಶ್ವದ ನಾಥನಲ್ಲಿವಿಶ್ವನಾಯಕನಲ್ಲಿ ಒಮ್ಮೆ ಪ್ರಾರ್ಥಿಸುವಾಗ ಸಹಜವಾಗಿ ಶ್ರೀ ಶಂಕರರ ಮೇಲಿನ ಪಂಚಕದ ನೆನಪು ಬಂತು. ವಿಶ್ವನಾಥನಿಗೆ ಮುಕ್ತಿಸಿಗಲಿ ಆತನ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಈ ನನ್ನ ಪ್ರಾರ್ಥನೆಯನ್ನು ಸಹೃದಯರಾದ ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದೇನೆ, ಪುನಃ ಸಿಗೋಣ, ನಮಸ್ಕಾರ.

Thursday, February 24, 2011

ಚಂದವಿರುವುದೆಲ್ಲಾ ನಮದಾಗಬೇಕಿಲ್ಲ !


ಚಂದವಿರುವುದೆಲ್ಲಾ ನಮದಾಗಬೇಕಿಲ್ಲ !

ಮನುಷ್ಯ ಸಹಜ ಆಸೆಯೆಂದರೆ ಚೆನ್ನಾಗಿರುವುದೆಲ್ಲಾ ತನ್ನದಾಗಿರಲಿ ಎಂಬುದು. ಚಂದದ ಹೂವು, ಹಣ್ಣು, ಮನೆ, ಕಾರು, ವಸ್ತು, ಒಡವೆ, ಬಟ್ಟೆ, ಹೆಣ್ಣು ಯಾವುದೇ ಇರಲಿ ಅದು ತನ್ನದಾಗಿಬಿಡಲಿ ಎಂಬುದು ಬಹುತೇಕರ ಅಪೇಕ್ಷೆ. ಈ ಕಾರಣಕ್ಕಾಗಿಯೇ ಹಲವು ಜಗಳಗಳು, ದ್ವೇಷ-ವೈಷಮ್ಯಗಳು ಹುಟ್ಟಿಕೊಳ್ಳುತ್ತವೆ. ಚಂದವನ್ನು ದೂರದಿಂದ ನೋಡಿ ಆನಂದಿಸಬೇಕು. ಅವುಗಳಲ್ಲಿ ಸಹಜವಾಗಿ ನಮಗೆ ಧಕ್ಕುವುದು ಸಿಕ್ಕೇಸಿಗುತ್ತದೆ ಅದನ್ನೂ ಮೀರಿ ಚಂದದ ಯಾವುದನ್ನೋ ಪಡೆಯುವಲ್ಲಿ ಪೈಪೋಟಿಗೋ ದುಸ್ಸಾಹಸಕ್ಕೋ ಮುನ್ನುಗ್ಗಬಾರದು.

ಕೆಲವರಿಗೆ ಗಿಡದಲ್ಲಿ ಅರಳಿರುವ ಅಂದದ ಹೂವುಗಳಷ್ಟನ್ನೂ ಕೊಯ್ಯುವ ಜಾಯಮಾನ. ಪ್ರಾಯಶಃ ಸೃಷ್ಟಿಸಿದ ದೇವರೂ ಕೂಡ ಹೂಗಳನ್ನೆಲ್ಲವನ್ನೂ ತನಗೇ ಅರ್ಪಿಸಿ ಎಂದು ಕೇಳಲಿಕ್ಕಿಲ್ಲ ಆದರೆ ಇವರು ಮಾತ್ರ ಕೀಳದೇ ಬಿಡುವುದೇ ಇಲ್ಲ. ಇನ್ನು ಕೆಲವರಿಗೆ ಸವಿಮಾತನ್ನು ಉಲಿಯುವ ಗಿಳಿ ತಮ್ಮ ಮನೆಯಲ್ಲೇ ಗೂಡಿನಲ್ಲಿರಲಿ ಎಂಬ ಇಚ್ಛೆ. ಪಾಪ ಆ ಬಂಧಿತ ಗಿಳಿಗೆ ತನ್ನ ಬಾಂಧವರು ಮರಳಿ ಸಿಗುವರೇ? ಜೀವಮಾನದಲ್ಲೇ ಅದು ತನ್ನ ವರ್ಗದ ಎಲ್ಲರಿಂದಲೂ ದೂರವಾಗಿ ಜೀವಿಸಬೇಕೆಲ್ಲವೇ ? ಸ್ವಚ್ಛಂದವಾಗಿ ಎಂದಾದರೂ ಕಾಡಲ್ಲಿ ಹಾರಲು ಮತ್ತೆ ಬಿಡುವು ಸಿಗುವುದೇ? ಮಾನವ ಸಹಜ ಇನ್ನೊಂದು ಇಚ್ಛೆ ಚಾಪಲ್ಯಕ್ಕೂ ಚಂದವನ್ನೇ ಬಯಸುವುದು. ಕೊಬ್ಬಿದ ಕುರಿಯನ್ನೋ ಕೋಳಿಯನ್ನೋ ಕಂಡಾಗ ಅದು ತಮ್ಮ ಆಹಾರಕ್ಕೆ ಸಿಗಲಿ ಎಂಬುದು ಕೆಲವರ ಅಪೇಕ್ಷೆ. ಆ ಜೀವಿಗಳಿಗೂ ಅವರವರ ಬಂಧುಗಳಿಲ್ಲವೇ ? ಅವು ನೋವು-ನಲಿವನ್ನು ಹಂಚಿಕೊಂಡು ಬದುಕುವುದಿಲ್ಲವೇ ? ಕೆಲವು ಜನರಿಗೆ ಸಿರಿವಂತಿಕೆ ಹೆಚ್ಚಿಸುತ್ತವೆ ಎಂದು ನಂಬಿಸಲ್ಪಟ್ಟು ಮಾರುವ ಹಾವುಗಳು ಇಷ್ಟ. ಹಾಗಾದರೆ ಆ ಕುರುಡುಮಂಡೆ ಹಾವುಗಳಿಗೂ ಅವುಗಳದೇ ಆದ ಬದುಕಿಲ್ಲವೇ ?

ಶೋ ಕೇಸಿನಲ್ಲಿ ಇಡುವ ಸಲುವಾಗಿ ತರಾವರಿ ಅಲಂಕಾರಿಕ ಸಾಮಾನುಗಳನ್ನು ತರುವವರಿಗೆ ತುಸುವೂ ತೆರಪೇ ಇರುವುದಿಲ್ಲ! ಆಗಾಗ ಹೋದಲ್ಲಿ ಬಂದಲ್ಲಿ ಕಂಡಲ್ಲಿ ಸಿಗುವ ಚಂದದ ವಸ್ತುಗಳೆಲ್ಲಾ ಅವರ ಶೋ ಕೇಸಿಗೆ ಬಂದುಬಿಡಬೇಕು. ಒಡವೆಗಳಲ್ಲಿ ಮಾಟದ ಬದಲಾವಣೆ ಕಂಡ ನೀರೆಯರನೇಕರಿಗೆ ಮಾರನೇ ದಿನವೇ ಹಣವೆಷ್ಟಾದರೂ ಪರವಾಗಿಲ್ಲ ಅವು ಬೇಕು. ರೇಷ್ಮೆ ಸೀರೆಗಳ ಅಂದಕ್ಕಂತೂ ಮಾರುಹೋಗದ ಹೆಂಗಸರೇ ಇರುವುದು ಸುಳ್ಳು. ’ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬ ಗಾದೆ ಇದೆಯಲ್ಲಾ ಅದರಂತೇ ಆಡಂಬರಕ್ಕಾಗಿ ಹಲವನ್ನು ಹೆಂಗಸರು ಬಯಸುತ್ತಾರೆ. ಗಂಡನ ಜೇಬು [ಕಿಸೆ] ಗಟ್ಟಿ ಇದ್ದರೆ ಬಚಾವು! ಇರದಿದ್ದರೆ ಸಾಲಮಾಡಿಯಾದರೂ ಕೆಲವನ್ನು ಪಡೆದೇ ತೀರಬೇಕು. ಈ ಕಾರಣಕ್ಕಾಗಿಯೇ ಕ್ರೆಡಿಟ್ ಕಾರ್ಡ್‍ಗಳು ಚಾಲ್ತಿಗೆ ಬಂದವು. ಮಾಮೂಲೀ ಹಣದ ದುಪ್ಪಟ್ಟು ಬಡ್ಡಿ ಕೊಟ್ಟರೂ ಪರವಾಗಿಲ್ಲ ತಕ್ಷಣಕ್ಕೆ ಖರೀದಿಸಲು ಆ ಸೌಲಭ್ಯಗಳು ಬೇಕು.

ಜೀವನದ ಗತಿಯೂ ಆ ದಿಸೆಯಲ್ಲೇ ನಡೆದಿದೆ. ಮಾರುವ ಜನ ಕೊಳ್ಳುವ ಜನರ ನಾಡಿಮಿಡಿತವನ್ನು ಯಾವುದೇ ಆಯುರ್ವೇದ ವೈದ್ಯನಿಗಿಂತಾ ಚೆನ್ನಾಗಿ ಅರಿತವರು. ವೈದ್ಯರು ಮುಟ್ಟಿ ಪರೀಕ್ಷಿಸಿದರೆ ಮಾರುವ ಜನ ದೂರದಿಂದಲೇ ನಾಡಿಯನ್ನು ತಿಳಿಯುವ ಕಸರತ್ತುಳ್ಳವರು! ಥರಥರದ ಮಾರಾಟ ಶೈಲಿ, ಒಂದಕ್ಕೊಂದು ಬಿಟ್ಟಿಯಲ್ಲಿ ಎಂಬ ಘೋಷಣೆ! ದರದಲ್ಲಿ ರಿಯಾಯತಿಯ ತೋರಿಕೆ, ಹಳೇ ವಸ್ತುಗಳ ಬದಲಿಗೆ ಹೊಸದನ್ನು ಕೊಳ್ಳುವ ಸೌಭಾಗ್ಯವೆಂಬ ಉದ್ಘೋಷ! ಬೇರೆಲ್ಲೂ ಸಿಗದ ಮಾಲು ತಮ್ಮಲ್ಲಿ ಮಾತ್ರ ಸಿಗುತ್ತದೆ ಎಂಬ ಹೆಗ್ಗಳಿಕೆಯ ಹೇಳಿಕೆ, ದರದಲ್ಲಿ ನಮ್ಮಷ್ಟು ಕಮ್ಮಿ ಯಾರೂ ನೀಡರು ಎಂಬ ಜಾಹೀರಾತು, ಪರಿಶುದ್ಧ ಹಾಗೂ ಪರಿಪೂರ್ಣತೆ ಎಂಬ ಸ್ವಯಂ ವರ್ಣನೆ ಹೀಗೇ ಹಲವಾರು ದಾರಿಗಳಿಂದ ಬಿಡುವ ಅಸ್ತ್ರಗಳಲ್ಲಿ ಕೆಲವಾದರೂ ಗ್ರಾಹಕರಿಗೆ ನಾಟುವುದು ಖಚಿತ; ಈ ಮಾತು ನಿಜವಾಗಿಯೂ ಇಲ್ಲಿ ಉಚಿತ!

ಹಾಗಂತ ಕಾಲಕ್ಕೆ ತಕ್ಕ ಆವಶ್ಯಕ ವಸ್ತುಗಳು ಮತ್ತು ಪರಿಕರಗಳ ಕೊಳ್ಳುವಿಕೆ ಸರಿಯಾಗೇ ಇದೆ. ಆದರೆ ಬರೇ ಅಂದಕ್ಕಾಗಿ ಕೊಳ್ಳುವುದಿದೆಯಲ್ಲಾ ಅದು ಆಕ್ಷೇಪಾರ್ಹ. ಒಬ್ಬರು ಮಾಡುತ್ತಾರೆ ಎಂದು ಇನ್ನೊಬ್ಬರೂ ಮಾಡಲು ಹೊರಡುತ್ತಾರೆ. ಆ ಇನ್ನೊಬ್ಬರಲ್ಲಿ ಕೆಲವರು ಆರ್ಥಿಕವಾಗಿ ನಿಜವಾಗಿಯೂ ಸಮರ್ಥರಾಗಿರುವುದಿಲ್ಲ. ಸಾಲಮಾಡಿಯಾದರೂ ಮಾಡಹೊರಟ ಖರೀದಿಯ ತಪ್ಪಿಗೆ ಕೊನೆಗೊಮ್ಮೆ ತೀರಿಸಲಾಗದ ಸಾಲದಲ್ಲಿ ಬಿದ್ದು ಮಾನಸಿಕ ಖಿನ್ನತೆಗೂ ಒತ್ತಡಕ್ಕೂ ಒಳಗಾಗಿ ನಾನಾಥರದ ಕಾಯಿಲೆಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಇದ್ದುದರಲ್ಲಿ ತೃಪ್ತಿಪಡೆಯುವ ಸ್ವಭಾವದಿಂದ ಇಂತಹ ಕೆಲವು ಕಾಯಿಲೆಗಳನ್ನು ದೂರವಿಡಬಹುದು. ಯಾರೋ ದಾರಿಯಲ್ಲಿ ಮಾತನಾಡುವುದನ್ನು ಕೇಳಿದೆ. "೪೦ ಆಯ್ತು ಅಂದ್ರೆ ಬಿ.ಪಿ.ಶುಗರು ಎಲ್ಲಾ ಅಂಟಿಕೊಂಡುಬಿಡುತ್ತವೆ "ಅಂತ. ಆದರೆ ನಿಜವಾಗಿಯೂ ಅವೆರಡೂ ಕಾಯಿಲೆಗಳಲ್ಲ ಬದಲಿಗೆ ನಮ್ಮ ಒತ್ತಡಗಳಿಗೆ ಶರೀರ ಸ್ಫಂದಿಸುವ ರೂಪಗಳು! ಇನ್ನು ಅಪರೂಪಕ್ಕೆ ತೀರಾ ಎಳೆಯರಲ್ಲೂ ಈ ನ್ಯೂನತೆಗಳು ಕಂಡುಬಂದರೆ ಅದಕ್ಕೆ ಅವರ ಆಹಾರ-ವ್ಯವಹಾರ ಕಾರಣವಿರಬಹುದು ಅಥವಾ ಇನ್ಯಾವುದೋ ರಾಸಾಯನಿಕ ಮಿಶ್ರಿತ ಆಹಾರ ಸೇವನೆಯ ದುಷ್ಪರಿಣಾಮ ಇರಬಹುದು.

ಚಂದದ ಹುಡುಗಿಯರ ಬಗ್ಗೆಯಂತೂ ಬರೆಯುವುದೇ ಬೇಡ. ಅವರು ಚಂದವಿದ್ದಾರೆಂದು ಅವರಿಗೇ ಪ್ರಾಯಕ್ಕೆ ಬರುವಾಗ ತಿಳಿದು ಹೋಗಿರುತ್ತದೆ. ದಿನಂಪ್ರತಿ ಹಲವಾರು ಗಂಟೆ ನಿಲುಗನ್ನಡಿಯ ಮುಂದೆ ನಿಂತು ಆತ್ಮರತಿಯಲ್ಲಿ ತೊಡಗುತ್ತಾರೆ. ’ಕೇವಲ ಮೊದಲನೋಟದಲ್ಲೇ ಪ್ರೇಮ’ ಎಂಬ ಜನ ಅವರುಗಳ ಹಿಂದೆ ಬೀಳುತ್ತಾರೆ. ಈ ಹುಡುಗಿಯರು ತೊಡುವ ತರಾವರಿ ಬಟ್ಟೆಗಳೂ ಕೂಡ ಎಲ್ಲವನ್ನೂ ’ಅಪಾರ’ದರ್ಶಕವಾಗಿಸುವತ್ತ ಹೋಗುತ್ತಿರುವಾಗ ಬೇಡವೆಂದರೂ ಹುಡುಗಿಯರ ಬಟ್ಟೆಗಳೇ ಹಲವೊಮ್ಮೆ ಹಲವು ಹುಡುಗರನ್ನು ಸೆಳೆಯುತ್ತವೆ, ಏಕಕಾಲಕ್ಕೆ ಅನೇಕ ಪ್ರೇಮಕೊಂಡಿಗಳು ಕುದುರುತ್ತವೆ. ದ್ವೇಷ-ಕೊಲೆಗಳಲ್ಲಿ ಅವುಗಳ ಪರ್ಯವಸಾನವಾಗುತ್ತದೆ. ಚಂದದ ಹುಡುಗಿಯರನ್ನು ಬೆಳೆಸುವ ಅಪ್ಪ-ಅಮ್ಮರಿಗೆ ಖರ್ಚೇನೂ ಸಣ್ಣಾಟದ್ದಲ್ಲ ! ಅವರುಗಳ ಹಲವು ಥರದ ಬಟ್ಟೆಗಳು, ಬಣ್ಣಗಳು, ಕ್ರೀಮುಗಳು, ಮಾರ್ಜಕಗಳು, ಅತ್ತರುಗಳು ಒಂದೇ ಎರಡೇ ? ಸುಮಾರಿನ ಅಪ್ಪ ಅಯ್ಯಯ್ಯಪ್ಪ !

ಹತ್ತು ಹಣ್ಣುಗಳನ್ನು ಬುಟ್ಟಿಯಲ್ಲಿಟ್ಟಾಗ ಕೊಳ್ಳುವ ಗಿರಾಕಿ ಚೆನ್ನಾಗಿರುವುದನ್ನು ಆಯುವುದು ಸಹಜ. ಆದರೆ ಅದೇ ಹಣ್ಣು ಹಲವರ ಆಯ್ಕೆಯಾದಾಗ ಅದಕ್ಕೆ ಬೇಡಿಕೆ ಹೆಚ್ಚಾಗಿ ದುಬಾರಿಯಾಗಬಹುದು. ಚಂದದ ಹಣ್ಣು ಮತ್ತೆ ಬರುತ್ತದೆ, ಅದು ಮುಗಿದುಹೋದ ಅಧ್ಯಾಯವೇನೂ ಅಲ್ಲವಲ್ಲ. ಹಾಗಾಗಿ ಅದಕ್ಕಾಗಿ ಕರುಬುವುದು ಬೇಡ. ಅದು ಬರದಿದ್ದರೂ ಪರವಾಗಿಲ್ಲ. ಅದನ್ನು ಕೊಂಡು ತಿಂದಷ್ಟೇ ಖುಷಿಯಾಗಿರೋಣ. ಅದಕ್ಕಾಗಿ ಏನು ಮಾಡಬೇಕೆನ್ನುತ್ತೀರಿ ? ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. ನಿಗ್ರಹದ ಒಂದು ಭಾಗ ಇದು. ಮನಸ್ಸು ನಮ್ಮ ಹಿಡಿತದಲ್ಲಿರಬೇಕೇ ವಿನಃ ಮನಸ್ಸಿನ ಕೈಗೆ ನಮ್ಮನ್ನು ನಾವು ಕೊಟ್ಟುಕೊಳ್ಳಬಾರದು. ಇದಕ್ಕೊಂದು ಉದಾಹರಣೆ ನೀಡಿ ಈ ಲೇಖನವನ್ನು ಮುಗಿಸುತ್ತೇನೆ :

ಒಬ್ಬ ಸನ್ಯಾಸಿಯಿದ್ದ. ಹೇಳೀ ಕೇಳೀ ಸನ್ಯಾಸಿ ಎಂದರೆ ಯಮ, ನಿಯಮ, ಆಸನ ಮೊದಲಾದವುಗಳಿಂದ ದೇಹವನ್ನು ದಂಢಿಸುವಾತ. ಅತೀವ ತಪಸ್ಸಿನಲ್ಲಿ ತೊಡಗಿದ್ದ ಆತ ತಪಸ್ಸಿನಿಂದ ಆಚೆಬಂದ ಹೊತ್ತಿನಲ್ಲಿ ಸಿಹಿಯಾದ ಪೇಡೆಗಳನ್ನು ತಿನ್ನುವ ಇಚ್ಛೆಯಾಯಿತಂತೆ. ಸನ್ಯಾಸಿಯೂ ಮನುಷ್ಯನೇ ತಾನೇ ? ಪೇಡೆಯ ನೆನಪಾಗಿ ಬಾಯಲ್ಲಿ ನೀರೂರಿತು. ಅದೇ ಮನಸ್ಸಿನಲ್ಲಿ ಸನ್ಯಾಸಿ ಹೊಳೆಯ ದಂಡೆಗೆ ಸ್ನಾನಕ್ಕೆ ತೆರಳಿದ. ಹಾಗೆ ಹೋದಾತ ಮಾರನೇದಿನದವರೆಗೂ ಬರಲೇ ಇಲ್ಲ! ಇತ್ತ ಆತನ ಶಿಷ್ಯರು ಆತ ಬರುತ್ತಾನೆಂದು ಕಾದೇ ಕಾದರು. ಆದರೂ ಬರಲಿಲ್ಲವಲ್ಲಾ ಎಂದು ಕಳವಳಿಸುತ್ತಾ ಹುಡುಕುತ್ತಾ ಮಾರನೇ ಬೆಳಿಗ್ಗೆ ಆ ನದಿಯ ದಡಕ್ಕೆ ಬಂದರು. ದೂರದಲ್ಲಿ ಬರುತ್ತಿರುವ ಶಿಷ್ಯರನ್ನು ಕಂಡು ಸನ್ಯಾಸಿ ಜೋರಾಗಿ ಹೇಳಲಾರಂಭಿಸಿದ " ನೋಡು ನನ್ನ ಶಿಷ್ಯರೆಲ್ಲಾ ಹೆದರಿಕೊಂಡು ಹುಡುಕುತ್ತಾ ಬರುವ ಹಾಗೇ ಮಾಡಿದಿಯಲ್ಲ ಬಡ್ಡೀ ಮಗನೆ ಇನ್ನಾದರೂ ಪೇಡೆ ತಿನ್ನುವ ಚಪಲವನ್ನು ಬಿಡು " ಸನ್ಯಾಸಿಯ ಜೊತೆಗೆ ಯಾರೂ ಇರಲಿಲ್ಲದಿದ್ದರೂ ಸನ್ಯಾಸಿ ಬೈಯ್ಯುತ್ತಿರುವುದನ್ನು ಶಿಷ್ಯರು ಕಾಣುತ್ತಿದ್ದರು. ಆಮೇಲೆ ಗುರುವನ್ನು ಸಮೀಪಿಸಿ ಕೇಳಿದಾಗ ಆತ ಅತ್ಯಂತ ಸಂತೋಷದಿಂದ ನಗುತ್ತಾ ಹೇಳಿದ " ನನ್ನೊಳಗಿನ ಬಡ್ಡೀಮಗನಿಗೆ ಪೇಡೆ ತಿನ್ನುವ ಚಪಲ ಜಾಸ್ತಿಯಾಗಿಬಿಟ್ಟಿತ್ತು. ಏನೇ ಹೇಳಿದರೂ ಕೇಳುತ್ತಿರಲಿಲ್ಲ. ಅದಕ್ಕೇ ನೀರಲ್ಲಿ ಸ್ನಾನಮಾಡಿಸಿ ನಿನ್ನೆಯಿಂದ ಇಲ್ಲೇ ಕಟ್ಟಿಹಾಕಿದ್ದೆ. ಈಗ ಪೇಡೆಯೇನೂ ಬೇಡ ಎನ್ನುತ್ತಿದ್ದಾನೆ, ನಡೀರಿ ಹೋಗೋಣ "

ಸಮಾಜಕ್ಕೆ ಸನ್ಯಾಸಿಗಳು ಮಾರ್ಗದರ್ಶಕರು. ಆಚರಿಸಿ ತೋರಿಸುವುದರಿಂದ ಅವರುಗಳನ್ನು ಆಚಾರ್ಯರು ಎನ್ನುತ್ತೇವೆ. ಚಂದದ್ದೆಲ್ಲಾ ನಮ್ಮದಾಗಬೇಕೆಂಬ ಬಯಕೆಯ ವಿಷಯದಲ್ಲಿ ಈ ಸನ್ಯಾಸಿಯಿಂದ ಆ ಒಂದು ತತ್ವವನ್ನು ತಿಳಿದ ನಾವು ಅದನ್ನು ಹತ್ತಂಶದಷ್ಟಾದರೂ ಅಳವಡಿಸಿಕೊಂಡರೆ ನಮಗೇ ಒಳಿತಲ್ಲವೇ ?

Wednesday, February 23, 2011

ಪಂಚ ಭೂತಗಳ ನೆನಕೆ


ಪಂಚ ಭೂತಗಳ ನೆನಕೆ

ಆಸರೆಯನು ನೀಡಿ ನಿಂತ
ಭುವಿಯೆ ನಿನಗೆ ನಮಿಸುವೆ
ಹಾಸಲು ವಿಧಿಸದ ಆಗಸ
ನಿನ್ನ ನೆನೆದು ಎರಗುವೆ

ಬೀಸಿ ಬಂದು ಕೋಶಪೊರೆವ
ಗಾಳಿ ನಿನ್ನ ಮರೆಯೆನೂ
ರಾಶಿ ಅನ್ನ ಬೇಯಿಸುವೊಲು
ಬೆಂಕಿ ನಿನ್ನ ಕರೆವೆನು

ದೋಷಗಳನು ನೀಗಿ ಹೊರಗೆ
ಒಳಗೆ ಇರುವ ಜಲವನೂ
ಆಸರಿಗೆ ಕುಡಿಯುವಾಗ
ಬಾಗುತಾ ವಂದಿಸುವೆನು

ಮಲಿನವಾಗೆ ಮತ್ತೆ ಶುದ್ಧ
ಕಲಿ ಕಲ್ಮಷ ತೊಳೆವೊಲು
ಹುಲುಮಾನವ ಜಾತಿ ಪೆದ್ದ
ಒಲಿದ ನಿಮ್ಮ ಕಾಣದು !

ನಿಮ್ಮೈವರ ಘನಕಾರ್ಯವು
ಹೆಮ್ಮೆಯ ತರುವಂಥದು
ನಮ್ಮ ಸುತ್ತ ನೀವಿರದಿರೆ
ಎಮ್ಮ ಪಾಡದೆಂಥದು ?

Tuesday, February 22, 2011

ಧರ್ಮ ಸಂಕಟ !


ಧರ್ಮ ಸಂಕಟ !


’ಅಹಿಂಸಾ ಪರಮೋಧರ್ಮ’
ಎಂದು ಪ್ರವಚಿಸುತ್ತಿರುವಾಗ
ಎದುರಿನ ಬಯಲಿನಲ್ಲಿ ಮೇಯುತ್ತಿರುವ
ಆಕಳಿನ ಮೈಮೇಲೆ ಕುಳಿತ
ಕಾಗೆ ಉಣ್ಣಿಯನ್ನು ಕುಕ್ಕುತ್ತಾ
ಆ ನೆಪದಲ್ಲಿ ಆಕಳ ರಕ್ತದ
ರುಚಿನೋಡುತ್ತಿತ್ತು
ಆದರೂ ಸುಮ್ಮನಿದ್ದೆ

ಭಾಷಣ ಬಿಗಿಯುತ್ತಿದ್ದಾಗಲೇ
ಗುಂಯ್ಯನೇ ಹಾರಿಬಂದ ಮೂರು ಸೊಳ್ಳೆಗಳು
ಕಾಲಿಗೆ ಕಚ್ಚ ಹತ್ತಿದ್ದವು
ಅದೇ ರಾತ್ರಿ ಪ್ರವಾಸಿ ಹೋಟೆಲಿನ
ಕೊಠಡಿಯಲ್ಲಿ ಮಲಗಿದ್ದಾಗ
ತಿಗಣೆಗಳು ಕಚ್ಚತೊಡಗಿದವು

ಮನೆಯಲ್ಲಿ ಎಲ್ಲೆಲ್ಲೂ
ಕಾಲಿಗೆ ಅಡರುವ ಜಿರಲೆಗಳ
ಹಿಕ್ಕೆಯ ಅಸಹ್ಯ ವಾಸನೆ
ನೊಣಗಳ ಹೂಂಕಾರದ ಮುತ್ತಿಗೆ
ಇಲಿಗಳ ಅಹರ್ನಿಶಿ ದರೋಡೆ !
ಜೋಳಿಗೆ ಹಾಕಿ ಹೊರಟ ನನ್ನ
ಬೀದಿನಾಯಿಗಳು ಅಟ್ಟಿಸಿಕೊಂಡು ಬಂದವು

ಹೊಡೆದರೆ ನನ್ನಿಂದ ಅವುಗಳಿಗೆ ಹಿಂಸೆ
ಹೊಡೆಯದೇ ಇದ್ದರೆ ಅವುಗಳಿಂದ
ತಾಳಲಾರದ ಹಿಂಸೆ !
ಬಡಿದರೆ ಅವು ಸಾಯುತ್ತವೆ
ಬಡಿಯದಿದ್ದರೆ ನನ್ನ ಜೀವಹಿಂಡುತ್ತವೆ

ಆಗ ಈ ಬುದ್ಧನಿಗೆ
ಅಲ್ಲಿ ಜ್ಞಾನೋದಯವಾಯಿತು !
ಧರ್ಮಸಂಕಟವೆಂದರೆ ಇಂಥದ್ದೇ ಎಂಬುದು
ಎಷ್ಟು ಸರಳವಾಗಿದೆಯಲ್ಲವೇ ?

Monday, February 21, 2011

ಆಸಕ್ತಿ ಮತ್ತು ಶ್ರದ್ಧೆ



ಆಸಕ್ತಿ ಮತ್ತು ಶ್ರದ್ಧೆ

ಜಗತ್ತಿನಲ್ಲಿ ಯಾರೂ ಕುಳಿತು ಉಣ್ಣುವಂತಿಲ್ಲ, ಅವರವರ ಅನ್ನಕ್ಕಾಗಿ ಅವರವರು ದುಡಿಯಲೇಬೇಕು. ದುಡಿಯುವ ರೀತಿಯಲ್ಲಿ ಕೆಲವು ಬದಲಾವಣೆಗಳಿರಬಹುದು. ಮಾಡುವ ವೃತ್ತಿ ಬೇರೇ ಇರಬಹುದು. ಆದರೆ ಪ್ರಾಮಾಣಿಕ ದುಡಿತವೇ ಒಳ್ಳೆಯ ಜೀವನಕ್ಕೆ ಮಾರ್ಗ. ಇಂದಿನ ದಿನಮಾನದಲ್ಲಿ ಎಳೆಯ ವಯಸ್ಸಿಗರಿಗೆ ಕೆಲಸಗಳಲ್ಲಿ ಆಸಕ್ತಿಯಿಲ್ಲ. ಹೇಗಾದರೂ ಆಗಲಿ ಆದಷ್ಟೂ ಜಾಸ್ತಿ ಗಳಿಸಬೇಕೆಂಬುದೇ ಅವರ ಉದ್ದೇಶವಾಗಿದೆ. ಹಳ್ಳಿಗಳಲ್ಲಿ ತೋಟ-ತುಡಿಕೆ ಹೊಲಗದ್ದೆಗಳಲ್ಲಿ ಕೆಲಸಮಾಡುವ ವೃತ್ತಿ ಯಾರಿಗೂ ಬೇಡವಾಗಿದೆ. ಒಂದು ಕಾಲದಲ್ಲಿ ಸರ್ವಜ್ಞ ಹೇಳಿದ ’ಕೋಟಿ ವಿದ್ಯೆಗಳಲ್ಲಿ ಮೇಟಿವಿದ್ಯೆಯೇ ಮೇಲು’ ಎನ್ನುವ ಮಾತನ್ನು ಇಂದಿನ ಯುವಜನಾಂಗ ಅಲ್ಲಗಳೆಯುತ್ತಿದೆ. ಆದರೆ ಮೇಟಿ ವಿದ್ಯೆಯೇ ಎಲ್ಲರಿಗೂ ಮೂಲ ಜೀವನಾಧಾರವೆಂಬ ಸತ್ಯ ಹಲವರು ಮರೆತಂತಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಟ್ಟ ರಾಜಕಾರಣಿಗಳ ಹಣಮಾಡುವ ಕಸರತ್ತನ್ನು ಮಾಧ್ಯಮಗಳಲ್ಲಿ ಕಂಡು ಹಳ್ಳಿಯಲ್ಲೂ ಜನಜೀವನದಲ್ಲಿ ಅದರ ಗಾಳಿ ಬೀಸಿದೆ. ಪರರಿಗೆ ಏನಾದರೂ ಆಗಲಿ ತನ್ನ ಹುಂಡಿಗೆ ಆದಷ್ಟೂ ಜಾಸ್ತಿ ಹಣ ತುಂಬಲಿ ಎಂಬುದು ಜನರೆಲ್ಲರ ಅನಿಸಿಕೆಯಾಗುತ್ತಿದೆ. ಕಾಲಮಾನದ ಬಗ್ಗೆ ಹೇಳುವಾಗ ಇತಿಹಾಸದಲ್ಲಿ ನಡೆದ ಸತ್ಯವನ್ನು ಮರೆಯಲಾಗುವುದಿಲ್ಲವಲ್ಲ...ಹೀಗಾಗಿ ಹೇಳುತ್ತಿದ್ದೇನೆ : ಹಿಂದಿನ ದಿನಗಳಲ್ಲಿ ಇರುವ ಮಾನವೀಯ ಮೌಲ್ಯಗಳಿಗೆ ಇಂದು ಪುರಸ್ಕಾರವಿಲ್ಲ. ದುಡ್ಡೇ ಎಲ್ಲದಕ್ಕೂ ಮೌಲ್ಯತರುವ ಏಕೈಕ ಕಾರಣವಾಗಿದೆ! ಹಣ ಎಷ್ಟಿಲ್ಲದಿದ್ದರೂ ಸಾಲದು ಎಂಬಂತಹ ವಾತಾವರಣವೂ ಸಮಾಜದಲ್ಲಿ ಸೃಷ್ಟಿಯಾಗಿಬಿಟ್ಟಿದೆ. ಮಾನವರೆಲ್ಲ ಕೇವಲ ಜೀವವಿರುವ ಬೊಂಬೆಗಳಾಗಿದ್ದಾರೆಯೇ ವಿನಃ ಭಾವನಾಶೂನ್ಯರಾಗಿದ್ದಾರೆ. ಅಪ್ಪ ಮಗನನ್ನೂ ಮಗ ಅಪ್ಪನನ್ನೂ ಧನಕನಕ ಆಸ್ತಿಗಾಗಿ ಬಡಿದು ತಿನ್ನುವ ಕಾಲ ಬಂದುಬಿಟ್ಟಿದೆ ಎಂದಮೇಲೆ ಮೂರನೆಯ ವ್ಯಕ್ತಿಗಳ ಸ್ಥಿತಿ ನಿಮಗೇ ಅರ್ಥವಾಗುತ್ತದೆ. ಹಣವಿದ್ದರೆ ಮಾತ್ರ ಮುಖದ ಮುಂದೆ ಗೌರವ ಸಿಗುತ್ತದೆ, ಇನ್ನು ಕೆಲವೊಮ್ಮೆ ತಮಗೆ ಏನಾದರೂ ತೊಂದರೆಯಾಗದಿರಲಿ ಎನ್ನುವ ಅನಿಸಿಕೆಯಿಂದ ರಾಜಕೀಯದವರನ್ನು ಸುಮ್ಮನೇ ಇನ್ಯಾರದೋ ಎದುರಿಗೆ ಹೊಗಳುವ ಪರಿಪಾಟವಿದೆ. ಆದರೆ ನಿಜಕ್ಕೂ ವ್ಯಕ್ತಿ ವ್ಯಕ್ತಿಗಳ ನಡುವೆ ಗೌರವದ ನಡವಳಿಕೆಗಳು, ಸಂಸ್ಕಾರಭರಿತ ಸಂಪರ್ಕಗಳು ಕ್ಷೀಣಿಸುತ್ತಿವೆ. ’ಮುಖ ನೋಡಿ ಮಣೆಹಾಕು’ ಎನ್ನುವುದನ್ನು ಸ್ವಲ್ಪ ತಿರುಚಿ ’ಹಣನೋಡಿ ಮಣೆಹಾಕು’ ಎಂದೆನ್ನಬೇಕಾಗಿದೆ. ಹಣ ಜಾಸ್ತಿ ಇದ್ದಷ್ಟೂ ಎಲ್ಲಾ ಕ್ರತ್ರಿಮ ಗೌರವಗಳೂ ಲಭ್ಯ, ಹಣವಿಲ್ಲದಿದ್ದರೆ ಯಾರೂ ಮೂಸನೋಡದ ಸ್ಥಿತಿ. ಹಣದ ಈ ಝಣತ್ಕಾರ ಜೋರಾಗಿಸಲು ಕಾರಣ ಕೆಟ್ಟ ರಾಜಕಾರಣದ ವಾತಾವರಣ. ’ಯಥಾ ರಾಜಾ ತಥಾ ಪ್ರಜಾ’! ಅಲ್ಲವೇ?

ಜಗತ್ತಿನಲ್ಲಿ ಯಾರಿಗೂ ಕೆಲಸವಿಲ್ಲಾ ಎಂಬುದಿಲ್ಲ. ಖಂಡಿತಾ ಕೆಲಸವಿದೆ. ಕೆಲಸವನ್ನು ಮಾಡುವ ಬುದ್ಧಿ ಮೊದಲಾಗಿ ಇರಬೇಕು. ಕೆಲಸವನ್ನು ನಾವೇ ಹುಡುಕಿಕೊಳ್ಳಬಹುದು. ಕೆಲಸವನ್ನು ಬೇರೆಯವರಲ್ಲಿ ಯಾಚಿಸುವುದಕ್ಕಿಂತಾ ನಮ್ಮ ಆರ್ಹತೆಗೆ ತಕ್ಕುದಾಗಿ ನಾವು ಮಾಡಬಲ್ಲ ಕೆಲಸಗಳಲ್ಲಿ ನಾವೇ ತೊಡಗಿಕೊಳ್ಳಬಹುದು. ಉದಾಹರಣೆಗೆ ಒಬ್ಬಾತ ಬಿ.ಕಾಮ್ ಮಾಡಿದ್ದರೆ ನೇರವಾಗಿ ಅಕೌಂಟೆಂಟ್ ಕೆಲಸವನ್ನು ಹುಡುಕುತ್ತಾ ಕೂರುವ ಬದಲು ಲೆಕ್ಕಪತ್ರ ಪರಿಶೋಧನೆಯಲ್ಲಿ ಪರಿಣತಿಗಾಗಿ ನುರಿತ ಲೆಕ್ಕಿಗರ ಮಾರ್ಗದರ್ಶನ ಕೆಲವುಕಾಲ ಪಡೆದು ಆಮೇಲೆ ತಾನೇ ಕೆಲಮಟ್ಟಿಗೆ ಖಾಸಗೀ ಕಂಪನಿಗಳ, ಚಿಕ್ಕಪುಟ್ಟ ವಹಿವಾಟುದಾರ ಲೆಕ್ಕಪುಸ್ತಕಗಳನ್ನು ಬರೆಯುವುದರಲ್ಲಿ ತೊಡಗಿಕೊಳ್ಳಬಹುದು. ಕೆಲವರಿಗೆ ಓದು ಕೇವಲ ಜ್ಞಾನಕ್ಕಾಗಿ ಮಾತ್ರ. ಅವರು ಓದಿದ್ದೇನೋ ಆಗಿದ್ದರೆ ಮಾಡುವ ವೃತ್ತಿ ಇನ್ನೇನೋ ಆಗುತ್ತದೆ. ಅದಕ್ಕೆ ಆಸಕ್ತಿ ಕಾರಣ.

ಎಲ್ಲರಿಗೂ ಎಲ್ಲವುದರಲ್ಲೂ ಆಸಕ್ತಿಯಿರುವುದಿಲ್ಲ. ನನಗೆ ಗೊತ್ತಿರುವ ವೈದ್ಯರು ಮೂವರನ್ನು ತೆಗೆದುಕೊಂಡರೆ ಒಬ್ಬರು ಆಂಗ್ಲ ಪದ್ಧತಿಯ ವೈದ್ಯವಿದ್ಯೆಯನ್ನು ಓದಿದವರು-ಆದರೆ ವೃತ್ತಿಯಲ್ಲಿ ’ಮೆಡಿಕಲ್ ಟ್ರಾನ್ಸ್‍ಕ್ರಿಪ್ಶನಿಷ್ಟ್’ ಆಗಿದ್ದಾರೆ. ಇನ್ನಿಬ್ಬರಲ್ಲಿ ಒಬ್ಬರು ಆಯುರ್ವೇದದ ಪದವಿ ಪಡೆದಿದ್ದರೂ ಆಂಗ್ಲಪದ್ಧತಿಯ ಆಸ್ಪತ್ರೆಗೆ ಯಜಮಾನರಾಗಿದ್ದಾರೆ. ಇನ್ನು ಮೂರನೆಯವರು ಆಯುರ್ವೇದದಲ್ಲಿ ವಿದ್ವತ್ತು ಮುಗಿಸಿ ತಮ್ಮದೇ ರಂಗದಲ್ಲಿ ತೊಡಗಿಕೊಂಡು ಚಿಕಿತ್ಸಾಲಯ ಆರಂಭಿಸಿ ಇದೀಗ ಬಹಳ ಹೆಸರುವಾಸಿಯಾಗಿದ್ದಾರೆ-ಬೆಳೆದಿದ್ದಾರೆ. ಇಲ್ಲಿ ಅವರವರ ಮನೋ ವಾಂಛೆಗೆ ತಕ್ಕಂತೇ ಅವರವರು ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದಾರೆ. ಓದಿದ ಮೆಕಾನಿಕಲ್ ಅಭಿಯಂತರರು ಬಹಳಜನ ತಂತ್ರಾಂಶ ಅಭಿಯಂತರರಾಗಿ ಕೆಲಸನಿರತರಾಗಿದ್ದಾರೆ. ಇಲೆಕ್ಟ್ರಿಕಲ್ ಅಭಿಯಂತರರೊಬ್ಬರು ’ಈವೆಂಟ್ ಮ್ಯಾನೇಜ್‍ಮೆಂಟ್’ ಕಂಪನಿಯನ್ನು ನಡೆಸುತ್ತಿದ್ದಾರೆ. ಹೀಗೇ ಓದಿಗೂ ಮಡುವ ವೃತ್ತಿಗೂ ಕೆಲವೊಮ್ಮೆ ತಾಳೆಹಾಕಲಾಗುವುದಿಲ್ಲ.

ವ್ಯಕ್ತಿಗೆ ಆತನ ಆಂತರ್ಯ ಇಷ್ಟಪಡುವಂತಹ ಯಾವುದೋ ಕೆಲಸ ಆತ ಹುಡುಕುತ್ತಿರುತ್ತಾನೆ. ಆದರೆ ಕೆಲವೊಮ್ಮೆ ಮನಸ್ಸು ಬೇಡಾ ಎನ್ನುವ ವೃತ್ತಿಯಲ್ಲೂ ತೊಡಗಿಕೊಂಡುಬಿಡುತ್ತಾನೆ. ಅಂತಹ ವ್ಯಕ್ತಿಯು ಜೀವನದಲ್ಲಿ ಉನ್ನತಿಯನ್ನು ಪಡೆಯಲು ಕಷ್ಟಸಾಧ್ಯವಾಗಬಹುದು. ಉನ್ನತಿಯನ್ನು ಕಾಣಲು ಉನ್ನತ ಗುರಿಯೊಂದೇ ಸಾಲದು; ಪೂರಕ ಮನೋಗತವೂ ಬೇಕು. ವಕೀಲನೊಬ್ಬ ತನ್ನ ಕಛೇರಿಯಲ್ಲಿ ನಿವೃತ್ತರಾದ ಕೆಲವು ವ್ಯಕ್ತಿಗಳನ್ನು ಬೆರೆಳಚ್ಚಿಸಲು ನಿಯಮಿಸಿಕೊಂಡಿದ್ದ. ಗಣಕಯಂತ್ರ ಬಂದಾದಿನಗಳಲ್ಲಿ ತಕ್ಷಣ ಅವರಿಗೆಲ್ಲಾ ಗಣಕಯಂತ್ರದಲ್ಲಿ ಬೆರಳಚ್ಚಿಸುವುದನ್ನು ಕಲಿಯಹೇಳಿದ. ಆದರೆ ಆ ನಿವೃತ್ತ ಗುಮಾಸ್ತರುಗಳ ಅಂಬೋಣ ಹೀಗಿತ್ತು " ೩೫ ವರ್ಷಗಳಿಂದ ಮಾಮೂಲೀ ಟೈಪರೈಟರ್ ನಲ್ಲಿ ಕೆಲ್ಸಾ ಮಾಡಿದೀವಿ ಸಾರ್...ನಮ್ಗೆ ಇವೆಲ್ಲಾ ಯಾಕೆ ಬೇಕು ಹೇಳಿ....ಏನೋ ಸಾರು ಹೇಳ್ತಾರೆ ನಾವೂ ಕಲೀಬೇಕಾಗಿದೆ. " ಆ ಜನರಿಗೆ ಕಲಿಸಲು ನಿಂತ ವ್ಯಕ್ತಿ ಸೋತನೇ ಹೊರತು ಅವರು ಸರಿಯಾಗಿ ಕಲಿಯಲಿಲ್ಲ. ಅದೇ ಕಿರ್ಲೋಸ್ಕರ್ ಕಂಪನಿಯ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ೭೭ ವರ್ಷ ತುಂಬಿದ ಹಿರಿಯರೊಬ್ಬರು ಗಣಕಯಂತ್ರವನ್ನು ಸ್ವಂತದ ಬಳಕೆಗಾಗಿ ತರಗತಿಗೆ ಬಂದು ಕಲಿತಿದ್ದು ನನ್ನ ನೆನಪಿನಲ್ಲಿದೆ, ಅವರ ಚಿತ್ರಗಳೂ ಇವೆ--ಇದು ನಿಜವಾದ ಆಸಕ್ತಿ.

ಎಲ್ಲಿ ಆಸಕ್ತಿಯಿದೆಯೋ ಅಲ್ಲಿ ಕೆಲಸ ಸಲೀಸಾಗಿ, ಚೆನ್ನಾಗಿ ನಡೆಯುತ್ತದೆ.ಆಸಕ್ತಿ ರಹಿತ ಕೆಲಸವಾದರೆ ಕೆಲಸಮಾಡುವಾಗಲೇ ನಿದ್ದೆಯೂ ಬರಬಹುದು, ಆಕಳಿಕೆಯೂ ಬರಬಹುದು, ಎದ್ದು ಓಡುವ ಮನಸ್ಸೂ ಬರಬಹುದು. ಆದರೆ ಉದರಂಭರಣೆಗೆ ಬೇಕಲ್ಲಾ ಎಂದುಕೊಂಡು ಸಿಕ್ಕ ಆ ವೃತ್ತಿಯನ್ನು ಹೇಗೋ ಒಟ್ಟಿನಲ್ಲಿ ಮಾಡುತ್ತಾ ಕಾಲಹಾಕುವುದು ಒಂದು ವರ್ಗ. ಅಲ್ಲಿ ಎಲ್ಲವೂ ಯಾಂತ್ರಿಕವಾಗಿರುತ್ತದೆ! ಯಾವುದೂ ಇಷ್ಟವಾಗುವುದಿಲ್ಲ. ಕೆಲಸದಲ್ಲಿ ಆಸಕ್ತಿಯಿದ್ದರೆ ತಂತಾನೇ ಶ್ರದ್ಧೆಯೂ ಹುಟ್ಟಿಕೊಳ್ಳುತ್ತದೆ. ಶ್ರದ್ಧೆ ಎಂದರೆ ಇನ್ವಾಲ್ವ್‍ಮೆಂಟ್ ಹೌದಲ್ಲ? ಲೋಟದಲ್ಲಿ ನೀರು ಕೊಡುವ ಹೋಟೆಲ್ ಹುಡುಗ ಲೋಟಕ್ಕೆ ಅಂಟಿರುವ ಕೊಳೆಯನ್ನು ಗ್ರಹಿಸದೇ ಕೊಡುವುದು ಅಶ್ರದ್ಧೆ, ಅದನ್ನು ಗ್ರಹಿಸಿ ಸ್ವಚ್ಛವಾಗುಳ್ಳ ಲೋಟದಲ್ಲಿ ಕೊಡುವುದು ಶ್ರದ್ಧೆ. ಕೆಲಸವೊಂದೇ; ಮಾಡುವಲ್ಲಿ ಕಾಳಜಿ ಬೇರೆ. ಅಪ್ಪ-ಅಮ್ಮನನ್ನು ಹುಟ್ಟಿಸಿದವರು ಹೇಗೋ ಸಾಕಬೇಕಲ್ಲಾ ಎಂದುಕೊಳ್ಳುತ್ತಾ ನೋಡಿಕೊಳ್ಳುವುದಕ್ಕೂ ತಂದೆ-ತಾಯಿ ನಮ್ಮ ದೇವರೆಂದು ತಿಳಿದು ಮುಪ್ಪಿನಲ್ಲಿ ಅವರನ್ನು ಪಾಲನೆಮಾಡುವುದಕ್ಕೂ ಅಂತರವಿದೆಯಲ್ಲ? ಇದು ನಮ್ಮ ಶ್ರದ್ಧೆಯನ್ನು ತೋರಿಸುತ್ತದೆ. ಶ್ರದ್ಧೆ ಭಕ್ತಿಯ ಇನ್ನೊಂದು ರೂಪಕೂಡ ಹೌದು. ಆದರೆ ಇದು ದೇವರಮೇಲಿನ ಭಕ್ತಿಯಲ್ಲಿ; ಮಾಡುವ ಕೆಲಸದಲ್ಲೇ ದೇವರನ್ನು ಕಾಣುವ ಭಕ್ತಿ!

ಸಮಾಜದಲ್ಲಿ ಎಲ್ಲರಿಗೆ ಮೇಲಾಗಿ ಬೆಳೆಯುವ ಹುಡುಗರಿಗೆ ಕೆಲಸದಲ್ಲಿ ಆಸಕ್ತಿ ಮತ್ತು ಶ್ರದ್ಧೆ ಬೇಕು. ಮಾಡುವ ವೃತ್ತಿಯಲ್ಲಿ ಇವೆರಡೂ ಇದ್ದಾಗ ಆ ಮಾರ್ಗವಾಗಿ ಪ್ರತಿಫಲ ದೊರೆತೇ ದೊರೆಯುತ್ತದೆ. ಹಾಗಂತ ಗುಡ್ಡಕ್ಕೆ ಮಣ್ಣುಹೊರುವ ಕೆಲಸವನ್ನು ಶ್ರದ್ಧೆಯ ಕೆಲಸವಾಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಕೆಲಸವನ್ನು ಆಯ್ದುಕೊಳ್ಳುವಾಗ ಹಲವಾರು ಪರಿಮಿತಿಗಳನ್ನು ಅವಲೋಕಿಸಬೇಕಾಗುತ್ತದೆ. ಮರುಭೂಮಿಯ ಬರದ ನಾಡಿನಲ್ಲಿ ಬಾವಿ ತೆಗೆದರೆ ನೀರು ಸಿಗುವುದು ದುರ್ಲಭ ಎಂಬುದು ಹೊರನೋಟಕ್ಕೆ ತಿಳಿದುಬರುವ ವಿಷಯ. ಅನುಭವಿಕರ ಮಾರ್ಗದರ್ಶನ ಪಡೆದು ಆಸಕ್ತಿತಳೆದು ಹಿಡಿಯಬೇಕಾದ ವೃತ್ತಿಗಳ ಪಟ್ಟಿಯಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕು. ಬಾವಿತೆಗೆಯುವವ ಮೂರಡಿ ತೆಗೆದು ನೀರು ಬರಲಿಲ್ಲ ಎಂದು ಬಿಡುವುದಿಲ್ಲ ಹೇಗೋ ಹಾಗೇ ಆಯ್ಕೆಮಾಡಿಕೊಂಡ ವೃತ್ತಿಯಲ್ಲಿ ತಾದಾತ್ಮ್ಯತೆಯಿಂದ ತೊಡಗಿಕೊಂಡು ಸಹನಶೀಲರಾಗಿ ಕೆಲಕಾಲ ಮುನ್ನಡೆಯಬೇಕು. ಹಾಗೊಮ್ಮೆ ಮಾಡಿದ ವೃತ್ತಿಯಲ್ಲಿ ತಕ್ಕ ಪ್ರತಿಫಲ ಕಾಣಿಸದೇ ಹೋದರೆ ಆಗ ಮಾಡಿದ ವೃತ್ತಿಯ ದೋಷಗಳತ್ತ ಕಣ್ಣುಹಾಯಿಸಬೇಕು.

ವಾಡಿಕೆಯಲ್ಲೊಂದು ಗಾದೆಯಿದೆ ’ಎಣ್ಣೆಬರುತ್ತದೆ ಎನ್ನುವಾಗ ಗಾಣಮುರಿಯಿತು’ ಎಂದು ಈ ರೀತಿ ಸೃಷ್ಟಿಸಹಜ ವೈಪರೀತ್ಯಗಳಿಂದ ಅನುಭವಿಸಬೇಕಾಗಿ ಬರಬಹುದಾದ ಕೆಲವು ಪರಿಣಾಮಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳಬೇಕಾಗುತ್ತದೆ. ಗಾಣವನ್ನು ನಾವು ಮೊದಲೇ ಸುಸ್ಥಿತಿಯಲ್ಲಿಟ್ಟುಕೊಂಡಿದ್ದರೆ ಗಾಣ ಮುರಿಯುತ್ತಿರಲಿಲ್ಲವೇನೋ ಅಥವಾ ಮುರಿದುಹೋಗಬಹುದಾದ ಗಾಣದ ಬದಲು ಬೇರೇ ಗಾಣವನ್ನು ಬಳಸಬಹುದಿತ್ತೇನೋ ಎಂಬುದನ್ನು ನಾವು ಲೆಕ್ಕಿಸಬೇಕಾಗುತ್ತದೆ.

ಒಟ್ಟಿನಲ್ಲಿ ಸೂಕ್ತ ಮುಂಧೋರಣೆ, ವೃತ್ತಿ ತಾದಾತ್ಮ್ಯತೆ ಮತ್ತು ತಾಳ್ಮೆ ಈ ಮೂರು ಅಂಶಗಳಿಂದ ಪ್ರೇರಿತರಾಗಿ ಆಸಕ್ತಿ ಮತ್ತು ಶ್ರದ್ಧೆಯನ್ನು ವಹಿಸಿ ಕೆಲಸಮಾಡಿದರೆ ವ್ಯಕ್ತಿ ಗೆದ್ದೇಗೆಲ್ಲುತ್ತಾನೆ. ಆ ಗೆಲುವು ಎಲ್ಲರದಾಗಲಿ ಎಂದು ಹಾರೈಸೋಣ.

Friday, February 18, 2011

ಹೊತ್ತಿನ ಮಹತ್ವ


ಹೊತ್ತಿನ ಮಹತ್ವ

ಹೆತ್ತ ತಾಯಿ-ತಂದೆ ಹೊತ್ತ ಇಳೆಯನ್ನು
ಎತ್ತರಕೆ ಬೆಳೆಯಲುಪಕರಿಸಿದ ಗುರುಗಳನು
ಕತ್ತು ಬಾಗಿಸಿ ನಮಿಸು ಕಷ್ಟವೇನೇ ಇರಲಿ
ಮತ್ತೆ ಕರ್ತವ್ಯಮೆರೆ | ಜಗದಮಿತ್ರ

ಹೊತ್ತು ಮುತ್ತಿನ ಥರದ ಮೌಲ್ಯವುಳ್ಳದ್ದಿಹುದು
ತೆತ್ತು ಕಲಿತಂತಲ್ಲ ಮತ್ತೆ ಅದುಬರದು
ಬಿತ್ತ ಬೀಜವು ಬೆಳೆದು ಗಿಡವಾಗಿ ಮರವಾಗಿ
ಮತ್ತುದುರಿ ಬೀಳುವುದು | ಜಗದಮಿತ್ರ

ತುತ್ತ ತುದಿಯೇರಿ ನಿಂತಿಹೆನೆಂದು ಹಮ್ಮಿನಲಿ
ಸೊತ್ತು ವೈಭವ ನೆನೆದು ಮೆರೆಯಲದು ತರವೇ ?
ಹೊತ್ತೇ ಕುತ್ತುಗಳ ತಂದಿಡುತ ದೂಡ್ಕೆಡಹೆ

ತುತ್ತಿಗೂ ಕಷ್ಟವೈ | ಜಗದಮಿತ್ರ

ಹೊತ್ತಿನಲಿ ಕಾರ್ಯವನು ನಿಗದಿಯಲಿ ಮುಗಿಪರವಿ
ಹತ್ತಿ ಮೇಲೇರಿ ಕೆಳಗಿಳಿದು ತೋರುವನು
ಅತ್ತರೂ ಕರೆದರೂ ಬರದು ಕಳೆದಿಹ ಕಾಲ
ಮತ್ತೇಕೆ ತಡವಿನ್ನು ? ಜಗದಮಿತ್ರ


ಅತ್ತ ಮುಪ್ಪಿನಲೊಮ್ಮೆ ಮಾಡಿದಕೆ ಕಳವಳಿಸೆ
ಸುತ್ತ ಯಾರೂ ಬರರು ಬಲು ಕಠಿಣ ಸಹಿಸೆ !
ಬೆತ್ತದಾ ಹೊಡೆತವೂ ಅಷ್ಟು ನೋವಿನದಲ್ಲ
ಕತ್ತೆ ನೀನಾಗಪ್ಪೆ | ಜಗದಮಿತ್ರ

ಕತ್ತೂರಿ ಪರಿಮಳವು ಕತ್ತೆಗರಿವಾಗುವುದೇ?
ಮತ್ತದೇ ಹೊಲಸ್ಕಾಣೆ ನಗುವುದ್ಹಲ್ಕಿರಿದು
ಎತ್ತಣಿಂದೆತ್ತಣಕೂ ಸಮಯದರಿವಿನ ಬಗ್ಗೆ
ಎತ್ತಿ ಅನುಸರಿಸದನು | ಜಗದಮಿತ್ರ

ಬತ್ತಿದಾ ತೊರೆಗಳಲಿ ನೀರು ಉಕ್ಕಲೂಬಹುದು
ಕೊತ್ತಳದ ಕೋಟೆಯಲಿ ರಾಜ ದರ್ಬಾರು
ಎತ್ತರದ ಗೋಪುರಕೆ ಹತ್ತು ಸವಾಲುಗಳು
ಹೊತ್ತರಿದು ಮುನ್ನಡೆಯೋ | ಜಗದಮಿತ್ರ

Wednesday, February 16, 2011

ದಿನಕರನ್ ಟ್ರಾನ್ಸ್‍ಪೋರ್ಟ್!

[ಅಜ್ಞಾತ ಚಿತ್ರಕಲಾವಿದನಿಗೆ ನಮಸ್ಕಾರ ]

ದಿನಕರನ್ ಟ್ರಾನ್ಸ್‍ಪೋರ್ಟ್!

ತೀರಾ ಹಗುರವಾಗಿ ಮಾತನಾಡಬೇಡಿ. ನಾವು ಅಷ್ಟೇನೂ ಹಗುರವಲ್ಲ. ನಮಗೂ ಸಾಕಷ್ಟು ಸ್ವಾಭಿಮಾನವಿದೆ. ತುಸು ಹೆಚ್ಚಾಗಿ ನಾವೂ ಕಮ್ಮಿಯೇನಲ್ಲ ಎನ್ನಲು ಕನ್ನಡನಾಡಿನಲ್ಲಿ ಅದೂ ಬೆಂದಕಾಳೂರೆಂಬ ಬೆಂಗಳೂರಿನಲ್ಲಿ ನಾವು ನೆಲೆನಿಂತು ಒಂದು ಲೆವಲ್ ಮ್ಯಾಂಟೇನ್ ಮಾಡಿಕೊಂಡಿದ್ದೇವೆ. ಉಟ್ಟಬಟ್ಟೆಯೂ ಚಿಕ್ಕ ಚಡ್ಡಿಯೇ ಆಗಿದ್ದು ಅದೇ ಸ್ಥಿತಿಯಲ್ಲಿ ಇಲ್ಲಿಗೆ ಬಂದ ಈ ದಿನಕರನ್ ಏನಿಲ್ಲವೆಂದರೂ ಇವತ್ತಿಗೆ ನಾಲ್ಕು ಲಾರಿ ಮತ್ತು ೬ ಕಾರುಗಳ ಮಾಲೀಕನಾಗಿರುವುದೇ ಇದಕ್ಕೆ ಸಾಕ್ಷಿ!

" ನೀ ಎನ್ನ ಪೇಸರಂಗ ಎನಕೆ ತೆರಿಯಾದು " ಎದುರಿಗೆ ಕುಳಿತಿರುವವರ ಮಾತನ್ನು ಕೇಳಿ ಅವಾಕ್ಕಾದರು ದಿನಕರನ್. ದಿನಕರನ್ ಬೆಂಗಳೂರಿನ ಕೊಳೇಗೇರಿ ತಮಿಳಿಗರ ಸಂಘದ ಅಧ್ಯಕ್ಷರೂ ಹೌದು. ಅಲ್ಲೇ ಇರುವ ಜಾಗದಲ್ಲೇ ಸ್ವಲ್ಪ ಎತ್ತರದ ಗುಡಿಸಲು ಕಾಣಿಸುತ್ತದೆ ನೋಡಿ ಅದೇ ಅವರ ಮನೆ. ಬಹಳ ಸರಳ ಜೀವನ !ಹರುಕು ಮುರುಕು ಕನ್ನಡ ಕಲಿತಿದ್ದ ದಿನಕರನ್ ಪರವಾಗಿ ಅಂದು ಕೊಳೇಗೇರಿಯಲ್ಲಿ ನಿಂತು ಸಭೆಯಲ್ಲಿ ಮಾತನ್ನಾಡುತ್ತಿದ್ದುದು ದಿನಕರನ್ ಅವರ ಸ್ನೇಹಿತ ಮುನಿರಾಜು-ಕನ್ನಡದವರೇ. ತಮಿಳರೇ ತುಂಬಿರುವ ಸಭೆಯಲ್ಲಿ ಕನ್ನಡದಲ್ಲಿ ಭಾಷಣಮಾಡಲು ಎದೆಗಾರಿಕೆ ಬೇಕು ಸ್ವಾಮೀ. ಸ್ವಲ್ಪ ರೌಡೀ ಶೈಲಿಯಲ್ಲೇ ಬದುಕುತ್ತಿದ್ದ ಮುನಿರಾಜುಗೆ ಹುಂಬಧೈರ್ಯ ಸಹಜವಾಗೇ ಇದೆ; ಹಾಗಾಗಿ ಮುನಿರಾಜು ಕನ್ನಡದಲ್ಲೇ ಮಾತನಾಡುತ್ತಿದ್ದುದು. ನೀವು ತಿಪ್ಪಸಂದ್ರ, ನೀಲಸಂದ್ರ, ಕೃಷ್ಣರಾಜಪುರ ಇಲ್ಲೆಲ್ಲಾ ಸುತ್ತಾಡಿ ಒಂದೆರಡು ರಸ್ತೆಗಳ ಬಗ್ಗೆ ಕೇಳಿ-ನಿಮಗೆ ತಮಿಳಿನಲ್ಲೇ ಪೂರ್ಣ ಮಾಹಿತಿ ಸಿಗುತ್ತದೆಯೇ ಹೊರತು ಕನ್ನಡದಲ್ಲಲ್ಲ! ಮೈಚಿವುಟಿಕೊಂಡು ನಾವೆಲ್ಲಿದ್ದೇವೆ ಅಂತಲೋ ಸಚಿನ್ ತೆಂಡೂಲ್ಕರ್ ತಂಪು ಪಾನೀಯದ ಜಾಹೀರಾತೊಂದರಲ್ಲಿ " ಮೈ ಕಹಾಂ ಹೂಂ ..." ಎಂದು ಹಲ್ಲುಕಿರಿದ ಹಾಗೇ ಮಾಡುತ್ತಲೋ ನಾವೆಲ್ಲಿದ್ದೇವೆ ಎಂದು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಕನ್ನಡಿಗರಿಗಿದೆ.

ಜನಜೀವನ ವೈವಿಧ್ಯದಲ್ಲಿ ಹಲವು ಆಸೆಗಳನ್ನು ಜನಸಾಮಾನ್ಯರು ಅದುಮಿಡಲು ಸಾಧ್ಯವೇ ಇಲ್ಲ. ಅದರಲ್ಲೂ ಸುತ್ತಲೂ ಉನ್ನತಮಟ್ಟದ ಜೀವನವನ್ನು ಉಪಭೋಗಿಸುವ ಜನರನ್ನು ಕಾಣುತ್ತಾ ಬದುಕುವ ಕೊಳೆಗೇರಿಗರಿಗೆ ತಾವೂ ಹಲವು ಸೌಲಭ್ಯಗಳನ್ನು ಪಡೆಯುವಾಸೆ. ಆದರೆ ಅದು ಸಾಧ್ಯವೇ? ಅಂತಹ ಅದಮ್ಯ ಆಸೆಗಳನ್ನು ಸಿಗುವ ಚಿಕ್ಕಪುಟ್ಟ ಪರಿಕರಗಳಿಂದಲೇ ಪಡೆದುಕೊಳ್ಳುವುದು ಅವರಲ್ಲೇ ಕೆಲವರ ಇರಾದೆಯಾದರೆ ಇನ್ನು ಕೆಲವರು ಅವರಲ್ಲೂ ಅಂತಸ್ತುಗಳನ್ನು ತೋರಬಯಸುವವರು ! ಇಂತಹ ’ಅಂತಸ್ತಿನ ಕೊಳೆಗೇರಿ’ ವಾಸಿಗಳಿಗೆ ಅವರ ಅನುಕೂಲಕ್ಕಾಗಿ ಅವರಲ್ಲೇ ಒಬ್ಬ ಸ್ಥಾಪಿಸಿದ ನಾಮಫಲಕವಿಲ್ಲದ ಸಂಸ್ಥೆ ’ದಿನಕರನ್ ಟ್ರಾನ್ಸ್‍ಪೋರ್ಟ್’ !

ಮಾರುಕಟ್ಟೆಯಲ್ಲಿ ಸಿಗುವ ಹಳೆಯಬಟ್ಟೆಗಳಲ್ಲಿ ಚೆನ್ನಾಗಿಕಾಣುವ ಒಂದು ಸಫಾರಿ ದಿರಿಸನ್ನು ಖರೀದಿಸಿ ಹಾಕಿಕೊಂಡು ಕತ್ತಿನಲ್ಲಿ ಮಿಂಚುವ ರೋಲ್ಡ್ ಗೋಲ್ಡ್ ಸರ, ಹತ್ತೂ ಬೆರಳುಗಳಿಗೆ ಥಳಥಳ ಹೊಳೆಯುವ ಕಲ್ಲುಗಳುಳ್ಳ ಕ್ಷಮಿಸಿ ನವರತ್ನಗಳುಳ್ಳ [ ಆಭರಣದ ಅಂಗಡಿಗಳಲ್ಲಿ ನಾವು ಕೊಳ್ಳುವಾಗ ’ನವರತ್ನಗಳೆ’ಂದು ನಮಗೆ ಮೋಸದಿಂದ ಮಾರಲ್ಪಡುವ ವಸ್ತುಗಳು ವಿನ್ಯಾಸ ವೈಖರಿಗೆ ಸೋಲುವ ಹೆಂಗಸರ ಕೊಸರುವಿಕೆಯಿಂದ ಅಸಹಾಯರಾಗಿ ಅದೇ ಆಭರಣಗಳನ್ನು ಬದಲಾಯಿಸಿ ಹೊಸದು ಕೊಳ್ಳಲು ಹೋದಾಗ ಕಲ್ಲುಗಳೆಂದು ಅದೇ ಅಂಗಡಿಯವರಿಂದ ಗುರುತಿಸಲ್ಪಟ್ಟು ಬೆಲೆಯಿಲ್ಲದ ಹರಳುಗಳಾಗಿ ನಮ್ಮ ಹೃದಯದಲ್ಲಿ ರಕ್ತ ಹರಳುಗಟ್ಟಿಸುವುದು ಹಗಲು ದರೋಡೆಯ ಇನ್ನೊಂದು ರೂಪ ಎನ್ನೋಣವೇ ? ಮಿಕ್ಕೆಲ್ಲಕ್ಕೂ ಆಯ ಅಳತೆ ಕಲ್ಪಿಸಿರುವ ಸಮಾಜದಲ್ಲಿ ಆಭರಣಗಳಿಗೆ ಮತ್ತು ರೇಶ್ಮೆ ಬಟ್ಟೆಗಳಿಗೆ ಇನ್ನೂ ಸಮರ್ಪಕ ಮೌಲ್ಯಮಾಪನ ಬರದಿದ್ದುದು ನಮ್ಮ ಆಧುನಿಕ ವಿಜ್ಞಾನದ ಔನ್ನತ್ಯಕ್ಕೆ ಹಿಡಿದ ಕನ್ನಡಿ ಎನ್ನೋಣವೇ ? ಅಥವಾ ನಾವೇ ಬುದ್ದುಗಳು ಎಂದುಕೊಂಡು ಸುಮ್ಮನಾಗೋಣವೇ ?-ತೀರ್ಮಾನ ನಿಮಗೇ ಬಿಟ್ಟಿದ್ದು! ] ಉಂಗುರಗಳನ್ನು ತೊಟ್ಟ ಉದ್ದನೆಯ ಸಣಕಲು ಇದ್ದಿಲಬಣ್ಣದ ವ್ಯಕ್ತಿಯೇ ಶ್ರೀಮಾನ್ ದಿನಕರನ್. ಏಕಾಂಗಿಯಾಗಿ ಸಾಹುಕಾರನಾಗಿಯೂ ನೌಕರನಾಗಿಯೂ ’ಒನ್ ಮ್ಯಾನ್ ಆರ್ಮಿ’ ಎಂಬಂತೇ ಅವರು ಚಾಲಕನೂ ಮಾಲಕನೂ ಆಗಿ ಹಲವು ಗಾಡಿಗಳನ್ನು ನಡೆಸುತ್ತಾ ಇದ್ದಾರೆ. ಎಲ್ಲಕ್ಕೂ ಮೇಲ್ಗಡೆ ’ದಿನಕರನ್ ಟ್ರಾನ್ಸ್‍ಪೋರ್ಟ್’ ಎಂದೇ ಬರೆದಿರುತ್ತದೆ. ಅವರು ಬರೆಸಿರುವ ಅಕ್ಷರಗಳಲ್ಲಿ ಸ್ವಲ್ಪ ತಪ್ಪಿದ್ದರೆ ತಿದ್ದುಕೊಂಡು ಓದಿ.

ದಿನಕರನ್ ಟ್ರಾನ್ಸ್‍ಪೋರ್ಟ್ ಬಗ್ಗೆ ಬರೆಯಬೇಕಾಗಿ ಬಂದುದು ಏಕೆಗೊತ್ತೋ ಅವರನ್ನು ಆಡಿಕೊಳ್ಳುವ ಸಲುವಾಗಿ ಖಂಡಿತಾ ಅಲ್ಲ. ಅವರಲ್ಲಿರುವ ಗಾಡಿಗಳಿಗೆ ಒಂದಕ್ಕೂ ಸರಿಯಾದ ಬ್ರೇಕು, ಸಸ್ಪೆನ್ಶನ್ ವಗೈರೆ ಇಲ್ಲ. ಅಕಸ್ಮಾತ್ ರಸ್ತೆಯಲ್ಲಿ ಅವರು ಗಾಡಿತೆಗೆದುಕೊಂಡು ಹೊರಟರೆ ಅವರ ಹಿಂದೆ ಹಾಗೂ ಮುಂದೆ ಚಲಿಸುವ ಗಾಡಿಗಳವರು ಅವರವರ ಬ್ರೇಕುಗಳನ್ನು ಅತಿಯಾಗಿ ಆತುಕೊಂಡೇ ಇರಬೇಕಾದ ಅಪ್ರಮೇಯವಿದೆ. ಬರೇ ಗೇರಿನಲ್ಲೇ ನಿಯಂತ್ರಿಸಿ ನಿಲ್ಲಿಸುವ ಕಲೆ ದಿನಕರನ್ ಅವರಿಗೆ ಸಿದ್ಧಿಸಿದೆಯಾದರೂ ಒಂದೊಮ್ಮೆ ಗಾಡಿ ನಿಲ್ಲದೇ ಹೋದರೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ! ಬೇಸಿಗೆಯಲ್ಲಿ ಹಲವುಸಲ ಏಕಕಾಲಕ್ಕೆ ಒಂದು ಕೊಳೇಗೇರಿಯವರು ಇನ್ನೊಂದೆಡೆ ಸಂಬಂಧ ಕುದುರಿಸಲೋ ಅಥವಾ ಇನ್ನೇತಕ್ಕೋ ಹೋಗಬೇಕಾದಾಗ ಕೆಲವರು ಅವರನ್ನು ಕರೆದೇ ಕರೆಯುತ್ತಾರೆ. ಆಗ ಒಂದೇ ದಿನ ಒಂದೇ ಸಮಯಕ್ಕೆ ಹಲವು ಗಾಡಿಗಳನ್ನು ಚಲಾಯಿಸುವ ಪ್ರಮೇಯ ಬಂದರೆ ಆಗ ಚಾಲಕರಾಗಿ ಅವರ ಪರಿಚಯದ ಕೆಲವು ಸ್ಲಮ್ ಹುಡುಗರು ಅವರ ಗಾಡಿಗಳನ್ನು ಎತ್ತುಕೊಂಡು ಹೊರಡುವುದಿದೆ. ಅಂತಹ ಸನ್ನಿವೇಶಗಳಲ್ಲಿ ದೇವರಮೇಲೇ ಭಾರಹಾಕಿ ನಡೆಯಬೇಕಾದ ಪರಿಸ್ಥಿತಿ ದಾರಿಹೋಕರದು.

ಉಳಿದ ದಿನಗಳಲ್ಲಿ ನಗರಪಾಲಿಕೆಯ ಕಸ ವಿಲೇವಾರಿಗೂ ಅವರ ಗಾಡಿಗಳು ಹೋಗುತ್ತಿರುತ್ತವೆ. ಒಂದೇ ಹೆಡ್ ಲೈಟಿರುವ ಒಕ್ಕಣ್ಣಗಳು, ಚಕ್ರಗಳ ಅಲೈನಮೆಂಟು ಕಳೆದುಹೋಗಿ ನಾನಾ ರೀತಿಯಲ್ಲಿ ನರ್ತಿಸುತ್ತಾ ಓಡುವ ಲಾರಿ ಮತ್ತು ಕಾರುಗಳು, ಸವಕಳಿಯಾಗಿ ಇನ್ನೇನು ಒಡೆದು ಹೋಗಬಹುದಾದ ರೀತಿಯ ಟೈರುಗಳು, ರಾಚಿರುವ ರಾಡಿಗಳೇ ಬಣ್ಣಗಳಾಗಿ ’ಕಳೆಕಟ್ಟಿರುವ’ ವಾಹನಗಳು, ಬೆಂಕಿಬಿದ್ದಾಗ ಮೇಲೇಳುವ ಹೊಗೆಯಂತೇ ದುತ್ತನೇ ಹೊಗೆಯುಗುಳುವ ಗಾಡಿಗಳು, ಗೇರ್ ಬದಲಾಯಿಸಿದಾಗ ಕಿಟಾರನೆ ಕಿರುಚುವ ಗಾಡಿಗಳು ಹೀಗೇ ವೈವಿಧ್ಯಮಯ ಗಾಡಿಗಳನ್ನು ದಿನಕರನ್ ಹೊಂದಿದ್ದಾರೆ. ಕಾರುಗಳೆಲ್ಲಾ ಬಹುತೇಕ ಪ್ರೀಮಿಯರ್ ಪದ್ಮಿನಿ ಅಥವಾ ಪ್ರೀಮಿಯರ್ ೧೦೮ ಈ ಕಾರುಗಳು. ಒಂದುಕಾಲಕ್ಕೆ ರಾಜಕಾರಣಿಗಳ ಕನಸಿನ ಕಾರಾಗಿದ್ದ ಕಾಂಟೆಸ್ಸಾ ಕಾರೂ ಒಂದು ಇತ್ತೀಚೆಗೆ ಬಂದು ಸೇರಿದೆ! ಲಾರಿಗಳಲ್ಲಿ ಹಲವೆಲ್ಲಾ ಕಲ್ಲಂಗಡಿ ಹಣ್ಣಿನ ಮೂತಿಯವು! ಆ ಲಾರಿಗಳ ಬಾಡಿ ಬಿಲ್ಡರ‍್ ಗಳು ಯಾರೋ ಅವರಿಗೆ ಬಹುಮಾನ ಘೋಷಿಸಬೇಕು. ಹೀಗೇ ವೈವಿಧ್ಯಮಯ ಗಾಡಿಗಳನ್ನು ನಡೆಸುವ ದಿನಕರನ್ ಅವರು ಖಾಲಿ ಇರುವ ದಿನಗಳಲ್ಲಿ ಮಿಕ್ಕಿದ ಗಾಡಿಗಳನ್ನೆಲ್ಲಾ ಅವರ ಏರಿಯಾದ ಹತ್ತಿರ ರಸ್ತೆಗಳಲ್ಲೇ ನಿಲ್ಲಿಸಿ [ಕೆಲವು ಸದಾ ಅಲ್ಲೀ ಇಲ್ಲೀ ಪೂರ್ತಿ ಕೆಟ್ಟು ವಾರಗಟ್ಟಲೆ ನಿಂತೇ ಇರುತ್ತವೆ ಅನ್ನಿ]ಅವರ ಗಿರಾಕಿಗಳಿಗೆ ಬೇಕಾದ ಕಾರನ್ನು ತೆಗೆದುಕೊಂಡು ಹೊರಡುತ್ತಾರೆ. ಒಮ್ಮೆ ಈ ಗಾಡಿ ಚಲಾಯಿಸಿದರೆ ಇನ್ನೊಮ್ಮೆ ಆ ಗಾಡಿ ಹೀಗೇ ಗಿರಾಕಿಗಳ ತೃಪ್ತಿಯೇ ಅವರ ಧ್ಯೇಯ !

ಅವರ ಗಾಡಿಗಳಲ್ಲಿ ಓಡಾಡುವ ಮಂದಿಗೆ ಅದೇ ಪರಮಾನಂದ! ಅದು ಅವರಿಗೆ ಅತ್ಯಂತ ಹೆಮ್ಮೆಯ ಅಂತಸ್ತಿನ ವಿಷಯ! ಒಂದೊಮ್ಮೆ ಓಡಾಡುವಾಗ ಏನಾದರೂ ಆದರೂ ಜನ್ಮದಲ್ಲೇ ದುಡಿಯಲಾರದಷ್ಟನ್ನು ಸರಕಾರ ಪರಿಹಾರಧನವಾಗಿ ಕೊಡುತ್ತದೆ ಎಂಬ ಅಭಿಮತವೂ ಇರಬಹುದು. ಬೆಂಗಳೂರಿಗರಾದರೆ ನೀವು ದಿನಕರನ್ ಟ್ರಾನ್ಸ್‍ಪೋರ್ಟ್ ಗಾಡಿಗಳನ್ನು ನೋಡಿಯೇ ಇರುತ್ತೀರಿ. ಕೆಲವರಂತೂ ಕೇವಲ ವಾಸನಾಬಲದಿಂದಲೇ ಈ ಗಾಡಿಗಳನ್ನು ಪತ್ತೆಹಚ್ಚಬಲ್ಲರು! ಫಿಟ್‍ನೆಸ್ ಸರ್ಟಿಫಿಕೇಟ್ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಹಲವು ಗಾಡಿಗಳ ಪೈಕಿ ಇವೂ ಸೇರುತ್ತವೆ. ಯಶವಂತಪುರದ ಮಂಡಿದೊರೆಗಳ ಕಿರಾಣಿ ಸಾಮಾನು ಸಾಗಿಸುವ ಕೆಲವು ಲಾರಿಗಳು ವೈಖರಿಯಲ್ಲಿ ಈ ವಾಹನಗಳ ಸಂಬಂಧಿಗಳು. ಕೆಲವೊಮ್ಮೆ ಅದಲುಬದಲಾದರೂ ತಿಳಿಯದಷ್ಟು ಸಾಮ್ಯತೆ ಇದೆ. ಒಂದೇ ವ್ಯತ್ಯಾಸವೆಂದರೆ ದಿನಕರನ್ ಅವರ ಲಾರಿಗಳಿಗೆ ಕಸವಿಲೇವಾರಿಮಾಡುವಾಗ ಅಂಟಿದ ಕೊಳೆಯ ಚಿತ್ರಗಳು, ಬಗ್ಗಡದ ಕಲೆಗಳು ಮತ್ತದರ ಅಸಾಧ್ಯ ’ಘಮಲು’! ಬಿಟ್ಟರೆ ಮಿಕ್ಕುಳಿದ ಸ್ಥಿತಿ ಒಂದೇ.

ಇನ್ನು ಕೆಲವು ಮರಳು ಲಾರಿಗಳು. ಅವುಗಳಲ್ಲಿ ನಿನ್ನೆಯವರೆಗೆ ಕಿನ್ನರ್ [ಕ್ಷಮಿಸಿ ಅವರನ್ನೇ ಕೇಳಿದಾಗ ತಾನು ’ಕಿನ್ನರ್’ ಎನ್ನುತ್ತಿದ್ದರು ಅಷ್ಟೆಲ್ಲಾ ಕಲಿತವರು: ಕಿನ್ನರ್= ಕ್ಲೀನರ್]ಆಗಿದ್ದವರು ಇಂದು ಡೈವರ್ [ಅವರೇ ಹೇಳಿದ್ದು]ಆಗುತ್ತಾರೆ. ಅವರಲ್ಲಿ ಅನೇಕರಿಗೆ ಸರಿಯಾದ ಸೂಚನೆಗಳ ಅರಿವಿರುವುದಿಲ್ಲ. ಚಾಲನೆಮಾಡುವಾಗ ಒಂದು ಪೆಗ್ಗು ’ಪರಮಾತ್ಮ’ನನ್ನು ಒಳಗೆ ಬಿಟ್ಟುಕೊಂಡುಬಿಟ್ಟರೆ ಅವರಲ್ಲಿರುವ ಪರಮಾತ್ಮ ಆಡಿಸಿದ್ದೇ ಆಟ! ಯಶವಂತಪುರದಲ್ಲಿ ಇದೇ ರೀತಿಯ ಮರಳು ಲಾರಿಯೊಂದು ಆಟೋದಲ್ಲಿ ಪ್ರಯಾಣಿಸುತ್ತಿದ್ದ ಹುಡುಗನೋರ್ವನನ್ನು ಬಲಿತೆಗೆದುಕೊಂಡಿದ್ದು ನನಗೆ ಕಣ್ಣಿಗಿನ್ನೂ ಕಟ್ಟಿದಂತಿದೆ.ಅದು ನಡೆದು ಒಂದು ವರ್ಷ. ಹೀಗಾಗಿ ಆ ಡೈವರ್ ನಡೆಸಿದ ಘಟನೆ ವಾರ್ಷಿಕೋತ್ಸವದ ನೆನಪಿನಲ್ಲಿ ಇದನ್ನು ಬರೆಯುತ್ತಿದ್ದೇನೆ! ಒಮ್ಮೆ ಬಸ್ಸಿನಲ್ಲಿ ನೆಲಮಂಗಲ ಕಡೆಯಿಂದ ಬರುತ್ತಿದ್ದಾಗ ಬೆಳಗಿನ ಜಾವದಲ್ಲಿ ತುಂತುರು ಮಳೆ ಹನಿಯುತ್ತಿತ್ತು. ಒಂದು ಮರಳುಲಾರಿ ಮುಂದೆ ಬರುತ್ತಿದ್ದುದು ಮಾತ್ರ ಗೊತ್ತು. ಆಮೇಲೆ ನಮ್ಮ ಬಸ್ಸು ರಸ್ತೆಯ ಪಕ್ಕದ ಮರವನ್ನು ಮುದ್ದಿಸಿತ್ತು. ನಮ್ಮ ಡ್ರೈವರ್ ಹೆದರಿ ಓಡಿಹೋಗಿದ್ದ! ಆದರೆ ಬಸ್ಸಿನಲ್ಲಿ ಇರುವವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದವು. ಮರಳಲಾರಿ ಅಡ್ಡ ಬಂದುಬಿಟ್ಟಿತಂತೆ ಎಂದು ಯಾರೋ ಹೇಳಿದರು. ಸದ್ಯ ಬದುಕಿದೆಯಾ ಬಡಜೀವವೇ ಎನ್ನುತ್ತಾ ಕಾಲೆಳೆದುಕೊಂಡು ಮನೆಗೆ ಹೋದಮೇಲೆ ದೇವರಿಗೆ ತುಪ್ಪದ ದೀಪ ಹಚ್ಚಿದೆವು !

೧೯೯೮ ರ ವರೆಗೂ ಕಾರೆಂಬುದು ಒಂದು ವಿಶೇಷ ಆಸ್ತಿ-ಅಂತಸ್ತಿನ ಹೆಗ್ಗುರುತಾಗಿತ್ತು. ಆಮೇಲೆ ಬಂದ ತಂತ್ರಾಂಶ ಕಂಪನಿಗಳ ಉನ್ನತ ಸಂಬಳದಿಂದ ಸಾಮಾಜಿಕ ಕ್ರಾಂತಿಯುಂಟಾಗಿ ’ಗಂಡಾಗುಂಡಿ ಮಾಡಿಯಾದರೂ ಗಡಿಗೇ ತುಪ್ಪಾ ಕುಡೀಬೇಕು’ ಎನ್ನುವ ಹೇಳಿಕೆಯನ್ನೇ ಬೇರೇ ರೀತಿಯಲ್ಲಿ ಹೇಳುತ್ತಾ ವಿದೇಶೀ ಬ್ಯಾಂಕುಗಳು ಬಂದವು. ಎಲ್ಲದಕ್ಕೂ ಸಾಲ ನೀಡಲ್ಪಟ್ಟಿತ್ತು. ೧೯೮೦ರ ವೇಳೆಗೆ ಹೇಗೆ ಎಲ್ಲರಮನೆಯ ಛಾವಣಿಯಮೇಲೆ ಟಿವಿ ಆಂಟೆನಾ ಕಾಣಿಸಿದರೇ ಅದೊಂದು ಅಂತಸ್ತಿನ ಧ್ಯೋತಕವಾಗಿತ್ತೋ ಅದೇ ತೆರನಾಗಿ ೧೯೯೮ರಿಂದ ಸುಮಾರು ೨೦೦೦ನೇ ಇಸವಿಯ ವರೆಗೆ ಎಲ್ಲರ ಮನೆಯಮುಂದೂ ಒಂದೊಂದು ಕಾರು! ಕಾರುಬಾರು ಜೋರು. ಆಮೇಲೆ ೨೦೦೧ ರಲ್ಲಿ ಆದ ಜಾಗತಿಕ ಆರ್ಥಿಕ ಹಿಂಜರಿತ ಹಲವು ತಂತ್ರಾಂಶ ತಂತ್ರಜ್ಞರನ್ನು ಬೀದಿಯಲ್ಲಿ ನಿಲ್ಲುವಂತೇ ಮಾಡಿತು. ಅವರಿಗೆ ಕರೆದು ಕೊಟ್ಟು ಕಾರು-ಬಂಗಲೆ ಕೊಡಿಸಿದ್ದ ಬ್ಯಾಂಕುಗಳು ಬಾಕಿಹಣ ಪಾವತಿಯಾಗದಾದಾಗ ಕೊಟ್ಟಿದ್ದನ್ನೆಲ್ಲಾ ಕಿತ್ತುಕೊಂಡರು. ಈ ದಿನಗಳಲ್ಲಿ ವಾಹನಸಾಲ ಸರ್ವೇಸಾಮಾನ್ಯವಾಗಿಹೋಯಿತು. ಈಗ ಕಾರೆಂಬುದು ಅಂತಸ್ತಿನ ಪ್ರಶ್ನೆಯಲ್ಲ-ಅನುಕೂಲದ ಪ್ರಶ್ನೆಯಾಗಿದೆ.ಆದರೆ ಕೆಲವರಿಗೆ ಮಾತ್ರ ಅದು ಇನ್ನೂ ಅಂತಸ್ತಿನ ಹೆಗ್ಗುರುತೇ ಆಗುಳಿದಿದೆ. ಇಂತಹ ಹೆಗ್ಗುರುತಿಗಾಗಿ ೧೯೮೫ ರಲ್ಲಿ ಚಾಲ್ತಿಯಲ್ಲಿ ಕಣ್ಮಣಿಯಾಗಿದ್ದ ಪ್ರೀಮಿಯರ್ ಪದ್ಮಿನಿ ಕಾರುಗಳು ಇಂದೂ ಅವರಲ್ಲಿವೆ. ಅಪರೂಪಕ್ಕೊಮ್ಮೆ ರಸ್ತೆಗೆ ಇಳಿಯುವ ಅವುಗಳನ್ನು ತಿರುಗಿಸುವಾಗ, ಬ್ರೇಕ್ ಹಾಕುವಾಗ ಚಾಲಕನಾಗಿರುವ ಯಜಮಾನ ಅನುಭವಿಸುವ ಯಾತನೆ ಪಕ್ಕದ ಗಾಡಿಗಳಲ್ಲಿ ಕೂತಿರುವ ನಮಗೆ ನೋಡಸಿಗುತ್ತದೆ. ಆದರೂ ಅವರಿಗೆ ಅದೇ ಕಾರು ಬೇಕು! ಅವರ ಈ ರಥಯಾತ್ರೆ ಅಲ್ಲಲ್ಲಿ ಹಲವು ಸರ್ತಿ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತದೆ ಎಂಬುದನ್ನೂ ಅವರು ಅರಿತಂತಿಲ್ಲ, ಇದು ವಿಪರ್ಯಾಸ.

ನಮ್ಮ ಬಿಳೀ ಕಾಪರ್ ಬಾಟಮ್ ಸಾರಿ ಸಾರಿ ಖಾಕಿ ಬಾಟಮ್ ನವರು ಖರ್ಚಿಗೆ ಕಾಸುಬೇಕಾದಾಗೆಲ್ಲಾ ಸಿಗ್ನಾಲ್ ತಿರುವಿನಲ್ಲೋ ಪಕ್ಕದಲ್ಲೋ ನಿಂತು ಸಿಗ್ನಾಲ್ ಹಳದಿ ಇರುವಾಗ ದಾಟಿದವರನ್ನೂ ಹಿಡಿದು ಸಾವಿರದೆಂಟು ತರಲೆಮಾಡುತ್ತಾರೆ. ಆಮೇಲೆ ನೂರೋ ನೂರೈವತ್ತೋ ತೆತ್ತರೆ ಕೋಳೀಸಾರಿಗೋ ’ಪರಮಾತ್ಮ’ನ ಲೆಕ್ಕಕ್ಕೋ ಆಯ್ತು ಎಂದು ಬಿಟ್ಟುಬಿಡುತ್ತಾರೆ. ಅದೇ ಖಾಖೀ ಬಾಟಮ್ ನವರಿಗೆ ಇಂತಹ ’ರಥ’ಗಳು ಕಾಣಿಸುವುದೇ ಇಲ್ಲವೋ ಅಥವಾ ಇವುಗಳ ಹಿಂದೆಯೂ ಯಾವುದೇ ಮಾಫಿಯಾ ಇದೆಯೋ ತಿಳಿಯದಾಗಿದೆ. ಅಂತೂ ’ಸಿಂಗಾಪೂರ್’ ಆಗುತ್ತಿರುವ ಬೆಂಗಳೂರಿನಲ್ಲಿ ಎತ್ತಿನ ಗಾಡಿಗಳನ್ನಂತೂ ಮುಖ್ಯರಸ್ತೆಗಳಲ್ಲಿ ನಿಲ್ಲಿಸಿದರು, ಆದರೆ ಕಲ್ಲಂಗಡಿ ಮೂತಿಯ ರಥಗಳು ಮಾತ್ರ ಹರೆದಾಡುತ್ತಲೇ ಇವೆ. ಅವುಗಳ ಉಪಟಳ ಹೇಳತೀರದ್ದು. ಡೈವರು ದಾರಿ ಕೊಟ್ಟರೆ ನಾವು ಮುಂದೆ ಸಾಗಬೇಕು. ಒಪಕ್ಷ ದಾರಿ ಕೊಡಲಿಲ್ಲವೋ ಆ ರಥಗಳ ಹಿಂದೆ ನಾವು ಕಾಲಾಳುಗಳಂತೇ ತೆರಳಬೇಕು!

ಅಗೋ ನೋಡಿ ನಾನು ಹೇಳುತ್ತಿರುವಂತೇ ಬಂದೇ ಬಿಟ್ಟಿತು ’ದಿನಕರನ್ ಟ್ರಾನ್ಸ್‍ಪೋರ್ಟ್’ ಲಾರಿ. ರಬ್ಬರ್ ಹಾರ್ನ್ ಪೋಂ ಪೋಂ ಪೋಂ ಎನ್ನುವುದು ಸದ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲೂ ಈಗ ಕಾಣಿಸುತ್ತಿಲ್ಲ, ಆದರೆ ಈ ರಥಗಳಲ್ಲಿದೆ. ಯಾಕೆಂದರೆ ಮಿಕ್ಕಿದ ಹಾರ್ನ್ ಗಳಿಗೆ ಬ್ಯಾಟರಿ ಬಹಳ ಬೇಕಾಗುತ್ತದೆ ಇದಾದರೆ ಬ್ಯಾಟರಿ ಇರದಿದ್ದರೂ ಸೈ! ಬೆಂಗಳೂರಿನಲ್ಲಿ ವಿಹರಿಸುವ ಜನ ಒಮ್ಮೆಯಾದರೂ ’ದಿನಕರನ್ ಟ್ರಾನ್ಸ್‍ಪೋರ್ಟ್’ ಕಾರು ಹತ್ತಿ- ಜಸ್ಟ್ ಫಾರೇ ಚೇಂಜ್ ! ಜೈ ದಿನಕರನ್ !