ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 14, 2011

ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಯಾವುದೋ ಕಾಣದ ಆ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿರಲಿ !


ಇದು ನನ್ನ ಒತ್ತಾಯವಲ್ಲ, ನಿಮ್ಮೆಲ್ಲರ ಗೆಳೆಯನಾಗಿ, ಅಂತರ್ಜಾಲದ ಮೂಲಕ ನಿಮ್ಮ ಆಪ್ತ ಸಹವರ್ತಿಯಾಗಿ ಕೊಡುತ್ತಿರುವ ನನ್ನ ಸಲಹೆ ಅಷ್ಟೇ. ಕಳೆದವಾರ ನಂಬಿಕೆಯ ಬಗ್ಗೆ ಬರೆದಿದ್ದೆ. ಆಮೇಲೆ ಅತಿಯಾದ ಕೆಲಸಗಳ ನಡುವೆ ನನ್ನ ಅಂತರ್ಜಾಲದ ’ಅಂತರ್ಜಲ’ ಕಮ್ಮಿಯಾಗಿ ಹೋಗಿತ್ತು. ಬರೆಯಲು ಮನಸ್ಸಿದ್ದರೂ ವಿಷಯಗಳು ಹಲವು ಹತ್ತು ಮನಸ್ಸನ್ನು ಮುತ್ತಿಕೊಂಡು ಬರೆಯುವಂತೇ ಒತ್ತಾಯಿಸುತ್ತಿದ್ದರೂ ಬರೆಯಲು ಸಮಯಮಾತ್ರ ಕೊನೆಗೂ ಆಗಿರಲಿಲ್ಲ. ಕೇಳದೇ ಧುಮ್ಮಿಕ್ಕಿದ ಭಾವನೆಗಳ ಜಲಪಾತದಲ್ಲಿ ಕಂಡ ದೃಶ್ಯವೇ ಕನ್ನಡ ನಾಡ ಭಕ್ತಿಗೀತೆಗಳು-ನೀವದನ್ನು ಓದಿದ್ದೀರಿ.

ನಿಮ್ಮೊಡನೆ ಬ್ಲಾಗ್ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿಟ್ಟು ಅದಾಗಲೇ ಕೆಲವು ದಿನಗಳು ಕಳೆದವು. ಹುಟ್ಟಿದಹಬ್ಬವನ್ನು ಆಚರಿಸಿಕೊಳ್ಳುವ ಮನುಷ್ಯ ನಾನಲ್ಲ. ಸಮಾಜಕ್ಕೆ ಅಂತಹ ಕೊಡುಗೆಯನ್ನು ಕೊಟ್ಟು ಹಸಿವಿನಲ್ಲಿರುವವರಿಗೆ ಅನ್ನಕೊಡಲು ಸಾಧ್ಯವಿದ್ದರೆ, ಬಡವರ ಬಡತನಕ್ಕೆ ಕಾರಣ ಹುಡುಕಿ ಸ್ವಿಸ್ ಬ್ಯಾಂಕಿನಲ್ಲಿ ಕದ್ದೂಮುಚ್ಚಿ ಹಣವಿಟ್ಟು ಚುನಾವಣೆ ಬಂದಾಗ ಬಡವರನ್ನುದ್ಧರಿಸುವ ಸೋಗು ಹಾಕುವವರ ಆ ಕಳ್ಳಹಣವನ್ನು ತಂದು ಬೇಕಾದವರಿಗೆ, ನೊಂದವರಿಗೆ, ಆರ್ತರಿಗೆ ಹಂಚಿ ಸಮತ್ವವನ್ನು ಕಾಪಾಡಿಕೊಳ್ಳಬಹುದಾದ ತಾಕತ್ತು ನನ್ನಲ್ಲಿದ್ದಿದ್ದರೆ, ನನ್ನ ಹುಟ್ಟುಹಬ್ಬ ಎಲ್ಲರಿಗೂ ಸಂಭ್ರಮವಾದರೆ ಹೋಗಲಿ ಬಹುತೇಕರಿಗಾದರೂ ಸಂಭ್ರಮವಾದರೆ ಅದನ್ನು ಆಚರಿಸಬಹುದಿತ್ತು. ಇದು ಕೀಳರಿಮೆಯಲ್ಲ, ಇದು ಸಾಮಾನ್ಯಾತಿಸಾಮಾನ್ಯನೊಡನೆ ಸಹಜೀವನ ನಡೆಸುವ ಪ್ರವೃತ್ತಿ. ಅಂದಾದುಂಧಿ ಖರ್ಚುಮಾಡಿ, ಕೇಕು ಕತ್ತರಿಸಿ ಸಂಭ್ರಮಿಸುವ ಬದಲು ಅದೇ ಹಣವನ್ನು ಯಾರು ಅಸಹಾಯರು ಅವರಿಗೆ ನೀಡಿದರೆ ಅದರಲ್ಲಿರುವ ಖುಷಿ ನಿಜಕ್ಕೂ ಇದರಲ್ಲಿಲ್ಲ! ನನ್ನ ಮಗನಿಗೆ ಚಾಕೋಲೇಟ್ ಕೊಡಿಸುವಾಗ ಕೂಡ ಕಟ್ಟಡ ಕೂಲಿಗಳ ಮಗು ರಸ್ತೆಯಲ್ಲಿ, ಮರಳದಿಬ್ಬದಲ್ಲಿ ಹಸಿವಿನಿಂದ ಹೊರಳಾಡುದನ್ನು ಮನ ನೆನೆಯುತ್ತದೆ; ಮರುಗುತ್ತದೆ! ರಸ್ತೆಗಳಲ್ಲಿ ಡೊಂಬರಾಟನಡೆಸುವ ಎಳೆಯ ಮಕ್ಕಳನ್ನು, ಬಿಸಿಲಿನಲ್ಲಿ ಹಸಿದ ಮಗುವನ್ನು ಜೋಳಿಗೆಯಲ್ಲಿ ಹೊತ್ತು ಬೇಡುವ ತಾಯಂದಿರನ್ನೂ ನೋಡಿದಾಗ ಅಯ್ಯೋ ಎನಿಸುತ್ತದೆ. ಈ ಎಲ್ಲದರ ನಡುವೆ ನನಗೆ ಹುಟ್ಟಿದ ಹಬ್ಬದ ಸಂಭ್ರಮ ಬೇಕಾಗಿಲ್ಲ; ಅದರಂತೆಯೇ ಬ್ಲಾಗ್ ಯಾವತ್ತು ಹುಟ್ಟಿತು ಎಂಬುದನ್ನೂ ಅಷ್ಟಾಗಿ ಮತ್ತೆ ಮತ್ತೆ ಅವಲೋಕಿಸುವುದಿಲ್ಲ. ಬರೆಯುವುದಷ್ಟೇ ನನ್ನ ಆದ್ಯತೆ.

ಒಮ್ಮೆ ನಾವು ಇನ್ನೂ ದ್ವಿತೀಯ ಪಿಯೂಸಿಯನ್ನು ಓದುತ್ತಿರುವ ಸಮಯ, ನನ್ನೊಟ್ಟಿಗೆ ನನ್ನೊಬ್ಬ ಮಿತ್ರ, ಇಬ್ಬರದೂ ಒಂದು ರೂಮು, ನಮ್ಮದೇ ಅಡುಗೆ. ಒಂದು ರಾತ್ರಿ ಸುಮಾರು ೧ ಗಂಟೆಗೆ ಹೊಟ್ಟೆಯನೋವು ಎಂದು ಚೀರಹತ್ತಿದ ಆತನಿಗೆ ಏನುಕೊಡಬೇಕೆಂದು ನನಗೆ ತಿಳಿಯಲಿಲ್ಲ. ನನ್ನಲ್ಲಿ-ಅವನಲ್ಲಿ ಯಾವುದೇ ಔಷಧವಿರಲಿಲ್ಲ, ಕೆಳಮಧ್ಯಮದರ್ಜೆಯ ಪಟ್ಟಣಗಳಲ್ಲಿ ರಾತ್ರಿ ೮:೩೦ ನಂತರ ಔಷಧದ ಅಂಗಡಿಗಳು ಬಾಗಿಲು ಮುಚ್ಚಿರುತ್ತವೆ. ಯಾವುದಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಎಂದರೆ ಯಾರಲ್ಲಿ ಕೇಳುವುದು? ಮಾರ್ನೇ ದಿನ ನನಗೆ ಪರೀಕ್ಷೆ. ಆ ಪರೀಕ್ಷೆಯೆ ನಡುವೆಯೇ ಈ ಪರೀಕ್ಷೆ! [ಆತನಿಗೆ ಅಗ ಪರೀಕ್ಷೆಯಿರಲಿಲ್ಲ ಎಂಬುದು ಸಮಾಧಾನ] ಕತ್ತಲ ದಾರಿಯಲ್ಲಿ ಆ ಅಪರಾತ್ರಿಯಲ್ಲಿ ರಸ್ತೆಹಿಡಿದು ಆತನನ್ನು ಯಾವುದಾದರೂ ಆಸ್ಪತ್ರೆಗೆ ಒಯ್ಯಲು ನನ್ನಲ್ಲಿ ಜಾಸ್ತಿ ಹಣಕೂಡ ಇರಲಿಲ್ಲ. ಹಣವಿರದಿದ್ದಾಗ ಯಾವುದೇ ಕೆಲಸವಾಗಲಿ ಅರ್ಧ ಜಂಘಾಬಲವೇ ಉಡುಗಿಹೋಗುತ್ತದೆ! ಈಗಂತೂ ಎಲ್ಲೆಲ್ಲೂ ಎಲ್ಲರಿಗೂ ಹಣವೇ ಪ್ರಧಾನ.

ಎರಡು ನಿಮಿಷ ಯೋಚಿಸಿದೆ. ನಾನೊಬ್ಬ ಭಕ್ತಿ ಭಂಡಾರಿ. ನನಗೆ ನಾನು ನಂಬಿದ ಕಾಣದ ಆ ಶಕ್ತಿಯಲ್ಲಿ ಅತೀವ ನಂಬಿಕೆಯಿದೆ. ಅದು ರಾಮನೋ ರಹೀಮನೋ ಬುದ್ಧನೋ ಕ್ರಿಸ್ತನೋ ಎಲ್ಲವೂ ಕೂಡ; ಹಲವು ರೂಪಗಳನ್ನು ಪಡೆಯಬಲ್ಲ ನಿರಾಕಾರ ರೂಪ! ನನ್ನ ಚೀಲದಲ್ಲಿ ಒಂದು ಕರಡಿಗೆಯಲ್ಲಿ ಶ್ರೀರಾಮಚಂದ್ರಾಪುರಮಠದ ಹಿಂದಿನ ಗುರುಗಳಾಗಿದ್ದ ಬ್ರಹ್ಮೈಕ್ಯ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ತಮ್ಮ ಕರಕಮಲದಿಂದ ಶ್ರೀರಾಮ[ಶಂಕರಾಚಾರ್ಯರಿಂದ ನೀಡಲ್ಪಟ್ಟು, ಅವಿಚ್ಛಿನ್ನವಾದ ಪರಂಪರೆಯ ಸ್ವಾಮಿಗಳಿಂದ ಸದಾ ಪೂಜೆಗೊಳ್ಳುವ]ನನ್ನು ಪೂಜಿಸಿದ್ದ ಶ್ರೀಗಂಧದ ಪ್ರಸಾದದ ಉಂಡೆಗಳು ಇದ್ದವು. ನಿತ್ಯವೂ ನಾನು ಅವುಗಳಲ್ಲಿ ಚೂರು ತುಣುಕು ತೆಗೆದು ಸ್ವಲ್ಪ ನೀರು ಸೇರಿಸಿ ಕಲಸಿ ಹಣೆಗೆ ಹಚ್ಚಿಕೊಳ್ಳುತ್ತಿದ್ದೆ. ಯಾಕೋ ಶ್ರೀರಾಮನ ಚಿತ್ರ ಕಣ್ಮುಂದೆ ಸುಳಿಯುತ್ತಿತ್ತು, ಮನಸಾ ಗುರುಪರಂಪರೆಗೆ, ಶ್ರೀರಾಮನಿಗೆ ಒಮ್ಮೆ ನಮಿಸಿ ಸ್ವಲ್ಪ ಅವೇ ಗಂಧದ ತುಣುಕುಗಳನ್ನು ಲೋಟವೊಂದರಲ್ಲಿ ಹಾಕಿ ನೀರಿನಲ್ಲಿ ಕದಡಿ ಮಿತ್ರನಿಗೆ ಕುಡಿಸಿದೆ. ಅರ್ಧಗಂಟೆಯೂ ಕಳೆದಿರಲಿಲ್ಲ, ಹೊಟ್ಟೆನೋವು ನಿಂತಿತ್ತು!

ಇನ್ನೊಂದೆರಡು ಪ್ರಸಂಗ ಹೀಗಿದೆ: ನಾನು ಓಡಿಸುತ್ತಿರುವ ಸ್ಕೂಟರಿಗೆ ಒಂದು ಕಾರು ಬಂದು ಗುದ್ದುವ ಸನ್ನಿವೇಶ ಎದುರಾಯ್ತು. ಕಾರು ಎಡದಿಂದ ನನಗೆ ತಾಗುತ್ತಿರುವುದು ಕಾಣುತ್ತಿತ್ತು; ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಆತ ಬಹಳವೇಗದಲ್ಲಿದ್ದ. ನುಗ್ಗಿ ಬಂದ ಆತ ಎಡಕ್ಕೆ ಹೊಡೆದೇ ಬಿಟ್ಟ. ಸ್ಕೂಟರಿಗೆ ಸ್ವಲ್ಪ ಪೆಟ್ಟುಬಿದ್ದಿದ್ದು ಬಿಟ್ಟರೆ ನನಗೆ ಏನೂ ಆಗಲಿಲ್ಲ! ಗೇರುಸೊಪ್ಪೆಯ ಘಟ್ಟದ ಇಳಿಜಾರಿನಲ್ಲಿ ನಾವು ಪ್ರಯಾಣಿಸುತ್ತಿದ್ದ ಬಸ್ಸಿನ ಜಾಯಿಂಟ್ ಕಟ್ಟಾಗಿಹೋಯ್ತು. ಬಸ್ಸು ಹೇಗ್ಹೇಗೋ ಓಡಲು ತೊಡಗಿತ್ತು, ಸಾಲದ್ದಕ್ಕೆ ಬ್ರೇಕ್ ಕೂಡ ಚೆನ್ನಾಗಿರಲಿಲ್ಲ. ಡ್ರೈವರ್ ಚಿಂತೆಗೀಡಾಗಿದ್ದ. ಬಸ್ಸಿನಲ್ಲಿ ನಿದ್ದೆಮಾಡಿಕೊಂಡಿದ್ದವರನ್ನು ಬಿಟ್ಟರೆ ಮಿಕ್ಕುಳಿದವರಿಗೆ ವಿಷಯದ ಅರಿವಾಗಿತ್ತು. ಆದರೂ ಚಲಿಸುವ ವಾಹನದಲ್ಲಿ ಕುಳಿತು ಅದರ ನಿಯಂತ್ರಣ ನಮ್ಮ ಕೈಮೀರಿದಾಗ ಏನುಮಾಡಲು ಸಾಧ್ಯ ? ಇಲ್ಲೆಲ್ಲಾ ನನಗೆ ಅನಿಸಿದ್ದು ನನ್ನ ನಂಬಿಕೆ ನನ್ನನ್ನು ಇನ್ನೂ ಇಲ್ಲಿ ಉಳಿಸಿದೆ. ನನ್ನ ’ಅವತಾರ’ಕ್ಕೆ ಕರ್ತವ್ಯ ಇನ್ನೂ ಬಾಕಿ ಇದೆ!

ಚಿಕ್ಕವನಿರುವಾಗ ನಮ್ಮ ತೋಟದಲ್ಲಿ ಬಾವಿಯೊಂದನ್ನು ತೋಡುತ್ತಿದ್ದರು. ಹತ್ತಡಿ ಆಳದ ಬಾವಿಯಲ್ಲಿ ಅದಾಗಲೇ ನೀರು ಸಣ್ಣಗೆ ಜಿನುಗುತ್ತಿತ್ತು. ಕೆಸರುಸಹಿತದ ಆ ನೀರನ್ನು ಹೊರಹಾಕುವ ಕೆಲಸಕ್ಕೆ ತುಂಬಿಸಿಕೊಡುವ ಸಹಾಯಕ ನಾನಾಗಿದ್ದೆ. ಆ ದಿನ ಅಪರಾಹ್ನ ಮೂರುಗಂಟೆಯೂ ಆಗಿರಲಿಲ್ಲ. ನನಗ್ಯಾಕೋ ಕೋಪ ಬಂದಿತ್ತು; ನೀರು ತುಂಬಿಸುವುದಿಲ್ಲವೆಂದು ಜಗಳವಾಡಿ ಮೇಲಕ್ಕೆ ಹತ್ತಿ ಹೊರಟುಬಿಟ್ಟೆ. ನಾನು ಹಾಗೆ ಮಾಡಿದ ನಂತರ ಬಾವಿ ತೆಗೆಯುತ್ತಿದ್ದ ಆಳುಗಳು ತಮಗೂ ಯಾಕೋ ಸಾಕೆನಿಸಿ ಮೇಲಕ್ಕೆ ಬಂದಿದ್ದರು. ಕ್ಷಣಾರ್ಧದಲ್ಲಿ ಬಾವಿಯ ಪಕ್ಕೆ ಕುಸಿದು ಹತ್ತಾರು ಕ್ವಿಂಟಾಲು ಕಲ್ಲು ಮಿಶ್ರಿತಮಣ್ಣು ರಾಶಿ ಬಿತ್ತು! ಬಾವಿಯಲ್ಲೇ ಇದ್ದಿದ್ದರೆ ನಾವೆಲ್ಲಾ ಮಣ್ಣೊಳಗೇ ಮಣ್ಣಾಗುತ್ತಿದ್ದೆವೋ ಏನೋ.

ಇನ್ನೂ ಹಲವಾರು ಘಟನೆಗಳಿವೆ. ಇದನ್ನೆಲ್ಲಾ ನನೆಸಿದಾಗ ನನಗನಿಸಿದ್ದು ಯಾವುದೋ ಶಕ್ತಿ ನಮಗೇ ಅರಿವುಗೊಡದೆ ಸತತ ತನ್ನನ್ನು ಕೆಲಸದಲ್ಲಿ ನಿಯೋಜಿಸಿಕೊಂಡಿರುತ್ತದೆ. ನಂಬಿಕೆಯಿಂದ ಪ್ರಾರ್ಥಿಸಿದರೆ ಅದರಿಂದ ಕಷ್ಟಕ್ಕೆ ಪರಿವರ್ತನೆ ಸಿಗುತ್ತದೆ! ಪ್ರಾರ್ಥಿಸುವಾಗ ನಿಸ್ವಾರ್ಥರಾಗಿ ಪ್ರಾರ್ಥಿಸಬೇಕು. ಬರೇ ನಾನು-ನನ್ನದು ಹೆಂಡತಿ-ಮಕ್ಕಳು ಕುಟುಂಬ ಇವಷ್ಟನ್ನೇ ಅಲ್ಲದೇ " ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ " [ಜಗತ್ತಿನ್ನ ಎಲ್ಲರ ಯೋಗಕ್ಷೇಮಾಭಿವೃದ್ಧಿಯನ್ನು ಬಯಸುವ] ಪ್ರಾರ್ಥನೆ ನಮದಾದರೆ ಅದಕ್ಕೆ ಸಿಗುವ ಫಲವೂ ಕೂಡ ದೊಡ್ಡದು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಮೀಸಾ ಕಾಯ್ದೆ ಜಾರಿಗೊಳಿಸಿ ಅನೇಕರನ್ನು ವಿನಾಕಾರಣ ಶಿಕ್ಷೆಗೆ ಗುರಿಪಡಿಸಿದ್ದಳು. ಅದೇ ಕಾಲಕ್ಕೆ ಜನ ಒಳಗೊಳಗೇ ಗುಸುಗುಸು ದಂಗೆ ಎದ್ದಿದ್ದರು. ಪರಿಸ್ಥಿತಿಯನ್ನರಿತ ಇಂದಿರಾ ಕಾಂಚಿಯ ಕಡೆಗೆ ಬಂದು ಅಲ್ಲಿನ ಪರಮಾಚಾರ್ಯರನ್ನು ಭೇಟಿಮಾಡಲು ಮುಂದಾದಳು. ನೇರಮುಖ ದರ್ಶನಕ್ಕೆ ಅವಕಾಶವೀಯದ ಪರಮಾಚಾರ್ಯರಲ್ಲಿ ತನಗೂ-ತನ್ನ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ ಪರಮಾಚಾರ್ಯರು ಏನೂ ಪ್ರತಿಕ್ರಿಯಿಸಲಿಲ್ಲವಂತೆ. ದೇಶಕ್ಕೆ ಒಳಿತಾಗಲಿ ಎಂದು ಕೇಳಿದಾಗ ತಮ್ಮ ಬಲಗೈಯಾಡಿಸಿ ಆಶೀರ್ವಾದವೆಂಬಂತೇ ತೋರಿದರಂತೆ! ಬರುವ ಸೌಕರ್ಯವೇನಿದ್ದರೂ ಎಲ್ಲರಿಗೂ ಬರಲಿ, ದೊರೆವ ಸುಖವೇನಿದ್ದರೂ ಎಲ್ಲರಿಗೂ ಸಿಗಲಿ. ನನಗೆ ಮಾತ್ರ ಸಿಗಬಹುದಾದ ಸುಖಕ್ಕೆ ಎಂದೂ ಹಾತೊರೆಯುವುದಿಲ್ಲ. ನಮ್ಮೂರಿನ ಗಾದೆ ’ಊರಿಗಾದ ಹಾಗೇ ಪೋರನಿಗೆ’ ! ಊರಿಗೆಲ್ಲಾ ಏನು ಲಭ್ಯವೋ ಅದೇ ನನಗೂ ಸಾಕು. ಆದರೆ ಉತ್ತಮವಾದುದನ್ನು ಸಮಾಜ ಗಳಿಸಿಕೊಳ್ಳಲು ಪರಾಶಕ್ತಿಯಲ್ಲಿ ನಂಬಿಕೆ ಬೇಕು. ಮತ್ತೆ ಸಿಗೋಣ, ಧನ್ಯವಾದ.

Monday, December 12, 2011

ಅನ್ನ-ನೀರು ಇರುವವರೆಗೂ ಕನ್ನಡ !

ಅನ್ನ-ನೀರು ಇರುವವರೆಗೂ ಕನ್ನಡ !
[ಮೊನ್ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನಲ್ಲಿ,ಗುಂಗಿನಲ್ಲಿ ಬರೆದ ಒಂದು ಹಾಡು ನಿಮಗರ್ಪಿತ :]

ಚಿನ್ನದಾ ರನ್ನದಾ ಕನ್ನಡದಾ ತೇರನು
ಮುನ್ನಡೆಸುವುದಕೆ ಜಾಣ ಬೇಗ ಬಾ
ನಿನ್ನೆ ಇಂದು ನಾಳೆ ಎಂದು ಮೂರುದಿನದ ಜಾತ್ರೆಯಲ್ಲ
ಅನ್ನ-ನೀರು ಇರುವವರೆಗೂ ಕನ್ನಡ !

ಹಲವು ಸಾಧುಸಂತರು ಬಲಕೆ ದೇಶಭಕ್ತರು
ಗೆಲುವಿಗಾಗಿ ದುಡಿದರು ರಥವನೆಳೆದು ಖ್ಯಾತರು
ಒಲವಿನಿಂದ ಕೂಡಿದ ತವರು-ತಾಯಿ ಮನೆಯಿದು
ಚೆಲುವಿನಲ್ಲಿ ಚೆಲುವಿದು ನಮ್ಮ ಹೆಮ್ಮೆ ಕನ್ನಡ

ಪದಪದದಲು ಹಾಸ್ಯ ಹೊನಲು ಹದಪಾಕದ ಭಾಷೆಯು
ಕದವ ತೆರೆದು ಕೊಟ್ಟರು ಜ್ಞಾನಪೀಠ ಸರಸತಿ
ಮುದದಿ ಮೋದಗೊಳ್ಳುವಾ ಎಮ್ಮ ಮುದ್ದು ಕನ್ನಡ
ಗದುಗಿನಾರಣಪ್ಪನ ಹೃದಯ ಕದ್ದ ಕನ್ನಡ

ಅವರೆ ಎಂದರೊಮ್ಮೆ ಅದುವೆ ಬೇಳೆಯ ಹೆಸರಾಯಿತು
ಅವರೆ ಎಂಬ ಪ್ರತ್ಯಯವು ಹೆಸರಪಕ್ಕ ಕುಳಿತಿತು
ಅವರೆ ಎಂಬ ಸರ್ವನಾಮ ಬಹಳ ಬಳಕೆಲಿರುವುದು
ಅವರೆ ? ಪದದ ಸ್ವಾರಸ್ಯವು ಇಲ್ಲಿ ನಮಗೆ ತಿಳಿಯಿತು

ಕವಿಗಳಾಡಿ ಹೊಗಳಿದಾ ಸದಭಿರುಚಿಯ ವಾಙ್ಮಯ
ಗವಿಗಳಲ್ಲು ಗೋಪುರದಲು ಮೆರೆವ ರೀತಿ ವಿಸ್ಮಯ
ರವಿಕಾಣದ ಮೂಲೆಯನೂ ಕಾಣಿಸಿಹುದೀ ಕನ್ನಡ
ಪವಿತ್ರವು ಪರಿಶುದ್ಧವು ಪರಿಶೋಭಿಪ ಕನ್ನಡ

Friday, December 9, 2011

ಗುರು ಶ್ರೀಧರನ ಕಾಣುವಾ ಭಕುತರ ಬವಣೆ ರೋಗವ ಕಳೆಯುವಾ ....


ಗುರು ಶ್ರೀಧರನ ಕಾಣುವಾ ಭಕುತರ ಬವಣೆ ರೋಗವ ಕಳೆಯುವಾ ....

ಅನೇಕಜನ್ಮ ಸಂಪ್ರಾಪ್ತ ಕರ್ಮಬಂಧವಿದಾಹಿನೇ |
ಆತ್ಮಜ್ಞಾನ ಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||

ಶ್ರೀಧರ ಭಗವಾನರ ಬಗ್ಗೆ ಸಾಕಷ್ಟು ಇದೀಗಾಗಲೇ ಬರೆದಿದ್ದೇನೆ, ಬರೆದಷ್ಟೂ ಮೊಗೆದಷ್ಟೂ ಸಿಗುವ ದಾಖಲೆಗಳು ಮತ್ತು ಘಟನೆಗಳು ಮತ್ತೆ ಮತ್ತೆ ಬರೆಯುವಂತೇ ಪ್ರೇರೇಪಿಸುತ್ತವೆ. ಆಧುನಿಕ ವಿಜ್ಞಾನ ಕಂಡರಿಯದ ಈ ಜಗತ್ತಿನಲ್ಲಿ ಹಾಸುಹೊಕ್ಕಾಗಿರುವ ಅದೆಷ್ಟೋ ವಿಷಯಗಳು ತಪಸ್ಸಿದ್ಧಿಯಿಂದ ಹೇಗೆ ಅವರಿಗೆ ಲಭ್ಯವಾಗುತ್ತಿದ್ದವು ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಜಗದೋದ್ಧಾರಕ್ಕಾಗಿ ಜನಿಸಿದ ಹಲವು ಮಹಾತ್ಮರಲ್ಲಿ ಶ್ರೀಧರರು ಒಬ್ಬರಷ್ಟೇ? ಮನೆ ತೊರೆದು ಹೊರಟು ಅದಾಗಲೇ ಹನ್ನೆರಡು ವರ್ಷಗಳು ಗತಿಸಿಹೋಗಿದ್ದವು. ತನ್ನೊಳಗಿನ ಚೈತನ್ಯವನ್ನು ಒರೆಹಚ್ಚಿ ಮುಂದೆ ಏನುಮಾಡಬೇಕೆಂಬುದನ್ನು ಗುರು ಸಮರ್ಥ ರಾಮದಾಸರಿಂದ ಅಪ್ಪಣೆಯ ರೂಪದಲ್ಲಿ ಪಡೆಯಬೇಕೆಂದು ನಿರ್ಧರಿಸಿ ಸಜ್ಜನಗಡಕ್ಕೆ ನಡೆದಿದ್ದ ಶ್ರೀಗಳು ಸಮರ್ಥರ ಸಮಾಧಿಗೆ ವಂದಿಸಿ ಅಲ್ಲಿಂದ ಉತ್ತರ ದಿಕ್ಕಿಗೆ ಸುಮಾರು ನಾಲ್ಕು ಕಿ.ಮೀ ದೂರವಿರುವ ಕಾಡಿಗೆ ತೆರಳಿದ್ದರು. ಹುಲಿಗಳ ಆರ್ಭಟ ಬಹಳ ಇದ್ದುದರಿಂದ ರಾತ್ರಿಯಿರಲಿ ಹಗಲೇ ಆ ಕಾಡಿಗೆ ಯಾರೂ ಹೋಗಲು ಹಿಂಜರಿಯುತ್ತಿದ್ದರು.

ಕಾಡಿನ ಮಧ್ಯದಲ್ಲಿ ಒಂದು ಕೋಡುಗಲ್ಲಿನ ಮೇಲೆ ಕೂತು ತಪಸ್ಸಿಗೆ ತೊಡಗಿದ ಶ್ರೀಧರರಲ್ಲಿ ಇರುವುದು ಎರಡೇ ಆಯ್ಕೆಗಳು. ಸಮರ್ಥರು ದರ್ಶನ ಕೊಟ್ಟರೆ ಅವರು ಹೇಳಿದಂತೇ ಮಾಡುವುದು ಅಥವಾ ಸಮರ್ಥರ ದರ್ಶನ ಆಗದಿದ್ದರೆ ಹಿಮಾಲಯಕ್ಕೆ ತೆರಳಿ ಅಲ್ಲಿಯೇ ತಪಸ್ಸುಮಾಡುತ್ತಾ ಇದ್ದುಬಿಡುವುದು. ದಿನವೊಂದು ಎರಡು ಮೂರು ಕಳೆದುಹೋದವು. ಕೋಡುಗಲ್ಲಿನ ಕುಳಿತ ಜಾಗವನ್ನು ಅವಲೋಕಿಸಿದರೆ ತುಸು ಜಾರಿದರೂ ಪ್ರಪಾತವಿತ್ತು. ಕೇವಲ ಒಬ್ಬರೇ ಕುಳಿತುಕೊಳ್ಳಬಹುದಾದ ಅತಿಕಿರಿದಾದ ಜಾಗದಲ್ಲಿ ಅಹೋರಾತ್ರಿ ಮೂರುದಿನಗಳ ಕಾಲ ಶ್ರೀಧರರು ತಪಗೈದ ಮೇಲೆ ಅವರ ಹೃದಯಾಕಾಶದಲ್ಲಿ ಒಂದು ದೃಶ್ಯ ಕಂಡುಬಂತು. ಅದು ಮನಸ್ಸಿನ ಕಲ್ಪನೆಯಾಗಿರದೇ ಆತ್ಮ ಸಾಕ್ಷಾತ್ಕಾರ ಶ್ರೀಧರರಿಗೆ ಲಭಿಸಿತ್ತು. " ಇಲ್ಲಿಯೇ ಭಗವಾನ್ ಶ್ರೀಧರರು ಇದ್ದಾರೆ ಅವರನ್ನು ಮೊದಲು ಪೂಜೆಮಾಡಿ ನಂತರ ತನ್ನ ಪೂಜೆಗೆ ಬನ್ನಿ " ಎಂದು ಸಮರ್ಥರು ಅಪ್ಪಣೆಕೊಡಿಸಿದ್ದಾರೆ ಎನ್ನುತ್ತಾ ಸಮರ್ಥರ ಅರ್ಚಕರಾದ ಸಖಾರಾಮ ಭಟ್ಟರು ಗಡದ ಹಲವು ಯಾತ್ರಿಕರೊಡನೆ ಕಾಡಿಗೆ ಶ್ರೀಧರರನ್ನು ಹುಡುಕುತ್ತಾ ಬಂದಿದ್ದರು ! ಸಮರ್ಥರು ತಮಗೆ ಬಹು ಇಷ್ಟವಾದ ಭಗವಾನ್ ಶಬ್ದವನ್ನು ಶ್ರೀಧರರಿಗೆ ದಯಪಾಲಿಸಿ ತಮ್ಮ ಅರ್ಚಕರ ಬಾಯಿಂದ ಹೇಳಿಸಿದ್ದರು. ಶ್ರೀಧರರ ಬಗ್ಗೆ ಅಷ್ಟಾಗಿ ಏನೂ ಅರಿಯದ ಅರ್ಚಕರು ಹಾಗೆ ಹೇಳುತ್ತಾ ನಡೆದು ಬಂದಿದ್ದರು!

" ಶಿಷ್ಯನ ಮೇಲಿನ ವಾತ್ಸಲ್ಯದಿಂದ ಶಿಷ್ಯನ ಮಹಿಮೆಯನ್ನು ಪ್ರಕಟಗೊಳಿಸುವುದಕ್ಕಾಗಿ ಗುರುಗಳು ಹಾಗೆ ಹೇಳಿದ್ದಾರೆ, ಅವರು ನಮಗೆಲ್ಲರಿಗೂ ಗುರುಗಳು. ಅವರನ್ನೇ ಪೂಜೆ ಮಾಡೋಣ ಬನ್ನಿ " ಎನ್ನುತ್ತಾ ಕೋಡುಗಲ್ಲಿನಿಂದ ಇಳಿದು ಶ್ರೀಧರರು ಸಜ್ಜನಗಡಕ್ಕೆ ಎಲ್ಲರ ಜೊತೆ ಮರಳಿ ಸಮಾಧಿಯಲ್ಲಿ ಸೇವೆ ಸಲ್ಲಿಸಿದರು.

೧೯೪೪ ರಲ್ಲಿ ಶ್ರೀಗಳು ಮಂಗಳೂರಿನ ಕೊಂಕಣಿ ಸಾರಸ್ವತ ಬ್ರಾಹ್ಮಣರಾದ ಶೆಣೈಯವರ ಮನೆಯಲ್ಲಿ ಚಾತುರ್ಮಾಸ್ಯ ನಡೆಸುತ್ತಿದ್ದರು. ಚಾತುರ್ಮಾಸ್ಯ ಸಮಯದಲ್ಲಿ ಯಾರಿಗೂ ದರ್ಶನವಿರುತ್ತಿರಲಿಲ್ಲ. ಹತ್ತಿರದ ಒಬ್ಬರು ಶಿಷ್ಯರು ಯಾರಾದರೂ ಹಣ್ಣು -ಹಾಲು ಇಂತಹ ಅಲ್ಪ ಆಹಾರವನ್ನು ಅವರು ಸ್ನಾನಕ್ಕೆ ತೆರಳಿದಾಗ ಅವರ ಕೋಣೆಗೆ ಹೋಗಿ ಇಟ್ಟುಬರಬೇಕಾಗಿತ್ತು ಬಿಟ್ಟರೆ ಮೌಖಿಕ ಸಂಭಾಷಣೆಯಾಗಲೀ ದರ್ಶನವಾಗಲೀ ಆಗುತ್ತಿರಲಿಲ್ಲ. ಈ ರೀತಿಯಾಗಿ ಎರಡುತಿಂಗಳು ಕಠಿಣ ತಪಸ್ಸಿನ ನಂತರ ವಿಜಯದಶಮಿಯ ಹೊತ್ತಿಗೆ ಗುರುಗಳು ಕೆಲವರಿಗೆ ದರ್ಶನ ನೀಡುತ್ತಿದ್ದರು. ಚಾತುರ್ಮಾಸ್ಯದ ಸಮಯವಾದ್ದರಿಂದ ಜನ ನಾಮುಂದು ತಾಮುಂದು ಎಂದು ಸೇವೆಮಾಡಲು ಹಾತೊರೆಯುತ್ತಿದ್ದರು.

ಇಂತಹ ಸಮಯದಲ್ಲಿ ಶ್ರೀನಿವಾಸ ರಾವ್ ಎಂಬ ಸಾರಸ್ವತ ಬ್ರಾಹ್ಮಣರ ಹೆಂಡತಿಯ ಅಕ್ಕನಮಗಳಾದ ರುಕ್ಮಾಬಾಯಿ ಕ್ಷಯರೋಗದಿಂದ ಹತ್ತು ವರ್ಷಗಳಿಂದಲೂ ನರಳುತ್ತಿದ್ದಳು. ಔಷಧೋಪಚಾರದಿಂದ ವಾಸಿಯಾಗದಾಗ ಶಸ್ತ್ರ ಚಿಕಿತ್ಸೆ ಕೂಡ ನಡೆದುಹೋಯಿತು. ಆದರೂ ವಾಸಿಯಾಗದ್ದರಿಂದ ಬದುಕುವುದಿಲ್ಲವೆಂದು ನಿರ್ಧರಿಸಿದ ವೈದ್ಯರು ಆಕೆಯನ್ನು ಮನೆಗೆ ಕಳುಹಿಸಿಕೊಟ್ಟರು. ಆ ವಿಧವೆ ಮರಣ ಸಂಕಟದಲ್ಲಿ " ನನಗೆ ಇಹಲೋಕ ಯಾತ್ರೆಯ ಕೊನೇ ಘಳಿಗೆ ಇದು, ಶ್ರೀ ಭಗವಾನ್ ಶ್ರೀಧರ ಸ್ವಾಮಿಗಳ ದರ್ಶನ ಲಭಿಸಿದ್ದರೆ ಕೃತಜ್ಞಳಾಗಿ ಇಹಲೋಕಯಾತ್ರೆ ಮುಗಿಸುತ್ತಿದ್ದೆ " ಎಂದು ಹಲುಬತೊಡಗಿದ್ದಳು. ಆಗ ಅಲ್ಲಿಯೇ ಇದ್ದ ಲಕ್ಷ್ಮೀದೇವಿ ಎಂಬಾಕೆ ಆ ಸುದ್ದಿಯನ್ನು ಎರಡು ಮೈಲಿ ದೂರದಲ್ಲಿದ್ದ ಶ್ರೀಧರರಲ್ಲಿಗೆ ತೆರಳಿ ಸನ್ನಿಧಿಯಲ್ಲಿ ಬಿನ್ನವಿಸಿದಳು. ಕೂಡಲೇ ಹೊರಟು ಅಲ್ಲಿಗೆ ತೆರಳಿದ ಶ್ರೀಧರರು ರುಕ್ಮಾಬಾಯಿಗೆ ದರ್ಶನವಿತ್ತು " ನಿನಗೆ ಮುಕ್ತಿ ಕೊಡಲೇ ? " ಎಂದು ಮೂರುಬಾರಿ ಕೇಳಿದರು. ಆಕೆ " ನನಗೀಗ ಮುಕ್ತಿ ಬೇಡ, ಬಂದ ಆಪತ್ತು ನಿವಾರಿಸಿಕೊಡಿ " ಎಂದು ಬೇಡಿದಳು; ಅಜ್ಞಾನದ ಮಾನವ ಮನಸ್ಸು ಹೀಗೇ ಲೌಕಿಕವಾಗಿರುತ್ತದೆ ನೋಡಿ! " ತಥಾಸ್ತು, ಇನ್ನು ಇಪ್ಪತೆರಡು ವರ್ಷ ಬದುಕಿರು " ಎಂದು ಶ್ರೀಧರರು ಆಶೀರ್ವದಿಸಿದರು. ಆಕೆಯೆ ಬಂಧುಗಳಿಗೆ " ಗಾಬರಿಯಾಗಬೇಡಿರಿ, ತೀರ್ಥವನ್ನು ಕೊಡುತ್ತಿರಿ " ಎಂದು ಸ್ವಸ್ಥಾನಕ್ಕೆ ಮರಳಿಬಿಟ್ಟರು.

ಗುರುಗಳು ತೆರಳಿದ ಚಣಕಾಲದ ನಂತರ ಅವಳ ಪ್ರಾಣ ಹೋದಂತಾಯ್ತು. ನಿಶ್ಚೇಷ್ಟಿತಳಾಗಿ ಬಿದ್ದಿದ್ದ ಆಕೆಗೆ ಶ್ರೀಗಳ ಅಪ್ಪಣೆಯಂತೇ ತೀರ್ಥ ಕುಡಿಸುತ್ತಲೇ ಇದ್ದರು. ಸ್ವಲ್ಪ ಹೊತ್ತಿನಲ್ಲೇ ಆಕೆಗೆ ಎಚ್ಚರವಾಯ್ತು. ತೀರ್ಥವೇ ಔಷಧವಾಗಿ ಕೆಲವೇ ದಿನಗಳಲ್ಲಿ ಆಕೆ ಸಂಪೂರ್ಣ ಗುಣಮುಖಳಾಗಿ ೨೨ ವರ್ಷಗಳ ಕಾಲ ಬದುಕಿದಳು!

ನಮ್ಮೂರಕಡೆ ಕೂಲಿಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ವಿಪರೀತ ಕಾಯಿಲೆಯಾಗಿತ್ತು. ಅದು ಯಾರಿಗೂ ಮಾಹಿತಿ ಇರದ ’ಗಾಂಡಗುದ್ಗೆ’ ರೋಗ ! ಕೆಲಸಮಾಡಿ ಜೀವನ ಸಾಗಿಸುತ್ತಿದ್ದ ಆತನ ಕುಟುಂಬದಲ್ಲಿ ಆತನನ್ನೇ ಅವಲಂಬಿಸಿದ್ದ ಮೂರ್ನಾಕು ಜನ ಇದ್ದರು. ಗಟ್ಟಿಮುಟ್ಟಾಗಿ ಮಟ್ಟಸವಾದ ದೇಹವನ್ನು ಹೊಂದಿದ್ದ ಆತ ಕೆಲಸಮಾಡುವುದಿರಲಿ ಬದುಕುವುದೇ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದ. ಶ್ರೀಧರರು ಬಂದಿದ್ದಾರೆ ಎಂದು ಯಾರೋ ಹೇಳಿದ್ದನ್ನು ಕೇಳಿ ಕಷ್ಟಪಟ್ಟು ಅವರಿವರ ಹೆಗಲ ಆಸರೆಪಡೆದು ಅವರಲ್ಲಿಗೆ ಬಂದ. " ಸ್ವಾಮೀ ನನ್ನ ಗತಿ ಹೀಗಾಗಿದೆ" ಎಂದ; ಜಾಸ್ತಿ ಮಾತನಾಡಲಾರ. ಏನಾಗಿದೆ ಎಂದು ತಿಳಿದೂ ಇಲ್ಲ. ಆದರೆ ವಿಪರೀತ ತೊಂದರೆ. ಮೂತ್ರಕೋಶದ ಭಾಗ ವಿಪರೀತ ಊದಿತ್ತು. ಶರೀರದಲ್ಲೂ ಇಳಿದುಹೋಗಿದ್ದ. ಗುರುಗಳು ಅವನನ್ನು ನಖ ಶಿಖಾಂತ ಒಮ್ಮೆ ನೋಡಿದರು. ಕಮಂಡಲದಿಂದ ತೀರ್ಥ ತೆಗೆದು ಪ್ರೋಕ್ಷಿಸಿ " ತಮ್ಮಾ , ಈ ಕ್ಷಣದಿಂದ ನಿನಗೆ ಆ ರೋಗವಿಲ್ಲ ಹೋಗಿ ಬಾ ನಿನಗೆ ಒಳ್ಳೇದಾಗಲಿ " ಎಂದು ಹರಸಿ ಮಂತ್ರಾಕ್ಷತೆಯನ್ನಿತ್ತರು. ಬರುವಾಗ ಹೆಗಲ ಆಸರೆ ಪಡೆದು ಬಂದಿದ್ದ ಆತ ಮರಳುವಾಗ ತಾನೇ ನಡೆದುಹೋದ! ಕೆಲವೇ ದಿನಗಳಲ್ಲಿ ಕ್ವಿಂಟಾಲು ತೂಕದ ಸಾಮಾನು ಚೀಲಗಳನ್ನು ಹೊತ್ತ! ಅನೇಕ ವರ್ಷಗಳ ಕಾಲ ಅವನ ಆಯುಷ್ಯವಿರುವವರೆಗೊ ನೆಮ್ಮದಿಯಿಂದ ಬದುಕಿದ.

ಇಂದು ಶ್ರೀಧರ-ದತ್ತ ಜಯಂತಿ! ಅಂದು ದತ್ತಜಯಂತಿಯ ದಿನ ದೇಗಲೂರು ನಾರಾಯಣರಾಯರು-ಕಮಲಮ್ಮ ದಂಪತಿಯ ಮಗನಾಗಿ ದತ್ತನ ವರಪುತ್ರನಾಗಿ, ದತ್ತಪಲ್ಲಕ್ಕಿಯು ಲಾಡ್ ಚಿಂಚೋಳಿಯ ಮನೆಯೆದುರು ಬಂದಾಗಲೇ ಜನಿಸಿದ್ದ ಶ್ರೀಧರರು ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಮಾನವ ಸಹಜದ್ದಲ್ಲ! ಮಹಾತ್ಮರ ಜನ್ಮ ಮತ್ತು ಉದ್ದೇಶ ಇದರಿಂದಲೇ ವ್ಯಕ್ತವಾಗುತ್ತದೆ; ಅವರ ಜೀವನವೇ ಒಂದು ಸಂದೇಶವಾಗುತ್ತದೆ. ಸಾಕ್ಷಾತ್ ದತ್ತಾವತಾರಿಯಾದ ಶ್ರೀಗಳ ಭಾವಚಿತ್ರವೊಂದರಲ್ಲಿ ಕಿವಿಯಲ್ಲಿ ಈಶ್ವರ, ಹಣೆಯ ಭಾಗದಲ್ಲಿ ಶಂಖ, ಕೈಲಿ ತ್ರಿಶೂಲ ಇತ್ಯಾದಿ ಕುರುಹುಗಳು ಕಾಣಿಸುವುದನ್ನು ಗುರುತಿಸಬಹುದಾಗಿದೆ. ಗುರುಗಳು ಅಂದು ಹೇಳಿಕೊಟ್ಟ ಗುರುಮಂತ್ರದೊಂದಿಗೆ ಒಮ್ಮೆ ನಿಮ್ಮೆಲ್ಲರ ಪರವಾಗಿ ನಮಿಸುತ್ತೇನೆ :

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ |
ಸ್ವಾನಂದಾಮೃತತೃಪ್ತಾಯ ಶ್ರೀಧರಾಯ ನಮೋ ನಮಃ ||

Wednesday, December 7, 2011

ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !


ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !

ನಮ್ಮೂರ ಹತ್ತಿರದಲ್ಲಿ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ. ಬಹಳ ಪುರಾತನ ಕಾಲದಿಂದ ನಂಬಿ ನಡೆತಂದ ಆಚರಣೆ, ಸಂಪ್ರದಾಯಗಳು. ಅದೇ ನಿಂಬಿಕೆಗೆ ಇಂಬುಕೊಡುವ ಶ್ರೀಕುಮಾರ ಮಕ್ಕಳಾಗದಿದ್ದವರಿಗೂ ಸಂತಾನಫಲ ಕೊಡುವಲ್ಲಿ ಸಫಲ ! ಚಿಕ್ಕ ಚಿಕ್ಕ ಬೆಳ್ಳಿಯ ತೊಟ್ಟಿಲ ಹರಕೆ, ನಾಗರ ಹೆಡೆ ಹರಕೆ ಹೀಗೇ ಹರಕೆ ಹಲವು ವಿಧ.

|| ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ||

ಎನ್ನುವ ಗೀತೆಯೆ ಉಕ್ತಿಯಂತೇ ಯಾವರೂಪದಿಂದ ಹರಕೆ ಸಲ್ಲಿಸಿದರು ಎಂಬುದಕ್ಕಿಂತ ಭಕ್ತಿ, ಶ್ರದ್ಧೆ ಮತ್ತು ಅಚಲ ನಂಬಿಕೆಯೇ ಅಲ್ಲಿ ಪ್ರಮುಖವಾಗುತ್ತದೆ. ಸಾವಿರಾರು ನಾಗರ ಕಲ್ಲುಗಳು ಪ್ರತಿಷ್ಠಾಪಿತಗೊಂಡಿವೆ, ಎಷ್ಟೋ ಹಳೆಯ ಮುಕ್ಕಾದ ಮುರುಡಾದ ಭಿನ್ನವಾದ ನಾಗರಕಲ್ಲುಗಳು ಮುಂದಿರುವ ಪುಷ್ಕರಣಿಯಲ್ಲಿ ಜಲಾಧಿವಾಸವಾಗಿವೆ. ಮೊನ್ನೆ ಚಂಪಾ ಷಷ್ಠಿಯಂದು ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ಇತ್ತಿದ್ದಾರೆ; ಹುಂಡಿಗೆ ಕಾಣಿಕೆ ಹಾಕಿದ್ದಾರೆ, ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ರಥೋತ್ಸವ ನಡೆಯುವುದಿಲ್ಲ, ಯಾಕೆಂದರೆ ದೇವಸ್ಥಾನ ಇರುವಲ್ಲಿ ಬಹಳ ಅಗಲವಾದ ವಿಸ್ತಾರವಾದ ಜಾಗವಿಲ್ಲ. ಅಡಕೆ ತೋಟದ ಒಂದು ಪಾರ್ಶ್ವದಲ್ಲಿ ಇರುವ ದೇವಸ್ಥಾನಕ್ಕೆ ಮೊದಲು ಕಾಲು ದಾರಿಯಲ್ಲೇ ಹೋಗಬೇಕಿತ್ತು-ಈಗ ವಾಹನ ಹೋಗುವಂತೇ ರಸ್ತೆ ಮಾಡಿದ್ದಾರೆ. ಅಲ್ಲಿ ಮಡೆಸ್ನಾನದಂತಹ ಆಚರಣೆ ನಡೆಯುವುದಿಲ್ಲ. ಆದರೆ ವಿಜೃಂಭಣೆಯ ಪಲ್ಲಕ್ಕಿ ಉತ್ಸವ, ಅಷ್ಟಾಂಗಸೇವೆ, ಪಂಚವಾದ್ಯ, ಫಳ, ನಗಾರಿ, ಮೋರಿ [ಕಹಳೆ], ಛತ್ರ-ಚಾಮರ, ಶಂಖ-ಜಾಗಟೆ ಇವೆಲ್ಲವುಗಳ ಸೇವೆ ಆಗಾಗ ಇದ್ದೇ ಇದೆ. ತ್ರಿಕಾಲ ಆಗಮೋಕ್ತ ಪೂಜೆ ನಡೆಸಲ್ಪಡುತ್ತಡುವ ಈ ಜಾಗ ಹಿಂದೆ ನಾರದರಿಂದ ಪ್ರತಿಷ್ಠಿತವಾಗಿದ್ದ ಮೂರ್ತಿಯನ್ನು ಹೊಂದಿತ್ತು ಎಂಬುದು ಐತಿಹ್ಯ; ಮೂರ್ತಿ ಹಳೆಯದಾಗಿ ಸ್ವಲ್ಪ ಭಿನ್ನವಾಗಿದ್ದರಿಂದ ಆಡಳ್ತೆಯ ಹತ್ತುಸಮಸ್ತರ ವಿನಂತಿಯ ಮೇರೆಗೆ ಐದು ವರ್ಷಗಳ ಹಿಂದೆ ಹೊಸ ವಿಗ್ರಹವನ್ನು ಶ್ರೀರಾಮಚಂದ್ರಾಪುರ ಮಠದ ಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಿದ್ದಾರೆ.

ಇಲ್ಲಿ ಮಡಿ ಎಂದರೆ ಮಡಿ. ಸ್ವಚ್ಛತೆಯಲ್ಲಿ ಕೊರತೆಕಂಡರೂ ಅಥವಾ ಮಡಿಯಲ್ಲಿ ತುಸು ವ್ಯತ್ಯಾಸವಾದರೂ ಹಾವು ಕಾಣುವುದನ್ನು ನೋಡಬಹುದಾಗಿದೆ. ಇದಕ್ಕಿಂತಾ ವಿಶೇಷ ಎಂದರೆ ಈ ಸುಬ್ಬಪ್ಪನ ಅಭಿಷೇಕಕ್ಕೆ ಒಂದು ಬಾವಿ ಇದೆ. ಅದರ ಕತ್ತದ ಹಗ್ಗ ಸುಮಾರು ಉದ್ದದ್ದು. ಆ ಹಗ್ಗವನ್ನು ಆ ಗ್ರಾಮದ ಕ್ರೈಸ್ತ ಕುಟುಂಬವೊಂದು ಹೊಸೆದುಕೊಡುತ್ತದೆ. ಹಗ್ಗ ಲಡ್ಡಾಗುತ್ತಿರುವ ಹಾಗೇ ಆ ಕ್ರೈಸ್ತರ ಮನೆಯ ವಠಾರದಲ್ಲಿ ಬುಸ್ಸಪ್ಪ ಕಾಣಿಸಿಕೊಳ್ಳುತ್ತದೆ! " ಹೋಗಪ್ಪಾ ಅರ್ಥವಾಯ್ತು ತಂದುಕೊಡ್ತೇವೆ " ಅಂದರೆ ಸಾಕು ಹಾವು ಮಾಯ! ಅದಾದ ದಿನವೊಪ್ಪತ್ತಿನಲ್ಲಿ ಹಗ್ಗವನ್ನು ಅವರು ತಂದು ಸೇವೆ ಸಲ್ಲಿಸಿ ಹೋಗುತ್ತಾರೆ. ಇದು ಇವತ್ತಿಗೂ ನಡೆಯುತ್ತಿರುವ ಚಮತ್ಕಾರ. ಹಾಗಂತ ಇದುವರೆಗೂ ಆಲ್ಲಿನ ಸುತ್ತಮುತ್ತಲ ಜಾಗಗಳಲ್ಲಿ ಹಾವು ಕಚ್ಚಿ ಸತ್ತರು ಎಂಬ ದಾಖಲೆ ಇಲ್ಲ. ಹಾಗೆಲ್ಲಾ ಕಚ್ಚುವುದೂ ಇಲ್ಲ, ಹಾವುಗಳ ಇರುವಿಕೆಯೇ ಕಾಣಿಸುವುದಿಲ್ಲ, ಆದರೂ ಮೈಲಿಗೆಯಾದರೆ, ಅಶುಚಿಯಾದರೆ ಹಾವುಗಳ ಒಡ್ಡೋಲಗವೇ ಎದ್ದು ಬರುತ್ತದೆ! ಇದು ಯಾವ ನಂಬುಗೆ ? ಇದು ಯಾವ ಜೀವ ಅಥವಾ ರಸಾಯನ ವಿಜ್ಞಾನ ?

ಮಡೆಸ್ನಾನದ ಬಗ್ಗೆ ಒಂದೆರಡು ಮಾತು :

ಕರ್ನಾಟಕದಲ್ಲಿ ಬ್ರಾಹ್ಮಣರ ಮೇಲೆ ’ಮಡೆಸ್ನಾನ’ದ ಆರೋಪ ಹೊರಿಸುತ್ತಾ ಹಲವು ಲೇಖನಗಳು ಪ್ರಕಟಗೊಳ್ಳುತ್ತಿವೆ. ಕರ್ನಾಟಕದಲ್ಲಿ ಕೇವಲ ೯ % ಬ್ರಾಹ್ಮಣರಿದ್ದಾರೆ, ಅದೂ ದಿನಗಳೆದಂತೇ ಸಂಖ್ಯೆ ಕಮ್ಮಿಯಾಗುತ್ತಿದೆ! ನಶಿಸಿ ಹೋಗಬಹುದಾದ ಸಂತತಿಗಳಲ್ಲಿ ಬ್ರಾಹ್ಮಣರೂ ಸೇರಿದರೆ ಆಶ್ಚರ್ಯವಲ್ಲ. ಈಗೀಗ ಜಾತೀ ರಾಜಕಾರಣ ಹೆಚ್ಚಿ ಬಲಗೈಯ್ಯಲ್ಲಿ ಕೋಳೀ ತಿನ್ನುತ್ತಾ ಎಡಗೈಯ್ಯಲ್ಲಿ ಪೂಜೆ ಮಾಡುವ ಹೊಸ ಪೀಳಿಗೆಗೆ ನಾಂದಿ ಹಾಡಿ ಎಂದು ಇತರೆ ವರ್ಗದವರು ಅಧಿಕಾರವಾಣಿಯಲ್ಲಿ ಅಪ್ಪಣೆ ಕೊಡಿಸುತ್ತಿದ್ದಾರೆ; ಯಾಕೆಂದರೆ ಅಧಿಕಾರ ಅವರ ಕೈಲಿದೆ! ಮಡೆ ಸ್ನಾನ ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದಲ್ಲ, ಬದಲಿಗೆ ಬ್ರಾಹ್ಮಣ್ಯದ ಮೇಲಿನ ಭಕ್ತಿಯಿಂದ, ಕಳಕಳಿಯಿಂದ ಎಲ್ಲಾ ವರ್ಗದ ಭಕ್ತರು ತಾವೇ ಕಂಡುಕೊಂಡ ಮಾರ್ಗ ಅದು. ಅದು ಅಲ್ಲಿ ಬಿಟ್ಟು ಇನ್ನೆಲ್ಲೂ ಇಲ್ಲ! ಬೇಕೆಂದರೆ ನಡೆಸಲಿ ಬೇಡವೆಂದರೆ ನಿಲ್ಲಿಸಲಿ, ಅಲ್ಲಿ ಬ್ರಾಹ್ಮಣರ ಪಾತ್ರವೇನೂ ಇರುವುದಿಲ್ಲ. ಮಡೆಸ್ನಾನ ಮಾಡುವ ಕೆಲವು ಪಂಗಡಗಳಲ್ಲೇ ಕೆಲವರು ಈ ರೀತಿ ಕಿಡಿ ಹೊತ್ತಿಸುತ್ತಿದ್ದಾರೆ.

ಬ್ರಾಹ್ಮಣರು ಮೊದಲಿನಿಂದಲೂ ಬಡವರೇ, ರಾಜಾಶ್ರಯ ಪಡೆದವರು, ಅವರಿಂದ ಅನ್ಯಾಯವಾಗಿದೆ ಎಂಬುದು ಕಪೋಲ ಕಲ್ಪಿತ ಕಥೆ! ಹಳೇಕಾಲದ ಯಾವುದೇ ಮಕ್ಕಳ ಕಥೆಯನ್ನು ತೆಗೆದುಕೊಳ್ಳಿ ’ಒಂದಲ್ಲಾ ಒಂದೂರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದನಂತೆ’ ಎಂದೇ ಆರಂಭಗೊಳ್ಳುತ್ತದೆ, ಅದಕ್ಕೆ ಅದೇ ಸಾಕ್ಷಿ! ಇದಕ್ಕೆ ಮಹಾಭಾರತದ ಕೃಷ್ಣ-ಕುಚೇಲರ ಕಥೆ ಕೂಡ ಆಧಾರವಾಗುತ್ತದೆ. ಬ್ರಾಹ್ಮಣರಲ್ಲಿ ಅಂಥಾ ಅನ್ಯಾಯದ ಬುದ್ಧಿ ಇದ್ದಿದ್ದರೆ ಕ್ಷತ್ರಿಯನಾದ ಶ್ರೀರಾಮನನ್ನೂ ಯಾದವನಾದ ಶ್ರೀಕೃಷ್ಣನನ್ನೂ ದೇವರೆಂದು ಪೂಜಿಸುತ್ತಿರಲಿಲ್ಲ. ರಾಜಕೀಯದ ಹಲವು ಸುಳಿಗಳು ಮಧ್ಯೆ ಹೆಡೆಯಾಡಿ ಕಾಲಗತಿಯಲ್ಲಿ ಕೇವಲ ವೇದ ಬೋಧಿಸಲಿಲ್ಲ ಎಂಬ ಸಿಟ್ಟಿನಿಂದ ಹುಟ್ಟಿದ ಕಥೆ ಅದು. ಇಂದಿಗೂ ಬಹುತೇಕರು ಸಂಸ್ಕೃತವನ್ನು ಹೀಗಳೆಯುತ್ತಾರೆ, " ಓದಿ ಬನ್ನಿ..." ಎಂದು ನಾವು ವೇದಸುಧೆ ಆರಂಭಿಸಿದ್ದೇವೆ, ಮುಂಜಿಮಾಡುತ್ತೇವೆ, ಆದರೆ ಪ್ರಥಮವಾಗಿ ಅವರು ನಮ್ಮ ನಿಯಮಗಳಲ್ಲಿ ಒಂದಾದ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ! ಇದು ಎಲ್ಲರಿಂದಲೂ ಸಾಧ್ಯವೇ ? ನಾನೇ ನನ್ನ ಎಷ್ಟೋ ಪ್ರಬಂಧಗಳಲ್ಲಿ ನಮ್ಮನೆಯಲ್ಲಿ ಆಳುಕಳುಗಳಾಗಿದ್ದ ಎಷ್ಟೋ ಜನಾಂಗಗಳ ಜನರುಗಳ ಬಗ್ಗೆ ನಮಗಿದ್ದ ಗೌರವ, ಪ್ರೀತಿಯನ್ನು ಹಂಚಿಕೊಂಡಿದ್ದೇನೆ, ಅದು ಭಗವಂತನ ಸಾಕ್ಷಿಯಾಗಿ ಸತ್ಯವಾದದ್ದೇ ಹೊರತು ನಾನು ಕಟ್ಟಿಬರೆದಿದ್ದಲ್ಲ. ನಮ್ಮಂತಹ ಅದೆಷ್ಟೋ ಜನ ಹಾಗೇ ನಡೆದರು. ಯಾರೋ ಎಲ್ಲೋ ಒಂದಿಬ್ಬರು ವಿಚಿತ್ರವಾಗಿ ನಡೆದುಕೊಂಡರೆ ಇಡೀ ಬ್ರಾಹ್ಮಣಕುಲವನ್ನೇ ವಾಚಾಮಗೋಚರವಾಗಿ ಹಿಗ್ಗಾಮುಗ್ಗಾ ಜಗ್ಗಾಡುವುದು ಖೇದಕರ. ಇದರ ಬಗ್ಗೆ ಇತರೆ ಜನಾಂಗಗಳು ತಿಳಿದು ಮಾತಾಡಬೇಕಾದ ಅಗತ್ಯ ಇದೆ.

ಮಹಾರಾಷ್ಟ್ರದ ಪಂಢರಾಪುರದಲ್ಲಿ ಮಠವೊಂದರ ಎದುರುಗಡೆ ಬಿದ್ದ ಎಂಜಲು ಎಲೆಗಳ ಮೇಲೆ ಅಳಿದುಳಿದ ಕೂಳಿನ ಕಾಳುಗಳನ್ನು ಯುವಕನೊಬ್ಬ ತಿನ್ನುತ್ತಿದ್ದ, ಬಹಳಜನ ಉತ್ಸುಕರಾಗಿ ನೋಡುತ್ತಿರುವಂತೆಯೇ ಆತ ಹಸುಗಳಿಗಾಗಿ ರಸ್ತೆಬದಿಯಲ್ಲಿಟ್ಟ ನೀರನ್ನೇ ಕುಡಿದ! ಜನ ಜಮಾಯಿಸಿದರು. ಆತ ಜಾಸ್ತಿ ಮಾತಾಡಲೊಲ್ಲ. ಹೆಸರು ಕೇಳಿದರು, ಆತ ಸ್ಪಷ್ಟವಾಗಿ ಏನನ್ನೂ ಹೇಳದೇ ಯಾರದೋ ಕೈಲಿದ್ದ ತಾಮ್ರದ ವಸ್ತುವಿನೆಡೆಗೆ ಕೈ ತೋರಿಸಿದ. ಯಾರಿಗೂ ಅರ್ಥವಾಗದಿದ್ದಾಗ ಮರಾಠಿಯಲ್ಲಿ " ನರ್ಮದಾ ನದಿಯ ಮಧ್ಯದಲ್ಲಿರುವ ಗಜಾನನ ಗುಡಿಯೊಂದರ ಹೆಸರೆಂ"ದ. ಜನ ಆತನನ್ನು ಅಲ್ಲಿಂದ ಗಜಾನನ ಮಹಾರಾಜ್ ಎಂತಲೇ ಕರೆದರು. ಆತ ಬ್ರಾಹ್ಮಣ ಕುಲದಿಂದಲೇ ಬಂದವನೆಂಬುದು ಆಮೇಲೆ ತಿಳಿದದ್ದು! ಅಂತಹ ಗಜಾನನ ಮಹಾರಾಜ್ ಬಹುದೊಡ್ಡ ಸಂತರಾಗಿ, ಅವಧೂತರಾಗಿ ಅನೇಕರ ಕಷ್ಟಗಳನ್ನು ನೀಗಿದರು. ಇದು ಇತಿಹಾಸ. ಅಂದು ಎಲ್ಲೋ ಬಿದ್ದ ಎಂಜಲೆಲೆಯ ಕೂಳನ್ನು ತಿಂದ ಅಂತಹ ಗಜಾನನ ಮಹಾರಾಜರಿಗೆ ಯಾವ ಕಾಯಿಲೆಯೂ ಅಂಟಲಿಲ್ಲ, ಇಂದು ಮಡೆಸ್ನಾನದಲ್ಲಿ ಎಂಜಲೆಲೆಯಲ್ಲಿರಬಹುದಾದ ಬ್ಯಾಕ್ಟೀರಿಯಾಗಳು ಹಾಗೆ ಮಡೆಸ್ನಾನ ಮಾಡುವವರಿಗೆ ಬಾಧಿಸಬಹುದು ಎಂಬುದು ಹಲವರ ಇರಾದೆ! ಹೊಟ್ಟೆ ಕೆಟ್ಟು ಆಪರೇಷನ್‍ಗೆ ತೆರಳಿದ್ದ ಬಾಲಕನೊಬ್ಬನಿಗೆ ವೈದ್ಯರು ಕೋಡಬೇಡವೆಂದರೂ ಆತನ ತಂದೆ ತಿರುಪತಿ ಲಾಡು ಕೊಟ್ಟಿದ್ದು ಆ ಪ್ರಸಾದದಿಂದ ಆತನಿಗೆ ಏನೂ ತೊಂದರೆಯಾಗದೇ ಸಲೀಸಾಗಿ ಆಪರೇಷನ್ ಮುಗಿಸಿ ಮನೆಗೆ ಮರಳಿದ್ದನ್ನು ನಾನೆಲ್ಲೋ ಓದಿದ್ದೇನೆ. ಹಲವಾರು ಜನ ಸ್ನಾನಮಮಾಡುವ ಪುಷ್ಕರಣಿಗಳಲ್ಲಿ ಸ್ನಾತರಾದ ಅದೆಷ್ಟೋ ಮಂದಿ ಇದ್ದಾರೆ-ಎಲ್ಲರಿಗೂ ಒಳಿತಾಗಿದೆ ವಿನಃ ಚರ್ಮರೋಗ ಬಾಧಿಸಲಿಲ್ಲ. ಅದು ಅಲ್ಲಲ್ಲಿನ ಕ್ಷೇತ್ರಾಧಿಪನ ಮಹಿಮೆ!! ಎಲ್ಲಿ ಭಕ್ತಿಯ ಪಾರಮ್ಯ ಇರುತ್ತದೋ ಅಲ್ಲಿ ದೇವರು ಭಕ್ತಾಧೀನನಾಗುತ್ತಾನೆ ಎಂಬುದಕ್ಕೆ ಇವೇ ಸಾಕ್ಷಿಗಳು.

ಕುಕ್ಕೆಯ ಸ್ಥಾನಿಕರಾದ ಮಲೆಕುಡಿ ಜನಾಂಗದವರು ಯಾವುದೋ ಕಾಲದಲ್ಲಿ ಅದನ್ನು ಆರಂಭಿಸಿದ್ದಿರಬೇಕು. ಅವರ ಭಕ್ತಿಗೆ ಅವರು ಹಾಗೆ ಮಾಡಿದ್ದನ್ನು ಕಂಡ ಮತ್ತಿನ್ಯಾರೋ ಬೇರೇ ಜನಾಂಗದ ಭಕ್ತರು ತಾವೂ ಹಾಗೇ ಆರಂಭಿಸಿದರು. ಶತಮಾನಗಳಿಂದ ನಡೆಯುತ್ತಿರುವ ಅದಕ್ಕೆ ಯಾರೋ ಒಂದಷ್ಟು ವಿರೋಧ ವ್ಯಕ್ತಪಡಿಸಿದರು. ನಾನು ಮಡೆಸ್ನಾನವನ್ನು ಯಾವ ರೀತಿಯಲ್ಲೂ ಯಾರ ಮೇಲೂ ಹೇರುವುದೂ ಇಲ್ಲ,ಸಮರ್ಥಿಸುವುದೂ ಇಲ್ಲ, ಅಲ್ಲಿನವರ ಹಕ್ಕಿಗೆ ಚ್ಯುತಿಯನ್ನೂ ತರಬಯಸುವುದೂ ಇಲ್ಲ. ಬದಲಾಗಿ ಇದು ಬ್ರಾಹ್ಮಣರ ಅವಹೇಳನದ ಕುರಿತು ಮಾಡಿದ ಒಂದು ಜಿಜ್ಞಾಸೆ. ಮಡೆಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾ ಹಬ್ಬುತ್ತದಂತೆ ಎಂದು ಪತ್ರಿಕೆಗಳಲ್ಲಿ ಓದಿದ್ದಕ್ಕೆ ಕೆಲವು ನಂಬಿಕೆಯ ಉದಾರಹಣೆ ಮಂಡಿಸಿದೆ ಅಷ್ಟೇ. ನಿಶ್ಚಿತವಾಗಿ ಹೇಳುತ್ತೇನೆ ಕೇಳಿ -- ಮಡೆಸ್ನಾನ ಬ್ರಾಹ್ಮಣರು ಒತ್ತಾಯಿಸಿ ಆರಂಭಿಸಿದ್ದಲ್ಲ, ಅಲ್ಲೂ ಅಲ್ಲಿನ ಮಲೆಕುಡಿ ಎಂಬ ಜನಾಂಗದವರಿಂದ ಮೊದಲು ಆಚರಿಸಲ್ಪಟ್ಟು ಆ ನಂತರ ಬ್ರಾಹ್ಮಣಭಕ್ತರೂ ಸೇರಿದಂತೇ ಬಹಳ ಜನ ನಡೆಸಿಬಂದಿದ್ದಾರೆ.

ಧರ್ಮಸ್ಥಳದ ಹೆಗ್ಗಡೆಯವರು ಸಾರಾಸಗಾಟಾಗಿ ಕುಕ್ಕೆಯಲ್ಲಿ ನಡೆಯುತ್ತಿರುವುದೆಲ್ಲಾ ಬರೇ ಮೂಢನಂಬಿಕೆಯಮೇಲೇ ಎಂದು ಅಪ್ಪಣೆಕೊಡಿಸಿಬಿಟ್ಟರು ! ಸ್ವಾಮೀ ಹೆಗ್ಗಡೆಯವರೇ, ಧರ್ಮಸ್ಥಳದಲ್ಲಿ ಧರ್ಮದೇವತೆಗಳು ಎನಿಸಿಕೊಂಡು ನೀವು ತೋರುವ ನಾಕು ಭೂತಗಳು ಇದ್ದಾವೆ ಅವು ನಿಮಗೆ ನುಡಿಗಟ್ಟು ಕೊಡ್ತಾವೆ ಮತ್ತು ನೀವದನ್ನು ಪಾಲಿಸಬೇಕು ಎಂಬುದಾಗಿ ಹೇಳುತ್ತೀರಿ, ’ಮಹಾನಡಾವಳಿ’ ಎಂದು ನಡೆಸುತ್ತೀರಿ. ಇದೆಕ್ಕೆಲ್ಲಾ ವೈಜ್ಞಾನಿಕ ತಳಹದಿ ಇದೆಯೇ ? ಅಥವಾ ನಿಮ್ಮ ಹಾಗೂ ಭಕ್ತರ ನಂಬಿಕೆಯೇ ಇದಕ್ಕೆ ತಳಹದಿಯೆ? ಒಪ್ಪಿಕೊಳ್ಳೋಣ ಜನತೆಗೆ ನೀವು ಬಹಳಷ್ಟು ಮಾರ್ಗದರ್ಶನ ಮಾಡಿದ್ದೀರಿ, ಹಲವಾರು ರೀತಿಯ ಯೋಜನೆ-ಆಯೋಜನೆಗಳನ್ನು ಕಾರ್ಯಗತ ಗೊಳಿಸಿ ಅನೇಕರು ಅನ್ನಕಂಡುಕೊಳ್ಳುವಲ್ಲಿ ಅನುವಾಗಿದ್ದೀರಿ ಇದೆಲ್ಲಾ ಸರಿಯೇ ಇದೆ. ಆದರೆ ನಿಮ್ಮ ಬಗೆಗೂ ಅಮೃತ ಸೋಮೇಶ್ವರರು ಒಮ್ಮೆ ಅಪಸ್ವರದಲ್ಲಿ ರಾಗ ಹಾಡಿದ್ದರು ಎಂಬುದನ್ನು ನಾನು ಕೇಳಿಬಲ್ಲೆ. ಅಲ್ಲೆಲ್ಲೋ ಯಾರೋ ಹೈಸ್ಕೂಲು ಶಿಕ್ಷಕಿಯ ವಿರುದ್ಧ ನೀವು ನಡೆದುಕೊಂಡಿದ್ದು ಅದು ಮತ್ತಿನ್ನೇನೋ ಆಗಿದ್ದು ಹೀಗೇ.

ಹಿಂದಿನ ಧರ್ಮದರ್ಶಿಗಳಾಗಿದ್ದ ನಿಮ್ಮ ತಂದೆ ರತ್ನವರ್ಮರ ಬಗ್ಗೆ ಬಣ್ಣಬಣ್ಣದ ಕಥೆಗಳೇ ಇವೆ. ಊರಕಡೆ ಜನ ಈಗಲೂ ಹಲವುಮಾತನಾಡುತ್ತಾರೆ, ಅದು ಬಿಡಿ. ಆದರೂ ಪ್ರಸಕ್ತ ನೀವು ಸುಧಾರಿತ ಜನಾಂಗಕ್ಕೆ ಜನರಿಂದ ಬಂದ ಹಣವನ್ನೇ ಸದುಪಯೋಗ ಪಡಿಸುತ್ತಿರುವುದರಿಂದ ಜನ ನಿಮ್ಮನ್ನು ಮೆಚ್ಚಿದ್ದಾರೆ; ಕೆಲವರು ಪೂಜಿಸಿಯೂ ಇದ್ದಾರೆ! ಅದೂ ನಿಮ್ಮ ಮೇಲಿನ ನಂಬಿಕೆಯಿಂದಲೇ. ಇವತ್ತು ಧರ್ಮಕ್ಷೇತ್ರಗಳಲ್ಲಿ ಧರ್ಮದರ್ಶಿಗಳ ಕುಟುಂಬಿಕರು ಯಾವ ಯಾವ ರೀತಿ ಅನೈತಿಕ ಚಟುವಟಿಕೆಗಳಲ್ಲಿ ಧರ್ಮದ ಮುಸುಕಿನಲ್ಲಿ ತೊಡಗಿರುತ್ತಾರೆ ಎಂಬುದನ್ನೂ ಕೆಲವು ಜನ ನನ್ನಂಥವರು ಇಣುಕಿ ನೋಡುತ್ತಾರೆ; ಬಾವಿಯ ತಳದಲ್ಲಿ ಕೆಸರಿರುವುದು ಸಹಜ ಆದರೆ ಕುಡಿಯಲು ನಮಗದು ಶುದ್ಧಜಲ ಪೂರೈಸುತ್ತಿದೆಯಲ್ಲಾ ಎಂಬುದು ನಮಗೆ ಬೇಕಾದದ್ದು.

ಜಗತ್ತು ನಡೆಯುತ್ತಿರುವುದೇ ನಂಬಿಕೆಯಮೇಲೆ. ಗಂಡ-ಹೆಂಡತಿಯನ್ನೂ ಹೆಂಡತಿ-ಗಂಡನನ್ನೂ, ಪ್ರಜೆಗಳು ಸರ್ಕಾರವನ್ನೂ, ಸರ್ಕಾರ ಪ್ರಜೆಗಳನ್ನೂ ಹೀಗೇ ಎಲ್ಲವೂ ಒಂದನ್ನೊಂದು ನಂಬಿಯೇ ನಡೆಯುವುದಾಗಿದೆ. ಯಾರಿಗೆ ಎಷ್ಟು ಆಯುಸ್ಸು, ಯಾವದಿನ ಎಷ್ಟು ಹೊತ್ತಿನವರೆಗೆ ಬದುಕುತ್ತಾರೆ ಎಂಬುದು ಗೊತ್ತಿಲ್ಲಾ ಆದರೂ ಹುಟ್ಟುತ್ತಾರೆ, ಬೆಳೆಯುತ್ತಾರೆ, ಮದುವೆ-ಮನಕಾಲ ನಡೆಯುತ್ತದೆ ಇದೆಲ್ಲಾ ಆಗುವುದು ನಂಬಿಕೆಯೆಮೇಲೆಯೇ. ನಾಳೆ ಎಲ್ಲಿ ಭೂಕಂಪವಾಗುತ್ತದೆ, ಎಲ್ಲಿ ಸುನಾಮಿ ಬರುತ್ತದೆ, ಎಲ್ಲಿ ಚಂಡಮಾರುತೆ ಬೀಸುತ್ತದೆ, ಎಲ್ಲಿ ಅಪಘಾತವಾಗುತ್ತದೆ ಎಂಬುದು ಯಾರಿಗೂ ಗೋಚರವಲ್ಲ! ಯಾವ ಹೊತ್ತಿಗೆ ಜಗತ್ತಿನ ಯಾವುದೇ ಭಾಗದಲ್ಲೊ ಏನಾದರೂ ಘಟಿಸಬಹುದು ಅಲ್ಲವೇ?

ಈ ದೃಷ್ಟಿಯಿಂದ ಹೇಳುವುದಾದರೆ ಕುಕ್ಕೆಯಲ್ಲಿ ನಡೆಯುವುದೆಲ್ಲಾ ಬರೇ ಮೂಢನಂಬುಗೆ ಎಂಬ ಮಾತು ಹಾಸ್ಯಾಸ್ಪದವಾಗುವುದಿಲ್ಲವೇ? ಮಡೆಸ್ನಾನ ಬಿಡಿ ಅದು ಮೂರುದಿನದ್ದು-ಆಗುತ್ತದೋ ಹೋಗುತ್ತದೋ ಅದು ಶಾಸ್ತ್ರೋಕ್ತವೇನಲ್ಲ, ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದೂ ಅಲ್ಲ. ಆದರೆ ಅಸಂಖ್ಯ ಭಕ್ತರಿಗೆ ಅತಿಕಡಿಮೆ ವೆಚ್ಚದಲ್ಲಿ ನಾಗದೋಷ ಪರಿಹಾರಕ್ಕೆ ಅಲ್ಲಿ ಆಶ್ಲೇಷಾ ಬಲಿ ನಡೆಸುತ್ತಾರೆ. ಹಲವುವಿಧದ ಸೇವೆ ನಡೆಸುತ್ತಾರೆ. ವಾಸ್ತವವಾಗಿ ನಿಮ್ಮ ಧರ್ಮಸ್ಥಳವೂ ಸೇರಿದಂತೇ ಈ ಭೂಮಿಯನ್ನು ಹೊತ್ತಿರುವುದೇ ಆದಿಶೇಷ ಎಂಬ ಕಲ್ಪನೆ ಇದೆಯಲ್ಲವೇ? ಆಗಾಗ ಭೂಮಿ ಅಲ್ಲಲ್ಲಿ ಅಲ್ಲಲ್ಲಿ ಬಿರಿಯುವುದು, ಜ್ವಾಲಾಮುಖಿ ಭೋರ್ಗರೆಯುವುದು, ಭೂಮಿಯಲ್ಲಿ ವೈಜ್ಞಾನಿಕವಾಗಿ ಗುರ್ತಿಸಲ್ಪಟ್ಟ ೭ ಪ್ಲೇಟುಗಳುಗಳಲ್ಲಿ ಸ್ಥಾನದ ಹೊಂದಾಣಿಕೆಯಲ್ಲಿ ತೊಂದರೆಯಾಗಿ ಭೂಕಂಪವಾಗುವುದು ಇವೆಲ್ಲಕ್ಕೂ ಹಿಂದೆ ಯಾವ ರಹಸ್ಯವಿದೆ ಎಂಬುದನ್ನು ನಾವು ಬಲ್ಲೆವೇನು ? ಅದಕ್ಕೆ ಸಂಪೂರ್ಣ ಪರಿಹಾರ ಕೊಡಲು ನಮ್ಮಿಂದ ಸಾಧ್ಯವೇ ? ಒಂದುಕಾಲದಲ್ಲಿ ಇಡೀ ಭೂಮಂಡಲ ನಾಗಾಧಿಪತ್ಯವನ್ನೇ ಹೊಂದಿತ್ತು, ಆಮೇಲೆ ನಾಗಗಳು ಅದನ್ನು ಮಾನವರಿಗೆ ಬಿಟ್ಟುಕೊಟ್ಟವು ಎಂದಾದಾಗ ಆ ಪೂಜ್ಯ ಭಾವನೆಯಿಂದಲಾದರೂ ಅವುಗಳನ್ನು ಆರಾಧಿಸುವುದೇ ಸರಿಯೇ ಅಲ್ಲವೇ?

ಇನ್ನೊಂದು ಮಾತು ನಂಬಿಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ: ನೀವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಧರ್ಮಸ್ಥಳ ಸಂಘಗಳನ್ನು ಮಾಡಿದ್ದೀರಲ್ಲ. ಅಲ್ಲಿ ನೀವು ಕೊಡುವ ಸಾಲಕ್ಕೆ ಯಾವ ಕಾಗದಪತ್ರ ಇರಲಿ ಇಲ್ಲದಿರಲಿ -ತೆಗೆದುಕೊಂಡವ ಅದನ್ನು ನಿಮಗೆ ಪೈಸಾ ಪೈಸಾ ಚುಕ್ತಾ ಕೊಡುತ್ತಾನೆ! ಯಾಕೆ ಗೊತ್ತೇ ? ಅದು ಧರ್ಮಸ್ಥಳದ ದುಡ್ಡು, ಹಾಗೇ ಇಟ್ಟುಕೊಂಡರೆ ಅಣ್ಣಪ್ಪ ಭೂತ ಹಿಡಿದುಕೊಂಡರೆ ಕಷ್ಟ! ಧರ್ಮದೇವತೆಗಳು ಕೈಬಿಟ್ಟರೆ ಕುಟುಂಬವೇ ಸರ್ವನಾಶವಾದೀತು ಎಂಬ ಭಯದಿಂದ ! ಅದೇ ನಂಬುಗೆ ನಿಮ್ಮಲ್ಲೂ ಇರುವುದಕ್ಕೇ ಜನರಿಗೆ ಹಾಗೆ ಸಾಲದ ರೂಪದಲ್ಲಿ ಹಣವನ್ನು ಒದಗಿಸುತ್ತೀರಿ. ಇಂಥದ್ದೇ ಸಾಲಕೊಡುವ ಕೆಲಸವನ್ನು ಬೇರೇಯಾರೋ ಇನ್ಯಾವುದೋ ಸಂಘದಿಂದ ಮಾಡಿದರೆ ವಸೂಲಾಗದೇ ಒದ್ದಾಡಬೇಕಾಗುತ್ತದೆ ಮಾತ್ರವಲ್ಲ ಸಾಲಕೊಟ್ಟವ ಜೀವ ಉಳಿಸಿಕೊಳ್ಳಲೂ ಪರದಾಡಬೇಕಾಗಬಹುದು!

ಜನರೂ ಕೂಡ ಬಹಳ ವಿಚಿತ್ರವಾಗಿದ್ದಾರೆ. ಜನರಿಗೆ ಮೋಜುಮಜಾ ಮಸ್ತಿಯೂ ಬೇಕು. ಮೊದಲಿನ ಹಾಗೇ ಜನರೆಲ್ಲಾ ನೈತಿಕನಿಷ್ಠೆಯವರೇ ಎಂದು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ: ಶ್ರೀರಾಮುಲುವಿನ ಗೆಲುವು. ಒಂದುಕಾಲಕ್ಕೆ ಏನೂ ಇರದಿದ್ದ ಹುಡುಗರಿಬ್ಬರು ರಾಜ್ಯವನ್ನೇ ಅಥವಾ ಅರ್ಧದೇಶವನ್ನೇ ಕೊಂಡುಕೊಳ್ಳುವ ಮಟ್ಟದ ಆದಾಯವನ್ನು ಪಡೆಯುತ್ತಾರೆ ಎಂದರೆ ಅದು ಎಲ್ಲಿಂದ ಹೇಗೆ ಬಂತು? ಜನರಿಗೆ ರಕ್ತ ಪರಿಚಲನೆ ಸರಿಯಾಗಿದ್ದರೆ ಮತ್ತೆ ಆ ಜಾಗಕ್ಕೆ ಗಣಿಗಳನ್ನು ನಡೆಸುವ ಯಾರನ್ನೂ ಚುನಾಯಿಸುತ್ತಿರಲಿಲ್ಲ. ಕೆಲವರಿಗೆ ತಿಳುವಳಿಕೆ ಇಲ್ಲ, ಇನ್ನು ಕೆಲವರು ಜಾತೀ ರಾಜಕಾರಣ ಮಾಡುತ್ತಾರೆ. ಶಾಸಕನೊಬ್ಬ ತಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಾನೆ ಎಂಬುದೂ ಕೂಡ ಒಂದು ನಂಬಿಗೆ! ಶಾಸಕನಾದವನು ರಾಜ್ಯದ/ಕ್ಷೇತ್ರದ ಜನರ ಹಕ್ಕು-ಬಾಧ್ಯತೆಗಳನ್ನು ಕಾಪಾಡುವುದರ ಜೊತೆಗೆ ಆ ಕ್ಷೇತ್ರದ ಸಂಪತ್ತಿನಲ್ಲಿ ಯಾವುದೇ ಅವ್ಯವಹಾರ ಆಗದ ಹಾಗೇ ನೋಡಿಕೊಳ್ಳುವುದು ಅವನ ಕೆಲಸವಾಗಿರುತ್ತದೆ. ಆದರೆ ಇಂದಾಗುತ್ತಿರುವುದೇನು: ಕೋಟಿ ಇದ್ದವರೇ ಚುನಾವಣೆಗೆ ನಿಲ್ಲಬೇಕು, ಅವರೇ ಗೆಲ್ಲುತ್ತಾರೆ ಮತ್ತೆ ಅವರೇ ಅಕ್ರಮವಾಗಿ ಸಂಪಾದಿಸುತ್ತಾರೆ. ನೈಸರ್ಗಿಕ ಸಂಪತ್ತನ್ನು ಲೂಟಿಹೊಡೆಯುತ್ತಾರೆ.

ಈಗ ಪುನಃ ವಿಜ್ಞಾನಕ್ಕೆ ಬರೋಣ. ವೈಜ್ಞಾನಿಕವೆನಿಸಿಕೊಂಡ ಮಾರ್ಗದಲ್ಲಿ ಹೆಣ್ಣುಮಕ್ಕಳ ಸ್ತನ ಅರ್ಬುದ ಕಾಯಿಲೆಗೆ ಆಪರೇಶನ್ನೇ ಮದ್ದು. ಅಥವಾ ಇನ್ಯಾವುದೋ ಅದೇ ತೆರನಾದ ಶಾಕ್ ಚಿಕಿತ್ಸೆ. ಸಂತಾನ ನಿರೋಧಕ ಅಲೋಪಥಿಯ ಮಾತ್ರೆಗಳ ಸತತ ಸೇವನೆಯಿಂದ ಇವತ್ತಿನ ಜನಾಂಗದ ಹೆಣ್ಣುಮಕ್ಕಳಲ್ಲಿ ಸ್ತನ ಅರ್ಬುದ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ನನಗೆ ಗೊತ್ತಿರುವ ಆಯುರ್ವೇದ ವೈದ್ಯರೊಬ್ಬರು ಅದ್ಭುತ ಪರಿಹಾರ ನೀಡುತ್ತಾರೆ. ಕಾಯಿಲೆ ಆಪರೇಶನ್ ಇಲ್ಲದೇ ವಾಸಿಯಾಗುತ್ತದೆ. ೩೦೦೦ ವರ್ಷಗಳ ಇತಿಹಾಸವಿರುವ ಆಯುರ್ವೇದ ನಮ್ಮ ಆಧುನಿಕ ವಿಜ್ಞಾನಿಗಳು ಹುಟ್ಟುವ ಮೊದಲೇ ಇತ್ತಲ್ಲಾ ? ಅದು ಅವೈಜ್ಞಾನಿಕ ಎನ್ನುತ್ತೀರೋ ?

ನಿಜವಾಗಿಯೂ ಈಗ ಹೇಳಿ ಯಾವುದು ನಂಬಿಗೆಯೆ ಮೇಲೆ ನಡೆಯುತ್ತಿಲ್ಲ? ನಡೆಯುವ ಎಲ್ಲಾ ಕೆಲಸಕ್ಕೂ ವೈಜ್ಞಾನಿಕ ತಳಹದಿ ಇದೆಯೇ ? ಜವಾಬ್ದಾರಿಯ ಜಾಗದಲ್ಲಿದ್ದು ಬರಿದೇ ಹಾಗ್ಯಾಕೆ ಇಲ್ಲದ್ದನ್ನು ಹೇಳುತ್ತೀರಿ ? ಮಡೆಸ್ನಾನವನ್ನು ಬಿಡಿ, ಕುಕ್ಕೆಯ ಮಿಕ್ಕಿದ ಕೆಲಸಕ್ಕೂ ಸೇರಿದಂತೇ ನೀವು ಹೇಳಿದ ಮಾತು ಸ್ವೀಕಾರಾರ್ಹವಲ್ಲ. ಅದು ನನ್ನಂತಹ ಕೆಲವರ ಅನಿಸಿಕೆಯಾದರೂ ಪರವಾಗಿಲ್ಲ.


Monday, December 5, 2011

ಕನ್ನಡದ ಅಡಿಗೆ !


ಕನ್ನಡದ ಅಡಿಗೆ !

ಕನ್ನಡ ರಾಜ್ಯೋತ್ಸವದ ಶುಭ ಅವಸರದಲ್ಲಿ ಈ ಸರ್ತಿ ಕನ್ನಡಮಾತೆಗೆ ಅರ್ಪಿಸಿದ ಹಾರ-ಆಹಾರ ಇದು. ಕನ್ನಡದಲ್ಲಿ ಹಿಂದಿನಿಂದ ಇಂದಿನವರೆಗೆ ಅದೆಷ್ಟೋ ಮಹಾನುಭಾವರುಗಳು ಬರೆದರು, ಕನ್ನಡ ಗುಡಿಯ ಸಾರಿಸಿ ರಂಗವಲ್ಲಿ ಇಟ್ಟು, ಚಂದದ ಅಡುಗೆಯನ್ನು ಮಾಡಿ ಹಬ್ಬವನ್ನು ಆಚರಿಸಿದರು. ಈ ಹಬ್ಬ ಸದಾ ಇರಲಿ, ಈ ಹಡಗು ಚಲನೆಯಲ್ಲಿರಲಿ ಎಂಬ ಸದಾಶಯದೊಂದಿಗೆ ಕನ್ನಡ ಜನತೆಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳೊಂದಿಗೆ ಸದ್ಯಕ್ಕೆ ಸ್ವೀಕರಿಸಿ ಈ ಅಡಿಗೆ:

ಅಡಿಗೆ ಸಿದ್ಧವಿದೆ ಕರೆಯಿರಿ ಗೆಳೆಯರೆ
ಅಡಿಗಡಿಗೆ ನಿಮ್ಮ ಸ್ನೇಹಿತರ
ಗುಡಿ ಕನ್ನಡದಲಿ ನಡೆದಿದೆ ಉತ್ಸವ
ಸಡಗರ ಮುಗಿಯದು ಸ್ನೇಹಪರ

ಗಡಬಡಿಸದೆ ಕಾರಂತರು ತಂದರು
ಒಡಲೊಳ ಬೆಟ್ಟದ ಜೀವಗಳ
ಬಿಡದೆ ಕಟ್ಟಿದರು ನಾಕುತಂತಿಯನು
ತುಡಿತದಿ ಬೇಂದ್ರೆಯು ಕನಸುಗಳ

ಬಿಡಿಬಿಡಿಯಾದರು ಭಗವದ್ಗೀತೆಯು
ನುಡಿಗಟ್ಟಿನ ಡೀವೀಜಿಯದು
ಕಿಡಿಕಿಡಿ ರೂಪದ ಹಾಸ್ಯದ ಪಲ್ಯವು
ಒಡನಾಡೀ ನಮ್ಮ ಬೀಚಿಯದು

ಕೊಡಮಾಡಿದರಾನವ್ಯ ನವೋದಯ
ಅಡಿಗರು ಗುಡುಗುತ ಬೇರೆದನಿ
ತಡಮಾಡದೆ ಮಕ್ಕಳ ಮನವರಿತರು
ಸಿಡಿಸುತ ರತ್ನನು ಪದಗಳನು

ಕಡೆದು ರಾಮಾಯಣ ಮೊಸರಲಿ ಬೆಣ್ಣೆಯ
ಗಡಿಗೆ ತುಂಬಿಸುತ ಕುವೆಂಪುವು
ಹಡಗು ಕಟ್ಟಿದರು ಬಿಎಂಶ್ರೀಗಳು
ಒಡೆಯದಂತೆ ಕೃಷ್ಣರಾಯ್ರುಗಳು

ಪೊಡವಿಯ ಕಥೆಗಳ ಆಸ್ತಿಯು ಮಾಸ್ತಿಯು
ಹುಡಿ ರಂಗೋಲಿಯ ಗೋರೂರು
ಪೊಡಮಡುವೆವು ಭುವನೇಶ್ವರಿ ನಿನಗೆ ನಾವ್
ಬೆಡಗಿದು ನಮ್ಮಯ ತವರೂರು

Saturday, December 3, 2011

ಡರ್ಟಿ ಎನಿಸದ ಡರ್ಟಿ ಪಿಕ್ಚರ್ !


ಡರ್ಟಿ ಎನಿಸದ ಡರ್ಟಿ ಪಿಕ್ಚರ್ !

ನಿಮ್ಮಂತೇ ಅಥವಾ ನಿಮ್ಮಲ್ಲಿ ಕೆಲವರಂತೇ ಕುತೂಹಲಿಯಾಗಿ ’ದಿ ಡರ್ಟಿ ಪಿಕ್ಚರ್’ ನೋಡಿದೆ! ನೋಡುವ ಮೊದಲು ಉತ್ಸುಕನಾಗಿದ್ದೆ, ಕಾಮದ ಬಗ್ಗೆ [ಕಾಮವನ್ನು ನೋಡುವ ಉದ್ದೇಶವಲ್ಲ] ಒಂದಷ್ಟು ಏನೇನೋ ಜೋಡಿಸಿರುತ್ತಾರೆ ಎಂದುಕೊಂಡಿದ್ದೆ, ಖಂಡಿತಾ ಹಾಗಿಲ್ಲ. ನೋಡುತ್ತಾ ನೋಡುತ್ತಾ ಕೊನೇಗೆ ನನಗೇ ಅರಿವಿಲ್ಲದೇ ಕಣ್ಣಲ್ಲಿ ಎರಡು ಹನಿಗಳು ಹುಟ್ಟಿ ಕೆನ್ನೆಯ ಪಕ್ಕೆಗಳತ್ತ ಜಾರಿದವು. ನಾವು ನೀವು ಸಾಮಾನ್ಯವಾಗಿ ತಿಳಿದುಕೊಳ್ಳುವಂತಹ ಸನ್ನಿವೇಶ ಯಾವುದೂ ಕಾಣಿಸಲಿಲ್ಲ. ಕುಟುಂಬ ಸಮೇತ ಕುಳಿತು ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಚಿತ್ರ; ಯಾಕೆಂದರೆ ಅದರಲ್ಲಿರುವ ಚಿಕ್ಕ ಪುಟ್ಟ ಬಿಚ್ಚುಡುಗೆಯ ಚಿತ್ರಗಳಿಗಿಂತಾ ಕೆಳಮಟ್ಟದ ಅಥವಾ ಬಟ್ಟೆಯೇ ಇಲ್ಲದ ಚಿತ್ರಗಳನ್ನು ನಿತ್ಯವೂ ನಾವು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ನೋಡುತ್ತೇವೆ. [ ಇನ್ನು ೮-೧೪ ವಯಸ್ಸಿನ ಚಿಕ್ಕಮಕ್ಕಳು ತೋರಿಸಬಾರದು ಎಂಬ ಮನೋಭಾವ ಇದ್ದರೆ ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗಬಹುದು. ೬ ಕ್ಕೂ ಕೆಳಗಿನವರಿಗೆ ಅರ್ಥವಾಗುವುದಿಲ್ಲ, ೧೫ ಕ್ಕೂ ಮೇಲಿನವರು ಅವರೇ ಕದ್ದಾದರೂ ನೋಡುತ್ತಾರೆ! ]

ನಾನು ಸಿನಿಮಾ ನೋಡದೇ ವರ್ಷಗಳೇ ಕಳೆದಿವೆ. ಮಡಿವಂತಿಕೆಯಲ್ಲ, ಹಣಖರ್ಚಾಗುವ ಪ್ರಮೇಯಕ್ಕಲ್ಲ, ನಮ್ಮಂತಹ ಬರಹಗಾರರು / ತರಬೇತುದಾರರು/ ತಂತ್ರಜ್ಞರು ಎಲ್ಲರ ಜೊತೆ ಕೂತು ಸಿನಿಮಾ ನೋಡಬಾರದೆಂಬ ಮನೋಭಾವದವನೂ ಅಲ್ಲ. ಸರದಿಯಲ್ಲಿ ನಿಂತು ಟಿಕೇಟು ಕೊಳ್ಳುವುದು, ನುಗ್ಗಾಟದಲ್ಲಿ ನುಸುಳಿ ಪ್ರಯಾಸದಲ್ಲೇ ನೋಡುವುದು ನನಗೆ ಒಗ್ಗುವುದಿಲ್ಲ. ನಾವು ನೋಡಬೇಕೆನ್ನಿಸುವಷ್ಟು ದಿವಸಗಳಿಗೆ ಸಿನಿಮಾ ಹತ್ತಿರದ ಥಿಯೇಟರ್ ಗಳಿಂದ ಎದ್ದುಹೋಗಿರುತ್ತದೆ. ಅವರಿವರ ಬಾಯಿಂದ ಕಥೆ ಗೊತ್ತಾದಮೇಲೆ ನೋಡುವ ಆಸಕ್ತಿ ತೀರಾ ಉಳಿಯುವುದಿಲ್ಲ. ಅದರಲ್ಲಂತೂ ಇತ್ತೀಚೆಗೆ ಕನ್ನಡದಲ್ಲಂತೂ ಒಂದೋ ಮಚ್ಚು-ಲಾಂಗು ವ್ಯವಹಾರದ್ದು ಇಲ್ಲಾ ಯೋಗರಾಜ ಭಟ್ಟರ ಒಂದೇ ರುಚಿಯ ಚಿತ್ರಾನ್ನ ಅದೂ ಇಲ್ಲಾ ಅಂದ್ರೆ ಅಲ್ಲೊಂದಷ್ಟು ಇಲ್ಲೊಂದಷ್ಟು ಸಿನಿಮಾಗಳ ತುಣುಕು ಕಥೆ ಕದ್ದು ಸೇರಿಸಿದ ಕೊಲಾಜ್ ಇವುಗಳೇ ಆಗಿರುತ್ತವೆ. ಪುಟ್ಟಣ್ಣ ಕಣಗಾಲ್‍ರಂಥವರು ಗತಿಸಿದ ಮೇಲೆ ಎಲ್ಲೋ ಆಗೊಮ್ಮೆ ಈಗೊಮ್ಮೆ ’ಅಮೃತವರ್ಷಿಣಿ’ , ’ಯಜಮಾನ’, ’ಆಪ್ತಮಿತ್ರ’ ಹೀಗೇ ಒಂದೊಂದು ಕನ್ನಡ ಸಿನಿಮಾಗಳು ಬರುತ್ತಿವೆ. ಅಂತಹ ನಿರ್ದೇಶಕರು ಕನ್ನಡದಲ್ಲಿ ಮತ್ತೆ ಬರುತ್ತಾರಾ ಎಂದು ಈಗಲೂ ನನ್ನಂಥವರು ಹುಡುಕುತ್ತಿದ್ದಾರೆ; ಹೊಸದೊಂದು ಸಿನಿಮಾ ಸೆಟ್ಟೇರಿದಾಗ ಅದರ ನಿರ್ದೇಶಕರಲ್ಲಿ ಕಣಗಾಲ್ ರನ್ನು ಕಾಣ ಹೊರಡುತ್ತೇವೆ. ಬಹುತೇಕ ಭ್ರಮನಿರಸನಗೊಳ್ಳುತ್ತೇವೆ. ಮತ್ತೆ ಹುಡುಕುವುದು ಮತ್ತೆ ಸುಮ್ಮನೇ ಕೂರುವುದು- ಇದನ್ನು ನೆನೆದಾಗ " ಬಂದೇ ಬರುತಾನೆ ರಾಮ ಬಂದೇ ಬರುತಾನೆ....." ಹಾಡಿನ ನೆನಪಾಗುತ್ತದೆ. ಪುಟ್ಟಣ್ಣ ಮರಳುವುದೂ ಇಲ್ಲ, ಯಾರಲ್ಲೂ ಪರಕಾಯ ಪ್ರವೇಶ ಮಾಡುವುದೂ ಇಲ್ಲ ಎಂಬ ಭಾವತರಂಗಗಳು ನಮ್ಮಲ್ಲಿ ಹರಿಯುವುದೇ ಇಲ್ಲ !

ಹಿಂದೂ ಕೆಲವೊಮ್ಮೆ ಇಂತಹದ್ದೇ ಹಿಂದೀ ಸಿನಿಮಾಗಳನ್ನು ನಾನು ನೋಡಿದ್ದಿದೆ. ತಬು ನಟಿಸಿದ ಚಾಂದನಿ ಬಾರ್, ಕರೀನಾ ಕಪೂರ್ ನಟಿಸಿದ ಚಮೇಲಿ ಇಂತಹ ಚಿತ್ರಗಳನ್ನು ನೋಡಿದ್ದೇನೆ; ಖುಷಿಪಟ್ಟಿದ್ದೇನೆ. ಇವುಗಳನ್ನು ನೋಡುವುದು ನಾಯಕಿಯರು ಬಿಚ್ಚುಡುಗೆಯಲ್ಲಿ ಚೆನ್ನಾಗಿ ಕಾಣುತ್ತಾರೆ ಎಂದು ಜೊಲ್ಲು ಸುರಿಸುವುದಕ್ಕಲ್ಲ ಬದಲಾಗಿ ಇಂತಹ ಚಿತ್ರಗಳಲ್ಲಿ ನಾಯಕ, ನಾಯಕಿ ತಮ್ಮ ಅದ್ಭುತ ನಟನಾ ಕೌಶಲವನ್ನು ಹೊರಹೊಮ್ಮಿಸಲು ಸಾಕಷ್ಟು ಅವಕಾಶಗಳಿರುತ್ತವೆ. ನಟಿಯರು ಹೇಗೂ ತಮ್ಮ ದೇಹಸಿರಿಯನ್ನು ಸಾರ್ವಜನಿಕರ ಕಣ್ಣಿಗೆ ಉಣಬಡಿಸುವುದು ಸಹಜವೇ. ಅಂಥದ್ದಕ್ಕೆ ತಯಾರಿದ್ದವರು ಮಾತ್ರ ಹಾಗೆ ನಟಿಯರಾಗುತ್ತಾರೆ. ಆದರೆ ನಟಿಯರು ಎಂದಾಕ್ಷಣ ಅವರೆಡೆ ಮೂಗು ಮುರಿಯುವುದು ಅಸಡ್ಡೆಮಾಡುವುದು ಸರಿಯಲ್ಲ. ಅವರಲ್ಲೂ ಕಲೆಗಾರಿಕೆ ಇರುತ್ತದೆ. ಒಳಗೆ ಕುಳಿತ ಕಲಾವಿದನಿಗೆ ಲಿಂಗಭೇದವಿಲ್ಲ. ವೈಯ್ಯಕ್ತಿಕ ಜೀವನದಲ್ಲಿ ನಟೀಮಣಿಗಳು ಏನಾದರೂ ಮಾಡಿಕೊಳ್ಳಲಿ ಆದರೆ ಕಥೆಯಲ್ಲಿ ಬರುವ ಆ ಯಾ ಪಾತ್ರಗಳಿಗೆ ಜೀವತುಂಬಿದ್ದಾರೋ ಎಂಬುದು ನಾವು ನೋಡಬೇಕಾದ ಪ್ರಮುಖ ಅಂಶ.

ಹಿಂದೆ ಸಿನಿಮಾಗಳು ಚೆನ್ನಾಗೇ ಇರುತ್ತಿದ್ದವು ಯಾಕೆಂದರೆ ಅವುಗಳ ಕಥೆಗಳು ಹೆಚ್ಚಾಗಿ ಉತ್ತಮ ಕಾದಂಬರಿಗಳನ್ನು ಆಧರಿಸುತ್ತಿದ್ದವು. ಇಂದು ಕಾಸು ಉಳ್ಳ ನಿರ್ಮಾಪಕ ಯಾವುದೋ ನಿರ್ದೇಶಕರನ್ನೂ ಇನ್ಯಾರ್ಯಾರೋ ಕಲಾವಿದರನ್ನೂ ಕಲೆಹಾಕಿ ಒಟ್ಟಾರೆ ಮತ್ತೊಂದಷ್ಟು ಹಣಗಳಿಸಬೇಕೆಂಬ ಒಂದೇ ಉದ್ದೇಶದಿಂದ ಸಿನಿಮಾ ಮಾಡಲು ಹೊರಟು ಊಟಕ್ಕೊಂದು ಉಪ್ಪಿನಕಾಯಿ, ಹಪ್ಪಳ-ಸಂಡಿಗೆ, ಪಲ್ಯ, ಚಿತ್ರಾನ್ನ ಇವೆಲ್ಲಾ ಇರುವ ಹಾಗೇ ಅವರದ್ದೇ ಭಾಷೆಯಲ್ಲಿ ಹೇಳುವುದಾದರೆ ಒಂದು ಲವ್ ಸೀನು, ಒಂದು ಫೈಟಿಂಗು, ಒಂದು ಕ್ಲೈಮ್ಯಾಕ್ಸು, ಒಂದ್ಸ್ವಲ್ಪ ಸೆಂಟಿಮೆಂಟು, ಒಂದಷ್ಟು ಹಾಡುಗಳ ಮಧ್ಯೆ ಒಂದು ಬಿಕನಿಹಾಕಿ ಕುಣಿವ ಐಟೆಮ್ ಸಾಂಗು --ಇದಲ್ಲ ಸಿನಿಮಾ. ಎಲ್ಲೂ ಪುನರಾವರ್ತಿತವಾಗದ ಕಾಲಕ್ಕೆ ತಕ್ಕ ಸ್ವಸಾಮರ್ಥ್ಯವುಳ್ಳ ಕಥೆಯನ್ನು ಆಯ್ದುಕೊಂಡು, ಉತ್ತಮ ಭೂಮಿಕೆ, ಉತ್ತಮ ನಿರ್ದೇಶಕರು-ತಂತ್ರಜ್ಞರನ್ನು ಹಾಕಿಕೊಂಡು ಮಾಡುವ ಸಿನಿಮಾ ಎಲ್ಲೂ ನೆಲಕಚ್ಚುವುದಿಲ್ಲ!! ಅಲ್ಲಿ ಕಲವಿದರೂ ಗೆಲ್ಲುತ್ತಾರೆ, ನಿರ್ಮಾಪಕ, ನಿರ್ದೇಶಕ, ತಂತ್ರಜ್ಞ ಎಲ್ಲರೂ ಉತ್ತೀರ್ಣರಾಗುತ್ತಾರೆ. ಅದು ಬಿಟ್ಟು ಹಾಡಿದ್ದನ್ನೇ ಹಾಡೋ ಕಿಸಬಾಯ್ ದಾಸರ ರೀತಿ ಮಾಡಿದ್ದನ್ನೇ ಮತ್ತೆ ಮಾಡುತ್ತಾ ಮಾಧ್ಯಮಗಳಲ್ಲಿ " ಇದೊಂಥರಾ ಡಿಫರೆಂಟ್ ಆಗಿದೆ " ಎಂದರೆ ಸಾಕಾಗೋದಿಲ್ಲ, ಪ್ರೇಕ್ಷಕ ಹುಷಾರಿದ್ದಾನೆ, ಚೆನ್ನಾಗಿಲ್ಲದಿದ್ದರೆ ತೋಪೆದ್ದುಹೋಗುತ್ತದೆ! ಆಮೇಲೆ ನಿದ್ರೆಮಾತ್ರೆ ಸುಸೈಡ್ ಅಟೆಂಪ್ಟು ಇದೆಲ್ಲಾ ನಾಟಕಮಾಡಿದರೂ ಮತ್ತೆ ಆ ಯಾ ಗೌರವ ಸ್ಥಾನಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಹೋಗಲಿ ಬಿಡಿ "ಇದೆಲ್ಲಾ ನಮಗೂ ಗೊತ್ತಿರುವ ಕಥೇನೆ ಅದ್ಯಾಕ್ ಕೊರೀತಾನೋ" ಅಂದ್ಕೊಂಡ್ರೆ ಕಷ್ಟ, ನೇರವಾಗಿ ಡರ್ಟಿಯತ್ತ ಸಾಗಿಬಿಡೋಣ.

ಸಿನಿಮಾ ಇರುವುದು ಒಬ್ಬ ನಟಿಯ ಜೀವನದ ಸುತ್ತ. ಅದು ಸಿಲ್ಕ್ ಸ್ಮಿತಾಳ ಜೀವನವನ್ನು ಹೋಲುವಂಥದ್ದೂ ಹೌದು ಮತ್ತು ಚಿತ್ರದಲ್ಲಿ ಸಿಲ್ಕ್ ಎನ್ನುವ ಹೆಸರನ್ನೇ ಬಳಸಲಾಗಿದೆ. ವಿದ್ಯಾಬಾಲನ್ ತನ್ನ ಪಾತ್ರವನ್ನು ಎಕ್ಸಲೆಂಟ್ ಆಗಿ ಮಾಡಿದ್ದಾಳೆ. ಉಳಿದ ಪಾತ್ರಗಳೂ ಸಾಕಷ್ಟು ಚೆನ್ನಾಗೇ ಮೂಡಿಬಂದಿವೆ. ಚಿತ್ರದ ಟೈಟಲ್ ಸಾಂಗ್ ಕೊನೇವರೆಗೂ ಮನೆಗೆ ಹೋದಮೇಲೂ ಮರೆತುಹೋಗುವುದಿಲ್ಲ. ನೀವೀಗಾಗಲೇ ಮಾಧ್ಯಮಗಳಲ್ಲಿ ಎಫ್ ಎಂ ರೇಡಿಯೋಗಳಲ್ಲಿ ಕೇಳಿಯೇ ಇರುತ್ತೀರಿ " ಊಲಾಲಾ ಊಲಾಲಾ ಊಲಾಲಾ ಊಲಾಲಾ ತೂ ಹೈ ಮೆರಿ ಫ್ಯಾಂಟಸಿ " ಎಂಬ ಹಾಡು. ನಟಿಯಾಗ ಹೊರಟ ಹೆಣ್ಣೊಬ್ಬಳಿಗೆ ಯಾವೆಲ್ಲಾ ರೀತಿಯ ಕಷ್ಟಕೋಟಲೆಗಳು ಬರಬಹುದು, ಜೀವನದ ಯಾವ ನೋವಿನ ಘಟ್ಟದಲ್ಲಿ ಎಂದಿನ ಅನಿವಾರ್ಯತೆಯಲ್ಲಿ ಅವಳು ಚಟಗಳಿಗೆ ಬಲಿಯಾಗುತ್ತಾಳೆ, ಗಂಡಸರು ಹೇಗೆ ಅವಳನ್ನು ದುರುಪಯೋಗಪಡಿಸಿ ಶೋಷಿಸುತ್ತಾರೆ ಎಂಬೆಲ್ಲಾ ಅಂಶಗಳ ಬಗ್ಗೆ ಕಥೆ ಹರವಿಕೊಂಡು ಸಾಗುತ್ತದೆ.

ವೃತ್ತಿ ಜೀವನದ ಆರಂಭದಲ್ಲಿ ಕೇವಲ ೫ ರೂಪಾಯಿಗಾಗಿ ಹಂಬಲಿಸುವ ನಟಿ ವೃತ್ತಿಯ ಶಿಖರವನ್ನೇರಿದಾಗ ಹಲವು ಡಿಮಾಂಡ್ ಮಾಡುತ್ತಾಳಾದರೂ ರಸಿಕ ಕಾಮುಕ ಚಿತ್ರ ನಿರ್ಮಾಪಕ, ನಿರ್ದೇಶಕ, ನಟರೊಂದಿಗೆ ಅವಳ ಸಂಬಂಧ ಹೇಗೆ ಬೆಸೆದುಕೊಂಡು ತನ್ನ್ ಸರ್ವಸ್ವವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾಳೆ ಎಂಬುದನ್ನು ವಿಶದವಾಗಿ ಚಿತ್ರಿಸಲಾಗಿದೆ. ವಯಸ್ಸು ಇನ್ನೂ ಇದ್ದರೂ ಉದ್ಯಮಕ್ಕೆ ದುಡಿದುಕೊಡುವ ಕುದುರೆಯಾಗಿ ಕಾಣದಾಗ ಕಾಲ ಕಸದಂತೇ ವರ್ತಿಸುವ ಆ ಮಂದಿಯ ನಿರಾಕರಣೆಗಳಿಗೆ ಬೇಸತ್ತು ಕಾಲಹಾಕುವುದು, ಮತ್ತೆ ಒಮ್ಮೆ ಐದೇ ರೂಪಾಯಿಗಳಿಗಾಗಿ ಬೇಡುವುದು ಇವೆಲ್ಲಾ ಮನಸ್ಸಿಗೆ ನಾಟುತ್ತವೆ. ದಿವಾಳಿಯಾಗಿ ಸಾಲಮಾಡಿಕೊಂಡ ನಟಿಗೆ [ಅಮ್ಮನ ಮನೆಬಾಗಿಲೂ ಮೊದಲೇ ಮುಚ್ಚಿಹೋಗಿರುತ್ತದೆ] ಯಾರೂ ಇಲ್ಲದಾದಾಗ ತನ್ನ ನೋವನ್ನು ಕೇಳುವವರೇ ಇಲ್ಲದ ದುರ್ಭರ ಸ್ಥಿತಿಯಲ್ಲಿ ಮಾನಸಿಕ ಖಿನ್ನತೆಯಲ್ಲಿ ಆಕೆ ಈ ಲೋಕಕ್ಕೆ ವಿದಾಯಹೇಳುವ ಸನ್ನಿವೇಶ ಕಣ್ಣಾಲಿಗಳನ್ನು ತುಂಬಿಸುತ್ತದೆ. ಈ ಸಂದರ್ಭ ನನಗೆ ಎರಡು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ತೀರಿಕೊಂಡ ಪರ್ವೀನ್ ಬಾಬಿಯ ನೆನಪಾಯ್ತು; ತುಂಬು ಹರೆಯದ ಸುಂದರ ತರುಣಿ ಒಂದುಕಾಲದಲ್ಲಿ ಅಮಿತಾಭ್ ರಂತಹ ನಾಯಕರ ಮನವನ್ನೇ ಗೆದ್ದಿದ್ದಳು! ಆದರೆ ಸಾಯುವಾಗ ಎಂತಹ ವ್ಯಥೆಯಿಂದ ಸತ್ತಳು ಎಂಬುದು ಅನೇಕರಿಗೆ ತಿಳಿದಿರುವ ಸಂಗತಿ.

ಇತ್ತೀಚೆಗೆ ಸೆಲೆಬ್ರಿಟಿಗಳು ಸಾರ್ವಜನಿಕ ಜೀವನದಲ್ಲಿರುವವರು ಹಲವು ಅನೈತಿಕ ಸಂಬಂಧಗಳಲ್ಲಿ ತೊಡಗಿಕೊಂಡು ಹೆಂಡತಿ-ಮಕ್ಕಳನ್ನು ಕೈಬಿಡುತ್ತಾರೆ. ಈ ಕಥೆಯನ್ನು ಬರೆಯುತ್ತಿರುವ ಹೊತ್ತಿಗೇ ’ಜಸ್ಟ್ ಬೆಂಗಳೂರು’ ನಲ್ಲಿ ಅಂತಹ ಒಂದು ಸುದ್ದಿ ಬಿತ್ತರವಾಯ್ತು. ನಮ್ಮ ಏಳ್ಗೆಗಾಗಿ, ನಮ್ಮ ಅನುಕೂಲಕ್ಕಾಗಿ ನಮ್ಮ ಜೊತೆಯಾದ ಹೆಣ್ಣನ್ನು ನಡುನೀರಿನಲ್ಲಿ ಕೈಬಿಡುತ್ತಿರುವುದು ಖಂಡನೀಯ. ಸಿನಿಮಾಮಂದಿಯ ಈ ವರ್ತನೆ ಈಗೀಗ ಇದು ತೀರಾ ದಿನಕ್ಕೊಂದೆರಡು ವರದಿಯಾಗುತ್ತಿದೆ. ಇಂಥದ್ದನ್ನು ಹಾಗೆ ಮಾಡಿದ ನಟ/ನಿರ್ದೇಶಕರಿಗೆ ಪ್ರೇಕ್ಷಕರು ಒಟ್ಟಾಗಿ ಕಲ್ಲೆಸೆದು ನಿಯಂತ್ರಿಸಬೇಕಾಗಿದೆ.

ಒಟ್ಟಾರೆ ಹೇಳುವುದಾದರೆ ಡರ್ಟಿ ಪಿಕ್ಚರ್ ನಲ್ಲಿ ಅಂಥಾ ಡರ್ಟಿ ಸನ್ನಿವೇಶಗಳ್ಯಾವವೂ ಇಲ್ಲ. ಇಂದಿನ ಮಕ್ಕಳು ನಮಗಿಂತಾ ತಿಳುವಳಿಕೆ ಉಳ್ಳವರಾಗಿರುವುದರಿಂದ ಕುಟುಂಬ ಸಮೇತ [ಅಥವಾ ಮಕ್ಕಳನ್ನು ಬೇಕಾದರೆ ಮನೆಯಲ್ಲೇ ಬಿಟ್ಟು] ಹಾಯಾಗಿ ಕುಳಿತು ನೋಡಬಹುದು. ಹೋಗಿಬನ್ನಿ, ನೋಡಿಬನ್ನಿ , ಕಲಾವಿದರಿಗೆ / ನಟಿಯರಿಗೆ ಅಂತಹ ಸ್ಥಿತಿ ಬಾರದಿರಲಿ ಎಂದು ಹಾರೈಸಿಬನ್ನಿ. ಮುಗಿಸುವ ಮುನ್ನ: ವಿದ್ಯಾಬಾಲನ್ ಅವರಿಗೆ ಬೇಕಷ್ಟು ಅವಾರ್ಡ್‍ಗಳು ಸಿಗಬಹುದಾಗಿದೆ; ಅವರಿಗೆ ನನ್ನ ಹಾರ್ದಿಕ ಅಭಿನಂದನೆಗಳು, ಮಿಕ್ಕವರಿಗೂ ಕೂಡ ಅಭಿನಂದನೆಗಳು.

Friday, December 2, 2011

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

ವಾಸ್ತವಿಕವಾಗಿ ಹೇಳಬೇಕಾದರೆ ನಾನು ದೈನಿಕ ಧಾರಾವಾಹಿಗಳನ್ನು ನೋಡುವುದಿಲ್ಲ. ಆದರೂ ಆರಂಭದಿಂದ ಇಲ್ಲೀವರೆಗೂ ಆಗಾಗ ಆಗಾಗ ನನ್ನನ್ನು ಸೆಳೆದಿದ್ದು ಒಂದೇ ಒಂದು ಧಾರಾವಾಹಿ ’ಶ್ರೀ ಗುರು ರಾಘವೇಂದ್ರ ವೈಭವ’. ಭರತಭೂಮಿ ಕಂಡ ತಪೋನಿಧಿಗಳಲ್ಲಿ ಮಂಚಾಲೆಯ ಶ್ರೀಗುರು ರಾಘವೇಂದ್ರ ತೀರ್ಥರೂ ಒಬ್ಬರು. ಅವರ ಹುಟ್ಟಿನಿಂದ ಹಿಡಿದು ನಡೆದ ಬಹುತೇಕ ಎಲ್ಲಾ ಘಟನೆಗಳನ್ನೂ ಸವಿಸ್ತಾರವಾಗಿಯೂ ಸಮರ್ಪಕವಾಗಿಯೂ ಜನರಿಗೆ ತಲ್ಪಿಸುವಲ್ಲಿ ನಿರ್ದೇಶಕ ಬ.ಲ.ಸುರೇಶ್ ಯಶಸ್ವಿಯಾಗಿದ್ದಾರೆ. ಆಯಾ ಪಾತ್ರಗಳ ಪೋಷಣೆಗಳನ್ನು ಎಲ್ಲಾ ಕಲಾವಿದರೂ ಅಷ್ಟೇ ಭಕ್ತಿಯಿಂದ, ಪ್ರೀತಿಯಿಂದ ನಿರ್ವಹಿಸುತ್ತಿದ್ದಾರೆ. ಅದರಲ್ಲಂತೂ ರಾಘವೇಂದ್ರರ ಪಾತ್ರಧಾರಿ ಆ ಪಾತ್ರಕ್ಕೆ ಹೇಳಿಮಾಡಿಸಿದ ಹಾಗಿರುವುದು ನನಗೆ ಬಹಳ ಖುಷಿಕೊಟ್ಟಿದೆ. ಭೂಮಿಕೆಯನ್ನು ಹಂಚುವುದರಲ್ಲೂ ಕಲಾವಿದರ ಆಯ್ಕೆಯಲ್ಲೂ ನಿರ್ದೇಶಕರು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅನೇಕ ಹಾಡುಗಳನ್ನೂ ದಾಸರ ಪದಗಳನ್ನೂ ಒಳಗೊಂಡಿರುವ ಧಾರಾವಾಹಿಯಲ್ಲಿ ಕೆಲವು ಹಾಡುಗಳಂತೂ ಅಮೋಘವಾಗಿವೆ, ವಿದ್ಯಾಭೂಷಣರ ಕಂಠಸಿರಿ ಮನಸ್ಸನ್ನು ಸಹಜಸ್ಥಿತಿಯಲ್ಲಿ ಗೆದ್ದುಬಿಡುತ್ತದೆ. ಒಂದು ದಿನ ಹೀಗೇ ತಡವಾಗಿ ಬಂದು ಊಟಕ್ಕೆ ಕುಂತಿದ್ದೆ, ಹತ್ತು ಗಂಟೆಯಾಗಿತ್ತು. ಸಾಮಾನ್ಯವಾಗಿ ಆ ಹೊತ್ತಿಗೆ ಇದ್ದರೆ ಟಿವಿ ೯ ಬಿತ್ತರಿಸುವ ಜಸ್ಟ್ ಬೆಂಗಳೂರು ನೋಡುವುದು ನನ್ನ ಅಭ್ಯಾಸ. ಆದರೆ ಆ ದಿನ ಮಾತ್ರ ಅದರ ಬದಲು ಯಾಕೋ ಸುವರ್ಣ ವಾಹಿನಿಯನ್ನು ನೋಡಲು ಆರಂಭಿಸಿದ್ದೆ. ಸಂಗೀತ ವಾದ್ಯ ಪರಿಕಕರಗಳಿಲ್ಲದೇ ಸಹಜವಾಗಿ ಕೈತಟ್ಟಿಕೊಂಡು ಹಾಡಿದ ಒಂದು ಹಾಡು ನನ್ನನ್ನು ಇನ್ನೂ ಹಿಡಿದಿಟ್ಟಿದೆ. ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಮಂತ್ರಾಲಯ ಮಠದ ಗುರುವಿನ ಶಿಷ್ಯರೂ ಮಠದ ಕೆಲಸಗಳಲ್ಲಿ ನಿರತರಾಗಿರುವ ಜನರು ಸೇರಿ ಒಂದೆಡೆ ಕುಳಿತು ಹಾಡುವ ಸನ್ನಿವೇಶ. ಶ್ವೇತವಸ್ತ್ರಧಾರೀ ಬ್ರಾಹ್ಮಣ ವೇಷದ ಹತ್ತಾರು ಮಂದಿ ಕೂತು ಹಾಡಿದ ಆ ದೃಶ್ಯಾವಳಿ ಈಗಲೂ ಕಾಡುತ್ತದೆ.

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ನಿಜಕ್ಕೂ ವಿಠೋಬ ಸಾಹುಕಾರನೇ ಹೌದು. ಮಹಾರಾಷ್ಟ್ರದ ಇಂದಿನ ಮರಾಠಾವಾಡಾ[ಹಿಂದೆ ವಿದರ್ಭದಲ್ಲಿತ್ತು]ದಲ್ಲಿರುವ ತನ್ನ ಆಲಯ ಶ್ರೀಮಂತಿಕೆಯಿಂದ ಕೂಡಿದ್ದರೂ ಆ ಜಿಲ್ಲೆಯಾದ್ಯಂತ ರೈತರು ಅನುಭವಿಸುತ್ತಿರುವ ಯಾತನೆಯನ್ನು ಮಾತ್ರ ಆತ ಯಾಕೆ ಕೇಳುತ್ತಿಲ್ಲ ಎಂಬುದು ನನಗೆ ಪ್ರಶ್ನೆಯಾಗಿ ಹಾಗೇ ಉಳಿದಿದೆ! ವರ್ಷವೂ ಕೋಟ್ಯಂತರ ಜನ ಯಾತ್ರೆಬಂದು ದರ್ಶನಮಾಡಿ ಪುನೀತರಾಗುವ ಸ್ಥಳ ಪಂಢರಾಪುರ. ಪಂಢರೀನಾಥನಿಗೆ ಎರಡೇ ಹಸ್ತ! ಸೊಂಟದಮೇಲೆ ಕೈಇಟ್ಟು ನಿಂತ ವಿಠಲನಿಗೆ ಮೀನಿನಾಕೃತಿಯ ಎರಡು ಕಿವಿಗಳು. ಅನೇಕ ಸಾಧು ಸಂತರು, ಸನ್ಯಾಸಿಗಳು, ವಿರಕ್ತರು ಹೀಗೇ ಹಲವಾರು ತೆರನಾದ ಭಕ್ತ-ಭಾವುಕರು ದಿಂಡಿ ಭಜನೆಮಾಡುವುದು ಅಲ್ಲಿನ ವಿಶೇಷ. ವಿಠೋಬ ಎಂದುಬಿಟ್ಟರೆ ಮಹಾರಾಷ್ಟ್ರದ ಜನತೆಗೆ ಅಚ್ಚುಮೆಚ್ಚು. ಹಾಡುತ್ತಾ ಕುಣಿಯುತ್ತಾ ಆತನನ್ನು ಓಲೈಸುವಲ್ಲಿ ಸಫಲರಾಗುತ್ತಾರೆ. ಉತ್ತರಕರ್ನಾಟಕದ ಗಾಣಗಾಪುರ ಕ್ಷೇತ್ರಕ್ಕೆ ಬಂದವರು ಪಂಢರಾಪುರಕ್ಕೆ ಹೋಗುವುದು ಅಥವಾ ಪಂಢರಾಪುರಕ್ಕೆ ಬಂದವರು ಗಾಣಗಾಪುರಕ್ಕೆ ಬರುವುದು ಯಾತ್ರಾರ್ಥಿಗಳ ರೂಢಿ. ಕೆಲವೊಮ್ಮೆ ಈ ಎರಡರ ಜೊತೆಗೆ ಶಿರಡಿ ಕೂಡ ಯಾತ್ರೆಯ ಪಟ್ಟಿಗೆ ಸೇರ್ಪಡೆಗೊಳ್ಳುತ್ತದೆ.


ವಿಠೋಬ ಭಕ್ತಾನುರಾಗಿ. ಭಜನೆಮಾಡುತ್ತಾ ಹೃದಯವನ್ನು ಸಮರ್ಪಿಸಿದರೆ ಏನನ್ನೇ ಕೇಳಿದರೂ ಒಲ್ಲೆ ಎನ್ನದ ಸ್ನೇಹಿತ! ಆತನ ಮೇಲೆ ಮರಾಠಿ ಅಭಂಗಗಳು, ಭಜನೆಗಳು, ಸಂಕೀರ್ತನೆಗಳು, ದೇವರನಾಮಗಳು ಅದೆಷ್ಟೋ ಇವೆ. ಕೆಲವೊಮ್ಮೆ ಅಹೋರಾತ್ರಿ ಜಾಗರಣೆನಡೆಸುತ್ತಾ ಮಾಡುವ ಭಜನೆಗಳಲ್ಲಿ ಕುಣಿತವೂ ಸೇರಿರುತ್ತದೆ. ನಾವು ಚಿಕ್ಕವರಿದ್ದಾಗ ನಮ್ಮೂರಿನ ಮಹಾವಿಷ್ಣು ದೇವಸ್ಥಾನದಲ್ಲೂ ಒಂದಷ್ಟು ಮರಾಠಿ ಭಜನೆಗಳನ್ನು ಹಿರಿಯರು ನಮಗೆ ಹೇಳಿಕೊಟ್ಟಿದ್ದರು. ಅರ್ಥ ಗೊತ್ತಿರಲಿಲ್ಲ. ಆದರೂ ಹಾಡಲು ತುಂಬಾ ಹಾಯಾಗಿರುವುದರಿಂದ ಭಜನೆಮಾಡುತ್ತಿದ್ದೆವು. " ಜೈ ಜೈ ವಿಠೋಬಾ ರಕುಮಾಯಿ ಮಹರಾಜ ವಿಠೋಬಾ ರಕುಮಾಯಿ "--ಇಂತಹ ಹಲವು ಹಾಡುಗಳು ಇಂದಿಗೂ ನೆನಪಿಗೆ ಬರುತ್ತವೆ. ಬೆಳಗಿನಜಾವದಲ್ಲಿ ಮರಾಠಿ ಭಜನೆಗಳು ಎಷ್ಟು ಚೆನ್ನಾಗಿರುತ್ತವೆ ಎಂದರೆ ಆ ಮಾಯೆಯಲ್ಲಿ ನಾವು ದೇವರನ್ನು ಕಾಣುತ್ತಾ ಭಾಷೆಯ ಗಡಿಯನ್ನೂ ಮೀರಿಬಿಡುತ್ತೇವೆ. ಯಾಕೆ ಈ ರೀತಿಯ ಭಜನೆ ಅಥವಾ ಸೇವೆ ವಿಠೋಬನಿಗೆ ಪ್ರೀತಿ ಎಂಬುದರ ಕುರಿತು ಅಲ್ಲಿನ ಸ್ಥಳಪುರಾಣ ಕೇಳಿ ಸ್ವಾರಸ್ಯಕರವಾಗಿದೆ:

ದಂಡಿರವನ ಎಂಬ ಅಡವಿಯಲ್ಲಿ ಜಾನು ಮತ್ತು ಸತ್ಯವತಿ ಎಂಬ ಬಡ ದಂಪತಿ ವಾಸವಾಗಿರುತ್ತಾರೆ. ಅವರಿಗೊಬ್ಬ ಮಗ ಪುಂಡಲೀಕ. ಮಗ ಪ್ರಾಯಪ್ರಬುದ್ಧನಾಗಿ ಮದುವೆಯಾಗುವವರೆಗೆ ತಂದೆ-ತಾಯಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದ. ಯಾವಾಗ ಮದುವೆಯಾಯಿತೋ ಆಗ ಪುಂಡಲೀಕನಿಗೆ ದುರ್ಬುದ್ಧಿ ಬಂದುಬಿಟ್ಟಿತು. ಯುವ ದಂಪತಿ ಮುದಿ ದಂಪತಿಯನ್ನು ತೀರಾ ಹೀನಾಯವಾಗಿ ಕಾಣಹತ್ತಿದರು. ಅವರನ್ನು ಪೀಡಿಸಿ ದುಡಿಸಿಕೊಳ್ಳ ಹತ್ತಿದ್ದರು. ಮಗ-ಸೊಸೆ ಕೊಡುವ ಕಷ್ಟ ತಾಳಲಾರದೇ ವೃದ್ಧ ದಂಪತಿ ತಾವು ಕಾಶೀ ಯಾತ್ರೆಗೆ ಹೋಗುವುದಾಗಿ ಸುಮ್ಮನೇ ಹೇಳಿದರು. ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡ ಪುಂಡಲೀಕ ತಾವೂ ನಿಮ್ಮ ಜೊತೆಗೂಡುತ್ತೇವೆ ಎಂದ ಮಾತ್ರವಲ್ಲ ಎಲ್ಲರೂ ಹೊರಡುವಂತೇ ಮಾಡಿಬಿಟ್ಟ. ಮಗ-ಸೊಸೆ ಕುದುರೆಯೊಂದರ ಮೇಲೆ ಪ್ರಯಾಣಿಸುತ್ತಿದ್ದರೆ ಅಪ್ಪ-ಅಮ್ಮ ಕುದುರೆಯ ಪಕ್ಕ ಕಾಲ್ನಡಿಗೆಯಲ್ಲಿ ಸಾಗಿದ್ದರು.

ನಿತ್ಯವೂ ಆಹಾರಕ್ಕಾಗಿ ಅಪ್ಪ-ಅಮ್ಮ ಅದೂ ಇದೂ ಕೆಲಸಮಾಡುವಂತೇ ಆಜ್ಞಾಪಿಸುತ್ತಿದ್ದ ಪುಂಡಲೀಕ ರಾತ್ರಿ ಎಲ್ಲಾದರೂ ತಂಗುತ್ತಾ ಅಲ್ಲಿ ತನ್ನ ಕುದುರೆಯನ್ನು ಸ್ವಚ್ಛಗೊಳಿಸಿ ಅಣಿಗೊಳಿಸಲು ಅಪ್ಪ-ಅಮ್ಮನಿಗೆ ತಾಕೀತು ಮಾಡುತ್ತಿದ್ದ. ಯಾಕಾದರೂ ಯಾತ್ರೆಗೆ ಹೋಗುತ್ತೇವೆಂದು ಹೇಳಿದೆವಪ್ಪಾ ಎನಿಸುವಷ್ಟು ತೊಂದರೆ ಕೊಡುತ್ತಿದ್ದ ಮಗನ ನಡಾವಳಿಯನ್ನು ಅನುಭವಿಸಿ ಪಾಲಕರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ದಿನದೂಡುತ್ತಿದ್ದರು. ಬಹುಪ್ರಯಾಸದಿಂದ ಅಂತೂ ಕಾಶೀಪಟ್ಟಣವನ್ನು ತಲ್ಪಿದರು. ಅಲ್ಲಿದ್ದ ಕುಕ್ಕುಟಸ್ವಾಮಿ ಎಂಬ ಸಂತರ ಆಶ್ರಮದಲ್ಲಿ ತಂಗಲು ಏರ್ಪಾಡುಮಾಡಿಕೊಂಡರು. ನಡೆದೂ ನಡೆದೂ ಇನ್ನಾಗದು ಎಂಬ ಸ್ಥಿತಿಗೆ ತಲ್ಪಿದ್ದ ವೃದ್ಧ ದಂಪತಿಗೆ ವಾರದ ಕಾಲವಾದರೂ ಕಾಶಿಯಲ್ಲೇ ಇರಬೇಕಾದ ಅನಿವಾರ್ಯತೆ ಇತ್ತು. ಅದಕ್ಕೆ ಆಶ್ರಮದಲ್ಲಿ ಅನುಮತಿಯೂ ಸಿಕ್ಕಿತು. ಕಾಶೀ ವಿಶ್ವನಾಥನನ್ನು ನೆನೆಯುತ್ತಾ ದಂಪತಿ ಹಾಗೇ ವಿರಮಿಸುತ್ತಿದ್ದರು.

ಒಂದು ರಾತ್ರಿ ಅಕಸ್ಮಾತ್ ಮಗ ಪುಂಡಲೀಕನಿಗೆ ಯಾಕೋ ಎಚ್ಚರವಾಗಿಹೋಯ್ತು. ನೋಡುತ್ತಾನೆ ಹೊರಗಿನಿಂದ ೪-೫ ಮಂದಿ ಕೊಳೆಯಾದ ಸೀರೆ ಧರಿಸಿದ ಸುಂದರ ತರುಣಿಯರು ಕುಕ್ಕುಟಸ್ವಾಮಿಯ ಆಶ್ರಮವನ್ನು ಪ್ರವೇಶಿಸುತ್ತಿದ್ದರು. ಹಾಗೆ ಬಂದವರು ಸ್ವಾಮಿಯ ಮನೆಯನ್ನು ಗುಡಿಸಿ, ಬೇಕಾದ ಸಾಮಗ್ರಿಗಳನ್ನು ಅಣಿಗೊಳಿಸಿಟ್ಟು ನಂತರ ಆಶ್ರಮದ ಪ್ರಾರ್ಥನಾ ಕೊಠಡಿಗೆ ತೆರಳಿದರು. ತುಸು ಹೊತ್ತಿನ ಬಳಿಕ ಮರಳಿ ಹೊರಹೊರಟ ಅವರ ಸೀರೆಗಳು ಆಗ ಪರಿಶುಭ್ರವಾಗಿದ್ದವು! ಇದೆಲ್ಲಾ ಏನು ವಿಚಿತ್ರ ಎಂದು ತನ್ನ ಕಣ್ಣುಗಳನ್ನೇ ನಂಬದಾದ ಪುಂಡಲೀಕ ಮಾರನೇ ರಾತ್ರಿಯೂ ಎಚ್ಚೆತ್ತುಕೊಂಡಿದ್ದು ತರುಣಿಯರು ಬಂದಾಗ ಅವರ ಹತ್ತಿರ ನಡೆದು " ನೀವೆಲ್ಲಾ ಯಾರು? ಇಲ್ಲಿಗೆ ಯಾಕೆ ಹೀಗೆ ಬರುತ್ತೀರಿ? ನಿಮ್ಮ ಬಟ್ಟೆಗಳು ಅದು ಹೇಗೆ ಕ್ಷಣಾರ್ಧದಲ್ಲಿ ಶುಭ್ರಗೊಳ್ಳುತ್ತವೆ ? " ಎಂದೆಲ್ಲಾ ಪ್ರಶ್ನೆಗಳನ್ನಿತ್ತನು. ತಾವು ಪುಣ್ಯನದಿಗಳಾದ ಗಂಗಾ, ಯಮುನಾ, ಸರಸ್ವತೀ ಮೊದಲಾದವರೆಂತಲೂ ಜನರು ಪ್ರತಿನಿತ್ಯ ತಮ್ಮ ಪಾಪಗಳನ್ನು ತೊಳೆಯಲು ನದಿಗಳಲ್ಲಿ ಸ್ನಾನಮಾಡುವುದರಿಂದ ತಮ್ಮ ಸೀರೆಗಳು ಮಲಿನವಾಗುತ್ತವೆ ಎಂದೂ ತಿಳಿಸಿ " ತಂದೆ-ತಾಯಿಗಳಿಗೆ ಕಷ್ಟಕೊಡುತ್ತಿರುವ ನಿನ್ನಂತಹ ಪರಮಪಾಪಿಯನ್ನು ಮಾತ್ರ ಕಾಣಲೇ ಇಲ್ಲ" ಎಂದುಬಿಟ್ಟರು.

ಪುಂಡಲೀಕನಿಗೆ ತಾನು ಮಡುತ್ತಿರುವ ತಪ್ಪಿನ ಅರಿವಾಯಿತು. ಆ ಕ್ಷಣದಿಂದಲೇ ಪುಂಡಲೀಕ ಬದಲಾಗಿ ಹೋದ. ತಂದೆ-ತಾಯಿಗಳ ಸೇವೆಯೇ ತನ್ನ ಪರಮಭಾಗ್ಯ ಮತ್ತು ಆದ್ಯ ಕರ್ತವ್ಯ ಎಂದುಕೊಂಡ ಆತ ತನಗೇ ಶರೀರ ಸ್ವಾಸ್ಥ್ಯವಿಲ್ಲದಿದ್ದರೂ ಮಾತಾ-ಪಿತೃಗಳ ಸೇವೆಯನ್ನು ತೊರೆಯದಾದ. ಮಗನಲ್ಲಾದ ಈ ಅಪೂರ್ವ ಬದಲಾವಣೆ ಕಂಡು ದೇವರೇ ಅವನಿಗೆ ಬುದ್ಧಿ ಕೊಟ್ಟಿರಬೇಕೆಂದು ವೃದ್ಧರು ತಿಳಿದರು. ಯಾವುದೇ ಕೆಲಸದಲ್ಲೂ ತನ್ನ ತಾದಾತ್ಮ್ಯತೆ ಇದ್ದರೆ ಅದು ದೇವರ ಸೇವೆಯಾಗುತ್ತದೆ. ಅದರಂತೇ ಮಾತಾ-ಪಿತೃಗಳ ಸೇವೆಯನ್ನು ಅತಿ ವಿಶೇಷವಾಗಿ ಮಾಡುತ್ತಿರುವ ಪುಂಡಲೀಕನ ಭಕ್ತಿಗೆ ವೈಕುಂಠದ ಮಹಾವಿಷ್ಣು ಪ್ರಸನ್ನಾನಾಗಿ ಪುಂಡಲೀಕನನ್ನು ಕಾಣಲು ಹೊರಟುಬಿಟ್ಟ! ಭಗವಂತ ಮನೆಬಾಗಿಲು ಬಡಿದಾಗ ಪುಂಡಲೀಕ ತಂದೆ-ತಾಯಿಗಳಿಗೆ ಊಟ ನೀಡುತ್ತಿದ್ದ. ಬಾಗಿಲೆಡೆಗೆ ಒಂದು ಇಟ್ಟಿಗೆ ಎಸೆದು ಅದರಮೇಲೆ ನಿಂತುಕೊಳ್ಳುವಂತೆಯೂ ತಾನು ತಂದೆ-ತಾಯಿಗಳ ಸೇವೆ ಮುಗಿದನಂತರ ಬರುವುದಾಗಿಯೂ ಕೂಗಿ ಹೇಳಿದ. ಬಂದಾತ ಭಗವಂತ ಎಂಬ ಸಂದೇಹ ಬಂದಿದ್ದರೂ ತನ್ನ ಕರ್ತವ್ಯದಲ್ಲಿ ವಿಮುಖನಾಗದೇ ಹಾಗೆ ಹೊರಗೇ ಕಾಯಿಸಿದ.

ಇಟ್ಟಿಗೆಯಮೇಲೆ ನಿಂತ ಮಹಾವಿಷ್ಣು ಸಾದಾ ಮಾನವ ರೂಪದಲ್ಲಿದ್ದ! ಸೊಂಟದಮೇಲೆ ಕೈ ಇಟ್ಟುಕೊಂಡು ಕಾದು ನಿಂತಿದ್ದ. ಹೊರಗೆ ಬಂದಾಗ ಪುಂಡಲೀಕನಲ್ಲೇ ಭಗವಂತ ಆತನ ಕ್ಷಮೆಯಾಚಿಸಿದ. ಸೇವಾ ಭಕ್ತಿಯ ಪಾರಮ್ಯವನ್ನು ಕಂಡು ಆನಂದಬಾಷ್ಪ ಸುರಿಸಿದ ವಿಠೋಬ ತಾನು ಯಾರೆಂಬುದನ್ನೂ ತಾನು ಬಂದಿದ್ದೇಕೆ ಎಂಬುದನ್ನೂ ಪುಂಡಲೀಕನಿಗೆ ಅರುಹಿದ. ತನಗೆ ಕೊಟ್ಟ ಈ ದರುಶನ ಭಾಗ್ಯ ಅದೇ ರೂಪದಲ್ಲಿ ತನ್ನಂತಹ ಸಕಲ ಭಕ್ತರಿಗೂ ಇದೇ ಜಾಗದಲ್ಲಿ ಸತತವಾಗಿ ಸಿಗುತ್ತಿರಲಿ ಎಂದು ಪ್ರಾರ್ಥಿಸಿದ ಪುಂಡಲೀಕ. ವಿಠೋಬ "ತಥಾಸ್ತು" ಎಂದು ಅಲ್ಲೇ ನಿಂತುಬಿಟ್ಟ! ನಂತರ ಅದೇ ಜಾಗದಲ್ಲಿ ದೇವಸ್ಥಾನದ ನಿರ್ಮಾಣವಾಯ್ತು.




ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ಯಾ
ಭಯೇನ ಚ ಪ್ರವ್ಯಥಿತಂ ಮನೋ ಮೇ |
ತದೇವ ಮೇ ದರ್ಶಯ ದೇವರೂಪಂ
ಪ್ರಸೀದ ದೇವೇಶ ಜಗನ್ನಿವಾಸ ||

ಮುಂದೊಂದು ಘಟನೆ ಹೀಗಿದೆ: ಮುಂದಿನ ಸಂತ ನಾಮದೇವ ಮಗುವಾಗಿದ್ದಾಗ ಆತನ ತಾಯಿ ಪ್ರತಿನಿತ್ಯ ಮಗನನ್ನು ಕರೆದುಕೊಂಡು ವಿಠೋಬನಿಗೆ ನೈವೇದ್ಯ ಸಲ್ಲಿಸಲು ಬರುತ್ತಿದ್ದಳು. ಒಂದೆರಡು ದಿನ ಅವಳಿಗೆ ಕಾರಣಾಂತರಗಳಿಂದ ದೇವಸ್ಥಾನಕ್ಕೆ ಬರಲಾಗಲಿಲ್ಲ, ಚಿಕ್ಕವನಾಗಿದ್ದ ಮಗನನ್ನು ನೈವೇದ್ಯ ಅರ್ಪಿಸುವಂತೇ ಕಳಿಸಿದ್ದಳು. ಮನೆಯಲ್ಲಿ ಮಡಿಯಲ್ಲಿ [ಸ್ವಚ್ಛತೆಯಲ್ಲಿ] ಮಾಡಿದ ಅಡಿಗೆಯನ್ನು ಪ್ರಥಮವಾಗಿ ದೇವರಮುಂದಿಟ್ಟು ಅದಕ್ಕೆ ಸುತ್ತ ನೀರನ್ನು ಪರಿಷೇಚಿಸಿ ದೇವರಲ್ಲಿ ಸ್ವೀಕರಿಸು ಎಂದು ಪ್ರಾರ್ಥಿಸುವುದು ವಾಡಿಕೆ. ಹಾಗೇ ಮಾಡಿದ ಮಗು ಭಗವಂತನ ಬರುವಿಕೆಗಾಗಿ ಕಾದ. ಕಾದ ಕಾದ ಕಾದ ಭಗವಂತ ಬರಲೇ ಇಲ್ಲ. ಬೇಸರಗೊಂಡ ನಾಮದೇವ ತನ್ನ ಹಣೆಯನ್ನು ಭವಂತನ ಪಾದಕ್ಕೆ ಜಪ್ಪಿ ಜಪ್ಪಿ ಘಾಸಿಮಾಡಿಕೊಳ್ಳತೊಡಗಿದ. ಬಾಲಕನ ಭಕ್ತಿ ಮತ್ತು ಮುಗ್ಧತೆಯನ್ನು ಕಂಡ ಭಗವಂತ ಪ್ರತ್ಯಕ್ಷನಾಗಿ ನೈವೇದ್ಯವನ್ನು ಸ್ವೀಕರಿಸಿ ನಾಮದೇವನ ಮೈದಡವಿದ! " ನಿನ್ನ ದರುಶನ ಪಡೆಯಲು ಬರುವ ಕೋಟ್ಯಂತರ ಜನ ನನ್ನನ್ನು ಸ್ಪರ್ಶಿಸಿ ಆಮೇಲೆ ನಿನ್ನನ್ನು ದರ್ಶಿಸುವಂತೇ ಅನುಗ್ರಹಮಾಡು ಎಂದ ಬಾಲಕನಿಗೆ ಭಗವಂತ " ತಥಾಸ್ತು" ಎಂದ. ನಾಮದೇವ ಇಂದಿಗೂ ಅಲ್ಲಿನ ಪ್ರಥಮ ಮೆಟ್ಟಿಲಲ್ಲಿ ಇದ್ದು ಎಲ್ಲರನ್ನೂ ಕಂಡು ಹರ್ಷಿಸುತ್ತಾನೆ ಮತ್ತು ನಿತ್ಯವೂ ಭಗವಂತನೊಡನೆ ಸಂವಾದ ಮಾಡುತ್ತಾನೆ ಎಂಬುದು ಅಲ್ಲಿನ ನಂಬಿಕೆ.

|| ಮಾಸಾನಾಂ ಮಾರ್ಗಶೀರ್ಷೋಹಮೃತೂನಾಂ ಕುಸುಮಾಕರಃ || ಎಂದು ಭಗವಂತ ಗೀತೆಯಲ್ಲಿ ಅಪ್ಪಣೆ ಕೊಡಿಸಿದ್ದಾನೆ. ಮಾಸಗಳಲ್ಲೇ ಮಾರ್ಗಶೀರ್ಷ ಮಾಸ ತಾನು ಎಂದಿದ್ದಾನೆ. ಈ ಮಾಸದಲ್ಲಿ ವಿಷ್ಣು ಕ್ಷೇತ್ರಗಳ ದರ್ಶನ, ಅಲ್ಲಿನ ಧೂಳಿಯ ಸ್ಪರ್ಶನ, ಅಲ್ಲಿನ ಸೇವೆಗಳ ಅವಲೋಕನ, ಕೀರ್ತನ-ಸಂಕೀರ್ತನಗಳ ಗಾಯನ, ವಾಚನ ಅತ್ಯಂತ ಪುಣ್ಯಪ್ರದ ಎಂಬುದು ಬಲ್ಲವರ ಅನಿಸಿಕೆ. ಗುರು ರಾಘವೇಂದ್ರರು ಧಾರಾವಾಹಿಯ ರೂಪದಲ್ಲಿ ವಿಠೋಬನ ನೆನಪನ್ನು ತಂದಿದ್ದಕ್ಕೆ ಅವರಿಗೆ ನನ್ನ ನಮನ, ಬಹುಶಃ ನಿಮ್ಮದೂ ಕೂಡಾ ...

ಪಂಢರಾಪುರವೆಂಬ ಒಂದು ನಗರ
ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ....

ವಿಠೋಬನಿರುವುದು ನದಿತೀರ
ಅಲ್ಲಿ ಭಂಡಾರಿ ಭಜನೆಯು ವ್ಯಾಪಾರ ...


Tuesday, November 29, 2011

ಚಳಿಗಾಲದ ಒಂದು ದಿನ !


ಚಳಿಗಾಲದ ಒಂದು ದಿನ !
[ಬರಹಗಳು ತ್ವರಿತಗತಿಯಲ್ಲಿ ಪ್ರಕಟಿಸಲ್ಪಟ್ಟಿವೆ, ಓದುಗ ಮಿತ್ರರು ಹಿಂದಿನ ಕೃತಿಗಳನ್ನೂ ಓದಬಹುದು. ಪ್ರಸಕ್ತ ಈ ಲೇಖನ ಯಾವುದೇ ಶಿಕ್ಷಕರನ್ನು ಹೀಗಳೆಯುವ ಕ್ರಮವಲ್ಲ, ಬದಲಾಗಿ ಅಂದಿನ ನಮ್ಮ ಆಗುಹೋಗುಗಳಲ್ಲಿ ಅನುಭವಿಸಿದ ಮಜದ ಮಜಲುಗಳನ್ನೊಳಗೊಂಡಿದ್ದಷ್ಟೇ. ಎಲ್ಲಾ ಶಿಕ್ಷಕರ ಮೇಲೂ ನನಗೆ ಅಪಾರ ಗೌರವವಿದೆ, ಸಹಾನುಭೂತಿ ಇದೆ. ಹೀಗಾಗಿ ಶಿಕ್ಷಕ ಓದುಗರು ಇದನ್ನು ಅನ್ಯಥಾ ಭಾವಿಸದೇ ತಾವೂ ವಿದ್ಯಾರ್ಥಿಯಾಗಿದ್ದಾಗಿನ ನೆನಪುಗಳನ್ನು ತಂದುಕೊಳ್ಳಬಹುದಾಗಿದೆ.]

ಯಾವಾಗ ನೋಡಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಕಲಿಸುವ ಮಾಸ್ತರಮಂದಿ ಸಾಮಾನ್ಯವಾಗಿ ನಿಬಂಧ ಅಂತ ಬರೆಸುವಾಗ ಅವರ ಮೊಟ್ಟ ಮೊದಲ ಆಯ್ಕೆ ’ಮಳೆಗಾಲದ ಒಂದು ದಿನ’. ಹಳ್ಳಿಯ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಳೆಗಾಲದಲ್ಲಿ ಆಗುವ ತೊಂದರೆಗಳು ಹಳ್ಳಿಯ ಮೂಲದ ಬಹುತೇಕರಿಗೆ ಗೊತ್ತು. ಅಲ್ಲಿನ ಹಳ್ಳ-ದಿಣ್ಣೆಗಳು, ಗದ್ದೆ-ಬದುವುಗಳು, ತೋಟತುಡಿಕೆಗಳ ಅಕ್ಕಪಕ್ಕದಲ್ಲೆಲ್ಲೋ ಇರುವ ಕಾಲುದಾರಿಗಳಲ್ಲಿ ಸಾಗಿ ಮುಖ್ಯ ಮಣ್ಣು ರಸ್ತೆಗೆ ತಲುಪಿ ಆ ದಾರಿಯಾಗಿ ಶಾಲೆಗೆ ಹೋಗುವಾಗ ಹಲವು ಸಮಸ್ಯೆಗಳ ಉದ್ಭವ ಆಗುವುದುಂಟು. ಅದನ್ನೇ ಆಧರಿಸಿ ಅನಾದಿ ಕಾಲದ ಯಾರೋ ಮೇಷ್ಟ್ರು ಆರಂಭಿಸಿದ ಆ ಹೆಸರಿನ ಕಥಾನಕ ಇನ್ನೂ ಮುಗಿದಿಲ್ಲವೆಂದರೆ ನಿಮಗೆ ಆಶ್ಚರ್ಯವಾಗಬೇಕು! ಕನ್ನಡ ವ್ಯಾಕರಣದ ಭಾಗವಾಗಿ ನಿಬಂಧ ಬರೆಯುವ ದಿನ ಬಂತೆಂದರೆ ಅಂದು ’ಮಳೆಗಾಲದ ಒಂದು ದಿನ’ದ ಕಥೆ ಬರುವುದು ಒಂದು ಶಾಸ್ತ್ರವೋ ಸಂಪ್ರದಾಯವೋ ಎಂಬಂತೇ ಈ ಅಂಧಾನುಕರಣೆ !

ಆ ಕಾಲದಲ್ಲೇ ’ಮಳೆಗಾಲದ ಒಂದು ದಿನ’ ಕೆಲವು ಮಾಸ್ತರ ಮಂದಿಗೆ ಚಳಿ ಬಿಡಿಸುವ ಆಲೋಚನೆ ಇರುತ್ತಿದ್ದ ವಿರೋಧೀ ವಿದ್ಯಾರ್ಥಿ ಬಣಗಳು ಇರುತ್ತಿದ್ದವು! ಹಾಗಂತ ಅಂಥಾ ಕಟು ದ್ವೇಷವೆಂದಲ್ಲ, ಆದರೂ ಅಲೋಪಥಿಕ್ ಮಾತ್ರೆಗಳನ್ನು ನುಂಗುವ ಕ್ರಾನಿಕ್ ಡಿಸೀಸ್ ಇರುವ ಜನರಹಾಗೇ ಮಾಸ್ತರಮಂದಿ ಕೊಟ್ಟ ಲತ್ತೆಗಳನ್ನು ತಿಂದೂ ತಿಂದೂ ಬೇಸರವಾಗಿ ಯಾವಾಗ ಮಾಸ್ತರ ಮಂದಿಗೆ ಚಳಿ ಬಿಡಿಸುವುದು ಎಂದು ಒಳಗೊಳಗೇ ಹಲ್ಲುಮಸೆಯುತ್ತಿದ್ದರು. ಒಳಗೇ ಕಟಗುಡುವ ಹಲ್ಲಿನ ಸಣ್ಣ ಶಬ್ದ ಅವರ ಅಕ್ಕಪಕ್ಕದಲ್ಲೆಲ್ಲೋ ಕೂತುಕೊಳ್ಳುತ್ತಿದ್ದ ನಮಗೆಲ್ಲಾ ಆಗಾಗ ಕೇಳುತ್ತಿತ್ತು. ನಾವೇನೂ ಮಹಾಸಭ್ಯರಾಗಿದ್ದವರು ಅಂತ ತಿಳೀಬೇಡಿ: ಪರ್ಸಂಟೇಜಿನಲ್ಲಿ ಸ್ವಲ್ಪ ಕಮ್ಮಿ ಇತ್ತು ಎಂದಷ್ಟೇ ಹೇಳಬಹುದು! ಯಾಕೆಂದರೆ ಅಜ್ಜನಮನೆಯಲ್ಲಿ ಎಮ್ಮೆ ಕರುಹಾಕಿದ ನೆವದಲ್ಲಿ ರಜಾ ಘೋಷಿಸಿಕೊಂಡು ವಾರ ಬಿಟ್ಟು ಮರಳಿಬಂದಾಗ ಕೆಲವು ಸರ್ತಿ ಶಾಲೆಯ ಹೊರಗೆ ಬಾಗಿ ನಿಲ್ಲಬೇಕಾಗುತ್ತಿತ್ತು! ಅಥವಾ ಶಾಲೆಯ ಇಡೀ ಕಟ್ಟಡವನ್ನೇ ದೇವಸ್ಥಾನಗಳಲ್ಲಿ ಸುತ್ತುವಂತೇ ಸುತ್ತುತ್ತಾ ಇರಬೇಕಾಗುತ್ತಿತ್ತು. ನಾವು ರಜೆ ಹಾಕಿದರೆ ಈ ಮಾಸ್ತರಮಂದಿಗೆ ಏನಪ್ಪಾ ಅಂಥಾ ತೊಂದ್ರೆ ? ಹೊಟ್ಟೆಕಿಚ್ಚಿನ ಪಾಪಿಗಳು ಎಂದುಕೊಳ್ಳುತ್ತಿದ್ದೆವು ನಾವು. ಈ ಕೆಲವು ಸಂದರ್ಭಗಳಲ್ಲಿ ಮಾತ್ರ ನಾವು ವಿರೋಧೀ ಬಣಗಳಲ್ಲಿ ಗುರುತಿಸಿಕೊಳ್ಳುತ್ತಿದ್ದೆವು ಬಿಟ್ರೆ ಮಿಕ್ಕಿದ ದಿನಗಳಲ್ಲಿ ನಾವೆಲ್ಲಾ ಗುರುಗಳ ಪಕ್ಷವೇ! ಅಲ್ಲಿ ’ಕುರ್ಚಿ’ ಸಿಗಲಿಲ್ಲ ಎಂಬ ರಾಜಕಾರಣದ ಅಂಶ ಲವಲೇಶವೂ ಇರಲಿಲ್ಲ. ರಜೆ ಹಾಕಿದಾಗ ಮಾಸ್ತರಮಂದಿ ಮಾಡುತ್ತಿದ್ದ ಕೆಂಗಣ್ಣು ಹೊರತುಪಡಿಸಿ ನಮ್ಮ ಗುರುಗಳೆಲ್ಲಾ ಬಹಳ ಒಳ್ಳೆಯವರೇ.

ಅಷ್ಟಕ್ಕೂ ಮಾಬ್ಲ, ಸುಬ್ರಾಯ ಇಂಥವ್ರೆಲ್ಲಾ ಕಾಯಮ್ಮಾಗಿ ಆಡಿಕೊಳ್ಳುತ್ತಿದ್ದ ಪಿಸುಮಾತುಗಳು ಆಗಾಗ ಹಂಗಾಮಿಗೆ ಅವರ ಪಕ್ಷ ಸೇರುತ್ತಿದ್ದ ನಮಗೂ ಗೊತ್ತಾಗುತ್ತಿದ್ದವು! ವಿರೋಧೀ ಬಣದ ಎಷ್ಟು ಪ್ರಬಲವಾಗಿತ್ತೆಂದರೆ ನಾಯಕನೇ ಇಲ್ಲದಿದ್ದರೂ ಮುಂಬೈನ ಡಬ್ಬಾವಾಲಾಗಳ ರೀತಿ ಕೆಲಸ ನಿರ್ವಹಿಸುವುದರಲ್ಲಿ ಸಮರ್ಥವಾಗಿತ್ತು; ಸಶಕ್ತವಾಗಿತ್ತು. ಮಾಸ್ತರಮಂದಿ ಶಾಲೆ ಮುಗಿಸಿ ಮನೆಗೆ ಸಾಗಿದ ಮೇಲೆ ಹಾದೀಲೋ ಬೀದೀಲೋ ಯಾವುದೋ ಮರದ ಕೆಳಗೆ ಆಗಾಗ ಬೈಠಕ್ಕು ನಡೀತಿತ್ತು. ಬೈಠಕ್ಕಿನ ವಿಷಯ ಮಾತ್ರ ದಯವಿಟ್ಟು ಕೇಳಬೇಡಿ : ಅದೊಂಥರಾ ’ ಬೆಕ್ಕಿಗೆ ಗಂಟೆ ಕಟ್ಟುವ ’ ಹಾಗಿನದು. ಹೋಗ್ಲಿ ಹೇಳೇಬಿಡ್ಲಾ? ಎದುರಾಗುವ ಮಾಸ್ತರಮಂದಿಗೆ ಎದುರಾ ಎದುರೇ ತಕ್ಕ ಶಾಸ್ತಿ ಮಾಡಿ ಬಾಕಿ ಮಕ್ಕಳಿಂದ ಶಹಭಾಸ್‍ಗಿರಿ ಪಡೆಯುವುದೇ ಆಗಿರುತ್ತಿತ್ತು. " ನೋಡ್ಡೋ ನೋಡ್ಡೋ " ಎಂದು ನೋಡುವುದಕ್ಕೇ ಒತ್ತು ಕೊಟ್ಟು ಪೌರುಷ ಕೊಚ್ಚುವ ಉತ್ತರಕುಮಾರನ ರೀತಿಯಲ್ಲಿ ಮೆರೆಯಲಿಚ್ಛಿಸುವ ಮಕ್ಕಳಿದ್ದರು. ಆದರೆ ಅಂದಿನ ದಿನಗಳಲ್ಲಿ ನಮ್ಮಲ್ಲಿನ ಪಾಲಕರಿಗೆ ಈ ಮಾಸ್ತರಮಂದಿ ಯಾವುದೇ ದೂರು ನೀಡುತ್ತಿರಲಿಲ್ಲ; ಇದು ಮಾತ್ರ ಅವರ ಔದಾರ್ಯವನ್ನು ಎತ್ತಿ ತೋರುತ್ತಿತ್ತು. ಅಲ್ಲೊಂದು ರಾಜೀ ಸೂತ್ರವೂ ಇತ್ತು: ಮಾಸ್ತರಮಂದಿ ಅಲ್ಲೀ ಇಲ್ಲೀ ಯಾರ್ಯಾರದ್ದೋ ಮನೇಲಿ ಇಸ್ಪೀಟು ಆಡಿದ್ದನ್ನೋ ಕಾಯಿವ್ಯಾಪಾರ ಮಾಡಿದ್ದನ್ನೋ ಕಂಡ ವಿರೋಧೀ ಬಣಗಳವರು ಆಗಾಗ ದೂರದಿಂದ ಬರುವ ’ಇನೇಶ ಭಟ್ಟ’ [ಇನ್ಸ್‍ಪೆಕ್ಟರ್ ಎಂದು ತಿಳಿಯಿರಿ, ಈ ಕುರಿತು ಹಿಂದಿನ ನನ್ನ ಪ್ರಬಂಧವೊಂದರಲ್ಲಿ ವಿವರವಾಗಿ ಹೇಳಿದ್ದೇನೆ]ರಿಗೆ ಹೇಳಿಬಿಟ್ಟರೆ ಎಂಬ ಅಪಾಯದ ಅರಿವಿರುವುದರಿಂದ ಅದೊಂಥರಾ ’ ಮ್ಯೂಚ್ವಲ್ ಅಂಡರ್ ಸ್ಟ್ಯಾಂಡಿಂಗು’ !

’ಮಳೆಗಾಲದ ಒಂದು ದಿನ’ ಎಂದ ತಕ್ಷಣ ನಾವೆಲ್ಲಾ ಕೆಲವು ಜನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದುದು " ಮಾಸ್ತರರ ಹಳೇ ಜಾಕೀಟು ಕಿಲೋಮೀಟರು ದೂರದವರೆಗೂ ತನ್ನ ಮುಗ್ಗಿದ ’ಪರಿಮಳ’ ಹಬ್ಬಿಸಿತ್ತು " ಎಂತಲೋ ಅಥವಾ " ಮಾಸ್ತರು ದೇವಪ್ಪಶೆಟ್ಟರ ಮನೆಯ ಅಂಗಳದ ಹಾದಿಯಲ್ಲಿ ಹಾವಸೆ ತುಳಿದು ದೊಪಕ್ಕನೆ ’ದುಡ್ಡು ಹೆಕ್ಕಿದರು’ " ಹೀಗೆಲ್ಲಾ ಇರುತ್ತಿದ್ದವು! ವಾಸ್ತವದ ಸಂಗತಿ ನಿಮ್ಮಲ್ಲಿ ಹೇಳದೇ ಬಚ್ಚಿಡಲು ಸಾಧ್ಯವೇ? ನಮ್ಮ ಕರಾವಳಿಯಲ್ಲಿ ಧೋ ಎಂದು ಸುರುಹಚ್ಚುವ ಮಳೆಯಲ್ಲಿ ವಾರಗಟ್ಟಲೆ ಒಮ್ಮೊಮ್ಮೆ ಮಿತ್ರನ ದರುಶನವೇ ಆಗುವುದಿಲ್ಲ. ಯಾವಾಗ ಆ ಫ್ರೆಂಡು ಬರುವುದಿಲ್ಲವೋ ಒದ್ದೆಯ ಪಸೆ ಹಾಗ್ಹಾಗೇ ಇದ್ದು ಬಟ್ಟೆಗಳೆಲ್ಲಾ ಒಂಥರಾ ಗಬ್ಬು ನಾರುತ್ತವೆ, ಥೂ ! ಅದರಲ್ಲಂತೂ ಸಿಗುವ ಸಂಬಳದಲ್ಲಿ ಕಷ್ಟಪಟ್ಟು ಎರಡು ಜೋಡೀ ಪ್ಯಾಂಟು ಶರ್ಟು ಹೊಲಿಸಿಕೊಳ್ಳುತ್ತಿದ್ದ ಮಾಸ್ತರಮಂದಿಗೆ ವಾರಾಂತ್ಯದಲ್ಲಿ ತೊಳೆದು ಅವು ಒಣಗದೇ ಇದ್ದಾಗ ಬಹಳ ಪೇಚಾಟ. ಕಟ್ಟಿಗೆ ಒಲೆಗೆ ಎತ್ತರದಲ್ಲಿ ಬಿದಿರಿನ ಗಳ ಅಡ್ಡಡ್ಡ ಕಟ್ಟಿ ಆ ಸೆಕೆಗೆ ಬಟ್ಟೆ ಒಣಗಿಸುವ ಪ್ರಯತ್ನವೂ ನಡೆಯುತ್ತಿತ್ತು. ಸೋನೆ ಮಳೆಯಲ್ಲಿ ಓಡಾಡಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಅಲ್ಲಲ್ಲಿ ಅರ್ಧರ್ಧ ನೆನೆಯುವ ಬಟ್ಟೆ ಕೆಲವೊಮ್ಮೆ ತನ್ನ ಅಮೋಘ ’ರಸದೌತಣ’ವನ್ನು ಸುತ್ತಲ ಎಲ್ಲರಿಗೂ ಕೊಡಮಾಡುವುದು ಸರ್ವೇ ಸಾಮಾನ್ಯ! ಮೂಗಿಗೆ ಪ್ಲಾಸ್ಟರ್ ಹಾಕಿಕೊಂಡರೂ ಒಡೆದು ಒಳನುಗ್ಗುವ ಅಸಾಮಾನ್ಯ ’ಪರಿಮಳ’ಕ್ಕೆ ’ಮಾರಿಹೋಗದವರೇ’ ಇಲ್ಲ! ಮಳೆಗಾಲದಲ್ಲಿ ಅದಕ್ಕೆಂತಲೇ ನಾವು ಕೆಲವು ಮನೆಗಳ ಕಡೆಗೆ ತಲೆಯನ್ನೂ ಹಾಕಿ ಮಲಗುತ್ತಿರಲಿಲ್ಲ!

ಗೂಟಕ್ಕೆ ಕಟ್ಟಿದ ಹರಕೆಯ ಕುರಿಯಂತೇ ನಾತವನ್ನು ತಾಳಲಾರದೆಯೂ ತಾಳಿಕೊಳ್ಳಬೇಕಾದ ಅಡ್ಜೆಸ್ಟ್‍ಮೆಂಟ್ ವ್ಯವಹಾರದಲ್ಲಿ ವಾಕರಿಕೆ ಬರುವಂತಾದರೂ ಮಾಸ್ತರಿಗೆ ಹೇಳಲುಂಟೇ ? ಅದರಲ್ಲಂತೂ ಕೆಲವು ಜನ ಹನಿಯುವ ನೆಗಡಿಯ ಮೂಗಿಗೆ ಕರವಸ್ತ್ರ ಹಿಡಿದು ಸೂಂ ...ಸೂಂ ... ರಪ್ ರಪ್ ರಫ್ ಎಂದು ಗೊಣ್ಣೆ ಎಳೆದು ಮಡಚಿ ಅದನ್ನು ಮತ್ತದೇ ಪ್ಯಾಂಟಿನಲ್ಲಿ ತುರುಕಿಕೊಂಡಿದ್ದನ್ನು ನೋಡಿಬಿಟ್ಟರೆ ದಿನಗಟ್ಟಲೆ ಊಟ-ತಿಂಡಿ ಬೇಡವಾಗಿ ಬಿಡುತ್ತಿತ್ತು. ನಾವೆಲ್ಲಾ ಹೇಗೇ ಅಂದರೆ ಊಟಕ್ಕೆ ಕೂತಾಗ ’ಲಂಡನ್ನಿನ’ ಸುದ್ದಿ ಬಂದರೂ ಸಹಿಸದ ಜನ; ಕಾವಲಿಯಲ್ಲಿ ಜಿಲೇಬಿ ಬಿಡುವುದಕ್ಕೂ ಲಂಡನ್ನಿಗೆ ಕೂರುವುದಕ್ಕೂ ಸಾಮ್ಯತೆ ಕಾಣುವುದರಿಂದ ಅದನ್ನೆಲ್ಲಾ ನೆನೆಸಿಕೊಳ್ಳಲೂ ಒಂಥಾರಾ ಆಗುವ ಜನ. ಅಂಥದ್ದರಲ್ಲಿ ಸಾಕ್ಷಾತ್ ಸಿಂಬಳದ ಪರಮೋಚ್ಚ ದರ್ಶನ ಮಾಸ್ತರರ ಕರವಸ್ತ್ರದಲ್ಲಿ ನಡೆದಾಗ ಇನ್ನೇನು ಕತ್ತು ಮುರಿಯಲು ಎತ್ತಿದ ಕಟುಕನ ಕೈಯ್ಯ ಕೋಳಿಯ ಅವಸ್ಥೆ ನಮ್ಮದಾಗುತ್ತಿತ್ತು; ಆದರೂ ಪ್ರಾಣಮಾತ್ರ ಇರುತ್ತಿತ್ತು !

ಆಗಾಗ ಬೀಡೀ ಧಂ ಎಳೆಯುವ ಹವ್ಯಾಸದ[ಸ್ವಲ್ಪ ಮರ್ಯಾದೆ ಕೊಡೋಣ ಚಟ ಎನ್ನಬಾರದು,ಎಷ್ಟೆಂದರೂ ಮಾಸ್ತರಲ್ಲವೇ?] , ’ಅಗ್ನಿಹೋತ್ರಿ’ ಗಳೆಂದು ವಿರೋಧೀ ಬಣದಿಂದ ಬಿರುದಾಂಕಿತಗೊಂಡ ಮಾಸ್ತರೊಬ್ಬರು ಎದುರಿಗೆ ಸೇದದಿದ್ದರೂ ಸೇದಿದ ತರುವಾಯ ತರಗತಿಗೆ ಮರಳಿದ ಅವರ ಬಾಯಿಂದ ಕೊಳೆತ ಬೀಡೀ ಮೋಟಿನ ಹೊಗೆಯ ಅನಪೇಕ್ಷಿತ ಸುಗಂಧ ದಸರಾ ಜಂಬೂಸವಾರಿಯಂತೇ ಗಜಗಾಂಭೀರ್ಯದಿಂದ ಮುಂದಕ್ಕೆ ಮುಂದಕ್ಕೆ ಮುಂದಕ್ಕೆ ನಿಧಾನವಾಗಿ ನಮ್ಮೆಡೆಗೆ ಸಾಗಿಬರುತ್ತಿತ್ತು! ಹಲ್ಲುಜ್ಜುವುದನ್ನೇ ಮರೆತಹಾಗಿರುವ ಅವರ ಬಾಚಿ ಹಲ್ಲುಗಳ ಸಂದಿಯಲ್ಲಿ ಕಪ್ಪುಗಟ್ಟಿರುವುದು ಕಾಣಿಸುತ್ತಿತ್ತು, ಕೈಲಿರುವ ಕಡ್ಡಿಯೊಂದನ್ನು ಅನಾಯಾಸವಾಗಿ ಆಗಾಗ ಹಲ್ಲಿಗೆ ಹಾಕಿ-ತೆಗೆದು ಹಾಕಿ-ತೆಗೆದು ಮಾಡುವುದರಿಂದ ಜಂಬೂಸವಾರಿಯ ಸ್ತಬ್ಧ ಚಿತ್ರಗಳು ಹಲವು ಹೊರಬರುತ್ತಿದ್ದವು ! ಇನ್ನೊಬ್ಬ ಮಾಸ್ತರು ಪಾಠಮಾಡುವಾಗ ಎದುರಿಗೆ ಕುಳಿತ ವಿದ್ಯಾರ್ಥಿಗಳಿಗೆ ಬಾಯಿಯ ’ತೀರ್ಥ ಪ್ರೋಕ್ಷಣೆ’ ಸದಾ ಅಗುತ್ತಿತ್ತು. ಇಂತಹ ಮಾಸ್ತರುಗಳ ಗುಂಪಿನ ಮಧ್ಯೆ ನಾವು ಮಾತ್ರ ಯಾವ ಪಕ್ಷದಲ್ಲೂ ಪಕ್ಕಾ ಆಗದೇ ಸ್ವತಂತ್ರ ಅಭ್ಯರ್ಥಿಗಳಾಗಿ ಪರೀಕ್ಷೆ ಎದುರಿಸುತ್ತಿದ್ದೆವು!

’ಮಳೆಗಾಲದ ಒಂದು ದಿನ’ ಎನ್ನುವ ಬದಲು ಬೇರೇ ಹೆಸರೇ ಇರಲಿಲ್ಲವೇ ನಿಬಂಧಕ್ಕೆ ? ಗೊತ್ತಿಲ್ಲ. ಆದರೆ ನೀವು ಎಲ್ಲಿಂದೆಲ್ಲಿಗಾದರೂ ಹೋಗಿ ಇಂದಿಗೂ ನಮ್ಮ ಸರಕಾರೀ ಪ್ರಾಥಮಿಕ ಶಾಲೆಗಳಲ್ಲಿ ಕಾಣುವ ಅಪ್ಪಟ ಸತ್ಯ ಯಾವುದೆಂದರೆ ’ಮಳೆಗಾಲದ ಒಂದು ದಿನ’ ! ಮಳೆಗಾಲ ಮುಗಿದಮೇಲೆ ಚಳಿಗಾಲ ಬರಬೇಕಲ್ಲ. ಚಳಿಗಾಲದಲ್ಲಿಯೂ ದಿನಗಳಿರುವುದಿಲ್ಲವೇ? ಎಂಬುದು ನಮ್ಮ ಹಲವರ ಅಂತರಂಗದಲ್ಲಿ ಹುಟ್ಟಿದ್ದ ಪ್ರಶ್ನೆಯಾದರೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಗೋಪಾಲ ಮಾಸ್ತರು ಸುಬ್ರಾಯನ ಕೆನ್ನೆಗೆ ಹೊಡೆದು ಹಲ್ಲು ಅಲುಗಾಡತೊಡಗಿದ್ದು ನಮ್ಮಲ್ಲಿನ ಒಂದು ಬೈಠಕ್ಕಿನಲ್ಲಿ ಎಲ್ಲರಿಗೂ ತಿಳಿದುಬಂದ ವಿಷಯ. ಸುಬ್ರಾಯ ಮನೆಯಲ್ಲಿ ಹೇಳಿದರೆ ತಪ್ಪುಮಾಡಿದ್ದಕ್ಕೆ ಮತ್ತೆ ಮನೆಯವರಿಂದಲೂ ಶಿಕ್ಷೆಯಾಗುತ್ತಿತ್ತು; ಅಲ್ಲಿ ಅಪ್ಪ ಅಲುಗಾಡುವ ಹಲ್ಲನ್ನು ಇಕ್ಕಳದಿಂದ ಪೂರ್ತಿ ಕಿತ್ತುಹಾಕುವ ಸಂಭವನೀಯತೆಯೇ ಜಾಸ್ತಿ ಇದ್ದಿದ್ದರಿಂದ ವಿಷಯ ನಮ್ಮೊಳಗೇ ಗೌಪ್ಯವಾಗಿತ್ತು! ಪಾಪದ ಹುಡುಗ ನೋವನ್ನು ಸಹಿಸಿ ಕೆನ್ನೆ ಊದಿಸಿಕೊಂಡು ಮನೆಗೆ ಹೋಗೀ ಬಂದು ಮಾಡುತ್ತಿದ್ದ; ಮನೆಯಲ್ಲಿ ಹಲ್ಲುನೋವಿಗೆ ಹೀಗಾಗಿದೆ ಎಂದು ಲವಂಗದ ಎಣ್ಣೆ ಹಾಕಿಕೊಂಡಿದ್ದನಂತೆ.

ಮಳೆಗಾಲ ಮುಗಿದು ದೀಪಾವಳಿ ಕಳೆದು ಚಳಿಗಾಲ ಬಂದೇ ಬಂತು. ಹಾವಿನ ದ್ವೇಷ ಹನ್ನೆರಡು ವರುಷ ಇರುತ್ತೋ ಇಲ್ಲವೋ ಗೊತ್ತಿಲ್ಲ ಸುಬ್ರಾಯನ ದ್ವೇಷ ಚಳಿಗಾಲದವರೆಗಂತೂ ಜೀವಂತವಿತ್ತು! ದ್ವೇಷಕ್ಕೆ ಕೆಲವೊಮ್ಮೆ ಅಸಾಧ್ಯ ಧೈರ್ಯವೂ ಬಂದುಬಿಡುತ್ತದೆ. ಗೋಪಾಲ್ ಮಾಸ್ತರು ಕಂಡರೆ ಕಚ್ಚಲು ಹವಣಿಸುವ ಹಾವಿನಂತಾಗುತ್ತಿದ್ದ ಸುಬ್ರಾಯ ಏನಾದರೂ ಮಾಡಿ ಮಾಸ್ತರಿಗೆ ಬುದ್ಧಿಕಲಿಸಬೇಕೆಂದು ಆಲೋಚಿಸ ಹತ್ತಿದ್ದ! ಗೋಪಾಲ್ ಮಾಸ್ತರರ ಊರಿಗೂ ನಮ್ಮ ಶಾಲೆಗೂ ಕೇವಲ ೩-೪ ಮೈಲು ಅಂತರ. ಮನೆಯಿಂದ ಬಂದು-ಹೋಗಿ ಮಾಡಲು ಅನುಕೂಲವಾಗುತ್ತದೆ ಎಂದು ಗೋಪಾಲ್ ಮಾಸ್ತರು ಈ ಶಾಲೆಗೇ ವರ್ಗ[ಟ್ರಾನ್ಸ್‍ಫರ್] ಮಾಡಿಸಿಕೊಂಡಿದ್ದರು. ಹತ್ತು ವರ್ಷವೇ ಆಗಿಬಿಟ್ಟಿತ್ತೋ ಏನೋ ಅಂತೂ ಹಾಗೂ ಹೀಗೂ ಕಸರತ್ತು ನಡೆಸಿ ಅವರು ನಮ್ಮ ಶಾಲೆಯಲ್ಲೇ ಕಾಯಂ ಆಗಿ ಠಿಕಾಣಿ ಹೂಡಿಬಿಟ್ಟಿದ್ದರು. ನದಿ ದಾಟಿ ಹೋಗುವ ಶಾಲೆಗಳಿಗೆ ಹಾಕಿಬಿಟ್ಟರೆ ಓಡಾಡುವುದು ಕಷ್ಟ ಎಂಬುದು ಅವರ ಅನಿಸಿಕೆ. ಆ ಕಾಲದಲ್ಲಿ ಹಳ್ಳಿಗಳಲ್ಲಿ ವಾಹನ ಸೌಕರ್ಯ ಕಮ್ಮಿ ಇತ್ತು. ಬೆಳಿಗ್ಗೆ ಒಂದು -ರಾತ್ರಿ ಒಂದು ಹೀಗೇ ವೈದ್ಯರು ಗುಳಿಗೆ ಬರೆದಂತೇ ಬಸ್ಸುಗಳು ಓಡುತ್ತಿದ್ದವು. ಬಸ್ಸು ತಪ್ಪಿಹೋದರೆ ಅಂದಿನದಿನ ಫಜೀತಿಯೇ. ಅದರಲ್ಲಂತೂ ಸಾಯಂಕಾಲದ ಬಸ್ಸು ತುಂಬಾ ಮಹತ್ವದ್ದು. ಚಳಿಗಾಲದಲ್ಲಿ ಕತ್ತಲಾಗುವುದೂ ಬೇಗ. ಅಹ-ಕ್ಷಯ = ಅವಚಯ [ಹಗಲು ಕಡಿಮೆ ರಾತ್ರಿ ಹೆಚ್ಚು].

ಹೀಗೇ ಒಂದು ದಿನ ಗೋಪಾಲರು ಶಾಲೆ ಮುಗಿಸಿ ಕಳ್ಳೇ ಬಯಲಿನ ಗದ್ದೆಹಾಳಿಯಮೇಲೆ ನಡೆದು ಹೋಗುತ್ತಿದ್ದರು. ಸಮಯ ಆರೂ ಚಿಲ್ಲರೆ ಆಗಿರಬಹುದು. ಆಗಲೇ ಮಬ್ಬುಗತ್ತಲು. ಹಾದಿಯ ಪಕ್ಕದಲ್ಲಿ ಅದೆಲ್ಲೋ ಅಡಗಿದ್ದ ಸುಬ್ರಾಯ ವಿಚಿತ್ರವಾಗಿ ಕೂಗಿಬಿಟ್ಟ. ಅವಸರದಲ್ಲಿ ಓಡುತ್ತಿದ್ದ ಗೋಪಾಲ್ ಮಾಸ್ತರು ಹೆದರಿ ಹಾರಿ ಗದ್ದೆಗೆ ಬಿದ್ದರು. ಹಾರಿಬಿದ್ದ ರಭಸಕ್ಕೆ ಕಾಲು ಉಳುಕಿ ಹೋಯ್ತು. ರಿಪೇರಿಗೆ ಸುಮಾರು ಒಂದು ತಿಂಗಳೇ ಬೇಕಾಯ್ತು! ಗುಟ್ಟು ನಿಮ್ಮಲ್ಲೇ ಇರಲಿ -- ವಿಚಿತ್ರವಾಗಿ ಕೂಗಿದ್ದು ದೆವ್ವ ಎಂದಷ್ಟೇ ತಿಳಿದ ಗೋಪಾಲರಾಯರಿಗೆ ಅದು ಸುಬ್ರಾಯನ ಕಿತಾಪತಿ ಎಂಬುದು ಇನ್ನೂ ಗೊತ್ತಿಲ್ಲ; ಹೌದಲ್ವಾ ಪಾಪ ಈಗ ಮಾಸ್ತರು ಮಕ್ಕಳ ಜೊತೆಗೆ ಬೇರೇ ಏಲ್ಲೋ ಇದ್ದಾರೆ ಅನಿಸುತ್ತದೆ, ನೀವು ಹೇಳಿದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಬಿಡಿ, ಇನ್ನು ಸುಬ್ರಾಯ ನಿಮಗೆಲ್ಲಿ ಸಿಗುತ್ತಾನೆ ? ಆತ ನನಗೇ ಸಿಗದೇ ಇಡೀ ೨೦ ವರ್ಷಗಳೇ ಕಳೆದಿವೆ.


Monday, November 28, 2011

ಹಸಿರು ಪರಿಸರದಲ್ಲಿ


ಹಸಿರು ಪರಿಸರದಲ್ಲಿ

ಹಸಿರು ಪರಿಸರದಲ್ಲಿ ಮಾಮರದ ಕೊಂಬೆಯಲಿ
ಪಿಸುಮಾತನುಲಿದಿತ್ತು ಗಿಳಿಯ ಮರಿಯೊಂದು
ಹಸಿವು ಬಾಧಿಸುತಿಹುದು ತಾರೆನುತ ಊಟವನು
ಕೊಸರಾಟ ನಡೆಸಿತ್ತು ತಾಯ ಬಳಿನಿಂದು

ಗೊರವಂಕ ಕೆಂಬೂತ ಗುಟುರುತಿರಲಲ್ಲಲ್ಲಿ
ತೆರೆದಿತ್ತು ಬೆಳ್ಮುಗಿಲು ದಿನದ ಅಂಗಡಿಯ
ಹೊರಹೊರಟ ಕಾಗೆಗಳು ಕೋಗಿಲೆಗಳಂದದಲಿ
ಕರೆಕರೆದು ಸಾರಿದವು ಇರಿಸಿ ದಾಂಗುಡಿಯ

ಹರೆವ ಬಳ್ಳಿಯು ಬೆಳೆದು ಚಿಗುರುತ್ತ ಸಾಗಿತ್ತು
ಹರೆಯದುತ್ಸುಕದಲ್ಲಿ ಹಿರಿಮರವನಾತು
ಗೆರೆಗೆರೆಯ ಚಿತ್ತಾರ ಬಾನ ಬಾಂದಳದಲ್ಲಿ
ಅರೆರೆ ಅದ್ಭುತ ರಮ್ಯ ಕಂಡೆ ಮನಸೋತು !

ಮಾಗಿ ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ತೂಗಿನಲಿದಾಡ್ವ ಗುಲಾಬಿದಳಗಳಲಿ
ಮಾಗಿಮಂಜಿನ ಹನಿಯು ಮುತ್ತು ಮಣಿ ಪೋಣಿಸಿದೆ
ಸಾಗುತಿದೆ ಭ್ರಮರದೋಂಕಾರ ಗಿಡಗಳಲಿ

ದೂರ ಬೆಟ್ಟಗಳಾಚೆ ಭಾನು ಹೊಳೆಯುತಲಿದ್ದ
ಹೀರಿ ತಣ್ಣನೆ ಹೊಗೆಯ ಕಿರಣನೇಯುತಲಿ
ಊರು ಕೇರಿಗಳಲ್ಲಿ ಜನವೆದ್ದು ಗಡಬಡಿಸಿ
ಬೀರಿದರು ರಂಗೋಲಿ ಹೂಗಳಾಯುತಲಿ

Saturday, November 26, 2011

ಶಿಖರಗಾಮಿಗಳ ಶಿಖರಗಮನದ ಶಕೆಯೊಳಕ್ಕೆ ಇಳಿದು


ಶಿಖರಗಾಮಿಗಳ ಶಿಖರಗಮನದ ಶಕೆಯೊಳಕ್ಕೆ ಇಳಿದು

ಒತ್ತಡದಲ್ಲಿ ಬರೆಯುವ ಮನಸ್ಸು ಕೆಲವೊಮ್ಮೆ ಬರುವುದೇ ಇಲ್ಲ; ಆದರೂ ಬರೆಯುವ ತೆವಲು ಕಮ್ಮಿಯಾಗುವುದಿಲ್ಲ. ಇದೊಂಥರಾ ಬಸ್ಸಿಗೆ ಹೋಗುವ ಮಲಬದ್ಧತೆ ಪ್ರಕೃತಿಯವರಿಗೆ ಆಗುವ ಸಂಕಟ ! ಇಷ್ಟಂತೂ ಸತ್ಯ, ಹೊರಗೆಹೋದಾಗ ಅವರಿಗೆಷ್ಟು ಖುಷಿಯಾಗುತ್ತದೋ ಅದರ ದುಪ್ಪಟ್ಟು ದಿಪ್ಪಟ್ಟು ಖುಷಿ ಬರೆದಾಗ ಆಗುತ್ತದೆ!ಆಮೇಲೆ ಒಂದಷ್ಟು ಹೊತ್ತು ಮನಸ್ಸು ಮತ್ತೆ ಬಸಿರುಗಟ್ಟುವವರೆಗೆ ನಿರಾಳ. ಇದ್ದಿದ್ದೇ ಬಿಡಿ ಮತ್ತದೇ ತೆವಲು, ಮತ್ತದೇ ಬರೆಯುವ ಗೋಳು ಗೀಳು ಎಲ್ಲಾ; ಬೀಡಿ ಚಟದವರಿಗೆ ಯಾವುದೂ ಸಿಗದಿದ್ದರೆ ಸೇದಿಬಿಸಾಕಿದ ಮೋಟು ಬೀಡಿಯಾದರೂ ಸರಿಯೇ ಅಂತೂ ಆ ಹೊತ್ತಿಗೆ ಆಗಬೇಕು; ಸಿಕ್ಕಿದ ಮೋಟುಬೀಡಿ ಕೊಡುವ ಚಣಕಾಲದ ಪರಮಾನಂದ ಸಿಕ್ಕುವ ತುಸುಸಮಯದ ಬರವಣಿಗೆ ಕೊಡುವ ಮಹದಾನಂದಂತೆಯೇ ಏನೋ. ಕೇಳಿ ಗೊತ್ತಷ್ಟೇ ಬಿಟ್ಟರೆ ಸದ್ಯ ಬೀಡಿ ಸಿಗರೇಟಿನ ’ಅಂಟುರೋಗ’ವಿಲ್ಲ; ಬಳಕೆ ಮಾಡಿಯೇ ಗೊತ್ತಿಲ್ಲ. ಅದಕ್ಕೇ ತಮಾಷೆಗೆ ಮಿತ್ರರೊಬ್ಬರು ಹೇಳುತ್ತಿದ್ದರು " ಸಿಗರೇಟು ಸೇದುವುದರಿಂದ ಹೊಟ್ಟೆಯೊಳಗಿನ ಕ್ರಿಮಿಗಳೆಲ್ಲಾ ನಾಶವಾಗುತ್ತವೆ " ಎಂದು ! ಆಂಗ್ಲ ಸಂಶೋಧಕರು ಅದನ್ನೂ ಒಂದು ದಿನ ಸಮ್ಮತಿಸಲೂ ಬಹುದು ಯಾರಿಗ್ಗೊತ್ತು ?

ನನ್ನ ಓದಿನ ಹರದಾರಿಯಲ್ಲಿ ಕರ್ನಾಟಕ ಸರಕಾರ ಪಠ್ಯವಾಗಿ ರೂಪಿಸಿದ ’ಶಿಖರಗಾಮಿಗಳು’ ಮಾತ್ರ ಮರೆಯಲಾಗದ ಉತ್ತಮ ಪುಸ್ತಕಗಳಲ್ಲಿ ಒಂದು. ಅದು ನೀಡಿದ ಕಿಕ್ಕು ಇಂದಿಗೂ ನೆನಪಾಗುತ್ತದೆ. ಮೊದಲೇ ನನಗೆ ಶಿಖರಗಳು ಅವುಗಳ ಮಜಲುಮಜಲುಗಳಲ್ಲಿ ಇರಬಹುದಾದ ಬಹುಥರದ ಜೀವಿಗಳು, ಅಲ್ಲಿನ ತರುಲತೆಗಳು, ಕಾಣಬಹುದಾದ ವಿವಿಧ ಆಕಾರಗಳು ಹೀಗೆಲ್ಲಾ ತಿಳಿಯಬೇಕೆಂಬ ಬಹುಮುಖದ ಆಸಕ್ತಿ. ಡಾಕ್ಟರು ಹೇಳಿದ್ದೂ ಹಾಲು ರೋಗಿ ಬಯಸಿದ್ದೂ ಹಾಲು ಅನ್ನೋ ಹಾಗೇ ನಾನು ಸಹಜವಾಗಿಯೇ ಓದಲು ಆಸೆ ಪಟ್ಟಿದ್ದ ಶಿಖರಗಳ ಕುರಿತಾದ ಕಿರು ಹೊತ್ತಗೆ ಅದಾಗಿತ್ತು. ನೀವೆಲ್ಲಾ ಸಾಧ್ಯವಾದರೆ ಓದಬೇಕು, ಕೆಲವರು ಓದಿರಲೂ ಸಾಕು. ಅದರಲ್ಲಿ ಹಿಲರಿ ಮತ್ತು ತೇನಸಿಂಗ್ ಇಬ್ಬರ ಮೌಂಟ್ ಎವರೆಸ್ಟ್ ಆರೋಹಣದ ಸಾಹಸಗಾಥೆಯನ್ನು ಸಾದ್ಯಂತ ವರ್ಣಿಸಲಾಗಿದೆ. ಮಾಗಿಯ ಚಳಿಯಲ್ಲಿ ಮಲೆನಾಡ ನೆಲದಲ್ಲಿ ಬಚ್ಚಲುಮನೆಯ ಒಲೆಯ ಮುಂದೆ ರಗ್ಗು ಹೊದೆದು ಕೂತು ಬಿಸಿ ಕಾಫೀ ಗುಟುಕರಿಸುತ್ತಾ ಅದನ್ನೇ ಪಕ್ಕವಾದ್ಯಗಳಂತೇ ಇಟ್ಟುಕೊಂಡು ’ಶಿಖರಗಾಮಿಗಳ’ನ್ನು ಓದುತ್ತಿದ್ದರೆ ಜಗತ್ತೆಲ್ಲಾ ಸುಂದರ, ಸುಮನೋಹರ!

ಮನುಷ್ಯರ ಜೀವನದಲ್ಲಿ ಅಂಥಾ ಸುಖವೆಂಬುದು ಬೇರೆಲ್ಲೂ ಇಲ್ಲ ಕಣ್ರೀ ! ಅದು ನಮ್ಮ ಮನೋಭಾವನೆಯ ಮೇಲೆ ಅವಲಂಬಿತವಾಗಿರ್ತದೆ. ಹತ್ತುಸಾವಿರ ಕೋಟಿ ಇದ್ದವನಿಗೂ ಹತ್ತೇ ರೂಪಾಯಿ ಇದ್ದವನಿಗೂ ಚಿಂತೆ ತಪ್ಪೋದಿಲ್ಲ; ಅದು ಮಾನವ ಜನ್ಮ ಸಹಜ. ಬುದ್ಧ ಹೇಳಿದನಂತೆ " ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ " ಅಂತ. ಹುಟ್ಟು-ಸಾವು ಹೇಗೆ ಸಹಜವೋ ಕಷ್ಟ-ಸುಖ-ಚಿಂತೆ-ನಿದ್ದೆ- ನೀರವ ಮೌನ-ದುಗುಡ-ಆಯಾಸ ಇವೆಲ್ಲವುಗಳೂ ಕೂಡ. ಸರ್ವಸಂಗ ಪರಿತ್ಯಾಗಿಯಾದ ಸನ್ಯಾಸಿಗೂ ಇವುಗಳ ಬಾಧ್ಯತೆ ತಪ್ಪಿದ್ದಲ್ಲ. ಎಂದಮೇಲೆ ಬದುಕಿನಲ್ಲಿ ಗೆಲುವಾಗಿರಲು ಕೆಲವು ಸಮಯ-ಸಂದರ್ಭಗಳನ್ನು ಬೇರೇಯವರಿಗೆ, ಜಗತ್ತಿಗೆ ತೊಂದರೆಯಾಗದ ರೀತಿಯಲ್ಲಿ ನಾವೇ ನಿರ್ಮಾಣಮಾಡಿಕೊಳ್ಳಬೇಕಾಗುತ್ತದೆ.’ ಇದು ಲೈಫ್ ಈಸ್ ಶಾರ್ಟ್ ಎಂಜಾಯ್ ಟು ದ ಬೆಸ್ಟ್’ ಹುಚ್ಚು ತತ್ವವಲ್ಲ, ಬದಲಾಗಿ ಹಂಚಿತಿನ್ನುವ, ಎಲ್ಲರೊಂದಿಗೆ ಸಹಬಾಳ್ವೆ ಮತ್ತು ಸಾಮರಸ್ಯದೊಂದಿಗೆ ಊಟದಲ್ಲಿ ಉಪ್ಪಿನಕಾಯಿ, ಗೊಜ್ಜು, ಪಲ್ಯ, ಚಿತ್ರಾನ್ನ ತಿಂದ ಹಾಗೇ; ಇನ್ ಕಾಂಟ್ರಾಸ್ಟ್ ಇಲ್ಲಿ ವಿಕಾರವಿಲ್ಲ, ವಿಕಾರದಿಂದ ಹುಟ್ಟುವ ವಿನೋದವೂ ಇಲ್ಲ, ಜಗತ್ತು ಈ ನಮ್ಮ ನಡವಳಿಕೆಯಿಂದ ಹಾಳಾಗುವುದೂ ಇಲ್ಲ-ಇದು ಜಗವ ಕಟ್ಟಿದವರ ಮತ್ತು ಜಗವ ಕಟ್ಟುವವರ ಕಥೆ.

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ
ಜನರೆಲ್ಲರಾಗುಡಿಯ ಕೆಲಸದಾಳುಗಳು
ಮನೆಯೇನು ಮಠವೇನು ಹೊಲವೇನು ನೆಲವೇನು
ಎಣಿಸೆಲ್ಲವದೆಯದನು | ಮಂಕುತಿಮ್ಮ

ತಿಮ್ಮಗುರು ಹೇಳಿದ್ದಾರಲ್ಲ ..ಯೋಚಿಸಿ ನೋಡಿ : ಈ ಇಡೀ ಪ್ರಪಂಚದಲ್ಲಿ ಸದಾ ಎಲ್ಲೆಲ್ಲೂ ಏನೇನೋ ಕೆಲಸಗಳು ನಡೆಯುತ್ತಲೇ ಇರುತ್ತವೆ. ಇಡೀ ಪ್ರಪಂಚದ ಜನ ಒಂದೇ ದಿನವೆಂದು ಕರೆಯುವ ದಿನವೇ ಇಲ್ಲ ಯಾಕೆಂದು ನಿಮಗೇ ತಿಳಿದಿದೆ. ಒಪಕ್ಷ ಒಂದೇ ದಿನ ಎಂಬುದು ಸಿಕ್ಕಿತು ಎಂದುಕೊಳ್ಳಿ-ಎಲ್ಲರೂ ರಜೆಹಾಕಿ ಕೂತುಬಿಟ್ಟರೆ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರಿಲ್ಲ, ಹಾಲು-ಮೊಸರು ಇತ್ಯಾದಿ ನಿತ್ಯದ ಸಾಮಾನುಗಳು ಸಿಗುವುದಿಲ್ಲ ಅಥವಾ ಇನ್ನೂ ಏನೇನೋ; ಅದು ಊಹೆಗೇ ನಿಲುಕದ್ದು. ಕಟ್ಟುವವರು ಕಟ್ಟುತ್ತಾರೆ. ಕೆಲವರು ಗುಡಿ ಕಟ್ಟುತ್ತಾರೆ, ಇನ್ನು ಕೆಲವರು ಮಸೀದಿ ಕಟ್ಟುತ್ತಾರೆ, ಮತ್ತೆ ಕೆಲವರು ಇಗರ್ಜಿ ಕಟ್ಟುತ್ತಾರೆ, ಮತ್ತಿನ್ಯಾರೋ ಮನೆಕಟ್ಟುತ್ತಾರೆ, ಸರ್ಕಾರ-ಸಾರ್ವಜನಿಕ ಸಂಸ್ಥೆಗಳವರು ತಂತಮ್ಮ ಕಟ್ಟಡಗಳನ್ನೋ ಸೇತುವೆ, ಮೇಲ್ಸೇತುವೆಗಳನ್ನೋ ನಿರ್ಮಿಸುತ್ತಾರೆ. ಹಳತನ್ನು ಕೆಡವಿ ಮತ್ತೆ ಹೊಸತನ್ನು ಕಟ್ಟುತ್ತಾರೆ. ಹೊಲಿಗೆಯವರು, ವೈದ್ಯರು, ಬಡಗಿಗಳು, ಕಮ್ಮಾರರು, ಶಿಕ್ಷಕರು. ಬ್ಯಾಂಕ ನೌಕರರು ಹೀಗೇ ಅವರವರ ಉಪಜೀವನದ ದಂಧೆಗಳಲ್ಲಿ ಎಲ್ಲರೂ ನಿರತರಾಗಿರುತ್ತಾರೆ. ಹೀಗಾಗಿ ಎಲ್ಲವೂ ಆಗಿಬಿಡಲಿ ಆಮೇಲೆ ತಾನು ಆರಾಮಾಗಿ ಕೂತು ವಿರಮಿಸುತ್ತೇನೆ, ವಿಹರಿಸುತ್ತೇನೆ ಎಂದರೆ ಅದು ಸಾಧ್ಯವಾಗುವುದೇ ಇಲ್ಲ. ಮತ್ತೂರು ಕೃಷ್ಣಮೂರ್ತಿಗಳು ಹೇಳಿದ ಹಾಗೇ ಕಾಣದ ದೈವ ಕಷ್ಟವನ್ನೇ ಕೊಡುತ್ತಿದ್ದರೆ ಆ ಕಷ್ಟವೇ ಸುಖವೆಂದು ತಿಳಿದು ಅನುಭವಿಸುವ, ಅದರಲ್ಲೂ ಆನಂದ ಪಡುವ ಮನೋಭಾವ ಬರಬೇಕಾಗಿದೆ. ಒಮ್ಮೆ ಅದು ಬಂದರೆ ಅಂತಸ್ತಿನ/ ಡಂಬಾಚಾರದ /ಆಡಂಬರದ ಮಾನವರ ಬದುಕಿಗೊಂದು ನೆಲೆ ಸಿಗುತ್ತದೆ. ಓಹೋ ಅದಿಲ್ಲಾ ಇವತ್ತು ಓಹೋ ಇದು ಖಾಲಿಯಾಗಿದೆ, ಅಯ್ಯೋ ಡಿಸ್ಕೌಂಟ್ ಸೇಲು ನಾವು ಹೋಗುವವರೆಗೆ ಮುಗಿದೇ ಹೋಗುತ್ತದೆ, ಅವರಮನೇಲಿರೋ ಸ್ಕೋಡಾ ಕಾರಿಗಿಂತಾ ಉತ್ತಮವಾದ ಲೇಟೆಸ್ಟ್ ಮಾಡೆಲ್ ಕಾರನ್ನು ನಾವು ಖರೀದಿಸಬೇಕು---ಹೀಗೇ ಈ ರೀತಿಯ ಪಕ್ಕಾ ಲೌಕಿಕ ವ್ಯವಹಾರಗಳು ತಹಬಂದಿಗೆ ಬರುತ್ತವೆ.

ಇನ್ನೂ ಒಂದು ಮಾತು ನೆನಪಾಯ್ತು: ಸಿನಿಮಾ ಕವಿತೆಗಳನ್ನು ಬರೆದ ಕೆ.ಕಲ್ಯಾಣ್ ಒಬ್ಬ ಪುರೋಹಿತರ ಮಗ. ಸಿನಿಮಾ ಪ್ರಪಂಚದಲ್ಲಿ ಗುರುತಿಸಿಕೊಳ್ಳುವ ಮೊದಲು ಅವರ ಪಟ್ಟ ಪಾಡು ಅವರು ಹೇಳಿದ್ದು ಜ್ಞಾಪಕಕ್ಕೆ ಬರುತ್ತಿದೆ. ಮನೆಯಲ್ಲಿ ಬಡತನ. ಯಾರಲ್ಲೂ ಹೇಳಿಕೊಳ್ಳಲಾಗದ ಸಾಂಪ್ರದಾಯಿಕ ವ್ಯವಸ್ಥೆ, ಮೇಲಾಗಿ ಮಡಿ-ಆಚರಣೆ ಬೇರೆ. ಓರಗೆಯ ಹುಡುಗರು, ಸ್ನೇಹಿತರು ಎಲ್ಲಾ ಅಲ್ಲಲ್ಲಿ ಹೋಟೆಲ್‍ಗಳಲ್ಲಿ ಕೂತು ತಿಂಡಿ-ತೀರ್ಥ ನಡೆಸುತ್ತಿದ್ದರೆ ಕಲ್ಯಾಣ್‍ಗೆ ಮಾತ್ರ ಅದು ಸಾಧ್ಯವಿಲ್ಲ. ಅಪ್ಪನ ದುಡಿಮೆಯಲ್ಲಿ ಸಂಸಾರ ಸಾಗಿಸುವುದೇ ಕಷ್ಟ ಅಂಥದ್ದರಲ್ಲಿ ಹೋಟೆಲ್ಲು ಸಿನಿಮಾ ಅಂತೆಲ್ಲಾ ಖರ್ಚುಮಾಡಿದರೆ ಉಳಿಯಲು ಸಾಧ್ಯವೇ ? ಕಿಲೋಮೀಟರು ನಡೆದೇ ಹೋಟೆಲ್‍ಗೆ ಹೋಗುವುದು, ಅಲ್ಲಿ ನಿಂತು ಒಂದುಗ್ಲಾಸು ನೀರು ಪಡೆದು ಅದನ್ನೇ ಕಾಫೀ ಕುಡಿದ ಹಾಗೇ ಗುಟುಕರಿಸುವುದು; ಯಾಕೆಂದರೆ ಕಾಫಿಗೆ ಕಾಸಿಲ್ಲ! ಮನದಲ್ಲಿ ಮಾತ್ರ ಕಾಫಿ ಕುಡಿದ ಅದೇ ತೃಪ್ತಿ! ಆ ಭಾವವೇ ಕಲ್ಯಾಣ್ ಅವರನ್ನು ಭಾವುಕನನ್ನಾಗಿ ಹಾಡುಗಳನ್ನು ಬರೆಸಿತು. ಅದೇ ಭಾವ ಕಲ್ಯಾಣ್‍ಗೆ ವೃತ್ತಿಯೊಂದನ್ನು ಒದಗಿಸಿತು, ಅದೇ ಮುಂದೆ ಜೀವನಕ್ಕೆ ಆಧಾರವಾಯ್ತು. ಜೀವನ ಶಿಖರವನ್ನು ಹಂತಹಂತವಾಗಿ ಏರುವಾಗ ಎದುರಾಗಬಹುದಾದ ಅಡೆತಡೆಗಳನ್ನು ಹೇಗೆ ಸ್ವೀಕರಿಸಬೇಕು ಎಂಬುದಕ್ಕೆ ಈ ಮೇಲಿನ ಇಬ್ಬರ ಉದಾಹರಣೆಗಳು ಸಾಕು.

’ಶಿಖರಗಾಮಿಗಳ’ನ್ನು ಓದುವಾಗ ಶೆರ್ಪಾ ಜನಾಂಗ, ಯಾಕ್ ಪ್ರಾಣಿ, ಯೇತಿ ಎಂಬ ವಿಚಿತ್ರ ದೈತ್ಯ ಪ್ರಾಣಿ ಇವುಗಳ ವಿವರ ಸಿಗುತ್ತಾ ಹೋಗುತ್ತದೆ. ಅಂದಿನ ಆ ಕಾಲದಲ್ಲಿ ಮೌಂಟೇನೀಯರಿಂಗ್‍ಗೆ ಅಷ್ಟೊಂದು ಸೌಲಭ್ಯಗಳಾಗಲೀ ಸಲಕರಣೆಗಳಾಗಲೀ ಇರಲಿಲ್ಲ. ಇದ್ದುದರಲ್ಲೇ ಸಾಧಿಸುವ ಕಲೆ ಮಾತ್ರ ಜನರಿಗೆ ಗೊತ್ತಿತ್ತು. ಈ ಮಾತು ಹೇಳುವಾಗ ಹಳ್ಳಿಯ ವೈದ್ಯರುಗಳ ನೆನಪಾಗುತ್ತದೆ. ಇಂದು ನಗರ/ಪಟ್ಟಣಗಳಲ್ಲಿ ಹೊಟ್ಟೆನೋವು ಎಂದರೆ ಸಾಕು ರಕ್ತ, ಮಲ-ಮೂತ್ರದಿಂದ ಹಿಡಿದು ಎಲ್ಲಾ ಚೆಕ್-ಅಪ್ ಮಾಡಿಸಿ ಎಕ್ಸ್‍ರೇ, ಸ್ಕ್ಯಾನಿಂಗು ಹಾಳು ಮೂಳು ಅಂತ ಇಲ್ಲದ್ದನ್ನೆಲ್ಲಾ ಒಂದಾದಮೇಲೊಂದರಂತೇ ದಿಢೀರನೆ ಮಾಡಿಮುಗಿಸುತ್ತಾರೆ. ಅದೇ ಹಳ್ಳಿಯ ವೈದ್ಯರುಗಳು ಇವತ್ತಿಗೂ ಹೊಟ್ಟೆ ನೋವೆಂದು ಹೋದರೆ ರೋಗ ಲಕ್ಷಣಗಳನ್ನು ಅವಲೋಕಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ರೋಗಿಯನ್ನು ಚೆನ್ನಾಗಿ ಮಾತನಾಡಿಸಿ ಮೈದಡವಿ ಕಳುಹಿಸುತ್ತಾರೆ. ರೋಗಿಗೆ ಅರ್ಧ ಶೀಕು ಪರಿಹಾರವಾಗೋದೇ ವೈದ್ಯರ ಮಾತಿನ ಉಪಚಾರದಿಂದ! ಕಾಯಿಲೆಗಳ ತಾಯಿಬೇರು ಇರುವುದು ಮನೋರೋಗದಲ್ಲಿ. ಮನಸ್ಸಿನಲ್ಲಿ ರೋಗವಿಲ್ಲದಿದ್ದರೆ, ಮನಸ್ಸು ನಿಶ್ಕಲ್ಮಶವಾಗಿದ್ದರೆ ಮಾನವರಿಗೆ ರೋಗಗಳು ತೀರಾ ಕಮ್ಮಿ. ಆದರೆ ನೂರಕ್ಕೆ ಎಷ್ಟು ಜನ ನಿಶ್ಕಲ್ಮಶ ಮನದವರು? ಎಲ್ಲಾ ಎದುರಿಗೊಂದು ಹಿಂದೊಂದು! " ಊಟ ಚೆನ್ನಾಗಿತ್ತು " ಎಂದು ಹೊಗಳಿದ ಅದೇ ವ್ಯಕ್ತಿ ಆ ಕಡೆಗೆ ಹೋದ ಮೇಲೆ " ಅವರ ಮನೆಗೆ ಊಟಕ್ಕೆ ಹೋಗಿದ್ದೆ ಮಾರಾಯಾ ಊಟವಾ ಅದು ? " ಎನ್ನುತ್ತಾರೆ ! ಹೋಗ್ಲಿ ಬಿಡಿ. ಆಗೆಲ್ಲಾ ರೀಬುಕ್ ವುಡ್‍ಲ್ಯಾಂಡ್ ಕಂಪನಿಗಳ ಮೊಹರು ಹೊತ್ತ ಮೌಂಟೇನ್ ಶೂಗಳಿರಲಿಲ್ಲ. ಈಗ ನೋಡಿ : ನಡೆಯಲೊಂದು. ಓಡಲು ಇನ್ನೊಂದು, ಟ್ರೆಕ್ಕಿಂಗಿಗೆ ಮತ್ತೊಂದು, ಕೂತುಕೊಳ್ಳಲೂ ಇನ್ನೊಂದು, ಜಾಗಿಂಗಿಗೆ ಬೇರೇನೇ ಒಂದು, ಕಚೇರಿಗೆ ಹೊಸದೊಂದು, ಪಿಕ್ನಿಕ್ ಹೋಗಲು ವಿಭಿನ್ನವಾಗಿದ್ದೊಂದು --ಇದೆಲ್ಲದರ ಅವಶ್ಯಕತೆ ನಿಜವಾಗಿಯೂ ಇದೆಯೇ ? 'ಕುಣಿಯಲಾರದ ಸೂಳೆ ಅಂಗಳವೇ ಡೊಂಕು ಎಂದಳಂತೆ' ಎಂಬುದೊಂದು ಗಾದೆ. ಹಿಂದಕ್ಕೆ ಸೂಳೆಯರು ಮಾತ್ರ ಕುಣಿಯುತ್ತಿದ್ದರು. 'ಜೊಲ್ಲು' ಜೋರಾಗಿ ಹರಿಯುವವರು ನೋಡುತ್ತಿದ್ದರು! ಇವತ್ತೂ ಕುಣಿಯುವವರ ರೂಪ ಮತ್ತು ವೇಷಗಳಲ್ಲಿ ಬದಲಾವಣೆಯಾಗಿದೆ, ಆದರೆ ಸಾರ್ವಜನಿಕವಾಗಿ ಅದೂ ಸಿನಿಮಾರಂಗದಲ್ಲಿ ಕುಣಿಯುವ ಹೆಣ್ಣುಗಳಿಗೂ ಹಿಂದಿನ ಆ ಕುಣಿಯುವ ಜನಗಳಿಗೂ ಒಂದೇ ವ್ಯತ್ಯಾಸ ಎಂದರೆ ಅದು ಲೋ ಪ್ರೊಫೈಲು --ಇದು ಹೈಪ್ರೊಫೈಲು!

ಯೇತಿ ಎಂಬ ಅದ್ಭುತ ಮತ್ತು ವಿಚಿತ್ರ ಪ್ರಾಣಿಯ ಬಗ್ಗೆ ನೀವು ಕೇಳಿರಲೂ ಸಾಕು. ಕೆಲವರು ವಿಜ್ಞಾನಿಗಳೆಂದು ಬೋರ್ಡು ಹಾಕಿಕೊಂಡವರು ಯೇತಿಯ ಇರುವಿಕೆಯನ್ನೇ ಅಲ್ಲಗಳೆಯುತ್ತಾರೆ. ಆದರೆ ಯೇತಿ ಎಂಬ ಪ್ರಾಣಿ ಹಿಮಾಲಯದ ಶಿಖರಗಳ ನಡುವಿನ ತಪ್ಪಲುಗಳಲ್ಲಿ ಅಲ್ಲಲ್ಲಿ ವಾಸವಾಗಿದೆ. ಸುಮಾರಾಗಿ ಚಿಂಪಾಂಜಿಯನ್ನು ಹೋಲುವ ಈ ಪ್ರಾಣಿ ಮಾನವ ದೇಹಕ್ಕೆ ಹತ್ತಿರವಾದ ಹೋಲಿಕೆಯುಳ್ಳಂಥದು. ಎರಡೇ ಕಾಲಿನಲ್ಲಿ ಓಡಾಡುತ್ತದೆ, ಮರವೇರುತ್ತದೆ, ಬೆಟ್ಟ ಹತ್ತಿ-ಇಳಿಯುತ್ತದೆ. ಪರ್ವತಗಳಲ್ಲಿ ಇರುವ ಹಣ್ಣುಹಂಪಲುಗಳನ್ನು, ಕಾಯಿ-ಸೊಪ್ಪು ಮೊದಲಾದವನ್ನು ತಿಂದು ಬದುಕುತ್ತದೆ. ಕರಡಿಯಂತೇ ಮಾನವನನ್ನು ಕಂಡರೆ ದಾಳಿ ನಡೆಸಬಹುದು, ಆದರೆ ಮಾನವರಿಗೆ ಕಾಣಿಸುವುದು ಅಪರೂಪ ಎನ್ನುತ್ತಾರೆ ಶೆರ್ಪಾ ಜನಗಳು. ಅಲಲ್ಲಿ ಓಡಾಡುವಾಗ ಯೇತಿಯ ಲದ್ದಿಗಳನ್ನು ಕಾಣಬಹುದಾಗಿದೆ. ಸಿಳ್ಳೆ ಹಾಕುತ್ತಾ ಮೇಲಕ್ಕೆ ಹತ್ತಿ ಹೋಗುತ್ತಿದ್ದ ಯೇತಿಯೊಂದನ್ನು ದೂರದಿಂದ ಕಂಡಬಗ್ಗೆ ತೇನ್‍ಸಿಂಗ್ ಹೇಳಿದ್ದಾರೆ.

ಹಿಮಾಚ್ಛಾದಿತ ಹಿಮಾಲಯವನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. ಇಂದಿಗೆ ನಾವು ಭಾಗ್ಯವಂತರು ಯಾಕೆಂದ್ರೆ ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ ಮೊದಲಾದ ಚಾನೆಲ್‍ಗಳಲ್ಲಿ ಹಿಮಶಿಖರಗಳ ಬಗ್ಗೆ ಅಲ್ಲಿನ ಸಾಹಸಗಾಥೆಗಳ ಬಗ್ಗೆ ವಿಸ್ತೃತ ವರದಿಗಳನ್ನು ಕುಳಿತಲ್ಲೇ ನೋಡುತ್ತೇವೆ. ಹಿಮಕರಡಿ, ಹಿಮಕುರಿ, ಬಿಳೀ ಹುಲಿ ಇನ್ನಿತರ ಹಿಮಪರ್ವತನಿವಾಸಿ ಪ್ರಾಣಿಗಳನ್ನೂ ಅವುಗಳ ಜೀವನ ಶೈಲಿಯನ್ನೂ ತಿಳಿದುಕೊಳ್ಳುತ್ತೇವೆ. ಅಪರೂಪಕ್ಕೆ ಕಾಡಿಗೆ ಹೋದವರಿಗೆ ಎಲ್ಲಿ ಹುಲಿ ಬಂದೀತು ಎಂಬ ಭಯವಾಗುತ್ತದೆ. ಆದರೆ ಸ್ಥಾನಿಕವಾಗಿ ಅಲ್ಲಲ್ಲೇ ಬದುಕು ಕಟ್ಟಿಕೊಂಡಿರುವ ಜನರಿಗೆ ಅದು ವಿಶೇಷವೇ ಅಲ್ಲ. ಕಾಡಾನೆಗಳು ಬೆಂಕಿಗೆ ತುಂಬಾ ಹೆದರುತ್ತವೆ. ಹಲವು ಜನರಿಗೆ ಅವು ಬೆಂಕಿಗೆ ಹೆದರುತ್ತವೆ ಎಂಬ ಅಂಶ ತಿಳಿದಿಲ್ಲ! ಕೆಲವು ಹಿಲಾಲು ಹಿಡಿದು ಕೂಗಿದರೆ ಅವು ಹೆದರಿ ಓಡುತ್ತವೆ. ಇದೇ ರೀತಿ ಪ್ರತೀ ಜೀವಿಗೂ ಅದರದ್ದೇ ಆದ ಪ್ರಾಣಭಯವಿದೆ. ಅದರ ನಾಡಿಮಿಡಿತವನ್ನು ಅರಿತ ಜನ ಆಲ್ಲಲ್ಲಿನ ಪರಿಸರಕ್ಕೆ ಹೊಂದಿಕೊಂಡಿರುತ್ತಾರೆ.

ಹಿಮಾಲಯದ ಚಳಿಗೆ ಮೈಒಡ್ಡೀ ಒಡ್ಡೀ ರೂಢಿಯಾಗಿಹೋದ ಶೆರ್ಪಾ ಜನಗಳಿಗೆ ಅಂಥಾ ಜಾಕೀಟು ಪಾಕೀಟು ಇಲ್ಲದಿದ್ದರೂ ಅವರು ಇರಬಲ್ಲರು. ಭಾರದ ಮೂಟೆಗಳನ್ನು ಬೆನ್ನಮೇಲೇರಿಸಿಕೊಂಡು ಪರ್ವತಗಳ ಕಡಿದಾದ ಕಾಲು ದಾರಿಯಲ್ಲಿ ನಿರಾತಂಕವಾಗಿ ಸಾಗಬಲ್ಲರು. ಆಮ್ಲಜನಕದ ಕೊರತೆ ಬಾಧಿಸಿದರೂ ನಮ್ಮೆಲ್ಲರಿಗಿಂತಾ ಜಾಸ್ತಿ ಹೊತ್ತು ತಡೆದುಕೊಳ್ಳಬಲ್ಲರು. ಕಾಲಿಗೆ ಇಂಥಾದ್ದೇ ಬ್ರಾಂಡಿನ ಶೂ ಕೊಡಿ ಎಂದು ಕೇಳರು! ಒಟ್ಟಾರೆ ಹೇಳುವುದಾದ್ರೆ ಕಷ್ಟವಾನಿಗಳು. ಹುಟ್ಟಿದಾರಭ್ಯ ಪರ್ವತಗಳ ಮಗ್ಗುಲಲ್ಲೇ ಬೆಳೆಯುವುದರಿಂದ ಪರ್ವತಗಳನ್ನು ಏರುವ ಬಗ್ಗೆ, ಹಿಮಪಾತವಾಗುವ ಬಗ್ಗೆ, ಸಾಗುವಾಗ ತೆಗೆದುಕೊಳ್ಳಬೇಕಾದ ಜಾಗರೂಕತೆಯ ಬಗ್ಗೆ ಅವರಿಗೆ ಬಹಳ ಆಳವಾದ ಜ್ಞಾನವಿದೆ. ತಂತ್ರಜ್ಞನೊಬ್ಬ ತನ್ನ ಸಂದೇಶದಿಂದಲೋ, ಅಥವಾ ಯಾವುದೋ ಉಪಕರಣದಿಂದಲೋ ಯಂತ್ರಗಳನ್ನು ನಿಯಂತ್ರಿಸುವಂತೇ/ನಿರ್ವಹಿಸುವಂತೇ ತಮ್ಮ ಚಾಕಚಕ್ಯತೆಯಿಂದ ಪರ್ವತಾರೋಹಣ ನಡೆಸುವಾಗ ಪರ್ವತದೊಡನೆ ಅದರ ಭಾಗವೇ ಆಗಿಬಿಡುವ ಶೆರ್ಪಾಗಳಿಂದ ಮಾರ್ಗದರ್ಶನ ಪಡೆದರೆ ಶಿಖರಗಾಮಿಗಳಿಗೆ ಅನುಕೂಲವಾಗುತ್ತದೆ. ಅಂದಹಾಗೇ ತೇನ್‍ಸಿಂಗ್ ಕೂಡಾ ಒಬ್ಬ ಶೆರ್ಪಾ ಆಗಿದ್ದರು ಎಂಬುದನ್ನು ಮರೆಯುವಂತಿಲ್ಲ.

ಕೊರೆವ ಚಳಿ, ಬೀಸುವ ಕುಳಿರ್ಗಾಳಿ, ಜಾರುವ ಹಿಮಬಂಡೆಗಳ ನಡುವೆ ಏಗುತ್ತಾ ಏಗುತ್ತಾ ಸಾಗುವ ಹಾದಿಯಲ್ಲಿ ಬಿಡಾರ ಹೂಡುವುದು, ಗುಡಾರದ ಬಿಡಾರದಲ್ಲಿ ಅಗ್ಗಿಷ್ಟಿಕೆಯ ಮುಂದೆ ಕೂತು ಅದರ ಬಿಸಿಯನ್ನು ಅನುಭವಿಸುವುದು, ಅಲ್ಲೇ ಹಿತವಾಗುವಂತೇ ಚಹಾ ಕುಡಿಯೋದು, ಒಂದಷ್ಟು ಅಡಿಗೆಮಾಡಿ ತಿಂದು ರಾತ್ರಿ ಬೆಚ್ಚನ ಚೀಲಗಳೊಳಗೆ ಹುದುಗಿಕೊಂಡು ಮಲಗಿ ಬೆಳಿಗ್ಗೆಗಾಗಿ ಕಾಯುವುದು, ವಾತಾವರಣದ ವೈಪರೀತ್ಯವಿದ್ದರೆ ಅದರ ಅಂದಾಜು ತೆಗೆದು ಮುಂದಿನ ಸಾಗಾಟವನ್ನು ನಿರ್ಧರಿಸುವುದು, ನಿತ್ಯವೂ ೫-೬ ಕಿ.ಮೀ ಪ್ರಯಾಣಿಸಿ ಮತ್ತೆ ಅಲ್ಲಲ್ಲಿ ಲಂಗರುಹಾಕಿ ತಂಬು ಹೂಡುವುದು, ಅನಾರೋಗ್ಯ ಕಾಡಿದರೆ ಇದ್ದ ಪರಿಕರಗಳಲ್ಲೇ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಮಿಸುವುದು, ಹಿಂದೆ ಹೋಗಿದ್ದ ಶಿಖರಗಾಮಿಗಳ ರೋಚಕ ಕಥೆಗಳನ್ನು ಇಂಚಿಂಚಾಗಿ ತಿಳಿದು ಅಂಥದ್ದೇ ಕೆಲವು ಸನ್ನಿವೇಶಗಳನ್ನು ನಿಭಾಯಿಸುವುದು....ಒಂದಲ್ಲಾ ಎರಡಲ್ಲಾ.

ಶಿಖರವನ್ನೇರಿ ಇನ್ನೇನು ತುತ್ತ ತುದಿ ತಲುಪುವಾಗಿನ ಅಸದೃಶ, ಅದಮ್ಯ ಅನುಭವ ನಿಜಕ್ಕೂ ಅವರ ಮಾತುಗಳಲ್ಲೇ ಕೇಳಬೇಕಾದ್ದು. ಬಹುಶಃ ಜಗತ್ತನ್ನೇ ಗೆದ್ದರೂ ಸಿಗದ ಸಂತೋಷ ಎವರೆಸ್ಟ್ ಶಿಖರವನ್ನು ಪೂರ್ತಿಯಾಗಿ ಏರಿದವರಿಗೆ ಸಿಗುತ್ತದೆ ಅನಿಸುತ್ತದೆ. ಯಾವುದೋ ಚಿಕ್ಕ ಸಾಮಾನ್ಯ ಬೆಟ್ಟವನ್ನೇರಿದ ನಮ್ಮ ಆನಂದವನ್ನೇ ನಾವು ಛಾಯಾಚಿತ್ರಗಳಲ್ಲಿ ಸೆರೆಹಿಡಿದು, ಅವುಗಳನ್ನು ಅಂತರ್ಜಾಲದ ಮೂಲಕವೋ ಆಲ್ಬಮ್ಮುಗಳ ಮೂಲಕವೋ ಸ್ನೇಹಿತರುಗಳಿಗೆ ತೋರಿಸುತ್ತಾ ಹೇಳಲಾಗದ ಖುಷಿಯನ್ನು ಅನುಭವಿಸುತ್ತೇವೆ ಎಂದಮೇಲೆ ಅಂತಹ ಎತ್ತರದ ಶಿಖರದ ತುತ್ತ ತುದಿಯಮೇಲೆ ನಿಂತು ಸುತ್ತಲ ಜಗತ್ತನ್ನು ನೋಡಿದಾಗ ಅವರಿಗೇನನ್ನಿಸಿರಬಹುದು? ಕಣ್ಣಿಗೆ ಕಾಣುವಷ್ಟು ದೂರ ಅವರಿಗೆ ಏನು ಕಾಣಿಸಿರಬಹುದು ? ಪರ್ವತವನ್ನೇರಿ ಮುಗಿದು ತಿರುಗಿ ಕೆಳಗಿಳಿದಾದಮೇಲೆ ಪರಸ್ಪರರನ್ನು ಬೀಳ್ಕೊಡುವಾಗ ಅಷ್ಟುದಿನ ಒತ್ತಟ್ಟಿಗೆ ಇದ್ದ ಅನುಭವ ಪ್ರಾಯಶಃ ಒಂದೇ ಶಾಲೆಯಲ್ಲಿ ಒತ್ತಟ್ಟಿಗೇ ಬಹುಕಾಲ ಕಲಿತು ಮುಂದಿನ ಓದಿಗಾಗಿ ದೂರವಾಗುವ ಸಹಪಾಠೀ ಸ್ನೇಹಿತರುಗಳ ಮನದಲ್ಲಿನ ಅಗಲಿರಲಾರದ ಭಾವ ಇರಬಹುದೇ? ಮನೆಗೆ ಹಿಂದಿರುಗಿ ವರ್ಷಗಳು, ದಶಕಗಳು ಕಳೆದಾದಮೇಲೊಂದು ದಿನ ನೆನಪಾದಾಗ ಆ ಭಾವ ಹೇಗಿರಬಹುದು ? ಅದೊಂದು ಅನಿರ್ವಚನೀಯ ಆನಂದವಲ್ಲವೇ ? ತೇನ್‍ಸಿಂಗ್ ಅದೇ ಭಾವದಲ್ಲಿ ಕೊನೆಯವರೆಗೂ ಇದ್ದರು. ಅಂತರ್ಜಾಲವಿಲ್ಲದ ಆ ಕಾಲದಲ್ಲಿ ನಾವೆಲ್ಲಾ ಸೇರಿ ನಮ್ಮ ಶಿಕ್ಷಕರೊಬ್ಬರ ಸಹಾಯದೊಂದಿಗೆ ತೇನ್‍ಸಿಂಗ್ ವಿಳಾಸ ಹುಡುಕಿ ಪತ್ರಿಸಿದ್ದೆವು. ಮರಳಿ ಉತ್ತರ ಕಳುಹಿಸಿದ ಪುಣ್ಯಾತ್ಮ ಜೊತೆಗೆ ತಮ್ಮ ಒಂದು ಪಾಸ್‍ಪೋರ್ಟ್ ಫೋಟೋ ಕೂಡ ಕಳಿಸಿದ್ದರು! ಆ ದಿನಗಳನ್ನು ನೆನೆಸಿಕೊಂಡಾಗ ಮತ್ತೆ ಹೈಸ್ಕೂಲಿಗೆ ಹೋಗುವ ಮನಸ್ಸಾಗುತ್ತದೆ, ’ಶಿಖರಗಾಮಿಗಳ’ನ್ನು ಓದುವ ಬಯಕೆ ಮೂಡುತ್ತದೆ, ಪರ್ವತಗಳು ದೂರದಲ್ಲಿ ನಿಂತು " ಬಾ " ಎಂದವೇನೋ ಎಂಬ ಪರ್ವತಾರೋಹಣದ ಹುಚ್ಚು ಒಮ್ಮೆನೋಡಿಬಿಡುವಾ ಎಂಬ ಮನೋಗತ ಕುದುರೆಯನ್ನೇರಿಬಿಡುತ್ತದೆ! ಅಷ್ಟಕ್ಕೂ ಪ್ರಕೃತಿಯ ಮುಂದೆ ಅದರ ಸೌಂದರ್ಯ ಸಿರಿಯ ಮುಂದೆ ಹುಲುಮಾನವ ಯಾವ ಲೆಕ್ಕ ಅಲ್ಲವೇ ? ನಮಸ್ಕಾರ.

Monday, November 21, 2011

ಹರೆಯದ ಲಾಸ್ಯ !

ಸಾಂಕೇತಿಕ ಚಿತ್ರ ಋಣ : ಅಂತರ್ಜಾಲ

ಹರೆಯದ ಲಾಸ್ಯ !

ಹೇಳಿಕೊಳ್ಳಲಾಗದಂಥ ಮೃದುಮಧುರದ ಭಾವಗಳವು
ಚಿಗುರನೊಡೆದು ಮನದ ಮರದಿ ಕಳೆಯು ಕಟ್ಟಿದೆ
ಆಳ ಬೇರು ಬೀಳಲಿಳಿದು ಬೀಳದಂಥ ಹಾವಗಳವು
ಚಿಗರೆಮರಿಯ ಚೆಂಗಾಟವು ಬಂದುಬಿಟ್ಟಿದೆ !

ಎದುರಿಗಿರಲದಾವ ಭಯವೋ ಹುದುಗಿ ಎದೆಯ ಸತ್ವಗಳನು
ಬದಿಗೆ ಸರಿಸಿ ಬೇರೆ ಮಾತನಾಡುತಿರುವಲಿ
ಒದಗಿಬರದ ಒಡಲಕರೆಯು ಹೆದರಿ ಗೆದರಿ ತತ್ವಗಳನು
ಅದುರುತಿರುವ ತುಟಿಗಳಿನಿತು ಒಣಗುತಿರುವಲಿ

ತಡೆಯಲಾರದಂಥ ಚಳಿಯು ಬಡಿದು ಗಾಳಿ ಬೀಸುತಿರಲು
ಗುಡುಗುತಿಹುದು ಪಡೆವ ಬಯಕೆ ಬಿಡದೆ ನನ್ನಲಿ
ಬೆಡಗಿ ನಿನ್ನ ನೋಡಿ ಸೋತ ತುಡುಗು ಬುದ್ಧಿ ಕಾಸುತಿರಲು
ಒಡತಿ ಹೇಗೆ ಮಂಡಿಸುವುದು ಒಸಗೆ ನಿನ್ನಲಿ ?

ಹುಲ್ಲೆಯಂಥ ಮುದ್ದು ಹುಡುಗಿ ಒಲ್ಲೆನೆಂಬ ಮಾತು ಸಲ್ಲ
ಮೊಲ್ಲೆಮೊಗದ ನಗುವ ಕಂಡು ಮಾಗಿ ಮಂಜಲಿ
ಗೆಲ್ವೆನೆಂಬ ಧೈರ್ಯವಿಲ್ಲ ಮೀನ ಹೆಜ್ಜೆ ಕಾಣಿಸೊಲ್ಲ
ಎಲ್ಲೆಯೊಳಗೇ ಸೆಳೆವ ಆಸೆ ಇರುವ ನಂಜಲಿ !!

Thursday, November 17, 2011

ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ !


ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ!

ನೀವು ತಿಳಿದಷ್ಟೆಲ್ಲಾ ಸಪ್ಪೆ ಹುಡುಗರು ನಾವಾಗಿರಲಿಲ್ಲ, ಸುಮ್ನೇ ಬೊದ್ದ [ಪೆದ್ದರು ಎಂಬುದಕ್ಕೆ ಹವ್ಯಕ ಪರಿಭಾಷೆ] ಮಕ್ಕಳಾಗಿರಲಿಲ್ಲ. ನಾವು ಮಾಡದ ಕಿಲಾಡಿ ಇರಲಿಲ್ಲ. ಕಿಲಾಡಿ ಹನುಮನೋ ಕಿಲಾಡಿ ಕಿಟ್ಟ [ಕೃಷ್ಣ]ನೋ ಇದ್ದರೆ ಅವರನ್ನೂ ಮೀರಿಸಿಬಿಡುವ ಕಿಲಾಡಿಗಳು ನಾವಾಗಿದ್ದೆವು ಹಾಂ..,. ಹಾಗಂತ ಹಾಳುಗೆಡಹುವ ಕಿಲಾಡಿತನ ನಮದಲ್ಲ, ಸಿಕ್ಕ ಸಮಯದಲ್ಲಿ ಸಿಕ್ಕವಸ್ತುಗಳನ್ನೇ ಸದುಪಯೋಗಪಡಿಸಿಕೊಂಡು ಸಿಗಬಹುದಾದ ಮಜಾ ತೆಗೆದುಕೊಳ್ಳುವುದು ನಮ್ಮ ಜಾಯಮಾನವಾಗಿತ್ತು ! ಅಪ್ಪಿ-ತಪ್ಪಿ ನಮಗರಿವಿಲ್ಲದೇ ಪೆದ್ದುಬಿದ್ದಿದ್ದೆಂದು ನಿಮಗನ್ನಿಸಿದರೆ ಅದಕ್ಕೆಲ್ಲಾ ನಾವು ಜವಾಬ್ದಾರರಾಗುವುದಿಲ್ಲ. ಪಾಪ ಅಂದಿನ ಮಕ್ಕಳಿಗೆ ಇವತ್ತಿನ ದಿನದಂತೇ ಏನ್ ಟಿವಿ ಗೀವಿ ಎಲ್ಲಾ ಇತ್ತೇ ? ಪೋಗೋ ಕಾರ್ಟೂನ್ ನೆಟ್ವರ್ಕು, ನಿಕ್ಕು ಅಂತೆಲ್ಲಾ ಹಲವಾರು ಮಕ್ಕಳಾಟಿಗೆಯ ಮಾಧ್ಯಮ ವಾಹಿನಿಗಳಿದ್ದವೇ ? ಏನೋ ಪಾಪದ ಮಕ್ಕಳಾದ ನಾವು ಇದ್ದುದರಲ್ಲೇ ಅಡ್ಜೆಸ್ಟ್ ಮಾಡ್ಕೊಂಡು ಆಡುತ್ತಿದ್ದೆವಪ್ಪ.

ನಮ್ಮ ಆ ಪೂರ್ವಾಶ್ರಮದಲ್ಲಿ ನಾವು ಮಕ್ಕಳಾಗಿದ್ದಾಗ ರೇಡಿಯೋ ಅಂದರೇ ದೊಡ್ಡದು! ಅದರೊಳಗೆ ಮನುಷ್ಯರು ಹೊಕ್ಕಿ ಕೂತು ಹಾಡುವಾಗ ಕೆಲವು ಹಾಡುಗಳನ್ನು ನಮಗೆ ಹಿಡಿಸಿದರೆ ಕಿವಿಗೊಟ್ಟು ಕೇಳುತ್ತಿದ್ದೆವು. ಈ ವಾರ್ತೆಪಾರ್ತೆ ಎಲ್ಲಾ ನಮ್ಗೆ ಬೇಕಾಗ್ತಿರ್ಲಿಲ್ಲ. ಅಂದಹಾಗೇ ಆ ದಿನಗಳಲ್ಲಿ ಇಂದಿನಂತೇ ದಿನಬೆಳಗಾದ್ರೆ ರಕ್ತಪಾತ, ಹದಿನಾರು ರಸ್ತೆ ಅಪಘಾತ, ಮತ್ತೆಲ್ಲೋ ವಿಮಾನ ಅಪಘಾತ, ಧರಣಿ-ಹರತಾಳ ಇವೆಲ್ಲಾ ಕಮ್ಮಿ ಇದ್ದವೇನೋ ಅನಿಸುತ್ತದೆ. ಆ ಬಗ್ಗೆ ನಾವು ತಲೆ ಕೆಡಿಸಿಕೊಂಡಿದ್ದರಲ್ವಾ ಗೊತ್ತಿರ್ತಿತ್ತು. ತಲೆಯೊಳಗೆ ಏನಾದ್ರೂ ಇದ್ರಲ್ವಾ ತಲೆ ಕೆಡಿಸಿಕೊಳ್ಳೋದಕ್ಕಾಗ್ತಿತ್ತು ! ಛೇ ಛೇ ತೀರಾ ಆಲೂಗಡ್ಡೆ ಅಂತ ತಿಳಿಯೋ ಅವಶ್ಯಕತೆಯಿಲ್ಲ ಬಿಡಿ ಓಹೊಹೊ...ನಮಗ್ಗೊತ್ತು ನೀವು ನಮ್ತರಾನೇ ಆಟ ಆಡಿದ್ದು, ಬಿಟ್ಗೊಂಡ್ ತಿರ್ಗಿದ್ದು, ನಾಯಿಗೆ ಕಲ್ಲು ಹೊಡ್ದು ಅದು ಅಟ್ಟಿಸಿಕೊಂಡು ಬಂದಾಗ ಹೆದರಿ ಗಿಡವೇರಿ ಕೂತಿದ್ದು, ಇರೋ ಒಂದೆರಡು ಚಡ್ಡಿ ಒದ್ದೆಯಾಗಿದ್ದಾಗ ಅಪ್ಪನ ಹಳೇ ಅಂಗಿ ಹಾಕ್ಕೊಂಡು ಮೊಳಕಾಲ ಕೆಳವರೆಗೂ ಅಲೆಸುತ್ತಾ ಮಾಸ್ತರು ಬಂದ ಸುದ್ದಿ ಕೇಳಿ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಂಡಿದ್ದು...ಎಲ್ಲಾ ಗೊತ್ತಿರೋವೇ.

ಅಜ್ಜನ ಮನೇಲಿ ಎಮ್ಮೆ ಕರುಹಾಕಿದ್ರೂ ಸಾಕು ನಮ್ಮ ಕನ್ನಡ ಶಾಲೆಗೆ ಹೋಗುವುದಕ್ಕೆ ನಮಗೆ ಹಡೆದ ಸೂತಕ ತಾಗಿಬಿಡುತ್ತಿತ್ತು. ಅಜ್ಜನ ಮನೆಯ ತಿರುಗಾಟ ಮುಗಿಸಿದ ಶಾಲೆಗೆ ಮರಳಿದ ನಾವು ಅದೇ ಕಾರಣವನ್ನು ಕೊಡುವುದೂ ಇತ್ತು. ಆಗಿನ ಮಾಸ್ತರುಗಳೂ ಇಷ್ಟೆಲ್ಲಾ ಹೋಮ್ ವರ್ಕ್ ಕೊಡ್ತಿರಲಿಲ್ಲ ಬಿಡಿ; ತಮಾಷೆಗಲ್ಲ ಆ ವಿಷಯದಲ್ಲಿ ನಾವೇ ಪುಣ್ಯವಂತ್ರು! ಅಜ್ಜನ ಮನೇಲಿ ಒಂದು ರೇಡಿಯೋ ಇತ್ತು. ಅದೇನೋ ಟ್ರಾನ್ಸಿಸ್ಟರು ಅಂತಿದ್ರಪ್ಪ ಸುಣ್ಣದ ಅಂಡೆ ಥರದ ತಿರಗಣಿ ಇರುವ ಪೆಟ್ಗೆ. ಅದರೊಳಗೆ ಒಂದು ಬಿಳೇ ಕಡ್ಡಿ ಆ ಕಡೆ ಈ ಕಡೆ ಓಡಾಡ್ತಿತ್ತು-ಯಾಕೋ ಗೊತ್ತಿಲ್ಲ.

ಅಜ್ಜನ ಮನೆಗೆ ನೆರೆಕೆರೆಯ ಹತ್ತಾರು ಜನ ರೇಡಿಯೋ ಕೇಳಲು ಬರ್ತಿದ್ರು. ರೇಡಿಯೋ ಅಂತ ಬರೀತಾ ಇರೋದು ಈಗ; ಆಗೆಲ್ಲಾ ಅದು ನಮ್ಗೆ ರಡ್ಯೋ ! ರಡ್ಯೋ ಕೇಳುವ ಬಳಗದಲ್ಲಿ ಅಪ್ಪಿ ಅಜ್ಜ ಕೂಡ ಒಬ್ಬ. ಅಜ್ಜನ ಮ್ನೇಲಿ ಇದ್ದಿದ್ದು ಒಂದೇ ಆರಾಮ್ ಕುರ್ಚಿ ! ಆ ಆರಾಮ್ ಕುರ್ಚಿಗೆ ಹಾಕುವ ಬಟ್ಟೆ ಇದ್ಯಲ್ಲ ಅದನ್ನು ತೆಗೆದು ತೊಳ್ಯೋ ಹಾಗೇ ಅದಕ್ಕೆ ಮೇಲೇ ಕೆಳಗೆ ಗೂಟ ತೂರಿಸಿ ಸಿಗಿಸೋ ವ್ಯವಸ್ಥೆ ಇತ್ತು. ಅಪ್ಪಿ ಅಜ್ಜ [ ಅಜಮಾಸು ೫೦ ವರ್ಷದ ವ್ಯಕ್ತಿ] ದಿನಾಲೂ ಬರ್ತಿದ್ದಂವ ಒಂದ್ ದಿನ ಆರಮ್ ಕುರ್ಚಿ ಬಿಟ್ಟಿದ್ದ್ರೆ ಹೇಳಿ. ಬಂದ ಬಂದ ಆರಾಮ್ ಕುರ್ಚಿಮೇಲೇ ಕುಂತ... ಬಂದ ಬಂದ ಆರಾಮ್ ಕುರ್ಚಿಮೇಲೇ ಕುಂತ..., ಅಬಬಬಬ ಅದೇನವನ ಅಜ್ಜ ಮಾಡಿಟ್ಟ ಹಕ್ಕು ಎಂಬಂತೇ ಕೂತು ಬಿಡ್ತಿದ್ದ. ಆರಾಮ್ ಕುರ್ಚಿ ಕೂತು ಅಲ್ಲೇ ಸಣ್ಣಗೆ ಜೋಲೀ ಹೋಡಿತಾ ಮಜಾ ತಗೊಳೋದಕ್ಕೆ ಬಾಳಾ ಒಳ್ಳೆ ಸೌಲತ್ತು. ಇವತ್ತಿಗೂ ಎಲ್ಲಾದ್ರೂ ಆರಮ್ ಕುರ್ಚಿ ಇದ್ರೆ ಹೇಳಿ ದೇವಸ್ಥಾನಕ್ಕೆ ಹೋದೋರೆಲ್ಲಾ ಕುಂತೆದ್ದು ಬರೋ ಹಾಗೇ ಒಂದ್ಸಲ ಆ ಕುರ್ಚಿಮೇಲೆ ಕೂತೆದ್ದೇ ಬರೋದು.

ಅಪ್ಪಿ ಅಜ್ಜ ಆರಾಮ್ ಕುರ್ಚಿ ಬಿಡೋ ಹಾಗೆ ಏನಾದ್ರೂ ವ್ಯವಸ್ಥೆ ಆಗ್ಬೇಕಲ್ಲಾ ಎಂಬ ಇಚ್ಛೆಯ ಜೊತೆಗೆ ತಾನೊಬ್ನೇ ಕೂತು ನಮಗ್ಯಾರಿಗೂ ಆ ಕುರ್ಚಿ ಕೊಡ್ತಿರಲಿಲ್ಲ ಎಂಬ ಹೊಟ್ಟೆಕಿಚ್ಚೂ ಕೂಡ ಇತ್ತು. ಏನದ್ರೂ ಮಾಡ್ಬೇಕಲ್ಲಾ ಅಂದ್ಕೊಂಡ ಮನಸ್ಸಿಗೆ ಒಮ್ಮೆ ಮಾಷ್ಟರ್ ಪ್ಲಾನು ಬಂದೇ ಬಿಟ್ಟಿತ್ತು! ಒಂದಿನ ಹೀಗೇ ಎಮ್ಮೆ ಕರುಹಾಕಿದ ಸೂತಕದ ನೆವದಲ್ಲಿ ಶಾಲೆಗೆ ರಜಾ ಒಗೆದ ಸಮಯ ಅಜ್ಜನ ಮನೆಗೆ ಹೋಗಿದ್ದಾಗ ಮಧ್ಯಾಹ್ನ ೨:೦೦ ಗಂಟೆಗೆ ಸಿಲೋನ್ ಸ್ಟೇಶನ್ನಂತೆ ಅದರಲ್ಲಿ ಹಾಡು ಕೇಳೋಕೆ ಅಪ್ಪಿ ಅಜ್ಜನ ಸವಾರಿ ಬಂದೇ ಬಂತು. ನಮಗೆ ಮೊದಲೇ ಅಂದಾಜಿತ್ತಲ್ಲಾ.. ಪೂರ್ವ ಸಿದ್ಧತೆ ನಡೆದೇ ಹೋಗಿತ್ತು. ಆರಾಮ್ ಕುರ್ಚಿಮೇಲೆ ಕುಂತ ಅಪ್ಪಿ ಅಜ್ಜ " ಅಯಪ್ಪಾ ಇದೆಂತದಾ " ಅಂದ್ಕಂಡು ನಿಧಾನಕ್ಕೆ ಬೆನ್ನು ಉಜ್ಕೋತ ಎದ್ದ! ಅರ್ಥವಾಯ್ತಲ್ಲ? ಕುರ್ಚಿಯ ಬಟ್ಟೆಯ ಒಂದು ಕಡೆಯ ಕೋಲನ್ನು ತೆಗೆದು ಬಟ್ಟೆಯನು ಸುಸ್ಥಿಯಲ್ಲಿ ಸರಿ ಇದ್ದಹಾಗೇ ಕಾಣುವಂತೇ ಜೋಡಿಸಲಾಗಿತ್ತು. ಅಪ್ಪಿ ಅಜ್ಜನ ಸವಾರಿ ದೊಪ್ಪನೆ ನೆಲಕ್ಕೆ ಕುಸಿದಿತ್ತು! ಹಾಗೆ ಮಾಡಬಾರ್ದು ಅಪಘಾತವಾಗ್ತದೆ ಎಂಬೋದೆಲ್ಲಾ ಗೊತ್ತಿದ್ರಲ್ವಾ ಸ್ವಾಮೀ ನಮ್ಗೆ! ಆಮೇಲೆ ದೊಡ್ಡವರ್ಯಾರೋ ಕೇಳಿದ್ರು, ಬೈದ್ರು ಅದೂ ಇದೂ ಅಂತ ಹೇಳಿ ನಂಬ್ರ ಅಲ್ಲಿಗೇ ನಿಂತತು ಬಿಡಿ. ಅದಾರಾಲಾಗಾಯ್ತು ಅಪ್ಪಿ ಅಜ್ಜ ಆರಾಮ್ ಕುರ್ಚಿಮೇಲೆ ಕೂತರೆ ಹೇಳಿ ! ಕನಸಲ್ಲೂ ನೆನೆಸ್ಕೊಂಡು ಹಾರಿ ಬಿದ್ದಿರ್ಬೇಕು !

ಶಾಲೆಯ ಸಮಾರಂಭಗಳಲ್ಲಿ ಜೈಕಾರ ಹಾಕುವುದೂ ಘೋಷಣೆ ಕೂಗುವುದು ಎಲ್ಲಾ ಇರ್ತಿತ್ತಲ್ಲಾ ಅಲ್ಲೂ ಅದೇ ಕತೆ. ನಮ್ಗೆ ಬೇಡಾ ಅಂದ್ರೂ ಮಾಡಿ ಅಂದ್ರೆ ಇನ್ನೇನ್ ಮಾಡೋದು? ಯಾಕೆ ಹಾಗೆ ಕೂಗ್ಬೇಕು ಅದರಿಂದ ಏನು ಪ್ರಯೋಜನ ಎಂಬುದು ನಮಗೆಲ್ಲಾ ಗೊತ್ತಿರ್ಲಿಲ್ಲ. ಏನಾದ್ರೂ ’ರಾಷ್ಟ್ರೀಯ ಹಬ್ಬ’ ಎಂಬ ಸುದ್ದಿ ಇದ್ದ್ರೆ ಬಾವುಟ ಹಾರ್ಸೋದು ಪೆಪ್ಪರಮಿಂಟ್ ಇಸ್ಕಳದು ಅದಷ್ಟೇ ನಮ್ಕೆಲಸ; ಬಾವುಟ ಹಾರ್ಸಬೇಕೂ ಅಂತಾನೂ ಇರ್ಲಿಲ್ಲ..ಪೆಪ್ಪರಮಿಂಟ್ ಕೊಟ್ಬುಟ್ರೆ ಸರಿ, ನಮ್ ಪಾಡಿಗೆ ನಾವು! ವಲ್ಲಭ ಭಾಯಿ ಪಟೇಲರ ಬಗ್ಗೆ ಬಂದಾಗ ’ಉಕ್ಕಿನ ಮನುಷ್ಯ’ ಅಂತಿದ್ರಲ್ಲಾ ಮಾಸ್ತರಿಗೆ ತಲೆ ಇಲ್ಲಾ ಅಂದ್ಕೊಂಡಿದ್ದೆವು ನಾವು. ಉಕ್ಕಿನಿಂದ ಮನುಷ್ಯ ಆದ್ರೆ ಜೀವ ಇರುತ್ತಾ? ಅಷ್ಟೂ ತಲೆ ಬೇಡ್ವಾ ಅಂತ ! ಅದ್ರಲ್ಲೂ " ಬೋಲೋ ಭಾರತ್ ಮಾತಾ ಕಿ " ಅಂದ ತಕ್ಷಣ " ನಿಮ್ಮನೆ ಕರಿಕುನ್ನಿ ನೇತಾಕಿ " ಅಂದ್ಕೊಳ್ತಿದ್ದೆವು ಮನಸ್ನಲ್ಲಿ. ಸ್ವಾಮೀ ಏನೂ ಅಪಾರ್ಥ ಮಾಡ್ಕೊಳ್ ಬೇಡಿ-ಇದು ದೇಶಕ್ಕೆ ಅವಮರ್ಯಾದೆ ಮಾಡೋ ಹಂಬಲ ಅಲ್ಲ, ಬದಲಾಗಿ ನಮ್ಮ ಅಂದಿನ ಹೋಡ್ ಬುದ್ಧಿವಂತಕೆ.

ಶಾಲೆಯಲ್ಲಿ ಬಾಯಿಪಾಠ ಹೇಳಿಕೊಡ್ತಾ ಇದ್ರು. ಪ್ರತಿನಿತ್ಯ ಅದು ಶಿಸ್ತುಬದ್ಧ ಆಚರಣೆ. ಒಂದೊಂದ್ಲಿ ಒಂದ ಒಂದೆರಡ್ಲ ಎರಡ...ಹೀಗೇ ಮಗ್ಗಿ ಗಿಗ್ಗಿ ವಾರ ನಕ್ಷತ್ರ, ರಾಶಿ, ಸಂವತ್ಸರ ಇದೆಲ್ಲಾ ಇರ್ತಿತ್ತು. ನಮ್ಮಲ್ಲಿ ಕೆಲವು ಶಿಳ್ಳೆಕ್ಯಾತಗಳಿದ್ದವು. ನಾವೆಲ್ಲಾ ಸೇರಿ ಒಂದ್ಕಾಲ್ ಕಾಲ ಅಂತ ಹೇಳುವುದಕ್ಕೆ ಪ್ರಾಸಬದ್ಧವಾಗಿ ಅದನ್ನು ತಿರುಗಿ ಕಟ್ಟುತ್ತಿದ್ದೆವು. ಉದಾಹರಣೆಗೆ ಒಂದ್ಕಾಲ್ ಕಾಲ ಮಾಸ್ತರ ಬೆನ್ನಿಗೆ ಕೋಲ....ಒಂದ್ ಸಿದ್ದ ಭತ್ತ.. ಮಾಸ್ತರ್ ಸತ್ತ. ಯಾರಾದ್ರೂ ಮಾಸ್ತರು ಹೊಡೆದ ನೋವು ಕೆಣಕಿದ್ರೆ ಅದರ ಆರ್ಭಟ ಜಾಸ್ತಿಯಾಗಿರುತ್ತಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. [ ಅಲ್ಲಾ ವಿಷಯ ನಿಮ್ಮಲ್ಲೇ ಇರ್ಲಿ ಈಗ ನನ್ನನ್ನೂ ಸೇರಿದಂತೇ ನಮ್ಮ ಶಿಳ್ಳೇಕ್ಯಾತಗಳೆಲ್ಲಾ ಎಂಜಿನೀಯರುಗಳಾಗಿ ಬೇರೇ ಬೇರೇ ವೃತ್ತಿಗಳಲ್ಲಿ ನಿರತರಾಗಿದ್ದೇವೆ; ಕಲಿಸಿದ ಮಾಸ್ತರುಗಳನ್ನೆಲ್ಲಾ ಆಗಾಗ ನೆನೆಯುತ್ತಲೇ ಇರುತ್ತೇವೆ.]

ಕಾರ್ತೀಕ ಮಾಸದಲ್ಲಿ ಊರ ದೇವಸ್ಥಾನಗಳಲ್ಲಿ ಭಜನೆ ನಡೆಯುತ್ತಿತ್ತು. ಅದರಲ್ಲಿ ಪುರಂದರ ದಾಸರ ಭಜನೆಗಳೇ ಜಾಸ್ತಿ. ದಾಸರ ಪದಗಳಲ್ಲಿ ಅತೀ ಹೆಚ್ಚು ಸಿಗುವುದು ಪುರಂದರ ದಾಸರದ್ದು ಅಲ್ವೇ? ಹಾಗೆ ಹಾಡುವ ಭಜನೆಗಳಲ್ಲಿ ’ಹರಿಕುಣಿದಾ ನಮ್ಮ ಹರಿಕುಣಿದ..’ ಭಜನೆ ಕೂಡಾ ಒಂದು. ಅದರಲ್ಲಿ ಕೊನೇ ಸಾಲು ’ಪರಮ ಭಾಗವತರ ಕೇರಿಯೊಳಾಡುವ ಪುರಂದರ ವಿಠಲ ಹರಿಕುಣಿದ ’. ನೀಲ್ಕೋಡ್ ಕಡೆಯ ಹಾಗಲಬಳ್ಳಿ ನೆಂಟರಲ್ಲಿ ’ಪರಮ ಭಾಗವತ’ ಎನ್ನುವವರೂ ಒಬ್ಬರು. ಅವರ ಹೆಸರು ಪರಮೇಶ್ವರ ಎಂದಿರಬೇಕು, ಕುಟುಂಬದ ಹೆಸರು [ಸರ್ ನೇಮ್] ಭಾಗವತ ಎಂಬುದಾಗಿ ಇತ್ತು. ಹಿಂದಕ್ಕೆ ಯಕ್ಷಗಾನ ಭಾಗವತಿಕೆ ಮಾಡುವ ಮನೆತನವನ್ನು ಭಾಗವತರು ಎಂದೇ ಕರೆಯುತ್ತಿದ್ದರು. ಪರಮೇಶ್ವರ ಎನ್ನುವುದು ಕರೆಯುವುದಕ್ಕೆ ಬಹಳ ಉದ್ದವಾಗುತ್ತದೆ ಎಂಬ ಅಡಚಣೆ ಗ್ರಹಿಸಿ ಪರಮ ಭಾಗವತ ಅಥವಾ ಪರಂ ಭಾಗೊತ ಅಂತ ಕರೀತಿದ್ರು. ಇಂಥಾ ಪರಮ ಭಾಗವತರ ಮನೆ ನೀಲ್ಕೋಡ್ನಲ್ಲಿ ಒಂದು ಕೇರಿಯಲ್ಲಿ ಇತ್ತು. ಆ ಕೇರಿಯಲ್ಲಿ ಪುರಂದರ ವಿಠಲನೆಂಬಾತ ಆಡುತ್ತಾನೆ ಅಂತಾದ್ರೆ ಪುರಂದರ ದಾಸರು ಅದನ್ನು ಹ್ಯಾಗೆ ಬಂದು ನೋಡಿದ್ರು ? ಅರ್ಥವಾಗದ ಬಹಳ ದೊಡ್ಡ ಸಮಸ್ಯೆ ನಮ್ಮದು! ಪುರಂದರ ದಾಸರು ಬದುಕಿಲ್ಲ ಬಹಳ ಹಿಂದೇ ಹಾಡು ಬರೆದರು ಎಂಬುದು ಗೊತ್ತಿತ್ತು..ಆದ್ರೆ ಈಗಿರುವ ಪರಮ ಭಾಗವತರ ಕೇರಿಯನ್ನು ಆಗಲೇ ಅದು ಹೇಗೆ ಅವರು ಕಂಡರು? ತಪಸ್ಸಿನ ಫಲವೇ ? ಆಗಲೇ ಭವಿಷ್ಯ ನುಡಿದರೇ? ಗೊತ್ತಾಗಿರ್ಲಿಲ್ಲ.

ಪರಮ ಭಾಗವತರು ನಮ್ಮನೆಗೆ ಅಪರೂಪಕ್ಕೆ ಬರುವುದಿತ್ತು, ಚಾ -ತಿಂಡಿ ವಗೈರೆ ಅಲ್ಪೋಪಹಾರವೋ ಬೇಸಿಗೆಯಾದರೆ ಶೈತ್ಯೋಪಚಾರವೋ ಊಟವೋ ಮುಗಿಸಿ ಅದೂ ಇದೂ ಕಥಾಕಾಲಕ್ಷೇಪವಾದಮೇಲೆ ಮತ್ತೆ ಅವರು ವಾಪಸ್ಸಾಗುತ್ತಿದ್ದರು. ಹೀಗಿದ್ದ ಒಂದು ಸಂದರ್ಭ ಅವರು ಬಂದಾಗ ನಾನು ಧೈರ್ಯಮಾಡಿ ಕೇಳಿಯೇ ಬಿಟ್ಟೆ. " ನಿಮ್ಮ ಕೇರಿಯಲ್ಲಿ ಪುರಂದರ ವಿಠಲ ಆಡಲಿಕ್ಕೆ ಬರುತ್ತಾನಂತೆ ಎಲ್ಲಿ ? " ನನ್ನ ಚಿಕ್ಕಪ್ಪಂದಿರು, ತಂದೆ, ಅಜ್ಜ ಆದಿಯಾಗಿ ಅಲ್ಲಿದ್ದ ಎಲ್ಲರೂ ನಕ್ಕರೆ ನಮ್ಮ ಗತಿ ಏನಾಗಬೇಡ ಸ್ವಾಮೀ ? ಪರಮ ಭಾಗವತರಿಗೂ ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಗಿರಬೇಕು.

ಕೆದಕಿದರೆ ನೂರಾರು ಕಥೆಗಳನು ಬರೆವೆನು
ಬೆದಕಿದರೆ ಹಲವಾರು ಘಟನೆಗಳ ತರುವೆನು
ಕೆದಕು-ಬೆದಕಿನ ಹಲವು ಸ್ವಾರಸ್ಯಗಳ ನಡುವೆ
ಬದುಕು ನೀರಸವಾಗದಂತಿರಲಿ
ಇದಕೆ ನಿನಗೊಂದಲ್ಲ ಹತ್ತಾರು ನೂರಾರು ನಮನಗಳು
ತದುಕದೇ ಸಲಹೆಮ್ಮ ಅಧಿಕ ಪ್ರೀತಿಯ ಪುರಂದರ ವಿಠಲ !

Wednesday, November 16, 2011

ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ!


ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ!

ಆನೆಗೆ ಆನೆ ಭಾರವಾಗಿರುವುದಂತೂ ನಿಜ. ಮೊದಲೇ ಕಾಡುಗಳ್ಳರು, ರಾಜಕಾರಣಿಗಳು ಮತ್ತು ಹೊಸದಾಗಿ ಜಮೀನಿಗಾಗಿ ಒತ್ತುವರಿಮಾಡುವ ರೈತಾಪಿ ಜನರು ಈ ಮೂರು ಕಾರಣಗಳಿಂದ ಅಡವಿ ಪ್ರದೇಶ ಕಮ್ಮಿಯಾದಮೇಲೆ ಬೃಹತ್ ಕಾಡುಪ್ರಾಣಿಗಳಿಗೆ ಜೀವನ ಕಷ್ಟಕರವೇ ಆಗಿದೆ. ಅದರಲ್ಲಂತೂ ಕಳೆದೊಂದು ವರ್ಷದಿಂದ ಬಿದಿರು ಹೂ ಬಿಟ್ಟು ತನ್ನನ್ನು ತಾನೇ ಸಂಪೂರ್ಣ ನಾಶಪಡಿಸಿಕೊಳ್ಳುವ ಹನ್ನೊಂದು ವರ್ಷಕ್ಕೊಮ್ಮೆ ನಡೆಯುವ ನೈಸರ್ಗಿಕ ಪ್ರಕ್ರಿಯೆ ನಡೆದಿದೆ. ದಿನಕ್ಕೆ ೨೫೦ ಕೆಜಿ ಆಹಾರ ಅದರಲ್ಲೂ ಹೆಚ್ಚಾಗಿ ಬಿದಿರು ಸೊಪ್ಪನ್ನು ತಿಂದು ಬದುಕುವ ಆನೆ ಎಲ್ಲಿಂದ ಯಾವರೀತಿಯಲ್ಲಿ ಆಹಾರ ಹುಡುಕಿಕೊಂಡೀತು ? ತಿನ್ನಲು ಹುಡುಕುತ್ತಾ ಸಾಗುವಾಗ ಹಿಂದೊಮ್ಮೆ ತನ್ನ ರಹದಾರಿಯಾಗಿದ್ದ ಪ್ರದೇಶಗಳಲ್ಲಿ ಕಾಲಿರಿಸಿದಾಗ ಹಲವು ಜಾಗಗಳು ರೈತರ ಕೈವಶವಾಗಿ ಹಲವು ತೆರನಾದ ಬೆಳೆಗಳು ಬೆಳೆದುನಿಂತಿರುವುದನ್ನು ನೋಡಿವೆ. ಆನೆ ಕುಟುಂಬ ಅಥವಾ ಸಂಘಜೀವಿಯಾದುದರಿಂದ ಬಂದರೆ ಇಡೀ ಸಮುದಾಯ ಬರುತ್ತವೆ; ತಿಂದರೆ ಎಲ್ಲವೂ ಮೆಲ್ಲುತ್ತವೆ. ಹಾಗೆ ಬಂದಿದ್ದು ಕರ್ನಾಟಕದ ಹಾಸನ ಜಿಲ್ಲೆಯ ಕೆಲವು ಭಾಗಗಳಿಗೆ ಮೈಸೂರು ಜಿಲ್ಲೆಯ ಹಲವು ಪ್ರದೇಶಗಳಿಗೆ ಮೇಲಾಗಿ ದಾರಿತಪ್ಪಿ ಮೈಸೂರಿಗೆ ! ಅವುಗಳ ಜಾಗವನ್ನು ಅವುಗಳ ಪಾಲಿಗೇ ಬಿಟ್ಟಿದ್ದರೆ ಅವು ಕಾಡಿನಿಂದ ನಾಡಿಗೆ ಬರುತ್ತಿರಲಿಲ್ಲ ಎಂಬುದನ್ನು ನಾವಿನ್ನೂ ಮನಗಾಣಬೇಕಾಗಿದೆ.

ವಿಷಯದ ಪ್ರಸ್ತಾವನೆ ಈ ರೀತಿಯಿಂದಾದರೂ ಇಲ್ಲಿ ಹೇಳ ಹೊರಟಿದ್ದು ಅದನ್ನಲ್ಲ. ಕಿಂಗ್ ಫಿಶರ್ ಎಂಬ ವಿಮಾನಯಾನ ಸಂಸ್ಥೆ ಯಾಕೆ ನಷ್ಟಕ್ಕೆ ಗುರಿಯಾಯ್ತು ಎಂಬುದನ್ನು ಅವಲೋಕಿಸಹೊರಟಿದ್ದು. ಜೊತೆಗೆ ವಿದರ್ಭ ಎಂಬಲ್ಲಿನದೂ ಸೇರಿದಂತೇ ನಮ್ಮ ಕರ್ನಾಟಕದ ಬಡತನದ ಕೆಲವು ಮುಖಗಳನ್ನೂ ನೋಡಿಕೊಂಡು ಬರೋಣ ಎಂಬ ಒಂದು ಪ್ರಯತ್ನ ಹೀಗೆ ಬರೆಸುತ್ತಿದೆ.

ಹಿಂದೊಮ್ಮೆ ಜೆ.ಆರ್.ಡಿ ಟಾಟಾ ಪುಸ್ತಕ ಬರೆದಿದ್ದೆ, ಅದಿನ್ನೂ ಮುದ್ರಣ ಮುಂಚಿನ ದೋಷ ಪರಿವೀಕ್ಷಣೆಯಲ್ಲಿದೆ ಅಂತಿಟ್ಟುಕೊಳ್ಳಿ. ಭಾರತದಲ್ಲಿ ವಿಮಾನಯಾನವನ್ನು ಆರಂಭಿಸಿದ್ದೇ ಜೆ.ಆರ್.ಡಿ. ಯವರು. ಸ್ವಾತಂತ್ರ್ಯಾ ನಂತರದ ವರ್ಷಗಳಲ್ಲಿ ಆದ ರಾಜಕೀಯ ಬದಲಾವಣೆಗಳಿಂದ ಕೇಂದ್ರ ಸರಕಾರ ವಿಮಾನಯಾನವನ್ನು ರಾಷ್ಟ್ರೀಕರಣಗೊಳಿಸಿತು. ಮಾತ್ರವಲ್ಲ ವಿಮಾನಯಾನ ಸಂಸ್ಥೆಗೆ ಮುಖ್ಯಸ್ಥರಾಗಿದ್ದ ಜೆ.ಆರ್.ಡಿಯವರನ್ನೂ ವಜಾ ಗೊಳಿಸಿರುವುದಾಗಿ ನೆಹರೂ ಜೆ.ಆರ್.ಡಿಗೆ ಪತ್ರ ಬರೆದಿದ್ದರು. ಖಾಸಗೀ ಸಂಸ್ಥೆಗಳಿಗೆ ವಿಮಾನಯಾನ ಪರವಾನಗಿ ಒಮ್ಮೆ ಇದ್ದಿದ್ದು ರದ್ದಾಗಿ ಮತ್ತೆ ಈಗ ನಾಕಾರು ವರ್ಷಗಳ ಹಿಂದೆ ಖಾಸಗೀ ಸಂಸ್ಥೆಗಳಿಗೂ ಪರವಾನಗಿ ನೀಡಲಾಯ್ತು. ಹಣವಿದ್ದ ದೊಡ್ಡ ದೊಡ್ಡ ಕಂಪನಿಗಳು ಇದನ್ನು ಬಹಳ ಆಸಕ್ತ ವಿಷಯವನ್ನಾಗಿ ತೆಗೆದುಕೊಂಡು ವಿಮಾನ ಹಾರಿಸಲು ಮುಂದಾದವು; ಆ ಪೈಕಿ ಕಿಂಗ್ ಫಿಶರ್ ಕೂಡ ಒಂದು.

ಸಾವಿರ ಕೋಟಿಗಳಲ್ಲಿ ಹೂಡಿಕೆಮಾಡಿ ನಿಧಾನವಾಗಿ ಹಿಂಪಡೆಯಬೇಕಾದ ದಂಧೆ ಅದು. ಒಂದೇ ಒಂದು ವಿಮಾನ ಹಾರಬೇಕದರೂ ಕೋಟ್ಯಂತರ ರೂಪಾಯಿ ನಷ್ಟವಾಗುವ ಸಂಭವನೀಯತೆ ಇರುವ ರಿಸ್ಕೀ ಜಾಬ್ ಅದು! ಹೆಂಡದಲ್ಲಿ ಹೇರಳ ಕಾಸೆಣಿಸಿದ್ದ ದೊರೆ ಮಲ್ಯರಿಗೆ ಇದರ ಆಗು ಹೋಗುಗಳ ಬಗ್ಗೆ ಅಷ್ಟಾಗಿ ಆಳವಾದ ಜ್ಞಾನ ಇರಲಿಲ್ಲ. ಸಕಾಲದಲ್ಲಿ ಆತ ಉತ್ತಮ ಸಲಹೆದಾರರಿಂದ ಸಲಹೆಯನ್ನೂ ಪಡೆದಿದ್ದು ಸುಳ್ಳು. ಮಾಡಬೇಕೋ ಮಾಡಬೇಕು ಎಂಬ ಹುಂಬತನವೇ ಮೊದಲ ತಪ್ಪುಹೆಜ್ಜೆಯೇನೋ ಅನಿಸುತ್ತದೆ. ದೊಡ್ಡವರ ವಿಷಯ ಬಿಡಿ; ಮಾತನಾಡುವ ಹಾಗಿಲ್ಲ. ಹಣವೊಂದೇ ಇದ್ದರೆ ಯಾವ ದಂಧೆಯನ್ನದರೊ ಮಾಡಲು ಸಾಧ್ಯ ಎಂದುಕೊಳ್ಳುವವರಿಗೆ ಮಲ್ಯ ಹಾಗೆ ಮಾಡಲು ಮುಂದಾಗಬಾರದು ಎಂಬುದನ್ನು ಮುಂದೊಂದು ದಿನ ಪಾಠಮಾಡಬಹುದು!

ವಿಮಾನಯಾನ ಸಂಸ್ಥೆ ಆರಂಭಿಸಿ, ಬೆಳೆಸಿ ಬೇರೆ ಕಂಪನಿಗಳಿಗೆ ವಹಿಸಿಕೊಟ್ಟು ಹೆಚ್ಚಿನ ಕೀರ್ತಿಮೌಲ್ಯ ಎಣಿಸಿಕೊಳ್ಳುವ ಆಸೆಯೂ ಇದ್ದಿರಬಹುದು. ಏನಿದ್ದರೂ ಬೆಳೆದ ಮೂಲ ದಂಧೆಯಿಂದ ಹಣ ಹೊಂಚಿ ಇನ್ನೊಂದಕ್ಕೆ ಸುರಿಯುವಾಗ ಸ್ವಲ್ಪ ದೀರ್ಘಾಲೋಚನೆ ಅವಶ್ಯಕ. ಕಿಂಗ್ ಫಿಶರ್ ಆರಂಭವಾದ ಒಂದೆರಡು ವರ್ಷಗಳಲ್ಲೇ ಡೆಕ್ಕನ್ ವಿಮಾನಯಾನ ಸಂಸ್ಥೆಯನ್ನೂ ಖರೀದಿಸಿದ್ದು ಮತ್ತೊಂದು ತಪ್ಪು ಹೆಜ್ಜೆ. ಕೇವಲ ಶ್ರೀಮಂತರಿಗಷ್ಟೇ ಮೀಸಲಾಗಿಡುವ ಹೈ ಕ್ಲಾಸ್ ವಿಮಾನಯಾನವನ್ನಷ್ಟೇ ನಡೆಸಿಕೊಂಡು ನಿಗದಿತ ಪ್ರದೇಶಗಳಿಗೆ ಮಾತ್ರ ಸೀಮಿತ ವಿಮಾನಗಳನ್ನು ಇಟ್ಟುಕೊಂಡು ನಡೆಸಬಹುದಿತ್ತು. ಹಾಗೂ ಮಾಡಲಿಲ್ಲ. ಮಲ್ಯ ಕೈ ಹಾಕಿದಮೇಲೆ ಎಲ್ಲಾಕಡೆಗೂ ಅದರ ಅಮಲು ಹರಡಬೇಕೆಂಬ ಅತೀ ಮಹತ್ವಾಕಾಂಕ್ಷೆ ಇನ್ನೊಂದು ತಪ್ಪು. ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ವಿಮಾನಯಾನ ಸಂಸ್ಥೆ ಮಾಡಿದ ಮಲ್ಯ ಹಾಗೆ ಮೇಲೇರುವಾಗ ಆಗುವ ಲಾಭ-ನಷ್ಟಗಳ ಪರಿವೆಯನ್ನೇ ಇಟ್ಟುಕೊಳ್ಳಲಿಲ್ಲ.

೨೦೦೫ ರಲ್ಲಿ ಸಂಸ್ಥೆ ಆರಂಭವಾದಾಗ ಕೆಲವು ಉದ್ಯಮಿಗಳೂ ಸೇರಿದಂತೇ ಸಿರಿವಂತ ಪ್ರಯಾಣಿಕರು ಮಲ್ಯ ಅಣಿಗೊಳಿಸಿದ ಸೆಕ್ಸೀ ಗಗನಸಖಿಯರನ್ನು ನೋಡುತ್ತಾ ಅವರ ವಿಮಾನಗಳಲ್ಲಿ ಯಾನ ಬೆಳೆಸಿದ್ದರೂ ಬರುಬರುತ್ತಾ ಅವರೆಲ್ಲಾ ಎಚ್ಚೆತ್ತುಕೊಂಡುಬಿಟ್ಟರು. ವಿಮಾನಯಾನ ಸಂಸ್ಥೆಗಳ ಸಂಖ್ಯೆಯೂ ಜಾಸ್ತಿಯಾಗಿ ಪ್ರಯಾಣದರದಲ್ಲಿ ಪೈಪೋಟಿ ಆರಂಭವಾಯ್ತು. ಕಚ್ಚಾತೈಲದ ಬೆಲೆಯೇರಿಕೆಯ ಆಧಾರದಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗುತ್ತಾ ಬಂತು. ಹಣದುಬ್ಬರ ಜಾಸ್ತಿಯಾಗಿ ಬ್ಯಾಂಕುಗಳ ಸಾಲಕ್ಕೆ ಬಡ್ಡಿದರ ಜಾಸ್ತಿಯಾಯ್ತು. ವಿದೇಶೀ ಬಂಡವಾಳ ಹೂಡಿಕೆದಾರರನ್ನು ಕರೆದುಕೊಳ್ಳಲು ಮಲ್ಯರಿಗೆ ಅನುಮತಿ ಸಿಗಲಿಲ್ಲ. ಪೆಟ್ರೋಲ್ ಮೇಲೆ ಇರುವ ತೆರಿಗೆಯೇ ಬಹಳವಾಗಿ ಖರ್ಚಿನಲ್ಲಿ ಅದೇ ಸುಮಾರು ೫೦% ನಷ್ಟು ಕಬಳಿಸಿಬಿಡುತ್ತಿದ್ದು. ಮಿಕ್ಕುಳಿದಂತೇ ಸೆಕ್ಸೀ ಗಗನಸಖಿಯರನ್ನು ದುಬಾರಿ ಸಂಬಳದಲ್ಲಿ ಸಾಕಬೇಕಲ್ಲಾ ? ಅನುಭವೀ ಪೈಲಟ್‍ಗಳನ್ನು ಬೇರೇ ಇಟ್ಟುಕೊಳ್ಳಬೇಕಾಗುತ್ತದಲ್ಲಾ ಯಾಕೆಂದರೆ ವಿಮಾನ ಗಗನಮಾರ್ಗದಲ್ಲಿ ಸಾಗುವಂಥದ್ದು, ಎಲ್ಲೋ ಇಲ್ಲೇ ಅಕ್ಕಪಕ್ಕದ ರಸ್ತೆಗಳಲ್ಲಿ ಓಡಾಡುವ ಲಾರಿ, ಬಸ್ಸುಗಳ ರೀತಿ ಅಲ್ಲ ನೋಡಿ! ಹೀಗೆಲ್ಲಾ ಆಗಿ ಮಲ್ಯ ಈಗ ಮಿಕಿಮಿಕಿ ನೋಡುತ್ತಿದ್ದಾರೆ.

ಈ ಸುದ್ದಿ ಆಗಾಗ ಮಾಧ್ಯಮಗಳಲ್ಲಿ ಪ್ರಚಾರ ಪಡೆದರೂ ಇಲ್ಲೀವರೆಗೂ ಮಲ್ಯ ತಡೆದುಕೊಂಡೇ ಇದ್ದಿದ್ದು ತನ್ನ ಇಮೇಜಿಗೆ ತನ್ನ ಛಾಪಿಗೆ ದಕ್ಕೆ ಬಾರದಿರಲಿ ಎಂಬ ಕಾರಣಕ್ಕಾಗಿ. ಸದ್ಯಕ್ಕೆ ನಷ್ಟ ಅಂದಾಜು ೪೮೦೦ ಕೋಟಿ ಎಂದು ಗಣಿಸಲ್ಪಟ್ಟಿದ್ದರೂ ಒಳಗಿನ ಗುಟ್ಟು ಶಿವನೇ ಬಲ್ಲ! ಒಟ್ಟೂ ೧೩ ಬ್ಯಾಂಕುಗಳು ಹಣ ಸುರಿದಿದ್ದು ಆಮೇಲಾಮೇಲೆ ಭದ್ರತೆಗಾಗಿ ೨೪% ಸ್ಟೇಕ್ಸ್‍ನ್ನು ತಮ್ಮಲ್ಲಿ ಇರಿಸಿಕೊಂಡಿವೆ. ಈಗ ಅವು ಮತ್ತೆ ಸಹಾಯ ನೀಡಲು ಮುಂದಾಗುತ್ತಿಲ್ಲ. ಆದರೂ ಮಹಾರಾಷ್ಟ್ರದ ಹಣಕಾಸು ಸಂಸ್ಥೆಯೊಂದು ೪೦೦೦ ಕೋಟಿ ಸಹಾಯ ಮಾಡುವುದಾಗಿ ಮುಂದಾಗಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತದೆಯೇ ? ಸಂದೇಹವಂತೂ ಬಲವಾಗಿದೆ. ದೇಶದಲ್ಲಿ ಉತ್ತಮ ಆಡಳಿತ ಸಲಹೆದಾರರು ಇದ್ದವರೆಲ್ಲಾ ಏನೆನ್ನುತ್ತಾರೆ? ಯಾರೂ ತಮ್ಮ ಅಭಿಪ್ರಾಯಗಳನ್ನು ಮುಂದೆ ತರುತಿಲ್ಲ ಎಂಬುದೇ ಆಶ್ಚರ್ಯವಾಗಿದೆ !

ಇನ್ನು ವಿದರ್ಭ ಎಂಬುದು ನಮ್ಮ ನೆರೆರಾಜ್ಯವಾದ ಮಹಾರಾಷ್ಟ್ರದ ಒಂದು ಪ್ರದೇಶ. ಅಲ್ಲಿನ ರೈತರ ಜೀವನ ಎಷ್ಟು ದುರ್ಭರವಾಗಿದೆ ಎಂದರೆ ರಾಜಕಾರಣಿಗಳು ಅದರಲ್ಲೂ ರಾಹುಲ್ ಗಾಂಧಿಯಂತಹ ಜನ ಸ್ವತಃ ಭೇಟಿ ನೀಡಿ ಮತದಾರರ ಕಣ್ಸೆಳೆದರು ಬಿಟ್ಟರೆ ಅಲ್ಲೀಗ ಯಾರೂ ಕೇಳುವವರಿಲ್ಲ. ನಾಗಪುರದಿಂದ ಹೈದ್ರಾಬಾದಿಗೆ ಹೋಗುವ ಮಾರ್ಗದುದ್ದಕ್ಕೂ ಹತ್ತಿ ಬೆಳೆಯುವ ಪ್ರದೇಶಗಳನ್ನೇ ಕಾಣಬಹುದು. ಹತ್ತಿ ಬೆಳೆ ಬೆಳೆಯುವ ರೈತನಿಗೆ ಕೆಜಿಗೆ ೫ ರೂ. ಸಿಗುತ್ತದಂತೆ. ಒಂದು ದಿನಕ್ಕೆ ಬೆಳಿಗ್ಗೆಯೇ ಹತ್ತಿ ಆಯಲು ಹೋದರೆ ಸಾಯಂಕಾಲ ೬:೩೦ಕ್ಕೆ ಸಿಗುವುದು ೫ ಕೆಜಿ ಹತ್ತಿ ! ಚಿಕ್ಕ ಹಿಡುವಳಿದಾರರು ಅಲ್ಪಸ್ವಲ್ಪ ಗದ್ದೆಗಳಿರುವವರು ಹಿಂದೆ ಮಾಡಿದ ಸಾಲ ಕೈಸಾಲಗಳಿಗೆ ಮತ್ತೆ ಕಿರುಸಾಲ ಮರಿಸಾಲ ಎಂದು ಸಾಲದ ಪಟ್ಟಿ ಬೆಳೆದು ೨೫,೦೦೦ ದಿಂದ ೫೦,೦೦೦ ....೩,೦೦,೦೦೦ ವರೆಗೂ ಸಾಲ ಮಾಡಿಕೊಂಡ ಜನ ಇದ್ದಾರೆ. ಸಾಲಕೊಟ್ಟವರ ಉಪಟಳ ಜಾಸ್ತಿಯಾದಾಗ ಅವರು ಮನೆಗೆ ಬಂದು ಮರಳಿಸುವಂತೇ ಬಲವಂತ ಮಾಡಿದಾಗ ಬೇಸತ್ತು ವಿಷಪ್ರಾಶನ ಮಾಡಿದ ಹಲವು ರೈತರ ವಿಧವೆಯರು ಬದುಕಲೂ ಆರದೆ, ಸಾಯಲೂ ಆರದೇ ಜೀವ ತೇದು ಕಾಲಹಾಕುತ್ತಿದ್ದಾರೆ. ಒಪ್ಪೊತ್ತಿನ ಗಂಜಿ ಕಾಣಿಸಲಿಕ್ಕೂ ಕಷ್ಟದಾಯಕ ಪರಿಸ್ಥಿತಿ ಇದೆ. ಒಂದೊಂದು ಮನೆಯಲ್ಲಿ ಕನಿಷ್ಠ ಎರಡು ಮೂರು ಮಕ್ಕಳಿದ್ದಾರೆ. ಅವರುಗಳ ವಿದ್ಯಾಭ್ಯಾಸ, ಬಟ್ಟೆ, ಸ್ಕೂಲ್ ಫೀಸು, ಔಷಧ ವಗೈರೆ ಖರ್ಚು ನೆನಪಿಸಿಕೊಂಡರೆ ಅಲ್ಲಿನ ಆ ವಿಧವೆಯರಲ್ಲಿ ಕಣ್ಣೀರು ಉಕ್ಕಿ ಹರಿಯುತ್ತದೆ. ೨೦೦೫ ರಿಂದ ಇತ್ತೀಚೆಗೆ ರೈತರ ಸಾವುಗಳ ಸಂಖ್ಯೆ ಜಾಸ್ತಿಯಾಗಿದೆ.

ರೈತರ ಸಾಲ ಮನ್ನಾ ಆಗುವುದು ಇರಲಿ ಸತ್ತ ರೈತರಿಗೆ ಪರಿಹಾರ ಸಿಗುತ್ತಿಲ್ಲ ಏಕೆಂದರೆ ಬಹುಸಂಖ್ಯಾಕರು ಗುತ್ತಿಗೆಯಮೇಲೆ ಕೆಲ್ಸಮಾಡುವವರಾಗಿದ್ದಾರೆ. ಸತ್ತಾಗ ಅವರ ಹೆಸರಿನಲ್ಲಿ ಯಾವುದೇ ಜಮೀನು ದಾಖಲೆಪತ್ರಗಳು ಇರುವುದಿಲ್ಲ. ಇದ್ದರೂ ಅವು ಸಾಲ ಕೊಟ್ಟವರ ಕೈವಶವಾಗಿ ಖಾತೆ ಬದಲಾವಣೆಯಾಗಿರುತ್ತದೆ! ಒಂದು ಕಾಲದಲ್ಲಿ ತಮ್ಮದೇ ಆಗಿದ್ದ ಹೊಲಗಳನ್ನು ಸಾಲಕೊಟ್ಟವರಿಗೆ ಮಾರಿಕೊಂಡು ಮತ್ತದೇ ಹೊಲದಲ್ಲಿ ಗುತ್ತಿಗೆಯ ಆಧಾರದಲ್ಲಿ ಹತ್ತಿ ಕೆಲಸಮಾಡುವ ರೈತರಿಗೆ ಯಾವುದೇ ಭದ್ರತೆ ಇರುವುದಿಲ್ಲ. ನಿತ್ಯ ಹನ್ನೆರಡು ತಾಸು ಕೆಲಸಮಾಡಿದರೂ ಹೊಟ್ಟೆ ತುಂಬಿಸಲಾಗದ ಬವಣೆ ಅವರನ್ನು ಕಾಡುತ್ತಿದೆ. ಮನೆಯ ಯಜಮಾನ ರಾತ್ರಿ ಮಲಗಿದವನು ಬೆಳಿಗ್ಗೆ ಏಳುತ್ತಾನೆ ಎನ್ನುವ ಗ್ಯಾರಂಟಿಯೇ ಇರದಷ್ಟು ಬೇಸತ್ತ ಜೀವನ ಅಲ್ಲಿನ ಜನರದಾಗಿದೆ. ಒಮ್ಮೆ ಬಂದು ಹೋದ ರಾಹುಲ್ ಗಾಂಧಿ ಮತ್ತೆ ಆ ಕಡೆ ತಲೆ ಹಾಕಿಲ್ಲ! ಛೆ ಛೆ ಹಾಗೆಲ್ಲಾ ಹೇಳ್ಬಾರ್ದು ನಮ್ಮ ರಾಜಕಾರಣಿಗಳೇ ಹಾಗಲ್ವೇ ?

ಕರ್ನಾಟಕದ ರಾಮನಗರದಲ್ಲಿ ಬಡತನ ಹೇಗಿದೆಯೆಂಬುದಕ್ಕೆ ಇತ್ತೀಚೆಗೆ ಟಿವಿ೯ ವರದಿಮಾಡಿತ್ತು. ಅಲ್ಲಿ ಸರಿಸುಮಾರು ೨೦,೦೦೦ ಜನ ತಮ್ಮ ಒಂದೊಂದು ಕಿಡ್ನಿ ಮಾರಾಟಮಾಡಿಕೊಂಡಿದ್ದಾರೆ ! ಕಿಡ್ನಿ ಜಾಲದ ಆಮಿಷಕ್ಕೆ ಬಲಿಬಿದ್ದು ೩-೪ ಲಕ್ಷ ಹಣಬರುತ್ತದೆ, ತಮ್ಮ ಸಾಲವಾದರೂ ತೀರಬಹುದೆಂಬ ಕಾರಣಕ್ಕೆ ಕಿಡ್ನಿ ಮಾರಿದರೆ ಜಾಲದ ಮಧ್ಯವರ್ತೀ ಕಳ್ಳಜನ ಬಹಳಷ್ಟು ಜನರಿಗೆ ೨,೦೦೦ ಅಥವಾ ೨,೫೦೦ ಕೊಟ್ಟು ಬೆದರಿಸಿ ಸುಮ್ಮನಾಗಿಸಿದ್ದಾರೆ. ವಿಚಿತ್ರವೆಂದರೆ ಕಿಡ್ನಿ ಮಾರಾಟಮಾಡಿಕೊಂಡವರು ಹೊಸ ಏಜೆನ್ಸಿ ಪಡೆದವರಂತೇ ತಮ್ಮಂತೇ ಅಸಹಾಯಕತೆಯಲ್ಲಿರುವ ಬೇರೇ ಜನರನ್ನು ಹುಡುಕಿ ತಂದು ಕಿಡ್ನಿ ಮಾರಾಟ ಮಾಡಿಸುತ್ತಿದ್ದಾರೆ. ಇದರಲ್ಲಿ ಹೆಂಗಸರೂ ಬಹಳ ಜನ ಸೇರಿದ್ದಾರೆ. ಅನಕ್ಷರಸ್ಥರಾದ ಗಂಡಸರು ಸಾಲ ತೀರಿಸುವ ಚಿಂತೆಯಲ್ಲಿ ಕುಡುಕರಾಗಿ, ದುಶ್ಚಟಗಳಿಗೆ ಬಲಿಬಿದ್ದು ಯಾರಾದರೂ ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲಾ ಎನ್ನುವ ಹಂತಕ್ಕೆ ಬಂದಾಗ, ಹೆತ್ತ ಅಪ್ಪ-ಅಮ್ಮ ತಮ್ಮ ಮುಪ್ಪಿನ ವಯಸ್ಸಿನಲ್ಲಿ ಮಗಳು-ಅಳಿಯಂದಿರಿಗೆ ಏನೂ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲದಾಗ ಮರ್ಯಾದೆ ಉಳಿಸಿಕೊಳ್ಳಲು ಹಣ ಸಿಗುವುದೆಂಬ ಆಸೆಗೆ ಗಾಳಿ ಸುದ್ದಿಗೆ ಕಿವಿಯೊಡ್ಡಿ ತಮ್ಮ ಕಿಡ್ನಿ ಮಾರಾಟಕ್ಕೆ ಒಪ್ಪಿ ಕಳೆದುಕೊಂಡ ಹೆಂಗಸರೇ ಬಹಳ ಜನ ಇದ್ದಾರೆ. ಇದನ್ನೆಲ್ಲಾ ಕೇಳುವುದಕ್ಕೆ ಅಥವಾ ಜನರನ್ನು ಹಾಗೆಲ್ಲಾ ಮಾಡದಂತೇ ಎಜ್ಯುಕೇಟ್ ಮಾಡುವುದಕ್ಕೆ ಯಾರಿದ್ದಾರೆ ? ಗೊತ್ತಿಲ್ಲ !

ಬಡತನವೆಂಬುದು ಯಾವುದೇ ಒಂದು ಜಾತಿ, ಕುಲ-ಗೋತ್ರಕ್ಕೆ ಸಂಬಂಧಿಸಿದ್ದಲ್ಲ. ಬಡತನ ಮತ್ತು ಸಿರಿತನ ಎಂಬುದೇ ಎರಡು ಜಾತಿಗಳು. ಎಲ್ಲಾ ಜನಾಂಗಗಳಲ್ಲೂ ಬಡತನ ಇದ್ದೇ ಇದೆ. ಬಡವರು ಬಡವರಾಗೇ ಉಳಿಯುತ್ತಾರೆ, ಸಿರಿವಂತರು ಸಿರಿವಂತರಾಗುತ್ತಲೇ ನಡೆಯುತ್ತಾರೆ. ಬಡತನ ಸಿರಿತನ ಪಡೆದು ಬಂದಿದ್ದಲ್ಲ ಮಾಡಿಕೊಂಡಿದ್ದು ಎಂದು ವಾದಿಸುವ ಯಾವ ಜನರೂ ಮಾರ್ಗದರ್ಶನಕ್ಕಾಗಿ ಅಲ್ಲಿಗೆ ಬರುವುದಿಲ್ಲ. ಬಡತನ ನಿರ್ಮೂಲನೆ ಎಂಬುದು ಒಂದು ಸೋಗೇ ಹೊರತು ಅದು ಯಾವ ರಾಜಕಾರಣಿಗೂ ಬೇಕಾಗಿಲ್ಲ. ಆಗಾಗ ರಾಯಚೂರು ಕಡೆಯ ಬಡತನದ ಚಿತ್ರಣಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೀರಿ. ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುವ ಜೀವಗಳನ್ನು ಕಂಡಿದ್ದೀರಿ. ಇದಕ್ಕೆಲ್ಲಾ ಯಾರಾದರೂ ನಿವಾರಣೋಪಾಯ ನೀಡುವವರಿದ್ದಾರಾ?

ಕೊನೆಯ ಒಂದು ಮಾತು ಹೇಳಿ ಮುಗಿಸಿಬಿಡುವುದು ಉತ್ತಮ : ಉತ್ತರಕರ್ನಾಟಕದಲ್ಲಿ ಮೇಲ್ವರ್ಗ, ಸ್ಥಿತಿವಂತರು ಎನಿಸಿಕೊಂಡು ಸರಕಾರೀ ಮೀಸಲಾತಿ ಮತ್ತು ಕೃಪೆಯಿಂದ ದೂರವೇ ಉಳಿದ ಬ್ರಾಹ್ಮಣವರ್ಗದ ಜನ ರಣಬಿಸಿಲಲ್ಲಿ ಕಲ್ಲು ಒಡೆದು ಜಲ್ಲಿ ತಯಾರಿಸಿ ಬದುಕುತ್ತಿದ್ದಾರೆ ! ಅಲ್ಲಿನ ಕೂಲಿಯೂ ಮತ್ತದೇ ೫೦-೬೦ ರೂಪಾಯಿ. ಸಿನಿಮಾವೊಂದರಲ್ಲಿ ದಿ| ಟಿ.ಎನ್.ಬಾಲಕೃಷ್ಣ ಮುದಿವಯಸ್ಸಿನಲ್ಲಿ ಕಲ್ಲು ಒಡೆಯುವ ಕಷ್ಟದ ಚಿತ್ರಣವನ್ನು ತೋರಿಸಿದ್ದಾರೆ. ಅದೇ ರೀತಿ ಅಕ್ಷರಶಃ ಮುದುಕರೂ ಕಲ್ಲು ಒಡೆಯುವುದನ್ನು ರಾಯಚೂರು-ಸಿಂಧನೂರು-ಬಳ್ಳಾರಿಯ ಕೆಲವು ಹಳ್ಳಿಗಳಲ್ಲಿ ಕಾಣಬಹುದು ! ’ನಾಡಿಗೆ ದೂರ ಕಾಡಿಗೆ ಹತ್ತಿರ’ ಎನಿಸುವ ಮುದುಕರಿಗೆ ಹುಟ್ಟಿದ ತಪ್ಪಿಗೆ ಮಾಡಲೇಬೇಕಾದ ಅನಿವಾರ್ಯತೆ ಅಲ್ಲಿದೆ. ಬೆವರು ಸುರಿಸುತ್ತಾ ಅವರು ತಯಾರಿಸಿದ ಜಲ್ಲೀ ಕಲ್ಲುಗಳು ಎಲ್ಲೆಲ್ಲಿಗೋ ಲಾರಿಗಳಲ್ಲಿ ಸಾಗುತ್ತವೆ.

ರಾಜಕಾರಣಿಗಳ ಡೊಂಬರಾಟ ಮಾತ್ರ ಇದನ್ಯಾವುದನ್ನೂ ಲೆಕ್ಕಿಸುವುದೇ ಇಲ್ಲ, ಅಲ್ಲಿ ಖುರ್ಚಿ ಭದ್ರತೆಯೇ ಅವರ ಚಿಂತೆ. ನೋಡಿ: ಮತ್ತೆ ಬಳ್ಳಾರಿಯಲ್ಲಿ ಈಗ ಡೊಂಬರಾಟ ನಡೆಯುತ್ತಿದೆ. ಇರುವ ಶಾಸಕ ರಾಜೆನಾಮೆ ಒಗೆದ. ಕಾರಣ ಕೇಳಿದರೆ ಸ್ವಜನರಿಂದಲೇ ಅವಮರ್ಯಾದೆ, ಅವಗಣನೆ! ಈಗ ಸ್ವತಂತ್ರ ಅಭ್ಯರ್ಥಿ-ನಾಳೆ ಗೆದ್ದಮೇಲೆ ಹುಲ್ಲು ಹೊತ್ತ ಮಹಿಳೆಯ ಸೆರಗು ಹಿಡೀತಾನೆ, ಅಲ್ಲಿ ಮತ್ತೆ ಜಗಳ- ಮತ್ತೆ ಹೊರಗೆ, ಮತ್ತೆ ಚುನಾವಣೆ; ಇದು ಮುಗಿಯದ ಡೊಂಬರಾಟ. ಪ್ರತೀ ಚುನಾವಣೆಗೆ ಕದ್ದೂ ಮುಚ್ಚಿ ಕೋಟ್ಯಂತರ ಹಣ ಚೆಲ್ಲುವ ಪ್ರತೀ ಹುರಿಯಾಳು ಎಲ್ಲಿಂದ ಹಣ ತರುತ್ತಾನೆ? ಗೆದ್ದಮೇಲೆ ಮತ್ತೆ ಮಾಮೂಲಿ ಸಿಗುತ್ತದೆಯೆಂಬ ಭದ್ರತೆ ಇರದಿದ್ದರೆ ಅಷ್ಟೆಲ್ಲಾ ಧೈರ್ಯ ಹೇಗೆ ಬರುತ್ತದೆ ? ಹೆಂಡ-ಬಟ್ಟೆ-ಬ್ಯಾನರು ಇತ್ಯಾದಿ ಚುನಾವಣೆಗೆ ಖರ್ಚುಮಡುವ ಆ ಹಣವನ್ನು ಬಡತನ ನಿರ್ಮೂಲನಗೆ ಖರ್ಚುಮಾಡಲು ಸಾಧ್ಯವಿಲ್ಲವೇ ? ಅಥವಾ ಬಡತನ ನಿರ್ಮೂಲನೆ ಎಂಬ ಕೆಲಸಕ್ಕೆ ಯಾರಲ್ಲೂ ಹಣ ಇರುವುದಿಲ್ಲವೇ ? ತಪ್ಪು ನಮ್ಮದು. ನಾವು ಮಂಗಗಳಾಗಿದ್ದೇವೆ. ರಾಜೀನಾಮೆ ಯಾಕೆ ಕೊಟ್ಟೆ-ಅಥವಾ ಯಾವ ಆಧಾರದ ಮೇಲೆ ಸ್ವೀಕರಿಸಿದಿರಿ ? ಎಂಬ ಕಾರಣ ಕೇಳಲು ನಾವು ಅರ್ಹರಲ್ಲ ! ಆಡಳಿತ ಯಂತ್ರದ ಕೀಲು ಕಳಚಿಬಿದ್ದರೂ ಕಂಡೂ ಕಾಣದಂತೇ ಪಂಕ್ಚರ್ ಆದ ಬಸ್ಸನ್ನೇರಿ ಮುಂದೆ ಸಾಗಿದಂತೇ ಸಾಗಬೇಕಾಗುತ್ತದೆ! ಇದೇ ಇಂದಿನ ಪ್ರಜಾಪ್ರಭುತ್ವ !! ಪಾಪ ಅವರ ಭಾರ ಅವರಿಗೆ ಸುಮ್ನೇ ಮಾತಾಡಿ ಪ್ರಯೋಜನವಿಲ್ಲ; ಆನೆ ಭಾರ ಆನೆಗೆ ಇರುವೆ ಭಾರ ಇರುವೆಗೆ !

Saturday, November 12, 2011

ಯುರೇಕಾ ಯುರೇಕಾ ಅಲ್ಲ ಇದು ಅರೇಕಾನಟ್ಟು !





ಹಣ್ಣಡಕೆ

ಚಾಲಿ ಅಡಕೆ

ಮದ್ರಾಸ್ ಅಥವಾ ಅಂಬಾಡಿ ಎಲೆ

ಯುರೇಕಾ ಯುರೇಕಾ ಅಲ್ಲ ಇದು ಅರೇಕಾನಟ್ಟು !

ವೈದಿಕರಿಗೆ ಎಷ್ಟೇ ಧವಸ ಧಾನ್ಯ ಬಟ್ಟೆ ಬಂಗಾರ ಏನು ಕೊಟ್ಟರೂ " ಐಶ್ವರ್ಯಮಸ್ತು " ಎನ್ನುವುದಿಲ್ಲ; ಹಾಗೆ ಹೇಳಲು ಅವರಿಗೂ ಶಾಸ್ತ್ರೋಕ್ತವಾಗಿ ಅಧಿಕಾರ ಪ್ರಾಪ್ತವಾಗುವುದು ತಾಂಬೂಲ ಕೊಟ್ಟಾಗ ಮಾತ್ರ. " ತಾಂಬೂಲಾನಿಪಾಂತು ಐಶ್ವರ್ಯಮಸ್ತು " ಎಂದು ಹರಸುತ್ತಾರೆ. ಅದಕ್ಕೇ ತಾಂಬೂಲ ಎಲ್ಲೆಲ್ಲೂ ತನ್ನದೇ ಆದ ಘನತೆಯನ್ನು ಇಂದಿನ ನವಯುಗದಲ್ಲೂ ಉಳಿಸಿಕೊಂಡಿದೆ. ಕೇಂದ್ರ ಸರಕಾರದವರು ಪಾನ್ ನಿಷೇಧ ಮಾಡಬೇಕು ಎಂದುಬಿಟ್ಟರು. ಪಾನ್ ನಲ್ಲಿ ಮುಖ್ಯವಾಗಿ ಬಳಸಬೇಕಾಗಿರುವುದು ಅಡಕೆ ಮತ್ತು ವೀಳ್ಯದೆಲೆ. ಅಡಕೆ ಜಗಿಯುವ ಕೆಲವರನ್ನು ಕಂಡು ಅದಕ್ಕೆ ಹೊಸರೂಪಕೊಡುವ ನೆಪದಲ್ಲಿ ರಾಸಾಯನಿಕ ಪರಿಮಳದ್ರವ್ಯಗಳನ್ನು ಸೇರಿಸಿ ಪ್ಲಾಸ್ಟಿಕ್ ಪೌಚ್‍ಗಳಲ್ಲಿ ತುಂಬಿಸಿ ಕಾಸು ಸಂಪಾದಿಸುವ ಅಡ್ಡ ಕಸುಬಿ ಕಂಪನಿಗಳು ಹುಟ್ಟಿಕೊಂಡು ತಾಂಬೂಲದ ಹೆಸರಿಗೆ ಮಸಿ ಬಳಿದರು. ಅಡಕೆ ಅಗಿಯುವುದು ಮಾರಕವೇ ? ಅಡಕೆ ಬೆಳೆ, ಅದರ ಆಗು-ಹೋಗು, ಅದನ್ನು ಬಳಸುವುದರಿಂದ ಆಗುವ ಉಪಕಾರಗಳ ಬಗ್ಗೆ ಕೊಂಚ ಚಿಂತಿಸೋಣ.

ದಕ್ಷಿಣಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಅಡಕೆ ಬೀಜರೂಪದಲ್ಲಿ ಬಂದದ್ದು ಆಸ್ಸಾಂ ನಿಂದ ಎನ್ನುತ್ತಾರೆ. ಆಸ್ಸಾಂ ನಲ್ಲಿ ಇದೊಂದು ಗುಡ್ಡಗಾಡು ಬೆಳೆ. ಆದರೆ ನಮ್ಮ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಅಡಕೆಯನ್ನು ಕ್ರಮಬದ್ಧ ಭಾಗಾಯಿತ ಪದ್ಧತಿಯಲ್ಲಿ ಬೆಳೆಯಲಾಗುತ್ತದೆ. ಪ್ರಾಯಶಃ ರಾಜರುಗಳ ಕೃಪಾಶ್ರಯ ಕೈಬಿಟ್ಟು ಹೋದನಂತರ ರಾಜರುಗಳೇ ಕೊಟ್ಟಿದ್ದ ಅಗ್ರಹಾರವೆಂಬ ಪ್ರದೇಶಗಳಲ್ಲಿ ತಮ್ಮ ವಸತಿಗಳ ಸುತ್ತ ಇಲ್ಲಿನ ಬ್ರಾಹ್ಮಣರು ಅಡಕೆಯನ್ನು ಬೆಳೆದರು, ಯಾಕೆಂದರೆ ಆ ಒಂದು ಸಂದರ್ಭದಲ್ಲಿ ವೇದಾಂತಿಗಳಿಗೆ, ವೇದಾಧ್ಯಯನ ಮಾಡಿದವರಿಗೆ, ಪುರೋಹಿತ ವೃತ್ತಿಯಲ್ಲಿದ್ದವರಿಗೆ ರಾಜಾಶ್ರಯವಿಲ್ಲದಾದಾಗ ಬೇರಾವ ನೌಕರಿಯನ್ನು ಮಾಡುವ ಹೊಸ ವಿದ್ಯೆಗಳ ಕುರಿತಾದ ಪದವಿಗಳು ಅವರಲ್ಲಿ ಇರಲಿಲ್ಲ. ಹೀಗಾಗಿ ಉಪಜೀವನದ ಅನಿವಾರ್ಯತೆಗಾಗಿ ಅವರು ಅಡಕೆಯನ್ನೋ ಭತ್ತ ಮತ್ತಿತರ ಬೆಳೆಗಳನ್ನೋ ಬೆಳೆಯಬೇಕಾಗಿ ಬಂತು. ಆಮೇಲಾಮೇಲೆ ಸಮಾಜದ ಎಲ್ಲಾ ವರ್ಗಗಳೂ ಅಡಕೆ ಬೆಳೆಯನ್ನು ಬೆಳೆದವು. ಇದು ಈಗ ಇತಿಹಾಸ.

ಸಂಸ್ಕೃತದಲ್ಲಿ ಪೂಗವೃಕ್ಷ ಎಂದು ಕರೆಯಲ್ಪಡುವ ಅಡಕೆಮರ ಇದ್ದ ಹೊರತು ದೇವಸ್ಥಾನಗಳಲ್ಲಿ ಹಿಂದೆ ಪ್ರತಿಷ್ಠಾಪನೆಗಳು ನಡೆಯುತ್ತಿರಲಿಲ್ಲವಂತೆ. ಒಂದೊಮ್ಮೆ ಹತ್ತಿರದಲ್ಲಿ ಸಿಗದಿದ್ದರೂ ದೂರದಿಂದ ತರಿಸುವ ವಹಿವಾಟಿತ್ತು ಎನ್ನುತ್ತಾರೆ ಅರಿತವರು. ಉತ್ತರಕರ್ನಾಟಕದ ಬಿಸಿಲು ಪ್ರದೇಶಕ್ಕೆ ಅಡಕೆ ಒಗ್ಗುವುದಿಲ್ಲ ಎಂಬುದು ಅಲ್ಲಿನವರ ಅನುಭವದ ಮಾತು. ಅರಸೀಕೆರೆ, ಬೀರೂರು, ಕಡೂರು, ಮಂಡ್ಯ, ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲೂ ಅಡಕೆ ಬೆಳೆಯುತ್ತಾರೆ. ಆದರೆ ಕರಾವಳಿಯಲ್ಲಿ ಬೆಳೆದ ಅಡಕೆಯ ಗುಣಮಟ್ಟಕ್ಕೆ ಇವುಗಳು ಸಾಟಿಯಲ್ಲ. ಅಲ್ಲಿನ ಭೂಗುಣ ಮತ್ತು ಹವಾಮಾನ ಅಡಕೆ ಬೆಳೆಗೆ ಪ್ರಶಸ್ತವಾಗಿದೆ ಎಂಬುದು ಸತ್ಯ. ಅಡಕೆ ಬಹಳ ನೀರಾವರಿಯನ್ನು ಬೇಡುವ ವರ್ಷದಲ್ಲಿ ಒಂದೇ ಸಲ ಫಸಲು ನೀಡುವ ಬೆಳೆ. ಬೆಳೆದ ಫಸಲನ್ನು ಕೊಯ್ಯುವಾಗ ಮತ್ತು ಸಂಸ್ಕರಿಸುವಾಗ ಬೇರೇ ಬೇರೇ ಪದ್ಧತಿಗಳನ್ನು ಅನುಸರಿಸಿ ಕೆಂಪಡಕೆ, ಚಾಲಿ, ಆಪಿ ಇತ್ಯಾದಿ ಹಲವು ತೆರನಾದ ಅಡಕೆಗಳನ್ನು ತಯಾರಿಸುತ್ತಾರೆ. ಆಮೇಲೆ ಅವು ಮಾರುಕಟ್ಟೆಯಲ್ಲಿ ಬಿಕರಿಗೊಂಡು ಮಧ್ಯವರ್ತಿಗಳ ಮೂಲಕ ಉತ್ತರಭಾರತ ಮತ್ತು ಇನ್ನಿತರ ಹೊರದೇಶಗಳಿಗೂ ಸಾಗಿಸಲ್ಪಡುತ್ತವೆ. ಮಧ್ಯವರ್ತಿಗಳಲ್ಲಿ ಹಲವರು ಅಡಕೆಗಳಿಗೆ ಪುನಃ ಸಂಸ್ಕಾರ ಕೊಟ್ಟು, ಇಂಡಿ, ಪಾಡ್ಚಾ, ಪುಡಿ, ಬಟ್ಲಡಕೆ, ಚೂರು ಹೀಗೇ ವಿವಿಧ ರೀತಿಯಲ್ಲಿ ಗ್ರೇಡ್ ಮಾಡುತ್ತಾರೆ. ಸಾಗುತ್ತಾ ಸಾಗುತ್ತಾ ಈ ಗ್ರೇಡೆಡ್ ಅಡಕೆಗಳು ಪುನಃ ಪುನಃ ರೂಪದಲ್ಲಿ ಮಾರ್ಪಾಡುಗೊಳಿಸಲ್ಪಡುತ್ತವೆ. ಮೂಲ ಅಡಕೆಯಲ್ಲಿ ಯಾವುದೇ ಹಾನಿಕಾರಕ ಕಲ್ಮಶ ಇರುವುದಿಲ್ಲ. ಅದಕ್ಕಾಗೇ ಅದನ್ನು ದೇವರಿಗೂ ಸಮರ್ಪಿಸಬಹುದೆಂದು ವೇದೋಕ್ತ ಮಂತ್ರಗಳೂ ಹೇಳುತ್ತವೆ.

ಫೂಗೀಫಲ ಸಮಾಯುಕ್ತಂ/ ಮಹದ್ದಿವ್ಯಂ ನಾಗವಲ್ಲೀ ದಲೈರ್ಯುತಂ |
ಕರ್ಪೂರ ಚೂರ್ಣ ಸಂಯುಕ್ತಂ ತಾಂಬೂಲಂ ಪ್ರತಿಗ್ರಹ್ಯತಾಂ ||

ಅಂದರೆ: ಅಡಕೆ, ವೀಳ್ಯದೆಲೆ , ಪಚ್ಚಕರ್ಪೂರ ಲವಂಗಾದಿಗಳನ್ನು ಇಟ್ಟು ಈ ತಾಂಬೂಲ ಕೊಡುತ್ತಿದ್ದೇನೆ ಪರಮಾತ್ಮಾ ಸ್ವೀಕರಿಸು ಎನ್ನುತ್ತೇವೆ. ಮದುವೆ, ಮುಂಜಿ ಅಥವಾ ಯಾವುದೇ ಮಂಗಲಕಾರ್ಯಗಳಲ್ಲಿ ಅಡಕೆ ಇಲ್ಲದೇ ನಡೆಯುವುದೇ ಇಲ್ಲ! ಹಳೆಯ ಕಾಲದ ವ್ಯವಹಾರಗಳಲ್ಲಿ ಗುತ್ತಿಗೆ ಹಿಡಿಯುವಾಗ ಅಥವಾ ವ್ಯವಹಾರ ನಡೆಸುವಾಗ ಸಂಚಕಾರ ಕೊಡೋದು ಅಥವಾ ವೀಳ್ಯಕೊಡೋದು ಎಂಬ ಪದ್ಧತಿ ಚಾಲ್ತಿಯಲ್ಲಿತ್ತು. ಈಗಲೂ ಹಿಂದಿಯಲ್ಲಿ ಸುಪಾರಿ ಕೊಡೋದು ಎಂದು ಕರೆಯುತ್ತಾರಾದರೂ ಹಾಳು ಕೊಲೆಗಡುಕರ ಬಳಕೆಯಿಂದ ಈ ಶಬ್ದವನ್ನು ಬಳಸಲು ಕೆಲವರು ಹಿಂಜರಿಯುತ್ತಾರೆ. ಸ್ವಲ್ಪವಾದರೂ ಹಣವನ್ನು ವೀಳ್ಯದೆಲೆ ಅಡಕೆಯ ಮೇಲೆ ಇಟ್ಟು ಕೊಡುವುದು ಅಂದಿನ ರೂಢಿಯಾಗಿತ್ತು. ರಾಜರುಗಳ ಕಾಲದಲ್ಲಿ ಧುರವೀಳ್ಯ ಕೊಡುವುದು ಎಂದಿತ್ತು. ಧುರವೀಳ್ಯವೆಂದರೆ ಯುದ್ಧಕ್ಕೆ ಕರೆಕೊಡುವುದು. ಇಂದಿಗೂ ಪುರೋಹಿತರಿಗೆ, ವೈದಿಕರಿಗೆ ಸಂಭಾವನೆಯಾಗಿ ಕೊಡುವ ಹಣವನ್ನು ವೀಳ್ಯದೆಲೆ-ಅಡಕೆಯ ಮೇಲೆ ಇಟ್ಟೇ ಕೊಡಲಾಗುತ್ತದೆ. ಹಣ ಎಷ್ಟಿದೆ ಕಾಣಬಾರದೆಂದು ಲಕೋಟೆಗಳನ್ನು ಬಳಸಿದರೂ ಜೊತೆಗೆ ತಾಂಬೂಲ ಅನಿವಾರ್ಯ. ಇಷ್ಟೆಲ್ಲಾ ದೇದೀಪ್ಯಮಾನ ಸ್ಥಾನವನ್ನು ಅಲಂಕರಿಸಿದ ಅಡಕೆಯನ್ನು ಯಾಕೆ ಕೇಂದ್ರ ಸರಕಾರ ಪ್ರೋತ್ಸಾಹಿಸಿಲ್ಲಾ ಎಂಬುದನ್ನು ಗಮನಿಸಿದರೆ ಅದರ ಹಿಂದೆ ಗುಟ್ಕಾ, ಪಾನ್ ಪರಾಗ್ ಮೊದಲಾದ ಕೆಮಿಕಲ್ ತಯಾರಕರ ದಂಡು ಕಾಣುತ್ತದೆ.

ಬೆಂಗಳೂರಿನ ಪಾನ್ ಬೀಡಾ

ಅಗಿಯುವ ಅಡಕೆಗೆ ಕೆಮಿಕಲ್ ಸೇರಿಸಿ ಹೊಸಹೊಸ ಸ್ವಾದ ಬರುವಂತೇ ಕಿಕ್ ಹೊಡೆಯುವಂತೇ ತಂಬಾಕು ಮಿಶ್ರಮಾಡಿ ಮಾರಾಟ ಮಾಡುವುದರಿಂದ ಇದೊಂದು ದುಶ್ಚಟವೆಂದು ಗುರುತಿಸಲ್ಪಟ್ಟಿತು. ದೇವರಿಗೆ ಸಮರ್ಪಿಸುವ ರೂಪದಲ್ಲಿ ಇರುವ ಅಡಕೆಯನ್ನು ಅಗಿದರೆ ಯಾವ ಹಾನಿಯೂ ಆಗುವುದಿಲ್ಲ, ಬದಲಾಗಿ ಅದು ಒಳ್ಳೆಯದೇ. ಅಲ್ಲಿ ತಂಬಾಕು ಅಥವಾ ಕೆಮಿಕಲ್ ಹಾಕಿರುವುದಿಲ್ಲವಲ್ಲ. ಸರಕಾರ ನಡೆಸುವ ಜನ ಅಡಕೆಯೇ ಹಾನಿಕಾರಕ ಎಂದು ತಪ್ಪುತಿಳಿದಿದ್ದರು. ಈಗೀಗ ವೈಜ್ಞಾನಿಕ ಸಂಶೋಧನೆಗಳು ನಡೆದು ಸಮಜಾಯಿಸಿ ಸಿಕ್ಕಮೇಲೆ ಮೂಲ ಅಡಕೆ ಹಾನಿಕರವಲ್ಲ ಎಂಬುದು ಅವರಿಗೆ ತಿಳಿಯಿತಾದರೂ ಪ್ಲಾಸ್ಟಿಕ್ ನಿಷೇಧಿಸುವ ಇಚ್ಛೆಯಿಂದ ಅಡಕೆ ಪೌಚ್‍ಗಳನ್ನು ನಿಷೇಧಿಸಿದೆ. ಹೀಗಾಗಿ ಅಡಕೆ ಮಾರುಕಟ್ಟೆಗೆ ಸ್ವಲ್ಪ ಹೊಡೆತ ಬಿದ್ದಿದೆ. ಆದರೂ ಅಡಕೆ ಕೇವಲ ಅದನ್ನಷ್ಟೇ ಅವಲಂಬಿಸಿಲ್ಲ. ಹೀಗಾಗಿ ಅಡಕೆ ಬೆಳೆಗಾರರು ಬದುಕಿಕೊಂಡರು!

ಸಹಜವಾಗಿ ಎಲ್ಲಾ ರೈತರಂತೇ ಭೂಮಿತಾಯಿ ಕೈಬಿಡುವುದಿಲ್ಲವೆಂಬ ಒಂದೇ ನಂಬಿಕೆಯಮೇಲೆ ಬೆಳೆ ತೆಗೆಯುವವರು ಅಡಕೆ ಬೆಳೆಗಾರರು. ಮಳೆ-ಬಿಸಿಲು-ಚಳಿಗಳನ್ನು ಅವಲಂಬಿಸಿದ ಬೆಳೆಯೂ ಹೌದು. ಮಳೆ ಸಕಾಲಕ್ಕೆ ಆಗಬೇಕು, ಹಿತಮಿತವಾಗಿರಬೇಕು. ಬಿಸಿಲು ಅತಿಯಾಗಬಾರದು, ಚಳಿಯೂ ತುಂಬಾ ಅತಿಯಾದರೆ ಅನುಕೂಲವಲ್ಲ. ಮಳೆಗಾಲದಲ್ಲಿ ಮಳೆಯ ಮಧ್ಯೆಯೇ ಕೊಳೆರೋಗಕ್ಕೆ ಪರಿಹಾರವಾಗಿ ತಾಮ್ರದ ಸಲ್ಫೇಟ್ ಎಂಬ ದ್ರಾವಣವನ್ನು ಸುಣ್ಣದನೀರಿನೊಡನೆ ಮಿಶ್ರಣಮಾಡಿ ಸಿಂಪಡಿಸಲಾಗುತ್ತದೆಯೇ ಹೊರತು ಮತ್ಯಾವ ರಾಸಾಯನಿಕಗಳನ್ನೂ ಬಳಸುವುದಿಲ್ಲ. ಅದೂ ದಪ್ಪದ ಸಿಪ್ಪೆಗೆ ತಾಗುತ್ತದಷ್ಟೇ. ಒಮ್ಮೆ ಆ ಮಿಶ್ರಣವನ್ನು ತಿಂದರೂ ಅದು ಅಂತಹ ಹಾನಿಕಾರಕವಲ್ಲ. [ಟೂತ್ ಪೇಸ್ಟ್ ತಿಂದರೆ ಹೇಗೆ ಹಾನಿಯಿಲ್ಲವೋ ಹಾಗೇ !]

ಖರ್ಚುವೆಚ್ಚಗಳನ್ನು ಗಮನಿಸಿದರೆ ಒಬ್ಬ ಅಡಕೆ ಬೆಳೆಗಾರನಿಗೆ ಆತನ ಹೊಟ್ಟೆ-ಬಟ್ಟೆಗೆ ಸಾಲುವಷ್ಟು ಮಾತ್ರ ದಕ್ಕುತ್ತದೆ. ಅಡಕೆ ಬೆಳೆಗೆ ಹೊಸ ಕೆಂಪು ಮಣ್ಣು, ಕೊಟ್ಟಿಗೆ ಗೊಬ್ಬರ ಬಹಳ ಪ್ರಾಮುಖ್ಯ. ರಾಸಾಯನಿಕ ಗೊಬ್ಬರ ಉಪಯೋಗಿಸಿದರೆ ಒಮ್ಮೆ ಅಧಿಕ ಇಳುವರಿ ಬರುತ್ತದೇನೋ ಹೌದು ಆದರೆ ಮರದ ತಿರುಳು ಬೆಂಡಿನಂತಾಗಿ ಮರ ಕೊಬ್ಬಿ ತನ್ನ ಗಡಸುತನವನ್ನು ಕಳೆದುಕೊಳ್ಳುವುದರ ಜೊತೆಗೆ ಗಾಳಿಮಳೆಗೆ ಮರ ನೆಲಕ್ಕೆ ಉರುಳುತ್ತದೆ. ಇಂದಿನ ದಿನಗಳಲ್ಲಿ ಕೊಟ್ಟಿಗೆ ಗೊಬ್ಬರ ಒದಗಿಸುವುದು ಕಷ್ಟಕರವಾಗಿದೆ. ಎರಡನೆಯದಾಗಿ ಮರಕಸುಬು ಗೊತ್ತಿರುವ ನುರಿತ ಕೆಲಸಗಾರರು ಕೊಳೆ ಔಷಧಿ ಸಿಂಪಡಿಸುವಾಗಲೂ ಮತ್ತು ಕೊನೆ ಕೊಯ್ಯುವಾಗಲೂ ಬೇಕಾಗುತ್ತಾರೆ. ಇದು ಬಹಳ ರಿಸ್ಕೀ ಜಾಬ್. ಸ್ವಲ್ಪ ಎಡವಟ್ಟಾದರೆ ಮರದಿಂದ ಕೆಳಗೆ ಬಿದ್ದು ಸೊಂಟ ಮುರಿದೀತು ಅಥವಾ ಕೆಲವೊಮ್ಮೆ ಮರವೇ ಮುರಿದುಬೀಳುವ ಸಾಧ್ಯತೆಯೂ ಇರುವುದರಿಂದ ಮರಹತ್ತುವಾಗಲೇ ಅವರ ಅನುಭವವೇ ಅವರಿಗೆ ಮಾಹಿತಿ ನೀಡುತ್ತದೆ. ಹೀಗಾಗಿ ಎಲ್ಲಾ ಕೆಲಸಗಾರರನ್ನೂ ಅಡಕೆ ತೋಟದಲ್ಲಿ ಬಳಸಿಕೊಳ್ಳಲು ಆಗುವುದಿಲ್ಲ. ಮರಕಸುಬಿನವರಿಗೆ ಧೈರ್ಯ, ಸಾಹಸ ಮತ್ತು ಗಾಳಿಗೆ ಬೇಕಾಬಿಟ್ಟಿ ತಲೆದೂಗುವ ಮರಗಳನ್ನು ಸಂಬಾಳಿಸುವ ಚಾಕಚಕ್ಯತೆ ಬೇಕಾಗುತ್ತದೆ. ಮರವೇರುವಾತ ತೀರಾ ವಯೋವೃದ್ಧನಾದರೂ ಕಷ್ಟ ತೀರಾ ಎಳಬನಾದರೂ ಕಷ್ಟ. ಹೀಗಾಗಿ ತಲೆತಲಾಂತರದಿಂದ ಕೆಲವರು ತಾವೇ ಇಷ್ಟಪಟ್ಟು ಮಾಡುವ ವೃತ್ತಿ ಇದು.

ಕೊಯ್ದ ಕೊನೆಗಳಿಂದ ಅಡಕೆ ಬೇರ್ಪಡಿಸುವುದು, ಅವುಗಳನ್ನು ಬಿಸಿಲಲ್ಲಿ ಒಣಗಿಸುವುದೋ,[ಕಾಯಡಕೆಯಾದರೆ ಸುಲಿದು ಬಿಸಿನೀರಲ್ಲಿ ಬೇಯಿಸುವುದೋ] ನಡೆಯುತ್ತದೆ. ಅವುಗಳನ್ನು ಸುಲಿಯುವುದಕ್ಕೇ ಸುಮಾರು ಮಂದಿ ಬೇಕಗುತ್ತದೆ. ಈಗೆಲ್ಲಾ ಇದಕ್ಕೆ ಯಂತ್ರಗಳು ಬಂದಿದ್ದರೂ ಯಂತ್ರಗಳು ಎಲ್ಲರ ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಸಹಕಾರ ಸಂಘಗಳನ್ನು ಮಾಡಿಕೊಂಡು ಅದನ್ನು ಖರೀದಿಸಿ ಅಡಕೆ ಸುಲಿಯುವ ಪ್ರಕ್ರಿಯೆಗೆ ಕೆಲವರು ಮುಂದಾಗಿದ್ದಾರೆ. ಹಣವುಳ್ಳವರು ಯಂತ್ರಕೊಂಡು ಹಣಪಡೆದು ಅಡಕೆ ಸುಲಿದು ಕೊಡುವ ಕೆಲಸವೂ ಇನ್ನು ಕೆಲವು ದಿನಗಳಲ್ಲಿ ಆರಂಭವಾಗಬಹುದು. ಮಳೆಗಾಲದಲ್ಲಿ ಸಕಾಲದಲ್ಲಿ ಔಷಧಿ ಸಿಂಪಡಿಸಲು ಮರಕಸುಬಿನವರು ಸಿಗದೇ ಇದ್ದಲ್ಲಿ ಸಂಪೂರ್ಣ ಅಡಕೆಪೀಚುಗಳು ಕೊಳೆತು ಉದುರಿಬೀಳುವುದು ತಪ್ಪಿದ್ದಲ್ಲ. ದೀಪಾವಳಿ ಸಮಯದಲ್ಲಿ ಹಣ್ಣದ ಅಡಕೆಯನ್ನೋ ಕೆಲವು ಪ್ರದೇಶಗಳಲ್ಲಿ ಕಾಯಡಕೆಯನ್ನೋ ಕೊಯ್ಯಲು ಮರಕಸುಬಿನವರು ಸಿಗಲಿಲ್ಲವೆಂದರೆ ಮತೆ ಪೀಕಲಾಟ. ಹರಸಾಹಸದ ನಡುವೆ ಗೊಬ್ಬರಕ್ಕಾಗಿ ದನಗಳ ಸಾಂಗತ್ಯವೂ ಬೇಕು, ಅವುಗಳ ಆರೋಗ್ಯ, ಉಪಚಾರ ನೋಡಿಕೊಳ್ಳಬೇಕು. ಚಳಿ ಮತ್ತು ಬೇಸಿಗೆಯಲ್ಲಿ ತೋಟಕ್ಕೆ ನೀರುಹಾಯಿಸುವ ವ್ಯವಸ್ಥೆಯಾಗಬೇಕು. ಹೀಗೇ ಹಲವು ಹತ್ತು ಕೆಲಸಗಳು ಅಡಕೆ ಬೆಳಗಾರನಿಗೆ. ಕೆಲವೊಮ್ಮೆ ಅಡಕೆ ತಯಾರಾಗಿ ಮಾರುಕಟ್ಟೆಗೆ ಕಳಿಸುವ ಸಮಯದಲ್ಲಿ ಉತ್ತಮ ಧಾರಣೆ ಸಿಗುವುದೇ ಇಲ್ಲ. ಒಮ್ಮೊಮ್ಮೆ ಧಾರಣಮಟ್ಟ ಕುಸಿದಾಗ ಖರ್ಚು-ವೆಚ್ಚ ಕೂಲಿ-ಮಜೂರಿ ಎಲ್ಲಾ ಕಳೆದು ಗಂಜಿ ಊಟಕ್ಕೂ ಹಿಂಜರಿಯದೇ ಇರಬೇಕಾಗುತ್ತದೆ. ಅಡಕೆಗೆ ಸರಕಾರದ ಬೆಂಬಲ ಬೆಲೆ ಇರಲಿಲ್ಲವಾಗಿ ಆರಕ್ಕೋ ಮೂರಕ್ಕೋ ಕೇಜಿ ಮಾರಿಕೊಂಡು ಕಾಲಹಾಕಬೇಕಾಗಿತ್ತು. ೧೯೭೨ರಿಂದ ಪ್ರತೀ ಹತ್ತುವರ್ಷಗಳಿಗೊಮ್ಮೆ ಅಡಕೆ ಧಾರಣೆ ನೆಲಕಚ್ಚಿಬಿಟ್ಟಿದ್ದು ಈಗ ದಾಖಲೆಗಳಲ್ಲಿ ನೋಡಸಿಗುತ್ತದೆ. ಬೆಳೆಗಾರನಲ್ಲಿ ಖಾಯಿಲೆ-ಕಸಾಲೆಗೆ ಖರ್ಚುಮಾಡಲೂ ಕಾಸಿರಲಿಲ್ಲ! " ಬಿಡಿ ಅತ್ಲಗೆ ಅದು ಹೇಳಿ ಪ್ರಯೋಜನವಿಲ್ಲ " ಎಂದವರು ಬಹಳಮಂದಿ.

ಅಡಕೆ ಬೇರೇ ಬೇರೇ ಭಾಷೆಗಳಲ್ಲಿ ಹೇಗೆ ಗುರುತಿಸಲ್ಪಟ್ಟಿದೆ ನೋಡೋಣವೇ? [ಅಂತರ್ಜಾಲದಲ್ಲಿ ಸಂಗ್ರಹಿಸಿದ ಆಂಗ್ಲ ಭಾಷೆಯಲ್ಲಿರುವ ಈ ಕೆಲ ಮಾಹಿತಿಗಳು ನಿಮಗಾಗಿ] :

Botanical Name: Areca catechu L. Family Name : ARECACEAE

Usage : Tree Used In Ayurveda, Folk, Homeopathy, Tibetian, Unani, Sidha and Modern

Distribution :

This speices is globally distributed in Indo-Malesia. It is cultivated in tropical America, Africa and India. Within India, it has been recorded Assam, Meghalaya, West Bengal, Karnataka, in the coastal regions, from Maharashtra to Kerala and Tamil Nadu and in the Deccan Plateau and Andaman and Nicobar Islands. It is also cultivated in the areas of its occurrence for its nuts which are commercially important.

Arabic (6) faufil, fofal, fofal or foufal, fofal or fouzal, foufal, fufal

Assamese (1) guwa

Bengali (1) supari

English (4) areca nut, betel palm, betelnut, pinang

Hindi (4) supari, supiari, suppari, supyari

Kannada (24) adake, adaki, adike, adike kaayi, adike mara, betta, bettadake, bettadike, bette, chautaki, chikaniyadike, chikke, cikaniyadike, cikke, gotadike, kangu, kaungu, khapura, khhapura, kowngu, puga, pugiphala, tambula, thaamboolagotu

Malayalam (28) adaka, adakai, adakka, atakka, ataykkamaram, atekka, atekkai, caunga, cavooghoo, chempalukka, cuanga, ghhonta, ghonta, kalunnu, kamugu, kamuka, kamuku, kamunnu, kavungu, kavunnu, kazhangu, kazhunnu, khhapuram, kramukam, pakavakka, pakka, pakku, pugam

Manipuri (1) kwa

Marathi (7) madi, pophal, pophala, pophali, pung, supaaree, supari

Mizoram (2) kuva, kuvathing

Oriya (12) kuva, kuvathing, trynodrumo

Persian (4) gird-chob, girdchob, popal, pupal

Sanskrit (32) a, akota, akotaja, chhataphala, chikkana, dirghapadapa, dridhavalkala, ghonta, gopadala, gubak, guvaka, kabukah, kapitana, karamattam, khapura, khipura, kramuka, kramukah, kramukam, kuvara, phalam, pooga, puga, puga-phalam, pugah, pugi, rajatala, suranjana, tambula, tantusara, udvegam, valkataru

Tamil (65) akotam, ataikkay, cakuntam#, cakuntam@, cakuntikai, cakuntikaimaram, cattamarkkam, ciram 2, curancanam, inippilapatitam, inippilatitamaram, iracatalam, kaiccikam, kaiccikamaram, kalacattiram, kalaymaram, kamugu, kamuku, kandi, kanti, kapuram#, kapuram@, katti, kiramamuki 1, kiramamukimaram, kiramugam, kiramukam, kiramukam#, kiramukam@, kirantimukam, kirumukam, kontai 2, kottai paakku, kottai pakku, kottai-pakku, kugagam, kukacamaram, kukakam, kuntal 2, kuvakam, maturapakam, maturapakamaram, nattukkamuku, paak, pakku, pakkumaram, pakkuppanai, paku-kotai, palacankiyam, palacinikiyamam, piramataru, piramatarucam, pirumaniyam, pugam, pukaram 1, putakam, talattiram, tampulavatanimaram, tantucaram, tantucaramaram, tarpati, taru, tiritavalkam, tuvarkkay, tuvarkkaymaram

Telugu (18) chikinamu, chikini, gautupoka, kazhangu, khapuramu, kolapoka, kramukamu, oppulu, oppuvakkulu, pakavakka, pogamu, poka, poka chettu, poka-vakka, prakka, pugamu, vakka, vakkalu

Tibetan (6) gla gor zo sa, go yu, kra ma ka (p), kra mra sa, sla bor se sa (d), zu (m) khan

Urdu (12) chalia jalai hui, chalia purani jalai hai, chalia sokhta, chhalia, chhalia kohna sokhta, chikni chhalia, fufal (chalia), gond supari, gul supari, katha, supari, supari chikni pisi hui


ಗುಟ್ಟೊಂದು ಹೇಳುವೆ ಕೇಳಿ :

ವಾರಕ್ಕೊಮ್ಮೆಯಾದರೂ ಎಲೆಯಡಕೆ ತಿನ್ನುವುದರಿಂದ ಹಲ್ಲುಗಳ ಮತ್ತು ಒಸಡುಗಳ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮೂರಲ್ಲಿ ಎಲೆಯಡಕೆಗೆ ’ಕವಳ’ ಎಂಬರು. ಕವಳ ಎಂದರೆ ಊಟ. ರಸಗವಳ ಎಂದರೆ ಮೃಷ್ಟಾನ್ನ ಭೋಜನ. ಊಟದಷ್ಟೇ ಮಹತ್ವ ಎಲೆಯಡಕೆಗೂ ಇರುವುದರಿಂದ ಪೂರ್ವಜರು ಅದನ್ನು ಕವಳ ಎಂದಿದ್ದಾರೆ. ನಮ್ಮ ಹಿರಿಯರ ಪರಿಚಿತರು ಸ್ನೇಹಿತರು ನಮ್ಮೂರಕಡೆ ಕೆಲವೊಮ್ಮೆ ಬಂದಾಗ " ಗಡಿಬಿಡಿ ಇದೆ, ಊಟಗೀಟ ಏನೂ ಬೇಡ ಒಂದು ಕವಳ ಕೊಡಿ ಸಾಕು " ಎಂದು ಕವಳಹಾಕಿಕೊಂಡು ಹೋಗುತ್ತಾರೆ. ಕವಳ ಅಷ್ಟು ಉತ್ತೇಜನಕಾರಿಯಾಗಿದೆ. ಕೆಲವರಿಗೆ ಕವಳ ಇದ್ದ ಹೊರತು ಕೆಲಸವೇ ನಡೆಯುವುದಿಲ್ಲ! ಶುಭಕಾರ್ಯಗಳ ದಿನ ಊಟದ ನಂತರ ತಾಂಬೂಲ ಕೊಡುವುದು ಶಾಸ್ತ್ರೋಕ್ತ ಪದ್ಧತಿಯಾಗಿರುತ್ತದೆ. ಅದರೊಟ್ಟಿಗೆ ಅಲ್ಲಿಯೇ ಹಾಕಿಕೊಳ್ಳಲು ರಸಭರಿತ ಪಾನ್ ಬೀಡಾಗಳನ್ನು ಕೊಡುವುದೂ ವಾಡಿಕೆಯಲ್ಲಿದೆ ಅಲ್ವೇ?

ಬಾಯಲ್ಲಿ ನೀರೂರಿಸುವ ಮಘೈ ಪಾನ್

ಕವಳದಲ್ಲಿ ಏನೆಲ್ಲಾ ಇರಬೇಕು :


೧. ನಾಗವಲ್ಲೀ ----ನಾಗವಲ್ಲೀ ಎಂದರೆ ಸಿನಿಮಾದಲ್ಲಿ ನೋಡಿದ್ದು ನೆನಪಾಗಿ ಹೆದರಿ ಓಡಿಹೊಗಬೇಡಿ. ಇದೊಂದು ಜಾತಿಯ ಬಳ್ಳಿ. ಇದರ ಎಲೆಯೇ ಕವಳಕ್ಕೆ ಶ್ರೇಷ್ಟ. ಇದು ಮತ್ತದೇ ನಮ್ಮ ಕರಾವಳಿ ಜಿಲ್ಲೆಗಳಲ್ಲಿ, ಮಲೆನಾಡಿನಲ್ಲಿ, ಬಯಲು ಸೀಮೆಯಲ್ಲಿ[ಸ್ವಲ್ಪ] ಮತ್ತು ಮೈಸೂರಿನಲ್ಲಿ ಬೆಳೆಯಲ್ಪಡುತ್ತದೆ. ಮೈಸೂರಿನ ಎಲ ಹೆಸರುವಾಸಿಯಾದರೂ ಕರಾವಳೀ ವೀಳ್ಯದೆಲೆ ಅದಕ್ಕೆ ಯಾವುದರಲ್ಲೂ ಕಮ್ಮಿಯಿಲ್ಲ. [ಮದ್ರಾಸ್ ಎಲೆ ಅಥವಾ ಅಂಬಾಡಿ ಎಲೆಯನ್ನು ಬಳಸುತ್ತಾರಾದರೂ ಅದು ವಿಶೇಷವಲ್ಲ. ಇನ್ನು ಸವಣೂರು, ಕಲ್ಕತ್ತಾ ಹೀಗೇ ಹಲವಾರು ತಳಿಯ ಎಲೆಗಳಿವೆ]

೨. ಅಡಕೆ : ಕೆಂಪಡಕೆ ತುಣುಕುಗಳು ಅಥವಾ ಚಾಲಿ ಅಡಕೆ ತುಣುಕುಗಳು

೩. ಸುಣ್ಣ: ಕಲ್ಲು ಸುಣ್ಣ ಅಥವಾ ಚಿಪ್ಪಿ ಸುಣ್ಣ [ಸ್ವಲ್ಪ]

ಹೆಚ್ಚುವರಿಯಾಗಿ ಉತ್ತಮ ಸ್ವಾದಕ್ಕಾಗಿ :

೪. ಪಚ್ಚಕರ್ಪೂರ [ಅತಿ ಚಿಕ್ಕ ಅಂಶ]

೫. ಲವಂಗ/ ಯಾಲಕ್ಕಿ : ಒಂದು

೬. ಖರ್ಜೂರ : ಉತ್ತುತ್ತಿ / ಖರ್ಜೂರ ಚಿಕ್ಕ ತುಣುಕುಗಳು

೭. ಕೊಬ್ಬರಿ : ಹಸಿ ಕಾಯಿಯ ತುಣುಕು ಅಥವಾ ಕೊಬ್ಬರಿಯ ತುಂಡು

೮. ಬೆಣ್ಣೆ ಗುಲ್ಕನ್ : ಸ್ವಲ್ಪ

ಅಡಕೆ, ವೀಳ್ಯದೆಲೆ, ಸುಣ್ಣ ಹದವಾಗಿ ಬೆರೆತಾಗ ಅದರಲ್ಲಿರುವ ಕ್ಯಾಲ್ಶಿಯಮ್ ಮತ್ತು ಇನ್ನಿತರ ನೈಸರ್ಗಿಕ ರಸಾಯನದ ಅಂಶಗಳು ಹಲ್ಲುಗಳು ಮತ್ತು ಒಸಡುಗಳನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿವೆ. ಕವಳ ಹಾಕುವ ಹಿರಿಯರನೇಕರಿಗೆ ಹಲ್ಲುನೋವಿನ ಬಾಧೆಯೇ ಇರಲಿಲ್ಲ ! ನನ್ನ ಅಜ್ಜ ೮೮ ವರ್ಷಗಳ ಕಾಲ ಬದುಕಿದ್ದರೂ ಒಂದೇ ಒಂದು ದಿನ ಹಲ್ಲು ನೋವು ಎನ್ನಲಿಲ್ಲ, ಅವರ ಹಲ್ಲುಗಳು ಗಟ್ಟಿಮುಟ್ಟಾಗಿದ್ದವು. ಅವರು ಉಪ್ಪು ಇದೆಯೆಂದು ಪ್ರಚಾರಗಿಟ್ಟಿಸುವ ಕಾಲ್ಗೇಟ್ ಬಳಸುತ್ತಿರಲಿಲ್ಲ ಬದಲಿಗೆ ಭತ್ತದ ಉಮಿ ಮತ್ತು ಕರ್ಪೂರ ಇತ್ಯಾದಿ ಸೇರಿಸಿದ ಪುಡಿಯನ್ನು ತೆಂಗಿನಕಾಯಿ ಸಿಪ್ಪೆಯ ಜೂಬಿನಲ್ಲಿ ಒಂದಷ್ಟು ತೆಗೆದುಕೊಂಡು ಗಸಗಸ ಹಲ್ಲುಜ್ಜುತ್ತಿದ್ದರು. ಹಲ್ಲುಗಳು ಫಳಫಳ ಹೊಳೆಯುತ್ತಿದ್ದವು. ಸನ್ಯಾಸಿಗಳು ಇಂಥದ್ದೇ ಮಿಶ್ರಣಕ್ಕೆ ಲವಂಗ ಮತ್ತು ಸ್ಫಟಿಕದ ಪುಡಿಗಳನ್ನು ಬೆರೆಸಿ ಹಲ್ಲುಜ್ಜುತ್ತಾರೆ ಎಂದು ಕೇಳಿಬಲ್ಲೆ. ಹಲ್ಲುಜ್ಜಲು [ಸಾಧ್ಯವಿದ್ದರೆ] ಬೇವಿನ ಕಡ್ಡಿ, ಬೈನೆಕಡ್ಡಿ ಮುಂತಾದ ಆಯುರ್ವೇದದಲ್ಲಿ ಹೇಳಿರುವ ಸಾಧನಗಳನ್ನೂ ಬಳಸಬಹುದಾಗಿದೆ. ಕವಳ ತಿಂದರೆ ಹಲ್ಲಿನ ಮೇಲೆ ಕಲೆ ಶಾಶ್ವತ ಎಂಬ ಮಾತು ಸುಳ್ಳು, ಅದು ನಾವು ಯಾವ ರೀತಿ ಕವಳ ತಿನ್ನುತ್ತೇವೆ ಎಂಬುದರ ಮೇಲೆ ಅವಲಂಬಿಸಿದೆ. ಹಾಗೂ ಡೌಟಿದ್ದರೆ ನಿತ್ಯ ಬಳಸುವ ಬದಲು ವಾರಕ್ಕೊಮ್ಮೆ ಬಳಸಬಹುದಲ್ಲ ?

ಕವಳಕ್ಕೆ ಯಾವುದು ಬೇಡ :

ಗುಟ್ಕಾ, ಪಾನ್ ಪರಾಗ್, ಜರ್ದಾ, ಇನ್ನಿತರ ಕೆಮಿಕಲ್ ಗಳು ಮತ್ತು ತಂಬಾಕು. ಯಾಕೆಂದರೆ ಇವೆಲ್ಲಾ ಹಾನಿಕಾರಕಗಳಾಗಿವೆ. ಹಲ್ಲು ಕರೆಗಟ್ಟುವುದು, ಹಾಳಾಗುವುದು, ಬಾಯಿ ಹುಣ್ಣಾಗುವುದು, ಕ್ಯಾನ್ಸರ್ ಬಾಧೆ ತಗಲುವ ಸಾಧ್ಯತೆ ಇರುವುದು, ಒಸಡು ಹುಣ್ಣಾಗಿ ದುರ್ನಾತ ಬೀರುವುದು ಹೀಗೇ ಈ ಎಲ್ಲಾ ಆಗುವುದು ಕೇವಲ ಕೆಮಿಕಲ್ ಮತ್ತು ತಂಬಾಕಿನಿಂದ.


ಸಂಶೋಧನೆಗಳ ಫಲವಾಗಿ ರೆಡಾಕ್ಸೈಡ್ [ ಗೋಡೆಯ ಕೆಳಭಾಗಕ್ಕೆ ಬಳಿಯುವ ಬಣ್ಣ]ನ್ನು ಕೆಂಪಡಕೆಯಿಂದ ತಯಾರಿಸಲು ಬರುತ್ತದೆ ಎಂಬುದು ಗೊತ್ತಾಗಿ ಈಗ ತಯಾರಾಗುತ್ತಿದೆ. ಅಡಕೆಮರಗಳ ವೇಸ್ಟ್ ಗಳಿಂದ ಬಯೋ ಡೀಸೆಲ್ ತಯಾರಿಸಲು ಬರುತ್ತದೆಂಬ ವಾದವೂ ಪರಿಶೀಲನೆಯಲ್ಲಿದೆ. ಗುಣಮಟ್ಟದ ಆದ್ಯತೆಯಿಂದ ನಮ್ಮ ದೇಶದಲ್ಲಿನ ಅಡಕೆಗಳು ಕೆಲವೊಮ್ಮೆ ಭೂತಾನ್, ಪಾಕಿಸ್ತಾನ, ಅರೇಬಿಯನ್ ದೇಶಗಳಿಗೂ ರಫ್ತಾಗುತ್ತವೆ.

ಇಂಡೋನೇಷ್ಯಾದ ಅಡ್ಕತ್ರಿ

ಇಂಡೋನೇಷ್ಯಾದ ಅಜ್ಜನ ಕವಳ ಉಕ್ಕಿ ಹರಿದ ಸಂತೋಷ ನೋಡಿ ಮಜಾ ತಕಳಿ !

ಭೌಗೋಳಿಕವಾಗಿ, ವ್ಯಾವಹಾರಿಕವಾಗಿ ಉಪಯೋಗಕಾರೀ ವಸ್ತುವಾಗಿ ಮಂಗಳದ್ರವ್ಯಗಳ ಮಧ್ಯೆ ಆಸೀನವಾಗುವ ಅಡಕೆಯನ್ನು ಆಂಗ್ಲರು ಅರೇಕಾನಟ್ ಎಂದರು. ಇಷ್ಟೆಲ್ಲಾ ಕಥೆಕೇಳಿದಮೇಲಾದರೂ ಯುರೇಕಾ ಯುರೇಕಾ ಅಲ್ಲ ಅರೇಕಾನಟ್ಟು ಅಂದರೆ ಅದರ ಮಟ್ಟ ನಿಮ್ಮ ನಿಲುವಿಗೆ ನಿಲುಕಿರಬೇಕಲ್ಲ? ದುಬಾರಿಯಲ್ಲ ಬಿಡಿ; ಬೇರೇ ಹಣ್ಣು-ಕಾಯಿ ಒಡವೆ ವಸ್ತುಗಳಿಗೆ ಹೋಲಿಸಿದರೆ ಬೆಲೆ ಕಮ್ಮಿಯೇ ! ಮುಗಿಸುವುದಕ್ಕೂ ಮುನ್ನ ಹೇಳಿಬಿಡುತ್ತೇನೆ : ನಾನು ನಿಮ್ಮಗಳ ಮನೆಗೆ ಬಂದಾಗಕವಳಕೊಟ್ಟರೆ ಮಾತ್ರ ಐಶ್ವರ್ಯ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತೇನೆ, ಗೊತ್ತಾಯ್ತಲ್ಲ?