ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 18, 2011

ತಬ್ಬಲಿಯು ನೀನಾದೆ ಮಗನೆ ಹೆದ್ದಾರಿಯಲಿ ಜವರಾಯನಿರುವನು........


ತಬ್ಬಲಿಯು ನೀನಾದೆ ಮಗನೆ ಹೆದ್ದಾರಿಯಲಿ ಜವರಾಯನಿರುವನು........

ಕಸವನ್ನು ತಿಂದು ಅಮೃತತುಲ್ಯ ರಸವನ್ನು ಕೊಡುವ ಏಕೈಕ ಪ್ರಾಣಿಯೆಂದರೆ ಆವು. ಆವು ಎಂದರೆ ಯಾವುದು ಎಂದು ತಬ್ಬಿಬ್ಬಾದಿರೇ ? ಗೋವು ಎಂದು ಅರ್ಥೈಸಿಕೊಳ್ಳಿ. ಗೋವಿನ ಬಗ್ಗೆ ಈ ಮೊದಲೇ ಕೆಲವು ಸಲ ಬರೆದಿದ್ದೇನೆ. ಇವತ್ತೂ ಮತ್ತೊಮ್ಮೆ ಹಾಗೇ ಬರೆಯಬೇಕು ಅನ್ನಿಸುತ್ತಿದೆ. ಕಾರಣವಿಷ್ಟೆ: ನಾನೊಬ್ಬ ಭಾವುಕ. ಹೊಕ್ಕಳ ತೊಟ್ಟನ್ನು ಅಲ್ಲೇ ಹೂತರೇನೋ ಎಂಬಂತೇ ಹುಟ್ಟಿದ ಹಳ್ಳಿಯನ್ನು ಸದಾ ಸ್ಮರಿಸುವ, ಅಲ್ಲಿನ ಬದುಕನ್ನು ನೆನೆಯುವ, ಅಲ್ಲಿರುವ ನನ್ನ ಅಪ್ಪ-ಅಮ್ಮರನ್ನು ಆಗಾಗ ದೂರವಾಣಿಯಲ್ಲಿ ಕರೆದು ಮಾತನಾಡುವ ಹೆಚ್ಚೇಕೆ ಮಹಾನಗರದಲ್ಲಿದ್ದೂ ಹುಟ್ಟಿದ ಹಳ್ಳಿಯ ಬದುಕನ್ನೇ ಮನಸಾ ತುಂಬಿಕೊಂಡವ ! ಹಾಗೆ ನಿನ್ನೆ ಒಮ್ಮೆ ಊರಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅಲ್ಲಿನ ಆಗುಹೋಗುಗಳ ಬಗ್ಗೆ ಸ್ವಲ್ಪ ವಿಚಾರಿಸಿದಾಗ ಮೊನ್ನೆಯ ರಾತ್ರಿ ಹತ್ತಿರದ ಹೈವೇಯಲ್ಲಿ ಸುಮಾರು ೪ ಕಿ.ಮೀ ಅಂತರದಲ್ಲಿ ಎರಡು ಮೂರು ಮಲೆನಾಡಗಿಡ್ಡ ತಳಿಯ ಹಸುಗಳನ್ನು ಯಾವನೋ ಖಾಸಗೀ ಬಸ್ ಚಾಲಕನೊಬ್ಬ ಗುದ್ದಿ ಸಾಯಿಸಿಹೋಗಿದ್ದಾನಂತೆ!

ನಾವೆಲ್ಲಾ ಚಿಕ್ಕವರಿರುವಾಗ ಊರಲ್ಲಿ ದೀಪಾವಳಿಯಲ್ಲಿ ಹೆಚ್ಚಿನ ಮಹತ್ವ ಕೊಡುತ್ತಿದ್ದುದು ಗೋವುಗಳಿಗೆ. ಅದು ಇವತ್ತಿಗೂ ಹಾಗೇ ಇದೆ. ಆದರೆ ’ಮಲೆನಾಡ ಗಿಡ್ಡ’ ಜಾತಿಗೆ ಸೇರಿದ ರಾಸುಗಳು ಇವತ್ತು ಸಂಖ್ಯೆಯಲ್ಲಿ ಅತೀ ಕಡಿಮೆಯಾಗಿವೆ. ಅಂದಿನ ಆ ದಿನಗಳಲ್ಲೇ ಅಲ್ಪಸ್ವಲ್ಪ ಗೋಮಾಳಗಳಿದ್ದವು. ಹೆಂಗಳೆಯರು ಬಲಿಪಾಡ್ಯದ ದಿನ ಪೂಜಿಸುವ ಗೋಮಾತೆಯಲ್ಲಿ ನಿವೇದಿಸುವ ಹಾಡಿನಲ್ಲಿ " ಹುಲ್ಲಿಗೂ ನೀರಿಗೂ ಚಿಂತೆಪಡಬೇಡ ಪಶುತಾಯೆ " ಎಂಬ ಸೊಲ್ಲನ್ನು ಹಾಡುವಾಗ ಹಸಿದಹೊಟ್ಟೆಯಲ್ಲಿ ಹುಲ್ಲಿಗಾಗಿ ನೀರಿಗಾಗಿ ಪರಿತಪಿಸಬಹುದಾದ ಗೋವಿನ ಚಿತ್ರದ ಕಲ್ಪನೆಯಾಗಿ ಕಣ್ಣಾಲಿಗಳು ತುಂಬಿ ಹರಿದಿದ್ದಿದೆ. ಸೃಷ್ಟಿಸಿದ ದೇವರೇ ಕೊಡಲು ಮನಸ್ಸುಮಾಡದಾಗ ಯಕ್ಕಶ್ಚಿತ ಒಡೆಯನೆನಿಸುವ ಸಾಕುವಾತ ಏನು ಮಹಾ ಕೊಡಲು ಸಾಧ್ಯ ಹೇಳಿ ?

ದೀಪಾವಳಿಯ ಆ ಚಳಿಗಾಲದ ಮುಂಜಾವಿನಲ್ಲಿ ಎಳೆಗರುಗಳು ಅಂಬೇ ಅಂಬೇ ಎನ್ನುತ್ತಾ ಚಿಗರೆಯ ಮರಿಗಳಂತೇ ಛಂಗನೆ ಜಿಗಿಯುತ್ತಾ ಅಮ್ಮಂದಿರ ಕಾಲ ಸಂದಿಯಲ್ಲಿ ನುಸುಳುವ ಅಲ್ಲಿಂದಲೇ ಮುಖ ಬಗ್ಗಿಸಿ ಹಣಿಕಿ ಇಣುಕಿ ನಮ್ಮನ್ನು ನೋಡುವ ದೃಶ್ಯ ಇಂದಿಗೂ ಮನದಲ್ಲಿ ಹಸಿರಾಗಿದೆ. ಒಣ ಕೆಮ್ಮಿಗೆ ದೇಸೀತಳಿಯ ಹಸುವಿನ ಉಷ್ಣಧಾರೆಯನ್ನು ಔಷಧವಾಗಿ ಕೊಡುತ್ತಿದ್ದರು. ಲೋಟವೊಂದರಲ್ಲಿ ಚೂರು ಹಸುವಿನ ತುಪ್ಪವನ್ನು ಹಾಕಿ ಕೊಟ್ಟಿಗೆಗೆ ಕೊಂಡೊಯ್ದರೆ ಅಲ್ಲಿ ಹಾಲನ್ನು ಕರೆಯುವಾಗ ಆಯಿ [ಅಂದರೆ ನಮ್ಮಮ್ಮ]ಹಸುವಿನ ಕೆಚ್ಚಲಿನಿಂದ ಮೊದಲು ಬಸಿಯುವ ಕೆಲವು ಧಾರೆಗಳು ಬಿಸಿಬಿಸಿಯಾಗಿರುತ್ತಿದ್ದವು. ಹಸುವಿನ ಮೈಬಿಸಿಯಲ್ಲಿ ಕೆಚ್ಚಲೊಳಗಿನ ಹಾಲೂ ಕೂಡ ಉಗುರುಬೆಚ್ಚಗೆ ಆಗಿರುತ್ತಿತ್ತು. ಹಾಗೆ ಕರೆದ ಧಾರೆಯನ್ನು ಉಷ್ಣಧಾರೆ ಎನ್ನಲಾಗುತ್ತಿತ್ತು. ಉಷ್ಣಧಾರೆ ಒಣಕೆಮ್ಮಿಗೆ ರಾಮಬಾಣ! ಇವತ್ತು ಅವೆಲ್ಲಾ ಪುಸ್ತಕದಲ್ಲೂ ದಾಖಲಾಗದ ಮರೆತುಹೋದ ವಿಷಯಗಳಾಗಿವೆ.

ನಮ್ಮನೆಯಲ್ಲಿ ಒಂದು ಸಂಪ್ರದಾಯವನ್ನು ಅಜ್ಜ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು ಏನೆಂದರೆ ಮಧ್ಯಾಹ್ನದ ಊಟಕ್ಕೂ ಮುಂಚೆ ಗೋವೊಂದಕ್ಕೆ ಸ್ವಲ್ಪ ಅನ್ನ-ಪದಾರ್ಥಗಳನ್ನು ತಪ್ಪಲೆಯಲ್ಲಿ ಉಣಬಡಿಸಿ ಆಮೇಲೆಯೇ ನಮ್ಮೆಲ್ಲರ ಊಟ ನಡೆಯುತ್ತಿತ್ತು. ಕೊಟ್ಟಿಗೆಯಲ್ಲಿ ಮುದುಕು ದನಗಳು ಇರುತ್ತಿದ್ದವು, ಅದಿಲ್ಲಾ ಕೊನೇಪಕ್ಷ ಅನ್ನ ತಿನ್ನಬಲ್ಲಷ್ಟು ಬೆಳೆದ ಎಳೆಯ ಕರುಗಳು ಇರುತ್ತಿದ್ದವು. ಒಟ್ಟಿನಲ್ಲಿ ಗೋಗ್ರಾಸ ಸಮರ್ಪಣೆ ಆಗಲೇಬೇಕಿತ್ತು. ಆಕ್ಷಣದಲ್ಲಿ ಮಿಕ್ಕುಳಿದ ದನಕರುಗಳಿಗೆ ಹುಲ್ಲನ್ನು ನೀಡಿ ಅವುಗಳ ಮೈದಡವುತ್ತಿದ್ದರು. ಅಜ್ಜ ಮನೆಯಲ್ಲಿಲ್ಲದ ವೇಳೆ ನಾವು ಯಾರಾದರೂ ಅದನ್ನು ನಡೆಸಬಹುದಿತ್ತು. ಅಜ್ಜನ ಗೋ ಪ್ರೇಮ ಎಷ್ಟಿತ್ತೆಂದರೆ ದೂರದಲ್ಲಿ ಅಜ್ಜ ಹೋಗುತ್ತಿದ್ದರೂ ಅವುಗಳಿಗಿರುವ ಮೂಗ್ಗಾಳಿ[ವಾಸನಾಬಲ]ಯಿಂದ ಅಜ್ಜನ ಜಾಡುಹಿಡಿದು ಅಂಬಾ ಎಂದು ಕೂಗುತ್ತಿದ್ದವು. ಬೆಳೆಯುತ್ತಿದ್ದಂತೇ ನನ್ನರಿವಿಗೆ ಬಂದ ಅಜ್ಜ ಬಳಸುತ್ತಿದ್ದ ಸಂಸ್ಕೃತದ ಶ್ಲೋಕ ಹೀಗಿತ್ತು :

ಗಾವೋಮೇ ಮಾತರಸ್ಸಂತು ಪಿತರಸ್ಸಂತು ಗೋವೃಷಃ |
ಗ್ರಾಸಮುಷ್ಠಿಂ ಮಯಾದತ್ತಂ ಗ್ರಹಾಣ ಪರಮೇಶ್ವರಿ ||

ಗೋವಿನಲ್ಲಿ ಮಾತೆಯನ್ನೂ ಹೋರಿಯಲ್ಲಿ ತಂದೆಯನ್ನೂ ಕಂಡೆನೆನ್ನುವ ಆ ಶ್ಲೋಕ ದೇವಿಯ ರೂಪವನ್ನೂ ಗೋವಿನಲ್ಲಿ ಕಂಡೆನೆನ್ನಲು ಮರೆಯುವುದಿಲ್ಲ.

ಊರಲ್ಲಿ ನಾನಿರುವಷ್ಟು ಕಾಲ ಸದಾ ದನಗಳ ಒಡನಾಟವಿತ್ತು. ಕ್ರಮೇಣ ನಾವೆಲ್ಲಾ ವಯಸ್ಸಿನಲ್ಲಿ ದೊಡ್ಡವರಾಗುತ್ತಾ ಸಾಗುತ್ತಿದ್ದಾಗ ಸರ್ಕಾರಗಳು ಬದಲಾಗುತ್ತಾ ರಾಜಕೀಯ ಪ್ರಪಂಚದಲ್ಲಿ ಸ್ವಾರ್ಥ, ಸ್ವೇಚ್ಛೆ ಇವೆಲ್ಲಾ ಜಾಸ್ತಿಯಾಗುತ್ತಾ ನಡೆದಾಗ ಗೋವುಗಳಿಗೆ ಸರಕಾರ ಬಿಟ್ಟಿದ್ದ ಗೋಮಾಳಗಳು ಕಡಿಮೆಯಾಗುತ್ತಾ ನಡೆದವು. ಹಿರಿಯ ಹಸುಗಳು ಕಾಲವಾದಮೇಲೆ ಕಿರಿಯವು, ಕರುಗಳು ಬೆಳೆಯುವ ಹೊತ್ತಿಗೆ ಗೋಮಾಳಗಳು ಅತ್ಯಂತ ಕ್ಷೀಣಿಸಿದವು. ರಾಜ್ಯಪದವನ್ನು ಕಳೆದಕೊಂಡ ರಾಜನಂತೇ ಗೋಮಾಳದಲ್ಲಿ ಮೇದು ಆಡಿ ಅನುಭವಿಸಿದ ದಿನಗಳನ್ನು ನೆನೆದು ಮತ್ತೆ ಸಿಗಲಾರದ ಆ ದಿನಗಳಿಗಾಗಿ ಹಂಬಲಿಸುತ್ತಾ ಆ ದನಗಳು ಮೂಕವಾಗಿ ಯಾವ ಭಾವನೆಗಳನ್ನು ತಳೆದವೋ ಅರಿವಿಗಿಲ್ಲ. ಈಗಂತೂ ಊರಲ್ಲಿ ಒಂದಿಬ್ಬರು ಮಹಾಶಯರು ಕಂಡಿದ್ದೆಲ್ಲಾ ತಮ್ಮದೇ ಎಂದು ಜಾಗವನ್ನೆಲ್ಲಾ ಕಬಳಿಸಿ ಹೋದಹೋದಲ್ಲಿ ಆಳದ ಅಗಳಗಳನ್ನೂ ಕಲ್ಲಿನ ಪಾಗಾರಗಳನ್ನೂ ನಿರ್ಮಿಸಿ ಹಳೆಯ ದಾರಿಗಳನ್ನೆಲ್ಲಾ ಮಾಯಿಸಿಬಿಟ್ಟಿದ್ದಾರೆ. ಒಮ್ಮೊಮ್ಮೆ ಹೀಗೂ ಅನಿಸುತ್ತದೆ--ನಾನು ಹುಟ್ಟಿದ್ದು ಇದೇ ಊರಿನಲ್ಲಿ ಹೌದೇ ?

ಮನುಷ್ಯನ ಸ್ವಾರ್ಥಲಾಲಸೆ ಜಾಸ್ತಿಯಾದಾಗ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗ ಬೆಟ್ಟಗಳೂ, ಹುಲ್ಲುಗಾವಲುಗಳೂ ಕಡಿಮೆಯಾದವು. ಕಾಡುಪ್ರಾಣಿಗಳ ಜೀವನಕ್ಕೆ ಹೇಗೆ ಸಮಸ್ಯೆಯಾಯಿತೋ ಅದಕ್ಕಿಂತಲೂ ಹೆಚ್ಚು ಊರಲ್ಲಿದ್ದ ದನಕರುಗಳಿಗೆ ಈ ಜ್ವಾಲೆಯ ಉರಿ ತಾಗಿತು. ಕಾಲಕೀರ್ದಿಯಲ್ಲಿ ತೆರೆದ ಪುಟಗಳಲ್ಲಿ ಓದಸಿಕ್ಕ ಮಾಹಿತಿ ಹೀಗಿದೆ. ರೈತನೊಬ್ಬ ತನ್ನ ಹಸುಗಳ ರಕ್ಷಣೆಗಾಗಿ ತನ್ನ ಜೀವವನ್ನೇ ಬಲಿದಾನಗೈದ ಕಥೆಕೂಡ ಕಾಣಸಿಗುತ್ತದೆ. ಬ್ರಾಹ್ಮಣನೊಬ್ಬ ಅರಿಯದೇ ತೆಂಗಿನಕಾಯಿ ಮರದಿಂದ ಕೆಡವಿದಾಗ, ಕೆಳಗೆ ನಿಂತಿದ್ದ ಹಸುವಿನ ತಲೆಗೆ ಅದು ತಗುಲಿ ಗತಿಸಿದ್ದನ್ನು ಕಂಡು ಭಿಕ್ಷುಕನಾದ ಕಥೆಯನ್ನೂ, ಬೇಡಿದ ಆ ಭಿಕ್ಷೆಯನ್ನು ನಿತ್ಯವೂ ಹಸುವೊಂದಕ್ಕೆ ಭಕ್ಷ್ಯವಾಗಿ ಉಣ್ಣಿಸುವ ಕಾಯಕದಲ್ಲಿ ತೊಡಗಿದ ಇತ್ತೀಚಿನ ನಿಜಜೀವನದ ಕಥೆಯನ್ನೂ ನಿಮಗೆ ಈ ಮೊದಲೇ ಹೇಳಿದ್ದೇನೆ. ಆದರೆ ಕಾಲದ ಕೂಸಾದ ರೈತ ಕ್ರಮೇಣ ತಾನೂ ಬದಲಾಗಿಬಿಟ್ಟ. ದರಏರಿಕೆಯ ಬಿಸಿ ರೈತನ ಇಕ್ಕೆಲಗಳನ್ನು ಮುತ್ತಿಕ್ಕಿದಾಗ ನಿಧಾನವಾಗಿ ರೈತ ಸಾಕುವ ದನಗಳ ಜಾತಿಯನ್ನು ಬದಲಾಯಿಸಿದ. ಮಲೆನಾಡ ಗಿಡ್ಡ ತಳಿಯ ಹಸುಗಳಿಗೆ ಹೊಸತಳಿಯ ಹೋರಿಯ ವೀರ್ಯವನ್ನು ಗರ್ಭಕ್ಕೆ ಸುರುವಿ ನಿಧಾನವಾಗಿ ತಳಿಬದಲಾವಣೆ ಮಾಡಿದ. ದೇಸೀ ತಳಿಯ ದನಗಳು ಲೀಟರುಗಟ್ಟಲೆ ಹಾಲನ್ನು ಕೊಡುವುದಿಲ್ಲ ಎಂಬ ಕಾರಣಕ್ಕೆ ಇದು ನಡೆಯಿತು. ಹಲವು ಮನೆಗಳಲ್ಲಿ ಕತ್ತೆಯೂ ಅಲ್ಲದ ಕುದುರೆಯೂ ಅಲ್ಲದ ದನವೂ ಅಲ್ಲದ ಹೊಸದೊಂದು ಪ್ರಾಣಿಯ ಉದಯವಾಯಿತು. ನೋಡಲು ದೈತ್ಯಾಕಾರ, ಹುಟ್ಟಿದ ತಿಂಗಳೊಪ್ಪತ್ತಿನಲ್ಲೇ ಬೆಳೆಬೆಳೆದು ಗರ್ಭಧರಿಸಲು ತಯಾರಾಗುವ ’ಹಾಲುಕೊಡುವ ಯಂತ್ರಗಳು’ ಜನಿಸಿದವು. ಪಾಪದ ಆ ಯಂತ್ರಗಳಿಗೆ ಬುದ್ಧಿಯೂ ಅಷ್ಟಕ್ಕಷ್ಟೇ, ದೇಹದಾರ್ಢ್ಯತೆಯೂ ಅಷ್ಟಕ್ಕಷ್ಟೇ. ಹೊಸತಳಿಯೆಂಬ ಕಾರಣಕ್ಕೆ ಹೆಚ್ಚಿನ ವಾಗತಿಮಾಡಿದ ಒಡೆಯನಿಗೆ ದೇಸೀತಳಿಗೇ ಅದೇಮಟ್ಟದ ವಾಗತಿ[ಉಪಚಾರ]ಮಾಡಿದ್ದರೆ ಚೂರ್ಹೆಚ್ಚುಕಮ್ಮಿ ಅದೇ ಪ್ರಮಾಣದ ಹಾಲನ್ನು ಕೊಡಬಹುದು ಎಂಬ ಸಣ್ಣ ಯೋಚನೆಯೂ ಆ ಕಾಲಕ್ಕೆ ಬರಲಿಲ್ಲ.

ಬದಲಾದ ವಾತಾವರಣದಲ್ಲಿ ಅಳಿದುಳಿದ ಮಲೆನಾಡ ಗಿಡ್ಡ ತಳಿಯ ದನಗಳು ’ಬಡರಾಮನ’ ಗೋವುಗಳಾಗಿ ಅಲ್ಲಲ್ಲಿ ಅಲೆಯುತ್ತಾ ದಿನಕ್ಕೊಮ್ಮೆ ಸಗಣಿಹಾಕುವಷ್ಟೂ ಆಹಾರ ತಿನ್ನಲು ಸಿಗದೇ ಸೊರಗುತ್ತಾ ಕಾಲಹಾಕಿದವು. ಬಯಲುಸೀಮೆಯಲ್ಲಿ ಬಹುತೇಕ ದನಗಳು ಮಾಂಸಕ್ಕಾಗಿ ಮಾರಲ್ಪಟ್ಟವು! ಹಾಲನ್ನು ಕುಡಿದ ಯಜಮಾನ ವಿಷವಿಕ್ಕುವಾಗ ಅರ್ಥಾತ್ ತನ್ನ ಅಸಹಾಯಕತೆಯಲ್ಲಿ ತನ್ನನ್ನು ಕಸಾಯಿಖಾನೆಗೆ ಕಳಿಸುವಾಗ ಗೋವಮ್ಮ ಏನನ್ನೂ ಚಿಂತಿಸುವ ಸ್ಥಿತಿಯಲ್ಲಿರಲಿಲ್ಲ. ತನ್ನೆದುರೇ ತನ್ನ ಮರಿಗಳನ್ನೂ ಮಕ್ಕಳನ್ನೂ ಕೈಕಾಲು ಲಟಕು ಲಟಕೆಂದು ಮುರಿದು ಲಾರಿಗೆ ಬಿಸುಟು ಕರೆದೊಯ್ಯುವ ಕಟುಕರ ಮುಂದೆ ಕಣ್ಣಂಚಿನ ಕಡೆಹನಿಗಳನ್ನು ಉರುಳಿಸಿದ್ದು ಬಿಟ್ಟರೆ ಕಾಣದ ಭಗವಂತನ ಕೃಪೆಗಾಗಿ ಪ್ರಾರ್ಥಿಸುವ ಯಾವ ಬಾಯೂ ಆ ಪ್ರಾಣಿಗಿರಲಿಲ್ಲ.

ಇದನ್ನರಿತ ಕೆಲವು ಮಠಾಧೀಶರುಗಳು, ಜೈನಸನ್ಯಾಸಿಗಳು ದೇಸೀ ಗೋವಿನ ಹೀನಾಯ ಸ್ಥಿತಿಯನ್ನು ನೆನೆದು ಮರುಗಿದರು. ಹಲವು ರೀತಿಯಲ್ಲಿ ಹಲವು ಮಗ್ಗುಲಲ್ಲಿ ಮಾನವನ ಬದುಕಿಗೆ ಅಗತ್ಯ ಬೇಕಾಗಬಹುದಾದ ಅನರ್ಘ್ಯರತ್ನಗಳಂತಹ ದೇಸೀ ಗೋವುಗಳ ತಳಿಗಳನ್ನು ಕಾಪಿಡುವುದರ ಔಚಿತ್ಯವನ್ನು ಮನದಂದು ಅದಕ್ಕೊಂದು ಆಂದೋಲನವನ್ನೇ ಹುಟ್ಟುಹಾಕಿದರು. ಹಿಂದೂಗಳಿಗೆ ಗೋವು ಪೂಜನೀಯ ಎಂಬ ಭಾವವನ್ನು ಮುಂದಿಟ್ಟು ಕೊನೇಪಕ್ಷ ಪೂಜನೀಯ ಎಂಬ ಕಾರಣಕ್ಕಾದರೂ ಹಸುಗಳನ್ನು ಕಟುಕರಿಗೆ ಮಾರದಿರಲಿ ಎಂಬ ಮನದಿಂಗಿತವನ್ನು ವ್ಯಕ್ತಪಡಿಸಿದರು. ಆದರೂ ಹಲವೆಡೆ ಮಾಂಸಕ್ಕಾಗಿ ಹಸುಗಳ ಕಳ್ಳಸಾಗಣೆ ನಡೆದೇ ಇತ್ತು; ನಡೆದೇ ಇದೆ. ಕರ್ನಾಟಕದಲ್ಲಿ ಸಿಂಹವೆಂಬ ಕಾಡುಪ್ರಾಣಿ [ಮೃಗಾಲಯಗಳನ್ನು ಬಿಟ್ಟರೆ] ಚಿತ್ರದ ವಸ್ತುವಾಗಿದೆ ಹೇಗೋ ಮುಂದೆ ದೇಸೀ ತಳಿಯ ದನಗಳೂ ಹಾಗೇ ಚಿತ್ರಗಳಿಗೆ ವಸ್ತುವಾದರೆ ಆಶ್ಚರ್ಯವೇನೂ ಇಲ್ಲ! ಉರಿವ ಸೂರ್ಯನ ಉರಿಬಿಸಿಲಿನಲ್ಲಿ ಮೇಯುತ್ತಾ ತನ್ನ ಭುಜಭಾಗದ ಸೂರ್ಯನಾಡಿಯಲ್ಲಿ ಬಿಸಿಲಿನ ಔಷಧೀಯ ಗುಣಗಳನ್ನು ಶೇಖರಿಸಿ ತನ್ನ ಹಾಲಿನ ಗ್ರಂಥಿಗಳಮೂಲಕ ಅದನ್ನು ಮನುಷ್ಯರಿಗೆ ಒದಗಿಸುತ್ತಿದ್ದ ದೇಸೀತಳಿಯ ಹಸುಗಳಿಲ್ಲದ ಪರಿಣಾಮವೇ ಇಂದು ನಾವು ಶಾರೀರಿಕವಾಗಿ ಸಾಕಷ್ಟು ದುರ್ಬಲರಾಗಿದ್ದೇವೆ; ಮೂರು ಮೂರು ದಿನಕ್ಕೊಮ್ಮೆ ವೈರಲ್ ಫೀವರ್ ಹತ್ತಿಕೊಳ್ಳುತ್ತದೆ, ಅಮೃತಬಳ್ಳಿ ಕಷಾಯ, ಅಮೃತತುಲ್ಯ ದೇಸೀತಳಿಯ ಹಸುವಿನ ಹಾಲು ಎರಡೂ ನಮಗೆ ವರ್ಜ್ಯವಾಗಿವೆ.

ಯಾರೇನೇ ಅಂದರೂ ಕಾಡುಗಳ್ಳರ, ದನಗಳ್ಳರ ಅಂಧಾದರ್ಬಾರ್ ಈಗಲೂ ಚಾಲ್ತಿಯಲ್ಲೇ ಇದೆ. ಅಲ್ಲಲ್ಲಿ ಭಜರಂಗದಳದವರು ಗೋ ಕಳ್ಳಸಾಗಣೆಯನ್ನು ಹಿಡಿದಿದ್ದಾರೆ; ಹಿಡಿಯುತ್ತಾರೆ. ಅವರು ಹಿಡಿಯುವ ಹತ್ತರಷ್ಟು ಇನ್ನೂ ಕತ್ತಲಲ್ಲೇ ಮಾರಾಟವಾಗುತ್ತಿವೆ. ಸಂಶಯವೇ ಬಾರದ ರೀತಿಯಲ್ಲಿ ಸಾಗಿಸುವ ’ಸಾಚಾ ಜನ’ಗಳಿದ್ದಾರೆ!ಹಗಲು ಅಂಥವರು ಹೋಗದ ದೇವಸ್ಥಾನಗಳಿಲ್ಲ;ಭೇಟಿಯಾಗದ ಸ್ವಾಮಿಗಳಿಲ್ಲ. ಕತ್ತಲಾದೊಡನೆಯೇ ಅವರ ಕರಾಮತ್ತು ಆರಂಭವಾಗುತ್ತದೆ! ತಿನ್ನುವವರ ಖಾನದಾನಿಗಿಂತ ಮಾರುವವರ ಕರಾಮತ್ತೇ ಬಹಳ ನೋವನ್ನು ತರಿಸುತ್ತದೆ. ಈಗ ಮಾಂಸದ ದರ ಹೆಚ್ಚಳವಂತೆ. ಮತ್ತೊಮ್ಮೆ ಬಕ್ರೀದ್, ಕ್ರಿಸ್ಮಸ್ ಎಲ್ಲಾ ಹತ್ತಿರವಾಗುತ್ತಿವೆ. ಕುರಿಗಳಿಗೆ ಬದಲಾಗಿ ಚೀಪ್ ರೇಟ್‍ನಲ್ಲಿ ದನಗಳು ಸಿಕ್ಕರೆ ಕೊಳ್ಳಲು ಮುಗಿಬೀಳುವ ಮಂದಿ ಇದ್ದಾರೆ. ಸಿಕ್ಕಿದ ಅವಕಾಶವನ್ನು ಪಾಪ-ಪುಣ್ಯದ ಹಂಗುತೊರೆದು ಮಾರಾಟದ ಮೂಲಕ ಸಕತ್ತಾಗಿ ಎನ್‍ಕ್ಯಾಶ್ ಮಾಡಿಕೊಳ್ಳುವ ಕತರ್ನಾಕ್ ಜನ ಕಾಯುತ್ತಿದ್ದಾರೆ!

ಜನಜಾತ್ರೆಗೆ ಅನಿವಾರ್ಯವಲ್ಲದಿದ್ದರೂ ಇರಲಿ ಎಂದು ಎಲ್ಲೆಂದರಲ್ಲಿ ರಸ್ತೆಗಳ ನಿರ್ಮಾಣವಾಗಿದೆ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿದೆ; ಅಗಲಗೊಳಿಸಲ್ಪಟ್ಟಿದೆ. ತಾಲೂಕುಗಳಲ್ಲೂ ಹಳ್ಳಿಗಳಲ್ಲೂ ರಾಜ್ಯಹೆದ್ದಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅಳಿದುಳಿದ ಪಾಪದ ದೇಸೀತಳಿಯ ದನಗಳು ಇರಬಹುದಾದ ಚಿಕ್ಕಪುಟ್ಟ ಜಾಗಗಳಲ್ಲಿನ ಸೊಪ್ಪು-ಸದೆ ತಿನ್ನಲು ಓಡಾಡುತ್ತಿರುತ್ತವೆ. ಮನುಷ್ಯ ನಿರ್ಮಿಸಿದ ರಸ್ತೆ, ವಾಹನಗಳು ಅತೀವೇಗದಲ್ಲಿ ಬರುತ್ತವೆ, ಬಂದಾಗ ಬದಿಗೆ ಸರಿಯಬೇಕು-ಓಡಿಹೋಗಬೇಕು ಎಂಬ ಯಾವುದೇ ಅನಿಸಿಕೆ ಬಹುಶಃ ಅವುಗಳಿಗಿರುವುದಿಲ್ಲ. ಚಾಲಕರಲ್ಲಿ ಹಲವರಿಗೆ ವೇಗಮಿತಿಯೆಂದರೆ ಏನೆಂಬುದೇ ತಿಳಿದಿಲ್ಲವಾದರೆ ಇನ್ನೂ ಹಲವು ಚಾಲಕರು ಸದಾ ’ಎಣ್ಣೆ’ಯಮೇಲೇ ಗಾಡೀ ಓಡಿಸುತ್ತಾರೆ. ಮೊನ್ನೆ ನಮ್ಮೂರಕಡೆ ನಡೆದಿದ್ದೂ ಅದೇ. ಒಬ್ಬನೇ ಚಾಲಕ ಒಂದೇ ರಾತ್ರಿಯಲ್ಲಿ ನಾಕಾರು ಮೈಲಿ ಅಂತರದಲ್ಲಿ ೩-೪ ದನಗಳನ್ನು ಸಾಯಿಸಿ ಬಸ್ ಓಡಿಸಿಕೊಂಡು ಮುಂದೆಸಾಗಿದ್ದಾನೆ. ವಾಹನ ಜಪ್ಪಿದ ಹೊಡೆತಕ್ಕೆ ಅವುಗಳ ಮಗ್ಗುಲು ಮುರಿದು ಅವು ಎಷ್ಟು ವೇದನೆಪಟ್ಟವೋ ಬೆಳಗಾಗುವಷ್ಟರಲ್ಲಿ ಹೆಣಗಳಾಗಿದ್ದವು. ಯಾರದೋ ಮನೆಯ ಸತ್ತ ದನಗಳನ್ನು ಗ್ರಾಮಸ್ಥರು ಕಂಡು ಮರುಗಿದರು, ನಂತರ ಅವುಗಳ ವಾರಸುದಾರರ ಸಮಕ್ಷಮ ಶ್ರದ್ಧೆಯಿಂದ ಮಣ್ಣುಮಾಡಿದರು.

ನಾವೆಲ್ಲಾ ಪ್ರಾಥಮಿಕ ಓದುವುದಕ್ಕೂ ಹಿಂದೆಯೇ ಬರೆಯಲ್ಪಟ್ಟ ಗೋವಿನ ಗೀತೆಯೊಂದು ನೆನಪಿಗೆ ಬರುತ್ತಿದೆ. ಅದನ್ನು ನೀವು ಕೇಳಿಯೇ ಇದ್ದೀರಿ:

ತಬ್ಬಲಿಯು ನೀನಾದೆ ಮಗನೇ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದೂ
ತಬ್ಬಿಕೊಂಡಿತು ಕಂದನ.....


ಈಗ ಇಲ್ಲಿ ಕಂದನನ್ನು ತಬ್ಬಿಕೊಳ್ಳುವುದಕ್ಕೂ ಅವಕಾಶವಿಲ್ಲ! ಹೆಬ್ಬುಲಿಯ ಬದಲಿಗೆ ಹೆದ್ದಾರಿಗಳಿವೆ! ಹಾಡು ಬದಲಾಗುತ್ತದೆ :

ತಬ್ಬಲಿಯು ನೀನಾದೆ ಮಗನೇ
ಹೆದ್ದಾರಿಯಲಿ ಜವರಾಯನಿರುವನು
ಇಬ್ಬರಾ ಋಣ ತೀರಿತೆನಲೂ
ಬಿಡದೇ ತಬ್ಬಿಕೊಳುವನು.....

ಓದುಗ ಮಹಾಶಯರೇ, ನೀವು ಯಾರೇ ಆಗಿರಲಿ ನಿಮ್ಮಲ್ಲಿ ನನ್ನ ವಿನಂತಿ ಇಷ್ಟೇ: ದೇಸೀ ಹಾಗೂ ಸೀಮೆ ಎಲ್ಲಾಗೋವುಗಳೂ ಎಮ್ಮೆಗಳೂ ಬೇಕು. ಆದರೂ ದೇಸೀ ತಳಿಯ ಗೋವುಗಳನ್ನು ರಕ್ಷಿಸುವಲ್ಲಿ ನಿಮ್ಮಪಾತ್ರವನ್ನು ಊಹಿಸಿಕೊಳ್ಳಿ. ಎಲ್ಲೀವರೆಗೆ ನಾವು ಹಾಲನ್ನು ಕೊಡುವ ಗೋಮಾತೆಗೆ ಹಾಲಾಹಲವನ್ನು ನೀಡುವ ಮನಸ್ಸಿನವರಾಗಿರುತ್ತೇವೋ ಅಲ್ಲೀವರೆಗೂ ನಮ್ಮ ಉನ್ನತಿ ಸಾಧ್ಯವಿಲ್ಲ. ಉನ್ನತಿ ಎಂಬುದನ್ನು ಸಿರಿವಂತಿಕೆ ಎಂಬುದಕ್ಕೆ ಹೋಲಿಸಿಕೊಳ್ಳಬೇಡಿ. ಉನ್ನತಿ ಎಂಬುದಕ್ಕೆ ಉನ್ನತವಾದ ಅರ್ಥವಿದೆ ಎಂಬುದನ್ನು ಮರೆಯಬೇಡಿ. ದನ ತಿನ್ನುವವರಿಗೆ ತಿನ್ನಬಾರದಂತೇ ಜಗನ್ನಿಯಾಮಕ ಪ್ರೇರೇಪಿಸಲಿ. ದಿನವೂ ಹಿಡಿಯಕ್ಕಿಯನ್ನು ಗೋವಿಗೆ ನೀಡಿ, ನಗರವಾಸಿಗಳು ಒಂದು ಬಾಳೆಯ ಹಣ್ಣು ನೀಡಿ, ನಿಮ್ಮೆಲ್ಲರ ಜನ್ಮ ಪಾವನವಾಗಲಿ, ಹಾಲುಕೊಟ್ಟ ಎರಡನೇ ಅಮ್ಮನ ಕಣ್ಣಲ್ಲಿ ಆನಂದಭಾಷ್ಪ ಸುರಿಯಲಿ.

Monday, October 17, 2011

ಕೋಂಪ್ಲಾನ್ ಬಾಯ್ ಬೋರ್ನವೀಟಾ ಕುಡಿದ ಸಂಭ್ರಮ !


ಕೋಂಪ್ಲಾನ್ ಬಾಯ್ ಬೋರ್ನವೀಟಾ ಕುಡಿದ ಸಂಭ್ರಮ !

ಬ್ಲಾಗಿಗ ಮಿತ್ರರಿಗೆ ಕೋಂಪ್ಲಾನ್ ಬಾಯ್ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲವೇನೋ, ಯಾಕೆಂದರೆ ಅವರು ಅಷ್ಟು ಪರಿಚಿತರು. ವಯಸ್ಸು ಕೇವಲ ೭೫ ಹುಮ್ಮಸ್ಸು ೨೫ರದ್ದು! ಛಾಯಾಚಿತ್ರ ಜಗತ್ತಿನಲ್ಲಿ ಅವರದ್ದೇ ಆದ ವಿಭಿನ್ನ ಛಾಪು ಮೂಡಿಸಿದ ವ್ಯಕ್ತಿ. ೨೦೧೦ ಆಗಷ್ಟ್ ತಿಂಗಳ ಬ್ಲಾಗಿಗರ ಕೂಟದಲ್ಲಿ ತಮಾಷೆಗಾಗಿ ಆಯೋಜಿಸಿದ್ದ ಸರ್ಪ್ರೈಸ್ ಗಿಫ್ಟ್ ನಲ್ಲಿ ಕೋಂಪ್ಲಾನ್ ಪಡೆದು ಅದನ್ನು ಕೈಯ್ಯಲ್ಲಿ ಎತ್ತಿಹಿಡಿದು ನಗೆಯಾಡಿದವರು. ಈಗಲಾದರೂ ನೆನಪಾಯಿತಲ್ಲ : ಎಮ್.ಶ್ರೀನಿವಾಸ ಹೆಬ್ಬಾರ ಎಂಬುದು ನಾಮಧೇಯ. ಅವರಿಗೆ ಮೊನ್ನೆ ಭಾರತೀಯ ವಿದ್ಯಾಭವನದಲ್ಲಿ ಈ. ಹನುಮಂತರಾವ್ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇದು ನಮ್ಮ ಕೋಂಪ್ಲಾನ ಬಾಯ್ ಬೋರ್ನವೀಟಾ ಕುಡಿದ ಕ್ಷಣವೇನೋ ಅನ್ನಿಸಿತು !

ಸುಮಾರು ೧೯೫೦ರ ದಶಕದಿಂದ ಆರಂಭಿಸಿ ೧೯೯೦ರ ದಶಕದ ವರೆಗೂ ತಮ್ಮ ಛಾಯಾಗ್ರಹಣವನ್ನು ನಡೆಸಿದ್ದ ಹೆಬ್ಬಾರರು ಗಣ್ಯ ಹಿರಿಯ ತಲೆಗಳಿಗೆ ಚೆನ್ನಾಗಿ ಪರಿಚಿತರು. ಹಲವರಿಗೆ ಫೋಟೋಗ್ರಫಿ ಮಾಡಿಕೊಟ್ಟ ಹೆಗ್ಗಳಿಕೆ ಅವರದು. ಅದಲ್ಲದೇ ಫೋಟೋಗ್ರಫಿಯಲ್ಲಿ ಕಲೆಯನ್ನು ಹೊರಸೂಸುವ ಚಾಕಚಕ್ಯತೆ ಅವರಿಗೆ ಆ ಕಾಲದಲ್ಲೇ ಮೈಗೂಡಿತ್ತು. ಅಂದಿನ ಕ್ಯಾಮೆರಾಗಳು ಮೆಕಾನಿಕಲ್ ಸ್ಟಿಲ್ ಕ್ಯಾಮೆರಾಗಳು. ತೆಗೆಯುವ ಚಿತ್ರಗಳು ರೀಲ್ ಅಥವಾ ಫಿಲ್ಮ್ ರೋಲ್ ಮೇಲೆ ಕೇವಲ ನೆಗೆಟಿವ್ ಬಿಂಬಗಳಾಗಿ ಮೂಡುವಂತಹ ದಿನಗಳು. ಚಿತ್ರಗಳ ಗ್ರಹಣ ಮುಗಿದಮೇಲೆ ಖಗ್ರಾಸ ಗ್ರಹಣಹಿಡಿದ ಕೊಠಡಿಯಲ್ಲಿ ನಿಂತು ಕಪ್ಪು ಬಟ್ಟೆಯ ಒಳಗೆ ನಿಧಾನಕ್ಕೆ ಫಿಲ್ಮ ರೋಲ್ ಕ್ಯಾಮೆರಾದಿಂದ ಹೊರತೆಗೆದು ಅದನ್ನು ಸಂಬಂಧಿಸಿದ ಕೆಮಿಕಲ್ ನಲ್ಲಿ ಹಾಕಿ ಆಮೇಲೆ ಅದನ್ನು ಪಾಸಿಟಿವ್ ಆಗಿ ಇನ್ನೊಂದು ಫಿಲ್ಮ್ ಕಾಗದದಮೇಲೆ ಅಚ್ಚಿಸಬೇಕಾಗುತ್ತಿತ್ತು. ಇದನ್ನು ತೊಳೆಯುವ ಕೆಲಸ ಎನ್ನುತ್ತಿದ್ದರು! ತೊಳೆಯುವ ಕೆಲಸದಲ್ಲಿ ತುಸು ವ್ಯತ್ಯಾಸವಾದರೆ ಚಿತ್ರಗಳು ಸ್ಫುಟವಾಗಿ ಮೂಡುತ್ತಿರಲಿಲ್ಲ. ಚಿತ್ರಗಳು ಅಚ್ಚಾದಮೇಲೆ ಮತ್ತೆ ಅವುಗಳನ್ನು ತಿದ್ದಲು ಇಂದಿನಂತೇ ಫೋಟೋಶಾಪ್ ತಂತ್ರಾಂಶ ಇರುವ ಕಾಲ ಅದಲ್ಲ! ಹೀಗಾಗಿ ಫೋಟೊಗ್ರಾಫರ್ ಆಗಿದ್ದವರು ಚಿತ್ರಗಳ ಡೆವಲಪ್‍ಮೆಂಟ್ ಮತ್ತು ಪ್ರಾಸೆಸಿಂಗ್‍ನಲ್ಲಿ ಸಾಕಷ್ಟು ಪರಿಣತರಾಗಿರಬೇಕಾಗುತ್ತಿತ್ತು. ಅಂದು ನಿಜಕ್ಕೂ ಅದು ಕೇವಲ ಕೆಲವರಿಗಷ್ಟೇ ಮೀಸಲಾದ ಸಾಧನೆ. ಆ ಸಾಧಕರು ಫೋಟೋಗ್ರಫಿಯಲ್ಲಿ ತಪಸ್ಸನ್ನು ಮಾಡುವವರಾಗಿದ್ದರು. ಅಂತಹ ಸಾಧಕರಲ್ಲಿ ಹೆಬ್ಬಾರರೂ ಒಬ್ಬರು.

ಅವರದೇ ಮಾತಿನಲ್ಲಿ ಹೇಳುವುದಾದರೆ ತೆಗೆದ ಚಿತ್ರಗಳನ್ನು ಸರಿಯಾಗಿ ಒಪ್ಪಿಸಬೇಕಾದರೆ ಪ್ರಾಸೆಸಿಂಗ್ ಹಂತದಲ್ಲಿ ಸಮಾಧಾನವಾಗುವವರೆಗೂ ನಾಕಾರು ಸರ್ತಿ ಮರುಪ್ರಯತ್ನಮಾಡಿ ಚಿತ್ರಗಳ ಗುಣಮಟ್ಟವನ್ನು ಉತ್ತಮವಾಗಿಸಬೇಕಾಗುತ್ತಿತ್ತು. ಹೀಗೆ ತೆಗೆದ ಅಂದಿನ ಹಲವು ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ನಳನಳಿಸುತ್ತಿವೆ. ವಿಷಾದವೆಂದರೆ ಮೊನ್ನೆಮೊನ್ನೆ ಕೆಲವರು ತೆಗೆದ ಬಣ್ಣದ ಚಿತ್ರಗಳು ಅದಾಗಲೇ ಅಳುತ್ತಿವೆ !! ಬಣ್ಣಗಳ ಮೇಲೆ ಅದೇನೋ ಹೊಸ ಕಲೆಗಳು ಮೂಡಿ ಮೂಲ ಚಿತ್ರ ಕಳೆಗುಂದಿ ಚಿತ್ರಗಳಲ್ಲಿರುವ ಕಲೆ ಮಾಯವಾಗಿದೆ. ಫೋಟೋಗ್ರಾಫರ್ ಕೇವಲ ವೃತ್ತಿಗಾಗಿ ಅದನ್ನು ಆಯ್ದುಕೊಂಡವನಾಗಿರದೇ ಆವನೊಬ್ಬ ಕಲಾವಿದನೂ ಕಲಾರಸಿಕನೂ ಆಗಿದ್ದರೆ ಆತ ತೆಗೆಯುವ ಚಿತ್ರಗಳಲ್ಲಿ ನೋಡುವಂತಹ ’ಜಾದೂ’ ಇರುತ್ತದೆ. ಇದು ಸಿನಿಮಾ ಚಿತ್ರೀಕರಣ ಮಾಡಿದ ಕೆಲವು ಮಹಾನುಭಾವರಿಗೂ ಅನ್ವಯವಾಗುತ್ತದೆ. ಒಳಗಿನ ಕಲಾವಿದನನ್ನು ಓಲೈಸಿ ಪಡೆದ ಚಿತ್ರಗಳಾದರೆ ಆ ಚಿತ್ರಗಳು ನೋಡುಗರ ಹೃದಯವನ್ನು ಸೂರೆಗೈಯ್ಯುವುದರಲ್ಲಿ ಸಂದೇಹವಿರುವುದಿಲ್ಲ. ಬದಲಿಗೆ ಎಲ್ಲರೂ ಮಾಡುತ್ತಾರೆ ಅದೇನು ಮಹಾ ಎಂದು ಫೋಟೋ ತೆಗೆಯುತ್ತಿದ್ದರೆ ಅದು ’ಫೋಟೋ ಜಾತಿ’ಯೇ ’ಜಾತಿ ಫೋಟೋ’ ಆಗುವುದಿಲ್ಲ !

ಇಂದಿನ ಆಧುನಿಕ ಕಾಲಮಾನದಲ್ಲಿ ವಿದ್ಯುನ್ಮಾನದ ನಾನಾಹಂತದ ಆವಿಷ್ಕಾರಗಳಿಂದ ಮಿರರ್ ಲೆಸ್ ಕ್ಯಾಮೆರಾಗಳವರೆಗೂ ತಾಂತ್ರಿಕತೆ ಹಬ್ಬಿದೆ ! ಡಿಜಿಟಲ್ ಕ್ಯಾಮೆರಾಗಳು ಬಂದಮೇಲಂತೂ ಎಂಥಾ ಹುಚ್ಚನೂ ಛಾಯಾಚಿತ್ರ ತೆಗೆಯಬಹುದಾದಷ್ಟು ಸಲೀಸಾಗಿದೆ. ಮೊದಲಿನ ಫೋಟೋಗ್ರಾಫರ್ಸ್ ಅನುಭವಿಸದ ಕಷ್ಟ ಈಗಿನವರಿಗಿಲ್ಲ. ನೋಡುಗನಿಗೊಂದು ಒಳ್ಳೆಯ ದೃಷ್ಟಿಕೋನವಿದ್ದರೆ ಚಿತ್ರಗಳು ಸುಂದರವಾಗಿ ಬಂದುಬಿಡುತ್ತವೆ. ಮೇಲಾಗಿ ತೆಗೆದ ಚಿತ್ರಗಳನ್ನು ತಕ್ಷಣ ನೋಡಬಹುದಾಗಿದೆ, ಸರಿಬಂದಿಲ್ಲವಾದರೆ ಮತ್ತೊಮ್ಮೆ ಪ್ರಯತ್ನಿಸಿ ಸರಿಪಡಿಸಬಹುದಾಗಿದೆ. ಆದರೂ ಕೆಲವರು ಎಡವುತ್ತಾರೆ. ಕೆಲವು ಚಿತ್ರಗಳಲ್ಲಿ ಯಾರದ್ದೋ ತಲೆಗಳನ್ನೇ ಹಾರಿಸಿರುತ್ತಾರೆ, ಇನ್ಯಾರಿಗೋ ಕೈಕಾಲುಗಳೇ ಇರುವುದಿಲ್ಲ, ಇನ್ನಷ್ಟು ಫೋಟೋಗಳು ತಮ್ಮದೇ ಹೌದೋ ಎಂದು ತೆಗೆಸಿಕೊಂಡವರು ಸಂಶಯಾಸ್ಪದವಾಗಿ ನೋಡುವಹಾಗೇ ಮುಖ ಊದ್ದುದ್ದವೋ ಅಡ್ಡಡ್ಡವೋ ಬಂದಿರುವಂತೇ ತೆಗೆಯುತ್ತಾರೆ. ಒಟ್ಟಾರೆ ಹೇಳುವುದಾದರೆ ಇವತ್ತಿಗೆ ಫೋಟೋಗ್ರಾಫಿ ಕಷ್ಟದಾಯಕವಲ್ಲ. ’ಇಂಗು ತೆಂಗು ಎರಡಿದ್ದರೆ ಮಂಗಮ್ಮನಾದರೂ ಅಡುಗೆಮಾಡುತ್ತದಂತೆ’ ಎಂಬ ಗಾದೆಯೊಂದು ನಮ್ಮಲ್ಲಿ ವಾಡಿಕೆಯಲ್ಲಿದೆ. ಅದೇ ರೀತಿ ತಕ್ಕಮಟ್ಟಿಗೆ ಉತ್ತಮವಾದ ಡಿಜಿಟಲ್ ಕ್ಯಾಮೆರಾವೊಂದಿದ್ದರೆ, ಫೋಟೋಗೆ ತಕ್ಕುದಾದ ಪರಿಸರವಿದ್ದರೆ ಚಿತ್ರಗಳು ಬಹುತೇಕ ಚೆನ್ನಾಗಿ ಬಂದಂತೆಯೇ.

ಇವತ್ತಿನ ಕಮರ್ಷಿಯಲೈಸೇಶನ್ ನಲ್ಲಿ ಎಲ್ಲವೂ ಹರಿಬಿರಿ, ಈಗ ತೆಗೆದ ಚಿತ್ರಗಳನ್ನು ಗಂಟೆಯೊಂದರಲ್ಲೇ ಪಡೆದುಬಿಡುತ್ತೇವೆ! ಆದರೆ ಚಿತ್ರಗಳ ಕಾಗದ ಮತ್ತು ಬಣ್ಣಗಳ ಗುಣಮಟ್ಟ ಪಸಂದಾಗಿರುವುದಿಲ್ಲ. ಕೊಡ್ಯಾಕ್ ಕಂಪನಿಯಂತಹ ಕೆಲವು ಫೋಟೋ ಮಾರ್ಟ್ ಕಂಪನಿಗಳು ಹಲವು ಪ್ರಾಸೆಸಿಂಗ್ ಯಂತ್ರಗಳನ್ನು ತಯಾರಿಸಿದ್ದಾರೆ. ಆದರೆ ಅವರು ಹೇಳಿದ ಉತ್ತಮ ವಸ್ತುಗಳನ್ನು ಬಳಸದೇ [ಹಣವುಳಿಸುವ ಉದ್ದೇಶದಿಂದ] ಕೀಳುಗುಣಮಟ್ಟದ ವಸ್ತುಗಳನ್ನು ಬಳಸುವುದರಿಂದ ಚಿತ್ರಗಳು ಬಹುಬೇಗ ಕೆಡುತ್ತವೆ! ಕೆಲವು ಲ್ಯಾಬ್ ಗಳಲ್ಲಿ ಚಿತ್ರಗಳಿಗೆ ಬಣ್ಣಹಚ್ಚುವ ಯಂತ್ರಗಳಲ್ಲಿ ಅವುಗಳ ಗಾಢಾಂಶ [ಥಿಕ್‍ನೆಸ್] ನಿಯಂತ್ರಕದಲ್ಲಿ ಕಮ್ಮಿ ಆಯ್ಕೆಮಾಡಿ ತೆಳುವಾಗಿ ಬಣ್ಣಲೇಪಿಸುವುದರಿಂದಲೂ ಚಿತ್ರಗಳು ಕೆಡುತ್ತವೆ ಅಥವಾ ಮಾಸಲು ಚಿತ್ರಗಳಾಗಿ ಕಾಣುತ್ತವೆ. ಇವುಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ಹೇಳುತ್ತಿದ್ದೇನೆ. ಬೆಂಗಳೂರಿನ ಹೆಸರಾಂತ ಜಿ.ಕೆ.ವೇಲ್ ನಲ್ಲಿ ಅಚ್ಚಿಸಿದ ಚಿತ್ರಗಳಿಗಿಂತ ಕುಂದಾಪುರದಲ್ಲಿ ಅಚ್ಚಿಸಿದ ಚಿತ್ರಗಳು ಬಹಳ ಮುದ್ದಾಗಿ ಕಾಣುತ್ತವೆ. ಈ ಅನುಭವ ನಿಮ್ಮದಾಗಬೇಕಾದರೆ ನಾಕಾರು ಲ್ಯಾಬ್ ಗಳಲ್ಲಿ ಒಮ್ಮೊಮ್ಮೆ ಚಿತ್ರ ಅಚ್ಚಿಸಿ ಪಡೆದು ನೋಡಬೇಕಾಗುತ್ತದೆ, ಸರ್ವ ಕಾಂಚಾಣಮಯಂ ಜಗತ್ ! ಭೌಗೋಳಿಕ ಸನ್ನಿವೇಶಗಳು ಮತ್ತು ವಾತಾವರಣಗಳೂ ಚಿತ್ರಗಳಮೇಲೆ ಪರಿಣಾಮ ಬೀರುತ್ತವೆ. ಕರಾವಳಿಯಲ್ಲಿ ಇಂದಿನ ಕಲರ್ ಚಿತ್ರಗಳು ಬಹುಬೇಗ ಹಾಳಾಗುತ್ತವೆ. ಅಲ್ಲಿನ ಹವೆಯಲ್ಲಿನ ಉಪ್ಪಿನಂಶವೂ ಅದಕ್ಕೆ ಕಾರಣವಿರಬಹುದು. ಆದರೆ ೪೦-೫೦ ವರ್ಷ ಹಳೆಯ ಕಪ್ಪು-ಬಿಳುಪು ಚಿತ್ರಗಳು ಇನ್ನೂ ಚೆನ್ನಾಗಿದ್ದುದುದು ನನ್ನ ಅಶ್ಚರ್ಯಕ್ಕೆ ಕಾರಣವಾಗಿದೆ.

ಇನ್ನು ಹೆಬ್ಬಾರರ ಬಗ್ಗೆ ಒಂದೆರಡು ಮಾತು. ಸಹೃದಯೀ ಹೆಬ್ಬಾರರು ’ಅರುಣ ಚೇತನ’ ಎಂಬ ಅಂಗವಿಕಲರ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಅದರಲ್ಲಿ ಮಾಂಸದಮುದ್ದೆಯಂತಹ ಅಂಗವಿಕಲ ಹಸುಗೂಸುಗಳನ್ನು ತರಬೇತುಗೊಳಿಸಿ ಸಮಾಜದಲ್ಲಿ ಎಲ್ಲರಂತೇ ಆ ಮಕ್ಕಳು ಬೆಳೆದು ಬದುಕಲು ಅನುಕೂಲ ಕಲ್ಪಿಸುತ್ತಾರೆ. ಅದಕ್ಕಾಗಿ ಸರಕಾರದ ಯಾವುದೇ ನೆರವು ಪಡೆದಿಲ್ಲ ಬದಲಾಗಿ ಸಾರ್ವಜನಿಕರಲ್ಲಿ ಉಳ್ಳವರಲ್ಲಿ ದೇಣಿಗೆ ಸ್ವೀಕರಿಸಿ ಆ ಶಾಲೆಯನ್ನು ನಡೆಸುತ್ತಾರೆ. ವರ್ಷದ ಹಿಂದೆ ಅವರು ಹೇಳಿದ್ದು- ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಹಸಿದವರಿಗೆ ಊಟನೀಡುವ ಕಾರ್ಯಕ್ರಮ ಕೂಡ ಅವರ ಕೆಲವು ಕಾರ್ಯಗಳಲ್ಲಿ ಒಂದಾಗಿದೆ. ಉಳ್ಳವರು ಯಾರದರೂ ದಾನ-ಧರ್ಮಮಾಡಲು ಮುಂದಾದರೆ, ಅಂಥವರಿಂದ ಅನ್ನದಾನವನ್ನು ಏರ್ಪಡಿಸುತ್ತಾರೆ. ಹೀಗೇ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವುದು ಕಾಣಸಿಗುತ್ತದೆ. ಅಂಗವಿಕಲ/ಬುದ್ಧಿಮಾಂದ್ಯ ಮಕ್ಕಳು ಹುಟ್ಟುವ ವಿಷಯ ಜ್ಯೋತಿಷ್ಯದ ಮೂಲಕ ಪರಿಗಣಿಸಿ ತಿಳಿದುಕೊಳ್ಳಬಹುದೇ ಎಂಬ ಕುತೂಹಲದಿಂದ ಜ್ಯೋತಿಷ್ಯವನ್ನು ಐಚ್ಛಿಕವಾಗಿ ಅಭ್ಯಸಿಸಿದ್ದಾರೆ. ಆದರೆ ಅವರು ವೃತ್ತಿ ಜ್ಯೋತಿಷ್ಕರಲ್ಲ, ಅದೊಂದು ಪ್ರವೃತ್ತಿ ಅಷ್ಟೆ. ಹೆಬ್ಬಾರರು ಇಂದಿನ ಕ್ಯಾಮೆರಾಗೂ ಅಡ್ಜೆಸ್ಟಾಗಿದ್ದು ಫೋಟೋಶಾಪ್ ಕೂಡ ಬಳಸುತ್ತಾರೆ. ನಿತ್ಯವೂ ಬೆಳಿಗ್ಗೆ ಶುಭೋದಯದ ಸಂದೇಶ ನನ್ನ ಜಂಗಮವಾಣಿಗೆ ತಲ್ಪುತ್ತದೆ.

ಕೊಟ್ಟಕಾಸಿನ ಜೊತೆಗೆ ಕೊಡದ ಕಾಸನ್ನೂ ಕಬಳಿಸುವ ಕೆಟ್ಟಸಂಸ್ಕೃತಿ ಮೆರೆಯುತ್ತಿರುವಾಗ ಅಲ್ಲಲ್ಲಿ ಎಲೆಮರೆಯ ಕಾಯಿಯಂತೇ ಕೆಲವು ಜನ ಅದರಾಚೆ ನಿಂತು ತಾವು ಹಾಗಲ್ಲ ಎಂದು ಸಾಬೀತುಪಡಿಸುತ್ತಾರೆ. ಸನ್ಮಾನವಾಗಿ ಬಂದ ಹತ್ತುಸಾವಿರ ರೂಪಾಯಿ ಹಣವನ್ನು ತಾವೇ ಹುಟ್ಟುಹಾಕಿದ ’ಅರುಣಚೇತನ’ಕ್ಕೆ ಕೊಟ್ಟ ಹೆಬ್ಬಾರರ ಕೆಲಸವನ್ನು ಈ ವಿಷಯದಲ್ಲೂ ಇಲ್ಲಿ ನೆನೆಯಬೇಕಾಗುತ್ತದೆ. ಸನ್ಮಾನದ ವೇದಿಕೆಯಲ್ಲಿ ಅವರು ’ಅರುಣಚೇತನ’ದ ವಿಷಯ ಪ್ರಸ್ತಾಪಿಸಿದ ಮರುಘಳಿಗೆಯಲ್ಲೇ ಕೆಲವರು ೫ರಿಂದ ಹತ್ತುಸಾವಿರ ರೂಪಾಯಿಗಳನ್ನು ನೀಡುವುದಾಗಿ ಯಾವುದೇ ಒತ್ತಾಯವಿಲ್ಲದೇ [ಸ್ವಯಂ]ಘೋಷಿಸಿದ್ದಾರೆ.

ಹೆಬ್ಬಾರರಿಗೆ ಸನ್ಮಾನ ಆನೆಗೆ ಅಲಂಕರಿಸಿದಂತೇ ಅಂತನಿಸಿತು ನನಗೆ. ಯಾಕೆಂದರೆ ಆನೆ ಸಹಜ ಸುಂದರ ಪ್ರಾಣಿ. ಗಜಗಾಂಭೀರ್ಯ ಅಂತಾರಲ್ಲ ಗಂಭೀರ ಸುಂದರ ನಡಿಗೆಗೆ ಆನೆ ಹೆಸರುವಾಸಿ. ಆಕಾರದಲ್ಲಿ ಅದರ ಸೌಂದರ್ಯ ಮನದೊಳಗೆ ಅಚ್ಚೊತ್ತಿ ನಿಲ್ಲುವಂಥದು. ಬುದ್ಧಿಮತ್ತೆಯಲ್ಲೂ ಕೂಡ ಪ್ರಾಣಿಗಳಲ್ಲಿ ಮನುಷ್ಯನನ್ನು ಬಿಟ್ಟರೆ ಅತೀ ಬುದ್ಧಿವಂತ ಪ್ರಾಣಿ ಎಂದರೆ ಆನೆ ಎಂಬುದು ಬೆಳಕಿಗೆ ಬಂದ ವಿಷಯ. ಅಂತಹ ಆನೆಗೆ ಅಲಂಕರಿಸಿದಾಗ ಹೇಗೆ ಕಾಣುತ್ತದೆ ಎಂಬುದನ್ನು ಜಂಬೂಸವಾರಿಯಲ್ಲಿ ನೋಡಿದ್ದೀರಿ. ಹಾಗೇ ಇಲ್ಲಿ ಕರ್ತವ್ಯದಲ್ಲಿ ಪರಿಪಕ್ವತೆ ಕೊಡಬಯಸುವ ಹೆಬ್ಬಾರರಿಗೆ ಸನ್ಮಾನ, ಪ್ರಶಸ್ತಿ ಇವುಗಳೆಲ್ಲಾ ಬಂದರೆ ಅದು ಆನೆಗೆ ಮಾಡುವ ಅಲಂಕಾರವಾಗುತ್ತದೆ. ನನ್ನ ಅವರ ಪರಿಚಯ-ಒಡನಾಟ ಬಹಳ ಹಿಂದಿನದೇನಲ್ಲ, ನಾನು ಬ್ಲಾಗ್ ಬರೆಯಲು ಆರಂಭಿಸಿದ ಸಮಯದಿಂದ ಸುಮಾರು ಒಂದೂವರೆ ವರ್ಷದ ಹಿಂದೆಯಷ್ಟೇ ಅವರ ನೇರ ಪರಿಚಯವಾಯಿತು. ಆಮೇಲೆ ಬ್ಲಾಗಿಗರ ಪುಸ್ತಕಗಳ ಬಿಡುಗಡೆಗೆ ಬಂದಾಗ ಆಗೀಗ ಭೇಟಿ, ಜಂಗಮವಾಣಿಯಲ್ಲಿ ಸಂಭಾಷಣೆ ಹೀಗೇ ಅದು ಮುಂದುವರಿದಿದೆ. ಇಷ್ಟೆಲ್ಲಾ ಇದ್ದರೂ ಹೆಬ್ಬಾರರು ಉತ್ತಮ ವಾಗ್ಮಿ ಎಂಬುದು ಹೊರನೋಟಕ್ಕೆ ಯಾರಿಗೂ ತಿಳಿಯುವ ವಿಷಯವಲ್ಲ. ಅವರೊಬ್ಬ ಒಳ್ಳೆಯ ಮಾತುಗಾರ ಕೂಡ. ಉತ್ತಮ ಪುಸ್ತಕಗಳನ್ನು ಓದುವುದು ಅವರ ಹವ್ಯಾಸಗಳಲ್ಲೊಂದು. ಬರಹಗಳ ಕುರಿತಾಗಿ ವಿಮರ್ಶೆಯನ್ನೂ ಮಾಡುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರು ಮೌನಿ! ಅದುಯಾಕೋ ಗೊತ್ತಿಲ್ಲ. ಹೆಸರಿಗೆ ’ಹೆಬ್ಬಾರ್ ಪಿಕ್ಚರ್ಸ್’ ಎಂಬ ಬ್ಲಾಗೊಂದಿದ್ದು ಅಲ್ಲಿ ಏನನ್ನೂ ಬರೆದದ್ದನ್ನು ಕಾಣಲಿಲ್ಲ, ಅವರ ಚಿತ್ರಗಳನ್ನೂ ಹಾಕಿರಲಿಲ್ಲವಪ್ಪ. ಅವರ ಅಭಿಪ್ರಾಯ ಮಾತ್ರ ನಿಖರವಾಗಿರುತ್ತದೆ, ನೇರವಾಗಿರುತ್ತದೆ. ದಾಕ್ಷಿಣ್ಯಕ್ಕೆ ಯಾರಿಗೋ ಹೊಗಳಿಕೆ ಹಾಕುವ ಜಯಮಾನ ಅವರದಲ್ಲ.

ಇನ್ನು ಗೂಗಲ್ ಬಜ್‍ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕೆಲವು ಮಹನೀಯ ದೋಸ್ತರುಗಳು ಯಾರೂ ಅಂದಿನ ಸಮಾರಂಭದಲ್ಲಿ ಕಾಣಸಿಗಲಿಲ್ಲ. ದೂರದಲ್ಲಿರುವ ಗೆಳೆಯರಿಗೆ ಬರಲು ಕಷ್ಟ ಎಂದಿಟ್ಟುಕೊಂಡರೂ ಹತ್ತಿರದಲ್ಲಿ ಅದೂ ಬೆಂಗಳೂರಲ್ಲಿ ಇರುವ ಬ್ಲಾಗಿಗ ಮಿತ್ರರಿಗೆ ಬಹುಶಃ ಸಮಯವಾಗಲಿಲ್ಲವೇನೋ ಅನಿಸುತ್ತದೆ. ಬ್ಲಾಗಿಗರಲ್ಲಿ ಶಶಿ ಜೋಯಿಸ್ ಮತ್ತು ದಿಗ್ವಾಸ್ ಹೆಗಡೆ ಕಾಣಸಿಕ್ಕರು. ಹೋಗಲಿಬಿಡಿ ಸಭೆ ಕಿಕ್ಕಿರಿದ ಜನಸಂದಣಿಯಿಂದ ತುಂಬಿತ್ತು. ಬಂದ ಬಹುತೇಕ ಜನರೆಲ್ಲಾ ಅವರವರ ರಂಗಗಳಲ್ಲಿ ಪರಿಣತರೂ ಮತ್ತು ಪ್ರಬುದ್ಧ ಮನಸ್ಕರು ಎಂದಷ್ಟೇ ಹೇಳಬಯಸುತ್ತೇನೆ. ಗಣೇಶನ ದೇವಸ್ಥಾನ ಎಲ್ಲಾದಿನವೂ ತೆರೆದಿರುತ್ತದೆಯಾದರೂ ಮಹಾಚೌತಿಯ ದಿನ ಗಣಪತಿಯ ದರ್ಶನ ಶ್ರೇಷ್ಠವಂತೆ. ಅಂತೆಯೇ ಸನ್ಮಾನಿತರಾದ ಹೆಬ್ಬಾರರನ್ನು ಅಲ್ಲೇ ಕಂಡು ಸಂಭ್ರಮಿಸಿದ, ಅಭಿನಂದಿಸಿದ ಧನ್ಯತಾಭಾವ ನನ್ನದಾಗಿದೆ. ಹೆಬ್ಬಾರರು ನೂರ್ಕಾಲ ಸುಖವಾಗಿ ಬಾಳಲಿ ದಿನಗಳೆದಂತೇ ಇನ್ನೂ ಎಳಬರಾಗುತ್ತಾ ಮಿಕ್ಕುಳಿದ ಎಳಬರಿಗೆ ದಾರಿದೀಪವಾಗಲಿ ಎಂದು ಹಾರೈಸುತ್ತೇನೆ, ನಮಸ್ಕಾರ ಹೆಬ್ಬಾರರಿಗೆ ಹಾಗೂ ಈ ಕಥೆ ಕೇಳಿದ ನಿಮಗೆಲ್ಲರಿಗೆ.

Thursday, October 13, 2011

ಕುರಿ ಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ !


ಕುರಿ ಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ !

ಹೌದ್ರೀ ಮನುಷ್ಯರನ್ನ ಬೇಕಾರೆ ಕುಯ್ಕೊಳಿ ಕೋಳಿ-ಕುರಿ ಮಾತ್ರ ಕುಯ್ಬೇಡಿ ಅನ್ನೋದು ಮಚ್ಚಣ್ಣಗಳ ಹಾಡು. ಅಂದಹಾಗೆ ಇದು ಜೋಗಯ್ಯ ಸಿನಿಮಾದ ಹಾಡಲ್ವೇ ? ಹೌದು ಮಾಸಾಮೀ ಇಲ್ಲಾ ಯಾರು ಇಲ್ಲಾ ಅಂಬೋದು, ಇತ್ತಿತ್ಲಾಗೆ ಇಂಥಾ ಮಚ್ಚಿನ ಹಾಡು ಇಸ್ಯಗಳೇ ಜನ[ಅ]ಪ್ರಿಯ ಅಂತಾರೆ ಕೆಲ್ವು ನಿರ್ದೇಸಕ್ರು. ನಿರ್ದೇಸ್ನ ಮಾಡಕಂತೂ ಯಾವುದೇ ಇಸ್ಕೂಲು ಕಾಲೇಜಿನ ದರ್ದಿಲ್ಲ ಬುಡಿ. ವೈನಾಗಿ ಹರ್ದ ಜೀನ್ಸು ನಾರ್ತಾ ಇರೋ ಟೀ ಸಲ್ಟು ಯೆಗಲ್ಮೇಲೊಂದು ಟರ್ಕಿ ಟವಲ್ಲು ಅಣೇಮೇಲೆ ಒಂದಷ್ಟ್ ನಾಮ ಇವಿದ್ರೆ ಸಾಕು! ಪುಟ್ಟಣ್ಣ ಕಣಗಾಲು ಎಂಬೊಬ್ಬ ’ಅಡ್ಡಕಸಬಿ’ ನಿರ್ದೇಸಕ ಇದ್ದಾ ನೋಡಿ ಆ ವಯ್ಯ ಹದೂ ಇದೂ ಅಂತೆಲ್ಲಾ ರಾಗಾ ಯೆಳಿತಾ ಇರ್ತಿದ್ದ. ಅದ್ಯಾರೋ ಕಾದಂಬ್ರಿಯಂತೆ ಕಥ್ಯಂತೆ....ಒಂದೆರಡಾ ಆ ವಯ್ಯಂಗೆ ಬೋ ವಯ್ಯಾರ ಸಿನ್ಮಾ ಮಾಡಕೆ. ರಾಮನವಮಿ ದಿನ ಕುರೀಕೋಳಿ ಕುಯ್ಯದ್ ವಸಿ ನಿಲ್ಸಿ ಕೋಸಂಬ್ರಿ ತಿಂದ್ಕಬುಟ್ಟು ಬೀಡೀ ಎಳೀತಿದ್ದ ನಮ್ ಹನೇಕ್ ನಿರ್ದೇಸಕ್ರುಗಳೆಲ್ಲಾ ಹೇನಾಗ್ಬೇಕು ಯೋಳಿ ನೀವೇಯ.

ಥೂ...ನಾವಿತ್ಲಾಗೆ ಕುರಿಕೋಳಿ ಸುದ್ದೀ ಯೋಳೂತ್ಲೂವೆ ಅವನ್ಯಾರೋ ಯೋಗರಾಜ್ ಭಟ್ನಂತೆ ಬಂದವ್ನೆ ಕರಡೀ ಕುಣೀಸ್ಕತಾವ ! ಹಾದೀ ಬೀದಿಲೆಲ್ಲಾ ಗಣೇಸ್ನ ಕುಂಡರ್ಸ್ಬುಟ್ಟು ’ಕುರಿಕೋಳಿ ಕುಯ್ಬೇಡಿ’ ಹಾಡು ಹಾಕಾವ ಅಂದ್ಕಂಡ್ರೆ ಈ ಜನೀಕ್ಕು ವಸಿ ತಲೆ ಇರ್ಬಾರ್ದ ? ಅದೆಂಥದೋ ಕತ್ಲಂತೆ ಕರಡ್ಯಂತೆ ಜಾಮೂನಂತೆ ! ನಾನೂ ಸುಮ್ನೇ ನಿಂತು ಕೇಳಿಸ್ಕತಾ ಇದ್ದೆ. ಇದೆಲ್ಲಾ ನಿಂಗೆ ಯಾರು ಯೋಳ್ಕೊಟ್ಟಿರಾದು ಅಂತಾ ಕೇಳ್ಕೋಬೇಕು ಅನ್ಕೊಳೋಸ್ಟ್ರಗೆ ’ಯಾವಾನಿಗ್ಗೊತ್ತು ? ’ ಅಂದ್ಬುಟ್ನೇ ಸಾಕತ್ಲಗೆ ಅಂತ ಮನೆಕಡೆ ಹೊಂಟೆ. ಸಿನ್ಮಾ ಮಂದಿಗೆ ಗಣೇಸ್ನ ಕಂಡ್ರೆ ಮಾಪ್ರೀತಿ ಅನ್ನುಸ್ತದೆ...ಯಾಕೆಂದ್ರೆ ನೀವೆಲ್ಲಾನಾ ನೋಡಿ ಗಣೇಸ್ ಯಾವ ಆಡು ಆಕದ್ರು ಬ್ಯಾಡ ಅನ್ನಂಗಿಲ್ಲ ! ಕೂತ್ಗಂಡು ಅಷ್ಟೂ ಹಾಡು ಕೇಳಿಶ್ಕತಾನೆ.

ಹೋಕ್ಕಳಿ ಬುಡಿ, ನಮ್ಮಲ್ಲಿ ಕಲಾಸಾಮ್ರಾಟ್ರು ಪ್ರೀತಿ ಯಾಕಾರು ಈ ಬೂಮಿಮೇಲದೆ ಅಂತೆಲ್ಲಾ ಕೇಳೋ ಒಳ್ಳೊಳ್ಳೆ ನಿರ್ದೇಸಕರವ್ರೆ. ಒಂದ್ ಕಿತಾ ಹೀರೋ ಮಚ್ ಇಡ್ಕಂಡ ಅಂದ್ರೆ ಅಂಗೆ ಎಲ್ರನೂ ಅಡ್ಡಡ್ಡ ಕತ್ತುರ್ಸಿ ಪೀಸ್ ಪೀಸ್ ಮಾಡೋವರ್ಗೂ ತೋರುಸ್ತಾರೆ. ನೆತ್ರು ಹರೀತದೆ ಯಂಗೆ ಅಂತೀರಾ ! ಅಂತದ್ನೆಲ್ಲಾ ಜನ ನೋಡ್ಬಕು. ಸಮಾಜ ಸುದಾರ್ಸ್ಬೋಕು ಅಂತಾನೆ ಅಸ್ಟೆಲ್ಲಾ ಖರ್ಚ್ ಮಾಅಡಿ ತೆಗೀತರೆ! ಕೆಲವ್ರಂತೂ ಕೋಟಿ ಕೋಟಿ ಸುರೀತರೆ ಅದೇನ್ ಸುಮ್ಕೇನಾ? ಕಾನಡಾ ಬಾಸೆ ಹುಳ್ಕಬೇಕು ಅಂದ್ರೆ ಕಾನಡಾ ಸಿನ್ಮಾ ಜನ ನೋಡ್ಬಕು ಹದ್ರಲ್ಲೂ ಮಚ್ಚು ಲಾಂಗು ಇರೋ ಸಿನ್ಮಾನೇ ನೋಡ್ಬಕು. ಈ ನಡ್ವೆ ಮಾದ್ಯಮದೋರು ರಾತ್ರಿ ರಕ್ತದ ಕಥೆ ಯೋಳೋದ್ನ ಸಲ್ಪ ಕಮ್ಮಿ ಮಡಗವ್ರೆ...ತಲೆಯಿಲ್ಲ ನನ್ಮಕ್ಳೂಗೆ. ಇಡೀ ದಿನ ದುಡ್ದ ರೈತಾಬಿ ಜನಿಕ್ಕೂ ಸೇರ್ದಂತೆಯ ಎಲ್ಲರ್ಗೂ ವಸಿ ಮಜಾತಗೊಳಕಾಯ್ತಿತು. ಬೋ ಒಳ್ಳೆ ಕಾರ್ಯಕ್ರಮಗೋಳ್ನ ಎತ್ಬುಟ್ಟು ಈಗೀಗ ಬರೀ ಹೆಂಡ್ತೀಗ್ ಹೊಡ್ದ ಕತೆ ಆಕ್ತರೆ. ಆ ದರ್ಸನ ಪಾಪ ಮಾಡಿದ್ದಾರು ಏನಪಾ ? ಹಿದೆಲ್ಲಾ ಮಾಮೂಲು. ಹೇಂಡ್ತಿದೀರು ಮಾತ್ ಕೇಳ್ದೇ ಇದ್ರೆ ಯೇನ್ ಮಾಡ್ಬೇಕೋ ಹದನ್ನೇ ಮಾಡವ್ನೆ. ಅಪ್ಪಂಗ ಹುಟ್ಟದ್ ಮಗ ಹವನು ಹದ್ಕೇಯ ಇಂದೆಮುಂದೆ ನೋಡ್ಡಲೆ ಇಕ್ಕವ್ನೆ. ಕಿವಿ ಹರದವ್ನೆ...ಅವನಾಗೋಕಾಗಿ ಅಸ್ಟಕ್ಕೇ ಬಿಟ್ಟ ಜರ್ ನಾನಾಗಿದ್ರೆ ಕತೆ ಬೇರೇನೇ ಆಯ್ತಿತ್ತು ಹೇನಂತೀರಾ ?

ಹೆಣ್ಮಕ್ಳು ಹಂದ್ರೇನು ವೈನಾಗಿ ಮನೆಗಿನೆ ಕಿಲೀನ್ ಮಾಡಿ, ಪಾತ್ರೆ-ಪಗಡೆ ಬೆಳಗ್ ಮಡೀಕಬುಟ್ಟು, ಒತ್ತೊತ್ಗೆ ಅನ್ನಾ-ಸಾರು ಮಾಡ್ಕೋತಾ ದೇವ್ರು ದಿಂಡ್ರು ಇವರ್ನೆಲ್ಲಾ ಮಾತಾಡ್ಸ್ಕೆಂಡು ಸುಮ್ಕೇರ್ಬೇಕು. ಅವರ್ಗೇನ್ ಖರ್ಚೀಗ್ ಕಮ್ಮೀ ಆಗ್ದಂಗೆ ಗಂಡ ಹಂಬೋನು ತಂದ ಆಕ್ತನಲ್ವಾ ? ಮುಗೀತು. ಮಿಕ್ದಂತೆ ಅವನೇನಾನಾ ಮಾಡ್ಕಂಡೋಗ್ಲಿ ಬುಡಿ. ಗಂಡ್‍ಗೆ ಚಟ ಯೆಣ್‍ಗೆ ಹಠ ಹಂತಾರಲ್ಲ ಅಂಗೇಯ ಆವಯ್ಯ ಆಚೆ ಓದ್ಮ್ಯಾಕೆ ಅವನ ಉಸಾಬರಿ ಎಲ್ಲಾ ಇವ್ರೂಗ್ಯಾಕೆ ಹಂತೀನಿ ? ತಿಂದು ಕೊಬ್ಬಿ ಸುಮ್ಕಿರೋಕಾಗ್ದೆ ಕ್ಯಾತೆ ತಗುದ್ರೆ ದರ್ಸನ ಮಾಡಿತ್ತರ ಅಲ್ಲ ಮತ್ತೂ ಬೇರೇನೆ ತರ ಆಯ್ತದೆ. ನೀವ್ ಯೋಳೂತ್ಲೂವೆ ನೆಪ್ಪಾಯ್ತು ಈ ಕಾರ್ಪೋರೇಟ್ರಗಳು ಅವ್ರಲ್ಲ ಅವರಂತಾ ಖದೀಮ್ರು ಬೇರೇ ಇಲ್ಲ. ಮೊನ್ನೆ ಮಲ್ಲೇಸ್ವರ್ದಗೆ ಆಡಹಗಲೇ ಜೋಗಯ್ಯನ ತರ್ದೋರು ಬಂದು ನಟರಾಜ ಅನ್ನೋನ ಮೇಲಕ್ಕಳುಸ್ಬುಟ್ರು. ಆವಯ್ಯ ಒಂದಿಬ್ರು ಉಡ್ಗೀರ್ನ ಬಾಳ ಪಿರೂತಿ ಮಾಡ್ತಿತ್ತಂತೆ. ಪೂರ್ವಾಸ್ರಮದಾಗೆ ಜೋಗಯ್ಯನೇ ಹಾಗಿದ್ದ ಪಾಲ್ಟಿ ಹದು! ಇಲೆಕ್ಸನ್ನಾಗೆ ಗೆದ್‍ಮೇಲೆ ಸಲ್ಪ ದೊಡ್ ಕುಳ ಅಂದ್ಕಬುಟ್ಟಿತ್ತು. ತನ್ನ ಜೊತೀಗೆ ಮಾಮೂಲಿ ವಸೂಲಿಗೆ ಓಡಾಡ್ತಾ ಇದ್ದ ಮನೀಷನ್ನ ತನ್ ಮನೆ ಕಕ್ಸ ಬಾತ್ರೂಮು ತೊಳ್ಯಕೆ ಮಡಗಿತ್ತು. ಆವಯ್ಯಂಗೆ ಬಾಳ ಕೋಪಬಂದಿತ್ತಾ ಹದು ಹೀ ರೀತಿ ತೀರಿಸ್ಕೋತು ಹಂತವ್ರೆ ಹಲ್ಲೀ ಜನ. ಹಿನ್ ಕೆಲವೇ ದಿನ್ದಲ್ಲಿ ಈ ಕತೆ ಸಿನ್ಮಾ ಆತದೆ. ನಮ್ ಕ್ಯಾತ ನಿರ್ದೇಸಕರೊಬ್ರು ಹೀಗ್ಲೇ ಸ್ಕೆಚ್ ಆಕ್ಯವ್ರೆ! ’ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಅವನ್ನಾ’ ಆಡು ಇದಕ್ಕೇ ಕರೆಕ್ಟಾಗಿ ಮ್ಯಾಚಾಯ್ತಿತು ಹಾದ್ರೆ ಹಾಗ್ಲೇ ಬಳಸ್ಬುಟ್ಟವ್ರೆ. ಅದರಪ್ಪನಂತಾ ಬೇರೇ ಆಡು ಬರೀತರೆ ಬುಡಿ.

ಪ್ರೇಕ್ಸಕ್ರು ನೀವಾರ ವಸಿ ಯೋಳ್ಬಾರ್ದಾ ? ’ಬೆಟ್ಟದ ಜೀವ’ ’ಮುಂಗಾರು ಮಳೆ’ ಈ ತರಾ ಡಬ್ಬಾ ಸಿನ್ಮಾ ಮಾಡ್ತರೆ ನಮ್ ಕೆಲು ನಿರ್ದೇಸಕ್ರು...ಥೂ ....ನೋಡಕೆ ಬೇಜಾರಪ್ಪ. ೫೦ ರೂಪಾಯಿ ಕೊಟ್ಟೋದ್ರೆ ಬರೀ ವೇಶ್ಟು. ಸಿನ್ಮಾ ಹಂದ್ಮೇಲೆ ಒಂದಸ್ಟ್ ಪೈಟಿಂಗು ಹದೂ ಇದೂ ಹಿರ್ಲೇಬೇಕು. ಬೆಳ್ಬೆಳಿಗ್ಗೆ ಯೆದ್ದು ರಡಿಯೋ ಆಕುದ್ರೆ ಕುರೀಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲ ಅಂದೇಟ್ಗೆ ನೆಪ್ಪಾಗೋತದೆ --ಓ ಹಿವತ್ತು ಕುಯ್ಬಾರ್ದು ಹಂತವ! ಅದೊಂತರ ಅಲಾರಾಮು ಕಣ್ರಪ್ಪ. ನೀವೊಪ್ಕಳಿ ಬಿಡಿ ಹಿನ್ಮುಂದೆಲ್ಲಾ ಇಂತದ್ಕೇ ಡಿಮೇಂಡು ಜಾಸ್ತಿ ಆತದೆ! ಜನ ಬೋ ಪ್ರೀತಿಯಿಟ್ಟು ನೋಡ್ತರೆ. ಒಂದ್ಸಲ ಟೀವಿನಾಗೆ ಒಬ್ಬಾತ ನಾಕಾರು ಮದ್ವೆ ಎಂಗಾದ ಅಂಬೋ ಕತೆ ತೋರ್ಸುದ್ರಾ ಅದರ್ನಂತ್ರ ಒಂದೆರಡೇ ತಿಂಗ್ಳಾಗೆ ಹಿನ್ನೊಬ್ಬ ಸಿಕ್ಕಾಕಬಿದ್ದ. ಕೇಳುದ್ರೆ ನಾನು ಆ ದಿನ ಟೀವಿನಾಗೆ ಇಂಗ್ ಮಾಡ್ಬೌದು ಅಂತ ಕಂಡಿದ್ದೆ...ಯೇನೋ ಮಾಡನ ಅನ್ನುಸ್ತು ಮಾಡ್ಬುಟ್ಟೆ.....ತಪ್ಪಾಗ್ಬುಟ್ಟದೆ ಕ್ಸಮ್ಸಿ ಹಂತಾವ ಎಸ್ಟ್ ಒಳ್ಳೆ ರೀತಿನಾಗೆ ಕೇಳ್ದ ಅಂತೀರಿ ! ಇಂಗೇ ಮಾದ್ಯಮದೋರು ಸಿನ್ಮಾದೋರು ಇಂತಿಂತಾ ಕಥೆಗೋಳ್ನ ತೋರುಸ್ತಾ ಇದ್ರೆ ಮನ್ಸ್ರು ಪಾಟ ಕಲೀತರೆ.

ಹದ್ಯಾರೋ ಬತ್ತವ್ರಲ್ಲ .......... ಓ ಅಂತಾದ್ದೇನಿಲ್ಲ ಬುಡಿ....ನನ್ ಬದ್ಕೇಯ. ಹದೇಯ ನಿಮಗ್ಗೊತ್ತಾಯಾಕಿಲ್ಲ ನನ್ನೆಂಡ್ರ ಪಿರುತಿ ಅಸ್ಟ ಸಾಕಾಯ್ತಿರಲಿಲ್ಲ...ಹದ್ಕೇ ಹಿಲ್ಲೇ ಬೂದಿಪಾಳ್ಯದಾಗೆ ಈ ನನ್ನ್ ಬದ್ಕೀಗೆ ಮನೆಮಾಡ್ಕೊಟ್ಟಿವ್ನಿ. ಆಗೀಗ ಅಂಗ ಬಂದ್ ಬ್ಯಾಟ್ರಿ ಚಾರ್ಜ್ ಮಾಡ್ಕೆಂಡು ಇಂಗ ಒಂಟೋಯ್ತಿನಿ. ಇವಳ್ಗೂ ನನ್ಕಂಡ್ರೆ ಬೋ ಆಸೆ ಬುಡಿ. ನಾ ಯೋಳಿದ್ದೆಲ್ಲಾ ಮಾಡ್ತದೆ ಕಣ್ರಪ್ಪ. ಇನ್ನೊಂದ ಹತ್ ವರ್ಸ ಯೇನ್ ತೊಂದ್ರೆ ಇರಾಂಗಿಲ್ಲ. ಆಮೇಲಿದ್ಯಾವೋನಗ್‍ಬೇಕು ? ಇನ್ನೂ ಒಂದ್ ಎಳಸು ಮಾಡ್ಬೇಕಾಗಿತು ಯಾವ್ದೂ ಸೆಟ್ಟಾಗ್ಲಿಲ್ಲ ! ಶಾನೆ ಸಮ್ಯ ಆಗೋಯ್ತು. ಹಿನ್ಮುಂದೆ ಸೋಮ್ವಾರ ಶನ್ವಾರ ಯಾವ್ದೇ ಪಾಲ್ಟಿ ಗೀಲ್ಟಿ ಇರಂಗಿಲ್ಲ...ನೆಪ್ಪಿಟ್ಗಳಿ...ಬರ್ಲಾ? ಇಂಗೇ ಸಮ್ಯ ಸಿಕ್ದಾಗ ಸಿಗುಮು.

Saturday, October 8, 2011

ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!


ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!

ಮತ್ತೂರು ಕೃಷ್ಣಮೂರ್ತಿಗಳು ದಿವಂಗತರು ಎಂಬ ಸುದ್ದಿ ಕೇಳಿಬಂದಿದ್ದು ವಿಜಯದಶಮಿಯ ಬೆಳ್ಳಂಬೆಳಿಗ್ಗೆಯ ೯ ಗಂಟೆಯ ವಾರ್ತೆಯಲ್ಲಿ. ನಾವೆಲ್ಲಾ ಹಬ್ಬದ ಸಡಗರದಲ್ಲಿ ಮೈಸೂರಿನ ಜಂಬೂಸವಾರಿ, ೯ ದಿನಗಳ ಮಟ್ಟಿಗೆ ಗತವೈಭವ ಮರುಕಳಿಸುವ ಈಗಿನ ಅರಸರ ಭಾಗ್ಯ, ಶೃಂಗೇರಿ-ಕೊಲ್ಲೂರು ಮುಂತಾದ ಕ್ಷೇತ್ರಗಳಲ್ಲಿನ ಉಪಾಸನಾ ವೈಖರಿ ಇವುಗಳ ಬಗ್ಗೆ ಕುತೂಹಲಿಗಳಾಗಿ ಮಾಧ್ಯಮವಾಹಿನಿಗಳನ್ನು ಅವಲೋಕಿಸುತ್ತಾ ಕುಂತಾಗಲೇ ಈ ವಿಷಯ ತಿಳಿಯಿತು. ಹಳ್ಳಿಯ ಮೂಲೆಯ ಬಡ ಹುಡುಗನೊಬ್ಬ ವಾರಾನ್ನವನ್ನುಂಡು ಸಂಸ್ಕೃತವನ್ನು ಕಲಿತು ಬೆಂಗಳೂರು ಸೇರಿ ಭಾರತೀಯ ವಿದ್ಯಾಭವನದ ನಿರ್ದೇಶಕರ ಸಾಲಿಗೆ ಸೇರುವ ಎತ್ತರಕ್ಕೆ ಬೆಳೆದಿದ್ದು, ಪದ್ಮಶ್ರೀ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಪಡೆದಿದ್ದು ಎಲ್ಲವೂ ನೆನಪಾದವು. ಸಂಸ್ಕೃತಗ್ರಾಮವೆಂದೇ ಖ್ಯಾತವಾದ ಶಿವಮೊಗ್ಗೆಯ ಮತ್ತೂರಿನಲ್ಲಿ ಜನಿಸಿದರೂ ಬ್ರಿಟಿಷರ ಕಾಲದಲ್ಲಿ ಅಲ್ಲೆಲ್ಲಾ ಬಡತನವೇ ಹಾಸುಹೊಕ್ಕಾಗಿತ್ತು.

ಸಹಜವಾಗಿ ರಾಜಾಶ್ರಯ ತಪ್ಪಿದ ಹಲವು ಬ್ರಾಹ್ಮಣ ವರ್ಗಗಳಲ್ಲಿ ಒಂದಾದ ಸಾಂಕೇತಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹುಡುಗನಿಗೆ ಅಧ್ಯಯನ ಮತ್ತು ಅಧ್ಯಾಪನಗಳೇ ಹಿಡಿಸಿದವು. ಉದರಂಭರಣೆಗಾಗಿ ಖಾಸಗೀ ಬಸ್‍ಕಂಡಕ್ಟರ್ ಆಗಿ ಕೆಲವುಕಾಲ ಕೆಲಸಮಾಡಿದರೂ ಮಾನಸಿಕ ಹಸಿವು ಭರಿಸುವುದಕ್ಕೆ ಅಥವಾ ಮನೋದರಂಭರಣೆಗೆ ಮಾಡುವ ಆವೃತ್ತಿ ಹಿಡಿಸುತ್ತಿರಲಿಲ್ಲ. ’ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ’ ಎಂದ ದಾಸವಾಣಿಯಂತೇ ಬದುಕಿನಲ್ಲಿ ಬೇರೇಯದನ್ನೇ ಬಯಸಿದ ವ್ಯಕ್ತಿ ಕೃಷ್ಣಮೂರ್ತಿಗಳು. ಅಲ್ಲಲ್ಲಿ ಉನ್ನತಮಟ್ಟದ ವ್ಯಾಖ್ಯಾನಗಳನ್ನು ನಡೆಸಿಕೊಡುತ್ತಿದ್ದ ಅವರ ಉಪನ್ಯಾಸಗಳನ್ನೂ, ಅರ್ಥವಿವರಣೆಗಳನ್ನೂ ಸ್ವತಃ ಕಂಡ ನಟ ಶ್ರೀನಾಥ್ ಹಿಂದಕ್ಕೆ ಉದಯ ವಾಹಿನಿಯ ನಿರ್ವಾಹಕ ಮುಖ್ಯಸ್ಥರಾಗಿದ್ದಾಗ ಕೃಷ್ಣಮೂರ್ತಿಗಳಲ್ಲಿ ಒಂದು ಬೇಡಿಕೆ ಇಟ್ಟರಂತೆ. ಅದರ ಫಲವಾಗಿ ಉದಯವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಮಹಾಭಾರತದ ವ್ಯಾಖ್ಯಾನ ನಡೆಯಿತು. ಗಮಕ ವಿದ್ವಾನ್ ಹೊಸಳ್ಳಿ ಕೇಶವಮೂರ್ತಿ ಮತ್ತು ಮತ್ತೂರು ಕೃಷ್ಣಮೂರ್ತಿ -ಈ ಮೂರ್ತಿದ್ವಯರ ಸಾಂಗತ್ಯ ಬೆಳಗಿನ ಅರ್ಧಗಂಟೆ ಕನ್ನಡ ಸಾರಸ್ವತಲೋಕದ/ಭಾವುಕ ಜನರ, ವಿದ್ವಾಂಸರ ಮನೋರಂಜನೆಗೆ ಕಾರಣವಾಗಿತ್ತು. ಕುಮಾರವ್ಯಾಸ ಭಾರತದ ಕಥಾಮಾಲಿಕೆ ಹರಿದು ಬರುವಾಗ ಸಮಯಾನುಕೂಲವುಳ್ಳ ಬಹಳಜನ ಅದನ್ನು ಇಷ್ಟಪಟ್ಟು ನೋಡುತ್ತಿದ್ದರು.

ಹಲವು ಜನರೊಡನೆ ಬೆರೆತು, ದೇಶವಿದೇಶಗಳಲ್ಲಿ ಸಂಚರಿಸಿ ಉಪನ್ಯಾಸಗಳನ್ನು ನೀಡಿ, ೭ ಭಾಷೆಗಳಲ್ಲಿ ಪ್ರೌಢಿಮೆ ಸಾಧಿಸಿ, ಇತಿಹಾಸದ ಪುಟಗಳನ್ನು ಸೇರಬೇಕಿದ್ದ ಕೆಲವು ಶಾಲೆಗಳನ್ನು ಊರ್ಜಿತಗೊಳಿಸಿ, ನವೀಕರಿಸಿ, ಹೊಸದಾಗಿ ಒಂದೆರಡು ಶಾಲೆಗಳನ್ನೂ ಆರಂಭಿಸಿ ಸಮಾಜಕ್ಕೆ ಈ ರೀತಿಯಲ್ಲಿ ಸೇವೆಮಾಡಿದವರು ಕೃಷ್ಣಮೂರ್ತಿಗಳು. ಇದು ಅವರಿಗೆ ನನ್ನ ಭಾವನಮನ. ಇವರಂತಹ ಆದರ್ಶ ಜನ ಇವತ್ತಿನಲ್ಲಿ ಕಡಿಮೆ ಇದ್ದಾರೆ. ಆಡಂಬರವನ್ನೇ ಆಲಿಂಗಿಸಿಕೊಂಡ, ಅಹಂಕಾರವೇ ಮೈವತ್ತ ಅನೇಕ ವಿದ್ವನ್ಮಣಿಗಳಿದ್ದಾರೆ. ಅಂಥವರಲ್ಲಿ ವಿದ್ವತ್ತಿಗಿಂತ ಅವರ ’ಮಣಿ’ಗಳೇ ಎದ್ದು ಕಾಣುತ್ತವೆ! ಅಂಥವರ ಮಧ್ಯೆ ಇಂಥವರೂ ಅಲ್ಲಲ್ಲಲ್ಲಲ್ಲಿ ಇದ್ದಾರೆ ಎಂಬುದನ್ನು ತೆಗೆದುಹಾಕುವ ಹಾಗಿಲ್ಲ.

ದಸರೆಯ ಮರುದಿನ ಅಂದರೆ ನಿನ್ನೆ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ಸಂಚರಿಸುವಾಗ ಟ್ರಾಫಿಕ್ ಸಿಗ್ನಾಲ್‍ನಲ್ಲಿ ನನ್ನ ವಾಹನ ನಿಲ್ಲಿಸಿಕೊಂಡೆ. ೬ ವರ್ಷದ ಚಿಕ್ಕ ಹುಡುಗ ಗಿಜಿಗುಡುವ ಹಲವು ವಾಹನಗಳ ಜಂಗುಳಿಯ ಮಧ್ಯೆ ಓಡೋಡಿ ಬೇಡುತ್ತಿದ್ದ. ಇನ್ನೇನು ಹಸಿರು ನಿಶಾನೆ ಬಂದರೆ ಆತ ಯಾವುದದರೂ ವಾಹನದ ಚಕ್ರಕ್ಕೆ ಸಿಲುಕಬಹುದೇ ಎಂಬ ಆತಂಕ ನನ್ನಲ್ಲಿತ್ತು. ಆದರೆ ಆತನಿಗೆ ಅದ್ಯಾವ ಭಯವೂ ಇದ್ದಿರಲಿಲ್ಲ. ಜನ್ಮಕೊಟ್ಟ ಅಪ್ಪ-ಅಮ್ಮ ಹೇಳಿಕೊಟ್ಟು ಹೆದರಿಸಿ ಬೇಡುವಂತೇ ಮಾಡಿದರೋ ಅಥವಾ ಯಾವುದೋ ಕಾಣದ ಧೂರ್ತ ಇಂತಹ ಮಕ್ಕಳನ್ನು ಹೀಗೆಲ್ಲಾ ದುಡಿಸಲು ತೊಡಗಿದ್ದಾನೋ ತಿಳಿಯಲಿಲ್ಲ. ಮನದತುಂಬ ಹಲವು ಭಾವನೆಗಳ ಅಲೆಗಳು ಎದ್ದವು. ನಾವು ಕೊಡಬಹುದಾದ ಒಂದು ನಾಣ್ಯ ಆತನ ಜೀವನಕ್ಕೇನೂ ಸಾಲುವುದಿಲ್ಲ, ಆದರೆ ಅವನಂತಹ ಅಸಂಖ್ಯ ಮಕ್ಕಳು ಇದೇ ರೀತಿ ರಸ್ತೆಗಳ ಬದಿಯಲ್ಲಿ ಡೊಂಬರಾಟ ತೋರಿಸುತ್ತಾ, ಇನ್ನೇನೋ ಮಾರುತ್ತಾ ಅಲ್ಲಲ್ಲಿ ಕಾಣಸಿಗುತ್ತಾರೆ. ಬಾಲ್ಯದ ಆಡುವ ವಯಸ್ಸಿಗೇ ಸ್ವಯಂ ಬಾಲಕಾರ್ಮಿಕರಾಗಿದ್ದಾರೆ; ಇಲ್ಲದಿದ್ದರೆ ಅವರಿಗೆ ಹೊತ್ತಿಗೆ, ತುತ್ತಿಗೆ ಕಾಸಿಲ್ಲ!

ನಮ್ಮಗಳ ಮನೆಯಲ್ಲಿ ಒಂದನ್ನೇ ಹಡೆಯುತ್ತೇವೆ, ಹಲವು ರೀತಿಯಲ್ಲಿ ಪ್ರಯತ್ನಿಸಿದರೂ ಊಟಮಾಡಿಸುವುದೇ ಒಂದು ಯಜ್ಞ. ಅದಕ್ಕೇ ಇರಬೇಕು ನಮ್ಮೂರಲ್ಲೊಂದು ಗಾದೆ-’ಕಂಡು ಸಾಕಿದ ಎಮ್ಮೆಯ ಕಣ್ಣು ಕುರುಡು’ ಎಂಬುದಾಗಿ. ವಯೋಮಾನದಲ್ಲಿ ಚಿಕ್ಕವರು ಮಾಡಲು ಕಷ್ಟವದುದನ್ನು ಹೊಟ್ಟೆಪಾಡಿನ ಅನಿವಾರ್ಯತೆಗೆ ಮಾಡುವ ಆ ಕಂದಮ್ಮಗಳಿಗೂ ಹೊತ್ತಿಗೆ ನಿಮಗೇನೂ ಕೊರತೆಮಾಡುವುದಿಲ್ಲ ತಿಂದುಂಡು ಸುಖವಾಗಿರಿ ಎಂದರೂ ರಂಪಮಾಡುತ್ತಾ ಮಾಧ್ಯಮಗಳ ಕಾರ್ಟೂನುಗಳಿಗಂಟಿಕೊಳ್ಳುವ ನಮ್ಮ ಮಕ್ಕಳಿಗೂ ತುಲನೆಮಾಡಿಕೊಂಡೆ. ಎಂತಹ ವಿಪರ್ಯಾಸ ನೋಡಿ: ಅಲ್ಲಿಗೂ ಇಲ್ಲಿಗೂ ಅಜಗಜಾಂತರ, ’ಪರಿಸ್ಥಿತಿ ಮನುಷ್ಯನನ್ನು ನಿರ್ಮಿಸುತ್ತದೆ’ ಎಂಬುದು ಸುಳ್ಳಲ್ಲ.

ಕೊನೆಯದಾಗಿ ನಿನ್ನೆಯ ಸಾಯಂಕಾಲದ ಒಂದು ಘಟನೆ. ಪತ್ನೀಪೀಡಕನಾಗಿ ಜೈಲು ಸೇರ್‍ರಿದ್ದ ಕನ್ನಡದ ನಟ ದರ್ಶನನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಆತನ ಮನೆಹತ್ತಿರ ಜಮಾಯಿಸಿಬಿಟ್ಟರಂತೆ! ಪಟಾಕಿ ಹಚ್ಚಿದರಂತೆ, ಕೇಕು ತಂದರಂತೆ. ಇಂತಹ ಅಭಿಮಾನಿಗಳೆಲ್ಲಾ ಪೊರ್ಕಿಜನ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ. ಅಂತಹ ಜನರನ್ನು ಹಾಗೆ ಕಲೆಹಾಕಲು ನಟನಟಿಯರಿಗೆ ತಗಲುವ ಖರ್ಚು ಸುಮಾರು ಜಾಸ್ತಿಯೇ ಇರಬಹುದು! ಆದರೂ ಸಮಾಜದಲ್ಲಿ ಏನೂ ಬಿಲ್ಡಪ್ ತೋರಿಸದಿದ್ದರೆ ವರ್ಚಸ್ಸಿಗ್ಗೇ ಕಮ್ಮಿ ಎಂಬ ಅಂತ[ಸ್ತು]ರಂಗದ ಅನಿಸಿಕೆಯಿಂದ ಸಹೋದರನಿಗೋ ಇನ್ನಾರಿಗೋ ಹೇಳಿ ಹೀಗೆ ಮಾಡಿಸಿರಬಹುದು ಬಿಡಿ. ಎಲ್ಲಾರಂಗಗಳೂ ಗಬ್ಬೆದ್ದು ನಾರುವಾಗ ಮೊದಲೇ ವೇಷಧಾರಿಗಳಾಗಿ ವಿಜೃಂಭಿಸುವ ಸಿನಿಮಾರಂಗದಲ್ಲಿರುವವರ ನಾಟಕ, ವೇಷ, ರಾಜಕೀಯ, ರುಷುವತ್ತು ಇವುಗಳ ಬಗ್ಗೆ ಬರೆಯುವಾತನಿಗೆ ನಿತ್ಯವೂ ಒಂದಿಲ್ಲೊಂದು ಸುದ್ದಿ ದೊರೆಯಬಹುದು.

ಸಮಾಜ ವಿಚಿತ್ರವಾಗಿದೆ. ದರ್ಶನ್ ಮಾಡಿದ ಕೆಲಸವನ್ನು ಇನ್ಯಾರೋ ಶ್ರೀಸಾಮಾನ್ಯ ಮಾಡಿದರೆ ಜನತೆ ಕ್ಷಮಿಸುತ್ತಿರಲಿಲ್ಲ. ಯಾವ ಹೆಂಡತಿಗೂ ಕೊಟ್ಟ ದೂರನ್ನು ಮರಳಿಪಡೆಯುವ ಒತ್ತಡ ಅಷ್ಟಾಗಿ ಬರುತ್ತಿರಲಿಲ್ಲ! ಖೈದಿಯಾಗಿ ಒಮ್ಮೆ ಒಳಸೇರಿ ಹೊರಬಂದಮೇಲೆ ಮನೆಯವರನ್ನುಳಿದು ಯಾರೂ ಆತನನ್ನು ಸ್ವಾಗತಿಸುವ ಮನೋಸ್ಥಿತಿ ಉಳ್ಳವರಾಗಿರುವುದಿಲ್ಲ. ಖರ್ಚಿಗೆ ಕೊಟ್ಟು ಕರೆದರೂ ಬರುವುದಿಲ್ಲ! ಅದೇ ನಟನೊಬ್ಬ ಅಥವಾ ರಾಜಕಾರಣಿಯೊಬ್ಬ ಮಾಡಿದ ಅಪರಾಧಗಳು ಆಗಸದಲ್ಲಿ ಮಿಂಚು ಮಿಂಚಿ ಮರೆಯಾದಹಾಗೇ ಗುಡುಗಿ ಮಳೆಸುರಿಸದೇ ಸುಮ್ಮನಾಗುವ ಕೆಲವು ಮೋಡಗಳ ಹಾಗೇ ಏನೂ ನಡೆದೇ ಇಲ್ಲವೆಂಬ ರೀತಿ ಮಾಯವಾಗಿಬಿಡುತ್ತವೆ. ಈ ದಿಸೆಯಲ್ಲಿ ಅಧಿಕಾರಶಾಹಿಯಾದ ಬೀಜೇಪಿಯ ಉಡುಪಿ ಶಾಸಕ ರಘುಪತಿ ಭಟ್ಟ ಒಬ್ಬಾತ ಧುತ್ತನೇ ಕಾಣುತ್ತಾನೆ. ಹೋದ ಹೆಂಡತಿ ಹೋದಳು-ಇರುವಶಾಸಕನಿಗೆ ಜೀವದಾನ ಕೊಡಿ ಎಂದು ಮೇಲ್ದರ್ಜೆಯ ರಾಜಕಾರಣಿಗಳು ಉಸುರಿದರೇ ? ಗೊತ್ತಿಲ್ಲ.

ಸದಾ ಹೊಸಬಟ್ಟೆಯಲ್ಲೇ ಮಿರುಗಿತ್ತಿದ್ದ ಸಭೆಗಳಲ್ಲಿ ಸಮಾಜಕ್ಕೆ ಸದ್ಬೋಧನೆಗೈತಿದ್ದ ಹಾಲಪ್ಪನೆಂಬ ಮಂತ್ರಿ , ಸಿನಿಮಾರಂಗದಲ್ಲಿ ಮಸಲ್ ಪೂರಿ ಸಿನಿಮಾ ಗೀತಸಾಹಿತ್ಯವನ್ನು ಬರೆದು ಇಂದಿನ ಯುವ ಜನಾಂಗಕ್ಕೆ ಬೇಕಾದ್ದನ್ನೇ ಕೊಡುತ್ತಿರುವ ಯೋಗರಾಜ ಭಟ್ಟರ ’ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದುರೀ’ ಹಾಡಿಗೆ ತಕ್ಕವನಾದ ಜಯಲಕ್ಷ್ಮೀ ಹೃದಯಾಂತರ್ಗತ ’ಜಗದ್ಗುರು ನರ್ಸ್ ರೇಣುಕ’ ಇನ್ನೂ ನೇಪಥ್ಯದಲ್ಲಿ ಖಾಯಂ ಪರಸ್ತ್ರೀಯರ ಶೀಲವನ್ನೇ /ಮೈಸುಖವನ್ನೇ ಮೇಯುತ್ತಿರುವ ಬಹುತೇಕ ರಾಜಕಾರಣಿಗಳು, ಸಿನಿಮಾ ರಂಗದ ದಿಗ್ಗಜ, ಆಗಜ ಈಗಜ, ಗಜ ಎಲ್ಲಾ ತೆರನಾದ ಗಜಗಳು ಇವರುಗಳನ್ನೆಲ್ಲಾ ನೆನಪಾದಾಗ ಸಾಮಜಿಕ ಸ್ವಾಸ್ಥ್ಯ ಎಂಬುದು ಬರೀ ಕಲ್ಪನೆಯೇ ಅಥವಾ ವಾಸ್ತವವೇ ಎಂಬ ಇಬ್ಬಂದಿತನ ಕಾಡುತ್ತದೆ.

ಮನುಷ್ಯ ಸಹಜವಾಗಿ ತಪ್ಪು ಮಾಡುತ್ತಾನೆ-ಸಮಾಜ ಅದನ್ನು ಕ್ಷಮಿಸಬೇಕು ಎನ್ನುವ ಹಲವರಲ್ಲಿ ನನ್ನದೊಂದು ಸಣ್ಣ ಪ್ರಶ್ನೆ, ಮನುಷ್ಯ ತಪ್ಪುಮಾಡದಿರಲಿ ಎಂಬ ಕಾರಣಕ್ಕೆ ನಮ್ಮ ಪೂರ್ವಜರು ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಬರೆದರು ಮತ್ತು ಅವುಗಳಲ್ಲಿ ತಮ್ಮಕಾಲಘಟ್ಟದ ಜೀವನಾನುಭವಗಳನ್ನು ಕಥೆಗಳನ್ನಾಗಿ ಉಪಕಥೆಗಳನ್ನಾಗಿ ಜೋಡಿಸಿದರು ಅಲ್ಲವೇ ? ಅವುಗಳನ್ನು ಓದುವ ವ್ಯವಧಾನ ಸಮಾಜದ ಮುಖಂಡಿರಿಗಿದೆಯೇ ? ಮಹತ್ವಾಕಾಂಕ್ಷಿಗಳಾಗಿ ದಿಲ್ಲಿ ಸರಕಾರದಲ್ಲೇ ಮಹೋನ್ನತ ಸ್ಥಾನವನ್ನು ಬಯಸುವವರು ಯಾರನ್ನೋ ಬಿಟ್ಟು ’ಮಹಾನ್ವೇಷಣ’ ಬರೆಸುತ್ತಾರೆ-ಬರೆದವರಿಗಾಗಲೀ ಬರೆಸಿದವಗಾಗಲೀ ಅದರ ತಲೆಬುಡ ಗೊತ್ತಿರುವುದಿಲ್ಲ! ಕೆಟ್ಟುಹೋದ ಸಮಾಜದಲ್ಲಿ ಮುಂದಾದರೂ ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತೆ ಚಿಗುರಲಿ ಎಂಬ ಕಾರಣಕ್ಕಾಗಿ. ವಿಜೃಂಭಿಸುತ್ತಿರುವ ವಿದೇಶೀ ಸಂಸ್ಕೃತಿಯ ಕೊಡೆಯಾದ ಲಿವ್-ಇನ್, ಒನ್ ನೈಟ್ ಸ್ಟೇ, ಡೇಟಿಂಗ್ ಮುಂತಾದ ಅನೈತಿಕ ಸಂಪರ್ಕ-ಸಂಬಂಧಗಳು ನಾಶವಾಗಲಿ ಎಂಬ ಕಾರಣಕ್ಕಾಗಿ, ಪರೀಕ್ಷೆಗಳಲ್ಲಿ ಮತ್ತು ಜೀವನದಲ್ಲಿ ಹತಾಶೆಯಿಂದ, ನಿರಾಸೆಯಿಂದ, ನೋವಿನಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಅಧಃಪತನಕ್ಕೆ ಇಳಿಯುವ ಜನರನ್ನು ಉದ್ದೇಶಿಸಲಾಗಿ ಕೆಲವು ಮಠಮಾನ್ಯಗಳು ಭಾರತೀಯ ಮೂಲದ್ದಾಗಿ ವಿಶ್ವವೇ ನಿಬ್ಬೆರಗಾಗಿ ಓದುವ ಬೌದ್ಧಿಕ ತರಬೇತಿ ಗ್ರಂಥ ’ಭಗವದ್ಗೀತೆ’ಯನ್ನು ಬೋಧಿಸಲು ಮುಂದಾದರೆ ರಾಜಕೀಯದ ಕೊಳಕರು ಅದರ ವಿರುದ್ಧ ಜನಾಂಗಗಳನ್ನು ಎತ್ತಿಕಟ್ಟುತ್ತಾರೆ; ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ ! ಇದು ಇಂದಿನ ಜೀವನದ ಮತ್ತೊಂದು ಮಜಲು.

ಮಾನಸಿಕ, ದೈಹಿಕ ಹಲವು ನೋವುಗಳನ್ನು ಸಹಿಸಿಯೂ ಕುಟುಂಬ ಒಡೆಯದಿರಲಿ, ತನ್ನ ಮಗನ ಭವಿಷ್ಯ ಹಾಳಾಗದಿರಲಿ, ತನ್ನಿಂದ ತನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸಿದವನ ಕಲಾಬದುಕಿನ ಭವಿಷ್ಯ ಕೆಡದಿರಲಿ ಎಂಬ ಕಾರಣಕ್ಕೆ ಭಾರತೀಯತೆಯನ್ನು ಮೆರೆದ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರಿಗೆ ನನ್ನದೊಂದು ಸಲಾಮು. ತನ್ನ ನೋವನ್ನೆಲ್ಲಾ ನುಂಗಿ ತಾನು ತಿರುಗಿ ಬಿದ್ದಿದ್ದೇ ಸುಳ್ಳೆಂದು ವಾದಿಸುತ್ತಾ ಯಾವುದೋ ವಿಷಮ ಘಳಿಗೆ ನಮ್ಮ ಬದುಕಿನಲ್ಲಿ ಘಟಿಸಿಹೋಗಿದೆ, ಅದನ್ನೆಲ್ಲಾ ಮರೆತಿದ್ದೇವೆ ಮತ್ತೆ ಒಂದಾಗಿ ಬದುಕುತ್ತೇವೆ ಎಂಬ ಅವರ ಮನೋವೃತ್ತಿಗೆ ಎಂತಹ ತಾಕತ್ತಿರಬೇಕು ಅನಿಸಿತು, ಅವರ ಕ್ಷಮಾಗುಣದ ಅರಿವಾಯಿತು. ಬಣ್ಣದ ರಂಗದಲ್ಲಿರುವ ಬಹುತೇಕರ ಹಿಂದೆ ಸದಾ ಅಪಸ್ವರಗಳು ಕೇಳುತ್ತಲೇ ಇರುತ್ತವೆ. ಅವು ಬೆಂಕಿಯಿರದೇ ಎದ್ದ ಹೊಗೆಯ ಸುರುಳಿಗಳಲ್ಲ! ಕೆಲವು ಆರುತ್ತವೆ; ಮತ್ತೆ ಕೆಲವು ಮುಂಬರುವ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರತಿಫಲನಗೊಳ್ಳುತ್ತವೆ!

ಮನುಷ್ಯನ ಬದುಕಿಗೆ ಕಲಾವಿದರು, ನಟನಟಿಯರು, ಸಂಗೀತಜ್ಞರು, ವಿದ್ವಾಂಸರು ಮಾದರಿಯೆನಿಸುತ್ತಾರೆ ! ಆ ಯಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಆ ಜನ ಕಚ್ಚೆಹರುಕರಾಗಿದ್ದರೆ ಸಮಾಜಕ್ಕೆ ಅವರಿಂದ ದುಷ್ಪರಿಣಾಮ ಉಂಟಾಗುತ್ತದೆ. ಪ್ರತಿಭಾವಂತರಬೇಕರು ಕೆಲವೊಮ್ಮೆ ಮಾನಸಿಕ ಉದ್ವಿಗ್ನರೂ ಒಂಥರಾ ಹುಚ್ಚರೂ ಆಗಿರುತ್ತಾರೆ. ಕೆಲವು ಸಂಗೀತಗಾರರ ಕೂದಲು, ದಿರಿಸುಗಳನ್ನು ಗಮನಿಸಿ! ಯಾಕೆ ಅವರೂ ಮನುಷ್ಯರಲ್ಲವೇ ಅನಿಸುತ್ತದೆ ತಾನೇ ? ನಾವು ಶ್ರೀಸಾಮಾನ್ಯರು, ಯುವಜನಾಂಗ ಇನ್ನಾದರೂ ತಿಳಿಯಬೇಕು ಏನೆಂದರೆ ಇಂತಹ ಯಾರೂ ನಮಗೆ ರೋಲ್ ಮಾಡೆಲ್ ಅಲ್ಲ. ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದರಲ್ಲಾ ಹಲವು ಗಣ್ಯರು ಅಂತಹ ದೇಶಭಕ್ತರು, ನೈತಿಕ ನಿಷ್ಠೆಯಿದ್ದವರು ನಮಗೆ ಆದರ್ಶವೆನಿಸಬೇಕೇ ಶಿವಾಯಿ ಇಂದಿನ ರಾಜಕಾರಣಿಗಳು,ಕಲಾವಿದರು, ಸಂಗೀತಗಾರರು [ಕ್ಷಮಿಸಿ ಕೆಲವು ಅಪವಾದಗಳು ಇರಲೂ ಸಾಕು] ನಮಗೆ ರೋಲ್ ಮಾಡೆಲ್ ಅಲ್ಲ. ಸರ್ವಜ್ಞನ ಕಾಲದಲ್ಲೂ ಕಚ್ಚೆಹರುಕರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಯಾಕೆಂದ್ರೆ ಕವಿ ಹೇಳಿದ್ದಾನೆ

ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಲೋಕದೊಳು
ನಿಶ್ಚಿಂತನಪ್ಪ | ಸರ್ವಜ್ಞ

-ಎಂಥಾ ಹಿತವಚನ ಅಲ್ಲವೇ ? ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದರೆ ಆಗ ಜಗವನ್ನೂ ಜಯಿಸಬಹುದಂತೆ! ಕಾಲ, ದೇಶ ಯಾವುದೇ ಇದ್ದರೂ ಉತ್ತಮ ಅಂಶಗಳನ್ನು, ಉಚ್ಚ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮೊಳಗೇ ಅವಿತಿರುವ ಕಾಮ,ಕ್ರೋಧ, ಲೋಭ, ಮೋಹ, ಮದ, ಮತ್ಸರ ಗಳೆಂಬ ರಾಕ್ಷಸೀ ಪ್ರವೃತ್ತಿಯನ್ನು ದಮನಗೊಳಿಸುವರೇ ಶರನ್ನವರಾತ್ರಿಯ / ವಿಜಯದಶಮಿಯ/ ದಸರೆಯ ಈ ಸಂದೇಶವನ್ನು ತಮ್ಮಲ್ಲಿ ಈ ಅಂಕಣದ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿದ್ದೇನೆ

ಮುಗಿಸುವ ಮುನ್ನ ಒಂದು ಸಣ್ಣ ಜೋಕು-- ’ ಮಾಡಿದ್ದುಣ್ಣೋ ಮಹರಾಯ ’ ಎಂಬ ನಾಟಕ ವೇದಿಕೆಯೇರುತ್ತಿದೆ. ಪರಿಕಲ್ಪನೆ ಮತ್ತು ಮೂಲ ಕಥೆ: ಶ್ರೀ ಅಣ್ಣಾ ಹಜಾರೆ. ಕದ್ದು ದುರುದ್ದೇಶಕ್ಕೆ ಗೀತರೂಪಕಕ್ಕೆ ಅಳವಡಿಸಿದವರು : ಕೇಂದ್ರ ಕಾಂಗೈ, ಚಪ್ಪರ ಚಾವಡಿ ಮತ್ತು ನೃತ್ಯ ಸಂಯೋಜನೆ : ಸಿಬಿಐ. ಪ್ರಧಾನ ಭೂಮಿಕೆಯಲ್ಲಿ : ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ, ಇವರಿಂದ ಕೃತಜ್ಞತಾ ಪೂರ್ವಕ ರಂಗಸಜ್ಜಿಕೆಯನ್ನು ನಿರ್ಮಿಸಿಕೊಳ್ಳಲಾಗಿದೆ : ಕರ್ನಾಟಕ ಲೋಕಾಯುಕ್ತ. ಪ್ರಾಂತೀಯ ಜೋಕರ್‍ಗಳಾಗಿ ಕಟ್ಟಾ ಸುಬ್ರಹ್ಮಣ್ಯ ಮತ್ತು ಕಟ್ಟಾ ಜಗದೀಶ್. ಮೊದಲಬಾರಿಗೆ ಖಳನಾಯಕನಾಗಿ ಕುಮಾರಣ್ಣ. ಮರದಕೆಳಗೆ ಬಿದ್ದ ಮಂಗನ ಪಾತ್ರದಲ್ಲಿ ಯಡ್ಯೂರಣ್ಣ. ಹಿನ್ನೆಲೆ ಗಾಯನ : ’ಮಣ್ಣಿನಮಕ್ಕಳಿ’ಂದ! ನಾಟಕ ಪೊಗದಸ್ತಾಗಿದೆ! ಅಂತೂ ಜನತೆಗೆ ಜೀವ ಇಲ್ಲದಿದ್ದರೂ ನಿಸರ್ಗ ಒಬ್ಬರಮೇಲೆ ಇನ್ನೊಬರನ್ನಾದರೂ ಛೂ ಬಿಟ್ಟು ಕೊನೆಗೊಮ್ಮೆ ನಿಯಂತ್ರಿಸುವುದೇ ಕಥೆಯ ಮೂಲವಸ್ತು! ಇನ್ನೂ ಹಲವು ಪಾತ್ರಗಳು ಚೌಕಿಯಲ್ಲಿ [ಗ್ರೀನ್ ರೂಮ್] ಬಣ್ಣ ಮೆತ್ತಿಸಿಕೊಳ್ಳುತ್ತಾ ವೇಷ ಕಟ್ಟಿಕೊಳ್ಳುತ್ತಾ ಇವೆ, ವಿದ್ಯುತ್ ಅಭಾವ ಇರುವುದರಿಂದ ಸ್ತ್ರೀರಾಮುಲು ಸೀಮೆ ಎಣ್ಣೆ ಗ್ಯಾಸ್‍ಲೈಟುಗಳನ್ನು ಸಂಗ್ರಹಿಸುವತ್ತ ಹೋಗಿದ್ದಾರೆ! ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ,

ಮಧ್ಯೆ ಹೀಗೊಂದು ಹಾಡು ಹರಿದುಬರುತ್ತದೆ --

ಜೈಲಲ್ಲಿ ಕರಡೀಗೆ ಜಾಮೀನು ಕೊಡಿಸೋಕೆ
ಯಾವತ್ತು ಹೋಗ್ಬಾರ್ದುರೀ
ಲಾರೀಲಿ ಲೋಡ್‍ಮಾಡಿ ಮುಟ್ಟುಗೋಲ್ಹಾಕ್ಕೊಳಕೆ
ಯಾವತ್ತು ಮರಿಬಾರ್ದುರೀ
ಅವ್ನೊಬ್ಬ ಇವ್ನೊಬ್ಬ ಮತ್ತೊಬ್ಬ ಮಗದೊಬ್ಬ
ಗಣಿಗೊಬ್ಬ ಧಣಿಗೊಬ್ಬ ೨ಜಿ ಸ್ಪೆಕ್ಟ್ರಂಗೊಬ್ಬ
ಯಾರನ್ನೂ ಹೊರಗಡೆಗೆ ಬಿಡಬಾರ್ದುರೀ.........

[ದೇಶಾದ್ಯಂತ ಒಂದೇ ಪ್ರದರ್ಶನ. ಆಕಸ್ಮಿಕವಾಗಿ ಸಂಭವಿಸಿಬಹುದಾದ ರಾಜಕೀಯ ಅವಘಡಗಳಿಂದ ಪ್ರದರ್ಶನ ರದ್ದಾದರೆ ಯಾವುದೇಕಾರಣಕ್ಕೂ ಹಣಮರುಪಾವತಿ ಸಾಧ್ಯವಿಲ್ಲ, ಸಹೃದಯೀ ಪ್ರೇಕ್ಷಕರು ಸಹಕರಿಸಲು ಕೋರಿದೆ] ನಮಸ್ಕಾರ.

Thursday, October 6, 2011

|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


’ಅಮ್ಮ’ ಎಂಬ ಶಬ್ದದ ಬಗ್ಗೆ ವರ್ಣನೆ ಮಾಡುವುದು ಬೇಕಾಗುವುದಿಲ್ಲ ಯಾಕೆಂದರೆ ಅದರ ತಾಕತ್ತೇ ಅಂಥದ್ದಿದೆ. ಹುಟ್ಟಿದ ಪ್ರತಿಯೊಂದೂ ಜೀವಿಗೂ ಅಮ್ಮ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜನ್ಮವೀಯುತ್ತಾಳೆ. ಬಹುತೇಕ ಸಸ್ತನಿಗಳಲ್ಲಿ ನೇರವಾದ ಜನ್ಮವಾದರೆ ಕೆಲವು ಸರೀಸೃಪಗಳಲ್ಲಿ, ಪಕ್ಷಿಗಳಲ್ಲಿ, ಜಲಚರಗಳಲ್ಲಿ ಮೊಟ್ಟೆಯ ರೂಪದಲ್ಲಿ ಅಮ್ಮ ಜನ್ಮವೀಯುತ್ತಾಳೆ. ಅಂತಹ ಸಾವಿರಕೋಟಿ ಅಮ್ಮಂದಿರ ಹುಟ್ಟಿಗೂ ಕಾರಣವಾದ ಒಬ್ಬ ಅಮ್ಮ ಇರಬೇಕಲ್ಲ ? ಆ ರೂಪವನ್ನೇ ’ಆದಿಶಕ್ತಿ’ ಎಂದೂ ಜಗನ್ಮಾತೆ ಎಂದೂ ಋಷಿಗಳು ಹೆಸರಿಸಿದರು. ದೇವನೊಬ್ಬನೇ ಆದರೂ ಆತನ ಬಹುರೂಪಗಳನ್ನು ಕಂಡ ಅದೇ ಮಹನೀಯರು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಅಲ್ಲಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳಲ್ಲಿ ನವದುರ್ಗೆಯರು, ಸಪ್ತಮಾತೃಕೆಯರು, ತ್ರಿಮೂರ್ತಿಗಳ ಹೆಂಡಂದಿರು ಮತ್ತು ಆ ಮೂರು ರೂಪಗಳ ಸಮ್ಮಿಲನದ ಶ್ರೀರಾಜರಾಜೇಶ್ವರೀ ರೂಪವನ್ನೂ ಅವರು ಗುಣಗಾನಮಾಡಿದರು.

ಆರಾಧನೆಯ ಕಾಲದಲ್ಲಿ ವರ್ಷದ ಕೆಲವು ಭಾಗಗಳನ್ನು ಹೀಗೀಗೆ ಅಂತ ತಿಳಿಸಿಕೊಟ್ಟು ಅವುಗಳ ಸಂದರ್ಭದ ಮಹತ್ವವನ್ನೂ ಔಚಿತ್ಯವನ್ನೂ ತಿಳಿಸಿಕೊಟ್ಟರು. ವೇದಗಳಲ್ಲಿ ಅಡಕವಾಗಿರುವ ರೀತಿಯಲ್ಲಿ ಹೇಳಬಹುದಾದರೆ ಶ್ರೀಸೂಕ್ತ, ಸರಸ್ವತೀ ಸೂಕ್ತ, ದುರ್ಗಾಸೂಕ್ತಗಳೇ ಮೊದಲಾದ ಕೆಲವು ಸೂಕ್ತಗಳಿಂದ ಅಮ್ಮನನ್ನು ಅರ್ಚಿಸಿದರು. ಇದನ್ನೇ ಪ್ರತಿಪಾದಿಸಿದ ನಮ್ಮ ಯುಗದ ಪ್ರಮುಖ ಅದ್ವರ್ಯುವಾದ ಭಗವತ್ಪಾದ ಶ್ರೀ ಆದಿಶಂಕರರು ಅಮ್ಮನನ್ನು ಆಜನ್ಮ ಪರ್ಯಂತ ಹಲವು ರೂಪಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಕಂಡರು, ಹಲವು ಕಾರಣಿಕ ಸನ್ನಿಧಾನಗಳನ್ನು ಸೃಜಿಸಿ ಅಲ್ಲೆಲ್ಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು ಎಂಬುದನ್ನು ನಾವೆಲ್ಲಾ ಓದುತ್ತಾ ತಿಳಿದಿದ್ದೇವೆ, ತಿರುಗುತ್ತಾ ಅವರು ಸ್ಥಾಪಿಸಿದ ಮೂರ್ತಿಗಳಲ್ಲಿ ಅಮ್ಮನನ್ನು ದರ್ಶನಮಾಡಿದ್ದೇವೆ. ಆಚಾರ್ಯ ಶಂಕರರಷ್ಟು ಅಮ್ಮನನ್ನು ಭಜಿಸಿದ ಸನ್ಯಾಸಿಗಳು, ಸಂತರು ಭೂಮಿಯಲ್ಲಿ ಈಗ ಸಿಗುವುದು ವಿರಳ. ಅವರು ರಚಿಸಿದ ಸ್ತೋತ್ರಗಳು, ಸ್ತುತಿಗೀತೆಗಳು ಗೇಯವೂ ಮನೋಹರವೂ ಆಗಿವೆ ಎಂಬುದಕ್ಕೆ ನಿತ್ಯವೂ ನಾವು ರೇಡಿಯೋ, ಮಾಧ್ಯಮಗಳಲ್ಲಿ ಕೇಳುವ ಅವರ ಹಲವು ಕೃತಿಗಳೇ ಸಾಕ್ಷಿಯಾಗಿವೆ. ಪ್ರಾಸಬದ್ಧವಾಗಿ ಅನೇಕ ಸ್ತೋತ್ರಗಳನ್ನು ಅವರು ರಚಿಸುವಾಗ ಅವುಗಳಲ್ಲಿ ಜಗತ್ತಿನ ಭಾಷೆಗಳಿಗೆ ಮಾತೃಭಾಷೆಯಾದ ಸಂಸ್ಕೃತಭಾಷೆಯ ಉತ್ಕೃಷ್ಟ ಪದಗಳನ್ನು ಪೋಣಿಸಿದ ಶೈಲಿಯನ್ನು ನೋಡಿದರೆ ಮೈ ರೋಮಾಂಚನಗೊಳ್ಳುತ್ತದೆ.

ಅಂತಹ ಕೃತಿಗಳನ್ನು ಅರ್ಥವಿಸಿಕೊಂಡು ಆಸ್ವಾದಿಸಿದರೆ ಮಾತ್ರ ಶಂಕರರು ಯಾಕೆ ಹೀಗೆ ಹೇಳಿದರು ಎಂಬುದು ತಿಳಿಯುತ್ತದೆಯೇ ವಿನಃ ಬರಿದೇ ಕಿವಿಗೆ ಮುದನೀಡುತ್ತದೆ ಎಂಬ ಕಾರಣಕ್ಕೆ ಸಿನಿಮಾ ಹಾಡುಗಳಂತೇ ಕೇಳಿಬಿಟ್ಟರೆ ಅವುಗಳ ಮೂಲ ರಸಾಭಿಜ್ಞತೆ ನಮಗೆ ನಿಲುಕುವುದಿಲ್ಲ. ಭಗವಾನ್ ಶ್ರೀಧರ ಸ್ವಾಮಿಗಳು ಒಮ್ಮೆ ಊರೊಂದಕ್ಕೆ ಭೇಟಿ ನೀಡಿ ಗುಡ್ಡದಲ್ಲಿ ನೆಲೆಸಿರುವ ಅಮ್ಮನನ್ನು ದರ್ಶಿಸುತ್ತಾರೆ. ಅಲ್ಲಿನ ಬಡ ಬ್ರಾಹ್ಮಣ ಅರ್ಚಕರಿಗೆ ಯಾವುದೇ ಸೌಲತ್ತು ಇಲ್ಲವಾಗಿ ಅಲ್ಲಿ ಪೂಜೋಪಕರಣಗಳ ಕೊರತೆ ಇದ್ದುದು ಶ್ರೀಧರರಿಗೆ ಕಾಣುತ್ತದೆ. [ತಾವು ಮೊದಲು ಉಪಯೋಗಿಸುತ್ತಿದ್ದ ಮರದ ಪಂಚಪಾತ್ರೆ-ಉದ್ದರಣೆಗಳನ್ನೇ ಇಟ್ಟುಕೊಂಡು]ತಮಗೆ ಯಾರೋ ಶ್ರೀಮಂತ ಭಕ್ತರು ಅರ್ಪಿಸಿದ್ದ ಬೆಳ್ಳಿಯ ಪೂಜೋಪಕರಣಗಳನ್ನು ಅಲ್ಲಿನ ಅರ್ಚಕರಿಗೆ ಬಳಸಲು ನೀಡಿ ಅಮ್ಮನಿಗೆ ಹೊಸ ಸೀರೆಯೊಂದನ್ನು ತರಿಸಿಕೊಟ್ಟು ಅಲಂಕರಿಸಿ ಪೂಜಿಸಿದ್ದನ್ನು ತಾವು ನೋಡುವಾಗ ವಿಗ್ರಹದ ಕಣ್ಣಲ್ಲಿ ಧಾರಾಕಾರವಾಗಿ ನೀರುಹರಿಯಿತಂತೆ! ಇದಕ್ಕೆ ದಾಖಲೆಗಳಿವೆ ಎಂದರಾದರೂ ನೀವು ನಂಬುತ್ತೀರೇನೋ.

ಇಂಥಾ ಅಮ್ಮನನ್ನು ಶರತ್ ಕಾಲದಲ್ಲಿ ನವದಿನಗಳಲ್ಲಿ ನವದುರ್ಗೆಯರೂಪದಲ್ಲಿ, ಲಕ್ಷ್ಮೀ ಪಾರ್ವತೀ ಸರಸ್ವತೀ ರೂಪದಲ್ಲಿ ಆರಾಧಿಸುವುದನ್ನು ಭಾರತವಾಸಿಗಳು ಸಹಸ್ರಮಾನಗಳಿಂದ ಆಚರಿಸುತ್ತಿದ್ದಾರೆ. || ನವೋ ನವೋ ಭವತಿ ಜಾಯಮಾನಃ || ಜಾಯಮಾನ ಕಾಲಮಾನ ಬದಲಾದರೂ ಅಮ್ಮನನ್ನು ಮರೆಯಲು ಸಾಧ್ಯವಾಗುವುದಿಲ್ಲ ಮತ್ತು ಅದು ವಿಹಿತವೂ ಅಲ್ಲ. ನವರಾತ್ರಿ ಪ್ರತೀ ಸಂವತ್ಸರದಲ್ಲೂ ಮೂರು ಬಾರಿ ಬರುತ್ತದೆ, ಆದರೆ ಬರುವ ಮೂರು ನವರಾತ್ರಿಗಳಲ್ಲಿ ಎರಡು ಬಹಳ ವಿಶೇಷ, ಮೊದಲನೆಯದು ವಸಂತ ನವರಾತ್ರಿ ಮತ್ತು ಇನ್ನೊಂದು ಈ ಶರನ್ನವರಾತ್ರಿ. ಇಂತಹ ಪರ್ವಕಾಲದಲ್ಲೇ ಶ್ರೀರಾಮ ರಾವಣನನ್ನು ವಿಜಯದಶಮಿಯ ದಿನ ವಧಿಸಿದನಂತೆ, ಪಾಂಡವರು ಅಜ್ಞಾತವಾಸಕ್ಕೆ ಹೊರಡುವಾಗ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಮೂಟೆ ಕಟ್ಟಿ ಬನ್ನಿ ಮರಕ್ಕೆ ಎತ್ತರದಲ್ಲಿ ಬಿಗಿದಿಟ್ಟು ಹೋಗಿದ್ದು ವಿಜಯದಶಮಿಯ ದಿನ ತಮ್ಮ ಆಯುಧಗಳಿಗೆ ಆಶ್ರಯನೀಡಿ ಕಾಪಾಡಿದ ಬನ್ನಿ ಮರವನ್ನು ಪೂಜಿಸಿ ಆಯುಧಗಳನ್ನು ಮರಳಿ ಎತ್ತಿಕೊಂಡರಂತೆ. ಹೀಗೇ ಹಲವು ಕಾರ್ಯಗಳು ನಡೆದು ಸಾತ್ವಿಕ ಶಕ್ತಿ ವಿಜೃಂಭಿಸಿ ವಿಜಯ ಲಭಿಸಿದ ದಿನವನ್ನು ಇವತ್ತಿಗೂ ವಿಜಯದಶಮಿ ಎಂಬುದಾಗಿ ನಾವು ಕರೆಯುತ್ತೇವೆ, ಆಚರಿಸುತ್ತೇವೆ.

ವೈದಿಕರೊಬ್ಬರ ಕೂಡ ನನ್ನ ಮಾತುಕತೆನಡೆದಿತ್ತು. ಕೆಲವು ವೈದಿಕರು ವೇದಪಾಠವನ್ನು ಗಿಣಿಪಾಠದಂತೇ ಕಂಠಪಾಠ ಮಾಡಿಕೊಂಡಿರುತ್ತಾರೆ, ಎಲ್ಲರಿಗೂ ವೇದಪಾಠಗಳ ಹುರುಳು ಕರಗತವಾಗಿರುವುದಿಲ್ಲ. ವೇದಪಾಠಗಳನ್ನು ಸಮರ್ಪಕವಾಗಿ ಅರ್ಥವಿಸಿಕೊಳ್ಳಲು ಶ್ರದ್ಧೆ ಮತ್ತು ಆಸಕ್ತಿ ಇವುಗಳ ಜೊತೆಗೆ ಸಂಸ್ಕೃತದ ಪ್ರೌಢಿಮೆಯ ಅಗತ್ಯತೆ ಇದೆ. ನಾನು ಮಾತನಾಡುತ್ತಿದ್ದುದು ಸ್ವಲ್ಪ ಗಂಧಗಾಳಿ ಇರುವ ವೈದಿಕರಲ್ಲಿ ಎಂಬುದನ್ನು ಮರೆಯುವಂತಿಲ್ಲ. ಮಾತುಕತೆಯ ಮಧ್ಯೆ ನಾನೊಂದು ಪ್ರಾಯೋಗಿಕ ಕಲ್ಪನೆಯನ್ನು ಪ್ರತಿಪಾದಿಸಿದ್ದೇನೆ. ಕೃಷ್ಣಯಜುರ್ವೇದದಲ್ಲಿ ದುರ್ಗಾ ಸೂಕ್ತ ಹೇಳಲ್ಪಟ್ಟಿದೆ. ಈ ದುರ್ಗಾ ಸೂಕ್ತದಲ್ಲಿ ಅಗ್ನಿಯನ್ನು ಧರಿಸಿದ ದೇವಿಯ ಬಗ್ಗೆ ತಿಳಿಸಿದ್ದಾರೆ. ಅಂಥಾ ಅಗ್ನಿಯನ್ನೇ ಉದರದಲ್ಲೂ ಕೈಯ್ಯಲ್ಲೂ ಜ್ವಲಿಸಿದ ಮಹತಾಯಿಯ ಈ ಸ್ತುತಿಯನ್ನು ಇಂದಿನ ನಮ್ಮ ವಾಹನಗಳನ್ನು ಚಲಾಯಿಸುವ ಪೂರ್ವ ಭಕ್ತಿಯಿಂದ ಪಠಿಸಿದರೆ/ ಅಥವಾ ಪುರೋಹಿತರ ದ್ವಾರಾ ಪಠಿಸುವಂತೇ ಕೇಳಿಕೊಂಡು ಪೂಜೆನಡೆಸಿದರೆ ಸಂಭವಿಸಬಹುದಾದ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತದೆ, ಮತ್ತು ಹಾಗೊಮ್ಮೆ ಸಂಭವಿಸಿದರೂ ಪ್ರಯಾಣಿಕರಿಗೆ, ಚಾಲಕರಿಗೆ ಯಾವುದೇ ಹಾನಿ ಸಂಭವಿಸಿದ ರೀತಿಯಲ್ಲಿ ಬಗೆಹರಿಯುತ್ತದೆ. ಇದು ಹಲವು ದಿನಗಳ ಅವಲೋಕನದಿಂದ ತಿಳಿದು ಬಂದಿದ್ದು ಈ ಬಗ್ಗೆ ಯಾರಾದರೂ ಸಂಶೋಧನೆ ಮಾಡುವವರಿದ್ದರೆ ಅವರಿಗೆ ಸ್ವಾಗತ ಬಯಸುತ್ತೇನೆ !

ಇದೇ ಕಾರಣಕ್ಕೂ ಇರಬಹುದು ಮಹಾನವಮಿಯ ದಿನ ಎಲ್ಲೆಡೆ ಯಂತ್ರಗಳ, ಆಯುಧಗಳ ಪೂಜೆ ನಡೆಯುತ್ತದೆ. ಪಂಚಭೂತಗಳನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯವಿಲ್ಲ. ಅವುಗಳ ಮೂಲವನ್ನು ಹುಡುಕುವುದೂ ನಮ್ಮಿಂದ ಆಗದ ಮಾತು. ಬಾವಿಯೊಂದನ್ನು ತೋಡಿದಾಗ ಕಾಣುವ ನೀರಿನ ಸೆಲೆಯೇ ಅಲ್ಲಿನ ಜಲಮೂಲ ಎಂದುಕೊಳ್ಳುತ್ತೇವೆಯೇ ಹೊರತು ಆ ನೀರಿನ ಸೆಲೆಯ ಆದಿ ಎಲ್ಲಿ ಎಂಬುದನ್ನು ಅಳೆಯಲು ನಾವು ಹೋಗುವುದೂ ಇಲ್ಲ, ಹೋದರೆ ಅದು ಮುಗಿಯುವ ಕೆಲಸವೂ ಅಲ್ಲ. ಕಣ್ಣಿಗೆ ಕಾಣುವ ನಾವು ನಿತ್ಯ ಉಪಯೋಗಿಸುವ ವಸ್ತು, ಪರಿಕರಗಳಲ್ಲಿ ಹೆಚ್ಚೇಕೆ ನಮ್ಮ ಈ ಭೌತಿಕ ಶರೀರದಲ್ಲೇ ಪಂಚಭೂತಗಳಿವೆ. ಆದರೆ ಆ ಶಕ್ತಿಗಳನ್ನು ನಾವು ಪರಿಗಣಿಸುವುದಿಲ್ಲ. ಶರೀರಕ್ಕೊಂದು ಕಾವು ಇರುತ್ತದೆ. ಆ ಶಾಖದಲ್ಲಿ ಏರಿಳಿತ ಇರುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆಯಾದರೂ ಆ ಶಾಖದ ಮೂಲ ಎಲ್ಲಿದೆ ಎಂಬುದು ನಮಗೆ ಅರ್ಥವಾಗಿದೆಯೇ ? ಇಲ್ಲ. ಆಹಾರ ಜೀರ್ಣಿಸುವ ಸಲುವಾಗಿ ಜಠರದಲ್ಲಿ ಸೃವಿಸುವ ದುರ್ಬಲ ಗಂಧಕಾಮ್ಲ ಅಗ್ನಿಯ ರೂಪವೇ ಆಗಿರುತ್ತದೆ; ತಿಂದ ಅನ್ನವನ್ನು ಕರಗಿಸುತ್ತದೆ. ವಿನಾಕಾರಣ ಅದೇ ದುರ್ಬಲ ಗಂಧಕಾಮ್ಲ ತೀಕ್ಷ್ಣವಾಗತೊಡಗಿ ಕೆಲವರಲ್ಲಿ ಹೊಟ್ಟೆ ಹುಣ್ಣಿಗೆ /ಕರುಳು ಹುಣ್ಣಿಗೆ ಕಾರಣವಾಗುತ್ತದೆ ! ಅಗ್ನಿಯಿಲ್ಲದೇ ನಮ್ಮ ಬದುಕು ಸಾಧ್ಯವಿಲ್ಲ. ನಿತ್ಯದ ಸೂರ್ಯನ ಬೆಳಕಿನಲ್ಲೂ ಅಗ್ನಿಯೇ ಅಡಗಿದೆ. ಹೀಗಿರುವಾಗ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಅಗ್ನಿಯೇ ಪ್ರಪಂಚದ ಅಳಿವು ಉಳಿವಿನಲ್ಲಿ ಪಾಲ್ಗೊಳ್ಳುತ್ತದೆ ಎಂಬುದು ತೋರಿಬರುವ ಸತ್ಯ. ಯಂತ್ರವೊಂದು ಚಾಲನೆಗೊಂಡಾಗ ಅಲ್ಲಿ ಶಾಖೋತ್ಫತ್ತಿಯಾಗುತ್ತದೆ. ಶಾಖೋತ್ಫತ್ತಿ ಜಾಸ್ತಿ ಇದ್ದಾಗ ಅಲ್ಲಿ ಅಗ್ನಿಯ ಆವಾಸ ಇದ್ದೇ ಇರುತ್ತದೆ--ಹೀಗೆ ಅರ್ಥವಿಸೋಣ ಪ್ರತಿಯೊಂದೂ ವಸ್ತುವಿನಲ್ಲೂ ಸುಪ್ತರೂಪದಲ್ಲಿ ಅಗ್ನಿ ಅಡಗಿದೆ! ಕರೆದರೆ ಜ್ವಲಿಸುತ್ತದೆ, ಇಲ್ಲವಾದರೆ ತಣ್ಣಗೆ ಕಾಣದಂತಿರುತ್ತದೆ. ಹೀಗಾಗಿ ಇರುವ ಎಲ್ಲಾ ಉಪಕರಣಗಳಿಗೆ ವಸ್ತುಗಳಿಗೆ ಪೂಜೆ ಸಲ್ಲುವುದು ಸಮರ್ಪಕವಾಗಿದೆ. ಅಗ್ನಿಯನ್ನೇ ಧರಿಸಿದ ಅಮ್ಮ ಅಲ್ಲೆಲ್ಲಾ ಇರುತ್ತಾಳೆ ಎಂಬ ಆಳವಾದ ಪರಿಕಲ್ಪನೆಯಿಂದ ಪೂರ್ವಜರು ಹಾಗೆ ಆರಂಭಿಸಿದರು; ಎಷ್ಟು ವೈಜ್ಞಾನಿಕವಲ್ಲವೇ ?

ವರ್ಷಪೂರ್ತಿ ಅಮ್ಮ ನಮ್ಮ ಸೇವೆಗೆ ನಿಂತಿರುತ್ತಾಳೆ, ವರ್ಷದಲ್ಲಿ ಒಮ್ಮೆ ಅಮ್ಮನಿಗೆ ನಾವು ಗೌರವ ಸಲ್ಲಿಸಿ ಕೃತಜ್ಞರಾಗೋಣ ಎಂಬ ಗೌರವ ಸೂಚಕ ಪ್ರಕ್ರಿಯೆಯೇ ಆಯುಧಪೂಜೆ/ಮಹಾನವಮಿ ಪೂಜೆ. ಈಗೀಗ ನವರಾತ್ರಿಯಲ್ಲಿ ಆರಂಭದಲ್ಲೇ ಕಾರ್ಖಾನೆಗಳಲ್ಲಿ ಸ್ವಚ್ಛಗೊಳಿಸಿ, ಬಣ್ಣ-ಸುಣ್ಣ ಬಳಿದು, ಅಲಂಕರಿಸಿ, ಒಂದಷ್ಟು ಹೂವು ಹಣ್ಣು ಇಟ್ಟು ಪೂಜೆಮಾಡಿ, ಪಟಾಖಿ ಹಚ್ಚಿ, ಕುಂಬಳಕಾಯಿ ಒಡೆದು, ಸಿಹಿತಿಂದು ರಜಾ ಎಂದುಬಿಟ್ಟರೆ ವಾರದ ತನಕ ಯಾರೂ ಬರುವುದಿಲ್ಲ. ಆದರೆ ಈ ಪೊಜೆಯ ಮಹತ್ವದ ಅರಿವಿರುವ ಕೆಲವೇ ಜನ ಮಾತ್ರ ಮಹಾನವಮಿಯ ಆ ದಿನದಂದೇ ಯಂತ್ರಗಳನ್ನು ಪೂಜಿಸುತ್ತಾರೆ. ಯಾವಾಗಲೋ ಮಾಡುವುದನ್ನು ಯಾವಾಗ ಬೇಕಾದರೂ ಮಾಡುವ ಚಾಳಿಗೆ ಏನೂ ಹೇಳಲಾಗುವುದಿಲ್ಲ. ಆದರೆ ರೀತಿಯಲ್ಲಿ ಆಯುಧಪೂಜೆ ಮಾಡಬೇಕಾಗಿರುವುದು ಮಹಾನವಮಿಯಂದೇ. ಬಿಡಿ ಅಷ್ಟಾದರೂ ಮಾಡುತ್ತಾರಲ್ಲ, ಸುಮ್ಮನಾಗೋಣ.

ಕೋಲ್ಕತಾದಲ್ಲಿ ಕಾಳಿಯಾಗಿ, ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿಯಾಗಿ, ಮೈಸೂರಿನಲ್ಲಿ ಚಾಮುಂಡಿಯಾಗಿ, ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ, ಶೃಂಗೇರಿಯಲ್ಲಿ ಶಾರದೆಯಾಗಿ ನೆಲೆಸಿದ ಅಮ್ಮ ಎಲ್ಲರನ್ನೂ ಹರಸಲಿ, ಜಗದ ಎಲ್ಲಾ ಮಕ್ಕಳಿಗೂ ಅವರ ಸದುದ್ದೇಶಪೂರಿತ ವಾಂಛಿತಗಳನ್ನು ದಯಪಾಲಿಸಿ ಕಷ್ಟದಲ್ಲಿರುವ ತನ್ನ ಮಕ್ಕಳನ್ನು ಪಾರುಮಾಡುವ ಕೃಪೆಮಾಡಲಿ ಎಂಬ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಶುಭ ಶರನ್ನವರಾತ್ರಿಯ, ವಿಜಯದಶಮಿಯ ಹಾರ್ದಿಕ ಶುಭಕಾಮನೆಗಳನ್ನು ತಮಗೆಲ್ಲಾ ಘೋಷಿಸುತ್ತಿದ್ದೇನೆ, ಶುಭಾಶಯಗಳು.

ಅಯಿ ಸುಮನಃ ಸುಮನಃ ಸುಮನಃ
ಸುಮನಃ ಸುಮನೋಹರ ಕಾಂತಿಯುತೇ |
ಶ್ರಿತರಜನೀ ರಜನೀ ರಜನೀ
ರಜನೀ ರಜನೀಕರ ವಕ್ತ್ರವೃತೇ |
ಸುನಯನವಿಭ್ರಮರ ಭ್ರಮರ ಭ್ರಮರ
ಭ್ರಮರ ಭ್ರಮರಾಧಿಪತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ |
ಶರಣ್ಯೇ ತ್ರ್ಯಂಬಕೇ ದೇವೀ ನಾರಾಯಣಿ ನಮೋಸ್ತುತೇ ||

ಯಾ ದೇವಿ ಸರ್ವ ಭೂತೇಷು ಯಂತ್ರರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಚಂಡೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ವಿದ್ಯಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ನಾನಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

|| ಓಂ ಸ್ವಸ್ತಿ ||

Saturday, October 1, 2011

ಮತ್ತೆ ಹಾಡಿತು ಕೋಗಿಲೆ !


ಮತ್ತೆ ಹಾಡಿತು ಕೋಗಿಲೆ !

ನದಿಯಾ ತಮಿಳು ಮೂಲದ ಕೂಲಿ ಕಾರ್ಮಿಕಳು. ಕೃಷ್ಣ ಸುಂದರ ಷೋಡಶಿ. ಬಡತನದಲ್ಲೂ ಬೆಂಕಿಯಲ್ಲಿ ಅರಳಿದ ಹೂವಂತೇ ಅರಳಿದ ಹೂವು. ಕಪ್ಪು ಮುಖದಲ್ಲಿ ಮಲ್ಲಿಗೆ ದಂಡೆ ಅರಳಿದಂತೇ ಕಾಣುವ ತುಂಬುನಗು. ಹದವಾದ ನಿತಂಬ. ಸಪಾಟು ಹೊಟ್ಟೆಯ ತೀಕ್ಷ್ಣ ಕಣ್ಣಿನ ಚಟುವಟಿಕೆಯ ಹುಡುಗಿ. ಮೈಸೂರು ಮಲ್ಲಿಗೆಯ ಮಾಲೆಯನ್ನು ಮೊಳವೆರಡು ಮುಡಿದು ಗಾರೆ ಕೆಲಸಕ್ಕೆ ಬಂದರೆ ಕೆಲಸದ ಗಂಡುಹುಡುಗರಿಗೂ ಯಾವುದೋ ಇಲ್ಲದ ಚಾಲನೆ ಸಿಗುತ್ತಿತ್ತು; ಮೈಯ್ಯಲ್ಲಿ ಏನೋ ಸಂಚಲನವಾಗುತ್ತಿತ್ತು. ಎಷ್ಟೋ ದಿನ ಮನೆಕಟ್ಟಿಸುತ್ತಿದ್ದ ಯಜಮಾನಿ ನಂದಿನಿಗೇ ಸ್ವಗತದಲ್ಲಿ ಅನಿಸಿದ್ದಿದೆ ’ ಏನಪ್ಪಾ ಮಲ್ಲಿಗೆ ಮೊಳಕ್ಕೆ ೨೦ ರೂಪಾಯಿ ಆದರೂ ಕೂಲಿ ಮಾಡಿ ಹೊಟ್ಟೆಹೊರೆದುಕೊಳ್ಳುವ ಈ ಹುಡುಗಿ ಅದು ಹೇಗೆ ಪ್ರತಿನಿತ್ಯ ಎರಡೆರಡು ಮೊಳ ಮಲ್ಲಿಗೆ ಹೂ ಮುಡಿದುಬರ್ತಾಳೆ ? ’ ಉತ್ತರ ಸಿಕ್ಕಿರಲೇ ಇಲ್ಲ. ಹೋಗಲಿ ತಾವು ಮಧ್ಯಮವರ್ಗದವರಾಗಿಯೂ ಪ್ರತಿಯೊಂದನ್ನೂ ಲೆಕ್ಕಹಾಕಿ ಅಳೆದು ತೂಗಿ ಸಂಸಾರ ನಡೆಸುವಾಗ ಖರ್ಚಿಗೆ ಸಾಲದೇ ಸಾಲದ ಮೊರೆಹೋಗುವ ನಮಗೆ ಮೊಳ ಮಲ್ಲಿಗೆ ಅಪರೂಪಕ್ಕೆ ಕೊಳ್ಳುವುದಕ್ಕೂ ಆತಂಕ, ಅಂಥಾದ್ದರಲ್ಲಿ ಇವಳದ್ದೇನಪ್ಪಾ ಈ ವಿಚಿತ್ರ ಎಂದುಕೊಂಡೇ ಇದ್ದಳು. ಮನಸ್ಸಿದ್ದರೆ ಮಾರ್ಗ ಎನ್ನುವ ಉತ್ತರವೂ ಒಮ್ಮೆ ನೆನಪಿಗೆ ಬಂದಿತ್ತು.

ಆತನಿಗೆ ಗೊತ್ತು ತನಗೆ ಬೇಕಾದ ವಸ್ತು ಎಲ್ಲಿ ಹಿಡಿದರೆ ಸಿಗುತ್ತದೆ? ಯಾವಾಗ ಎಲ್ಲಿ ಹೇಗೆ ಹಿಡಿಯಬೇಕು ಎಂಬುದು. ಹೂವು ಮಾರುವ ದಾರಿಯಲ್ಲಿ ಸೈಕಲ್ ಓಡಿಸಿ ಬರುತ್ತಾ ಬರುತ್ತಾ ಕಂಡವಳೇ ನದಿಯಾ! " ಪರವಾಗಿಲ್ಲ, ನಲ್ಲ ಇರಕ್ಕು" ಎಂದುಕೊಂಡ ಆತನ ಮತೃಮೂಲವೂ ತಮಿಳೇ. ನದಿಯಾ ಕೂಲಿಮಾಡಿದರೇನಾಯ್ತು ಆಕೆಯಲ್ಲಿ ಆಕೆಯ ಹರೆಯದಲ್ಲಿ ಜಗನ್ಮೋಹಿನಿಯನ್ನೇ ಕಂಡ ಈ ಮುರುಗ ! ಹೇಗಾದರೂ ಮಾಡಿ ಆಕೆಯನ್ನು ಪಡೆಯುವ ಮನಸ್ಸು ಆತನಿಗೆ. ಆರಂಭದ ಮುಗುಳ್ನಗು ಬರುಬರುತ್ತಾ ೫ ನಿಮಿಷದ ಮಾತಿಗೆ ತಿರುಗಿ ಈಗೀಗ ಗಂಟೆಗಟ್ಟಲೆ ಮಾತೂ ಮಾತೂ ಮಾತು. ಆಕೆಗೆ ಜಾಸ್ತಿ ಏನೂ ತಿಳೀದು. ಹರೆಯದ ಮುಗ್ಧ ಸ್ನಿಗ್ಧ ಭಾವಗಳಿಗೆ ತೆರೆದುಕೊಂಡಿದ್ದಳಷ್ಟೇ. ಮುರುಗನನ್ನು ಕಂಡಾಗಲೆಲ್ಲಾ ’ಮುರಳೀಧರ’ನ ಮುರಳಿಗೆ ಮನಸೋತ ಗೋವಿನಂತಾಗುತ್ತಿದ್ದಳು! ಯಾಕೋ ಮುರುಗ ಬರುವ ಸಮಯ ಹತ್ತಿರ ಬಂದಾಗ ಹಾದಿಬದಿಯಲ್ಲೇ ನಿಂತಿರೋಳು. ಅಪ್ಪ-ಅಮ್ಮ ಬೇರೇ ಜಾಗದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯ ಸಿಕ್ಕಿತ್ತು.

ಜೋಗುಪಾಳ್ಯದ ಮುರುಗೇಶ ನಿತ್ಯವೂ ಹೂ ಮಾರುತ್ತಾ ಬರುತ್ತಿದ್ದ. ಸೈಕಲ್ಲಿಗೆ ಹೂವಿನ ಬುಟ್ಟಿ ಏರಿಸಿ ಹೊರಟುಬಿಟ್ಟರೆ ಹೂ ಮಾರಿ ಮುಗಿದಮೇಲೇ ಮನೆ ಸೇರುವಾತ. ಆಗಾಗ ಆಗಾಗ ನಂದಿನಿಯ ನಿರ್ಮಾಣ ಹಂತದಲ್ಲಿರುವ ಮನೆಯ ಅಕ್ಕ-ಪಕ್ಕ ನಿಂತು ಹುಡುಗರ ಕೂಡ ಮಾತನಾಡಿಕೊಂಡು ಹೋಗುತ್ತಿರುವಾಗಲೇ ಅವನಿಗೆ ನದಿಯಾಳ ಸಲುಗೆ ಸಿಗಲು ಆರಂಭವಾಯ್ತು. ಆತನೋ ಈಕೆಗಿಂತ ಸ್ಥಿತಿವಂತ. ಹೊಟ್ಟೆಬಟ್ಟೆಗೆ ಮನೆಯ ಎಲ್ಲರೂ ಸೇರಿ ಅದೂ ಇದೂ ಯಾಪಾರ ಸಾಪಾರ ಮಾಡಿ ದುಡೀತಿದ್ರು-ಸಾಕಾಗ್ತಿತ್ತು. ಅಪ್ಪ ಹಳೇ ಲಾರಿ ಬಾಡಿಗೆ ಓಡಿಸಿ ಒಂದಷ್ಟು ಹಣ ಕೂಡಿಟ್ಟು ಸಣ್ಣ ಸೈಟುಕೊಂಡು ಗೂಡೊಂದ ಕಟ್ಟಿದ್ದ. ಇರುವ ಇಬ್ರು ಹೆಣ್ಮಕ್ಕಳ ಮದುವೆ ಅದಾಗಲೇ ಆಗಿಹೋಗಿತ್ತು. ಮುರುಗನಿಗೂ ಇನ್ನೇನು ಮದುವೆ ವಯಸ್ಸೇ ಆತನ ಅಪ್ಪನ ಲೆಕ್ಕದಲ್ಲಿ. ೨೧ ವರ್ಷ ಕಳೆದು ೨೨ ಮೆಟ್ಟಿತ್ತು. ಎಲ್ಲಾದರೂ ಸಲ್ಪ ಅನುಕೂಲ ಇರುವ ತಮಿಳು ಮನೆತನದಿಂದ ಹೆಣ್ಣೊಂದನ್ನ ಸೊಸೆಯಾಗಿ ತರುವ ಬಯಕೆ ಅವರಿಗಿತ್ತು.

ಗಾರೆ ಕೆಲಸಕ್ಕೆ ಸಹಾಯಕಳಾಗಿರುವ ಬಡ ನದಿಯಾಳನ್ನು ಮದುವೆಯಾಗುತ್ತೇನೆ ಎಂದರೆ ಮನೆಯಲ್ಲಿ ಹುರಿದುಮುಕ್ಕಿಬಿಡುತ್ತಾರೆ. ಅದೂ ಅಲ್ಲದೇ ಆಕೆಗೆ ಯಾವ ಆಸ್ತಿಯೂ ಇಲ್ಲ. ಇರುವ ಹರೆಯದ ದೇಹವೇ ಆಸ್ತಿ. ಮುರುಗನಿಗೂ ಆಸ್ತಿಬೇಕೆಂಬ ಆಸೆ ಇತ್ತು ಆದರೆ ಹರೆಯದ ಕರೆಯ ಜೋರಾಗಿತ್ತು, ಮೈಯಲಿ ಆಕೆಯನ್ನು ಕಂಡಾಗಲೆಲ್ಲ ಕರೆಂಟು ಹರಿಯುತ್ತಿತ್ತು. ’ಆಸ್ತಿ ಪಾಸ್ತಿ ಆಮೇಲೆ ನೋಡುವಾ ಮೊದಲೊಮ್ಮೆ ಸಿಕ್ಕರೆ’ ಎನ್ನುತ್ತಿತ್ತು ಮನಸ್ಸು. ಬಿಗಿದಪ್ಪಿ ಏನೇನೋ ಮಾಡುವ ಬಯಕೆಯೆಲ್ಲಾ ಚಿಗುರಿ ಬಹಳಕಾಲವಾಗಿತ್ತು. ಬುಟ್ಟಿಯೊಳಗಿನ ಹಾವು ಆಗಾಗ ಆಗಾಗ ಬುಸುಗುಡುತ್ತಲೇ ಇತ್ತು. ತಾಳಲಾಗದ ಕಿಚ್ಚಿಗೆ ಏನೆಲ್ಲಾ ಮಾಡಿದ್ದಿದೆ ಎಂದರೆ ಛೆ ಹೇಳುವುದು ಬೇಡಬಿಡಿ. ಅದು ಕೇಳುವುದಕ್ಕೆ ಲಾಯಕ್ಕಿಲ್ಲ. ತಡ್ಕೋಬೇಕು ತಡ್ಕೋಬೇಕು ಅಂದ್ರೆ ಎಲ್ಲೀವರೆಗೆ ತಡ್ಕೋಬೇಕು ? ಅದ್ಕೂ ಇತಿಮಿತಿ ಇಲ್ವೇ? ನಿರ್ಧಾರಕ್ಕೆ ಬಂದುಬಿಟ್ಟಿದ್ದ: ಮನೆಯವರು ಏನಾದ್ರೂ ಮಾಡ್ಕೊಳ್ಲಿ, ತನಗಂತೂ ಒಂದಷ್ಟ್ ದಿನ ಆಕೆ ಬೇಕು !

ನದಿಯಾಗೂ ಶರೀರ ಅದ್ಯಾಕೋ ಮುರುಗನನ್ನು ಕಂದಾಗೆಲ್ಲ ಕಾದ ಕಬ್ಬಿಣದಂತಾಗುತ್ತಿತ್ತು. ಕರಗಿ ನೀರಾಗಿ ಹರಿದ ಮಂಜು ಬಿಂದಿವಿನಿಂದ ತೊರೆ, ಹಳ್ಳ, ನದಿ ಎಲ್ಲಾ ಅಗಿ ಸಾಗರ ಸೇರುವಂತೇ ಒಳಗೊಳಗೆ ಒತ್ತರಿಸಿ ಓಡಾಡುವ ಭಾವನೆಗಳನ್ನು ಮುರುಗನ ಎದೆಗೊರಗಿ ಹಂಚಿಕೊಳ್ಳುವುದರಲ್ಲಿ ಇಷ್ಟವಿತ್ತು. ಆಕೆ ಟೆಂಟಿನಲ್ಲಿ ಸಿನಿಮಾಗಳನ್ನು ನೋಡುತ್ತಿದ್ದಳಲ್ಲಾ ಅಲ್ಲೆಲ್ಲಾ ನಾಯಕ ನಾಯಕಿ ರೋಮಾನ್ಸು ನೋಡಿದಾಗ ನಾಯಕನಲ್ಲಿ ಮುರುಗನನ್ನೇ ಕಾಣುತ್ತಿದ್ದಳು. ಹೇಳುವುದಕ್ಕೇ ಮರೆತೆ- ಬನ್ನೇರು ಘಟ್ಟ ರಸ್ತೆಯ ಬಿಳೇಕಳ್ಳಿ ಪಕ್ಕದ ಟೆಂಟಿನಲ್ಲಿ ಇತ್ತೀಚೆಗೆ ಮುರುಗ ಮತ್ತು ನದಿಯಾ ಸೇರಿ ಒಂದು ಸಿನಿಮಾ ನೋಡಿದ್ದರು. ಸಿನಿಮಾ ಅರಂಭದಿಂದ ಮುಗ್ಯೋವರೆಗೂ ಕಥೆಗಿಂತಾ ಆತ ಗಟ್ಟಿಯಾಗಿ ಆಗಾಗ ಅಪ್ಪಿಕೊಂಡು ಮೇಲೆಲ್ಲಾ ಏನೇನೋ ಮಾಡುತ್ತಿದ್ದುದು ನೆನಪಾದಗ ಜೀವನ ಸುಂದರವಾಗಿ ಕಾಣುತ್ತಿತ್ತು. ಪ್ರತೀದಿನವೂ ಸಿನಿಮಾ ನೋಡುವ ಮನಸ್ಸಾಗುತ್ತಿತ್ತು. ಯಾವಾಗಲೂ ಸಿನಿಮಾ ಟೆಂಟಿನಲ್ಲಿ ಕೂತೇ ಇರೋಣ ಎನ್ನಿಸುತ್ತಲೂ ಇತ್ತು. ಕರೆಂಟು ಹೋಗಿ ಕತ್ತಲಲ್ಲಿ ಮುರುಗ ಜೋರಾಗಿ ಮುತ್ತುಕೊಡುವಾಗ ಎಲ್ಲಿಂದಲೋ ಟಾರ್ಚ್ ಬೆಳಕೊಂದು ಹಾದುಹೋಗಿ ತಮ್ಮನ್ನು ಕಂಡ ಪಡ್ಡೆಗಳು ಸೀಟಿ ಹೊಡೆದು ಅದೇನೋ ಕೂಗಿದ್ದು ಈಕೆಗೆ ಈಗಲೂ ನಗುಬರಿಸುತ್ತಿತ್ತು.

ಅಂತೂ ಕಟ್ಟಡಕ್ಕೆ ಮೊದಲ ಹಂತದ ಮುಚ್ಚಿಗೆ ಮುಗಿದು ಮಹಡಿ ಕಟ್ಟುತ್ತಿರುವಾಗ ಕೆಲವು ಕೊಠಡಿಗಳನ್ನು ಕಟ್ಟುತ್ತಿದ್ದರು. ಬಹಳದಿನದಿಂದ ಬುಟ್ಟಿಯಿಂದ ಹೊರಬರಲೆತ್ನಿಸುತ್ತಿದ್ದ ಮುರುಗನ ಹಾವಿಗೆ ಅಂದುಬಿಡುಗಡೆಯ ಅವಕಾಶ ಒದಗಿಬಂದಿತ್ತು! ಮುರುಗನ ಆಸೆಗೆ ನದಿಯಾ ಬೇಡ ಎನ್ನಲಿಲ್ಲ. ನಿತ್ಯವೂ ಮಲ್ಲಿಗೆ ಮೊಳವೆರಡನ್ನು ಕೊಟ್ಟು ಅಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮುರುಗನಿಗೆ ಹಾಗೆಲ್ಲಾ ಯಾವುದನ್ನೂ ಬೇಡಾ ಎನ್ನುವ ದಾರ್ಷ್ಟ್ಯ ಅವಳಲ್ಲಿರಲಿಲ್ಲ. ಮದುವೆಯ ಬಗ್ಗೆ ಆಕೆಗೆ ತಿಳೀದು ಬಿಡಿ....ಅದನ್ನೆಲ್ಲಾ ಅಕೆ ಸದ್ಯ ಯೋಚಿಸಲೇ ಇಲ್ಲ. ಅಂದು ಕೃಷ್ಣ ಪಕ್ಷದ ಕ್ಷೀಣಚಂದ್ರನಿದ್ದ. ತಿಂಗಳು ಹಾಲು ಚೆಲ್ಲಿದಂತಿರಲಿಲ್ಲ, ಬದಲಾಗಿ ಅಲ್ಲಲ್ಲಿ ಅಲ್ಲಲ್ಲಿ ಮೋಡಗಳ ನೆರಳೂ ಸೇರಿದಂತೇ ಬಿಳೀ ಕಾಗದದಮೇಲೆ ವಾಟರ್ ಮಾರ್ಕ್ ಬಣ್ಣ ಬರೆದಂತಿತ್ತು. ನದಿಯಾ ಕೆಲಸಮುಗಿದು ಮನೆಗೆ ಹೊರಟವಳು ದಾರಿಯಲ್ಲಿ ಮುರುಗನನ್ನು ಭೇಟಿಮಾಡಿದಳು. ಮನೆಗಳಲ್ಲಿ ಏನು ಹೇಳಿದರೋ ಅರಿವಿಲ್ಲ. ಅಂತೂ ಇಬ್ಬರ ಮನೆಗಳಲ್ಲೂ ಹುಡುಕಾಟವೂ ನಡೆದಿರಬಹುದು. ಆದರೆ ಆ ರಾತ್ರಿಮಾತ್ರ ಹಾವು ಹುತ್ತಸೇರಿತ್ತು! ಕೀಲಿ ತಿರುಗಿಸಿದ ಭೂಪನ ಚಿಗುರುಮೀಸೆಯನ್ನು ಸ್ವತಃ ತಾನೇ ಕೈಯಿಂದ ನೀವುತ್ತ ಖುಷಿಪಟ್ಟಳು ನದಿಯಾ. ಎಂದೂ ಕಂಡಿರದ ಅದೇನೋ ಕಂಡಂತಾಗಿತ್ತು. ಬೆಳಗಿನ ಜಾವದವರೆಗೂ ’ಅರೆಮನೆ’ಯ ಮಹಡಿಯಲ್ಲಿ ರೂಪುಗೊಳ್ಳುತ್ತಿದ್ದ ಕೊಠಡಿದ ಗೋಡೆಯ ಪಕ್ಕದಲ್ಲಿ ದೇಹವೆರಡೂ ಒಂದಾಗಿತ್ತು. ಬೆಳಗಿನ ಐದುಗಂಟೆಗೆ ಜಾಗ್ ಮಾಡುವವರ ಮಾತುಕೇಳಿ ಎಚ್ಚೆತ್ತು ಇಬ್ಬರೂ ಅಗಲಲಾರದೇ ಅಗಲಿದರು!

ನದಿಯಾಳ ಅಪ್ಪ-ಅಮ್ಮ ಹುಡುಕಿ ಸೋತರು. ಬಡವರಾದ ತಮಗೆ ಮಗಳೂ ಕಳೆದು ಈ ರೀತಿ ತೊಂದರೆಯಾಗಬೇಕೇ ಎಂದು ಚಿಂತಿಸುತ್ತಿರುವ ವೇಳೆಗೆ ಬೆಳ್ಳಂಬೆಳಿಗ್ಗೆ ನದಿಯಾ ಬಂದುಬಿಟ್ಟಿದ್ದಳು. ಗದರಿಕೊಂಡ ಅಪ್ಪ-ಅಮ್ಮನಿಗೆ ಯಾರೋ ತೊಂದರೆಕೊಟ್ಟು ಅಟ್ಟಿಸಿಕೊಂಡು ಬಂದಾಗ ಅಲ್ಲೆಲ್ಲೋ ಅಡಗಿದ್ದು ರಾತ್ರಿ ಕಳೆದು ಬಂದೆ ಎಂದಳು. ಹುಡುಕಿದ ಅಪ್ಪ-ಅಮ್ಮನಿಗೆ ಗೆಳೆಯನೊಬ್ಬನಿಗೆ ಏನೋ ಅಪಘಾತಕ್ಕೆ ಈಡಾಗಿದ್ದು ರಾತ್ರಿಯೆಲ್ಲಾ ಆಸ್ಪತ್ರೆಯಲ್ಲಿ ಕಳೆದುದಾಗಿ ವರದಿ ಒಪ್ಪಿಸಿದ ಮುರುಗ! ಅಲ್ಲಿಗೆ ಆ ರಾತ್ರಿಯ ಕಥೆ ಹಾಗೆ ಕಳೆದು ಹೋಯ್ತು, ಮುಗಿದೂ ಹೋಯ್ತು.

ವಾರವೆರಡು ಕಳೆದಿರಲಿಲ್ಲ, ನದಿಯಾಗೆ ವಾಂತಿ ! "ಏನು ತಿಂದೆ ಯಾಕೆ ವಾಂತಿ ? " ಎಂದರು ಅಪ್ಪ-ಅಮ್ಮ. ತನಗೇನೂ ತಿಳಿದಿಲ್ಲವೆಂದೊ ಹೊರಗಡೆ ತಾನೇನೂ ತಿಂದಿಲ್ಲವೆಂದೂ ತಿಳಿಸಿದಳು. ವೈದ್ಯರಲ್ಲಿಗೆ ಹೋಗಲು ಜಾಸ್ತಿ ಕಾಸಿಲ್ಲ. ಸರಕಾರೀ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಹೋದಾಗ ಅಲ್ಲಿನ ವೈದ್ಯರು ಕೇಳಿದ್ದು " ನೋಡಮ್ಮಾ ನಿನಗೆ ಹುಡುಗ ಯಾರದರೂ ಗೊತ್ತಾ ? " , ಆಕೆಗೆ ಹೌದು ಅನ್ನಬೇಕೋ ಇಲ್ಲಾ ಅನ್ನಬೇಕೋ ತಿಳೀಲಿಲ್ಲ. ವೈದ್ಯರೇ ಮುಂದುವರಿಸಿದರು " ನೀನೀಗ ಬಸುರಿಯಾಗಿದೀಯ ಕಣಮ್ಮ...ಮದುವೆ ಆಗಿಲ್ವಾ ? " ಕುಸಿದುಹೋದ ಅವಳೆಂದಳು " ಆಗಿದೆ" . ವೈದ್ಯರು ವಾಂತಿ ತಹಬದಿಗೆ ಬರಲು ಸ್ವಲ್ಪ ಮಾತ್ರೆ ಪಡೆದುಹೋಗುವಂತೇ ಚೀಟಿ ನೀಡಿದರು. ಕಟ್ಟುತ್ತಿರುವ ಜಾಗದಲ್ಲೇ ಒಂದು ಸಣ್ಣ ಗೂಡು ಅವಳ ಮನೆ. ಮನಗೆ ಬಂದ ಆಕೆಗೆ ತಲೆಸುತ್ತು ಬರುತ್ತಿತ್ತು, ನಿದ್ದೆ ಬರುತ್ತಿತ್ತು. ಇನ್ನೂ ಏನೇನೋ ! " ವೈದ್ಯರು ಕಮ್ಮಿ ಆಗ್ತದೆ ಎಂದು ಹೇಳಿದ್ದಾರೆ " ಎಂದು ಸುಮ್ಮನಾಗಿಸಿಬಿಟ್ಟಿದ್ದಳು ಅಪ್ಪ-ಅಮ್ಮನ್ನ. ಮುರುಗನಿಗೆ ನಿಧಾನಕ್ಕೆ ವಿಷಯ ತಿಳಿಸಿದಳು. ಮುರುಗ ನಕ್ಕು ಅದೇನಾಗಲ್ಲ ಬಿಡು ಎಂದ, ತಾನು ನೋಡ್ಕೋತೀನಿ ಎಂದ. ಆ ನಂತರದ ದಿನಗಳಲ್ಲಿ ಮುರುಗ ಬಹಳ ಹೊತ್ತು ನಿಲ್ಲುತ್ತಿರಲಿಲ್ಲ. ಬರುತ್ತಿದ್ದ, ನಗುತ್ತಿದ್ದ, ಹೂ ನೀಡುತ್ತಿದ್ದ, ಸ್ವಲ್ಪವೇ ಸ್ವಲ್ಪ ಹೊತ್ತು ಹೊರಟುಹೋಗಿಬಿಡುತ್ತಿದ್ದ!

ಒತ್ತಾಯಕ್ಕೆ ಬಸಿರಾದರೆ ಹಡೆಯೋದು ದಾರೀಲಿ ಎಂಬೊಂದು ಗಾದೆ ಇದ್ಯಲ್ಲ ಹಾಗೇ ಮೂರು ತಿಂಗಳವರೆಗೆ ಹೇಗೋ ಮ್ಯಾನೇಜ್ ಮಾಡಿದಳು. ಆನಂತರ ಹೊಟ್ಟೆ ಉಬ್ಬರಿಸಿ ಕಾಣುತ್ತಿತ್ತು. ಕೆಲಸಮಾಡಲು ಆಸಕ್ತಿ ಇರಲಿಲ್ಲ. ಶರೀರ ನಿತ್ರಾಣವಾದಂತಿತ್ತು. ಕುಂತಲ್ಲೇ ನಿದ್ದೆ ಹೋಗೋಳು. ಅಪ್ಪ-ಅಮ್ಮಂಗೆ ಹೊಟ್ಟೆನೋಡಿ ಡೌಟು ಬಂತು. ಕೇಳೇ ಕೇಳಿದರು. ಅಪ್ಪ ಒಂದು ಇಟ್ಟೂ ಬಿಟ್ಟರು. ಒಡಲಾಳದ ಉರಿ ಬೇರೆ ಅಪ್ಪನ ಹೊಡೆತ ಬೇರೆ ನದಿಯಾ ಮರುಗಿದಳು. ಆಕೆಯ ಅಮ್ಮ ತಾನು ಸತ್ತುಹೋಗಬಾರದಿತ್ತೇ ಎಂದಳು. ಅಪ್ಪ-ಅಮ್ಮನ ಮನಸ್ಸನ್ನು ಇಷ್ಟೆಲ್ಲಾ ನೋಯಿಸಿ ತಾನು ಇರಬೇಕೆ ಎಂಬ ಅನಿಸಿಕೆಗೂ ಅವಕಾಶ ಕೂಡಿಬಂತು. " ಯಾರು ಬೊಗಳು ? " ಅಪ್ಪ ಗದರಿದರು. ಕಡೆಗಣ್ಣಿನಲ್ಲಿ ಅದು ಹೇಗೋ ಎಲ್ಲೆಲ್ಲೋ ನೋಡುತ್ತಾ " ಮುರುಗ " ಸಣ್ಣಗೆ ಉಲಿದಳು.

ಮಾರನೇ ಬೆಳಿಗ್ಗೆ ನಂದಿನಿಯ ನಿರ್ಮಾಣವಾಗುತ್ತಿರುವ ಆ ಮನೆಮುಂದೆ ನದಿಯಾಳ ಅಪ್ಪ ಅಡಗಿನಿಂತಿದ್ದ. ಯಾರು ಎಲ್ಲಿ ಏನು ಸೂಟುಕೊಟ್ಟರೋ ಗೊತ್ತಾಗಲಿಲ್ಲ, ಆ ದಿನ ಮುರುಗ ಬರಲೇ ಇಲ್ಲ. ಅದಕ್ಕೂ ಮಾರನೇ ದಿನವೂ ಬರಲಿಲ್ಲ. ಆ ನಂತರ ಆತ ಬರುವುದನ್ನೇ ನಿಲ್ಲಿಸಿಬಿಟ್ಟ. ಹೂ ಮಾರುವುದನ್ನು ಬೇರೇ ಪ್ರದೇಶಕ್ಕೆ ಸೀಮಿತಗೊಳಿಸಿಬಿಟ್ಟ. ನದಿಯಾ ನಲುಗಿದಳು. ಹೇಳಲೂ ಆಗದ ಕೇಳಲೂ ಆಗದ ಸ್ಥಿತಿ ಅವಳದು. ಮುರುಗನ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಬೇಡಿ ಕಾಡಿ ಪಡೆದ ಭಾವಚಿತ್ರವೊಂದೇ ಅವಳ ತಾಬಾ ಇದ್ದಿದ್ದು. ಭಾವಚಿತ್ರವನ್ನು ಅಪ್ಪನಿಗೆ ಕೊಟ್ಟಳು. ಮೇಸ್ತ್ರಿ ಮತ್ತು ಇನ್ನೊಂದಿಬ್ಬರಿಗೆ ಅಪ್ಪ ವಿಷಯ ಹೇಳಲೇಬೇಕಾಯ್ತು. ಅವರನ್ನೊಡಗೂಡಿ ಅಪ್ಪ ಪೋಲೀಸರಿಗೆ ವಿಷಯ ತಿಳಿಸಿದ. ಕಾಸಿಲ್ಲದ ಕೈಲಿ ಬಂದ ಅವರನ್ನು " ಆಯ್ತಪ್ಪಾ ನೋಡ್ತೀವಿ ಕಂಪ್ಲೇಂಟು ಕೊಟ್ಟು ಹೋಗಿ " ಎಂದರು. ಬಡತನ ಇಲ್ಲೂ ಹಾಗೇ ತನ್ನತನ ಕಾಪಾಡಿಕೊಂಡಿತ್ತು! ಫಿರ್ಯಾದಿ ಕೊಟ್ಟಿದ್ದು ಕೆಲಸಕ್ಕೆ ಬರಲಿಲ್ಲ. ಯಾರೋ ಹೇಳಿದರು ನೀವು ಮಾಧ್ಯಮದವರಿಗೆ ಹೇಳಿ ವಿನಂತಿಸಿಕೊಳ್ಳಿ.

ಮಾಧ್ಯಮದ ಮಂದಿ ನದಿಯಾಳನ್ನೂ ತಂದೆಯನ್ನೂ ಮಾತನಾಡಿಸಿ ಅದನ್ನು ಬಿತ್ತರಿಸಿದರು. ಮುರುಗನ ಛಾಯಾಚಿತ್ರವನ್ನು ಬಹಿರಂಗಗೊಳಿಸಿದರು. ಮುರುಗನ ಅಮ್ಮ ಲೋಕಲ್ ಚಾನೆಲ್‍ನಲ್ಲಿ ಇದನ್ನು ಕಂಡುಬಿಟ್ಟರು. ಆ ರಾತ್ರಿ ಮುರುಗ ಮನೆಗೆ ಬರುತ್ತಿದ್ದಂತೇ ಆತನಗೆ ಮಂಗಳಾರತಿ ಬೆಳಗಿದರು. " ಪೋಲೀಸರು ಹುಡುಕಿದರೆ ಏನು ಮಾಡ್ತೀಯಾ ? " ಕೇಳಿದರು. ಕೂಲಿಯವಳನ್ನು ಮುಟ್ಟಿದೆಯಾ ಮನೆಹಾಳನೆ ಎಂದು ಜರಿದರು. ಅಪ್ಪ-ಅಮ್ಮ ಪ್ಲಾನುಮಾಡಿ ಚೆನ್ನೈ ಹತ್ತಿರದ ಹಳ್ಳಿಯ ನೆಂಟರ ಮನೆಗೆ ಕಳಿಸಿಬಿಟ್ಟರು. ಅಲ್ಲಿಂದಲೇ ವ್ಯವಹಾರ ಕುದುರಿಸಿ ಮದುವೆ ಗೊತ್ತುಮಾಡಿ ಮುರುಗನ ಮದುವೆ ನಡೆದುಹೋಯಿತು. ಕಾಸಿರುವ ಕುಟುಂಬದ ಕನ್ಯೆ ಮುರುಗನ ಹೆಂಡತಿಯಾಗಿ ಮನೆಸೇರಿದಳು. ಮುರುಗ ಗಡ್ಡ ಮೀಸೆ ಬೆಳೆಸಿಕೊಂಡು ಚಹರೆ ಬದಲಿಸಿಕೊಂಡು ಬದುಕುತ್ತಿದ್ದ.

ಒಂದಷ್ಟು ದಿನ ಮಾಧ್ಯಮದವರು, ಪೋಲೀಸರು ತಡಕಾಡಿದರು. ಗಟ್ಟಿಇಲ್ಲದ ಕೇಸು ಎಂದು ಬಿಟ್ಟುಕೊಟ್ಟರು. ಸಾರ್ವಜನಿಕರಿಗೆ ನಿತ್ಯವೂ ಇಂಥದೇ ಯಾವುದೋ ಒಂದು ಕಥೆ ನಡೆದೇ ಇರುವುದರಿಂದ ಜಾಸ್ತಿ ತಲೆತೂರಿಸುವ ಮನಸ್ಸಾಗಲಿಲ್ಲ. ಮದುವೆಗೆ ಮೊದಲೇ ಬಸಿರಾದ ಹುಡುಗಿಯ ಅಪ್ಪ-ಅಮ್ಮನಿಗೆ ಅವರ ಜಾತಿಯವರು ಕಟ್ಟಿಕೊಟ್ಟರು ;ಬಹಿಷ್ಕಾರ ಹಾಕಿದರು. ಅಪ್ಪ-ಅಮ್ಮನ ಅಳಲು ಕಂಡು ತಾಳಲಾರದ ಗರ್ಭಿಣಿ ನದಿಯಾ ಮುರುಗನ ಪ್ರೀತಿಯನ್ನೂ ಮರೆಯಲಾಗದೇ ಮನೆಯನ್ನೇ ತೊರೆದಳು. ರೈಲುನಿಲ್ದಾಣ ಅಲ್ಲಿ-ಇಲ್ಲಿ ಅಂತ ಅಲೆದಳು. ಅದೆಲ್ಲೋ ಹೇಗೋ ಹಡೆದಳು. ಹೆತ್ತ ಕೂಸನ್ನು ಬಗಲಿನ ಜೋಳಿಗೆಗೆ ತುಂಬಿಸಿಕೊಂಡು ಬೇಡಿದಳು. ಜನವೆಲ್ಲ ಅಕೆಯನ್ನು ಅರೆಹುಚ್ಚಿ ಎಂದು ತಿಳಿದರು. ರಾತ್ರಿ ಹೊತ್ತು ಕಾಮುಕರ ಕಾಟ ತಪ್ಪಿಸಿಕೊಳ್ಳುವುದು ಹರಸಾಹಸವಾಗಿತ್ತು. ಆದರೂ ತನ್ನ ಶರೀರವನ್ನು ಇನ್ಯಾರಿಗೂ ಕೊಡದೇ ರಕ್ಷಿಸಿಕೊಂಡಳು. ಮಗುವಿನ ಭಾಗ್ಯವನ್ನು ನೆನೆದು ಮಮ್ಮಲ ಮರುಗಿದಳು. ಮಗು ಸ್ವಲ್ಪ ದೊಡ್ಡದಾಗುತ್ತಿರುವಂತೇ ಮತ್ತೆಲ್ಲೋ ಗಾರೆ ಕೆಲಸಕ್ಕೆ ಶುರುವಿಟ್ಟಳು.

ಮುರುಗನ ಅಪ್ಪ-ಅಮ್ಮ ವರದಕ್ಷಿಣೆ ಆಸೆಗೆ ಏನೋ ಮಾಡಲು ಹೋಗಿ ಮುರುಗನೋ ಸೇರಿದಂತೇ ಎಲ್ಲರೂ ಜೈಲುಸೇರಿದ್ದರು. ಬೀಗರ ಬಡಿತಕ್ಕೆ ಅಡ್ಡಡ್ಡ ಮಲಗಿಬಿಟ್ಟ ಮುರುಗನ ಅಪ್ಪ-ಅಮ್ಮ ತಪ್ಪಿನ ಅರಿವಿಗೆ ಬಂದರು. ಜೈಲುಹಕ್ಕಿಯಾಗಿ ಬಂಧಿಯಾಗಿರುವ ಮುರುಗನಿಗೆ ಕೃಷ್ಣಪಕ್ಷನ ಕ್ಷೀಣಚಂದ್ರನ ತಿಂಗಳ ಬೆಳಕು ಮತ್ತೆ ಚೆಲ್ಲಿದ ನೆನಪು ಕಾಡುತ್ತಿತ್ತು. ೫ ವರ್ಷಗಳ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ಮಹಾನಗರಪಾಲಿಕೆಯವರು ಮುರುಗನ ಅಪ್ಪ ಕೊಂಡಿರುವ ಜಾಗ ತಮ್ಮದೆಂದೂ ಅದರ ಖಾತೆಯಲ್ಲಿ ಮೋಸವಾಗಿದೆಯೆಂದೂ ಮನೆಯನ್ನೂ ಉರುಳಿಸಿದ್ದರು. ಮನೆಯಿರಲಿ ಅವರ ವಸ್ತುಗಳೆಲ್ಲಾ ಎಲ್ಲಿಗೆ ಹೋದವೋ ಅರಿವಿಲ್ಲ. ಕೈಲಿರುವ ಕಾಸು ಕರಗಿತ್ತು. ಮತ್ತೆ ದುಡಿತ ಬೇಕಿತ್ತು. ಕೆಲಸ ಹುಡುಕುತ್ತಾ ಹೊರಟ ಮುರುಗನ ಮನೆಯವರಿಗೆ ಸಸಾರದ ಕೆಲಸ ಮತ್ತದೇ ಗಾರೆ ಕೆಲಸವಾಗಿತ್ತು. ಮನೆಯ ಮೂರೂ ಜನ ಹಾಗೆ ಗಾರೆ ಕೆಲಸಕ್ಕೆ ಆತು ಜೀವನ ನಡೆಸಬೇಕಾಯಿತು.

ಕಟ್ಟುತ್ತಿರುವ ಕಟ್ಟಡದ ಹತ್ತಿರದಲ್ಲಿ ಮರಳಿನ ರಾಶಿಯಮೇಲೆ ಆಡುತ್ತಿರುವ ಮುದ್ದಾದ ಮಗುವನ್ನು ಕಂಡು ಮಾತನಾಡಿಸಿದ ಮುರುಗ. ಆತನಿಗೆ ಆಕೆ ತಮಿಳು ಮೂಲದವರ ಮಗಳೆಂಬುದು ಗೊತ್ತೇ ವಿನಃ ಮತ್ತೇನೂ ತಿಳಿದಿರಲಿಲ್ಲ. ಮಗುವನ್ನು ಬಿಟ್ಟು ಬಹಳಹೊತ್ತು ಒಳಗಡೆ ಕೆಲಸದಲ್ಲಿದ್ದ ಮಗುವಿನ ತಾಯಿ ಮಗು ಏನುಮಾಡುತ್ತಿರಬಹುದೆಂಬ ಸಹಜ ಕುತೂಹಲದಿಂದ ಬಂದು ನೋಡುತ್ತಾಳೆ--ಮುರುಗ ಮಗುವನ್ನು ಮಾತನಾಡಿಸುತ್ತಿದ್ದಾನೆ ! ಓಡೋಡಿ ಬಂದು ಮುರುಗನನ್ನು ಮಾತನಾಡಿಸಿದಳು. " ಹೇಗಿದ್ದೀರಿ ? " ಎಂಬ ಪ್ರೀತಿಯ ಹರವನ್ನು ಹೊರಸೂಸಿದಳು. ತನ್ನ ನೋವನ್ನೆಲ್ಲಾ ಅರೆಕ್ಷಣ ಮರೆತು ಮುರುಗ ಮಾಡಿದ್ದು ತಪ್ಪು ಎನ್ನುವುದನ್ನೂ ಮರೆತಳು. ಮಾತನಾಡಿದರು ಜೋಡಿ. ಮಗುವಿಗೆ ಒಂದೂ ಅರ್ಥವಿಲ್ಲ! ಬಹಳ ಹೊತ್ತಿನ ಮಾತು. ಮತ್ತೆ ಪ್ರೀತಿ, ಮತ್ತೆ ಬಯಕೆ! ಯಾರೋ ಪುಣ್ಯಾತ್ಮರು ಆಕೆಗೆ ಒಳ್ಳೆಯ ಕಂತ್ರಾಟುದಾರರ ಪರಿಚಯ ಮಾಡಿಸಿದ್ದರಿಂದ ಅನುದಿನವೂ ಕೆಲಸಕ್ಕೆ ಬರಗಾಲವಿರಲಿಲ್ಲ. ಮುರುಗನಿಗೂ ಅಲ್ಲೇ ಕೆಲಸ ಕೊಡಿಸುವ ಇಚ್ಛೆ ವ್ಯಕ್ತಪಡಿಸಿದಾಗ ಆತ ಒಪ್ಪಿಕೊಂಡ. ಮಗು ತನ್ನದೇ ಎಂಬುದನ್ನರಿತ ಆ ಕ್ಷಣ ಭುವಿಯೇ ಸ್ವರ್ಗದಂತಿತ್ತು. ಮಗುವನ್ನು ಎತ್ತಿ ಮುದ್ದಾಡಿದ ಮುರುಗ ನದಿಯಾಳ ಸಂಗಾತಿಯಾಗಿ ಶಾಶ್ವತವಾಗಿ ಅವಳೊಂದಿಗೆ ಬದುಕು ಕಟ್ಟುವ ಮನಸ್ಸುಮಾಡಿದ. ಇಬ್ಬರ ಮನದಲ್ಲೂ ಕೋಗಿಲೆ ಮತ್ತೆ ಹಾಡಿತು. ದೂರದ ಮಾಮರದಲ್ಲಿ ವಸಂತಾಗಮನವಾಗಿ ಹೊಸಹಸಿರು ಚಿಗುರೊಡೆದು ಕೋಗಿಲೆಯೊಂದು ಕುಳಿತು ಇಂಪಾಗಿ ಹಾಡಹತ್ತಿತ್ತು. ಕಣ್ಣಂಚಲ್ಲಿ ಹರಿದ ಮುತ್ತಿನಮಣಿಗಳು ಗಲ್ಲದಮೇಲೆ ಧುಮ್ಮಿಕ್ಕುತ್ತಿರುವಂತೇ ಹಾದಿಯಲ್ಲಿ ಹಾದುಹೋಗುತ್ತಿರುವ ಮಲ್ಲಿಗೆ ಹೂ ಮಾರುವವನನ್ನು ಕರೆದು ಮೊಳ ಮಲ್ಲಿಗೆ ಕೊಂಡು ನದಿಯಾಗೆ ಮುಡಿಸಿದ ಮುರುಗ.

Sunday, September 25, 2011

ಜಾಹೀರಾತು


---------------ಜಾಹೀರಾತು--------------

ಆತ್ಮೀಯ ಓದುಗ ಮಿತ್ರರೇ, ನವೆಂಬರ್ ಮೊದಲವಾರದಿಂದ ನೇಚರ್ ಕೌನ್ಸೆಲಿಂಗ್ ಮತ್ತು ಪರ್ಸೊನಾಲಿಟಿ ಡೆವಲಪ್‍ಮೆಂಟ್ ತರಬೇತಿ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ಆರಂಭವಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಹೊಸ ಬ್ಲಾಗ್ ಯಾ ಜಾಲತಾಣದ ಮುಖಾಂತರ ಮಾಹಿತಿ ನೀಡಲಾಗುವುದು. ಪರಿಣತರು ಸೂಚಿಸುವ ಮಾರ್ಗಗಳು/ ಸಮಸ್ಯೆಗಳ ಪರಿಹಾರಕ್ಕೆ ಸುಲಭ ಸೂತ್ರಗಳು ಇಲ್ಲಿ ಲಭ್ಯ. ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಆಶಿಸುವ, ಸಮಸ್ಯೆಗಳಲ್ಲಿ ತೊಳಲಾಡಿ ಸರಿಯಾದ ಪರಿಹಾರ ಕಾಣದ ಪ್ರತೀವ್ಯಕ್ತಿಯನ್ನೂ ಪ್ರತ್ಯೇಕ ಸಮಯಾಧಾರಿತ ಸೆಶನ್‍ಗಳಲ್ಲಿ ಸಂದರ್ಶಿಸಿ ತರಬೇತಿ ನೀಡಲಾಗುತ್ತದೆ / ಪರಿಹಾರ ಮಾರ್ಗ ಸೂಚಿಸಲಾಗುತ್ತದೆ. ವ್ಯಕ್ತಿಗಳ ವೈಯ್ಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ ಮತ್ತು ವಿದ್ಯಾರ್ಹತೆ ಮತ್ತು ಅನುಭವಗಳ ಆದ್ಯತೆ ಮೇಲೆ ವೃತ್ತಿಯ ಉತ್ಕರ್ಷದಬಗ್ಗೆ/ಹೆಚ್ಚಿನ ಆದಾಯವನ್ನು ಪಡೆಯುವ ಬಗ್ಗೆ ಸೂತ್ರಗಳನ್ನು ತಿಳಿಸಲಾಗುತ್ತದೆ. ದ್ವಂದದಲ್ಲಿ ಸಿಲುಕಿರುವ, ಓದಿಗೆ ಗಮನವೀಯದ ವಿದ್ಯಾರ್ಥಿಗಳಿಗೆ, ಪದವಿ ಪಡೆದು ಯಾವುದೇ ಉದ್ಯೋಗ ಮಾಡಲು ಸಿಗದೇ ಇರುವವರಿಗೂ ಕೂಡ ಮಾರ್ಗದರ್ಶನವಿದೆ.

ಪಬ್ಲಿಕ್ ರಿಲೇಶನ್ಸ್ ಮ್ಯಾನೇಜ್‍ಮೆಂಟ್ ಮತ್ತು ಇನ್ನಿತರ ಸೇವೆಗಳು:

ಇದಲ್ಲದೇ ಯಾರಾದರೂ ಅದಾಗಲೇ ಸ್ವಯಂ ಉದ್ಯೋಗಮಾಡುತ್ತಿದ್ದವರು, ಕಲಾವಿದರು, ನೃತ್ಯಪಟುಗಳು, ಸಂಗೀತಗಾರರು, ವಸ್ತುಗಳ ಉತ್ಫಾದಕರು, ಉದ್ದಿಮೆದಾರರು, ಬೇರೇ ಬೇರೇ ರಂಗಗಳಲ್ಲಿ ಸರ್ವಿಸ್ ಕೊಡುವವರು ಸಾರ್ವಜನಿಕ ಪರಿಚಯ, ಪ್ರಚಾರ ಇವುಗಳ ಬಗ್ಗೆ ಆಸಕ್ತರಗಿದ್ದಲ್ಲಿ ಅಂಥವರಿಗೆ ಆ ಯಾ ಸರ್ವಿಸ್‍ಗಳನ್ನು ಒದಗಿಸಲಾಗುತ್ತದೆ. ಕಳೆಗುಂದಿರುವ ಹಳೆಯ ದಂಧೆಯಲ್ಲಿ ಬೇಸತ್ತಿರುವವರಿಗೆ ಹೊಸ ಮಾರುಕಟ್ಟೆಯ ವೈಖರಿಗಳನ್ನು ಅಳವಡಿಸಿಕೊಳ್ಳಲು ತಿಳಿಸಿಕೊಡಲಾಗುತ್ತದೆ. ಹೊಸಹೊಸ ಆಯೋಜನೆಗಳನ್ನು ಮತ್ತು ಉದ್ದಿಮೆಗಳನ್ನು ಮಾಡುವವರಿಗೆ ಅದರ ಲಾಭಾಲಾಭದ ಬಗ್ಗೆ ವಿವರಣೆ ಒದಗಿಸಲಾಗುತ್ತದೆ. ಹೊಸ ಉತ್ಫನ್ನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆಮಾಡಿ ತ್ವರಿತಗತಿಯಲ್ಲಿ ಅದಕ್ಕೆ ಮಾರುಕಟ್ಟೆ ಒದಗುವಂತೇ ಯೋಜನೆಗಳನ್ನು ರೂಪಿಸಕೊಡಲಾಗುತ್ತದೆ.

ವ್ಯಕ್ತಿತ್ವ ವಿಕಸನದ ಸಾಮೂಹಿಕ ತರಬೇತಿ ಶಿಬಿರಗಳು ಮತ್ತು ಕಾರ್ಪೋರೇಟ್ ಐಟಿ ಟ್ರೇನಿಂಗ್‍ಗಳು ಲಭ್ಯವಿರುತ್ತವೆ. ಇವುಗಳನ್ನು ಸಂಘಸಂಸ್ಥೆಗಳವರು, ಕಂಪನಿಗಳವರು ಪಡೆದುಕೊಳ್ಳಬಹುದಾಗಿದೆ. ಇನ್ನೂ ಹಲವಾರು ತೆರನಾದ ಸರ್ವಿಸ್‍ಗಳು ಲಭ್ಯವಾಗುವಂತೇ ನಮ್ಮ ಕಾರ್ಯವೈಖರಿ ವಿಸ್ತಾರಗೊಂಡಿದೆ. ಅಂತೂ ಒಂದು ಉತ್ತಮ ವೇದಿಕೆಯನ್ನು ರೂಪಿಸುತ್ತಿದ್ದೇವೆ ಎಂಬ ಹೆಮ್ಮೆ ನಮ್ಮದಾಗಿದೆ. ಇದು ವೃತ್ತಿ ಸಂಬಂಧಿತ ವಿಷಯವಾದ್ದರಿಂದ ಇದಕ್ಕೆ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಶುಲ್ಕ ವ್ಯಕ್ತಿಗಳು ಮತ್ತು ಅವರು ಕೇಳುವ ವಿಷಯಗಳನ್ನಾಧರಿಸಿರುತ್ತದೆ. ನವೆಂಬರ್ ಮೊದಲವಾರದಲ್ಲಿ ಆರಂಭಗೊಳ್ಳಲಿರುವ ಈ ಸೇವೆಗಳಲ್ಲಿ ಆಸಕ್ತಿ ತಳೆದಿರುವವರು ಈ ಕೆಳಗಿನ ಮಿಂಚಂಚೆ ವಿಳಾಸಕ್ಕೆ ಮಿಂಚಂಚೆ ಕಳಿಸಿ, ತಮ್ಮ ವಿವರಗಳನ್ನು ತಿಳಿಸಿ ನಮ್ಮಿಂದ ಹೆಚ್ಚಿನ ವಿವರಗಳನ್ನು ಪಡೆಯಬಹುದಾಗಿದೆ, ಮತ್ತು ಹೆಸರು ನೋಂದಾಯಿಸುವ ಮಾರ್ಗವನ್ನು ತಿಳಿಯಬಹುದಾಗಿದೆ. ಟರ್ನಿಂಗ್ ಪಾಯಿಂಟ್‍ಗಾಗಿ ನಿರೀಕ್ಷಿಸುತ್ತಿರುವ ಜನ ಉಪಯೋಗಿಸಿಕೊಳ್ಳಬಹುದಾದ ಸೇವೆಗಳು ಲಭ್ಯ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇನೆ. ನಮ್ಮ ಸಂಸ್ಥೆಯ ಮಿಂಚಂಚೆ ಹೀಗಿದೆ :

uddime@gmail.com

ಧನ್ಯವಾದಗಳು.

Thursday, September 22, 2011

ವಾದ್ಯದಮೇಲೆ ಓಡಾಡುವ ’ನಡೆ’ ಇದೆ !


ವಾದ್ಯದಮೇಲೆ ಓಡಾಡುವ ’ನಡೆ’ ಇದೆ !

ಕವಳದ ಸಂಚಿ[ಎಲೆಯಡಿಕೆ ಚೀಲ] ಬಗಲಲ್ಲಿ ಇಟ್ಟುಕೊಂಡು ಹೊರಟುಬಿಟ್ಟರೆ ಕೆಲವರ ಕೆಲಸವೇ ಮನೆ ಮನೆ ಸುತ್ತುವುದು. ಹಕ್ಕೆಚಡಿ ಪುರಾಣ ಹೇಳುತ್ತಾ ಇದ್ದಿದ್ದಕ್ಕೆ ಕೈಕಾಲು ಸೇರಿಸಿಯೋ ಅಥವಾ ಇಲ್ಲದಿದ್ದುದನ್ನೋ ಊದ್ದುದ್ದ ನಾಲಿಗೆ ಎಳೆಯುತ್ತಾ ಹೇಳುವುದರಲ್ಲಿ ಇಂಥಾ ಜನ ನಿಸ್ಸೀಮರಿರುತ್ತಾರೆ. ಹೆರೋಲೆ ಅಪ್ಪಚ್ಚಿ ಸತ್ತಮೇಲೆ ಚೌಡೀ ಮತ್ತು ಜಟ್ಗ, ಕೀಳು ವಗೈರೆ ದೇವತೆಗಳನ್ನು ಪೂಜೆಮಾಡಿ ಆದರಿಸುವವರು ಕಮ್ಮಿ ಆಗಿದ್ದಾರೆ ಎಂಬುದು ಕೆಲವರ ಹೇಳಿಕೆಯಾದರೂ ಪೂಜೆಗಳಂತೂ ನನಗೆ ತಿಳಿದ ಮಟ್ಟಿಗೆ ಇನ್ನೂ ನಡೆದೇ ಇವೆ.

ನಾನೇನಾದರೂ ಬಿದ್ದು ಕಲ್ಲಿಗೆ ತಲೆಬಡಿದು ತಲೆಯೊಡೆದು ಸತ್ತುಹೋಗದೇ ಬದುಕಿ ನಿಮ್ಮೆದುರು ಬರೆಯುತ್ತಿದ್ದರೆ ಅದಕ್ಕೆ ಕಾರಣ " ನಿನಗೆ ಹೆದರಿಕೆಯಾಗದಂತೇ ಜೊತೆಗೇ ಶ್ರೀಧರಸ್ವಾಮಿಗಳಿದ್ದಾರೆ " ಎಂದ ಮನೆಯ ಹಿರಿಯರ ಮಾತು. ಇಲ್ಲದಿದ್ದರೆ ಈಲೋಕಕ್ಕೆ ಬಂದಷ್ಟೇ ವೇಗದಲ್ಲಿ ನಾನು ಮರಳಿಯೂ ಬಿಡುತ್ತಿದ್ದೆ! ಚಿಕ್ಕವರಿರುವಾಗ ನಮಗೇನು ಪೇಟೇ ಮಕ್ಕಳ ಥರ ಯೂನಿಫಾರ್ಮು, ಸಾಕ್ಸು ಶೂ ಹಾಕಿ ಶಾಲೆಗೆ ಕಳಿಸುವುದು ಕರಕೊಂಡುಬರುವುದು ಇದೆಲ್ಲಾ ಇರಲಿಲ್ಲ. ಸಿಕ್ಕಿದ ಚಡ್ಡಿಯನ್ನು ಸಿಗಿಸಿಕೊಂಡು ಸವೆದ ಹವಾಯಿಯಿದ್ದರೆ ಅದನ್ನೆ ಮೆಟ್ಟಿಕೊಂಡು ಹತ್ತು ಹರದಾರಿ ನಡೆದೇ ಹೋಗಬೇಕಾಗಿತ್ತು ಶಾಲೆಗೆ. ಅದುಬಿಡಿ ಶಾಲೆಗೆ ಹೋಗುವುದಕ್ಕಿಂತಾ ಹೆಚ್ಚಾಗಿ ನೆನೆಸಿದ ಭತ್ತ ತೆಗೆದುಕೊಂಡು ಮಿಲ್ಲುಮಾಡಿಸಿ ಅವಲಕ್ಕಿತಯಾರಿಸಿಕೊಂಡು ಬರುವುದು, ಅಂಗಡಿಯಿಂದ ರವೆ, ಹಿಟ್ಟು, ತರಕಾರಿ ಇತ್ಯಾದಿಗಳನ್ನು ಅರ್ಜೆಂಟಿಗೆ ತಂದುಕೊಡುವುದು, ಕೊಟ್ಟಿಗೆಯಲ್ಲಿರುವ ನಮ್ಮ ಹಸುಗಳು ಹಾಲು ಬತ್ತಿಸಿಕೊಂಡಾಗ ನಿತ್ಯ ನಿಗದಿತವೇಳೆಗೆ ಹಾಲು ಸಿಗುವ ಬೇರೇ ಮನೆಯಿಂದ ಹಾಲು ತರುವುದು, ಬೇಸಿಗೆಯಾದರೆ ಅಡಕೆ ತೋಟಕ್ಕೆ ನೀರುಬಾರಿ ಮಾಡುವುದು, ಭಟ್ಟರ[ಪುರೋಹಿತರ] ಮನೆಗೆ ಹೋಗಿ ಅವರು ನಮ್ಮಲ್ಲೇ ಬಿಟ್ಟುಹೋಗಿದ್ದ ಸಿದ್ದಕ್ಕಿ-ಕಾಯಿಗಳನ್ನು ತಲ್ಪಿಸಿಬರುವುದು ಇತ್ಯಾದಿ ’ಕುನ್ನಿಗೆ ಕೆಲಸವಿಲ್ಲ ಕೂರಲು ಪುರುಸೊತ್ತಿಲ್ಲ’ ಎಂಬ ರೀತಿ ಕೆಲಸಗಳು ಅಡರಿಕೊಂಡೇ ಇರುತ್ತಿದ್ದವು.

ಕೊಟ್ಟ ಯಾವುದೇ ಕೆಲಸಗಳನ್ನು ಸ್ವಲ್ಪ ಆಟವಾಡುತ್ತ ತಡವಾಗಿ ಮಾಡುವುದಿತ್ತು ಬಿಟ್ಟರೆ ಕೆಲಸ ಮಾಡುವುದಿಲ್ಲ ಎನ್ನುವುದು ನಮ್ಮ ಜಾಯಮಾನವೇ ಅಲ್ಲ. ಕೆಲಸದ ಜೊತೆಜೊತೆಗೆ ಆಗಾಗ ಹಕ್ಕೆಚಡಿ ಪುರಾಣಿಕರ ಕಥೆಗಳನ್ನು ಕೇಳುವುದೂ ಅಭ್ಯಾಸವಾಗಿಬಿಟ್ಟಿತ್ತು! ತಂಬೂರಿಯಂಥಾ ಬಾಯಿತುಂಬಾ ಕವಳದ ಕೆಂಪುಎಂಜಲನ್ನು ತುಂಬಿಕೊಂಡು ಮಧ್ಯೆ ಮಧ್ಯೆ " ಗಾಗಾಕ್ ಗಾಗಾಕ್ " ಎಂದು ಗಂಟಲಿಗೆ ಹೋಗುವ ಆ ಮಿಶ್ರಣವನ್ನು ವಾಪಾಸು ಬಾಯಿಗೆ ಎಳೆಯುತ್ತಾ ತಮ್ಮದೇ ಲೋಕದಲ್ಲಿ ಆನಂದತುಂದಿಲರಾಗಿ ವಿಹರಿಸುತ್ತಾ ಕಥಾಕಾಲಕ್ಷೇಪಮಾಡುವ ಜನ ಬಂದುಬಿಟ್ಟರೆ, ಹಾಗೆ ಬಂದ ಅವರನ್ನು ಜಾಸ್ತಿಹೊತ್ತು ಕೂರಿಸಿಕೊಳ್ಳಲೂ ಆಗದೇ ಎದ್ದುಹೋಗು ಎಂದು ಹೇಳಲೂ ಆರದೇ ತಮ್ಮೊಳಗೇ ಒದ್ದಾಡುವ ನಮ್ಮ ಹಿರಿಯರು ಬರಿದೇ ಹೂಂ ಗುಟ್ಟಿದರೂ ಸಾಕು ಅವರು ಕಥೆಹೇಳುತ್ತಲೇ ಇರುತ್ತಿದ್ದರು! ಕೆಲವು ಕಥೆಗಳು ನಮ್ಮನೆಯ ಹಿರಿಯರಿಗೆ ಬೇಡವಾದರೂ ನಮಗೆ ಬೇಕಾಗಿಬಿಡುತ್ತಿದ್ದವು !!

ಗುಂಡಬಾಳೆಯಲ್ಲಿ ವರ್ಷದ ೫ ತಿಂಗಳು ಒಂದೇ ವೇದಿಕೆಯಲ್ಲಿ ಹರಕೆಬಯಲಾಟ[ಯಕ್ಷಗಾನ]ನಡೆಯುತ್ತದೆ-ಅದು ಕರ್ನಾಟಕದ ಮಂದಿ ಸೇರಿದಂತೇ ಬೇರೇ ರಾಜ್ಯಗಳವರಿಗೂ ಗೊತ್ತು. ಯಾಕೆಂದರೆ ಜಿ.ಎಸ್.ಬಿ ಸಮುದಾಯದ ಸಂಪರ್ಕ ಎಲ್ಲೆಲ್ಲಾ ಇದೆಯೋ ಅಲ್ಲೆಲ್ಲಾ ಆ ಸುದ್ದಿ ಹಬ್ಬಿರುತ್ತದೆ. ಮೊದಲು ಎಲ್ಲಿನೋಡಿದರೂ ಗದ್ದೆಯೋಗದ್ದೆ ಎನ್ನುವ ಸುಮಾರು ೪೦-೫೦ ಎಕರೆಗಿಂತಾ ಹೆಚ್ಚಿನ ಬಹುದೊಡ್ಡ ಬಟಾಬಯಲಿನ ನಡುವೆ ಒಂದುಜಾಗದಲ್ಲಿ ಸಣ್ಣಗೆ ಚಪ್ಪರಕಟ್ಟಿ ಅದನ್ನೇ ವೇದಿಕೆ ಎಂದು ತಿಳಿದು ಆಟ ನಡೆಸುತ್ತಿದ್ದರು. ನಾವೆಲ್ಲಾ ಹುಟ್ಟುವುದಕ್ಕೂ ಮುಂಚೆ ರಾತ್ರಿ ಬೆಳಕಿನ ಸಲುವಾಗಿ ದೊಡ್ಡ ದೊಂದಿಗಳನ್ನೂ ಸೀಮೇಎಣ್ಣೆ ಗ್ಯಾಸ್ ಲೈಟ್‍ಗಳನ್ನೂ ಬಳಸಲಾಗುತ್ತಿತ್ತಂತೆ. ವೇದಿಕೆಯ ಇಕ್ಕೆಲಗಳಲ್ಲಿ ಅವುಗಳನ್ನು ಜೋಡಿಸಿ ಬೆಳಕು ಕಾಣುವಂತೇ ಮಾಡಲಾಗುತ್ತಿತ್ತಂತೆ. ಆದರೆ ನಾವೆಲ್ಲಾ ಚಿಕ್ಕವರಿರುವಾಗ ವಿದ್ಯುತ್ತು ಅದಾಗಲೇ ಬಂದಿತ್ತಾದ್ದರಿಂದ ಕಗ್ಗಾಡಿನ ಕುಗ್ರಾಮಗಳಲ್ಲೂ ಕೆಲವುಮಟ್ಟಿಗೆ ವಿದ್ಯುದ್ದೀಪಗಳು ಬಳಕೆಗೆ ಬಂದುಬಿಟ್ಟಿದ್ದವು.

ಗುಂಡಬಾಳೆಯ ಮುಖ್ಯಪ್ರಾಣ ಎಂದೇ ಹೆಸರಾದ ಹನುಮ ಒಂದಾನೊಂದು ಕಾಲಕ್ಕೆ ಪಕ್ಕದಲ್ಲೇ ಹರಿವ ನದಿಯಲ್ಲಿ ಯಾರೋ ಹವ್ಯಕ ಬ್ರಾಹ್ಮಣನೋರ್ವನಿಗೆ ಸ್ನಾನಮಾಡುವಾಗ ಸಿಕ್ಕನಂತೆ. ಸಿಕ್ಕ ಚಿಕ್ಕ ವಿಗ್ರಹವನ್ನು ನದೀ ಮುಖಜ ಭೂಮಿಯಿಂದ ಅನತಿದೂರದಲ್ಲಿ ಪ್ರತಿಷ್ಠಾಪಿಸಿ ಪೂಜೆಮಾಡುತ್ತಿದ್ದ ಆ ಬ್ರಾಹ್ಮಣ ಯಾವಕಾಲದಲ್ಲೋ ವಿಧಿವಶನಾದ. ಆತನ ವಂಶಸ್ಥರೂ ಯಾರೂ ಸರಿಯಾಗಿ ಇರಲಿಲ್ಲವಾಗಿ ಸಹಜವಾಗಿ ಆ ಪ್ರದೇಶದಕ್ಕೆ ಒಲಸೆಬಂದ ಜಿ.ಎಸ್.ಬಿ ಸಮುದಾಯದ ಒಂದೆರಡು ಕುಟುಂಬಗಳು ಹನುಮನ ಪೂಜೆ-ಪುನಸ್ಕಾರಗಳನ್ನು ನೋಡಿಕೊಂಡವು. ಕಾಲಕ್ರಮೇಣ ಹನುಮ ಕುಂತಲ್ಲಿಂದಲೇ ತನ್ನ ಪರಾಕ್ರಮವನ್ನು ತೋರಿಸಿದ. ಯಾವಮಾಯೆಯಲ್ಲಿ ಆಟಬೇಕೆಂದು ಕೇಳಿದನೋ ಗೊತ್ತಿಲ್ಲ ಅಂತೂ ಆಟ ಹರಕೆಯ ರೂಪದಲ್ಲಿ ಕಾಯಂ ಆಗಿಬಿಡ್ತು.

ಯಾರೋ ತಮ್ಮ ಜೀವನದ ಸಮಸ್ಯೆಗಳನ್ನು ಮುಂದಿಟ್ಟು " ಅಪ್ಪಾ ಹನುಮಾ ನಿನಗೆ ಹರಕೆಯಾಟವಾಡಿಸಿ ದಶಾವತಾರದ ದೃಶ್ಯಗಳನ್ನು ತೋರಿಸುವೆನಪ್ಪಾ ದಯಮಾಡಿ ನಮ್ಮ ಕೋರಿಕೆ ನೆರವೇರಿಸಿಕೊಡುತ್ತೀಯಾ ಸ್ವಾಮೀ ? " ಎಂದು ಹರಕೆಮಾಡಿಕೊಂಡು ಹೋದವರಿಗೆ ಅವರ ವಾಂಛೆಗಳು ನೆರವೇರಿದವು,ಕೆಲಸಗಳು ಕೈಗೂಡಿದವು. ಅಂಥಾ ಜನ ಹರಕೆಯಾಟವನ್ನು ನಡೆಸಿಕೊಟ್ಟರು. ಅವರನ್ನು ನೋಡಿ ಮತ್ತಷ್ಟು ಮಂದಿ ಹರಕೆ ಹೊತ್ತುಕೊಂಡರು---ಪಟ್ಟಿ ಬೆಳೆಯುತ್ತಲೇ ಹೋಯಿತು. ಈಗ ನೀವು ಆಟ ಆಡಿಸಲು ಬುಕ್ ಮಾಡಿದರೆ ಪ್ರಾಯಶಃ ಎಳಬರಾದರೆ ನಿಮ್ಮ ಮುಪ್ಪಿನ ವಯಸ್ಸಿಗೆ ಅವಕಾಶ ಸಿಗಬಹುದು, ಹಳಬರಾದರೆ ಹನುಮನ ಹುಟ್ಟೂರುಸೇರಿದಮೇಲೆ ಮುಂದಿನ ತಮ್ಮ ಪೀಳಿಗೆಯವರು ಆ ಅವಕಾಶ ಪಡೆಯಬಹುದು!! ಯಾವುದಕ್ಕೂ ಹನುಮ ಕೃಪೆದೋರಬೇಕು.

ಅಲ್ಲಿನ ಆಟದ ೫ ತಿಂಗಳದ ಅವಧಿಯಲ್ಲಿ ಹುಬ್ಬಾಸಿ ಮತು ವೀರಭದ್ರ ಈ ಎರಡು ಎಕ್ಸ್ಟ್ರಾ ವೇಷಗಳು ನಿಗದಿತ ಕಾಲದಲ್ಲಿ ಬಂದುಗೋಗುತ್ತವೆ-ಅದು ಎಲ್ಲಾ ದಿನಗಳಲ್ಲೂ ಅಲ್ಲ, ಬದಲಾಗಿ ಆ ಸಂಪೂರ್ಣ ಅವಧಿಯಲ್ಲಿ ಆಟದ ಪ್ರಸಂಗಗಳು ಜೋರುಜೋರಾಗಿ ನಡೆಯುತ್ತವೆ ಎನ್ನುವ ದಿನಗಳಲ್ಲಿ ಹುಬ್ಬಾಸಿ ಬರುತ್ತಾನೆ, ಆಟಗಳ ಸೀಸನ್ ಮುಗಿಯುತ್ತಾ ಬರುವಾಗ ವೀರಭದ್ರ ಬರುತ್ತಾನೆ. ಈ ಎರಡೂ ವೇಷಗಳು ವೇದಿಕೆಯಿಂದ ಬಹುದೂರದಲ್ಲಿ ಗುರುತಿಸಿದ ಜಾಗದಿಂದ ವಿಜೃಂಭಣೆಯ ಮೆರವಣಿಗೆಯಲ್ಲಿ ಬರುತ್ತವೆ. ಈ ವೇಷಗಳನ್ನು ಕಟ್ಟಿದವರಿಗೆ ಮೈಮೇಲೆ ಆವೇಶಬರುತ್ತದೆ ಎಂಬುದೊಂದು ಕಲ್ಪನೆ ಇದೆ. ಅದು ಬರಲಿ ಬಿಡಲಿ ಇದೆಲ್ಲಾ ಒಂದು ಭಗವಂತನ ಸೇವೆ. ಹುಬ್ಬಾಸಿ ಎಂಬ ರಕ್ಕಸ ಕರಾವಳಿ-ಮಲೆನಾಡು ಪ್ರಾಂತಗಳಲ್ಲಿ ಹಿಂದೆ ಬಹಳ ಮೆರೆದಿದ್ದಬಗ್ಗೆ ದಾಖಲೆ ಇದೆ. ಬನವಾಸಿಯ ರಾಜಾ ಮಯೂರವರ್ಮ ತನ್ನ ಮಾಂಡಲಿಕರೊಡಗೂಡಿ ಆತನನ್ನು ಸದೆಬಡಿದ ಎಂಬುದು ಇವತ್ತಿಗೆ ಇತಿಹಾಸ. ಅಂತಹ ಹುಬ್ಬಾಸಿಯ ನೆನಪಿನಲ್ಲಿ ಒಮ್ಮೆ ಆ ವೇಷ ಆವೇಶಭರಿತವಾಗಿ ಹನುಮನ ಮುಂದೆ ಗದ್ದೇಬಯಲಿನಲ್ಲಿ ನಿರ್ಮಿತವಾಗಿರುವ ವೇದಿಕೆಯನ್ನೇರಿ ನಡೆದುಹೋಗುತ್ತದೆ. ಈ ಎರಡೂ ವೇಷಗಳಿದ್ದ ದಿನ ಜನ ೫-೬ ಸಾವಿರಕ್ಕೂ ಹೆಚ್ಚುಸಂಖ್ಯೆಯಲ್ಲಿ ಸೇರುತ್ತಾರೆ! ಆವೇಶ ಭರಿತವಾಗಿ ಆ ವೇಷಗಳು ಹೆಜ್ಜೆಹಾಕಿ ಖಡ್ಗ ಝಳಪಿಸಿ ಅಬ್ಬರಿಸಿ ಕೂಗಿ ಗೆಜ್ಜೆಕಾಲನ್ನು ಘಲಿರುಘಲಿರೆಂದು ಬಡಿದು ಹುಬ್ಬು ಹಾರಿಸಿ ಕೇಕೇ ಹಾಕಿಹಾಕಿ ಕೆಂಪುಕಣ್ಣನ್ನು ತಿರುವಿದಾಗ ಜನ ನಿಬ್ಬೆರಗಾಗಿ ನೋಡುತ್ತಾರೆ! ಮಕ್ಕಳ ಚಡ್ಡಿ ಒದ್ದೆಯಾಗುವುದರಲ್ಲಿ ಅನುಮಾನವಿಲ್ಲ!! ವೇಷಗಳು ಇಳಿದುಹೋದ ಬಳಿಕ ನಿಟ್ಟುಸಿರುಬಿಡುವ ಜನರೂ ಇದ್ದಾರೆ. ಇಲ್ಲೊಂಥರಾ ಭಯ-ಭಕ್ತಿಗಳ ಮಿಶ್ರಛಾಪು ! ಎದುರು ದೂರದಲ್ಲಿ ತನ್ನ ದೇವಾಲಯದಲ್ಲೇ ಕುಳಿತ ಹನುಮ ಎಲ್ಲವನ್ನೂ ದಿಟ್ಟಿಸಿ ನೋಡುತ್ತಾನೆ ಎಂಬುದು ಅನಿಸಿಕೆ. ಅದು ಹೌದೂ ಹೌದು. [ಗುಂಡಬಾಳೆಯ ಬಗ್ಗೆ ಮತ್ತೊಮ್ಮೆ ನೋಡೋಣ ಬಿಡಿ, ಇಲ್ಲದಿದ್ರೆ ನಮ್ಮ ಕಥೆ ಕಾದಂಬರಿಯಾದೀತು ! ]

ಇಂಥಾ ಗುಂಡಬಾಳೆಯಲ್ಲಿ ಆಟಗಳ ಸೀಸನ್ ಮುಗಿದು ಓಕುಳಿಯಾಡಿದಮೇಲೆ ಪ್ರತೀ ಅಮವಾಸ್ಯೆಯ ರಾತ್ರಿ ಅದೇ ರಂಗಸ್ಥಳದಲ್ಲಿ ದೆವ್ವಗಳು-ಭೂತಪ್ರೇತಗಳು ತಮ್ಮ ಸೇವೆಯ ಆಟಗಳನ್ನು ನಡೆಸುತ್ತವೆ ಎಂಬುದು ನಮ್ಮ ತಾಂಬೂಲಾನಂದರುಗಳು ಹೇಳುವ ಪುರಾಣ. ಕತ್ತಲಲ್ಲಿ ಅಕಸ್ಮಾತ್ ಎಚ್ಚೆತ್ತು ನೋಡಿದರೆ ಭೂತಗಳು ಗೆಜ್ಜೆಕಟ್ಟಿ ಕುಣಿಯುವುದು ಕಾಣಿಸುವುದಂತೆ. ಥೇಟ್ ಮನುಷ್ಯರ ರೀತಿಯಲ್ಲೇ ಪ್ರಸಂಗಗಳನ್ನು ನಡೆಸುವ ಅವುಗಳು ಏನೋ ಸಂಭಾಶಿಸುವುದು ಕುಣಿಯುವುದು ಎಲ್ಲಾ ಕಂಡರೂ ಯಾವುದೂ ಅರ್ಥವಾಗುವುದಿಲ್ಲವಂತೆ. ಒಂದೊಮ್ಮೆ ಆಗ ಯಾರದರೂ ಅಲ್ಲಿಗೇನಾದರೂ ಹೋದರೆ ಅಪಾಯ ಕಟ್ಟಿಟ್ಟದ್ದು ಎಂಬುದು ನಮ್ಮ ಹಕ್ಕೆಚಡಿ ಪುರಾಣಿಕರ ಅಂಬೋಣ.

ಹೀಗೇ ಕೆಲವು ಆಯಕಟ್ಟಿನ ಜಾಗಗಳನ್ನು ಹೆಸರಿಸುತ್ತಾ ಅವುಗಳ ಸುತ್ತಾ ಬಣ್ಣಬಣ್ಣದ ಕಥೆಗಳನ್ನು ರೋಚಕವಾಗಿ ಹೇಳುತ್ತಾ ಕೂತಿರುವಾಗ ಮಕ್ಕಳಾದ ನಮಗೆ ಒಳಗೊಳಗೇ ಅವ್ಯಕ್ತ ಭಯ, ಆತಂಕ! ಒಬ್ಬರೇ ಓಡಾಡುವಾಗಿನ ಸಂಭವನೀಯತೆಗಳ ಬಗ್ಗೆ ನೆನೆದು ಮೈನಡುಕ. ಇಂಥಾ ಪುಕ್ಕಲು ಶರೀರಿಗಳಾಗಿದ್ದ ನಾವು ಎಲ್ಲಾದರೂ ಒಂಟಿಯಾಗಿ ಬಿಡುವ ಸಾಧ್ಯತೆಗಳನ್ನು ಆದಷ್ಟೂ ತಪ್ಪಿಸಿಕೊಳ್ಳುತ್ತಿದ್ದೆವು. ಆದರೂ ಹಳ್ಳಿಯ ಜೀವನದಲ್ಲಿ ಕೊನೇಪಕ್ಷ ಓಡಾಡುವಾಗಲಾದರೂ ಒಂಟಿಯಾಗಿ ಇರಬೇಕಾಗಿ ಬರಬಹುದಾದ ಪ್ರಮೇಯಗಳು ಹೆಚ್ಚು. ಮೂರು ರಸ್ತೆ ಕೂಡುವ ಜಾಗದಲ್ಲಿ ಎಳನೀರು ಅರಿಷಿನ ಕುಂಕುಮ ಇತ್ಯಾದಿ ಏನಾದರೂ ಕಂಡರೆ ನಮ್ಮ ಪ್ರಸಾದ ಒಣಗಿ ಮೂರು ಮೂರು ದಿನ ನಮಗೆ ಕಕ್ಕಸಿಗೆ ಹೋಗುವ ಗೊಡವೆಯೇ ಇರುತ್ತಿರಲಿಲ್ಲ! ಮೇಲಾಗಿ ಚಿಕ್ಕವರಿರುವಾಗ ಕಟ್ಟಡ ರೂಪದ ಕಕ್ಕಸುಮನೆ ಇರಲಿಲ್ಲ, ನಾವೆಲ್ಲಾ ಯಾರೋ ಹೇಳಿದ್ದನ್ನು ಕೇಳಿಕೊಂಡು ’ಲಂಡನ್ನಿ’ಗೆ ಹೋಗಿಬರ್ತೇವೆ ಎನ್ನುತ್ತಾ ಹೋಗುವುದಾಗಿತ್ತು. ಲಂಡನ್ನಿಗೆ ಹೋಗುವಾಗ ಕೂಡ ಓರಗೆಯ ನಾಕಾರು ಜನ ಮಕ್ಕಳು ಸೇರಿದರೇ ಧೈರ್ಯ. ಯಾಕೆಂದರೆ ನಮ್ಮ ’ಲಂಡನ್ನು’ ಇರುವುದು ಹತ್ತಿರದ ಬೆಟ್ಟದಲ್ಲಿ ! ಬೆಟ್ಟದ ಮರಗಳ ಸಂದಿಯಲ್ಲಿ ಅವಿತು ಕೂತು ನಿರಾಳವಾಗಿ ಹೊರದೂಡಿಬಿಟ್ಟರೆ ಜಗವೇ ಸುಖಮಯ !

’ಲಂಡನ್ನಿಗೆ’ ಕೂತಾಗ ಇಲ್ಲದ ಆಲೋಚನೆಗಳು ಬರುವುದೇ ಜಾಸ್ತಿ! ಕೆಲವು ಕವಿಗಳಿಗೆ, ಕಥೆಗಾರರಿಗೆ ಎಲ್ಲಾ ಸ್ಫೂರ್ತಿ ನೀಡುವ ಸಮಯ ಅದೇ ಅಂತೆ. ನಮಗೆ ಅದು ಹಾಗಾಗಿರದೇ ದೆವ್ವಗಳ ವಿರಾಟ್ ರೂಪಗಳ ಬಗ್ಗೆ ಆಲೋಚಿಸುವ ಕಾಲವಾಗಿರುತ್ತಿತ್ತು. ದೆವ್ವಗಳು ಹೇಗೆಲ್ಲಾ ಇರಬಹುದು, ವಿಕಾರ ಮುಖ, ಹಿಂದೆಮುಂದಾದ ಕಾಲುಪಾದಗಳು, ಊದ್ದುದ್ದ ಉಗುರು ಬೆಳೆದಿರುವ ಕೈಗಳು, ಪೀಚಲು ಶರೀರದ ತುಂಬಾ ಬಿಳೀಬಟ್ಟೆ .....ಇನ್ನೂ ಏನೇನೋ ! ನೆನೆದಾಗ ಒಳಗೆ ಸ್ಟಾಕ್ ಇರುವ ಅಷ್ಟೂ ಚಾಚಿ ಹೊರಬಿದ್ದು ಹೋಗುತ್ತಿತ್ತು-ಮಲಬದ್ಧತೆಯೂ ಇಲ್ಲ ಏನೂ ಇಲ್ಲ; ಎಂಥಾ ಒಳ್ಳೇ ಔಷಧ ನೋಡಿ ! ಲಂಡನ್ನಿಗೆ ಹೋಗುವ ಕೆಲಸ ಮಳೆಗಾಲದಲ್ಲಿ ಸ್ವಲ್ಪ ಪರಿಶ್ರಮದಾಯಕವಾಗಿತ್ತು. ಶಾಲೆಯ ಸಮಯ, ಮಳೆಯಿರದ ಸಮಯ, ಕತ್ತಲೆಯಾಗದ ಸಮಯ, ಜೊತೆಗಾರರು ಸಿಗುವ ಸಮಯ ---ಈ ಎಲ್ಲಾ ಸಮಯಗಳ ಅವಲಂಬನೆ ಅವಲೋಕನ ನಡೆದೇ ಲಂಡನ್ ಕೆಲಸ ಆಗಬೇಕಾಗುತ್ತಿತ್ತು. ಆಮೇಲೆ ನಾವೆಲ್ಲಾ ಸುಮಾರು ಹೈಸ್ಕೂಲಿಗೆ ಹೋಗುವ ಹೊತ್ತಿಗೆ ನಿಧಾನವಾಗಿ ಕಕ್ಕಸುಮನೆಗಳು ತಲೆ ಎತ್ತಿದವು. ಆದರೂ ಹಳೆತಲೆಯಾಗಿದ್ದ ಈಗ ಶಿವನಪಾದ ಸೇರಿರುವ ತಲಗೆರೆ ವೆಂಕಟ್ರಮಣ ಭಟ್ಟರು ಹೇಳಿದ್ದಿಷ್ಟು :

" ನೋಡೋ ಯಾರಾದ್ರೂ ಹೋದ ಜಾಗದಲೆಲ್ಲಾ ಮತ್ತೊಬ್ರು ಹೋಪ್ಲಾಗ ಮಾರಾಯಾ, ಒಂದು ಬಾಣ ಹೊಡದ್ರೆ ಎಷ್ಟು ದೂರ ಹೋಗ್ತೋ ಅಷ್ಟು ದೂರ ಹೋಗಿ ಮಣ್ಣಿನಲ್ಲಿ ಸಣ್ಣ ಕುಳಿ ತೆಗೆದು ಅಲ್ಲಿ ಕಕ್ಕಸುಮಾಡಿ ಮೇಲಿಂದ ಮಣ್ಣುಮುಚ್ಚಿ ತೊಳೆದುಕೊಳ್ಳವು. ಕೈಗೆ ಕಾಲಿಗೆ ಹುತ್ತದ ಮಣ್ಣಿನ್ನು ಹಚ್ಚಿ ತೊಳೆದುಕೊಂಡು ೧೦-೧೨ಸಲ ಬಾಯಿ ಮುಕ್ಕಳಿಸಿ ತೂಪವು. ಆಗಮಾತ್ರ ಅದು ಸರಿಯಾದ ಕೆಲ್ಸ, ಅಲ್ದಿದ್ರೆ ದೋಷ ತಟ್ತು " ಕೊನೇವರೆಗೂ ಕಟ್ಟಿದ ಕಕ್ಕಸುಮನೆಯನ್ನು ಬಳಸುವ ಗೋಜಿಗೆ ಅವರು ಹೋಗಲಿಲ್ಲ; ಬೇಕಾಗಿಯೂ ಬರಲಿಲ್ಲ. ಧೋ ಎಂದು ಸುರಿವ ಮಳೆಗಾಲದಲ್ಲಿ ಸೂರ್ಯ ಕಾಣುವುದೇ ಅಪರೂಪವಾಗಿರುವಾಗ ಒಂದು ಬಾಣ ಹೊಡೆದರೆ ಅದು ತಲ್ಪುವಷ್ಟು ದೂರ ಇರಲಿ, ಪರ್ಯಾಯ ವ್ಯವಸ್ಥೆ ಇದ್ದರೆ ಲಂಡನ್ನಿಗೆ ಹೋಗುವ ಬವಣೆಯೇ ಇರದಿದ್ದರೆ ಎಂಬ ಅಲೋಚನೆಯೂ ಬರುತ್ತಿತ್ತು.

ಮಸುಕಲ್ಮಕ್ಕಿ ಜಟ್ಗ, ಹರ್ನಮೂಲೆ ಜಟ್ಗ ಇಂಥಾ ಜಟ್ಗಗಳೇನೂ ಕಮ್ಮಿ ಅಲ್ಲ ಎಂಬ ಮಾತು ’ತಂಬೂರಿದಾಸರ’ ಬಾಯಿಂದ ಅದಾಗಲೇ ಬಂದಿದ್ದಾಗಿತ್ತು. ರಾತ್ರಿ ಜಟ್ಗನ ಬಲೆಯಲ್ಲಿ ಸದ್ದಾಗುವುದನ್ನು ಕೇಳಬೇಕಂತೆ ! ಚಿತ್ರ-ವಿಚಿತ್ರ ಸದ್ದುಗಳು ಬರುತ್ತವಂತೆ. " ಕುಪ್ಪಯ್ಯ ಶೆಟ್ಟರ ಮಗ ಎಲ್ಲಿಗೋ ಹೋದೋನು ಸರಿರಾತ್ರಿ ಹನ್ನೆರಡು ಗಂಟೆಗೆ ಆ ದಾರಿಯಾಗಿ ಬರುವಾಗ ವಾಹನ ನಿಲ್ಲಿಸಿ ಇಳಿದು ನೋಡಿದನಂತೆ, ನೋಡಿದ್ದೊಂದು ಗೊತ್ತಿ ಬಿಟ್ಟರೆ ಎಚ್ಚರತಪ್ಪಿ ಬಿದ್ದುಬಿಟ್ಟಿದ್ದನಂತೆ. ಅದೆಷ್ಟೋ ಹೊತ್ತಿನ ನಂತರ ಎಚ್ಚರವಾದಾಗ ಯಾರೋ ತಂದು ವಾಹನದಲ್ಲಿ ಹಾಕಿದ್ದರಂತೆ. ಮಾರನೇ ದಿನದಿಂದ ವಾರದದಿನ ಮೇಲೇಳಲೇ ಇಲ್ವಂತೆ.....ಜ್ವರಾ ಅಂದ್ರೆ ಜ್ವರ...ಕತ್ತುರ್ಯೋಜ್ವರ...ಆಮೇಲೆ ಪೂಜೆಕೊಡ್ತೇನೆ ಅಂತ ಹೇಳ್ಕೊಂಡ್ ಮೇಲೆ ಆರಾಮಾಯ್ತಂತೆ " ಇದನ್ನೆಲ್ಲಾ ಕೇಳುವಾಗ ಯಾವ ಮಕ್ಕಳಿಗೆ ಮನಸ್ಸಲ್ಲಿ ಅಲೋಚನೆ ಬರದೇ ಹೋಗುತ್ತದೆ ಹೇಳಿ?

ಹೀಗೇ ಒಮ್ಮೆ ಹಾಲು ತರಲು ಕಬ್ಬಿನಗದ್ದೆಗೆ ಹೋಗಿದ್ದೆ. ಕಬ್ಬಿನಗದ್ದೆ ಎಂದರೆ ಅದು ಈಗ ಕಬ್ಬು ಬೆಳೆಯುವ ಗದ್ದೆಯಲ್ಲ ಬದಲಿಗೆ ಈಗಿರುವುದು ಅಡಕೆ ತೋಟ ಮತ್ತು ಅದರ ಪಕ್ಕ ಎತ್ತರದಲ್ಲಿ ಒಂದು ಮನೆ. ಹಿಂದ್ಯಾವಗ್ಲೋ ಕಬ್ಬು ಬೆಳೆದ ಪ್ರದೇಶ ಅದಾಗಿತ್ತಂತೆ ಅದ್ಕೇ ಆಗಿಂದ ಚಾಲ್ತಿಯಲ್ಲಿರುವ ಹೆಸರು ಕಬ್ಬಿನಗದ್ದೆ. ಕಬ್ಬಿನಗದ್ದೆಯ ಆ ಮನೆಗೆ ನಮ್ಮನೆಯಿಂದ ಒಂದೂವರೆ ಫರ್ಲಾಂಗು ದೂರ. ಸಾಗುವ ಹಾದಿಯ ಒಂದೆ ಅಡಕೆ ತೋಟದ ಸಾಲು, ಇನ್ನೊಂದೆಡೆ ಬೆಟ್ಟ. ನಡುವೆ ಇರುವ ಕಾಲುದಾರಿಯಲ್ಲಿ ನಡೆದುಹೋದರೆ ಕಬ್ಬಿನಗದ್ದೆ ಸೇರಬಹುದು. ಹಾದಿಯ ಮಧ್ಯೆ ಒಂದಷ್ಟು ದೂರ ಯಾವುದೇ ಜನವಸತಿ ಸಿಗುತ್ತಿರಲಿಲ್ಲ. ಅದೂ ಮಳೆಗಾಲದ ದಿನಗಳಲ್ಲಿ ಅಲ್ಲಲ್ಲಿ ಹರಿಯುವ ನೀರಿನ ಝರಿಗಳ ಸದ್ದುಬಿಟ್ಟರೆ ಬೆಟ್ಟದ ಹಕ್ಕಿಗಳ ಕಲರವವೋ ಎಂಥದೋ ನಮಗದೆಲ್ಲಾ ಅಂದು ಬೇಡವಗಿತ್ತು;ಬಚಾವದರೆ ಸಾಕಿತ್ತು ಅಷ್ಟೇ ! " ಹಾಲು ತಂದ್ಯನೋ ? " ಎಂದು ಕೇಳುವ ಹಿರಿಯರಿಗೆ ಹೇಗಾದರೂ ಮಾಡಿ ತಂದುಕೊಡಬೇಕಾಗಿತ್ತು; ಉಪಾಯ ಇರಲಿಲ್ಲ. ನಿರ್ವಾಹವಿಲ್ಲದೇ ಓಡುತ್ತಾ ದಾರಿಗುಂಟ ಕಲ್ಲಿಗೆ ಜಪ್ಪಿ ಗಾಯಗೊಂಡ ಕಾಲುಬೆರಳನ್ನು ಉಜ್ಜುತ್ತಾ ಮತ್ತೆ ತಿರುತಿರುಗಿ ಬೆನ್ನತ್ತಿ ಏನಾದರೂ ಬಂತೋ ಎಂದು ನೋಡಿಕೊಳ್ಳುತ್ತಾ ಸಾಗುವ ನಮ್ಮ ಪಾಡು ನಮಗೆ!

ಅದೂ ಅಮಾವಾಸ್ಯೆಯ ರಾತ್ರಿಯಲ್ಲಿ ಜಟ್ಗ, ಕೀಳು ಎಲ್ಲಾ ಸೇರಿ ಭಜನೆ ಹಾಡುತ್ತಾ ಶಂಖ ಊದುತ್ತಾ ಜಾಗಟೆ ಪಂಚವಾದ್ಯಗಳ ಸಮೇತ ತಮ್ಮ ಜಾಗದಿಂದ ಅದೇ ದಾರಿಯಲ್ಲಿ ಸಾಗಿ ಮತ್ತೊಂದು ಜಾಗಕ್ಕೆ ತೆರಳುತ್ತಿದ್ದವಂತೆ. " ಸುಳ್ಳು ಹೇಳಡ ನೀನು ಕಂಡವರಿದ್ದೊ " ಎಂದು ಹೇಳಿದ್ದ ’ಪುರಾಣಿಕರ’ ಮಾತು ಆಗಾಗ ಜ್ಞಾಪಕಕ್ಕೆ ಬರುತ್ತಿರುತ್ತಿತ್ತು. ಅಕರಾಳ ವಿಕರಾಳ ಮುಖ, ರುಂಡವಿಲ್ಲದ ಶರೀರ ಕುದುರೆಮೇಲೆ ಕುಳಿತು ಓಡುವುದು ಇತ್ಯಾದಿ ವಿಚಿತ್ರ ಕಲ್ಪನೆಗಳನ್ನು ನಮ್ಮಲ್ಲಿ ಸೃಜಿಸಿ ನಮ್ಮ ಜಂಘಾಬಲವೇ ಉಡುಗಿಹೋಗುವಂತೇ ಮಾಡಿದ್ದ ಪುರಾಣಿಕ ಜನ ರಾತ್ರಿಯವೇಳೆ ಮನೆಯಿಂದ ಆಚೆಬಂದು ಮೂತ್ರವಿಸರ್ಜಿಸಲೂ ಆಗದ ಇಕ್ಕಟ್ಟಿನಲ್ಲಿ ನಮ್ಮನ್ನು ಸಿಗಿಸಿಹಾಕಿದ್ದರು! ಆಗೆಲ್ಲಾ ಮನೆಯೊಳಗೇ ಶೌಚಾಲಯ ಬಚ್ಚಲುಮನೆ ಇರಲಿಲ್ಲವಾಗಿ ಒಂದಕ್ಕೋ ಎರಡಕ್ಕೋ ಅಂತೂ ಮನೆಯ ಹೊರಗಡೆ ತೆರಳಲೇ ಬೇಕಾಗಿತ್ತು. " ನಡೆ ಇಪ್ಪ ಜಾಗಕ್ಕೆ ರಾತ್ರಿ ಹೋಪ್ದು ಒಳ್ಳೇದಲ್ಲ, ಅವ್ಕೆ ತೊಂದ್ರೆಕೊಟ್ಟಂಗಾಗಿ ಅವು ತಿರುಗಿ ಬೀಳ್ತೊ " ಎಂದಿದ್ದ ಆ ಜನರ ಮಾತು ಮನದಲ್ಲಿ ಹಗಲಿಗೂ ಪ್ರತಿಧ್ವನಿಸುತ್ತಿತ್ತು.

ಒಂದು ದಿನ ಹಾಲು ತರುವಾಗ ಹಿಂದಿನಿಂದ ಬಸಕ್ಕನೆ ಕಲ್ಲೊಂದು ಬಂದು ಬಿತ್ತು. ಶಿವನೇ ಶ್ರೀರಾಮಚಂದ್ರ, ಇಡಗುಂಜಿ ಮಾಗಣಪತಿ, ಗುಂಡಬಾಳೆ ಹನ್ಮಂತ,ಮುಗ್ವಾ ಸುಬ್ರಹ್ಮಣ್ಯ.....ಕ್ಷಣಮಾತ್ರದಲ್ಲಿ ಅಷ್ಟೂ ದೇವರುಗಳು ನೆನಪಾಗಿದ್ದರು. " ನನ್ನ ರಕ್ಷಣೆ ನಿನ್ನ ಹೊಣೆಯಪ್ಪಾ " ಎಂದು ಪ್ರಾರ್ಥಿಸಿದ್ದೇ ಪ್ರಾರ್ಥಿಸಿದ್ದು ಹೊರತಾಗಿ ತಿರುಗಿ ನೋಡುವ ಯಾವುದೇ ಧೈರ್ಯ ಇರಲಿಲ್ಲ. ಇನ್ನೇನು ಓಡಿ ಹೇಗಾದರೂ ತಪ್ಪಿಸಿಕೊಳ್ಳಲು ಸಾಧ್ಯವೋ ನೋಡಬೇಕು ಎನ್ನುವಷ್ಟರಲ್ಲಿ ಜೋರಾಗಿ ನಗು ಕೇಳಿಸಿತು! ಮತ್ತೂ ಕಂಗಾಲು ಇನ್ನೂ ಕಂಗಾಲು ! ಮುಂದೆ ಇರುವುದು ಮೆಟ್ಟಿಲುಗಳ ದಾರಿ, ಮೆಟ್ಟಿಲು ತಪ್ಪಿ ಕೆಳಗೆ ಬಿದ್ದರೆ ಕೆಳಗಡೆ ಇರುವ ಶಿಲೆಕಲ್ಲುಗಳ ರಾಶಿಗೆ ತಲೆಬಡಿದರೆ ಪರಿಣಾಮ ಏನು ಎಂದು ಹೇಳುವುದು ಕಷ್ಟ. ಹೇಗೂ ಸಾಯುವುದೇ ಎಂದುಕೊಂಡು ಶ್ರೀಧರಸ್ವಾಮಿಗಳನ್ನು ನೆನೆಯುತ್ತಾ ತಿರುಗಿ ನೋಡಿದರೆ ಆಚೆಮನೆ ಮಾಚಣ್ಣ ನಗುತ್ತಾ ನಿಂತಿದ್ದ ! ಆತನಿಗೆ ಮಕ್ಕಳನ್ನು ಹೆದರಿಸಿ ಗೋಳುಹುಯ್ದುಕೊಳ್ಳೋದು ಹವ್ಯಾಸ. ಅದ್ರಲ್ಲೂ ನನ್ನಂಥಾ ಪರದೇಶಿ ಸಿಕ್ಕಿದ್ದಕ್ಕೆ ಬಾಳ ಮಜವಾಗಿತ್ತು ಆತನಿಗೆ. ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ!

ಇಂದಿಗೂ ಊರಿಗೆ ಹೋದಾಗ ದಿನವೆರಡು ತಂಗಲು ಅವಕಾಶ ಸಿಕ್ಕರೆ ಆ ಜಾಗಗಳಿಗೆ ಹೋಗುತ್ತೇನೆ. ಜಾಗದ ರೂಪಗಳು ಬದಲಾದರೂ ನನ್ನ ನೆನಪಲ್ಲಿ ಹಾಗೇ ಉಳಿದಿವೆ. ಅಂದಿನ ದಿನಗಳ ಪೇಚಾಟಗಳನ್ನು ನೆನೆದು ನಗುಬರುತ್ತದೆ. ನನ್ನಂಥಾ ಮಕ್ಕಳು ಈಗ ಯಾರಾದರೂ ಹಾಗೇ ಅದೇ ಸ್ಥಿತಿಯಲ್ಲಿ ಇರಬಹುದೇ ಎಂದುಕೊಳ್ಳುತ್ತೇನೆ. ಜಟ್ಗಗಳು ಸ್ವಲ್ಪ ಕಾಯಿದೆ ಬದಲಿಸಿದ ಹಾಗಿದೆ! ಅವುಗಳ ಬಗ್ಗೆ ಪುರಾಣಕೊರೆಯಲು ಜನರಿಗೆ ಸಮಯ ಇರುವುದಿಲ್ಲವೋ ಏನೋ ! ಅಂತೂ ಪೂಜೆ-ಪುನಸ್ಕಾರಗಳಲ್ಲಿ ಬದಲಾವಣೆ ಇಲ್ಲ. ವಾದ್ಯದ ಮೇಲೆ ಓಡಾಡುವ ’ನಡೆ’ ಬಗ್ಗೆ ಜಾಸ್ತಿ ಮಾತು ಕೇಳಿಬರುವುದಿಲ್ಲ.

Friday, September 16, 2011

" ತಮ್ಮಾ ವಿಶೂ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡುತ್ತೀಯಾ ? "


" ತಮ್ಮಾ ವಿಶೂ, ಜನರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಮಾಡುತ್ತೀಯಾ ? "

ಕಾರಿರುಳ ಕತ್ತಲಲ್ಲಿ ಜೀರುಂಡೆಗಳ ಕೂಗು, ಬಾವಲಿಗಳ ಹಾರಾಟ, ಕಾಡುಪ್ರಾಣಿಗಳ ಸರಸರ ಸಂಚಲನ, ಅಲ್ಲಲ್ಲಿ ನರಿಗಳ ಊಳು, ಕರಡಿಗಳೂ ಇದ್ದಿರಬಹುದಾದ ಪರಿಸರ-ಗೊತ್ತಿಲ್ಲದ ಸಂಗತಿ ! --ಇಂಥಾ ಮಣ್ಣರಸ್ತೆಯಲ್ಲಿ ಯಾವ ಬೆಳಕಿನ ಸಹಾಯವೂ ಇಲ್ಲದ ಆ ಕತ್ತಲಲ್ಲಿ ಬಾಳದೀವಿಗೆಯಾದ ಜ್ಞಾನನದೀವಿಗೆಯನ್ನು ಬೆಳಗುವ ಸಲುವಾಗಿ, ವ್ಯಾಸಂಗಮಾಡುತ್ತಿರುವ ವಿದ್ಯಾಲಯಕ್ಕೆ ತನ್ನ ಓದಿನಲೆಕ್ಕದ ಹಣಪಾವತಿಸುವ ಸಲುವಾಗಿ ಆ ಹಣವನ್ನು ಪಡೆಯಲು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ನಡೆದಿದ್ದ ವಿದ್ಯಾರ್ಥಿಯ ಮನದಲ್ಲಿ ಕಠಿಣ ನಿರ್ಧಾರವೊಂದಿತ್ತು---ತಾನು ಪ್ರಯತ್ನಿಸಿ ಹಲವರ ಬಾಳಿಗೆ ಬೆಳಕಾಗುವುದು ! ಅದೇ ದೃಢವಿಶ್ವಾಸ ಅದೇ ಅಚಲ ನಂಬಿಕೆ ಅದೇ ಸಾಧಿಸುವ ಛಲ ಹುಡುಗನನ್ನು ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೂ ಅಲ್ಲಿಂದ ಮರಳಿ ಬೆಂಗಳೂರಿಗೂ ನಡೆದೇ ಸಾಗುವಂತೇ ಮಾಡಿತ್ತು. ವಿದ್ಯಾರ್ಜನೆಗೆ ಮನೆಯಲ್ಲಿ ಪಡೆದ ಶುಲ್ಕದ ಹೊರತಾಗಿ ಬಿಡಿಗಾಸೂ ಇಲ್ಲದ ಬಡತನಕ್ಕೆ ಆತ ಮರುಗಲಿಲ್ಲ, ಬದಲಾಗಿ ಅದರಿಂದ ನೇರಮಾರ್ಗದಲ್ಲಿ ಬಿಡುಗಡೆ ಬಯಸಿದರು, ಯೋಚಿಸಿದರು, ಯೋಜಿಸಿದರು, ಬೆಳೆದರು, ಹಲವರನ್ನು ಬೆಳೆಸಿದರು ಮತ್ತು ಸ್ವತಃ ತನ್ನ ಜೀವನವನ್ನೇ ದೇಶಕ್ಕಾಗಿ ರಾಜ್ಯಕ್ಕಾಗಿ ದುಡಿಸಿದರು ! ಅಂತಹ ಭಾರತದ ಸುಪುತ್ರ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಹುಟ್ಟಿ ನೂರೈವತ್ತು ವರ್ಷಗಳು ಕಳೆದುಹೋದವು !!

ಜನಸಾಮಾನ್ಯರಾದ ನಾವು ಜಲಪಾತವನ್ನು ಕಂಡರೆ " ಆಹಾಹಾ ಎಂತಹ ಸೌಂದರ್ಯ " ಎನ್ನುತ್ತಾ ಯಾರೋ ತಯಾರಿಸಿದ ಡಿಜಿಟಲ್ ಕ್ಯಾಮರಾ ಹಿಡಿದು ಕ್ಲಿಕ್ಕಿಸುತ್ತಿರುತ್ತೇವೆ ಬಿಟ್ಟರೆ ಅಂತಹದ್ದೇ ಆದ ಜೋಗ ಜಲಪಾತವನ್ನು ಕಂಡಾಗ ಈ ಮಹಾತ್ಮ ಹೇಳಿದ್ದು " ವ್ಹಾಟ್ ಎ ವೇಸ್ಟ್ " ! ಹರಿದು ಪೋಲಾಗುವ ನೀರಿನ ಶಕ್ತಿಯನ್ನೇ ಬಳಸಿ ವಿದ್ಯುತ್ತನ್ನು ತಯಾರಿಸುವ ಅತಿ ದೊಡ್ಡ ಮಟ್ಟದ ಯಂತ್ರಾಗಾರವನ್ನು ರೂಪಿಸಿದ ಸ್ಥಾಪಿಸಿದ ಆ ಮನುಷ್ಯ ಸ್ವತಃ ಅತ್ಯಂತ ಸಣಕಲು ಶರೀರಿ ಎಂಬುದನ್ನು ನೋಡಿದಾಗ ನಾವೆಷ್ಟು ದಂಗಾಗುತ್ತೇವೆ ಅಲ್ವೇ ? ಈ ರಾಜ್ಯದ ಯಾ ದೇಶದ ಯಾರನ್ನೇ ಮರೆತರೂ ವಿಶ್ವೇಶ್ವರಯ್ಯನವರನ್ನು ಮರೆಯಲು ಮತ್ತು ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಯಾಕೆಂದರೆ ದೀಪಕ್ಕೆ ’ಇದು ದೀಪ ಇರುತ್ತದೆ ’ ಎಂದು ಯಾರೂ ಹೊಸದಾಗಿ ಬೋರ್ಡುಹಾಕುವುದು ಬೇಕಾಗುವುದಿಲ್ಲ!

ಬಡತನದಲ್ಲಿ ಕಷ್ಟಪಟ್ಟು ಎಲ್ಲೆಲ್ಲೋ ಹೋಗಿ, ರಾಜರ ಕಾಲದ ಬೀದಿ ದೀಪದಲ್ಲಿ[ಹರಳೆಣ್ಣೆ ದೀಪ] ಓದಿ ಸಿವಿಲ್ ವಿಭಾಗದಲ್ಲಿ ತಾಂತ್ರಿಕ ಪದವಿಯನ್ನು ಪೂರೈಸಿದ ಶ್ರೀಯುತರು ಮೈಸೂರು ರಾಜ್ಯದಲ್ಲಿ ಅಂದಿಗೆ ಇರುವ ಕೊರತೆಗಳನ್ನು ನೀಗಿಸಲು ಯೋಜನೆಗಳನ್ನು ತನ್ನೊಳಗೇ ನಿಯೋಜಿಸಿಕೊಂಡರು. ಆ ಸಮಯದಲ್ಲಿ ಹಿ ಈಸ್ ಒನ್ ಮ್ಯಾನ್ ಆರ್ಮಿ ! ಕರ್ನಾಟಕಕ್ಕೆ ಕುಡಿಯುವ ನೀರಿನ, ವಿದ್ಯುತ್ತಿನ್ನ ಅವಶ್ಯಕತೆಯಿತ್ತು. ಹಡೆದ ಅಮ್ಮ ಮನೆಯಲ್ಲಿ " ತಮ್ಮಾ ವಿಶೂ ಜನರಿಗೆ ಕುಡಿಯಲು ನೀರನ್ನು ಪೂರೈಸುವ ಯಾವುದಾದರೂ ಕೆಲಸವನ್ನು ಮಾಡಪ್ಪಾ " ಎಂದು ಹರಸಿದ್ದರು, ಹಡೆದಮ್ಮನ ಹರಕೆಯ ಫಲ ಕಾವೇರಿ ನದಿಗೆ ಸೇತುವೆಯ ನಿರ್ಮಾಣ! ಕನ್ನಂಬಾಡಿಕಟ್ಟೆ ನಿರ್ಮಾಣಕ್ಕೂ ಮುನ್ನ ಮೈಸೂರಿಗೆ ತೆರಳಿದ್ದ ಅವರನ್ನು ಕಂಡ ರಾಜರಿಗೆ ಅನಿಸಿದ್ದು ’ಯಾವನೋ ಪೋರ ನದಿಗೆ ಗೋಡೆ ಕಟ್ಟಿ ನೀರು ಶೇಖರಿಸುತ್ತಾನಂತೆ ಎಲ್ಲಾದರೂ ಉಂಟೇ ? ’ ಎಂಬಂಥದು. ಆದರೂ ತಮ್ಮ ಸಹಜ ರಾಜಸ ಮನೋವೃತ್ತಿಯಿಂದ ರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು " ಆಗಲಿ ತಮ್ಮಾ ಇದೋ ಹಣ ನೀಡುತ್ತೇನೆ ಆದರೆ ಮತ್ತೆ ಕೇಳಬೇಡ-ಇಷ್ಟರಲ್ಲೇ ಮುಗಿಸಬೇಕು ಅಥವಾ ನಿಲ್ಲಿಸಿಬಿಡಬೇಕು ಅಲ್ಲದೇ ಇದು ಮೇಲಾಗಿ ಮೈಸೂರು ರಾಜ್ಯದ ಪ್ರಜೆಗಳ ಮಾನಾಪಮಾನದ ಪ್ರಶ್ನೆ ಅದನ್ನೇ ಪಣವಾಗಿಸಿದ್ದೇನೆ ಕಟ್ಟು ಹೋಗು " ಎಂದು ಹೇಳಿಬಿಟ್ಟರಂತೆ ! ಕಟ್ಟೆ ಪೂರ್ತಿಯಾಗುವುದಕ್ಕೂ ಮುನ್ನ ಹಣ ಖಾಲಿಯಾಯಿತು. ಮತ್ತೆ ರಾಜರನ್ನು ಕಂಡಿದ್ದಾಯ್ತು. ರಾಜರು ನೋಡುತ್ತಿದ್ದಂತೆಯೇ

" ಇನ್ನು ಹಣಕೊಡಲು ಸಾಧ್ಯವಿಲ್ಲ " ಎಂದುಬಿಟ್ಟರು.

" ಹಣವಲ್ಲ ಸ್ವಾಮೀ, ಸದ್ಯಕ್ಕೆ ಕನ್ನಡನಾಡಲ್ಲಿ ಮದ್ಯದ ಅಂಗಡಿಗಳಿಗೆ ಅನುಮತಿಯಿಲ್ಲ, ನಮ್ಮ ಕಟ್ಟೆ ಕಟ್ಟುವ ಆ ಪ್ರದೇಶದಲ್ಲಿ ೫-೬ ಮದ್ಯದ ಅಂಗಡಿಗಳನ್ನು ಇಡಲು ಅನುಮತಿ ಬೇಕು "

" ಅಲ್ಲಯ್ಯಾ ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧವಯ್ಯಾ ? "

" ಮಹಸ್ವಾಮೀ, ಕಟ್ಟೆ ಕಟ್ಟುವ ಕೂಲಿ ಕೆಲಸದವರು ಶನಿವಾರದ ಸಂಬಳ ಪಡೆದು ನೆರೆರಾಜ್ಯವಾದ ತಮಿಳು ಪ್ರಾಂತದಲ್ಲಿರುವ ಸೆರೆ ಅಂಗಡಿಗಳಿಗೆ ಹೋಗಿ ಅಲ್ಲಿ ಕುಡಿದು ಕಾಲಹರಣಮಾಡುತ್ತಾರೆ ಮತ್ತು ಸೋಮವಾರದ ತನಕ ನಮಗೆ ಅವರು ಮರಳಿ ಸಿಗುವುದಿಲ್ಲ. ಅವರು ದುಡಿದ ಹಣ ಇಲ್ಲೇ ಈ ರಾಜ್ಯದ ಅಂಗಡಿಯನ್ನೇ ಸೇರಿದರೆ ಅದೇ ಹಣವನ್ನು ಮರುವಿನಿಯೋಗಿಸುವುದರ ಜೊತೆಗೆ ಅವರನ್ನೂ ಇಲ್ಲೇ ಇರಿಸಿಕೊಂಡು ಜಾಸ್ತಿ ಕಾಲಹರಣವಾಗದಂತೇ ಬೇಗ ಮುಗಿಸಲು ಅನುಕೂಲವಾಗುತ್ತದೆ "

ರಾಜರು ತಲೆದೂಗಿದರು ! ಕನ್ನಂಬಾಡಿ ಎದ್ದು ನಿಂತಿತು, ಹಲವರಿಗೆ ಅನುಕೂಲವಯಿತು.

ಅವರು ಬದುಕಿದ್ದ ಕಾಲಘಟ್ಟದಲ್ಲೇ ಒಮ್ಮೆ ಕೃಷ್ಣರಾಜಸಾಗರ ಬತ್ತಿಹೋಯಿತು! ಜನರೆಲ್ಲಾ ಬೊಬ್ಬಿಟ್ಟರು, ಹಲವು ಮೇಧಾವಿಗಳು " ಏನು ಮಾಡೋದು ವಿಶ್ವೇಶ್ವರಯ್ಯನೋರೇ ? " ಎನ್ನುತ್ತಾ ಬಂದರು. ಆಗ ನಿಧಾನವಾಗಿ ಸರ್ ನೀಡಿ ಉತ್ತರ ಒಂದೇ " ಇದು ಸಕಾಲ, ದೇವರೇ ನೀಡಿದ್ದು-ಹಾಗೆಲ್ಲಾ ಮತ್ತೆ ಮತ್ತೆ ಲಭಿಸುವುದಿಲ್ಲ, ಹೋಗಿ ಜಲಾಶಯದ ಹೂಳನ್ನು ತೆಗೆಸಿಬಿಡಿ " !

೨೦೦೪ರ ಬೇಸಿಗೆಯಲ್ಲೂ ಜಲಾಶಯ ಖಾಲೀ ಆಗಿತ್ತು, ಆದರೆ ಹೂಳೆತ್ತುವ ಯಾವುದೇ ಸಾಹಸಕ್ಕೆ ಯೋಜನೆಗಳಿರಲಿ ಜಾಸ್ತಿ ನೀರು ನಿಂತರೆ ಒತ್ತಡದಿಂದ ಶತಮಾನದಷ್ಟು ಹಳತದ ಕಟ್ಟೆ ಒಡೆದರೆ ಎಂಬ ಹೆದರಿಕೆಗೆ ಯಾವ ರಾಜಕಾರಣಿಯೂ ಯಾವ ಎಂಜಿನೀಯರೂ ಮನಸ್ಸುಮಾಡಲಿಲ್ಲ! ಸರಕಾರಕ್ಕೇ ಸವಾಲು ಎಸೆಯುವ ಛಾತಿ ಇದ್ದುದು ಒಬ್ಬರಲ್ಲೇ ಅದು ಆಗಿಹೋಗಿರುವ ನಮ್ಮ ವಿಶ್ವೇಶ್ವರಯ್ಯನವರಲ್ಲಿ ಮಾತ್ರ!

ಮೈಸೂರಿನ ದಿವಾನರಾಗಿ ನೇಮಕಗೊಳ್ಳುವ ಮುನ್ನಾದಿನ ಹತ್ತಿರದ ಬಂಧು-ಮಿತ್ರ-ಆಪ್ತೇಷ್ಟರನ್ನು ಕರೆದು ಅವರು ಹೇಳಿದ್ದೇನು ಬಲ್ಲಿರೋ ? " ನಾಳೆಯಿಂದ ಮಹಾರಾಜರು ನನಗೆ ಅತ್ಯಂತ ದೊಡ್ಡ ಜವಾಬ್ದಾರಿಯೊಂದನ್ನು ಕೊಡಲಿದ್ದಾರೆ. ನನ್ನ ಹೆಸರನ್ನು ಬಳಸಿಕೊಂಡು ಅದನ್ನು ಎಲ್ಲೂ ದುರುಪಯೋಗಮಾಡದಂತೇ ಇರಿ ಎನ್ನಲು ನಿಮ್ಮನ್ನೆಲ್ಲಾ ಕರೆದಿದ್ದೇನೆ " ಹೇಳಿದ್ದು ಮಾತ್ರವಲ್ಲ ದಿವಾನಖಾನೆಯಿಂದ ಹಿಡಿದು ರಾಜರ ಸರಕಾರದ ಯಾವುದೇ ಅಂಗಗಳಲ್ಲೂ ತಮ್ಮ ಕುಟುಂಬ-ಬಳಗದ ಯಾರಿಗೂ ತನ್ನ ಪ್ರಭಾವದಿಂದ ನೌಕರಿ ಕೊಡಿಸುವ ಸರ್ಕಸ್ಸು ಮಾಡಲಿಲ್ಲ. ಪ್ರತಿಭಾನ್ವಿತರಿಗೆ ಎಲ್ಲಿದ್ದರೂ ಆದ್ಯತೆಯಿದೆ ಎಂಬುದು ಅವರ ಅನಿಸಿಕೆಯಾಅಗಿತ್ತು, ಅಭಿಪ್ರಾಯವಾಗಿತ್ತು.

ಸರಕಾರದ ಬೇರೇ ವಿಭಾಗದಲ್ಲಿ ಕೆಲಸಮಡುತ್ತಿರುವಾಗ ಒಮ್ಮೆ ಮಹಾರಾಜರು ಅವರನ್ನು ಕರೆದು
" ವಿಶ್ವೇಶ್ವರಯನೋರೇ, ನೀವು ಸ್ಥಾಪಿಸಿದ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಈಗ ನಷ್ಟದಲ್ಲಿ ನಡೆಯುತ್ತಿದೆಯಂತೆ ಅದಕ್ಕೇನಾದರೂ ಮಾಡಲು ಸಾಧ್ಯವೇ ? " ಎಂದರು. ಅಲ್ಲಿಗೆ ತೆರಳಿ ಅಲ್ಲಿನ ನ್ಯೂನತೆಗಳನ್ನು ಅವಲೋಕಿಸಿದ ಸರ್ ಎಂ.ವಿ ನಷ್ಟ ಭರಿಸುವ ಹಲವು ಮಾರ್ಗಗಳನ್ನು ತೋರಿಸಿಕೊಟ್ಟರಲ್ಲದೇ ಸ್ವತಃ ತಾನೇ ನಿಂತು ಅಮೇರಿಕಾದಂತಹ ರಾಷ್ಟ್ರಕ್ಕೆ ಕಬ್ಬಿಣ-ಉಕ್ಕು ಪೂರೈಸುವ ದೊಡ್ಡ ಆರ್ಡರ್ ಪಡೆದು ನಷ್ಟವನ್ನು ನಿವಾರಿಸಿಯೂ ಬಿಟ್ಟರು!

ವಿದೇಶವೊಂದರಲ್ಲಿ ಕನ್ಸಲ್ಟಂಟ್ ಆಗಿ ಮುದಿಪ್ರಾಯದ ಎಂಬತ್ತರಲ್ಲಿ ಭೇಟಿ ನೀಡಿದ್ದಾಗ, ಅಲ್ಲಿಯೂ ಯಾವುದೋ ಕಟ್ಟೆ[ಡ್ಯಾಮ್] ಕಟ್ಟುವ ಬಗ್ಗೆ ಮಾಹಿತಿ ನೀಡಬೇಕಾಗಿತ್ತಂತೆ. ಅಲ್ಲಿನ ತಜ್ಞರು ತಂದುಹಾಕಿರುವ ದೇಶವಿದೇಶಗಳ ಶಿಲೆಯ ಕಲ್ಲುಗಳ ಪೈಕಿ ಅತ್ಯಂತ ಉತ್ಕೃಷ್ಟವೆಂದು ಪರಿಗಣಿಸಿ ಹೆಚ್ಚಿನ ಹಣಕೊಟ್ಟು ತರಿಸಿದ್ದ ಒಂದು ರಾಶಿಯ ಕೆಲವು ಕಲ್ಲುಗಳನ್ನು ತಮ್ಮ ಊರುಗೋಲಿನಿಂದ ಬಡಿದು ನೋಡಿದ ಸರ್ ಎಂ.ವಿ " ಈ ರಾಶಿ ಸುತರಾಂ ಬಳಕೆಗೆ ಸಲ್ಲ " ಎಂದುಬಿಟ್ಟರಂತೆ! ಕೆಲವರು ಸರ್ ಎಂ.ವಿ.ಗೆ ವಯಸ್ಸಾಯ್ತು ಅರಳು-ಮರುಳು ಎಂದುಕೊಂಡು ನಕ್ಕರೆ ಅವರಲ್ಲಿಯೇ ಕೆಲವರು ’ದೆರ್ ಮಸ್ಟ್ ಬಿ ಎ ಬ್ರೇನ್ ಬಿಹೈಂಡ್ ದಿಸ್ ರಾಂಡಮ್ ಚೆಕಿಂಗ್’ ಎಂದುಕೊಂಡು ಆ ಕಲ್ಲುಗಳಮೇಲೆ ಪ್ರಮಾಣಿಸಲು ಒತ್ತಡಹಾಕಿದಾಗ ಇನ್ನೂ ಸಾಕಷ್ಟು ಒತ್ತಡ ಬೀಳುವ ಮೊದಲೇ ಕಲ್ಲುಗಳು ಪುಡಿಪುಡಿಯಾದವಂತೆ ! ಇಂತಹ ವಿಶ್ವೇಶ್ವರಯ್ಯ ಕೇವಲ ಕರ್ನಾಟಕ ಎಂದು ಪಕ್ಷಪಾತ ಮಾಡದೇ ಇಡೀ ದೇಶಕ್ಕಾಗಿ ದುಡಿದರು. ವಿದೇಶಗಳಿಗೂ ಸಹಕರಿಸಿದ ಏಕೈಕ ತಜ್ಞ ಅವರಾಗಿದ್ದಾರೆ. ಒರಿಸ್ಸಾ, ಹೈದರಾಬಾದ್, ಬಿಹಾರ್ ಮುಂತಾದ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆಗಳಿದ್ದವು; ಉತ್ತರವಾದುವೊಂದೇ ಸರ್. ಎಂ.ವಿಯವರ ಸಲಹೆ!

ಕೇವಲ ಸಿವಿಲ್ ಎಂಬ ವಿಭಾಗದಲ್ಲಿ ಗುರುತಿಸಿಕೊಳ್ಳದೇ ಎಲ್ಲಾರಂಗಗಳಲ್ಲೂ ತಮ್ಮ ಪ್ರತಿಭೆಯನ್ನು ತೋರಿಸಿದವರು ಸರ್. ಎಂ.ವಿ. ಜನತೆಗೆ ಅಂದಿನಕಾಲದಲ್ಲೇ ಮೈಸೂರು ಬ್ಯಾಂಕ್ ಸ್ಥಾಪಿಸಿಕೊಟ್ಟರು, ಮೈಸೂರು ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯನ್ನು ಆರಂಭಿಸಿದರು, ತನಗೆ ರಾಜರು ಬಹುಮಾನವಾಗಿ ನೀಡಿದ ಹಣದಲ್ಲಿ ಮೈಸೂರಿನಲ್ಲಿ ಜಯಚಾಮರಜೇಂದ್ರ ಪಾಲಿಟೆಕ್ನಿಕ್ ಮತ್ತು ಬೆಂಗಳೂರಿನಲ್ಲಿ ಸಿಲ್ವರ್ ಜ್ಯೂಬಿಲಿ ಪಾಲಿಟೆಕ್ನಿಕ್ ಹೀಗೇ ಎರಡು ಪಾಲಿಟೆಕ್ನಿಕ್‍ಗಳನ್ನು ನಿರ್ಮಿಸಿ ತಾಂತ್ರಿಕ ವಿದ್ಯೆ ಹಲವರಿಗೆ ಸುಲಭದಲ್ಲಿ ದೊರೆಯುವಂತೇ ಮಾಡಿದರು ಮಾತ್ರವಲ್ಲ ಎಲ್ಲಿಯೂ ತಮ್ಮ ಹೆಸರನ್ನು ಇಡಗೊಡಲಿಲ್ಲ ! ಎಂಜಿನೀಯರಿಂಗ ಕಾಲೇಜು ಆರಂಭಿಸಿದರು, ಭದ್ರಾವತಿ ಕಬ್ಬಿಣ-ಉಕ್ಕು ಕಾರ್ಖಾನೆ ಆರಂಭಿಸಿದರು ಹೀಗೇ ಒಂದೇ ಎರಡೇ ಆನೆ ನಡೆದದ್ದೇ ದಾರಿ ಎನ್ನುವ ಹಾಗೇ ಸರ್. ಎಂ.ವಿ. ನಡೆಸಿದ್ದೆಲ್ಲವೂ ಫಲಪ್ರದವಾಗಿವೆ; ಲಕ್ಷೋಪಲಕ್ಷ ಜನರಿಗೆ ಅನುಕೂಲ ತಂದಿವೆ.

ಇಂತಹ ಮಹಾನ ವ್ಯಕ್ತಿ ಜಪಾನಿಗೆ ಒಮೆ ಭೇಟಿ ನೀಡಿದ್ದಾಗ ಅಲ್ಲಿನ ಮುತ್ಸದ್ಧಿಯೊಬ್ಬರು ಇವರನ್ನು ಕಂಡು ಮಾತನಡಿದರಂತೆ " ನೀವು ಭಾರತೀಯರಿ ಅತಿ ಬುದ್ಧಿವಂತರು, ಆದರೆ ನೀವು ತೋರಿಸಿದ ಗುಣಮಟ್ಟದ ವಸ್ತುಗಳನ್ನು ಕಳಿಸುವಾಗ ಗುಣಮಟ್ಟವನ್ನು ಬದಲಿಸುವುದರಲ್ಲೂ ನಿಷ್ಣಾತರು ಹಾಗಾಗಿ ನಾವು ನಿಮ್ಮನ್ನು ನಂಬುವಹಾಗಿಲ್ಲ " ---ಈ ವಿಷಯ ಸರ್. ಎಂ.ವಿ.ಗೆ ಮನದಲ್ಲಿ ಕೊನೇವರೆಗೂ ಕೊರೆಯುತ್ತಿತ್ತಂತೆ. ಇನ್ನೊಮ್ಮೆ ಅಮೇರಿಕಾಕ್ಕೆ ಹೋದಾಗ ನ್ಯೂಯಾರ್ಕ ನಗರದಲ್ಲಿ ಅವರಿಗೆ ಹಲ್ಲಿನ ತೊಂದರೆ ಕಾಡಿತಂತೆ. ಅಲ್ಲಿನ ಹಲ್ಲಿನ ವೈದ್ಯರೊಬ್ಬರಲ್ಲಿಗೆ ತೆರಳಿದ ಸರ್.ಎಂ.ವಿ ಚಿಕಿತ್ಸೆ ಪಡೆದು ವೈದ್ಯರ ಶುಲ್ಕವನ್ನು ಒಂದು ಲಕೋಟೆಯಲ್ಲಿಟ್ಟು ಪಾವತಿಸಿ ಬಂದರಂತೆ. ಅದಾದ ವಾರದಲ್ಲೇ ಸರ್. ಎಂ.ವಿ ಭಾರತಕ್ಕೆ ಮರಳುತ್ತಿರುವಾಗ ವಿಮಾನ ನಿಲ್ದಾಣದಲ್ಲಿ ಯಾರೋ ತಮ್ಮನ್ನು ಹುಡುಕಿಬಂದ ಸಂದೇಶವನ್ನು ಪಡೆದು ನೋಡಲಾಗಿ ಆ ಹಲ್ಲಿನ ವೈದ್ಯರು ನಿಂತಿದ್ದರಂತೆ. ವಿಚಾರಿಸಲಾಗಿ ತಮಗೆ ಶುಲ್ಕಕ್ಕಿಂತ ತುಸು ಜಾಸ್ತಿ ಹಣ ಪಾವತಿಸಿರುವುದರಿಂದ ಅದನ್ನು ಮರಳಿ ಕೊಡುವ ಸಲುವಾಗಿ ಸರ್.ಎಂ.ವಿಯವರನ್ನು ಹುಡುಕಿಕೊಂಡು ಆ ವೈದ್ಯ ಅಲ್ಲಿಗೆ ಹಾಗೆ ಬಂದಿದ್ದರು! " ಇರಲಿ ಬಿಡಿ, ತಮ್ಮ ಉತ್ತಮ ಚಿಕಿತ್ಸೆಗೆ ಅದು ಹೆಚ್ಚೇ ? " ಎಂದು ಸರ್ ಕೇಳಿದರೂ ಆ ವೈದ್ಯರು ಅದನ್ನು ಇಟ್ಟುಕೊಳ್ಳದೇ ಮರಳಿಸಿರುವುದು ಅಲ್ಲಿನ ಜನರ ನಿಯತ್ತನ್ನು ತೋರಿಸುತ್ತದೆ ಎಂಬುದನ್ನು ಸರ್. ಎಂ.ವಿ ಆಗಾಗ ಹೇಳುತ್ತಿದ್ದರಂತೆ. ನಾವು ಬಿಡಿ ಭಾರತೀಯರು ಯಾರನ್ನು ಬಿಟ್ಟಿದ್ದೇವೆ ನಾವು? ಸಾರ್ವಜನಿಕ ಬೀದಿಯಲ್ಲಿ ನಿಂತು ಅಣ್ಣಾಹಜಾರೆಗೆ ಜೈ ಎನ್ನುವ ನಮ್ಮೆಲ್ಲರೊಳಗೇ ನಿಯತ್ತಿಲ್ಲದ ಸ್ವಾರ್ಥದ ರಕ್ಕಸ ಆಗಾಗ ಎದ್ದು ನಿಂತು ಮೈಕೊಡವಿ ತನ್ನ ಇರುವನ್ನು ಬೇರೆಯವರಿಗೆ ತೋರಿಸುತ್ತಾನೆ. ಪ್ರಾಮಾಣಿಕತೆ ಇಲ್ಲದ ಜೀವನ ಎಲ್ಲಕ್ಕಿಂತ ಹೀನ ಎಂಬುದು ಸರ್. ಎಂ.ವಿ.ಯವರ ಅಂಬೋಣವಾಗಿತ್ತು.

ಇಡೀ ಬೆಂಗಳೂರು ಕೊಳೆಗೇರಿ ಆಗದಿರಲು ಕಾರಣ ಹಳೆಯ ಬೆಂಗಳೂರು ನಗರದ ರೂಪುರೇಷೆಗಳನ್ನು ಸರ್. ಎಂ.ವಿ. ತಿದ್ದಿದರು, ನಗರಕ್ಕೆ ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಕೆಯ ಸೂತ್ರಗಳನ್ನು ನಿರ್ಮಿಸಿದರು. ಇದೂ ಅಲ್ಲದೇ ಇಂದಿನ ಬೃಹತ್ತಾಗಿ ಬೆಳೆದ/ಬೆಳೆಯುತ್ತಲೇ ಇರುವ ಬೆಂಗಳೂರಿನ ಇನ್ನರ್ ಮತ್ತು ಔಟರ್ ರಿಂಗ್ ರೋಡ್‍ಗಳನ್ನು ಸರ್.ಎಂ.ವಿ ಮೊದಲೇ ಗುರುತಿಸಿ ತಿಳಿಸಿದ್ದರಂತೆ ಎಂದರೆ ಅವರೆಷ್ಟು ಪಂಡಿತರಬಹುದು. ನಾವು ಚಿಕ್ಕವರಿದ್ದಾಗ ಕೆಲವು ಕಥೆಗಳನ್ನು ಕೇಳಿದ್ದೆವು. ಅವುಗಳಲ್ಲಿ ಒಂದು ಬ್ರಿಟಿಷರು ವಿಶ್ವೇಶ್ವರಯ್ಯನವರ ಮೆದುಳಿಗೆ ಹಣಕೊಟ್ಟು ಕೊಂಡುಕೊಳ್ಳಲು ಮುಂದಾಗಿದ್ದರಂತೆ ಎಂಬುದು ! ಅದು ನಿಜವೋ ಸುಳ್ಳೋ ಅರಿವಿಲ್ಲ ಆದರೆ ಸಮಗ್ರ ಜಗತ್ತಿನ ಸಕಲದೇಶಗಳ ತಜ್ಞ-ವಿಜ್ಞಾನಿಗಳ, ಅಭಿಯಂತರರುಗಳ ದೃಷ್ಟಿ ಆ ಕಾಲಕ್ಕೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕೃಶಕಾಯದ ವಿಶ್ವೇಶ್ವರಯ್ಯನವರಮೇಲೆ ನೆಟ್ಟಿದ್ದುದಂತೂ ನಿಜ.

ಇಂತಹ ಮಹಾನ್ ವ್ಯಕ್ತಿಗಳನ್ನು ನೋಡಿದರೆ ನಮಗನ್ನಿಸುವುದು " ಸಂಭವಾಮಿ ಯುಗೇ ಯುಗೇ " ಎಂಬ ಭಗವಂತನ ಗೀತಯ ವಚನ! ಎಲ್ಲಿ ಪ್ರಜೆಗಳಿಗೆ ಆಪತ್ತು-ವಿಪತ್ತು ಅತಿರೇಕಕ್ಕೆ ಹೋಗುತ್ತದೋ ಆಗ ತನ್ನ ಆವಿರ್ಭಾವ ಮಾನವ ಶರೀರದಲ್ಲಿ ಆಗುತ್ತದೆ ಎಂಬುದು. ಸರ್.ಎಂ.ವಿ ಯವರ ಮನೆತನದಲ್ಲಿ ಹಿಂದಕ್ಕೆ ನೋಡಿದರೆ ಅಂತಹ ಪ್ರಕಾಂಡ ಪಂಡಿತರಾಗಲೀ ಮೇಧಾವಿಗಳಾಗಲೀ ಜಾಸ್ತಿ ಆಂಗ್ಲವಿದ್ಯೆ/ಪದವಿ ಪಡೆದವರಾಗಲೀ ಇರಲಿಲ್ಲ. ಅವರ ನಂತರದಲ್ಲೂ ಮುಂದೆ ಇಲ್ಲೀವರೆಗೆ ಅವರ ವಂಶದಲ್ಲಿ ಯಾರೂ ಅಂತಹ ಮೇಧಾವಿ ಹುಟ್ಟಿ ಬರಲಿಲ್ಲ. ಒಂದೊಮ್ಮೆ ಸರ್.ಎಂ.ವಿ ಹುಟ್ಟಿಬರದಿದ್ದರೆ ಇಂದು ನಾವೆಲ್ಲಾ ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು ? --ಅದು ಊಹಿಸಲಸಾಧ್ಯ. ಕರ್ನಾಟಕದ ಬಹುಭಾಗಕ್ಕೆ ವಿದ್ಯುತ್ತು ಪೂರೈಸುವ ಶರಾವತಿ ಜಲವಿದ್ಯುತ್ ಯೋಜನೆಯನ್ನು ರೂಪಿಸಿದ ಆ ಪುಣ್ಯಾತ್ಮನ ಅನುಗ್ರಹದಿಂದ ಮನೆಮನೆಯಲ್ಲೂ ಇಂದು ಟಿವಿ,ಫ್ರಿಜ್ಜು, ವಾಶಿಂಗ್ ಮಶಿನ್, ಮಿಕ್ಸರ್, ಗ್ರೈಂಡರ್, ಓವನ್, ಗೀಸರ್, ಕಂಪ್ಯೂಟರ್ .....ಈ ಎಲ್ಲಾ ಯಂತ್ರಗಳನ್ನು ನಡೆಸುವ ಅನುಕೂಲ ಲಭ್ಯವಾಗಿದೆ, ಕತ್ತಲೆಯ ಮನೆಗಳು ಬೆಳಕು ಕಂಡಿವೆ!

ಸರ್.ಎಂ.ವಿಯನ್ನು ಉತ್ತಮ ಆಡಳಿತಗಾರನೆನ್ನಬಹುದೇ? ಉತ್ತಮ ತಂತ್ರಜ್ಞಾನಿ ಎನ್ನಬಹುದೇ ? ನಿಜವಾದ ದೇಶಭಕ್ತ ಎನ್ನಬಹುದೇ? ನಿಸ್ವಾರ್ಥ ಕರ್ಮಯೋಗಿ ಅನ್ನಬಹುದೇ? ಉತ್ತಮ ವಾಗ್ಮಿ ಎನ್ನಬಹುದೇ? ಉತ್ತಮ ನಿರ್ದೇಶಕ ಎನ್ನಬಹುದೇ? ಉತ್ತಮ ಮಾರ್ಗದರ್ಶಕ ಎನ್ನಬಹುದೇ? ಉತ್ತಮ ಮಾರ್ಕೆಟರ್ ಎನ್ನಬಹುದೇ ? ಭಗವದ್ಗೀತೆಯ ಹಲವು ಅಂಶಗಳನ್ನು ತನ್ನ ಕೃತಿಗಳಲ್ಲಿ ತೋರಿಸಿದ ಅವರಿಗೆ ಯಾವ ಹೆಸರಿನಿಂದ ಕರೆದರೂ ಅದು ಸಮಂಜಸವೆನಿಸುತ್ತದೆ. ಕೆಲವು ವಿಗ್ರಹಗಳ ದೃಷ್ಟಿ ಎಲ್ಲಿನಿಂತರೂ ನಮ್ಮನ್ನೇ ನೋಡುವ ಭಾಸವಾಗುವಂತೇ ಇನ್ನೂ ಕೆಲವು ಗುಡ್ಡಗಳು ಪರ್ವತಗಳು ಒಂದೊಂದು ಕಡೆಯಿಂದ ಒಂದೊಂದು ಆಕಾರದಿಂದ ಕಂಗೊಳಿಸುವಂತೇ ಸರ್ ಎಂ.ವಿ ಕೂಡ ಸರ್ವತ್ರ ಕಾಣಿಸಿಕೊಳ್ಳುತ್ತಾರೆ. ಬಡಕಲು ಶರೀರದ ಸಣ್ಣತಲೆಯೊಳಗಿನ ’ದೊಡ್ಡ ತಲೆ’ಯಲ್ಲಿ ಅದೇನಿತ್ತೋ ಜಗನ್ನಿಯಾಮಕನೇ ಬಲ್ಲ ! ಇವತ್ತಿನ ಬೆಂಗಳೂರಿನ ’ವಿಶ್ವೇಶ್ವರಯ್ಯ ಟಾವರ್’ ಎಂಬ ಜಾಗದಲ್ಲಿ ಮನೆಮಾಡಿಕೊಂಡು ವಾಸವಿದ್ದ ಸರ್.ಎಂ.ವಿ ತಮ್ಮ ಇಳಿಜೀವನವನ್ನು ಕೊನೆಯವರೆಗೂ ಅಲ್ಲೇ ಕಳೆದರಂತೆ. ದೇಹವಿಸರ್ಜಿಸಿದಾಗ ಅವರ ಖಾತೆಯಲ್ಲಿದ್ದ ೩೨೦೦೦ ರೂಪಾಯಿಗಳನ್ನು ಅವರ ಮುಪ್ಪಿನಲ್ಲಿ ಜೊತೆಯಲ್ಲಿ ಸಹಕರಿಸಿಕೊಂಡಿದ್ದ ಒಂದಿಬ್ಬರು ಹುಡುಗರಿಗೆ ಸೇರಬೇಕು ಎಂದು ಬರೆದಿದ್ದರಂತೆ! ಅದು ಬಿಟ್ಟರೆ ಇನ್ನೇನೂ ಅವರದಾದ ಆಸ್ತಿ ಇಲ್ಲ ! ಇಂದಿನ ಅಭಿಯಂತರರುಗಳು ಹೊಡೆಯುವ ಕೋಟಿಗಟ್ಟಲೆ ಹಣ ಆಸ್ತಿ-ಪಾಸ್ತಿ ನೋಡಿದರೆ ನಿಜಕ್ಕೂ ಸರ್.ಎಂ.ವಿ ದೇವಮಾನವರಾಗಿ ಕಾಣುತ್ತಾರೆ! ನಮ್ಮಪುಣ್ಯ ನಾವು ಅವರನ್ನು ಕನ್ನಡನಾಡಿನಲ್ಲಿ ಪಡೆದಿದ್ದೆವು; ನಮ್ಮ ಭಾಗ್ಯ ಅವರು ನಮಗಾಗಿ ಬಹಳಷ್ಟು ಕಟ್ಟಿಕೊಟ್ಟರು.

ಸರ್ ಎಂ.ವಿ ಒಮ್ಮೆ ಎಲ್ಲಿಗೋ ಹೋಗಿದ್ದಾಗ ಮಾರ್ಗಮಧ್ಯೆ ತಮ್ಮ ಮುದ್ದೇನಹಳ್ಳಿ ಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳನ್ನು ಭೇಟಿ ಆಗಬೇಕಾಯಿತು. ಮಕ್ಕಳಮೇಲಿನ ಪ್ರೀತಿಯಿಂದ ಅಂದಿನ ಕಾಲಕ್ಕೆ ಹತ್ತುಸಾವಿರದಲ್ಲಿ ಸಿಹಿತಿನಿಸು/ಚಿಕ್ಕ ಕೊಡುಗೆ ತರಿಸಿ ಎಲ್ಲಾ ಮಕ್ಕಳಿಗೂ ವಿತರಿಸಿದ ಸರ್ ಎಂ.ವಿ ಅಲ್ಲಿನ ಜನರ ಒತ್ತಾಯದ ಮೇಲೆ ಹತ್ತು ನಿಮಿಷ ಭಾಷಣಮಾಡಬೇಕಾಗಿ ಬಂತಂತೆ. ಯಾವಾಗಲೂ ಪೂರ್ವತಯಾರಿಯಿಲ್ಲದೇ ಭಾಷಣಮಾಡಲು ನಿರಾಕರಿಸುತ್ತಿದ್ದ ಅವರು ಅಂದು ಹಾಗೆ ಮಾಡದಾದರು. ಸಭೆ ಮುಗಿಯಿತು. ಅವರು ಮರಳಿ ಬೆಂಗಳೂರಿಗೆ ಬಂದಮೇಲೆ ತಮ್ಮ ಮಾತು ಮಕ್ಕಳಿಗೆ ರುಚಿಸಿತೋ ಇಲ್ಲವೋ ಎಂಬ ಅನಿಸಿಕೆಯಿಂದ ಇನ್ನೊಮ್ಮೆ ತಾವು ಅಲ್ಲಿಗೆ ಬರುವುದಾಗಿ ಘೋಷಿಸಿ ಮತ್ತೆ ತೆರಳಿ ಮತ್ತೆ ಸಿಹಿತಿನಿಸುಗಳನ್ನು ವಿತರಿಸಿ ತಯಾರಿಸಿಕೊಂಡ ಭಾಷಣವನ್ನು ಮಂಡಿಸಿದರಂತೆ ! ಮಕ್ಕಳನ್ನೂ ಅವಗಣನೆ ಮಾಡದ ಅವರ ಮನಸ್ಸು ಯಾವುದೇ ಕೆಲಸವನ್ನು ಮಾಡುವಾಗಲೂ ಪರಿಪೂರ್ಣತೆಯನ್ನು ಬಯಸುತ್ತಿತ್ತು ಎಂಬುದಕ್ಕೆ ಇದು ಉದಾಹರಣೆ. ಹೇಳುತ್ತಾ ಹೋದರೆ ಮುಗಿಯದ ಚರಿತ್ರೆ, ಸರ್.ಎಂ.ವಿ ವ್ಯಕ್ತಿ ಎನ್ನುವುದಕ್ಕಿಂತ ದಂತಕಥೆಯಾದ ಶಕ್ತಿ ಎನ್ನುವುದು ಉತ್ತಮ. ಜೀವನದಲ್ಲಿ ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದು ಮತ್ತು ಉದ್ಯೋಗಶೀಲರಾಗಿ ಪರಿಪೂರ್ಣವಾಗಿ ತೊಡಗಿಕೊಂಡು ನಮ್ಮನ್ನೇ ನಾವು ಆಗಾಗ ಅವಲೋಕಿಸಿಕೊಳ್ಳುತ್ತಾ ಮಾಡುವ ಕೆಲಸಗಳಲ್ಲಿ ಪರಿಪಕ್ವತೆ ಪಡೆದರೆ ಅದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವವಾಗಿದೆ. ಹಾಗೆ ಬದುಕೋಣ ಅಲ್ಲವೇ ? ನಮಸ್ಕಾರ.

Tuesday, September 13, 2011

ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!


ಒದರಿದನು ತಾಂ 'ಕೃಷ್ಣರಾಯುಡು' ವಿಜಯನಗರಧಿಪ !!

[ನಾಕಾರು ದಿನ ಕೆಲವರನ್ನು ಹೀಗೇ ಸ್ತುತಿಸೋಣ ಎಂಬ ತುಂಬುಹೃದಯದ ಹಂಬಲದಿಂದ ಮೊದಲನೆಯದಾಗಿ ಇಂದು ಜನಾರ್ದನ ಭಜನೆ!]

ಗದರಿದನು ಗಣಿರಾಯನುದಯಿಸಿ
ಹೆದರಿಸುತ ಹಲವರನು ಹಣದೊಳು
ಒದರಿದನು ತಾಂಕೃಷ್ಣರಾಯುಡುವಿಜಯನಗರಧಿಪ !!
ಸದರಿ ಮಾನವ ಹುದುಗಿ ನಿಧಿಗಳ
ಬದರಿನಾರಾಯಣನ ಮೀರಿಸೆ
ಚದುರಿನಿಂತನು ರಾಜಕೀಯದ ಬಿದಿರು ಬೊಂಬೆಗಳ !

ಎದುರು ಜಾವದ ಮೂರುಗಂಟೆಗೆ
ಖದರುವೇಷವದೈದು ಕೋಟಿದು
ನಿದಿರೆ ತೊರೆದರು ನೆಂಟರಿಷ್ಟರು ಅದನು ನೋಡುವೊಲು !
ಮಧುರ ನುಡಿಗಳ ಕೇಳಿ ವಿನಯದಿ
ಅಧರವಾಡದೆ ಶರಣು ನಿಂದರು
ಪದರಪದರದಿ ಕಾಸನಿರಿಸಿದ ದೊರೆಗೆ ವಂದಿಸುತ !!

ಗೆದರಿ ದಾಖಲೆ ಕಾಗದಂಗಳ
ಮುದುರಿ ಸಿಬಿಐ ಜನಂಗಳು

ಉದಯನುದಿಸುವ ಮೊದಲೆ ಹಾಜರು ಬದಲಿ ಗುರುತಿನಲಿ !
ಮದಿರೆ ಮಾನಿನಿ ಹಣದ ಥೈಲಿಯ
ಉದುರಿಸಿದರದನೊಲ್ಲೆನೆಂದರು
ಅದಿರು ದಂಧೆಯ ಪ್ರಮುಖ ಕುಳವನು ಹದನೆ ಕರೆದೊಯ್ದು !!

ಉದರ ಭರ್ತಿಗೆ ಎದುರು ಖರ್ಚಿಗೆ
ಮೊದಲಿರುವ ಮೂವತ್ತು ಸಾವಿರ
ಅದರಲೇ ಅತಿಕಡಿಮೆ ಬಳಸುತ ಸರಳ ತಾನೆಂದ !
ಕುದುರದಾಯಿತು ಯಾವ ಆಮಿಷ
ಕುದುರೆಗಳು ಮಾರಾಟಗೊಳ್ಳವು
ಬೆದರಿನಿಂದನು ಕಂಬಿಯೆಣಿಸುತ ತಾ ಜನಾರ್ದನನು !!

Sunday, September 11, 2011

'ಹಯಗ್ರೀವ' ಪುರಾಣ !


'ಹಯಗ್ರೀವ' ಪುರಾಣ !

ಪುರಾಣ ಹೇಳುವುದರಲ್ಲಿ ನನ್ನದು ಎತ್ತಿದಕೈ ಎಂಬುದು ನೀವೇ ಹೇಳಿದ ಹಾಗಿತ್ತಪ್ಪ, ಅದನ್ನು ವಾಪಸ್ಸು ಪಡೆದುಕೊಂಡಿರೋ ಅಲ್ಲಾ ಇನ್ನೂ ಭಿನ್ನಮತವಿಲ್ಲದ ಸಹಮತ ಇದೇಯೋ ಅದರ ಅರಿವು ಬರಬೇಕಾದರೆ ನಿಮ್ಮ ವೋಟ್ ಆಫ್ ಕಾನ್ಫಿಡೆನ್ಸ್ ಕರೆಯಬೇಕಾಗುತ್ತದೇನೋ. ಒಂದು ಮಾತು ನೆನಪಿರಲಿ ಮಹನೀಯರೇ, ನಾನು ಬರೆಯಲು ಕುಳಿತ ಖುರ್ಚಿ ನನ್ನ ಸ್ವಂತದ್ದು, ಈ ಖುರ್ಚಿಗಂತೂ ಚುನಾವಣೆ ಇಲ್ಲ-ನಾನಿರುವರೆಗೆ ನನ್ದೇ ಆಗಿರುತ್ತದೆ ಎಂಬುದನ್ನು ನಿಮ್ಮೆಲ್ಲರಿಗೆ ತಿಳಿಸಲು ವಿಚಿತ್ರವಾಗಿ ನಕ್ಕು ಹೇಳುತ್ತಿದ್ದೇನೆ. ಡೀನೋಟಿಫಿಕೇಶನ್ನು ಗಣಿವ್ಯವಹಾರ ಯಾವುದರಲ್ಲೂ ನಾನು ಸೇರಿಕೊಂಡಿಲ್ಲ ಎಂಬುದು ಅಣ್ಣಾ ಹಜಾರೆಯಾಣೆ ಸತ್ಯ-ಅದು ತಮಗೂ ಗೊತ್ತಿರುವ ವಿಷಯವಾಗಿರಬಹುದು ಎಂಬ ಮನೋಭಾವನೆ ನನ್ನದು. ಕಾಸುಕೊಟ್ಟು ಯಾವುದೇ ಪ್ರಶಸ್ತಿಯನ್ನು ಪಡೆದುಕೊಳ್ಳಲಾಗದ ನಿರ್ಜೀವಿ ನಾನು ಎಂಬುದೂ ಕೂಡ ಈಗಾಗಲೇ ನಿಮಗೆ ಮನದಟ್ಟಾಗಿರುವುದರಿಂದ ಆ ಬಗ್ಗೆ ಜಾಸ್ತಿ ಸ್ಕ್ರೂ ಹಾಕುವುದು ಬೇಡ.

ಅಷ್ಟಾದಶ ಪುರಾಣಗಳನ್ನು ಓದೀ ಓದೀ ಕೂಚುಭಟ್ಟರಾದ ನಮ್ಮ ಸೊಂಡೆ ತಿಪ್ಪಾಭಟ್ಟರ ಖಾಸಾ ದೋಸ್ತರಾದ ಕುಳ್ ತಿಪ್ಪಾಭಟ್ಟರ ಸುದ್ದಿ ಹೇಳುವರೇ ತಮ್ಮಲ್ಲಿಗೈತಂದೆ. ಈ ಸಲ ಮತ್ತೆ ಆರಂಭದ ಶ್ಲೋಕಗಳನ್ನೆಲ್ಲಾ ಹೇಳುತ್ತಾ ಕೂರುವುದಿಲ್ಲ-ಹೇಳೀ ಕೇಳೀ ಮೊದಲೇ ಪುರಾಣ...ಇನ್ನೂ ಉದ್ದವಾದರೆ ಎದ್ದು ಓಡಿಹೋದರೆ ಏನುಗತಿ ? ಹಾಗೂ ಕಟ್ಟಾ ಸಂಪ್ರದಾಯವಾದಿಗಳು ಈಗ ಮಾತನಾಡುವ ಹಾಗಿಲ್ಲ ಯಾಕೆಂದ್ರೆ ’ಕಟ್ಟಾ’ ಎಂಬುದಕ್ಕೆ ದಿನಕ್ಕೊಂದು ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಆರಂಭದ ಪುಣ್ಯಕಾಲದಲ್ಲಿ ನಿಮಗೊಂದು ಹಿತವಚನ ಹೇಳಿಕೊಡುತ್ತೇನೆ ಕೇಳುವಂಥವರಾಗಿ--ಒಂದೊಮ್ಮೆ ಯಾವುದೇ ಕಾರಣಕ್ಕೆ ಯಾರೇ ಶ್ರೀಕೃಷ್ಣ ಜನ್ಮಸ್ಥಾನ ಸೇರಿದರೂ ಒಳಸೇರಿತ್ತಿದ್ದಂತೇಯೇ ವಿಚಿತ್ರವಾದ ಕಾಯಿಲೆಗಳಿವೆ ಎಂದು ಮಾಧ್ಯಮಗಳಿಗೆ ಹೇಳಿಕೆ ಬರುವಹಾಗೇ ಮಾಡಿ, ನಿಧಾನವಾಗಿ ಯಾವುದಾದರೂ ವೈದ್ಯರನ್ನು ಗುತ್ತಿಗೆ ಹಿಡಿದು ಆಸ್ಪತ್ರೆ[ದಡ]ಸೇರಿ ಬಿಡಿ. ಅಲ್ಲಿಗೆ ನೀವು ಆಲ್ಮೋಸ್ಟು ಆಚೆ ಬಂದಹಾಗೇ ಎಂದು ತಿಳಿಯಿರಿ!

ಮೈಮೇಲೆ ದರ್ಶನ ಬರುತ್ತದೆ ಎಂಬುದು ನಮ್ಮ ಕರಾವಳಿ ಜಿಲ್ಲೆ ಕಡೆ ಮಾತು. ತೂಗುದೀಪದ ಬೆಳಕಲ್ಲಿ ದೇವರನ್ನು ಕಂಡ ಜನ ಹೊರಗಿನ ಸೂರ್ಯನ ಪ್ರಭೆಯಲ್ಲಿ ದರ್ಶನವನ್ನು ಸರಿಯಾಗಿ ಪಡೆದುಕೊಂಡು ಭ್ರಾಂತಿಕಳೆದವರಗಿದ್ದಾರೆ! ಈ ಕನ್ನಡ ದೇಶದಲ್ಲಿ ಇನ್ನೆಷ್ಟು ಜನರಿಗೆ ’ದರ್ಶನ’ ಬಂದು ಇಳಿಯಬೇಕೋ ಗೊತ್ತಾಗುತ್ತಿಲ್ಲ, ಆದರೆ ಹಲವಾರು ಜನರಿಗೆ ’ದರ್ಶನ’ ಬರುವುದು ಇನ್ನೂ ಲೋಕಕ್ಕೆ ತಿಳಿದಿಲ್ಲ, ಒಂದೊಂದಾಗಿ ಹೊರಬರುತ್ತದೆ: ಕಥೆಯಲ್ಲ-ಜೀವನ!

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಮರಮಾನಂದಮಾಧವಮ್ ||

ಅಪರೂಪಕ್ಕೆ ಈ ಸತ್ಯ ವಾಕ್ಯದ ಅರ್ಥ ಜನರಿಗೆ ಆಗುತ್ತಿದೆ ಎಂಬುದು ಜನಜನಿತವಾದ ಸಂಗತಿಯಾಗಿದೆ. ಉಪ್ಪು ತಿಂದವ ನೀರು ಕುಡೀಲೇಬೇಕು ಎಂಬ ಅಪ್ಪಟ ಕನ್ನಡದ ಸ್ಲೋಗನ್ನು ಬಳಸಿ ರೋಷ ತೋರ್ಪಡಿಸಿದ ನಮ್ಮ ಬಾಂಧವರ ಕ್ಲೇಶ ನಿವಾರಣೆಗಾಗಿ ತಿಪ್ಪಾ ಭಟ್ಟರು ’ ಹಯಗ್ರೀವ’ ಮಾಡಿದ್ದಾರೆ !

ಸ್ವಸನಸ್ಪರ್ಶನೋ ವಾಯುಃ ಮಾತುರಿಷ್ವಾ ಸದಾಗತಿಃ |
ಪ್ರಷದಷ್ವೋ ಗಂಧವಹೋ ಗಂಧವಾಹಾ ನಿಲಾಶುಗಾಃ ||

ತಪ್ಪೆಷ್ಟು ಸರಿಯೆಷ್ಟು ಎಂಬ ಅರಿವಿಲ್ಲದೇ ಈ ಮೇಲಿನಂತೇ ವಾಯುವರ್ಣನೆಯನ್ನು ಈಗಲೇ ಮಾಡಿಬಿಟ್ಟಿದ್ದೇನೆ, ಸಂಸ್ಕೃತ ವಿದ್ವಾಂಸರೇ ದಯಮಾಡಿ ತಪ್ಪಿದ್ದರೆ ಹೊಟ್ಟೆಗೆ ಹಾಕಿಕೊಳ್ಳಿ. ಯಾಕೆ ವಾಯುಸ್ತುತಿಮಾಡಿದೆ ಎಂಬುದನ್ನು ನಿಮಗೆ ಮುಂದೆ ಹೇಳುತ್ತಾ ಹೋಗುತ್ತೇನೆ.

ವಾಲಿ ಸುಗ್ರೀವ ಇಂಥವರ ಬಗ್ಗೆ ಕೇಳಿದ ನಮ್ಮಲ್ಲಿ ಕೆಲವರಿಗೆ ಹಯಗ್ರೀವನೆಂಬ ರಕ್ಕಸನ ಬಗೆಗೂ ತಿಳಿದಿರಲು ಸಾಕು. ಕೆಲವರಲ್ಲಿ ಹಯಗ್ರೀವ ದೇವರು ಎಂಬ ನಂಬಿಕೆಯೂ ಇದೆ. ಆದರೆ ನಮ್ಮ ತಿಪ್ಪಾ ಭಟ್ಟರಿಗೆ ಹಯಗ್ರೀವ ಎಂದರೆ ಒಂದು ಸಿಹಿ ತಿನಿಸು. ತಿಪ್ಪಸಂದ್ರದ ಮೊದಲನೇ ಹಂತದ ಮೂರನೇ ರಸ್ತೆಯ ನಾಕನೇ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಗುಡಾಣ ಹೊಟ್ಟೆಯ ಕುಳ್ಳಗಿನ ಆಸಾಮಿಯನ್ನು ನೀವು ನೋಡಿರಲಿಕ್ಕೂ ಸಾಕು! ನೋಡಿಲ್ಲ ಎಂದರೆ ಬಿಡಿ ಪರವಾ ಇಲ್ಲ ನಾನೇ ಹೇಳುತ್ತಿದ್ದೇನೆಲ್ಲ ಅವರ ಬಗ್ಗೆ ನೋಡುವುದಕ್ಕಿಂತಾ ಕೇಳುವುದು ಭಾರೀ ಇದೆ.

ಸ..ರಿ...ಗ..ಮ..ಪ ಅಂತಲೇ ಇರ್ತಿದ್ದ ಭಟ್ಟರದ್ದು ಅಡುಗೆ ವೈವಾಟು. ಅಲ್ಲೀ ಇಲ್ಲಿ ಪ್ರೀತಿಯಿಂದ ಕರೆದೋರ ಮನೆಗೆ ಅಡಿಗೆ ಮಾಡಲಿಕ್ಕೆ ಹೋಗಿ ಕೊಟ್ಟ ಅಷ್ಟಿಷ್ಟು ಹಣವನ್ನು ಎತ್ತಿಕೊಂಡು ಕಮಕ್ ಕಿಮಕ್ ಎನ್ನದೇ ಮನೆಕಡೆ ಹೆಜ್ಜೆಹಾಕುವ ಬಡಪಾಯಿ ಬ್ರಾಹ್ಮಣ ಶ್ರೀಮಾನ್ ತಿಪ್ಪಾ ಭಟ್ಟರು. ತಿಪ್ಪಸಂದ್ರಕ್ಕೆ ಅವರು ಬರುತ್ತಿದ್ದುದನ್ನು ಬೆಂಗಳೂರು ಮಹಾನಗರ ಪಾಲಿಕೆಯವರು ಗಮನಿಸಿರಬೇಕು ಅದಕ್ಕೇ ಇರಬೇಕು ಅದು ತಿಪ್ಪ ಸಂದ್ರ ! ಸಾವಿರ ತೂತುಗಳಿರುವ ಹಳೇ ಕೊಡೆ ಸಲ್ಪ ಕೊಳೆ ಮಸಿ ತಗುಲಿದ ಒಂದುಕಾಲಕ್ಕೆ ಬಿಳಿಯದೇ ಆಗಿದ್ದ ಪಂಚೆ, ಸರ್ವಕೆಲಸಕ್ಕೂ ಆಸ್ಕರ ನೀಡುವ ಹೆಗಲು ಅಂಗವಸ್ತ್ರ, ತಾರೆಗಳ ತೋಟದಂತೇ ಕಾಣುವ ತೂತುಬಿದ್ದ ಗಂಜೀಪರಾಕು [ಬನೀನು], ಬಸ್ಸಲ್ಲಿ ಓಡಾಡುವಾಗ ಮೇಲಿಂದ ಹಾಕಿಕೊಳ್ಳಲು ಒಂದು ಬುಶ್ ಕೋಟು [ತೆಳು ನೀಲಿ ಬಣ್ಣದ ಅರ್ಧ ತೋಳಿನ ಅಂಗಿ], ಕಾಲಿಗೆ ಸವೆದು ಇನ್ನೇನು ತೂತು ಬೀಳಲಿರುವ ಹವಾಯಿ. ಭಟ್ಟರ ಅಂಗಿ ಆ ಕಡೆ ತುಂಬುತೋಳಿನದ್ದೂ ಅಲ್ಲ ಈಕಡೆ ಅರ್ಧ ತೋಳಿನದ್ದೂ ಅಲ್ಲ--ಇವೆರಡರ ನಡುವೆ ತೋಳಿನ ಗಂಟು ಕಳಿದು ಮೊಳಕೈಯನ್ನು ಒಂದಂಗುಲ ಆವರಿಸುವ ಅಂಗಿ ---ಇದಕ್ಕೆ ಏನಂತೀರೋ ನೀವೇ ಹೆಸರಿಟ್ಟುಕೊಳ್ಳಿ.

ಭಟ್ರೀ ಅಂದುಬಿಟ್ರೆ ಸಾಕು ಪಾಪ ಮೂವತ್ತೆರಡರಲ್ಲಿ ಉಳಿದಿರುವ ಮೂರ್ನಾಲ್ಕು ಹಲ್ಲನ್ನು ರಾಷ್ಟ್ರೀಯ ಹೆದ್ದಾರಿಯ ಮೈಲಿಗಲ್ಲಿನಂತೇ ತೋರಿಸುತ್ತಾ ಓಡಿ ಬಂದು " ನನ್ ಕರದ್ರಾ " ಅನ್ನೋರು. ಸಲ್ಪ ಸಲುಗೆ ಇದ್ದವರಿಗೆಲ್ಲಾ ಬೇಸಿಗೆಯಾದರೆ " ತಂಪಾಗಿ ಮಜ್ಜಿಗೆ ಕುಡೀರಿ " ಎಂದು ನಾಕಾರು ಪಾತ್ರೆ ತಡಕಾಡಿ ಮಜ್ಜಿಗೆ ಮಾಡಿಕೊಂಡು ತಂದುಬಿಡುತ್ತಾರೆ. ಯಾರಲ್ಲೇ ಏನೇ ಕಾರ್ಯಕ್ರಮ ಜರುಗಿದರೂ ಭಟ್ಟರನ್ನು ಕರೆದರೆ ಅವರ ಮೊದಲೆ ಆದ್ಯತೆಯ ತಿನಿಸು ’ಹಯಗ್ರೀವ’ !

ಹಯಗ್ರೀವ ಬಗ್ಗೆ ನಿಮಗೆ ಈ ಮೊದಲ್ರ್‍ಏ ಒಮ್ಮೆ ವಿವರಿಸಿದ ನೆನಪು, ಇರಲಿ, ಮತ್ತೊಮ್ಮೆ ಹೇಳೋದ್ರಿಂದ ನನ್ನ ಗಂಟೇನೂ ಹೋಗೋದಿಲ್ಲ, ಅಸಲಿಗೆ ಗಂಟುಕಟ್ಟಿದ ಆಸಾಮಿಯೇ ನಾನಲ್ಲ! ಕಡ್ಲೆ ಬೇಳೆಯನ್ನು ಚೆನ್ನಾಗಿ ತೊಳೆದು ಹದವಾಗಿ ಬೇಯಿಸಿ ಅದಕ್ಕೆ ಗೊತ್ತಾದ ಪ್ರಮಾಣದಲ್ಲಿ ಸಕ್ಕರೆ ಹಾಕಿ ಕಲಸಿ, ಸ್ವಲ್ಪ ಕಾಯಿತುರಿ ಪರಿಮಳಕ್ಕೆ ಯಾಲಕ್ಕಿ ಇವಿಷ್ಟು ಹಾಕಿ ಒಂದುಹದಕ್ಕೆ ಕಾಸಿ ಇಳಿಸಿದಾಗ ಅದು ಹಯಗ್ರೀವ ಎನಿಸಿಕೊಳ್ಳುತ್ತದೆ. ಹಯಗ್ರೀವ ತಿಂದ ತಾಸೆರಡು ತಾಸಿನಲ್ಲೇ ಬುರ್ ಬುರ್ ಬುರಕ್ ಎಂಬ ವಾಯುಭಾರ ಸಮತೋಲನ ಕ್ರಿಯೆ ಆರಂಭವಾಗಿಬಿಡುತ್ತದೆ! ಯಾಕೆಂದರೆ ಅದು ಕಡ್ಲೆ. ಬೇಳೆಗಳಲ್ಲೇ ವಾಯುವಿನ ಪರಮೋತ್ಫತ್ತಿಗೆ ಮೊದಲನೇ ಸ್ಥಾನ ಅಲಂಕರಿಸಿರುವುದು ಅವರೇ ಬೇಳೆ. ಮೊದಲನೇ ರನ್ನರ್ ಅಪ್ -- ಕಡ್ಲೆಬೇಳೆ, ಎರಡನೇ ರನ್ನರ್ ಅಪ್ ಅಲಸಂದೆ. ಸ್ಪರ್ಧೆಯಲ್ಲಿ ಎಲ್ಲಾ ಬೇಳೆಗಳೂ ಭಾಗವಹಿಸುತ್ತವೆ!

ನೀವು ಕಮ್ಮಿ ಬಜೆಟ್‍ನಲ್ಲಿ ಸಿಹಿತಿನಿಸು ಸಹಿತ ಔತಣವನ್ನು ಏರ್ಪಡಿಸಬೇಕು ಎಂದುಕೊಂಡರೆ ಸೀದಾ ತಿಪ್ಪಾಭಟ್ಟರನ್ನು ಕಂಡುಬಿಡಿ ಆಯ್ತಾ ? ಅವರಿಗೆ ಮೊಬೈಲ್ ಇಲ್ಲ, ಅವರ ಮಗಳ ಮೊಬೈಲ್ ನಂಬ್ರ ಈ ರೀತಿ ಇದೆ--೧೨೩೪೫೬೭೮೯೦. ಮೊದಲೇ ಹೇಳುತ್ತೇನೆ ಕೇಳಿ ಮಗಳು ಶರೀರದಲ್ಲಿ ಅಪ್ಪನನ್ನೂ ಮೀರಿಸಿದ್ದಾಳೆ, ಇನ್ನೂ ಬೆಳೆಯುತ್ತಲೇ ಇದ್ದಾಳೆ. ನಾಕಾರು ವರ್ಷಗಳ ಹಿಂದೆ ಅವಳ ಮೂವತ್ತೆರಡನೇ ವಯಸ್ಸಿಗೆ ಮದುವೆ ಎಂಬುದೊಂದನ್ನು ಮಾಡಿದ್ದರು. ಅದೇನಾಯ್ತೋ ತಿಳೀಲಿಲ್ಲ ಮದುವೆಯ ರಾತ್ರಿ ಓಡಿಹೋದ ಗಂಡ ಮತ್ತೆ ಮನೆಕಡೆ ಸುಳೀಲಿಲ್ಲ, ಮಗಳ ನಿಜರೂಪ ದರ್ಶನವಾಗಿ ಬೆಚ್ಚಿಬಿದ್ದಿರಬಹುದೆ ಎಂದುಕೊಂಡವರು ನಮ್ಮಂಥಾ ಪಡ್ಡೆಗಳು. ಹೀಗಾಗಿ ನೀವು ಇನ್ಯಾವುದೋ ಕಾರಣಕ್ಕೆ ಫೋನುಮಾಡುವುದರಲ್ಲಿ ಅರ್ಥವಿಲ್ಲಾ ಅಂದೆ! ಅಲ್ಲ ಪಾಪ ನೀವು ಹಾಗಲ್ಲ ಅಂತ ನನಗೆ ಗೊತ್ತು, ಆದರೂ ನಮ್ಮಲ್ಲಿ ಕೆಲವರಿಗೆ ಹೆಂಗಸರನ್ನು ಕಂಡರೆ ಏನೋ ಒಂಥರಾ ಅನುಕಂಪ, ಯಾರೋ ಭಟ್ಟರ ಮಗಳಂತೆ ಒಮ್ಮೆ ನೋಡಿಬಿಡುವಾ ಎಂದು ಕಾಲು ಹೊಡೆದರೂ ತಪ್ಪಲ್ಲ. ಆ ಕಡೆ ’ ಹಲೋ ’ ಎಂದ ಗೊಗ್ಗರು ದನಿಗೆ ಕೆಲವ್ರು ಕಾಲೇ ಕಟ್ ಮಾಡಿಬಿಡ್ತಾರಂತೆ. ಕಾಲು ಅಂದ್ರೆ ಗೊತ್ತಾಯ್ತಲ್ಲ ಮಾರಯ್ರೆ ? ಅದು ಶರೀರದ ಕಾಲಲ್ಲ ಮೊಬೈಲ್ ಕರೆ, ಮೊಬೈಲ್ ಕಾಲು!

ಭಟ್ಟರು ಯಾವುದಕ್ಕೂ ಬೇಸರಮಾಡಿಕೊಂಡ ಜನ ಅಲ್ಲ. ಅವರಾಯ್ತು ಅವರ ಕೆಲ್ಸವಾಯ್ತು. ಮಗಳ ಗಂಡ ಬಿಟ್ಟು ಮಗಳು ತಮ್ಮನೆಯಲ್ಲೇ ಉಳಿಯುವ ಪ್ರಮೇಯ ಬಂತಲ್ಲ ಅಂತಲೂ ಚಿಂತಿಸಲಿಲ್ಲ. ಹೇಗೋ ದೇವರು ನಡೆಸುತ್ತಾನೆ ಎಂಬ ತುಂಬಿದ ಹಂಬಲ ಅವರದ್ದು. ನಿತ್ಯ ಎಲ್ಲಾದರೂ ಅಡಿಗೆ ಕೆಲಸಮಾಡಿ ಒಂದಷ್ಟು ಹಯಗ್ರೀವ ಕಲಸಿ, ತಾವೂ ಸಲ್ಪ ತಿಂದು ಮಜ್ಜಿಗೆ ಕುಡಿದು ಡರ್ ಎಂದು ತೇಗಿಬಿಟ್ಟರೆ ಮುಂದಿನ ಡರ್ ಎಲ್ಲಾ ಹಿಂಬಾಗಿಲಿನಿಂದಲೇ ನಡೆಯುತ್ತಿರುತ್ತದೆ ! ಪ್ರತೀ ಸರ್ತಿ ಅಪಾನವಾಯು ಸ್ಫೋಟಗೊಂಡಾಗಲೂ ಭಟ್ಟರಿಗೆ ಏನೋ ಸಮಾಧಾನ, ಹರೇರಾಮ ಹರೇರಾಮ ಎನ್ನುವ ಅವರ ಹತ್ತಿರದಲ್ಲಿ ಯಾರದರೂ ’ಆಪ್ತರು’ [ಅರ್ಥವಾಯಿತಲ್ಲ? ] ಇದ್ದರೆ " ಹೈಂಕ್ಕ ...ಸಲ್ಪ ಸಡ್ಲಾಯ್ತು " ಎಂಬುದನ್ನು ನಾವು ಕೆಲವೊಮ್ಮೆ ಕದ್ದುಕೇಳಿ ಖುಷಿಪಟ್ಟಿದ್ದಿದ್ದೆ. ಆಪಸ್ನಾತಿಯಲ್ಲಿ ನಾವು ಕಿಲಾಡಿಗಳು ಭಟ್ಟರು ’ ವಾಯುಸ್ತುತಿ ’ ಮಾಡುತ್ತಿದ್ದಾರೆ ಎಂದುಕೊಂಡು ನಮ್ಮಷ್ಟಕ್ಕೇ ನಾವು ನಗುವುದಿದೆ. ಜಗತ್ತಿನಲ್ಲಿ ಏನೇ ಏನಾಗಿ ಹೋದರೂ ಭಟ್ಟರು ಹಯಗ್ರೀವ ಮಾಡುವುದನ್ನಂತೂ ಸದ್ಯ ನಿಲ್ಲಿಸುವುದಿಲ್ಲ.

ಕೆಲವೊಮ್ಮೆ ಸಮಾಜದಲ್ಲಿ ಹೀಗೂ ಇರುತ್ತದೆ. ಹೇಗೆ ಎಂದರೆ ಅಕ್ಕಿಮೇಲೂ ಆಸೆ ನೆಂಟರಮೇಲೂ ಪ್ರೀತಿ ! ಅಕ್ಕಿ ಖರ್ಚಾಗಲೂ ಬಾರದು ನೆಂಟರು ಉಂಡಹಾಗೂ ಇರಬೇಕು ! ಎಂಥಾ ಕಸರತ್ತು ಅಲ್ವೇ? ಅಂಥಾ ಕೆಲವು ಜನರಿಗೆ ಏನಾದರೂ ಕಾರ್ಯಕ್ರಮ ನಡೆಸಿದರೆ ಕಮ್ಮಿ ಅಂದ್ರೆ ಅಂಥಾ ಕಮ್ಮಿ ಖರ್ಚಿನಲ್ಲಿ ಸಾಗಬೇಕಾಗುತ್ತದೆ. ಹೇಳಿಕೊಳ್ಳಲು ಔತಣದಂತಿರಬೇಕು, ಆದರೆ ಜಾಸ್ತಿ ಖರ್ಚು ಮಾಡುವಂತಿಲ್ಲ ! ೫೦೦ ಜನರಿಗೆ ಅಡಿಗೆ ಮಾಡಿದ್ದರಲ್ಲಿ ಸಾವಿರ ಮಂದಿ ಊಟಮಾಡಿ ಏಳಬೇಕು. ಅವರು ಹೊಟ್ಟೆ ತುಂಬಾ ಉಂಡರೋ ಬಿಟ್ಟರೋ ಶಿವನೇ ಬಲ್ಲ-ಅದು ಅಂಥವರಿಗೆ ಬೇಕಾಗೂ ಇಲ್ಲ. ಹೊರಡುವಾಗ ಒಳಗೆ ಕೊಳೆಯಲು ಶುರುವಾದ ನುಸಿರೋಗದ ಮುಷ್ಠಿಯಲ್ಲಿ ಮೂರು ಹಿಡಿಸುವ ಹೊಸ ತೆಂಗಿನಕಾಯಿ ಒಂದೆರಡು ಎಲೆ, ತಿನ್ನಲು ಸಹ್ಯವಲ್ಲದ ಅಡಿಕೆ ಚೀಟು ಇಟ್ಟು ತಾಂಬೂಲ ಕೊಟ್ಟು ಬೃಹದಾಕಾರವಾಗಿ ಹಲ್ಲುಗಿಂಜಿ ಬೀಳ್ಕೊಟ್ಟುಬಿಟ್ಟರೆ ಅಲ್ಲಿಗೆ ಕಾರ್ಯಕ್ರಮ ಅದ್ಧೂರಿಯಲ್ಲಿ ಮುಗಿದಹಾಗೇ ಆಯ್ತು! ಅಂಥವರಿಗೆ ಅತಿ ಕಡಿಮೆ ವೆಚ್ಚದಲ್ಲಿ ಮಾಡಿಕೊಡಬಹುದಾದದ್ದು ಹಯಗ್ರೀವ.

ಇನ್ನು ಹಯಗ್ರೀವದ ಬಗ್ಗೆ ಏನು ಹೇಳಲಿ ? ಅಪ್ಪಟ ದೇಸೀ ಸಿಹಿತಿನಿಸು. ನಕಲು ಮಾಡಿದರೂ ಒಂದೇ ಮಾಡದಿದ್ದರೂ ಒಂದೇ. ಸ್ವಲ್ಪ ಹೆಚ್ಚೋ ಕಮ್ಮಿಯೋ ಬೇಯಿಸಿದ ಯಾವ ಬೇಳೆಗೇ ಆಗಲಿ ಹದವಾಗಿ ಸಕ್ಕರೆ ಯಾಲಕ್ಕಿ ಹಾಕಿ ತಿಂದರೆ ರುಚಿ ಸಹಜವೇ. ಅದರಲ್ಲೂ ಹಲವು ತಿನಿಸುಗಳಿಗೆ ಮೂಲವಸ್ತುವಾದ ಕಡ್ಲೆಯಿಂದ ಮಾಡಿದ ಕಡ್ಲೆಬೇಳೆ ಅವುಗಳಲ್ಲೇ ಉತ್ಕೃಷ್ಟವಾದುದು. ಅಡ್ಡಡ್ಡ ಬೆಳೆಯುವುದು ಬಿಟ್ಟರೆ ಇನ್ಯಾವುದೇ ಅಡ್ಡಪರಿಣಾಮವಿಲ್ಲ!! ಉದ್ದ ಪರಿಣಾಮವಿರುವುದು ವಾಯುಸ್ತುತಿಮಾಡಿದರೆ ಹೊರಟುಹೋಗಿ ವಾಯುಮಂಡಲದಲ್ಲಿ ವಿಲೀನವಾಗಿಬಿಡುತ್ತದೆ ! ಹೀಗಾಗಿ ದುಷ್ಪರಿಣಾಮ ರಹಿತ ಘನವಸ್ತುವಿನಾಕಾರವೂ ಇಲ್ಲದ ದ್ರವವೆಂದು ಕರೆಯಲೂ ಅಸಾಧ್ಯವಾಗಿರುವ ಮಧ್ಯಂತರ ರೂಪದ ಈ ತಿನಿಸಿನ ವಸ್ತುವಿಗೆ ವೈಜ್ಞಾನಿಕವಾಗಿ ಯಾವ ರೂಪದ್ದು ಎಂಬುದನ್ನೂ ನೀವೇ ಹೆಸರಿಸಿಕೊಳ್ಳಬೇಕಾದ ಪ್ರಸಂಗ ಇದೆ ! ದ್ರವವಸ್ತುವನ್ನು ಕಾಯಿಸಿದಾಗ ಅದು ಆವಿಯಾಗಿ ಅನಿಲವಾಗಿ ಮಾರ್ಪಡುತ್ತದೆ ಎಂಬುದನ್ನು ತಿಳಿದಿದ್ದರೂ ಅದೂ ಅಲ್ಲದ ಇದೂ ಅಲ್ಲದ ಈ ಇದನ್ನು ತಿಂದಾಗ ಅದು ಅನಿಲರೂಪದಿಂದ ಹೊರಬರುತ್ತದೆ ಎಂಬುದನ್ನು ಯಾವುದೇ ಕೋರ್ಟಿನ ಕಟಕಟೆಯಲ್ಲಿ ನಿಂತು ಸಾಕ್ಷೀಸಹಿತ ಸಾಬೀತುಪಡಿಸಲು ಮರ್ಯಾದೆಗಂಜಿ ಹಿಂಜರಿವ ’ವಿಷಯವಸ್ತು’ ಇದಾಗಿದೆ!

ಮುದುಕರು ಅಕಸ್ಮಾತ್ ತಿಂದುಬಿಟ್ಟರೆ ಜೊತೆಗೆ ಹಿಮಾಲಯ ಡ್ರಗ್ ಕಂಪನಿಯ ಗ್ಯಾಸೆಕ್ಸ್ ಮಾತ್ರೆಯನ್ನೂ ಸೇವಿಸುವುದು ಒಳಿತು! ಆಯುರ್ವೇದ ಭಂಡಾರಗಳಲ್ಲಿ ವಾಯುವಿಳಂಗ ಎಂಬ ಚಿಕ್ಕ ಚಿಕ್ಕ ಬೀಜದ ರೂಪದ ಗಿಡಮೂಲಿಕೆ ದೊರೆಯುತ್ತದೆ,ಅದನ್ನು ಅರೆದು ಹುಡಿಮಾಡಿ ನೀರಿಗೆ ಹಾಕಿ ಕುಡಿದರೂ ಅನುಕೂಲ. ಕೆಲವು ಮುದುಕರಿಗೆ ಸುಧಾರಿಸಿಕೊಳ್ಳಲು ದಿನವೆರಡು ಹಿಡಿದೀತು, ಗಾಭರಿಯಾಗಬೇಡಿ ಸಾಯುವ ಕೇಸಂತೂ ಅಲ್ಲ!! ಹೆಂಗಸರು ತಿಂದರೆ ಮುಖ ಮುಖ ನೋಡ್ಕೊಂಡು ನಗ್ತಾರೆ. ಆ ನಗುವಿನ ಆಸುಪಾಸಿನಲ್ಲೆಲ್ಲೋ ಆ ವಾಯುವನ್ನು ವಾಯುಮಂಡಲಕ್ಕೆ ಉಡ್ಡಯನ ಮಾಡಿಬಿಡುತ್ತಾರೆ--ಗೊತ್ತೇ ಆಗುವುದಿಲ್ಲ ಮಾರಯ್ರೆ !

ತಿಪ್ಪಾ ಭಟ್ಟರು ಯಾಕೆ ಹಯಗ್ರೀವವನ್ನೇ ಮಾಡುತ್ತಾರೆಂದರೆ ಅವರಿಗೆ ತಯಾರಿಸಲು ಬರುವ ಸಿಹಿತಿನಿಸುಗಳಲ್ಲಿ ಅತೀ ಸುಲಭದ ತಿನಿಸು ಇದಾಗಿದೆ. ಪಾಕ-ಗೀಕ ಎಂತ ಜಾಸ್ತಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರು ಮೂರು ಸಲ ಹರೇರಾಮ ಎನ್ನುವುದರೊಳಗೆ ಬೇಳೆ ಬೆಂದಿರುತ್ತದೆ, ಬಾಣಲೆಗೆ ಹಾಕಿ ಸಕ್ಕರೆಹಾಕಿ ಯಾಲಕ್ಕಿ ಪುಡಿ ಹಾಕಿ ತಿರುಗಿಸುತ್ತಾ ಇನ್ನೊಮ್ಮೆ ಹರೇರಾಮ ಎಂದುಬಿಡುವಷ್ಟರಲ್ಲಿ ಹಯಗ್ರೀವ ರೆಡಿ ! ಸಾಕು ಜಾಸ್ತಿ ಬರೆಯಲಾರೆ, ತೀರಾ ಜಾಸ್ತಿಯಾಗಿಬಿಟ್ಟರೆ ನೀವು ಭಟ್ಟರನ್ನು ಹುಡುಕಿಕೊಡಿ ಅಂದ್ರೆ ಕಷ್ಟ. ಅವರು ನಿಂತಲ್ಲೇ ನಿಲ್ಲೋ ಪ್ರಾಣಿ ಅಲ್ಲ! ಭಟ್ಟರದ್ದು ರಾಹುಪಾದ [ಪಾದದ ಕೆಳಮೈಯ್ಯಲ್ಲಿ ಮಧ್ಯದಲ್ಲಿ ಸ್ವಲ್ಪ ತಗ್ಗಿನ ಜಾಗವಿರುತ್ತದೆ, ಅದಿಲ್ಲದೇ ಸಪಾಟಾಗಿ ಹಲಗೆಯಂತೇ ನೇರವಾಗಿರುವ ಪಾದ ಉಳ್ಳವರನ್ನು ರಾಹುಪಾದಿಗರು ಎನ್ನುತ್ತಾರೆ ಎಂಬುದಾಗಿ ಯಾರೋ ಹೇಳಿದ್ದನ್ನು ನಾನು ಕೇಳಿಕೊಂಡು ನಿಮಗೆ ಇಲ್ಲಿ ಹೇಳಿದ್ದೇನೆ.] ಅಂತ ತಿಳಿಯಿತು. ರಾಹುಪಾದದ ಬಗ್ಗೆ ಮಾಧ್ಯಮದವರಿಗೆ ಗೊತ್ತಾದರೆ ಹಳ್ಳಿಯಲ್ಲಿ ಕೆಲಸವಿಲ್ಲದ ಹಕ್ಕಿಶಕುನದವರಿಗೆ ಬಣ್ಣ ಹಚ್ಚಿ ಡ್ರೆಸ್ಸುಮಾಡಿಸಿ ಅವರನ್ನು ರಾತ್ರೋರಾತ್ರಿ ’ಗುರೂಜಿ’ಮಾಡಿ ಕೂರಿಸಿಕೊಂಡು ದಿನಗಟ್ಟಲೆ ಅದರಬಗ್ಗೇ ಕೊರೆಯಲು ಆರಂಭಿಸಿಬಿಡುತ್ತಾರೆ. ಅದ್ಕೇ ಅಂದೆ ನೀವೂ ಕೇಳ್ಕೊಂಡು ಸುಮ್ನಾಗಿ, ಹಲುಬ್ತಾ ತಿರುಗ್ಬೇಡಿ, ನಿಮ್ದು ರಾಹುಪಾದವದರಂತೂ ನೀವು ನಿಂತಲ್ಲಿ ನಿಲ್ಲುವುದಿಲ್ಲ, ಇನ್ನು ಯಾವ ಯಾವ ಮಾಧ್ಯಮದ ಕಚೇರಿಗೆ ಲಗ್ಗೆ ಇಡಬೇಕೋ ದೇವರೇ ಬಲ್ಲ !

|| ಇತಿ ಶ್ರೀ ಹಯಗ್ರೀವ ಪುರಾಣೇ ಪೂರ್ವೋತ್ತರ ಅಭಯಖಂಡೇ ಏಕೋಧ್ಯಾಯಃ ||

|| ಸರ್ವತ್ರ ಹವಯಗ್ರೀವ ಪ್ರಾಪ್ತಿರಸ್ತು || ||ಸಮಸ್ತ ಸನ್ಮಂಗಳಾನೀ ಭವಂತು ||

ಇನ್ನೇನೇನ್ ಬೇಕೋ ನೀವೇ ಹೇಳ್ಕೊಳಿ ನಾನು ಎದ್ದು ಹೊರಟೆ ........