ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 9, 2010

ಎಲ್ಲಿಯ ಸಂಬಂಧ ?


ಚಿತ್ರ ಋಣ : ಅಂತರ್ಜಾಲ

ಎಲ್ಲಿಯ ಸಂಬಂಧ ?

ಮಾನವ ಜೀವನ ಭಾವನೆಗಳ ಸರ
ಕೊಂಡಿ ಬೆಸೆದಿಹ ಸಂಕೋಲೆ
ನಾವಿದನರಿತರು ಹೊರಬರಲಾರೆವು
ಕಂಡೂ ತೂಗುವ ಉಯ್ಯಾಲೆ

ಹುಟ್ಟುವುದೆಲ್ಲೋ ಸಾವು ಅದೆಲ್ಲೋ
ಗೊತ್ತಿರದಾ ಹಲಪುಟಗಳಿವು
ಒಟ್ಟಿಗೆ ಇರಲೂ ಒಮ್ಮನಸಿಲ್ಲದ
ಉತ್ತರ ರಹಿತ ಪ್ರಶ್ನೆಗಳು

ಬಂದಿಹೆವಿಲ್ಲಿ ಬರಿಗೈಯ್ಯಲ್ಲಿ
ಬಂಧನ ಮರೆತು ಮೆರೆಯುವೆವು
ಸಂದುವೆವಲ್ಲಿ ಬರಿಮೈಯ್ಯಲ್ಲಿ
ಅಂದಿಗೆ ಬಿಡುಗಡೆ ಕಾಣುವೆವು !

ನಾನೊಬ್ಬಣ್ಣ ನೀನೋ ತಮ್ಮ
ಅಪ್ಪಾ ಅಮ್ಮಾ ಕಣ್ಣೊಡೆಯೆ
ಈ ದಿಬ್ಬಣವು ಇಲ್ಲಿಗೆ ಮಾತ್ರ
ಯಾರಿಹರು ನೀ ಹೊರನಡೆಯೆ ?

ಯಾರ ಮಗನು ನೀ ಯಾರ ಮಗಳು ನೀ ?
ಯಾರಿಗೆ ನೀನು ಯಜಮಾನ ?
ಬಾರಿ ಬಾರಿ ನೀ ಕೇಳಿಕೊ ಇದನೇ
ಸಾರುವೆ ನಿನಗೆ ಬಹುಮಾನ !

Sunday, August 8, 2010

|| ಅಥ ಶ್ರೀ ಹುಳಿ ಮಜ್ಜಿಗೆ ಪುರಾಣಂ ||




|| ಅಥ ಶ್ರೀ ಹುಳಿ ಮಜ್ಜಿಗೆ ಪುರಾಣಂ ||

ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ|
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದಮಾಧವಂ ||

ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಮ್ |
ಪರಾಶರಾತ್ಮಜಂ ವಂದೇ ಶುಕತಾತಂ ತಪೋ ನಿಧಿಮ್ ||

ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ |
ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ ||


ಚಾತುರ್ಮಾಸ್ಯ ಕಾಲದಲ್ಲಿ ವ್ಯಾಸಾದಿ ಮಹಾಮುನಿಗಳನ್ನು ಮನಸಾ ವಂದಿಸಿ ಗೌರೀತನಯ ಗಣೇಶನಿಗೆ ಅಡ್ಡಬಿದ್ದು ಸೂತಮಹಾಮುನಿಗಳು ಶೌನಕಾದಿ ಮುನಿಗಳಿಗೆ ಹೇಳಿರದ, ಅಷ್ಟಾದಶ ಪುರಾಣಗಳ ಪೈಕಿ ೨೦ ನೇ ಪುರಾಣವಾದ ’ಹುಳಿಮಜ್ಜಿಗೆ ಪುರಾಣ’ವನ್ನು ತಿಪ್ಪಾ ಭಟ್ಟರು ಸುಬ್ಬಮ್ಮನೇ ಮೊದಲಾದ ಸೇರಿದ ಹೆಂಗಸರು-ಮಕ್ಕಳಿಗೆಲ್ಲ ಹೇಳಿದ್ದನ್ನು ಅಲ್ಲೇ ಪಕ್ಕದಲ್ಲಿ ಗಡದ್ದಾಗಿ ಊಟಹೊಡೆದು ಮಲಗಲು ಜಾಗಸಿಗದೇ ಕುಳಿತೇ ತೂಕಡಿಸುತ್ತಿದ್ದ ನಾನು ಕೇಳಿದ ರೀತ್ಯಾ ಶ್ರುತಪಡಿಸುವಂತವನಾಗುತ್ತೇನೆ!

ಬೇಸಿಗೆ ಕಾಲದಲ್ಲಿ ಮಜ್ಜಿಗೆಯೊಂದು ಸಿಕ್ಕಿದರೆ ಅದು ಮಹಾಪುಣ್ಯವೆಂಬಂತೇ ಅನುಭವಿಸುವವರು ಬಹುತೇಕರಿದ್ದಾರೆ. ಸ್ವಾಭಾವಿಕವಾಗಿ ಸ್ವಲ್ಪ ಸಿಹಿಯುಳ್ಳ ಮಜ್ಜಿಗೆ ಕುಡಿದವರ ದಾಹವನ್ನು ತಣಿಸುತ್ತದೆ ಮಾತ್ರವಲ್ಲ ತುಸು ಒಣಗಿದ ಹೂ ಕುಂಡದ ಗಿಡಕ್ಕೆ ನೀರೆರೆದ ಅರ್ಧಘಂಟೆಯಲ್ಲಿ ಹೇಗೆ ನಳನಳಿಸುತ್ತದೋ ಹಾಗೇ ಜನರ ಸರ್ವನರಗಳೂ ನವಚೈತನ್ಯ ಪಡೆದು ಮನುಷ್ಯ ಕೆಲಸ ಮಾಡಲು ಹೊಸ ಉತ್ಸಾಹ ಪಡೆಯುತ್ತಾನೆ ಎಂಬುದು ನಿಸರ್ಗ ನಿಯಮ. ಆದರೆ ಇದೇ ಮಜ್ಜಿಗೆ ಆಯುರ್ವೇದದಲ್ಲಿ ಹಲವು ಔಷಧಗಳ ಸಂಗಾತಿಯಾಗಿ ಸೇವಿಸಲ್ಪಡುವುದೂ ಉಂಟು. ಮಜ್ಜಿಗೆ ತಕ್ಕಮಟ್ಟಿಗೆ ಹುಳಿ ಇದ್ದರೆ ಅದನ್ನು ಲಿಂಬೂ ಪಾನಕದ ಪರ್ಯಾಯವಾಗಿ ಉಪಯೋಗಿಸುವರು ಸಂಖ್ಯೆಯಲ್ಲಿ ಬಹಳ ಸಿಗುತ್ತಾರೆ. ಆದರೆ ಈಗ ನಾವು ಕೇಳುತ್ತಿರುವ ಹುಳಿ ಮಜ್ಜಿಗೆ ಕಥೆಯೇ ಬೇರೆ!

ಮಹಾಭಾರತ ಯುದ್ಧ ಮುಗಿಯುತ್ತಿರುವ ದಿನಗಳು. ಇನ್ನೇನು ಮುಗಿದೇಹೋಯಿತು ಎನ್ನುವಾಗ ಭೀಷ್ಮಾಚಾರ್ಯರು ಮರಣಿಸಿದ ಮೇಲೆ ಅವರು ದಾಹ ತೀರಿಸಿಕೊಳ್ಳಲು ಅರ್ಜುನ ಬಾಣಹೊಡೆದು ಗಂಗೆಯನ್ನು ಬರಿಸಿ ಆ ಚಿಲುಮೆ ನೇರವಾಗಿ ಅವರ ಬಾಯಿಗೆ ಬೀಳುವಂತೇ ಮಾಡಿದ್ದನಲ್ಲ. ನಾವಾದರೆ ನಮಗೆ ಬಾಟ್ಲಲ್ಲಿ ತುಂಬಿದ ಮಿನರಲ್ ವಾಟರ್ ಕೊಡು-ಈ ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಹಲವರು ತುಳಿದ ಜಾಗದಲ್ಲಿ ಹುಟ್ಟಿದ ಗಲೀಜು ನೀರನ್ನು ನಾವು ಕುಡೆಯೆವು ಅಂದುಬಿಡೆತ್ತಿದ್ದೆವೇನೋ, ಆದರೆ ಅದು ಮಹಾಭಾರತ ಕಾಲವಾದ್ದರಿಂದ ಅಲ್ಲಿ ಹಾಗೆ ಹುಟ್ಟಿದ ನೀರು ಮಿನರಲ್ ಯುಕ್ತ ವಾಟರೇ ಆಗಿತ್ತು! ಇರಲಿ, ನಮ್ಮ ಭೀಷ್ಮಾಚಾರ್ಯರು ಮರಣಿಸಿದ ಬಳಿಕ ಗಂಗೆಗೆ ಇಲ್ಲಿ ತಾನಿದ್ದು ಪ್ರಯೋಜನವಿಲ್ಲ ಎಂದೆನಿಸಿತು. ಅದಕ್ಕಾಗಿ ಯುದ್ಧದಲ್ಲಿ ತನ್ನಿಚ್ಛೆಯಂತೇ ಮೆರೆದ ಶ್ರೀಕೃಷ್ಣ ಪ್ರಸನ್ನವದನನಾಗಿ ಕುಳಿತಿದ್ದ ಹೊತ್ತು ನೋಡಿ ಮನುಷ್ಯರೂಪದಲ್ಲಿ ಆತನನ್ನು ಕಂಡು ತನ್ನಳಲನ್ನು ತೋಡಿಕೊಂಡಳು. ಶಾಪಾನುಗ್ರಹ ಸಮರ್ಥನಾದ ಶ್ರೀಕೃಷ್ಣ ಆ ಗಂಗೆಗೆ ನೀನು ಅಂಶಾಂಶ ರೂಪದಲ್ಲಿ ಭಾರತೀಯ ತಳಿಯ ಹಸುವಿನ ಹಾಲಿನಲ್ಲಿ ಅಡಗಿದ್ದು ಲೋಕದ ಜನರನ್ನೆಲ್ಲಾ ಪೊರೆ, ಆ ಹಾಲು ಪ್ರೆಶ್ ಮಜ್ಜಿಗೆಯಾದಾಗ ಅದು ಕುಡಿಯಲು ಅಮೃತತುಲ್ಯವಾಗಿರಲಿ ತದನಂತರ ಯಾವಾಗ ಆ ಮಜ್ಜಿಗೆ ಅತೀ ಹುಳಿಬರುತ್ತದೋ ಆಗ ನೀನು ಅದರಲ್ಲಿಂದ ಮಾಯವಾಗಿ ಅದು ಕುಡಿಯಲು ಅನುಪಯುಕ್ತವಾಗಿ ಪರಿಣಮಿಸಲಿ ಎಂದು ಹರಸಿದ. ಇನ್ನೇನೂ ದಾರಿಕಾಣದೇ ಗಂಗೆ ತಥಾಸ್ತು ಎಂದುಕೊಂಡು ಹೊರಟುಹೋದಳು.

ಅಲ್ಲಿಂದಾಚೆಗೆ ಹಾಲು ಮಜ್ಜಿಗೆಯ ರುಚಿಯಲ್ಲಿ ಜನ ಬಹಳೇ ಬದಲಾವಣೆ ಕಂಡರು. ಈ ಪದಾರ್ಥಗಳ ಅದ್ಬುತ ರುಚಿಯನ್ನು ಜನ ಹೊಗಳೇ ಹೊಗಳಿದರು. ಅಂದಿನ ಕಾಲಕ್ಕೆ ಲಸ್ಸಿ ಪಸ್ಸಿ ಇವೆಲ್ಲಾ ಗೊತ್ತಿರದಿದ್ದರಿಂದಲೂ ತಂಗಳ ಪೆಟ್ಟಿಗೆ, ಮಿಕ್ಸಿ ಗ್ರೈಂಡರುಗಳನ್ನು ಆ ಅವತಾರ ಕಾಲದಲ್ಲಿ ಶ್ರೀಕೃಷ್ಣ ಹೊರತರದಿದ್ದರಿಂದಲೂ ಮೊಸರನ್ನು ಸುತರಾಂ ಕಡೆಗೋಲಲ್ಲೇ ಕಡೆಯುತ್ತಿದ್ದರು. ಇದಕ್ಕೆ ಇಂದಿಗೂ ಸಾಕ್ಷಿ ಉಡುಪಿಯಲ್ಲಿ ಕಡೆಗೋಲು ಹಿಡಿದು ಕೃಷ್ಣ ನಿಂತಿರುವುದು. ಆಗೆಲ್ಲಾ ಮೊಸರನ್ನು ಬಹಳ ವ್ಯವಸ್ಥಿತವಾಗಿ ’ಸಿಕ್ಕ’ ಎಂಬ ಬಳ್ಳಿಯಿಂದ ಮಾಡಿದ ನೇಯ್ಗೆಯ ತೂಗುದಾರದಲ್ಲಿ ಮಣ್ಣಿನ ಮಡಕೆಗಳಲ್ಲಿ ಮುಚ್ಚಿಡುತ್ತಿದ್ದರು. ಕರೆದ ನೊರೆಹಾಲನ್ನು ಕೆಲಹೊತ್ತು ಹಾಗೇ ಬಿಟ್ಟು, ಸೋಸಿ ನಂತರ ಕಾಯಿಸಿ, ಉಗುರು ಬೆಚ್ಚಗಿನವರೆಗೆ ಅದು ತಣಿದಮೇಲೆ ಅದಕ್ಕೆ ’ನೆರವು’[ಹೆಪ್ಪು]ಹಾಕುತ್ತಿದ್ದರು. ಹಾಗೆ ರಾತ್ರಿ ಹೊತ್ತಲ್ಲಿ ಹೆಪ್ಪಿಗಿಟ್ಟ ಹಾಲು ಮೊಸರಾಗಿ ಬೆಳಗಿನ ಜಾವ ೫ ಗಂಟೆಗೆ ಶೌಚ ಸ್ನಾನಾದಿಗಳನ್ನು ತೀರಿಸಿದ ಹೆಂಗಸರು ಮಡಿಯಲ್ಲಿ ಮೊಸರ ಮಡಿಕೆಗಳನ್ನು[ಗಡಿಗೆಗಳನ್ನು] ಸಿಕ್ಕದಿಂದ ಇಳಿಸಿ, ಅದನ್ನು ಈರಿಕೆಯೆಂಬ ಹುಲ್ಲಿನಿಂದ ಮಾಡಿದ ದೊಡ್ಡ ಉದ್ದಿನವಡೆಯಾಕಾರದ ಆಕೃತಿಯ ಮೇಲೆ ಕೂರಿಸಿ, ಅದಕ್ಕೆ ಸ್ವಲ್ಪ ಶುದ್ಧ ನೀರು [ಗಂಗಾಜಲ!] ಹಾಕಿ ಆಮೇಲೆ ನಿಧಾನಕ್ಕೆ ಕಡೆಗೋಲು ಇಳಿಸಿ, ಕಡೆಗೋಲ ಕಂಬದ ಸಹಾಯದಿಂದ ಮೊಸರನ್ನು ಕಡೆಯುತ್ತಿದ್ದರು. ೧೫-೨೦ ನಿಮಿಷ ಕಡೆದಾಗ ಶುದ್ಧ ಮಜ್ಜಿಗೆಯ ಮೇಲ್ಭಾಗದಲ್ಲಿ ಶುದ್ಧ ಬೆಣ್ಣೆ ತೇಲುತ್ತಿತ್ತು. ಆ ತೇಲುವ ಬೆಣ್ಣೆಯ ತುಂಡುಗಳನ್ನೆಲ್ಲ ಎತ್ತಿ ತೆಗೆದು ಬೇರೆ ಪಾತ್ರೆಗೆ ಹಾಕಿ ಮಜ್ಜಿಗೆಯನ್ನು ಬೇರೆ ಪಾತ್ರೆ ಒಂದಷ್ಟು ಬಗ್ಗಿಸುತ್ತಿದ್ದರು. ಹಾಗೆ ಬಗ್ಗಿಸಿದ ಮಜ್ಜಿಗೆ ಬಹಳಕೆಲಸಗಳಿಗೆ ಉಪಯೋಗಿಸಲ್ಪಡುತ್ತಿತ್ತು.ಹೀಗೆ ತಗೆದ ಮಜ್ಜಿಗೆ ಬೇಸಿಗೆಯಲ್ಲಿ ಮನೆಗೆ ಬಂದ ಬಹಳ ಅತಿಥಿಗಳಿಗೆ,ಅಭ್ಯಾಗತರಿಗೆ ಬಾಯಾರಿಕೆಗೆ ಕೊಡಲ್ಪಡುತ್ತಿತ್ತು. ಯಾವುದೇ ಅಡ್ಡ,ಕೆಟ್ಟ ವಾಸನೆಯಿರದ ಮಜ್ಜಿಗೆ ಕುಡಿಯಲು ಉತ್ಕೃಷ್ಟ ಪಾನೀಯವೆಂಬುದು ಈಗಲೂ ಎಲ್ಲರಿಗೂ ಗೊತ್ತು.

ಮಜ್ಜಿಗೆ ಬಗ್ಗೆ ಹೇಳುವಾಗ ಬೆಣ್ಣೆ-ತುಪ್ಪದ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ ಪುರಾಣ! ಪುರಾಣಾಂತರ್ಗತ ಶ್ರೀ ಬೆಣ್ಣೆ-ತುಪ್ಪ ದೇವತಾಭ್ಯೋ ನಮಃ || ಆವಾಹಯಿಷ್ಯೇ ! ಬೆಣ್ಣೆ-ತುಪ್ಪಗಳು ಮಜ್ಜಿಗೆಯ ಮರಿಗಳು. ಒಮ್ಮೆ ಹೀಗಾಯಿತು ಒಂದು ಮದುವೆಯ ಆಮಂತ್ರಣ ಕೊಡಲು ಪಕ್ಕದ ಹಳ್ಳಿಗೆ ನಾನು ಹೋಗಿದ್ದೆ. ನಮ್ಮಲ್ಲಿ ಮದುವೆ-ಮುಂಜಿಗಳಿಗೆ ಕರೆಯಲು ಬಂದವರಿಗೆ ಕೊನೇಪಕ್ಷ ಸಕ್ಕರೆ-ತುಪ್ಪ ಕೊಡುವುದು ವಾಡಿಕೆ. ಅಂದು ನನಗೂ ಬಿಡದೇ ಹಠಮಾಡಿ ಆ ಮನೆಯ ಯಜಮಾನ ಸಕ್ಕರೆ-ತುಪ್ಪ ಮನೆಯೊಡತಿಗೆ ಹೇಳಿ ತರಿಸಿ ಕೊಟ್ಟ. ಬಾಯಲ್ಲಿ ಹಾಕುತ್ತಿರುವಂತೇ ನನಗೆ ಉಸಿರು ತೆಗೆದು ಕೊಳ್ಳುವುದಿರಲಿ, ಉಮ್ಮಳಿಸಿ ವಾಂತಿ ಬರುವಂತಾಯಿತು, ನುಂಗಿದರೆ ವಾಂತಿ ಗ್ಯಾರಂಟಿ-ಉಗುಳಿದರೆ ಯಜಮಾನರಿಗೆ ಬೇಜಾರು, ಅಪ್ಪಾ ನನ್ನ ಅವಸ್ಥೆ ದೇವರಿಗಷ್ಟೇ ಗೊತ್ತು. ಗಾದೆಗೆ ’ಬಿಸಿ ತುಪ್ಪ’ ಅಂತಾರೆ, ಆದರೆ ವಾಸ್ತವದಲ್ಲಿ ವಾಸನೆಯ ತುಪ್ಪವೂ ಹಾಗೇನೆ. ಕೆಲವರಿಗೆ ಬೆಣ್ಣೆ-ತುಪ್ಪವನ್ನು ಹೇಗಿಡಬೇಕು, ಯಾವಾಗ ಬಳಸಬೇಕು ಎಂಬುದು ತಿಳಿದಿರುವುದಿಲ್ಲ. ಬೆಣ್ಣೆಯನ್ನು ದಿನದಿನವೂ ಕರಗಿಸಿ ತುಪ್ಪಮಾಡುವ ವಹಿವಾಟು ತುಂಬಾ ಕಮ್ಮಿ. ಎತ್ತಿಟ್ಟ ಬೆಣ್ಣೆಯನ್ನು ನೀರಿನಲ್ಲಿಟ್ಟುಕೊಳ್ಳುವುದು ಅಭ್ಯಾಸ. ಆ ನೀರನ್ನು ದಿನವೂ ಬದಲಾಯಿಸುತ್ತ ೪-೫ ದಿನಗಳಿಗೊಮ್ಮೆ ಬೆಣ್ಣೆ ಶೇಖರಣೆ ಜಾಸ್ತಿಯಾದಾಗ ತುಪ್ಪ ಮಾಡುವುದು ಆಚರಣೆ. ತುಪ್ಪ ಕಾಯಿಸುವದಕ್ಕೂ ಒಂದು ಹದವಿದೆ. ಬೆಣ್ಣೆ ಕರಗಿ ಕಾದು ಒಂದು ಹಂತಕ್ಕೆ ಬರುವವರೆಗೆ ಕಾಯಿಸುತ್ತಲೇ ಇರಬೇಕು, ಕಾಯಿಸಿದ್ದು ಜಾಸ್ತಿ-ಕಮ್ಮಿ ಹೇಗೇ ಆದರೂ ತುಪ್ಪ ಕೆಡುವುದು ಶತಸ್ಸಿದ್ಧ! ಕೆಲವೊಮ್ಮೆ ಚೆನ್ನಾಗಿರುವ ತುಪ್ಪವನ್ನೂ ಚಮಚ ಹಾಕಿ ಬಳಸುತ್ತ ಬಹಳದಿನವಿಟ್ಟರೆ ಅಥವಾ ಬಳಸದೇ ತಿಂಗಳುಗಳ ಕಾಲವಿಟ್ಟರೆ ತುಪ್ಪ ’ಜಡ್ಡು’ ಹಿಡಿದ ತುಪ್ಪ ಅಥವಾ ಜಡ್ಡು ಎನ್ದಿಕೊಳ್ಳುತ್ತದೆ. [ಜಿಡ್ಡು ಬೇರೆ ಜಡ್ಡುಬೇರೆ, ಜಿಡ್ಡು ಎಂದರೆ ನಯದ ಪಸೆ, ಜಡ್ಡು ಎಂದರೆ ವಾಸನೆ ಎಂದರ್ಥ] ಹೀಗೇ ಕೆಲವು ಮನೆಗಳಲ್ಲಿ ಅವರ ಮೂಗುಗಳು ನಮ್ಮ ಮೂಗುಗಳ ಥರ ತೆರೆದುಕೊಳ್ಳುವುದೇ ಇಲ್ಲ. ಅವುಗಳಿಗೆ ಜಡ್ಡು ಹಾಗೂ ಹೊಸದು ಎಲ್ಲಾ ಒಂದೇ! ಅಂತಹ ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಮಾಡಿದಾಗ ದೇವರಿಗೆ ಸಪಾದಭಕ್ಷ್ಯ ಮಾಡುವಾಗ ಜಡ್ಡುತುಪ್ಪವನ್ನೇ ಬಳಸುವುದರಿಂದ ಬಂದವರು ಪ್ರಸಾದವಾಗಿ ಪಡೆಯುವ ಸಪಾದವನ್ನು ತಿನ್ನಲು ಹೇಸಿಕೊಳ್ಳುತ್ತಾರೆ. ತಿನ್ನುವ ಹಾಗಿಲ್ಲ-ತಿನ್ನದೇ ಇರುವ ಹಾಗೂ ಇಲ್ಲ[ದೇವರು ಕೋಪಿಸಿಕೊಂಡರೆ!]

ಕೆಲವು ಮನೆಯಲ್ಲಿ ಬೆಣ್ಣೆ ದೋಸೆ ಕೊಡುತ್ತೇವೆಂದು ಹೇಳಿ ತಂದುಬಿಡುತ್ತಾರೆ. ಅಲ್ಲೂ ಅದೇ ಗತಿ. ದಿನವೂ ಅದೇ ಹಳೇ ನೀರಿನಲ್ಲಿ ಕುಳಿತಿರುವ ಬೆಣ್ಣೆ ವಾಸನೆಗಟ್ಟಿರುತ್ತದೆ. ಅಂತಹ ಬೆಣ್ಣೆ ತಟ್ಟೆಗೆ ಬಂದಾಗ ಭುಗ್ಗನೆ ಪೆಟ್ರೋಲ್ಗೆ ಬೆಂಕಿ ತಗುಲಿದ ಹಾಗೇ ನಮ್ಮ ಮೂಗಿಗೆ ವಾಸನೆ ಹತ್ತಿಕೊಂಡುಬಿಡುತ್ತದೆ! ಗಂಟೆಗಟ್ಟಲೆ ಈ ವಾಸನೆ ಯಾವ ವಾಸು ಬತ್ತಿ ಹಚ್ಚಿದರೂ ಓಡಿಹೋಗುವಂತಹುದಲ್ಲ. ಎದುರಿಗೇ ಕುಳಿತುಕೊಳ್ಳುವ ಯಜಮಾನರು

" ಸಂಕೋಚ ಮಾಡ್ಕೋಬಾರ್ದು, ಇನ್ನೊಂದು ಹಾಕ್ಸೊಳ್ಳಿ " ಅಂದುಬಿಟ್ಟರೆ ನಾವು ಸತ್ತಂತೆ ! ನಮ್ಮ ಫಜೀತಿ ಹೇಗಿರಬಹುದು!

ಕೆಲವು ಮನೆಗಳಲ್ಲಿ ಈ ನಾಥವೇ ಜಾಸ್ತಿ ಇರುವುದರಿಂದ ಮನೆಕಾಯುವುದಕ್ಕೆ ನಾಯಿಯ ಅವಶ್ಯಕತೆಯೇ ಇರುವುದಿಲ್ಲ. ವೆರಿ ಸಿಂಪಲ್ ಸಾಲ್ಯುಶನ್- ಬೆಣ್ಣೆ ಅಥವಾ ತುಪ್ಪದ ಪಾತ್ರೆ ತಂದು ಮುಚ್ಚಳ ತೆಗೆದಿಟ್ಟುಬಿಟ್ಟರೆ ಅವರ ಮನೆಕಡೆ ದರೋಡೆಕೋರರೂ ಬರುವುದೇ ಇಲ್ಲ!

’ಮಳ್ಳಾದರೂ ತಾಯಿ ನೀರಾದರೂ ಮಜ್ಜಿಗೆ’ ಎಂಬುದು ನಮ್ಮಲ್ಲಿನ ಗಾದೆ. ಈ ಗಾದೆ ಯಾವಾತ ಮಾಡಿದ್ದೋ ಗೊತ್ತಿಲ್ಲ! ತಾಯಿ ಮಳ್ಳಾದರೂ ಕೆಲವರು ಸಹಿಸಿಯಾರು, ಮಜ್ಜಿಗೆ ನೀರಾದರೂ ಪರವಾಗಿಲ್ಲ ಆದರೆ ಮಜ್ಜಿಗೆ ಹೆಂಡದ ವಾಸನೆಗೆ ತಿರುಗಿದರೆ ಅದು ಮದಿರಾರಸ ಪ್ರಿಯರಿಗೆ ಮಾತ್ರ ಇಷ್ಟವಾಗುತ್ತದೆಯೇ ಹೊರತು ಎಲ್ಲರೂ ಅದನ್ನು ಕುಡಿಯಲಾರರು.

ಒಮ್ಮೆ ಹೀಗೇ ಅದೂ ಇದೂ ಕೆಲಸಮಾಡುತ್ತಿದ್ದ ಮಂಜುವಿಗೆ ಸೀತಾರಾಮ್ ಹೆಗ್ಡೇರು
" ಏ ಮಂಜು ಉರಿ ಬಿಸ್ಲಲಾ , ಸ್ವಲ್ಪ ಮಜ್ಜಿಗೆ ಕುಡ್ಯನ ಬಾರಾ " ಅಂದರಂತೆ. ಮಂಜು ಬಂದಿದ್ದಾನೆ. ಮಜ್ಜಿಗೆಯೂ ಬಂದಿದೆ. ಮಜ್ಜಿಗೆಯ ಲೋಟವನ್ನು ಬಾಯಿಗಿಟ್ಟನೋ ಇಲ್ಲವೋ " ಊವೇ ......ಊವೇ" ಎಂತ ವಾಂತಿ ಮಾಡಿ ಎಚ್ಚರತಪ್ಪಿಬಿದ್ದಿದ್ದಾನೆ. ಆತನನ್ನು ಹೆಗ್ಡೇರು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಎಚ್ಚರವಾದಾತನಿಗೆ ಹೆಗ್ಡೇರ ಮುಖನೋಡಿದ ತಕ್ಷಣ ವಾಂತಿ! ನೀರೂ ಬೇಡ ಏನೂ ಬೇಡ ಬದುಕಿ ಉಳಿದರೆ ಸಾಕು ಎನ್ನುವ ಸ್ಥಿತಿ.

ಆತ ಹುಷಾರಾಗಿ ಮನೆಗೆ ಬಂದ ವಾರದಮೇಲೆ ಬೇಟಿಯಾದಾಗ ಏನಾಯಿತು ಎಂದು ಕೇಳಿದರೆ " ಹೆಗ್ಡೇರ್ ಮನೆಲಿ ಮಜ್ಜಿಗೆ ಕೊಟ್ಟೀರು ಮಾರಾರ್ಯೆ, ಅದ್ಯೆಂತಾ ವಾಸನೆ ಅದು, ಹುಟ್ದಾಗಿಂದ ಇನ್ನೂವರೆಗೆ ಎಲ್ಲೆಲ್ಲೂ ನೋಡ್ಲಿಲ್ಲಾಗಿತ್ತು ನಾನು, ಬ್ಯಾಡ್ರೋ ಬ್ಯಾಡ, ಇನ್ನು ಮಜ್ಜಿಗೆ ಸಹವಾಸವೇ ಬ್ಯಾಡ " --ಮಂಜು ಉವಾಚ !

ತೀರಾ ಹುಳಿಬಂದ ಮಜ್ಜಿಗೆಯ ಪರಿಯೇ ಇದು. ಹಳ್ಳಿಯಲ್ಲೇ ಹಾಗೆ ಇನ್ನು ಶಹರ-ಪಟ್ಟಣಗಳಲ್ಲಿ ಪ್ಯಾಕೆಟ್ ಹಾಲಿನಿಂದ ಮಾಡಿದ ಮೊಸರು, ಮಜ್ಜಿಗೆ ಎಲ್ಲ ೨ ದಿನಗಳ ನಂತರ ಉಪಯೋಗಕ್ಕೆ ಯೋಗ್ಯವಲ್ಲ. ಒಂದೊಮ್ಮೆ ಉಪಯೋಗಿಸಿದರೆ ಮತ್ತೆ ನಿಮ್ಮ ಮೊಸರು-ಮಜ್ಜಿಗೆಯನ್ನು ಬಳಸುವ ಅಭಿರುಚಿಯೇ ಬದಲಾಗಿ ತೆನ್ನಾಲಿ ರಾಮಕೃಷ್ಣನ ಬೆಕ್ಕಿನ ಕಥೆಯಂತಾಗುತ್ತದೆ ಹುಷಾರು!

ಇತ್ತೀಚೆಗೆ ಈ ಮೇಲಿನ ಎಲ್ಲಾ ನಂಬಲರ್ಹ ಮೂಲಗಳಿಂದ ಬಂದ ವರದಿಯನ್ನು ಆಧರಿಸಿ ನಾನು ಎಲ್ಲೇ ಹೋದರೂ ಈಗ ಬೆಣ್ಣೆ-ತುಪ್ಪ ಬಡಿಸುತ್ತೇವೆ ಎಂದರೆ ನನಗೆ ವೈದ್ಯರು ಬಳಸಬೇಡ-ಅಲರ್ಜಿ ಇದೆ ಎಂದಿದ್ದಾರೆ ಎನ್ನುತ್ತೇನೆ ಮತ್ತು ಮಜ್ಜಿಗೆ ತಂದರೆ ಮಜ್ಜಿಗೆ ಅಂದರೆ ನನಗೆ ಅಷ್ಟಕ್ಕಷ್ಟೇ ಎಂದು ತಪ್ಪಿಸಿಕೊಳ್ಳುತ್ತೇನೆ. ನಿಮಗೂ ಈ ಅನುಭವಗಳು ಬಂದಿರಬಹುದು, ಬರಲೂಬಹುದು ಎಂಬ ಕಾರಣದಿಂದ ಸೂತರು ಶೌನಕಾದಿ ಮುನಿಗಳಿಗೆ ಹೇಳಿರದಿದ್ದ ವಿಷಯವನ್ನು ತಿಪ್ಪಾಭಟ್ಟರು ಸುಬ್ಬಮ್ಮ ಮತ್ತನೇಕ ಹೆಂಗಸರು-ಮಕ್ಕಳಿಗೆಲ್ಲ ಹೇಳಿರುವುದನ್ನ ನಿಮಗೆ ಇಂದಿಲ್ಲಿ ತಿಳಿಸಿಕೊಟ್ಟಿದ್ದೇನೆ.

|| ಇತಿ ಶ್ರೀ ಹುಳಿಮಜ್ಜಿಗೆ ಪುರಾಣಂ ಸಂಪೂರ್ಣಂ ||


ಫಲಶ್ರುತಿ

ಭಕ್ತಿಯಿಂದ ಈ ಪುರಾಣವನ್ನು ಓದುವವರಿಗೆ, ಪುಟಗಟ್ಟಿದ ರೂಪದಲ್ಲಿ ಪ್ರಿಂಟು ತೆಗೆದು-ಮನೆಯ ಕಪಾಟಿನಲ್ಲಿ ಎತ್ತಿಟ್ಟು ಆಗಾಗ ಪೂಜಿಸುವವರಿಗೆ, ಫ್ರೆಂಡ್ಸುಗಳಿಗೆ ತೋರಿಸಿ ನಕ್ಕು ನಕ್ಕು ಸುಸ್ತಾದವರಿಗೆ, ಗೂಗಲ್ ಬಜ್ಜಿನಲ್ಲಿ ಕೂತು ಬಿಸಿಬಿಸಿ ಬಜ್ಜಿ ಕಾಯಿಸಿಕೊಳ್ಳುವವರಿಗೆ, ಕಾಯಾ-ವಾಚಾ-ಮನಸಾ ಅನುಭವಿಸಿ ಇದನ್ನ ಈ ಮೆಲ್ ಮಾಡುವವರಿಗೆ, ಶಹರದಲ್ಲಿದ್ದು ಮಜ್ಜಿಗೆ-ಬೆಣ್ಣೆ-ತುಪ್ಪ ಮಾಡಿ ಗೊತ್ತಿಲ್ಲದ ಇತ್ತೀಚಿನ ಹುಡುಗಿಯರಿಗೆ ಈ ಎಲ್ಲರಿಗೂ ದೇವರು ಒಳ್ಳೆಯ, ದುರ್ವಾಸನಾರಹಿತ ಬೆಣ್ಣೆ-ತುಪ್ಪ-ಮಜ್ಜಿಗೆ ಇತ್ತು ಸಲಹುತ್ತಾನೆ.

ಸತ್ಯಾಸ್ಸಂತು ಭಕ್ತಸ್ಯ ಕಾಮಾಃ ||

Saturday, August 7, 2010

ಒಲವಿನ ಸೆಳೆತ

ರಾಜಾರವಿವರ್ಮ ರಚಿತ ಚಿತ್ರ ಕೃಪೆ : ಅಂತರ್ಜಾಲ

ಒಲವಿನ ಸೆಳೆತ


ಗೆಳೆಯ ಕರೆದಿಹನೆಂದು ನಾ ಹೋದೆ ಜೊತೆಯಾಗಿ
ಗಿಳಿಯ ಮರಿ ಕೂತಿರುವ ಆ ಮನೆಯ ಕಡೆಗೆ
ಅಳಿವಿನಂಚಲಿ ಇರುವ ಹಲವು ಜೀವಿಗಳನ್ನು
ಬಳಗ ಸಹಿತದಿ ನೋಡಲೊಮ್ಮೆ ಆ ಬದಿಗೆ

ಲಿಂಬೂ ಪಾನಕದೊಡನೆ ಬಂದವಳ ನೋಡಿದೆನು
ಬೆಂಬಿಡದೆ ಅಚ್ಚಿಸಿತು ಮನವು ಚಿತ್ತಾರ
ತುಂಬಿ ಚೆಲ್ಲಿತು ಲೋಟದಲ್ಲಿ ಆ ಪಾನೀಯ
ಹಂಬಲಿಸಿ ಅವಳಿರವ ಅಲ್ಲಿ ಮನಸಾರ

ಕರೆಬಂದು ನಾ ತೆರಳಿ ಜಿಂಕೆ-ಕಡವೆಗಳನ್ನು
ಹೆರೆ ಬಿಟ್ಟ ಹಾವು ಮತ್ತೊಂದಷ್ಟು ಮೃಗವ
ಅರಿವಿರದೇ ಮನಸೆಲ್ಲ ಆಕೆಯೊಡನಾಡಿತ್ತು !
ಬರುವಿಕೆಯ ಬಯಸುತ್ತ ನಮ್ಮೂರ ಕಡೆಗೆ

ಹೆಸರು ಕೇಳಲು ಭಯವು ಉಸಿರುಗಟ್ಟಿದ ರೀತಿ
ಹಸುಳೆಗೆನ್ನೆಯ ಮೇಲೆ ಗುಳಿ ನಗಲು ತುಸುವೇ
ಹೆಸರುಕಾಳಿನ ಉಸ್ಲಿ ಮಜ್ಜಿಗೆಯ ನೀಡಿದಳು
ಕೆಸರಲರಳಿದ ಕಮಲ ಮುಗುದೆಯವಳು !

ಹೊಸಬನಾನೆಂಬಂತೆ ಒಂದಿನಿತು ತೋರ್ಗೊಡದೆ
ಗಸಗಸೆಯ ಪಾಯಸವ ಧಾರಾಳ ಬಡಿಸಿ
ಎಸಳಯಾಲಕ್ಕಿ ಪೂರಿತ ವಿವಿಧ ತಿನಿಸುಗಳ
ನಸುನಕ್ಕು ನೀಡಿದಳು ಕುಶಲದಲಿ ಬಹಳ

ಹೊರಟು ನಿಂತೆವು ನಾವು ಮನವು ಹೊರಟಿರಲಿಲ್ಲ!
ಕರಟ ತಟ್ಟಿದ ಸದ್ದು ತಿರುಗಿ ನಾ ನೋಡೆ
ಹರಟುವುದು ಹಲವಿತ್ತು ಇನ್ನೆಲ್ಲಿ ತರವಲ್ಲ
ಮುರುಟಿ ನಿಂತಲ್ಲೇ ಕಣ್ಮಿಂಚಿನಲಿ ಕರೆದೂ !


Friday, August 6, 2010

ರಿಕವರಿ ರೌಡಿಸಂ !

ಕಲ್ಪನೆಗಾಗಿ ಬಳಸಿದ ಚಿತ್ರ ಋಣ : ಅಂತರ್ಜಾಲ

ರಿಕವರಿ ರೌಡಿಸಂ !

[ಈ ಹಾಡಿನಲ್ಲಿ ಛಂದಸ್ಸು ಮತ್ತು ವ್ಯಾಕರಣ ಗಣನೆಗೆ ತರವಲ್ಲ, ಇದು ಕೇವಲ ತಮಾಷೆಗಾಗಿ !]

ಮಲ್ಟಿನ್ಯಾಷನಲ್ ಬ್ಯಾಂಕಿನವರು
ಪಲ್ಟಿಹೊಡೆದು ಗಿರಾಕಿ ಕರೆದು
ಉಲ್ಟಾ ಸೀದಾ ಮಾತನಾಡಿ ಹೆದರಿಸಿದ್ದರು
ಗಿಲ್ಟಿಮನದ ಬಡವನವಗೆ
ಸಿಲ್ಟು ಇರದ ಮನಸಿನವಗೆ
ಅಲ್ಟಿಮೇಟು ಡೇಟುಕೊಟ್ಟು ಕಳಿಸಿಬಿಟ್ಟರು

ಡೇಟು ಮುಗಿದು ಹೋದರವಗೆ
ದಾಟಿಬರಲು ಆಗಲಿಲ್ಲ
ಊಟಕುಂಟು ಆಟಕಿಲ್ಲ ಅವನ ಜನರಿಗೆ
ಪಾಠಮಾಡುತಿದ್ದ ಮೇಷ್ಟ್ರು
ಪಾಟಿಯಲ್ಲಿ ಬರೆಸುತಿದ್ರು
’ಕಾಟಖಚಿತ ಸಾಲವೆಂಬ ಶೂಲ ಪಡೆದಗೆ’ !

ಮ್ಯಾನೇಜರು ಪ್ಲಾನು ಮಾಡಿ
ಟೀನೇಜಿನ ಟೀಮು ಕರೆದು
ನೀವೇ ವಸೂಲಿಮಾಡಿ ತನ್ನಿರೆಂದರು
ನಾವೇ ಜನ ಹೊರಟೆವೀಗ
ಕಾವೇರಿದೆ ಬಿಡುವುದಿಲ್ಲ
ಸಾವಾದರು ಸರಿಯೆ ಬಡಿದು ತರುವೆವೆಂದರು

ಗುಂಡು ತುಂಡು ಸೇರಿಕೊಂಡು
ಚೆಂಡು ಬುಗುರಿಯಾಡುವಾಗ
ಚಂಡ ಭೈರನೆದ್ದು ಒಮ್ಮೆ ಗುಟುರುಹಾಕಿದ
ಮಂಡೆಬಿಸಿ ಮಾಡಿಕೊಂಡ
ಪಾಂಡುರಂಗ ಪರಮ ತಾನು
ಉಂಡು ಉಡದೆ ಉಟ್ಟು ಉಣದೆ ಹಣವ ಕಟ್ಟಿದ !

Thursday, August 5, 2010

ರಾತ್ರಿ ಚಾ ಪಾರ್ಟಿ ಇರುತ್ತದಂತೆ !


ರಾತ್ರಿ ಚಾ ಪಾರ್ಟಿ ಇರುತ್ತದಂತೆ !

ಇದನ್ನು ಕೇಳಿಯೇ ಮಕ್ಕಳಾದ ನಮಗೆಲ್ಲ ಒಂಥರಾ ಥ್ರಿಲ್ಲಿಂಗ್ ! ರಾತ್ರಿ ಹೊತ್ತಿನಲ್ಲೆಲ್ಲ ಚಾ ಕುಡುಯುವುದು ಸಾಮಾನ್ಯವಾಗಿ ನಾವು ನೋಡಿದ್ದಲ್ಲ. ಅದಕ್ಕೇ ಅದು ಹೇಗಿರಬಹುದು ಮತ್ತು ಏನೆಲ್ಲಾ ತಿಂಡಿ ಇರಬಹುದು ಎಂಬುದು ನಮ್ಮ ಕುತೂಹಲ. ಮಕ್ಕಳಿಗೆ ಸಹಜವಾಗಿ ತಿಂಡಿಗಳೆಲ್ಲಾ ಇಷ್ಟ್ ತಾನೇ ? ಅದೂ ಬೇರೆಯವರ ಮನೆಗಳಲ್ಲಿ ಮಾಡಿದ್ದು ಹೇಗಿರುತ್ತದೆ ತಿಳಿಯಬೇಕು ಎಂಬುದೊಂದು ಸ್ವಲ್ಪ ಕೆಟ್ಟ ಬಯಕೆ. ಆಗಾಗ ನಮ್ಮ ಅಕ್ಕ-ಪಕ್ಕದ ಮನೆಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಿದರೆ ಕಾಯಿಸುವಾಗ-ಬೇಯಿಸುವಾಗ್ಲೇ ಅದರ ಪರಿಮಳ ನಮ್ಮಅಸಾಧಾರಣಮೂಗಿಗೆ ಹೊಡೆಯುತ್ತಿತ್ತು. ಆಗ ಪಕ್ಕದ ಮನೆಯ ಮಕ್ಕಳನ್ನು ಆಟಕ್ಕೆ ಕರೆದು

"ಏಯ್ ನಿಮ್ಮನೇಲಿ ಇವತ್ತೇನ್ ಮಾಡಿದಾರೋ "

" ಕೈಮುಗಿಯುವ ಮೊಮ್ಮಿ "

ಕೈಮುಗಿಯುವ ಮೊಮ್ಮಿ ಎಂದರೆ ಅದು ನಮ್ಮ ಮುಗಿದ ಕೈ ಆಕಾರದ ಸಿಹಿತಿನಿಸು! ಅಕ್ಕಿಹಿಟ್ಟಿನ ಕಡುಬು ನೋಡಿದ್ದೀರಲ್ಲಾ ಆಥರದ್ದೇ ಒಂದು. ಅಂಥದ್ದೆಲ್ಲಾ ದಿನವೂ ಮಾಡುವುದಲ್ಲ. ಅಪರೂಪಕ್ಕೆ ನೂಲು ಹುಣ್ಣಿಮೆ, ನಾಗರ ಪಂಚಮಿ ಇಂತಹ ದಿನಗಳಲ್ಲೇ ಮಾತ್ರ ಸಿಗುವಂತದು. ನಮ್ಮನೆಗಳಲ್ಲಿ ಅಮ್ಮ ತಿಂಗಳ ರಜಾಕ್ಕೆ ಕೂತರೆ ಆಗ ಅದು ಸಿದ್ಧವಾಗುತ್ತಿರಲಿಲ್ಲ, ಇನ್ಯಾವುದೋ ಹಬ್ಬಕ್ಕೆ ಪೋಸ್ಟ್ ಪೋನ್ ಆಗಿಬಿಡುತ್ತಿತ್ತು. ಒಮ್ಮೊಮ್ಮೆ ಅವರ ಮನೆಗಳಲ್ಲೂ ಅದೇ ಕಥೆ. ಹೀಗಾಗಿ ಕೆಲವೊಮ್ಮೆ ತಿನ್ನಬೇಕೆನಿಸುವ ನಮ್ಮ ಜಿಹ್ವಾಚಾಪಲ್ಯಕ್ಕೆ ಅದೇ ಕಾಲಕ್ಕೆ ತುರಿಕೆ ಜಾಸ್ತಿಯಾಗಿಬಿಡೋದು. ಏನಾದರೂ ಉಪಾಯ ಮಾಡಿ ನಾವು ಅವುಗಳನ್ನು ಹೊರಗಡೆ ತಂದು ಎಲ್ಲಾ ಸೇರಿ ಆಟವಾಡುತ್ತಾ ತಿನ್ನುವುದಿತ್ತು.

ನಾಗರ ಪಂಚಮಿಗೆಸುಳಿರೊಟ್ಟಿಮಾಡುತ್ತಿದ್ದರು. ಬೇಕಾದರೆನೀವೂ ಮಾಡಿನೋಡಿ--

ನೆನೆಹಾಕಿ ರುಬ್ಬಿದ ಅಕ್ಕಿಯ ಹಿಟ್ಟನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಚಪಾತಿ ಹಿಟ್ಟಿನ ಹದಕ್ಕೆ ಇಟ್ಟುಕೊಂಡು ಅದನ್ನು ತುಂಡು ಬಾಳೆಲೆಯಮೇಲೆ ನಮ್ಮ ಅಂಗೈ ಆಕಾರಕ್ಕೆ ತೆಳ್ಳಗಿನ ಪದರದ ಥರ ಆಗುವವರೆಗೆ ತಟ್ಟಿ[ಕೈಗೆ ಎಣ್ಣೆ ತಗುಲಿಸಿಕೊಂಡು ಮಾಡಬೇಕಾದ ಕೆಲಸ], ನಂತರ ಅದರಮೇಲೆ ಸಿದ್ಧಪಡಿಸಿರುವ ಕಾಯಿಸಿ ಇಳಿಸಿರುವ ಕಾಯಿತುರಿ-ಬೆಲ್ಲದ ಮಿಶ್ರಣವನ್ನು ಒಂದು ಪದರ ಹರಡಿ. ನಿಧಾನಕ್ಕೆ ಅಂಗೈ ಮಡಿಸಿದಂತೇ ಮಡಿಸಿಕೊಳ್ಳಿ, ದೋಸೆ ಕಾವಲಿಯ ಮೇಲೆ ತುಂಡು ಬಾಳೆಲೆ ಸಮೇತ ಇಡಿ, ಒಂದೈದು ನಿಮಿಷ ಆಕಡೆ ಈಕಡೆ ಮಗುಚುತ್ತ ಬೇಯಿಸಿ! ಬಾಳೆಲೆ ಬಣ್ಣ ಬದಲಾಗುತ್ತ ಬಂದಾಗ ಇಳಿಸಿ ತಣಿಯಲು ಬಿಡಿ. ತಿಂದುನೋಡಿ--ಇದು ಸುಳಿರೊಟ್ಟಿ! ಸುಳಿರೊಟ್ಟಿಯನ್ನು ನಿಜವಾಗಿ ಮಾಡುವುದು ಅರಿಶಿನ ಗಿಡದ ಎಲೆ[ಅರಿಶಿನ ಕೀಳೆ]ಯಲ್ಲಿ! ಅದು ಅರಿಶಿನದ ಎಲೆಯ ಪರಿಮಳವನ್ನು ಹೀರಿಕೊಂಡು ಬೇಯುತ್ತದೆ. ಆಗ ತಿಂದರೆ ಅದರ ಪರಿಮಳವೇ ಬೇರೆ. ಆದರೆ ಶಹರ-ಪಟ್ಟಣಗಳಲ್ಲಿ ಅರಿಶಿನದ ಎಲೆ ಎಲ್ಲಿ ಸಿಗುತ್ತದೆ ? ಹೀಗಾಗಿ ಅದಕ್ಕೆ ಪರ್ಯಾಯ ಬಾಳೆಲೆ ಹೇಳಿದ್ದೇನೆ.

ಇರಲಿ ನಾವು ಮರಳಿ ಮಕ್ಕಳಾಗೋಣ! ನಮ್ಮೂರ ದೇವಸ್ಥಾನಗಳಲ್ಲಿ ಕಾರ್ತೀಕಮಾಸ ಮುಗಿಯುವ ಹೊತ್ತಿಗೆ ತಿಂಗಳದಿನ ದಿನವೂ ಸಾಯಂಕಾಲ ನಡೆಸಿಬಂದ ಭಜನಾ ಸೇವೆಗೆ ಮಂಗಳ ಹಾಡುವ ಭಜನೆಸಪ್ತಾಹ ನಡೆಯುತ್ತದೆ. ಸಪ್ತಾಹದಲ್ಲಿ ಹಲವು ವಿಧ. ಇದರಲ್ಲೇ ಯಾಮಾಷ್ಟಕ ಎಂದರೆ ಒಂದೊಂದು ಯಾಮಕ್ಕೆ ಒಂದೊಂದು ಗುಂಪು ಕುಳಿತು ಅಖಂಡ ಭಜನಾ ಸೇವೆ ನಡೆಯುತ್ತದೆ. ಇದು ಏಳುದಿನಗಳ ಪರ್ಯಂತ ನಡೆಯುವುದರಿಂದ ಸಪ್ತಾಹವೆಂದು ಹೆಸರು. ಆದರೆ ಈಗ ಕಾಲ ಬದಲಾಗಿದೆ. ಕೇವಲ ೨೪ ಘಂಟೆಗೆ ಅಖಂಡ ಭಜನೆ ಮುಗಿದುಹೋಗುತ್ತದೆ! ನಮ್ಮದು ಹಳ್ಳಿಯಾಗಿರುವುದರಿಂದ ಅಲ್ಲಿ ಆಗಿನಕಾಲದಲ್ಲಿ ದ್ವನಿವರ್ಧಕದ ವ್ಯವಸ್ಥೆ ಇರಲಿಲ್ಲ. ಇಂತಹ ವಿಶೇಷ ಕಾರ್ಯಕ್ರಮಗಳಿರುವಾಗ ಮಾತ್ರ ದೂರದ ಪಟ್ಟಣದಿಂದ ಬಾಡಿಗೆಗೆ ಮೈಕು ತರಿಸುತ್ತಿದ್ದರು. ಮೈಕಿನವ ಬಂದು ಶ್ರೀಮತಿ ಎಸ್. ಜಾನಕಿಯವರು ಹಾಡಿರುವಶುಕ್ಲಾಂಬರಧರಂ ವಿಷ್ಣುಂ ....’ ಎನ್ನುವ ದೋಸೆಥರದ ತಿರುಗುವ ಅದೇನೋ ಹಾಕುತ್ತಿದ್ದ! ತಿರುಗುತ್ತಿರುವ ಅದರ ಮೇಲೆ ಒಂದು ದಪ್ಪ ಕಡ್ಡಿಯ ಥರದ್ದನ್ನು ಎಳೆದು ಬಿಟ್ಟರೆ ಅಲ್ಲಿ ತರತರದ ಹಾಡುಗಳು ಬರುತ್ತಿದ್ದವು ! ಕೆಲವೊಮ್ಮೆ ಹಾಡು ಮುಂದೆಹಾಡಲು ಮರೆತುಹೋದ ಹಾಗೇ ೧೦-೧೨ ಬಾರಿ ಹಾಡಿದ್ದನ್ನೇ ಹಾಡುತ್ತಿತ್ತು. ಆಗ ಮೈಕಣ್ಣ ಅದೇನೋ ಬೆಕ್ಕಿನಮರಿ ಎತ್ತಿ ಬಿಟ್ಟಹಾಗೇ ದಪ್ಪದ ಕೋಲನ್ನು ಸ್ವಲ್ಪ ಎತ್ತಿ ಪಕ್ಕಕ್ಕೆ ಬಿಡುತ್ತಿದ್ದ. ಅಲ್ಲಿಂದ ಮತ್ತೆ ಮುಂದೆ ಹಾಡುತ್ತಿತ್ತು. ನಮಗೆಲ್ಲಾ ಮೈಕಣ್ಣನನ್ನೂ ಅವನ ಪೆಟ್ಟಿಗೆಯನ್ನೂ ಹೊರಗೆ ಮರಕ್ಕೋ ಎತ್ತರದ ಕಂಬಕ್ಕೋ ಕಟ್ಟುವ ಕಹಳೆಯಾಕಾರದ್ದನ್ನೂ ನೋಡುವುದೇ ಒಂದು ಹಬ್ಬ! ಅದು ಗ್ರಾಮೊಫೋನ್ ಎನ್ನುವುದು ನಮಗಂದಿಗೆ ತಿಳಿದಿರಲಿಲ್ಲ. ಆತನ ಹತ್ತಿರ ಹಲವಾರುದೋಸೆಗಳಿರುತ್ತಿದ್ದವು. ದೇವಸ್ಥಾನಗಳಿಗೆ ಬಂದರೆ ಭಕ್ತಿ ಗೀತೆ ಹಾಡುವ ದೋಸೆಮಾತ್ರ ಹಾಕುತ್ತಿದ್ದ. ಊರಲ್ಲಿ ನಾಟಕಕ್ಕೆ ಬಂದರೆ ಅದಕ್ಕೇ ಬೇರೆ ಸಿನಿಮಾ ಹಾಡುಗಳು. ’ನಾ ಬಿಡಲಾರೆ ಎಂದೂ ನಿನ್ನಾ...ನೀನಾದೆ ನನ್ನಾ ಪ್ರಾಣಾ.....’ ತರದ್ದು. ’ಕನ್ನಡ ನಾಡಿನ ವೀರರಮಣಿಯ ಗಂಡು ಭೂಮಿಯ ವೀರನಾರಿಯಾ.....’ ಹಾಡು ಎಲ್ಲರ ಅಚ್ಚುಮೆಚ್ಚಿನದು. ಅದರ ಅರ್ಥ ಅಷ್ಟೆಲ್ಲಾ ತಿಳಿದಿರಲಿಲ್ಲ, ಆದರೆ ದೊಡ್ಡವರೆಲ್ಲಾ ಇಷ್ಟಪಡುತ್ತಾರಲ್ಲ ಅಂತ ನಾವೂ ಇಷ್ಟಪಡುತ್ತಿದ್ದೆವು!


ಮೈಕಣ್ಣನ ಮೈಕಿನಲ್ಲಿ ಕುಳಿತು ಹಾಡಿದರೆ ಊರಿಗೆಲ್ಲಾ ಕೇಳುತ್ತದೆ ಎಂಬುದು ನಮಗೆ ತಿಳಿದುಬಿಟ್ಟಿತ್ತು. ಹಾಗಾಗಿ ಒಂದು ಅವಕಾಶ ಎಲ್ಲಾದರೂ ಸಿಗುವುದೆಂದರೆ ನಮಗೆ ನಿಧಿಸಿಕ್ಕಿದಷ್ಟು ಖುಷಿ! ಭಜನಾಮಂಡಳಿಯಲ್ಲಿ ಉಸ್ತುವಾರಿ ನೊಡುಕೊಳ್ಳುತ್ತಿದ್ದ ಬಾಳಣ್ಣ ಎಲ್ಲಾದರೂ ಮನಸ್ಸಿದ್ದರೆ ಅವಕಾಶ ಮಾಡಿಕೊಡುತ್ತಿದ್ದ. ಅವಕಾಶಕ್ಕಾಗಿ ಆತನ ಪಕ್ಕದಲ್ಲೇ ಕೂತು ಮರ್ಜಿಗಾಗಿ ಆಗಾಗ ಆತನ ಮುಖ ನೋಡುತ್ತಾ ಎಲ್ಲರ ಜೊತೆ ಭಜನೆ ಹೇಳುವುದು ನಮ್ಮ ಕೆಲಸ. ಅಲ್ಲಿಕೆಲವರು ದೇವರ ಮೇಲಿನ ಭಕ್ತಿಗಿಂತ ಮೈಕಣ್ಣನ ಮೈಕಿನಲ್ಲಿ ಹಾಡಲಾಗುತ್ತದೆಂದೇ ಬರುತ್ತಿದ್ದರು. ಎಂದೂ ಬಾರದ ಅವರ ಸವಾರಿ ಅಂದು ಮಾತ್ರ ತಪ್ಪದೇ ಹಾಜರಾಗುತ್ತಿತ್ತು. ಬಾಳಣ್ಣನಿಗೆ ಮನಸ್ಸಿಲ್ಲದಿದ್ದರೆ ಆತ ಹಾಲು ಹಿಂಡಲು ಹೋದಾಗ ಒದೆಯುವ ಆಕಳಿನಂತೇ ತನ್ನ ಕಣ್ಣುಬೇಳೆ ತಿರುಗಿಸಿಒದ್ದ ಹಾಗೇಮಾಡಿಬಿಟ್ಟರೆ ಮತ್ತೆ ಗಂಟೆಗಟ್ಟಲೆ ಆತನ ಮುಖ ನೋಡಲೇ ಹೆದರಿಕೆಯಾಗುತ್ತಿತ್ತು. ಹೆದರಿಕೆಯಲ್ಲೂ ಇನ್ನೇನೂ ಆಗದಲ್ಲ ಎಂಬ ಸಮಾಧಾನದ ನಡುವೆ ಎಲ್ಲಾದರೂ ಅವಕಾಶ ಕೊಟ್ಟಾನು ಎಂಬ ಸಣ್ಣ ಆಸೆಯೊಂದು ಅಲ್ಲೇ ತಡೆದು ಕೂರುವಂತೇ ಮಾಡುತ್ತಿತ್ತು. ದೊಡ್ಡವರು ಹಾಡಿ ದಣಿದ ಮೇಲೆ ಜನರ ಕೊರತೆ ಬಿದ್ದರೆ ಆಗಮಾತ್ರ ಮಕ್ಕಳ ಸರದಿ ಬರುತ್ತಿತ್ತು! ಅದು ತುಂಬಾ ಅಪರೂಪ ಅನ್ನಿ. ಮೈಕಿನಲ್ಲಿ ದನಿ ತೂರಿಸಲಷ್ಟೇ ಬಂದ ಅಪರೂಪದ ಜನರಿಗೆ ಭಜನೆಗಳು ಮರೆತುಹೋಗಿರುತ್ತಿದ್ದವು. ಅವರು ಹಾಡಿ ತಾನೂ ಹಾಡಿದ್ದೇನೆ ಎಂದು ಊರಿಗೆಲ್ಲ ಕೇಳಿಸುವ ಚಟದ ನಡುವೆ ಹಾಡುತ್ತಿರುವ ಭಜನೆ ತಾಳತಪ್ಪಿದ್ದಾಗ ಹೂತ ರಥವನು ಕರ್ಣ ಎತ್ತುತ್ತಿರುವಂತೇ ಅವರಿವರು ನೆನಪಿಸಿಕೊಟ್ಟಾರೂ ಎಂದು ಕಾಯುತ್ತ ಹಾಡಿದ್ದನ್ನೇ ಹಾಡುತ್ತ ಆತಂಕದಲ್ಲಿದ್ದರೆ ಉಳಿದಕೆಲವರು ಅವರನ್ನು ನೋಡಿ ಮುಸಿಮುಸಿ ನಗುತ್ತಿದ್ದರು.

ಭಜನೆ ಕಾರ್ಯಕ್ರಮಗಳಿರುವಾಗ ಗಂಟೆಗೊಂದಾವರ್ತಿ ದೇವರಿಗೆ ಆರತಿ ನಡೆಯುತ್ತಿತ್ತು. ಊರವರು ಅವರಿವರು ಅಂತಹೇಳಿ ಹಣ್ಣು-ಕಾಯಿ, ನೈವೇದ್ಯಕ್ಕೆ ಪಂಚಕಜ್ಜಾಯ, ಎಳ್ಳುಂಡೆ, ಹುಳಿಅವಲಕ್ಕಿ, ಕೋಸಂಬರಿ, ಕಡ್ಲೆ ಉಸುಳಿ ಮುಂತಾದ ಹತ್ತಾರು ಬಗೆಯ ಪನವಾರಗಳನ್ನು ತರುತ್ತಿದ್ದರು. ಊರಿಗೆ ಬಂದ ನಾರಿ ನೀರಿಗೆ ಬರದೇ ಹೋಗುತ್ತಾಳೆಯೇ ಎಂಬ ಹಳೆಯ ಗಾದೆಯಂತೇ ದೇವರಿಗೆ ಬಂದ ಪನವಾರ ಭಜನೆಗೆ ಕೂತಭಕ್ತಾದಿಗಳಿಗೂ ಪ್ರಸಾದ ರೂಪವಾಗಿ ಸ್ವಲ್ಪ ಸ್ವಲ್ಪ ಸಿಗುತ್ತಿತ್ತು! ರಾತ್ರಿ ಘಂಟೆಗೆ ದೀಪೋತ್ಸವವಿರುತ್ತಿತ್ತು.ಆಗೊಮ್ಮೆ ಮಹಾಮಂಗಲಾರತಿಗೆ ಊರಬಹುತೇಕರು ಕೊನೇಪಕ್ಷ ಮನೆಗೊಬ್ಬರಂತೇ ಬರುತ್ತಿದ್ದರು. ಅದಾದ ಮೇಲೆ ಮತ್ತೆ ರಾತ್ರಿ ಹನ್ನೆರಡು ಗಂಟೆಗೆ ಮಂಗಲಾರತಿ ಮಾಡುತ್ತಿದ್ದರು. ಮನೆಯವರು ದೀಪೋತ್ಸವ ಮುಗಿದ ಮೇಲೆ ನಮ್ಮನ್ನೆಲ್ಲಾ ಮನೆಗೆ ಹೊರಡುವಂತೇ ಒತ್ತಾಯಿಸಿ ಕರೆದುಕೊಂಡು ಹೋಗುತ್ತಿದ್ದರು. ನಾವೆಲ್ಲಾ ಸಣ್ಣವರಲ್ಲವೇ-ನಿದ್ದೆ ಇಲ್ಲದೇ ಇರಲಾಗುತ್ತಿರಲಿಲ್ಲ. ಆಮೇಲೆ ಬೆಳಗಿನವರೆಗೆ ಏನೇನು ವಿಶೇಷವಿರುತ್ತದೆ ಎಂದು ನಾವು ಯಾರನ್ನಾದರೂ ಕೇಳುತ್ತಿದ್ದೆವು. ರಾತ್ರಿ ಹನ್ನೆರಡು ಗಂಟೆಯ ಆರತಿ ಮುಗಿದ ಸ್ವಲ್ಪ ಹೊತ್ತಿನ ಮೇಲೆ ಭಜನೆಯವರಿಗೆಚಾ ಪಾರ್ಟಿಇರುತ್ತದೆ ಮತ್ತೆ ಇನ್ನೊಮ್ಮೆ ಬೆಳಗಿನ ಜಾವ -೫ಗಂಟೆಗೆ ಇರುತ್ತದೆ ಎಂದು ಯಾರೋ ಹೇಳಿದ್ದರು.

ಮಕ್ಕಳಿಗೆ ಕುತೂಹಲ ಶುರುವಾದರೆ ಅದು ತಣಿಯುವವರೆಗೂ ಅವಿರತವಾಗಿ ಅವರು ಅದನ್ನು ತಿಳಿಯಲು ಪ್ರಯತ್ನಿಸುತ್ತಾರಲ್ಲವೇ ಹಾಗೇ ಒಮ್ಮೆ ನಾನೂ ಮತ್ತು ಇನ್ನೊಬ್ಬ ಪಕ್ಕದ ಮನೆಯ ಹುಡುಗನೂ ರಾತ್ರಿಯೆಲ್ಲಾ ಭಜನೆ ಮಾಡುವುದಾಗಿ ಕುಳಿತುಕೊಂಡೆವು. ದೀಪೋತ್ಸವ ಆದ ಮೇಲೆ ಮನೆಗೆ ತೆರಳಿ ಊಟಮುಗಿಸಿ ಮರಳಿಬಂದೆವು. ತಲೆಗೆ ಸುತ್ತಿಕೊಳ್ಳಲು ಕೇವಲ ಒಂದು ಉಣ್ಣೆಯಮಫ್ಲರ್ಎನ್ನುವ ಸಣ್ಣ ಬಟ್ಟೆಯನ್ನು ಬಿಟ್ಟರೆ ಬೇರೆ ಶಾಲು ಅಥವಾ ಬೇಡ್ ಶೀಟ್ ಎಲ್ಲಾ ತಂದಿರಲಿಲ್ಲ. ರಾತ್ರಿ ಹನ್ನೊಂದು ಆಗಿರಬಹುದು. ಆಗ್ಲೇ ಚಳಿಯಾಗಲಿಕ್ಕೆ ಶುರುವಾಯಿತು. ಕುಳಿತಲ್ಲೇ ಭಜನೆ ಹೇಳುತ್ತ ಕಣ್ಣಿಗೆ ಆಗಾಗ ಜೋಂಪು ಹತ್ತಿ ತೂಗುತ್ತಿದ್ದೆವು, ಪಕ್ಕದಲ್ಲಿ ಕುಳಿತವರಿಗೆ ತಾಗಿದ ತಕ್ಷಣ ಎಲ್ಲೂ ಏನೂ ತೊಂದರೆಯಾಗಿಲ್ಲಾ ಎಂಬುದನ್ನು ಗಟ್ಟಿಮಾಡಿಕೊಂಡವರೇ ಭಜನೆಯ ಒಂದೆರಡು ಸೊಲ್ಲುಗಳನ್ನು ಜೋರಾಗಿ ಹಾಡಿ ಮತ್ತೆ ಮತ್ತದೇ ಸ್ಥಿತಿ! ಅಂತೂ ರಾತ್ರಿ ೧೨ ಮಂಗಲಾರತಿಯಾಯ್ತು. ನಮ್ಮ ಕಣ್ಣೆಲ್ಲಾ ಚಾ ಪಾರ್ಟಿಗಾಗಿ ಕಾದಿತ್ತು. ಮನೆಗಳಲ್ಲಾದರೆ ಅದು ಬೇರೆ ವಿಷಯ. ಹಳ್ಳಿಯ ದೇವಸ್ಥಾನಗಳಲ್ಲಿ ಯಾವುದೇ ಅಡಿಗೆಯ ವ್ಯವಸ್ಥೆ ಇರದ ಕಾಲದಲ್ಲಿ ಅದು ಹೇಗೆ ಇದನ್ನೆಲ್ಲ ನಿಭಾಯಿಸುತ್ತಾರೆ ಎಂಬುದರ ಜೊತೆಗೆ ಅದನ್ನು ಅನುಭವಿಸುವುದೇ ರುಚಿಯಾಗಿ ಪರಿಣಮಿಸಿತ್ತು. ಊರವರು ಭಜನೆಮಂಗಲದ ದಿನವೆರಡಕ್ಕೆ ಎಲ್ಲರೂ ತನು-ಮನ-ಧನಗಳ ಜೊತೆಗೆ ದಿನಸಿ, ಹಾಲು,ಬಾಳೆಹಣ್ಣು,ಬಾಳೆಲೆ ಹಲವಾರು ಸಾಮಗ್ರಿಗಳನ್ನು ಕೊಡುತ್ತಿದ್ದರು. ದೇವಸ್ಥಾನದ ಸ್ಥಾಯೀ ಸಮಿತಿ[ವಿಶ್ವಸ್ಥ ಸಮಿತಿ] ಇದರ ಲೆಕ್ಕಾಚಾರಗಳು ಹಾಗೂ ವ್ಯವಸ್ಥೆಗೆ ಬೇಕಾಗುವ ಪಾತ್ರೆ-ಪಗಡೆ ಎಲ್ಲವನ್ನೂ ಒಟ್ಟುಗೂಡಿಸುತ್ತಿತ್ತು.

ಅಂತೂ ಬಹು ನಿರೀಕ್ಷಿತ ಚಾ ಪಾರ್ಟಿ ಬಂದೇ ಬಿಟ್ಟಿತು. ದೇವಸ್ಥಾನದ ಚಂದ್ರಶಾಲೆಯಲ್ಲಿ [ಪಕ್ಕದ ಹೊರಾವರಣದಲ್ಲಿರುವ ಚಂದ್ರಾಕಾರದ ಕಟ್ಟಡ.] ಕಟ್ಟಿಗೆಯ ಒಲೆ ಉರಿಯತೊಡಗಿತ್ತು. ನಾಣಣ್ಣ[ನಾರಯಣ] ಮತ್ತು ಸೀತಣ್ಣ[ಸೀತಾರಾಮ]ಇಬ್ಬರು ಚಾ ಮಾಡುತ್ತಿದ್ದರು. " ಚಾ ರೆಡಿ"ಅಂತ ಕರೆಬಂದ ತಕ್ಷಣ ಭಜನೆ ಮಾಡುವವರಲ್ಲಿ ಕೆಲವರು ಚಾ ಪಾರ್ಟಿಗೆ ಕುಳಿತುಕೊಳ್ಳಲು ತಯಾರಾದರು. ಭಜನೆ ಮಾಡುವುದಕ್ಕೆ ಪರವೂರಕಲಾವಿದರೂಬರುತ್ತಿದ್ದರು. ಅವರಿಗೆ ತಮ್ಮ ಕಂಠಸಿರಿಯನ್ನು ನಮ್ಮೂರ ಜನರಿಗೆ ತೋರಿಸಿಕೊಳ್ಳುವ ಹೆಚ್ಚುಗಾರಿಕೆಯಿರುತ್ತಿತ್ತು. ಅದರಲ್ಲೂ ಮದುವೆಗೆ ಬೆಳೆದ ವಯಸ್ಸಿನ ಹುಡುಗರ ಸಂಖ್ಯೆ ಜಾಸ್ತಿ. ತಾನು ಚೆನ್ನಾಗಿ ಹಾಡುವುದನ್ನು ನೋಡಿ ಯಾರಾದರೂ ಹುಡುಗಿಯರೋ ಅವರ ಅಪ್ಪಂದಿರೋ ತಮ್ಮನ್ನು ಮಾತನಾಡಿಸಿ ಸಂಬಂಧ ಕುದುರಬಹುದೇನೋ ಎಂಬ ಅನಿಸಿಕೆ ಅವರದಾಗಿತ್ತು! ಅಪರೂಪಕ್ಕೊಮ್ಮೆ ಹಾಗೇ ನೋಡಿ ಕಣ್ಣಿಟ್ಟು ಹುಡುಗರಿಗೆ ತಮ್ಮ ಮಕ್ಕಳ ಜಾತಕಗಳನ್ನು ತಲ್ಪಿಸುವ ಕನ್ಯಾಪಿತೃಗಳೂ ಇದ್ದರು ಎಂಬುದು ನಮಗೆ ಆವಾಗ ತಿಳಿಯುತ್ತಿರಲಿಲ್ಲ. ಅಂತಹ ಕಲಾವಿದರಿಗೆ ಚಾ ಪಾರ್ಟಿಯಲ್ಲಿ ಮೊದಲ ಆದ್ಯತೆ. ನಮ್ಮ ಸರದಿ ಬಂದಾಗಲೇ ತಿಳಿದಿದ್ದು ಹಾಲು ಕಮ್ಮಿಹಾಕಿರುವ ಕೆಂಪನೆಯ ಖಡಕ್ ಚಾ ಜೊತೆಗೆ ಒಂದೊಂದು ಕೊಬ್ಬರಿ ಮಿಠಾಯಿ, ಕಲಸಿದ ತೆಳುಅವಲಕ್ಕಿ[ ಕೆಂಪಕ್ಕಿಯ ರುಚಿಯಾದ ಊರ ಮಿಲ್ಲಿನಲ್ಲೇ ಮಾಡಿಸಿದ ಪೇಪರ್ ಅವಲಕ್ಕಿಗೆ ಕಾಯಿತುರಿ,ಬೆಲ್ಲ, ಮೆಣಸು, ಸಾಂಬಾರ್ ಪುಡಿ ಹಾಕಿ ಕಲಸುತ್ತಿದ್ದರು]. ರಾತ್ರಿ ಅದೂ ದೇವಸ್ಥಾನಗಳಲ್ಲಿ ಇನ್ನೇನು ಮಾಡಲು ಸಾಧ್ಯ ಬಿಡಿ. ಇಲ್ಲಿ ಚಾ ಪಾರ್ಟಿಯಲ್ಲಿ ಸಿಗುವ ಪದಾರ್ಥಗಳಿಗಿಂತ ಚಾ ಪಾರ್ಟಿಯಲ್ಲಿ ಕುಳಿತು ದೇವಸ್ಥಾನದಲ್ಲಿ ಪಡೆದ ಆತಿಥ್ಯವೇ ಒಂಥರಾ ಥ್ರಿಲ್ಲಿಂಗ್ ಆಗಿರುತ್ತಿತ್ತು. ನಮ್ಮೂರಿಗೆ ಕಲಾವಿದರು ಬಂದಂತೇ ನಮ್ಮೂರ ಹುಡುಗಕಲಾವಿದರುಪಕ್ಕದ ಊರುಗಳಿಗೆ ಅಲ್ಲಿನ ಭಜನೆ ಮಂಗಲ ಕಾರ್ಯಕ್ಕೆ ಹೋಗುವುದಿತ್ತು. ಇದು ಒಂದು ರೀತಿ ಸೌಹಾರ್ದಕ್ಕೆ, ಸಂಬಂಧಕ್ಕೆ ಅನುಕೂಲವೂ ಆಗಿತ್ತು. ’ಭಾವೀ ಮಾವಂದಿರಮುಂದೆ ಹಾಡುವ ಕಲೆಗಾರಿಕೆ ಹುಡುಗರನ್ನು ಅಲ್ಲಲ್ಲೇ ಪುಳಕಗೊಳಿಸುತ್ತಿತ್ತು. ಇನ್ನು ಅಪ್ಪಿ ತಪ್ಪಿ ಮದುವೆಗೆ ಬೆಳೆದು ನಿಂತ ಹುಡುಗಿಯರೂ ಆಗಾಗ ಕಂಡರೆ[ಯಾಕೆಂದರೆ ಕಲಾವಿದರು ಹಗಲು ಹೊತ್ತಿನಲ್ಲೂ ಇರುತ್ತಿದ್ದರು] ಭಜನೆಯ ಗತಿಯೇ ಬದಲಾಗುತ್ತಿತ್ತೇನೋ ನಮಗದು ಅರಿವಿಲ್ಲ!

ಬರುಬರುತ್ತ ಮೈಕಾಸುರನ ಬಾಡಿಗೆ ಕಮ್ಮಿಯಾಯ್ತು. ಬಾಡಿಗೆ ಮೈಕಣ್ಣಗಳ ಸಂಖ್ಯೆ ಜಾಸ್ತಿಯಾಯ್ತು. ಹೀಗಾಗಿ ಊರಲ್ಲಿ ಮದುವೆ-ಮುಂಜಿ ಥರದ ಏನೇ ಕಾರ್ಯಕ್ರಮಗಳಿದ್ದರೂ ಮೊದಲಾಗಿ ಹಾಕುವುದು ಮೈಕು. ಮೈಕಿನ ಅವಾಂತರ ತಾಳಲಾರದೇಮೈಕಾಸುರನೆಂಬ ಬಿರುದನ್ನು ಮೈಕಿಗೆ ನೀಡಲಾಗಿತ್ತು. ಅಲ್ಲೂ ಅಷ್ಟೇ ಹೆಂಗಸರು-ಮಕ್ಕಳು ನಾ ಮುಂದು ತಾಮುಂದು ಎಂದು ಹಾಡಲು ತರಾತುರಿಯಲ್ಲಿ ನಿಂತಿರುತ್ತಿದ್ದರು. ನಮ್ಮಂತಹ ಗಂಡುಮಕ್ಕಳೂ ಹಿಂದೇನೂ ಇರಲಿಲ್ಲ. ಆದರೆ ಮೈಕ್ ಹಿಡಿದ ಹೆಂಗಸರ ದಂಡಿನ ನಡುವೆ ನಮಗೆ ಬಹಳ ಮುಜುಗರವಾಗುತ್ತಿತ್ತು-ಹೀಗಾಗಿ ಒತ್ತರಿಸಿ ಬರುವ ಒತ್ತಾಸೆಯನ್ನು ಅಲ್ಲೇ ಒತ್ತಿಟ್ಟು ತಾನಾಗೇ ಸಿಕ್ಕರೆ ಮಾತ್ರ ಹಾಡುತ್ತಿದ್ದೆವು. ಯಾರಾದರೂ ಊರವರು " ನಿನ್ನ ಹಾಡು ಕೇಳಿದೆ ಮಾರಾಯ, ಚಲೋ ಇತ್ತು " ಎಂದುಬಿಟ್ಟರೆ ಪಿ.ಬಿ.ಶ್ರೀನಿವಾಸರಿಗೆ ಪ್ರಶಸ್ತಿ ಕೊಟ್ಟರೂ ಸಿಗದಂತಹ ಗೌರವ ನಮ್ಮೊಳಗೇ ನಮಗೆ ದಕ್ಕುತ್ತಿತ್ತು. ಅದರಲ್ಲಂತೂ ಆಚೀಚೆಯ ಮನೆಯವರು ನಮ್ಮನೆಗೆ ಬಂದು " ಇಂವ ಚಲೋ ಹಾಡ್ತ ಮಾರಾಯ " ಅಂತ ಹೇಳಿ ಒಂದು ಚಾ ಕುಡಿದು ಹೋಗಿಬಿಟ್ಟರೆ ಇನ್ನೆಲ್ಲಾದರೂ ಅವರನ್ನು ಮತ್ತೆ ನೋಡಿದಾಗ ನಾಚಿಕೆಯೋ ಅವರಮೇಲೆ ಗೌರವವೋ ಏನೋ ಸಾಧಿಸಿದೆನೆಂಬ ಹೆಗ್ಗಳಿಕೆಯ ಭಾವವೋ ಅಂತೂ ಮನಸ್ಸಿನ ಮೂಲೆಯಲ್ಲಿ ಹೇಳಲಾಗದ ವಿಶೇಷ ಭವನಾಲಹರಿಯೇ ಚಿಮ್ಮಿ ಹರಿಯುತ್ತಿತ್ತು!

ಮದುವೆಗಳಲ್ಲೂ ನಮ್ಮಲ್ಲಿ ಚಾ ಪಾರ್ಟಿಗಳಿರುತ್ತಿದ್ದವು. ಬೆಳಗಿನ ೧೧ ಗಂಟೆಯ ಒಳಗೆ ಬಂದವರಿಗೆ ತಿಂಡಿ-ಚಾ ಕೊಡುವ ಪದ್ಧತಿ ಇತ್ತು. ಅದರದ್ದೇ ಒಂದು ವಿಶೇಷ ಕಥೆಯನ್ನು ಮತ್ತೊಮ್ಮೆ ನೋಡೋಣ, ಸುಮ್ಮನೇ ಓದಿದ ಹಾಗಲ್ಲ, ಮನದಲ್ಲೇ ನಕ್ಕಿ ಮಜಾತೆಗೆದುಕೊಳ್ಳುವುದಲ್ಲ, ಎಲ್ಲಾದರೂ ಚಾ ಪಾರ್ಟಿ ಇದ್ದರೆ ಹೇಳಿ, ಒಮ್ಮೆ ಸೇರಿಕುಳಿತು ಹರಟುತ್ತ ಚಾ ಕುಡಿಯೋಣ ಆಗದೇ ?