ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 11, 2010

ಶಿವರಾತ್ರಿ ಪ್ರ-'ಯಾಣ'


ಶಿವರಾತ್ರಿ ಪ್ರ-'ಯಾಣ'

ಶಿವನ ಒಂದು ರೂಪವಾದ ಭೈರವೇಶ್ವರನ ತಾಣ-'ಯಾಣ' ತುಂಬಾ ಮನಮೋಹಕ ಪ್ರದೇಶ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ದಿಂದ ಸುಮಾರು ೩೬ ಕಿಲೋ ಮೀಟರ್ ದೂರದಲ್ಲಿದೆ. ಕುಮಟಾದಿಂದ ಶಿರಸಿಗೆ ಹೋಗುವ ಮಾರ್ಗದಲ್ಲಿ ಕತಗಾಲ್ ಹತ್ತಿರದ ಆನೆಗುಂದಿ ಎಂಬಲ್ಲಿ ಇಳಿದುಕೊಂಡರೆ ಅಲ್ಲಿಂದ ಎಡಕ್ಕೆ ಸುಮಾರು ೧೬ ಕೀ.ಮೀ. ಹೋಗಬೇಕು. ಎರಡನೇ ಮಾರ್ಗ-ಶಿರಸಿಯಿಂದ ಮತ್ತಿಘಟ್ಟಕ್ಕೆ ಹೋಗುವ ದಾರಿಯಲ್ಲಿ ವಡ್ಡಿ ಕ್ರಾಸ್ ಎಂಬಲ್ಲಿ ಇಳಿದುಕೊಂಡರೆ ಸುಮಾರು ಕೀ.ಮೀ. ನಡೆಯಬೇಕು. ಸ್ವಂತದ ವಾಹನ ಇದ್ದರೆ ತುಂಬಾ ಅನುಕೂಲ, ನಡೆಯುವ ಪ್ರಮೇಯ ಇರುವುದಿಲ್ಲ, ಇದ್ದರೂ ಹೆಚ್ಚೆಂದರೆ ಕೀ.ಮೀ. ಅಷ್ಟೇ. ಉಳಿದುಕೊಳ್ಳಲು ಹತ್ತಿರದ ಪಟ್ಟಣಗಳೆಂದರೆ ಶಿರಸಿ ಅಥವಾ ಕುಮಟಾ ಮಾತ್ರ. ಎರಡೂ ಅಜಮಾಸ್ ೫೦ ಕೀ.ಮೀ. ದೂರ ಇವೆ. ಯಾಣದಲ್ಲಿ ಸದ್ಯಕ್ಕೆ ತಿಂಡಿ-ಊಟದ ವ್ಯವಸ್ಥೆ ಇರುವುದಿಲ್ಲ, ಪೂರ್ವ ತಯಾರಿ ಇಟ್ಟುಕೊಂಡೇ ಹೋದರೆ ಸೂಕ್ತ, ಇಲ್ಲವೆಂದರೆ ದಾರಿಯಲ್ಲಿ ಸಿಗುವ ಚಿಕ್ಕಪುಟ್ಟ ಅಂಗಡಿಗಳಿಂದ ಏನಾದರೂ ಕುರುಕಲು,ಬಿಸ್ಕತ್ ಪಡೆಯಬಹುದು ಅಷ್ಟೇ. ನೀರಿನ ತೊಂದರೆ ಇರುವುದಿಲ್ಲ, ನೈಸರ್ಗಿಕವಾಗಿ ಹರಿದು ಬರುವ ಮಿನರಲ್ ವಾಟರ್ ಲಭ್ಯ! ಇದೊಂದು ವಿಶಿಷ್ಟ ನೈಸರ್ಗಿಕ ಪ್ರವಾಸೀ ಸ್ಥಳ. ಕಾಡಿನ ಮಧ್ಯೆ ಯಾವ ಗೌಜು-ಗದ್ದಲವಿಲ್ಲದ ಪ್ರದೇಶ, ಹಸಿರು ಕಾನನ, ಎಂದಿಗೂ ಬತ್ತದ ನೀರಿನ ತೊರೆ ಇತ್ಯಾದಿ ಕಣ್ಣಿಗೆ 'ಹಬ್ಬ'ಕಟ್ಟುವ ಶಿವನ ವಾಸಸ್ಥಳ.

ಸ್ಥಳ ಪುರಾಣದಲ್ಲಿ ಭಸ್ಮಾಸುರ-ಮೋಹಿನಿ

ಕಲ್ಲಿನಿಂದ ಕೂಡಿದ ಭಸ್ಮವನ್ನು ಶಿವ ಕೋಪದಿಂದ ಬೀಸಾಡಿದಾಗ ದೈತ್ಯಶಕ್ತಿಯೊಂದರ ಉಗಮವಾಗುತ್ತದೆ. ಅವನೇ 'ಭಸ್ಮಾಸುರ' . ಹೀಗೆ ಹೆಸರು ಬರಲು ಕಾರಣ ಶಿವನಿಂದ ಅಸುರ ಪಡೆದ ವರ. ಹುಟ್ಟಿದ ತಕ್ಷಣ ಶಿವನನ್ನು ಒಲಿಸಿ-ಓಲೈಸಿ ತನ್ನ ಬಲಗೈಯನ್ನು ಯಾರ ತಲೆಯಮೇಲೆ ಇಡುತ್ತೇನೋ ಇಡಿಸಿಕೊಂಡವರು ಭಾಸ್ಮವಾಗಿಹೊಗಬೇಕು ಎಂಬ ವರವನ್ನು ಪಡೆದ. ಪಕ್ಕದಲ್ಲಿ ಅತಿ ಲಾವಣ್ಯವತಿಯಾದ ಶಿವೆಯನ್ನ ಕಂಡ. ಅವಳನ್ನೇ ಮೋಹಿಸಹೊರಟ. ಶಿವನ ಕೆಂಗಣ್ಣಿಗೆ ಗುರಿಯಾದ. ಶಿವನನ್ನೇ ಬೆದರಿಸಿ ಶಿವನ ಶಿರದ ಮೇಲೆ ಕೈ ಇಡುವುದಾಗಿ ಆರ್ಭಟಿಸಿದ. ಕಂಗಾಲಾದ ಶಿವ ಓಟಕ್ಕಿತ್ತ. ಅಟ್ಟಿಸಿಕೊಂಡು ಬಂದ ಭಸ್ಮಾಸುರ. ಈರ್ವರೂ ಓಡುತ್ತಾ ಓಡುತ್ತಾ ಯಾಣಕ್ಕೆ ಬಂದರು.

ಇಷ್ಟರಲ್ಲಿ ದೇವಗಣ ಸಭೆಸೇರಿದರು. ಏನಾದರೂ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು! ಆಗ ಮಹಾವಿಷ್ಣು ಒಂದು ನಾಟಕವನ್ನು ರೂಪಿಸಿದ. ತನ್ನ ಶಕ್ತಿಯಿಂದ ಅತಿ ರೂಪವತಿಯಾದ 'ಮೋಹಿನಿ'ಯನ್ನು ಸೃಷ್ಟಿಸಿದ. ಮೋಹಿನಿ ಧರೆಗೆ ಬಂದಳು. ಭಸ್ಮಾಸುರ ಹತ್ತಿರದಲ್ಲಿ ಸುಳಿದಾಡಿದಳು. ಮೋಹಿನಿಯನ್ನು ಕಂಡ ಭಸ್ಮಾಸುರ ಅವಳಿಗೆ ಮನಸೋತ, ಅವಳು ಹೇಳಿದ್ದನ್ನೆಲ್ಲ ಮಾಡುವುದಾಗಿಯೂ ಹೇಗಾದರೂ ಅವಳು ತನ್ನವಳಾಗಬೇಕೆಂದು ಪರಿ ಪರಿಯಿಂದ ಅವಳಿಗೆ ದುಂಬಾಲುಬಿದ್ದ. ಮೋಹಿನಿ ತಾನು ಹೇಳಿದ ರೀತಿ ನೃತ್ಯವನ್ನು ಮಾಡಿದರೆ ಅವನನ್ನು ವರಿಸುವುದಾಗಿ ಹೇಳಿದಳು. ಇಬ್ಬರೂ ನೃತ್ಯಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಮೋಹಿನಿ ತನ್ನ ಬಲಗೈಯನ್ನು ತನ್ನ ತಲೆಯಮೇಲೆ ಇಟ್ಟುಕೊಂಡಳು; ಅನುಸರಿಸುತ್ತಿರುವ ಭಸ್ಮಾಸುರ ಕೂಡ ಅದೇ ರೀತಿ ಮಾಡಿದ. ಕ್ಷಣದಲ್ಲಿ ಆತ ಅಲ್ಲೇ ಭಸ್ಮವಾದ!


ಶಿಲಾಮಯ, ನಿಸರ್ಗ್ ನಿರ್ಮಿತ, ಆಧಾರ ರಹಿತ ನಿಲುವು. ಒಂದನ್ನು ಭೈರವೇಶ್ವರ ಶಿಖರ ವೆಂದೂ ಇನ್ನೊಂದನ್ನು ಮೋಹಿನಿ ಶಿಖರವೆಂತಲೂ ಜನ ಗುರುತಿಸಿದ್ದಾರೆ. ಭೈರವೇಶ್ವರ ಶಿಖರ
ಅಗಲವಾಗಿದೆ, ಮೋಹಿನಿ ಅಮ್ಮನವರ ಶಿಖರ ಸ್ವಲ್ಪ ಮೊನಚಾಗಿದೆ. ನೋಡಲು ಮೋಹಿನಿ ಶಿಖರ ಎತ್ತರವಾಗಿ ಕಂಡರೂ ಭೈರವೇಶ್ವರ ಶಿಖರಕ್ಕಿಂತ ಮೋಹಿನಿ ಶಿಖರ ದೊಡ್ದದಾಗಿಲ್ಲ ಎಂಬುದು ಹೇಳಿಕೆ. ಮೋಹಿನಿ ಶಿಖರ ಬೆಳೆಯುತ್ತದೆಂದೂ ಆದರೂ ಭೈರವೇಶ್ವರ ಶಿಖರಕ್ಕಿಂತ ಎತ್ತರ ಬೆಳೆದಾಗ ತನ್ನಿಂದ ತಾನೇ ಶಿಖರದ ತುದಿ ಉದುರಿ ಬೀಳುತ್ತದೆಂದೂ ಅಲ್ಲಿನ ಜನ ಹೇಳುತ್ತಾರೆ. ಭೈರವೇಶ್ವರ ಶಿಖರದ ಒಳಗೆ ಗುಹೆಗಳಿವೆ, ನೋಡಲು ನಯನ ಮನೋಹರವಾಗಿವೆ, ಭೀತಿ ಹುಟ್ಟಿಸುವಷ್ಟು ದೊಡ್ಡದಾದಗುಹೆಗಳವು! ಇಂತಹ ಒಂದು ಮುಖ್ಯ ಗುಹೆಯಲ್ಲಿ ಭೈರವೇಶ್ವರ ದೇವರು ನೆಲೆಸಿದ್ದಾನೆ. ಹಿಂದೆ ನಡೆದ ಪುರಾಣೋಕ್ತ ಐತಿಹ್ಯದನೆನಪಿಗೆ ಈ ದೇವಸ್ಥಾನದಲ್ಲಿ ಶಿವ-ಮೋಹಿನಿ ಅಮ್ಮನವರಿಗೆ ಪೂಜೆ ಪ್ರತಿದಿನ ಸಲ್ಲುತ್ತದೆ.

ಇಲ್ಲಿ ಹತ್ತಿರದಲ್ಲಿಯೇ, ಕುಮಟಾದಿಂದ ಬರುವ ಮಾರ್ಗದಲ್ಲಿಯೇ ಒಂದು ಗುಡ್ಡವಿದ್ದು ಅದನ್ನು ಭಸ್ಮಾಸುರ ಬೂದಿಯಾದ ಸ್ಥಳವೆನ್ನುತ್ತಾರೆ, ಆಶ್ಚರ್ಯವೆಂದರೆ ಸುತ್ತಲ ಎಲ್ಲಾ ಗುಡ್ಡಗಳ ಮಣ್ಣು ಕೆಂಪು, ಇದು ಮಾತ್ರ ಕಪ್ಪು ಮಣ್ಣಿನಿಂದ ಕೂಡಿದೆ! ಇದು ವಿಜ್ಞಾನಿಗಳಿಗೂ ಸೋಜಿಗ ಉಂಟುಮಾಡಿದ ವಿಷಯವಾಗಿದೆ. ಯಾಣದ ದೇವರ ಗುಹೆಯಲ್ಲಿ ಕತ್ತಲು, ಇದನ್ನು ನೀಗಲು ಬಹಳ ಹಿಂದೆಯೇ ಸೌರ ವಿದ್ಯುತ್ ನಿಂದ ಉರಿಯುವ ದೀಪಗಳನ್ನು ಕೆಲ ವಿಜ್ಞಾನಿಗಳು ಬಂದು ಅಳವಡಿಸಿದ್ದಾರೆ. ಶಿಖರದಲ್ಲಿ ಅಲ್ಲಲ್ಲಿ ಜೇನು ಗೂಡುಗಳಿವೆ, ದೇವಸ್ಥಾನದಲ್ಲಿ ಸ್ವಚ್ಛತೆಯ ಕೊರತೆಯಾದಲ್ಲಿ, ಮೈಲಿಗೆಯಾದಲ್ಲಿ ಹೆಜ್ಜೇನುಗಳು
ಕಡಿಯುತ್ತವೆ
ಎಂಬ ಪ್ರತೀತಿ ಇದೆ. ಭೈರವೇಶ್ವರ ಗುಹಾಂತರ ದೇವಸ್ಥಾನದಲ್ಲಿ ನೀರು ಜೇನಹನಿಯ ರೀತಿ ದೇವರಮೇಲೆ ಸದಾ ತೊಟ್ಟಿಕ್ಕುತ್ತಿರುತ್ತದೆ. ಹಾಗೆ ತೊಟ್ಟಿಕ್ಕಿದ ನೀರು ಗುಹೆಯ ನೆಲದಲ್ಲಿ ಹರಿದು ಹೊರಗೆ ಹೋಗುತ್ತದೆ.

ಜಾತ್ರೆ
ಪ್ರತೀವರ್ಷ ಮಹಾಶಿವರಾತ್ರಿಯಂದು ಈ ದೇವಳದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಇಡೀದಿನ ನಾ ನಾ ಥರದ ಉತ್ಸವಗಳು, ಅಖಂಡ ಭಜನೆಗಳು, ಪಲ್ಲಕ್ಕಿ ಉತ್ಸವವೇ ಮೊದಲಾದ ಹಲವು ಸೇವೆಗಳು ನಡೆದು, ಶಿವರಾತ್ರಿಯ ಜಾಗರಣೆಯೊಂದಿಗೆ ಜಾತ್ರೆ ಕೊನೆಗೊಳ್ಳುವುದು. ಈ ಸಂದರ್ಭ ಸುತ್ತ-ಮುತ್ತಲ ಎಲ್ಲಾ ಪ್ರದೇಶಗಳಿಂದ ಸುಮಾರು ಹತ್ತಾರು ಸಾವಿರಜನ ಬಂದು ಹೋಗುತ್ತಾರೆ.

----
ಶಿವರಾತ್ರಿ

ಬೇಡನೊಬ್ಬ ಒಂದು ಸಂಜೆ ಆಹಾರ ಹುಡುಕುತ್ತ ಹೊರಟು ಒಂದು ಮೃಗವನ್ನು ಕಂಡು ಬೇಟೆಯಾಡಲು ಬೆನ್ನಟ್ಟಿ ಹೋಗುತ್ತಾನೆ. ಬಹಳ ಹಸಿದ ಕುಟುಂಬ,ಮನೆಯಲ್ಲಿ ಬೇರೆ ಏನೂ ತಿನ್ನಲು ಇರುವುದಿಲ್ಲ. ಹೀಗಾಗಿ ಬೇಟೆ ಸಿಗಲೇಬೇಕೆಂಬ ಹಠದಿಂದ ಮುಂದೆ ಮುಂದೆ ಹೋಗುತ್ತಾ ಕಾಡಲ್ಲಿ ಕತ್ತಲಾವರಿಸುತ್ತದೆ. ಕತ್ತಲಿನಲ್ಲಿ ಒಂದಷ್ಟು ದೂರ ನಡೆದ ಬೇಡ, ಬೇಸರಗೊಂಡು ತನ್ನ ಕುಟುಂಬವನ್ನು ನೆನೆಯುತ್ತ ಕ್ರೂರ ಮೃಗಗಳಿಂದ ತಪ್ಪಿಸಿಕೊಳ್ಳಲು ಆ ರಾತ್ರಿ ಕಾಡಲ್ಲೇ ಇರುವ ಯವುದೋ ಮರವೊಂದನ್ನೇರಿ ಕುಳಿತುಕೊಳ್ಳುತ್ತಾನೆ. ಏನೇ ಮಾಡಿದರೂ ಇಡೀ ರಾತ್ರಿ ಅವನಿಗೆ ನಿದ್ದೆ ಬರುವುದಿಲ್ಲ. ಹೀಗಾಗಿ ಮರದ ಟೊಂಗೆಯಲ್ಲಿ ಕೈಗೆಸಿಗುವ ಎಲ್ಲಾ ಎಲೆಗಳನ್ನು ಒಂದೊಂದಾಗಿ ಕಿತ್ತು ಕೆಳಗೆ ಹಾಕುತ್ತ ಬೇಸರ ಕಳೆಯುತ್ತಾನೆ. ಅವನ ಅರಿವಿಗೆ ಗೋಚರವಾಗದ ಒಂದು ಘಟನೆ ನಡೆಯುತ್ತದೆ, ಅದೆಂದರೆ ಆ ಮರದ ಕೆಳಗೆ ಒಂದು ಶಿವಲಿಂಗವಿದ್ದು, ಆ ಮರ ಬಿಲ್ವ ಪತ್ರೆಯದ್ದಾಗಿರುತ್ತದೆ! ರಾತ್ರಿಯಿಡೀ ಆತ ಹಾಕಿದ ಬಿಲ್ವದ ಎಲೆಯಿಂದ ಗೊತ್ತಿಲ್ಲದೇ ನಡೆದ ಆ ಪೂಜೆಯಿಂದ ಶಿವ ಪ್ರಸನ್ನನಾಗಿ ಅವನಿಗೆ ಪ್ರತ್ಯಕ್ಷ ದರುಶನವಿತ್ತು ಅವನ ಕಷ್ಟಗಳನ್ನು ಕಳೆಯುತ್ತಾನೆ. ಮುಂದೆ ಪ್ರತೀವರ್ಷ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆ ರಾತ್ರಿ ’ಮಹಾಶಿವರಾತ್ರಿ’ ಎಂದು ಪರಿಗಣಿಸಲ್ಪಡುತ್ತದೆ; ಹಬ್ಬವಾಗಿ ದೇಶಾದ್ಯಂತ ಆಚರಿಸಲ್ಪಡುತ್ತದೆ.


ಶಿವನೊಬ್ಬ ಭಕ್ತರ ಭಕ್ತಾಗ್ರೇಸರ-ಬೋಳೆಶಂಕರ-ಬೋಲೆನಾಥ್
ನಿಜವಾಗಿಯೂ ಹೌದು. ನೀವು ಶಿವನ ಯಾವುದೇ ಕಥಾಮಾಲಿಕೆಯನ್ನು ತೆಗೆದುಕೊಳ್ಳಿ ಹಿಂದೆ-ಮುಂದೆ ನೋಡದೆ "ಭಕ್ತಾ , ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ಏನು ಬೇಕೋ ಕೇಳು", ಆಕ್ಷಣ ನಮ್ಮ ಶಿವ ತನ್ನನ್ನೇ ಮರೆತಿರುತ್ತಾನೆ! ಏನೋ ಕೇಳಿದರೂ "ತಥಾಸ್ತು"ಎಂದುಬಿಡುತ್ತಾನೆ! ಹೀಗೇ ಮಾಡಿ ರಾವಣನಿಗೆ ಆತ್ಮಲಿಂಗ ಕೊಟ್ಟ. ಹೀಗೇ ಮಾಡಿ ಭಕ್ತ ಮಾರ್ಕಾಂಡೇಯನಿಗೆ ಜೀವದಾನ ಕೊಟ್ಟ. ಜಪಿಸಿದರೆ ಹುಚ್ಚೆದ್ದು ಕುಣಿವ ವ್ಯಕ್ತಿತ್ವ ನಮ್ಮ ಈಶನದ್ದು. ಅಷ್ಟೇ ಕೋಪವೂ ಬರುತ್ತದೆ. ಅಷ್ಟೇ ಸ್ವಾಭಿಮನಿಯೂ ಹೌದು. ಶಿವನ ಕೋಪದಿಂದ ದಕ್ಷಯಜ್ಞವೇ ಒಂದು ದೊಡ್ಡ ಪ್ರಮಾದದ ಘಟನೆಯಾಯಿತು. ತನ್ನ ಭಕ್ತರನೇಕರಿಗೆ ವಿಶೇಷ ವರದಾನ ಮಾಡಿದ ಶಿವ " ದೇಹಿ " ಎಂದು ಬರುವವರಿಗೆ " ಅಸ್ತು " ಎಂದು ಕೊಟ್ಟುಬಿಡುವ ಕರುಣಾಮೂರ್ತಿ! ಬೇಡರ ಕಣ್ಣಪ್ಪನನ್ನು ನೋಡಿ, ಹಿರಣ್ಯಕಶಿಪುವನ್ನು ನೋಡಿ, ರಾವಣನನ್ನು ನೋಡಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಶಂಭುವಿನಿಂದ ವರಪದೆದವರೇ.


' ಶಿವ 'ನೆಂದರೆ ಶುಭ ಎಂದರ್ಥ
ಶಿವನನ್ನು ಮೆಚ್ಚಿಸಲು ಹಲವಾರು ಪೂಜೆ-ಉಪಾಸನೆಗಳಿದ್ದರೂ ಗಜಚರ್ಮಧರ, ರುಂಡಮಾಲಧರ, ಭಸ್ಮವಿಲೇಪಿತ ಹೀಗೆಲ್ಲ ಕರೆಸಿಕೊಳ್ಳುವ ನಮ್ಮ ಸ್ವಯಂಭೂವಿಗೆ ನಮಕ-ಚಮಕಸಹಿತ
ರುದ್ರಾಭಿಷೇಕ, ಶ್ರೀರುದ್ರ ಇವುಗಳಿಂದಲೂ ಮೃತ್ಯುಂಜಯ,ಅಘೋರಾಸ್ತ್ರ ಮುಂತಾದ ಜಪಗಳಿಂದಲೂ ಶಿವ ಭಕ್ತರಿಗೆ ಸುಲಭಸಾಧ್ಯನಾಗುತ್ತಾನೆ. ರುದ್ರಪಾರಾಯಣಮಾಡುವುದರಿಂದ ಏಕಾಗ್ರತೆಯಿಂದ ಅದರ ಘೋಷವನ್ನು ಕೇಳುವುದರಿಂದ ನಮ್ಮ ರಕ್ತದೊತ್ತಡ ಸುಸ್ಥಿತಿಯಲ್ಲಿರುತ್ತದೆ[truly,scientifically proven sequence]. ಶ್ರೀರುದ್ರದ ಒಂದೊಂದು ಶ್ಲೋಕವೂ ಆಯುರ್ವೇದೀಯ ಔಷಧಿಗಳನ್ನು ಸೂಚಿಸುತ್ತದೆ. ರುದ್ರಪಾರಾಯಣದಿಂದ ಅನೇಕ ಹಂತದ ಮಾನಸಿಕ ವ್ಯಾಧಿಗಳು ನಿವಾರಣೆಯಾಗುತ್ತವೆ! ಅಭಿಷೇಕ ಇರುವಲ್ಲಿ ರುದ್ರವಿಲ್ಲದಿದ್ದರೆ ಅದು ಗೌಣ ! ಅಭಿಷೇಕದ ಕಲ್ಪನೆಯೇ ರುದ್ರದಿಂದ ಜನಿಸಿತೇನೋ ಎಂಬಷ್ಟು ಅದು ಅಭಿಷೇಕದ ಅವಿಭಾಜ್ಯ ಅಂಗ.

ಹರಿ-ಹರರಲ್ಲಿ ಭೇದವೆಣಿಸಬಾರದು
ಮೂಲ ಪರಬ್ರಹ್ಮನ ವಿವಿಧ ರೂಪಗಳಲ್ಲಿ ಎರಡು ರೂಪಗಳು. ಇವುಗಳಲ್ಲಿ ಭೇದ ಮಾಡಬಾರದು. ಹರಿ-ಹರ ಈರ್ವರೂ ಒಂದೇ. ನಮ್ಮ ಕೆಲವು ಹುಚ್ಚು ಆಚರಣೆಗಳಿಂದ ದೇವರನ್ನೇ divide & rule ಪಾಲಿಸಿಗೆ ಹಚ್ಚಿಬಿಟ್ಟಿದ್ದೇವೆ ನಾವು. ಇದನ್ನು ಗಮನಿಸಿಯೇ ಹಿರಿಯ ಕವಿ ಪು.ತಿ. ಅವರು 'ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು.......' ಎಂಬ ಹಾಡನ್ನು ಬರೆದರು. ಶಿವ-ಕೇಶವ,ಶಂಕರ-ನಾರಾಯಣ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ದೈವಶಕ್ತಿಯ ಮೂಲ ಒಂದೇ. ಆರಾಧನೆಗೆ ಮೂರ್ತರೂಪ ಮಾತ್ರ ಬೇರೆ.




ಶಿವ
ಅರ್ಧನಾರೀಶ್ವರ. ಶಿವ ಬಂದರೆ ಅಲ್ಲಿ ಶಿವೆಯೂ ಬಂದಳು ಎಂದೇ ತಿಳಿದಿರಬೇಕು. ಜಗದ ಹಿತಕ್ಕಾಗಿ ಸದಾ ಓಡಾಡುವ ಇವರನ್ನು " ಜಗತಃ ಪಿತರೌ ಒಂದೇ ಪಾರ್ವತೀ ಪರಮೇಶ್ವರೌ " ಎನ್ನುತ್ತಾರೆ, ಜಗತ್ತಿನ ತಂದೆ-ತಾಯಿ ಎಂದು ಗುರುತಿಸಲ್ಪಡುವ ಶಿವ-ಶಿವೆಯರನ್ನು ಸ್ಮರಿಸುತ್ತ ಶಿವನಲ್ಲಿ ಹೀಗೆ ಪ್ರಾರ್ಥಿಸೋಣ-






ಕರಚರಣ
ಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶೃವನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯಜಯ ಕರುಣಾ
ಬ್ಧೇ ಶ್ರೀ ಮಹಾದೇವ ಶಂಭೋ ||

[ ಹೇ ಪರಶಿವನೇ, ನಮ್ಮ ದೇಹ,ವಚನ,ಮನಸ್ಸು.ಇವುಗಳ ಕರ್ಮಗಳಿಂದಲೂ, ಕೇಳುವುದು-ನೋಡುವುದು ಮೊದಲಾದ ಪಂಚೇಂದ್ರಿಯಗಳಿಂದ ಎಸಗುವ ಕರ್ಮಗಳಿಂದಲೂ ದೋಷಪೂರಿತರಾಗುವ ನಮಗೆ ಯಾವುದು ಹಿತ-ಯಾವುದು ಅಹಿತ, ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು ಇದರಬಗೆಗೆ ಗೊತ್ತಿರದೇ, ನಮ್ಮ ಅಜ್ಞಾನದಿಂದ ಎಸಗುವ ಸಮಸ್ತದೋಷಗಳನ್ನು ದೂರಮಾಡಿ ನಮ್ಮನ್ನೆಲ್ಲ ಕ್ಷಮಿಸಿ ರಕ್ಷಿಸು, ಅಸತ್ಯದಿಂದ ಸತ್ಯದೆಡೆಗೆ,ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನಮಾರ್ಗದೆಡೆಗೆ ಕರೆದೊಯ್ಯು ಎನ್ನುವುದು ಇದರಲ್ಲಿ ಅಡಗಿದ ತಾತ್ಪರ್ಯ ]

|| ಹರನಮಃ ಪಾರ್ವತೀಪತಯೇ ಹರ ಹರ ಮಹಾದೇವ ||

Wednesday, February 10, 2010

ಆಂಜನೇಯ 'ಮಲಬಾರ' ದವನನ್ನು ಅಟ್ಟಿಸಿ ಸೋತ ಕಥೆ !



ಆಂಜನೇಯ 'ಮಲಬಾರ' ದವನನ್ನು ಅಟ್ಟಿಸಿ ಸೋತ ಕಥೆ !

ರಾಮಾಯಣ ಕಾಲದ ಒಂದು ಶುಭ್ರ ಮುಂಜಾವು, ಎಲೆಗಳಮೇಲೆ ಮಂಜಿನ ಹನಿ ಬಿದ್ದು ಪಳ ಪಳಿಸುತ್ತಿರುವ ತಣ್ಣನೆಯ ವಾತಾವರಣ, ಕೋಗಿಲೆ-ಕಾಜಾಣಗಳು ಗಿಡಮರಗಲ್ಲಿ ಅವಿತು ಅಲ್ಲೇ ಅಘೋಷಿತ ಸ್ಪರ್ಧೆಯಿಂದ ತಮ್ಮ ಗಾಯನ ಕಚೇರಿಗಳನ್ನು ಸಾರ್ವಜನಿಕ ಹಿತಾಸಕ್ತಿಗೆ ಸಮರ್ಪಿಸುವ ವೇಳೆ, ಗೋವುಗಳು ಎದ್ದು ಮೇವುಕೊಡಿ ಎಂಬರ್ಥದಲ್ಲಿ 'ಅಂಬಾ' ಎನ್ನುತ್ತಿರುವ ಸಮಯ, ಹೆಂಗಳೆಯರು ತಮ್ಮ ಮನೆವಾರ್ತೆ ಕೆಲಸಗಳನ್ನು ಪ್ರಾರಂಭಿಸಿ ಮುಂದುವರೆಸಿದ ಕಾಲ, ಪರಿಜನರು-ಪುರಜನರು ಶೌಚ-ಸ್ನಾನಾದಿ ನಿತ್ಯ ನೈಮಿತ್ತಿಕ ಕೆಲಸಗಳನ್ನು ಪೂರೈಸಿ ದೇವರ ಪೂಜೆಯಲ್ಲಿತೊಡಗಿರುವ ಸಮಯ, ಶ್ರೀರಾಮಾದಿ ರಾಜ-ಸಂಸ್ಥಾನಿಕರು ತಮ್ಮ ಪ್ರಾತರ್ವಿಧಿಗಳನ್ನು ಪೂರೈಸಿ ಇನ್ನೇನು ಮುಗಿಸುವ ಕಾಲ ಎಲ್ಲೋ ಒಂದು ಭಯದ ಕೂಗು ಶ್ರೀರಾಮನಿಗೆ ಕೇಳಿಬರುತ್ತದೆ,

" ರಾಮಾ ರಕ್ಷಿಸು, ರಾಮಾ ರಕ್ಷಿಸು "

ಶ್ರೀರಾಮ ತಮಗೆಲ್ಲಾ ತಿಳಿದಿರುವಂತೆ ತನ್ನ ಬದುಕಿನ ಆದರ್ಶದಿಂದ ಮನೆಮಾತಾಗಿದ್ದ ವ್ಯಕ್ತಿ, ಪ್ರಜೆಗಳ ಸುಖದಲ್ಲೇ ವೈಯಕ್ತಿಕ
ದುಃಖವನ್ನು ಮರೆತ ವ್ಯಕ್ತಿ, ಏಕಪತ್ನೀ ವೃತಸ್ಥನಾಗಿ, ತುಂಬಾ ಘನತೆ-ಗಾಂಭೀರ್ಯದಿಂದ,ಸರಳ-ಸಜ್ಜನಿಕೆಯಿಂದ ಹುಣ್ಣಿಮೆಯಚಂದ್ರನೋಪಾದಿಯಲ್ಲಿ ಕಂಗೊಳಿಸಿದ ವ್ಯಕ್ತಿ. ಯಾರಿಗೆ ಶ್ರೀರಾಮ ಗೊತ್ತಿಲ್ಲ ? [except today's little kids who are not much fortunate to learn these world epics from their parents due to overcrowded work commitment & unhealthy 'homework' -'percentage','engineering & medical seat concept' right at the junior age of 5years!] ಬಹುಶಃ ಇಂಥವರಿಗಾದರೂ ಅರ್ಜೆಂಟಿಗೆ ಇರಲಿ ಅಂತ ನಮ್ಮ ಪೂರ್ವಜರು ರಾಮಾಯಣವನ್ನು ಒಂದೇ ಶ್ಲೋಕದಲ್ಲಿ ನೆನಪುಮಾಡಿಕೊಳ್ಳಲು ಅನುವುಮಾಡಿಕೊಟ್ಟರು-

ಪೂರ್ವಂ ರಾಮ ತಪೋವನಾದಿ ಗಮನಂ
ಹತ್ವಾ ಮೃಗಂ ಕಾಂಚನಂ |
ವೈದೇಹಿ ಹರಣಂ ಜಟಾಯು ಮರಣಂ
ಸುಗ್ರೀವ ಸಂಭಾಷಣಂ|
ವಾಲೀ ನಿಗ್ರಹಣಂ ಸಮುದ್ರ ತರಣಂ
ಲಂಕಾಪುರೀ ದಾಹನಂ |
ಪಶ್ಚಾದ್ರಾವಣ ಕುಂಭಕರ್ಣ ಹನನಂ
ಏತದ್ಧಿ ರಾಮಾಯಣಮ್ ||

ಎಷ್ಟು ಸುಲಾಲಿತವಾಗಿದೆ ನೋಡಿ, ಬರೇ ನಾಲ್ಕು ಸಾಲುಗಳಲ್ಲಿ ಇಡೀ ರಾಮಾಯಣವನ್ನೇ ಬರೆದಿದ್ದಾರೆ! ಎಂತಹ ದೂರದರ್ಶಿತ್ವನಮ್ಮ ಪೂರ್ವಜರದು! ರಾಮಾಯಣ ಕಾಲ ಹಾಗಿತ್ತು, ನಮ್ಮ ವಿಜಯನಗರಕ್ಕಿಂತ ಅದ್ಬುತವಾಗಿತ್ತು. ಹೆಸರಿಗೆ ಕೂಡ ನಾವೆನ್ನುವುದು 'ರಾಮರಾಜ್ಯ' ಅಂತಲ್ಲವೇ ? ಪ್ರಜೆಗಳು ಸತ್ಪ್ರಜೆಗಳಾಗಿದ್ದರು! ಆಗಲೇ 'ಯಥಾ ರಾಜಾ ತಥಾ ಪ್ರಜಾ' ಎಂಬ ಮಾತು ಹುಟ್ಟಿದ್ದು! ಕೋಸಲ ದೇಶ ಸಮೃದ್ಧವಾಗಿತ್ತು. ಹಾದಿ ಬೀದಿಗಳಲ್ಲಿ ಮುತ್ತು-ರತ್ನ ವಜ್ರ-ವೈಡೂರ್ಯಗಳನ್ನು ರಾಶಿಹಾಕಿ ಮಾರುತ್ತಿದ್ದರು. ಮನೆಗಳಿಗೆ ಬೀಗಮುದ್ರೆ ಇರಲಿಲ್ಲ, ಕಳ್ಳರೇ ಇರದ ಕಾಲವದು. [ಇವತ್ತಿನ 'ಸಂಪಂಗಿ' ಥರದ ರಾಜಕಾರಣಿಗಳ ಕಾಲವಲ್ಲ,ಇವತ್ತು ಶಾಸಕರೇ ಕಳ್ಳರು !ಕಳ್ಳತನಮಾಡಿ ಸಿಕ್ಕಿಬಿದ್ದಾಗ ಎದೆನೋವು ಎಂದು 'ನಾಟಕಮಾಡಿ' ಆಸ್ಪತ್ರೆಸೇರಿ ಒಳಗಡೆಯಿಂದ ಕೇಸು ಖಲಾಸುಮಾಡಿಸುವುದು-ಖುಲಾಸೆ ಮಾಡಿಸುವುದು ಇವತ್ತಿನ ಅದ್ಬುತ ರಾಜಕೀಯ 'ಕಲೆ'! ಹೆಂಡವೇ ಅಮೃತ! ಇದು ಕಲಿಗಾಲ ] ಬೇಕಾದಷ್ಟು ಹಾಲು-ಹೈನ
ಪದಾರ್ಥಗಳಿದ್ದವು, ಬೇಕಷ್ಟು ದವಸ-ಧಾನ್ಯಾದಿಗಳಿದ್ದವು. ಪ್ರಜೆಗಳಿಗೆ ಅಂದಿನಕಾಲಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳು ಲಭ್ಯವಿದ್ದವು! ಪ್ರಜೆಗಳು ಉಂಡುಟ್ಟು ಸುಖವಾಗಿದ್ದರು,ತೃಪ್ತಿಯಿಂದಿದ್ದರು. ಪ್ರಜೆಗಳು ನೇರವಾಗಿ ಶ್ರೀರಾಮನಲ್ಲಿ ತಮ್ಮ ತೊಂದರೆಗಳಿದ್ದರೆ ಹೇಳಿಕೊಳ್ಳುತ್ತಿದ್ದರು, ಅವೆಲ್ಲ ಅತಿ ಶೀಘ್ರದಲ್ಲಿ ಬಗೆಹರಿಸಲ್ಪಡುತ್ತಿದ್ದವು. ಶ್ರೀರಾಮ ಪಶು-ಪಕ್ಷಿಗಳಿಂದಲೂ ಅವುಗಳ ಅಹವಾಲು ಆಲಿಸುತ್ತಿದ್ದನೆಂಬ ಒಂದು ಪ್ರತೀತಿ ಇದೆ.

ಇಂತಹ ರಾಮರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಯಾಕೀ ಆರ್ತನಾದ ?ಶ್ರೀರಾಮನಿಗೆ ಎಷ್ಟೋ ದೂರದಲ್ಲಿ ಹೊರಡಿಸಿದ ಈ ಕೂಗು ಕೇಳಿತೆಂದರೆ ನಿಮಗೆ ಅರ್ಥವಾಗಬೇಕು ! [ ಇವತ್ತು ವಿಧಾನಸೌಧದ ಎದುರುಗಡೆ ಕುಳಿತು ಕೂಗಿದರೂ ಕೇಳುವುದಿಲ್ಲ, ಇವತ್ತಿನ ಪ್ರಜೆಗಳೂ ಅಂದಿನಂತಿಲ್ಲ, ಬೆಂಕಿಪೊಟ್ಟಣದಲ್ಲಿ ಸರಿಯಾಗಿ 50 ಕಡ್ಡಿ ಇಲ್ಲದಿದ್ದರೂ ಧರಣಿಕೂರುವ ತರಗತಿ ಇವತ್ತಿನ ಪ್ರಜೆಗಳದ್ದು!] ರಾಮಚಂದ್ರ ಕಕ್ಕಾಬಿಕ್ಕಿಯಾದ ! ಹುಡುಕಲು ಅನುವಾದ. ಹೊರಟೇಬಿಟ್ಟ. ರಾಜಧಾನಿಯಿಂದ ಹೊರಗೆ ಬಂದ. ದೂರದಲ್ಲಿ ಒಂದು ಬಯಲು ಪ್ರದೇಶ....ಓ ...ಅಗೋ ......
ಅಲ್ಲಿ ಯಾರೋ ಕಾಣುತ್ತಿದ್ದಾರೆ.....ನಮ್ಮ ಹನುಮನಲ್ಲವೇ ? ಹೌದು ರಾಮನಿಗೆ ಅರ್ಥವಾಯಿತು!

ಹನುಮ ಯಾರನ್ನೋ ಗೋಳುಹುಯ್ದುಕೊಳ್ಳುತ್ತಿದ್ದ! ಯಾಕೆ? ಏನಾಯ್ತು ?

ಶ್ರೀರಾಮ ತಡಮಾಡಲಿಲ್ಲ, ನಡೆದೇ ನಡೆದ. ನಡೆದು ಆ ಸ್ಥಳಕ್ಕೆ ಬಂದ. ಬಂದು ವಿಚಾರಿಸಿದ. ಅರ್ಧ ಕುಳಿತ ಸ್ಥಿತಿಯಲ್ಲಿರುವ , ಕೂಗುತ್ತಿರುವ ಆ ವ್ಯಕ್ತಿಯನ್ನು ಉದ್ದೇಶಿಸಿ ಕೇಳಿದ --" ಯಾಕಪ್ಪಾ, ಏನು ತೊಂದರೆ ?"

" ಸ್ವಾಮೀ ಹನುಮನಿಂದ ಕಾಪಾಡಿ "

" ಯಾಕೋ ಹನುಮ ಅವನಿಗೆ ಹೊಡೆಯುತ್ತಿದ್ದೀಯಲ್ಲ? "

" ಸ್ವಾಮೀ ರಾಮಚಂದ್ರ, ಈತ ಮಲಶೋಧನೆಗೆ ಕುಳಿತಿದ್ದಾನೆ ! ಇಂತಹ ಅಸಹ್ಯಸ್ಥಿತಿಯಲ್ಲಿರುವಾಗ ನಿನ್ನ ನಾಮವನ್ನು ಜಪಿಸಿದ್ದಾನೆ, 'ರಾಮಾ ರಾಮಾ' ಎನ್ನುತ್ತಿದ್ದಾನೆ ,ಹೀಗಾಗಿ ಓಡಾಡುತ್ತ ಈಕಡೆ ಬಂದಿದ್ದ ನನಗೆ ಇದನ್ನು ನೋಡಿ ಸಹಿಸಲಾಗಲಿಲ್ಲ, ಎಲಾ ಮೈಲಿಗೆಯವನೆ ಈ ಸ್ಥಿತಿಯಲ್ಲಿ ನನ್ನ ರಾಮನನ್ನು ಜಪಿಸುವುದೇ ಎಂದುಕೊಂಡು ಒಂದು ಬಿಟ್ಟಿದ್ದೇನೆ "

" ಹನುಮಾ, ಈತ ತುಂಬಾ ಹತ್ತಿರದವನಪ್ಪಾ , ಮಲಬದ್ಧತೆಯಾಗಿ ಮೂರುದಿನಗಳ ಕಾಲ ಮಲವಿಸರ್ಜನೆ ಮಾಡಲಾಗಿರದ ಕಾರಣ ಇಂದು ಅಂತೂ ಇಂತೂ ಮಲವಿಸರ್ಜನೆಯಾಗಿ, ಅದರಿಂದ ಸ್ವಲ್ಪ ದೇಹ ಬಾಧೆ ಕಮ್ಮಿಯಾಗಿ, ಹಿತವಾಗಿ 'ರಾಮಾ ರಾಮಾ' ಎಂದು ನೆನಪುಮಾಡಿಕೊಂಡಿದ್ದಾನೆ, ಇದು ತಪ್ಪಲ್ಲವಪ್ಪಾ. ಇದು ನನಗೆ ಒಪ್ಪೇ, ಒಳ್ಳೆಯ ಭಾವನೆಯಿಂದ ಯಾರೇ ಎಲ್ಲೇ ಎಷ್ಟು ಹೊತ್ತಿಗೇ ನನ್ನನ್ನು ನೆನೆದರೂ ಅದು ನನಗೆ ನಾಟುತ್ತದೆ, ಹೀಗಾಗಿ ಈತನನ್ನು ಬಿಟ್ಟುಬಿಡು "

" ಸ್ವಾಮೀ ತಪ್ಪಾಯ್ತು, ನಾನೇ ಒಬ್ಬ ದೊಡ್ಡ ಭಕ್ತ ಅಂತ ತಿಳಿದುಕೊಂಡಿದ್ದೆ, ನನಗಿಂತಲೂ ಇಂತಹ ಕಷ್ಟದಲ್ಲಿ ಜಪಿಸಿದವರು ಹೆಚ್ಚು ಅಂತ ಮಾರ್ಗದರ್ಶನ ಮಾಡಿದೆಯಲ್ಲ ಸ್ವಾಮೀ, ಅರ್ಥವಾಯ್ತು, ಯಾವುದು ಇದುವರೆಗೆ ಅರ್ಥವಾಗಿರಲಿಲ್ಲವೋ ಈಗ ಅದು ಅರ್ಥವಾಯ್ತು, ಈತನನ್ನು ಬಿಟ್ಟಿದ್ದೇನೆ ಸ್ವಾಮೀ, ಮನ್ನಿಸು "

ನಿಮಗೂ ಈಗ ಅರ್ಥವಾಗಿರಬೇಕಲ್ಲ ? ಅಲ್ಲವೇ ? ಹೀಗೇ ಯಾವುದೇ ಸ್ಥಿತಿಯಲ್ಲಿ ನಾವಿದ್ದರೂ ಒಳ್ಳೆಯ ಸ್ಮರಣೆ, ಒಳ್ಳೆಯ ಜಪ,ನಾಮ ಜಪ ಇವಕ್ಕೆಲ್ಲ ಕಾಲ ದೇಶಗಳನ್ನು ಆತುಕೊಳ್ಳದೇ ಸಮಯವಾದಾಗ ಮಾಡಿಬಿಡಬೇಕು. ಅದರಿಂದ ಒಳಿತೇ ಹೊರತು ಕೆಡುಕಿಲ್ಲ !

ಮಂಗಲಂ ಕೌಸಲೇಂದ್ರಾಮಹನೀಯ ಗುಣಾತ್ಮನೆ|
ಚಕ್ರವರ್ತಿ ತನೂಜಾಯ ಸಾರ್ವಭೌಮಾಯ ಮಂಗಲಂ ||

Tuesday, February 9, 2010

ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ...



ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ...

ಮಾನವ ಮೆದುಳು ಅತೀ ಅದ್ಬುತ ! ಅದ್ಬುತ ಶಕ್ತಿಯನ್ನೂ ಪಡೆದಿದೆ. ವಿಪರ್ಯಾಸವೆಂದರೆ ನಮ್ಮಲ್ಲಿ ಅನೇಕರು ಅದರ ಪೂರ್ತಿ ಉಪಯೋಗ ಪಡೆಯುತ್ತಿಲ್ಲ! ಬಹಳಸಲ ಮೆದುಳು ಆಲಸ್ಯದ ದಾಸನಾಗಿಬಿಡುತ್ತದೆ. ಇಂತಹಮೆದುಳಿಗೆ ನಾವು ಯಾವ ರೀತಿ ಬೋಧಿಸುತ್ತೇವೋ ಆರೀತಿಯಲ್ಲಿ ಅದು ಕೆಲಸ ನಿರ್ವಹಿಸುತ್ತದೆ!

ರಾಮಾಯಣದಲ್ಲಿ ಹನುಮಂತನಿಗೆ ಸಮುದ್ರವನ್ನು ಕಳೆದು ಹಾರುವ ತಾಕತ್ತು ಇದೆಯೆಂದು ಆತನ ಸುಪ್ತಮನಕ್ಕೆ ಗೊತ್ತಿದ್ದರೂ ಅಂಗದ, ಜಾಂಬವ ಮೊದಲಾದ ಕಪಿವೀರರು ಆಂಜನೇಯನಿಗೆ ಆತನ ಶಕ್ತಿಯನ್ನು ಮನವರಿಕೆ ಮಾಡಿಕೊಟ್ಟು ಹುರಿದುಂಬಿಸಿದಾಗಲೇ ಆತ ಹಾರಲು ಮನಮಾಡುತ್ತಾನೆ;ಹಾರಿ ವಿಜಯಿಯಾಗಿ ಲಂಕೆಯನ್ನು ಸೇರುತ್ತಾನೆ !


ಹಲವು ದಿನಗಳಿಂದ ತಾವು ಶಹರಗಳಲ್ಲಿ ಕೇಳುತ್ತಿರುವ ಒಂದು ಶಬ್ಧ ’ವಕ್ತಿತ್ವ ವಿಕಸನ’ ಅಥವಾ ಹೀಗೆಂದ ಕೂಡಲೇ ಅನೇಕರು ಹೆಳುವುದು-" ನಾನು ಚೆನ್ನಾಗೇ ಇದ್ದೇನಲ್ಲ,ನನಗ್ಯಾಕೆ ವ್ಯಕ್ತಿತ್ವ ವಿಕಾಸದ ಕಲಿಕೆ ? " ಇಲ್ಲಿ ತಾವು ಆಸದ, ವ್ಯಕ್ತಿತ್ವ ಅನ್ನುವುದನ್ನು ಮೊದಲು ಅರ್ಥ ಮಾಡಿಕೊಂಡರೆ ವ್ಯಕ್ತಿತ್ವ ವಿಕಸನ ಆಗಿದೆಯೋ ಇಲ್ಲವೋ ಎನ್ನುವುದು ಗೋಚರಿಸುತ್ತದೆ.

ಕೆಲವರನ್ನು ಕಂಡಾಗ ಮತ್ತೆ ಮತ್ತೆ ಅವರನ್ನು ಒಮ್ಮೆ ನೋಡೋಣ ಅನಿಸುತ್ತದೆ, ತಿರುತಿರುಗಿ ನೋಡುತ್ತೇವೆ! ಕೆಲವರನ್ನು ಕಂಡರೆ ಮತ್ತೆ ನೋಡುವುದೇ ಬೇಡ ಎನ್ನಿಸುತ್ತದೆ, ತಪ್ಪಿಸಿಕೊಂಡು ಓಡುತ್ತೇವೆ! ಕೆಲವರನ್ನು ಕಂಡರೆ ಅವರ ಕೂಡ ಮಾತಾಡಲು ತುಂಬಾ ಇಷ್ಟವಾಗುತ್ತದೆ ! ಇನ್ನು ಕೆಲವರ ಕೂಡ ಮಾತನಾಡಲು ಕಷ್ಟವಾಗುತ್ತದೆ ! ಕೆಲವರು ಏನಾದರೂ ತಿಳಿಸಿಕೊಟ್ಟರೆ ಇನ್ನೂ ಕಲಿಯೋಣ ಅನಿಸುತ್ತದೆ. ಮತ್ತೆ ಕೆಲವರ ಕಲಿಸುವಿಕೆ ಇದ್ದ ದಿನ ನಾವು ಸಿನಿಮಾಗೋ ಪಾರ್ಕಿಗೋ ಹೋಗಿ ತಲೆಮರೆಸಿಕೊಳ್ಳುತ್ತೇವೆ-ತೆನ್ನಾಲಿ ರಾಮಕೃಷ್ಣನ 'ಹಾಲನ್ನು ಕಂಡರೆ ಓಡುವ ಬೆಕ್ಕಿನ' ಥರ ಆಗಿಬಿಡುತ್ತೇವೆ! ಕೆಲವರ ಬರುವಿಕೆಗಾಗಿ ಗಂಟೆಗಟ್ಟಲೆ ಕಾಯಲು ರೆಡಿ, ಇನ್ನು ಕೆಲವರು ಬರುತ್ತಾರೆಂದರೆ 'ಬಂತು ಶನಿ' ಎಂದುಕೊಳ್ಳುತ್ತ ಹುಟ್ಟಿದ ತಪ್ಪಿಗೆ ಅನುಭವಿಸಲೇ ಬೇಕು ಅಂಬ ಅನುಭಾವವನ್ನು ತಾಳುತ್ತೇವೆ. ಕೆಲವರ ನೃತ್ಯವನ್ನು ಸಾವಿರ ಕಿಲೋ ಮೀಟರ್ ದೂರವಾದರೂ ಕ್ರಮಿಸಿ ನೋಡುತ್ತೇವೆ, ಇನ್ನು ಕೆಲವರು ಪಕ್ಕದ ರಂಗಮಂದಿರದಲ್ಲೇ ನೃತ್ಯಮಾಡುತ್ತಿದ್ದರೂ ಚಾದರ ಎಳೆದುಕೊಂಡು ಮಲಗಿಬಿಡುತ್ತೇವೆ! ಕೆಲವರ ಹಾಡು ಬೆಳತನಕ ಹಾಡಿದರೂ ಕಮ್ಮಿ, ಇನ್ನು ಕೆಲವರದು ಕೇಳುವಾಗ 'ಯಾಕಪ್ಪಾ ಈ ಶಿಕ್ಷೆ ಸ್ವಾಮೀ ?' ! ಯಾಕೆ ? ಏನಾಯ್ತು ? ಇದಕ್ಕೆಲ್ಲ ಕಾರಣ ಅವರ ವ್ಯಕ್ತಿತ್ವ ಅವರು ರೂಪಿಸಿಕೊಂಡ ಬಗೆ!

ಕಿಲೋ ಮೀಟರ್ ದೂರ ಕೇಳುವಷ್ಟು ಅಸಹ್ಯವಾಗಿ ನಗುವವರು, ಹಂದಿ ಹೂಂಕರಿಸಿದಂತೆ ನಗುವವರು, ದೊಡ್ಡದಾಗಿ ವಿಚಿತ್ರವಾಗಿ ಸೀನುವವರು, ಅತಿ ಭಯಂಕರವಾಗಿ ಕೂಗುವವರು, ಊಟಮಾಡುವಾಗ 'ಪಚ ಪಚ ಪಚ ಪಚ' ಥರದ ಶಬ್ಧ ಮಾಡುವವರು,ಮೂಗಿನ ಹೊಳ್ಳೆಯಲ್ಲಿ ಆಗಾಗ ಬೆರಳಾಡಿಸಿ 'ಕಿಟ್ಟ' ತೋಡುವವರು, ಕಿವಿಯಲ್ಲಿ ಬೆಂಕಿಕಡ್ಡಿ ಅಥವಾ ಏನಾದರೂ ಕಡ್ಡಿ ಹಾಕಿ ತಿರುಗಿಸಿ ತಲೆಯನ್ನು ನಾಯಿ ಅಲ್ಲಾಡಿಸಿದಂತೆ ಅಲ್ಲಾಡಿಸುವವರು, ಮುಖ ನೋಡಿ ಮಾತಾಡದವರು, ಮುಖವನ್ನೇ ಅತಿಯಾಗಿ ನೋಡುತ್ತಾ ಮಾತಾಡುವವರು, ಆಗಾಗ ಭುಜಗಳನ್ನು ಕುಣಿಸುವವರು, ಸುಮ್ಮನೇ ತಲೆಕೆರೆದುಕೊಳ್ಳುವವರು, ಜಗತ್ತನ್ನೇ ಜಯಿಸಿದ ಪರಾಕ್ರಮಿಯ ಥರ ಕೂರುವವರು, ಏನನ್ನೋ ಕಳೆದುಕೊಂಡ ಹಾಗೇ ಯಾತನೆ ಪಡುವವರು, ಮುಖ ಗಂಟಿಕ್ಕಿಕೊಂಡೆ ಇರುವವರು, ಊಟಮಾಡಿದ ತಾಟಿನಲ್ಲೇ ಕೈತೊಳೆಯುವವರು, ಪಕ್ಕದಲ್ಲೇ ಉಗುಳುತ್ತ ನಿಲ್ಲುವವರು, ಕೆಲಸಮಾಡುವಾಗ ತಲೆತುಂಬ ಬೇರೆ ಏನೋ ಆಲೋಚನೆಗೀಡಾಗುವವರು, "ಸರ್ ಸ್ವಲ್ಪ ಪೆನ್ ಕೊಡಿ", "ಸರ್ ಸ್ವಲ್ಪ ಪೇಪರ್ ಕೊಡಿ " ,"ಸರ್ ಗಂಟೆ ಎಷ್ಟು?" ಎನ್ನುತ್ತಾ ಪರಾವಲಂಬಿಯಾಗುವವರು, ಜೀನ್ಸ್ ಪ್ಯಾಂಟ್ ಮತ್ತು ಟೀ ಶರ್ಟ್ ಹಾಕಿಕೊಂಡು ಸಂದರ್ಶನಕ್ಕೆ[official interview] ಬರುವವರು, ಬರ್ಮುಡಾ ಹಾಕಿಕೊಂಡು ಬ್ಯಾಂಕ್ ಗೆ ಬರುವವರು, ಕಣ್ಣಲ್ಲೇ ಕೊಂದುಬಿಡುವಂಥವರು, ಕಣ್ಣಲ್ಲೇ ಪ್ರೇಮ ಕವಿತೆ ಹಾಡುವವರು --ಅಬ್ಬಾ ಒಂದೇ ಎರಡೇ ? ಎಷ್ಟು ಅದ್ಬುತವೀ ಲೋಕ ! ಕೇವಲ ನಮ್ಮ ಕಣ್ಣಲ್ಲೇ 256 ಬೇರೆ ಥರದ ಸಂದೇಶ ಕೊಡಬಹುದು ಅಂದರೆ ನಂಬುತ್ತೀರಾ ? ಹಾಗಾದರೆ ಇದನ್ನೆಲ್ಲಾ ತಿಳಿಸಿಕೊಡುವ ಶಾಸ್ತ್ರ 'ವ್ಯಕ್ತಿತ್ವ ವಿಕಸನ ' [personality development]

[ ಕಂತಿನ ರೂಪದಲ್ಲಿ ತಮಗೆ ಸಾಧ್ಯವಾದಾಗ ವ್ಯಕ್ತಿತ್ವ ವಿಕಸನದ ಬಗೆಗೆ ಬರೆಯುತ್ತೇನೆ ]


ವ್ಯಕ್ತಿತ್ವ ಎಂದರೇನು ?
ನೋಡಲು ತುಂಬಾ ಎತ್ತರ ಇರುವ ವ್ಯಕ್ತಿ ಬಹಳ ವಿಕಸಿತ ವ್ಯಕ್ತಿಯೇ ? ಅಥವಾ ವ್ಯಕ್ತಿ ಸುಂದರನಾ/ಳಾಗಿದ್ದರೆ ಮಾತ್ರ ವ್ಯಕ್ತಿತ್ವ ಚೆನ್ನಾಗಿದೆ ಎನ್ನುತ್ತಾರೆಯೇ ? ನಿಜವಾಗಿ ಹೇಳುವುದಾದರೆ ನಮ್ಮ ಶರೀರವನ್ನು ನೋಡಿ ಚಂದ,ದಪ್ಪ ಹೀಗೆಲ್ಲ ಇದ್ದರೆಮಾತ್ರ ಬಹಳ ಒಳ್ಳೆಯ ವ್ಯಕ್ತಿ ಅಂತ ಅನ್ನುವುದಿಲ್ಲ. ಶರೀರ ವ್ಯಕ್ತಿತ್ವದ ಒಂದು ಭಾಗ ಅಷ್ಟೇ.

ನಮ್ಮ ಗುಣಸ್ವಭಾವಗಳು, ನಮ್ಮ ನಡವಳಿಕೆಗಳು ಪ್ರತಿಯೊಬ್ಬರಲ್ಲೂ ಭಿನ್ನ ಭಿನ್ನವಾಗಿರುತ್ತವೆ. ಇಂತಹ ಭಿನ್ನ ಭಿನ್ನ ಗುಣಸ್ವಭಾವಗಳಿಂದ, ನಡವಳಿಕೆಗಳಿಂದ ನಮ್ಮ ಶರೀರವೂ ಅದಕ್ಕೆ ತಕ್ಕುದಾಗಿ ವರ್ತಿಸುತ್ತದೆ. ಉದಾಹರಣೆಗೆ- ವಿಜಯೀ ವ್ಯಕ್ತಿಯೊಬ್ಬನ ಮುಖದಲ್ಲಿ ವಿಜಯದ ಲಕ್ಷಣ, ವಿಜಯದ ಹೆಮ್ಮೆಯ ಮುಗುಳ್ನಗೆ ಇರುತ್ತದೆ. ಒಟ್ಟಾರ‍ೆ ನಮ್ಮ ಗುಣಸ್ವಭಾವಗಳು, ನಮ್ಮ ನಡವಳಿಕೆಗಳು ಹಾಗೂ ನಮ್ಮ ಶಾರೀರಿಕ ಮುದ್ರೆಗಳು ಒಟ್ಟಾಗಿ ನಮ್ಮನ್ನು ಬೇರೆಯವರಿಂದ ವಿಭಿನ್ನವಾಗಿ ತೋರುವಂತೆ ಮಾಡುತ್ತವೆ-ಇದನ್ನು ನಾವು ವ್ಯಕ್ತಿಯ ವ್ಯಕ್ತಿತ್ವ ಎನ್ನುವುದು.

ಹೇಗೆ ನಮಗೆ ಬಟ್ಟೆ, ತಿಂಡಿ ಮುಂತಾದವುಗಳಲ್ಲಿ ನಮಗೆ ಇದು ಬೇಕು ಇದು ಬೇಡ ಎಂದು ಆಯ್ದುಕೊಳ್ಳುತ್ತೇವೋ ಹಾಗೆಯೇ ನಾವು ಯಾವಥರದ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂಬುದು ನಮ್ಮ ಆಯ್ಕೆಗೆ ಒಳಪಡುತ್ತದೆ. ಕೇವಲ ಕೆಲವೇ ಪರಿಣಿತ ತರಬೇತುದಾರರ ಮುಖಾಂತರ ಇಂತಹ ವ್ಯಕ್ತಿತ್ವದ ಬಗೆಗಿನ ಆಯ್ಕೆಯನ್ನು ಪಡೆದುಕೊಳ್ಳುವುದು ಸಾಧ್ಯ.

ವ್ಯಕ್ತಿತ್ವ ವಿಕಸನದ ತರಬೇತಿಗೆ ತರಬೇತುದಾರರು ತಮ್ಮ ಅನುಭವದ ಮೂಸೆಯಿಂದ ಹೊರತೆಗೆದ ಅನೇಕ ಪರೀಕ್ಷೆಗಳನ್ನು ಮಾಡುತ್ತಾರೆ. ಅವುಗಳಿಂದ ಆ ಪರೀಕ್ಷೆಗೊಳಗಾದ ವ್ಯಕ್ತಿ ಯಾವ ತರಗತಿಯವನು/ಯವಳು ಎಂಬುದು ತರಬೇತುದಾರರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಸಮಯಮಿತಿ ಪ್ರಯೋಗದ ಒಂದೆರಡು ಉದಾಹರಣೆ ಕೊಡುತ್ತೇನೆ --

ಇಂಕ್ ಬ್ಲಾಟ್ ಟೆಸ್ಟ್ [ಶಾಯಿ ಮೆತ್ತುವ ಪರೀಕ್ಷೆ]

ಇದರಲ್ಲಿ ಸ್ವಲ್ಪ ಶಾಯಿಯನ್ನು ಒಂದು ಹಾಳೆಯಮೇಲೆ ಚೆಲ್ಲಿ ಅದನ್ನು ಮಡಚಲಾಗುತ್ತದೆ. ಹಾಳೆಯನ್ನು ಪುನಃ ಬಿಡಿಸಿದಾಗ ಅದು ವಿಧವಿಧದ ಚಿತ್ತಾರ ಮೂಡಿಸಿರುತ್ತದೆ, ಮತ್ತೆ ಮತ್ತೆ ಈ ಥರ ಮಾಡಿದಾಗ ವ್ಯಕ್ತಿಯು ಇಷ್ಟಪಡುವ ಯಾವುದೋ ನೋಟ ಅಥವಾ ಚಿತ್ರ ತರಬೇತುದಾರರಿಗೆ ತಿಳಿಯುತ್ತದೆ.

ಬಿಲ್ಡಿಂಗ್ ಬ್ರಿಕ್ಸ್ [ಮರದ ತುಂಡು ಚೌಕಗಳನ್ನು ಜೋಡಿಸುವುದು]

ವ್ಯಕ್ತಿಯ ಮುಂದೆ ಒದಷ್ಟು ಚೌಕಾಕಾರದ ಮರದ ತುಂಡುಗಳನ್ನು ರಾಶಿಹಾಕಲಾಗುತ್ತದೆ. ನಂತರ ವ್ಯಕ್ತಿಯ ಕಣ್ಣನ್ನು ಬಟ್ಟೆಯಿಂದ ಕಟ್ಟಲಾಗುತ್ತದೆ. ವ್ಯಕ್ತಿ ಆ ತುಂಡುಗಳನ್ನು ಒಂದರಮೇಲೊಂದರಂತೆ ಬೀಳದಂತೆ ಜೋಡಿಸಬೇಕು. ಕಡಿಮೆ ಸಮಯದಲ್ಲಿ ಆತ ಅದನ್ನು ಬೀಳಿಸದೇ ಎಷ್ಟು ಹೆಚ್ಚು ಎತ್ತರಕ್ಕೆ ಜೋಡಿಸುತ್ತಾನೆ ಎಂಬುದರ ಮೇಲೆ ವ್ಯಕ್ತಿಯ ಗುರಿಸಾಧಿಸುವ ಕಲೆಯನ್ನು ಗುರುತಿಸಲಾಗುತ್ತದೆ.


ಮೆಮೊರಿ ಪವರ್ ಟೆಸ್ಟ್ [ಜ್ಞಾಪಕ ಶಕ್ತಿ ಪರೀಕ್ಷೆ ]

ವ್ಯಕ್ತಿಯ ಎದುರುಗಡೆ ವಿವಿಧ ಉತ್ಪನ್ನಗಳನ್ನು/ಪದಾರ್ಥ/ವಸ್ತುಗಳನ್ನು ಇಟ್ಟು ನೋಡಲು ಹೇಳಿ, ನಂತರ ಕಣ್ಣನ್ನು ಬಟ್ಟೆಯಿಂದ ಕಟ್ಟಿ ನೋಡಿದ ಒಂದೊಂದನ್ನೂ ಹೆಸರಿಸಲು ಹೇಳುವುದು.ಕೊಟ್ಟ ಸಮಯದಲ್ಲಿ ಆತ ಎಷ್ಟು ಹೆಚ್ಚು ಸರಿಯಾದ ಹೆಸರುಗಳನ್ನು ಹೇಳುತ್ತಾನೆ/ಳೆ ಎಂದು ನೋಡುವುದು. ಇದರಿಂದ ವ್ಯಕ್ತಿಯ ಜ್ಞಾಪಕಶಕ್ತಿಯ ಬಗೆಗೆ ತಿಳಿಯುತ್ತದೆ.


ಗುರಿ ತಲುಪುವುದು ಎಲ್ಲರ ಮನಸ್ಸಿನ ಗುರಿ ! ಗುರಿಯೇ ಇಲ್ಲದಿದ್ದರೆ ಎಲ್ಲಿಗೆ ತಲಪುವುದು ಗುರಿ ? ಒಂದು ಮರದ ಮೇಲೆ ತುಂಬಾಚೆನ್ನಾಗಿರುವ ಮಾವಿನ ಹಣ್ಣು ಕಾಣುತ್ತಿದೆ, ಕಲ್ಲು ಹೊಡೆಯುತ್ತೇವೆ, ಆಯ್ತು , ಕೂಡ ಆಯ್ತು, ೧೦ ನೇ ಕಲ್ಲೂ ಹೊಡೆದಾಯ್ತು. ಆದರೆ ಹಣ್ಣು ಬೀಳುತ್ತಿಲ್ಲ ! ಸ್ವಾಮೀ ತಪ್ಪು ಕಲ್ಲಿನದ್ದೂ ಅಲ್ಲ, ಮರದ್ದೂ ಅಲ್ಲ; ಅದು ನಿಮ್ಮ ಮನಸ್ಸಿನದು! ಒಂದು ಆಳವಾದಕಾಲುವೆಯನ್ನು ಜಿಗಿದು ದಾಟಬೇಕು, ಕೆಲವರು ಸಲೀಸಾಗಿ ಹಾರಿ ದಾಟಿಬಿಡುತ್ತಾರೆ, ಇನ್ನು ಕೆಲವರು ಅನುಮಾನಿಸುತ್ತ ದಾಟಲು-ಜಿಗಿಯಲು ಬರುತ್ತಾರೆ, ಇಂಥವರು ಕಾಲುವೆಯಲ್ಲಿ ಬಿದ್ದೇಹೋಗುತ್ತಾರೆ ! ಕೆಲವರು ದಾಟುವುದೇ ಇಲ್ಲ ಅವರು ಇದ್ದಲ್ಲೇ ನಿಂತು ಏನೂಮಾಡಲಾಗದೆ ಇರುತ್ತಾರೆ, ಅಂಥವರನ್ನು 'ಪುಕ್ಕು' ಅಥವಾ 'ಪೊಕ್ಕು' ಎನ್ನಬಹುದು.

||ಸಂಶಯಾತ್ಮಾ ವಿನಶ್ಯತಿ||

ಸಂಶಯ ನಮ್ಮ ಮೇಲೆ ನಮ್ಮ ಹತೋಟಿ ಇರದ ಸ್ಥಿತಿಗೆ ನಮ್ಮನ್ನು ತಲ್ಪಿಸಿಬಿಡುತ್ತದೆ! ಸಂಶಯ ಹಲವು ಸಂದೇಹಗಳನ್ನೂ ಸೃಷ್ಟಿಸಿ ಜಗಳಗಳು-ದೊಂಬಿಗಳಿಗೆ ಕಾರಣವಾಗುತ್ತದೆ. ಅದಕ್ಕೇ ಸಂಸ್ಕೃತದಲ್ಲಿ ಸಂಶಯ ಇರುವವರು ನಶಿಸಿಹೋಗುತ್ತಾರೆ ಎಂಬ ಉಲ್ಲೇಖಇದೆ.

ಗುರಿ ಸಾಧಿಸಲು ಪಕ್ವವಾದ ಮನಸ್ಸು ಬೇಕು, ಏಕಾಗ್ರತೆ ಬೇಕು, ತಾದಾತ್ಮ್ಯತೆ ಬೇಕು, ಸರಿಯಾದ ಗುರಿ ಇರಬೇಕು, ಸರಿಯಾದ ತತ್ವ ಸಿದ್ಧಾಂತ ಬೇಕು, ಸಮಯದ ಪರಿಜ್ಞಾನ ಇರಬೇಕು, ಕಷ್ಟಪಟ್ಟು ದುಡಿಯುವ ಹಂಬಲ ಇರಬೇಕು, 'ಮಾಡಬೇಕು' ಎಂಬಹಸಿವಿರಬೇಕು, 'ಸಾಧಿಸುತ್ತೇನೆ ' ಎಂಬ ಅಚಲ ವಿಶ್ವಾಸವಿರಬೇಕು.....ಹೀಗೆ ಹಲವು ಅಂಶಗಳನ್ನು ನೆನಪಿನಲ್ಲಿಟ್ಟು ಅಳವಡಿಸಿಕೊಳ್ಳಬೇಕಾಗುತ್ತದೆ.

ಮಹಾಭಾರತದಲ್ಲಿ ದ್ರೋಣ ಮತ್ತು ಅರ್ಜುನರ ಕಥೆ ಕೇಳುತ್ತೇವೆ,ಬಿಲ್ಲು ವಿದ್ಯೆಯನ್ನು ಕಲಿಸುತ್ತಾ ದ್ರೋಣರು ಮರದಮೇಲೆ ಹಕ್ಕಿಯ ಪ್ರತಿರೂಪವೊಂದನ್ನು ಇಟ್ಟು, ಅದರ ಕಣ್ಣಿಗೆ ಗುರಿಯಿಟ್ಟು ಬಾಣ ಹೊಡೆಯಿರಿ ಎಂಬ ಒಂದು ಪರೀಕ್ಷೆಯನ್ನು ಎಲ್ಲರಿಗೂ ಕೊಡಲಾಗಿ, ಮಿಕ್ಕೆಲ್ಲ ಕೂಡ ಮರದಮೇಲೆ ಏನಿದೆಯೆಂದು ಕೇಳಿದಾಗ ಅವರೆಲ್ಲ 'ಹಕ್ಕಿ ಕಾಣುತ್ತಿದೆ' ಎನ್ನುತ್ತಾರೆ. ಆದರೆ ಅರ್ಜುನ ' ಹಕ್ಕಿಯ ಕಣ್ಣು ಮಾತ್ರ ಕಾಣುತ್ತಿದೆ ಗುರುಗಳೇ,ಅದೊಂದನ್ನು ಬಿಟ್ಟು ಇನ್ನೇನೂ ಕಾಣುತ್ತಿಲ್ಲ' ಎನ್ನುತ್ತಾನೆ! ಅಷ್ಟೇಅಲ್ಲ ಗುರಿಹಿಡಿದು ಗುರಿತಲುಪಿಬಿಡುತ್ತಾನೆ;ಜಯಸಾಧಿಸುತ್ತಾನೆ.

[ಮುಂದಿನ ದಿನಗಳಲ್ಲಿ ನೋಡೋಣ .......]

Monday, February 8, 2010

'ಕೊಡುವುದೇನು ಕೊಂಬುದೇನು ಸ್ನೇಹ ಪ್ರೀತಿ ಒಲವು .......'



'ಕೊಡುವುದೇನು ಕೊಂಬುದೇನು ಸ್ನೇಹ ಪ್ರೀತಿ ಒಲವು'.......
ಬಾಲ್ಯ

ಸ್ನೇಹಿತರೇ, ನಿಮಗಿದೊ ಮೊದಲಾಗಿ ವಂದನೆ. ನಾವು ಪ್ರಾಥಮಿಕ ಶಾಲೆಯಲ್ಲಿರುವಾಗ ನಮಗೆ ಪಠ್ಯದಲ್ಲಿರದಿದ್ದರೂ ಒಂದು ಪದ್ಯವನ್ನು ಸದಾ ಹಾಡುತ್ತಿದ್ದೆವು. ನಿಂತುಕೊಂಡು ಹಿಂದೆ-ಮುಂದೆ ವಾಲುತ್ತ ನಮ್ಮದೇ ಆದ ಒಂದು ’ಸಾತ್ವಿಕ’ರಾಗದಲ್ಲಿ, ಯಾರಿಗಾದರೂ ’ಪಾಪ’ ಎನ್ನಿಸುವ ರಾಗದಲ್ಲಿ ಹಾಡುತ್ತಿದ್ದೆವು.ಆ ಹಾಡು ’ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲು ತಂಪಿನಲಿ ತಂಗಿರುವೆನು ...’ ಇದರ ಅರ್ಥ ಅಷ್ಟಾಗಿ ನೆಟ್ಟಗೆ ಆಗದಿದ್ದರೂ ಏನೋ ಗೆಳೆತನದ ಬಗ್ಗೆ, ಸ್ನೇಹದ ಬಗ್ಗೆ ಎಂಬುದಷ್ಟೇ ಗೊತ್ತಿತ್ತು. ನಾವು ೭ನೇ ತರಗತಿ ಮುಗಿಸುವಾಗ ಒಂದುದಿನ ’ಬೀಳ್ಕೊಡುವ ಸಮಾರಂಭ’, ಎಲ್ಲಾ ವರ್ಗದ ಶಿಕ್ಷಕರು,ವಿದ್ಯಾರ್ಥಿ-ವಿದ್ಯಾರ್ಥಿನಿಯರು,ಸಹಪಾಠಿಗಳು ಎಲ್ಲರೂ ಸೇರಿದ್ದರು. ಊರ ಪ್ರಮುಖರೂ ಒಂದಿಬ್ಬರು ಬಂದಿದ್ದರು. ಹೀಗೇ ಅದೂ ಇದೂ ಭಾಷಣ, ಭಾವಗೀತೆ,ಭಕ್ತಿಗೀತೆ ಇದೆಲ್ಲ ಮುಗೀತು. ಎಲ್ಲರನ್ನೂ ರಂಜಿಸಿದ ನನಗೆ ಅಲ್ಲೀವರೆಗೂ ತಡೆದುಕೊಂಡಿದ್ದ ಗಂಗೆ ಧಾರಾಕಾರವಾಗಿ ಹರಿದೇಬಿಟ್ಟಳು! ಬಹುಶಃ ಅವತ್ತಿನಿಂದ ನಾನು ಭಾವುಕನಾದೆನೋ ಅನ್ನಿಸುತ್ತಿದೆ. ನಾವು ಸ್ನೇಹಿತರಲ್ಲಿ ವಿಭಜನೆಯಾಗಿ ಯಾರ್ಯಾರೋ ಯಾವ ಯಾವುದೋ ಪ್ರೌಢಶಾಲೆಗೆ ಸೇರಿದೆವು. ನಿಜವಾಗಿ ಹೇಳುತ್ತೇನೆ ಕೇಳಿ-ನಂತರ ಕೆಲವರ ಭೇಟಿ ಮತ್ತೆ ಆಗಲೇ ಇಲ್ಲ. ಮತ್ತೆ ಮೂರು ವರ್ಷ ಪ್ರೌಢಶಾಲೆ-ಅಲ್ಲೂ ಹಾಗೇ, ಮೂರು ವರ್ಷ ಮುಗಿದಮೇಲೆ ನಮ್ಮ ಗೆಳೆತನದ ಪಾಡು ಬೇಕೆ?

ಭಾರತ

ಎಂದಿದ್ದರೂ ಬಾಲ್ಯದ ಗೆಳೆಯರನ್ನು ಯಾರೂ ಮರೆಯಲಾಗುವುದಿಲ್ಲ! ಮಹಾಭಾರತದಲ್ಲಿ ಶ್ರೀಕೃಷ್ಣ-ಸುಧಾಮರ ಕಥೆಯನ್ನು ನಾವು ಕೇಳುತ್ತೇವೆ. ಅಪರೂಪಕ್ಕೆ ಎಷ್ಟೋ ವರ್ಷಗಳ ನಂತರ ಬಂದ ಬಾಲ್ಯಸ್ನೇಹಿತ ಸುಧಾಮನನ್ನು ಬಾಗಿಲಭಟರು ಒಳಗಡೆ ಬಿಡುವುದಿಲ್ಲ, ಸುದ್ದಿ ಹೇಗೋ ತಿಳಿದುಕೊಂಡ ಶ್ರೀಕೃಷ್ಣ ಹೆಬ್ಬಾಗಿಲಿಗೇ ಓಡಿಬರುತ್ತಾನೆ,ತಪ್ಪನ್ನು ಕ್ಷಮಿಸುವಂತೆ ಬೇಡುತ್ತಾನೆ. ಬಂದ ಕುಚೇಲನನ್ನು ವಾದ್ಯ-ವೇದಘೋಷಗಳ ಸಹಿತ ಒಳಬರಮಾಡಿಕೊಂಡು, ನವರತ್ನಖಚಿತ ಸಿಂಹಾಸನದಲ್ಲಿ ಕುಳ್ಳಿರಿಸಿ, ಸಪತ್ನೀಕನಾಗಿ ಶ್ರೀಕೃಷ್ಣ ಬಂಗಾರದ ಹರಿವಾಣದಲ್ಲಿ, ಬಂಗಾರದ ಕಲಶದಿಂದ ನೀರೆರೆದು, ಗಂಧ-ಚಂದನಹಚ್ಚಿ, ಹಾರ-ಹೂವುಗಳಿಂದ ಪಾದಪೂಜೆ ಮಾಡುತ್ತಾನೆ! ಕಸ್ತೂರಿ ತಿಲಕವನ್ನಿತ್ತು ಮಂಗಳಾರತಿ ಬೆಳಗುತ್ತಾನೆ! ಸುಧಾಮ ಬಡತನದಲ್ಲಿ ಬೇಡಿತಂದಿದ್ದ,
ಹರಿದ ಬಟ್ಟೆಯ ತುಂಡಿನಲ್ಲಿ ಕಟ್ಟಿಕೊಂಡುಬಂದಿದ್ದ ಅವಲಕ್ಕಿಯನ್ನು ಅಂಜುತ್ತಲೇ ಕೊಟ್ಟಾಗ ಬಾಯಿಚಪ್ಪರಿಸಿ ತಿನ್ನುತ್ತಾನೆ ಶ್ರೀಕೃಷ್ಣ! ಎಂಥ ಉತ್ಕಟ ಸಂಸ್ಕೃತಿ ನಮ್ಮ ಭಾರತದ ನೆಲದ್ದು ! ಇಂದಿಗೂ ಅದಕ್ಕೇ ಲಕ್ಷ್ಮೀ ಪೂಜೆಯಲ್ಲಿ ಅದೇ ಅವಲಕ್ಕಿಗೇ ಶ್ರೇಷ್ಠ ಸ್ಥಾನ! ಹೆಂಗರುಳು ಹೊಂದಿರುವ ಯಾರೇ ಆದರೂ ಇವರೀರ್ವರ ಭೇಟಿಯನ್ನು ದೃಶ್ಯಮಾಧ್ಯಮದಲ್ಲಿ ನೋಡಿದರೆ ಒಂದಿನಿತಾದರೂ ಆನಂದಭಾಷ್ಪದೊಂದಿಗೆ ದುಃಖದ ಕಣ್ಣೀರು ಸುರಿಸಲಾರದೆ ಇರರು.

ಕೌಮಾರ್ಯ

ಹೀಗೇ ನಾನು ನನ್ನ ವಿದ್ಯೆ-ವೃತ್ತಿಗಾಗಿ ಅನೇಕ ಪ್ರದೇಶಗಳಲ್ಲಿ ಸಂಚರಿಸಿದಾಗ ಬಹಳಥರದಲ್ಲಿ ನನಗೆ ಬೇರೆ ಬೇರೆ ಗೆಳೆಯರು-ಸ್ನೇಹಿತರು ಸಿಕ್ಕರು, ಮತ್ತೆ ಕಳೆದುಕೊಂಡೆವು --ಇದು ನನ್ನ ಸ್ನೇಹಿತರೊಬ್ಬರು ಬರೆದಂತೆ ಕಳೆದು ಕೂಡಿ ಕಟ್ಟುವ ಲೆಕ್ಕಾಚಾರದ ಹಂದರವಾಗಿಬಿಟ್ಟಿತ್ತು. ಬದುಕಿನಲ್ಲಿ ಒಳ್ಳೆಯ ಸ್ನೇಹಿತರು ಇರಬೇಕು. ಅನುವು-ಆಪತ್ತಿನಲ್ಲಿ ಅಣ್ಣ-ತಮ್ಮ,ಅಕ್ಕ-ತಂಗಿಯ ಥರ ಜೊತೆಯಾಗಿ ಸಂಬಾಳಿಸುವ ಸ್ನೇಹಿತರಿರಬೇಕು. ಅಂತಹ ಸ್ನೇಹಿತರಿದ್ದಾಗ ಯಾರನ್ನೂ ಒಂಟಿತನ ಕಾಡುವುದಿಲ್ಲ. ಇತ್ತೀಚೆಗೆ ಸಿನಿಮಾರಂಗದಲ್ಲಿ ನಟ ಅಂಬರೀಷ್ ತಮ್ಮ ಗೆಳೆಯ ಡಾ|ವಿಷ್ಣುವರ್ಧನ್ ರನ್ನು ಕಳೆದುಕೊಂಡಾಗ ಅತ್ತರು,ಅಷ್ಟು ಘಾಟಿ ಎನಿಸಿಕೊಂಡ ಮನುಷ್ಯ ಯಾಕೆ ಅತ್ತರು ? ಅದು ಸ್ನೇಹದ ಕೈವಾಡ!

ಅದಕ್ಕೆಂತಲೇ ನಮ್ಮ ತಿಮ್ಮಗುರು ಅಂತಾರೆ -

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ
ಜನರೆಲ್ಲರಾ ಗುಡಿಯ ಕೆಲಸದಾಳುಗಳು
ಮನೆಯೇನು ಮಠವೇನು ಹೊಲವೇನು ನೆಲವೇನು
ಎಣಿಸಲ್ಲವದೆಯದನು | ಮಂಕುತಿಮ್ಮ

ಧ್ಯಾತ್ಮ

ಈ ಜೀವನ ಯಾರಿಗೆ ಎಷ್ಟು ದಿನ-ಯಾವ ರೀತಿ, ಏನು ವೃತ್ತಿ ಏನೊಂದೂ ನಮ್ಮ ಎಣಿಕೆಗೆ ಸಿಗದ ವಿರೋಧಾಭಾಸವಾಗುವ ಅನೇಕ ಸನ್ನಿವೇಶಗಳು ನಡೆಯುತ್ತವೆ. ನಾನೇ ವೃತ್ತಿಯಿಂದ ಮಾನವ ಸಂಪನ್ಮೂಲದ ಬಗ್ಗೆ ತರಬೇತಿ ನಡೆಸುತ್ತೇನೆ, ಆದರೆ ತರಬೇತಿ ಏನೇ ನಡೆಸಿದರೂ ಯಾರ್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದು ನಡೆಯಲೇಬೇಕೆಂಬುದು ಸೃಷ್ಟಿ ನಿಯಮ! ಅದಕ್ಕೇ 'ಪದವೀಂ ಪೂರ್ವ ಪುಣ್ಯಾನಾಂ ..' ಎನ್ನುತ್ತಾರೆ ಪ್ರಾಜ್ಞರು. ಅಂತೆಯೇ

||ಜಾತಸ್ಯ ಮರಣಂ ಧ್ರುವಂ||

ಎಂದಿದ್ದಾರೆ ಸಂಸ್ಕೃತದಲ್ಲಿ ಅಂದರೆ ಹುಟ್ಟಿದ ಯಾವುದೇ ಪಶು-ಪಕ್ಷಿ,ಪ್ರಾಣಿ ಅಥವಾ ಜೀವಿ ತನ್ನ ಕಾಲಸನ್ನಿಹಿತವದಾಗ ಕಾಲವಾಗಲೇಬೇಕು. ಅದರಲ್ಲಂತೂ ಮನುಷ್ಯನಲ್ಲಿ ಅಷ್ಟಚಕ್ರಗಳೊಂದಿಗೆ ’ಸುಷುಮ್ನಾ’ ಎಂಬ ನಾಡಿಯೊಂದಿರುತ್ತದೆ,ಇದು live recording setup ಅಥವಾ black box ,ಮಾಡಿದ ಪ್ರತಿಯೊಂದು ಕರ್ಮ ಇದರಲ್ಲಿ save ಆಗಿರುತ್ತದೆ. ಈ ನಾಡಿ ಜಾಗೃತವಾಗುವುದು ಮನುಷ್ಯನ ಆಯುಷ್ಯಮುಗಿಯುತ್ತಾ ಬರುವ ಗಳಿಗೆಯಲ್ಲಿ. ಅದು ಪ್ರತಿಫಲಿಸಿ ತನ್ನ ವರದಿಯನ್ನು ನಮ್ಮಲ್ಲಿರುವ ’ಆತ್ಮ’ವೆಂಬ ಸುಪ್ತಚೇತನಕ್ಕೆ ರವಾನಿಸುತ್ತದೆ. ಈ ಪ್ರಕ್ರಿಯೆ ಮುಗಿದ ಹಂತದಲ್ಲಿ ಒಟ್ಟಾರೆ ಮನುಜನ ಆತ್ಮ ದೇಹ ತೊರೆಯುತ್ತದೆ. ನೀವು ನಿಮಗೆ ಕೇಳಿಕೊಳ್ಳಿ-’ನಾನು ಯಾರು?’ ಅಂಥವರ ಮಗ/ಮಗಳು ಇದೆಲ್ಲ ಸಾಮಾನ್ಯದ ಉತ್ತರ, ನನಗೆ ಅದು ಬೇಕಾಗಿಲ್ಲ, ನನ್ನೊಳಗಿನ ’ನಾನು’ ಯಾರು? ಎಲ್ಲಿಂದ ಬಂದೆ, ಎಲ್ಲಿಗೆ ಪಯಣ, ಏನು ಉದ್ದೇಶ -ಒಂದೂ ಅರ್ಥವಿಲ್ಲ! ಗೊತ್ತಾಗುವುದೂ ಇಲ್ಲ. ಇದನ್ನು ಅರಿತರೆ ನಮ್ಮ ದ್ವೇಷ,ಅಸೂಯೆ..ಮುಂತಾದ ಎಲ್ಲ ಗುಣಗಳು ಹೋಗಿಬಿಡುತ್ತವಲ್ಲವೇ ? ಇದೇ ಸಂದರ್ಭ ಹೇಳಿಬಿಡುತ್ತೇನೆ -ನಮ್ಮ ಚರ್ಮದಲ್ಲಿ 7 ಪದರಗಳಿವೆ ಎಂಬುದನ್ನು ವೇದ ಅದು ಹುಟ್ಟಿದಾಗಲೇ ಸಾರಿದೆ,ಆದರೆ ನಮ್ಮ ವಿಜ್ಞಾನಿಗಳು ಕಳೆದವರ್ಷವಷ್ಟೇ ಇದನ್ನು ಒಪ್ಪಿಕೊಂಡಿದ್ದಾರೆ ! ಅದಕ್ಕೇ ವಿಜ್ಞಾನವನ್ನು 're-search' ಎನ್ನುವುದು, ಒಮ್ಮೆ ಮಹಾನ್ ದಾರ್ಶನಿಕರು, ಋಷಿಮುನಿಗಳು ಕಂಡು ಹಿಡಿದು ಹೇಳಿದ್ದನ್ನು ಮೊಲಕ್ಕೆ ಮೂರೇಕಾಲು ಎಂಬ ರೀತಿ 'ಸುಳ್ಳು' ಎಂದು ವಾದಿಸಿ, ಯಾವುದೋ ಗಳಿಗೆಯಲ್ಲಿ ತಮಗೆ ಅದರ ಶೋಧ ಆದಾಗ ಮತ್ತೆ ಮೊಲಕ್ಕೆ ನಾಲ್ಕು ಕಾಲು ಇದೆ, ಅದು ವೇಗದಲ್ಲಿ ಹಾರುವಾಗ ತಮಗೆ ಕಂಡಿರಲಿಲ್ಲ ಎಂಬರೀತಿಯಲ್ಲಿ 'ಸತ್ಯ' ವನ್ನು silent ಆಗಿ ಒಪ್ಪಿಕೊಳ್ಳುವುದು!

ದೇವರು ಎರಡು ಬಾರಿ ನಗುವುದನ್ನು ತಮಾಷೆಯಾಗಿ ನಾವು ಕೇಳಿದ್ದರೂ ಅದು ಸತ್ಯದ ಮಾತೇ ಸರಿ. ಒಮ್ಮೆ ವೈದ್ಯರು ಇನ್ನೇನು ಜೀವಹೋಯಿತು ಎನ್ನುವ ವ್ಯಕ್ತಿಯನ್ನು ಬದುಕಿಸುತ್ತೇನೆಂದಾಗ, ಇನ್ನೊಮ್ಮೆ ಅಣ್ಣ-ತಮ್ಮಂದಿರು ಜಮೀನನ್ನು[ಭೂಮಿಯನ್ನು]ತನ್ನದು, ತನ್ನದು ಎಂದು ಅಳೆಯುವಾಗ -ಈ ಎರಡುಬಾರಿ ದೇವರು ನಗುತ್ತಾನಂತೆ ! ಇರುವಾಗ ಎಲ್ಲವುದೂ ಬೇಕು, ಹೋಗುವಾಗ ಯಾವುದು ಬೇಕು? ಯಾವುದು ನಮ್ಮ ಜೊತೆ ಬರುವಂಥದು, ಅಸಲಿಗೆ ನಮಗೆ ನಾವ್ಯಾರೆಂಬುದೇ ಗೊತ್ತಿಲ್ಲ, ತಲೆ-ಬುಡ ಗೊತ್ತಿಲ್ಲ ಇನ್ನ್ಯಾರು ನಮ್ಮ ಹಿಂಬಾಲಕರು? ಬರುತ್ತದೆ ---ಅದೇ ನಮ್ಮ ಕರ್ಮ ! ನಾವು ಮಾಡಿದ ಕರ್ಮ ನಮ್ಮ ಜೊತೆಗೇ ಬರುತ್ತದೆ. ಇದು ನನ್ನ ಮಾತಲ್ಲ, ಭಗವಂತ ಗೀತೆಯಲ್ಲಿ ಹೇಳಿದ್ದು! ಋಷಿಮುನಿಗಳು ತಮ್ಮ ಜ್ಞಾನಚಕ್ಷುವಿನಿಂದ ನೋಡಿದ್ದು,ಬರೆದಿದ್ದು!

ಬಾಲ್ಯದ ಹರಹು

ನಾನು ಚಿಕ್ಕವನಿರುವಾಗ ಹೀಗೊಮ್ಮೆ ಒಂದು ಊರಲ್ಲಿ ನಮ್ಮ ನೆಂಟರೊಬ್ಬರು ಒಂದು ಪ್ರೌಢ ಶಾಲೆಯ ಅಧ್ಯಕ್ಷರಾಗಿದ್ದರು.ಅವರು ಸಂದರ್ಶನವೊಂದರಲ್ಲಿ ಒಬ್ಬ ಶಿಕ್ಷಕಜಾಗದ ಅಭ್ಯರ್ಥಿಯ ಕೂಡ ಒಂದು ಹಾಡನ್ನು ಹಾಡಿಸಿದರು. " ಅಗಣಿತ ತಾರಾಗಣಗಳ ನಡುವೆ ನಿನ್ನನೇ ಮೆಚ್ಚಿಹೆ ನಾನು...." ದಿ|ಕುವೆಂಪು ಅವರು ಬರೆದ ಈ ಭಾವಗೀತೆಯನ್ನು ಆ ಅಭ್ಯರ್ಥಿ ಬಹಳ ಸುಶ್ರಾವ್ಯವಾಗಿ ಹಾಡಿದರು. ಎಳವೆಯಲ್ಲಿ ಕೇಳಿದ ಆ ಹಾಡು ನನ್ನ ಮನಸ್ಸಿಗೆ ತುಂಬಾ ನಾಟಿತ್ತು. ಆ ಹಾಡಿದ ಮೋಡಿಗಾರನ ಮುಖವೇ ಸದಾ ಕಣ್ಣೆದುರು ಬರುತ್ತದೆ. ನನಗೆ ಅವರನ್ನು ನೋಡಿ ತುಂಬ ’ಪಾಪ’ ಅನ್ನಿಸಿಬಿಟ್ಟಿತ್ತು. ಈಗ ಹಾಡಿಸಿದವರು ಕಾಲವಾಗಿ ದಶಕವೇ ಕಳೆಯಿತು, ಹಾಡಿದ ಆ ವ್ಯಕ್ತಿ ಇದ್ದಾರೋ ಇಲ್ಲವೋ ತಿಳಿಯದು. ಹೀಗೆ ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಹಲವಾರು ವೃತ್ತಿಯನ್ನು ಅವಲಂಬಿಸಿ ಏನೆಲ್ಲಾ ಮಾಡಬೇಕಾಗುತ್ತದೆ ಎಂಬುದನ್ನು ನೆನೆಸಿಕೊಂಡಾಗ ನಮ್ಮ ಭಾವನೆಗಳು ಕೆರಳುತ್ತವೆ-ಕೆಲಸಮಾಡುತ್ತವೆ. ಒಳ್ಳೆಯ ಭಾವನೆಗಳನ್ನು ಗೌರವಿಸಿ ಮೆಲುಕು ಹಾಕಿ, ಕೆಟ್ಟವನ್ನು ದೂರಮಾಡಿ ಎಂಬುದು ನನ್ನ ಸಲಹೆ ತಮಗೆ.

ನನ್ನ ಹಾಡುಗಳನ್ನು, ಸಾಹಿತ್ಯವನ್ನೂ ಓದುವಾಗ ನನ್ನ ತಪ್ಪುಗಳನ್ನು ಒಪ್ಪಿದ, ಹರಸಿದ,ಹಾರೈಸಿದ,ತಿದ್ದಿದ ತಮ್ಮೆಲ್ಲರ ಉಪಕಾರ ಸ್ಮರಣೆಗೆ ಈ ಕೆಳಗಿನ ಹಾಡು,ನಿಮ್ಮ ಸ್ನೇಹ ಸಕ್ಕರೆಗಿಂತ ಸಿಹಿ, ಈ ಸ್ನೇಹ-ಪ್ರೇಮ ಸದಾ ಇರಲೆಂಬ ಸದಾಶಯದೊಂದಿಗೆ ನನ್ನೀ ಹಾಡಿನೊಂದಿಗೆ ತಮಗೆಲ್ಲಾ ಸತತ ಋಣಿಯಾಗಿದ್ದೇನೆ.....

ಸ್ನೇಹಾಂತರಂಗ

ಎಲ್ಲಿ ತೆರಳಿದಿರಿ ನನ್ನ ಸ್ನೇಹಿತರೆ
ಮಲ್ಲಿಗೆಯ ನಗೆಯ ಚೆಲ್ಲಿ
ಸಲ್ಲದು ಈ ಪರಿತಾಪ ಬಲ್ಲೆನು ನಿಮ್ಮ ಕೋಪ !

ಗಾಳಿಯ ನರುಗಂಪು ಬಿಸಿಲಿನ ಝಳದಿ
ಹಾಳೆಯಮೇಲ್ ನಾಲ್ಕಕ್ಷರ ಬರೆದೆನು ಭರದಿ

ಲಘು-ಗುರು ಗುಣಿಸುತ ಹಾಡನು ಬರೆದವನಲ್ಲ
ಲಘುವಾಗಿಯೆ ಪರಿಗಣಿಸಿರಿ ನೀವಿದನೆಲ್ಲ !

ಅಗಣಿತ ಶಬ್ಧದ ಸಾಗರ ಈ ಕನ್ನಡ ಮಾತೆ
ಸಗಣಿತ ಸಂಧಿಯ-ಛಂದದ ಭಾಗ್ಯವಿಧಾತೆ

ಅಕ್ಷರದಿಂ ಅಕ್ಷರಕು ಇದೆ ಅಂತರ ಬಹಳ
ಸಾಕ್ಷರವಿರೆ ನುಡಿಸಬಹುದು ಸರಿಗಮ ಸರಳ

ಹಾಗೆ ಹೀಗೆ ಓದಿಕೊಂಡು ಸಾಗಲಿ ನಿಮ್ಮಗಾಡಿ
ಭೋಗದ ಸಿರಿವೈಭೋಗಕೆ ಬರಲದು ಕೃಪೆಮಾಡಿ
------
[ಭೋಗ ಷಟ್ಪದಿಯ ಮೆರವಣಿಗೆಯಲ್ಲಿ ಕುಂಟು ಕುರಿಗಳು: ಇವನ್ನು ಹಾಗೇ ಸುಮ್ಮನೇ ಓದಿಕೊಳ್ಳಿ, ಛಂದಸ್ಸು-ಲಘು-ಗುರು ಮಾತ್ರೆಗಳನ್ನು ಅಳವಡಿಸದೆ ಮೂಲರೂಪದಲ್ಲೇ ಕೊಡುತ್ತಿದ್ದೇನೆ,ಮತ್ತೆ ಸಾಧ್ಯವಾದಾಗ ಇನ್ನಷ್ಟು ಸೇರಿಸಿ, 'ಚೂಡಾಕರ್ಮ' ಪೂರೈಸಿ ನಿಮ್ಮಕೈಗಿಡುತ್ತೇನೆ]

ಗಲ್ಲಿಗಲ್ಲಿಗೊಂದು ಬಾರು
ಇಲ್ಲದಿದ್ರು ತಲೆಗೆ ಸೂರು
ಬಲ್ಲವರೇ ನಡೆಸುತಾರೆ ಬಹಳ ವಿಪ್ಲವ
ಚೆಲ್ಲುಹುಡುಗಿಯರನು ಕಂಡು
ಹಲ್ಲುಕಿರಿದು ಹಾಳುಬಿದ್ದ
ಎಲ್ಲಹುಡುಗ್ರಿಗದುವೆ ಅಡ್ಡೆ ‘ನಡೆಸ್ವರೆಲ್ಲವ’

ಪಡ್ಡೆಹುಡುಗರೆಲ್ಲ ಸೇರಿ
ಬಿಡ್ಡಿನಾಟ ಆಡಿದಣಿದು
ಸಡ್ಡುಹೊಡೆದು ನಿಲ್ಲುತಾರೆ ಖಡ್ಗ ಹಿಡಿಯುತ
ವಡ್ಡತನದ ಹಿರಿಯರೆಲ್ಲ
ಒಡ್ಡಿ ಬೆಂಬಲವನು ಅವರ್ಗೆ
ಖೆಡ್ಡವಾಯ್ತು ರೋಡು ರೋಡು ಬದುಕು ದುಷ್ಕೃತ

ಕಾಸುಕೊಟ್ರೆ ಪೂರ್ವಜನ್ಮ
ಪೋಸು ತೋರ್ವೆನೆಂದು ಹೇಳಿ
ವಾಸುದೇವನಾಣೆಹಿಡಿದು ಬೊಗಳೆ ಬಿಟ್ಟರು
ಬೀಸುತಿರುವ ’ಗಾಳಿಯಲ್ಲಿ’
ಸೋಸಿಕೊಂಡು ’ತಮ್ಮ ಧಾನ್ಯ’
ಲೇಸು ಹರಸುತೇನೆ ಎನುತ ಕಳಿಸಿಕೊಟ್ಟರು

ಸೇವೆಯೆಂಬ ಸೋಗಿನಲ್ಲಿ
ಯಾವರೋಗವೆಂದು ತಿಳಿದು
ತಾವೆ ಟ್ರೀಟುಮಾಡುತೇವೆ ಎನುತಲಿದ್ದರು
ಆವರೋಗವಿಲ್ಲದವನ
ಜಾವತನಕ ಲ್ಯಾಬೊಳಿಟ್ಟು
ನೋವುಮರೆಯಲೊಮ್ಮೆ ದೊಡ್ಡ ಬಿಲ್ಲು ಕೊಟ್ಟರು

ವಿದ್ಯೆಕಲಿಸುತೇವೆ ಎಂದು
ಗದ್ಯಪದ್ಯಕಿಂತ ಮೊದಲು
ಅಧ್ಯಯನಕೆ ರಾಶಿ ಕಂತೆ ಎಣಿಸಿಕೊಂಡರು
ವಾದ್ಯ ನೃತ್ಯ ಗೀತ ಚಿತ್ರ
ಖಾದ್ಯ ಕ್ರೀಡೆ ಟೂರು ಎನುತ
ಸಾಧ್ಯವಾದ ಎಲ್ಲ ರೀತಿ ಸುಲಿದುಬಿಟ್ಟರು

ಅಳೆದು ಸುರಿದು ತೂಗಿ ನೋಡಿ
ಘಳಿಗೆ ಫಲವ ತಿರುಗಿ ನೋಡಿ
ತೊಳೆದು ಪಾದ ಹರುಷದಿಂದ ಮಗಳಕೊಟ್ಟರು
ಕಳೆಯದಿರಲು ಕೆಲವು ವರುಷ
ಅಳಿಯದಿರಲು ನೆನೆಪು ನಿಮಿಷ
ಹಳಿದು ಒಡವೆ ತರಲು ಮನೆಗೆ ಕಳಿಸಿಕೊಟ್ಟರು

ನಿಮ್ಮ ಜೊತೆಗೆ ನಾನು ಸೇರಿ
ಹಮ್ಮು ಬಿಮ್ಮು ಎಲ್ಲ ತೊರೆದು
ಒಮ್ಮೆನಕ್ಕರಾಯ್ತು ಅದುವೆ ಯೋಗರಿಂಗಣ
ಚಿಮ್ಮಿಸಲ್ಕೆ ನಗೆಯ ಬುಗ್ಗೆ
ಹೊಮ್ಮಿಬಂತು ’ಆರುಕಾಲು’
ಹೆಮ್ಮೆಯಂಥದೇನು ಇದುವೆ ಭೋಗರಿಂಗಣ


Sunday, February 7, 2010

ತಾಂಬೂಲಾನಂದ ’ಟಿ.ವಿ.’ ನೋಡಿದ ಕಥೆ !!



ತಾಂಬೂಲಾನಂದ 'ಟಿ.ವಿ.' ನೋಡಿದ ಕಥೆ !

ಸುಮಾರು ೧೯೯೬-೯೭ರ ಸಮಯ. ಗಣಪತಿ, ಶ್ರೀಧರ ಮತ್ತು ಕೃಷ್ಣ ಮೂರು ಮಂದಿ ಬೆಂಗಳೂರಿನಲ್ಲಿ ಬೇರೆ ಬೇರೆ ಜಾಬ್ ಹಿಡಿದು ಎಲ್ಲರೂ ಸೇರಿ ಒಂದು ಸಣ್ಣ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಅಪರೂಪಕ್ಕೊಮ್ಮೆ ಊರಿಂದ ಅವರು ಇವರು ಅಂತ ಯಾರಾದರೂ ಬರುತ್ತಿರುತ್ತಿದ್ದರು. ಬಂದವರು ವಾರಗಟ್ಟಲೆ ಉಳಿಯುತ್ತಿದ್ದರು. ಹೈ ಕೋರ್ಟ್ ಕೆಲಸಕ್ಕೆ ಅಂತ ಬಂದವರು, ದೊಡ್ಡ ಆಸ್ಪತ್ರೆಗೆ ಅಂತ ಬಂದವರು, ಯಾವುದೋ ಸಂದರ್ಶನಕ್ಕೆ ಬಂದವರು, ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಬಂದವರು ಇತ್ಯಾದಿ ಇತ್ಯಾದಿ ಎಲ್ಲರೂ ಬಂದು ಠಿಕಾಣಿ ಹೂಡುತ್ತಿದ್ದರು. ಅದರಲ್ಲಂತೂ ಬ್ಯಾಚುಲರ್ ರೂಮ್ ಅಂದ್ರೆ ಕೆಲವರಿಗೆ ತುಂಬಾ ಒಳ್ಳೇ ಆಸರೆ; ಯಾಕೇಂದ್ರೆ ಹೆಂಗಸರು-ಮಕ್ಕಳು ಇದ್ದ ಮನೆಯಾದರೆ ಅವರ ಸಂಸಾರದ ರಗಳೆಗಳೆಲ್ಲ ಇವರಿಗೂ ಸ್ವಲ್ಪ ತಾಗುತ್ತಿದ್ದವು, ಹೀಗಾಗಿ ಇಂಥವರ ರೂಮ್ ಗೆ ಬರುವುದು ಮಾಮೂಲಿ. ಬರುವಾಗ ರೂಮ್ ನಲ್ಲಿರುವ ಹುಡುಗರಿಗೆ ತಾವು ಖಾಲಿ ಕೈಲಿ ಬರಲಿಲ್ಲ ಎಂದು ತೋರಿಸಲು ಅದೂ ಇದೂ ತಿನ್ನಲು ಮನೆಯಲ್ಲಿ ಮಾಡಿದ ಏನಾದರೂ ಐಟೆಮ್ ಗಳನ್ನು ಚೂರು ಪಾರು ತರುತ್ತಿದ್ದರು!

ಗಣಪತಿಯ ಅಣ್ಣ ರಾಮಚಂದ್ರ ತುಂಬಾ ವಾಚಾಳಿ. ಊರಲ್ಲಿ ಎಲೆಅಡಿಕೆ ಬಾಯಿ ತುಂಬಾ ತುರುಕಿಕೊಂಡು ಅಚೀಚೆ ಜಾರಿ ಬರುವ ಎಂಜಲನ್ನು ಕೈಯ್ಯಿಂದ ಪುಸಕ್ಕನೆ ಒರೆಸಿ ಮಾತಾಡಲಿಕ್ಕೆ ಶುರುವಿಟ್ಟರೆ ಮುಂದಿರುವ ಕವಳ[ತಾಂಬೂಲ ಅಥವಾ ಎಲೆಅಡಿಕೆಯ ಬಟ್ಟಲು] ಬರಿದಾಗುವವರೆಗೂ ವೃತ-ಕಥೆ ಜಾಗರಣೆಯಲ್ಲಿರುತ್ತದೆ ! ಯತಾನ್ ಶಕ್ತಿ ತಾಂಬೂಲವನ್ನು ಮೆದ್ದು ಆನಂದತುಂದಿಲನಾಗುವುದರಿಂದ ಶ್ರೀಯುತರಿಗೆ ಊರಲ್ಲೆಲ್ಲ 'ತಾಂಬೂಲಾನಂದ' ಎಂಬ ’ಬಿರುದು’ ಕೊಟ್ಟಿದ್ದರು! ಕೆಲಸವಿಲ್ಲದವರು ಸಿಕ್ಕಿಬಿಟ್ಟರೆ ಪಟ್ಟಾಂಗ-ಪ್ರಸಂಗಕ್ಕೆ ಕೊನೆ ಎಂಬುದೇ ಇರುತ್ತಿರಲಿಲ್ಲ. ಇದು ಯವುದೇ ಪೇಪರ್ನಲ್ಲಿ ಬರದಿದ್ದರೂ ಸುಮಾರಾಗಿ ಕೇಳಿತಿಳಿದ ಸುತ್ತ ಮುತ್ತಲ ಹಳ್ಳಿಯ ಹತ್ತಾರು ಜನರಿಗೆ, ಅವರಿಂದ ಬಾಯಿಗೆ->ಬಾಯಿಗೆ->ಬಾಯಿಗೆ ಹಬ್ಬಿ ’ಹಬ್ಬ’ವಾಗಿಬಿಟ್ಟಿತ್ತು!

ಇಂತಹ ಪುಣ್ಯಾತ್ಮ ಆಗಾಗ ’ನಮ್ಮನೆ ಬ್ರಾಂಚು’ ’ನಮ್ಮನೆ ಬ್ರಾಂಚು’ ಎನ್ನುತ್ತ ಇಲ್ಲಿ ಬೆಂಗಳೂರಿಗೆ ಬಂದು ಕುಳಿತುಕೊಳ್ಳುವುದಿತ್ತು. ಬರುವಾಗ ಸುಮ್ಮನೆ ಬಂದರಲ್ಲವೋ ? ಕೈಯ್ಯಲ್ಲೊಂದು ಕಪ್ಪು ಬ್ಯಾಗು, ಅದರಲ್ಲಿ ಒಂದು ದೊಡ್ಡ ಕಟ್ಟು ವೀಳ್ಯದೆಲೆ, ಪಲ್ಯಕ್ಕೆ ಬೀನ್ಸ್ ಹೆಚ್ಚಿದ ಥರದ ತಂಬಾಕಿನ ಕಟ್ಟು, ೫೦-೬೦ ಅಡಿಕೆ, ಸುಣ್ಣದ ಕರಡಿಗೆ[ಚಿಕ್ಕ ಬಾಕ್ಸ್] ಇವಿಷ್ಟರ ಜೊತೆಗೆ ನೂರೆಂಟು ಜನರ ದೂರವಾಣಿ ನಂಬರುಗಳಿರುವ ಒಂದು ಚೀಟಿ ಇರುತ್ತಿತ್ತು. ಬಂದಮೇಲೆ ಸಿಕ್ಕ ಎಲ್ಲ ನಂಬರಿಗೂ ಫೋನ್ ಮಾಡಿ ಏನಾದರೂ ಮಾತಾಡುವುದು. ಕೆಲವರು 'ತಾಂಬೂಲ' ಅಂತ ತಿಳಿದರೆ ಸಾಕು ನಂತರ ಒಂದೆರಡು ದಿನ ಕರೆ ಸ್ವೀಕರಿಸುವ ಗೋಜಿಗೇ ಹೋಗುತ್ತಿರಲಿಲ್ಲ! ಒಮ್ಮೊಮ್ಮೆ ಅಂಥವರ ಮನೆಗೆ ಹೋಗಬೇಕು ಇಂಥವರ ಮನಗೆ ಹೋಗಬೇಕು ಕರೆದುಕೊಂಡು ಹೋಗಿ ಅಂತ ಮೂವರಲ್ಲಿ ಒಬ್ಬರನ್ನು ಹಿಡಿದುಕೊಳ್ಳುತ್ತಿದ್ದ. ಹಿಡಿದುಬಿಟ್ಟರೆ ಒಳ್ಳೇ ಹಲಸಿನ ಮೇಣದ ಥರ !

ಬಂದ ಮೇಲೆ ಸುಮ್ಮನೇ ಅಂತ ಇದ್ದರೆ ಅವರು 'ಅವರೇ' ಅಲ್ಲ! ಒಳ್ಳೆ ವಂಡರಗಪ್ಪೆ ಥರ ವಟ ವಟ ವಟ ವಟ ಅಂತ ಒಂದು ನಿಮಿಷವಾದರೂ ಬಾಯಿಮುಚ್ಚದೇ ’ತಮ್ಮತನ’ ಮೆರೆಯುತ್ತಿದ್ದರು. ಹೀಗಾಗಿ ಅಣ್ಣನ ಬರುವಿಕೆಯ ಸುದ್ದಿ ತಿಳಿದಾಗಲೇ ತಮ್ಮ ಗಣಪತಿ ’ಸಣ್ಣ’ಗಾಗಿಬಿಡುತ್ತಿದ್ದ ! ಅವನ ಜೊತೆಗಾರರು ಎಲ್ಲಾದರೂ ಪರಸ್ಪರ ಬೇರೆ ಬೇರೆ ದೋಸ್ತರ ರೂಮ್ ಗಳಿಗೆ ಹೋಗಿರಲು ಪ್ರಯತ್ನಿಸುತ್ತಿದ್ದರು. ಹೇಳಲಾರರು-ಹೇಳದೇ ಇರಲಾರರು ಇದು ಒಂಥರಾ ಬಿಸಿತುಪ್ಪದ ಕಥೆಯ ಥರಾ ಆಗಿಬಿಟ್ಟಿತ್ತು!ಮೊದಲೇ ತಾಂಬೂಲಾನಂದ ಬರುವ ಸೂಟು ಸಿಕ್ಕರೆ ಕೆಲವೊಮ್ಮೆ ತಪ್ಪಿಸಿಕೊಳ್ಳಲು ರಜಗುಜರಾಯಿಸಿ ಬೇರೆಲ್ಲಿಗೋ ಹೋಗಿದ್ದುಬಿಡುತ್ತಿದ್ದರು ಪಾಪ! ಬೆಂಗಳೂರಲ್ಲಿ ಊರಿನ ಥರ ಕವಳ ಉಗಿಯಲು ಕಂಡ ಕಂಡಲ್ಲೆಲ್ಲ ಆಗುವುದೇ ? ಆದರೂ ನಮ್ಮ ತಾಂಬೂಲಾನಂದರು ಶಿಸ್ತಾಗಿ ಪಿಕಿ ಪಿಕಿ ಪ್ಸೊ ಪ್ಸೊ ಪ್ಸೊ ಪಿಚಕ್ ಅಂತ ಟಾಯ್ಲೆಟ್ ತುಂಬೆಲ್ಲ ತರಾವರಿ ರಂಗೋಲಿ ಹಾಕುತ್ತಿದ್ದರು! ನೀರನ್ನು ಹಾಕುವ ಅಭ್ಯಾಸ ಗೊತ್ತೇ ಇರಲಿಲ್ಲ, ಗಣಪತಿ ಹೇಳಲಾರ,ಅಣ್ಣ ಕಲಿಯಲಾರ-ಜೊತೆಗಿದ್ದವರು ತಾಳಲಾರರು ! 'ತಾಂಬೂಲ'ಸವಾರಿ ಬಂತೆಂದರೆ ಸಾಕು ಯಮಯಾತನೆ ಅನುಭವಿಸುತ್ತಿದ್ದರು.

ಹೀಗೇ ಒಂದುದಿನ ತಾಂಬೂಲದ ಸವಾರಿ ಬೆಂಗಳೂರಿಗೆ ಚಿತ್ತೈಸಿತು. ಶ್ರೀಧರ ಅಕೌಂಟಂಟ್ ಆಗಿರುವುದರಿಂದ ಮನೆಯಲ್ಲಿಯೂ ಕೆಲಸವಿರುತ್ತಿತ್ತು. ಅದೂ ಇದೂ ಫೈಲನ್ನು ಮನೆಗೆ ತಂದುಕೊಂಡು ಕೆಲಸ ಮಾಡುತ್ತಿದ್ದ. ಆ ದಿನ ಶ್ರೀಧರ ಸಾಯಂಕಾಲ ಬಂದವನೇ ಇನ್ನೊಂದುಕಡೆಗಿರುವ ಚಿಕ್ಕರೂಮ್ ನಲ್ಲಿ ಕೆಲಸ ಮಾಡುತ್ತ ಕುಳಿತ. ತಾಂಬೂಲದವರ ಕಥೆ ಪ್ರಾರಂಭವಾಗಿತ್ತು. ಶ್ರೀಧರ ಸ್ವಲ್ಪ ತಲೆಬಿಸಿ ಹೋಗಲಿ ಅಂತ ಒಳಗಡೆ ರೂಮಿನ ಬಾಗಿಲನ್ನು ಸ್ವಲ್ಪ ಹಾಕಿದಹಾಗೆ ಮಾಡಿ ಕೆಲಸದಲ್ಲಿ ನಿರತನಾಗಿದ್ದ. ಬೇಸರ ಕಳೆಯಲು ಸಣ್ಣಗೆ ಹಾಡು ಹಾಕಿಕೊಂಡಿದ್ದ. "ಈ ಸಮಯ ಆನಂದಮಯ..." ಸ್ವಲ್ಪ ನಮ್ಮ ತಾಂಬೂಲಕ್ಕೂ ಕೇಳುತ್ತಿತ್ತು. ಬಹಳ ಹೊತ್ತು ತುಂಬ ಕುತೂಹಲ ತಡೆದುಕೊಂಡ ತಾಂಬೂಲದವರು ತಮ್ಮ ಬರುತ್ತಿದ್ದಂತೆ ಕೇಳಿದರು " ಗಣ್ಪತಿ, ಶ್ರೀಧರ ಅದ್ಯಾಕೊ ಒಬ್ನೇ ರೂಮ್ ಹೊಕ್ಕೊಂಡು ಟಿ.ವಿ.ನೋಡ್ತಾ ಇದಾನಲ್ಲ, ನನ್ನ ಕರೀಲೇ ಇಲ್ಲ"

ಗಣಪತಿ ತಲೆಕೆರೆದುಕೊಂಡ ! ರೂಮ್ ನಲ್ಲಿ ಟಿ.ವಿ. ಇರಲೇಇಲ್ಲ, ಮತ್ತೆ ಶ್ರೀಧರ ಒಬ್ನೇ ನೋಡುವುದು ಅಂದರೇನು? ಆದ್ರೂ ಶ್ರೀಧರನ ಹತ್ತಿರ ಕೇಳಲಿಲ್ಲ, ಯಾಕೆಂದ್ರೆ 'ತಾಂಬೂಲ' ಬಂದಾಗ ಅವರೆಲ್ಲ ಮಾತಾಡದೇ ಸುಮ್ಮನಾಗಿಬಿಡುತ್ತಿದ್ದರು. ಹೀಗೇ ದಿನ ಒಂದೆರಡು ಕಳೆಯಿತು. ಗಣಪತಿ ಜಾಣ ಕಿವುಡರ ಥರಾ ಇದ್ದು ಬಿಟ್ಟಿದ್ದ. ಕೊನೆಗೊಮ್ಮೆ ಏನೋ ವಿಚಾರ ನೆನಪುಮಾಡಿಕೊಳ್ಳುವಾಗ ಯಾಕೋ ಡೌಟು ಬಂತು, ಅಣ್ಣನನ್ನು ಕರೆದು ಶ್ರೀಧರ ನೋಡುತ್ತಿದ್ದ ಟಿ.ವಿ. ಎಲ್ಲಿತ್ತು ಅಂತ ತೋರಿಸುವಂತೆ ಕೇಳಿದ. ತಾಂಬೂಲದವರು ಎದ್ದು ಬಂದು ಒಳಗಡೆ ರೂಮ್ ನಲ್ಲಿರುವ
ಟಿ.ವಿ. ಥರ ಕಾಣುವ ಬಾಕ್ಸ್ ತೋರಿಸಿದ! ಅದುವೇ ಶ್ರೀಧರ ಉಪಯೋಗಿಸುತ್ತಿದ್ದ ಕಂಪ್ಯೂಟರ್ ಮಾನಿಟರ್!

Saturday, February 6, 2010

ಜಾಣ ಬಾ ತಡೆದು ಮನೆಗೆ !


ಬೈದುಕೊಳ್ಳಬೇಡಿ ಭಾನುವಾರವೂ ಬಿಡುವುದಿಲ್ಲ ಅಂತ, ನಾನೂ ಅದರ ಬಗ್ಗೇ ತಮ್ಮನ್ನೆಲ್ಲಾ ಸೇರಿಸಿಕೊಂಡು ಒಂದು ಸಣ್ಣ ಹಾಡು ಬರೆದಿದ್ದೇನೆ. ಹಾಡಿಕೊಳ್ಳಲು ಬರುವ, ಮುದನೀಡುವ, ಅಜ್ಞಾಪಿಸುವ,ಪ್ರಶ್ನಿಸುವ ಎಲ್ಲ ಭಾವನೆಗಳನ್ನೂ ನನ್ನಲ್ಲಿ ಭರಪೂರ ತುಂಬಿಕೊಂಡು ನಿಮ್ಮ ಪರವಾಗಿ ವಕೀಲಿ ವೃತ್ತಿ ಮಾಡಿದ್ದೇನೆ ಈ ಹಾಡಿನಲ್ಲಿ ! ನನ್ನೀ ಹಾಡು ತಮ್ಮ ಮನದಲ್ಲಿ ಸದಾ ಭಾನುವಾರದ ಹಾಡಾಗಿ ಗುನುಗುನಿಸಲಿ ಎಂಬುದು ನನ್ನ ಆಶಯ. ಕವಿಗೆ- ಕಲ್ಪನೆಗೆ ಮೊದಲೇ ಹೇಳಿದ ಹಾಗೇ ಹೊತ್ತುಗೊತ್ತು ಇಲ್ಲ. ಇದು ೯:೦೦ ರಿಂದ ೬:೦೦ ರ ಕೆಲಸದ ಅವಧಿಯ ಪರಿಮಿತಿಗೊಳಪಡುವುದಿಲ್ಲ. ಉಪಜೀವನಕ್ಕಾಗಿ ಮನುಷ್ಯ ಏನೆಲ್ಲಾ ಕಸರತ್ತು ಮಾಡುತ್ತಾ ಬಿಡುವಿರದ ದುಡಿಮೆಯಲ್ಲಿ ತೊಡಗಿರುತ್ತಾನೆ. ಬಿಡುವೇ ಇಲ್ಲದ ಅವನಿಗೆ ಎಲ್ಲೋ ಒಂದು ದಿನ ಸ್ವಲ್ಪ ಜಾಸ್ತಿ ಹೊತ್ತು ಮಲಗಿದ್ದು ತಡವಾಗಿ ಎಳೋಣವೆಂದು ಅನಿಸುತ್ತದೆ, ಆದರೆ ಮನೆಯ ಮಿಕ್ಕುಳಿದ ಜನ, ಬಂಧು-ಮಿತ್ರರು ಏನಂದುಕೊಂಡಾರು ಎಂಬ ಸಂಕೋಚ,ನಾಚಿಕೆಯಿಂದ ಬೇಗ ಏಳುವ ಮನಸ್ಸಿಲ್ಲದಿದ್ದರೂ ಅರೆಬರೆ ಮನಸ್ಸಿನಿಂದ ಎದ್ದು ಕೆಲಸಮಾಡಲು ಆರಂಭಿಸುತ್ತಾನೆ. ಅಂತಹ ಮನಸ್ಸು ಸೂರ್ಯನಿಗೇ ತಡವಾಗಿ ಬರುವಂತೆ ಆದೇಶಿಸುವ ಒಂದು ಸನ್ನಿವೇಶದಲ್ಲಿ ಈ ಹಾಡು ರಚಿತವಾಗಿದೆ.

ಜಾಣ ಬಾ ತಡೆದು ಮನೆಗೆ !

ಸೂರ್ಯ ನಿನಗಾಯಿತದೊ ಭಾಳ ಬೇಗನೆ ಬೆಳಗು
ಬಾರದಿರು ಸ್ವಲ್ಪ ತಾಳು
ಇರುಳ ಪರದೆಯ ಸರಿಸಿ ಜಗಕೆ ಬೆಳಕನು ಹರಿಸಿ
ಸಾರದಿರು ದಿನವ ಕೇಳು !

ಬಹಳ ದಿನವಾಯಿತದೊ ನಿನ್ನಲ್ಲಿ ಹೇಳದೆಯೆ
ಮಲಗದೆಯೆ ಬಹಳ ಸಮಯ
ಕಹಳೆಯೂದುವರೆಲ್ಲ ಹೊತ್ತಾರೆ ಏಳದಿರೆ
ಹಲವು ಥರ ನಾಚಿಕೆ ಭಯ !

ಮಂಜಮುಂಜಾನೆಯಲಿ ಗುಂಜಿಸಿದ ದುಂಬಿಗಳ
ಕಂಡಾಯ್ತು ಬಹಳ ಹಿಂದೆ
ಸಂಜೆಗೆಂಪಿನ ನಿನ್ನ ಹಣ್ಣು ಕೆನ್ನೆಯ ನೋಡೆ
ಎಲ್ಲಿಹುದು ಸಮಯ ಮುಂದೆ ?

ಬೆಳಗು ಬೈಗಿನ ಲೆಕ್ಕ ನಮಗಿಹುದೆ ಕೆಲಸದಲಿ?
ಕಳೆಯುವುದು ಬದುಕು ಹೀಗೇ
ಒಳಗೆ ನೆಮ್ಮದಿಯಿಲ್ಲ ಸಾಕಾಯ್ತು ಅಲೆದಲೆದು
ಅನುದಿನವು ಹೊರಗೆ ಹೊರಗೆ

ಭಾನುವಾರದ ಬೆಳಗು ರಜೆಯ ದಿನದಾ ಸೊಬಗು
ಬಗೆಬಗೆಯ ಭಕ್ಷ್ಯಭೋಜ್ಯ
ಸಾನುರಾಗದ ಬಾಳ್ವೆ ಸಂಗೀತ ಸಾಹಿತ್ಯ
ಸಿಗಲುಂಟೆ ಕೆಲವು ಗಳಿಗೆ ?

ನಾವೂ ಮನುಜರು ಕಣಾ ನಾವೇನು ಯಂತ್ರಗಳೆ ?
ಆಣೆ ಮಾಡುವೆನು ನಿನಗೆ
ನೋವು ಕಳೆಯಲು ಹಾಗೆ ಹೊದ್ದು ಮಲಗಲು ಹೀಗೆ
ಜಾಣ ಬಾ ತಡೆದು ಮನೆಗೆ !

Friday, February 5, 2010

ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ.....












ನಿನ್ನ
ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ.....

ನಮ್ಮ ಶರೀರದಲ್ಲಿ ಕಿವಿ,ಮೂಗು,ಕಣ್ಣು, ತಲೆ, ಕೈ,ಕಾಲು ಎಲ್ಲವೂ ಹೇಗೆ ಒಂದೊಂದೂ ತುಂಬಾ ಮುಖ್ಯವೋ ಹಾಗೇಯೇ ಸಾಹಿತ್ಯಾಸಕ್ತರಿಗೆ ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸಿದ, ಜನಸಾಮಾನ್ಯನ ಒಳಿತಿಗಾಗಿ ಮಿಡಿದ ಹೃದಯಗಳನ್ನು ನೆನಪುಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಹೇಗೆ ಒಂದು ಖಾದ್ಯಕ್ಕೆ ಉಪ್ಪು-ಹುಳಿ-ಖಾರ-ಸಿಹಿ ಇವೆಲ್ಲ ತಕ್ಕ ಪ್ರಮಾಣದಲ್ಲಿ ಮಿಳಿತವಾದಾಗ ಅಡುಗೆ ರುಚಿಯಾಗಿರುತ್ತದೋ ನಮ್ಮ ಸಮಾಜ ಕೂಡ ಹಾಗೇ, ಇಲ್ಲಿ ಎಲ್ಲಾ ವೃತ್ತಿಯವರೂ ಬೇಕು. ಆಗ ಸುಖಕರ-ಸ್ವಸ್ಥ ಸಮಾಜದ ಸೃಷ್ಟಿಯಾಗಲು ಸಾಧ್ಯ ಕೆಲವರು ನಮ್ಮ ಮಧ್ಯೆಯೇ ಇದ್ದು ತಮ್ಮ ಕರ್ತವ್ಯ ಪೂರೈಸಿ, ತಮ್ಮ ವೈಯಕ್ತಿಕ ಆಶೋತ್ತರಗಳಿಗೆ ಅಷ್ಟಾಗಿ ಹಂಬಲಿಸದೇ, ಯಾವ ಪ್ರಚಾರವನ್ನೂ ಬಯಸದೇ ಎಲೆ ಮರೆಯ ಕಾಯಿ ಇದ್ದ ಹಾಗೇ ಇದ್ದು ನಿರ್ಗಮಿಸಿ ಬಿಡುತ್ತಾರೆ. ಇಂಥವರಿಗೆ ಗೀತೆಯಲ್ಲಿ ಶ್ರೀಕೃಷ್ಣ 'ಕರ್ಮಯೋಗಿಗಳು' ಅನ್ನುತ್ತಾನೆ. ವ್ಯಕ್ತಿ ಪಡೆದ ಪೂರ್ವಾರ್ಜಿತದ ಪುಣ್ಯದಿಂದ ತಾನು ದೊಡ್ಡ ಸ್ಥಾನ ಅಲಂಕರಿಸಿದಮೇಲೂ 'ದೊಡ್ದವನಾಗುವುದು' ತನ್ನ ವಿದ್ಯಾರ್ಹತೆ,ಸ್ಥಾನಮಾನ ಇವನ್ನೆಲ್ಲ ಮರೆತು 'ಎಲ್ಲರೊಂದಿಗೆ ತನ್ನ ಬದುಕು, ಎಲ್ಲರಂತೆ ತಾನು' ಎಂಬ ಭಾವನೆಯನ್ನು ತಳೆದಾಗ. ತನ್ನಿಂದಾಗಬಹುದಾದ ಒಳಿತನ್ನು ಸಮಾಜಕ್ಕೆ ಮಾಡಿ, ಉಪಕಾರ ಸ್ಮರಣೆಗಾಗಿ,ಪ್ರತಿಫಲಕ್ಕಾಗಿ ಎಂದೂ ಹಂಬಲಿಸದೇ,ಕೊರಗದೇ ಸಮಾಜವೆಂಬ ಆಕಾಶದಲ್ಲಿ ಧ್ರುವತಾರೆಯಾಗುತ್ತಾರೆ! ಕವಿ ತನ್ನ ಕಾವ್ಯದಿಂದ ಕಲ್ಪನಾ ಜಗತ್ತನ್ನು ಕಟ್ಟಿಕೊಟ್ಟರೆ,ಕಲಾವಿದ ಕುಂಚದಿಂದಲೂ, ಸಂಗೀತ ವಿದ್ವಾನ್ ತನ್ನ ಸಂಗೀತದಿಂದಲೂ ಪ್ರೌಢಿಮೆಯನ್ನು ಮೆರೆಯುತ್ತಾರೆ. ಕೆಲವರು ವೇದಿಕೆಯ ಮೇಲೂ, ಇನ್ನು ಕೆಲವರು ನೇಪಥ್ಯದಲ್ಲೂ ಕೆಲಸಮಾಡುತ್ತಾರೆ. ಬಟಾಬಯಲನ್ನೇ ತನ್ನ ವೇದಿಕೆಯನ್ನಾಗಿ ಮಾಡಿಕೊಂಡು ಕೆಲಸಮಾಡುವ ತೀರಾ ಅಪರೂಪದ ವ್ಯಕ್ತಿಗಳು ಕೆಲವರಿರುತ್ತಾರೆ. ಅಂತಹ ಒಂದು ದೈತ್ಯ ಪ್ರತಿಭೆಯನ್ನು ತಮ್ಮ ಮುಂದೆ ತರಲು ಬಹಳ ಸಂತಸವೆನಿಸುತ್ತದೆ. ಅವರಿಗೊಮ್ಮೆ ಶಿರಬಾಗಿ ನಿಮ್ಮ ಮುಂದೆ ಅವರ ಬಗ್ಗೆ ಪ್ರಸ್ತಾಪಿಸುತ್ತೇನೆ.

ಹೌದು, ನಿಮ್ಮ ಲೆಕ್ಕಾಚಾರ ತಪ್ಪಾಗಿದ್ದು ಸಿನಿಮಾ ಹಾಡಿನ ಸಾಲು ನೋಡಿ ! ಆದರೆ ನಾನು ಹೇಳ ಹೊರಟಿರುವುದು ಕಣ್ಣಿನ ಬಗ್ಗೇನೆ ! ಅದು ಕಣ್ಣಿನ ಮಾಯದ ಮೋಡಿಗಾರ ಪದ್ಮಶ್ರೀ , ಪದ್ಮಭೂಷಣ ದಿ| ಡಾ| ಎಮ್.ಸಿ.ಮೋದಿ ಯವರ ಬಗ್ಗೆ. ೧೯೧೫ ರಲ್ಲಿ ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಜನಿಸಿದ ಮುರುಗಪ್ಪ ಚನ್ನವೀರಪ್ಪ ಮೋದಿ ಭಾರತ ಮಾತೆಯ ಹೆಮ್ಮೆಯ ಮಗುವಾಗಿದ್ದರು. ಸೇವೆ ಎಂಬ ಸೋಗಿನಲ್ಲಿ ವ್ಯಾಪಾರೀಕರಣ ನಡೆದಿರುವ ಈ ದಿನಗಳಲ್ಲಿ ಬಡಜನರಿಗೆ ಭಾಗ್ಯವಿಧಾತರಾಗಿ ಬಂದ ಸೌಭಾಗ್ಯ ನಿಧಿ ಡಾ|ಮೋದಿ.

ಯಾವ ಚಿಕಿತ್ಸೆಗಳು ಇಂದು ಗಹನವೆಂದು ಪರಿಗಣಿಸಲ್ಪಟ್ಟು ವಿಶೇಷ ಚಿಕಿತ್ಸಾ ಕೊಠಡಿಗಳಲ್ಲಿ ಮಾಡಲ್ಪಡುತ್ತವೆಯೋ ಅದನ್ನು ಒಂದುಕಾಲದಲ್ಲಿ ಹಳ್ಳಿ ಹಳ್ಳಿಗೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಷ್ಟೇ ಅಲ್ಲ ಹೆಚ್ಚಿನ ಚಿಕಿತ್ಸಾ ಉಪಕರಣಗಳಿಲ್ಲದೇ ಅವರು ಕಣ್ಣಿನ ಚಿಕಿತ್ಸೆ ಮಾಡಿದ ಹೆಗ್ಗಳಿಕೆಯ ಗರಿಯೂ ಅವರ ಕಿರೀಟಕ್ಕೇರುತ್ತದೆ !

೧೯೪೩ರಲ್ಲಿ ಸವ್ಯಸಾಚಿಯ ಥರ ಕೆಲಸ ಆರಂಭಿಸಿದ ಡಾ|ಮೋದಿ ತನ್ನ ಸೇವಾವಧಿಯಲ್ಲಿ ೪೬,೧೨೦ ಹಳ್ಳಿಗಳಿಗೆ ಸೇವೆಗಾಗಿ ಭೇಟಿ ಇತ್ತರು, ಕ್ಯಾಂಪ್ ನಡೆಸಿದರು. ಒಂದು ಅಂದಾಜಿನ ಪ್ರಕಾರ ೧,೨೧,೧೮,೬೩೦ ಕಣ್ಣಿನ ರೋಗಿಗಳನ್ನು ತಪಾಸಣೆ ನಡೆಸಿದರು, ಅಲ್ಲದೇ ಸುಮಾರು ೬,೧೦,೫೬೪ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿದರು. ೧೯೫೦ರ ಸುಮಾರಿಗೆ ತಿರುಪತಿಯಲ್ಲಿ ಒಂದೇ ದಿನದಲ್ಲಿ ೬೯೫ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ದಿಡೀರ್ ಖ್ಯಾತಿಗಳಿಸಿದ ಮೋದಿಯವರು ಒಂದೇ ದಿನದಲ್ಲಿ ೮೩೩ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಿ ಗಿನ್ನೆಸ್ ಬುಕ್ ನಲ್ಲಿ ದಾಖಲಾದರು. ಈ ವಿಷಯ ನಂಬಲು ಅಸಾಧ್ಯವೆನಿಸಿದರೂ ನಡೆದದ್ದನ್ನು, ದಾಖಲಿಸಿದ್ದನ್ನು ಒಪ್ಪಲೇಬೇಕಲ್ಲ? ಅನೇಕ ವಿಜ್ಞಾನಿಗಳಿಗೆ ಇವರು ಈ ವಿಷಯದಲ್ಲಿ ಸವಾಲಾಗಿದ್ದಾರೆ! ದಿನಕ್ಕೆ ೮೦೦ರಷ್ಟು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸುವುದು ಹೇಗೆ ? ಅದು ಎಷ್ಟರಮಟ್ಟಿಗೆ ಸುರಕ್ಷಿತ ? ಚಿಕಿತ್ಸೆ ಮಾಡಿಸಿಕೊಂಡವರ ಅನಿಸಿಕೆ ಏನು? ಹಲವು ರೀತಿಯ ಪ್ರಶ್ನೆಗಳು ಹುಟ್ಟಿಕೊಂಡವು. ಇಲ್ಲಿಯೂ ಕೂಡ ಅವರಲ್ಲಿ ಅಂತಹುದೇನಿದೆ ? ಎಂಬುದೇ ತರ್ಕಕ್ಕೆ ನಿಲುಕದ ಅದ್ಬುತ ವಿಷಯವಾಯಿತು!

ಯವುದೇ ಮಾಧ್ಯಮಗಳಿಗೆ ಮೋದಿಯವರು ಸೊಪ್ಪು ಹಾಕುತ್ತಿರಲಿಲ್ಲ. ವ್ಯರ್ಥ ಮಾತುಕತೆಗಿಂತ ಕೃತಿಯಲ್ಲಿ ತಮ್ಮ ಸೇವೆಯನ್ನು ತೋರಿಸಿದ ಪ್ರಚಂಡ ಪ್ರತಿಭೆ ಇದು. ಅನೇಕರು ಹಲವಾರು ಪ್ರಶ್ನೆ ಕೇಳುತ್ತಿದ್ದರೂ ಅವರು ಅದಕ್ಕೆಲ್ಲ ತೀರಾ ತಲೆಕೆಡಿಸಿಕೊಂಡವರಲ್ಲ. ಹಾಗಂತ ಯಾರನ್ನೂ ಅಸಡ್ಡೆ ಮಾಡುತ್ತಿರಲಿಲ್ಲ. ಬಿಡುವಿದ್ದ ಸಮಯ ಕೆಲವರು ಪ್ರಶ್ನಿಸಿದರೆ ತಾವು ಉತ್ತರಿಸುತ್ತಿದ್ದರು.

’ಸಾಮೂಹಿಕ ಕಣ್ಣಿನ ಶಸ್ತ್ರ ಚಿಕಿತ್ಸೆ’ ಎಂಬ ಹೊಸ ಆಂದೋಲನವನ್ನೇ ನಡೆಸಿ ಕಣ್ಣಿನ ತೊಂದರೆಗೊಳಗಾಗಿರುವ ಬಡವರ, ಆರ್ತರ ಚಿಕಿತ್ಸೆಗೆ ತನ್ನ ಜೀವನವನ್ನೇ ಮುಡುಪಾಗಿಟ್ಟರು. ಮೋದಿಯವರು ದುಡ್ಡು ಮಾಡುವ ಚಟಕ್ಕೆ ಎಂದೂ ಬಲಿಬೀಳದೇ ತನ್ನ ನಿಜವಾದ ಸೇವಾ ಸೌಜನ್ಯವನ್ನು ತೋರಿದವರು. ನಾವು ಬರೇ ಮದರ್ ಥೆರೆಸಾ ಎನ್ನುತ್ತೇವೆ, ಒಂದರ್ಥದಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋದವರು ಡಾ|ಮೋದಿ.

ಅವರ ಚಿಕಿತ್ಸೆಗಳು ಅದ್ಬುತ ಯಶಸ್ಸನ್ನು ಕಂಡವು. ಹೀಗಾಗಿ ಜನರು ಡಾ|ಮೋದಿಯನ್ನು ದೇವರೋಪಾದಿಯಲ್ಲಿ ಪೂಜಿಸುವಷ್ಟು ಅವರು ಮನೆಮಾತಾಗಿದ್ದರು. ಕ್ಷಣಾರ್ಧದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವುದು ಅವರಿಗೆ ಸಿದ್ಧಿಸಿದ ವಿಷಯವಾಗಿತ್ತು. ಈ ಸುದ್ದಿ ವಿದೇಶೀ ವೈದ್ಯರುಗಳಿಗೆ ನುಂಗಲಾರದ ತುತ್ತಾಗಿತ್ತು! ಒಬ್ಬ ಭಾರತೀಯ ಬುಡ್ಡ ಬಂದು ಇಷ್ಟೆಲ್ಲ ಸಾಧಿಸಲು ಹೇಗೆ ಸಾಧ್ಯ, ಇವನನ್ನು ಎಲ್ಲಾದರೂ ಸಿಕ್ಕಿಸಿಹಾಕಬೇಕೆಂದು ಬಹಳ ವಿಧದಲ್ಲಿ ಪ್ರಯೋಗ ನಡೆಸಿದರು, ಯಾವ ಸನ್ನಿವೇಶವೇ ಬಂದರೂ ವಿಜಯಲಕ್ಷ್ಮಿ ಡಾ|ಮೋದಿಯವರ ಬೆನ್ನಿಗೇ ಶಾಶ್ವತವಾಗಿ ಅಂಟಿಕೊಂಡುಬಿಟ್ಟಿದ್ದಳು!

ಇವರ ನಿಸ್ವಾರ್ಥ ಸೇವೆ ಗಮನಿಸಿ ಆಗಿನ ಘನ ಸರಕಾರಗಳು ೧೯೫೬ ರಲ್ಲಿ ಪದ್ಮಶ್ರೀ ಮತ್ತು ೧೯೬೮ ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಕೊಟ್ಟು ಪುರಸ್ಕರಿಸಿದವು. ಅವರ ಕೆಲಸವನ್ನು ಹೆನ್ರಿ ಫೋರ್ಡ್ ಅವರ ಕೆಲಸಗಳಿಗೆ ಹೋಲಿಸಲಾಗುತ್ತಿತ್ತು. ಕಣ್ಣಿಗೆ ಚಿಕಿತ್ಸೆ ನೀಡಲು ಇರುವ ಸಾಗಾಣಿಕಾ ಪಟ್ಟಿ [conveyor belt] ಎಂದರೆ ಅದು ಡಾ|ಮೋದಿ ಎಂಬಷ್ಟು ಖ್ಯಾತಿಗಳಿಸಿದ್ದ ಶ್ರೀಯುತರು ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯಲ್ಲಿ ಸೇವಾರ್ಥ /ಧರ್ಮಾರ್ಥ ಕಣ್ಣಿನ ಚಿಕಿತ್ಸಾ ದವಾಖಾನೆಯನ್ನು ತೆರೆದರು, ಅದು ಇಂದಿಗೂ ಕೆಲಸಮಾಡುತ್ತ ಅನೇಕ ರೋಗಿಗಳಿಗೆ ಸಹಾಯ ಮಾಡುತ್ತಿದೆ.

ಕೇವಲ ಇಂಥವರನ್ನು ಕಂಡಾಗ ಮಾತ್ರ ನಮಗೆ ನೆನಪಾಗುವುದು

||ವೈದ್ಯೋ ನಾರಾಯಣೋ ಹರಿಃ||

ಹೇಗೆ ಕವಿಗಳು-ಸಾಹಿತಿಗಳು ಅದಕ್ಕಾಗೇ ಹುಟ್ಟಿರುತ್ತಾರೋ ಹಾಗೇ ಡಾ|ಮೋದಿ ಜನರ ಕಣ್ಣಿನ ನೋವಿಗೆ ಸ್ಪಂದಿಸಲೆಂದೇ ಭುವಿಗೆ ಬಂದಿದ್ದ ವಿಶೇಷ ನೇತ್ರಾಧಿಕಾರಿ ! ಹಾಗಾಗೇ ಅವರು ಬದುಕಿರುವಾಗಲೇ ದಂತಕಥೆಯಾಗಿದ್ದರು ! ಬಹುಶಃ ಇಂತವರನ್ನೆಲ್ಲ ಕಳಿಸುವುದಕ್ಕೇ ಭಗವಂತ ಹೇಳಿರಬೇಕು ' ತದಾತ್ಮಾನಂ ಸೃಜಾಮ್ಯಹಂ ' ಅಂತ. ಡಾ|ಮೋದಿ ೯೦ ವಯಸ್ಸಿನ ಕಾಲ ಜೀವಿಸಿದ್ದರು, ೨೦೦೫ ರ ನವೆಂಬರ್ ೧೧ ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮರಣಿಸಿದರೂ ಭಾರತದ ಲಕ್ಷೋಪಲಕ್ಷ ಜನರ ಕಣ್ಣುಗಳಿಗೆ ಬೆಳಕನ್ನು ಕೊಟ್ಟು 'ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪಾ....' ಎಂದು ರೋಗಿಗಳನ್ನು ರೋಗಮುಕ್ತರನ್ನಾಗಿಸಿ ಭಾರತದಲ್ಲಿ ಶಾಶ್ವತವಾಗಿ ಬೆಳಗುವ ಹಣತೆಯಾಗಿದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ.

Thursday, February 4, 2010

ಇಂದು ಕೆಂದಾವರೆಯ ದಳದಳಿಸಿದಾರಿಯಲಿ...........












ಇಂದು
ಕೆಂದಾವರೆಯ ದಳದಳಿಸಿ ದಾರಿಯಲಿ...........


ಬಹುತೇಕ ಕನ್ನಡದ ಹಿರಿಯ ಕವಿಗಳೆಲ್ಲ ಆರ್ಥಿಕವಾಗಿ ಬಡವರಾಗಿದ್ದರು. ಕಾವ್ಯ-ಸಾಹಿತ್ಯವೇ ಅವರ ಆಸ್ತಿ-ಪಾಸ್ತಿ.
ಅವರು ಅದನ್ನೇ ಉಸಿರಾಡಿದರು,ತಿಂದರು,ಅದನ್ನೇ ಕುಡಿದರು,ಕುಣಿದರು,ಹಂಚಿಕೊಂಡು ನಗೆಯಾಡಿದರು. ಅವರೆಂದೂ ರಾಜಕಾರಣಿಗಳ ಹಿಂದೆ ಬಿದ್ದವರಲ್ಲ! ಆಗ ರಾಜಕೀಯವೂ ರೀತಿ ಹೊಲಸಾಗಿರಲಿಲ್ಲ! ಬಡತನ-ಉಪವಾಸ-ಕೆಲಸಕ್ಕಾಗಿ ಅಲೆದಾಟ ಇದು ನಮ್ಮ ಕವಿಗಳಲ್ಲೂ ಇತ್ತು, ವಿಪರ್ಯಾಸವೆಂದರೆ ಇಂದು ನಾವು ಸಾಮಾನ್ಯ ತೊಂದರೆಗೂ ಬೋಬ್ಬಿರಿಯುತ್ತೇವೆ, ಆದರೆ ಅಂದು ಅವರು ಅದನ್ನೇ ಗಣಿಸದೇ ಅದನ್ನೇ ಆಧಾರವಾಗಿಟ್ಟುಕೊಂಡು ಬೇರೆಬೇರೆ ಕವನ-ವಚನ-ಸಾಹಿತ್ಯಗಳನ್ನು ಸೃಷ್ಟಿಸಿದರು. ವರಕವಿ ಬೇಂದ್ರೆಯವರ ಮನೆಯಲ್ಲಿ ಉಪವಾಸವಿರುವ ಎಷ್ಟೋ ದಿನಗಳಿರುತ್ತಿದ್ದವು. ಅಂತಹ ಸಮಯದಲ್ಲಿ " ಕುಣಿಯೋಣು ಬಾರಾ ಕುಣಿಯೋಣು ಬಾ ......" ಎಂದು ಕುಣಿದು ಹಾಡನ್ನು ಬರೆದರು. ಅವರು ಕಾಲವಾಗಿ ಅನೇಕ ವರ್ಷಗಳ ಮೇಲೆ ಧಾರವಾಡಕ್ಕೆ ನಾನು ಹೋದಾಗ ಸಾಧನಕೇರಿಯ ಅವರ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. "ಬಾರೋ ಸಾಧನಕೇರಿಗೆ" ಎಂದಿದ್ದರಲ್ಲ , ದಕ್ಕೆ! ಸ್ವತಃ ನಾನು ನಮ್ಮ ಮಲ್ಲಿಗೆ ಕವಿ ನರಸಿಂಹ ಸ್ವಾಮಿಯವರನ್ನು ಭೇಟಿ ಮಾಡಿದ್ದೆ, ನನಗೆ ಕವಿಗಳು ಹೇಗೆ ಬದುಕುತ್ತಾರೆ ಎಂಬುದು ಕುತೂಹಲವಾಗಿತ್ತು ! ಬಹುಶಃ ೧೯೯೭ ರಲ್ಲಿ ಎಂದೆನಿಸುತ್ತದೆ. ಕತ್ರಿಗುಪ್ಪೆಯಲ್ಲಿರುವ ಅವರ ಮನೆಗೆ ಹೋದಾಗ ಸ್ವಾಗತಿಸಿದ್ದೇ ಅವರು. ಅವರ 'ಶಾರದೆ ' [ಇತ್ತೇಚೆಗೆ ಅವರು ತೀರಿಕೊಂಡರು]ನನಗೆ ಕೊಟ್ಟ ಲಿಂಬೂ ಪಾನಕದಲ್ಲಿ ಅದೆಂತಹ ಅದ್ಬುತ ರುಚಿಯಿತ್ತು, ಇವತ್ತಿನ ರೆಡಿ ಮಿಕ್ಸ್ ಅಲ್ಲ ಅದು! ನನ್ನ ಅಜ್ಜಿಯಥರವಯಸ್ಸಿನ ಅವರ ಮಡದಿ ಬೇಡವೆಂದರೂ ಕೇಳದೆ ನನ್ನನ್ನು , ಒಬ್ಬ ಸಾಮಾನ್ಯ ಹುಡುಗನನ್ನು ಆದರಿಸಿದ ಅವರ ಆತ್ಮೀಯತೆ ನೋಡಿ ಅಲ್ಲೇ ಅಂದುಕೊಂಡೆ ನಿಜವಾಗಿ ಕವಿ 'ಶಾರದೆ'ಯನ್ನು ಕಂಡಿದ್ದಾರೆ ! ಕಂಡು 'ಮೈಸೂರು ಮಲ್ಲಿಗೆ ' ಬರೆದಿದ್ದಾರೆ.ಹೀಗೇ ಕನ್ನಡದ ಪ್ರತಿಯೊಬ್ಬ ಕವಿ-ಸಾಹಿತಿಯೂ ಕೂಡ ಬರೇ ಪುಸ್ತಕದಲ್ಲಿ-ಸಾಹಿತ್ಯದಲ್ಲಿ ಅಲ್ಲದೆ ತಮ್ಮ ಬದುಕಿನ ತುಂಬಾ ಆಚರಣೆಯಲ್ಲಿ ಅನನ್ಯ ಅತಿಥಿ ಸತ್ಕಾರದ ಸಂಸ್ಕೃತಿಯನ್ನು ಮೆರೆದಿದ್ದಾರೆ-ಈಗಿರುವವರು ಮೆರೆಯುತ್ತಿದ್ದಾರೆ. ತಮ್ಮ ನೋವನ್ನು ನುಂಗಿ ನಮಗೆಲ್ಲ 'ಆಸ್ತಿ' ಮಾಡಿಟ್ಟ ಇಂತಹಮಹಾನ್ ಚೇತನಗಳ ಬಗ್ಗೆ , ಈ ಮಾಲಿಕೆಯಲ್ಲಿ ಆಗಾಗ ನಮ್ಮೆಲ್ಲಾ ಕವಿಗಳ ಬಗ್ಗೆ ಬರೆಯುತ್ತೇನೆ.


ಕನ್ನಡ ತಾಯಿ ಹೆತ್ತ ಅನೇಕ ಕವಿಪುಂಗವರಲ್ಲಿ ದಿ|ಶ್ರೀ ಮೊಗೇರಿ ಗೋಪಾಲಕೃಷ್ಣ ಅಡಿಗರೂ ಒಬ್ಬರು. ೧೯೧೮ ರಲ್ಲಿ ಈಗಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಸಣ್ಣ ಹಳ್ಳಿಯಲ್ಲಿ ಸಂಪ್ರದಾಯಸ್ಥ ಬಡ ಬ್ರಾಹ್ಮಣ ದಂಪತಿಗೆ ಜನಿಸಿದ ಶ್ರೀಯುತರು ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯನ್ನು ಬೈಂದೂರಿನಲ್ಲಿ ಪೂರೈಸಿದರು. ಆಗಿನ ಕಾಲಕ್ಕೆ ಅಲ್ಲಿ ಹತ್ತಿರ ಪ್ರೌಢಶಾಲೆ ಇರದ ಕಾರಣ ೧೪ ಕಿಲೋ ಮೀಟರ್ ದೂರದ ಕುಂದಾಪುರಕ್ಕೆ ಹೋಗಿ ಅಭ್ಯಸಿಸಿದರು. ಅಲ್ಲಿಗೆ ನಾ ನಾ ರೀತಿಯ ಆರ್ಥಿಕ ಮುಗ್ಗಟ್ಟು ವಗೈರೆ ತೊಂದರೆಯಾಗಿ ಅವರ ವಿದ್ಯಾಭ್ಯಾಸ ಸ್ವಲ್ಪ ತಡವರಿಸಿತು. ಮನೆಯವರೆಲ್ಲರಿಗೆ ವಿರುದ್ಧವಾಗಿ, ನಂತರ ಅವರ ಹತ್ತಿರದ ಬಂಧು ಮಹಿಳೆಯೊಬ್ಬರು ತಮ್ಮ ಸಹಾಯವನ್ನಿತ್ತು ಪ್ರೋತ್ಸಾಹಿಸಿದ ಮೇಲೆ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ[ಅನ್ಸ್] ಮುಗಿಸಿದರು.

ಅನೇಕ ಚಿಕ್ಕಪುಟ್ಟ ನೌಕರಿ ಮಾಡುತ್ತ ಅಡಿಗರು ಕೊನೆಗೊಮ್ಮೆ ಮೈಸೂರಿನ ’ಶಾರದಾ ವಿಲಾಸ ಕಾಲೇಜಿ’ನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿ ೧೯೪೮ ರಿಂದ ೧೯೫೨ರ ವರೆಗೆ ಕೆಲಸ ನಿರ್ವಹಿಸಿದರು. ಈ ಸಮಯದಲ್ಲಿ ಅವರು ನಾಗಪುರ ವಿಶ್ವವಿದ್ಯಾಲಯದಿಂದ ಮಾಸ್ಟರ್ ಡಿಗ್ರಿ ಮುಗಿಸಿದರು. ಅನಂತರ ಮೈಸೂರಿನ ಸೇಂಟ್ ಫಿಲೊಮಿನಾ’ಸ್ ಕಾಲೇಜ್ ನಲ್ಲಿ ಹತ್ತು ವರ್ಷಗಳಕಾಲ ಕೆಲಸ ಮಾಡಿದರು. ೧೯೬೦ ರಲ್ಲಿ ಶ್ರೀಯುತರು ಸಾಗರದಲ್ಲಿ ಹೊಸದಾಗಿ ಸ್ಥಾಪಿತವಾದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಕೆಲಕಾಲ ಪ್ರಾಂಶುಪಾಲರಾಗಿ ದುಡಿದರು. ನಂತರ ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಕೆಲಸಮಾಡಿದರು. ೫ ಜನ ಮಕ್ಕಳು ಮತ್ತು ೯ ಜನ ಮೊಮ್ಮಕ್ಕಳ ತುಂಬಿದ ಸಂಸಾರವನ್ನು ನಡೆಸಿದರು.

ವೃತ್ತಿಯಿಂದ ಇಂಗ್ಲೀಷ್ ಅಧ್ಯಾಪಕರಾದರೂ ಅವರು ನೆಚ್ಚಿಕೊಂಡದ್ದು ಕನ್ನಡಸಾಹಿತ್ಯವನ್ನೇ. ಅತ್ಯುತ್ತಮ ಕವಿ, ವಿಮರ್ಶಕ, ಮತ್ತು ಹೊಸತನದ ಚಿಂತಕರಾಗಿ ಕನ್ನಡಕ್ಕೆ ಒಳ್ಳೊಳ್ಳೆಯ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟರು. ಸಮಾಜ ಅವರನ್ನು 'ನವೀನ ಸಾಹಿತ್ಯದ ಹರಿಕಾರ ' ಎಂದೇ ಗೌರವಿಸಿತ್ತು. ಇಡೀ ಐವತ್ತು ವರ್ಷಗಳ ಸಾಹಿತ್ಯ ಜೀವನದಲ್ಲಿ ಅವರು ೧೯೬೧ರಲ್ಲಿ ಒಂದೇ ಒಂದು ಇಂಗ್ಲೀಷ್ ಕವಿತೆಯನ್ನು ರ್ಯಾಡಿಕಲ್ ಹುಮನಿಸ್ಟ್ ಮ್ಯಾಗಜಿನ್ ನ ಎಮ್.ಎನ್.ರಾಯ್ ಅವರ ವಿನಂತಿಯ ಮೇರೆಗೆ ,ಕವಿ ದಿ|ಶ್ರೀ ರವೀಂದ್ರನಾಥ ಠಾಗೋರರ ಮೆಲೆ ಬರೆದರು.

ಸ್ವಾತಂತ್ರ್ಯ ಬಂದ ವೇಳೆ 'ಭಾರತದ ನವೋದಯ ಸಾಹಿತ್ಯ' ವೆಂಬ ಚಳುವಳಿ ಮಾಡಿದರು . ಸಂಪ್ರದಾಯಬದ್ಧ ಭಾರತದ ಸಾಹಿತ್ಯಕ್ಕೆ ಪಾಶ್ಚಿಮಾತ್ಯ ಸಾಹಿತ್ಯದ ಚಳುಕನ್ನು-ಥಳುಕನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಎಲ್ಲಾ ಕೃತಿಗಳು ನಮ್ಮ ಮಧ್ಯಮ ವರ್ಗದ ಜನರ ನಾಡಿಮಿಡಿತಗಳಾಗಿವೆ. ಅಡಿಗರ ಕೃತಿಗಳನ್ನು ಕೇವಲ ಕೆಲವು ಪ್ರತಿಭಾವಂತರು ಮಾತ್ರ ಭಾಷಾಂತರಿಸಿದರು. ಅಂತವರಲ್ಲಿ ಸರ್ವಶ್ರೀ ಎ.ಕೆ.ರಾಮಾನುಜನ್, ಎಮ್.ಜಿ.ಕೃಷ್ಣಮೂರ್ತಿ, ರಾಜೀವ್ ತಾರಾನಾಥ್,ಸುಮತೀಂದ್ರ ನಾಡಿಗ ಮತ್ತು ಎಮ್.ಕೆ.ಅನಿಲ್ ಇವರು ಪ್ರಮುಖರು. ೨೦೦೭ರಲ್ಲಿ ಡಾ|ನಾಡಿಗರು ಅಡಿಗರ ಆಯ್ದ ಕವನಗಳ ಸಂಕಲನವನ್ನು ಹೊರತಂದರು,ಇದನ್ನು ಭಾರತೀಯ ಸಾಹಿತ್ಯ ಪರಿಷತ್ತು ಪರಿವೀಕ್ಷಿಸಿತು.

ಅವರ ಬರವಣಿಗೆ ವಿಶಿಷ್ಟವಾಗಿತ್ತು, ಜೊತೆಗೆ ಅವರು ಕಥೆ,ಕವನ-ಸಾಹಿತ್ಯಗಳಲ್ಲಿ ತನ್ನನ್ನು ಪ್ರಚಾರಕ್ಕೆ ಒಳಪಡಿಸಿಕೊಳ್ಳಲಿಲ್ಲ. ಎಂದೂ ಡೊಗ್ಗು ಸಲಾಮು ಹೊಡೆದು ತನ್ನ ಕೆಲಸ ಮಾಡಿಸಿಕೊಂಡವರಲ್ಲ. ಅವರಿಗೆ ಮಾಧ್ಯಮಗಳು[ಆ ಕಾಲಕ್ಕೆ ಪತ್ರಿಕೆಗಳು,ರೇಡಿಯೋ ಇತ್ಯಾದಿ] ಪ್ರಚಾರ ಎನ್ನುವುದಕ್ಕಿಂತ ಹಸಿರನ್ನು ಸದಾ ಇಷ್ಟಪಡುವ ಜೀವ ಅದಾಗಿತ್ತು! ಪ್ರಾಯಶಃ ಕರಾವಳಿಯ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದರಿಂದ ಆ ರೀತಿ ಅವರು ಗಿಡ-ಮರಗಳನ್ನು ಪ್ರೀತಿಸುತ್ತಿದ್ದರೇನೋ ಅನಿಸುತ್ತಿದೆ.

ಅವರ ಪ್ರಮುಖ ಕೃತಿಗಳು :

ಭಾವತರಂಗ - ೧೯೪೬
ಅನಂತೆ - ೧೯೮೬ರಲ್ಲಿ (ಕಾದಂಬರಿ)
ಭೂಮಿ ಗೀತ - ೧೯೫೯
ಮಣ್ಣಿನ ವಾಸನೆ (ಪ್ರಬಂಧಗಳ ಪುಸ್ತಕ) - ೧೯೬೬
ವರ್ಧಮಾನ - ೧೯೭೨
ಇದನ್ನ ಬಯಸಿರಲಿಲ್ಲ (ಕವಿತೆಗಳು) - ೧೯೭೫
ಸಮಗ್ರ ಕಾವ್ಯ (ಕವನ ಸಂಕಲನ) - ೧೯೭೬

ನಮ್ಮ ಕವಿಗಳು ಎಷ್ಟೆಲ್ಲಾ ಭಾವತುಂಬಿ, ಮನದುಂಬಿ ಬರೆಯುತ್ತಿದ್ದರೆಂದರೆ ಅದನ್ನು ಶುಶ್ರಾವ್ಯವಾಗಿ ಹಾಡಿದಾಗ ಕೇಳಿ ಅನುಭವಿಸಬೇಕೇ ಹೊರತು ಬರೇ ಶಬ್ಧಗಳಿಂದ ಬಣ್ಣಿಸಲು ಸಾಧ್ಯವಾಗುವುದಿಲ್ಲ. ಅಡಿಗರ ಅಂತಹ ಒಂದು ಅದ್ಬುತ ಗೀತೆಯನ್ನು ತಮ್ಮ ಮುಂದಿಡಲು ಅಪೇಕ್ಷಿಸಿದ್ದೇನೆ:

ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ...........
ಶ್ರೀಮತಿ ಮಂಜುಳಾ ಗುರುರಾಜ್ ಹಾಡಿದ್ದಾರೆ, ಮೈಸೂರು ಅನಂತಸ್ವಾಮಿ ಇದಕ್ಕೆ ಸಂಗೀತವನ್ನು ಅಳವಡಿಸಿದವರು. ಇದನ್ನುತಾವೊಮ್ಮೆ ಕೇಳಿ, ಆಸ್ವಾದಿಸಿ..ಬಹುಶಃ ನಂತರ ತಾವು ಅಡಿಗರು ಎಷ್ಟು ನಿಸರ್ಗಪ್ರಿಯರಾಗಿದ್ದರು ಎಂಬುದನ್ನು ಮನಗಾಣುತ್ತೀರಿ
[ಇದು ಯೂ ಟ್ಯೂಬ್ ನಲ್ಲಿದೆ. ಕೆಳಕಂಡ ಲಿಂಕ್ ಕಾಪಿ ಮಾಡಿ ಬ್ರೌಸರ್ನಲ್ಲಿ [ಅಡ್ರೆಸ್] ಪೇಸ್ಟ್ ಮಾಡಿ, ಎಂಟರ್ ಕೀ ಪ್ರೆಸ್ ಮಾಡಿ ನಂತರ ಅದರ ಮೋಡಿ ನೋಡಿ !]

http://video.disney-bg.com/video/XzFLCnvkjNU

[ಇದನ್ನು ಬಾಂಬೆ ಜಯಶ್ರೀ ಕೂಡ ಹಾಡಿದ್ದಾರೆ. ]ತುಂಬಾ ಸುಶ್ರಾವ್ಯವಾಗಿ ಹಾಡಿರುವ ಮಂಜುಳಾ ಅವರಿಗೂ, ಕಿವಿಯ ಮೂಲಕ ಹೃದಯದ ಬಾಗಿಲನ್ನು ತಟ್ಟುವ ಅನಂತ ಸ್ವಾಮಿಯವರಿಗೂ, ಹಾಗೂ ಕವಿ ಅಡಿಗರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸೋಣವೇ ? ಭಾವನೆಗೆ ತಕ್ಕ ದೃಶ್ಯ ಮಾಧ್ಯಮವನ್ನೂ ಅಳವಡಿಸಲಾಗಿದೆ-ಅದೂ ಕೂಡ ತುಂಬಾ ಸುಂದರವಾಗಿ ಮೂಡಿಬಂದಿದೆ[ ಅದನ್ನು ಅಳವಡಿಸಿದವರ ವಿವರ ಸಿಕ್ಕಿಲ್ಲ ಅವರಿಗೂ ನಮ್ಮ ನಮನಗಳು]

ಸಂತೃಪ್ತ ಜೀವನ ನಡೆಸಿದ ಅಡಿಗರು ೧೯೯೨ ಬೆಂಗಳೂರಿನಲ್ಲಿ ತಮ್ಮ ಜೀವನ ಯಾತ್ರೆ ಪೂರೈಸಿದ್ದಾರೆ. ಅವರು ಕಾವ್ಯ-ಸಾಹಿತ್ಯಗಳಲ್ಲಿ ಇನ್ನೂ ಬದುಕಿಯೇ ಇದ್ದಾರೆ !

Wednesday, February 3, 2010

ಹಾರ್ಮೋನ್ ಮಾಸ್ತರ್


ಹಾರ್ಮೋನ್ ಮಾಸ್ತರ್

[ಮೇಲಿನ ಚಿತ್ರ ಕೇವಲ ಕಾಲ್ಪನಿಕ,ಕಥೆಯ ಪ್ರಸ್ತುತಿಗಾಗಿ ಮಾತ್ರ ಬಳಸಲಾಗಿರುತ್ತದೆ ]

ಪಾಹಿ ಶಾಂತ ಭುವನೇಶ್ವರ ಸುಮನೋಹರ ಭುವನ ಸಾರ
ಪಾಪ ಹಾರ ................

ಸರಿಗಮಪ ಗಮಪ ಗಮಪ ಪದನಿ ಪದನೀ ಪದನೀ....... ಮಾಸ್ತರ್ ನುಡಿಸುತ್ತಿದ್ದಾರೆ ಹಾರ್ಮೋನಿಯಮ್ ಅನ್ನು, ನಾವೆಲ್ಲ ಹಳ್ಳಿ ಜನ ಅವರನ್ನು ಹಾರ್ಮೋನ್ ಮಾಸ್ತರ್ ಎಂದೇ ಕರೆಯುವುದು, ಅವರಿಗೆ ಹಾಗೆ ಕರೆದರೆ ತುಂಬಾ ಖುಷಿ ! ಅವರಿಗೆ ಹಾರ್ಮೋನಿನದ್ದೇ ಖಯಾಲಿ. ಹಾರ್ಮೋನು ಅಂದರೆ ಜೀವ ! ಒಂದು ಬೀಡಿ ಮತ್ತು ಹಾರ್ಮೋನು ಕೊಟ್ಟು ಬಿಟ್ಟರೆ ಊಟದೆ ಗೊಡವೆಯೇ ಇಲ್ಲ, ಇದ್ದರೂ ಸರಿ-ಇರದಿದ್ದರೂ ಸರಿ. ಅವರಿಲ್ಲದಿದ್ದರೆ ನಮ್ಮೂರಲ್ಲೆಲ್ಲ ಸಂಗೀತ, ನಾಟಕ ಇತ್ಯಾದಿಗಳಿಗೆ ಕಳೆಯೇ ಇಲ್ಲ ! ಒಂದರ್ಥದಲ್ಲಿ ಅವರು ದಿಗ್ದರ್ಶಕರು /ನಿರ್ದೇಶಕರು ಕೂಡ.


ಹಾರ್ಮೋನ್ ಮಾಸ್ತರ್ ಎಂದೇ ಖ್ಯಾತರಾದವರು ರಂಗರಾವ್ ಹವಾಲ್ದಾರ್. ಇವರು ಜಾಸ್ತಿ ಓದಿದವರಲ್ಲ.ಚಿಕ್ಕವರಿರುವಾಗ ಅಲ್ಲಿ ಇಲ್ಲಿ ಪೌರಾಣಿಕ ನಾಟಕಗಳಿಗೆ ಹೋಗುತ್ತಿದ್ದರಂತೆ. ಚಿಕ್ಕಮಕ್ಕಳಿಗೆ ಯಾರೂ ಹಾರ್ಮೋನ್ ಮುಟ್ಟಲು ಬಿಡುತ್ತಿರಲಿಲ್ಲವಂತೆ. ತಲೆತಲಾಂತರದಿಂದ ಮನೆಯಲ್ಲಿ ಜಮ್ಖಾನ [ನೆಲಕ್ಕೆ ಹಾಸುವ ಬಟ್ಟೆ]/ಗುಡಾರ ಗಳನ್ನು ಬಾಡಿಗೆಗೆ ಕೊಡುತ್ತಿದ್ದರಂತೆ. ಎಲ್ಲೇ ಕಾರ್ಯಕ್ರಮವಿರಲಿ ಇವ್ರಮನೆ ಜಮ್ಖಾನ ಬಂದೇ ಬಿಡುತ್ತದೆ. ಅದಕ್ಕೆ ಬಣ್ಣ ಎಂಬುದೇ ಇಲ್ಲ, ಅಲ್ಲಲ್ಲಿ ಸಣ್ಣ ತೂತುಗಳು, ಚಾ,ಕಾಪಿ ಚೆಲ್ಲಿದ ಕಲೆಗಳು, ಸುಣ್ಣದ ಗೀಟು, ಒಂಥರ ಕಮಟು ವಾಸನಾಯುಕ್ತ ಜಮ್ಖಾನ. ರಾತ್ರಿ ಸರಿಹೊತ್ತಿನಲ್ಲಿ ಅದರಮೇಲೆ ಮಲಗಿದರೆ ಅದರ ಆತ್ಮಕಥೆಯನ್ನು ನಮ್ಮಜೊತೆ ಹೇಳಿಕೊಳ್ಳಬಹುದೇ ಎಂಬಷ್ಟು ಮುದುಕು. ಕೆರೆ-ತೊರೆಗಳಲ್ಲಿ ನಿರಲ್ಲಿ ನೆನೆಸಿದರೆ ಹಾಗೇ ಮರದ ಹಲಗೆಯ ಥರ ಗಟ್ಟಿಯಾಗಿ ಅಡ್ಡ ಮಲಗಬಹುದಾದ ತಾಕತ್ತು ಈ ಜಮ್ಖಾನಕ್ಕೆ! ಬಹುಶಃ ಹುಟ್ಟಿದಾರಭ್ಯ ನೀರನ್ನೇ ಕಂಡಿಲ್ಲ! ಇರಲಿ, ಅಂತೂ ಈ ಗುಡಾರಗಳನ್ನು ಬಾಡಿಗೆಗೆ ಕೊಡುವುದು ಅವರಮನೆಯ ವೃತ್ತಿ. ಏನೇ ಕಾರ್ಯಕ್ರಮದಲ್ಲಿ ಎಲ್ಲರೂ ಎದ್ದು ಹೋದರೂ ಕೊನೆಯವರೆಗೂ ಕುಳಿತು ಬಹಳ ಆಸಕ್ತಿ ಇದ್ದವರಂತೆ ನೋಡುವ ವ್ಯಕ್ತಿ ನಮ್ಮ ಹಾರ್ಮೊನ್ ಮಾಸ್ತರ್ : ಕಾರಣ ಅವರು ಆ ಜಮ್ಖಾನವನ್ನು ಮರಳಿ ಮನೆಗೆ ಹಾಕಿಸಿಕೊಂಡು ಹೋಗಬೇಕು!

ಹೀಗೇ ಅನೇಕ ನಾಟಕ ವಗೈರೆ ಕಾರ್ಯಕ್ರಮಗಳಲ್ಲಿ ಕೂತು ಕೂತು ಬೇಜಾರಾಗಿ, ಆ ಬೇಜಾರು ಕಳೆಯಲು ಕಂಡುಕೊಂಡ ದಾರಿ ಹಾರ್ಮೋನ್! ಅದನ್ನು ಹೇಗಾದರೂ ಮಾಡಿ ಕಲಿಯಬೇಕೆಂಬ ಹಠ. ಸರಿಗಮಪ...ಸರಿಗಮಪ....ಸ ರಿ..ಗ..ಮ..ಪ.. ಕೇಳಿಬಿಟ್ಟರೆ ಸಾಕು ಮೈಯೆಲ್ಲ ರೋಮಾಂಚನ! ಹೀಗೆ ಸಾಗಿ ಬಂದ ದಾರಿಯಲ್ಲಿ ಅಡ್ಡ ಸಿಕ್ಕವರು ಸೀತಾರಾಮ್ ಮೇಷ್ಟ್ರು, ಹಾರ್ಮೋನ್ ನಲ್ಲಿ ಘನವಿದ್ವತ್ತು ಎಂದೇ ಖ್ಯಾತಿಗೊಳಗಾದ ಸೀತಾರಾಮ್ ಮೇಷ್ಟ್ರಿಗೆ ಮಕ್ಕಳೆಂದರೆ ನಮ್ಮ ನೆಹರೂ ಕಂಡಿದ್ದಕ್ಕಿಂತ ಹೆಚ್ಚು ಪ್ರಾಣ, " ಪಾಪದವು, ಹಾರ್ಮೋನ್ ಅಂದ್ರೆ ಇಷ್ಟಪಟ್ಟು ನೋಡ್ತವೆ, ಬಾರಿಸಬೇಕು [ನುಡಿಸಬೇಕು ಎನ್ನುವುದಕ್ಕೆ ನಮ್ಮಲ್ಲಿಯ ಗ್ರಾಮ್ಯ ಭಾಷೆ] ಅಂತ ಬಹಳ ಆಸೆ ಅಲ್ವಾ ?" ಎನ್ನುತ್ತ ಎಲ್ಲರನ್ನೂ ಮುದ್ದಾಡೋದು ಅವರ ಪ್ರವೃತ್ತಿ.

ಹೀಗೇ ಒಂದಿನ "ಗುರೂಜಿ, ನಂಗೆ ಹಾರ್ಮೋನ್ ಹೇಳ್ಕೊಡ್ತ್ರ್ಯಾ?" -ತುಂಬಾ ಆಸಕ್ತಿಯಿಂದ ಕೇಳಿದ್ದು ನಮ್ಮ ರಂಗರಾವ್ ಹವಾಲ್ದಾರ್.

"ಆಯ್ತಪ್ಪ, ನೀನು ಭಾಳ ದಿವ್ಸದಿಂದ ಕೇಳೇ ಇದೀಯ, ಕಲಿಸ್ತೀನ್ ತಗೋ " ಎಂದು ಸ್ಯಾಂಕ್ಶನ್ ಮಾಡಿಬಿಟ್ಟರು.

ರಂಗರಾವ್ ಹವಾಲ್ದಾರ್ ಗೆ ಸ್ವರ್ಗಕ್ಕೆ ಮೂರೇ ಗೇಣು! ಹೀಗೆ ಅವರ ಹಾರ್ಮೋನ್ ವಾದನ ಶುರುವಾಯಿತು. ಅಲ್ಲಿಂದ ಹಿಡಿದವರು ಅದು ಇವರ ಕೈಬಿಟ್ಟರೂ ಇವರು ಮಾತ್ರ ಹಾರ್ಮೋನ್ ಬಿಟ್ಟವರಲ್ಲ.


" ಹೋಯ್ ಹಾರ್ಮೋನ್ ಮಾಸ್ತರೆ ಎತ್ಲಾಕಡಿಗೊಂಟ್ರಿ ?" ಗಂಪಣ್ಣ ದಾರೀಲಿ ಸಿಕ್ಕದ್ರು.

" ಇಲ್ಲೇ ಹೋಗ್ತೀನಿ ಇವತ್ತು ’ಮುಳ್ಳಿನಹಾಸಿಗೆ’ ನಾಟ್ಕಾ ಐತ್ರೀಯಪ್ಪ ಅದಕ್ಕ ತಯಾರೀಗ್ ಹೊಂಟೇನಿ. "

" ಹೌದಾ, ಭಾಳ ಚೆನ್ನಾಗಿದೆ, ನಿಮ್ ನಾಟ್ಕ ಅಂದ್ರೆ ಕೇಳ್ಬೇಕಾ ? " ಎನ್ನುತ್ತ ಗಂಪಣ್ಣ ದಿಕ್ಕು ಬದಲಾಯಿಸಿದರು.

ಸರಿಗಮಪ ಸರಿಗಮಪ ...ಗುನುಗುತ್ತ ನಮ್ಮ ಹಾರ್ಮೋನ್ ಮಾಸ್ತರ್ ಮುಂದೆ ಹೋದರು. ಹೀಗೇ ದಿನವೂ ಊರೂರು ಸುತ್ತೋರು.

ಹೀಗೆ ಒಂದಿನ ಮನೇಲಿ ಸಾಮಾನೆಲ್ಲ ಖಾಲಿಯಾಗಿತ್ತು. ದುಡ್ಡೂ ಇರ್ಲಿಲ್ಲ, ಎನ್ಮಾಡುದು, ಮಾಸ್ತರ್ ಅಲ್ವೇ ಎನೋ ಪ್ಲಾನ್ ಮಾಡಿದರು. ’ಯುರೆಕಾ ಯುರೆಕಾ’ ಎಂಬಷ್ಟು ಖುಷಿಯಾಯಿತು. ಊರಲ್ಲಿ ಇಟ್ಲ ಕಮ್ತಿ [ವಿಟ್ಠಲ್ ಕಾಮತ್] ಜ್ಯೊತಿಷ್ಯ ಹೇಳುತ್ತಿದ್ದರು,ಅವರದ್ದೇ ಕಿರಾಣಿ ಅಂಗಡಿಯೂ ಇತ್ತು. ಸರಿ ನಮ್ಮ ಮಾಸ್ತರ್ ಅಲ್ಲಿಗೆ ಹಾಜರ್! ಮೊದ್ಲು ಜ್ಯೋತಿಷ್ಯ ಕೇಳ್ದ್ರು.

" ಕಾಮತ್ರೆ ನಾನು ಈಸಲ ಸಾಲಮಾಡ್ಕೊಂಡ್ರ ನನ್ಹತ್ರ ವಾಪಸ್ ಕೊಡಾಕ ಆಗತೈತೇನ್ರಿ?"

ವಿಟ್ಠಲ್ ಕಾಮತ್ ಭವಿಷ್ಯ ನುಡಿದರು " ಕೊಡ್ತೀರಿ, ಯಾಕಾಗೂದಿಲ್ಲ? " ಸ್ವಲ್ಪ ಹೊತ್ತು ಅದೂ ಇದೂ ಕೇಳಿದಮೇಲೆ ಈ ಕಡೆ ಅವರ ಕಿರಾಣಿ ಅಂಗಡಿಗೆ ಬಂದ್ರು. ವಿಟ್ಠಲ್ ಕಾಮತ್ರ ಮಗ ಸಾಮಾನು ಕೊಡ್ತಾ ಇದ್ದ.

" ನೋಡಪಾ ನಂಗೆ ೨೫ಕೆಜಿ ಅಕ್ಕಿ ಮತ್ತ ........" ಅಂತೆಲ್ಲ ತೂಕಮಾಡಿ ಚೀಲಕ್ಕೆ ತುಂಬಿಸಿಕೊಂಡರು. ಕಾಮತ್ರ ಮಗ ದುಡ್ಡು ಕೇಳಿದಾಗ " ಸ್ವಲ್ಪ ನಿಲ್ಲಲೇಯಪ್ಪ, ಸ್ವಲ್ಪ ದಿನ ಬಿಟ್ಟಿ ಕೊಡ್ತೇನು, ನಿಮ್ ತಂದಿ ಈಗಷ್ಟೆ ಹೇಳ್ಯಾರ ನನಗ, ಯಾರ್ ಕೂಡೆ ನಾನ್ ಸಾಲಾ ಮಾಡ್ಲಿ ನನಗ ವಾಪಸ್ ಕೊಡಾಕ್ ಬರ್ತೈತಿ ಅಂದಾರ, ಬೇಕಾದ್ರ ಕೇಳ್ಕೊಂಬಾ, ಅಲ್ಲಿ ಮಟ ನಾನಿಲ್ಲೇ ಇರ್ತೇನು"

ಕಾಮತ್ರ ಮಗ ತಂದೆಗೆ ಚೀಟಿ ಕಳಿಸಿ ಕೇಳಿದ, ಅವರು ಅಡಿದ ಭವಿಷ್ಯದ ಮಾತನ್ನು ಉಳಿಸಿಕೊಳ್ಳಲು "ಕೊಡು" ಎಂದು ಬರೆದಿದ್ದರು ! ಮಾಸ್ತರ್ ಯೋಗ ಖುಲಾಯಿಸ್ತು,ಬದುಕಿಕೊಂಡರು. ಇಲ್ಲಾಂದ್ರೆ ಮಾಸ್ತರ್ ಹತ್ರ ದುಡ್ಡು ಕಾಸು ಇರಲ್ಲ. ಪುಡಿಗಾಸು ಇದ್ದ್ರೆ ಅದು ಬೀಡಿ-ತಿರುಗಾಟ ಅಂತ ಖರ್ಚು. ಜನಾನೂ ಅವರ ಹತ್ತಿರ ಅದೂ ಇದೂ ಕೆಲ್ಸ ತಗೋತಿದ್ರೆ ವಿನಃ ಜಾಸ್ತಿ ದುಡ್ಡು ಕೊಡೋರಲ್ಲ!

ಹೀಗೊಂದು ದಿನ ತಾಲೀಮು ನಡೆಯುತ್ತಿತ್ತು.

ಪಾಹಿ ಶಾಂತ ಭುವನೇಶ್ವರ ಸುಮನೋಹರ ಭುವನ ಸಾರ ................
ಇದು ಅನೇಕರಿಗೆ ಗೊತ್ತಿರುವ ರಂಗದ ಮೊದಲನೆಯ ಗೀತೆ.
ಅಂಕದ ಪರದೆ ಎತ್ತುವ ಮುನ್ನ, ವೇದಿಕೆಗೊಂದು ಪೂಜೆ ಮಾಡಿ ಈ ಹಾಡನ್ನು ಹಾಡುವುದು ವಾಡಿಕೆ. ಮಾಸ್ತರು ಹಾಡುತ್ತಾ ಹಾಡುತ್ತಾ ತಾಲೀಮು ಪ್ರಾರಂಭಿಸಿದ್ದರು. ಯಾರೋ ಕೂಗುತ್ತ ಬಂದ್ರು " ಮೇಷ್ಟ್ರೆ ನಿಮ್ಮ ಮಗಳು ಕಾಣ್ತಾ ಇಲ್ವಂತೆ, ಎಲ್ಲೋ ಹೋಗ್ಬುಟ್ಟಿದಾಳೆ"

ಮಾಸ್ತರಿಗೆ ಚಿಂತೆ ಶುರುವಾಯ್ತು. ಮಗಳು ಎಲ್ಲಿಗೆ ಹೋಗಿರಬಹುದು ? ಹುಡುಕುವ ಕೆಲ್ಸದಲ್ಲಿ ತಾಲೀಮನ್ನು ನಿಲ್ಲಿಸಿ ಹೊರಟರು.ತನ್ನ ಕೆಲಸದಲ್ಲಿ ಜಗತ್ತನ್ನೇ ಮರೆಯುತ್ತಿದ್ದ ಮಾಸ್ತರಿಗೆ ಮಗಳ ಬೇಕು-ಬೇಡಗಳ ಪರಿವೆಯೇ ಇರಲಿಲ್ಲ. ಈಗಿನ ಕಾಲದ ಮಕ್ಕಳು ನೋಡಿ ಅವರಿಗೆ ಎಲ್ಲರ ಮನೆಯ ಹಾಗೇ ತಾವೂ ಶಿಸ್ತಾಗಿ ಇರಬೇಕು, ಓದಬೇಕು, ಸಿನಿಮಾ ನೋಡಬೇಕು ಎಂಬೆಲ್ಲ ಬಯಕೆ. ಆದರೆ ಮನೆಯ ಪರಿಸ್ಥಿತಿಯಲ್ಲಿ ಆಗಬೇಕಲ್ಲ. ಕಷ್ಟದಲ್ಲೇ ವ್ಯಾಸಂಗ ಮಾಡುತ್ತ ಮಾಡುತ್ತ ಈಗ ಕಾಲೇಜು ಓದುತ್ತಿದ್ದಳು. ಕಾಲೇಜಿನಲ್ಲಿ ದೂರದ ಊರಿಗೆ ಪ್ರವಾಸವನ್ನು ಗೊತ್ತುಪಡಿಸಿದ್ದರು. ಎಲ್ಲ ಸಹಪಾಠಿಗಳೂ ಹೋಗುವವರಿದ್ದರು. ತನಗೆ ಹೋಗಲಾಗುತ್ತಿಲ್ಲ ಎಂಬುದೇ ಅವಳ ಕೊರಗಾಗಿತ್ತು. ಕೊರಗಿನಲ್ಲಿ ಅವಳು ಮನೆಬಿಟ್ಟು ಹೊರಟುಹೋಗಿದ್ದಳು.

ಮಾಸ್ತರು ಹುಡುಕಿಯೇ ಹುಡುಕಿದರು, ಉಚ್ಚಂಗಿ ದೇವರಿಗೆ ಹರಕೆ ಹೊತ್ತರು, ಇನ್ನೇನೇನೋ ಮಾಡಿದರು. ಆದರೆ ಹುಡುಗಿ ಸಿಗಲೇ ಇಲ್ಲ. ದಿನಗಳು ಉರುಳಿ ನಾಟಕದ ದಿನ ಹತ್ತಿರ ಬಂದುಬಿಟ್ಟಿತು. ಮಾಸ್ತರು ತನ್ನ ಕಷ್ಟಗಳನ್ನು ಯಾರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ, ಜನರು ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾಟಕ ಶುರುವಾಯಿತು.

" ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ ........"

ಪ್ರತೀ ಹಾಡಿಗೆ ಚಪ್ಪಾಳೆಗಳ ಸುರಿಮಳೆ, ಅದ್ಭುತ ಹಾರ್ಮೋನ್ ವಾದನ, ನಿಜವಾಗಿಯೂ ಅದು ಹಾಗಿತ್ತು. ತನ್ನ ವ್ಯಕ್ತಿಗತ ದುಃಖದ ಗಾಢಛಾಯೆ ಆ ದುಃಖಭರಿತ ಸನ್ನಿವೇಶಗಳ ನಾಟಕಕ್ಕೆ ಪೂರಕವಾಗಿ ನಾಟಕ ಎಲ್ಲಿಲ್ಲದ ಅದ್ಬುತ ಯಶಸ್ಸನ್ನು ಕಂಡಿತು. ’ವಾಹ್ ವಾಹ್ ವಾಹ್ ವಾಹ್ ’ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈಕಡೆ ಮಾಸ್ತರು ಬಹಳವಾಗಿ ಒಳಗೊಳಗೇ ನೋಯುತ್ತಿದ್ದರು, ಬೇಯುತ್ತಿದ್ದರು.

ಮಗಳಿಲ್ಲದಿದ್ದರೂ ವೃತ್ತಿಯನ್ನು ಬಿಡುವಹಾಗಿಲ್ಲ, ಊಟಕ್ಕೆ ಅಂತ ಬೇಕಲ್ಲ ! ನಾಟಕ ನೂರಾರು-ಸಾವಿರಾರು ಪ್ರದರ್ಶನ ಕಂಡಿತು. ಮಾಸ್ತರ್ ಘನತೆ ಹೆಚ್ಚುತ್ತಲೇ ಇತ್ತು. ಒಳಗೆ ಮಾಸ್ತರ್ ಒಣಗಿ ಹೋಗುತ್ತಿದ್ದರು, ಬಾಡಿ ಬಸವಳಿದಿದ್ದರು, ಮಗಳಿಲ್ಲದೇ ಅರೆಹುಚ್ಚರಾಗುವಂತ ಸ್ಥಿತಿ! ಇಷ್ಟಿದ್ದರೂ ಸರಕಾರ ಅವರಕಡೆ ಗಮನ ಹರಿಸಿರಲಿಲ್ಲ. ಅವರಿಗೆ ಪ್ರಶಸ್ತಿಗಳನ್ನು ಕೊಡಲಿಲ್ಲ, ಸಹಾಯಧನ-ಮಾಶಾಸನ ಯಾವುದೂ ಸಿಗಲಿಲ್ಲ. ಮಾಸ್ತರು ಮಗಳ ನೆನಪಿನಲ್ಲೇ ಕಾಲಹಾಕುತ್ತಿದ್ದರು.

ಹೀಗೇ ದಿನ ಕಳೆಯುತ್ತ ಒಂದುದಿನ ಬಹಳ ಅದ್ಬುತ ನಾಟಕ, ಹೊಸ ಪ್ರಯೋಗ, ಎಂದಿನಂತೇ ಸರಿಗಮಪ.. ಸರಿಗಮಪ...
ತನ್ಮಧ್ಯೆ ಊರವರಿಂದ ಅಂತೂ ಮಾಸ್ತರಿಗೆ ಒಂದು ಸನ್ಮಾನವಾಯಿತು. ನಾಟಕ ಮುಗಿಯಿತು. ಸಹಜವಾಗಿ ಎಲ್ಲರೂ ಮನೆಗೆ ಹೋದಂತೆ ಮಾಸ್ತರೂ ಮನೆಗೆ ಹೋದರು. ಮನೆಯ ಮುಂದೆ ತುಂಬಾಜನ ಜಮಾಯಿಸಿದ್ದರು ! ಯಾಕಿರಬಹುದು ? ಗೊತ್ತಾಗಲಿಲ್ಲ.

ಹತ್ತಿರ ಹೋದರು. ಅಲ್ಯಾರೋ ಪೋಲೀಸರ ಥರ ಕಾಣುತ್ತಿದ್ದರು. ವಿಚಾರಿಸಲಾಗಿ ಮಾಸ್ತರಮಗಳು ಅಹಲ್ಯಾಬಾಯಿ ನಕ್ಸಲೈಟ್ ಗುಂಪಿಗೆ ಸೇರಿದ್ದಳೆಂದೂ, ಪೋಲೀಸರ್ ಗುಂಡಿನ ಚಕಮಕಿಗೆ ಪ್ರಾಣತೆತ್ತಳೆಂದೂ ಎಲ್ಲರೂ ಹೇಳತೊಡಗಿದ್ದರು. ಮಾಸ್ತರು ನೋಡಿದಾಕ್ಷಣ ಕುಸಿದು ಬಿದ್ದರು. ಅವರ ಹೆಂಡತಿಗೆ ಮೊದಲೇ ಎಚ್ಚರತಪ್ಪಿ ಹೋಗಿತ್ತು. ಎಲ್ಲರೂ ಕಾಯುತ್ತಿದ್ದರು. ಮಾಸ್ತರು ಮರಳಿ ಈ ಲೋಕಕ್ಕೆ ಬರಲೇಇಲ್ಲ . ಸಂಗೀತದ ಹಾಡುಹಕ್ಕಿ ಪಂಜರ ತೊರೆದು ಸರಿಗಮಪ.. ಸರಿಗಮಪ... ಎನ್ನುತ್ತ ಹಾರಿಹೋಗಿತ್ತು.

" ಹಾರಿಹೋದೆಯ ಗಿಣಿಯೆ ನೀನು ಪಂಜರದಿಂದ
ಆರು ಕರೆದರು ನಿನ್ನ ದೂರದೆಡೆಗೆ ........"

Tuesday, February 2, 2010

ಅಂತರಂಗದ ಬಯಕೆ

ಕನ್ನಡದ ಮಲ್ಲಿಗೆ ಕವಿ,ಪ್ರೇಮಕವಿ ದಿ|| ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರ ನೆನಪಿನಲ್ಲಿ, ಅವರ ಜಾಡು ಹಿಡಿದು ಬರೆದ ನನ್ನ ಕವನ. ಇಲ್ಲಿ ಮನೆಯಲ್ಲಿ ಈ ಅಂತರಂಗ ಗಂಡ-ಹೆಂಡಿರ ನಡುವಿನದು. ಹೆಂಡತಿಯ ಅನಾರೋಗ್ಯದಿಂದ ಬಸವಳಿದ ಗಂಡ ಮದುವೆಯಾದ ಹೊಸದರಲ್ಲಿನ ತನ್ನಕೆಲವು ನೆನಪುಗಳನ್ನು ಕೆದಕುತ್ತಾನೆ. ಆ ಪ್ರೀತಿಯಲ್ಲಿ ಹರಿಯುವ ನೀರಿನ ಸೆಳವು ಇದೆ, ಹೊಳೆವ ಮಿಂಚಿನ ಚಳುಕು ಇದೆ. ಆ ಪ್ರೀತಿ ಒಂದು ಅಮೃತತ್ವದ ಸಂಕೇತ. ಊರಲ್ಲಿ ಜಾತ್ರೆ- ಹರಿದಿನ ಏನೇ ಇದ್ದರೂ, ತನ್ನ ಮನದನ್ನೆ ಅನಾರೋಗ್ಯದಿಂದಿದ್ದು ಮಲಗಿದಲ್ಲಿಂದ ಏಳಲಾಗದ ಸ್ಥಿತಿಯಲ್ಲಿದ್ದರೂ ಗಂಡನನ್ನು ಜಾತ್ರೆಗೆ ಹೋಗಿಬರುವಂತೆ ಕೇಳಿಕೊಂಡಾಗ ಆತ ಹೋಗಲಾರ! ತನ್ನ ಪ್ರೀತಿಯ ಮಡದಿ ವರುಷಗಳ ಕಾಲ ಹೀಗೆ ಮಲಗಿರುವಾಗ ಸರಿಯಾದ ಯಾವ ಗಂಡನಿಗೆ ಹಬ್ಬ-ಜಾತ್ರೆಯ ಆಚರಣೆಗೆ ಹೋಗಲು ಮನಸು ಬಂದೀತು ? 'ನಿನ್ನ ಬಿಟ್ಟು ಇರಲು ತನ್ನಿಂದ ಸಾಧ್ಯವೇ ಇಲ್ಲ ' ಎಂಬ Dedication. ಅಲ್ಲಿನ ನೋವಲ್ಲೂ-ನೋವಿನ ನಲಿವಲ್ಲೂ ಅನ್ಯೋನ್ಯ ದಾಂಪತ್ಯದ ಕ್ಷಣದ ಹಂದರವನ್ನು ತಮಗೆ ತೋರಿಸಲು ಕೊಂಚ ಪ್ರಯತ್ನಿಸಿದ್ದೇನೆ.



ಅಂತರಂಗದ ಬಯಕೆ

ಹೇಳಿಬಿಡಲೇ ನಿನಗೆ ಅಂತರಂಗದ ಬಯಕೆ ?
ತಾಳದಿರು ಬಿಗುಮಾನ ಮತ್ತೆ ಮೌನ
ನಾಳಿನಾ ದಿನಗಳಲಿ ನಾನೂರು ಕನಸಿನಲಿ
ಬಾಳ ದೀವಿಗೆಯಾಗಿ ನಡೆಸು ಯಾನ

ಮೂರು ದಿನದಾ ಬದುಕು ದಾರಿ ಸುಲಭವಿದಲ್ಲ
ಭಾರ ತಪ್ಪಿಸಲೆಳಸಿ ಸಾರಿ ಬಂದೆ
ವಾರದಾ ದಿನಗಳಲಿ ತಿಂದೆ ನೋವನು ಬಳಲಿ
ಯಾರ ಸಂಘವು ನನಗೆ ಇಷ್ಟವಿಲ್ಲ

ಮೊನ್ನೆ ಕಾನೂರಿನಲಿ ಸಣ್ಣ ದೇವರ ಜಾತ್ರೆ
ಮುನ್ನವೇ ತಾವ್ ನಡೆದು ಹೋದರೆಲ್ಲ!
ಕನ್ನ ಹಾಕಿದ ಹುಡುಗಿ ನೀನಿಲ್ಲಿ ಮಲಗಿರಲು
ಅನ್ನ-ನೀರನು ಕೊಡಲು ಅನ್ಯರುಂಟೇ ?

ಯಾರ ಪಾಪದ ದೃಷ್ಟಿ ಹಾರಿ ತಾಗಿತು ನಿನಗೆ ?
ಊರು ಸುತ್ತುವ ಗಳಿಗೆ ಹಾದಿಯಲ್ಲಿ
ಘೋರದುರಿತವನರಿತು ವೈದ್ಯರೆಡೆಯಲಿ ಹೋದೆ
ಬೇರುನಾರಿನ ಪಥ್ಯ ಕೊಟ್ಟರಿಲ್ಲಿ

ಅರಸುತಿಹ ಮೊಗ್ಗೊಂದು ಕೈಗೆ ಸಿಕ್ಕಿರುವಾಗ
ಅರಸನಂದದಿ ಸುಖವ ಕಂಡೆ ನಾನು
ಬಿರುಸಾದ ಈ ಗಾಳಿ ನುಸುಳಿರಲು ಮಧ್ಯದಲಿ
ಹರುಷವೆನಗುಂಟೆಲ್ಲಿ ಹಳೆಯನೆನಪು

ಹಾಡು-ಹಸೆಯಿಲ್ಲದಲೆ ಬಾಡಿಹೋಗಿದೆ ಬದುಕು
ಗಾಢ ಗಡುತರ ದಿನವು ಕ್ಷಣವು ಕ್ಷಣವು
ಆಡಿಕೊಂಬರು ನೂರು ಆತು ಬರುವರು ಯಾರು?
ಗಾಡಿಕಾರನೆ ಬಂದು ಸಲಹ ಬೇಕು !

ನಿನ್ನ ಬಿಟ್ಟರೆಘಳಿಗೆ ಬದುಕು ಸಾಧ್ಯವೆ ನನಗೆ?
ನನ್ನ ಮನವನು ಬಲ್ಲ ನೀನು ತಿಳಿಸು
ಚಿನ್ನಕಿಂತಲು ಭಾರ ನಿನ್ನ ಪ್ರೀತಿಯ ಹರವು
ಇನ್ನು ಹೇಳಲು ಅದಕೆ ಸಾಟಿಯುಂಟೇ ?

Monday, February 1, 2010

ಬ್ರಿಟಿಷ್ ಸರಕಾರದಿಂದ ತಸ್ತೀಕನ್ನು ಪಡೆದ ಭೂಪ ಈ ಗಣಪ !








ಬ್ರಿಟಿಷ್ ಸರಕಾರದಿಂದ ತಸ್ತೀಕನ್ನು ಪಡೆದ ಭೂಪ ಈ ಗಣಪ !


ಇಡಗುಂಜಿ ಶ್ರೀ ಮಹಾಗಣಪತಿಯ ಬಗೆಗೆ ಹೇಳಹೊರಟಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ, ಶ್ರೀಮತ್ ಶರಾವತೀ ನದೀ ತಟದಲ್ಲಿ , ಹೊನ್ನಾವರದಿಂದ ಸುಮಾರು ೧೪ ಕಿಲೋಮೀಟರ್ ದೂರದಲ್ಲಿ, ಆಗ್ನೇಯ ದಿಕ್ಕಿನಲ್ಲಿ ನೆಲೆನಿಂತ ಒಂದು ಜಾಗ ಶ್ರೀಕ್ಷೆತ್ರ ಇಡಗುಂಜಿ. ಇಲ್ಲಿಯ ಗಣಪತಿ ದೇವರು ತನ್ನ ಪ್ರಖರ ಪ್ರಭಾವದಿಂದ ಜಗತ್ಪ್ರಸಿದ್ಧನಾಗಿದ್ದಾನೆ.

ಹಿನ್ನೆಲೆ
: ಸುಮಾರು ೧೫೦೦ ವರ್ಷಗಳ ಇತಿಹಾಸ ಹೊಂದಿರುವ[ಇದಕ್ಕೂ ಪೂರ್ವದ ದಾಖಲೆಗಳು ಸಿಗುತ್ತಿಲ್ಲ, ಇದು ಇನ್ನೂ ಪುರಾತನವೆಂಬುದು ನಿಸ್ಸಂಶಯ]ಇಡಗುಂಜಿ ದೇವಸ್ಥಾನ ಅನೇಕ ಅರಸುಮಕ್ಕಳಿಗೆ ಶ್ರದ್ಧೆಯ ಆರಾಧನಾ ಕೇದ್ರವಾಗಿತ್ತು ಎಂದು ಇತಿಹಾಸದಲ್ಲಿ ಕಂಡು ಬರುತ್ತದೆ. ಹುಬ್ಬಾಸಿ ಎಂಬ ರಕ್ಕಸನ ಉಪಟಳ ಜಾಸ್ತಿಯಾಗಿ ಕರಾವಳಿಯಲ್ಲಿ ಜನರೆಲ್ಲ ನೊಂದಿರುವ ಕಾಲದಲ್ಲಿ ರಾಜಮನೆತನದವರು ಅವನನ್ನು ನಿಗ್ರಹಿಸಿದರೆಂದೂ,  ಸರಿಯಾದ ಪೂಜೆ ಪುನಸ್ಕಾರಕ್ಕಾಗಿ ಬನವಾಸಿಯ ಕದಂಬರು ಉತ್ತರದ ಅಹಿಕ್ಷೇತ್ರದಿಂದ ಆಚಾರವಂತ ಬ್ರಾಹ್ಮಣರನ್ನು ಕರೆತಂದು ಆಶ್ರಯವಿತ್ತು, ಮುಂದೆ ತಮ್ಮ ರಾಜ್ಯಭಾರ ಚೆನ್ನಾಗಿ ನಡೆಯಲೆಂದು ಪ್ರಾರ್ಥಿಸಿದರೆಂದು ತಿಳಿದುಬರುತ್ತದೆ. ಕೆಳದಿಯ ರಾಜ ಶಿವಪ್ಪನಾಯಕನಿಂದ ಕಟ್ಟಡದ ಜೀರ್ಣೋದ್ಧಾರ ನಡೆಸಲ್ಪಟ್ಟ ದಾಖಲೆಗಳಿವೆ.

ಕ್ಷೇತ್ರ ಪುರಾಣ
: ದ್ವಾಪರ ಯುಗದಲ್ಲಿ ವಾಲಖಿಲ್ಯ ಎಂಬ ಮಹರ್ಷಿ ಅನೇಕವರ್ಷಗಳಕಾಲ ಈ ಶರಾವತೀ ತೀರದಲ್ಲಿರುವ ಕುಂಜಾವನದಲ್ಲಿ [ಗುಂಜಾರಣ್ಯದಲ್ಲಿ] ಅಘೋರ ತಪಸ್ಸನ್ನು ಆಚರಿಸುತ್ತ ಅದಕ್ಕೆ ತಕ್ಕುದಾದ ಫಲಶ್ರುತಿ ಕಾಣದೇ ಇರುವಾಗ ದೇವರ್ಷಿ ನಾರದರು ಅಲ್ಲಿಗೆ ಬರುತ್ತಾರೆ. ಬಂದ ನಾರದರಿಗೆ ತನ್ನ ಸಂಕಷ್ಟವನ್ನು ನಿವೇದಿಸಿದ ವಾಲಿಖಿಲ್ಯರಿಗೆ ಈ ಸ್ಥಳದ ಹಾಗೂ ಮನುಕುಲದ ಹಿತ ದೃಷ್ಟಿಯಿಂದ ಇಲ್ಲಿ ಪೂರ್ಣಕಳೆಯ ಗಣೇಶನನ್ನು ಸ್ಥಾಪಿಸಿ ಪೂಜಿಸಲು ಸಲಹೆನೀಡುತ್ತಾರೆ. ಪೂರ್ಣಕಳೆಯ ಗಣೇಶ ಆಗಬೇಕೆಂದರೆ ಸ್ವತಃ ಗಣೇಶ ಭೂಮಿಗೆ ಬರಬೇಕು, ಇದಕ್ಕೆ ಉಪಾಯವೇನೆಂದು ಕೇಳಲಾಗಿ ನಾರದರು ತಾನು ಗಣೇಶನನ್ನು ಕರೆತರುವುದಾಗಿ ಕೈಲಾಸಕ್ಕೆ ತೆರಳುತ್ತಾರೆ. ಕೈಲಾಸಕ್ಕೆ ನಾರದರು ತೆರಳಿದ ವೇಳೆ ಅಪ್ಪ-ಅಮ್ಮನ ಮಧ್ಯೆ ಸಿಹಿತಿಂಡಿಗಾಗಿ ಹಠಹಿಡಿದ ಬಾಲಗಣಪ ಕಾಣಸಿಗುತ್ತಾನೆ.[ಗಣಪತಿ ಮೂಲರೂಪದಿಂದ ಪರಬ್ರಹ್ಮಸ್ವರೂಪವಾಗಿದ್ದರೂ ಬಹು ಪ್ರಚಲಿತವಿರುವ ಗಣಪತಿಯ ಅವತಾರಗಳಲ್ಲಿ ಪಾರ್ವತೀಸುತ ಕೂಡ ಒಂದು ಅವತಾರ!] ಹೀಗೆ ಕಂಡ ಗಣಪನನ್ನು ಮೂಲರೂಪದಿಂದ ಪ್ರಾರ್ಥಿಸಲು ತನಗೆ ದಿನಂಪ್ರತಿ ಎಡಬಿಡದೆ ಸಿಹಿತಿಂಡಿ-ಮೋದಕ-ಪಂಚಕಜ್ಜಾಯ ಇವನ್ನೆಲ್ಲ ಕೊಡುವ ಹಾಗಿದ್ದರೆ ಭೂಮಿಗೆ ನಾರದರ ಜೊತೆ ಬರುವುದಾಗಿ ಭರವಸೆ ಕೊಡುತ್ತಾನೆ. ಅದನ್ನೇ ನಿರೀಕ್ಷಿಸುತ್ತಿದ್ದ ನಾರದರು "ತಥಾಸ್ತು" ಎಂದುಬಿಡುತ್ತಾರೆ,ಗಣಪನನ್ನು ಭೂಮಿಗೆ ಕರೆತರುತ್ತಾರೆ. ಭುವಿಗೆ ಬಂದ ವಿಘ್ನೇಶ್ವರ ವಾಲಖಿಲ್ಯರ ವಿಘ್ನಗಳನ್ನೆಲ್ಲ ತೊಡೆದು ಹಾಕಿ ಹೊರಡಲು ಕಾತುರನಾಗಿದ್ದ ವೇಳೆ, ಮುನಿಯ ಸತತಕೋರಿಕೆಯ ಮೇರೆಗೆ ದೇವಾನುದೇವತೆಗಳೆಲ್ಲ ಸೇರಿ ಗಣಪತಿಯನ್ನು ಅಲ್ಲೇ ಶಾಶ್ವತವಾಗಿ ಅಂಶರೂಪದಿಂದ ಉಳಿಯುವಂತೆ ಪ್ರಾರ್ಥಿಸುತ್ತಾರೆ. ಅನೇಕಸಲ ಒಲ್ಲೆ ಎಂದ ಗಣೇಶ ಅಂತೂ ಸಮ್ಮತಿಸುತ್ತಾನೆ. ದೇವಶಿಲ್ಪಿ ವಿಶ್ವಕರ್ಮ ಅತೀ ಅಪರೂಪದ ವಿಗ್ರಹವೊಂದನ್ನು ಕಡೆದುಕೊಡುತ್ತಾನೆ, ಸ್ವತಃ ನಾರದರು ಅಭೂತಪೂರ್ವವಾದ ಒಂದು ಮುಹೂರ್ತ ಹುಡುಕಿ ಆ ಗಣಪನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪ್ರಥಮ ಪೂಜೆ ನಡೆಸುತ್ತಾರೆ. ಗಂಧರ್ವ-ಯಕ್ಷ, ಕಿನ್ನರ-ಕಿಂಪುರುಷರು ನಾ ನಾ ವಾದ್ಯಗಳೊಂದಿಗೆ ಗಾಯನ,ನರ್ತನಾದಿಗಳಿಂದ ಗಣೇಶನನ್ನು ಸಂಪ್ರೀತಗೊಳಿಸುತ್ತಾರೆ. ದೇವಗಣ ಜಯಜಯಕಾರವನ್ನು ಮೊಳಗಿಸುತ್ತದೆ. ಹೀಗೆ ಬ್ರಹ್ಮ-ವಿಷ್ಣು-ಮಹೇಶ್ವರಾದಿ ಸಕಲರೂ ಅಷ್ಟದಿಕ್ಪಾಲಕರೂ,ಅಷ್ಟಮಾತೃಕೆಗಳೂ ಬಂದು ಆ ಸಮಾರಂಭವನ್ನು ಬಹಳ ವಿಜೃಂಬಣೆಯಿಂದ ಆಚರಿಸುತ್ತಾರೆ. ಆನಂದತುಂದಿಲನಾದ ಗಜಾನನ ಪ್ರಸನ್ನನಾಗಿ, ಭುವಿಯ ಭಕ್ತರನ್ನೆಲ್ಲ ಅವರ ಇಷ್ಟಾರ್ಥನೆರವೇರಿಸುತ್ತ ಬಹಳ ಪ್ರಸಿದ್ಧನಾಗುತ್ತಾನೆ. ಇಂದಿಗೂ ಬೆಳಗಿನಜಾವ ಬ್ರಾಹ್ಮಿ ಮುಹೂರ್ತದಲ್ಲಿ ನಾರದರು ಮೊದಲ ಪೂಜೆಯನ್ನು ನಡೆಸುತ್ತಾರೆಂಬ ಪ್ರತೀತಿ ಜನಜನಿತವಾಗಿದೆ.


ಇತಿಹಾಸದಲ್ಲಿ : ಗಣೇಶ ಮಾತೋಬಾರ ಶ್ರೀ ಸಿದ್ಧಿವಿನಾಯಕನಾದ ಬಗೆ
ಇಂತಹ ಗಣಪತಿಗೆ ದಿನಾಲೂ ಕೊಪ್ಪರಿಗೆಯಲ್ಲಿ ಬೆಲ್ಲದಿಂದ ತಯಾರಿಸಿದ ’ಪಂಚಕಜ್ಜಾಯ’ವೆಂಬ ತಿನಿಸನ್ನು ನಿವೇದಿಸಲಾಗುತ್ತದೆ. ದಿನವೂ ಹತ್ತಾರು ಕ್ವಿಂಟಾಲ್ ’ಪಂಚಕಜ್ಜಾಯ’ ಮಾಡಿ ನಿವೇದಿಸುತ್ತಾರೆ. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷ್ ಮಾಮಲೇದಾರನೊಬ್ಬ ಇಡಗುಂಜಿಗೆ ಬೇಟಿ ಕೊಡುತ್ತಾನೆ. ಅಲ್ಲಿನ ನೈವೆದ್ಯಕ್ಕೆ ಅಷ್ಟೆಲ್ಲ ಪದಾರ್ಥಗಳನ್ನು ಬಳಸುವುದನ್ನು ಕಂಡು " ವ್ಹಾಟ್ ಏ ವೇಸ್ಟ್ " ಅನ್ನುತ್ತಾನೆ. ಆಗ ಅಲ್ಲಿನ ಅರ್ಚಕರು ಗಣಪತಿಗೆ ಅಷ್ಟು ದಿನಾಲೂ ಬೇಕೆಂದೂ ಅದನ್ನು ಗಣೇಶ ತಿನ್ನುತ್ತಾನೆಂತಲೂ ತಿಳಿಸುತ್ತಾರೆ. ಬ್ರಿಟಿಷ್ ಮಾಮಲೇದಾರನಿಗೆ ಗಣಪತಿಯನ್ನು ಟೆಸ್ಟ್ ಮಾಡುವ ಹುಚ್ಚು ಹುಟ್ಟುತ್ತದೆ, ಅವನು ಅರ್ಚಕರಿಗೆ ಗಣಪತಿ ಕೊಪ್ಪರಿಗೆಯಷ್ಟು ಪಂಚಕಜ್ಜಾಯವನ್ನು ತಿನ್ನುವುದನ್ನು ತೋರಿಸೆಂದೂ ಒಂದೊಮ್ಮೆ ಅದು ಸುಳ್ಳಾದರೆ ಅರ್ಚಕರನ್ನು ಕಾರಾಗ್ರಹಕ್ಕೆ ಕಳುಹಿಸುವುದಾಗಿಯೂ ತಾಕೀತು ಮಾಡುತ್ತಾನೆ. ತಯಾರಿ ನಡೆಯುತ್ತದೆ. ಬ್ರಿಟಿಷ್ ಮಾಮಲೇದಾರ ಬೆಳ್ಳಿಯ ಹಗ್ಗವೊಂದನ್ನು ಮಾಡಿಸಿ ತರುತ್ತಾನೆ. ಅದನ್ನು ಗಣಪತಿಯ ಹೊಟ್ಟೆಗೆ ಕಟ್ಟಿ ಕುಣಿಕೆಯಿಂದ ಬಿಗಿಯಲಾಗುತ್ತದೆ. ಮಹಾಪೂಜೆ ಆದ ಮೇಲೆ ಎಲ್ಲರ ಎದುರು ಕೊಪ್ಪರಿಗೆಯನ್ನು ಗರ್ಭಗುಡಿಯ ಒಳಭಾಗದಲ್ಲಿ ದೇವರ ಎದುರು ಇಟ್ಟು ಬಾಗಿಲನ್ನು ಹಾಕಲಾಗುತ್ತದೆ. [ಒಂದೇ ಬಾಗಿಲು ಬಿಟ್ಟು ಬೇರೆ ಯಾವ ಬಾಗಿಲೂ ಇರುವುದಿಲ್ಲ ಎಂಬುದು ನೆನಪಿರಲಿ] ಅರ್ಚಕರಿಗೆ ಅಯೋಮಯ. ಹೊರಗಡೆ ಎಲ್ಲರ ಜೊತೆ ಕುಳಿತುಕೊಂಡು ಮನಸ್ಸಿನಲ್ಲಿ ಸದಾ ಪೂಜಿಸುವ ಗಣೇಶನನ್ನು ವಿಧ ವಿಧವಾಗಿ ಪ್ರಾರ್ಥಿಸುತ್ತಾರೆ. ಯತಾವತ್ ಕೊಟ್ಟ ಸಮಯ ಮೀರುತ್ತದೆ, ಬಾಗಿಲು ತೆರೆಯುತ್ತಾರೆ! ಏನಾಶ್ಚರ್ಯ ! ಕೊಪ್ಪರಿಗೆ ತುಂಬಾ ಇದ್ದ ಇದ್ದ ಪಂಚಕಜ್ಜಾಯ ಖಾಲಿ ಖಾಲಿ. ಕಟ್ಟಿದ ಬೆಳ್ಳಿಯ ಹಗ್ಗ ಎತ್ತಲು ಬರದಷ್ಟು ತುಂಡು ತುಂಡಾಗಿ ಬಿದ್ದಿರುತ್ತದೆ ! ಇದನ್ನು ಬ್ರಿಟಿಷ್ ಮಾಮಲೇದಾರ ಸಾಕ್ಷೀಕರಿಸಿದ್ದಾನೆ ಅಲ್ಲದೆ ತಪ್ಪಿನ ಅರಿವಾಗಿ ಕ್ಷಮಿಸೆಂದು ಪೂಜೆ ಸಲ್ಲಿಸಿ ಅಂದಿನಿಂದ ಬ್ರಿಟಿಷ್ ಸರಕಾರದ ವತಿಯಿಂದ ಪ್ರತಿದಿನ ೪ರೂಪಾಯಿ ’ತಸ್ತೀಕ್’ ಅನ್ನು ಪಂಚಕಜ್ಜಾಯಕ್ಕೆ ಅಂತ ಘೋಷಣೆ ಮಾಡಿ ಕೊಡಮಾಡುತ್ತಾರೆ. ಇದು ಕಾರವಾರದ ಅಂದಿನ ಬ್ರಿಟಿಷ್ ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಅರ್ಚಕರ ಮಾತು ಉಳಿಸಿದ ಗಣೇಶ ಮಹತಿ ಭಾರವನ್ನು ಹೊತ್ತು, ತನ್ನ ಮಾತೃತ್ವವನ್ನು ಮೆರೆದು ಮಾತೋಬಾರ ಸಿದ್ಧಿವಿನಾಯಕನೆಂದು ಪೂಜೆಗೊಳ್ಳುತ್ತಾನೆ.ಅತ್ಯಂತ ಜಾಗೃತ ಕ್ಷೇತ್ರವಾದ ಇಡಗುಂಜಿ ಇಂದಿಗೂ ಬರುವ ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಗಣಪತಿ ವಿಶ್ವವ್ಯಾಪಿಯಾಗಿದ್ದಾನೆ. ಪ್ರತಿದಿನ ಸಾವಿರಾರು ಭಕ್ತರಿಗೆ ದರುಶನ ನೀಡುವ ಬೆನಕ ವಿಶೇಷ ಹಬ್ಬ ಹರಿದಿನಗಳಲ್ಲಿ, ಸಂಕಷ್ಟ ಚತುರ್ಥಿಗಳಲ್ಲಿ ಲಕ್ಷಾಂತರ ಜನರಿಗೆ ಆಶೀರ್ವದಿಸುತ್ತಾನೆ! ಮಾಹಾ ಚೌತಿ ಮತ್ತು ರಥ ಸಪ್ತಮಿ ಅತೀ ವಿಶೇಷ ಪರ್ವಕಾಲಗಳಾಗಿದ್ದು ಆ ದಿನಗಳಲ್ಲಿ ದಿನವೊಂದಕ್ಕೆ ೫-೬ ಲಕ್ಷ ಜನರಿಗೆ ತನ್ನ ಬಗೆಬಗೆಯ ರೂಪವನ್ನು ತೋರ್ಪಡಿಸುತ್ತಾನೆ ಇಲ್ಲಿನ ಇನ್ನೊಂದು ವಿಶೇಷವೆಂದರೆ ವಿಗ್ರಹದ ಮೇಲೆ ಹೂವನ್ನೋ , ಬಟ್ಟೆಯನ್ನೋ ಅಥವಾ ಆಭರಣವನ್ನೋ ಯಾವುದನ್ನೂ ಹೇಗೇ ಇಟ್ಟರೂ ವಿಗ್ರಹ ಬೇರೆಬೇರೆ ರೀತಿಯಲ್ಲಿ ಅಂದವಾಗಿ ಕಾಣುತ್ತದೆ.ಮೂಲ ವಿಗ್ರಹ ದೇವ ಶಿಲ್ಪಿಯದಾದ್ದರಿಂದ ಅಲಂಕರಿಸದೆ ಹಾಗೆ ಬಿಟ್ಟರೆ ಅದರ ಮೂಲರೂಪದಲ್ಲೇ ಈ ಬಾಲರೂಪಿ ದ್ವಿಭುಜ ಗಣಪ ಕಂಗೊಳಿಸುತ್ತಾನೆ. ಸತ್ಯಗಣಪತಿ ವೃತ ಮತ್ತು ಗಣಹೋಮ ಇತ್ಯಾದಿ ಹರಕೆ ಸೇವೆಗಳು ದಿನವೂ ನಡೆಯುತ್ತವೆ . ಯಕ್ಷಗಾನ ಪ್ರಿಯನಾದ ಈತನ ಕಾರಣಿಕ ದೃಷ್ಟಿಯಿಂದ 'ಕೆರೆಮನೆ ಮೇಳ' ಜಗತ್ತನ್ನು ಸುತ್ತಿದ ಮೊದಲ ಯಕ್ಷಗಾನ ಮೇಳವಾಗಿಯೂ,ಸಮಗ್ರ ಕಲೆಯನ್ನು ಸಮರ್ಪಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಕ್ಷಗಾನಕ್ಕೆ ರಾಷ್ಟ್ರಪ್ರಶಸ್ತಿಗಳಿಸಿ ಗೌರವ ತಂದಿತ್ತ ದಿ|ಶ್ರೀ ಶಿವರಾಮ ಹೆಗಡೆ ಹಾಗೂ ಎಲ್ಲಾ ಕೆರೆಮನೆ ಬಳಗದವರು ಗಣಪನ ಕರುಣೆಗೆ ಪಾತ್ರರಾಗಿ ಅವನನ್ನೇ ಆರಾಧ್ಯದೈವವಾಗಿ ಆ ಹೆಸರಿನಿಂದಲೇ ಮೇಳವನ್ನು ನಡೆಸಿಬಂದಿದ್ದಾರೆ. ರಾಜಕಾರಣಿಗಳು,ಮಂತ್ರಿ-ಮಹೋದಯರು-ಸಿನಿಮಾ ತಾರೆಯರು ಇತ್ಯಾದಿ ಎಲ್ಲರೂ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.ಒಟ್ಟಿನಲ್ಲಿ ಈ ಕ್ಷೇತ್ರ ಕಾರಣಿಕ ಪುಣ್ಯಕ್ಷೇತ್ರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ತನ್ನ ಭಕ್ತರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುವ ಈ ದೇವರು ಮಾತನಾಡದೇ ಇದ್ದರೂ 'ಮಾತನಾಡುವ ದೇವರು' ಎಂದೇ ಖ್ಯಾತನಾಮನಾಗಿದ್ದಾನೆ!

ಇಷ್ಟು ಕೇಳಿದ ಮೇಲೆ ನನ್ನ ಕವಿ ಹೃದಯದ ಒಂದು ಹಾಡನೊಂದಿಗೆ ಆತನನ್ನು ಪೂಜಿಸೋಣವೇ ?
ನೆನೆವುದೆನ್ನಮನ............

ನೆನೆವುದೆನ್ನಮನ
ನೆನೆವುದೆನ್ನಮನ
ನೆನೆವುದೆನ್ನಮನ ಶ್ರೀ ಗಜಾನನ
ಕನವರಿಸುವೆ ಸದಾ ನಿನ್ನ ಸನ್ನಿಧಿಯ
ಬೆನಕ ಬಾರಯ್ಯ ಇದೊ ನೂರೆಂಟು ನಮನ

ಬಾಲ ಭಾಸ್ಕರ ನೀನೆ ಕೋಟಿ ಸೂರ್ಯನು ನೀನೆ
ಕಾಲ ಗರ್ಭದಲಿ ಹುದುಗಿ ಕುಳಿತವ ನೀನೆ
ಭಾಲಚಂದ್ರನು ನೀನೆ ಧೂಮ್ರಕೇತುವು ನೀನೆ
ಲೀಲಾ ನಾಟಕ ವಿಕಟ ವಿಘ್ನಹರನು ನೀನೆ

ದೇಶ ಕೋಶಗಳ ಮೀರಿದ ಮಹಿಮಾ
ದಾಶರಥಿಗೆ ಜಯ ಕರುಣಿಸಿದ ಗರಿಮಾ
ಕ್ಲೇಶನಾಶ ವಿಪ್ಲವಹರ ಲಘಿಮಾ
ವೇಷದಿ ಲಿಂಗ ಧರೆಗಿಳಿಸಿಹ ಗಣಿಮಾ

ಮೋದಕ ಪ್ರಿಯ ಬಾರೊ ಮುಗ್ಧರೂಪನೆ ಬಾರೊ
ಸಾಧಕರಿಗೆ ಸಕಲ ಸಿದ್ಧಿಗಳನು ತಾರೊ
ಬಾಧಕಗಳ ನೀಗೆ ಭವಭಯಹರ ಬಾರೊ
ನಾದ ಬ್ರಹ್ಮನೆ ಬಾರೊ ರತ್ನಗರ್ಭನೆ ಬಾರೊ

ರಾಶಿವಿದ್ಯೆಗಳ ಅಧಿಪತಿ ಗಣಪತಿ
ಭಾಷೆ ಸಾಲದು ನಿನಗೆ ನಮಿಸಲು ದಿನಪತಿ
ರೋಷದಿ ಚಂದ್ರನ ಶಪಿಸಿದ ಶ್ರೀಪತಿ
ಪಾಶಾಂಕುಶಧರನೆ ಮಂಗಲದಾರತೀ