ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, June 15, 2010

ಜಗವೆಂಬ ಮನೆಯ ನೆನೆದು

ಸುಮ್ಮನೆ ಕುಳಿತೊಮ್ಮೆ ವಿಚಾರಿಸುತ್ತಿದ್ದರೆ ಮನಸ್ಸಿಗೆ ಹಲವು ಬಾರಿ ಅನ್ನಿಸುವುದು ಯಾಕಪ್ಪಾ ದಿನಬೆಳಗಾದರೆ ಜಗಳ,ದೊಂಬಿ,ಲೂಟಿ,ಬಾಂಬು....ಇವುಗಳಿಗೆಲ್ಲ ಇತಿಶ್ರೀ ಹಾಡಿ ಇಡೀ ಜಗತ್ತೇ ಒಂದು ಮನೆಯ ಥರ ಅಂತ ಭಾವಿಸಿ ಎಲ್ಲರೂ ಭ್ರಾತೃತ್ವ ಭಾವದಿಂದ ಸುಖವಾಗಿರಬಹುದಲ್ಲ ಅಂತ.

ಒಂದು ಕಡೆ ಮತಾಂಧರು ಇನ್ನೊಂದು ಕಡೆ ರಾಜಕೀಯ ಪಕ್ಷಪಾತಿಗಳು, ಮಗುದೊಂದೆಡೆ ಸಾಮಾಜಿಕ ಹಿತಾಸಕ್ತಿ-ಸೌಲಭ್ಯ ತಮಗೆ ಸಿಕಿಲ್ಲವೆಂಬವರು. ಹೀಗಾಗಿ ಅಂತೂ ಸೃಷ್ಟಿಸಿದ ಭಗವಂತ ಜಗದಲ್ಲಿ ಸುಂದೋಪಸುಂದರು ಸುಂದರಿಗಾಗಿ ಹೊಡೆದಾಡಿ ಸತ್ತಂತೆ ನಮ್ಮ ಅಳಿವು-ಉಳಿವನ್ನು ನಮ್ಮವರ ಕೈಯ್ಯಲ್ಲೇ ಕೊಟ್ಟು ಬಹಳ ಚಾಲಾಕಿತನ ಮೆರೆದನಲ್ಲ ಅಲ್ಲವೇ ? ಇದರ ಅರ್ಥವೇ ತಿಳಿಯದೇ ಬಿನ್-ಲಾಡೆನ್ ಅಂತೆ ಡೇವಿಡ್ ಹೆಡ್ಲಿಯಂತೆ ಎಂತೆಂತಹ ರಾಕ್ಷಸರು ಹುಟ್ಟಿದರು ನೋಡಿ! ಒಂದು ಕಡೆ ದಾವೂದ್ ಇಬ್ರಾಹಿಂ ಇನ್ನೊಂದುಕಡೆ ರವಿಪೂಜಾರಿ ಇವರೆಲ್ಲರ ಅಂತಿಮ ಗುರಿ ಏನು? ಇವರಿಗಾಗಿ ಪ್ರತ್ಯೇಕ ಆಯುಷ್ಯ ಕೊಟ್ಟು ಹೆಚ್ಚಿಸಲಾಗಿದೆಯೇ ? ಎಲ್ಲರೂ ಬಂದ ಹಾಗೇ ವಾಪಸ್ ಹೋಗಲೇಬೇಕೆಂಬ ಅರಿವು ಬಾಂಬಣ್ಣಗಳಿಗಿಲ್ಲವೇಕೆ?

ಪೂಜನೀಯ ಶ್ರೀ ಶ್ರೀ ರವಿಶಂಕರರು ಜಗತ್ ಹಿತಾರ್ಥ ಎಂತಹ ಅದ್ಬುತ ಕೆಲಸವನ್ನು ಮಾಡುತ್ತಿದ್ದಾರೆ ನೋಡಿ.ಅದರಲ್ಲಿ ಅವರ ಸ್ವಾರ್ಥ ಅಡಗಿದೆಯೇ ? ಇಲ್ಲವಲ್ಲ? ಅವರು ಸನ್ಯಾಸಿಯಲ್ಲ,ಪರಮಹಂಸ ಅಲ್ಲ, ಮತ ಪ್ರಚಾರಕ ಅಲ್ಲ, ಸಾದಾ ಮನುಷ್ಯ ಕೂಡ ಅಲ್ಲ. ಹಾಗಾದರೆ ಅವರು ಯಾರು ? ಅವರೊಬ್ಬ ತತ್ವಜ್ಞಾನಿ ಎಂದರೆ ತಪ್ಪೇ? ಜಗತ್ತೇ ತನ್ನ ಮನೆ, ತನಗೆ ಯಾರೂ ವೈರಿಗಳಿಲ್ಲ, ಎಲ್ಲರೂ ನಮ್ಮೊಳಗಿನ ಸಾಮರ್ಥ್ಯವನ್ನು ವರ್ಧಿಸಿಕೊಂಡು, ರೋಗ ರುಜಿನಗಳನ್ನು ದೂರವಿಟ್ಟು ಇರುವಷ್ಟು ಕಾಲ ಸುಖವಾಗಿ,ಸಹಜವಾಗಿ ಬದುಕೋಣ ಎಂಬ ಅವರ ಮಹತ್ತರ ಸಂದೇಶ ನಮಗರ್ಥವಾಗಲು ಇನ್ನೆಷ್ಟು ಕಾಲ ಬೇಕಾಗಬಹುದು?

ಪ್ರಕೃತಿಯಲ್ಲಿ ಮನುಷ್ಯ ಹುಟ್ಟಾ ಮಾಂಸಾಹಾರಿಯಲ್ಲ, ಅವನಿಗೆ ಮಾಂಸಾಹರಕ್ಕೆ ಬೇಕಾಗುವ ಹಲ್ಲುಗಳೂ ಇಲ್ಲ-ಜೀರ್ಣಾಂಗವೂ ಆ ರೀತಿ ಇಲ್ಲ. ಆದರೆ ಇಂದು ನಮ ಮೋಜು-ಮಜಕ್ಕಾಗಿ ಹಲವು ಹತ್ತು ರೀತಿಯ ಪ್ರಾಣಿ-ಪಕ್ಷಿಗಳನ್ನು ಬಲಿಗೊಟ್ಟು ಭುಂಜಿಸುವುದು ಯಾವ ನ್ಯಾಯ? ಅವುಗಳಿಗೂ ಅವುಗಳದೇ ಆದ ಕುಟುಂಬ-ಸಂಸಾರ-ಮಕ್ಕಳು-ಮರಿ ಇರುವುದಿಲ್ಲವೇ? ಅವುಗಳನ್ನು ಅಗಲಿಸಿದ ಪಾಪ ನಮಗಲ್ಲವೇ? ಅಲ್ಲದೇ ಮಾಂಸಾಹಾರಕ್ಕೆ ಹಾಕುವ ಕಡು ಮಸಾಲೆಯಲ್ಲಿ ಕಚಡಾ ಕಲ್ಲು ಹುರಿದು ತಿಂದರೂ ರುಚಿಯೆಂಬ ಮಿತ್ರರೊಬ್ಬರ ಹೇಳಿಕೆಯನ್ನು ಹಿಡಿದು ವಿವೇಚಿಸಿದರೆ ಅಲ್ಲಿ ನಾವು ಕಾಣುವುದು ಸತ್ಯವಷ್ಟೇ? ಕಡು ಮಸಾಲೆ ಹಾಕಿದ ಯಾವ ಪದಾರ್ಥವೇ ಆಗಲಿ ಅದು ಮಸಾಲೆಯ ರುಚಿಯಿಂದ ರುಚಿಕಟ್ಟಾಗಿರುವುದೇ ಹೊರತು ಅಲ್ಲಿ ಮಾಂಸದಿಂದ ಮಾತ್ರ ರುಚಿ ಬರುತ್ತದೆ ಎಂದರೆ ಅದು ಸುಳ್ಳೆಂದು ನನ್ನ ಅನಿಸಿಕೆ. ಇನ್ನು ಮದ್ಯವನ್ನು ದೂರ ದಬ್ಬಿದರೆ ಜಗತ್ತು ಬಹಳಪಾಲು ಸುಧಾರಿಸಿದ ಹಾಗೇ. ಇದಕ್ಕಾಗಿ ಒಂದು ಸಣ್ಣ ಉದಾಹರಣೆ ನೋಡಿ-- ತಂದೆಯೊಬ್ಬ ಮದ್ಯ ಸೇವಿಸಿದ್ದ. ತನ್ನ ಹೊಸ ಕಾರನ್ನು ತಾನೇ ತೊಳೆಯುತ್ತಿದ್ದ. ಆಡುತ್ತಿರುವ ಆತನ ನಾಲ್ಕು ವಯಸ್ಸಿನ ಪುಟ್ಟ ಮಗ ಸಣ್ಣ ಕಲ್ಲೊಂದನ್ನು ಹಿಡಿದು ಕಾರಿನ ಮೇಲೆ ಗೀಚಿ ಬಿಟ್ಟ. ಸಹಿಸಲಸಾಧ್ಯ ಕೋಪವುಕ್ಕಿದ ತಂದೆ ತನ್ನೆದುರಿಗಿರುವ ಮಗನ ಕೈಮೇಲೆ ಸುತ್ತಿಗೆಯಿಂದ ಜಜ್ಜಿ ಬಜ್ಜಿಯಾಗುವಷ್ಟು ಮಾಡಿಬಿಟ್ಟ. ತಂದೆ ಏನುಮಾಡಿದನೆಂಬ ಅರಿವಿಲ್ಲದ ಕಂದ ನೋವಿನಲ್ಲೇ ತನ್ನ ಕೈಯ್ಯನ್ನು ನೋಡುತ್ತ " ಅಪ್ಪಾ, ನನ್ನ ಬೆರಳುಗಳು ಯಾವಾಗ ಮತ್ತೆ ಬೆಳೆಯುತ್ತವೆ ? " ಎಂಬ ಪ್ರಶ್ನೆ ಕೇಳಿದ. ಈ ಮಾತನ್ನು ಕೇಳಿದ ತಂದೆಗೆ ಮದ್ಯದ ಅಮಲು ಒಮ್ಮೆಗೇ ಇಳಿದು ಹೋಯಿತು! ಹುಚ್ಚನಂತಾದ ಆತ ಕಾರನ್ನು ಒದೆಯಲು ಹೋದಾಗ ಅಲ್ಲಿ ನಾಲ್ಕು ಶಬ್ಧಗಳು ಕಂಡವು. " ಐ ಲವ್ ಯು ಡ್ಯಾಡ್ " ! ಆ ಮನುಷ್ಯನಿಗೆ ತಪ್ಪಿನ ಅರಿವಾಗುವ ಹೊತ್ತಿಗೆ ಬಹಳ ತಡವಾಗಿತ್ತು. ಮಗು ರಕ್ತಸ್ರಾವದಿಂದ ತೀರಿಹೋಗಿತ್ತು. ಬೇಸತ್ತ ಆ ಮನುಷ್ಯ ಆತ್ಮಹತ್ಯೆ ಮಾಡಿಕೊಂಡ. --ಇದು ಒಂದು ಸಣ್ಣ ಘಟನೆ ಅಷ್ಟೇ. ಪ್ರಪಂಚದಾದ್ಯಂತ ಮದ್ಯದ ಅಮಲಿನಲ್ಲಿ ನಡೆಯುವ ಅವಘಡಗಳಿಗೇನು ಲೆಕ್ಕವಿದೇಯೇ. ಸುಂದರ ತರುಣಿಯರನ್ನು ಬಯಸುವ ತರುಣರು ಬೀದಿ ನಾಯಿಗಳ ಥರ ಬಡಿದಾಡುವುದನ್ನು ಅನೇಕ ಕಡೆ ಕಾಣಬಹುದಾಗಿದೆ. ಸಿನಿಮಗಳಲ್ಲೂ ತ್ರಿಕೋನ ಮತ್ತು ಬಹುಕೋನ ಪ್ರೇಮ ಕಥೆ ಎಂದು ಬಣ್ಣಿಸಲ್ಪಡುವ ಈ ಘಟನೆಗಳು ನಿಜವಾಗಿ ಪ್ರೇಮವಿಲ್ಲದ ಕಾಮಕ್ರೀಡೆಗಳು. ನಿಜವಾದ ಪ್ರೇಮ ತ್ಯಾಗದಿಂದ ಕೂಡಿರುತ್ತದೆ. ಅಲ್ಲಿ ತನಗೇ ಎಲ್ಲವೂ, ತನದೇ ಎಲ್ಲವೂ ಎಂಬ ಇನ್ನಿಲ್ಲದ ಸ್ವಾರ್ಥ ಇರುವುದಿಲ್ಲ. ಇದನ್ನು ತಿಳಿದೇ ಆಂಗ್ಲರು ಹೇಳಿದರು- ಬ್ಯೂಟಿ ಈಸ್ ಬಟ್ ಸ್ಕಿನ್ ಡೀಪ್ - ಎಂದು, ಅದರರ್ಥ ಕೇವಲ ಹರೆಯದ ಹುಮ್ಮಸ್ಸಿನಲ್ಲಿ, ದಷ್ಟಪುಷ್ಟವಾದ ಅಂಗಾಂಗಗಳನ್ನು ಹೋಂದಿದ ಸೌಂದರ್ಯವತಿ ಸಿಕ್ಕರೆ ನೆನಪಿರಲಿ ಸೌಂದರ್ಯ ಶಾಶ್ವತವಲ್ಲ ಎಂದು! ಆದರೆ ಆಗುತ್ತಿರುವುದೇ ಬೇರೆ. ನಾವು ಮೊದಲಾಗಿ ನೋಡುವುದೇ ಸೌಂದರ್ಯವನ್ನು. ಅದೂ ನಮ್ಮ ಕುದುರೆ ಒಂದನ್ನರಸಿ ಮುಗಿಸಿದರೆ ತೃಪ್ತವಾಗುವುದಿಲ್ಲ-ಬದಲಾಗಿ ಹಲವನ್ನು ಬಯಸುತ್ತದೆ. ಅಲ್ಲಿ ನಾವು ರಾಜಸರಾಗುತ್ತೇವೆ; ಕಾಮುಕರಾಗುತ್ತೇವೆ; ವಿಷಯಲಂಪಟರಾಗುತ್ತೇವೆ. ಇದನ್ನು ತಮ್ಮ ದೂರ ದೃಷ್ಟಿಯಿಂದಲೇ ಅರಿತ ಬಹುಸೂಕ್ಷ್ಮಗ್ರಾಹಿ ಆದಿ ಶಂಕರರು ಹೇಳಿದರು--

ನಾರೀಸ್ತನಭರನಾಭೀದೇಶಂ
ದೃಷ್ಟ್ವಾ ಮಾಗಾ ಮೋಹಾವೇಶಂ |
ಏತನ್ಮಾಂಸವಸಾದಿ ವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||

ಎಂತಹ ಪ್ರಭುದ್ಧ ಹೇಳಿಕೆ ನೋಡಿ! ಅದಕ್ಕೇ ಅಲ್ಲವೇ ಮಹಾತ್ಮರು ಯಾವಾಗಲೂ ಸಾಮಾನ್ಯರಿಗಿಂತ ಭಿನ್ನವಾಗಿರುತ್ತಾರೆ ಎನ್ನುವುದು?

ಹೀಗಾಗಿ ಮದ್ಯ,ಮಾಂಸ,ಮಾನಿನಿ ಈ ಮೂರು ಮನುಷ್ಯನ ಸ್ವಭಾವವನ್ನು ಬದಲಿಸುತ್ತವೆ ಎಂಬುದು ಮಥಿತ ಅಂಶವಷ್ಟೇ? ಇದನ್ನರಿತು ನಮ್ಮ ಮಹಾತ್ಮಾ ಗಾಂಧೀಜಿ ಈ ಮೂರನ್ನೂ ಬಹಳ ದೂರವಿಟ್ಟಿದ್ದರು ಅಲ್ಲವೇ ? ಇದರ ಒಳಹೊರಗಿನ ಇನ್ನೊಂದು ಗಾದೆ ಹೆಣ್ಣು-ಹೊನ್ನು-ಮಣ್ಣು ಈ ಮೂರನ್ನು ಬೆನ್ನತ್ತಿ ಹೋದರೆ ಸುಖವಿಲ್ಲ ಎಂಬುದಲ್ಲವೇ?

ಜಗದ ಯಾವ ಮೂಲೆಯಿಂದಲೂ ಒಳ್ಳೆಯದು ಹರಿದು ಬರಲಿ, ಅದನ್ನು ನಾವೆಲ್ಲ ಸ್ವೀಕರಿಸಲು ನಮಗೇನೂ ತೊಂದರೆಯಿಲ್ಲವಲ್ಲ. ಆದರೆ ಜಗತ್ತಿಗೆ ಬಹಳಷ್ಟು ಒಳ್ಳೆಯ ಕೊಡುಗೆಗಳನ್ನು ನಮ್ಮ ಭಾರತ ಕೊಟ್ಟಿದೆ-ಕೊಡುತ್ತಿದೆ ಎಂಬುದು ನಮಗೆ ಹೆಮ್ಮೆ ಅಷ್ಟೇ! ಧರ್ಮ ಯಾವುದೇ ಆದರೂ ದೇವರು ಒಬ್ಬನೇ! ಹೇಗೆ ಕೆಲವೊಂದು ಪ್ರದೇಶಗಳಿಗೆ ಹೋಗಲು ಹಲವು ಮಾರ್ಗಗಳಿರುತ್ತವೆಯೋ ಹಾಗೇ ದೇವರು ಎಂಬ ಆ ಶಕ್ತಿಸ್ವರೂಪವನ್ನು ತಲ್ಪಲು ಬಹಳ ರೂಪಗಳಲ್ಲಿ ನಾವು ಪೂಜಿಸುತ್ತೇವೆ, ಪ್ರಾರ್ಥಿಸುತ್ತೇವೆ, ಭಜಿಸುತ್ತೇವೆ, ಆರಾಧಿಸುತ್ತೇವೆ, ಸೇವಿಸುತ್ತೇವೆ, ಆಸ್ವಾದಿಸುತ್ತೇವೆ. ಆತ ಅಲ್ಲಾಹುವೋ ಕ್ರಿಸ್ತನೋ ಬುದ್ಧನೋ ಮಹಾವೀರನೋ ಗಣೇಶನೋ ಯಾರೇ ಆಗಿದ್ದರೂ ಅವೆಲ್ಲ ಆ ಮೂಲ ರೂಪದ ಹೊರಮುಖಗಳು ಎಂದು ನಾವೇಕೆ ಇನ್ನೂ ತಿಳಿದಿಲ್ಲ? ಈ ನಿಜದ ತತ್ವವನ್ನು ಅವಲೋಕಿಸಿದರೆ, ಆಹ್ವಾನಿಸಿದರೆ, ಅಭಿವಂದಿಸಿದರೆ,ಅನುಸರಿಸಿದರೆ ನಮ್ಮಲ್ಲಿ ಬಹಳಮಟ್ಟಿಗಿನ ಭಿನ್ನಾಭಿಪ್ರಾಯಗಳು ತಗ್ಗಬಹುದಲ್ಲ ಅಲ್ಲವೇ? ಹೀಗೇ ಇದೇ ವಿಚಾರವನು ಮಥಿಸುತ್ತ ಮಥಿಸುತ್ತ ತೆಗೆದ ಅಲ್ಪ ಪ್ರಮಾಣದ ನವನೀತ ನಿಮ್ಮ ಮುಂದೆ- ತಿಂದು ರುಚಿ ನೋಡಿ ಹೇಳಿ ಆಗದೇ ?


ಜಗವೆಂಬ ಮನೆಯ ನೆನೆದು

ಹೀಗೊಮ್ಮೆ ನನ್ನ ಕನಸು
ಜಗವೊಂದು ಮನೆಯಾಗಿ
ಹಾಯಾಗಿ ಬದುಕಬಹುದೇ ?

ಮುರಿದ ಹಕ್ಕಿಯ ರೆಕ್ಕೆಗಳ
ತಿರುವಿ ಹೊಲಿಯುತ್ತ
ಮರಳಿ ಹಕ್ಕಿಯ ಮುದದಿ ಹಾರಗೊಡಬಹುದೇ ?

ಕಿರಿದಾಯ್ತು ಜಗವು
ಗಣಕ ಯಂತ್ರದ ಜಾಲ
ಬೋಗಿಗಳ ಕೊಂಡಿ ಬೆಸೆದಿರಲು ಅಹುದಲ್ಲ ?

ಜಗದಿ ಮಾನವ ಧರ್ಮ
ಸ್ತ್ರೀ-ಪುರುಷ ಜಾತಿಗಳು
ವಯದ ಮಿತಿಯರಿತು ನಡೆವೊಲು ನಲಿವದಹುದೇ ?

ನಮಗೆ ಪಕ್ಷವು ಬೇಡ
ಗುಂಪುಗಾರಿಕೆ ಬೇಡ
ಮುಗುದರಾಗಲು ಮಾರ್ಗತೆರೆಯಬಹುದೇ ?

ಬಡತನವ ಓಡಿಸಲು
ಸಿರಿತನಕೆ ಮಿತಿಯಿಡಲು
ಹಂಚಿ ತಿನ್ನುವ ತತ್ವ ಅಳವಡಿಸಬಹುದೇ?

ಕಾಯಿಲೆಗೆ ಪಾಷಾಣ
ಕಂಡು ಎಲ್ಲರು ಸೇರಿ
ನೋವಿರದ ಜಗವನ್ನು ಕಟ್ಟಬಹುದೇ ?

ವಾಯಿದೆಯ ಭಯವಿರದ
ಜಾಯಮಾನಕೆ ಒಗ್ಗಿ
ಕಾಯವಿಳಿಯುವವರೆಗೂ ಸುಖಿಸಬಹುದೇ?

ಹಮ್ಮಿರದ-ಭಿಮ್ಮಿರದ
ಸಾಮಾನ್ಯರಂತಿದ್ದು
ಒಂದೇ ವಿನಿಮಯವನ್ನು ಪಡೆಯಬಹುದೇ?

ಕಾಡು ಕಡಿಯದೆ ನಾಡು
ಜಗವೆಂಬ ಹಂಬಲದಿ
ಕೂಡಿದ್ದು ನಾಳೆಗಳ ಸ್ವಾಗತಿಸಬಹುದೇ ?

Monday, June 14, 2010

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!


ಅಂತೂ ಇಂತೂ ನಿತ್ಯಾನಂದನ ಬಿಡುಗಡೆಯಾಯ್ತು! ಆತನ ಭಕ್ತರ ಮನಸ್ಸಿಗೆ ಕಾಡಿನಿಂದ ಶ್ರೀರಾಮ ವನವಾಸ ಮುಗಿಸಿ ಬಂದದ್ದಕ್ಕಿಂತ ತುಸು ಹೆಚ್ಚೇ ಖುಷಿಯಾಯ್ತು. ಛೆ ಛೆ ನಮ್ಮ ಸ್ವಾಮೀಜಿ ಹಾಗಲ್ಲ- ತುಂಬಾ ಸೆನ್ಸಿಟಿವೆ ಮ್ಯಾಟರು ಎನ್ನುತ್ತಿರುವ ನಿತ್ಯಭಕ್ತಾನಂದರುಗಳಿಗೆಲ್ಲ ನಮೋನ್ನಮಃ ! ಭಾರತಮಾತೆ ಬಹುಶಃ ಬಹಳದಿನಗಳಮೇಲೆ ಪುರುಸೊತ್ತು ಮಾಡಿಕೊಂಡು ಒಮ್ಮೆ ನಕ್ಕಿರಬೇಕು! ಸ್ವಲ್ಪ ಕಣ್ಣು ಕ್ಲೀಯರ್ ಇದ್ದವರಿಗೆ ಪಂಚಾಗ್ನಿ ಎಂದು ಹೆಸರಿಸಿದ ಚಳಿಗೆ ಹಾಕಿಕೊಳ್ಳುವ ಬೆಂಕಿಯ ಮಧ್ಯೆ ಆಗಾಗ ಸಣ್ಣಗೆ ಕಣ್ಣು ಕಿರಿದಾಗಿ ತೆರೆದು ಮೀಡಿಯಾದವರ ಕ್ಯಾಮರಾ ನೋಡುತ್ತಿದ್ದ ನಿತ್ಯಾನಂದನನ್ನು ನೋಡಲು ಕಣ್ಣುಗಳೆರಡೂ ಸಾಲದು! ನಿತ್ಯ ಬರುತ್ತಿದ್ದಂತೆ ಇಡೀ ಆಶ್ರಮಕ್ಕೆ ಆಶ್ರಮವೇ ಎದ್ದು ಕುಣಿಯಿತು. ಪೂರ್ಣಕುಂಭ ಸ್ವಾಗತ ಬೇರೆ! ಲೋಕದಲ್ಲಿ ಇನ್ನೆಲ್ಲೂ ಸಿಗದ ಆನಂದವನ್ನು ಪಡೆಯುತ್ತಿರುವ ಎಲ್ಲಾ ಆನಂದಗಳು-ಮಾತಾನಂದಗಳು ಖುದ್ದು ಹಾಜರಿದ್ದು ನಿತ್ಯಾನಂದವನ್ನು ಬರಮಾಡಿಕೊಂಡರು. ಜನಮರುಳೋ ಜಾತ್ರೆ ಮರುಳೋ ಎಂಬಂತೆ ಹಲವು ಜನ ಹೆಚ್ಚಿನ ಶಿಕ್ಷಣ ಪಡೆದ ಭಕ್ತರೂ ಇದ್ದರು. ಅಂದಹಾಗೆ ಈ ಪಂಚಾಗ್ನಿಗೆ ಸೀಮೆ ಎಣ್ಣೆ ಸುರಿದು ಶಾಸ್ತ್ರೋಕ್ತವಾಗಿ ಬೆಂಕಿ ಹಚ್ಚಲಾಯಿತು! ಅಲ್ಪ ಸ್ವಲ್ಪ ಹೊಗೆಉಗುಳುತ್ತ ಆಗಾಗ ಅರ್ಧ ಅಡಿ ಎತ್ತರಕ್ಕೆ ಉರಿದ ಬೆಂಕಿಯನ್ನೇ ಮಾಧ್ಯಮದವರು ಕಷ್ಟಪಟ್ಟು ಕವರೇಜ್ ಮಾಡಿ ಸಾರ್ವಜನಿಕರಿಗೆ ಪಂಚಾಗ್ನಿ ಎಂದು ತೋರಿಸಬೇಕಾಯಿತು! ಇಂತಹ ಅಡ್ಡಕಸುಬಿ ಖಡ್ಡ ಸ್ವಾಮಿಗಳು ಬಹಳ ಒಳ್ಳೆಯ ಶಬ್ಢಗಳನ್ನೆಲ್ಲ ದುರುಪಯೋಗ ಮಾಡುತ್ತಾರಲ್ಲ ಎಂಬುದೇ ಖೇದದ ಮಾತು. ಅಂತೂ ಪಂಚಾಗ್ನಿ ಪ್ರಾಯಶ್ಚಿತ್ತ ಲೋಕ ಮಾಡಿದ ತಪ್ಪಿಗೆ ಎಂದೂ ಭಕ್ತರು ಟಿ.ವಿಯಲ್ಲಿ ಕೂತು ಹೇಳಿಕೆ ಕೊಟ್ಟರು! ಈ ಲೋಕಕಲ್ಯಾಣಾಥದ ಪ್ರಾಯಶ್ಚಿತ್ತದ ೨೧ ದಿನಗಳ ಕಾಲ ಪ್ರತೀ ದಿನ ಗಾಂಜಾ-ಆಫೀಮು ಬಳಕೆಯೂ ಇದ್ದರೆ ಬಿದ್ದ ಮಳೆಯ ಚಳಿಗೆ ಸ್ವಲ್ಪ ಬೆಚ್ಚಗೆ ಹಚ್ಚಗೆ ಇರಬಹುದಾಗಿತ್ತು ಆದರೆ ಅದು ಇನ್ನೂ ಪ್ರಾರಂಭವಾಗಿಲ್ಲ ಅನಿಸುತ್ತದೆ.

ಪಂಚಾಗ್ನಿಯ ವರ್ಣನೆ ಕೆಲವು ವೇದ-ಪುರಾಣ ಭಾಗಗಳಲ್ಲಿ ಇದೆ ಎಂಬುದನ್ನು ಕೇಳಿದ್ದೇನೆ. ವ್ಯಕ್ತಿ ತನಗೆ ತಾನೇ ಪ್ರಾಯಶ್ಚಿತ್ತಕ್ಕಾಗಿ ೪೫ ದಿನಗಳ ಕಾಲ ಚತುರಸ್ರ ಮಂಡಲ ಅಂದರೆ ಚೌಕಾಕಾರದ ಕುಂಡವನ್ನು ಸುತ್ತಲೂ ಕೊರೆದು, ಅದರಲ್ಲಿ ವ್ಯಕ್ತಿ ತಾನು ಕುಳಿತಾಗ ಹೊರಗೆ ಕಾಣದಷ್ಟು ಎತ್ತರದವರೆಗಿನ ಬೆಂಕಿಯನ್ನು ನಾಲ್ಕೂ ದಿಕ್ಕಿನಲ್ಲಿ ಉರಿಸಿದರೆ ಮೇಲಿಂದ ಉರಿವ ಸೂರ್ಯ ಐದನೆಯ ಅಗ್ನಿ ಎಂಬುದನ್ನೂ ಪರಿಗಣಿಸಿ, ಸತತ ನಲವತ್ತೈದು ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಆರಂಭಿಸಿ ಅಪರಾಹ್ನದವರೆಗೆ ಪ್ರತಿನಿತ್ಯ ನಡೆಸುವ ಪ್ರಾಯಶ್ಚಿತ್ತ ವಿಧಿ ಇದು. ಇದನ್ನು ಹೋಗಿ ಯವುದೋ ಚಿಲ್ಲರೆ ಬೆಂಕಿಗೆ ಹೋಲಿಸಿ ಪಂಚಾಗ್ನಿ ಎಂದರೆ-ಹೇಳಿದ್ದನ್ನು ನಾವೆಲ್ಲ ಕೋಲೆ ಬಸವನ ಥರ ಸರಿಯೆಂದು ನಂಬಿದರೆ ಜಗತ್ತಿನಲ್ಲಿ ಮೂರ್ಖರ ಸಂಖ್ಯೆ ಜಾಸ್ತಿಯಾದೀತು ಎಂಬುದು ನಮ್ಮ ಅಂಬೋಣ!

ಪರಮಹಂಸರದು ಅತೀತಾಶ್ರಮ-ಅವರು ಏನುಬೇಕಾದರೂ ಮಾಡಬಹುದು ಎಂದೆಲ್ಲ ಹುಚ್ಚು ಹೇಳಿಕೆ ಕೊಡುವ ಆಧ್ಯಾತ್ಮಿಕವಾಗಿ ಏನೂ ಓದದ-ಅರಿಯದ ಆನಂದಗಳನ್ನು-ಮಾತಾನಂದಗಳನ್ನು ನೋಡಿದರೆ ಪಾಪ ಅನ್ನಿಸುತ್ತಿತ್ತು. ಅಲ್ಲಾ ಸ್ವಾಮೀ ನಮಗೆ ಸನ್ಮಾರ್ಗ ಬೋಧಿಸುವ ಸರಿಯಾದ ಸನ್ಯಾಸಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಇರುವಾಗ ಇವರಿಗೆಲ್ಲ ಯಾವ ಮಂಕು ಕವಿದಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅನೇಕ ಕಾಂತರು-ಕಾಂತೆಯರೂ-ಕಾಂತಿಯರೂ ಬಂದು ದೊಪ್ಪೆಂದು ಅಡ್ಡಬೀಳುವ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ. ಒಟ್ಟಿನಲ್ಲಿ ನಿತ್ಯಾನಂದನಿಗೆ ಪುಗಸಟ್ಟೆ ಪ್ರಚಾರ ಸಿಕ್ಕಂತಾಯ್ತು. ನಮ್ಮ ಸಮಾಜವೇ ಹೀಗೆ. ಇಂತಹ ಹಗಲುಗಳ್ಳರನ್ನೇ ನಂಬುವುದು,ಅವರು ಎಲ್ಲರ ಮಧ್ಯೆ ವಿಜೃಂಭಿಸುವಂತೆ ಮಾಡುವುದು. ನೆನೆಪಿರಲಿ-ಬಿಡದಿಗೆ ಭಕ್ತರು ಹೆಚ್ಚುವ ಕಾಲ ಬಂದಿದೆ! ನಿತ್ಯಾನಂದನಿಗೆ ಶುಕ್ರದೆಸೆ ಬಂದಿದೆ. ನಾವೂ ಯಾಕೆ ಕಮ್ಮಿ ಎನಿಸಿಕೊಳಬೇಕು? ನಾವೆಲ್ಲ ಸೇರಿ ಒಂದು ಭಜನೆ ಹಾಡಿದರೆ ಹೇಗೆ? ತಗಳಿ-- ಭಜನೆ ನಾನೇ ರಚಿಸಿ ಕೊಟ್ಟಿದ್ದೇನೆ >>>

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!

[ರಾಮ ಮಂತ್ರವ ಜಪಿಸೋ ಎಂಬಂತೆ ]

ಪಂಚಾಗ್ನಿಯ ಉರಿಸೋ ನಿತ್ಯನೇ ನಿನ್ನ
ಪಂಚಾಗ್ನಿಯ ಉರಿಸೋ

ನಾರೀನರರ ಮಧ್ಯೆ ಕೆದಕಿ ವರ್ತುಳ ಕೊರೆದು
ನೂರಾರು ಲೀಟರು ಸೀಮೆ ಎಣ್ಣೆಯ ಸುರಿದು
ಭಾರೀ ಜನಸ್ತೋಮ ಮತ್ತೆ ಮೀಡಿಯಾದವರು
ಹಾರಿ ಬಂದು ನೋಡಿ ದಂಗುಬಡಿಸಿಕೊಂಬ

ಪಂಚಾಗ್ನಿಯು ಎಂದರೇನೆಂದು ತಿಳಿಯದೆ
ಹೊಂಚು ಹಾಕಿ ಜನಕೆಳೆಯೊ ನಾಮವನು
ಮಂಚವೇರಿ ಮುದದಲಿ ನರ್ತಿಸು ಮತ್ತೆ
ಕೊಂಚ ನೆನೆಪಿರಲಿ-ಸೀಡಿ ಕ್ಯಾಮರಾಗಳು!

ಓದಿದವರಿಗೆಲ್ಲ ಮಂಕು ಬೂದಿಯ ಎರಚಿ
ಮಾಧವ ಕಲೆ ಕಲಿಸಿದೆಯೊ ನೀ ಗುರುವೇ ?
ಆದಿನಾರಾಯಣ ತಾನೇ ಎಂದರೂ
ಖೇದ ನಮಗೆ ಜನ ನಂಬುತಾ ಕೆಟ್ಟರು!

’ಪರಮಹಂಸ’ ಶಬ್ಧವನೆಲ್ಲ ಬಳಸುತ
ಚರಮ ಹರಿಯುವಂತ ನೋವುತಾರದಿರೊ
ಕರುಮನಮದು ಅನುಭವಿಸಿ ತೀರಲು
ಮರಿಮಕ್ಕಳು ಕಾವಿ ನೋಡಿ ಹೆದರಲು !

ಕಾಂತರನೇಕರು ನಿನ್ನ ಭಕುತರು
ಕಾಂತಿಯರೂ ಕಾವಿ ತೊಟ್ಟು ಬಂದರು
ಆಂತರ್ಯದಿ ಎರ್ರೋಟಿಕ್ ಪ್ಲೆಷರು
ಶಾಂತಿಮಾಡು ನೀ ಕಾವಿಯ ತೆರೆದು !

ಬಿಡದಿಯ ಭಕ್ತರ ದಂಡನು ತೊರೆದು
ತಡಮಾಡದೆ ಹಿಮಾಲಯ ಹಿಡಿದು
ಬಿಡದೇ ಖಾಕಿಗಳು ನಿನ್ನ ಹುಡುಕಲು
ಅಡಿಗಡಿಗೂಮ್ಮೆ ನಗುತಲಿ ತಾ ಬಂದೆ !

Sunday, June 13, 2010

ಕಥೆ ಬರೆಯುವರ ಕಥೆಯೊಳಗಿನ ಕಥೆ


ಕಥೆ ಬರೆಯುವರ ಕಥೆಯೊಳಗಿನ ಕಥೆ

ಕಥೆ ಬರೆಯಬೇಕೆಂದು ಕೂಚು ಭಟ್ಟರು ನಿರ್ಧರಿಸಿಬಿಟ್ಟರು. ಆದರೆ ಯಾವ ಕಥೆ ಬರೆಯಬೇಕೆಂಬುದೇ ಹೊಳೆಯಲಿಲ್ಲ. ಕಥೆಯ ಕಥೆಗಾಗಿ ಹುಡುಕಿ ಹುಡುಕಿ ಪರಿತಪಿಸಿದರು. ಕೊನೆಗೂ ಕಥೆಯ ಕಥಾವಸ್ತು ಸಿಗದ ಕಾರಣ ಏನುಬರೆಯಬೇಕೆಂದು ಆಲೋಚಿಸುತ್ತ ಬಹಳ ಚಿಂತಾಕ್ರಾಂತರಾಗಿದ್ದರು. ಹುಟ್ಟಿ ಬೆಳೆದು ಐವತ್ತು ವರುಷ ಕಳೆದು ಹೋಯಿತು, ಆದರೆ ಕಥೆ ಬರೆಯಲೇ ಇಲ್ಲವಲ್ಲ ಎಂಬುದು ಇನ್ನೊಂದು ಕಳವಳ. ಅಂತೂ ಬರೆಯಲು ಬಹಳ ಉತ್ಸುಕರಾಗಿದ್ದರು. ಇಂದು ಬರೆಯಬೇಕು ನಾಳೆ ಬರೆಯಬೇಕು ಎಂದೆಲ್ಲ ಎಣಿಕೆ ಮನದ ತುಂಬಾ. ಯಾರೋ ಹೇಳಿದರು "ಕೂಚು ಭಟ್ಟರೇ ನೀವು ಕಥೆಬರೆಯಲು ಒಂದು ಒಳ್ಳೆಯ ಮುಹೂರ್ತದಲ್ಲಿ ಶುರುಮಾಡಿ" ಎಂದು. ಭಟ್ಟರಿಗೂ ಅದು ಸಹಜವಾಗಿ ಹೌದೆನಿಸಿ ಅದಕ್ಕೆ ತಯಾರಿ ನಡೆಸುತ್ತಿದ್ದರು. ಪುರೋಹಿತರನ್ನು ಕೇಳಿ ಕಥೆ ಬರೆಯಲು ಒಂದು ಒಳ್ಳೆಯ ಮುಹೂರ್ತ ಮತ್ತು ಪ್ರಾರಂಭಿಕ ಪೂಜೆ ಒಂದನ್ನು ಗೊತ್ತು ಪಡಿಸಿಕೊಂಡರು. ದಿನ ಕಳೆಯುತ್ತ ಕಳೆಯುತ್ತ ಅಂತೂ ಭಟ್ಟರ ಕಥೆ ಬರೆಯುವಿಕೆಯ ಪ್ರಾರಂಭದ ದಿನ ಬಂದೇ ಬಿಟ್ಟಿತು. ಪೂಜೆಯೂ ನಡೆದೇ ಹೋಯಿತು. ಆದರೆ ಕಥೆಯ ಹೆಸರಾಗಲೀ ಕಥೆಯ ಕಥಾವಸ್ತುವಾಗಲೀ ಭಟ್ಟರಿಗೇ ತಿಳಿದಿರಲಿಲ್ಲ! ಅಂತೂ ಭಟ್ಟರು ಕಥೆ ಬರೆಯಲು ಕುಳಿತೇ ಬಿಟ್ಟರು!

ಹಾಗೂ ಹೀಗೂ ಒಂದು ಮರದ ಪೀಠಹತ್ತಿ ಕುಳಿತು ಕಥೆಬರೆಯುತ್ತಿದ್ದರು.

|| ಪೀಠಸ್ಥ ಕೂಚು ಭಟ್ಟಂ ದೃಷ್ಟ್ವಾ ಪುನರ್ಜನ್ಮಂ ನವಿದ್ಯತೇ ||
ಎನ್ನಬಹುದಾದ ಘನಗಾಂಭೀರ್ಯ ಪೀಠವೇರಿ ಕುಳಿತ ನಮ್ಮ ಕೂಚುಭಟ್ಟರದು. ಹಳೆಯ ಕಾಲದ ದೊಡ್ಡ ಋಷಿಗಳೆಲ್ಲ ಪುರಾಣ ಬರೆಯಲು ಕುಳಿತ ಹಾಗೇ ಶ್ರೀಮದ್ಗಾಂಭೀರ್ಯದ ಪೋಸುಕೊಡುತ್ತ ಬರೆಯುತ್ತಿದ್ದರು. ಠಾಕು ಠೀಕಾಗಿ ಕುಳಿತ ಕೂಚುಭಟ್ಟರಿಗೆ ಪೀಠದ ಕೀಲು ಕಟಕ್ ಎಂದು ತುಂಡಾಗಿದ್ದು ತಿಳಿಯಲೇ ಇಲ್ಲ. ಕ್ಷಣಾರ್ಧದಲ್ಲಿ ಭಟ್ಟರು ದುರ್ಯೋಧನ ಪೀಠದಿಂದ ಬಿದ್ದ ರೀತಿ ಪೀಠಸಮೇತ ಬಿದ್ದರು. ಸದ್ಯಕ್ಕೆ ಅಲ್ಲಿ ಯಾರೂ ಇರಲಿಲ್ಲವಾಗಿ ಯಾವುದೇ ಸಂಕೋಚವಿಲ್ಲದೇ ಸೊಂಟ ನೀವಿಕೊಂಡು ಎದ್ದು ನಿಂತಿತು ಸವಾರಿ! ಆದರೂ ಬಿದ್ದ ಕ್ಷಣದಲ್ಲಿ ಕಳಕ್ ಅಂತ ಸೊಂಟದಲ್ಲಿ ಎನೋ ಶಬ್ಧ ಬಂತಲ್ಲ, ಅದು ಬಂದಾಗ ಬಂದ ನೋವು ಇನ್ನೂ ಹೋಗಿರಲಿಲ್ಲ. ಉಜ್ಜುತ್ತ ಉಜ್ಜುತ್ತ ಗಂಟೆಯೇ ಕಳೆದರೂ ಭಟ್ಟರ ಸೊಂಟದ ಕಥೆ ದೊಡ್ಡ ಕಥೆಯಾಯಿತು; ಭಟ್ಟರಿಗೆ ವ್ಯಥೆಯಾಯಿತು. ಆದರೂ ಗುಣವಾದಮೇಲೆ ಮತ್ತೆ ಕಥೆಬರೆದರಾಯಿತು ಅಂದುಕೊಂಡರು.

ಪೀಠ ಮುರಿದಿದ್ದು ಮನೆಯಲ್ಲಿ ಎಲ್ಲರಿಗೂ ಕಾಣುತ್ತಿತ್ತು. ಭಟ್ಟರ ಕ್ವಿಂಟಾಲು ತೂಕಕ್ಕೆ ಹಳೆಯ ಮರದ ಕೀಲು ಕಟ್ಟನೇ ತನ್ನ ಅವಸಾನವನ್ನು ಕಂಡುಕೊಂಡಿತ್ತು. ಭಟ್ಟರು ಅದಕ್ಕಾಗಿ ಪಶ್ಚಾತ್ತಾಪ ಪಟ್ಟವರಲ್ಲ; ಶಕುನವಾಗಲಿಲ್ಲವೆಂದು ಹಳವಡಿಸಲೂ ಇಲ್ಲ. ಆದರೂ ಬಿದ್ದಾಗ ಆದ ನೋವು ಆಗಾಗ ಮರುಕಳಿಸಿ ಭಟ್ಟರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಆಡುವಂತಿಲ್ಲ-ಅನುಭವಿಸುವಂತಿಲ್ಲ! ಕಟ್ಟಾ ಸ್ವಾಭಿಮಾನಿಯಾದ ಕೂಚುಭಟ್ಟರು ಯಾರಲ್ಲಿಯೂ ತನ್ನ ಈ ದುಗುಡವನ್ನು ಹೇಳಿಕೊಳ್ಳಲಾರರು. ಆಯೊಡೆಕ್ಸ್ ಮತ್ತು ಇನ್ನೂ ಅನೇಕ ಎಲ್ಲಾ ಬ್ರಾಂಡಿನ ನೋವು ನಿವಾರಕ ತೈಲ-ಲೇಪನ ಪದಾರ್ಥಗಳನ್ನು ಹಚ್ಚಿ ನೋಡಿದ್ದಾಯಿತು. ಹಚ್ಚಿದಷ್ಟೇ ಹೊತ್ತು! ಅಮೇಲೆ ಮತ್ತೆ ಆ ಅಸಾಧ್ಯ ನೋವು ಹಾಜರು. ಕಾಣದ ದೇವರಿಗೆಲ್ಲ ಕಮುಗಿದು ಒಳಗೊಳಗೇ ಪ್ರಾರ್ಥನೆ-ಹರಕೆ ಎಲ್ಲವೂ ನಡೆಯಿತು. ಮನೆಯಲ್ಲಿ ಇನ್ಯಾರಿಗೂ ವಿಷಯ ಗೊತ್ತೇ ಇಲ್ಲ. ಹೇಳಿಕೊಳ್ಳಲು ಭಟ್ಟರೇನು ಇದಕ್ಕೆಲ್ಲ ಹೆದರುವ ಸಣ್ಣಮರಿಯೇ ? ಛೆ ಛೆ. ನಾಳೆ ಕಥೆಯನ್ನು ಬರೆಯುವ ಉದ್ಧಾಮ ಪಂಡಿತರು ಈ ಇಷ್ಟುಸಣ್ಣ ನೋವಿಗೆಲ್ಲ ದೊಡ್ಡದೇನೋ ಆದಂತೆ ಆಡುವುದೇ ? ಆ ಥರದ ವ್ಯಕಿಯೇ ಅಲ್ಲ ಭಟ್ಟರು! ಈ ನೋವೆಲ್ಲ ಏನೂ ಅಲ್ಲ ಅವರಿಗೆ. ಆದರೆ ನೋವು ಬಂದಾಗ ಮಾತ್ರ ತಿರುಪತಿ ವೆಂಕಟರಮಣ ಧರ್ಮಸ್ಥಳದ ಮಂಜುನಾಥ ಎಲ್ಲರೂ ನೆನಪಾಗುತ್ತಾರೆ!

ಪತ್ರಿಕೆಯಲ್ಲಿ ಬರುವ ಹಲವು ಕಥೆಗಳನ್ನು ಓದಿದ್ದರು ಭಟ್ಟರು. ಇನ್ನೂ ಆಗಾಗ ಓದುತ್ತಲೂ ಇದ್ದರು. ಹಿರಿ-ಕಿರಿಯ ಸಾಹಿತಿಗಳ ನೆರೆ-ಕರೆಯ ಬರಹಗಳು,ಕಥೆಗಳು ಆಹಾ ಅದೇನಂತೀರಿ ಅದನ್ನೆಲ್ಲ ಚಾಚೂ ಬಿಡದೇ ಪ್ರಯತ್ನ ಪೂರ್ವಕ ಓದಿ ಮುಗಿಸುತ್ತಿದ್ದರು. ಅವುಗಳ ಪ್ರಭಾವದಿಂದಲಾದರೂ ತಾನು ಬರೆಯಬಹುದೇನೋ ಎಂಬ ಆಸೆ ಭಟ್ಟರಿಗೆ. ಛೆ ಎಂತೆಂಥಾ ದಡ್ಡರೆಲ್ಲ ಮುಂದೆ ಬಂದು ಬಿಟ್ಟರು, ತಾನು ಮಾತ್ರ ಬರೆಯಲೇ ಇಲ್ಲವಲ್ಲ ಎಂಬುದೇ ನಮ್ಮ ಕೂಚು ಭಟ್ಟರ ಇರಾದೆ. ಮನಸ್ಸಿಗೆ ಈ ಥರ ಬೇಸರವಾದಾಗ ಎಫ್ ಎಮ್ ರೇಡಿಯೋ ಹಾಕಿಕೊಳ್ಳುವರು. ಅಲ್ಲಿ ಮಾತನಾಡುವ ರೇಡಿಯೋ ಜಾಕಿಗೂ ತನಗೂ ಏನು ಅಭ್ಯಂತರ, ರೇಡಿಯೋದಲ್ಲಿ ಜಾಕಿ ಹೇಗೆ ಸುಲಲಿತವಾಗಿ ಮಜವಾಗಿ ಸನ್ನಿವೇಶಕ್ಕೆ ತಕ್ಕಂತೆ ಮಾತು ಹೊಸೆದು ಕಥೆ ಕಟ್ಟುತ್ತಾರೋ ಅದೇ ರೀತಿ ತಾನೂ ಕಥೆಬರೆಯಲೇಬೇಕೆಂದುಕೊಳ್ಳುವರು.ಅದು ಹೆಗೆ ಅವರಿಗೆಲ್ಲ ವಿಷಯ ಸಿಗುತ್ತದೆ ಎಂಬುದೇ ಇವರಿಗೆ ಅರ್ಥವಾಗಲಿಲ್ಲ! ಒಂದು ಗುಟ್ಟು- ಇದು ನಿಮ್ಮಲ್ಲೇ ಇರಲಿ --ಎಲ್ಲಾದರೂ ಯಾರಾದರೂ ಕಥೆ ಬರೆಯಲು ಹೇಳಿಕೊಡುವ ತರಗತಿ ನಡೆಸುತ್ತಿದ್ದರೆ ಭಟ್ಟರಿಗೆ ಸೇರಿಬಿಡೋಣವೆನ್ನಿಸಿತ್ತು! ಆದರೆ ಕಥೆಯನ್ನೋ ಕಾವ್ಯವನ್ನೋ ಬರೆಯಲು ತರಬೇತಿ ಕೊಡಲಾಗುವ ಶಾಲೆ ಮಾತ್ರ ಸಿಗಲೇ ಇಲ್ಲ. ಹೀಗಾಗಿ ಪಾಪಿ ಹೋದಲ್ಲಿ ಮೊಳಕಾಲು ನೀರು ಎಂದಂತೆ ಬಹಳ ಹತಾಶರಗಿದ್ದರು ನಮ್ಮ ಕೂಚು!--ಯಾರಿಗೂ ಹೇಳಬೇಡಿ, ಯಾಕೆಂದರೆ ಇದು ಅವರ ಮನೆಯವರಿಗೂ ಗೊತ್ತಿಲ್ಲ!

ಭಟ್ಟರ ಹೆಂಡತಿ ವಿಶಾಲಾಕ್ಷಮ್ಮ ಮಹಾ ಸಾಧ್ವಿ. ಯಾವಾಗಲೂ ತಾನಾಯಿತು ತನ್ನ ಕೆಲಸವಾಯಿತು ಅಂತ ಇರುವವಳು. ಎಂದೂ ತನಗೆ ಅದು ಬೇಕು ಇದು ಬೇಕು ಎಂದು ಕೇಳಿದವಳಲ್ಲ. ಗಂಡ ಹೊಸ ಸೀರೆ ಕೊಡಿಸದೇ ವರುಷವೇ ಕಳೆದಿದ್ದರೂ ಅದಕ್ಕಾಗಿ ತಲೆಕೆಡಿಸಿಕೊಂಡವಳಲ್ಲ,ಮರುಗುವವಳೂ ಅಲ್ಲ. ಹೇಗೂ ಗಂಡನ ವ್ಯಕ್ತಿತ್ವದ ಅರಿವಿದೆ. ಗಂಡನ ಹತ್ತಿರ ಕೇಳಿ ಸುಮ್ಮನೇ ಬೈಸಿಕೊಳ್ಳುವುದಕ್ಕಿಂತ ಕೇಳದಿರುವುದೇ ವಾಸಿ ಎಂಬುದು ಅವಳ ಅನಿಸಿಕೆ. ಹೀಗಾಗಿ ಅವಳು ಆದಷ್ಟೂ ಅಂತರ್ಮುಖಿಯಾಗಿಯೇ ಇರುತ್ತಿದ್ದಳು. ಭಟ್ಟರಿಗೆ ಅವಳ ಕೂಡ ಮಾತನಾದಲು ಪುರುಸೊತ್ತೆಲ್ಲಿದೆ? ಕಥೆಬರೆಯುವ ಹಂಬಲದಲ್ಲಿರುವ ಮಹಾನ್ ಲೇಖಕ ಅವರು ಹೀಗಾಗಿ ಯಾರೊಂದಿಗೆ ಸುಖಾಸುಮ್ಮನೇ ಲೋಕಾಭಿರಾಮವಾಗಿ ಎರಡು ಸಿಹಿಮಾತು ಹಂಚಿಕೊಳ್ಳುವ ಪ್ರವೃತ್ತಿ ನಮ್ಮ ಕೂಚಿನದ್ದಲ್ಲ! ಕುಂಬಳಕಾಯಿ ಮಜ್ಜಿಗೆ ಹುಳಿ ಎಂದರೆ ಗಂಡನಿಗೆ ಪ್ರೀತಿ ಎಂಬುದು ಅವಳಿಗೆ ಗೊತ್ತಿರುವ ಆಪ್ತ ವಿಷಯಗಳಲ್ಲೊಂದು. ಹೀಗಾಗಿ ಭಟ್ಟರ ಅವಕೃಪೆಗೆ ಪಾತ್ರಳಾಗದಿರಲೆಂದುಕೊಂಡು ಆಗಾಗ ಮಜ್ಜಿಗೆ ಹುಳಿ ಮಾಡೋಳು. ಭಟ್ಟರು ಈ ವಿಷಯದಲ್ಲಿ ಮಾತ್ರ ತುಂಬಾ ತೃಪ್ತರು. ಊಟಮಾಡುವಾಗ ಯಾವುದೋ ಯಂತ್ರದ ಥರ ಸೊರ ಸೊರ ಸೊರ ಎಂದು ದೊಡ್ಡ ಸದ್ದು ಮಾಡುತ್ತ ಮಾಡುವುದು ನಮ್ಮ ಕೂಚಿನ ವೈಖರಿ. ಹೆಂಡತಿ ಮಜ್ಜಿಗೆ ಹುಳಿ ಮಾಡಿದ ದಿನ ಎಅಡು ತುತ್ತು ಜಾಸ್ತಿಯೇ ಉಂಡು ಬಲಗೈಯ ಎಲ್ಲಾ ಬೆರಳುಗಳನ್ನೂ ಗಂಟಲವರೆಗೆ ಎಳೆದುಕೊಂಡು ಚೀಪಿದರಷ್ಟೇ ಅವರ ಊಟ ಮುಗಿಯುತ್ತಿತ್ತು!ಊಟದ ನಂತರ ಮಾಳಿಗೆಯ ಕೋಣೆಯ ಮಂಚದಮೇಲೆ ಕಾಲು ಚಾಚಿ ಮಲಗಿದರೆ ’ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’! ನಂತರ ಚಾಲೂ ಹಚ್ಚುವ ಗರಗಸ ಕಾಮಗಾರಿ [ಗೊರಕೆ] ಗೊಂಡಾರಣ್ಯದಲ್ಲಿ ದಪ್ಪನೆಯ ದಿಮ್ಮಿಯನ್ನು ಹಲಗೆಯಾಗಿ ಕತ್ತರಿಸುವಾಗ ಆಗುವಂತ ಸದ್ದು!

’ಮಾವಿನ ಹಣ್ಣಿನ ಸೀಕರಣೆ’ ಎಂದು ಹೆಸರಿಡಲೇ ಓ ಬೇಡ ಬೇಡ ಹಾಗಾದ್ರೆ ’ಮಣ್ಣಿನಮಗ’ ಎಂದು ಆರಂಭಿಸಲೇ ಛೆ ಛೆ ಬೇಡವೇ ಬೇಡ....ಮತ್ತೆ ಹಾಗಾದ್ರೆ ’ದೋಣಿಸಾಗಲಿ ಮುಂದೆ ಹೋಗಲಿ’ ಎಂದು ಬರೆಯಲೇ ಹೀಗೇ ಕಥೆಗೊಂದು ನಾಮಕರಣ ಮಾಡಿಕೊಂಡು ಬರೆಯಲು ಪ್ರಯತ್ನಿಸುತ್ತಿದ್ದರು. ಕಥೆ ಎರಡು ಪುಟ ಅಬ್ಬಬ್ಬ ಅಂದ್ರೆ ಮೂರು ಪುಟಗಳಲ್ಲಿ ಮುಗಿದು ಹೋಗಬೇಕೆಂಬ ಆಸ್ತೆಯಿದ್ದ ಆಜಾನುಭಾಹು ನಮ್ಮ ಕೂಚು ಭಟ್ಟರು, ಓದಿ ಓದಿ ಓದಿ ಮರುಳಾದೆಯಾ ಕೂಚು ಭಟ್ಟ ಅಂತಾರಲ್ಲ ಬಹುಶಃ ಆ ಗಾದೆ ಈ ಭಟ್ಟರಿಂದಾಗಿಯೇ ಹುಟ್ಟಿರಬೇಕು! ಕಥೆಯಲ್ಲಿ ಸಸ್ಪೆನ್ಸ್ ಇರಬೇಕು, ಕಥೆ ಮಾದಕವಾಗಿರಬೇಕು, ಕಥೆಯಲ್ಲಿ ಬರುವ ಪಾತ್ರಗಳು ಜನರ ಮನಸ್ಸನ್ನು ಬಹಳ ಆಕರ್ಷಿಸಬೇಕು.ಕಥೆ ಮಾರ್ದವತೆಯಿಂದ ಕೂಡಿರಬೇಕು, ಕಥೆಯಲ್ಲಿ ಆದರ್ಶಗಳಿರಬೇಕು, ಕಥೆಯಲ್ಲಿ ಒಂದು ಕ್ಲೈಮ್ಯಾಕ್ಸ್ ಇರಬೇಕು....ಒಂದೇ ಎರಡೇ ನಮ್ಮ ಭಟ್ಟರ ಕಥೆಯಲ್ಲಿನ ಸಾಧ್ಯತೆಗಳ ಕಲ್ಪನೆ. ಅದ್ಭುತ ಪರಿಕಲ್ಪನೆ ನಮ್ಮ ಕೂಚಿನದು!

ಅಗಾಗ ನಮ್ಮ ಕೂಚು ಭಟ್ಟರಿಗೆ ಕಾಪಿ ಕುಡಿಯುವ ಚಟ, ಒಂದು ಸಿಪ್ಪು ಕಾಪಿ ಹೀರಿ, ತಟಕ್ಕನೆ ಲೈಟರ್ ಒತ್ತಿ ಸಿಗರೇಟು ಹಚ್ಚಿದರೆ ಪರಮಾತ್ಮನಾದಷ್ಟು ಸುಖ! ಸುಖವೆಂದರೆ ಇದೇ ಏನೋ ಅನ್ನಿಸಿಬಿಟ್ಟಿತ್ತು ನಮ್ಮ ಕೂಚಿಗೆ! ಮಕ್ಕಳು ಎದುರು ಬಂದರೆ ದುರುಗುಟ್ಟುವ ಹವ್ಯಾಸಿ ಕಲಾವಿದ ನಮ್ಮ ಕೂಚು! ಅಡ್ಡ ಕಸುಬಿಗಳೆಲ್ಲ ಹಾಗೇ ಅಂದುಕೊಳ್ಳಬೇಡಿ ನಮ್ಮ ಕೂಚು ಅಡ್ಡ-ಉದ್ದ ಎರಡನ್ನೂ ಬಲ್ಲವರು. ಪೋರಗಳು ಪಕ್ಕದ ಮನೆಯಲ್ಲೋ ಪಕ್ಕದ ಬೀದಿಯಲ್ಲೋ ಪೋಲಿ ಅಲೆಯುವುದು ಸಹಿಸಲಾರದ ನಗ್ನ ಸತ್ಯವಾಗಿ ಭಟ್ಟರನ್ನು ಕಾಡುತ್ತಿತ್ತು. ಆಗಾಗ ಒಳಗೊಳಗೇ ಸಿಗರೇಟು ಉರಿದಂತೆ ಉರಿದುಹೋಗುತ್ತಿದ್ದರು.

ಅಂತೂ ನಮ್ಮ ಭಟ್ಟರು ’ರಾಧಿಕಾ-ಕುಮಾರಕೃಷ್ಣ’ ಆಖ್ಯಾಯಿಕೆಯನ್ನು ಬರೆಯತೊಡಗೇ ಬಿಟ್ಟರು! ಪ್ರಾಯಶಃ ಎಲ್ಲೋ ಯಾವುದೋ ಅಡ್ಡವಾಸನೆ ಬಂದಿತ್ತೋ ಏನೋ ಅಂತೂ ನಮ್ಮ ಕೂಚು ತೆರೆಯಿತು ಬಾಟಲಿಯ ಬೂಚು! ಕಥೆಯಲ್ಲಿ ರಾಧಿಕಾ ಎಂಬ ಹೆಣ್ಣು ಮಗಳನ್ನೂ ಮತ್ತು ಕುಮಾರಕೃಷ್ಣ ನೆಂಬ ಕೃಷ್ಣನ ಪ್ರಾಯವನ್ನೂ ಬಣ್ಣಿಸಬೇಕೆಂಬುದು ಭಟ್ಟರ ಬಯಕೆ. ನಡುನಡುವೆ ಹಾಸ್ಯಮಿಶ್ರಿತ ತಹಬಂದಿಯಿರಲಿ ಎಂಬುದು ಕೂಚು ಅವರ ತಹತಹ. ಪ್ರಾಯವನ್ನು ವರ್ಣಿಸಲು ತೊಡಗಬೇಕು. ರಾಧಿಕೆಯ ಬಳುಕುವ ಸೊಂಟವನ್ನು ಹಿಡಿದುಕೊಂಡಿದ್ದರು [ಕಥೆಯ ಆ ಭಾಗದಲ್ಲಿ] ಅಷ್ಟರಲ್ಲಿ ಭಟ್ಟರ ಸೊಂಟದ ನೋವು ತೀವ್ರ ಉಲ್ಬಣವಾಯಿತು. ಕುಮಾರಕೃಷ್ಣನ್ ಪ್ರವೇಶವೇ ಇನ್ನೂ ಆಗಿರಲಿಲ್ಲ, ಆಗಲೇ ಆತಂಕ,ಗಡಿಬಿಡಿ. ಮಧ್ಯೆ ಮಧ್ಯೆ ತನಗೆ ತಾನೇ ಅಂದುಕೊಳ್ಳುವರು " ಆಯೊಡೆಕ್ಸ್ ಹಚ್ಚಿರಿ ಮತ್ತೆ ಓಡಾಡಿರಿ [೩ ಸರ್ತಿ ರಿಪೀಟ್ ಮಾಡಿ! ]" ಶಿವಪೂಜೆಯಲ್ಲಿ ಕರಡಿ ಬಂದಹಾಗೇ ಕಥೆಬರೆಯುವಾಗ ಈ ಹಾಳಾದ ಸೊಂಟನೋವೊಂದು ಬಿಡುವುದಿಲ್ಲವಲ್ಲ ಎಂಬುದು ಕೂಚಿನ ಅಹವಾಲು.

ಅಂತೂ ಕುಮಾರಕೃಷ್ಣನ ಪ್ರವೇಶ ಯಾರಿಗೂ ತಿಳಿಯದ ರೀತಿಯಲ್ಲಿದ್ದರೂ ತಿಳಿದು ಆಯಿತು! ಕುಮಾರ ದೂರದಿಂದ ರಾಧಿಕೆಯನ್ನು ಕಂಡಿದ್ದೂ ಆಯಿತು. ರಾಧಿಕೆಯನ್ನು ಕಂಡ ಕುಮಾರ ಮನದ ತುಂಬ ಅವಳ ಸೌಂದರ್ಯವನ್ನೇ ತುಂಬಿಕೊಂಡು ಆ ದಿನದ ಮಟ್ಟಿಗೆ ಕೈಗೆ ಸಿಗಲಿಲ್ಲವಲ್ಲ ಎಂದು ಹಪಹಪಿಸಿದ್ದೂ ಆಯಿತು. ಇದಕ್ಕೇನಾದರೂ ಮಾಡಬೇಕೆಂದು ಮನದಲ್ಲೇ ಪ್ಲಾನು ಮಾಡಿ ಕೈನಡೆಯುವಾಗ ಅಧಿಕಾರದಲ್ಲಿರುವಾಗ ಇದಕ್ಕೊಂದು ಮಾರ್ಗಸೂಚಿ ಹಾಕಿಕೊಳ್ಳೋಣವೆಂದು ತೀರ್ಮಾನಿಸಿ ರಾಧಿಕೆಯ ಬೆನ್ನ ಹಿಂದೆ ಅನೇಕ ರೀತಿಯಲ್ಲಿ ಬೆನ್ನಟ್ಟಿ ಹೋಗಿದ್ದೂ ಆಯಿತು. ಅಂತೂ ಹಾಗೂ ಹೀಗೂ ತಂತ್ರ ಪ್ರತಿತಂತ್ರದಿಂದ ರಾಧಿಕೆಯನ್ನು ತನ್ನ ವಶಕ್ಕೆ ಪಡೆದ ಕುಮಾರಕೃಷ್ಣ ಅವಳಿಗಾಗಿ ಇರಲಿ ಎಂದು ಉಡುಗೊರೆಯಾಗಿ ವೈಭವೋಪೇತ ಮಹಲೊಂದನ್ನು ಕಟ್ಟಿಸಿಕೊಟ್ಟ. ಎಂದೂ ತನ್ನ ಆಪ್ತ ಗೋಪಿಕೆಯೊಡನೆಯೂ ಅಷ್ಟಾಗಿ ನಗದ ಕುಮಾರ ರಾಧಿಕೆಗಾಗಿ ತನ್ನ ಬಾಯಗಲಿಸಿ ನಕ್ಕ! ನವಿಲುಗರಿಯಂತೆ ಎದ್ದಿರುವ ಎರಡೇ ಕೂದಲನ್ನು ನೋಡಿ ರಾಧಿಕೆ ಎಣ್ಣೆಮುಖದ ಕುಮಾರಕೃಷ್ಣನನ್ನು ಪ್ರೀತಿಸಲು ಒಡಂಬಡಿಕೆಯಾಯಿತು. ಪ್ರೀತಿ ಬೆಳೆದು ಬೆಳೆದು ಹತ್ತಿರ ಹತ್ತಿರ ಹತ್ತಿರವಾಗಿ ರಾಧಿಕಾ-ಕುಮಾರಕೃಷ್ಣರ ಮಿಲನ ಮಹೋತ್ಸವವಾಯ್ತು! ಛೆ ಛೆ ಸಿಟ್ಟು ಬಂತು ಅಂತ ತನ್ನತನವನ್ನು ಅವರು ಕಳೆದುಕೊಳ್ಳುತ್ತಾರೆಯೇ? ಕೂಚು ಭಟ್ಟರು ಅದನ್ನೆಲ್ಲ ಮೆಟ್ಟಿನಿಂತ ಮಹನೀಯರಲ್ಲವೇ ಎಂಬುದು ನೆನೆಪಾದ ತಕ್ಷಣ ಮತ್ತೆ ಮಾಮೂಲೀ ಕೂಚು ಭಟ್ಟರ ರೂಪಕ್ಕೆ ವರ್ಗಾವಣೆ.

ತನ್ಮಧ್ಯೆ ನಮ್ಮ ಕೂಚು ಭಟ್ಟರಿಗೆ ಸೊಂಟನೋವು ಜಾಸ್ತಿಯಾಯಿತು. ಕೋಪಗೊಂಡ ಕೂಚು " ಆ ಒಂದು ಆ ಎರಡು ಆ ಮೂರು " ಎನ್ನುತ್ತ ಆಚೀಚೆ ಸುಮ್ಮನೇ ಹೆಜ್ಜೆ ಹಾಕಿದರು. ಎಫ್ ಎಮ್ ನಲ್ಲಿ ರಾಧಿಕೆ ನಿನ್ನ ಸರಸವಿದೇನೆ ... ಹಾಡು ಅನಿರೀಕ್ಷಿತವಾಗಿ ತೇಲಿಬಂದಿತ್ತು. ಆದರೆ ಹಾಳಾದ ಸೊಂಟನೋವಿನಲ್ಲಿ ರೇಡಿಯೋವನ್ನೇ ಕಿತ್ತು ಪಕ್ಕದ ರಸ್ತೆಗೆ ಬಿಸುಡುವಷ್ಟು ಸಿಟ್ಟು. ತೈಲಧಾರೇ ಯಂತೆ ಮನಸು ಕೊಡೊ ಕಥೆಯಲ್ಲಿ ಶಂಭೋ ಎಂದು ತಮಾಷೆಗಾಗಿ ಹಾಡುತ್ತ ಸ್ವಲ್ಪ ಸಮಯದಲ್ಲಿ ನೋವು ಕಮ್ಮಿಯಾದಾಗ ಮತ್ತೆ ಕಥೆಯ ಮುಂದುವರಿಕೆ!

ಬೆಳ್ಳಗಿನ ರಾಧಿಕೆಗೂ ಕರ್ರಗಿನ ಕುಮಾರಕೃಷ್ಣನಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದಿರೇ ಈ ಲೋಕವೇ ಹೀಗೆ. ದುಡ್ಡಿನ ಮುಂದೆ ಸಕಲವೂ ನಗಣ್ಯ. ಕೇವಲ ಕಾಂಚಾಣದ ಝಣ ಝಣವೇ ಎಲ್ಲಕ್ಕೂ ಮಾನ್ಯ ಅಲ್ಲವೇ? ಅಂತೂ ರಾಧಿಕೆಯನ್ನು ಅಪ್ಪಿ ಮುದ್ದಾಡಿದ ಕುಮಾರ ಬಗ್ಗೆ ಸಮಾಜ ಬಹಳ ಆಡಿಕೊಂಡಿತು. ಮನೆಯಲ್ಲಿ ಭಾಮಾನಿತ ಅರ್ಥಾತ್ ಸತ್ಯಭಾಮೆ ದೊಡ್ಡ ರಂಪವನ್ನೇ ಮಾಡಿದಳು. ಹಲವರ ಬಾಯಿಂದ ಕೇಳಿದ್ದಳಾದರೂ ಗಂಡ ತನ್ನನ್ನು ಕಡೆಗಣಿಸಿ ರಾಧಿಕೆಯನ್ನು ಸೇರುತ್ತಾನೆಂದು ಕನಸಲ್ಲೂ ಎಣಿಸಿರಲಿಲ್ಲ. ಕುಮಾರಕೃಷ್ಣ ಇದಕ್ಕೆಲ್ಲ ಸಿದ್ಧನಾಗಿಯೇ ಇದ್ದ. ಆತನಿಗೆ ಯಾವ ನಲ್ಲಿ ತಿರುಗಿಸಿದರೆ ಎಲ್ಲಿ ನೀರು ಬರುತ್ತದೆಂಬುದು ಗೊತ್ತಿತ್ತು. ಹೀಗಾಗಿ ಭಾಮಾನಿತ ಸುಮ್ಮನಿರುವಂತೆ ಅವಳಿಗೊಂದು ವ್ಯವಸ್ಥೆ ಕಲ್ಪಿಸಿ ಅಲ್ಲಿ ಆಕೆ ಮುಂಚೂಣಿಯಲ್ಲಿದ್ದು ಎಲ್ಲವನ್ನೂ ನೋಡಿಕೊಳ್ಳಲು ಕೆಲಸ ಒಪ್ಪಿಸಿದ. ಅಲ್ಲಿ ಆಕೆ ಬ್ಯುಸಿಯಾಗಿರುವಾಗ ಇಲ್ಲಿ ತಾನು ಹಸ್ತಿನಾಪುರದ ರಾಜಕಾರ್ಯವನ್ನು ಬೇರೆಯವರಿಗೆ ವಹಿಸಿಕೊಟ್ಟಾಗ ಕುಮಾರಕೃಷ್ಣನಿಗೆ ಇನ್ನೇನು ಕೆಲಸ? ಆತ ನೆನಪಾದಾಗೆಲ್ಲ ರಾಧಿಕೆಯ ಮನೆಗೆ ನಡೆದ. ಆಕೆಯನ್ನು ಯಥೇಚ್ಛ ಭೋಗಿಸಿದ. ಹರುಷಗೊಂಡ. ಆಕೆ ಕರೆದಲ್ಲಿಗೆ ಪೂಜೆ-ಪುನಸ್ಕಾರ, ನಾಗಬನ-ದೇವಸ್ಥಾನವೆಂದು ತಿರುಗಿದ. ಕೊನೆಗೂ ಅನಾಯಾಸವಾಗಿ ರಾಧಿಕೆಗೆ ಮಗುವೊಂದನ್ನು ಕರುಣಿಸಿದ! ರಾಜಕಾರ್ಯದಲ್ಲಿ ಬಿಡುವಿರುವಾಗ ಮಾಡುವ ಮಹೋನ್ನತ ಕೆಲಸಗಳಲ್ಲಿ ಇದೂ ಒಂದು ತಾನೇ?

ಕಿಟಾರನೆ ಕೀಚುತ್ತ ಬಾಗಿಲು ಡಬ್ಬೆಂದು ಮುಚ್ಚಿಕೊಂಡಿತು.ಗಾಳಿಗೆ ಇರಬೇಕು ಎಂದುಕೊಂಡರು ಕೂಚು. ಅದು ಹಾಗಾಗಿರಲಿಲ್ಲ. ಬದಲಿಗೆ ಅವರ ಮಗಳು ಶಾಲಿನಿ ಹಾಗಿಂದ ಅಲ್ಲೇಲ್ಲೋ ಹೋಗುವಾಗ ರೂಮಿನ ಬಾಗಿಲಿಗೆ ಕೈ ತಾಗಿ ಬಾಗಿಲು ಮುಂದೆ ಬಂದು ಬಡಿದುಕೊಂಡಿತ್ತು. ಶಾಲಿನಿಗೂ ಮದುವೆಯ ವಯಸ್ಸು ಹತ್ತಿರ ಬಂದಿದೆ. ಡಿಗ್ರಿ ಮುಗಿಸಿ ಮನೆಯಲ್ಲೇ ಇದ್ದಾಳೆ. ಜಾಬಿಗೆಲ್ಲ ಕಳಿಸುವಷ್ಟು ಕೆಳದರ್ಜೆ ಮನುಷ್ಯರಲ್ಲ ನಮ್ಮ ಕೂಚು. ಮೇಲಾಗಿ ಹುಡುಗಿಯರು ಹೊರಗೆ ಕೆಲಸಮಾಡುವಾಗ ಸಹೋದ್ಯೋಗಿಗಳ ಕಾಟ, ಅಕಸ್ಮಾತ್ ಸಲುಗೆ ಬೆಳೆದರೆ ಲವ್ ಮ್ಯಾರೇಜ್ ಇದೆಲ್ಲಾ ಯಾಕೆ ಅಂತ ಆ ವಿಚಾರವನ್ನೇ ಬದಿಗಿಟ್ಟು " ಮಗಳೇ ನೀನು ಇಲ್ಲಿರುವಷ್ಟು ದಿನ ಆರಾಮಾಗ್ ಇದ್ದು ಬಿಡು, ಮುಂದೆ ಮದುವೆ ಆದ ಮೇಲೆ ನೌಕರಿಗೆ ಹೋಗಬೇಕಾಗಿ ಬಂದರೆ ಅನಿವಾರ್ಯ ಆಗ ಯಜಮಾನರನ್ನು ಕೇಳಿ ಹೋಗು" ಎಂದುಬಿಟ್ಟಿದ್ದರು. ಅವರು ಕಡ್ಡಿ ತುಂಡು ಮಾದಿದ ಹಾಗೇ ಹೇಳಿದಮೇಲೆ ಮುಗಿದೇ ಹೋಯಿತು. ಸಾಕ್ಷಾತ್ ಪರಶಿವನೇ ಬಂದರೂ ಭಟ್ಟರ ನಿರ್ಧಾರದಲ್ಲಿ ಬದಲಾವಣೆ ಇರುವುದಿಲ್ಲ!ಬಾಗಿಲ ಸದ್ದಾಯಿತಾದರೂ ಮಗಳು ಕೋಣೆಯೊಳಗೆ ಬರಲಿಲ್ಲ. ಬದಲಾಗಿ ಬಾಗಿಲು ಬಡಿದುಕೊಂಡಿದ್ದಕ್ಕೆ ದೂರದಿಂದಲೇ ಕ್ಷಮೆ ಕೇಳಿಕೊಂಡು ಹೋದಳು. ತಂದೆಯ ಹತ್ತಿರ ಜಾಸ್ತಿ ಹೋದರೂ ಕಷ್ಟ, ಅವರು ಯಾವಾಗ ಜಮದಗ್ನಿ, ಯಾವಾಗ ದೂರ್ವಾಸ ಎಂದು ತಿಳಿಯುವುದಿಲ್ಲ! ಅಕಸ್ಮಾತ ದೂರ್ವಾಸರೂಪತಾಳಿದ್ದರೆ ಅಂದಿಗೆ ಒಮ್ಮೆ ಅಲ್ಲಿ ಕಪಾಳಮೋಕ್ಷ ಕಟ್ಟಿಟ್ಟ ಬುತ್ತಿ! ಹೀಗಾಗಿ ಭಟ್ಟರ ಕೋಣೆಗಾಗಲೀ ಅವರು ಕುಂತಾಗ ಅವರ ಹತ್ತಿರವಾಗಲೀ ಸಾಧ್ಯವಾದಷ್ಟು ಮನೆಯವಯಾರೂ ಹೋಗುತ್ತಿರಲಿಲ್ಲ.

ಕೂಚು ಪೆನ್ನು ನಿಲ್ಲಿಸಿದರು. ಮತ್ತದೇ ಸೊಂಟನೋವು! ನಗುವಾಗ ನೂರು ನೆಂಟರು ಅಳುವಾಗ ಯಾರು ಇಲ್ಲಾ.. ಎಫ್ ಎಮ್ ನಲ್ಲಿ ಹಾಡು! ಕಥೆ ಬರೆದ ಸಂತೋಷವನ್ನು ಹಂಚಿಕೊಳ್ಳುವುದಾದರೆ ಹಲವರು ಬರುತ್ತಾರೆ. ಆದರೆ ಸೊಂಟನೋವಿನಲ್ಲಿ ನಾನು ಬಳಲುವಾಗ ಯಾರೂ ಬರುವುದಿಲ್ಲ. ಅಂದಮೇಲೆ ಈ ಜಗತ್ತು ಬರೇ ಸ್ವಾರ್ಥಿಗಳಿಂದ ಕೂಡಿದೆ. ಇಂತಹ ಸ್ವಾರ್ಥ ಜನರಿಗೆ ನಾನಾಗಿ ಯಾಕೆ ಕಥೆಬರೆದುಕೊಡಲಿ ಎಂಬ ಅಲೆ ಮನದಲ್ಲಿ ಬಂದ ತಕ್ಷಣ ಕೂಚು ಎದ್ದು ಕಿಟಕಿಯಲ್ಲಿ ಆಚೆ ನೋಡುತ್ತಿದ್ದರು. ದೂರದಲ್ಲಿ ಕಾಗೆಯೊಂದು ಸತ್ತ ಹೆಗ್ಗಣವನ್ನು ಕುಕ್ಕಿ ತಿನ್ನುವುದನ್ನು ಕಂಡು ಮತ್ತಷ್ಟು ಗಂಭೀರನಾದ ಕೂಚು ಕಥೆಯಲ್ಲಿರುವ ಭಾವಗಳನ್ನು ಅವಲೋಕಿಸಿದರು. ಜೋರಾಗಿ ತನಗೆ ತಾನೇ ಹೇಳಿಕೊಂಡರು " ಇನ್ನೇನಾದರೂ ಕಥೆ ಬರೆದರೆ ಅದು ನನಗೆ, ಕೇವಲ ನನಗೆ ಹೊರತು ಬೇರೆ ಯಾರಿಗೂ ಅಲ್ಲ,ಸ್ವಸಂತೋಷಕ್ಕಾಗಿ ನನಗಾಗಿ ನಾನು ಬರೆದುಕೊಳ್ಳುವುದೇ ಹೊರತು ಯಾರೋ ಖುಷಿಪಟ್ಟರೆ ನನಗೇನು ಸಿಕ್ಕೀತು " ಎಂದು ತಾನೂ ಸ್ವಾರ್ಥಿಯಾದರು,ಕಥೆಯನ್ನು ತನಗೆ ಬೇಕಾದ ರೀತಿ, ಬೇಕಾದ ಹಾಗೆ ಬರೆಯಲು ಉಪಕ್ರಮಿಸಿದರು.

Saturday, June 12, 2010

ಗದ್ದೆಯಲಿ ಹೀಗೊಮ್ಮೆ



ಗದ್ದೆಯಲಿ ಹೀಗೊಮ್ಮೆ

ಕಟ್ಟ ಕದಿರಿನ ಸೊಂಪಾದ ಗದ್ದೆಯಲ್ಲಿ

ಮಟ್ಟ ಮೀರದ ಮಾರುತ ನಗುವ ಚೆಲ್ಲಿ

ಸದ್ಯ ಏನಾಯ್ತು ನೋಡುವಾ ಘಳಿಗೆಯಲ್ಲಿ
ಮಧ್ಯ ಮಿಂಚುಳ್ಳಿ ಮೀನಿಗಾಗಿ ಹುಡುಕಿತಲ್ಲಿ


ಬಿಳಿಯ ಬೆಳ್ಳಕ್ಕಿ ಬಣ್ಣದ ರಾಶಿಯಲ್ಲಿ
ಎಳೆಯ ಮೀನುಗಳ ತಾವೆಳೆದು ಕೊಕ್ಕಿನಲ್ಲಿ


ದೂರ ಮರದಲ್ಲಿ ಮುದ್ದು ಗಿಣಿ ಸಾಲಿನಲ್ಲಿ
ಹಾರುತಲ್ಲಲ್ಲಿ ನಲಿನಲಿವ ಹರುಷದಲ್ಲಿ

ಒಂಟಿ ಮಾಮರದ ಟೊಂಗೆಗಳ ಸಂದಿನಲ್ಲಿ
ಕಂಠದಿಂಪಿನಲಿ ಕೋಗಿಲೆಯು ಹಾಡಿತಲ್ಲಿ

ಯಾರೂ ತರದಿರಲಿ ಅಡಚಣೆಯ ನಡುವಿನಲ್ಲಿ
ಸಾರು ಅನ್ನಕ್ಕೆ ರಜಹಾಕಿ ಕೂರ್ವೆನಿಲ್ಲಿ

Thursday, June 10, 2010


ಅರ್ಥವಾಗದ ಬದುಕು

ಬೇಸರವು ಕೆಲವೊಮ್ಮೆ ಯಾಕೋ ಹಾಗೊಳಗೊಳಗೆ
ಆಸರೆಯ ಬಯಸಿಹುದು ಮನವೇನೋ ನೆನೆದು
ನೇಸರನ ಎತ್ತರಕೆ ಎತ್ತಿಡುತ ಏಣಿಯನು ಕಾಣದಿಹ ಗುರುತು ಹುಡುಕಿ!

ದರ್ಪವೋ ದುಗುಡವೋ ದುಮ್ಮಾನವೋ ಅರಿಯೆ
ಸರ್ಪ ಹೆಡೆ ಎತ್ತಿ ನಿಂತಂತೆ ಬುಸುಗುಡುತ
ಅರ್ಪಣಾ ಭಾವವನು ಪಡೆಯಲೊಮ್ಮೆಗೆ ತಿರುವು ನೆನಪಿರದ ಕುರುಹು ನೆನೆದು!

ಕಾಮಾದಿ ರಕ್ಕಸರು ಬೀಡುಬಿಟ್ಟಿಹ ಕಾಡು
ಆಮೋದದಲಿ ಒಮ್ಮೆ ಗಹಗಹಿಸಿ ನಗುತ
ವ್ಯೋಮಯಾನಕೆ ಹೊರಟ ಗಗನಯಾತ್ರಿಯ ಸಡ್ಡು ಗೊತ್ತಿರದ ವಿಷಯ ಹಿಡಿದು

ಬರೆದು ಬಿಡು ಸಾಕೆನುತ ನೆನಗುದಿಯ ಬೇಗೆಗಳ
ಉರಿಯುತಿಹ ಮನದಿಂದ ಹೊರ ಹರಿದು ಬಿಡಲು
ಹರಿದು ಬಿಸುಡುವ ಅಚ್ಚ ಹುಚ್ಚನಂದದಿ ಹಲವು ಗೋಜಲಿನ ಮಡಿಲೊಳಿಳಿದು!

ಬಡತನದ ಬವಣೆ ಸಿರಿತನದವರ ಹಮ್ಮಿನಲಿ
ಗಡಬಡಿಸಿ ನಿಂತು ಧಿಮಿಗುಡುತ ಮಧ್ಯದಲಿ
ಚಡಪಡಿಸಿದನಗ್ನಿ ತಾ ಹೆದರಿ ಮುದುರುತ್ತ ಮುಂದಿರುವ ಕೇಡು ನೆನೆದು!

ಹರಿಯೇನು ಹರನೇನು ಯಾರು ಬಂದರೂ ಕೇಳೆ
ನರನನ್ನ ತಪ್ಪ ತೋರಿಸು ಎನುತ ಅದುರಿ
ಥರಥರ ನಡುಗುತ್ತ ಭೀಷ್ಮ-ವಲಲರ ನೆನೆದು ಸತ್ಯವನು ಹುಡುಕಿ ದಣಿದು

ಮಾಧ್ಯಮದಿ ಆದರ್ಶ ಬೋಧೆಯನು ಹೇಳುವರು
ಆದ್ಯತೆಯ ಅರಿವನ್ನು ಮೆಟ್ಟಿ ಹೊರನಡೆದು
ಸಾಧ್ಯತೆಯ ತೂರಿ ತಣ್ಣೀರೆರಚಿ ಚಿವುಟುತ್ತ ಮೊಟಕುವರು ಬಹಳ ಮೆರೆದು!

Monday, June 7, 2010

ಸಹಾಯ ’ಹಸ್ತ’!


ಸಹಾಯ ’ಹಸ್ತ’!

ಭಳಿರೇ ಪರಾಕ್ರಮ ಕಂಠೀರವ ! ನಮೋನ್ನಮಃ !

"ಇತ್ತ ಕಾಂಗ್ರೆಸ್ ಪಾಳೆಯದಲ್ಲಿ ಬಹುದಿನಗಳಿಂದ ಯಾವುದೇ ಕಜ್ಜಾಯದ ತಿನಿಸು ಸಿಕ್ಕಿರಲಿಲ್ಲ, ಇದನ್ನೇ ಯೋಚಿಸುತ್ತ ಬರುತ್ತಿರಲಾಗಿ ಏನದು ಯಾರದದು ಕೂಗು? ಓಹೋ ಮಾಧ್ಯಮದವರೇ ? ಕೆಲವಾದರೂ ಒಳ್ಳೆಯ ಕೆಲಸ ನಿಮ್ಮಿಂದ ಆಗುತ್ತಿದೆಯಲ್ಲಾ, ಬಹಳ ಸಂತೋಷ, ಬಹಳ ಸಂತೋಷ!

ಅದೇನು ಟೈಲ್ಸ್ ವ್ಯವಹಾರ ಅಂತೆಲ್ಲಾ ಕೇಳುತ್ತಿರುವಿರಲ್ಲ ಯಾಕೆ? ಟೈಲ್ಸ್ ದುಬಾರಿಯಾಯಿತೇ?
ಅದಲ್ಲವೇ? ಇನ್ನೇನು ವಿಷಯ? ಏನೂ ನೆರೆಪರಿಹಾರ ಕಾಮಗಾರಿ ಜೋರಾಗಿದೆಯೇ? ಅಲ್ಲಲ್ಲ ಹಾಗಾದ್ರೆ ? ನೆರೆಪರಿಹಾರಕ್ಕೆ ಸಂಗ್ರಹಿಸಿದ ಹಣ ಹೆಗ್ಗಣದ ಜರುವಿಗೆ ಬಿದ್ದು ಕಾಣದಾಯಿತೇ? ಅದೂ ಅಲ್ಲ? ಏನ್ ಹೇಳ್ತಿದೀರಾ ನೀವು ನನಗೊಂದೂ ಅರ್ಥವಾಗ್ತಾ ಇಲ್ಲ. ಇರಲಿ ಸ್ವಲ್ಪ ನೀವೇ ಹೇಳೊದನ್ನ ಓದಿ/ನೋಡಿ ತಿಳಿದು ಆಮೇಲೆ ಮಾತಾಡುತ್ತೇನೆ."

" ಸ್ವಾಮೀ ಗುಪ್ತಚಿತ್ರರೇ ನಿಮ್ಮಿಂದ ಸುಧಾರಿಸಲು ಆಗದ ಕೆಲಸ ಇದು, ತಾವು ತಮ್ಮ ರಾಜ್ಯಕ್ಕೆ ಮರಳಬಹುದು"

" ಯಾರೂ ಯಾರದೂ ಮತ್ತೆ ಬಡಬಡಿಸುತ್ತಿರುವುದು ? "

ಮನುಜ ಲೋಕದ ಮಾರಿಹಬ್ಬವನ್ನು ನೋಡಬೇಕು ಎಂದರೆ ಕಾಂಗ್ರೆಸ್ ಪಾಳೆಯಕ್ಕೆ ಬರಬೇಕು. ಇಡೀ ಉತ್ತರ ಕರ್ನಾಟಕದ ಬಹುಭಾಗ ಜಲಾವೃತವಾಗಿರಲು ಒಬ್ಬ ವಿಮಾನದಲ್ಲಿ ಕುಳಿತು ಸಂಚರಿಸಿ ಮಜಾ ತೆಗೆದುಕೊಳ್ಳುತ್ತಾನೆ, ಇನ್ನೊಬ್ಬ ಏಸಿ ಕಾರಿನ ಒಳಗೆ ವೀಡಿಯೋ ನೋಡುತ್ತ ಹರಟುತ್ತಾನೆ, ಮತ್ತೊಬ್ಬ ಮೊಬೈಲ್ ನಲ್ಲಿ ತಾಸುಗಟ್ಟಲೇ ಯಾವುದೋ ರಾಂಗ್ ಕನೆಕ್ಷನ್ ನವಳೊಂದಿಗೆ ಸರಸಸಲ್ಲಾಪದಲ್ಲಿ ತೊಡಗಿರುತ್ತಾನೆ, ಇನ್ಯಾರೋ ಒಬ್ಬ ಕಮಲಕ್ಕೆ ಕೆಸರು ತುಂಬುವುದನ್ನಷ್ಟೇ ಕಾಣುತ್ತಾನೆ! ಇದೆಲ್ಲ ಇಲ್ಲಿನ ’ಕೈ’ಗುಣ! ಹಿಂದೊಮ್ಮೆ ನನಗೆ ನಗುತರಿಸಿದ್ದು ಭಸ್ಮಾಸುರ ಮೋಹಿನಿಯ ಪ್ರಸಂಗ. ಮತ್ತದೇ ಪ್ರಸಂಗ ಮರುಕಳಿಸುತ್ತಿದೆಯೇ ಎಂಬಂತೇ ಕೈಯ ಜನ ತಮ್ಮ ಕೈಯ್ಯನ್ನೇ ತಮ್ಮ ತಲೆಯಮೇಲೆ ಇಟ್ಟು ಕುಣಿಯತೊಡಗಿದ್ದಾರೆ!ಸ್ವಾಮೀ, ಮನುಷ್ಯಮಾತ್ರರು ಸರಿಯಾಗಿ ತಿಂದುಣ್ಣಲೂ ಬೇಸರಪಟ್ಟ ದಿನಗಳು ಆ ಕರಾಳ ನೆರೆಯ ದಿನಗಳು. ಅಂತಹ ಘಟನೆಗಳನ್ನು ಟಿ.ವಿ.ಯಲ್ಲಿ ನೋಡಿದ ಇನ್ನೇನು ಸಾಯುವ ಕಾಲ ಸಮೀಪಿಸಿದ, ಯಾವುದೇ ಆರ್ಥಿಕ ಆದಾಯವಿಲ್ಲದ ಹಣ್ಣು ಹಣ್ಣು ಮುದುಕಿಯರು, ಮುದುಕರು, ಏನೂ ಅರಿಯದ ಮಕ್ಕಳು-ಮರಿಗಳಾದಿಯಾಗಿ ಹಲವು-ಹತ್ತು ಕೈಲಾಗದ ನಮ್ಮ ಜನ ನಮ್ಮದೇ ಬಾಂಧವರನೇಕರು ಕಷ್ಟದಲ್ಲಿದ್ದಾರೆಂದು ಅನ್ನಿಸಿದ ಕ್ಷಣದಿಂದ ತಮ್ಮಿಂದಾದ ರೀತಿಯಲ್ಲಿ ಮೊಗೆದು ಮೊಗೆದು ದಾನಮಾಡಿದಾಗ ಮಧ್ಯದಲ್ಲೇ ತಾವೂ ಅದನ್ನು ತಲ್ಪಿಸುತ್ತೇವೆ ಅಂತ ’ಕೈ’ಯ್ಯೊಡ್ಡಿ ಬೇಡಿದ ಈ ಮಂದಿ ಹಂದಿಗಿಂತ ಕೀಳಾದ ಬದುಕನ್ನು ಬದುಕಬೇಕೆ? ಹಂದಿ ಹೊಲಸನ್ನು ತಿನ್ನುತ್ತದೆ, ಆದರೆ ಅದಕ್ಕಾದರೂ ಒಂದು ನ್ಯಾಯ ನೀತಿ ಧರ್ಮ ಇರಬಹುದು, ಆದರೆ ಈ ’ಕೈ’ಯ್ಯೊಡ್ಡುವ ಜನರಿಗಿಲ್ಲ.

ಗಾದೆ ಹೀಗಿದೆ- ಪರರ ಕಾಲ್ಕೆಳಗೆ ಕೊಳೆಯುವುದನ್ನು ನಾತಬರುತ್ತಿದೆ ಎನ್ನುವ ಜನ ತಮ್ಮ ಕಾಲ ಬುಡದಲ್ಲೇ ಕುಂಬಳಕಾಯಿ ಕೊಳೆತಿದ್ದರೂ ನೋಡುತ್ತಿಲ್ಲ !

ಹೌದೌದು, ಕುಂಬಳಕಾಯಿ ಕೊಳೆತರೆ ಮಾತ್ರ ಅದರಂತ ಕೆಟ್ಟ ನಾತ ಬೇರೆ ಯಾವುದೂ ಇಲ್ಲ ಎನ್ನಬೇಕೇನೋ. ಅದೇ ಮಾತನ್ನು ಜನಪದರು ನಾಣ್ಣುಡಿಯಾಗಿ ಬಳಸಿದರು.


ಏನೇ ಇರಲಿ ರಾಜಕಾರಣದಲ್ಲಿ ಏನೆಲ್ಲಾ ನಡೆಯಬ್ನಹುದು ಎಂಬುದಕ್ಕೆ ಇವತ್ತಿನ ನೆರೆಪರಿಹಾರದ ನಿಧಿಯನ್ನು ಖೊಳ್ಳೆ ಹೊಡೆದಿದ್ದೇ ಅತ್ಯಂತ ಸಕಾಲಿಕ ಉದಾಹರಣೆ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದರೂ ಮುಖವಡಿಯಾಗಿ ಬಿದ್ದರೂ ಮೂಗಿಗೆ ಏನೂ ಆಗಿಲ್ಲವೆಂಬಂತೆ ಒರೆಸಿಕೊಳ್ಳುತ್ತಿರುವ ’ಕೈ’ಗಳು ಮತ್ತೆ ಯಾವ ಹೊಸ ಮಾರ್ಗದಿಂದ ಇಲ್ಲಿಂದ ಪಾರಾಗಬಹುದು ಎಂದು ಯೋಚಿಸುತ್ತಿರಬಹುದೇ ? ಅಷ್ಟಾಗಿ ಯಾವ ರೀತಿ, ನೀತಿ,ರಿವಾಜು ಇಲ್ಲದ ಜನರಿಗೆ ತಪ್ಪಿಸಿಕೊಳ್ಳಲು ಮಾರ್ಗ ಬೇರೆ ಬೇಕೆ? ಏನನ್ನೂ ಮಾಡಲು ಹೇಸದ, ಅಧಮರನ್ನು ನಮ್ಮ ಮುಂದಾಳುಗಳೆಂದು ನಾವು ಭಾವಚಿತ್ರ.ಭಿತ್ತಿಚಿತ್ರ ರೂಪದಲ್ಲಿ ಅಂಟಿಸುತ್ತ ಜೈಕಾರ ಹಾಕುವಾಗ ಕಾಣದ ’ಕೈ’ಗಳು ಯಾವ್ಯಾವ ಕೆಲಸಮಾಡುತ್ತವೆ ಎಂಬ ಒಂದೇ ಒಂದು ಸುಳಿವಾದರೂ ನಮಗೆ ಸಿಕ್ಕೀತೆ? ಅಥವಾ ಜನತಂತ್ರದಲ್ಲಿ ತಂತ್ರಗಾರಿಕೆಯ ಅರ್ಥವೇ ಆಗದ ಮುಗ್ಧ,ಸ್ನಿಗ್ಧ, ನಿಷ್ಕಪಟ ಮನೋಭಾವದ ಜನ ನಾವು ಅತಂತ್ರರಾಗಲು ಇಂತಹ ಕೆಲವೇ ಕೆಲವು ’ಕೈ’ಗಳು ಸಾಕಲ್ಲವೇ? ಜೀವನದಲ್ಲೇ ಸುಳ್ಳು ಎಂಬ ಪದವನ್ನು ಹೊಡೆದುಹಾಕಿ ಅದರ ಬದಲಿಗೆ ಅದರಮೇಲೆ ಬಿಳಿಯ ಬಣ್ಣ ಹಚ್ಚಿ ಅದರ ಮೇಲೆ ಸತ್ಯ ಎಂಬ ಶಬ್ಧವನ್ನು ಬಳಸಿಕೊಳ್ಳುವ ’ಕೈ’ಗಳು ಎಲ್ಲವೂ ಸತ್ಯ ಎಂಬ ಧೋರಣೆಯಿದ್ದವರಗಿದ್ದರೆ ಈಗ ಅದೇ ಸತ್ಯ ಎಂಬ ಶಬ್ಧವನ್ನು ನೆರೆಪರಿಹಾರ ನಿಧಿಯವಿಷಯದಲ್ಲಿ ಯಾವ ರೀತಿ ಬಳಸಿಯಾರು ?

ಸರಿಯಾದ ನಾಥರಿಲ್ಲದೇ ಆನಾಥವಾಗಿದೆ ದೇಶ್ ಅಂದರೆ ತಪ್ಪೆ? ಇದಕ್ಕೆಲ್ಲ ನಮ್ಮ ಅಸಮರ್ಪಕ ಹಳೆಯ ತಿದ್ದುಪಡಿಯಾಗದ ಸಂವಿಧಾನವೇ ಕಾರಣವಲ್ಲವೇ ? ಬುದ್ದುಗಳು ನಾವು! ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುವುದಷ್ಟೇ ಗೊತ್ತು ನಮಗೆ ಬಿಟ್ಟರೆ, ಧೂರ್ತರಾಜಕರಣಿಗಳನ್ನು, ಬ್ರಷ್ಟರನ್ನು ಮಟ್ಟಹಾಕುವ ತಾಕತ್ತು, ಆಡ್ಯತೆ, ಸಾಮರ್ಥ್ಯ ನಮ್ಮಲ್ಲಿದೆಯೇ ? ನೆತ್ತಿಯ ಮೇಲೆ ಕೂತ ಕಾಗೆ ಕಿವಿಯ ಉಣ್ಣಿಯನ್ನು ಕಚ್ಚಿ ತಿನ್ನುವ ನೆಪದಲ್ಲಿ ನಮ್ಮದೇ ನೆತ್ತರು ಹೀರುವಾಗ ಕಣ್ಮುಚ್ಚಿ ಮಲಗುವ ನನ್ನ ದೇಶ ಬಾಂಧವಏ ಇನ್ನಾದರೂ ನಾವು ಎಚ್ಚೆತ್ತುಕೊಂಡು ಬಾಳ್ವೆ ನಡೆಸಲು ಸಾಧ್ಯವೇ? ಹಗಲುಗಳ್ಳರನ್ನು, ಅಸಾಧ್ಯ ಹೊಟ್ಟೆಯ ಹೆಗ್ಗಣಗಳನ್ನು ಹಿಡಿದು ಹೊಡೆಯಲು ಸಾಧ್ಯವೇ ?

ಹೋಗಲಿ ಬಿಡಿ ಹಾಡಾದರೊ ಹಾಡೋಣ--

[ಈ ದೇಹದಿಂದ ದೂರವಾದೆ ಏಕೆ ಆತ್ಮನೆ ಹಾಡಿನ ರಾಗದಲ್ಲಿ]


ಸಹಾಯ ’ಹಸ್ತ’!

ಈ ಡಬ್ಬಿಯಿಂದ ದೂರಹೋದೆ ಕಾಂಚಾಣವೇ
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ?

ಬೆಂಗಳೂರು ಮಂಗಳೂರಲೆಲ್ಲ ಸುತ್ತುತಾ
ತಿಂಗಳಾರು ದಿನದಿ ನಿನ್ನ ಹೊತ್ತುನಡೆದೆವು
ಅಂಗಳದಲಿ ನೆರೆಯು ಸೋಕಿ ಮಲಗಿದವರಿಗೆ
ಸಂಘ-ಸಂಸ್ಥೆಗಳೂ ಸೇರಿ ಕೊಟ್ಟ ಕಾಣಿಕೆ
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ?

ಡೀಕೇಸೀ ದೇಸುಪಾಂಡೆ ಸಿದ್ಧರೆಲ್ಲರು
ಹೂಕೋಸು ಕುಯ್ದು ತಂದ ಹಾಗೆ ತಂದರು
ಆಕಾಸು ನಾಕುಜನರ ಮನೆಯದಲ್ಲವೇ?
ಪಿರಕಾಸು ನಮ್ಮ ಜನಕೆ ಬುದ್ಧಿಯಿಲ್ಲವೇ?
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ?

ಬಡವರ ಉದ್ಧಾರಕಾಗಿ ಜನಿಸಿ ಬಂದೆವು!
ಗಿಡವನೆಟ್ಟು ಜಗದ ತುಂಬ ಕಾಡ ಬೆಳೆದೆವು!
ಕೊಡಲಿ ಪೆಟ್ಟು ಕೊಡಲು ಸುಮ್ಕೆ ಸುಳ್ಳು ಸುದ್ದಿಯಾ
ಬಿಡುತ ಗಾಳಿಯಲ್ಲಿ ಹಬ್ಬಿಸಿಹರು ಮೂರ್ಖರು
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ?

ಕಮಲದಲ್ಲಿ ಕೆಸರು ಕಂಡು ಮೈಯ ಝಾಡಿಸಿ
ವಿಮಲ ವಾದ ಬಾಯಿಗಳಲಿ ಪಾಠಹೇಳಿಸಿ
ಅಮಲಿನಲ್ಲಿ ಹಗಲು ಕಂಡ ಪಾಳು ಬಾವಿಗೆ
ಸುಮಲರೂಪದಲ್ಲಿ ಬೀಳಿಸುತಲಿ ಹೋದೆಯಾ?
ಈ ಮಾಯ ನ್ಯಾಯವೇ? ಈ ಮಾಯ ನ್ಯಾಯವೇ ?

ನೆರೆಯ ಜನರು ಪರಿಪರಿಯಲಿ ಅಳುತ ಕೂತಿರೆ
ಮೊರೆಯ ಹೊಕ್ಕು ಜನತೆಯಲ್ಲಿ ’ಕೈ’ಯ್ಯ ಒಡ್ಡುತ
ಸರಿಯ ಬದುಕು ಕಟ್ಟಿಕೊಡಲು ಸೂರೆ ಹೊಡೆದೆವು
ಮರೆಯ ಕತ್ತಲಲ್ಲಿ ಭರನೆ ಜರುಗಿಸಿಟ್ಟೆವು
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ ?

ಬ್ಯಾಂಕಿನಲ್ಲಿ ಠೇವು ಇಟ್ಟು ಮರಿಯಬೆಳೆಸಲು
ಸಾಂಖ್ಯಯೋಗ ನ್ಯಾಯವನ್ನೇ ಒತ್ತೆ ಇಟ್ಟೆವು
ಟ್ಯಾಂಕು ತುಂಬ ತುಂಬುತಿರಲು ಕುಹಕಮಕ್ಕಳು
ಟ್ಯಾಂಕು ಒಡೆದು ಬೀದಿರಂಪ ಮಾಡಿಬಿಟ್ಟರು
ಈ ಮಾಯ ನ್ಯಾಯವೇ ? ಈ ಮಾಯ ನ್ಯಾಯವೇ ?

Sunday, June 6, 2010

ಸಂಪಾದಕ, ಸಂಪಾದಕೀಯ ಮತ್ತು ಸಂಪಾದನೆ

ಚಿತ್ರ ಋಣ : ಅಂತರ್ಜಾಲ

ಸಂಪಾದಕ, ಸಂಪಾದಕೀಯ ಮತ್ತು ಸಂಪಾದನೆ

ಸಂಪಾದಕ

ಜಗತ್ತಿನಲ್ಲಿ ಹುಟ್ಟಿದ ಪ್ರತಿ ಜೀವಿಯೂ ಸಂಪಾದಕ ಜೀವಿಯೇ! ಎಲ್ಲಿ ಸಂಪಾದಿಸುವ ಕೆಲಸ ನಡೆಯುತ್ತದೆಯೋ ಅದನ್ನು ಸಂಪಾದಕತ್ವ ಎನ್ನುತ್ತೇವೆ ಮತ್ತು ಆ ಕೆಲಸವನ್ನು ನಿರ್ವಹಿಸುವ ವ್ಯಕ್ತಿ/ಜೀವಿ ಸಂಪಾದಕ. ಸಂಪಾದನೆ ಎಂದರೆ ಕಲೆಹಾಕುವ ಕೆಲಸ. ಯಾವುದನ್ನು ಬೇಕಾದರೂ ಕಲೆಹಾಕಬಹುದು. ನಾವು ಜೇನುಹುಳಗಳನ್ನು ನೋಡುತ್ತೇವೆ. ಅವು ಹನಿ ಹನಿ ಮಕರಂದವನ್ನು ತಮ್ಮ ಮೂತಿಯಲ್ಲಿ ಶೇಖರಿಸಿಕೊಂಡು ತಂದು ತಮ್ಮದೇ ಆದ ಶೈಲಿಯಲ್ಲಿ ಮಾಡಿದ ಮೇಣದ ಗೂಡಿನ ಕೋಶಗಳಲ್ಲಿ ಸಂಪಾದಿಸುತ್ತವೆ. ಅರ್ಚಕನೊಬ್ಬ ನಾನಾಥರದ ಹೂವುಗಳನ್ನು ಸಂಪಾದಿಸಿಕೊಂಡು ಅರ್ಚನೆ ಮಾಡುತ್ತಾನೆ, ನಾವೆಲ್ಲ ನಿತ್ಯವೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಪ-ಪುಣ್ಯಗಳನ್ನು ಸಂಪಾದಿಸುತ್ತಿರುತ್ತೇವೆ. ಹೀಗೇ ಅನೇಕ ಹುಳ-ಹುಪ್ಪಟೆ-ಹಕ್ಕಿ-ಪಕ್ಷಿಗಳೆಲ್ಲ ತಮ್ಮ ತಮ್ಮ ಜೀವನ ಧರ್ಮಾನುಸಾರ ಸಂಪಾದಕತ್ವವನ್ನು ನೆರವೇರಿಸುತ್ತವೆ. ಉದರಂಬರಣೆಗೆ ವ್ಯಕ್ತಿ ಯಾವುದೋ ಮಾರ್ಗದಲ್ಲಿ ಕೆಲಸಮಾಡುತ್ತ ಹಣವನ್ನು ಸಂಪಾದಿಸುತ್ತಾನೆ. ಹೀಗೇ ಎಲ್ಲರೂ ಸಂಪಾದಕರೇ. ಆದರೆ ಸರ್ವೇ ಸಾಮಾನ್ಯವಾಗಿ ನಾವು ಸಂಪಾದಕರೆಂದು ಕರೆಯುವುದು ಒಂದು ಪತ್ರಿಕೆ,ನಿಯತಕಾಲಿಕೆ,ಬೇರೆಯವರ ಕೃತಿಗಳ ಸಂಪುಟ ಮುಂತಾದುವುಗಳಲ್ಲಿ ಸಂಪಾದಕತ್ವ ನಿರ್ವಹಿಸುವ ವ್ಯಕ್ತಿಗಳಿಗೆ. ಇಲ್ಲಿ ಸಂಪಾದಕರಾಗಲು ಇಂಥದ್ದೇ ಮಾನದಂಡವೇನೂ ಇಲ್ಲ. ಪ್ರತಿಭೆಯಿಂದ ಮೇಲೆಬರುವವರು ಅನೇಕರಾದರೆ, ಅವರವರ ವೈಯಕ್ತಿಕ ಪ್ರಭಾವ,ಪ್ರಲೋಭನೆಗಳನ್ನು ಅಥವಾ ಸಾಂದರ್ಭಿಕವಾಗಿ ಸಿಗಬಹುದಾದ ’ಬಿದ್ದುಹೋಗುವ ಜಾಗ ತುಂಬುವ’ ಕೆಲಸವನ್ನು ವಹಿಸಿಕೊಂಡು ಸಂಪಾದಕರಾಗಿ ಕೆಲಸಮಾಡುವವರಿರುತ್ತಾರೆ.

ಸ್ವಯಂ ಪ್ರತಿಭೆಯಿಂದ ಸ್ವಯಂಭುವಿನ ಥರ ಮೇಲೆದ್ದು ಸಂಪಾದಕರಾದವರು ತಮ್ಮ ಸ್ವಂತಿಕೆಯನ್ನು ಕಾಪಿಡಲು ಯಾರ ಮರ್ಜಿಗೋ ಮುಲಾಜಿಗೋ ಬರೆಯುವ/ಸಂಪಾದಿಸುವ ವ್ಯಕ್ತಿಗಳಾಗುವುದು ಕಡಿಮೆ.ಇಂಥವರು ವಿಸ್ತ್ರತ ಅಧ್ಯಯನಶೀಲರಾಗಿರುತ್ತಾರೆ. ತಮ್ಮ ಸುತ್ತಲ ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವವರಾಗಿರುತ್ತಾರೆ,ಸಹನಶೀಲರಾಗಿರುತ್ತಾರೆ,ಸ್ಮಯಪ್ರಜ್ಞೆ ಮತ್ತು ಸ್ಮಯ ಸ್ಪೂರ್ತಿ ಎರಡನ್ನೂ ಹೊಂದಿದವರಾಗಿರುತ್ತಾರೆ.ತತ್ವ-ತರ್ಕ ಮುಂತಾದ ಹಲವು-ಹತ್ತು ವಿಷಯಗಳಲ್ಲಿ ಸ್ವಾನುಭವದಿಂದ ಬೆಳೆಯುತ್ತಬಂದವರಾಗಿರುತ್ತಾರೆ,ತತ್ವನಿಷ್ಠರಾಗಿರುತ್ತರೆ. ಮನುಜಮತ ಮತ್ತು ವಿಶ್ವಪಥ ಅವರ ಮಾರ್ಗವಾಗಿರುತ್ತದೆಯೇ ವಿನಃ ಕೇವಲ ಯಾವುದೇ ಧರ್ಮಕ್ಕೋ, ರಾಜಕೀಯ ಪ್ರಲೋಭನೆಗೋ ಒಳಗಾಗಿರುವುದಿಲ್ಲ. ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಲೇಖನಿಯಿಂದ ತಿದ್ದಬಲ್ಲ ಆದರ್ಶಗಳನ್ನು ಅವಲೋಕಿಸುತ್ತಾರೆ,ಅಳವಡಿಸಿಕೊಂಡಿರುತ್ತಾರೆ. ಒಂದರ್ಥದಲ್ಲಿ ಸಂಪಾದಕರು ನ್ಯಾಯಾಧೀಶರ ರೀತಿಯಲ್ಲಿ ಬಹಳ ಗಂಭೀರ ತರಗತಿಯವರಾಗಿದ್ದು ನಿಷ್ಪಕ್ಷಪಾತಿಗಳಾಗಿರುತ್ತಾರೆ. ಸಾಮಾನ್ಯರಿಗಿಂತ ಭಿನ್ನವಾಗಿ ಆದರೆ ಸಾಮಾನ್ಯರ ಬೇಕು-ಬೇಡಗಳಿಗೆ ಕನ್ನಡಿಹಿಡಿದು ಅದನ್ನು ಆಳುವ ಪ್ರಭುಗಳಮುಂದೆ ಎತ್ತಿ ಇಡುವ ಸಮಾಜೋದ್ಧಾರದ ಕೆಲಸವನ್ನು ಮಾಡುತ್ತಿರುತ್ತಾರೆ. ತನ್ನ ಜಾಣತನದಿಂದ ಕಾವಿ-ಖಾದಿ-ಖಾಕಿ ಗಳಾದಿಯಾಗಿ ಎಲ್ಲರಂಗದಲ್ಲೂ ತಮ್ಮ ಟೆಸ್ಟ್ ಪ್ರೋಬ್ ಇಟ್ಟು ಆಗಾಗ ಇರುವುದನ್ನು ಪರಿಶೀಲನೆ ಮಾಡುತ್ತಿರುತ್ತಾರೆ. ಯಾಕೆಂದರೆ ಇವತ್ತು ನಾವು ಕಲಿಗಾಲದಲ್ಲಿದ್ದೇವೆ. ಕಲಿಯ ಪ್ರಭಾವದಿಂದ ಲೌಕಿಕ ವ್ಯವಹಾರಗಳಲ್ಲಿ ತೊಡಗಿಕೊಂಡ ಅನೇಕ ಜನ ದಾರಿ ತಪ್ಪಿಬಿಡಬಹುದು-ಹೀಗಾಗಿ ಅವರನ್ನೆಲ್ಲ ಸರಿದಾರಿಗೆ ತರಲು ತಮ್ಮ ಬರವಣಿಗೆಯನ್ನು ಬಳಸುತ್ತಾರೆ. ಬರವಣಿಗೆಯ ಹರಿತವಾದ ಶೈಲಿಯೇ ಖಡ್ಗದ ರೀತಿ,ಈಟಿಯ ರೀತಿ ಅಂಥವರಿಗೆ ತಾಗಿ ಅವರು ಸುಧಾರಿಸಲಿ ಎಂಬುದು ಸಂಪಾದಕರ ಅಭಿಮತವಾಗಿರುತ್ತದೆಯೇ ಹೊರತು ಅಲ್ಲಿ ಕುಚೋದ್ಯಕ್ಕೆ, ಕುಹಕಕ್ಕೆ ಅವಕಾಶವಿರುವುದಿಲ್ಲ! ಸಂಪಾದಕನೊಬ್ಬ ಒಳ್ಳೆಯ ಡ್ರೈವರ್, ಹಿ ಮಸ್ಟ್ ಬಿ ಏ ಡ್ರೈವಿಂಗ್ ಫೋರ್ಸ್ ಟು ದಿ ಸೊಸೈಟಿ! ಜನರಿಗೆ ಸ್ಪಂದಿಸುತ್ತ,ತಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತ ಪ್ರತೀ ಹಂತದಲ್ಲೂ ಉತ್ಕೃಷ್ಟ ಸಂಪಾದಕೀಯವನ್ನು ಮತ್ತು ಇತರ ಕೃತಿಗಳನ್ನು ಕೊಡುವ ಸ್ವಭಾವ ಇಂತಹ ಸುಧಾರಸ ಮನೋವೃತ್ತಿಯವರದಾಗಿರುತ್ತದೆ.

ಪ್ರತಿಭೆಯಿಲ್ಲದೇ,ಅರ್ಹತೆಯೂ ಇಲ್ಲದೇ ಕೇವಲ ಪ್ರಲೋಭನೆಯಿಂದ ಸಂಪಾದಕಸ್ಥಾನಕ್ಕೆ ಬಂದು ಕುಳಿತ ವ್ಯಕ್ತಿ ಮಂಗ ಕೈಯಲ್ಲಿ ಮಾಣಿಕ್ಯ ಪಡೆದಂತೆ ಆಡುತ್ತಾರೆ. ಅವರಿಗೆ ಸಂಪಾದಕನ ಆದರ್ಶಗಳು ಒಗ್ಗುವುದಿಲ್ಲ. ಅವರು ಏಕಮುಖವಾಗಿರುತ್ತಾರೆ. ಅವರದ್ದು ಹಿಟ್ಲರ್ ವಾದವಾಗಿರುತ್ತದೆ. ತಮ್ಮ ನುಡಿಯನ್ನು ಎಲ್ಲರೂ ಏಕರೂಪದಲ್ಲಿ ಅಂಗೀಕರಿಸಬೇಕೆಂಬುದು, ಮತ್ತು ತಾವು ಹೇಳಿಕೆ ಕೊಟ್ಟಮೇಲೆ ಜಗತ್ತಿಗೇ ಅದು ಆದರ್ಶ ಎಂಬ ಅತಿಯಾದ ಅಹಂಕಾರ ಹೊಂದಿರುತ್ತಾರೆ. ತಮ್ಮ ಮಾತನ್ನು ಪರಿಚಯದ/ಸುತ್ತಲಿನ ಒದುಗ ಪ್ರಪಂಚ ಮನ್ನಿಸಿ ನಡೆಯಲಿ, ಯಾವಾಗಲೂ ತಮ್ಮ ಮಾತಿಗೇ ಸೊಪ್ಪುಹಾಕಲಿ ಎಂಬ ಎಡಬಿಡಂಗಿಗಳಾಗಿರುತ್ತಾರೆ. ಸ್ನೆಹಿತವರ್ಗದವರೆಲ್ಲರೂ ತಮ್ಮನ್ನೇ ರೋಲ್ ಮಾಡೆಲ್ ಥರ ಅನುಸರಿಸಲಿ ಎಂಬ ಅಂಡೆಪಿರ್ಕಿಗಳಾಗಿರುತ್ತಾರೆ. ಹೆಂಗಸರ/ಹೆಣ್ಣುಮಕ್ಕಳ ಮಧ್ಯೆ ಸಭೆಯಲ್ಲಿ ಕಂಗೊಳಿಸುವ ಕೃಷ್ಣಪರಮಾತ್ಮರಾಗಿರುತ್ತಾರೆ! ರಾಜಕಾರಣಿಗಳ ಮಾತಿಗೆ ಕಟ್ಟುಬೀಳುವ ಕೋಡಂಗಿಗಳಾಗಿರುತ್ತಾರೆ. ಖಾಕಿಯನ್ನು ದೂರದಲ್ಲೇ ಕಂಡರೂ ಬಟ್ಟೆ ಒದ್ದೆಮಾಡಿಕೊಳ್ಳುವ ನಜಬಂಢರಾಗಿರುತ್ತಾರೆ. ಕಾಣುವ ಕಾವಿಗಳಿಗೆಲ್ಲ ಸೆಲ್ ಫೋನ್ ನಲ್ಲೇ ಸಲಾಮುಹೊಡೆದು ಸಾಷ್ಟಾಂಗವೆರಗುವ ಭಟ್ಟಂಗಿಗಳಾಗಿರುತ್ತಾರೆ! ಇಂಥವರಿಗೆ ಜ್ಞಾನಾರ್ಜನೆಗಿಂತ ಪೊಳ್ಳು ಸ್ವಪ್ರತಿಷ್ಠೆ, ದುರಹಂಕಾರ,ದುರಭಿಮಾನವೇ ಮೊದಲಾದ ಎಲ್ಲಾ ಬೇಡದ ಗುಣ-ಸ್ವಭಾವಗಳು ಮೈಗೊಂಡು ತಮಗೇ ತಿಳಿಯದೇ ಅವರು ಬಾಹುಕರಾಗಿರುತ್ತಾರೆ! ’ವಸುದೈವ ಕುಟುಂಬಕಮ್’ ಎಂಬದನ್ನು ಗಾಳಿಗೆ ತೂರಿ ಸಮಾಜದ ಮುಂದೆ ಧುತ್ತೆಂದು ಬೇರೆ ಮಾಧ್ಯಮದವರು ಎತ್ತಿಹಿಡಿಯುವ ಕೆಟ್ಟ ಘಟನಾವಳಿಗಳನ್ನೆಲ್ಲ ’ಕೇವಲ ಷಡ್ಯಂತ್ರ’ ಎಂದು ಬಣ್ಣಿಸುತ್ತ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಂಚದ ಕೆಳಗೆ ತೂರಿ ಮಲಗಿಬಿಡುತ್ತಾರೆ! ಜಗತ್ತು ಎನನ್ನುತ್ತದೆ ಎಂಬ ಕನಿಷ್ಠ ಪರಿಜ್ಞಾನ ಕೂಡ ಅವರಿಗಿರುವುದಿಲ್ಲ. ಕೆಲವೊಮ್ಮೆ ಈ ಪೀಳಿಗೆಯವರು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ’ಪ್ರಸಾದ’ಪಡೆದು ಬರೆಯುತ್ತಿರುತ್ತಾರೆ. ಹಾಗೆ ನೋಡಿದರೆ ಸಮಾಜಕ್ಕೆ ಬೇಕಾಗುವ ಯಾವ ಕೃತಿಯೂ ಅವರಿಂದ ರಚಿತವಾಗಿರುವುದಿಲ್ಲ; ಸಮಾಜೋನ್ನತಿಯ ಕೆಲಸ ಅವರ ಜಗದಲ್ಲಿ ಕನಸಿನ ಮಾತು. ಬದುಕು ಪೂರ್ತಿ ’ಪ್ರಸಾದ’ ಹೆಚ್ಚಿಸಿಕೊಳ್ಳುವ ಇಂಥವರು ತಾವೂ ಬೆಳೆಯುವುದಿಲ್ಲ, ತಮಗೆ ತಿಳಿದ ವ್ಯಕ್ತಿಗಳನ್ನೂ ಸಮಾಜದಲ್ಲಿ ಬೆಳೆಯಗೊಡುವುದಿಲ್ಲ! ಹೆಚ್ಚಾಗಿ ಇಂತಹ ’ಸಂಪಾದಕ’ರಿರುವುದು ಚಿಕ್ಕ-ಪುಟ್ಟ ಪತ್ರಿಕೆಗಳು-ವಾರಕ್ಕೋ-ತಿಂಗಳಿಗೋ ಹೊರಡುವ ಸಮುದಾಯಗಳ ಪತ್ರಿಕೆಗಳು, ಸೂರ್ಯನ ಬೆಳಕನ್ನು ಅಷ್ಟಾಗಿ ನೋಡದ ಪಾಕ್ಷಿಕಗಳು ಇತ್ಯಾದಿಗಳಲ್ಲಿ. ಅಲ್ಲಿ ಅವರೈರುವವರೆಗೆ ಅವರ ಅಂಡೆಪಿರ್ಕಿತನವಿರುವುದರಿಂದ ಪತ್ರಿಕೆಯ ಬೆಳವಣಿಗೆಯಾಗಲೀ ವಿಕಸನವಗಲೀ,ವಿಸ್ತ್ರತ-ಮೌಲ್ಯಯುತ ಕೃತಿಗಳ ಪ್ರಕಟಣೆಯಾಗಲೀ ಸಾಧ್ಯವೇ ಇರುವುದಿಲ್ಲ. ತನ್ನ ಮೂಗಿನ ನೇರಕ್ಕೆ ಸೂರ್ಯಬಂದರೆ ಅವನ್ನನ್ನೇ ಕೆಕ್ಕರಿಸಿ ನೋಡಿ ಉಗುಳುವ ಬಹುದೊಡ್ಡ ಕಮಂಗಿಗಳು ಇವರು! ಹೀಗಾಗಿ ಸಂಪಾದಕ ಹೇಗಿರಬೇಕು ಎಂಬುದು ಇಂಥವರಿಗೆ ಅಪಥ್ಯ ವಿಷಯ. ಸಮಾಜವನ್ನು ಶುದ್ಧ-ವಿಚಾರಪೂರಿತ,ಮೌಲ್ಯಯುತ,ಸಾರಯುತ,ನಿಷ್ಕಪಟ,ನಿರ್ಭೀತ,ನಿಷ್ಪಕ್ಷಪಾತ ಸಂಪಾದಕೀಯವೆಂಬ ಪಂಚಗವ್ಯದಿಂದ ಶುದ್ಧೀಕರಿಸಬೇಕಾದ ಸಂಪಾದಕರುಗಳಲ್ಲಿ ಹೀಗೆ ಎರಡನೆಯ ವಿಭಾಗದವರೂ ಇದ್ದಾರೋ ಎಂಬುದು ನಿಮಗೆಲ್ಲ ಆಶ್ಚರ್ಯವುಂಟುಮಾಡಬಹುದು, ಆದರೆ ಇದು ಸತ್ಯ, ಬಹುಶಃ ಪತ್ರಿಕೋದ್ಯಮ,ಪ್ರಕಾಶನಗಳು ಬದುಕಿರುವವರೆಗೂ!


ಸಂಪಾದಕೀಯ

ಸಂಪಾದನಕ್ರಿಯೆಯಲ್ಲಿ ಸಂಪಾದಕರು ಬಹಳ ಜಾಣ್ಮೆಯನ್ನು ಮೆರೆಯಬೇಕಾಗುತ್ತದೆ. ಪತ್ರಿಗೆಗಳಲ್ಲಿ ದುಡಿಯುವ ಸಂಪಾದಕರಿಗಂತೂ ದಿನವೂ ಹಲವು ಸಾವಿರ ಕೃತಿಗಳು,ಪತ್ರಗಳು,ಮಿಂಚಂಚೆಗಳು ಬರುತ್ತಿರುತ್ತವೆ. ಸುತ್ತಲ ಲೋಕದಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ರಾಜಕೀಯ-ಸಾಮಾಜಿಕ,ಆರ್ಥಿಕ,ಜಾಗತಿಕ ಪಿಡುಗುಗಳು ಕಾಣಿಸಿಕೊಳ್ಳುತ್ತಿರುತ್ತವೆ. ಅನೇಕ ಹಳೆಯ-ಹೊಸ ಕವಿ-ಸಾಹಿತಿಗಳ ಕೃತಿಗಳ ಪ್ರಕತಣೆ,ಅವಲೋಕನ,ಪುನರ್ಮುದ್ರಣ,ಪರಿಶ್ಕರಣವೇ ಮೊದಲಾದ ಕಾರ್ಯಗಳು ನಡೆಯುತ್ತಿರುತ್ತವೆ. ಹೊಸಹೊಸ ಬಗೆಯ ಲೇಖನ-ಅಂಕಣಗಳನ್ನು ಕೊಟ್ಟು-ಕಟ್ಟಿ ಬೆಳೆಸಬೇಕಾದ ಪ್ರಮೇಯ ಇದೆ. ಇದರೊಂದಿಗೆ ತನ್ನ ಎಲ್ಲಾ ಕಾರ್ಯಗಳಿಗೆ ಪೂರಕ ಗುಣಮಟ್ಟದಲ್ಲಿ ಬರೆಯುವ ಅರ್ಹತೆಯುಳ್ಳ ವ್ಯಕ್ತಿಗಳನ್ನು ಆಯ್ದು ಒಂದು ದೊಡ್ಡ ಟ್ರೂಪ್ ಕಟ್ಟಿಕೊಳ್ಳುವುದರೊಂದಿಗೆ ಆ ಟ್ರೂಪ್ ಕೆಡದಂತೆ, ಒಡೆಯದಂತೆ ಸಂರಕ್ಷಣೆ ಮತ್ತು ಸಂವಹನಮಾಡುವುದೂ ಕೂಡ ಸಂಪಾದಕನ ಜಾವಾಬ್ದಾರಿಯ ವ್ಯಾಪ್ತಿಗೆ ಒಳಪಡುತ್ತದೆ. ಹಲ್ಲುಗಳ ಮಧ್ಯೆ ನಾಲಿಗೆ ಕೆಲಸನಿರತವಾಗಿರುವಂತೆ ಎಲ್ಲರ ಮಧ್ಯೆ ತಾನಿದ್ದು ತನ್ನ ಇರವನ್ನು ಗಮನಿಸುತ್ತ ಹೊರಜಗದ ಪರಿಯನ್ನೂ ಅವಲೋಕಿಸಿ ಬರೆಯುವ ವೃತ್ತಿ ಭೂಮಿ ತನ್ನನ್ನೇ ಸುತ್ತುತ್ತ ಸೂರ್ಯನನ್ನೂ ಸುತ್ತುವುದಕ್ಕೆ ಹೋಲಿಸಬಹುದಾಗಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ ಸಮಾಜಕ್ಕೆ ಹಿತವೆನಿಸುವ, ರಾವಣತ್ವವನ್ನು ಮರ್ದಿಸಿ ರಾಮತ್ವಮೆರೆಸುವ, ಸಮಾಜಘಾತುಕರನ್ನು ನಿಗ್ರಹಿಸುವ ಮೂರನೆಯ ಕಣ್ಣನ್ನು ತೆರೆಯುವ ಮುಕ್ಕಣ್ಣನಾಗಬೇಕಾಗುತ್ತದೆ! ಹರಿತವಾದ ಲೇಖನಿಯಿಂದ ಧೂರ್ತ ರಾಜಕಾರಣಿಗಳನ್ನು, ಖೂಳರನ್ನು, ಕಳ್ಳರನ್ನು, ಹಗಲು ದರೋಡೆಕೋರರನ್ನು, ವಂಚಕರನ್ನು, ವೇಷಧಾರಿಗಳನ್ನು, ತಪ್ಪಿತಸ್ಥರನ್ನು ಜನರಮುಂದೆ-ಸಮಾಜದ ಮುಂದೆ ಹೆಡೆಮುರಿಗೆ ಕಟ್ಟಿ ತಂದು ನಿಲ್ಲಿಸುವ ಯೋಧ ಈ ಸಂಪಾದಕನಾಗಬೇಕಾಗುತ್ತದೆ. ಪ್ರಕೃತಿಯ ವಿಕೋಪಗಳಲ್ಲಿ, ವಿಪರ್ಯಾಸಗಳಲ್ಲಿ, ಅನಿವಾರ್ಯತೆಯಲ್ಲಿ, ವಿಪ್ಲವಗಳಲ್ಲಿ ಘಟನೆಗಳನ್ನು ಮನದಂದು ಮಾರ್ದನಿಸುವ, ಇದ್ದುದರಲ್ಲೇ ಸುಖದಿಂದಿರುವ ಲೋಕದ ಇತರ ಜನಸಮುದಾಯಕ್ಕೆ ಕೂಗಿ ಹೇಳಿ ಸಹಾಯಕ್ಕಾಗಿ ಕರೆಯುವ ಕಹಳೆಯಾಗಬೇಕಾಗುತ್ತದೆ. ರಾಜಕೀಯ-ಆರ್ಥಿಕ ಡೋಲಾಯಮಾನ ಪರಿಸ್ಥಿತಿ ಉದ್ಭವವಾದಾಗ ಸಮಾಜದಲ್ಲಿ ಅಲ್ಲೋಲ ಕಲ್ಲೋಲವಗದಂತೆ ಕರೆಕೊಡುವ ರಾಜನಾಗಬೇಕಾಗುತ್ತದೆ! ನೀತಿ ಬಾಹಿರ ಕೆಲಸಗಳಲ್ಲಿ ತೊಡಗಿದ ಜನರನ್ನು ಮಟ್ಟಹಾಕುವ ದಂಡಾಧಿಕಾರಿಯಾಗಬೇಕಾಗುತ್ತದೆ. ಒಟ್ಟಾರೆ ಜನರ ಕಣ್ಣಿಗೆ ಕಣ್ಣಾಗಿ,ಜನರ ದನಿಗೆ ದನಿಯಾಗಿ,ಜನರ ಕಿವಿಗೆ ಕಿವಿಯಾಗಿ--ಹೀಗೇ ಜನಪಂಚೇಂದ್ರಿಯಗಳು ಏನನ್ನು ಸಾಮನ್ಯವಾಗಿ ಅನುಭವಿಸುತ್ತವೆಯೋ ಅದನ್ನೇ ತನ್ನ ಸ್ವಾನುಭವಕ್ಕೆ ತೆಗೆದುಕೊಳ್ಳುವ ಪರಕಾಯ ಪ್ರವೇಶ ಮಾಡುವ ಅತಿಮಾನುಷಶಕ್ತಿಯ ರೀತಿ ಕೆಲಸ ಮಾಡಬೇಕಾಗುತ್ತದೆ!

ಈ ನಡು ನಡುವೆಯೇಜನರ ಜೇಬಿಗೂ ಭಾರವಾಗದ ದರದಲ್ಲಿ ಜನರಿಗೆ ರುಚಿ ರುಚಿಯಾದ ಆಹ್ಲಾದಕರ ಕೃತಿಗಳನ್ನು ನೀಡುತ್ತ ಮುಂದೆಸಾಗುವ, ಬೆಳೆಯುವ-ಬೆಳಗುವ ತ್ರಿವಿಕ್ರಮನಾಗಬೇಕಾಗುತ್ತದೆ. ಬಹುತೇಕ ಸಂಪಾದಕರಿಗೆ ಇವುಗಳಲ್ಲಿ ಕೆಲವೊಂದು ಮಾತ್ರ ಸಿದ್ಧಿಸಿರುತ್ತದೆ. ಮಿಕ್ಕಿದ್ದರ ಗೋಜಿಗೆ ಅವರು ಹೋಗುವುದೇ ಇಲ್ಲ. ಇವತ್ತು ಸಂಪಾದಕರಿಗೆ ಹಿಂದಿನ ಸಂಪಾದಕರ ರೀತಿ ಅಚ್ಚನ್ನು[ಮುದ್ರಣ ದೋಷ] ತಿದ್ದುವಲ್ಲಿ ಬಹಳ ಸಮಯವೇನೂ ಪೋಲಗದು, ಈಗ ಗಣಕ ಯಂತ್ರಗಳಿವೆ, ಲೋಹದ ಮೊಳೆಗಳನ್ನು ಜೋಡಿಸಿ ಅಚ್ಚಿಸುವ ಕಾಲವಿದಲ್ಲ, ಪೂರಕ ಪರಿಸರವಿದೆ-ಪರಿಕರಗಳಿವೆ, ಪದವಿಪಡೆದ ಬರಹಗಾರರಿದ್ದಾರೆ, ಸರಸ್ವತಿ ಎಲ್ಲರಲ್ಲೂ ಸ್ಪುರಿಸುತ್ತ ಅಧ್ಯಯನ-ಅಧ್ಯಾಪನ ಎರಡೂ ರಂಗ ವಿಸ್ತರಿಸಲ್ಪಟ್ಟಿದೆ, ದೃಶ್ಯಮಾಧ್ಯಮಗಳು/ಶ್ರಾವ್ಯ ಮಾಧ್ಯಮಗಳು ಕ್ಷಣಕ್ಷಣದ ವರದಿಗಳನ್ನು ಹೊತ್ತು ತರುತ್ತಿರುತ್ತವೆ-- ಈ ಎಲ್ಲ ಲಭ್ಯ ಉಪಲಬ್ಧಗಳಿಂದ ಸಂಪಾದಕೀಯ ಬಹಳ ಸರಳವಾಗಿ,ಸ್ಫುಟವಾಗಿ,ನಿರರ್ಗಳವಾಗಿ ಸ್ರವಿಸಲು ಬರುವ ತೈಲಧಾರೆಯಂತೆ ಹರಿಯಲು ಸಾಧ್ಯವಿದೆ; ಇದಕ್ಕೆ ಸಂಪಾದಕನ ಧೈರ್ಯ,ಸ್ಥೈರ್ಯ ಮತ್ತು ಉಳಿದ ಮನೋಭೂಮಿಕೆ ಸಜ್ಜಾಗಿ ಕಾರ್ಯ ನಡೆಯುತ್ತಿರಬೇಕಷ್ಟೇ.


ಸಂಪಾದನೆ

ಸಂಪಾದನೆಯೆಂದರೆ ಗಳಿಕೆ,ಗಳಿಸುವುದು,ದುಡಿಮೆ,ಸಂಭಾವನೆ ಹೀಗೆಲ್ಲ ಆಗುತ್ತದಲ್ಲವೇ ? ಸಂಪಾದನೆಯೆಂದರೆ ಸಂಪಾದಕನ ಅರ್ಥದಲ್ಲಿ ಸಂಗ್ರಹಿಸಿದ,ಆಯ್ದ,ಸಂಗ್ರಹಯೋಗ್ಯ,ಪ್ರಕಟಣಪೂರ್ವದ, ಓದುಗರ ಕೈಗೆ ಅಚ್ಚಿಸಿ ಕೊಡಬಹುದಾದ ತಿದ್ದಿ.ತೀಡಿ, ಬಣ್ಣಹಚ್ಚಿ, ಹದಗೊಳಿಸಿ, ಹುಬ್ಬು ಬರೆದು-ವೇಷತೊಡಿಸಿ,ಆಭರಣಗಳಿಂದ ಅಲಂಕರಿಸಿದ ನಾಟ್ಯ ಸರಸ್ವತಿ; ಸಾಸಿವೆ,ಕೋಸಂಬರಿ, ಹುಳಿ,ಮಜ್ಗೆ-ಹುಳಿ, ತಿಳಿಸಾರು, ಕೂಟು, ಹೋಳಿಗೆ, ಫೇಣಿ, ಸಜ್ಜಿಗೆ, ಶ್ಯಾವಿಗೆ ಮತ್ತು ಗಸಗಸೆ ಪಾಯಸ, ನುಚ್ಚಿನುಂಡೆ, ಕಾಯ್ಗಡಬು, ಕೆನೆಮೊಸರು, ಮಾವಿನ್ಕಾಯ್ ನೀರ್ಗೊಜ್ಜು, ಪುಳಿಯೋಗರೆ, ಕೇಸರೀಬಾತು ಎಲ್ಲವುಗಳಿಂದ ಎಡೆಸಿಂಗರಿಸಿ ನಿವೇದಿಸಲು ತಯಾರಿ ನಡೆಸಿರುವ, ಇಂಗು-ಕರಬೇವಿನ ಮೇಲೋಗರಕ್ಕೆ ಸಿದ್ಧವಾದ ಅಡುಗೆ!

ಸಂಪಾದಕನ ಸಂಪಾದನೆಯ ಜೋಳಿಗೆಯಲ್ಲಿ ಇಲ್ಲದ ಕಜ್ಜಾಯವಿಲ್ಲ. ಸಮಾಜಕ್ಕೆ ನಿರ್ವಂಚನೆಯಿಂದ, ನಿಷ್ಕಳಂಕಿತನಾಗಿ, ನಿಸ್ಪೃಹನಾಗಿ, ನಿರುಪದ್ರವಕಾರಿಯಾಗಿ, ನಿರ್ವಿಕಾರಿಯಾಗಿ, ನಿರ್ವಿಣ್ಣನಾಗಿ, ಮೊಗೆದು ಬಡಿಸುವ ವಿಶಾಲ ಹೃದಯದ ಬಾಣಸಿಗನಾಗಿ, ಅಕ್ಷಯಾಂಬರನೀಡುವ ಶ್ರೀಕೃಷ್ಣನಾಗಿ, ಕಲಿಸುವ ಅಧ್ಯಾಪಕರಿಗೇ ಅಘೋಷಿತ ಪ್ರಾಧ್ಯಾಪಕನಾಗಿ, ತನ್ನ ಭಂಡಾರದಿಂದ ಎತ್ತಿಕೊಡುವ ಭಕ್ತನಾಗಿ, ದೇಶಸೇವೆಯ ಛಲದಂಕಮಲ್ಲನಾಗಿ ಕೊಡಬಹುದಾದ ಕೈತುತ್ತು ಬಹಳ. ಬಾಯಿ ಚಪ್ಪರಿಕೆಗೆ-ನೆಂಜಿಕೊಳ್ಳಲು ವಿವಿಧರೀತಿಯ ಹಪ್ಪಳ,ಸಂಡಿಗೆ-ಉಪ್ಪನಿಕಾಯಿ ವ್ಯಂಜನಗಳನ್ನೂ ಇಟ್ಟು ಗಾರ್ನಿಶ್ [ಅಲಂಕರಿಸಿ] ಕೊಡುವ ಕಲೆ ಒಳ್ಳೆಯ ಸಂಪಾದಕನದ್ದು. ಇಲ್ಲಿ ಆತನ ಸಂಪಾದನೆಯ ಮುಂದೆ ಸಂಭಾವನೆ ಗೌಣ! ಕಾಟಾಚಾರಕ್ಕೆ ಏನೋ ಬರೆಯಬೇಕಪ್ಪ ಅಂತ ಬರೆಯದೇ ತನ್ನ ಮನೋಗತ ಕ್ಷಣಿಕ ಸುಖವಾಂಚೆಗಳನ್ನು-ಇಷ್ಟಾರ್ಥಗಳನ್ನೂ ಪಕ್ಕಕ್ಕಿಟ್ಟು ಜನಸಾಮನ್ಯರ ಮುಖವಾಣಿಯಾಗಿ, ಜನರಿಗಾಗಿ-ಸಮಾಜಕ್ಕಾಗಿ ಏನಾದರೊಂದು ಕಾಣಿಕೆಯನ್ನು ಕೊಡುತ್ತಲೇ ಇರಲೇಬೇಕೆಂಬ ತಹತಹವನ್ನು ಹೊಂದಿದವನ ಜೋಳಿಗೆಯಲ್ಲಿ ತುಂಬಿಹರಿದ ಜ್ಞಾನಗಂಗೆ-ಜ್ಞಾನಸರಸ್ವತಿ ನಿಜವಾದ
ಸಂಪಾದನೆ. ಈತ ಅಲೆಮಾಇಯಾಗುತ್ತನೆ, ಸನ್ಯಾಸಿಯಾಗುತ್ತಾನೆ,ವೈದ್ಯನಾಗುತ್ತಾನೆ, ವಿಭೀಷಣನಾಗುತ್ತಾನೆ-ಒಟ್ಟಾರೆ ಈತ ನಿರ್ವಹಿಸದ ಪಾತ್ರಗಳೇ ಇಲ್ಲ. ಕೆರೆಯನೀರನು ಕೆರೆಗೆ ಚೆಲ್ಲಿ ಎಂಬಂತೆ ಶೂನ್ಯದಲ್ಲಿ ಹಿಡಿದ ತನ್ನ ಜೋಳಿಗೆಯಲ್ಲಿ ಸಾವಿರ ಸಾವಿರ ಮನಗಳಿಗೆ ಆದರ್ಶವಾಗಬಲ್ಲ, ಲಕ್ಷೋಪಲಕ್ಷಜನರು ಓದಿ ಆಸ್ವಾದಿಸುವ,ಪ್ರಚುರಗೊಳ್ಳಲು ಸನ್ಮಾರ್ಗ ಬೋಧಿಸುವ ಕನಸುಗಳನ್ನು ಕೃತಿಗಳ ರೂಪದಲ್ಲಿ ಕಟ್ಟಿ ಪೇರಿಸಿ ಮುಂದಿಡುವ ಕಾಯಕವೇ ಈ ಸಂಪಾದನೆ. ಸಂಪಾದನೆಯಲ್ಲಿ ಸದಭಿರುಚಿಯ ಜನಾಭಿಪ್ರಾಯದಿಂದ ಕ್ರೋಢೀಕರಿಸಿದ ಅನೇಕ ಅಂಶಗಳು ಕಾಣಸಿಗುತ್ತವೆ.

ಆಮೇಲೆ ಮಿಕ್ಕಿದ ಅರ್ಥದಲ್ಲಿ ನಮ್ಮ ನಮ್ಮ ಸ್ವಾರ್ಥಕ್ಕಾಗಿ ಗಳಿಸುವ ಗಳಿಕೆ ಸಂಪಾದನೆ! ಇದು ಎಲ್ಲರೂ ಮಾಡುವ ಮತ್ತು ಕರ್ತವ್ಯವೆಂದು ಒಳ್ಳೆಯ ಮಾರ್ಗದಲ್ಲಿ ನಡೆದು ಮಾಡಲೇಬೇಕಾದ ಕಾರ್ಯ. ಇಲ್ಲಿಯೂ ಗಳಿಸಿದ್ದೆಲ್ಲ ತನಗೇ ಎಂಬ ಸ್ವಾರ್ಥವಿರದಿದ್ದರೆ ಅದು ತುಂಬಾ ವಿಹಿತ. ಗಳಿಕೆಯಲ್ಲಿ ಭಾಗಶಃ ದಾನ-ಧರ್ಮ ಎಂದು ಸ್ವಲ್ಪ ವ್ಯಯಿಸಿ ಸಮಾಜದ ಹಿತರಕ್ಷಣೆಯಲ್ಲೂ ಸ್ವಲ್ಪ ವ್ಯಯಿಸಿದರೆ ಇಲ್ಲೂ ಈ ಸಂಪಾದಕ ಬೆಳಗುತ್ತಾನೆ.

Friday, June 4, 2010

ಶಬರಿ


ರಾಮನೇ ತನ್ನ ಸರ್ವಸ್ವ ಎಂದು ಬಗೆದು ಆಂಜನೇಯನಂತೆ ರಾಮನನ್ನು ತನ್ನ ಹೃತ್ಕಮಲದಲ್ಲಿ ಹುದುಗಿಸಿಕೊಂಡು ಬದುಕಿದ ಮುದಿ ಜೀವ ಶಬರಿ. ಗಾಳಿಗೆ ತರಗೆಲೆಗಳ ಸದ್ದಾದರೂ ರಾಮ ಬಂದನೇನೋ ಎಂದುಕೊಂಡು ಹುಡುಕುವ ಮನೋವೃತ್ತಿ ಆಕೆಯದ್ದು. ಬಹಳ ಜನರಿಂದ ಕೇಳಿ ತಿಳಿದಿದ್ದಳು ರಾಮನ ಬಗೆಗೆ. ಪ್ರತಿದಿನವೂ ಈಗಬಂದಾನು ಆಗ ಬಂದಾನು ಎಂದುಕೊಳ್ಳುತ್ತ ಹಲವತ್ತುಕೊಳ್ಳುವ ಆಕೆ ಮುಪ್ಪಡರಿದ ಶರೀರದಲ್ಲೇ ಎಳೆಯ ಮನವನ್ನು ಹೊಂದಿದ್ದಾಕೆ. ಕಾಡುಮೇಡುಗಳಲ್ಲಿ ಅಲೆದು ಫಲಪುಷ್ಪಗಳನ್ನು ತಂದು ಅವುಗಳನ್ನೆಲ್ಲ ಕೂಗಲ ಬಳ್ಳಿಯಿಂದ ನೇಯ್ದು ಮಾಡಿದ ಬುಟ್ಟಿಗಳನ್ನು ತೊಳೆದು ಆ ಬುಟ್ಟಿಗಳಲ್ಲಿ ಹಾಕಿಟ್ಟು, ಗುಡಿಸಲ ಮುಂದಿನ ಅಂಗಳದಂಥ ಸ್ವಲ್ಪ ಜಾಗವನ್ನು ಸಾರಿಸಿ ರಂಗವಲ್ಲಿ ಇಟ್ಟು-ಹೂಗಳನ್ನು ಹರಡಿ, ಅಲ್ಲೇ ಇರುವ ಸಪಾಟಾದ ಅಗಲದ ಕಲ್ಲೊಂದನ್ನು ಸ್ವಚ್ಛಗೊಳಿಸಿ ಇಟ್ಟು ಅದರಮೇಲೆ ತನ್ನದೊಂದು ನಾರುಮಡಿ ಹಾಸಿ ರಾಮ ಇನ್ನೇನು ಬಂದೇ ಬಿಟ್ಟನೇನೋ ಎಂಬಂತೆ ದಿನವೂ ಕಾಯ್ದೇ ಕಾಯ್ವಳು.

ಕಾಡುಜನರು ಜೇನಿಗೋ, ಕಟ್ಟಿಗೆಗೋ, ಗೆಡ್ಡೆ-ಗೆಣಸಿಗೋ ಬಂದವರು ತಮ್ಮೊಳಗೆ ಕೂಗಿ ಕರೆದರೆ ಅಲ್ಲೆಲ್ಲೋ ರಾಮನ ಕೂಗು ಕೇಳಿಸಿತೇನೋ ಅನ್ನುವಂತೆ ಗುಡಿಸಲಿನಿಂದ ಆಚೆ ಬಂದು ಹಿಮ್ಮಡ ಎತ್ತರಿಸಿ ಎರಗಿ ಎರಗಿ ನೋಡಿ ರಾಮನ ಇರವನ್ನು ಹುಡುಕುತ್ತಿದ್ದಳು. ದಿನವೂ ರಾಮ ಬರುವುದು ಕೇವಲ ಒಂದು ಮರೀಚಿಕೆಯಾಗುತ್ತಿತ್ತು. ಆದರೂ ಆಕೆಯ ಆಂತರ್ಯ ’ರಾಮ ಬಂದೇ ಬರುತ್ತಾನೆ ಮಗಳೇ ನೀನು ಕಾಯುತ್ತಲೇ ಇರು’ ಎನ್ನುವ ಸಂದೇಶ ಕೊಡುತ್ತಿದ್ದುದರಿಂದ ರಾಮ ಬರುವ ನಿರೀಕ್ಷೆಯಲ್ಲೇ ಪ್ರತಿದಿನವನ್ನೂ ಹೊಸದಿನವೇನೋ ಎಂಬರೀತಿಯಲ್ಲಿ ಜಾವದಲ್ಲೇ ಕಾಡಿಗೆ ಹೋಗಿ ಹಣ್ಣ್-ಹೂವು ಆಯ್ದು ತಂದು ಅವನ್ನೆಲ್ಲ ದಿನವೂ ಮೊದಲು ಹೇಳಿದ ರೀತಿಯಲ್ಲೇ ಅಲಂಕರಿಸುತ್ತಿದ್ದಳು. ರಾಮ ಬರುವನೋ ಬರನೋ ಅವಳಿಗೆ ಅದು ಅರ್ಥವಿಲ್ಲ,ಆದರೆ ರಾಮ ಬಂದೇ ಬರುವನೆಂಬ ಅಚಲ ವಿಶ್ವಾಸವೊಂದಿತ್ತು, ಅದು ಅಂಧಶ್ರದ್ಧೆಯಾಗಿರಲಿಲ್ಲ, ಆಂತರ್ಯದ ಕರೆಯನ್ನು ಅನುಸರಿಸಿದ ಭಕ್ತಿ ಪುರಸ್ಸರ ಕಾರ್ಯವಾಗಿತ್ತು.

ಅಜ್ಜಮ್ಮನ ಸುತ್ತ ನೋಡಿಕೊಳ್ಳಲು ಅವಳಿಗೆ ತನ್ನವರು ಎಂದು ಯಾರೂ ಇರಲಿಲ್ಲ. ಗುಡಿಸಲ ಅಕ್ಕ-ಪಕ್ಕ ಅಥವಾ ಆ ಭೂ ಪ್ರದೇಶದಲ್ಲೇ ಅವಳದೊಂದೇ ಗುಡಿಸಲು. ಮುಪ್ಪಡರಿದ ದೇಹಕ್ಕೆ ದೇವರದೇ ಕಾವಲು! ತನ್ನ ಇರುವಿಕೆ, ಅರೋಗ್ಯ ಇದರ ಬಗ್ಗೆಲ್ಲ ಚಿಂತೆಗೀಡಾದವಳಲ್ಲ ಶಬರಿ. ಅವಳಿಗೆ ರಾಮನ ದರ್ಶನವಷ್ಟೇ ಬೇಕಾಗಿತ್ತು. ಭೂಮಿಯಲ್ಲಿ ಮಿಕ್ಕೆಲ್ಲ ಕಾರ್ಯಗಳು ಆ ಕೆಲಸದ ಮುಂದೆ ಕಳಾಹೀನವಾಗಿದ್ದವು. ಕಾಡುಮರಗಳು ಒಂದಕ್ಕೊಂದು ಹೊಸೆದು ಪೀಂ ಪೀಂ ಅಂತ ಶಬ್ಧ ಹೊರಟರೆ ರಾಮ ಬಂದನೇನೋ ಅಂದುಕೊಳ್ಳುವಳು. ಮಂದ ಮರುತ ಬೀಸಿ ಕಾಡಹೊಗಳ ಪರಿಮಳ ಬಂದರೆ ಅದು ರಾಮ ತೊಟ್ಟ ನಾರುಡುಗೆಗೆ ನೈಸರ್ಗಿಕವಾಗಿ ಪೂಸಿದ ಪರಿಮಳವೇನೋ ಅಂದುಕೊಳ್ಳುವಳು. ಕಣ್ಣು ಮಂಜಾಗಿ ಕತ್ತಲಾವರಿಸುವವರೆಗೂ ರಾಮನಿಗಾಗಿ ಹೊರಗೆ ಕಾಯುವ ಸಂಪ್ರದಾಯ ಅವಳದ್ದು. ಊಟ-ತಿಂಡಿ ಇವುಗಳ ಗೊಡವೆ ಅವಳಿಗಿರಲಿಲ್ಲ, ಆದರೆ ಮಾಡುವಳು ಇಲ್ಲದಿರೆ ರಾಮನನ್ನು ನೆನೆದು ನೀರನ್ನು ಕುಡಿದೇ ಹಾಯಾಗಿರುತ್ತಿದ್ದಳಾಕೆ. ಶರೀರ ಬಿದ್ದುಹೋಗುವ ಮೊದಲು ರಾಮ ಒಮ್ಮೆ ಬರಲಿ ಎಂದು ಸುತ್ತಲ ಎಲ್ಲಾ ದೇವಾನುದೇವತೆಗಳನ್ನು ನೆನೆದು ಪ್ರಾರ್ಥಿಸುವಳು.

ಮಗನ ರೀತಿಯಲ್ಲಿ ರಾಮನನ್ನು ಉಪಚರಿಸಲು ಬಯಸುವ ಆಕೆ ಕಾಡ ಮಿಕಗಳ ಕೂಗನ್ನು ಆಲೈಸುವ ಶಬರಿ, ಮೊದಲ ಬಾಣಂತನದಲ್ಲಿ ಹಸುಗೂಸನ್ನು ಬಹಳಹೊತ್ತು ಬಿಟ್ಟಿದ್ದು ಆಮೆಲೆ ಭೆಟ್ಟಿಯಾದಗ ಮುದ್ದಿಸುವ ಅಮ್ಮನ ಪ್ರೀತಿಯನ್ನು ರಾಮನಿಗಾಗಿ ಹೊಂದಿದ್ದಳಾಕೆ. ಬದುಕಿನಲ್ಲಿ ಪಡೆದ ಮಹತ್ತರ ಭಾಗ್ಯವೇ ರಾಮನನ್ನು ಕಾಣುವುದು ಎಂಬ ಅಭೀಪ್ಸೆಯನ್ನು ಹೊಂದಿದ್ದಳಾಕೆ. ಯಾರೇ ಬರಲಿ ಇರಲಿ ಯಾವುದೂ ಅವಳಿಗೆ ಮುಖ್ಯವಲ್ಲ, ಶ್ರೀರಾಮನ ಮುಖ ಕಮಲವನ್ನು ದರ್ಶಿಸಿ, ರಾಮನ ಪಾದಾರವಿಂದಗಳಲ್ಲಿ ಬಗೆಬಗೆಯ ಹೂವುಗಳನ್ನಿಟ್ಟು ಆತ ಮನಸಾರೆ ತಿನ್ನಲು ಅನುಕೂಲವಾಗುವ ಬೋರೆಹಣ್ಣುಗಳನ್ನು ಕೊಡುವ ಬಯಕೆ ಅವಳದಾಗಿತ್ತಷ್ಟೇ.

ಅಂತೂ ಶ್ರೀರಾಮ ಬಂದ, ಶಬರಿಯ ಭಕ್ತಿಯ ಆದರಾತಿಥ್ಯ ಸ್ವೀಕರಿಸಿದ, ಆಕೆ ಸಿಹಿಯಿದೆಯೋ ಎಂದು ನೋಡಲು ಶುದ್ಧಮನದಿಂದ ಕಚ್ಚಿ ಕೊಟ್ಟ ಹಣ್ಣುಗಳನ್ನು ಅಷ್ಟೇ ಭಕ್ತಿಯಿಂದ,ಪ್ರೀತಿಯಿಂದ ರಾಮ ತಿಂದ. ಅವಳ ಕೋರಿಕೆಗಾಗಿ ಎದುರುನೋಡಿದ. ಅವಳ ಕೋರಿಕೆ ಜಗದ ಹಿತವೇ ತನ್ನ ಹಿತವೆಂಬುದಾಗಿತ್ತು, ತನಗೆ ಸತತವಾಗಿ ಜನ್ಮಾಂತರಗಳಲ್ಲೂ ನಿನ್ನ ಭಕ್ತಿಯಿರಲಿ, ನಿನ್ನ ಕೃಪೆಯಿರಲಿ --ಇವಿಷ್ಟೆ ಆಗಿತ್ತು.

ಶಬರಿ

ಸ್ವಾಮೀ ಬಂದೆಯಾ ನಿನ್ನ ಕಾಣದೇ ಹಗಲಿರುಳು
ಧ್ಯಾನಿಸುತ ಇರುತಿದ್ದೆ ಕಾಲಪರ್ವದಲಿ
ರಾಮನಿನ್ನಯ ಪಾದ ಧೂಳಿಯನು ಸ್ವೀಕರಿಸಿ
ಧನ್ಯನಾದೆನು ಮುದುಕಿ ಜನ್ಮ ಜನ್ಮದಲಿ

ಬಾಷ್ಪವಿಳಿಯಿತು ಮನಕೆ ಬಹಳ ಸಂತಸವಾಗಿ
ಕಾಶ್ಯಪಾದಿಗಳೆಲ್ಲ ಹರಸಿಹರು ರಾಮಾ
ನಿಷ್ಫಲವು ಎಂದು ಹಳಹಳಿಸುತ್ತ ನೊಂದಿದ್ದೆ
ಪುಷ್ಪಗಳ ಹಂದರವು ಈಗ ಜೀವನವು

ಏಸೋ ದಿನಗಳು ನಿನ್ನ ಹಂಬಲಿಸಿ ಹಲವತ್ತು
ವಾಸಿಯಾಗದ ನೋವ ಮರೆತೆ ನಾ ರಾಮಾ
ನಾಸಿಕದಿ ಆಘ್ರಾಣಿಸುತಲೊಮ್ಮೆ ಹೂವುಗಳ
ವಾಸುಕೀಶಯನ ನಿನಗರ್ಪಿಸಲು ತಂದೆ

ಘಟ್ಟ ಘನಘೋರ ದುರ್ಗಮ ಕಾಡು ಕಣಿವೆಗಳ
ದಿಟ್ಟೆಯಾಗುತ ಜಯಿಸಿ ಹಣ್ಣುಗಳ ರಾಮಾ
ಬುಟ್ಟಿಯಲಿ ಕೊಯ್ದಿರಿಸಿ ಕಾದಿದ್ದೆ ನಿನಗಾಗಿ
ಕೊಟ್ಟು ನಮಿಸುವೆ ಕಚ್ಚಿ ಸಿಹಿಯಾದುದಾಯ್ದು

ನನ್ನತನವೆನಗಿಲ್ಲ ಬಂದುಹೋಗುವರಿಲ್ಲ
ಬಿನ್ನಾಣ ಬೆಡಗುಗಳ ಅರಿವಿಲ್ಲ ರಾಮಾ
ನನ್ನ ಹೃದಯದ ತುಂಬ ನಿನ್ನದೇ ಪ್ರತಿಬಿಂಬ
ಇನ್ನಾಯ್ತು ಸಾರ್ಥಕವು ಬದುಕಿದ್ದು ಜೀವ

ಮಗನ ರೂಪದಿ ಶುಭ್ರ ಗೌರವರ್ಣದಿ ಬಂದು
ಖಗವಾಹನನೆ ನಿಜದ ನೆಲೆಮರೆತು ರಾಮಾ
ಬಗೆಬಗೆಯ ಹೂವು ಹಣ್ಣುಗಳಿಹವು ನಿನಗಾಗಿ
ಜಗದ ಜೀವರ ಹರಸೋ ತಿಂದು ಸುಖದಿಂದ

Sunday, May 30, 2010

ಮುಂಗಾರಿನ ಕಹಳೆ


[ಚಿತ್ರ ಋಣ : ಅಂತರ್ಜಾಲ ]

ಮುಂಗಾರಿನ ಕಹಳೆ

ಮಳೆಯ ಹನಿ ಪಟಪಟನೆ ಭುವಿಯ ಅಂಗಣಕುದುರಿ
ನಳಿನ ಮುಖಿಗಾಗಿಹುದು ಮಂಗಳದ ಸ್ನಾನ
ಇಳೆಯ ಮಂಟಪದಲ್ಲಿ ಹೊಳೆವ ಮೂರುತಿಯಿರಿಸಿ
ಸುಳಿದು ಒಡೆದಂತಿಹುದು ತೆಂಗು ಫಲವನ್ನಾ

ನವಿಲು ನೋಡುತ ಮೋಡ ನರ್ತಿಸಿತು ನಲಿವಿನಲಿ
ಒಲವಿನಲಿ ಗರಿಗೆದರಿ ತೋರಿಸುತ ಬಣ್ಣ
ಉಲಿಯಿತದೋ ನಡು ನಡುವೆ ಸಂಗಾತಿಯನು ಕರೆದು
ಗೆಲುವ ಭಾವದಿ ಮಿಟುಕಿಸುತ ತನ್ನ ಕಣ್ಣ

ಕಪ್ಪೆಗಳು ಎಲ್ಲಿಂದಲೋ ಇರವ ತೋರ್ಗೊಡುತ
ಕುಪ್ಪಳಿಸಿ ನೆಗೆದಿಹವು ರಸ್ತೆಯುದ್ದಗಲ
ಒಪ್ಪಿಸುತ ಒದರಿಹವು ಗೊಟರು ಗೊಟರಿನಮಾತು
ಸಪ್ಪೆ ಬದುಕಲಿ ತಂತು ಜೀವಕಳೆಯನ್ನ

ಬಲಿದ ಮಾರುತ ತನ್ನ ಮಂದ ಧೋರಣೆ ತೊರೆದು
ವಿವಿಧ ದಿಸೆಯಲಿ ಹರಿಸಿ ಹರಿಹಾಯ್ದು ಬೀಸಿ
ಸವಿದು ನುಂಗಿದ ಜಗದ ಜಡತತ್ವಗಳನೆಲ್ಲ
ತಿವಿದು ಜನಶಕ್ತಿಯನು ಬೆಚ್ಚಿಸುತ ಕುಣಿಸಿ

ಬಟ್ಟಬಯಲಲಿ ಒಣಗಿ ಮುರುಟಿ ಸತ್ತಿಹ ಸಸ್ಯ
ತಟ್ಟನೇ ಮೈಕೊಡವಿ ಮೇಲೆದ್ದು ಚಿಗುರಿ
ಕಟ್ಟೆ-ಕೆರೆಗಳು ತುಂಬಿ ಮಗುಚಿ ನುಗ್ಗುತ ನೀರು
ಸೃಷ್ಟಿಯಲಿ ಹೊಸಹಬ್ಬ ಜೀವಸಂಕುಲಕೆ

ಏಡಿ ಎರೆಹುಳವೆದ್ದು ಜಾಡಿಸುತ ಮೈಮುರಿದು
ಓಡಿಹವು ಊರಗಲದುದ್ದ ಜಾಗದಲಿ
ಆಡಿಸುತ ಬಾಲವನು ಹೊಸೆದು ಮೈಯ್ಯನು ಮುದುಡಿ
ಬೀಡುಬಿಟ್ಟಿವೆ ಒಳಗೆ ನಾಯಿ-ಬೆಕ್ಕುಗಳು

ಭುಗಿಲೆದ್ದ ಆಗಸದಿ ನೇಸರನು ಮರೆಯಾಗಿ
ಹಗಲಿನಾ ಚಹರೆ ಕಳೆದೋಯ್ತು ಮೋಡದಲಿ
ಬಗಲೊಳಗೆ ಮಿಂಚು ಕರೆತಂದು ಗುಡುಗುಮ್ಮನನು
ಒಗೆದು ಕೆಡವಿದ ಶಬ್ಧ ಮಕ್ಕಳವು ಹೆದರಿ

ಮರೆಯಲಾಗದ ಮಹಾನುಭಾವ ದಿ|ಶ್ರೀ ಶಂಭು ಹೆಗಡೆ ಕೆರೆಮನೆ


ಮರೆಯಲಾಗದ ಮಹಾನುಭಾವ ದಿ|ಶ್ರೀ ಶಂಭು ಹೆಗಡೆ ಕೆರೆಮನೆ

ಪಾರ್ತಿಸುಬ್ಬನಿಂದ ಹುಟ್ಟಿತೆನ್ನಲಾದ ಯಕ್ಷಗಾನ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡು ಧೋ ಎಂದು ಸುರಿವ ಮಳೆಗಾಲದ ಮುಸಲಧಾರೆಯಲ್ಲಿ ಹೊರಗೆ ಹೋಗಲಾರದ ೪ತಿಂಗಳು ಮನೋರಂಜನೆಗಾಗಿ ಕೇವಲ ತಾಳಮದ್ದಲೆಯ ಮೂಲಕ ಪ್ರಾರಂಭಗೊಂಡ ಈ ಕಲೆ ಇಂದು ಶತಮಾನಗಳನ್ನು ದಾಟಿ ಸಮಗ್ರ ಕಲೆಯಾಗಿ ಅಭಿವೃದ್ಧಿಗೊಂಡಿದೆ. ಯಾರೇ ಏನೇ ಅಂದರೂ ವೃತ್ತಿ ಜೀವನವನ್ನಾಗಿ ಯಕ್ಷಗಾನವನ್ನು ಆಯ್ದು ಕೊಂಡವರಿಗೆ ಇಂದಿನ ಕಾಲ ಒಂದರ್ಥದಲ್ಲಿ ಒಳ್ಳೆಯಕಾಲವಾದರೂ ಎಲ್ಲರಿಗೂ ಅದು ಪೂರ್ಣಾವಧಿ ಅನ್ನನೀಡುವ ಕಾಲವಲ್ಲ--ಇದನ್ನು ಹೇಳಲು ಕಾರಣ ಇಷ್ಟೇ- ಈ ಕಲಾವಿದರು ಬಡತನದಲ್ಲೇ ಇರಬೇಕೇ ಹೊರತು ಇದು ವೈಯಕ್ತಿಕ ಬದುಕಿನಲ್ಲಿ ಸಿರಿತನತರುವ, ಅವರ ಅನುವು-ಆಪತ್ತಿನಲ್ಲಿ ಅನುಕೂಲಕ್ಕೆ ಬರುವ ಆಪದ್ಧನ ಕೊಡುವ ರಂಗವಲ್ಲ. ಬಹುತೇಕ ನಮ್ಮ ಕವಿ-ಸಾಹಿತಿಗಳಂತೆ ಯಕ್ಷರಂಗದ ಕಲಾವಿದರೂ ಬಡತನವನ್ನೇ ಹಾಸು ಹೊದ್ದವರು;ಹಾಗೇ ಬದುಕುವವರು.ಜೀವನದಲ್ಲಿ ವಿಪರ್ಯಾಸಗಳನ್ನು ಕಾಣುತ್ತಲೇ ಇರುತ್ತೇವೆ-ಉದಾಹರಣೆಗೆ ಸಾಲು ಮರದ ತಿಮ್ಮಕ್ಕ. ತಿಮ್ಮಕ್ಕ ದಂಪತಿಗೆ ಮಕ್ಕಳಿರಲಿಲ್ಲ, ಮಕ್ಕಳ ಬದಲಿಗೆ ಅವರು ಮರಗಳನ್ನು ಬೆಳೆಸಿದ್ದು ಅದೂ ಸಾರ್ವಜನಿಕರಿಗೆ ನೆರಳು ನೀಡುವಂತೆ ರಸ್ತೆಬದಿಯಲ್ಲಿ ಬೆಳೆಸಿದ್ದು ಅದಕ್ಕಾಗಿ ಸರಕಾರ ಪ್ರಶಸ್ತಿ ನೀಡಿದ್ದು ಈಗ ಇತಿಹಾಸ. ಆದರೆ ಮುಪ್ಪಿನ ಈ ಕಾಲದಲ್ಲಿ ಚಿಕ್ಕ ಗುಡಿಸಲಲ್ಲಿ ತಿಂದುಣ್ಣಲು,ಹಾಸು-ಹೊದೆಯಲು,ಮೈಮುಚ್ಚಲು ಬಟ್ಟೆ ಈ ಎಲ್ಲ ಮೂಲಭೂತ ಜೀವನಾವಶ್ಯಕ ವಸ್ತುಗಳಿಲ್ಲದೇ ಸೊರಗುವ ಆ ಹಿರಿಯ ಜೀವಕ್ಕೆ ಕೇವಲ ಕಾಗದದಲ್ಲಿ ಬರೆದು ಕಟ್ಟುಹಾಕಿಸಿದ ಪ್ರಶಸ್ತಿ ಅನುಪಯುಕ್ತ. ಅನೇಕ ಚಿಕ್ಕಪುಟ್ಟ ಸಂಘ-ಸಂಸ್ಥೆಗಳೂ ಕರೆದು ಕೊಟ್ಟಿರುವುದು ಮತ್ತದೇ ಥರದ ಕಟ್ಟುಹಕಿಸಿದ ಮುದ್ರಿತ ಕಾಗದ. ಅದರಲ್ಲಿ ಏನು ಬರೆದಿದೆ ಎಂಬುದನ್ನೂ ಓದಲಾರದ ಆಕೆಗೆ ಯಾವ ಅಶಾಕಿರಣವೂ ಇಲ್ಲ. ಗುಡಿಸಲಿನಲ್ಲಿ ಆ ಪ್ರಶಸ್ತಿಗಳನ್ನು ನೇತುಹಾಕಲೂ ಜಾಗವಿಲ್ಲ! ಕೇವಲ ಸರಕರದ ಮಾಶಸನ ಆಕೆಗೆ ಜೀವನಧಾರ. ವೃದ್ಧಾಪ್ಯ ಸಹಜ ಕಾಯಿಲೆಬಂದರೆ ಚಿಕಿತ್ಸೆಗೆ ಬೇಕಾದ ಹಣ ಕೂಡ ಆಕೆಯಲ್ಲಿಲ್ಲ. ಹೀಗೇ ಯಕ್ಷರಂಗದಲ್ಲೂ ಇದೇ ರೀತಿ. ವೇದಿಕೆಯಲ್ಲಿ ರಾಜಮಹಾರಾಜರಾಗಿ ಮೆರೆಯುವ ನಟರು ಮಾರನೇ ದಿನ ಸಾಲಮಾಡಿ ಅಕ್ಕಿತರಬೇಕಾದ ಪರಿಸ್ಥಿತಿ ಇದ್ದರೆ ಇದು ಆಶ್ಚರ್ಯವಲ್ಲ! ಅದೂ ಅಂಗಡಿಯಾತ ಕೊಟ್ಟರೆ ಉಂಟು ಕೊಡದಿದ್ದರೆ ಇಲ್ಲ! ಹೊಟ್ಟೆಯಮೇಲೆ ತಣ್ಣೀರು ಬಟ್ಟೆಯೇ ಗತಿ! ಹೀಗಿರುತ್ತ ಸಂಸಾರವನ್ನು ನಿಭಾಯಿಸುವುದು ಎಷ್ಟು ಸುಲಭದ ಕೆಲಸ ಎಂದು ನವು ಅರ್ಥಮಾಡಿಕೊಳ್ಳಬಹುದು. ಸಾಲದ್ದಕ್ಕೆ ಅಂದಿನ ಪ್ರತೀ ಇಡೀರಾತ್ರಿ ಯಕ್ಷಗಾನದಲ್ಲಿ ನಟಿಸಿದ ಬಹುತೇಕ ಕಲಾವಿದರಿಗೆ ನಿದ್ದೆಯ ಮಂಪರು ಹೋಗಿಸಲು ಬೀಡಿ-ಸಿಗರೇಟು-ಮದ್ಯ ಇತ್ಯಾದಿ ದುರ್ವ್ಯಸನಗಳು ಹುಟ್ಟಿಕೊಂಡವು. ಇಂದಿನ ಯುವ ಕಲಾವಿದರ ಪೀಳಿಗೆಯಲ್ಲಿ ಅವು ಸಿರಿತನದ ದ್ಯೋತಕವಾಗಿ ಗುಟ್ಕಾ,ಸಿಗರೇಟು ಮತ್ತು ವಿವಿಧ ಮಾದರಿಯ ಮಲ್ಯ-ಖೋಡೆಗಳ ಮದಿರಾರಸವಾಗಿ ಹರಿದಾಡುತ್ತಿವುದು ಖೇದಕರ!


ಇಂತಹ ಯಕ್ಷರಂಗದಲ್ಲಿ ಯಾವ ಚಟಗಳಿಗೂ ದಾಸರಾಗದೇ ಇರುವ ಶುದ್ಧ-ಸಾತ್ವಿಕ ಕುಟುಂಬ ಎಂದರೆ ಅದು ಕೆರೆಮನೆ ಕುಟುಂಬ. ತನ್ನ ತಾದತ್ಮ್ಯತೆಯಿಂದ ಯಕ್ಷಗಾನಕ್ಕೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟ ದಿ| ಶ್ರೀ ಶಿವರಾಮ ಹೆಗಡೆಯವರ ತಂದೆ ಇಡಗುಂಜಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಏನೋ ಕೆಲಸಮಾಡಿಕೊಂಡಿದ್ದರಂತೆ, ಯಕ್ಷಗಾನಪ್ರಿಯನಾದ ಆ ದೇವನ ಮಹಿಮೆಯೋ ಎಂಬಂತೆ ಮಗ ಶಿವರಾಮ ಹುಟ್ಟಿದ, ಎಳವೆಯಲ್ಲೇ ಗೆಜ್ಜೆ ಕಟ್ಟಿದ, ಬೆಳೆದು ಮೇಳ ಕಟ್ಟಿದ! ಹೆಸರಾಂತ ದಿ| ಶ್ರೀ ಮೂಡ್ಕಣಿ ನಾರಾಯಣ ಹೆಗಡೆಯವರ ಸಹವರ್ತಿಯಾಗಿ, ಯಕ್ಷರಂಗದ ಭೀಷ್ಮರೆಂದೇ ಅಂದಿಗೆ ಖ್ಯಾತಿ ಪಡೆದಿದ್ದ ದಿ|ಶ್ರೀ ಸದಾನಂದ ಹೆಗಡೆಯವರ ಶಿಷ್ಯನಾಗಿ ಬೆಳೆದ ಶಿವರಾಮರು ತಂದೆ ಪೂಜಿಸಿದ,ಆರಾಧಿಸಿದ ಶ್ರೀ ಇಡಗುಂಜಿ ಮಹಾಗಣಪತಿಯ ಹೆಸರನ್ನೇ ಇಟ್ಟು ಯಕ್ಷಗಾನ ಮೇಳವನ್ನು ಕಟ್ಟಿದರು. ಈ ಶಿವರಾಮರಿಗೆ ಶಂಭು ಮತ್ತು ಗಜಾನನ ಎಂಬ ಇಬ್ಬರು ಮಕ್ಕಳು. ತಂದೆಯ ವೃತ್ತಿ ಮಕ್ಕಳಿಗೆ ಎನ್ನುವ ಕಾಲ ಅದಾಗಿದ್ದರಿಂದಲೋ ಏನೋ ಇಬ್ಬರೂ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದರು. ಇವತ್ತಿಗೆ ಈ ಇಬ್ಬರೂ ದಿವಂಗತರು.

ನೋಡಿದೆಯಾ ವಿದುರ....ಕೌರವನೊಡ್ಡೋಲಗವ ....ಇಂತಹ ಯಕ್ಷಗಾನದ ಹಾಡುಗಳು ನೆನಪಿಗೆತರುವುದು ದಿವಂಗತ ಶ್ರೀ ಶಂಭುಹೆಗಡೆ ಕೆರೆಮನೆಯವರನ್ನು. ಕಲಾವಿದನಾಗಿ ಬಹಳ ಶ್ರಮಿಸಿ,ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತ, ಎಲ್ಲೂ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ನೋಡಿಕೊಂಡು ಯಕ್ಷರಂಗಕ್ಕೆ ಹೊಸ ಹೊಸ ಪ್ರಯೋಗಗಳನ್ನು ಅಳವಡಿಸಲು ಉಪಕ್ರಮಿಸಿದ ಅಚ್ಯುತರವರು. ಹರೆಯದಲ್ಲಿ ತಂದೆ ಅರ್ಥಿಕ ಒದ್ದಾಟವನ್ನು ಕಂಡು ಮೇಳಕ್ಕೆ ಹೊಸ ರೂಪುರೇಷೆ ನೀಡಿದ ಶಂಭುಹೆಗಡೆ ಬಹುತೇಕರಿಗೆ ಶಂಭಣ್ಣನಾಗುವಷ್ಟು ಹತ್ತಿರವಾದವರು. ಜೋಡಿಸಿ-ಬಿಡಿಸಿಡಬಹುದಾದ ಅರ್ಧಚಂದ್ರಾಕೃತಿಯ ರಂಗಸಜ್ಜಿಕೆ ಕೆರೆಮನೆ ಮೇಳದ ಪ್ರಮುಖ ಆವಿಷ್ಕಾರ. ಆಗಿನ ಕಾಲಕ್ಕೆ ಮೇಳವೆಂದರೆ ಬರೇ ಕಲಾವಿದರ ಕೂಟವಾಗಿರಲಿಲ್ಲ, ಕಲಾವಿದರೆಲ್ಲ ನಾಟಕ ಮಂಡಳಿಯ ರೀತಿ ನೌಕರರೇ ಆಗಿರುತ್ತಿದ್ದು, ವೇದಿಕೆ, ಆಸನಗಳು,ಟೆಂಟು-ಗುಡಾರ,ಟೆಂಟು ಕಟ್ಟುವ ಸಾಮಗ್ರಿಗಳು, ದೀಪಕ್ಕಾಗಿ ಜನರೇಟರ್-ಅದರ ಹೊಟ್ಟೆಗೆ ವ್ಯವಸ್ಥೆ, ಟೆಂಟು ಕಟ್ಟಲು ಕೂಲಿ ಜನ, ಮೇಳದಲ್ಲಿ ಅಡಿಗೆಮನೆ-ಬಾಣಸಿಗ, ಅಡಿಗೆ ಸಾಮಗ್ರಿ, ಪಾತ್ರೆ-ಇತ್ಯಾದಿ, ಚೌಕಿಮನೆಯಲ್ಲಿ ವೇಷ-ಭೂಷಣಗಳು,ಬಣ್ಣಗಳು-ಮುಖವರ್ಣಿಕೆಯ ಸಾಮಗ್ರಿಗಳು,ಸಾಗಟಕ್ಕೆ ವಹನಗಳು-ಲಾರಿ ಇವುಗಳನ್ನೆಲ್ಲ ಸಮರ್ಪಕವಾಗಿ ನೋಡಿ-ನಿಭಾಯಿಸಲು ಒಬ್ಬ ವ್ಯವಸ್ಥಾಪಕರು ಹೀಗೇ ಒಂದೇ ಎರಡೇ...ಇದೂ ಒಂದು ಥರ ವ್ಯವಸ್ಥಿತ ಸಂಸ್ಥೆಯಾಗಿರುತ್ತಿತ್ತು[ಇಂದು ಕೆಲವೇ ಇಂತಹ ಸಂಸ್ಥೆಗಳು ಉಳಿದುಕೊಂಡಿವೆ] ಪ್ರತೀ ರಾತ್ರಿ ಬೇರೇ ಬೇರೆ ಪ್ರದೇಶಗಳಲ್ಲಿ ಆಟ, ಹೀಗಾಗಿ ಬೆಳಗಾಗುತ್ತಿದ್ದಂತೆ ಹಾಕಿದ ಟೆಂಟು ಕಿತ್ತು ಇನ್ನೊಂದು ಊರಿಗೆ ಹೋಗಿ ೧೧ಗಂಟೆಯೊಳಗೆ ಅಲ್ಲಿಗೆ ತಲುಪಿ ಅಲ್ಲಿ ಮತ್ತೆ ಟೆಂಟಿನ ಪುನರ್ನಿರ್ಮಾಣ!ಸಾಗಟದ ಲಾರಿ ಕೆಟ್ಟುನಿಂತರೆ, ಯಾವುದೋ ಒಬ್ಬ ಕಲಾವಿದ ರಜಾಹಾಕಿದರೆ, ಬರದಿದ್ದರೆ ಅವನ ಜಾಗ ತುಂಬಿಕೊಳ್ಳಲು ಪರ್ಯಾಯಕಲಾವಿದರು,ಕಲಾವಿದರ ಆರೋಗ್ಯ, ಕೂಲಿ ಜನರ ಆರೋಗ್ಯ, ಕಾಲದ ವೈಪರೀತ್ಯದಿಂದ ಘಟಿಸಬಹುದಾದ ಮಳೆ-ಗಾಳಿಗಳಂತಹ ಆಕಸ್ಮಿಕ ಸನ್ನಿವೇಶಗಳು-ಇವುಗಳನ್ನೆಲ್ಲ ನಿಭಾಯಿಸುವ ಸರ್ಕಸ್ ಕಂಪನಿಯಾಗಿತ್ತು ಯಕ್ಷಗಾನಮೇಳ!

ಏನೇ ಇದ್ದರೂ ಕೈಲಾಗುವವರೆಗೆ ಇಂತಹ ಒಂದು ವ್ಯವಸ್ಥೆಯನ್ನು ನಡೆಸಿದ, ಯಜಮಾನನಾಗಿ ಕಲೆಕ್ಷನ್ ಆಗದಿದ್ದರೂ ನಂಬಿಕೊಂಡ ಕಲಾವಿದರಿಗೆ,ಕೆಲಸದವರಿಗೆ ಒಂದಿನಿತೂ ಕೈಕೊಡದ ನಿಜವಾದ ’ಯಜಮಾನ’ ಶ್ರೀ ಶಂಭು ಹೆಗಡೆ. ಪರಿಸ್ಥಿತಿ ಹೇಗೇ ಇದ್ದರೂ ಅದನ್ನು ಮೆಟ್ಟಿನಿಂತು ಅವರು ನಿಭಾಯಿಸಿದ ಪಾತ್ರಗಳು ಬಹಳ ಮತ್ತು ಅವಿಸ್ಮರಣೀಯ ಕೂಡ. ಎಣ್ಣೆಗೆಂಪಿನ ಉರುಟು ಮುಖದ ಈ ಸ್ಪುರದ್ರೂಪಿಯ ಹಲ್ಲುಗಳು ಸ್ಪಟಿಕದಂತೇ ಕಂಗೊಳಿಸುತ್ತಿದ್ದವು. ವೇಷ ಯಾವುದೇ ಇರಲಿ ರಂಗಕ್ಕೆ ಬಂದಾಗ ಅವರ ಮುಖದಲ್ಲಿರುವ ಲಕ್ಷಣವೇ ಅದ್ಭುತ, ಮಲ್ಲಿಗೆಯನ್ನೂ ನಾಚಿಸುವ ಸಹಜ ನಗು, ಹೆಂಗಸರನ್ನೂ ಅಳಿಸುವ, ಆಂತರ್ಯದಿಂದ ಹೊಮ್ಮುತ್ತಿದ್ದ ಭಾವಪೂರಿತ ಅಳು ಇವೆರಡೂ ಬಹಳ ಅಪ್ಯಾಯಮಾನ. ಬಹಳ ಎತ್ತರವೂ ಅಲ್ಲದ, ಬಹಳ ಕುಳ್ಳೂ ಅಲ್ಲದ ಈ ವ್ಯಕ್ತಿ ಬೊಜ್ಜಿರದ ತನ್ನ ದೇಹದಂತೆ ತನ್ನ ತಲೆಯನ್ನೂ ಬಹಳ ತೆಳ್ಳಗಿಟ್ಟುಕೊಂಡು ಸದಾಕಾಲ ಮೌಲ್ಯಾಧಾರಿತವಾಗಿರುವ ಆವಿಷ್ಕಾರಗಳ-ಹೊಸತನಗಳ ಹುಡುಕಿವಿಕೆಯಲ್ಲೇ ತನ್ನನ್ನು ತೊಡಗಿಸಿಕೊಂಡಿರುತ್ತಿದ್ದರು.

ಶಂಭಣ್ಣ ನಿರ್ವಹಿಸಿದ ನಳ,ಹರಿಶ್ಚಂದ್ರ,ರಾಮ,ಕೌರವ,ಕರ್ಣ,ಕೃಷ್ಣ,ದಶರಥ ಮುಂತಾದ ಪಾತ್ರಗಳು ಈ ಕಲೆಯ ಅರಾಧಕರಿಗೆ, ಯಕ್ಷಗಾನ ಕಲಾನುಭೂತಿ ಇರುವವರಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲದ ಪಾತ್ರಗಳು. ಇದರ ಹೊರತಾಗಿ ಹನುಮಂತ,ಈಶ್ವರ,ವಿಶ್ವಾಮಿತ್ರ ಹೀಗೆ ಹತ್ತು-ಹಲವು ವೇಷಗಳನ್ನು ಇವರು ಮಾಡಿದ್ದರು-ಮಾಡಿ ಸೈ ಎನಿಸಿಕೊಂಡಿದ್ದರು.


ಕಲಿ ಕಿರೀಟಿಯೆ ಕೇಳು ...ಏನಪೇಳಲಿ ನಿನಗೆ........
ಕರ್ಣನಾಗಿ ಅವರು ರಥದ ಚಕ್ರ ಹೂತುಹೋದ ಸನ್ನಿವೇಶವನ್ನು ಅಭಿನಯಿಸುತ್ತಿದ್ದುದ್ದು ಎಲ್ಲರ ಕಣ್ಣಿಗೆ ಅಲ್ಲಿ ಹೂತುಹೋದ ರಥವನ್ನೇ ತೋರುತ್ತಿತ್ತು[ನಿಜವಾಗಿ ಅಲ್ಲಿ ರಥವಿರದಿದ್ದರೂ], ಬಾಹುಕನಾಗಿ ಅಷ್ಟಾವಕ್ರ ದೇಹಪಡೆದು,ದಮಯಂತಿಯನ್ನು ಕಳೆದುಕೊಂಡು ಗುರುತು ಹೇಳದೇ ಸ್ನೇಹಿತ ಋತುಪರ್ಣ ರಾಜನ ಆಸ್ಥಾನದಲ್ಲಿ ಕೆಲಸಮಾಡಿಕೊಂಡಿದ್ದು, ದಮಯಂತಿಯ ಪುನಃಸ್ವಯಂವರದ ಕರೆ ಕೇಳಿ ತನ್ನ ಮಿತ್ರ ನಳನ ಮಡದಿಗೆ ಮತ್ತೆ ಸ್ವಯಂವರವೇಕೆ ಎಂದುಕೊಂಡು ತಡೆಯಲಾರದೇ ಸ್ನೇಹಿತ ಋತುಪರ್ಣ ಹೊರಟು ನಿಂತಾಗ ಕಣ್ಣಲ್ಲಿ ಹರಿಸುವ ಭಾವನೆಗಳ ಮಹಾಪೂರಕ್ಕೆ ಸಭಾಸದರು ಕೊಚ್ಚಿಹೋಗುತ್ತಿದ್ದರು. ನಿರ್ಯಾಣದ ರಾಮನಾಗಿ ಅವರು ತನ್ನ ಬಂಧುವರ್ಗ, ಪ್ರಜೆಗಳು, ಮಾಂಡಲಿಕರು ಇತ್ಯಾದಿ ಹಲವರಿಗೆ ಕೊನೆಯದಾಗಿ ಕ್ರೂತಜ್ಞತೆ ಹೇಳಿ ನಿರ್ಗಮಿಸುವಾಗ ಬಹುತೇಕರ ಕರವಸ್ತ್ರಗಳು ಒದ್ದೆಯಾಗಿರುತ್ತಿದ್ದವು. ಮಗನನ್ನು ಕಾಡಿಗೆಕಳುಹಿಸಿದ ಅಪರಾಧೀ ಭಾವಕ್ಕೆ ಒಳಗಾಗಿ ಪರಿಪರಿಯಾಗಿ ನೋಯುವ-ಬೇಯುವ,ಬೆಂದು ಬಸವಳಿದು ಸಾಯುವ ದಶರಥನ ಪಾತ್ರ ಆ ಮಾತುಗಳು ಅದ್ವಿತೀಯ-ಅನನ್ಯ! ಹೆಗಲಮೇಲೆ ಕಂಬಳಿ ಹೊದ್ದು, ಕೈಯಲ್ಲಿ ಕೋಲು ಹಿಡಿದು ಒಡೆಯ ವೀರಬಾಹುವಿನ ಆಜ್~ಝೆಯಂತೆ ಸ್ಮಶಾನ ಕಾಯುತ್ತಿರುವಾಗ ತಮ್ಮಮಗನನ್ನೇ ಸುಡಲು ಬಂದ ಭಾರ್ಯೆ ಚಂದ್ರಮತಿಯನ್ನುದ್ದೇಶಿಸಿ ಆಡುತ್ತಿದ್ದ ಮಾತುಗಳು ಬಹುಶಃ ನಮ್ಮ ಕನ್ನಡ ಸಿನಿಮಾ ಕೊಡುವುದಕ್ಕಿಂತ ಸಾವಿರಪಟ್ಟು ಉತ್ತಮವಾಗಿರುತ್ತಿದ್ದವು. ಮನೋಜ್ಞ ಹಾಗೂ ಹಿತಮಿತ ಅಭಿನಯದೊಂದಿಗೆ ಪ್ರತೀ ವೇದಿಕೆಯಲ್ಲಿ ಮಾಡುವ ಅದದೇ ಪಾತ್ರಗಳೂ ಕಳಾವಂತಿಕೆಯಲ್ಲಿ-ಪಡಿಮೂಡಿಸುವಲ್ಲಿ ವಿಭಿನ್ನ-ವಿಶೇಷ! ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಾಡುಗಳನ್ನು ನೆಬ್ಬೂರು ಭಾಗವತರು ಹಾಡುತ್ತಿರುವಾಗ, ಕರ್ಕಿಯ ಭಂಡಾರೀ ಮನೆತದವರು ಚಂಡೆ-ಮದ್ದಳೆ ಬಾರಿಸುತ್ತಿರುವಾಗ ಶಂಭಣ್ಣನ ಪಾತ್ರ ರಂಗದಲ್ಲಿದ್ದರೆ ಅದು ಯಕ್ಷಲೋಕವೇ ಸರಿ! ಸದ್ಯಕ್ಕೆ ಅದು ನ ಭೂತೋ ನ ಭವಿಷ್ಯತಿ!

ಕಾಲಾನಂತರದಲ್ಲಿ ಈ ಕಲೆಯ ಪೈಪೋಟಿ ಮತ್ತು ಕಲಾಸಕ್ತರ ಮನೋಸ್ಥಿತಿ ಬದಲಾಗಬಹುದಾದ ಸನ್ನಿವೇಶವನ್ನು ಮುನ್ನವೇ ಅಂದಾಜಿಸಿದ್ದ ಬುದ್ಧಿವಂತ ಶಂಭಣ್ಣ ಕಾಲಮಿತಿ ಪ್ರಯೋಗವನ್ನು ಹುಟ್ಟುಹಾಕಿದ್ದರು. ಪ್ರಾರಂಭದಲ್ಲಿ ಇದಕ್ಕೆ ಬಹಳ ವಿರೋಧಾಭಾಸ ಕಂಡರೂ ನಂತರ ಬಹಳ ಜನ ಅದನ್ನೇ ಇಷ್ಟಪಟ್ಟರು. ಸ್ವಲ್ಪಮಟ್ಟಿಗೆ ಮಾತು-ನೃತ್ಯ್-ಪಾತ್ರಗಳಿಗೆ ಕಡಿವಾಣಹಾಕುವ ಕಾಲಮಿತಿ ಪ್ರಯೋಗ ಕೊನೇಪಕ್ಷ ಇಡೀ ರತ್ರಿ ಕುಳಿತು ನೋಡಲು ಅನಾನುಕೂಲವಿರುವ ಆಸಕ್ತರಿಗೆ ಈ ಕಲೆಯನ್ನು ಆಸ್ವಾದಿಸಲು ಒಂದು ಪರ್ಯಾಯ ಮಾರ್ಗ! ಒಂದನ್ನು ಪಡೆಯುವಾಗ ಇನ್ನೊಂದನ್ನು ಸ್ವಲ್ಪ ಕಳೆದುಕೊಳ್ಳುವುದು ಎಷ್ಟೋ ಕಾರ್ಯಗಳಲ್ಲಿ ಸೃಷ್ಟಿಯ ಸಹಜಧರ್ಮ. ಹೀಗಾಗಿ ಇಡೀ ರಾತ್ರಿಯಲ್ಲಿ ನಡೆದು ಪಡೆಯಬಹುದಾದ ಹಾಸ್ಯ-ಲಹರಿ, ಚಿಕ್ಕ-ಪುಟ್ಟ ಪಾತ್ರಗಳು,ಉದ್ದನೆಯ ಸಭಾಲಕ್ಷಣದ ಕಾರ್ಯ ಇವುಗಳನ್ನೂ ಮತ್ತು ಕೆಲವು ಪಾತ್ರಗಳ ಕೆಲವು ಹಾಡು-ಸನ್ನಿವೇಶಗಳನ್ನೂ ಇಲ್ಲಿ ಕೈಬಿಡಲಾಗುವುದರಿಂದ ಇದನ್ನು ಸಹಿಸಿಕೊಂಡಿ ಆಸ್ವದಿಸಬೇಕಾದುದು ಮೊದಲಿನಿಂದ ಇಡೀರಾತ್ರಿ ನೋಡುತ್ತ ಬಂದ ಈ ಕಲೆಯ ಹಲವು ಆರಾಧಕರ ಅನಿಸಿಕೆ-ಅನಿವಾರ್ಯತೆ. ಏನಿದ್ದರೂ ಸಮ್ ಥಿಂಗ್ ಈಸ್ ಬೆಟರ್ ದ್ಯಾನ್ ನಥಿಂಗ್ ಅಲ್ಲವೇ ?

ಯಾವೊಂದೂ ಹೆಜ್ಜೆಗುರುತು, ಸ್ಥಾನಮನ ಸರಿಯಗಿ ಸಿಗದ ಯಕ್ಷಗಾನಕ್ಕೆ ದಿ|ಶ್ರೀ ಶಿವರಾಮ ಕಾರಂತರ ರೀತಿಯಲ್ಲಿ ಪ್ರಯತ್ನಶೀಲರಾಗಿ ಹಲವು ಮಾನ್ಯತೆಗಳನ್ನೂ,ಹಕ್ಕು-ಬಾಧ್ಯತೆಗಳನ್ನೂ ಜಾನಪದ-ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಶ್ರೀಯುತರು ತಂದುಕೊಟ್ಟರು. ಯಕ್ಷಗಾನ ಕಲೆ ಜನಪದವಲ್ಲ, ಇಲ್ಲಿ ನವರಸ ಭರಿತವಾದ ವೈಖರಿ ಇದೆ, ತಾಳ-ಲಯ-ಗಚ್ಚುಗಾರಿಕೆಯಿದೆ, ಸ್ವಚ್ಛ-ಅಚ್ಚಕನ್ನಡದ ಶಬ್ಧಗಳಗಳ ಮಾತಿನ ಲಹರಿಯಿದೆ, ಚಂಡೆ-ಮದ್ದಳೆಗಳ ಪೂರಕ ಉಪೋದ್ಘಾತವಿದೆ, ಶಾಸ್ತ್ರೀಯ ಕುಣಿತದ ಲಾಸ್ಯವಿದೆ ಎಂಬುದನ್ನೆಲ್ಲ ನಿರ್ಭಿಡೆಯವಾಗಿ ಹೇಳಿ ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಮಾಡಲು ಮೊಟ್ಟಮೊದಲಾಗಿ ಸೂಚಿಸಿದ ಅನುಮೋದಿಸಿದ ಏಕೈಕ ವ್ಯಕ್ತಿ ನಮ್ಮ ಶಂಭಣ್ಣ ಅಂದರೆ ತಪ್ಪಲ್ಲ. ದೇಶವಿದೇಶಗಳಲ್ಲಿ ಈ ಕಲೆಯ ಸೊಬಗು-ಸಂಸ್ಕೃತಿಯನ್ನು ವಿಜೃಂಭಿಸಿದ ಹೆಗ್ಗಳಿಕೆ ಕೆರೆಮನೆ ಮೇಳಕ್ಕೆ ಸಲುತ್ತದೆ. ಈ ಕಲೆಗೊಂದು ಕ್ರಮಬದ್ಧ ಕಲಿಕೆಯ ರೂಪಕೊಡಲು ಶ್ರಮಿಸಿದ ಶಂಭಣ್ಣ ಕೆರೆಮನೆಯಲ್ಲಿ ಶ್ರೀಮಯ[ ಅವರ ಟ್ರೂಪ್ ನ ಶಾಟ್ ಫಾರ್ಮ್] ಕಲಾಕೇಂದ್ರವನ್ನು ಕಟ್ಟಿ-ಬೆಳೆಸಿ ಯಶಸ್ವಿಯಾಗಿ ನಡೆಸಿದ್ದಾರೆ.ಬದುಕಿದ್ದಾಗಲೇ ಸಂಶೋಧನೆಯ ಸಾಹಿತ್ಯಕ್ಕೆ ವಸ್ತುವಾದ ಶ್ರೀ ಶಂಭು ಹೆಗಡೆಯವರ ಯಕ್ಷಗಾನದ ಪತ್ರಗಳ ಬಗ್ಗೆ ಸಾಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಶ್ರೀ ಜಿ.ಎಸ್.ಭಟ್ ಅವರಿಗೆ ಡಾಕ್ಟರೇಟ್ ಪಡೆಯುವಲ್ಲಿ ಸಹಕಾರಿಯಾಯಿತು.

ಇಂದು ಅವರ ಮಗ ಶ್ರೀ ಶಿವಾನಂದ ಹೆಗಡೆ ಕೆರೆಮನೆ ಮೇಳವನ್ನು ಮುನ್ನಡೆಸಿದ್ದಾರೆ. ಈಗ ಕೇವಲ ಕಾಲಮಿತಿ ಪ್ರಯೋಗದ ಮೇಳ. ಹೆಚ್ಚಾಗಿ ರಂಗಮಂದಿರಗಳಲ್ಲಿ, ಸಜ್ಜಾಗಿರುವ ವೇದಿಕೆಗಳಲ್ಲಿ ಇವರು ತಮ್ಮ ತಂಡವನ್ನು ತಂದು ಪ್ರದರ್ಶನ ನೀಡೂತ್ತಾರೆ. ತನ್ನ ಪ್ರಯತ್ನದಿಂದ ಬೆಂಗಳೂರಿನಂತಹ ಅನೇಕ ಶಹರ,ಪಟ್ಟಣಗಳಲ್ಲಿ ಇವರು ಪ್ರದರ್ಶನ ನೀಡಿ ಹಲವು ವಿದ್ಯಾರ್ಥಿ ಅಭಿಮಾನಿಗಳನ್ನೂ ಪಡೆದಿದ್ದಾರೆ. ಮಿತ್ರರಾದ ಶಿವಾನಂದರು ಒಮ್ಮೆ ನಮ್ಮ ಆಫೀಸಿಗೆ ತನ್ನ ಲ್ಯಾಪ್ ಟಾಪ್ ಸರಿಪಡಿಸಿಕೊಳ್ಳಲು ಬಂದಿದ್ದರು. ಆಗ ಅವರನ್ನು ಕೇಳದೆಯೇ ಅವರ ಮಂಡಳಿಯ ಛಾಯಾಚಿತ್ರಗಳಿರುವ ಕಟ್ಟೊಂದನ್ನು[ಡೈರೆಕ್ಟ್ರಿ] ಪಡೆಯಲು ಉದ್ಯುಕ್ತನಗುವಷ್ಟು ತಹತಹ ನನಗಿತ್ತು, ಕಾರಣವಿಷ್ಟೇ ನನಗೆ ಇತ್ತೀಚೆಗೆ ಎಲ್ಲೂ ಶಂಭಣ್ಣನ ಯಕ್ಷಗಾನ ನೋಡಸಿಗಲಿಲ್ಲ, ಕೊನೇಪಕ್ಷ ಅವರ ಬೇರೆ ಬೇರೆ ಹಾವ-ಭಾವಗಳ ಭಾವಚಿತ್ರಗಳಾದರೂ ನನ್ನಲ್ಲಿರಲಿ, ಮತ್ತು ಅದು ಬಹುಬೇಗ ನನಗೆ ಸಿಗಲಿ ಎಂಬುದಾಗಿತ್ತೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ. ಆಮೇಲೆ ಸ್ವತಃ ಅವರೇ ಕರುಣಿಸಿದ ಕೆಲವು ಚಿತ್ರಗಳು ನನ್ನಲ್ಲಿವೆ.ಅವರಲ್ಲಿ ಕೆರೆಮನೆ ಮೇಳದ ವೀಡಿಯೋ ಬಗ್ಗೆ ವಿಚಾರಿಸಿದ್ದೆ, ಕೆಲವು ಇವೆ-ಆದರೆ ಇನ್ನೂ ಹೊಅರತಂದಿಲ್ಲ-ನಿಮಗೆ ಬೇಕಾದರೆ ಕೊಡುತ್ತೇನೆ ಎಂದಿದ್ದರು. ನಾನು ಅವರಿಂದ ಪಡೆದ ಛಾಯಚಿತ್ರಗಳಲ್ಲಿ ಕೆಲವು ಗಣಕಯಂತ್ರಕ್ಕೆ ವೈರಸ್ ಬಂದಾಗ ಕೆಲವು ಅಳಿಸಿ ಹೋಗಿವೆ. ಮೊನ್ನೆ ಪತ್ರಿಕೆಯೊಂದರಲ್ಲಿ ಒಂದು ಸಂದೇಶ ಬಂತು ’ನಿಜರಾಮ ನಿರ್ಯಾಣ’ ಸಿ.ಡಿ. ಬಿಡುಗಡೆಯಾಗಿದೆ,ಆಸಕ್ತರು ಕೊಳ್ಳಬಹುದು ಎಂದು.ಇದುವರೆಗೆ ಕೆರೆಮನೆ ಮೇಳದ ವೀಡಿಯೋ ಸಿ.ಡಿಗಳು ಹೊರಬಂದಿರಲಿಲ್ಲ. ಇದೀಗ ಆ ಒಂದು ಮಾಧ್ಯದಲ್ಲಿ ಮೊದಲ ಕಾಣಿಕೆಯಾಗಿ ಅದನ್ನು ತಂದಿದ್ದಾರೆ. ಈ ಸುದ್ದಿ ಕೇಳಿ ಬಹಳ ಸಂತೋಷವಾಯ್ತು.

ವ್ಯಕ್ತಿಗಿಂತ ವ್ಯಕ್ತಿತ್ವ ಬಹಳ ಮುಖ್ಯ. ಕಲಾವಿದರ ವೈಯಕ್ತಿಕ ಬದುಕಿನಲ್ಲಿ ಹಲವಾರು ಕಷ್ಟಕೋಟಲೆಗಳು ಇರುತ್ತವೆ ಯಾಕೆಂದರೆ ಅವರೂ ಮನುಷ್ಯರಲ್ಲವೇ ? ವ್ಯಕ್ತಿಯಾಗಿ ತನ್ನ ಹಲವು ನೋವುಗಳನ್ನೂ ಮರೆತು ಸಮಾಜದ ಒಳಿತಿಗಾಗಿ ಸಾತ್ವಿಕ,ಸಮಗ್ರ ಹಾಗೂ ಸಮರ್ಥ ಕಲೆಯೊಂದನ್ನು ಪ್ರಚುರಪಡಿಸಿ " ಶರಣರ ಬದುಕಿನ ಅರ್ಥವನ್ನು ಮರಣದಲ್ಲಿ ನೋಡು ಎಂದು ಪ್ರಾಜ್ಞರು ಹೇಳಿದ್ದಾರೆ" ಎನ್ನುತ್ತ ತಾನೂ ಒಬ್ಬ ಶರಣನೇ ಸರಿ ಎಂಬುದನ್ನು ಸಾಬೀತುಪಡಿಸಿದ ದಿ|ಶ್ರೀ ಶಂಭು ಹೆಗಡೆ ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಉತ್ತಮ ವಾಗ್ಗೇಯಕಾರರಾಗಿ ಹಲವು ಸಾಹಿತ್ಯಾಸಕ್ತರಿಗೆ,ಭಾವುಕರಿಗೆ,ಕಲಾರಸಿಕರಿಗೆ,ಕಲಾಫೋಷಕರಿಗೆ,ಕಲಾರಾಧಕರಿಗೆ ತಮ್ಮ ನಳಪಾಕವನ್ನು ಬಡಿಸಿದ್ದಾರೆ, ನಿರ್ಯಾಣದ ಶ್ರೀರಾಮನಾಗಿಯೇ ಅಭಿನಯಿಸುತ್ತ ಆರಾಧ್ಯದೈವದ ಸನ್ನಿಧಿಯಿಂದ ನೇರ ದೇವರ ಆಸ್ಥಾನಕ್ಕೆ ನಿರ್ಗಮಿಸಿಬಿಟ್ಟಿದ್ದಾರೆ, ಅನೇಕ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಶ್ರೀರಾಮನ ರೀತಿಯಲ್ಲೇ ಜನಪ್ರಿಯರಾಗಿಯೂ ಇದ್ದ ಈ ವ್ಯಕ್ತಿಯ ನಿರ್ಗಮನ ’ನಿಜರಾಮನಿರ್ಯಾಣ’ ಎಂದರೆ ಅತಿಶಯೋಕ್ತಿಯಲ್ಲ.

Saturday, May 29, 2010

ನಮ್ಮ ಭಾರತ


ನಮ್ಮ ಭಾರತ

ಸೇತು ರಾಮೇಶ್ವರದಿಂದ ಮೇರು ಪರ್ವತದನಕ
ಹಬ್ಬಿರುವ ಉದ್ದದಾ ನಮ್ಮ ಭಾರತವು
ಆತುಕೊಂಡಿದೆ ವಿವಿಧ ಧರ್ಮ ಆಚಾರಗಳ
ಈ ಕಥೆಯ ಕೇಳಿ ಸುಖಿಸುವೆವು ಅನುದಿನವು

ಗಂಗೆ ಕಾವೇರಿ ನರ್ಮದೆ ಕೃಷ್ಣೆ ಗೋದೆಯರು
ತುಂಗೆ ಕಪಿಲೆ ಕಬಿನಿ ಬ್ರಹ್ಮಪುತ್ರೆಯರೂ
ಅಂಗಳದಿ ಮಂಗಳದ ದೀಪ ಶರಾವತಿಯು
ಬಂಗಾಳಕೊಲ್ಲಿಯಲಿ ಸಂಘಮಿಪ ನದಿಗಳು

ಭಾಷೆ ಹಲವು ನಮದು ಶ್ರೀಮಂತವಾಗಿಹುದು
ವೇಷಭೂಷಣಗಳಲು ಭಿನ್ನತೆಯ ಮೆರೆದೂ
ಕೋಶತುಂಬಲು ಹಗಲು ಇರುಳೆನದೆ ಶ್ರಮಿಸುವೆವು
ಆಶಯವು ಒಂದೇ ತಾಯೊಲುಮೆ ನಮಗಿರಲು

ಒಡಹುಟ್ಟಿದವರಂತೆ ಬದುಕಿ ಬಂದಿಹೆವಿಲ್ಲಿ
ನಡುತಟ್ಟಿ ಎದೆತಟ್ಟಿ ಸ್ವಾಭಿಮಾನದಲಿ
ಇಡಿದಾದ ಹಳೆಯ ಭಾರತ ನಮದು ನೆಲವೆನುತ
ಗಡಿನಾಡ ಜನಕೆಲ್ಲ ಗುಡುಗಿ ಹೇಳುವೆವು

ಬಲುರುಚಿಯ ಖಾದ್ಯ ನೈವೇದ್ಯ ಭಾರತಜನಕೆ
ಖಲುಶಿತದ ಮನವ ನಿರ್ಮಲಗೊಳಿಸುತಿರಲು
ಹಲಸು ಮಾವು ಬಾಳೆ ಏಲಕ್ಕಿ ಎಳೆನೀರು
ಬಳಸುತಾ ಭೂರಮೆಯ ಸಗ್ಗ ನೆನೆಯುವೆವು

ತಾಯಿ ಭಾರತಿ ನಿಂತು ಹರಸಿ ಮಕ್ಕಳನೆಲ್ಲ
ಬಾಯಿಗನ್ನವನಿಕ್ಕಿ ಮುದ್ದಿಸುವ ಕಾಲ
ಹಾಯ ಹರಿಗೋಲಿಕ್ಕಿ ದುರ್ಗಮದ ನದಿಯಲ್ಲಿ
ಮಾಯದಲಿ ರಮಿಸುವಳು ಬರಸೆಳೆದು ಬಹಳ

Friday, May 28, 2010

ಗೋಪುರ ಗಾನ !!


ಗೋಪುರ ಗಾನ !!

ತಿಳಿ ಗುಲಾಬಿ ಪಂಚೆ, ಗಿಳಿಹಸಿರು ಬಣ್ಣದ ಜುಬ್ಬಾ ತೊಟ್ಟುಕೊಂಡು,ಎರಡೂ ಹೆಗಲಿಗೆ ಶಾಲನ್ನು ಹೊದ್ದು, ಹಣೆತುಂಬಾ ಢಾಳಾಗಿಕಣ್ಣಿಗೆ ಹೊಡೆಯುವಂತೇ ಭಸ್ಮ ತ್ರಿಪುಂಡ್ರ[ವಿಭೂತಿ], ಕೊರಳಲ್ಲಿ ಎರಡೆರಡು ಮಧ್ಯಮ ಗಾತ್ರದ,ಚಿನ್ನದಲ್ಲಿ ಕಟ್ಟಿದ ರುದ್ರಾಕ್ಷಿ ಹಾರಹೇರಿಕೊಂಡು, ಕೈಯ್ಯಲ್ಲಿ ಹೊಸ ಲ್ಯಾಪ್ ಟಾಪ್ ಮತ್ತು ಬ್ಲಾಕ್ ಬೆರ್ರಿ ಮೊಬೈಲು ಹಿಡಿದು ಕೊಂಡು ಬಂದೇ ಬಿಟ್ಟರು ನಮ್ಮಚಂದ್ರಕಾಂತ ಗುರೂಜಿ, ಇವರು ನಾನು ತಮಗೆಲ್ಲಾ ಮೊದಲೊಮ್ಮೆ ಪರಿಚಯಿಸಿದ " ಪುನರ್ಜನ್ಮ" ಖ್ಯಾತಿಯ ದಾಮೋದರಗುರೂಜಿಯ ಖಾಸಾ ತಮ್ಮ. ಏನಿಲ್ಲಾ ಅಂದರೂ ೧೦ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಮಹೀಂದ್ರಾ ಸ್ಕಾರ್ಪಿಯೋ ಗಾಡಿಯಲ್ಲಿ ಅತೀ ಸಾಮಾನ್ಯನಂತೇ ಓಡಾಡಿಕೊಂಡಿದ್ದಾರೆ. ತಾವಾಯಿತು,ತಮ್ಮ ಕೆಲಸವಾಯಿತು. ಹಾಗಂತ ಅವರಿಗೆ ಯಾವ ಅಹಮ್ಮೂ ಇಲ್ಲ. ತುಂಬಾ ಡೌನ್ ಟು ಅರ್ಥ್ ಮ್ಯಾನ್ ! ತುಂಬಾನೇ ಸಿಂಪಲ್ಲು !

ಮಾಧ್ಯಮದಲ್ಲಿ ಗುರೂಜಿ ಕಾಣಿಸಿಕೊಂಡರೆ ಸಾಕು ಮಾರನೇ ದಿನವೇ ಗುರೂಜಿ ಅಫೀಸಿನ ಬಾಗಿಲಲ್ಲಿ ಸಾವಿರಾರು ಜನ! ಗುರೂಜಿಯ ಭವಿಷ್ಯವೇ ಹಾಗೆ. ಅದು ಫಲಕಾರಿಯೋ ಇಲ್ಲವೋ ಹರನೇ ಬಲ್ಲನಾದರೂ ಹೆದರಿ ಓಡಿ ಬಂದುಪರಿಹಾರಕಂಡುಕೊಳ್ಳುವ ಮಂದಿ ಬಹಳ. ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಗುರೂಜಿ ಕಷ್ಟಪಟ್ಟು ಮೂರನೇ ತರಗತಿ ಓದಿದ್ದಾರೆ. ನಂತರಅಣ್ಣ ದಾಮೋದರ ಗುರೂಜಿಯ ಸಹಾಯಕರಾಗಿ ಇತ್ತೀಚಿನವರೆಗೂ ಕೆಲಸ ಮಾಡಿ ಅಣ್ಣನ ಗರಡಿಯಲ್ಲಿ ಪಳಗಿದ ಹುಲಿಯಾಗಿದ್ದಾರೆ. ಯಾರನ್ನೋ ಕರೆಸಿ ಇಂಗ್ಲೀಷ್ ಅಭ್ಯಾಸ ಮಾಡಿಕೊಂಡು ಕಂಪ್ಯೂಟರ್ ಕಲಿತುಕೊಂಡಿದ್ದಾರೆ.

ಕಳಪೆ ಟಿವಿಯ ಸಂದರ್ಶನ ಕೋಣೆಗೆ ಪ್ರವೇಶಿಸಿಯೇ ಬಿಟ್ಟರು ನಮ್ಮ ಗುರೂಜಿ.


" ನಮಸ್ಕಾರ ವೀಕ್ಷಕರೇ ನಾನು ನಿಮ್ಮ ಅಸಹ್ಯಾ... ಇಂದು ನಮ್ಮೊಂದಿಗಿದ್ದಾರೆ ಖ್ಯಾತ ಜ್ಯೋತಿಷಿ ಚಂದ್ರಕಾಂತ ಗುರೂಜಿಯವರು, ನಿನ್ನೆ ಕಾಳಹಸ್ತಿಯಲ್ಲಿ ರಜಗೋಪುರ ಕುಸಿದು ಬಿದ್ದ ಮೇಲಿನ ಶಕುನ ಮತ್ತು ಪರಿಣಾಮಗಳ ಬಗ್ಗೆ ಅವರು ತಮ್ಮ ಪ್ರಶ್ನೆಗಳಿಗೆಉತ್ತರಿಸಲಿದ್ದಾರೆ, ಪ್ರಶ್ನೆ ಕೇಳಲಿಚ್ಛಿಸುವವರು ನಮ್ಮ ಕೆಳಗಿನ ದೂರವಾಣಿಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು... ೯೯೮೭೬೧೨೩೪_ ಹಾಗೂ ೯೯೮೭೬೧೨೪೪_ "

" ನಮಸ್ಕಾರ ಗುರೂಜಿ, ಕಾರ್ಯಕ್ರಮಕ್ಕೆ ತಮಗೆ ಸ್ವಾಗತ "

" ನಮಸ್ಕಾರ,

ವಂದೇ ಶಂಭುಮುಮಾಪತಿಂ .....ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಶಿವಂ ಶಂಕರಂ, ಜಗತ್ಪಿತೃವಾದ ಪರಮೇಶ್ವರನಿಗೆ ನಮಿಸುತ್ತ ಎಲ್ಲಾ ವೀಕ್ಷಕರಿಗೂ ಭಗವಂತನ ಕರುಣೆ ದೊರಕಲಿ ಎಂದು ಹೇಳುತ್ತ ಇವತ್ತಿನ ಕಾರ್ಯಕ್ರಮಆರಂಭಿಸೋಣ "

" ಸ್ವಾಮೀ ನಾವು ಬರಗಾಲಪುರದಿಂದ ಕಾಲ್ ಮಾಡ್ತಿರೋದು "

" ಏನು ನಿಮ್ಮ ಹೆಸರು ? ಏನ್ ಕೇಳಬೇಕಾಗಿತ್ತು "

" ನಾನು ಬೀರಣ್ಣಾ ಅಂತ, ಈಗ ಕಾಳಹಸ್ತಿಯಲ್ಲಿ ರಾಜಗೋಪುರ ಬಿದ್ದಿರೋದ್ರಿಂದ ಪರಿಣಾಮ ಏನಾಗ್ಬೌದು ಹೇಳ್ತೀರಾ? "

" ಇದೊಂದು ದೊಡ್ಡ ದುರಂತ, ದೇಶಕ್ಕೇ ಏಕೆ ಜಗತ್ತಿಗೇ ಇದರಿಂದ ವಿಪತ್ತು ತಪ್ಪಿದ್ದಲ್ಲ, ಹಿಂದೆಂದೂ ನಡೆಯದ ಇಂತಹ ಘಟನೆಇದೀಗ ಸಂಭವಿಸಿದೆ, ಗುರುಗ್ರಹದ ಸ್ಥಾನಪಲ್ಲಟವೇ ಇದಕ್ಕೆಲ್ಲ ಕಾರಣ"

" ಗುರೂಜಿ ಹಾಗಾದ್ರೆ ಮುಂದೆ ಇನ್ನೇನಾಗ್ಬೌದು ? "

" ಸುನಾಮಿ ಬರುವ ಲಕ್ಷಣ ಕಂಡು ಬರ್ತಾ ಇದೆ, ಜಗತ್ತಲ್ಲೇ ಅಲ್ಲೋಲ-ಕಲ್ಲೋಲ್, ಎಲ್ಲೆಲ್ಲೂ ದೊಂಬಿ-ಗಲಾಟೆ, ಬಾಂಬು "

" ಮತ್ತೆ ಈಗಾಗಲೇ ನಡೀತಿರೋದೇ ಆಗೋಯ್ತಲ್ಲ ಸ್ವಾಮಿ ಬೇರೆ ಇನ್ನೇನೂ ಆಗೋದಿಲ್ಲ ತಾನೇ ? "

" ಸದ್ಯಕ್ಕೆ ಹಾಗೇನೂ ಕಾಣಿಸ್ತಾ ಇಲ್ಲ, ಈಗಿರುವ ಪರಿಸ್ಥಿತಿ ನೋಡಿದ್ರೆ ಜನ ತಕ್ಷಣಕ್ಕೆ ಶಾಂತಿ-ಹೋಮ ಪೂಜೆ ಇತ್ಯಾದಿಗಳನ್ನುನುರಿತ ಪಂಡಿತರಿಂದ ಗುರೂಜಿಗಳ ಆಶೀರ್ವಾದ ಪಡೆದುಕೊಂಡು ಮಾಡ್ಸಿದ್ರೆ ಬರಬಹುದಾದ ಅನೇಕ ದೊಡ್ಡ ಕೆಟ್ಟಪರಿಣಾಮಗಳನ್ನು ಸ್ವಲ್ಪ ಮಟ್ಟಿಗೆ ಕಮ್ಮಿಮಾಡಿಕೊಳ್ಳಬಹುದು "

" ಅಲ್ಲಾ ಸ್ವಾಮ್ಯೋರೇ ಬುಡಬುಡಿಕೆ ಹಕ್ಕಿ ನರಸಪ್ಪ ಜಾವ್ದಲ್ಲೇ ಕೂಕ್ಕೊಂಡು ಹೋಯ್ತಾ ಇರ್ತಾನಲ್ಲ, ಎಲ್ಲಾ ರಕ್ತವಾಂತಿಮಾಡ್ಕತಾರೆ, ಅದ್ಯಾರೋ ಸತ್ತೋಗ್ಬುಡ್ತಾರೆ, ಮತ್ಯಾರ್ಗೋ ತುಂಬಾ ತ್ರಾಸಾಗ್ತೈತೆ,ಮಕ್ಳು-ಮರಿಗಳ್ಗೆಲ್ಲ ಹುಸಾರಿರಾಕಿಲ್ಲಅಂತೆಲ್ಲ.... ರೀತಿ ಏನೂ ಆಯಾಕಿಲ್ಲ ತಾನೇ ? "

" ರೀತಿ ಏನೂ ಆಗಲ್ಲ ಅಂತ ಹೇಳೋಕಾಗಲ್ಲ, ಆದ್ರೆ ಆದಷ್ಟು ನೀವು ಶಾಂತಿ ಕರ್ಮ ಮಾಡ್ಸೋದು ತುಂಬಾ ಒಳ್ಳೆದು "

" ಅಂದ್ರೆ ಈಗ ಅರ್ಜೆಂಟ್ ಗೆ ಶಾಂತಿ ಮಾಡ್ಬೇಕೂ ಅಂತೀರಿ,ಎಲ್ಲಿ ಮಾಡ್ಸಬೇಕೂ ಸುಮಾರು ಎಷ್ಟು ಖರ್ಚಾಗ್ಬೌದುಹೇಳಾಕಾಗ್ಬೋದಾ "

" ಅದು ಎಲ್ಲರ್ಗೂ ಸೇರಿ ಸಮೂಹಿಕ ಆದ್ರೆ ಒಂಥರಾ, ನಿಮ್ಗೆ ಒಬ್ಬರ್ಗೇ ಆದ್ರೆ ಒಂಥರಾ ಆಗತ್ತೆ, ಒಬ್ಬರ್ಗೇ ಆದ್ರೆ ಸುಮ್ನೇ ಭಾರ ಜಾಸ್ತಿಅಂತಾದ್ರೆ ಎಲ್ಲಾ ಸೇರ್ಕೊಂಡು ಮಾಡ್ಸ್ಕೋಬೌದು, ಒಟ್ಟೆಲ್ಲಾ ಸುಮಾರು ಲಕ್ಷ ಖರ್ಚು ಆಗ್ಬೌದು, ೨೦ ಜನ ಪುರೋಹಿತ್ರು ಬೇಕು, ೧೫ ಕ್ವಿಂಟಾಲ್ ತುಪ್ಪ ಬೇಕು ಹೀಗೇ ಬಹಳ ಸಾಮಾನು ಬೇಕಾಗ್ತವೆ ಬೀರಣ್ಣೋರೇ, ನೀವು ಖುದ್ದಾಗಿ ಭೇಟಿ ಆದ್ರೆ ಎಲ್ಲಾಮಾತಾಡ್ಬೌದು "


" ಮೊನ್ನೆ ಅಕ್ಷಯ ತದಿಗೆ ದಿವ್ಸ ಬೆಂಗ್ಳೂರ್ ಬಂಟಿ ಜಿವೆಲ್ಲರಿ ಶಾಪ್ನಾಗೆ ತಾವು ಕುಂತು ಭಾಳ ಮಂದಿಗೆ ಉಪಕಾರ ಮಾಡುದ್ರಿ"

" ಉಪಕಾರ ಏನ್ಬಂತು, ಬಂಟಿ ಮಾಲೀಕರಾದ ನಮ್ಮ ಸುಂದರೇಶು ನಮ್ಗೆ ತುಂಬಾ ಬೇಕಾದವ್ರು, ಸ್ವಲ್ಪ ಬಂದು ಕೂತ್ಗಂಡುರತ್ನ,ಹಅಳು,ವಜ್ರಗಳ ಬಗ್ಗೆ ಸ್ವಲ್ಪ ಗಿರಾಕಿಗೆ ತಿಳ್ಸ್ಕೊಡಿ ಅಂದ್ರು, ಅಷ್ಟಾಗಿ ಕರ್ದ್ರಲ್ಲ ಅಂತ ಹೋಗಿದ್ದೆ, ಬೆಳಿಗ್ಗೆಯಿಂದ ರಾತ್ರಿ ೧೦ಘಂಟೆತನ್ಕ ಭಾಳಾ ಸುಸ್ತಾಗ್ಬುಡ್ತು"

" ನೀವು ಕುಂತಿದ್ದೇ ಕುಂತಿದ್ದು ಆಯಪ್ಪಂಗೆ ಒಳ್ಳೆ ಯಾಪಾರ್ವಂತೆ, ಅಂತೂ ತಮ್ಮ ದಯದಿಂದ ಒಳ್ಳೇ ಯಾಪಾರ ಮಾಡ್ಕಂಡ್ರುಅನ್ನಿ, ತಮ್ಮ ಕಾಲ್ಗುಣವೇ ಹಾಗೆ ಅಲ್ವಾ ಸ್ವಾಮೀ? "

" ಇರ್ಲಿ ಬಿಡಿ, ಹೊಗಳಿಕೆ ನಂಗೆ ಇಷ್ಟ ಆಗಲ್ಲ, ನಿಮ್ಗೆ ಬೇಕಾದ್ರೆ ಬಂದು ಭೇಟಿ ಮಾಡಿ ಆಯ್ತಾ? "

" ಆಯ್ತು ಸ್ವಾಮಿ, ನಾನು ಒಂದೆರ್ಡದಿನದಲ್ಲೇ ತಮ್ಮನ್ಕಾಣ್ತೀನಿ"

" ನಂಸ್ಕಾರ ನಾನು ರಂಗಣ್ಣಾ ಅಂತ,ಸಿಡ್ಲಘಟ್ಟದಿಂದ, ಸರ್ತಿ ನಂಗೆ ಸೈಕಲ್ ಪಕ್ಷದೋರು ರಾಜ್ಯಸಭೆಗೆ ಅವಕಾಶ ಕೊಡ್ತೀನಿಅಂದವ್ರೆ,ಅದ್ರ ಬಗ್ಗೆ ಕೇಳೊಣ ಅಂತ "

" ರಂಗಣ್ಣೋರೇ ಇವತ್ತಿನ ವಿಷ್ಯ ಗೋಪುರ ಉರುಳಿದ ಬಗ್ಗೆ ಮಾತ್ರ, ಇರ್ಲಿ ನೀವು ಕೇಳಿದೀರಿ ಅಂತ ಹೇಳ್ತೀನಿ, ನಿಮ್ಗೆ ಸ್ಥಾನ ದಕ್ಕಲುಸ್ವಲ್ಪ ತಡೆ ಇದೆ, ನಿಮ್ಮ ಹತ್ತಿರದವ್ರೇ ಸ್ವಲ್ಪ ಅಡ್ಡಗಾಲು ಹಾಕ್ತಾ ಇದಾರೆ. ಹೀಗಾಗಿ ಸ್ಥಾನ ನಿಮ್ಗೆ ದಕ್ಬೇಕು ಅಂದ್ರೆ ಒಂದೆರಡು ಕ್ರಮಜರುಗಿಸಬೇಕು, ನೀವು ನನ್ನನ್ನು ಇವತ್ತೇ ಭೇಟಿ ಆಗಿ..ಎಲ್ಲಾ ಮಾತಾಡೋಣ "

ಗುರೂಜಿ ಕನ್ನಡಿಯಲ್ಲಿ ಕಾಣುತ್ತಿರುವ ಹಾಗೆ ಹೇಳುತ್ತಾ ಮುಂದುವರಿಸಿದರು --

" ವೀಕ್ಷಕರೇ ಇದು ಅಂತಿಥ ವಿಪತ್ತಲ್ಲ, ಭಾರೀ ಅಪಶಕುನ, ದೇಶ ಒಬ್ಬ ಒಳ್ಳೆಯ ರಾಜಕಾರಣಿಯನ್ನು, ಒಬ್ಬ ಮೇರು ನಟನನ್ನುಹಾಗೂ ಒಬ್ಬ ಅತ್ಯಂತ ಪ್ರಭಾವೀ ಮಹಿಳೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಬರುವ ಮಳೆಗಾಲದಲ್ಲಿ ಅಕಾಲಿಕ ಮಳೆ, ಭಯಂಕರ ಚಂಡಮಾರುತ ಬೀಸಿ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಹಾನಿಯುಂಟುಮಾಡಲಿದೆ, ಒಂದು ನದಿಯ ಅಣೆಕಟ್ಟೆಗೆಧಕ್ಕೆಯಾಗಲಿದೆ, ಭಾರೀ ವಿಮಾನ ದುರಂತದ ಸಾಧ್ಯತೆ ಕೂಡ ಕಂಡು ಬರ್ತಾ ಇದೆ "

" ವೀಕ್ಷಕರೇ ಈಗ ಒಂದು ಚಿಕ್ಕ ವಿರಾಮ ತಗೋತೀವಿ, ವಿರಾಮದ ನಂತರ ಗುರೂಜಿ ಅಪಶಕುನದ ಬಗ್ಗೆ ಇನ್ನೂ ಬಹಳತಿಳಿಸಿಕೊಡುವವರಿದ್ದಾರೆ, ಪ್ಲೀಸ್ ಡೋಂಟ್ ಗೋ ಅವೇ "

ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್


ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್

ಮನುಷ್ಯ ಯಾವ ತರಗತಿಯವನು ಎಂಬುದನ್ನು ಅವನ್ ಮುಖ ನೋಡಿಯೇ ಹೇಳಬಹುದು ಎನ್ನುತ್ತದೆ ಆಂಗ್ಲ ಗಾದೆ. ಇದುಸಮಂಜಸ್ವೇ ಸರಿ. ಇದುವರೆಗಿನ ನನ್ನ ವೃತ್ತಿನಿರತ ಕಾರ್ಯಕಲಾಪಗಳಲ್ಲಿ ಲಕ್ಷಾಂತರ ಜನರನ್ನು ನೋದಿದ್ದೇನೆ. ಜಗತ್ತಿನಲ್ಲಿ ಒಬ್ಬರಮುಖದಂತೇ ಇನ್ನೊಬ್ಬರದಿಲ್ಲ. ಒಂದೊಮ್ಮೆ ತದ್ರೂಪ ಹೋಲಿಕೆ ಇದ್ದರೂ ಪ್ರತಿವ್ಯಕ್ತಿಯೂ ಒಂದೆಲ್ಲಾ ಒಂದು ರೀತಿಯಲ್ಲಿ ಭಿನ್ನ! ಬೀಗನಿರ್ಮಿಸುವ ಗಾಡ್ರೆಜ್ ನಂತಹ ಕಂಪನಿಗಳು ಎಷ್ಟೋ ಕೊಟಿ ಬೀಗಗಳನ್ನು ಮಾಡಿರಬಹುದು-ಆದರೆ ಅವುಗಳಲ್ಲಿ ಹಲವಷ್ಟುಒಂದೇತೆರನಾಗಿರುತ್ತವೆ, ಆದರೆ ನಮ್ಮ ನಿರ್ಮಾತೃವಿನ ಚಾಕಚಕ್ಯತೆ ವಿಷಯದಲ್ಲಿ ನಕಲು ಮಾಡಲಾಗದ ಕೆಲಸವಾಗಿದೆ!

ನಾವು ಹಲವು ವ್ಯಕ್ತಿಗಳನ್ನು ನೋಡಿದಾಗ ಅವರು ಕಣ್ಣಲ್ಲೇ ನಗುತ್ತಾರೆ ಎಂದು ಹೇಳುತ್ತೇವೆ. ಇನ್ನು ಕೆಲವರದು ಕಣ್ಣಲ್ಲೇಮಾತನಾಡುವಷ್ಟು ಚಾಲಾಕೀ ಕಣ್ಣುಗಳು-ಆಕರ್ಷಕ ಕಣ್ಣುಗಳು. ಮುಖದ ಬಹುಮುಖ್ಯ ಅಂಗವಾದ ಕಣ್ಣು ಕತ್ತಲಲ್ಲಿ ದೀಪವಿದ್ದಂತೇಜೀವಂತಿಕೆಯ ಸಂಕೇತ. ಅದರಲ್ಲೂ ವಿದ್ಯುತ್ ದೀಪಕ್ಕಿಂತ ಎಣ್ಣೆಬತ್ತಿಯ ದೀಪ ಅಲ್ಲಾಡುತ್ತ ಉರಿಯುತ್ತ ತನ್ನ ಜ್ವಲಂತ ಸ್ಥಿತಿಯಲ್ಲಿವಿಭಿನ್ನವಾದ ಹೊಂಬಣ್ಣದಿಂದ ಕಂಗೊಳಿಸುತ್ತ ಇಹದ ಬದುಕಿಗೆ ಬಹಳ ಉತ್ತೇಜನ ನೀಡುವ ಉತ್ಕೃಷ್ಟ ಮಾಧ್ಯಮ, ಮನಸ್ಸನ್ನುಪೂರಕ ಪ್ರಚೋದನೆಗಳಿಂದ ತುಂಬುವ ದೀಪದಂತೇ ಮುಖದಲ್ಲಿ ಕಣ್ಣುಗಳೂ ಕೂಡ. ಕಣ್ಣಿಲ್ಲದ ದಿನಗಳನ್ನು ನೆನೆಸಿಕೊಳ್ಳಲೂಕಣ್ಣಿದ್ದವರಿಗೆ ಸಾಧ್ಯವಿಲ್ಲ! ಹೀಗಿರುವ ಕಣ್ಣುಗಳಲ್ಲೂ ಆಕಾರ,ಗಾತ್ರ,ವಿನ್ಯಾಸ ವೈವಿಧ್ಯತೆ ಇದೆ. ಮುಖದ ಪ್ರತಿ ಇಂಚಿಂಚಿನಲ್ಲೂಒಂದಷ್ಟು ಸೂಕ್ಷ್ಮತೆಯನ್ನು ಸೃಶ್ಟಿಕರ್ತ ಕಲಾಕಾರ ಮೆರೆಯುತ್ತ ಒಬ್ಬರಿಗಿಂತ ಒಬ್ಬರನ್ನು ಭಿನ್ನವಾಗಿ ತೋರಿಸುವಲ್ಲಿ ಸಂಪೂರ್ಣಯಶಸ್ವಿಯಾಗಿದ್ದಾನೆ!

ಪ್ರತೀ ಮುಖದಲ್ಲಿ ಪ್ರತಿಯೊಂದು ಅವಯವವೂ ವಿಭಿನ್ನ,ವಿಶಿಷ್ಟ. ಹೆಣ್ಣಾದರೆ ಕಣ್ಣು ಹುಬ್ಬಿನಲ್ಲೋ, ಕಣ್ಣ ವಿನ್ಯಾಸದಲ್ಲೋ,ಗಡ್ಡದವಿನ್ಯಾಸದಲ್ಲೋ,ಕೆನ್ನೆಯ ಆಯಗಲದ ವಿನ್ಯಾಸದಲ್ಲೋ,ಕೆನ್ನೆ ಗುಳಿಯ ಮಾರ್ಪಾಡಿನಲ್ಲೋ,ಕೇಶವಿನ್ಯಾಸದಲ್ಲೋ, ತಲೆಯಆಕಾರದಲ್ಲೋ,ತುಟಿಯ ಅಳತೆ-ಆಕಾರ-ಬಣ್ಣ-ವಿನ್ಯಾಸದಲ್ಲೋ, ಕಿವಿಯ ಪ್ರಸ್ತುತಿಯಲ್ಲೋ, ಕಿವಿಯ ಉದ್ದಗಲ ವಿನ್ಯಾಸದಲ್ಲೋಹೀಗೆ ಭಿನ್ನವಾಗಿಸುವ ಸೃಷ್ಟಿ, ಗಂಡಾದರೆ ಇವೆಲ್ಲವೂ ಸೇರಿದಂತೆ ಮೀಸೆ,ಗಡ್ಡ ಇವುಗಳ ಉದ್ದಗಲ,ವಿನ್ಯಾಸ,ಬಣ್ಣ,ಗಡುಸುತನಇವುಗಳನ್ನೆಲ್ಲ ಮೇಳೈಸಿ ಭಿನ್ನತೆ ಕಾಣುವ ಹಾಗೆ ಮಾಡುತ್ತದೆ.

ಒಟ್ಟಾರೆ ಮುಖದ ಚಹರೆ ನಮಗೆ ಮುಖ್ಯಗುರುತು. ದೃಶ್ಯಮಾಧ್ಯಮಗಳಲ್ಲಿ ಅದಕ್ಕೇ ಯಾರನ್ನಾದರೂ ಕಾರಣಾಂತರಗಳಿಂದತೋರಿಸಬಾರದು ಎಂದಿದ್ದರೆ ಅವರ ಮುಖಕ್ಕೆ ಮಾಸ್ಕ್ ಹಾಕಿ ತೋರಿಸುತ್ತಾರೆ ಅಲ್ಲವೇ?

ವ್ಯಕ್ತಿಯನ್ನು ನೋಡಿದಾಕ್ಷಣ ನಮ್ಮ ಮನಸ್ಸಲ್ಲಿ ಯಾವುದೋ ತರಂಗಗಳ ಉದ್ಭವವಾಗುತ್ತದೆ. ತರಂಗಗಳೇ ಸಂದೇಶಗಳಾಗಿದ್ದುಸರಿಯಾಗಿ ಅರ್ಥವಿಸುವ ತಾಕತ್ತು ಇರುವ ಜನರಿಗೆ ಎದುರಿನ ವ್ಯಕ್ತಿ ಯಾವರೀತಿಯವನು ಎಂಬುದು ಸಾಮಾನ್ಯವಾಗಿತಿಳಿದುಹೋಗಿರುತ್ತದೆ. ಒಂದು ತಮಾಷೆಯೆಂದರೆ ಭವಿಷ್ಯವನ್ನು ಹೇಳುವವರ ಮುಖಗಳನ್ನು ನೋಡಿಯೇ ಅವರ ಭವಿಷ್ಯಹೇಳಿಬಿಡಬಹುದು- ವಿಷಯದಲ್ಲಿ ನನ್ನ ವೈಯಕ್ತಿಕ ನಿರ್ಧಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ! ಭವಿಷ್ಯ ಹೇಳುವವರೂಕೂಡ ಬಹುತೇಕ ಮುಖ ನೋಡಿ ಅರಿಯಲು ಪ್ರಯತ್ನಿಸುವ ಕಲೆಯನ್ನು ಮೈಗೂಡಿಸಿಕೊಂಡಿರುತ್ತಾರೆ.

ಮುಖವನ್ನು ಅವಲೋಕಿಸಿದಾಗ, ಅವರು ಕಣ್ಣಿಗೆ ಕಣ್ಣುಕೊಟ್ಟು ಮಾತನಾಡುವವರೋ ಅಲ್ಲವೋ, ಅವರು ಎತ್ತನೋಡುತ್ತಮಾತನಾಡುತ್ತಾರೆ, ಅವರ ಮುಖದ ಭಾವನೆಗಳು ಹೇಗೆ ಬದಲಾಗುತ್ತವೆ, ಅವರ ಹಣೆಯಲ್ಲಿ ಯಾವರೀತಿ ಗೆರೆಗಳುಗೋಚರಿಸುತ್ತವೆ, ಅವರ ಮುಖವನ್ನು[ಬಾಯಿ,ಗಡ್ಡ ಇಅವುಗಳನ್ನು] ಯಾವ ಆಕಾರಕ್ಕೆ ಅವರು ತಿರುಗಿಸುತ್ತಿರುತ್ತಾರೆ ಎಲ್ಲಾಅಂಶಗಳು ಅವರ ಸಂಸ್ಕೃತಿ ಮತ್ತು ಭಾವನೆಗಳನ್ನು ಹೊರಹೊಮ್ಮಿಸಿದರೆ ಮುಖದ ಮೇಲಿನ ಕೂದಲು, ಅವುಗಳ ಆಕಾರ, ಮುಖದಸ್ವಚ್ಛತೆ, ಕಣ್ಣುಗಳ ಬಣ್ಣ ಕೆಲವು ಅಂಶಗಳು ಅವರ ಬಹುಮುಖದ ವ್ಯಕ್ತಿತ್ವದ ಪ್ರಾತ್ಯಕ್ಷಿಕೆ ತೋರಿಸುವ ಶೋ ರೂಮ್ ಗಳಾಗಿಕೆಲಸಮಾಡುತ್ತವೆ.

ವ್ಯಕ್ತಿಯೊಬ್ಬ ಖೂಳನೋ, ಒಳ್ಳೆಯವನೋ, ಸಾಧುವೋ, ಕಳ್ಳನೋ, ಸುಳ್ಳನೋ, ಅಪರಾಧಿಯೋ, ನಿರಪರಾಧಿಯೋ, ನಿಸ್ಪೃಹನೋ, ಸ್ವಾರ್ಥಿಯೋ, ಸಾದಾ-ಸೀದಾ ಮನುಷ್ಯನೋ, ಢೋಂಗಿಯೋ, ಕ್ರೂರನೋ, ಕರುಣಿಯೋ, ಹೃದಯವಂತನೋ, ಸಮರ್ಥನೋ, ಅಸಮರ್ಥನೋ, ಅರ್ಹತೆಯುಳ್ಳವನೋ ಅಥವಾ ಅನರ್ಹನೋ, ಉಪದ್ರವಿಯೋ, ನಿರುಪದ್ರವಿಯೋ, ಪ್ರಾಮಾಣಿಕನೋ,ಧೂರ್ತನೋ,ದೂತನೋ,ಸಾತ್ವಿಕನೋ, ಮೈಗಳ್ಳನೋ ಎಲ್ಲವನ್ನೂ ಬಹುತೇಕ ಮುಖದರ್ಶನದಿಂದಲೇಒಮ್ಮೆ ಕೆಲವು ಮಟ್ಟಿಗೆ ನಿರ್ಧರಿಸಿಬಿಡಬಹುದು.

ಮಾನವ ಸಂಪನ್ಮೂಲವನ್ನು ಅರಿತಿರುವ ನುರಿತ ವ್ಯಕ್ತಿಗಳಿಗೆ ಅಳಯುವಿಕೆ ಒಗ್ಗಿಕೊಂಡಿರುವುದರಿಂದ ಅವರು ಬಂದ ಬಹಳಅಭ್ಯರ್ಥಿ,ವ್ಯಕ್ತಿಗಳನ್ನು ಮೊದಲ ನೋಟದಲ್ಲೇ ಇಂಥಾ ವ್ಯಕ್ತಿ ಎಂದು ಗುರುತಿಸಲು ಸಮರ್ಥರಾಗಿರುತ್ತಾರೆ. ಹೀಗಾಗಿ ವ್ಯಕ್ತಿತ್ವದಲ್ಲಿಮುಖಲಕ್ಷಣವೂ ಕೂಡ ಬಹಳ ಪ್ರಾಮುಖ್ಯ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಹುಟ್ಟಿನಿಂದ ಪಡೆದ ತಲೆಬುರುಡೆ-ಮುಖದ ಆಕಾರ ಬದಲಾಯಿಸಲಾಗದ್ದಾದರೆ ವ್ಯಕ್ತಿಯ ಹುಟ್ಟು, ಪರಿಸರ,ಸಂಘ-ಸಾಹಚರ್ಯೆ,ಅನುಕರಣೆ,ಅಂಧಾನುಕರಣೆ, ಅತಿರೇಕದ ಅಭಿಮಾನ, ಹೊಸತನವನ್ನು ಅಳವಡಿಸಿಕೊಳ್ಳುವ ತಹತಹ, ತಾನೂ ಏನೂಕಮ್ಮಿ ಇಲ್ಲ ಎಂದು ಮುಖದಲ್ಲೇ ತೋರಿಸಬೇಕೆಂಬ ಅಹಂ ಇವೆಲ್ಲ ವ್ಯಕ್ತಿಯ ಮುಖವನ್ನು ಲೌಕಿಕವಾಗಿ ಮಾರ್ಪಾಡುಗೊಳಿಸುತ್ತವೆ.

ವ್ಯಕ್ತಿಯ ಮುಖ ಯಾವ ರೀತಿ ವಿಸ್ತ್ರತವಾಗಿದೆ, ಕೂದಲು[ಗಡ್ಡ-ಮೀಸೆ-ತಲೆಗೂದಲು-ಹುಬ್ಬು]ಯಾವರೀತಿ ವಿನ್ಯಾಸ ಹೊಂದಿದೆ, ಮುಖದ ಹಾಗೂ ಕಣ್ಣುಗಳ ಬಣ್ಣ ಏನು, ಕಿವಿಯಲ್ಲಿ ಏನಾದರೂ ಆಭರಣವಿದೆಯೇ[ಇದ್ದರೆ ಒಂದೇ ಕಿವಿಯಲ್ಲೋ ಅಥವಾಎರಡರಲ್ಲೋ] ಎಂಬೆಲ್ಲಾ ಅಂಶಗಳು ವ್ಯಕ್ತಿ ಸಾಮಾನ್ಯವಾಗಿ ಯಾವರೀತಿ ಎಂದು ನಿರ್ಧರಿಸಲು ಪೂರಕ ಅಂಶಗಳಾಗಿಕೆಲಸಮಾಡುತ್ತವೆ.

ಹೀಗಾಗಿ ಶಾರೂಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ರಜನೀಕಾಂತ್,ಪ್ರಭುದೇವ್,ದೋನಿ ಸ್ಟೈಲ್ ಎಂದುಕೊಳ್ಳುತ್ತಾಹೊಸ ಹೊಸ ಮಾದರಿಯ ಕೇಶವಿನ್ಯಾಸಗಳನ್ನು ತಮ್ಮ ಮುಖಕ್ಕೆ ಹೊಂದದಿದ್ದರೂ ಅಳವಡಿಸಿಕೊಂಡು, ಒಂಟಿಯಂತಹಆಭರಣಗಳನ್ನು ಒಂದೇ ಕಿವಿಗೆ ಸಿಕ್ಕಿಸಿಕೊಂಡು, ಹರಕುಗಳಿರುವ ಲೋ ಜೀನ್ಸ್ ಮತ್ತು ಟೀ ಶರ್ಟ್ ಹಾಕಿಕೊಂಡು, ಸ್ಪೋರ್ಟ್ಸ್ ಶೂಹಾಕಿಕೊಂಡು, ಸರಿಯಾದ ದಾಖಲು ಪತ್ರಗಳನ್ನು ತರದೇ ಸಂದರ್ಶನಕ್ಕೆ ಬರುವವರಿಗೆ ಏನನ್ನುತ್ತೀರಿ? ಅವರ ಮುಖವಂತೂ ಬಹಳಕಳಪೆಯದ್ದಾಗಿರುತ್ತದೆಂದು ಬೇರೆ ಹೇಳಬೇಕೆ?
ಮುಖವನ್ನು ಬೇಕಾಬಿಟ್ಟಿ ತಿರುಗಿಸುತ್ತ, ಭುಜಗಳನ್ನು ಕುಣಿಸುತ್ತ, ಕಣ್ಣುಗಳಲ್ಲಿ ಇವನೇನು ಮಹಾ ಎಂಬರೀತಿ ವಿಚಿತ್ರ ಭಾವನೆಗಳನ್ನುಹೊಮ್ಮಿಸುತ್ತ, ಒಂದು ಕಾಲಮೇಲೆ ಇನ್ನೊಂದು ಕಾಲುಹಾಕಿಕೊಂಡು ಕೈಯಿಂದ ತಲೆತುರಿಸಿಕೊಳ್ಳುತ್ತ ಸಂದರ್ಶನಕ್ಕೆ ಕೂರುವಹುಡುಗರಿದ್ದಾರೆ! ಇಂಥವರಿಗೆಲ್ಲ ದೇವರೇ ಗತಿ! ಇನ್ನು ಕೆಲವು ಮುಖಗಳಲ್ಲಿ ಭಾವನೆಗಳೇ ಇರುವುದಿಲ್ಲ, ಕಳಾಹೀನಮುಖ-ಸಪ್ಪೆ,ಸಪ್ಪೆ. ವ್ಯಕ್ತಿಯ ಜೀವಂತಿಕೆ ಅವನ ಕಳೆ ಕಳೆಯಾಗಿರುವ ಹುರುಪಿನ ಮುಖದಲ್ಲಿರತ್ತದಲ್ಲವೇ? ಆದರೆ ಇಂದಿನ ನಮ್ಮಅನೇಕ ಯುವಜನರಿಗೆ ಅದರ ಅನಿಸಿಕೆಯೇ ಇಲ್ಲ!

ಒಳ್ಳೆಯ ವ್ಯಕ್ತಿತ್ವಕ್ಕೆ ಒಳ್ಳೆಯ ಮುಖಲಕ್ಷಣ ಕೂಡ ಕಾರಣ. ಒಂದು ಕಟ್ಟಡಕ್ಕೆ ಎಲ್ಲಾ ಚೆನ್ನಾಗಿದ್ದು ವಾಸ್ತು ಅದೂ ಇದೂ ಅಂತಯಾರೋ ಅಡ್ಡಕಸುಬಿಗಳ ಸಲಹೆ ಪಡೆದು ಇಡೀ ಕಟ್ಟಡವನ್ನೇ ಹೇಗೆ ವಿರೂಪಗೊಳಿಸುತ್ತಾರೋ ಹಾಗೇ ಯರನ್ನೋ ಅನುಕರಿಸಲುಹೋಗಿ ತಮ್ಮ ಇರುವ ಮುಖಲಕ್ಷಣವನ್ನೂ ಕಳೆದುಕೊಳ್ಳುವ ಇಂದಿನ ಅನೇಕ ಹುಡುಗರು ಸಂದರ್ಶನದಲ್ಲಿ ಮುಖವೇ ಮೊದಲನಿರ್ಧಾರಕ್ಕೆ ಕಾರಣ ಎಂಬ ಅಂಶವನ್ನು ಮರೆಯುವಂತಿಲ್ಲ.

ಕವಿ ಕಾಳಿದಾಸ ಕೂಡ ಅರ್ಥವಿಸಿದ್ದು-|| ಕಮಲೇ ಕಮಲೋತ್ಪತ್ತಿಃ ||
ಅಂದರೆ ಮುಖವೆಂಬುದೇ ಒಂದು ಕಮಲವಾದರೆ ಅದರಲ್ಲಿರುವ ಕಣ್ಣುಗಳು ಎರಡು ಕಮಲಗಳು. ಹೀಗಾಗಿ ಮುಖವನ್ನು ಕಮಲಕ್ಕೆಹೋಲಿಸುತ್ತಾರೆ ಎಂದಾದಮೇಲೆ ಮುಖ ಎಷ್ಟು ಶುಭ್ರ ಮತ್ತು ಕಳಾಭರಿತವಾಗಿರಬೇಕು ಎಂಬುದನ್ನು ಊಹಿಸಿಕೊಳ್ಳಬೇಕಾಗುತ್ತದೆ.

ಯಾವುದೋ ಆಫೀಸಿಗೆ ಹೋಗಿ, ಅಲ್ಲಿ ನೀವು ನೋಡುವ ವ್ಯಕ್ತಿಯನ್ನು ಅವರ ವೇಷ-ಭೂಷಣ,ಆಕಾರ,ಮುಖ,ನಿಲುವು ಇವುಗಳಿಂದಅವನು ದಫೇದಾರನೋ, ಗುಮಾಸ್ತನೋ, ಜವಾನನೋ, ಅಧಿಕಾರಿಯೋ, ಅಭಿಯಂತನೋ ಎಂದು ನೀವೇ ಅಳೆದುಬಿಡುತ್ತೀರಿ! ಅಂದಮೇಲೆ ಮುಖವೇ ಪ್ರಧಾನ ಕಛೇರಿ-ಹೆಡ್ ಆಫೀಸ್. ಇದು ಶಿರೋಭಾಗವನ್ನೂ ಹೊಂದಿರುವುದರಿಂದ ಮುಖ ನಿಜವಾಗಿಯೂಪ್ರಧಾನ ಕಛೇರಿಯೇ.

ನಾವು ನಾವೇ, ನಾವು ಅವರಲ್ಲ, ನಮಗೆ ಬೇರೆಯೇ ಆದ ವ್ಯಕ್ತಿತ್ವ ಇದೆ, ನಮ್ಮತನವನ್ನು ನಾವು ಕಳೆದುಕೊಳ್ಳಬಾರದೆಂಬಅಂಶವನ್ನು ಮನದಟ್ಟುಮಾಡಿಕೊಂಡು ಅಂಧಾನುಕರಣೆಮಾಡದೇ ನಮ್ಮ ವ್ಯಕ್ತಿತ್ವಕ್ಕೆ ಪೂರಕವಾಗುವ ಚಹರೆಗಳನ್ನು ಹೊಂದಲುವ್ಯಕ್ತಿತ್ವ ವಿಕಸನ ತರಬೇತುದಾರರ ಸಲಹೆ ಪಡೆಯಬಹುದು. ಮುಖವನ್ನು ಆದಷ್ಟೂ ತೊಳೆಯುತ್ತ ಸ್ವಚ್ಛವಾಗಿ ಇಟ್ಟುಕೊಂಡಿದ್ದುಕಣ್ಣುಗಳಲ್ಲಿ ಮಡ್ [ಕೊಳೆ] ಕೂತಿರದ ಹಾಗೆ ನೋಡಿಕೊಂಡು, ಮುಖದ ಹಾವ-ಭಾವ, ಕಣ್ಣುಗಳ ಬಳಕೆ-ನೋಟ, ಕ್ಷಣಿಕವಾಗಿಮುಖದ ಕೇಂದ್ರೀಕರಣೆ ಇವುಗಳ ಬಗ್ಗೆ ಸಾಕಷ್ಟು ತಿಳಿದು ನಡೆಯುವುದು ಬಹಳ ಉತ್ತಮ.

Tuesday, May 25, 2010

ವಿಧಿಲಿಖಿತ

[ಚಿತ್ರ ಋಣ : ಫೋಟೋ ಸರ್ಚ್.ಕಾಂ ]

ತಮಗೆಲ್ಲ ತಿಳಿದಂತೆ ಈ ಜೀವ ಜಗತ್ತು ಪುನರ್ಜನ್ಮದಿಂದಾವೃತವಾದುದು. ಇತ್ತೀಚಿನ ಅನೇಕ ವೈಜ್ಞಾನಿಕ ಸಂಶೋಧನೆಗಳೂ ಕೂಡ ಇದನ್ನು ಒಪ್ಪುವ ಹಂತಕ್ಕೆ ಬಂದಿವೆ, ಆದರೂ ಮಾನವ ತಾನೇನು ಕಮ್ಮಿ ಎನ್ನುವ ಅಹಂ ತಕ್ಷಣಕ್ಕೆ ಬಿಟ್ಟುಕೊಡಲಾರ! ಸಮಾಜದಲ್ಲಿ ಭಿಕ್ಷಾಧಿಪತಿಯಿಂದ ಹಿಡಿದು ಲಕ್ಷಾಧಿಪತಿ-ಕೋಟ್ಯಾಢಿಪತಿಯವರೆಗೆ ಅನೇಕ ಬಡ-ಸಿರಿತನದ ಸ್ತರಗಳನ್ನು ನೋಡುತ್ತೇವೆ. ಎಷ್ಟೇ ಪ್ರಯತ್ನಿಸಿದರೂ ಒಂದೇ ತರಗತಿಯನ್ನು ಮಾಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಇದು ಪಡೆದು ಬಂದ ಕರ್ಮ ಸಿದ್ಧಾಂತದ ಆಧರಿತ ನಡೆ. ಈ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ಹಾಗೇ ನಾವೆಲ್ಲ ಪರಿಸ್ಥಿತಿಯ ಕೈಗೊಂಬೆಗಳು! ಆದರೂ ಲೌಕಿಕವಾಗಿ ನಾವು ಬದುಕಿನಲ್ಲಿ ಹಲವು ಹತ್ತು ಆಸೆ ಇಟ್ಟುಕೊಳ್ಳುತ್ತೇವೆ. ಸೈಕಲ್ಲಿರುವವನಿಗೆ ಇಂಧನದಿಂದ ನಡೆಸುವ ದ್ವಿಚಕ್ರವಾಹನ ಕೊಳ್ಳುವ ಬಯಕೆ,ಅಂತಹ ದ್ವಿಚಕ್ರವಾಹನವಿರುವವನಿಗೆ ಕಾರು ಕೊಳ್ಳುವ ಬಯಕೆ, ಕಾರು ಇರುವವನಿಗೆ ಜಗತ್ತಿನಲ್ಲೇ ಹೆಚ್ಚಿನ ಮೊತ್ತದ ಹೊಸ ಕಾರನ್ನು ತನ್ನದಾಗಿಸಿಕೊಳ್ಳುವ ಬಯಕೆ, ಸಣ್ಣ ಉದ್ಯಮಿಗೆ ದೊಡ್ಡ ಉದ್ಯಮಿಯಾಗುವ ಕನಸು, ದೊಡ್ಡ ಉದ್ಯಮಿಗೆ ದೇಶದಗಲ ಬೆಳೆವ ಸ್ವಪ್ನ, ದೇಶದಗಲ ಬೆಳೆದ ಉದ್ಯಮಿಗೆ ಜಗತ್ತನ್ನೇ ತನ್ನ ಉದ್ಯಮದಿಂದ ಆವರಿಸುವ ಆಸೆ....ಹೀಗೆ ಇದು ಸನ್ಯಾಸಿ ಬೆಕ್ಕುಸಾಕಿದ ಕಥೆಯಂತೆ ಬೆಳೆಯುತ್ತಲೇ ಹೋಗುವ ಬಯಕೆ.

ಬಯಕೆಗಳ ಮಹಾಪೂರ! ಈ ಮಹಾಪೂರಕ್ಕೆ ನಮ್ಮ ದುರ್ಬಲ ಮನಸ್ಸೇ ಕಾರಣ. ಮೊನ್ನೆಯ ಪತ್ರಿಕೆಯೊಂದರಲ್ಲಿ ಮುನಿ ಶ್ರೀ ತರುಣಸಾಗರಜೀ ಹೇಳಿದ್ದಾರೆ- ಯಾವುದನ್ನೂ ಅಭ್ಯಾಸ ಅಂತ ಮಾಡಿಕೊಳ್ಳಬೇಡಿ ಅಂತ-ಅದು ಯಾವುದಕ್ಕೂ ಶಾಶ್ವತವಾಗಿ ಅಂಟಿಕೊಳ್ಳಬೇಡಿ ಎಂಬ ಸಂದೇಶ. ಕೆಲವರಿಗೆ ಹೊತ್ತಿಗೆ ಸರಿಯಾಗಿ ಚಹಾ ಕುಡಿಯದಿದ್ದರೆ ತಲೆನೋವು ಬರುತ್ತದೆ, ಹಲವರಿಗೆ ಗುಟ್ಕಾ ಜಗಿಯದಿದ್ದರೆ ತಲೆಗೆ ಏನೂ ಸೂಚಿಸುವುದೇ ಇಲ್ಲ, ಕೆಲವರು ಮದ್ಯ ಸೇವಿಸಿದರೇನೇ ವಾಹನ ಚಾಲನೆ ಮಾಡಲು ಬರುತ್ತದೆ...ಹೀಗೇ ಇವೆಲ್ಲ ಅಭ್ಯಾಸಗಳು. ಅಭ್ಯಾಸ ಸದಭ್ಯಾಸವೋ ದುರಭ್ಯಾಸವೋ ಅದು ಎರಡನೇ ಪ್ರಶ್ನೆ, ಆದರೆ ಈ ಅಭ್ಯಾಸ ಅನ್ನುವುದೇ ಅಂಟುಕೊಳ್ಳುವ ಬಯಕೆ. ಇದನ್ನು ನಮ್ಮ ತಲೆಯಲ್ಲಿ ಇಟ್ಟುಕೊಳ್ಳದೇ ನಮ್ಮ ಮುಷ್ಠಿಯಲ್ಲಿ ಬಿಗಿಹಿಡಿದು ನಡೆದರೆ ಆಗ ಅದು ಒಂದು ಅಭ್ಯಾಸವಾಗದೇ ಕೇವಲ ಉಪಯೋಗ ಅಥವಾ ಪ್ರಯೋಗವಾಗುತ್ತದೆ. ಆಗ ನಾವು ಆ ಕೆಲಸಗಳಿಗೆ ಯಜಮಾನರಾಗುತ್ತೇವೆಯೇ ಹೊರತು ದಾಸರಾಗುವುದಿಲ್ಲ. ಯಾವುದೇ ವಿಷಯಕ್ಕೆ ನಾವು ದಾಸರಾಗುತ್ತ ನಮ್ಮ ದೌರ್ಬಲ್ಯವನ್ನು ಹೆಚ್ಚಿಸಿಕೊಂಡರೆ ಆಗ ನಮ್ಮತನ ಕಳೆದುಹೋಗಿ ನಮ್ಮ ಇಹಪರದ ಸ್ವಾಸ್ಥ್ಯಗಳು ಅಸ್ವಸ್ಥಗೊಳ್ಳುತ್ತವೆ. ಈ ’ಅಭ್ಯಾಸ’ವೆಂಬ ಅಂಟನ್ನು ಬಿಟ್ಟು ಅವುಗಳ ಯಜಮಾನರಾದರೂ ಅವುಗಳಲ್ಲಿ ಒಳ್ಳೆಯದನ್ನು ಮಾತ್ರ ಆರಿಸಿಕೊಂಡು ಅವುಗಳಿಗೆ ಯಜಮಾನರಾಗುವುದು ಒಳಿತು. ಇಲ್ಲದಿದ್ದರೆ ಮುನಿಗಳು ಹೇಳಿದ್ದಾರೆ ಅಪರೂಪಕ್ಕೊಮ್ಮೆ ಹೆಂಡ ಕುಡಿದರೆ ತಪ್ಪಲ್ಲ ಎಂದುಕೊಂಡು ಸಾಧನೆಯ ಮಾರ್ಗದಲ್ಲಿ ಸ್ವಲ್ಪ ಮುನ್ನಡೆದ ವ್ಯಕ್ತಿ ಹೆಂಡದ ರುಚಿ ನೋಡಿ ಮತ್ತೆ ಅಪರೂಪಕ್ಕೊಮ್ಮೆ ಅದನ್ನು ಆಸ್ವಾದಿಸುವ ಯಜಮಾನತ್ವಕ್ಕೆ ಇಳಿಯಬಹುದು.


ಯುಗಧರ್ಮ ಎಂಬುದು ಸುಳ್ಳಲ್ಲ! ಈ ಯುಗದಲ್ಲಿ ಮದ್ಯ,ಮಾಂಸ,ಮಾನಿನಿ ಈ ಮೂರಕ್ಕೆ ಬಹಳ ದುರ್ವಾಜ್ಯವೂ ಮತ್ತು ಅವುಗಳ ಅಂಧಾದುಂಧಿ ವ್ಯಾಪಾರೀಕರಣದಿಂದ ಬಹಳ ಲಾಭವೂ ಬಂದು ಮಾಯೆ ಬಹಳ ವಿಜೃಂಭಿಸುತ್ತದೆ.ಜೂಜುಕೋರರು,ದಗಾಕೋರರು,ಹಲಾಲುಟೋಪಿಗಳು,ವಂಚಕರು,ಅತ್ಯಾಚಾರಿಗಳು,ದುರಾಚಾರಿಗ-ಳು,ಮಾದಕ ವ್ಯಸನಿಗಳೇ ರಾಜ್ಯಭಾರಮಾಡುತ್ತಾರೆ, ಅವರೇ ಆರ್ಥಿಕವಾಗಿ ಬಹಳ ಉನ್ನತ ಸ್ಥಾನಕ್ಕೆ ಎತ್ತಲ್ಪಟ್ಟು ಮೆರೆಯುತ್ತಾರೆ‍ ಎಂಬುದು ಜನಜನಿತ ಯುಗಧರ್ಮದ ಅಂಬೋಣ. ಅದು ಸತ್ಯವಾಗಿ ತೋರುತ್ತಿರುವುದೂ ಹೌದು. ಹೀಗಾಗಿ ಕೆಲವೊಮ್ಮೆ ಒಳ್ಳೆಯತನಕ್ಕೆ, ಸತ್ಯಕ್ಕೆ, ಸದಾಚಾರಿಗಳಿಗೆ ಸಡ್ಡುಹೊಡೆದು ಅಟ್ಟಹಾಸದಿಂದ ಮೆರೆವ ರೌಡಿ ತರಗತಿಯವರನ್ನು ನಾವು ಸಹಿಸಬೇಕಾಗಿದೆ. ಅಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡವರೆಲ್ಲ ಹಲವರನ್ನು ನೋಯಿಸಿ,ಹಿಂಸಿಸಿ ಮತ್ತೆ ಜನ್ಮಾಂತರದಲ್ಲಿ ಹೇಳವರಾಗೋ, ಕುಂಟರಾಗೋ ಹುಟ್ಟಿ ಪಾಪದ ಪ್ರಾಯಶ್ಚಿತ್ತ ಜೀವನವನ್ನು ನಡೆಸಬೇಕಾಗಿ ಬರುತ್ತದೆ.

ಹಲವರು ಹೇಳುವುದಿದೆ " ನಾನು ಈ ಜನ್ಮದಲ್ಲಂತೂ ಎಳ್ಳಷ್ಟೂ ತಪ್ಪುಮಾಡಿಲ್ಲ, ಆದರೂ ಅನುಭವಿಸುತ್ತಿರುವ ಕಷ್ಟಮಾತ್ರ ಹೇಳತೀರದು, ಒಮ್ಮೊಮ್ಮೆ ವಿಚಾರಿಸಿದರೆ ದೇವರು ಇರುವುದು ಸುಳ್ಳೇನೋ ಅನಿಸುತ್ತಿದೆ" ಎಂದೆಲ್ಲ. ಅದಕ್ಕೆ ಉತ್ತರ, ದೇವರು ಎಂಬ ಶಕ್ತಿ ನಾವು ಪ್ರತಿ ಘಳಿಗೆ-ಕ್ಷಣಗಳಲ್ಲೂ ಮಾಡುವ ತಪ್ಪು-ಒಪ್ಪುಗಳನ್ನು ಕಲೆಹಾಕಿ ಅಳೆದು-ಸುರಿದು ಮುಂದಿನ ನಮ್ಮ ಜನ್ಮವನ್ನು ನಿರ್ಧರಿಸುತ್ತದೆ. ಹೀಗಾಗಿ ಈ ಜನ್ಮದ ಕೆಲಸದ ಫಲವನ್ನೇ ನಾವು ಉಪಭೋಗಿಸದೇ ಹಿಂದಿನ ಜನ್ಮಾಂತರದ ಕರ್ಮಗಳ ಫಲಗಳನ್ನು ಪಡೆಯುತ್ತಿರುತ್ತೇವೆ-ಅನುಭವಿಸುತ್ತಿರುತ್ತೇವೆ. ಅಂತೆಯೇ ಅಂದುಕೊಂಡ ಹಾಗೆಲ್ಲಾ ನಾವು ಏನೆಲ್ಲಾ ಪಡೆಯಲು, ಏನೆಲ್ಲಾ ಆಗಲು ಆಗುವುದಿಲ್ಲ. ನಾನು ನಾಳೆಯೇ ಹಲವಾರು ಕೋಟಿಗೆ ಒಡೆಯನಾಗಿ ಅನೇಕ ಜನರನ್ನು ಸಹಾಯಕಾರನ್ನಾಗಿ ಇಟ್ಟುಕೊಂಡು ಹಾಯಾಗಿ ಬದುಕಬೇಕು ಎಂಬಂತ ಆಸೆಯಾಗಲೀ, ಛೆ ಆ ಹುಡುಗಿ ನನಗಾಗೇ ಹುಟ್ಟಿಬಂದ ಅಪ್ರತಿಮ ಸುಂದರಿ-ಆಕೆ ನನ್ನನ್ನು ಬಿಟ್ಟು ಬೇರೆ ಯಾರನ್ನೂ ಬಯಸುವುದಿಲ್ಲ ಎಂಬ ಸೌಂದರ್ಯದ ಕುರುಡು ಕಲ್ಪನೆಯಾಗಲೀ, ಈ ಆಸ್ತಿ ನಂಗೇ ದಕ್ಕುತ್ತದೆ ಎಂಬ ವ್ಯಾಮೋಹವಾಗಲೀ ಕೇವಲ ನಮ್ಮ ಬಾಹ್ಯ ಪ್ರಪಂಚದ ವ್ಯಾಪಾರೀ ಚಿಂತನೆಗಳು-ಪ್ರಾಜ್ಞರು,ಜಿಜ್ಞಾಸುಗಳು,ಮುಮುಕ್ಷುಗಳು ಇವುಗಳನ್ನೆಲ್ಲ ’ಬಾಹ್ಯವೃತ್ತಿಗಳು’ ಎಂದಿದ್ದಾರೆ. ಇಂತಹ ಬಾಹ್ಯವೃತ್ತಿಗಳನ್ನು ಅರಿತು ಅವುಗಳನ್ನು ನಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡು ಬದುಕೋಣ ಎಂಬುದು ಜಗದಮಿತ್ರನ ಅಪೇಕ್ಷೆಯಾಗಿದೆ.


ವಿಧಿಲಿಖಿತ

ಹುಟ್ಟು ಸಾವುಗಳೆಲ್ಲ ನಮ್ಮ ಕೈಯೊಳಗಿಲ್ಲ
ಪಟ್ಟ ಪದವಿಯ ಬಯಸಿ ಹೊರಟಿಹೆವು ನಾವು
ಕೊಟ್ಟ ಪಾತ್ರವ ಮಾಡು ಪೋಷಿಸುತ ಚೆನ್ನಾಗಿ
ಮೆಟ್ಟಿ ಮಿಥ್ಯದ ಬಯಕೆ | ಜಗದಮಿತ್ರ

ಹೊರಗೆ ಬಣ್ಣದ ಗೋಡೆ ಒಳಗೆ ಮಣ್ಣಿನಗಚ್ಚು
ನರನಾಡಿಗಳ ರೀತಿ ತಂತಿ ತುಂಬಿಹುದು
ನರನ ನಯನವ ನಲಿಸಿ ಬಣ್ಣ ಬಿರುಕನು ಮುಚ್ಚಿ
ಹರನಮರೆಸುವ ತಂತ್ರ | ಜಗದಮಿತ್ರ

ಇರುವನಕ ಬೇಕೆಮಗೆ ಸಂಪತ್ತು ಧನಕನಕ
ಬರುವಾಗ ತರಲಿಲ್ಲ ಹೋಗುವಾಗಿಲ್ಲ
ಮರೆಯದಲೆ ಉಪಕ್ರಮಿಸು ಪರದ ಸತ್ಯವನರಿತು
ಗುರುತನದಿ ಬಾಳುನೀ | ಜಗದಮಿತ್ರ

ಕರ್ಮಬಂಧನದಿಂದ ಬಂಧಿತವು ಈ ಜೀವ
ಮರ್ಮವರಿಯದ ನಮಗೆ ತರುತಿಹುದು ಕಾವ
ಚರ್ಮವ್ಯಾಧಿಯರೀತಿ ಮರುಹುಟ್ಟು ಮತ್ತಂತ್ಯ
ತೀರ್ಮಾನ ಮನಕಿರಲಿ | ಜಗದಮಿತ್ರ

ಹಳೆಯ ಕಟ್ಟಡದಂತೆ ಸೋರುವುದು ಜೀವಜಗ
ಮಳೆಯ ಅಜ್ಞಾನದಾ ನೀರು ಹನಿಸುತಲಿ
ಕೊಳೆಯ ಎಳೆಯುತ ತಂದು ಸೋಕಿಸುತ ಮೈಮನಕೆ
ಮೆಳೆಯ ಮಾಯೆಯ ಮುಸುಕಿ | ಜಗದಮಿತ್ರ

ನನ್ನಮನೆ ನನ್ನಜನ ನಾನು ನನದೇ ಎಂಬ
ಕನ್ನವಿಕ್ಕುವ ಕೆಲಸ ಕಾರ್ಯಗಳು ಬೇಡ
ಮುನ್ನ ನೀ ಅರ್ಥವಿಸಿ ಚೆನ್ನಾಗಿ ಬ್ರಹ್ಮಾಂಡ
ಕನ್ನಯ್ಯನೊಲುಮೆ ಪಡೆ| ಜಗದಮಿತ್ರ

ಮತ್ತೆ ಹುಟ್ಟುವ ಬಯಕೆ ಗಗನದೆತ್ತರದಾಸೆ
ಮತ್ತುಬರಿಸುತ ಆತ್ಮಕಡರುತಿದೆ ಬಳ್ಳಿ
ಕುತ್ತು ಇದ ತಿಳಿದು ನೀ ಪಥ್ಯಜೀವಿತ ನಡೆಸಿ
ಹತ್ತು ಆ ಪರಮಪದ | ಜಗದಮಿತ್ರ