ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 2, 2010

ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ !



ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ !

ಅನಿವಾರ್ಯವಾಗಿ ನಿಮ್ಮೊಡನೆ ಹಂಚಿಕೊಳ್ಳಬೇಕಾದ ಮನದ ಇಂಗಿತಗಳು ಕೆಲವು. ಸಮಾಜದ ಹತ್ತಾರು ಮುಖ-ಮಜಲುಗಳನ್ನು ಅವಲೋಕಿಸಿದಾಗ ಸಿಗುವ ಅನನ್ಯ ಅನುಭವ ಬರೇ ’ ಕುಳಿತೋದದೆಯುಂ ಕಾವ್ಯಪರಿಣತಮತಿಗಳ್’ ಎಂಬ ಮಾತಿಗೆ ಅಡ್ಡ ಬರುತ್ತವೇನೋ. ಕೆಲವನ್ನು ನಾವು ಅಗೆದು ತೆಗೆದು ಜಾಳಿಗೆಯಲ್ಲಿ ಜಾಲಾಡಿಸಿದಾಗ ಮಾತ್ರ ನಮಗೆ ಅವರ ಪರಿಣತಿಯಾಗಲೀ ಅಥವಾ ಇತಿಹಾಸದ ಕತ್ತಲೆಯ ಗರ್ಭದಲ್ಲಿ ನಡೆದುಹೋದ ನೈಜ ಕಥೆಗಳ ಹಂದರವಾಗಲೀ ನೋಡಸಿಗುತ್ತದೆ! ಅಂತಹ ಕೆಲವು ಘಟನೆಗಳನ್ನು ಅನಾವರಣ ಗೊಳಿಸುವ ಅನಿಸಿಕೆ ಅದಮ್ಯವಾಗಿ ಮನವನ್ನೆಲ್ಲಾ ಅಮರಿಕೊಂಡಾಗ ಹೀಗೆ ಬರೆಯುತ್ತಿದ್ದೇನೆ.

೩೦-೪೦ ವರ್ಷಗಳ ಹಿಂದಿನ ಕರ್ನಾಟಕ ಇಷ್ಟು ಸಿರಿವಂತರನ್ನು ಹೊಂದಿರಲಿಲ್ಲ, ಆ ವಿಷಯದಲ್ಲಿ ಈಗಲೇ ವಾಸಿ ಎನ್ನಬಹುದು. ಇವತ್ತು ಧನದ ಶ್ರೀಮಂತಿಕೆಯಿದೆ ಆದರೆ ಹೃದಯ ಸಿರಿವಂತಿಕೆಯ ಕೊರತೆ ಹಲವೆಡೆ ಕಾಣುತ್ತದೆ. ಅಂದು ಕರ್ನಾಟಕದ ಹಳ್ಳಿ ಹಳ್ಳಿಗಳು ರಸ್ತೆಗಳಿರದೇ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳಿರದೇ ಇದ್ದವು. ಹಾಗಂತ ಹಳ್ಳಿಯ ಜನ ಭಾರತೀಯ ಆಯುರ್ವೇದವನ್ನು ಪಾರಂಪರ್ಯವಾಗಿ ನಡೆಸಿಬಂದ ಕೆಲವು ವೈದ್ಯರನ್ನು ಹೊಂದಿದ್ದರಿಂದ ಕಷ್ಟವೋ ಸುಖವೋ ಜೀವನ ನಡೆದುಹೋಯಿತು. ಯಾವುದೇ ಜಾತಿ ಮತಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಸಹಜವಾಗಿ ಮನುಷ್ಯರು ಎಂದಿಟ್ಟುಕೊಳ್ಳೋಣ. ಆ ಮನುಷ್ಯರಲ್ಲಿ ಬಡತನ ಸದಾ ಕಾಡುವ ಸಮಸ್ಯೆಯಾಗಿತ್ತು. ಉಟ್ಟರೆ ಉಣಲಿಲ್ಲ, ಉಂಡರೆ ಉಡಲಿಲ್ಲ-ಹೀಗೇ ಬಹುತೇಕ ಹಳ್ಳಿಗಳು ಬಡವರನ್ನು ಹೊಂದೇ ಇದ್ದವು. ಆದರೂ ಇದ್ದುದರಲ್ಲೇ ತೃಪ್ತಿಪಡುವ, ಮನುಷ್ಯರ ಗುಣ-ನಡತೆ ಹಾಗೂ ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವ ಸಮಾಜ ಅಂದಿಗಿತ್ತು. ದುಡ್ಡಿಲ್ಲದೇ ಇದ್ದರೂ ಕೆಲಸ ಪೂರೈಸಿಕೊಳ್ಳಬಹುದಾದ ಪರಸ್ಪರರ ಬಳಗವಿತ್ತು. ಅವರಿಗೆ ಇವರು ಇವರಿಗೆ ಅವರು ಎಂದು ಕೆಲಸಗಳಲ್ಲೂ ತಮ್ಮಿಂದ ತಾವೇ ತಮಗಾಗಿ ನಡೆಸಿಬಂದ, ಅಘೋಷಿತ ಕಾರ್ಯಕಾರೀ ಸಮಿತಿಯೊಂದು ಪ್ರತೀ ಹಳ್ಳಿಯಲ್ಲಿ ಕೆಲಸಮಾಡುತ್ತಿತ್ತು. ವಕೀಲರು-ನ್ಯಾಯಾಲಯ-ಆರಕ್ಷಕ ಠಾಣೆಗಳ ಅವಶ್ಯಕತೆಯಿಲ್ಲದೇ ಗ್ರಾಮದ ಕೆಲವು ಜನ ಹಿರಿಯರು ಸೇರಿ ಗೋತ್ತಾದ ಒಂದು ಕಟ್ಟೆಯೋ ಜಾಗವೋ ಅಲ್ಲಿ ಸೇರಿ ತಮ್ಮ ತೊಡಕುಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ದೇವರು-ದಿಂಡರು ಎಂಬ ಭಕ್ತಿ ಭಾವವೂ ಮತ್ತು ಹಾದಿ ತಪ್ಪಿದರೆ ಯಾರೂ ಕ್ಷಮಿಸಲಾರರು ಎಂಬ ಭಯವೂ ಇದ್ದುದರಿಂದ ಯಾರೇ ಆಗಲಿ ಯಾವುದೇ ಅಪಚಾರದ ಕೆಲಸಕ್ಕೆ ಕೈಹಾಕಲು ಹೆದರುತ್ತಿದ್ದರು.

ರಾಜಕೀಯದ ಕಲಿ ಕಾಲಿಟ್ಟಮೇಲೆ ಹಳ್ಳಿಗಳ ಸ್ಥಿತಿ ಬದಲಾಗಿಹೋಯಿತು. ಎಷ್ಟಪ್ಪಾ ಅಂದರೆ ಅಕ್ಕ ಪಕ್ಕದ ದಾಯಾದರು ಮುಖ ಮುಖ ನೋಡದಷ್ಟು ಬದ್ಧವೈರಿಗಳಾಗಿ ಮಾರ್ಪಟ್ಟರು. ಯಾರಿಗೂ ಕಷ್ಟದ ಕೆಲಸವಾಗಲೀ ಶ್ರಮಜೀವನವಾಗಲೀ ಬೇಕಾಗಿಲ್ಲ. ಕೃಷಿ ಪದಾರ್ಥಗಳಷ್ಟೇ ಬೇಕೇ ವಿನಃ ಅವುಗಳನ್ನು ಬೆಳೆಯುವ ಗೋಜಿಗೆ ಹೋಗದವರೇ ಜಾಸ್ತಿ. ಎಲ್ಲರೂ ಅಂಡೆಚಡ್ಡಿ[ಪ್ಯಾಂಟು] ಹಾಕಲು ತೊಡಗಿದರು. ಪ್ರತಿಯೊಬ್ಬರ ಕೈಗೂ ಗಡಿಯಾರ ಬಂತು. ಕೆಲಸವಿಲ್ಲದೆಯೂ ಪೇಟೆ ಸುತ್ತುವ ಬೂಟಾಟಿಕೆಯ ವ್ಯವಹಾರಸ್ಥರು ತಯಾರಾದರು. ಹಾಸಿಗೆಗೂ ಮೀರಿ ಕಾಲು ಚಾಚುವ, ಸಾಲಮಾಡಿಯೂ ಗಡಿಗೆ ತುಪ್ಪ ಸೇವಿಸುವ ಜನರ ಸಂಖ್ಯೆ ಬೆಳೆಯತೊಡಗಿತು. ಪ್ರತೀ ಸಣ್ಣ ತೊಡಕಿಗೂ ನ್ಯಾಯಾಲಯಗಳ ಮೊರೆಹೋಗುವ ಕಾಲ ಆರಂಭವಾಯಿತು. ಪರಸ್ಪರರಲ್ಲಿ ವಿಶ್ವಾಸ ಕಮ್ಮಿಯಾಯಿತು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ನಮ್ಮ ದೃತಿಗೆಟ್ಟ ರಾಜಕಾರಣಿಗಳು ಮನೆಮನೆಗಳಲ್ಲೂ ಉಪಯೋಗಿಸಿ ಮನೆಗಳನ್ನೇ ಒಡೆದರು. ಗ್ರಾಮ್ಯ ಬದುಕಿನ ಸಹಜ ಸ್ಥಿತಿ ತನ್ನತನವನ್ನು ಕಳೆದುಕೊಂಡು ಪಟ್ಟಣದ ಕಡತಂದ ಅತಿನಾಗರಿಕ ಹುಚ್ಚು ಸಂಪ್ರದಾಯ, ಸಂವೇದನೆಗಳು ಅನುಕರಿಸಲ್ಪಟ್ಟವು. ಕಂಡಿದ್ದನ್ನೆಲ್ಲಾ ಕೊಳ್ಳುವ ಮತ್ತು ಪಕ್ಕದವರ ’ತೂಕ’ಕ್ಕಿಂತ ತಮ್ಮ ’ತೂಕ’ವನ್ನು ಹೆಚ್ಚಿಸಿ ಕೊಳ್ಳುವ ಪಟ್ಟಿಯಲ್ಲಿ ಹೇರಳವಾಗಿ ಬೆಳವಣಿಗೆ ಕಂಡುಬಂತು. ಸಮಾಜದಲ್ಲಿ ಯಾರೂ ಯಾರನ್ನೂ ಯಾವಕೆಲಸಕ್ಕೂ ನಂಬಿನಿಲ್ಲುವ ವಾತಾವರಣವೇ ಕಳೆದುಹೋಯಿತು. ಅದರ ಪರಿಣಾಮ ಕುರುಡು ಕಾಂಚಾಣ ಬೃಹದಾಕಾರ ತಳೆದು ಕುಣಿಯಹತ್ತಿತ್ತು. ಎಲ್ಲೆಲ್ಲೂ ದುಡ್ಡು ದುಡ್ಡು ದುಡ್ಡು. ಹಣವಿದ್ದರೆ ಮಾತ್ರ ಬೆಲೆ, ಇಲ್ಲದಿದ್ದರೆ ಆ ವ್ಯಕ್ತಿಗಿಲ್ಲ ಭುವಿಯಲ್ಲಿ ನೆಲೆ ಎಂಬಂತಹ ದಿನಗಳು ಬಂದವು. ಇದನ್ನೆಲ್ಲಾ ಪ್ರಸಕ್ತ ನಮ್ಮನ್ನಾಳುವ ರಾಜಕೀಯದವರಲ್ಲೂ, ನಮ್ಮಲ್ಲೂ ನಾವೇ ಕಾಣುತ್ತಿದ್ದೇವೆ. ಪರೋಕ್ಷ ನಾವೆಲ್ಲಾ ಕೆಲಸಕ್ಕೆ ಬಾರದ ಕತ್ತೆಗಳಾಗಿ ನಮ್ಮಿಂದಾರಿಸಲ್ಪಟ್ಟ ಕೆಲವರು ಹಲವಷ್ಟು ಹಡೆಯುವ ಕುದುರೆಗಳಾಗಿ ಪರಿಸ್ಥಿತಿ ಹಿಗ್ಗಾಮುಗ್ಗಾ ತೂಗುವುದನ್ನು ಕಂಡೂ ಅಯ್ಯೋ ಅನ್ನಿಸಿ ಸುಮ್ಮನಿರಬೇಕಾಗಿದೆ ಅಲ್ಲವೇ ?

ಈ ಎರಡು ಕಾಲಘಟ್ಟಗಳ ಜತೆಜತೆಗೆ ಅಂದಿನ ಹಾಗೂ ಇಂದಿನ ಕೆಲವು ಮಾನವೀಯ ಮೌಲ್ಯಾಧಾರಿತ ಘಟನೆಗಳನ್ನು ಈಗ ನೋಡೋಣ. ಮೊದಲನೆಯದು ವಾರಾನ್ನ. ಬಡ ವಿದ್ಯಾರ್ಥಿಗಳು ತಮ್ಮ ಮುಂದಿನ ಕಲಿಕೆಗಾಗಿ ತಮ್ಮ ತಂದೆ-ತಾಯಿಗಳಿಂದ ಬೀಳ್ಕೊಂಡು, ಪಟ್ಟಣಗಳಿಗೆ ಬಂದು ಅಲ್ಲಿ ಕಠಿಣ ಪರಿಶ್ರಮದಿಂದ ಓದನ್ನು ಮುಂದುವರಿಸಲು ನಿರ್ಧರಿಸಿ, ಸ್ಥಿತಿವಂತರ ಅಥವಾ ಸ್ವಲ್ಪ ಸ್ಥಿತಿವಂತರ ಮನೆಗಳಿಗೆ ಭೇಟಿ ನೀಡಿ ಅನ್ನ-ವಸತಿಗೆ ಕೋರಿಕೊಂಡು ವಾರದ ಏಳುದಿನಗಳಲ್ಲಿ ಒಂದೊಂದು ಮನೆಯನ್ನು ಗೊತ್ತುಪಡಿಸಿಕೊಂಡು ಮುನ್ನಡೆಯುವುದು ವಾರಾನ್ನದ ವ್ಯವಸ್ಥೆ. ಅವತ್ತಿನ ಕಾಲಕ್ಕೆ ಕೆಲವು ಮನೆತನಗಳಲ್ಲಿ ದಾನ-ಧರ್ಮ ಮತ್ತು ಅತಿಥಿ ಸತ್ಕಾರಕ್ಕೆ ಆದ್ಯತೆಗಳಿದ್ದವು. ಕೆಲವು ಮಧ್ಯಮವರ್ಗದ ಕುಟುಂಬಗಳೂ ದೊಡ್ಡಮನಸ್ಸಿನಿಂದ ಕುಗ್ರಾಮ-ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗಾಗಿ ವಾರಕ್ಕೊಂದು ದಿನ ಆಶ್ರಯನೀಡುತ್ತಿದ್ದರು. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ಅದೂ ಇದೂ ಕೆಲಸಮಾಡಿಸಿಕೊಂಡು ಒಂದುದಿನ ಅನ್ನ ಹಾಕುತ್ತಿದ್ದರು.

ಈ ವಾರಾನ್ನಕ್ಕೆ ಹೋಗುವ ಹುಡುಗರಿಗೆ ಬಹಳ ಇರುಸುಮುರುಸು. ಅನ್ನಹಾಕುವವರ ಋಣವನ್ನು ಭರಿಸುವುದು ಹೇಗೆ ಎಂಬ ಯೋಚನೆ ಕೆಲವರಲ್ಲಿರುತ್ತಿತ್ತು. ಕೆಲವು ಮನೆಗಳಲ್ಲಿ ಬಂದ ವಾರದ ಹುಡುಗರನ್ನು ಚೆನ್ನಾಗಿ ಕಂಡರೆ ಇನ್ನು ಕೆಲವು ಮನೆಗಳಲ್ಲಿ ಒಟ್ಟಾರೆ ಹಾಕಬೇಕಲ್ಲಪ್ಪಾ ಎಂಬ ಭಾವವಿರುತ್ತಿತ್ತು. ಕೆಲವೊಮ್ಮೆ ಸರದಿಯ ವಾರದ ಮನೆಯವರು ಅನಾರೋಗ್ಯದಿಂದಲೋ ಅಥವಾ ಬೇರೇ ಕಾರ್ಯಗಳಿಂದಲೋ " ನಾಳೆ ಬರಬೇಡ, ಮುಂದಿನವಾರ ಬಾ " ಎಂದುಬಿಟ್ಟರೆ ಆಗ ಆ ವಿದ್ಯಾರ್ಥಿಗೆ ಉಪವಾಸವೇ ಗತಿಯಾಗಿಬಿಡುತ್ತಿತ್ತು. ಅಪರೂಪಕ್ಕೊಮ್ಮೆ ತಮ್ಮ ಸಹಪಾಠಿಗಳ ತಂದೆ-ತಾಯಿಗಳು ಎಲ್ಲಾದರೂ ಒಪ್ಪಿ ಅನ್ನಹಾಕುವುದಾದರೆ ಹಾಗೆ ಉಪವಾಸವುಳಿಯಬೇಕಾಗಿ ಬರುವ ದಿನ ಅಂತಹ ಮನೆಗಳಿಗೆ ಹೋಗುತ್ತಿದ್ದರು. ತಾವೇ ಹೋಗಿ " ಊಟಕ್ಕೆ ಬರಲೇ " ಎಂದು ಕೇಳುವಾಗ ಅವರ ಮನೋಭಾವ-ನಿರ್ವಾಹವಿಲ್ಲದೇ ಕೇಳಿಕೊಳ್ಳುವ ಪರಿ ನೀವೇ ಊಹಿಸಿ. ಕೆಲವು ಮನೆಗಳಲ್ಲಿ ನಡುವಯಸ್ಸಿನ ಹುಡುಗರು ವಾರದ ಹುಡುಗರನ್ನು ಗೋಳುಹುಯ್ದುಕೊಳ್ಳುತ್ತಿದ್ದರು. ಇನ್ನು ಕೆಲವು ಮನೆಗಳಲ್ಲಿ ಮನೆಯೊಡೆಯ ಒಪ್ಪಿಕೊಂಡಿದ್ದರೂ ಹೆಂಗಸರು ಕರುಬುತ್ತಲೇ ಅನ್ನಹಾಕುತಿದ್ದರು. ಹಲವು ಮನೆಗಳಲ್ಲಿ ವಾರದ ವಿದ್ಯಾರ್ಥಿಗಳು ಹೂವಿನ ಗಿಡಗಳಿಗೆ ನೀರುಹಾಕುವುದು, ಬಾವಿಯಿಂದ ನೀರು ಸೇದಿ ಸಂಗ್ರಹಿಸುವುದು, ಬಟ್ಟೆ ಒಗೆಯುವುದು, ಸಾಮಾನು ತಂದುಕೊಡುವುದೇ ಮುಂತಾದ ಹಲವು ಕೆಲಸಗಳನ್ನು ಮಾಡಬೇಕಾದ ಪ್ರಮೇಯವಿತ್ತು. ಕೆಲವರು ಮಾತ್ರ ಇಂತಹ ವಿದ್ಯಾರ್ಥಿಗಳನ್ನು ದೇವರಂತೇ ಕಾಣುವ ಮನೋಧರ್ಮದವರಾಗಿದ್ದರು. ಅಂತೂ ಅಂದಿಗೆ ಕೊನೇಪಕ್ಷ ಅನ್ನಹಾಕುವ ಧಾರಾಳತನವಿತ್ತಲ್ಲ ಎಂಬುದೇ ಸಮಾಧಾನ.

ಹಾಗೆ ನೋಡಿದರೆ ಅಂದಿಗೆ ಅಡಿಗೆ ಪರಿಕರಗಳು, ಅನುಕೂಲತೆಗಳು ಕಮ್ಮಿ ಇದ್ದವು. ಇದ್ದಲು ಒಲೆ ಅಥವಾ ಸೀಮೆ ಎಣ್ಣೆ ಅಗ್ಗಿಷ್ಟಿಕೆಯನ್ನು ಬಳಸಿ ಆಹಾರ ಬೇಯಿಸಬೇಕಾಗಿತ್ತು. ಕೆಲವು ಕಡೆ ಕಟ್ಟಿಗೆಯ ಒಲೆಯೂ ಇದ್ದ ಕಾಲವದು. ಅಂದಿನ ಗೃಹಿಣಿಯರಿಗೆ ಶಾರೀರಿಕ ಅನಾನುಕೂಲವಿದ್ದರೆ ಇವತ್ತಿನ ರೀತಿ ಹಲವು ವೈದ್ಯಕೀಯ ಸವಲತ್ತುಗಳು ಇರಲಿಲ್ಲ. ಹಾಗಂತ ಅತಿರೇಕದ ಧಾವಂತವೂ ಇರದ ಜೀವನ ಅವರದಾಗಿತ್ತು. ತಮ್ಮ ಮಕ್ಕಳ ಜತೆಗೆ ಬಂದ ವಾರದ ವಿದ್ಯಾರ್ಥಿಯನ್ನೂ ಆತ್ಮೀಯವಾಗಿ ಕಂಡು ಉಣಬಡಿಸುವ ಕೆಲವರಿದ್ದರು.

ಒಮ್ಮೆ ಒಬ್ಬರು ಹೇಳಿದ್ದು-- ತಾವು ವಾರಾನ್ನ ಮಾಡುತ್ತಿರುವಾಗ ಒಂದು ದಿನ ಉಪವಾಸವಿರಬೇಕಾದ ಪ್ರಮೇಯ ಬಂದಿತ್ತು. ಯಾವ ಮನೆಯೂ ಗೊತ್ತಾಗಿರಲಿಲ್ಲ. ಸಹಪಾಠಿಯೊಬ್ಬನ ಸ್ನೇಹದಲ್ಲಿ ಆತನಲ್ಲಿ ನಿವೇದಿಸಿ " ಏ ನಿಮ್ಮಮ್ಮಂಗೆ ಹೇಳಿ ಊಟ ಹಾಕಲು ಕೇಳಿನೋಡುತ್ತೀಯೇನೋ " ಎಂದಿದ್ದಕ್ಕೆ ಆ ಹುಡುಗ ಒಪ್ಪಿ ತನ್ನ ಮನೆಯಲ್ಲಿ ಹೇಳಿಬಿಟ್ಟಿದ್ದಾನೆ. ಅವರು " ಆಗಲಿ ಆತ ಬರಲಿ " ಎಂದು ಹೇಳಿಕಳಿಸಿದ್ದಾರೆ. ಈತ ಹೋಗಿದ್ದಾಯ್ತು, ಹೋದಾಗ ಕಂಡಿದ್ದು ಅದು ಸಣ್ಣದೊಂದು ಮನೆ. ಅತಿ ದೊಡ್ಡ ಸಂಸಾರ. ಏಳೆಂಟು ಮಕ್ಕಳು-ಗಂಡ-ಹೆಂಡತಿ. ಅವರಿಗೇ ಬಡತನ. ಅಂಥದ್ದರಲ್ಲೂ ಆ ಮಹಾತಾಯಿ ತನ್ನಮಕ್ಕಳ ರೀತಿಯಲ್ಲೇ ಒಬ್ಬ ಉಂಡರೆ ದೇವರು ಉಂಡಂತೇ ಎಂಬ ಭಾವದಿಂದ ಬರಹೇಳಿದ್ದಳು! ಆಮೇಲೆ ಪ್ರತೀವಾರದ ಒಂದು ದಿನ ಅವರ ಮನೆಗೆ ಊಟಕ್ಕೆ ಹೋದಾಗ ಈತನಿಗೆ ಬಿಸಿಬಿಸಿ ಅನ್ನ ಬಡಿಸುತ್ತಿದ್ದರು. ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳುವ ತನ್ನ ಮಕ್ಕಳಿಗೆ ತಂಗಳನ್ನು ಬಡಿಸುತ್ತಿದ್ದಳು ಆ ಮಹಾತಾಯಿ. ಇದನು ಗ್ರಹಿಸಿದ ಈತ " ಯಾಕಮ್ಮಾ ನನಗೆ ಮಾತ್ರ ಬಿಸಿಬಿಸಿ ಅನ್ನ, ನಿಮ್ಮ ಮಕ್ಕಳಿಗೆಲ್ಲಾ ತಂಗಳನ್ನ ಹಾಕುತ್ತೀರಿ ? " ಎಂದಾಗ ಅವರೆಂದರು " ಅಯ್ಯಾ, ಅವರಿಗೆ ಅನಾರೋಗ್ಯವಾದರೆ ನೋಡಿಕೊಳ್ಳಲು ತಂದೆ-ತಾಯಿ ನಾವಿಲ್ಲೇ ಇದ್ದೇವೆ, ನಿನಗೆ ಅಪ್ಪಿ-ತಪ್ಪಿ ಅನಾರೋಗ್ಯವಾದರೆ ಯಾರುನೋಡಿಕೊಳ್ಳುವವರಿದ್ದಾರಪ್ಪ ? ಅದಕ್ಕೇ ಹಾಗೆ ಮಾಡುತ್ತಿದ್ದೇನಪ್ಪಾ, ಏನೂ ತೊಂದರೆಯಿಲ್ಲ ಬಿಡು. " ಆ ಮಾತನ್ನು ಕೇಳಿ ಈತನಿಗೆ ಅವರೂ ತನ್ನ ತಾಯಿಯಸಮಾನ ಎಂದೆನಿಸಿತು. ಸಹಜತಾನೇ ?

ಇನ್ನೊಂದು ದಿನ ಇದೇ ವಿದ್ಯಾರ್ಥಿಗೆ ಊಟವಿರಲಿಲ್ಲ. ಅನಿರೀಕ್ಷಿತವಾಗಿ ವಾರದಲ್ಲೊಂದು ದಿನ ಅನ್ನಹಾಕುವವರು ಎಲ್ಲಿಗೋ ಪ್ರಯಾಣ ಹೋಗಿದ್ದರಿಂದ ಅಂದಿಗೆ ಉಪವಾಸವೇ ಗತಿಯಾಗಿತ್ತು. ತಾಳದ ಹೊಟ್ಟೆಯ ತಾಳಕ್ಕೆ ತಕ್ಕಂತೇ ಒಂದಷ್ಟು ನೀರುಕುಡಿದು ಅನ್ನದ ಜಾಡನ್ನು ಹಿಡಿದು ಹೊರಟಿದ್ದನೀತ. ದಕ್ಷಿಣ ಕನ್ನಡದ ಪುಣ್ಯಾತ್ಮರೊಬ್ಬರ ಹೋಟೆಲ್ ಒಂದು ಕಾಣಿಸಿತು. ಹೇಳಿ-ಕೇಳಿ ದಕ್ಷಿಣ ಕನ್ನಡವೆಂದರೆ ಉತ್ಕೃಷ್ಟ ಆಹಾರ ತಯಾರಿಕೆಗೆ ಹೊಸ ವ್ಯಾಖ್ಯಾನ ಬರೆದ ಜಾಗತಾನೇ? ಅಲ್ಲಿನವರ ಹೋಟೆಲ್ ಕೂಡಾ ಹಾಗೇ ಇರುತ್ತವೆ. ಈ ಹುಡುಗ ಆ ಹೋಟೆಲ್ ಮುಂಭಾಗ ಒಂಡೆರಡು ಸಲ ಆಚೆ ಈಚೆ ಓಡಾಡಿದ. ಗಲ್ಲಾದಲ್ಲಿ ಕುಳಿತು ಹಣಸ್ವೀಕರಿಸುತ್ತಿದ್ದ ಮಹಾಬಲೇಶ್ವರ ಭಟ್ಟರಿಗೆ ಈತ ಕಂಡ. ಅವರಿಗೆ ಈತನ ಪರಿಚಯವಿತ್ತು. ಈತ ವಾರಾನ್ನಮಾಡಿ ವಿದ್ಯಾರ್ಜನೆ ಮಾಡುವ ಹುಡುಗ ಎಂದು ಹಿಂದೆ ಯಾರೋ ಹೇಳಿದ್ದರು. ಹಾಗೆ ಕಂಡ ಅವನನ್ನು ಅವರು ಒಳಗೆ ಕರೆದರು. " ಏನಪ್ಪಾ ಊಟವಾಯ್ತಾ ? " ಈತ ನಿರುತ್ತರನಾಗಿದ್ದ. ಅನ್ನ-ತಿಂಡಿ ತಯಾರಿರುವ ಹಾಗೂ ಅದನ್ನೇ ಉದ್ಯಮವಾಗಿಸಿಕೊಂಡಿರುವ ಜಾಗಕ್ಕೇ ಬಂದು ಬಿಟ್ಟಿಯಲ್ಲಿ ಅನ್ನಹಾಕಿ ಎಂದಹಾಗೆ ಆಗುತ್ತದೇನೋ ಎಂಬ ಭಾವನೆ ಈತನಿಗೆ. ಮಾತನಾಡದ್ದಕ್ಕೆ ಸಲುಗೆಯಿಂದ ಭಟ್ಟರು ಒಂದು ಬಿಟ್ಟರು ! ಹಸಿದ ಹೊಟ್ಟೆಯಲ್ಲೂ ಏನೋ ಚಳುಕು, ನೋವು. ಆಗ ಬಾಯಿಂದ ಬಂದಿದ್ದು " ಇಲ್ಲಾ ಸ್ವಾಮೀ, ಇವತ್ತು ವಾರದ ಸರದಿ ಮನೆಯವರು ಎಲ್ಲಿಗೋ ಹೋಗಿದ್ದಾರೆ. ಹೀಗಾಗಿ ಊಟವಿಲ್ಲ. " ಭಟ್ಟರು ಕುಳಿತಲ್ಲಿಂದಲೇ ಕೂಗಿ ಹುಡುಗನೊಬ್ಬನನ್ನು ಕರೆದರು. " ಹೇಯ್ ಬರ್ರೋ ಇಲ್ಲಿ, ಇವನನ್ನು ಕರೆದುಕೊಂಡು ಹೋಗಿ ಊಟಹಾಕಿ. "

ಊಟಮುಗಿಸಿದ ಸಂತೃಪ್ತ ಹೊಟ್ಟೆಯಲ್ಲಿ ಭಟ್ಟರನ್ನು ಮನದಲ್ಲೇ ಅಭಿನಂದಿಸುತ್ತಾ ಗಲ್ಲಾದ ಹತ್ತಿರ ಬಂದ ಈತನನ್ನು ಮತ್ತೆ ಹಿಡಿದುಕೊಂಡರು ಭಟ್ಟರು. " ಹೇಯ್ ನಿಲ್ಲಯ್ಯಾ, ಆಣೆ ಎಂದರೇನು ಗೊತ್ತೇನಯ್ಯಾ ನಿಂಗೆ? ನಿನ್ನ ಬಲಗೈಕೊಡು, ನನ್ನ ತಲೆಯಮೇಲೆ ಇಡು ಹೇಳು ಇವತ್ತಿನಿಂದ ಊಟವಿರದ ದಿನ ನಮ್ಮಲ್ಲಿಗೆ ಬಂದು ಊಟಮಾಡದೇ ಹೋದರೆ ಮಹಾಬಲೇಶ್ವರ ಭಟ್ಟರಮೇಲಾಣೆ. " ಒಂಥರಾ ಹೆದರಿಕೆಯಿಂದ ಹುಡುಗ ಹೇಳಿಕೊಟ್ಟಂತೇ ಮಾಡಿದ. ಆಮೇಲೆ ಹೇಳಿದರು " ನೋಡಯ್ಯಾ ಅಕಸ್ಮಾತ್ ನೀನು ಉಪವಾಸವಿದ್ದು ಆಣೆಮಾಡಿದ್ದನ್ನು ಮರೆತರೆ ಮಹಾಬಲೇಶ್ವರ ಭಟ್ಟರು ಸತ್ತುಹೋಗುತ್ತಾರೆ ತಿಳಿಯಿತೇ ? " ಹುಡುಗ ದಂಗಾಗಿ ಹೋಗಿದ್ದ. ಈ ಹುಡುಗ ಇನ್ನೂ ಜೀವಂತವಿದ್ದು ಹೆಸರ್ವಾಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆನಿಂತ ಈತನೇ ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿರುವ ಶೀ ಮತ್ತೂರು ಕೃಷ್ಣಮೂರ್ತಿ. ಇಂತಹ ಸಾಮಾಜಿಕ ಕಳಕಳಿಯುಳ್ಳ, ಒಳ್ಳೆಯತನವನ್ನು ಪ್ರೋತ್ಸಾಹಿಸುವ ಹಲವು ಧಾರ್ಮಿಕ ಮನೋಭಾವದ ಜನ ಅಂದಿದ್ದರು. ಇದು ಒಂದು ಉದಾಹರಣೆಯಾದರೆ ಇಂತಹುದೇ ಅಸಂಖ್ಯ ಸಂಗತಿಗಳು ನೋಡಸಿಗುತ್ತವೆ. ವಾರಾನ್ನ ಕಲಿಸಿದ ವಿನಯ ವಿಧೇಯತೆ ಬಹಳ ಎಂದು ಪ್ರತೀ ವ್ಯಕ್ತಿಯ ಜೀವನವನ್ನು ತಿಳಿದಾಗಲೂ ನಮ್ಮರಿವಿಗೆ ಬರುತ್ತದೆ. ಜೀವನದಲ್ಲಿ ವಾರಾನ್ನದ ಹುಡುಗರು ಸಾಧಿಸಿದಷ್ಟು ಬೇರೆ ಹುಡುಗರು ಸಾಧಿಸಲಿಲ್ಲ ಎನ್ನುವದು ಕಂಡುಬರುತ್ತದೆ. ಕಲಿತು, ಬೆಳೆದು, ತಮ್ಮಕಾಲಮೇಲೆ ತಾವು ನಿಂತು, ದೇಶದ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದ ಅನೇಕ ಹುಡುಗರು ವಾರಾನ್ನದವರೆಂದರೆ ಆಶ್ಚರ್ಯವಾಗುತ್ತದಲ್ಲವೇ ?

ಇನ್ನೊಂದು ವಿಧದ ಬಗ್ಗೆ ಮಾತಾಡೋಣ. ಅದು ರಾಜಕೀಯದ ರುಶುವತ್ತು. ಇಂದು ಎಲ್ಲವೂ ಲಂಚಪ್ರಪಂಚ ! ಲಂಚಾವತಾರ ! ಲಂಚವಿಲ್ಲದೇ ಯಾವುದೂ ನಡೆಯುವುದಿಲ್ಲ ಎಂಬಷ್ಟು ಹಾಸುಹೊಕ್ಕಾಗಿದೆ ಲಂಚದ ಇರವು. ಬ್ರಷ್ಟಾಚಾರ ನಿರ್ಮೂಲನೆಯ ಕಾರ್ಯಕ್ರಮ ಉದ್ಘಾಟನೆಗೆ ಬಂದ ರಾಜಕಾರಣಿಗೆ ಮರಳುವಾಗ ಅಲ್ಲೇ ಸಿಕ್ಕು ಯಾವುದೋ ಕೆಲಸಮಾಡಿಸಿಕೊಳ್ಳಲು ಲಂಚ. ನೌಕರಿ ಗಿಟ್ಟಿಸಲು, ಸಿಕ್ಕಿದ ನೌಕರಿಯಲ್ಲಿ ಮುಂಬಡ್ತಿಪಡೆಯಲು, ಬೇಕಾದ ಜಾಗಕ್ಕೆ ವರ್ಗಾಯಿಸಿಕೊಳ್ಳಲು, ಡೊನೇಶನ್ ಹಣಗಳಿಸಲು ಕಳಪೆ ವಿದ್ಯಾಸಂಸ್ಥೆಗಳನ್ನು ಆರಂಭಿಸಿದ್ದಕೆ ಪರವಾನಿಗೆ ಪಡೆಯಲು ಈಗ ಇದೆಲ್ಲವೂ ಮುಗಿದು ಪ್ರಶಸ್ತಿ-ಪುರಸ್ಕಾರಗಳಿಗೆ ಲಾಬಿ ನಡೆಯುತ್ತಿದೆ! ಅದಕ್ಕೂ ಲಂಚ. ಅರ್ಹತೆಗೆ ಮೀರಿದ ಗೌರವವನ್ನು ಕೊಂಡುಕೊಳ್ಳುವ ಪರಿಪಾಠ! ಎಂಥಾ ವಿಪರ್ಯಾಸ ನೋಡಿ.

ನಮ್ಮ ಊರಲ್ಲೆಲ್ಲಾ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಊಟಮಾಡುವಾಗ ಮದುವೆಮನೆಯವರು ಬಂದು ಊಟದ ಜಾಗಕ್ಕೆ ಕರೆಯಬೇಕಿತ್ತು. ಬದಲಾದ ರೀತಿಯಲ್ಲಿ ಇಂದು ನಾವು ತಟ್ಟೆಹಿಡಿದು ಬೇಡಿ ತಿನ್ನುವ ’ಬಫೆ’ ಯನ್ನು ಸ್ವೀಕರಿಸಿದ್ದೇವೆ. ಜಾಗ ಜಾಸ್ತಿ ಇಲ್ಲದ ಜಾಗದಲ್ಲಿ ಅದು ಅನುಕೂಲವೇ ಆದರೂ ನಮ್ಮ ಆಯುರ್ವೇದ ಸಾರುವುದು ನಿಂತು ಏನನ್ನೂ ತಿಂದು-ಕುಡಿದು ಮಾಡಬೇಡಿ ಎಂಬುದಾಗಿ. ಆದರೆ ಅದನ್ನೆಲ್ಲಾ ಕೇಳುವವರಾರು? ನಿನ್ನೆ ನನಗೆ ಒಬ್ಬರು ಸಿಕ್ಕರು ಮತ್ತು ಹೇಳಿದರು " ಏನಿಲ್ಲಾ ಸರ್ ಎಲ್ಲರಿಗೂ ಹೇಳ್ಬುಟ್ಟಿದ್ದೀನಿ, ಆಫೀಸಲ್ಲಿ ಎಲ್ಲರೂ ಅವರವರ ಸಂಬಳದಲ್ಲಿ ೫೦೦ ರೂಪಾಯಿ ಕೊಡಿ ಅಂತ. ಕನ್ನಡದ ಯಾವುದಾದರೂ ಚಿತ್ರವನ್ನು ಇಟ್ಟು ಒಂದು ಮಾಲೆ ಹಾಕಿ, ಒಂದೊಂದು ಸ್ವೀಟ್ ಕೊಟ್ಟು, ಒಂದುದ್ದ ಸರ ಪಟಾಕಿ ಹಚ್ಬುಡ್ತೀವಿ, ಅಲ್ಲಿಗೆ ಯಾರೂ ಮಾತಾಡೋ ಹಾಗೇ ಇಲ್ಲ ಏನಂತೀರಾ ? " . ನಾನು ಹೌದು ಅನ್ನಲೋ ಅಲ್ಲ ಅನ್ನಲೋ ತಿಳಿಯದಾದೆ. ಯಾಕೆಂದರೆ ಆಚರಣೆಗಳೆಲ್ಲಾ ಡಾಂಭಿಕವಾದಾಗ ಅದರಲ್ಲಿ ಮಹತ್ತರ ಸಾಧನೆಯೇನಿದೆ? ಈಗ ಎಲ್ಲವೂ ಅಷ್ಟೆ ಒಂದು ಸಿನಿಮಾ ಅಂದರೆ : ಕೆಲವು ಮರಸುತ್ತುವ ಹಾಡುಗಳು, ಒಂದೆರಡು ಫೈಟು, ಒಂದು ಕ್ಲೈಮ್ಯಾಕ್ಸು -ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು. ಎಲ್ಲವೂ ಹೀಗೇ ಆಗಿಬಿಟ್ಟಿವೆ. ಅದರಂತೇ ನಮ್ಮ ಪ್ರಶಸ್ತಿ, ದಾಖಲೆಗಳು, ಡಾಕ್ಟರೇಟ್ ಮುಂತಾದವುಗಳೆಲ್ಲಾ ಸೇರಿಕೊಂಡು ಅಣಕಿಸಿದಂತೇ ಆಗುತ್ತದೆ.

ಬದುಕಿನಲ್ಲಿ ಏನಾದರೂ ಅನುಸರಿಸುವುದಿದ್ದರೆ ಅದನ್ನು ಕಾರಂತ, ಬೇಂದ್ರೆ ಮತ್ತು ಡೀವಿಜಿಯವರಿಂದ ಕಲಿಯಬೇಕಾಗಿತ್ತು. ಇಂದಿಗೆ ಅವರು ಅಮರರು ಹೀಗಾಗಿ ಅವರ ಕೃತಿಗಳಲ್ಲಿ ಅವರ ಜೀವನಚರಿತ್ರೆಗಳಲ್ಲಿ ಆದಷ್ಟೂ ನೋಡಿ ತಿಳಿದುಕೊಳ್ಳುವುದು ಬಹಳ ಇದೆಯೆನಿಸುತ್ತದೆ. ಮೀಸಾ ಕಾಯಿದೆಯನ್ನು ಜಾರಿಗೆತಂದ ಸಮಯದಲ್ಲಿ ಕೇಂದ್ರ ಸರಕಾರ ಕೊಟ್ಟ ಪುರಸ್ಕಾರವನ್ನು ನೇರವಾಗಿ ಶ್ರೀಮತಿ ಇಂದಿರಾಗಂಧಿಯವರಿಗೆ ಬಿಸಾಕಿದ ಹೆಗ್ಗಳಿಕೆ ಕಾರಂತರದು! ಬ್ರಿಟಿಷರು ತಪ್ಪಾಗಿ ತಿಳಿದು ಶಿಕ್ಷಿಸಿದಾಗಲೂ ಸಹಿಸಿ ಸಾಹಿತ್ಯ ಮುಂದುವರಿಸಿದ ಮತ್ತು ಯಾವುದೇ ಪ್ರಶಸ್ತಿಗಾಗಿ ಹಲ್ಲುಗಿಂಜುವ ಕೆಲಸಮಾಡದವರು ಬೇಂದ್ರೆ. ಅಭಿಮಾನಿಗಳು ಸನ್ಮಾನಿಸಿ ಕೊಟ್ಟ ಒಂದುಲಕ್ಷರೂಪಾಯಿಯ [೩೫ ವರ್ಷಗಳ ಹಿಂದೆ] ಹಣವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಸಿದವರು ಡೀವೀಜಿ. ಮಾಸಾಶನ ಕೊಡುವುದಕ್ಕೆ ಆಸ್ತಿವಿವರದ ಅರ್ಜಿ ಕೇಳಿ ಡಾ| ಕೆರೆಮನೆ ಮಹಾಬಲ ಹೆಗಡೆಯವರಿಗೆ ಸರಕಾರದ ಪತ್ರಬಂದಾಗ ಅವರು ಹೇಳಿದ್ದಿಷ್ಟು: " ಕಲಾವಿದನೊಬ್ಬನಿಗೆ ಮಾಸಾಶನವನ್ನು ಆತನ ಕಲಾಸೇವೆ ನೋಡಿ ಕೊಡುವುದಾದರೆ ಅದು ಸರಿ, ಆಸ್ತಿಯವಿವರ ಕೇಳಿ ಅರ್ಜಿ ಪಡೆದು ಕೊಡುವುದಾದರೆ ಅದಕ್ಕೆ ನನ್ನ ಧಿಕ್ಕಾರವಿದೆ". ಹುಟ್ಟಾ ಕಡುಬಡತನದಿಂದ ಬಂದ ಹೆಗಡೆ ರಂಜಿಸಿದ ಜನರ ಸಂಖ್ಯೆ ಅಪಾರ. ಅವರ ಕಲಾಸೇವೆ ಅಮೋಘ. ಆದರೆ ಕುರುಡು ಸರಕಾರಕ್ಕೆ ಅಂದು ಕಣ್ಣಿರಲಿಲ್ಲವಲ್ಲ! ಇಂತಹ ಘನತೆವೆತ್ತ ಜನರನ್ನು ನಾನು ಬೇರೆಲ್ಲೂ ಕಾಣಲಿಲ್ಲ. ಇವರನ್ನೆಲ್ಲಾ ಪಡೆದುದು ನಮ್ಮ ಭಾಗ್ಯ.

ಆದರೆ ಈಗ ಎಲ್ಲವೂ ತಂತ್ರ-ಪ್ರತಿತಂತ್ರ-ಕುತಂತ್ರ ರಾಜಕಾರಣಿಗಳ ತಹಬಂದಿಯಲ್ಲಿ ಲಂಚದ ಮೂಲಕವೇ ನಡೆಯುವ ಕೆಲಸಗಳು ಹಲವು. ಪ್ರಶಸ್ತಿಗಾಗಿ ಅರ್ಜಿ ಸ್ವೀಕರಿಸುವುದು ಎಂಥಾ ನಾಚಿಕೆಗೇಡು! ಹಾಗೆ ಅರ್ಜಿ ಕೊಡುವ ಜನರಿಗಾದರೂ ಮಾನ ಮರ್ಯಾದೆ ಬೇಡವೇ ? ತನಗೆ ರಾಜ್ಯೋತ್ಸವ ಪ್ರಶಸ್ತಿಕೊಡಿ ತನಗೂ ಕೊಡಿ ಎಂದು ೩೫೦೦ ಜನ ಅರ್ಜಿಹಾಕಿದ್ದರಂತೆ. ಅದರಲ್ಲಿ ಕೆಲವನ್ನು ಆರಿಸಲಾಯಿತಂತೆ. ಸರಕಾರ ಆಯ್ಕೆಗಾಗಿ ಲಾಬಿಮಾಡದ, ಲಂಚಹೊಡೆಯದ, ಯಾರದೇ ಸಂಪರ್ಕಕ್ಕೆ ಸಿಗದ ಒಂದು ಸಮಿತಿಯನ್ನು ನೇಮಕಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ ? ಆ ಸಮಿತಿ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಮಾಹಿತಿಯನ್ನು ಗೌಪ್ಯವಾಗಿ ಕಲೆಹಾಕಿ ಆಮೇಲೆ ಕ್ರೋಢೀಕರಿಸಿದ ದಾಖಲೆಗಳನ್ನೆಲ್ಲಾ ತೆಗೆದು ಪರಿಶೀಲಿಸಿ ಪರಿಷ್ಕರಿಸಿ ಪ್ರಶಸ್ತಿಗೆ ಅರ್ಹರಾದವರ ಯಾದಿಯನ್ನು ನಂತರ ಬಿಡುಗಡೆಗೊಳಿಸಿದ್ದರೆ ಬಹುಶಃ ಇಂತಹ ಹಾಸ್ಯಾಸ್ಪದ ಸನ್ನಿವೇಶದ ಸೃಷ್ಟಿಯ ಪುನರಾವರ್ತನೆಯಾಗುತ್ತಿರಲಿಲ್ಲ. ಸರಕಾರ ಹಾಗೆ ಮಾಡುವುದಿಲ್ಲ. ಯಾಕೆ ಗೊತ್ತೇ ? ಇಲ್ಲೂ ಲಂಚಾವತಾರ!

ಇನ್ನು ಕಾಣದ ಲೋಕದಿಂದ ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆ ಇವರೆಲ್ಲಾ ಧರೆಗೆ ಬಂದಂತೇ ಯಾವುದೋ ಕಣ್ಣಿಗೇ ಕಾಣದ ದೂರದೇಶದಲ್ಲಿರುವ ವಿಶ್ವವಿದ್ಯಾಲಯವೊಂದೆರಡು ನಮ್ಮ ರಜಕಾರಣಿಗಳಿಗೆ ನಮ್ಮ ಸಿನಿಮಾತಾರೆಯರಿಗೆ ರಾತ್ರೋರಾತ್ರಿ ಗೌರವ ಡಾಕ್ಟರೇಟ್ ಕೊಟ್ಟುಬಿಡುತ್ತಾರೆ! ಅವರ ದೇಶದಲ್ಲಿ ಅಲ್ಲಿನ ಪ್ರಜೆಗಳು ಪ್ರಾಯಶಃ ಈ ವ್ಯಕ್ತಿಗಳ ಹೇಸರನ್ನೇ ಕೇಳಿರುವುದಿಲ್ಲ! ಇನ್ನು ಜಾಗತಿಕ ಮಟ್ಟದಲ್ಲಿ ಇವರು ಮಾಡಿರುವ ಘನಂದಾರಿ ಕೆಲಸಗಳು ಯಾವುದೂ ಕಾಣಿಸುವುದಿಲ್ಲ. ಒಟ್ಟಾರೆ ಈ ಡಾಕ್ಟರೇಟ್ ಕೊಡಿಸುವಿಕೆಯಲ್ಲಿ ಯಾವುದೋ ಮಧ್ಯವರ್ತಿಗಳು ವೈಯಕ್ತಿಕ ಹೊರಗುತ್ತಿಗೆ ಪಡೆಯುತ್ತಾರೆ ಎಂಬುದರಲ್ಲಿ ಎರಡುಮಾತಿಲ್ಲ ! ಹೀಗೆ ಕೊಡಲ್ಪಡುವ ಡಾಕ್ಟರೇಟ್ ಸದ್ಯ ಯಾರ್ಯಾರಿಗೆ ಬಂತೆಂದು ತಮಗೆಲ್ಲಾ ಹೊಸದಾಗಿ ಹೇಳಬೇಕೆ ? ಇವರಿಗಿಂತ ರಸ್ತೆಬದಿಯಲ್ಲಿ ಅಂಗಡಿ ತೆರೆದು ವೈದ್ಯಕೀಯ ಶಿಕ್ಷಣ ಪಡೆಯದಿದ್ದರೂ ತಾನು 'ಡಾಕ್ಟರ್' ಎಂದು ನಾಮಫಲಕ ಹಾಕಿಕೊಳ್ಳುವ ಡಾಕ್ಟರ್ ಗಳೇ ವಾಸಿ. ಯಾಕೆಗೊತ್ತೇ ? ಅವರು ಕೆಲವೇ ಜನರನ್ನು ಹಾಳುಮಾಡುತ್ತಾರೆ, ಆದರೆ ಈ ಗೌರವ ಡಾಕ್ಟರ್ ಗಳು ಸಮಾಜದ ಸಂಸ್ಕೃತಿಯನ್ನೇ ಬದಲುಮಾಡುತ್ತಾರೆ. ’ನಂದೋರಾಯನ ದರ್ಬಾರ ನಾಯಿ-ನರಿ ಪಾಲು’ ಎಂಬೊಂದು ಗಾದೆ ನೆನಪಿಗೆ ಬರುತ್ತಿದೆ. ಪ್ರಶಸ್ತಿಗೆ-ಫಲಕಕ್ಕೆ ಮುಗಿಬೀಳುತ್ತಿರುವ ಅನರ್ಹರು ಅದನ್ನು ಕೊಂಡುಕೊಳ್ಳಲು ಮುಂದಾಗುತ್ತಿರುವುದು ನವಸಮಾಜದ ಕೆಟ್ಟ ಸಂಸ್ಕೃತಿಯ ದ್ಯೋತಕವಾಗಿದೆ. ಮಾನ ಸನ್ಮಾನಗಳು, ಬಿರುದು-ಬಾವಲಿಗಳು ಸಹಜವಾಗಿ ಗೌರವಯುತವಾಗಿ ಸಮಾಜಗುರುತಿಸಲ್ಪಟ್ಟು ಹರಿದುಬರಬೇಕೇ ವಿನಃ ’ ಇವರು ಇಂಥಾ ಪ್ರಶಸ್ತಿ ವಿಜೇತರು, ಇವರು ಅಂಥಾ ಪ್ರಶಸ್ತಿ ವಿಜೇತರು ಎಂದು ಘೋಷಿಸಿಕೊಳ್ಳುವುದರ ಮೂಲಕ ಪ್ರಚಾರ ಗಿಟ್ಟಿಸುವ, ಮುಂದೆ ಹಣಗಳಿಸಲು ಇದು ಸಹಕಾರಿಯಾಗಲೆಂದು ಉದ್ದೇಶಿಸುವ ಹಲವು ಅನರ್ಹ ಜನರಿಗೆ ಏನನ್ನಬೇಕೋ ತಿಳಿಯದಾಗಿದೆ. ಇದರಿಂದ ನಿಜವಾಗಿ ಅರ್ಹತೆಯುಳ್ಳ ಎಷ್ಟೋ ಜನ ಮೂಲೆಗುಂಪಾಗುತ್ತಾರೆ. ಎಲೆಮರೆಯ ಕಾಯಿಯಂತೇ ಬದುಕಿ ತಮ್ಮ ಜೀವನ ಕಳೆಯುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ ೧೬೫ ಜನರಿಗೆ ಕೊಟ್ಟರಲ್ಲ, ಅದರಲ್ಲಿ ಬರೇ ೬೫-೭೦ ಜನರಿಗೆ ಕೊಟ್ಟರೂ ಅದೂ ಕೂಡ ಹೆಚ್ಚೇ ಆಗುತ್ತಿತ್ತು. ಮಿಕ್ಕುಳಿದ ಯಾರೂ ಅದಕ್ಕೆ ಅರ್ಹರಲ್ಲದಿರುವುದು ನಮಗೆ ತಿಳಿದುಬರುವ ಅಪ್ಪಟ ಸತ್ಯ! ಇಲ್ಲೂ ಕುದುರೆ ಲದ್ದಿ ಖರೀದಿ ನಡೆದಿದೆ ಎಂಬ ಸುದ್ದಿ ?

ಒಂದುಕಡೆ ಬಡತನದಿಂದ ಕಷ್ಟಪಟ್ಟು ಮೇಲೆಬಂದ ಅರ್ಹತೆಯುಳ್ಳ ಜನ, ಇನ್ನೊಂದು ಕಡೆ ಹಣದಿಂದ ಅರ್ಹತೆಯಿಲ್ಲದ್ದನ್ನೂ ಖರೀದಿಮಾಡುವ ಜನ-ಈ ಎರಡು ಸಮುದಾಯಗಳ ನಡುವೆ ಯಾರು ಹಿತವರು ನಿಮಗೆ -ನಮಗೆ? ನಾಳಿನ ನಮ್ಮ ರಾಜ್ಯ-ದೇಶದಲ್ಲಿ ನಾಡು-ನುಡಿ-ಸಂಸ್ಕೃತಿ ಉಳಿಯಬೇಕೆಂದರೆ ನಿಜವಾಗಿ ಅರ್ಹತೆಯುಳ್ಳವರಿಗೆ ಮಾನ-ಸನ್ಮಾನ ನಡೆಯಲಿ, ಅದು ಬಿಟ್ಟು ಯಾರು ಎಷ್ಟನ್ನು ಕೊಡುತ್ತಾರೆ, ಯಾರಮೂಲಕ ಲಾಬಿ ಮಾಡಿದ್ದಾರೆ ಎಂಬುದನ್ನು ಅವಲಂಬಿಸಿ ಅಂತಹ ಪ್ರಶಸ್ತಿಗಳು ಅಪಾತ್ರರ ಪಾಲಾಗಿ ಮುಂದೆ ನಮ್ಮ ಸಮಾಜಕ್ಕೆ ಭ್ರಮನಿರಸನವಾಗುವ ಸ್ಥಿತಿ ಬಾರದಿರಲಿ ಎಂದು ಹಾರೈಸುತ್ತ ಮತ್ತೊಮ್ಮೆ ನಿಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದೇನೆ, ನಮಸ್ಕಾರ.

Sunday, October 31, 2010

ನಗೆಯಲೂ ಬಯಸುವ ಕನ್ನಡವ !

ಮೊದಲ ಚಿತ್ರ ಋಣ : ಶ್ರೀ ಬಿ.ಕೆ.ಎಸ್ ವರ್ಮಾ

ನಗೆಯಲೂ ಬಯಸುವ ಕನ್ನಡವ !

ಜೀವನ ಕಡಲಿನ ಸ್ನೇಹದ ನೌಕೆಯ
ಪಾವನ ಓ ಸಹಯಾತ್ರಿಗಳೇ
ನಾವಿರುವರೆಗೂ ಒಳಿತನು ಬಯಸುವ
ಭಾವದಿ ನಮಿಸುತ ಕನ್ನಡಕೆ

ಎಂದಿಗೂ ದೂರದ ಕಂದನ ಮರೆಯದ
ಬಂಧು ನಮ್ಮ ಕನ್ನಡಮಾತೆ
ಚಂದದ ಛಂದಸ್ಸುಗಳಿಹ ಭಾಷೆಯು
ಸುಂದರ ಲಕ್ಷಣಗಳ ವನಿತೆ

ಸಿರಿವಂತೆಯು ನಮ್ಮಮ್ಮನು ಶಬ್ದದಿ
ವರಕವಿ ನಟರನು ಹಡೆದಿಹಳು
ಬರವಿರದಾ ನೀರಿನ ಸೆಲೆ ಹರಿದಿದೆ
ನೆರವೀಯುತ ನೀಡುತ ನೆರಳು

ನೂರು ವಿಧಂಗಳು ಮುನ್ನೂರು ತರಂಗಳು
ನೀರೆಯವಳು ಬಹು ಮೋದದಲಿ
ಆರುಕೋಟಿ ಮಕ್ಕಳ ಬೆಳೆಸುವ ಪರಿ
ಯಾರಿಗೂ ಮತ್ಸರ ತರದಿರಲಿ !

ಜಯಸಿರಿಯು ನಮ್ಮಮ್ಮನ ಸೋದರಿ
ಭಯವಿಲ್ಲಾ ಅವಳಿರುವಿಕೆಗೆ
ವಯವನು ವ್ಯಯಿಸುವ ಕೆಲಮಟ್ಟಿಗೆ ನಾವ್
ನಯನಮನೋಹರ ಮಾಳ್ಪುದಕೆ

ಹೆಗಲಲಿ ಕನ್ನಡ ಬಗಲಲಿ ಕನ್ನಡ
ಮುಗಿಲಲೂ ಕಾಣುವ ಕನ್ನಡವ
ಹಗಲಲಿ ಕನ್ನಡ ತೊಗಲಲಿ ಕನ್ನಡ
ನಗೆಯಲೂ ಬಯಸುವ ಕನ್ನಡವ !

Friday, October 29, 2010

ಭೀಷ್ಮ


ರಾಜಾರವಿವರ್ಮ ಕೃತ ಚಿತ್ರಗಳ ಕೃಪೆ : ಅಂತರ್ಜಾಲ

ಭೀಷ್ಮ


[ಮಹಾಭಾರತದಲ್ಲಿ ಅನೇಕ ಪಾತ್ರಗಳು ನಮ್ಮ ಮನವನ್ನು ಕಲಕುತ್ತವೆ. ಅಂತಹ ಒಂದು ಪಾತ್ರದ ಅಭಿವ್ಯಕ್ತಿ ನನ್ನ ಲೇಖನಿಯಲ್ಲಿ ನಿಮಗಾಗಿ ]



ಶಂತನು ಮಕ್ಕಳನ್ನು ಏಕೆ ನದಿಗೆ ಎಸೆದು ಸಾಯಿಸುತ್ತೀಯ ಎಂದು ಕೇಳಿದ್ದೇ ತಪ್ಪಾಗಿ ಗಂಗೆ ಮೂಲರೂಪಕ್ಕೆ ನಡೆದುಬಿಟ್ಟಳು. ದೇವವೃತ ಬೆಳೆದು ಆಗತಾನೇ ಹದಿಹರೆಯಕ್ಕೆ ಕಾಲಿಡುತ್ತಿದ್ದ. ಅಪ್ಪನ ನೋವಲ್ಲಿ ಆತನೇ ಅಪ್ಪನ ಆಪ್ತ ಬಂಧು. ಅಪ್ಪನನ್ನು ಬಿಟ್ಟು ಬೇರೆಯ ಜಗತ್ತೇ ಇಲ್ಲದ ಹುಡುಗನಾತ. ತಾಯಿ ಗಂಗೆ ಕೆಲವರುಷ ತನ್ನ ಜತೆಗಿದ್ದರೂ ಇರುವಷ್ಟು ದಿನ ಮಾತಾಪಿತೃಗಳಿಬ್ಬರಿಗೂ ಬಹಳ ಸಂತಸವನ್ನುಂಟುಮಾಡಿದ ಮಗುವಾತ. ತನ್ನ ತಂದೆ ಪರಾಶರ ಮಹರ್ಷಿಯ ಮಗನೆಂದೂ, ಯಮುನೆಯ ನಡುಗಡ್ಡೆಯಲ್ಲಿ ಹುಟ್ಟಿದವನೆಂದೂ ಆತ ಕೇಳಿತಿಳಿದಿದ್ದ. ತಂದೆಯ ರಾಜಸ ಲಕ್ಷಣಗಳು ಅವನನ್ನು ಬಹುವಾಗಿ ಆಕರ್ಷಿಸಿದ್ದವು. [ ಪಚ್ಮಣಿ ಎಂಬ ಈ ನಡುಗಡ್ಡೆ ಇಂದಿಗೂ ಯಮುನೆಯ ಪಶ್ಚಿಮ ಭಾಗದಲ್ಲಿ ನೋಡಸಿಗುತ್ತದೆ]ಇದೊಂದು ಕಥೆಯಾದರೆ ಕಾಲಾನಂತರದಲ್ಲಿ ಪರಾಶರ ಸುತ ಶಂತನು ಹಸ್ತಿನಾಪುರಕ್ಕೆ ಬಂದು ಗಂಗೆಯನ್ನು ವರಿಸಿದ್ದು ಇನ್ನೊಂದು ಕಥೆ.

ಗಂಗೆಯ ಮೋಹಪಾಶದಿಂದ ಹೊರಬರುತ್ತಿದ್ದ ವೇಳೆ ಶಂತನುವಿನ ಮನವ ಕದ್ದವಳು ಸತ್ಯವತಿ. ಬೆಸ್ತರ ಹುಡುಗಿ. ಆಕೆಯೆ ಹದವಾದ ಮೈಕಟ್ಟು ರೂಪಲಾವಣ್ಯಕ್ಕೆ ಮನಸೋತ ಶಂತನು ಹಲವಾರು ದಿನ ಹಾಗೇ ಕಳೆದ. ಆತನದು ಆಡಲಾರದ ಅನುಭವಿಸಲಾರದ ಸ್ಥಿತಿ! ಎಡೆಯಲ್ಲಿ ಬೆಳೆಯುತ್ತಿರುವ ತನ್ನ ಮತ್ತು ಗಂಗೆಯ ಪ್ರೀತಿಯ ಕುಡಿಯಿದೆ, ಆ ಕುಡಿ ಇನ್ನೂ ಹದಿಹರೆಯಕ್ಕೆ ಕಾಲಿಡುತ್ತಿದೆ. ಹೇಳಬೇಕೆಂದರೆ ಆ ಗಾಂಗೇಯನಿಗೆ ಈಗ ಹರೆಯದ ಹುಡುಗಿಯರ ಪ್ರೇಮಪಾಶದಲ್ಲಿ ಸಿಲುಕುವ ವಯಸ್ಸು. ಆದರೆ ತನಗೆ ಯಾಕೆ ಈ ರೀತಿ ಭಾವನೆ ಎಂಬುದನ್ನು ಆತ ಯೋಚಿಸಿಯೂ ತನ್ನ ಮನದ ಬಯಕೆಯನ್ನು ಹತ್ತಿಕ್ಕಲಾರದಾದ. ಶಂತನುವಿನ ಪ್ರೇಮಜ್ವರ ಉಲ್ಬಣಿಸುತ್ತಿರುವಾಗ ತಾಯಿಯಿಲ್ಲದ ತಬ್ಬಲಿ ಗಾಂಗೇಯ ನಡೆದುಬಂದ ಅಪ್ಪನಿದ್ದೆಡೆಗೆ, ಕೇಳಿದ ತಂದೆಯಲ್ಲಿ " ಅಪ್ಪಾ ನಿಮ್ಮ ಚಿಂತೆಗೆ ಕಾರಣವೇನು. ನಾನಿದ್ದೂ ನೀವು ಇಷ್ಟೆಲ್ಲಾ ಯಾರೂ ದಿಕ್ಕಿಲ್ಲದಂತೇ ಪರಿತಪಿಸುತ್ತಿರುವುದೇಕೆ? ನನ್ನಲ್ಲಿಯೂ ಹೇಳಬಾರದೇ ? " . ಮಗನ ಮಾತಿಗೆ ಮನಸೋತ ಶಂತನು ತನ್ನ ಮನದ ಬಯಕೆಯನ್ನು ತೋಡಿಕೊಂಡ. ಅರ್ಥೈಸಿಕೊಂಡ ಯುವಮುತ್ಸದ್ಧಿ ಗಾಂಗೇಯ ಬೆಸ್ತರ ಮುಖಂಡನ ಮನೆಯ ದಾರಿ ಹಿಡಿದು ನಡೆದ. ಅಲ್ಲಿ ಬೆಸ್ತರ ಮುಖಂಡ ದಾಶರಾಜನನ್ನು ಕಂಡು ತನ್ನ ತಂದೆಯ ಬಯಕೆಯನ್ನು ನಿವೇದಿಸಿದ. ಅಪ್ಪನಿಗಾಗಿ ಅಪ್ಪನ ಉಳಿವಿಗಾಗಿ ಮಗಳನ್ನು ಧಾರೆಯೆರೆದು ಕೊಡುವಂತೆ ಗಾಂಗೇಯ ಅಕ್ಷರಶಃ ಅಂಗಲಾಚಿದ! ಆದರೂ ಬೆಸ್ತನ ಮನಸ್ಸು ಏನನ್ನೋ ಎಣಿಸುತ್ತಿತ್ತು. ಕೊನೆಗೂ ಗಂಗೇಯ ಪಟ್ಟುಬಿಡದೇ ಕೇಳಿದ " ಏನಾಗಬೇಕೆಂಬುದನ್ನು ಹೇಳಿದರೆ ಅದನ್ನು ಪೂರೈಸಲೂ ನಾನು ಸಿದ್ಧನಾಗಬಹುದೋ ನೋಡುತ್ತೇನೆ ಹಾಗಾಗಿ ಏನಾಗಬೇಕೆಂದು ತಿಳಿಸಿ" ಎಂದಾಗ, ಬೆಸ್ತ ಕೇಳಿದ "ಶಂತನುವಿಗೆ ಸತ್ಯವತಿಯಲ್ಲಿ ಹುಟ್ಟಿದ ಮಕ್ಕಳಷ್ಟೇ ಮುಂದೆ ಆ ರಾಜ್ಯವನ್ನು ಆಳಲು ಅರ್ಹರಾಗಬೇಕು , ಮಿಕ್ಕುಳಿದ ಯಾರಿಗೂ ಆಡಳಿತದಲ್ಲಿ ಹಕ್ಕಿರಬಾರದು " --ಇಂತಹ ಸಂದಿಗ್ಧದಲ್ಲೂ ತನ್ನೋ ಮನೋಸ್ಥೈರ್ಯವನ್ನು ಕಳೆದುಕೊಳ್ಳದ ಗಾಂಗೇಯ ತಾನು ಆಜನ್ಮ ಬ್ರಹ್ಮಚಾರಿಯಾಗಿರುತ್ತೇನೆಂದೂ, ತನಗೆ ಸಿಂಹಾಸನದ ಉತ್ತಾರಾಧಿಕಾರತ್ವ ಬೇಡವೆಂದೂ ಪ್ರತಿಜ್ಞೆಮಾಡಿದ! ತಂದೆಯ ಪ್ರೇಮಕನ್ನಿಕೆಯನ್ನು ತಂದೆಗೆ ಮಗ ಮುಂದಾಗಿ ನಿಂತು ಸಂಬಂಧ ಕುದುರಿಸಲು, ತನ್ನ ಸ್ವಾರ್ಥ ತ್ಯಜಿಸಿ ಗೈದ ಪ್ರತಿಜ್ಞೆ ದೇವತೆಗಳಿಗೂ ಕೇಳಿಸಿತಂತೇ, " ಭಲೇ ಗಾಂಗೇಯ ಇದು ಭೀಷ್ಮ ಪ್ರತಿಜ್ಞೆಯೇ ಸರಿ ....ನೀನೀಗ ಭೀಷ್ಮ .......ನೀನೀಗ ಭೀಷ್ಮ " ಎಂದು ಅಶರೀರವಾಣಿ ಮೊಳಗಿ ಪುಷ್ಪವೃಷ್ಟಿಯಾಯಿತಂತೆ. ಅಂದಿನಿಂದ ದೇವವೃತ ಭೀಷ್ಮನಾದ.

ಅಂತೂ ತನ್ನ ಜೀವನವನ್ನೇ ಕಡೆಗಣಿಸಿ ತಂದೆಗೆ ಬೆಸ್ತರ ಕನ್ಯೆಯನ್ನು ವಿವಾಹಮಾಡಿಸಿದ ಅಪ್ರತಿಮ ಬಾಲ್ಯಸಾಹಸಿ ಭೀಷ್ಮ! ಮುಂದೆ ಕಾಲಾನಂತರದಲ್ಲಿ ತನ್ನ ಜೀವಿತವನ್ನು ಕೊಟ್ಟ ಮಾತಿಗೆ ತಪ್ಪದಂತೇ ನಡೆದ ಆಜನ್ಮ ಬ್ರಹ್ಮಚಾರಿ ಭೀಷ್ಮ. ತಂದೆಯ ಮರಣಾನಂತರ ತನ್ನ ತಂದೆಗೆ ಸತ್ಯವತಿಯಲ್ಲಿ ಜನಿಸಿದ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಎಂಬ ಮಕ್ಕಳನ್ನು ಸಿಂಹಾಸನದಲ್ಲಿ ಕೂರಿಸಿಕೊಂಡು ಅವರು ಬೆಳೆದು ದೊಡ್ಡವರಾಗುವವರೆಗೆ ರಾಜ್ಯಭಾರ ನಡೆಸಿಡೆಸಲು ಸತ್ಯವತಿಗೆ ಸಹಕರಿಸಿದ. ಮುಂದುವರಿದ ಭಾಗವೇ ಮಹಾಭಾರತಕ್ಕೆ ನಾಂದಿ ಎಂಬುದನ್ನು ಬೇರೆ ಹೇಳಬೇಕೆ ?

ಕಾಶೀರಾಜನ ಮಕ್ಕಳಾದ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ತನ್ನ ಮಲತಮ್ಮ ವಿಚಿತ್ರವೀರ್ಯನಿಗೆ ಮದುವೆಮಾಡಲಾಗಿ ಅವರ ಸ್ವಯಂವರ ನಡೆಯುವ ಜಾಗದಿಂದ ಅಪಹರಿಸಿ ಕರೆತಂದ ಭೀಷ್ಮನಿಗೆ, ಅವರಲ್ಲಿ ಹಿರಿಯಳಾದ ಅಂಬೆ ತಾನು ಸುಬಲದೇಶದ ಸಾಲ್ವ ಮಹಾರಾಜನನ್ನು ಬಹಳ ಇಷ್ಟಪಟ್ಟುದಾಗಿಯೂ ತನ್ನನ್ನು ಕಳುಹಿಸಿಕೊಡಬೇಕೆಂದೂ ಕೇಳಿಕೊಳ್ಳುತ್ತಾಳೆ. ಆಗ ಭೀಷ್ಮ ಮರಳಿ ಆಕೆಯನ್ನು ಸಾಲ್ವನಲ್ಲಿಗೆ ಕಳುಹಿಸಿಕೊಟ್ಟರೂ ಬಹಳಕಾಲ ಇನ್ನೊಬ್ಬ ಗಂಡಸಿನ ಜತೆಗೆ ಉಳಿದ ಹೆಣ್ಣನ್ನು ಮದುಯಾಗುವುದು ತನಗಿಷ್ಟವಿಲ್ಲವೆಂದು ಆತ ತಿರಸ್ಕರಿಸುತ್ತಾನೆ. ಪುನಃ ಆಕೆ ದಾರಿಕಾಣದೇ ಭೀಷ್ಮನಲ್ಲಿಗೆ ಬಂದು ಮಾಡಿದ ತಪ್ಪಿಗೆ ತನ್ನನ್ನು ಮದುವೆಯಾಗ್ಲೇ ಬೇಕೆಂದು ಹಠಹಿಡಿಯುತ್ತಾಳೆ. ಮಾಡಿದ ಪ್ರತಿಜ್ಞೆಯನ್ನು ಭಂಗಗೊಳಿಸಲು ಒಪ್ಪದ ಭೀಷ್ಮನಿಗೆ ತಾನು ಸತ್ತು ಇನ್ನೊಂದು ಜನ್ಮವೆತ್ತಿ ಶಿಖಂಡಿಯಾಗಿ ನಿನ್ನನ್ನು ಸಾಯಿಸುತ್ತೇನೆಂದು ಶಪಿಸುತ್ತಾಳೆ ಮತ್ತು ಆ ಕ್ಷಣವೇ ತುಸುದೂರ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಸಾಯುವುದಕ್ಕೂ ಮುನ್ನ ಅಂಬೆ ಗುರು ಪರಶುರಾಮರಲ್ಲಿ ಪ್ರಾರ್ಥಿಸಿ ಭೀಷ್ಮನನ್ನು ಈ ಕುರಿತು ಒಲಿಸುವಂತೇ ಕೇಳಲು ಹೇಳುತ್ತಾಳೆ. ಪರಶುರಾಮರು ಭೀಷ್ಮನನ್ನು ಕೇಳಲಾಗಿ ಆತ ಮತ್ತೆ ನಾಜೂಕು ಮಾತಿನಿಂದ ತಿಳಿಸಿ ನಿರಾಕರಿಸುತ್ತಾನೆ. ಕುಪಿತರಾದ ಪರಶುರಾಮರು ಭೀಷ್ಮನನ್ನು ಯುದ್ಧಕ್ಕೆ ಕರೆಯುತ್ತಾರೆ. ರಥಾರೂಢನಾಗಿ ಕುರುಕ್ಷೇತ್ರಕ್ಕೆ ಬಂದ ಭೀಷ್ಮ ತನ್ನೆದುರು ಪರಶುರಾಮರು ಬರಿಗಾಲಲ್ಲಿ ನಿರಾಯುಧರಾಗಿ ನಿಂತಿರುವುದನ್ನು ನೋಡಿ ರಥಾರೂಢರಾಗಿ, ಶಸ್ತ್ರಧಾರಿಯಾಗಿ ಬರಲು ವಿನಂತಿಸಿದಾಗ ಭೀಷ್ಮನಿಗೆ ತಿಳಿಸಿ ಇನ್ನೊಮ್ಮೆ ಸರಿಯಾಗಿ ನೋಡಲು ಹೇಳುತ್ತಾರೆ. ಆಗ ಎದುರಿಗೆ ರಥದಲ್ಲಿ ಪರಶುರಾಮರಿದ್ದರೆ, ನಾಲ್ಕುವೇದಗಳು ಕುದುರೆಗಳಾಗಿ, ವಾಯು ಸಾರಥಿಯಾಗಿ ಅವರು ಗಾಯತ್ರಿ, ಸಾವಿತ್ರಿ, ಸರಸ್ವತಿ ಮೂರು ದೇವಿಯರನ್ನು ಎದೆಗವಚವಾಗಿ ಧರಿಸಿಬಂದಿದ್ದು ಕಾಣುತ್ತಾನೆ. ಯುದ್ಧ ಘಟಿಸುತ್ತದೆ, ಯಾರೂ ಇನ್ನೂ ಸೋತಿರುವುದಿಲ್ಲ. ಭೀಷ್ಮನಿಗೆ ಹಿರಿಯರು ಕೊಟ್ಟ ವಿಶೇಷವಾದೊಂದು ಅಸ್ತ್ರವಿರುತ್ತದೆ-ಅದು ಪರಶುರಾಮರಿಗೆ ಗೊತ್ತಿರುವುದಿಲ್ಲ. ಅದನ್ನು ಉಪಯೋಗಿಸಿದರೆ ಪರಶುರಾಮರು ರಣರಂಗದಲ್ಲಿ ಮಲಗಬೇಕಾಗುತ್ತದೆ. ರಣರಂಗದಲ್ಲಿ ಮಲಗಿದವನನ್ನು ಸತ್ತವನೇ ಎಂದು ವೇದಹೇಳುತ್ತದೆಂದೂ ಅದನ್ನು ಉಪಯೋಗಿಸೆಂದೂ ಕೆಲವರು ಹೇಳಿದರೂ ಭೀಷ್ಮ ಅದನ್ನು ಉಪಯೋಗಿಸುವುದಿಲ್ಲ. ಅಷ್ಟರಲ್ಲಿ ಪರಶುರಾಮರು ಮನಸ್ಸು ಬದಲಿಸಿ ಯುದ್ಧ ಬಿಟ್ಟು ತೆರಳುತ್ತಾರೆ.

ಆ ವೇಳೆಗೆ ಕುರುಕ್ಷೇತ್ರದಲ್ಲಿ ಮಹಾಯುದ್ಧವೇ ಆರಂಭವಾಗುವುದರಿಂದ ಸಂಪೂರ್ಣ ಕುರುಕ್ಷೇತ್ರಕ್ಕೆ ಸಾಕ್ಷಿಯಾಗಿ ಭೀಷ್ಮ ರಣರಂಗದಲ್ಲಿ ಕುರುವಂಶದ ನಾಯಕನಾಗಿ ಮುನ್ನಡೆದು ಬರುತ್ತಾನೆ.
ಇದಕ್ಕೆ ಕಾರಣವೂ ಇಲ್ಲದಿಲ್ಲ.

ಹಿನ್ನೆಲೆ

ಸ್ನಾನಕ್ಕೆಂದು ಕೊಳವೊಂದಕ್ಕೆ ಇಳಿದ ದುರ್ಯೋಧನನಿಗೆ ಗಂಧರ್ವರು ಅಲ್ಲಿಗೆ ಬಂದಿರುವುದು ಕಾಣಿಸುತ್ತದೆ. ಅದನ್ನು ಸಹಿಸದ ಆತ ಅವರ ಕೂಡ ಯುದ್ಧನಡೆಸಿ ಸೋತು ಸಿಕ್ಕಿಹಾಕಿಕೊಂಡಾಗ ಯುಧಿಷ್ಠಿರ, ಅರ್ಜುನ ಮುಂತಾದ ಪಾಂಡವರ ವಿನಂತಿಯ ಮೇರೆಗೆ ಅವರು ಆತನನ್ನು ಬಿಡುಗಡೆಗೊಳಿಸುತ್ತಾರೆ. ಅವಮಾನಿತನಾದ ದುರ್ಯೋಧನ ತಾನು ಕ್ಷತ್ರಿಯನಾಗಿಯೂ ಹೀಗಾಯ್ತಲ್ಲಾ ಎಂಬ ಕೊರಗಿನಿಂದಿದ್ದರೂ ಋಣ ಕಳೆವ ನೆಪದಲ್ಲಿ ಅರ್ಜುನನಿಗೆ ತನ್ನಿಂದ ಏನಾದರೂ ತೆಗೆದುಕೋ ಎಂದು ವಿನಂತಿಸುತ್ತಾನೆ. ಅದಕ್ಕೆ ಅರ್ಜುನ ಕಾಲಬಂದಾಗ ಕೇಳುತ್ತೇನೆಂದು ಹೇಳಿರುತ್ತಾನೆ. ಕುರುಕ್ಷೇತ್ರ ಯುದ್ಧ ಇನ್ನೇನು ಸನ್ನದ್ಧವಾದಾಗ ಅರ್ಜುನ ದುರ್ಯೋಧನನಲ್ಲಿಗೆ ಹೋಗಿ ಆತನಲ್ಲಿರುವ ಬಂಗಾರದ, ಶಕ್ತಿ ತುಂಬಿದ ೫ ವಿಶೇಷವಾದ ಬಾಣಗಳನ್ನು ಕೊಡುವಂತೆ ಕೇಳುತ್ತಾನೆ. ದುರ್ಯೋಧನ ಆಶ್ಚರ್ಯಚಕಿತನಾಗಿ ತನ್ನಲ್ಲಿ ಆ ಐದು ಬಾಣಗಳಿವೆಯೆಂದು ಯಾರು ಹೇಳಿದರೆನ್ನಲು ಅರ್ಜುನ ಶ್ರೀಕೃಷ್ಣ ಹೇಳಿದನೆನ್ನುತ್ತಾನೆ. ನಿರ್ವಾಹವಿಲ್ಲದೇ ದುರ್ಯೋಧನ ಆ ೫ ಅಸಾಧಾರಣ ಶಕ್ತಿ ಹೊಂದಿದ ಬಾಣಗಳನ್ನು ಅರ್ಜುನನಿಗೆ ಕೊಡುತ್ತಾನೆ. ಆ ಒಂದೊಂದೂ ಬಾಣಗಳು ಭೀಷ್ಮನ ಆಜನ್ಮ ತಪಶ್ಚರ್ಯದ ಶಕ್ತಿಯಿಂದ ಪ್ರೇರಿತವಾಗಿದ್ದು ಒಬ್ಬೊಬ್ಬ ಪಾಂಡವನನ್ನು ಮುಗಿಸಲು ಸಾಕಾಗಿದ್ದವು.

ತಪ್ಪಿಹೋದ ಅವಕಾಶವನ್ನು ನೆನೆಯುತ್ತ ದುರ್ಯೋಧನ ಭೀಷ್ಮರಲ್ಲಿಗೆ ರಾತ್ರಿ ಬಂದಾಗ, ಮತ್ತೆ ತನ್ನಲ್ಲಿ ಅಂತಹ ಬಾಣಗಳನ್ನು ಸೃಜಿಸುವ ಶಕ್ತಿ ಇಲ್ಲವೆಂದೂ, ಪರಮಾತ್ಮನೇ ಬಯಸಿ ಮರಳಿ ಪಡೆದದ್ದರಿಂದ ಅದನ್ನು ಮೀರುವ ಸಾಮರ್ಥ್ಯ ತನ್ನಲ್ಲಿಲ್ಲವೆಂದೂ, ಆದರೆ ನಾಳೆಯ ಯುದ್ಧದಲ್ಲಿ ತಾನು ಸಿಂಹದಂತೆ ಹೋರಾಡುವೆನೆಂದೂ ತಿಳಿಸುತ್ತಾನೆ. ಅದರಂತೇ ಮಾರನೇ ದಿನ ಯುದ್ಧಾರಂಭಗೊಂಡಾಗ ಗರ್ಜಿಸುವ ಹಸಿದ ಸಿಂಹದೋಪಾದಿಯಲ್ಲಿ ಭೀಷ್ಮ ಅರ್ಜುನನೆಡೆಗೆ ಸಾಗಿಬರುತ್ತಾನೆ. ತಾತಯ್ಯನ ಕೋಪದ ಪರಾಕ್ರಮದ ಮುಂದೆ ಅರ್ಜುನನ ಆಟ ನಡೆಯುವುದಿಲ್ಲ. ಭೀಷ್ಮ ಬಿಟ್ಟ ಒಂದು ಬಾಣ ಅರ್ಜುನನ ಎದೆಗವಚವನ್ನು ಸೀಳಿಹಾಕುತ್ತದೆ. ಅಲ್ಲದೇ ರಥದ ಚಕ್ರ ಸ್ವಲ್ಪ ಹೂತು ತೊಂದರೆಯಾಗುತ್ತದೆ. ಕೋಪಗೊಂಡ ಕೃಷ್ಣ ಲಗಾಮು ಚಾವಟಿಗಳನ್ನು ಅಲ್ಲೇ ಬಿಟ್ಟು ರಥವಿಳಿದು ಕೆಳಗೆ ಬಂದು ಚಕ್ರವನ್ನು ಸರಿಪಡಿಸುತ್ತಾನಲ್ಲದೇ ಭಕ್ತನಾದ ಅರ್ಜುನನ ರಕ್ಷಣೆಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ತಾನು ಶಸ್ತ್ರವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಭೀಷ್ಮನಿಗೆ ಕೊಟ್ಟಿದ್ದ ವಚನವನ್ನು ಮುರಿಯಲು ಮನಮಾಡುತ್ತಾನೆ. ಅರ್ಜುನನ ವಿನಂತಿಯ ಮೇರೆಗೆ ಹಾಗೆ ಮಾಡದೇ ಮತ್ತೆ ರಥವೇರಿ ಸಾರಥಿಯಾಗಿ ಮುನ್ನಡೆಸುವಾಗ ಅರ್ಜುನನಿಗೆ ಹೇಳಿ ಶಿಖಂಡಿಯನ್ನು ಕರೆದು ಆತನನ್ನು ಕವಚದ ಬದಲಾಗಿ ಮುಂದೆ ನಿಲ್ಲಿಸಿಕೊಂಡು ಭೀಷ್ಮನೊಟ್ಟಿಗೆ ಸೆಣಸಾಡಲು ಹೇಳುತ್ತಾನೆ.

ಘನಘೋರ ಯುದ್ಧದಲ್ಲಿ ಅರ್ಜುನನ ಅಸಂಖ್ಯಾತ ಬಾಣಗಳು ಭೀಷ್ಮನ ಮೈಸೇರಿ ಮೈಯ್ಯೆಲ್ಲಾ ರಕ್ತಸಿಕ್ತವಾಗುತ್ತದೆ, ಹಲವು ಗಾಯಗಳು ತಂದ ನೋವಿಗೆ ಹತಾಶೆಗೊಂಡು ಭೀಷ್ಮ ನೆಲವನ್ನು ಹಿಡಿಯಬೇಕಾಗಿ ಬರುತ್ತದೆ. ಅರ್ಜುನ ಶರಗಳನ್ನೆಸೆದು ಶಯ್ಯೆಯೊಂದನ್ನು ರಚಿಸಿದಾಗ ಅದರಮೇಲೆ ಭೀಷ್ಮ ಪಿತಾಮಹ ಮಲಗುತ್ತಾನೆ. ಇಚ್ಛಾಮರಣಿಯಾಗಲು ತಂದೆಯಿಂದ ಅನುಗ್ರಹ ಪಡೆದಿದ್ದ ಭೀಷ್ಮ ನೋವನ್ನು ಸಹಿಸಿಕೊಂಡು, ಮಹಾಭಾರತ ಯುದ್ಧವನ್ನು ನೋಡುತ್ತಾ, ದೇಹವನ್ನು ತೊರೆಯಲು ಒಳ್ಳೆಯ ಮುಹೂರ್ತಕ್ಕಾಗಿ ಕಾದು ಮಲಗಿರುತ್ತಾನೆ.

ತನ್ನದಲ್ಲದ ತಪ್ಪಿಗೆ ಭೀಷ್ಮ ಹಲವು ಬಾರಿ ಅಪರಾಧಿ ಎನಿಸಿಕೊಳ್ಳುತ್ತಾನೆ. ಜನ್ಮಪೂರ್ತಿ ತಂದೆ, ಕುಟುಂಬ, ವಂಶ ಇವರೆಲ್ಲರಿಗಾಗಿ ಬದುಕಿದ ಭೀಷ್ಮ ಒಂದರ್ಥದಲ್ಲಿ ಕೊನೆಯವರೆಗೂ ಏಕಾಂಗಿಯೇ. ಅವನ ಆಸೆ-ಆಕಾಂಕ್ಷೆಗಳಿಗೆ ಮನ್ನಣೆಯೇ ಇರಲಿಲ್ಲ. ಯಾರೂ ಆತನನ್ನು ’ನಿನಗೇನು ಬೇಕು ಅಜ್ಜಯ್ಯಾ’ ಎಂದು ಒಂದು ದಿನವೂ ಕೇಳಿದ್ದಿಲ್ಲ. ಬದಲಾಗಿ ಅಜ್ಜಯ್ಯನಿಂದ ಸಿಗಬಹುದಾದ ಪ್ರಯೋಜನವನ್ನು ಎಲ್ಲರೂ ಪಡೆದರು. ಹಾಗೆ ನೋಡಿದರೆ ಭೀಷ್ಮ ಎಲ್ಲರಿಗೂ ಅಜ್ಜನೇ. ಸಂಧಾನಕ್ಕಾಗಿ ಪ್ರಯತ್ನಿಸಿದವರಲ್ಲಿ ಭೀಷ್ಮಕೂಡ ಒಬ್ಬ. ಆದರೆ ಸಂಧಾನವೇ ಬೇಡವೆಂಬ ಕೌರವನ ನಿರ್ಧಾರಕ್ಕೆ ಆತ ಮನದಲ್ಲೇ ಕುಸಿದುಹೋದ. ಮುಖದಲ್ಲಿನ ಎರಡು ಕಣ್ಣುಗಳಂತಿರುವ ಆ ಎರಡು ಕುಟುಂಬಗಳಲ್ಲಿ ಆತನಿಗೆ ಯಾರು ಹೆಚ್ಚು ಅಥವಾ ಯಾರು ಕಮ್ಮಿ ಎಂಬುದಿರಲಿಲ್ಲ. ಕೃಷ್ಣನ ನಿರ್ಧಾರದಂತೇ ಆತ ಕೌರವರನ್ನು ಸೇರಬೇಕಾಯಿತು. ಇನ್ನೇನು ಹರೆಯ ಉಕ್ಕಿ ಹರಿವಾಗ ತನ್ನ ದೈಹಿಕ ಬಯಕೆಗಳನ್ನೆಲ್ಲಾ ಒತ್ತಟ್ಟಿಗೆ ಕಟ್ಟಿ ಸುಟ್ಟುಹಾಕಿದ ಭೀಷ್ಮ ತಾನು ಸುಖಪಡಲೇ ಇಲ್ಲ. ಈ ಕಡೆ ರಾಜನೂ ಆಗದಾಯ್ತು, ಆಕಡೆ ಮದುವೆಯಾಗುವುದನ್ನೂ ತಪ್ಪಿಸಿಕೊಂಡಾಯ್ತು, ತಂದೆಯ ಮರಣಾನಂತರ ಆತ ಬದುಕಿದ್ದದ್ದು ಕೇವಲ ತನ್ನ ಮಾತಿನಂತೇ ತನ್ನ ಮಲತಮ್ಮಂದಿರ ಯೋಗಕ್ಷೇಮ ನೋಡುವುದು ಮತ್ತು ಅವರಿಗೆ ರಾಜ್ಯಾಧಿಕಾರ ಪ್ರಾಪ್ತವಾಗಿ, ಅವರ ಮಂಗಳಕಾರ್ಯಗಳಾಗಿ ವಂಶ ಮುಂದುವರಿಯುವುದು, ಇದು ಬಿಟ್ಟು ಇನ್ನೇನೂ ಬೇಕಿರಲಿಲ್ಲ ಆತನಿಗೆ. ತನ್ನ ಕಣ್ಮುಂದೆ ಹುಟ್ಟಿ ಬೆಳೆದು, ಚಿನ್ನಿದಾಂಡು ಆಟವಾಡಿದ ಹುಡುಗರು ನೆಲಕ್ಕಾಗಿ ಬಡಿದಾಡಿ ಜನಸ್ತೋಮ ಮರೆಯಲಾಗದ ಭಾರತವನ್ನೇ ಸೃಜಿಸುತ್ತಾರೆಂಬುದನ್ನು ಕನಸಲ್ಲೂ ಎಣಿಸಿರಲಿಲ್ಲವಾತ.

ಕಣ್ಣೆದುರೇ ಕೃಷ್ಣನಿದ್ದರೂ ಕೃಷ್ಣ ಮಾತನಾಡಲಾರ, ಸಂತೈಸಲಾರ, ಅಳಲು ಕೇಳಲಾರ, ಬದಲಾಗಿ ತನ್ನಲ್ಲಿರುವ ಅಸಾಧಾರಣ ಶಕ್ತಿ ಉಡುಗಿಹೋಗಲೆಂದು ಶಿಖಂಡಿಯನ್ನು ಎದುರು ನಿಲ್ಲಿಸಿಕೊಂಡ! ಭೀಷ್ಮನಿಗೆ ಅರ್ಥವಾಗಿ ಹೋಗಿತ್ತು--ಕೃಷ್ಣನೊಬ್ಬ ಅತಿಮಾನುಷ ಶಕ್ತಿ, ಆತನ ಸಂಕಲ್ಪದಂತೇ ಆತ ಎಲ್ಲವನ್ನೂ ನಡೆಸುತ್ತಾನೆ ಎಂಬುದು. ಹಾಗಂತ ಕೃಷ್ಣನಲ್ಲಿ ಆತ ಪ್ರಾಣಭಿಕ್ಷೆ ಬೇಡಲಿಲ್ಲ. ಭೀಷ್ಮನಿಗೀಗ ಆತ್ಮಜ್ಞಾನವಾಗಿತ್ತು. ಆತ ತಂದೆಗೆ ಸಲ್ಲಿಸಿದ ಸೇವೆಯಿಂದ " ಮಗನೇ ಇಚ್ಛಾಮರಣಿಯಾಗು " ಎಂದು ತಂದೆಯಿಂದ ವರವನ್ನು ಪಡೆದಿದ್ದ. ತಾನೊಬ್ಬ ಒಳ್ಳೆಯ ವ್ಯಕ್ತಿ ಎಂದೂ, ಅಪ್ರತಿಮ ಸಾಹಸಿಯೆಂದೂ, ಅಸಾಧಾರಣ ಹೋರಾಟಗಾರನೆಂದೂ ಎಂದೂ ಕೊಚ್ಚಿಕೊಂಡವನಲ್ಲ; ಅವನ ಮನದಲ್ಲಿ ಅಹಂಕಾರ ತುಂಬಿರಲೇ ಇಲ್ಲ. ಕೇವಲ ಕೊಟ್ಟಮಾತಿಗಾಗಿ ಬದುಕಿದ್ದು, ತನ್ನ ಮಾತುನಡೆಯುವಂತೇ ನೋಡಿಕೊಂಡ ಸಜ್ಜನ ಭೀಷ್ಮ. ಆತನೊಬ್ಬ ಕರ್ಮಯೋಗಿ. ಕ್ಷತ್ರಿಯನಾಗಿ ತನ್ನ ಧರ್ಮವನ್ನು ಮೆರೆಯುತ್ತಾ ಆ ಧರ್ಮಾಚರಣೆಯಲ್ಲೇ ದೇವರನ್ನು ಕಂಡ ಕ್ಷಾತ್ರತೇಜಸ್ವಿ ಆತ. ತಾನು ಕೈಗೊಂಡ ನಿರ್ಧಾರಗಳು ತಪ್ಪು ಎಂದು ಯಾವಗಲೂ ಅನಿಸಲಿಲ್ಲ ಆತನಿಗೆ.

ಇಂದು ಮಗು ದುರ್ಯೋಧನನಿಗಾಗಿ ಮತ್ತೊಬ್ಬ ಮಗು ಅರ್ಜುನನ ಕೂಡ ಯುದ್ಧ ! ಬಹಳ ಯೋಚಿಸಿದ್ದಾನೆ ಭೀಷ್ಮ. ತನ್ನೊಳಗಿನ ತಳಮಳವನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಒದ್ದಡಿದ್ದಾನೆ ಭೀಷ್ಮ. ಕೊನೆಗೂ ಕಾಲಸನ್ನಿಹಿತವಾದಾಗ ಅನಿವಾರ್ಯವಾಗಿ ಕೃಷ್ಣ ಸಾರಥ್ಯದ ರಥದಲ್ಲಿರುವ ಅರ್ಜುನನ ಎದುರು ವೀರಾವೇಶದಿಂದ ಮುನ್ನುಗ್ಗಿದ್ದಾನೆ ಭೀಷ್ಮ. ರಥದಲ್ಲಿ ಕುಳಿತ ದೇವರು ತನ್ನನ್ನು ಬೇಗ ಕರ್ತವ್ಯದೀಮ್ದ ಬಿಡುಗಡೆಗೊಳಿಸಲಿ ಎಂಬುದೇ ಆತನ ಆಶಯವಾಗಿತ್ತು. ಜೀವನದುದ್ದಕ್ಕೂ ನಡೆದ ಹಲವಾರು ಘಟನೆಗಳು ಆತನಿಗೆ ಬೇಸರತರಿಸಿದ್ದವು, ನೋವುಂಟುಮಾಡಿದ್ದವು. ಆದರೂ ಒಪ್ಪಿಕೊಂಡ ಪಾತ್ರಪೋಷಣೆಯನ್ನು ಮಾಡಿಯೇ ಇಹವನ್ನು ತ್ಯಜಿಸುವ ಇಚ್ಛೆಯನ್ನು ಆತ ಹೊಂದಿದ್ದ. ಇದನ್ನರಿತ ಪರಶುರಾಮರು ತಾವೇ ಸ್ವತಃ ಹಿಂದೆ ಭೀಷ್ಮನಲ್ಲಿ ನಡೆಸಿದ ಯುದ್ಧವನ್ನು ನಿಲ್ಲಿಸಿ ಹೊರಟುಹೋದರು. ಅಂತೂ ಯುದ್ಧ ಘಟಿಸಿ ತನಗೆ ಬಾಣಗಳು ನಾಟಿ ಶರಶಯ್ಯೆಯಲ್ಲಿ ಮಲಗಿದ್ದಾಗಿದೆ ಈಗ. ಬಾಯಾರಿಕೆಗೆ ಪರಮಾತ್ಮನ ಅಣತಿಯಂತೇ ಅರ್ಜುನ ಬಾಣ ನೆಟ್ಟು ಗಂಗೆಯನ್ನೇ ಬಾಯಿಗೆ ತಲ್ಪಿಸಿದ್ದಾನೆ. ಎದುರಾಳಿ ಅರ್ಜುನನಲ್ಲ, ಅರ್ಜುನನ ಎದುರು ಲಗಾಮು ಹಿಡಿದು ಕುಳಿತ ಶ್ರೀಕೃಷ್ಣ ಎಂಬುದನ್ನು ನಿರ್ಧರಿಸಿದ್ದ ಭೀಷ್ಮ ಆತನ ಸಮ್ಮುಖದಲ್ಲೇ ಬಾಣಗಳ ಮಂಚದಮೇಲೆ ಮಲಗಿದ್ದಾನೆ. ಬದುಕಿನಲ್ಲಿ ಯಾರ್ಯಾರಿಗೆ ಏನೇನು ಸಿಗಬೇಕೋ ಅದು ಸಿಗಬೇಕು, ಏನೇನು ನಡೆಯಬೇಕೋ ಅದು ನಡೆದೇ ತೀರಬೇಕು. ಸಂಚಿತಕರ್ಮಫಲವನ್ನು ಅನುಭವಿಸಿಯೇ ಕಳೆಯಬೇಕೇ ವಿನಃ ಅದು ಹಾಗೇ ಮಾಯವಾಗಿಹೋಗುವುದಲ್ಲ.

ಹೆತ್ತಾತನರ್ಜುನನು ಮುತ್ತಯ್ಯ ದೇವೇಂದ್ರ
ಮತ್ತೆ ಮಾತುಲನು ಶ್ರೀಹರಿಯಿರಲು ಅಭಿಮನ್ಯು
ಸತ್ತನೇಕಯ್ಯ ? ಸರ್ವಜ್ಞ

ಎಂಬ ಸರ್ವಜ್ಞಕವಿಯ ಉದ್ಘೋಷದಂತೇ ಯಾರೇ ಇದ್ದರೂ ವಿಧಿಯ ಮುಂದೆ ಅವರು ಏನೂ ಮಾಡಲಾರರು. ಜನಬಲ, ಧನಬಲ, ದೇಹಬಲ ಇವೆಲ್ಲಾ ಆಗ ಕೆಲಸಮಾಡಲಾರವು. ಕ್ಷತ್ರಿಯಬಲವನ್ನು ಅಪಾರವಾಗಿ ವಶಿಷ್ಠರ ಮೇಲೆ ಪ್ರಯೋಗಿಸಿದ ಚಂಡ ಕೌಶಿಕ ಪ್ರತೀ ಘಳಿಗೆ ಸೋತು ಹೋದ! ಆಮೇಲೆ ಅವನಿಗೆ ಅರ್ಥವಾಗಿದ್ದು ಅದನ್ನೇ ಅನುಸರಿಸಿ "ಬ್ರಹ್ಮರ್ಷಿ" ಎಂದು ವಶಿಷ್ಠರಿಂದಲೇ ಗೌರವಿಸಲ್ಪಟ್ಟ ! ಅಂದರೆ ತಪಃಶಕ್ತಿಗೆ ಸರಿಸಮವಾದ ಶಕ್ತಿ ಬೇರಾವುದೂ ಅಲ್ಲ.

ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ ---ಎಂಬ ಉಕ್ತಿಯಂತೇ ಕೇವಲ ಬ್ರಹ್ಮತೇಜಸ್ಸು ಮಾತ್ರ ಅಸಾಧ್ಯವಾದುದನ್ನೂ ಸಾಧ್ಯವಾಗಿಸುವಂಥದು. ಅಂತಹ ಬ್ರಹ್ಮಚರ್ಯ ವೃತನಿಷ್ಠನಾದ ಭೀಷ್ಮ ಪಿತಾಮಹ ತನ್ನ ಜೀವಿತದಲ್ಲಿ ಗಳಿಸಿದ ಪುಣ್ಯದ ಬಹುಭಾಗವನ್ನು ಆ ಐದು ಬಾಣಗಳಿಗೆ ಧಾರೆಯೆರೆದಿದ್ದ. ನಿರರ್ಥಕವಾದ ಆ ಕೆಲಸದ ಬದಲು ಅದನ್ನು ಹಾಗೇ ಇಟ್ಟುಕೊಳ್ಳಬಹುದಿತ್ತು, ಆದರೆ ಕ್ಷಾತ್ರಧರ್ಮವನ್ನು ಕಾಪಾಡಲು, ತಾನು ಪ್ರತಿನಿಧಿಸುವ ವಂಶದ ಭಾಗವನ್ನು ಕಾಪಾಡಲು ಹಾಗೆ ಮಾಡಿದ್ದ. ಅಂಬೆಯನ್ನು ಕರೆತರದೇ ಹೋದರೆ ತನ್ನ ಮಲತಮ್ಮನಿಗೆ ಮದುವೆಗೆ ಸರಿಯಾದ ಅಷ್ಟು ಚಂದದ ಹೆಣ್ಣು ಸಿಗುವಳೇ ಎಂಬ ಕಾರಣದಿಂದ ಹಾಗೆ ರಥದಲ್ಲಿ ಬಲವಂತವಾಗಿ ಕರೆತಂದಿದ್ದ. ಮೋದಲೇ ಆಕೆಯ ಬಗೆಗೆ ತಿಳಿದಿದ್ದರೆ ಆ ಕೆಲಸಕ್ಕೆ ಕೈಹಾಕುತ್ತಲೇ ಇರಲಿಲ್ಲ ಭೀಷ್ಮ. " ಮಕ್ಕಳೇ ಬೇಡಾ " ಎಂದರೂ ತಾನೇ ಅವರ ನಡುವೆ ನಿಂತು ಹೋರಾಡುವಂತ ಪರಿಸ್ಥಿತಿ ಬರುತ್ತದೆಂಬ ನಿರೀಕ್ಷೆಯಿಟ್ಟುಕೊಂಡವನಲ್ಲ ಭೀಷ್ಮ. ಎಂದು ಮೊಮ್ಮಗು ಅರ್ಜುನನನಿಂದ ಸೋತನೋ ಅಂದೇ ಭೀಷ್ಮ ಸತ್ತುಹೋದ, ಆದರೆ ಕೇವಲ ಶುಭಗಳಿಗೆಗಾಗಿ, ಪರಮಾತ್ಮನ ಅಂತಿಮ ದರ್ಶನಕ್ಕಾಗಿ ಹಾತೊರೆದು ಜೀವವನ್ನು ಕೈಯ್ಯಲ್ಲಿ ಬಿಗಿಹಿಡಿದು ಜೀವಚ್ಛವವಾಗಿ ಶರಶಯ್ಯೆಯಲ್ಲಿ ಮಲಗಿದ್ದಾನೆ ಭೀಷ್ಮ. ಸುತ್ತ ರಣರಂಗದಲ್ಲಿ ಸತ್ತ, ಅರೆಸತ್ತ ಸೈನಿಕರು. ನೋವಿನ ಚೀರಾಟ. ಹಗಲೂ-ರಾತ್ರಿ ನೋವು, ನೋವು ನೋವಿನದೇ ಗೋಳು. ಕೇಳುತ್ತಿರುವ ಆರ್ತನಾದಗಳು. ಹಗಲು ಹಾರಾಡುವ ರಣಹದ್ದುಗಳು, ಕಾಗೆಗಳು. ರಾತ್ರಿಯಲ್ಲಿ ನಿಶಾಚರಿ ಪಶುಪಕ್ಷಿಗಳು. ಎಲ್ಲೆಲ್ಲೂ ರಕ್ತದ ಅಸಹ್ಯ ಹುಟ್ಟಿಸುವ ವಾಸನೆ. ರಾತ್ರಿಗಾಗಿ ಯುದ್ಧವಿರಾಮವಿದ್ದರೂ ಎದ್ದುಹೋಗಲಾರದ ಸ್ಥಿತಿ. ನೆಂಟರಿಷ್ಟರು ಬಂಧು-ಬಳಗ ಯಾರೂ ಸನಿಹದಲ್ಲಿ ಇರಲಾರದ ಗತಿ. ದಾರುಣವಾದ ಈ ವಿಷಮ ಪರಿಸರದಲ್ಲಿ ಜನ್ಮಾವಶೇಷದ ಋಣತೀರಿಕೆಗಾಗಿ ಕುಟುಕು ಜೀವವನ್ನು ಹಿಡಿದು ಕಳೆದಹೋದ ಜೀವಮಾನವನ್ನು ಅವಲೋಕಿಸುತ್ತಿದ್ದ ಭೀಷ್ಮ. ವಶಿಷ್ಠರ ಶಾಪವೇ ಕಾರಣವಾಗಿ ಮನುಷ್ಯನಾಗಿ ಪಡಬಾರದ ಪಾಡುಪಟ್ಟ ಭೀಷ್ಮ ಸಾಯುವ ನೋವಿನ ಘಳಿಗೆಯಲ್ಲೂ ತನ್ನ ಪ್ರೀತಿಪಾತ್ರ ಜನರನ್ನು ಮರೆಯಲಿಲ್ಲ. ಬಹುದೀನನಾದ ಭೀಷ್ಮ ತನ್ನಿಂದ ಇತರರಿಗಾದ ಉಪಕಾರಕ್ಕೆ ಪ್ರತ್ಯುಪಕಾರ ಬಯಸಲಿಲ್ಲ. ಆತನಿಗೆ ಬೇಕಾದುದೊಂದೇ ಶ್ರೀಕೃಷ್ಣನ ಕೊನೆಯ ಒಂದು ನೋಟ. ಆ ನೋಟವನ್ನೊಮ್ಮೆ ಹೃದಯಕವಾಟ ತೆರೆದು ಅದರಲ್ಲಿ ಹುದುಗಿಸಿಕೊಂಡು ಆತನೇ ಕರುಣಿಸುವ ಶುಭಸಮಯದಲ್ಲಿ ಕಣ್ಮುಚ್ಚುವವನಿದ್ದ ಭೀಷ್ಮ. ಆ ಸಮಯ ಸನ್ನಿಹಿತವಾದಗ ಮತ್ತೊಮ್ಮೆ ತನ್ನ ತಂದೆ ಶಂತನುವನ್ನೂ ತಾಯಿ ಗಂಗೆಯನ್ನೂ ಮನದಲ್ಲೇ ವಂದಿಸಿ, ನಿಮಗೆ ತಕ್ಕಮಗನಾಗಲು ಸಾಧ್ಯವಾಗದಿದ್ದರೂ ಕೈಲಾದಮಟ್ಟಿಗೆ ನಾನು ನಾನಾಗಿರಲು ಪ್ರಯತ್ನಿಸಿದ್ದೇನೆ ಎಂದು ಮನದಲ್ಲೇ ವಂದಿಸಿದ. ಆತನ ಮನದಲ್ಲಿ ಯಾವುದೇ ಅಶಾಂತಿಯಾಗಲೀ ಅತೃಪ್ತಿಯಾಗಲೀ ಇರಲಿಲ್ಲ.


ಶಂತನು ಗಂಗೆಯ ವರಿಸಿದ ಕಾರಣ
ನಿಂತೆನು ಈ ದಿನ ಭುವಿಯೊಳಗೆ
ಸಂತತಿ ನಡೆಸುತ ವಂಶವ ಮುಂದಕೆ
ಸಂತಸ ತರಲೀ ಹಿರಿಯರಿಗೆ

ಕ್ಷಾತ್ರದಿ ಕಾದುತ ಬೇಡದ ಭಾಗ್ಯವ
ಪಾತ್ರೆಯೊಳಿರಿಸಲು ಬಯಸಿಲ್ಲ
ಗೋತ್ರವು-ಕುಲವು ಒಂದೇ ಆದರೂ
ಖಾತ್ರಿಯು ಯುದ್ಧವು ಬಿಡದಲ್ಲ

ನಲುನಲುಗುವ ನನ್ನೊಳಮನಸಿನ ಪರಿ
ಅಲುಗಾಡಿಸುತಲಿದೆ ದೇಹವನು
ಬಲುಮಾನವರಿವರೆಲ್ಲರು ಕಮ್ಮಿಯೇ ?
ಹುಲುಮಾನವ ನಾನಾಗಿಹೆನು

ಚೆಂಡು ಬುಗುರಿಯಾಡಿದ ಮರಿಮಕ್ಕಳು
ರುಂಡ ಮುಂಡ ಕತ್ತರಿಸುತಲಿ
ಅಂಡಪಿಂಡ ಬ್ರಹ್ಮಾಂಡವು ಮರೆಯದ
ಚಂಡ ಯುದ್ಧವನು ನಡೆಸುತಲಿ

ಬುದ್ಧಿ ಹೀನ ಜನರೊಂದಿಗೆ ಕಳೆದೆನು
ಇದ್ದೂ ಏನೂ ಸಾಧಿಸದೇ
ಗದ್ದಲದೊಳ ಜೀವನವದು ಅದುರಿತು
ಬಿದ್ದುದಕೇನೂ ವಾದಿಸದೇ

ಪರಮಾತ್ಮನ ಪರಿಶೋಭಿತ ಚರಣದಿ
ಶಿರವಿಡುತಲಿ ನಾ ಬೇಡುವೆನು
ಹರಿನೀನೆಂಬುದು ಅರಿವಾದೊಡೆನೆಯೇ
ಬರೆದೆನು ನಿನಗೀ ಜೀವವನು

ಸಲ್ಲದ ಪಾಪವ ಮಾಡದ ಜನ್ಮದಿ
ಇಲ್ಲದ ನೋವನು ಅನುಭವಿಸಿ
ಎಲ್ಲರೊಡನೆ ಸಹಕರಿಸುತ ಪಾತ್ರವ
ಬಲ್ಲರೀತಿಯಲಿ ನಿರ್ವಹಿಸಿ

ಮುರಳೀಗಾನದಿ ಸುಖಿಸುವ ಕೃಷ್ಣನೆ
ಧರೆಗುರುಳಿಸಿ ನೋಡುವುದೇನು ?
ಭರದಲಿ ಸಮಯವ ಕರುಣಿಸು ಬೇಗದಿ
ಸರಸರ ನಿನ್ನೊಳು ಸೇರುವೆನು !

Tuesday, October 26, 2010

ಇಮಾಮ್ ಸಾಬಿಯೂ ಗೋಕುಲಾಷ್ಟಮಿಯೂ


ಇಮಾಮ್ ಸಾಬಿಯೂ ಗೋಕುಲಾಷ್ಟಮಿಯೂ


ಬದುಕಿನ ಪುಟಗಳಲ್ಲಿ ಹೃದಯ ವೈಶಾಲ್ಯತೆ ಇದ್ದರೆ ಜಗತ್ತು ಸುಂದರವಾಗುವುದಕ್ಕೆ ಬೇರಾವುದೇ ಪರಿಕರ ಬೇಕಾಗುವುದಿಲ್ಲ. ನಮ್ಮ ವ್ಯಕ್ತಿತ್ವ ಸಂಪೂರ್ಣ ವಿಕಸಿತವಾಗಬೇಕಾದರೆ ಅದರ ದರ್ದು ಇದ್ದೇ ಇದೆ. ವಿಶಾಲ ಮನೋಭಾವ ಇಲ್ಲದವರು ಬಾಲಿಶ ವ್ತಕ್ತಿಯಂತೆಯೋ, ಕುಬ್ಜರಂತೆಯೋ, ಲೋಭಿಗಳಂತೆಯೋ ಆಗಿರುವುದು ನಮಗೆ ಕಂಡುಬರುತ್ತದೆ. ಮುಳುಗುವವನಿಗೆ ಹುಲ್ಲುಕಡ್ಡಿ ಭಾರ ಎಂಬೊಂದು ಗಾದೆ ಹೇಗೆ ಹುಟ್ಟಿತೋ ಗೊತ್ತಿಲ್ಲ, ಆದರೆ ಮುಳುಗಿರುವ ವಸ್ತುವನ್ನು ಹುಲ್ಲುಕಡ್ಡಿಯಾದ ದರ್ಬೆಯನ್ನೇ ಇಳಿಬಿಟ್ಟು ಅವು ಒಂದಕ್ಕೊಂದು ಅಂಟಿಕೊಂಡು ದಾರವಾಗಿ, ಆ ದಾರದಿಂದಲೇ ಮೇಲೆತ್ತಿದ ಘಟನೆ ಮಹಾಭಾರತದಲ್ಲಿ ನಮಗೆ ವೇದ್ಯವಾಗುತ್ತದೆ. ನಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬಹುದಾದ ನಯ ವಿನಯಗಳು ಯಾರಿಂದಲೋ ಕಡ ತಂದು ಬಳಸಬೇಕಾದ ಗುಣನಡತೆಗಳಲ್ಲ. ಮೇಲಾಗಿ ಅವಕ್ಕೆ ಯಾವುದೇ ಖರ್ಚಿನ ಬಾಬತ್ತು ಕೂಡ ಇಲ್ಲ. ನಯ-ವಿನಯ-ವೈಶಾಲ್ಯ-ಕ್ಷಮೆ-ದಾನ-ಧರ್ಮ ಹೀಗೇ ಇವೆಲ್ಲಾ ಒಂದೇ ಸಾಲಿನಲ್ಲಿ ಒಂದಕ್ಕೊಂದು ಅಂಟಿನಿಂತಿರುವ ನಡತೆಯ ಮುಖ್ಯ ಸಲ್ಲಕ್ಷಣಗಳು. ನಾವೇ ಸ್ವತಃ ಎಲ್ಲವನ್ನೂ ಜನ್ಮಜಾತವಾಗಿ ಪಡೆದುಬಂದಿರುವುದಿಲ್ಲವಾದ್ದರಿಂದ ಹಿರಿಯರನ್ನು ಮತ್ತು ಸದ್ಗುಣಿಗಳನ್ನು ನೋಡಿ ನಾವದನ್ನು ಅಳವಡಿಸಿಕೊಳ್ಳುವುದು ಬಹಳ ಒಳ್ಳೆಯದು.

ಇದರ ಕುರಿತು ಹೇಳುವಾಗ ಕೆಲವು ಉದಾಹರಣೆಗಳ ಸಮೇತ ಹೇಳಿದರೆ ಸಮಂಜಸವೆನಿಸಿ ಹಾಗೇ ಸಾಗುತ್ತೇನೆ. ಕೆಲವು ವರ್ಷಗಳ ಹಿಂದೆ ನನ್ನ ಅತ್ಮೀಯ ಗೆಳೆಯರೊಬ್ಬರು ಹೋಟೆಲ್ ಒಂದಕ್ಕೆ ತಿಂಡಿಗೆ ಹೋದರು. ಅವರು ಕುಳಿತ ಹೋಟೆಲ್ ಸಾಮಾನ್ಯ ತರಗತಿಯದ್ದಾಗಿತ್ತು. ಆದ್ರೆ ಸೆಲ್ಫ್ ಸರ್ವಿಸ್ ಥರದ್ದಲ್ಲ. ಅಲ್ಲಿ ಕೂತರು ಕೂತರು ಕೂತರು, ಯಾರೂ ಮಾತಾನಾಡಿಸಲು ಬರಲೇ ಇಲ್ಲ. ಇನ್ನೇನು ಎದ್ದು ಹೋಗಿಬಿಡಬೇಕೆನ್ನುವಷ್ಟು ಅಸಹನೆ ಕೋಪದರೂಪವನ್ನು ಪಡೆಯಬೇಕೆನ್ನುವಷ್ಟರಲ್ಲಿ ಒಬ್ಬ ತಾತ ಬಂದು ಮಾತನಾಡಿಸಿದ

" ಏನ್ ಕೊಡ್ಲಿ ಸರ್ ? "

ಇವರು ಉತ್ತರಿಸುವ ಬದಲು ಆತನನ್ನು ಸುಮ್ಮನೇ ಕೇಳಿದರು

" ಯಜಮಾನ್ರೆ ನೀವು ಇಲ್ಯಾವಾಗ್ ಬಂದ್ರಿ ? "

" ಒಂದ್ತಿಂಗ್ಳಾಯ್ತು ಸಾರ್, ಅಲ್ಲೀ ಯಶವಂತಪುರದಲ್ಲಿದ್ದಾಗ ಸಂಬ್ಳ ತುಂಬಾನೇ ಕಮ್ಮಿ ಕೊಡ್ತಿದ್ರು, ಮೇಲಾಗಿ ಯಜಮಾನ್ರು ತುಂಬಾನೇ ಸಿಡುಕು....ನಂಗೂ ವಯಸ್ಸಾಯ್ತು.....ಮಕ್ಳು-ಮರಿ ಸಂಸಾರ ಎಲ್ಲಾ ನಡೀಬೇಕಲ್ಲಾ ಸ್ವಾಮಿ....ಅದಕ್ಕೇ ಇಲ್ಲೊಂದ್ ಕೆಲ್ಸ ಇದೆ ಅಂತ ನಂ ಸ್ನೇಹಿತರೊಬ್ರು ಹೇಳ್ದ್ರು...ಬಂದೆ ಇಷ್ಟ ಆಯ್ತು. ಯಜಮನ್ರು ತುಂಬಾ ಒಳ್ಳೇಜನ...ಇರುವಷ್ಟು ದಿನ ಇದ್ಬುಡೋಣ ಅನ್ನಿಸ್ತಾ ಇದೆ "

ನನ್ನ ಸ್ನೇಹಿತರಿಗೆ ಆ ಒಂದು ಮಾತಿನಿಂದ ಆರಂಭವಾದ ಉಪಚಾರ ಮನೆಯಲ್ಲೂ ಸಿಗದಷ್ಟು ವ್ಯವಸ್ಥೆಯೊಂದಿಗೆ, ಪುನಃ ಬರುತ್ತಿರಬೇಕೆಂಬ ಆತ್ಮೀಯ ಆಹ್ವಾನದೊಡನೆ ಗೌರವಪೂರ್ವಕ ನಮಸ್ಕಾರ ಸಹಿತದ ಬೀಳ್ಕೊಡುಗೆಯೊಂದಿಗೆ ಅಂದಿಗೆ ಮುಗಿಯಿತು. ಅದೇ ಅಂದು ಅವರು ರೇಗಾಡಿದ್ದರೆ ಆ ಮನುಷ್ಯನೂ ಕೂಡ ಕುಪಿತನಾಗಿ ಕ್ಷಣಾರ್ಧದಲ್ಲಿ ಎಲ್ಲವೂ ಬೇರೆಯದೇ ರೀತಿ ಆಗುತ್ತಿತ್ತು.

ಉದಾ ೨ :

ಎಚ್.ಎಸ್.ವಿ ಬರೆದ ಅನಾತ್ಮಕಥನದಲ್ಲಿ ರಾಜಕುಮಾರ್ ಬಗ್ಗೆ ಬರೆದಾಗ ಅವರು ಹೇಳುತ್ತಾರೆ -- ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ, ಹಿರಿಯಕವಿ ಕೆ.ಎಸ್.ನ. ಅಲ್ಲಿಗೆ ಬಂದಿದ್ದರು. ಡಾ| ರಾಜಕುಮಾರ್ ಕೂಡ ಪಾಲ್ಗೊಳ್ಳಬೇಕಾದ ಸಭೆ. ಬಂದಿಳಿದ ರಾಜಕುಮಾರ್ ನೇರವಾಗಿ ವೇದಿಕೆಯಲ್ಲಿ ಕುಳಿತಿದ್ದ ಕೆ.ಎಸ್.ನ ಗೆ ದೀರ್ಘದಂಡ ನಮಸ್ಕಾರ ಮಾಡಿದರಂತೆ. ಸಭೆಯಲ್ಲಿ ರಾಜಕುಮಾರ್ ಅಭಿಮಾನಿಗಳೆ ಹೆಚ್ಚಿದ್ದು ಕೆ.ಎಸ್.ನ ಅಭಿಮಾನಿಗಳ ಸಂಖ್ಯೆ ಕಮ್ಮಿ ಇತ್ತು ಹೀಗಾಗಿ ಅವರ ವ್ಯಕ್ತಿತ್ವವನ್ನು ಎಲ್ಲರಿಗೂ ಉನ್ನತಮಟ್ಟದಲ್ಲಿ ಪರಿಚಯಿಸುವುದಕ್ಕಾಗಿ ಮೆರುಕಲಾವಿದನೊಬ್ಬ ಇನ್ನೊಂದು ರಂಗದ ಮೇರುಕಲಾವಿದನೊಬ್ಬನಿಗೆ ನಮಸ್ಕರಿಸಿದ್ದು ಎನ್ನುತ್ತಾರೆ ಎಚ್.ಎಸ್.ವಿ. ಇದರಿಂದ ರಾಜಕುಮಾರ್ ಚಿಕ್ಕವರಾಗಲಿಲ್ಲ ಬದಲಿಗೆ ರಾಜಕುಮಾರ್ ಅವರ ಆದರ್ಶವನ್ನು ಎಲ್ಲರೂ ಕಂಡರು.

ಜಗತ್ತಿನ ಪ್ರತೀ ಅಣು ಅಣುವೂ ಗೌರವಯುತವಾದದ್ದೇ. ಸಮಯಬಂದಾಗ ಹುಲ್ಲುಕಡ್ಡಿಯೂ ಕೆಲಸಮಾಡಬಲ್ಲುದು. ಇದನ್ನು ಅರಿಯದೇ ಜನರನ್ನು ನಿಭಾಯಿಸುವುದು ಕಷ್ಟವಾದಾಗ ಕರ್ನಾಟಕ ಈಗ ಕಾಣುತ್ತಿರುವ ಅರಾಜಕತೆ ಕಾಣಬಹುದು. ಅದು ನಮ್ಮ ನಮ್ಮ ಮಟ್ಟದಲ್ಲಿನ ವ್ಯವಹಾರದಲ್ಲಿ ಅರಾಜಕತೆಯೇ ಆಗಿರುತ್ತದೆ. ಹಾಗಂತ ಕೇವಲ ಹೊರತೋರಿಕೆಗಾಗಿ ಆ ವೇಷ ಹಾಕುವುದು ಬೇಡ. ವ್ಯಕ್ತಿಗೆ ಗೌರವ ಕೊಟ್ಟು ಪಡೆಯುವ ಸಂಸ್ಕಾರ ಸಿದ್ಧಿಸಿರಬೇಕು. ಯಾವ ವ್ಯಕ್ತಿಯಲ್ಲಿ ಸದ್ಗುಣಗಳು ಮನೆಮಾಡಿರುತ್ತವೆಯೋ ಆ ವ್ಯಕ್ತಿ ಸ್ವಯಂ ಮೇಲ್ಮಟ್ಟಕ್ಕೆ ಏರುತ್ತಾನೆ.

ಎಚ್.ಎಸ್.ವಿ ಒಂದುಕಡೆ ಬರೆಯುತ್ತಾರೆ-- ಬೆಂಗಳೂರಿಗೆ ಬಂದ ಹೊಸದು, ಸಂಸಾರ ಅವಿಭಕ್ತ ಹಾಗೂ ದೊಡ್ಡದು. ಅವರ ಮನೆಯಲ್ಲಿ ಅಡಿಗೆಗೆ ಗ್ಯಾಸ್ ಇರಲಿಲ್ಲ. ಆ ಕಾಲದಲ್ಲಿ ವರ್ಷಗಟ್ಟಲೆ ಗ್ಯಾಸ್ ಗಾಗಿ ಬುಕ್ ಮಾಡಿ ಕಾಯಬೇಕಾದ ಪ್ರಸಂಗವಿತ್ತು. ಅನಿರೀಕ್ಷಿತವಾಗಿ ಸಿಕ್ಕ ಮುದುಕನೊಬ್ಬ ರಾಮಾ ಶಿವಾ ಅನ್ನುತ್ತಾ, ಕಾಲುಗಂಟು ನೀವಿಕೊಳ್ಳುತ್ತಾ ಅವರನ್ನು ಸಂಧಿಸಿ ಗ್ಯಾಸ್ ಕೊಡಿಸುತ್ತೇನೆಂದು ಹೇಳುತ್ತಾ ಅಂದಿನ ಅವರ ಸಂಬಳದ ಅರ್ಧಹಣ ಅಂದರೆ ಮುನ್ನೂರು ರೂಪಾಯಿ ಪಡೆದು ಮೋಸಮಾಡುತ್ತಾನೆ. ಆ ಮುದುಕನ ತೋರಿಕೆಯ ಲಕ್ಷಣಗಳು ಒಳ್ಳೆಯವನಂತೇ ಕಂಡುಬಂದುದರಿಂದ ಎಚ್.ಎಸ್.ವಿ ಮೋಸಹೋಗುತ್ತಾರೆ. ಇದೇ ರೀತಿ ಇನ್ನೊಮ್ಮೆ ಸಿನಿಮಾ ಥೇಟರ್ ನಲ್ಲಿ ಅಸಹಾಯ ಸ್ಥಿತಿಯಲ್ಲಿ ಹುಡುಗನೊಬ್ಬ ಸಹಕರಿಸಿ ಅವರ ಮನೆಮಂದಿಯೆಲ್ಲರ ಮನಗೆದ್ದು ಅವರ ಮನೆಗೆ ಆತ್ಮೀಯನಾಗಿ ಆಮೇಲೊಂದು ದಿನ ತನಗೆ ತೀವ್ರ ಅನಾರೋಗ್ಯವೆಂದೂ ಆಪರೇಶನ್ ಗೆ ಖರ್ಚಿಗೇ ಇಲ್ಲವೆಂದು ಹೇಳುತ್ತಾ, ಎಚ್.ಎಸ್.ವಿ ತಾವೇ ಸ್ವಲ್ಪ ಕೊಡುತ್ತೇವೆಂದು ಹತ್ತುಸಾವಿರ ಕೊಟ್ಟಾಗ, ಹಣಪಡೆದು ದೂರವಾಗುತ್ತಾನೆ. ಮತ್ತೆ ಮೂವತ್ತು ವರ್ಷಗಳನಂತರ ಅನಿರೀಕ್ಷಿತವಾಗಿ ರವೀಂದ್ರ ಕಲಾಕ್ಷೇತ್ರದ ಹೊರಗೆ ಭೇಟಿಯಾಗಿ ಆತನೇ ಬಂದು ಮಾತನಾಡಿಸಿ ಸಾರಿ ಎಂದು ಚೆಕ್ ಕೊಟ್ಟು ಹೋಗುತ್ತಾನೆ. ಕೆಲಸಕ್ಕೆ ಬಾರದ ಚೆಕ್ ತಗಂಡು ಎಚ್. ಎಸ್.ವಿ ಸುಮ್ಮನೇ ಇರುತ್ತಾರೆ. ಆ ಚೆಕ್ ಎನ್ ಕ್ಯಾಷ್ ಆಯಿತೋ ಇಲ್ಲವೋ ನೀವೇ ಊಹಿಸಿ ಎಂದು ನಮಗೇ ಹೇಳುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ ಎಚ್.ಎಸ್.ವಿ ಕೋಪಗೊಳ್ಳುವ ಬದಲು, ಯಾವುದೇ ಈರ್ಷ್ಯೆ ತೀರಿಸುವ ಬದಲು ಅಂಥವರ ಬಗ್ಗೆ ಮರುಕಪಡುತ್ತಾರೆ.

ಎಚ್.ಎಸ್.ವಿ ಯವರು ಬರೆದ ಲೋಕದ ಕಣ್ಣಿಗೆ ರಾಧೆಯು ಕೂಡ, ಅಮ್ಮಾ ನಾನು ದೇವರಾಣೆ , ನೀರು ತಿಳಿಯಿದ್ದರೂ ಕೊಳವಿರಲಿ ಆಳ ಎಂಬೆಲ್ಲಾ ಹತ್ತುಹಾಡುಗಳನ್ನು ಸೇರಿಸಿ ಖ್ಯಾತ ಸಂಗೀತ ಸ್ವರಸಂಯೋಜಕರಾದ ಸಿ.ಅಶ್ವತ್ಥ್ ಅವರಿಗೆ ನೀಡಿದಾಗ ಕೆಲವುದಿನಗಳ ನಂತರ ಆ ಹಾಡುಗಳ ಲಿಖಿತ ಪ್ರತಿಗಳ ಫೈಲನ್ನು ಮರಳಿ ಕೊಟ್ಟು " ಮೂರ್ತಿ , ಇವು ನನಗ್ಯಾಕೋ ಅಷ್ಟಾಗಿ ಹಿಡಿಸಲಿಲ್ಲ " ಎಂದರಂತೆ. ಎಚ್.ಎಸ್.ವಿ ಮರುಮಾತಾಡದೇ ಸುಮ್ಮನೇ ಪಡೆದರು. ಅದಾದ ಮಾರನೇ ದಿನ ಮೈಸೂರು ಅನಂತಸ್ವಾಮಿ ಎಚ್.ಎಸ್.ವಿ ಯವರ ಮನೆಗೆ ಬಂದವರು ಎಚ್.ಎಸ್.ವಿ ಬರೆದದ್ದರಲ್ಲಿ ಒಂದಷ್ಟು ಭಾವಗೀತೆಗಳನ್ನು ಆಯ್ದುಕೊಡಲು ಹೇಳಿದರಂತೆ. ಅಶ್ವತ್ಥ್ ಮರಳಿಸಿದ ಫೈಲು ಅನಂತಸ್ವಾಮಿಯವರ ಕೈ ಸೇರಿತು. ಅನಂತಸ್ವಾಮಿ ಅದಕ್ಕೆ ರಾಗಸಂಯೋಜಿಸಿ ಹಾಡಿ ಆಮೇಲೆ ಅವು ಅನೇಕ ಹಾಡುಗಾರರಿಂದ ಅನೇಕ ವೇದಿಕೆಗಳಲ್ಲಿ ಹಾಡಲ್ಪಟ್ಟು ಜಗದ್ವಿಖ್ಯಾತವಾದವು ! [ವಿಶ್ವಕನ್ನಡಿಗರೆಲ್ಲರೂ ಇಷ್ಟಪಟ್ಟು ಕೇಳಿರುವ ಹಾಡುಗಳವು]. ಅದಾದಮೇಲೆ ಎಚ್.ಎಸ್.ವಿ ಯವರ ಹಾಗೂ ಅಶ್ವತ್ಥ್ ರ ಸ್ನೇಹಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ನಂತರದ ದಿನಗಳಲ್ಲಿ ಎಚ್.ಎಸ್.ವಿ ಯವರ ಅನೇಕ ಗೀತೆಗಳನ್ನು ಅಶ್ವತ್ಥ್ ಬಳಸಿಕೊಂಡರು, ಹಾಡಿದರು. ವ್ಯಕ್ತಿಗೆ ತನ್ನ ತಪ್ಪಿನ ಅರಿವಾದಾಗ ಆತನೇ ಕುಗ್ಗಿಹೋಗುತ್ತಾನೆ; ಪಶ್ಚಾತ್ತಾಪ ಪಡುತ್ತಾನೆ. ಆ ಪಶ್ಚಾತ್ತಾಪದ ಬೇಗುದಿಯೇ ಆತನನ್ನು ಮನವನ್ನು ದಹಿಸಿ ಶುಚಿಗೊಳಿಸುತ್ತದೆ.

ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ ಎಲ್ಲರಿಗೂ ಒಂದಿಲ್ಲೊಂದು ಅವಕಾಶ ಸಿಕ್ಕೇ ಸಿಗುತ್ತದೆ. ಯಾರೋ ತಿರಸ್ಕರಿಸಿದರು ಎಂದು ಅವರಮೇಲೆ ಹರಿಹಾಯುವುದಾಗಲೀ ಅಥವಾ ನಮ್ಮೊಳಗೇ ನಾವು ಕುಗ್ಗಿಕೊರಗುವುದಾಗಲೀ ಸರಿಯಲ್ಲ.

ಇವತ್ತು ಅವಿಭಕ್ತ ಭಾರತ ವಿಭಕ್ತವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಾರತಗಳೆಂಬ ಮೂರು ರಾಷ್ಟ್ರಗಳಾಗಿವೆ. ಅಕ್ಕಪಕ್ಕದ ರಾಷ್ಟ್ರಗಳವರು ತಿಳುವಳಿಕೆಯಿಲ್ಲದೇ ತಮ್ಮ ಮೌಢ್ಯವನ್ನು ಮೆರೆಯುತ್ತಲೇ ಇದ್ದಾರೆ. ಹಾಗೆ ಅವರು ಹಾರಾಡಿದಾಗಲೆಲ್ಲಾ ನಮ್ಮಲ್ಲಿಯೂ ಕೆಲವರು ಅವರನ್ನು ವಿರೋಧಿಸಿ ಹಾರಾಡುತ್ತಾರೆ. ಅವರಿಗೆ ಬುದ್ಧಿಯಿಲ್ಲವೆಂದು ನಮಗೂ ಬುದ್ಧಿಯಿಲ್ಲವಾಯಿತೇ ? ಉತ್ತರಕರ್ನಾಟಕದ ಅನೇಕ ದೇವಸ್ಥಾನಗಳು ಮತ್ತು ಮಸೀದಿಗಳು ಒಂದೇ ವಿಶ್ವಸ್ಥ ಸಮಿತಿಯ ಅಡಿಯಲ್ಲಿ ನಡೆಯುತ್ತಿವೆ. ಹಿಂದೂ-ಮುಸಲ್ಮಾನ್ ಹಬ್ಬಗಳೆಲ್ಲಾ ಸಮರ್ಪಕವಾಗಿ ಎರಡೂ ಕೋಮುಗಳಿಂದ ಆಚರಿಸಲ್ಪಡುತ್ತವೆ. ಹುಸೇನಾಬಿಯೂ ಸುಶೀಲಕ್ಕನೂ ಒಟ್ಟಿಗೇ ಹಲವು ಕೆಲಸಗಳನ್ನು ಮಾಡುತ್ತಾರೆ. ಪರಸ್ಪರರ ಕಷ್ಟ-ಸುಖಗಳಲ್ಲಿ ನೆರವಾಗುತ್ತಾರೆ. ಎಲ್ಲೂ ವಗ್ವಾದಗಳಿಲ್ಲ. ಚಿಕ್ಕಪುಟ್ಟ ವಾಗ್ವಾದಗಳಿದ್ದರೂ ಅದೆಲ್ಲಾ ಒಂದೇ ಮನೆಯ ಸದಸ್ಯರೊಳಗೆ ನಡೆದಂತೇ ನಡೆದು ಆಮೇಲೆ ಮತ್ತೆ ಬಗೆಹರಿದುಹೋಗುತ್ತವೆ. ಇಮಾಮ್ ಸಾಬಿ ಗೋಕುಲಾಷ್ಟಮಿಯನ್ನೂ ಚೆನ್ನಬಸಣ್ಣ ರಾಮ್ ದಾನ್ ಹಬ್ಬವನ್ನೂ ಆಚರಿಸುತ್ತಾರೆ. ಇಮಾಮ್ ತನ್ನ ಮಿತ್ರರನ್ನು-ಬಂಧುಗಳನ್ನೂ ಕರೆದುಕೊಂಡು ಗೋಕುಲಾಷ್ಟಮಿಯ ಪೂಜೆಯಲ್ಲಿ ಪಾಲ್ಗೊಂಡು ತಿಂಡಿ ತಿಂದರೆ ಚೆನ್ನಬಸಣ್ಣ ರಾಮ್ ದಾನ್ ನ ಆಚರಣೆ-ಪ್ರಾರ್ಥನೆಗಳಲ್ಲಿ ಭಾಗವಹಿಸಿ ಇಫ್ತಾರ್ ಕೂಟಗಳಲ್ಲಿ ಭುಂಜಿಸುತ್ತಾನೆ. ಹಾಡೊಂದರಲ್ಲಿ ಕವಿ ಹೇಳುವಂತೇ

ಓದಿ ಬ್ರಾಹ್ಮಣನಾಗು
ಕಾದು ಕ್ಷತ್ರಿಯನಾಗು
ಏನಾದರೂ ಆಗು ಮೊದಲು ಮಾನವನಾಗು

ಹುಟ್ಟಾ ಯಾರೂ ಯಾವುದೇ ಜಾತಿಮತಗಳಲ್ಲಿ ಜನಿಸಿದರೂ ಬೆಳೆಯುತ್ತಾ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ನವಯುಗದಲ್ಲಿ, ನವ ಕಾಲಧರ್ಮದಲ್ಲಿ ಮಾನವಧರ್ಮವಷ್ಟೇ ಶ್ರೇಷ್ಠ. ಮೊದಲು ಮನುಷ್ಯನಾಗಬೇಕಾಗುತ್ತದೆ;ಮನುಷ್ಯನಾಗಲು ಕಲಿಯಬೇಕಾಗುತ್ತದೆ.

ದಕ್ಷಿಣ ಕನ್ನಡದ ದೇವಸ್ಥಾನವೊಂದರ ಅರ್ಚಕರೊಬ್ಬರ ಕುಟುಂಬ ವಾಹನವೊಂದರಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅಪಘಾತ ಸಂಭವಿಸಿ ಕುಟುಂಬದ ಎಲ್ಲಾ ಸದಸ್ಯರೂ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವಾಗ ಕೆಲವು ಮುಸ್ಲಿಮ್ ಬಾಂಧವರಿಗೆ ಅವರ್ಯಾರೋ ಪುರೋಹಿತರು ಎಂಬುದು ಹೊರನೋಟದಿಂದ ತಿಳಿಯುತ್ತದೆ. ಆಮೇಲೆ ನೋಡಿದರೆ ಅವರು ಸುಮಾರಾಗಿ ಪರಿಚಯವಿರುವವರಂತೇ ಎಲ್ಲೋ ನೋಡಿರುವಂತೇ ಭಾಸವಾಗುತ್ತದೆ. ಆ ಕ್ಷಣ ಅವರು ಪರಿಚಯಕ್ಕಾಗಿ ನಿಲ್ಲುವುದಿಲ್ಲ, ಹತ್ತಿರದ ಆಸ್ಪತ್ರೆಯೊಂದಕ್ಕೆ ಎಲ್ಲರನ್ನೂ ಬೇರೆ ವಾಹನವೊಂದರಲ್ಲಿ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ--ಇದಲ್ಲವೇ ಇಮಾಮ್ ಸಾಬಿಯ ಗೋಕುಲಾಷ್ಟಮಿಯ ಪೂಜೆ ? ಶಾಸಕರೂ ಮಂತ್ರಿಯೂ ಆಗಿದ್ದ ಭಟ್ಕಳದ ಯಾಹ್ಯಾ ಸಾಹೇಬರಿಗೆ ತುರ್ತಾಗಿ ಚಿಕಿತ್ಸೆಬೇಕಾಗಿ ಬಂದಾಗ, ಹಳ್ಳಿಗಾಡಿನ ಮೂಲೆಯೊಂದರ ಬ್ರಾಹ್ಮಣರೊಬ್ಬರು ದಿನಗಳ ಕಾಲ ಅವರ ಚಿಕಿತ್ಸೆಗೆ ನಿಲ್ಲುತ್ತಾರೆ. ಇದಲ್ಲವೇ
ರಾಮ್ ದಾನ್ ಪ್ರಾರ್ಥನೆ ?

ಹೀಗೇ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳೋಣ, ಸಂಕುಚಿತ ಮನೋವೃತ್ತಿ ಅಳಿಸಿಹಾಕೋಣ, ಆ ಮೂಲಕ ನಮ್ಮ ವ್ಯಕ್ತಿತ್ವ ಎಲ್ಲರಿಗೂ ಹತ್ತಿರವಾಗಿ ಎಲ್ಲರಲ್ಲೂ ಪ್ರೀತಿಯನ್ನು-ಸ್ನೇಹವನ್ನು ಗಳಿಸೋಣ. ಪ್ರತೀ ದೋಡ್ಡ ವ್ಯಕ್ತಿಯಲ್ಲಿ ದೊಡ್ಡ ಹೃದಯವೂ ಇರುತ್ತದೆ [ಕ್ಷಮಿಸಿ ಈ ಮಾತು ಇಂದಿನ ಹಲವು ರಾಜಕಾರಣಿಗಳಿಗೆ ಅನ್ವಯವಾಗುವುದಿಲ್ಲ ].

Monday, October 25, 2010

ಸೆಲ್ಲಾನಂದಿನಿಯ ’ಕನ್ನಡೀ’ಕರಣ !!

ಚಿತ್ರ ಕೃಪೆ : ಫೋಟೋ ಸರ್ಚ್

ಸೆಲ್ಲಾನಂದಿನಿಯ ’ಕನ್ನಡೀ’ಕರಣ
!!

ನೀವು ಎಲ್ಲೇ ಇರಿ, ಹೇಗೇ ಇರಿ, ಊಟಮಾಡಿರಿ, ಹಸಿದ ಹೊಟ್ಟೆಯಲ್ಲಿರಿ, ನಿದ್ದೆ ಮಾಡಿರಿ, ನಿದ್ದೆಮಾಡದೇ ಆಯಾಸಪಟ್ಟಿರಿ, ಸ್ನಾನಮಾಡಿರಿ ಅಥವಾ ಗಬ್ಬುನಾತಹೊಡೆಯುತ್ತಿರಿ, ಹಲ್ಲುಜ್ಜಿರಿ ಅಥವಾ ಉಜ್ಜದೇ ನಾರುವ ಬಾಯಲ್ಲಿರಿ ಆದರೆ ನೀವುಮಾಡಬಹುದಾದ ಅಥವಾ ಮಾಡುತ್ತಿರುವುದೇ ಆದ ಒಂದು ಕಾಮನ್ ಕೆಲಸ ಎಂದರೆ ಮೊಬೈಲ್ ಗುಂಡಿ ಒತ್ತುತ್ತಿರುವುದು ! ಮೊಬೈಲ್ ಬಂದು ದಶಮಾನೋತ್ಸವ ಆಗಿಹೋಗಿದೆ ! ಆದರೆ ದಶಮಾನೋತ್ಸವವನ್ನು ಯಾರು ಎಲ್ಲಿ ಆಚರಿಸಿದರೆಂದು ತಿಳಿದಿಲ್ಲ. ತಳ್ಳುಗಾಡಿಯ ತಿಪ್ಪೇಸ್ವಾಮಿಯಿಂದ ಹಿಡಿದು ಟಾಟಾರ ತನಕವೂ ಹೋಗಲಿಬಿಡಿ ಇನ್ನೂ ತುಸು ಮೇಲೆ ಹೋಗೋಣ ಬಿಲ್ ಗೇಟ್ಸ್ ತನಕವೂ ಇದರ ವ್ಯಾಪ್ತಿ ಹಬ್ಬಿದೆ. ಯಾರಿಗೆ ಬೇಡ ಸೆಲ್ಲು ? ಒಂದಾನೊಂದು ಕಾಲದಲ್ಲಿ ಸೆಲ್ಲು ಅಂದರೆ ಬರೇ ಬ್ಯಾಟರಿ ಸೆಲ್ಲು ಮಾತ್ರವಾಗಿತ್ತು. ಮಿಕ್ಕಿದ್ದಕ್ಕೆಲ್ಲಾ ನಮಗೆ ಸೆಲ್ಲು ಎಂಬ ಶಬ್ದದ ಬಳಕೆ ಗೊತ್ತಿರಲಿಲ್ಲ. ಈಗ ತಕಳಿ ಮಾತುಮಾತಿಗೆ ಸೆಲ್ಲು ಬಂದೇಬರುತ್ತದೆ. ಯಾಕೆಂದರೆ ಅದಿಲ್ಲದಿದ್ದರೆ ಜೀವನವೇ ಇಲ್ಲ. ಹೊಲದಲ್ಲಿ ಕೂಲಿಮಾಡುವಾತ ನಾಳೆ ಬರುತ್ತೇನೆ ಎಂದು ಇನ್ಯಾರೋ ಯಜಮಾನರಿಗೆ ತನ್ನ ಕೆಸರುಕೈಯ್ಯಲ್ಲೇ ಕಾಲ್ ರಿಸೀವ್ ಮಾಡಿ ಮಾತಾಡುವುದು ಸೆಲ್ಲಿನಲ್ಲೇ ಅಲ್ಲವೇ? ಹಾಗೇ ಈ ಸೆಲ್ಲು ಬಂದಮೇಲೆ ಲ್ಯಾಂಡ ಫೋನ್ ಗಳೆಲ್ಲಾ ಹುಡುಗಿಯರ ಮುಂದೆ ಅಜ್ಜಿಯರು ಇದ್ದಂತೇ ಭಾಸವಾಗುತ್ತದೆ ! ಕೆಲವೊಮ್ಮೆ ಅಜ್ಜಿಯರು ಮನೆಯ ಪ್ರಾಯದ ಹುಡುಗಿಯರ ಅಲಂಕಾರವನ್ನು ಕಂಡು ಕರುಬುತ್ತ ಸಂದುಹೋದ ತಮ್ಮ ಪ್ರಾಯದ ದಿನಗಳನ್ನು ನೆನೆಯುತ್ತಾ ಒಳಗೊಳಗೇ ಅಳುವುದನ್ನು ಯಾರು ಅರಿತಿಲ್ಲ ? ಹೀಗೆ ಬರೆದರೆ ಇದೂ ಹೊಸ ವಿಷಯವೇ ಎಂದಿ ನೀವು ಕೆಳಲೂಬಹುದು. ತಾಳಲಾರದೆ ಏನೋ ಅಂದಾಗ ಬೇಸರವಾಗಿ ತರಲೆಮಾಡುವ ಆ ಹುಡುಗಿಯರನ್ನು ಅಜ್ಜಿಯಂದಿರು ಹಿಡಿಶಾಪಹಾಕಿದ ಹಾಗೇ ಬೈಯ್ಯುತ್ತಾರಲ್ಲ, ಉದಾಹರಣೆಗೆ : " ಇರಿ ನಿಮಗೂ ಮುಪ್ಪು ಬಂದೇ ಬರುತ್ತದೆ, ನನನ್ನು ಈಗ ಹೇಗೆ ಟೀಕಿಸಿದಿರೋ ಅದೇರೀತಿ ನಿಮ್ಮನ್ನು ನಿಮ್ಮ ಮೊಮ್ಮಕ್ಕಳು ಆಡಿಕೊಂಡಾಗ ಆಗ ನಿಮಗೆ ಅರ್ಥವಾಗುತ್ತದೆ." -ಇದೇ ಅಲ್ಲವೇ ಕಾಲಚಕ್ರ ? ಇಂದಿನ ಮಕ್ಕಳೇ ನಾಳಿನ ನಾಗರಿಕರು ಎಂದು ಕನ್ನಡ ಶಾಲೆಯಲ್ಲಿ ನಾವು ಬರೆದುಕೊಟ್ಟ ಭಾಷಣದಲ್ಲಿ ಹಲವು ಸರ್ತಿ ಹೇಳಿದ್ದಿತ್ತು, ಆದರ ಅರ್ಥ ತೀರಾ ನಮಗೆ ಗೊತ್ತಿರದಿದ್ದರೂ ಭಾಷಣಮಾಡುವುದಕ್ಕೆ ನಾವೇನೂ ಕಮ್ಮಿ ಇರಲಿಲ್ಲ ಸ್ವಾಮೀ ! ಕೆಲವೊಮ್ಮೆ ಗುತ್ತೇದಾರರು ಪತ್ತೇದಾರೌ ಇವರೆಲ್ಲಾ ಟೊಂಕಕಟ್ಟಿ ರಾಜಕೀಯದಲ್ಲಿ ಶಾಸಕ ಪ್ರಜೆಗಳಾದಾಗ ನಾನು ಅಂದುಕೊಂಡಿದ್ದಿದೆ--ಹೌದಪ್ಪಾ ಹಿಂದಿನ[ಬೆಂಚಿನ] ಮಕ್ಕಳೇ ಮುಂದಿನ ನಾಗರಿಕರು ! ಈಗ ನೀವೂ ನಾವೂ ಉದ್ದುದ್ದ ಸರ್ಟಿಫಿಕೇಟ್ ಇಟ್ಟುಕೊಂಡು ಮಿಕಿಮಿಕಿ ಅಂತ ವಿಧಾನಸೌಧದಲ್ಲಾಗುವ ಜಟ್ಟಿಕಾಳಗವನ್ನು ನೋಡುವುದಿಲ್ಲವೇ ?

ಹೋಯ್, ಇರಲಿ ವಿಷಯಾಂತರಿಸಬೇಡಿ ನಾವು ಮಾತನಾಡಬೇಕಾದ್ದು ಬಹಳ ಇದೆ. ಸಮಯದ ತೊಂದರೆ ನಿಮಗೂ ನಮಗೂ ಅಡ್ಡಬಂದರೂ ಹೆಚ್ಚೇನಲ್ಲ, ಅದು ಮಾಮೂಲು. ಆದರೂ ಬೆಳಿಗ್ಗೆ ಗಡಿಬಿಡಿಯಲ್ಲಿ ಬಾತ್ ರೂಂ ನಲ್ಲಿ ಸರಸರ ಸ್ನಾನಮಾಡುವಾಗ ಕಾಲುಜಾರಿ, ಮೈಯ್ಯುಜ್ಜಿಕೊಳ್ಳುವಾಗ ನಮ್ಮ ಉಗುರೇ ನಮಗೆ ಪರಚಿ ಗಾಯವಾಗಿ, ದಸೋಬುಸೋ ಎಂದು ಪ್ಯಾಂಟು ಶರ್ಟು ತೊಟ್ಟು ಬೆಲ್ಟ್ ಸರಿಪಡಿಸಿಕೊಳ್ಳುತ್ತಲೇ ಮನೆಯಲ್ಲಿ ತಿಂಡಿ ರೆಡಿಯಿರದ ಕಾರಣ ಓಡುತ್ತಾ ಓಡುತ್ತಾ ಎಸ್.ಎಲ್.ವಿ ಫಾಸ್ಟ್ ಫುಡ್ ಗೆ ಎಂಟ್ರಿಕೊಟ್ಟು, ಒಂದರ್ಧ ಇಡ್ಲಿನೋ ಪಡ್ಲಿನೋ ತಿಂದು, ಬಸ್ಸೋ ಗಾಡಿಯೋ ಹತ್ತಿ ಆಫೀಸು ತಲುಪಿ ಕೆಲಸಮಾಡುವುದರಲ್ಲೇ ನಾವು ತೃಪ್ತರಲ್ಲವೇ ? ಹಾಗೇನೇ ಇರುವ ಸಮಯದಲ್ಲೇ ಎಲ್ಲಾ ಅಡ್ಜಸ್ಟ್ ಮೆಂಟು. ಯಾರೋ ಹೇಳಿದರು ’ಲೈಫ್ ಈಸ್ ಫುಲ್ ಆಫ ಅಡ್ಜಸ್ಟ್ ಮೆಂಟ್ ’ ಅಂತ, ರೇನಾಲ್ಡ್ ಪೆನ್ನಿಗೆ ಪಾರ್ಕರ್ ಪೆನ್ನಿನ ರೀಫಿಲ್ಲು ಹೊಂದುವುದಿಲ್ಲ, ಬೆಂಗಳೂರಿನ ಯಾಕೆ ಹಳ್ಳಿಯ ಹುಡುಗೀರಿಗೂ ಸಾಪ್ಟ್ ವೇರ್ ಹುಡುಗನನ್ನು ಬಿಟ್ಟರೆ ವೃತ್ತಿಯ ಹುಡುಗರು ಹೊಂದುವುದಿಲ್ಲ ! ಪ್ಯಾಂಟನ್ನು ಶರೀರದ ಮೇಲ್ಭಾಗಕ್ಕೂ ಶರ್ಟ್ ನ್ನು ಶರೀರದ ಕೆಳಭಾಗಕ್ಕೂ ಹಾಕಿಕೊಳ್ಳಿ ಅಡ್ಜಸ್ಟ್ ಆಗುವುದಿಲ್ಲ ಅಂದಮೇಲೆ ಎಲ್ಲಿಬಂತು ಹೊಂದಾಣಿಕೆ ?

" ಹಲೋ ಯಾರು ಸರ್ ? ಯಾರೂ ? ಅಲ್ಲಲ್ಲ ರಾಂಗ್ ನಂಬರ್ "

ಬರೆಯುತ್ತಿರುವಾಗ ನನ್ನ ಸೆಲ್ಲೇ ಕವಕ್ಕನೆ ಕೂಗಿಬಿಡಬೇಕೆ ? ಈ ಸೆಲ್ಲು ತಯಾರುಮಾಡಿದವರಿಗೆ ಇನ್ನೊಂದು ಮಾತನ್ನು ಹೇಳಬೇಕು. ತಯಾರು ಮಾಡುವಾಗಲೇ ಏನಾದರೂ ಪ್ರೋಗ್ರಾಂ ಬರೆದು ನಾವು ಬ್ಯೂಸಿ ಇರುವಾಗ ತಂತಾನೇ ಅದು ಬಂದ ಕಾಲ್ ಯಾರದೆಂದು ನಮಗೆ ಹೇಳಬೇಕು. ಚಂದದ ಹುಡುಗಿ ಕಾಲ್ ಮಾಡಿದರೆ ಮುದುಕಪ್ಪಗಳಿಗೆ ಅವರ ಫೋಟೋ ಕಾಣಿಸಬೇಕು. ಪಡ್ಡೆಗಳಿಗೆ ಹುಡುಗೀರ ಕಾಲ್ ಬರುತ್ತಿದ್ದ ಹಾಗೇ " ಹಾಯ್ ಲವ್ಲೀ " ಎಂದು ಅದೇ ಮೊದಲಾಗಿ ಹೇಳಿಬಿಡಬೇಕು. ಹುಡುಗೀರಿಗೆ ಪಡ್ಡೆಗಳೋ ಮುದುಕಪ್ಪಗಳೋ ಯಾರು ಕಾಲ್ ಮಾಡುತ್ತಿದ್ದಾರೆಂದು ಮೊದಲೇ ತಿಳಿದುಹೋಗಬೇಕು. ಪಡ್ಡೆಗಳಾದರೆ ಅವುಗಳಿಗೆ ಮತ್ತೆ ಪ್ಯಾರಲಲ್ ಕನೆಕ್ಷನ್ ಎಷ್ಟಿದೆ ಎಂಬುದನ್ನೂ ಅದು ಹೇಳುವಷ್ಟು ಜಾಣತನದಿಂದ ಕೂಡಿರಬೇಕು. ಮುದುಕಪ್ಪಗಳು ಪದೇ ಪದೇ ಕಾಲ್ ಮಾಡಲು ಆರಂಭಿಸಿದರೆ ಹುಡುಗೀರ ಸೆಲ್ಲಿನಿಂದ ಅವರಿಗೆ ಅಜ್ಜಿಯರ ದನಿ ಕೇಳಬೇಕು. ಹೀಗೇ ಯಾರ್ಯಾರಿಗೆ ಎಲ್ಲೆಲ್ಲಿ ಯಾವ್ಯಾವ ರೀತಿ ಸೌಕರ್ಯಬೇಕೋ ಅಷ್ಟನ್ನೂ ಒದಗಿಸುವ ಸೆಲ್ಲುಗಳ ಬರಲಿ ಎಂದು ಅವರಲ್ಲಿ ಪ್ರಾರ್ಥಿಸೋಣ!

ಇತ್ತೀಚೆಗೆ ಯಾರೂ ಬಹುತೇಕ ಸೆಲ್ ಬಿಟ್ಟು ಇರುವುದೇ ಇಲ್ಲ. ಅಲ್ಲೆಲ್ಲೋ ಪ್ರಶ್ನೆ ಕೇಳಿದಾಗ ಯರೋ ಒಬ್ಬ ಹೇಳಿದ ನೆನಪು-- ತನಗೆ ಸೆಲ್ ಮತ್ತು ಲ್ಯಾಪ್ ಟಾಪ್ ಬಿಟ್ಟು ಬದುಕಲು ಸಾಧ್ಯವಾಗುವುದೇ ಇಲ್ಲಾ ಎಂದು. ಅಂತೂ ಸೆಲ್ಲಿಲ್ಲದೇ ಲೈಫಿಲ್ಲ, ಲ್ಯಾಪ್ ಟಾಪಿಲ್ಲದೆಯೂ ಲೈಫಿಲ್ಲ, ನೆಟ್ ಇಲ್ಲದೆಯೂ ಲೈಫಿಲ್ಲ.....ಲೈಫು ಇಷ್ಟೇನೆ ! ಹುಡುಗಿಯರಿಗೆ ಅನೇಕ ಕಂಪನಿಗಳು ಎಸ್.ಎಮ್.ಎಸ್ ಬಹಳಷ್ಟು ಕೊಟ್ಟು ಉಪಕಾರಮಾಡಿದ್ದಾರೆ. ಹೆಚ್ವಾಶಿ ಎಲ್ಲಾ ಹುಡುಗೀರೂ ಸೆಲ್ಲಾನಂದಿನಿಗಳೇ ! ಇದರಲ್ಲಿ ತಪ್ಪಿಸಿಕೊಂಡಿರುವವರಿದ್ದರೆ ಅವರಿಗೆ ಯಾವುದೋ ಕಾಯಿಲೆಯೋ ಕಸಾಲೆಯೋ ಇರಬೇಕೆಂದೇ ಅರ್ಥ ಎಂಬಷ್ಟರ ಮಟ್ಟಿಗೆ ಬೆಳೆದಿದೆ ಈ ಸೆಲ್ಲು ಪ್ರೇಮ. ಕಾಲದ ಅನುಬಂಧವೇ ಹಾಗೆ. ಕಾಯಿದೆ ಎಂಬುದು ಪುಸ್ತಕದಲ್ಲಿ ಬರೆಯಲ್ಪಟ್ಟಿದೆ; ನಡೆಯಬೇಕಾದ್ದು ನಡೆದೇ ಇದೆ ಅಲ್ಲವೇ ? ಉದಾಹರಣೆಗೆ : ವರದಕ್ಷಿಣೆ ಸಾಮಾಜಿಕ ಪಿಡುಗು ಎಂದು ಮೆಜುಗುದ್ದಿ ಭಾಷಣಮಾಡಿ ಚಪ್ಪಾಳೆಯ ಹೊರೆಹೊರುವ ರಾಜಕಾರಣಿಯ ಮಗನಿಗೆ ಹೆಣ್ಣುಕೊಡುವವರು ಸೂಟ್ ಕೇಸ್ ತುಂಬಿಸಿಯೇ ಕೊಡಬೇಕಾಗುತ್ತದೆ. ವರದಕ್ಷಿಣೆ ಹಲವಾರು ಸ್ತರಗಳಲ್ಲಿ ಚಾಲ್ತಿಯಲ್ಲಿದ್ದೇ ಇದೆ. ವರದಕ್ಷಿಣೆ ತೆಗೆದುಕೊಂಡಿಲ್ಲವಾದರೆ ಗಂಡಿಗೆ ಏನೋ ಐಬು ಎಂಬಲ್ಲಿಯವರೆಗೆ ಅದು ಕಾಮನ್ ಆಗಿಬಿಟ್ಟಿದೆ ! ದೇಶದಲ್ಲಿ ಜಾತಿ ವ್ಯವಸ್ಥೆ ಬೇಡವೆನ್ನುವ ಸರಕಾರದ ಎಲ್ಲಾ ಅರ್ಜಿಗಳಲ್ಲಿ ಹೆಸರು, ಕುಲ-ಗೋತ್ರಗಳಂತೇ ಜಾತಿ ______ ಎಂದು ಕೇಳುತ್ತಾರೆ ! ನಿಜವಾಗಿಯೂ ಜಾತಿಪದ್ಧತಿಯ ನಿರ್ಮೂಲನವಾಗಬೇಕೆಂದಿದ್ದರೆ ಸರಕಾರಕ್ಕೇಕೆ ಬೇಕು ಜಾತಿಯ ಕಾಲಮ್ಮು ?

ಅರೆರೆ, ಎದ್ದೋಡಿ ಹೋಗುತ್ತಿದ್ದೀರಲ್ರೀ ಕೇಳ್ರಿ ಇಲ್ಸ್ವಲ್ಪ. ಇಡೀ ದಿನ ಸೆಲ್ಲು ಒತ್ತುತ್ತಾ ಅದಕ್ಕೇ ಅಂಟಿಕೊಂಡಿದ್ದರೆ ಮನೆಯ ಅಥವಾ ಕಚೇರಿಯ ಮಿಕ್ಕುಳಿದ ಜನರಿಗೆ ಕಷ್ಟವಲ್ಲವೇ ? ಆ ಅನಿಸಿಕೆ ಅಂತಹ ಸೆಲ್ಲಾನಂದಿನಿಗಳಿಗೆ ಬರುವುದೇ ಇಲ್ಲವೇ ? ಅದೇನ್ ಎಸ್.ಎಮ್.ಎಸ್ಸು ಅಂತೀರಿ....ಮೊಬೈಲ್ ಚಾಟಿಂಗು....ಮೊಬೈಲ್ ಚಾಟಿಂಗು. ಮನೆಗೆಬಂದು ಕೋಣೆಗೆ ಸೇರಿಕೊಂಡುಬಿಟ್ಟರೆ ಅವರ ಲೋಕವೇ ಬೇರೆ. ಸೆಲ್ಲಾಯಿತು ಅವರಾಯಿತು. ಸೆಲ್ ನೆಟವರ್ಕ್ ಇಲ್ಲದಿದ್ದರೆ ಅವರ ಚಿಂತೆಯನ್ನು ಕೇಳಬೇಕೆ ? ತಿಂಡಿ-ಊಟ ರುಚಿಸುವುದಿಲ್ಲ, ನಿದ್ದೆ ಬರುವುದಿಲ್ಲ. ಮಾರನೇದಿನ ಪಡ್ಡೆಗಳೋ ಅಥವಾ ಬೇರೇ ಫ್ರೆಂಡುಗಳೋ ಕಾಲ್ ಮಾಡಿದರೆ ಸಾಕು " ಆಯ್ ಮಿಸ್ಸಡ್ ಯೂ ಏ ಲಾಟ್ ಯೂ ನೋ " ! ಹೌದ್ರೀ ಹೌದ್ರೀ ನೀವು ಮಿಸ್ಸಡ್ ಏ ಲಾಟು ಅಲ್ಲಿ ಮನೇಲಿ ಪಾಪ ಅಪ್ಪ-ಅಮ್ಮ ಹಿಡಿದು ಕಾಯ್ತಾ ಇರ್ತಾರೆ ಊಟದ ತಾಟು !

ಕನ್ನಡ ಭಾಷೆಯ ಶಬ್ದಲಾಲಿತ್ಯದಲ್ಲಿ ಕಾಣುವ ವೈಖರಿ ಬೇರಾವ ಭಾಷೆಯಲ್ಲೂ ಸಿಗದೇನೋ ಎಂಬುದು ನನ್ನಿಸಿಕೆ. ಶಬ್ದಗಳನ್ನು ಅಲ್ಲಲ್ಲೇ ತಿರುಚಿ,ಮಗುಚಿ ಬೇರೆಯದೇ ಕಲ್ಪನೆ ಕೊಡಬಹುದಾದ ಸುಲಲಿತ, ಸಮೃದ್ಧ ಭಾಷೆ ನಮ್ಮ ಕನ್ನಡ. ನಾನು ಇಲ್ಲಿ ಕನ್ನಡೀಕರಿಸುವವರೆಗೆ ಸ್ವಲ್ಪ ತಾಳ್ಮೆ ಇರಲಿ ಮಾರಾಯರೆ! ಕನ್ನಡೀಕರಣ ಎಂದರೆ ಯಾವುದೋ ಕವಿ-ಸಾಹಿತಿಗಳು ಬೇರೇ ಭಾಷೆಯಲ್ಲಿ ಬರೆದದ್ದನ್ನು ಕನ್ನಡಕ್ಕೆ ತರ್ಜುಮೆಮಾಡುವುದಲ್ಲ. ಬದಲಾಗಿ ಕನ್ನಡಿಗೆ ನಮ್ಮ ಸೆಲ್ಲಾನಂದಿನಿಗಳು ಹಲವೊಮ್ಮೆ ಆತುಕೊಳ್ಳುವುದು! ಶರೀರದಲ್ಲಿ ಎಂತೆಂಥಾ ಹಿಡಿಂಬೆಗಳನ್ನೂ ಮೀರಿಸುವಂತವರು " ಹಾಯ್ " ಎಂದು ಕನ್ನಡಿಯಲ್ಲಿ ಪೋಸ್ ಕೊಟ್ಟು ಹೇಗೆ ಕಾಣುತ್ತೇನೆ ಎಂದು ತಮ್ಮನ್ನು ತಾವೇ ನೋಡಿಕೊಳ್ಳುವುದು. ಹಳೆಯ ಚೂಡೀದಾರದ ಬದಲಾಗಿ ಹೊಸ ಜೀನ್ಸ್ ಮತ್ತು ಮಲ್ಲಿಕಾಶೇರಾವತ್ ಬಳಸುವಂತಹ ಟಾಪು ಹಾಕಿಕೊಂಡು ಹೇಗೆ ಕಾಣುತ್ತೇನೆ ಎಂದು ತಿರುತಿರುಗಿ ನೋಡುವುದು. ಅದಾದಮೇಲೆ ಸ್ವಲ್ಪ ಏನೋ ಕಮ್ಮಿಯೆಂದೆನೆಸಿ ಬ್ಯೂಟೀ ಪಾರ್ಲರಿಗೆ ಹೋಗಿಬಂದು ಮತ್ತದೇ ಕನ್ನಡೀಕರಣ! ಆಗಲೂ ಸರಿಯೆನಿಸದಿದ್ದರೆ ಮತ್ತೆ ಸಿಗೋ ಜಾಹೀರಾತುಗಳನ್ನೆಲ್ಲಾ ಮಗುಚಿ ಅಲ್ಲಿರುವ ರೂಪದರ್ಶಮ್ಮಗಳ ರೀತಿಯನ್ನೇ ಅನುಕರಿಸಲು ತೊಡಗುವುದು. " ಆಯ್ ಮಿನ್ ಇಟ್ ಈಸ್ ಸೋ ಸ್ವೀಟ್ ಯೂ ನೋ ...ಸೋ ಕ್ಯೂಟ್ ಯೂ ನೋ " ಎಂದೆಲ್ಲಾ ಚಪಲಕ್ಕೆ ಹೇಗೇಗೋ ಇಂಗ್ಲೀಷ್ ಬಳಸುವುದು. ಕನ್ನಡ ಬಂದರೂ ಸ್ವಲ್ಪ ಇಂಗ್ಲೀಷ್ ಮಿಕ್ಸ್ ಮಾಡಿದರೇ ಹೆಚ್ಚಿನ ಜನ ಆಸಕ್ತರಾಗುತ್ತಾರೆ ಎಂದು ತಿಳಿದು ಯಾವುದೋ ಭಾಷೆಯಮೂಲದವರಂತೇ ಮೈಸೂರಿನ ಪಕ್ಕದ ಕೆ.ಎಂ.ದೊಡ್ಡಿಯಲ್ಲಿ ಹುಟ್ಟಿಬೆಳೆದ ಹುಡುಗಿಯೂ ಆಡುವುದು ನೋಡಿದರೆ ’ಕನ್ನಡೀ’ಕರಣವನ್ನೂ ಕನ್ನಡೀಕರಣವನ್ನೂ ಮಾಡುತ್ತಾ ಸೇವೆಗೈಯುತ್ತಿರುವ ಅವರಿಗೆ ಕೈಲಾದ ಪ್ರಶಸ್ತಿಗಳನ್ನೆಲ್ಲಾ ಕೊಡಬೇಕೆನಿಸಿದರೆ ತಪ್ಪೆಂದು ಭಾವಿಸಬೇಡಿ.

ನವಿಲು ಕುಣಿಯಿತು ಅಂತ ಕೆಂಬೂತವೂ ಕುಣಿಯಿತು ಎಂಬುದು ಯಾರೋ ಓಬೀರಾಯ ಮಾಡಿದ ಗಾದೆ! ಯಾಕೆಂದರೆ ಈಗಿನ ಬ್ಯೂಟೀ ಪಾರ್ಲರ್ ಗಳಲ್ಲಿ ರಿಪೇರಿ ಮಾಡಲು ಇನ್ನೇನು ಸಾಧ್ಯವೇ ಇಲ್ಲಾ ಎನ್ನುವ ಕೆಟ್ಟಮುಖದವರನ್ನೂ ಮನುಷ್ಯರೂಪಕ್ಕೆ ತಿರುಗಿಸುತ್ತಾರಪ್ಪ.

" ಹೋಯ್ ಭಟ್ರೇ ಪರಿಚಯ ಸಿಗ್ಲಿಲ್ವಾ ? ನಾನು ರಾಧಿಕಾ.....ನಿಮ್ಮ ಹಳೇಮನೆ ಹತ್ತಿರ ಇದ್ನಲ್ಲ ..."

ತಲೆಕೆರೆದುಕೊಳ್ಳುತ್ತಾ ಯಾಕೆ ಗುರುತುಸಿಗಲಿಲ್ಲವೆಂದು ನೋಡಿದರೆ ಕಾಲೀಸೈಟು ಕ್ಲೀನ್ ಮಾಡಿ ಹೊಸಮನೆ ಕಟ್ಟಿದಂತೇ ಅವಳ ಮುಖಕ್ಕೆ ಅದೆಂತೆಂಥದೋ ಕ್ರೀಮು ಬಳಿದು, ಲಿಪ್ ಸ್ಟಿಕ್ಕು ಉಜ್ಜಿ, ಸಹಜವಾಗಿದ್ದ ಕಣ್ಣ ಹುಬ್ಬನ್ನು ಉದ್ಯಾನವನದ ಸಾಲುಗಿಡಗಳನ್ನು ಕಟ್ ಮಾಡಿದಂತೇ ಟ್ರಿಮ್ ಮಾಡಿ .....ಬೇಡರೀ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಂತೂ ಆಕೆಗೆ ಉತ್ತರ ನೀಡಿ ಕಳಿಸಿದೆ ಅನ್ನಿ." ಮಾಡಿಕೊಳ್ಳಲಿ ಬಿಡಿ, ನಿಮ್ಮಪ್ಪನ ಗಂಟೇನು ಹೋಯ್ತು ? " ಎಂದು ನೀವು ಕಾಲುಕೆದರಿ ನಿಲ್ಲುವ ಮೋದಲೇ ನಾನೇ ಹೇಳಿಬಿಡುತ್ತೇನೆ ಕೇಳಿ:
" ನಮ್ಮ ಪಕ್ಷದಲ್ಲಿ ಆ ಥರ ಯಾವುದೇ ಜನ ಇಲ್ಲಾ, ನಾವೆಲ್ಲಾ ಒಂದು ಸಿದ್ಧಾಂತವನ್ನು ನೆಚ್ಚಿಕೊಂಡು ಬೆಳೆದ ಪಕ್ಷ. ನಮಗೆ ಕೋಟಿಯಾಗಲೀ ಕೋಟಿಕೋಟಿಯಾಗಲೀ ಯಾವುದರ ಬಗ್ಗೆಯೂ ತಿಳಿದಿಲ್ಲ. ನಾವೆಲ್ಲಾ ಒಟ್ಟಿಗೇ ಇದ್ದೇವೆ.. ಒಟ್ಟಿಗೇ ಇರ್ತೇವೆ " ...ಛೆ ಛೆ ....ಇದು ನಾನು ಶಾಸಕನಾದ ಕನಸುಕಂಡು ಹಲುಬಿದ್ದು ಇಲ್ಲೂ ಬಂದುಬಿಡ್ತಾ ಹೋಗ್ಲಿ ಬಿಡಿ... ಅವರೆಲ್ಲಾ ಏನಾರೂ ಮಾಡ್ಕೊಳ್ಲಿ. ನಾವಾಯಿತು ನಮ್ಮ ಕೆಲಸವಾಯಿತು.

’ಕನ್ನಡೀ’ಕರಣ ಜಾಸ್ತಿಯಾದಮೇಲೆ ಮುದುಕಪ್ಪಗಳೂ ಸುಮ್ಮನೇ ಕುಳಿತಿಲ್ಲ. ಕೂದಲು ಇದ್ದರೆ ಸರಿ ಇರದಿದ್ದರೆ ಕೂದಲು ಇರುವಂತೆಯೇ ಕಾಣುವಂತೇ ಅಷ್ಟು ಸಹಜವಾದ ವಿಗ್ ಧರಿಸಿ ಕನ್ನಡಿಗೆ ಜೋತುಕೊಳ್ಳುತ್ತಾರೆ. ಕೂದಲು ಬೆಳ್ಳಗಾದವರು ಬಣ್ಣ ಹಚ್ಚಿಕೊಂಡು ಕನ್ನಡಿ ಎದುರು ನಿಂತು ಇನ್ನೊಮ್ಮೆ ಮದುವೆಗೆ ತಯಾರಾಗಿರುವ ಗಂಡಿನಂತೇ ಸಂಭ್ರಮಿಸುತ್ತಾರೆ. ಬಿಳಿಯ ಕಣ್ಣು ಹುಬ್ಬಿಗೆ, ಮೀಸೆಗೆ, ಗಡ್ಡಕ್ಕೆ ಎಲ್ಲೆಡೆಯೂ ಬಣ್ಣ ! ಕೆಲವರು ಕಣ್ಣಿಗೆ ಹೆಂಗಳೆಯರಂತೇ ಕಾಡಿಗೆ ಬೇರೆ ! ಎಲ್ಲವನ್ನೂ ಪೂರೈಸಿದ ಮೇಲೆ ಕನ್ನಡಿಯ ಎದುರುನಿಂತು ಬೇರೆ ಬೇರೆ ರೀತಿಯಲ್ಲಿ ನಕ್ಕು ನೋಡುತ್ತಾರೆ. ಹಲ್ಲು ಅಷ್ಟಾಗಿ ಸರಿಕಾಣಿಸದಿದ್ದರೆ ಮಾರನೇದಿನವೇ ಹಲ್ಕಟ್ ಸಾರಿ ಹಲ್ಲುತಜ್ಞರನ್ನು ಭೇಟಿಮಾಡುತ್ತಾರೆ ! " ಬಾಯಲ್ಲಿ ಸರಿಯಾಗಿ ಏನೂ ಬ್ಯಾಲೆನ್ಸೇ ಇಲ್ಲವಲ್ರೀ " ಎಂದು ಅವರಂದರೆ " ಡಾಕ್ಟ್ರೇ ಎಷ್ಟೇ ಖರ್ಚಾದ್ರೂ ಪರವಾಗಿಲ್ಲ....ಹಲ್ಲೂಂದ್ರೆ ಏನು ಮುತ್ತು ....ಮುತ್ತು ಪೋಣಿಸಿರೋ ಹಾಗೇ ಮಾಡ್ಕೊಡಿ " . ವೈದ್ಯರಿಗೆ ವಿಧಿಯಿಲ್ಲ ! ತಂತಿ-ತಂಬೂರಿ ಎಲ್ಲಾ ತಗಂಡು ಅದೆಷ್ಟು ರೀತಿ ರಿಪೇರಿ ಸಾಧ್ಯವೋ ಅಷ್ಟನ್ನೂ ಮಾಡುತ್ತಲೇ ಇರುತ್ತಾರೆ..ವಾರ ವಾರಕ್ಕೂ ಸಿಟ್ಟಿಂಗು ಸಿಟ್ಟಿಂಗು....ಗಿರಾಕಿ ಮತ್ತೆ ಕಣ್ಣು ಕೆಂಪಗೆ ಮಾಡುವವರೆಗೂ ಸಿಟ್ಟಿಂಗೇ ಕೆಲವುಕಡೆ ! ಅಂತೂ ಸಿಟ್ಟಿಂಗ್ ಎಲ್ಲಾ ಮುಗಿಸಿ ಬಂದ ಮಾಮ ಮತ್ತದೇ ’ಕನ್ನಡೀ’ಕರಣ !

’ಕನ್ನಡೀ’ಕರಣದ ಭರದಲ್ಲಿ ನವೆಂಬರ್ ಹತ್ತಿರಬಂದಿರುವುದರಿಂದ ಕೊನೇಪಕ್ಷ ರಾಜ್ಯೋತ್ಸವದ ಸಮಯದಲ್ಲಾದರೂ ಕನ್ನಡಿ ಬದಿಗಿರಿಸಿ ಕನ್ನಡವನ್ನು ಸ್ವಲ್ಪ ಮಾತನಾಡೋಣವೇ ? ಅಂದಹಾಗೇ ಈ ಲೇಖನದಲ್ಲಿ ಬಳಸಲಾದ ಇಂಗ್ಲೀಷ್ ಶಬ್ದಗಳು ನಮ್ಮ ’ಕನ್ನಡೀ’ಕರಣದವರ ಪ್ರಭಾವದಿಂದ ಹುಟ್ಟಿದ್ದಿರುತ್ತದೆ. [ ’ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಕೇವಲ ಕಾಲ್ಪನಿಕ’ ಎಂಬ ಬೋರ್ಡು ಓದುತ್ತೀರಲ್ಲಾ, ಅದೇ ಸ್ಟೈಲಿನಲ್ಲಿ ಓದಿಕೊಳ್ಳಿ]

Sunday, October 24, 2010

’ಅನಾತ್ಮಾ’ವಲೋಕನ


’ಅನಾತ್ಮಾ’ವಲೋಕನ

ಮೊನ್ನೆ ಆತ್ಮದ ಬಗ್ಗೆ ಹೇಳಿದೆ. ಇಂದು ಅನಾತ್ಮದ ಬಗ್ಗೆ ಹೇಳುತ್ತಿದ್ದೇನೆ. ಅನಾತ್ಮ ಎಂಬ ಶಬ್ಧಕ್ಕೆ ಇಲ್ಲಿ ಅರ್ಥವನ್ನು ಹೇಳಿರುವುದು ಇದು ಕೇವಲ ಒಬ್ಬರ ಆತ್ಮಕಥೆಯಲ್ಲ ಬದಲಾಗಿ ಹಲವು ಸಾಮಾಜಿಕ ಕಥೆಗಳಂತೇ ಒಬ್ಬ ವ್ಯಕ್ತಿಯ ಅನುಭವಕ್ಕೆ ಬಂದ ಘಟನೆಗಳು ಕಥೆಗಳಾಗಿ ರೂಪುಗೊಂಡಿರುವುದು. ಒಂದರ್ಥದಲ್ಲಿ ಕಾವ್ಯ-ಸಾಹಿತ್ಯರಂಗದ ನನ್ನ ಗುರುಗಳನೇಕರ ಸಾಲಿನಲ್ಲಿ ಕುಳಿತಿರುವ ಡಾ| ಶ್ರೀ ಎಚ್.ಎಸ್. ವೆಂಕಟೇಶಮೂರ್ತಿಗಳ ಕೃತಿ ’ಅನಾತ್ಮಕಥನ’. ಹೆಸರೂ ಸುಂದರವಾಗಿರುವಂತೇ ವಸ್ತುವಿಷಯಗಳ ಹರವೂ ಸುಂದರ, ಅವು ಮನವನ್ನು ಕೆದಕಿ ಕೆರಳಿಸುತ್ತ, ಬಸ್ಸಿನ ಭರ್ತಿಯಾಗಿರುವ ಸೀಟೊಂದರಲ್ಲಿ ಜಾಗಮಾಡಿ ಕುಳಿತುಕೊಂಡ ಹಾಗೇ ಮನದಲ್ಲೇ ಆಸೀನವಾಗಿಬಿಡುವ ಭಾವಬಂಧುರ.

ಬಿಪಿ ವಾಡಿಯಾ ಸಂಭಾಂಗಣದಲ್ಲಿ ಇಂದು ಎರಡನೇಬಾರಿ ಬಿಡುಗಡೆಗೊಂಡ ಕೃತಿ ಇದು. ನಾಲ್ಕುವಾರಗಳ ಹಿಂದೆ ಅಮೇರಿಕಾದಲ್ಲಿ ದಿ| ಶ್ರೀ ಪು.ತಿ.ನ ಅವರ ಮಗಳಮನೆಯಲ್ಲಿ ಒಮ್ಮೆ ಬಿಡುಗಡೆಗೊಂಡ ಕೃತಿ ಕನ್ನಡ ಜನತೆಯ ಸಂಭ್ರಮಕ್ಕೆನ್ನುವಂತೇ ಇಂದು ಇನ್ನೊಮ್ಮೆ ಇಲ್ಲಿ ಸಾಂಪ್ರದಾಯಿಕ ಲೋಕಾರ್ಪಣ ಸಂಸ್ಕಾರವನ್ನು ಕಂಡಿತು. ಅತಿರಥ ಮಹಾರಥರೇ ಮಂಡಿಸಿದ್ದ ಸಭೆಯಲ್ಲಿ ವೇದಿಕೆಯ ಮೇಲೂ ಕೆಳಗೂ ಎಲ್ಲೆಲ್ಲೂ ಗಣ್ಯರದೇ ಸಾಲು ಕಾಣುತ್ತಿತ್ತು. ವೇದಿಕೆಯಲ್ಲಿ ಶ್ರೀ ರವಿಬೆಳಗೆರೆ, ಶ್ರೀ ಬಿ.ಆರ್.ಲಕ್ಷ್ಮಣರಾವ್, ಶ್ರೀ ಗಿರೀಶ್ ರಾವ್ [ಜೋಗಿ] , ಶ್ರೀ ವಸುಧೇಂದ್ರ ಆಚೀಚೆ ಕುಳಿತಿದ್ದರೆ, ಮಧ್ಯೆ ಶ್ರೀ ವೆಂಕಟೇಶಮೂರ್ತಿಗಳು ಕುಳಿತಿದ್ದರು. ಶ್ರೋತೃಗಳಲ್ಲಿ ಶ್ರೀ ಎಚ್.ಜಿ.ಸೋಮಶೇಖರ ರಾವ್, ಶ್ರೀ ಟಿ.ಎನ್.ಸೀತಾರಮ್, ಶ್ರೀ ನಡಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದ ಹಲವು ಗಣ್ಯರು ಆಸೀನರಾಗಿದ್ದರು. ಅನೇಕ ಬ್ಲಾಗಿಗ ಮಿತ್ರರು ಬಂದಿದ್ದರು ಎಂಬುದು ಬಹಳ ಸಂತೋಷ. ಕಾರ್ಯಕ್ರಮದ ಬಗ್ಗೆ ಹೊಸದಾಗಿ ಬರೆಯುವ ಅವಶ್ಯಕತೆಯಿದೆಯೇ ? ನೀವೇ ಊಹಿಸಿಕೊಳ್ಳಿ ! ಕನ್ನಡ ಸಾರಸ್ವತ ಲೋಕಕ್ಕೆ ಆತ್ಮಕಥನದ ಪರಿಚಯವಿದೆ, ಅದರಲ್ಲಿ ಹಲವು ರೀತಿಯ ಆತ್ಮಕಥೆಗಳೂ ಬಂದಿವೆ. ವಿಭಿನ್ನವಾದ ಶೈಲಿಯಲ್ಲಿ ಅತೀ ಮುದ್ದಾಗಿ ಮತ್ತು ಪುಟ್ಟಪುಸ್ತಕವಾಗಿ ಓದಲು ಬಹಳ ಇಷ್ಟವಾಗುವ ಕೃತಿ ’ಅನಾತ್ಮಕಥನ’. ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದ ಶ್ರೀ ಮೋಹನ್ ಅವರಿಗೂ ಹಾಗೂ ಎಚ್ಚರಿಸಿ ಕರೆದೊಯ್ದ ಮಿತ್ರ ಶ್ರೀ ಪರಾಂಜಪೆಯವರಿಗೂ ಒಮ್ಮೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನನ್ನ ನೆಚ್ಚಿನ ಶ್ರೀ ಎಚ್.ಎಸ್.ವಿಯವರು ಸ್ವತಃ ಆಗಮಿಸುತ್ತಿದ್ದಂತೇ [ಅಲ್ಲಿಗೆ ತಂದಿಟ್ಟಿರುವ] ಕಾಫೀ ಕುಡಿಯಲು ಆಹ್ವಾನಿಸಿದರು, ಸರಳ,ನಿಗರ್ವೀ ಜೀವನಕ್ಕೆ ಬೇರೆ ಉದಾಹರಣೆ ಬೇಕೆ? ಸಾರಸ್ವತಲೋಕದಲ್ಲಿರುವ ವ್ಯಕ್ತಿ ತನ್ನ ಕೃತಿಗಳ ಬಗ್ಗೆಯೇ ಕೇಂದ್ರೀಕೃತವಾಗದೇ ಬಾಹ್ಯಪ್ರಪಂಚದ, ನಿತ್ಯಜೀವನದ ಬಗ್ಗೆ ಸಹಜವಾಗಿ ಮಾತನಾಡಲು ಹೊರಟಾಗ ಮಾತ್ರ ಎಲ್ಲರಿಗೂ ಅದು ಇಷ್ಟವಾಗುತ್ತದೆ ಎಂಬ ಅವರ ಅನಿಸಿಕೆ ನಿಜಕ್ಕೂ ಸತ್ಯವಷ್ಟೇ ?

ಎಚ್.ಎಸ್.ವಿಯವರ ಜೀವನದಲ್ಲಿ ಆಗಾಗ ಬಂದುಹೋದ ಹಲವಾರು ಪಾತ್ರಗಳು ಕಥೆಗಳಮೂಲಕ ನಮ್ಮ ಬದುಕಿಗೂ ಲಗ್ಗೆಇಟ್ಟುಬಿಡುವುದು ಅವರ ವಿಶಿಷ್ಟ, ಸರಳ ಹಾಗೂ ಅದ್ಬುತ ಶೈಲಿಯ ಮೂಲಕ. ಅನೇಕ ಕವಿ-ಸಾಹಿತಿಗಳನ್ನೂ ಹಾಗೂ ಅವರ ಬದುಕು-ಬರೆಹಗಳನ್ನೂ ಸೇರಿಸಿದಂತೆ ಅವರೇ ಬರೆದಿರುವ ಆತ್ಮಕಥೆಗಳನ್ನೂ ಕೇಳಿದ್ದೇವೆ; ಎಷ್ಟೋ ಇಷ್ಟವಾಗಿದೆ-ಕೆಲವನ್ನು ಓದುವುದೇ ಕಷ್ಟವಾಗಿದೆ. ಆದರೆ ಇಲ್ಲಿ ನಾವು ಅನಾತ್ಮಕಥನವನ್ನು ತೆರೆದರೆ ಆರಂಭದ ಪುಟದಿಂದ ಓದಲು ಶುರುಮಾಡಿದರೆ ಅದು ಅಂತ್ಯವಾಗುವವರೆಗೂ ಪ್ರತೀ ಕಥೆ ಅಥವಾ ಘಟನೆ ನಮ್ಮನ್ನು ಮುಂದೆ ಓದುವಂತೆ ಸೆಳೆಯುತ್ತಲೇ ಹೋಗುತ್ತದೆ ! ಏನಿಲ್ಲಾ ಎಂದರೆ ಎಲ್ಲವೂ ಇದೆ ಎನ್ನುವ ಸಾಂಬಾರ್ ಬಟ್ಟಲು ಅನಾತ್ಮಕಥನ. ನವರಸಗಳನ್ನೂ ಕುಟ್ಟಾಣಿಯಲ್ಲಿ ಹಾಕಿ ಯಾವುದೋ ಆಯುರ್ವೇದದ ಔಷಧವನ್ನು ಅರೆಯುವಂತೇ ಕುಟ್ಟಿ ಸಮ್ಮಿಶ್ರಗೊಳಿಸಿ ತಿನ್ನುವ ಗುಳಿಗೆಗಳನ್ನಾಗಿ ಕೊಟ್ಟಿದ್ದಾರೆ ಎಚ್.ಎಸ್.ವಿಯವರು. ಇದು ಗದ್ಯ ಅನ್ನುವುದಕ್ಕಿಂತ ಕಾವ್ಯಗಳಾಗಬೇಕಿದ್ದ ಅವರ ಕೆಲವು ಅನಿಸಿಕೆಗಳು-ಅನುಭವಗಳು ಗದ್ಯವಾಗಿ ಬರೆಯಲ್ಪಟಿವೆ. ಮನೆಜನ, ದೂರದ ಗೆಳೆಯರು, ಡಾ| ರಾಜಕುಮಾರ್, ಸಿ.ಅಶ್ವತ್ಥ್, ಮೈಸೂರು ಅನಂತಸ್ವಾಮಿ ಮುಂತಾದ ಹಲವರು ಬಂದುಹೋಗುವ ’ವೇದಿಕೆ’ ಅನಾತ್ಮಕಥನ.

ಇಲ್ಲಿ ಪ್ರಾಣಿಗಳಿಗೂ ಮಾನ್ಯತೆಯಿದೆ. ಸಾಕು ಪ್ರಾಣಿಗಳ ಬಗ್ಗೆ ನಾವು ಅಷ್ಟಾಗಿ ಆಲೋಚಿಸುವುದು ವಿರಳವಷ್ಟೇ? ಆದರೆ ಎಚ್.ಎಸ್.ವಿ ಘಟನೆಯೊಂದನ್ನು ಬರೆಯುತ್ತ ರೂಬಿ ಎಂಬ ನಾಯಿಯ ಬಗ್ಗೆ ಬರೆಯುತ್ತಾರೆ. ಕಥೆಗಳ ಬಗ್ಗೆ ನಾನು ಹೇಳುವುದಕ್ಕಿಂತ ಅದನ್ನು ನೇರವಾಗಿ ಓದಿದರೇ ಪರಿಣಾಮ ಸರಿಯಾಗಿರುತ್ತದೆ. ಕೇವಲ ೧-೨ ಘಂಟೆಗಳನ್ನು ಅಥವಾ ಒಂದು ಸಿನಿಮಾ ನೋಡಲೋ ಅಥವಾ ಹೊರಗಡೆ ಸುತ್ತಲೋ ಬಳಸುವ ಸಮಯದ ಭಾಗವನ್ನು ಒಂದುದಿನ ಮೀಸಲಾಗಿರಿಸಿದರೆ ಒಂದೇಒಂದುಸಲ ಆಕಳಿಸದೇ, ಕುಳಿತಲ್ಲೇ ತಲೆ ಓಲಾಡದೇ ಹಿಡಿದಿಟ್ಟು ಓದಿಸಿ ಖುಷಿಕೊಡುವ ಕೃತಿ ಇದು. ಜೀವನದಲ್ಲಿ ಬೇಸರಗೊಂಡ ವ್ಯಕ್ತಿಗೆ ತನ್ನೊಬ್ಬನ ಜೀವನದಲ್ಲಿ ಮಾತ್ರ ಈ ರೀತಿಯಾಯಿತೇ ಎಂಬ ಹಳವಂಡಗಳಿದ್ದರೆ ಅನಾತ್ಮಕಥನವನ್ನು ಓದುವುದರಿಂದ ಎಂತೆಂತಹ ಸನ್ನಿವೇಶಗಳನ್ನು ಎಚ್.ಎಸ್.ವಿ ಅನುಭವಿಸಿದ್ದಾರಪ್ಪ ಎಂಬುದು ಅರಿವಿಗೆ ಬರುತ್ತದೆ. ಈ ಘಟನೆಗಳಂತಹದೇ ಹಲವಾರು ಘಟನೆಗಳು ನಮ್ಮ-ನಿಮ್ಮ ಜೀವನದಲ್ಲೂ ಆಗಿಹೋಗಿರುವುದರಿಂದ, ಆಗುತ್ತಿರುವುದರಿಂದ, ಆಗಬಹುದಾದುರಿಂದ ಕಥೆಗಳು ನಮ್ಮದೇ ಕಥೆಗಳೇನೋ ಅಥವಾ ಘಟನೆಗಳ ಪ್ರತ್ಯಕ್ಷದರ್ಶಿಗಳು ನಾವೂ ಸಹ ಹೌದೇನೋ ಎಂಬ ಅನಿಸಿಕೆ ಮೂಡುತ್ತದೆ. ಆ ಕ್ಷಣದಲ್ಲಿ ಎಚ್.ಎಸ್.ವಿ ಬರಹಗಳು ನಮ್ಮ ದೇಹದ ಕಣಕಣವನ್ನೂ ವ್ಯಾಪಿಸಿ, ವಿಜ್ರಂಭಿಸಿ, ಮನಸ್ಸಲ್ಲಿ ಸಂತಸದ ಮೆರವಣಿಗೆ ಹೊರಡಿಸುವುದರಿಂದ ಯಾವುದೇ ಜಾತ್ರೆಗೆ ಹೋಗಿಬಂದದ್ದಕ್ಕಿಂತಲೂ ನೆಮ್ಮದಿ ಕೃತಿಯನ್ನೋದುವುದರಿಂದ ಸ್ವಾನುಭವಕ್ಕೆ ಸಿದ್ಧಿಸುತ್ತದೆ.
ದೇಶ ತಿರುಗು ಅಥವಾ ಕೋಶ ಓದು ಎಂಬ ಗಾದೆಗೆ ತಕ್ಕುದಾಗಿ ಯಾವುದೇ ಅನುಭವಗಳ ಕೋಶಕ್ಕೂ ಕಮ್ಮಿಯಿರದ ಕೃತಿ ಅನಾತ್ಮಕಥನ.

ಹೇಳಿಬಿಡುತ್ತೇನೆ ಕೇಳಿ: ನಾನು ಶ್ರೀ ಎಚ್.ಎಸ್.ವಿ ಯವರು ಅವರ ’ಪರಸ್ಪರ’ ಬ್ಲಾಗಿನಲ್ಲಿ ಹಾಕಿದ್ದ, ಅಡಿಗರ ಕುರಿತಾದ ಘಟನೆಯೊಂದನ್ನು ಓದಿದ್ದೆ, ಅಡಿಗರು-ಅವರಿಗೆ ಬೆಕ್ಕಿನಮೇಲಿರುವ ಪ್ರೀತಿ-ಅವರು ಮನೆಬದಲಾಯಿಸಿ ಹೋದಾಗ ಬೆಕ್ಕು ಆ ಮನೆಯನ್ನು ತೊರೆದು ಬರದೇ ಇದ್ದುದೇ ಮೊದಲಾಗಿ ಅಳೆ ಎಳೆಯ ಆಪ್ತವಿಚಾರಗಳು ಅದರಲ್ಲಿದ್ದವು. ಅದರ ನಂತರ ’ನಾಣೀಭಟ್ಟನ ಭೂತ’ ಎಂಬ ಅವರ ತಂದೆ ಹಾಗೂ ಅವರ ಕುರಿತಾದ ಕಥೆಯನ್ನೂ ಓದಿದೆ. ಹೀಗೇ ಓದುತ್ತಾ ಓದುತ್ತಾ ಶ್ರೀ ಜಿ.ಎನ್. ಮೋಹನ್ ಅವರು ಅವಧಿಯಲ್ಲಿ ಪ್ರಕಟಿಸಿರುವ, ಎಚ್.ಎಸ್.ವಿಯವರು ಬರೆದಿರುವ ಕೆಲವು ಕಥನಗಳನ್ನೂ ಓದಿದೆ. ಒಂದಕ್ಕಿಂತಾ ಒಂದು ರಸಗವಳ. ವಾರಗಳ ಕಾಲ ಮತ್ತೆ ಬೇರೇನೋ ಹಾಕುತ್ತಾರೇನೋ ಎಂದು ಕಾದಿದ್ದೆ, ಆದರೆ ಅಲ್ಲಿ ಹಾಕಲಿಲ್ಲ ಬದಲಾಗಿ ಅವುಗಳನ್ನೇ ಪೋಣಿಸಿ ಪುಸ್ತಕರೂಪದಲ್ಲಿ ಪ್ರಕಟಿಸುವ, ಪ್ರಕಾಶಿಸುವ ಇರಾದೆಯನ್ನು ಅವರು ಎಚ್.ಎಸ್.ವಿಯವರಲ್ಲಿ ಹೇಳಿದಾಗ ಎಚ್.ಎಸ್.ವಿಯವರು ಒಪ್ಪಿಕೊಂಡು ಅತ್ಮೀಯವಾಗಿ ಬರೆದ ಲೇಖನಗಳ ಕಟ್ಟು ಅನಾತ್ಮಕಥನ. ಈ ವಿಷಯದಲ್ಲಿ ಮೇಫ್ಲವರ್ ಮತ್ತು ಗುಲ್ ಮೋಹರ್ ಒತ್ತಟ್ಟಿಗೆ ಸೇರಿಸಿ ಈ ಕೃತಿ ಪ್ರಕಾಶಿಸಿದ ಮೋಹನ್ ಅವರಿಗೆ ನಾನು ಆಭಾರಿ.

ಹಳಬರೊಂದಿಗೂ ಎಳಬರೊಂದಿಗೂ ಹೊಂದಾಣಿಕೊಂಡು, ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ, ಆತ್ಮೀಯತೆಯಿಂದ ಕಾಣುವ ಸಹೃದಯೀ ಕವಿ-ಸಾಹಿತಿಯಾದ ಎಚ್.ಎಸ್.ವಿಗಳು ಮೊಸರು ಕಡೆದು ತೆಗೆದು ತಿನ್ನಲು ಕೊಟ್ಟ ನವನೀತ ಇದು; ಕಾಯಿ-ಬೆಲ್ಲ ತುಂಬಿ ಕರಿದು ಮಟ್ಟಸವಾಗಿ ಜೋಡಿಸಿಟ್ಟು ತಣಿಸಿ ಮೆಲ್ಲಲು ಕೊಟ್ಟ ಮೋದಕ ಇದು. ಸಾಹಿತ್ಯಾಸಕ್ತರು, ಸಜ್ಜನರು, ಕವಿಗಳು, ಬ್ಲಾಗಿಗರು ಅಲ್ಲದೇ ಯಾರೇ ಆಗಲಿ: ಕನ್ನಡ ಬಲ್ಲವರು ಕೊಂಡು ಓದಬಹುದಾದ, ಓದಬೇಕಾದ ಕೃತಿ ’ಅನಾತ್ಮಕಥನ’ .

Saturday, October 23, 2010

ಭಾವನೆಯ ಕೊಳದಲ್ಲಿ


ಭಾವನೆಯ ಕೊಳದಲ್ಲಿ

ಕಾಡ ಮಧ್ಯದಲಿರುವ ತಣ್ಣೀರ ತಿಳಿಗೊಳದಿ
ಹಾಡಿನಾ ಸೊಗಡು ಕಲ್ಲುದುರಿ ಅಲೆಯೇಳೆ !
ನೋಡುವಾ ಕೇಳುವಾ ಆಸೆಗಳ ಪುದುವೊಟ್ಟು
ಮಾಡಿ ಮನೋರಥದಿ ಮೆರೆಸುವಾ ವೇಳೆ

ಒಡನಾಡಿಗಳ ಮರೆತು ನೀರವದಿ ಅರೆಘಳಿಗೆ
ಗಡಿದಾಟಿ ಜನರ ಜಂಜಡಗಳನು ಕಳೆದು
ಅಡಿಗಡಿಗೆ ಗುಡಿಯು ಮಂದಿರ ಮಸೀದಿಗಳೆಂಬ
ಬಡಬಡಿಕೆಯಿರದಂಥ ಭಾವವದು ಬೆಳೆದು

ಭಾವಗಳು ನೂರ್ಮಡಿಸಿ ಮಗುಚಿರಲು ಮನದೊಳಗೆ
ಜೀವಕಳೆ ಚೇತನವ ಪಡೆದು ಪುಟಿಯುತಲಿ
ದೇವಸೃಷ್ಟಿಯ ಲೋಕ ಸೆಳೆಯುತ್ತ ತನ್ನೆಡೆಗೆ
ಯಾವಲೆಕ್ಕಕು ಸಿಗದ ಹರುಷವನು ನೀಡುತಲಿ

ಯಾವುದೋ ರಾಜನೊಂದಾನೊಂದು ಕಾಲದಲಿ
ಕಾವೇರಿ ಬೇಟೆಯನು ಬೆನ್ನಟ್ಟಿ ಬಂದು
ದಾವಾರಿಸಿಕೊಳಲು ಇಳಿದೊಮ್ಮೆ ನೀರ್ಕುಡಿದು
ಸಾವಿರದ ಬದುಕ ನೆನೆಯುತ್ತೊಮ್ಮೆ ನಿಂದು

ಆನೆ ಹುಲಿ ಸಿಂಹ ಮಿಕ ಮುಂತಾದ ಮೃಗಗಳವು
ಜೇನು ತಿಂದಾ ಕರಡಿಯೂ ಜತೆಗೆ ಸೇರಿ
ಬಾನಾಡಿಗಳು ಹಾರಿ ಬಸವಳಿದು ಕೆಳಗಿಳಿದು
ಗಾನಮಾಡುತ ಅಮೃತಬಿಂದುವನು ಹೀರಿ

ಕೆಂದಾವರೆಗಳವು ಅರಳಿ ದೂರದಲಿ ಒಂದೆಡೆಗೆ
ಅಂದವನು ಬಿಚ್ಚಿಡುತ ಸೂರ್ಯನರಸಿರಲು
ಬಂದವರ ಮನಸೂರೆಗೊಳ್ಳುತ್ತ ಕೊಳವಲ್ಲಿ
ಸಂದಕಾಲದ ಪರಿವೆಯಿಲ್ಲದಂತಿರಲು

Friday, October 22, 2010

ಚಿದಾನಂದ-ರೂಪಂ ಶಿವೋಹಂ ಶಿವೋಹಂ


ಚಿದಾನಂದ-ರೂಪಂ ಶಿವೋಹಂ ಶಿವೋಹಂ

ಅಹಂ ನಿರ್ವಿಕಲ್ಪೋ ನಿರಾಕಾರ-ರೂಪೋ
ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ |
ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧಃ
ಚಿದಾನಂದ-ರೂಪಃ ಶಿವೋಹಂ ಶಿವೋಹಂ ||

ಆತ್ಮ ಷಟ್ಕಮ್ ಎಂಬ ಷಟ್ಕದ ೬ ನೇ ಶ್ಲೋಕದ ಮೂಲಕ ಸಾಧಕರ ಬಗ್ಗೆ ಒಂದೆರಡು ಮಾತು ಬರೆಯುವುದು ಹಿತವೆನಿಸುತ್ತದೆ. ಆತ್ಮದ ಮೂಲರೂಪಕ್ಕೆ ಯಾವುದೇ ಹಕ್ಕು-ಬಾಧ್ಯತೆಗಳು ಎಡತಾಕುವುದಿಲ್ಲಾ ಎಂಬುದನ್ನು ಆತ್ಮ ಷಟ್ಕ ವಿವರಿಸುತ್ತದೆ. ಅಸಲಿಗೆ ಆಕಾರವೇ ಇರದ, ನಿರ್ವಿಕಲ್ಪ ಸ್ವರೂಪವಾದ ಆತ್ಮ ದೇಹವೆಂಬ ಪಂಜರದಲ್ಲಿ ಬಂದು ಕುಳಿತುಕೊಳ್ಳುತ್ತದೆಯೇ ವಿನಃ ಅದಕ್ಕೆ ಯಾವುದೇ ಬಂಧನಗಳಿಲ್ಲ. ಅದರಲ್ಲಂತೂ ಮಹಾತ್ಮರು ಮಾನವ ದೇಹದಿಂದ ಜನಿಸುವುದು ಭುವಿಯ ಜನರ ಭಾಗ್ಯ.

ಯಾವುದೇ ನಾಸ್ತಿಕನೂ ಜೀವನದ ಅಂತ್ಯಭಾಗದಲ್ಲಿ ಒಮ್ಮೆ ತಾನು ನಾಸ್ತಿಕನಾಗಿ ಕೆಟ್ಟೆ ಎಂಬ ಭಾವನೆಗೆ ಒಳಗಾದರೆ ಅದರಲ್ಲಿ ಆಶ್ಚರ್ಯವಿಲ್ಲ. ಹಾಗೆ ಬೀಳುವವರೆಗೂ ಅಂತಹ ನಾಸ್ತಿಕರೆಲ್ಲ ಜಪಿಸುವ ಘೋಷವಾಕ್ಯ ’ ದೇವರು ಅಥವಾ ನಮಗಿಂತ ಹಿರಿದಾದ ಶಕ್ತಿಯೇ ಇಲ್ಲ. ಆಕಾಶ್,ಭೂಮಿ,ವಾಯು,ಅಗ್ನಿ, ನೀರು ಎಲ್ಲವೂ ನಿಸರ್ಗ, ಮನುಷ್ಯ ಕೇವಲ ತನ್ನ ಪ್ರಯತ್ನದಿಂದಲೇ ಎಲ್ಲವನ್ನೂ ಸಾಧಿಸಬಹುದು’ ಎಂಬುದು. ಅಡಿಗೆ ಬಿದ್ದರೂ ಮೂಗು ಮಣ್ಣಾಗಲಿಲ್ಲ--ಎಂಬೊಂದು ಗಾದೆಯಂತೇ ಆಸ್ತಿಕರು ಕೇಳುವ ಪ್ರಶ್ನೆಗಳಿಗೆ ಅವರು ಹಾರಿಕೆಯ ಉತ್ತರ ಕೊಡುತ್ತಾರೆ.

ನಮ್ಮೀ ಭೌತಿಕ ಜಗತ್ತಿನಲ್ಲಿ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ ಎಂಬ ಕೋಶಗಳಿವೆ ಎಂಬುದಾಗಿ ವೇದ ಸಾರುತ್ತದೆ. ಜನಸಾಮಾನ್ಯರಾದ ನಮಗೆಲ್ಲಾ ಮೊದಲಿನ ಮೂರು ಗೋಚರವಾದರೆ ವಿಜ್ಞಾನದ ನಿತ್ಯಾನುಸಂಧಾನದಿಂದ ವಿಜ್ಞಾನಮಯ ಕೋಶಗಳ ಕೆಲವು ಸ್ತರಗಳನ್ನು ಆಗಾಗ ಅಲ್ಲಲ್ಲಿ ಕೆಲವು ವಿಜ್ಞಾನಿಗಳು ಕಾಣುತ್ತಾರೆ. ಹಾಗೆ ಕಾಣುವಾಗ, ಅವರು ಯಶಸ್ಸು ಪಡೆಯುವಾಗ ಆ ದಿಸೆಯಲ್ಲಿ ಪ್ರಯೋಗಾಲಯಗಳಲ್ಲಿ ಅವರು ಬಹುಕಾಲ ಅದಕ್ಕೆ ಸಂಬಂಧಿಸಿದ ತಪಸ್ಸಿನಲ್ಲಿ ನಿರತರಾಗಿರುತ್ತಾರೆ. ತಪಸ್ಸೆಂದರೆ ಕೇವಲ ಬಾಹ್ಯ ದೇಹವನ್ನು ಒಂದು ಕಡೆ ಆಸನದಮೇಲೆ ಕೂರಿಸಿ, ಮೂಗು ಹಿಡಿದೋ ಅಥವಾ ಕಣ್ಣುಮುಚ್ಚೋ ಏನನ್ನೋ ಗುನುಗುನಿಸುವುದಲ್ಲ, ಬದಲಿಗೆ ಇಟ್ ಈಸ್ ಆನ್ ಅಲೈನ್ ಮೆಂಟ್ ಪ್ರೊಸಿಜರ್ ಟು ಪ್ಲೇಸ್ ಅವರ್ ಸೌಲ್ ಇನ್ಲೈನ್ ವಿಥ್ ದಿ ಸುಪ್ರೀಮ್ ಸೌಲ್ ! ಹೇಗೆ ಕೃತಕ ಉಪಗ್ರಹವನ್ನು ಕಕ್ಷೆಗೆ ಸೇರಿಸುವುದನ್ನು ತಿಳಿಯುತ್ತೇವೋ ಹಾಗೇ ಇಲ್ಲಿನ ಅಥವಾ ಇಹದ ಬಂಧನಗಳನ್ನು, ಹಕ್ಕು-ಬಾಧ್ಯತೆಗಳನ್ನು ಯಾ ಭವದ ಭೌತಿಕ ಅಸ್ಥಿತ್ವವನ್ನೇ ಮರೆಯುವ ಆ ಆನಂದಮಯ ಕಕ್ಷೆಗೆ ಸೇರಲು ಪ್ರಯತ್ನಿಸುವುದು.

ಅಯ್ಯಪ್ಪ ಭಕ್ತರು ವೃತನಿಷ್ಟರಾದಾಗ ಮಾತ್ರ ಆ ಕಾಲದಲ್ಲಿ ಬಾಹ್ಯವಾಗಿ ಅದೂ ಇದೂ ಆಚರಣೆಯಲ್ಲಿ ನಿರತರಾಗಿರುತ್ತಾರೆ, ಆಮೇಲೆ ಅದನ್ನೆಲ್ಲಾ ಮರೆತು ಮತ್ತೆ ಕರ್ಕ ಮಕರಸಂಕ್ರಮಣ ಬರುವವರೆಗೆ ಬೇಕಾದಹಾಗೆಲ್ಲಾ ಇದ್ದುಬಿಡುತ್ತಾರಲ್ಲಾ--ಇದು ಸರಿಯಲ್ಲ. ಅಲ್ಲಿ ೧೮ ಮೆಟ್ಟಿಲುಗಳನ್ನು ಏರಲು ಹದಿನೆಂಟು ಸಾಧನೆಗಳನ್ನು ಮಾಡಬೇಕೆಂಬ ನಿಯಮವಿದೆ. ಬಹುತೇಕರು ಆ ಸಾಧನೆಯನ್ನು ಸಾಧಿಸುವುದಿಲ್ಲ! ಆದರೂ ದೇವರನ್ನು ಆ ಮೆಟ್ಟಿಲುಗಳನ್ನು ಏರಿಯೇ ದರ್ಶನಮಾಡುತ್ತಾರೆ. ಕಾಸಿದ್ದರೆ ಕರೆದೊಯ್ದು ನೇರವಾಗಿ ತಿರುಪತಿಯ ತಿಮ್ಮಪ್ಪನ ದರುಶನ ಮಾಡಿಸುವ ಏಜೆಂಟರಿದ್ದಾರೆ. ಆದರೆ ಈ ಯಾವುದೇ ಕ್ರಿಯೆ ದೇವರ ಹತ್ತಿರಕ್ಕೆ ನಮ್ಮನ್ನು ಕರೆದೊಯ್ಯಲು ಸಾಧ್ಯವಿಲ್ಲ. ದೇವರ ದರುಶನಕ್ಕೆ ಆಯಾಯ ಕ್ಷೇತ್ರಗಳಲ್ಲಿ ನಿಬಂಧಿಸಿರುವ ನಿಯಮಗಳನ್ನು ಉಲ್ಲಂಘಿಸದೇ ಪ್ರಯಾಸಪೂರ್ವಕವಾಗಿ ಮಾಡಿದ ದರ್ಶನವೇ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಲ್ಲಾಂದರೆ ದುಡ್ಡು ಕೊಟ್ಟು ಕೊಳ್ಳುವ ಬೇಕರಿಯ ತಿನಿಸಿಗೂ ಪರಮಾತ್ಮನಿಗೂ ಏನೂ ವ್ಯತ್ಯಾಸ ಕಾಣಿಸುವುದಿಲ್ಲ. ಭಗವಂತ ಅಷ್ಟು ಸುಲಭಸಾಧ್ಯನಲ್ಲ ! ಅದರೆ ಸುಲಭ ಸಾಧ್ಯನೂ ಹೌದು. ಅದು ಅಂತಹ ಸಾಧಕ ಮನಸ್ಕರಿಗೆ ಮಾತ್ರ. ನಮ್ಮ ಮನಸ್ಸನ್ನು ತಹಬಂದಿಗೆ ತಂದು, ನಮ್ಮ ಕೈಯ್ಯಲ್ಲಿ ಮನಸ್ಸನ್ನು ಯಾವುದೋ ವಸ್ತುವನ್ನು ಹಿಡಿದಂತೇ ಗಟ್ಟಿಯಾಗಿ ಹಿಡಿದು, ಏಕಾಗ್ರತೆ ಸಾಧಿಸಿದರೆ ಆಗ ನಾವು ಮಾಡುವ ಧ್ಯಾನ ಅಥವಾ ನಿರಾಕಾರ ಧ್ಯಾನ, ನಿರ್ವಿಷಯ ಧ್ಯಾನ ನಮ್ಮನ್ನು ನಿರ್ವಿಕಲ್ಪದೆಡೆಗೆ ಕರೆದೊಯ್ಯಲು ಪ್ರಾರಂಭಿಸುತ್ತದೆ.

ಇದನ್ನೆಲ್ಲಾ ನಾನು ಬರೆದೆನೆಂದ ಮಾತ್ರಕ್ಕೆ ಎಲ್ಲರೂ ಓದುವುದಿಲ್ಲ. ಬಹಳಜನ ಓದಿದರೂ ಓದುವಾಗ ಆಕಳಿಕೆಯೊಂದಿಗೇ ಓದುತ್ತಾರೆ. ಕೇವಲ ಕೆಲವು ಜನ ಇದರಲ್ಲೇನಿದೆ ಎಂದು ಅರಿಯಬಯಸುತ್ತಾರೆ. ಪರಮಾತ್ಮನಲ್ಲಿನ ಆಸಕ್ತಿ ಕೂಡ ಹಾಗೇ. ಕಾಣುವ ತೀಟೆಯುಳ್ಳ ನಮ್ಮ ಕಣ್ಣಿಗೆ ಚೆನ್ನಾಗಿ ಕಾಣಲೆಂದು ಹಲವು ರೂಪಗಳಲ್ಲಿ ಭಗವಂತನನ್ನು ತೋರಿಸಿದರು, ಕೇಳುವ ಕಿವಿಯ ಆಹ್ಲಾದಕತೆಗೆ ಬೇಕಾಗಿ ಭಗವಂತನ ಕುರಿತಾದ ಸ್ತುತಿ, ಸಂಗೀತಗಳನ್ನು ರಚಿಸಿದರು, ಸ್ಪರ್ಶಸುಖಕ್ಕೆ ಹಾತೊರೆವ ಚರ್ಮಕ್ಕೆ ಸೋಕಲೆಂದು ವಿಗ್ರಹ ಮುಟ್ಟಿ ದರುಶನಮಾಡಲು ಕೆಲವು ಕಡೆ ಅನುವುಮಾಡಿಕೊಟ್ಟರು, ಜಿಹ್ವಾಚಾಪಲ್ಯಕ್ಕೆ ಇರಲೆಂದು ಭವಂತನಿಗೆ ನಿವೇದಿಸಿದ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲುಕೊಟ್ಟರು, ಆಘ್ರಾಣಿಸುವ ಮೂಗಿಗೆ ಅನುಕೂಲವಾಗಲೆಂದು ಧೂಪ-ದೀಪ-ಅಗರು ಕಸ್ತೂರಿ-ಚಂದನಗಳನ್ನು ಬಳಸಿದರು. ಆದರೆ ಇವು ಮತ್ತೆ ನಮ್ಮ ಇಂದ್ರಿಯಪರಿಧಿಗಷ್ಟೇ ಮೀಸಲು ! ಈ ಪರಿಧಿಯನ್ನು ಬಿಟ್ಟು ಹೊರಪರಿಧಿಗೆ ಹೊರಟಾಗ ಮಾತ್ರ ನಮಗೆ ಆಂತರ್ಯದ ಪ್ರಪಂಚ ಅರಿವಿಗೆ ಬರುತ್ತದೆ. ಆ ಪ್ರಪಂಚದ ಅರಿವಾದ ಜನರಿಗೆ ಈ ಪ್ರಪಂಚ ಬಹುಗೌಣವಾಗುತ್ತದೆ. ಆದರೂ ಕೆಲವೊಮ್ಮೆ ಸಾಧಕರು ಭಕ್ತರಿಗೆ/ಶಿಷ್ಯರಿಗೆ ಬೇಕಾಗಿ ಅಲಂಕರಿತ ಪಲ್ಲಕ್ಕಿಯಲ್ಲಿ ಕೂರುವುದೋ, ಪೀಠದಲ್ಲಿ ಕುಳಿತು ದರ್ಬಾರ್ ನಡೆಸುವುದೋ ಇಂತಹದ್ದನ್ನೆಲ್ಲಾ ಮಾಡಲೂಬಹುದು.

ಜಿಲ್ಲಾಮಟ್ಟದ ವ್ಯಾವಹಾರಿಕನಿಗೆ ತಾಲೂಕು ಚಿಕ್ಕದು, ರಾಜ್ಯಮಟ್ಟದವನಿಗೆ ಜಿಲ್ಲಾಮಟ್ಟ ಚಿಕ್ಕದು, ದೇಶಮಟ್ಟದವನಿಗೆ ರಾಜ್ಯಮಟ್ಟ ಚಿಕ್ಕದು, ಅಂತರ್ರಾಷ್ಟ್ರೀಯ ವ್ಯವಹಾರಸ್ಥನಿಗೆ ದೇಶಕೂಡ ಚಿಕ್ಕದು--ಹೀಗೇ ಅಂತರ್ರಾಷ್ಟ್ರೀಯ ಮಟ್ಟದ ವ್ಯವಹಾರಸ್ಥ ಆಗಾಗ ಆಗಾಗ ವಿದೇಶಗಳಿಗೆ ವಿಮಾನವೇರಿ ಹೋಗಿ ಬಂದಂತೇ ಆಂತರ್ಯದ ಪ್ರಪಂಚವನ್ನು ಅರಿತವರಿಗೆ ಈ ಪ್ರಪಂಚ ಚಿಕ್ಕದಾಗಿ ಕಾಣಿಸುತ್ತದೆ, ನಶ್ವರವಾಗಿ ಕಾಣಿಸುತ್ತದೆ! ಅವರು ಆಗಾಗ ಆಗಾಗ ಅಥವಾ ದಿನವೂ ಒಂದೆರಡಾವರ್ತಿ ಧ್ಯಾನಸ್ಥರಾಗಿ ಆ ಪ್ರಪಂಚಕ್ಕೆ ಹೋಗಿಬರುತ್ತಾರೆ. ಇಲ್ಲಿ ಅವರೇರುವ ವಿಮಾನವೇ ತಹಬಂದಿಗೆ ತಂದ ಮನಸ್ಸು. ಹೇಗೆ ವಿಮಾನ ಅಪಘಾತವಾದರೆ ಕಷ್ಟವೋ ಹಾಗೇ ಮನಸ್ಸೆಂಬ ಪೈಲಟ್ ರಹಿತ ವಿಮಾನ ನಮ್ಮನ್ನು ಎಲ್ಲೆಲ್ಲೋ ಹೈಜಾಕ್ ಮಾಡಿಬಿಡುವ ಸಾಧ್ಯತೆಗಳಿರುತ್ತವೆ. ಮನಸ್ಸೆಂಬ ವಿಮಾನ ಬೇರಾವ ಅಪಘಾತಕ್ಕೆ ಈಡಾಗದಿದ್ದರೂ ಈ ಹೈಜಾಕ್ ಆಗುವ ಪ್ರಕ್ರಿಯೆಯೇ ಅಪಘಾತವೆಂದು ತಿಳಿದರೆ ತಪ್ಪಲ್ಲ. ಈ ಮನಸ್ಸೆಂಬ ವಿಮಾನದ ಪೈಲಟ್ ಆಗಲು ಒಂದು ಮಾರ್ಗ ಲಭ್ಯವಿದೆ. ಅದೇ ಅಷ್ಟಾಂಗ ಯೋಗ. ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ--ಈ ಮೆಟ್ಟಿಲುಗಳು ನಮ್ಮನ್ನು ಪರಾತತ್ವದೆಡೆಗೆ ಕರೆದೊಯ್ಯುತ್ತವೆ.

ತಿನ್ನಲಾರದ ದ್ರಾಕ್ಷಿ ಹುಳಿಯೆಂದ ನರಿಕಥೆಯನ್ನೂ, ಮೊಲಕ್ಕೆ ಮೂರೇ ಕಾಲೆಂದು ವಾದಿಸಿದ ವಿತಂಡವಾದಿಗಳ ತತ್ವವನ್ನೂ ನಾವು ಕೇಳಿದ್ದೇವೆ. ನಾಸ್ತಿಕರೂ ಕೂಡ ಇಲ್ಲೇ ಎಲ್ಲೋ ಅಕ್ಕ-ಪಕ್ಕ ನಿಲ್ಲುತ್ತಾರೆ. ಇದಕ್ಕೂ ಮುಂದೆ ಅವರು ಸಾಗುವುದಿಲ್ಲ. ಯಾಕೆಂದರೆ ಅವರಿಗೆ ಅದು ಸಾಧ್ಯವಿಲ್ಲ- ಸಾಧ್ಯವಿಲ್ಲದ್ದು " ಇಲ್ಲವೇ ಇಲ್ಲ "
ಎಂದುಬಿಟ್ಟರೆ ಅವರ ಅಹಂ ಗೆ ತೊಂದರೆಯಾಗುವುದಿಲ್ಲ. ಹೀಗಾಗಿ ದೇವರೂ ಸುಳ್ಳು, ಎಲ್ಲವೂ ಸುಳ್ಳು ಎಂಬುದೇ ಅವರು ಹೇಳುವ ಅಪ್ಪಟ ಸುಳ್ಳು ಎಂಬುದನ್ನು ಸಹೃದಯ ಓದುಗರಲ್ಲಿ ಭಿನ್ನವಿಸುತ್ತಿದ್ದೇನೆ.

ಈ ನಡುವೆ ಗೀತೆಯಲ್ಲಿ ಭಗವಂತ ಹೇಳುತ್ತಾನೆ - ಒಂದೊಮ್ಮೆ ಸಾಧಿಸಲು ಪ್ರಯತ್ನಿಸಿ ವಿಫಲನಾದರೆ ಆತನಿಗೆ ಮುಂದಿನ ಜನ್ಮದಲ್ಲಿ ಅದಕ್ಕೂ ಮುಂದಿನ ಹಂತವನ್ನೋ ಅಥವಾ ಆತ ಸಾಧಿಸಿದರೆ ಮೋಕ್ಷವನ್ನೋ ಕರುಣಿಸುತ್ತೇನೆ ಎಂದು. ಉದಾಹರಣೆಗೆ: ಉಡುಪಿಯ ವಿದ್ಯಾಭೂಷಣರು ಸಾಧನೆಯ ಹಾದಿಯಲ್ಲಿದ್ದರು. ಆದರೆ ಲೌಕಿಕದ ಆಕರ್ಷಣೆಯಿಂದ ಮನಸ್ಸು ವಿಚಲಿತವಾಯಿತು. ಆಂತರ್ಯದಲ್ಲೊಂದು ಬಾಹ್ಯದಲ್ಲೊಂದು ರೀತಿಯಲ್ಲಿ ಬದುಕಲು ಇಷ್ಟಪಡದೇ ನೇರವಾಗಿ ಸಮಾಜದಿಂದ, ಉಳಿದ ಪೀಠಾಧಿಪತಿಗಳಿಂದ ಆಗಬಹುದಾದ ಮಾನಸಿಕ ಆಘಾತಗಳನ್ನು ಗ್ರಹಿಸಿಯೂ ಆತ ಸನ್ಯಾಸಧರ್ಮ ತ್ಯಜಿಸಿ ಸಂಸಾರಿಯಾದರು. ಇದು ಒಂದರ್ಥದಲ್ಲಿ ಒಳ್ಳೆಯದೇ. ಈಗ ಅವರ ಸನ್ಯಾಸದಲ್ಲಿದ್ದಾಗ ನಡೆಸಿದ ಜಪ-ತಪದ ಆಧ್ಯಾತ್ಮಿಕ ಬ್ಯಾಂಕ್ ಬ್ಯಾಲೆನ್ಸ್ ಹಾಗೇ ಇರುತ್ತದೆ. ಮುಂದಿನ ಜನ್ಮದಲ್ಲಿ ಮತ್ತೆ ಸನ್ಯಾಸಿಯಾಗಿ ಹುಟ್ಟು ಇನ್ನೂ ಮೇಲ್ಪಂಕ್ತಿಗೋ ಮುಕ್ತಿಗೋ ಹೋಗಲು ದೇವರು ಅನುಕೂಲ ಕಲ್ಪಿಸುತ್ತಾನೆ. ವಿದ್ಯುದೀಪ ಉರಿಯುತ್ತಿರುವಾಗ ವಿದ್ಯುತ್ತು ಹೋದರೆ ಮರಳಿಬಂದಾಗಾ ಪುನಃ ಹೇಗೆ ಆ ದೀಪ ಉರಿಯುವುದೋ [ ನಾವು ಗುಂಡಿಯನ್ನು ಅದುಮಿ ಆರಿಸಿದ್ದರೆ ಆ ಪ್ರಶ್ನೆ ಬೇರೆ !] ಹಾಗೇ ಎಲ್ಲಿಗೇ ನಿಲ್ಲಿಸಿದ್ದರೋ ಅಲ್ಲಿಂದಲೇ ಹಿಡಿದೆತ್ತಿ ಮುಂದೆ ಅವಕಾಶ ಕಲ್ಪಿಸುತ್ತೇನೆ ಎಂಬುದು ಭಗವಂತನ ಹೇಳಿಕೆ.

ವಿಮಾನ ಚಾಲಕನಿಗೆ ವಾತಾವರಣದ ಪ್ರಕ್ಷುಬ್ಧತೆ ಪರಿಣಾಮ ಬೀರುವ ಹಾಗೇ ಮನೋವಿಮಾನ ಚಾಲಕನಿಗೆ ಬಾಹ್ಯಾಚರಣೆಗಳ ಪ್ರಕ್ಷುಬ್ಧತೆ ಆತನ ವೈಫಲ್ಯಕ್ಕೆ ಕಾರಣವಾಗಬಹುದು. ರಸ್ತೆಯಲ್ಲಿ ನಡೆಯುವ ಚಿಕ್ಕಮಕ್ಕಳನ್ನು ಬರಹೋಗುವ ವಾಹನಗಳಿಗೆ ಸಿಲುಕದಂತೆ ತಪ್ಪಿಸಲು ಕೈಹಿಡಿದು ಹೇಗೆ ನಡೆಸುತ್ತೇವೆಯೋ ಹಾಗೆಯೇ ನಮ್ಮ ಮನಸ್ಸನ್ನು ದುರ್ಗಮವಾದ ಹಾಗೂ ಕಡಿದಾದ ಈ ಶಿಖರದ ಹಾದಿಯಲ್ಲಿ ನಡೆಸುವುದು ಭಗವಂತ ನಮಗೇ ಕೊಟ್ಟ ಹೊಣೆಗಾರಿಕೆಯಾಗಿರುತ್ತದೆ. ಅದಕ್ಕೆಂದೇ ಸನ್ಯಾಸಿಗಳು ಬಾಹ್ಯಾಚರಣೆಯಲ್ಲಿ ಸಂಗೀತ ಪರಿಕರಗಳನ್ನು ನುಡಿಸುವುದು, ಹಾಡುವುದು, ನರ್ತಿಸುವುದೇ ಮುಂತಾದ ಐಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದೆಂಬ ನಿಯಮವಿದೆ. ಅದಲ್ಲದೇ ಸನ್ಯಾಸಿಗಳ ಮುಖ್ಯ ಕರ್ತವ್ಯಾ ತಪಸ್ಸನ್ನು ಆಚರಿಸುವುದು ಮತ್ತು ಸತ್ಯ-ನ್ಯಾಯ-ಧರ್ಮ ಮಾರ್ಗವನ್ನು ಶಿಷ್ಯರಿಗೆ ಬೋಧಿಸುವುದಾಗಿರುತ್ತದೆ. ಮಿಕ್ಕುಳಿದ ಎಂಜಿನೀಯರಿಂಗ್ ಕಾಲೇಜು ನಡೆಸುವುದು, ಆಸ್ಪತ್ರೆ ಕಟ್ಟುವುದು ಇವೆಲ್ಲಾ ರಾಜಕೀಯವನ್ನು ಹಿಡಿದು ಆಳುತ್ತಿರುವವರ ಜವಬ್ದಾರಿಯೇ ಹೊರತು ಯಾರೋ ಸ್ವಾಮಿಗಳು ತಮಗೆ ಏನನ್ನೂ ಮಾಡಲಿಲ್ಲಾ ಎಂಬುದು ಸರಿಯಲ್ಲ. ಬದಲಾಗಿ ಸಮಾಜ/ಶಿಷ್ಯರು ತಂತಮ್ಮ ಆತ್ಮೋನ್ನತಿಗೆ ಬೇಕಾಗಿ ಮಾರ್ಗದರ್ಶಿಸಲು ಬೇಕಾಗಿ ಅಂತಹ ಗುರುವನ್ನು ಗುರುತಿಸುವುದು,ಗೌರವಿಸುವುದು ಮಾಡಬೇಕಾದುದು ಶಿಷ್ಯರಾದವರ ಧರ್ಮ. ಸನ್ಯಾಸಿಗಳು ತಾನೇ ತಾನಾಗಿ ಸಮಾಜಕ್ಕೆ ವಿದ್ಯೆಯನ್ನೋ ಆರೋಗ್ಯವನ್ನೋ ಕೊಡಲು ಮುಂದಾಗಿ ಕೆಲವಾರು ಸಂಸ್ಥೆಗಳನ್ನು ನಡೆಸಿದರೆ ಅದು ಅವರ ಸ್ವ-ಇಚ್ಛೆ. ಹೀಗೆ ನಡೆಸುವಾಗ ಕಾರಣಾಂತರಗಳಿಂದ ಬಾಹ್ಯಾಚರಣೆಯ ಪ್ರಕ್ಷುಬ್ಧತೆ ತನ್ನನ್ನು ಕಾಡದಂತೆ ಅವರು ಎಚ್ಚರವಹಿಸಬೇಕಾಗುತ್ತದೆ, ಯಾಕೆಂದರೆ ಸನ್ಯಾಸಿಗಳಿಗೆ ಕರ್ಮಾಧಿಕಾರವಿಲ್ಲ, ಪ್ರತೀ ಕೆಲಸಕ್ಕೂ ಅವರು ಪರಾವಲಂಬಿಯಾಗಿ ಬದುಕಬೇಕಾಗುತ್ತದೆ, ಊಟಮಾಡುವಾಗ ಕೂಡ ಶಿಷ್ಯನೊಬ್ಬ ಉದ್ದರಣೆಯಿಂದ ಹಸ್ತೋದಕ ಹಾಕಿದರೇ ಊಟಮಾಡಬೇಕು ಇಲ್ಲಾಂದರೆ ಹಾಗೇ ಉಳಿಯಬೇಕು-- ಇದು ಸನ್ಯಾಸಾಶ್ರಮದ ಅನಿವಾರ್ಯತೆ !

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಥೋ ನ ವೇದಾ ನ ಯಜ್ಞಾಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ-ರೂಪ ಶಿವೋಹಂ ಶಿವೋಹಂ ||

ಎಂತಹ ಚಂದದ ವಾಖ್ಯಗಳು, ಎಷ್ಟು ಅರ್ಥಗರ್ಭಿತ ! ಆತ್ಮದ ಮೂಲರೂಪಕ್ಕೆ ಯಾವುದೇ ಪಾಪ-ಪುಣ್ಯ, ಸುಖ-ದುಃಖಗಳ ಗೊಡವೆಯಿಲ್ಲ, ಯಾವುದೇ ತೀರ್ಥ- ಮಂತ್ರ, ವೇದ-ಯಜ್ಞಗಳ ಅನುಷ್ಠಾನವಿಲ್ಲ, ಊಟವಿದ್ದರೂ ಇರದಿದ್ದರೂ ಒಂದೇ ಸ್ಥಿತಿ--ಅದೇ ಚಿದಾನಂದ ರೂಪ !

ನೀವೀಗ ಕೇಳುತ್ತೀರಿ ಅರೆರೆ ಆತ್ಮೋದ್ಧಾರಕ್ಕೆ ಏಕಾಗ್ರಚಿತ್ತದಿಂದ ಧ್ಯಾನಮಾಡಬೇಕೆಂದು ಹೇಳಿದ ನಾನೇ ಈಗ ಆತ್ಮಕ್ಕೆ ಯಾವುದೂ ಬಾಧಕವಲ್ಲ ಎಂಬುದನ್ನು ಪ್ರತಿಪಾದಿಸುತ್ತಿರುವುದು ವಿರೋಧಾಭಾಸವಾಗಿ ಕಾಣಬಹುದು. ಹೇಳುತ್ತೇನೆ ಕೇಳಿ: ಆತ್ಮದಲ್ಲಿ ಹಲವು ಜೋಡಣೆಗಳಿವೆ. ಅವು ಕೇವಲಾತ್ಮಕ್ಕೆ ಅಂಟಿಕೊಂಡಿರುತ್ತವೆ. ಹಾಗೆ ಅಂಟಿಕೊಂಡಿರುವ ನಂಟನ್ನು ಕಳೆಯಲೇ ನಾವು ಸಾಧನೆಯ ಮಾರ್ಗ ಹಿಡಿಯಬೇಕಾಗುತ್ತದೆ. ಒಂದು ಉದಾಹರಣೆ ಕೇಳಿ- ಶೇಂಗಾ ಅಥವ ನೆಲಗಡಲೆ ಮೂಲದಲ್ಲಿ ಒಂದೇ. ಆದರೆ ನಾವದನ್ನು ಹಲವು ರೀತಿಯಲ್ಲಿ ಕಾಣುತ್ತೇವೆ. ಆಗತಾನೇ ಕಿತ್ತ ಹಸಿಶೇಂಗಾ, ಸಿಪ್ಪೆಸಹಿತ ಒಣಗಿದ ಶೇಂಗಾ, ಸಿಪ್ಪೆರಹಿತ ಒಣಗಿದ ಶೇಂಗಾ, ಹುರಿದ ಶೇಂಗಾ, ಕರಿದ ಶೇಂಗಾ ......ಹೀಗೇ..., ಅದೇ ರೀತಿ ಆತ್ಮ ದೇಹದಲ್ಲಿ ಆಸೀನವಾದಾಗ ಅದಕ್ಕೆ ಸ್ಥಿತ್ಯಂತರದ ಪ್ರಭಾವವಿರುತ್ತದೆ. ದೇಹದೊಳಗಿನ ಆತ್ಮ ಬಾಣಲೆಯಲ್ಲಿರುವ ಶೇಂಗಾದಂತೇ ಆದಾಗ ಮಾತ್ರ ಅದು ಕೇವಲಾತ್ಮವಾಗುತ್ತದೆ. ಹೇಗೆ ಹುರಿದ/ಕರಿದ ಶೇಂಗಾ ಭುವಿಯಲ್ಲಿ ನೆಟ್ಟರೆ ಸಸಿಹುಟ್ಟಲಾರದೋ ಕೇವಲಾತ್ಮ ಸ್ಥಿತಿಗೆ ತಲ್ಪಿದ ಆತ್ಮ ಮತ್ತೆ ಮರುಹುಟ್ಟು ಪಡೆಯದೇ ಪರಮಾತ್ಮದಲ್ಲಿ ಅಥವಾ ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮೇಲಿನ ಶ್ಲೋಕ ಕೇವಲಾತ್ಮದ ಕುರಿತಾಗಿ ಹೇಳಿದ್ದಿರುತ್ತದೆ. ಕೇವಲಾತ್ಮಕ್ಕೂ ಪರಮಾತ್ಮಕ್ಕೂ ಭಿನ್ನತೆ ಇರುವುದಿಲ್ಲ. ಕೇವಲಾತ್ಮ ಅತ್ಯಂತ ಶಕ್ತಿಸಾಮರ್ಥ್ಯವುಳ್ಳದ್ದಾಗಿರುತ್ತದೆ.

ನ ಮೃತ್ಯುರ್ನಶಂಕಾ ನ ಮೇ ಜಾತಿಭೇದಃ
ಪಿತಾನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಹುಟ್ಟೂ-ಸಾವು , ಯಾವುದೇ ಶಂಕೆ, ಜಾತಿ ಭೇದ, ತಂದೆ-ತಾಯಿ, ಬಂಧು-ಮಿತ್ರ, ಗುರು-ಶಿಷ್ಯ ಇವ್ಯಾವ ಪರಿಧಿ-ಕಟ್ಟುಪಾಡುಗಳೂ ಕೇವಲಾತ್ಮಕ್ಕೆ ತಟ್ಟುವುದಿಲ್ಲ. ಅದಕ್ಕೆ ಅಪ್ಪನೂ ಇಲ್ಲ-ಅಮ್ಮನೂ ಇಲ್ಲ, ಬಂಧುವೂ ಇಲ್ಲ-ಮಿತ್ರರೂ ಇಲ್ಲ, ಜಾತಿಯೂ ಇಲ್ಲ-ಭೇದವೂ ಇಲ್ಲ,ಗುರುವೂ ಇಲ್ಲ-ಶಿಷ್ಯನೂ ಇಲ್ಲ. ಇದುವೇ ಆತ್ಮದ ಚಿದಾನಂದ ರೂಪ.

ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ
ಮದೋ ನೈವ ಮೇ ನೈವ ಮಾತ್ಸರ್ಯ ಭಾವಃ |
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಯಾವುದೇ ರಾಗದ್ವೇಷವಿಲ್ಲ, ಲೋಭ-ಮೋಹಗಳೂ ಇಲ್ಲ, ಸೊಕ್ಕೂ ಇಲ್ಲ, ಸಿಡುಕೂ ಇಲ್ಲ, ಹೊಟ್ಟೆಕಿಚ್ಚೂ ಇಲ್ಲ, ಯಾವುದೇ ಧರ್ಮವೂ ಇಲ್ಲ, ಧನವೂ ಇಲ್ಲ, ಕಾಮವಾಂಛೆಯೂ ಇಲ್ಲ, ಮೋಕ್ಷವೂ ಇಲ್ಲ....ಈ ಸ್ಥಿತಿಯೇ ಆತ್ಮದ ಚಿದಾನಂದ ಸ್ಥಿತಿ.

ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ನ ವಾ ಪಂಚಕೋಶಃ |
ನ ವಾಕ್ಪಾಣಿ-ಪಾದೌ ನ ಚೋಪಸ್ಥಪಾಯೂ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಪ್ರಾಣದ ಸಂಜ್ಞೆಯಿಲ್ಲ, ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ ಎಂಬ ಪಂಚ ವಾಯುಗಳ ಪರಿಷೇಚನೆಯಿಲ್ಲ, ಸಪ್ತಧಾತುಗಳಾಗಳೀ ಪಂಚಕೋಶಗಳಾಗಲೀ ಕಾರ್ಯಕಾರಣವಲ್ಲ, ಮಾತನಾಡುವುದಿಲ್ಲ, ಹಸ್ತ-ಪಾದಗಳೆಂಬ ಅವಯವಗಳೂ ಇಲ್ಲ--ಇದೇ ಚಿದಾನಂದ-ರೂಪ.

ಮನೋಬುದ್ಧ್ಯಹಂಕಾರ-ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ |
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ
ಚಿದಾನಂದ-ರೂಪಂ ಶಿವೋಹಂ ಶಿವೋಹಂ ||

ಬುದ್ಧಿ-ಮನಸ್ಸು-ಚಿತ್ತಗಳಿಲ್ಲ, ಕೇಳುವ ಕಿವಿಯಾಗಲೀ, ನೋಡುವ ಕಣ್ಣಾಗಲೀ, ಆಘ್ರಾಣಿಸುವ ನಾಸಿಕವಾಗಲೀ, ರುಚಿನೋಡುವ ನಾಲಿಗೆಯಾಗಲೀ ಇಲ್ಲ, ಭೂಮಿ-ಆಕಾಶ-ಅಗ್ನಿ-ವಾಯು-ವರುಣ[ಜಲ]ರೆಂಬ ಪಂಚಭೂತಗಳ ಪ್ರಲೋಭನೆಯಿಲ್ಲ--ಇದೇ ಚಿದಾನಂದರೂಪ--ಇದೇ ಸದಾನಂದ ರೂಪ.

ಇವತ್ತು ಯಾರೋ ವಿಜ್ಞಾನಿಯೊಬ್ಬ ಯಾವುದೋ ಪ್ರಯೋಗದಲ್ಲಿ ತೊಡಗಿದ್ದರೆ ನಾವು ಆತನನ್ನು ವಿಜ್ಞಾನಿಯೆಂದು ಗುರುತಿಸುತ್ತೇವೆ, ಗೌರವಿಸುತ್ತೇವೆ. ಅದೇ ಮನುಷ್ಯನಿಗೂ ಮಿಗಿಲಾದ ಅತಿಮಾನುಷ ಶಕ್ತಿಯನ್ನು ಆವರ್ಭವಿಸಿಕೊಳ್ಳಲು ಕಾತ್ರರಾಗಿರುವ, ಅದನ್ನು ತಲುಪಲು ಬಯಸುವ, ಆ ಶಕ್ತಿಯನ್ನು ತನ್ನಲ್ಲಿ ಭಾಗಶಃ ಹುದುಗಿಸಿಕೊಂಡು ತನ್ನ ಸುತ್ತಲಿನ ಶಿಷ್ಯವೃಂದಕ್ಕೆ ಸನ್ಮಾರ್ಗವನ್ನು ತೋರಿಸುವ, ಶಿಷ್ಯವೃಂದದ ಜನ್ಮಾಂತರದ ಕಷ್ಟಕಾರ್ಪಣ್ಯಗಳನ್ನು ನೀಗುವ ಯೋಗೀಂದ್ರನೊಬ್ಬ ನಮ್ಮ ನಡುವಿದ್ದರೆ ಅವರನ್ನು ಕಾಣದಾಗುತ್ತೇವೆ. ಆಧುನಿಕತೆಯ ಸೋಗಿನಲ್ಲಿ ತಾವು ಬುದ್ಧಿಜೀವಿಗಳೆಂದು ಬೋರ್ಡುಹಾಕಿಕೊಳ್ಳುವ ನಾವು ನಮಗಿಂತ ಉತ್ತಮ ಸ್ತರದಲ್ಲಿದ್ದ ಬುದ್ಧಿಜೀವಿಗಳು ಅನುಭವಿಸಿದ, ಅನುಭಾವಿಗಳಾಗಿ ನಮ್ಮೊಳಿತಿಗಾಗಿ ಹಂಚಿದ ಜ್ಞಾನವನ್ನು ಅರ್ಥಹೀನವೆಂದು ಪರಿಗಣಿಸುತ್ತೇವೆ. ವಿವೇಚಿಸದೇ ಕೈಲಾಗದವರು ಸನ್ಯಾಸಿಗಳೋ ಸಾಧುಗಳೋ ಆಗುತ್ತಾರೆಂದು ತಿಳಿಯುತ್ತೇವೆ. ನಮ್ಮತನವೇ ದೊಡ್ಡದೆಂದು ಹೆಮ್ಮೆಯಿಂದ ಸಂಭ್ರಮಿಸುತ್ತೇವೆ. ಅರಿಯದೇ ಉರಿಯುತ್ತೇವೆ-ಇದು ನಮ್ಮ ಅಜ್ಞಾನವೇ ಹೊರತು ನಿಜವಾದ ಸಾಧು-ಸಂತರು ಅಜ್ಞಾನಿಗಳಲ್ಲ. ಅವರು ಆಧ್ಯಾತ್ಮ ವಿಜ್ಞಾನಿಗಳು! ಅವರೂ ಸಂಶೋಧಕರೇ. ಅವರವರು ಅವರವರದೇ ಆದ ಶಿಸ್ತಿನಲ್ಲಿ, ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಮೋಕ್ಷವನ್ನು ಪಡೆಯಲು ಈಸಿ ಫಾರ್ಮುಲಾ ಸಂಶೋಧಿಸುತ್ತಾರೆ.

ಇಂತಹ ಸಂತ-ಮಹಂತರ ಸಾಲಿಗೆ ಶ್ರೀ ಶ್ರೀ ಕೇಶವಮೂರ್ತಿಗಳೆಂಬ ಸಾಧುಗಳೂ ಸೇರಿದ್ದರು. ಅವರ ಕುಟುಂಬದ ಹಿರಿಯರು ಈಗ ಯಾರೂ ಇರಲಾರರೇನೋ--ಯಾಕೆಂದರೆ ಮೊನ್ನೆ ಅವರು ಮುಕ್ತರಾದಾಗ ಅವರಿಗೆ ೯೮ ವರ್ಷ ವಯಸ್ಸಾಗಿತ್ತು. ತುಂಬಾ ಎಳವೆಯಲ್ಲೇ ತೆಂದೆ-ತಾಯಿಗಳನ್ನು ಕಳೆದುಕೊಂಡಿದ್ದರಿಂದಲೂ, ಊರನ್ನು ಬಿಟ್ಟು ಹಲವಾರೆಡೆಗೆ ಸಾಧುಜೀವನ ನಡೆಸಿದ್ದರಿಂದಲೂ ಅವರ ಕುಟುಂಬ-ಬಂಧುವರ್ಗದ ಎಳೆಯ ವ್ಯಕ್ತಿಗಳಿಗೆ ಅವರ ಪರಿಚಯವಿತ್ತೋ ಇಲ್ಲವೋ ತಿಳಿದಿಲ್ಲ. ಕೇಶವಮೂರ್ತಿಗಳನ್ನು ಈ ವಿಷಯದಲ್ಲಿ ಬಹಳವಾಗಿ ಯಾರೂ ಕೆದಕುತ್ತಿರಲಿಲ್ಲ. ಅವರೊಬ್ಬ ಸಾಂಕೇತಿ ಬ್ರಾಹ್ಮಣ ಕುಟುಂಬದ ಹಿನ್ನೆಲೆಯಿಂದ ಬಂದವರೆಂದು ಅವರೇ ಹೇಳಿದ್ದರಂತೆ. ಬಹಳ ಸಾದಾ ಸೀದಾ ಇದ್ದ ಅವರು ಆಜಾನುಬಾಹುವೇನೂ ಆಗಿರಲಿಲ್ಲ. ಸುಮಾರು ೫ ಅಡಿ-೩ ಅಂಗುಲ ಎತ್ತರವಿದ್ದರು. ಶಜವಾಗಿ ಕೃಶಶರೀರಿ. ಒಪ್ಪೊತ್ತೂಟ- ಅದಕ್ಕೂ ಸಂಕೋಚ. ಶ್ರೀಧರಾಶ್ರಮದಲ್ಲಿ ತಮ್ಮೆಲ್ಲಾ ಕೆಲಸಗಳನ್ನು ಕೊನೆಯವರೆಗೂ ತಾವೇ ಮಾಡಿಕೊಳ್ಳುತ್ತಿದ್ದರು. ಬೆಳಗಿನಜಾವದಿಂದ ಮಧ್ಯಾಹ್ನದವರೆಗೆ ಧ್ಯಾನದಲ್ಲಿರುತ್ತಿದ್ದ ಅವರು ೧೨ ಗಂಟೆಗೆ ಅವರಿರುವ ಕೊಠಡಿಯಿಂದ ಸುಮಾರು ೬೦-೭೦ ಮೆಟ್ಟಿಲೇರಿ ಶ್ರೀಧರರ ಸಮಾಧಿಮಂದಿರಕ್ಕೆ ಮಹಾಮಂಗಲಾರತಿಗೆ ನಿತ್ಯವೂ ತಪ್ಪಿಸದೇ ಬರುತ್ತಿದ್ದರು. ಆಮೇಲೆ ೧:೩೦ರ ವೇಳೆಗೆ ಮತ್ತೆ ಕೆಳಗಡೆ ದೂರದಲ್ಲಿರುವ ಭೋಜನಶಾಲೆಗೆ ನಡೆದೇ ಹೋಗಿ ಆಶ್ರಮದ ಇತರ ವಟುಗಳೊಡನೆ ಸಹಪಂಕ್ತಿ ಭೋಜನದಲ್ಲಿ ಊಟ ಸೇವಿಸುತ್ತಿದ್ದರು. ಊಟದ ನಂತರ ತಮ್ಮ ತಟ್ಟೆಯನ್ನು ತಾವೇ ತೊಳೆದಿಟ್ಟು ಹೋಗುತ್ತಿದ್ದರು. ಬರೇ ಒಂದೇ ಊಟ. ಮತ್ತೆ ಹೊಟ್ಟೆಗೆ ಆಹಾರ ಬೀಳುತ್ತಿದ್ದುದು ಮಾರನೇ ದಿನ ಮಧ್ಯಾಹ್ನವೇ ! ಆಶ್ರಮದ ಆಡಳ್ತೆಯ ಸದಸ್ಯರೊಬ್ಬರು ಕೇಶವಮೂರ್ತಿಗಳ್ಯಾಕೆ ಸನ್ಯಾಸ ದೀಕ್ಷೆ ಸ್ವೀಕರಿಸಿಲ್ಲಾ ಎಂದು ಕೇಳಿದರೆ, "ನಾನು ಹಾಗೇ ಮಾಡಿದರೆ ಕರ್ಮಾಧಿಕಾರ ಹೋಗಿ ನಿಮ್ಮೆಲ್ಲರಿಂದ ಸೇವೆ ಮಾಡಿಸ್ಕೊಳ್ಳಬೇಕಾಗುತ್ತಪ್ಪಾ " ಎಂದುಬಿಟ್ಟರಂತೆ ! ಪಾಠಶಾಲೆಯ ಹುಡುಗರು ಕೆಲವೊಮ್ಮೆ ಅವರ ಕೂಡ ತರಲೆಮಾಡುತ್ತಿದ್ದರು. ಆದರೂ ಅವರನ್ನೆಲ್ಲಾ ಸಹಿಸಿಕೊಂಡೇ, ಕ್ಷಮಿಸುತ್ತಲೇ ಬದುಕಿದ ದಿವ್ಯರೂಪವದು. ಎಲ್ಲರಿಗೂ ಹಿರಿಯಜ್ಜನ ಥರ ಇದ್ದ ಅವರು ಹೊರಗಡೆ ಬರುತ್ತಿದ್ದುದು ಕಮ್ಮಿ-ಹೀಗಾಗಿ ಬಹಳ ಮಂದಿಗೆ ಅವರ ದರ್ಶನವಾಗಲೀ, ಪರಿಚಯವಾಗಲೀ ಆಗಿಲ್ಲ. ಅಂತೂ ಅವರೊಬ್ಬ ಮಹಾನ್ ಚೇತನವೆಂಬುದು ಸುಳ್ಳಲ್ಲ.

ಹತ್ತುವರ್ಷಗಳ ಹಿಂದೆ ತಡವಾಗಿ ಗುರುತಿಸಿದ ಆಶ್ರಮದ ಸಮಿತಿ ಅವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದೆ. ಅವರ ಹೆಸರು ಶಾಶ್ವತವಾಗಿ ಆಶ್ರಮದ ಯಾತ್ರಾರ್ಥಿಗಳಿಗೆ ಗೋಚರಿಸುವ ಹಾಗೇ ಏನಾದರೊಂದು ಸ್ಮರಣೀಯವಾದುದನ್ನು ಮಾಡಬೇಕೆಂಬ ಆಶಯವನ್ನು ಸಮಿತಿ ಹೊಂದಿದೆ. ಸಜ್ಜನರು ಸಿಗುವುದು ದುರ್ಲಭ, ಅದರಲ್ಲಂತೂ ಬದುಕಿನುದ್ದಕ್ಕೂ ಯಾರಿಂದಲೂ ಸೇವೆ ಅಪೇಕ್ಷಿಸದೇ, ನಿಸ್ವಾರ್ಥರಾಗಿ, ಸಮಾಜದ ಎಲ್ಲರ ಒಳಿತಿಗಾಗಿ ಆಶ್ರಮದಲ್ಲಿದ್ದು ತಪಗೈದ ಅವರ ಕಾರ್ಯ ಶ್ಲಾಘನೀಯ ಮತ್ತು ಮನನೀಯ. ಸಾಧುವಿಗೂ ಸನ್ಯಾಸಿಗೂ ಬರೇ ದೀಕ್ಷೆಯಷ್ಟೇ ಅಂತರವಾದರೂ ಸನ್ಯಾಸಿಗಳಿಗೆ ಸಿಗುವ ಸೌಲಭ್ಯ ಸಾಧುಗಳಿಗೆ ಸಿಗುವುದಿಲ್ಲ. ಅಂತ್ಯಕಾರ್ಯಕೂಡ ಸಾಧುಗಳಿಗೆ ಸಾದಾ ಜನರಂತೇ ನಡೆದರೆ ಸನ್ಯಾಸಿಗಳಿಗೆ ಅದರ ಕ್ರಮ ವಿಭಿನ್ನವಾಗಿರುತ್ತದೆ. ಏನೇ ಇದ್ದರೂ ಯಾವೊಬ್ಬ ಸನ್ಯಾಸಿಗಿಂತ ತೂಕ ಹೆಚ್ಚಿರಬಹುದಾದ ತಪಸ್ಸಾಧನೆಗೈದ ಶ್ರೀ ಶ್ರೀ ಕೇಶವಮೂರ್ತಿಗಳಿಗೆ ತ್ರಿಕರಣಪೂರ್ವಕ ಪಾದಾಭಿವಂದನೆ, ಸಾಷ್ಟಾಂಗ ವಂದನೆ. ಗುರುವಿನ ಬೆಳಕು ಚೆಲ್ಲುವ ಅವರ ಚೇತನವನ್ನು ನೆನೆದು ಸ್ತುತಿಗೀತೆಯೊಂದನ್ನು ಬರೆದೆ. ಅದು ನಿಮ್ಮೆಲ್ಲರ ಓದಿಗಾಗಿ ಇಲ್ಲಿದೆ:

ಗುರುವೆ ನಮ್ಮ ತಾಯಿ-ತಂದೆ
ಗುರುವೆ ನಮ್ಮ ಬಂಧು-ಬಳಗ
ಗುರುವೆ ಸಕಲ ಸಂಪದವೂ
ಹರಿಯು ಹರನು ಬ್ರಹ್ಮನು

ನಶ್ವರವಿದು ಈ ಶರೀರ
ಶಾಶ್ವತದೆಡೆ ಸಾಗುಬಾರ
ನಿಶ್ಚಯವದು ಪರದಸ್ಥಿತ್ವ
ನೆಚ್ಚಿ ನಡೆಯೆಸಿಗುವುದು !

ಜ್ಯೋತಿ ಬೆಳಕನೀಡಿ ಜಗದಿ
ಅಂಧಕಾರ ಕಳೆಯುವಂತೆ
ನೀತಿ-ನಿಯಮ ಬೋಧೆತಿಳಿದು
ಬೆಳಗಲಾತ್ಮ ಚೇತನ

ದಾಸರಾಗಲಿಲ್ಲ ನಾವು
ಸಾಧುವಾಗದಕ್ಕೆ ನೋವು
ಸಾಧಕರ ಪಾದದಡಿಯ
ಧೂಳಾಗಲಿ ಮೈಮನ

ನಗುವಿನಲೀ ನೋವಿನಲೀ
ಬಗೆಯ ಭೇದ ಕಾಣದಂತ
ನಿಜದ ಬ್ರಹ್ಮಜ್ಞಾನವರಿತು
ಭಜನೆಮಾಡು ದೇವನ

ಗುರುಕರುಣೆಯ ಜ್ಯೋತಿಯಲ್ಲಿ
ಅವರ ಮಂದಹಾಸದಲ್ಲಿ
ಗುರುಪಾದದ ಸೇವೆಯಲ್ಲಿ
ನಡೆಯಲೆಮ್ಮ ಜೀವನ


Thursday, October 21, 2010

ಚೋರ ಬುದ್ಧಿ


ಚೋರ ಬುದ್ಧಿ

ಸಾವಿರಾರು ಆಸೆಗಳವು
ಬೇರುಬಿಟ್ಟು ಮನದತುಂಬ
ನೇರ ಒಮ್ಮೆ ಬೆಳೆಯಗೊಡದ
ಚೋರ ಬುದ್ಧಿ ಜನಿಸಿತು

ಹಾರ ಬೇಕು ತಿನ್ನೆಮೊದಲು
ದಾರಬೇಕು ಮೈಮುಚ್ಚಲು
ಧಾರಿಣಿಯಲಿ ಮಲಗೆ ಜಾಗ
ಮೂರು ವಿಷಯ ತೋರಿತು

ನಾರಿ ಬಯಸಿ ನರನ ಸಂಗ
ಜಾರಿಬಿದ್ದು ಜೀವಸೃಷ್ಟಿ
ಊರುತುಂಬ ಜನರು ತುಂಬಿ
ಆರು ಅದಕೆ ಸೇರಿತು

ಹಾರಲು ವಿಮಾನವಿರಲಿ
ಏರಬಯಸೆ ನೆಗವದಿರಲಿ
ಭಾರೀ ಮಹಲು ಸ್ವಂತಕಿರಲಿ
ಮೂರು ಮತ್ತೆ ಕೂಡಿತು

ಊರಹೊರಗೆ ತೋಟವಿರಲಿ
ತೇರೆತ್ತರ ಲಾಭಬರಲಿ
ಕೂರುವಲ್ಲೇ ಮುಗಿವಕೆಲಸ
ಕೋರಿಕೆಗಳು ಕೂಡುತ

ಮೇರೆಮೀರುವಷ್ಟು ಬಯಕೆ
ತೋರುತಿತ್ತು ಧ್ಯಾನದಲ್ಲಿ
ಯಾರುಕರೆದರವುಗಳನ್ನು ?
ಸೇರಿಬಂದವೆಲ್ಲವು !

ಮಾರುದ್ದದ ಬೀಳಲುಗಳ
ನೀರಹೀರೆ ಆಳಕಿಳಿಸಿ
ಸಾರಹೀನವಾಯ್ತು ಬದುಕು
ದಾರಿಕಾಣದೊಮ್ಮೆಲೇ !

Monday, October 18, 2010

ನಾವು ನೀವು ಮತ್ತು ಅವರು

ಚಿತ್ರ ಕೃಪೆ : ಅಂತರ್ಜಾಲ
ನಾವು ನೀವು ಮತ್ತು ಅವರು


ಈ ಹೆಸರನ್ನು ಕೇಳುತ್ತಿದ್ದಾಗ ಯಾವುದೋ ಹಿಂದೀ ಸಿನಿಮಾ ತಲೆಬರೆಹವೇನೋ ಅನಿಸುತ್ತದಲ್ಲವೇ ? ಸದ್ಯಕ್ಕೆ ಇದು ಅದಲ್ಲ. ಇದು ಒಬ್ಬ ಮಹಾತ್ಮರ ಕುರಿತಾದ ವಿಷಯ! ಅನೇಕಸಲ ನಾವು ನಮ್ಮ ನಡುವೆ ಯಾರ್ಯಾರೆಲ್ಲ ಇದ್ದಾರೆಂಬುದನ್ನು ಲಕ್ಷ್ಯಕ್ಕೇ ತೆಗೆದುಕೊಳ್ಳುವುದಿಲ್ಲ. ಇಹದಲ್ಲಿ ಹುಟ್ಟಿದ ಪ್ರತೀ ಜೀವಿಗೂ ’ಮರಣವೇ ಮಹಾನವಮಿ’ ಎಂಬುದು ಗಾದೆ. ಆದರೆ ಮಹಾನವಮಿಯಂದು ಅತಿಸಹಜ ಮರಣವನ್ನು ಪಡೆಯಲು ಅದೃಷ್ಟಬೇಕೆಂಬುದು ಬಲ್ಲವರು ತಿಳಿಹೇಳುವ ಸತ್ಯ. ಇಂತಹ ಮಹಾನವಮಿಯ ಮರಣವನ್ನು ಪಡೆದ ಶ್ರೇಷ್ಠ ಸಾಧುವೊಬ್ಬರ ಬಗ್ಗೆ ಬರೆಯಲು ಮನಸ್ಸು ಹವಣಿಸಿತು. ಪ್ರಾಯಶಃ ಇಂಥವರ ಕಥೆಯನ್ನು ಹೇಳುವುದೂ ಕೇಳುವುದೂ ಕೂಡ ಒಂದು ಪುಣ್ಯಭಾಜನ ಕೆಲಸ ಎಂಬನಿಸಿಕೆಯಿಂದ ಇಲ್ಲಿ ಬರೆಯತೊಡಗಿದ್ದೇನೆ.

ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ಒಬ್ಬ ಹುಡುಗನ ಜನನ: ಸರಿಸುಮಾರು ೯೮ ವರ್ಷಗಳ ಹಿಂದೆ ಆಯಿತು. ಮಗು ಅತಿ ಸಣ್ಣವಿರುವಾಗಲೇ ತಾಯಿ-ತಂದೆಯರ ಅಗಲುವಿಕೆ. ಮನೆಯಲ್ಲಿ ಇನ್ನಾರೂಗತಿಯಿರದ ಸ್ಥಿತಿಯಲ್ಲಿ ಸೋದರಮಾವನಲ್ಲಿ ಒಂದಷ್ಟುಕಾಲ ತಂಗಿದ್ದ ಈ ಹುಡುಗ ಕಾಲಾನಂತರ ತನಗೆ ಸಂಸಾರಿಗಳಿಗಿಂತ ಸನ್ಯಾಸಿಗಳ ಬದುಕೇ ಹತ್ತಿರವಾಗುವುದನ್ನೂ, ಇಷ್ಟವಾಗುವುದನ್ನೂ ಕಂಡ. ಪಾಲಕರಿಲ್ಲದ ಬಾಲ್ಯದಲ್ಲಿ ಆತನಿಗೆ ಅನೇಕ ಕಹಿದಿನಗಳನ್ನು, ಕಷ್ಟಗಳನ್ನು ಮತ್ತು ಮೂದಲಿಕೆಗಳನ್ನು ಅನುಭವಿಸಬೇಕಾಗಿ ಬಂತು. ಅನೇಕ ದೇವಾಲಯಗಳು, ಊರುಗಳು, ಪುಣ್ಯಕ್ಷೇತ್ರಗಳನ್ನು ಸಂಚರಿಸುತ್ತಾ ಬ್ರಾಹ್ಮಣ್ಯದ ಕರ್ತವ್ಯವಾದ ವೇದಗಳನ್ನು ಕಂಠಸ್ಥಮಾಡಿಕೊಂಡ. ಅದ್ವೈತದ ಪ್ರತಿಪಾದಕರಾದ ಶ್ರೀಶಂಕರರ ತತ್ವಗಳು ಬಹಳ ಆಪ್ತವಾದವು. ತಿರುಗುತ್ತಾ ತಿರುಗುತ್ತಾ ಮಧುಕರೀ ಭಿಕ್ಷಾನ್ನಸೇವಿಸುತ್ತ ನೈಷ್ಠಿಕ ಬ್ರಹ್ಮಚರ್ಯವನ್ನು ಪರಿಪಾಲಿಸುತ್ತ ಆತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಲಸೆ ಗ್ರಾಮಕ್ಕೆ ಬಂದ. ಅಲ್ಲಿ ಶೀಗೇಹಳ್ಳಿಯ ಶಿವಾನಂದ ಸ್ವಾಮಿಗಳ ಶಿಷ್ಯರಾದ ಗಣೇಶ ಸಾಧುಗಳ ಪರಿಚಯವಾಗಿ ಅವರೊಂದಿಗೇ ಬದುಕನ್ನು ತಪಸ್ಸಿನಲ್ಲಿ ಕಳೆಯಲು ನಿರ್ಧರಿಸಿದ. ಅಲ್ಲಿ ಈ ರೀತಿ ಮೂರು ಸಾಧಕ ಸಾಧುಗಳು ಒಟ್ಟಿಗೇ ಮಧುಕರೀ ಭಿಕ್ಷಾನ್ನ ಸೇವಿಸುತ್ತ ತಂತಮ್ಮ ತಪಸ್ಸಿನಲ್ಲಿ ಕಳೆದರು.

ಕಾಲಕ್ರಮೇಣ ಸಾಧುಗಳಲ್ಲಿ ಹಿರಿಯರಾದ ಗಣೇಶ್ ಸಾಧುಗಳು ನಿಧನರಾದರು. ಅಲ್ಲಿ ಇಬ್ಬರೇ ಇರಬೇಕಾಯಿತು. ಈ ಪೈಕಿ ಹಾಸನದ ಆ ಸಾಧುವಿಗೆ ಬಹಳಕಾಲ ಅಲ್ಲಿರಲು ಮನಸ್ಸಾಗಲಿಲ್ಲ. ಆಧ್ಯಾತ್ಮದ ಶಿಖರವನ್ನೇರಬಯಸಿದ್ದ ಮನಸ್ಸು ತಕ್ಕ ಪರಿಸರವನ್ನೂ, ಪ್ರಭಾವಿ ಗುರುವನ್ನೂ ಹುಡುಕುತ್ತಿತ್ತು. ಅಲ್ಲಿಂದ ಹೊರಗೆ ನಡೆದುಬಿಟ್ಟರು. ಹೊರಗಡೆ ಚರಯೋಗಿಯಾಗಿ ಅಲೆದಾಡುವಾಗ ಅವರ ನಿತ್ಯದ ಅನ್ನಬೇಯಿಸುವ ಪಾತ್ರೆಗಳನ್ನೂ, ಅವರಹತ್ತಿರವಿದ್ದ ಯಾರೋ ಭಕ್ತರು ನೀಡಿದ್ದ ಕಾಣಿಕೆಯ ಹಣವನ್ನೂ ಪಾಪಿಗಳ್ಯಾರೋ ಕದ್ದರು. ಹೀಗಾಗಿ ಎಲ್ಲೆಲ್ಲೋ ಅಲೆಯುತ್ತ ಇರುವ ಕಾಲವಿದಲ್ಲ, ಮುಪ್ಪಡರಿದ ಈ ವೇಳೆ ತಮಗೆ ಸದ್ಗುರುವೊಬ್ಬರ ದಿವ್ಯ ಕ್ಷೇತ್ರ ಸಿಕ್ಕರೆ ಅದು ಭಾಗ್ಯವೆಂದು ನೆನೆಸುತ್ತಾ ದಿನಗಳೆಯುತ್ತಿರುವಾಗ ಹುಡುಕುತ್ತ ಆತ ಕಂಡಿದ್ದು ವರದಹಳ್ಳಿ ಕ್ಷೇತ್ರ. ಮಹಾಮಹಿಮ ಶ್ರೀ ಶ್ರೀಧರ ಭಗವಾನರು ತಮ್ಮ ಅಖಂಡ ತಪೋಬಲದಿಂದ ತೀರ್ಥವನ್ನು ಸೃಜಿಸಿ, ಅಲ್ಲಿಯೇ ವಾಸವಿದ್ದು-ತಪಗೈದು ಲಕ್ಷಾಂತರ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದ, ಸಮಾಧಿಸ್ಥರಾಗಿದ್ದರೂ ಇನ್ನೂ ಭಕ್ತರ ಅಹವಾಲುಗಳನ್ನು ಸ್ವೀಕರಿಸುತ್ತಿರುವ ಸ್ಥಳ ಕಣ್ಣೆದುರಿಗೆ ನಿಂತಿತ್ತು. ಅಲ್ಲಿಗೇ ಹೋಗಿಬಿಡುವುದಾಗಿ ತೀರ್ಮಾನವಾಯಿತು. ಆದರೆ ಅಲ್ಲಿ ಆಶ್ರಮದ ಕಟ್ಟುಪಾಡಿನಂತೇ ಆಶ್ರಮದ ಆಡಳ್ತೆಯ ಪದಾಧಿಕಾರಿಗಳು ಹಾಗೆಲ್ಲ ಕಂಡಕಂಡ ಸಾಧುಗಳಿಗೆ ಪುರಸ್ಕಾರವೀಯುವ ಪರಿಪಾಠವಿರಲಿಲ್ಲ. ತಾನು ಹೀಗೆ ಎಂಬ ಪ್ರಲೋಭನೆಯನ್ನು ಉಂಟುಮಾಡಿ ಉಳಿಯುವ ಮನೋಭಾವ ಈ ವ್ಯಕ್ತಿಯದಲ್ಲ! ಏನುಮಾಡುವುದು ? ಗಣೇಶ್ ಸಾಧುಗಳ ಪೂರ್ವಾಶ್ರಮ ಮನೆತನದಲ್ಲಿ ಕೆಲವರು ಅವರ ಹೊಣೆಗಾರಿಕೆಯನ್ನು ಹೊತ್ತು ತಮ್ಮಲ್ಲೇ ಉಳಿದುಕೊಳ್ಳಲು ಅವಕಾಶಕಲ್ಪಿಸಿದರೂ ಈ ಸಾಧು ಮಹಾತ್ಮ ಬಹಳಕಾಲ ಅಲ್ಲಿರಲು ಒಪ್ಪಲಿಲ್ಲ. ಆಗಲೇ ತುಂಬಾ ವಯಸ್ಸಾಗಿತ್ತು. ಸುಮಾರು ೮೦ಕ್ಕೂ ಹೆಚ್ಚಿನ ವಯಸ್ಸು. ಕೈಕಾಲಿನಲ್ಲಿ ಅಷ್ಟೊಂದು ತ್ರಾಣವಿರಲಿಲ್ಲ. ಆದರೆ ಮನಸ್ಸು ಮಾತ್ರ ಯಾರಸೇವೆಯನ್ನೂ ಪಡೆಯಲು ಒಪ್ಪುತ್ತಿರಲಿಲ್ಲ. ಹಠಯೋಗದಿಂದಲೂ, ದಿನದಲ್ಲಿ ಮಧ್ಯಾಹ್ನದಲ್ಲಿ ಕೇವಲ-ಕೇವಲ-ಕೇವಲ ಒಂದೇ ಊಟದಿಂದಲೂ
ತಮ್ಮ ಭೌತಿಕ ಕಾಯವನ್ನು ಮಣಿಸಿದ್ದರು ಈ ಯೋಗಿಗಳು.

ಅಂತೂ ಹಾಗೂ ಹೀಗೂ ಮಾಡಿ ವರದಹಳ್ಳಿಯ ಅಮ್ಮನವರ ದೇವಸ್ಥಾನದಲ್ಲಿ, ಅಲ್ಲಿನ ಸಮಿತಿಗೆ ಹೇಳಿ ಕೊಠಡಿಯೊಂದು ದೊರೆಯಿತು. ಅಲ್ಲೇ ಅನ್ನಮಾಡಿಕೊಂಡು ಒಪ್ಪೊತ್ತೂಟ ಮುಂದುವರಿಸಿ ತಮ್ಮ ನೇಮನಿಷ್ಠೆಯಲ್ಲಿ ಯಾವಕೊರತೆಯನ್ನೂ ಮಾಡದೇ ಮುಂದುವರಿದರು. ಮುಪ್ಪಿನ ದೇಹದಲ್ಲಿ ವರದಹಳ್ಳಿಯ ಶ್ರೀಧರರ ಸಮಾಧಿ ಸ್ಥಳಕ್ಕೆ ಹೋಗುವ ಮೆಟ್ಟಿಲುಗಳನ್ನು ಏರುವುದು ಅನೇಕರಿಗೆ ಆಗದ ಕೆಲಸ. ಆದರೂ ಈತ ಮಾತ್ರ ನಿತ್ಯವೂ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲೇ ತಣ್ಣೀರಿನಲ್ಲಿ ಶೌಚ-ಸ್ನಾನಾದಿಗಳನ್ನು ಪೂರೈಸಿ, ಅನುಷ್ಠಾನಕ್ಕೆ ಕುಳಿತರೆ ಮಧ್ಯಾಹ್ನ ೧೨ರ ವರೆಗೆ ನಿತ್ಯವೂ ತಪೋನಿರತರಾಗಿರುತ್ತಿದ್ದರು. ಈ ವೇಳೆಯಲ್ಲಿ ಬೆಳಿಗ್ಗೆ ನೀರನ್ನು ಬಿಟ್ಟರೆ ಯಾವುದೇ ಆಹಾರ ಸೇವಿಸುತ್ತಿರಲಿಲ್ಲ.

ಒಮ್ಮೆ ಇವರು ಅಮ್ಮನವರ ದೇವಸ್ಥಾನದಿಂದ ಸಮಾಧಿಮಂದಿರಕ್ಕೆ ಹೋಗಿಬರುವ ವೇಳೆ ಮಳೆಯಲ್ಲಿ ಜಾರಿ ಬಿದ್ದುಬಿಟ್ಟರಂತೆ. ಆಗ ಹಣೆಯಭಾಗ ಒಡೆದು ಬಹಳ ನೋವು ಅನುಭವಿಸಿದರೂ ಆಶ್ರಮದ ಜನರಲ್ಲಿ ಯಾರ ಸಹಾಯವನ್ನೂ ಇವರು ಬಯಸಲಿಲ್ಲ. ಸನ್ಯಾಸ ದೀಕ್ಷೆಯನ್ನು ಪಡೆದರೆ ತಾನು ಕರ್ಮಾಧಿಕಾರವಿಲ್ಲದೇ ಪರರಿಂದ ಸೇವೆಮಾಡಿಸಿಕೊಳ್ಳಬೇಕಾಗುತ್ತದೆಂಬ ಒಂದೇ ಉದ್ದೇಶದಿಂದ ಸನ್ಯಾಸದೀಕ್ಷೆಯನ್ನು ತೆಗೆದುಕೊಳ್ಳದೇ ಸಾಧುವಾಗಿ ಬದುಕಿದ ಈ ಮಹಾನ್ ವ್ಯಕ್ತಿಯ ವ್ಯಕ್ತಿತ್ವದ ಅನುಭವ ಆಶ್ರಮದ ಆಡಳ್ತೆಯವರಿಗೆ ಆಗ ಅರಿವಿಗೆ ಬಂತು. ಅವರನ್ನು ಕರೆದು ಸಮಾಧಿ ಮಂದಿರಕ್ಕೆ ಹತ್ತಿರದಲ್ಲಿರುವ ಗುರುಕುಲ ಕುಟೀರದಲ್ಲಿ ಕೊಠಡಿಯೊಂದನ್ನು ಕೊಟ್ಟರು.

ಏನೇ ಕೊಡಲಿ ಬಿಡಲಿ ತಾನಾಯಿತು ತನ್ನ ಕರ್ತವ್ಯವಾಯಿತು ಎಂದುಕೊಂಡಿದ್ದ ಅವರೇ ಶ್ರೀ ಕೇಶವಮೂರ್ತಿಗಳು. ಮೊನ್ನೆ ಮಹಾನವಮಿಯ ದಿನ ಅನಾಯಾಸವಾಗಿ ಆಶ್ರಮದ ಪರಿಸರದಲ್ಲೇ ತಮ್ಮ ಇಹಲೋಕಯಾತ್ರೆ ಪೂರೈಸಿದ ಈ ಸಾಧುಗಳಿಗೆ ದಿನವೊಂದರಹಿಂದೆ ಸ್ವಲ್ಪ ಅಸ್ವಾಸ್ಥ್ಯ ಬಾಧಿಸಿದ ಕಾರಣ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲು ಕೆಲವು ಭಕ್ತರು ಹವಣಿಸಿದರೂ ಆಗಲೇ ಅವರು ಹೇಳಿದ್ದರಂತೆ " ನನ್ನನ್ನು ಇಲ್ಲೇ ಬಿಡಿ, ನನಗೆ ಚಿಕಿತ್ಸೆ ಬೇಡ, ನಾನು ಇವತ್ತೇ ತೆರಳುತ್ತೇನೆ " ಎಂಬುದಾಗಿ. ಹಾಗೆ ಅವರು ಹೇಳಿದರೂ ಮನಸ್ಸುತಡೆಯದೇ ಅವರನ್ನು ವಾಹನವೊಂದರಲ್ಲಿ ಕುಳ್ಳಿರಿಸಿ ಕರೆದೊಯ್ಯಲು ತಯಾರಿ ನಡೆಸುತ್ತಿರುವಾಗಲೇ ಅವರು ಇಹವನ್ನು ತೊರೆದುಬಿಟ್ಟರು. ವರದಹಳ್ಳಿಯ ಕ್ಷೇತ್ರಕ್ಕೆ ಇಂತಹ ತಪೋಧನರು ಕೆಲವರು ಬರುತ್ತಿರುತ್ತಾರೆ. ಎಷ್ಟೆಂದರೂ ಅದು ಸಾಧಕರೊಬ್ಬರ ಅಪ್ರತಿಮ ಸಾಧನೆಯ ಸಿದ್ಧಿಕ್ಷೇತ್ರ. ಆಶ್ರಮದ ಆಡಳ್ತೆಯವರು, ಆಶ್ರಮದ ವೇದಪಾಠಶಾಲೆಯ ವಿದ್ಯಾರ್ಥಿಗಳು, ಹಾಗೂ ಅನೇಕ ಭಕ್ತರು ಕಣ್ಣೀರ್ಗರೆದರು. ಗುರು ಶ್ರೀಧರಭಗವಾನರ ಇಚ್ಛೆಯಂತೇ ಶ್ರೀ ಕೇಶವಮೂರ್ತಿಗಳ ಮರಣ ಆಶ್ರಮದ ತಾಣದಲ್ಲೇ ನಡೆಯಿತು. ಪುರಜನರು, ಪರಿಜನರು, ಭಕ್ತರು, ವಿದ್ಯಾರ್ಥಿಗಳು ಎಲ್ಲರೂ ಸೇರಿ ಆಶ್ರಮದ ಹೊರವಲಯದ ಬೆಟ್ಟದಲ್ಲಿ ಅವರ ಅಂತ್ಯೇಷ್ಟಿಗಳನ್ನು ನೆರವೇರಿಸಿದರು. ಸಾಧುವೊಬ್ಬರ ದೇಹ ಪಂಚಭೂತಗಳಲ್ಲಿ ಲೀನವಾಯಿತು, ಅವರ ಆತ್ಮ ವರದಹಳ್ಳಿಯ ಪರಿಸರದಲ್ಲಿ ಐಕ್ಯವಾಯಿತು;ಮೋಕ್ಷಪಡೆಯಿತು. ಅವರ ಮುಂದಿನ ಕೃತುಗಳನ್ನು ಆಶ್ರಮದವರು ಮತ್ತು ಭಕ್ತರು ಸೇರಿ ನಡೆಸಲಿದ್ದಾರೆ. ಇದನ್ನೆಲ್ಲಾ ನೋಡಿದ ನನಗೆ ಭಗವಂತ ಗೀತೆಯಲ್ಲಿ ಹೇಳಿದ ಈ ನುಡಿ --

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಯಾರು ನನ್ನಲ್ಲಿ ಅನನ್ಯ ಶರಣತೆಯನ್ನು ಹೊಂದಿರುತ್ತಾರೋ ಅವರ ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ, ನಾನೇ ವಹಿಸಿಕೊಳ್ಳುತ್ತೇನೆ.

--ಎಂಬ ಆ ಮಾತನ್ನು ಆಗಾಗ ಆಗಾಗ ನಾವು ದೃಷ್ಟಾಂತಗಳ ಮೂಲಕ ಕಾಣುತ್ತೇವಲ್ಲವೇ ?

ಯಾವಪ್ರಚಾರವನ್ನೂ ಬಯಸದೇ, ಎಲ್ಲಾ ಅರ್ಥದಲ್ಲಿ ಸರ್ವಸಂಗ ಪರಿತ್ಯಾಗಿಗಳಾಗಿ, ಆಶ್ರಮದಲ್ಲಿ ಇದ್ದೂ ಇಲ್ಲದಂತೇ ನೆಲೆಸಿದ್ದ ಇಂತಹ ತಪೋಧನರಿಗೆ ಎತ್ತಿ ಒಮ್ಮೆ ಕೈಮುಗಿದರೆ ನಮ್ಮ ಸಾಸಿವೆಯ ಭಕ್ತಿಯಾದರೂ ಸಂದೀತು ಎನ್ನುವುದು ನನ್ನ ಭಾವನೆ. ಇಂದಿನ ದಿನಮಾನದಲ್ಲಿ ಸಾಧಿಸಂತರಿಗೆ ಅಷ್ಟಾಗಿ ಅನುಕೂಲವಿಲ್ಲ. ಶುದ್ಧ ಆಹಾರ,ವಿಹಾರಗಳಿಗೆ ಅವರಿಗೆ ಮುಕ್ತ ಪರಿಸರ ದೊರೆಯುವುದಿಲ್ಲ. ಶ್ರೀಧರರ ದಿವ್ಯದೃಷ್ಟಿಗೆ ಈ ಚೇತನ ಕಂಡಿತ್ತಿರಬೇಕು. ತನ್ನಲ್ಲಿಗೇ ಕರೆಸಿಕೊಂಡು ತನ್ನಲ್ಲೇ ಇರಿಸಿಕೊಂಡು ತನ್ನಲ್ಲೇ ಅಡಕಮಾಡಿಕೊಂಡರು. ಮಹಾತ್ಮರ ಜನ್ಮವೆಲ್ಲ ಹೀಗೇ! ಅವರೆಲ್ಲಾ ಬೆಂಕಿಯಲ್ಲಿ ಅರಳಿದ ಹೂವುಗಳಾಗಿರುತ್ತಾರೆ. ಶಾಪಾನುಗ್ರಹ ಸಮರ್ಥರಾಗಿದ್ದರೂ ಯಾವ ಅಹಂಕಾರವೂ ಇಲ್ಲದೇ ಸಾತ್ವಿಕರಾಗಿ ನಮ್ಮ ನಡುವೆ ಬಾಳಿ-ಬದುಕಿ ತಮ್ಮ ಬಂದ ಕೆಲಸ ತೀರಿದ ಮೇಲೆ ಕ್ಷಣವೂ ನಿಲ್ಲದೇ ನಿರ್ಗಮಿಸಿಬಿಡುತ್ತಾರೆ. ವರದಹಳ್ಳಿ ಇಂತಹ ಅನೇಕ ತಪೋಧನರ ದಿವ್ಯಕ್ಷೇತ್ರವಾಗಿದೆ ಎಂಬುದು ತೋರಿಬರುವ ಸತ್ಯ. ನಾವೂ ನೀವೂ ಇರುತ್ತೇವೆ, ನಮ್ಮಿಂದ ಹೆಚ್ಚಿನದೇನೂ ಸಾಧಿಸಲಾಗಲಿಲ್ಲ, ಆದರೆ ’ಅವರು’ ಎಂಬುದೇ ಇಲ್ಲಿ ಇಂತಹ ಮಹಾನುಭಾವರಿಗೆ ಬಳಸಿದ ಶಬ್ದ, ಅವರು ನಮ್ಮಂತಲ್ಲ, ಅವರ ಎಳ್ಳಷ್ಟೂ ಯೋಗ್ಯತೆ ನಮ್ಮಲ್ಲಿಲ್ಲ. ಅವರಂತೇ ಆಗಲು ಜನ್ಮಾಂತರಗಳಲ್ಲೂ ಸಾಧ್ಯವೋ ಅಸಾಧ್ಯವೋ ತಿಳಿದಿಲ್ಲ. ಆದರೆ ಆಗಾಗ ಎಲ್ಲಾದರೂ ಕಾಣುವ ಇಂತಹ ’ಅವರಿಗೆ’ ನಾವು ಶರಣಾಗೋಣ, ಶಿರಬಾಗಿ ನಮಿಸೋಣ.

Wednesday, October 13, 2010

ಮನದ ತಂತಿಯಲ್ಲಿ ಹರಿದು

ಚಿತ್ರಋಣ : ಶೃಂಗೇರಿ. ನೆಟ್ [ಶೃಂಗೇರಿ ಮಠದ ಕೃಪೆಯಿಂದ ]

ಮನದ ತಂತಿಯಲ್ಲಿ ಹರಿದು

[ಪೀಠಸ್ಥ ಶ್ರೀ ಶಾರದಾಮಾತೆಯನ್ನು ನೆನೆದಾಗ ಕಣ್ತುಂಬಿ-ಮನದುಂಬಿ ತಂತಾನೇ ಹರಿದ ಗೇಯಗೀತೆ. ನಮ್ಮ ಮನದ ಭಾವಕ್ಕೆ ಮೂಲ ಪ್ರೇರಣೆ ದೈವದ ಈ ರೂಪದಲ್ಲಿ ಅಲ್ಲವೇ ? ತಪ್ಪೋ ಒಪ್ಪೋ ನಮ್ಮನ್ನು ಭುವಿಗೆ ವಿಧಿಬರೆಹ ಬರೆದು ಕಳಿಸಿರುವ ಅಮ್ಮಾ ಶಾರದೆ ನಮ್ಮನ್ನು ಅನುಗ್ರಹಿಸು - ಎಂಬುದು ಪ್ರಾರ್ಥನೆ. ಇದರಲ್ಲಿ ನನ್ನ ಜೊತೆ ನೀವೆಲ್ಲಾ ಸೇರಿರುವಿರೆಂದು ನಂಬಿರುತ್ತೇನೆ, ಎಲ್ಲರಿಗೂ ಶರನ್ನವರಾತ್ರಿಯ, ಶುಭದಸರೆಯ ಹಾರ್ದಿಕ ಶುಭಾಶಯಗಳು. ]

ಮನದ ತಂತಿಯಲ್ಲಿ ಹರಿದು
ಬೆಳಗಲೆಮ್ಮ ಶಾರದೆ
ಬಂದಳೊಮ್ಮೆ ದಸರೆಯಲ್ಲಿ
ಇರುವಳೇನು ಬಾರದೆ ? || ಪ ||

ಅಮ್ಮನಿನ್ನ ಪ್ರೇರಣೆಯು
ನಮ್ಮ ಬುದ್ಧಿ ತಿಳಿಯಲೊಮ್ಮೆ
ಸುಮ್ಮನಿರುವೆವಿಲ್ಲಿ ಭವದಿ
ಎಮ್ಮಮೂಲ ತಿಳಿಸು ಒಮ್ಮೆ
ಕಮ್ಮಗೋಲನೆಸೆವ ಬಾಣಗಳನು ತಡೆದು ಬದುಕಲು
ಹೆಮ್ಮೆಯಿಂದ ಜೀವಿಸುವೆವು ಅಮ್ಮ ನೀನು ಹರಸಲು || ೧ ||

ಕಾರುಣ್ಯದಿ ಕಾಣಲೊಮ್ಮೆ
ಧಾರೆಯಾಗಿ ಸ್ಫುರಿಸಲೊಮ್ಮೆ
ಭಾರಗಳನು ನೀಗಲೊಮ್ಮೆ
ಚೋರಮನವ ಶಿಕ್ಷಿಸೊಮ್ಮೆ
ದಾರಿಯುದ್ದ ಸಿಗುವ ಭಾರೀ ಕಷ್ಟಗಳನು ಹರಿಸಲು
ಭೇರಿ ಬಾರಿಸುತ್ತ ನಿನ್ನ ನೆನೆದು ಒಮ್ಮೆ ಕುಣಿಯಲು || ೨ ||

ವಿಧಿಯರೂಪ ವಿದ್ಯೆಯಲ್ಲಿ
ಕದಿಯಲಾಗದಂಥಾ ಶ್ರೇಷ್ಠ
ನಿಧಿಯತಂದು ನಮ್ಮೊಳಿರಿಸಿ
ಬದಿಗೆ ಸರಿದು ನೇಪಥ್ಯದಿ
ಸದಭಿರುಚಿಯ ಸಾಹಿತ್ಯಗಳ ಸೃಜಿಸುವಂತೆಮಾಡಿದೆ
ಅದಕೆ ತಕ್ಕ ಶಬ್ದವಾಗಿ ಲೇಖನಿಯಲಿ ಮೂಡಿದೆ || ೩ ||

ಜಗವುಗೌಣ ನೀನಿಲ್ಲದೆ
ನಗುವದಿಲ್ಲ ನಲಿವಿಲ್ಲದೆ
ಬಗೆಯ ಬರೆದು ಹಣೆಯಮೇಲೆ
ನಗುವ ನಿನ್ನ ತೋರಲೊಮ್ಮೆ
ಅಗರು ಮಂಗಳಾರತಿಯನು ಜಗದಲಿ ಸ್ವೀಕರಿಸಲೊಮ್ಮೆ
ಮುಗುದರನ್ನು ಕಂಡು ಹರಸಿ ಪೀಠದಲ್ಲಿ ಕೂರಲೊಮ್ಮೆ || ೪ ||

Tuesday, October 12, 2010

ಕುದುರೆಲಾಯದಲ್ಲಿ ನಗೆಲಾಯ !


ಕುದುರೆಲಾಯದಲ್ಲಿ ನಗೆಲಾಯ !

ವೇದಾಂತಿ ಹೇಳಿದನೂ ಹೊನ್ನೆಲ್ಲ ಮಣ್ಣೂ ಮಣ್ಣೂ
ಗಣಿಲೊಬ್ಬ ಹೇಳಿದನು ಮಣ್ಣೆಲ್ಲ ಹೊನ್ನೂ ಹೊನ್ನೂ !
ಅಧ್ಯಕ್ಷ ಹೇಳಿದನು ಈ ವೇಳೆ ಶೂನ್ಯ ಶೂನ್ಯ
ಸಿದ್ದು-ಕುಮಾರ ಹೇಳಿದರು ರೀ ನಮ್ಮದೈತೆ ಭವ್ಯ !


ದೊಡ್ಡ ಬಂಡೆ, ಶಿಲ್ಪಿಯೊಬ್ಬ ಚಾಣದಿಂದ ಚೇಣುಹಾಕುತ್ತಿದ್ದ. ಈತ ಸರಸರ ಅಲ್ಲಿಗೆ ಬಂದವನೇ " ಏನುಮಾಡುತ್ತಿದ್ದೀರಿ ಶಿಲ್ಪಿಗಳೇ ? " ಎಂದ

ಶಿಲ್ಪಿಯಿಂದ ಬಂದ ಉತ್ತರ " ಈ ಬಂಡೆಯಲ್ಲಿ ಬಂಧಿಸಲ್ಪಟ್ಟಿರುವ ದೇವತೆಯನ್ನು ಬಂಧಮುಕ್ತಗೊಳಿಸುತ್ತಿದ್ದೇನೆ "

ಆತ ಮುನ್ನಡೆದ. ಚಿತ್ರಕಾರನೊಬ್ಬನನ್ನು ಕಂಡ ಮತ್ತು ಕೇಳಿದ " ಏನುಮಾಡುತ್ತಿರುವಿರಿ ಚಿತ್ರಕಾರರೇ ?"

ಚಿತ್ರಕಾರ ಉತ್ತರಿಸಿದ " ಕವಿಯ ಕಲ್ಪನೆಗೊಂದು ಚಿತ್ತಾರದ ಆಕಾರ ಕೊಡುತ್ತಿದ್ದೇನೆ"

ಆತ ಮುನ್ನಡೆದು ವಿಧಾನಸೌಧದ ಎದುರು ಬಂದ. ಅಲ್ಲಿ ನಿಂತಿದ್ದ ರಾಜಕೀಯ ನಾಯಕರನ್ನು ಕುರಿತು ಕೇಳಿದ " ಏನು ಮಾಡುತ್ತಿರುವಿರಿ ರಾಜಕೀಯ ನಾಯಕರೇ ? "

ರಾಜಕಾರಣಿ ಉತ್ತರಿಸಿದ " ನಮ್ಮ ಮುಂದಿರುವ ಈ ಭವ್ಯ ಕಟ್ಟಡದಲ್ಲಿ ಕುದುರೆ ವ್ಯಾಪಾರಕ್ಕೆ ಹೊಸ ಶಾಶ್ವತ ಕೇಂದ್ರವನ್ನು ಇಲ್ಲಿ ಕಾಣುತ್ತಿದ್ದೇವೆ, ಶತಶತಮಾನಗಳ ಹಿಂದೆ ಆಗಬೇಕಾಗಿದ್ದ ಕೆಲಸ, ಸ್ವಾತಂತ್ರ್ಯ ಬಂದು ಅದೆಷ್ಟೋ ವರ್ಷಗಳಾದ್ರೂ ಆಗಿರ್ಲಿಲ್ಲ, ಈಗ ಅದು ಒಂದು ರೂಪಕ್ಕೆ ಬರುತ್ತಿದೆ "


------------

ರಾಜನೊಬ್ಬ ಮಂತ್ರಿಗೆ ಮರದಮೇಲಿದ್ದ ಕಾಗೆಗಳನ್ನು ಎಣಿಸಿ ತಿಳಿಸಲು ಹೇಳಿದ್ದನ್ನು ನೆನೆಸಿಕೊಂಡ ಈತ ರಾಜಕೀಯ ನಾಯಕರೊಬ್ಬರ ಹತ್ತಿರ ಕೇಳಿದ " ಸ್ವಾಮೀ ನಿಮ್ಮ ಸಂಖ್ಯೆ ಎಷ್ಟು ? "

ರಾಜಕಾರಣಿ ಪಟ್ಟನೆ ಉತ್ತರಿಸಿದ " ನಮ್ಮದು ೧೨೦ "

ಈತ ಕೇಳಿದ " ಅದು ಹೇಗೆ ಹೇಳುತ್ತೀರಿ ?

" ಸದ್ಯಕ್ಕೆ ಎಣಿಸಿದಾಗ ಕಾಣುವುದು ೧೨೦, ಹತ್ತು-ಹನ್ನೆರಡು ಜಾಸ್ತಿಯಾದರೆ ಎಲ್ಲಿಂದಲೋ ಅವು ಬಂದಿವೆ ಎಂದರ್ಥ, ೧೬-೧೭ ಕಮ್ಮಿ ಇದ್ದರೆ ಎಲ್ಲಿಗೋ ಅವು ಹೋಗಿವೆ ಎಂದರ್ಥ "

-------------

ಎಲಿಜಬೆತ್ ಟೇಲರ್ ನ ಬಹುವಾಗ ನೆನೆಸಿಕೊಂಡ ಈತ ಯಾಕೋ ತಲೆತುರಿಕೊಳ್ಳುತ್ತಿದ್ದ. ಯಾರೋ ಪರಿಚಯದವರು ಕೇಳಿದರು " ಯಾಕಯ್ಯಾ ಬಹಳ ಸುಸ್ತಾಗಿದ್ದೀಯಾ ? "

" ಏನಿಲ್ಲಾ ಸ್ವಾಮೀ, ಎಲಿಜಬೆತ್ ಟೇಲರ್ ಒಬ್ಬಳೇ ಹಲವಾರು ಮದುವೆಯಾದಳು, ಮದುವೆಯಾಗಿ ತೊರೆದಿದ್ದ ಗಂಡನನ್ನೇ ಮತ್ತೆ ಮದುವೆಯಾದಳು. ನಮ್ಮಲ್ಲಿ ರಾಜಕೀಯ ಪಕ್ಷಗಳು ಅವಳ ಹಾದಿಯಲ್ಲೇ ಇವೆ. ಅವುಗಳಿಗೆ ಹಳೇ ಸ್ನೇಹಿತರು, ಒಟ್ಟಿಗೆ ಪಡೆದದ್ದು, ತಿಂದಿದ್ದು, ನುಂಗಿದ್ದು ಎಲ್ಲಾ ನೆನಪಿಗೆ ಬಂದಾಗ ಮತ್ತೆ ಒಂದಾಗಿಬಿಡುತ್ತವೆ "


---------------


ಈತ ನಡೆಯುತ್ತಾ ಹೋಗುವಾಗ ಮರಮೇಲೆ ಮಂಗವೊಂದು ಬಹಳೇ ಹಾರಾಡುತ್ತಿತ್ತು! ಕಲ್ಲೆಸೆದು ಓಡಿಸಲು ಹೋದರೆ ತನಗೇ ಏನಾದರೂ ಮಾಡಿಬಿಡಬಹುದೆಂಬ ಹೆದರಿಕೆಯಲ್ಲಿ ಮುನ್ನಡೆದುಹೋದ. ಮರಳಿಬರುವಾಗ ಮಂಗ ಮರ ಕೆಳಗೆ ನೆಲದಮೇಲೆ ಮಲಗಿತ್ತು! ಅದರ ಹಾರಾಟ ತಂತಾನೇ ನಿಂತುಹೋಗಿತ್ತು ಯಾಕೆಂದರೆ ಕಾಲು ಮುರಿದಂತಿತ್ತು. ಈತ ತಲೆಕೆಡಿಸಿಕೊಳ್ಳಲಿಲ್ಲ, ಆದರೆ ತುಲನೆಮಾಡಿದ, ಬುದ್ಧಿವಂತ ಎನಿಸಿಕೊಂಡ ಮಂಗಗಳು ನೀರಲ್ಲಿನ ಮೀನಿನ ಹೆಜ್ಜೆಯ ಗುರುತು ಹೇಗೆ ಸಿಗದೋ ಹಾಗೇ, ಮುಸುಕಲ್ಲಿ ಗುದ್ದಿದ್ದು ನೋವಾದರೂ ಗಾಯ ಹೇಗೆ ಕಾಣದೋ ಹಾಗೇ, ಕಾನೂನಿನ ಚೌಕಟ್ಟಿಗೆ ಕಾಗದದಲ್ಲಿ ಸಿಗದಂತೇ ತಪ್ಪಿಸಿಕೊಂಡು ಹಾರಾಡಿ ಹಾರಾಡಿ ಇನ್ನೇನು ’ಎಣ್ಣೆ ಬರುವಾಗ ಗಾಣ ಮುರಿದಂತೇ’ ಆದಾಗ ಹತಾಶೆಯಿಂದ ಕುಳಿತಿದ್ದನ್ನು ನೆನೆಸಿಕೊಂಡ

------------------

ಮಗ್ಗಿ ಹೇಳು ಎಂದರು ಮೇಷ್ಟ್ರು. ಈತ ಹೇಳಿದ. ೧೨೧-೧೦೫+೧ ನ್ನು ಸೇರಿಸಿ ಒಂದೇ ನಿಮಿಷದಲ್ಲಿ ಹೇಳಿಬಿಟ್ಟ-೧೦೬. ಪಾಪ ಗಣಿತದಲ್ಲಿ ಪಕ್ಕಾ! ಆದರೇನು ಮಾಡೋದು " ಯಾಕಪ್ಪಾ ಅಷ್ಟು ಅವಸರ ಮಾಡಿದೆ" ಎಂದರೆ ಕುದುರೆ ಖರೀದಿಸಿದ ಜನ ಮಗ್ಗಿ ತಪ್ಪು ಎಂದು ಹೊಡೆಯಲು ಬಂದಿದ್ದರು, ಅದಕ್ಕೇ ಅನಿವಾರ್ಯವಾಗಿ ಹಾಗೆಮಾಡಿದೆ ಎನ್ನುವುದನ್ನೇ ಬೇರೇ ರೀತಿ ಹೇಳಿದ.

----------------

ಈತನಿಗೆ ಸಂಭ್ರಮವೂ ಇರಲಿಲ್ಲ, ಭ್ರಮೆಯೂ ಇರಲಿಲ್ಲ! ಯಾಕೆಂದರೆ ಅದರಲ್ಲಿ ಹುರುಳೇ ಇಲ್ಲ ಎಂಬುದು ಈತನ ಅನಿಸಿಕೆ. ಯಾರೋ ಹೇಳಿದರು ಮತ್ತೆ ರೆಕ್ಕೆ-ಪುಕ್ಕ ಬಲಿಯುತ್ತಿದೆ, ಕುದುರೆವ್ಯಾಪಾರಕ್ಕೆ ಕಣ ತಯಾರಾಗುತ್ತಿದೆ! --ಎಂದು. ಈತ ಆತನನ್ನು ನೋಡಿದ. ಆತ ಏನೂ ತಿನ್ನದ ಸೊಳ್ಳೆಯಂತಿದ್ದ, ಯಾವ ಥೆರಪಿಯಿಂದಲೂ ಆತ ರಿಪೇರಿ ಕಂಡಿರಲಿಲ್ಲ. ಯಾಕೋ ಒಂದು ಕೈ ನೋಡೋಣವೆನ್ನುವ ಮನಸ್ಸಾಯಿತು ಆತನಿಗೆ. ತಾನು ಬೇಹುಗಾರಿಕೆಯಲ್ಲಿ ಬಹಳಜಾಣ ಎಂದ! ಆಚೀಚೆ ಓಡಡತೊಡಗಿದ ನೋಡಿ--ಸೊಳ್ಳೆಯಂತಿದ್ದವ ತಿಂದೂ ತಿಂದೂ ’ಉಬ್ಬಿ’ಹೋದ !

----------------

ಈತ ಇನ್ನೇನು ಮನೆಗೆ ಹೊರಟಿದ್ದ. ದಾರಿಯಲ್ಲಿ ಯಾರದೋ ಆರ್ತನಾದ " ಕಾಪಾಡೀ ಕಾಪಾಡೀ ". ಹೋಗಿ ನೋಡುತ್ತಾನೆ. ’ವಿದಳನ’ ಕ್ರಿಯೆಯಲ್ಲೂ, ಜಯಸಿರಿ-ಜಯಲಕ್ಷ್ಮಿ ದೊರೆತಾಗ ’ವಿಲೀನ’ಕ್ರಿಯೆಗೂ ಬಹಳವಾಗಿ ತೊಡಗಿಕೊಂಡಿದ್ದ ಪ್ರಾಣಿ-ಗೋಸುಂಬೆ ಎಂಬ ನಾಮಾಂಕಿತ ಪಡೆದು ಖ್ಯಾತಿವೆತ್ತ ಮಹಾನುಭಾವ ಜೀವಿ! ಈತ ಕೇಳಿದ " ಯಾಕಪ್ಪಾ ಏನಾಯ್ತು ? "

ಬಂದ ಉತ್ತರ " ನಾವೆಲ್ಲಾ ಸುಮ್ನೇ ಹೋಗಿದ್ದಲ್ಲಾ, ನಮ್ನೆಲ್ಲಾ ರೌಡಿಗಳು ಬಂದು ಹೆದರಿಸಿ ಕರ್ಕೊಂಡು ಹೋದ್ರು "
ಈತ ಕೇಳಿದ " ಅಲ್ಲಯ್ಯಾ ಮತ್ತೆ ೪-೫ದಿನ ಅಲ್ಲಿ ಆರಾಮಾಗಿ ಮೇದ್ಕೊಂಡಿದ್ದೆ "

" ಇಲ್ಲಣ್ಣಾ, ನಾನೆಲ್ ನಿಂತ್ ಬೇಕಾರೂ ಹೇಳ್ತೀನಿ, ನಾನು ಪಕ್ಷವಿರೋಧಿ ಅಲ್ಲ "

ಈತನಿಗೆ ನಗಬೇಕೋ ಅಳಬೇಕೋ ಒಂದೂ ತಿಳೀಲಿಲ್ಲ! ಹಾಳಾಗ್ ಹೋಗ್ಲಿ ನಮ್ ಹಣೇಬರ ಎಂದ್ಕೋತಾ ಮನೆದಾರಿ ಹಿಡ್ದ.

Monday, October 11, 2010

ಅಯೋಮಯ!


ಅಯೋಮಯ!

ಉಂಡಮನೆಗೆ ಎರಡು ಬಗೆವ
ಭಂಡ ರಾಜಕೀಯದವರ
ಕಂಡುಸೋತು ಮನವು ದಿನವು ಬರೆಯದಾಯಿತು !
ಕಂಡಕಂಡಲೆಲ್ಲ ಅಲೆದು
ಮೊಂಡು ಬುದ್ಧಿಬಹಳ ಮೆರೆದು
ಕೊಂಡು-ಕೊಡುವ ಕುದುರೆ ವ್ಯಾಪಾರನೋಡಿತು !

ಮಂಡೆಬಿಸಿ ಮಾಡಲೊಮ್ಮೆ
ಅಂಡಿಗೆ ಬಿಸಿಮುಟ್ಟಿಸುತ್ತ
ಚಂಡು ತೂರಿ ಮಜವಪಡೆವ ಶಾಸಕರನೋಡಿತು!
ಭಂಡಧೈರ್ಯದಿಂದ ಕೋಟಿ
’ಬಂಡವಾಳ’ದಂತೆ ಸುರಿವ
ಪುಂಡು ಹುಡುಗುರಾಜಕೀಯವನ್ನು ಕಂಡಿತು !

ಹೆಂಡ-ಹೆಣ್ಣು-ಹಣವ ಪಡೆದು
ಮಂಡಿಯೂರಿ ನಮಿಸುವಂತ
ಉಂಡೆನಾಮವಿಟ್ಟ ಶಾಸಕರ ಹುಡುಕಿತು !
ಹಿಂಡುಕಟ್ಟಿಕೊಂಡು ತಾವು
ಗೂಂಡಾಗಳು ಎಂದು ತೋರಿ
ಥಂಡುಹೊಡೆದು ದಾಸರಾದುದನ್ನು ಅರಿಯಿತು!

ಸಂಡಿಗೆ ಕಜ್ಜಾಯ ಮೆದ್ದು
ಗುಂಡಿಗೆಯಲಿ ತಂತ್ರಹೂಡಿ
ಮುಂಡೆಮದುವೆಯಲುಂಬ ಕೆಲವು ’ಕೈ’ಯನಂಬಿತು!
ಅಂಡುಸುಟ್ಟ ಬೆಕ್ಕಿನಂತೆ
ಅಂಡೆಚೆಡ್ಡಿ ಚಿವುಟಿಗೊಳುತ
ಕೊಂಡು-ಕಳೆದು ಹಪಹಪಿಸಿದ ’ದಳ’ವ ಕಂಡಿತು!

ಬೆಂಡೆಕಾಯಿ ಹುರಿದರೀತಿ
ಗುಂಡಿಯದುಮಿ ಬರೆದುಹರಿದು
ಬಂಡಿತುಂಬ ಮತವೆಣಿಸಿದ ರೀತಿ ನೆನೆಸಿತು!
ಕಂಡೂ ಕಂಡೂ ಕೊಡುವೆವಲ್ಲ
ಕುಂಡೆ-ಹೊಟ್ಟೆ ಬೆಳೆದ ಜನಕೆ
ಮಂಡೆಸರಿಯಿಲ್ಲ ನಮಗೆ ಎಂದು ಮರುಗಿತು !

Saturday, October 9, 2010

ಜಗವೆಂಬ ಹಕ್ಕಿ ಗೂಡು


ಜಗವೆಂಬ ಹಕ್ಕಿ ಗೂಡು

ಜಗವದೊಂದು ಹಕ್ಕಿ ಗೂಡು
ಅದಕೆ ತಾಯ ರೆಕ್ಕೆ ಮಾಡು
ಮರಿಗಳಿಹವು ಚಿಲಿಪಿಲಿಪಿಲಿ
ಗುಟುಕಿಗಾಗಿ ಗಲಿಬಿಲಿ !

ನಗುವು ನಲಿವು ಏಳುಬೀಳು
ಅಗಲಿಬಾಳದಂತ ಬಯಕೆ !
ತಾಯಿ ಮುನಿಸಿಕೊಂಡರಾಗ
ಸಹಿಸಿ ಬಾಳಲಾರೆವು

ಅಮ್ಮ ಪ್ರೀತಿ ತೋರ್ವಳೊಮ್ಮೆ
ಸುಮ್ಮನೇ ಕುಕ್ಕುವಳಿನ್ನೊಮ್ಮೆ
ನಮ್ಮ ಹುಟ್ಟು ಏತಕೆಂಬ
ಆಳ ಅರಿಯದಾದೆವು

ಹುಟ್ಟನಿರೀಕ್ಷಿತವು ಎಮಗೆ
ಸಾವು ಅನಿವಾರ್ಯದಾ ಘಳಿಗೆ
ಹುಟ್ಟು ಮತ್ತು ಸಾವ ನಡುವೆ
ಗೂಡಲೊಮ್ಮೆ ಚಿಗಿತೆವು !

ಜನುಮಜಾತ ಕರ್ಮದಲ್ಲಿ
ಭವದ ಬಂಧ ತೊರೆವುದೆಲ್ಲಿ ?
ನಗದು ಪುಣ್ಯಗಳಿಸಿ ಇಹದ
ಸಾಲ ತೀರಿಸುವೆವು !

ಗೆಲುವ ಸೂರ್ಯ ಕಿರಣ ಹೊಳೆದು
ಬಳಿಕ ರೆಕ್ಕೆ-ಪುಕ್ಕ ಬಲಿದು
ಅಮ್ಮ ಹಾರಕಲಿಸೆ ಒಮ್ಮೆ
ದೂರಹೊರಗೆ ಹೊರಟೆವು !