ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, October 27, 2012

ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ


ಮನುಕುಲ ಬದುಕುವ ಅತಿ ಸಹಜ ಸನಾತನ ಹಿಂದೂ ಜೀವನ ಧರ್ಮ 
ಅಧ್ಯಾಯ-೧

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದ ಕುಣಿವ ಕುಂತಳದ |
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿಸ್ತ
ರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿಪುರಾಣಾಗಮ ಸಿದ್ಧಿದಾಯಕಿಯೆ |
ಶೌರಿಸುರಪತಿ ಸಕಲಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ||

ತನ್ನ ದೇಶ ಕಾಲಗಳ ಬಗ್ಗಾಗಲೀ ತನ್ನ ಬಗ್ಗಾಗಲೀ ಏನೂ ತಿಳಿಸದೇ ಮಹಾಕವಿ ಕುಮಾರವ್ಯಾಸ ತನ್ನದೇ ಆದ ವಿಶಿಷ್ಟ ಛಾಪಿನಲ್ಲಿ ಕರ್ಣಾಟ ಭಾರತ ಕಥಾಮಂಜರಿ ಅರ್ಥಾತ್ ಕುಮಾರವ್ಯಾಸ  ಭಾರತವನ್ನು ಬರೆದ. ಋಷಿಸಂಸ್ಕೃತಿಯ ಕವಿ-ಸಾಹಿತಿಗಳ ಮನದಲ್ಲಿ ಚಣಕಾಲ ನೆಲೆನಿಂತು ಬರೆಯಿಸುವ ಶಕ್ತಿ ಕಣ್ಣಿಗೆ ಗೋಚರವಲ್ಲ! ಒಮ್ಮೆ ಬರೆದಿದ್ದನ್ನು ಮತ್ತೆ ತೆರೆದು ಓದಿದರೆ ತಾವೇ ಬರೆದದ್ದು ಹೌದೇ ಎನಿಸುವ ಅನೇಕ ಅದ್ಭುತ ಕಥಾನಕಗಳ ಕೃತಿಕಾರರ ಮನದಲ್ಲಿ ಉತ್ತಮಕೃತಿಗಳ ರಚನೆಯನ್ನು ರಚಿಸುವಂತೇ, ನಿಂತು ನಡೆಸಿದ ಅಂತಹ ದಿವ್ಯ ಶಕ್ತಿಯ ಜಾಡು ಹಿಡಿದು ಹೊರಟರೆ ತಿಳಿಯುವುದು ಪರಬ್ರಹ್ಮ ಸ್ವರೂಪ!! ಅಂತಹ ಶಕ್ತಿಯನ್ನು ಆದಿಯಲ್ಲಿ ಗುರುವಾಗಿ, ಗಣಪತಿಯಾಗಿ, ಶಾರದೆಯಾಗಿ, ಶೌರಿ-ಸುರಪತಿ-ವರವಿರಂಚಿ-ಮಹೇಶ್ವರನಾಗಿ ಕಂಡು ಕೈಮುಗಿಯುವುದು ಸತ್ಸಂಪ್ರದಾಯ. ಹಾಗೊಮ್ಮೆ ಎಲ್ಲ ದೇವಾನುದೇವತೆಗಳಿಗೂ ನಮಿಸುತ್ತಾ, ಕವಿಜನಸಂದಣಿಗೆ ಬಲಬಂದು,  ’ಸನಾತನ ಜೀವನ ಧರ್ಮ’ ದ ಬಗೆಗೆ ಬರೆಯಲು ಅನುವು ಮಾಡಿಕೊಡಿರೆಂದು ಪ್ರಾರ್ಥಿಸುತ್ತಿದ್ದೇನೆ.  

ಬಹುಕಾಲದಿಂದ ಅನೇಕರ ಪ್ರಶ್ನೆ ನನ್ನಲ್ಲಿ: "ನೀವು ಯಾಕೆ ಯಾವಾಗಲೂ ಧಾರ್ಮಿಕ ವಿಷಯಗಳ ಬಗ್ಗೆ ಜಾಸ್ತಿ ಒತ್ತುಕೊಡುತ್ತೀರಿ?"

ಅನೇಕಾವರ್ತಿ ಹೇಳಿದ್ದನ್ನೇ ಮತ್ತೊಮ್ಮೆ ಹೇಳುತ್ತಿದ್ದೇನೆ: ನನ್ನದು ವೇದ ಸಂತುಲಿತ ಜೀವನ. ಅಪೌರುಷೇಯವಾದ ವೇದಗಳನ್ನು ಸದಾ ಭಾಗಶಃ ಆಸ್ವಾದಿಸುತ್ತಾ, ಆಮೋದಗೊಳ್ಳುತ್ತಾ ಆ ಗುಂಗಿನಲ್ಲಿಯೇ ಮನದ ಕೆಳಸ್ತರಗಳಲ್ಲಿ ಉದ್ಭವಗೊಳ್ಳುವ ಲೌಕಿಕಭಾವಗಳನ್ನು ಕವನ-ಲೇಖನಗಳ ರೂಪದಲ್ಲಿ ಬರೆಯುವುದು ನನ್ನ ಅಭ್ಯಾಸ. ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ನನ್ನಿಂದ ಬರೆಯಿಸಿದ ಆ ಶಕ್ತಿ ಎಲ್ಲವನ್ನೂ ಒಂದು ಮೂಲಾಧಾರಸೂತ್ರದಲ್ಲಿ ಬಂಧಿಸುತ್ತದೆ-ಅದು ಮಾನವ ಸಹಜ ಜೀವನ ಧರ್ಮ. ಧಾವಂತದ ಜೀವನದಲ್ಲಿ ಅನೇಕರಿಗೆ ಬಿಡುವಿಲ್ಲ, ಕೆಲವರಿಗೆ ಆಸಕ್ತಿಯೂ ಇಲ್ಲ, ಇನ್ನು ಕೆಲವರಿಗೆ ಸಮರ್ಪಕ ವಿಷಯ ಸಿಗುತ್ತಿಲ್ಲ. ಜನಸಾಮಾನ್ಯರಾದ ನಮಗೆ ಸನಾತನ ಧರ್ಮದ ಮಹತ್ವದ ಅರಿವಿಲ್ಲದೇ ಯಾರೋ ಹೇಳಿದ ಇನ್ಯಾವುದನ್ನೋ ಹಿಂಬಾಲಿಸಿ ನಡೆಯುತ್ತಿದ್ದೇವೆ. ಒಮ್ಮೆ ಸನಾತನ ಧರ್ಮ ಎಷ್ಟು ನಿಸರ್ಗ ಸಹಜವಾಗಿದೆ ಮತ್ತು ಅತ್ಯುತ್ತಮವಾಗಿದೆ ಎಂಬುದನ್ನು ತಿಳಿದರೆ, ಮತ್ತೆ ಪ್ರಶ್ನೆಗಳು/ಸಂದೇಹಗಳು ಹುಟ್ಟುವುದಿಲ್ಲ. ಈ ಒಂದು ಕಾರಣಕ್ಕಾಗಿ ಅಕ್ಷರಪ್ರಿಯ ಸ್ನೇಹಿತರೆಲ್ಲರ ಓದಿಗಾಗಿ ಆರಂಭಗೊಂಡಿದ್ದು ಈ ಮಾಲಿಕೆ. ಜನಸಾಮಾನ್ಯರ ಎಲ್ಲಾ ಪ್ರಶ್ನೆಗಳನ್ನೂ ಮನದಲ್ಲಿ ಒಡಮೂಡಿಸಿಕೊಂಡು ಬರೆಯುವ ಉತ್ತರರೂಪೀ ಕಥಾನಕಗಳ ಮಾಲಿಕೆ ಇದಾಗಿರುತ್ತದೆ. ತೆಂಗಿನಕಾಯಿಯೇ ಮಧುರ-ಅದಕ್ಕೆ ಬೆಲ್ಲವನ್ನು ಸೇರಿಸಿದಾಗ ಹೇಗೆನಿಸಬಹುದು?  ಕಾಯಿ-ಬೆಲ್ಲ ಮೆಲ್ಲುವುದು ಬಹುಸಂಖ್ಯಾಕರಿಗೆ ಸಂತಸ ತರುವ ವಿಷಯ; ಅದೇ ರೀತಿ ಸಾಹಿತ್ಯಕ ಕ್ರೀಡೆಗಳಲ್ಲಿ ಆಸಕ್ತರಾದವರಿಗೆ ಮಹಾಕವಿಗಳ ಕಾವ್ಯಧಾರೆ ಕಾಯಿ-ಬೆಲ್ಲ ಇದ್ದಹಾಗೇ. ಕವಿಗಳ ಹೇಳಿಕೆಗಳ ಸಹಯೋಗದೊಂದಿಗೆ, ಅನೇಕ ಕಂತುಗಳಲ್ಲಿ ಈ ಕಥಾನಕ ನಡೆದುಬರುತ್ತದೆ.

ಹಿಂದುತ್ವ-ಭಾರತೀಯತೆ, ಸಂಸ್ಕೃತಿ-ನಾಗರಿಕತೆ, ಧರ್ಮ-ಮತ, ಪಂಚಾಂಗ, ಸ್ನಾನ-ಶೌಚ, ಆಹಾರ, ಜಪ-ಧ್ಯಾನ, ಯೋಗ-ಪ್ರಾಣಾಯಾಮ-ಸೂರ್ಯನಮಸ್ಕಾರ, ವೇದಗಳು, ಹಬ್ಬಗಳು, ಹಿಂಸೆ-ಅಹಿಂಸೆ, ಸತ್ಯ-ಅಸತ್ಯ, ಸ್ವಾಧ್ಯಾಯ, ದೇಹಾಲಂಕಾರ, ಪೂಜೆ-ಪುನಸ್ಕಾರ-ದಾನ, ಸಂಸ್ಕಾರಗಳು, ದೈನಂದಿನ ಚರ್ಯೆಗಳು ಹೀಗೆ ಹಲವು ಹತ್ತು ಅಧ್ಯಾಯಗಳು ಈ ಮಾಲಿಕೆಯಲ್ಲಿ ಪ್ರಸ್ತಾಪಿತಗೊಳ್ಳುತ್ತವೆ. ಸೀಮಿತ ಪರಿಮಿತಿಯಲ್ಲಿ ಸಂವಾದಗಳಿಗೆ ಅವಕಾಶವೂ ಇರುತ್ತದೆ.

ಹಿಂದೂಗಳು ಎಂದರೆ ಯಾರು ?

ಹಿಂದೂಗಳು ಎಂದರೆ ಯಾರು ಎಂಬುದನ್ನು ಅರಿಯುವ ಮೊದಲು ಒಂದು ನಿವೇದನೆ: ಜಗತ್ತಿನಲ್ಲಿರುವ ಎಲ್ಲರ ಶಾಂತಿಗಾಗಿ, ಸಮೃದ್ಧಿಗಾಗಿ, ಸಂತೃಪ್ತಿಗಾಗಿ ಎಲ್ಲರೂ ವಿವಿಧ ರೂಪಗಳಲ್ಲಿ ಪರಾಶಕ್ತಿಯನ್ನು ಕಾಣಲು ಬಯಸುತ್ತಾರೆ. ಯಾರು ಯಾವ ರೂಪದಲ್ಲೇ ಕಂಡರೂ, ನೆನೆದರೂ ಶಕ್ತಿಯಿರುವುದು ಒಂದೇ ಎರಡಲ್ಲ ಎಂಬುದನ್ನು ನೆನಪಿಸುವ ಶ್ಲೋಕ ಈ ರೀತಿ ಇದೆ:

ಯಂ ವೈದಿಕಾಃ ಮಂತ್ರದೃಶಃ ಪುರಾಣಾಃ ಇಂದ್ರಂ ಯಮಂ ಮಾತರಿಶ್ವಾನಮಾಹುಃ |
ವೇದಾಂತಿನೋ ನಿರ್ವಚನೀಯಮೇಕಂ ಯಂ ಬ್ರಹ್ಮಶಬ್ದೇನ ವಿನಿರ್ದಿಶಂತಿ ||
ಶೈವಾಯಮೀಶಂ ಶಿವ ಇತ್ಯವೋಚನ್ ಯಂ ವೈಷ್ಣವಾಃ ವಿಷ್ಣುರಿತಿಸ್ತುವಂತಿ |
ಬುದ್ಧಸ್ತಥಾರ್ಹನ್ನಿತಿ ಬೌದ್ಧಜೈನಾಃ ಸತ್ಶ್ರೀ ಅಕಾಲೇತಿ ಚ ಸಿಖ್ಖಸಂತಃ ||
ಶಾಸ್ತೇತಿ ಕೇಚಿತ್ ಕತಿಚಿತ್ ಕುಮಾರಃ ಸ್ವಾಮೀತಿ ಮಾತೇತಿ ಪಿತೇತಿ ಭಕ್ತ್ಯಾ |
ಯಂ ಪ್ರಾರ್ಥಯಂತೇ ಜಗದೀಶಿತಾರಂ ಸ ಏಕ ಏವ ಪ್ರಭುರದ್ವಿತೀಯಃ ||  

ಸನಾತನಿಗಳ ಪರಮೋಚ್ಚ ಆದರ್ಶವೆಂದರೆ ಯಾರನ್ನೂ ಹಿಂಸಿಸದೇ ಬದುಕುವುದು. ವಿವಿಧ ಮತಗಳಿಂದ ಕೂಡಿದ ಭಾರತ ಹಿಂದೊಮ್ಮೆ ಸಂಪೂರ್ಣ ಸನಾತನಿಗಳಿಂದಲೇ ತುಂಬಿತ್ತು! ಕಾಲಗತಿಯಲ್ಲಿ, ಐಹಿಕ ಸುಖವನ್ನಷ್ಟೇ ಪ್ರಧಾನವನ್ನಾಗಿ ಬಯಸಿದ ಮನಸ್ಸುಗಳು ಯಾವುದೋ ಹೊಸತನವನ್ನು ಬಯಸಿ ಬೇರೇನನ್ನೋ ಹುಡುಕಹೊರಟವು. ಏನನ್ನೋ ಕಂಡಹಾಗೇ ಭಾವಿಸಿದವು. ಹಾಗೆ ಸ್ಥಾಪಿತವಾದ ಹೊಸಮತಗಳ ಪ್ರತಿಪಾದಕರಿಗೆ ಅನುಯಾಯಿಗಳೂ ಜನಿಸಿದರು. ಹಾಗೇ ಮತಗಳ ಸಂಖ್ಯೆಯಲ್ಲೂ ಮತ್ತು ಅವುಗಳ ಅನುಯಾಯಿಗಳ ಸಂಖ್ಯೆಯಲ್ಲೂ ವೃದ್ಧಿಯಾಯ್ತು. ಸನಾತನಿಗಳಲ್ಲೇ ಹಲವು ಮತಗಳು ಹುಟ್ಟಿಕೊಂಡರೂ ಮೂಲದಲ್ಲಿ ಎಲ್ಲರೂ ಸನಾತನಿಗಳೇ ಆಗಿದ್ದರು; ಮತ್ತು ಅರಿಯದೇ ತಾವು ಆಚರಿಸುತ್ತಿರುವ ಇಂದಿನ ಹೊಸ ಮತಗಳೇ ಸರಿಯೆಂದು ವಾದಿಸುವ ಅವರಿಗೆ ನಿಜದ ನೆಲೆಯ ಅರಿವಾದರೆ ಸನಾತನಿಗಳ ದೊಡ್ಡತನದ ಅರಿವೂ ಆದೀತು. ಹುಟ್ಟಾ ಯಾರೂ ಏನನ್ನೂ  ತರಲಿಲ್ಲ, ಹೋಗುವಾಗ ಕೊಂಡೊಯ್ಯುವುದಿಲ್ಲ ಎಂಬುದೆಲ್ಲಾ ಸರಿ. ಆದರೆ ಬದುಕಿರುವವರೆಗೆ ಯಾವ ರೀತಿ ಇದ್ದರೆ ಎಲ್ಲೂ ಎಂದೂ ಯಾರಿಗೂ ಯಾವುದಕ್ಕೂ ಘಾಸಿಯಾಗುವುದಿಲ್ಲ ಎಂಬುದನ್ನು ಪ್ರತಿಪಾದಿಸುವ ಏಕೈಕ ಧರ್ಮವೆಂದರೆ ಅದು ಸನಾತನ ಧರ್ಮ. ಇದ್ದುದನ್ನು ಇದ್ದಹಾಗೇ ಇರಲು/ಬಾಳಲು ಬಿಡು ಎಂಬ ಸನಾತನ ತತ್ವವನ್ನು ಇಲ್ಲೊಮ್ಮೆ ಅವಲೋಕಿಸಬೇಕು. 

ಹಿಂದೂ ಸಮಾಜವನ್ನು ದೂಷಿಸುವವರು ಕ್ರೈಸ್ತ ಮಿಶನರಿಗಳೋ ಮುಸ್ಲಿಂ ಮದರಸಾಗಳವರೋ ಅಥವಾ ಪಾಶ್ಚಾತ್ಯರ ಮಾನಸ ಪುತ್ರರಂತಾಗಿರುವ ನಮ್ಮವರೋ ಸನಾತನ ಧರ್ಮವನ್ನು ಸರಿಯಾಗಿ ಅರ್ಥೈಸದೇ ಹಾಗೆ ಮಾಡುತ್ತಾರೆ. ವಿಶೇಷವೆಂದರೆ ಪಾಶ್ಚಾತ್ಯ ವಿದ್ವಾಂಸರನೇಕರಲ್ಲಿ ಸರಿಯಾದುದನ್ನು ಅರಿಯುವ, ಅರಿತು ಅಳವಡಿಸಿಕೊಳ್ಳುವ ಔದಾರ್ಯ ಇದೆಯೆಂಬುದನ್ನು ಅಲ್ಲಗಳೆಯಲಾಗದು. ಹಿಂದೂ ಎಂಬ ಪದ ಪರಕೀಯರು ನಮಗಿಟ್ಟಿದ್ದು ಎಂಬ ತಪ್ಪುಕಲ್ಪನೆ ಇದೆ. ಹಿಂದೂ ಎಂದರೆ ಬೇರೇ ಭಾಷೆಗಳಲ್ಲಿ ಹೇಡಿ, ತಿರಸ್ಕಾರ ಸೂಚಕ ಶಬ್ದ ಎಂಬೆಲ್ಲಾ ಹೇಳಿಕೆಗಳೂ ಇವೆ. ಆದರೆ ವಾಸ್ತವ ಅದಲ್ಲ. ಹಿಂದೂ ಎಂದರೆ ಸಿಂಧೂ ಎಂಬ ಪದದ ಅಪಭ್ರಂಶ. ಸಪ್ತ ಮಹಾನದಿಗಳು ಅಥವಾ ಸಪಸಿಂಧೂ ಭೂಮಿ ಈ ಭಾರತ. ಸಪ್ತ ಎಂಬ ಪದ ಹಪ್ತ ಎಂದಾಗಿದ್ದು ನಮಗೆ ಗೋಚರಿಸುತ್ತದೆ. ಅದೇ ರೀತಿ ಸಪ್ತಸಿಂಧೂ ಹೋಗಿ ಹಪ್ತಹಿಂದೂ ಆಗಿ ಅದರಲ್ಲೂ ಹಿಂದೂ ಉಳಿದುಕೊಂಡಿದೆ. ಹಿಂದೂ ಎಂಬುದಕ್ಕಿಂತಾ ಭಾರತೀಯ ಅಥವಾ ಸನಾತನ ಎಂಬುದು ಉತ್ತಮ ಪದ. ಭಾರತದ ನಿವಾಸಿಗಳೆಲ್ಲಾ ಹಿಂದೂಗಳೇ. ಹಿಂದೂ ಎಂಬ ಒಂದೇ ಪದ ಪ್ರಸಕ್ತ ಭಾರತ ನಿವಾಸಿಗಳೆಲ್ಲರನ್ನೂ ತನ್ನೊಳಗೆ ಅಡಕಮಾಡಿಕೊಳ್ಳುತ್ತದೆ. ಯಾಕೆಂದರೆ ಹಿಂದೂ ಎಂದರೇ ಭಾರತೀಯತೆಯಲ್ಲದೇ ಬೇರೇ ಅಲ್ಲ. ಹಿಂದೂ  ಎನಿಸಿಕೊಂಡ ಮಾತ್ರಕ್ಕೆ ಆತ ಸನಾತನ ದೇವರುಗಳನ್ನೇ ಪೂಜಿಸಬೇಕೆಂಬ ಅರ್ಥವಲ್ಲ; ಆದರೆ ಹಿಂದೂ ಎನಿಸಿಕೊಂಡವನು ವೈಜ್ಞಾನಿಕ ನೆಲೆಗಟ್ಟಿನ ಭಾರತೀಯ ಮೂಲದ್ದಾದ ಸತ್ಸಂಪ್ರದಾಯಗಳನ್ನು [ಯಾವುದೇ ಪೂರ್ವಾಗ್ರಹಪೀಡಿತನಾಗದೇ] ಪಾಲಿಸುವುದು ಆತನ ಧರ್ಮವಾಗುತ್ತದೆ. ಹಾಗಾದ್ರೆ ಇಲ್ಲೊಂದು ಪ್ರಶ್ನೆ ನಿಮ್ಮಲ್ಲೇಳುವುದು ಸಹಜ. ಭಾರತೀಯರಲ್ಲಿ ಅನ್ಯ ಮತಗಳಿಗೆ ಸೇರಿದವರೂ ಇದ್ದಾರಲ್ಲಾ ..ಅವರೇನು ಮಾಡಬೇಕು. ಇದಕ್ಕೆ ಉದಾಹರಣೆ ಇಷ್ಟೇ: ಅಮೇರಿಕಾದಲ್ಲಿ ನೆಲೆಸಿದವರು ಅಲ್ಲಿನ ಕಾಯ್ದೆ-ಕಾನೂನು ಸಂಪ್ರದಾಯಗಳನ್ನು ಮೀರುವಂತಿಲ್ಲವಷ್ಟೇ? ಅದೇ ರೀತಿ ಭಾರತದಲ್ಲಿ ನೆಲೆಸಿದ ಪ್ರತೀ ವ್ಯಕ್ತಿಯೂ ಇಲ್ಲಿನ ಮೂಲ ಸಂಸ್ಕೃತಿ-ಸಂಪ್ರದಾಯಗಳಿಗೆ ಧಕ್ಕೆಯಾಗದಂತೇ ನಡೆದುಕೊಳ್ಳುವುದು ಭಾರತವಾಸಿಗಳ ಧರ್ಮ.

ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಂ |
ವರ್ಷಂ ತದ್ ಭಾರತಂ ನಾಮ ಭಾರತೀಯತ್ರ ಸಂತತಿಃ ||

ಪ್ರಸಕ್ತ ಸಮುದ್ರದಿಂದ ಉತ್ತರಕ್ಕೂ ಹಿಮಾಲಯದಿಂದ ದಕ್ಷಿಣಕ್ಕೂ ಇರುವ ಭೂಭಾಗದ ನಿವಾಸಿಗಳೆಲ್ಲಾ ಭಾರತೀಯರೇ ಆಗಿದ್ದಾರೆ. ಆಂಗ್ಲರು ಭಾರತಕ್ಕೆ ಬಂದರು, ಭಾರತವನ್ನು ಒಡೆದು ಆಳಿದರು. ಒಡೆದಾಳುವುದೇ ನೀತಿಯೆಂದುಕೊಂಡ ಅವರು ಆರ್ಯರು ಭಾರತಕ್ಕೆ ಬಂದು ಭಾರತೀಯ ಮೂಲನಿವಾಸಿಗಳನ್ನು ಯುದ್ಧಮಾಡಿ ಗೆದ್ದು ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದರು ಎಂಬ ಕಥೆ ಕಟ್ಟಿದರು. ಆ ಕಥೆ ಎಷ್ಟು ವ್ಯಾಪಕವಾಯ್ತೆಂದರೆ ಇವತ್ತಿಗೂ ಇತಿಹಾಸವನ್ನು ಓದುವ ವಿದ್ಯಾರ್ಥಿಗಳನೇಕರು ಆರ್ಯರು ಭಾರತಕ್ಕೆ ಬಂದರು ಎಂಬುದಾಗಿಯೇ ಓದುತ್ತಾರೆ, ಭಾವಿಸುತ್ತಾರೆ. ಆರ್ಯರು ಹೊರಗಿನವರಲ್ಲಾ ಅವರೂ ಭಾರತದಲ್ಲೇ ಯುಗಯುಗಗಳಿಂದಲೂ ಇದ್ದರು ಎಂಬುದಕ್ಕೆ ಪ್ರಾಗೈತಿಹಾಸ ಮತ್ತು ತತ್ಸಂಬಂಧೀ ಹಲವು ದಾಖಲೆಗಳು, ಕುರುಹುಗಳು ಇಂದಿಗೂ ಸಿಗುತ್ತವೆ! ಆಂಗ್ಲ ಭಾಷೆಯ ರೆಲಿಜನ್ ಎಂಬ ಪದವನ್ನು ತರ್ಜುಮೆಮಾಡುವಾಗ ಅನುವಾದಕರಿಗೆ ಅದರ ಅರಿವಿರದ ಕಾರಣ ಧರ್ಮ ಮತ್ತು ಮತ ಎಂಬ ಪದಗಳನ್ನು ಒಂದೇ ಎಂಬಂತೇ ಭಾವಿಸಿ ರೆಲಿಜನ್ ಎಂಬುದನ್ನು ಧರ್ಮ ಎಂದಿದ್ದಾರೆ. ನಮ್ಮ ಪೂರ್ವಜರು ಮತಕ್ಕಿಂತಾ ಭಿನ್ನವಾದ ಧರ್ಮವನ್ನು ಸನಾತನ ಎಂದು ಕರೆಯುತ್ತಿದ್ದರು, ಸನಾತನ ಪದವೇ ಅವರಿಗೆ ಇಷ್ಟವಾಗಿತ್ತು. ಯಾವುದು ಯಾರಿಂದಲೂ ಸ್ಥಾಪಿತವಾಗದ ಧರ್ಮವೋ ಯಾವುದು ಮಾನವನ ಅತಿ ಸಹಜ ಬದುಕುವ ಧರ್ಮವೋ ಅದು ಸನಾತನ ಧರ್ಮ ಅರ್ಥಾತ್ ಹಿಂದೂ ಧರ್ಮ. ಈ ಭುವಿಗೆ ಬಂದ ವ್ಯಕ್ತಿಯೋರ್ವ ತನ್ನ ಇರುವಿಕೆಯಿಂದ, ತನ್ನ ಬದುಕಿಗಾಗಿ, ತನ್ನ ಬೆಳವಣಿಗೆಗಾಗಿ ಇನ್ನೊಂದು ಜೀವಿಗೆ, ಪರಿಸರಕ್ಕೆ ಹಾನಿಯುಂಟುಮಾಡಬಾರದೆಂಬುದೇ ಹಿಂದೂ ಧರ್ಮದ ಮೂಲ ಸಂದೇಶ. ಧರ್ಮ ಮತ್ತು ಮತಗಳ ವ್ಯತ್ಯಾಸ ತಿಳಿಯದಿದ್ದುದೇ ಇಂದಿನ ಸಮಾಜದಲ್ಲಿ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಯೋಣ.

ನಮ್ಮ ದೇಶದಲ್ಲಿ ಬಹುಸಂಖ್ಯಾಕರು ವೇದ ಮತಾನುಯಾಯಿಗಳಿರಬಹುದು. ಆದರೆ ರಾಷ್ಟ್ರೀಯತಾ ಸೂಚಕವಾದ ಹಿಂದೂ ಪದದಲ್ಲಿ ವೇದೇತರ ಮತಾನುಯಾಯಿಗಳೂ ಚಿಂತಕರೂ ಇದ್ದಾರೆ. ವೈದಿಕ ಮತವೇ ಹಿಂದುತ್ವ ಎಂಬುದು ದುರಾಗ್ರಹ. ಸರ್ವ ಸಂಗ್ರಾಹಕಗುಣ ಹಿಂದೂ ಪದದ ವ್ಯಾಪ್ತಿ. ತಾವು ವೈದಿಕ ಪಂಗಡಕ್ಕೆ ಸೇರಿದವರು ಎಂಬ ಭಾವನೆ ತೊಡೆದುಹಾಕಲು ಬೌದ್ಧರು, ಜೈನರು, ಪಾರಸಿಕರು, ವೀರಶೈವರು, ಸಿಖ್ಖರೇ ಮೊದಲಾದವರು ತಮ್ಮನ್ನು ಹಿಂದೂಗಳಲ್ಲ ಎಂದುಕೊಂಡರು! ಹಿಂದೂ ಒಂದು ರಾಷ್ಟ್ರೀಯತೆಯೇ ವಿನಃ ಅದು ಮತದ ಸಂಕೇತವಲ್ಲ, ಮತವನ್ನು ಬಣ್ಣಿಸುವ ಪದವೂ ಅಲ್ಲ. ಮೊದಲೇ ಹೇಳಿದಹಾಗೇ  ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ ಈ ಏಳ ಮಹಾನದಿಗಳ [ಸಪ್ತ ಸಿಂಧೂಗಳ ಮತ್ತು ಅವುಗಳ ಉಪನದಿಗಳ] ಸರಹದ್ದಿನಲ್ಲಿ ವಾಸಿಸುವ ಎಲ್ಲಾ ಜನರೂ ಹಿಂದೂಗಳೇ. ಬ್ರಹ್ಮ ಸಮಾಜ, ಅರ್ಯಸಮಾಜ ಕೆಲವು ಸುಧಾರಿತ ಪಂಥಗಳು ಹಿಂದಿನಿಂದ ನಾವು ನಡೆಸಿಬಂದ ಕೆಲವು ಪದ್ಧತಿಗಳನ್ನು ಅಲ್ಲಗಳೆದರು ಎಂದಮಾತ್ರಕ್ಕೆ ಅವರು ಹಿಂದೂಗಳಲ್ಲ ಎನ್ನಲಾಗುವುದಿಲ್ಲ. ನೂರಾರು ಮಂದಿ ಮಹಾಪುರುಷರು ನಮ್ಮ ಸಮಾಜದಲ್ಲಿ ಹುಟ್ಟಿ, ಹೊಸ ಆಧ್ಯಾತ್ಮಿಕ  ಮತ್ತು ಮತೀಯ ಅಚಾರ-ವಿಚಾರಗಳನ್ನು ರೂಪಿಸಿ, ಪಂಥಗಳನ್ನು ಸ್ಥಾಪಿಸಿ ಸಮಾಜ ಸುಧಾರಣೆಗೆ ಯತ್ನಿಸಿದ್ದಾರೆ. ಇಂತಹ ಪ್ರಯತ್ನಗಳು ಈ ಹಿಂದೆ ನಡೆದಂತೇ ಮುಂದೆಯೂ ಹಲವು ನಡೆಯಬಹುದಾಗಿದೆ. ಆದರೆ ಹಿಂದುತ್ವದ ಮೂಲಸ್ವರೂಪಕ್ಕೆ ಧಕ್ಕೆಯಾಗದು. ಕೆಲವೊಂದು ರೂಢಿಗಳನ್ನು ಮಾತ್ರ ಹಿಂದುತ್ವದ ಲಕ್ಷಣಗಳು ಎಂದು ಬಗೆದಲ್ಲಿ ಅನೇಕರನ್ನು ಹಿಂದೂಗಳೇ ಅಲ್ಲ ಎನ್ನಬೇಕಾದೀತು, ಹೀಗಾಗಿ ಹಿಂದೂ ಶಬ್ದವನ್ನು ರಾಷ್ಟ್ರೀಯತೆಯ ಪದವನ್ನಾಗಿ ಬಳಸಲಾಗಿದೆ.  

ಇವತ್ತು ಭಾರತವಲ್ಲದೇ ಜಗದ ನಾನಾ ದೇಶಗಳಲ್ಲಿ ಹಿಂದೂಗಳು ನೆಲೆಸಿದ್ದಾರೆ. ಗಯಾನಾ, ಫಿಜಿ ಮೊದಲಾದ ಕೆಲವು ದೇಶಗಳಲ್ಲಂತೂ ಅವರೇ ಬಹುಸಂಖ್ಯಕರು! ಮಾರಿಷಸ್ ನಂತಹ ಕೆಲವು ಕಡೆ ಹಿಂದೂಗಳ ಸಂಖ್ಯೆಯೇ ದೊಡ್ಡದು. ಅವರಲ್ಲಿ ಬಹಳಮಂದಿ ಅಲ್ಲಲ್ಲಿಯೇ ಹುಟ್ಟಿಬೆಳೆದ ರತೀಯ ಮೂಲದವರ ವಂಶಸ್ಥರು ಅಷ್ಟೇ. ಅನೇಕರು ಅಲ್ಲಲ್ಲಿನ ರಾಷ್ಟ್ರೀಯತೆಯನ್ನೇ ಪಡೆದುಕೊಂಡಿದ್ದಾರೆ. ಆದರೂ ಸಾಂಸ್ಕೃತಿಕವಾಗಿ ಅವರು ಹಿಂದೂಗಳಾಗಿದ್ದಾರೆ. ಅಮೇರಿಕೆಯಂತಹ ಮುಂದುವರಿದ ರಾಷ್ಟ್ರಗಳಲ್ಲಿನ ಜನ ಹಿಂದೂ ಸಂಸ್ಕೃತಿಯನ್ನು ಒಪ್ಪಿದ್ದಾರೆ, ಭಾರತಕ್ಕೆ ಬಂದು ಇಲ್ಲಿನ ವೇದ-ಆಯುರ್ವೇದಗಳ ಬಗ್ಗೆ ಯೋಗ-ಪ್ರಾಣಾಯಾಮಗಳ ಬಗ್ಗೆ ಆಸ್ಥೆಯಿಂದ ಅಭ್ಯಾಸ ನಡೆಸುತ್ತಾರೆ, ತಾವು ಹಿಂದೂಗಳೆಂದೇ ಹೇಳಿಕೊಳ್ಳಲು ಇಷ್ಟಪಡುತ್ತಾರೆ. ಅಂಥವರನ್ನು ನಾವು ಸಾಂಸ್ಕೃತಿಕ ಹಿಂದೂಗಳೆಂದು ಕರೆಯಬೇಕಾಗುತ್ತದೆ. ಮಹರ್ಷಿ ಅರವಿಂದರು ಹೇಳುತ್ತಾರೆ " ಒಂದುಕಡೆ ಹಿಮಾಲಯ ಮತ್ತೊಂದು ಕಡೆ ಸಮುದ್ರ ಈ ನಡುವಿನ ಭೂಭಾಗದಲ್ಲಿ ಬೆಳೆದುಬಂದ ಪವಿತ್ರವೂ ಪ್ರಾಚೀನವೂ ಆದ ಈ ಧರ್ಮವನ್ನು, ಈ ಪರ್ಯಾಯ ದ್ವೀಪದಲ್ಲಿ ಯುಗಯುಗಗಳ ಕಾಲಪ್ರವಾಹದಲ್ಲೂ ಸುರಕ್ಷಿತವಾಗಿ ಇಡಲೋಸುಗ ಆರ್ಯಜನಾಂಗಕ್ಕೆ ಭಗವಂತನಿಂದ ನೀಡಲ್ಪಟ್ಟ ನಿಧಿ ಇದು. ಆದರೆ ಇದು ಒಂದು ದೇಶಕ್ಕೆ ಸೀಮಿತವಲ್ಲ. ಇದು ನಿಜವಾಗಿಯೂ ಸನಾತನ ಧರ್ಮ ಮತ್ತು ಇತರ ಮತಗಳನ್ನು ಒಳಗೊಂಡಿರುವ ವಿಶ್ವಧರ್ಮ." 

ಭಾರತೀಯರ್ಷಿ ಸಂಪ್ರೋಕ್ತಾನ್ ಇಹಾಮುತ್ರಾರ್ಥಸಾಧಕಾನ್ |
ಯೋsಂಗೀಕರೋತಿ ಸಶ್ರದ್ಧಂ ಸತ್ ಸಿದ್ಧಾಂತಾನ್ ಸನಾತನಾನ್ ||
ಮಹಾತ್ಮಿಭಿಃ ದಿವ್ಯಶೀಲೈಃ ಕಾಲೇ ಕಾಲೇ ಪ್ರವರ್ತಿತಾನ್ |
ಸಂಪ್ರದಾಯಾನಾದ್ರೀಯತೇ ಯಃ ಸರ್ವಾನ್ ಪಾರಮಾರ್ಥಿಕಾನ್ ||
ಯತ್ರಕುತ್ರಾಪಿ ಜಾತೋsಸೌ ಅಸ್ತು ಯಃ ಕೋsಪಿ ಜನ್ಮನಾ |
ಸಚ್ಛೀಲೋದಾರಚರಿತಃ ಸೋsತ್ರ ಹಿಂದುರಿತಿ ಸ್ಮೃತಃ ||

ದೇವ ಮಂದಿರ ಭಜನೆ ಪೂಜೆ ಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ
ಭಾವವಂ ಕ್ಷುಲ್ಲ ಜಗದಿಂ ಬಿಡಿಸಿ ಮೇಲೊಯ್ವು
ದಾವುದಾದೊಡಮೊಳಿತು -ಮಂಕುತಿಮ್ಮ

ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾಡುವ ಪೂಜೆ, ಅರತಿ, ಭಜನೆ, ಪ್ರಸಾದ ಸ್ವೀಕರಣೆ, ಜಪ-ತಪ, ಹೋಮ-ನೇಮ ಇವೆಲ್ಲಾ ಜೀವನಕ್ಕೆ ಅಲಂಕಾರವಾಗಿವೆ ಮತ್ತು ಮನಸ್ಸನ್ನು ಮುದಗೊಳಿಸಿ ಉನ್ನತ ವೈಚಾರಿಕತೆಗೆ ಏರುವಲ್ಲಿ ಸಹಾಯಕವಾಗಿವೆ. ಕ್ಷುಲ್ಲಕ ಭಾವಗಳೇ ಮನದಲ್ಲಿ ಸದಾ ತುಂಬಿದ್ದರೆ ಬದುಕಿನ ನಿಜಧ್ಯೇಯವನ್ನು ಸಾಧಿಸುವುದು ಸಾಧ್ಯವಾಗುವುದಿಲ್ಲ. ಕ್ಷಣಿಕವಾದ ಈ ಜಗದಲ್ಲೇ ಸುತ್ತುತ್ತಾ ಬಳಲುವ ನಮಗೆ ಉನ್ನತ ವಿಚಾರಗಳು ಮನದಲ್ಲಿ ಒಡಮೂಡಲು ತನ್ಮೂಲಕ ಮೋಕ್ಷವನ್ನು ಪಡೆಯುವತ್ತ ನಾವು ನಡೆಯಲು ಸಹಕಾರಿಯಾಗುವ ಕಾರ್ಯಗಳೇ ಪೂಜಾ ಕಾರ್ಯಗಳು. ಉನ್ನತ, ಉದಾತ್ತ ವಿಚಾರಗಳನ್ನು  ಹೇಳುವ ಯಾವ ಕೆಲಸವೇ ಆದರೂ, ಸಂಸ್ಕಾರವಾದರೂ ಅವು ಒಳ್ಳೆಯವೇ. ದೈವ ಸಾನ್ನಿಧ್ಯದಲ್ಲಿ ವಿಶೇಷವಾದ ಶಕ್ತಿ ಸಂಚಯನವಾಗುತ್ತದೆ ಮತ್ತು ಅದು ಮೋಕ್ಷವನ್ನು ಪಡೆಯುವ ಮಾರ್ಗವನ್ನು ತೋರುತ್ತದೆ ಎಂಬುದು ಡಿ.ವಿ.ಜಿಯವರ ಹೇಳಿಕೆಯಾಗಿದೆ. ಸಮಾಜದಲ್ಲಿ ಬೇಕಾದ್ದು ಬೇಡಾದ್ದು ಎಲ್ಲಾ ತುಂಬಿರುತ್ತವೆ. ಎಲವೊಮ್ಮೆ ಯಾವುದು ಒಳಿತು  ಮತ್ತು ಯಾವುದು ಕೆಡುಕು ಎಂಬುದನ್ನು ನಿರ್ಣಯಿಸುವುದೇ ಕಷ್ಟವಾಗಿಬಿಡಬಹುದು. ಇಂತಹ ಸಂದಿಗ್ಧದಲ್ಲಿ ಸನಾತನ ಸೂತ್ರಗಳು ನಮಗೆ ಸಹಕಾರಿಯಾಗಿವೆ. ಹಲವು ಸಹಸ್ರಮಾನಗಳ ಅನುಭವಗಳಿಂದಲೂ ಮತ್ತು ದರ್ಶನಗಳಿಂದಲೂ ಅವು ನಿಖರವಾದ ಮಾಹಿತಿಯನ್ನು ಒದಗಿಸುತ್ತವೆ. 

ಚಿಕ್ಕವರಿರುವಾಗ ನಮ್ಮ ನಿರ್ಧಾರಗಳಿಗೆ ಅಡ್ಡಿಪಡಿಸುವ ನಮ್ಮ ಅಪ್ಪನಿಗೆ ಬುದ್ಧಿ ಇಲ್ಲವೆಂದು ನಾವೆಂದುಕೊಳ್ಳುತ್ತೇವೆ. ಬೆಳೆಯುತ್ತಾ ನಮ್ಮಪ್ಪ ಮಾಡಿದ್ದು ಕೆಲವು ಭಾಗ ಸರಿ ಎಂದು ಒಪ್ಪುತ್ತೇವೆ. ಇನ್ನೂ ಬೆಳೆದು ವಯಸ್ಸು ಜಾಸ್ತಿಯಾಗತೊಡಗಿದಾಗ ಅಪ್ಪ ನಮ್ಮ ಸಲುವಾಗಿ ಮಾಡಿದ ಅನೇಕ ಕೆಲಸಗಳು ಮತ್ತು ನಿರ್ಧಾರಗಳು ಸರಿ ಎಂಬ ಅನುಭವ ನಮ್ಮದಾಗುತ್ತದೆ. ಆದರೂ ಅಪ್ಪನದು ಪೂರ್ತಿ ಸರಿಯೆಂದು ನಾವು ಒಪ್ಪುವ ಹಂತಕ್ಕೆ ಇನ್ನೂ ಬಂದಿರುವುದಿಲ್ಲ. ಯಾವಾಗ ನಮಗೆ ಮದುವೆಯಾಗಿ ಮಕ್ಕಳಾಗಿ ನಾವೇ ’ಅಪ್ಪ’ ಎನಿಸಿಕೊಳ್ಳುತ್ತೇವೋ ಆಗ ಅಪ್ಪಮಾಡಿದ್ದು ಸಂಪೂರ್ಣ ಸರಿಯೆನಿಸುತ್ತದೆ; ಅಪ್ಪನ ಅನುಭವ ಸುಳ್ಳಲ್ಲವೆಂಬುದನ್ನು ತೆಪ್ಪಗೆ ಒಪ್ಪಿಕೊಳ್ಳುತ್ತೇವೆ. ಒಬ್ಬ ಸಾಮಾನ್ಯ ಅಪ್ಪ ತನ್ನ ಮಗುವಿಗಾಗಿ ಇರುವುದರಲ್ಲಿ ಉತ್ತಮ ನಿರ್ಧಾರಗಳನ್ನೇ ಕೈಗೊಂಡಿರುತ್ತಾನೆ ಎಂದಮೇಲೆ ಜಗತ್ತಿನ ಜನರನ್ನೆಲ್ಲಾ ತಮ್ಮ ಮಕ್ಕಳೆಂದೇ ತಿಳಿದ ಆರ್ಷೇಯ ಋಷಿಗಳ ಪಾರಂಪರಿಕ ಅನುಭವ ಸುಳ್ಳೆನಲು ಸಾಧ್ಯವೇ? ಪರಂಪರಾಗತವಾಗಿ ಶ್ರುತಿಯಾಗಿ ಹರಿದುಬಂದ ಜೀವನಧರ್ಮ ಸೂತ್ರಗಳೇ ವೇದಗಳು ಎಂದರೆ ತಪ್ಪಾಗುವುದಿಲ್ಲ. ಅವುಗಳಿಗೆ ಲೇಖಕರು ಇಲ್ಲ; ತಯಾರಿಸಿದ ವಸ್ತುವೊಂದಕ್ಕೆ ತಯಾರಕರೇ ಉಪಯೋಗಿಸುವ ರೀತಿನೀತಿಗಳನ್ನೂ, ಗುಣಮಟ್ಟಕ್ಕೆ ಸಮಯಾಧಾರಿತ ಖಾತ್ರಿಯನ್ನೂ ಕೊಡುವಂತೇ ವೇದಗಳ ಸೃಷ್ಟಿಕರ್ತ ಅವುಗಳ ಸಮಯವನ್ನು ಸಾರ್ವಕಾಲಿಕವನ್ನಾಗಿ ಮಾರ್ಪಡಿಸಿದ್ದಾನೆ. ಸರಿಯಾಗಿ ಅರಿತು ಬಳಸಿದರೆ ಅವುಗಳಲ್ಲಿನ ಜ್ಞಾನ ನಮ್ಮ ಅಧುನಿಕ ವಿಜ್ಞಾನಕ್ಕಿಂತಲೂ ಮಿಗಿಲು ಎಂಬುದನ್ನು ಕಾಣಬಹುದಾಗಿದೆ. ಯಾವ ಮತದ ಯಾವುದೇ ಸೂತ್ರವೂ ತಪ್ಪಾಗಿ ಗ್ರಹಿತವಾಗಿರಬಹುದು, ಯಾಕೆಂದರೆ ಅನೇಕ ಮತಗಳು ಮಾನುಷ ನಿರ್ಮಿತವಾಗಿವೆ. ಅವು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಜೀವನಧರ್ಮಗಳಾಗುವ ಪರಿಪಕ್ವತೆಯನ್ನು ಹೊಂದಿಲ್ಲದಿರುವುದು ತುಲನೆಮಾಡಿದಾಗ ತಿಳಿದುಬರುತ್ತದೆ. ಪಕ್ವವಾದ ಮತ್ತು ಯುಕ್ತವಾದ ಮಾಹಿತಿಯನ್ನು ಮಾತ್ರ ವೇದಗಳು ಒಳಗೊಂಡಿರುವುದರಿಂದ ಯಾವ ರೀತಿಯಲ್ಲೂ ಯಾವ ನೀತಿಯಲ್ಲೂ ಅವು ನಗಣ್ಯವಲ್ಲ, ಲೋಪಗಳನ್ನು ಹೊಂದಿರುವುದಿಲ್ಲ.     

ಪಂಚತಂತ್ರದ ಒಂದು ಚಿಕ್ಕ ಕಥೆಯೊಂದಿಗೆ ಆರಂಭಿಕ ಅಧ್ಯಾಯವನ್ನು ಮುಗಿಸೋಣ. ದೇಶವೊಂದರಲ್ಲಿ ಧರ್ಮಬುದ್ಧಿ ಮತ್ತು ಪಾಪ ಬುದ್ಧಿ ಎಂಬಿಬ್ಬರು ಗೆಳೆಯರಿದ್ದರು. ಹೆಸರೇ ಸೂಚಿಸುವಂತೇ ಧರ್ಮಬುದ್ಧಿ ಧರ್ಮಾತ್ಮ ಮತ್ತು ಪಾಪಬುದ್ಧಿ ಪಾಪಾತ್ಮನೆಂದು ತಿಳಿದುಕೊಳ್ಳಿ. ಪಾಪಬುದ್ಧಿಗೆ ವಿಶೇಷವಾದ ವಿದ್ಯೆಯಾಗಲೀ ಪರಿಣತಿಯಾಗಲೀ ಇರಲಿಲ್ಲ. ಆದರೆ ಧರ್ಮಬುದ್ಧಿ ಘನಪಾಠಿಯಾಗಿದ್ದ. ಕುತಂತ್ರಗಳಲ್ಲಿ ಪಾಪಬುದ್ಧಿ ಬಹಳ ಮುಂದಿರುತ್ತಿದ್ದ. ಒಮ್ಮೆ ಹೇಗಾದರೂ ಮಾಡಿ ಧರ್ಮಬುದ್ಧಿಯನ್ನು ಬಳಸಿಕೊಂಡು ಒಂದಷ್ಟು ಹಣಗಳಿಸಬೇಕೆಂಬ ಆಸೆ ಪಾಪಬುದ್ಧಿಯದು.

ಧರ್ಮಬುದ್ಧಿಗೆ ಪಾಪಬುದ್ಧಿ ಹೇಳಿದ "ಮಿತ್ರಾ ನೋಡು ನೀನು ಪಂಡಿತನಾದ ಮಾತ್ರಕ್ಕೆ ಜನ ನಿನ್ನನ್ನು ಹಾಗೆ ಮೆಚ್ಚುವುದಿಲ್ಲ. ದೇಶಗಳನ್ನು ಪರ್ಯಟನೆಮಾಡಿ ಹಲವು ಜನರನ್ನು ಸಂಪರ್ಕಿಸುವುದರಿಂದ ಹೆಚ್ಚಿನ ಧನ-ಕನಕ ಸಂಪಾದನೆಯಾಗುತ್ತದೆ. ಬರುವುದಾದರೆ ಬಾ ನಾನು ವಿದೇಶಯಾತ್ರೆಗೆ ಹೋಗುವವನಿದ್ದೇನೆ." ಗೆಳೆಯನ ಮಾತಿನಲ್ಲಿ ಧೂರ್ತ ಭಾವವನ್ನು ಗ್ರಹಿಸದ ಧರ್ಮಬುದ್ಧಿ ಗೆಳೆಯನೊಟ್ಟಿಗೆ ವಿದೇಶ ಯಾತ್ರೆಗೆ ನಡೆದ. ವಿದೇಶ ಸಂಚಾರದಲ್ಲಿ ಅವರೀರ್ವರೂ ಹೇರಳ ಧನ-ಕನಕಗಳನ್ನು ಸಂಪಾದಿಸಿ ಮನೆಗೆ ಮರಳಲು ಮುಂದಾದರು. ಊರು ಸಮೀಪಿಸುತ್ತಿರುವ ಸಮಯದಲ್ಲಿ ಪಾಪಬುದ್ಧಿ ಧರ್ಮಬುದ್ಧಿಗೆ ಹೇಳಿದ: "ಗೆಳೆಯಾ, ನಾವೀಗ ಹೇರಳ ಸಂಪತ್ತುಗಳನ್ನು ಗಳಿಸಿದ್ದೇವೆ. ಇದು ಪರಭಾರೆಯಾಗಬಾರದಷ್ಟೇ? ಊರಿಗೆ ಕೊಂಡೊಯ್ದರೆ ಮನೆಯಲ್ಲಿನ ಜನರಿಗೋ ನೆಂಟರಿಗೋ ಪಾಲುಕೊಡಬೇಕಾದ ಪ್ರಮೇಯ ಬರುತ್ತದೆ. ಮೇಲಾಗಿ ನೀರಿನಲ್ಲಿರುವ ಮೀನು, ಹಾರುವ ಹಕ್ಕಿ, ಭೂಮಿಯಮೇಲಿರುವ ಪ್ರಾಣಿಗಳು ಮಾಂಸಭಕ್ಷಕರ ಪಾಲಾಗುವುದು ಸರಿಯಷ್ಟೇ? ಅದೇರೀತಿ ನಗದು ಸಂಪತ್ತನ್ನು ಇಟ್ಟುಕೊಂಡವರಿಗೆ ಕಳ್ಳರಕಾಟ ತಪ್ಪಿದ್ದಲ್ಲ, ಸಂಪತ್ತನ್ನು ಕಾದುಕೊಳ್ಳುವುದು ಕಠಿಣ ಕೆಲಸ. ಹೀಗಾಗಿ ಇಲ್ಲೇ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಸಂಪತ್ತನ್ನು ಹೂತಿಡೋಣ ಮತ್ತು ಖರ್ಚಿಗೆ ಬೇಕಾದಾಗ ಬೇಕಾದಷ್ಟನ್ನೇ ತೆಗೆದುಕೊಳ್ಳುತ್ತಾ ಇರೋಣ ಆಗದೇ?" ಎಂದ. ಧರ್ಮಬುದ್ಧಿ ಅದಕ್ಕೂ ಸಮ್ಮತಿಸಿದ. ತಂದಿದ್ದ ಸಂಪತ್ತನ್ನು ಮರವೊಂದರ ಬುಡದಲ್ಲಿ ಹೂತಿಟ್ಟು ಈರ್ವರೂ ಊರಿಗೆ ಮರಳಿ ನಿಶ್ಚಿಂತೆಯಿಂದಿದ್ದರು.

ಕೆಲವುದಿನಗಳ ನಂತರ ಒಂದು ಮಧ್ಯರಾತ್ರಿ ಪಾಪಬುದ್ಧಿ ಕಾಡಿಗೆ ತೆರಳಿ, ಮರದ ಬುಡದಲ್ಲಿದ್ದ ಸಂಪತನ್ನು ಪೂರ್ತಿಯಾಗಿ ಎತ್ತಿಕೊಂಡು ಪುನಃ ಆ ಜಾಗಕ್ಕೆ ಮಣ್ಣುತುಂಬಿಸಿ ಮನೆಗೆ ಮರಳಿದ. ಮಾರನೇದಿನ ಧರ್ಮಬುದ್ಧಿಯನ್ನು ಕರೆದು ತನಗೆ ಹಣದ ಅಗತ್ಯ ಹೆಚ್ಚಿರುವುದಾಗಿಯೂ ಕಾಡಿಹೋಗಿ ತರೋಣವೆಂತಲೂ ಒತ್ತಾಯಿಸಿದ. ಸಮ್ಮತಿಸಿದ ಧರ್ಮಬುದ್ಧಿಯ ಜೊತೆ ಕಾಡಿಗೆ ತೆರಳಿ ಮರದಬುಡದಲ್ಲಿ ಅಗೆಯಲಾಗಿ ಹುದುಗಿಸಿಟ್ಟಿದ್ದ ಸಂಪತ್ತು ಇಲ್ಲವಾಗಿತ್ತು! ತನಗೇನೂ ಸಂಶಯವೇ ಇಲ್ಲವೆಂದೂ ಧರ್ಮಬುದ್ಧಿಯೇ ಅದನ್ನು ತೆಗೆದುಕೊಂಡಿದ್ದಾನೆಂದೂ ಪಾಪಬುದ್ಧಿ ಜಗಳ ತೆಗೆದ. ಜಗಳ ರಾಜ್ಯದ ರಾಜನ ನ್ಯಾಯಾಲಯಕ್ಕೆ ಹೋಯ್ತು. ನ್ಯಾಯಾಧಿಕಾರಿಗಳ ಸಮ್ಮುಖದಲ್ಲಿ ವಿಷಯ ಮಂಡಿತವಾಯ್ತು. ಸಂಪತ್ತು ಇಟ್ಟಬಗ್ಗೆಯಾಗಲೀ, ಕದ್ದಬಗ್ಗೆಯಾಗಲೀ ಲಿಖಿತ ರೂಪದ ದಾಖಲೆಗಳು, ಸಾಕ್ಷಿಗಳು ಇಲ್ಲದಿರುವುದರಿಂದ ದೇವರಮುಂದೆ ಆಣೆಪ್ರಮಾಣ ಮಾಡಬೇಕೆಂದು ನ್ಯಾಯಾಧೀಶರು ಹೇಳಿದರು. ತನಗೆ ದೇವರಮೇಲೆ ನಂಬಿಕೆಯಿದ್ದು ಮರದಲ್ಲಿರುವ ವನದೇವಿ ತನ್ನ ಪರವಾಗಿ ಸಾಕ್ಷಿ ನುಡಿಯುವ ಖಾತ್ರಿ ಇರುವುದರಿಂದ ಕಾಡಿಗೇ ತೆರಳಿ ಮರದ ಸಾಕ್ಷಿ ಕೇಳಲು ಅನುಮತಿಸಬೇಕೆಂದು ಪಾಪಬುದ್ಧಿ ವಿನಂತಿಸಿದ. ನ್ಯಾಯಾಲಯ ಅದಕ್ಕೆ ಸಮ್ಮತಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಕಳಿಸಲು ಒಪ್ಪಿತು. ಅಂದಿನ ನ್ಯಾಯಾಲಯದ ಕಲಾಪ ಮುಗಿಸಿಕೊಂಡ ಪಾಪಬುದ್ಧಿ ಶೀಘ್ರ ಮನೆಗೆ ದೌಡಾಯಿಸಿದ. ತಂದೆಯನ್ನು ಕಂಡು ನಡೆದ ಘಟನೆ ತಿಳಿಸಿ, "ಅಪ್ಪಾ ನೀನು ಮನಸ್ಸುಮಾಡಿ ಒಂದು ವಾಕ್ಯ ಉಸುರಿದರೆ ಸಂಪತ್ತೂ ನಮ್ಮದಾಗುತ್ತದೆ ಮತ್ತು ನನ್ನ ತಯೂ ಉಳಿಯುತ್ತದೆ" ಎಂದ. ಮಗನ ಒತ್ತಾಯಕ್ಕೆ ಅಪ್ಪ ಮಣಿದ. ಮರದಲ್ಲಿ ದೊಡ್ಡ ಪೊಟರೆಯೊಂದು ಇರುವುದೆಂದೂ ಅದರಲ್ಲಿ ಅಪ್ಪ ಅವಿತಿರಬೇಕೆಂದೂ ಮಗ ತಿಳಿಸಿದ.

ಮಾರನೇ ಬೆಳಿಗ್ಗೆ ಸ್ನಾನ ಮುಗಿಸಿ ಹೊಸ ಬಟ್ಟೆ ತೊಟ್ಟ ಪಾಪಬುದ್ಧಿ,  ಧರ್ಮಬುದ್ಧಿ ಮತ್ತು ನ್ಯಾಯಾಲಯದ ಅಧಿಕಾರಿಗಳೊಡನೆ ಅಡವಿಯ ಮರದ ಹತ್ತಿರ ಬಂದ. ಮರದಮುಂದೆ ನಿಂತು " ಎಲೈ ಸೂರ್ಯ-ಚಂದ್ರರೇ, ವಾಯು-ಅಗ್ನಿಗಳೇ, ಸ್ವರ್ಗ ಮತ್ತು ಭೂಮಿಗಳೇ, ಹೃದಯ ಮತ್ತು ಮನಸ್ಸುಗಳೇ, ಹಗಲು ರಾತ್ರಿಗಳೇ, ಸೂರ್ಯೋದಯ ಮತ್ತು ಸೂರ್ಸ್ತಗಳೇ ನೀವೆಲ್ಲವೂ ಧರ್ಮಮಯವಾಗಿದ್ದೀರಿ. ಮನುಷ್ಯನ ಪ್ರತಿಯೊಂದು ಕರ್ಮಗಳನ್ನೂ ನೀವು ಪ್ರತ್ಯಕ್ಷವಾಗಿ ನೋಡುತ್ತೀರಿ. ಮರದಲ್ಲಿರುವ ದೇವತೆಯೇ ನಿನ್ನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮೀರ್ವರಲ್ಲಿ ಯಾರು ಕಳ್ಳರು ಎಂಬುದನ್ನು ಸಾರಿಬಿಡು" ಎಂದು ಜೋರಾಗಿ ಕೂಗಿ ಹೇಳಿದ. ಮಗನ ಮಾತನ್ನು ಆಲೈಸಿದ ಪಾಪಬುದ್ಧಿಯ ತಂದೆ ಅವಿತಿದ್ದ ಪೊಟರೆಯಿಂದ ಹೇಳಿದ:" ಕೇಳೀ ಕೇಳೀ ಹಣವನ್ನು ಕದ್ದಿದ್ದು ಧರ್ಮಬುದ್ಧಿಯೇ." ದಂಡಾಧಿಕಾರಿಗಳಿಗೆ ಅಶರೀರವಾಣಿಯಿಂದ ಅಚ್ಚರಿಯಾಯ್ತು! ನ್ಯಾಯಲಯದ ಅಪ್ಪಣೆಯಂತೇ ಧರ್ಮಬುದ್ಧಿಗೆ ಶಿಕ್ಷೆನೀಡಲು ಅವರು ಸಿದ್ಧತೆ ನಡೆಸಿದರು. ಧರ್ಮಬುದ್ಧಿ ಮರುಮಾತನಾಡಲಿಲ್ಲ. ಮರದ ಸುತ್ತ ಒಮ್ಮೆ ಸುತ್ತಿದ ಧರ್ಮಬುದ್ಧಿ ತ್ವಿತಾಗಿ ಉರಿಯುವಸ್ತುವಿನಿಂದ ಮರದ ಬುಡಕ್ಕೆ ಬೆಂಕಿಹಚ್ಚಿದ. ಧಗಧಗನೇ ಮರ ಹೊತ್ತಿ ಉರಿಯುವಾಗ ಮರದ ಪೊಟರೆಯೊಳಗೆ ಅವಿತಿದ್ದ ಪಾಪಬುದ್ಧಿಯ ತಂದೆ ಚೀರುತ್ತಾ ಕೆಳಕ್ಕೆ ಉರುಳಿದ. ದಂಡಾಧಿಕಾರಿಗಳು " ಏನಪ್ಪಾ ಇದು?" ಎಂದು ಆತನನ್ನು ಗದರಿದರು. ಆತ ನಿಜವನ್ನು ಒಪ್ಪಿಕೊಂಡ ಮತ್ತು ಮರುಘಳಿಗೆಯಲ್ಲೇ ಪ್ರಾಣಬಿಟ್ಟ. ತಪ್ಪುಮಾಡುವುದರೊಂದಿಗೆ ತಪ್ಪನ್ನು ಮುಚ್ಚಲು ಮತ್ತಷ್ಟು ತಪ್ಪುಮಾಡಿರುವ ಪಾಪಬುದ್ಧಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿತು. ಅನ್ಯಾಯವಾಗಿ ಕಾಡಿನ ಮರ ಬೆಂಕಿಗೆ ಆಹುತಿಯಾಗುವಂತೇ ಮಾಡಿದ ಪಾಪಬುದ್ಧಿ ತನ್ನಪ್ಪನ ಹಾಗೂ ತನ್ನ ಸಾವನ್ನು ತಾನೇ ತಂದುಕೊಂಡ.

ಈ ಕಥೆಯಲ್ಲಿ ನೀತಿಯನ್ನು ಹೊಸದಾಗಿ ಹೇಳಬೇಕಿಲ್ಲ. ತಪ್ಪುಮಾಡುವುದು ಮಾನವ ಸಹಜವಾಗಿರಬಹುದು; ಆದರೆ ತಪ್ಪನ್ನೇ ಮಾಡದಂತೇ ಆಧಾರಸಹಿತವಾಗಿ ಆದೇಶ ನೀಡುವುದು ಹಿಂದೂಧರ್ಮ. ಇನ್ಯಾವುದೋ ಧರ್ಮ  ಕಳ್ಳತನ ಮಾಡು-ಆದರೆ ಸಿಕ್ಕಿಬೀಳಬೇಡ ಎಂದೂ ಹೇಳಬಹುದು, ಆದರೆ ಅದು ನಿಜವಾದ ಮಾರ್ಗವಲ್ಲ. ಕಳ್ಳತನ ತರವಲ್ಲ ಎಂದು ತಿಳಿಸುವುವೇ ನಿಜವಾದ ಜೀವನಧರ್ಮ. ಅಂತಹ ಧರ್ಮ ಜಗತ್ತಿನಲ್ಲಿಯೇ ಏಕೈಕ, ಅದು ನಮ್ಮ ಸನಾತನ ಜೀವನಧರ್ಮ ಎಂದು ಹೇಳುತ್ತಾ ಪ್ರಥಮೋಧ್ಯಾಯವನ್ನು ಪೂರೈಸಿದ್ದೇನೆ, ನಮಸ್ಕಾರ.

Wednesday, October 17, 2012

|| ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||


 || ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||

ಕಲ್ಯಾಣಾಯುತ-ಪೂರ್ಣಚಂದ್ರವದನಾಂ ಪ್ರಾಣೇಶ್ವರಾನಂದಿನೀಮ್
ಪೂರ್ಣಾಪೂರ್ಣತರಾಂ ಪರೇಶಮಹಿಷೀಂ ಪೂರ್ಣಾಮೃತಾಸ್ವಾದಿನೀಮ್ |
ಸಂಪೂರ್ಣಾಂ ಪರಮೋತ್ತಮಾಮೃತಕಲಾಂ ವಿದ್ಯಾವತೀಂ ಭಾರತೀಮ್
ಶ್ರೀಚಕ್ರಪ್ರಿಯ-ಬಿಂದು-ತರ್ಪಣಪರಾಂ ಶ್ರೀ ರಾಜರಾಜೇಶ್ವರೀಮ್ ||

ಶಕ್ತಿದೇವತೆಯ ಆರಾಧನೆಗೆ ಶರನ್ನವರಾತ್ರಿ ಪ್ರಶಸ್ತವಾಗಿದೆ; ಶರದೃತುವಿನಲ್ಲಿ ಬರುವುದರಿಂದ ಶರನ್ನವರಾತ್ರಿ ಎಂದು ಹೆಸರು. ಶಾರದೆಯ ಆರಾಧನೆಯೂ ಇರುವುದರಿಂದ ಶಾರದಾ ನವರಾತ್ರಿ ಎಂತಲೂ ಕರೆಯುತ್ತಾರೆ. ಶಾರದೆ ಬ್ರಹ್ಮ ಮಾನಸ ಪುತ್ರಿ; ಆದರೆ ಬ್ರಹ್ಮನ ಮಡದಿ ಕೂಡ ಹೌದು. ಸೃಷ್ಟಿಕರ್ತನೇ ಅವನಾದಮೇಲೆ ಎಲ್ಲರ ಸೃಷ್ಟಿಗೆ ಅವನೇ ಕಾರಣನಲ್ಲವೇ? ಹೀಗಾಗಿ ಆತ ಶಾರದೆಯ ಸೃಷ್ಟಿಕರ್ತನೂ ಹೌದು ಅತ್ತು ಆಕೆಯ ಪತಿಯೂ ಹೌದು.

ಹರಿಯ ಉರವನು ಮೆಟ್ಟಿ ಹ ಿರು ತುಳಿದ
ಸರಸಿಜೋದ್ಭವನ ಮೊಗಗೆಡಿಸಿ ಮೀರಿದಳು
ಹಿರಿಯರಿನ್ನಾರು | ಸರ್ವಜ್ಞ

ಎಂದ ಸರ್ವಜ್ಞ ವಚನದಲ್ಲಿ ಆತ ಹೇಳಿದ್ದು ಮೂರು ರೂಪದಲ್ಲಿ ಕಾಣಿಸಿದ ಸ್ತ್ರೀಯನ್ನು. ಗಂಗೆಯಾಗಿ ಶಿವನ ಜಟೆಯಲ್ಲಿ ನೆಲೆಸಿದರೆ, ಸಿರಿಯಾಗಿ ಹರಿಯ ಹೃದಯದಲ್ಲೇ ನಿಂತಳು, ವಾಣಿಯಾಗಿ-ಜನ್ಮಕೊಟ್ಟ ವಿರಂಚಿಯನ್ನೇ ಮದುವೆಯಾದಳು ಎಂಬುದು ಅರ್ಥ. ಅಪ್ಪನನ್ನೇ ಮಗಳು[ಮಾನಸ ಪುತ್ರಿಯಾದರೂ ಸಹಿತ] ಮದುವೆಯಾಗಿದ್ದರಿಂದ ಬ್ರಹ್ಮದೇವರು ಕೆಲವುಕಾಲ ತಬ್ಬಿಬ್ಬಾಗಿದ್ದೂ ಇದೆ ಎಂದು ಕೇಳಿದ್ದೇನೆ. ಹೀಗಾಗಿ ಸ್ತ್ರೀ   ಅಂದರೇ ಶಕ್ತಿ ಎಂಬುದು ತಿಳಿದುಬರುತ್ತದೆ. ಈ ಕಾಲದಲ್ಲಿ ನಾವು ಅಬಲೆ ಗಿಬಲೆ ಎಂದೆಲ್ಲಾ ಕರೆದರೂ ಹೆಣ್ಣಿಗೆ ಇರುವ ರ್ಢ್ಯತೆ ಗಂಡಿಗೆ ಇಲ್ಲವೆಂಬುದೂ ಕೆಲವೊಮ್ಮೆ ತಿಳಿದುಬರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮರ್ಯಾದೆಯನ್ನೇ ಕೊಡಲಿಲ್ಲ ಎನ್ನುವ ಮಹಿಳೆಯರು ನಮ್ಮಲ್ಲಿನ ನವರಾತ್ರಿಗೆ ಆಗಮಿಸಬೇಕು! ನವರಾತ್ರಿಯಲ್ಲಿ ದಿನಕ್ಕೊಂದು ಶಕ್ತಿ ದೇವತೆಯಂತೇ ನವದುರ್ಗೆಯರ ಆರಾಧನೆ, ಅಷ್ಟಲಕ್ಷ್ಮಿಯರ ಆರಾಧನೆ ಜೊತೆಗೆ ಸರಸ್ವತಿಯ ಆರಾಧನೆ ಜೊತೆಜೊತೆಗೇ ನಡೆಯುತ್ತವೆ. ಸುಹಾಸಿನೀ ಪೂಜೆ ಮತ್ತು ಕುಮಾರಿಕಾ ಅಥವಾ ಕೌಮಾರೀ ಪೂಜೆ ನಮ್ಮ ಪ್ರತಿಯೊಂದೂ ವಿಶೇಷ ಪೂಜೆಗಳ ಒಂದು ಭಾಗ ಎಂಬುದನ್ನೂ ಇಲ್ಲಿ ಮರೆಯುವಂತಿಲ್ಲ. ಸದ್ಗೃಹಿಣಿಯೊಬ್ಬಳು ಮನೆಯಲ್ಲಿ ಶುಚಿರ್ಭೂತಳಾಗಿ ಅಡುಗೆ ತಯಾರಿಸಿ, ತಯಾರಿಸಿ ಭಕ್ಷ್ಯ ಭೋಜ್ಯಗಳನ್ನು ದೇವಿಗೆ ನಿವೇದಿಸಿ, ಅಗ್ರದ[ಕುಡಿಬಾಳೆ]ಎಲೆಯಿಟ್ಟು ಅವುಗಳಲ್ಲಿ ಮುತ್ತೈದೆಯರಿಗೆ ಕುವರಿಯರಿಗೆ ಊಟನೀಡಿ, ಯಥಾನ್ ಶಕ್ತಿ ದಕ್ಷಿಣೆ, ಬಟ್ಟೆ, ಅರಿಶಿನ-ಕುಂಕುಮ-ಬಳೆ-ಹೂವು ಇವೇ ಮೊದಲಾದ ಮಂಗಲ ದ್ರವ್ಯಗಳನ್ನು ಕೊಟ್ಟು ಅವರಲ್ಲೇ ದೇವಿಯ ರೂಪವನ್ನು ಕಾಣುವುದು ನವರಾತ್ರಿಯುದ್ದಕ್ಕೂ ನಡೆಯುವ ವೈಶಿಷ್ಟ್ಯ! -ಇದು ಜಗತ್ತಿನ ಇನ್ನವುದೇ ಮತದಲ್ಲಿ ಕಾಣುವುದಿಲ್ಲ!! 

ಹಾಗೆ ನೋಡಿದರೆ ಒಂದು ಸಂವತ್ಸರದಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ೧. ವಸಂತ ನವರಾತ್ರಿ, ೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ, ೩ ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ, ೪. ಪೌಷ ನವರಾತ್ರಿ ಮತ್ತು ೫. ಮಾಘ ನವರಾತ್ರಿ. ಚಿಕ್ಕದಾಗಿ ವಿವರಣೆ ತಿಳಿಯೋಣ:

೧. ವಸಂತ ನವರಾತ್ರಿ: ಇದು ಮಾರ್ಚ್ ಏಪ್ರಿಲ್ ಸಮಯದಲ್ಲಿ ಘಟಿಸುತ್ತದೆ. ಚೈತ್ರಶುದ್ಧ ಪಾಡ್ಯದಿಂದ ನವಮಿಯವರೆಗೆ ನಡೆಯುವ ಈ ನವರಾತ್ರಿ ರಾಮನವಮಿಯನ್ನು ಒಳಗೊಂಡಿರುವುದರಿಂದ ರಾಮನವರಾತ್ರಿ ಎಂತಲೂ ಕರೆಯುತ್ತಾರೆ. ಈ ಕಾಲದಲ್ಲೂ ಕೂಡ ನವ ಶಕ್ತಿಗಳ ಆರಾಧನೆ ನಡೆಯುತ್ತದೆ.

೨. ಗುಪ್ತ ನವರಾತ್ರಿ ಅಥವಾ ಶಾಕಂಬರಿ ನವರಾತ್ರಿ: ಅಷಾಢ ಮಾಸದ ಶುಕ್ಲಪಕ್ಷದ ಪ್ರಿಪಯಿಂದ ನವಮಿಯವರೆಗೆ ದೇವಿಯರ ಆರಾಧನೆ, ವಿಶೇಷವಾಗಿ ಗಾಯತ್ರೀಮಾತೆಯ ಆರಾಧನೆ ಈ ಕಾಲಘಟ್ಟದ ನವರಾತ್ರಿಯದ್ದು.

೩. ಶಾರದಾ ನವರಾತ್ರಿ ಅಥವಾ ಶರನ್ನವರಾತ್ರಿ: ಮೇಲೆ ಹೇಳಿದಹಾಗೇ ಶರನ್ನವರಾತ್ರಿ ಅಥವಾ ಮಹಾನವರಾತ್ರಿ ಎಂತಲೂ ಕರೆಯಲ್ಪಟ್ಟಿದೆ. ದುಷ್ಟ ಶಕ್ತಿಗಳ ನಿಗ್ರಹ ಮತ್ತು ಶಿಷ್ಟರ ಪರಿಪಾಲನೆ ನಡೆದ ನೆನಪಿನಲ್ಲಿ ಈ ಆಚರಣೆ. ಪಾಂಡವರು ಬನ್ನಿ ಮರಕ್ಕೆ ಕಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದ ಕಾಲ, ಶ್ರೀರಾಮ ರಾವಣನನ್ನು ವಧಿಸಿದ ಕಾಲ, ಕೌರವರನ್ನು ಕೊಂದು ಪಾಂಡವರು ಧರ್ಮಸಾಮ್ರಾಜ್ಯವನ್ನು ಸ್ಥಾಪಿಸಿದ ಕಾಲ ಇದಾಗಿತ್ತು ಎಂಬುದು ಪ್ರಾಗೈತಿಹಾಸದಿಂದ ತಿಳಿದುಬಂದ ವಿಷಯ. ಇಲ್ಲಿ ನವದಿನಗಳಲ್ಲಿ ಯಾವ ಯಾವ ದೇವಿಯರನ್ನು ಆರಾಧಿಸುತ್ತಾರೆ ಸ್ವಲ್ಪ ನೋಡೋಣ:

ಅ> ಪ್ರತಿಪದೆಯ ದಿನ : ಶೈಲಪುತ್ರಿ: ಜಗನ್ಮಾತೆ ಈ ದಿನ ಗಿರಿಜೆಯಾಗಿ ಪೂಜೆ ಸ್ವೀಕರಿಸುತ್ತಾಳೆ.ದುರ್ಗೆಯ ಮೊದಲನೇ ಮುಖ. ಅರ್ಧಚಂದ್ರನನ್ನು ಶಿರದಲ್ಲಿ ಧರಿಸಿ ನಂದಿವಾಹನೆಯಾಗಿ ಬಂದಿದ್ದಳಂತೆ ಜಗತ್ತಿಗೆ ಈ ದಿನ, ಆ ನೆನಪಿನಲ್ಲಿ ಹಾಗೇ ಪೂಜೆ.

ಬ>ಬಿದಿಗೆಯ ದಿನ:  ಬ್ರಹ್ಮಚಾರಿಣಿರೂಪದಲ್ಲಿ ದೇವಿಗೆ ಪೂಜೆ. ದುರ್ಗೆಯ ಎರಡನೇ ಮುಖ, ಕೈಯಲ್ಲಿ ಗುಲಾಬಿ ಹೂಗಳನ್ನೂ ಕಮಂಡಲವನ್ನೂ ಧರಿಸಿದ್ದಳಂತೆ. ಅದೇ ರೀತಿಯಲ್ಲಿ ಧ್ಯಾನಿಸಿ ಪೂಜಿಸಲ್ಪಡುತ್ತಾಳೆ.

ಕ> ತದಿಗೆಯ ದಿನ: ಚಂದ್ರಘಂಟಾ ಎಂಬ ರೂಪದಲ್ಲಿ ದೇವಿಯನ್ನು ದರ್ಶಿಸುತ್ತೇವೆ. ಜಗದ್ಧಾತ್ರಿಯ ಮೂರನೇ ಮುಖ ಇದಾಗಿದ, ಬಹಳ ಕೋಪದಿಂದ ಹೊರಡುತ್ತಾ ಶಿರದಲ್ಲಿ ಅರ್ಧಚಂದ್ರನನ್ನು ಧರಿಸಿ ಹುಲಿಯಮೇಲೆ ಕುಳಿತು, ಚಂದ್ರಘಂಟಾ ಎಂದು ಕರೆಯಲ್ಪಟ್ಟಳಂತೆ-ಅದೇ ರೂಪದಲ್ಲಿ ಪೂಜೆ.

ಡ> ಚತುರ್ಥಿಯ ದಿನ : ಕೂಷ್ಮಾಂಡ ರೂಪಿಣಿಯಾಗಿ ಕಾಣುತ್ತಾಳೆ. ಎರಡು ಕೈಗಳಲ್ಲಿ ರಕ್ತತುಂಬಿದ ಎರಡು ಹೂಜೆಗಳನ್ನು ಹಿಡಿದು ಆರ್ಭಟಿಸುವ ಶಕ್ತಿ ಸೃಷ್ಟಿಯ ಸೃಷ್ಟಿ, ಸ್ಥಿತಿ. ಲಯ ಕರ್ತೆಯಾಗಿ, ಸೂರ್ಯಮಂಡಲವನ್ನು ತನ್ನ ಶಕ್ತಿಯಿಂದ ಸೃಜಿಸಿದಳೆಂಬ ಕಾರಣಕ್ಕಾಗಿ ಆಕೆಯನ್ನು ಅದೇ ರೂಪದಲ್ಲಿ ಆರಾಧಿಸಲಾಗುತ್ತದೆ.

ದ> ಪಂಚಮಿಯ ದಿನ: ಸ್ಕಂದಮಾತಾ ಅಂದರೆ ಕಾರ್ತಿಕೇಯನಿಗೆ ಜನ್ಮವಿತ್ತ ದೇವಿ ಸಿಂಹಾಸನದಮೇಲೆ ಕುಳಿತು  ಕಮಲದ ಹೂಗಳನ್ನು ಧರಿಸಿದ್ದಳಂತೆ-ಅದೇ ರೂಪದಲ್ಲಿ ಈ ದಿನ ಪೂಜೆ.

ನ> ಷಷ್ಠಿಯ ದಿನ :  ಕಾತ್ಯಾಯಣಿಯಾಗಿ ಅಲಂಕಾರಗೊಳ್ಳುತ್ತಾಳೆ.ಕಾತ್ಯ ಋಷಿಯ ಮಗಳಾಗಿ, ಚಂದ್ರಹಾಸವೆಂಬ ಆಯುಧವನ್ನು ಹಿಡಿದು ಸಿಂಹವಾಹನೆಯಾಗಿ ಕಡುಕೋಪದಲ್ಲಿ ವಿಜೃಂಭಿಸಿದ ಶಕ್ತಿ ಕಾತ್ಯಾಯಣಿ. ಈ ದಿನ ಆ ರೂಪದಲ್ಲಿ ಪೂಜೆ.

ಪ> ಸಪ್ತಮಿಯ ದಿನ : ಭಯಂಕರವಾಗಿ ಘರ್ಜಿಸುತ್ತಾ ಬೆಳಕೇ ಕಾಣಿಸದಂತೇ ಕತ್ತಲರೂಪವನ್ನೂ ಕತ್ತಲಲ್ಲೇ ಮಿರುಗುವ ಬಣ್ಣಬಣ್ಣದ ಆಭರಣಗಳನ್ನೂ ಧರಿಸಿದ ದೇವಿ ಕತ್ತೆಯನ್ನೇರಿ ಕಾಣಿಸಿಯೂ ಕಾಣಿಸದಂತಾಗಿ ದುಷ್ಟರನ್ನು ಮಟ್ಟಹಾಕುವ ಕಾಲರಾತ್ರಿಯಾಗಿ ಸಂಹರಿಸಿದ ದಿನವೆಂದು ತಿಳಿಯಲಾಗಿದೆ, ಕಾಲರಾತ್ರಿಯ ಆರಾಧನೆ.

ಫ> ಅಷ್ಟಮಿಯ ದಿನ : ಮಹಾಗೌರಿಯಾಗಿರುತ್ತಾಳೆ. ಷೋಡಶಿಯಾಗಿದ್ದ ಗಿರಿಜೆ ಮಹಾದೇವನ ಮಡದಿಯಾಗುತ್ತಾಳೆ-ಮಹಾದೇವಿ ಮಹಾಗೌರಿ ಎನಿಸುತ್ತಾಳೆ. ಗೌರನ ಅರ್ಧಾಂಗಿ ಶ್ರೀಗೌರಿಯ ಆರಾಧನೆ ಈ ದಿನ ನಡೆಯುತ್ತದೆ.  

ಮ> ನವಮಿಯ ದಿನ : ಸಿದ್ಧಿದಾತ್ರಿ! ಸಿದ್ಧರು, ಯಕ್ಷರು, ಗಂಧರ್ವರು, ಕಿನ್ನರರು, ಕಿಂಪುರುಷರು, ಕೆಲವು ಅಸುರರು, ದೇವತೆಗಳು ಎಲ್ಲರೂ ತಮ್ಮ ತಮ್ಮ ಸಿದ್ಧಿಗಾಗಿ ಪ್ರಾರ್ಥಿಸಿದಾಗ ಸಿದ್ಧಿದಾತ್ರಿಯಾಗಿ ಸಿದ್ಧಿಯನ್ನು ಅನುಗ್ರಹಿಸುವವಳಾಗಿ ಕಾಣಿಸಿಕೊಂಡಳಂತೆ. ಅದಕ್ಕೇ ಈ ದಿನ ಸಿದ್ಧಿದಾತ್ರಿಯ ಆರಾಧನೆ ನಡೆಯುತ್ತದೆ. ದುರ್ಗೆಯನ್ನು ಆಹ್ವಾನಿಸಿ ವಾಹನ, ಯಂತ್ರೋಪಕರಣ, ಆಯುಧಗಳ ಪೂಜೆ ನಡೆಯುತ್ತದೆ.

ಇದಲ್ಲದೇ ಬ್ರಹ್ಮಾಣಿ, ವೈಷ್ಣವಿ, ಮಾಹೇಶ್ವರಿ, ಇಂದ್ರಾಣಿ, ಕೌಮಾರಿ, ವಾರಾಹಿ ಮತ್ತು ಚಾಮುಂಡಾ ಎಂಬ ಅಷ್ಟಮಾತೃಕೆಯರ  ಆರಾಧನೆಯೂ ಸಹ ನಡೆಯುತ್ತದೆ. ಮೂಲಾ ನಕ್ಷತ್ರ ಆರಂಭವಾದ ದಿನ ವಿಗ್ರಹ ರೂಪದಲ್ಲೋ ಯಾ ಪುಸ್ತಕಗಳ ರೂಪದಲ್ಲೋ ಶಾರದೆಯನ್ನು ಸ್ಥಾಪಿಸಲಾಗುತ್ತದೆ. ಅಂದಿನಿಂದ ದಶಮಿಯ ವರೆಗೆ ನಾಲ್ಕು ದಿನಗಳ ಪರ್ಯಂತ ಸರಸ್ವತಿಗೆ ಪೂಜೆ ಸಲ್ಲುತ್ತದೆ. ಅಷ್ಟಮಿ ನವಮಿ ಮತ್ತು ದಶಮಿಗಳಂದು ಮಹಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತೀ ಪೂಜೆ ನಡೆಯುತ್ತದೆ. 

ವಿಜಯದಶಮಿ ವಿಜಯದ ಸಂಕೇತವಂತೆ. ಪಾಂಡವರಿಗೆ ಗೆಲುವುತಂದ ದಿನ, ಶ್ರೀರಾಮನಿಗೆ ಿಜ ದೊರೆತ ದಿನ ಇದೇ ಆಗಿದೆ ಎಂದು ಪ್ರಾಗೈತಿಹಾಸ ಹೇಳುತ್ತದೆ. ವಿಜಯ ದಶಮಿಯಂದು ಶಾರದೆಗೆ ವಿಶೇಷ ಪೂಜೆ ಮಧ್ಯಾಹ್ನದಲ್ಲಿ ಸಲ್ಲಿಸಲ್ಪಟ್ಟು, ಸ್ಥಾಪಿತ ಶಾರದೆಯನ್ನು ಷೋಡಶೋಪಚಾರ ಮಹಾಪೂಜೆಗಳಿಂದ   ಆರಾಧಿಸಿದನಂತರ ಶಾರದಾ ವಿಸರ್ಜನೆ ನಡೆಯುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸದ ಆರಂಭದ ದಿನ ಇದಾಗಿದೆ. ಹಲವು ಜನ ಹೊಸ ಉದ್ಯಮಗಳನ್ನು ಇಂದೇ ಆರಂಭಿಸುತ್ತಾರೆ. ಕೆಲವರು ಅಂಗಡಿಮುಂಗಟ್ಟುಗಳಲ್ಲಿ ಪೂಜೆ ನಡೆಸುತ್ತಾರೆ. ಕರ್ನಾಟಕದಲ್ಲಿ ಮೈಸೂರಿನಲ್ಲಿ ಜಂಬೂ ಸವಾರಿ ನಡೆಯುತ್ತದೆ. ಶೃಂಗೇರಿ, ಕೊಲ್ಲೂರು ಮೊದಲಾದ ಜಾಗೃತ ದೇವಾಲಯಗಳಲ್ಲಿ ತ್ರಿಗುಣಸ್ವರೂಪೀ ದೇವಿಯ ಆರಾಧನೆ ನಡೆಸಲ್ಪಡುತ್ತದೆ. ಸಂಜೆ ಉತ್ತರಭಾರತದಲ್ಲಿ ರಾವಣದಹನ ಕಾರ್ಯಕ್ರಮ ನಡೆಸಲ್ಪಡುತ್ತದೆ.

ಈಗತ್ತಾಕಿ ಉಳಿದ ನಾತ್ರಿಗನ್ನಿಳಿಯೋಣ: 
 
೪. ಾತ್ರಿ: ಿಸೆಂಬರ್-ಜಿ ಸಂದರ್ಲ್ಲಿ ುಗುವಾತ್ರಿ ಇದು. ಮತ್ತೆ ದೇವಿಯ ಆರೆ. ಪಷ್ಯಾಸ ುಕ್ಲ ಪ್ರಿಪತ್ ನಿಂದಿಯೆಗೆ ಜುವ ಅಮ್ಮ ಆರೆ.

೫. ಮಾತ್ರಿ :  ಾಸ ುಕ್ಲ ಾಡ್ಯಿಂದ ಿಯೆಗೆ ಜುವ  ಂಬೆಯ ಆರೆ. ಸಾನ್ಯಾಗಿ ಜಿ ತಿಂಗೊನೆ ಅಬ್ರಿ ತಿಂಗಲ್ಲಿ ಬುತ್ತ
 
[ಈ ಎಲ್ಲಾ ನವರಾತ್ರಿಗಳನ್ನೂ ಅಖಂಡ ಭರತವರ್ಷದ ರಾಜರುಗಳು ನಡೆಸುತ್ತಿದ್ದರು. ದೇವರನ್ನು ಅಮ್ಮನ ರೂಪದಲ್ಲಿ ಕಂಡರೆ ಸ್ವಂತ ಅಮ್ಮನನ್ನು ಕಂದಷ್ಟೇ ತೃಪ್ತಿ-ತಮ್ಮ ನೋವು-ನಲಿವುಗಳನ್ನು ಹಡೆದಮ್ಮನಲ್ಲಿ ಹೇಳಿಕೊಂಡ ಹಾಗೇ ಜಗದಮ್ಮನಲ್ಲಿ ಹೇಳಿಕೊಳ್ಳುತ್ತಿದ್ದರು. ಕಾಲಾನಂತರ ಅಧುನಿಕ ಜೀವನದ ಭರದಲ್ಲಿ, ರಾಜರುಗಳ ಆಳ್ವಿಕೆ ಅಳಿದಮೇಲೆ ಈಗ ಶಾರದಾ ನವರಾತ್ರಿ ಮಾತ್ರ ಪ್ರಮುಖವಾಗಿ ಆಚರಣೆಯಲ್ಲಿದೆ. ಉತ್ತರಭಾರತದಲ್ಲಿ ಬಹಳ ಕಡೆ ವಸಂತ ನವರಾತ್ರಿಯನ್ನೂ ಆಚರಿಸುತ್ತಾರೆ. ]

ಇಂತೀಪರಿಯಲ್ಲಿ ನವರಾತ್ರಿಯ ಮಹತ್ವವನ್ನು ಸ್ಥೂಲವಾಗಿ ತಿಳಿದಿದ್ದೀರಿ. ಮಧು-ಕೈಟಭರನ್ನೂ, ಶುಂಭ-ನಿಶುಂಭರನ್ನೂ, ಸುಂದೋಪಸುಂದರನ್ನೂ ದೇವಿ ಹನನ ಮಾಡುತ್ತಾಳೆ. ಮೂಕಾಸುರನನ್ನೂ ಮಹಿಷಾಸುರನನ್ನೂ ದೇವಿ ಕೊಲ್ಲುತ್ತಾಳೆ. ತ್ರಿಮೂರ್ತಿಗಳ ಮಡದಿಯರಾಗಿ ಕಾಣುವ ದೇವಿ,  ದೇವಿ ಮಹಾತ್ಮೆಯಲ್ಲಿ ತಾನೇ ಎಲ್ಲದಕ್ಕೂ ಆಧಾರ ಎಂಬುದನ್ನು ಎತ್ತಿ ತಿಳಿಸಿದ್ದಾಳೆ. ಅಪ್ಪ ಇದ್ದಮೇಲೆ ಅಮ್ಮ ಇರಲೇಬೇಕಲ್ಲಾ? ಇಲ್ಲದಿದ್ದರೆ ಅಪ್ಪನನ್ನು ಅಪ್ಪನೆನ್ನಲು ಸಾಧ್ಯವೇ? ಋಷಿಗಳ ಕಾಲದಲ್ಲಿ ಅದು ಸಾಧ್ಯವಾಗಿರಬಹುದಾದರೂ ಮೂಲದಲ್ಲಿ ಋಷಿಗಳಿಗೂ ಒಬ್ಬ ಅಮ್ಮ ಇರಲೇಬೇಕಲ್ಲಾ? ಅಪ್ಪ-ಅಮ್ಮ ಎರಡೂ ಒಂದೇ ಶಕ್ತಿಯ ಎರಡು ಮುಖಗಳಾದರೂ ಎರಡೂ ಮುಖಗಳನ್ನು ತಿಳಿದುಕೊಳ್ಳಬೇಕಾದುದು, ಒಪ್ಪಿಕೊಳ್ಳಬೇಕಾದುದು, ಆರಾಧಿಸಬೇಕಾದುದು ನಮ್ಮ ಧರ್ಮ. ನಾಣ್ಯಕ್ಕೆ ಹೇಗೆ ಎರಡು ಮುಖವೋ, ಸಂಸಾರಕ್ಕೆ ಹೇಗೆ ಗಂಡ-ಹೆಂಡಿರೋ ಹಾಗೇ ಪ್ರಕೃತಿ-ಪುರುಷರ ಪರೋಕ್ಷ ಆರಾಧನೆಯಲ್ಲಿ ನವರಾತ್ರಿ ಪ್ರಕೃತಿ ಆರಾಧನೆ ಅರ್ಥಾತ್ ಸ್ತ್ರೀ ರೂಪದ ಆರಾಧನೆಗೆ ಮೀಸಲಾಗಿದೆ.   

ಸರ್ವರಿಗೂ ಶರನ್ನವರಾತ್ರಿಯ ಹಾರ್ದಿಕ ಶುಭಾಶಯಗಳು. ದೇವಿ ಸಕಲ ಸಮೃದ್ಧಿಯನ್ನೂ ಇತ್ತು ಪೊರೆಯಲಿ ಎಂದು ಹಾಸುತ್ತೇನೆ. ಜಗವನ್ನು ಹೊತ್ತು, ಜಗವನ್ನು ಹೆತ್ತು, ಹೆತ್ತಜಗವನ್ನೇ ಮತ್ತೆ ಹೊತ್ತು ಮುನ್ನಡೆಸುವ, ಆ ನಡೆಯಲ್ಲೇ ಆನಂದವನ್ನು ಅನುಭವಿಸುವ ಅದಿಪರಾಶಕ್ತಿಗೆ ನಮ್ಮ ನಮನಗಳನ್ನು ಹೀಗೆ ಹೇಳೋಣ:

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ|
ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೆ || 

Tuesday, October 16, 2012

ಶರನ್ನವರಾತ್ರಿಯ ಪ್ರಾರ್ಥನೆ

ಚಿತ್ರಕೃಪೆ : ಹರೇರಾಮ.ಇನ್ [hareraama.in]
ಶರನ್ನವರಾತ್ರಿಯ ಪ್ರಾರ್ಥನೆ

ಜಗನಾಳುವ ಶಕ್ತಿ ಮೊಗೆದು ತನ್ನನು ತೋರಿ
ಬಗೆಬಗೆಯ ರೂಪದಲಿ ಬರಲು ನಗೆ ಬೀರಿ
ಅಗರು ಕಸ್ತೂರಿ ಸಿರಿಗಂಧ ಪುಷ್ಪಗಳಿಟ್ಟು
ಮುಗುದ ಮನದಲಿ ನಮಿಸಿ ಸ್ವಾಗತವ ಕೋರಿ

ತೆಗೆದು ಮುಗಿಯದ ಗುಪ್ತ ಶಕ್ತಿಯಾಗರ ಗಹನ
ನಗದು ರಾಮನಲೊಮ್ಮೆ ಅಂಬೆ ಕಾಳಿಯಲಿ
ನಗರದೇವತೆಯಾಗಿ ಸಡಗರದಿ ನೆಲೆನಿಂದು
ಖಗವಾಹನನ ಮಡದಿ ಶಿವೆಯು ಸರಸತಿಯು !

ಮೊಗೆಯಲಿಡುವೆವು ಧೂಪ ಚಿನ್ನದಾರತಿ ಬೆಳಗಿ
ಸೊಗದ ಸಿರಿಯದು ಲಭಿಸೆ ನಿನ್ನ ಧ್ಯಾನಿಪೆವು
ನೊಗವ ಹೊತ್ತಿವೆವಿಲ್ಲಿ ನಿನ್ನ ಈ ನೆಲದಲ್ಲಿ
ಜಗದಂಬೆ ಶಕ್ತಿಕೊಡು ಶಕ್ತಿರೂಪಿಣಿಯೇ

ಮೊಗದ ಚೆಲುವನು ಕಂಡು ಮರೆತೆವೀ ಭಾರವನು
ಮಗುದೊಮ್ಮೆ ನವರಾತ್ರಿ ನವದಿನದ ಪೂಜೆ
ಮಿಗಿಲು ಮಾತೆಯ ಪ್ರೀತಿ ಅದನು ಹರಿಸುವ ರೀತಿ
ಮಗುವೆಂಬ ಮಮತೆಯಲಿ ಸಲಹು ಎಲ್ಲರನು 

ಸಗರ ಸಂತತಿಗಲ್ಲಿ ಗಂಗೆಯಾಗುತ ಹರಿದೆ
ಚಿಗರೆಕಂಗಳ ಸೊಬಗ ಶಿರಸಿ ಮಾರಿಕೆಯೇ
ಅಗಲವಿಸ್ತಾರಗಳ ಹರಹು ಬಲ್ಲವರಾರು ?
ತೊಗಲುಗೊಂಬೆಗಳಮ್ಮ ನಿನ್ನ ಮಕ್ಕಳಿವು ! 

Wednesday, October 10, 2012

ಅಚಲ ನಿರ್ಧಾರದ ತಾಕತ್ತು-ಸಾವಿಗೇ ಸವಾಲೊಡ್ಡಿ ನಿಂತು ಗೆಜ್ಜೆ ಕಟ್ಟಿ ಕುಣಿವ ಕರಾಮತ್ತು !

 ಚಿತ್ರಗಳ ಋಣ : ಅಂತರ್ಜಾಲ
ಅಚಲ ನಿರ್ಧಾರದ ತಾಕತ್ತು-ಸಾವಿಗೇ ಸವಾಲೊಡ್ಡಿ ನಿಂತು ಗೆಜ್ಜೆ ಕಟ್ಟಿ ಕುಣಿವ ಕರಾಮತ್ತು !  

ಇದೊಂದು ನೈಜ ಘಟನೆ. ಅದೊಂದು ಹಳ್ಳಿ, ಅಲ್ಲೊಂದು ಶಾಲೆ. ವಿಪರೀತ ಚಳಿಯ ವಾತಾವರಣದಲ್ಲಿ ಶಾಲೆಯಲ್ಲಿ ಚಳಿ ಓಡಿಸಲು ನಿತ್ಯ ಬೆಳಿಗ್ಗೆ ಬೊಡ್ಡೆ ಅಥವಾ ಚರಿಗೆ ಯಾನೇ ಗಡಿಗೆ ಆಕಾರದ ಕಲ್ಲಿದ್ದಲ ಒಲೆಯನ್ನು ಉರಿಸಬೇಕಾಗಿತ್ತು. ಚಿಕ್ಕ ಹುಡುಗನೊಬ್ಬ ಬೇಗನೇ ಎದ್ದು, ಶಿಕ್ಷಕರುಗಳೂ ಮತ್ತು ಸಹಪಾಠಿಗಳೂ ಬರುವುದರೊಳಗೇ ಶಾಲೆಗೆ ಬಂದು ಆ ಕೆಲಸವನ್ನು ನಿಭಾಯಿಸುತ್ತಿದ್ದ. ಹೀಗೇ ಒಂದು ಬೆಳಿಗ್ಗೆ ಅವರೆಲ್ಲಾ ಬರುವ ಹೊತ್ತಿಗೆ ಶಾಲೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುವುದರಲ್ಲಿತ್ತು. ಬೆಂಕಿಯಲ್ಲಿ ಬೇಯುತ್ತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹುಡುಗನನ್ನು ಹೊರಗೆ ಎಳೆದುಕೊಂಡು ಬಂದು ನೋಡುತ್ತಾರೆ ದೇಹದ ಕೆಳಭಾಗ ಪೂರ್ಣವೇ ಎಂಬಷ್ಟು ಸುಟ್ಟುಹೋಗಿದೆ. ತಕ್ಷಣವೇ ಅವನನ್ನು ಹತ್ತಿರದ ಚಿಕ್ಕ ಆಸ್ಪತ್ರೆಗೆ ಸಾಗಿಸುತ್ತಾರೆ. ಹಾಸಿಗೆಯಲ್ಲಿ ಅರೆಜೀವವಾಗಿ ಬಿದ್ದುಕೊಂಡಿದ್ದಾಗಲೇ ವೈದ್ಯರು ತನ್ನಮ್ಮನಲ್ಲಿ ಮಾತನಾಡಿದ್ದನ್ನು ಹುಡುಗ ಕೇಳಿಸಿಕೊಳ್ಳುತ್ತಾನೆ! ಶರೀರದ ಬಹಳ ಭಾಗ ಸುಟ್ಟುಹೋಗಿರುವುದರಿಂದ ಆತ ಸತ್ತುಹೋದರೇ ಒಳ್ಳೆಯದು, ಬದುಕಿದ್ದರೂ ಆತ ಸರಿಯಾಗಿ ಜೀವಿಸಲಾರ ಎಂಬ ಅಭಿಪ್ರಾಯವನ್ನು ವೈದ್ಯರು ಆತನ ತಾಯಿಗೆ ತಿಳಿಸುತ್ತಿರುವುದು ಗೊತ್ತಾಗುತ್ತದೆ.

ಆದರೆ ಆ ಹುಡುಗ ಸಾಯಲು ಸಿದ್ಧನಿರಲಿಲ್ಲ! ತಾನು ಬದುಕಿಯೇ ಬದುಕುತ್ತೇನೆ ಎಂದು ಆತ ತನ್ನೊಳಗೇ ನಿರ್ಧರಿಸುತ್ತಾನೆ. ವೈದ್ಯರಿಗೇ ಪರಮಾಶ್ಚರ್ಯ-ಆತ ಬದುಕಿ ಉಳಿಯುತ್ತಾನೆ! ಆದರೂ ಮತ್ತೆ ವೈದ್ಯರ ಮಾತು ಕೇಳಿಸುತ್ತದೆ ಏನೆಂದರೆ ದೇಹದ ಕೆಳಭಾಗದ ಮಾಂಸಖಂಡಗಳು ಸುಟ್ಟು ಕರಕಲಾಗಿರುವುದರಿಂದ ಆತ ಸಾಯುವುದೇ ಒಳ್ಳೆಯದಿತ್ತು, ಬದುಕಿದ್ದರೂ ಜೀವನಪೂರ್ತಿ ಆತ ಏನೂ ಮಾಡಲಾರದವನಾಗಿ ಪರಾವಲಂಬಿಯಾಗಿ ಬದುಕಬೇಕಾಗುತ್ತದೆ ಎಂಬುದಾಗಿ ಆತನ ಅಮ್ಮನಲ್ಲಿ ಹೇಳಿದರು. ಹೇಗೂ ಬದುಕುಳಿದಿದ್ದೇನೆ ಎಂಬುದು ಖಾತ್ರಿಯಾಗುತ್ತಿದಂತೆಯೇ ಹುಡುಗ ಮನದಲ್ಲೇ ನಿರ್ಧರಿಸುತ್ತಾನೆ: ತಾನೆಂದೂ ನಡೆಯಲಾಗದಂಥಾ ವ್ಯಕ್ತಿಯಾಗಿ, ಪರಾವಲಂಬಿಯಾಗಿ ಇರುವುದಿಲ್ಲ! ಆದರೆ ದುರ್ದೈವವಶಾತ್ ಆ ಕ್ಷಣದಲ್ಲಿ ಆತನಲ್ಲಿ ಸೊಂಟದ ಕೆಳಗಿನ ಅಂಗಾಂಗಗಳು ಕೆಲಸಮಾಡುತ್ತಿರಲಿಲ್ಲ. ಆತನ ತೆಳುವಾದ ಕಾಲುಗಳು ಅಶಕ್ತವಾಗಿ ನೇತಾಡುತ್ತಿದ್ದವು. ಅಂತೂ ಹಾಗೂ ಹೀಗೂ ಗಾಯವಾಸಿಯಾದಮೇಲೆ ಆತನನ್ನು ವೈದ್ಯರು ಮನೆಗೆ ಕಳಿಸಿಕೊಟ್ಟರು. ಆದರೆ ಆ ಕಾಲುಗಳ ಮೇಲೆ ಹುಡುಗನಿಗೆ ಯವುದೇ ಹಿಡಿತವಾಗಲೀ, ಸ್ಪರ್ಶಜ್ಞಾನವಾಗಲೀ ಇರಲೇ ಇಲ್ಲ. ಆತನ ಅಮ್ಮ ಪ್ರತಿದಿನ ಆತನ ಕಾಲುಗಳನ್ನು ಒತ್ತಿ ಮಸಾಜ್ ಮಾಡಿಕೊಡುತ್ತಿದ್ದಳು. ಪ್ರೀತಿಯಿಂದ ಮಗನನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿಡುತ್ತಿದ್ದಳು. 

ತಾನು ಗಾಲಿ ಕುರ್ಚಿಯಲ್ಲಿ ಕೂತು ಬದುಕುವುದಿಲ್ಲ, ತಾನು ನಡೆಯಲೇ ಬೇಕು ಎಂದು ಹುಡುಗ ನಿರ್ಧರಿಸಿದ. ಒಂದು ಭಾನುವಾರ ಎಂದಿನಂತೇ ಗಾಲಿಕುರ್ಚಿಯಲ್ಲಿ ಮಗನನ್ನು ಕೂರಿಸಿ ಎಳೆಬಿಸಿಲಲ್ಲಿ ತಾಜಾ ಹವೆಯ ಸೇವನೆಗೆ ಅಂತ ಹಾಗೇ ಹೊರಗೆ ಅಂಗಳದಲ್ಲಿ ಬಿಟ್ಟು ಆತನ ಅಮ್ಮ ಅಲ್ಲೆಲ್ಲೋ ಕೆಲಸಕ್ಕೆ ತೆರಳಿದ್ದಳು. ನಿಧಾನವಾಗಿ ಪಕ್ಕದಲ್ಲಿರುವ ಬೇಲಿಯ ಕಡೆಗೆ ಗಾಲಿಕುರ್ಚಿ ಓಡಿಸಿಕೊಂಡು, ಬೇಲಿಯ ಗೂಟವನ್ನು ಹಿಡಿದು ಮೇಲೆದ್ದುನಿಂತ ಆ ಹುಡುಗ! ಹಾಗೇ ನಿಧಾನವಾಗಿ ಕುರ್ಚಿಯಿಂದಿಳಿದು ಒಂದೊಂದೇ ಗೂಟವನ್ನು ಹಿಡಿಯುತ್ತಾ ಶರೀರವನ್ನು ಎಳೆದುಕೊಂಡು ಕದಲಲು ಪ್ರಯತ್ನಿಸಿದ!! ಈ ಕೆಲಸವನ್ನು ಆತ ಪ್ರತಿನಿತ್ಯ ಮುಂದುವರಿಸಿದ. ಅದನ್ನು ಕಂಡ ಅಮ್ಮ ಆತನಿಗಾಗಿ ಬೇಲಿಯುದ್ದಕ್ಕೂ ನುಣುಪಾದ ನೆಲಹಾಸನ್ನು ಹಾಕಿಸಿಕೊಟ್ಟಳು. ಹೇಗಾದರೂ ಮಾಡಿ ತ್ರಾಣವಿಲ್ಲದ ತನ್ನ ಕಾಲುಗಳಲ್ಲಿ ಚೈತನ್ಯ ತುಂಬಿಸುವುದು ಆತನ ಇಚ್ಛೆಯಾಗಿತ್ತು, ನಿರ್ಧಾರವಾಗಿತ್ತು. ಪ್ರತಿನಿತ್ಯದ ಮಸಾಜು [ನೀವುವಿಕೆ] ಮತ್ತು ಅವಿರತ ಪ್ರಯತ್ನದಿಂದ ಒಂದುದಿನ ಆತ ಯಾವುದೇ ಸಹಾಯವಿಲ್ಲದೇ ಎದ್ದುನಿಂತ! ನಿಂತವನು ನಿಧಾನವಾಗಿ ಹೆಜ್ಜೆ ಎತ್ತಿಡಲು ಯತ್ನಿಸಿದ. ಹೆಜ್ಜೆ ಎತ್ತಿಡಲು ಮುಂದಾದ ಅವನು ನಿಧಾನವಾಗಿ ನಡೆಯಲು ಯತ್ನಿಸಿದ. ನಂತರ ಜೋರಾಗಿ ನಡೆಯಲು ಯತ್ನಿಸಿದ, ತದನಂತರ ಓಡಲು ಯತ್ನಿಸಿದ. ಮೊದಲಿದ್ದ ಕಾಲುಗಳು ಇಲ್ಲವಾಗಿದ್ದವು; ಹೆಸರಿಗೆ ಮಾತ್ರ ಇರುವ ಕಾಲುಗಳಲ್ಲಿ ಮತ್ತೆ ತ್ರಾಣ ಕಂಡಿತ್ತು, ಕಾಲುಗಳು ಮಾತುಕೇಳುತ್ತಿದ್ದವು-ಹಿಡಿತ ತಕ್ಕಮಟ್ಟಿಗೆ ಸಿಕ್ಕಿತ್ತು. ಹುಡುಗ ಮತ್ತೆ ಶಾಲೆಗೆ ನಡೆದ, ನಂತರ ಶಾಲೆಗೆ ಓಡಿದ. ಶಾಲೆಯಲ್ಲಿ ತನ್ನದೇ ಮುಖಂಡತ್ವದಲ್ಲಿ ಟ್ರಾಕ್ ತಂಡ ಕಟ್ಟಿಕೊಂಡು ಓಡಲು ಆರಂಭಿಸಿದ!

ಯಾವ ಹುಡುಗ ಬದುಕುವುದೇ ಇಲ್ಲಾ ಎಂದು ವೈದ್ಯರು ಭಾವಿಸಿದ್ದರೋ, ಯಾವ ಹುಡುಗ ಬದುಕಿದರೂ ಇನ್ನೊಬ್ಬರಿಗೆ ಭಾರ ಎಂದು ವೈದ್ಯರು ಬಗೆದಿದ್ದರೋ, ಯಾವ ಹುಡುಗ ಓಡುವುದಂತೂ ಕನಸಿನ ಮಾತು ಎಂದು ಮತ್ತೆ ಹೇಳಿದ್ದರೋ,  ಕಾಲಾನಂತರದಲ್ಲಿ, ಮೆಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಆ ಹುಡುಗ ಜಗತ್ತಿನಲ್ಲೇ ವೇಗದ ಓಟದಲ್ಲಿ ಮೊದಲಿಗನೆಂಬ ದಾಖಲೆ ಸೃಷ್ಟಿಸಿದ; ಆ ಹುಡುಗನೇ ಡಾ| ಗ್ಲೆನ್ ಕನ್ನಿಂಗ್ ಹಾಮ್. ೧೬ ಜೂನ್ ೧೯೩೪ರಂದು ೪:೦೬.೮ ನಿಮಿಷಗಳಲ್ಲಿ ಮೈಲು ದೂರ ಓಡಿಮುಗಿಸಿ ಹಿಂದಿನ ವಿಶ್ವದಾಖಲೆಯನ್ನು ಮುರಿದವರು ಈ ಗ್ಲೆನ್ ಕನ್ನಿಂಗ್ ಹಾಮ್.

ಇಂತಹ ಅನೇಕರು ಭಾರತದಲ್ಲೂ ಇದ್ದಾರೆ, ಅಜ್ಞಾತವಾಗಿದ್ದಾರೆ-ಪ್ರಚಾರಕ್ಕೆ ಬಂದಿಲ್ಲ. ಅಲ್ಲಲ್ಲಿ ನಮಗೆ ಕೆಲವು ವ್ಯಕ್ತಿಗಳ ಮಾಹಿತಿ ಸಿಗುತ್ತದೆ. ಬದುಕು ಹಲವು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುವುದು ನಿರೀಕ್ಷಿತವೇ! ಯಾರ ಬದುಕು ಯಾವಾಗ ಹೇಗೆ ತಿರುಗುತ್ತದೆ ಎಂಬುದರ ಬಗ್ಗೆ ಮಾತ್ರ ಖಚಿತತೆ ಯಾರಲ್ಲೂ ಇರುವುದಿಲ್ಲ. ಆದರೂ ಭಗವಂತ ಕೊಟ್ಟ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವತ್ತ ನಾವು ಮುನ್ನಡೆಯಬೇಕು. ಹಾಗೆ ಮುನ್ನಡೆಯುವಾಗ ಅಚಲವಾದ, ದೃಢವಾದ ನಿರ್ಧಾರ ಬೇಕೇಬೇಕು. ನೆಪೋಲಿಯನ್ ಹಿಲ್ ಎಂಬಾತ ಬರೆದ ’ ಥಿಂಕ್ ಅಂಡ್ ಗ್ರೋ ರಿಚ್ ’ ಎಂಬ ಪುಸ್ತಕದ ಬಗ್ಗೆ ಬಹಳ ಹಿಂದೊಮ್ಮೆ ಹೇಳಿದ್ದೆ.  ಅದರಲ್ಲಿ ಲೇಖಕ ಸ್ವಾನುಭವವನ್ನು ಹಂಚಿಕೊಂಡಿದ್ದಾನೆ. ೫೦೦ ಕ್ಕೂ ಅಧಿಕ ಖ್ಯಾತನಾಮರನ್ನು ಸಂದರ್ಶಿಸಿ, ಅವರ ಯಶಸ್ಸಿನ ಹಿಂದೆ ಇರುವ ಸಾಹಸಗಾಥೆಯನ್ನು ಹುಡುಕಿದ್ದಾನೆ. ಆ ಮೂಲಕ ನ್ಯಾಯವಾಗಿ ಸಿರಿವಂತಿಕೆಯನ್ನು ಪಡೆಯಲು ಕೆಲವು ಮೂಲಭೂತ ಅಂಶಗಳನ್ನು ಆತ ಯಾದಿಮಾಡಿದ್ದಾನೆ:

೧. ಉತ್ಕಟ ಮನೋಭಿಲಾಷೆ

೨. ನಂಬಿಕೆ

೩. ಸ್ವಯಂ ಸಲಹೆ

೪. ಯಾವುದಾದರೊಂದರಲ್ಲಿ ವಿಶೇಷ ಪರಿಣತಿ

೫. ದೂರದರ್ಶಿತ್ವ

೬. ವ್ಯವಸ್ಥಿತ ಕಾರ್ಯಯೋಜನೆಗಳು

೭. ನಿರ್ಧಾರ

೮. ತಾಳ್ಮೆ

೯. ಮನೋದಾರ್ಢ್ಯತೆ

೧೦. ಲೈಂಗಿಕ ಕಾಮದ ದಾಹವನ್ನು ಪರಿವರ್ತಿಸಿ ಬೇರೇ ಉತ್ತಮ ಕೆಲಸಗಳಿಗೆ ಬಳಸಿಕೊಳ್ಳುವಿಕೆ

೧೧. ಸುಪ್ತ ಮನಸ್ಸಿನಲ್ಲಿ ನಿಲ್ಲಿಸಿಕೊಳ್ಳುವ ಸ್ತಬ್ಧ ಚಿತ್ರಗಳು

೧೨. ಸಕ್ರಿಯ ಮೆದುಳು

೧೩. ಸಿಕ್ತ ಸೆನ್ಸ್ ಅಥವಾ ಮುಂದೆ ಹೀಗೇ ಆಗುತ್ತದೆ ಎಂಬ ಯಾವುದೋ ಅನಿಸಿಕೆ, ವಿಶಿಷ್ಟ ದೂರಗ್ರಾಹಿತ್ವ. 

ಈ ಅಂಶಗಳಲ್ಲಿಯೂ ನಿರ್ಧಾರ ಎಂಬುದನ್ನು ಕಾಣುತ್ತೀರಿ. ಇದೂ ಅಲ್ಲದೇ ಹದಿನಾರು ನೀತಿಗಳನ್ನು ಹದಿನಾರು ಕಥೆಗಳ ರೂಪದಲ್ಲಿ ಲೇಖಕ ಬರೆದಿದ್ದಾನೆ. ಭಾರತವೂ ಕಮ್ಮಿಯೇನಿಲ್ಲ, ಚಾಣಕ್ಯನ ಅರ್ಥಶಾಸ್ತ್ರ ಇವೆಲ್ಲವುಗಳನ್ನೂ ಒಡಗೊಂಡೇ ಇದೆ; ಆದರೆ ನಮಗೆ ಹಿತ್ತಲಗಿಡ ಮದ್ದಲ್ಲವಲ್ಲಾ ? ಒಬ್ಬ ಚಾಣಕ್ಯ, ಮಹರ್ಷಿ ವಿದ್ಯಾರಣ್ಯ ಇವರೆಲ್ಲಾ ಏನೂ ಇಲ್ಲದವರಲ್ಲಿ ಶಕ್ತಿಯನ್ನು ಪ್ರಚುರಗೊಳಿಸಿ ಸಾಮ್ರಾಜ್ಯ ಸ್ಥಾಪಿಸಿದವರು! || ಕ್ಷಣಶಃ ಕ್ಷಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್ || --ಎಂದಿದ್ದಾರೆ ಆದಿ ಶಂಕರರು. ವಿದ್ಯಾರ್ಜನೆ ಮತ್ತು ಧನಾರ್ಜನೆ ಎರಡಕ್ಕೂ ಕ್ಷಣ ಕ್ಷಣಕ್ಕೂ ಸಾಧನೆ ನಡೆಯುತ್ತಲೇ ಇರಬೇಕಂತೆ, ಆದರೆ ಆ ಸಾಧನೆ ನೀತಿಯುತವಾದ ಮಾರ್ಗದಲ್ಲಿರಬೇಕು ಎಂಬುದನ್ನು ಮರೆಯುವಂತಿಲ್ಲ. ನಮಗೆ ಹಣ ಬೇಕೆಂದು, ಯಶಸ್ಸು ಬೇಕೆಂದು ಯಾರಿಗೋ ಮೋಸಮಾಡುವುದು, ತಲೆ ಹೊಡೆದು ಅಪಹರಿಸುವುದು, ಹೆದರಿಸಿ/ಬೆದರಿಸಿ ಕಿತ್ತುಕೊಳ್ಳುವುದು, ಕಳ್ಳತನ-ಲೂಟಿ, ದರೋಡೆ ಮುಂತಾದವುಗಳಿಂದ ಸ್ವಾಧೀನ ಪಡಿಸಿಕೊಳ್ಳುವುದು ನಿಜವಾದ ಸಿರಿವಂತಿಕೆಯಲ್ಲ; ಹೀಗೆ ಬಂದಿದ್ದು ಶಾಶ್ವತವೂ ಅಲ್ಲ.   

ನನ್ನ ಓದಿನ ವ್ಯಾಪ್ತಿಗೆ ನಿಲುಕಿದ ಇನ್ನೂ ಕೆಲವು ಅಂಶಗಳನ್ನು ತಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ:

* Experience has proven that the best-educated people are often those who are known as "self-made," or selfeducated. It takes more than a college degree to make one a person of education. Any person who is educated is one who has learned to get whatever he wants in life without violating the rights of others. Education consists, not so much of knowledge, but of knowledge effectively and persistently APPLIED. Men are paid, not merely for what they know, but more particularly for WHAT THEY DO WITH THAT...?

* The whole course of things goes to teach us faith. We need only obey. There is guidance for each of us, and by lowly listening we shall hear the right word.?

* If you think you are outclassed, you are You've got to think high to rise. You've got to be sure of yourself before You can ever win the prize. Life's battles don't always go To the stronger or faster man. But sooner or later, the man who wins Is the man who thinks he can?

* The greatest achievement was at first and for a time a dream. The oak sleeps in the acorn; the bird waits in the egg; and in the highest vision of the soul a waking angel stirs. Dreams are the seedlings of realities.?

* I trust I have .long since made my peace with the King of kings. No personal consideration shall induce me to abandon the righteous cause of my country. Tell governor Gage, it is the advice of Samuel Adams to him, no longer to insult the feelings of an exasperated people.?

* When Henley wrote the prophetic lines, "I am the Master of my Fate, I am the Captain of my Soul," he should have informed us that we are the Masters of our Fate, the Captains of our Souls, because we have the power to control our thoughts. He should have told us that...?

* Do not wait. The time will never be "just right." Start where you stand, and work with whatever tools you may have at your command, and better tools will be found as you go along.?

* Why then do we longer delay, why still deliberate ? Let this most happy day give birth to the American republic. Let her arise, not to devastate and conquer, but to reestablish the reign of peace and of the laws. The eyes of Europe are fixed upon us ; she demands of...?

* No two minds ever come together without, thereby, creating a third, invisible, intangible force which may be likened to a third mind.?


ಸಿರಿವಂತಿಕೆ ತಮ್ಮ ಮಗಳ ಬಾಳಿನಲ್ಲಿರಲಿ ಎಂಬ ಅನಿಸಿಕೆಯಿಂದ, ಒತ್ತಾಯ ಪೂರ್ವಕವಾಗಿ, ತಂದೆಯ ವಯಸ್ಸಿನ ಗಂಡಿಗೆ ಮಗಳನ್ನು ಕೊಟ್ಟು ಈಗ ಕಳೆದುಕೊಂಡ ಘಟನೆ ನಿನ್ನೆ ವರದಿಯಾಗಿದೆ. ನಟಿ, ನಿರೂಪಕಿಯಾಗಿ ಕೆಲಸಮಾಡಿಕೊಂಡಿದ್ದ ಹೇಮಶ್ರೀ ಎಂಬಾಕೆ ಇಹಲೋಕ ತೊರೆದುಹೋಗಿದ್ದಾಳೆ; ಅದು ಕೊಲೆಯೇ ಎಂಬುದರಲ್ಲಿ ಅನುಮಾನವೇ ಇಲ್ಲ. ರೂಪವತಿಯನ್ನು ತನಗೆ ಬೇಕಾದಹಾಗೇ ಬಳಸಿಕೊಳ್ಳಲು ರಾಜಕೀಯದ ಒತ್ತಡ ಬೀರಿದ ವ್ಯಕ್ತಿ ಈಗ ಬಾಯಿ ಬಿಡಬೇಕಾಗಿದೆ. ಇಲ್ಲಿ ಹೇಮಶ್ರೀ ತೆಗೆದುಕೊಂಡ ನಿರ್ಧಾರ ತಪ್ಪಿದೆ. ಯಾರದೋ ಬಲವಂತಕ್ಕೆ ಮಣಿದು, ಅಪ್ಪ-ಅಮ್ಮ ಒತ್ತಾಯಿಸುತ್ತಾರೆ ಎಂಬ ಕಾರಣಕ್ಕಾಗಿ ತನ್ನ ಜೀವನವನ್ನು ಆಕೆ ಕಳೆದುಕೊಂಡಳು. ಹೀಗೆ ಮಾಡುವಾಗ ಮನೆಜನರ ಗೌರವಕ್ಕಾಗಿ ತಾನು ಹಾಗೆ ಒಪ್ಪಿದೆನೆಂಬ ಧರ್ಮಸಂಕಟವನ್ನು ಆಕೆ ಹೇಳಿಕೊಂಡಿದ್ದಾಳೆ. ಹಾಗೆ ನಿರ್ಧಾರಕ್ಕೆ ಬರುವ ಮೊದಲು ಆಕೆ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಸಲಹೆ ನೀಡುವ ನಿಪುಣರನ್ನು ಸಂಪರ್ಕಿಸಬಹುದಿತ್ತು. ಅಥವಾ ಸ್ವಂತ ದುಡಿಮೆಗೆ ಆಕೆಗೆ ಅವಕಾಶ ಇದ್ದುದರಿಂದ ಪರಾವಲಂಬಿಯಾಗಿ ಬದುಕಬೇಕಾದ ಹಂಗೇನೂ ಇರಲಿಲ್ಲ. ಕೇವಲ ಹಣದ ಆಸೆಗೆ ಬಲಿಯಾದ ಪಾಲಕರ ಗೊಡ್ಡು ಮನಸ್ಸಿಗೆ ಅವರ ನಿರ್ಧಾರಕ್ಕೆ ಅಸ್ತು ಎಂದಳು. ನಿರ್ಧಾರ ಸರಿಯಾಗಿರಲಿಲ್ಲ.  


ಎಷ್ಟೋ ಅಮ್ಮಂದಿರು ರಸ್ತೆಯಲ್ಲಿ ಚಿಕ್ಕಮಕ್ಕಳನ್ನು ಬಿಟ್ಟು ತಾವುತಾವೇ ಹರಟೆ ಹೊಡೆಯಲು ನಿಂತಿರುತ್ತಾರೆ. ವಾಹನಗಳು ರೊಯ್ಯರೊಯ್ಯನೆ ಸಾಗುತ್ತಿರುವಾಗ ಮಕ್ಕಳು ಎಲ್ಲಿಹೋದರು ಎಂಬ ಕಿಂಚಿತ್ ಪ್ರಜ್ಞೆಯೂ ಅವರಿಗಿರುವುದಿಲ್ಲ. ಗಾಡಿ ಹಾಯ್ದು ಮಗು ಘಾಸಿಗೊಂಡರೆ, ಸತ್ತರೆ ಆಗಮಾತ್ರ ಬೊಬ್ಬೆಯೋ ಬೊಬ್ಬೆ! ಗೊತ್ತಿದ್ದೂ ಹೀಗೆ ಮಾಡುವುದು ತಪ್ಪಲ್ಲವೇ? ಗೊತ್ತಿದ್ದೂ ಕೆಲವು ಪಾಲಕರು ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕೂರಿಸಿ, ಹಾಗೇ ಬಿಟ್ಟು ರಸ್ತೆಯ ಪಕ್ಕದ ಅಂಗಡಿಗಳಿಂದ ಅದೂ ಇದೂ ಖರೀದಿಸಿಕೊಂಡು ಬರಲು ಹೋಗುತ್ತಾರೆ. ಸ್ವಲ್ಪ ಅಲುಗಾಡಿದರೆ ಗಾಡಿಯ ಸಮೇತ ಮಗು ವಾಹನನಿಬಿಡ ರಸ್ತೆಯಮೇಲೆ ಬಿದ್ದರೆ, ಆಗ ಯಾವುದಾದರೂ ವಾಹನ ವೇಗದಿಂದ ಹಾದುಹೋದರೆ ಪರಿಸ್ಥಿತಿ ಏನಾಗಬಹುದು? ಇದು ತಪ್ಪು ನಿರ್ಧಾರವಲ್ಲವೇ? ಎರಡು ನಿಮಿಷ ಹೆಚ್ಚಿನ ಕಾಲವ್ಯಯಮಾಡಿ ಮಗುವನ್ನೂ ಜೊತೆಗೆ ಕರೆದೊಯ್ದರೆ ಮಗು, ಗಾಡಿ ಎರಡೂ ಸುರಕ್ಷಿತವಾಗಿರಬಹುದಲ್ಲಾ ?  ಬಳ್ಳಾರಿಯ ಪ್ರಾಣಿ ಸಂಗ್ರಹಾಲಯದಲ್ಲಿ ಮಗುವನ್ನು ಅಲ್ಲೆಲ್ಲೋ ಬಿಟ್ಟು ಇನ್ನೊಂದು ಕಡೆ ತೆರಳಿದ ತಾಯಿಗೆ ಮಗು ಪ್ರಾಣಿಗಳನ್ನು ಸ್ಪರ್ಶಿಸುತ್ತಿದೆ ಎಂಬ ವಿವೇಚನೆ ಬೇಕಿರಲಿಲ್ಲವೇ? ಜಿಂಕೆ ಸಾಧುಪ್ರಾಣಿಯೇ ಆದರೂ ತಿಂಡಿಕೊಡುವಾಗ ಅಪ್ಪಿತಪ್ಪಿ ಚಿಕ್ಕ ಮಗುವಿನ ಬೆರಳನ್ನು ಅರಿಯದೇ ಕಚ್ಚಿಬಿಟ್ಟರೆ ಆಗ ಅನಾಹುತ ನಡೆಯಬಹುದಿತ್ತಲ್ಲಾ? ಆದರೆ ಅನಾಹುತ ಇನ್ನೂ ದೊಡ್ಡದೇ ನಡೆಯಬೇಕೆಂದು ಬರೆದಿದ್ದರೆ ಯಾರು ಬದಲಾಯಿಸಲು ಸಾಧ್ಯ? ತಾವೆಲ್ಲಾ ತಿನ್ನುವ ಚಾಕಲೇಟ್ ಹಿಡಿದು ಹುಲಿಗೆ ತನ್ನ ಪ್ರೀತಿಯನ್ನು ತೋರಿದ ಮಗುವಿನ ಮಮತೆಯನ್ನು ಹುಲಿ ಬಲ್ಲುದೇ? ಹುಲಿ ಹಸಿದಿತ್ತು, ಮಗು ಅರಿಯದಾಗಿತ್ತು, ಅಮ್ಮನಿಗೆ ಬುದ್ಧಿ ಕಮ್ಮಿ ಇತ್ತು, ಮಗು ಎಡಗೈಯ್ಯನ್ನೇ ಸಂಪೂರ್ಣ ಕಳೆದುಕೊಂಡಿತು. ಆ ಮಗು ನಾಳೆ ದೊಡ್ಡದಾದಾಗ ಅದಕ್ಕೆ ಕಷ್ಟದ ಅರಿವಾಗುತ್ತದೆ. ಹೋದ ಕೈ ಮರಳಿ ಬಾರದಲ್ಲಾ? ಇಲ್ಲಿ ಯಾವ ನಿರ್ಧಾರ ಬೇಕು? ಇಲ್ಲಿಯ ತನಕ ತನ್ನೆರಡೂ ಕೈಗಳಿಂದ ಆಡಿಕೊಂಡಿದ್ದ ಮಗುವಿಗೆ ಎಡಗೈ ಹಂಗಿಲ್ಲದೇ ಬದುಕುವ ತರಬೇತಿ ನೀಡಬೇಕು. ಜೀವನಪೂರ್ತಿ ಒಂದು ಕೈ ಇಲ್ಲದೇ ಹೋದರೂ ಅದರ ಅನಿವಾರ್ಯತೆ ಇಲ್ಲಾ ಎಂಬ ರೀತಿಯಲ್ಲಿ ಬದುಕಲು ಕಲಿಸಬೇಕಾದುದು ಮತ್ತು ಬದುಕುವ ಮಾರ್ಗವನ್ನು ಬೋಧಿಸಬೇಕಾದುದು ಪಾಲಕರ ಪ್ರಸಕ್ತ ನಿರ್ಧಾರವಾಗಬೇಕು. ಸಮಯೋಚಿತ ಮತ್ತು ಸಮರ್ಪಕ ನಿರ್ಧಾರದಿಂದ ತೆಗೆದುಕೊಂಡ ನಿಶ್ಚಿತಗುರಿಯೆಡೆಗೆ  ಅಚಲವಿಶ್ವಾಸದಿಂದ ಸಾಗುವುದು ಬದುಕಿನ ಯಶಸ್ಸಿಗೆ ಬಹಳ ಮುಖ್ಯ.  


Tuesday, October 9, 2012

ಭಾವಾನಂದ ಲಹರಿ

ಚಿತ್ರಋಣ: ಅಂತರ್ಜಾಲ
ಭಾವಾನಂದ ಲಹರಿ

ಭಾವಲಹರಿ ಹರಿಯಲಿಲ್ಲಿ ರಾಗ ತಾಳ ತಾಳಲಿಲ್ಲ
ಕಾವಿನಿಂದ ಮೊಟ್ಟೆಯೊಡೆದು ಮರಿಯು ಹುಟ್ಟಿತು !
ಜೀವತಳೆದ ಭಾವನೆಗಳ ರೂಪುಗಟ್ಟಿತು

ನೋವಿನಲ್ಲು ನಲಿವಿನಲ್ಲು ಸೋಲಿನಲ್ಲು ಸೆಡವಿನಲ್ಲು
ಬೇವಿನಲ್ಲು ಮಾವಿನಲ್ಲು ಹಾಯ್ದ ಮನದೊಳು
ತಾವುಮಾಡಿ ತೂರಿ ಬಂತು ತಾನು ಮುದದೊಳು

ಜಾವಜಾವದಲ್ಲು ಜನಿಸಿ ಮತ್ತೆ ಸತ್ತು ಮರಳಿ ಹುಟ್ಟಿ
ದೇವರೂಪ ತಲುಪುವೆಡೆಗೆ ಹೆಜ್ಜೆಯಿಕ್ಕುತಾ 
ಸಾವಿನಲ್ಲು ಸೆಣಸಿ ಪುನಃ ಗೆಜ್ಜೆಕಟ್ಟುತಾ

ಯಾವ ರಂಭೆ ಮೇನಕೆಯರ ರೂಪನೋಡಿ ಸೋತು ಮಣಿದು
ದಾವಿನಲ್ಲಿ ಸಿಲುಕಿ ತಪದ ಫಲವ ಕಳೆಯಿತು ?
ಠಾವು ತನ್ನದಲ್ಲವೆಂದು ಮೂಲ ಹುಡುಕಿತು

ಗಾವುದಗಳ ದೂರ ನೆಗೆದು ತೆಪ್ಪಗೆದ್ದು ಮತ್ತೆ ಸದ್ದು !
ಕೋವಿ ಹಿಡಿದು ಈಡು ಹೊಡೆದು ಗುರಿಯ ಮೆರೆಯಿತು
ಬಾವು ಸಿಡಿದು ಮೂರ್ತರೂಪ ಹೀಗೆ ಮೊರೆಯಿತು 

Sunday, October 7, 2012

ಚೌತೀ ಮರುದಿನದ ’ಹನಿಗಾರಿಕೆ’ಯಲ್ಲಿ ಸಿಕ್ಕಿದ್ದು PUNCHಕಜ್ಜಾಯ !


ಚೌತೀ ಮರುದಿನದ ’ಹನಿಗಾರಿಕೆ’ಯಲ್ಲಿ ಸಿಕ್ಕಿದ್ದು PUNCHಕಜ್ಜಾಯ !

ಸರ್ಪಸುತ್ತು
===========

ಸರ್ಪಸುತ್ತು
ನಿಮಗೆ ಗೊತ್ತು
ಸಹಿಸಲಾರದ ಬೇನೆ
ಸರ್ಪ ಸುತ್ತಿದ್ದರೂ
ನಸುನಗುತ್ತಿರುವ
ಗಣಪನಿಗೆ ವಂದನೆ !

-ಬಂದಿದ್ದು ಉದಯವಾಣಿಯಲ್ಲಿ ವರ್ಷದ ಹಿಂದಿನ ಗಣೇಶ ಚತುರ್ಥಿಯ ಸಮಯದಲ್ಲಿ! ನಕ್ಕು ಕೆಮ್ಮು ಬಂದು ಸುಧಾರಿಸಿಕೊಳ್ಳುವ ಮೊದಲೇ ಮತ್ತೊಂದು ಪಟಾಕಿ ಸಿಡಿಯಿತು :

ರಾಗಿ ಪದ
===========

ಇದ್ದಿದ್ದರೆ ಇಂದು ಕನಕದಾಸರು
ಮತ್ತೊಮ್ಮೆ ರಾಗಿಪದ
ಹಾಡುತ್ತಿದ್ದರು
ಭಾರೀ ಶ್ರೀಮಂತರಾಗಿ
ಮಾಜಿ ಸಚಿವರಾಗಿ
ರಾಗಿ ತಿಂದೀರಾ ?
ಜೈಲಲಿ ರಾಗಿ ತಿಂದೀರಾ ?

ಗಣಪತಿಗೆ ಬಹಳ ಇಷ್ಟದ ಖಾದ್ಯಗಳಲ್ಲಿ ಒಂದು ಪಂಚಕಜ್ಜಾಯ, ಆದರೆ ಈ ಡುಂಡಿರಾಜ ಗಣಪತಿಗೆ ಇಷ್ಟದ ನೈವೇದ್ಯ PUNCHಕಜ್ಜಾಯ. ಹನಿಗವನಗಳು-ಅಣಕವಾಡುಗಳು-ಭಾವಗೀತೆಗಳು-ವಿನೋದ ಗೀತೆಗಳು-ಚುಟುಕಗಳು ಇವೆಲ್ಲಾ ಸೇರಿದ್ದೇ ಈ ಪಂಚಕಜ್ಜಾಯದ ವಿಶೇಷ. ನಮ್ಮೂರಕಡೆಗೆ ಸಮಾನ್ಯವಾಗಿ, ದೊಡ್ಡ ದೊಡ್ಡ ಹಬ್ಬಗಳ ಸಂದಿನಲ್ಲೇ ಎಲ್ಲಾದರೂ ಮನೋರಂಜಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುವುದು ವಾಡಿಕೆ. ಹೆಚ್ಚಾಗಿ ಯಕ್ಷಗಾನ ತಾಳಮದ್ದಲೆ ಅಥವಾ ಆಟಗಳನ್ನೋ ಅಥವಾ ಸುಗಮಸಂಗೀತ ರಸಧಾರೆಯನ್ನೋ ಇಟ್ಟುಕೊಳ್ಳುತ್ತಾರೆ. ಅಲ್ಲಲ್ಲಿ ಭಜನೆಗಳೂ, ಭರತನಾಟ್ಯ ಮುಂತಾದ ಕಾರ್ಯಕ್ರಮಗಳೂ ಸೇರಿರುತ್ತವೆ. ಮಹಾಚೌತಿಗೆ ಊರಿಗೆ ಹೋಗಲಿಲ್ಲ-ದಾಯಾದರಲ್ಲಿನ ಯಾವುದೋ ಸೂತಕದಿಂದ ಹಬ್ಬ ದಸರಾಕ್ಕೆ ಮುಂದೂಡಲ್ಪಟ್ಟಿದೆ; ಹಬ್ಬ ಆ ಯಾ ಸಂದರ್ಭದಲ್ಲಿ ನಡೆದರೆ ಮಾತ್ರ ಚಂದ. ಊರೆಲ್ಲೆಲ್ಲಾ ಆಚರಿಸಿ ಮುಗಿದಮೇಲೆ ಕೇವಲ ಒಂದಷ್ಟು ಕುಟುಂಬಗಳವರು ಜಾಗಟೆ ಹೊಡೆದು ಹಬ್ಬಮಾಡುವಾಗ ಎಂದಿನ ಖುಷಿ ಇರುವುದಿಲ್ಲ. ಈ ಭಾವನೆಯಲ್ಲಿ ನಾನಿದ್ದಾಗಲೇ ಪಂಚಕಜ್ಜಾಯ ಕೊಡ್ತೇನೆ ಬನ್ನಿ ಎಂದು ಸಾರ್ವತ್ರಿಕವಾಗಿ ಆಮಂತ್ರಣ ಹಿಡಿದು ಬಂದಿದ್ದು ನಮ್ಮ ಡುಂಡಿ-ಫೇಸ್ ಬುಕ್ಕಿನಲ್ಲಿ. ಹಬ್ಬ ತಪ್ಪಿದರೂ ಹೋಳಿಗೆ ತಪ್ಪಬಾರದು ಎಂದೇ ಬಯಸುವ ನಾನು ಮತ್ತು ನನ್ನಂಥಾ ಜನ ನಡೆದಿದ್ದು ಡುಂಡಿರಾಜ[ಗಣಪತಿ] ಕೊಡುವ PUNCHಕಜ್ಜಾಯ ಪಡೆಯಲಿಕ್ಕೆ!   

ಒಂದಿಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಎನ್ನಬಹುದು. ’ಜಾಲಿಬಾರಿನಲ್ಲಿ ಕೂತು ಪೋಲಿಗೆಳೆಯರು’ ಹಾಡು ಬರೆದು ತುಂಟತನ ಕವಿತ್ವಕ್ಕೆ ಹೆಸರಾದ ಕವಿ ಬಿ.ಆರ್.ಲಕ್ಷ್ಮಣರಾಯರು ಕನ್ನಡ ಸಾಹಿತ್ಯ ಪ್ರಾಕಾರಕ್ಕೆ ಹೊಸದೊಂದು ಜೋಡಣೆ ಕಲ್ಪಿಸಿದರು-ಅದು ಹನಿಗವನ. ಅಧುನಿಕ ಧಾವಂತದ ಜೀವನದಗತಿಗೆ ದರ್ಶಿನಿ ಹೋಟೆಲ್ ಗಳಿದ್ದಂತೇ ತುರ್ತಾಗಿ, ತ್ವರಿತವಾಗಿ,ಚಿಕ್ಕದಾಗಿ ಏನನ್ನಾದರೂ ನೆನೆದುಕೊಂಡು ನಗಲಿಕ್ಕೆ  ಜನ ಆಸಕ್ತರಾಗಿದ್ದ ಕಾಲ. ಐದೇ ನಿಮಿಷದ ಮ್ಯಾಗಿ, ಸ್ಥಳದಲ್ಲೇ ಕಟ್ ಓಪನ್ ಕುರ್ ಕುರ್ರೆ, ಲೇಸ್ ತಮಗೆ ಲೇಸೆಂದು ಬಗೆಯುವ ಅನಿವಾರ್ಯತೆಯಲ್ಲಿದ್ದ ಜನರಿಗೆ ಸೀಮೆ ಎಣ್ಣೆ/ಗ್ಯಾಸ್/ರೇಷನ್ ಖರೀದಿಗೆ ಕ್ಯೂ ನಿಂತಾಗ, ಬ್ಯಾಂಕಿನಲ್ಲಿ ಹಣಕಟ್ಟಲೋ ಪಡೆಯಲೋ ಸರದಿ ನಿಂತಾಗ, ಬಸ್ಸಿಗಾಗಿ ಕಾದು ಬೇಸತ್ತು ನಿಂತಾಗ, ದಿನಗೆಲಸದ ಮಧ್ಯೆ ಮಧ್ಯಾಹ್ನದ ಲಂಚ್ ತೆಗೆದುಕೊಂಡು ಒಂದೈದು ನಿಮಿಷ ಕುಳಿತಲ್ಲೇ ತೂಕಡಿಸುವಾಗ ಇಂಥಾ PUNCHಮಾತ್ರೆಗಳು ಸಿಕ್ಕರೆ ಮಹದಾನಂದವಾಗುತ್ತದೆ. ಕೆಲಸದ ರಾಶಿಯ ನಡುವೆ ಕಳೆದು ಹೋದ ಜೀವಗಳ ಸೆಟೆದುಕೊಂಡ ನರಗಳು ಸಹಜ ಸ್ಥಿತಿಗೆ ಬರುವುದಕ್ಕೆ ಅವು ಸಹಕಾರಿ!

ನಾವೆಲ್ಲಾ ಚಿಕ್ಕವರಿದ್ದಾಗಿನಿಂದಲೇ ವ್ಯಂಗ್ಯ ಪ್ರಿಯರು. ಹಿಂದೊಮ್ಮೆ ನಾನು ಹೇಳಿದ್ದೆ: ರಸ್ತೆಗಳ ಮೈಲಿಗಲ್ಲುಗಳ ಮೇಲೆ ಕಪ್ಪು ಅಕ್ಷರಗಳಲ್ಲಿ ಬರೆದ ಊರುಗಳ ಹೆಸರನ್ನು ಯಾರೋ ತಿದ್ದಿ ’ಆರೊಳ್ಳಿ’ ಇರುವುದನ್ನು ’ಆಠೊಳ್ಳಿ’ ಮಾಡಿದ್ದನ್ನೂ, ’ಬೆಂಗಳೂರು’ ಇದ್ದುದನ್ನು ’ಬೆಂದಳೂರು’ ಮಾಡಿಟ್ಟಿದ್ದನ್ನೂ ನೋಡಿ ನಗುತ್ತಿದ್ದೆವು. ಇನ್ನು ರಾಜ್ಯ ರಸ್ತೆ ಸಾರಿಗೆಯ ಬಸ್ಸುಗಳ ನಾಮಫಲಕವನ್ನು ಓದುವುದೇ ಬಹಳ ಮೋಜಿನದಾಗಿರುತ್ತಿತ್ತು. ಅಕ್ಷರಗಳ ನಡುವೆ ಜಾಗ ಬಿಟ್ಟೂ ಬಿಟ್ಟೂ ಬರೆಯುವ ಪದ್ಧತಿಯಲ್ಲಿ ಕೆಲವೊಮ್ಮೆ ಅಕ್ಷರಗಳ ಗುರುತು ತಪ್ಪಾಗಿಬಿಡುವುದೂ ಇತ್ತು. ಹೊನ್ನಾವರ ಎಂದು ಅವರು ಬರೆದಿದ್ದರೆ ಓಡುತ್ತಿರುವ ಬಸ್ಸನ್ನು ದೂರದಿಂದ ನೋಡುತ್ತಿದ್ದವರಿಗೆ ಅದು ಕಾಣುತ್ತಿದ್ದುದು ’ಪೊನ್ನಾದರ’ ಎಂದು! ಹೊನ್ನಾವರಕ್ಕೂ ಕುಂದಾಪುರಕ್ಕೂ ಭೌಗೋಳಿಕವಾಗಿ ತೀರಾ ಹತ್ತಿರದ ಎಂಬ ಅಂತರವಲ್ಲದಿದ್ದರೂ ಡುಂಡಿಗೂ ನನಗೂ ಮತ್ತು ನಮ್ಮೊಳಗಿನ ಆ ಒಂದು ಭಾವಕ್ಕೂ ಬಹುಶಃ ಆ ಅಂತರ ಕಮ್ಮಿ ಇದೆ. ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿರುವ ಅವರನ್ನೂ ಅವರ ಬರಹಗಳಿಗೆ ಸ್ಪಂದಿಸುತ್ತಾ ಡ್ಯಾಮೇಜರ್ ಆಗಿರುವ ನನ್ನನ್ನೂ ಹತ್ತಿರ ತಂದಿದ್ದೇ ಅವರ ಹನಿಗವನಗಳು.  

ಡಿ ಮೋಹ
=========

ಸಿಎಂ ಆಗುವ ಮುನ್ನ ಯಡ್ಡಿ
ಸೇರಿಸಿಕೊಂಡಿದ್ದರು ಇನ್ನೊಂದು ಡಿ
ತಮ್ಮ ನೇಮಿಗೆ
ಸಿಎಂ ಆದಮೇಲೂ ಯಡ್ಡಿ
ಎಲ್ಲ ನಿಯಮ ಗಾಳಿಗೊಡ್ಡಿ
ಸೇರಿಸುತ್ತಲೇ ಹೋದರು ಡಿ
ನೋಟಿಫೈ ಆದ ಭೂಮಿಗೆ !

ಹತ್ತಿದ ಲಿಫ್ಟು ಗಕ್ಕನೆ ಮೇಲಕ್ಕೆ ಎತ್ತಿ ಫಕ್ಕನೆ ಕೆಳಕ್ಕೆ ಇಳಿಸಿ ಮಾಡುವಾಗಿನ ಗುರುತ್ವಾಕರ್ಷಣ ಶಕ್ತಿಯ ವಿಚಲಿತ ಅನುಭವ ಇಂತಹ ಹನಿಗಳದ್ದು. ನೋಡ್ತಾ ನೋಡ್ತಾ ಇದ್ದಹಾಗೇ ೩೬ ಕ್ಕೂ ಅಧಿಕ ಕೃತಿಗಳನ್ನು ಬರೆದು ಹಂಚಿದ ಡುಂಡಿಗೆ, ಕಾಶಿಗೆ ಹೋಗಿಬಂದ ಹೆತ್ತವರು ಅಲ್ಲಿ ಕಂಡ ಡುಂಡಿರಾಜ ಎಂಬ ಗಣಪತಿಯ ನೆನಪಿನಲ್ಲಿ ಇಟ್ಟ ಹೆಸರೇ ಡುಂಡಿ. ಸಂಸ್ಕೃತ ಬಲ್ಲವರನ್ನುಳಿದು ಕೆಲವರಿಗೆ ಮೊದಲು ಇದೆಂಥಾ  ಹೆಸರಪ್ಪಾ ಎನ್ನಿಸಿದ್ದೂ ಉಂಟು, ಹೇಳೋದಕ್ಕೆ ಬರದೇ ದುಂಡಿರಾಜ ಎಂದವರೂ ಉಂಟು. ಹೆಸರಿನಲ್ಲೇ ಈ ಹಾಸ್ಯಪ್ರಸಂಗವನ್ನೂ ಅಡಗಿಸಿಕೊಂಡ ಡುಂಡಿಗೆ, ಈ ಸಲುವಾಗಿ ಕೇಳಿದವರಿಗೆ ಉತ್ತರ ಹೇಳಿಯೇ ಕೂದಲುಗಳು ಜಾಸ್ತಿ ಉದುರಿ ಹೋಗಿರಬೇಕು ಎಂಬುದು ನನ್ನ someಶೋಧನೆ !  ಈ someಶೋಧನೆಗೆ ಅಡ್ಡಬಂದವರೇ ಚಂಪಾ !

ಅಭಿನಂದನೆ
============

ಪಂಪ ಪ್ರಶಸ್ತಿಗೆ
ಆಯ್ಕೆಯಾದ ನಿಮಗೆ
ಅಭಿನಂದನೆ ಚಂಪಾ    
ತಡವಾಯಿತೆಂದು
ಮಾಡದಿರಿ ರಂಪ
ನಿಮಗುಂಟು ನಮ್ಮ
ಅನುಕಂಪ ! 

ಹೋಗಲಿ ಬಿಡಿ someಶೋಧನೆ ಈಗ ಸದ್ಯಕ್ಕೆ ಅಸಾಧ್ಯವೆಂದು ಕೈಚೆಲ್ಲಿ ಕೂತರೆ,

ನಮ್ ಕುಂದಾಪ್ರದಲ್ಲಿ ಹಟ್ಟಿಕುದ್ರು
ಎಂಬ ಹಳ್ಳಿ ಇತ್ತ್ ಕಾಣಿ.
ಮೊನ್ನೆ ಮೊನ್ನೆ ಅಲ್ಲಿ ಹುಟ್ಟಿತ್ತ್
ಮಾರ್ರೆ ಈ ಮಾಣಿ
ಎಂಥಾ ಅಂತ್ರಿ ಬಿಟ್ಟಿದ್ದೇ
ಬಿಟ್ಟಿದ್ದು ಹಾಯಿಲ್ಲದ ದೋಣಿ
ಬರ್ದಿದ್ದೆಲ್ಲಾ ಓದದ್ರೆ ಅರ್ಥಾಯ್ತಿತ್ತ್ ನಿಮ್ಗೆ
ಕಾಂಬುಕ್ ಮಾಣಿ ಉಂಬುಕ್ ಗೋಣಿ ! 

[ಈ ಚುಟುಕ ಡುಂಡಿಯ ಮೇಲಿನ ಸಲುಗೆಯಿಂದಲೂ ಪ್ರೀತಿಯಿಂದಲೂ ಡುಂಡಿಯ ಓದಿನ ವಿಸ್ತಾರವನ್ನು ಬಣ್ಣಿಸುವ ಹವಣಿಕೆಯಿಂದಲೂ ನಾನು ಬರೆದಿದ್ದು, ಆಭಾಸಬೇಡ, ನಮ್ಮೆಡೆಗೆ ’ಮಾಣಿ’ ಎಂಬ ಪದವನ್ನು ಗಂಡುಮಗುವಿಗೂ ’ಕೂಸು’ ಎಂಬ ಪದವನ್ನು ಹೆಣ್ಣುಮಗುವಿಗೂ ಬಳಸುತ್ತೇವೆ]

ಅಂದಹಾಗೇ ೧೮.೦೮.೧೯೫೬ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಕುದ್ರುವಿನಲ್ಲಿ ಜನಿಸಿದ ಡುಂಡಿರಾಜರು ಋಜುಮಾರ್ಗದವರು. ಕೃಷಿವಿಜ್ಞಾನದಲ್ಲಿ ಅತ್ಯಧಿಕ ಅಂಕಗಳೊಡನೆ ಎಂ.ಎಸ್ಸಿ ಪದವಿಯನ್ನು ಪಡೆಯುವಾಗ ರಾಜ್ಯಪಾಲರಿಂದ ಚಿನ್ನದ ಪದಕವನ್ನು ಪಡೆದವರು. ಉದರಂಭರಣೆಗಾಗಿ ಆಯ್ದುಕೊಂಡ ದಂಧೆ ಬ್ಯಾಂಕ್ ನೌಕರಿ. ಕಾರ್ಪೋರೇಷನ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿರುವ ಅವರಿಗೆ ವರ್ಗಾವರ್ಗಿ ಎಂಬುದು ವೃತ್ತಿ ಸಹಜವಾಗಿ ಸಿಕ್ಕ ಅನಿವಾರ್ಯತೆ. ಮಕ್ಕಳನ್ನು ಓದಿಗೆ ಹಚ್ಚಿದ್ದರಿಂದ ಹೆಂಡತಿ ಮಕ್ಕಳನ್ನು ಬೆಂಗಳೂರಲ್ಲೇ ಬಿಟ್ಟು ತಾನು ಮಂಗಳೂರಿನ ಶಾಖೆಯಲ್ಲಿ ಕೆಲಸಮಾಡುವಾಗಿನ ದಿನಗಳನ್ನು ಅವರು ತಮ್ಮ ಅಣಕವಾಡಿನಲ್ಲಿ ಹೇಳಿದ್ದು ಹೀಗೆ:

ಒಂದಿರುಳು ಫೋನಿನಲಿ ನನ್ನವಳ ಕೇಳಿದೆನು
ಚೆಂದನಿನಗಾವುದೆಂದು
ನಮ್ಮೂರು ಮಂಗ್ಳೂರೊ, ನಿಮ್ಮೂರು ಬೆಂಗ್ಳೂರೊ
ಚೆಂದನಿನಗಾವುದೆಂದು

ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಎಂದೆನ್ನ ಕೇಳಲೇಕೆ ?
ಬೆಂಗ್ಳೂರಿನಲ್ಲೀಗ ವಿಪರೀತ ಚಳಿ ಉಂಟು
ವಿಸ್ತರಿಸಿ ಹೇಳಬೇಕೆ ?

ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಫೋನಲ್ಲಿ ಚರ್ಚೆ ಏಕೆ?
ರಜೆಹಾಕಿ ಬಂದುಬಿಡಿ ಎಂದಳಾಕೆ !

ಬೆಂಗ್ಳೂರು ರಸ್ತೆಯಲಿ ಬಸ್ಸುಗಳು ಕಾರುಗಳು
ಲಾರಿಗಳು ಸಾಲು ಸಾಲು
ಬಸ್ಸು ಲಾರಿಗೆ ಬಡಿದು ಮುಸುಡಿ ಸೀಟಿಗೆ ಹೊಡೆದು
ಉದುರಿ ಹೋಗುವುದು ಹಲ್ಲು

ಶಿರಾಡಿ ಘಾಟಿಯಲಿ ಎಷ್ಟೊಂದು ಹೊಂಡಗಳು
ಗಬ್ಬೆದ್ದು ಹೋಗಿ ರೋಡು
ಉದ್ದಕ್ಕೂ ಕುಲುಕಾಟ ಬೆನ್ನುಮೂಳೆಗೆ ಏಟು
ಯಾರಿಗೂ ಬೇಡ ಪಾಡು

ಬೆಂಗ್ಳೂರಿನಲ್ಲೀಗ ವಿಪರೀತ ಟ್ರಾಫಿಕ್ಕು
ಓಡಾಟ ದೊಡ್ಡಗೋಳು
ಬೆಂಗ್ಳೂರಿಗಿಂತಲೂ ಮಂಗ್ಳೂರೆ ಸುಖವೆಂದು
ಅನ್ನಿಸದೆ ಸತ್ಯ ಹೇಳು 

ಮಂಗ್ಳೂರು ಚೆಂದವೋ ಬೆಂಗ್ಳೂರು ಚೆಂದವೋ
ಸುಮ್ಮನೆ ವಾದವೇಕೆ?
ಸಾಕುಬಿಡಿ ಫೋನು ಇಡಿ ಎಂದಳಾಕೆ

ದಿ|ಕೆ.ಎಸ್.ನ. ಅವರ ’ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು.....’ ಹಾಡಿನ ಧಾಟಿಯಲ್ಲಿರುವ ಈ ಅಣಕವಾಡನ್ನು ಮತ್ತೆ ವಿಸ್ತರಿಸಿ ಹೇಳೆಬೇಕೇ? ಗೊತ್ತಾಯ್ತಾ....ಸುಮ್ಮನಿರಿ ನಗದೆ ಜೋಕೆ !!

ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ’ಅಂಕಿತ ಪುಸ್ತಕ’ ಪ್ರಕಾಶನ ಹೊರತಂದ ’ಹನಿಗಾರಿಕೆ’ ಮತ್ತು ’ಬನ್ನಿ ನಮ್ಮ ಹಾಡಿಗೆ’ ಎಂಬ ಎರಡು ಪುಸ್ತಕಗಳನ್ನು ವಿಧಿಯುಕ್ತವಾಗಿ ಬಿಡುಗಡೆಗೊಳಿಸಿದ್ದು ನೆಚ್ಚಿನ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು. ವೇದಿಕೆಯಲ್ಲಿ ಹಾಜರಿದ್ದವರು ಬಿ.ಅರ್. ಲಕ್ಷ್ಮಣರಾವ್, ಚಿಂತಾಮಣಿ ಕೊಡ್ಲೆಕೆರೆ, ಜರಗನಹಳ್ಳಿ ಶಿವಶಂಕರ್, ಯಶವಂತ ಹಳಿಬಂಡಿ ಜೊತೆಗೆ ನಮ್ಮ ಡುಂಡಿ. ವೇದಿಕೆಯ ಕೆಳಗೆ ಇದ್ದವರಲ್ಲಿ ಕೆಲವರು: ಇನ್ನೊಬ್ಬ ನೆಚ್ಚಿನ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ, ಟಿ.ಎನ್ ಸೀತಾರಾಮ್, ಶ್ರೀನಿವಾಸ್ ಕಪ್ಪಣ್ಣ, ಎಂ.ಎನ್.ವ್ಯಾಸರಾವ್, ಗ್ಯಾಜೆಟ್ ಲೋಕವನ್ನು ತೆರೆದಿಡುವ ಪವನಜ, ಜೋಗಿ, ಉದಯವಾಣಿಯ ರವಿ ಹೆಗಡೆ ಇತ್ಯಾದಿ.....ನಾನು ಕಂಡಂತೆ ನನಗೆ ಸಿಕ್ಕಷ್ಟು! 

ನಿರೂಪಣೆ ’ಅಂಕಿತ’ದ ಪ್ರಕಾಶ್ ಖುದ್ದಾಗಿ ಮಾಡಿದರೆ, ಒಂದೆರಡು ಮಾತು ಮೂರ್ನಾಕು ಹಾಡು ಹಾಡಿ ರಂಜಿಸಿದವರು ಹಳಿಬಂಡಿ. ಎನ್.ಎಸ್.ಎಲ್ ಪುಸ್ತಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದಮೇಲೆ ಚುಟುಕು ಚುಟುಕು ಮಾತುಗಳನ್ನಾಡಿದವರು ಬಿ.ಆರ್.ಎಲ್. ಕಾರ್ಯಕ್ರಮದ ಮೊದಲಭಾಗದ ನಂತರ ವೇದಿಕೆಯಲ್ಲಿರುವ ಪಂಚಕವಿಗಳಿಂದ PUNCHಕವಿಗೋಷ್ಠಿ ನಡೆಯಿತು. ಎಲ್ಲರೂ ತಮ್ಮತಮ್ಮ ಹನಿಗಳನ್ನು ಒಬ್ಬೊಬ್ಬರಾಗಿ ಹೇಳಿ ರಂಜಿಸಿದರು. ಮಧ್ಯೆ ಮಧ್ಯೆ ಡುಂಡಿಯ ನಿರೂಪಣಾ ಡುಂಡಿಮವೂ ಇತ್ತು- ಈ ಎರಡನೇ ಭಾಗದಲ್ಲಿ.ಅಂತೂ ಎದುರು ಕೂತವರಿಗೆ ಇವತ್ತು ಪಂಚಕಜ್ಜಾಯ ಮೆದ್ದ ಅನುಭವ:

ಅನುಭವ
=========

ಕವಿಗಳು ಹೇಳುತ್ತಾರೆ
ಕವಿತೆಗೆ ಅರ್ಥಬೇಕಿಲ್ಲ
ಭಾವ ಬೇಕಿಲ್ಲ
ಅದೊಂದು ಅನುಭವ
ಹಾಗೆಂದರೇನು?
ಓದಿದ ನಂತರ ಅನುಭವಿಸುವ
ತಲೆನೋವಾ ? 

ಎಂದು ’ಹನಿಗಾರಿಕೆ’ಯಲ್ಲೇ ಡುಂಡಿ ಕೇಳಿದ್ದಾರೆ.

ಬನ್ನಿ ನಮ್ಮ ಹಾಡಿಗೆ [ ’ಟೈಟಲ್ ಸಾಂಗು’ ]
============

ಎಲ್ಲೂ ತಾವಿಲ್ಲವೆಂದು
ಚಡಪಡಿಸುವ ಜೋಡಿಗಳೆ
ಬೆದರಿ ರೆಕ್ಕೆ ಮುದುರಿಕೊಂಡು
ಕೂತ ಬಾನಾಡಿಗಳೆ
ಬನ್ನಿ ನಮ್ಮ ಹಾಡಿಗೆ
ನಿರಾತಂಕವಾಗಿ ಪ್ರೀತಿ
ಮಾಡಿ ನಿಮ್ಮ ಪಾಡಿಗೆ
ಹಾಡಿಗಿಲ್ಲ ಬಾಡಿಗೆ.

’ಹಾಡಿ’ ಎಂದರೆ ನಮ್ಮೂರಕಡೆಗೆ ಅಡಕೆ ತೋಟಕ್ಕೆ ಪೂರಕವಾಗಿ ಪೂರ್ವಜರು ನಮಗೆ ಬಿಟ್ಟ ಸೊಪ್ಪಿನಬೆಟ್ಟ ಎಂದೂ ಆಗುತ್ತದೆ. ಬನ್ನಿ ನಮ್ಮ ಹಾಡಿಗೆ ಎಂದು ಕರೆದಿದ್ದಾರಲ್ಲಾ ಅವರು ಕರೆದಿದ್ದು ಹಾಡನ್ನು ಓದಬನ್ನಿ ಎಂದಾದರೂ ಒಂದರೆಕ್ಷಣ ಹೀಗೂ ಆಗಬಹುದಲ್ಲಾ ಎಂದುಕೊಂಡವನು ನಾನು. ಅದು ಹಾಗಲ್ಲಾ ಹೀಗೆ ಎಂದು ’ಅನುಭವ’ ಎಂಬ ಚುಟುಕವನ್ನು ಓದಿ ತಿಳಿದುಕೊಂಡವನು ನಾನು. ಅಪರೂಪದ ನೆಂಟರಮನೆಗೆ ಹೋದ ವಾತಾವರಣವಿತ್ತು. ನನಗೆ ಬೇಕಾದ ಎಲ್ಲರನ್ನೂ ಕಂಡ ತೃಪ್ತಿಯೂ ಇತ್ತು. ಲಕ್ಷ್ಮೀನಾರಾಯಣ ಭಟ್ಟರಿಗೆ ಕಾಲ್ಮುಟ್ಟಿ ನಮಸ್ಕರಿಸಲು ಮುಂದಾದಾಗ "ಉಹೂಂ ಉಹೂಂ ಬೇಡ ಬೇಡ" ಎನ್ನುತ್ತಾ ಅವರೂ ಪ್ರತಿಯಾಗಿ ಅದೇರೀತಿ ನಮಸ್ಕರಿಸಲು ಹೊರಟಿದ್ದು ನನ್ನನ್ನು ಪೇಚಿಗೆ ಸಿಲುಕಿಸಿತ್ತು; ಅವರ ಆಂತರ್ಯ ಅದೆಷ್ಟು ದೊಡ್ಡದು!

ನನ್ನ ಇನಿಯನ ನೆಲೆಯ ಬಲ್ಲೆಯೇನೆ ?
ಹೇಗೆ ತಿಳಿಯಲಿ ಅದನು ಹೇಳೆ ನೀನೆ 

ಇರುವೆ ಸರಿಯುವ ಸದ್ದು ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ? 

ಇಂಥಾ ಸೂಕ್ಷ್ಮ ಕುಸುರಿ ಕೆಲಸಗಳನ್ನು ಭಟ್ಟರ ಹಾಡುಗಳಲ್ಲಿ ಮಾತ್ರ ಕಾಣಲು ಸಾಧ್ಯ! ಆ ಹಾಡು ಬರೆದ ಸನ್ನಿವೇಶವನ್ನು ಸಭೆಗೂ ಮುನ್ನ ನನ್ನೊಡನೆ ಅವರು ಚರ್ಚಿಸುತ್ತಿದ್ದಾಗಲೇ ಸಭೆಗೆ ಬರಬೇಕೆಂದು ಸೂಚನೆ ಬಂತು, ನಾವು ಸಭಾಂಗಣಕ್ಕೆ ಹೋದೆವು. ಇನ್ನೊಮ್ಮೆ ಅಂತಹ ಹಲವಾರು ಸಂಗತಿಗಳನ್ನು ಹೊತ್ತು ಅಲಾಯ್ದ ಸಿಗುತ್ತೇನೆ ಬಿಡಿ. ಯಾಕೆಂದರೆ ಇಂದು ಎಲ್ಲವೂ ಹನಿಗೆ ಮೀಸಲು. ಅಂದಹಾಗೇ ಸದ್ಯಕ್ಕೆ ಸಾರಸ್ವತ ಲೋಕದಲ್ಲಿ ಮೀಸಲಾತಿ ವಗೈರೆ ಜಾರಿಯಲ್ಲಿಲ್ಲ; ಅನಧಿಕೃತವಾಗಿ ಇದ್ದರೆ ನನಗೆ ತಿಳಿದಿಲ್ಲ. ಅಲ್ಲಿ ಎಲ್ಲವೂ ಜ್ಞಾನಮಯ, ಮನದ ಯಾವ್ಯಾವುದೋ ಸ್ತರಗಳಲ್ಲಿ ನರ್ತಿಸುವ ಸರಸ್ವತಿಯ ಹೆಜ್ಜೆಗುರುತುಗಳನ್ನು ಅಕ್ಷರಗಳ ರಂಗೋಲಿಯಲ್ಲಿ ಬಿಡಿಸಿ ತೋರಿಸುವುದು ಕವಿ-ಸಾಹಿತಿಯ ಜಾಣ್ಮೆ-ಅದು ಸರಸ್ವತಿಯ ಅಶೀರ್ವಾದ ಕೂಡ. 

ಮಾನಸ ಸಂಚರರೇ
ಬ್ರಹ್ಮಣಿ ಮಾನಸ ಸಂಚರರೇ .... ಎಂಬ,  ಸಂತ ತ್ಯಾಗರಾಜ ವಿರಚಿತ ಸಂಸ್ಕೃತದ ಹಾಡು ಕರ್ನಾಟಕ ಸಂಗೀತದ ಪ್ರಕಾರದಲ್ಲಿ ವಿಶಿಷ್ಟವಾಗಿದೆ, ನನಗೆ ಬಹಳ ಆಮೋದ ನೀಡುವ ಹಾಡುಗಳಲ್ಲಿ ಅದೂ ಒಂದು. 

[ಚಿಕ್ಕ ತಿದ್ದುಪಡಿ, ಮಾನಸ ಸಂಚರರೇ ಎಂಬ ಹಾಡಿನ ಕರ್ತೃ ಶ್ರೀ ಸದಾಶಿವ ಬ್ರಹ್ಮೇಂದ್ರರು, ತಪ್ಪು ಗ್ರಹಿಕೆಯಿಂದ ತ್ಯಾಗರಾಜರು ಎಂದು ಬರೆದಿದ್ದೆ, ತಿದ್ದಿಕೊಂಡು ಓದುವುದೇ ಈಗಿರುವ  ಪಂಚ್ ! ಯಾರ ಕಣ್ಣಿಗೂ ಇದು ಬೀಳಲಿಲ್ಲವಲ್ಲ ಎಂಬುದೇ ಆಶ್ಚರ್ಯಕರ ಪಂಚ್ !! ]

ಡುಂಡಿಯ ಇನ್ನೊಂದೆರಡು-ಮೂರು ಹನಿಗಳೊಂದಿಗೆ ನಿಮ್ಮ ಬೀಳ್ಕೊಡುಗೆಯ ತಯಾರಿ ನಡೆಸಿದ್ದೇನೆ:

ಕರೀನಾ
=========

ಗಣೇಶೋತ್ಸವದಲ್ಲಿ
ವಿಶೇಷ ಆಕರ್ಷಣೆ
ಹಿಂದಿ ನಟಿ ಕರೀನಾ
ಬ್ರಹ್ಮಚಾರಿಯ ಮುಂದೆ
ಸೆಕ್ಸಿ ತಾರೆ
ಡಾನ್ಸ್ ಮಾಡೋದು ಸರೀನಾ ?

ಆಮೇಲೆ
=======

ಪೂಜೆ ಪುನಸ್ಕಾರ
ಷೋಡಶೋಪಚಾರ
ಹೆಚ್ಚೆಂದರೆ ಒಂದು ವಾರ
ಆಮೇಲೆ ಅಯ್ಯೋ
ಕೆರೆಗೆ ಹಾರ !

ಕ್ರಾಂತಿ
=======
ಸಂಕ್ರಾಂತಿ ಹಬ್ಬ ಆಚರಿಸಿದಳು ತಾಯಿ
ರೇಷ್ಮೆ ಸೀರೆಯುಟ್ಟು
ಹೂ ಮುಡಿದು ಎಳ್ಳು ಬೀರಿ
ಮಗಳು ಕ್ರಾಂತಿಕಾರಿ
ಜೀನ್ಸ್ ಪ್ಯಾಂಟ್ ಟೀ ಶರ್ಟ್ ತೊಟ್ಟು
ಟಾಕೀಸಿಗೆ ಹೋದಳು
ಬಾಯ್ ಫ್ರೆಂಡ್ಸ್ ಜತೆ
ಗಂಡು ಬೀರಿ !

ಇಷ್ಟೆಲ್ಲಾ ಹೊತ್ತು ಓದುತ್ತಾ ಕುಳಿತ ನೀವು ಹದಿಹರೆಯದ ಮಗಳ ಅಪ್ಪನೋ ಅಮ್ಮನೋ ಆಗಿದ್ದರೆ,

ಬೇಗ ಇಲ್ಲಿಂದ ಕಾಲ್ಕೀಳಿ ಹಾರಿ
ಯಾಕೆಂದರೆ ನಿಮ್ಮ ಮಗಳೂ
ಬಹಳ ಹೊತ್ತು ಒಬ್ಬಳನ್ನೇ ಬಿಟ್ಟರೆ
ಆಗಿಬಿಟ್ಟಾಳು ಕ್ರಾಂತಿಕಾರಿ !!        

ಡುಂಡಿಗೆ ಅಭಿನಂದನೆಗಳು, PUNCHಕಜ್ಜಾಯ ತಿಂದಿದ್ದಕ್ಕೆ ನಿಮಗೆಲ್ಲಾ ಧನ್ಯವಾದಗಳು, ನಮಸ್ಕಾರ. 


Thursday, October 4, 2012

ಇಲಿಯು ಪಂಜರದೊಳಿಲ್ಲ ಶ್ರೀರಾಮರಾಮಾ......

ಚಿತ್ರಋಣ: ಅಂತರ್ಜಾಲ
ಇಲಿಯು ಪಂಜರದೊಳಿಲ್ಲ ಶ್ರೀರಾಮರಾಮಾ......

ಚಕಿತರಾದರೂ ನಂಬಲೇಬೇಕಾದ ೧೦೦ ಕ್ಕೆ ಇನ್ನೂರರಷ್ಟು ಅಪ್ಪಟ ಸತ್ಯದ ವಿಚಾರ, ರೂಪಾಯಿಗೆ ೩೨ ಆಣೆ ಸತ್ಯ; ಮಿಕ್ಕಿದ ಬರಹಗಳೆಲ್ಲಾ ಸುಳ್ಳು ಇದು ಮಾತ್ರ ಸತ್ಯ ಎಂದು ತಿಳಿಯಬೇಡಿ, ಕಾಲ ಕಷ್ಟವಪ್ಪಾ ಹೀಗೆ ಬರೆದಾಗಲೇ ಮಿಕ್ಕಿದ ಬರಹಗಳೆಲ್ಲಾ ಸುಳ್ಳು ಎಂದು ಇನ್ನೂ ವಾಕ್ಯ ಪೂರ್ಣವಾಗುವ ಮೊದಲೇ ಶ್ರೀಕೃಷ್ಣ ’ಅಶ್ವತ್ಥಾಮೋ ಹತಃ .....’ ಎನ್ನುತ್ತಿದ್ದಾಗ ಶಂಖ ಊದಿದಂತೇ ತಮಗೆ ಬೇಕಾದಂತೇ ಊದಿಬಿಡುವ ಜನಗಳೂ ಇದ್ದಾರೆ. ಅಂದಹಾಗೇ ನಮ್ಮಲ್ಲಿ ಶಂಖ ಊದುವುದು ಎಂದರೆ ಕವಚ ಕುಡುಗುವುದು ಎಂದರ್ಥ ಅರ್ಥಾತ್ ಟಿಕೆಟ್ ತಗೊಳ್ಳೋದು ಎಂದು ಬೆಂಗಳೂರಿಗರೂ ಹೇಳಿದಂತೇ ಈ ಲೋಕದ ಪ್ರಯಾಣ ಮುಗಿಸುವುದು ಎಂದರ್ಥ. ನೋಡಿ ನಿಜವಾಗಿ ಶಂಖ ಊದುವುದು ಮಂಗಳಮಯ ಸನ್ನಿವೇಶಗಳಲ್ಲಿ ಮತ್ತು ಯುದ್ಧಗಳಲ್ಲಿ ಮಾತ್ರ! ಆದ್ರೆ ಗೂರಲು ಉಬ್ಬಸದ ಮುದುಕರು ಚಳಿಗಾಲದಲ್ಲಿ ಕೆಲವೊಮ್ಮೆ ತಾಳಲಾರದೇ ಮೇಲಕ್ಕೆ ಹೋಗಿಬಿಡುತ್ತಾರೆ. ಬೆಳ್ಳಂಬೆಳಿಗ್ಗೆ ಸುದ್ದಿಮಾಡಲೆಂದೇ ಇರುವ ಕೆಲವು ಜನ "ಗೊತ್ತಿಲ್ವಾ..... ಅಂವ ಶಂಖ ಊದಿಬಿಟ್ಟ" ಎನ್ನುತ್ತಾ ಬರುವುದೂ ಇರುತ್ತದೆ. ಶಂಖ ಊದುವುದಕ್ಕೂ ಅದಕ್ಕೂ ನಿಜವಾಗಿಯೂ ಸಂಬಂಧವಿಲ್ಲ, ದ್ರೋಣಚಾರ್ಯರು, ಶ್ರೀಕೃಷ್ಣ ಶಂಖ ಊದಿದಾಗ ಹೋದರು ಎಂಬ ಕಾರಣಕ್ಕೋ ಏನೋ ಅದನ್ನು ಹೀಗೆ ಬಳಸುತ್ತಿರುವುದು ವಿಪರ್ಯಾಸ. ಟಿವಿ ಜ್ಯೋತಿಷಿಗಳು ಗುರು ಮತ್ತು ಗುರೂಜಿ ಎಂಬ ಪದಗಳಿಗೆ ಸ್ಥಾನಪಲ್ಲಟ ಮಾಡಿಸಿದಂತೇ, ಬೈಗುಳಕ್ಕೆ ’ಸಂಸ್ಕೃತ ಪದಗಳು’ ಎಂದು ಕೆಲವರು ಹೇಳಿದಂತೇ ಇಲ್ಲೂ ’ಶಂಖ ಊದು’ ಎಂಬುದರ ಈ ರೀತಿಯ ಬಳಕೆ ಕರ್ಣಕಠೋರವಾಗುತ್ತದೆ ಯಾಕೆಂದರೆ ಶಂಖ ಅವಮಂಗಳದ ಸಂಕೇತವಲ್ಲ, ಬದಲಾಗಿ ಅದು ವಿಜಯದ ಸಂಕೇತ.       

ಅಂದಹಾಗೇ ಶಂಖ ಊದುವುದಕ್ಕೂ ಈ ಕಥೆಗೂ ಸಂಬಂಧವೇನೂ ಇಲ್ಲ. ಆದರೂ ತಮಾಷೆಗಾಗಿ ಹೇಳುವುದು- ಇದು ಇಲಿಗಳು ಶಂಖ ಊದಿದ ಕಥೆ!

ಗಿಳಿಯು ಪಂಜರದೊಳಿಲ್ಲಾ ಶ್ರೀರಾಮರಾಮ
ಬರಿದೇ ಪಂಜರವಾಯ್ತಲ್ಲಾ

ಎಂದು ದಾಸರು ಹಾಡಿದರು. ದಾಸರಪದಗಳನ್ನು ಕದ್ದು ಬಳಸುತ್ತೇವೆ ಎಂಬ ಆಪಾದನೆ ಕೆಲವು ಸ್ನೇಹಿತರದು. ಅದು ಒಂದು ವರ್ಗಕ್ಕೆ ಮಾತ್ರ ಮೀಸಲು ಎಂಬುದು ಅವರ ಧೋರಣೆ. ನಮ್ಮದೋ ಹಾಗಲ್ಲ; ಉತ್ತಮವಾದುದು ಎಲ್ಲಿಂದ ಬಂದರೂ ನಾವದನ್ನು ಮುಕ್ತಮನದಿಂದ ಸ್ವಾಗತಿಸುತ್ತೇವೆ, ಸ್ವೀಕರಿಸುತ್ತೇವೆ. ಮತ್ತು ಹಾಗೆ ಸ್ವೀಕರಿಸಿದ್ದನ್ನು ಮನಸಾ ಅನುಮೋದಿಸುತ್ತೇವೆ, ಅನುಸರಿಸುತ್ತೇವೆ, ಅಸ್ವಾದಿಸುತ್ತೇವೆ, ಮತ್ತಷ್ಟು ಅಂಥದ್ದನ್ನೇ ಅಪೇಕ್ಷಿಸುತ್ತೇವೆ ವಿನಃ ಅದನ್ನು ಕದ್ದು ಬಳಸುವ ಜಾಯಮಾನ ನಮ್ಮದಲ್ಲ. ಹಾಗೆ ಹೇಳುವ ಕೆಲವರಿಗೆ ಅವರ ನೈತಿಕ, ಆಧ್ಯಾತ್ಮಿಕ ಕುಬ್ಜತನದ ಅರಿವಿಲ್ಲ!  ದಾಸರು ಈ ಹಾಡನ್ನು ಹಾಡಿದ್ದೂ ’ಶಂಖ ಊದಿದ್ದ’ರ ಕುರಿತೇ ಆಗಿದೆ. ಭಗವಂತನನ್ನು ಅಕ್ಕನಿಗೆ ಹೋಲಿಸಿ ಅವರು ಮುಂದುವರಿಸುತ್ತಾರೆ ಹೀಗೆ :

ಅಕ್ಕ ನಿನ್ನ ಮಾತು ಕೇಳಿ
ಚಿಕ್ಕದೊಂದು ಗಿಳಿಯಸಾಕಿದೆ
ಅಕ್ಕ ನೀನಿಲ್ಲದ ವೇಳೆ
ಬೆಕ್ಕುಕೊಂಡು ಪೋಯಿತಯ್ಯೋ

ಆತ್ಮವೆಂಬ ಗಿಳಿ ದೇಹವೆಂಬ ಪಂಜರದಲ್ಲಿ ಬಂಧಿಯಾಗಿರುತ್ತದೆ. ಭಗವಂತನೆಂಬ ಅಕ್ಕನ ಮಾತು ಕೇಳಿ ಸಾಕಿದೆ ಎನ್ನುತ್ತಾರೆ. ’ಅಕ್ಕ’ನಿಲ್ಲದ ವೇಳೆ ಬೆಕ್ಕು[ಯಮ] ಕದ್ದೊಯ್ದಿತು ಎನ್ನುತ್ತಾರೆ. ದಾಸರ ಪದ್ಯಗಳೆಲ್ಲವೂ ಅರ್ಥಗರ್ಭಿತವೇ. ಅವು ಭಗವಂತನನ್ನು ಭಕ್ತಿಮಾರ್ಗದಿಂದ ಸೇವಿಸಲು ಇರುವ ಸೋಪಾನಗಳು. ಅವುಗಳಲ್ಲಿಯೇ ಈ ಪದ್ಯ ಅತ್ಯಂತ ವಿಶಿಷ್ಟವಾಗಿದೆ.

ನೋಡಿ ಇದನ್ನೇ ನಾವು ಚಿಕ್ಕವರಿದ್ದಾಗ ತಮಾಷೆಗೆ ಬಳಸಿದ್ದುಂಟು. ದೇವರನ್ನು ತಮಾಷೆಯಾಗಿಯಾದರೂ ನೆನಪುಮಾಡಿಕೊಳ್ಳಬಹುದಂತೆ ಬಿಡಿ. ಕೆಲವೊಮ್ಮೆ ನಮ್ಮಲ್ಲಿ ಊಟಕ್ಕೆ ಕುಳಿತಾಗ ಗ್ರಂಥಗಳನ್ನೋ ಶ್ಲೋಕಗಳನ್ನೋ ಹೇಳುವುದಿರುತ್ತದೆ. ಹಾಗೆ ಹೇಳುತ್ತಾ ಪ್ರತೀ ಗ್ರಂಥ/ಶ್ಲೋಕದ ಕೊನೆಗೆ ರಾಮನಾಮ ಸ್ಮರಣೆ, ದೈವ ಸ್ಮರಣೆ, ಜೈಕಾರ  ಇತ್ಯಾದಿಯಾಗಿ ಹೇಳುವುದಿದೆ.

||ಭೋಜನಕಾಲೇ ಸೀತಾಕಾಂತ ಸ್ಮರಣಂ||ಎಂದಿರುವುದನ್ನು ಯಾರೋ ನನ್ನಂಥಾ ಕಿಡಿಗೇಡಿ ಯುವಕರು ತಿರುಚಿ ||ಭೋಜನಕಾಲೇ ಅಕಸ್ಮಾತ್ ಮರಣಂ ||ಎಂದು ಹೇಳಿಬಿಟ್ಟಿದ್ದರು! ಕಿವಿಗೆ ರಾಮಸ್ಮರಣೆಯೇ ಕೇಳಿದಂತೆನಿಸಿದ ಹಿರಿಯರು "ಜೈ ಜೈ ರಾಮ್" ಎಂದು ಹೇಳಿದಾಗ ಯುವಪಡೆಯ ಮುಖದಲ್ಲಿ ನಗು ತಡೆಯಲಾರದಾಗಿತ್ತು!  ಅದೇರೀತಿ ||ಹರಹರಾ ಶ್ರೀಚನ್ನಸೋಮೇಶ್ವರಾ|| ಎಂಬಲ್ಲಿ ||ಹರಹರಾ ಹರ್ಕಂಗಿ ಮಾಬ್ಲೇಶ್ವರಾ|| ಎಂದವರೂ ಇದ್ದಾರೆ. ಕೆಲವರಂತೂ ಅವರವರದ್ದೇ ಆದ ಶ್ಲೋಕಗಳನ್ನು ರಚಿಸಿ ಹೇಳುತ್ತಿದ್ದುದೂ ಉಂಟು. ಒಬ್ಬ ಪುಣ್ಯಾತ್ಮ ಇಡೀ ಕರ್ನಾಟಕದ ಜನತೆಯ ನಾನಾ ವಿಧದ ಸಿಹಿತಿನಿಸುಗಳ ವೈಖರಿಯನ್ನು ವರ್ಣಿಸಿ ಶ್ಲೋಕವೊಂದನ್ನು ರಚಿಸಿದ್ದು ನೆನಪಿಗೆ ಬರುತ್ತದೆ. ಒಬ್ಬ ಹುಡುಗನಿಗೆ ಮಾತ್ರ

ಶಾಂತಾಕಾರಂ ಭುಜಗ ಶಯನಂ
ಪದ್ಮನಾಭಂ ಸುರೇಶಂ |

ಎಂದಿರುವಲ್ಲಿ ಹೇಳುವಾಗ ಹೆದರಿಕೆಯೋ ಎಲ್ಲಿ ತಪ್ಪಿಹೋಗುತ್ತದೆಂಬ ಭಾವವೋ ಗೊತ್ತಿಲ್ಲ ಯಾವಾಗಲೂ ಹೀಗೇ ಹೇಳುತ್ತಿದ್ದ:

ಶಾಂತಾಕಾರಂ ಗಜಭುಜ ಶಯನಂ
ಪದ್ಮನಾಭಂ ಸುರೇಶಂ |

ಹೀಗೇ ನಮ್ಮ ಬಾಲ್ಯ ವಿವಿಧ ವಿನೋದಾವಳಿಗಳಿಂದ ಕೂಡಿದ್ದಿತ್ತು. ’ಮೇಲೆ’ ಹೋಗುವ ಪದಸೂಚಕವಾಗಿ ’ಹರಹರ ಹಾಕುವುದು’, ’ಗೋವಿಂದ ಹಾಕುವುದು’ ಎಂಬೆಲ್ಲಾ ಪರ್ಯಾಯ ಪದಗಳನ್ನು ಬಳಸುತ್ತಿದ್ದರು. ಇದು ಎಲ್ಲರಿಗೂ ಸಹಜ ಭಾವಾರ್ಥದಲ್ಲಿ ತೋರಿದರೂ ಸ್ಥಳಿಕರಿಗೆ ಮಾತ್ರ ಅದರ ಗೂಢಾರ್ಥ ತಿಳಿದುಬಿಡುತ್ತಿತ್ತು. ದಾಸರ ಪದಗಳನ್ನೂ ಶ್ಲೋಕಗಳನ್ನೂ ಕೆಲವೊಮ್ಮೆ ನಾವೇ ನಮಗೆ ಬೇಕಾದ ರೀತಿಯಲ್ಲಿ ತಿದ್ದಿಕೊಂಡು ತಮಾಷೆ ಮಾಡುವುದಿತ್ತು.

ನೀನೇಕೋ ನಿನ್ನ ಹಂಗೆಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ

ಎಂಬ ಹಾಡನ್ನು ಪಟ್ಟಣದ ಜನರಿಗೆ ತಕ್ಕಹಾಗೇ ತಿದ್ದಿ,

ನೀನೆಕೋ ನಿನ್ನ ಹಂಗೇಕೋ
ನಿನಗೆ ನಾಮ ಹಾಕುವ ಬಲವೊಂದಿದ್ದರೆ ಸಾಕೋ

ಎಂದು ಹೇಳಿ ನಕ್ಕಿದ್ದೇವೆ. ಎಲ್ಲಾದರೂ ಬಂದ್, ಗಲಾಟೆ, ಮುಷ್ಕರ ನಡೆಯುತ್ತಿದ್ದರೆ ನಮ್ಮ ಹಾಡು ಇದು:

ಕಲ್ಲು ಸಿಕ್ಕರೆ ಕೊಳ್ಳಿರೋ
ನೀವೆಲ್ಲರು ಕಲ್ಲುಸಿಕ್ಕರೆ ಕೊಳ್ಳಿರೋ

ಕಲ್ಲು ಸಿಕ್ಕರೆ ಉರಿ ಬಲ್ಲವರೇ ಬಲ್ಲರು !
ಮೆಲ್ಲ ತೋಚಿದ ಎಡೆಗೆಲ್ಲ ಬಿಸಾಕಿರೋ

ಹೀಗೆಲ್ಲಾ ನಾನು ಬರೆದರೆ, "|ಶಾಂತಮ್ ಪಾಪಂ ಶಾಂತಂ ಪಾಪಂ| ಎನ್ನಪ್ಪಾ ಹಾಗೆಲ್ಲಾ ಅನ್ಬಾರ್ದು" ಎನ್ನುವ ಮಂದಿಯೂ ಇದ್ದಾರು! ಇದು ದಾಸರನ್ನೋ ಗ್ರಂಥ ರಚನೆಕಾರರನ್ನೋ ಟೀಕಿಸುವ ಪರಿಯಲ್ಲ; ಕೇವಲ ತಮಾಷೆಗಾಗಿ ಹೈಕಳು ಹಾಡಿಕೊಳ್ಳುವ ಪರಿ.

ಇಷ್ಟೆಲ್ಲಾ ಹೇಳಿದ್ದಾಯ್ತಲ್ಲಾ ಈಗ ಮುಖ್ಯ ಕಥೆಗೇ ಹೋಗಿಬಿಡೋಣ. ನಾವು ಚಿಕ್ಕವರಿದ್ದಾಗಿನ ದಿನಗಳ ಕಥೆ ಇದು. ನಮ್ಮೂರಲ್ಲಿ ಮನೆಯಲ್ಲಿ ರಾತ್ರಿಯಾಯ್ತೆಂದರೆ ಇಲಿಗಳ ಕಾಟ ಬಹಳವಾಗಿತ್ತು. ಇದ್ದಬದ್ದ ಸಾಮಾನು-ದಿನಸಿ, ತರಕಾರಿ, ಬಟ್ಟೆಗಳು, ಪುಸ್ತಕಗಳು ಎಲ್ಲವನ್ನೂ ಒಂದಷ್ಟು ತಿಂದು ಒಂದಷ್ಟು ಕಡಿದು ನಿತ್ಯ ತಮ್ಮ ಅಭರ್ತಳ[ಅಸಾಧ್ಯ ಉಪಟಳ] ತೋರಿಸುತ್ತಿದ್ದವು. ರಾತ್ರಿ ಮಲಗಿದಾಗ ಮೈಮೇಲೇ ಹರಿದಾಡುವಷ್ಟೂ ಅತಿರೇಕದ ಧೈರ್ಯ! ಎಲಾ ಇವುಗಳ ಹೀಗೇ ಬಿಟ್ಟರೆ ಸಾಧ್ಯವಿಲ್ಲ ಎಂದುಕೊಂಡ ಅಪ್ಪ ಇಲಿಬೋನನ್ನು ತಂದಿದ್ದ.[ನಮ್ಮಲ್ಲಿ ನಾವು ಅಪ್ಪ-ಅಮ್ಮನನ್ನು ಬಹುವಚನದಿಂದ ಕರೆಯುವುದಿಲ್ಲ, ಅವರು ನಮಗೆ ಅತ್ಯಂತ ಆಪ್ತರಲ್ಲವೇ? ಭಗವಂತನನ್ನು ಏಕವಚನದಿಂದ ಸಂಬೋಧಿಸಿದಂತೇ ಇಲ್ಲೂ ಹಾಗೇ.] ನಿತ್ಯ ರಾತ್ರಿ ಕೊಬ್ಬರಿ ತುಣುಕು ಏನಾದರೂ ಹಾಕಿ ಬೋನನ್ನು ಇಡುವುದು ವಾಡಿಕೆಯಾಯ್ತು. ಕೆಲವು ದಿನ ಮರಿ ಇಲಿಗಳೂ ಸೇರಿದಂತೇ ಮಧ್ಯಮ ತರಗತಿಯ ದೇಹದಾರ್ಡ್ಯತೆಯ ಇಲಿಗಳೂ ಬೋನಿನಲ್ಲಿ ಬಿದ್ದವು; ಬಿದ್ದು ಶಂಖ ಊದಿದವು!

ದೇಹದಾರ್ಡ್ಯತೆಯ ಬಗ್ಗೆ ಹೇಳುವಾಗ ತಕ್ಷಣಕ್ಕೆ ನೆನಪಾಯ್ತು. ಸೊಂಡಿಲಿಗಳು ನಮ್ಮಲ್ಲಿ ಅತಿ ಕಮ್ಮಿ ಇದ್ದವು. ಅವು ನಿಜಕ್ಕೂ ಪಾಪದವು. ಅಂತಹ ಮೂಷಿಕಗಳು ಅಪರೂಪಕ್ಕೊಮ್ಮೆ ಬರುತ್ತಿದ್ದವು. ಹೆಗ್ಗಣಗಳ ಕಾಟವೇ ಜಾಸ್ತಿ. ದಪ್ಪ ಹೊಟ್ಟೆಯ ೧೦ ಕೇಜಿ ತೂಕದ ಬೆಕ್ಕಿಗಿಂತಾ ದೊಡ್ಡಗಾತ್ರದ ಹೆಗ್ಗಣಗಳು ಎದುರಾದರೆ, ನಮ್ಮ ಪೋಲೀಸರಿಗೆ ವೀರಪ್ಪನ್ ಎದುರಾದಾಗಿನ ಪರಿಸ್ಥಿತಿಯಂತೇ ಆ ಬೆಕ್ಕುಗಳ ಸ್ಥಿತಿಯೂ ಆಗುತ್ತಿತ್ತೋ ಏನೋ!! ಎದುರಾಗುವ ಬೆಕ್ಕಿಗೆ ಲಬಕ್ಕನೆ ಎರಡು ಬಿಟ್ಟು ಓಡಿಸಿ ತಮ್ಮ ಕೆಲಸ ನಡೆಸಿಕೊಳ್ಳುವ ಹೆಗ್ಗಣಗಳೂ ಇದ್ದಿರಲು ಸಾಕು. ಅವು ಮಾಡುವ ಸಪ್ಪಳಕ್ಕೆ ಕಳ್ಳರು ಬಂದಿದ್ದಾರೆ ಎಂದೇ ತಿಳಿಯಬೇಕು. ಕಳ್ಳರು ಅಕಸ್ಮಾತ್ ಆ ಹೊತ್ತಿಗೆ ಹೊರಗೆ ಬಂದಿದ್ದರೆ, ಹೆಗ್ಗಣಗಳು ಮಾಡುವ ಸದ್ದುಕೇಳಿ ಯಾರೋ ಎಚ್ಚರವಾಗಿದ್ದಾರೆ ಎಂದುಕೊಂಡು ಓಡಿಹೋಗಬೇಕಾದ ಪರಿಸ್ಥಿತಿ! ಹಗಲಿಡೀ ಅಕ್ಕಪಕ್ಕದ ತೋಟ-ಗದ್ದೆಗಳ ನೆಲದಲ್ಲಿರುವ ಮಹಮಹಾ ದೊಡ್ಡ ಬಿಲಗಳಲ್ಲಿ ಅವುಗಳ ವಾಸ. ಸಂಜೆಯಾಗುತ್ತಲೇ ಮನೆಗಳತ್ತ ಸವಾರಿಯ ಆಗಮನ. ಆ ಕಾಲಕ್ಕೆ ಜೀವನ್ ಟೋನ್ ಮತ್ತು  ಚ್ಯವನ ಪ್ರಾಶ ಎಂಬ ಲೇಹ್ಯಗಳು ದೇಹವರ್ಧನೆಗೆ ಎಂದು ಜಾಹೀರಾತು ಬರುತ್ತಿತ್ತು. ಅಂತಹದೇನನ್ನೋ ತಿಂದು ಕೊಬ್ಬಿದ ರೀತಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಓಡಾಡುತ್ತಿದ್ದ ಹೆಗ್ಗಣಗಳ ಕಾಲದಲ್ಲಿ ಬೆಕ್ಕುಗಳೇ ಸೇರಿ ಇಲಿಗೆ ಗಂಟೆ ಕಟ್ಟಲು ತಯಾರಾಗಿದ್ದವೋ ಏನೋ! ಬೆಕ್ಕುಗಳಿಗೆ ಬದುಕಬೇಕೆಂಬ ಆಸೆ ಇತ್ತಲ್ಲಾ ಅದಕ್ಕೆ.

ಇಂಥಾಕಾಲಮಾನದಲ್ಲಿ ಅಪ್ಪ ಇಡುವ ಬೋನಿಗೆ ಬಿದ್ದ ಹೆಗ್ಗಣಗಳು ಕೆಲವು ತಪ್ಪಿಸಿಕೊಂಡು ಹೋಗಿಬಿಡುತ್ತಿದ್ದವು. ಬೋನು ಚಿಕ್ಕದಾಗಿದ್ದರಿಂದ ಒಳಗಡೆಯಿಂದ ಬಾಗಿಲನ್ನು ಒತ್ತಿ ತೆರೆದುಕೊಂಡು ಜಾರಿಕೊಳ್ಳುತ್ತಿದ್ದವು. ಬೆಳ್ಳಂಬೆಳಗ್ಗೆ ಇಲಿ ಬಿದ್ದಿದೆಯಾ ಎಂದು ನೋಡಲು ಮಹಡಿಯೇರಿ ಬರುತ್ತಿದ್ದ ಅಪ್ಪನನ್ನು ಕಂಡಾಗ ನಮಗೆ ದಾಸರ ಪದ ನೆನಪಾಗುತ್ತಿತ್ತು. ಅಪ್ಪನ ಹೆಸರೂ ರಾಮಚಂದ್ರ ಎಂದೇ ಆಗಿದ್ದರಿಂದ ಹಾಡು ಹೇಳಿಬರೆಸಿದ ಹಾಗಿತ್ತು.

ಇಲಿಯು ಪಂಜರದೊಳಿಲ್ಲ
ಶ್ರೀರಾಮರಾಮ ಬರಿದೇ ಪಂಜರವಾಯ್ತಲ್ಲಾ.

ಅಪ್ಪ ನಿನ್ನ ಮಾತು ಕೇಳಿ
ಒಪ್ಪಿ ಸಣ್ಣ ಬೋನು ಇರಿಸಿದೆ
ಅಪ್ಪ ನೀನಿಲ್ಲದ ವೇಳೆ
ತಪ್ಪಿಸ್ಕೊಂಡು ಹೋಯಿತಯ್ಯೋ ....

"ರಾಮನಿರುವ"ಎಂಬ ಇಲಿಯು
ರೋಮರಾಶಿ ಹೊದ್ದ ಇಲಿಯು
ನೇಮದಂತೆ ಎಲ್ಲಮೆದ್ದು
ನಾಮಹಾಕಿ ಹೋಯಿತಯ್ಯೋ ....

ಒಂಬತ್ಸಾರಿ ಬಡಿದು ನೂಕಿ
ತಿಂಬಷ್ಟ್ ಕೊಬ್ರಿ ತಿಂದುಕೊಂಡು
ನಂಬಿಕೂತ ನಮ್ಮನೆಲ್ಲಾ
ತುಂಬುಮನದಿ ಬೈದುಕೊಂಡು ...

ಹೇಳಲು ಮರೆತಿದ್ದೆ: ನಮ್ಮಲ್ಲಿ ಬೋನಿಗೆ ಪಂಜರ ಎನ್ನುವ ಗಾಂವ್ಟಿ ಪದ ಚಾಲ್ತಿಯಲ್ಲಿದೆ. ಇಲಿ-ಹುಲಿ ಇಂಥಾದ್ದನ್ನೆಲ್ಲಾ ಇಡುವುದಕ್ಕೆ ಬಳಸುವುದು ಬೋನು. ಗಿಳಿಯನ್ನು ಬಂಧಿಸಿಡುವುದು ಮಾತ್ರ ಪಂಜರ. ಆದರೆ ನಮ್ಮಲ್ಲಿ ಈ ಎಲ್ಲದಕ್ಕೂ ಪಂಜರ ಎಂಬ ಶಬ್ದವನ್ನೂ ಬಳಸುವುದುಂಟು. ಹೀಗಾಗಿ ಮೇಲಿನ ಹಾಡಿನಲ್ಲಿ ’ಇಲಿಯು ಪಂಜರದೊಳಿಲ್ಲ’ ಎಂದು ಬಳಸಿದ್ದು. ನಮಗೆ ನಮ್ಮೊಳಗೇ ನಗೆ ಮತ್ತು ಚರ್ಚೆ. ತಪ್ಪಿಸಿಕೊಂಡು ಹೋದ ಇಲಿ ತನ್ನ ಸಹಚರರಿಗೆ ಏನು ಹೇಳಿದ್ದೀತು ? 

"ಹೇಯ್ ನೋಡ್ರೋ ನೀವೆಲ್ಲಾ ರಾತ್ರಿ ಆ ಮನೆಗೆ ಹೋಗೀರಲ್ಲಾ ಹೋದಾಗ ಬಾಳ ಹುಷಾರಪ್ಪಾ .. ಅಲ್ಲಿ ಯಜಮಾನ್ರು ರಾಮ ಅಂತ, ಅವರು ಪಂಜರ ಇಡ್ತಾರೆ. ಅಪ್ಪಿ ತಪ್ಪಿ ಪಂಜರದಲ್ಲಿ ಬಿದ್ದುಗಿದ್ದೀರ ಮತ್ತೆ. ಅಕಸ್ಮಾತ್ ಪಂಜರದಲ್ಲಿ ಬಿದ್ರೂ ಇನ್ನೊಬ್ಬರನ್ನ ಸಹಾಯಕ್ಕೆ ಕೂಗಿ. ನಾವ್ಯಾರಾದ್ರೂ ಬಂದು ಮೇಲಿನಿಂದ ಬಾಗಿಲಿನ ಹಿಡಿಕೆಯಮೇಲೆ ಒತ್ತಡ ಹಾಕಿ ನಿಮ್ಮನ್ನ ತಪ್ಪಿಸ್ತೇವೆ. ಸುಮ್ನೇ ಇರ್ಬೇಡಿ ಆಯ್ತಾ...ಹಾಗೇನಾದ್ರೂ ಇದ್ರೆ  ಆಮೇಲೆ ಶಂಖ ಊದ್ಬೇಕಾಗ್ತದೆ" ಅಂತ ಮೀಟಿಂಗ್ ಕರೆದು ಹೇಳಿರಬೇಕು!

ಅದೆಲ್ಲಾ ಹೋಗ್ಲಿ, ಅನುಮಾನ ಬಂದ್ರೆ ಅದೆಷ್ಟೋ ದಿನ ಹೆಗ್ಗಣಗಳು ಬೋನು ಇರಿಸಿದ ದಿಕ್ಕಿನತ್ತ ಕೂಡ ಬರುತ್ತಿರಲಿಲ್ಲ. ಬೋನು ಇರಿಸುವವರಿಗೇ ಗಂಟೆಕಟ್ಟಿದರೆ ಹೇಗೆ ಅಂತ ಮೀಟಿಂಗ್ ನಲ್ಲಿ ಮಾತಾಡಿಕೊಂಡಿರಬಹುದು ಅಂತೀರಾ? ಹೋಗ್ಲಿ ಬಿಡಿ ಕಲಿಗಾಲ! ಸದ್ಯ ಮೀಸಲಾತಿ ಕೇಳಲೊಂದು ಮುಂದಾಗಲಿಲ್ಲ! "ನಿಮ್ಮ ಜಮೀನುಗಳಲ್ಲಿ ಕಾಯಮ್ಮಾಗಿ ವಾಸವಿರುವ ನಮಗೆ ಇಂತಿಷ್ಟು ಪಡೆಯಲು ಅರ್ಹರೆಂಬ ಹಕ್ಕನ್ನು ಕಡ್ಡಾಯ ಮಾಡತಕ್ಕದ್ದು" ಎಂದು ಇಲಿರಾಯ[ಇಲಿರಾಜ] ಘರ್ಜಿಸಿದ್ದರೆ ಇಂದಿನ ವಿಧಾನಸೌಧದ ವರೆಗೂ ಸುದ್ದಿಯಾಗುತ್ತಿತ್ತೇನೋ! ಅವುಗಳಿಗೂ ಮತ ಚಲಾಯಿಸುವ ’ಪ್ರಜಾಪ್ರಭುತ್ವ’ ಕಲ್ಪಿಸಿದ್ದರೆ ವೋಟ್ ಬ್ಯಾಂಕ್ ರಾಜಕಾರಣಿಗಳು ಅವುಗಳಿಗೆ ಬೆಂಬಲ ನೀಡುತ್ತಿದ್ದಿರಲೂ ಬಹುದಿತ್ತೇನೋ! ಬೇರೇ ಯಾರೇ ಶಂಖ ಊದಿದರೂ ಬ್ರಷ್ಟ ರಾಜಕಾರಣಿಗಳು ಮಾತ್ರ ಶಂಖ ಊದುವುದಿಲ್ಲ ನೋಡಿ! ನೀವೂ ಇಂಥಾ ಪದ್ಯಗಳನ್ನು ಕಲ್ಪಿಸಿಕೊಂಡು ಹಾಡಿ. ಮೀಸಲಾತಿ ಕೊಡಲಾಗುವುದಿಲ್ಲ ಮತ್ತೆ ಮೊದ್ಲೇ ಹೇಳ್ಬಿಟ್ಟಿದ್ದೀನಿ...ಇಲ್ಲೇನಿದ್ರೂ ನಿಮ್ಮ ಪದಭಂಡಾರ ಮತ್ತು ಅವುಗಳನ್ನು ಬಳಸುವ ಜಾಣ್ಮೆಯ ಕರಾಮತ್ತಿಗೇ ಮೆರಿಟ್ಟು. ಅಂದಹಾಗೇ ಶಂಖ ಊದುವ ಸುದ್ದಿ ಜಾಸ್ತಿ ಕೇಳಿ ನಿಮಗೆ ಬೇಜಾರಾಯ್ತೇನೋ ಅಲ್ವೇ ?

ಮಂಗಲಂ ಭಗವಾನ್ ವಿಷ್ಣುಃ
ಮಂಗಲಂ ಮಧುಸೂದನಃ |
ಮಂಗಲಂ ಪುಂಡರೀಕಾಕ್ಷೋ
ಮಂಗಲಂ ಗರುಡಧ್ವಜ ||

ಮಂಗಲ ಹಾಡಿಬಿಟ್ಟಿದ್ದೇನೆ, ಹೋಗಿಬನ್ನಿ, ಮತ್ತೆ ಸಿಗೋಣ, ಅಲ್ಲೀತನಕ ನೋಡ್ತಾ ಇರಿ.......೨೪/೭ ....... ಓ ಸಾರಿ ಸಾರಿ ಟಿವಿ ಚಾನೆಲ್ ಹುಡ್ಗೀರು ಹುಡ್ಗರು ಹೇಳಿದ್ದು ಅನಗತ್ಯವಾಗಿ ಕಂಠಪಾಠ ಆಗಿಬಿಟ್ಟಿದೆ,  ಬ ಬಾಯ್...