ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, December 19, 2010

ದತ್ತನ ನೆನೆ ಮನವೆ


ದತ್ತನ ನೆನೆ ಮನವೆ

ಬ್ರಹ್ಮಾಂಡವನ್ನು ಧರಿಸಿಯೂ ಅದರೊಳಗೇ ಹೊಕ್ಕೂ ಇರುವ ಪರಾಶಕ್ತಿಗೆ ಆಗಾಗ ಹಲವನ್ನು ಕೆದಕುವ ಅಪೇಕ್ಷೆ. ಯಾರ್ಯಾರನ್ನು ಎಲ್ಲೆಲ್ಲಿ ಹೇಗೆ ಹೇಗೆ ಪರೀಕ್ಷಿಸಲಿ ಎಂಬುದನ್ನು ಸದಾ ಪರಿಗಣಿಸುವ ಈ ಶಕ್ತಿ ಮಾಹಾವಿಷ್ಣುವಾಗಿ ದಶಾವತಾರ ತಾಳಿಯೂ, ಮಹಾಗಣಪತಿಯಾಗಿ ೧೭ ಅವತಾರತಾಳಿಯೂ, ಮಹಾಶಕ್ತಿಯಾಗಿ ಎಣಿಕೆಯಿಲ್ಲದಷ್ಟು ಅವತಾರತಾಳಿಯೂ ಭುವಿಯಲ್ಲಿ ವಿರಾಜಿಸಿದರೆ ಅವತಾರಗಳಲ್ಲೂ ವೈವಿಧ್ಯತೆ ಮೆರೆಯುವ ಪರಿ ಬಹಳ ಖುಷಿಗೊಳಿಸುವಂಥದು. ತಾನು ಹಲವು ರೂಪಗಳಲ್ಲಿದ್ದರೂ ಎಲ್ಲರೂಪಗಳ ಮೂಲ ರೂಪ ಒಂದೇ ಎಂಬ ತತ್ವವನ್ನು ಸಾರುವ ಈ ಶಕ್ತಿಯೇ ರಾಮನೂ ಆಗುತ್ತದೆ, ಹನುಮನೂ ಆಗುತ್ತದೆ. ತನ್ನಿಂದಲೇ ತನ್ನನ್ನು ಸೃಜಿಸಿ, ಸೇವಿಸಿ ವಿಸ್ಮಯವನ್ನುಂಟುಮಾಡುವ ಈ ಶಕ್ತಿಗೆ ಹಿಂದೊಮ್ಮೆ ಅತ್ರಿ ಮಹರ್ಷಿಯ ಕಾಲದಲ್ಲಿ ಅವರ ಮಗನಾಗಿ ಆಡುವ ಆಸೆ ಬಂತಂತೆ. ಆಗ ಹುಟ್ಟಿದ ಮಗುವೇ ದತ್ತಾತ್ರೇಯ.

ಅತ್ರಿ ಮಹರ್ಷಿಯ ಪತ್ನಿ ಅನಸೂಯಾ. ಮಹಾ ಪತಿವೃತೆಯಾದ ಅನಸೂಯೆ ಯಾವ ಅಸೂಯೆಯೂ ಇಲ್ಲದ ಸಾಧ್ವಿಮಣಿ. ಮುನಿಗೆ ತಕ್ಕ ಮಡದಿ, ರೂಪವತಿಯೂ ಗುಣಾಢ್ಯಳೂ ಆಗಿರುತ್ತಾಳೆ. ಕಾರ್ಯನಿಮಿತ್ತ ಅತ್ರಿ ಹೊರಗೆ ಹೋಗಿರುವ ಒಂದುದಿನ ಮೂರುಜನ ಅಭ್ಯಾಗತರು ಆಗಮಿಸುತ್ತಾರೆ. ಬಂದ ಜನರನ್ನು ಆದರಿಸುವ ಸಂಸ್ಕೃತಿ ಮುನಿಜನರದ್ದು. ಅದರಂತೇ ಬಂದ ಮೂರುಜನ ಗಂಡಸರಿಗೆ ಉಪಚರಿಸ ಬೇಕಲ್ಲ ? ಗಂಡ ಬರುವವರೆಗೆ ಬಹಳ ಸಮಯವಾಗಬಹುದೇನೋ, ಅಲ್ಲಿಯವರೆಗೂ ಅವರಿಗೆ ತೃಷೆಗೋ ಹಸಿವಿಗೋ ಏನನ್ನೂ ಕೊಡದೇ ಹಾಗೇ ಕೂರಿಸುವುದು ಸರಿಯೇ ಎಂದುಕೊಳ್ಳುತ್ತಾ ಅವರನ್ನು ಮಾತನಾಡಿಸುತ್ತಾಳೆ ಅನಸೂಯಾ. ಬಂದ ಗಂಡಸರು ಬಹಳ ಕಿಲಾಡಿ ಬುದ್ಧಿಯವರೇ ಆಗಿದ್ದು ತಮ್ಮ ತೃಷೆಗೆ ಅನಸೂಯೆಯ ಎದೆಯಹಾಲೊಂದೇ ಬೇಕಾದದ್ದೆಂದೂ ಅದನ್ನು ಬಿಟ್ಟು ಬೇರೇನನ್ನೂ ತಾವು ಬಯಸೆವೆಂದೂ ವಿವಸ್ತ್ರಳಾಗಿ ತಮಗೆ ಎದೆಯೂಡಿಸಬೇಕೆಂದೂ ಬೇಡಿಕೆಯಿಡುತ್ತಾರೆ. ಬೇಡಿಕೆಯನ್ನು ನೆರವೇರಿಸದಿದ್ದಲ್ಲಿ ಅತಿಥಿ ಸೇವೆಯನ್ನು ಭಂಗಗೊಳಿಸಿದ ಪಾಪವನ್ನು ಅನುಭವಿಸಬೇಕಾಗುತ್ತದೆಂದೂ ಸಾರುತ್ತಾರೆ.

ಕ್ಷಣಕಾಲ ಯೋಚಿಸಿದ ಅನಸೂಯೆ ಮೂವರನ್ನೂ ಒಂದೇ ಕಡೆ ಸಾಲಾಗಿ ಕುಳಿತುಕೊಳ್ಳಿರೆಂದೂ ತಾನು ಹಾಲೂಡಿಸಲು ಒಪ್ಪಿರುವೆನೆಂದೂ ತಿಳಿಸುತ್ತಾಳೆ. ಬಂದ ಮೂರೂ ಗಂಡಸರು ಒಂದೆಡೆ ಕುಳಿತು ಕಾಯುತ್ತಿರುವಾಗ ತನ್ನ ಕಮಂಡಲುವಿನಿಂದ ನೀರನ್ನು ತೆಗೆದು ಪರಾಶಕ್ತಿಯನ್ನು ಧ್ಯಾನಿಸಿ ಇವತ್ತು ತನ್ನ ಪತಿವೃತಾ ಧರ್ಮಕ್ಕೆ ಕಳಂಕ ತಟ್ಟುವ ಸಮಯ ಬಂದಿದೆಯೆಂದೂ ಅನಿವಾರ್ಯವಾಗಿ ಬಂದ ಅತಿಥಿಗಳನ್ನು ತಾನು ಸೇವಿಸಬೇಕಾಗಿದೆಯೆಂದೂ ಅಂದುಕೊಳ್ಳುತ್ತಾ ಎದುರಲ್ಲಿ ಕುಳಿತಿದ್ದ ಮೂರೂಜನ ಗಂಡಸರಿಗೆ ಪ್ರೋಕ್ಷಿಸಿಬಿಡುತ್ತಾಳೆ. ಕ್ಷಣಮಾತ್ರದಲ್ಲಿ ಮೂರೂಜನ ಗಂಡಸರು ಮೂರು ಸುಂದರ ಗಂಡು ಶಿಶುಗಳಾಗಿ ಮಲಗುತ್ತವೆ. ಅಮ್ಮನ ಅಕ್ಕರೆ ತುಂಬಿದ ಅನಸೂಯೆ ಆ ಶಿಶುಗಳಿಗೆ ಎದೆ ಹಾಲನ್ನು ನೀಡುತ್ತಾಳೆ ಮಾತ್ರವಲ್ಲ ಮೂವರನ್ನೂ ಒಂದೇ ತೊಟ್ಟಿಲೊಳಿಟ್ಟು ಜೋಗುಳಹಾಡಿ ರಮಿಸುತ್ತಾಳೆ. ಅವಳ ಭಕ್ತಿ,ಶ್ರದ್ಧೆಗೆ ಒಲಿದ ಪರಾಶಕ್ತಿಯ ಮೂರು ರೂಪಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ತಾವೆಂದೂ, ಪೂರ್ವದಲ್ಲಿ ಅನುಗ್ರಹಿಸಿದಂತೇ ಅತ್ರಿ ದಂಪತಿಯ ಮಗನಾಗಿ ಅಯೋನಿಜರಾಗಿ ಜನಿಸಲು ಬಂದಿದ್ದಾಗಿಯೂ ಅನಸೂಯೆಗೆ ತಿಳಿಸಿ ದೇಹವೊಂದರಲ್ಲೇ ಮೂರು ತಲೆ, ಆರು ಕೈಗಳು ಉಳ್ಳ ಒಂದೇ ಶಿಶುವಾಗಿ ಇನ್ನುಮುಂದೆ ಇದೇ ರೂಪದಲ್ಲಿ ಇರುವುದಾಗಿ ತಿಳಿಸುತ್ತಾರೆ. ಅತ್ರಿ ಮುನಿಗೆ ದತ್ತವಾಗಿ ಬಂದ ಈ ಮಗುವನ್ನು ಮುನಿದಂಪತಿ ದತ್ತಾತ್ರೇಯನೆಂದು ನಾಮಕರಣಗೈದು ಬೆಳೆಸುತ್ತಾರೆ.

ಸಹಜವಾಗಿ ಪರಾಶಕ್ತಿಯಾದ ಪರಬ್ರಹ್ಮನ ಒಂದು ಆವಿಷ್ಕಾರವಾದ ದತ್ತಾತ್ರೇಯ ಮುನಿಯ ಸುತ್ತ ಗೋವುಗಳು, ನಾಯಿಗಳು ಇನ್ನೂ ಹಲವು ಪಶು-ಪಕ್ಷಿಗಳು ಆಗಾಗ ಸುತ್ತುವರಿಯುತ್ತವೆ. ಆತನ ಸನ್ನಿಧಾನದಲ್ಲಿ ಸಿಗುವ ಅಪರಿಮಿತ ಆನಂದಾನುಭೂತಿಯಿಂದ ಆತನ ಪಕ್ಕವೇ ನಿಲ್ಲಲು ಇಷ್ಟಪಡುತ್ತವೆ. ಆ ಯಾ ಜನ್ಮಗಳಲ್ಲಿರುವ ತನ್ನದೇ ಹಲವು ಛೇದಿತ ಅಂಶಗಳಾದ ಅವೆಲ್ಲವುಗಳಲ್ಲೂ ಪ್ರೀತಿಯನ್ನು ತೋರುವ, ಅವುಗಳ ಐಹಿಕ ಸಂಕಷ್ಟಗಳನ್ನು ನಿವಾರಿಸುವ ಮನಸ್ಸು ದತ್ತಾತ್ರೇಯನದ್ದಾಗಿರುತ್ತದೆ. ಅನೇಕ ಋಷಿಗಳೂ, ಋಷಿಕುವರರೂ ಸೇರಿದಂತೇ ಹಲವರು ದತ್ತನ ಸಾಮೀಪ್ಯವನ್ನು ಬಯಸುವಷ್ಟು ಪೂರ್ಣಕಳಾ ರೂಪಿ ದತ್ತಾತ್ರೇಯನಾಗಿರುತ್ತಾನೆ. ಶಾಂತಸರೋವರದಲ್ಲಿ ನಿಂತ ನೀರಿನಂತೇ ಪ್ರಶಾಂತ ಮನಸ್ಸುಳ್ಳ ಆಜಾನುಬಾಹು ದತ್ತಾತ್ರೇಯ ಭುವಿಯ ಬಹುತೇಕರ ಕಣ್ಮಣಿಯಾಗುತ್ತಾನೆ. ಹಲವರ ಸಂಕಷ್ಟಗಳಲ್ಲಿ ಅವರ ಕಣ್ಣೀರೊರೆಸುವ ಪರಾಶಕ್ತಿಯ ಈ ರೂಪವನ್ನು ಜನ ಶಾಶ್ವತವಾಗಿ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ. ಸಂತಾನಹೀನರಿಗೆ ಸಂತಾನವನ್ನು ಕರುಣಿಸುವ, ವಿವಿಧ ಕಾಯಿಲೆಗಳಲ್ಲಿ ತೊಳಲುವವರಿಗೆ ಅವುಗಳಿಂದ ನಿವೃತ್ತಿನೀಡುವ, ಶುದ್ಧಹಸ್ತರಿಗೆ ಅಲೌಕಿಕ ಸಹಾಯವನ್ನು ಉಣಬಡಿಸುವ ದತ್ತಾತ್ರೇಯ ತಂದೆ-ತಾಯಿಯ ಅಪೇಕ್ಷೆಯಂತೇ ವಿವಿಧ ಸನ್ಯಾಸಿಗಳ ರೂಪದಲ್ಲಿ ಪುನರಪಿ ಜನಿಸುವೆನೆಂದು ತಿಳಿಸುತ್ತಾನೆ.

ದತ್ತಾತ್ರೇಯನ ಜಾಗೃತ ಸ್ಥಳಗಳಲ್ಲಿ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ಬಹಳ ಪ್ರಸಿದ್ಧವಾಗಿದೆ. ಶ್ರೀಪಾದ ವಲ್ಲಭರು ಮತ್ತು ನರಸಿಂಹ ಸರಸ್ವತಿಗಳು ಎಂಬ ಈರ್ವರು ಸನ್ಯಾಸಿಗಳು ಒಬ್ಬರಾದಮೇಲೆ ಒಬ್ಬರಂತೇ ಇದೇ ಸ್ಥಳದಲ್ಲಿ ನೆಲೆನಿಂತು ಹಲವುಕಾಲ ತಪಸ್ಸನ್ನಾಚರಿಸ್ದೂ ಅಲ್ಲದೇ ಜಗತ್ತಿಗೇ ಒಳಿತನ್ನು ಬಯಸಿ ಹಲವು ಕಾರ್ಯಗಳನ್ನು ನಡೆಸಿದ್ದಾರೆ. ಇಂದಿಗೂ ಗಾಣಗಾಪುರದಲ್ಲಿ ನಿರ್ಗುಣಪಾದುಕೆಗಳೆಂಬ ಮಾನವ ಪಾದವನ್ನೇ ಮುಟ್ಟಿದಂತೆನಿಸುವ ಪಾದುಕೆ ಪೂಜಿತವಾಗುತ್ತಿರುವುದು ನರಸಿಂಹ ಸರಸ್ವತಿಗಳ ದಿವ್ಯ ಅನುಗ್ರಹದಿಂದ. ಭೀಮಾ-ಅಮರಜಾ ನದಿಗಳು ಸೇರುವ ಜಾಗ ಇದಾದ್ದರಿಂದ ಸಂಗಮದಲ್ಲಿ ಸ್ನಾತರಾಗಿ ದತ್ತನ ಸೇವೆ ನಡೆಸಿದರೆ ಶ್ರೇಯಸ್ಕರವೆಂಬುದು ಶತಶತಮಾನಗಳ ಇತಿಹಾಸದಿಂದ ಅನಾವರಣಗೊಂಡ ಸತ್ಯ ವಿಷಯ. ಆಗರ್ಭ ಶ್ರೀಮಂತನೂ ಕೂಡ ಇಲ್ಲಿಗೆ ಬಂದಾಗ ತನ್ನ ಅಹಂಕಾರ ನಿವೃತ್ತಿಗಾಗಿ ಮಧುಕರೀ ಭಿಕ್ಷಾನ್ನವನ್ನು ಬೇಡುವುದು ಇಲ್ಲಿನ ಸಂಪ್ರದಾಯ!

ಕರ್ನಾಟಕದ ಗುಲಬರ್ಗಾ ಜಿಲ್ಲೆಯ ಲಾಡ್ ಚಿಂಚೋಳಿಯಲ್ಲಿ ಜೀವಿಸಿದ್ದ ದೇಗಲೂರು ನಾರಾಯಣರಾವ ಪತಕಿ ಮತ್ತು ಅವರ ಪತ್ನಿ ಸೌ| ಕಮಲಾಬಾಯಿಯವರಿಗೆ ಹುಟ್ಟಿದ ಮಕ್ಕಳೆಲ್ಲಾ ಸತ್ತುಹೋಗುತ್ತಿದ್ದರು. ಅವರು ಆ ಕಾಲಕ್ಕೆ ಹೈದರಬಾದ್ ನಲ್ಲಿ ವಾಸವಿದ್ದರು. ಹೀಗಿದ್ದಾಗ ಗತಿಸಿದ ಎರಡು ಮಕ್ಕಳ ಆ ನೆನಪು ಅವರ ಮನಸ್ಸನ್ನು ತುಂಬಿ ತೀರಾ ದುರ್ಬಲಗೊಳಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕುಲಪುರೋಹಿತರಾದ ಮಾರುತಿರಾಯರು ಅವರ ಮನೆಗೆ ಆಗಮಿಸಿ ಅವರ ಪೂರ್ವಜರ ವೃತ್ತಾಂತವನ್ನೂ, ಕುಟುಂಬಕ್ಕೆ ತಗುಲಿರುವ ಸರ್ಪದೋಶವನ್ನೂ ತಿಳಿಸುತ್ತಾ ನಿವಾರಣೆಗಾಗಿ ಮತ್ತು ಮಹಾಪುರುಷನ ಜನನಕ್ಕಾಗಿ ಹಿಂದೆ ವಧಿಸಲ್ಪಟ್ಟ ಸರ್ಪರೂಪೀ ಕುಲಪುರುಷನ ಸ್ವಪ್ನವಾಣಿಯಂತೇ ದಂಪತಿ ಗಾಣಗಾಪುರಕ್ಕೆ ತೆರಳಿ ಅಲ್ಲಿ ಶ್ರದ್ಧಾಭಕ್ತಿಯಿಂದ ಸೇವೆಸಲ್ಲಿಸುವಂತೇ ತಿಳಿಸಿದರು. ಪುರೋಹಿತರಿಂದ ವಿಷಯವನ್ನು ಅರಿತ ನಾರಾಯಣರಾಯರು ಸಪತ್ನೀಕರಾಗಿ ಗಾಣಗಾಪುರಕ್ಕೆ ಬಂದು ಹಲವು ರೀತಿಯಲ್ಲಿ ಸೇವೆಸಲ್ಲಿಸಹತ್ತಿದರು. ಕೆಲವೇದಿನಗಳಲ್ಲಿ ಅವರ ನಿಷ್ಕಪಟ ಮನೋಭಾವದ ಸೇವೆಗೆ ಒಲಿದ ದತ್ತಾತ್ರೇಯನು ದರ್ಶನವಿತ್ತು ಒಂದು ಪೂರ್ಣಫಲವನ್ನು ಅನುಗ್ರಹಿಸಿ ಅದನ್ನು ಬಳಸುವಂತೆಯೂ ಮತ್ತು ಕುಲೋದ್ಧಾರಕನಾದ ಪುತ್ರನೊಬ್ಬ ಜನಿಸುವುದಾಗಿಯೂ ತಿಳಿಸುತ್ತಾನೆ. ಸಂತರ್ಪಣೆಯನ್ನು ಪೂರೈಸಿದ ದಂಪತಿ ಮರಳಿ ಹೈದರಾಬಾದ್ ಗೆ ಬರುತ್ತಾರೆ.


ಕೆಲವೇ ದಿನಗಳಲ್ಲಿ ಮತ್ತೆ ಕಮಲಾಬಾಯಿಯವರಿಗೆ ಬಸುರಿಯಾಗಿ ಬಯಕೆ ಆರಂಭವಾಗುತ್ತದೆ. ನವಮಾಸಗಳು ತುಂಬಿದ ಗರ್ಭಿಣಿಯನ್ನು ತಾಯಿ ಬಯಾಬಾಯಿಯವರ ಇಚ್ಛೆಯಂತೇ ಹಡೆಯುವ ಸಲುವಾಗಿ ಕಮಲಾಬಾಯಿಯವರ ಅಕ್ಕನಾದ ಚಂದೂಬಾಯಿಯವರ ಮನೆಗೆ [ಲಾಡ್ ಚಿಂಚೋಳಿಗೆ] ಕರೆದು ತರುತ್ತಾರೆ. ಗಾಣಗಾಪುರದಿಂದ ೧೦-೧೨ ಮೈಲು ದೂರದಲ್ಲಿರುವ ಆ ಊರಿನಲ್ಲಿ ಅದಾಗಲೇ ದತ್ತಜಯಂತಿಯ ದಿನಗಳ ಸಂಭ್ರಮ ಕಾಲಿಡುತ್ತಿತ್ತು. ದೇಸಾಯರು[ನಾರಾಯಣರಯರ ಷಡ್ಕ]ಆ ಊರಿನ ಪ್ರಮುಖರಲ್ಲಿ ಒಬ್ಬರಾಗಿದ್ದು ಉತ್ಸವದಲ್ಲಿ ಅವರೂ ಪಾಲ್ಗೊಳ್ಳುವವರಿದ್ದರು. ಅಂದು ಶಾಲಿವಾಹನಶಕೆ ೧೮೩೦ ಪ್ಲವಂಗನಾಮ ಸಂವತ್ಸರ ಮಾರ್ಗಶೀರ್ಷ ಶುದ್ಧ ಪೌರ್ಣಮಿ ಗುರುವಾರ ದಿನಾಂಕ ೧೯.೧೦.೧೯೦೭ ಸಾಯಂಕಾಲ ೭: ೨೩ ಗಂಟೆಗೆ ಕಮಲಾಬಾಯಿಯವರು ಪುತ್ರರತ್ನವನ್ನು ಪ್ರಸವಿಸಿದರು. ಅದೇ ಸಮಯಕ್ಕೆ ಸರಿಯಾಗಿ ದತ್ತಪ್ರಭುವಿನ ಪಲ್ಲಕ್ಕಿ ಉತ್ಸವ ಅದೇ ಮನೆಯ ಬಾಗಿಲಿಗೆ ಬಂದಿತ್ತು! ಮತ್ತೊಬ್ಬ ದತ್ತಾವತಾರಿಯ ಜನನವಾಯಿತು ಎಂದು ಬೇರೇ ಹೇಳಬೇಕೆ ?

ಈ ದತ್ತಾವತಾರಿ ಬೇರಾರೂ ಅಲ್ಲ, ತಮಗೆಲ್ಲಾ ಈ ಮೊದಲೇ ಕೆಲವು ಸಲ ಹೇಳಿದಂತೇ ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳು. ಅವರ ಚರಿತ್ರೆಯನ್ನು ಈ ಸಂದರ್ಭದಲ್ಲಿ ಓದುವುದು ಅತ್ಯಂತ ಪುಣ್ಯತಮ ಕೆಲಸ. ಧರ್ಮಭೇದವಿಲ್ಲದೇ ಹಿಂದೂ ಮುಸ್ಲಿಂ ಕ್ರೈಸ್ತರನೇಕರನ್ನು ಹರಸಿದ, ಮಾರ್ಗದರ್ಶಿಸಿದ, ಅವರ ಕಷ್ಟಗಳನ್ನು ಪರಿಹರಿಸಿದ, ಮನುಷ್ಯಮಾತ್ರರಿಂದ ಮಾಡಲಾಗದ ಕೆಲಸಗಳನ್ನು ಅನಾಯಾಸವಾಗಿ ಮಾಡಿತೋರಿಸಿದ ಅಘಟಿತ ಘಟನಾ ವಿಶುದ್ಧ ವಿಶೇಷ ಶ್ರೀಗಳ ಭೌತಿಕ ಜೀವನದ ಕೆಲವು ಘಟನೆಗಳನ್ನು ಈ ಕೆಳಗೆ ಅವರ ಚರಿತ್ರೆಯಿಂದಾಯ್ದು ಪ್ರಸ್ತುತಪಡಿಸುತ್ತಿದ್ದೇನೆ [ ಚಿತ್ರಗಳಮೇಲೆ ಕ್ಲಿಕ್ಕಿಸಿ ಮರು ಕ್ಲಿಕ್ಕಿಸಿ ಗಾತ್ರವನ್ನು ಹಿಗ್ಗಿಸಿ ಓದಿಕೊಳ್ಳಿ ]:


ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜರು ಜನಿಸದ ಬಗೆ



ಶಸ್ತ್ರಕ್ರಿಯೆಯಲ್ಲಿ ಜೀವವುಳಿಸಿದ ಮಂತ್ರಾಕ್ಷತೆ


ಭಗವಾನರ ಬಾಲ್ಯದ ಕಷ್ಟಗಳನ್ನು, ಅವರ ಬಾಲಲೀಲೆಗಳನ್ನು ಅರಿತರೆ, ಸನ್ಯಾಸಿಯಾಗುವ ಮುನ್ನ " ಸಾಧು ಠೊಣಪ" ಎಂತೆಲ್ಲಾ ಜರಿವ ಜನರಿಂದ ಅವರು ಅನುಭವಿಸಿದ ಅವಮಾನಕರ ಸನ್ನಿವೇಶಗಳನ್ನು ತಿಳಿದರೆ ಬಹಳ ಖೇದವಾಗುತ್ತದೆ, ಕಣ್ಣೀರು ಬೇಡವೆಂದರೂ ಹರಿಯುತ್ತದೆ. ಹರಿ ತನ್ನ ನರರ ಜೀವನಕ್ಕೆ ಉಪಕರಿಸಲು ನರನಾರಾಯಣ ರೂಪದಲ್ಲಿ ತೊಡಗಿಸಿಕೊಂಡು ತನ್ನನ್ನೇ ತಾನು ದಂಡಿಸಿಕೊಳ್ಳುವುದು ಕೇವಲ ಜನಸಾಮಾನ್ಯನೂ ಕಷ್ಟಗಳನ್ನು ಮೀರಿ ತನ್ನನ್ನು ಕಾಣಲು ಪ್ರಯತ್ನಿಸಿದರೆ ಸಾಧ್ಯವಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿರುತ್ತದೆ. ಆದಿ ನಾರಾಯಣ ಅಂಶಾಂಶರೂಪದಲ್ಲೂ, ಅಂಶರೂಪದಲ್ಲೂ, ಪೂರ್ಣರೂಪದಲ್ಲೂ ಹಲವು ಅವತಾರವೆತ್ತಿ ಜಗತ್ತಿನ ರಕ್ಷಣೆಗೆ ತೊಡಗುತ್ತಾನೆ. ಶ್ರೀಧರರಲ್ಲಿ ಯಾರೋ ಕೇಳಿದರು " ಸ್ವಾಮೀ ನಿಮಗೆ ಧರ್ಮಭೇದವಿಲ್ಲವೆಂದಮೇಲೆ ಕೇವಲ ಸನಾತನ ಧರ್ಮವನ್ನೇ ಯಾಕೆ ಆಯ್ದುಕೊಳ್ಳುತ್ತೀರಿ ? " ಶ್ರೀಧರರು ಹೇಳಿದರು " ತಮ್ಮಾ, ಜಗತ್ತಿನಲ್ಲಿ ಇರುವ ಎಲ್ಲಾ ಧರ್ಮಗಳನ್ನು ತುಲನೆಮಾಡಿನೋಡು, ಯಾವುದು ಪರಿಪೂರ್ಣ ತತ್ವದಿಂದ ಕೂಡಿ ಮನುಜ ಜೀವನಕ್ಕೆ ತಕ್ಕುದಾಗಿದೆಯೋ ಅದನ್ನೇ ಆಯ್ದುಕೊಳ್ಳುವುದು ವಿಹಿತವಾಗಿ ಕಂಡುದರಿಂದ ನಾನು ಸನಾತನ ಧರ್ಮವನ್ನೇ ಆಯ್ದುಕೊಂಡಿದ್ದೇನೆ " ಕೇವಲ ಒಬ್ಬ ಪ್ರವಾದಿಯೋ ಪ್ರವರ್ತಕನೋ ಸೃಜಿಸಿ ನಡೆಸಿದ ಧರ್ಮವಲ್ಲ ಸನಾತನ ಧರ್ಮ. ಯಾರಿಗೂ ಅನ್ಯಾಯ ಬಯಸದ, ಕೇಡನ್ನು ಬಗೆಯದ, ವಿಶ್ವವೇ ತನ್ನ ಕುಟುಂಬವೆಂಬ ತತ್ವವನ್ನು ಸಾರುವ ಈ ಧರ್ಮದಲ್ಲಿ ಅಳವಡಿಸಲ್ಪಟ್ಟಿರುವ ಸೂತ್ರಗಳನ್ನು ಅವಲೋಕಿಸುವಾಗ ಯಾವುದೇ ಒತ್ತಾಯದಿಂದ ಯಾರೂ ಪ್ರಚುರಪಡಿಸದ ಇದು ಹೇಗೆ ಉಳಿದಿದೆ ಮತ್ತು ನಡೆದಿದೆ ಎಂಬುದೇ ದೈವೀ ಸಂಕಲ್ಪ! ಭಗವಾನ್ ಶ್ರೀಧರರನ್ನು ನೋಡಿದವರು ಸಾಕ್ಷಾತ್ ನಾರಾಯಣನನ್ನು ನೋಡಿದವರೇ ಎಂದರೆ ತಪ್ಪಲ್ಲ. ಶ್ರೀಧರರು ಮತ್ತೆ ಮತ್ತೆ ಅವತರಿಸಲಿ, ದತ್ತನಾಗೋ ದಿಗಂಬರನಾಗೋ ನಮ್ಮ ಜೀವನಕ್ಕೆ ಬೆಳಕನ್ನು ನೀಡಲಿ ಎಂದು ಅವರ ಜನ್ಮದಿನದ ಸಮಯದಲ್ಲಿ ಅವರ ಸನ್ನಿಧಿಯಲ್ಲಿ ಪ್ರಾರ್ಥಿಸುತ್ತೇನೆ,

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ |
ಸ್ವಾನಂದಾಮೃತತೃಪ್ತಾಯ ಶ್ರೀಧರಾಯ ನಮೋ ನಮಃ ||

14 comments:

  1. ಭಗವಾನ್ ಸ್ವರೂಪರಾದ ಶ್ರೀ ಶ್ರೀಧರರಲ್ಲಿ ಪಾದಗಳಲ್ಲಿ ಆಶೀರ್ವಾದ ಬೇಡುತ್ತ, ಅವರನ್ನು ಪರಿಚಯಿಸಿದ ತಮಗೆ ಧನ್ಯವಾದಗಳು

    ReplyDelete
  2. ವಿ,ಆರ್.ಬಿ.ಸರ್, ದತ್ತ+ಅತ್ರೇಯ=ದತ್ತಾತ್ರೇಯ, ವಾವ್..ನನಗೆ ಖಚಿತ ತಿಳಿದಿರಲಿಲ್ಲ..ದತ್ತಾತ್ರೇಯ ನಾಮ ಯಾವುದೋ ರೀತಿಯಲ್ಲಿ ಅತ್ರಿ ಮಹಾಮುನಿಗೆ ಸಂಬಂಧಿಸಿದ್ದಾ ? ಎಂಬ ಸಂಶಯವಿತ್ತು..ನಿಮ್ಮ ಲೇಖನದಿಂದ ಇದು ತಿಳಿದಂತಾಯಿತು..ಹಾಗೆಯೇ ಮಹಾಸತಿ ಅನುಸೂಯಾ ತೆಲುಗು ಸಿನಿಮಾ ನೋಡಿದ್ದೆ ಆದ್ದರಿಂದ ತ್ರಿಮೂರ್ತಿಗಳು ಮಕ್ಕಳಾಗುವ ವಿಷಯ ತಿಳಿದಿತ್ತು. ಮಾಹಿತಿ ಭರಿತ ಲೇಖನ..ಅಭಿನಂದನೆಗಳು ಮತ್ತು ಧನ್ಯವಾದಗಳು.

    ReplyDelete
  3. Hello Ganagapur is in Afzalpur TQ. Gulbarga Di

    ReplyDelete
  4. ಮಂಜು ಅವರೇ, ತಮ್ಮ ಹೇಳಿಕೆಯಂತೇ ಅದನ್ನು ಬದಲಾಯಿಸಿದ್ದೇನೆ, ಕೆಲವೊಮ್ಮೆ ಪ್ರಮಾದವಶಾತ್ ಕೆಲವು ತಪ್ಪುಗಳು ಗೊತ್ತಿಲ್ಲದೇ ಅಗುತ್ತವೆ, ಕ್ಷಮಿಸಿ,

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು.

    ReplyDelete
  5. ಬ್ಲಾಗಿಗೆ ಲಿಂಕಿಸಿಕೊಂಡ ದಿಗ್ವಾಸ್ ಹೆಗಡೆ ಮತ್ತು ಶ್ರೀನಾಥರಿಗೆ ಸ್ವಾಗತ ಮತ್ತು ನಮನ

    ReplyDelete
  6. ದತ್ತ ಜಯಂತಿಯ ಪವಿತ್ರದಿನಕ್ಕೆ ನಿಮ್ಮ ಲೇಖನ ಸಕಾಲಿಕವಾಗಿ ಬಂದಿದೆ. ನಿಮಗೆ ಧನ್ಯವಾದಗಳು. ದತ್ತಾತ್ರೇಯನು ಭಕ್ತರಿಗೆಲ್ಲರಿಗೂ ಶುಭವನ್ನು ಮಾಡಲಿ.

    ReplyDelete
  7. TUMBAA OLLEYA PARICHAYA MATTU JNAANAAMRATA SIR
    THANKS FOR THE INFORMATION

    ReplyDelete
  8. ಉತ್ತಮ ಪರಿಚಯ ಲೇಖನ ಭಟ್ ಸರ್. ಶ್ರೀಧರರನ್ನು ನೆನೆಪಿಸಿಕೊಳ್ಳುವುದೇ ಒ೦ದು ಮಹತ್ಕಾರ್ಯ. ಈ ಸತ್ಸ೦ಗ ಕ್ಕೆ ತಮಗೆ ಧನ್ಯವಾದಗಳು.

    ಅನ೦ತ್

    ReplyDelete
  9. ನಮಸ್ಕಾರ ಭಟ್ಟರೇ,

    " ......... ಮೂರುಜನ ಅಭ್ಯಾಗತರು ಆಗಮಿಸುತ್ತಾರೆ. ಬಂದ ಜನರನ್ನು ಆದರಿಸುವ ಸಂಸ್ಕೃತಿ ಮುನಿಜನರದ್ದು. ........ ಬಂದ ಗಂಡಸರು ಬಹಳ ಕಿಲಾಡಿ ಬುದ್ಧಿಯವರೇ ಆಗಿದ್ದು ತಮ್ಮ ತೃಷೆಗೆ ಅನಸೂಯೆಯ ಎದೆಯಹಾಲೊಂದೇ ಬೇಕಾದದ್ದೆಂದೂ ಅದನ್ನು ಬಿಟ್ಟು ಬೇರೇನನ್ನೂ ತಾವು ಬಯಸೆವೆಂದೂ ವಿವಸ್ತ್ರಳಾಗಿ ತಮಗೆ ಎದೆಯೂಡಿಸಬೇಕೆಂದೂ ಬೇಡಿಕೆಯಿಡುತ್ತಾರೆ". ಈ ಅತಿಥಿಗಳದ್ದು ಎಂತಹ ನಾಚಿಕೆಗೇಡಿನ ನಡವಳಿಕೆಯಲ್ಲವೇ?

    ಇದೇ ರೀತಿ ಗಾಂಧಿಯು ಮಾಡಿದ್ದರಂತೆ ತಮ್ಮ ಇಳಿವಯಸ್ಸಿನಲ್ಲಿ ತಮ್ಮಲ್ಲಿನ್ನು ಕಾಮ ಉಳಿದಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಯುವತಿಯೋರ್ವಳ ಜೊತೆ ಮಲಗಿದ್ದರಂತೆ, ಗಾಂಧಿ ಏನೋ ತನ್ನನ್ನು ತಾನು ಪರೀಕ್ಷಿಸಿಕೊಂಡ, ಆದರೆ ಆತನ ಜೊತೆ ಮಲಗಿದ್ದ ಆ ಯುವತಿಯ ಮನಸ್ಥಿತಿ ಹೇಗಿದ್ದಿರಬಹುದು?

    ಇಂತಹವರನ್ನು ನಾವು ದೇವರು / ಮಹಾತ್ಮ ಎಂದು ಆರಾಧಿಸಬೇಕೆ?

    ReplyDelete
  10. ದತ್ತಾತ್ರೇಯನ ಬಗ್ಗೆ ಬಹಳ ಉಪಯುಕ್ತ ಮಾಹಿತಿಯ ಜೊತೆಗೆ ಶ್ರೀಧರ ಸ್ವಾಮಿಗಳ ಬಗ್ಗೆ ಕೂಡ ನನಗೆ ತಿಳಿದಿರದ ಹಲವು ವಿಚಾರಗಳನ್ನು ತಿಳಿಸಿದ್ದೀರಿ. Good One.

    ReplyDelete
  11. ಸಜ್ಜನರೇ, ಮತ್ತೊಮ್ಮೆ ತಮಗೆಲ್ಲಾ ಒಂದನೆಗಳು, ಒಂದು ಮಾತು ತಾವು ಇಲ್ಲಿ ಗಮನಿಸಿ, ಭಗವಂತನ ರೂಪಗಳನ್ನು ಅವನ ಮಾಯೆಯನ್ನು ಪರೀಕ್ಷಿಸಲು ನಾವು ಅರ್ಹರಲ್ಲ. ಒಂದರ್ಥದಲ್ಲಿ ಅನಸೂಯಾ ಕೂಡ ಅವನದೇ ಇನ್ನೊಂದು ಅಂಶವನ್ನು ಹೊತ್ತಿದ್ದರಿಂದ ಇಲ್ಲಿ ನಾಚಿಕೆಯ ಪ್ರಶ್ನೆ ಬರಲಿಲ್ಲ, ಇದಲ್ಲದೇ ಪತಿವೃತೆಯೊಬ್ಬಳ ವೃತಕ್ಕೆ ಫಲವನ್ನು ತೋರಿಸುವ ಮಹತ್ಕಾರ್ಯವನ್ನು ಪರಬ್ರಹ್ಮ ತ್ರಿಮೂರ್ತಿಗಳ ಮೂಲಕ ಮಾಡಿಸಿದ್ದಾನೆ. ಗಾಂಧೀಜಿ ಮಲಗಿರಬಹುದು ಅದರಲ್ಲಿ ತಪ್ಪು ಅಂತ ನನಗನಿಸಲಿಲ್ಲ, ಜಿನ ಸ್ವಾಮಿಗಳು ದಿಗಂಬರರಾಗಿರುತ್ತಾರೆ, ಆದರೆ ಅವರ ನಿಗ್ರಹ ಸಾಮರ್ಥ್ಯವನ್ನು ಬಹಿರಂಗವಾಗಿ ನಾವು ನೋಡಬಹುದು ಅಲ್ಲವೇ? ಇಂದ್ರಿಯ ನಿಗ್ರಹ ಅನುಸರಿಸಿದ ಮಾನವರೆಲ್ಲಾ ದೈವತ್ವದೆಡೆಗೆ ಹತ್ತಿರವಾಗುತ್ತಾರೆ ಎಂದು ಕೃಷ್ಣನೇ ಹೇಳಿದ್ದಾನಲ್ಲ? ತಮ್ಮ ಅನಿಸಿಕೆಗಳಿಗೆ ಸ್ವಾಗತ, ಬೇಕಾದರೆ ಇನ್ನೂ ಸಂಶಯಗಳಿದ್ದರೆ ಅವನ್ನು ಬಗೆಹರಿಸಲು ಪ್ರಯತ್ನಿಸುವೆ.

    ReplyDelete
  12. ಭಟ್ ಸಾರ್..
    ನನಗೆ ಅದೇಕೋ ಯಾವ ಬ್ಲಾಗ್ ಗಳೂ (ನನ್ನದೂ ಸೇರಿದಂತೆ) ತೆರೆಯಲಾಗುತ್ತಿಲ್ಲ. ಇವತ್ತೇ.. ಈ ಸಮಯದಲ್ಲಿ ಸಾಧ್ಯವಾಗಿದ್ದರಿಂದ ಇಷ್ಟು ತಡವಾಗಿ ನಿಮ್ಮ ಬರಹ ನೋಡಲು ಬಂದೆ. ತುಂಬಾ ಚೆನ್ನಾಗಿದೆ ಸಾರ್. ಅನೇಕ ವಿಷಯಗಳು ತಿಳಿಯಿತು. ನಾನು ಅವರ ಚರಿತ್ರೆಯನ್ನು ಓದಿಲ್ಲ, ಈಗ ಓದಬೇಕೆಂದೆನ್ನಿಸಿದೆ. ಧನ್ಯವಾದಗಳು ಸಾರ್...

    ReplyDelete
  13. ನಮಸ್ಕಾರ ಭಟ್ಟರೆ,

    ನಿಮ್ಮ ಅನಿಸಿಕೆಗೆ ವಂದನೆಗಳು, ಆದರೆ ನನಗೇಕೊ ಅದು ಸರಿ ಎನ್ನಿಸುವುದಿಲ್ಲ,

    ಜೈನ ಮುನಿಗಳು ದಿಗಂಬರರಾಗಿರುತ್ತಾರೆ, ನಿಜ ಆದರೆ ಅವರು ಪರಸ್ತ್ರಿಯೊಂದಿಗೆ ಈ ರೀತಿ ಕೆಟ್ಟದಾಗಿ ನಡೆದುಕೊಳ್ಳವುದಿಲ್ಲ.

    ಪರಸ್ತ್ರೀಯರೊಂದಿಗೆ ಕೆಟ್ಟ ಕೆಲಸ ಯಾರೇ ಮಾಡಿರಲಿ ಅದು ತಪ್ಪಲ್ಲವೇ.

    ನನ್ನ ಈ ಅಭಿಪ್ರಾಯದಿಂದ ನಿಮಗೆ ಬೇಸರವಾದರೆ ಕ್ಷಮೆಯಿರಲಿ.

    ವಂದನೆಗಳು.

    ReplyDelete
  14. ನಮಸ್ಕಾರ ಶ್ರೀನಾಥರೇ, ಗಾಂಧಿಗೆ ನಾವೆಲ್ಲಾ ಕರ್ಮಯೋಗಿ ಎನ್ನುತ್ತೇವೆ. ಅವರಲ್ಲಿ ಮಾನಸಿಕ ನಿರ್ಧಾರವಿತ್ತು-ತಾನು ಪರಸ್ತ್ರೀಯೊಡನೆ ರಾತ್ರಿಕಳೆದರೂ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳುವುದಿಲ್ಲಾ ಎಂಬ ಅದಮ್ಯ ಅನಿಸಿಕೆ ಅವರಲ್ಲಿತ್ತು. ಆ ಮನೋದಾರ್ಷ್ಟ್ಯತೆಯೇ ಅವರನ್ನು ಆ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿತು. ನಮ್ಮ ಮನಸ್ಸನ್ನು ನಾವು ನಿಲ್ಲಿಸಬಲ್ಲೆವಾದರೆ ನಾವು ಯಾರೊಂದಿಗೂ ಯಾವುದೇ ಸಮಯದಲ್ಲೂ ಎಲ್ಲೂ ಬೇಕಾದರೂ ಇರಬಹುದು, ಸ್ವತಃ ಶ್ರೀಧರರು ಮುಂಬೈನ ಕಾಮಟಿಪುರಕ್ಕೆ ಭೇಟಿ ನೀಡಿ ಅವರ ಪಾಪಜನ್ಮಕ್ಕೆ ಮರುಗಿದ್ದಾರೆ, ಅನೇಕರನ್ನು ಹರಸಿದ್ದಾರೆ ಎಂಬುದಾಗಿ ಚರಿತ್ರೆ ತಿಳಿಸುತ್ತದೆ, ಹಾಗಾದರೆ ಸ್ವಾಮಿಗಳಿಗೆ ಮೈಲಿಗೆ ತಾಗಲಿಲ್ಲವೇ? ಇಲ್ಲಾ ಸ್ವಾಮೀ, ಅವರೆಲ್ಲ ಮಹಾತ್ಮರು, ನಮ್ಮ ಇತಿ-ಮಿತಿಗಳನ್ನು ಮೀರಿ ಪರಿಧಿಯ ಹೊರಗಿನ ಲೋಕವನ್ನು ಕಂಡವರು. ಹೀಗಾಗಿ ನಮ್ಮ ನಿಲುವನ್ನು ನಾವೇ ವಿಶ್ಲೇಷಿಸಿಕೊಳ್ಳಬೇಕು, ತಮಗೆ ಈಗ ಅರ್ಥವಗಿರಬಹುದು, ಧನ್ಯವಾದ

    ಶ್ಯಾಮಲ ಮೇಡಂ ತಮಗೂ ಧನ್ಯವಾದ.

    ReplyDelete