ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, July 23, 2010

’ಮಳೆಗಾಲದ ಒಂದು ದಿನ’


’ಮಳೆಗಾಲದ ಒಂದು ದಿನ’

ಬಹಳ ಜನ ಸೇರಿದ್ದರೂ ಮೊದಮೊದಲು ಯಾಕೆಂಬುದು ತಿಳಿಯಲಿಲ್ಲ. ನಂತರ ನನ್ನನ್ನು ಅಜ್ಜಿ-ಅಮ್ಮ ಆಗಾಗ ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು " ಹುಷಾರಾಗುತ್ತದೆ ಹೆದರಬೇಡ" ಎನ್ನುವಾಗಲೇ ಏನೋ ಅನುಮಾನ ಶುರುವಾಗಿದ್ದು! ಅದನ್ನು ಅರ್ಥೈಸಿಕೊಳ್ಳಲು ಬಹಳ ಸಮಯ ಹಿಡಿಯಲಿಲ್ಲ. ಯಾಕೆಂದರೆ ಅದು ಮೊದಲು ಮನಸ್ಸಿಗೆ ಗೊತ್ತಾಗಿ ಮರೆತಿದ್ದ ವಿಷಯ ಅಷ್ಟೇ !

ಮಳೆಗಾಲ ನಮ್ಮ ಕರಾವಳಿಯಲ್ಲಿ ಬಹಳ ಜೋರು. ಒಮ್ಮೊಮ್ಮೆ ಧೋ ಎನ್ನಹತ್ತಿದರೆ ಬರೋಬರಿ ಮೂರು ನಾಲ್ಕುದಿನಗಳವರೆಗೆ ಬಿಡದೇ ಇರುವ ಮಳೆಯೂ ಇತ್ತು. ವಾರಗಳತನಕ ಸುರಿದೂ ಸುರಿದೂ ಸುರಿದೂ ಬೇಸರಹುಟ್ಟಿಸುವಷ್ಟು ಮಳೆ ಬರುತ್ತಿತ್ತು. ಅಂದಿನ ಆ ಬೇಸರದ ಮಳೆಯ ದಿನಗಳಲ್ಲಿ ಕಾಲಹಾಕಲೇಂದೇ ಯಕ್ಷಗಾನದ ತಾಳಮದ್ದಲೆಯ ರೂಪ ಬಂದಿದ್ದು! ಯಾರಾದರೂ ಒಳ್ಳೆಯ ಮಾತುಗಾರರು ಬಂದ ಸುದ್ದಿ ತಿಳಿದರೆ ಪ್ರಸಂಗ ಯಾವುದೇ ಇರಲಿ ನಾವು ಹೋಗಿ ಅಕ್ಕ ಪಕ್ಕದ ಮನೆಗಳಲ್ಲೋ ದೇವಸ್ಥಾನದಲ್ಲೋ ಅದೆಲ್ಲಿ ತಾಳಮದ್ದಲೆ ನಡೆಯುತ್ತಿತ್ತೋ ಅಲ್ಲಿಗೆ ಧೌಡಾಯಿಸಿ ಕುಳಿತುಕೊಳ್ಳುತ್ತಿದ್ದೆವು. ಆದರೆ ದಿನಂಪ್ರತಿ ಪ್ರಸಂಗ[ತಾಳಮದ್ದಲೆ]ಇರುತ್ತಿರಲಿಲ್ಲ. ಆಗೆಲ್ಲ ಕಥೆ ಹೇಳುವವರನ್ನು ಹುಡುಕುವುದು! ಯಾರು ಚೆನ್ನಾಗಿ ಕಥೆ ಹೇಳುತ್ತಾರೋ ಅವರನ್ನು ಹುಡುಕಿ ದುಂಬಾಲು ಬೀಳುವುದು. ಅಂತೂ ಬ್ಯಾಂಕಿನಿಂದ ಸಾಲಪಡೆದಷ್ಟು ಕಷ್ಟಪಟ್ಟಾದರೂ ಅವರಿಂದ ಕಥೆ ಕೇಳಲೇಬೇಕು! ಇದು ನಮ್ಮ ಸಂಕಲ್ಪ ಸಿದ್ಧಿ!

ಮಳೆಗಾಲದ ನಮ್ಮ ಶಾಲೆಗಳಲ್ಲಿ ದಾಖಲೆ ನಿರ್ಮಿತ ಒಂದು ಕಾಯಂ ಪ್ರಬಂಧವೆಂದರೆ ’ಮಳೆಗಾಲದ ಒಂದು ದಿನ’ ! ಮಕ್ಕಳೇ ನಾಳೆ ಎಲ್ಲರೂ ಪ್ರಬಂಧ ಬರೆದುಕೊಂಡು ಬನ್ನಿ ಎಂದುಬಿಟ್ಟರೆ ನಾವೆಲ್ಲ ಬರೆಯೋದಕ್ಕೆ ಅಷ್ಟಾಗಿ ಗಟ್ಟಿಗರಲ್ಲದ ಕಾಲ ಅದಾಗಿದ್ದರಿಂದ ಬೆಕ್ಕಿಗೆ ಬರೆಹಾಕಿದಂತಾಗುತ್ತಿತ್ತು. " ಹ್ಯಾಗಾದ್ರೂ ತಪ್ಪಿಸ್ಕೊಳ್ಬೇಕಲ್ಲೋ ಸದಾಶಿವ " ಅಂತ ನಮ್ನಮ್ಮೊಳಗೆ ನಾವು ಮಾತಾಡಿಕೊಳ್ಳುತ್ತಿದ್ದೆವು. ಯಾಕೆಂದರೆ ಪ್ರಬಂಧ ಚೆನ್ನಾಗಿರಲಿಲ್ಲವೆಂದರೆ ನಮ್ಮ ಸರ್ ನಮ್ಮನ್ನು ಇತರ ಹುಡುಗರ ಮುಂದೆ ಛೇಡಿಸುವುದಾಗಾಲೀ ಗೇಲಿಮಾಡುವುದಾಗಲೀ ನಮಗೆ ಸತ್ತಷ್ಟಾಗುತ್ತಿತ್ತು, ಮರ್ಯಾದೆವಂತರು ನೋಡಿ! ಅದಕ್ಕೇ ಸಹವಾಸವೇ ಬೇಡ ಅಂತ ಯಾವುದಾದರೂ ಕಾರಣ ಹುಡುಕಿ ರಜಾಗುಜರಾಯಿಸಿಬಿಟ್ಟರೆ ಆಮೇಲೆ ಸರು ಅವರೇ ಕರಿಹಲಗೆಯ ಮೇಲೆ ಬರೆಯಿಸಿಕೊಡುವುದನ್ನು ನಕಲುಮಾಡಿಕೊಂಡರೆ ಸರಿ ಎಂಬುದು ನಮ್ಮ ಅಂಬೋಣ.

ವಿಷಯಕೇಳಿ ! ಮಳೆಗಾಲದ ಒಂದು ದಿನ ಅಂತ ಈಗ ಬರೆಯಲು ಹೇಳಿದರೆ ಒಂದಲ್ಲ, ಮಳೆಗಾಲದ ಸಾವಿರದಿನ ಬೇಕಾದರೂ ಬರೆದು ಕೊಟ್ಟೇವು, ಆದರೆ ಅಂದಿಗೆ ನಮಗದು ಆಗುತ್ತಿರಲಿಲ್ಲ. ಏನು ಬರೆಯಬೇಕೆಂಬುದೇ ತಿಳಿಯುತ್ತಿರಲಿಲ್ಲ. ಅಸಲಿಗೆ ನಾವು ವಿದ್ಯಾವಂತರೇನೋ ಹೌದಾಗಿದ್ದೆವು, ಅಂದರೆ ಪತ್ರಿಕೆಗಳನ್ನು ತಲೆಕೆಳಗಾಗಿ ಹಿಡಿದರೆ ನಮಗೆ ದೂರದಿಂದಲೇ ಗೊತ್ತಾಗುತ್ತಿತ್ತಪ್ಪ ಇನ್ನೇನು ಬೇಕು ಹೇಳಿ ? ಹಾಗಂತ ಕಮ್ಮಿ ಎಂದುಕೊಳ್ಳಬೇಡಿ ನಮ್ಮ ಚಿಕ್ಕಪ್ಪ, ಅಜ್ಜ ಎಲ್ಲಾ ಹೇಳಿದ್ದರು ದಿನಾಲೂ ರೇಡಿಯೋ ವಾರ್ತೆಕೇಳಿ ಲೋಕದ ಎಲ್ಲಾವಿಷಯ ಗೊತ್ತಾಗುತ್ತದೆ ಅಂತ. ನಿಜಹೇಳಲಾ ವಾರ್ತೆ ಮುಗಿದ ತಕ್ಷಣ ಬರುವ ಸಿನಿಮಾ ಹಾಡುಗಳು ನಮ್ಮ ಮನಕದ್ದುಬಿಟ್ಟಿದ್ದವು! ನಮಗೆ ವಾರ್ತೆಗೀರ್ತೆ ಎಲ್ಲಾ ಬೇಕಾಗುತ್ತಿರಲಿಲ್ಲ, ಆದರೆ ಹಾಡು ಕೇಳುವ ಚಟದಿಂದ ರೇಡಿಯೋ ಹತ್ತಿರವೇ ಸುಳುಕಾಡುವುದು ಜಾಸ್ತಿ ಇತ್ತು. ದೊಡ್ಡವರು ಬಂದರೆ ವಾರ್ತೆಕೇಳುವುದನ್ನು ತೋರಿಸುವುದು ಜೋರು! ಇಲ್ಲೂ ಅಷ್ಟೇ-ಅವರು ಬೈಯ್ದರೆ ತಡಕೊಳ್ಳುವ ತಾಕತ್ತು ನಮಗಿರಲಿಲ್ಲ,ಮರ್ಯಾದೆ ಪ್ರಶ್ನೆ ನೋಡಿ-ಅದಕ್ಕೇ ಅವರು ಹೇಳಿದ ಹಾಗೇ ವಾರ್ತೆ ಕೇಳಿದ ಹಾಗೇ ಕೇಳಿ ನಂತರ ಹಾಡು ಶುರುವಾದಾಗ ಸಣ್ಣಗೆ ಎಲೆ ಅಡಿಕೆ ಜೊತೆಗಿರುವ ಸುಣ್ಣದ ಅಂಡೆಯ ಥರದ ಅದೇನನ್ನೋ ತಿರುಗಿಸಿ ಸ್ವಲ್ಪ ಶಬ್ಢ ಜೋರಾಗಿ ಬರುವಂತೆ ಇಟ್ಟುಕೊಳ್ಳುತ್ತಿದ್ದೆವು. ಯಾರಾದರೂ ದೊಡ್ಡವರು ದೊಡ್ಡಬಾಯಿಮಾಡಿದರೆ [ಎನೋ ಕೂಗಿಕರೆದರೆ] ನಮಗೆ ಅನಿರೀಕ್ಷಿತವಾಗಿ ದೊಡ್ಡ ರೋಡ್ ಹಂಪ್ ಸಿಕ್ಕಿದ ಅನುಭವ ! ಹಾಡಿನ ಶಬ್ಢ ಸಣ್ಣಗಾಗಿಬಿಡುತ್ತಿತ್ತು !

ಸುಮ್ಮನೇ ಹೇಳುವುದಕ್ಕಲ್ಲ ದಿ|ಹೈಗುಂದ ಡಾಕ್ಟರು ಎಂದರೆ ನಮ್ಮಲ್ಲಿ ಆಗ ಜನಜನಿತ. ಜನರ ನಡುವೆ ತನ್ನನ್ನು ತೊಡಗಿಸಿಕೊಂಡ, ತೀರಾ ಬದುಕುವುದಕ್ಕೆ ಬೇಕಾಗುವಷ್ಟು ಮಾತ್ರ ಶುಲ್ಕ ಪಡೆದು ತುಲನಾತ್ಮಕ ನಾಡಿ ಪರೀಕ್ಷೆಯೇ ಮೊದಲಾದ ಕೆಲವು ಕ್ರಮಗಳಿಂದ ರೋಗಿಗಳ ರೋಗವಾಸಿಮಾಡುವ ಸೇವಾಭಾವನೆಯ ಆಯುರ್ವೈದ್ಯ ಅವರಾಗಿದ್ದರೂ ಪ್ರಸಂಗದ ಅರ್ಥ ಹೇಗೆ ಹೇಳುತ್ತಿದ್ದರು ಬಲ್ಲಿರೋ ಕೂತವ ಕೂತೇ ಇರಬೇಕು-ಬಾಯಿ ತೆರೆದುಕೊಂಡು! ಅವರ ಜೊತೆ ಎದುರಿಗೆ ಅಪರೂಪಕ್ಕೆ ಕೆರೆಮನೆ ದಿ|ಮಹಾಬಲ ಹೆಗಡೆಯವರು ಬಂದುಬಿಟ್ಟರೆ ಮುಗಿಯಿತು- ಅಲ್ಲಿ ಬೆಳಗಾಗುವವರೆಗೂ ಹಬ್ಬವೇ! ಕೇಳುವ ಕಿವಿಗೆ ರಸದೌತಣ. ಮಹಾಬಲರು ತಮ್ಮ ತೋಟ ಗದ್ದೆಗಳಲ್ಲೂ ತಿರುಗಾಡುತ್ತ " ನೋಡಿದೆಯಾ ವಿದುರ ಕೌರವನೊಡ್ಡೋಲಗವ......." ಎಂದು ಅಲ್ಲಿ ಹುಟ್ಟಿ ಬೆಳೆದ ಕಳೆಯ ಸಸಿಗಳೆಡೆಗೆ ಅಡ್ಡಡ್ಡ ಕೈತೋರಿಸುತ್ತ ನಡೆಯುತ್ತಿದ್ದರಂತೆ!ಇನ್ನೂ ವಿಶೇಷ ಎಂದರೆ ಬಾಂಬೆಗೋ ಎಲ್ಲಿಗೋ ಹೋಗಿ ಮರಳಿಬಂದವರು ಅಲ್ಲೆಲ್ಲೋ ಊರಕಡೆಯಲ್ಲಿ ಎಳೆನೀರನ್ನು ಕುಡಿದು ನೂರು ರುಪಾಯಿ ನೋಟು ಕೊಟ್ಟು [ಅಂದಿನ ಕಾಲಕ್ಕೆ ನೂರು] ಚಿಲ್ಲರೆ ಪಡೆಯದೇ ಯಕ್ಷಗಾನದ ಹಾಡು ಹೇಳಿಕೊಳ್ಳುತ್ತಾ ಹಾಗೇ ಹೋಗಿದ್ದರಂತೆ! ಅಂದರೆ ಯಕ್ಷಗಾನವನ್ನೇ ತನ್ನ ಉಸಿರಾಗಿ ಅನುಭವಿಸಿದ ಮಹಾನ್ ಕಲಾವಿದರಲ್ಲಿ ಮಹಾಬಲರೂ ಒಬ್ಬರು. ಇಂತಹ ಘಟಾನುಘಟಿಗಳು ಪ್ರಸಂಗ ನಡೆಸಿಕೊಡುವದಿನ ನಾವೆಲ್ಲಾ ಅಲ್ಲಿ ಹಾಜರು! ಮಾರನೇ ದಿನ ಶಾಲೆಯಲ್ಲಿ ಕಣ್ಣಲ್ಲಿ ಆಗಾಗ ಆಗಾಗ ಹಲವು ಕಲಾವಿದರು ಪ್ರಸಂಗದ ಅರ್ಥಹೇಳುವಂತೇ ಭಾಸ!

ಎಲ್ಲೋ ಒಮ್ಮೊಮ್ಮೆ ಗುರು ಮಾಸ್ತರು ಕ್ಲಾಸು ತೆಗೆದುಕೊಂಡರೆ ’ಮಳೆಗಾಲದ ಒಂದುದಿನ’ ಬರೆಯಬೇಕಾಗಿಯೇ ಬರುತ್ತಿತ್ತು. ಈ ಪ್ರಬಂಧ ಇದೆಯಲ್ಲ ಇದನ್ನು ಬರೆಸದ ಶಾಲೆಗಳು ಹಾಗೂ ತರಗತಿಗಳು ಇಲ್ಲವೆಂದರೆ ತಪ್ಪಿಲ್ಲವೇನೋ! ಏನೇನೋ ಸರ್ಕಸ್ಸು ಮಾಡಿ ಅದನ್ನು ಬರೆಯಹೊರಟರೆ ಮತ್ತದೇ ಪ್ರಶ್ನೆ- ಏನಂತ ಬರೆಯಬೇಕು. ಪ್ರಬಂಧದ ಗಂಧ-ಗಾಳಿಯೂ ಇರದ ಜನ ನಾವು, ಅಷ್ಟಿದ್ದೂ ಪ್ರಬಂಧ ಬರೆಯುತ್ತೇವೆಂದು ಹೊರಟರೆ ಸ್ಥಿತಿಗತಿ ಏನಾಗಬೇಡ! ಅವರಿವರ ಹತ್ತಿರ ಕೇಳುವುದು. ಅದೂ ಇದೂ ಸೇರಿಸಿ ಕೊನೆಗೊಮ್ಮೆ ಅದನ್ನು ಪ್ರಬಂಧ ಅಂತ ಕರೆದುಬಿಡುವುದು ನಮ್ಮ ವಿಶ್ವಪ್ರಯತ್ನ! [ಭಗೀರಥ ಪ್ರಯತ್ನಕ್ಕಿಂತ ದೊಡ್ಡದು ಎಂದು ತಿಳಿದುಕೊಳ್ಳಿ]

ಹೀಗೇ ಒಂದು ಮಳೆಗಾಲ. ಹಲಸಿನ ಹಪ್ಪಳ ತಿನ್ನುವ ಕಾಲ! ಹೊರಗೆ ಹನಿಹನಿ ಸೋನೆ ಮಳೆಯಿತ್ತು. ನಾನು ಮತ್ತು ಅಜ್ಜಿ ಅಡಿಗೆಮನೆಯಲ್ಲಿ ಹಲಸಿನ ಹಪ್ಪಳವನ್ನು ತಿನ್ನುವ ಪೂರ್ವ ತಯಾರಿಯಲ್ಲಿ ತೊಡಗಿದ್ದೆವು. ನಾನು ನೋಡುವುದು-ಅಜ್ಜಿ ತಯಾರುಮಾಡುವುದು. ಎರಡು ಹಲಸಿನ ಹಪ್ಪಳ ನಿಗಿನಿಗಿ ಇಂಗಾಳದ[ಕೆಂಡದ] ಒಲೆಯಲ್ಲಿಟ್ಟು ಸುಟ್ಟು ಅವುಗಳ ಎರಡೂ ಮೈಗೆ ಕೊಬ್ಬರಿ ಎಣ್ಣೆ ಸವರಿ ಮೇಲೆ ಕಾಯಿತುರಿ ಇಟ್ಟು ಅಜ್ಜಿ ನನ್ನ ಹತ್ತಿರ ಅದನ್ನು ಕೊಟ್ಟು ಮಹಡಿಯಲ್ಲಿ ಕುಳಿತು ಓದುತ್ತಿದ್ದ ನನ್ನ ಚಿಕ್ಕಪ್ಪನಿಗೆ ಕೊಟ್ಟುಬರಲು ತಾಕೀತು ಮಾಡಿದಳು. ಭಕ್ತಿಯಿಂದ ಅದನ್ನು ಶಿರಸಾವಹಿಸಿ ನಡೆಸಲು ಸುಕುಮಾರನಾದ ನಾನು ಮನೆಯ ಒಳಗಡೆಯ ಮರದ ಏಣಿಯನ್ನು ಹತ್ತಿ ಹೋಗಿ ಅದನ್ನು ಚಿಕ್ಕಪ್ಪನಿಗೆ ಕೊಟ್ಟು ನನ್ನ ಪಾಲಿನ ಹಪ್ಪಳದ ವಸೂಲಿಗೆ ವಾಪಸ್ಸು ಬರುತ್ತಿದ್ದೆ. ಅಲ್ಲೇ ನೋಡಿ ಎಡವಟ್ಟಾಗಿದ್ದು- ಏಣಿಯು ಹೊರ ಕಿಟಕಿಗೆ ಹತ್ತಿರವಿದ್ದುದರಿಂದ ಮಳೆಯ ನೀರಿನ ಸಣ್ಣ ಹನಿಗಳು ಗಾಳಿಗೆ ಕಿಟಕಿ ಮೂಲಕ ಹಾರಿ ಏಣಿಯ ಮೆಟ್ಟಿಲ ಮೇಲೆ ಬಿದ್ದಿದ್ದವು. ಇದನ್ನು ತಿಳಿಯದೇ ಇಳಿಯುತ್ತಿದ್ದ ನಾನು ಏಣಿಯ ತುದಿಯಿಂದ ಕೆಳತನಕ ಎಷ್ಟು ಮೆಟ್ಟಿಲು ಇದೆಯೆಂಬುದನ್ನು ಒಂದೇ ಸಲಕ್ಕೆ ಲೆಕ್ಕಹಾಕಿಬಿಟ್ಟಿದ್ದೆ! ಹಾಗೆ ಬಿದ್ದ ಪರಿಣಾಮ [ಬಿದ್ದ ಎನ್ನಬೇಡಿ-ಮರ್ಯಾದೆ ಪ್ರಶ್ನೆ ಮಾರಾಯರೆ] ಹಣೆಯ ಮೂಲೆಗೆ ಏನೋ ಬಡಿದು ಆಳವಾದ ಗಾಯದ ಜೊತೆಗೆ ನನಗೆ ಪ್ರಜ್ಞೆ ಇರಲಿಲ್ಲ. ಅಷ್ಟು ಮಾತ್ರ ತಿಳಿದಿತ್ತೇ ವಿನಃ ನಂತರದ್ದು ನನಗೆ ಏನೂ ಗೊತ್ತಿರಲಿಲ್ಲ.

ತಿಳಿದಿದ್ದು ಇಷ್ಟು- ನಾನು ಬಿದ್ದಮೇಲೆ ರಕ್ತ ಸುಮಾರು ಹೋಯಿತು. ನಂತರ ಕಂಗಾಲಾದ ಮನೆಯ ಹಿರಿಯರು ಅದು ಹೇಗೋ ಗಾಡಿ ಹಿಡಿದು ಹತ್ತು ಕಿಲೋಮೀಟರ್ ದೂರಕ್ರಮಿಸಿ ಅಡಿಗ ವೈದ್ಯರನ್ನು ಕರೆತಂದರು. ಅಡಿಗ ವೈದ್ಯರು ಬಂದವರೇ ಅದೇನೇನೋ ಚಿಕಿತ್ಸೆ ಮಾಡಿ ಹಣೆಯ ಗಾಯಕ್ಕೆ ಬ್ಯಾಂಡೇಜು ಕಟ್ಟಿ, ನನಗೆ ನೋವು ತಿಳಿಯದಂತೆ ಏನೇನೋ ಮಾಡಿದ್ದರು. ಇದನ್ನೆಲ್ಲ ಕಂಡು ಹೌಹಾರಿ ಹೆದರಿಬಿದ್ದ ನನ್ನ ಅಜ್ಜಿ-ಆಮ್ಮ ಎಲ್ಲಾ ಸೇರಿ ಮಳೆಗೆ ಹಿಡಿಶಾಪ ಹಾಕಿದರಿರಬೇಕು! ಅಂತೂ ನನಗಾದ ಸ್ಥಿತಿ ನೋಡಿ ಅವರು ನನಗೆ ಇನ್ನೇನಾಗುತ್ತದೋ ಎಂಬ ಒಳ ಮನಸ್ಸಿನ ಹೆದರಿಕೆಯಿಂದ " ಹೆದರಬೇಡ ಹೆದರಬೇಡ " ಎನ್ನುತ್ತ ತಲೆನೇವರಿಸುತ್ತಿದ್ದರು. ಅಂತೂ ಕೊನೆಗೊಮ್ಮೆ ನಿರುಂಬಳವಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು! ಆಮೇಲೆ ಸರಿಸುಮಾರು ತಿಂಗಳಕಾಲ ನನ್ನ ಬ್ಯಾಂಡೇಜು ಬಿಡಿಸಿರಲಿಲ್ಲ. ಕೊನೆಕೊನೆಗೆ ಅದಕ್ಕೆ ಮೇಲಿಂದ ಕೊಬ್ಬರಿ ಎಣ್ಣೆ ಬಿಡುತ್ತ ಅದು ತಂತಾನೇ ಜಾರುವಂತೆ ಮಾಡಿದರು. ತಿಂಗಳ ಮೇಲೆ ಅದ್ಯಾವುದೋ ಒಂದು ರಾತ್ರಿ ಮಲಗಿರುವಾಗ ಹಾಸಿಗೆಯಲ್ಲೇ ಅದು ತನ್ನಿಂದ ತಾನೇ ಬಿದ್ದುಹೋಯಿತು. ಮಳೆಗಾಲವನ್ನು ವಿನಾಕಾರಣ ಬೈದರೇ ಹೊರತು ಅದರದ್ದೇನು ತಪ್ಪು!

ಅದಾದಮೇಲೆ ಮಳೆಗಾಲದ ಹಲವು ದಿನಗಳು ಬಂದುಹೋದವು. ಆದರೆ ಬರೆಯಬೇಕಾದ ಆ ಪ್ರಬಂಧಮಾತ್ರ ಹಾಗೆಯೇ ಕುಳಿತಿರುತ್ತಿತ್ತು. ಮಳೆ ಜೋರಾದಾಗ ಮರದಮೇಲೆ ನೆನೆಯುತ್ತ ಕೂರುವ ಮಂಗಗಳು " ಸಾಯ್ಲಿ ಹಾಳಾದ್ ಮಳೆಗಾಲ, ನಾಳೆ ಬೆಳಗಾಗಲಿ ನಾವೆಲ್ಲ ಸೇರಿ ಮನೆ ಕಟ್ಟಿಯೇ ಬಿಡೋಣ " ಎಂದುಕೊಳ್ಳುತ್ತವಂತೆ. ಬೆಳಗಾದಾಗ ಆಹಾರ ಹುಡುಕುವ ಗಡಿಬಿಡಿಯಲ್ಲಿ ರೊಯ್ಯ ರೊಯ್ಯನೆ ಮರದಿಂದ ಜಿಗಿಜಿಗಿದು ಹಾರೋಡಿ ಪರಾರಿ, ಮತ್ತೆ ಮರುರಾತ್ರಿ ಮಳೆಬಂದಾಗ ಅದೇ ಮನೆಕಟ್ಟುವ ಮೀಟಿಂಗು! ಇದರ ಪುನರಾವರ್ತನೆ ಮಳೆಗಾಲ ಮುಗಿಯುವವರೆಗೂ. ಒಂದರ್ಥದಲ್ಲಿ ಮಾಡಬೇಕು ಮಾಡಬೇಕು ಎನ್ನುತ್ತ ಹಾಗೇ ಮುಂದೂಡುವ ಕೆಲಸಗಳಿಗೆ ನಮ್ಮಲ್ಲಿ ಇಂದಿಗೂ ಬಳಸುವ ಗಾದೆ ’ಮಂಗ ಮನೆಕಟ್ಟಿದ ಹಾಗೇ ’ ಅಂತ. ಇಲ್ಲಿ ’ಮಳೆಗಾಲದ ಒಂದುದಿನ’ ಕೂಡ ಮಂಗ ಮನೆಕಟ್ಟಿದ ಹಾಗೇ ಅಲ್ಲವೇ ?

Thursday, July 22, 2010

ಋಣಿ

ಚಿತ್ರ ಋಣ :ಅಂತರ್ಜಾಲ

ಋಣಿ

ಋಣಿಯಾಗು ಜಗದಲ್ಲಿ ತಂದೆತಾಯಿಗಳಿಂಗೆ
ಅಣಿಗೊಳಿಸು ನಿನ್ನ ಮನ ನೆನೆಸೆ ಧೇನುವನು
ಕಣಕಣದ ತುಂಬೆಲ್ಲ ದೈವತ್ವವಂ ಹೊತ್ತ
ಗಣಿಯು ಸಾತ್ವಿಕ ರೂಪ | ಜಗದಮಿತ್ರ

ಊರೊಳಗೆ ದೊಡ್ಡಜನ ನೀನಹುದು ದುಡ್ಡಿರಲು
ವೀರನೆಂಬರು ನಿನಗೆ ನೀ ಗೆದ್ದುಬರಲು
ಆರೇಳುದಿನ ಕಾಲ ಬಡತನವ ನಟಿಸೊಮ್ಮೆ
ಕೇರುತ್ತ ಜನರೆಣಿಸು | ಜಗದಮಿತ್ರ

ಮರೆಯದಿರು ಶಿಕ್ಷಕರ ತೊರೆಯದಿರು ಮನೆಜನರ
ಕುರಿತೋದು ಮಹಾನುಭಾವ ಜೀವಿಗಳ
ಅರೆಕಾಸಿನಾಸೆಯಲಿ ಮಾರದಿರು ನಿನ್ನತನ
ಬರೆದು ತೋರಿಸು ಜಗಕೆ | ಜಗದಮಿತ್ರ

ನೆನೆಯೊ ನೆರೆಹೊರೆಯನ್ನ ನೆನೆಯೊ ಗುರುಹಿರಿಯರನ
ಮನಮುಟ್ಟಿ ಭಜಿಸು ನೀ ನಿತ್ಯ ದೈವವನ
ವನರಾಶಿ ಈ ಭೂಮಿ ವಾಯು ನದಿಗಳ ನೆನೆಯೊ
ಕನಸಲ್ಲು ಕೆಡಿಸದಿರು | ಜಗದಮಿತ್ರ

ವಿನಯ ವಿದ್ಯೆಗೆ ಬೇಕು ಮನೆಗೆ ಛಾವಣಿಬೇಕು
ಘನಕಾರ್ಯಮಾಡುವಗೆ ಮೊದಲು ಮನಬೇಕು
ಜನತಂತ್ರ ತುಳಿದಿರಲು ಅಡ್ಡದಾರಿಯ ಭರದಿ
ತನುಕೊಡವಿ ಸಡ್ಡುಹೊಡೆ | ಜಗದಮಿತ್ರ

ನೆನೆ ನಿನ್ನ ದೇಶವನು ನೆನೆ ನಿನ್ನ ರಾಜ್ಯವನು
ನೆನೆಯೊಮ್ಮೆ ಈ ಜನ್ಮದುಪಕರಿಪ ಜನರ
ಮನವ ಒಂದಾವರ್ತಿ ಹಿಡಿದು ಜಾಗ್ರತಗೊಳಿಸಿ
ಮುನಿಜನರ ನೆನೆಯೊ ನೀ | ಜಗದಮಿತ್ರ

Tuesday, July 20, 2010

ತಿಂಗಳ ಕನಸು

ರಾಜಾರವಿವರ್ಮ ರಚಿತ ಚಿತ್ರಕೃಪೆ-ಅಂತರ್ಜಾಲ

ತಿಂಗಳ ಕನಸು

ತಿಂಗಳ ರಾತ್ರಿಯಲಿ ತಂಗಾಳಿ ಸುಯ್ದಿರಲು
ಅಂಗಳಕಿಳಿವ ಆಸೆ
ಮಂಗಳನೋಡೋಡಿ ಓಡೋಡಿ ಕಂಡಿರಲು
ಕಂಗಳ ತುಂಬಿಹುದು ಕನಸುಗಳ ಪರಿಷೆ!

ಅಲ್ಲಿ ನೀರವದ ಪರಿಸರದಿ ಮಾಮರದಿ ಗೂಡಿನಲಿ
ಚಿಲಿಪಿಲಿ ಸವಿಯುಲಿಯ ಕೊಸರುವಿಕೆ
ಎಲ್ಲಾ ಮಲಗಿರಲು ಹಾಯಾಗಿ ಅನುಭವಿಸೆ ಸುಖನಿದ್ದೆ
ನಲ್ಲೆ ನೆನಪಾಗಿ ಉಲಿದುಲಿದು ಗುನುಗುವಿಕೆ

ಹಾಡು ಹಾಡುತ್ತ ನಡೆಯುತ್ತಾ ನಗುತಿರುವ ಚಂದಿರನ
ಜಾಡಿ ನೀರಿನಲಿ ಬಂಧಿಸುವ ಬಯಕೆ
ಆಡಿ ಮುದ್ದಾಡಿ ಮನಸಾರೆ ನೇವರಿಸೆ ಮುಂಗುರುಳ
ಬೀಡು ಬಿಟ್ಟಿಹುದು ಮನವದು ಮೇಯೋಕೆ!

ರವಿಯು ನಿರ್ಗಮಿಸಿ ಜಾವದಲಿ ಶಶಿಯುದಿಸಿ ನಸುನಗುತ
ಭುವಿಯ ಮೈಗೆಲ್ಲ ಹಾಲಿನ ಅಭಿಷೇಚನ
ಕವಿದ ಕತ್ತಲೆಯ ಮೋಡಗಳ ನಡುನಡುವೆ ಅಡಗುತ್ತ
ಸವಿವ ಕಣ್ಣಿಗೆ ಬೆಳ್ಳಿಯ ನೀರಾಜನ!

ಉದ್ದಜಡೆಯವಳೆ ಸಂಪಿಗೆನಾಸಿಕ ಮುದ್ದು ಮೊಗದವಳೆ
ಖುದ್ದು ನೀನೊಮ್ಮೆ ಇಲ್ಲಿಗೆ ಬರಬಾರದೇ ?
ಸದ್ದುಮಾಡದೆ ಹಿತ್ತಲ ಬಾಗಿಲನು ತೆರೆಯುತ್ತ ತಾಬರದೇ
ನಿದ್ದೆ ಕದ್ದವಳೆ ಇರುವೆಯ ದಯೆತೋರದೇ ?

Monday, July 19, 2010

ಕಾಮನ್ ಸೆನ್ಸ್ -ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ ಕಾಮನ್ ಆಂಡ್ ಏಜಿಂಗ್

ಚಿತ್ರ ಕೃಪೆ -ಅಂತರ್ಜಾಲ

ಕಾಮನ್ ಸೆನ್ಸ್ -ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ
ಕಾಮನ್


ಆಂಡ್

ಏಜಿಂಗ್

ಇದರ ಬಗ್ಗೆ ನಮ್ಮ ಹೊಸ ಪೀಳಿಗೆಯವರು ಲಕ್ಷ್ಯವಿಟ್ಟರೆ ಅವರ ಅರ್ಧ ಕರ್ತವ್ಯ ನೆರವೇರಿದ ಹಾಗೇ ಎಂದರೆ ತಪ್ಪಲ್ಲ ಅಲ್ಲವೇ ? ಯಾಕೆಂದರೆ ಯಾವುದು ಜೀವನದಲ್ಲಿ ಅತೀ ಮುಖ್ಯವೋ ಅದನ್ನೇ ಅರಿತಿರದ ಹೊಸ ಪೀಳಿಗೆ ತಯಾರಾಗುತ್ತಿದೆ! ಎಪ್ಟಿಟ್ಯೂಡ್ ಟೆಸ್ಟ್ ಇದೆ ಅಂತ ಆಗಾಗ ಪುಸ್ತಕದ ಬದನೇಕಾಯಿ ಬಳಸುವ ಯುವ ಪೀಳಿಗೆಗೆ ನಿಜ ಅರ್ಥದಲ್ಲಿ ಅದು ಟೆಸ್ಟ್ ಬರೆಯಲು ಬೇಕಾಗಿ ಓದಿಕೊಳ್ಳುವ ಸಾಮಗ್ರಿಯಾಗಿದೆಯೇ ಹೊರತು ಜೀವನಕ್ರಮದಲ್ಲಿ ಅದರ ಅಳವಡಿಕೆ ಇಲ್ಲ. ನಾವೆಲ್ಲಾ ಆಗಾಗ ಅನ್ನುತ್ತಿರುತ್ತೇವೆ-ಜನರೇಶನ್ ಗ್ಯಾಪ್ ಜನರೇಶನ್ ಗ್ಯಾಪ್ ಅಂತ. ಆದರೆ ಕೆಲವು ಜನರಿಗೆ ತಲೆಮಾರುಗಳ ಮಧ್ಯೆ ಯಾವುದೇ ಬದಲಾವಣೆಯ ಅನಿಸಿಕೆ ಇರದ ಬಳಕೆ ಸಾಧ್ಯ. ಕೆಲವರು ಮುದುಕರಾದರೂ ಎಳಬರ ಜೊತೆ ಸ್ನೇಹಿತರ ರೀತಿ ಹೊಂದಿಕೊಳ್ಳುತ್ತಾರೆ. ಕೆಲವರು ಚಿಕ್ಕವರಿದ್ದರೂ ಅವರಿಗೆ ತಾವು ವಯಸ್ಸಾಗಿ ಅನುಭವ ಪಕ್ವವಾದವರಂತೇ ಕಾಣಿಸಿಕೊಳ್ಳಬೇಕೆಂಬ ಅಪೇಕ್ಷೆ. ಅದಿರಲಿ ನಾವೀಗ ಸದ್ಯಕ್ಕೆ ಮರಳಿ ವಿಷಯಕ್ಕೆ ಬರೋಣ-

ಕಾಮನ್ ಸೆನ್ಸ್ ಅಂದರೇನು? ಬದುಕಿನಲ್ಲಿ ನಾಗರಿಕನೋರ್ವ ತನ್ನ ಇರವಿನಿಂದ ಇನ್ನೊಬ್ಬರಿಗೆ ಅನಾನುಕೂಲವೋ ಅಪಚಾರವೋ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ತಾನು ಮಾಡಬೇಕಾದ ಕೆಲವು ಸಮಾಜಮುಖಿ ಕೆಲಸಗಳನ್ನು ಸಾಮಾನ್ಯ ತಿಳುವಳಿಕೆ ಅಥವಾ ಕಾಮನ್ ಸೆನ್ಸ್ ಎನ್ನುತ್ತಾರೆಯಷ್ಟೇ? ಸೆನ್ಸ್ ಅನ್ನುವ ಶಬ್ಧಕ್ಕೆ ಸ್ಪಂದಿಸು ಎನ್ನುವ ಅರ್ಥವೂ ಸಿಗುತ್ತದೆ. ಸ್ಪಂದನೆಯೇ ಇಲ್ಲದ ಹಲವು ವ್ಯಕ್ತಿಗಳು ಸಿಗುತ್ತಾರೆ, ಅದಲ್ಲದೇ ಇತ್ತೀಚೆಗೆ ನಮ್ಮ ಕನ್ನಡದ ಭಾಷಾಶೈಲಿಯಲ್ಲಿ ’ಜಾಣ ಕುರುಡು’, ’ಜಾಣ ಕಿವುಡು’ ಇತ್ಯಾದಿ ಶಬ್ಢಗಳು ಸೇರಿಕೊಂಡಿವೆ. ಕಂಡೂ ಕಾಣದಂತಿರುವುದಕ್ಕೆ ಜಾಣ ಕುರುಡು ಎಂದರೆ ಕೇಳಿಸಿದರೂ ಕೆಳಿಸದಿರುವುದಕ್ಕೆ ಜಾಣ ಕಿವುಡು ಎನ್ನುತ್ತಾರೆ. ಹಿಂದೆಲ್ಲ ಜೀವನದಲ್ಲಿ ಜಾಣ ಕುರುಡು ಮತ್ತು ಜಾಣ ಕಿವುಡು ಸ್ವಭಾವ ಜಾರಿಯಲ್ಲಿರಲಿಲ್ಲ. ಅಲ್ಲಿ ಏನಿದ್ದರೂ ಆಡಿದ ಮಾತೆಲ್ಲ ಸತ್ಯವೇ ಆಗಿರುತ್ತಿತ್ತು.ಇದೆಲ್ಲ ಇಂದಿನ ನಮ್ಮ ಅಗತ್ಯಕ್ಕೆ, ಅನುಕೂಲಕ್ಕೆ ತಕ್ಕಂತೆ ನಾವು ಸೃಜಿಸಿಕೊಂಡ ಶಬ್ಧಗಳು.

ರಸ್ತೆಯಲ್ಲಿ ನಡೆದು ಹೋಗುತ್ತಿರುತ್ತೇವೆ ಎಂದಿಟ್ಟುಕೊಳ್ಳೋಣ, ನಮ್ಮ ಬೆಂಗಳೂರಿನಂತಹ ಶಹರದಲ್ಲಿ ರಸ್ತೆಯಲ್ಲಿ ನಡೆಯ ಹೊರಟರೆ ಬಟ್ಟೆ ಬದಲಾಯಿಸಿ ಸ್ನಾನಮಾಡಬೇಕಾದುದು ನಮ್ಮಂಥವರಿಗೆ ಅನಿವಾರ್ಯ, ಕಾರಣ ಇಷ್ಟೇ -ಸಿಂಗಾಪೂರ್ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕರೆದ ಬೆಂಗಳೂರಲ್ಲಿ ನಡೆದಾಡುವ ಬಹುತೇಕ ಯುವ ಪೀಳಿಗೆ ಕಂಡ ಕಂಡಲ್ಲಿ ಪಿಚಕ್ ಪಿಚಕ್ ಎಂದು ಉಗುಳಿಕೊಂಡೇ ಓಡಾಡುತ್ತಾರೆ. ತಿಳಿಯ ಹೇಳಿದರೆ ದುರುಗುಟ್ಟಿ ನೋಡಿ ಹೊಡೆಯೋಕೆ ಬರುವ ಸಂಪ್ರದಾಯ ಅವರದ್ದು! "ಇದೇನ್ ನಿಮ್ಮಪ್ಪನ್ ಮನೆ ಜಾಗಾನಾ?" ಎನ್ನುವ ಮಾತಿನಿಂದ ಜಗಳಕ್ಕೆ ಆರಂಭ. ಇದೇ ರೀತಿ ರಸ್ತೆಯಲ್ಲಿ ಅಥವಾ ಕಂಡಲ್ಲಿ ಬೀಡಿ-ಸಿಗರೇಟು ಸೇದುವುದು, ಸೇದಿದ ನಂತರ ಅದರ ಕೊನೆಯ ಆ ಮೋಟನ್ನು ಬೆಂಕಿ ಸಹಿತ ಅಲ್ಲಲ್ಲೇ ಬಿಸಾಡುವುದು,ಕಂಡ ಕಂಡ ಗೋಡೆಯ ಮೇಲೆ, ವಿದ್ಯುತ್ ಕಂಬಗಳಮೇಲೆ, ರಸ್ತೆಗಳ ನಾಮಫಲಕಗಳ ಮೇಲೆ ಬೇಕಾಬಿಟ್ಟಿ ಭಿತ್ತಿಪತ್ರಗಳನ್ನು ಅಂಟಿಸುವುದು, ಬಾಳೇಹಣ್ಣಿನ ಸಿಪ್ಪೆಯನ್ನು ಗೊತ್ತಿದ್ದೂ ರಸ್ತೆಗೆ ಹಾಕಿ ಯಾಓ ಜಾರಿದಾಗ ಮಜಾತೆಗೆದುಕೊಳ್ಳುವುದು, ಹಲ್ಲಲ್ಲಿ ಕತ್ತರಿಸಿ ಬಾಯಿಗೆ ಗುಟ್ಕಾ ಸುರುವಿಕೊಂಡು ಕಾಲಿ ಗುಟ್ಕಾ ಪ್ಯಾಕೆಟ್ ಅನ್ನು ರಸ್ತೆಗೆ ಎಸೆಯುವುದು, ಕಾಲಿಯಾಗಿರುವ ನೀರಿನ/ಕೋಲಾ ಬಾಟಲಿಗಳನ್ನು ಸುಮ್ಮನೇ ಕೈಯ್ಯಲ್ಲಿ ಯಾಕೆ ಅಂತ ಅಲ್ಲಲ್ಲೇ ಬಿಸಾಡುವುದು, ಎಲ್ಲೆಂದರಲ್ಲಿ ನಾಯಿಗಳ ರೀತಿ ಮೂತ್ರ ವಿಸರ್ಜಿಸುವುದು ಇವೆಲ್ಲಾ ಕಣ್ಣಿಗೆ ದಿನವೂ ಢಾಳಾಗಿ ಎದ್ದು ಕಾಣುವ ನಮ್ಮ ಸಿಂಗಾಪೂರಿನ ಲಕ್ಷಣಗಳು!

ಗೋಡೆಯಮೇಲೆ ಗೀಚುವುದು, ಬಸ್ಸಿನ ಕಿಟಕಿಯಿಂದ ತಿಂದುಳಿದ ಹಣ್ಣಿನ ಕೊಳೆತ ಭಾಗ, ಸಿಪ್ಪೆ ಮುಂತಾದುವುಗಳನ್ನು ಎಸೆಯುವುದು, ವಾಹನಗಳ ಕಿಟಕಿಯಿಂದ ಪಿಚಕ್ಕನೆ ಉಗುಳುವುದು-ಕೈ ತೊಳೆಯುವುದು, ವಾಹನ ಚಲಿಸುತ್ತಿರುವಾಗ ತಲೆ ಮತ್ತು ಕೈಗಳನ್ನು ಆಗಾಗ ಕಿಟಕಿಯಿಂದ ಹೊರಚಾಚುವುದು, ಶಹರದ ನಡುವಿನರಸ್ತೆಗಳಲ್ಲಿ ಹಸುಗಳು/ಎಮ್ಮೆಗಳು ಓಡಾಡಿದರೆ ತೊಂದರೆ ಅಂತ ತಿಳಿದೂ ಅವುಗಳನ್ನು ಹಾಗೆ ಮಧ್ಯೆ ಕಳಿಸುವುದು, ನಾಯಿಯನ್ನು ರಸ್ತೆಯ ಕಂಡ ಕಂಡ ಭಾಗಗಳಲ್ಲಿ ನಿಲ್ಲಿಸಿ [ಹೆಚ್ಚಾಗಿ ಪಕ್ಕದ ಮನೆಯ ಮುಂದೆ]ಮಲ-ಮೂತ್ರ ವಿಸರ್ಜಿಸುವುದು,ಪಬ್ಲಿಕ್ ಟಾಂಕಿಯ ನೀರಿನ ಕೊಳಾಯಿಯನ್ನು ತಿರುಗಿಸಿ ತಮ್ಮ ಕೆಲ್ಸವಾದ ಮೇಲೆ ಅದನ್ನು ಸ್ವಸ್ಥಾನಕ್ಕೆ ತಿರುಗಿಸಿ ನೀರು ನಿಲ್ಲಿಸದೇ ಹಾಗೇ ತೆರಳುವುದು, ಉದ್ಯಾನದಲ್ಲಿ ಹುಲ್ಲು ಹಾಸಿನ ಮೇಲೆ ಅಡ್ಡಡ್ಡ ಮಲಗುವುದು, ಹೂವು ಕೀಳುವುದು, ಬೇಡದ ತ್ಯಾಜ್ಯಗಳನ್ನು ಉದ್ಯಾನದಲ್ಲೇ ಕಂಡಲ್ಲಿ ಬಿಸಾಡುವುದು ಇವೆಲ್ಲಾ ಅವಿರತವಾಗಿ ನಡೆಸಿಬಂದ ನಮ್ಮ ಉದ್ಯಾನ ನಗರಿಯ ಯುವ ಪೀಳಿಗೆಯ ಸರ್ವೇಸಾಮಾನ್ಯ ಸ್ವಭಾವಗಳು-ಇವು ಅವರ ಲೆಕ್ಕದಲ್ಲಿ ತಪ್ಪಲ್ಲ ಎಂದು ಪರಿಗಣಿತವಾದ ಅಂಶಗಳು.

ಯಾವುದೋ ಸಂಪಿನಿನಲ್ಲಿ/ಹರತಾಳದಲ್ಲಿ/ಬಂದಿನಲ್ಲಿ ಸರಕಾರೀ ಬಸ್ಸುಗಳಿಗೆ ಬೆಂಕಿ ಹಚ್ಚುವುದು, ಜನರಿಗೆ ಕಲ್ಲಲ್ಲಿ ಹೊಡೆಯುವುದು, ಚಪ್ಪಲಿ ತೂರುವುದು, ವಿದೇಶೀ ಕೆಟ್ಟ ಪ್ರಜೆಯೊಬ್ಬ ಮಾಡಿದ್ದನ್ನು ಮಾಧ್ಯಮಗಳಲ್ಲಿ ತಿಳಿದು ಆ ಅಂಧಾನುಕರಣೆಯನ್ನೇ ಮಾಡಿ ಗಣ್ಯವ್ಯಕ್ತಿಗಳಿಗೆ ಹಾಗೂ ನ್ಯಾಯಾಲಯಗಳಲ್ಲಿ ಚಪ್ಪಲಿ ತೂರುವುದು, ಯವುದೋ ಕಾರ್ಖಾನೆಯ/ಮನೆಯ ಗಾಜಿನ ಕಿಟಕಿಗಳನ್ನು ಒಡೆಯುವುದು, ರೈಲು-ಬಸ್ಸು ತಡೆಯುವುದು ಇವೆಲ್ಲಾ ಉಗ್ರರೂಪೀ ವಿವೇಕಹೀನರ ಕೆಲಸಗಳು. ಖೋಟಾ ನೋಟು ಚಲಾವಣೆ,ಕೊಡಬಾರದ ಮುಖ್ಯಮಾಹಿತಿಗಳನ್ನು ವಿದೇಶೀಯರಿಗೆ ಕೊಡುವ ಬೇಹುಗಾರಿಕೆ, ಹಣದ ಆಸೆಗೆ ಯಾರಿಗೋ ಸಹಾಯಮಾಡಲು ಹೋಗಿ ಕೊಲೆ-ಸುಲಿಗೆ-ದರೋಡೆ ಮಾಡುವುದು, ಸಾರ್ವಜನಿಕ ಆಸ್ತಿಗಳಾದ ಮಂದಿರ,ಮಸೀದಿ,ಇಗರ್ಜಿ, ಬಸದಿ ಇವುಗಳನ್ನೆಲ್ಲ ದ್ವಂಸಮಾಡುವುದು, ದೇಶದ ಬಾವುಟಕ್ಕೆ ಅಪಚಾರವೆಸಗುವುದು, ತಮ್ಮ ಕಂಪನಿಗಳಲ್ಲಿ ವಿದೇಶೀಯರು ಅವರವರ ರಾಷ್ಟ್ರಗೀತೆಗಳನ್ನು ಹಾಡಿಕೊಂಡು ನಮ್ಮ ರಾಷ್ಟ್ರ ಗೀತೆಗೆ ಅವಹೇಳನ ಮಾಡುವಾಗ ಮುಚ್ಚಿಹಾಕುವುದು, ಕನ್ನಡ ಸಂಘಟನೆಗಳ ಹೆಸರಲ್ಲಿ ರೌಡಿಸಂ ಮಾಡುವುದು, ಇನ್ನೊಬ್ಬರ ಆಸ್ತಿಯನ್ನು ಬಲವಂತವಾಗಿ ತನ್ನದಾಗಿಸಿಕೊಳ್ಳುವುದು, ಹುಡುಗಿಯನ್ನು ನಂಬಿಸಿ ಕೈಕೊಡುವುದು, ಹಲವು ಹುಡಿಗಿಯರನ್ನು ಹಾಳುಮಾಡುವ ಚಟವನ್ನು ಬೆಳೆಸಿಕೊಂಡು ಮಜಾ ಪಡೆಯುವುದು-ಇವೆಲ್ಲಾ ಗುನ್ನೆಗಳು-ಅಪರಾಧಗಳು ಎನಿಸಿಕೊಳ್ಳುವ ಮಾಡಬಾರದ ಕೆಲಸಗಳು, ಆದರೆ ನಡೆದೇ ಇರುವ ಸಾಮಾನ್ಯ ಜ್ಞಾನರಹಿತ ಘಟನೆಗಳು.

ಪಠ್ಯಗಳಲ್ಲಿ ಪರರಿಗೆ ಸಹಾಯಮಾಡಬೇಕು, ಬಡವರಿಗೆ ಆದಷ್ಟು ದಾನ ಮಾಡಬೇಕು, ಆರ್ತರನ್ನು ರಕ್ಷಿಸಬೇಕು, ಕೈಲಾಗದವರನ್ನು ಕಣ್ಣೆತ್ತಿ ನೋಡಿ ಅವರಿಗೊಂದು ದಾರಿ ಕಲ್ಪಿಸಬೇಕು--ಹೀಗಿದ್ದೆಲ್ಲಾ ನಾವು ಓದಿರುತ್ತೇವೆ, ಆದರೆ ಯಾವುದೋ ಒಬ್ಬ ಕುರುಡ ಕೋಲು ಹಿಡಿದು ದೊಡ್ಡ ರಸ್ತೆಯನ್ನು ದಾಟುತ್ತಿರುವಾಗ ಇನ್ನೇನು ರಸ್ತೆಯ ಮಧ್ಯದ ವಿಭಾಜಕಕ್ಕೆ ತಾಗಿ ಬೀಳುತ್ತಾನೆ ಅಥವಾ ವಾಹನಕ್ಕೆ ಅಡ್ಡ ಸಿಕ್ಕಿಹಾಕಿಕೊಳ್ಳುತ್ತಾನೆ ಎಂದು ಕಾಣುತ್ತಿದ್ದರೂ ಕಂಡರೂ ಕಾಣಿಸದ ಹಾಗೇ ಸುಮ್ಮನೇ ಹೋಗಿಬಿಡುವುದು, ಯಾರೋ ಮುದುಕಿ/ಮುದುಕ ಸಹಾಯಮಾಡಿ ಎಂದು ಗೋಗರೆಯುತ್ತಿದ್ದರೆ ಅವರನ್ನು ಲೆಕ್ಕಿಸದಿರುವುದು, ಬಸ್ಸಿನಲ್ಲಿ ಮಹಿಳೆಯರ ಮೀಸಲು ಜಾಗದಲ್ಲಿ ಕುಳಿತುಕೊಳುವುದು, ಬಸ್ಸಿನಲ್ಲಿ ನಿಲ್ಲಲಾರದ ಮುದುಕರು ಪಕ್ಕಕ್ಕೆ ಬಂದು ನಿಂತಾಗ ಕುಳಿತಲ್ಲೇ ಕಂಡೂ ಕಾಣದಂತಿರುವುದು, ಬಸ್ಸಿನಲ್ಲಿ ನೂಕು ನುಗ್ಗಲಿನಲ್ಲಿ ಹುಡುಗಿಯ ಕೈಮೈ ತಾಗುವಂತೆ ನಿಂತುಕೊಂಡು ಮಜಾತೆಗೆದುಕೊಳ್ಳುವುದು,ಏಕಮುಖ ಸಂಚಾರದ ರಸ್ತೆಯಲ್ಲಿ ಅದು ನಮಗಲ್ಲ ಎಂದು ಪೋಲೀಸರಿರದಿದ್ದಾಗ ಹಾಗೇ ಗಾಡಿ ಓಡಿಸಿಕೊಂಡು ಹೋಗುವುದು, ರಸ್ತೆ ಅಪಘಾತದಲ್ಲಿ ಯಾರೋ ಬಿದ್ದಿದ್ದರೆ ನೋಡದೇ ರುಯ್ಯನೆ ಮುಂದೆ ಹೋಗಿಬಿಡುವುದು, ಪಕ್ಕದ ಮನೆಗೆ ಕಳ್ಳರು ಬಂದ ಸುದ್ದಿ ಕೇಳಿ ತಮ್ಮನೆಯ ಬಾಗಿಲುಗಳನ್ನು ತೆಗೆದು ಅಲ್ಲಿಗೆ ಸಹಾಯಕ್ಕೆ ಧಾವಿಸದೇ ಬಾಗಿಲು ಮುಚ್ಚಿ ಭದ್ರಪಡಿಸ್ಕೊಳ್ಳುವುದು, ಯಾವುದೋ ವ್ಯಕ್ತಿ ಕೂಗಿಕೊಂಡರೆ ಅದು ನಮಗ್ಯಾಕೆ ಬಿಡಿ ಎಂದುಕೊಂಡು ಅಸಡ್ಡೆ ಮಾಡುವುದು--ಇವೆಲ್ಲಾ ಕುರುಡು,ಕಿವುಡು ಜಾಣತನವೆಂಬ ಸಾಮಾನ್ಯಜ್ಞಾನ ರಹಿತ ಘಟನೆಗಳು.

ಪಟ್ಟಿ ಮಾಡಿದರೆ ಆಂಜನೇಯನ ಬಾಲದಂತೆ ಬೆಳೆಯುವ ಇಂತಹ ಘಟನೆಗಳು ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿವೆ. ಕೆಲವೊಮ್ಮೆ ನಾವೇ ಕೆಲವು ಸಣ್ಣ-ಪುಟ್ಟ ಲೋಪದೋಷಗಳಲ್ಲಿ ಭಾಗಿಯಾಗಿದ್ದರೆ ಅಚ್ಚರಿಪಡಬೇಕಿಲ್ಲ! "ನಾವೂ ಮನುಷ್ಯರು ತಾನೇ ? ಆಗುತ್ತಪ್ಪ ಅದಕ್ಕೇನೀಗ? " ಎಂದುಕೊಳ್ಳುವ ಬದಲು ಸ್ವಲ್ಪ ವಿವೇಚಿಸಿದರೆ ನಾವೆಲ್ಲಿ ಎಡವುತ್ತೇವೆ ಎಂಬುದನ್ನು ತಿಳಿದುಕೊಂಡು ಅಷ್ಟಷ್ಟಾಗಿ ಸರಿಪಡಿಸಿಕೊಳ್ಳಬಹುದಲ್ಲ !

ಇನ್ನು ಕೆಲವರಿಗೆ ತಾವು ಬಹಳ ವಯಸ್ಸಾದ ಅನುಭವೀ ಮುತ್ಸದ್ಧಿ ಎನಿಸಿಕೊಳ್ಳುವ ತವಕ. ಅವರು ಕುರುಚಲು ಗಡ್ಡ ಬೆಳೆಸಿಕೊಳ್ಳುವುದು, ಕಣ್ಣಿಗೆ ಗೋಲ್ಡನ್ ಕಲರ್ ಫ್ರೇಮ್ ಇರುವ ಕನ್ನಡಕ ಹಾಕಿಕೊಳುವುದು, ಕೂದಲನ್ನು ಆದಷ್ಟು ಹಣ್ಣಾಗಿದ್ದು ಕಾಣುವಂತೆ ಬಿಡುವುದು ಇವೆಲ್ಲಾ ಅವರ ಆಕರ್ಷಣೆಗಳು! " ನಾವೆಲ್ಲಾ ಆಗೆಲ್ಲಾ ಹೇಗಿದ್ದೆವು ಅಂದ್ರೆ " ಎಂದು ಶುರುವಿಟ್ಟುಕೊಳ್ಳುವ ಅವರ ಮಾತು ಕೆಂಪೇಗೌಡರ ಕಾಲದವರೆಗೋ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ವರೆಗೋ ಹೋಗಿನಿಲ್ಲುತ್ತವೆ. ವಯಸ್ಸಿನ್ನೂ ನಮಗಿಂತ ನಾಲ್ಕೈದು ವರ್ಷ ಜಾಸ್ತಿ ಇದ್ದರೂ ಎಲಾ ಇವನ ಯಾವರೀತಿ ಮಾತಾಡುತ್ತಾನಲ್ಲಾ ಎಂಬ ಪರಿಭಾಸವಾದರೂ ನಾವು ಹೇಳಿದರೆ ನಮಗೇ ಎದುರುಹಾಯುವ ಮೌಢ್ಯ ಅವರದಾಗಿರುತ್ತದೆ. ಈ ಹುಸಿ ವೃದ್ಧತನದಲ್ಲಿ ತಾನು ಮಾಡಬೇಕಾದ ಅನೇಕ ಕೆಲಸಗಳಿಗೆ ಡಿಸ್ಕೌಂಟು ಪಡೆಯುವ ಮನೋಭಿಲಾಷೆ ಅಡಗಿರುತ್ತದೆ ಎಂಬುದನ್ನು ಶೋಧಿಸಿ ತಿಳಿದುಕೊಂಡಿದ್ದೇನೆ. ಅಂಥವರಿಗೆ " ಸ್ವಾಈ ನೀವು ಇದೇ ರೀತಿ ಮಾಡಿದರೆ ಬೇಗ ಬೊಜ್ಜು ಬೆಳೆದು ನಿಜವಾಗಿಯೂ ಮುಪ್ಪು ಬಂದುಬಿಡುತ್ತದೆ " ಎಂದು ಹೇಳಬೇಕೆನಿಸುತ್ತದೆ. ಕೆಲವರು ತಮ್ಮ ಅನುಭವ ತುಂಬಾ ಆಳದ್ದು ಎನ್ನುವುದನ್ನು ಪ್ರಕಟಿಸಲೂ ಹೀಗೆ ಮುದುಕು ವೇಷ ಹಾಕುತ್ತಾರೆ ! ಕೆಲವರದ್ದು ಪ್ರಚಾರಪ್ರಿಯತೆ, ವಯಸ್ಸಾಗಿದ್ದರೂ ಶರೀರ ಮಾಗಿದ್ದರೂ ಏನಾದರೂ ಅಸಡ್ಡೆ ಹೇಳಿಕೆ ಕೊಟ್ಟು ಮಾಧ್ಯಮಗಳಲ್ಲಿ ಪ್ರಚಾರದಲ್ಲಿರುವುದೇ ಇವರ ಚಾಳಿ. ಬುದ್ಧಿಜೀವಿಗಳೆನಿಸಿಕೊಳ್ಳುವ ಇವರು ಜೀವಿತದ ಪೂರ್ತಿ ಆಗಾಗ ಆಗಾಗ ಸುದ್ದಿ ಮಾಡುತ್ತ ಬಂದವರೇ ಆಗಿರುತ್ತಾರೆ, ಈಗ ಮುದುಕಾಗಿ ಸುದ್ದಿ ಮಾಡಲು ಏನೂ ಇಲ್ಲದಾದಾಗ ಏನಾದರೂ ಅಸಂಬದ್ಧ ಹೇಳಿಕೆ ಕೊಟ್ಟುಬಿಟ್ಟರೆ ಅದರಿಂದ ಪ್ರಚಾರ ಸಿಗುತ್ತದಲ್ಲ ಎಂಬ ಅನಿಸಿಕೆ ಅವರದ್ದು. ಅವರ ಹೇಳಿಕೆಗಳು ಸಮಾಜದಮೇಲೆ ಯಾವ ಪರಿಣಾಮ ಉಂಟುಮಾಡುತ್ತವೆ ಎಂಬ ಕನಿಷ್ಠ ತಿಳುವಳಿಕೆಯನ್ನೂ ವಿವೇಚಿಸದೇ ಹೇಳಿಕೆ ಕೊಟ್ಟು ಪ್ರಚಾರ ಪಡೆವ ಹುನ್ನಾರ.

ಇನ್ನು ಕೆಲವು ಜನರಿರುತ್ತಾರೆ. ಅವರಿಗೆ ಮುಪ್ಪೇ ಬರುವುದಿಲ್ಲ. ಅವರು ಬಳಸದ ಬಣ್ಣಗಳೇ ಇಲ್ಲ, ಬಳಸದ ಪರಿಮಳ ದ್ರವ್ಯಗಳಾಗಲೀ, ಲೋಶನ್-ಶಾಂಪೂ, ಕ್ರೀಮು ಮುಂತಾದವುಗಳಾಗಲೀ ಇಲ್ಲವೇ ಇಲ್ಲ. ಚಿರಯೌವ್ವನಿಗರು ಎಂದು ಕರೆಸಿಕೊಳ್ಳಬೇಕೆಂಬುದು ಅವರ ಆಸೆ. ಕೆಲವರಲ್ಲಿ ಎಲ್ಲೋ ಒಳಗೆ ಕಾಮವಾಸನೆ ಕೂಡ ಇದ್ದಿರುತ್ತದೆ! ಯಾರನ್ನೋ ಪ್ರಲೋಭನೆಗೆ ಒಳಪಡಿಸಲು ಅವರು ಬಹಳ ಪ್ರಯತ್ನದಲ್ಲಿರುತ್ತಾರೆ! ಯಾವುದು ವಯಸ್ಸಾದವರಿಗೆ ಸಿಂಧುವಲ್ಲವೋ ಅದನ್ನು ಮಾಡಹೊರಟರೆ ಎಷ್ಟು ಚೆನ್ನ ಹೇಳಿ?

ಸಾಮಾನ್ಯ ಜ್ಞಾನದಲ್ಲಿ ಗಣಿತ, ವಿಜ್ಞಾನ,ಸಮಾಜ ವಿಜ್ಞಾನ, ರಾಜಕೀಯ, ಭಾಷೆ, ಸಂಗೀತ,ಸಾಹಿತ್ಯ, ಕಲೆ ಮುಂತಾದ ಎಲ್ಲರಂಗಗಳಲ್ಲೂ ಸ್ವಲ್ಪ ಸ್ವಲ್ಪ ಜ್ಞಾನ ಬೇಕೇ ಬೇಕು. ಒಂದು ಘಟನೆ ಕೇಳಿ- ವಿಧಾನ ಸೌಧದಿಂದ ಬಹುಮಹಡಿ ಕಟ್ಟಡ[ಅಂದಿನ ದಿನಗಳಲ್ಲಿ]ಕ್ಕೆ ಇರುವುದು ೦.೪ ಕಿಲೋಮೀಟರಿಗಿಂತ ಕಡಿಮೆ ಅಂತರ. ಆದರೆ ಇದನ್ನೇ ಪುಸ್ತಕಗಳಲ್ಲಿ ಲೆಕ್ಕತೋರಿಸುವಾಗ ರಸ್ತೆಕಾಮಗಾರಿಯ ಕಂತ್ರಾಟುದಾರನೊಬ್ಬ ೭೫ ಕಿಲೋಮೀಟರ್ ಎಂದು ನಮೂದಿಸಿ ಹಣಪಡೆದುಕೊಂಡಿದ್ದು ಹಳೆಯ ಜೋಕು! ನಮಗೆ ಗಣಿತ ಗೊತ್ತಿಲ್ಲದಿದ್ದರೆ ಅಳತೆ ಮಾಡುವುದು ಹೇಗೆ? ನಮ್ಮ ಬದುಕಿಗೆ ಯಾವುದನ್ನೇ ಕೊಡು-ಕೊಳ್ಳುವಾಗ ತೂಕ-ಅಳತೆಗಾದರೂ ನಮಗೆ ಗಣಿತ ಬೇಡವೇ? ಲೆಕ್ಕ ಬರದಿದ್ದರೆ ದುಡ್ಡು ಎಣಿಸುವುದು ಹೇಗೆ? ಹೀಗೇ ಉದಾಹರಿಸುತ್ತಾ ನಡೆದರೆ ಅದು ಮುಗಿಯದ ಕಥೆ!

ಹೀಗೇ ಸಾಮಾನ್ಯ ಜ್ಞಾನ ಕೇವಲ ಕುಳಿತಲ್ಲೇ ಬರುವುದಲ್ಲ. ಅದನ್ನು ನಾವು ಬಲ್ಲವರಿಂದ- ಸಮಾಜದಿಂದ ಪಡೆದುಕೊಂಡು ಅನುಸರಿಸಬೇಕು. ಯಾವುದು ಪಥ್ಯವೋ ಯಾವುದು ಸಮಂಜಸವೋ ಅದನ್ನು ಅನುಸರಿಸಬೇಕು. ನಮ್ಮಿಂದ ಸಮಾಜಕ್ಕೆ, ಇತರ ಜನರಿಗೆ ತೊಂದರೆ ಆಗದ ರೀತಿಯಲ್ಲಿ, ನಮ್ಮಿಂದ ಬೇರೆಯವರಿಗೆ ಆಭಾಸ, ಅಪಚಾರ ಆಗದ ರೀತಿಯಲ್ಲಿ, ನಮ್ಮಿಂದ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಬಾರದ ರೀತಿಯಲ್ಲಿ ನಡೆದುಕೊಳ್ಳುವುದು, ಬದುಕಿನಲ್ಲಿ ಶಿಸ್ತು-ಸಂಯಮ,ನಿಯಮ,ನ್ಯಾಯ-ನೀತಿ ಇವುಗಳನ್ನು ಅಳವಡಿಸಿಕೊಳ್ಳುವುದು, ಎಲ್ಲವನ್ನೂ ತಿಳಿದಿದ್ದು ಪ್ರತೀ ಹೆಜ್ಜೆಯನ್ನೂ ತೂಗಿ-ಅಳೆದು ನಂತರವೇ ಮುಂದಿಡುವುದು ಸಾಮಾನ್ಯ ಜ್ಞಾನ. ಬೆಂಕಿ ಸುಡುತ್ತದೆ, ನೀರು ನೆನೆಸುತ್ತದೆ, ಗಾಳಿ ಬೀಸುತ್ತದೆ ಇವೆಲ್ಲಾ ನಮಗೆ ಗೊತ್ತಿರುವ ಸಾಮಾನ್ಯ ಜ್ಞಾನವಾದರೆ ವಿದ್ಯುತ್ತಿನಿಂದ ಶಾಕ್ ಹೊಡೆಯುತ್ತದೆ, ವಾಹನವನ್ನು ಅತಿವೇಗದಿಂದ ಓಡಿಸಿದರೆ ಅಪಘಾತವಾಗುತ್ತದೆ, ಕುಡಿತದಿಂದ ಹಲವರಿಗೆ ಅಪಚಾರವಾಗುತ್ತದೆ ಎಂಬುದೆಲ್ಲ ಹಿರಿಯರ, ಅನುಭವಿಕರ ಮೂಲಕ ಪಡೆದುಕೊಳ್ಳಬೇಕಾದ ಸಾಮಾನ್ಯ ಜ್ಞಾನ. ಪರೀಕ್ಷೆಗೆ ಹೋಗುವಾಗ ಲೆಕ್ಕಣಿಕೆ[ಪೆನ್ನು], ಪೆನ್ಸಿಲ್ ಇರಬೇಕು, ಕಛೇರಿಗಳ ಸಂದರ್ಶನಕ್ಕೆ ಹೋಗುವಾಗ ಜೀನ್ಸ್ ಪ್ಯಾಂಟು-ಟೀ ಶರ್ಟ್ ಹಾಕಬಾರದು, ವಕೀಲರು ಹಿಪ್ಪಿ ಕೂದಲನ್ನು ಬಿಟ್ಟು ಒಂದೇ ಕಿವಿಗೆ ಒಂಟಿ ಹಾಕಿ ಕೈಗೆ ಬಳೆ ಹಾಕಿಕೊಂಡು ಅಲೆಯಬಾರದು, ಹುಡುಗಿಯರು ಅತಿಯಾದ ಮಾಡ್ ಡ್ರೆಸ್ ಹಾಕಿಕೊಂಡು ಕಾಲೇಜಿಗೆ ಹೋಗಬಾರದು -ಎಂಬುದೆಲ್ಲ ಅನುಭವದಿಂದ ಹಿರಿಯರು ಹೇಳುವ ಜ್ಞಾನ. ತಂತಮ್ಮ ರಂಗಕ್ಕೆ ಸಂಬಂಧಿಸಿದಂತೇ ಹೇಗೆ ನಡೆದುಕೊಳ್ಳಬೇಕೆಂದು ಕಲಿಯುವುದು ಗಾಢಾಂಧಕಾರದಿಂದ ಸಿನಿಮಾ ಮಾಧ್ಯಮದವರನ್ನು ಅನುಸರಿಸದಿರುವುದು ಅನುಭವದಿಂದ ಬರಬೇಕಾದದ್ದು. ಇದು ಇಲ್ಲದವರಿಗೆ ಸಿದ್ಧಿಸಲಿ, ಯಾವುದು ಸಾಮಾನ್ಯಜ್ಞಾನವೆಂದು ಗಣಿಸಲ್ಪಟ್ಟು ಗಾಳಿಗೆ ತೂರಲ್ಪಡುತ್ತದೋ ಅದು ಸ್ವಸ್ಥಾನದಲ್ಲಿದ್ದು ಮೆರುಗನ್ನು ಪಡೆದು ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸೋಣ.

Sunday, July 18, 2010

ಸ್ವಗತ


ಸ್ವಗತ

ಎದ್ದು ಗೆದ್ದು ಹಾರುತಿದೆ ಮನಸು
ಕದ್ದ ಕನಸುಗಳು ಬಯಲಾಗಿ ನನಸು
ಮುದ್ದು ಮುಖದಿ ತುಸು ಮಂದಹಾಸ
ಸದ್ದಿಲ್ಲದ ಸಹಜ ಸಂತೋಷ

ಪೆದ್ದು ಪೆದ್ದಾಗಿ ಇದ್ದ ದಿನ ಹಲವು
ಒದ್ದೆ ಕಣ್ಣ ಒರಸಲಿಲ್ಲ ಕರವು
ಇದ್ದ ಈ ಅಂಗಗಳಲಿಷ್ಟು ಭೇದ
ಬದ್ಧತೆಯ ಕುರಿತೋದಿ ವೇದ !

ನಮ್ಮಣ್ಣ ನನಗಿಂತ ಭಿನ್ನ
ತಿಮ್ಮಣ್ಣ ದ್ಯಾವ್ರ್ನ ಕಂಡಿಹನ
ತಮ್ಮ ಜರುಗು ಜರುಗು ನೀನಂತ
ಸುಮ್ಮನೊರಗಿ ಮರದಡಿಗೆ ಕುಂತ

ಯೋಗ ಧ್ಯಾನ ಎಲ್ಲ ಬೆಕಂತ
ಯಾಗ ಯಜ್ಞ ಮಾಡಬೇಕಂತ
ಭೋಗಭಾಗ್ಯ ನಮ್ಮ ಹಣೆಬರವು
ಬೀಗುದ್ಯಾಕ ನೀನು ಸಿರಿವಂತ ?

ವಿಷಯ ಐತಿ ತುಂಬ ಗಂಭೀರ !
ಕಷಾಯಕ್ಕೆ ರೋಗಗಳು ಬಾರ
ಕುಶಲದೊಳು ಇದನ ನೀನರಿತೂ
ಖುಷಿಗೊಳಿಸು ನಡೆಸು ನೀ ಹಲವ್ರ

ನಿನಾರು ಎಂಬುದನ ತಿಳಕೋ
’ನಾನಲ್ಲ’ ಎಂದು ನೀ ಹೇಳ್ಕೋ
ಬಾನಲ್ಲಿ ಸೆಳಮಿಂಚು ಪಡೆದು
ಕಾನನದಿ ಕಿರುದಾರಿ ಕಂಡ್ಕೋ

Saturday, July 17, 2010

ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....



ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....

ಹೀಗಿರಬೇಕು ಜೀವನದಲ್ಲಿ ಉತ್ಸಾಹ ಎಂದರೆ, ಹೀಗಿರಬೇಕು ಲವಲವಿಕೆಯೆಂದರೆ ಹೀಗಿರಬೇಕು ಸ್ಪಿರಿಟ್ ಎಂದರೆ! ಇದು ಉತ್ಪ್ರೇಕ್ಷೆಯಲ್ಲ ಬದಲಾಗಿ ವಾಸ್ತವಿಕತೆ. ಬೇರೆ ಯಾವುದೇ ರಂಗದಲ್ಲಾದರೂ ೭೭ ವರ್ಷ ವಯಸ್ಸಾಗಿಬಿಟ್ಟರೆ ಆತ ಅತಿ ಮುದುಕನೆಂದು ಗುರುತಿಸಿ ಗೌರವಿಸಿ ನಿಧಾನಕ್ಕೆ ನಡೆತಂದು ವೇದಿಕೆಯಮೇಲೆ ಕುಳ್ಳಿರಿಸಿ, ಹಾರ ತುರಾಯಿ ಅರ್ಪಿಸಿ ಮತ್ತೆ ಹಾಗೇ ಕೈಹಿಡಿದುಕೊಂಡು ವೇದಿಕೆಯಿಂದ ಅವರ ಆಸನಕ್ಕೆ ಕರೆದೊಯ್ಯುವ ’ನಿಧಾನ ನಿಧಾನ ವಯಸ್ಸಾಯ್ತು’ ಎನ್ನುವ ಪ್ರಶ್ನೆ. ಆದರೆ ೭೭ ವಯಸ್ಸಿನ ವ್ಯಕ್ತಿಯೊಬ್ಬ ತೀರಾ ೨೦ರ ಎಳೆಯ ಹುಡುಗನನ್ನೂ ನಾಚಿಸುವಷ್ಟು ತಾಳಹಾಕಿ ಕುಣಿಯುತ್ತಾನೆಂದರೆ ಇದನ್ನು ನಂಬಬೇಕೋ ಬಿಡಬೇಕೋ ಹಲವರಿಗೆ ಇದೇ ಒಂದು ಸಮಸ್ಯೆ! ಪ್ರಾಯಶಃ ಯಾರ ಮನೆಯಲ್ಲೇ ಆಗಲಿ ನೋವಿಗೋ ಉಳುಕಿಗೋ ತೈಲವನ್ನು ಲೇಪಿಸಿ ಉಜ್ಜಿಕೊಳ್ಳುತ್ತ ಮಲಗಿ ಕಾಲಕಳೆಯುವ ಈ ಮುಪ್ಪಿನ ವಯಸ್ಸು ಈ ವ್ಯಕ್ತಿಗೆ ಮಾತ್ರ ಹೊಸ ಪ್ರಾಯವನ್ನು ಮರಲಿ ಕೊಟ್ಟಿದೆ, ಹೊಸ ಜೀವಕಳೆಯನ್ನು ಹೊರಹೊಮ್ಮಿಸಿದೆ-ಈ ಮೂಲಕ ಆಳಸಿಗಳಾಗಿ ಕುಳಿತ ಯುವಕರನೇಕರನ್ನು ಕರೆದು ಕುಣಿಸಿದೆ. ತನ್ನ ಹಾವ-ಭಾವ, ಅತಿ ವಿಷಿಷ್ಟ ಕುಣಿತ, ಕೊನೆಯ ಪ್ರೇಕ್ಷಕನೂ ನೋಡಬಹುದಾದ ಕಣ್ಣಿನ ಕಸರತ್ತು, ಒಂದೊಂದು ಹಾಡಿಗೂ ಹಲವು ಬಗೆಯ ಭಾವ-ಭಂಗಿಗಳ ಮಸಲತ್ತು, ಬಾಲ್ಯ-ಶೈಶವ-ಯೌವ್ವನ-ಮುಪ್ಪು-ಮರಣ ಎಲ್ಲವನ್ನೂ ಕಥೆಯ ಹಂದರಕ್ಕನುಗುಣವಾಗಿ ಕೇವಲ ಅಭಿನಯದಲ್ಲೇ ಹೇಳುವ ಅನೂಹ್ಯ ಹೊಸತನ, ವೇದಿಕೆಗೆ ಪ್ರವೇಶಿಸುತ್ತಿದ್ದಂತೆಯೇ ತರುವ ಮಿಂಚಿನ ಸಂಚಾರ- ಇವನ್ನೆಲ್ಲ ಹೇಳುತ್ತಿರುವುದು ಕರ್ನಾಟಕದ ಅಪ್ಪಟ ಹಾಗೂ ಸಮಗ್ರ ಕಲೆಯಾದ ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗ್ಗೆ. ಒಮ್ಮೆ ನೋಡಿದರೆ ಮಗುದೊಮ್ಮೆ ನೋಡುವ, ಇನ್ನೊಮ್ಮೆ ಮತ್ತೊಮ್ಮೆ ಹಲವೊಮ್ಮೆ ನೋಡಬೇಕೆಂದು ಮನಸ್ಸು ಕಾಡುವ ಶ್ರೇಷ್ಠ ಅಭಿನಯ ಚಾತುರ್ಯ ನಮ್ಮ ಚಿಟ್ಟಾಣಿ ಅಜ್ಜನವರದು, ಛೆ ಛೆ ಹೀಗೆಂದರೆ ಅವರಿಗೆ ಕೋಪಬಂದೀತು ! ನಮ್ಮ ಚಿಟ್ಟಾಣಿಯವರದ್ದು.



ಒಂದುಕಾಲದಲ್ಲಿ ಉತ್ತರಕನ್ನಡದ ಹೊನ್ನಾವರ ತಾಲೂಕಿನ ಭಾಸ್ಕೇರಿ ಎಂಬ ಊರಿನ ಭಾಗವಾದ ಚಿಟ್ಟಾಣಿ ಎಂಬ ಸಣ್ಣ ಕಿಷ್ಕಿಂಧೆಯಲ್ಲಿ ಜನಸಿ, ಯಕ್ಷಗಾನದ ಹಿಂದಿನ ತಲೆಮಾರಿನ ಅತಿರಥ ಮಹಾರಥರ ಪಾತ್ರಗಳನ್ನು ನೋಡಿ ಪ್ರಭಾವಿತನಾಗಿ, ಓದನ್ನು ತೊರೆದು ಗುಡ್ಡಗಳಲ್ಲಿ-ಬಯಲುಗಳಲ್ಲಿ ತಾನೇ ತಯಾರಿಸಿಕೊಂಡ ಹಳದಿ,ಕೆಂಪು,ಮಸಿ[ಅರಿಶಿನ,ಕುಂಕುಮ,ಕಪ್ಪು] ಬಣ್ಣಗಳನ್ನು ಬರೆದುಕೊಂಡು, ಹಿರಿಯರ ಕಣ್ತಪ್ಪಿಸಿ, ತನ್ನ ಹಾಗೂ ತನ್ನ ಓರಗೆಯ ಮಿತ್ರರ ಸಂತೋಷಕ್ಕಾಗಿ ಮನದಣಿಯೇ ಕುಣಿದ ಪೋರನೊಬ್ಬ ಈ ಮಟ್ಟಕ್ಕೆ ಬೆಳೆಯಬಲ್ಲ ಎಂದು ಯಾರೂ ಎಣಿಸಿರಲಿಲ್ಲ! ಹಿನ್ನೆಯಲ್ಲಿ ಅನುವಂಶಿಕವಾಗಿ ಯಾರೂ ಕಲಾರಂಗದಲ್ಲಿ ಇರದ, ಈ ಕಲೆಗೆ ಪೂರಕ ಪ್ರತಿಕ್ರಿಯೆ ಮನೆಯ ಸದಸ್ಯರಿಂದ ಸಿಗದ ಆ ಕಾಲದಲ್ಲಿ, ಮನೆಯ ಕಿತ್ತುತಿನ್ನುವ ಬಡತನ ಎಲ್ಲರನ್ನೂ ಆರ್ಥಿಕವಾಗಿ ದಿನಂಪ್ರತಿ ಬಡಿದುಕೂರಿಸುವ ಉತ್ಸಾಹರಹಿತ ಬದುಕಿನ ಆ ಕಾಲಘಟ್ಟದಲ್ಲಿ ಈ ಮಗು ಇದನ್ನು ಸಾಧಿಸಿದ್ದು, ಅದೇ ಮಗು ಈಗ ಅಜ್ಜನ ಸ್ಥಾನಕ್ಕೆ ಬಂದುನಿಂತಿದ್ದು, ಕನ್ನಡ ಸಿನಿಮಾ ರಂಗದ ರಾಜಕುಮಾರ್ ಇದ್ದಹಾಗೇ ಯಕ್ಷರಂಗದಲ್ಲಿ ತನ್ನನ್ನು ಮೀರಿಸದ ಸಾಧನೆಯನ್ನು ಗೈದಿದ್ದು, ಯಕ್ಷಗಾನವನ್ನು ನೋಡುವ,ಕೇಳುವ ಹುಚ್ಚಿದ್ದವರಿಗೆಲ್ಲ ಹೆಚ್ಚಿನ-ಮೆಚ್ಚಿನ ದೊಡ್ಡ ದೀಪಾವಳಿ ಹಬ್ಬ ಕೊಟ್ಟಿದ್ದು ಶ್ರೀಯುತರು ಪಡೆದ ಪುಣ್ಯ, ಯಕ್ಷರಂಗದ ಪ್ರೇಕ್ಷಕರೂ ಪಡೆದ ಭಾಗ್ಯ!

ಒಬ್ಬ ವ್ಯಕ್ತಿ ಶಕ್ತಿಯಾಗಿ ಬೆಳೆದರೆ, ಗುರುತರ ಪಾತ್ರ ನಿರ್ವಹಿಸಿದರೆ ಬಹುಶಃ ಅವನ ಶಕೆಯಿಂದ ಸುತ್ತಲ ಅನೇಕ ಜನ ಪ್ರಭಾವಿತರಾಗುವುದರೊಂದಿಗೆ ಹುಟ್ಟಿದ ಊರಿಗೂ ಕ್ಷೇತ್ರಕ್ಕೂ ಹೆಸರು ಸಿಗುತ್ತದೆ ಎಂಬುದು ಸುಳ್ಳಲ್ಲ-ಯಾಕೆಂದರೆ ಯಾರಿಗೂ ಅಷ್ಟಾಗಿ ಗೊತ್ತಿರದ ’ಚಿಟ್ಟಾಣಿ’ ಎಂಬ ಮಜರೆ [ಅತಿ ಚಿಕ್ಕ ಭೂ ಪ್ರದೇಶ] ಕೇವಲ ಈ ನಟನ ಹೆಸರ ಜೊತೆ ಪ್ರಾರಂಭದಲ್ಲಿ ಥಳುಕುಹಾಕಿಕೊಂಡು ಇಂದು ಚಿಟ್ಟಾಣಿ ಎಂದರೆ ಸಾಕು ಅದು ರಾಮಚಂದ್ರ ಹೆಗಡೆ ಎಂದೇ ಅರ್ಥಕೊಡುವಷ್ಟು ನಾಣ್ಯದ ಎರಡು ಮುಖವಾಗಿ ಬಿಟ್ಟಿವೆ ಈ ಹೆಸರುಗಳು.


ಯಕ್ಷಗಾನದ ಗಾಳಿ ಇಲ್ಲದವರಿಗೂ ಅವರ ಒಂದೇ ಕುಣಿತವನ್ನು ಒಮ್ಮೆ ತೋರಿಸಿದರೆ ಸಾಕು ಮತ್ತೆ ಅದನ್ನೇ ತೋರಿಸುವಂತೆ ಅಥವಾ ಎಲ್ಲಾದರೂ ಅವರ ಕಾರ್ಯಕ್ರಮವಿದ್ದರೆ ಮುಂಚಿತವಾಗಿ ತಿಳಿಸುವಂತೆ ಬುಲಾವುಬರುತ್ತದೆ!ಎಂತಹ ಗಾರುಡೀ ವಿದ್ಯೆ ನೋಡಿ! ಎಂತಹ ಮಾಂತ್ರಿಕತೆ ಅನ್ನಿ, ಆದರೂ ಇಂದಿನ ಈ ಸ್ಥಾನಕ್ಕೆ ಅವರೇರುವ ಹಿಂದಿನ ಆವರ ಅವಿರತ ಪ್ರಯತ್ನ, ಅವಿಶ್ರಾಂತ ದುಡಿಮೆ, ಒಳ್ಳೆಯ ನಟನಾಗಬೇಕೆಂಬ ಆ ಛಲ ಇಂದಿನ ನಮ್ಮೆಲ್ಲಾ ಗುರಿಸಾಧಕರಿಗೊಂದು ಬಲ-ಆದರ್ಶ.

ವಿದ್ಯೆ ಕಲಿಯಲಿಲ್ಲ, ಮಾತಿನ ಭಂಡವಾಳವಿಲ್ಲ, ಆರ್ಥಿಕ ಸಾಮರ್ಥ್ಯ ಅಂದಿಗಿರಲಿಲ್ಲ, ಆಟ ಮುಗಿಸಿ ಮನಗೆ ಮರಳುವಾಗ ಬೆಳೆಯುತ್ತಿರುವ ಸಂಸಾರಕ್ಕೆ ಬೇಕಲ್ಲ? ಅವರದೇ ಭಾಷೆಯಲ್ಲಿ ಹೇಳುವುದಾದರೆ .....ಹೂಹುಂ ? ಹೂಹುಂ ? ಎಲ್ಲಿದೆ ಬಹುಕಿನ ಬಂಡಿ ಎಳೆಯಲು ಬೇಕಾದ ಹಣ;ಆರ್ಥಿಕತೆ? ಆದರೂ ಇದನ್ನೇ ನಂಬಿಕೊಂಡು ಕೇವಲ ತನಗೆ ಮುಂದೊಂದು ದಿನ ಒಳ್ಳೆಯದಾದೀತೆಂಬ ಧೋರಣೆಯಿಂದ ಆ ಅಪ್ರತಿಮ ವಿಶ್ವಾಸದಿಂದ ಛಲದಂಕಮಲ್ಲನಾಗಿ ಎಡಬಿಡದೇ ಪಾತ್ರಗಳನ್ನು ಮಾಡಿದರು;ಅಷ್ಟಿಷ್ಟು ಲಭಿಸಿದ ಸಂಭಾವನೆಯನ್ನು ಉದರಂಭರಣೆಗೆ ಹೇಗೋ ಸಾಕಾಗುವಂತೆ ತೂಗಿಸಿಕೊಂಡರು.

ಕಾಲವೊಂದು ಬಂತು. ಅಲ್ಲಿ ಪ್ರದರ್ಶನ ಇದ್ದಲ್ಲಿ ಚಿಟ್ಟಾಣಿ ಇದ್ದರೆ ಮಾತ್ರ ಕಂತ್ರಾಟುದಾರರಿಗೆ ಗಂಟಿಗೆ ತೊಂದರೆಯಿಲ್ಲ ಎಂದೆನಿಸಿತು. ಅದು ಖಂಡಿತವೂ ಹೌದು. ಚಿಟ್ಟಾಣಿ ಮಾಡದ ಪಾತ್ರಗಳಿಲ್ಲ; ಕುಣಿಯದ ನೃತ್ಯ ಶೈಲಿಯಿಲ್ಲ! ಕೆಲವು ಯಕ್ಷಗಾನ ಪಾತ್ರಧಾರಿಗಳು ಯಾರು ಕುಣಿಯುತ್ತಾರೆ ಎಂಬ ದೃಷ್ಟಿಯಿಂದ ಅಲ್ಲಲ್ಲೇ ’ಕಳ್ಳಬೀಳುವ’ [ಕುಣಿತವನ್ನು ಸ್ವಲ್ಪವಷ್ಟೇ ಶಾಸ್ತ್ರಕ್ಕೆ ಮಾಡಿ ಮುಗಿಸುವ]ತರಗತಿಯವರಿದ್ದರು! ಆದರೆ ಆರೋಗ್ಯ ಸರಿಯಿರದಿದ್ದರೂ ಬಂದು ಕೊಟ್ಟಮಾತಿಗೆ ಕಟ್ಟುಬಿದ್ದು ತನ್ನನ್ನು ನಂಬಿ ಬಂದ ಅಭಿಮಾನೀ ಪ್ರೇಕ್ಷಕರನ್ನು ದಂಗುಬಡಿಸುವ ಚಾಕಚಕ್ಯತೆ ಮತ್ತು ಕುಣಿತದ ಹುಮ್ಮಸ್ಸು ಚಿಟ್ಟಾಣಿಯವರಲ್ಲಿತ್ತು;ಇದೆ. ಈ ಒಂದು ಗುಣವೇ ಅವರನ್ನು ಈ ರಂಗದಲ್ಲಿ ಮೇರುವ್ಯಕ್ತಿಯನ್ನಾಗಿ ಬೆಳೆಸಿತು ಅಂದರೆ ತಪ್ಪಲ್ಲ. ಮಾಗಧ, ಕಾರ್ತವೀರ್ಯ, ಕೌರವ, ದುಷ್ಟಬುದ್ಧಿ, ಕೀಚಕ, ಭಸ್ಮಾಸುರ ಹೀಗೆ ಹಲವು ಪ್ರಮುಖ ದುಷ್ಟಪಾತ್ರಗಳೂ ಸೇರಿದಂತೆ ಇನ್ನೂ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ-ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದೊಂದು ಕಾಲ ಯಕ್ಷಲೋಕದ ಗಂಧರ್ವ ದಿ| ಕಾಳಿಂಗನಾವುಡರ ಭಾಗವತಿಕೆ ಮತ್ತು ದಿ| ದುರ್ಗಪ್ಪ ಗುಡಿಗಾರರ ಮದ್ದಳೆಗಳೊಂದಿಗೆ ಚಿಟ್ಟಾಣಿಯ ಪಾತ್ರ-ಅದೊಂದು ಧರೆಗಿಳಿದ ಇಂದ್ರನ ನಂದನವನ! ’ನೀಲಗಗನದೊಳು ಮೇಘಗಳಾ...ಕಂಡಾಗಲೆ......ನವಿಲು ಗೈಯ್ಯುತಿದೆ ಎಂಬ ಶೃಂಗಾರ ರಸದ ಹಾಡಿಗೆ ಸಖಿಯರೋಮ್ದಿಗೆ ವನವಿಹಾರದ ಸಂಭ್ರಮದಲ್ಲಿ ಮೆರೆಯುವ ಯಾವುದೇ ರಾಜಪಾತ್ರವಾಗಿರಲಿ ಅಲ್ಲಿ ಪ್ರೇಕ್ಷಕ ತನ್ನನ್ನೇ ಆ ಪಾತ್ರದಲ್ಲಿ ಸಮ್ಮಿಳಿಸಿಕೊಂಡು ಅನುಭವಿಸಿದ ಪರಿ ಇಂದಿಗೂ ಕಣ್ಕಟ್ಟುತ್ತದೆ! ಇಂದು ಆ ಕಂಚಿನ ಕಂಠದ ಕೋಗಿಲೆ ಮರದಿಂದ ಹಾರಿಹೋಗಿದೆಯಲ್ಲದೇ ಮೃದುಮಧುರ ಭಾವಗಳಿಗೆ ಜೀವಕೊಡುತ್ತಿದ್ದ ಮೃದಂಗ ಮಾಂತ್ರಿಕ ಗುಡಿಗಾರರೂ ದಿವಂಗತರಾಗಿದ್ದಾರೆ. ಈಗೇನಿದ್ದರೂ ಹೊಸ ಪೀಳಿಗೆಯ ಹಿಮ್ಮೇಳ ಕಲಾವಿದರು. ತನ್ನ ಕಲಾಜೀವನದಲ್ಲಿ ಅದೆಷ್ಟು ಭಾಗವತರನ್ನು, ಉಳಿದ ಹಿಮ್ಮೆಳ ಕಲಾವಿದರನ್ನು, ಸಹಕಲಾವಿದರನ್ನು ಕಂಡರೋ ಹೆಗಡೆಯವರನ್ನೇ ಕೇಳಬೇಕು. ಸರಿಸುಮಾರು ಮೂರು ತಲೆಮಾರಿನ ಕಲಾವಿದರು ಇವರೊಂದಿಗೆ ಪಾತ್ರಮಾಡಿದ್ದಾರೆ.

ನವರಸಗಳನ್ನೂ ತನ್ನ ಭಾವಾಭಿವ್ಯಕ್ತಿಯಿಂದ ಎದುರುಗಡೆ ಕೂತಿರುವ ಅತಿ ದಡ್ಡ ಪ್ರೇಕ್ಷಕನಿಗೂ ಗೊತ್ತಾಗುವಹಾಗೆ ಅಭಿನಯಿಸಿ ಮಿತ ಅರ್ಥದೊಂದಿಗೆ ಎಲ್ಲೂ ಏನೂ ಕಮ್ಮಿಯಾಗಿಲ್ಲ ಅನ್ನುವ ಹಾಗೇ ನಡೆಸಿಕೊಂಡುಹೋಗಬಲ್ಲ ಸ್ವಸಾಮರ್ಥ್ಯ ಶ್ರೀ ಚಿಟ್ಟಾಣಿಯವರಿಗೆ ಮಾತ್ರ ಇದೆ ಎಂದರೆ ತಪ್ಪಲ್ಲ. ರಾಜ್ಯಪ್ರಶಸ್ತಿಯೊಂದಿಗೆ ಅಸಂಖ್ಯ ಪ್ರಶಸ್ತಿ-ಫಲಕಗಳನ್ನು ತನ್ನದಾಗಿಸಿಕೊಂಡ ಚಿಟ್ಟಾಣಿಗೆ ಪ್ರಶಸ್ತಿಯ-ಗೌರವದ ಬೆನ್ನುಹತ್ತಿ ಹಿಡಿವ ಚಟವಿಲ್ಲ. ನವಿಲಿಗೆ ನರ್ತನ ಕೋಗಿಲೆಗೆ ಗಾಯನ ಹೇಗೆ ಸಹಜ ಪ್ರಕ್ರಿಯೆಯೋ ಚಿಟ್ಟಾಣಿಗೆ ಕುಣಿತವೇ ಸಹಜ ಪ್ರಕ್ರಿಯೆ. ಅಂತೆಯೇ ನವಿಲಿಗೆ ನಿನ್ನ ನರ್ತನ ಚೆನ್ನಾಗಿಲ್ಲವೆಂದೂ ಕೋಗಿಲೆಯಲ್ಲಿ ನಿನ್ನ ಗಾಯನ ಚೆನ್ನಾಗಿಲ್ಲವೆಂದೂ ಹೇಳಲು ಸಾಧ್ಯವೇ? ಹೀಗಾಗಿ ಬಹುಸಂಖ್ಯಾಕ ಪುರಸ್ಕಾರಗಳು ಅವರನ್ನು ಹುಡುಕಿ ಬಂದವು. ಈಗಲೇ ನೀವು ಸನ್ಮಾನ ಮಾಡಿ-ಮರುಕ್ಷಣ ಅದೇ ವೇದಿಕೆಯಲ್ಲಿ ತನ್ನೆಲ್ಲಾ ಕಸುವಿನಿಂದ ಯಾವುದೇ ಅಹಂಕಾರವಿಲ್ಲದೇ ಕುಣಿವ ನವಿಲು ಈ ಚಿಟ್ಟಾಣಿ!

ಈ ಕೆಳಗಿನ ಯೂಟ್ಯೂಬ್ ಕೊಂಡಿಯಲ್ಲಿ ಅದು ಒಮ್ಮೆ ಬಿಟ್ಟು ಬಿಟ್ಟು ಬಂದ ನಂತರ ರೀಪ್ಲೇ ಮಾಡಿ [ಪುನರ್ವೀಕ್ಷಿಸಿ] ಚಿಟ್ಟಾಣಿಯ ಕುಣಿತದ ಒಂದು ಝಲಕ್ ಅನುಭವಿಸಿ-




ಚಿಟ್ಟಾಣಿಯವರಿಗೂ ಹಿಮ್ಮೇಳದವರಿಗೂ ಹಾಗೂ ಯೂಟ್ಯೂಬ್ ಮೂಲಕ ನಮಗಿದನುಣಬಡಿಸಿದ ಗಜಾನನ ಎನ್ನುವವರಿಗೂ ಚಪ್ಪಾಳೆಯ ಬದಲಾಗಿ ಧನ್ಯವಾದಸಮರ್ಪಿಸೋಣವೇ?

ಮೂರು ಗಂಡು ಮಕ್ಕಳಲ್ಲಿ ಇಬ್ಬರು ಯಕ್ಷಗಾನ ಕಲಿತಿದ್ದಾರೆ. ಹಿರಿಯ ಮಗ ಸುಬ್ರಹ್ಮಣ್ಯ ಚಿಟ್ಟಾಣಿ ಕುಣಿತ ಮತ್ತು ಅರ್ಥಗಾರಿಕೆ ಎರಡನ್ನೂ ಮೇಳೈಸಿಕೊಂಡು ಹೊಸತನವನ್ನು ಮೆರೆದಿದ್ದರೆ, ಇನ್ನೊಬ್ಬ ಮಗ ನರಸಿಂಹ ಚಿಟ್ಟಾಣಿ ಅಪ್ಪನ ರೀತಿಯಲ್ಲೇ ಕುಣಿತವನ್ನಷ್ಟೇ ಮಾಡುತ್ತಾರೆ. ಮಗಳೊಬ್ಬಳಿದ್ದು ಮದುವೆಯಾಗಿ ಸುಖದಿಂದಿದ್ದಾರೆ. ಹೀಗೇ ಈಗ ಸುಖೀಕುಟುಂಬದ ಸಾಹಸಸಿಂಹ ಚಿಟ್ಟಾಣಿ ಎಂದರೆ ಅದು ಸಮಂಜಸವೇ ಸರಿ. ಗೇರುಸೊಪ್ಪೆಯ ಹತ್ತಿರದಲ್ಲಿ ಜಮೀನು ಖರೀದಿಸಿ ಅಲ್ಲಿ ಮನೆಮಾಡಿ ನೆಲೆನಿಂತ ಚಿಟ್ಟಾಣಿ ಶತಾಯುಷ್ಯವನ್ನೂ ಮೀರಿ ಬದುಕಿಬಾಳಿ ಇನ್ನೂ ಹಲವುಕಾಲ ಇದೇ ಉತ್ಸಾಹದಲ್ಲಿ ಯುವ ಪೀಳಿಗೆಗೆ ತನ್ನ ಪಾತ್ರ ಪ್ರದರ್ಶಿಸಲಿ ಎಂದು ನಾವೆಲ್ಲ ಹಾರೈಸೋಣವೇ?

Friday, July 16, 2010

ಮೂಕ ರೋದನ !

ವೇದದ ಮಹತ್ವವನ್ನರಿಯುವ ಮತ್ತು ವೇದ ಸಂತುಲಿತ ಜೀವನವನ್ನು ನಡೆಸಲು ಬಯಸುವ ಎಲ್ಲ ದೇಶಬಾಂಧವರ ಆದ್ಯ ಕರ್ತವ್ಯ ವೇದದಷ್ಟೇ ಮಹತ್ವವನ್ನು ಪಡೆದು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿರುವ ಗೋಮಾತೆಯ ರಕ್ಷಣೆ. ಅದರಲ್ಲೂ ಭಾರತೀಯ ಗೋ ತಳಿಗಳು ದಿನೇ ದಿನೇ ಕ್ಷೀಣಿಸುತ್ತಿವೆ. ಉತ್ತರಕರ್ನಾಟಕದ ಬಹುಭಾಗಗಳಲ್ಲಿ ದಲ್ಲಾಳಿಗಳಿಗೆ ರಾಸುಗಳ ಮಾರಾಟ್ ನಡೆದೇ ಇದೆ. ಇದೀಗ ಕರ್ನಾಟಕ ಸರಕಾರ ಗೋನಿಷೇಧ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಆಕಳುಗಳನ್ನು ಕಾಳಸಂತೆಯಲ್ಲೋ ಅಥವಾ ಹೊರನಾಡಿಗರಿಗೋ, ಪರನಾಡಿಗರಿಗೋ ಮಾರಾಟಮಾಡುತ್ತಾರೆ. ಬದುಕಲು ಗಂಜಿಹುಡುಕುವ ಸ್ಥಿತಿಯಲ್ಲಿರುವ ರೈತ ತನ್ನುಳಿವಿಗಾಗಿ ಇಂತಹ ಮುಗ್ಧ, ಸಾತ್ವಿಕ ಜೀವಿಗಳನ್ನು ಬಲಿಕೊಡುತ್ತಿದ್ದಾನೆ. ಇದನ್ನು ತಪ್ಪಿಸಲು ಮಠ-ಮಾನ್ಯಗಳು ಪಹರೆ ನಡೆಸುತ್ತಿದ್ದರೂ, ಜನ ಜಾಗ್ರತಿ ಹಮ್ಮಿಕೊಂಡಿದ್ದರೂ ಇದಿನ್ನೂ ಪೂರ್ತಿಯಾಗಿ ಅಳವಡಿಕೆಯಾಗಿಲ್ಲ.

ದಿನವೂ ಹುಲ್ಲು-ನೀರನ್ನು ಸ್ವೀಕರಿಸುತ್ತ ಅಮೃತತುಲ್ಯ ಹಾಲನ್ನು ನಮಗೀಯುವ ಗೋವು ನಮಗೆಲ್ಲ ಪ್ರಾತಃಸ್ಮರಣೀಯ, ಮಾತ್ರವಲ್ಲ ನೀವೆಲ್ಲ ತಿಳಿದಂತೆ ಗೋವಿನಲ್ಲಿಯೇ ಎಲ್ಲಾ ದೇವತೆಗಳ ವಾಸವಿದೆ ಎಂದು ಭಾವಿಸಿದ್ದೇವೆ ನಾವು. ನಮ್ಮ ಗೃಹಪ್ರವೇಶಕ್ಕಾಗಲೀ ಒಳ್ಳೆಯ ಕಾರ್ಯಕ್ರಮಗಳಲ್ಲಾಗಲೀ ಗೋಪೂಜೆ ಕಡ್ಡಾಯವಾಗಿದೆ -ಇದು ನಮ್ಮ ಆರ್ಷೇಯ ವೇದ ಸಂಸ್ಕೃತಿ. ಉಂಡಮನೆಗೆ ಎರಡು ಬಗೆಯಬೇಡ ಎನ್ನುವುದು ಗಾದೆ, ಆದರೆ ಹಾಲುಂಡ ಮನೆಯನ್ನೇ ನಾವು ಕೆಡವಲು ಹೊರಟಿದ್ದೇವೆ. ವನ್ಯ ಪ್ರಾಣಿಗಳಿಗಾದರೂ ರಕ್ಷಣೆ ಇದೆ ಆದರೆ ನಮ್ಮ ನಡುವೆಯೇ ಇದ್ದು ನಿತ್ಯವೂ ನಮಗೆ ಹಾಲನ್ನು ಸುರಿಸಿ ಬದುಕು ಹಸನಾಗಿಸುವ ಗೋಮಾತೆಯನ್ನು ಮಾತ್ರ ನಾವು ಉಡಾಫೆಮಾತುಗಳಿಂದ ಇನ್ನೂ ಇನ್ನೂ ಇನ್ನೂ ದೂರ ಇಟ್ಟಿದ್ದೇವೆ.

ಕಾಲಘಟ್ಟದಲ್ಲಿ ವೇದದ ತತ್ವ ಸಾರುತ್ತದೆ - ಬೆಳಿಗ್ಗೆ ಎದ್ದು ಶೌಚಾದಿ ನಿತ್ಯಕರ್ಮ ಮುಗಿಸಿ ರಾತ್ರಿ ಕಂಡ ಕೆಟ್ಟ ಕನಸಿನಿಂದ ನೊಂದಿದ್ದರೆ ಅದನ್ನು ಗೋವಿನ ಕಿವಿಯಲ್ಲಿ ಹೇಳಿ ಪ್ರಾರ್ಥಿಸು ! ತಮಗೆಲ್ಲ ಇದು ತಿಳಿದಿರಬಹುದು. ನನ್ನ ತಂದೆಯ ದಿನಚರಿ ಇವತ್ತಿಗೂ ಇದೇ ಇದೆ. ಇದರರ್ಥ ಗೋವು ನಮ್ಮ ಅಹವಾಲನ್ನು ಸ್ವೀಕರಿಸುತ್ತದೆ ಎಂದಲ್ಲವೇ? ಅದೇ ಬಯಲುನಾಡಿನ ಮಠವೊಂದರಲ್ಲಿ ಮೂಕಪ್ಪ ಸ್ವಾಮಿಗಳೆಂಬ ಹೆಸರಿನಲ್ಲಿ ಯಾವ ಒಬ್ಬ ಸನ್ಯಾಸಿಗೂ ಕಡಿಮೆ ಇರದ ಆಚರಣೆ ತೋರುವ ಮೂಕ ಬಸವ ಸ್ವಾಮಿಗಳನ್ನು ನಾವು ನೋಡುತ್ತೇವೆ. ಅಂದಮೇಲೆ ಕೇವಲ ಮಾತು ಬಂದರೆ ಮಾತ್ರ ಎಲ್ಲವೂ ತಿಳಿಯುತ್ತದೆ ಇಲ್ಲದಿದ್ದರೆ ಇಲ್ಲ ಎಂಬ ನಮ್ಮ ಭಾವನೆ ಸಲ್ಲ. ಆದರೂ ದೈವ ಕೊಟ್ಟ ಆ ಶರೀರದಲ್ಲಿ ತನ್ನನ್ನು ತಾನು ಉಳಿಸಿಕೊಳ್ಳಲು ಬೇಕಾಗಿ ಹೋರಾಡುವ ಅನುಕೂಲಗಳಿಲ್ಲ.

ಅನುಭಾವಿಗಳಾದ ತಮಗೆಲ್ಲ ಹೆಚ್ಚಿಗೆ ಹೇಳಿ ಕೇಳಲಾರೆ. ನನ್ನದೊಂದು ಸಣ್ಣ ಕೋರಿಕೆ, ಎಲ್ಲೆಲ್ಲಿ ಇಂತಹ ಅನಾಹುತಗಳು ನಡೆಯುತ್ತವೆಯೋ ಅದನ್ನು ತಡೆಗಟ್ಟಲು ನಾವೆಲ್ಲ ಶ್ರಮಿಸೋಣ ಎಂಬುದು. ಇದಕ್ಕೆ ತಮ್ಮೆಲ್ಲರ ಸಹಮತವನ್ನು ಯಾಚಿಸುತ್ತೇನೆ. ದಯವಿಟ್ಟು ನಾವು ಬದುಕುಪೂರ್ತಿ ಹಾಲುಂಡ ಮನೆಗೆ ಎರಡು ಬಗೆಯುವುದು ಬೇಡ ಅಲ್ಲವೇ?


ಸಚಿತ್ರ ಸುದ್ದಿ ಋಣ -ವಿಜಯಕರ್ನಾಟಕ ದಿನಪತ್ರಿಕೆ

[ಮೇಲಿನ ಚಿತ್ರವನ್ನು ಕ್ಲಿಕ್ಕಿಸಿ ದೊಡ್ಡದು ಮಾಡಿ ಸುದ್ದಿ ತಿಳಿದುಕೊಳ್ಳಬಹುದು]


ಮೂಕ ರೋದನ !


ನನ್ನೊಡೆಯ ಗೆಣೆಕಾರ ನಿನಗೆರಗಿ ಬೇಡುವೆನು
ಮಾರದಿರು ನನ್ನನೀಗ
ಚೆನ್ನಾಗಿ ಬಾಳೆಂದು ಮನಪೂರ್ತಿ ಹರಸಿಹೆನು
ತೂರದಿರು ಕಟುಕಗೀಗ

ಹನ್ನೆರಡು ಮಕ್ಕಳನು ಹೆತ್ತು ಕೊಟ್ಟೆನು ನಿನಗೆ
ಹಾಲುಣಿಸಿ ಬಹಳ ದಿನವು
ಇನ್ನೆರಡು ವರುಷದಲಿ ಆಯುಷ್ಯ ಮುಗಿಯುವುದು
ನೀರುಣಿಸು ಉಳಿದ ದಿನವೂ

ನಿನ್ನ ಮಕ್ಕಳ ಕಂಡೆ ಮಡದಿ ಕೊಟ್ಟುದನುಂಡೆ
ನನ್ನೆಣಿಕೆ ಮೀರಿ ನೆಡೆದು
ಮುನ್ನ ಹಾಲೀವಾಗ ಪ್ರೀತಿ ಸಿಹಿಸಿಹಿಯುಂಡೆ
ಇನ್ನದಕೆ ಜೀವ ಬರದು !

ಒಡೆಯ ಕೈಮುಗಿಯುವೆನು ಕಣ್ಣಲ್ಲೇ ಪ್ರಾರ್ಥಿಪೆನು
ಅಡಿಗಳಿಗೆ ಎರಗಿ ನಾನು
ಬಡವಾಯ್ತು ಈ ಜೀವ ಸಹಿಸಲಾರದು ನೋವ
ಒಡನಾಡಿ ಕ್ಷಮಿಸೆಯೇನು ?

ಹಣದ ಥೈಲಿಯ ಹುಡುಕಿ ಕಣಕಣದಿ ಅದ ನೆನೆದು
ಗುಣಮರೆತು ಹೋದೆಯಲ್ಲಾ?
ಹೆಣಗಾಟವೀ ಬದುಕು ದೈವ ಚಿತ್ರಿತ ತೊಡಕು
ಒಣಗುತಿದೆ ದೇಹವೆಲ್ಲ !

ಹುಲ್ಲು-ಕಸವನು ತಿಂದು ಸಿಗುವಂತ ನೀರ್ಕುಡಿದು
ಹಾಲೆರೆದೆ ಭವದಿ ನಿಮಗೆ
ಕಲ್ಲು-ಮಣ್ಣೊಳಗಿಟ್ಟು ಮುಚ್ಚಿಬಿಡು ದೇಹವನು
ಅಲ್ಲಿಗದು ಸಾಕು ನನಗೆ

Thursday, July 15, 2010

ದೊಡ್ಡವರಾಗಿ !



ದೊಡ್ಡವರಾಗಿ !


ಇದೇನಪ್ಪಾ ನಾವೆಲ್ಲಾ ದೊಡ್ಡವರಾಗಿ ಬಹಳ ಸಮಯವೇ ಸರಿಯಿತಲ್ಲ, ಇನ್ನೂ ದೊಡ್ಡವರಾಗಿ ಎಂದರೆ ಏನಿದರರ್ಥ ಎಂಬ ಯೋಚನೆ ಸಹಜ. ಆದರೆ ದೊಡ್ಡವರಾಗಿ ಎನ್ನಲು ಕಾರಣವಿದೆ. ಅದನ್ನು ಮುಂದೆ ನೀವೇ ತಿಳಿಯುತ್ತೀರಿ.

ಬಹಳ ಜನ ಹಾಗೇ ಗಾಳಿಗೆ ಮುದುಕರಾಗಿಬಿಟ್ಟಿದ್ದಾರೆ ಎನ್ನುವುದು ನಮ್ಮಲ್ಲಿನ ಒಂದು ಮಾತು! ಗಾಳಿಗೆ ಮುದುಕಾಗುವುದು ಅಂದರೇನು ? ಬದುಕಿನಲ್ಲಿ ಯಾವೊಂದೂ ಸಣ್ಣ ಜವಾಬ್ದಾರಿಯನ್ನೂ ಹೊರದೇ, ಹಲವಕ್ಕೆ ಪರಾವಲಂಬಿಯಾಗಿ, ಸ್ವಾರ್ಥಿಯಾಗಿ ಬರೇ ತನ್ನ ಬದುಕೊಂದನ್ನೇ ನೋಡಿಕೊಂಡಿರುವ ಹಲವು ವಿಷಯಗಳಲ್ಲಿ ಅನುಭವ ಶೂನ್ಯರಾದ ವ್ಯಕ್ತಿಗಳನ್ನು ತಮಾಷೆಗೆ ’ಗಾಳಿಗೆ ಮುದುಕಾದವರು’ ಅಥವಾ ಗಾಳಿಗೇ ಕೂದಲೆಲ್ಲ ಹಣ್ಣಾದವರು ಎನ್ನುವುದು ನಮ್ಮಲ್ಲಿನ ವಾಡಿಕೆ!

ಮನುಷ್ಯ ಬೆಳೆಯ ಬೇಕಾದರೆ ತನ್ನೊಳಗಿನ ಹಲವು ಅನಿಷ್ಟಗಳನ್ನು ತೊಡೆದುಹಾಕಬೇಕು. ಅದರಲ್ಲಿ ಮುಖ್ಯವಾದವು ಅಸೂಯೆ ಮತ್ತು ಸಣ್ಣತನ! ನಮ್ಮ ಸಹೋದ್ಯೋಗಿಗೆ ಪ್ರಮೋಶನ್ ಬಂದಿದ್ದಕ್ಕಾಗಿ, ಪಕ್ಕದ ಮನೆಯವರಿಗೆ ಲಾಟರಿಯಲ್ಲಿ ಲಕ್ಷರೂಪಾಯಿ ಸಿಕ್ಕಿದ್ದಕ್ಕಾಗಿ, ಎದುರು ಮನೆ ಹುಡುಗಿ ನಮ್ಮ ಮಗಳಿಗಿಂತ ಹೆಚ್ಚಿನ ಅಂಕ ಗಳಿಸಿದ್ದಕ್ಕಾಗಿ, ಆಚೆಮನೆ ಸೀತಮ್ಮ ಸುಂದರ ರೇಷ್ಮೆ ಸೀರೆ ಖರೀದಿಸಿದ್ದಕ್ಕಾಗಿ, ವಿಪಕ್ಷದಲ್ಲಿ ಕುಳಿತ ನಮಗೆ ಆಡಳಿತ ನಡೆಸುತ್ತಿರುವ ಪಕ್ಷದ ಯಾವುದೋ ಸಾಧನೆ ಧುತ್ತೆಂದು ಕಣ್ಣಿಗೆ ಬಿದ್ದುದಕ್ಕಾಗಿ, ಅಷ್ಟೆಲ್ಲಾ ಪ್ರೀತಿಸುತ್ತಿದ್ದ ಆ ಹುಡುಗಿ ಕೈಕೊಟ್ಟು ಇನ್ನೊಬ್ಬನ ಜೊತೆ ಮದುವೆಯಾಗುತ್ತಿರುವುದಕ್ಕಾಗಿ, ಇದೇ ಓಣಿಯ ಕೊನೇ ಮನೆಯಲ್ಲಿರುವ ಚಿಕ್ಕ ಹುಡುಗ ರಮೇಶ ಸಾಫ್ಟ್ ವೇರ್ ಎಂಜಿನೀಯರ್ ಆಗಿ ರಾಶಿ ಸಂಬಳ ಪಡೆಯುತ್ತಿರುವುದಕ್ಕಾಗಿ ಹೀಗೆ ಹಲವಾರು ಕಾರಣಗಳಿಗೆ ನಾವು ಒಂದಿಲ್ಲೊಂದು ಸಮಯ ಮತ್ಸರಿಸುತ್ತೇವೆ. ನಮಗೆ ದಕ್ಕದ ಆ ಭಾಗ್ಯಕ್ಕಾಗಿ ಕೈಕೈ ಹಿಸುಕಿಕೊಳ್ಳುತ್ತೇವೆ, ಆಡಲೂ ಆಗದೆ ಅನುಭವಿಸಲೂ ಆಗದೆ ನಮ್ಮೊಳಗೇ ನಾವು ಕಾಯುತ್ತೇವೆ-ಬೇಯುತ್ತೇವೆ! ಒಂದು ಕ್ಷಣ ವಿವೇಚಿಸಿದರೆ ನಮಗೆ ತಿಳಿದು ಬರುವ ಸೀದಾ ಸಾದಾ ಅಂಶ-ನಾವು ನಮಗೆ ಸಂಬಂಧವೇ ಇಲ್ಲದ ಯಾವುದೋ ವಿಷಯಕ್ಕಾಗಿ ಅಷ್ಟೆಲ್ಲಾ ತಲೆಕೆಡಿಸಿಕೊಂಡಿರುತ್ತೇವೆ. ಇದು ಬೇಕೆ?

ಹಿಂದಕ್ಕೆ ಅವಿಭಕ್ತ ಕುಟುಂಬ ಪದ್ಧತಿ ಜಾರಿಯಲ್ಲಿತ್ತು. ಇಂದು ಕೇವಲ ಟಿ.ವಿ. ಪರದೆಯಲ್ಲಿ ಅಪರೂಪಕ್ಕೆ ಕಾಣಬಹುದಾದ ಇಂತಹ ಕುಟುಂಬಗಳು ಹಿಂದೆ ಬಹಳವಾಗಿದ್ದವು. ಅಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ, ಚಿಕ್ಕಪ್ಪನ ಮಕ್ಕಳು, ದೊಡ್ಡಪ್ಪನ ಮಕ್ಕಳು, ಮತ್ತೊಬ್ಬ ದೊಡ್ಡಪ್ಪನ ಕುಟುಂಬ ಮತ್ತು ಅವರ ಮಕ್ಕಳು, ಇನ್ನೊಬ್ಬ ಸಣ್ಣ ಚಿಕ್ಕಪ್ಪ-ಅವರ ಕುಟುಂಬ-ಮಕ್ಕಳು ಹೀಗೇ ಹಲವಾರು ಅಣ್ಣ-ತಮ್ಮಂದಿರು ಸೇರಿ ಒಂದೇ ಮನೆಯಲ್ಲಿ ಅಡಿಗೆ-ಊಟ-ಆಟ ಎಲ್ಲವನ್ನೂ ನಡೆಸುತ್ತ ಹಾಯಾಗಿ ಸುಖದಿಂದಿದ್ದರು. ಮನೆಯಲ್ಲಿ ಯಾರಾದರೂ ಚಿಕ್ಕ ಮಕ್ಕಳಿದ್ದರೆ ಅವುಗಳ ಆರೈಕೆಯನ್ನು ಮುದಿ ಜೀವಗಳು ಕೈಲಾಗುವವರೆಗೂ ಬಹಳವಾಗಿ ನಡೆಸಿಕೊಡುತ್ತಿದ್ದವು. ಮಕ್ಕ್ಳಿಗೆ ಕಥೆ-ಕವನ, ದೇವರ ಸ್ತೋತ್ರ ಇವುಗಳನ್ನೂ ನೀತಿ ಕಥೆ-ಪಂಚತಂತ್ರದ ಕಥೆ ಇವುಗಳನ್ನೆಲ್ಲಾ ಹೇಳುತ್ತಾ ಮುಂದಿನ ಪೀಳಿಗೆಗೆ ಬೇಕಾಗುವ ನೈತಿಕತೆಯನ್ನು ಆ ಮೂಲಕ ಕುಟುಂಬದ ಹಿರಿಯರು ಧಾರೆ ಎರೆಯುತ್ತಿದ್ದರು. ಇಂತಹ ಕುಟುಂಬಗಳಲ್ಲಿ ಬಟ್ಟೆ-ಬರೆ ಖರೀದಿ, ಹೆಂಗಸರಿಗೆ ಬೇಕಾಗುವ ಬಳೆ-ಓಲೆ ಇತ್ಯಾದಿ ಖರೀದಿ, ಮಕ್ಕಳ ಆಟಿಕೆ ಖರೀದಿ, ಶಾಲೆಗೆ ಹೋಗುವ ಒಂದೇ ಓರಗೆಯ [ಅಣ್ಣ-ತಮ್ಮಂದಿಅರ್ ಮಕ್ಕಳು]ಮಕ್ಕಳಿಗೆ ಪುಸ್ತಕಗಳ ಖರೀದಿ ಇವನ್ನೆಲ್ಲ ಒಟ್ಟಾಗಿ ಒಂದೇ ಸಲ ಮಾಡುತ್ತಿದ್ದರು. ಅಂಗಿ, ಸೀರೆ, ಮಕ್ಕಳ ಅಂಗಿ-ಚಡ್ಡಿ ಇಂತಹ ಬಟ್ಟೆಗಳನ್ನು ಸ್ಕೂಲ್ ಯೂನಿಫಾರ್ಮ್ ಇದ್ದಹಾಗೇ ಪನ್ನಾ ಲೆಕ್ಕದಲ್ಲಿ ಒಟ್ಟಿಗೇ ಖರೀದಿಸಿ ಅಮೇಲೆ ಅವರವರ ಅಳತೆಗೆ ತಕ್ಕಂತೆ ಹೊಲಿಸಿಕೊಳ್ಳುತ್ತಿದ್ದರು. ಕೇವಲ ವರ್ಷಕ್ಕೊಂದಾವರ್ತಿ ಜವಳಿ ತರುವುದು ಅಂತಲೇ ಇರುತ್ತಿತ್ತು. ಮನೆಯ ಯಾರಿಗೇ ಯಾವುದೇ ಹೆಚ್ಚು-ಕಮ್ಮಿ ಎನಿಸಿದರೂ ಹೊಂದಾಣಿಕೆಯೇ ಜೀವನದ ಸೂತ್ರವಾಗಿತ್ತು. ವಸ್ತು-ಒಡವೆಗಳನ್ನು ಸಂಖ್ಯೆಯಲ್ಲಿ ಕಮ್ಮಿ ಇದ್ದರೆ ಯಾರದರೂ ಉದಾರವಾಗಿ ಅದನ್ನು ಕೆಲವರು ಬಳಸಿಕೊಳ್ಳಲಿ ಎಂದು ಸುಮ್ಮನಿರುತ್ತಿದ್ದರು.

ಇಂತಹ ಒಂದು ಮನೆಯಲ್ಲಿ ಇಬ್ಬರು ಚಿಕ್ಕ ಹೆಣ್ಣುಮಕ್ಕಳು [ಅಣ್ಣ-ತಮ್ಮನ ಮಕ್ಕಳು] ಒಂದೇ ಇರುವ ಮಲ್ಲಿಗೆಯ ದಂಡೆಗಾಗಿ ಜಗಳಕಾದರು. ಒಬ್ಬಳ ಅಪ್ಪ ಮಧ್ಯೆ ಬಂದು ತನ್ನ ಮಗಳನ್ನು ಚೆನ್ನಾಗಿ ಗದರಿಸಿ ಇಸಿದುಕೊಂಡು ಇನ್ನೊಬ್ಬ ಹುಡುಗಿಗೆ ಅದನ್ನು ಕೊಟ್ಟ. ಆ ಹುಡುಗಿ ಸಂತೋಷಗೊಂಡು ತನ್ನ ತಂದೆ-ತಾಯಿಯೆಡೆಗೆ ನಡೆದಳು.--ಇಲ್ಲಿ ಮೊದಲನೇ ಹುಡುಗಿ ತನ್ನ ಕೈಲಿರುವ ಮಲ್ಲಿಗೆ ದಂಡೆಯನ್ನು ತ್ಯಾಗಮಾಡ್ಬೇಕಾಯಿತು, ಹಾಗೆ ಮಾಡಲು ಮನಸ್ಸು ಮಾಡಿಸಿದ್ದು ಈ ಹುಡುಗಿಯ ಅಪ್ಪ. ಈತನಿಗೆ ಆ ಇನ್ನೊಬ್ಬ ಹುಡುಗಿ ತನ್ನ ಸಹೋದರನ ಮಗಳೇ ತಾನೆ-ಚೆನ್ನಾಗಿರಲಿ ಎಂಬ ಭಾವವಿತ್ತು. ತನ್ನ ಮಗಳಿಗೆ ಇಲ್ಲದಿದ್ದರೂ ಸರಿ ಅವಳು ಚೆನ್ನಗಿರಲಿ ಎಂದು ದೊಡ್ಡಮನಸ್ಸಿನಿಂದ ಇಸಿದುಕೊಟ್ಟಿದ್ದಾನೆ. ಈ ಥರದ ಹಲವು-ಹತ್ತು ಘಟನೆಗಳು ಅವಿಭಕ್ತ ಕುಟುಂಬಗಳಲ್ಲಿ ಹಾಸುಹೊಕ್ಕಾಗಿದ್ದವು. ಅಲ್ಲಿ ದುಡ್ಡಿನ ದುರಹಂಕಾರವಿರಲಿಲ್ಲ, ಬಡತನದ ಬವಣೆ ಗೊತ್ತಿರಲಿಲ್ಲ. ಇಡೀ ಕುಟುಂಬದ ಸದಸ್ಯರು ಒಟ್ಟಾಗಿ ದುಡಿಯುತ್ತಿದ್ದರು, ಒಟ್ಟಾಗಿ ತಿನ್ನುತ್ತಿದ್ದರು, ಒಟ್ಟಾಗಿ ಕುಳಿತು ದೈನಂದಿನ ಆಗು-ಹೋಗುಗಳನ್ನು ಪರಸ್ಪರ ಮೆಲುಕು ಹಾಕುತ್ತಿದ್ದರು. ಒಬ್ಬರ ಅನುವು-ಆಪತ್ತಿನಲ್ಲಿ ಇಡೀ ಕುಟುಂಬವೇ ನೆರವಿಗೆ ನಿಲ್ಲುತ್ತಿತ್ತು. ಒಬ್ಬ ಕಾಯಿಲೆಯಿಂದ ಬಳಲುತ್ತಿದ್ದರೆ ಮಿಕ್ಕುಳಿದವರು ಆತನೂ ಸೇರಿದಂತೆ ಆತನ ಕುಟುಂಬವನ್ನು ಪೊರೆಯುತ್ತಿದ್ದರು! ಅಲ್ಲಿ ಅನ್ಯೋನ್ಯತೆ ಇತ್ತು, ಪ್ರೀತಿ ಇತ್ತು, ವಿಶ್ವಾಸವಿತ್ತು, ಅವಲಂಬನೆ ಹಿತಮಿತವಾಗಿತ್ತು, ಪ್ರಾಮಾಣಿಕತೆ ಇತ್ತು, ದುಡಿಯುವ ಮನೋಭಾವವಿತ್ತು, ಹಂಚಿತಿನ್ನುವ ದೊಡ್ಡತನವಿತ್ತು.

ಅಧುನಿಕೀಕರಣದಿಂದಾಗಿ ಅವಿಭಕ್ತ ಕುಟುಂಬಗಳು ಬಹುಪಾಲು ವಿಭಕ್ತವಾದವು-ಮಾಯವಾದವು, ಚಿಕ್ಕ ಚಿಕ್ಕ ವಿಭಜಿತ ಕುಟುಂಬಗಳು ಪೇಟೆ ಪಟ್ಟಣ ಸೇರಿದವು. ಅಲ್ಲಿರುವ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಹಿರಿಯರು ಯಾರೂ ಇರಲಿಲ್ಲ! ನೀತಿಕಥೆ, ರೀತಿ-ರಿವಾಜು ಇವುಗಳನ್ನು ತಿಳಿಸಿಕೊಡಲು ಅಪ್ಪ-ಅಮ್ಮಗೆ ಪುರುಸೊತ್ತಿಲ್ಲ! ಶಾಲೆಯಿಂದ ಬರುವ ಮಗುವನ್ನು ಮನೆಯಲ್ಲಿ ಸ್ವಾಗತಿಸುವುದು ಬೀಗಹಾಕಿದ ಬಾಗಿಲು! ಅನಾರೋಗ್ಯ ಪೀಡಿತ ಗಂಡನಿಗೆ ಊಟ ಅಂತ ಅಲ್ಲೆಲ್ಲೋ ಮಾಡಿಟ್ಟು ಕೆಲಸಕ್ಕೆ ಹೋಗುವ ಹೆಂಡತಿ, ಕಾಯಿಲೆಬಿದ್ದ ಹೆಂಡತಿಯನ್ನು ಮೂತ್ರವಿಸರ್ಜಿಸಲು ಕರೆದುಕೊಂಡು ಹೋಗಲು ಸಮಯವಿರದ ಗಂಡ, ಬೆಳಗಿನ ಧಾವಂತದಲ್ಲಿ ಹೋಟೆಲಿನದೇ ತಿಂಡಿ-ಅರ್ಧ ಬೆಂದ ಇಡ್ಲಿ ತಿಂದು ಸ್ವಲ್ಪ ಅದನ್ನೇ ಕಟ್ಟಿಕೊಂಡು, ಮಗುವಿಗೆ ಅದನ್ನೇ ತುರುಕಿ ಎಲ್ಲರೂ ಅವರವರ ಅಖಾಡಾಕ್ಕೆ ಪ್ರಯಾಣ, ಸಮಯ ಮೀರಿದ್ದಕ್ಕೆ ನಾಲ್ಕು ಗರಮ್ ಮಾತು- ಸಂಸಾರದ ದೋಸೆ ತೂತು! ಇಂತಹ ಪರಿಸರದಲ್ಲಿ ೪೦ ವಯಸ್ಸಿಗೇ ದಂಪತಿಗೆ ಬಿ.ಪಿ., ಶುಗರು ಇವೆಲ್ಲಾ ಕೇವಲ ಮಾನಸಿಕ ಒತ್ತಡದ ಪರಿಣಾಮ, ಈ ಮಾನಸಿಕ ಒತ್ತಡ ಹೆಚ್ಚಿನ ಮನೆಗಳಲ್ಲಿ ವಿಭಕ್ತ ಕುಟುಂಬದಲ್ಲಿನ ಅನಿವಾರ್ಯತೆಯ ಪರಿಣಾಮ!

" ತಮ್ಮಾ ಆರಾಮೇನೋ " ಎಂದು ಹಳ್ಳಿಯಿಂದ ಅಣ್ಣ ದೂರವಾಣಿಯಲ್ಲಿ ಮಾತನಾಡಿದರೆ ಮನಸ್ಸು ತುಂಬಿಬರುತ್ತದೆ. ಅವಿಭಕ್ತ ಕುಟುಂಬದ ಆ ಆಪ್ತತೆ ಇನ್ನೆಲ್ಲಿ ಎಂದು ಮನಸ್ಸಿಗೆ ಅದರ ಅಲೆಬಂದು ಅಪ್ಪಳಿಸುತ್ತದೆ. ಅಣ್ಣನ ಮುಂದೆ ತಮ್ಮ ಸಣ್ಣವನೇ ಆಗಿದ್ದರೂ ಬದುಕು ಕೊಟ್ಟ ನೋವಿನಿಂದ ಇನ್ನೂ ಸಣ್ಣವನಾಗಿಬಿಡುತ್ತಾನೆ. ಅಣ್ಣ ಎದುರಿಗೆ ಬಂದರೆ ಅವನನ್ನು ಆತುಕೊಂಡು ಗೋಳೋ ಎಂದು ದೊಡ್ಡದಾಗಿ ಅತ್ತುಬಿಡುವಾ ಎನಿಸುತ್ತದೆ! ಅಣ್ಣ ಊರಲ್ಲಿದ್ದು ಅಪ್ಪ-ಅಮ್ಮನನ್ನಾದರೂ ಸೇವೆಗೈಯ್ಯುತ್ತಿದ್ದಾನೆ ಆದರೆ ತಾನು ಸ್ವಾರ್ಥಿಯಾಗಿ ತನ್ನ ಕುಟುಂಬವನ್ನು ಮಾತ್ರ ಹೊಟ್ಟೆಹೊರೆದುಕೊಳ್ಳುತ್ತ ಹಲವಾರು ಒತ್ತಡ-ಜಂಜಡಗಳ ಮಧ್ಯೆ ಯಾಕಪ್ಪಾ ಸಿಕ್ಕಿಹಾಕಿಕೊಂಡೆ ಎಂದೆನಿಸುತ್ತದೆ ಆ ತಮ್ಮನಿಗೆ!

ಬಹುತೇಕ ವಿಭಕ್ತ ಮನೆಗಳಲ್ಲಿ ಇದಕ್ಕೆ ಮೂಲಕಾರಣ ಹೆಂಗಳೆಯರಾಗಿರುತ್ತಾರೆ. ಅವರು ದೊಡ್ಡವರಾಗಿರುವುದಿಲ್ಲ! ಅವರ ಸಣ್ಣತನ ಇಡೀ ಕುಟುಂಬದ ಸೌಹಾರ್ದತೆಯನ್ನೇ ಬಲಿತೆಗೆದುಕೊಳ್ಳುತ್ತದೆ. "ನನಗೆ ನಿಮ್ಮ ಅಪ್ಪ-ಅಮ್ಮನ ಜೊತೆ, ಅಣ್ಣ-ಅತ್ತಿಗೆ ಜೊತೆ ಇರಲು ಸಾಧ್ಯವಿಲ್ಲ, ಬೇಕಾದರೆ ಬೇರೆ ಮನೆ ಮಾಡಿ, ಇಲ್ಲಾಂದರೆ ನನ್ನ ದಾರಿ ನನಗೆ-ನಿಮ್ಮ ದಾರಿ ನಿಮಗೆ" ಎಂದು ಸವಾಲೊಡ್ಡಿ ಬಡಗಂಡನಿಗೆ ವಿಭಜಿಸುವ ಸೂತ್ರದ ಕಂಕಣಕಟ್ಟುವ ಜನ ಇವರೇ! ಎಲ್ಲೋ ಕೆಲವೊಮ್ಮೆ ಅಪವಾದವಿರಬಹುದುಷ್ಟೇ.

ಇನ್ನೊಂದು ಘಟನೆ, ಒಂದು ಕಡೆ ಇಬ್ಬರು ಒಂದೇ ಊರಿನ ಹುಡುಗಿಯರು ಸೇರಿ ಒಂದು ಕೋಣೆ ಬಾಡಿಗೆಗೆ ಪಡೆದು ಪಟ್ಟಣದಲ್ಲಿ ಓದುಮುಂದುವರಿಸುತ್ತಿದ್ದರು. ಅವರು ದಿನಾಲೂ ಅಧ ಲೀಟರ್ ಹಾಲು ಖರೀದಿಸಿ ಉಪಯೋಗಿಸುತ್ತಿದ್ದರು. ಆವರಲ್ಲಿ ಒಬ್ಬಳಿಗೆ ಹಾಲು ಸ್ವಲ್ಪ ಕಡಿಮೆ ಸಾಲುತ್ತಿತ್ತು. ಇನ್ನೊಬ್ಬಳು ಸ್ವಲ್ಪ ಹಾಲು ಕುಡಿಯುವ ತರಗತಿಯವಳು. ಇದನ್ನೇ ಸದಾ ನೋಡುತ್ತಿದ್ದ ಮೊದಲನೆಯವಳಿಗೆ ತನ್ನ ಸ್ನೇಹಿತೆ ತನಗಿಂತ ಹಾಲನ್ನು ಜಾಸ್ತಿ ಉಪಯೋಗಿಸುವುದು ಖರ್ಚಿನ ವಿಷಯದಲ್ಲಿ ಸಹಿಸಲಾಗಾಲಿಲ್ಲ. ಶುರು ತಗೊಳಿ-ಮಾರನೇ ದಿನದಿಂದಲೇ ಅವರು ಅರ್ಧರ್ಧ ಲೀಟರ್ ಪ್ರತ್ಯೇಕ ತೆಗೆದುಕೊಂಡು ಪ್ರತ್ಯೇಕವಾಗಿ ಇಟ್ಟುಕೊಳ್ಳಹತ್ತಿದರು. ಮುಂದೆ ಆ ಇಬ್ಬರಲ್ಲಿ ಮೊದಲನೆಯವಳು ಯಾವುದೋ ಕಂಪನಿಯಲ್ಲಿ ಸ್ವಾಗತಕಾರಿಣಿಯಾದರೆ ಎರಡನೆಯವಳು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮ್ಯಾನೇಜರ್ ಆದಳು. ಇದರರ್ಥ ಹಾಲು ಜಾಸ್ತಿ ಕುಡಿಯುವವರು ದೊಡ್ಡ ಹುದ್ದೆಗೆ ಏರುತ್ತಾರೆಂದಲ್ಲ, ಅವಳಲ್ಲಿ ದೊಡ್ಡತನವಿತ್ತು- ಅವಳು ಧಾರಾಳಿಯಾಗಿದ್ದಳು, ಆ ಧಾರಾಳಿತನ ಅವಳ ಹೆಚ್ಚಿನ ಓದಿಗೆ ಮತ್ತು ಹಲವು ವೃತ್ತಿಪರ ಪರೀಕ್ಷೆಗಳನ್ನು ಬರೆಯಲು ಅನುವುಮಾಡಿಕೊಟ್ಟಿತು. ಎಂದೋ ಒಮ್ಮೆ ಭೇಟಿಯಾದ ಇಬ್ಬರೂ ಪರಸ್ಪರ ಹಳೆಯ ನೆನಪನ್ನು ಕೆದಕಿದರು, ಬ್ಯಾಂಕ್ ಮ್ಯಾನೇಜರ್ ಆಗಿರುವವಳು ಮೊದಲನೆಯವಳಿಗೆ ದುಬಾರಿ ಬೆಲೆಯ ಸೀರೆಯೋಮ್ದನ್ನು ಉಡುಗೊರೆಯಾಗಿ ನೀಡಿದಳು! ಅವಳ ಮುಂದೆ ಮೊದಲನೆಯವಳು ಕುಬ್ಜಳಾಗಿಹೋದಳು,ಹಾಲಿನ ಬಳಕೆಯ ಬಗ್ಗೆ ತಾನು ತೋರಿದ ಸಣ್ಣತನ ನೆನದು ಮನಸ್ಸಲ್ಲೇ ಮರುಗಿದಳು.

ದೊಡ್ಡವ್ಯಕ್ತಿಗಳು ದೊಡ್ಡತನವನ್ನೇ ಮೈಗೂಡಿಸಿಕೊಂಡಿರುತ್ತಾರೆ. ಅವರಿಗೆ ಎಲ್ಲಿದ್ದರೂ ಜನಮೆಚ್ಚುಗೆ ಮತ್ತು ಮನ ಮೆಚ್ಚುಗೆ ಎರಡೂ ಸಿಗುತ್ತವೆ. ಕೊನೇಪಕ್ಷ ನಾಲ್ಕಾರು ಜನ ಅವರನ್ನು ಸಮಾಜದಲ್ಲಿ ಗುರುತಿಸಿ ಗೌರವಿಸುತ್ತಾರೆ. ಅವರಿಗೆ ಬೇಕಾದ ಯಾವುದೋ ಕೆಲಸವನ್ನು ಇನ್ಯಾರೋ ಗೌರವಪೂರ್ವಕವಾಗಿ ಮಾಡಿಕೊಡುತ್ತಾರೆ. ಅವರು ಹತ್ತಾರು ಜನ ಇಷ್ಟಪಡುವ ವ್ಯಕ್ತಿಯಾಗುತ್ತಾರೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬಂತೆ [ಕಾಲೀ ಕೊಡವೂ ತುಳುಕುವುದಿಲ್ಲ ಎನ್ನಬೇಡಿ!] ಸಮಾಜದ ಕೆಲವು ಸಮಸ್ಯೆಗಳಿಗಾದರೂ ಅವರು ಸ್ಪಂದಿಸುತ್ತಾರೆ. ಬಡಜನತೆಗೆ ತಮ್ಮಿಂದಾಗಬಹುದಾದ ಸಹಾಯ ಸಹಕಾರಗಳನ್ನು ನೀಡುತ್ತಾರೆ. ಸರ್ ಎಮ್. ವಿಶ್ವೇಶ್ವರಯ್ಯನವರು ಎಂತಹ ದೊಡ್ಡವರಾಗಿದ್ದರೆಂದರೆ ತನಗೆ ಮಹಾರಾಜರಿಂದ ಬಂದ ಪುರಸ್ಕಾರದ ಹಣವನ್ನು ಬೆಂಗಳೂರಿನಲ್ಲಿ ಎಸ್.ಜೆ.ಪಾಲಿಟೆಕ್ನಿಕ್ ಕಟ್ಟುವಂತೇ ಕೊಟ್ಟುಬಿಟ್ಟರು, ಅಭಿಮಾನೀ ಬಳಗ ಅಪರೂಪವಾಗಿ ಏರ್ಪಡಿಸಿದ್ದ ಸನ್ಮಾನದಲ್ಲಿ ತಮಗೆ ಕೊಟ್ಟ [ಅಂದಿನಕಾಲಕ್ಕೆ] ಒಂದು ಲಕ್ಷರೂಪಾಯಿ ನಗದನ್ನು ದೊಡ್ಡವರಾದ ನಮ್ಮ ಡೀವೀಜಿ ಗೋಖಲೆ ಸಾರ್ವಜನಿಕ ಸಂಸ್ಥೆಯ ಬೆಳವಣಿಗೆಗೆ ಕೊಟ್ಟರು!

ನಾವು ನಮಗೇ ಅರಿವಿಲ್ಲದೆ ಪ್ರತೀ ಸೇಕಂದಿಗೂ ಬೆಳೆಯುತ್ತಲೇ ಇದ್ದೇವೆ, ವಯಸ್ಸು ಜಾಸ್ತಿಯಾಗುತ್ತಲೇ ಇದೆ, ಒಂದರ್ಥ ನಾವು ಗಾಳಿಗೆ ಮುದುಕರಾಗುತ್ತಿದ್ದೇವೆ. ಅದಿಲ್ಲಾ ನಾವು ನಮ್ಮನ್ನೂ ನಮ್ಮ ಬದುಕಿನ ಗತಿಯನ್ನೂ ಸಿಂಹಾವಲೋಕನ ಮಾಡಿಕೊಳ್ಳಬೇಕು. ಬದುಕಿನ ತೂಮ್ಬ ನಮ್ಮಲ್ಲಿ ನಾವು ಇದುವರೆಗೆ ತುಂಬಿಕೊಂಡು ನಡೆದ ಸಣ್ಣತನ ಮತ್ತು ಅಸೂಯೆ ಈ ಎರಡು ಅಂಶಗಳನ್ನು ಬಿಡಬೇಕು. ಶಕ್ಯವಾದಷ್ಟೂ ಧಾರಾಳಿಗಳಾಗಬೇಕು. ಆಗ ಮಾತ್ರ ನಾವು ದೊಡ್ಡವರಾಗಲು ಸಾಧ್ಯ, ನಿಜ ಅರ್ಥದಲ್ಲಿ ಬೆಳೆಯಲು ಸಾಧ್ಯ.

Wednesday, July 14, 2010

ಥೈ ಥೈ ತದ್ದಿನ ಧೇಂ ಧೇಂ........




ಥೈ ಥೈ ತದ್ದಿನ ಧೇಂ ಧೇಂ........


ಪ್ರತಿಭೆಗಳಲ್ಲಿ ದೈತ್ಯ ಪ್ರತಿಭೆಗಳದ್ದೇ ಒಂದು ವಿಭಾಗ. ಅವುಗಳನ್ನು ಪರಿಚಯಿಸಲು ಪ್ರಾರಂಭಿಸಿದರೆ [ವಾಸ್ತವವಾಗಿ ಅವರುಗಳ ಪರಿಚಯ ಎಲ್ಲರಿಗೂ ಇದೆ, ಆದರೆ ಅವ್ರನ್ನು ನನ್ನ ಶಬ್ಧಗಳಲ್ಲಿ ತಿಳಿಸಿಕೊಡುವುದಾದರೆ]ಎಲ್ಲಿ ಆದಿ ಮತ್ತು ಎಲ್ಲಿ ಅಂತ್ಯ ಎಂದು ಗೊತ್ತುಮಾಡಿಕೊಳ್ಳುವುದು ಕಷ್ಟ. ಒಂದೊಮ್ಮೆ ಕಮ್ಮಿ ಹೇಳಿಬಿಟ್ಟರೆ ಎನ್ನುವ ಆಭಾಸ ಬೇರೆ. ಆದರೂ ನನಗೆ ಗೊತ್ತಿರುವ ಮಟ್ಟಿಗೆ ಗೊತ್ತಿರುವುದನ್ನು ಇತರರಿಗೆ ಹಂಚಲು ಅಭ್ಯಂತರವೇನಿಲ್ಲವಲ್ಲ! ಹೀಗಾಗಿ ಬರೆಯಲು ಮುಂದಾಗುತ್ತಿದ್ದೇನೆ. ಇವತ್ತಿನ ನಮ್ಮ ಕಥಾನಕದ ನಾಯಕ ದಿ|ಶ್ರೀ ಕೋಟ ಶಿವರಾಮ ಕಾರಂತರು, ಪ್ರಾಯಶಃ ಕಾರಂತರೆಂದರೆ ಅದು ಇವರು ಎಂದೇ ಅರ್ಥ! ಅಷ್ಟರ ಮಟ್ಟಿಗೆ ಜನಪ್ರಿಯರಾದ ವ್ಯಕ್ತಿ ಈ ಕಾರಂತಜ್ಜ. ಮಕ್ಕಳಿಗಾಗಿ ’ತರಂಗ’ ವಾರಪತ್ರಿಕೆಯಲ್ಲಿ ’ಬಾಲವನ’ದ ಕಾರಂತಜ್ಜನಾದ ಶ್ರೀಯುತರು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕೈಹಾಕದ ಕಣಗಳೇ ಇಲ್ಲ!

ಯಾರಿಗಾದರೂ ಏನಾದರೂ ಸಂದೇಹವಿದ್ದರೆ ಅದೊಂದು ಕಾಲವಿತ್ತು-ಸೀದಾ ಕಾರಂತರಲ್ಲಿ ಕೇಳುವುದು-ಆ ಮೂಲಕ ಸಂದೇಹ ಬಗೆಹರಿಸಿಕೊಳ್ಳುವುದು. ಸಾಹಿತ್ಯ, ಜರ್ನಲಿಸಂ, ಯಕ್ಷಗಾನ, ಸಿನಿಮಾ ನಿರ್ದೇಶನ, ಕೃಷಿ ಹೀಗೇ ಯಾವ ರಂಗದಲ್ಲೂ ಸಿಗಬಹುದಾದ ಕವಿ-ಸಾಹಿತಿಗಳ ಸಾಲಿನಲ್ಲಿ ಶ್ರೀಯುತರು ಅಗ್ರಗಣ್ಯರು. ಬದುಕಿನ ಕೊನೆಯ ಘಟ್ಟದ ವರೆಗೂ ಅತ್ಯಂತ ಕ್ರಿಯಾತ್ಮಕವಾಗಿ, ಕ್ರಿಯಾಶೀಲರಾಗಿ ದೀಪದಿಂದ ಹಲವು ದೀಪ ಬೆಳಗಿದಂತೆ ತನ್ನ ಇಚ್ಛಾಶಕ್ತಿಯಿಂದ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ’ಕಡಲ ತೀರದ ಭಾರ್ಗವ’ನ ಬಗ್ಗೆ ಸ್ವಲ್ಪ ಹೆಳುತ್ತೇನೆ ಕೇಳಿ--

೧೯೦೨ ರ ಅಕ್ಟೋಬರ್ ೧೦ನೇ ದಿನಾಂಕದಂದು ಉಡುಪಿಗೆ ಹತ್ತಿರದ ’ಕೋಟ’ ಎಂಬ ಗ್ರಾಮದಲ್ಲಿ ಶೇಷ ಕಾರಂತ ಮತ್ತು ಲಕ್ಷ್ಮಮ್ಮ ದಂಪತಿಗೆ ಐದನೆಯ ಮಗುವಾಗಿ ಜನಿಸಿದ ಕಾರಂತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುಂದಾಪುರದಲ್ಲಿ ಪೂರೈಸಿ ನಂತರ ಮಂಗಳೂರಿನಲ್ಲಿ ಕಾಲೇಜು ವ್ಯಾಸಂಗವನ್ನು ಸ್ವಲ್ಪಕಾಲ ಮಾಡಿದರು. ಆಗೆಲ್ಲ ನಮ್ಮ ಗಾಂಧೀ ತಾತನ ಚಳುವಳಿಗಳು ಜೋರಾಗಿ ನಡೆಯುತ್ತಿದ್ದವು. ಗಾಂಧೀಜಿಯಿಂದ ಪ್ರಭಾವಿತರಾದ ಕಾರಂತರೌ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಇದೇ ಕಾರಣದಿಂದ ಅಸಹಕಾರ ಚಳುವಳಿಗಾಗಿ ಕಾಲೇಜು ಓದನ್ನು ಅರ್ಧಕ್ಕೇ ನಿಲ್ಲಿಸಿದರು. ಖಾದಿ ಮತ್ತು ಸ್ವದೇಶೀ ಚಳುವಳಿಗಳಲ್ಲಿ ಐದುವರ್ಷಗಳ ಕಾಲ ತೊಡಗಿಕೊಂಡ ಶ್ರೀಯುತರು ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಆರಂಭಿಸಿ ಮುನ್ನಡೆದರು. ಅಜಮಾಸು ಮೂವತ್ತು ವಯಸ್ಸಿನಲ್ಲಿ ಲೀಲಾ ರನ್ನು ಮದುವೆಯಾದರು.

ನನಗೆ ಸುಮಾರು ೮ವರ್ಷ ವಿರಬಹುದು. ಆಗ ನನ್ನ ಚಿಕ್ಕಪ್ಪನ ಮನೆಯಲ್ಲಿ [ರಜದಲ್ಲಿ] ಕಂಡ, ಕಾರಂತರು ಖಗೋಳದ ಬಗ್ಗೆ ’ಈ ಜಗತ್ತು’ ಎಂಬ ಪುಸ್ತಕಮಾಲೆಯನ್ನು ಓದಲು ಮನಸ್ಸುಮಾಡಿದೆ. ಅಲ್ಲಿನಿಂದ ನನಗೆ ಕಾರಂತರ ಮೇಲಿನ ಪ್ರೇಮ ಜಾಸ್ತಿಯಾಗುತ್ತಾ ಹೋಯಿತು. ಸಾಮಾನ್ಯವಾಗಿ ಯಾರೂ ಅಷ್ಟು ಸವಿಸ್ತಾರವಾಗಿ ಹೇಳದ ಖಗೋಳ ಶಾಸ್ತ್ರವನ್ನು ಬಹಳ ಪರಿಪೂರ್ಣವಾಗಿ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿಗೆ ಅಪ್ರತಿಮ ಕೊಡುಗೆಗಳನ್ನು ಕೊಟ್ಟ ಕಾರಂತರ ಕಾದಂಬರಿಗಳಂತೂ ಒಂದಕ್ಕಿಂತಾ ಒಂದು ಅದ್ಬುತ! ಓದಿದ ಯಾವನೂ ಮರೆಯಲಾಗದ ಅನನ್ಯ ಅನುಭವ ಆ ಕಾದಂಬರಿಗಳಲ್ಲಿ. ಮರಳಿ ಮಣ್ಣಿಗೆ, ಅಳಿದಮೇಲೆ, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಚೋಮನ ದುಡಿ ಇವೆಲ್ಲಾ ದಿನವೂ ಕೆಣಕುವ ಪಾತ್ರಗಳನ್ನೊಳಗೊಂಡ ಕಾದಂಬರಿಗಳು. ಅವುಗಳಿಂದ ಸಿಗುವ ಬದುಕಿನ ಅನುಭವ ಸಾರ ಅನುಭಾವಿಯಾಗಲು ಯಾರಿಗೆ ಇಷ್ಟವಾಗುವುದಿಲ್ಲ! ಮೈ ಮನಗಳ ಸುಳಿಯಲ್ಲಿ, ಅದೇ ಊರು ಅದೇ ಮರ, ಶನೀಶ್ವರನ ನೆರಳಿನಲ್ಲಿ, ಕುಡಿಯರ ಕೂಸು, ಸ್ವಪ್ನದ ಹೊಳೆ, ಸರ್ಸಮ್ಮನ ಸಮಾಧಿ--ಇವೂ ಕೂಡ ಅತ್ಯುತ್ತಮ ಕೃತಿಗಳೇ ಆಗಿವೆ. ’ಮರಳಿ ಮಣ್ಣಿಗೆ’ ಕಾದಂಬರಿ ಅವರ ಕೃತಿಗಳಲ್ಲೇ ಶ್ರೇಷ್ಠ ಎಂದರೆ ತಪ್ಪಾಗಲಾರದು. ವರುಷಕ್ಕೊಂದರಂತೆ ಸುಮಾರು ೪೭ ಕಾದಂಬರಿಗಳನ್ನು ಬರೆದ ಕಾರಂತರು ೧೯೫೭ ರಲ್ಲಿ ಸ್ವಲ್ಪ ಯಕ್ಷಗಾನ ಬಯಲಾಟದ ಕಡೆಗೆ ವಾಲಿದರು.

ಯಕ್ಷಗಾನದ ಗಂಡುಮೆಟ್ಟಿನ ಸ್ಥಳಗಳಲ್ಲಿ ಕುಂದಾಪುರವೂ ಒಂದು. ಇಲ್ಲಿಗೆ ಹತ್ತಿರದ ಸಾಲಿಗ್ರಾಮದಲ್ಲಿ ಬಹುಕಾಲ ವಾಸಿಸಿದ್ದ ಕಾರಂತರು ಯಕ್ಷಗಾನವನ್ನು ಬಹುವಾಗಿ ಪ್ರೀತಿಸಿದವರು. ಸಮಗ್ರ ಕಲೆಯಾದ ಅದನ್ನು ಸಮಾಜದ ಮುಂಚೂಣಿಗೆ ತರಲು ಬಹಳ ಶ್ರಮಿಸಿದವರಲ್ಲಿ ಶ್ರೀಯುತರೂ ಒಬ್ಬರು. ಯಕ್ಷಗಾನ ಬಯಲಾಟ ಮತ್ತು ಯಕ್ಷಗಾನ ಎಂಬುದಾಗಿ ಎರಡು ಹೊತ್ತಗೆಗಳನ್ನು ಯಕ್ಷಗಾನದ ಮೇಲೆ ಬರೆದರು. ಯಕ್ಷಗಾನದ ಕುರಿತು ಸಂಶೋಧನೆ ನಡೆಸಿದವರಲ್ಲಿ ಮೊಟ್ಟ ಮೊದಲನೆಯ ಮತ್ತು ಅತೀ ಪ್ರಮುಖರು ಎಂದರೆ ಅವರೇ ಶಿವರಾಮ ಕಾರಂತರು!ಯಕ್ಷಗಾನದ ಹಳೆಯ ಪ್ರಸಂಗಗಳನ್ನು ಹುಡುಕಿ,ಅವುಗಳ ಸಂಗೀತದ ತಾಯಿಬೇರನ್ನು ಹೊರತೆಗೆದು, ಯಕ್ಷಗಾನದ ಹುಟ್ಟು-ಬೆಳವಣಿಗೆ ಮುಂತಾದ ವಿಷಯಗಳನ್ನು ಬಹಳಕಾಲ ಅಭ್ಯಸಿಸಿದ ಕಾರಂತರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಬ್ಯಾಲೆ ಮುಂತಾದ ಜಾನಪದ ಕುಣಿತಗಳನ್ನು ಯಕ್ಷಗಾನದಲ್ಲಿ ಪ್ರಯೋಗಿಸಿ ನೋಡಿದರು.ತನ್ನದೇ ಆದ ತಂಡವೊಂದನ್ನು ಕಟ್ಟಿಕೊಂಡು ಅದನ್ನು ಆ ಕಾಲದಲ್ಲೇ ಐರೋಪ್ಯ ದೇಶಗಳಿಗೆ ಕೊಂಡೊಯ್ದಿದ್ದರು.

೧೯೩೦-೪೦ ರಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ ತನ್ನ ಮೊದಲ ಕೆಲವು ಕಾದಂಬರಿಗಳನ್ನು ಅವರೇ ಪ್ರಕಟಿಸಿದರು ಮಾತ್ರವಲ್ಲ ಅದಕ್ಕೆ ಆವರಣ ಪುಟ[ಕವರ್ ಪೇಜ್] ಅವರೇ ರಚಿಸಿದ ಚಿತ್ರ ಮತ್ತು ವಿನ್ಯಾಸಗಳಿಂದ ಕೂಡಿತ್ತು. ಬಹುಶಃ ಕೃತಿಕಾರರು ತಮ್ಮ ಪುಸ್ತಕಗಳಿಗೆ ಆವರಣ ಪುಟದ ವಿನ್ಯಾಸವನ್ನೆಲ್ಲ ಮಾಡುವುದು ದುರ್ಲಭ. ಆದರೆ ಕಾರಂತರು ಅದನ್ನು ಮಾಡಿದ್ದರು. ನಂತರ ಪ್ರೆಸ್ ತುಂಬಾ ನಷ್ಟದಲ್ಲಿ ನಡೆದುದರಿಂದ ಅದನ್ನು ನಿಲ್ಲಿಸಿಬಿಟ್ಟರು.

ಕಾರಂತರು ಒಟ್ಟೂ ೪೧೭ ಪುಸ್ತಕಗಳನ್ನು ಹೊರತಂದು ಭಾರತದಲ್ಲೇ ಬರಹಗಾರನೊಬ್ಬನಿಗೆ ಸಾರಾಸಗಾಟಾಗಿ ಸಾಧ್ಯವಾಗದ ಸಾಧನೆ ಮೆರೆದಿದ್ದರೂ ಇದು ಮೊದಲು ಪರಿಗಣಿತವಾಗಲಿಲ್ಲ. ಬರೇ ೪೭ ಕಾದಂಬರಿಗಳಷ್ಟೇ ಅಲ್ಲದೇ ಅವರು ೩೧ ಗೀತ ರೂಪಕಗಳು,೪ ಸಣ್ಣ ಕಥೆಗಳು, ವಿವಿಧ ಪ್ರಬಂಧಗಳ ೬ ಪುಸ್ತಕಗಳು ಮತ್ತು ರೇಖಾಚಿತ್ರಗಳು, ಜಾಗತಿಕ ಕಲೆಯ ಕನ್ನಡಾವತರಣಿಕೆಯೂ ಸೇರಿದಂತೇ ಕಲೆಯ ಮೇಲೆ ೧೩ ಪುಸ್ತಕಗಳು,ಚಾಳುಕ್ಯ ಶಿಲ್ಪಕಲೆ ಮತ್ತು ವಿನ್ಯಾಸದ ಬಗ್ಗೆ ಪುಸ್ತಕ, ಯಕ್ಷಗಾನದ ಮೇಲೆ ಎರಡು, ಮಕ್ಕಳಿಗಾಗಿ ಜ್ಞಾನಭಂಡಾರ ತುಂಬಿದ ಮೂರು ಸಂಚಿಕೆಗಳುಳ್ಳ ಪುಸ್ತಕ, ಬೆಳೆದ ಮಕ್ಕಳಿಗಾಗಿ ೪ ಸಂಚಿಕೆಗಳ ವಿಜ್ಞಾನದ ಎನ್ಸೈಕ್ಲೋಪೀಡಿಯಾ, ೨೪೦ ಮಕ್ಕಳ ಪುಸ್ತಕ, ಪ್ರವಾಸದ ಬಗ್ಗೆ ೬ ಪುಸ್ತಕಗಳು, ಪಕ್ಷಿಗಳ ಬಗ್ಗೆ ಎರಡು, ಮೂರು ಪ್ರವಾಸ ಕಥನಗಳು, ಒಂದು ಸ್ವಂತ ಜೀವನ ಚರಿತ್ರೆ ಹೀಗೇ ಈ ಯಾದಿ ಪೂರ್ಣಗೊಳ್ಳುವುದಿಲ್ಲ! ಮಕ್ಕಳಿಗಂತೂ ಅಮರಚಿತ್ರಕಥೆಯನ್ನುಅನುವಾದಿಸಿ ಕೊಟ್ಟ ಕಾರಂತಜ್ಜ ಪ್ರಾತಃಸ್ಮರಣೀಯರು.

ಅವರ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ಶ್ರೀಯುತರಿಗೆ ಜ್ಞಾನಪೀಠಪ್ರಶಸ್ತಿ ಲಭಿಸಿತು. ಇಲ್ಲಿ ಮೂಕಿಯಾಗಿರುವ ಅಜ್ಜಿಯೊಬ್ಬಳು ತನ್ನ ಹತ್ತಿರದ ಬಂಧು ಸುಬ್ಬಣ್ಣನಿಗೆ ಹಲವು ಅರ್ಥವಗದ ಘಟನೆಗಳನ್ನು ಅರ್ಥವಾಗುವಂತೆ ತಿಳಿಸಿಕೊಡುವುದು, ಹಿಂದಿನ ಕುರುಡು ನಂಬಿಕೆಗಳು ಅವುಗಳ ಅಡ್ಡ ಪರಿಣಾಮಗಳು ಇವುಗಳ ಬಗ್ಗೆ ವಿಸ್ತ್ರತವಾಗಿ ವಿವರಿಸುವ ಈ ಕಾದಂಬರಿಯಲ್ಲಿ ಹಳೆಯ ಕಾಲದ ಕುರುಡು ಕಟ್ಟುಪಾಡುಗಳು, ಬದುಕಿನ ಹಲವು ಮಜಲುಗಳು, ಧಾರ್ಮಿಕ ಮತ್ತು ಸಾಮಾಜಿಕ ಸಂಬಂಧಗಳು, ಪರಿಕಲ್ಪನೆಗಳು ಇವುಗಳನ್ನೆಲ್ಲ ಮೂಕಜ್ಜಿಯ ಸನ್ನೆಗಳಲ್ಲಿ ಪ್ರಸ್ತುತ ಪಡಿಸುವ ಕಾರಂತರು ಅವಳಿಗೆ ಅತಿಮಾನುಷ ಶಕ್ತಿಯನ್ನು ಕೊಟ್ಟು ಭೂತ ಮತ್ತು ಭವಿಷ್ಯತ್ ಕಾಲದ ಆಗು ಹೋಗುಗಳು ಅವಳಿಗೆ ಗೋಚರಿಸುತ್ತಿರುವಂತೆ ಚಿತ್ರಿಸಿದ್ದಾರೆ. ಸುಬ್ಬಣ್ಣ ಅನೇಕ ಘಟನೆಗಳಿಗೆ ಹತ್ತಿರದ ಕಾಡಲ್ಲಿ ಕುರುಹು ಹುಡುಕುವುದು, ಅಲ್ಲಿನ ಗುಹೆಗಳಲ್ಲಿ ಆತನಿಗೆ ಕೂದಲು-ಮೂಳೆ ಮೊದಲಾದವು ಸಿಗುವುದು, ಆತ ಅವನ್ನು ತಂದು ಮೂಕಜ್ಜಿ ತೋರಿಸಿದಾಗ ಅವಳು ಅವುಗಳು ಹೇಗೆ ಅಲ್ಲಿ ಬಿದ್ದಿವೆ ಎಂಬುದರ ಬಗ್ಗೆ ಹಲವು ಆಶ್ಚರ್ಯಕರ ಸಂಗತಿಗಳನ್ನು ಹೊಅರಗೆಡಹುವುದು--ಹೀಗೇ ಕಾದಂಬರಿ ಅಂದಿನ ಕಾಲದ ಹಲವು ಮಜಲುಗಳನ್ನು ಮೆಲುಕುತ್ತದೆ ಮತ್ತು ರಸವತ್ತಾಗಿದೆ. ಒಬ್ಬನ ಜೀವನದ ಮೌಲ್ಯವನ್ನು ವಿಸ್ತರಿಸಿ ಹೇಳುವ ಈ ಕಾದಂಬರಿ ಕುರುಡು-ಮೂಢ ನಂಬಿಕೆಗಳು ಮಾಡುವ ದುಷ್ಪರಿಣಾಮಗಳನ್ನು ವಿಷದೀಕರಿಸು ಪರಿ ನಿಜಕ್ಕೂ ಪರಿಣಾಮಕಾರಿ! ಹೀಗೇ ಇದೂ ಅಲ್ಲದೇ ಸ್ವತಃ ವಿಜ್ಞಾನವನ್ನು ಓದದ ಕಾರಂತರು ಅತ್ಯಂತ ಮಹತ್ತರ ಮತ್ತು ಸ್ವಾರಸ್ಯಕರ ವಿಜ್ಞಾನದ ಪರಿಚಯವನ್ನು ಅಂದಿನ ಮಕ್ಕಳಿಗೆ ಮಾಡಿಕೊಟ್ಟಿರುವುದು ಪ್ರಶಂಸನೀಯ ಮತ್ತು ಆಶ್ಚರ್ಯಕರ!

ತನ್ನವರನ್ನು ಕಳೆದುಕೊಂಡು ಮರುಗುವ ಮನಸ್ಸಿನ್ನು ತಹಬಂದಿಯಲ್ಲಿಟ್ಟು ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬ ಜೀವನಚರಿತ್ರೆಯ ಮೊದಲ ಭಾಗವನ್ನು ಬರೆದು ನಂತರ ಎರಡನೆಯ ಭಾಗವಾಗಿ"ಸ್ಮೃತಿ ಪಟಲದಿಂದ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ತನ್ನ ನಾಡು-ನುಡಿಯ ಉಳಿವಿಗಾಗಿ ಪರಿಸರ ಹೋರಾಟಕ್ಕೆ ಧುಮುಕಿ ಶರಾವತಿ ಟೇಲರೇಸ್ ಮತ್ತು ಕೈಗಾ ಅಣುಸ್ಥಾವರದ ಪ್ರತಿಷ್ಠಾಪನೆಯ ವಿರುದ್ಧ ಪರಿಸರ ಆಂದೋಲನವನ್ನು ನಡೆಸಿದರು. ಅಂದಿನ ಅನಿವಾರ್ಯತೆಯಲ್ಲಿ ರಾಜಕೀಯವನ್ನು ಸೇರಿ ಸಮಾಜಕ್ಕೆ ಸೇವೆ ಮಾಡಲು ಮುನ್ನುಗ್ಗಿದ ಅವರಿಗೆ ಚುನಾವಣೆಯಲ್ಲಿ ನಮ್ಮ ಜನ ಗೆಲುವು ನೀಡಲಿಲ್ಲ, ಬಹುಶಃ ಅವರಿಗೆ ಅದು ಯೋಗ್ಯವಲ್ಲದ ರಂಗ ಎಂತಲೇ ಹಾಗೆ ಮಾಡಿದ್ದಿರಬಹುದು! ತನ್ನ ಮೊನಚಾದ ಮಾತುಗಳಿಂದ ಚಾಟಿ ಏಟು ಕೊಡುತ್ತಿದ್ದ ಕಾರಂತರು, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ ನಡೆದ್ದಾಡುವ ವಿಶ್ವಕೋಶವೆಂದೇ ಖ್ಯಾತರದ ಕಾರಂತರು ಸಮಾಜದಿಂದ " ಕಡಲ ತೀರದ ಭಾರ್ಗವ" ಎಂದೇ ಗುರುತಿಸಲ್ಪಟ್ಟರು. ಹಂಪಿ ಉಳಿಸುವ ಬಗ್ಗೆ ಸೇರಿದಂತೆ ಹತ್ತು-ಹಲವು ವಿಷಯಗಳಲ್ಲಿ ಅವರು ಆಂದೋಲನಗೈದರು.

ಕೊಡಗಿನ ಕಾಫೀ ಎಸ್ಟೇಟ್ ಹಾಗೂ ಅಡಿಕೆತೋಟದ ಮಾಲೀಕರಾದ ದಿ|ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆಯಲ್ಲಿ ಅವರ ಒತ್ತಾಯದ ಮೇರೆಗೆ ಸುಮಾರು ತಿಂಗಳುಗಳ ಕಾಲ ವಾಸವಿದ್ದ ಕಾರಂತರು " ಬೆಟ್ಟದ ಜೀವ " ಕಾದಂಬರಿ ಬರೆದರು. ಇದರಲ್ಲಿ ಅಡಿಕೆ ತೋಟದ ಕೃಷಿಕರಾದ ವೃದ್ಧ ದಂಪತಿಯನ್ನು ಚಿತ್ರಿಸಿದರು. ಶಹರದಿಂದ ಮಗನ ಹಿಂದಿರುಗುವಿಕೆಯ ನಿರೀಕ್ಷೆಯಲ್ಲಿರುವ ಈ ದಂಪತಿಯ ಕಥೆ ಅತ್ಯಂತ ಹೃದಯಂಗಮವಾಗಿದೆ. "ಸರಸಮ್ಮನ ಸಮಾಧಿ" ಸತಿ ಪದ್ಧತಿಯ ಬಗ್ಗೆ ವಿವೇಚಿಸಿದರೆ ’ಮರಳಿ ಮಣ್ಣಿಗೆ’ ಮೂರು ತಲೆಮಾರಿನ ಬಗ್ಗೆ ತಿಳಿಸಿಕೊಡುವಂತಾದ್ದು, ’ಮೈಮನಗಳ ಸುಳಿಯಲ್ಲಿ’ ಕಾದಂಬರಿ ಬಸ್ರೂರಿನ ನರ್ತಕಿಯೊಬ್ಬಳ ಸುತ್ತ ಹೆಣೆದದ್ದಾಗಿದ್ದು ಕೆಲವು ನಾಜೂಕು ವಿಷಯಗಳಿಂದ ಕೂಡಿತ್ತಾದ್ದರಿಂದ ಚೆನ್ನಾಗೇ ಇದ್ದರೂ ಜನ ಅದನ್ನು ಬಹಳವಾಗಿ ಪ್ರಚುರಪಡಿಸಲಿಲ್ಲ. 'ಅಪೂರ್ವಪಶ್ಚಿಮ' -ಪ್ರವಾಸ ಕಥನ ಓದುವುದೇ ಒಂದು ರೋಮಾಂಚನ. ಇದನ್ನು ಓದಿದವರು ಹಲವಾರು ಬಾರಿ ಮತ್ತೆ ಓದುವುದಿದೆ!

ಆನೆ ಹೋದದ್ದೇ ದಾರಿ ಎಂಬ ಗಾದೆಯಂತೆ ಕಾರಂತರು ನಡೆದದ್ದೇ ಮಾರ್ಗ! ಮಕ್ಕಳಿಗಾಗಿ ಅತೀ ಮುತುವರ್ಜಿಯಿಂದ ಅವರು ನಿರ್ಮಿಸಿದ ಚಿಕ್ಕ ರೈಲು ಏಷಿಯಾದಲ್ಲಿಯೇ ಪ್ರಪ್ರಥಮವಾಗಿತ್ತು ಮಾತ್ರವಲ್ಲ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಅದೇ ತೆರನಾದ ಮಕ್ಕಳ ರೈಲು ನಿರ್ಮಾಣಕ್ಕೆ ಪ್ರೇರಕವಾಯಿತು. ಕಾಡುಗಳ್ಳರಿಂದ ಎರಡು ಎಳೆಯ ಹುಲಿಮರಿಗಳನ್ನು ರಕ್ಷಿಸಿದ ಶ್ರೀಯುತರು ಮಗನನ್ನು ಆ ದಿಸೆಯಲ್ಲಿ-ಪರಿಸರ ಸಂರಕ್ಷಣೆಯಲ್ಲಿ ತೊಡಗುವಂತೆ ಪ್ರೇರೇಪಿಸಿದರು. ಮಗ ಉಲ್ಲಾಸ್ ಕಾರಂತ ಇನ್ನೂ ಆ ಹಾದಿಯಲ್ಲೇ ಮುನ್ನಡೆದಿದ್ದಾರೆ.

ಸನ್ಮಾನ ಮತ್ತು ಪುರಸ್ಕಾರಗಳು

ಜ್ಞಾನಪೀಠ ಪ್ರಶಸ್ತಿ-೧೯೭೮
ಪದ್ಮ ಭೂಷಣ - ಇಂದಿರಾಗಾಂಧಿಯಿಂದ ತರಲ್ಪಟ್ಟ ಎಮರ್ಜೆನ್ಸಿ[ಮೀಸಾ] ಕಾಯಿದೆಯ ವಿರುದ್ಧ ನಡೆದ ಶ್ರೀಯುತರು ಇದನ್ನು ಆ ನೆನಪಿನಲ್ಲಿ ತಿರಸ್ಕರಿಸಿದರು,
ಸಾಹಿತ್ಯ ಅಕಾಡೆಮೀ ಪ್ರಶಸ್ತಿ - ೧೯೫೮
ಪಂಪ ಪ್ರಶಸ್ತಿ
ತುಲ್ಸಿ ಸಮ್ಮಾನ್
ಸ್ವೆಡಿಶ್ ಅಕಾಡೆಮಿ ಪ್ರಶಸ್ತಿ
ಮಂಗಳೂರು ವಿಶ್ವವಿದ್ಯಾಲಯ ೧೯೯೦ ರಲ್ಲಿ ’ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್’ ಎಂಬ ಸಂಸ್ಥೆಯನ್ನು ಕಾರಂತರ ಗೌರವಾರ್ಥ ಸ್ಥಾಪಿಸಿತು.
ಭಾರತದ ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ


ಕೆಲವು ಪ್ರಮುಖ ಕೃತಿಗಳು

ಮೂಕಜ್ಜಿಯ ಕನಸುಗಳು
ಮರಳಿ ಮಣ್ಣಿಗೆ
ಚೋಮನ ದುಡಿ
ಅಪೂರ್ವ ಪಸ್ಚಿಮ-ಪ್ರವಾಸ ಕಥನ
ಅಬುವಿಂದ ಬರ್ಮಾಕ್ಕೆ - ಪ್ರವಾಸ ಕಥನ
ಅರಸಿಕರಲ್ಲ - ಪ್ರವಾಸ ಕಥನ
ಮೈ ಮನಗಳ ಸುಳಿಯಲ್ಲಿ
ಬೆಟ್ಟದ ಜೀವ
ಸರಸಮ್ಮನ ಸಮಾಧಿ
ಅಳಿದ ಮೇಲೆ
ಕುಡಿಯರ ಕೂಸು
ಜ್ಞಾನ
ಮೈಲಿಕಲ್ಲಿನೊಡನೆ ಮತುಕತೆ-ಸಣ್ಣ ಕಥೆ
ಅದ್ಭುತ ಜಗತ್ತು - ( ಸೈನ್ಸ್)
ವಿಜ್ಞಾನ ಪ್ರಪಂಚ -( ಸೈನ್ಸ್)
ಕಲದರ್ಶನ - ಕಲೆಯ ಬಗೆಗೆ ಸಚಿತ್ರ ಪುಸ್ತಕ.
ಯಕ್ಷಗಾನ
ಯಕ್ಷಗನ ಬಯಲಾಟ
ಭಾರತೀಯ ಚಿತ್ರಕಲೆ
ಹುಚ್ಚು ಮನಸ್ಸಿನ ಹತ್ತು ಮುಖಗಳು--ಜೀವನ ಚರಿತ್ರೆ
ಚಿಗುರಿಧ ಕನಸು
ಮುಗಿದ ಯುದ್ಧ
ಮೂಜನ್ಮ
ಧರ್ಮರಾಯನ ಸಂಸಾರ
ಕೇವಲ ಮನುಷ್ಯರು
ಇಲ್ಲೆಯಂಬ
ಇದ್ದರೂ ಚಿಂತೆ
ನಾವು ಕಟ್ಟಿದ ಸ್ವರ್ಗ
ಅಷ್ಟ ದಿಗ್ಗಜಗಳು
ಕಣ್ಣಿದ್ದೂ ಕುರುಡರು
ಗೆದ್ದ ದೊಡ್ಡಸ್ತಿಕೆ
ಕನ್ನಡಿಯಲ್ಲಿ ಕಂಡಾತ
ಅಂಟಿದ ಅಪರಂಜಿ
ಹಳ್ಳಿಯ ಹತ್ತು ಸಮಸ್ತರು
ಸಮೀಕ್ಷೆ
ಮೊಗ ಪಡೆದ ಮನ
ಶನೀಶ್ವರನ ನೆರಳಿನಲ್ಲಿ
ನಂಬಿದವರ ನಾಕ ನರಕ
ಕಂಬನಿಯ ಕುಯಿಲು
ಈ ಜಗತ್ತು (ಸೈನ್ಸ್)


ಸಿನಿಮಾ-ದೃಶ್ಯಮಾಧ್ಯಮ


ಚೋಮನ ದುಡಿ
ಚಿಗುರಿದ ಕನಸು
ಮಲೆಯ ಮಕ್ಕಳು

ತಮ್ಮ ೯೫ ನೆಯ ವಯಸ್ಸಿನಲ್ಲೂ ಪಕ್ಷಿಗಳ ಬಗ್ಗೆ ಕೃತಿಯೊಂದನ್ನು ಬರೆದರು, ಹೆಚ್ಚಿನ ಪಕ್ಷ ಇದು ಜಾಗತಿಕ ದಾಖಲೆ ಎನ್ನಬಹುದು!

ರಸಿಕತೆಯನ್ನೂ ಮೈಗೂಡಿಸಿಕೊಂಡಿದ್ದ ಕಾರಂತರು ತುಂಬಾ ಹಾಸ್ಯಪ್ರಜ್ಞೆಯುಳ್ಳವರೂ ಆಗಿದ್ದರು.ಮುಖದಲ್ಲಿ ಗಂಭೀರ ಕಳೆ ಎದ್ದು ಕಾಣುತ್ತಿದ್ದರೂ ಮಗುವಿನ ಮನಸ್ಸಿನ ಮುಗ್ಧತೆಯನ್ನೂ ಹೊಂದಿದ್ದರು. ಪ್ರಯಾಣಿಸುವಾಗ ವಾಹನದಲ್ಲಿ ಎಂದೂ ಪ್ರಯಾಣಿಸುವ ದಿಕ್ಕಿಗೆ ವಿರುದ್ಧವಾಗಿ ಕೂರುತ್ತಿರಲಿಲ್ಲ! ಹಾಗೆ ಕೂತರೆ ಅದು ನಮ್ಮ ದೇಹ ಚಕ್ರಕ್ಕೆ ವಿರುದ್ಧವಾಗುತ್ತದೆಂಬ ವೈಜ್ಞಾನಿಕ ಸತ್ಯವನ್ನು ಅವರ ಮನಸ್ಸು ಅರಿತಿತ್ತು! ರಾತ್ರಿ ಹೊತ್ತಿನಲ್ಲಿ ದೇಹಾಯಾಸದಿಂದಲೂ ಸರಿಯಾಗಿ ಕಾಣಿಸದಿರುವುದರಿಂದಲೂ ಅಪಘಾತಗಳು ನಡೆಯುತ್ತವೆ ಎಂಬ ಕಾರಣಕ್ಕಾಗಿಯೂ ಮತ್ತು ಹಗಲಿಡೀ ಸುತ್ತಿದ ದೇಹಕ್ಕೆ ವಿಶ್ರಾಂತಿಯನ್ನು ಕೊಡಬೇಕೆಂಬ ಅನಿಸಿಕೆಯಿಂದಲೂ ಆದಷ್ಟು ಹಗಲು ಹೊತ್ತಿನಲ್ಲಿ ಮಾತ್ರ ಪ್ರಯಾಣಿಸುತ್ತಿದ್ದರು. ವೈಯಕ್ತಿಕ ಬದುಕಿನಲ್ಲಿ ಅವರೊಬ್ಬ ಶಿಸ್ತಿನ ಸಿಪಾಯಿಯಾಗಿದ್ದರು. ಯಕ್ಷಗಾನ ಪ್ರಿಯರಾಗಿದ್ದ ಅವರ ನೆನಪಿನಲ್ಲಿ ಯಕ್ಷಗಾನದ ಹಾಡೊಂದನ್ನು ಕೇಳಿ ಡಾ| ಕಾರಂತರಿಗೆ ನಮಿಸೋಣ.

ಬಡಗು ತಿಟ್ಟಿನ ಪ್ರಸಿದ್ಧ ನಟ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಪಿಟ್ಸ್ ಬರ್ಗ್ ನಲ್ಲಿ ಅಭಿನಯಿಸಿದ ಹಾಡನ್ನು ಈ ಕೆಳಗಿನ ಲಿಂಕ್ ಕಾಪಿ-ಪೇಸ್ಟ್ ಮಾಡುವ ಮೂಲಕ ನೋಡಿ-ಅನುಭವಿಸಿ.
http://video.google.com/googleplayer.swf?docid=-3506364937259877306&hl=en&fs=true style=width:400px;height:326pxallowFullScreen=trueallowScriptAccess=alwaystype=application/x-shockwave-flash>

ಕಲಾವಿದ ಹೆಗಡೆಯವರಿಗೂ ಮತ್ತು ಹಿಮ್ಮೇಳದ ಎಲ್ಲಾ ಕಲಾವಿದರಿಗೂ ನಮನಗಳು.

ಇಷ್ಟೆಲ್ಲಾ ಬರೆದ ಕಾರಂತರು ಬದುಕಿನ ಕೊನೆಯ ಹಂತದವರೆಗೂ ಅತ್ಯಂತ ಸಕ್ರಿಯರಾಗಿ ಓಡಾಡಿಕೊಂಡಿದ್ದರು. ಬಹಳ ಲವಲವಿಕೆಯಿಂದಿದ್ದರು. ಬಹಳ ಸರಳ ಜೀವಿಯಾಗಿದ್ದ ಶ್ರೀಯುತರು ನಿಗರ್ವಿಯಾಗಿ ಬದುಕಿದ ಮಹಾಮೇರುವಾಗಿದ್ದರು. ಕನ್ನಡದ ಅಭೂತಪೂರ್ವ ಆಸ್ತಿ ಕಾರಂತರು ೯ ಡಿಸೆಂಬರ್ ೧೯೯೭ ರಂದು ತಮ್ಮ ಬದುಕಿಗೂ ಬರವಣಿಗೆಗೂ ವಿದಾಯಹೇಳಿದರು.

Tuesday, July 13, 2010



ಧುಮ್ಮಿಕ್ಕುತ ಬಂದಳು ಶರಾವತಿ

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಧುಮ್ ಧುಮ್ ಧುಮ್ಮಿಕ್ಕಿ ಹರಿದು
ರಿಮ್ ಜಿಮ್ ವಿದ್ಯುತ್ತ ನೀಡಿ
ಬಂ ಬಂ ಬಸೋಲ್ ಸದ್ದಿನಿಂದಾ
ಹರಿದುಬಂದಳು ಶರಾವತಿ
ಭರದಿ ಬೆಳಗುತ್ತ ನಾಡ
ವರದ ದೀಪವು ನೋಡ
ಹರುಷ ಹರಡುತ್ತ ಮನಕೆಲ್ಲಾ
ತೆರೆದುತಂದಳು ಪಂಚಾರತಿ !

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ.......

ರಾಜಾ ರಾಕೆಟ್ಟು ರಾಣಿ
ರೋರರ್ ಮತ್ತಲ್ಲೇ ತ್ರಿವೇಣಿ
ರಾಜಧಾನಿಯ ಜನವೆಲ್ಲ ಕುಣಿದೇಳುವಾ
ಆ ಅಬ್ಬರದ ಸೆಳಕು!
ಭೋಗ ವೈಭೋಗವಲ್ಲಿ
ಯೋಗ ಬೇಕೊಮ್ಮೆ ನೋಡೆ
ರಾಗ ಹಾಕುತ್ತ ತಾಳ ನಾವು
ಕುಣಿಯೋಣ ಏಕಳುಕು?

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಊರ ಪೋರಗಳೆಲ್ಲ
ನಾರಿಮಣಿಗಳು ತಾವೆಲ್ಲ
ಭಾರೀ ಆಸೆಯ ಹೊತಗೊಂಡು
ಸೇರಿ ಬಂದರು ನೋಡಲಿಕೆ
ಭೂರಿ ಭೋಜನ ಕಣ್ಗೆ
ಸೂರೆ ಹೊಡೆಯುವವರ್ಗೆ
ಜಾರಿ ಬಿದ್ದೀರಿ ಕೆಳಗೆ ಜೋಕೆ!
ಮುಂಗಾರುಮಳೆ ಜಾರ್ಕೆ

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಸಿನಿಮಾ ಮಂದಿಗಳಷ್ಟು
ಎನಿಮಾ ಹಚ್ಚಿ ಬಿಚ್ಚಿಟ್ಟು
ಹನುಮ ಬಲದಿಂದ ಮೆಟ್ಟಿಲಿಳಿದು
ಎಣಿಸಿ ಸಾವಿರ ಬೇಸಿಗೆಯಲಿ !
ಘನತೆಗೊಂದೇ ಜಲಪಾತ
ಬನತಾಯೀಯ ನಡುವೆ
ಅನತಿದೂರದಿ ಕರೆಯುತಿಹುದು
ಹೋಗೊಮ್ಮೆ ನೋಡಲ್ಲಿ !

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ.....

Monday, July 12, 2010

ಛಲ



ಛಲ


ಇರಲೇಕೆ ಈ ಜಗದಿ ಛಲವಿಲ್ಲದಿರೆ ಮನದಿ
ಬರಲುಂಟೆ ಪರಲೋಕದಾ ಗಂಟು ನಮಗೆ ?
ಹರಿವಾಣದೆದೆಯಲ್ಲಿ ಸಾಧಿಪಗೆ ನೂರೆಂಟು
ನರನ ನಾಡಿಯ ಮಿಡಿತ | ಜಗದಮಿತ್ರ

ಬರುವ ಸಂಕಷ್ಟಗಳ ದುಃಖ-ದುಮ್ಮಾನಗಳ
ಇರುವೆಯಂದದಿ ಕಂಡು ತಿರುಗಿ ಮುನ್ನಡೆದು
ಅರಿವು ಕೊಡುವರ ಕೂಡ ಹದ ಸ್ನೇಹವಂ ಪಡೆದು
ಹಿರಿಯೋ ಛಲದಾ ಕತ್ತಿ | ಜಗದಮಿತ್ರ

ಅರೆಘಳಿಗೆ ಮರೆತಿರಲು ಜಗವು ಮರೆವುದು ನಿನ್ನ
ಹೊರಗೆ ಸಾಧಿಪ ಸಮಯ ಸೀಮಿತವು ಇಹದಿ
ಹರನಿಲ್ಲ-ಹರಿಯಿಲ್ಲ ಜನರು ಮೊದಲೇ ಇಲ್ಲ
ಗುರಿಯಿಲ್ಲದಿರೆ ನಿನಗೆ | ಜಗದಮಿತ್ರ

ಜಗಕಾಗಿ ಬದುಕಿದರು ಶ್ರೀರಾಮ ಶ್ರೀಕೃಷ್ಣ
ಬಗೆಬಗೆಯ ಕಷ್ಟಗಳ ನುಂಗಿ ನೀರ್ ಕುಡಿದು
ಲಘುಬಗೆಯ ಕಾರ್ಪಣ್ಯಕಿಟ್ಟು ಮನದಲಿ ಕಿಚ್ಚು
ಧಗ ಧಗನೆ ಉರಿಸುನೀ | ಜಗದಮಿತ್ರ

ಹೇಡಿಯೆಂಬರು ನಿನಗೆ ನಗೆಯಾಡಿ ಬೆರಳಿಟ್ಟು
ಆಡಿಕೊಂಬರು ನಿನ್ನ ಎಲ್ಲರೆದುರಿನಲಿ
ಬೀಡಾಡಿಗಳ ನಿನ್ನ ಛಲದಿಂದ ದಮನಿಸುತ
ರೂಢಿಗುತ್ತಮನಾಗು | ಜಗದಮಿತ್ರ

ಛಲದಿಂದ ಶಿವಧನುವ ಮುರಿದನಾ ಶ್ರೀರಾಮ
ಹಲವು ಯೋಜನದುದ್ದ ಹಾರಿದನು ಹನುಮ !
ಗೆಲುವ ಗಾಂಢೀವಿ ತಾ ಪಡೆದ ಪಾಶುಪತಾಸ್ತ್ರ
ನಿಲುವು ನಿನಗಿದು ತರವು | ಜಗದಮಿತ್ರ

ಬಲವು ಬಹುಥರವಿಹುದು ಚೆಲುವು ಕ್ಷಣಿಕದ್ದಿಹುದು
ಒಲವು ಸಾರ್ಥಕ್ಯಕ್ಕೆ ದಾರಿಯಲಿ ದೀಪ
ಹಲವು ಹದಿನೆಂಟು ಪದ-ಪಟ್ಟಗಳು ನಿನಗಿಹವು
ಛಲವ ಸಾಧಿಸಿ ಪಡೆಯೋ | ಜಗದಮಿತ್ರ

Sunday, July 11, 2010

ವಾಸ್ತುವಿನ ವಾಸ್ತವಾಂಶ



ವಾಸ್ತುವಿನ ವಾಸ್ತವಾಂಶ

ಇತ್ತೀಚೆಗೆ ಮಾಧ್ಯಮಗಳ ಅಬ್ಬರದ ಒಡ್ಡೋಲಗದಲ್ಲಿ ಠಾಕು ಠೀಕಾಗಿ ಬಂದು ಕುಳಿತು ಥರಾವರಿ ದಿರಿಸಿನಲ್ಲಿ ಕಾಣಿಸುತ್ತ ಲ್ಯಾಪ್ ಟಾಪ್ ಇಟ್ಟುಕೊಂಡು ಜನತೆಗೆ ವಾಸ್ತು-ಭವಿಷ್ಯ ನುಡಿಯುತ್ತೇವೆ ಎನ್ನುವವರ ಸಂಖ್ಯೆ ದಿನೇ ದಿನೇ ನಾಯಿಕೊಡೆಯಂತೇ ಬೆಳೆದುಕೊಂಡು ಹೋಗುತ್ತಲೇ ಇದೆ. 'ಗುರೂಜಿಗಳು' ತಯಾರಾಗುತ್ತಲೇ ಇದ್ದಾರೆ ! ಇದಕ್ಕೆ ಮೊದಲನೇ ಕಾರಣ ಮಾಧ್ಯಮದವರು ಅವರ ವಿಜೃಂಭಣೆಗೆ ಅವಕಾಶಕೊಡುವುದು, ಎರಡನೆಯ ಕಾರಣ ಎಂತಹ ನಾಸ್ತಿಕನಿಗೂ ಮನದ ಯಾವುದೋ ಮೂಲೆಯಲ್ಲಿ ತನಗೆ ವಾಸ್ತುವಿನಿಂದ ಅಥವಾ ಗ್ರಹಚಾರದಿಂದ ಏನೋ ತೊಂದರೆ ಇರಬಹುದೇ ಎಂಬ ಕುತೂಹಲ! ಹಳ್ಳಿಯ ಜನರಿಗಂತೂ ಈ ಜ್ಯೋತಿಷಿಗಳು ಚಿತ್ರ ತಾರೆಯರಂತೇ ಕಾಣಿಸತೊಡಗಿದ್ದಾರೆ. ಮೊದಲೆಲ್ಲ ಹಕ್ಕಿ ಶಕುನವನ್ನೋ ಕವಡೆಶಾಸ್ತ್ರವನ್ನೋ ಹೇಳಿಕೊಂಡು ಉದರಂಭರಣೆ ಮಾಡಿಕೊಳ್ಳುತ್ತಿದ್ದ ಜನ ಈಗ ಫೈವ್ ಸ್ಟಾರ್ ಆಫೀಸ್ ಮಾಡಿ ಕೂತು ದೂರವಾಣಿಯಲ್ಲಿ ಅಪಾಯಿಂಟಮೆಂಟ್ ಕೊಡುತ್ತಾರೆ! ಗಣಕಯಂತ್ರವನ್ನೇ ನೋಡದಿದ್ದ ಈ ಮಂದಿ ಗಣಕಯಂತ್ರ ತಜ್ಞರಿಗಿಂತ ಚೆನಾಗಿ ಅದನ್ನು ಬಳಸಿಕೊಳ್ಳಲು ತೊಡಗಿದ್ದಾರೆ!

ಮನುಜಜೀವನದಲ್ಲಿ ತೊಂದರೆ ಅನುವು ಆಪತ್ತುಗಳು ಅನಿವಾರ್ಯ-ಸಹಜ. ತೊಂದರೆ ಬಂದಾಗ ಅದಕ್ಕೆ ಪರಿಹಾರವಾಗಿ ಹಲವು ಮಾರ್ಗವನ್ನು ಹುಡುಕುತ್ತೇವೆ, ಹಾಗೇ ಅಂತಹ ನಮ್ಮ ಅನಿವಾರ್ಯತೆಯಲ್ಲಿ ಹಾಲು ಹಿಂಡಿಕೊಳ್ಳುವ ಗೋಮುಖವ್ಯಾಘ್ರಗಳು ಹಲವು ಕೂತಿವೆ! ಅವರೈಗೆ ಜನರ ಒಳಿತಿಗಿಂತ ತಮ್ಮ ಹುಂಡಿಗೆ ಎಷ್ಟು ಬಿತ್ತು ಎಂಬುದೇ ಲೆಕ್ಕ! ಇಂತಹ ಫೈವ್ ಸ್ಟಾರ್ ಜ್ಯೋತಿಷಿಗಳು ವಿದೇಶಗಳಿಗೂ ಹೋಗುತ್ತಿರುತ್ತಾರೆ, ರಾಜಕಾರಣಿಗಳಿಗೆ ತಾವು ಭವಿಷ್ಯ ಹೇಳಿದ್ದರಿಂದಲೇ ಅವರು ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ. ಅಕಸ್ಮಾತ್ ಭವಿಷ್ಯ ಸುಳ್ಳಾದರೆ "ನಿಮ್ಮ ಹುಟ್ಟಿದ ಘಳಿಗೆ ಸರಿಯಿಲ್ಲ ಅದು ಸರಿ ಇದ್ದರೆ ಭವಿಷ್ಯ ಸುಳ್ಳಾಗುವುದೇ ಇಲ್ಲ" ಎನ್ನುತ್ತಾರೆ ಅಥವಾ ಇದ್ದಕ್ಕಿದ್ದಲ್ಲೇ ಕೆಲವು ದಿನ ನಾಪತ್ತೆಯಾಗಿಬಿಡುತ್ತಾರೆ! [ಕಲ್ಲು ಬೀಳುವುದನ್ನು ತಪ್ಪಿಸಿಕೊಳ್ಳಬೇಕಲ್ಲ!]

ಹಾಗದ್ರೆ ವಾಸ್ತು-ಜ್ಯೋತಿಷ್ಯ ಇವೆಲ್ಲ ಊರ್ಜಿತವಿಲ್ಲವೇ ? ಅವು ಹೆಳುವುದು ಸತ್ಯವಲ್ಲವೇ ಎಂದರೆ- ಇವೆಲ್ಲ ಒಂದು ರೀತಿಯಲ್ಲಿ ಗೋಚಾರ ವಿಜ್ಞಾನಗಳು. ಆದರೆ ಇದನ್ನು ಸಮರ್ಪಕವಾಗಿ ಕಲಿತ, ಅಳವಡಿಸಿಕೊಂಡ ಜನ ಕೇವಲ ಬೆರಳೆಣಿಕೆಯಷ್ಟು. ಮತ್ತು ಈ ವಿದ್ಯೆಗಳಿಗೆ ಆಧ್ಯಾತ್ಮಿಕ ಅನುಸಂಧಾನ ಮತ್ತು ಜಪ--ತಪದ ಫಲ ಸೇರಿರಬೇಕಾಗಿರುವುದರಿಂದ ಪಟ್ಟಣ-ಶಹರಗಳಲ್ಲಿ ಜಪ-ತಪವನ್ನು ಮಾಡಲು ಸರಿಯಾದ ಜ್ಯೋತಿಷಿಗಳಿಗೆ ವ್ಯವಸ್ಥೆ ಕಮ್ಮಿ ಇರುವುದರಿಂದ ಅವರು ಹಳ್ಳಿಯ ಮೂಲೆಗಳಲ್ಲೇ ಇರುತ್ತಾರೆ ಮತ್ತು ಕಾಸಿಗಾಗಿ ಇದನ್ನೇ ವೃತ್ತಿಯಾಗಿ ಸ್ವೀಕರಿಸುವ ಜನ ಅಲ್ಲ ಅವರು! ಶಹರದಲ್ಲಿರುವ ಎಲ್ಲಾ ಜ್ಯೊತಿಷಿಗಳೂ ಒಂದಿಲ್ಲೊಂದು ರೀತಿಯಲ್ಲಿ ಹಾದಿ ತಪ್ಪಿಸುವವರೇ ಆಗಿರುತ್ತಾರೆ-ಎಚ್ಚರವಿರಲಿ!

ಬಂಗಲೆಗಳಲ್ಲಿ ಇದ್ದುಕೊಂಡು -ಕಾರುಗಳಲ್ಲಿ ಓಡಾಡಿಕೊಂಡು ತಮ್ಮ ವ್ಯವಹಾರ ಇಟ್ಟು ನಡೆಸುವ ಇಂಥವರಿಗೆ ಹಲವು ಸ್ವಯಂವರ ಎನ್ನುವ ಕಾರ್ಯಕ್ರಮಗಳು, ಬೆಳಗಿನ ಮಂಗಲಮುಹೂರ್ತದ ಸಮಯಗಳು ಮಾಧ್ಯಮಗಳಲ್ಲಿ ಸಿಕ್ಕು ಇವರಿಗೆಲ್ಲ ಒಳ್ಳೇ ಮಸಾಲೆ ದೋಸೆ ಸಿಕ್ಕಹಾಗಾಗಿದೆ! ಚೆನ್ನಾಗಿ ಮೇಯುತ್ತಲೇ ಇದ್ದಾರೆ! ಇದರಲ್ಲಿ ಸಂಖ್ಯಾಶಾಸ್ತ್ರ ಎಂಬುದೊಂದು ಹೊಸ ಗೋಳು. " ನಿಮ್ಮ ಹೆಸರಿಗೆ ಈ ನಂಬರು ಬರುತ್ತದೆ, ಸ್ವಲ್ಪ ಹೀಗೆ ಮಾಡಿಕೊಳ್ಳಿ ಅದರಿಂದ ನಿಮ್ಮ ಗತಿಯೇ ಬದಲಾಗುತ್ತದೆ" ಎನ್ನುವವರು, " ಗಂಡ-ಹೆಂಡತಿ ನೀವು ಮದುವೆಯಾದ ಸಮಯ ಸರಿ ಇರಲಿಲ್ಲ, ಕಾಸುಕೊಡಿ ತಿರುಪತಿಯಲ್ಲಿ ಮರುಮಾಂಗಲ್ಯಧಾರಣೆ ಮಾಡಿಸುತ್ತೇನೆ " ಎನ್ನುವ ಪಾತಕಿಗಳು ಸೇರಿದ್ದಾರೆ. ಕೆಲವರದು ದೊಡ್ಡ ಪರಿವಾರವೇ ಇದೆ! ಅವರು ಅಪ್ಪ-ಮಕ್ಕಳು ಎಲ್ಲಾ ಸೇರಿ ’ಮಿಕ’ವನ್ನು ಹಿಡಿಯುತ್ತವೆ. ಇನ್ನು ಕೆಲವರು ತಮಗೆ ಇನ್ನೂ ೩ ತಿಂಗಳು ಭೇಟಿಗೆ ಅವಕಾಶಕೊಡಲಾಗುವುದಿಲ್ಲ ಎನ್ನುವ ಬ್ಯೂಸಿನೆಸ್ಸು!

ಥರಾವರಿ ಉಂಗುರಗಳು-ಮಣಿಗಳು-ಸರಗಳು,ತಾಯಿತಗಳು-ಯಂತ್ರಗಳು ಏನೆಲ್ಲವನ್ನೂ ಕೊಡುತ್ತಾರೆ ಎಂದರೆ ಸ್ವಲ್ಪ ವಿವೇಚಿಸಿದರೆ ಇವು ಅನಗತ್ಯ ಎನಿಸುತ್ತದೆ ಅಲ್ಲವೇ? ಇಲ್ಲದ ಕಾರಣಹೇಳಿ ಆ ಹೋಮ ಈ ಪೂಜೆ ಮಾಡಿಸಿ ಎನ್ನುವ ಕೆಲವರು ಪುರೋಹಿತರನ್ನು ತಮ್ಮಲ್ಲೇ ಸಂಬಳಕ್ಕೆ ಇಟ್ಟುಕೊಂಡು ಅದನ್ನೂ ನಡೆಸಿಕೊಡಲು ಮುಂದಾಗಿದ್ದಾರೆ. ಇದರಲ್ಲೇ ಮನೆ ಕಟ್ಟಿದ್ದಾರೆ, ವಾಹನ ಖರೀದಿಸಿದ್ದಾರೆ. ಇನ್ನೂ ಕೆಲವರು ಗಳಿಸಿದ ದುಡ್ಡನ್ನು ಅಬ್ಬರದ ಪ್ರಚಾರಕ್ಕಾಗಿ ನೆರೆಪೀಡಿತರಿಗೆ ಸಹಾಯಮಾಡುತ್ತೇವೆ ಎಂದು ಘೋಷಿಸಿದ್ದಾರೆ! [ಇದಕ್ಕೆ ಯಾವ ರಾಜಕಾರಣಿಯ ಕೃಪೆ ಇದೇಯೋ ಗೊತ್ತಿಲ್ಲ!] ಇನ್ನು ಟೆಲಿಮಾರ್ಕೆಟಿಂಗ್ ಮೂಲಕ ಹನುಮಾನ್ ಯಂತ್ರ, ಶನಿಯಂತ್ರ, ವಾಸ್ತುಲಕ್ಷ್ಮಿ ಯಂತ್ರ ಕೊಡುವವರು ಅಲ್ಲದೇ ಗಾಡಿಗೆ ಮಂತ್ರಿಸಿದ ಕಲ್ಲು-ಕಪ್ಪು ಮಸಿಬಳಿದ ಹಗ್ಗ,ಬಿಳಿಯ ಶಂಖ ಇವನ್ನೆಲ್ಲ ಸುರಿದು ಯಾವುದೇ ತೊಂದರೆ ಆಗದಂತೆ ಮಾಡುತ್ತೇವೆ ಎನ್ನುವವರಿದ್ದಾರೆ!

ಒಮ್ಮೆ ವಿಚಾರಮಾಡಿ-ನಮ್ಮ ಹಿಂದಿನ ತಲೆಮಾರಿನ ಜನರೆಲ್ಲ ಬದುಕಿರಲಿಲ್ಲವೇ ? ಮಾಧ್ಯಮಗಳು ಬೆಳೆಯುವ ಮೊದಲು ಅವರು ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದರೇ? ಅವರಿಗೂ ಕಾಯಿಲೆ-ಕಸಾಲೆ, ಅನುವು-ಆಪತ್ತು ಇತ್ತಲ್ಲವೇ? ಅವರೂ ಗೃಹ--ಗೋಷ್ಠ ಮೊದಲಾದ ಕಟ್ಟಡಗಳನ್ನು ಕಟ್ಟಿಕೊಂಡು ನಡೆದುಬಂದಿದ್ದರಲವೇ? ನಮ್ಮನ್ನೆಲ್ಲ ಬೆಳೆಸಿ ಬಂದಿದ್ದಾರಲ್ಲವೇ? ಹಾಗಾದರೆ ಇತ್ತೀಚೆಹೆಗೆ ಮಾತ್ರ ಇದಕ್ಕೆ ಇಷ್ಟೊಂದು ಪ್ರಾಮುಖ್ಯತೆ ಏಕೆ?

ಜ್ಯೋತಿಷ್ಯ ಕೇವಲ ಗಣಿತವೊಂದನ್ನೇ ಅವಲಂಬಿಸಿಲ್ಲ, ಅಲ್ಲಿ ಅತಿಮಾನುಷ ಶಕ್ತಿಗಳ ಅನುಗ್ರಹ ಬೇಕು. ಅವನ್ನು ಸಂಪಾದಿಸಲು ಒಳ್ಳೆಯ ಮಾರ್ಗದಲ್ಲಿ ಜಪ-ತಪಾದಿ ನಿತ್ಯ ನೈಮಿತ್ತಿಕ ವ್ಯವಹಾರ ಬೇಕು-ಅನುಷ್ಠಾನ ಬೇಕು. ಗಂಟೆಗಟ್ಟಲೇ ಅನುಷ್ಠಾನ ಪರರಾಗುವ ನಿಜ ಜ್ಯೋತಿಷಿಗಳಿಗೆ ಅವರು ಕಾಸಿಗಾಗಿ ಅದನ್ನು ಮಾಡಹೊರಟರೆ-ಮಾರಹೊರಟರೆ ಪಡೆದ ಮಂತ್ರ ಸಿದ್ಧಿ ತೊರೆದುಹೋಗುತ್ತದೆ. ಇದು ಕೇವಲ ಜನರ ಹಿತಾರ್ಥವಾಗಿ ನಮಗೆ ಅರಿವಿಲ್ಲದ ದೇವರೆಂಬ ಮಹಾಶಕ್ತಿ ನಡೆಸಿಕೊಡುವ ವಹಿವಾಟು! ಇಂತಹ ಜ್ಯೋತಿಷ್ಕರು ಬಂಗಲೆ ಕಟ್ಟುವುದಿಲ್ಲ, ಆಫೀಸು ತೆರೆಯುವುದಿಲ್ಲ, ಲ್ಯಾಪ್ ಟಾಪ್ ಇಡುವುದಿಲ್ಲ! ಅಷ್ಟೇ ಏಕೆ ಅವರು ಮಾಧ್ಯಮಗಳಿಗೆ ನೋಡಲೂ ಸಿಗುವುದಿಲ್ಲ. ಅವರು ಪ್ರಚಾರಪ್ರಿಯರಲ್ಲ, ಅವರೌ ಬೂಟಾಟಿಕೆಯ ಜನವಲ್ಲ. ಲೋಕೋಪಕಾರಾರ್ಥ, ಪರೋಪಕಾರಾರ್ಥ " ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ " ಎಂಬ ಸಂಕಲ್ಪದೊಂದಿಗೆ ತಮ್ಮ ಗುರುಮುಖೇನ ಪಡೆದ ಆ ರಮಲ ಧಾರೆಯನ್ನು ಹರಿಸುತ್ತಾರೆಯೇ ವಿನಃ ಇರುವ ಇಪ್ಪತ್ತೂ ಬೆರಳಿಗೆ ವಜ್ರ ವೈಢೂರ್ಯಗಳ ಉಂಗುರ ಹಾಕಿಕೊಂಡು ಕುಳಿತುಕೊಳ್ಳುವವರಲ್ಲ! ಇಂಥವರು ವಾರದ ಕೆಲವೇ ತಿಥಿ-ಮಿತಿಯ ದಿನಗಳಲ್ಲಿ ತಮ್ಮ ನೈತಿಕ ನಿಷ್ಠೆಯಿಂದ ಗಳಿಸಿದ ಜಪಸಿದ್ಧಿಯಿಂದ ಪ್ರಸಾದಿಸುವ ನುಡಿ ಕೆಲಸಮಾಡುವುದು ನಿಜ. ಆದರೆ ಯಾರು ಆ ಜನ ಎಲ್ಲಿದ್ದಾರೆ ಎಂಬುದನ್ನು ಹುಡುಕುವುದಕ್ಕೂ ಬಹಳ ಸ್ಮಯವಿರುತ್ತದೆ.

ಹಳ್ಳಿಗಳಲ್ಲೂ ಪುಡಿ ಹಕ್ಕಿ ಶಕುನಿಗಳು ಮಣೆಮೇಲೆ ಅಕ್ಕಿ ಇಟ್ಟು ಭವಿಷ್ಯ ಹೇಳುತ್ತಿದ್ದವರು ಮಾಧ್ಯಮದಲ್ಲಿ ಜ್ಯೋತಿಷಕ್ಕೆ ಜಾಸ್ತಿ ಬೆಲೆಸಿಕ್ಕಮೇಲೆ ಚಿಕ್ಕ ಕೋಣೆ ಬಾಡಿಗೆಗೆ ಹಿಡಿದು ಅಬಿವೃದ್ಧಿ ಸಾಧಿಸಿದ್ದಾರೆ! ಅಪ್ಪಿ-ತಪ್ಪಿ ನಿಜ ಉಸುರುವ ಜ್ಯೋತಿಷಿ ಅಂತ ತಿಳಿದು ಇಂಥವರನ್ನು ಕಂಡಿರೋ ನುಣ್ಣಗೆ ಬೋಳಿಸಿಯೇ ಕಳಿಸುತ್ತಾರೆ!

ಇನ್ನು ವಾಸ್ತು ವಿಷಯಕ್ಕೆ ಬಂದರೆ ಯಾವುದನ್ನು ನಮ್ಮ ಕೈಯ್ಯಲ್ಲಿ ಸಸಾರಕ್ಕೆ ಮಾಡಲು ಆಗುವುದಿಲ್ಲವೋ ಅದನ್ನೇ ವಾಸ್ತುಪುರಾಣಿಕರು ಹೇಳುವುದು. ಮನೆಯಲ್ಲಿ ಅಗ್ನಿಮೂಲೆ-ವಾಯುಮೂಲೆ, ಆಮೂಲೆ ಈ ಮೂಲೆ ಎಲ್ಲಾ ಮೂಲೆಯೂ ಇರುತ್ತವೆ ಸ್ವಾಮೀ, ನಿಮ್ನಿಮ್ಮ ಅನುಕೂಲಕ್ಕೆ ತಕ್ಕಂತೇ ಅದನ್ನು ಅಳವಡಿಸಿಕೊಳ್ಳಿ- ಅದೇ ವಾಸ್ತು- ಅದೇ ಶುದ್ಧ ವಾಸ್ತು. ಚಪ್ಪಲಿ ಸ್ಟ್ಯಾಂಡ್ ಇಡುವಲ್ಲಿ ದೇವರನ್ನು ಇಡಿ ದೇವರನ್ನು ಇಟ್ಟಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಿ ಎನ್ನುವುದು ಈ ದುಡ್ಡಿನ ವಾಸ್ತು ಪುರಾಣಿಕರ ವಾಸ್ತು. ಆಫ್ಟರ್ ಆಲ್ ವಾಸ್ತು ಎನ್ನುವುದು ಒಂದು ಸಾಮಾನ್ಯ ಜ್ಞಾನ! ಕಾಮನ್ ಸೆನ್ಸ್- ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ ಕಾಮನ್ ! ನಮಗೆ ಕಾಮನ್ ಸೆನ್ಸ್ ಎನ್ನುವುದಿದ್ದರೆ ವಾಸ್ತು ಪುರಾಣಿಕರ ಹಾರ ತುರಾಯಿಗಳು ಶೀಘ್ರ ಮಾಯವಾಗುತ್ತವೆ!

ಅದೆಲ್ಲಾ ಓಕೆ ಈಗ ಇಷ್ಟೆಲ್ಲಾ ಪುರಾಣ ಯಾಕೆ ಎಂದಿರೇ ತಡೆಯಿರಿ- ನಮಗೆ ಇವುಗಳೆಲ್ಲ ಇಲ್ಲದೇ ಬದುಕಲು ಸಾಧ್ಯವಿಲ್ಲವೇ? ಅವರು ನಮ್ಮ ಪರವಾಗಿ ಮಧ್ಯವರ್ತಿಗಳಾಗಿ ದೇವರನ್ನು ಕೂಗಿ ಕರೆಯುವ ಬದಲು ನಾವೇ ಕಯಾ ವಾಚಾ ಮನಸಾ ದಿನವೂ ಕೆಲಸಮಯ ಪ್ರಾರ್ಥಿಸಿ ಕರೆಯುವುದು-ಬೇಡಿಕೊಳ್ಳುವುದು ಸಾಧ್ಯವಾಗದ ಮಾತೇ? ನಮ್ಮ ಪೂರ್ವಿಕರು ಅನುಭವದಿಂದ ಅನುಗ್ರಹಿಸಿದ, ಪಂಚಾಂಗದಲ್ಲಿ ಎಂದಿಗೂ ಲಭ್ಯವಿರುವ ಧ್ವಜಾಯ, ಗಜಾಯ ಮುಂತಾದ ಆಯಗಳನ್ನು ಅವಲೋಕಿಸಿ ಅವೇ ವಾಸ್ತು! ಅಷ್ಟು ಸಾಕು ನಮ್ಮ ಬದುಕಿಗೆ. ಒಂದನ್ನು ಅರ್ಥಮಾಡಿಕೊಳ್ಳಿ- ನಮ್ಮ ಹಣೆಬರಹ ಅದು ಪೂರ್ವ ನಿರ್ಧರಿತ! ಯಾವ ಸರಸ್ವತೀ ಚಕ್ರವಾಗಲೀ ಸುದರ್ಶನ ಚಕ್ರವಾಗಲೀ ವಾಸ್ತು ಯಂತ್ರವಾಗಲೀ ಅದನ್ನು ಬದಲಯಿಸಲು ಸಾಧ್ಯವಿಲ್ಲ! ಅದು ಬದಲಾಗಬೇಕೆಂದು ಬರೆದಿದ್ದರೆ ಅದಕ್ಕೆ ಕಾಸುಕೊಟ್ಟು ಬದಲಾಯ್ಸಿಕೊಳ್ಳುವ ಅವಶ್ಯಕತೆಯಿಲ್ಲ. ಕೇವಲ ಪ್ರಾರ್ಥನೆಯಿಂದ ಸಾಧ್ಯ!

ಮರ್ಕಟ ನ್ಯಾಯ ಮತ್ತು ಮಾರ್ಜಾಲ ನ್ಯಾಯ ಎಂಬಂತೆ ದೇವರು ಯಾರನ್ನೂ ಕೈಬಿಡುವುದಿಲ್ಲ. ಮಾರ್ಜಾಲ ನ್ಯಾಯದಲ್ಲಿ ದೇವರು ಹಲವರನ್ನು ಬೆಕ್ಕು ತನ್ನ ಎಳೆಯ ಮರಿಗಳನ್ನು ಬಾಯಲ್ಲಿ ನೋವಾಗದಂತೆ ಕಚ್ಚಿ ಬೇರೆಡೆ ಸಾಗಿಸುವಂತೆ ಕಷ್ಟದಿಂದ ಸುಖದೆಡೆಗೆ ಸಾಗಿಸಿದರೆ, ಸ್ವಲ್ಪ ನತದೃಷ್ಟರು ಜಾಸ್ತಿ ಪ್ರಾರ್ಥಿಸಿದಾಗ ನಾವೇ ದೇವರನ್ನು ಮಂಗನ ಮರಿ ತಾಯಿ ಮಂಗನನ್ನು ಅಪ್ಪಿಕೊಂಡಂತೆ ಅಪ್ಪಿಕೊಂಡಾಗ ಅಲ್ಲಿ ನಮ್ಮನೆಲ್ಲ ಕಷ್ಟದ ನೆರೆನೀರಿಂದ ಹೊರಗೆ ಸಾಗಿಸಿ ನಮಗೊಂದು ಸುಖದ ವಾಸ್ತವ್ಯ ಕಲ್ಪಿಸುತ್ತಾನೆ-ಇದು ಮರ್ಕಟನ್ಯಾಯ. ನಮ್ನಮ್ಮ ವೈಯಕ್ತಿಕ ನಂಬಿಕೆ ಮತ್ತು ವಿಶ್ವಾಸದ ಮೇಲೆ ನಮಗೆ ಫಲ ದೊರಕುತ್ತದೆ. ನಾವು ಸದಾಚಾರಿಗಳಾಗೋಣ. ದಿನವೂ ಪ್ರಾರ್ಥನೆ ಮಾಡೋಣ-ಕೇವಲ ನಿಷ್ಕಪಟ,ನಿಷ್ಕಳಂಕ ಮನಸ್ಸಿನ ಪ್ರಾರ್ಥನೆಯಿಂದ ಮಾತ್ರ ಪರಿವರ್ತನೆ ಸಾಧ್ಯ.

Saturday, July 10, 2010

ಧ್ರುವತಾರೆ



ಚಿತ್ರಕೃಪೆ-ಅಂತರ್ಜಾಲ

ಧ್ರುವತಾರೆ

ಕೆಲವರು ಅದಕ್ಕಾಗೇ ಹುಟ್ಟಿರುತ್ತಾರೆ! ಅವರ ಬದುಕೇ ಒಂದು ಹೋರಾಟ. ಅವರನ್ನು ನೋಡಿ ಉಳಿದವರು ತಿಳಿಯಬೇಕಾದ ನೀತಿ ಬಹಳ. ನಮ್ಮ ಇತಿಹಾಸ ಪುರಾಣಗಳಲ್ಲಿ ಹಲವಾರು ಪಾತ್ರಧಾರಿಗಳು ಬಂದು ಹೋಗುತವೆ, ಆದರೆ ಕೆಲವೊಂದು ನಮ್ಮ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಬಿಡುತ್ತವೆ. ಯಾಕೋ ಆ ಪಾತ್ರವನ್ನು ಮರೆಯಲು ನಮ್ಮಿಂದ ಸಾಧ್ಯವಾಗುವುದೇ ಇಲ್ಲ! ಎಲ್ಲೇ ಹೋಗಲಿ, ಏನೇ ಮಾಡಲಿ ಆಗಾಗ ಆಯಾ ಪಾತ್ರಗಳ ಮಗ್ಗಲು ಬದಲಾಗುತ್ತಿರುತ್ತದೆ! ಒಮ್ಮೆ ರಾಮ ಬಂದರೆ ಇನ್ನೊಮ್ಮೆ ಕೃಷ್ಣ ಬಂದಹಾಗೇ ಜನಾನುರಾಗೀ ಜೀವಗಳ ನೆನಪು ಸದಾ ಕಾಡುತ್ತದೆ. ಅವರು ನಮ್ಮವರೇ ಎಂಬ ಅವಿನಾಭಾವ ಸಂಬಂಧ ಬೆಸೆದುಕೊಳ್ಳುತ್ತದೆ. ಅವರನ್ನು ನಾವು ಸಾಕ್ಷಾತ್ ನೋಡಿದ್ದರೆ ಎಷ್ಟು ಚೆನ್ನಾಗಿತ್ತು ಅನಿಸುತ್ತದೆ. ’ಅವರ ಸಾಮೀಪ್ಯ ಇದ್ದಿದ್ದರೆ’ ಅನಿಸುತ್ತದೆ! ಅವರು ಹೇಗಿದ್ದಿರಬಹುದು ಎಂಬ ಕುತೂಹಲ ಕಾಡುತ್ತದೆ. ಅವರ ಕಾಲದ ಅವಶೇಷಗಳ ಹುಡುಕುವಿಕೆಗೆ ಮನ ಮುಂದಾಗುತ್ತದೆ. ಕೆಲವೊಮ್ಮೆ ಅವರೂ ಮನುಷ್ಯರೇ ಆಗಿದ್ದರು ಎಂಬುದನ್ನು ನಂಬಲಾಗದ ಅವರನ್ನು ದೇವರಸ್ಥಾನದಲ್ಲಿಟ್ಟು ಪೂಜಿಸುವ ಮನಸ್ಸು! ಹಾಗಾದರೆ ರಾಮ ಕೃಷ್ಣ ಇವರೆಲ್ಲ ಹೇಗೆ ಹಾಗೆ ನಾಯಕರಾದರು? ಅವರಲ್ಲಿರುವ ವಿಭಿನ್ನ ಮನೋದಾರ್ಷ್ಟ್ಯತೆ ಏನು? ಅವರ ಸ್ವಭಾವ ಎಂತಹದ್ದು? -ಇದನ್ನೆಲ್ಲ ನಾವು ತಿಳಿದು ಕೊಂಡರೆ ಅವರ ವ್ಯಕ್ತಿತ್ವ ವಿಶೇಷಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಆಗ ನಮ್ಮ ಬದುಕು ಮೇಲ್ಮಟ್ಟಕ್ಕೆ ಹೋಗುತ್ತದೆ, ನಮ್ಮಲ್ಲಿ ಒಳ್ಳೆಯತನ ಬೆಳೆಯುತ್ತದೆ, ನಮ್ಮ ಆತ್ಮವಿಶ್ವಾಸ ವೃದ್ಧಿಸುತ್ತದೆ, ನಮ್ಮ ಜೀವನದ ಗತಿಯೇ ಪೂರಕ ಕೆಲಸಗಳನ್ನು ಮಾಡಲು ಉದ್ಯುಕ್ತವಾಗುತ್ತದೆ! ಇಂತಹ ಅಪರೂಪದ ಪಾತ್ರಗಳ ಸಾಲಿನಲ್ಲಿ ಶ್ರೀ ವಿಷ್ಣುಪುರಾಣ ಮತ್ತು ಶ್ರೀಮದ್ಭಾಗವತದಲ್ಲಿ ಉಲ್ಲೇಖವಾಗಿರುವ ಧ್ರುವ ಚರಿತ್ರೆಯೂ ಒಂದು.

ಸ್ವಯಂಭೂ ಮನುವಿನ ಮಗನಾದ ಉತ್ತಾನಪಾದ ರಾಜನಿಗೆ ಸುನೀತಿ ಎಂಬ ಹೆಂಡತಿಯಲ್ಲಿ ಜನಿಸಿದ ಅದ್ಭುತ ಪ್ರತಿಭೆಯೇ ಧ್ರುವ. ಉತ್ತಾನಪಾದ ರಾಜನಿಗೆ ಇನ್ನೊಬ್ಬಳು ಹೆಂಡತಿಯಿದ್ದಳು-ಅವಳೇ ಸುರುಚಿ. ಸುರುಚಿಯಲ್ಲಿ ಪಡೆದ ಮಗನ ಹೆಸರು- ಉತ್ತಮ. ರಾಜಾ ಉತ್ತಾನಪಾದನಿಗೆ ಉತ್ತಮನೆಂದರೆ ಬಹಳ ಅಕ್ಕರೆ. ಅವನು ಯಾವಾಗಲೂ ತಂದೆಯ ತೊಡೆಯೇರಿ ಆಡುತ್ತಿರುತ್ತಿದ್ದ.

ಒಮ್ಮೆ ಧ್ರುವ ಮತ್ತು ಉತ್ತಮ ಈರ್ವರೂ ಆಡುತ್ತಿರುವಾಗ ಅವರಿಗೆ ತನ್ನ ತಂದೆಯ ತೊಡೆಯೇರುವ ಆಸೆಯಾಯಿತು. ಕಿರಿಯ ಹೆಂಡತಿಯ ಕಾರಣದಿಂದ ಉತ್ತಾನಪಾದನಿಂದ ಅಸಡ್ಡೆಗೊಳಗಾಗಿದ್ದ ಸುನೀತಿಗೆ ಪಟ್ಟದ ಸಿಂಹಾಸನದಲ್ಲಾಗಲೀ ರಾಣೀವಾಸದಲ್ಲಾಗಲೀ ಯಾವುದೇ ಆದ್ಯತೆ ಇರಲಿಲ್ಲ. ರಾಜ ಏನಿದ್ದರೂ ಸುರುಚಿಯನ್ನೇ ಕೇಳಿ ನಿರ್ಧಾರಕ್ಕೆ ಬರುತ್ತಿದ್ದ, ಅವಳನ್ನೇ ಕೂರಿಸಿಕೊಂಡು ವಿಷಯ ವಿವೇಚನೆ ಮಾಡುತ್ತಿದ್ದ. ಸುರುಚಿಯ ಧೂರ್ತತನದಿಂದ ಸುನೀತಿ ಬೇಸತ್ತಿದ್ದಳು. ದಿನವೂ ಕಣ್ಣೀರಲ್ಲೇ ಕೈತೊಳೆವ ಕರ್ಮ ಅವಳದಾಗಿತ್ತು. ಹೀಗಿರುತ್ತ ಆಡುತ್ತಿರುವ ಮಗ ಬಂದು ತನ್ನ ತಂದೆಯನ್ನು ತೋರಿಸೆಂದು ಕೇಳಿದಾಗ ಸುನೀತಿ ದೂರದಿಂದಲೇ ಕೈ ತೋರುತ್ತ ರಾಜ ಉತ್ತಾನಪಾದನ ಬಗ್ಗೆ ಹೇಳಿದಳು, ಮತ್ತು ತನ್ನನ್ನು ನಿನ್ನ ತಂದೆ ಹತ್ತಿರ ಹೋಗಗೊಡುವುದಿಲ್ಲವಾದ್ದರಿಂದ ತಾನು ಅಲ್ಲೆಲ್ಲೂ ಹೋಗುವುದಿಲ್ಲವೆಂಬುದಾಗಿ ತಿಳಿಸಿದಳು. ಆಡುವ ಹುಡುಗರೀರ್ವರೂ ಆಡುತ್ತ ನಾ ಮುಂದು ತಾ ಮುಂದು ಎಂದು ತಂದೆಯ ತೊಡೆಯನೇರಲು ಹೋದರು.

ಇದನ್ನು ಕಂಡ ಸುರುಚಿ ದ್ರುವನನ್ನು ಗದರಿದಳು ಮಾತ್ರವಲ್ಲ ಆತನನ್ನು ಆತನ ತಂದೆಯ ತೊಡೆಯಮೇಲಿಂದ ನೂಕಿಬಿಟ್ಟಳು. "ನಿನಗೇನಿದ್ದರೂ ವಿಷ್ಣು ಸಾನ್ನಿಧ್ಯವೇ ಗತಿ, ಜಪಿಸು ಹೋಗು" ಎಂದು ರಕ್ಕಸ ನಗೆ ನಕ್ಕಳು. ಹಸುಗೂಸು ಧ್ರುವನಿಗೆ ಬಹಳ ಬೇಸರವಾಯಿತು. ಮನಸ್ಸು ಬಹಳ ನೊಂದಿತು. ಆತ ನೇರವಾಗಿ ಅಳುತ್ತ ತನ್ನ ತಾಯಿ ಸುನೀತಿಯೆಡೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದ. ತಾಯಿ ಅವನಿಗೆ ವಿಷ್ಣು ನಾಮ ಭಜಿಸುವುದನ್ನೇ ಛಲದಿಂದ ಮಾಡಲು ಹೇಳಿದಳು.

ಬಾಲಕ ಧ್ರುವ ಬಹುಬೇಗ ಅಮ್ಮನಿಂದ ಬೀಳ್ಕೊಂಡು ಏಕಾಂಗಿಯಾಗಿ ಘೋರ ಕಾನನವನ್ನು ಸೇರಿದ. ಅವನಿಗೆ ವಿಷ್ಣುಪದವೋಂದನ್ನು ಬಿಟ್ಟರೆ ಕಾಲಾಕಾಲ ಅಥವಾ ಕ್ರೂರ ಮೃಗಗಳು , ಕಳ್ಳ-ಕಾಕರು ಇವುಗಳ ಪರಿವೆಯೇ ಇರಲಿಲ್ಲ. ತನ್ನ ದೂರದೃಷ್ಟಿಯಿಂದ ಇದನ್ನು ಮನಗಂಡ ದೇವರ್ಷಿ ನಾರದರು ದಾರಿಯಲ್ಲಿ ಧ್ರುವನಿಗೆ ಸಿಕ್ಕರು. ಆತನ ಕಠಿಣ ಮನೋಗತವನ್ನು ತೊರೆಯುವಂತೆಯೂ ಅದು ಬಾಲಕರಿಗೆಲ್ಲ ಹೇಳಿಸಿದ್ದಲ್ಲವೆಂದೂ ಹೇಳಿದರು. ಧ್ರುವ ಕೇಳಬೇಕಲ್ಲ. ಧ್ರುವನಿಗೆ ತಾನು ಬಾಲಕ ಎಂಬುದೇ ಮರೆತು ಹೋಗಿತ್ತು! ಅವನಿಗೆ ವಿಷ್ಣು ಪಾದದ ಭಜನೆಯೊಂದೇ ಬೇಕಾಗಿತ್ತು. ಇದನ್ನೇ ನಾರದರಿಗೆ ಅರುಹಿದ ಆತ ತನ್ನ ಅಚಲ ನಿರ್ಧಾರವನು ಪ್ರಕಟಗೊಳಿಸಿದ. ಇದನ್ನು ತಿಳಿದ ನಾರದರು ತಪಸ್ಸಿನ ಮಾರ್ಗ ಮತ್ತು ಧರ್ಮವನ್ನೂ, ಗುರಿತಲುಪುವ ಬಗೆಯನ್ನೂ ಮತ್ತು ದಿವ್ಯ ಮಂತ್ರವನ್ನೂ ಉಪದೇಶಿಸಿ ಆತನನ್ನು ಹೃತ್ಪೂರ್ವಕ ಹರಸಿ ಅಲ್ಲಿಂದ ಅಂತರ್ಧಾನರಾದರು.

ಬಾಲಕ ಧ್ರುವ ಸಮತಟ್ಟಾದ ದಿಬ್ಬವೊಂದನ್ನು ಹುಡುಕಿ ಪದ್ಮಾಸನಹಾಕಿ ಕುಳಿತು ನಾರದರು ಉಪದೇಷಿಸಿದಂತೇ ಏಕೋಭಾವದಿಂದ " ಓ ನಮೋ ಭಗವತೇ ವಾಸುದೇವಾಯ " ಎಂಬ ಮಂತ್ರವನ್ನು ಜಪಿಸುತ್ತ ನಿರಾಹಾರಿಯಾಗಿ ಆರು ತಿಂಗಳುಗಳನ್ನೇ ಕಳೆದ. ಅವನ ಆ ಮನಸ್ಸಿನ ಸಮಾಧಿಸ್ಥಿತಿಯಲ್ಲಿ ಆತನಿಗೆ ಹೊರಜಗತ್ತಿನ ಯಾವುದೇ ಆಗುಹೋಗುಗಳಾಗಲೀ ಅನ್ನಾಹಾರದ ಗೊಡವೆಯಾಗಲೀ ಇರಲೇ ಇಲ್ಲ! ಆತನ ರಕ್ಷಣೆಗೆ ನಿಸರ್ಗವೇ ನಿಂತಿತ್ತೇ ಹೊರತು ಬೇರಾರೂ ಅಲ್ಲಿರಲಿಲ್ಲ. ಅಂತೂ ಆತನ ತಪದ ಬಿಸಿ ವೈಕುಂಠ ತಲುಪಿ ಶ್ರೀಮನ್ಮಹಾವಿಷ್ಣು ಧರೆಗಿಲೀಡೂ ಬಂದ. ಬಂದದ್ದು ಹೌದು ಆದರೆ ಬಾಲಕ ಸಮಾಧಿ ಸ್ಥಿತಿಯಿಂದ ಮೇಲೇಳಬೇಕಲ್ಲ. ಆತನಿನ್ನೂ ಎದುರಿಗೆ ಬಂದ ದೇವರನ್ನೇ ತಿಳಿಯದೇ ಕೇವಲ ಮನಸ್ಸಿನ ತುರ್ಯಾವಸ್ಥೆಯಲ್ಲಿ ಮಹಾವಿಷ್ಣುವನ್ನು ಕಾಣುತ್ತಲೇ ಇದ್ದ. ಇದನ್ನು ತಡೆದು ತಾನು ಬಂದಿದ್ದೇನೆನಲು ವಿಷ್ಣು ಧ್ರುವನ ಮನಸ್ಸಿನ ಸಾಂಗತ್ಯವನ್ನು ನಿಲ್ಲಿಸಿದ; ತನ್ಮೂಲಕ ಆತ ಕಣ್ಣುತೆರೆದು ನೋಡುವಂತೇ ಮಾಡಿದ. ಕಣ್ತೆರೆದ ಧ್ರುವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆತ ತನ್ನ ಕಣ್ಣು-ಕೈಕಾಲುಗಳನ್ನೇ ಮುಟ್ಟಿಕೊಳ್ಳುತ್ತ ಎದುರಿಗಿರುವುವ ಸತ್ಯವನ್ನು ಸತ್ಯವೇ ಹೌದೋ ಅಥವಾ ಬ್ರಮೆಯೋ ಎಂಬುದನ್ನು ತಿಳಿದು ತದನಂತರ ಎದುರಿಗಿರುವ ಶ್ರೀ ಮಹಾವಿಷ್ಣುವನ್ನು ನೋಡತೊಡಗಿದ. ಆತನಿಗೆ ಬಾಯಿಂದ ಮಾತೇ ಹೊರಡದ ಹಾಗಾಗಿತ್ತು. ತನ್ನ ಪಾಂಚಜನ್ಯದಿಂದ ಪೋರನ ಕೆನ್ನೆಯನ್ನು ಸವರಿದ ಮಹಾವಿಷ್ಣು. ತಕ್ಷಣ ಧ್ರುವನ ಬಾಯಿಂದ ೧೨ ಸರ್ಗಗಳ ಸ್ತುತಿಯೋಮ್ದು ಹರಿದುಬಂತು. ಅದೇ ಧ್ರುವ ಸ್ತುತಿ ಎಂದು ಹೆಸರುಪಡೆಯಿತು.

ಬಂದ ದೇವರು ತಾನು ಆತನ ತಪಸ್ಸಿಗೆ ಮೆಚ್ಚಿದ್ದಾಗಿಯೂ ಬೇಕಾದ ವರವನ್ನು ಕೇಳೆಂದೂ ಹೇಳಲಾಗಿ ಬಾಲಕ ತನಗೆ ವಿಷ್ಣುವಿನ ಧ್ಯಾನವಷ್ಟೇ ಸಾಕು ಇನ್ನೇನೂ ಬೇಡವೆಂದ. ಇನ್ನೂ ಏನಾದರೂ ಕೇಳು ಎಂದು ಭಗವಂತ ಒತ್ತಾಯಿಸಲಾಗಿ ಸಪ್ತರ್ಷಿಗಳೆಲ್ಲ ಸೇರಿ ಇಂತಹ ಎಳೆಯ ಸಾಧಕನಿಗೆ ಶಾಶ್ವತ ಧ್ರುವಪದವೇ ಪರಮಯೋಗ್ಯವೆಂದು ಪರೋಕ್ಷ ನಿರ್ಧರಿಸಿ ಬಾಲಕನ ಬಾಯಿಂದ ಅದನ್ನೇ ಬರುವಂತೆ ಮಾಡಿದರು. " ಎಂದಿಗೂ ಮಲತಾಯಿ ದೂಡದ ಒಂದು ರಾಜ್ಯವನಿತ್ತು ಕರುಣಿಸು" ಎಂದು ಧ್ರುವ ಕೇಳಿಕೊಂಡ. ಮಹಾವಿಷ್ಣು ತಥಾಸ್ತು ಎಂದು ಹರಸಿ ಅಂತರಿಕ್ಷದಲ್ಲಿ ಹಾರಿ ಕಣ್ಮರೆಯಾದ.

ತರುವಾಯ ಅರಮನೆಗೆ ಮರಳಿದ ಧ್ರುವನನ್ನು ಸುದ್ದಿತಿಳಿದ ಅರಮನೆಯ ಪುರಜನರು-ಪರಿಜನರು ಸಂಭ್ರಮದಿಂದ ಸ್ವಾಗತಿಸಿದರು. ಆರು ವರ್ಷದ ಹಸುಳೆ ರಾಜನ ಸ್ಥಾನದಲ್ಲಿ ಕೂತು ಕಿರೀಟ ಧರಿಸಿ ಬಹುಕಾಲ ನೀತಿಯುಕ್ತ ರಾಜ್ಯಭಾರಮಾಡಿದ. ನಂತರ ಪರಮಾತ್ಮ ಕರುಣಿಸಿದ, ಪ್ರಳಯಕಾಲದಲ್ಲೂ, ಕಲ್ಪಾಂತರದಲ್ಲೂ ಬದಲಾಗದ ಶಾಶ್ವತ ಮಿಂಚುವ ಮಿನುಗುತಾರೆ ಯಾಗಿ ಧ್ರುವತಾರೆಯಾಗಿ ಬಾನಂಗಳದಲ್ಲಿ ಸ್ಥಾನಪಡೆದ.

ಯಾವ ಮಗು ಹಂಸತೂಲಿಕಾತಲ್ಪದಲ್ಲಿ ಮಲಗಿ ಸುಖವಾಗಿ ಉಂಡುಟ್ಟು ಬೆಳೆಯಬೇಕಿತ್ತೋ ಅಂತಹ ಸಣ್ಣ ಹುಡುಗ ಕಾಡಿಗೆ ಹೋದ, ಕಠಿಣ ವೃತ ಪಾಲಿಸಿದ! ಅಪ್ಪನ ಪ್ರೀತ್ಯಾದರಗಳಿಲ್ಲದ ಆ ಮನ ಅದೆಷ್ಟು ನೋಂದಿತ್ತೋ ಆ ಕಾಲಕ್ಕೆ. ತನಗೆ ಪ್ರೀತಿ ಹಾಗಿರಲಿ ಕ್ಷಣಕಾಲ ಅಪ್ಪನ ತೊಡೆಯಮೇಲೆ ಕೂರಲೂಜಾಗಸಿಗದಾಗ, ತಾನು ನೂಕಲ್ಪಟ್ಟು ಕೆಳಗೆ ಬಿದ್ದಾಗ ಆದ ಅಸಹನೀಯ ಅವಮಾನ ಹೇಗಿರಬೇಡ ? ಇಲ್ಲಿ ಸುರುಚಿಯ ಹೊಟ್ಟೆಕಿಚ್ಚು-ರಾಜನ ಅನೀತಿ,ಅಸಡ್ಡೆಯ ಸ್ವಭಾವಗಳು, ಸುನೀತಿಯ ಅಸಹಾಯಕತೆ ಮತ್ತು ಬಾಲಕನ ಗುರಿತಲ್ಪುವ ಅಚಲ ನಿರ್ಧಾರ ಇವುಗಳನ್ನು ಕಾಣುತ್ತೇವೆ. ಹಿಂದೆ ಕಥಾರೂಪ ಇತಿಹಾಸವೆಂದು ಪರಿಗಣಿತವಾಗಿದ್ದ ಈ ಥರ ವಿಷಯಗಳು ಇಂದಿನ ನಮ್ಮ ಮಕ್ಕಳ ಪಠ್ಯಕ್ರಮದಿಂದ ಜಾರಿಹೋಗಿವೆ. ಗ್ರಾಮೀಣ ಪರಿಸರದಲ್ಲೂ ಕೇವಲ ಬೆರಳೆಣಿಕೆಯಷ್ಟು ಜನ ಈ ಥರದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಾರೆ,ಮಿಕ್ಕುಳಿದವರು ಟಿ.ವಿ.ಮುಂದೆ ಕಾಲಹರಣ ಮಾಡುತ್ತಾರೆ. ವಿಪರ್ಯಾಸವೇ ಇದು. ನಮ್ಮ ಮಕ್ಕಳಿಗೆ ಮಹಾಭಾರತ-ರಾಮಾಯಣಗಳಂತ ಅದ್ಬುತ ಜೀವನಮೌಲ್ಯಸಾರುವ ಅನುಭವೀ ಕಥನಗಳು ಕೊಡಲ್ಪಡುತ್ತಿಲ್ಲ, ಅವರೆಲ್ಲ ಇಂಗ್ಲೀಷ್ ಓದುತ್ತ ಎಲ್ಟನ್ ಜಾನ್ ಮತ್ತು ಮೈಕೇಲ್ ಜಾಕ್ಸನ್ ಆಗುತ್ತಾರೆ! ಈ ಕಳಕಳಿಯಿಂದ ನಮ್ಮ ಭವ್ಯ ಭಾರತದಲ್ಲಿ ಹಲವು ಧ್ರುವತಾರೆಗಳು ಬೆಳಗಲೆಂದು ಹಾರೈಸಿ ಇಂದಿಗೆ ಈ ಕಥನ-ಕವನ:

ಛಲವಿರಲಿ ಮನದಿ ಗುರುವೇ
ಶ್ರೀ ಹರಿಯೇ ಬಲವಾಗಲೆನಗೆ ಅದುವೆ

ಕೋಪದಿ ತಂದೆಯು ನೀತಿಯ ನೂಕುತ
ಪಾಪದ ಅಮ್ಮನ ಮರೆತನು ವಿಧಿಯೇ
ಆಪದ್ಬಾಂಧವ ಅನಾಥರಕ್ಷಕ
ಕಾಪಾಡೆನುತಲಿ ಈ ಪರಿ ಬೇಡುವೆ

ಸುರುಚಿಕ್ಕಮ್ಮಗೆ ಗುರುಗುಟ್ಟುವ ಚಟ
ಸರಸರ ಬಂದು ತಾ ದರದರನೆಳೆದು
ಹರಹರ ಎನ್ನನು ದೂಡಿದಳಾಗಲೇ
ವರಮಹಾವಿಷ್ಣು ನಿನ್ನನೇ ಪಾಡುವೆ

ಎಂದಿಗೂ ಮಲತಾಯಮ್ಮನು ಕೇಳದ
ಒಂದೇ ರಾಜ್ಯವನಿತ್ತು ನೀ ಹರಸು
ನೊಂದಿದೆ ಈ ಮನ ಪ್ರೀತಿಯ ಕಾಣದೆ
ಬಂದಿನಿತೆನ್ನನು ಹರಸಲು ಕಾಡುವೆ

Friday, July 9, 2010

ಅಭಿನವ ಭಾರತ



ಚಿತ್ರ ಕೃಪೆ :ಅಂತರ್ಜಾಲ

ಅಭಿನವ ಭಾರತ

ನಮ್ಮದೀ ದೇಗುಲವು ಪುಣ್ಯ ಭಾರತದೇಶ
ಪಡೆದು ಬಾ ಹುಟ್ಟಲೊಮ್ಮೆ!
ಹೆಮ್ಮೆಯಲಿ ಬೀಗುವೆವು ಭರತ ಖಂಡವಿದೆಂದು
ದುಡಿದು ಬಾ ನೋಡಲೊಮ್ಮೆ!

ಅಗಣಿತ ವಿದ್ಯೆಗಳ ಆಗರವು ಈ ನೆಲವು
ಸಗರಚಕ್ರವರ್ತಿ ಆಳ್ದ ಜಗವು
ಬಗೆಬಗೆಯ ವೇಷಭೂಷಣಗಳಲಿ ಶೋಭಿಸುವ
ನಗೆಹೊನಲು ಹರಿಸಿದ ಜನರಕಡಲು

ನವರತ್ನ ರಾಶಿಗಳ ಬಳ್ಳ ಬಳ್ಳದಿ ಅಳೆದು
ಉಳ್ಳವರು ಮಾರಿದರು ಯುಗಯುಗಾಂತರದಿ
ಕವಿರತ್ನ ಕಾಳಿದಾಸನು ಮತ್ತೆ ವಾಲ್ಮೀಕಿ
ಹಳ್ಳ-ಹೊಳೆ ಹರಿಸಿದರು ಕಾವ್ಯಗಳ ತೆರದಿ

ಕನ್ನಡಾಂಬೆಯು ಸೇರಿ ಹಲವು ಮಕ್ಕಳ ಬೀಡು
ಸನ್ನಡತೆ-ಸಂಸ್ಕೃತಿಯ ವಿಶ್ವದಾಲಯವು
ಪನ್ನೀರ ಕಾರಂಜಿ ಜನರಗುಣ ಅಪರಂಜಿ
ಮುನ್ನಡೆದ ರಾಷ್ಟ್ರಗಳ ರಾಣಿಯರಮನೆಯು.

ಧುಮ್ಮಿಕ್ಕಿ ಹರಿವಂತ ಹಲವು ನದಿಗಳ ನಾಡು
ಗೊಮ್ಮಟನು ನೆಲೆನಿಂತ ದಿವ್ಯ ಪರಿಸರವು
ಹೊಮ್ಮಿ ಹೊರಹರಿದ ಹಲ ಪ್ರತಿಭೆಗಳ ಸಾಗರವು
ಗಮ್ಮತ್ತು-ಗರದಿಯಾಟವು ನಡೆದ ಸ್ಥಳವು

Thursday, July 8, 2010

ದೇವರು ಕೊಟ್ಟ ’ಭಾಗ್ಯಜ್ಯೋತಿ’ ಕಣ್ಣು




ದೇವರು ಕೊಟ್ಟ ’ಭಾಗ್ಯಜ್ಯೋತಿ’ ಕಣ್ಣು


ದೇವರು ಕೊಟ್ಟ ಭಾಗ್ಯಗಳಲ್ಲಿ ಕಣ್ಣೂ ಕೂಡ ಒಂದು ಭಾಗ್ಯ. ಶರೀರದಲ್ಲಿ ಮುಖ್ಯ ಹಾಗೂ ವಿದ್ಯುದೀಕರಿಸುವ [ಇಲೆಕ್ಟ್ರಿಫಾಯಿಂಗ್ ಇಫೆಕ್ಟ್]ಗುಣ ಹೊಂದಿರುವ ಅಂಗ ಕಣ್ಣು. ಇಂತಹ ಕಣ್ಣಿನ ಬಗ್ಗೆ ಹಿಂದೆ ಬರೆದಿದ್ದೆ, ಮತ್ತೆ ಕೆಲವು ಸಂಗತಿಗಳನ್ನು ಬರೆಯುತ್ತಿದ್ದೇನೆ.

ಹಚ್ಚಿದ ದೀಪ ಕೋಣೆಗೆ ಬೆಳಕನ್ನು ನೀಡುವುದು ಹೇಗೋ ಹಾಗೇ ಸರಿಯಾದ ಕಣ್ಣು ಮನುಜ ಶರೀರಕ್ಕೆ ದೀಪ. ಕಣ್ಣಿದ್ದರೇ ಬಹುತೇಕ ಕೆಲಸಗಳು ಸಾಧ್ಯವೇ ವಿನಃ ಕಣ್ಣಿನ ಹಂಗಿಲ್ಲದೇ ಮಾಡುವ ಕೆಲಸಗಳು ಅತಿ ವಿರಳ. ಒಂದೊಮ್ಮೆ ಕಣ್ಣಿನ ಸಹಾಯವಿಲ್ಲದೇ ಕುರುಡನೊಬ್ಬ ಕೆಲಸಮಾಡುತ್ತಿದ್ದರೆ ಅದು ಆತನಿಗೆ ದೈವೀದತ್ತ ಹೆಚ್ಚುವರಿ ಸೂಕ್ಷ್ಮ ಸಂವೇದನೆಯ ಗುಣದಿಂದ ಮಾತ್ರ ಸಾಧ್ಯ. ಆದರೂ ಅಲ್ಲಿ ಕೆಲಸಕ್ಕೆ ತಗಲುವ ಸಮಯ ಸಾಮಾನ್ಯವಾಗಿ ಬೇಕಾಗುವ ಸಮಯದ ಎರಡು ಮೂರು ಪಟ್ಟು ಹೆಚ್ಚಾಗಿರಬಹುದು. ಹೇಗೆ ಉರಿಯುವ ದೀಪಕ್ಕೆ ಎಣ್ಣೆ ಸಾಲದಿದ್ದರೆ ದೀಪ ಆರಿಹೋಗುವುದೋ ಹಾಗೇ ಕೆಲವರಿಗೆ ಯಾವುದೋ ಪಡೆದ ದೌರ್ಭಾಗ್ಯದಿಂದ ಕಾಣುತ್ತಿದ್ದ ಕಣ್ಣು ಕಾಣದಂತಾಗಬಹುದು! ಉರಿಯುವಾಗ ಹೇಗೆ ಕಪ್ಪನೆಯ ಕದಿರು ಬಂದ ಬತ್ತಿಯಾದರೆ ದೀಪ ತಡವರಿಸಿ ಉರಿಯುವುದೋ ಹಾಗೆಯೇ ಕಣ್ಣ-ಹೂ ಬಂದರೆ ಕಣ್ಣು ಸರಿಯಾಗಿ ಕಾಣಿಸದೇ ಹೋಗಬಹುದು. ಜೋರಾಗಿ ಬೀಸುವ ಗಾಳಿಯಲ್ಲೂ ಮತ್ತು ಗಾಳಿ ಇಲ್ಲದ ನಿರ್ವಾತದಲ್ಲೂ ದೀಪ ಉರಿಯುವುದು ಕಷ್ಟ ಹೇಗೋ ಹಾಗೇ ಕಲುಷಿತ ವಾತಾವರಣದಲ್ಲಿ ಮತ್ತು ವಿಷಪೂರಿತ ಹೊಗೆಯಿರುವಲ್ಲಿ ಕಣ್ಣು ತನ್ನತನ ಕಳೆದುಕೊಳ್ಳಬಹುದು. ಸಿಡಿಮದ್ದು, ಗೊತ್ತಿಲ್ಲದೇ ಬಳಸುವ ಔಷಧಗಳು, ಮೂಢನಂಬಿಕೆಯಿಂದ ಸಮಯಪ್ರಜ್ಞೆ ಇಲ್ಲದೇ ಕಣ್ಣಿಗೆ ಏನನ್ನೋ ಬಿಟ್ಟುಕೊಂಡು ಕಾಲಕಳೆಯುವುದು, ಕಲುಷಿತ ನೀರಿನಲ್ಲಿ ಕಣ್ಣು ತೊಳೆಯುವುದು, ಕಣ್ಣನ್ನು ವಿನಾಕರಣ ಅಥವಾ ನವೆಯಾದಾಗ ಜೋರಾಗಿ ಮತ್ತು ಗಡುಸಾಗಿ ಉಜ್ಜುವುದು,ಫ್ಯಾನ್ಸಿಗಾಗಿ ಕಲರ್ ಕಲರ್ ಕಣ್ಣಿನ ಗ್ಲಾಸ್ ಗಳನ್ನು ಅವುಗಳ ಗುಣಮಟ್ಟ ತಿಳಿಯದೇ ಬಳಸುವುದು ಮುಂತಾದ ಹಲವು ಕಾರಣಗಳಿಂದ ಸರಿಯಾದ ಕಣ್ಣು ಹಾಳಾಗಬಹುದು. ಈ ಎಲ್ಲಾ ಸಂದರ್ಭಗಳ ಬಗ್ಗೆ ಎಚ್ಚರ ಎಂಬ ಸಂದೇಶವನ್ನು ಆರಂಭದಲ್ಲೇ ನೀಡುತ್ತ ಕಣ್ಣಿನ ಬಗ್ಗೆ ಹಿಂದೆ ಹೇಳಿದ್ದರ ಹೊರತಾಗಿ ಕೆಲವು ಮಾಹಿತಿಯನ್ನು ಕೊಡಲು ಉಪಕ್ರಮಿಸುತ್ತಿದ್ದೇನೆ.

ಈಗ ಸದ್ಯಕ್ಕೆ ನೀವು-ನಾವೆಲ್ಲ ಓದುತ್ತಿರುವುದು ನಮ್ನಮ್ಮ ಕಣ್ಣುಗಳಿಂದಲೇ ಅಲ್ಲವೇ? ಕಣ್ಣಿಂದ ಬರೇ ನೋಡುವುದರ ಹೊರತಾಗಿ ಹಲವು ಭಾವನೆಗಳನ್ನೂ ವ್ಯಕ್ತಪಡಿಸಬಹುದು ಎಂಬುದು ನಮೆಗೆಲ್ಲಾ ತಿಳಿದೇ ಇದ್ದರೂ ಯಾವ್ಯಾವ ಭಾವನೆಗಳು ಮತ್ತು ಹೇಗೇಗೆ ಎನ್ನುವುದನ್ನು ಸ್ವಲ್ಪ ಅವಲೋಕಿಸೋಣ.

ಕೋಪ ಬಂದಾಗ ಕಣ್ಣು ಕೆಂಡಕಾರುತ್ತದೆ ಎನ್ನುತ್ತಾರೆ. ಆದರೆ ನಿಜವಾಗಿ ನಮ್ಮ ಕಣ್ಣಲ್ಲಿ ಕೆಂಡ ಇದೆಯೇ ? ಇಲ್ಲ. ಆದರೆ ಒಂದು ಮತು ಸತ್ಯ- ನಮ್ಮ ಕಣ್ಣು ಕೆಲವು ಭಾವನೆಗಳ ಅಲೆಗಳನ್ನು ಹರಿಬಿಡುತ್ತದೆ. ಕಣ್ಣು ನಗುತ್ತದೆ ಎನ್ನುತ್ತಾರಲ್ಲ-ಆದರೆ ಕಣ್ಣಿಗೆ ಪ್ರತ್ಯೇಕ ಬಾಯಿದೆಯೇ ನಗಲಿಕ್ಕೆ? ಇದರರ್ಥ ಕಣ್ಣಿನಲ್ಲಿ ನಡೆವ ವಿವಿಧ ಮಾರ್ಪಾಡುಗಳವು! ಕಣ್ಣು ಸರಿ ಸುಮಾರು ೨೫೬ ಬೇರೆ ಬೇರೆ ಭಾವನೆಗಳನ್ನು ನೋಟಗಳ ರೂಪದಲ್ಲಿ ತೋರ್ಪಡಿಸುತ್ತದೆ. ಬಹಳ ಅಳುವಾಗಲೂ ಕಣ್ಣೀರು ಅತಿಯಾಗಿ ನಗುವಾಗಲೂ ಕಣ್ಣೀರು ಈರುಳ್ಳಿ ಹೆಚ್ಚಿದಾಗಲೂ ಕಣ್ಣೀರು...ಎಲ್ಲಿದೆ ಆ ನೀರಿನ ಸರೋವರ? ಒವರ್ ಹೆಡ್ ಟ್ಯಾಂಕ್ ಯಾವುದು? ಎಂತಹ ವಿಚಿತ್ರ ನೋಡಿ. ಆದರೆ ಸುರಿವ ಆ ನೀರಿನ ಪ್ರಮಾಣದಲ್ಲಿ ಭಿನ್ನತೆ!

ಕಣ್ಸನ್ನೆಯಲೇ ...... ಎಂದು ಕೆಲವು ಹಾಡುಗಳಲ್ಲಿ ಕೇಳುತ್ತೇವೆ. ಕಣ್ಣಿನ್ನಲ್ಲೇ ಸನ್ನೆ ಮಾಡಲು ಸಾಧ್ಯವೆಂದಾಯಿತಲ್ಲ. ಹೌದೌದು ಇದು ಕಾಲೇಜು ಹುಡುಗ-ಹುಡುಗಿಯರಿಗೆ ಗುರುವಿರದೇ ಬಂದ ವಿದ್ಯೆ! " ಆ ಸೂರ್ಯ ಕೂಡ ಕಣ್ಣ್ ಹೊಡೀತಾನ್ ಕಾಣಣ್ಣೋ ..." ಎನ್ನುವ ಸಿನಿಮಾ ಹಾಡನ್ನು ಗುನುಗುನಿಸದ ಹುಡುಗರು ದಶಕದ ಹಿಂದಿರಲಿಲ್ಲ! ಈಗ ಅದು ಹಳೆಯ ಹಾಡು. ಕಣ್ಣಿಂದ ಅನೇಕ ಸಂಕೇತಗಳನ್ನು ಸೃಜಿಸಬಹುದು. ಶೃಂಗಾರ, ಕಾರುಣ್ಯ, ದಯಾ, ಭೀಭತ್ಸ, ಉಗ್ರ, ಭಯಾನಕ,ಪ್ರೇಮ, ವಾತ್ಸಲ್ಯ, ಹಾಸ್ಯ, ಸಂತೋಷ ....ಹೀಗೇ ನವರಸಗಳನ್ನೂ ಬರೇ ಕಣ್ಣಲ್ಲೇ ಅಭಿವ್ಯಕ್ತಗೊಳಿಸಲು ಸಾಧ್ಯ ಮಾತ್ರವಲ್ಲ ಕಣ್ಣಿರದಿದ್ದರೆ ಅವುಗಳ ಅಭಿವ್ಯಕ್ತಿ ಧುಸ್ಸಾಧ್ಯ!

ಹತ್ತೊಂಬತ್ತು ವರ್ಷಗಳ ಹಿಂದೆ ಮೊದಲಗಿ ಬೆಂಗಳೂರಿಗೆ ನನು ಬಂದಾಗ ಸಿಗ್ನಾಲಿನಲ್ಲಿ ನಾಯಿಯೊಂದನ್ನು ನೋಡಿದೆ. ಅದು ಜನರಮಧ್ಯೆ ಹಾಗೆಯೇ ನಿಂತಿತ್ತು. ಕೆಂಪು ದೀಪ ಆರಿ ಹಸ್ರಿರು ದೀಪಬಂದ ತಕ್ಷಣ ಅದು ರಸ್ತೆಯ ಮತ್ತೊಂದು ಬದಿಗೆ ಓಡಿತು. ಅದಾದ ಹಲವು ಸರ್ತಿ ಈ ರೀತಿ ನೋಡಿದ್ದೇನೆ. ಕೆಲವು ನಾಯಿಗಳೂ, ಉಳಿದ ಪಶು-ಪಕ್ಷಿಗಳೂ ಕೂಡ ತಮ್ಮ ಸಂಕೇತಗಳಿಗೆ ಬಳಸುತ್ತವೆ. ಒಮ್ಮೆ ಒಂದು ನಾಯಿಯನ್ನು ದುರುಗುಟ್ಟಿ ನೋಡಿ..ಅದು ಗು ಎನ್ನಬಹುದು.. ಅದರ ಕಣ್ಣು ಸರಿಯಾಗಿ ಕೆಲಸಮಾಡುತ್ತಿದ್ದು ಅದು ಜಾತಿ ನಾಯಿಯಾದರೆ ಹಾಗನ್ನುತ್ತದೆ.....ನಾಯಿ ಜಾತಿಯಾದರೆ ಹಾಗೇ ಬಿದ್ದುಕೊಂಡಿರಬಹುದು! ಮರದ ಮೇಲೆ ಕುಳಿತ ಕಾಗೆಗೆ ಕೆಳಗಿನಿಂದಲೇ ಕಲ್ಲೆತ್ತಿ ಎಸೆದ ಪೋಸು ಕೊಡಿ, ಕಾಗೆ ಕತ್ತು ತಿರುತಿರುವಿ ಕೊನೆಗೊಮ್ಮೆ ಹಾರಿಹೋಗುತ್ತದೆ. ಕೆಲವು ಸಿನಿಮಾಗಳಲ್ಲಿ ಹುಡುಗಿಗೋ ಹೆಂಗಸಿಗೋ ಎದುರುನಿಂತ ಗಂಡಸು ಒಂದೇ ಕಣ್ಣು ಮಿಟುಕಿಸುವುದರಿಂದ ಅವರು ಕೋಪಗೊಂಡು ಚೆನ್ನಾಗಿ ದಬಾಯಿಸುತ್ತಾರೆ-- ಆಮೇಲೆ ಆ ಆ ಗಂಡಸು ಕಣ್ಣಿನ ನರದೌರ್ಬಲ್ಯ ಉಳ್ಳವನು ಎಂಬ ಉತ್ತರಬಂದಾಗ ಸಮಾಧಾನಪಟ್ಟುಕೊಳ್ಳುತ್ತಾರೆ. ಕೆಲವರಿಗೆ ಹಾಗೆ ಕಣ್ಸನ್ನೆ ಮಾಡದಿದ್ದರೇ ಬೇಸರವಾಗಬಹುದು ಬಿಡಿ-ಆ ವಿಚಾರ ಬೇರೆ! ಇಲ್ಲಿ ನೋಡಿ-- ಹೆಂಗಸಿಗೆ/ಹುಡುಗಿಗೆ ಗಂಡಸೊಬ್ಬ/ಹುಡುಗನೊಬ್ಬ ಅಥವಾ ಗಂಡಸಿಗೆ/ಹುಡುಗನಿಗೆ ಹೆಂಗಸೊಬ್ಬಳು/ಹುಡುಗಿಯೊಬ್ಬಳು ಒಂದೇ ಕಣ್ಣು ಮಿಟುಕಿಸುವುದರಿಂದ ಅದರಲ್ಲಿರುವ ಅರ್ಥ ನಿಮಗೀಗ ಅರ್ಥವಾಗಿದೆ!

ಸಂದರ್ಶನಕ್ಕೆ ಕುಳಿತ ಗಂಡಸಿನ/ಹೆಂಗಸಿನ ಕಣ್ಣುಗಳಲ್ಲಿ ಪರಸ್ಪರ ಭಾವನೆಗಳು ಹರಿದಾಡುತ್ತಿರುತ್ತವೆ. ನೇರ ಸಂವಹನದಲ್ಲಿ ಕೆಲವೊಮ್ಮೆ ಕೆಲವರು ಬಹಳ ಆಳವಾಗಿ ಎದುರಿಗಿರುವವರ ಕಣ್ಣಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ಅದು ಅವರ ವೈಯಕ್ತಿಕ ಮಾಹಿತಿಗಳ ಕಲೆಹಾಕುವಿಕೆಗೆ ಬೇಕಾಗಿ ಇರಬಹುದು, ಅಥವಾ ತನಗಿಂತ ಹೆಚ್ಚಿಗೆ ತಿಳಿದುಕೊಂಡ ವ್ಯಕ್ತಿಯನ್ನು ಆಳದವರೆಗೆ ನೂಕಿ ನೋಡುವ ರೀತಿ ಇರಬಹುದು ಅಥವಾ ಆಮೇಲೆ ಈ ಹುಡುಗ/ಹುಡುಗಿ ಎಲ್ಲಿ ಹೇಗೆ ತನಗೆ ಸಿಗಬಹುದು ಎಂಬ ಕಾಮದ ವಾಸನೆ ಇರುವ ನೋಟವಾಗಿರಬಹುದು. ಇದು ಆ ಈರ್ವರ ನಡುವೆ ಮಾತ್ರ ಗೊತ್ತಾಗುವ ವಿಷಯವೇ ಹೊರತು ಬೇರೇ ಸಾಕ್ಷಿ ಇದಕ್ಕಿರುವುದಿಲ್ಲ. ಆದರೆ ಪರಸ್ಪರರ ನೋಟವೇ ಕೆಲವೊಮ್ಮೆ ಸಹಜವಾಗಿದ್ದರೆ ಇನ್ನೊಮ್ಮೆ ಅಸಹಜವಾಗಿರಬಹುದು ಮತ್ತೊಮ್ಮೆ ಹತ್ತಿರ ಸೆಳೆವ ನೋಟವಗಿರಬಹುದು, ಇನ್ನೂ ಕೆಲವೊಮ್ಮೆ ಧಿಕ್ಕರಿಸುವ ನೋಟ, ಮಗುದೊಮ್ಮೆ ತಾನೇನು ಕಮ್ಮಿ ಎಂಬ ಅಹಮ್ಮಿನ ನೋಟ ಇರಬಹುದು.

ಹೀಗೇ ಮಾಡಿದರೆ ಸರಿ ಹೀಗೇ ಮಾಡಿದರೆ ತಪ್ಪು ಎಂಬ ಚೌಕಟ್ಟನ್ನು ಹಾಕಿ ಬಂಧಿಸುವುದಕ್ಕಿಂತ ಯಾವ ವ್ಯಕ್ತಿ ಎಲ್ಲೆಲ್ಲಿ ಹೇಗೇಗೆ ನೋಟ ಹರಿಸಿದರೆ ಒಳ್ಳೆಯದು ಎಂಬುದನ್ನು ಅವರವರೇ ಅರಿತುಕೊಳ್ಳುವುದು ಒಳ್ಳೆಯದು. ಒಂದೊಮ್ಮೆ ಇದಕ್ಕೆಲ್ಲ ಪಾಠಹೇಳಿ ಕಲಿಸಿದರೂ ಕಣ್ಣಿಗೆ ಬೀಗಹಾಕಲು ಸಾಧ್ಯವಿಲ್ಲವಷ್ಟೇ? ಇಲ್ಲಿ ಇಂದ್ರಿಯ ನಿಗ್ರಹವೆಂಬ ವಿಷಯ ಕೂಡ ತನ್ನ ಒಳಹರಿವನ್ನು ತೆರೆದಿಡುತ್ತದೆ ನೋಡಿ. ಗಂಡಿಗೆ ಹೆಣ್ಣಿಗಿಂತ ಸೌಂದರ್ಯೋಪಾಸನೆ ಜಾಸ್ತಿ ಎನ್ನಬಹುದು, ಅಥವಾ ಅದಕ್ಕಿಂತ ಭಿನ್ನವಾಗಿ ಚೆನ್ನಾಗಿ ಕಂಡ ಹಲವು ವಸ್ತು-ವಿರುದ್ಧ ಲಿಂಗೀ ವ್ಯಕ್ತಿಗಳನ್ನು ತನ್ನದಾಗಿ ಮಾಡಿಕೊಳ್ಳುವಾಸೆ ಪ್ರಕೃತಿ ಸಹಜವಾಗಿ ಗಂಡಿಗೆ ಜಾಸ್ತಿ. ಇದನ್ನರಿತ ಹಲವು ವ್ಯಾಪಾರೀ ಗಂಡುಗಳು ತಮ್ಮ ಮಳಿಗೆಗಳಲ್ಲಿ ಸುಂದರ ಹುಡುಗಿಯರನ್ನು ಕುಳ್ಳಿರಿಸಿ ತನ್ಮೂಲಕ ಪರೋಕ್ಷವಾಗಿ ಬೇರೆ ಗಂಡಸರನ್ನು ತಮ್ಮಲ್ಲಿ ಖರೀದಿಮಾಡುವಂತೆ ಆಕರ್ಷಣೆ ನೀಡುತ್ತಾರೆ. ಹಲವು ಇಂತಹ ಪ್ರದೇಶಗಳಲ್ಲಿ ಮುತ್ತಿನ ನಗೆಚೆಲ್ಲುವ ಚೆಲುವೆಯರ ಚಳುಕು ಥರುವ ಕಣ್ಣೋಟಕ್ಕೆ ಮನಸೋತ ಗಿರಾಕಿ ಒಲ್ಲೆ ಎನ್ನದೇ ಅಲ್ಲಿ ಮರಲ್ಪಡುವ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾನೆ!

ಕಣ್ಣಿನ ರೂಪ ವಿನ್ಯಾಸಗಳಲ್ಲಿ ಅಗಲ-ಉದ್ದ-ಆಕಾರಗಳಲ್ಲಿ ಹಲವು ವೈವಿಧ್ಯತೆಗಳನ್ನು ನಾವು ಕಾಣುತ್ತೇವೆ. ಅದು ಈ ಲೇಖನದ ವ್ಯಾಪ್ತಿಗೆ ಹೊರತಾಗಿದ್ದು ಇನ್ನೊಂದಿನ ನಿಮಗೆ ಹಾಸ್ಯರೂಪದಲ್ಲಿ ಕಾಣಸಿಗುತ್ತದೆ!

ಸಾಮಾನ್ಯವಾಗಿ ನಾವು ಸಂವಹಿಸುವಾಗ ಎದುರಿಗಿರುವ ವ್ಯಕ್ತಿ ಯಾರು, ಎಂಥವರು, ಯಾವ ವಯಸ್ಸು-ವರ್ಚಸ್ಸು, ನಾವು ಯಾರು, ನಮ್ಮ ವೈಯಕ್ತಿಕ ಹಕ್ಕು-ಬಾಧ್ಯತೆಗಳೇನು, ನಮ್ಮ ಸದ್ಯದ ಸ್ಥಿತಿ-ಗತಿ ಏನು, ನಮಗೂ ಎದುರಿಗಿರುವ ವ್ಯಕ್ತಿಗೂ ಇರುವ ಸಂಬಂಧವೇನು ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ವ್ಯವಹರಿಸುವುದು ಈಗ ಬೇಕಾದ ವಿಷಯ. ಸಂದರ್ಶನಕ್ಕೆ ಕುಳಿತಾಗ ಎಲ್ಲೆಲ್ಲೋ ನೋಡುತ್ತ ಮಾತನಾಡುವುದು, ನಮ್ಮ ಕಾಲುಗಳನ್ನು ನೋಡುತ್ತ ಮಾತನಾಡುವುದು, ಇನ್ಯಾವುದೋ ಪಕ್ಕದಲ್ಲಿ ಮಂಡಿಸಿದ ವ್ಯಕ್ತಿಯನ್ನು ಸತತ ನೋಡುತ್ತ ಮಾತನಾಡುವುದು, ಸಂದರ್ಶಕರನ್ನು ದುರುಗುಟ್ಟಿ ನೋಡುತ್ತ ಮಾತನಾಡುವುದು, ಕಣ್ಣು ಮುಚ್ಚಿಕೊಂಡು ಮಾತನಾಡುವುದು, ಒಂದು ಅಥವಾ ಎರಡೂ ಕಣ್ಣು ಉಜ್ಜಿಕೊಳ್ಳುತ್ತ ಮಾತನಾಡುವುದು, ಕಣ್ಣು ಹುಬ್ಬಿನ ಹತ್ತಿರ ತುರಿಸಿಕೊಳ್ಳುತ್ತ ಮಾತನಾಡುವುದು, ಒಮ್ಮೆ ನೋಡಿ ನಕ್ಕು ಮತ್ತೆಲ್ಲೋ ನೋಡುತ್ತ ಪುನಃ ನೋಡದೇ ಇದ್ದುಬಿಡುವುದು, ದರ್ಪದಿಂದ ಬೀಗುವ ನೋಟ ಹರಿಸುವುದು, ಯಾವ ಸಂವೇದನೆಯನ್ನೇ ಹರಿಸದ ಕಣ್ಣನ್ನು ಪೇಲವವಾಗಿ ಒಮ್ಮೊಮ್ಮೆ ಹರಿಬಿಡುವುದು, ಸುಸ್ತಾಗಿರುವ ರೀತಿ ಕಣ್ಣು ಹಾಯಿಸುವುದು ಇವೆಲ್ಲಾ ಸರಿಯಾದ ನೋಟಗಳಲ್ಲ.

ಅರಮನೆಗೆ/ಮಂತ್ರಿಗಳಮನೆಗೆ ಹೋದಾಗ ಅವರ ಹೆಂಗಸರನ್ನಾಗಲೀ, ಗುರುಮನೆಗೆ ಹೋದಾಗ ಅಲ್ಲಿರಬಹುದಾದ ಪರಿಚಾರಿಕೆಯರನ್ನಾಗಲೀ, ಶಿಕ್ಷಕರ ಮನೆಗೆ ಹೋದಾಗ ಅವರ ಹೆಂಡತಿ ಅಥವಾ ಮಗಳನ್ನಾಗಲೀ ನೋಡುವಾಗ ಅವನತ ಮುಖಿಯಾದ ಕಣ್ಣುಗಳಿದ್ದರೆ ಹಿತ. ಮನೆಯ ಹಿರಿಯರ ಮುಂದೆ, ದೊಡ್ಡವರ ಮುಂದೆ ಸಹಾ ಆದಷ್ಟು ವಿಧೇಯತೆ ಬಿಂಬಿಸುವ ಕಣ್ಣೋಟವಿದ್ದರೆ ಅದು ಸರಿ. ಸಭೆ-ಸಮಾರಂಭಗಳಲ್ಲಿ ನಮ್ಮ ನೋಟ ಸಭೆಯ ಉದ್ದಗಲಕ್ಕೂ ಓಡಾಡಬೇಕೇ ವಿನಃ ಕೇವಲ ಮುಂದೆ ಕುಳಿತ ಒಬ್ಬಿಬ್ಬರ ಮೇಲೋ ಅಥವಾ ಪರಿಚಿತರ ಮೇಲೋ ಕೇಂದ್ರೀಕೃತವಾಗಿರಬಾರದು. ಯಾವುದೇ ಸಂದರ್ಭದಲ್ಲೂ ದರ್ಪವನ್ನು ತೋರಿಸುವ ನೋಟ ಹರಿಸದಿದ್ದರೆ ಅದು ವಿನಯಕ್ಕೆ ಮತ್ತೊಂದು ಮಜಲನ್ನು ಕೊಡುತ್ತದೆ. ಮಕ್ಕಳನ್ನು ಸುಖಾಸುಮ್ಮನೇ ಕಣ್ಣು ಹಿಗ್ಗಿಸಿ ಹೆದರಿಸುವುದು ಸರಿಯಲ್ಲ. ಪಕ್ಕದಮನೆಯಲ್ಲಿ ಎಷ್ಟೆಲ್ಲಾ ಹಣ್ಣು ತಂದಿದ್ದಾರೆ ಎಂದು ಆಸೆಕಂಗಳಿಂದ ನೋಡುವುದು ಸರಿಯಲ್ಲ.

ಕೆಲವರು ಅಷ್ಟು ದೂರ ಬರುತ್ತಿರುವಾಗಲೇ ಅವರ ಕಣ್ಣನ್ನು ನೋಡಿಯೇ ನಾವು ಅಂದಾಜಿಸುತ್ತೇವೆ- ಬರುತ್ತಿರುವ ವ್ಯಕ್ತಿ ಯಾವ ಥರದವನು, ಅವನು ಕೋಪದಲ್ಲಿದ್ದಾನೋ, ಸಂತೋಷದಲ್ಲಿದ್ದಾನೋ, ಬೇಸರದಲ್ಲಿದ್ದಾನೋ, ಸೊಕ್ಕಿದ್ದಾನೋ, ಸೊರಗಿದ್ದಾನೋ ಇತ್ಯಾದಿ ಅವನ ಕಣ್ಣಲ್ಲಿ ಆತ ತೋರುವ ಮನದಿಂಗಿತಕ್ಕೆ ತಕ್ಕುನಾಗಿ ಭಾಷ್ಯ ಬರೆಯಲು ನೋಟಕರಿಗೆ ಸಾಧ್ಯವಾಗುತ್ತದೆ. ಕಣ್ಣ ಹುಬ್ಬನ್ನು ಆಗಿಂದಾಗ್ಗೆ ಅನಾವಶ್ಯಕವಾಗಿ ಹಾರಿಸುವವರು ಕೆಲವು ಮಂದಿ. ಇದು ರೂಢಿಯಾಗಿಬಿಟ್ಟರೆ ಬೀಡಿ-ಸಿಗರೇಟು ಚಟದಂತೆ ತಪ್ಪಿಸುವುದೇ ಕಷ್ಟ! ಬೊಗಸೆಕಂಗಳು ಎನ್ನುತ್ತೇವಲ್ಲ ಹಾಗೆಂದರೆ ಕಣ್ಣೇನು ಬೊಗಸೆ ತುಂಬಾ ತುಂಬುವಷ್ಟಿವಿಯೇ ? ಕಣ್ಣನ್ನು ನೋಡಿದಾಗ ನಮಗೆ ನಮ್ಮ ಬೊಗಸೆಯಲ್ಲಿ ತನ್ನ ಭಾವನೆಗಳನ್ನೆಲ್ಲ ಆ ವ್ಯಕ್ತಿ ತುಂಬಿಸಿಕೊಟ್ಟ ಅನುಭವವಾಗುತ್ತದೆ. ಅದಕ್ಕೇ ಅವು ಬೊಗಸೆಕಂಗಳು! ನೀಲಲೋಚನ ಅಂದರೆ ಕಣ್ಣೇನೂ ನೀಲಿಗಟ್ಟಿರುವುದಿಲ್ಲ ಬದಲಾಗಿ ಅರ್ಧನಿಮೀಲಿತವಾಗಿ ಜ್ಞಾನಚಕ್ಷುಗಳಂತೇ ಕಂಡುಬರುವುದರಿಂದ ಅವು ನೀಲಲೋಚನಗಳು. ಕಮಲಲೋಚನ ಎಂದರೆ ಕಮಲದಂತೇ ಅರಳಿರುವ ಭಾವವನ್ನು ಹೊರಹೊಮ್ಮಿಸುವ ಕಣ್ಣುಗಳು. ಸುಲೋಚನ--ಯಾವುದೋ ಹುಡುಗಿ ಬಂದು ಬಿಟ್ಟಾಳು! ಸುಲೋಚನ ಎಂದರೆ ಚೆನ್ನಾಗಿರುವಕಣ್ಣು ಅಲ್ಲವೇ? ಅದನ್ನೇ ಕೆಲವರು ಕನ್ನಡಕಕ್ಕೆ ಪರ್ಯಾಯವಾಗಿ ಬಳಸುತ್ತಾರೆಂಬುದನ್ನು ಕೇಳಿದ್ದೇನೆ.

ಎದುರಿಗಿರುವ ವ್ಯಕ್ತಿಯ ಬಹುತೇಕ ಆಯಾಮಗಳು ಅವನ ಕಣ್ಣ ನೋಟದಲ್ಲೇ ಬಿಂಬಿತವಾಗುತ್ತವೆ. ಕೆಲವರನ್ನು ನೋಡಿ--ಅವರು ನಮ್ಮನ್ನು ತಿಂದುಬಿಡುವಂತೆ ನೋಟ ಹರಿಸುತ್ತಿರುತ್ತಾರೆ, ಇನ್ನು ಕೆಲವರು ಎಲ್ಲೋ ಪರಿಚಯವಿರುವವರ ಹಾಗೇ ನೋಡುತ್ತಾರೆ, ಕೆಲವರಿಗೆ ಎದುರಿಗೆ ಯಾರು ಬಂದರೆಷ್ಟು ಹೋದರೆಷ್ಟು! ಅವರಿಗೆ ಭಾವನೆಗಳೇ ಇಲ್ಲವೇನೋ ಎನ್ನುವಂತಿರುತ್ತವೆ ಅವರ ಕಣ್ಣುಗಳು. ಕೆಲವರಿಗೆ ಅನಾಥಪ್ರಜ್ಞೆ ಕಾಡುವ ಕಣ್ಣುಗಳಾದರೆ ಇನ್ನು ಕೆಲವರ್ದು ಅಪರಾಧೀ ಭಾವ ಹೊಮ್ಮಿಸುವ ಕಣ್ಣುಗಳು. ಕುಹಕ ಬುದ್ಧಿಯುಳ್ಳವರ ಕಣ್ಣುಗಳು ಎದುರಿಗಿರುವವರ ಆಯಳತೆ ನಿರ್ಧರಿಸುವ, ಅವರಿಗೆ ಕೀಟಲೆಕೊಟ್ಟು ಮಜಾತೆಗೆದುಕೊಳ್ಳುವ ಗೋಮುಖ ವ್ಯಾಘ್ರನ ರೀತಿಯ ಕಣ್ಣುಗಳಾಗಿದ್ದು ಗುರುತಿಸುವುದು ಭಾರೀ ಕಷ್ಟದ ಕೆಲಸ! ತತ್ವಜ್ಞಾನಿಯೊಬ್ಬನ ಕಣ್ಣುಗಳು ಹಲವರಿಗೆ ಏನನ್ನೋ ಕೊಡಬಯಸುವಂತೆ ವಾತ್ಸಲ್ಯಪೂರಿತವಾಗಿರುತ್ತವಾದರೆ ವಿಜ್ಞಾನಿಗಳ ಕಣ್ಣುಗಳು ಸದಾ ಹುಡುಕುವ ಗಡಿಬಿಡಿಯಲ್ಲಿರುವವು, ನಟನ ಕಣ್ಣುಗಳು ಚಂಚಲವಾದರೆ, ನಟಿಯಲ್ಲಿ ಅವು ಮೀನಿನ ಹೆಜ್ಜೆಯನ್ನು ನೀರಲ್ಲಿ ಹುಡುಕಿದಂತೇ ಆಭಾಸವುಂಟುಮಾಡುವಂಥವು,ಕುಡುಕನ ಕಣ್ಣು ಕೆಂಪಾಗಿ ನಿಸ್ತೇಜವಾಗಿದ್ದರೆ ತಾಪಸರ ಕಣ್ಣು ಚೈತನ್ಯದ ಚಿಲುಮೆಯನ್ನೇ ಹರಿಸುವ ದಿವ್ಯ ಚಕ್ಷುಗಳಾಗಿರುತ್ತವೆ. ರಾಜಸರ ಕಣ್ಣು ಸುಖೋಪಭೋಗಗಳನ್ನು ಲೆಕ್ಕಿಸುವುದಾದರೆ ಲೆಕ್ಕಿಗರ ಕಣ್ಣು ಅಂಕೆಗಳನ್ನು ಜೋಪಾನವಾಗಿ ಗ್ರಹಿಸುವ ತೀಕ್ಷ್ಣಮತಿಯುಳ್ಳವು, ವೈದ್ಯರ ಕಣ್ಣು ರೋಗಿಗೆ ಆಶಾದಾಯಕ ಭಾವನೆಯನ್ನು ಕೊಡುವವಾದರೆ ಜ್ಯೋತಿಷರ ಕಣ್ಣು ಖಗೋಳವನ್ನೇ ನುಂಗಿ ನೀರು ಕುಡಿದ ಮಹಾಪಾಂಡಿತ್ಯದ ಬೂಟಾಟಿಕೆಯಿಂದ ಕೂಡಿದವುಗಳು, ವಿದ್ಯಾರ್ಥಿಯ ಕಣ್ಣು ಪರೀಕ್ಷೆಯ ಚಿಂತೆಯನ್ನು ಸೂಚಿವಂತವಾಗಿದ್ದರೆ ಅಭ್ಯರ್ಥಿಯ ಕಣ್ಣು ಸೋಲು-ಗೆಲುವಿನ ತಳಮಳ ಹೊತ್ತಿರುವವು,ಜ್ಞಾನಿಗಳ ಕಣ್ಣು ಇನ್ನೂ ತಿಳಿದುಕೊಳ್ಳುವ ಕಾತುರದಿಂದ ಕೂಡಿದ್ದರೆ ಪಾತಕಿಗಳ ಕಣ್ಣು ಕ್ರೌರ್ಯವನ್ನು ಮೆರೆಯುವಂಥವು. ಹೀಗೇ ಆಯಾಯ ವ್ಯಕ್ತಿ ಮತ್ತು ಆಯಾಮಗಳಿಗೆ ತಕ್ಕನಾಗಿ ಕಣ್ಣು ಹಲವು ಭಾವನೆಗಳನ್ನು ಹೊರಸೂಸುವ ಮಾಯಾಪೆಟ್ಟಿಗೆಯಾಗಿರುತ್ತದೆ.

ಕಣ್ಣ ನೋತದ ಬಗ್ಗೆ ಹಲವು ಭಾವಗೀತೆಗಳು- ಸಿನಿಮಾ ಹಾಡುಗಳು ಬರೆಯಲ್ಪಟ್ಟವು, ಇನ್ನೂ ಬರೆಯಲ್ಪಡುತ್ತಲೇ ಇವೆ. ಯಾಕೆಂದರೆ ಹೆಣ್ಣ ಕಣ್ಣುಗಳು ಹಲವೊಮ್ಮೆ ಕವನಗಳನ್ನು ಹಾಡುತ್ತವೆ! ನಾಯಕನ ಕಣ್ಣುಗಳು ನಾಯಕಿಗೆ ರುಚಿಸಿದರೆ ನಾಯಕಿಯ ನಯನಗಳು ನಾಯಕನಿಗೆ ಅತಿ ವಿಶಿಷ್ಟವಾಗಿ ಹೊರಹೊಮ್ಮುತ್ತವೆ. ರತಿ-ಮನ್ಮಥರನ್ನು ಗಣನೆಗೆ ತೆಗೆದುಕೊಂಡು ಬರೆಯುವಾಗ ಕಾಮನಬಿಲ್ಲು ಎಂದು ಬರೆದು ಅದನ್ನು ಕಣ್ಣಹುಬ್ಬಿಗೆ ಹೋಲಿಸಿದ್ದಾರೆ. ಪೌರಾಣಿಕ ಕಥೆಗಳನ್ನು ಗಮನಿಸಿದರೆ ಅಲ್ಲಿ ವಿಶ್ವಾಮಿತ್ರ ಮೇನಕೆಯನ್ನು ಕಂಡ ಪ್ರೇಮ ಸಂಚಲಿತ ಕಾಮದ ಕಣ್ಣು, ದುಷ್ಯಂತ-ಶಕುಂತಲೆಯರ ಮೊದಲ ನೋಟದ ಪ್ರೇಮ, ವಾಮನನ ಚಿಕ್ಕ ರೂಪ ಕಂಡು ದಾನಗೈದ ಬಲಿಗೆ ಬಹುದೊಡ್ಡ ರೂಪದ ವಾಮನನ್ನು ತೋರಿದ ಅದೇ ಕಣ್ಣು, ಚಿನ್ನದ ಜಿಂಕೆಯನ್ನು ಕಂಡ ಸೀತೆ ರಾಮ-ಲಕ್ಷ್ಮಣರನ್ನು ಕರೆದು ಅದನ್ನು ತಂದುಕೊಡುವಂತೆ ಮಾಡಿದ ಆ ಕಣ್ಣು, ಮಾರುತಿಗೆ ಶತಯೋಜನ ವಿಸ್ತೀರ್ಣದ ಸಮುದ್ರವನ್ನು ಅತಿ ಚಿಕ್ಕ ಕೂಗಳತೆಯ ನದಿಯದಡಗಳ ರೀತಿ ತೋರ್ಪಡಿಸಿದ್ದು ಅದೇ ಕಣ್ಣು. ಕಣ್ಣಿನ ಭಾಷೆಯ ವ್ಯಾಪಕತ್ವ ಇಷ್ಟಕ್ಕೇ ಸೀಮಿತವಲ್ಲ. ಆದರೆ ಇದ್ದುದರಲ್ಲಿ ಅದನ್ನು ಹೇಗೆ ಬಳಸಿದರೆ ಅನುಕೂಲಕರ ಅಥವಾ ಒಳ್ಳೆಯದು ಎಂದು ತಿಳಿದುಕೊಂಡರೆ ಅದರ ಮಹತ್ವದ ಅರಿವಾಗುತ್ತದೆ.

ಸ್ಥೂಲವಾಗಿ ಹೇಳಿಬಿಡಬಹುದಾದರೆ ಮನಸ್ಸಿಗೆ ವಿಷಯದ ದೃಶ್ಯಮಾಧ್ಯಮಗಳ ಅನುಭೂತಿಯನ್ನು ತರುವ ಅತಿ ವಿಷಿಷ್ಟ ಅಂಗ ನಮ್ಮ ಕಣ್ಣು. ಕಣ್ಣನ್ನು ಕೈಯ್ಯಲ್ಲಿ ಇಟ್ಟುಕೊಳ್ಳೋಣ, ಕಣ್ಣಿಗೆ ಕಂಡಿದ್ದೆಲ್ಲಾ ಬೇಕು ಎನ್ನುವ ಕೊಳ್ಳುಬಾಕ ಸಂಸ್ಕೃತಿಯನ್ನು ಮಟ್ಟಹಾಕೋಣ, ಈ ಕಣ್ಣು ಮನದಲ್ಲಿ ಜ್ಞಾನದ ದೀವಿಗೆಯನ್ನು ಬೆಳಗುವ ಮೂಲ ದೀಪವಾಗಲಿ, ಈ ಕಣ್ಣು ತನ್ನ ಸ್ವಯಂಪ್ರಕಾಶದಿಂದ ಹಲವರ ಬಾಳಿಗೆ ಬೆಳಕನ್ನು ನೀಡಲು ಉಪಕಾರವಾಗುವ ದೀಪವಾಗಲಿ ಎಂದು ಆಶಿಸೋಣವೇ?