ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, November 24, 2010

ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು


ದಿ| ಶ್ರೀ ಕೆರೆಮನೆ ಶಂಭು ಹೆಗಡೆಯವರ ಮರೆಯಲಾಗದ ಪಾತ್ರಗಳು

ಯಕ್ಷರಂಗದ ಕೆಲವು ಪಾತ್ರಗಳನ್ನು ಕೆಲವರು ಮಾತ್ರ ಸಮರ್ಥವಾಗಿ ನಿಭಾಯಿಸಬಲ್ಲರು. ಹೇಗೆಂದರೆ ಅವರು ಅಭಿನಯಿಸುವ ಪಾತ್ರ ನಿಜವಾಗಿಯೂ ಅದು ಪಾತ್ರವಲ್ಲ ಬದಲಾಗಿ ಅದೇ ವ್ಯಕ್ತಿ ನಮ್ಮ ಕಣ್ಣಮುಂದಿರುವಂತೆ ಅನಿಸುತ್ತದೆ. ಆ ಯಾ ವ್ಯಕ್ತಿಗಳು ಆ ಯಾ ಪಾತ್ರಗಳಿಗಾಗೇ ಹುಟ್ಟಿಬಂದಿದ್ದರೋ ಎಂಬ ಸಂದೇಹ ಕೂಡ ಬಾರದೇ ಇರುವುದಿಲ್ಲ. ಕನ್ನಡ ನೆಲದ ಅಷ್ಟೇ ಏಕೆ ಭಾರತದ ಸರ್ವ ಶ್ರೇಷ್ಠ ಕಲಾ ಪ್ರಾಕಾರಗಳಲ್ಲಿ ಯಕ್ಷಗಾನ ತನ್ನ ವಿಶಿಷ್ಟವಾದ ಛಾಪು ಒತ್ತಿದ್ದರೆ ಅದಕ್ಕೆಲ್ಲ ಈ ಮಹನೀಯರು ನಿರ್ವಹಿಸಿದ ಪಾತ್ರಗಳೂ ಕಾರಣ ಎಂದರೆ ತಪ್ಪಾಗಲಾರದೇನೋ. ಇವತ್ತು ಅಂತಹ ಒಂದೆರಡು ಸನ್ನಿವೇಶಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಅಪೇಕ್ಷಿಸಿ ಹೀಗೆ ಬಂದಿದ್ದೇನೆ.

ಕಣ್ಣೀರಿಳಿಸುವ ದೃಶ್ಯಗಳಿಗಿಂತಲೂ ಮೊದಲು ಶಶಾಂಕ್ ಎಂಬ ಈ ಬಾಲ ಪ್ರತಿಭೆಯನ್ನು ನೋಡಿ, ಇಷ್ಟು ಎಳವೆಯಲ್ಲೇ ಆ ಕುಣಿತ, ಹಾವ ಭಾವ:



ಪುಟಾಣಿಗೊಂದು ಚಪ್ಪಾಳೆ ತಟ್ಟಿ ಭಳಿರೇ ಬಾಲಕ || ದೀರ್ಘಾಯುಷ್ಮಾನ್ ಭವ || ಎಂದು ಹರಸಿ ಮುನ್ನಡೆಯುತ್ತಿದ್ದೇನೆ.

ಪೌರಾಣಿಕ ಕಥಾಭಾಗಗಳಲ್ಲಿ ಸತ್ಯವೇ ಮೂರ್ತಿವೆತ್ತ ರಾಜಾ ಸತ್ಯಹರಿಶ್ಚಂದ್ರ, ತನ್ನ ದೌರ್ಭಾಗ್ಯದಿಂದ ದೇಶಬ್ರಷ್ಟನಾದ ನಳ-ಬಾಹುಕ, ಮಹಾಭಾರತದ ದಾನಶೂರ ಕರ್ಣ, ರಾಮ ನಿರ್ಯಾಣದ ಶ್ರೀರಾಮ, ಪಾದುಕಾ ಪಟ್ಟಾಭಿಷೇಕದ ದಶರಥ.....ಹೀಗೇ ಈ ಕೆಲವು ಪಾತ್ರಗಳನ್ನು ದಿ| ಶ್ರೀ ಕೆರೆಮನೆ ಶಂಭುಹೆಗಡೆಯವರು ನಿರ್ವಹಿಸುತ್ತಿದ್ದ, ಪೋಷಿಸುತ್ತಿದ್ದ ರೀತಿಯೇ ಬೇರೆ. ಅಲ್ಲಿ ಅಭಿನಯಕ್ಕಿಂತ ಭಾವನೆಗೆ ಬಹು ಪ್ರಾಧಾನ್ಯತೆ. ಅಂತಹ ಭಾವನಾಪ್ರಧಾನ ಸಂಗತಿಗಳನ್ನು ಪ್ರೇಕ್ಷಕರೆಲ್ಲ ಕಣ್ಣೆವೆಯಿಕ್ಕದೇ ಮೈಯ್ಯೆಲ್ಲಾ ಕಿವಿಯಾಗಿ ಕಾದು ಕುಳಿತು ನೋಡುವಂತೇ ನಡೆಸಿಕೊಡುತ್ತಿದ್ದ ಮಹಾನುಭಾವ ಶಂಭಣ್ಣನ ನೆನಪು ಮರುಕಳಿಸಿ, ಮನದ ಭಾವ ನೀರಾಗಿ ಕಣ್ಣಾಲಿಗಳಲ್ಲಿ ಹರಿದಾಗ ಅವರಿಗೊಮ್ಮೆ ವಂದಿಸಲೋಸುಗ ಬರೆಯುತ್ತಿದ್ದೇನೆ. ಈ ಮೇಲೆ ಹೇಳಿದ ಎಲ್ಲಾ ಪಾತ್ರಗಳಲ್ಲಿ ಅವರ ಭಾವತಲ್ಲೀನತೆ, ಭಾವತನ್ಮಯತೆ, ಆ ಅಸ್ಖಲಿತ ಮಾತುಗಳು, ನಿರರ್ಗಳವಾಗಿ ಹರಿಯುವ ಕಥೆಗೆ ಪೂರಕವಾದ ಜ್ಞಾನಧಾರೆ ಕುಳಿತ ಎಲ್ಲಾ ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸುತ್ತಿದ್ದವು. ಕಣ್ಣೀರು ತರಿಸುವ ಪಾತ್ರಗಳೇ ಅವುಗಳಾದರೂ ಜನ ಮತ್ತೆಮತ್ತೆ ಅದನ್ನೇ ನೋಡಲು ಬಯಸುತ್ತಿದ್ದರು, ಮೇಲಾಗಿ ತಮ್ಮ ಜೀವನದ ಘಟನೆಗಳಿಗೂ ಆ ಪಾತ್ರಗಳಿಗೂ ತಾದಾತ್ಮ್ಯತೆ ಕಂಡು ತಮ್ಮ ನೋವನ್ನು ಅಂದು ಅಲ್ಲಿ ಕಣ್ಣೀರು ಹರಿಸುವುದರ ಮೂಲಕ ನೊಂದ ಮನವನ್ನು ಹಗುರಗೊಳಿಸಿಕೊಳ್ಳುತ್ತಿದ್ದರು.

ನಾವೆಲ್ಲಾ ಅಂದು ಚಿಕ್ಕವರೇ ಆಗಿದ್ದರೂ ಆ ಪಾತ್ರಗಳು ಸೃಜಿಸಿದ ಚಿತ್ರಣ, ಕೆರಳಿಸಿ ಮನದೊಳಕ್ಕಿಳಿದ ಭಾವನೆಗಳು ಇಂದಿಗೂ ಜೀವಂತ, ನಾವಿರುವವರೆಗೂ ಅವು ಜೀವಂತ. ಬಹುಶಃ ಎಲ್ಲಾ ಮಕ್ಕಳಿಗೂ ಎಳವೆಯಲ್ಲಿ ಇಂತಹ ಪುಣ್ಯಕಥಾಭಾಗಗಳ ಅಭಿನಯವನ್ನು ಯಕ್ಷಗಾನದಲ್ಲಿ ನೋಡಲು ಅದೂ ಇಂತಹ ಕಲಾವಿದರು ನಿರ್ವಹಿಸಿದ್ದನ್ನು ಕಾಣಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ನಾವು ಪಡೆದುಬಂದ ಪುಣ್ಯ ನಮಗೆ ಆ ಕಾಲಕ್ಕೆ ಇಂತಹ ದೃಶ್ಯಗಳನ್ನು ಕಣ್ಣಾರೆ ನೋಡುವ ಅವಕಾಶ, ಅನುಕೂಲ ನಮಗೆ ದೊರೆಯಿತು. ಮಹಾನುಭಾವರಾದ ನಮ್ಮ ಹಿರಿಯರು ಅದಕ್ಕೆ ಅನುಮತಿಯಿತ್ತು, ಅಗತ್ಯ ಸಹಕಾರವನ್ನೂ ಇತ್ತು, ನಾವು ಪೂರ್ಣರಾತ್ರಿ ಅದನ್ನು ನೋಡಲಾಗದೇ ಮಧ್ಯೆ ಮಧ್ಯೆ ನಿದ್ದೆಮಾಡಿದರೂ ನಮ್ಮನ್ನು ಪಕ್ಕದಲ್ಲೇ ಕೂರಿಸಿಕೊಂಡು ತೋರಿಸುವ ಸಾಹಸಮಾಡಿದರು, ಈ ವಿಷಯದಲ್ಲಿ ನಾವು ಅವರಿಗೆ ಮೊದಲಾಗಿ ಋಣಭಾರಿಗಳು.

ಈಗ ಶ್ರೀಯುತ ಶಂಭುಹೆಗಡೆಯವರ ಹರಿಶ್ಚಂದ್ರನ ಪಾತ್ರದ ಕೆಲವು ತುಣುಕುಗಳನ್ನು ಆಸ್ವಾದಿಸೋಣ ಬನ್ನಿ :






ಶ್ರೀಯುತರು ಈ ಎಲ್ಲಾ ಪಾತ್ರಗಳಿಗೆ ಜೀವರಸ ತುಂಬುತ್ತಿದ್ದುದು ಅವರ ಸಾಹಿತ್ಯಕ ಮಾತುಗಾರಿಕೆಯಿಂದ. ಆಹಾ ....ಎಂತಹ ಸುಂದರ, ಸ್ಪಷ್ಟ ಮಾತುಗಳವು! ಮಾತು ಆಡಿದರೆ ಮುತ್ತು ಉದುರಿದಂತೇ. ಎದುರಿನ ಪಾತ್ರಧಾರಿಗೇ ಕಣ್ಣಲ್ಲಿ ನೀರುಹರಿಸುವ ತಾಕತ್ತು ಅವರಿಗಿತ್ತು. ಯಕ್ಷಗಾನದ ವಿಶೇಷವೆಂದರೆ ಇಲ್ಲಿ ಮಾತುಗಳನ್ನು ಬಾಯಿಪಾಠ ಮಾಡಿ ಉಚ್ಚರಿಸುವುದಿಲ್ಲ, ಬದಲಾಗಿ ಸನ್ನಿವೇಶಕ್ಕೆ ತಕ್ಕಂತೇ ಪಾತ್ರಧಾರಿಯೇ ಅದನ್ನು ಭರಿಸಬೇಕು. ಇಲ್ಲಿ ಪಾತ್ರಧಾರಿಯ ಓದಿನ ಆಳ-ಅಗಲ-ವಿಸ್ತಾರದ ವಿಸ್ತರವನ್ನು ನಾವು ಅವಲೋಕಿಸಿಬಹುದಾಗಿದೆ. ಹೆಗಡೆಯವರು ದಿನಂಪ್ರತಿ ಓದುತ್ತಿದ್ದರು. ಸಮಕಾಲೀನ ಮತ್ತು ಪೂರ್ವದ ಹಲವು ಪುಸ್ತಕಗಳನ್ನು ಬಿಡುವಿದ್ದಾಗ ಓದುವುದು ಅವರ ಅಭ್ಯಾಸವಾಗಿತ್ತು. ಪಾತ್ರವನ್ನು ಆಳಕ್ಕೆ ಇಳಿದು ಆ ದಿನಗಳಲ್ಲಿ ಆ ವ್ಯಕ್ತಿ ಹೇಗಿದ್ದಿರಬಹುದು ಎಂಬುದನ್ನು ಮೊದಲೇ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ಹರಿಶ್ಚಂದ್ರ ತನ್ನ ಹೆಂಡತಿ ಸತ್ತ ಮಗನನ್ನು ಹೊತ್ತುಕೊಂಡು ಸ್ಮಶಾನಕ್ಕೆ ಬಂದಾಗಿನ ದೃಶ್ಯವನ್ನು ಅವರು ಮನಸಾ ಅನುಭವಿಸಿ ಆ ಮೂಲಕ ಅವರೂ ಅಳುತ್ತ ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದರು. ಮಗನನ್ನು ಕಾಡಿಗೆ ಕಳುಹಿಸಿದ ಅನಿವಾರ್ಯತೆಯನ್ನು ಆ ಸಂದಿಗ್ಧವನ್ನು ಅನುಭವಿಸುವ ದಶರಥ ನಮ್ಮೆದುರಿಗೇ ಸಾಯುತ್ತಿದ್ದಾನೇನೋ ಎಂದೆನಿಸುತ್ತಿತ್ತು. ತಾಯ ಪ್ರೀತಿಯನ್ನೂ ಕಳೆದುಕೊಂಡು, ಹೆತ್ತ ಮಗ ವೃಷಸೇನನನ್ನೂ ಕಳೆದುಕೊಂಡು ರಣರಂಗದಲ್ಲಿ ದುಃಖಿಸುವ ಕರ್ಣನನ್ನು ನೋಡಿದಾಗ ಆತ ತನ್ನೆದೆಯಲ್ಲಿರುವ ಅಮೃತಕಲಶವನ್ನು ಹೊರತೆಗೆದು ಕೊಡುವಾಗಿನ ದೃಶ್ಯ ಕರ್ಣ ನಮ್ಮೆದುರಲ್ಲೇ ಇದ್ದಾನೇನೋ ಎಂಬಂತಿರುತ್ತಿತ್ತು. ಅಂತಹ ಕರ್ಣನ ಪಾತ್ರದ ಎರಡು ತುಣುಕಗಳನ್ನು ನೋಡಿ :






ಕಾರ್ಕೋಟಕ ಸರ್ಪ ಕಚ್ಚಿದ ನೆಪದಿಂದ ನಳಮಹಾರಾಜ ಬಾಹುಕನಾಗಿ, ದೇಶಬ್ರಷ್ಟನಾಗಿ ಅಲೆಯುತ್ತಾ ಅಲೆಯುತ್ತಾ ತನ್ನ ಆಪ್ತ ಸ್ನೇಹಿತನಾದ ಋತುಪರ್ಣ ಮಹಾರಾಜನ ಆಸ್ಥಾನಕ್ಕೆ ಬಂದು ಆತನಿಗೆ ಪರಿಚಯಿಸಿಕೊಳ್ಳುವಾಗ ನಿಜ ಹೇಳಿದರೆ ಎಲ್ಲಿ ಆತ ನೊಂದುಕೊಳ್ಳುತ್ತಾನೋ ಎಂಬ ಪರಿವೆಯಿಂದ ತಾನು ನಳನಲ್ಲವೆಂದು ಬರಿದೇ ಹೇಳುವ ದೃಶ್ಯ, ಹೆಂಡತಿ ದಮಯಂತಿಯ ಪುನಃ ಸ್ವಯಂವರ ನಡೆಯುತ್ತದೆ ಎಂಬ ಸುದ್ದಿಯನ್ನು ಋತುಪರ್ಣ ತನಗೆ ತಿಳಿಸಿದಾಗ ಒಳಗೊಳಗೇ ವಿಲವಿಲನೆ ಒದ್ದಾಡುವ ಬಾಹುಕನ ಮಾತುಗಳು ಹೃದಯಕಲಕುತ್ತಿದ್ದವು. ಕೊನೆಗೊಮ್ಮೆ ಬಾಹುಕ ನಳನೇ ಎಂದು ತಿಳಿದಾಗ ಋತುಪರ್ಣನನ್ನು ನಡೆಸಿಕೊಳ್ಳುವ ಆ ಆಪ್ತತೆಯ ಅಭಿನಯ ಮತ್ಯಾರಲ್ಲಿ ಕಂಡೀತು ? ಬದುಕಿನ ಕೊನೆಯ ಕ್ಷಣದವರೆಗೂ ಪೌರಾಣಿಕ ಪಾತ್ರಗಳನ್ನು ಬಿಟ್ಟು ಬೇರೇ ಪಾತ್ರಗಳನ್ನು ಅವರು ನಿರ್ವಹಿಸಲಿಲ್ಲ. ಅವರು ಯಾರೊಂದಿಗೋ ಹೋಲಿಸಿಕೊಂಡು ಆ ನಟನನ್ನು ಮೀರಿಸುತ್ತೇನೆಂಬ ಗೋಜಿಗೆ ಹೋದವರಲ್ಲ. ಅವರದ್ದೇ ಆದ ಒಂದು ತಿಟ್ಟನ್ನು, ಒಂದು ಸಂಪ್ರದಾಯಬದ್ಧ ಚೌಕಟ್ಟನ್ನು ಅವರು ಇಟ್ಟುಕೊಂಡಿದ್ದರು. ಹೊಸರೂಪದ ಭಾಗವತಿಕೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹಿತಮಿತವಾದ ಆಂಗಿಕ ಅಭಿನಯ, ನೃತ್ಯ ಮತ್ತು ಅರ್ಥ ಇವು ಅವರ ರಂಗಮಾಧ್ಯಮದ ಆಯಾಮಗಳಲ್ಲಿ ಸದಾ ಸಮನ್ವಯಗೊಂಡ ಅಂಶಗಳಾಗಿರುತ್ತಿದ್ದವು. ಖ್ಯಾತ ನೃತ ವಿದುಷಿ ಶ್ರೀಮತಿ ಮಾಯಾರಾವ್ ಅವರಲ್ಲಿ ಕೋರಿಯೋಗ್ರಾಫಿ ಬಗ್ಗೆ ತರಬೇತಿ ಪಡೆದಿದ್ದ ಅವರ ಜೀವನವನ್ನು ಸಾಗರದ ಎಲ್.ಬಿ ಕಾಲೇಜಿನ ಅಧ್ಯಾಪಕರಾಗಿದ್ದ ಡಾ| ಜಿ.ಎಸ್. ಭಟ್ಟರು ಸಂಶೋಧನೆಗೇ ವಿಷಯವಸ್ತುವಾಗಿ ಬಳಸಿಕೊಂಡರು.

ಸೀತಾವಿಯೋಗದ ಶ್ರೀರಾಮನ ಒಂದು ದೃಶ್ಯವನ್ನು ನೋಡಿ :


ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ, ಉತ್ತರಕನ್ನಡ ಮತ್ತು ಮಲೆನಾಡು ಪ್ರಾಂತಗಳಲ್ಲಿ ಶಂಭು ಹೆಗಡೆಯವರ ಪರಿಚಯ ಹೊಸದಾಗಿ ಮಾಡಿಕೊಡಬೇಕಾಗಿಲ್ಲ. ಅಲ್ಲಿನ ಬಹುತೇಕ ಜನರ ಜೀವನದ ಮೇಲೆ ಹೆಗಡೆಯವರ ಪಾತ್ರ ಪೋಷಣೆ ಪರಿಣಾಮ ಬೀರಿದೆ. ಚಿಕ್ಕ ಚಡ್ಡಿ ಹುಡುಗನಾಗಿದ್ದ ನನ್ನಂಥವನೊಬ್ಬ ಆ ಕಾಲಕ್ಕೆ ಅನುಭವಿಸಿದ್ದನ್ನು ನೆನಪಿಸಿಕೊಂಡು ಇಷ್ಟು ಬರೆಯುವೆನಾದರೆ ಬರೆಯುವ/ಮಾತನಾಡುವ ಕಲೆ ಗೊತ್ತಿರದ ಜನ ಅದೆಷ್ಟು ನೆನಪಿನ ಮೂಟೆಗಳನ್ನು ತಮ್ಮಲ್ಲೇ ಹುದುಗಿಸಿಕೊಂಡಿರಬಹುದು ನೀವೇ ಲೆಕ್ಕಹಾಕಿ !

ರಾಮಾಯಣ ಮಹಾಭಾರತದ ಕಥೆಗಳನ್ನು ಮತ್ತೆ ಮತ್ತೆ ಹೇಳಲು, ತಿಳಿಸಿಕೊಡಲು ಇಂತಹ ಪಾತ್ರಪೋಷಕರ ಅವಶ್ಯಕತೆ ಈಗಲೂ ಯಕ್ಷರಂಗದಲ್ಲಿದೆ. ಆದರೆ ನನಗನಿಸಿದ ರೀತಿಯಲ್ಲಿ ಇದುವರೆಗೆ ಭಾವಪೂರಿತ ಮಾತಿನಲ್ಲಿ ಶಂಭುಹೆಗಡೆಯವರ ಸರಿಸಾಟಿಯಾಗುವ ವ್ಯಕ್ತಿ ಹುಟ್ಟಿಬಂದಿಲ್ಲ. ಅವರ ಜಾಗವನ್ನು ತುಂಬಲು ಇದುವರೆಗೂ ಯಾರಿಂದಲೂ ಆಗಲಿಲ್ಲ. ಸ್ನೇಹಿತರೇ, ನೋಡಿದಿರಲ್ಲ ಈ ಮೇಲಿನ ತುಣುಕಗಳಲ್ಲಿ ಭಾಗವಹಿಸಿದ ಶ್ರೇಷ್ಠ ಭಾಗವತ ನೆಬ್ಬೂರು ನಾರಾಯಣ ಹೆಗಡೆಯವರಿಗೂ ಹಾಗೂ ಮಿಕ್ಕುಳಿದ ಹಿಮ್ಮೇಳ-ಮುಮ್ಮೇಳದವರಿಗೂ ನಮ್ಮ ನಮನ ಸಲ್ಲಿಸೋಣ. ದಿ| ಶಂಭುಹೆಗಡೆಯವರು ಮತ್ತೆ ಯಕ್ಷಗಾನಕ್ಕಾಗಿ ಮರಳಿ ಜನಿಸಿ ಬರಲಿ, ಕರ್ನಾಟಕದ ಜನತೆಗೆ ತನ್ನ ಭಾಷೆಯ ಸೊಬಗನ್ನು ಉಣಬಡಿಸಲಿ ಎಂದು ಹಾರೈಸುತ್ತೇನೆ, ನಮಸ್ಕಾರ.

Monday, November 22, 2010

ಸಾರಥಿಯೆ ನಿಲ್ಲೊಮ್ಮೆ .....


ಸಾರಥಿಯೆ ನಿಲ್ಲೊಮ್ಮೆ .....

ದೇಹದೀ ಕೊಳಲಿನಲಿ ನವರಂಧ್ರಗಳ ಕೊರೆದು
ಜೀವ ನುಡಿಸಿದ ತನ್ನ ಭಾವಗಳು ಹರಿದೂ
ಸಂಸಾರ ಸಾಗರದಿ ನೌಕೆನಡೆಸುತಲರಿದು
ಸುಖ ದುಃಖಗಳೀಯುತ್ತ ತನ್ನೆಡೆಗೆ ಕರೆದೂ


ರಾಜ್ಯಭಾರವ ನಡೆಸಿ ತಾ ಕುಳಿತು ಕಾಣದಲಿ
ಒಂದರೊಳಗೊಂದಾಗಿ ಮೆರೆವುದನು ಕಂಡೆ
ಮಂದಬುದ್ಧಿಗೆ ಕವಿದಿರುವಹಂಕಾರದಲಿ
ಕಂಡರೂ ಕಾಣದಂತಾಗಿಹುದನುಂಡೆ

ಆರೂ ವೈರಿಗಳಿರದ ಬದುಕಿನೀ ದಾರಿಯಲಿ
ಆರು ಅಶ್ವಗಳಿರಿಸಿ ಚಾವಟಿಯ ಬೀಸಿ
ಸಾರಥಿಯೆ ಎಲ್ಲಿಗದು ಪಯಣವೀ ವೇಗದಲಿ ?
ಮಾರುತಿಯ ಮೀರಿಸುವ ರೀತಿಯಲಿ ನಡೆಸಿ

ರಾಗ ಹಲವನು ನುಡಿಸಿ ಕೊಳಲ ಮಾಯೆಯಲಿರಿಸಿ
ಭೋಗದಾ ವೈಭೋಗ ತೆರೆತೆರೆದು ತೋರಿ
ತ್ಯಾಗಮಾಡುತ ಮುರಳಿ ತೊರೆವೆ ಮತ್ತೊಂದರಸಿ
ಯೋಗ ಬಯಸುವೆ ನಿನ್ನ ದರುಶನವ ಕೋರಿ

Sunday, November 21, 2010

ಬದುಕು ಜಟಕಾ ಬಂಡಿ ..........

ಚಿತ್ರ ಕೃಪೆ : ಅಂತರ್ಜಾಲ [ಕೇವಲ ಕಾಲ್ಪನಿಕ ]

ಬದುಕು ಜಟಕಾ ಬಂಡಿ ..........

ಮಾನವ ಸಂಪನ್ಮೂಲದ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸಮಾಡುತ್ತಿರುವ ಗಿರೀಶ್ ಗೆ ನಿತ್ಯವೂ ಬಿಡುವಿಲ್ಲದ ಕೆಲಸ. ಕಂಪನಿಯನ್ನು ಉತ್ತಮ ದರ್ಜೆಗೆ ಏರಿಸಲು ಒಳ್ಳೆಯ ಕೆಲಸಗಾರರೂ ಕೂಡ ಒಂದು ಕಾರಣ ಎಂಬುದನ್ನು ಆತ ನಂಬಿದ ವ್ಯಕ್ತಿ. ಮೇಲಧಿಕಾರಿಗಳ ಜೊತೆ ಮಾತನಾಡುವಾಗ ಇನ್ನು ಮುಂದೆ ಮತ್ತಷ್ಟು ಪರಿಶ್ರಮದಿಂದ ಇನ್ನೂ ಉತ್ತಮ ಅರ್ಹತೆಯುಳ್ಳ ಕೆಲಸಗಾರರನ್ನು ಆಯ್ಕೆಮಾಡುವುದಾಗಿ ಆತ ಭರವಸೆ ಕೊಟ್ಟಿದ್ದ. ತಾನು ಅಲಂಕರಿಸಿದ ಹುದ್ದೆಗೆ ನ್ಯಾಯ ಒದಗಿಸುವ ಉದ್ದೇಶ ಆತನಿಗಿತ್ತು. ಸೇರಿದ ಒಳ್ಳೆಯ ನೌಕರರನ್ನು ಕಂಪನಿಬಿಟ್ಟು ಬೇರೇ ಕಂಪೆನಿಗೆ ಹಾರದಂತೆ ನಿಲ್ಲಿಸಿಕೊಳ್ಳುವುದೂ ಅಷ್ಟೇ ಕೌಶಲದ ಕೆಲಸವಾಗಿತ್ತು. ಆಗೀಗ ಬಿಟ್ಟು ಹೋಗುವ ಕೆಲವು ಕೆಲಸದವರ ಬದಲಾಗಿ ಆಗಾಗ ಹೊಸ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವುದು ಮತ್ತು ಅವರಲ್ಲಿ ಉತ್ತಮವಾಗಿರುವವರನ್ನು ಆಯ್ಕೆಮಾಡಿಕೊಳ್ಳುವುದು ಸದಾ ಜಾರಿಯಲ್ಲಿದ್ದ ಪ್ರಕ್ರಿಯೆಯಾಗಿಬಿಟ್ಟಿತ್ತು. ಹೀಗೇ ಅಂದೂ ಕೂಡ ಒಂದು ತಾಂತ್ರಿಕ ಸೇವಾ ಹುದ್ದೆಗೆ ಸಂದರ್ಶನಕ್ಕೆ ಕರೆದಿದ್ದ. ಸುಮಾರು ೨೮-೩೦ ಅಭ್ಯರ್ಥಿಗಳು ಬಂದಿದ್ದರು. ಬಂದವರಲ್ಲಿ ಹುಡುಗರೂ ಇದ್ದರು ಹುಡುಗಿಯರೂ ಇದ್ದರು.

ಒಂದುಕಾಲದಲ್ಲಿ ಕೇವಲ ಹುಡುಗರೇ ನಿಭಾಯಿಸಬಹುದಾದ ಹುದ್ದೆಯನ್ನು ಇಂದು ಮಡಿವಂತಿಕೆ ತೊರೆದು ಧೈರ್ಯದಿಂದ ಹುಡುಗಿಯರೂ ನಿಭಾಯಿಸುತ್ತಿದ್ದರು. ಹುಡುಗಿಯರು ಕೊಟ್ಟ ನೌಕರಿಯಲ್ಲಿ ಆದಷ್ಟೂ ಹೆಚ್ಚಿನ ಕಾಲ ನಿಲ್ಲುವ ಒಂದು ಲಕ್ಷಣ ಆತನಿಗೆ ಬಹಳ ಹಿಡಿಸುತ್ತಿತ್ತು. ಅವರು ಕೆಲಸವನ್ನೂ ಆದಷ್ಟು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ ಬರುಬರುತ್ತಾ ರಾಯರ ಕುದುರೆ ಕತ್ತೆಯಾಗತೊಡಗಿತು ! ಈಗೀಗ ನೌಕರಿಯಲ್ಲಿ ಕಂಪನಿಯಿಂದ ಕಂಪನಿಗೆ ಜಿಗಿಯುವ ಕೆಲಸದಲ್ಲಿ ಹುಡುಗಿಯರೇ ಮುಂಚೂಣಿಯಲ್ಲಿದ್ದಾರೆ ಎಂಬುದು ಮನವರಿಕೆಯಾಗಿ ಈ ಸರ್ತಿ ಹುಡುಗರಿಗೇ ಆದ್ಯತೆ ಕೊಡಬೇಕೇನೋ ಎಂದುಕೊಂಡಿದ್ದ.

" ನೆಕ್ಸ್ಟ್ "

ಆತ ಕರೆದಾಗ ಒಳಗೆ ಬಂದಿದ್ದು ಶೀತಲ್. ಶೀತಲ್ ಬಹಳ ಸುಂದರ ಹುಡುಗಿ. ಸುಮಾರು ೨೬ ವರ್ಷ ವಯಸ್ಸು. ಮೆಕಾನಿಕಲ್ ತಂತ್ರಜ್ಞಾನ ಓದಿಕೊಂಡವಳು. ೩-೪ ವರ್ಷಗಳ ಒಳ್ಳೆಯ ಅನುಭವ ಕೂಡ ಹೊಂದಿದ್ದಳು. ತನ್ನ ವಿವರಣೆಗಳುಳ್ಳ ಬಯೋಡಾಟಾವನ್ನು ಗಿರೀಶ್ ಕೈಯ್ಯಲ್ಲಿ ಕೊಟ್ಟಳು. ಆತ ಕೂರ್ಲೌ ಹೇಳಿದನಂತರ ಎದುರುಗಡೆಗಿರುವ ಆಸನದಲ್ಲಿ ಕುಳಿತಳು. ಕೆಲವೊಂದು ತಾಂತ್ರಿಕ ವಿಷಯಗಳನ್ನು ಆಕೆಯಲ್ಲಿ ಕೇಳಿ ಉತ್ತರಪಡೆದ ನಂತರ ಆಕೆಯನ್ನು ಸೇರಿಸಿಕೊಳ್ಳುವುದೇ ಬಿಡುವುದೇ ಎಂಬುದು ಮನಸ್ಸಿನ ಹೊಯ್ದಾಟವಾಗಿತ್ತು ಗಿರೀಶ್ ನಿಗೆ. ಆಕೆಯ ಸ್ನಿಗ್ಧ ಸೌಂದರ್ಯ ಇಂದೇಕೋ ಆತನನ್ನು ಸೆಳೆಯುತ್ತಿತ್ತು. ಆಕೆಗೆ ನೌಕರಿ ಕೊಡದಿದ್ದರೂ ಆಕೆಯನ್ನು ಕಳೆದುಕೊಳ್ಳಲು ಆತ ಸಿದ್ಧನಿರಲಿಲ್ಲ. ಆಕೆಯ ಭಾವುಕ ಬೊಗಸೆ ಕಂಗಳು ತನ್ನೆದುರು ಬಿತ್ತರಿಸಿದ ಹಲವು ಭಾವನೆಗಳಿಗೆ ಆತನ ಮನಸ್ಸು ಕವನ ಹೊಸೆಯತೊಡಗಿತ್ತು. ಆದರೂ ತನ್ನ ವೈಯ್ಯಕ್ತಿಕ ಹಿತಾಸಕ್ತಿಯನ್ನು ಆತ ಹೇಳಿಕೊಳ್ಳಲಾಗುವುದೇ ? ಅದಕ್ಕೇ ಆತ ಆಕೆಯನ್ನು ಸ್ವಲ್ಪ ಹೊತ್ತು ಹೊರಗೆ ಕುಳಿತಿರಲು ಹೇಳಿದ. ಮುಂದೆ ಇನ್ನೆರಡು ಅಭ್ಯರ್ಥಿಗಳಿದ್ದರು. ಅವರ ಸಂದರ್ಶನ ಮುಗಿಸಿದಮೇಲೆ ಇನ್ನೊಮ್ಮೆ ಆಕೆಯನ್ನು ಮಾತನಾಡಿಸುವ ಇರಾದೆ ಆತನದಾಗಿತ್ತು. ಆಕೆ ಅಭ್ಯರ್ಥಿಯೇ ಆದರೂ ತನ್ನೆದುರು ಆಕೆ ಕುಳಿತಾಗ ಹೃದಯ ಹಾಡುವ ಹಲವು ರಾಗಗಳು ಮನದಲ್ಲಿ ಉದ್ಭವಿಸಿ ಕಣ್ಣುತುಂಬುವ ಹಲವು ಬಣ್ಣದ ಚಿತ್ತಾರಗಳು ಆತನಿಗೆ ಮುಂದೇನುಮಾಡಬೇಕೆಂಬುದನ್ನೇ ಮರೆಸುತ್ತಿದ್ದವು.

" ನೆಕ್ಸ್ಟ್ "

ಆಗ ಒಳಬಂದಿದ್ದು ರಾಜೀವ. ಬಹಳ ಒಳ್ಳೆಯ ಹುಡುಗ. ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಕಷ್ಟಾರ್ಜಿತದಲ್ಲಿ ಮಾಧ್ಯಮಿಕ ಹಂತದವರೆಗೆ ವಿದ್ಯಾಭ್ಯಾಸ ಪೂರೈಸಿ ನಂತರ ಭಾಗಶಃ ಅಲ್ಲಿಲ್ಲಿ ಕೆಲಸಮಾಡಿಕೊಂಡು ತಾಂತ್ರಿಕ ಪದವಿ ಗಳಿಸಿದ್ದ. ತೆಳ್ಳಗಿನ ವ್ಯಕ್ತಿಯ ಕಣ್ಣ ತುಂಬಾ ಸಾಧಿಸಬೇಕೆಂಬ ಹಂಬಲ ಎದ್ದು ಕಾಣುತ್ತಿತ್ತು. ಅನುಭವವೂ ಸಾಕಷ್ಟು ಇದ್ದುದರಿಂದ ಈತ ಹುದ್ದೆಗೆ ಒಂದರ್ಥದಲ್ಲಿ ತಕ್ಕುದಾದ ವ್ಯಕ್ತಿಯಾಗಬಹುದಿತ್ತು. ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ಕೊಟ್ಟಿದ್ದ ರಾಜೀವ. ವೈಯ್ಯಕ್ತಿಕ ವಿಚಾರಗಳನ್ನು ಕೇಳುತ್ತಾ ತಂದೆಯ ಬಗೆಗೆ ಕೇಳಿದ್ದ. ತನ್ನೆರಡು ಕಣ್ಣಲ್ಲಿ ಹನಿಗಳನ್ನು ತುಂಬಿಕೊಂಡು ಮುಗ್ಧ ಮಗುವಿನ ರೀತಿ ಕಣ್ಣೊರೆಸಿಕೊಳ್ಳುತ್ತ ಉತ್ತರಿಸಿದ ರಾಜೀವ ತಾನು ಅತೀ ಅವನಿರುವಾಗಲೇ ಯಾವುದೋ ಹಾವು ಕಡಿದು ತಂದೆ ತೀರಿಹೋದನೆಂದೂ, ತಂದೆಯ ಪ್ರೀತಿಯನ್ನು ಕಳೆದುಕೊಂಡ ಹತಭಾಗ್ಯನೆಂದೂ ಹೇಳಿದ.

ಅಪ್ಪನೆಂದರೆ ಈ ರೀತಿಯ ಅನನ್ಯತೆ ಇರುತ್ತದೆಂಬುದನ್ನು ಇದೇ ಮೊದಲಾಗಿ ಅನುಭವಿಸುತ್ತಿದ್ದ ಗಿರೀಶ್. ತಾನು ಚಿಕ್ಕವನಿದ್ದಾಗ ಅಪ್ಪ-ಅಮ್ಮ ಇಬ್ಬರೂ ಪ್ರೀತಿಯಿಂದಿದ್ದರು. ತಾನು ೪-೫ ವಯಸ್ಸಿನವನಾಗುವ ಹೊತ್ತಿಗೆ ಅಪ್ಪ-ಅಮ್ಮ ದಿನಾಲೂ ಜಗಳವಾಡುತ್ತಿದ್ದರು. ಮೊದಲೆಲ್ಲಾ ತನ್ನೊಟ್ಟಿಗೇ ತನ್ನನ್ನು ಮಧ್ಯೆ ಮಲಗಿಸಿಕೊಂಡು ಆಚೆ ಈಚೆ ಮಲಗುತ್ತಿದ್ದ ಅಪ್ಪ-ಅಮ್ಮ ಕ್ರಮೇಣ ಬೇರೆ ಬೇರೆ ಕೋಣೆಗಳಲ್ಲಿ ಮಲಗುತ್ತಿದ್ದರು. ಈ ವಿಷಯದಲ್ಲಿ ಅಪ್ಪನನ್ನು ಕೇಳಲಿ ಅಮ್ಮನನ್ನು ಕೇಳಲಿ ತನ್ನನ್ನು ಗದರಿಸುತ್ತಿದ್ದರು. ಕೊನೆಗೊಂದು ದಿನ ಅಪ್ಪ-ಅಮ್ಮ ಒಬ್ಬರನ್ನೊಬ್ಬರು ಥಳಿಸುತ್ತಿದ್ದರು. ಆ ರಾತ್ರಿ ಅಪ್ಪ ಅಮ್ಮನನ್ನೂ ತನ್ನನ್ನೂ ಮನೆಯಿಂದ ಹೊರಗೆ ನೂಕಿಬಿಟ್ಟರು. ಅಳುತ್ತಿದ್ದ ಅಮ್ಮನನ್ನು ನಾನು ತಾನು ಓಡೋಡಿ ಅಪ್ಪಿಕೊಂಡೆ. ಆಮೇಲೆ ಅಮ್ಮ ಏನುಹೇಳಿದರೂ ಕೇಳಿಸಿಕೊಳ್ಳದ ಅಪ್ಪ ಬಾಗಿಲು ತೆರೆಯಲೇ ಇಲ್ಲ. ತನ್ನನ್ನು ನೋಡಲೂ ಬರಲಿಲ್ಲ. ಅರೆಗತ್ತಲೆಯಲ್ಲಿ ಅಮ್ಮ ತನ್ನ ಕೈಹಿಡಿದುಕೊಂಡು ದೂರ ನಡೆದಳು. ತನಗೆ ಕಾಲು ನೋವುಬಂದು ನಡೆಯಲಾಗುತ್ತಿರಲಿಲ್ಲ. ತಾನು ಅಮ್ಮನ ಮುಖವನ್ನೇ ಆಗಾಗ ನೋಡುತ್ತಿದ್ದೆ. ಅಮ್ಮನಿಗೆ ಬೇಸರವಾಗಿದೆಯೆಂಬುದು ಸ್ಪಷ್ಟವಾಗಿತ್ತು. ಅವಳಿಗೆ ಮತ್ತೂ ಬೇಸರಮಾಡುವುದು ಬೇಡವೆಂದು ತಾನು ನೋವಾದರೂ ನಡೆಯುತ್ತಿದ್ದೆ. ನಡೆದೂ ನಡೆದೂ ನಡೆದೂ ಸುಮಾರು ತಾನು ಎಂದಿಗೂ ನಡೆದಿರದ ದೂರವನ್ನು ಕ್ರಮಿಸಿದ್ದೆವು. ಅಲ್ಲಿ ಅಮ್ಮನ ಗೆಳತಿಯ ಮನೆಯೊಂದಿತ್ತು ಎಂಬುದು ಆಮೇಲೆ ತನಗೆ ಗೊತ್ತಾಗಿದ್ದು. ಅಮ್ಮ ಬಾಗಿಲು ತಟ್ಟಿ ಎಬ್ಬಿಸಿದಾಗ ಕತ್ತಲು ತುಂಬಿದ ನೀರವ ರಾತ್ರಿಯಲ್ಲಿ, ನಾಯಿಗಳ ಬೊಗಳುವಿಕೆಗಳ ಮಧ್ಯೆ ಯಾರು ಬಂದಿದ್ದಾರೆಂದು ಅಮ್ಮನ ಗೆಳತಿ ಬಾಗಿಲ ಪಕ್ಕದ ಕಿಟಕಿಯಿಂದ ನೋಡಿದಳು. ತಿಳಿದ ನಂತರ ಬಾಗಿಲು ತೆರೆದು ಬರಮಾಡಿಕೊಂಡಳು.

ಅಮ್ಮ ತುಂಬಾ ದಣಿದಿದ್ದಳು. ಆಕೆಗೆ ದಣಿದದ್ದಕಿಂತ ಹೆಚ್ಚು ಅಪ್ಪಬೈದಿದ್ದು ಬೇಸರವಾಯಿತಿರಬೇಕು. ಗೆಳತಿ ಶರ್ಮಿಳಾ ಆಶ್ಚರ್ಯದಿಂದ ಕೇಳಿದಾಗ ಆಮ್ಮ ಆಕೆಯ ಹೆಗಲಮೇಲೆ ತಲೆಯಾನಿಸಿ ಗಳಗಳನೇ ಅತ್ತಳು. ಶರ್ಮಿಳಾ ಆಂಟಿ ಅಮ್ಮನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಕುಡಿಯಲು ನೀರು ಕೊಟ್ಟು, ಊಟಕ್ಕೆ ಸಜ್ಜುಗೊಳಿಸಲು ಅಡಿಗೆಮನೆಗೆ ಹೋದರು. ಶರ್ಮಿಳಾ ಆಂಟಿಯ ಯಜಮಾನರು ಅಂದು ಊರಲ್ಲಿರಲಿಲ್ಲ. ಆಗ ತಾನು ಮತ್ತು ಅಮ್ಮ ಇಬ್ಬರೇ ಜಗುಲಿಯಲ್ಲಿ ಕುಳಿತಿದ್ದೆವು. ಅಮ್ಮನನ್ನು ಕೇಳಿದರೆ ಮತ್ತೆ ಅಳಲೂಬಹುದು ಎಂಬ ಸಂದೇಹ ತನಗಿತ್ತು. ಆದರೂ ಅಪ್ಪ ಯಾಕೆ ಅಷ್ಟು ಕಟುಕ ಮನಸ್ಸಿನವರಾದರು ಎಂಬುದು ಮಾತ್ರ ತನಗೆ ತಿಳಿಯಲಿಲ್ಲ. ಅದನ್ನು ತಿಳಿಯುವ ಕುತೂಹಲವಿದ್ದರೂ ಅಮ್ಮನಿಗಲ್ಲದೇ ಮತ್ತಿನ್ಯಾರಿಗೆ ಅದು ಗೊತ್ತಿರಲು ಸಾಧ್ಯ ? ತನ್ನ ಪ್ರಶ್ನೆಗಳನ್ನು ಹಾಗೇ ತನ್ನ ಪುಟ್ಟ ಮೆದುಳಿನಲ್ಲಿ ಬಂಧಿಸಬೇಕಾಯಿತು. ಅಪ್ಪನ ಮೇಲೆ ತನಗೂ ಕೋಪ ಬಂದಿತ್ತು. ಆದರೆ ಒಳಗೊಳಗೇ ಪ್ರೀತಿಯೂ ಇತ್ತು. ಆತ ಅಮ್ಮನನ್ನು ಮಾತ್ರ ಹೀಗೆ ಬೈದ ಹೊಡೆದ ಎಂಬ ಕಾರಣಕ್ಕೆ ಅವನನ್ನು ಏಕಾಏಕೀ ಎದುರಿಸುವ ಧೈರ್ಯ ತನಗಿರಲಿಲ್ಲ. ಅಕಸ್ಮಾತ್ ತನಗೂ ಆತ ಎರಡಿಟ್ಟರೆ ಎಂಬ ಭಯ ತನ್ನಲ್ಲಿತ್ತು. ಆದರೂ ಒಂದೆರಡು ಬಾರಿ ಜೋರಾಗಿ " ಅಪ್ಪಾ ಏನ್ಮಾಡ್ತಾ ಇದ್ದೀರ ...ಅಮ್ಮನ್ನ ಹೊಡೀತೀರ ಯಾಕೆ ? " ಎಂದು ಜೋರಾಗಿ ಕೂಗಿದ್ದಿದೆ. ಆದರೆ ಅಪ್ಪ ಅದಕ್ಕೆಲ್ಲಾ ಉತ್ತರಿಸುವ ಗೋಜಿಗೆ ಹೋಗದೇ ಅಮ್ಮನನ್ನು ಬೈಯ್ಯುವ ದೂಡುವ ಕಾರ್ಯದಲ್ಲಿ ನಿರತರಾಗೇ ಇದ್ದರು.

ಊಟಕ್ಕೆ ಅಣಿಗೊಳಿಸಿದ ಶರ್ಮಿಳಾ ಆಂಟಿ ತಮ್ಮನ್ನು ಕರೆದರು. ತಾವು ಹೋಗಿ ಕುಳಿತಾಗ ಅಮ್ಮ ಅದೇನೇನೋ ಇಂಗ್ಲೀಷಿನಲ್ಲಿ ತಮ್ಮ ಗೆಳತಿಯೊಂದಿಗೆ ಸಂಭಾಷಿಸಿದರು. ತನಗದು ಸದ್ಯ ಅರ್ಥವಾಗದ್ದು. ಊಟದ ಶಾಸ್ತ್ರ ಮುಗಿಸಿದರು ಅಮ್ಮ. ಆಗಲೇ ರಾತ್ರಿ ೧೨:೩೦ ರ ಮೇಲೆ ಆಗಿಹೋಗಿತ್ತು. ಕೋಣೆಯೊಂದರಲ್ಲಿ ಹಾಸಿಗೆಹಾಸಿ ತಮಗೆ ನಿದ್ರಿಸಲು ಅನುವುಮಾಡಿಕೊಟ್ಟಿದ್ದಳು ಶರ್ಮಿಳಾ ಆಂಟಿ. ಆ ಇಡೀ ರಾತ್ರಿ ಅಮ್ಮ ಏನೇನೋ ಸಣ್ಣಗೆ ಗುನುಗುತ್ತಾ ಅಳುತ್ತಿದ್ದರು. ಅಮ್ಮ ನಿದ್ರಿಸುವುದಿಲ್ಲವೇಮ್ದು ತಿಳಿದು ತನಗೂ ನಿದ್ರೆ ಬೇಡವಾಗಿತ್ತು. ಅದೇ ಕೊನೆಯಿರಬೇಕು. ಅಲ್ಲಿಂದಾಚೆ ಅಮ್ಮ ಮತ್ತೆ ಅಪ್ಪನಿದ್ದೆಡೆ ಹೋಗಲಿಲ್ಲ. ತಾನು ಹುಟ್ಟಿ ಇಷ್ಟುದಿನ ಬೆಳೆದು ಆಡಿದ ಆ ಮನೆ, ಅಲ್ಲಿನ ಸುತ್ತಲ ಪರಿಸರದಲ್ಲಿ ವಾಸವಿದ್ದ ಪೂಜಾ ಆಂಟಿ, ಪವಿತ್ರಾ ಆಂಟಿ, [ಮಂಚ್ ಕೊಡುತ್ತಿದ್ದ ಪಕ್ಕದ ಮನೆ] ತಾತ, ಸೀಬೆಕಾಯಿ ಆಂಟಿ, ಆಡಲು ಬರುತ್ತಿದ್ದ ಸ್ಕೂಲ್ ಸ್ನೇಹಿತರಾದ ರವಿ, ಸುಧೀಶ್, ಚಿರಂತ್, ಸ್ನೇಹಾ, ಇಂಚರ ಇವರೆಲ್ಲರನ್ನೂ ತಾನು ಕಳೆದುಕೊಂಡೆ. ಮತ್ತೆಂದೂ ಅಪ್ಪ ತನಗಾಗಿ ಹುಡುಕಿ ಬರಲೇ ಇಲ್ಲ. ಆಸೆ ಕಂಗಳಿಂದ ನೋಡುತ್ತಿದ್ದ ತನಗೆ ದಿನವೂ ನಿರಾಸೆಯೇ ಕಾದಿತ್ತು. ಈಗ ತನ್ನಜೊತೆ ಚೌಕಾಬಾರ್ , ಕಣ್ಣಾಮುಚ್ಚೆ, ಕೇರಮ್ಮು ಎಲ್ಲಾ ಆಡಲಿಕ್ಕೆ ಯಾರೂ ಇರಲಿಲ್ಲ. ಆಡುವ ವಸ್ತುಗಳೂ ಇರಲಿಲ್ಲ. ಮನೆಯಿಂದ ತಂದಿದ್ದು ಏನೂ ಇರಲಿಲ್ಲ. ಹಾಕಿಕೊಂಡು ಬಂದ ಚಡ್ಡಿ-ಪ್ಯಾಂಟು ಬಿಟ್ಟರೆ ತನ್ನೆಲ್ಲಾ ವಸ್ತುಗಳು ಆ ಮನೆಯಲ್ಲೇ ಇದ್ದವು. ತನಗಿಷ್ಟವಾದ ಜೀನ್ಸ್, ಬಣ್ಣದ ದಿರಿಸುಗಳು, ಕ್ರೆಯಾನ್ಸ್, ರಬ್ಬರು, ಪೆನ್ಸಿಲ್ ಪುಸ್ತಕಗಳು ಎಲ್ಲವೂ ಅದೇ ಮನೆಯಲ್ಲಿದ್ದವು. ಹೋಗಿ ತರೋಣವೆಂದರೆ ಅಮ್ಮ ನೊಂದುಕೊಂಡಾರೆಂಬ ಅನಿಸಿಕೆ.

ಅಪ್ಪ ಯಾಕೆ ಹಾಗಾದನೆಂಬ ಕಾರಣ ಮಾತ್ರ ಗೊತ್ತಗಲೇ ಇಲ್ಲ. ಮೊದಲೆಲ್ಲಾ ಚೆನ್ನಾಗೇ ಇದ್ದರು. ತನ್ನನ್ನು ಬಹಳ ಪ್ರೀತಿಮಾಡುತ್ತಿದ್ದರು, ಮುದ್ದುಮಾಡುತ್ತಿದ್ದರು, ಚಾಕೊಲೇಟ್-ಹೊಸ ಹೊಸ ಬಟ್ಟೆ ಎಲ್ಲಾ ತಂದು ಕೊಡೋರು. ತಾನೇನಾದರೂ ಕೇಳಿದರೆ ಆದಷ್ಟೂ ಬೇಗನೇ ತಂದುಕೊಟ್ಟು " ಈಗ ಖುಷಿ ಆಯ್ತಾ ನಿಂಗೆ ಮರೀ ? " ಎನ್ನುತ್ತಾ ಲಲ್ಲೆಗರೆಯುತ್ತಿದ್ದರು. ಅಮ್ಮನೇ ಆಗಾಗ ಗದರಿಕೊಳ್ಳುವುದು ಬಿಟ್ಟರೆ ಅಪ್ಪ ತನ್ನನ್ನೆಂದೂ ಹೊಡೆದಿರಲಿಲ್ಲ. ಅಮ್ಮನೊಂದಿಗೂ ತುಂಬಾ ಪ್ರೀತಿಯಿಂದ ನಗುತ್ತಾ ಮಾತನಾಡುತ್ತಿದ್ದರು. ಚಳಿಗಾಲದಲ್ಲಿ ಅವರಿಬ್ಬರ ಮಧ್ಯೆ ಹಾಸಿಗೆಯಲ್ಲಿ ಬೆಚ್ಚಗೆ " ಅಮ್ಮ ಹೊದಿಕೆ-ಅಪ್ಪ ಹೊದಿಕೆ " ಎಂದುಕೊಂಡು ಅವರೀರ್ವರು ಹೊದ್ದ ಹೊದಿಕೆಗಳಲ್ಲೂ ಪಾಲು ಪಡೆದು ಒಂದರಮೇಲೊಂದು ಹೊದೆದುಕೊಂಡು ಮಲಗುತ್ತಿದ್ದೆ ತಾನು. ಸ್ಕೂಲಿಗೆ ಹೊತ್ತಾಗುತ್ತೆ ಏಳೋ ಎಂದು ಅಮ್ಮ ಕೂಗಿದರೂ ಅವರೀರ್ವರೂ ಎದ್ದುಹೋಗಿ ಬಹಳ ಸಮಯವಾದರೂ ಏಳುತ್ತಲೇ ಇರಲಿಲ್ಲ ತಾನು. ರಾತ್ರಿ ಊಟವಾದಮೇಲೆ ’ಪೋಗೋ’ ನೋಡುತ್ತ ತಡವಾಗಿ ನಿದ್ರಿಸುವ ತನನ್ನು ಅದೆಷ್ಟೋ ಹೊತ್ತಿಗೆ ಅಪ್ಪ ಮೆಲ್ಲನೆ ಎತ್ತುತಂದು ಹಾಸಿಗೆಯ ಮಧ್ಯಭಾಗದಲ್ಲಿ ಮಲಗಿಸಿಕೊಳ್ಳುತ್ತಿದ್ದರು. ಅವರಿಗೆ ಬೇರಾವ ಚಾನೆಲ್ ನೋಡಲೂ ತಾನು ಬಿಡದಾಗ " ಮರೀ ಸ್ವಲ್ಪ ಹೊತ್ತು ಕಣೋ ನ್ಯೂಸ್ ನೋಡಬೇಕು " ಎಂದೆಲ್ಲಾ ತನ್ನಲ್ಲಿ ಕೇಳುತ್ತಿದ್ದರು. ಸ್ಕೂಲ್ ಹೋಮ್ ವರ್ಕ್ ಮುಗಿಸಲು ಅಪ್ಪನಾಗಲೀ ಅಮ್ಮನಾಗಲೀ ಸಹಾಯಮಾಡುತ್ತಿದ್ದರು. ಯಾವುದೋ ವಸ್ತು ಸರಿಯಿಲ್ಲವೆಂದು ಅತ್ತರೆ ಮಾರನೇದಿನವೇ ಹೊಸದನ್ನು ತಂದುಕೊಡುವ ಜಾಯಮಾನ ಅಪ್ಪನದಾಗಿತ್ತು. ಮೈಕೈ ತುರಿಕೆ ಇದ್ದರೆ ಇಡೀ ಮೈಗೆ ಕೊಬ್ಬರಿ ಎಣ್ಣೆ ಸವರುತ್ತಿದ್ದುದೂ ಅಪ್ಪನೇ ! ಹೊತ್ತಲ್ಲೇ ಎದ್ದು ತನ್ನ ಸ್ಕೂಲ್ ಬ್ಯಾಗ್ ತಯಾರಿಮಾಡಿ, ತನ್ನ ಸಮವಸ್ತ್ರಕ್ಕೆ ಇಸ್ತ್ರಿ ಹಾಕಿ, ಅದನ್ನು ತನಗೆ ತೊಡಿಸಿ, ಕಾಲುಚೀಲ, ಬೂಟು ಇವನ್ನೆಲ್ಲಾ ಹಾಕಿ ಅಣಿಗೊಳಿಸುವುದು ಅಪ್ಪನಾದರೆ, ಸ್ನಾನಮಾಡಿಸಿ, ದೇವರ ಸ್ತೋತ್ರ ಹೇಳಿಸಿ, ತಿಂಡಿಬ್ಯಾಗ್ ತಯಾರಿಮಾಡಿ, ತಿಂಡಿ ತಿನ್ನಿಸಿ-ಹಾಲುಕೊಟ್ಟು ಮುಂತಾದ ಕೆಲಸವನ್ನು ಅಮ್ಮ ಮಾಡುತ್ತಿದ್ದಳು. ಅಪ್ಪ ಗಾಡಿಯಲ್ಲಿ ಕರೆದೊಯ್ಯುವಾಗ ಅಮ್ಮ ಬಾಗಿಲ ಹೊರಗಿನ ಗೇಟಿನವರೆಗೂ ಬಂದು ಬೀಳ್ಕೊಟ್ಟು ಹೋಗುತ್ತಿದ್ದರು.

ಈಗಲೋ ಅಮ್ಮ ಇಲ್ಲಿ, ಅಪ್ಪ ಅಲ್ಲಿ. ಅಪ್ಪನ ಮನೆಗೆ ಮತ್ತೆ ಹೋಗೋಣವೇ ಎಂದು ಕೇಳುವ ಮನಸ್ಸಾಗುತ್ತಿತ್ತಾದರೂ ಅಮ್ಮ ನೊಂದುಕೊಳ್ಳಬಾರದಲ್ಲ. ಅದಕ್ಕೇ ತಾನು ಸುಮ್ಮನಿದ್ದೆ. ನೋಡುತ್ತಾ ನೋಡುತ್ತಾ ಬೆಳಗಾಗಿಹೋಯಿತು. ಅಮ್ಮನಿಗೆ ಶರ್ಮಿಳಾ ಆಂಟಿ ಸ್ವಲ್ಪ ಹಣ ಕೊಟ್ಟಳು. ಅಮ್ಮ-ತಾನು ತಿಂಡಿತಿಂದು ಶರ್ಮಿಳಾ ಆಂಟಿಗೆ ಕೃತಜ್ಞತೆ ಸಲ್ಲಿಸಿ ಅಜ್ಜನಮನೆ ಊರಿಗೆ ಪ್ರಯಾಣಬೆಳೆಸಿದೆವು. ಕೆಲಸದ ದಿನವಾದ್ದರಿಂದ ಅನಿರೀಕ್ಷಿತವಾಗಿ ಮಧ್ಯಾಹ್ನ ೩ ಗಂಟೆಗೆಲ್ಲಾ ಬಂದಿಳಿದ ತಮ್ಮನ್ನು ನೋಡಿ ಅಜ್ಜ-ಅಜ್ಜಿಗೆ ಆಶ್ಚರ್ಯವಾಯಿತು. ಏನೋ ಕಾರಣವಿರಬೇಕೆಂಬ ಗುಮಾನಿ ಅಜ್ಜನಿಗೆ ಬಂದಿರಬೇಕು. ಒಳಮನೆಗೆ ಕರೆದು ಊಟ-ಉಪಚಾರ ವಗೈರೆ ನಡೆಸಿದರು. ಎಷ್ಟೇ ಕೇಳಿದರೂ ಅಮ್ಮ ಆಕ್ಷಣಕ್ಕೆ ಏನನ್ನೂ ಹೇಳಲಿಲ್ಲ. ಸರಿ ಮಗಳು-ಮೊಮ್ಮಗ ಬಂದಿದ್ದಾರೆ ಅಂತ ಅಜ್ಜ-ಅಜ್ಜಿ ಸುಮ್ಮನಾಗಿಬಿಟ್ಟರು.

ದಿನಗಳು ಕಳೆಯುತ್ತಲೇ ಇದ್ದವು. ತನಗೆ ಸ್ಕೂಲೂ ಇರಲಿಲ್ಲ, ಸ್ನೇಹಿತರೂ ಇರಲಿಲ್ಲ. ಅಜ್ಜನ ಮನೆಯ ಸುತ್ತಲ ಮನೆಯ ಕೆಲವು ಹುಡುಗರು " ನೀನು ಸ್ಕೂಲಿಗೆ ಹೋಗುವುದಿಲ್ವೇನೋ ? " ಎಂದು ಗೋಳುಹುಯ್ದುಕೊಳ್ಳುತ್ತಿದ್ದರು. ಅವರೆಲ್ಲರ ಮನೆಯಲ್ಲಿ ಅಪ್ಪ್-ಅಮ್ಮ ಹಾಯಾಗಿದ್ದರು. ಅವರೆಲ್ಲಾ ಅ ಹಳ್ಳಿಯ ಶಾಲೆಗೆ ಹೋಗುತ್ತಿದ್ದರು. ಅವರನ್ನೆಲ್ಲಾ ನೋಡಿದಾಗ ತನಗೂ ಅಪ್ಪನ ನೆನಪು ಸದಾ ಕಾಡುತ್ತಿತ್ತು. ಅಪ್ಪನ ಮನೆಗೆ ಅಮ್ಮ ಹೋಗುವುದು ಯಾವಾಗ, ಮೊದಲು ನಾವು ಊರಿಗೆ ಬಂದಾಗ ದಿನವೂ ದೂರವಾಣಿ ಕರೆ ಮಾಡಿದ ಹಾಗೇ ಈಗಲೂ ಕೊನೆಗೊಮ್ಮೆ ಮಾಡಬಹುದೇ? ಅಮ್ಮ ಯಾಕೆ ಹೀಗೆ ಮಾಡಿದಳು. ತಿರುಗಿ ಒಮ್ಮೆ ಅಪ್ಪನನ್ನು ಓಲೈಸಿ ಮನೆಗೆ ಹೋಗಬಾರದಿತ್ತೇ ? ಉತ್ತರವಿಲ್ಲದ ಪ್ರಶ್ನೆಗಳು ಕಾಡುತ್ತಲೇ ಇದ್ದವು. ಹೀಗೇ ತಿಂಗಳುಗಳ ಮೇಲೆ ತಿಂಗಳುಗಳೇ ಕಳೆದುಹೋದವು. ಅಪ್ಪ ತಮ್ಮನ್ನೆಲ್ಲಾ ಮರೆತಿರಬಹುದೇ? ಈಗ ಹೇಗಿರಬಹುದು? ಆತನ ಕೋಪ ತಣ್ಣಗಾಗಿರಬಹುದೇ ? ಎಂದು ಯೋಚಿಸುತ್ತಿದ್ದೆ. ಅನಿರೀಕ್ಷಿತವಾಗಿ ಬಂದ ಅಂಚೆಮಾಮ " ಮರಿ ಶಾಲ್ಮಲಿ ಅಂದ್ರೆ ಯಾರು ಕೂಗು " ಅಂದರು. ಅಮ್ಮನನ್ನು ಕೊಗಿದೆ. ರಜಿಸ್ಟರ್ ಮಾಡಿದ ಪತ್ರವೊಂದು ಬಂದಿದೆಯೆಂದು ಆತ ತಿಳಿಯಿತು. ಹಾಗಂತ ಅಮ್ಮನೇ ಹೇಳಿದ್ದು. ಪತ್ರ ಬಂತಲ್ಲ, ಬಹುಶಃ ಅಪ್ಪನದ್ದೇ ಇರಬೇಕು, ಇನ್ನೇನು ತಮ್ಮನ್ನು ಕರೆದುಬಿಡುತ್ತಾನೆ ಎಂದುಕೊಂಡೆ.

ಅಮ್ಮ ಗಳಗಳನೇ ಅಳಲು ಶುರುಮಾಡಿದ್ದರು. ಬಂದ ಪತ್ರದಲ್ಲಿ ಏನಿತ್ತು ಎಂಬುದು ತನಗೆ ಅರ್ಥವಾಗದ್ದು. ಮತ್ತದೇ ಅರ್ಥವಾಗದ ನೋವುಗಳು. ಕಾಡುವ ಪ್ರಶ್ನೆಗಳು, ಮರೆಯಲಾಗದ ನೆನಪುಗಳು. ಅಂದು ಮಾತ್ರ ಅಮ್ಮ ಎಲ್ಲರೆದುರೂ ತನ್ನ ಮನಸ್ಸನ್ನು ಬಿಚ್ಚಿ ಹೇಳಲೇಬೇಕಾಯಿತು. ಅಮ್ಮನಿಗೆ ಅಪ್ಪ ನ್ಯಾಯಾಲಯದ ಮೂಲಕ ಸೋಡಚೀಟಿ ಕೊಡುತ್ತಿರುವ ಸಂದೇಶ ಕಳಿಸಿದ್ದ. ಹಾಗಂದರೇನು ಮುಂದೇನಾಗುತ್ತದೆ ಎಂಬುದು ತನ್ನರಿವಿಗೆ ನಿಲುಕದ ವಿಷಯ. ಅಮ್ಮನೊಂದಿಗೆ ಅಜ್ಜ-ಅಜ್ಜಿಯೂ ಅತ್ತಾಗ ತನಗೂ ಅಳುತಡೆಯಲಾಗಲಿಲ್ಲ. ಗಂಟೆಗಟ್ಟಲೆ ಇಡೀ ಕುಟುಂಬ ಅತ್ತಿದ್ದೆವು. ಆಮೇಲೆ " ಎದೆಗಟ್ಟಿ ಮಾಡಿಕೋ ಮಗಾ ದೇವರಿದ್ದಾನೆ .......ನಿನಗೆ ಹೇಗೂ ಮಗನೊಬ್ಬನಿದ್ದಾನಲ್ಲ .......ಅವನ ಮುಖನೋಡಿ ನಿನ್ನ ನೋವನು ಮರೆ" ಎಂದು ಅಜ್ಜ ಹೇಳುತ್ತಿದ್ದರು. ಅಪ್ಪ ಏನು ಕಳಿಸಿದ್ದಾನೆ ಎಂಬುದು ನನಗೆ ಕೊನೆಗೂ ತಿಳಿಯದ ವಿಷ್ಯವೇ ಆಗಿತ್ತು. ಹಠಮಾಡಿದ್ದಕ್ಕೆ ಅಜ್ಜ ಹೇಳಿದ್ದು " ನಿಮ್ಮಪ್ಪನಿಗೆ ನೀವು ಬೇಡವಂತೆ ಕಣೋ ....ಅದಕ್ಕೇ ಆತ ಬೇರೆ ಮದುವೆಯಾಗುತ್ತಾನಂತೆ.....ಇನ್ನು ನಿನ್ನ ಪಾಲಿಗೆ ಅಮ್ಮನೇ ಅಪ್ಪ ಮಗೂ ...ಜಾಸ್ತಿ ಏನೂ ಕೇಳಬೇಡ...ನಿನಗೀಗ ಅರ್ಥವಾಗೊಲ್ಲ...ಮುಂದೊಂದು ದಿನ ನೀನು ದೊಡ್ಡವನಾಗಿ ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯಲ್ಲಿದ್ದು ಅಮ್ಮನ್ನ ಚೆನ್ನಾಗಿ ನೋಡಿಕೋ ....ದೇವರು ನಿಮಗೆ ಒಳ್ಳೇದು ಮಾಡುತ್ತಾನೆ " ಅಜ್ಜ ಮತ್ತೆ ಪಂಚೆಯ ತುದಿಯಿಂದ ಕಣ್ಣೊರೆಸಿಕೊಳ್ಳ ಹತ್ತಿದ್ದರು.

ಕಳೆದೆರಡು ವರ್ಷಗಳಲ್ಲಿ ಅಷ್ಟೊಂದು ಪ್ರೀತಿಸಿದ್ದ ಅಪ್ಪ ಇಂದೇಕೆ ತಮ್ಮನ್ನು ಬೇಡವೆಂದು ಹೇಳುತ್ತಿದ್ದಾನೆ ಎಂಬುದು ಕಗ್ಗಂಟಾದ ಸಂಗತಿಯಾಗಿತ್ತು. ಅಪ್ಪನ ಹರವಾದ ಎದೆಯಮೇಲೆ ಮಲಗಿಕೊಂಡು ಆಟವಾಡುತ್ತಾ ಆತನ ಎದೆಗೂದಲನ್ನು ಎಳೆದು ನೋವುಂಟುಮಾಡಿ ಆತ ಕಿರುಚಿದಾಗ ಸಂತಸಗೊಳ್ಳುತ್ತಿದ್ದ ಆ ರಜಾದಿನಗಳು ಮತ್ತೆ ಸಿಗುವುದೇ ? ಅಪ್ಪನ ಬೆನ್ನಮೇಲೆ ಹತ್ತಿ ಆನೆಯಾಟವಾಡುವ, ಆತನನ್ನು ಕೂರಿಸಿ ಆತನ ಮೈಮೇಲೆ ಟವೆಲ್ ಹೊದಿಸಿ, ತಲೆಗೆ ನೀರು ಸಿಂಪಡಿಸಿ, ಹಣಿಗೆ ತೆಗೆದುಕೊಂಡು ಕ್ಷೌರಿಕನ ಆಟವಾಡುವ ದಿನಗಳು ಮತ್ತೆ ಲಭ್ಯವೇ ? ಅಪ್ಪನೇ ಖುದ್ದಾಗಿ " ಇನ್ನು ನೀವು ಬರುವುದೇ ಬೇಡ..." ಎಂದು ಸಂದೇಶ ಕಳಿಸಿದ ಮೇಲೆ ಇನ್ನೆಲ್ಲಿ ಮತ್ತೆ ಅಪ್ಪ ಕರೆಯುವುದು ಸಾಧ್ಯವೇ ? ಮತ್ತದೇ ಮೂಕ ಭಾವಗಳು, ನಾಕಾರು ಪ್ರಶ್ನೆಗಳು .....ಯಾವುದೂ ಮನಸ್ಸಿಗೆ ಸುಸೂತ್ರವಿಲ್ಲ. ಅಳುವ ಅಮ್ಮನ-ಅಜ್ಜ-ಅಜ್ಜಿಯ ಮುಖಗಳನ್ನೇ ನೋಡುತ್ತಾ ಆ ಎಲ್ಲವನ್ನೂ ಮರೆತು ಆಡಲು ಪ್ರಯತ್ನಿಸಿದವ ತಾನು. ವಾಸ್ತವದಲ್ಲಿ ತನಗೆ ಆಟವೂ ಬೇಡ...ಊಟವೂ ಬೇಡ.....ಅಪ್ಪ ಸಿಕ್ಕರೆ ಸಾಕಾಗಿತ್ತು.

ಅಂತೂ ಅಪ್ಪ ಬಾರದಾದ. ತಾವಿಲ್ಲಿದ್ದಾಗ ಉಲಿಯುತ್ತಿದ್ದ ದೂರವಾಣಿ ಯಂತ್ರ ಈಗ ಸುಮ್ಮನೇ ಹಂಗಿಸುತ್ತಿತ್ತು. ಬೇಡದ ಪತ್ರಗಳೇ ಬರುತ್ತಿದ್ದವು. ತಮ್ಮ ಜೀವನ ಸದ್ಯ ಇಲ್ಲಿಯೇ ಎಂಬುದು ತನಗರಿವಾದದ್ದು ಆ ದಿನಗಳಲ್ಲಿ. ಅಜ್ಜ ಅವರಿವರನ್ನು ಕಂಡು ತನ್ನನ್ನು ಹಳ್ಳಿಯ ಶಾಲೆಗೆ ಸೇರಿಸಿದ. ತನಗೆ ಕನ್ನಡ ಬರುತ್ತಿರಲಿಲ್ಲ. ಹೊಸದಾಗಿ ಅಭ್ಯಸಿಸಬೇಕಾಗಿತ್ತು. ಆದರೂ ಹೊಸ ಗೆಳೆಯರೊಂದಿಗೆ ಹೊಂದಿಕೊಂಡು, ಅಜ್ಜ-ಅಜ್ಜಿಯರೊಡನೆಯೂ ಆಟವಾಡುತ್ತಾ ಅಮ್ಮ-ಅಜ್ಜ-ಅಜ್ಜಿ ಹೇಳುವ ಹಲವು ಕಥೆಗಳನ್ನೂ, ವೀರಪುರುಷರ ಜೀವನಗಾಥೆಗಳನ್ನೂ ಕೇಳುತ್ತಾ ಅಪ್ಪನಿಲ್ಲದ ನೋವನ್ನು ಮರೆತೆ. ಮುಂದೊಂದು ದಿನ ಬೆಳೆದು ದೊಡ್ಡವನಾಗಿ ಅಜ್ಜನಿಗೂ-ಅಜ್ಜಿಗೂ-ಅಮ್ಮನಿಗೂ ಖುಷಿತರುವ ಇಚ್ಛೆ ತನಗೆ ಬಂದಿತ್ತು. ಸಾಧ್ಯವಾದರೆ ಮತ್ತೆ ಅಪ್ಪ ತಮ್ಮನ್ನು ಕರೆದೊಯ್ಯಬಹುದೆಂಬ ಆಸೆಯೂ ಇತ್ತು; ಬತ್ತಿಹೋಗಿರಲಿಲ್ಲ.

ತಾನು ಹೈಸ್ಕೊಲ್ ಗೆ ೧೦ನೇ ಈಯತ್ತೆಗೆ ಹೋಗುವಾಗಲೇ ತಿಳಿದದ್ದು ’ಅಮ್ಮನನ್ನು ಅಪ್ಪ ಬಿಟ್ಟುಬಿಟ್ಟಿದ್ದಾನೆ’ ಅಂತ. ಅದಕ್ಕೆ ಕಾರಣವಿಷ್ಟೆ ಅಪ್ಪ ಇನ್ಯಾವುದೋ ಹುಡುಗಿಯ ಪ್ರೇಮಪಾಶದಲ್ಲಿ ಬಿದ್ದಿದ್ದ. ಆಕೆ ಅಮ್ಮನಿಗಿಂತಾ ಸುಂದರಿಯಂತೆ. ಒಳ್ಳೆಯ ನೌಕರಿಯಲ್ಲಿದ್ದಾಳಂತೆ. ಅದುಹೇಗೋ ಅಪ್ಪನಿಗೆ ಅಂತರ್ಜಾಲದ ಮೂಲಕ ಸಂಪರ್ಕ ಬೆಳೆದು ಇಬ್ಬರೂ ಮಾತನಾಡತೊಡಗಿದರಂತೆ. ಆಮೇಲೆ ಅವಳು ಅಪ್ಪನ ಜಂಗಮವಾಣಿಗೆ ಆಗಾಗ ಕರೆಮಾಡುತ್ತಿದ್ದಳಂತೆ. ಈ ವಿಷಯ ಅದು ಹೇಗೋ ಅಮ್ಮನಿಗೆ ತಿಳಿದುಬಿಟ್ಟಿದೆ. ಅಮ್ಮ ಅಂದೇ ಬಹಳ ಅತ್ತಳಂತೆ. ಆಮೇಲೆ ಆಗಾಗ ಪರಿಪರಿಯಾಗಿ ಅಪ್ಪನಲ್ಲಿ ಆ ಸಂಬಂಧ ಬಿಡುವಂತೇ ಗೋಗರೆದಳಂತೆ. ಆದರೆ ಅಪ್ಪನ ಹುಚ್ಚುಪ್ರೀತಿ ಕುರುಡಾಗಿ ಅಮ್ಮನ ಇರವನ್ನು ಮರೆತಿತ್ತು. " ಬೇಕಾದ್ರೆ ನೀನೂ ಇರು ಇಲ್ಲಾಂದ್ರೆ ಅವಳೊಬ್ಬಳೇ ಸಾಕು ....." ಎಂದು ಅಪ್ಪ ಒತ್ತಾಯಿಸಿದಾಗ ಅಮ್ಮನಿಗೆ ಮನಸ್ಸು ತಾಳದೇ ಜಗಳ ಆರಂಭಿಸಿದ್ದಾಳೆ. ಈ ವಿಷಯ ತನ್ನಲ್ಲೇ ಇರಲಿ ಎಂದು ಕೊನೆಯ ದಿನದವರೆಗೂ ಯಾರಿಗೂ ಹೇಳಿರಲಿಲ್ಲ. ಯಾವಾಗ ಅಪ್ಪ ತಾನು ಪ್ರೀತಿಸಿದ ಇನ್ನೊಬ್ಬ ಹುಡುಗಿಯನ್ನು ಶೀಘ್ರವೇ ಮದುವೆಯಾಗುತ್ತೇನೆ ಎಂದನೋ ಆಗ ಮಾತ್ರ ಜಗಳ ತಾರಕ್ಕಕೇರಿತು. ಅದೇ ಕೊನೆ. ಅಮ್ಮನೂ ಮನಸ್ಸು ಗಟ್ಟಿ ಮಾಡಿಕೊಂಡು ಏನಾದರಾಗಲಿ ಎಂದು ಜಗಳವಾಡಿದ್ದು. ಯಾವ ಹೆಣ್ಣೆ ಆಗಲಿ ಇನ್ನೊಂದು ಹೆಣ್ಣಿಗೆ ತನ್ನ ಗಂಡನನ್ನು ಕೊಡಲು ಒಪ್ಪುವಳೇ ? ಖಾರವಾದ ಮಾತುಗಳು ಕೈಕೈಮಿಲಾಯಿಸುವವರೆಗೆ ಬೆಳೆದು ಅಮ್ಮ-ಅಪ್ಪ ನಿಜಕ್ಕೂ ಬಡಿದಾಡಿದರು. ಅಂದೇ ರಾತ್ರಿ ಅಪ್ಪ ದಯೆ, ಕರುಣೆ, ವಾತ್ಸಲ್ಯ, ನೀತಿ, ಪ್ರೀತಿ ಎಲ್ಲವನ್ನೂ ಗಾಳಿಗೆ ತೂರಿ ಹದಿಹರೆಯದ ಹುಡುಗನಂತೇ ಆ ಹುಡುಗಿಗಾಗಿ ಹಂಬಲಿಸುತ್ತಾ ತಮ್ಮನ್ನು ಮನೆಯಿಂದ ಹೊರದಬ್ಬಿದ್ದರು !

ಮುಪ್ಪಿನ ವಯಸ್ಸಿನ ಅಜ್ಜ-ಅಜ್ಜಿ ತಮ್ಮ ಕೃಷೀಜೀವನದ ಕಷ್ಟಾರ್ಜಿತದಲ್ಲಿ ತಮ್ಮನ್ನು ಅದುಹೇಗೋ ಸಾಕಿ-ಸಲಹಿದರು. ಗಂಡುಮಕ್ಕಳಿಲ್ಲದ ಅವರಿಗೆ ತಾನೇ ಗಂಡುಮಗುವಂತಾಗಿ ಬೆಳೆದೆ. ಪದವಿ ಮುಗಿಸಿ ನಂತರ ’ಮಾನವ ಸಂಪನ್ಮೂಲ ಮತ್ತು ಅದರ ಅಭಿವೃದ್ಧಿ, ತರಬೇತಿ ’ ಈ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಇಂದು ಒಂದು ಹಂತಕ್ಕೆ ಬಂದಿದ್ದೇನೆ.

" ಸರ್ ....ಅಪ್ಪ ನಾನು ಚಿಕ್ಕವನಿರುವಾಗಲೇ " ಎಂಬ ರಾಜೀವನ ಪುನರುಕ್ತಿಗೆ ಮರಳಿ ಲೋಕಕ್ಕೆ ಬಂದ ಗಿರೀಶ್ ಆತನನ್ನು ಆಯ್ಕೆಮಾಡಿದ. ಅಪ್ಪನಿಲ್ಲದ ಬದುಕು ಯಾವ ಮಗುವಿಗೂ ನೋವಿನ ಬದುಕೇ ಸರಿ ಎಂಬುದು ಅವನ ಮನದಿಂಗಿತವಾಗಿತ್ತು. ತಾನೆಂದೂ ಹೆಣ್ಣಿನ ಸೌಂದರ್ಯಕ್ಕಾಗಿ ಸೋತು ಬಾಳುಕೊಟ್ಟ, ಕೈಹಿಡಿದ ಹೆಣ್ಣಿಗೆ ವಂಚಿಸಬಾರದು ಎಂದುಕೊಂಡ ಗಿರೀಶ್ ಕಛೇರಿಯ ಸಹಾಯಕನನ್ನು ಕರೆದು ಹೊರಗೆ ಕೂತಿರುವ ಶೀತಲ್ ಳನ್ನು ಒಳಗೆ ಕಳಿಸಲು ಹೇಳಿದ. ನೌಕರಿ ಗಿಟ್ಟಿಸಿದ ರಾಜೀವನ ಕೈಕುಲಿಕಿದ, ರಾಜೀವ ನಮಸ್ಕರಿಸಿ ಹೊರಟುಹೋದ. ಆ ನಂತರ ಒಳಗೆಬಂದ ಶೀತಲ್ ಗೆ " ಇವತ್ತಿನ ಸಂದರ್ಶನದಲ್ಲಿ ನಿಮಗೆ ಇನ್ನೂ ಹಲವು ಪ್ರಶ್ನೆಗಳನ್ನು ಕೇಳುವುದಿತ್ತು... ಆದರೆ ಇವತ್ತು ಸಮಯ ಸಾಲುತ್ತಿಲ್ಲ...ಕಾಯಿಸಿದ್ದಕ್ಕಾಗಿ ಕ್ಷಮಿಸಿ....ಇನ್ನೊಮ್ಮೆ ನಿಮಗೆ ಸಂದೇಶ ಕಳಿಸಿ ಹೊಸದಾಗಿ ಸಂದರ್ಶಿಸುತ್ತೇನೆ " ಎಂದು ಕಳುಹಿಸಿಕೊಟ್ಟ. ತಾನಿನ್ನೂ ಮದುವೆಯಾಗಿರದ ವ್ಯಕ್ತಿಯೇ ಆಗಿದ್ದರೂ ತನ್ನ ಬಾಲ್ಯದಲ್ಲಿ ಅಪ್ಪ ನಡೆಸಿದ ಕಥೆ ಗಿರೀಶ್ ನ ಮನದ ತುಂಬಾ ತುಂಬಿಕೊಂಡಿತ್ತು.

Friday, November 19, 2010

ರಾಧಿಕೆ ನಿನ್ನ ಸರಸವಿದೇನೆ ..........?


ರಾಧಿಕೆ ನಿನ್ನ ಸರಸವಿದೇನೆ ..........?

" ಏನ್ಲಾ ಸಿವಾ ಆರಾಮಿದೀಯೇನ್ಲಾ ? "

" ಹೌದಣೋ ಸಂದಾಕಿವ್ನಿ, ಮತ್ತೇನಿಸ್ಯ ? "

" ಏನಿಲ್ಕಣೊ ಮಗಾ ಯಡ್ಯೂರಣ್ಣನ್ ತಾವ ಬಾಳಾ ಜಮೀನದಾವಂತೆ ಒಸಿ ಕೊಡುಸ್ಕ್ಯಬೇಕಾಗಿತು "

" ಅವ್ರಲ್ಲ ಸೋಬಕ್ಕ ಅವ್ರುನ್ನೆ ಹಿಡ್ದ್ಬುಡಿ ಕೆಲ್ಸ್ ಸಲೀಸಾಗೋತದೆ "

" ಒಹೊಹೊಹೊ ಸೋಬಕ್ಕ ಅಂಗೇ ಎಲ್ಲಾ ಮಾತಾಡ್ಸಕಿಲ್ಲ ಸಿವಾ ಅವರೀಗ ೧೬೬ ಎಕ್ರೆ ಕಾಪೀ ಎಸ್ಟೇಟ್ ಮಡಗವ್ರೆ "

" ಹೌದೇನಣಾ ? ನಂಗೊತ್ತೇ ಇರ್ಲಿಲ್ಲಾ "

" ಸುಮ್ಕೇನಾ ರಾಜ್ಕೀಯಕ್ಕೆ ಬಂದಿರಾದು, ಅವ್ರುಗೆ ರಾತ್ರೋರಾತ್ರಿ ಅದ್ಯಾವ್ದೋ ಕಂಪ್ನಿ ಮೂರುವರೆ ಕೋಟಿ ಸಾಲ ಕೊಟ್ಟದೆ, ಜಾಮೀನಿಲ್ಲ-ಗೀಮೀನಿಲ್ಲ.....ಆ ದುಡ್ನೇ ನಾ ಕಾಪೀ ತೋಟ ತಗಳಕೆ ಬಳ್ಸಿರಾದು ಅಂತ ಹೇಳ್ಯವ್ರೆ ಎಲ್ಲೀ.....ಲೋಕಾಯ್ತರಲ್ಲಿ.....ಅವ್ರುಗೆ ಸಾನೆ ಡೌಟ್ ಬಂದದೆ....ಅದೆಂಗೆ ನಿಂಗೆ ಅಷ್ಟೆಲ್ಲಾ ಸಾಲ ಕೊಟ್ಬುಟ್ರು ಅಂತ ರಾಗತೆಗ್ದವ್ರೆ....ಅಷ್ಟೊತ್ಗೆ ನಮ್ಮ ಯಡ್ಯೂರಣ್ಣ ಫೋನಾಕವ್ರೆ ಅನ್ಸುತ್ತೆ.....ಬಿಟ್ಟಾಕವ್ರೆ "

" ಹೌದೇನಣಾ ? ಇಷ್ಟೆಲ್ಲಾ ಆಗೈತಾ ? ಅಂಗಾರೆ ಕಷ್ಟಕಣಣ್ಣೋ ಸದ್ಯ ನೀ ಸೋಬಕ್ಕನ್ ತಾವ ಹೋಗ್ಬ್ಯಾಡ "

" ಸುಮ್ಮುನ್ಕುತ್ಗೊಳೋ ತರ್ಲೆ ನನ್ಮಗನೆ ನಂಗೊತ್ತಿಲ್ವಾ ಈ ಕೆಲಸಕ್ಕೆ ಯಾರ್ನ ಹಿಡೀಬೇಕು ಯಾರ್ನ ಮಡೀಕಬೇಕು ಅಂತಾವ "

-----------------------

" ಅಣಾ ಭೂಕಬಳಿಕೆ ಅಂತಾವ ವಾತ್ರೆಲಿ ಹೇಳವ್ರಲ್ಲ ಹದೇನಣಾ ಅಂಗಂದ್ರೆ ಕಬಳ್ಸೋದೂ ಅಂದ್ರೆ ನುಂಗೋದಲ್ವಾ.... ? "

" ಹೌದ್ಕಣಪ್ಪಾ ಖುರ್ಚೀಲಿದ್ದಾಗ ಮಾಡ್ಮಡೀಕಬುಟ್ರೆ ಮೊಮ್ಮಕ್ಳ ಕಾಲಕ್ಕೂ ಬತ್ತದೆ ಅಂತ ಎಲ್ಲಾ ಸುರುಹಚ್ಕಂಡವ್ರೆ "

" ಕಟ್ಟಾ ಮೀಟಾ ಅಂತೆಲ್ಲ ಬರುದ್ರಲ್ಲ ಪೇಪರ್ರಗೆ ಈಗ ಎಲ್ಲಾವ್ರೂ ಕಟ್ಟಾನೇ ಹಂತೀಯಾ ? "

" ಹಿನ್ನೆಲ್ಲಾ ಅಂಗೇಯ ಕಣ್ಲಾ .....ಒಂದಷ್ಟ್ ಕಾಸ್ಮಾಡ್ಕೆಂಬುಟ್ಟು ಅಲ್ಲಿ ಹಿಲ್ಲಿ ನಿತ್ಗಂಬೋದು...ಗೆದ್ ಬರೂತ್ಲೂವೆ ಎಲ್ಲಾ ಸ್ಕೆಚ್ ಹಾಕ್ಕಂಬೋದು.....ಯಾರಾದ್ರೂ ಅಡ್ಡ ಬಂದ್ರೆ ಸರ್ಕಾರ ಉರುಳುಸ್ತೀವಿ ಅಂತಾ ಕಾಗೆ ಹಾರ್ಸೋದು ....ತಾವೇನೇ ಮಾಡುದ್ರೂ ಎಲ್ಲಾರೂ ಸುಮ್ಕಿರ್ಬೇಕು .....ಆಮೇಲಾಮೇಲೆ ಎಲ್ಲರೂ ತಮ್ಮಂಗೇ ಆಗೋಯ್ತರೆ .....ಆಗಿರೋದು ಒಂದೇ ಪಾಲ್ಟಿ .....ಇರೋಧಾನೇ ಇರಾಕಿಲ್ಲ "

" ಎಂತಾ ಕಾಲ ಬಂದೋಯ್ತಣಾ.....ನಮ್ ಕುಮಾರಣ್ಣ ಅಂಗೆಲ್ಲಾ ಮಾಡಾಕಿಲ್ಲ ಹಲ್ವಾ "

" ಕುಮಾರಣ್ಣ್ನೇ ಸುರುಹಚ್ಕಂಡಿದ್ ಕಣ್ಲಾ ಮೂದೇವಿ .........ಆವಯ್ಯಾ ಸುರುಮಾಡಿದ್ನೇ ಈವಯ್ಯಂದ್ರು ಮುಂದರ್ಸ್ಕೋತ ಬಂದವ್ರೆ "

" ನಮ್ಮ ಕಿಷ್ಣಪ್ಪೋರ್ ಕಾಲಕ್ಕೆಲ್ಲಾ ಒಳ್ಳೇದಿತ್ತಲ್ಲಾ ? "

" ಕತ್ತೇನ್ ತಂದು...ಕಿಷ್ಣಪ್ಪೋರು ದಿಲ್ಲಿ ದರ್ಬಾರಿಂದ್ಲೇ ಮೊನ್ನೆ ಅಳೀಮಯ್ಯ ಮುಕಾಂತ್ರ ರಿಸಾಟ್ರ ಬಿಲ್ನೆಲ್ಲಾ ಶೆಟ್ಲಮಾಡ್ಸಿಲ್ವೇಲ್ನಾ ? ನಿಂಗೆ ರಾಜ್ಕೀಯ ಗೊತ್ತಾಯಾಕಿಲ್ಲ ನೀ ಬಿಡಾಕಿಲ್ಲ .... ಜೀವಾ ತಿಂತೀಯ"

------------------

" ದೀಪಾವಳಿ ಗಿಫ್ಟು ಕೊಡ್ಲೇ ಇಲ್ಲಾ ಕಣಣ್ಣಾ ನೀನು .....ದೀಪಾವಳೀನೂ ಆಗೋಯ್ತು...ತುಳ್ಸಿ ಪೂಜೆನೂ ಆಗೋಯ್ತು"

" ಗೋವಾದಿಂದ ತರಕ್ ಯೋಳಿದ್ದೆ ಕಣ್ಲಾ ನಮ್ ಬಾಮೈದ ಹಲ್ಲೇ ಕೆಲ್ಸ ಮಾಡದು....ಬರೋವಾಗ ಒಂದಷ್ಟ ಹಿಡ್ಕಂಬಾ ಅಂತಂದೆ .....ಆವಯ್ಯ ರಜಾ ಸಿಗ್ನಿಲ್ಲಾ ಅಂತಾವ ಬರೋದೇ ಬಂದಮಾಡ್ದ್ನ ...ನಂಗೊಂತರಾ ಕೈಮುರ್ದಾಂಗಾಗೋಗದೆ "

" ಹೋಗ್ಲಿ ರವಿಬೆಳಗೆರೆ ಅದೇನೋ ’ಕಾಮರಾಜ ಮಾರ್ಗ’ ಅಂತ ಬರ್ದವನಂತಲ್ಲಾ ಓದುದ್ರಾ ? "

" ನಮ್ಮಂತೋರ್ಗೆ ಗೀತೆ ಗೀತೆ ಕಣ್ಲಾದೂ....ವೈನಾಗಿ ಎರಡು ತುಂಡ್ ತಿಂದ್ಕಬುಟ್ಟು ಒಸಿ ಏರ್ಸ್ಕಬುಟ್ಟಿದ್ದೇ ಓದೋಕ್ಕೂತ್ರೆ ಸ್ವರ್ಗ... ಸ್ವರ್ಗನೇ ಇಳ್ದ್ ಬತ್ತದೆ....ಅದ್ಕೇ ಕಣ್ಲಾ ...ಪ್ರಿಂಟಾದಂಗೂ ಖರ್ಚಾಗೋತದೆ ನೋಡ್ತಾಯಿರು ! "

" ಹಂತಾದೇನಣಾ ಅದ್ರಲ್ಲಿ ? "

" ನೇರೂ ಕಾಲ್ದಿಂದ ಹಿಡ್ದು ಇಲ್ಲೀಗಂಟ ಸುಮಾರೆಲ್ಲಾ ದೊಡ್ ಮನ್ಸೂರ ಬಗ್ಗೆ ಬರದವ್ನೆ.... ಅವರೋ ಅವರಾಟಾನೋ ನಾ ಯೋಳ್ತಾಯಿದ್ರೇ ಇಂಗ್ ಬಾಯ್ಬಾಯ್ ಬಿಟ್ಕಂಡು ನೋಡ್ತಾಯ್ಕಂತೀಯ ....ಇನ್ನು ನಿಂಗೇನಾರ ಪುಸ್ತ್ಕಾ ಸಿಕ್ಕುದ್ರೆ ದಿನಾ ಓದಕಾಯ್ತದೆ ಅಂತಾವ ದೇವರ್ಕೋಣೇಲಿ ಪೂಜೆಗಿಟ್ಕಂಬುಡ್ತೀಯ ಬುಡು "

" ಅಣಾ ಬೆಂಗ್ಳೂರ್ಗೋದ್ರೆ ನಂಗೊಂದ್ ಕಾಪಿ ತಗಂಬಾರಣ...ಅದೆಷ್ಟಾತದೆ ಅಂತಾ ಕೊಟ್ಬುಡ್ತೀನಿ "

" ಅದ್ಕಿರೋದು ಹಿನ್ನೂರೈವತ್ತು ರೂ. ಬ್ಲಾಕಲ್ಲಿ ಡಬಲ್ ರೇಟ್ ಮಡ್ಗ್ಯವ್ರೆ ಅಂದವ್ನೆ ನಮ್ ಬಸ್ಯ "

" ಏನಾರಾ ಆಕ್ಕೊಂಡೋಗ್ಲಿ ಕಣಣ್ಣೋ ನಂಗೊಂದ್ ಕಾಪಿ ಬೇಕೇ ಬೇಕು "

-------------------

" ಅಣಾ ಕನಡಾ ಸಾಯ್ತ್ಯ ಸಮ್ಮೇಳ್ನ ಮಾಡ್ತವ್ರಂತಲ್ಲ "

" ಹೌದ ಕಣೋ ಈ ಸರ್ತಿ ಬೇಂಗ್ಳೂರಾಗೇ ಮಾಡಾದು "

" ಹದ್ಯಾರೋ ಜೀವಿ ನ ಕರೀತಾರಂತೆ ....ಹದ್ಯಾರ್ಲ ಅಂಗಂದ್ರೆ ? "

" ಓ ಅದೇ ಕಣ್ಲಾ ಮೊದ್ಲೆಲ್ಲಾ ಹವ್ರೂ ಇವ್ರೂ ಅಂತ ಮಾ ಮಾ ದೊಡ್ ಹೆಸರುಇದ್ದೋರ್ನ ಕರೀತಿದ್ರು....ಅವರಿಗೆಲ್ಲ ಮಾತಾಡಕ್ಕೇ ಕೊಡ್ದೇ ಜೀವಿಲ್ದಿದ್ದಂಗೇ ಕೂತಿರ್ಬೇಕಾಯ್ತಿತ್ತು....ಈವಯ್ಯ ೯೮ ವರ್ಸಾದ್ರೂ ಭಲೇ ಘಾಟಿ .....ಚೆನ್ನಾಗಿ ಮುಕಕ್ಕೇ ಉಗ್ದಂಗೆ ಯೋಳಬುಡ್ತರೆ ಅದಕ್ಕೇ ಜೀವಿ ಜೀವಿ ಹನ್ನದು "

" ಹೌದು ಹದ್ಯಾವನೋ ಮುದ್ಕಪ್ಪನ ಕರ್ದು ಅಲ್ಲಿ ಹೇನೆಲ್ಲಾ ಮಾಡ್ತರೆ ? "

" ಮೂರು ದಿವ್ಸ ಹಬ್ಬ ಹಬ್ಬದ್ ತರ ಇರ್ತದೆ ಕಣ್ಲಾ....ಊಟ...ತಿಂಡಿ ಅಂತ ಎಲ್ಲಾ ಇರ್ತದೆ.....ಕನಡಾ ಬಾವುಟ ಹಾರುಸ್ತರೆ.....ಸುರುವಾಗೋವಾಗ ಸಲ್ಪ ಮೆರವಣ್ಗೆ ಹದೂ ಇದೂ ಇರ್ತದೆ ....ಸುರುಮಾಡಕೂ ಮುಗಿಸಕೂ ರಾಜ್ಕೀಯ ನಾಯ್ಕರು ಬತ್ತರೆ.....ಬಾಳ ಜನ ಸೇರ್ತರೆ...ಹುಡ್ಗೀರು ಅವ್ರು ಇವ್ರು ಅಂತಾವ ಸಾನೆ ಜನ ಓಡಾಡ್ತರೆ "

" ಹುಡ್ಗೀರ್ ಬತ್ತರೆ ಅಂತಾಯ್ತು...ನಾನು ಹೋಬೇಕಣಾ .......ಬೆಂಗಳೂರ್ ಬೊಂಬೆಗೋಳ್ನ ನೋಡ್ದೆ ಸಾನೆ ಬೇಜಾರಾಗೋಗದೆ....ಒಂದ್ ಕಿತಾ ರೌಂಡ್ ಹೊಡ್ದ್ಬುಟ್ಟ್ರೆ ಹೆಲ್ಲಾ ಸರಿಹೋತದೆ "

" ಹೋಗವ ಬಿಡು....ನಾನೂ ನಿನ್ನಂಗೇ ಹೋಬೇಕು ಅಂದ್ಕಂಡಿವ್ನಿ.....ಯಾರಾರಾ ಏನಾರಾ ಮಾಡ್ಕಳ್ಳಿ....ಸರ್ಕಾರ ಒಂದಷ್ಟ್ ಕರ್ಚ್ ಮಾಡ್ತದೆ....ನಾವೂ ಹೋಗಿ ಮಜಾ ಉಡಾಯ್ಸ್ಕಂಬರೋದು "

-------------------


" ಅಣಾ ರಾಧಿಕಾ ಅವ್ಳಲ್ಲಾ ........"

" ಹೇಳ್ಲಾ ಮುಂದೆ ......"

" ಅವ್ಳೀಗೆ ವರ್ಸದ ಹಿಂದೆ ಮಗೂ ಆಯ್ತಲಣಾ ಹದೂ ನಮ್ ಕುಮಾರಣ್ಣಂದಂತೆ ? "

" ಇನ್ನೇನಾತದೆ ಮತ್ತೆ......ತುರ್ಕೆ ಜಾಸ್ತಿ ಆಯ್ತು...ಹೆಂಗೂ ಒಂದ್ ಮಡೀಕಬೇಕು ಚೆನ್ನಾಗಿರೋದಕ್ಕೆ ಕೈ ಹಾಕವ ಅಂತ ಸುರು ಹಚ್ಕಂಡಿದ್ದ "

" ಹವ್ಳೇನೋ ಹದಯಾವ್ದೋ ಉದಯವಾಣಿ ಪೇಪರ್ನಾಗೆ ಹೇಳವ್ಳಂತೆ.....’ನಾನು ಮಾಜಿ ಮಂತ್ರಿಯೊಬ್ಬುರ್ನ ಮದ್ವೆ ಆಗಿದ್ದೌದು....ಮಗೂನೂ ಆಗದೆ..ಆದ್ರೆ... ಎರ್ಡೆರ್ಡಲ್ಲಾ....ಒಂದೇಯ.....ನಾನು ಮಗೂನ ವಿದೇಶಕ್ಕೆಲ್ಲಾ ಕಳುಸ್ಲಿಲ್ಲಾ....ಹಿಲ್ಲೇ ಇದೀವಿ ...ನಾ ಇನ್ನೂ ಸಿನ್ಮಾದಾಗೆ ಮತ್ತೆ ಹಿರೋಯಿಣಿ ಮಾಡ್ತೀನಿ ಆದ್ರೆ ಜಾಸ್ತಿ ಬಿಚ್ಚಾಕಿಲ್ಲಾ...’ ಅಂದವ್ಳಂತೆ "

" ಹೋಕ್ಕಳಿ ಬುಡು ಗೌಡ್ರೂ ಮಾತಾಡಂಗಿಲ್ಲ....ಸೊಸೆದೀರೂ ಮಾತಾಡಾಂಗಿಲ್ಲ...ಮಂತ್ರಿಗಿರಿ ಇಲ್ಡಿರ್ವಾಗ ಸುಮ್ನೇ ಹೋಗಿ ಆಟ ಆಡಕೊಂದ್ಕಿತಾ ಜಾಗ ಬೇಕಲ್ವಾ ? "

" ಜನತಾ ದರ್ಸನ ಮಾಡೀ ಮಾಡೀ ಸುಸ್ತಾಗ್ಬುಟ್ಟಿತ್ತು ಪಾಪ ಹದ್ಕೇ ’ ಜಾನಕಿ ತರ ಒಬ್ಳೇ ಇರ್ಬ್ಯಾಡ....ನಾನಿದೀನಲ್ಲ....ನಿಂಗೆಲ್ಲಾ ಕೊಡ್ತೀನಿ.....ನೀ ನಂಗಬೆಕಾದ್ನೆಲ್ಲಾ ಕೊಟ್ಬುಡು ’ ಅಂದವ್ನೆ....ಭದ್ರಾವತಿ ಬಂಗಾರ್ದ ಬಣ್ಣ ಕಂಡ್ಬುಟ್ಟು ಒಸಿ ಬೇಜಾರಾದ್ರೂ ಇನ್ನೇನ್ ಹಬ್ಬಬ್ಬಾ ಹಂದ್ರೆ ಒಂದ್ ಹತ್ತನ್ನೆರ್ಡ್ ವರ್ಸ .... ಆಮೇಲೆಲ್ಲಾ ಬಣ್ಣ ತಗಂಡೇನೂ ಆಯಾಕಿಲ್ಲ...ಒಳ್ಳೇ ಆಸ್ತಿ ಮನೆ ಇದ್ರೆ ಸಾಕು ಅಂತಾವ ಮನ್ಸಮಾಡ್ಯವಳೆ....ಮಾಡಿದ್ದೇ ಮಾಡಿದ್ದು ಕುಮಾರಣ್ಣ ಮತ್ಯಾರೂ ಕಣ್ಣಾಕ್ ದಂಗೆ ಕೈಲೊಂದ್ ಕೊಟ್ಬುಟ್ಟ "

" ಓಗ್ಲಿ ಬಿಡೋ.....ನಿಂದೇನೋಯ್ತು ಗಂಟು .....ನಾ ಹೋಬೇಕು ಅರ್ಜೆಂಟದೆ "

" ಯಾಕಣಾ ಹಶ್ಟು ಅರ್ಜೆಂಟು ? "

" ಮಾದೇಗೌಡ್ರ ಸೊಸೆ ಹತ್ರ ಏನಾರ ಎಲ್ಪು ಬೇಕಾರೆ ಯೋಳು ಬತ್ತೀನಿ ಅಂದಿದ್ದೆ....ಬೆಳಗ್ಗೆನೇ ಪೋನಾಕವ್ಳೆ ಇನ್ನೂ ಹೋಯಕಾಯ್ತಾ ಇಲ್ಲ .....ಬರ್ಲಾ "

" ಅಣೋ ........................."


" ಬತ್ತೀನಿ ಬತ್ತೀನಿ......... ;) "

Thursday, November 18, 2010

ಸೂರ್ಯ ನಿಷ್ಠೆ


ಸೂರ್ಯ ನಿಷ್ಠೆ

ಸಪ್ತಾಶ್ವದ ರಥವನೇರಿ
ಸೂರ್ಯನುದಿಸಿ ಬರುವ ವೇಳೆ
ಹಾಡೊಂದಕೆ ದೇಹರಚಿಸಿ
ಭಾವತುಂಬಿ ಜೀವಬಂತು
ನವನವೀನ ಕಲ್ಪನೆ ನೂರು ವಿಧದ ಯೋಚನೆ

ಸಕಲ ಜೀವರಾಶಿಗಳಿಗೆ
ಬದುಕನೀವ ಬೆಳಕನಿತ್ತು
ವ್ಯಥಿತ ಮನದ ವ್ಯಾಕುಲಗಳ
ಕಳೆವನಾತ ಮೌನದಲ್ಲಿ
ಚಕಿತರಾಗಿ ನೋಡಿರಿ ನಿಷ್ಠೆ ನೆನೆದು ನಲಿಯಿರಿ

ಕಾಯಿಸಲೋ ಬೇಯಿಸಲೋ
ಕೆಲಸ ಕಾರ್ಯ ನಡೆಯಿಸಲೋ
ಆತ ಬಾರದಿದ್ದರೊಮ್ಮೆ
ಬೆಳೆಯುತಿತ್ತೇ ಬದುಕುಬಳ್ಳಿ ?
ರವಿಯು ಇರದ ಜಾಗವು ರೋಗಗಳಿಗೆ ಹಾರವು

ರಜೆಯ ಹಾಕಲಿಲ್ಲ ಗೆಳೆಯ
ವಿಜಯನಗೆಯ ಬೀರಲಿಲ್ಲ !
ಸುಜನ ಕುಜನ ಭೇದ ಭಾವ
ಅಳವಡಿಸುತ ನಡೆಯಲಿಲ್ಲ
ಸರ್ವರಿಗೂ ಸರಿಸಮಾನ ತತ್ವದಲ್ಲಿ ಇರಿಸಿ ಗಮನ

ಬಾಡಿಗೆಯ ಕೊಡುವೆವೇನು ?
ಬಾಳತುಂಬ ಬೆಳಗುವುದಕೆ
ಹಾಳುಮನದ ನಮಗೆ ಒಮ್ಮೆ
ಸ್ಮರಿಸದಂಥ ನಂಜುನಮದು
ನಾಳೆಗಳನು ನಡೆಸಲು ನೆನೆಯಿರಿಂದು ಮನದೊಳು

Wednesday, November 17, 2010

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........


ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ........

ಅನುರೂಪ ದಾಂಪತ್ಯಕ್ಕೆ ಹಾಡಿಕೊಳ್ಳಲು ಬೇಕಾದ ಹಾಡುಗಳನ್ನೆಲ್ಲಾ ಗುತ್ತಿಗೆ ಹಿಡಿದವರಂತೇ ಬರೆಯುತ್ತಾ ಹೋದವರು ನಮ್ಮ ’ಮೈಸೂರು ಮಲ್ಲಿಗೆ’ಯ ಕವಿ ದಿ| ಶ್ರೀ ಕೆ.ಎಸ್. ನರಸಿಂಹಸ್ವಾಮಿಗಳು. ಕವಿಮನವನ್ನು ಮತ್ತು ಮನೆಯನ್ನು ಕಾಣುವ ಬಯಕೆ ಹೊತ್ತು ೧೯೯೮ ರಲ್ಲಿ ಒಮ್ಮೆ ಕತ್ರಿಗುಪ್ಪೆಯಲ್ಲಿರುವ ಅವರ ಮನೆಗೆ ಹೋಗಿದ್ದೆ. ಆಗಲೇ ಮುಪ್ಪಡರಿದ್ದ ಕವಿವರ್ಯರು ಮನೆಯ ಮುಂಭಾಗದಲ್ಲಿರುವ ಚಿಕ್ಕ ಜಾಗದಲ್ಲಿ ಬೆತ್ತದ ಖುರ್ಚಿ ಹಾಕಿಕೊಂಡು ಕುಳಿತಿದ್ದರು. ಕಣ್ಣಿಗೆ ದಪ್ಪ ಗಾಜಿನ ಸೊಲೋಚನ[ಕನ್ನಡಕ]. ಇಳಿಸಂಜೆಯಲ್ಲಿ ನಾನು ಹೋದಾಗ ಅವರ ’ಶಾರದೆ’ [ಪತ್ನಿ ದಿ| ಶ್ರೀಮತಿ ವೆಂಕಮ್ಮನವರು] ಆದರದಿಂದ ಬರಮಾಡಿಕೊಂಡರು. ಹೇಳಿಕೇಳಿ ನಾನೊಬ್ಬ ಕಾಲೇಜು ವಯಸ್ಸಿನ ಹುಡುಗ; ಗುರುತು ಪರಿಚಯ ಇಲ್ಲದವ. ಆದರೂ ಎಷ್ಟೋ ವರ್ಷಗಳ ಒಡನಾಟವಿದೆಯೇನೋ ಎಂಬಷ್ಟು ಆತ್ಮೀಯತೆಯಿಂದ ಅವರು ನಡೆಸಿಕೊಂಡ ರೀತಿ ನನಗೆ ಬಹಳ ಹಿಡಿಸಿತ್ತು. ಕವಿಗಳಿಗೆ ಕಿವಿ ಬೇರೇ ಸ್ವಲ್ಪ ಮಂದವಾಗಿತ್ತು. ಈ ಕುರಿತು ಹೇಳಿದ ವೆಂಕಮ್ಮನವರು ಸೀದಾ ಅಡುಗೆ ಕೋಣೆಗೆ ಹೋಗಿ [ಆಗ ಬೇಸಿಗೆಯ ದಿನಗಳು] ಯಾಲಕ್ಕಿಯನ್ನು ಹಾಕಿದ ಲಿಂಬೂ ಪಾನಕವನ್ನು ಮಾಡಿತಂದರು. ಆಗ ನರಸಿಂಹಸ್ವಾಮಿಗಳು ಪತ್ರಿಕೆಯೊಂದಕ್ಕೆ ವಾರದಲ್ಲಿ ಒಂದಾವರ್ತಿ ಹಾಡುಗಳನ್ನು ಬರೆದು ಕೊಡುತ್ತಿದ್ದರು; ಬರವಣಿಗೆಗೆ ಆಗುತ್ತಿರಲಿಲ್ಲವಾಗಿ ವ್ಯಕ್ತಿಯೊಬ್ಬನ ಸಹಾಯದಿಂದ ತಮ್ಮ ಕೃತಿಗಳನ್ನು ಬರಹರೂಪಕ್ಕೆ ಇಳಿಸುತ್ತಿದ್ದರು.

ಮೊದಲಿನಿಂದಲೂ ನನಗೆ ಕವಿ-ಸಾಹಿತಿಗಳೆಂದರೆ ಎಲ್ಲಿಲ್ಲದ ಆಸೆ. ಒಳ್ಳೆಯ ಕವಿ-ಸಾಹಿತಿಗಳು ಕಂಡರೆ ಅವರ ಹಿಂದೇ ಹೋಗುವುದು, ಅವರ ದೈನಂದಿನ ಬದುಕು, ಅವರ ಬಗ್ಗೆ ಒಂದಷ್ಟು ಅರಿತುಕೊಳ್ಳುವುದು ನನ್ನ ಅಭ್ಯಾಸ. ಹಾಗೆ ನೋಡಿದರೆ ನನ್ನೆಲ್ಲಾ ಸ್ನೇಹಿತರು ಸಿನಿಮಾ ತಾರೆಯರನ್ನು ನೋಡಲು ಆಸೆಪಟ್ಟದ್ದಕ್ಕಿಂತ ತುಸು ಹೆಚ್ಚಾಗಿ ನಾನು ಕವಿ-ಸಾಹಿತಿಗಳ ಸಾಂಗತ್ಯವನ್ನು ಬಯಸುತ್ತಿದ್ದೆ. ಅವರುಗಳ ಸನ್ನಿಧಾನದಲ್ಲಿ ನನಗೆ ನಿಧಿಸಿಕ್ಕದ್ದಕಿಂತ ದಿಪ್ಪಟ್ಟು ದುಪ್ಪಟ್ಟು ಖುಷಿಯಾಗುತ್ತಿತ್ತು! ನನಗೆ ಅವರ ಮನೆಯಲ್ಲಿ ಭೋಜನ, ತಿಂಡಿ ಇಂತದ್ದರ ಬಗ್ಗೇನೂ ಆಸೆಯಿರಲಿಲ್ಲ. ಅವರೊಂದಿಗೆ ಮಾತಾಡಬೇಕು, ಒಂದಷ್ಟು ಅವರ ಮನೋಗತವನ್ನು ಕೆದಕಿ ಸಿಗಬಹುದಾದ ಮುತ್ತುಗಳನ್ನು ಎತ್ತಿ ಪೋಣಿಸಿ, ನನ್ನ ಮೊಲೆಯಲ್ಲಿ ಆಪದ್ಧನವಾಗಿ ಕಾಪಿಟ್ಟುಕೊಳ್ಳುವ ಅದಮ್ಯ ಚಡಪಡಿಕೆ ನನ್ನದು. ಮುತ್ತು ಪೋಣಿಸಿಕೊಳ್ಳುವಾಗ ಹೊತ್ತುಗೊತ್ತಿನ ಪರಿವೆಯೇ ಇರುತ್ತಿರಲಿಲ್ಲ! ಹಲವು ದಿನ ಹಿರಿಯ ಮಿತ್ರ ಶತಾವಧಾನಿ ಶ್ರೀ ಆರ್.ಗಣೇಶ್ ಅವರ ಮನೆಯಲ್ಲೂ ಕೂರುತ್ತಿದ್ದೆ. ನನ್ನ ವೃತ್ತಿನಿರತ ಜಂಜಾಟಗಳ ನಡುವೆಯೂ ಸಿಗರೇಟು, ಬೀಡಿ ಚಟದವರಿಗೆ ಆಗಾಗ ಅವು ಹೇಗೆ ಬೇಕಾಗುತ್ತಾವೋ ಹಾಗೇ ಕಾವ್ಯ-ಸಾಹಿತ್ಯ-ಕುಶಲೋಪರಿ ನನ್ನಿಷ್ಟದ ವಿಷಯಗಳು. ಮದಿಸಿದ ಮದ್ದಾನೆಯೊಂದು ಕದಳೀವನಕ್ಕೆ ನುಗ್ಗಿದಂತೇ ನುಗ್ಗಲಾಗದಿದ್ದರೂ ಆಗಾಗ ಕವಿ-ಸಾಹಿತಿಗಳ ಮನೆ ಸುತ್ತಾ ಆಮೆ ನಡೆದಂತೇ ನಿಧಾನವಾಗಿ ಸುಳಿದು ಹಣಿಕಿ-ಇಣುಕಿ ’ಅವರಿದ್ದಾರೋ’ ಎಂದು ಖಾತ್ರಿಮಾಡಿಕೊಂಡು, ಅವರಿಗೆ ಸಮಯವಿದೆ ಎಂಬುದು ಗಟ್ಟಿಯಾದಮೇಲೆ ಹೋಗಿ ಕುಳಿತುಕೊಳ್ಳುವುದಾಗಿತ್ತು. ಇಂತಹುದೇ ಒಂದು ಪ್ರಯತ್ನದಲ್ಲಿ ಕೆ.ಎಸ್.ನ ಅವರ ಮನೆಗೂ ಒಮ್ಮೆ ಎಡತಾಕಿದ್ದೆ. ಸುಮಾರು ಎರಡು ಗಂಟೆಗಳಕಾಲ ಹರಟಿದ ಸೌಭಾಗ್ಯ ನನ್ನದು! ನನ್ನ ಜೀವನದ ಅವಿಸ್ಮರಣೀಯ ತುಣುಕುಗಳಲ್ಲಿ ಈ ಘಟನೆ ಕೂಡ ಒಂದು.

ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ನರಸಿಂಹಸ್ವಾಮಿಗಳು ಜನವರಿ ೧೫, ೧೯೧೫ನೇ ಇಸ್ವಿಯಲ್ಲಿ ಜನಿಸಿದರು. ಹುಟ್ಟಾ ಹೊಯ್ಸಳ ಕರ್ನಾಟಕ ಬ್ರಾಹ್ಮಣರು. ಮೈಸೂರಿನಲ್ಲಿ ಆರಂಭಿಕ ಹಂತದ ವಿದ್ಯಾಭ್ಯಾಸಗಳನ್ನು ಪೂರೈಸಿದರು. ೧೯೩೪ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ಅಲ್ಲಿ ಓದಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದರು. ೧೯೩೬ ರಲ್ಲಿ ತಿಪಟೂರಿನಲ್ಲಿ ವೆಂಕಮ್ಮ ಎಂಬ ಹುಡುಗಿಯನ್ನು ಮದುವೆಯಾಗಿ, ಮನೆಯನ್ನೂ-ಮನವನ್ನೂ ತುಂಬಿಸಿಕೊಂಡರು. ಮೈಸೂರಿನ ನಗರಪಾಲಿಕೆಯಲ್ಲಿ ಗುಮಾಸ್ತನಾಗಿ ಸೇವೆಸಲ್ಲಿಸುತ್ತ ವೃತ್ತಿ ಆರಂಭಿಸಿದ ನರಸಿಂಹಸ್ವಾಮಿಗಳು ನಡೆದ ದಾರಿಬಹುದೂರ.

ಕನ್ನಡ ಕಾವ್ಯಲೋಕಕ್ಕೆ ನವ್ಯ ಮತ್ತು ನವ್ಯೋತ್ತರ ಕಾವ್ಯಗಳು ಪಾದಾರ್ಪಣೆ ಮಾಡಿದ ಕಾಲವದು. ತಮಗನಿಸಿದ್ದನ್ನು ಸರಳ ಶಬ್ದಗಳಲ್ಲಿ ಯಾವುದೇ ಪ್ರಾಸ, ಛಂದಸ್ಸು ವಗೈರೆಗಳ ಮಾರ್ಗಬಂಧಿಗಳಿಲ್ಲದೇ ಬರೆಯುವವರ ಅವಶ್ಯಕತೆಯಿತ್ತು. ಅಡಿಗರು ಅದರ ಹರಿಕಾರರಾಗಿದ್ದರು. ಅಂತಹ ಸಾಲಿಗೆ ಕೆ.ಎಸ್.ನ. ಸೇರಿದರೂ ಕಾವ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಕೆ.ಎಸ್.ನ. ರಾಬರ್ಟ್ ಬರ್ನ್ಸ್ ಇವರ ಕಾವ್ಯಗಳಿಗೆ ಮೂಲಕಾರಣ. ಮೊದಲಾಗಿ ಅವನ ಕವನಗಳನ್ನೇ ಆಂಗ್ಲ ಭಾಷೆಯಿಂದ ಕನ್ನಡೀಕರಿಸಿದವರು ಕೆ.ಎಸ್.ನ. ಮುಂದೆ ಅದರಿಂದ ಪ್ರೇರಿತರಾಗಿ ತಮ್ಮ ಹೆಂಡತಿಯನ್ನೇ ಸ್ಫೂರ್ತಿಯ ಸೆಲೆಯಾಗಿ ಬಳಸಿಕೊಂಡು ಅವರು ಬರೆದ ಕವನಗಳು ಒಂದಕ್ಕಿಂತಾ ಒಂದು ಅಪ್ರತಿಮ, ಓಘ, ಅಮೋಘ.

ಒಂದುಕಾಲಕ್ಕೆ ಅವರ ಕೃತಿಗಳನ್ನು ಕೇಳುವವರೇ ಇರಲಿಲ್ಲ! ಮೂಲೆಗೆ ಬಿದ್ದು ಹಳೇ ಪೇಪರ್ ಮಾರುವವರ ಕೈಗೆ ಹೋಗಿದ್ದ ಪ್ರತಿಗಳೇ ಎಷ್ಟೋ ! ಆದರೆ ಯಾವುದೋ ಒಬ್ಬ ಸಾಹಿತ್ಯ ಪ್ರೇಮೀ ಪುಣ್ಯಾತ್ಮ ಅದನ್ನು ಎತ್ತಿಕೊಂಡು ಓದಿ, ಅದನ್ನೊಂದು ಪ್ರಕಾಶನಕ್ಕೆ ಕೊಂಡೊಯ್ದು ಕೊಟ್ಟಾಗ ಅವರು ಅದನ್ನು ಪ್ರಕಾಶಿಸಲು ಮುಂದೆ ಬಂದರು. ಪ್ರಕಾಶಕರಿಗೇ ವ್ಯವಹಾರದ ಹಕ್ಕನ್ನು ಬಿಟ್ಟುಕೊಟ್ಟ ಕೆ.ಎಸ್.ನ. ೧೯೪೨ರಲ್ಲಿ ತನ್ನ ಮೊದಲ ಕೃತಿಗೊಂದು ಪ್ರಕಟಣೆ ಕಾಣಿಸುವಲ್ಲಿ ಯಶಸ್ವಿಯಾದರು. ’ಮೈಸೂರು ಮಲ್ಲಿಗೆ’ ಯ ಕಂಪು ನಂತರ ಎಲ್ಲೆಡೆಗೂ ಪಸರಿಸಲು ಶುರುವಾಯಿತು. ಇದರಲ್ಲಿರುವ ೪೯ ಕವನಗಳು ದಾಖಲೆಯ ಪ್ರಸಾರವನ್ನು ಕಂಡವು. ಮುದ್ರಣದ ಮೇಲೆ ಮುದ್ರಣ ಕಂಡ ರೋಮಾಂಚನ ಕವನ ಸಂಕಲನ ಪ್ರಾಯಶಃ ಕನ್ನಡದಲ್ಲಿ ಮತ್ತೊಂದಿಲ್ಲ! ಕವನಗಳಲ್ಲಿ ಅದೆಷ್ಟು ಆಪ್ತತೆ ತುಂಬಿದೆಯೆಂಬುದನ್ನು ’ಅಕ್ಕಿ ಆರಿಸುವಾಗ’ ಎಂಬ ಕವನ ಓದಿ ನೋಡಿ [ಇದನ್ನೆಲ್ಲಾ ನೀವು ಈಗಾಗಲೇ ನೂರಾರು ಬಾರಿ ಕೇಳಿಯೇ ಇರುತ್ತೀರಿ. ಆದರೂ ಕೇಳಿದಷ್ಟೂ ಕೇಳಬೇಕೆನಿಸುವ ಓದಿದಷ್ಟೂ ಓದಬೇಕೆನಿಸುವ ಅತ್ಯಂತ ಆಪ್ತವಾದ ಶಬ್ದಮಾಲೆಗಳು. ಪ್ರಾಯಶಃ ಪ್ರಿಯತಮ ತನ್ನ ಪ್ರಿಯತಮೆಯ ಕಿವಿಯಲ್ಲಿ ಪಿಸುಗುಟ್ಟುವ ಹಲವು ಸಿಂಪ್ಲಿ ನಥಿಂಗ್ ಗಳು, ಆದರೂ ಬಿಡಲಾರದಂತೇ ಕಿವಿಯಲ್ಲಿ ಗುನುಗುನಿಸುತ್ತಲೇ ಗುಂಗಿನಲ್ಲಿ ತಡೆಹಿಡಿಯುವ ಹಸಿಹಸಿ ಕವಿತೆಗಳು !]



[ಗಾತ್ರ ಹಿಗ್ಗಿಸಲು ಅಕ್ಷರದ ಮೇಲೆ ಕ್ಲಿಕ್ಕಿಸಿ ]

ದುಡ್ಡು ಕೊಟ್ಟರೆ ಹಸನುಮಾಡಿದ ಆಹಾರ ಧಾನ್ಯಗಳು, ಪದಾರ್ಥಗಳು ಸಿಗುವ ಕಾಲ ಅದಾಗಿರಲಿಲ್ಲ, ಬದಲಿಗೆ ಅಕ್ಕಿ, ಬೇಳೆ-ಕಾಳುಗಳನ್ನು ಕೊಂಡು ಆಮೇಲೆ ಸ್ವಚ್ಛಗೊಳಿಸಿಕೊಳ್ಳಬೇಕಾದ ದಿನಗಳವು. ಹೆಂಡತಿಯ ಉಂಗುರವಿರದ ಬೆರಳು ಹಾಗೂ ಬಂಗಾರದ ಸರವಿಲ್ಲದ ಕತ್ತನ್ನು ಕವಿ ಗಮನಿಸುತ್ತಾರೆ.

ಕವಿ ಹೃದಯ ಎಂದರೆ ಇದೇ ತಾನೇ ? ತನ್ನ ಹೆಂಡತಿಗೆ ಬೇಕಷ್ಟು ಬಂಗಾರ ಧರಿಸುವ, ಅಲಂಕರಿಸಿಕೊಳ್ಳುವ ಆಸೆಯಾಗಲೀ, ಆಸ್ಪದವಾಗಲೀ ಇರಲಿಲ್ಲ, ಆದರೆ ಇದ್ದುದರಲ್ಲೇ ತನ್ನ ಜತೆ ಅವಳು ಹಾಯಾಗಿದ್ದಳು ಎಂಬುದನ್ನು ನೋವಿನಲ್ಲಿಯೇ ನಯವಾಗಿಯೇ ಹೇಳಿದ್ದಾರೆ ಕವಿ ಅಲ್ಲವೇ ? ಮಡದಿ ವೆಂಕಮ್ಮನವರಿಗೆ ಕವಿ ಬರೆದ ಕಾವ್ಯಗಳೇಆಭರಣಗಳಾಗಿದ್ದವು ಎಂದರೆ ತಪ್ಪಲ್ಲ. ಅಂತಹ ಬಡತನವನ್ನೂ ಅವರು ಅನುಭವಿಸಿ ಬಂದರೂ ಅವರ ಕಾವ್ಯ ಶ್ರೀಮಂತಿಕೆಯಲ್ಲಿ ಅದು ಮರೆಯಾಗಿ ಹೋಗಿತ್ತು !

ಚಲನಚಿತ್ರ ದಿಗ್ದರ್ಶಕರಾದ ಶ್ರೀಯುತ ಟಿ.ಎಸ್.ನಾಗಾಭರಣರವರು ಇವರ ಹಲವು ಗೀತೆಗಳನ್ನು ದೃಶ್ಯ/ಶ್ರಾವ್ಯ ಮಾಧ್ಯಮಕ್ಕೆ ಅಳವಡಿಸಿದರು. 'ಮೈಸೂರು ಮಲ್ಲಿಗೆ' ಯನ್ನು ಸಂಪೂರ್ಣ ಕಥಾಹಂದರ ಹೊಂದಿಸಿ ಚಲನ ಚಿತ್ರವನ್ನಾಗಿಸಿದರು. ಒಂದೊಂದು ಹಾಡೂ ಅದೆಷ್ಟು ಇಂಪು ಅದೆಷ್ಟು ತಂಪು ಅದೆಷ್ಟು ಕಂಪುಬೀರುತ್ತದೆ ಎಂಬುದನ್ನು ಸದ್ಯಕ್ಕೀಗ 'ಕನ್ನಡವೇ ಸತ್ಯ' ಕಾರ್ಯಕ್ರಮದಲ್ಲಿ ಹಾಡಿದ್ದ ಎರಡು ಹಾಡುಗಳ ಮೂಲಕ ನೋಡೋಣ:



ಗಾಯಕ ಸಿ.ಅಶ್ವಥ್ , ಗಾಯಕಿ ಎಂ.ಡಿ.ಪಲ್ಲವಿ ಹಾಗೂ ತಂಡದವರಿಗೆ ನಮ್ಮ ಧನ್ಯವಾದಗಳು.



ಬೆಂಬಿಡದ ಭಾವನೆಗಳು ನಮ್ಮನ್ನು ಗಂಧರ್ವಲೋಕಕ್ಕೇ ಕರೆದೊಯ್ಯುವಂತೇ ಅನಿಸುತ್ತದೆ. ಯವೊಂದೂ ಹಾಡನ್ನು ಕೇಳಿ ಮುಗಿಯಿತೆಂಬುದೇ ಇಲ್ಲ. ಆ ಹಾಡುಗಳು ಹಿಂದಿಗೂ, ಇಂದಿಗೂ, ಮುಂದಿನ ಜನಾಂಗಕ್ಕೂ ಇಂಪಾಗಿ ಕೇಳುತ್ತಿದ್ದರೆ ಅದಕ್ಕೆ ಅವುಗಳಲ್ಲಿನ ಒಲವಿನ ದಾಂಪತ್ಯದಿಂದ ಎರಕಹೊಯ್ದ ಸಾಹಿತ್ಯಕ ಹೂರಣವೇ ಕಾರಣ.

ನರಸಿಂಹ ಕೆಲವೊಮ್ಮೆ ನರಸಿಂಹಾವತಾರಿಯೂ ಆಗುತ್ತಿದ್ದರಂತೆ, ಅದು ಹೆಂಡತಿಯೊಂದಿಗಲ್ಲ, ಮಿಕ್ಕುಳಿದ ಜನರೊಡನೆ ಮಾತ್ರ. ಆಗ ಅಲ್ಲಿ ಮನದನ್ನೆಯ ಪ್ರವೇಶವಾಗಿಬಿಟ್ಟರೆ ಬಂದ ನಾರಸಿಂಹ ಹೊರಟುಹೋಗಿ ಕಿಕ್ಕೇರಿ ನರಸಿಂಹ ಮಾತ್ರ ಉಳಿಯುತ್ತಿದ್ದನಂತೆ! ಅವರಿಗೆ ಸ್ವರಲಾಲಿತ್ಯ, ಶಬ್ದಲಾಲಿತ್ಯ ಮತ್ತು ಶಾರೀರ ಇವಿಷ್ಟು ಇರದಿದ್ದರೆ ಕವನಗಳು ಸುತರಾಂ ಹಿಡಿಸುತ್ತಿರಲಿಲ್ಲ. ನನ್ನೇದುರೇ ಯಾರಿಗೋ ನೇರವಾಗಿ ಖಾರವಾಗಿ " ಶಾರೀರ್ವೇ ಇಲ್ಲ " ಎಂದಿದ್ದನ್ನು ಕೇಳಿದ್ದೆ. ಹಾಗಂತ ಹೃದಯ ತುಂಬಾ ಮೆದು....ನಿಮಗೆ ಗೊತ್ತಾಗೋದಿಲ್ವೇ ? ಕಲ್ಲು ಹೃದಯದಿಂದ ಕವನಗಳು ಹೊರಹರಿಯಲು ಸಾಧ್ಯವೇ ? ಒಮ್ಮೆ ಹುಟ್ಟಿದರೂ ಮರಗಳೇ ಇಲ್ಲದ ಬೋಳು ಗುಡ್ಡದಂತೇ ಅವುಗಳಿಗೆ ಭಾವನೇಯೇ ಇರುತ್ತಿರಲಿಲ್ಲ ಅಲ್ಲವೇ ?

ಕೆ.ಎಸ್.ನ ಅವರಿಗೆ ಗಾಯಕ ಸಿ. ಅಶ್ವಥ್ ಸ್ನೇಹಿತರಾಗಿದ್ದರು. ಸರಕಾರದಿಂದ ಏನಾದರೂ ಕೆಲಸವಾಗಬೇಕಾದರೆ ತಾನು ಮಾಡಿಕೊಡುತ್ತೇನೆಂದು ಹೇಳುತ್ತಿದ್ದರಂತೆ. ಒಮ್ಮೆ ಮಾತ್ರ ಯಾವುದೋ ಕೆಲವು ಹಾಡುಗಳಿಗೆ ಗೌರವಧನ ಬಂದಿದ್ದನ್ನು ಅಶ್ವಥ್ ಬಳಗ ತಮಗೆ ಕೊಡಲೇ ಇಲ್ಲ ಎಂಬುದನ್ನು ಸ್ವತಃ ಕವಿಗಳೇ ನನ್ನೊಂದಿಗೆ ನೋವಿನಲ್ಲಿ ಹೇಳಿದರು.[ದೊಡ್ಡವರ ಸಣ್ಣತನಗಳು ಕೆಲವೊಮ್ಮೆ ಕೆಲವು ಯಾರಿಗೂ ಕಾಣದ ಸಂಗತಿಗಳಾಗಿ ಉಳಿದುಹೋಗುತ್ತವೆ] ಆಗಲೇ ಬಹಳ ಮುಪ್ಪಡರಿ ಏನೂ ಕೆಲಸಮಾಡಲಾಗದೇ ಇರುತ್ತಿದ್ದ ಅವರಿಗೆ ಅಷ್ಟಿಷ್ಟು ಹಣದ ಅವಶ್ಯಕತೆಯಿತ್ತೇನೋ ಅನ್ನಿಸಿತು.

ಕೆ.ಎಸ್.ನ ಅವರ ಕೃತಿಗಳ ಬಗ್ಗೆ ತಿಳಿದುಕೊಳ್ಳೋಣವೇ ?

ಕವನ ಸಂಕಲನಗಳು

  • ಮೈಸೂರು ಮಲ್ಲಿಗೆ (೧೯೪೨)
  • ಉಂಗುರ (೧೯೪೨)
  • ಐರಾವತ (೧೯೪೫)
  • ದೀಪದ ಮಲ್ಲಿ (೧೯೪೭)
  • ಇರುವಂತಿಗೆ (೧೯೫೨)
  • ಶಿಲಾಲತೆ (೧೯೫೮)
  • ಮನೆಯಿಂದ ಮನೆಗೆ (೧೯೬೦)
  • ತೆರೆದ ಬಾಗಿಲು (೧೯೭೬)
  • ನವಪಲ್ಲವ (೧೯೮೩)
  • ಮಲ್ಲಿಗೆಯ ಮಾಲೆ (೧೯೮೬,೨೦೦೪)
  • ದುನ್ಡು ಮಲ್ಲಿಗೆ (೧೯೯೩)
  • ನವಿಲ ದನಿ (೧೯೯೯)
  • ಸನ್ಜೆ ಹಾಡು (೨೦೦೦)
  • ಕೈಮರದ ನೆಳಲಲ್ಲಿ (೨೦೦೧)
  • ಎದೆ ತುಂಬ ನಕ್ಷತ್ರ (೨೦೦೨)
  • ಮೌನದಲಿ ಮಾಥ ಹುಡುಕುತ್ತ (೨೦೦೩)
  • ದೀಪ ಸಾಲಿನ ನಡುವೆ (೨೦೦೩)
  • ಹಾಡು-ಹಸೆ (೨೦೦೩)

ಭಾಷಾಂತರಿಸಿದ ಕೃತಿಗಳು

  • ಮೀಡಿಯಾ (೧೯೬೬)
  • ರಾಬರ್ಟ್ ಬರ್ನ್ಸ್ ಕವಿಯ ಕೆಲವು ಪ್ರೇಮಗೀತೆಗಳು (೧೯೯೭)
  • ಕೆಲವು ಚೈನೀ ಕವನಗಳು (೧೯೯೭)

ಗದ್ಯ

  • ಮಾರಿಯ ಕಲ್ಲು (೧೯೪೨)
  • ಉಪವನ (೧೯೫೮)
  • ದಮಾಯಂತಿ (೧೯೬೦)
  • ಸಿರಿಮಲ್ಲಿಗೆ (೧೯೯೦)

ಪ್ರಶಸ್ತಿಗಳು

  • ೧೯೭೮ ರಲ್ಲಿ ಶ್ರೀಯುತರ ’ತೆರೆದ ಬಾಗಿಲು’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  • ನರಸಿಂಹಸ್ವಾಮಿಯವರ ಕನ್ನಡ ಸೇವೆ ಮತ್ತು ಅದರ ವೈಶಿಷ್ಟ್ಯವನ್ನು ಗಮನಿಸಿದ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.
  • ೧೯೯೧ ರಲ್ಲಿ ಮೈಸೂರಿನಲ್ಲಿ ನಡೆದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.
  • ೧೯೯೭ ರಲ್ಲಿ ಶ್ರೀಯುತರ ದುಂಡುಮಲ್ಲಿಗೆ ಕವನ ಸಂಕಲನಕ್ಕೆ ಪಂಪ ಸಾಹಿತ್ಯ ಪ್ರಶಸ್ತಿ ಲಭ್ಯವಾಗಿದೆ.
  • ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತುಗಳು ಇವರನ್ನು ಫೆಲೋಶಿಪ್ [ಆಸ್ಥಾನ ವಿದ್ವಾನ್] ಅಥವಾ ಸಭಾಸದಸ್ಯತ್ವ ಕೊಟ್ಟು ಗೌರವಿಸಿವೆ.

೨೭ ಡಿಸೆಂಬರ್ ೨೦೦೩ ರಂದು ಕೆ.ಎಸ್.ನ ರವರು ತಮ್ಮ ಬಾಳಯಾತ್ರೆಯನ್ನು ಮುಗಿಸಿದರು ಎನ್ನುವಾಗ ಅವರೊಂದಿಗೂ ಅವರ ಕವನಗಳೊಂದಿಗೂ ಇರುವ ಭಾವನಾತ್ಮಕ ಸಂಬಂಧ ಬಿಚ್ಚಿಕೊಂಡು ಕಣ್ಣುಗಳು ತೇವವಾಗುತ್ತವೆ. ಮನದಲ್ಲೆಲ್ಲೋ ಅವರ ಇಂಪಾದ ಹಾಡೊಂದರ ಪಲ್ಲವಿ ಸುಳಿದುಹೋಗುತ್ತದೆ

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೇ..........

Tuesday, November 16, 2010

ಮಾನಸ ಪೂಜೆ


ಮಾನಸ ಪೂಜೆ

ಭಗವತ್ಪಾದ ಶ್ರೀ ಆದಿಶಂಕರರು ಪ್ರಕಾಂಡ ಪಂಡಿತರೂ ಉತ್ತಮ ಕವಿಗಳೂ ಆಗಿದ್ದರು. ಆ ದಾರ್ಶನಿಕರ ಬಗ್ಗೆ ಬರೆಯತೊಡಗಿ ಮಧ್ಯದಲ್ಲಿ ಅನಿವಾರ್ಯತೆಯಲ್ಲಿ ನಿಲ್ಲಿಸಿದ್ದೆ. ಮತ್ತೆ ಕೆಲದಿನಗಳಲ್ಲಿ ಅದನ್ನು ಆರಂಭಿಸುತ್ತಿದ್ದೇನೆ. ಮನುಷ್ಯ ಏನೂ ಇರಲಿ ಇಲ್ಲದಿರಲಿ ತನ್ನ ದೈನಂದಿನ ವ್ಯವಹಾರಗಳ ಮಧ್ಯೆ ಇದ್ದಲ್ಲೇ ಹೇಗೆ ದೈವಧ್ಯಾನ ಮಾಡಬಹುದು ಎಂಬುದನ್ನು ಅಂದೇ ಅವರು ಸೂಚಿಸಿದ್ದರು. ಪಾಂಡವರಲ್ಲಿ ಭೀಮ ಇಂತಹುದೇ ಉಪಾಸನೆಯನ್ನು ಮಾಡುತ್ತಿದ್ದ ಎಂಬುದೊಂದು ಐತಿಹ್ಯ. ಮನುಷ್ಯನ ಮನಸ್ಸೇ ಎಲ್ಲಕ್ಕೂ ಮೂಲ ಕೇಂದ್ರವಾಗಿರುವುದರಿಂದ ಅಲ್ಲೇ ಹೊರಜಗತ್ತಿನ ವೈಭವ-ವೈಭೋಗಗಳನ್ನು ಕಲ್ಪನೆಮಾಡಿಕೊಳ್ಳುತ್ತಾ ದೈವಕ್ಕೆ ಅವುಗಳಿಂದ ಮನಸಾ ಪೂಜಿಸುವುದು ಮಾನಸ ಪೂಜೆ ಎನಿಸಿದೆ. ಶುದ್ಧ ಮನಸ್ಸಿನಲ್ಲಿ ದೇವರನ್ನು ಆಹ್ವಾನಿಸಿ ನಡೆಸಬಹುದಾದ ಈ ಪೂಜೆಗೆ ಬೇಕಾಗುವ ಒಂದೇ ಪ್ರಮುಖ ವಸ್ತು--ಮನಸ್ಸು. ಶಂಕರರ ಅಡಿಗಳಿಗೆರಗುತ್ತ ಅವರು ರಚಿಸಿದ ಶಿವಮಾನಸ ಸ್ತೋತ್ರವನ್ನು ಕನ್ನಡೀಕರಿಸಲು ನನ್ನ ಶಬ್ದಗಳನ್ನೂ ಸೇರಿಸಿ ಹೀಗೆ ಪ್ರಯತ್ನಿಸಿದ್ದೇನೆ : ]

ಆಂತರ್ಯದಲಿ ಕುಳಿತು
ನನ್ನಾಳ್ವ ಓ ದೊರೆಯೇ
ಅರ್ಪಿಸುವೆ ನಿನಗಿದುವೇ
ನನ್ನ ಹಾಡು
ನಿತ್ಯವೂ ಬೆಳಗಿನಲಿ
ಮತ್ತದೇ ಬೈಗಿನಲಿ
ಸ್ವಸ್ತ ಚಿತ್ತವ ಕೊಡುವ
ಕೃಪೆಯ ಮಾಡು

ರತ್ನ ಸಿಂಹಾಸನವ
ಕಲ್ಪಿಸುವೆ ಮನಸಿನಲಿ
ಪಟ್ಟೆ ಪೀತಾಂಬರವ
ಅಣಿಗೊಳಿಸುತಲ್ಲಿ
ಜಾತೀಯ ಪುಷ್ಪಗಳ
ಧೂಪದೀಪಗಳಿಟ್ಟು
ಪ್ರೀತಿಯಲಿ ಸ್ವಾಗತಿಸಿ
ಕುಳ್ಳಿರಿಸುತಲೀ

ಅರ್ಘ್ಯ ಪಾದ್ಯಾದಿಗಳು
ಸ್ನಾನ ಪಾನೀಯಗಳು
ಭೂಷಣಕೆ ಗಂಧ
ಮಾಲೆಗಳನ್ನು ಇಡುತ
ಭೇಷಾಯ್ತು ನಿನ್ನಿರವು
ನಾ ಸೋಲದಂತಿರಲು
ಕೇಶವನೇ ಶಿವನೇ ನೀ
ಪ್ರೀತಿಸೈ ಸತತ

ನವರತ್ನ ಖಚಿತ
ಬಂಗಾರದಾ ಪಾತ್ರೆಯಲಿ
ತುಪ್ಪ ಹಾಲ್ಮೊಸರು ಪಂಚ
ಭಕ್ಷ್ಯಾದಿಗಳನು
ಬಾಳೆ ಮಾವಿತ್ಯಾದಿ
ವಿಧದ ಹಣ್ಣಿನ ಜತೆಗೆ
ಪಾನಕ ತಾಂಬೂಲವಂ
ಕೊಡುತಲಿಹೆನು

ಅವಸರದ ಜೀವನದಿ
ಮರೆತಿರುವೆ ನಿನ್ನನ್ನೇ
ಭವಸಾಗರವು ಬಹಳ
ವಿಸ್ತಾರವಹುದು
ಕ್ಷಮಿಸೆನ್ನ ಮಂದಮತಿ
ಕರುಣಿಸುತ ಚಂದಗತಿ
ಮರುಳು ಮಾನವ ಜನ್ಮ
ಮುಸುಕು ಕವಿದಿಹುದು

ಕರಚರಣ ಕೃತಪಾಪ
ಕಾಯದಲಿ ಕರ್ಮದಲಿ
ಶ್ರವಣ ನಯನಗಳಲ್ಲಿ
ಜನಿಸಿದಪರಾಧ
ವಿಹಿತವೋ ಅವಿಹಿತವೋ
ಸರ್ವವನು ಕಡೆಗಣಿಸು
ಜಯಜಯವು ಜಯವೆನುತ
ದರ್ಶಿಸುವೆ ಪಾದ

Monday, November 15, 2010

ಬಾಲ್ಯಸಖಿ

ಚಿತ್ರ ಋಣ : ಅಂತರ್ಜಾಲ

ಬಾಲ್ಯಸಖಿ

ತಣ್ಣೆಳಲು ಬಯಸುತ್ತ ತೆರಳಿ ಆಲದ ಅಡಿಗೆ
ಕಣ್ಣೆವೆಯ ಮುಚ್ಚಿ ಮಲಗಿರಲು ಸಿಹಿಗನಸು
ಬಣ್ಣಿಸಲು ಶಬ್ದ ಸೋಲುವ ಮುನ್ನ ನಾ ಬರೆದೆ
ನುಣ್ಣನೆಯ ಈ ಹಾಡು ಗುನಿಗುನಿಸುವುದಕೆ

ಹುಣ್ಣಿಮೆಯ ರಾತ್ರಿಯಲಿ ಬಂದು ಕುಳಿತಿರೆ ಇಲ್ಲಿ
ಹೆಣ್ಣು ಹರಿಣದ ಮುಖವ ಹೊತ್ತ ಆ ಮುಗುದೆ
ಬಣ್ಣ ಹಾಲಿನ ಬಿಳುಪು ಸುರಲೋಕ ಸುಂದರಿಯು
ಗಿಣ್ಣದಂತಹ ಕೆನ್ನೆ ಮೃದುಮನಸಿನವಳು

ಅಣ್ಣಕೇಳ್ ನಾ ಬಂದೆ ಸರಿರಾತ್ರಿಯಲಿ ಭರದಿ
ಸಣ್ಣ ನಡುವನು ಬಳಸಿ ಮುದ್ದಾಡಲಾಗ
ಹಣ್ಣು-ಹಂಪಲು ಹಿಡಿದು ತೋರಿದೆನು ಪ್ರೀತಿಯನು
ಬೆಣ್ಣೆ ಮುದ್ದೆಯ ಮೈಯ ಸೋಕಿಸಿದಳವಳು

ಚಿಣ್ಣರಂತಾಗಿದ್ದ ನಮ್ಮ ಮನಗಳು ಸೇರಿ
ಮಣ್ಣಾಟವಾಡಿದ ದಿನಗಳನು ನೆನೆದೂ
ತಣ್ಣನೆಯ ಸುಳಿಗಾಳಿ ಸುಂಯ್ಯೆಂದು ಬೀಸಿಬರೆ
ಸುಣ್ಣಹಚ್ಚಿದ ತಾಂಬೂಲವನು ಮೆದ್ದೂ

ಬಣ್ಣಬಣ್ಣದ ಕಾಗದಗಳನು ಅಂಟಿಸುತ
ಕಣ್ಣಳತೆ ಮೀರಿ ಹೋಗುವ ದೂರದೆಡೆಗೆ
ಮಣ್ಣಾದ ಕೈಗಳಲಿ ಹಾರಿಸುತ ಗಾಳಿಪಟ
ಹುಣ್ಣಾಗುವಷ್ಟು ನಕ್ಕುದ ನೆನೆದು ಕಡೆಗೆ

ಹೆಣ್ಣವಳು ಬಾಲ್ಯಸಖಿ ಬಾಳಬೆಳಗಿದ ಗೆಳತಿ
ಗೆಣ್ಣು ಮುರಿದಿಹ ಕಾಯಿ ನೆಲವಪ್ಪಿದಂತೇ
ಹಣ್ಣೆಲೆಯು ಕೋಲೊಂದು ಉದುರಿ ಚೀಲದಮೇಲೆ
ಟಣ್ಣೆಂದು ಬಿದ್ದ ಸದ್ದಿಗೆ ಎದ್ದು ಕುಳಿತೆ !

Sunday, November 14, 2010

ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!


ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!

ಎಷ್ಟೋ ಸಮಯ ಮಕ್ಕಳನ್ನು ನಾವು ಮರೆತೇಹೋಗುತ್ತೇವೆ. ದೈನಂದಿನ ನಮ್ಮ ವ್ಯಾವಹಾರಿಕ ಜಂಜಡಗಳಲ್ಲಿ ಮಕ್ಕಳನ್ನು ಬೈದೋ ಬಡಿದೋ ದೂರ ಅಟ್ಟುವುದೇ ನಮ್ಮ ಕ್ರಿಯೆಯಾಗಿ ಎಷ್ಟೋ ಮನೆಗಳಲ್ಲಿ ಇಂದಿಗೂ ಅಪ್ಪನೆಂದರೆ ಹೆದರಿ ಮುದುರಿಕೊಳ್ಳುವ ಮಕ್ಕಳೂ ಇದ್ದಾರೆ! ಅಪ್ಪ ಯಾಕೆ ಒಮ್ಮೊಮ್ಮೆ ಹೀಗಾಗಿ ಬಿಡುತ್ತಾನೆ ಎಂದು ಆ ಮುಗ್ಧ ಮನಸ್ಸು ಅರ್ಥೈಸಲಾಗದೇ ಸೋಲುತ್ತದೆ. ಮನೆಯಲ್ಲಿ ಅಪ್ಪ-ಅಮ್ಮ ಕೊಡುವ ಪರಿಸರ, ಸಂಸ್ಕಾರದಲ್ಲಿ ಮಕ್ಕಳು ಬೆಳೆಯುತ್ತಾರೆ. ಈ ಕುರಿತು ಗಿಳಿಮರಿಗಳೆರಡರ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಒಂದು ನೈಜ ಘಟನೆಯನ್ನು ತಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

ಒಂದು ಪ್ಲಾಸ್ಟಿಕ್ ಪೀಠೋಪಕರಣಗಳನ್ನು ಮಾರುವ ಅಂಗಡಿಯ ಪಕ್ಕ ನನ್ನ ವಾಹನವನ್ನು ನಿಲ್ಲಿಸುತ್ತಿದ್ದೆ. ಅಲ್ಲಿ ಪಾರ್ಕಿಂಗ್ ಜಾಗದ ಹಿಂದೆ ಸಂದಿಯಲ್ಲಿ ಚಿಕ್ಕ ಹುಡುಗರಿಬ್ಬರು ನಿಂತಿದ್ದರು. ಸುಮಾರು ೬-೭ ವಯಸ್ಸಿನವರು. ಒಬ್ಬನ ತುಟಿಯೊಡೆದು ರಕ್ತ ಹೊರಚಿಮ್ಮುತ್ತಿತ್ತು. ತುಸು ಹೊತ್ತು ನೋಡಿ ಹತ್ತಿರ ಕರೆದೆ. " ಯಾಕಪ್ಪಾ ಏನಾಯಿತು ? " ಎಂದೆ. ಆತ ಅಳುವುದನ್ನು ಇನ್ನೂ ಜೋರಾಗಿಸಿದ. ಬಹುಶಃ ಒಡೆದ ದವಡೆಯ ಅಥವಾ ತುಟಿಯ ನೋವಿನಿಂದ ಆತ ಚೀರುತ್ತಿದ್ದನಿರಬೇಕು. ಗಮನಿಸಿ ನೋಡಿದಾಗ ತಿಳಿದದ್ದು : ಆತ ಯಾವುದೋ ಸ್ಲಮ್ ಹುಡುಗ, ಜೊತೆಗಾರನೂ ಸ್ಲಮ್ ಹುಡುಗನೇ. ಆಗ ಅಪರಾಹ್ನ ೪ ಗಂಟೆಯ ಸಮಯ. ಊಟಮಾಡಿದ್ದರೋ ಹಸಿದಿದ್ದರೋ ಆ ಹುಡುಗರು ತಿಳಿಯದು. ಅವರನ್ನು ಕೇಳುವವರಾರು? ದುಡಿಯುವ ಜನಸಾಮಾನ್ಯನೇ ತೊಂದರೆಯಿಂದ ಹೆಳವನಾದರೆ ಯಾರೂ ಕೇಳದ ಕಾಲವಿದು ಅಂದಮೇಲೆ ಅಂತಹ ಹುಡುಗರನ್ನೆಲ್ಲಾ ಯಾರು ಕೇಳುತ್ತಾರೆ ಅಲ್ಲವೇ ? ನಾನು ತಡೆಯದಾದೆ. ಮನಸ್ಸಿಗೆ ಬಹಳ ಬೇಸರವಾಯಿತು. ಆತ ಅಂತೂ ಉತ್ತರಿಸಿದ " ಆ ಅಂಗಡಿಯಪ್ಪ ಹೊಡೆದನಣ್ಣಾ. " ಎನ್ನುತ್ತಾ ಕೆನ್ನೆ ಮುಟ್ಟಿಕೊಂಡ. ಕೆನ್ನೆ ಊದತೊಡಗಿತ್ತು. ನಾನು ಮತ್ತೆ ಕೇಳಿದೆ " ನೀನೇನು ಮಾಡಿದೆ ಅಂತ ಹೊಡೆದರು ? " ಆತ ನಿರುತ್ತರನಾಗಿದ್ದ. ನಾನು ಅಂಗಡಿಯಾತನಲ್ಲಿ ಕೇಳಿದೆ " ಸ್ವಾಮೀ ಅಷ್ಟು ಜೋರಾಗಿ ಹೊಡೆದಿರಲ್ಲ ಯಾಕೆ ಅಂತ ಕೇಳಬಹುದೇ ? " ಅಂಗಡಿಯಾತ ಹೇಳಿದ " ಕಳನನ್ಮಕ್ಳು ಚೇರ್ ಕದೀತಾ ಇದ್ರು ಅದಕ್ಕೇ ಕೊಟ್ಟೆ ಎರಡು. " ಉತ್ತರಬಂತು. ಅರ್ಥವೂ ಆಯಿತು.

ಸ್ಲಮ್ ಹುಡುಗರಿಗೆ ಅವರ ಮಾತಾ-ಪಿತೃಗಳು ಇನ್ನೇನು ಹೇಳಿಕೊಡಲು ಸಾಧ್ಯ! ಊಟಕ್ಕೇ ಗತಿಯಿರದಿರುವಾಗ ವಿದ್ಯೆಗೆ ದಾರಿ ಇದೆಯೇ ? ಅನ್ನ-ವಸತಿಗೆ ಅನುಕೂಲವಿಲ್ಲದಾಗ ಮಿಕ್ಕಿದ ಸಂಸ್ಕಾರಗಳಿಗೆ ಪುರಸ್ಕಾರವಿರುತ್ತದೆಯೇ ? ಬಡತನದ ಬವಣೆಯ ಸಂಸಾರದಲ್ಲಿ ಹುಟ್ಟಿಬೆಳೆಯುವ ಇಂಥಾ ಮಕ್ಕಳ ಗೋಳು ಹೇಳತೀರದು. ಅಪ್ಪ-ಅಮ್ಮ ಹೇಳಿದ್ದನ್ನು ಅವರು ಪಾಲಿಸಬೇಕು. ಇಲ್ಲದಿದ್ದರೆ ಹೊಟ್ಟೆಗೆ ಸಿಗುವ ಚಿಲ್ಲರೆ ಹಿಟ್ಟೂ ಇಲ್ಲ! ಪಾಲಕರು ಹೇಳಿದ್ದನ್ನು ಆದಷ್ಟೂ ಪಾಲಿಸುವ ಅಂತಹ ಹುಡುಗರು ಹಲವೊಮ್ಮೆ ಬೆಳೆಯುತ್ತಾ ಸಹಜವಾಗಿ ಇಲ್ಲದ ಚಟಗಳಿಗೆ ಬಲಿಯಾಗುತ್ತಾರೆ. ಕೆಲಸದಲ್ಲಿ ಆಸಕ್ತಿಯಿಲ್ಲದೇ ಮಾದಕ ವ್ಯಸನಿಗಳಾಗಿ ಎಲ್ಲೋ ಬಿದ್ದಿರುವುದೂ ಇರಬಹುದು. " ಹೇಯ್ ಏಳ್ರೋ ಮೇಲೆ ಹೋಗ್ರೋ ಏನಾದ್ರೂ ಒಂದಷ್ಟ್ ಪಟಾಯ್ಸ್ಕೊಂಡ್ ಬನ್ನಿ, ಇಲ್ಲಾಂದ್ರೆ ಒದ್ದೋಡ್ಸ್ಬುಡ್ತೀನಿ " ಇಂತಹ ಬೆದರಿಕೆಯ ದನಿಗೆ ಒಂದುಕಡೆ ಬೆದರಿ ಇನ್ನೊಂದು ಕಡೆ ತಿನ್ನುವ ತುತ್ತಿಗೆ ಅನಿವಾರ್ಯವಾಗಿ ಸ್ಲಮ್ ಮಕ್ಕಳು ದಾರಿ ತಪ್ಪುತ್ತಾರೆ. ನೇರಮಾರ್ಗದ ದುಡಿಮೆಯ ಬದಲು ಅಡ್ಡಡ್ಡ ಮಾರ್ಗವನ್ನು ಹಿಡಿಯುತ್ತಾರೆ. ಅವರಲ್ಲೇ ಬಹಳ ಮಂದಿ ಅವರಿವರ ಬಂಟರಾಗಿ ರೌಡೀ ಗ್ಯಾಂಗ್ ಗಳಲ್ಲಿ ಸೇರಿಕೊಂಡರೆ ಕೆಲವರು ಮಾತ್ರ ಚಿಲ್ಲರೆ ವ್ಯಪಾರವೋ ಸಾಪಾರವೋ ಮಾಡಿ ಜೀವಿಸುತ್ತಾರೆ. ಎಲ್ಲೋ ಬೆರಳೆಣಿಕೆಯಷ್ಟು ಜನ ಕೂಲಿ, ಚಿಕ್ಕಪುಟ್ಟ ನೌಕರಿ ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ.

ಹೀಗಿರುವ ಸ್ಲಮ್ ಒಂದರಿಂದ ಬಂದಿದ್ದ ಅವರಿಬ್ಬರು ಹಸಿದ ಹೊಟ್ಟೆಯಲ್ಲೇ ಇದ್ದರೇನೋ. ಅಲ್ಲಿರುವ ಪ್ಲಾಸ್ಟಿಕ್ ಅಂಗಡಿಯಾತ ಕೂಡ ತೀರಾ ಅನುಕೂಲದವರೇನಲ್ಲ. ತಮ್ಮ ಬದುಕಿಗಾಗಿ ಇರುವುದರಲ್ಲೇ ಅಷ್ಟೋ ಇಷ್ಟೋ ಹಣಕೂಡಿಸಿಕೊಂಡು ಅಂಗಡಿ ತೆರೆದಿದ್ದವರು. ಮೇಲಾಗಿ ವ್ಯಾಪಾರದಲ್ಲಿ ವಿಪರೀತ ಪೈಪೋಟಿ ಬೇರೆ. ತನ್ನ ಅನ್ನಕ್ಕೇ ಕೈಹಾಕಿದವರು ಹುಡುಗರೇ ಆಗಿದ್ದರೂ ತಾಳಲಾರದೇ ಹುಡುಗನಿಗೆ ಎರಡು ಬಾರಿಸಿದ್ದಾರೆ. ಹೊಡೆದ ತೀವ್ರತೆಗೆ ದವಡೆಯೇ ಒಡೆದು ತುಟಿಯತನಕವೂ ಗಾಯವಾಗಿ ರಕ್ತಬಂದಿದೆ. ಇಲ್ಲಿ ಹುಡುಗರ ತಪ್ಪೋ ಅಥವಾ ಅಂಗಡಿಯವರ ತಪ್ಪೋ ನೀವೇ ಹೇಳಿ. ಒಬ್ಬ ಏನೂ ಇಲ್ಲದವ, ಇನ್ನೊಬ್ಬ ತನ್ನ ಹೊಟ್ಟೆಗೆ ವ್ಯಾಪಾರೀ ವೃತ್ತಿಯಲ್ಲಿ ತೊಡಗಿಕೊಂಡವ. ನಾನು ಅಂಗಡಿಯವರ ಕೂಡ ಮಾತನಾಡಿದೆ. " ಸ್ವಾಮೀ ಏನೋ ಹುಡುಗರು ಸ್ವಲ್ಪ ಗದರಿಸಿ ಬಿಡಬಹುದಿತ್ತು, ಇನ್ನು ಮಾಡಿದರೆ .....ಅಂತ ಹೇಳಬಹುದಿತ್ತಲ್ಲ " ಎಂದೆ. " ನಿಮಗೇನ್ ಗೊತ್ರೀ ನಮ್ ಕಷ್ಟಸುಖ ದಿನಾ ಬರ್ತಾರೆ...ನಿಂತಿರ್ತಾರೆ.....ಸ್ವಲ್ಪ ನೋಡ್ಲಿಲ್ಲಾ ಅಂದ್ರೆ ಹೊಡ್ಕೊಂಡೋಗ್ಬುಡ್ತಾರೆ...ಪಾಪಿ ನನ್ಮಕ್ಳು. "

ನಾನು ಹೆಚ್ಚಿಗೆ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ಹುಡುಗ ಅಲ್ಲೇ ಅಳುತ್ತಿದ್ದ. ಆತನನ್ನು ಕರೆದು ಕೈಗೊಂದು ಹತ್ತು ರೂಪಾಯಿ ಕೊಟ್ಟು [ಇದು ಕೊಟ್ಟೆ ಎಂದು ತೋರಿಸಲು ಬರೆದದ್ದಲ್ಲ, ನಡೆದದ್ದನ್ನ ಇದ್ದಹಾಗೇ ಹೇಳುತ್ತಿದ್ದೇನೆ] " ಅಲ್ಲಯ್ಯಾ ನೀನ್ಯಾಕೋ ಕದಿಯಕ್ಕೆ ಹೋಗಿದ್ದೆ? ಕಳ್ತನ ಮಾಡೋದು ತಪ್ಪು ಅಂತ ಗೊತ್ತಿಲ್ವಾ ? " ಅಂದೆ. ಆತ ನನ್ನ ಕಣ್ಣುಗಳನ್ನು ನೋಡಿ ತನ್ನ ಅಸಹಾಯಕತೆಯನ್ನು ಕಣ್ಣುಗಳಿಂದಲೇ ತಿಳಿಸುತ್ತಿದ್ದ. ಮಕ್ಕಳ ಇಂತಹ ಗೋಳಿಗೆ ಕಾರಣ ನಮ್ಮಲ್ಲಿನ ಬಡತನವಲ್ಲವೇ ? ಹುಟ್ಟಾ ಯಾವ ಮಗುವೂ ಕಳ್ಳ ಸುಳ್ಳ ಆಗಿರುವುದಿಲ್ಲ. ಮಗುವಿಗೆ ತಾನ್ಯಾರು, ಎಲ್ಲಿದ್ದೇನೆ, ಏನುತಿನ್ನುತ್ತೇನೆ ಇವೆಲ್ಲಾ ಪರಿವೆಯೇ ಇರುವುದಿಲ್ಲ. ಅಲ್ಪಸ್ವಲ್ಪ ತಿಳುವಳಿಕೆ ಬರುವುದು ೩ ವರ್ಷಗಳ ನಂತರವಷ್ಟೇ. ಹೀಗಾಗಿ ೩ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದೇವರೆಂದೇ ತಿಳಿದರೆ ತಪ್ಪಿಲ್ಲ. ಅಂತಹ ಮುಗ್ಧ ಮನಸ್ಸು ಅವರದಾಗಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಅವ್ರು ಹುಟ್ಟಿದ ಸುತ್ತಲ ಪರಿಸರಕ್ಕೆ ಒಗ್ಗಿಕೊಳ್ಳತೊಡಗುತ್ತಾರೆ. ಅಲ್ಲಿನ ಭಾಷೆ, ಸಂಸ್ಕಾರ-ಸಂಸ್ಕೃತಿ, ಆಹಾರ-ವಿಹಾರ, ಆಚಾರ-ನಡವಳಿಕೆ ಎಲ್ಲವನ್ನೂ ಮಗು ಸೂಕ್ಷ್ಮವಾಗಿ ಅರಿಯತೊಡಗುತ್ತದೆ, ಅನುಕರಿಸತೊಡಗುತ್ತದೆ. ಯಾವುದು ತಪ್ಪು ಯಾವುದು ಒಪ್ಪು ಎನ್ನುವುದನ್ನು ಮರೆತು ತಪ್ಪನ್ನೇ ಸರಿಯೆಂಬ ಭಾವನೆಯಿಂದ ತನ್ನ ಹಿರಿಯರು ಹೇಳಿದ್ದನ್ನು ಮಾಡತೊಡಗುತ್ತದೆ.

ಎಳವೆಯಲ್ಲೇ ಇಂತಹ ಮಕ್ಕಳು ಬೀದಿಗೆ ಬಂದು ಬೇಡುವುದು-ಕಾಡುವುದು ಮುಂತಾದ ಹಲವು ಮಾರ್ಗಗಳನ್ನು ಹಿಡಿಯುತ್ತಾರೆ. ಒಮ್ಮೊಮ್ಮೆ ಯಾವುದೂ ಸಾಲದಾಗ ಪಾಲಕರು ಹೇಳಿಕೊಡುವ ಕಳ್ಳತನವೇ ಮೊದಲಾದ ಬೇಡದ ಕೆಲಸಕ್ಕೆ ಕೈಹಾಕುತ್ತಾರೆ. ಸಮಾಜ ತಮ್ಮನ್ನು ವಿರೋಧಿಸುತ್ತದೆ ಎಂದು ಅನಿಸಿದಾಗ ಸಮಾಜದ ಜನರನ್ನು ನಿಗ್ರಹಿಸಲು ಮಚ್ಚು-ಲಾಂಗುಗಳನ್ನು ಕೈಗೆತ್ತಿಕೊಂಡು ಹೆದರಿಸುವ ಕಾಯಕ ಆರಂಭವಾಗುತ್ತದೆ. ಎಳೆಯ ಮಗುವೊಂದು ಪರಿಸ್ಥಿತಿಯಿಂದ ಬೆಳೆದ ರೌಡಿಯಾಗುತ್ತದೆ! ಇದರ ಮೂಲ ಬಡತನ ಮತ್ತು ಪರಿಸರ. ಇಂತಹ ಮಕ್ಕಳಿಗೆ ಆರಂಭದಲ್ಲೇ ಒಳ್ಳೆಯ ವಿದ್ಯೆ-ಸಂಸ್ಕಾರ ಸಿಕ್ಕಿದ್ದರೆ ಅವರು ಹೀಗಾಗುತ್ತಿರಲಿಲ್ಲ. ಆದರೆ ಹುಟ್ಟಿಸಿದಾತನಿಗೆ ಅವರ ಉದರಂಭರಣೆಯೇ ಕಷ್ಟವಾಗಿರುವಾಗ ಇನ್ನು ವಿದ್ಯೆಯೆಲ್ಲಿಂದ ಬಂತು ? ಪಾಪದ ಕೂಸುಗಳು ಪಾಪಕೂಪದ ಕೃತ್ಯಕ್ಕೆ ಇಳಿದುಬಿಡುತ್ತವೆ. ವಂಚನೆ, ಮೋಸ, ದಗಾಕೋರರಾಗಿಯೂ, ಕಳ್ಳರು-ದರೋಡೆಕೋರರಾಗಿಯೂ ಕೆಲದಿನ ಸಂಪಾದಿಸಿದ ಹಣದಿಂದ ಆಮೇಲೆ ರೋಲ್ ಕಾಲ ಮಾಡಲು ಶುರುಮಾಡಿ ರೌಡಿಗಳಾಗುತ್ತಾರೆ.

ಈಗ ಸಮಾಜದ ಇನ್ನೋಂದು ಮುಖವನ್ನು ನೋಡೋಣ. ಉಳ್ಳವರ ಮಕ್ಕಳಿಗೆ ಹೊಟ್ಟೆ-ಬಟ್ಟೆಗೆ ಹೇರಳವಾಗಿ, ಹೆಚ್ಚಾಗಿ, ತಿಂದಿದ್ದು ಕರಗದೇ ಹಲವು ಹವ್ಯಾಸ ಬೆಳೆಯುತ್ತದೆ. ಇಲ್ಲಿಯ ಸಂಸ್ಕಾರ ವಿಭಿನ್ನವಾಗಿದ್ದು ಇಲ್ಲಿ ಅಪ್ಪ-ಅಮ್ಮ ಯಾಂತ್ರಿಕವಾಗಿ ಮಕ್ಕಳನ್ನು ಬೆಳೆಸುತ್ತಾರೆ. ಆತ್ಮೀಯತೆ ತೀರಾ ಕಮ್ಮಿ ಇರುವ ವಾತಾವರಣದಲ್ಲಿ ಮಕ್ಕಳು ಅಪ್ಪ-ಅಮ್ಮನ ನಿಜವಾದ ಪ್ರೀತಿ ಸಿಗದೇ ಉಂಡಾಡಿಗಳಾಗಿ ಖರ್ಚಿಗೊಂದಷ್ಟು ಪಾಕೆಟ್ ಮನಿ ಪಡೆದು ವಿದ್ಯಾರ್ಥಿದೆಸೆಯಲ್ಲಿಯೇ ಬೇಡದ ಚಟಗಳನ್ನು ಅಂಟಿಸಿಕೊಳ್ಳಲು ತೊಡಗುತ್ತಾರೆ. ಅಪ್ಪ-ಅಮ್ಮನ ಮಧ್ಯೆ ಇರುವ ’ಅಹಂ’ ಎಂಬ ಕಂದಕದಿಂದ ಮಕ್ಕಳು ಎಲ್ಲಿದ್ದಾರೆ, ಏನುಮಾಡುತ್ತಿದ್ದಾರೆ ಎಂಬುದನ್ನು ಲಕ್ಷ್ಯಿಸುವ ದೇಖರೇಖಿಯ ಕೆಲಸ ಅಪ್ಪ-ಅಮ್ಮಂದಿರಿಗೆ ಸಾಧ್ಯವಾಗುವುದಿಲ್ಲ.

ಇದಕ್ಕೆ ಉದಾಹರಣೆ: ಕಳೆದ ಕೆಲವು ತಿಂಗಳ ಹಿಂದೆ ಅತಿ ಚಿಕ್ಕ ಹುಡುಗರಿಬ್ಬರು ಮನೆಯಿಂದ ತಪ್ಪಿಸಿಕೊಂಡಿದ್ದರು. ಆಮೇಲೆ ನೋಡಿದರೆ ಮಧ್ಯಮವರ್ಗದವರಿಗೆ ಜನ್ಮದಲ್ಲೇ ಸಾಧ್ಯವಾಗದ ರೆಸಾರ್ಟ್ ಖರ್ಚಿನ ವಾಸದಲ್ಲಿ ಅವರು ಇದ್ದರು. ಅಲ್ಲಿಗೆ ಹೋಗಿ ಏನೇನನ್ನೋ ಬಯಸಿ ಕೇಳಿಪಡೆದು ಮಜಾಮಾಡತೊಡಗಿದ್ದರು. ಇಷ್ಟು ಸಣ್ಣಮಕ್ಕಳು ಮಾಡಿದ ಕೆಲಸದ ಇತಿಹಾಸ ಕೇಳಿ ನಾವೆಲ್ಲಾ ನಿಜಕ್ಕೂ ದಂಗಾಗಿ ಹೋಗಿದ್ದೆವು. ಇವತ್ತಿನ ದಿನ ವಾರ್ತಾವಾಹಿನಿಗಳು ನಿರಂತರ ಕಾರ್ಯನಿರತವಾಗಿರುವುದರಿಂದ ಅವರ ಪತ್ತೆ ಸುಲಭಸಾಧ್ಯವಾಯಿತು. ಇಲ್ಲಾಂದರೆ ಮಕ್ಕಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದೇ ಭಾವಿಸಬೇಕಾಗುತ್ತಿತ್ತು. ಇದು ಇಂದು ನಿನ್ನೆಯದಲ್ಲ,ಹಿಂದಿನಿಂದಲೂ ನಡೆದು ಬಂದಿದ್ದು. ಉಳ್ಳವರಿಗೆ ಮಕ್ಕಳೂ ಒಂದು ಉಪಕರಣವಿದ್ದ ಹಾಗೇ! ಹೆಂಡತಿ-ಮಕ್ಕಳು ಇರಬೇಕೋ ಇರಬೇಕು ಅಷ್ಟೇ. ಬಾಕಿ ಚಟಗಳನ್ನೆಲ್ಲಾ ಅವರು ದುಡ್ಡಿಕೊಟ್ಟು ತೆವಲು ತೀರಿಸಿಕೊಳ್ಳುತ್ತಾರೆ. ಐಷಾರಾಮೀ ಬಂಗಲೆಯಲ್ಲಿ ಹಾಯಾಗಿ ಹತ್ತಾರು ಕೋಣೆಗಳು, ದೊಡ್ಡ ದೊಡ ಹಜಾರಗಳು, ಕೈಗೆ ಕಾಲಿಗೆ ಆಳುಗಳು, ಅಡಿಗೆಯವರು.....ಹೀಗೇ ಎಲ್ಲದಕ್ಕೂ ಪ್ರತ್ಯೇಕ ವ್ಯವಸ್ಥೆ...ಎಲ್ಲವೂ ದುಡ್ಡಿನಲ್ಲೇ. ಕೋಣೆ ಕೋಣೆಗೆ ಫೋನು, ಟಿವಿ. ಅಪ್ಪನಿಗೊಂದು ಕೋಣೆ, ಅಮ್ಮನಿಗೆ ಇನ್ನೊಂದು ಕೋಣೆ. ಮಕ್ಕಳಿಗೆ ಒಬ್ಬೊಬರಿಗೆ ಒಂದೊಂದು ಕೋಣೆ. ಮಕ್ಕಳಿಗೆ ಹೋಮ್ ವರ್ಕ್ ಮಾಡಿಸಲು ಟ್ಯೂಶನ್ ಟೀಚರ್, ಅವರನ್ನು ಮಲಗಿಸಲು ಆಯಾಗಳು. ಇನ್ನೇನು ಬೇಕು. ಅಲ್ಲಿ ಕೊರತೆಯಿರುವುದು ಅಪ್ಪ-ಅಮ್ಮನ ಪ್ರೀತಿ ಮಾತ್ರ. ಎಲ್ಲವೂ ಯಾಂತ್ರಿಕ!

ಇಂತಹ ಸ್ಥಿತಿಯಲ್ಲಿ ಬೆಳೆದ ಹುಡುಗರು ಹಿಂದೊಮ್ಮೆ ಪರೀಕ್ಷೆಗೆ ಕುಳಿತಾಗ ತಾವು ಹೇಗೂ ಉತ್ತೀರ್ಣರಾಗುವುದಿಲ್ಲವೆಂದು ತಿಳಿದಾಗ ನೂರು ನೂರು ರೂಪಾಯಿಗಳ ನೋಟುಗಳನ್ನು ಉತ್ತರಪತ್ರಿಕೆಗೆ ಗುಂಡುಪಿನ್ನು ಚುಚ್ಚಿ ಸಿಕ್ಕಿಸಿ ಅದರ ಕೆಳಗೆ ಬರೆದ ವಚನ

’ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ’ !

ಇಂತಹ ಮಹಾಮೇಧಾವಿಗಳೇ ಮುಂದೆ ಬೆಳೆದು ರಾಜಕಾರಣಿಗಳಾಗುತ್ತಾರೆ! ನಮ್ಮನ್ನೆಲ್ಲಾ ಆಳುತ್ತಾರೆ. ಅವರಿಗೆ ಗೊತ್ತು ದುಡ್ಡು ಕೊಟ್ಟರೆ ಎಲ್ಲವೂ ಸಾಧ್ಯ. ದುಡ್ಡಿದ್ದರೆ ಏನನ್ನೂ ಖರೀದಿಸಬಹುದು ಎಂಬುದು ಅವರ ಅನುಭವ ಜನ್ಯ ಅನಿಸಿಕೆಯಾಗಿರುತ್ತದೆ. ಶಾಸಕ ಸ್ಥಾನಕ್ಕೆ ಟಿಕೀಟು ಖರೀದಿಯಾಗುತ್ತದೆ. ಆಮೇಲೆ ಚುನಾವಣೆಗೆ ಒಂದಷ್ಟು ಕೋಟಿ ಇನ್ವೆಷ್ಟಮೆಂಟ್ ಆಗುತ್ತದೆ! ಆಮೇಲೆ ಗೆದ್ದಮೇಲೆ ಮಂತ್ರಿಗಿರಿಗೆ ಮತ್ತಷ್ಟು ಕೋಟಿ ಖರ್ಚಾಗುತ್ತದೆ! ತದನಂತರ ಅವುಗಳನ್ನೆಲ್ಲಾ ಸರಿದೂಗಿಸಿ ಮುಂದಿನ ಚುನಾವಣೆಗೆ ಮತ್ತು ಐಷಾರಾಮೀ ಜೀವನಕ್ಕೆ ಬೇಕಾಗಿ ಮಿಗಿಸಲು ಲಾಬಿ ಶುರು ಹಚ್ಚಿಕೊಳ್ಳುತ್ತಾರೆ!

ಯಾವ ಮಗು ಎಳವೆಯಲ್ಲಿ ಏನನ್ನು ಬಯಸಬಾರದಿತ್ತೋ , ಯಾವ ಕಾಮಚೇಷ್ಟೆಗಳನ್ನು ಅನುಭವಿಸಬಾರದಿತ್ತೋ, ಏನನ್ನು ಕುಡಿಯಬಾರದಿತ್ತೋ ಅಷ್ಟನ್ನೂ ಮಾಡಿಮುಗಿಸಿರುತ್ತದೆ. ಮೂಲದಲ್ಲೇ ಮಹತ್ವಾಕಾಂಕ್ಷೆಯ ಆಸೆಗಳನ್ನು ಖರೀದಿಸುವ ಸಂಸ್ಕೃತಿಗೆ ಒಗ್ಗಿದ ಮಗುವಿಗೆ ಯಾವುದು ಬೇಕು ಯಾವುದು ಬೇಡ ಎಂಬುದರ ಪರಿವೆ ಹೇಗೆ ತಾನೇ ಬಂದೀತು? ಅಪ್ಪ - ಅಮ್ಮ ಪಾರ್ಟಿಗಳಲ್ಲಿ ಪೆಗ್ಗು ಹಾಕುವುದು ಕಂಡಾಗ ತಾನೇಕೆ ಮಾಡಬಾರದು ಎಂದು ಮಗುವಿನ ಮನಸ್ಸು ಅತ್ತಕಡೆ ಎಳೆಯುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಕಾಲೇಜಿಗಿನ್ನೂ ಕಾಲಿಡದವ ಎಮ್.ಜಿ. ರಸ್ತೆಯ ರೆಸ್ಟಾರೆಂಟ್ ಒಂದರಲ್ಲಿ ಕಂಠಪೂರ್ತಿ ಕುಡಿದು ದಾಂಧಲೆ ಮಾಡಿದ್ದು ನಮಗೆ ಗೊತ್ತಿರುವ ಹಳೇ ಕಥೆ. ಕಾಲಗರ್ಭದಲ್ಲಿ ಇಂತಹ ಅದೆಷ್ಟು ಕಥೆಗಳಿವೆಯೋ !

ಮಹಾತ್ಮಾ ಗಾಂಧೀಜಿ ಚಿಕ್ಕವರಿರುವಾಗ ಬೀಡಿಯೊಂದನ್ನು ಸೇದಿದ್ದರಂತೆ. ಅದು ಸರಿಯಲ್ಲವೆಂದು ಯಾವಾಗ ತಿಳಿಯಿತೋ ಮರುಕ್ಷಣದಿಂದ ತನ್ನಲ್ಲೇ ಕೊರಗಿ ಮತ್ತೆ ತಾನು ಬೀಡಿಸೇದದಂತೇ ಮನಸ್ಸನ್ನು ಹಿಡಿತದಲ್ಲಿಟ್ಟರಂತೆ. ಮನೆಯಲ್ಲಿ ನಾವೇನು ಮಾಡುತ್ತೇವೆ, ಶಾಲೆಯಲ್ಲಿ ಶಿಕ್ಷಕರು ಏನುಮಾಡುತ್ತಾರೆ ಇವೆಲ್ಲಾ ಚಿಕ್ಕಮಕ್ಕಳ ಎಳೆಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಈ ಎರಡು ಪ್ರದೇಶಗಳಲ್ಲಿ ಸಿಗುವ ವ್ಯಕ್ತಿಗಳೇ ಅಂದಿಗೆ ಮಕ್ಕಳ ರೋಲ್ ಮಾಡೆಲ್ ಆಗಿರುತ್ತಾರೆ! ನಮ್ಮಲ್ಲಿ ಯಾರೇ ಆಗಲಿ ಶ್ರೀಮಂತರಿದ್ದರೆ ಅವರಲ್ಲಿ ಒಂದು ಸವಿನಯ ವಿಜ್ಞಾಪನೆ ನನ್ನದು. ನಿಮ್ಮ ಮಕ್ಕಳನ್ನು ಯಾರದೋ ಉಸ್ತುವಾರಿಯಲ್ಲಿ ಬೆಳೆಸುವ ಬದಲು ನೀವೇ ಬೆಳೆಸಿ. ನಿಮ್ಮ ಅಂಹಕಾರ, ಶ್ರೀಮಂತಿಕೆಯನ್ನೆಲ್ಲಾ ಪಕ್ಕದಲ್ಲಿರಿಸಿ ವ್ಯವಹರಿಸಿ. ಮಹಾಲಕ್ಷ್ಮಿ ಚಂಚಲೆಯಂತೆ! ಅವಳು ನಿಂತಲ್ಲಿ ನಿಲ್ಲುವುದಿಲ್ಲವಂತೆ. ಒಂದೊಮ್ಮೆ ಯಾವುದೋ ತೊಂದರೆಯಿಂದ ಅವಾಂತರವಾಗಿ ಗಳಿಸಿದ ಶ್ರೀಮಂತಿಕೆ ನಶಿಸಿಹೋಗಿ ಬಡತನ ಬಂದುಬಿಟ್ಟರೆ ಆಗ ಹೇಗೆ ಬದುಕಬೇಕು ?

ನಾವೆಲ್ಲಾ ಎಳೆಯವರಿರುವಾಗ ನಮ್ಮ ತಾಯಿ, ತಂದೆ, ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು ಎಲ್ಲರೂ ಇರುವ ಕೂಡು ಕುಟುಂಬ ನಮ್ಮದಾಗಿತ್ತು. ೨ ವರ್ಷದವರಿದ್ದಾಗಲೇ ದಿನಾಲೂ ಬಾಯಿಪಾಠ ಹೇಳಿಸುತ್ತಿದ್ದರಂತೆ ನಮ್ಮ ಅಜ್ಜಿ. ೬ ವರ್ಷವಾದಾಗ ನಮ್ಮ ನಮ್ಮ ಬಟ್ಟೆಯನ್ನು ನಾವ್ನಾವೇ ತೊಳೆದುಕೊಳ್ಳಬೇಕು, ಶುಭ್ರ ಬಟ್ಟೆಗಳನ್ನು ಧರಿಸಬೇಕು, ಹಲ್ಲುಗಳನ್ನು ಬೆಳಿಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವ ಮುನ್ನ ಹೀಗೇ ಎರೆಡಾವರ್ತಿ ಉಜ್ಜಿ ಸ್ವಚ್ಛಗೊಳಿಸಬೇಕು ಎಂದು ಹೇಳಿಕೊಟ್ಟವರು ತಾಯಿ, ಸಾಹಸದ ಗಾಥೆಗಳನ್ನು ಮನದಟ್ಟಾಗಿಸಿ ವ್ಯಕ್ತಿ ಯಾವಾಗಲೂ ಕಾರ್ಯತತ್ಪರನಾಗಿರಬೇಕೆಂದೂ ಸಾಮಾನ್ಯವಾಗಿ ಬೇಕಾಗುವ ಎಲ್ಲಾ ಕೆಲಸಗಳನ್ನೂ ಅರಿತಿರಬೇಕೆಂದೂ ಹೇಳಿ-ತಿಳಿಸಿ-ಕಲಿಸಿದವರು ಅಜ್ಜ, ಮಕ್ಕಳಿಗೆ ಬೇಕಾಗುವ ಪುಸ್ತಕ, ಪಟ್ಟಿ, ಪೆನ್ಸಿಲ್, ಬಿಸ್ಕಿಟ್ ಇವನ್ನೆಲ್ಲಾ ತಂದವರು ಚಿಕ್ಕಪ್ಪಂದಿರು, ಬದುಕಿಗೆ ಬೇಕಾಗುವ ಹಲವು ಕೆಲಸಗಳನ್ನು ಪ್ರಯೋಗಿಕವಾಗಿ ಪ್ರಾತ್ಯಕ್ಷಿಕೆ ಮಾಡಿತೋರಿಸಿದವರು, ಕಿವಿ ಹಿಡಿದು ಬುದ್ಧಿಹೇಳಿದವರು ತಂದೆ. ನಮ್ಮಂತಹ ಶುಂಠರನ್ನು, ಮೂಢರನ್ನು ತಿದ್ದಲು ಅವರು ರಾಮಾಯಣ ಮಹಾಭಾರತಗಳ ಕಥೆಗಳನ್ನು ಬಳಸಿದರು.

ಪ್ರತೀನಿತ್ಯ ದೈವಧ್ಯಾನ, ಪೂಜೆ-ಪುನಸ್ಕಾರ, ಅತಿಥಿಸತ್ಕಾರ, ಶಾಲೆ, ಪಾಠ-ಪ್ರವಚನ, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು, ಕೊಟ್ಟಿಗೆಯ ಕೆಲಸಗಳು-ಸಗಣಿ ಎತ್ತುವುದು, ಎಮ್ಮೆ-ದನಗಳನ್ನು ಮೀಯಿಸುವುದು, ಕೊಟ್ಟಿಗೆ ತೊಳೆಯುವುದು, ಗೊಬ್ಬರ ಬರಗುವುದು, ಹಾಲು ಹಿಂಡುವುದು, ಜಾನುವಾರುಗಳಿಗೆ ಮೇವು-ಅಕ್ಕಚ್ಚು [ಕಲಗಚ್ಚು]ಕೊಡುವುದು, ತೋಟದಲ್ಲಿ ಗಿಡ-ಮರಗಳಿಗೆ ನೀರು-ಗೊಬ್ಬರ ಪೂರೈಕೆ ಇವೇ ಮೊದಲಾದ ಹತ್ತಾರು ಕಾರ್ಯಗಳಲ್ಲಿ ನಾವು ತೊಡಕಿಕೊಳ್ಳುತ್ತ ಓದುವಂತೇ ಪ್ರೇರೇಪಿಸಿದ್ದರಿಂದ ಇಂದು ಮಾನವರಾಗಿದ್ದೇವೆ ಅಂದುಕೊಂಡಿದ್ದೇನೆ! ನಮ್ಮ ಹಿರಿಯರು ಪ್ರತಿನಿತ್ಯ ಹೇಳುತ್ತಿದ್ದುದು :

|| ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ ||

ಅಂದಿಗೆ ನಮಗೆ ವೇದಮಂತ್ರಗಳ, ಶ್ಲೋಕಗಳ, ಸ್ತುತಿ-ಕವಚಗಳ ಅರ್ಥವಾಗುತ್ತಿರಲಿಲ್ಲ. ಇಂದು ನಮಗೆ ಇದನ್ನೆಲ್ಲಾ ಹೇಳಿಕೊಟ್ಟರಲ್ಲಾ ಪುಣ್ಯಾತ್ಮರು ಎಂದು ಮನಸ್ಸು ಕೃತಜ್ಞವಾಗುತ್ತದೆ. ಜೀವನದಲ್ಲಿ ಯಾರಲ್ಲಿಯೂ ಬೇಡಬಾರದಂತಹ ಸ್ಥಿತಿಯಲ್ಲಿ ನಾವು ಜೀವಿಸಿ ನಂತರ ನಿರಾಯಾಸವಾಗಿ ಮರಣವಾದರೆ ಅದೇ ಸುಖವೆಂದು ಈ ಮೇಲಿನ ಶ್ಲೋಕ ಹೇಳುತ್ತದೆಯಷ್ಟೇ ? " ಮಕ್ಕಳೇ ಯಾರನ್ನೂ ದ್ವೇಷಿಸಬೇಡಿ. ಎಲ್ಲರಲ್ಲಿಯೂ ಪ್ರೀತಿಯಿರಲಿ. ಜಗತ್ತಿನ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನಿದ್ದಾನೆ. ಆದಷ್ಟೂ ಬಡವರಿಗೆ, ಆರ್ತರಿಗೆ, ಮುಪ್ಪಿನ ವಯಸ್ಸಿನವರಿಗೆ, ಅಂಗವಿಕಲರಿಗೆ ಸಹಾಯಮಾಡಿ. ಯಾರಿಗೂ ನಮ್ಮಿಂದ ಅನ್ಯಾಯ-ಅಪಚಾರವಾಗದಂತೇ ನೋಡಿಕೊಳ್ಳಿ. ಒಂದೊಮ್ಮೆ ಯಾರಾದರೂ ನಮ್ಮಿಂದ ನೊಂದುಕೊಂಡರೆ ಅಂಥವರಲ್ಲಿ ಕ್ಷಮೆಯಾಚಿಸಿ. ಸಾಧು-ಸಂತರ ಸೇವೆಮಾಡಿ. ಗೋವುಗಳನ್ನು ಚೆನ್ನಾಗಿ ಆರೈಕೆಮಾಡಿ, ನಮ್ಮ ಸುತ್ತಲಿರುವ ಪ್ರತಿಯೊಂದೂ ವಸ್ತುವಿನಲ್ಲೂ ಪರಮಾತ್ಮ ಸಾನ್ನಿಧ್ಯ ಇದೆಯೆಂದು ಭಾವಿಸಿ ನಡೆದುಕೊಳ್ಳಿ." --ಹೀಗೇ ಹಲವು ಅಂಶಗಳನ್ನು ಆಗಾಗ ಹೇಳುತ್ತಿದ್ದರಲ್ಲದೇ ಅದರಂತೇ ನಡೆದುಕೊಂಡರು; ನಮಗದು ಆದರ್ಶ.

" ದರಿದ್ರ ಏಳಗೊಡ ಭಾಗ್ಯ ಕೂರಗೊಡ. ಜಾಸ್ತಿ ಮಲಗಿದರೆ ದರಿದ್ರರಾಗ್ತೇವೆ ಕೆಲಸಮಾಡಿ ಭಾಗ್ಯ ಹುಡುಕಿಕೊಂಡು ಬರುತ್ತದೆ " ಎನ್ನುತ್ತಿದ್ದ ಅಜ್ಜಿ ನಮ್ಮೆಲ್ಲರನ್ನೂ ಹೊತ್ತಾರೆ ಎಬ್ಬಿಸಿ ದೇವರಿಗೆ ಹೂ ಕೊಯ್ಯಲು ಕಳುಹಿಸುತ್ತಿದ್ದುದು ನೆನಪಿಗೆ ಬರುತ್ತಿದೆ. ಕೆಲವೊಮ್ಮೆ ಚಳಿಗಾಲದಲ್ಲಿ ಇಂಪಾಗಿ ಹಾಡುವ ಹಕ್ಕಿಗಳ ಕಲರವದ ನಡುವೆ ಅಜ್ಜಿ ಹಾಡುತ್ತಿದ್ದ ಹಾಡು :

ಏಳು ಮುದ್ದಿನ ಗಿಣಿಯೆ ಏಳು ಸದ್ಗುಣಮಣಿಯೆ
ಏಳಯ್ಯ ಕಂದಯ್ಯ ಬೆಳಗಾಯಿತು

ಕ್ರೂರಮೃಗಗಳು ತಾವು ಗವಿಯ ಸೇರುತಲಿಹವು
ಪಾರಿಜಾತದ ಪುಷ್ಪ ಅರಳುತಿಹುದು .....

ಹಾಡು ಸುಮಾರು ಉದ್ದವಿದೆ, ಒಳ್ಳೆಯ ಸಾಹಿತ್ಯವಿದೆ. ಬರೆದ ಅಜ್ಞಾತ ಕವಿಯ ಬಗ್ಗೆ ಗೊತ್ತಿಲ್ಲ. ಈ ಹಾಡಿನ ಅರ್ಥವನ್ನು ಅಜ್ಜಿಯೇ ವಿವರಿಸುತ್ತಿದ್ದರು. ಇಂದಿಗೆ ಅಜ್ಜಿ ಕೇವಲ ನೆನಪುಮಾತ್ರ. ಅವರು ನಮ್ಮೆಲ್ಲಾ ಮಕ್ಕಳ ಹೃದಯದಲ್ಲಿ ನೆಲೆನಿಂತರು! ಇವತ್ತಿನ ದಿನದಲ್ಲಿ ಅವಿಭಕ್ತ ಕುಟುಂಬಗಳು ಎಲ್ಲೋ ಸಾವಿರಕ್ಕೆ ಒಂದು ಕಾಣಸಿಕ್ಕರೆ ನಮ್ಮ ಪುಣ್ಯ. ಇದ್ದರೂ ಮೊದಲಿನ ನಿಸ್ಪೃಹ ಜೀವನದ ವೈಖರಿ ಇವತ್ತಿನ ಜನರಲ್ಲಿಲ್ಲ. ಅಂದು ಹಿರಿಯರಿದ್ದರು ಸನ್ಮಾರ್ಗ ಬೋಧಿಸುತ್ತಿದ್ದರು; ಇಂದು ಹಿರಿಯರು ಜೊತೆಗಿರುವುದಿಲ್ಲ ಸನ್ಮಾರ್ಗ ಯಾವುದು ದುರ್ಮಾರ್ಗ ಯಾವುದು ತಿಳಿಯುವುದೇ ಇಲ್ಲ. ವಿದ್ಯೆ ಕಲಿಸುವ ಶಿಕ್ಷಣ ಕೇಂದ್ರಗಳು ಬದುಕುವ ನಿಜವಾದ ಕಲೆಯನ್ನು ಕಲಿಸುವ ಬದಲು ಬೇರೇನನ್ನೋ ಹೇಳುತ್ತವೆ. ಇಲೆಕ್ಟ್ರಿಕಲ್ ಎಂಜಿನೀಯರಿಂಗ್ ಓದಿಕೊಂಡಾತ ಕೆಟ್ಟುನಿಂತ ತನ್ನ ಮೋಟಾರ್ ರಿಪೇರಿಗೆ ಯಾವುದೋ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸುತ್ತಾನೆ, ಸಿವಿಲ್ ಓದಿದವನಿಗೆ ಮನೆ ಕಟ್ಟಿಸಲು ಮತ್ತೊಬ್ಬ ಕಂತ್ರಾಟುದಾರ ಹೇಳಿಕೊಡಬೇಕಾಗುತ್ತದೆ, ಪ್ರಶಿಕ್ಷಣ ಓದಿದ ಪಂಡಿತನಿಗೆ ಪಾಠಮಾಡುವ ಪ್ರಾತ್ಯಕ್ಷಿಕೆಗೆ ಮತ್ತೆ ತರಬೇತಿ ಬೇಕು! --ಇವೆಲ್ಲಾ ಪಠ್ಯಕ್ರಮದ ನ್ಯೂನತೆಗಳು.

ಹೃದಯ ತಜ್ಞ ಡಾ| ಬಿ.ಎಮ್. ಹೆಗ್ಡೆಯವರು ಹೇಳುತ್ತಾರೆ-- ಅಲೋಪಥಿಯಲ್ಲಿ ಕೆಲವು ಮಾಪನಗಳನ್ನು ವಿದೇಶೀ ಹವಾಮಾನಕ್ಕನುಗುಣವಾಗಿ ಹೇಳುತ್ತಿದ್ದರಂತೆ. ಭಾರತದ ಹವಾಮಾನಕ್ಕೂ ಅಲ್ಲಿಗೂ ವ್ಯತ್ಯಾಸವಿರುವುದಿಲ್ಲವೇ ? ಇಲ್ಲಿ ಹೊಸದಾಗಿ ಕಲಿಯುವ ವೈದ್ಯರು ಆ ಪಠ್ಯಗಳನ್ನು ಅಭ್ಯಸಿಸಿ ಮಾಪನ ಉಪಯೋಗಿಸುವಾಗ ರೋಗಿಯ ತಪಾಸಣೆಯಾಧಾರಿತ ಅಂಕಿ ಅಂಶಗಳನ್ನು ಸರಿಯಾಗಿ ನಮೂದಿಸದೇ ಅಲ್ಲಿನ ಅಳತೆಗಳನ್ನೇ ಅವಲಂಬಿಸಿ ಬರೆಯುತ್ತಿದ್ದರಂತೆ. ಇದು ಅಷ್ಟಾಗಿ ಯಾವ ವೈದ್ಯರ ಲಕ್ಷ್ಯಕ್ಕೂ ಬರುತ್ತಿರಲಿಲ್ಲವಂತೆ. ಹೆಗ್ಡೆಯವರು ಅದನ್ನು ಪರಿಶೀಲಿಸಿ ಆ ನ್ಯೂನತೆಯನ್ನು ಹೊರಹಾಕಿದ್ದಾರೆ. --ಇದು ನಮ್ಮ ಪಠ್ಯಕ್ರಮಕ್ಕೂ ಮತ್ತು ಪ್ರಾಕ್ಟಿಕಲ್ ಗೂ ಇರುವ ವ್ಯತ್ಯಾಸ.

ಬಡತನ ನಮ್ಮಲ್ಲಿ ಇದ್ದೇ ಇದೆ. ಗದ್ದೆಯಲ್ಲಿ ಕೆಸರಿರುವಂತೇ, ಹುದ್ದೆಗೊಂದು ಜವಾಬ್ದಾರಿಯಿರುವಂತೇ ಇದು ಸದ್ಯಕ್ಕಂತೂ ಅನಿವಾರ್ಯ ಸಹಜ. ಇದನ್ನು ಒಪ್ಪಿಕೊಳ್ಳೋಣ. ಆದರೆ ಕೆಸರಿನಲ್ಲಿಯೇ ಕಮಲವೂ ಅರಳುವಂತೆ, ಆ ಅರಳಿದ ಕಮಲ ಕೆಸರನಲ್ಲಿಯೇ ಇದ್ದರೂ ಅದನ್ನು ಅಂಟಿಸಿಕೊಳ್ಳದಂತೇ ಇರುವಂತೇ ಬಡತನವಿದೆಯೆಂಬ ಭಾವವನ್ನು ತೊರೆದು ನಾವೆಲ್ಲಾ ಶ್ರೀಮಂತರೇ ಎಂಬ ಭಾವದಿಂದ ಬದುಕಬಲ್ಲೆವಷ್ಟೇ ? ನಮಗೆ ಢಾಂಬಿಕತೆ ಬೇಡ, ಇದ್ದುದನ್ನೇ ನಮ್ಮ ಶ್ರೀಮಂತಿಕೆಯೆಂದು ತಿಳಿಯಲು ಅಡ್ಡಿಯಿಲ್ಲವಲ್ಲ? ನಿಜವಾಗಿಯೂ ಹೇಳಲೇ ನಾವ್ಯಾರೂ ಬಡವರಲ್ಲ. ನಮ್ಮನ್ನು ಬಡವರನ್ನಾಗಿಸಿದವರು ಖರೀದಿಸುವ ಮನೋಭಾವದ ರಾಜಕಾರಣಿಗಳು. ಅವರು ಖೊಳ್ಳೆ ಹೊಡೆದು ಸ್ವಿಸ್ ಬ್ಯಾಂಕಿನಲ್ಲಿಟ್ಟ ಹಣ ದೇಶಕ್ಕೆ ಮರಳಿ ಬಂದಿದ್ದರೆ-ಅದನ್ನು ಬಡವರು ಪಡೆದಿದ್ದರೆ ದೇಶದಲ್ಲಿ ಬಡತನವೆಂಬುದು ಇರುತ್ತಿರಲಿಲ್ಲ. ಆಗಲಿ, ಆಗುವುದೆಲ್ಲಾ ಒಳ್ಳೆಯದಕ್ಕೇ! ಕಾಲ ಮತ್ತೆ ಬದಲಾಗುತ್ತಿರುತ್ತದೆ. ಆದರೊಂದು ಮಾತು ಮಕ್ಕಳಿಗೆ ಒಳ್ಳೆಯತನ ಮೈಗೂಡಿಸಿಕೊಳ್ಳಲು ಅನುವುಮಾಡಿಕೊಡಿ. ಸನ್ಮಾರ್ಗವನ್ನು ಕಥೆಯಲ್ಲಲ್ಲ ಕೃತಿಯಿಂದ ಬೋಧಿಸಿ ! ಮಕ್ಕಳು ಬಸವಣ್ಣನವರ ಆ ವಚನವನ್ನು ಬದಲಿಸದೇ ಮೂಲ ವಚನವನ್ನು ಹಾಗೇ ಬಳಸುವಂತೇ ಆಗಲಿ. ಮಕ್ಕಳು ಎಲ್ಲೇ ಇರಲಿ, ಅವರು ಮುಗ್ಧರೇ, ಅವರನ್ನು ತಿದ್ದುವುದು-ತೀಡುವುದು ನಮ್ಮ ಕರ್ತವ್ಯ. ಈ ದಿಸೆಯಲ್ಲಿ ತಿದ್ದುವ ನೆಪದಲ್ಲಿ ಮಕ್ಕಳನ್ನು ಗೋಳುಹುಯ್ದುಕೊಳ್ಳುವ ಕೆಲಸ ಮಾಡಬೇಡಿ. ತಿದ್ದುವ ಕ್ರಮ ನಮ್ಮ ಕಾರ್ಯರೂಪದಿಂದ ತೋರ್ಪಡುವ ಸಂಸ್ಕಾರದಿಂದ ಅವರಿಗೆ ತಂತಾನೇ ಬರಲಿ. ಮಕ್ಕಳಲ್ಲಿ ದಯೆಯಿರಲಿ, ಅನುಕಂಪವಿರಲಿ, ಪ್ರೀತಿಯಿರಲಿ, ಸಹಾನುಭೂತಿಯಿರಲಿ. ಮಂಗಳವನ್ನೂ ಶುಭವನ್ನೂ ಕೋರುವ ಹಾಡಿನ ಪಲ್ಲವಿಯೊಂದಿಗೆ ಈ ಲೇಖನಕ್ಕೆ ಮಂಗಳ ಕೋರೋಣ:

ಮಂಗಳದಾ ಈ ಸುದಿನ ಮಧುರವಾಗಲೀ ....
ನಿಮ್ಮೊಲವೇ ಈ ಮನೆಯ ನಂದಾದೀಪವಾಗಲಿ ......

Saturday, November 13, 2010

ಹಣ್ಣು ಬೇಕೇ ಹಣ್ಣು?


ಎಲ್ಲಾ ಹಿರಿಕಿರಿಯ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು

ಹಣ್ಣು ಬೇಕೇ ಹಣ್ಣು ?

ಪಪ್ಪಾಂ ಪಿಪ್ಪೀಂ ಪೀಂ ಪೀಂ
ರಪ್ಪಾಂ ರಿಪ್ಪೀಂ ರೀಂ ರೀಂ
ಚಪ್ಪಾಂ ಚಿಪ್ಪೀಂ ಚೀಂ ಚೀಂ
ಅಚ್ಚೂ ಮೆಚ್ಚೂ ಧಾಂ ಧೂಂ

ಹಣ್ಣು ಬೇಕೇ ಹಣ್ಣು ?
ಬಣ್ಣ ಬಣ್ಣದ ಹಣ್ಣು
ಅಣ್ಣ ಅಪ್ಪ ಅಮ್ಮ
ಕೊಳ್ಳಿರೆಲ್ಲಾ ಹಣ್ಣು

ಸೇಬು ಮಾವು ಬಾಳೆ
ಹಲಸು ಸೀಬೆ ಕಿತ್ತಳೆ
ಸೀತಾಫಲ ಅನಾನಸ್ಸು
ತುಂಬುತಾವೆ ಮನಸ್ಸು

ಬನ್ನಿರಮ್ಮಾ ಕೊಳ್ಳಿ
ಬನ್ನಿರಣ್ಣಾ ತಗೊಳಿ
ಬನ್ನಿರೆಲ್ಲಾ ಬೇಗ
ಹಣ್ಣು ತಿನ್ನೋ ಯೋಗ !

ಗಾಡಿಯನ್ನು ನಾನು
ದೂಡಿಕೋತ ಮುಂದೆ
ಹಾಡಿಕೊಂಡು ಸಾಗಿ
ಆಡುತೇನೆ ಬೀಗಿ

’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ !!



’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ !!

ಹಳೆಯ ಮನೆಗೆ ಹೊಸಬಣ್ಣ
ಹಳೆಯ ಸಾಬೂನಿಗೆ ಪೌಡರ್ ಕ್ರೀಮ್
ಇತ್ಯಾದಿಗಳಿಗೆ ’ನ್ಯೂ ಇಂಪ್ರೂವ್ಡ್ ’ ಎನ್ನುವ
ಲೇಬಲ್ ಮಾಡಿಸಿದಾಗ ಅವು
ಮಾರಾಟವಾಗುವ ಜೋಶೇ ಬೇರೆ
ಅದರಲ್ಲಂತೂ ಇನ್ನೊಂದಷ್ಟು ರೇಟು ಜಾಸ್ತಿಮಾಡಿ
ಏನಾದರೂ ’ಫ್ರೀ’ ಎಂದುಬಿಟ್ಟರೆ ಸಾಕು !
ನಮಗೆ ಗೊತ್ತು ಜನರನ್ನು ಹೇಗಾದರೂ ಹಿಡೀಬೇಕು

ವ್ಯಕ್ತಿಯೊಬ್ಬನಿಗೆ ಹೇಳಿ ೧೦ ಕೀ.ಮೀ. ದೂರದಲ್ಲಿ
ದೋಸೆ ಕ್ಯಾಂಪ್ ಶುರುವಾಗಿದೆ ಒಂದಕ್ಕೊಂದು ಫ್ರೀ
ಖರ್ಚು ಹಾಕಿ ಬಸ್ಸಲ್ಲೋ ಗಾಡಿಯಲ್ಲೋ ಓಡುವ
ದಡ್ಡನನ್ಮಗನ್ನ ನೋಡಿ ನಗಬೇಕೋ ಅಳಬೇಕೋ ?

ಯಾರಿಗೋ ತಮಾಷೆಗೆ ಹೇಳಿದ್ದು
ಕಾಂಟೋನ್ಮೆಂಟ್ ಪೆಟ್ರೋಲ್ ಬಂಕಿನಲ್ಲಿ ವಾರ್ಷಿಕೋತ್ಸವ
೨ ಲೀಟರ್ ಪೆಟ್ರೋಲು ಫ್ರೀ ಆಗಿ ಕೊಡ್ತಾರಂತೆ ಅಂತ
ಗಾಡಿ ತೆಗೆದುಕೊಂಡು ಸೀದಾ ದೌಢಾಯಿಸಿದ

ಉದ್ದಿನ ಹಿಟ್ಟನ್ನು ವಡೆಯಾಕಾರದಲ್ಲಿ
ಕರಿದಾಗ ಅದು ಉದ್ದಿನ ವಡೆ ಉರುಟಾಗಿ
ಮುದ್ದೆ ಕಟ್ಟಿ ಕರಿದರೆ ಅದು ಉದ್ದಿನ ಬೋಂಡ
ಅದಕ್ಕೇ ನಿರ್ಧರಿಸಿಬಿಟ್ಟಿದ್ದೇನೆ ಇನ್ನುಮೇಲೆ
ಏನೇ ಬರೆಯಲಿ ಹಾಳೋ ಮೂಳೋ
ಹಲಸೋ ಮಾವೋ ಪೈನಾಪಲ್ಲೋ
ಮೇಲ್ಗಡೆ ಒಂದು ಲೇಬಲ್ ಹಾಕಿಬಿಡುತ್ತೇನೆ
’ನ್ಯೂ ಸಮ್ತಿಂಗ್ ಸ್ಪೆಶಲ್ಲು ’ ಎಂದು
ಹೊಸ ರುಚಿಯವರು ಹಳೆರುಚಿಯವರು
ಮರ್ಯಾದಸ್ತರು ಮಾಮಲೇದಾರರು
ಹೆಣ್ ಹೆಂಗಸ್ರು [ಕ್ಷಮಿಸಿ ಗಂಡ್ ಹೆಂಗಸ್ರು ಇದ್ದಾರೋ ಇಲ್ವೋ ಗೊತ್ತಿಲ್ಲ !]
ಸಣ್ ಮಕ್ಳು ಎಲ್ಲಾ ಮುಕರ್ಕೊಂಡ್ ಕೂತ್ಗೊಂಡು
ಓದಿದ್ದೇ ಓದಿದ್ದು ಓದಿದ್ದೇ ಓದಿದ್ದು !

*
ಒಂದಷ್ಟ್ ಅಂಥದ್ನೆಲ್ಲಾ ಅಚ್ಚಾಕ್ಸಿ
ಪೇಟೇ ಚೌಕದಲ್ಲಿ ಒಬ್ಬನ್ ನಿಲ್ಲಸ್ಬುಡ್ತೀನಿ
’ಅರೇ ಒಂದಕ್ಕೊಂದ್ ಫ್ರೀ ಇಲ್ಲಿ ಒಂದಕ್ಕೊಂದ್ ಫ್ರೀ’ ಅಂತ
ಕೂಗ್ಕೋತ ಮಾರ್ಬುಡು ಒಂದಷ್ಟ್ ದುಡ್ ಬರಲಿ
ರಾಜ್ಕೀಯ ಸೇರ್ಕಂಡು ಹಾಯಾಗಿದ್ಬುಡೋದು
ಈ ಬರ್ಯೋದೆಲ್ಲಾ ಯಾರಿಗ್ಬೇಕು ಅಲ್ವೇ ?

*conditions apply

Friday, November 12, 2010

ಹಾಲುಗೆನ್ನೆ ಸುಂದರಿ

ರಾಜಾರವಿವರ್ಮ ಕೃತ ಚಿತ್ರಕೃಪೆ: ಅಂತರ್ಜಾಲ

ಹಾಲುಗೆನ್ನೆ ಸುಂದರಿ

ಹಾಲುಕೊಡಲು ಬಂದ ಅವಳು
ಬಹಳ ಹೊತ್ತು ಇರಲಿ ಎಂಬ
ಬಯಕೆಯಿಂದ ಬೊಗಸೆಕಂಗಳನ್ನೇ
ನೋಡುತಿದ್ದೆನು !

ಗಾಳಹಾಕಿ ಎಳೆದಳಲ್ಲ
ಮಾಯದಲ್ಲಿ ಅರಿವಗೊಡದೇ
ಗಾಯವಾಯ್ತು ಎದೆಯಲೆಲ್ಲೋ
ಕಾಣದಾಗಿದೆ !

ಎಂಥನಗುವಿನಪ್ಸರೆಯು
ಮಿಂಚಿ ಹಲ್ಲು ತುಸುವೇ ಸಮಯ
ಹೊಂಚುಹಾಕಿ ಎಸೆದಳೇನು

ತನ್ನ ಬಾಣವೆನ್ನೆಡೆ ?

ಜಕಣ ಶಿಲ್ಪಿ ಕಡೆದ ಮೂರ್ತಿ !
ಜತನಮಾಡಿಕೊಳಲು ನನಗೆ
ಅತಿಶಯದಾನಂದ ತರಲು
ಆಕೆ ಬರುವಳೇ ?

ಬೇಕು’ ’ಬೇಕುಎಂಬ
ಒಳಗಿನಾಸೆ
ಹೊರಟು ಜಾಸ್ತಿಯಾಗಿ
ಹೇಳಿಬಿಡುವೆನೆಂದು ನಡೆಸಿ
ತಾಲೀಮು ಪುನರಪಿ

ಕಾಲ ಕೂಡಿ ಬರುವುದಿತ್ತು
ಹಾಲು-ಮೊಸರು ಉಂಡುಬೆಳೆದ
ಹಾಲಗೆನ್ನೆಯಂಥ ಚಲುವೆ
ಪಡೆಯಲವಳನು

ನಾನು ಧೈರ್ಯ ಮಾಡಲಿಲ್ಲ
ಆಕೆಯಾಗಿ ಹೇಳಲಿಲ್ಲ
ಆಡದೆಯೇ ಹೋದ ಮಾತು
ಕಣ್ಣೊಳಿದ್ದವು !

ಬಾಳನೌಕೆಯಲ್ಲಿ ನಾನು
ಅವಳ ಜತೆಗೆ ಕೂತುಕೊಂಡು
ಭಾವಯಾನ ಮೌನದಲ್ಲಿ
ನಡೆಯುತಿದ್ದಿತು

ಹಾಲು ಚೆಲ್ಲಿ ನೆಲಕೆ ಅರ್ಧ
ಕಾಲು ತುಳಿದೆನೆಂದು ಹೆದರಿ
ನೀಲಿಕಣ್ಣ ಬೆಡಗಿ ಜಾರಿ
ತೋಳ ತೆಕ್ಕೆಗೆ

’ಏಳು ಮಗನೇ ತಾಯ ಕರೆಗೆ
ಧಿಮ್ಮನಿಳಿದು ಕನಸಹೊರಗೆ
ಆಲಿಕಲ್ಲ ಮಳೆಯ ನೆನೆದು
ಮನವು ನಲಿಯಿತು !

Thursday, November 11, 2010

ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!


ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಉತ್ತರ ಕನ್ನಡದ ಮಿಸಳ್ ಬಾಜಿಯಂ!!

ಕನ್ನಡ ಕರಾವಳಿಯ ಬಹುತೇಕ ಜನ ಬಾಯಿ ಚಪ್ಪರಿಸಿ ತಿನ್ನುವ ಅತೀ ಇಷ್ಟದ ಹೋಟೆಲ್ ತಿಂಡಿಗಳಲ್ಲಿ ಮಿಸ್ಸಳ್ ಬಾಜಿ ಮತ್ತು ಬನ್ಸ್ ಬಾಜಿ ಬಹಳ ಪ್ರಮುಖ ಸ್ಥಾನ ಪಡೆದಿವೆ. ಈ ಹೆಸರುಗಳು ಎಷ್ಟು ಪ್ರಚಲಿತವೆಂದರೆ ಇದಕ್ಕೆಂದೇ ಹೆಗ್ಗುರುತಾದ ಹೋಟೆಲ್ಗಳೂ ಅಲ್ಲಿ ಇವೆ. ಮಿಸ್ಸಳು ಇಲ್ಲದ ದಿನವನ್ನು ಅಲ್ಲಿನ ಜನ ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಂತ ಅಂಥಾದ್ದೇನಪ್ಪಾ ಅದರಲ್ಲಿ ಅಂತ ನೀವೆಲ್ಲ ಕೇಳಹೊರಟರೆ ಅದನ್ನು ತಿಂದೇ ನೋಡಿ ಸ್ವಾಮೀ ಎನ್ನಬೇಕಾಗುತ್ತದೆ.

ಮಸಾಲ್ ಪೂರಿಯ ಮಸಾಲೆಯನ್ನು ಹೋಲುವ ಸಾಂಬಾರಿನಿಂದ [ಬಾಜಿಯಿಂದ] ತುಂಬುವ ಪ್ಲೇಟಿನಲ್ಲಿ ಗುಡ್ಡದ ಮಿನಿಯೇಚರ್ ನ ರೀತಿ ಮಧ್ಯಕ್ಕೆ ಗೋಪುರಾಕಾರವಾಗಿ ನಿಲ್ಲುವ ಈ ತಿಂಡಿ ಯಾವ ಕಾಲದ ಯಾರ ಆವಿಷ್ಕಾರವೋ ತಿಳಿದುಬಂದಿಲ್ಲ. ಅಂತೂ ಕಡಲ ಕಿನಾರೆಯ ಜನ ನೆನಪಿಟ್ಟು ಕೇಳಿ ತಿನ್ನುವ ತಿಂಡಿ ಈ ಮಿಸ್ಸಳ್ ಬಾಜಿ. ಶುದ್ಧ ತೆಳು ಅವಲಕ್ಕಿ ಪ್ಲೇಟಿನಲ್ಲಿ ಹಾಕಿ, ಜೊತೆಗೆ ಅಷ್ಟೇ ಅಳತೆಯಲ್ಲಿ ಖಾರ ಮಿಕ್ಸ್ಚರ್ ಹಾಕಬೇಕು, ಅದಕ್ಕೆ ಜೊತೆಗೆ ಶೇವ್ ಚೂಡ ಮತ್ತು ಕಡ್ಲೆ ಹಿಟ್ಟಿನಲ್ಲಿ ಕರಿದ ಶೇಂಗಾ ಬೀಜಗಳನ್ನು ಸೇರಿಸುತ್ತಾರೆ. ಮೇಲಿಂದ ಈರುಳ್ಳಿಸೇರಿಸಿ ಮಾಡಿದ ಘಮಘಮಿಸುವ ಸಾಂಬಾರನ್ನು ಹಾಕಿ ತಿನ್ನಲು ಕೊಟ್ಟರೆ ಅದರಲ್ಲಿ ನಮ್ಮನ್ನೇ ನಾವು ಕಳೆದುಹೋಗುವ ಅದ್ಬುತ ರುಚಿ, ಸ್ವಲ್ಪ ಸಿಹಿ,ಖಾರ,ಹದವಾಗಿ ಉಪ್ಪು, ಮಸಾಲೆ ಪದಾರ್ಥಗಳ ಪರಿಮಳ ಎವೆಲ್ಲವುಗಳ ಮಿಶ್ರಣವಿರುವ ಈ ತಿಂಡಿಯನ್ನು ಮಳೆಗಾಲದಲ್ಲಂತೂ ಜನ ತುದಿಗಾಲಲ್ಲಿ ನಿಂತು ತಿನ್ನುತ್ತಾರೆ. ಬೇಗ ಜೀರ್ಣವಾಗುವ ಈ ತಿಂಡಿ ಹೆಚ್ಚಾಗಿ ಯಾವ ವೇಳೆಗಾದರೂ ತಿನ್ನಬಹುದಾದ ಹಿತವಾದ ಭಕ್ಷ್ಯ. " ಅರೆ ಹೋಯ್ ಪೈಮಾಮ್,ಕೈಂಯ್ ಗೆಲ್ರೆ ಮಾರಾಯ, ಮಿಸ್ಸಳ್ ಅಸ? " ಅಂತ ಕೇಳುತ್ತ ಪೈಗಳ ಹೋಟೆಲ್ ಅಥವಾ ಇನ್ನ್ಯಾವುದೋ ಲೋಕಲ್ ಹೋಟೆಲ್ ಗೆ ಹೋಗಿ ವಿಚಾರಿಸಿದರೆ ಮಿಸ್ಸಳ್ ಬಾಜಿ ಸಿಕ್ಕೇ ಸಿಗುತ್ತದೆ, ಇನ್ನೇನಾದ್ರೂ ಜನ ಜಾಸ್ತಿ ಬಂದು ತಿಂದು ಖಾಲಿ ಆಗಿದ್ದ್ರೆ ಮಾತ್ರ ಬೇರೆ ಹೋಟೆಲ್ ಹುಡುಕೋದು ಅನಿವಾರ್ಯ.

ಕರಾವಳಿಯಲ್ಲಿ ಮಳೆಯ ಆರ್ಭಟ ಬಹಳವಾಗಿರುತ್ತದೆ. ದಪ್ಪದಪ್ಪಹನಿಗಳು ಗಾತ್ರದ ಮುಸಲಧಾರೆಗಳಾಗಿ ಸುರಿಯುತ್ತಲೇ ಇರುತ್ತವೆ. ಬೆಳಗು ಬೈಗಿನ ಅಂತರವಿಲ್ಲದೇ ಬೆಳಗೇ ಬೈಗೇನೋ ಎಂಬಂತೇ ಕತ್ತಲಾವರಿಸಿ ಧೋ ಎಂದು ಸುರಿಯಲಾರಂಭಿಸಿದರೆ ಮಳೆಗೆ ಪುರುಸೊತ್ತೇ ಇಲ್ಲ. ಇಂತಹ ಮಳೆಗಾಲದಲ್ಲಿ ಅದೂ ನಾಲ್ಕು ತಿಂಗಳು ಸುರಿವ ದಿನಗಳಲ್ಲಿ ದಿನವೂ ಅದೂ ಇದೂ ಕೆಲಸ ಅಂತ ಮನೆಯ ಹೊರಗೆ ಬಂದ ಜನರ ಮೈ ಸ್ವಲ್ಪವಾದರೂ ನೆನೆಯುವುದು ಅನಿವಾರ್ಯ. ಚಳಿಹಿಡಿದ ಶರೀರಕ್ಕೆ ಒಂದಷ್ಟು ಬಿಸಿ ಪಡೆದುಕೊಳ್ಳುವ ಮತ್ತು ಹಸಿದ ಹೊಟ್ಟೆಗೆ ತುಸು ಏನಾದರೂ ತಿಂದುಕೊಳ್ಳುವ ಮನಸ್ಸಾಗುವ ಜನಕ್ಕೆ ಮೂಗರಳಿಸಿ ಕಣ್ಣು ಹಿರಿದಾಗಿಸಿ ನೋಡುವಂತೆ ಮಾಡುವ ತಿಂಡಿ ಮಿಸ್ಸಳ್. ಮಿಸ್ಸಳ್ ಬಾಜಿ ಎನ್ನಬೇಕಿಲ್ಲ ಬರೇ ಮಿಸ್ಸಳು ಎಂದರೆ ಸಾಕು! ಹೊಸದಾಗಿ ಹೋಟೆಲ್ ಹಾಕಿದ ಮಾಲೀಕನಿಗೆ ಗಲ್ಲಾಪೆಟ್ಟಿಗೆಗೆ ಗಸಗಸಿ ರೊಕ್ಕ ತುಂಬಿಸುವುದು ಮಿಸ್ಸಳು ಮತ್ತು ಬನ್ಸ್ ಬಿಟ್ಟರೆ ಈರುಳ್ಳಿ ಬಜೆ [ಈರುಳ್ಳಿ ಬಜ್ಜಿ].

ಸ್ಕೂಲು-ಕಾಲೇಜು ಹುಡುಗರು ತಮ್ಮ ತರಗತಿಯ ಅವಧಿಗಳ ಮಧ್ಯೆ ಎದ್ದುಬಂದು ತಿಂದು ಹೋಗುವುದು ಮಿಸ್ಸಳು. ಸೀತಾರಮ್ ಹೇಗ್ಡೆರು ಪೇಟೆಗೆ ಬಟ್ಟೆತರಲು ಬಂದವರು ಸುತರಾಂ ಮರೆಯದೇ ಕೇಳಿ ತಿನ್ನುವ ತಿನಿಸು ಮಿಸ್ಸಳು. ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದ ಜಾನಕಕ್ಕ ಜ್ಞಾಪಿಸಿಪಡೆದು ತಿನ್ನುವುದು ಈ ಮಿಸ್ಸಳು. ರಾಮದಾಸ್ ಕಾಮತ್ ರು "ಮಕ್ ಕಬರ್ನಾ ಅಶಿಲೆ ಮರಾಯಾ" ಅಂತ ಸುದ್ದಿ ಹೇಳುತ್ತ ತಿನ್ನುವುದು ಮಿಸ್ಸಳು. ಗೋವಿಂದ ಶೆಟ್ರು ವ್ಯಾಪಾರದ ಮಧ್ಯದಲ್ಲಿ ಗೋವಿಂದನಾಮಸ್ಮರಣೆಯೊಂದಿಗೆ ಮಗನನ್ನು ಅಂಗಡಿಯಲ್ಲಿ ಬಿಟ್ಟು ಬಂದು ತಿಂದುಹೋಗುವುದು ಮಿಸ್ಸಳು. ಗೇಬ್ರಿಯಲ್ ಗೊನ್ಸಾಲ್ವಿಸ್ ಮತ್ತು ಮ್ಯಾಥ್ಯು ಫರ್ನಾಂಡಿಸ್ ಇಗರ್ಜಿಗೆ ಹೋಗಿಬರುವಾಗ ತಿಂದುಹೋಗುವುದು ಮಿಸ್ಸಳು. ಗೇರುಸೊಪ್ಪೆಯ ಬಾಪು ಸಾಹೇಬರು " ಮಾಶಾ ಅಲ್ಲಾ " ಎನ್ನುತ ಮೆಟ್ಟಿಲು ಹತ್ತಿ ಬಂದು ತಿಂದು ತೆರಳುವುದು ಮಿಸ್ಸಳು. ಬಾಡಿಗೆ ಕಾರುಗಳು ಕ್ಯಾಬ್ ಗಳನ್ನು ಓಡಿಸುವ ಚಾಲಕ-ಮಾಲಕರು ಗುಂಪಾಗಿ ಹರಟೆ ಹೊಡೆಯುತ್ತ ಸವಿಯುವುದು ಮಿಸ್ಸಳು. ಗಡಿಬಿಡಿಯಲ್ಲಿ ಕೋರ್ಟಿಗೆ ಹೋಗುವ ವಕೀಲರುಗಳು ಕೆಲವೇ ನಿಮಿಷ ಸುಖಾಸೀನರಾಗಿ ಕೇಳುವುದು ಇದೇ- ಮಿಸ್ಸಳು! ಹೋಟೆಲ್ ನಲ್ಲಿ ಪಾರ್ಟಿ ಕೊಡುವ ಅಲ್ಲಿನ ಜನ ಮೊದಲಾಗಿ ಆದೇಶಿಸುವ ತಿಂಡಿ ಮಿಸ್ಸಳು; ಪಾರ್ಟಿ-ಪಂಗಡ ಮರೆತು ಎಲ್ಲರೂ ಒಂದೆಡೆ ಕಲೆತ ಸಂಭ್ರಮಗಳ ಸರಹದ್ದಿನಲ್ಲಿ ಸರಸರನೆ ತಿಂದುಣ್ಣುವ ತಿಂಡಿ ಇದೇ ಮಿಸ್ಸಳು. ಅಪ್ಪನ ಜೊತೆಗೆ ಪೇಟೆಗೆ ಬಂದ ಮಗ/ಮಗಳು ಅಪೇಕ್ಷಿಸಿ ತಿನ್ನುವುದು ಮಿಸ್ಸಳು, ಅಪರೂಪಕ್ಕೆ ಪೇಟೆಗೆ ಬಂದ ಸುಕ್ರು ಹಳ್ಳೇರ್ ಬಯಸುವುದೂ ಮಿಸ್ಸಳು. ಇಡೀದಿನ ರೋಗಿಗಳನ್ನು ಶುಶ್ರೂಷೆಮಾಡಿ ದಣಿದ ವೈದ್ಯ ಭಾಸ್ಕರ್ ತಮ್ಮ ಕೋಣೆಗೆ ಪಾರ್ಸೆಲ್ ತರಿಸಿಕೊಳ್ಳುವುದು ಮಿಸ್ಸಳು! ಹೀಗೇ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎನ್ನುವ ಹಾಗೇ ಎಲ್ಲುಂಟು ಎಲ್ಲಿಲ್ಲ ಎಂದೇ ಲೆಕ್ಕಕ್ಕೆ ಸಿಕ್ಕದ ಸಿಕ್ಕಾಪಟ್ಟೆ ಖರ್ಚಾಗುವ[ಬೇಗ ಖಾಲಿಯಾಗುವ]ಅಗ್ಗದ ಖರ್ಚಿನ ತಿಂಡಿ ಈ ಮಿಸ್ಸಳು. ಶಾಸ್ತ್ರ ಶಾಸ್ತ್ರವೆನ್ನುತ್ತಿರುವ ಶಾಂತೇರಿ ಕಾಮಾಕ್ಷಿ ದೇವಸ್ಥಾನದ ಭಟ್ಟರು ದಾಯಾದರಲ್ಲಿ ಹಡೆದ ಸೂತಕ ಬಂದಾಗ ಇದೇ ಸಮಯವೆಂದು ಹೋಟೆಲಿಗೆ ನುಗ್ಗಿ ತಿಂದು ಜನಿವಾರ ಬದಲಿಸಿಕೊಳ್ಳುವುದು ಇದೇ ಮಿಸ್ಸಳು!

ಕಡಲತೀರದಲ್ಲಿ ಯಕ್ಷಗಾನ,ನಾಟಕ, ಸಂಗೀತ ರಸಸಂಜೆಗಳಿಗಂತೂ ಕಮ್ಮಿ ಇಲ್ಲವೆಂದು ತಮಗೆಲ್ಲ ತಿಳಿದಿದೆಯಷ್ಟೇ? ಪ್ರತೀಕಾರ್ಯಕ್ರಮದಲ್ಲೂ ಹೊರಾಂಗಣದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಚಹಾ ಅಂಗಡಿ ಇರುವುದಂತೂ ಕಾಯಂ. ಯಾಕೇಂದ್ರೆ ಅಲ್ಲಿನ ಜನ ಅದರಲ್ಲಂತೂ ಸಣ್ಣ ಚಟಗಳಾದ ಚಹಾ-ಬೀಡಿ-ಸಿಗರೇಟು ಇವುಗಳನ್ನು ಅಂಟಿಸಿಕೊಂಡ ಜನ, ಅವುಗಳನ್ನೆಲ್ಲ ಬಿಟ್ಟು ಬಹಳ ಹೊತ್ತು ಇರುವುದೇ ಇಲ್ಲ. ಹೀಗಾಗಿ ಚಹಾ ಅಂಗಡಿ ಇದ್ದಮೇಲೆ ಗಣಪತಿಯ ಜೊತೆಗೆ ಮೂಷಿಕವಿದ್ದಹಾಗೇ ಅಲ್ಲಿ ಮಿಸ್ಸಳಿನ ಹಾಜರಾತಿ ಇದ್ದೇ ಇರುತ್ತದೆ. ಪೂರ್ಣರಾತ್ರಿಯ ಕಾರ್ಯಕ್ರಮವಾದರೆ ಅದಕ್ಕೆ ಮಧ್ಯೆ ಮಧ್ಯೆ ಮೂತ್ರ ವಿಸರ್ಜನೆಗೆ ಎದ್ದು ಹೋದವರು, ನಿದ್ದೆ ಬರದಿರಲೆಂದು ದಂ ಎಳೆಯಲು ಹೋದವರು ಎಲ್ಲರೂ ಖುದ್ದಾಗಿ ಹೋಗಿ ಕುಕ್ಕರಿಸಿ ಕುಳಿತು ಮಟ್ಟಸವಾಗಿ ತಿಂದು ಮುಗಿಸುವ ಮನನೀಯ ತಿಂಡಿ ಈ ಮಿಸ್ಸಳು.

ಜಾಗತೀಕಅಣ ಎಲ್ಲೇ ಅಡಿಯಿಟ್ಟರೂ, ಏನೇ ಪರಿಣಾಮ ಬೀರಿದರೂ ಜಗದುದ್ದಗಲ ಬೇರೆಲ್ಲೂ ಕಾಣಲಾರದ ಅಪ್ಪಟ ದೇಶೀಯ ತಿನಿಸು ನಮ್ಮದೇ ಆದ ಉತ್ತರಕನ್ನಡದ ಮಿಸ್ಸಳು.ಪಟ್ಟಾಗಿ ಕೂತು ಪಟ್ಟಂಗ ಹೊಡೆಯುವಾಗೆಲ್ಲ ನೆನೆಪಾಗಿ ಪ್ಲೇಟಿನ ಮೇಲೆ ಪ್ಲೇಟು ಪಡೆಪಡೆದು ಗಡದ್ದಾಗಿ ತಿಂದು ತೇಗಿಮುಗಿಸುವ ಆಸೆ ಹುಟ್ಟಿಸುವ ತಿನಿಸು ನಮ್ಮದೀ ಮಿಸ್ಸಳು ! ನಮ್ಮದೀ ಮಿಸ್ಸಳು! ವಿದೇಶೀಯರೂ ಸೇರಿದಂತೆ ಹಲವು ಪ್ರವಾಸಿಗರ ಮನಸೂರೆಗೊಂಡ ಮರೆತರೆ ಮರುಗಬೇಕಾದ ಜನಪ್ರಿಯ ನೈವೇದ್ಯ ಉತ್ತರ ಕನ್ನಡದ ಮಿಸ್ಸಳು. ಸ್ವಲ್ಪ ಇರಿ ವಿದೇಶೀಯರು ನುಗ್ಗಿ ಪೇಟೆಂಟ್ ಪಡೆಯುವ ಮೊದಲು ಒಂದು ಹಾಡಿನ ತುಣಿಕು ಹಾಡಿಬಿಡುತ್ತೇನೆ ---

ಉಪ್ಪರಿಗೆಯ ಜನ ಚಪ್ಪರಿಸಿ ತಿಂದರು
ಮುಪ್ಪಡರಿದ ಜನ ನೆಪ್ಪಿನಿಂದ ನೆನೆದರು
ಸಪ್ಪೆಯಾದ ಜೀವನದಲ್ಲಿ ಕುಪ್ಪಳಿಸಲು ಕುಮ್ಮಕ್ಕು ನೀಡುವ
ಉಪ್ಪು ಖಾರ ಸಹಿತದ ಮಿಸ್ಸಳೇ ನಿನಗೆ
ಬಪ್ಪರೇ ಭಳಿರೇ ಬಹುಪರಾಕ್ ಬಹುಪರಾಕ್ !

" ಹಾಂ ಏನ್ ಕೊಡ್ಲಿ ನಿಮ್ಗೆ ? ಖಾಲಿ ದೋಸೆ,ಮಸಾಲೆ ದೋಸೆ, ಇಡ್ಲಿ, ಉಪ್ಪಿಟ್ಟು, ಶಿರ, ಪೂರಿ ಬಾಜಿ,ಬನ್ಸ್ ಬಾಜಿ, ಮಿಸ್ಸಳು " ಅಂತ ಸಪ್ಲೈಯರ್ ಲಿಸ್ಟ್ ಹೇಳುತ್ತ ಕೊನೇಗೊಮ್ಮೆ ಹೇಳುವ ಐಟೆಮ್ ಮಿಸ್ಸಳು. ಯಾಕೇಂದ್ರೆ ಅದು ಹೇಗೂ ಹೇಳದಿದ್ದ್ರೂ ಕೇಳುವಂತ ಐನಾತಿ ಐಟಮ್ ಅನ್ನೋದು ಅವರಿಗೆಲ್ಲ ಗೊತ್ತೇ ಇದೆ.

ಮಿಸ್ಸಳು ಒಂದೊಂದು ಹೋಟೆಲ್ ನಲ್ಲಿ ಅವರವರ ತಯಾರಿಕೆಗೆ ತಕ್ಕಂತೆ ಸ್ವಲ್ಸ್ವಲ್ಪ ಭಿನ್ನ ರುಚಿಯಿಂದ ಸಿಗುತ್ತದೆ. ಕೆಲವರು ತುಂಬಾ ಚೆನ್ನಾಗಿ ಮಸಾಲೆ ಹಾಕಿದರೆ ಇನ್ನು ಕೆಲವರು ಸ್ವಲ್ಪ ಕಮ್ಮಿ ಮಸಾಲೆ ಸಾಮಗ್ರಿಗಳನ್ನು ಉಪಯೋಗಿಸುತ್ತಾರೆ. ಆದರೂ ಮಿಸ್ಸಳು ರುಚಿಯೇ ಆಗಿರುತ್ತದೆ. ಹೊಸದಾಗಿ ತಿನ್ನುವವರಿಗೆ ಇದು ಅನುಭವಕ್ಕೆ ಬರುವುದಿಲ್ಲ. ತಿನ್ನುತ್ತ ಸ್ವಲ್ಪ ರೀಸರ್ಚ್ ಮಾಡಿದರೆ ಕೆಲವು ಹೋಟೆಲ್ ಗಳು ಇದಕ್ಕಾಗೇ ಹುಟ್ಟಿದವೇನೋ ಎನ್ನುವಷ್ಟು ಖುಷಿಕೊಡುವ ರುಚಿಯ ಮಾಯಾಜಗತ್ತು ಈ ಮಿಸ್ಸಳಿನದು. ಯಾವುದೇ ಕೆಲಸದ ಗಡಿಬಿಡಿಯಲ್ಲೂ ಕೆಲವೇ ನಿಮಿಷಗಳಲ್ಲಿ ತಿಂದುಮುಗಿಸಿಬಿಡಬಹುದಾದ ಈ ತಿಂಡಿ, ತಿಂದ ಕೆಲವೇ ನಿಮಿಷಗಳಲ್ಲಿ ಒಂಥರಾ ಆತ್ಮತೃಪ್ತಿಯಾಗುವಷ್ಟು ದೇಹದುದ್ದಗಲ ನರನಾಡಿಗಳಲ್ಲೂ ತನ್ನ ಘಮಘಮದಿಂದ ಮಘಮಘಿಸಿ ಜೀವಕ್ಕೆ ಹೊಸ ಚೈತನ್ಯ ತುಂಬುವ ಅತಿ ವಿಷಿಷ್ಟ ಮತ್ತು ಕಾಲಭೇದರಹಿತ ತಿಂಡಿ! ಹೋಟೆಲ್ ಮಾಲೀಕರು ಹಸಿವಾದಾಗ ತಾವೇ ಖುದ್ದಾಗಿ ಎದ್ದುಬಂದು ಒಂದಷ್ಟು ಸುರುವಿಕೊಂಡು ಚಪ್ಪರಿಸಿ ತಿನ್ನುವುದು ಕಾಣಸಿಗುವ ದೃಶ್ಯವಾದರೆ, ಸಪ್ಲೈಯರ್ ಹುಡುಗರು, ಟೇಬಲ್ ಒರೆಸುವ ಮಾಣಿಗಳು ಸದಾ ಓಎಗಣ್ಣಿನಿಂದ ಆಗಾಗ ಗಮನಿಸುವುದು ಈ ಮಿಸ್ಸಳು. ಯಜಮಾನರು ಅನುಮತಿ ಮತ್ತು ಅವಕಾಶ ಕೊಟ್ಟಾಗ ಗಬಗಬನೆ ಹಸಿದ ಹೆಬ್ಬುಲಿಯಂತೆ ಅತೀವ ಬಯಕೆಯಿಂದ ತಿನ್ನುವ ಖಾದ್ಯ ಇದೇ ಈ ಮಿಸ್ಸಳು. ಇದಕ್ಕೆ ಸಾಥ್ ನೀಡಲು ಈರುಳ್ಳಿ ಬಜೆ. ಬಜೆಯೆಂದು ಕರೆಸಿಕೊಳ್ಳುವ ಈರುಳ್ಳಿ ಬಜ್ಜಿ. ಕನ್ನಡ ಕರಾವಳಿಯ ಈರುಳ್ಳಿ ಬಜೆಯ ಶೈಲಿ ತುಸು ವಿಭಿನ್ನ. ಅಲ್ಲಿ ಸಿಗುವ ಈರುಳ್ಳಿಯ ಗುಣಮಟ್ಟ ಕೂಡ ಹಾಗೇ. ಸಿಹಿಸಿಹಿಯಾಗಿರುವ ಈರುಳ್ಳಿಯನ್ನು ಖಾರಮಿಶ್ರಿತ ಶುದ್ಧ ಕಡ್ಲೆಹಿಟ್ಟಿಗೆ ಮೈದಾ ಬೆರೆಸಿ, ಉಪ್ಪು ಇತ್ಯಾದಿ ಹಾಕಿ ಕರಿದ ಬಿಸಿ ಬಿಸಿ ಈರುಳ್ಳಿ ಬಜೆ ಸುತ್ತಲ ಕಿಲೋಮೀಟರ್ ಜಾಗಕ್ಕೆ ಪರಿಮಳ ಬೀರುತ್ತ ಗಿರಾಕಿಯನ್ನು ಹೋಟೆಲ್ಲಿಗೆ ಕರೆತರುವಲ್ಲಿ ರಾಕೆಟ್ ಉಡ್ಡಯನಮಾಡಿದಂತೇ ಯಶಸ್ವೀ ಕೆಲಸ ಮಾಡುತ್ತದೆ. ಮಿಸ್ಸಳಿನ ಜೊತೆಗೆ ಈರುಳ್ಳಿ ಬಜೆ ಸೇರಿದರೆ ಅದರ ಲೋಕವೇ ಬೇರೆ! ತಿಂದು ಕೈತೊಳೆದುಕೊಂಡವರೂ ಕೈಮೂಸಿ ನೋಡುತ್ತಿರುವಂತ ಪರಿಮಳ ಬೀರುವ ಈರುಳ್ಳಿ ಬಜೆಯದ್ದು. ಎನನ್ನೂ ತಿನ್ನಲಾರದಷ್ಟು ಹೊಟ್ಟೆಬಿರಿ ತಿಂದು ಬರೇ ಟೀ ಕುಡಿಯಲು ಬಂದ ಜನ ಸುಮ್ನೇ ಬಾಯಿಗೆ ಬಿಟ್ಟುಕೊಳ್ಳುವ ಮೆತ್ತನೆಯ ತಿಂಡಿ ಈರುಳ್ಳಿ ಬಜೆ.

ಬೆಳಿಗ್ಗೆ ಹೊಟ್ಟೆತುಂಬಾ [ಕಮ್ಮಿ ಖರ್ಚಿನಲ್ಲಿ] ತಿನ್ನಬಹುದಾದ ತಿಂಡಿ ಬನ್ಸ್ ಬಾಜಿ. ರೂಪದಿಂದ ಪೂರಿಯ ಸಹೋದರತ್ವ ಹೊಂದಿರುವ ಈ ತಿಂಡಿ ಅಕ್ಕಿಹಿಟ್ಟು, ಮೈದಾಹಿಟ್ಟು, ಬಾಳೆಹಣ್ಣು ಮತ್ತು ಉಪ್ಪು-ಅಡಿಗೆ ಸೋಡಾ ಇವುಗಳ ಮಿಶ್ರಣ. ಹಿಟ್ಟುಗಳನ್ನು ಹದಪ್ರಮಾಣದಲ್ಲಿ ಸೇರಿಸಿ, ನೀರು ಹಾಕಿ, ಬಾಳೇ ಹಣ್ಣು[ ಯಾಲಕ್ಕಿ,ಪುಟಬಾಳೆ ಅಥವಾ ಮೆಟ್ಗ ಎಂದು ಕರೆಸಿಕೊಳ್ಳುವ ಬಾಳೇ ಹಣ್ಣು] ಕಿವುಚಿ ಸೇರಿಸಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಚಿಟಿಕೆ ಸೋಡಾ ಬೆರೆಸಿ ನಾದಿದರೆ ತಯಾರಾಗುವ ಮೆತ್ತನೆಯ ಹಿಟ್ಟಿನ ಮುದ್ದೆಯನ್ನು ಪೂರಿಯನ್ನು ಒರೆದ ಹಾಗೇ ಸ್ವಲ್ಪ ಸ್ವಲ್ಪವೇ ಉಂಡೆಮಾಡಿ ಕೈಯ್ಯಿಂದಲೇ ತಟ್ಟಿ, ಕುದಿಯುತ್ತಿರುವ ಖಾದ್ಯತೈಲದಲ್ಲಿ ಕಂದು ಬಣ್ಣ ಬರುವವರೆಗೆ ಕರಿದರೆ ಸಿದ್ಧವಾಯಿತು ನೋಡಿ ನಮ್ಮ ಬನ್ಸ್. ಬನ್ನಿನ್ನ ಹಾಗೇ ಮೆತ್ತಗಿದ್ದರೂ ಬನ್ನಿಗೂ ಪೂರಿಗೂ ವಿಭಿನ್ನವಾಗಿರುವ ಬನ್ಸ್ ನ ಒಳಮೈ ತೆರೆದು ನೋಡಿದರೆ ಬೆಳ್ಳನೆಯ ಪೆಟಿಕೋಟ್ ಥರದ ಒಳಮೈ ನೋಡಬಹುದು. ಸಿಹಿಯಾಗಿರುವ ಈ ತಿಂಡಿಗೆ ಜೊತೆಗೆ ನೆಂಜಿಕೊಳ್ಳಲು ಮಿಸ್ಸಳಿಗೆ ಮಾಡಿದ ರೀತಿಯಲ್ಲೇ ಸಾಂಬಾರು. ಎರಡು ತಿಂಡಿ ತಟ್ಟೆಗಳಲ್ಲಿ ಒಂದರಲ್ಲಿ ಮೂರು ಬನ್ಸ್ ಮತ್ತು ಇನ್ನೊಂದರಲ್ಲಿ ಬಾಜಿ [ಸಾಂಬಾರು] ಇಟ್ಟುಕೊಂಡು ಕುಳಿತುಬಿಟ್ಟರೆ ಈ ಜಗ ಸೋಜಿಗ!

ಒಂದು ಪ್ಲೇಟ್ ಬನ್ಸ್ ಬಾಜಿ ತಿಂದು ನಿಮ್ಮ ಕೆಲಸಕ್ಕೆ ಹೋಗಿ, ಹಸಿವೆ ಮಧ್ಯಾಹ್ನ ೧ರ ತನಕ ನಿಮ್ಮನ್ನು ಬಾಧಿಸದು, ಇದು ಗ್ಯಾರಂಟಿ, ಇಲ್ಲದಿದ್ದರೆ ನಿಮಗೆ ನಿಮ್ಮಹಣ ವಾಪಸ್! ಕರಾವಳಿಯಲ್ಲಿ ಬಿಸಿಲ ಧಗೆ ಹೆಚ್ಚು. ಮಳೆಗಾಲದ ಮಧ್ಯೆ ಬಿಸಿಲು ಬಂದರೂ ಅಷ್ಟರಲ್ಲೇ ಸೆಕೆ ಆರಂಭ. ಹೀಗಾಗಿ ಅಲ್ಲಿ ಬೆವರುವುದೂ ಹೆಚ್ಚು. ತಿಂದ ಆಹಾರ ಜೀರ್ಣವಾಗುವುದೂ ಬಹುಬೇಗ. ಇಂತಹ ಸನ್ನಿವೇಶದಲ್ಲಿ ಅಲ್ಲಿನ ಹೋಟೆಲಿಗರು ಕಂಡುಕೊಂಡ ರುಚಿಯಾದ ತಿಂಡಿ ಬನ್ಸ್ ಬಾಜಿ.

ಮಳೆಗಾಲ ಇನ್ನೇನು ಬಂತು ಎನ್ನುವಾಗ ಪೇಟೆಗೆ ಕೆಲಸಕ್ಕೆ ಹೋದರೆ ಕುಳಿತು ತಿನ್ನಲು ಸರಿಯಾಗಿ ಜಾಗವಿರುವ, ಶುಚಿ ರುಚಿಯಿಂದ ಕೂಡಿದ ಹೋಟೆಲನ್ನು ಮನಸ್ಸು ಎಣಿಸುತ್ತಾ ಇರುತ್ತದೆ. ಹೋಟೆಲ್ ನೋಡಲು ಬಹಳ ಕ್ಲಾಸಿಕ್ ಆಗಿರದಿದ್ದರೂ ನೀಡುವ ಈ ತಿಂಡಿಗಳನ್ನು ಮರೆಯಲಾಗದು. ತಿನ್ನುವ ಮನಸ್ಸುಳ್ಳವರು ಈ ತಿಂಡಿಗಳ ಹೆಸರನ್ನು ಬರೆದಿಟ್ಟುಕೊಂಡು ಕರಾವಳಿಯ ಪ್ರೇಕ್ಷಣೀಯ ಸ್ಥಳಗಳಾದ ಮುರುಡೇಶ್ವರ, ಗೋಕರ್ಣ, ಯಾಣ, ಧರ್ಮಸ್ಠಳ, ಉಡುಪಿ ಹೀಗೇ ಎಲ್ಲಿಗಾದರೂ ಹೋದರೆ ಅಥವಾ ಹೊನ್ನಾವರ, ಕುಮಟಾ ಕಡೆ ಒಮ್ಮೆ ರುಚಿನೋಡಬಹುದು.

Wednesday, November 10, 2010

ಜ್ಞಾತನಾಗು

ಚಿತ್ರ ಋಣ: ಅಂತರ್ಜಾಲ

ಜ್ಞಾತನಾಗು

ಬದುಕು ಕಲಿಸುವ ಪಾಠ ಬಹಳ ಮೌಲ್ಯದ್ದಹುದು
ಕೆದಕಿ ಬರೆದರು ಹೊತ್ತಗೆಗಳ ಪೂರ್ವಜರು
ಪದಕ ಪದವಿಯ ವಿಶ್ವವಿದ್ಯಾಲಯಕಂ ಮಿಗಿಲು
ಅದಕುಂಟೆ ಸರಿಸಾಟಿ | ಜಗದಮಿತ್ರ

ಓದುತ್ತ ಅರಿ ಮೊದಲು ಮಾಡುತ್ತ ತಿಳಿ ಹಲವು
ಬಾಧಕವೇ ಬೇಡವೆನ್ನುತ ಕೂರಬೇಡ
ಹಾದಿಬೀದಿಯಲೊಮ್ಮೆ ನೋಡುತ್ತ ಕಲಿ ಕೆಲವು
ಆದರಿಸು ಆದರ್ಶ | ಜಗದಮಿತ್ರ

ದೇಹಕ್ಕೆ ಸ್ನಾನವನು ಮಾಳ್ಪ ರೀತಿಯಲೊಮ್ಮೆ
ಸಾಹಸದಿ ಮನಸನ್ನು ಸ್ನಪನಗೊಳಿಸುವೊಲು
ಆಹಾರ-ನಿದ್ದೆ-ಮೈಥುನಗಳಲಿ ಹದವಿರಿಸಿ
ವಿಹರಿಸು ಧ್ಯಾನದಲಿ | ಜಗದಮಿತ್ರ

ಮನವು ಎಲ್ಲಕು ಮೂಲ ಕಾರಣವು ಕಾರ್ಯಕ್ಕೆ
ಅನುಗೊಳಿಸು ಅಭ್ಯಸಿಸಿ ಪ್ರಾಜ್ಞ ಜೀವಿತವ
ಮನುಕುಲದಿ ಸಮಯ ಸದ್ವಿನಿಯೋಗಿಸುತ ನಡೆಸು
ನೆನೆವಂತ ಕೆಲಸಗಳ | ಜಗದಮಿತ್ರ

ಉತ್ತಮದ ಪುಸ್ತಕಗಳೇ ನಮ್ಮ ಆಸ್ತಿಗಳು
ಪತ್ತಿನಲಿ ಮನವನ್ನು ಮುದಗೊಳಿಸುವುದಕೆ
ಹೊತ್ತುಹೊತ್ತಿಗೆ ಅವುಗಳಂ ತೆರೆದು ತುಂಬುತ್ತ
ಎತ್ತು ನಿನ್ನಯ ಮಟ್ಟ | ಜಗದಮಿತ್ರ

ಸುಜ್ಞಾನಿಗಳ ಬದುಕು ಪರರಜ್ಞಾನ ನೀಗಿಸಲು
ವಿಜ್ಞಾನಿಗಳು ಶ್ರಮಿಸಿ ಸಂಶೋಧಿಸುವರು
ಅಜ್ಞಾನಕಿಂತ ಬೇರೊಂದು ದೋಷವದಿಲ್ಲ
ಪ್ರಜ್ಞಾನ ನೀ ಗಳಿಸು | ಜಗದಮಿತ್ರ

Tuesday, November 9, 2010

ಢಂ ಪುಸ್ ಡಬೋಲ್ !!


ಢಂ ಪುಸ್ ಡಬೋಲ್ !!

ದೀಪಾವಳಿಗೆ ಮೂರುದಿವಸ ದಿನಕ್ಕೊಂದರಂತೇ ಪಟಾಕಿ ಸಿಡಿಸಿದರೆ ಎಂಬ ಆಸೆ ಇತ್ತು. ಆದರೆ ಮಳೆಯಲ್ಲಿ ದೀಪಾವಳಿ ಪಟಾಕಿಯೆಲ್ಲಾ ಟುಸ್ ಆದಾಗ ಮರೆವಿನ ಹಿತ್ತಲಲ್ಲಿ ಆಪದ್ರಕ್ಷಕವಾಗಿ ಹೂತಿಟ್ಟ ಔಷಧೀಯ ಮೂಲಿಕೆಗಳನ್ನು ಹೊರತೆಗೆದು ಬಳಸಿದರೆ ಹೇಗೆ ಎಂಬ ಭಾವನೆ ಬಂತು. ಹೀಗಾಗಿ ಇವತ್ತು ಸ್ವಲ್ಪ ಮಳೆಯೂ 'ನಿಂತಿದ್ದೇನೆ ' ಅಂತ ಕೆಲವುಕಡೆ ಬೋರ್ಡು ಹಾಕಿರುವುದರಿಂದ ನಿನ್ನೆಯ ಮಳೆಯಿಂದಾದ ಶೀತ ನೆಗಡಿಗೆ ನನ್ನ ಮೂಲಿಕೆಗಳೇ ಸಾಕಾಗಬಹುದು ಎಂಬ ಭಂಡ ಧೈರ್ಯದಿಂದ ನೆಲ ಅಗೆದು ಹೊರಗೆಳೆದೆ ನೋಡಿ ....... ಆಗ ಸಿಕ್ಕಿದ್ದೇ ಢಂ ಪುಸ್ ಡಬೋಲ್ !

ಢಂ !

ನಾವು ಚಿಕ್ಕವರಿರುವಾಗ ಅಂದರೆ ಕನ್ನಡಶಾಲೆಯಲ್ಲಿ ಓದುತ್ತಿರುವಾಗ ನಮಗೆ ಓದು, ಬರಹ ಬರುತ್ತಿತ್ತೇ ವಿನಃ ಹೊರಜಗತ್ತಿನ ಯಾವುದೋ ರಾಜಕೀಯಕ್ಕೋ ವ್ಯವಹಾರಗಳಿಗೋ ತಲೆ ಹಾಕಿದ ಜನವಲ್ಲ ನಾವು. ನಾವಾಯಿತು ನಮ್ಮ ಪಾಡಾಯಿತು ದೊಗಳೆ ಚಡ್ಡಿಯನ್ನು ಜಗ್ಗುತ್ತಾ ಹರಿದ ಚಪ್ಪಲಿಯನ್ನು ಸೂಜಿ ದಾರದಿಂದ ಹೊಲಿದು ಕಿತ್ತುಹೋದ ಸಂಸಾರದ ಗಂಡ-ಹೆಂಡಿರ ವೈಮನಸ್ಯ ಬಗೆಹರಿಸಿ ವಿಚ್ಛೇದನವನ್ನು ರದ್ದುಗೊಳಿಸುವಂತೇ ಎಲ್ಲಕ್ಕೂ ಪರಿಹಾರ ಕಂಡುಕೊಳ್ಳುತ್ತಾ ಬದುಕಿದ ಬಡಪಾಯಿ ಹುಡುಗರು ನಾವು. ಯಾರಾದರೂ ದಾರಿಹೋಕರು ಕಣ್ಣುಹಿಗ್ಗಿಸಿದರೆ ಚಡ್ಡಿಯಲ್ಲೇ ಉಚ್ಚೆ ಹೊಯ್ದುಕೊಳ್ಳುವಷ್ಟು ಅಸಾಧಾರಣ ಧೈರ್ಯವಂತರು ನಾವು. ಇರಲಿ ಬಿಡಿ ಸಾಕು ಹೇಳ ಹೊರಟಿದ್ದು ನಮ್ಮಕಥೆಯನ್ನಲ್ಲ....ಸುಬ್ಬಕ್ಕನದು.

ಸುಬ್ಬಕ್ಕ ನಮ್ಮ ಪಕ್ಕದ ಮನೆಯ ಸಂಬಂಧಿ. ಆಗಾಗ ನಮ್ಮನೆಗೆ ಬರುತ್ತಿದ್ದಳು. ಸುಮಾರು ೬೦ ವಯಸ್ಸಿನ ಹೆಂಗಸು. ನೋಡುವುದಕ್ಕೆ ಸಹ್ಯಾದ್ರಿ ಸಮೂಹದ ಯಾವುದೋ ಬೆಟ್ಟ! ಬಂದಾಗ ನಮ್ಮಲ್ಲಿ ಊಟ-ತಿಂಡಿಗೆ ನಿಲ್ಲುವುದಿತ್ತು. ಅನಿರೀಕ್ಷಿತವಾಗಿ ಬರುವ ಆಕೆ ಕೆಲವೊಮ್ಮೆ ಬೇರೆ ಅಭ್ಯಾಗತರಿರುವಾಗ ಬಂದು ಕಿರಿಕಿರಿಯುಂಟುಮಾಡುವುದೂ ಇತ್ತು. ಹಾಗಂತ ನಾವೆಂದೂ ಅವಳನ್ನು ಅವಳ ಮುಂದೆ ಬೈಯ್ಯಲಿಲ್ಲ ! ಯಾಕೆಂದರೆ ಅವಳು ಮದುವೆಯಾಗಿ, ಸಂಸಾರ ಹೂಡಿ, ಕೆಲವು ಪೆದ್ದ ಮಕ್ಕಳನ್ನು ಹೆತ್ತು ಆಮೇಲಾಮೇಲೆ ಗಂಡನಕೂಡ ಜಗಳವಾಡಿ ಕೊನೆಗೊಂದು ದಿನ ಬಡ್ಡಾಕುಳಿ ತಲೆಯ ಯಜಮಾನ ರಾಮ ತನಗೆ ಬಂದ ಕೋಪವನ್ನು ಹೆಂಡತಿಯ ಮೇಲೆ ಹಾಯಿಸುವ ರಭಸದಲ್ಲಿ ತನ್ನ ಸಂಪೂರ್ಣ ಸ್ಥಿರಾಸ್ಥಿಯನ್ನು ಅದೇ ಊರಿನ ಅಣ್ಣೇ ಮನೆಗೆ ಬರೆದುಬಿಟ್ಟ ! ಢಂ ! ಶಬ್ದ ಕೇಳಲಿಲ್ಲವೇ ? ಇದೇ ಆಗಿದ್ದು ಪಾಪ, ಜೀವಮಾನದಲ್ಲಿ ಆಕೆಗೂ ಆಕೆಯ ಮಕ್ಕಳಿಗೂ ಪರರ ಮನೆಯ ಕೂಲಿ ಕೆಲಸಮಾಡುತ್ತಾ ಹೇಗೇಗೋ ಹೊಟ್ಟೆಹೊರೆದುಕೊಳ್ಳಬೇಕಾಗಿ ಬಂತು. ಇದನ್ನೇ ವಿಧಿಯಾಟವೆನ್ನೋಣವೇ ? ಹೀಗಾದ್ದರಿಂದ ಅಲ್ಲಿಂದಲಾಗಾಯ್ತು ಸುಬಕ್ಕನದು ಎಲ್ಲಿಗೆ ಹೋದರೂ ಅದೇ ಹಾಡು: ತನ್ನ ಗಂಡನ ಬೋಳಿಗೆ ಎಣ್ಣೆ ಸವರಿ ನಮ್ಗೆಲ್ಲಾ ನಾಮಹಾಕಿದ ಅಣ್ಣೇ ಮನೆಯವರು ಹಾಳುಬಿದ್ದೋಗಲಿ --ಎಂಬುದು.

ಇಲ್ಕೇಳಿ ಹೋಯ್ ಮೊದಮೊದ್ಲು ನಮಗೂ ಆಕೆ ಯಾಕೆ ಹಾಗೆ ಹೇಳುತ್ತಾಳೆ ಎಂದು ತಿಳಿದಿರಲಿಲ್ಲ. ಅಂತೂ ನಿಧಾನವಾಗಿ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದ್ದೆವು. ಒಮ್ಮೆ ನಮ್ಮನೆಗೆ ಬಂದ ಸುಬ್ಬಕ್ಕ

" ತಮಾ ಒಂದ್ ಕಾಗ್ದ ತಗ್ಯ ನಾ ಹೇಳ್ದಾಂಗ್ ಬರಿ ಆಯ್ತಾ " ಎಂದಳು.

ನಾನು " ಹೂಂ ಆಯ್ತು" ಅಂದೆ

ಬರ್ಯೋ " ಸುಬ್ಬಕ್ಕ ಅನಾಥರಕ್ಷಳಿರುತ್ತಾಳೆ "

ನನ್ನ ತಲೆಗೆ ಏನೂ ಹೊಳೆಯಲಿಲ್ಲ, ಎಷ್ಟೇ ಚಿಂತಿಸಿದರೂ ನನಗೆ ಆ ಶಬ್ದದ ಅರ್ಥವೇ ಆಗಲಿಲ್ಲ. ಬಹಳ ಹೊತ್ತು ಕಾಲಹರಣ ಮಾಡಲು ಸುಬ್ಬಕ್ಕನನ್ನು ಕಳಿಸಬೇಕಾಗಿತ್ತಲ್ಲ ಅದಕ್ಕೇ ಅವಳು ಹೇಳಿದಹಾಗೆಲ್ಲಾ ಬರೆದುಕೊಟ್ಟೆ.

ನಾವು ಬುದ್ಧಿ ತಿಳಿದು ದೊಡ್ಡವರಾಗುವ ಹೊತ್ತಿಗೆ ನನಗೆ ತಿಳಿದದ್ದು, ಅವಳು ಬರೆಯಿಸಿದ್ದು ಅರ್ಜಿ ಎಂಬುದು. ಅರ್ಜಿಯ ಹಲವು ಕಡೆ ಸುಬ್ಬಕ್ಕ ಅನಾಥರಕ್ಷಳು ಎಂದು ಬರೆದಿದ್ದೆನಲ್ಲ ಅದರ ಅರ್ಥ ಸುಬ್ಬಕ್ಕ ಅನಕ್ಷರಸ್ಥಳು ! ತಾನು ಅನಕ್ಷರಸ್ಥಳಾಗಿರುವುದರಿಂದ ತನಗೆ ಓದಲು/ಬರೆಯಲು ಬಾರದೇ ಇರುವುದರಿಂದ ಸ್ವಲ್ಪ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ಯಜಮಾನರು ತಮ್ಮ ಆಸ್ತಿಯನ್ನೆಲ್ಲಾ ತನಗೆ ತಿಳಿಯದೇ ಯಾರಿಗೋ ಬಿಡಿಗಾಸನ್ನೂ ತೆಗೆದುಕೊಳ್ಳದೇ ಬರೆದುಕೊಟ್ಟಿದಾರಾಗಿಯೂ ಮತ್ತು ಹಾಗೆ ಮಾಡುವಂತೇ ಅಣ್ಣೇಮನೆಯವರು ಸತತವಾಗಿ ಪ್ರೇರೇಪಿಸಿದ್ದರಿಂದ ತನ್ನ ಗಂಡನಿಗೆ ಬುದ್ಧಿಯಿಲ್ಲದ್ದನ್ನು ತಿಳಿದು ದುರುಪಯೋಗಮಾಡಿಕೊಂಡರು ಎಂದು ಕೆಲವು ಅಧಿಕಾರಿಗಳಿಗೆ ಕಳಿಸಲು ಆಕೆ ನನ್ನ ಕೈಲಿ ಅರ್ಜಿ ಬರೆಯಿಸಿದ್ದಳು !

ಪುಸ್ !

ಕೆಲವರಿಗೆ ಮಾತಿನ ಮಧ್ಯೆ ಆಗಾಗ ಏನಾದರೂ ಒಂದೆರಡು ಶಬ್ದಗಳನ್ನು ಉಪಯೋಗಿಸುವ ಹವ್ಯಾಸ. ಇಂತಹ ಒಬ್ಬರು ನಮ್ಮ ಬಳಗದಲ್ಲಿದ್ದರು. " ನಾ ಹೇಳದ್ ತಿಳೀಲಿಲ್ಲಾ ? " ಎಂಬ ಒಕ್ಕಣಿಕೆಯನ್ನು ಅವರು ಸದಾ ಉಪಯೋಗಿಸುತ್ತಿದ್ದರು. ತೀರಾ ಪುಕ್ಕಲುತನದ ಈ ಮನುಷ್ಯನಿಗೆ ಬೆಕ್ಕುಗಳೆಂದರೆ ಭಾರೀ ಹೆದರಿಕೆ. ದೂರದಲ್ಲಿ ಬೆಕ್ಕುಗಳನ್ನು ಕಂಡರೂ ದಾರಿಬದಲಾಯಿಸಿ ಹೋಗಿಬಿಡುವ ವ್ಯಕ್ತಿ ಈತ. ನಮ್ಮನೆಗೆ ಬಂದಾಗ ನಮಗೆಲ್ಲಾ ಬೆಕ್ಕುಗಳ ವರ್ಣನೆ ಮಾಡಿ ಬೆಕ್ಕುಗಳು ಹುಲಿ-ಸಿಂಹಗಳಿಗಿಂತಾ ಕ್ರೂರ ಎಂಬಂತೇ ಬಣ್ಣಿಸಿ ನಮ್ಮಲ್ಲೂ ಕೆಲವು ಕಾಲ ಹೆದರಿಕೆ ಉಂಟಾಗುವಂತೇ ಮಾಡಿಬಿಟ್ಟಿದ್ದ ಆಸಾಮಿ !

ಹಾಗಂತ ಈತ ಚಿಕ್ಕವನೇನೂ ಅಲ್ಲ. ಆಗಲೇ ಮದುವೆ ವಯಸ್ಸಿಗೆ ಬಂದ ಮಗನೂ ಇದ್ದ. ಮಗನ ಮದುವೆ ಮಾಡುತ್ತೇನೆ ಎಂದು ಊರತುಂಬಾ ಡಂಗುರ ಸಾರಿದ್ದರಿಂದ ಅನೇಕಜನ ಹೆಣ್ಣು ಹೆತ್ತವರು ಈತನ ಮಗನಿಗೆ ಹೆಣ್ಣುಕೊಡುವ ಸಲುವಾಗಿ ವಧುಪರೀಕ್ಷೆಯ ಕಾರ್ಯವನ್ನು ಇಟ್ಟುಕೊಳ್ಳುತ್ತಿದ್ದರು. ಅಲ್ಲಿ ಇಲ್ಲಿ ಕರೆದಾಗ ಈತ ಹೆಂಡತಿ ಮಗನೊಟ್ಟಿಗೆ ಹೋಗಿ ನೋಡಿಬರುತಿದ್ದ. ಒಮ್ಮೆ ಹೀಗೇ ಹೊರಟಿತ್ತು ಮೇಳ. ದಾರಿಯಲ್ಲಿ ಒಂದು ಬೆಕ್ಕು ದೂರದಲ್ಲಿ ಓಡಿಬರುತ್ತಿತ್ತು.

" ನಾ ಬರುದಿಲ್ಲ ನೀವೇ ಹೋಗ್ಬನ್ನಿ " ಕಾಲೆಳೆಯುತ್ತಾ ಅಡ್ಡರಸ್ತೆಯಲ್ಲಿ ತಿರುಗಿದ ಈತ.

" ಬನ್ನಿ ನೀವು ಬರ್ದೇ ಇದ್ರೆ ಅವ್ರು ಏನ್ ತಿಳ್ಕೋತಾರೋ ಗೊತ್ತಿಲ್ಲಾ, ಯಾಕ್ ಹೀಗೆ ಬನ್ನಿ " ಎಂದು ಹೆಂಡತಿ ಕೇಳುತ್ತಿದ್ದರೂ ಆತನಿಂದ ಉತ್ತರಬಂದಿದ್ದು ಇಷ್ಟೇ

" ನಾ ಬರುದಿಲ್ಲ ನಾ ಹೇಳದ್ ತಿಳೀಲಿಲ್ಲಾ ? "

ಹೇಗೋ ಏನೋ ಊರ ಹಲವರಿಗೆ ಈತ ಬೆಕ್ಕಿಗೆ ಹೆದರುವ ವಿಷಯ ಗೊತ್ತಿತ್ತು. ಆದರೆ ಅದನ್ನೇ ನೇರವಾಗಿ ’ಬೆಕ್ಕಿಗೆ ಹೆದರಾಂವ ’ ಎನ್ನುವ ಬದಲು ’ನಾ ಹೇಳದ್ ತಿಳೀಲಿಲ್ಲಾ’ ಎಂದು ಜನ ಈತನಿಗೆ ಅಡ್ಡಹೆಸರು ಇಟ್ಟಿದ್ದರು. ಯಾರಾದರೂ ಈತನ ಮನೆಯ ಹಾದಿಯಲ್ಲಿ ಹೋಗುವಾಗ ಬರುವಾಗ ಇನ್ನೊಬ್ಬರಿಗೆ ಅವರು ಗುರುತು ಹೇಳುತ್ತಿದ್ದುದು " ನೋಡೋ ಇದು ’ನಾ ಹೇಳದ್ ತಿಳೀಲಿಲ್ಲಾ ’ ಮನೆ." ಬೆಕ್ಕಿಗಿಂತಾ ಅಪಸಂಶಯದ ಪ್ರಾಣಿಯಾದ ಈತನ ಮಗನಿಗೆ ಯಾವ ಸಂಬಂಧಗಳೂ ಕೂಡಿಬರಲಿಲ್ಲ. ಬಹುತೇಕ ಮನೆಗಳಲ್ಲಿ ಬೆಕ್ಕುಗಳಿದ್ದವು--ಅದು ಕಾರಣ. ಇನ್ನು ಕೆಲವು ಮನೆಗಳಿಗೆ ಹೋಗುವಾಗ ಬರುವಾಗ ಬೆಕ್ಕುಗಳು ಕಣ್ಣಿಗೆ ಬಿದ್ದುದು ಕಾರಣ. ಅಪ್ಪನ ಈ ಮಹಾನಡಾವಳಿಯನ್ನು ನೋಡಿ ಜಿಗುಪ್ಸೆಗೊಂಡ ಮಗ ಒಂದಿನ ರಾತ್ರಿ ಮನೆಬಿಟ್ಟು ಓಡಿಹೋದ. ನಂತರದ ದಿನಗಳಲ್ಲಿ ಮಾನಸಿಕವಾಗಿ ಖಿನ್ನನಾದ ಈತ ತಾನೂ ಬೆಕ್ಕಿನ ರೀತಿಯಲ್ಲೇ ವರ್ತಿಸುತ್ತಿದ್ದ!

ಹಾಗಂತ ಬಹಳ ಜನ ಸೇರಿದ ಜಾಗದಲ್ಲಿ ದೂರದಲ್ಲಿ ಬೆಕ್ಕುಗಳಿದ್ದರೂ ಈತ ಆಕಡೆಗೇ ನೋಡುತ್ತಿರಲಿಲ್ಲ ಬಿಟ್ಟರೆ ಆಗೆಲ್ಲಾ ಒಳ್ಳೆ ಧೈರ್ಯ! ಇಂತಹ ಮನುಷ್ಯನಿಗೆ ಒಮ್ಮೆ ಛಾಯಚಿತ್ರದ ಗೀಳು ಹಿಡೀತು. ಮದುವೆಯೊಂದರಲ್ಲಿ ಫೋಟೋ ತೆಗೆಯುವಂತೇ ದುಂಬಾಲುಬಿದ್ದ. ಆಗೆಲ್ಲಾ ಸ್ಟಿಲ್ ಕ್ಯಾಮರಾಗಳ ಕಾಲ. ರೀಲನ್ನು ಹಾಕಿ ಫೋಟೋ ತೆಗೆದು ಅದನ್ನು ಸಂಸ್ಕರಿಸಬೇಕಾಗುತ್ತಿತ್ತು. ಇವನ ಹಠ ನೋಡಿ ಅಲ್ಲಿ ಸೇರಿದ್ದ ಕೆಲಜನ

" ನಿನ್ನ ಮುಂದಿನ ಎರಡು ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡು ಫೋಟೋ ತೊಳೆಯಲು ಬರುದಿಲ್ಲ ಮಾರಾಯ "

ಅಂದಿದ್ದೇ ತಡ ಊರಲ್ಲಿ ಮತ್ತೊಂದೆಡೆಗೆ ಮದುವೆ ನಡೆಯುವುದನ್ನೇ ಎದುರುನೋಡುತ್ತಿದ್ದ. ಒಂದು ಮದುವೆ ಇದ್ದುದು ತಿಳಿದಿತ್ತು. ಮದುವೆಗೆ ವಾರ ಮುಂಚಿತವಾಗಿ ತಯಾರಾಗಿಬಿಟ್ಟ! ಮದುವೆಯ ದಿನ ಬಂದೇ ಬಂತು. ಮದುವೆಮನೆಗೆ ಬಂದವನೇ ಅಲ್ಲಿಗೆ ಬಂದ ಅದೇ ಹಳೆಯ ಫೋಟೋಗ್ರಾಫರ್ ಕೈಲಿ ಫೋಟೋ ತೆಗೆಯುವಂತೇ ಹೇಳಿದ.

" ನೋಡಯ್ಯಾ ನೀ ಹೇಳಿದ್ಯಲ್ಲ ಹಲ್ಲು ಕ್ಯಾಮರಾ ರೀಲಿಗೆ ಸಿಕ್ಕಾಕೊಂಡ್ಬುಡುತ್ತೆ ಅಂತ ಅದ್ಕೇ ಹೋಗಿ ಮುಂದಿನ ಹಲ್ಲು ಕಿತ್ತಾಕ್ಸೊಂಡು ಬಂದಿದೀನಿ, ತೆಗೀ ಈಗ ಫೋಟೋ, ನಾ ಹೇಳದ್ ತಿಳೀಲಿಲ್ಲಾ " ಎಂದ

ಸುತ್ತ ಇದ್ದವರಿಗೆಲ್ಲಾ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

ಡಬೋಲ್

ಕಡಕಾಲ್ ರಾಮಣ್ಣ ಎಂದ್ರೆ ವರ್ಲ್ಡ್ ಫೇಮಸ್ಸು ! ಆತನ ವಿಷಯ ನೀವು ನಮ್ಮೂರಿಗೆ ಹೋಗಿ ಕೇಳದ್ರೆ ಈಗ್ಲೂ ಹೇಳ್ತಾರೆ ಜನ. ಜಕಣಾಚಾರಿಯನ್ನಾದ್ರೂ ಜನ ಮರೀಬಹುದು ಆದರೆ ರಾಮಣ್ಣನನ್ನು ಮರೆಯಲು ಸಾಧ್ಯವೇ ? ಹಳೆಯ ಕಾಲಮಾನ. ಆಗ ಗದ್ದೆಗಳಲ್ಲಿ ಮಾಳಗಳನ್ನು ಹಾಕಿ ರಾತ್ರಿ ಕಾವಲು ಕಾಯುತ್ತಿದ್ದರು. ಕಾಡು ಊರಿಗೆ ಹತ್ತಿರವಿರುತ್ತಿದ್ದುದರಿಂದ ನರಿ, ತೋಳ, ಹಂದಿ ಇತ್ಯಾದಿ ಹಲವು ಕಾಡುಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಲು ಹಾಗೆ ಕಾಯುವುದು ಬೇಕಾಗುತ್ತಿತ್ತು. ರಾತ್ರಿ ಆಗಾಗ ಗದ್ದೆಯ ಬದುವಿನ ಮೇಲೆ ಓಡಾಡಿಬರುವುದು, ಒಮ್ಮೊಮ್ಮೆ ಕಾಲಿಯಾದ ತಗಡಿನ ಎಣ್ಣೆ ಡಬ್ಬವನ್ನು ಬೋರಲುಹಾಕಿ ಜೋರಾಗಿ ಕೋಲಿನಿಂದ ಬಡಿದು " ತಾವಿದ್ದೇವೆ " ಎಂದು ಕಾಡುಪ್ರಾಣಿಗಳಿಗೆ ಸೂಚಿಸುವುದು ರೂಢಿ. ನಾಲ್ಕು ಸೆಲ್ಲಿನ ಅಗಲ ಗಾಜಿನ ಬ್ಯಾಟರಿ [ಟಾರ್ಚ್] ಹಿಡಿದು ಗದ್ದೆಯಲ್ಲಿ ಓಡಡುವುದೆಂದರೆ ಕೆಲವರಿಗೆ ಬಹಳ ಆಸಕ್ತಿ.

ಅದರಲ್ಲಂತೂ ರಾಮಣ್ಣ ನಡುವಯಸ್ಕ. ಆತನಿಗೆ ಬೀಡೀ ಸೇದುವ ಚಟ. ಮೂವತ್ತು ಮಾರ್ಕಿನ ಬೀಡಿಗಳನ್ನು ಅಂಗಿಯ ಜೇಬಿನಲ್ಲಿ ಇಟ್ಟುಕೊಂಡು ಮಲಗಿಬಿಟ್ಟರೆ ರಾತ್ರಿ ನೆನಪಾದಾಗ ಒಂದೊಂದು ಅಂಟಿಸಿಕೊಂಡು ಸೇದುತ್ತಿದ್ದ. ಹಂದಿಗಳ ಉಪಟಳ ಜಾಸ್ತಿಯಾಗಿದ್ದರಿಂದ ನಿಗ್ರಹಿಸಲು ಸಾಧ್ಯವಾಗದೇ ಹೊಸದಾಗಿ ಕಂಡುಕೊಂಡ ದಾರಿ ಆಗಾಗ ಪಟಾಕಿ ಹೊಡೆಯುವುದು. ಆಗ ಸಿಗುತ್ತಿದ್ದ ಬಿಡಿಬಿಡಿಯಾದ ಲಕ್ಷ್ಮೀ ಪಟಾಕಿಯನ್ನು ಜೇಬಲ್ಲೇ ಬೀಡಿಯೊಟ್ಟಿಗೆ ಇಟ್ಟುಕೊಂಡುಬಿಟ್ಟ. ಮಲಗಿದವನಿಗೆ ನಿದ್ದೆಯ ಮಂಪರು ಹತ್ತಿತ್ತು. ಸ್ವಲ್ಪ ಎಚ್ಚರವಾದಂತಾದಾಗ ಅಲ್ಲೆಲ್ಲೋ ಗದ್ದೆಯ ಒಂದು ಮೂಲೆಯಲ್ಲಿ ಯಾವುದೋ ಪ್ರಾಣಿಯ ಸದ್ದು ಕೇಳಿಬರುತ್ತಿತ್ತು. ಅಪರಾತ್ರಿಬೇರೆ. ಹಂದಿಗಳು ಬಹಳ ಅಪಾಯಕಾರಿಯಾದ್ದರಿಂದ ಮಾಳ ಇಳಿದು ಹೋಗಲೂ ಹೆದರಿಕೆ.

ರಾಮಣ್ಣ ತಡಮಾಡಲೇ ಇಲ್ಲ. ಜೇಬಿನಿಂದ ಬೀಡಿಯೊಂದನ್ನು ತೆಗೆದು ಸೇದುತ್ತಾ ನೋಡೋಣ ಎಂದುಕೊಂಡ. ಹಚ್ಚಿದ ಬೀಡಿ ಸುರ್ ಸುರ್ ಎಂದು ಅರ್ಧ ನಿಮಿಷದಲ್ಲಿ " ಡಬೋಲ್ " ಎಂಬ ಸದ್ದಿನೊಡನೆ ಸ್ಪೋಟಗೊಂಡಾಗಲೇ ರಾಮಣ್ಣನಿಗೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಪಟಾಕಿಯ ನೆನಪಾಗಿದ್ದು. ಪರಿಣಾಮ ಕಣ್ಣೊಂದು ಬರ್ಬಾದಾಗಿ ಹೋಯಿತು. ಮಾರನೇದಿನ ದೂರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಕಣ್ಣು ಮರಳಿ ಬರಲೆ ಇಲ್ಲ. ದೀಪಾವಳಿಯಲ್ಲಿ ಮಿಕ್ಕುಳಿದ ಪಟಾಕಿಯನ್ನು ಹಂದಿ ಓಡಿಸಲು ರಾಮಣ್ಣ ಮಾಡಿದ ಪ್ಲಾನೇನೋ ಸರಿ. ಆದರೆ ಆತ ವಿಷಕಾರಿಯಾದ ಆ ಸ್ಪೋಟಕವನ್ನು ಬೀಡಿಯೊಂದಿಗೆ ಜೇಬಿನಲ್ಲಿಟ್ಟುಕೊಂಡು ಸೇದಿ ಬೆಳಗಾಗುವುದರೊಳಗೆ ಸುತ್ತ ಹತ್ತಾರು ಹಳ್ಳಿಗಳಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದ!