ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 6, 2010

ಭಾಗೀರಥಿ














ಭಾಗೀರಥಿ


ಭಾಗೀರಥಿ ಬರಲಿಲ್ಲ ಎಂಬುದು ಎಲ್ಲರ ಮನಸ್ಸಿಗೆ ಬೇಸರತಂದಿತ್ತು. ಬಹಳಕಾಲದಿಂದ ಭಾಗೀರಥಿ ಎಂದರೆ ನಮ್ಮೆಲ್ಲರ ಮೆಚ್ಚುಗೆ ಪಡೆದಿದ್ದಳು. ಅವಳ ಅಪರೂಪದ ರೂಪ, ಅವಳ ಸೌಮ್ಯ ಸ್ವಭಾವ, ಸಮಯಪ್ರಜ್ಞೆ ಮತ್ತು ಶಿಸ್ತು ಇದನ್ನೆಲ್ಲ ನೋಡಿದರೆ ಇವಳಿಗ್ಯಾರು ಇಷ್ಟು ಚೆನ್ನಾಗಿ ಹೇಳಿಕೊಟ್ಟರು ಎಂಬುದೇ ಅರ್ಥವಾಗದ್ದು ನಮಗೆ! ಬಹುಶಃ ಪೂರ್ವಜನ್ಮದ ಸ್ಮರಣೆಯೋ ಏನೋ ಭಾಗೀರಥಿ ನಿಜವಾಗಿಯೂ ಕಾಶೀ ಭಾಗೀರಥಿಯ ಅಪ್ಪಟ ಸಂಯಮವನ್ನೂ, ಸಹನೆಯನ್ನೂ, ಗುಣಧರ್ಮವನ್ನೂ ಪಡೆದವಳು.

ಮಳೆಗಾಲದ ಕರಾವಳಿಯ ದಿನಗಳೇ ಹಾಗೆ. ಅಲ್ಲಿ ಧೋ ಎಂದು ಸುರಿವ ಮುಸಲಧಾರೆಗೆ ಕೆಲವೊಮ್ಮೆ ದಿನಗಟ್ಟಲೆ ಕೆಲವೊಮ್ಮೆ ವಾರಗಟ್ಟಲೆ ಬಿಡುವೇ ಇರುತ್ತಿರಲಿಲ್ಲ. ಮಳೆಗಾಲ ಬಂತೆಂದರೆ ಹಳ್ಳಿಯ ಜೀವನವೆಲ್ಲ ದ್ವೀಪವಾಸಿಗಳ ಜೀವನದ ರೀತಿ ಆಗಿ ಬಿಡುತ್ತಿತ್ತು. ಪಟ್ಟಣ ಮತ್ತು ಹಳ್ಳಿಗಳ ನಡುವೆ ಸಂಪರ್ಕವೇ ಕಡಿದ ರೀತಿ ಇರುತ್ತಿತ್ತು. ಆಕಾಲದಲ್ಲಿ ಅಷ್ಟಾಗಿ ಸ್ಥಿರದೂರವಾಣಿಗಳು ಎಲ್ಲಕಡೆ ಲಭ್ಯವಿರಲಿಲ್ಲ. ದಿನಪತ್ರಿಕೆ, ಟಿ.ವಿ. ಯಾವುದೂ ಇರಲಿಲ್ಲ. ಅಂದಿನ ಮಹೋನ್ನತ ವಾರ್ತಾಮಾಧ್ಯಮವೆಂದರೆ ರೇಡಿಯೋ. ಅದು ಬಿಟ್ಟರೆ ಗ್ರಾಮಲೆಕ್ಕಿಗರು, ಸರಕಾರೀ ದಾಯಿಗಳು[ಹೆಲ್ತ್ ಇನ್ಸ್ಪೆಕ್ಟರ್ ಅಂತಾಗಿದೆ ಈಗ], ಮಾಸ್ತರರು ಇಂಥವರೇ ಸುದ್ದಿಮಾಧ್ಯಮವಾಗಿ ಶಾಲೆಯ ಮಕ್ಕಳ ಮೂಲಕ, ತಿರುಗಾಟದಲ್ಲಿ ಅಲೊಮ್ಮೆ ಇಲ್ಲೊಮ್ಮೆ ಭೇಟಿಯಾಗುವ ಜನರ ಮೂಲಕ ವಾರ್ತಾಲಾಪ ತಿಳಿಸುತ್ತಿದ್ದರು. ಆಗೆಲ್ಲ ಜನಸಂಖ್ಯೆಯೂ ಇಷ್ಟೊಂದು ಇರಲಿಲ್ಲ. ಬಾಂಬು ಚಾಕು-ಚೂರಿ ಸಂಸ್ಕೃತಿ ನಮಗೆಲ್ಲ ಕೇಳರಿಯದ್ದು. ಹೀಗೇ ಬದುಕು ಇರುವಷ್ಟು ಪರಿಕರಗಳಿಂದ ಸಂತೃಪ್ತಿಯಲ್ಲಿ ಯಾವುದೇ ಗೋಜಲುಗಳಿಲ್ಲದೇ ನಡೆಯುತ್ತಿತ್ತು.

ಹಳ್ಳಿಗರಿಗೆ ಅನೇಕ ಗಿಡಮೂಲಿಕೆ ಔಷಧ ಕ್ರಮಗಳು ಗೊತ್ತಿದ್ದವು. ಅವುಗಳಿಂದ ಯಾವುದೇ ಅಪಾಯವಂತೂ ಇರುತ್ತಿರಲಿಲ್ಲ. ಹಲವು ಔಷಧಗಳು ಪರಿಣಾಮಕಾರಿಯಾಗಿ ಕೆಲಸಮಾಡುತ್ತಿದ್ದವು. ವೈದ್ಯರು ಬೇಕೆಂದರೆ ಹತ್ತು-ಹದಿನೈದು ಕೆಲವೊಮ್ಮೆ ಇಪ್ಪತ್ತು ಕಿಲೋಮೀಟರ್ ದೂರದ ಪಟ್ಟಣದಲ್ಲಿ ಇರುವ ಸರಕಾರೀ ಆಸ್ಪತ್ರೆಗೆ ಹೋಗಬೇಕು. ಕೆಲವರ್ಷಗಳ ನಂತರ ಇಂಗ್ಲೀಷ ಮೆಡಿಸಿನ್ ಓದಿದವರು ಬಂದು ಅಲ್ಲಲ್ಲಿ ತಾಸೆರಡು ತಾಸು ದವಾಖಾನೆಯನ್ನು ನಡೆಸಿ ಬೇರೆಲ್ಲಿಗೋ ತೆರಳುತ್ತಿದ್ದರು. ಆದರೂ ಇಂಗ್ಲೀಷ್ ಮೆಡಿಸಿನ್ ಬಳಕೆ ಅಂತಹ ಅನಿವಾರ್ಯ ಅಂತಾದರೆ ಮಾತ್ರವಾಗಿತ್ತು. ಚಿಕ್ಕ-ಪುಟ್ಟ ನಂಜಿನ ಜ್ವರ-ನೆಗಡಿ ಇದಕ್ಕೆಲ್ಲ ಯಾವತ್ತೂ ಕಷಾಯದ ಹೊರತು ಬೇರೆ ಏನೂ ಔಷಧ ಬೇಕಾಗುತ್ತಿರಲಿಲ್ಲ. ಹಳ್ಳಿಯಲ್ಲಿ ಸಿಗುವ ಮುಸ್ತಕ, ಒಂದೆಲಗ, ಕಡ್ಲಂಗಡ್ಲೆ, ಏಕನಾಯಕ,ಕಾಡು ಜೀರಿಗೆ, ಮೆಣಸಿನಕಾಳು, ಅಮೃತಬಳ್ಳಿ, ಕೊಡಸನ ಬೇರು, ನೆಗ್ಗಿನಮುಳ್ಳು, ತೆಂಗಿನಕೊನೆ ಇವೆಲ್ಲ ಗಿಡಮೂಲಿಕೆಗಳೂ ಸೇರಿದಂತೆ ಸಾವಿರಾರು ಮೂಲಿಕೆಗಳು ಹಲವಾರು ಔಷಧ ಪ್ರಕ್ರಿಯೆಗಳಾಗಿ ಬಳಸಲ್ಪಡುತ್ತಿದ್ದವು.

ಸುಬ್ರಾಯ ಹೆಗ್ಡೇರು ಮನಸ್ಸು ಮಾಡಿ ಒಂದು ಆ ಕಾಲದಲ್ಲಿ ಲಭ್ಯವಿದ್ದ ಚಿಕ್ಕ ಲಾರಿಯ ಥರದ ವಾಹನವೊಂದನ್ನು ಖರೀದಿಸಿ ಹಳ್ಳಿಯಿಂದ ಪಟ್ಟಣಕ್ಕೆ ತೆರಳಲು ಸಾರ್ವಜನಿಕರ ಬಾಡಿಗೆಗೆ ಉಪಯೋಗಿಸುತ್ತಿದ್ದರು. ಅದರಲ್ಲಿ ಡ್ರೈವರ್ ಕ್ಯಾಬೀನಿನಲ್ಲಿ ಚಾಲಕ ಮತ್ತು ಯಜಮಾನರನ್ನು ಬಿಟ್ಟರೆ ಮೈಗೆ ಮೈತಾಗಿಸಿ ತಳುತ್ತ ಕುಳಿತರೆ ಒಬ್ಬ ಕೂರಬಹುದಿತ್ತು. ಮಿಕ್ಕಿದವರಿಗೆಲ್ಲ ವಾಹನದ ಹಿಂಬದಿಯಲ್ಲಿ ಟಾರ್ಪಾಲಿನ್ ಕಟ್ಟಿದ ಗೂಡಿನಲ್ಲಿ ಇಕ್ಕೆಲಗಳಲ್ಲಿ ಎಅಡು ಉದ್ದನೆಯ ಮರದ ಬೆಂಚುಗಳು ಇದ್ದವು. ಅದೂ ಭರ್ತಿಯಾದ ಮೇಲೆ ಜನ ನಿಂತುಕೊಂಡೇ ಕೈಗೆ ಸಿಗುವ ಗೂಡಿನ ಮೇಲ್ಚಾವಣಿಗೆ ಕಟ್ಟಿರುವ ಗಳವನ್ನೇ ಹಿಡಿದು ತೂಗಾಡುತ್ತ ಪಟ್ಟಣ ಸೇರಬೇಕಾಗಿತ್ತು. ಅವರು ಬೆಳಿಗ್ಗೆ ಹಳ್ಳಿಗರನ್ನು ಪಟ್ಟಣಕ್ಕೆ ಕರೆದೊಯ್ದು ಬಿಟ್ಟರೆ ಸರಿ ಸುಮಾರು ಮಧ್ಯಾಹ್ನ ಮೂರು ಗಂಟೆಗೆ ಅಲ್ಲಿಂದ ಮರಳಿ ಹೊರಡುತ್ತಿದ್ದರು. ಬರುಬರುತ್ತ ಅವರಿಗೆ ಗಿರಾಕಿ ಜಾಸ್ತಿಯಾಗಿ ಮತ್ತೆರಡು ವಾಹನಗಳನ್ನು ಪಾಳಿಯ ರೀತಿಯಲ್ಲಿ ಬಿಡುತ್ತಿದ್ದರು. ದಿನಸಿ ಸಾಮಾನು, ಪಾತ್ರೆ-ಪಗಡೆ ಇತ್ಯಾದಿ ಮನೆಬಳಕೆಯ ಸಾಮಾನುಗಳನ್ನು ಹಳ್ಳಿಗರು ಅಲ್ಲಿಂದ ತರೋರು. ತರಕಾರಿಯನ್ನು ಕೊಂಡುಕೊಳ್ಳುವ ವಹಿವಾಟು ಮೊದಲಿಗಿರಲಿಲ್ಲ.

ಬಿದ್ದ ಮಳೆಗೆ ಕೆರೆಕಟ್ಟೆಗಳೆಲ್ಲ ತುಂಬಿ ಎಲ್ಲಿ ನೋಡಿದರೂ ಹಳದಿ ಅಥವಾ ಮಣ್ಣಿನ ಬಣ್ಣದ ನೀರು ಕಾಣಿಸುತ್ತಿತ್ತು. ಕೆಲವೇ ದಿನಗಳಲ್ಲಿ ಗುಡ್ಡ ಬೆಟ್ಟಗಳೆಲ್ಲ ಹಸಿರು ಹುಲ್ಲನ್ನು ಹೊದ್ದು, ಗಿಡ-ಮರಗಳೆಲ್ಲ ಉದ್ದಿನವಡೆ ಊದಿದಂತೇ ಹುಲುಸಾಗಿ ಬೆಳೆಯುತ್ತಿದ್ದವು. ಅಲ್ಲಲ್ಲಿ ಗಿಳಿ-ಗೊರವಂಕದಾದಿಯಾಗಿ ಹಲವು ಹಕ್ಕಿಗಳು ಉಲಿವ ದನಿ ಇಂಪಾಗಿ ಕೇಳುತ್ತಿತ್ತು. ಬಣ್ಣ ಬಣ್ಣದ ಎಲೆಗಳು ಚಿಗುರಿ, ಹೂಗಳು ಅರಳಿ ನಿಸರ್ಗಪ್ರೇಮಿಗಳಿಗೆ ಅದೊಂದು ಹಬ್ಬದ ವಾತಾವರಣ. ಬದುಕಿನಲ್ಲಿ ಇದಕ್ಕಿಂತ ಇನ್ನೇನು ಬೇಕು ಎಂಬಷ್ಟು ಕಂಟೆಂಟ್ಮೆಂಟ್ ಇದ್ದ ಜನ ಅವತ್ತಿಗಿದ್ದರು! ರಾಜಕೀಯ ಬೆಳೆದಿರಲಿಲ್ಲ. ನ್ಯಾಯ ಎಲ್ಲರಿಗೂ ಒಂದೇ ರೀತಿ ಇತ್ತು. ಯಾರೂ ಯಾರನ್ನೂ ಹತ್ತಿ ತುಳಿಯುತ್ತಿರಲಿಲ್ಲ. ಅವರವರ ಕೆಲಸವಾಯಿತು, ಅವರ ಪಾಡಾಯಿತು. ದಿನಗೂಲಿ ಮಾಡುವ ಜನರಲ್ಲೂ ಜಮೀನುದಾರರಲ್ಲೂ ಒಡೆಯ-ಒಕ್ಕಲಿನ ಹಿತವಾದ ಬಾಂಧವ್ಯವಿತ್ತು. ಕೂಲಿಯ ಜನರ ಊಟ-ತಿಂಡಿಗಳೆಲ್ಲ ಬಹುತೇಕ ಒಡೆಯನಮನೆಯಲ್ಲೇ ನಡೆದುಹೋಗುತ್ತಿತ್ತು. ಸಾಯಂಕಾಲ ಮನೆಗೆ ಹೋಗುವಾಗ ಕೂಡ ಅಷ್ಟಿಷ್ಟು ಆಹಾರ ಪದಾರ್ಥಗಳನ್ನು ಅವರು ತೆಗೆದುಕೊಂಡು ಹೋಗುತ್ತಿದ್ದರು. ಅವರಿಗೆ ಕೂಲಿಯ ಹಣವನ್ನು ಮುಂಗಡವಾಗಿ ಕೆಲವರು ಅದಕ್ಕೆ ಇದಕ್ಕೆ ಅಂತ ಪಡೆದರೆ ಕೆಲವರು ಕೈಗಡ ಅಂತ ಸಾಲಪಡೆದು ಆಮೇಲೆ ಕಂತಿನ ರೂಪದಲ್ಲಿ ದುಡಿದ ಕೂಲಿಯಲ್ಲಿ ಆದಷ್ಟು ಆದಷ್ಟು ಮರಳಿ ಕಟ್ಟೋರು. ಕೂಲಿಯವರ ಮಕ್ಕಳಿಗೆ ಶಾಲೆ ಓದಲು ಖರ್ಚಿಗೆ, ಅವರಿಗೆ ಕೆಲ ಬಟ್ಟೆ-ಬರೆಗಳು, ಹಳೆಯ ಪುಸ್ತಕಗಳು ಇವೆಲ್ಲವನ್ನೂ ಕೊಡುತ್ತಿದ್ದರು. ಶಾಲೆಗಳಲ್ಲಿ ಕೂಲಿಮಾಡುವವರ ಮಕ್ಕಳು- ಜಮೀನುದಾರರ ಮಕ್ಕಳು ಎಂಬ ಭೇದವಿರಲಿಲ್ಲ. ಎಲ್ಲರೂ ಸ್ನೇಹಿತರಾಗಿ ಓದುತ್ತಿದ್ದೆವು.


[ಆಯಾಯ ಕಾಲಕ್ಕೆ ಬೇರೆ ಬೇರೆ ಹಣ್ಣು-ಕಾಯಿ ಪದಾರ್ಥಗಳು ನೈಸರ್ಗಿಕವಾಗಿ ಬೆಳೆದಿದ್ದನ್ನು ಯಜಮಾನರುಗಳೂ ಕೂಲಿಗಳೂ ಎಲ್ಲರೂ ಉಪಯೋಗಿಸುತ್ತಿದ್ದರು. ವಾಸ್ತವವಾಗಿ ಕೂಲಿಗಳ-ಜಮೀನ್ದಾರರ ನಡುವೆ ಅದೆಂತಹ ಆತ್ಮೀಯತೆ ಇತ್ತು ಎಂದರೆ ಅದನ್ನು ಈ ಕಾಲದಲ್ಲಿ ಹಳ್ಳಿಗಳಲ್ಲಾಗಲೀ, ಪಟ್ಟಣಗಳಲ್ಲಾಗಲೀ ನೋಡಲು ಸಾಧ್ಯವಿಲ್ಲ. ಕೂಲಿಜನರನ್ನು ಅವರು ಕೂಲಿಗಳು ಎನ್ನುವ ಬದಲು ಮನೆಮಂದಿಯ ರೀತಿಯಲ್ಲೇ ನಡೆಸಿಕೊಂಡ ಕಾಲಘಟ್ಟವದು. ಆ ನಂತರ ರಾಜಕೀಯ ಪ್ರವೇಶದಿಂದ ಹಳ್ಳಿಗಳು ಎಂದಿನ ಮಾರ್ದವತೆಯನ್ನೂ ಆ ಆಹ್ಲಾದಕರ ವಾತವರಣವನ್ನೂ ಆ ಪ್ರೀತಿ-ವಿಶ್ವಾಸವನ್ನೂ ಕಳೆದುಕೊಂಡು ಪಟ್ಟಣದ ಸಂಸ್ಕೃತಿಗೆ ಹಳ್ಳಿ ತನ್ನನ್ನು ಮಾರಿಕೊಂಡಿತು. ಎಲ್ಲೆಲ್ಲಿಯೂ ದುಡ್ಡೇ ದೊಡ್ಡಪ್ಪಗಳಾದವು! ಮೂಲ ವೃತ್ತಿಯನ್ನು ಬಿಟ್ಟು ಜನ ದುಡ್ಡು ಹೆಚ್ಚು ಬರುವ ದಂಧೆಗೆ ಇಳಿಯ ತೊಡಗಿದರು. ವಾತಾವರಣ ಕ್ರಮೇಣ ಕಲುಷಿತವಾಗಿ ಗ್ರಾಮೀಣ ಸೊಗಡನ್ನು ಕಳೆದುಕೊಂಡಿತು. ಮುಖದಲ್ಲಿ ನಗುಹೊತ್ತ ಜನಸಮುದಾಯ ಹೋಗಿ ಮುಖ ಅಡ್ಡಹಾಕಿ ತಿರುಗುವ ಕೆಟ್ಟ ಸಂಸ್ಕೃತಿ ಕಾಲಿಟ್ಟಿತು.]

ಬೇಸಿಗೆಯಲ್ಲಿ ಮಾಡಿ ಪೇರಿಸಿ ಇಟ್ಟ ಹಲಸಿನ ಹಪ್ಪಳಗಳು ಮಳೆಗಾಲದಲ್ಲಿ ಬಹಳ ರುಚಿಕಟ್ಟಾಗಿರುತ್ತಿದ್ದವು. ಅವುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕರಿದೋ, ಕೆಂಡದ ಒಲೆಯಲ್ಲಿ ಸುಟ್ಟಿ ಕೊಬ್ಬರಿ ಎಣ್ಣೆ ಸವರಿಯೋ ಬಳಸುತ್ತಿದ್ದರು. ಜೊತೆಗೆ ತೆಂಗಿನಕಾಯಿತುರಿ ಹಚ್ಚಿದ ಈ ಹಪ್ಪಳಗಳು ಅಲ್ಲಿನ ಮಳೆಗಾಲಕ್ಕೆ ಹೇಳಿಮಾಡಿಸಿದ ವ್ಯಂಜನಗಳು! ಕರಿದ ಹಲಸಿನ ಹಪ್ಪಳವನ್ನು ನುರಿದು ಅದಕ್ಕೆ ಒಗ್ಗರಣೆ ಹಾಕಿ, ಕಾಯಿತುರಿಯೊಂದಿಗೆ ಸ್ವಲ್ಪ ಖಾರ ಮತ್ತು ಬೆಲ್ಲ ಸೇರಿಸಿದರೆ ಅದನ್ನು ಮೆಲ್ಲುವಾಗಿನ ಆನಂದ ಇಂದಿನ ನಮ್ಮ ಪಿಝ್ಝಾ ಕಾಲದಲ್ಲಿ ಬರೇ ನೆನೆಪು ಮಾತ್ರ. ಹಲಸಿನ ತೊಳೆಯನ್ನು ಸೀಳಿ ಕರಿದು, ಉಪ್ಪು-ಖಾರ ಹದವಗಿ ಹಾಕಿದ ಚಿಪ್ಸು ಇನ್ನೊಂದು ಅದ್ಬುತ ವ್ಯಂಜನ. ನೆನಪುಗಳ ಮಾಯಲೋಕದಲ್ಲಿ ನಾವು ಕೆದಕೂಪದ ಕೈಕೋಲಿನಂತೇ ನಮ್ಮ ಯೋಚನೆಯನು ಹರಿಬಿಟ್ಟರೆ ಅಂದಿನ ದಿನಗಳ ವಿಚಾರ ಅದು ಮರೆಯಲಾಗದ ಆಚಾರ. ಅಮಿತ ಸಹಜ ಆನಂದದ ಆಗರ.

ಸುರಿವ ಮಳೆಯ ದಿನಗಳಲ್ಲಿ ಕರಿದ ಹಪ್ಪಳವನ್ನು ತಿನ್ನುತ್ತ ಅಜ್ಜ-ಅಜ್ಜಿ-ಕೂಲಿಯಾಳುಗಳು ಹೇಳುವ ಕಥೆಗಳನ್ನು ಕೇಳುತ್ತಿದ್ದರೆ ಅದು ಮನಸ್ಸಿಗೆ ಸಿಗುವ ಮತ್ತೊಂದು ವ್ಯಂಜನ. ಜನಸಾಮಾನ್ಯರ ಬದುಕಲ್ಲಿ ನಡೆದ, ನಡೆಯಬಹುದಾದ ಹಲವು ಘಟನೆಗಳನ್ನು ಕಥಾರೂಪದಲ್ಲಿ ಮಕ್ಕಳಿಗೆ ಹೇಳುವ ಅಂದಿನ ಕ್ರಮ ಅತ್ಯಂತ ಅನುಭವವನ್ನು ತರುವಂಥದ್ದೂ ಮತ್ತು ಜೀವನ ನಿರ್ವಹಣೆಗೆ ಮಾರ್ಗದರ್ಶಿಯೂ ಆಗುತ್ತಿತ್ತು. ಅಜ್ಜ-ಅಜ್ಜಿಯರು ರಾಮಯಣ ಮಹಾಭಾರತದ ಕಥೆಗಳನ್ನು ಹೇಳಿದರೆ ಕೂಲಿಯ ಮಾದೇವ, ಹನಮಂತ, ನಾಗು, ಈಶ್ವರ, ಸಣಕೂಸ, ಅಮಗೂಸ ಇವರೆಲ್ಲ ಥರಾವರಿ ಕಥೆಗಳನ್ನು ಹೇಳುತ್ತಿದ್ದುದುಂಟು. ನಾವು ಮಕ್ಕಳು ಅವರು ತೋಟ-ತುಡಿಕೆಗಳಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೇ ಹೋಗಿ ಅವರನ್ನು ಕೇಳಿಕೊಂಡರೆ ಅವರಿಗೂ ಕೆಲಸದ ಆಯಾಸ ಗಮನಕ್ಕೆ ಬರುತ್ತಿರಲಿಲ್ಲ, ನಮಗೂ ಕಥೆಕೇಳಿ ಮನಸ್ಸು ಮಜಾ ಅನುಭವಿಸುತ್ತಿತ್ತು. ಈ ಕಥೆಗಳಲ್ಲಿ ಒಬ್ಬೊಬ್ಬರ ಕಥೆ ಹೇಳುವ ಕ್ರಮಗಳೂ ಅತಿ ವಿಶಿಷ್ಟವಾಗಿರುತ್ತಿದ್ದವು. ಆಯಾಯ ಕಥೆಗಳನ್ನು ಅವರವರ ಬಾಯಿಂದಲೇ ಕೇಳಿದರೇ ಚೆನ್ನ ಎನಿಸುತ್ತಿತ್ತು. ಒಂದರ್ಥದಲ್ಲಿ ಅವರಲ್ಲೆಲ್ಲಾ ಒಬ್ಬೊಬ್ಬ ಕಥೆಗಾರನಿದ್ದ! ಕಲಾವಿದನೂ ಇದ್ದ! ಸಂಗೀತಗಾರನೂ ಇದ್ದ! ಕೂಲಿಗಳ ಜೀವನ ಕ್ರಮದಲ್ಲಿ ಸ್ನಾನ ದಿನಾಲೂ ಸಂಜೆ ಇರುತ್ತಿತ್ತು, ಹಗಲೆಲ್ಲಾ ಜಮೀನಿನಲ್ಲಿ ದುಡಿದು ಹೈರಾಣಾದ ಮೈ-ಮನಕ್ಕೆ ಮರದ ಕುಂಟೆ ಹೆಟ್ಟಿ ತಿರುವಿದ ಸತತ ಉರಿವ ಬೆಂಕಿಯಲ್ಲಿ ಕಾಯಿಸಿದ ಹಂಡೆಯ ಮರಳುವ ನೀರಿನಲ್ಲಿ ಸ್ನಾನಮಾಡಿಬಿಟ್ಟರೆ ಆ ದಿನದ ಆಯಾಸವೆಲ್ಲ ಪರಿಹಾರವಾದಂತೇ. ಅವರು ಸ್ನಾನ ಮಾಡುವಾಗ ಕೂಡ ನಾವು ಕಥೆಗಾಗಿ ಬೆನ್ನುಹತ್ತಿತ್ತಿದ್ದುದುಂಟು!

ಮಳೆಗಾಲದಲ್ಲಿ ಅಡಿಕೆತೋಟಗಳಲ್ಲಿ ಕೊಳೆಮದ್ದು[ಮೈಲುತುತ್ತು-ಕಾಪರ್ ಸಲ್ಫೇಟ್+ಸುಣ್ಣ] ಸಿಂಪಡಿಸಲು ಹೋದ ಕೂಲಿ ಜನ ಬಂದಿಳಿದು ಮೈಗೆಲ್ಲ ಮೆತ್ತಿದ ಕೊಳೆಮದ್ದಿನ ದ್ರಾವಣದ ಕಲೆಗಳನ್ನು ಕೊಬ್ಬರಿ ಎಣ್ಣೆ ನೀವಿಕೊಳ್ಳುತ್ತ ಹುಣಿಸೇ ಹಣ್ಣಿನಿಂದ ಉಜ್ಜಿ ತೊಳೆದುಕೊಳ್ಳುತ್ತ ಬಾಯಿಂದ ಉಸ್ ಉಸ್ ಉಸ್ ಎನ್ನುವಾಗ ನಮಗೂ ಒಂಥರಾ ಸ್ನಾನಮಾಡಿಬಿಡಬೇಕೆನ್ನುವ ಆಸೆ ಅಮರಿಕೊಳ್ಳುತ್ತಿತ್ತು. ಚಳಿ ಹಿಡಿವ ಮಳೆಗಾಲದಲ್ಲಿ ಹಂಡೆಯಲ್ಲಿ ಮರಳುವ ಬಿಸಿ ನೀರು ಯಾರಿಗೆ ಬೇಡ ಹೇಳಿ? ಸ್ನಾನ ಮಾಡಿದ ತರುವಾಯ ಅವರು ಬಟ್ಟೆಗಳನ್ನೆಲ್ಲ ಆಲ್ಲೆಲ್ಲೋ ಹೊರಗೆ ಬಿದಿರಗಳಗಳ ಮೇಲೆ ಹರವುತ್ತಿದ್ದರು. ದೇವರನ್ನು ನೆನೆದು ಕೈಮುಗಿದು ಮನೆಯ ಜಗುಲಿಯಲ್ಲಿ ಬಂದು ಕೂತರೆ ಅವರಿಗೆ ಬಿಸಿ ಬಿಸಿ ಊಟ ರೆಡಿ. ಬೆಳಿಗ್ಗೆ ಮೂರಾವರ್ತಿ ತಿಂಡಿ ತಿನ್ನುವ ಈ ಜನ ಹೊಟ್ಟೆ ಭಾರವಾದರೆ ಕೆಲಸಮಾಡಲಗದೆಂದು ಊಟವನ್ನು ಸಾಯಂಕಾಲಕ್ಕೆ ಇಟ್ಟುಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ನಾಗಪ್ಪ ಶೆಟ್ಟಿ ಎಂಬ ೫೫ ವಯಸ್ಸಿನ ವ್ಯಕ್ತಿ ದೂರದ ಊರಿಂದ ನಮ್ಮೂರಿಗೆ ಕೊಳೆಮದ್ದು ಸಿಂಪಡಿಸಲಾಗಿಯೇ ಬರುತ್ತಿದ್ದ. ನಾಗು ಅಥವಾ ನಾಗಪ್ಪಜ್ಜ ವಾರಕಾಲ ನಮ್ಮಲ್ಲೆ ಠಿಕಾಣಿ ಹೂಡಿ ಮದ್ದಿನಕೊಯ್ಲು ಮುಗಿದಮೇಲೆಯೇ ಮನೆಗೆ ತೆರಳುತ್ತಿದ್ದ. ಆತ್ ಇದ್ದಷ್ಟು ದಿನ ಆತನೊಡನೆ ಕಥೆ ಕೇಳದ ದಿನಗಳೇ ಇಲ್ಲ! ಪುಸು ಪುಸು ಬೀಡಿ ಸೇದುತ್ತ ಉಜ್ಜದೇ ಹಾಳುಬಿದ್ದ ಮುರುಕು ಹಲ್ಲುಗಳ ಮಧ್ಯೆ ನಾಲಿಗೆ ಇಟ್ಟು ಆತ ನಗುವುದು ನಮಗೆಲ್ಲ ಇಷ್ಟವಾದ ವಿಷಯ! ಬೀಡಿಯ ನಾತ ರುಚಿಸದಿದ್ದರೂ ಬೀಡಿ ಸೇದುವವರು ನಮ್ಮ ದೋಸ್ತರಾಗಿರುವಾಗ ನಾವು ಬೀಡಿ ಸೇದಬೇಡ ಎಂದು ಹೇಳಲುಂಟೇ? ಹಾಗೊಮ್ಮೆ ಹೇಳಿದರೆ ಕೋಪಿಸಿಕೊಂಡು ಹೇಳಬೇಕಾದ ಕಥೆಗೇ ಸಂಚಕಾರ ಕೊಟ್ಟರೆ? ನಾಗು ಊಟಮಾಡುವಾಗ ಅದೂ ಇದೂ ಬಡಿಸುವ ನೆಪದಲ್ಲಿ ನಮ್ಮ ಸ್ನೇಹಸಂಪಾದನೆ ಆಗುತ್ತಿತ್ತು. ಕಥೆಯೇನು ಪುಕ್ಸಟೆ ಬರುತ್ತದೆಯೇ ಹಾಗಂತ ಅದು ದುಡ್ಡು ಕೊಟ್ಟರೂ ಸಿಗುವಂಥದ್ದಾಗಿರಲಿಲ್ಲ! " ತಮಾ ಏನ್ರ ಅಜ್ಜನ್ ಮನಿಗೆ ಹೋಗ್ಲಿಲ್ವನ ? " ನಾಗಣ್ಣ ಈ ಸ್ವರ ಎತ್ತಿದರೆ ಆತನ ಫ್ರೆಂಡಶಿಪ್ ಗಟ್ಟಿ ಎಂದರ್ಥ, ನಾಗು ಏನೂ ಮಾತನಾಡದೇ ಸುಮ್ಮನಿದ್ದರೆ ಅವನಿಗ್ ಕಥೆ ಹೇಳುವ ಮನಸ್ಸು ಇಲ್ಲ ಎಂದರ್ಥ. ಆತನ ಮುಖಚರ್ಯೆ ನೋಡಿಯೇ ಅರ್ಥಮಾಡಿಕೊಳ್ಳುತ್ತಿದ್ದ ನಮಗೆ ಸಮಯ ಸಂದರ್ಭ ನೋಡಿ ಲಂಚಕೊಟ್ಟು ಸಹಿಮಾಡಿಸಿಕೊಳ್ಳುವ ಸರಕಾರೀ ಅಧಿಕರಿಗಳ ಜೊತೆ ಸಹವಾಸ ಇಟ್ಟುಕೊಂಡಿರುವವರ ರೀತಿ, ಕಥೆ ಕೇಳುವಿಕೆಯ ಪ್ರಸ್ತಾವನೆಯಾಗುತ್ತಿತ್ತು. ಕಥೆ ಪ್ರಾರಂಭವಾದರೆ ರಾತ್ರಿ ದೊಡ್ಡವರು ಬೈಯ್ದು ಊಟಕ್ಕೆ ಹೊತ್ತಾಯ್ತು ಅಂತ ಗದರಿಸುವವರೆಗೂ ಕಥಾಕಾಲಕ್ಷೇಪ ನಡೆದೇ ಇರುತ್ತಿತ್ತು! ಇಂತಹ ನಾಗು ಊರಿಗೆ ಹೋದಮೇಲೆ ಕೆಲದಿನ ನಮಗೆ ಬೇಜಾರಾಗುತ್ತಿತ್ತು.

ಇಂತಹ ಮಳೆಗಾಲದಲ್ಲಿ ಕಂಬಳಿಗೊಪ್ಪೆಯನ್ನೋ ಗುರುಬನ್ನೋ [ತಾಳಿಗರಿಯಿಂದ ಮಾಡಿದ್ದು] ಹಾಕಿಕೊಂಡು ತೋಟ-ಗದ್ದೆಗಳಲ್ಲಿ, ಬೆಟ್ಟ್-ಬೇಣಗಳಲ್ಲಿ ಹತ್ತಾಡಿ ಸುತ್ತಿಳಿದು ಹರುಷಪಡೆವ ಮಕ್ಕಳು ನಾವಾಗಿದ್ದೆವು. ಬೇಸಿಗೆಯಲ್ಲಿ ಕಸುವಿನಿಂದ ಬೀಸಿ ಎಶೆದ ಕಲ್ಲಿಂದ ಬಿದ್ದ ಮಾವಿನ ಮಿಡಿಯನ್ನು ಅಂಗಿಯ ಕೆಳಬಾಗದಲ್ಲಿ ಸುತ್ತಿ, [ಕಚ್ಚಿ ತುಂಡುಮಾಡಿ] ಕಾಗೆ ಎಂಜಲು ಮಾಡಿ ಹಂಚಿಕೊಂಡು ತಿನ್ನುತ್ತಿದ್ದ ನಾವುಗಳು ಈಗೀಗ ಒಂದೇ ಕಂಬಳಿಗೊಪ್ಪೆಯಲ್ಲಿ ಇಬ್ಬಿಬ್ಬರು ತೂರಿಕೊಂಡು ಹೋಗಿ ಆಡುವುದಿತ್ತು.ಮಳೆ ಬಿಡುವುಕೊಟ್ಟಾಗ, ಶಾಲೆಗೆ ರಜೆ ಸಿಕ್ಕಿದಾಗ ಆಡುವ ಕಬಡ್ಡಿ, ಮರಕೋತಿ, ಕಳ್ಳ-ಪೋಲೀಸ್, ಚಿನ್ನಿ-ದಾಂಡು[ನಮ್ಮಲ್ಲಿ ಇದಕ್ಕೆ ಹಾಣೆಗೆಂಡೆ ಅಥವಾ ಹಾಣೇಕೋಲು ಎನ್ನುತ್ತಿದ್ದರು!] ಇವುಗಳಿಗೇನೂ ಕೊರತೆ ಇರಲಿಲ್ಲ. ಇವತ್ತು ದೋಸ್ತಿ ಇದ್ದರೆ ನಾಳೆ ಬದ್ಧ ವೈರಿಗಳಂತೇ ಆಗುವ ಮಕ್ಕಳ ನಡುವಿನ ಕ್ಷಣಿಕ ನಿಷ್ಠುರದ ಘಟನೆಗಳು ಬಹಳವೇ ಇದ್ದವು. ಅದೇನೇ ಇದ್ದರೂ ರಜಾಸಿಕ್ಕಾಗ ಆಡಲು ವೈರತ್ವವನ್ನು ಮರೆತು ಕೈಯ ತೋರುಬೆರಳು-ಮಧ್ಯಬೆರಳು ಎರಡ್ನ್ನು ಸೇರಿಸಿ ಹಿಡಿದರೆ ಅಲ್ಲಿಗೆ ರಾಜಿಯಾಗಿಬಿಡುತ್ತಿತ್ತು! ನಮ್ಮ ಆಟಗಳ ನಡುವೆ ಹಲವಾರು ಗ್ರಾಮೀಣ ಸಾಮಗ್ರಿಗಳಿರುತ್ತಿದ್ದವು. ನಮಗೂ ದನ-ಕರುಗಳಿಗೂ ಕೂಡ ಆಟದ ಪ್ರೀತಿಯ ನಂಟು! ಸ್ನಾನಕ್ಕೂ ಮುನ್ನ ಮನೆಯಲ್ಲಿ ರಜದಲ್ಲಿ ಕೊಟ್ಟಿಗೆಗೆ ಹೋಗಿ ಅಲ್ಲಿರುವ ಸಣ್ಣ ಕರುಗಳನ್ನೋ ಅನಾರೋಗ್ಯದಿಂದ ಗೋಮಾಳಕ್ಕೆ ತೆರಳದೇ ಅಲ್ಲೇ ಇರುವ ದನವನ್ನೋ ಮಾತಾಡಿಸುತ್ತ, ಹುಲ್ಲು ನೀಡುವುದು, ಮೈ ಉಜ್ಜುವುದು ಆಮೇಲೆ ಪ್ರೀತಿಯಿಂದ ಅವುಗಳು ನಾವು ಅಂಗಿ ತೆಗೆದು ಕುಳಿತರೆ ಮೈಯ್ಯನ್ನೆಲ್ಲ ನೆಕ್ಕುತ್ತಿದ್ದವು. ಅವು ಹಾಗೆ ನೆಕ್ಕುವಾಗ ತರಿತರಿಯಾದ ಅವುಗಳ ನಾಲಿಗೆ ತಗಿದರೆ ಕಚಗುಳಿಯಗುತ್ತಿತ್ತು. ಇದನ್ನೆಲ್ಲಾ ಅನುಭವಿಸಲು ನಮಗೆ ರಜವೇ ಸಿಗುವುದಿಲ್ಲ ಎನ್ನುವ ಬೇಸರವೂ ಆಗುತ್ತಿತ್ತು. ಯಾರದರೂ ರಾಜಕೀಯದವರು ಸತ್ತರೆ ನಮಗೆ ಶೋಕಾಚರಣೆಗಿಂತ ರಜೆಸಿಕ್ಕುವುದಕ್ಕೆ ಆನಂದವಾಗುತ್ತಿತ್ತು! ಹೀಗಾಗಿ ನಾವು ಮಕ್ಕಳು ನಮಗೇನು ಗೊತ್ತು- ಯಾರಾದರೂ ರಾಜಕಾರಣಿಗಳು ಸಾಯುವುದನ್ನೇ ಕಾಯುತ್ತಿದ್ದೆವು!

ನಮ್ಮಲ್ಲಿ ಆಗ ೩೪-೩೫ ಆಕಳ ಬಾಲಗಳು ಇದ್ದವು! [ನೆನಪಿಡಿ ಆಕಳುಗಳನ್ನು ಬಾಲದ ಲೆಕ್ಕಾಚಾರದಲ್ಲಿ ಎಣಿಸುತ್ತಿದ್ದರು ಎಂದು ಹಿಂದೊಮ್ಮೆ ಹೇಳಿದ್ದೇನೆ] ಗೀತಾ, ಕಮಲಿ, ರೆಣುಕಾ, ಲಲಿತಾ, ವಸುಂಧರೆ....ಹೀಗೆಲ್ಲ. ಅವುಗಳ ಪೈಕಿ ಭಾಗೀರಥಿ ಎಂಬುದು ಹಿರಿಯಜ್ಜಿ. ಭಾಗೀರಥಿ ಬಹಳ ಅಚ್ಚುಮೆಚ್ಚಿನ ದನ. ಗೋವು ಅಂದರೆ ಗೋವು! ಅದರ ಮುಖದ ಲಕ್ಷಣವೇ ಹಾಗಿತ್ತು. ಉದ್ದನೆಯ ಕೊಂಬು ಮೇಲೆದ್ದು ಒಂದಕ್ಕೊಂದು ಒಳಬಾಗಿ ಅವಳ ನೆತ್ತಿಯಮೇಲೆ ಪೂರ್ಣ ಚಂದ್ರಾಕಾರವನ್ನು ಸೃಷ್ಟಿಸಿದ್ದವು. ಬಾಲದ ಕೊನೆಯಲ್ಲಿ ಗೊಂಡೆಯಂತಿರುವ ಕೂದಲಿನ ಗುಚ್ಚವಿತ್ತು. ಮಕ್ಕಳು ಕಾಲ್ಕೆಳಗೆ ತೂರಿ ಆಛೆ ಹೋಗಲಿ, ಬಾಲ ಹಿಡಿದು ಆಡಲಿ.... ಕಮಕ್ ಕಿಮಕ್ ಎನ್ನದ ಸಭ್ಯ ದನ ಅದಾಗಿತ್ತು. ನಾವು ಹೆಚ್ಚಗಿ ಪ್ರೀತಿಯಿಂದ ಎಲ್ಲಾ ಆಕಳು ಮತ್ತು ಹೋರಿಗಳನ್ನು ಅವಳು-ಅವನು ಎಂದೇ ಮನುಷ್ಯರನ್ನು ಟ್ರೀಟ್ ಮಾಡಿದ ಹಾಗೇ ಮಾಡುತ್ತಿದ್ದೆವು. ಬೆಳಿಗ್ಗೆ ಎದ್ದು ಮಲ-ಮೂತ್ರ ವಿಸರ್ಜಿಸಿ, ಅಜ್ಜಿಯಿಂದ ಸ್ನಾನ ಪೂಜೆ ಪಡೆವ ಭಾಗೀರಥಿ ನಂತರ ಅಜ್ಜಿ ಶಾಸ್ತ್ರೋಕ್ತವಾಗಿ ಕೊಡುವ ಬಾಳೆಲೆಯಲ್ಲಿ ಮಡಚಿ ಕಟ್ಟಿದ ತೊಳೆದ ಅಕ್ಕಿಯನ್ನು ತಿನ್ನುತ್ತಿದ್ದಳು. ನಂತರ ಅಕ್ಕಚ್ಚು-ಹಿಂಡಿ ಇವುಗಳನ್ನು ಪಡೆದು ಸರಿಸುಮಾರು ೯ ಗಂಟೆಗೆ ತನ್ನ ಮಕ್ಕಳು-ಮರಿಮಕ್ಕಳು ಎಲ್ಲರನ್ನೂ ಕಟ್ಟಿಕೊಂಡು ಗುಂಪಿನ ನಾಯಕಿಯಾಗಿ ಎಲ್ಲರನ್ನೂ ಸಾಲಾಗಿ ಶಾಲೆಗೆ ಹೋಗುವ ಮಕ್ಕಳಂತೇ ನಡೆಸುತ್ತ ಗೋಮಾಳಕ್ಕೆ ಮೇಯಲು ತೆರಳುವಳು. ಅವಳು ಹಾಗೆ ಹೋಗುವಾಗ ದನಗಳಲ್ಲಿ ವಯಸ್ಸಿಗೆ ಅನುಗುಣವಾಗಿ ಅನುಕ್ರಮವಾಗಿ ಅವಳನ್ನು ಅವುಗಳು ಸಾಲಾಗಿ ಹಿಂಬಾಲಿಸುತ್ತಿದ್ದುದು ನಮಗೆ ಆಶ್ಚರ್ಯವೂ ಮತ್ತು ಖುಷಿಕೊಡುವ ವಿಚಾರವೂ ಆಗಿತ್ತು. ತಮಾಷೆಗೆ ನವು ಗಣಿತದ " ಏರಿಕೆಯೆ-ಇಳಿಕೆಯ ಕ್ರಮವನ್ನು ನೋಡೋ " ಎಂದುಕೊಂಡು ನಗುತ್ತಿದ್ದೆವು.

ಭಾಗೀರಥಿ ನಮ್ಮನೆಯ ಅಜ್ಜಿ ಹೇಗೋ ಹಾಗೇ ಆ ಅಕಳ ಮಂದೆಗೆಲ್ಲ. ಆಕೆ ಕೂಗಿದರೆ ಎಲ್ಲವೂ ಸೇರುತ್ತಿದ್ದವು, ಆಕೆ ಹೊರಟರೆ ಅವಳ ಜೊತೆ ಎಲ್ಲವೂ ಹೊರಟುಬಿಡುತ್ತಿದ್ದವು. ಸಾಯಂಕಾಲ ೫ಗಂಟೆಗೆಲ್ಲ ಈ ಭಾಗೀರಥಿ ವಾಪಸ್ಸು ಕೊಟ್ಟಿಗೆಗೆ ಬರೋಳು, ತನ್ನ ಪರಿವಾರವನ್ನು ಕಾಳಜಿಯಿಂದ ಸಾಲಾಗಿ ಕರೆತರೋಳು. ಊರ ಪರವೂರ ಹತ್ತಾರು ಜನ ನಮ್ಮನೆಯ ದನಗಳ ದೈನಂದಿನ ಈ ಮಿಲಿಟರಿ ಶಿಸ್ತನ್ನು ಆಗಾಗ ನಿಂತು ನೋಡುತ್ತಿದ್ದರು. ನಮ್ಮೊಡನೆ ಬಹಳ ಜನ ಈ ಕುರಿತು ಸಂತಸ ವ್ಯಕ್ತಪಡಿಸಿದ್ದೂ ಉಂಟು. ನಾವೇ ಕೇಳಿ ತಿಳಿದಿದ್ದು-ನಮ್ಮನೆಯ ಕೊಟ್ಟಿಗೆಯ ಪರಂಪರೆಯಲ್ಲಿ ಪಡೆಯ ಮುಖ್ಯಸ್ಥೆ/ಮುಖ್ಯಸ್ಥ ಸತ್ತ ಮೇಲೆ ನಂತರ ಸೀನೆಯಾರಿಟಿಯಲ್ಲಿ ಮುಂದಿರುವವರು ಅದನ್ನು ನಿಭಾಯಿಸುತ್ತಿದ್ದರು. ಯಾವುದಾದರೂ ಆಕಳು-ಕರು ಸತ್ತರೆ ಇಡೀ ಕೊಟ್ಟಿಗೆಯಲ್ಲಿ ಮೌನರೋದನ ಕಂಡುಬರುತ್ತಿತ್ತು. ಎಲ್ಲಾ ಆಕಳುಗಳ ಕಣ್ಣಿಂದ ನೀರು ಸುರಿದ ಹಸಿ ಕಲೆಯನ್ನು ನಾವು ಗುರುತಿಸಬಹುದಿತ್ತು!ಹೀಗೇ ಅತ್ಯಂತ ಮುತುವರ್ಜಿಯಿಂದ ತನ್ನ ಮೇಳನಡೆಸಿಬಂದ ಭಾಗೀರಥಿ ಮಳೆಗಾಲದ ಒಂದು ಸಂಜೆ ಮರಳಲೇ ಇಲ್ಲ.

ಹರೆಯದ ದಿನತುಂಬಿದ ದನಗಳು ಕೆಲವೊಮ್ಮೆ ತನ್ನನ್ನು ಮೇಯಲು ಬಿಡು ಎನ್ನುತ್ತ ಹಗ್ಗವನ್ನು ಎಳೆದೆಳೆದು ಸಾಂಕೆತಿಕವಾಗಿ ತೋರುತ್ತ ಹಠಮಾಡಿಕೊಂಡು ಮೇಯಲು ಹೋಗಿ ಗುಡ್ಡ-ಬೆಟ್ಟಗಳಲ್ಲಿ ಕರು ಹಾಕಿಬಿಡುವುದು ಒಮ್ಮೊಮ್ಮೆ ನಡೆದುಬಿಡುತ್ತಿತ್ತು. ಆ ರಾತ್ರಿ ಅವುಗಳು ವಾಪಸ್ ಬರದಾಗ ಭಾಗೀರಥಿ ಏನನ್ನೋ ತನ್ನ ಭಾಷೆಯಲ್ಲಿ ಹೇಳುತ್ತಿದಳು, ಅದು ನಮಗೆ ತಿಳಿಯುತ್ತಿರಲಿಲ್ಲ. ಆದರೂ ಮಾರನೇ ದಿನ ಹುಡುಕಿದರೆ ಕರುಹಾಕಿದ ದನಗಳು ತಮ್ಮ ಕಂದಮ್ಮನನ್ನು ಹೊಟ್ಟೆಯಕೆಳಭಾಗ ಇರಿಸಿಕೊಂಡು ನಾಯಿ-ನರಿ ಇತ್ಯಾದಿ ಪ್ರಾಣಿಗಳಿಂದ ಹಗಲಿರುಳೂ ನವು ಹೋಗಿ ಕರೆತರುವವರೆಗೂ ಕಾಯುತ್ತಿದ್ದವು! ಉಪವಾಸವಿದ್ದರೂ ಚಿಂತೆಯಿಲ್ಲ ಕರುವನ್ನು ಬಿಡುತ್ತಿರಲಿಲ್ಲ! ಆಮೇಲೆ ಹುಡುಕುವ ನಮ್ಮ ಮನೆಯವರಿಗೋ ಕೆಲಸದವರಿಗೋ ಅಲ್ಲೆಲ್ಲೋ ಕಂಡು ಕೂಗುತ್ತ ನಂತರ ತಾಯಿ-ಕರು ಇಬ್ಬರನ್ನೂ ಕರೆತರುವುದಾಗಿರುತ್ತಿತ್ತು. ಆದರೆ ಅಂದು ಸಂಜೆಯ ಸ್ಥಿತಿ ಅದಾಗಿರಲಿಲ್ಲ. ಅಜ್ಜಮ್ಮ ಭಾಗೀರಥಿ ಬಂದಿರಲಿಲ್ಲ. ಮುದುಕಾದೆಯಮ್ಮ--ನೀನು ಮೇಯಲು ಹೊರಗಡೆ ಹೋಗುವುದು ಬೇಡ ಎಂದರೂ ಹಠಮಡಿಕೊಂಡು ಹೋಗುತ್ತಿದ್ದಳಾಕೆ! ದನ-ಕರು ನಿಂತಲ್ಲೆ ಇದ್ದರೆ ಮೈಯ್ಯೆಲ್ಲ ಜಡ್ಡು ಹತ್ತುತ್ತದೆ ಎಂಬ ಇನ್ನೊಂದು ಕಾರಣಕ್ಕೂ ಅಡ್ಡಾಡಿಕೊಂಡು ಬರಲಿ ಎಂದು ಅವಳನ್ನು ಮೇಯಲು ಬಿಡುತ್ತಿದ್ದರು.

ಬಾರದ ಭಗೀರಥಿಗಾಗಿ ಬೆಳಕು ಹರಿವವರೆಗೂ ನಂತರವೂ ಬ್ಯಾಟರಿ,ಬೆಂಕಿ ಹಚ್ಚಿದ ಸೂಡಿ[ತೆಂಗಿನ ಒಣಗರಿಗಳ ಕಟ್ಟು],ಹಗರ ಸೂಡಿ[ಅಡಿಕೆ ಮರದ ದಬ್ಬೆಯನ್ನು ಸಣ್ಣಗೆ ಉದ್ದುದ್ದಾಗಿ ಸೀಳಿ,ಏಳೆಂಟು ಸೇರಿಸಿ ಕಟ್ಟಿದ ಕಟ್ಟು] ಮತ್ತು ದೊಂದಿಯ ಸಹಾಯದಿಂದ ಸಮರೋಪಾದಿಯಲ್ಲಿ ಹುಡುಕಾಟ ನಡೆಯಿತು. ಭಾಗೀರಥಿಯ ಕುರುಹೇ ಇರಲಿಲ್ಲ, ಅವಳ ಸುಳಿವೇ ಎಲ್ಲೂ ಸಿಕ್ಕಿರಲಿಲ್ಲ. ಅವತ್ತಿನ ದಿನ ಬೆಳಿಗ್ಗೆ ಅವಳನ್ನು ಹಗ್ಗಬಿಡಿಸಿ ಕಳಿಸಿದ್ದಕ್ಕೆ ನಮ್ಮಮ್ಮ ತನ್ನನ್ನೇ ಕಾರಣಮಾಡಿಕೊಂಡು ತಾನೇ ಬಹಳ ಅತ್ತು ಕರೆದು ಮಾಡಿದ್ದೂ ಆಯಿತು. ಆದರೆ ಅದರಿಂದ ಭಾಗೀರಥಿ ಬರುವುದು ಸಾಧ್ಯವೇ? ಎಲ್ಲಾದರೂ ದಿಕ್ಕು ತಪ್ಪಿ ಹೋಹಿರಬಹುದೇ? ಎಲ್ಲಾದರೂ ಸುಸ್ತಾಗಿ ಮಲಗಿ ಬಿಟ್ಟಿರಬಹುದೇ ? ಎಲ್ಲಾದರೂ ಏಟುಮಾಡಿಕೊಂಡು ಮನೆಯಿಂದ ಯಾರಾದರೂ ಬರಬಹುದೆಂದು ಸಹಾಯಕ್ಕಾಗಿ ಕಾತರಿಸುತ್ತಿರಬಹುದೇ? ಬಾಯಾರಿಕೆಗೆ ನೀರು ಕುಡಿಯಲು ಎಲ್ಲೋ ಮಡುವಿಗಿಳಿದು ಮುಳುಗಿ ಹೋಗಿರಬಹುದೇ? ಒಂದಲ್ಲ ಎರಡಲ್ಲ....ಪ್ರಶ್ನೆಗಳಿಗೆ ಲೆಕ್ಕವೇ ಇಲ್ಲ. ಎಲ್ಲಾ ಬೇಡದ ಕೆಟ್ಟ ಆಲೋಚನೆಗಳದೇ ರಾಶಿ. ನಾವು ಮಕ್ಕಳು-ನಮಗೆ ಕೊಟ್ಟಿಗೆಯ ಅಜ್ಜಮ್ಮನನ್ನು ಕಾಣದ ಆದರೆ ಏನೂ ಮಾಡಲರದ ಸ್ಥಿತಿ. ಏನು ಮಾಡೋಣ? ದೊಡ್ಡವರೆಲ್ಲ ತಲೆನೋವಲ್ಲಿದ್ದಾರೆ, ಕಥೆಹೇಳುವ ನಮ್ಮ ದೋಸ್ತರೆಲ್ಲ ಮುಖವೂದಿಸಿಕೊಂಡು ಸುಮ್ಮನೇ ನಿಂತಿದ್ದಾರೆ, ಕೆಲವರು ಅಲ್ಲಿಲ್ಲಿ ಹುಡುಕುತ್ತ ಹೋಗಿದ್ದಾರೆ, ಮನೆಯವರಲ್ಲಿ ಗಟ್ಟಿಗರು ಹುಡುಕುತ್ತ ಹೋಗಿದ್ದಾರೆ, ನಮ್ಮನೆಯ ಹತ್ತಿರದ ಊರಲ್ಲಿ ವಾಸಿಸುವ ಬಂಧು-ಬಳಗದ ಜನ ಅದು ಹೇಗೋ ಸುದ್ದಿ ತಿಳಿದು ಹುಡುಕಲು ಮುಂದಾಗಿದ್ದಾರೆ....ಹೀಗೇ ಭಾಗೀರಥಿ ಎಲ್ಲರಿಗೂ ಬೇಕಾಗಿದ್ದ, ಒಬ್ಬ ಸಾಮನ್ಯ ಮನುಷ್ಯನಿಗಿಂತ ಹೆಚ್ಚಿನ ತಲೆಯುಳ್ಳ ದನವಾಗಿದ್ದಳು. ಎಲ್ಲರೂ ಪರಿತಪಿಸಿದವರೇ. ಅಂತೂ ಮಾರನೇ ದಿನ ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಯಾರೋ ಒಬ್ಬರು ಓಡುತ್ತಾ ಬಂದರು. ಅವರು ಬಹಳ ಗಾಬರಿಗೊಂಡಿದ್ದರು ಎಂದು ಅವರ ಮುಖನೋಡಿಯೇ ಹೇಳಬಹುದಿತ್ತು.ಬಂದ ಆ ವ್ಯಕ್ತಿ ನಮ್ಮ ಪರವೂರ ಬಂಧುವೊಬ್ಬರಾಗಿದ್ದರು " ನಿಮ್ಮನೆ ಭಾಗೀರಥಿ ಕಾಶಿ ವಿಶ್ವೇಶ್ವರನ ಸನ್ನಿಧಿ ಸೇರಾಯ್ತು" ಅನ್ನುತ್ತ ಅಳುತ್ತಿದ್ದರು. ಮನೆಯವರೆಲ್ಲ ಬಹಳ ಅತ್ತರು. ನಾವು ಅತ್ತೆವೆಂದು ಬೇರೆ ಹೇಳಬೇಕೆ? ಭಾಗೀರಥಿ ಗುಡ್ಡದ ಒಂದು ಪಕ್ಕದಿಂದ ಇನ್ನೊಂದು ಗುಡ್ಡದ ಪಕ್ಕಕ್ಕೆ ಹೋಗುವಾಗ ಮಧ್ಯೆ ಯಾವುದೋ ಕಾಲದಲ್ಲಿ ನಿರ್ಮಿತವಾದ ಆಳ ಕಂದಕದಲ್ಲಿ ಕಾಲು ಜಾರಿ ಬಿದ್ದಿದ್ದಳು, ಕಂದಕದ ದಡದ ಮೇಲಿನ ಹುಲ್ಲನ್ನು ತಿನ್ನಲು ಹೋದಳೊ ಅಥವಾ ಈ ಬದಿಯಿಂದ ಆ ಬದಿಗೆ ಹಾರಲು ಹೊರಟಿದ್ದಳೋ ದೇವರಿಗೇ ಗೊತ್ತು. ಬಿದ್ದ ಭಾಗೀರಥಿ ಬಹಳ ಕಾಲ ಉಳಿದಿರಲಿಕ್ಕಿಲ್ಲ. ಅದೂ ಮಳೆಗಾಲವಾದ್ದರಿಂದ ಕೆಳಗೆ ನೀರು ಹರಿಯುತ್ತಿತ್ತು. ಎರಡು ಕಲ್ಲುಗಳ ಮಧ್ಯೆ ಬಿದ್ದು ತಡೆದು ನಿಂತು ಇಹಲೋಕ ಯಾತ್ರೆ ಪೂರೈಸಿದ ಭಾಗೀರಥಿ ನಿಜವಾಗಿಯೂ ಕಾಶೀ ವಿಶ್ವನಾಥನ ಸನ್ನಿಧಾನ ಸೇರಿ ನಮ್ಮೆಲ್ಲರ ಮನದಲ್ಲಿ ಅಮರಳಾಗಿದ್ದಳು;ಚಿರಸ್ಥಾಯಿಯಾಗಿದ್ದಳು.

Monday, July 5, 2010

ರಸಿಕನ ಹುಡುಗಿ

[ರಾಜಾ ರವಿವರ್ಮ ರಚಿತ ಚಿತ್ರ ಕೃಪೆ -ಅಂತರ್ಜಾಲ ]

ರಸಿಕನ ಹುಡುಗಿ


ಏನಿದು ಅಹಾ ಈ ಬಳುಕು
ಏನೋ ಥಳುಕು ಥಳುಕು
ನವನವೀನ ಒರಸೆ ನಿನ್ನಾ ನಡುವಿನಲ್ಲೀ

ಸಂಚೊಂದು ಸಲಿಗೆಯಲ್ಲಿ
ಹೊಂಚಿದ್ದು ಸೆಳವಿನಲ್ಲಿ
ಮಿಂಚಗೊಂಚಲ ಹರಿಬಿಟ್ಟ ಚಳುಕು ಎದೆಯಾಳದಲ್ಲೀ

ಮಲ್ಲಿಗೆಯ ನಗೆಯ ಒನಪು
ಗಲ್ಲದ ಗುಳಿಯ ಹಾಸ್ಯ
ಅಲ್ಲೊಮ್ಮೆ ಮೂಗು ಕೊಂಕಿ ನನ್ನೆದೆಯ ನವಿಲ ಲಾಸ್ಯ!

ಅಟಕಾಯ್ಸೊ ಕಣ್ಣ ಕಾವ್ಯ
ತುಟಿಯಲ್ಲಿ ಭಾಷೆ ನವ್ಯ
ಕುಟುಕಿತ್ತು ನನ್ನ ಹೃದಯ ಹಗಲಿರುಳು ಬರೆದು ಭಾಷ್ಯ!

ಕೈಯಲ್ಲಿ ನೂರು ತಿರುವಿ
ಮೈಮನವ ಹೊರಳಿ ಬರುವಿ
ಸೈ ಸರಿಯು ಎಂಬ ಮನಸು ನಿನ್ನ ನೋಡಿ ಹೆಣೆದು ಕನಸು!

ಬಳ್ಳಿಯದು ಆ ಶರೀರ
ಬೆಳ್ಳಗಿನ ಎದೆಯ ಭಾರ
ಅಳ್ಳೆದೆಯೆ ಅಳೆದು ನುಂಗಿ ಕಳ್ಳನಾಮಾಡಿತಿಲ್ಲಿ!

ಎಳೆ ಬೆಂಡೆಕಾಯಿ ಬೆರಳು
ಸುಳಿಸುಳಿದು ಬರುವ ಕುರುಳು
ಕುಳಿತಲ್ಲೇ ಬಿಟ್ಟು ಬಾಯ ನಾನಲ್ಲಿ ಮಂಗಮಾಯ !

ನೀನ್ಯಾಕೋ ನನಗೆ ಇಷ್ಟ
ನೀನಿದ್ರೆ ಇಲ್ಲ ಕಷ್ಟ
ನೀನಿರದ ಬಾಳು ಶೂನ್ಯ ನೀ ಕೂಡಿ ಮಾಡು ಧನ್ಯ!

Saturday, July 3, 2010

'ಆ ಆತ'

ಚಿತ್ರ ಕೃಪೆ : ಅಂತರ್ಜಾಲ

'ಆ ಆತ'

ಎದೆಯುಬ್ಬಿಸಿ ನಡೆವನು ಆತ ಒಳಗೊಳಗೆ
ನನ್ನೊಳಗೆ
ಎಡಬಿಡದೆ..ಅನುದಿನವೂ....ಅನುಕ್ಷಣವೂ!

ಹೆದರುವನಲ್ಲ ಆತ ಒಂದಿನಿತು ಯಾವುದಕೂ
ಮರುಗುವನಲ್ಲ ಆತ ನೂರೆಂಟು ಮೊರೆತಕ್ಕೂ
ಅಲುಗುವುದಿಲ್ಲ ಆತ ಜಗವರಿತ ಕಂಪನಕೂ !
ನಲುಗುವುದಿಲ್ಲ ಆತ ಈ ಬೆಂಕಿ ಆ ಮಳೆಗೂ

ಬಿರುಬಿಸಿಲದು ಬಿಸಿಲೇ ಅಲ್ಲ ಆತನಿಗೆ ಅರೆಘಳಿಗೆ
ನೊರೆಹಾಲನು ಕುಡಿಯುವುದಿಲ್ಲ ಈ ಘಳಿಗೆ ಮರುಘಳಿಗೆ
ಹರೆದಾಡುವ ಹಂಬಲವಿಲ್ಲ ಸ್ಥಿರನಾತ ಶಾಶ್ವತನು
ಬರೆ ಸುಮ್ಮನೆ ಇರುವನು ಒಳಗೆ ಇಣುಕುತ್ತ ನನ್ನೊಳಗೆ!

ಚಿಂತೆಯ ಸಂತೆಯನೆಂದೂ ಬಯಸಿಲ್ಲ-ಬಯಸಲ್ಲ
ಕಂತೆನೋಟುಗಳನ್ನು ತನದಾಗಿಸೋ ಆಸೆಯದಿಲ್ಲ!
ಕುಂತು ತಿನ್ನುವನಲ್ಲ..ಮಲಗುವುದು..ಗೊತ್ತಿಲ್ಲ
ಆಂತರ್ಯದಿ ಬರೆಯುತ ಏನೋ ಕೂತಿರುವ ಕಡೆತನಕ !

ಅಣ್ಣ-ತಮ್ಮಂದಿರನು ಕಂಡಿಲ್ಲ-ಕಾಣಲ್ಲ
ಸುಣ್ಣ-ಬೆಣ್ಣೆಗಳಲಿ ಆಸಕ್ತಿ ಮೊದಲವಗಿಲ್ಲ!
ಕಣ್ಣಿಗೆ ಕಾಣದ ಲೋಕ ಅವನಿರವು ಅನಿವಾರ್ಯ
ಮಣ್ಣಲಿ ನನ್ನೊಡನಿದ್ದು ನನಗೊಮ್ಮೆಯು ಕಾಣನು ಆತ!

’ಅವನೆನ್ನುವ’ ನನ್ನಯ ಬುದ್ಧಿ ಅತಿಮಿತವೋ ನನಗರಿವಿಲ್ಲ
’ಅವನಲ್ಲ’ದ ಆ ’ಅವನ’ನ್ನು ಅವನೆನ್ನುವೆ ನಿಮ್ಮೊಡನೆಲ್ಲ
’ಅವನಿ’ಲ್ಲದೆ ಈ ಜಗವಿಲ್ಲ ’ಅದು’ ಎನ್ನಲು ಮನಸೊಪ್ಪಲ್ಲ
ಇದಕಾಯಿತು ಭಾವದ ಹರಿವು ನನ್ನೊಳಗಿನ ’ಆತನ’ ಒಲವು!

Friday, July 2, 2010

ರಾಮಾಂಜನೇಯ ಯುದ್ಧ


ರಾಮಾಂಜನೇಯ ಯುದ್ಧ

ನಾವೆಲ್ಲ ತಿಳಿದಂತೆ ರಾಮನ ಸದ್ಭಕ್ತ ಆಂಜನೇಯ. ರಾಮನ ನೆರಳಿನಂತೆ ಆತನನ್ನು ಸದಾ ಹಿಂಬಾಲಿಸುವ ವ್ಯಕ್ತಿ ಹನುಮಂತ. ರಾಮನ ಪರಿಚಯವಾದಂದಿನಿಂದ ಇಂದಿನವರೆಗೂ ಕಲ್ಪದಲ್ಲಿ ನೆಲೆಸಿದ್ದು ಸದಾ ರಾಮ ಸ್ಮರಣೆಯಲ್ಲಿ ನಿರತ ನಮ್ಮ ಹನುಮಣ್ಣ. ವಜಕಾಯಿಯೆಂದು ಕ್ಯಾತಿ ಪಡೆದು ಶತಯೋಜನ ವಿಸ್ತೀರ್ಣದ ಸಾಗರವನ್ನೇ ಹಾರಿ ಲಂಕೆಯನ್ನು ತಲ್ಪಿದ ಏಕಮೇವಾದ್ವಿತೀಯ ಸಾಹಸಿ ಈ ಗುಣವಂತ. ರಮನನ್ನು ನೆನೆಸದೇ ತೊಟ್ಟು ನೀರನ್ನೂ ಸೇವಿಸದ ಅನನ್ಯ ಭಾವದ ಶ್ರದ್ಧಾಳು ಈ ಭಗವಂತ. ಬಯಸದೇ ಮುಂದಿನ ಕಲ್ಪದಲ್ಲಿ ಬ್ರಹ್ಮಪದವನ್ನು ಪಡೆದ ಅಸೀಮ ಸಾಧಕ ಈ ಮಹಾನ್ ಯುಕ್ತಿವಂತ. ಇಂತಹ ಹನುಮನಿಗೂ ಆತನ ಆರಾಧ್ಯ ಸ್ವಾಮಿ ರಾಮನಿಗೂ ಯುದ್ಧವೇ ? ಕಲ್ಪಿಸಿಕೊಳ್ಳಲೂ ಅಸಾಧ್ಯ! ಆದರೆ ಇದು ಪುರಾಣೋಕ್ತ ಸತ್ಯ. ರಾಮಾಯಣ ಕಂಡ ಸತ್ಯ.


ರಾಮಾಯಣವನ್ನು ಎಲ್ಲಾದರೂ ಎಂದಾದರೂ ಹೇಗಾದರೂ ಓದಿ, ಅಲ್ಲಿ ಕಣ್ಣಿಂದ ದಳ ದಳ ದಳನೇ ನೀರು ಹರಿಸುತ್ತ-ಬಾಷ್ಪಾಂಜಲಿಯನ್ನು ಹಿಡಿದು ತಗ್ಗಿ ಬಗ್ಗಿ ನಮಿಸುವ ಹನುಮ ನಮಗೆಲ್ಲಾ ಕಾಣದ ಸ್ಥಿತಿಯಲ್ಲಿ ಕೂತೇ ಇರುತ್ತಾನೆ ಎಂಬುದು ಪ್ರತೀತಿ. ಆತ ತನ್ನ ತಪೋಬಲದಿಂದ ತನ್ನ ಪ್ರಸ್ತುತಿಯನ್ನು ಏಕಕಾಲದಲ್ಲಿ ಅನೇಕ ಪ್ರದೇಶಗಳಲ್ಲಿ ಪ್ರಚುರಗೊಳಿಸಬಲ್ಲ ಮಹಿಮಾನ್ವಿತ. ಹೀಗಾಗಿ ರಾಮಾಯಣವನ್ನು ಬಳಸುವವರು ಆಂಜನೇಯನಿಗೊಂದು ಆಸನವನ್ನು ಕಲ್ಪಿಸಿ ಅಲ್ಲಿ ಆತನ ಚಿತ್ರಪಟವನ್ನಿಟ್ಟು ಹೂವು ಹಣ್ಣುಗಳನ್ನು ಸಮರ್ಪಿಸುತ್ತಾರೆ.

ರಾಮಾಯಣದಲ್ಲಿ ವಿಶ್ವಾಮಿತ್ರರ ಪಾತ್ರ ಕೂಡ ಮಹತ್ವ ಪೂರ್ಣವಾದುದು. ತನ್ನ ಸ್ವಾಯತ್ತ ಕಲ್ಪನೆಯಿಂದ ಕ್ಷತ್ರಿಯನಾದ ಕೌಶಿಕ ಮಹಾರಾಜ ಕೇವಲ ತನ್ನ ದೀರ್ಘಕಾಲದ ಉದ್ದಂಡ, ನಿಕಟ, ನಿಷ್ಕಲ್ಮಷ, ಜ್ವಲಂತ ತಪಸ್ಸಿನಿಂದ ಮಹರ್ಷಿಯಾಗಿ ತ್ರಿಶಂಕುವಿಗೆ ಬೇರೊಂದು ಸ್ವರ್ಗವನ್ನೇ ಸೃಷ್ಟಿಸಿ ಹಲವು ಆಖ್ಯಾನಗಳಿಗೆ ಕಾರಣೀಭೂತರಾಗಿ ಬ್ರಹ್ಮರ್ಷಿ ಎಂಬ ಪದವನ್ನು ಪಡೆದ ಹಠಸಾಧಕ ಮಹಾಮುನಿ ವಿಶ್ವಾಮಿತ್ರ. ಇಂತಹ ವಿಶ್ವಾಮಿತ್ರರಿಗೆ ಒಮ್ಮೆ ಏನೋ ಮನಸ್ಸಲ್ಲಿ ಸಂಕಲ್ಪವಾಗಿ ಅವರು ರಾಮನನ್ನು ಕರೆದರು. ಶಕುಂತ ಎಂಬ ಸೂರ್ಯವಂಶಜ ವ್ಯಕ್ತಿ ಕ್ರೌಂಚಪಕ್ಷಿಜೋಡಿಯನ್ನು ಬಾಣದಿಂದ ಹೊಡೆದುರುಳಿಸುವಾಗ ಒಂದು ತನ್ನ ಯಜ್ಞಕುಂಡಕ್ಕೆ ಬಿದ್ದು ತನ್ನ ವೃತಭಂಗವಾಯಿತು,ಮಾಡಿದ ತಪ್ಪಿಗೆ ಕ್ಷಮೆಯಾಚಿಸದೇ ತಪ್ಪು ಮಾಡಿದ್ದಾನೆ ಆ ಶಕುಂತ ಆತನನ್ನು ೮ ದಿನಗಳಲ್ಲಿ ವಧಿಸು ಎಂಬುದಾಗಿ ಅಜ್ಞಾಪಿಸಿದರು. ಗುರು ವಿಶ್ವಾಮಿತ್ರರ ಆದೇಶಕ್ಕೆ ರಾಮ ಅಸ್ತು ಎಂದ. ಆ ಕ್ಷಣದಿಂದಲೇ ಪ್ರಾರಂಭವಾಯಿತು ಶಕುಂತನ ಬೇಟೆ!

ಇತ್ತ ತನ್ನ ವಧೆಗಾಗಿ ರಾಮನನ್ನು ನಿಯೋಜಿಸಿದ್ದನ್ನು ಜನರಿಂದ ಕೇಳಿ ತಿಳಿದ ಶಕುಂತ ದಿಕ್ಕಾಪಾಲಾಗಿ ಓಡುತ್ತ ಹನುಮನ ಅಮ್ಮ ಅಂಜನಾದೇವಿಯಿದ್ದಲ್ಲಿಗೆ ಬಂದು ಪಾದಕ್ಕೆ ಬಿದ್ದು ಪ್ರಾಣಭಿಕ್ಷೆ ಬೇಡಿದ. ಯಾರು ಯಾವ ಕಾರಣಕ್ಕೆ ಆತನನ್ನು ಕೊಲ್ಲಲು ಮುಂದಾಗಿದ್ದಾರೆ ಎಂಬುದನ್ನು ಕೇಳಲಾಗಿ ತನಗೆ ಪ್ರಾಣಭಿಕ್ಷೆ ಕೊಡುತ್ತೇನೆಂಬ ವಾಗ್ದಾನ ಕೊಟ್ಟರೆ ಮಾತ್ರ ಆಮೇಲೆ ಅದನ್ನು ತಿಳಿಸುವುದಾಗಿ ಹೇಳಿದ! ಜೀವಭಯದಿಂದ ಹೆದರಿ ಕಂಗಾಲಾಗಿದ್ದ ಆತನಿಗೆ ಅಂಜನಾದೇವಿ ಪ್ರಾಣಭಿಕ್ಷೆಯನ್ನು ಕೊಡುವುದಾಗಿ ವಾಗ್ದಾನ ಮಾಡಿಬಿಟ್ಟಳು! ನಂತರ ತಿಳಿದದ್ದು ಆತನನ್ನು ಕೊಲ್ಲಲು ಬರುತ್ತಿರುವುದು ಸ್ವತಃ ಶ್ರೀರಾಮ ಎಂಬುದು. ಆಗ ಆಕೆ ಕಕ್ಕಾವಿಕ್ಕಿಯಾದಳು. ಕಂದ ಹನುಮನನ್ನು ಕರೆದು ಅಮ್ಮನಾದ ತನಗೆ ಈ ಒಂದು ಆಸೆಯನ್ನು ಪೂರೈಸಿಕೊಡುವಂತೆ ಮಗನಲ್ಲಿ ಮೊರೆಯಿತ್ತಳು.

ಅಯೋಧ್ಯೆಯಲ್ಲಿ ರಾಮ ನಡೆಯುವ ಎಲ್ಲಾ ವರ್ತಮಾನಗಳನ್ನು ತಿಳಿದುಕೊಳ್ಳುತ್ತಲೇ ಇದ್ದ. ಶಕುಂತ ಹನುಮನಿದ್ದಲ್ಲಿಗೆ ಓಡಿರುವುದೂ ಮತ್ತು ಹನುಮನಿಂದ ರಕ್ಷಿತನಾಗಿರುವುದೂ ರಾಮನಿಗೆ ತಿಳಿದುಬಂತು. ರಾಮ ಬಹಳ ಜಂಜಡದಲ್ಲಿ ಸಿಲುಕಿದ್ದ. ಇತ್ತ ಗುರುವಿನ ಅದೇಶವನ್ನು ಪರಿಪಾಲಿಸಬರದು ಅಥವಾ ಅತ್ತ ಸದ್ಭಕ್ತನ ಜೊತೆ ವೈರುಧ್ಯ ಮಾಡಿಕೊಂಡು ಶಕುಂತನಿಗಿಂತಲೂ ಮೊದಲು ಹನುಮಂತನನ್ನು ಮುಗಿಸಬೇಕು-ಎಂತಹ ಪೇಚಾಟ ನೋಡಿ. ಕ್ರುದ್ಧನಾದ ರಾಮ ಅರಮನೆಯ ಉಪ್ಪರಿಗೆಯಲ್ಲಿ ಶತಾಯ ಗತಾಯ ತಿರುಗುತ್ತಿದ್ದ. ಏನುಮಾಡೋಣ ಏನುಮಾಡೋಣ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದ. ಹಾಗೂ ಹೀಗೂ ಮನದಲ್ಲೇ ಒದ್ದಾಡುತ್ತ ದಿನವೊಂದನ್ನು ಕಳೆದ ರಾಮ. ಹಾಗಂತ ಶಕುಂತನನ್ನು ಮುಗಿಸುವ ಕಾರ್ಯವನ್ನು ಬಹಳ ಮುಂದೂಡುವಂತಿರಲಿಲ್ಲ.

ಇತ್ತ ರಾಮ ಹೊರಗಡೆಗೆ ಹೋದ ಸಮಯದಲ್ಲಿ ಅಂಜನಾದೇವಿ ಅಯೋಧ್ಯೆಗೆ ಹಣ್ಣು-ಹೂವಿನೊಂದಿಗೆ ಬಂದು ದೇವೀ ಎಂದು ಕರೆದು ತನ್ನ ಅಳಲನ್ನು ಸೀತಾಮಾತೆಗೆ ತೋಡಿಕೊಂಡಳು. ಸೀತೆಯ ಮನಸ್ಸು ಅವಳ ಅಹವಾಲನ್ನು ಅವಲೋಕಿಸಿ, ಅನಸೂಯಾ ದೇವಿಯಿಂದ ಪ್ರೇರಿತವಾದ ಪತಿವೃತಾಧರ್ಮದ ಫಲಾಫಲದ ಪರಿಶೀಲನೆಗಾಗಿಯೂ ಮತ್ತು ಹಿಂದೆ ಹನುಮನಿಂದ ಪಡೆದ ಸೇವೆಯ ಕೃತಜ್ಞತಾರ್ಥವಾಗಿಯೂ ಎರಡು ವರಗಳನ್ನು ಅನುಗ್ರಹಿಸಿತು. ಮೊದಲನೆಯದಾಗಿ ರಾಮ ಹನುಮನ ಮೇಲೆ ಬಿಡುವ ಎಲ್ಲಾ ಬಾಣಗಳೂ ಶಾಂಡಿಲ್ಯಪತ್ರೆಗಳಾಗಿ, ಬಿಲ್ವಪತ್ರೆಗಳಾಗಿ,ತುಳಸೀದಳಗಳಾಗಿ ಆತನಮೇಲೆ ಬೀಳಲಿ, ಎರಡನೆಯದು ರಾಮ ಬ್ರಹ್ಮಾಸ್ತ್ರವನ್ನು ಹನುಮನ ಮೇಲೆ ಪ್ರಯೋಗಿಸಿದರೆ ಅದು ವೈಜಯಂತೀ ಹಾರವಾಗಿ ಆತನ ಕೊರಳಲ್ಲಿ ವಿಜೃಂಭಿಸಲಿ-ಎಂಬೀ ವರಗಳನ್ನು ಪಡೆದು ಹೊರಟುಹೋದಳು. ಈ ವಿಷಯವನ್ನು ರಾಮನಲ್ಲಿ ಸೀತೆ ಭಿನ್ನವಿಸಲಿಲ್ಲ, ಆ ಕಾರಣ ರಾಮನಿಗೆ ಇದು ತಿಳಿಯಲೇ ಇಲ್ಲ. ಹಾಗಂತ ಸೀತೆಯ ಕಪಟತನವಲ್ಲ ಇದು! ತನಗೋಸ್ಕರ ಲಂಕೆಯವರೆಗೆ ಜೀವವನ್ನೇ ಪಣವಾಗಿಟ್ಟು ಹಾರಿಬಂದು ತನ್ನನ್ನು ಪರೋಕ್ಷವಾಗಿ ರಕ್ಷಿಸಿದ, ತನ್ನ ಮಗನ ಸಮಾನನೆಂದು ಸೀತೆ ತಿಳಿದುಕೊಂಡ ಹನುಮನ ರಕ್ಷಣೆಯ ಕಾರ್ಯದಲ್ಲಿ ಅವಳಿಗೆ ಆಸಕ್ತಿ ಇತ್ತು, ತಾಯಿಯ ಮಮತೆ-ವಾತ್ಸಲ್ಯ ಇತ್ತು, ಮಗುವಿನ ಮೇಲಿರುವಂತಹ ಪ್ರೇಮವಿತ್ತು. ರಾಮನ ಮನಸ್ಸನ್ನು ಬದಲಾಯಿಸಿ ಹೇಗಾದರೂ ಮಾಡಿ ಯುದ್ಧವನ್ನು ತಪ್ಪಿಸಿಬೇಕೆಂಬ ಇರಾದೆ ಅವಳದಾಗಿತ್ತು. ಅದಕ್ಕಾಗಿ ಅವಳು ರಾಮನ ಬರವನ್ನೇ[ಬರುವಿಕೆಯನ್ನೆ]ಕಾದಳು.


ರಾಮ ಬಂದ, ತಿಂಡಿ ಬೇಡ-ಊಟಬೇಡ, ಕನಸಲ್ಲೂ ಅದೇ ಕನವರಿಕೆ, ರಾಮನ ಮುಖ ತುಂಬಾ ಕೆಂಪಡರಿ ಹೋಗಿತ್ತು. ಸೈರಣೆಯನ್ನೇ ಕಳೆದುಕೊಂಡಿದ್ದ ರಾಮ ತನ್ನೋಳಗೇ ಹೊಯ್ದಾಡುತ್ತಿದ್ದ. ಏನುಮಾಡಲಿ ಏನುಮಾಡಲಿ--ಅಂದುಕೊಳ್ಳುತ್ತ ಅದೇ ಕೈ ಕೈ ಹಿಸುಕಿಕೊಳ್ಳುವ ಕೆಲಸ. ಇದನ್ನು ಪರಾಂಬರಿಸಿದ ಸೀತೆ ರಾಮನ ಸಮಸ್ಯೆ ಏನೆಂಬುದನ್ನು ಕೇಳಿದಳು.[ತನಗೆ ಅದರ ಅರಿವಿದೆಯೆಂಬುದನ್ನು ಅವನ ಗಮನಕ್ಕೆ ತರಲಿಲ್ಲ, ತಂದರೆ ರಾಮಾಯಣದ ಕಥೆ ಇನ್ನೇನೋ ಆಗುತ್ತಿತ್ತೇನೋ!] ರಾಮ ವಿವರಿಸಿದ. ತಾನು ಕೊಲ್ಲಬೇಕಾದ ಶಕುಂತನನ್ನು ಹನುಮ ಬಚ್ಚಿಟ್ಟು ಪರೋಕ್ಷ ಸ್ವಾಮಿದ್ರೋಹಮಾಡಿದ್ದಾನೆ, ಹನುಮನನ್ನು ಕೊಲ್ಲದೇ ವಿಧಿಯಿಲ್ಲ, ಆ ಕಪಿಗೆ ಕಪಿ ಬುದ್ಧಿಯನ್ನು ಬಿಟ್ಟು ಬೇರೆ ಬುದ್ಧಿ ಬರಲು ಆತ ಹುಟ್ಟಿದ್ದು ಕಪಿಯಜಾತಿಯಲ್ಲಲ್ಲವೇ ? ಎಂದೆಲ್ಲ ಬಡಬಡಾಯಿಸಿದ. ಮನದಲ್ಲಿ ಒಮ್ಮೆ ಕನಿಕರವೂ ಇನ್ನೊಮ್ಮೆ ಕೋಪವೂ ಉಕ್ಕಿಹರಿಯುತ್ತಿತ್ತು. ತನಗಾಗಿ ಹನುಮ ಮಾಡಿದ ಸೇವೆಯನ್ನು ನೆನೆದು ರಾಮ ಬಹಳ ದಯಾರ್ದ್ರ ಹೃದಯವನ್ನು ತಳೆಯುತ್ತಾನೆ -ಮರುಕ್ಷಣ ತನ್ನ ಗುರುವಿನ ವೈರಿಯನ್ನು ತನ್ನಿಂದ ಅಡಗಿಸಿಟ್ಟು ಹನುಮ ಆತನನ್ನು ರಕ್ಷಿಸಿ ಸ್ವಾಮಿದ್ರೋಹಿಯಾದ ಎಂಬುದನ್ನು ನೆನೆದು ರಾಮ ವಜ್ರದಷ್ಟು ಕಠೋರನಾಗುತ್ತಾನೆ! ಈ ಎರಡೂ ಆಚೆ-ಈಚೆ ಆಚೆ-ಈಚೆ ಮನದ ಮಗ್ಗಲುಬದಲಿಸುತ್ತ ರಾಮನಿಗೆ ಕೊನೆಗೊಮ್ಮೆ ಕಿವಿಯಲ್ಲಿ ಕಾದ ಸೀಸವನ್ನು ಸುರುವಿದ ಅನುಭವವಾಗಿದೆ! ನಿಂತ ಮೆಟ್ಟಲ್ಲೇ ಹೊರಡುವ ನಿರ್ಧಾರಕ್ಕೆ ಬಂದ ರಾಮನನ್ನು ಮಡದಿ ಸೀತೆ ಏನೇ ಹೇಳಿದರೂ ಕೇಳದೇ ಹಿಂಬಾಲಿಸಿದ್ದಾಳೆ.

ಅಡವಿಗೆ ನಡೆತಂದ ಶ್ರೀರಾಮ ಅಂಗದ ಮುಂತಾದ ಕೆಳದರ್ಜೆಯ ವಾನರ ನಾಯಕರನ್ನು ಕರೆದು ಹನುಮನಿಗೆ ಸುದ್ದಿ ತಲ್ಪಿಸಿ ಯುದ್ಧಕ್ಕೆ ದುರವೀಳ್ಯವನ್ನು ಕಳುಹಿಸಿದ್ದಾನೆ. ದೂರದಿಂದ ಓಡೋಡಿ ಬಂದ ಅವರು ಮಾರುತಿಗೆ ನಡೆದ ವಿಷಯವನ್ನೆಲ್ಲ ಅರುಹಿದ್ದಾರೆ, ಶಕುಂತನನ್ನು ಬಿಟ್ಟುಕೊಡುವಂತೆ ಬೇಡಿದ್ದಾರೆ. ಆದರೆ ಹನುಮ ಬಿಡಬೇಕಲ್ಲ! ಆತ ಅಮ್ಮನಿಗೆ ಮಾತುಕೊಟ್ಟಿದ್ದ! ತನ್ನ ಪ್ರಾಣವನ್ನಾದರೂ ಕೊಟ್ಟಾನೆಯೇ ಹೊರತು ಜೀವ ಇರುವವರೆಗೆ ಶಕುಂತನ ಕೂದಲೂ ಕೊಂಕದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದನ್ನು ಆತ ಯಾವುದೇ ಕಾರಣಕ್ಕೂ ಅಲ್ಲಗಳೆಯಲಿಲ್ಲ, ಅದನ್ನು ಕಾರ್ಯಗತಗೊಳಿಸದೇ ಬಿಡಲೂ ಸಿದ್ಧನಿರಲಿಲ್ಲ. ಆದರೂ ನಿತ್ಯ ನೈಮಿತ್ತಿಕ ಆಚರಣೆಯಂತೇ ರಾಮಭಜನೆಯಲ್ಲೇ ತಲ್ಲೀನನಾಗಿದ್ದ ಹನುಮ.


ರಾಮಾ ರಾಮಾ ರಾಮಾ ರಾಮಾ

ಪಾಲಿಸು ನನ್ನನು ನೀ ರಘುವೀರ
ರಾಮಾ ರಾಮಾ ರಾಮಚಂದ್ರಾ...ಶ್ರೀ ರಾಮಚಂದ್ರಾ

ನಿನ್ನ ಭಕುತರ ಭಕುತನು ನಾನು
ಅನ್ನವನೀಯುವ ಪ್ರಭುವರ ನೀನು
ಘನ್ನ ಮಹಿಮನೇ ಶರಣೆಂಬೆನು ನಾ
ಮನ್ನಿಸಿ ನೀ ಪೊರೆಯೋ..ಅನುದಿನಾ....

ಅಮ್ಮನ ಅಣತಿಯು ನನ್ನನು ಹಿಡಿದು
ಸುಮ್ಮನೆ ಕೂರಲು ಮತ್ತದು ಬಿಡದು
ಒಮ್ಮೆ ಕ್ಷಮಿಸಿ ಆ ಬಡ ಶಮಂತಗೆ
ಒಮ್ಮತದಲಿ ಜೀವನವನು ಕರುಣಿಸೋ ....

ಗುರುನೀನು ಗುಣಧಾಮನು ನೀನು
ಹರಿ ನೀನು ಪುರುಷೋತ್ತಮ ನೀನು
ಅರಿಹಂತನು ನೀ ಅಭಯಂಕರ ನೇ
ಪರಿನೋಡುತಲರಿ ಸಲಹೆನ್ನಾ.......


ಅಯೋಧ್ಯಾರಾಮಾ ...ದಶರಥರಾಮಾ...ಕೌಸಲ್ಯಾರಾಮಾ...ಕಾರುಣ್ಯರಾಮಾ...ರಾಮಾ..ರಾಮಾ......


ರಾಮನ ಪುರಪ್ರವೇಶವಾಯಿತು. ರಾಮ ಹನುಮನಿದ್ದಲ್ಲಿಗೆ ಧಾವಿಸಿಬಿಟ್ಟ. ಇನ್ನೇನು ಬಾಣಪ್ರಯೋಗವಷ್ಟೇ ಬಾಕಿ! ಆದರೂ ಮಗುವಿನ ಥರದ ಮಾರುತಿಯನ್ನು ನೋಡಿ ಶಕುಂತನನ್ನು ಬಿಟ್ಟುಬಿಡುವಂತೆ ಸ್ವತಃ ಬುದ್ಧಿವಾದ ಹೇಳಿದ. ಎಷ್ಟೇ ಹೆಳಿದರೂ ಕೇಳದ ಹನುಮಂತ ರಾಮನೊಡನೆ ಯುದ್ಧವನ್ನೇ ಬೇಕಾದರೂ ಮಾಡಿಯೇನು ಆದರೆ ಶಕುಂತನನ್ನು ಬಿಡಲೊಲ್ಲೆ ಎಂದು ಪಟ್ಟುಹಿಡಿದ. ಯುದ್ಧ ನಡೆಯಿತು. ರಾಮ ನಾಮವನ್ನು ಜಪಿಸುತ್ತ ಕುಳಿತ ಹನುಮ, ಆಅತನ ಮೇಲೆ ಬಾಣಗಳ ಪ್ರಯೋಗಕ್ಕೆ ಮುಂದಾದ ರಾಮ. ನಡುವೆ ಬಾನಂಗಳದಿಂದ ಭಾಸ್ಕರ ವಾಲುತ್ತ ಮುಳುಗತೊಡಗಿದ. ಇದನ್ನು ದೂರಗ್ರಾಹಿಯಾಗಿ ನೋಡುತ್ತ ನಿಂತ ವಿಶ್ವಾಮಿತ್ರರು ಅಲ್ಲಿಗೆ ಬಂದು ರಾಮಾ ನೀನು ಇಷ್ಟುಹೊತ್ತು ಅಡೆನು ಮಾಡಿದೆ? ಸಂಜೆ ಸಮೀಪಿಸಿದರೂ ನಿನ್ನಿಂದ ಶಕುಂತನನ್ನು ವಧಿಸಲಾಗಲಿಲ್ಲವಲ್ಲಾ...ಅದೋ ನೋಡು ಸೂರ್ಯನಿಗೆ ತಡೆಹಿಡಿಯುತ್ತಿದ್ದೇನೆ ಬೇಗನೇ ಯುದ್ಧ ಪೂರೈಸಿ ಮುಗಿಸು ಎಂದರು. ವಿಶ್ವಾಮಿತ್ರರು ಅಷ್ಟುಮಾಡಿದ್ದೇ ತಡ ರಾಮ ಎಲ್ಲಿಲ್ಲದ ಅಸ್ತ್ರಗಳನ್ನು ಮಾರುತಿಯ ಮೇಲೆ ಪ್ರಯೋಗಿಸತೊಡಗಿದ.

ಉಹುಂ..ಏನೂ ಪ್ರಯೋಜನವಾಗಲಿಲ್ಲ. ಎಲ್ಲವೂ ಶಾಂಡಿಲ್ಯ, ಭಿಲ್ವ
ಮುಂತಾದ ಪತ್ರೆಗಳಾಗಿ ಹನುಮನ ತಲೆಯಮೇಲೆ ಬೀಳುತ್ತಿದ್ದವು. ಕೊನೆಗೊಮ್ಮೆ ಬ್ರಹ್ಮಾಸ್ತ್ರ ಪ್ರಯೋಗಿಸಿದ. ಅದು ವೈಜಯಂತೀ ಹಾರವಾಗಿ ಹನುಮನ ಕೊರಳಿಗೆ ಬಂದು ಬಿತ್ತು. ಬಹಳ ಆಶ್ಚರ್ಯಚಕಿತನಾದ ರಾಮ ಜೊತೆಗೇ ಇದ್ದ ಸೀತೆಯನ್ನು ಕೇಳಿದ. ಆಗ ಆಕೆ ಹಿಂದೆ ನೀಡಿದ ವರಗಳನ್ನು ಹೇಳಿದಳು. ಪುನಃ ಕೋಪಗೊಂಡ ರಾಮ ನಾರಾಯಣಾಸ್ತ್ರವನ್ನು ಹೊಅರತೆಗೆದ..ಇನ್ನೇನು ಬಿಡಬೇಕು..ಅಷ್ಟರಲ್ಲಿ ಪುನಃ ವಿಶ್ವಾಮಿತ್ರರು ಪ್ರತ್ಯಕ್ಷರಾಗಿ ರಾಮನನ್ನು ತಡೆದರು. ಹಿಡಿದಿರುವ ನಾರಾಯಣಾಸ್ತ್ರದಿಂದ ಪ್ರಳಯಸದೃಶ ವಾತಾವರಾಣ ಉಂಟಾಗಿ ಹಲವು ಸಾವು-ನೋವು ಸಂಭವಿಸುವುದರಿಂದ ಅದು ಬೇಡವೆಂತಲೂ ಯಾವ ಶಕುಂತನಿಗಾಗಿ ರಾಮ ಹುಡುಕುತ್ತಿದ್ದಾನೋ ಅವನ ರುಂಡ ಅಲ್ಲಿ ಬಿದ್ದಿದೆ ನೋಡು ಎಂತಲೂ ರಾಮನಿಗೆ ಅಪ್ಪಣೆಕೊಡಿಸಿದರು. ಒಪ್ಪಿದ ಮಾತನ್ನು ತಾನು ಪೂರೈಸಿಕೊಟ್ಟದ್ದಕ್ಕೆ ರಾಮನಿಗೆ ಸಮಧಾನವಾಯಿತು, ಆದರೆ ಅದನ್ನು ಹನುಮನಿಗೂ ಹೇಳಿಬಿಡು ಎಂದು ಹೇಳಿದರು ವಿಶ್ವಾಮಿತ್ರರು. ಸತ್ತ ಶಕುಂತನನ್ನು ಕಂಡು ಹನುಮ ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂದು ಕ್ರುದ್ಧಗೊಂಡ ಹನುಮ ಇದೆಲ್ಲಾ ಆ ಮುನಿಯ ಆಟವೆಂದು ವಿಶ್ವಾಮಿತ್ರರ ಮೇಲೆ ಹರಿಹಾಯತೊಡಗಿದಾಗ ಮಧ್ಯೆ ನಾರದರ ಪ್ರವೇಶವಾಯಿತು. ನಾರದರು ಬರುಬರುತ್ತಿದ್ದಂತೆ ಹನುಮನಿಗೆ ಸಶರೀರಿಯಾಗಿ ಜೀವಂತವಿರುವ ಶಕುಂತನನ್ನು ತೋರಿಸಿದರು. ತನ್ಮೂಲಕ ಅಲ್ಲಿ ಏನು ನಡೆಯಿತು ಎಂಬುದನ್ನು ವಿಸ್ತರಿಸಿ ಹೇಳಿದರು. ರಾಮ-ರಾಮನಾಮ ಈ ಎರಡರ ಮಹಾತ್ಮೆಯನ್ನು ಜಗತ್ತಿಗೆ ತೋರುವ ಸಲುವಾಗಿ ಅದರಲ್ಲೂ ರಾಮನಾಮಕ್ಕೆ ಸರಿಸಾಟಿಯಾದ ನಾಮವಿಲ್ಲ ಎಂಬುದನ್ನು ಸಾರುವುದಕ್ಕಾಗಿ ಅದನ್ನು ಪ್ರಚುರಪಡಿಸಲು ಹನುಮನೇ ಸರಿಯಾದ ಭಕ್ತ ಎಂಬುದನ್ನು ಮನಗಂಡು ಇಷ್ಟೆಲ್ಲ ನಾಟಕವನ್ನು ಮುನಿ ವಿಶ್ವಾಮಿತ್ರರು ಹೆಣೆದಿದ್ದರು ಎಂಬುದನ್ನು ತಿಳಿಸಿದರು.

ವಿಷಯ ತಿಳಿದ ಹನುಮ ಬಹಳ ಸಂತೊಷಗೊಂಡ. ಲೋಕದಲ್ಲಿ ಯಾರೂ ಕೃತಘ್ನರಾಗಿರಬಾರದು, ಬದುಕಿನಲ್ಲಿ ಕೃತಜ್ಞತಾಭಾವ ಬಹಳ ದೊಡ್ಡದು--ಇದನ್ನೂ ಕೂಡ ಈ ಕಥೆಯಿಂದ ಲೋಕಾರ್ಪಣೆಮಾಡಿದ ಮುನಿಗಳಿಗೆ ಎಲ್ಲರೂ ಅಭಿವಂದಿಸೋಣ ಎಂಬಲ್ಲಿಗೆ ರಾಮ-ಸೀತೆಯರನ್ನು ಮತ್ತೆ ಹನುಮ ಸುತ್ತುತ್ತ ತನ್ನ ಭಕ್ತಿಯನ್ನು ಪುನಃ ಅಭಿವ್ಯಕ್ತಗೊಳಿಸಿದ. ರಾ ಎನ್ನುವಾಗ ಸಕಲ ಪಾಪಗಳೂ ನಮ್ಮ ಬಾಯಿಂದ ಹಒಅರಗೆ ಹೋಗಿ ಮ ಎಂದಾಗ ಹೊರಗಿನ ಪಾಪಗಳು ಒಳಗೆ ಬಾರದಂತೆ ತುಟಿ ಮುಚ್ಚಿಕೊಳ್ಳುವುದರಿಂದ ಈ ರಾಮ ಶಬ್ಧ ಅತಿ ವಿಶಿಷ್ಟವಾಗಿದೆಯೆಂತಲೂ, ಮಹಾವಿಷ್ಣುವಿನ ಕುರಿತ ಅಷ್ಟಾಕ್ಷರೀ ಮಹಾಮಂತ್ರದಿಂದ ’ರಾ’ ಎನ್ನುವ ಅಕ್ಷರವನ್ನೂ ಶಿವಪಂಚಾಕ್ಷರಿ ಮಹಾಮಂತ್ರದಿಂದ ’ಮ’ ಎಂಬ ಅಕ್ಷರವನ್ನೂ ತೆಗೆದು ಪೋಣಿಸಿ ’ರಾಮ’ಎಂದು ಹೆಸರಿಡಲಾಗಿದ್ದನ್ನು ಮಹರ್ಷಿ ವಿಶ್ವಾಮಿತ್ರರೂ ಮತ್ತು ನಾರದರೂ ನೆನಪಿಸಿಕೊಂಡರು, ರಾಮನಾಮ ಜಪದ ಫಲವಾಗಿ ಹನುಮ ಸೋಲಲಿಲ್ಲ ಮಾತ್ರವಲ್ಲ ಶಕುಂತನೂ ಬದುಕುಳಿದ ಎಂಬುದನ್ನು ಜಗತ್ತು ನೋಡಿ ನಲಿಯಿತು.

Thursday, July 1, 2010

ಪಲ್ಲಕ್ಕಿಯ ನಾಯಿ ’ಪರಿಮಳವ’ ಹೀರುತ್ತ......


ಪಲ್ಲಕ್ಕಿಯ ನಾಯಿ ’ಪರಿಮಳವ’ ಹೀರುತ್ತ......


ಈಗಿನ ಜೀವನವೇ ಹೀಗೆ. ಇಲ್ಲಿ ಯಾರೆಂಬುದಿಲ್ಲ, ಯಾತರದ್ದೆಂಬುದಿಲ್ಲ, ಎಲ್ಲೆಲ್ಲಿ ರಾಜಕಾರಣ ಮಾಡಲು ಸಾಧ್ಯವೋ ಅಲ್ಲೆಲ್ಲ ಮಾಡುವುದು. ಹೇಳುವುದು ಆಚಾರ;ತಿನ್ನುವುದು ಬೂದಿ. ಇಂಥವರ ಮಧ್ಯೆ ಊರಿಗಲ್ಲ ನಾಡಿಗೆ, ನಾಡಿಗಲ್ಲ ದೇಶಕ್ಕೆ, ದೇಶಕ್ಕಲ್ಲ ಜಗತ್ತಿಗೇ ಒಳಿತನ್ನು ಬಯಸುವವರು ಅಪರೂಪ, ಅಂಥವರಲ್ಲಿ ಶ್ರೀ ಶ್ರೀ ರವಿಶಂಕರ್ ಒಬ್ಬರು. ಈ ಶತಮಾನ ಕಂಡ ತತ್ವಜ್ಞಾನಿಗಳಲ್ಲಿ ಅವರು ಬಹಳ ಉನ್ನತ ಹಂತದಲ್ಲಿದ್ದಾರೆ. ದುಡ್ಡಿಗಾಗಿ ಆಶ್ರಮ ಕಟ್ಟಲಿಲ್ಲ, ಹಾಗೆ ನೋಡಿದರೆ ಅವರು ಈಗಿರುವ ಆ ಆಶ್ರಮ ಅವರ ತಂದೆಯ ಆಸ್ತಿ. ತಂದೆಯಿಂದ ಮಕ್ಕಳಿಗೆ ಸಿಗಬಹುದಾದ ಆಸ್ತಿ. ಅಂತಹ ಆಸ್ತಿಯನ್ನು ಲೋಕೋಪಕಾರದ ಕಾರ್ಯಕ್ರಮಗಳಿಗೆ ಬಳಸುತ್ತಿರುವುದು ಮೊದಲನೆಯದಾಗಿ ಪ್ರಶಂಸನಾರ್ಹ. ಎರಡನೆಯದಾಗಿ ತಮ್ಮ ವೈಯಕ್ತಿಕ ಬೇಕು-ಬೇಡಗಳನ್ನು ಬಿಟ್ಟು ಹಲವರಿಗೆ ಮಾರ್ಗದರ್ಶಿಸುವುದು ಕೂಡ ಅಭಿನಂದನೀಯ. ಮೂರನೆಯದಾಗಿ ಆಡುವುದನ್ನು ಆಚರಣೆಯಲ್ಲೂ ಅಳವಡಿಸಿಕೊಳ್ಳುವ ಸತ್ಸಂಪ್ರದಾಯ.

ಮಹರ್ಷಿ ಮಹೇಶ್ ಯೋಗಿಗಳ ತತ್ವಾನುಯಾಗಿ ಹೊರಟ ರವಿಶಂಕರರು ಧ್ಯಾನದಲ್ಲಿ ತಲ್ಲೀನರಾಗಿ ಬಹಳಕಾಲ ಕುಳಿತಾಗ ಹೊಸದಾದ ತತ್ವವೊಂದನ್ನು ಕಂಡುಕೊಂಡರು. ಆ ತತ್ವವನ್ನು ಅನುಸರಿಸಲು ಕಲಿಯುವುದನ್ನು ’ಸುದರ್ಶನ ಕ್ರಿಯೆ’ ಎಂಬುದಾಗಿ ಹೆಸರಿಸಿದರು. ಇದಕ್ಕೆ ಯಾವ ಮತ ಭೇದವಾಗಲೀ ಭಿನ್ನಾಭಿಪ್ರಾಯವಾಗಲೀ ಇಲ್ಲ, ಶುದ್ಧ ಮನಸ್ಸು ಮತ್ತು ಸ್ವಚ್ಛವಾತಾವರಣ, ಶುಭ್ರ ಬಟ್ಟೆ ಇವಿಷ್ಟೇ ಬೇಕಾದ ಪರಿಕರಗಳು. ಯಾರೂ ಯಾವಾಗ ಬೇಕಾದರೂ ಅಳವಡಿಸಿಕೊಂಡು ತಮ್ಮಲ್ಲಿಯೇ ತಮಗೆ ಪಾಸಿಟಿವ್ ಎನರ್ಜಿ ತುಂಬಿಕೊಳ್ಳಬಹುದಾದ ಪ್ರಕ್ರಿಯೆ ಇದು. ಇದನ್ನು ಕಲಿಯುವವರು ಕಲಿಸುವವರಿಗೆ ಅವರ ಅಸಲು ಖರ್ಚಾಗಿ ಸ್ವಲ್ಪ ಹಣವನ್ನು ಕೊಡಬೇಕಷ್ಟೇ ಬಿಟ್ಟರೆ ಇದು ಸುಲಿಗೆಯ ಮಾರ್ಗವಲ್ಲ!

ಜಗದ್ವ್ಯಾಪೀ ಮರವಾಗಿ ಬೆಳೆದ ಈ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಅಲ್ಲಲ್ಲಿ ಅನೇಕ ಪ್ರತಿನಿಧಿಗಳೆಂಬ ವಾಲಂಟೀಯರ್ಸ್ ಗಳಿಂದ ನಡೆಸಲ್ಪಡುತ್ತದೆ. ಈ ಕಲಿಸುವ ಪ್ರಕ್ರಿಯೆಗೆ ಒಂದು ಸಂಸ್ಥೆಯ ಆಕಾರ ಕೊಡುವ ಸಲುವಾಗಿ ಆಶ್ರಮವನ್ನು ಬಳಸಲಾಗುತ್ತದೆ. ಇಲ್ಲಿ ಕಲಿತು ಮೇಲಿನ ಹಂತಕ್ಕೆ ತಲುಪಿದ ತಾತ್ವಿಕ ಮತ್ತು ಯೋಗ ಶಿಕ್ಷಕರು ಸತ್ಸಂಗವೆಂಬ ಧ್ಯಾನ ಶಿಬಿರಗಳಲ್ಲಿ ಪಾಲ್ಗೊಂಡು ಮುಂದಿನ ತಮ್ಮ ಯೋಜನೆಗಳಿಗೆ, ವಿಸ್ತಾರದ ಅಳವಡಿಕೆಯ ಮಾರ್ಗಗಳಿಗೆ ಕೆಲವಾರು ಪ್ಲಾನುಗಳನ್ನು ರವಿಶಂಕರರಿಂದ ಪಡೆಯುವ ಕೇಂದ್ರವಿದು. ಅದೇ ರೀತಿ ಶಾಂತಿ-ಸೌಹಾರ್ದತೆಯಿಂದ ಬದುಕು ಸುಗಮ ಎಂದು ಬೋಧಿಸುವ ವಿಶ್ವಮಾನವ ತತ್ವವನ್ನು ಒಳಗೊಂಡ ಕೇಂದ್ರವಿದು.

ಸ್ವಾಮೀ ನಾನದರ ಆರಾಧಕನಾಗಲೀ, ಭಕ್ತನಾಗಲೀ ಅಲ್ಲ--ಹಾಗಂದುಕೊಳ್ಳಬೇಡಿ! ಆದರೆ ಅಲ್ಲಿನ ತತ್ವ ಮತ್ತು ಸತ್ವ ಎರಡನ್ನೂ ಕೂಲಂಕಶವಾಗಿ ಕೇಳಿ ತಿಳಿದುಕೊಂಡಿದ್ದೇನೆ, ಮಹೇಶ್ ಯೋಗಿಗಳ ಬಗ್ಗೆ ಬಹಳ ಹಿಂದೆಯೇ ಓದಿದ್ದೆ, ತಿಳಿದಿದ್ದೆ,ಅಭ್ಯಸಿಸಿದ್ದೆ,ಅನುಭವಿಸಿದ್ದೆ. ಅಂಥವರ ಗರಡಿಯಲ್ಲಿ ಪಳಗಿದ ವ್ಯಕ್ತಿ ಯಾವರೀತಿ ಇರಬಹುದು ಎಂಬ ಪರಿಕಲ್ಪನೆ ನನಗಿದೆ. ಯಾರೋ ಸಿಕ್ಕರು ಎಂದು ಶಿಷ್ಯನನ್ನಾಗಿ ಸ್ವೀಕರಿಸಲು ಮಹೇಶ್ ಯೋಗಿಗಳು ಸಿದ್ಧರಿರಲಿಲ್ಲ, ಅವರಿಗೆ ಹಲವಾರು ಪರೀಕ್ಷೆಗಳಿದ್ದವು, ಪಾಂಡಿತ್ಯದ-ಬುದ್ಧಿಮಟ್ಟದ ಪರಿಶೀಲನೆ ಕೂಡ ನಡೆಯುತ್ತಿತ್ತು ಅಲ್ಲದೇ ಬ್ರಹ್ಮಚರ್ಯವನ್ನು ಸರಿಯಾಗಿ ಪಾಲಿಸುವರೇ ಎಂಬುದನ್ನು ಹಲವು ದಿಕ್ಕು-ದಿಸೆ ಮತ್ತು ದೆಸೆಗಳಿಂದ ಅಂಬಿನ ಅಲುಗಿನ ಮೇಲೆ ನಿಲ್ಲಿಸಿ ಪರೀಕ್ಷಿಸುವಂತೆ ನೋಡಿಕೊಳ್ಳುತ್ತಿದ್ದರು. ಪ್ರಾಯಶಃ ನಮ್ಮ ರಾಮಕೃಷ್ಣಾಶ್ರಮದ ಸನ್ಯಾಸಿಗಳಿಗೆ ಅಂಥದೇ ಪರೀಕ್ಷೆಗಳಿವೆ ಎನ್ನಬಹುದು. ಅಂತಹ ಧ್ಯಾನದ ಪೈಲ್ವಾನರ ಗರಡಿಯಲ್ಲಿ ಮರಿ ಪೈಲ್ವಾನರಾಗಿ ಹೊರಹೊಮ್ಮಿದವರು ರವಿಶಂಕರ್. ಅವರ ತಂದೆ-ತಾಯಿಯ ಮದುವೆಗೆ ಬಂದ ಹಿರಿಯರೊಬ್ಬರು " ನಿಮಗೆ ಜಗತ್ಕಲ್ಯಾಣ ಕಾರ್ಯದಲ್ಲಿ ಭಾಗಿಯಾಗುವ ಮಗುವೊಂದು ಜನಿಸುತ್ತದೆ " ಎಂದು ಹರಸಿದ್ದರಂತೆ, ಆ ಮಾತು ಬಹುತೇಕ ಸತ್ಯ ಎಂಬುದನ್ನು ಇಲ್ಲಿ ನೆನೆಸಿಕೊಳ್ಳಲು ಇಷ್ಟಪಡುತ್ತೇನೆ!

ಜಗತ್ತಿನಲ್ಲಿ ನಾವೆಲ್ಲ ಇದ್ದೇವೆ. ಇದ್ದುಬಿಟ್ಟರಾಗಲಿಲ್ಲ, ಹಲವು ಪಶು-ಪಕ್ಷಿಗಳೂ ಇರುತ್ತವೆ. ಆದರೆ ನಮಗೆ ಅವುಗಳಿಗಿಂತ ಭಿನ್ನವಾಗಿ ಯೋಚಿಸುವ ಮೆದುಳನ್ನು ಜಗನ್ನಿಯಾಮಕ ಕೊಟ್ಟಿದ್ದಾನೆ. ನಾವು ಯಾರೇ ಆದರೂ ಯಾವ ಧರ್ಮ, ಮತ, ಪಂಗಡ, ಜಾತಿ, ಕೋಮು ಯಾವುದನ್ನೇ ಅನುಸರಿಸುತ್ತಿದ್ದರೂ ಮೂಲ ಮಾನವನಾಗಿ, ಇನ್ನೊಬ್ಬರಿಗೆ ನೋವಾಗದಂತೆ, ಇನ್ನೊಬ್ಬರ ಬದುಕಿನಲ್ಲಿ ಹಸ್ತಕ್ಷೇಪವಾಗದಂತೆ, ಇನ್ನೊಬ್ಬರಿಗೆ ನಮ್ಮಿಂದ ಅಪಚಾರವಾಗದಂತೆ, ಹಲವರಿಗೆ ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಉಪಕಾರವಾಗುವಂತೆ, ಸತ್ಯ-ಶಾಂತಿ-ನೆಮ್ಮದಿಯಿಂದ, ನಮ್ಮದೇ ಉಸಿರಾಟದ ಹಂತಗಳನ್ನು ಅವಲೋಕಿಸಿ ನಮ್ಮೊಳಗಿನ ನೆಗೆಟಿವ್ ಎನರ್ಜಿಯನ್ನು ತೊಲಗಿಸಿ ಸಹಜ ಬದುಕುವುದನ್ನು ಬದುಕುವ ಕಲೆಯನ್ನು ಬೋಧಿಸುವ ಸೇವೆಯೇ ಆರ್ಟ್ ಆಫ್ ಲಿವಿಂಗ್.


ನಮ್ಮೂರಲ್ಲಿ ಹಲವುಜನ ಹೇಳುವುದನ್ನು ಕೇಳಿದ್ದೆ- ನಾಯಿಯನ್ನು ದೇವರೆಂದು ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತರಂತೆ. ಬಂಗಾರದ ಪಲ್ಲಕ್ಕಿ, ವಜ್ರಖಚಿತ ಮೇಲ್ಭಾಗವನ್ನೂ ಬಹಳ ಮೌಲ್ಯದ ಮೆತ್ತನ ಆಸನವನ್ನೂ ಹೊಂದಿತ್ತು. ನಾಯಿ ನಾರಾಯಣ ಸ್ವಾಮಿ , ದತ್ತಾತ್ರೇಯನ ಹತ್ತಿರವಿತ್ತು ಎಂಬೆಲ್ಲ ಕಾರಣಕ್ಕೆ ಅಷ್ಟೊಂದು ಮನ್ನಣೆ! ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗುತ್ತಾ ಇತ್ತು. ನಾಯಿ ಮಹಾರಾಜರು ಜನರನ್ನು ನೋಡುತ್ತಾ ನೋಡುತ್ತಾ ಸಾಗಿದ್ದರು ಪಲ್ಲಕ್ಕಿಯಲ್ಲಿ. ಹಳ್ಳಿಯ ಯಾವುದೋ ರಸ್ತೆಯ ಮೂಲೆಯೊಂದರಲ್ಲಿ ಯಾರೋ ಹೊಲಸು ಮಾಡಿದ್ದರು. ಅದರ ಕೆಟ್ಟ ನಾತ ನಮ್ಮ ನಾಯಿ ಮಾಹಾರಾಜರ ಮೂಗಿಗೆ ದಿವ್ಯ ಸುಗಂಧವಾಗಿ ತೇಲಿಬಂತು. ಆ ಕಡೆ ದೃಷ್ಟಿ ಹಾಯಿಸಿದ್ದೇ ನಾಯಿ ಮಹಾರಾಜರು ತಮ್ಮ ಮೇಲಿನ ಶಾಲನ್ನು ಕೊಡವಿ ಬೀಳಿಸಿ, ಕಣ್ಣರಳಿಸಿ ನೋಡಿ, ಮೂಗು ಹಿಗ್ಗಿಸುತ್ತ ಪಲ್ಲಕ್ಕಿಯಿಂದ ಎಲ್ಲರೂ ಏನಾಗುತ್ತಿದೆಯೆಂದು ನೋಡುವ ಮುಂಚೆಯೇ ಜಿಗಿದೋಡಿ ಹೊಲಸು ತಿನ್ನಲು ಹೋದರು! ಪಲ್ಲಕ್ಕಿ ಹೊತ್ತವರು ನಿಂತಲ್ಲೇ ಅವಾಕ್ಕಾಗಿ ನೋಡಬೇಕಾಯಿತಲ್ಲದೇ ನಾಯಿಯ ಯಜಮಾನರು ತಮ್ಮ ನಾಯಿ ಅಂತಿಂಥದ್ದಲ್ಲ ಎಂದು ಹೇಳಿಕೊಡಿದ್ದರಲ್ಲ, ಅವರ ಮುಖ ಹುಳಿಹಿಂಡಿದ ಹಾಲಿನಂತೆ, ಕಪ್ಪಿಟ್ಟ ಸೂರ್ಯನಂತೆ ಕಳಾಹೀನವಾಯಿತು. ಆದರೆ ನಾಯಿ ಮಾತ್ರ ತನ್ನ ಹೊಲಸು ತಿನ್ನುವ ಕೆಲಸವನ್ನು ಯಾವುದೇ ಮುಜುಗರವಿಲ್ಲದೇ ನಿರ್ಭಿಡೆಯವಾಗಿ ಮುಂದುವರಿಸಿತ್ತು! ಇದನ್ನು ಪ್ರಸ್ತಾವಿಸಲಿ ಕಾರಣವಿದೆ. ಹೀಗೆ ಓದಿ-

ನಮ್ಮ ಆರ್ಕೋಟಿ ಕನ್ನಡ ಜನತೆ ಒಂದು ಕಾಲದ ಭೂಗತ ಲೋಕದ ರೌಡಿಯೊಬ್ಬನನ್ನು ಪತ್ರಕರ್ತನೆಂದು ಪಲ್ಲಕ್ಕಿಯಲ್ಲಿ ಹೊತ್ತರು. ಆತ ಮಾಡಿದ್ದನ್ನೆಲ್ಲಾ ಏನೋ ಪಾಪ ಅನಿವಾರ್ಯತೆಗಾಗಿ ಮಾಡಿದ್ದ, ಈಗ ಹಾಗಿಲ್ಲ ಎಂಬ ಅನಿಸಿಕೆಯಿಂದ ಮರೆತು,ಕ್ಷಮಿಸಿ ಆತನನ್ನು ಬೆಳೆಸಿದರು. ಆತ ಬೆಳೆದ. ದಿನಗಳೆದಂತೆ ತಾನು ಬಹಳಾ ಒಳ್ಳೇ ಆದರ್ಶವ್ಯಕ್ತಿ, ತನ್ನನ್ನೇ ಎಲ್ಲರೂ ಫಾಲೋ ಮಾಡಿ ಎಂಬ ಹಂತಕ್ಕೆ ಬೆಳೆದುನಿಂತ. ಸರಿ. ಆಯ್ತು ಬಿಡಿ. ಫಾಲೋ ಮಾಡುವುದು ಬಿಡುವುದು ನಮ್ನಮ್ಮ ವೈಯಕ್ತಿಕ ವಿಷಯ ಅದನ್ನ ಮರೆಯೋಣ. ಆದರೆ ಆದ ತಾನೊಬ್ಬ ಪ್ರಭಾವೀ ವ್ಯಕ್ತಿ ತನ್ನ ಪ್ರಭಾವದಿಂದ ಅನೇಕರಿಗೆ ಚಳ್ಳೆಹಣ್ಣು ತಿನ್ನಿಸುವಷ್ಟು ಶನಿಮಹಾತ್ಮ ತಾನೆಂದು ಭಾವಿಸಿದ ಈತ ಎಕ್ಸ್ ಟಾರ್ಶನ್ ಮಾಡುವುದಕ್ಕೆ ಹೊರಟುಬಿಟ್ಟ. ಹೇಗಾದರೂ ಈಗ ಮಾಜಿ ರೌಡಿ ಹಾಲೀ ಪತ್ರಕರ್ತ, ತಾನು ಬಟ್ಟೆಹಾವು ಬಿಟ್ಟರೂ ಜನ ಹಾವೇ ಬಂದಿದೆ ಎಂದು ಹೆದರುತ್ತಾರೆ ಎಂಬುದನ್ನು ಮನಗಂಡ ಈತ ಕೆಲವು ಕಳಂಕಿತ ಪತ್ರಿಕೆಗಳು ಮೊದಲೆಲ್ಲಾ ಮಾಡಿ ಹೆಸರು ಕೆಡಿಸಿಕೊಂಡು ಹಳ್ಳಹಿಡಿದುಹೋಗಿದ್ದರೂ ತನ್ನದೂ ಒಂದು ಪತ್ರಿಕೆಯಿದೆ-ತಾನು ತನಗೆ ಬೇಕಾದ್ದನ್ನು ಬರೆಯಬಲ್ಲೆ, ಸೀಡಿ ಮಾಡಿ ಜನತೆಗೆ ತೋರಿಸಬಲ್ಲೆ- ಇಲ್ಲದಿದ್ದರೆ ೪೩ ಕೋಟಿ ಹಣಕೊಡಿ ಎಂದು ಹಾರುವಷ್ಟು ತಯಾರಾದ. ಇದಕ್ಕೆ ಬೇಕಾಗಿ ಕೆಲವರನ್ನು ತನ್ನೊಡನೆ ಸೇರಿಸಿಕೊಂಡ. ಯರೋ ಒಬ್ಬಾತ ತನ್ನ ಜಮೀನನ್ನೇ ಆಶ್ರಮ ಕಬಳಿಸಿದೆ ಎಂದು ಈ ಮಾಜಿ ರೌಡಿಗೆ ಹೇಳಿಕೊಂಡು ಅತ್ತನಂತೆ, ಅದಕ್ಕೇ ಈ ಮಾಜಿ ಹಾಲಿಯಾಗುವುದಕ್ಕೂ ತಯಾರಾಗಿಬಿಟ್ಟ. ಕೆಲವರುಷದ ಹಿಂದೆ ಇದೇ ಮಾಜಿಗೆ ಒಂದೆರಡು ಕಡೆ ಚಳ್ಳೆಹಣ್ಣು ತಿನ್ನಿಸಿದ್ದಾರೆ! ಈಗ ಸಿಗುವುದು ಹೊಸ ಚಳ್ಳೇಹಣ್ಣು!ಜಗದೋದ್ಧಾರಕನಾದ ಕೃಷ್ಣಪರಮಾತ್ಮ ಹೊರಟಂತೆ ತಾನು ಹೊರಟಿದ್ದೇನೆ ಎಂದುಕೊಳ್ಳುತ್ತ, ಪಲ್ಲಕ್ಕಿಯಲ್ಲೇ ಕೂತು ಹೊರಗಡೆ ಯಾರೋ ಒಬ್ಬಾತ ತನ್ನ ಜಮೀನು ತನ್ನ ಜಮೀನು ಎಂದು ಕೂಗಿಕೊಳ್ಳುವವ ಕೊಡುವ ಹೊಲಸನ್ನು ಪಡೆದುಬಿಟ್ಟ. ಅನೇಕದಿನಗಳಿಂದ ನಿತ್ಯಾನಂದನ ಮೇಲೆ ಬರೆದಿದ್ದನಂತೆ--ಈಗ ನಿನ್ನಮೇಲೂ ಬರೆಯುತ್ತೇನೆ ಎಂದು ಶ್ರೀ ಶ್ರೀ ರವಿಶಂಕರ್ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದನಂತೆ. ನಾಯಿಯ ಕಥೆ ಕೇಳಿದಿರಲ್ಲ,ಹಾಗೆಯೇ ಮಾಜಿಗಳು ಎಂದಿದ್ದರೂ ಅವರು ಮಾಜಿಗಳೇ! ಸಂದರ್ಭಬಂದರೆ ಅವರು ’ಹಾಲಿ’ ಎಂಬ ಸ್ಲಾಟಿಗೆ ಜಿಗಿದುಬಿಡುತ್ತಾರೆ. ಇದನ್ನೆಲ್ಲ ನೋಡಿಯೇ ನಮ್ಮ ಹಿರಿಯರು ’ಹುಟ್ಟಿದ ಗುಣ ಘಟ್ಟಹತ್ತಿದರೂ ಬಿಡದು’ ಎಂಬ ಗಾದೆಯನ್ನು ಶತಶತಮಾನಗಳ ಹಿಂದೆಯೇ ಬರೆದಿದ್ದಾರೆ.

ನಮ್ಮ ಸುತ್ತ ಇಂತಹ ಹಲವಾರು ಮಾಜಿಗಳು, ರಾಜಿಗಳು ಅಂಡಲೆಯುತ್ತಿರುತ್ತಾರೆ. ಮಾಧ್ಯಮಗಳಲ್ಲಿ ಅವರ ಕೈವಾಡವನ್ನು ಮಾಡುವ ಇಂತಹ ಅನೇಕರು ಇರುತ್ತಾರೆ. ಸಾರ್ವಜನಿಕರಲ್ಲಿ ಒಂದು ಹೊಸ ಹುಸಿ ಅಲೆಯನ್ನು ತಾತ್ಕಾಲಿಕವಾದರೂ ಬಿಸಿಬಿಸಿಯಾಗಿ ಎಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಯಕಾಯುತ್ತಿರುತ್ತಾರೆ. ಇಂಥವರಿಗೆ ಕಾಸು ಮುಖ್ಯವೇ ಹೊರತು ಸಾಮಾಜಿಕ ಸ್ವಾಸ್ಥ್ಯವಲ್ಲ. ನಿಜವಾಗಿ ಹೇಳುವುದಾದರೆ ಇಂತಹ ಮಾಜಿಗಳು ನಿತ್ಯಾನಂದ ಪರಂಪರೆಗೆ ಯೋಗ್ಯ! ಅಲ್ಲಿ ಜಾಗ ಸಿಕ್ಕರೆ ಕೂತು ’ಪ್ರಸಾದ’ ಮೆಲ್ಲುತ್ತ ಹಾಯಾಗಿರಬಹುದು. ಯಕ್ಕಶ್ಚಿತ ಒಬ್ಬ ಮಾಜಿಯನ್ನು ಸಮಾಜ ತಲೆಯಮೇಲೆ ಪಲ್ಲಕ್ಕಿಯಲ್ಲಿ ಹೊತ್ತ ಪರಿಣಾಮ ಈಗೀಗ ಕಂಡುಬರುತ್ತಿದೆ. ಹೀಗಾಗಿ ಪತ್ರಿಕೆಗಳಲ್ಲಿ ಬಂದಿದ್ದೆಲ್ಲಾ ನಿಜವಲ್ಲ;ಅವುಗಳಲ್ಲಿ ಕೆಲವು ಬೇಡದ ಮಾಹಿತಿಗಳೂ ಇರುತ್ತವೆ, ಮೂಲಭೂತವಾಗಿ ಪತ್ರಿಕೆಯನ್ನು ನಡೆಸುವವರಮೇಲೆ ಅವಲಂಬಿಸಿ, ಅವುಗಳ ಸಂಪಾದಕರನ್ನು ಅವಲಂಬಿಸಿ ಪತ್ರಿಕೆಗಳ ಸ್ವರೂಪ, ಸ್ವಭಾವ, ಸಂವಹನಶೀಲತೆ, ಪದಪ್ರಯೋಗ ಇವೆಲ್ಲಾ ಇರುತ್ತವೆ ಎಂದು ತಮಗೆಲ್ಲಾ ತಿಳಿಸಬಯಸುತ್ತೇನೆ. ಇದನ್ನೇ ಜಗದಮಿತ್ರ ನಿನ್ನೆಯ ಆಖ್ಯಾಯಿಕೆಯಲ್ಲಿ

ಸಂಪಾದಕನು ತಾನು ತಂಪೆರೆವೆ ಹಲಜನಕೆ......ಎಂದು ಹೇಳಿ ಪರಿತಪಿಸಿದ್ದಾನೆ! ತಮ್ಮಲ್ಲಿ ತಣ್ಣೀರನ್ನೂ ತಣಿಸಿ ಕುಡಿವ ತಾಳ್ಮೆಯಿರಲಿ; ಕಣ್ಣಾರೆ ಕಂಡಿದ್ದನ್ನೂ ಇನ್ನೊಮ್ಮೆ ಪರಾಂಬರಿಸುವ ಸಹನೆಯಿರಲಿ ಎಂಬ ಹೇಳಿಕೆಯೊಡನೆ ತಮ್ಮಿಂದ ಸದ್ಯಕ್ಕೆ ಈ ಲೆಖನದಿಂದ ಬೇರ್ಪಟ್ಟು ನನ್ನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೇನೆ.

Wednesday, June 30, 2010

ಅಹಂಕಾರ


ಚಿತ್ರ ಕೃಪೆ-ಫೋಟೋ ಸರ್ಚ್.ಕಾಂ

ಅಹಂಕಾರ

ಒಂದು ತರಗೆಲೆ ಹಾರಿ ಸಂದುಗೊಂದನು ಮೀರಿ
ಚಂದದಲಿ ಬೀಗುತ್ತ ಸೇರಲಾಗಸವ
ಮಂದಾಸನದಿಂದ ಬಿದ್ದ ನಹುಷನಂತೆ
ಸಂದಿತಿಳೆಗೈತಂದು | ಜಗದಮಿತ್ರ

ಮನದ ಮೂಸೆಯ ತುಂಬ ತಾನುತಾನೆಂತೆಂಬ
ವನದಿ ಮರ್ಕಟ ಕುಣಿವ ಹದವಿರದ ಕುಣಿತ
ಸನದು ಶಾಸನವಿಲ್ಲ ಅನುಭವದ ಪರಿಯಲ್ಲ
ಅನುಗಾಲ ತಿನ್ನುವುದು ! ಜಗದಮಿತ್ರ

ಅಶನಮದ ವಶನಮದ ಅರ್ಥ-ವೈಭೋಗ ಮದ
ಕುಶಲತೆಯ ಕಳೆಯುವುದು ಬುದ್ಧಿ ಬದಿಗೊತ್ತಿ
ವಿಷದವಹುದಾಮೇಲೆ ನೆಶೆಕಳೆದ ಹೊತ್ತಲ್ಲಿ
ಖುಷಿಯು ಶಾಶ್ವತವಹುದೇ ? ಜಗದಮಿತ್ರ

ಕಟ್ಟಿನೂರೆಂಟು ಬಂಗಲೆಗಳನು ಒಟ್ಟಿನಲಿ
ಮೆಟ್ಟುತೇಳುವ ಹಲವು ಬಡಜನಂಗಳನು
ಚಟ್ಟವೇರುವ ಮುನ್ನ ಪದಕುಸಿದು ಪರಿನೋಳ್ಪೆ
ಕಟ್ಟಕಡೆಗದು ಖಚಿತ | ಜಗದಮಿತ್ರ

ಆರ ನೂರನುಮಾಡಿ ನೂರು ಮುನ್ನೂರೆಂದು
ಹಾರೋಡಿ ಇರಿಸಿ ಹಣವನು ಬೆಳೆಯುವವನೇ
ವಾರಾನ್ನದಿಂ ಕಲಿವ ಮಕ್ಕಳನು ನೋಡಿಕಲಿ
ಭಾರವಪ್ಪುದು ಹೋಗೆ | ಜಗದಮಿತ್ರ

ಹಣವು ಅಧಿಕಾರ ಯೌವ್ವನವು ಮೇಳೈಸಿರಲು
ಗುಣವ ಸುಟ್ಟುರಿವೆ ಬಲು ಬಣಿವೆಗಳಮಾಡಿ
ಕಣಕಣದಿ ಕಾಮಾಂಧನಾದ ಲೋಲುಪನಿನ್ನ
ಅಣಕಿಸುವ ದಿನಬಹುದು | ಜಗದಮಿತ್ರ

ಯಶವು ಜಯಸಿರಿಯು ನಸುನಕ್ಕು ತಾನಡಿಯಿಡಲು
ಪಶುವಪ್ಪೆ ಮರೆತು ಕರ್ತವ್ಯ ಕುಲುಮೆಗಳ
ವಶವಾದ ಸಿರಿಯೊಮ್ಮೆ ಕೃಶವಾಗಿ ಕರಗಿರಲು
ಅಶನಕಲೆವಂತಕ್ಕು | ಜಗದಮಿತ್ರ

ದರ್ಪದೊಳು ರಾಜ್ಯಪದ ಪಟ್ಟಗಳ ಸುಖ ಪಡೆದು
ಅರ್ಪಿಸಿದರೆಲ್ಲ ತನು-ಮನ-ಧನವ ಮರಳಿ
ದರ್ಪಣದಿ ಕಂಡ ಸಿರಿಸಂಪತ್ತೆಲ್ಲ ನಮದಲ್ಲ
ತರ್ಪಣವ ಬಿಡು ಅದಕೆ | ಜಗದಮಿತ್ರ

ಸಂಪಾದಕನು ತಾನು ತಂಪೆರೆವೆ ಹಲಜನಕೆ
ಕಂಪು ಕಸುವಿನ ಸರಕು ಕೊಡುವ ಮದವೇರೆ
ಇಂಪಾಗಿ ಹಾಡುವಗೆ ಧ್ವನಿಪಟಲ ಒಡೆದಂತೆ
ಜೋಂಪು ಹಿಡಿವುದು ನಿನಗೆ | ಜಗದಮಿತ್ರ

ನಾನೆಂಬ ಪದವನ್ನು ಕಡೆಗಣಿಸು ಜೀವನದಿ
ಹೀನಬುದ್ಧಿಯ ತೊರೆದು ಅನುಕ್ಷಣ ಕ್ಷಣದಿ
ಆನೆಬಲ ಅಸುರಬಲ ಎನಿತೂ ನೆಮ್ಮದಿ ಥರದು
ಮಾನವನು ನೀನಾಗು | ಜಗದಮಿತ್ರ

Tuesday, June 29, 2010

ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!



ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!

ಗಣಪತಿಯ ಬಗ್ಗೆ ಬರೆದರೆ ಅದಕ್ಕೆ ಕೊನೆಯೇ ಇರುವುದಿಲ್ಲ, ನಾವು ಮನುಜರಾಗಿರುವುದರಿಂದ ಬರೆಯುವುದಕ್ಕೆ ಆದಿ ಇರಬಹುದು ಆದರೆ ಅಂತ್ಯಕಾಣಿಸುತ್ತೇನೆ ಎಂದು ಹೇಳುವ ದಾರ್ಷ್ಟ್ಯತೆ ಯಾರಲ್ಲಿಯೂ ಇಲ್ಲ;ಯಾಕೆಂದರೆ ಗಣಪನ ವಿಷಯವೇ ಹಾಗೆ. ಗಣಪ ಎಂದರೆ ಆತನೊಬ್ಬ ಜನತೆಯ ಅತೀ ಪ್ರೀತಿಪಾತ್ರ ದೇವರು. ಬಹುತೇಕ ಎಲ್ಲಾ ಕಡೆ ಅವನ ವಿಗ್ರಹಗಳನ್ನು ನೋಡುತ್ತೇವೆ. ಬಿಂದು ರೂಪದಿಂದ ಪ್ರಾರಂಭಗೊಳ್ಳುವ ಆತನ ರೂಪ ಇಂಥದ್ದೇ ಎನ್ನಲಾಗದ ರೀತಿ ಹಬ್ಬಿ ಹರಡುತ್ತದೆ. ಬಹಳ ಸರ್ತಿ ನಾವು ಯಾರೋ ನಮ್ಮನ್ನು ಕರೆದು " ನೋಡ್ರೀ ಇಲ್ಲಿ ನಮ್ಮನೇಲಿ ಕುಂಬಳಕಾಯಿಯಲ್ಲಿ ಗಣಪ ಮೂಡಿದ್ದಾನೆ, ನಮ್ಮಲ್ಲಿ ಟೊಮೇಟೊ ದಲ್ಲಿ ಮೂಡಿದ್ದಾನೆ" ಎಂದೆಲ್ಲ ಹೇಳುತ್ತಿರುತ್ತಾರೆ. ಅಲ್ಲಲ್ಲಿ ಆಗಾಗ ಕಾಣಿಸಿಕೊಳ್ಳುವ ಸೊಂಡಿಲ ಆಕೃತಿಯನ್ನು ಗಣಪನಿಗೆ ಹೋಲಿಸಿ ಖುಷಿಪಡುತ್ತಾರೆ. ವಿನಾಯಕನೇ ಹಾಗೆ. ಆತ ವಿಶ್ವವ್ಯಾಪಿ-ವಿಶ್ವಂಭರ. ಹದಿನೇಳು ಅವತಾರಗಳಲ್ಲಿ ವಿಜೃಂಭಿಸಿ ಅಸುರರನ್ನು ಸದೆಬಡಿದು ಮಹಾಭಾರತವನ್ನು ಅದರೊಳಗಣ ಭಗವದ್ಗೀತೆಯನ್ನೂ ನಮಗೆ ಬರೆದು ಕರುಣಿಸಿದ ಗೀರ್ವಾಣ ಲಿಪಿಕಾರ! ಸೊಂಡಿಲಿನಲ್ಲಿರುವ ಬೆರಳರೀತಿಯ ಆಕಾರದ ಭಾಗದಿಂದ ಬರೆದದ್ದೇ ಗೀರ್ವಾಣ ಲಿಪಿ! ಅದು ಓಘ, ಅದು ಅಮೋಘ, ಅದು ಆಮೋದ,ಅದು ಪ್ರಮೋದ,ಅದು ವಿಕಟ, ಅದು ವಿಲಂಬ, ಅದು ನಿರ್ವಿಕಾರ, ಅದು ಸದಾಕಾರ, ಅದು ಸದಾಲಂಬ,ಅದು ನಿರಾಲಂಬ ಹೀಗೆ ಏನೆಲ್ಲಾ ಹೇಳಹೊರಟರೂ ಅದು ಗಣನಾಯಕನ ಸಹಸ್ರನಾಮಗಳಲ್ಲಿ ಒಂದಾಗುತ್ತದೆ.

ಮಕ್ಕಳಿಗೆ ಬಾಲಗಣಪ ಆಟದ ವಸ್ತುವಾಗಿ ಲಭಿಸಿದರೆ ಕೆಲವರಿಗೆ ಆತ ಸ್ನೇಹಿತ, ಹಲವರಿಗೆ ಆದಿ ಪೂಜ್ಯನಾದರೆ ಇನ್ನೂ ಕೆಲವರು ಅವನನ್ನು ಅಲಂಕಾರಿಕ ವಸ್ತುವಾಗಿ ಮನೆಯಲ್ಲಿ ಇಟ್ಟುಕೊಳ್ಳಬಯಸುವವರು. ಯಾವುದೇ ಮಡಿ-ಮೈಲಿಗೆ-ಭಯ-ಭಕ್ತಿ ಇವುಗಳನ್ನೆಲ್ಲ ಮೀರಿದ ಅತಿ ಹೃದಯಸ್ಪರ್ಶೀ ದೇವರು ನಮ್ಮ ಗಣೇಶ. ಹಲ್ಲನ್ನು ವಕ್ರವಾಗಿ ಹೊಂದಿರುವುದರಿಂದ ವಕ್ರತುಂಡ ಎಂತಲೂ, ಕೋಪದಲ್ಲಿ ಒಂದು ಹಲ್ಲನ್ನು ಚಂದ್ರನತ್ತ ಮುರಿದೆಸೆದು ಇನ್ನೊಂದು ಕೋರೆದಾಡೆಯನ್ನು ಮಾತ್ರ ಇಟ್ಟುಕೊಂಡಿರುವುದರಿಂದ ಏಕದಂತ ಎಂತಲೂ, ಕೃಷ್ಣಮೃಗದ ಕಣ್ಣನ್ನು ಹೋಲುವ ಸಣ್ಣ ಕಣ್ಣುಳ್ಳವನದುದರಿಂದ ಕೃಷ್ಣಪಿಂಗಾಕ್ಷ ಎಂತಲೂ,ಆನೆಯ ಬಹುತೇಕ ಮೇಲ್ನೋಟವನ್ನು ಪ್ರದರ್ಶಿಸುವುದರಿಂದ ಗಜವಕ್ತ್ರ ಎಂತಲೂ, ಉದ್ದನೆಯ ದೊಡ್ಡ ಹೊಟ್ಟೆಯನ್ನು ಪಡೆದು ಲಂಬೋದರನೆಂತಲೂ,ವಿಕಟ ನಾಟಕದ ಸಕ್ರಿಯ ರೂವಾರಿಯಾಗುವುದರಿಂದ ವಿಕಟನೆಂತಲೂ,ವಿಘ್ನವನ್ನು ಕಾರಕ-ವಿಘ್ನ ನಿವಾರಕ ಎರಡೂ ಆಗಿರುವುದರಿಂದ ವಿಘ್ನರಾಜೇಂದ್ರನೆಂದೂ,ಹೊಗೆಯಬಣ್ಣದಲ್ಲೂ ಕಾಣಿಸುವುದರಿಂದ ಧೂಮ್ರವರ್ಣ ಎಂತಲೂ, ಬಿದಿಗೆಯ ಚಂದ್ರನನ್ನು ಹೋಲುವುದರಿಂದ ಮತ್ತು ಚಂದ್ರನಿಂದ ಪೂಜಿತನಾಗಿ ಅವನನ್ನು ಧರಿಸಿರುವುದರಿಂದ ಭಾಲಚಂದ್ರ ಎಂತಲೂ, ನಾಯಕರಿಗೆ ನಾಯಕನಾದುದರಿಂದ ವಿನಾಯಕ ಎಂತಲೂ ವರ್ಣಿಸಲ್ಪಟ್ಟಿದ್ದಾನೆ.

ಹಲವಾರು ಗಾಡಿಗಳ ಮುಂಭಾಗದಲ್ಲಿ ಕುಳಿತು ಕಣ್ಣಿಗೆ ಹರುಷತರುವ ಈತ ಮನೆಗಳ ಮುಂಭಾಗದಲ್ಲಿ, ಕಾರ್ಖಾನೆಗಳ ಮುಂಭಾಗದಲ್ಲಿ, ವಸತಿ ಸಮುಚ್ಚಯ-ಆಸ್ಪತ್ರೆ-ಹೋಟೆಲ್ ಹೀಗೇ ಎಲ್ಲೆಂದರಲ್ಲಿ ಗಣೇಶನ ಅತಿ ಚಿಕ್ಕ ವಿಗ್ರಹದಿಂದ ಹಿಡಿದು ಅತಿ ದೊಡ್ಡವಿಗ್ರಹಗಳನ್ನು ಕಾಣಬಹುದು. ಬೆನಕನ ಮೂರ್ತಿ ಇದ್ದುಬಿಟ್ಟರೆ ಅದೊಂದು ಸೇಕ್ಯುರ್ಡ್ ಪ್ಲೇಸ್ ಟು ಲಿವ್-ಇನ್ ಎಂದುಕೊಳ್ಳುವವರು ಎಷ್ಟೋ ಮಂದಿ. ಕೆಲವೆಡೆ ಘಟ್ಟದ ರಸ್ತೆಗಳಲ್ಲಿ ಅಲ್ಲೆಲ್ಲೋ ಅಡ್ಡಸಿಕ್ಕು ಪೂಜೆಗೊಳ್ಳುವ ’ಹಾದಿ ಗಣಪತಿ’ ಕೂಡ ಇರುತ್ತಾನೆ. ದುರ್ಗಮ ಪ್ರದೇಶಗಳಲ್ಲಿ, ಕಾಡು-ಮೇಡುಗಳಲ್ಲಿ ಅಂಡಲೆಯುವವರು ಕಷ್ಟಕಳೆಯಲು ನೆನೆದರೆ ಮೀನುಗಾರರು, ಸಮುದ್ರಯಾನಿಗಳು ತಮ್ಮನ್ನು ಸಂಕಷ್ಟದಲ್ಲಿ ಸಿಲುಕದಂತೆ ನೋಡಿಕೊಳ್ಳಲು ಆತನನ್ನು ಇಟ್ಟು ಪ್ರಾರ್ಥಿಸುತ್ತಾರೆ. ಶಾಲೆಗಳಲ್ಲಿ ನಿಂತು ವಿದ್ಯಾಗಣಪತಿ ಎಂಬ ಅಭಿದಾನ ಪಡೆದ ಈತ ಕಾಶಿಯಲ್ಲಿ ಡುಂಢಿರಾಜನಾಗಿದ್ದಾನೆ! ಇತ್ತೀಚೆಗೆ ದೃಷ್ಟಿಗಣೇಶ ಎಂಬ ಹೊಸ ನಾಮವನ್ನು ಪಡೆದು ಅಂಗಡಿ-ಮುಂಗಟ್ಟು ಹಾಗೂ ಮನೆ-ಮಹಲುಗಳಲ್ಲಿ ಚಿತ್ರರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅಂತೂ ಗಣಪತಿಯನ್ನು ಬಿಟ್ಟು ನಮಗೆ ಯಾವ ಪೂಜೆಯನ್ನು ಮಾಡಿದರೂ ಅದು ತೃಪ್ತಿ ತರುವುದಿಲ್ಲ.

ಇಂತಹ ಸುಮುಖ ಕೆಲವುಕಡೆ ದುರ್ಮುಖನಾಗಿಯೂ ಕಾಣುವುದರಿಂದ ಏಕದರಲ್ಲಿ ಅನೇಕ-ಅನೇಕದರಲ್ಲಿ ಏಕ ಎಂಬುದನ್ನು ತನ್ನ ಬಹುರೂಪೀ ಪ್ರಸ್ತುತಿಯೊಂದಿಗೆ ಸಾದರಪಡಿಸುತ್ತಾನೆ. ಈ ವಿನಾಯಕ ವಿವಾಹಿತ ಎನ್ನುವವರು ಕೆಲವರಾದರೆ ಈತ ಅವಿವಾಹಿತ ಅಂತ ನಂಬಿ ಪೂಜಿಸುವವರು ಹಲವರು. ಅಣಿಮಾ,ಗರಿಮಾ,ಲಘಿಮಾದಿ ಹಲವು ಮೂಲ ಶಕ್ತಿಗಳ ಆಗರವನ್ನು ತನ್ನಲ್ಲೇ ಇರಿಸಿಕೊಂಡು ಅನಂತ ಶಕ್ತಿ ಸಂದೋಹನೆಂಬ ಹೆಗ್ಗಳಿಕೆಗೆ ಪಾತ್ರನಾದ ಈತ ಹಲವು ಹತ್ತು ಕೈಗಳು, ತಲೆಗಳು, ವಿರಾಟ್ ರೂಪಗಳನ್ನೆಲ್ಲ ತೋರಿಸಿ ಪರಮಾತ್ಮನ ಪೂರ್ಣರೂಪವೆಂತಲೂ ಕರೆಯಲ್ಪಟ್ಟಿದ್ದಾನೆ. ಕಾರ್ಯಗಳಿಗೆ ಜಯವನ್ನು ತಂದುಕೊಡುವ ಸಿದ್ಧಿ ಮತ್ತು ಮನಸ್ಸಿಗೆ ಹೆಚ್ಚಿನ ಮಟ್ಟದ ಜ್ಞಾನವನ್ನು ಕೊಡುವ ಬುದ್ಧಿ ಈ ಈರ್ವರನ್ನೂ ಹೆಂಡಿರನ್ನಾಗಿ ಪಡೆದು ಸಿದ್ಧಿ-ಬುದ್ಧಿವಿನಾಯಕನಾಗಿದ್ದಾನೆ. ಹಲವರು ಕ್ಷೇತ್ರಗಳಲ್ಲಿ ಅಲ್ಲಲ್ಲಿ ಸ್ಥಾನಿಕವಾಗಿ ಏನನ್ನೋ ಪಡೆದು ಹರಸುತ್ತ-ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಕಡ್ಲೆಗಣಪತಿ, ಬಟ್ಟೆವಿನಾಯಕ,ಉಪ್ಪಿನಗಣಪತಿ, ಟಿಟ್ವಾಳಾ ಗಣಪತಿ, ಜಂಭುಗಣಪತಿ ಹೀಗೆಲ್ಲ ಹಲವಾರು ಹೆಸರಿನಿಂದ ಮೆರೆಯುತ್ತಾನೆ.

ಬಹುತೇಕ ಹಿಂದೂ ಹಿರಿಯಡಿಗೆಗಳಲ್ಲಿ ದೇವರಿಗೆ ಉಪ್ಪು ನಿಷಿದ್ಧ, ಆದರೆ ಉಪ್ಪಿನಲ್ಲೇ ಸಿಕ್ಕು ಪ್ರತಿಷ್ಠಾಪಿತನಾಗಿ ಉಪ್ಪನ್ನೇ ನೇರವಾಗಿ ಹರಕೆಯಾಗಿ ಪಡೆಯುವ ಉಪ್ಪಿನಗಣಪನಿದ್ದಾನೆ ! ಮಯವಾದ ಬಟ್ಟೆಯ ಗಂಟನ್ನು ತನ್ನ ಮೈಮೇಲೆ ಪ್ರದರ್ಶಿಸುವುದರ ಮೂಲಕ ತನಗೆ ಬಟ್ಟೆ ಎಂದರೆ ಪ್ರೀತಿ ಎಂಬುದಾಗಿ ಪರೋಕ್ಷ ತಿಳಿಸಿ ಅದನ್ನೇ ಹರಕೆಯಾಗಿ ಪಡೆದು ಹರಸುವ ಬಟ್ಟೆವಿನಾಯಕನಿದ್ದಾನೆ. ಇದೆಲ್ಲ ಹೇಗಿದ್ದರೂ ವಿನಾಯಕ ಎಲ್ಲ ಶಕ್ತಿಗಳ ಸಂಗಮವೆನ್ನಲು ಕಾರಣಗಳಿವೆ. ಈತನಿಗೆ ಅಲಂಕಾರವೂ ಬೇಕು, ಅಭಿಷೇಕವೂ ಬೇಕು, ನೈವೇದ್ಯವೂ ಭರಪೂರಬೇಕು[ಹಾಗಂತ ನೈವೇದ್ಯ ನೀಡದಿದ್ದರೆ ಒಣಗಣೇಶನಾಗಿಯೂ ಇರಲು ಸಿದ್ಧ!]--ಅಂದರೆ ಯಾವುದು ಬೇಡ ಈತನಿಗೆ?ತಿನ್ನುವ ಎಲ್ಲಾ ವಸ್ತುಗಳೂ ಅತ್ಯಂತ ಮೋದಕರ-ಅತ್ಯಂತ ಸತ್ವಭರಿತ, ನಡೆಸುವ ಎಲ್ಲಾಕಾರ್ಯಗಳೂ ಅಷ್ಟೇ ತತ್ವಪೂರಿತ, ತೋರುವ ಆಕಾರಗಳೂ ತತ್ವ ಪ್ರೇರಿತ. ಹರಿ-ಹರ-ಬ್ರಹ್ಮರನ್ನು ಸೇರಿಸಿದಂತಿರುವ ಈತ ಇವರೆಲ್ಲರ ಮೂಲವಾದ ಪರಬ್ರಹ್ಮ ಎಂಬ ತತ್ವವನ್ನು ಸಾರಿ ತೋರಿಸುತ್ತಾನೆ.

ದೇವರನ್ನು ಹೆಚ್ಚಾಗಿ ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸುತ್ತಾರೆ. ಆದರೆ ನಮ್ಮ ಬೆನವನಿಗೆ ದಿಕ್ಕೇ ಇಲ್ಲ. ಅದರಲ್ಲೂ ನೆಗೆಟಿವ್ ಎನರ್ಜಿಯ ದಿಕ್ಕು ಎಂದೇ ಖ್ಯಾತವಾದ ದಕ್ಷಿಣದಿಕ್ಕಿಗೆ ಮುಖಮಾಡಿರುವ ಗಣೇಶ ಸಿಕ್ಕರೆ ಅಲ್ಲಿ ನಮಗೆ ಅದು ಕನ್ವಟ್ ಆಗಿ ಪಾಸಿಟಿವ್ ಎನರ್ಜಿ ಆಗುತ್ತದೆ ಎಂಬುದು ಬಹಳ ವಿಶೇಷ! ಮನೆಯ ಎದುರಿಗೇ ರಸ್ತೆಯೊಂದು ನೇರವಾಗಿ ಬಂದು ಸೇರುವಂತಿದ್ದರೆ ಅಲ್ಲಿ ಗಣೇಶನ ವಿಗ್ರಹವನ್ನು ಇಡುತ್ತಾರೆ, ನಡೆಯಬಹುದಾದ ವಾಹನ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಸಿಗಲೆಂದು ಹಾಗೆ ಮಾಡಿರುತ್ತಾರೆ.

ಉಳಿದ ದೇವತೆಗಳು ತಾವು ಮಾಡಿಕೊಂಡ ಉಪದ್ವ್ಯಾಪಕ್ಕೆ ಗಣೇಶನ ಮೊರೆಹೊಕ್ಕು ಪರಿಹಾರ ಕಂಡುಕೊಂಡಿದ್ದು ಸರ್ವೇ ಸಾಮಾನ್ಯ. ಯಾಕೆಂದರೆ ಅತೀ ಬುದ್ಧಿವಂತ ದೇವರಾದ ಈತನಿಗೆ ಯಾವುದಾದರೊಂದು ಹೊಸಮಾರ್ಗಕಂಡುಬರುತ್ತದೆ ಎಂಬುದು ಅವರಿಗೆಲ್ಲ ತಿಳಿದೇಇದೆ. ಪರರು ಮಾಡಿದ ತಪ್ಪಿಗೆ ತಾನು ನೋವು ಸಹಿಸಿ ಅವರನ್ನು ಕಾಪಾಡಿದ ಪೇಚಿನಪ್ರಸಂಗಗಳು ಒಂದೆರಡಲ್ಲ. ಆತ್ಮಲಿಂಗವನ್ನು ರಾವಣನ ಕೈಯ್ಯಿಂದ ತಪ್ಪಿಸುವಾಗ ರಾವಣ ಕೊಟ್ಟ ಹೊಡೆತವನ್ನು ಒಂದಿನಿತೂ ಹೆದರದೇ ತಿಂದ ಈತ ಮಹಾನ್ ಧೈರ್ಯಶಾಲಿಯೂ ಕೂಡ. ತಂದೆ-ತಾಯಿಗೆ ಮೂರು ಸುತ್ತು ಬಂದು ಜಗತ್ತೇ ನಿಮ್ಮಲ್ಲಡಗಿದೆ ಎಂಬ ತತ್ವವನ್ನು ಬೋಧಿಸಿದ ಬುದ್ಧಿವಂತನೂ ಇವನೇ ಅಲ್ಲವೇ ? ಸ್ವಾಮಿನಿಷ್ಠೆಗೆ ಪ್ರತೀಕವಾದ ಈತ ಅಮ್ಮ ತನ್ನನ್ನು ದ್ವಾರದ ಕಾವಲುಗಾರನಾಗಿ ನಿಯೋಜಿಸಿದಾಗ ಅರಿಯದೇ ಮಾಡಿದ-ಶಿವನನ್ನೇ ಒಳಗೆ ಬಿಡದ ತಪ್ಪಿಗೆ ತನ್ನನ್ನೇ ಒಮ್ಮೆ ಬಲಿಕೊಟ್ಟುಕೊಂಡ ವೀರ ಮತ್ತು ಶೂರ!

ವೇದವ್ಯಾಸರು ಮಹಾವಿಷ್ಣುವಿನ ಸ್ವರೂಪವೇ ಅನ್ನುತ್ತಾರೆ. ಅಂಥವರು ಭಾರತ ಬರೆಯುವಾಗ ಅವರು ಶೀಘ್ರಗತಿಯಲ್ಲಿ ಹೇಳುತ್ತ ಹೋಗುವಾಗ ಬರೆದುಕೊಳ್ಳುವ ಲಿಪಿಕಾರನ ಅವಶ್ಯಕತೆಯಿತ್ತು. ಬರೇ ತಲೆಯಿಲ್ಲದ ಲಿಪಿಕಾರನಾದರೆ ಆತ ತಪ್ಪು ಮಾಡಿಯಾನು ಎಂದು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವ ಲಿಪಿಕಾರನೇ ಬೇಕೆಂಬ ಹುಡುಕಾಟಕ್ಕೆ ಮಿತಿಯಿರಲಿಲ್ಲ, ಯಾರೂ ಸಿಗುವ ಕುರುಹೇ ಇರಲಿಲ್ಲ! ಚಿಂತಾಕ್ರಾಂತರಾದ ವ್ಯಾಸರಲ್ಲಿಗೆ ಸೃಷ್ಟಿಕರ್ತ ಬ್ರಹ್ಮನ ಮಾನಸಪುತ್ರ ನಾರದರೇ ಬಂದು ನಿಮ್ಮ ಚಿಂತೆಗೆ ಕಾರಣವೇನು ಎಂದು ಕೇಳಬೇಕಾಯಿತು! ವ್ಯಾಸರಿಂದ ಉತ್ತರ ಪಡೆದ ನಾರದರು ಗಣೇಶನ ಉಲ್ಲೇಖವನ್ನೂ ಆತ ಆವಿರ್ಭಾವವಾಗುವ ಕ್ರಮವನ್ನೂ ಅವನನ್ನು ಒಲಿಸಿಕೊಳ್ಳುವ ವೈಖರಿಯನ್ನೂ ತಿಳಿಸಿ ಈ ಬರವಣಿಗೆ ಆತನಿಂದಲ್ಲದೇ ಬೇರೆಯವರಿಂದ ಸಾಧ್ಯವಿಲ್ಲ ಎಂದುಬಿಟ್ಟರು. ವ್ಯಾಸರು ಗಣಪನನ್ನು ಆರಾಧಿಸಲಾಗಿ ಪ್ರಸನ್ನನಾದ ಸಿದ್ಧಿವಿನಾಯಕ ತನ್ನನ್ನು ಕರೆಸಿದ ಕಾರಣ ತಿಳಿದುಕೊಂದು ಅವರಿಗೊಂದು ನಿಬಂಧನೆ ವಿಧಿಸಿದ, ಏನೆಂದರೆ ವ್ಯಾಸರೇ ನೀವು ನಿಲ್ಲಿಸದೇ ನಿರರ್ಗಳವಾಗಿ ತೈಲಧಾರೆಯಂತೆ ಹೇಳುತ್ತ ಹೋಗಬೇಕು, ನೀವು ಮಧ್ಯೆ ಎಲ್ಲಾದರೂ ನಿಲ್ಲಿಸಿದರೆ ತಾನು ಲೇಖನಿ ಬಿಸುಟು ಹೊರಡುತ್ತೇನೆ ಎಂದು! ವ್ಯಾಸರಿಗೆ ವ್ಯಸನವಯಿತು, ಪುನಃ ಪ್ರಾರ್ಥಿಸಿ ತಾನು ಹೇಳುವುದನ್ನು ಅರ್ಥವಿಸಿಕೊಂಡು ಬರೆಯಬೇಕಾಗಿ ವಿನಂತಿಸಿದರು, ಇದಕ್ಕೆ ಇಬ್ಬರೂ ಸಮ್ಮತಿಸಿ ಭಾರತ ಬರೆಯಲ್ಪಟ್ಟಿತು, ತನ್ಮಧ್ಯೆ ಬರುವ ಹಲವು ಸಂಶಯಗಳನ್ನು ಬೇಕೆಂತಲೇ ಗಣೇಶ ಪ್ರಶ್ನೆಮಾಡಿ ತಿಳಿದುಕೊಂಡ. ಭಗವದ್ಗೀತೆಯನ್ನೂ ಒಳಗೊಂಡ ಮಹಾಭಾರತ ಗಣೇಶಗೀತೆಯನ್ನೂ ಸೇರಿಸಿಕೊಂಡಿತು! ಬರೆದು ಮುಗಿಸಿದ ಮಹಾಗಣಪತಿ ವೇದವ್ಯಾಸರಿಂದ ರಚಿಸಲ್ಪಟ್ಟ ಈ ಕಾವ್ಯ ಪಂಚಮವೇದವಾಗಲಿ ಎಂದು ಹರಸಿ ಹಾರೈಸಿ ಹೊರಟ. ಅದರ ಫಲವಾಗಿ ನಾವಿಂದು ಭಾರತವನ್ನು ಮೂಲ ಸಂಸ್ಕೃತದಲ್ಲಿ ಕಾವ್ಯವಾಗಿ ಪಡೆದಿದ್ದೇವೆ.

ನಿರಾಕಾರ ಮತ್ತು ಸದಾಕಾರ ಈ ಎರಡು ಮೂಲ ಸ್ವರೂಪದ ಆರಾಧನೆಯ ಕ್ರಮಗಳಾದರೆ ವಿಗ್ರಹರೂಪದ ಗಣಪನ ಉಪಾಸನೆಯಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎಂಬ ಎರಡು ವಿಧಗಳು. ಭಾಗಶಃ ಕುತ್ತಿಗೆಯ ಮೇಲ್ಭಾಗವನ್ನಷ್ಟೇ ಇಟ್ಟುಕೊಂಡು ಪೂಜಿಸುವುದು ಖಂಡೋಪಾಸನೆ, ಇಡೀ ಮೂರ್ತಿಯನ್ನು ಇಟ್ಟುಕೊಂಡು ಆರಾಧಿಸುವುದು ಅಖಂಡೋಪಾಸನೆ. [ಇನ್ನು ಕೆಲವರಂತೂ ಬರೇ ಒಂದು ಉರುಟು ಪ್ಲಾಸ್ಟಿಕ್ ರೂಪದಲ್ಲಿ ಅಲ್ಲೇ ಮಧ್ಯೆ ಸ್ವಲ್ಪ ಉಬ್ಬು ಸೊಂಡಿಲಾಕಾರಮಾಡಿ ನಮ್ಮ ವಾಹನಗಳಲ್ಲಿ ಇಟ್ಟುಕೊಂಡಿರುತ್ತೇವೆ.] ಭಾರತದ ಹಲವು ಪ್ರದೇಶಗಳಲ್ಲಿ,ರಾಜ್ಯಗಳಲ್ಲಿ ವಿವಿಧ ನಮೂನೆಯ ವಿಘ್ನೇಶ ವಿಗ್ರಹಗಳು ಕಾಣಸಿಗುತ್ತವೆ. ಕೆಲವು ಕೇಸರಿ ಬಣ್ಣದವು, ಹಲವು ಕಪ್ಪು ಶಿಲೆಯವು, ಇನ್ನು ಕೆಲವು ಬಿಳಿಯ ಗ್ರಾನೈಟ್ ನಿಂದ ಮಾಡಿದವು ಮತ್ತಿನ್ನೂ ಕೆಲವು ಮಣ್ಣಿನಿಂದ ಮಾಡಿದವುಗಳು. ಅಪರೂಪದಲ್ಲಿ ಮರದಲ್ಲಿ ತಯಾರಿಸಿದ ವಿಗ್ರಹಗಳು ಮತ್ತು ಲೋಹದಲ್ಲಿ ತಯಾರಿಸಿದವುಗಳೂ ಬಳಕೆಯಲ್ಲಿವೆ. ಮೂರ್ತಿ ಯಾವುದೇ ಆಗಿರಲಿ ಅದನ್ನು ತಂದ ಮೇಲೆ ಅದಕ್ಕೊಂದು ಸಂಸ್ಕಾರದ ಕ್ರಮ ಇರುತ್ತದೆ. ಅದನ್ನು ಮಾಡದ ಹೊರತು ಆ ಮೂರ್ತಿಯಲ್ಲಿ ದೇವರ ಪ್ರತಿಬಿಂಬ ಅಥವಾ ಛಾಯಾಬಿಂಬ ಪೂಜೆಗೆ ಅಣಿಗೊಂಡಿರುವುದಿಲ್ಲ. ಇದರಲ್ಲೂ ದೇವಸ್ಥಾನ, ಮನೆ/ಗೃಹ/ಮಹಲು, ವಾಹನ ಈ ರೀತಿ ಮೂರು ರೀತ್ಯಾ ವಿಭಜಿಸಿ ಆಯಾಯ ಸ್ಥಳಕ್ಕೆ ತಕ್ಕುದಾದ ವಿಗ್ರಹವನ್ನು ಪಡೆಯಬಹುದಾಗಿದೆ. ಇಲ್ಲಿ ಪೂಜೆಗೂ ಮುನ್ನ ನಡೆಸುವ ವೈದಿಕ ವಿಧಿ-ವಿಧಾನ ಸಂಸ್ಕಾರಗಳು ಆಯಾಯ ಸ್ಥಳ ಮತ್ತು ವಿಗ್ರಹದ ಸ್ವರೂಪಕ್ಕೆ ತಕ್ಕಂತೆ ಇರುತ್ತವೆ. ಉದಾಹರಣೆಗೆ ದೇವಸ್ಥಾನಕ್ಕಾದರೆ ಅಲ್ಲಿ ಆಗಮ ಶಾಸ್ತ್ರ ರೀತ್ಯಾ ಹೋಮಗಳು-ಶುದ್ಧೀಕರಣ,ಸಾತ್ವಿಕ ಬಲಿ[ಪ್ರಾಣಿ ಬಲಿಯಲ್ಲ], ಅಷ್ಟಬಂಧ ಇವೇ ಮೊದಲಾದ ಹಲವು ಹತ್ತು ಕಾರ್ಯಕ್ರಮಗಳಾದರೆ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಆವಾಹನಾ ಕಾರ್ಯಕ್ರಮದ ಪ್ರಮಾಣ ತುಂಬಾ ಕಮ್ಮಿ ಇರುತ್ತದೆ. ಅಂತೆಯೇ ವಾಹನದಲ್ಲಿ ಇಡುವ ಮೂರ್ತಿಗಳಿಗೆ ಅತೀ ಕಡಿಮೆ ಕಾರ್ಯದಿಂದ ಅವುಗಳಿಗೊಂದು ಸಂಸ್ಕಾರ ಕೊಡುತ್ತಾರೆ. ಈ ಸಂಸ್ಕಾರ ಕೊಡುವಿಕೆಯಿಂದ ವಿಗ್ರಹದ ತಯಾರಿಕಾ ಹಂತದಲ್ಲಿ ಆಗಿರಬಹುದಾದ ದೋಷಗಳು ಅಥವಾ ವಿಗ್ರಹ ರೂಪಕ್ಕೂ ಬರುವ ಮೊದಲು ಆ ಮೂಲವಸ್ತುವಿದ್ದ ರೀತಿ, ಅದರ ಹೀನ ಸ್ವರೂಪ, ಅದರಲ್ಲಿರುವ ನೆಗೆಟಿವ್ ಎನರ್ಜಿ ಎಲ್ಲಾ ತೆಗೆದು ಹಾಕಲ್ಪಡುತ್ತದೆ. ಇಷ್ಟಾದ ಮೇಲೆಯೇ ಮೂರ್ತಿ ಪೂಜೆಗೆ ಅರ್ಹವೇ ಹೊರತು ಅದಕ್ಕೂ ಮೊದಲು ಅದೊಂದು ಕಲಾಕೃತಿ ಅಷ್ಟೇ! ದೇವಸ್ಥನಗಳಲ್ಲಿ ಇರುವ ವಿಗ್ರಹಗಳು ಸ್ಥಿರ ಅಥವ ಅಚಲ ವಿಗ್ರಹಗಳೆಂದೂ ಮನೆ ಹಾಗೂ ವಾಹನಗಳಲ್ಲಿರುವ ವಿಗ್ರಹಗಳು ಚರ ಅಥವಾ ಚಲವಿಗ್ರಹಗಳೆಂದೂ ಗುರುತಿಸಲ್ಪಡುತ್ತವೆ. ದೇವಸ್ಥಾನಗಳಲ್ಲಿರುವ ವಿಗ್ರಹಗಳಲ್ಲಿ ಪಾಸಿಟಿವ್ ಎನರ್ಜಿ ಜಾಸ್ತಿ ಇದ್ದು ಮನೆಯಲ್ಲಿರುವ ವಿಗ್ರಹಗಳಲ್ಲಿ ಕಡಿಮೆ ಮತ್ತು ಇತರೆಡೆಗಳಲ್ಲಿರುವ ವಿಗ್ರಹಗಳಲ್ಲಿ ಅದು ಇನ್ನೂ ಕಡಿಮೆ ಇರುತ್ತದೆ.

ನಮಗೆ ಗೊತ್ತಿರದ ಅನೇಕ ಚೀನೀಯರ ಕಪ್ಪೆಯನ್ನೋ-ಕವಡೆಯನ್ನೋ ತಂದು ಅದು ವಾಸ್ತು ಎಂದು ದುಡ್ಡುಮಾಡುವವರು ಭಾರತದ ಎಲ್ಲೆಡೆ ಹಬ್ಬಿದ್ದಾರೆ. ಅದಕ್ಕೆ ಬದಲಾಗಿ ನಮ್ಮ ಕಣ್ಣೆದುರು ಕುಳಿತರೆ ಅತ್ಯಂತ ಕಿರಿದದ ವಿಗ್ರಹವಾಗಿಯೂ ಎಲ್ಲ ಪಾಸಿಟಿವ್ ಎನರ್ಜಿಯನ್ನು ಎಳೆದು ತರಬಲ್ಲ ಗಣೇಶನನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವೇ ? ಒಬ್ಬ ಲಾಫಿಂಗ್ ಮ್ಯಾನ್ ಬದಲಿಗೆ ನಗುತ್ತ ನೃತ್ಯಮಾಡುವ ನಾಟ್ಯಗಣೇಶನನ್ನು ಇಟ್ಟುಕೊಳ್ಳಬಹುದಲ್ಲ ?


ಸರಿಗಮಪದನಿಸ ಹಾಡೀ
ನಮ್ಮ ಬೆನಕಣ್ಣನ ಕೊಂಡಾಡೀ ||ಪ||

ಮೊರದಗಲದ ಕಿವಿಯಿಂದಾ ದುಗುಡವ
ಹರ ಸುತ ಕೇಳುತ ಬಂದಾ
ಮಿರಿಮಿರಿ ಮಿಂಚುವ ಕಣ್ಣು ಸೊಂಡಿಲ
ಹರಿದಾಡಿಸಿ ತಾ ನಿಂದಾ ||೧||

ಲಂಬೋದರನನು ಹೊತ್ತು ಮೂಷಕ
ಅಂಬೆಗಾಲಿಡುವ ಪರಿಯು
ತುಂಬಿತು ಹೃನ್ಮನವೆಲ್ಲಾ ಖುಷಿಯಲಿ
ಸಂಭ್ರಮಿಸುವ ದಿನಚರಿಯೂ ||೨||

ಅದ್ಭುತ ಮಾಯಾಲೋಕ ಈ ಗಣಪ
ಸದ್ದುಮಾಡದಲೇ ಬರುವಾ
ನಿದ್ದೆಯಲಿಹ ಜನವೆಲ್ಲಾ ಕೇಳಿ
ಎದ್ದು ನಿಂತು ನಾವ್ ಕರೆವ ||೩||

ಶುದ್ಧಮನವು ಸಾಕವಗೆ ನಮ್ಮನು
ಉದ್ಧರಿಸಲು ಬರುವವಗೆ
ಪೆದ್ದುತನದಿ ನಾವೆಲ್ಲಾ ಈ ಪರಿ
ಗುದ್ದಾಡಲೇಕೆ ಒಳಗೆ ||೪||



Monday, June 28, 2010

ಮೀಸೆ ಪುರಾಣದ ಅಂತ್ಯ ಭಾಗವು !!


ಮೀಸೆ ಪುರಾಣದ ಅಂತ್ಯ ಭಾಗವು !!


ಮೀಸೆಯೆಂಬಾ ಕಾಡ ಏಕೈಕ ದೊರೆ ನಾನು

ಕೂಸುಗಳ ಹೆದರಿಸುವೆ ಹುರಿ ಮೀಸೆ ತಿರುವಿ
ಈಸುಖದೊಳೆನ್ನ ಸಂಪತ್ತು ಅಡಗಿಹುದಮಿತ
ವಾಸುದೇವನ ಪರಮ ಕೃಪೆಯಿಂದ ಸತತ

ಹಬ್ಬ ಹರಿದಿನಗಳಲಿ ಉಣ್ಣುವುದು ಪಾಯಸವ
ಉಬ್ಬುತ್ತ ನನಗಧಿಕ ವ್ಯಂಜನಾದ್ರಿಯಲಿ
ತಬ್ಬಿಬ್ಬು ಹಲವು ಜನ ಬೋಳಿಸಿದರಾಗಾಗ
ಹುಬ್ಬು ಏರಿಸಿ ನೋಡಿಹರು ಬಹಳ ಸಮಯ

--ಇವು ಮೀಸೆಯ ಮಹತ್ವವನ್ನು ಸಾರುವ ಮುಕ್ತಕಗಳು! ಕೆಲವ್ರಿಗೆ ಮೀಸೆ ಆಸ್ತಿಯಾಗಿದ್ದರೆ ಇನ್ನು ಕೆಲವರಿಗೆ ಮಕ್ಕಳನ್ನು ಹೆದರಿಸುವ ಹತ್ಯಾರ! ಮತ್ತೆ ಕೆಲವರ ಮೀಸೆಯಂತೂ ಆಗಾಗ ಏನಾದರೊಂದನ್ನು ಮೆದ್ದುಕೊಂಡೇ ಇರುತ್ತದೆ. ಹಬ್ಬ-ಹರಿದಿನಗಳಲ್ಲಿ ಪಾಯಸ ಮುಂತಾದವನ್ನು ಪಡೆದರೆ ಮತ್ತೆ ಕೆಲವೊಮ್ಮೆ ಕರಿದ ಪದಾರ್ಥಗಳ ಕೆಲಭಾಗವನ್ನು ಸ್ವೀಕರಿಸುವುದು. ಮೀಸೆಯನ್ನು ಕೆಲವುಸಲ ಬೇಡ ಅಂತ ಬೋಳಿಸಿಬಿಟ್ಟರೆ ನೋಡುವ ಪರಿಚಯದ ಜನರೆಲ್ಲ ತಬ್ಬಿಬ್ಬು " ಇವನು ಅವನೇನಾ ಅಥವಾ ಇವನು ಬೇರೇನಾ ? " ಎಂದು ತಮ್ಮೊಳಗೇ ಪ್ರಶ್ನೆ ಹಾಕಿಕೊಂಡು ನಿಲ್ಲುತ್ತಾರೆ, ನೋಡುತ್ತಾರೆ, ನಗೆಯಾಡಿ ಮೀಸೆ ಬೋಳಿಸಿಕೊಂಡವ ಪ್ರತಿಕ್ರಿಯಿಸುತ್ತಾನೋ ಎಂದು ಕಾದುನೋಡುತ್ತಾರೆ.

ಮೀಸೆಯನ್ನು ಬೋಳಿಸಿಕೊಳ್ಳುವುದು ಇಂಗ್ಲೀಷರಿಂದ ಅದರಲ್ಲೂ ಅಲೇಕ್ಸಾಂಡರ್ ನಿಂದ ಬಂತು ಎಂಬುದು ಒಂದು ಕಥೆ. ಆದರೆ ಅದು ಹೌದೋ ಅಲ್ಲವೋ ಅಂತೂ ನಮ್ಮ ಬಾಲೀವುಡ್ ಅಣ್ಣಗಳೆಲ್ಲ ಮೀಸೆ ಇಲ್ಲದವರೇ ಆಗಿದ್ದಾರೆ. ಅವರ ಲೆಕ್ಕದಲ್ಲಿ ಮೀಸೆ ಇರದಿದ್ದರೆ ಬಹಳ ಚಿಕ್ಕವರಂತೇ ಕಾಣುತ್ತೇವೆ ಎಂದಿರಬಹುದು. ಬೇರೆ ಪ್ರಾಂತೀಯ ಸಿನಿಮಾ ರಂಗಗಳಲ್ಲೂ ಮೀಸೆ ಬೋಳಿಸಿಕೊಳ್ಳುವ ನಟರು ಬಹಳ ಇದ್ದಾರೆ. " ನಾನು ಹೇಳಿದ್ದು ಆಗಲಿಲ್ಲ ಅಂದರೆ ಮೀಸೆ ಬೋಳಿಸಿಕೊಳ್ಳುತ್ತೇನೆ ?" ಎಂದು ಪಂಥಕ್ಕೂ ಮೀಸೆಯನ್ನೇ ಬಳಸುವ ಜನ ಇದ್ದಾರೆ. ಇದರಲ್ಲೇ ವಿಭಿನ್ನತೆ ಮೆರೆತು ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಎನ್ನುವವರಿದ್ದಾರೆ. ಮೀಸೆ ಇಟ್ಟುಕೊಂಡು ಬೇಡದ ಕೆಲಸವೋ ಮಾಫಿಯಾ ಕೆಲಸವೋ, ದೇಶದ್ರೋಹಿ ಕೆಲಸವೋ ಮಾಡಿ ಆ ನಂತರ ಗೊತ್ತಾಗದಿರಲಿ ಎಂದಿ ಗಡ್ಡ ಮೀಸೆ ತಲೆ ಎಲ್ಲವನ್ನೂ ಒಮ್ಮೆಲೇ ಬೋಳಿಸಿ ತಿರುಗುವ ಮಂದಿ ಒಂದೆಡೆ ಆದರೆ, ಇನ್ನೊಂದೆಡೆ ಎಲ್ಲವನ್ನೂ ಮೊದಲೇ ಬೋಳಿಸಿಕೊಂಡು ಅಂಥಾ ಕುಕೃತ್ಯಗಳಲ್ಲಿ ತೊಡಗಿ ನಂತರ ಅವುಗಳನ್ನ ಕೃತ್ರಿಮವಾಗಿ ಅಂಟಿಸಿಕೊಂಡು ತಲೆಮರೆಸಿಕೊಳ್ಳುವವರೂ ಇದ್ದಾರೆ!

ಕೇರಳ ಪ್ರಾಂತದಲ್ಲಿ ಮೀಸೆಗೆ ಬಹಳ ಪ್ರಧಾನ್ಯತೆ. ಎದುರಿಗೆ ಬಂದ ವ್ಯಕ್ತಿ ದಟ್ಟ ಕಪ್ಪು ಪೊದೆ ಮೀಸೆಯನ್ನು ಹೊಂದಿದ್ದರೆ ಆತ ಬಹುತೇಕ ಮಲಯಾಳಿಯೇ ಎಂಬ ಕಾಲವೊಂದಿತ್ತು, ಈಗಲೂ ಇದೆ ಆದರೆ ಬಣ್ಣಗಳ ಬಳಕೆಯ ಮಹಿಮೆಯಿಂದ ಈಗ ಎಂಥಾ ಬಿಳೀ ಅಥವಾ ಸಮ್ಮಿಶ್ರ ಬಣ್ಣದ ಮೀಸೆಯನ್ನೂ ಕೂಡ ಕಪ್ಪು ಮೀಸೆಯನ್ನಾಗಿ ಮಾಡಬಹುದಲ್ಲ-ಹೀಗಾಗಿ ಆ ಹೇಳಿಕೆಯನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಕೈಬಿಡಲಾಗಿದೆ! ಮಮ್ಮುಟ್ಟಿ ಎಂಬ ನಟನ ಮೀಸೆ ನೋಡಿದ್ದೀರಲ್ಲ, ಹೆಚ್ಚು ಪಕ್ಷ ಕೇರಳದ ಮೀಸೆಗಳೆಲ್ಲ ಆ ಮಾದರಿಯಲ್ಲೇ ಇರುತ್ತವೆ. ಅಲ್ಲಿನ ತೆಂಗಿನಕಾಯಿ ಮಿಶ್ರಿತ ಆಹಾರ ಸೇವನಾಕ್ರಮ, ಕೊಬ್ಬರಿ ಎಣ್ಣೆಯ ಬಹೂಪಯೋಗ ಇವುಗಳಿಂದ ಕೇರಳಿಗರ ಕೂದಲು-ಮೀಸೆ ಎಲ್ಲವೂ ಕಪ್ಪಗೇ ಇರುತ್ತವೆ. ಎಲ್ಲೋ ಜಿರಲೆಗಳ ಮಧ್ಯೆ ಅಪರೂಪಕ್ಕೊಂದು ಬಿಳಿಜಿರಲೆ ಇರುವಂತೇ ಅಪರೂಪಕ್ಕೊಬ್ಬೊಬ್ಬರು ಬಿಳೀ ಬಣ್ಣದ ಮೀಸೆ ಹೊಂದಿರುತ್ತಾರೆ ಅಲ್ಲಿ. ವ್ಯಾಪಾರಮಾಡುವ ಕೇರಳದ ಕಾಕಾಗಳು ದಪ್ಪ ಮೀಸೆಯೊಂದಿಗೆ ಮೊದಲಿನ ಒಂದು ಗುಂಡಿ ತೆರೆದಿಟ್ಟ ಕಪ್ಪು ಕೂದಲು ಭರಿತ ಎದೆಯನ್ನು ಪ್ರದರ್ಶಿಸುತ್ತ ಉದ್ದ ತೋಳಿನ ಅಂಗಿಯ ತೋಳಭಾಗವನ್ನು ಮೇಲಕ್ಕೆ ಸುತ್ತಿ ಒಂಥರಾ ಯುನಿಫಾರ್ಮಿಟಿ ಮೆರೆಯುತ್ತಾರೆ!

ಹಿಟ್ಲರ್, ಐನಸ್ಟೈನ್ ಇವರುಗಳ ಮೀಸೆಯನ್ನೆಲ್ಲ ನೋಡಿರುವಿರಲ್ಲ? ನಮ್ಮಲ್ಲಿ ಮೀಸೆಯ ವೆರೈಟಿಗೇನು ಬರಗಾಲವೇ? ಸಂಗೊಳ್ಳಿ ರಾಯಣ್ಣನ ಮೀಸೆ, ಕೃಷ್ಣದೇವರಾಯನ ಮೀಸೆ, ಶಿವಾಜಿಯ ಮೀಸೆ, ಟಿಪ್ಪುವಿನ ಮೀಸೆ ಹೀಗೇ ರಾಜರುಗಳ ಕಾಲದಿಂದ ಹಿಡಿದು ಇಂದಿನ ನಮ್ಮ ಮಂತ್ರಿಮಹೋದಯರುಗಳ ಮೀಸೆಗಳನ್ನು ನೋಡಿ ಒಬ್ಬೊಬ್ಬರದು ಒಂದೊಂಥರ! ಯುನಿಟಿ ಇನ್ ಡೈವರ್ಸಿಟಿ !! ಅಂದಹಾಗೇ ನಮ್ಮ ಭಾರತೀಯರ ಮೇಲೆ ಮೊಘಲರು ಮೊದಲಾಗಿ ದಂಡೆದ್ದು ಬಂದಾಗ ಅಂದಿನ ಹಿಂದಿನ ಕಾಲದಲ್ಲಿ ಗ್ರಾಮ್ಯ ಪ್ರದೇಶಗಳಲ್ಲಿ ಬಹಳ ಲೇಟೆಸ್ಟ್ ಎನ್ನುವ ಆಯುಧಗಳು ಯಾವುದೂ ಇರಲಿಲ್ಲವಂತೆ. ಆಗ ತುಂಬಾ ಜನಸೇರಿ ಬ್ರಾಹ್ಮಣರು ಬುದ್ಧಿವಂತರು ವಿಚಾರಿಸೋಣ[ ಇಲ್ಲದಿದ್ದರೆ ಬಂದ ಆ ದಂಡನ್ನು ಹಿಮ್ಮೆಟ್ಟಿಸದೇ ತಾವೆಲ್ಲ ಜೀವಗಳನ್ನು ಬಲಿಗೊಡಬೇಕಲ್ಲ ಎಂಬ ಕಾರಣಕ್ಕಾಗಿ] ಎಂದು ಹೋದರಂತೆ. ಕೆಲವು ತಲೆ ಇರುವ ಬ್ರಾಹ್ಮಣರು ಕಲೆತು ಬಹುಬೇಗ ಚಿಂತನ ಮಂಥನ ಮಾಡಿ ಒಂದು ಪ್ಲಾನ್ ಮಾಡಿದರಂತೆ! ಅದರ ಪ್ರಕಾರ ನಮ್ಮ ಪ್ರಾಂತಗಳಲ್ಲಿ ಬಹುತೇಕರಿಗೆ ಮೀಸೆ ಇದೆ, ಅದರಂತೆ ತೋಟಗಳಲ್ಲಿ ಬಾಳೆಗಿಡಗಳೂ ಹುಲುಸಾಗಿ ಬೆಳೆದಿರುತ್ತವೆ. ಆ ಬಾಳೆಗಿಡಗಳನ್ನು ಕಡಿದು ಅವುಗಳ ಮಧ್ಯದ ಟ್ಯೂಬ್ ಲೈಟ್ ಥರದ ದಿಂಡನ್ನು ಒಂದೇ ಅಳತೆಗೆ ಮಾಡಿಕೊಳ್ಳುವುದು, ಬಿಳೇ ಪಂಚೆ ತೊಟ್ಟು, ಬಿಳೇ ಬಾಳೆಯ ದಿಂಡುಗಳನ್ನು ಎಲ್ಲರೂ ಹೆಗಲಮೇಲೆ ಇಟ್ಟುಕೊಂಡು ಒಂದೇ ಮಂದಗತಿಯಲ್ಲಿ ನಾಲ್ಕಾರು ಸಾಲಿನಲ್ಲಿ ನಡೆಯುವುದು, ಅವರಲ್ಲಿ ಕೋಲಕಾರನಾದ ವ್ಯಕ್ತಿ ಕೆಲವು ಸೂಚನೆಗಳನ್ನು ಕೊಡುವುದು, ಆ ಸೂಚನೆಗಳಂತೆ ಎಲ್ಲರೂ ನಡೆದುಕೊಳ್ಳುವುದು --ಎಂದು ನಿರ್ಧಾರಮಾಡಿಕೊಂಡರಂತೆ. ಹಾಗೆ ಮಾಡಿಕೊಂಡು ಮುಂದೆ ಹೋಗುವಾಗ ಕೋಲಕಾರನಿಗೆ ಉಚ್ಚೆಗೆ ಹೋಗುವ ಅವಸರವಾಯಿತು. ಆತ ಮೀಸೆ ತಿರುವುತ್ತ ಅಲ್ಲೇ ಪಕ್ಕಕ್ಕೆ ಸರಿದು ಬಿಳಿಯ ಬಾಳೆಯ ದಿಂಡನ್ನು ಎಡಹೆಗಲಮೇಲೆ ಸರಿಯಾಗಿ ಹಿಡಿದು ಮೂತ್ರಕ್ಕೆ ಕುಳಿತ. ಅವನೇ ಕ್ಯಾಪ್ಟನ್ ಎಂದಮೇಲೆ ಅನುಸರಿಸಬೇಕಲ್ಲವೇ ? ಎಲ್ಲರೂ ಅದೇ ರೀತಿ ಅನುಸರಿಸಿದರು. ಎದುರಿಗೆ ದೂರದಲ್ಲಿ ನೋಡುತ್ತ ನಿಂತಿದ್ದ ಮೊಘಲ್ ಸೈನ್ಯಾಧಿಪತಿಗಳು ಎಂತಹ ಶಿಸ್ತಿನ ಭಾರತೀಯ ಸೈನ್ಯವಪ್ಪಾ ಈ ಹಳ್ಳಿಗಳಲ್ಲಿ ಎಂದುಕೊಳ್ಳುವುದರ ಜೊತೆಗೆ ತಾವು ಜನುಮದಲ್ಲೇ ಕಂಡರಿಯದ ವಿಚಿತ್ರ ಮತ್ತು ಅದ್ಬುತ ಬಂದೂಕಿಗೂ ಮಿಗಿಲಾಗಿ ಅಡ್ವಾನ್ಸ್ಡ್ ಆಗಿರುವಂತೆ ಕಾಣುವ ಬಿಳಿಯ ಆಯುಧವನ್ನು ಕಂಡು ತಮ್ಮ ಸೈನ್ಯವನ್ನು ಮರಳಿ ಒಯ್ದರಂತೆ! ಇಲ್ಲೂ ನಮ್ಮ ಮೀಸೆ ಕೂಡ ಕೆಲಸಮಾಡಿದೆ!

ಮೀಸೆಯನ್ನು ಬಳಸಿಕೊಂಡು ಹಲವು ಗಿನ್ನೆಸ್ ದಾಖಲೆಗಳು ನಡೆದಿವೆ ಅಲ್ಲವೇ ? ಮೀಸೆಯಿಂದ ತುಂಬಿದ ಬಿಂದಿಗೆ ಎತ್ತುವುದು, ಭಾರದ ಕಲ್ಲನ್ನು ಎತ್ತುವುದು, ಮೀಸೆಗೆ ದಾರಕಟ್ಟಿ ಅದರ ಇನ್ನೊಂದು ತುದಿಯನ್ನು ಕಾರಿಗೆ ಕಟ್ಟಿ ಎಳೆದವರಿದ್ದಾರೆ. ಇಷ್ಟೇ ಏಕೆ ಮೀಸೆಯನ್ನು ಮಾರುದ್ದ ಬೆಳೆಸಿ ಕೂದಲಿನಂತೆ ಕಾಪಾಡುವ ಬಾಬಾಗಳು ನೋಡಸಿಗುತ್ತಾರೆ. ತೊಳೆಯದೇ ಹಾಗೇ ಬಿಡುವ ಉದ್ದನೇ ಮೀಸೆ ಉದ್ದದ ಮಲಬಾರ್ ಹೊಗೆಸೊಪ್ಪಿನ ಕಟ್ಟನ್ನು ಕಾಣುವ ಹಾಗೇ ಕಾಣುತ್ತದೆ. ಕೆಲವರು ಕಣ್ಣಲ್ಲಿ ನಕ್ಕಂತೆ ಇನ್ನು ಕೆಲವರು ತಮ್ಮ ಮೀಸೆಯಲ್ಲೇ ನಗುತ್ತಾರೆ ಅದು ಹೇಗೆ ಎಂದರೆ ಅನುಭವದಿಂದ ಮಾತ್ರ ನೀವದನ್ನು ತಿಳಿಯಲು ಸಾಧ್ಯ! ಅವರು ನೇರವಾಗಿ ಗಹಗಹಿಸಿ ನಗುವುದೇ ಇಲ್ಲ, ಅವರು ಮೀಸೆಯುಳ್ಳ ಮೇಲ್ದುಟಿಯನ್ನು ಸ್ವಲ್ಪ ಅಗಲಿಸಿದರೆಂದರೆ ಅಲ್ಲಿ ನಗೆ ಮೂಡಿಬರುತ್ತದೆ.

ನಮ್ಮ ಮಹಾಭಾರತ, ಪುರಾಣ ಇವುಗಳಲ್ಲೆಲ್ಲ ಬರುವ ಎಲ್ಲಾ ಪಾತ್ರ್ಧಾರಿಗಳೂ ಮೀಸೆ ಹೊಂದಿದ್ದರು. ಇಂತಿಂಥವರಿಗೆ ಇಂತಿಂಥಾ ಮೀಸೆ ಇತ್ತು ಎಂಬುದು ಬಹಳ ಜನಜನಿತ. ಆ ಪಾತ್ರ ಕಣ್ಣ ಮುಂದೆ ಬಂದಾಗ ಆ ರೀತಿಯದೇ ಮೀಸೆ ಇದ್ದರೆ ಸರಿ, ಇಲ್ಲದಿದ್ದರೆ ಆ ಪಾತ್ರವನ್ನು ನಾಟಕ-ಯಕ್ಷಗಾನ ಮೊದಲಾದವುಗಳಲ್ಲಿ ಅಭಿನಯಿಸುವ ವ್ಯಕ್ತಿಗೆ ಅನುಭವ ಸಾಲದು ಎಂದುಕೊಳ್ಳುತ್ತಾರೆ ಜನ. ಮೀಸೆಯಲ್ಲಿ ಇನ್ನೂ ಒಂದೆರಡು ರೀತಿಯನ್ನು ನಾನಿಲ್ಲಿ ಹೇಳಲೇಬೇಕು. ಒಂದು ಸೇನಾ ಮೀಸೆ, ಗಾಬರಿಯಗಬೇಡಿ-ಸೇನೆಗೆ ಮೀಸೆಯಿರುವುದಿಲ್ಲ ಅದರೆ ಸೈನಿಕರಿಗಿರುತ್ತದಲ್ಲ, ಅಲ್ಲಿ ಬಹುತೇಕ ಅವರದ್ದಾದ ಒಂದು ರೀತಿ ಇರುತ್ತದೆ. ಇನ್ನೊಂದು ಮುಳ್ಳು ಮೀಸೆ-ಅದು ಹೇಗೆ ಎಂದರೆ ನೀವು ಮುಳ್ಳುಹಂದಿಯನ್ನು ಚಿತ್ರದಲ್ಲಾದರೂ ನೋಡಿರಲಿಕ್ಕೆ ಸಾಕು-ಅದೇ ರೀತಿ ನಮ್ಮಲ್ಲಿ ಕೆಲವರ ಕೂದಲು ಮೀಸೆ ಎಲ್ಲ ಮುಳ್ಳಿನ ರೀತಿ ನಿಂತಿರುತ್ತದೆ, ಬಹಳ ಸ್ಟ್ರಾಂಗು ! ತಾಗಿದರೆ ಗಾಯವೇ ಆಗಬೇಕು. ಈ ಮೀಸೆಗೆ ಶತ್ರುಪರಾಜಯ ಮೀಸೆ ಎಂದೂ ಕರೆಯುತ್ತಾರೆ! ವಿರಜಾ ಮೀಸೆಯ ಬಗ್ಗೆ ವಿಸ್ತರಿಸಿ ಹೇಳಿರಲಿಲ್ಲ, ಅದು ವಿರಕ್ತರಿಗೆ ಬರುವ ಮೀಸೆ. ನಮ ಸನ್ಯಾಸಿಗಳೆಲ್ಲ ಗಡ್ಡ-ಮೀಸೆಗಳನ್ನು ಅಂದಕ್ಕಾಗಿ ಬಿಡುವುದಿಲ್ಲ, ಬದಲಾಗಿ ಪ್ರತೀ ಹುಣ್ಣಿಮೆಗೊಮ್ಮೆ ಅವರು ತಲೆ-ಗಡ್ಡ-ಮೀಸೆ ಎಲ್ಲವುಗಳನ್ನೂ ಮುಂಡನಮಾಡಿಸಿಕೊಳ್ಳುತ್ತಾರೆ. ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆ ಬರುವವರೆಗೆ ಯಾವುದೇ ನಿಯಂತ್ರಣ ಅಥವಾ ಕತ್ತರಿಸುವಿಕೆ ಇಲ್ಲದೇ ತನಗಿಷ್ಟಬಂದಹಾಗೇ ತಾನೇ ಬೆಳೆವ ಮೀಸೆ ವಿರಜಾಮೀಸೆ.

ನಮ್ಮ ಕನ್ನಡದಲ್ಲಿ ಫ್ಲಾವರ್ ಬ್ರಾಕೆಟ್ಟಿಗೆ ಮೀಸೆ ಕಂಸ ಎನ್ನುತ್ತೇವೆ. ಮಹಾಭಾರತದಲ್ಲಿಯ ಕಂಸನಿಗೂ ಈ ಮೀಸೆಕಂಸಕ್ಕೂ ಯಾವುದೇ ಸಂಬಂಧವಿಲ್ಲ, ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ-ಹುನ್ನಾರವೂ ಇಲ್ಲ, ಎಲ್ಲಾ ಓಪನ್ ಓಪನ್! ಈ ಮೀಸೆ ಕಂಸದ ಥರದ ಮೀಸೆ ಕೆಲವರಿಗೆ ಇರುತ್ತದೆ. ಅದನ್ನು ಅವರು ಹಾಗೇ ಒಪ್ಪವಾಗಿ ಹೂವಿನ ಥರವೇ ಇಟ್ಟುಕೊಂಡಿರುತ್ತಾರೆ. ಇಂತಹ ಮೀಸೆಯುಳ್ಳವರು ಪ್ರಾಯಶಃ ಕಿಡಿಗೇಡಿಗಳಾಗಿರುವುದಿಲ್ಲ. ಇನ್ನು ಸಮ್ಮಿಶ್ರ ಸರಕಾರದಂತೆ ಬಣ್ಣದಲ್ಲೂ, ಬೆಳವಣಿಗೆಯಲ್ಲೂ ವಿವಿಧ ರೀತಿಯ ಮಿಶ್ರಣವನ್ನು ತೋರಿಸುವ ಮೀಸೆ ಸಮ್ಮಿಶ್ರ ಮೀಸೆ.
ಮತ್ತೊಂದು ಶೈಲಿಯೆಂದರೆ ಅದು ಪಾರ್ಕಿನಲ್ಲಿ ಹೊಸದಾಗಿ ಹಾಕಿದ ಹಸಿರುಚಿಗುರಿನ ಹಾಗೇ ಕೂದಲುಗಳನ್ನೆಲ್ಲ ೨-೩ ಸೆಂಟಿಮೀಟರ್ ಗೆ ಕಟಾವ್ ಮಾಡಿ ಕಾಲೊರೆಸುವ ತೆಂಗಿನನಾರಿನ ಮ್ಯಾಟ್ ನಂತೆ ಮುಟ್ಟಿದರೆ ಕುಶನ್ ಥರದ ಫೀಲಿಂಗ್ ಕೊಡುವ ’ಪಾರ್ಕ್ ಮೀಸೆ’.

ಇತ್ತೀಚೆಗೆ ತರಾವರಿ ಬಣ್ಣಗಳು ಬಂದಿರುವುದರಿಂದ ಕಪ್ಪುಬಣ್ಣವನ್ನು ಹೊದ್ದ ಟೆಫ್ಲಾನ್ ಕೋಟೆಡ್ ಮೀಸೆ, ಅರಗೆಂಪು ಬಣ್ಣ ಹೊಂದಿದ ಕಾಪರ್ ಬಾಟಮ್ ಮೀಸೆ, ಕಂದು ಬಣ್ಣ ಹೊಂದಿದ ನೈಲಾನ್ ಮೀಸೆ, ಅಧಿಕ ಇಳುವರಿ ತೋರುವ ಬಳುವರೀ ಮೀಸೆ[ಬಳ್ಳಿಯ ಥರ ಹರಡಿರುತ್ತದೆ], ಕುರುಚಲು ಗಿಡಗಳ ಥರ ಕಾಣಿಸುವ ಕುರುಚಲು ಮೀಸೆ, ಮಧ್ಯೆ ಮಧ್ಯೆ ಕಲೆಗಳಿಂದ ಕಂಗೊಳಿಸುವ ಕಜ್ಜಿಮೀಸೆ, ಮಸಾಲೆದೋಸೆಯನ್ನು ಅರ್ಧಮಡಿಸಿದ ಹಾಗೇ ಕಾಣುವ ಮಸಾಲೆ ಮೀಸೆ, ಚಪ್ಪನ್ನೈವತ್ತಾರು ದೇಶಗಳನ್ನು ಸೇರಿಸಿ ಹೊಸೆದು ಒಂದು ಭಾರತವನ್ನು ಕಟ್ಟಿದಂತೆ ಮೀಸೆಯನ್ನು ಅದು ಹುಟ್ಟಿದ ಜಾಗದಿಂದಲೇ ಅಡ್ಡಡ್ಡ ತಿರುವಿ ಹದಗೊಳಿಸಿ ಜೈಕಿಸಾನ್ ದೃಶ್ಯಕ್ಕೆ ತೋರಿಸಲು ಮಾಡಿದ ಮೀಸೆ ಜೈಕಿಸಾನ್ ಮೀಸೆ!ಇವೆಲ್ಲ ಬಹುರೂಪೀ ಮೀಸೆಯ ಶತಾವತಾರಗಳು!


ಮಾವಂದಿರಿಗೆ ಮೀಸೆ ಜಾಸ್ತಿ ಇರುತ್ತಿತ್ತೆಂದೋ ಏನೋ ಅಂತೂ ಮೀಸೆಮಾವ ಎನ್ನುವುದು ಜನಪ್ರಿಯ ಶಬ್ಧ ಅಲ್ಲವೇ ? ಕೆಲವರು ಪೋಲೀಸನಿಗೂ ಮೀಸೆಮಾವ ಎನ್ನುತ್ತಾರೆ. [ಉತ್ತರ ಭಾರತದಲ್ಲಿ ಪೋದ್ದಾರ್ ಎನ್ನುವ ಪೊಲೀಸರಿಗೆ ಪೋದ್ದಾರ್ ಮೀಸೆ ಎನ್ನಬಹುದು] ಮೀಸೆ ಅತ್ತೆ ಎನ್ನಲೂ ಅಡ್ಡಿಯಿಲ್ಲವೇನೋ ಕೆಲವು ಅತ್ತೆಯರಿಗೂ ತೆಳ್ಳಗೆ ಮೀಸೆ ಕಾಣಸಿಗುತ್ತದೆ![ಇದನ್ನ ಹಾರ್ಮೋನ್ ವೈಪರೀತ್ಯ ಎನ್ನುತ್ತಾರೆ!]


ಕೊನೆಯದಾಗಿ ಮೀಸೆಗೊಂದು ಮಂಗಳ ಮುಕ್ತಕ-

ಮೀಸೆ ಜನಕ ತುಟಿಯತನಕ ಬೆಳೆಸು ಪುಕ್ಕಟೆ
ಕಾಸು ಕೊಟ್ಟು ಬೆಳೆವ ಗೊಡವೆ ಇಲ್ಲವಲ್ಲವೇ ?

ವ್ಯಸನಕೊಮ್ಮೆ ಉಜ್ಜಿಕೊಳಲು ಮೀಸೆ ಬೇಡವೇ?
ಹಸುಳೆಯಂತೆ ಕಾಣಲೆಂದು ಬೋಳಿಸುವುದೇ ?
ಅಸುರ-ಸುರರು-ನರರು ಎಂಬ ಭೇದವಿಲ್ಲದೇ
ಕುಶಲ ಪೇಳ್ವ ಮಾರ್ಗದಲ್ಲಿ ಅಂದವಾನಡೆ !

Sunday, June 27, 2010

ಕರೆದಳಾರಾಧೆ


ಕೃಷ್ಣನ ಬಗ್ಗೆ ರಾಧೆಗಿದ್ದ ಪ್ರೀತಿ ಅಪ್ರತಿಮ. ಅದು ಅಮೋಘ,ಉತ್ಕಟ,ಅನನ್ಯ,ಅನೂಹ್ಯ, ಬಣ್ಣಿಸಲಸದಳ. ಪ್ರಾಯಶಃ ಈ ಪ್ರಪಂಚದಲ್ಲಿ ಬೇರಾವ ಸಂಗಾತಿಯೂ ಕೊಡಲಾರದ ಪ್ರೇಮವನ್ನು ತನ್ನ ಕೃಷ್ಣನಿಗಾಗಿ ಆಕೆ ಮೀಸಲಿರಿಸಿದ್ದಾಳೆ. ಕೃಷ್ಣನೊಬ್ಬ ಕಳ್ಳ, ಹೆಂಗುಸರ ಮಳ್ಳ, ಕೃಷ್ಣನೊಬ್ಬ ತಲೆಹಿಡುಕ, ಕೃಷ್ಣನೊಬ್ಬ ವಾಚಾಳಿ, ಕೃಷ್ಣನೊಬ್ಬ ಗೊಲ್ಲ, ಕೃಷ್ಣನೊಬ್ಬ ಕುತ್ಸಿತ-ಕಪಟ ನಾಟಕರಂಗ ಹೀಗೇ ಜನಸಮುದಾಯುದಲ್ಲಿ ಅಲ್ಲಲ್ಲಿ ಗುಲ್ಲೆದ್ದಿದ್ದರೂ ಆ ಬೆಂಕಿಯ ಕಿಡಿಗೆ ತನ್ನ ಬದುಕಿನ ಪ್ರೀತಿಯನ್ನು ಬಲಿಕೊಡುವ ಸಾದಾ ಹೆಣ್ಣಾಗಿರಲಿಲ್ಲ ರಾಧೆ! ಲೋಕದ ಕಣ್ಣಿಗೆ ರಾಧೆ ಹೆಣ್ಣೇ ಸರಿ ಆದರೆ ಅವಳ ಆಂತರ್ಯದಲ್ಲಿ ಕೃಷ್ಣನ ಮೂರ್ತಿ ಕಡೆದು ನಿಲ್ಲಿಸಲ್ಪಟ್ಟಿತ್ತು;ಪ್ರತಿಷ್ಠಾಪಿಸಲ್ಪಟ್ಟಿತ್ತು. ಕೃಷ್ಣನಿಗಾಗಿ ಅವಳು ಏನನ್ನೂ ಮಾಡಿಯಾಳು. ಆಗೊಮ್ಮೆ ಈಗೊಮ್ಮೆ ಕೃಷ್ಣನನ್ನು ಹುಡುಕಲು ತನ್ನ ಸಖಿಯರನ್ನು ಕಳಿಸುವಳು, ಅವರು ತಾವು ಒಲ್ಲೆ ಎಂದಾಗ ಪುರಸ್ಕಾರದ ಆಮಿಷವೊಡ್ಡಿ ತನ್ನ ಮನದಿನಿಯನನ್ನು ಹುಡುಕಿಕೊಡುವಂತೆ ಗೋಗರೆಯುವಳು.

ರಾಜಕಾರ್ಯದಲ್ಲಿ ಮಗ್ನನಾದ ಕೃಷ್ಣ ಮನೆಗೆ ಬರುವುದು ವಿಶ್ರಾಂತಿಗಾಗಿ ಮಾತ್ರ, ಅದೂ ನಡುರಾತ್ರಿ ಕಳೆದ ಮೇಲೆ ಬಂದು ಮತ್ತೆ ಬೆಳಗಿನ ನಸುಕಿನಲ್ಲೇ ಎದ್ದು ಹೋಗುವ ಪರಿಪಾಟ! ಯಾವ ಹೆಂಡತಿ ಸಹಿಸಿಯಾಳು?ಸರಿಯಾದ ಮಾತಿಲ್ಲ,ಕಥೆಯಿಲ್ಲ, ಊಟ-ತಿಂಡಿ ಜೊತೆಗಿದ್ದು ಮಾಡಿ ವರುಷಗಳೇ ಕಳೆದಿವೆ!ತನ್ನ ಹೆಣ್ತನದ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳಲಾರಳು. ಅಕ್ಕಪಕ್ಕದ ಮನೆಯ ಹೆಂಗಳೆಯರು ಯಾಕಮ್ಮಾ ನಿನ್ನ ಕೃಷ್ಣ ಪ್ರತೀ ರಾತ್ರಿ ತಡವಾಗಿ ಬರುವುದು ಎಂದು ಪರಸ್ಪರರು ನೋಡಿಕೊಂಡು ನಕ್ಕಾಗ ಕರುಳಿಗೆ ಬೆಂಕಿಯಿಟ್ಟಂತೆ ಚುಂಯ್ ಗುಡುವ ಅನುಭವ,ಆದರೂ ಮುಚ್ಚಿಕೊಳ್ಳುತ್ತಿದ್ದಳು! ನೋವನ್ನ ಬಚ್ಚಿಟ್ಟುಕೊಳ್ಳುತ್ತಿದ್ದಳು!ಒಸರುವ ಕಣ್ಣೀರನ್ನು ಸೆರಗಿನಿಂದ ಒರೆಸಿ ಆ ಕ್ಷಣ ಅದು ಅವರ ಕಣ್ಣಿಗೆ ಕಾಣದಂತೆ ಮಾಡುತ್ತಿದ್ದಳು. ಅವರಿಗೆ ಸರಿಯಾಗಿ ಬೈದು ಮರಳಿಬಂದು ಬಾಗಿಲು ಹಾಕಿಕೊಂಡು ಪಲ್ಲಂಗದ ಮೇಲೆ ಬೋರಲು ಬಿದ್ದು ಮನ ಹಗುರಾಗುವವರೆಗೂ ಅತ್ತುಬಿಡುವಳು.


ತಂಗದಿರನ ಪೂರ್ಣರಾತ್ರಿಗಳಲ್ಲಿ, ಮಂದ ಮಾರುತ ಹಾಯ್ದು ಮೈಯೆಲ್ಲ ಪುಳಕಗೊಳ್ಳುವಾಗ ಕೃಷ್ಣ-ತನ್ನ ಸಖ ಹತ್ತಿರವಿದ್ದರೆ ಪರಮಸುಖ ಎಂದುಕೊಳ್ಳುವಳು. ಆತ ಬರಬೇಕಲ್ಲ. ಆತ ಬಂದಾಗ ಹಿಂದಿನ ಕಥೆಗಳನ್ನೆಲ್ಲ ಮರೆತು ಹೊಸ ಬದುಕು ಪ್ರಾರಂಭಿಸೋಣವೆಂಬ ಬಯಕೆ ಆಕೆಯದು;ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂದಿದ್ದು ಬಹುಶಃ ರಾಧಾ-ಕೃಷ್ಣರನ್ನು ನೋಡಿಯೇ ಇರಬೇಕು! ಮನಸು ಹೇಳ ಬಯಸಿದೆ ನೂರೊಂದು ! ನನಸಮಾಡಲಾಗದಾ ಮಾತೊಂದು !

ಒಮ್ಮೊಮ್ಮೆ ಕೃಷ್ಣ ಬರುವ ಸಮಯ ಎಚ್ಚರವಿದ್ದು ಚೆನ್ನಾಗಿ ಬೈದು ಮಂಗಳಾರತಿ ಎತ್ತುವಾ ಎನಿಸುತ್ತದೆ, ಆತನ ಕೂಡ ಘನ ಘೋರ ಮಾತಿನ ಕಾಳಗ ನಡೆಸಿ ಮತ್ತಿನ್ನಾತ ಎಲ್ಲೂ ಹೋಗದೇ ಸಂಜೆಯೊಳಗೇ ಮನೆ ಸೇರುವಂತೆ ಮಾಡಬೇಕೆನಿಸುತ್ತದೆ. ಚಿವುಟಿ ಕೃಷ್ಣನನ್ನು ಗುದ್ದಾಡಿ ಹಣ್ಣುಗಾಯಿ-ನೀರುಗಾಯಿ ಮಾಡುವ ಕೋಪ ಆವರಿಸುತ್ತದೆ. ನೀನು ಬರಲೇ ಬೇಡ ಎಂದು ಬಾಗಿಲು ಹಾಕಿ ಬಿಡುವಾ ಎನಿಸುತ್ತದೆ. ಸವತಿಯರ ನೆನಪಾದಾಗ ಅವಡುಗಚ್ಚಿ ಸೊಂಟಕಟ್ಟಿ ಎಲ್ಲರ ಸೊಂಟ ಮುರಿದುಹಾಕುವ ಈರ್ಷ್ಯೆ ಉಕ್ಕಿಬರುತ್ತದೆ! ಬರಿಗೈಲಿ ಕೃಷ್ಣನನ್ನು ಎಲ್ಲೂ ಕಾಣಲಿಲ್ಲ ಎಂದು ಬರುವ ಸಖಿಯರಿಗೆ ನಖದಿಂದ ಶಿಖದವರೆಗೂ ಬೈಯ್ದು ಅಟ್ಟುವ ಕ್ರೋಧ ಆವರಿಸುತ್ತದೆ! ಆದರೆ ಕೃಷ್ಣ ಬರುತಿದ್ದಂತೆ ದೀಪಕ್ಕೆ ಮುತ್ತಿಡುವ ಪತಂಗದಂತೇ ತನ್ನ ಸ್ಥಿತಿ. ಕೃಷ್ಣ ಬಂದಾಗ ಆತ ತನ್ನ ತೋಳ್ತೆಕ್ಕೆಯಲ್ಲಿ ಒಂದೇ ಒಂದು ನಿಮಿಷ ಬಂಧಿಸಿ ರಮಿಸಿದರೆ ಸಾಕು ಸುಯ್ಯನೆ ಬಂದ ಬಿರುಗಾಳಿ ತರಗೆಲೆಯನ್ನು ಹಾರಿಸಿಕೊಂಡು ಹೋದಂತೆ ತನ್ನಲ್ಲಿರುವ ಎಲ್ಲಾ ವೈರುಧ್ಯಗಳೂ ಮಾಯ! ಹೀಗಾಗಿ ಕೃಷ್ಣನ ಈ ಮಾಯೆಯಲ್ಲಿ ತನ್ನನೇ ಮೀಯಿಸಿಕೊಂಡ ರಾಧೆ ಕೃಷ್ಣನನ್ನು ಅರ್ಥವಿಸತೊಡಗುತ್ತಾಳೆ.

ಕೃಷ್ಣ ಜಗತ್ತಿಗೇ ಗುರುವಾಗತಕ್ಕವನು, ಕೃಷ್ಣನೊಬ್ಬ ಲೋಕೋದ್ಧಾರಕ, ಕೃಷ್ಣನೊಬ್ಬ ಸಕ್ರಿಯ ಪರಿಪೂರ್ಣ ಆದರ್ಶ ರಾಜಕಾರಣಿ, ಕೃಷ್ಣ ಹಲವು ಗೋಪ-ಗೋಪಿಕೆಯರ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ಘನಾಢ್ಯ, ಕೃಷ್ಣನೊಬ್ಬ ಸಾವಿರ ಸಾವಿರ ಸಂಖ್ಯೆಯ ಗೋವುಗಳನ್ನು ಮೈದಡವಿ ಸಂತೈಸಿ ಅವುಗಳಿಗೆ ಹುಲ್ಲು-ನೀರು-ಆಸರೆ ಕಲ್ಪಿಸುವ ವ್ಯವಸ್ಥಾಪಕ, ಕೃಷ್ಣನೊಬ್ಬ ಸಮಾಜ ಘಾತುಕನಾದ ಕಾಳೀಯನ ಮರ್ದಕ,ಕೃಷ್ಣನೊಬ್ಬ ಮುರಳೀಗಾನ ವಿಲೋಲ, ಕೃಷ್ಣನೊಬ್ಬ ಅಸುರೀ ಶಕ್ತಿ ಭಂಜಕ...ಹೀಗೇ ತನ್ನಲ್ಲಿ ತನಗೇ ಗೊತ್ತಿಲ್ಲದಂತೆ ಮನಸ್ಸಿನ ಉದ್ದಗಲ-ಆಳಗಳಲ್ಲಿ,ಮನದ ಪ್ರತೀ ಮೂಸೆ ಮೂಸೆಯಲ್ಲಿ, ಶರೀರದ ಅಣು ಅಣುವಿನಲ್ಲಿ-ಕಣ ಕಣದಲ್ಲಿ ಆತನನ್ನು ಆಹ್ವಾನಿಸಿಕೊಳ್ಳುತ್ತಾಳೆ. ಆ ಮೋಹ ವ್ಯಮೋಹ, ಅತಿ ವ್ಯಾಮೋಹ, ಅದು ಬಿಟ್ಟಿರಲಾರದ ನಂಟು. ಅದು ಪ್ರೀತಿಯ ಸಾರ್ಥಕ್ಯದ ಗಂಟು, ಅದು ಸುಲಲಿತ ದಾಂಪತ್ಯದ ’ಸರಿಗಮಪದನಿಸ’. ಇಂತಹ ವೇಳೆ ರಾಧೆ ಕೃಷ್ಣನ ಕುರಿತಾಗಿ ಯೋಚಿಸಿದ್ದು ಹೀಗೆ--

ಕರೆದಳಾರಾಧೆ

ನಗುಮೊಗದಿ ಕರೆದಳಾರಾಧೆ
ವರ ಕೃಷ್ಣಗೆ ನೀಡುತ ಸರಸದ ಬೋಧೆ

ಕಡೆಗಣ್ಣ ನೋಟ ತಾ ಹರಿಸಿ
ಒಡೆಯನ್ನ ಹೃದಯದಲಿ ಇರಿಸಿ
ನಡುರಾತ್ರಿವರೆಗೆ ಬಾರದಿಹ
ಒಡಲಾಳದ ನೋವನು ಮರೆಸಿ

ತಂಗದಿರನ ತಂಪು ಬೆಳಕಲ್ಲಿ
ಅಂಗಳದ ತುಂಬ ಹಾಲ್ ಚೆಲ್ಲಿ
ಮಂಗಳದ ಸೌಕುಮಾರ್ಯ
ರಂಗೆದ್ದು ಕುಣಿಯಿತದೋ ಅಲ್ಲಿ

ತಂಗಾಳಿ ತುಸುವೆ ತಾ ಬೀಸಿ
ಅಂಗಾಂಗಕೆ ಪರಿಮಳ ಪೂಸಿ
ಸಂಗಾತಿಯ ಕರೆಯುತ ಮನಸು
ಸಂಘರ್ಷಗಳನು ಪರಿಹರಿಸಿ

ಅದು ನಿಲ್ಲದ ಪ್ರೀತಿಯ ಮೋಹ
ಬದಲಾಗದ ಅತಿ ವ್ಯಾಮೋಹ
ಅದುಮಿಟ್ಟು ಕೊಳದ ಆ ಶರೀರ
ವದರಿತ್ತು ಮುರಳಿಯೇನಮಃ

ಹದಿನಾರು ಸಾವಿರದ ನೂರು
ಚದುರುತ್ತ ಸವತಿಯರು ಜೋರು!
ಎದುರಾಳಿ ಸತ್ಯಭಾಮೆಯೆನಗೆ
ಅದಕಿಲ್ಲ ಕೋಪ ಬಳಿಸಾರು

Saturday, June 26, 2010

ಬಾಡೀ ಲ್ಯಾಂಗ್ವೇಜ್


ಬಾಡೀ ಲ್ಯಾಂಗ್ವೇಜ್

ಹಿಂದೊಮ್ಮೆ ಹೇಳಿದ್ದೆ, ಬಾಡೀ ಲ್ಯಾಂಗ್ವೇಜ್ ಬಹಳ ಮುಖ್ಯ ಎಂದು, ತಮಗೆಲ್ಲ ನೆನಪಿರಬಹುದು. ಇದನ್ನು ಸಹಜವಾಗಿ ತಿಳಿಯಬೇಕಾದರೆ ಟಿ.ವಿ ಪೋಗೋ ವಾಹಿನಿಯಲ್ಲಿ 'ಮಿಸ್ಟರ್ ಬೀನ್' ನ ಒಂದೆರಡು ಕಂತುಗಳನ್ನಾದರೂ ನೋಡಿ! ಅಲ್ಲಿ ಹಾಸ್ಯವೂ, ತರಲೆ ಪ್ಲಾನುಗಳೂ, ಜನಸಾಮಾನ್ಯನ ಮನಸ್ಸಲ್ಲಿ ಉದ್ಭವವಾಗುವ ಎಲ್ಲ ಮನೋ ತರಂಗಗಳು ಕಾಣಸಿಗುತ್ತವೆ! ಮನುಷ್ಯ ಇನ್ನೊಬ್ಬ ಅಥವಾ ಒಂದು ಜನರ ಗುಂಪಿನ ಮಧ್ಯೆ ತನ್ನ ಶಾರೀರಿಕ ಚರ್ಯೆಗಳಿಂದ ಮೇಲಾಗಿ, ಕೀಳಾಗಿ ಅಥವಾ ಸಮಾನವಾಗಿ ಕಾಣುತ್ತಾನೆ !

ಮುಖದ ಬಗ್ಗೆ ಕೂಡ ಹಿಂದೆ ಬರೆದಿದ್ದೇನೆ. ಮನುಷ್ಯನ ಯವ್ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು, ದೊಡ್ಡವರೆದುರು,ಚಿಕ್ಕವರೆದುರು, ಕಚೇರಿಯಲ್ಲಿ ತನಗಿಂತ ಉನ್ನತ ದರ್ಜೆಯಲ್ಲಿರುವವರೆದುರು, ಕಂಪನಿಯ ಮುಖ್ಯಸ್ಥರ ಎದುರು, ತನ್ನ ಕಂಪನಿಅಯನ್ನು ಪ್ರತಿನಿಧಿಸಿ ಬೇರೆ ಕಚೇರಿಗೆ ಹೋದಾಗ ಅವರೆದುರು ಹೀಗೇ ವಿವಿಧ ಸ್ಥಳ,ಕಾಲ,ದೇಶ,ಭಾಷೆ ಇವುಗಳನ್ನೆಲ್ಲ ನೋಡಿಕೊಂಡು ಅಲ್ಲಿಗೆ ತಕ್ಕುದಾಗಿ ನಡೆಯಲು ಶಾರೀರಿಕವಾಗಿ ನಮ್ಮ ಭಾವನೆಗಳನ್ನು ಮೂಕ ಅಭಿನಯದ ಮೂಲಕ ಅಭಿವ್ಯಕ್ತಗೊಳಿಸುವುದು ಬಾಡಿ ಲ್ಯಾಂಗ್ವೇಜ್.

ಇದನ್ನು ಅಭ್ಯಸಿಸಲು ಮೊದಲು ತುಂಬಾ ಸುಲಭ ಉಪಾಯವೆಂದರೆ ಮೂಕರೊಟ್ಟಿಗೆ ವ್ಯವಹರಿಸುವುದು. ಅಲ್ಲಿ ಅವರಿಗೆ ಅನೇಕ ಘಟನೆಗಳನ್ನು ವಿವರಿಸುವಾಗ ಹಲವು ರೀತಿಯ ಆಂಗಿಕಾಭಿನಯಮಾಡಿ ತೋರಿಸಬೇಕಾಗುತ್ತದೆ. ಚೂರು ತಪ್ಪಿದರೂ ಅವರಿಗೆ ಬೇರೆಯೇ ಆದ ರೀತಿಯಲ್ಲಿ ಅರ್ಥವಾಗಿರುತ್ತದೆ. ಹೀಗಾಗಿ ಬಹಳ ಕಾಳಜಿಯಿಂದ ವ್ಯವಹರಿಸಬೇಕಾಗುವುದರಿಂದ ಆ ಜವಾಬ್ದಾರಿಯೇ ಸಹಜವಾಗಿ ನಮಗೆ ಮೂಕಾಭಿನಯವನ್ನು ಅಥವಾ ಬಾಡಿ ಲ್ಯಾಂಗ್ವೇಜ್ ಅನ್ನು ಕಲಿಯಲು ಸಹಕಾರಿಯಾಗುತ್ತದೆ.

ಮನುಷ್ಯನಿಗೆ ದೇವರುಕೊಟ್ಟ ಅತ್ಯಪೂರ್ವ ಸಂಪರ್ಕ ಮಾಧ್ಯಮವೇ ಬಾಡಿಲ್ಯಾಂಗ್ವೇಜ್. ಕಣ್ಣು,ಮೂಗು,ಬಾಯಿ ಇವುಗಳ ಜೊತೆಗೆ ಕೈಗಳನ್ನೂ ಇನ್ನೂ ಕೆಲವೊಮ್ಮೆ ಕಾಲುಗಳನ್ನೂ ಸೇರಿಸಿ ಅಭಿನಯದ ಮೂಲಕ ಅಭಿವ್ಯಕ್ತಗೊಳಿಸಲ್ಪಡುವ ವಿಷಯಕ್ಕೆ ಯಾವುದೇ ಭಾಷೆಯ ಗಡಿಮಿತಿ,ಪರಿಮಿತಿ ಇಲ್ಲ. ಉದಾಹರಣೆಗೆ ನಿದ್ದೆ ಮಾಡು ಎನ್ನುವುದನ್ನು ತೋರಿಸುವಾಗ ಕೈಯನ್ನು ತಲೆಯ ಪಕ್ಕಕ್ಕೆ ಹಿಡಿದು ತಲೆಯನ್ನು ಕೈಯ ಮೇಲೆ ಆನಿಸಿತೋರಿಸುತ್ತೇವೆ, ಜಗತ್ತಿನ ಯಾವ ಮೂಲೆಗೆ ಹೋದರೂ ಇದೇ ಪದ್ಧತಿ ಬಳಸಲ್ಪಡುತ್ತದೆ.

ಅಳುವುದು, ನಗುವುದು, ಕೆಮ್ಮುವುದು, ಬಾಯಲ್ಲಿ ಕೈಯಿಟ್ಟು ಸೀಟಿಹಾಕುವುದು ಇವೆಲ್ಲ ಭಾಷೆಯನ್ನು ಆಧರಿಸದ ಪ್ರಕ್ರಿಯೆಗಳು. ಈ ಅಳು-ನಗುಗಳಲ್ಲೇ ವೈವಿಧ್ಯತೆ ಇದ್ದು ಅವುಗಳನ್ನೂ ಹತೋಟಿಯಲ್ಲಿಡಲು ಏನು ಮಾಡಬೇಕು ಎಂಬುದನ್ನು ಈ ಶರೀರ ಪ್ರಕ್ರಿಯಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಕೆಲವರು ಚಪ್ ಚಪ್ ಚಪ್ ಎಂದು ಶಬ್ಢಮಾಡುತ್ತ ತಿಂದುಂಡು ಮಾಡುತ್ತಾರೆ, ಇದು ನಾಗರಿಕ ಸಮಾಜದಲ್ಲಿ ಅಸಹನೀಯವೆನಿಸುತ್ತದೆ, ಕೆಲವರು ವಿಪರೀತ ಗೊರಕೆ ಹೊಡೆಯುತ್ತಾರೆ, ಕೆಲವರು ತಮ್ಮ ವಸ್ತುಗಳನ್ನು ಬೇರೆಯವರ ತಾಬಾ ವಹಿಸಿ ಬಹಳ ಹೊತ್ತು ಅವರು ಮರಳಿಬರುವುದೇ ಇಲ್ಲ, ಕೆಲವರು ಪಕ್ಕದ ಮನೆಯವರಿಗೆ ತೊಂದರೆಯಾಗುವಷ್ಟು ಸಂಗೀತದ ಧ್ವನಿಯನ್ನು ದೊಡ್ಡದಾಗಿಮಾಡಿ ಕೇಕೇ ಹಾಕುತ್ತಾರೆ, ಇನ್ನು ಕೆಲವರು ತಮ್ಮ ಮನೆಯ ನಾಯಿಯನ್ನು ಪಕ್ಕದ ಮನೆಯ ಗೇಟಿನ ಎದುರಿಗೆ ನಿಲ್ಲಿಸಿ ಮಲ-ಮೂತ್ರ ವಿಸರ್ಜಿಸಲು ಅನುಕೂಲ ಕಲ್ಪಿಸಿಕೊಡುತ್ತಾರೆ, ಕೆಲವರು ಸಂಜೆಯಾಯಿತೆಂದರೆ ಹತ್ತಿರದ ಮನೆಗಳಿಗೆ ಸಂಚಾರಹೊರಟು ದಿನಾ ಉಪದ್ರವ ಅಥವಾ ಉಪಗ್ರಹವಾಗಿ ಕಾಡುತ್ತಾರೆ! ---ಹೀಗೆಲ್ಲ ಹಲವು ಹತ್ತು ಆಭಾಸದ ಪ್ರಕ್ರಿಯೆಗಳು ನಮಗೆ ಅರಿಯದೇ ಸಮಾಜದಲ್ಲಿ ನಡೆದೇ ಇವೆ. ಮನುಷ್ಯ ಹೇಗಾದರೂ ಇರಬಹುದು ಬಿಡಿ ತೊಂದರೆ ಏನಿಲ್ಲ-ಅದು ಆತ ಹಳ್ಳಿಯಲ್ಲಿ ಅವನ ಸ್ವಂತದ ಜಮೀನಿನಲ್ಲಿ ಇರುವಾಗ, ಅವನದೇ ಮನೆಯಲ್ಲಿ ಅವನ ಹೆಂಡತಿ-ಮಕ್ಕಳು ಆತನ ಬೆವರಿನ ನಾತ ಸಹಿಸಲಾರರು, ಆತ ಕಂಡಲ್ಲಿ ಉಗುಳುವುದನ್ನು ಇಷ್ಟಪಡಲಾರರು, ಆತ ವಿನಾಕಾರಣ ಹರಿಹಾಯುವುದನ್ನು ನೆನಪಿಸಿಕೊಳ್ಳಲೂ ಆರರು!

ವ್ಯಕ್ತಿ ಅರಮನೆಯಲ್ಲಿ ಹೇಗಿರಬೇಕು, ಗುರುಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದೆಲ್ಲ ಒಂದು ತರ್ಕಬದ್ಧ ನಿರ್ಧಾರಿತ ವಿಷಯ. ಇದನ್ನೇ ಉದಹರಿಸುವುದಾದರೆ ನಮ್ಮ ಪೋಲೀಸಣ್ಣಗಳು ಎಲ್ಲಾದರೂ ಯಾರದರೂ ಮಡಿದ ಜಾಗಕ್ಕೆ ಬಂದರೆ ತಮ್ಮ ಟೋಪಿ ತೆಗೆಯುತ್ತಾರೆ-ಯಾಕೆಂದರೆ ಅದು ಅವರಿಂದ ಸತ್ತವರಿಗೆ ಸಿಗುವ ಗೌರವ! ಟಕ್ ಟಕ್ ಟಕ್ ಅಂತ ನಡೆದು ಬಂದು ಸೆಲ್ಯೂಟ್ ಹೊಡೆದು ಪುರಸ್ಕಾರ ಸ್ವೀಕರಿಸುತ್ತಾರೆ--ಅದು ಅಲ್ಲಿನ ಕರ್ತವ್ಯ ನಿಷ್ಠೆಯ ಪ್ರದರ್ಶನ.

ಇತ್ತೀಚೆಗೆ ಅಮೇರಿಕಾದಲ್ಲಿ ನ್ಯೂ ಈಯರ್ ದಿನ ನಮ್ಮ ಪುರೋಹಿತರಿಂದ ಶಾಲುಹೊದೆಸಿಕೊಂಡು ತೃಪ್ತಿಪಟ್ಟ ಅಮೇರಿಕಾ ಅಧ್ಯಕ್ಷ ಒಬಾಮಾ, ಭಾರತೀಯ ಸಂಜಾತರ ಸಂಸ್ಕೃತಿಗೆ ಮತ್ತು ಬಿಹೇವಿಯರಲ್ ಸೈನ್ಸ್ ಗೆ ಮಾರುಹೋದವರು! ಅಂದರೆ ನಮ್ಮಲ್ಲಿ ಉಚ್ಚಮಟ್ಟದ ಸಂಸ್ಕೃತಿ ಇದೆ-ಆದರೆ ನಾವು ಬಹುತೇಕರು ಅದನ್ನು ಅಳವಡಿಸಿಕೊಳ್ಳುತ್ತಿಲ್ಲ ಅಲ್ಲವೇ? ನಿಜವಾಗಿಯೂ ಇದು ಅಪ್ಪಟ ಸತ್ಯ, ಬಾಡೀ ಲ್ಯಾಂಗ್ವೇಜ್ ಅನ್ನುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ!

ಕೊಲೆಗಡುಕ ನಗುಮುಖವನ್ನು ಹೊತ್ತಿರುವುದಿಲ್ಲ, ನಗೆಹೊನಲಿನ ಮಧ್ಯೆ ಯಾರೂ ಅಳುತ್ತಕೂರುವುದಿಲ್ಲ, ಪೋಲೀಸಣ್ಣ ಕೆಂಗಣ್ಣು ಬಿಡದೇ ಇದ್ದರೆ ಕಳ್ಳನ ಬಾಯಿಂದ ಸತ್ಯಹೊರಬೀಳುವುದಿಲ್ಲ, ಬಾಂಬು ಹಾಕುವವರು ತಮ್ಮಲ್ಲಿ ಬಾಂಬಿದೆ ಎಂದು ಹೇಳುತ್ತ ತಿರುಗುವುದಿಲ್ಲ, ಮಂತ್ರಿಗಿರಿಯಲ್ಲಿರುವವರು ಸಾದಾ ಸೈಕಲ್ ನಲ್ಲಿ ಓಡಾಡುವುದಿಲ್ಲ, ಉಪಾಧ್ಯಾಯರು ಮರೆಗುಳಿಯಾಗಿರುವುದಿಲ್ಲ, ಜ್ಯೋತಿಷ್ಕರು ಪೆದ್ದರಾಗಿರುವುದಿಲ್ಲ ಇವೆಲ್ಲ ಅವರವರ ವೃತ್ತಿ ಅಥವಾ ಕೆಲಸಕ್ಕೆ ತಕ್ಕುದಾಗಿ ಅವರು ನಡೆಯುವ ರೀತಿಗಳು.

ವಿದ್ಯೆಗೆ ವಿನಯವು ಪೂರಕ ಅಥವಾ ತುಂಬಿದ ಕೊಡ ತುಳುಕುವುದಿಲ್ಲ ಎಂದು ನಾವು ಹೇಳುತ್ತೇವೆ-ಅರ್ಥ ಏನೆಂದರೆ ವಿದ್ಯೆ ಸರಿಯಾಗಿ ಕಲಿತವರು ವಿನಯವಂತರಾಗಿರುತ್ತಾರೆ. ಸಮರ್ಪಕವಾಗಿ ಕಲಿಸದ ಗುರುಗಳಿಂದ ಅಥವಾ ಸಂಸ್ಕಾರ ರಹಿತ ಗುರುಗಳಿಂದ ಪಡೆದ ವಿದ್ಯೆ ವಿನಯವನ್ನು ಕೊಡುವುದರ ಬದಲು ಇನ್ನೇನನ್ನೋ ಕೊಡುತ್ತದೆ. ಗುಣ-ಸ್ವಭಾವ ಒಳ್ಳೆಯದಾದರೆ ಅವರನ್ನು ತುಂಬಿದ ಬಿಂದಿಗೆಗೆ ಹೋಲಿಸುತ್ತಾರೆ-ತುಂಬಿದ ಬಿಂದಿಗೆ ತುಳುಕುವುದಿಲ್ಲ ಅದು ಅರ್ಧ ಅಥವಾ ಕಾಲುಭಾಗ ತುಂಬಿದ್ದರೆ ಆಗ ಎತ್ತಿಕೊಂಡು ಹೋಗುವಾಗ ತುಳುಕುತ್ತದೆ ಹೇಗೋ ಅದೇ ರೀತಿಯಲ್ಲಿ ಅಲ್ಪವನ್ನು ತಿಳಿದವ ಜ್ಞಾನಿಗಿಂತ ಮಿಗಿಲಾಗಿ ಆಡುತ್ತಾನೆ, ಜ್ಞಾನಿ ತಾನು ಬಹಳ ತಿಳಿದುಕೊಂಡವನೆಂದು ಬಡಾಯಿ ಕೊಚ್ಚಿಕೊಳ್ಳಲಾಗಲೀ, ಪ್ರದರ್ಶಿಸಲಾಗಲೀ ಹೋಗುವುದಿಲ್ಲ. ಕೆಲವೊಮ್ಮೆ ಕೆಲವರು ತಮ್ಮ ಢಾಂಬಿಕತೆಯನ್ನು ಹೊರಜಗತ್ತಿಗೆ ಪ್ರದರ್ಶಿಸುತ್ತಿರುತ್ತಾರೆ, ಅಲ್ಲಿ ಅವರ ನಡಾವಳಿಯನ್ನು ನೋಡಿದರೆ ಅವರೇನು ಕುಬೇರನ ಮಕ್ಕಳೇ ಇರಬೇಕೇನೋ ಎಂಬಂತಿರುತ್ತದೆ, ಅಸಲಿಗೆ ಮನೆಗೆ ಹೋದರೆ ಕುಳಿತುಕೊಳ್ಳಲು ಸರಿಯಾದ ಖುರ್ಚಿಗಳಿರುವುದಿಲ್ಲ! ಬೂಟಾಟಿಕೆಗಿಂತ ನೈಜ ಸ್ಥಿತಿಯಲ್ಲಿರುವುದು ಬಹಳ ಉತ್ತಮ ಮತ್ತು ಸಂತೃಪ್ತಿದಾಯಕ.

ಒಬ್ಬ ನಿಜವಾದ ಸಾಧುವನ್ನು, ಒಬ್ಬ ಸಹಜ ಸನ್ಯಾಸಿಯನ್ನು, ಒಬ್ಬ ನಿಜವಾದ ದೊಡ್ಡವ್ಯಕ್ತಿಯನ್ನು ಕಂಡಾಗ ನಮ್ಮ ಮನದೊಳಗೆ ನಮ್ಮ ಆಂತರ್ಯವೇ ಹೇಳಿಬಿಡುತ್ತದೆ---ಇವರು ನಿಸ್ಪೃಹರು, ಇವರು ಸದಾಚಾರಿಗಳು, ಇವರು ಗೌರವಿಸಲು ಯೋಗ್ಯರು--ಎಂದು ಅದು ನಿರ್ಧರಿಸಿಬಿಡುತ್ತದೆ. ಪ್ರತೀ ವ್ಯಕ್ತಿಯ ದೇಹದ ಹೊರಗೆ ನಮ್ಮ ಕಣ್ಣಿಗೆ ಕಾಣದ ಒಂದು ಪ್ರಭಾವಳಿ ಇದೆ, ಅದು ಪ್ರಕಾಶಮನ್ವಾಗಿರುತ್ತದೆ, ಅದರ ಗಾತ್ರ ಹೆಚ್ಚಿದ್ದಷ್ಟೂ ವ್ಯಕ್ತಿ ಬಹಳ ಎತ್ತರಕ್ಕೇರಿದವನು ಎಂದರ್ಥ, ಅದು ಕಮ್ಮಿ ಇದ್ದಷ್ಟೂ ವ್ಯಕ್ತಿ ಕೆಳಮಟ್ಟದವನು ಎಂದು ತಿಳಿಯಬೇಕು. ನಮ್ಮ ಜೀವ ವಿಜ್ಞಾನ ಇನ್ನೂ ಅದನ್ನು ಸಂಶೋಧಿಸುತ್ತಿದೆ ಆದರೆ ನಮ್ಮ ವೇದ ಅದನ್ನು ಪ್ರಸ್ತುತಪಡಿಸಿದೆ!ಈ ಪ್ರಭಾವಳಿ ನಮ್ಮ ಪೂರ್ವ ಜನ್ಮದ ಸುಕೃತದಿಂದ ಲಭಿಸಿರುತ್ತದೆ! ನಾವು ನಮ್ಮ ದೇಹ ಮತ್ತು ಮನಸ್ಸನ್ನು ಒಳ್ಳೆಯ ಸಂಸ್ಕಾರದವರಲ್ಲಿ ಪಳಗಿಸಿದರೆ ಅದು ಪಳಗಿಸಿದ ಆನೆಯಂತೆ ಒಂದು ಹದಕ್ಕೆ ಬರುತ್ತದೆ! ನಮ್ಮ ಸಮರ್ಪಕ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಸಮರ್ಪಕ ವ್ಯಕ್ತಿಗಳಿಂದ ಸರಿಯಾದ ಬಾಡೀ ಲ್ಯಾಂಗ್ವೇಜ್ ಹೊರಡುತ್ತದೆ!

ಒಬ್ಬ ಮುತ್ಸದ್ಧಿಯನ್ನು ಮಾತನಾಡಿಸಿ ನೋಡಿ ಅಬ್ಬಾ ಎಂತಹ ಮುತ್ಸದ್ಧಿ ಇನ್ನೊಮ್ಮೆ ಅವರೊಡನೆ ಮಾತಾಡಬೇಕು ಎನಿಸುತ್ತದೆ ಅಲ್ಲವೇ? ಅಲ್ಲಿಗೆ ಕಾರಣ ಇಷ್ಟೇ- ಆತ ಮುತ್ಸದ್ಧಿಯಾಗಿದ್ದು ಅವರ ಜ್ಞಾನಲಹರಿ ಅವರ ಭಾವಾಭಿನಯದೊಂದಿಗೆ ನಮ್ಮ ಶರೀರದ ಪ್ರಭಾವಳಿಯನ್ನೂ ಮೀರಿ ನಮ್ಮನ್ನು ತಲ್ಪಿದೆ, ಮಿಕ್ಕುಳಿದವರದ್ದು ಮೇಲಿಂದ ಮೇಲೆ ತೇಪೆ ಹಾಕಿದ ಹಾಗೇ ಇರುತ್ತದೆ!

ಕೆಲವರಿಗೆ ಎಲ್ಲಿ ಮಲಗಬಾರದು, ಯಾವುದರ ಮೇಲೆ ಕೂರಬಾರದು, ಯಾವುದನ್ನು ಮುಟ್ಟಬಾರದು, ಯಾವುದನ್ನು ಕೀಳಬಾರದು, ಯಾವುದನ್ನು ತುಳಿಯಬಾರದು ಇವೆಲ್ಲ ಅರಿವಿಗಿರುವುದಿಲ್ಲ, ರಸ್ತೆಯಲ್ಲಿ ನಡೆಯುವಾಗ ಪಿಚಕ್ ಪಿಚಕ್ ಅಂತ ಅಸಭ್ಯವಾಗಿ ಉಗುಳುವವರು,ಬಸ್ಸಿನಲ್ಲಿ ಕುಳಿತು ಕೆಳಗಡೆ ನೋಡದೇ ಪಕ್ಕದ ಕಿಟಕಿಯಲ್ಲಿ ಉಗುಳುವವರು, ರಸ್ತೆಯಲ್ಲಿ ಬಾಳೆಹಣ್ಣಿನ ಸಿಪ್ಪೆ ಬಿಸಾಡುವವರು, ಮೂಸಂಬಿ-ಕಿತ್ತಳೆ ಇತ್ಯಾದಿ ಹಣ್ಣು ತಿಂದಿ ಸಿಪ್ಪೆ ಎಲ್ಲೆಂದರಲ್ಲಿ ತೂರುವವರು, ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಕಂಡಲ್ಲಿ ಬಿಸಾಡುವವರು, ಸಿಗರೇಟು-ಬೀಡಿಗಳನ್ನು ಬೆಂಕಿಸಮೇತ ಹಾಗೇ ಕಂಡಕಂಡಲ್ಲಿ ಬಿಸಾಡುವವರು ಈ ಥರ ಹಲವಾರು ವ್ಯಕ್ತಿಗಳನ್ನು ಕಾಣುತ್ತೇವಲ್ಲ, ಮಾತನಾಡಿದರೆ " ನಾವೇನಾದ್ರೂ ಮಾಡ್ಕೋತೀವಿ ನಿಮಗೇನೀವಾಗ? " ಅಂತ ಎಗರಿಬರುವವರಿಗೆ ಏನೆನ್ನಬೇಕು? ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಿ ಅಸಹ್ಯ ವಾಸನೆ ಹುಟ್ಟಿಸುವವರು ಹಲವರಿರುತ್ತಾರೆ. ಕೈಯ್ಯನ್ನು ತಲೆಯ ಹಿಂದಕ್ಕೆ ಕಟ್ಟಿ ಆಕಳಿಸುವವರು, ಟಪ್ ಟಪ್ ಟಿಪ್ ಎಂದು ಕೈಯ ನೆಟ್ಟಿಗೆ ತೆಗೆಯುವವರು ಅನೇಕರಿದ್ದಾರೆ. ಆದರೆ ಇವರಿಗೆಲ್ಲ ಯಾವ ಗುರು ಬೋಧಿಸಿದನೋ ಶಿವನೇ ಬಲ್ಲ!

ಒಳ್ಳೆಯದನ್ನು ತರುವ ಶರೀರ ಪ್ರಕ್ರಿಯೆಗಳನ್ನು ಸರಿಯಾದ ಗುರುವಿನಿಂದ ಅರಿಯೋಣ, ಜಗದಲ್ಲಿ ಒಳ್ಳೆಯ ವ್ಯಕ್ತಿತ್ವ ಪಡೆದು ಆದಷ್ಟು ಉನ್ನತಿಯನ್ನು ಪಡೆಯೋಣ ಎಂಬ ಸದಾಶಯದೊಂದಿಗೆ ಸದ್ಯಕ್ಕೆ, ಇಂದಿಗೆ ಈ ಲೇಖನದಿಂದ ಬೀಳ್ಕೊಡಲೇ ?

Friday, June 25, 2010

’ಇದು ದೀಪ ಇರುತ್ತದೆ’!!!


’ಇದು ದೀಪ ಇರುತ್ತದೆ’!!!


ದೀಪಕ್ಕೆ ’ಇದು ದೀಪ ಇರುತ್ತದೆ’ ಎಂದು ಯಾರೂ ಬೋರ್ಡು ಹಾಕುವುದಿಲ್ಲ ಅಲ್ಲವೇ? ದೀಪವನ್ನು ನೋಡಿದ ತಕ್ಷಣ ನಮಗೆ ಗೊತ್ತು ಅದು ದೀಪ್ ಎಂಬುದು! ಯಾಕೆಂದರೆ ಅದು ಸುತ್ತಲ ಪ್ರದೇಶಕ್ಕೆ ಬೆಳಕು ಹರಿಸಿರುತ್ತದೆ. ಹಾಗೆಯೇ ಜ್ಞಾನಿಗಳು, ಮಹಾತ್ಮರು ಎಲ್ಲರ ಬದುಕು. ಅವರು ತಾವು ಇಂಥವರು ಅಂಥವರು ಮೆಂತೆ ಕದ್ದವರು ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಅದೆಲ್ಲಾ ಏನಿದ್ದರೂ ರಾಜಕೀಯದವರಿಗೆ ಬಿಟ್ಟಿದ್ದು. ಇತ್ತೀಚಿನ ರಾಜಕೀಯದ ಹಲವು ದುಂದುಗಾರಿಕೆಗಳಲ್ಲಿ ಸಮಾವೇಶಗಳೂ ಒಂದು. ಸಾಧನೆ ಮಾಡಿದ್ದರೆ ಅದನ್ನು ಜನತೆ ಮೆಚ್ಚುತ್ತಾರೆ, ಅದಕ್ಕಾಗಿ ಸಮಾವೇಶ ಯಾತಕ್ಕೆ ಬೇಕು ? ಹಿಂದೆ ರಾಮರಾಜ್ಯವನ್ನು ನಾವು ಕೇಳಿಲ್ಲವೇ? ಅಂತಹ ಅನ್ವರ್ಥಕ ನಾಮ ಪಡೆದ ರಾಜ್ಯ ಅದಾಗಿತ್ತು, ಅಲ್ಲೆಲ್ಲೂ ಈ ಥರದ ಸಮಾವೇಶಗಳು ನಡೆದಿರಲಿಲ್ಲ ಅಲ್ಲವೇ? ನಡೆದಿದ್ದಾದರೆ ಅದು ಉಲ್ಲೇಖಗೊಳ್ಳುತ್ತಿತ್ತು.

ಇಂದಿನ ಜನತೆ ಪಾಲಾಗಿ ಹೋಗಿದ್ದಾರೆ, ಕೈ ಬೆಂಬಲಿಗರು,ಕಮಲ ಬೆಂಬಲಿಗರು,ತೆನೆಹೊತ್ತ ಮಹಿಳೆ ಬೆಂಬಲಿಗರು ಹೀಗೆಲ್ಲ ಹಲವಾರು ಬೆಂಬಲಿಗರುಗಳು--ಆ ಬೆಂಬಲಿಸುವಿಕೆಗೆ ಅರ್ಥವೇ ಇಲ್ಲ! ಪಕ್ಷದ ಕಾರ್ಯಕರ್ತನಾಗಿ ಕಾಸು ಹೊಡೆಯುವ ಪ್ಲಾನು! ಅಲ್ಲಿ ನ್ಯಾಯ-ನೀತಿ-ಧರ್ಮ ಎಲ್ಲ ಬರೇ ಪುಸ್ತಕಗಳಲ್ಲಿವೆ. ನಾನು ಈ ಮೊದಲೇ ಬರೆದಂತೆ ಹಳ್ಳಿ ಹಳ್ಳಿಗಳಲ್ಲೂ ಈ ರಾಜಕೀಯ ಹೊಕ್ಕು ಅಕ್ಕ-ಅಣ್ಣ ಎಂದುಕೊಂಡಿದ್ದ ಮಂದಿಯೆಲ್ಲ ಈಗ ಆ ಪಕ್ಸದ ಅಧ್ಯಕ್ಸರು ಈ ಪಕ್ಸದ ಕಾರ್ಯಕರ್ತ್ರು ಅಂತಲೇ ಗುರುತಿಸಿಕೊಳ್ಳುತ್ತಾರೆ....ಏನಾಗಿದೆ ನಮ್ಮ ಜನರಿಗೆ? ನಮಗೆ ಬೇಕಾದುದು ಒಳ್ಳೆಯ ಸೌಲಭ್ಯಸಹಿತ ಸಂತೃಪ್ತ ಜೀವನ-ಅದನ್ನು ದೊರಕಿಸಿ ಕೊಡುವಂತಹ ಸರಿಯಾದ ವ್ಯಕ್ತಿ ಯಾರೋ ಅವನಿಗೆ ಪಕ್ಷಭೇದವಿಲ್ಲದೇ ಮತದಾನ ಮಾಡಬೇಕು. ಮೇಲಾಗಿ ಇಡೀ ದೇಶದಲ್ಲಿ ಎರಡೇ ಪಕ್ಷಗಳಿದ್ದರೆ ಆಗ ದಿನಬೆಳಗಾಗಿನ ದ್ಯಾವು,ಸಿದ್ದು,ಜಾನು, ರಾಮು ಇವರೆಲ್ಲರ ಕಿತ್ತಾಟ-ತೇಪೆ ಹಚ್ಚಿಕೊಂಡು ರಾಜಕೀಯ ಅಧಿಕಾರ-ದುಡ್ಡಿನ ಲಾಲಸೆಗಾಗಿ ತೆಕ್ಕೆಹಾಕಿಕೊಳ್ಳುವುದು ನಿಲುತ್ತದೆ, ಪಕ್ಷಾಟನೆ- ಕುದುರೆ ವ್ಯಾಪಾರ ಎಲ್ಲಾ ಮಾಯವಗಿ ಜನತೆ ನಿರುಂಬಳರಾಗುತ್ತಾರೆ! ಆದರೆ ’ಅಂದಕಾಲತ್ತಿಲ್’ ಎಂಬಂತೆ ಸ್ವಾತಂತ್ರ್ಯ ಬಂದಾಗ ಅರ್ಜೆಂಟಾಗಿ ಮಾಡಿದ ನಮ್ಮ ಸಂವಿಧಾನದಲ್ಲಿ ಅನೇಕ ನ್ಯೂನತೆಗಳಿವೆ-ಅವುಗಳು ಹಾಗೇ ಇರುವವರೆಗೂ ರಾಜಕೀಯದವರ ಆಸ್ತಿ ಬೆಳೆಯುತ್ತದೆ-ಹಲವಾರು ಅನುಪಯುಕ್ತ ಸಮಾವೇಶಗಳು ನಡೆಯುತ್ತಲೇ ಇರುತ್ತವೆ!

ಎಲ್ಲಿಯವರೆಗೆ ಸಂವಿಧಾನದ ತಿದ್ದುಪಡಿ ಆಗುವುದಿಲ್ಲವೋ ಅಲ್ಲೀವರೆಗೆ ನ್ಯಾಯವೇ ಮೂರ್ತಿವೆತ್ತಂತ ವೆಂಕಟಾಚಲೈಯ್ಯ, ಸಂತೋಷ ಹೆಗ್ಡೆ ಇಂಥವರಿಗೆಲ್ಲ ನೋವು ಸಹಜ! ಕಥೆಯೋಮ್ದು ನೆನಪಿದೆ -ನೀನು ಹೊಡೆದ ಹಾಗೇ ಮಾಡು, ನಾನು ಸತ್ತಹಾಗೇ ನಟಿಸುತ್ತೇನೆ’ ಎಂದು, ಅದೇ ರೀತಿ ನೀವು ಹಿಡಿದ ಹಾಗೇ ಮಾಡು, ನಾವು ಶಿಕ್ಷಿಸಿದ ಹಾಗೇ ಮಾಡುತ್ತೇವೆ ಎಂದು ಆಳುವ ದೊರೆಗಳು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರುವ ಕೆಲಸ ಸದ್ಯ ಲೋಕಾಯುಕ್ತ ಸ್ಥಾನದ್ದು! ಅದರಲ್ಲೂ ಕಳ್ಳರನು-ಖೂಳರನ್ನು ಹಿಡಿಯುವಗಲೇ ಫೋನು,ಬೆದರಿಕೆ ಇತ್ಯಾದಿ! ಯಾಕಾಗಿ ಮಾಡಬೇಕು ಇದನ್ನು, ನಮ್ಮ ಜನರಿಗೆ ದಮ್ಮಿದ್ದರೆ ಎದ್ದು ಬಂದು ಚಳುವಳಿ ನಡೆಸಿ ಲೋಕಯುಕ್ತರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿಸಲಗುವುದಿಲ್ಲವೇ? ಇದು ಲೋಕಾಯುಕ್ತರಿಗೆ ಮಾತ್ರವಲ್ಲ- ಎಲ್ಲ ಆ.ಭಾ.ಸೇ, ಆ.ಕ.ಸೇ ಮುಂತಾದ ಬ್ಯೂರೋಕ್ರಾಟ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಎತ್ತಾಕಿ ಅವನನ್ನು ಎಂದರೆ ಅಲ್ಲಿಂದ ರಾತ್ರೋ ರಾತ್ರಿ ವರ್ಗಾವಣೆ- ಏನು ಅ ಅಧಿಕಾರಿಗೆ ನಮಗಿರುವಂತೆ ಹೆಂಡತಿ-ಮಕ್ಕಳು ಇರುವುದಿಲ್ಲವೇ, ಸಂಸಾರದ ಆರೋಗ್ಯ,ಮಕ್ಕಳ ವಿದ್ಯಾಭ್ಯಾಸ ಇವೆಲ್ಲದರ ಕುರಿತು ವರ್ಗಾಯಿಸುವಾಗ ದೊರೆಗಳು ವಿಚಾರಿಸುತ್ತಾರೆಯೇ? ಇಲ್ಲವಲ್ಲ. ತನ್ನ ಬಚಾವಿಗಾಗಿ, ತನ್ನ ಉಳಿವಿಗಾಗಿ ತನ್ನಿಂದ ಆದ ಹೆಚ್ಚಿನ ಕಾಣಿಕೆಯನ್ನು ಕಾಣದ ಕೈಗೆ ಕೊಡಬೇಕಾಯಿತು ಆತ! ಅಲ್ಲಿಂದಲೇ ಶುರು ಬ್ರಷ್ಟಾಚಾರ! ಬ್ರಷ್ಟಾಚಾರದ ನಿರ್ಮೂಲನೆ ಮೇಲಿಂದ ಕೆಳತನಕ ಆಗ್ಬೇಕೇ ಹೊರತು ಕೆಳಗಿನಿಂದ ಮೇಲೆ ಹೋಗುತ್ತಾ ಹೋದರೆ ಶತಶತಮಾನಗಳು ಕಳೆದರೂ ಅದು ಲಂಗು-ಲಗಾಮು ಇಲ್ಲದೇ ಬೆಳೆಯುತ್ತದೆ! ಇದನ್ನು ನೋಡಿದಾಗ ನಮಗೆ ರಾಜರುಗಳ ಆಳ್ವಿಕೆಯೇ ಮೇಲೆಸುತ್ತದೆ ಅಲ್ಲವೇ?

ಇನ್ನೊಂದನ್ನು ತಮ್ಮೆಲ್ಲರಲ್ಲಿ ಹೇಳಬೇಕಾಗಿದೆ, ಇವತ್ತು ಜನಸಂಖ್ಯೆಯ ದೃಷ್ಟಿಯಲ್ಲಿ ಮೈನಾರಿಟಿ ಎಂಬುದು ಆ ಮಟ್ಟದಲ್ಲಿ ಇಲ್ಲ, ಎಲ್ಲಾ ಮೈನಾರಿಟಿ ಈಗ ಬದಲಾಗಿ ಮೆಜಾರಿಟಿಗೆ ಬಂದಿದೆ! ಮೈನಾರಿಟಿ-ಮೆಜಾರಿಟಿ, ಆ ಕೋಮು -ಈ ಕೋಮು,ಆ ಜಾತಿ-ಈಜಾತಿ, ಹಿಂದ-ಅಹಿಂದ,ಮೀಸಲಾತಿ-ಒಳಮೀಸಲಾತಿ ಇವೆಲ್ಲ ಯಾತಕ್ಕೆ ಸ್ವಾಮೀ? ಭಾರತ ಒಂದೇ, ಇಲ್ಲಿನ ಪ್ರಜೆಗಳೆಲ್ಲ ಒಂದೇ ಎಂಬ ಏಕರೂಪದ, ತಾರತಮ್ಯವಿರದ ಆಢಳಿತವನ್ನು ಇಟ್ಟು ಯಾರು ಪರಿಶ್ರಮದಿಂದ ಮೇಲೆಬರುತ್ತಾರೋ ಅಂತವರಿಗೆ ಆದ್ಯತೆ ಕೊಟ್ಟರೆ ಅಲ್ಲಿಗೆ ಬಹುಪಾಲು ಬ್ರಷ್ಟಾಚಾರ ವೇಗವಾಗಿ ಕಡಿಮೆಯಾಗುತ್ತದೆ. ಸುಳ್ಳು ಸರ್ಟಿಫಿಕೇಟ್ ಗಳು,ಜಾತಿ ಪತ್ರಗಳು, ಆದ್ಯತಾ ಪತ್ರಗಳು, ಶಾಸಕ-ಸಂಸದ-ಮಂತ್ರಿಗಳ ಪರ್ಸನಲ್ ಆದ್ಯತೆಗಳು ಎಲ್ಲವೂ ಹೊರಹೊರಟು ಟ್ರಾನ್ಸ್ಪರಂಟ್ ಆಢಳಿತವಾಗುತ್ತದೆ. ಖಜಾನೆಗೆ ಬರುವ ಮತ್ತು ಹೋಗುವ ಹಣದ ಲೆಕ್ಕದ ಜೊತೆಗೆ ಸರಕಾರೀ ಕೆಲಸಗಳನ್ನು ಮಾಡುವ ಗುತ್ತಿಗೆದಾರರಿಗೆ ಕೆಲವೊಂದು ನಿಬಂಧನೆಗಳನ್ನು ಹಾಕಿದರೆ ಅಲ್ಲಿ ಬ್ರಷ್ಟಚಾರ ಕಮ್ಮಿ ಆಗುತ್ತದೆ. ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಹುಕಾಲ ತಿಂದು ಬದುಕಿರುವ ಹಳೆಯ ಭೂತಗಳಮೇಲೆ ಸ್ವತಂತ್ರ ಲೋಕಾಯುಕ್ತರು ತಮ್ಮ ಮಾಂತ್ರಿಕತೆಯನ್ನು ಮೆರೆದರೆ ಅಲ್ಲಿಗೆ ಹಲವು ಹಂತಗಳ ಬ್ರಷ್ಟಾಚಾರ ಕಮ್ಮಿ ಆಗುತ್ತದೆ. ಆದರೆ ನಮ್ಮ ಸ್ಥಿತಿ ಹೇಗಿದೆ ಎಂದರೆ ಬೆಕ್ಕಿಗೆ ಘಂಟೆ ಕಟ್ಟುವವರಾರು ಎಂಬಂತಾಗಿದೆ! ಇದನ್ನೆಲ್ಲ ಗ್ರಹಿಸಿಯೇ ಸರಿಯಾದ ವ್ಯಕ್ತಿ ಲೋಕಾಯುಕ್ತರಾಗಿರಲು ಹೇಸುತ್ತಾರೆ, ಈಗ ಶ್ರೀ ಹೆಗ್ಡೆಯವರಿಗೆ ಆಗಿದ್ದೂ ಅಷ್ಟೇ!

ತಮ್ಮೊಳಗೇ ಕಿತ್ತಾಟ, ಮುಸುಕಿನ ಗುದ್ದಾಟ ಮುಗಿಸಿಕೊಳ್ಳದ ಜನ ಸಮಾವೇಶ ಮಾಡುವುದೇತಕ್ಕೆ? ಅಷ್ಟಾಗಿಯೂ ಇವರು ಮಾಡಿದ ಅಂತಹ ಘನಂದಾರೀ ಕೆಲಸ ಯಾವುದೇ ಸರಕಾರ ಮಾಡಲಗದಂತಹ ಅಸಾಮಾನ್ಯ ಕೆಲಸವೇನು? ನೆರೆಪರಿಹಾರದ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ, ಬೇಕಾದಲ್ಲಿ ರಸ್ತೆ ಮಾಡುವುದು ಬಿಟ್ಟು ಬೇಡದಲ್ಲಿ ರಸ್ತೆ, ಬೋರು, ಅಂಡರ್ಪಾಸು ಇತ್ಯದಿ ಮಾಡುತ್ತ ಇದನ್ನೇ ಹೆಗ್ಗಳಿಕೆಯೆನ್ನುವವರಿಗೆ ಏನೆನ್ನಬೇಕು? ಇದಕ್ಕೇ ಹೇಳಿದ್ದು ಸಾಧಿಸಿದವರು ಅದನ್ನು ಸಮಾವೇಶ ಕರೆದು ತೋರಿಸಬೇಕಿಲ್ಲ, ಜನರಿಗೆ ಕಣ್ಣಿದೆ,ಬುದ್ಧಿಯಿದೆ. ಮತದಾರ ದೂರದಿಂದ ನೋಡುತ್ತಿರುತ್ತಾನೆ! ಹೊಗೆಯ ಮೂಲ ಬೆಂಕಿ ಎಂಬುದು ಎಲ್ಲರಿಗೂ ಗೊತ್ತು! ಇದಕ್ಕಾಗಿ ಕೋಟಿಗತ್ತಲೇ ಖರ್ಚುಮಾಡಿ ಸಮಾವೇಶಬೇಕೆ? ಹೋಗಲಿ ಸಮಾವೇಶದಲ್ಲಿ ನಿಜವಾಗಿ ’ಸಾಧನೆ’ಗೈದ ಸಂಪಂಗಿ,ರೇಣುಕ, ಹಾಲಪ್ಪ ಇವರೆಲ್ಲರಿಗೂ ಸನ್ಮಾನವನ್ನಾದರೂ ಮಾಡಿ!

ಕೊನೆಯದಾಗಿ ಒಂದುಮಾತು,ನಿನ್ನೆಯ ಒಂದು ದಿನಪತ್ರಿಕೆಯೊಂದರಲ್ಲಿ ಒಬ್ಬರು ಬರದ್ರು ಇಂಥಾ ಮಂತ್ರಿ-ಅವರೊಳಗೆ ನೀವರಿಯದ ಇಂಥಾ ಒಳ್ಳೆಯ ಮುಖಗಳು ಅಂತ. ಸ್ವಾಮೀ ಹತ್ತುಮಂದಿಯ ಆಸ್ತಿಯಾದ ಭೂಮಿಯಲ್ಲಿ ನಿಸರ್ಗವನ್ನು ದೋಚುವ ಗಣಿಗಾರಿಕೆಯಿಂದ ಗಳಿಸಿದ ಹಣವನ್ನು ತಮ್ಮ ಸ್ಥಾನಭದ್ರತೆಗೆ ಉಪಯೋಗಿಸುತ್ತಿದ್ದಾರೆ, ಅದಿಲ್ಲಾ ಅವರು ಮುಂದೆ ಅಧಿಕಾರಕ್ಕೆ ಬರುವುದಿಲ್ಲ! ಅಧಿಕಾರವಿಲ್ಲದಿದ್ದರೆ ಗಣಿ ಕೈತಪ್ಪಿ ಹೋಗುತ್ತದೆ! ಹೀಗಾಗೇ ಬರೆದ ಆ ಮಹನೀಯರಿಗೊಂದು ಹೇಳುತ್ತೇನೆ ನಾವರಿಯದ ಅ ಮುಖ ನಾವರಿಯದಿದ್ದರೂ ಅರಿತೇ ಇರುವುದು! ಅಲ್ಲಿ ಸ್ವಾರ್ಥವೇ ಇದೆ! ನಮ್ಮ ಹಿಂದಿನ ಜನಾಂಗ ನಿಸರ್ಗವನ್ನು ಇಷ್ಟೊಂದು ದೋಚಿರಲಿಲ್ಲ! ನನಗೂ ಒಂದಷ್ಟು ಅನುಕೂಲ ಕೊಡಿ-ಹಲ್ವಾರು ಜನರಿಗೆ ದಿನಾ ಅನ್ನಸತ್ರ ಮಾಡುತ್ತೇನೆ, ಹಲವು ಚಿಕ್ಕ-ಪುಟ್ಟ ಸೌಲಭ್ಯ ಕೊಡಿಸುತ್ತೇನೆ, ಸಾಮೂಹಿಕ ಮದುವೆಮಾಡಿಸುತ್ತೇನೆ--ಇದೆಲ್ಲಾ ರಾಜಕೀಯದವರ ಅಂಗಸೌಷ್ಟವ ಸ್ವಾಮೀ, ಅದಕ್ಕಿಂತಾ ಭಿನ್ನವಾದ ಬೇರಾವ ರೀತಿಯ ಮುಖವಿದೆಯೇ ಹೇಳಿ? ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಬಹಳಕಾಲ ಬರೋದಿಲ್ಲ ಅನ್ನೋ ಗಾದೆ ಇದ್ಯಲ್ಲ ಹಾಗೇ ಜನಸಾಮಾನ್ಯನಿಗೆ ಅವನು ದುಡಿದು ತಿನ್ನಲು ಅನುಕೂಲವಾಗುವ ಪರಿಸರ ನಿರ್ಮಿಸಬೇಕೇ ಹೊರತು ಕ್ಷಣಿಕ ಆಮಿಷಗಳು-ದಾಸೋಹಗಳು ಜನರಲ್ಲಿ ಆಲಸ್ಯವನ್ನು ಬೆಳೆಸುತ್ತವೆ, ಜನ ತಮ್ಮತನವನ್ನು ಕಳೆದುಕೊಳ್ಳುತ್ತಾರೆ-ಇದು ಸಮಾಜಕ್ಕೆ ಅಂಟುವ ಪಾರ್ಕಿನ್ಸನ್ ಕಾಯಿಲೆಯಾಗುತ್ತದೆ. ದಾಸೋಹ ನಡೆಸಲು ಮಠ-ಮಾನ್ಯಗಳಿವೆ,ಮಂದಿರ-ಮಸೀದಿಗಳಿವೆ, ಅವುಗಳನ್ನು ನಡೆಸುವುದಕ್ಕಿಂತ ಆ ಅನಿವಾರ್ಯತೆ ಜನರಲ್ಲಿ ತಲೆದೋರದಂತೆ ನೋಡಿಕೊಳ್ಳಿ! ವೀರ ಮಯೂರವರ್ಮರು-ಹೊಯ್ಸಳರು-ವಿಜಯನಗರದ ಅರಸರು ಆಳಿದ ಈ ನಾಡಿನಲ್ಲಿ ಸ್ವಾವಲಂಬನೆಯ ಮಂತ್ರ ಹೇಳಿಕೊಡಿ, ಭಿಕ್ಷಾಟನೆ ಬೇಡ ಅಲ್ಲವೇ? ನಮ್ಮಲ್ಲಿನ ರಾಜಕೀಯಕ್ಕೆ ಸದ್ಯ ಎಚ್.ಎನ್ ರಂತಹ ಶಿಕ್ಷಣ ಕೊಡುವವರು, ನಿಜಲಿಂಗಪ್ಪ-ಕಡಿದಾಳು ಮಂಜಪ್ಪ ಥರದವರು ಬೇಕು. ಆವರು ನಿತ್ಯ ಅವರ ಮನೆಗಳಲ್ಲಿ ದಾಸೋಹ ಮಾಡಲಿಲ್ಲ, ಪತ್ರಿಕೆಗಳಲ್ಲಿ ಬಹಳ ಕಾಣಿಸಿಕೊಳ್ಳಲಿಲ್ಲ ಬದಲಿಗೆ ಜನಸಾಮಾನ್ಯನ ಮನೆಯಲ್ಲಿ ದಿನದ ದಿನಸಿಗೆ ಕೊರತೆ ಆಗದಂತೆ ನೋಡಿಕೊಂಡರು, ಅವರ ಮನೆಗಳಲ್ಲಿ ದಿನವೂ ದೀಪ ಬೆಳಗುವಂತೆ ಕಣ್ಣಿಟ್ಟು ಕಾದರು! ಅವರು ಮಡಿದಾಗ ಅವರ ಅಂತ್ಯಕಿಯೆಗೆ ಹೊರತಾಗಿ ಅವರಲ್ಲಿ ಬೇರಾವ ಕಾಸೂ ಇರಲಿಲ್ಲ-ಹೇಳಿಕೊಳ್ಳುವಂತಹ ಸ್ಥಿರಾಸ್ತಿಯೂ ಇರಲಿಲ್ಲ! [ಆದ್ರೆ ಆಂಧ್ರದಲ್ಲಿ ವೈ ಎಸ್ ಆರ್ ಸತ್ತಾಗ ಅವರ ಪರಿವಾರದ ಆಸ್ತಿ ೩೩ಸಾವಿರ ಕೋಟಿ ರೂಪಾಯಿ ಅಂತ ಹಲವು ಮಿಂಚಂಚೆಗಳು ಇನ್ನೂ ಪ್ರಚಲಿತದಲ್ಲಿವೆ -ಇವರೂ ಬದುಕಿದ್ದಾಗ ದಾಸೋಹಿಗಳಾಗಿದ್ದರು,ಈ ಮಿಂಚಂಚೆ ತಮಗೂ ಬಂದಿರಬಹುದು!] ಅಂತಹ ಸುಪುತ್ರರು ಬೇಕು ಕರ್ನಾಟಕಕ್ಕೆ, ಅಂತಹ ನಿಸ್ಪೃಹರು ಬೇಕು ನಮ್ಮ ದೇಶಕ್ಕೆ !

ಬಹಳ ಕೊರೆದುಬಿಟ್ಟೆನೇ? ಬೇಸರವಾಯಿತೇ? ಎಂದಿನಂತೆ ಒಂದು ಚಿಕ್ಕ ಹಾಡಿನೊಂದಿಗೆ ಮಂಗಳ ಹಾಡೋಣ ಅಲ್ಲವೇ?


ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಭೂಮ್ಯಾಗೆ ಹಣವಚೆಲ್ಲಿ ಮಂಕ್ರಿಯಪ್ಪ ಕಾರೇರಿ ಬಂದ ................

ಮಳೆ-ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಸ್ಯಾಮಿಯಾನ್ದ ಮೇಲ್ ಮಂಜು ಹನಿ ಇಂಗೋಗೈತೆ
ಫ್ಲೆಕ್ಸು ಹಾರುತಿದೆ ಧೂಳು ಹರಡುತಿದೆ
ಜನತೆ ನೋಡುತಿದೆ ಹಣೆ ಚಚ್ಚಿಕೊಳ್ಳುತಿದೆ !

ಯಾಕ್ಲಾ ಲೂಸ್ ಮಾದ ಗುರ್ ಗುಟ್ತೀಯ್ಯಾ......?
ಎಣ್ಣೆ ಸಾಕಾಯಕಿಲ್ವಾ.....?

ರೈತರಿಗೆ ಹೊಸ ಸೌಲತ್ತನ್ನು
ಕೊಡುವೆನೆಂದು ಕಿತ್ತು ಭೂಮಿಯನ್ನು
ಕೈತೋರಿಸಿ ಅವರ್ಗೆ ಆಕಾಸ್ನಾಗೆ
ಹಾರೋದರು ಬೇಗ ಇಮಾನ್ದಾಗೆ
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಗಣಿಗಳಲಿ ಧಣಿಗಳು ಚೆನ್ನಾಗ್ಮೆದ್ದು
ಗಡಿಭಾಗದ ಜನಕ್ಕೊರ್ಸಿ ’ಜೇನುಕೈನ’
ಪೇಪರ್ನಾಗೆ ಮಿಂಚಿ ನಾ ನಾ ಥರ
ಆಗವ್ರೆ ಬಲು ಜೋರು ಶಿವನೇ ಹರ
ಓಹೋ ಹೋ ಹೋ ಹೋ ಹೋ ಆಹಾಹಾ......ಹೋ

ನೆರೆಕಂಬಳ ಗ್ಲೋಬಲ್ ಇನ್ವಸಟ್ಮಂಟು
ಎಲ್ಲಾದ್ರಾಗೂ ಉಂಟು ನೋಟಿನ ನಂಟು!
ತಮ್ಮೊಳಗೇ ತಾವ್ಯಾರು ತೋರ್ಸ್ಗಂಬುದು
ಈ ಇಸ್ಯಕ್ಕೊಂದಷ್ಟು ಖರ್ಚಾಕೋದು
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಏ ಏ ಎಲ್ಲಾಪ್ಪಾ ಇವ್ರೂ ಏಳ್ಲಾ ಮಾದ ಹೊತ್ತಾಯ್ತದೆ, ಹೊಟ್ಟೆ ಚುರುಗುಟ್ತೈತೆ ಮನೇಲಿ ಹಿಟ್ಟು ಆಗೋಗದೆ....ಮಂಕ್ರಿಯಪ್ಪೋರ್ನ ಕೇಳ್ದೆ ಒಸಿ ಇರು ಇನ್ನೊಂದ್ಕಿತಾ ಇಲೆಕ್ಸನ್ನಾಗೆ ಬತ್ತೀನಿ ಅಂತಂದ್ರು...ಹೋಗುದ್ಕೆ ಕೈಗೊಂದ್ ಕೆಂಪ್ ನೋಟ್ ಕೊಟ್ಟವ್ರೆ..ಭಾಳಾ ವಳ್ಳೆ ಜನ ನಮ್ಮ ಮಂಕ್ರಿಯಪ್ಪ್ನೋರು...ಊಟಿಲ್ಲಾ ಅಂದ್ರೆ ತಮ್ಮನೆತಾವ ಮಾಡ್ಕಂಡೋಗ್ಬುಡು ಅಂದ್ರು....ಏಳ್ರಪೋ .....ಹೇ ಹೇ...ಹೇ........

Thursday, June 24, 2010

ಐಷಾರಾಮೀ ಅವತಾರಿಗಳು!!




ಐಷಾರಾಮೀ ಅವತಾರಿಗಳು!!


ನಮ್ಮ ಸುತ್ತಲ ಹತ್ತು ರಾಜ್ಯಗಳಲ್ಲಿ ಹುಡುಕಿದರೆ ಸಿಗುವವರು ಹಲವು ಅವತಾರಿಗಳು. ಇವರೆಲ್ಲ ಅವತಾರಿಗಳಲ್ಲ ಬದಲಾಗಿ ನಿತ್ಯಾನಂದನದ್ದಲ್ಲದ ಇನ್ನೊಂದು ರೀತಿಯ ದಗಾಕೋರರು. ಅಂಥಾ ಬಾಬಾ ಇಂಥಾ ಬಾಬಾ ಅಂತೆಲ್ಲ ಕರೆದುಕೊಳ್ಳುವ ಇವರು ಅಸಲಿಗೆ ಯಾರಿಗೂ ಒಳಿತನ್ನು ಮಾಡುವ ಶಕ್ತಿಯನ್ನಾಗಲೀ, ಮಂತ್ರಶಕ್ತಿಯನ್ನಾಗಲೀ ಹೊಂದಿದವರಲ್ಲ. ಇವರ ಕೆಲಸ ಏನೆಂದರೆ ನಾಳೆ ಯಾವ ಪ್ಲಾನು ಹಾಕಿ ವಸೂಲಿ ಮಾಡುವುದು ಎನ್ನುವುದು. ಇವರಲ್ಲಿ ಕೆವರು ಕಾವಿ ವೇಷ ತೊಟ್ಟರೆ ಇನ್ನು ಕೆಲವರು ಶುಭ್ರವಾದ ರೇಷ್ಮೆ ಬಟ್ಟೆ ತೊಡುವವರು. ದಿನವಿಡೀ ಸ್ಥಳೀಯ ಮಾಧ್ಯಮಗಳಲ್ಲಿ ಶೋಭಿಸುತ್ತ ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಬಕಗಳು!

ಯಾವ ಮಹಾತ್ಮನೂ ಈ ಜಗದಲ್ಲಿ ತಾನು ಮಹಾತ್ಮ ತಾನು ಅವತಾರಿ ಎಂದು ಘೋಷಿಸುವುದಿಲ್ಲ! ಅದನ್ನು ಸಮಾಜ, ಜನರು ಗುರುತಿಸುತ್ತಾರೆ. ಆದರೆ ಇಂತಹ ಬಾಬಾಗಳಲ್ಲಿ ಹಾಗಲ್ಲ ಇವರ ಆರಂಭಿಕ ಹಂತವೇ ಒಂಥರಾ ಉದ್ಭವ ಮೂರ್ತಿಯಂತೇ ರಾತ್ರೋರಾತ್ರಿ! ಸುತ್ತ ವ್ಯವಸ್ಥಿತ ಗುಂಪುಗಳನ್ನು ’ಸೇವೆಗೆ’ ಅಪಾಯಿಂಟ್ ಮಾಡಿಕೊಳ್ಳುವುದು! ಇಂತಹ ಸಾಲಿನಲ್ಲಿ ಅನೇಕರು ಇದ್ದರೂ ನಮಗೆ ಅತೀ ಹತ್ತಿರದ ಮತ್ತು ಅಬ್ಬರದ ಪ್ರಚಾರ ಪಡೆದ ಬಾಬಾ ಅಂದರೆ ’ಅಮ್ಮ-ಭಗವಾನ್’! ಯಕ್ಕಶ್ಚಿತ್ತ ಸಾಮಾನ್ಯ ಇನ್ಶೂರನ್ಸ್ ಕಾರ್ಯಕರ್ತನೊಬ್ಬ ತನಗೆ ಜ್ಞಾನೋದಯವಾಯಿತು ಎಂದು ಹೆಂಡತಿಯ ಸಮೇತ ಪೀಠಮಾಡಿಸಿ ಕೂತು ಆರ್ಥಿಕವಾಗಿ ದೇಶದುದ್ದಗಲ ಬೆಳೆದು ಹೆಮ್ಮೆರವಾಗಿ ನಿಂತಿರುವುದು! ತಮ್ಮ ಮನೆಯ ಅಪ್ಪ-ಅಮ್ಮನನ್ನೇ ವೃದ್ಧಾಶ್ರಮದಲ್ಲಿಟ್ಟಿರುವ ಅನೇಕ ಭಕ್ತರು ಈ ಅಮ್ಮ-ಭಗವಾನ್ ಎಂದು ಅವರೇ ಹೇಳಿಕೊಟ್ಟು ಕರೆಸಿಕೊಳ್ಳುವವರನ್ನು ಆರಾಧಿಸುವುದು. ಮೂಲತಃ ಆಂಧ್ರದವನಾದ ಈ ಮನುಷ್ಯನ ಪರಿವಾರ ಗಣದಲ್ಲಿ ಗಡಿ ಭಾಗದ ಮತ್ತು ಆಂಧ್ರಮೂಲದ ಜನಗಳೇ ಜಾಸ್ತಿ! ಇದು ’ಕಲ್ಕಿ’ಯ ಆವಾಹನೆ !

’ನೇಮಂ’ ಆಶ್ರಮವೆಂಬ ಪಂಚತಾರಾ ವ್ಯವಸ್ಥೆಯ ಕಟ್ಟಡ ಕಟ್ಟಿಕೊಂಡು ಅಲ್ಲಿ ಬಗೆಬಗೆಯ ಹೊಸ ಹೊಸ ವಿನ್ಯಾಸದ ಪೀಠಗಳನ್ನು, ಆಸನಗಳನ್ನು, ಪಲ್ಲಂಗಗಳನ್ನು ಮಾಡಿಸಿಕೊಂಡು ಗಟ್ಟಿಯಾಗಿ ತಳವೂರಿ ಕೂತಿದ್ದಾನೆ ಈ ಮನುಷ್ಯ. ಪ್ರಾರಂಭದಲ್ಲಿಯ ಛಾಯಚಿತ್ರಗಳನ್ನು ನೀವು ನೋಡಬೇಕು, ಆಗ ಬರೇ ಸಾದಾ ಬಿಳೀ ಗ್ರನೈಟು ಕಲ್ಲು ಹಾಸಿದ ನೆಲದ ಕಟ್ಟಡ ಬಾಗಿಲ ಮುಂತೆ ನಿಂತು ಹಳದಿ ಬಟ್ಟೆ ಧರಿಸಿ, ತಲೆಗೂ ಅದನ್ನೇ ಕಟ್ಟಿಕೊಂಡು, ತನ್ನೆರಡೂ ಕೈಗಳನ್ನು ಮುಂದೆ ಚಾಚಿ ನಿಂತು ಪೋಸು ಕೊಟ್ಟಿದ್ದನ್ನು ಅನೇಕರು ತಪ್ಪಾಗಿ ನಮಗೆ ತಿಳಿಹೇಳಿದ್ದು " ಕಲ್ಕಿ ಬಂದಿದ್ದಾರೆ, ಅಗೋ ನೋಡಿ ನಿಮ್ಮ ಕಷ್ಟಗಳನ್ನೆಲ್ಲ ನನ್ನ ಕೈಗೆ ಹಾಕಿ ಎಂದು ಕರೆಯುತ್ತಾರೆ" ಎಂದು! ಅಲ್ಲಿ ಆತ ಕೈ ಚಾಚಿದ್ದು ಬನ್ನಿ ಭಕ್ತರೇ ಮತ್ತಷ್ಟು ಜನರನ್ನು ಕರೆತನ್ನಿ, ಹಣ-ಕಾಣಿಕೆ ನೀಡಿ, ಪೂಜೆ ಮಾಡಿ, ಆರತಿ ಎತ್ತಿ ಎಂದು! --ಇದು ನಕಲಿ ಕಲ್ಕಿಗೆ ಆಸನ


ಹಲವರು ಜನ ಪ್ರತಿಮೆಗಳನ್ನಿಟ್ಟು ಪೂಜಿಸಿದರು, ಫೋಟೋ ಇಟ್ಟು ಧ್ಯಾನಿಸಿದರು. ಮನೆಗಳಲ್ಲಿ,ಕಛೇರಿಗಳಲ್ಲಿ,ಆಸ್ಪತ್ರೆಗಳಲ್ಲಿ,ಉದ್ದಿಮೆಯ ಜಾಗಗಳಲ್ಲಿ, ಸ್ಕೂಲು-ಕಾಲೇಜುಗಳಲ್ಲಿ ಎಲ್ಲಿಲ್ಲ ಹೇಳಿ? ಪ್ರಾಯಶಃ ಗಣಕ ಯಂತ್ರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರವಾದ ವಸ್ತುಗಳಲ್ಲಿ ಈ ಗಂಡ-ಹೆಂಡಿರ ಫೋಟೋ ಪ್ರಮುಖ ಸ್ಥಾನ ವಹಿಸಿದೆ! ಫೋಟೋಗಳಿಗೆ ಚಿಕ್ಕ ಪೀಠಗಳು, ಬಣ್ಣದ ಹಾರಗಳು, ಹೂವುಗಳು, ಸುಗಂಧ ದ್ರವ್ಯಗಳು, ಫೋಟೋಗಳಲ್ಲಿ ಅವರು ಕಂಡುಬಿಟ್ಟರೆ ಸಾಕು ಅಡ್ಡಡ್ಡ ಉದ್ದಂಡ ನಮಸ್ಕರಿಸುವವರು, ಪ್ಯಾಂಟಿನಜೇಬಿನಲ್ಲಿಯೇ ಕೈಮುಗಿಯುವ ಪ್ರತಿಷ್ಠೆಯ ಜನರು, ಹಾಲು ಹರಿಯುತ್ತಿದೆ-ಜೇನು ತೊಟ್ಟಿಕ್ಕುತ್ತಿದೆ ಎನ್ನುವವರು, ಅರಿಶಿನ-ಕುಂಕುಮ ಉದುರುತ್ತಿದೆ ಎನ್ನುವವರು ಒಂದೇ ಎರಡೇ -ಜನ ಮಳ್ಳೋ ಜಾತ್ರೆ ಮಳ್ಳೋ ಎಂದಿದ್ದು ಇದಕ್ಕೇ ಇಅರಬೇಕು--ಇದು ಈ ಕಲ್ಕಿಗೆ ಪಾದ್ಯ

ಜನ ತರಹೇವಾರಿಯಲ್ಲಿ ಅನೇಕರನ್ನು ಸೇರಿಸುವುದು, ಅಲ್ಲಲ್ಲಿ ಮೀಟಿಂಗ್ ಸಂಘಟಿಸುವುದು, ಕಲ್ಕಿಯ ಬಗ್ಗೆ ಬಹಳ ವಾಕ್ಚಾತುರ್ಯ ಉಪಯೋಗಿಸಿ ವಟಗುಡುವ ಹದಿಹರೆಯದ ಸುಂದರ ಹೆಣ್ಣು ಆಚಾರ್ಯರುಗಳು-ಪ್ರಾಚಾರ್ಯರುಗಳು, ಈ ಆಚಾರ್ಯರುಗಳನ್ನು ನೋಡಲು ಹಸಿದ ಕಣ್ಣು-ಮೈಮನ ಹೊತ್ತು ಬಂದ ಪಡ್ಡೆ ಹುಡುಗರು-ಹೈಕಳು-ವಿಷಯಲಂಪಟರು ಛೆ ಛೆ ಹೇಳತೀರದು....ಕಲ್ಕೀ ಗುಣಗಾನ ವೈಭವ, ಕಣ್ಣಾರೆ ನೀವು ನೊಡಬೇಕು. ಅಲ್ಲಿ ಬಂದವರಿಗೆಲ್ಲ ಕೆಲವೊಮ್ಮೆ ತಿಂಡಿ-ಊಟ, ತರಾವರಿ ವ್ಯವಸ್ಥೆ!--ಇದು ಡೂಪ್ಲಿಕೇಟ್ ಕಲ್ಕಿಗೆ ಅರ್ಘ್ಯ

ಮನೆಗಳಲ್ಲಿ ಮಹಿಳೆಯರದೇ ಒಡ್ಡೋಲಗ. ಹಾಲಿನ ಅಭಿಷೇಕ, ಪಂಚಾಮೃತದ ಅಭಿಷೇಕ, ಎಳೆನೀರಿನ ಅಭಿಷೇಕ,ದೇವರಿಗೆ ಹೇಳುವ ಮಂತ್ರಗಳನ್ನು ಪುರೋಹಿತರಿಂದ ಹೇಳಿಸಿ ಅಭಿಷೇಕ---ಇತಿ ಸ್ನಾನಂ||

ಸ್ನಾನಾನಂತರೇ ಆಚಮನೀಯಂ [ಸ್ನಾನದ ತರುವಾಯ ಬಾಯಿತೂಳೆಯಲು ನೀರು] ಇದಕ್ಕೆಲ್ಲ ಕಲ್ಕಿಗೆ ಉಪಯೋಗಿಸುವುದು ಪನ್ನೀರು, ರೋಸ್ ವಾಟರ್, ವಿ ಐ ಪಿ ಅವತಾರಿಗೆ ತಕ್ಕುದಾದ ವ್ಯವಸ್ಥೆ ಇಡಬೇಕಷ್ಟೇ ?

ಭೂಷಣಕ್ಕೆ ಅಂದರೆ ತೊಟ್ಟುಕೊಳ್ಳಲು ರೇಷ್ಮೆ ವಸ್ತ್ರಗಳು, ದಿರಿಸುಗಳು, ಅಮ್ಮಗೆ ತುಟ್ಟಿಯ ರೇಷ್ಮೆ ಸೀರೆ,ಝರಿ ಶಾಲು ಇತ್ಯಾದಿಗಳು ಭಕ್ತರಮನೆಗಳಲ್ಲಿ! ಅವುಗಳನ್ನು ’ನೇಮಂ’ ಗೆ ಹೋಗುವಾಗ ಕೊಂಡೊಯ್ದು ತಲ್ಪಿಸುವುದು! ಫಾರಿನ್ ಸೆಂಟ್ ಗಳನ್ನೂ ಕೊಡುತ್ತಾರೆ, ಭುವಿಗೆ ಬಂದ ಕಲ್ಕಿಯನ್ನು ಇಲ್ಲೇ ಉಳಿಸಿಕೊಳ್ಳಬೇಕಲ್ಲ! ಅದಕ್ಕೇ ಆದರೆಕಲ್ಕಿ ಕಾಲ ಕಾಲಕ್ಕೆ ಎಡಮುದುಕು ಚಹರೆ ತೋರುತ್ತಿದ್ದಾರಲ್ಲ! ಕಲ್ಕಿ ಬಹಳಕಾಲ ಇರುವುದಿಲ್ಲವೇ? ಛೆ ಛೆ ಅವತಾರಿಗಳು ತಮ್ಮ ಅವತಾರಗಳನ್ನು ಬಂದಕಾರಣ ಮುಗಿದ ಮೇಲೆ ಮುಗಿಸಿಹೊರಡುತ್ತಾರಲ್ಲವೇ? ಹಾಗಾದರೆ ೨೦೧೨ಕ್ಕೆ ಪ್ರಳಯವಾಗುವುದು ಗ್ಯಾರಂಟಿ ಅಂದಾಯ್ತು ಅಲ್ಲವೇ? ಆದರೆ ಒಂದು ಯುಗಕ್ಕೆ ನಾಲ್ಕು ಪಾದಗಳು ಎನ್ನುತ್ತದೆ ವೇದ. ಕಲಿಯುಗದ ಪ್ರಥಮಪಾದದಲ್ಲಿ ನಾವಿದ್ದೇವೆ, ಅಂದಮೇಲೆ ಪ್ರಳಯವೆಲ್ಲಿ ಬಂತು? ಒಹೋ ೨೦೧೨ಕ್ಕೆ ಪ್ರಳಯ ಎನ್ನುವುದೆಲ್ಲ ಕಟ್ಟು ಕಥೆ! ನಮ್ಮ ಈ ಕಲ್ಕಿ ಹತ್ತಿರ ಸದ್ಯಕ್ಕೆ ಖಡ್ಗ ಮತ್ತು ಬಿಳೇ ಕುದುರೆ ಎಲ್ಲ ಇಲ್ಲವಲ್ಲ? ಅದರ ತಯಾರಿ ಇನ್ನೂ ಆಗಿಲ್ಲವೆಂತಲೋ ಬಿಡಿ.

ಮಾಲೆಗಳೆಂದರಾಯಿತೆ ಬಹುಶಃ ತಿರುಪತಿ ತಿಮ್ಮಪ್ಪನಿಗೂ ಇಂತಹ ಮಾಲೆಗಳು ಸಿಗಲಿಕ್ಕಿಲ್ಲ! ಅಷ್ಟು ಮಾಲೆಗಳು, ಬಣ್ಣ ಬಣ್ಣದ ಹೂವುಗಳಿಂದ ಮಾಡಲ್ಪಟ್ಟವು, ರೇಷ್ಮೆ ಗೂಡುಗಳಿಂದ ಮಾಡಲ್ಪಟ್ಟವು ಎಲ್ಲವನ್ನೂ ಕಲ್ಕ್ಯಾರ್ಪಣಗೈಯ್ಯುವುದು ಕಲ್ಕಿ ಭಕ್ತರ ಬಯಕೆ. ಅದರಲ್ಲೂ ಕಲ್ಕಿ ಮೊದಲು ಹೇಳಿಕೊಟ್ಟ ಶ್ಲೋಕವೇ ಬೇರೆ, ಈಗ ಅನುಗ್ರಹಿಸುವ ’ಮೂಲಮಂತ್ರ’ವೆಂಬ ಶ್ಲೋಕವೇ ಬೇರೆ. ಮೂಲಮಂತ್ರದ ಅರ್ಥವೇ ಗೊತ್ತಿರದ ಇಂಥವ್ರಿಗೆ ಮೂಲಮಂತ್ರ ಎಂಬ ಶಬ್ಧದ ಪ್ರಯೋಗಮಾಡಬೇಕೆಂಬುದು ಗೊತ್ತು! ಇದು ನಿತ್ಯಾನಂತನಿಂದ ಬಳುವಳಿ ಪಡೆದಿದ್ದಿರಬಹುದು!
ಮೊದಲು ಅವರ ಶ್ಲೋಕ ಹೀಗೆನ್ನುತ್ತಿತ್ತು

ಭಗವತಿ ಪದ್ಮಾವತೀ ಸಮೇತ ಕಲ್ಕಿ ಭಗವತೇ ನಮಃ |

ಆದರೆ ಅದು ನಗೆಪಾಟಲಾದಮೇಲೆ ಹೀಗೆ ಪರಿಷ್ಕರಿಸಲಾಗಿದೆ--

ಭಗವತೀ ಸಮೇತ ಕಲ್ಕಿ ಭಗವತೇ ನಮಃ |

ಇದುವರೆಗೆ ಯಾವ ಗುರುವೂ ತನ್ನನ್ನೇ ಹೀಗೆ ಜಪಿಸಿ ಎಂದು ಹೇಳಿಲ್ಲ-ಹೇಳಿದ್ದು ಕೇಳಿಲ್ಲ! ಆದಿ ಶಂಕರರನ್ನೂ ಸೇರಿದಂತೆ ಎಷ್ಟೊಂದು ಜನ ಸಾಧು-ಸಂತರು ಬಂದರೂ ಅವರೆಲ್ಲ ತನ್ನನ್ನೇ ಜಪಿಸಿ ಎನ್ನಲಿಲ್ಲ. -ಹೀಗೇ ಇದು ಈ ಕಲ್ಕಿಗೆ ಮಾಲಾರ್ಪಣೆ

ಧೂಪ ದೀಪ ಹೇಗೂ ನಮ್ಮ ಹಿಂದೂ ಪೂಜೆಗಳಲ್ಲಿ ಅತಿ ಸಹಜ. ಭಕ್ತರೆನಿಸಿಕೊಂಡವರು ಹಾರುತ್ತಾ ಕುಣಿಯುತ್ತಾ ಆರತಿ ಮಾಡುವವರಿದ್ದಾರೆ, ಅಮ್ಮ-ಭಗವಾನರ ಕೃಪೆಯಿಂದಲೇ ತಾವು ಬದುಕಿದೆವು ಅನ್ನುವವರಿದ್ದಾರೆ. ಅವರಿಂದಲೇ ನಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಗೋಳೋ ಎಂದು ಅಳುವವರಿದ್ದಾರೆ! ನಮ್ಮ ದುಃಖತಪ್ತ ಜನರಿಗೆ, ಕಷ್ಟದಲ್ಲಿರುವ ಜನರಿಗೆ ಸಾಂತ್ವನ ಹೇಳಲು,ಧೈರ್ಯತುಂಬಲು ಕೆಲವು ಜನ ಬೇಕು. ಇದನ್ನೇ ನಾಯ್ಡು ದುರುಪಯೋಗ ಮಾಡಿಕೊಂಡು ಕಲ್ಕಿಯಾದ! ಒನ್ಸ್ ವೀಕನೆಸ್ ಈಸ್ ಅದರ್ಸ್ ಗೇನ್ !


ಇಷ್ಟು ಸಾಕು ಎನಿಸುತ್ತದೆ,

ಅಭ್ಯುತ್ಥಾನಮ್ ಸ್ವಾಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ|
ಸ್ನಾನಂ ವಾಸೋ ಭೂಷಣಾಂಗಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ||

ಈ ರೀತಿ ಸುಮಾರಾಗಿ ನಮ್ಮ ಸಂಸ್ಕೃತದಲ್ಲಿ ಹೇಳುವಂತೆ ಷೋಡಷೋಪಚಾರ ಮಾಡಿದ್ದೇನೆ. ನನ್ನ ಪ್ರೀತಿಯ ಮಹಾಜನಗಳೇ ಕಲ್ಕಿ ಭೂಮಿಯ ಮೇಲೆ ಇನ್ನೂ ಹುಟ್ಟಿಲ್ಲ! ಇಷ್ಟು ಬೇಗ ಹುಟ್ಟುವುದೂ ಇಲ್ಲ! ಒಂದೊಮ್ಮೆ ಆತ ಹುಟ್ಟಿದ್ದರೂ ಪ್ರಬುದ್ಧ ಸ್ಥಿತಿಗೆ, ಪ್ರಕಾಶಮಾನ ಸ್ಥಿತಿಗೆ ಬರುವುದು ಕಲಿಯುಗದ ನಾಲ್ಕನೇ ಪಾದದಲ್ಲಿ! ಹೀಗಾಗಿ ಯಾರೋ ದಾರಿ ಹೋಕರು ಟವೆಲ್ ಹಾರಿಸಿ ತಾನೇ ಕಲ್ಕಿ ಬಂದಿದ್ದೇನೆ-ಜನರ ಕಷ್ಟಗಳನ್ನೆಲ್ಲ ನುಂಗಿಹಾಕುತ್ತೇನೆ ಅಂದಾಗ ಹೋಗಿ ದಬಕ್ಕನೆ ಬೋರಲು ಬೀಳುವುದು ಬಹಳ ವಿಷಾದನೀಯ, ಈ ವಿಷಯದಲ್ಲಿ ಈ ಕಲ್ಕಿ ಲಕ್ಕಿ! ದಿನವೂ ಐಷಾರಾಮೀ ಬದುಕನ್ನು ಬದುಕುತ್ತಿರುವ ಪಂಚತಾರಾ ದಂಪತಿ ಅಮ್ಮ-ಭಗವಾನ್ ಎನಿಸಿಕೊಳ್ಳಲು ನಾಚಿಕೆ ಪಡುತ್ತಿಲ್ಲ ನೋಡಿ, ನೀವೂ ಹೋಗಬಹುದು-ಆರತಿ ಮಾಡಬಹುದು! ನೇಮಂ.......ನೇಮಂ ! ಶಿಸ್ತಾಗಿ ಇಸ್ತ್ರಿ ಮಾಡಿದ ಗರಿಗರಿಯಾದ ರೇಷ್ಮೆ ಬಟ್ಟೆಗಳನ್ನು ತೊಟ್ಟು ಗಂಡ-ಹೆಂಡತಿ ತಮ್ಮ ಕಾಲ್ಕೆಳಗೆ ಹಲವರನ್ನು ಅಡ್ಡಬೀಳಿಸುವ ಜಾಗವೇ ನೇಮಂ ! ಪುಣ್ಯಾತಗಿತ್ತಿ ಅಮ್ಮ ಎನಿಸಿಕೊಂಡವಳಿಗೆ ಹುಬ್ಬು ಡ್ರೆಸ್ ಮಾಡಲು ಅದ್ಯಾವ ಹೆಣ್ಣುಮಗಳಿದ್ದಳೊ ಗೊತ್ತಿಲ್ಲ. ಅಂತೂ ಈ ದಂಪತಿ ಪಟ್ಟಾಗಿ ಬಂದು ಆಸೀನರಾದರೆ ಅಲ್ಲಿ ಬಹಳ ಮಂದಿ ತಮ್ಮ ತನವನ್ನೇ ಕಳೆದುಕೊಳ್ಳುತ್ತಾರೆ-ಅದೇ ನೇಮಂ! ಅಶ್ರಮದ ಒಳಗೆ ನಡೆಯುವ ಹದಿಹರೆಯದ ಹೆಣ್ಣು ಆಚಾರ್ಯರುಗಳ ನೇಮಂ ಎಲ್ಲ ಇನ್ನೂ ಹೊರಬರುವುದರಲ್ಲಿದೆ, ಕಾಯುತ್ತಿರಿ ಇದು ಮತ್ತೊಂದು ನಿತ್ಯ ಆನಂದ ಪರಮಹಂಸ ಸ್ಥಿತಿ!

ಉಪಚಾರದ ಕೊನೆಯ ಘಟ್ಟ- ಪ್ರಣಾಮ-ಇದನ್ನು ಮಾತ್ರ ಗೋವಿಂದನಿಗೆ ಇಟ್ಟುಬಿಡೋಣ, ಯಾಕೆಂದರೆ ಎಲ್ಲಿಯವರೆಗೆ ನಾಮ ಹಾಕಿಸಿಕೊಳ್ಳುವವರಿರುತ್ತಾರೋ ಅಲ್ಲೀವರೆಗೆ ನಾಮಹಾಕುವವರೂ ಇರುತ್ತಾರಂತೆ! ನಾಮವನ್ನೇ ಪ್ರಧಾನವಾಗಿ ಹೊಂದಿದ ತಿಮ್ಮಪ್ಪಾ ನಮಗೆ ಮಾತ್ರ ಬೇರೆಯವರು ನಾಮಹಾಕದಂತೆ ಕಾಪಾಡಪ್ಪಾ ಎಂದು ಅವನಿಗೇ ನಮಿಸಿಬಿಡೋಣ ಎಂಬುದು ದೃಢವಾದ ತೀರ್ಮಾನ. ಹೇ ಭಗವಂತ ನೀನು ಕಳೆದ ಒಂಬತ್ತು ಅವತಾರಗಳಲ್ಲೂ ಪಟ್ಟ ಪಾಡು ಅಷ್ಟಿಷ್ಟಲ್ಲ, ನಿನ್ನ ಹತ್ತನೆಯ ಅವತಾರದ ಜಾಗಕ್ಕೆ ನಾವು ಭೂಲೋಕದ ಮಂದಿ ಈಗಾಗಲೇ ಒಬ್ಬನನ್ನು ಕುಳ್ಳಿರಿಸಿಬಿಟ್ಟಿದ್ದೇವೆ. ಇಲ್ಲೀವರೆಗೆ ನೀನು ನಮಗೆ ನಾಮ ಹಾಕಿಸುತ್ತಿದ್ದೆಯಲ್ಲ ಈಗ ನಿನಗೂ ಭೂಸುರರ ಬಿಸಿ ತಟ್ಟಲಿ ಎಂಬ ಸಲುವಾಗಿ ನಾಮ ಹಾಕಿಬಿಟ್ಟಿದ್ದೇವೆ! ಹೇಗೆ ಆಗದೇ? ನೀನು ಕಾವೇರೀ ತೀರದಲ್ಲಿ ಮುಂದೆಂದೋ ಬರುವೆಯೆಂದು ಹೇಳುತ್ತಾರೆ. ಆದರೆ ಸದ್ಯ ನೀನು ಬಂದರಂತೂ ಜನ ಜಾಗದಲ್ಲಿರುವ ಈ ಕಲ್ಕಿಯಿಂದ ’ಪ್ರಸಾದ’ಪಡೆದು ನಿನ್ನನ್ನೇ ಡೂಫ್ಲಿಕೇಟು ಎಂದು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ! ಇಲ್ಲಿ ಜನ ಹಾಗೆ ’ಪ್ರಸಾದ’ ಸ್ವೀಕರಿಸುವಾಗ ನೋಡಲಿರಲಿ ಅಂತ ಹುಡುಕಿದರೆ ನಮ್ಮ ಲೋಕಾಯುಕ್ತರೂ ಬಿಟ್ಟು ಬಿಟ್ಟು ಹೋಗುತ್ತಿದ್ದಾರೆ, ನಾವು ಅಸಹಾಯರು ದೇವಾ... ತಿರುಪತೀ ವೆಂಕಟರಮಣ ಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ....ಗೋವಿಂದಾ.......ಗೋವಿಂದ!!

Tuesday, June 22, 2010

ಹೀಗೆರಡು ಕಥೆಗಳು

ಹೀಗೆರಡು ಕಥೆಗಳು

ತಂಪಿನ ವಾತವರಣದಲ್ಲಿ ಕಾಪಿ ಕುಡಿಯುತ್ತ ಕುಳಿತ ಶಾಂತಾಳಿಗೆ ಹಳೆಯ ನೆನಪುಗಳು ಕಾಡಿದವು. ಟಿವಿಯಲ್ಲಿ ಹಲವು ಸಲ ಕಂಡಿದ್ದರೂ ತನ್ನ ಪ್ರೀತಿಯ ಪ್ರಶಾಂತ್ ಅದೇ ಥರದ ವ್ಯಕ್ತಿ ಅಂತ ತಿಳಿದಿರಲಿಲ್ಲ ಅವಳಿಗೆ. ಜೀವನ ಹೂ ಬನವಾಗಿತ್ತು. ಬಗೆಬಗೆಯ ಡ್ರೆಸ್ ಗಳು, ವಿವಿಧ ಲಿಪ್ ಸ್ಟಿಕ್-ಮೇಕಪ್ ಸಾಮಗ್ರಿಗಳು, ತರಾವರಿ ಚಪ್ಪಲಿಗಳು, ನೂರೆಂಟು ನಮೂನೆಯ ಆಭರಣಗಳು, ಲೇಟೆಸ್ಟ್ ಸೆಲ್ ಫೋನ್ ಹ್ಯಾಂಡ್ ಸೆಟ್ ಗಳು ಇವೆಲ್ಲವನ್ನೂ ಪಡೆದು ರಾಣಿಯಂತೆ ಮೆರೆದಿದ್ದಳು! ಅಪ್ಪ-ಅಮ್ಮ ಅಡ್ಡಿ ಮಾಡಿರಲಿಲ್ಲ, ಮಗಳು ಏನು ಮಾಡಿದರೂ ಸೈ ಎನ್ನುವ ಪರಿಪಾಟದವರಾಗಿದ್ದರು. ಮಗಳು ಕಾಲೇಜಿನಲ್ಲಿ ಏನು ಓದಿದಳು, ಎಲ್ಲಿ ಕುಳಿತಳು, ಯಾಕೆ ಇಷ್ಟು ತಡವಾಗಿ ಮನೆ ಸೇರಿದಳು--ಇದನ್ನೆಲ್ಲ ವಿಚಾರಿಸುವ ಜನವೇ ಅಲ್ಲ ಅವರು! ಹೀಗಾಗಿ ತಾನು ಗಂಡು ಬೀರಿಯಾಗೇ ಬೆಳೆದಳು! ಅಂದದಲ್ಲಿ ಯಾವ ಸಿನಿಮಾ ಹೀರೋಯಿನ್ ಗೂ ಕಮ್ಮಿ ಇರಲಿಲ್ಲ, ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಸುಶ್ಮಿತಾ ಸೇನ್ ಎಲ್ಲರ ಒನಪು ಒಯ್ಯಾರದ ಜೊತೆಗೆ ಬಿಪಾಷಾ ಬಸುವಿನ ಮಾದಕತೆ ತುಂಬಿಕೊಂಡವಳು, ಇದನ್ನೆಲ್ಲ ತನ್ನ ಶಾಶ್ವತ ಬೆಡಗು ಎಂದು ಭಾವಿಸಿ ಅನೇಕ ಹುಡುಗರ ನಿದ್ದೆಗೆಡಿಸಿದ್ದಳು. ಪಡ್ಡೆ ಹೈಕಳು ಲೋ ಜೀನ್ಸ್ ತೊಟ್ಟು ನಡೆವಾಗ ಅವರ ತೆಳು ಸೊಂಟಕ್ಕೆ ಮಾರುಹೋಗುತ್ತಿದ್ದ ತಾನು ಅನೇಕರನ್ನು ಬಯಸುವ ಮನೋಭಾವನೆ ಹೊಂದಿದ್ದಳು. ರಮೇಶನ ಕೂದಲು ಚೆನ್ನಾಗಿದ್ದರೆ ನವೀನನ ಕಣ್ಣು ಚೆನ್ನಾಗಿತ್ತು, ರೋಹಿತ್ ನ ಎತ್ತರ ಇಷ್ಟವಾದರೆ ಪ್ರತೀಕ್ ನ ಮುಖ ತುಂಬಾ ಮುಗ್ಧವಾಗಿತ್ತು. ಯಾರನ್ನೂ ದೂರವಿಡಲು ಮನಸಾಗುತ್ತಿರಲಿಲ್ಲ. ಕೊನೆಗೊಮ್ಮೆ ಎಲ್ಲವನ್ನೂ ಒಬ್ಬನಲ್ಲೇ ಪಡೆಯಲಾಗದಿದ್ದರೂ ಇರಲಿ ಎಂದು ಪ್ರಶಾಂತ್ ನನ್ನು ಪ್ರೀತಿಸಲು ಪ್ರಾರಂಭಿಸಿದಳು.

ಅತ್ತ ಪ್ರಶಾಂತನ ಕಥೆಯೇ ಬೇರೆ ಇದ್ದುದು ಇವಳಿಗೆ ತಿಳಿದಿರಲಿಲ್ಲ. ಅದೊಂದು ಬಣ್ಣದ ಚಿಟ್ಟೆ ಎಂಬುದು ಅರಿವಿಗೆ ಬಂದಿರಲಿಲ್ಲ, ಹೀಗಾಗಿ ಹೋಟೆಲ್, ಐಸ್ ಕ್ರೀಮ್ ಪಾರ್ಲರ್, ಸೈಬರ್ ಕೆಫೆ,ಪಾರ್ಕು ಅಂತೆಲ್ಲ ಹಲವು ಕಡೆ ಜೊತೆಗೇ ಓಡಾಡುತ್ತಿದ್ದಳು. ದಿನಗಳೆದಂತೆ ಅವನಲ್ಲಿ ತುಂಬಾ ಅನುರಕ್ತನಾಗಿದ್ದಳು. ಅವನ ಜೊತೆಗಿರುವಾಗ ತಾನು ಏನುಮಾಡುತ್ತಿದ್ದೇನೆ ಎಂಬುದನ್ನೇ ಮರೆತುಬಿಡುತ್ತಿದ್ದಳು.

ಹೀಗೇ ಒಂದು ದಿನ ದೂರದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬರೋಣವೆಂದ ಪ್ರಶಾಂತನಿಗೆ ಅಂಟಿಕೊಂಡು ಹೊರಟೇ ಬಿಟ್ಟಳು. ಮೈಸೂರಿನಲ್ಲಿ ರಾತ್ರಿ ಉಳಿದು ಮಾರನೇದಿನ ಹೋಗೋಣವೆಂಬ ಆತನ ಒತ್ತಯಾಕ್ಕೆ ಒಲ್ಲೆ ಎನ್ನಲಾಗಲಿಲ್ಲ. ಆ ರಾತ್ರಿ ಆ ರಾತ್ರಿ ಅವಳು ಬಯಸಿದ ರಾತ್ರಿಯೂ ಆಗಿತ್ತು. ಅಂದು ಆತ ಲೊಚ ಲೊಚನೆ ಕೊಟ್ಟ ಸಿಹಿ ಮುತ್ತುಗಳ ನೆನಪಾದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ! ಆತನ ಬರಿಮೈಯ ಬಿಸಿಯಪ್ಪುಗೆ, ಉದ್ವೇಗದ ಪ್ರೀತಿ, ಆಮೇಲೆ ಅವನು ಕೊಟ್ಟ ಶರೀರ ಸುಖ ಇದನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ.

ಮರಳಿ ತಿಂಗಳಾಗುವಾಗ ಇದ್ದಕಿದ್ದಲ್ಲೇ ವಾಂತಿಗೆ ಶುರುವಾಯಿತು. ಚಿಕಿತ್ಸೆಗಾಗಿ ವೈದ್ಯರನ್ನು ಕಂಡಾಗ ಅವರು ಕುರುಹು ನೋಡಿ ಪುನಃ ಪರೀಕ್ಷೆಮಾಡಿ ಬಸುರಿ ಎಂದು ಹೇಳಿಬಿಟ್ಟರು. ಅಲ್ಲಿಯವರೆಗೆ ಜೊತೆಗಿದ್ದ ಪ್ರಶಾಂತ ಆವತ್ತಿನಿಂದ ಜೊತೆಯನ್ನೇ ತೊರೆದ. ಎಲ್ಲೂ ಹೇಗೂ ಸಿಗದೇ ಕಣ್ಮರೆಯಾದ. ತಿಂಗಳದಿನ ದಿನವೂ ಎಲ್ಲೋ ಹೇಗೋ ತನ್ನೊಂದಿಗೆ ಸುಖಿಸುತ್ತಿದ್ದ ಆತನಿಗೆ ಬಸುರಿ ಎಂಬ ಸುದ್ದಿ ತಿಳಿದ ತಕ್ಷಣ ತಾನು ಬೇಡವಾಗಿದ್ದಳು.

ಕಥೆಯನ್ನು ತಿಳಿಯದ ಮನೆಯಲ್ಲಿ ಮಗಳಿಗೆ ಯಾಕೋ ಆರೋಗ್ಯ ಸರಿಯಿಲ್ಲವೆಂದಷ್ಟೇ ಗೊತ್ತಿತ್ತು. ಅದೇನು ಮಹಾ ದಿನವೆರಡು ದಿನಗಳಲ್ಲಿ ಮಾಮೂಲೀ ಸರಿಹೋಗುತ್ತದೆ ಎಂದುಕೊಂಡಿದ್ದರು. ಪಾಪ ಅವರಿಗೇನು ಗೊತ್ತು ರಾಣಿಯ ಮೇಜವಾನಿ!ಆಮೇಲೆ ನಡೆದಿದ್ದೇ ಬೇರೆ. ಎಚ್ಚರ ತಪ್ಪಿ ಬಿದ್ದಿದ್ದ ತನ್ನನ್ನು ಯರೋ ಆಸ್ಪತ್ರೆಗೆ ಸೇರಿಸಿದ್ದರು. ಚೀಲದಲ್ಲಿರುವ ಮಾಹಿತಿಯಿಂದ ಮನೆಗೆ ತಿಳಿಸಿ ವೈದ್ಯರು ಅಪ್ಪ-ಅಮ್ಮನನ್ನು ಕರೆಸಿದ್ದರು. ವಿಷಯ ತಿಳಿದ ಅವರು ಕಕ್ಕಾವಿಕ್ಕಿಯಾಗಿ ಕುಸಿದು ತಲೆಗೆ ಕೈಹಚ್ಚಿ ಕುಳಿತಿದ್ದರು. ತನ್ನೊಂದಿಗೆ ಕೇಳಿದರು. ಪರಿಸ್ಥಿತಿ ತನ್ನ ಕೈಮೀರಿ ಹೋಯಿತು ಎಂದು ಆಗ ಅರಿವಿಗೆ ಬಂದ ತನಗೆ ಅಬಾರ್ಷನ್ ಮಾಡಿಸಲಾಯಿತು. ಜೊತೆಗೆ ವೈದ್ಯರು ತನಗೆ ಎಚ್.ಐ.ವಿ ಸೋಂಕು ತಗುಲಿರುವುದಾಗಿ ಹೇಳಿದರು. ರಾಣಿಯಂತೆ ಮೆರೆದ ತಾನು ಶರೀರದ ಕಸುವನ್ನೆಲ್ಲ ಕಳಕೊಂಡು ದಾಸಿಯಂತೆ,ಭಿಕ್ಷುಕಿಯಂತೆ ಕುಬ್ಜಳಾಗಿಬಿಟ್ಟಿದ್ದಳು.

-------------೦------------

ಬಹಳ ಜನ ಸೇರಿದ್ದರು ಅಲ್ಲಿ. ಯಾಕೆ ಎಂಬುದು ಹಿಂದೆ ನಿಂತವರಿಗೆ ಗೊತ್ತಾಗುತ್ತಿರಲಿಲ್ಲ. ರೈಲ್ವೇ ಲೈನಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ ಎಂಬುದಷ್ಟೇ ತಿಳಿದ ಸುದ್ದಿ. ಅಂತೂ ಇಂತೂ ನುಗ್ಗುತ್ತ ನುಗ್ಗುತ್ತ ಮುಂದೆ ಹೋಗಿ ನೋಡಿದರೆ ಅಭಿಷೇಕ್! ಅಭಿಷೇಕ್ ಬಹಳ ಸ್ಫುರದ್ರೂಪಿ ಯುವಕ, ಆಗತಾನೇ ಮದುವೆಯಾಗಿದ್ದ. ೭-೮ ವರ್ಷಗಳಿಂದ ಕೆಲಸಮಾಡಲು ಬಂದು ಹತ್ತಿರದ ಓಣಿಯಲ್ಲೇ ಉಳಿದುಕೊಂಡ ಆತನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು.ಹಾಗೆ ನೋಡಿದರೆ ಆತನ ಮನೆಗೆ ಬರಹೋಗುವವರೂ ಕಡಿಮೆಯೇ. ವೃತ್ತಿಯ ಹೊರತು ಇನ್ನಾವುದೇ ವ್ಯವಹಾರಗಳಲ್ಲಿ ತೊಡಗಿಕೊಂಡ ವ್ಯಕ್ತಿಯಲ್ಲ ಆತ.

ಸಖರಾಯಪಟ್ಟಣದ ಅಭಿಷೇಕ್ ಗೆ ಇದ್ದುದೊಂದೇ ಆಸೆ. ತಾನು ಹೇಗಾದರೂ ಮಾಡಿ ದುಡಿಯಬೇಕು. ಮನೆಯಲ್ಲಿರುವ ಅಪ್ಪ-ಅಮ್ಮನನ್ನು ಬಡತನದ ಬವಣೆಯಿಂದ ಪಾರುಮಾಡಬೇಕು. ತಂಗಿಗೊಬ್ಬ ಒಳ್ಳೆಯ ಗಂಡನ್ನು ನೋಡಿ ಮದುವೆ ಮಾಡಬೇಕು. ಅಮೇಲೆ ತಾನು ಮದುವೆಯಾಗಿ ಹಾಯಾಗಿ ಇರಬೇಕು ಎಂಬುದು.

ನಮ್ಮ ಎಣಿಕೆಗಳೇ ಒಂದು, ವಿಧಿಲಿಖಿತವೇ ಇನ್ನೊಂದು ಅಲ್ಲವೇ? ಅಭಿಷೇಕ್ ಬೆಂಗಳೂರಿಗೆ ಬಂದು ಕೆಲಸ ಆರಂಭಿಸಿದ್ದು ನಿಜ, ದುಡಿದದ್ದನ್ನು ಒದಷ್ಟು ಊರಿಗೆ ಕೊಟ್ಟು ತಂದೆ ಮಾಡಿದ್ದ ಸಾಲವನ್ನು ತೀರಿಸಿದ್ದು ನಿಜ. ತಂಗಿಯನ್ನು ಅಂತೂ ಕಷ್ಟಪತ್ತು ಮದುವೆ ಮಾಡಿದ್ದೂ ಸತ್ಯ. ತಾನು ಮದುವೆಯಾಗಿದ್ದೂ ಅಷ್ಟೇ ಸತ್ಯ.

ಮದುವೆಯಾಗುವಾಗ ಬಹಳ ಮುದ್ದಾಗಿ ಕಂಡ ಹುಡುಗಿ ಮದುವೆಯಾದ ಕೆಲಸಮಯದ ನಂತರ ಬಣ್ಣ ಬದಲಾಯಿಸಿದ್ದಳು! ಅವಳಿಗೆ ತನ್ನ ಕಡೆಯವರನ್ನು ಬಿಟ್ಟರೆ ಗಂಡನ ಮನೆಯವರಾಗಲೀ ನೆಂಟರಿಷ್ಟರಾಗಲೀ ಬಂದರೆ ಹಿಡಿಸುತ್ತಿರಲಿಲ್ಲ. ನೋಡಲು ಅತಿ ಸುಂದರಿಯಾಗಿದ್ದ ಮುಗ್ಧಳಂತೇ ಕಾಣುತ್ತಿದ್ದ ಹುಡಿಗಿಗೆ ಗಂಡನ ಜುಟ್ಟುಹಿಡಿದು ಮಣಿಸುವ ಸ್ವಭಾವವಿತ್ತು. ಮನೆಯಲ್ಲಿ ತಂದೆ-ತಾಯಿ, ಸ್ಕೂಲಲ್ಲಿ ಶಿಕ್ಷಕರು ಹೆದರಿಸದಷ್ಟು ಹೆದರಿಕೆ ಉಂಟುಮಾಡುವ ಕಠಿಣ ಮನಸ್ಕಳಾಗಿದ್ದಳು ಆ ಹುಡುಗಿ! ಗೋಮುಖ ವ್ಯಾಘ್ರ ಅಂದರೆ ಅವಳೇ ಎನ್ನುವಷ್ಟು ಧೂರ್ತೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಅಭಿಷೇಕ್ ನ ತಂದೆಗೆ ಆರೋಗ್ಯ ಹದಗೆಟ್ಟಿತು. ಸಾಕಷ್ಟು ಉಪಚಾರಗಳಾದಮೇಲೆ ತಿಳಿದಿದ್ದು ಅವರಿಗೆ ಲಿವರ್ ಕ್ಯಾನ್ಸರ್ ಇದೆ ಎಂಬುದು! ಮನುಷ್ಯನ ಲಿವರ್ ಹೇಗೆ ಎಂದರೆ ಅದರ ಹತ್ತರಲ್ಲಿ ಒಂದು ಭಾಗ ಕೆಲಸಮಾಡುತ್ತಿದ್ದರೂ ಅದು ಮಾಮೂಲೀಯಾಗಿ ಕಾಣುತ್ತದೆ. ಹೊರನೋಟಕ್ಕೆ ಇಡೀ ಲಿವರ್ ಸರಿ ಇದೆ ಎಂಬರೀತಿ ಇರುತ್ತದೆ. ಯಾವಾಗ ಕೊನೇ ಹಂತ ತಲ್ಪುತ್ತದೋ ಆಗ ಮಾತ್ರ ಗೊತ್ತಗುವುದು ಲಿವರ್ ಕ್ಯಾನ್ಸರ್! ಈ ವಿಷಯ ಕೇಳಿ ಅಭಿಷೇಕ್ ತುಂಬಾ ನೊಂದ. ಅಮ್ಮ ನೋಯದಿರಲೀ ಎಂದು ಅಮ್ಮನಿಗೆ ರಿಪೋರ್ಟ್ ನಲ್ಲಿ ಬಂದಿದ್ದನ್ನು ಮರೆಮಾಚಿದ್ದ. ಒಳಗೆ ತಡೆಯಲಾರದ ಬೇಗುದಿ ಹೊತ್ತ ಅಭಿಷೇಕ್ ಗೆ ಮನಸ್ಸಿಲ್ಲುದ್ದುದು ಅಪ್ಪನಿಗೆ ಹೇಗಾದರೂ ಅದನ್ನು ವಾಸಿಮಾಡಿಸಲು ಸಾಧ್ಯವೇ ಎಂಬುದು. ತನ್ನ ಸಂಬಳ ಅಂತಹ ಕಾಯಿಲೆಯ ಉಪಚಾರಕ್ಕೆಲ್ಲ ಸಾಲುತ್ತಿಲ್ಲ, ಅದಕ್ಕಾಗಿ ಹೇಗಾದರೂ ಮಾಡಿ ಸಾಲಮಾಡಿಯಾದರೂ ಅಪ್ಪನನ್ನು ಬದುಕಿಸಬೇಕೆಂಬ ಬಯಕೆ ಮತ್ತು ಕರ್ತವ್ಯಪ್ರಜ್ಞೆ ಅವನನ್ನು ಕಾಡುತ್ತಿತ್ತು.

ಮನೆಯಲ್ಲಿ ವಿಷಯ ತಿಳಿದ ಅರ್ಧಾಂಗಿ ಕಾಳಿಯಾಗಿದ್ದಳು. ಸಂಬಳದಲ್ಲಿ ಒಂದು ಪೈಸೆ ಸಹ ಆತನ ಅಪ್ಪನ ಖರ್ಚಿಗಾಗಿ ಕೊಡಲು ಸಿದ್ಧಳಿಲ್ಲವೆಂದು ಘೋಷಿಸಿಬಿಟ್ಟಿದ್ದಳು. ಆಗತಾನೇ ಜಾಗತಿಕ ಆರ್ಥಿಕ ಮುಗ್ಗಟ್ಟು ಒಕ್ಕರಿಸಿದುದರಿಂದ ಜಾಸ್ತಿ ರಜವನ್ನು ಹಾಕಿದರೆ ಕಂಪನಿಯಲ್ಲಿ ಕೆಲಸದಿಂದ ತೆಗೆಯಬಹುದೇಂಬ ಆತಂಕ ಬೇರೆ. ಸ್ನೇಹಿತರಲ್ಲಿ ಸಾಲ ಕೇಳೋಣವೆಂದು ಒಬ್ಬಿಬ್ಬರನ್ನು ವಿಚಾರಿಸಿದಾಗ ಅವರಲ್ಲಿ ಹುಟ್ಟುವುದು ೨೫-೩೦ ಸಾವಿರ, ಲಕ್ಷಗಟ್ಟಲೇ ಹಣ ಪಾವತಿಸಬೇಕಾಗಿರುವುದೆಲ್ಲಿ ಈ ಅಲ್ಪ ಹಣವೆಲ್ಲಿ, ಅದೂ ಪಡೆದ ಸಾಲವನ್ನು ಮರಳಿಸುವ ದಾರಿಯಾವುದು? ಸಮಸ್ಯೆಗಳ ತಿಕ್ಕಾಟ ಗಂಭೀರ ಹಂತಕ್ಕೆ ತಲ್ಪಿತು. ಅಭಿಷೇಕ್ ರಾತ್ರಿ ಬಹುಹೊತ್ತಿನತನಕ ಚಿಂತಿಸುತ್ತಿದ್ದ. ಬೇಳಗಾಗಬೇಕು. ಆಗ ಅತೀವವಾಗಿ ನೊಂದ ದುರ್ಬಲ ಮನಸ್ಸಿನಲ್ಲೇ ತನ್ನ ತಂದೆ-ತಾಯಿಯ ಕ್ಷಮೆ ಬೇಡಿ ಹೊರ ಹೊರಟ ಅಭಿಷೇಕ್ ರೈಲ್ವೇ ಲೈನಿಗೆ ಧುಮುಕಿದ್ದ. ಧುಮುಕಿ ಇಹಲೋಕ ತೊರೆದಿದ್ದ. ಹಕ್ಕಿ ಸಾತಂತ್ರ್ಯ ಪಡೆದಿತ್ತು- ಹೆಂಡತಿಯಿಂದ, ಮರುಗಿತ್ತು ತಂದೆ-ತಾಯಿಯನ್ನು ಪೊರೆಯಲಾಗದ ಅಸಹಾಯಕತೆಯಿಂದ.