ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 14, 2012

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು.....

ಚಿತ್ರಕೃಪೆ : ಅಂತರ್ಜಾಲ
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು.....

ಹಡೆದಮ್ಮ ಪುಣ್ಯಭೂಮಿ ಶ್ರೀಭಾರತಮಾತೆಗೆ ಸಾಷ್ಟಾಂಗ ನಮಸ್ಕಾರಗಳು. ದೇಶಕಾಯುತ್ತಿರುವ ಯೋಧರಿಗೆ ನನ್ನ ಹೃತ್ಪೂರ್ವಕ ನಮನಗಳು. ನನ್ನ ಮಾತುಗಳನ್ನು ಕುತೂಹಲಿಗಳಾಗಿ ನಿರೀಕ್ಷಿಸುತ್ತಿರುವ ನನ್ನ ಸಹಜಾತ ದೇಶಬಾಂಧವರಾದ ನಿಮಗೆಲ್ಲರಿಗೂ ವಂದನೆಗಳು ಮತ್ತು ಶುಭಾಶಂಸನೆಗಳು.

ತಾಯಿ ಭಾರತಿಗೆ ಸ್ವಾತಂತ್ರ್ಯ ಬಂದಾಗ ನಾನು ಹುಟ್ಟಿರಲಿಲ್ಲ! ನನ್ನ ಹುಟ್ಟಿನ ಸಂಕಲ್ಪ ಬಹುಶಃ ಆ ಬ್ರಹ್ಮನಿಗೂ ಇನ್ನೂ ಆಗಿರಲಿಲ್ಲ! ಸ್ವಾತಂತ್ರ್ಯ ಬಂದ ಅನೇಕ ವರ್ಷಗಳ ನಂತರದಲ್ಲಿ ನನ್ನಂತೆಯೇ ಹಲವರು ಜನಿಸಿದ್ದೀರಿ, ಸ್ವಾತಂತ್ರ್ಯದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರೂ ಅದನ್ನು ನೋಡಿದವರೂ ಕೆಲವರಿದ್ದೀರಿ. ಸ್ವಾತಂತ್ರ್ಯದ ಬಗ್ಗೆ ಪಠ್ಯದಲ್ಲಿ ನಾನು ಓದುತ್ತಿರುವಾಗ ಆ ವಯಸ್ಸಿಗೆ ನನಗೆ ಅದರ ಮಹತ್ವ ಗೊತ್ತಾಗುತ್ತಿರಲಿಲ್ಲ. ಅಂದೇನಿದ್ದರೂ ತ್ರಿವರ್ಣ ಬಾವುಟವನ್ನು ಧ್ವಜಕ್ಕೆ ಕಟ್ಟಿ ಹಾರಿಸಿ, ಅದರಿಂದ ಉದುರುವ ಹೂಪಕಳೆಗಳನ್ನು ವೀಕ್ಷಿಸುತ್ತಾ, ಬಲಗೈ ಹಣೆಗೆ ಹಚ್ಚಿ ಜನಗಣಮನ ಹಾಡುವುದಷ್ಟೇ ನಮಗೆ ಸಂತಸ ತರುವ ವಿಷಯವಾಗಿತ್ತು. ಆಮೇಲೆ ನಾವು ಕಾಯುತ್ತಿದ್ದುದು ಕೊನೆಯಲ್ಲಿ ಹಂಚುವ ಮಿಠಾಯಿಗೆ ಮಾತ್ರ! ಆ ಮಧ್ಯೆ ನಾನೂ ಸೇರಿದಂತೇ ಹಲವು ಮಕ್ಕಳ, ಶಿಕ್ಷಕರ, ಊರ ಹಿರಿಯರ ಭಾಷಣಗಳು ಮಂಡಿಸಲ್ಪಡುತ್ತಿದ್ದವಾದರೂ ಅಲ್ಲಿ ಪ್ರಸ್ತಾಪವಾಗುತಿದ್ದ ಗಾಂಧೀಜಿ, ಚಂದ್ರಶೇಖರ್ ಆಜಾದ್, ಮಂಗಲಪಾಂಡೆ, ಭಗತ್ ಸಿಂಗ್, ನೇತಾಜಿ ಸುಭಾಶ್ಚಂದ್ರ ಬೋಸ್,  ಲೋಕಮಾನ್ಯ ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯಿ ಪಟೇಲ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪಿ, ಲಾಲಾ ಲಜಪತರಾಯ್ ಮೊದಲಾದವರ ಜೀವನದ ಬಗ್ಗೆ ತೀರಾ ತಲೆಕೆಡಿಸಿಕೊಳ್ಳದ ವಯಸ್ಸು ಅದಾಗಿತ್ತು. ಬುದ್ಧಿ ತಿಳಿದಾಮೇಲೆ ಅನಿಸಿದ್ದು ನಮ್ಮ ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಜನ ಸ್ವಾರ್ಥರಹಿತರಾಗಿ ಕೆಲಸಮಾಡಿ ಮಡಿದರು ಎಂಬುದು! ಅಂತಹ ಅಸಂಖ್ಯ ಅಮರವೀರರಿಗೆ ನನ್ನ ನಮಸ್ಕಾರಗಳು.

ಸ್ವಾತಂತ್ರ್ಯ ಎಂಬ ಪದದ ಸುತ್ತ ಹತ್ತಾರು ಸರ್ತಿ ಗಿರಕಿ ಹೊಡೆದರೆ ಯಾವುದು ಸ್ವಾತಂತ್ರ್ಯ ಮತ್ತು ಯಾವುದು ಸ್ವೇಚ್ಛಾಚಾರ ಎಂಬುದರ ಅರಿವು ಮೂಡಬಹುದು. ಯಾಕೆಂದರೆ ನಮ್ಮಲ್ಲಿನ ಸದ್ಯದ ರಾಜಕಾರಣಿಗಳ ಅರ್ಥದಲ್ಲಿ ಅವರಮಟ್ಟಿಗೆ ಸ್ವಾತಂತ್ರ್ಯ ಎಂದರೆ ಅದು ಅವರು ನಡೆಸಬಹುದಾದ ಸ್ವೇಚ್ಛಾಚಾರ! ಹಳ್ಳಿಮನೆಯಲ್ಲಿ ಕೂಲಿ ಕೆಲಸಮಾಡುತ್ತಿದ್ದ ವ್ಯಕ್ತಿಯನ್ನು ಮಾತನಾಡಿಸಿದಾಗ ಆತ ಹೇಳಿದ " ಅಯ್ಯೋ ಯಾರ್ ಬಂದ್ರೇನು ಸ್ವಾಮೀ ನಾವ್ ಕೆಲ್ಸ ಮಾಡೋದು ತಪ್ತದಾ ?" ಯಾರು ಬಂದರೂ ಅಷ್ಟೇ ಎಂಬ ಅನಿಸಿಕೆಯಿಂದ ಹೇಳಿದನೋ ಅಥವಾ ಯಾರೂ ತಮ್ಮಂಥವರಿಗೆ ಸಹಾಯ ಮಾಡಲಿಲ್ಲ ಎಂಬ ಕೋಪದಲ್ಲಿ ಹೇಳಿದನೋ ತಿಳಿಯಲಿಲ್ಲ. ಪ್ರಜಾತಂತ್ರ ಎಂಬ ಸೇವಾಕಾರ್ಯ ಏನಿದ್ದರೂ  ಹಣಗಳಿಸಲು ಇರುವಂಥದ್ದು ಎಂಬಂತೇ ಆಗಿಬಿಟ್ಟಿರುವ ಈ ದಿನಗಳಲ್ಲಿ ದೇಶಭಕ್ತರು ಎಂದರೆ ಕೈಲಾಗದವರೇನೋ ಎಂಬ ಭಾವನೆ ಬಂದುಬಿಡುತ್ತದೆ.

ಮಗುವಿಗೆ ಶಿಕ್ಷಣ ಮನೆಯಿಂದ ಆರಂಭ ಅಲ್ಲವೇ? ’ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು’ ಎಂದಿದ್ದಾರಲ್ಲಾ? ಮನೆಯಲ್ಲಿ ಅಮ್ಮ ಯಾವರೀತಿಯ ಸಂಸ್ಕಾರವನ್ನು ಬಾಲ್ಯದಲ್ಲಿ ಕೊಡುತ್ತಾಳೋ, ಸುತ್ತಲ ಪರಿಸರ ಯಾವ ರೀತಿಯ ಸಂಸ್ಕಾರವನ್ನು ಪರೋಕ್ಷವಾಗಿ ಬೋಧಿಸುತ್ತದೋ ಮಗು ಹಾಗೇ ಬೆಳೆಯುತ್ತದೆ! ಶಿವಾಜಿ ಮಹಾರಾಜರಿಗೆ ಅವರಮ್ಮ ಜೀಜಾಬಾಯಿ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದಳಂತೆ. ಹಾಗೆ ಕಥೆಹೇಳುವಾಗ ಅವಳಿಗೆ ತನ್ನ ಮಗನೊಬ್ಬ ಮಹಾರಾಜನಾಗುವವ ಎಂಬುದು ತಿಳಿದಿರಲಿಲ್ಲ! ಸಮರ್ಥ ರಾಮದಾಸರಂತಹ ಶ್ರೇಷ್ಠ ಗುರುವಿನ ಪರಮಾನುಗ್ರಹದಿಂದಲೂ ಮಾರ್ಗದರ್ಶನದಿಂದಲೂ ಶಿವಾಜಿ ಪ್ರಬಲ ಸಾಮ್ರಾಜ್ಯವನ್ನು ಕಟ್ಟುವುದು ಸಾಧ್ಯವಾಗುತ್ತದೆ; ಮೊಘಲರನ್ನು ಹತ್ತಿಕ್ಕುವುದು ಸಾಧ್ಯವಾಗುತ್ತದೆ. ಪೂರ್ವೇತಿಹಾಸದಲ್ಲಿ ಈ ದೇಶದ ಅನೇಕ ರಾಜಮಹಾರಾಜರುಗಳೂ ಚಕ್ರವರ್ತಿಗಳೂ ಹಾಗೆ ಅವರವರ ಹುಟ್ಟಿನ ಪರಿಸರದ ಸತ್ವವನ್ನು ಹೀರಿ ಬೆಳೆದವರೇ ಆಗಿದ್ದಾರೆ. ಪ್ರಪಂಚಕ್ಕೆ ರಾಮಾಯಣ  ಮತ್ತು ಮಹಭಾರತ ಎಂಬ ದಿವ್ಯ ಜೀವನಗಾಥೆಗಳನ್ನು ಕೊಟ್ಟ ಶ್ರೇಷ್ಠ ದಾರ್ಶನಿಕರ, ಋಷಿಸಂಸ್ಕೃತಿಯ ಮನುಕುಲ ನಮ್ಮದಾಗಿದೆ.

ದೇಶೋದ್ಧಾರದ ಹೆಸರಿನಲ್ಲಿ ಕೆಲಸಕ್ಕೆ ಬಾರದವರನ್ನು ಶಿಕ್ಷಕರನ್ನಾಗಿ ನೇಮಿಸಿದರೆ, ಪುಸ್ತಕ ತಲೆಕೆಳಗಾಗಿ ಹಿಡಿದು ಓದುವ ಮಂದಿ ಅದೇನು ಕಲಿಸಿಯಾರು? ಕೆಲಸ ಕೊಡಬಾರದು ಎಂಬರ್ಥವಲ್ಲ...ಯಾರಿಗೆ ಯಾವ ಕೆಲಸಕೊಟ್ಟರೆ ಯೋಗ್ಯ ಎಂಬುದನ್ನು ಆಡಳಿತದಲ್ಲಿರುವವರು ತಿಳಿದು ಕೊಡಬೇಕು. ದಾನಮಾಡುವಾಗಲೂ ಸತ್ಪಾತ್ರನಿಗೆ ದಾನ ಮಾಡು ಎಂಬ ಮಾತೊಂದಿದೆಯಲ್ಲಾ ಹಾಗೇ ಯೋಗ್ಯತೆಯನ್ನು ಗುರುತಿಸಿ ಜವಾಬ್ದಾರಿಯನ್ನು ಕೊಡುವ ಕೆಲಸ ನಡೆಯಬೇಕಿತ್ತು; ಆದರೆ ದಶಕಗಳಿಂದ ನಡೆದುಕೊಂಡು ಬಂದಿರುವುದು ಮೀಸಲಾತಿ! ಮೀಸಲಾತಿಯಲ್ಲಿ ವಿದ್ಯೆಕಲಿಸಲು ಬಾರದವ ಶಿಕ್ಷಕನಾಗಿ ಹುದ್ದೆ ಪಡೆದ-ಬೋಧಿಸಿದ!! ಆತನಿಂದ ಯಾವ ಮಟ್ಟದ ವಿದ್ಯೆಯನ್ನು ವಿದ್ಯಾರ್ಥಿಗಳು ಪಡೆಯಲು ಸಾಧ್ಯ? ಚಾಲಕನೊಬ್ಬ ಸರಿಯಾಗಿ ವಾಹನ ಚಲಿಸದಿದ್ದರೆ ಪ್ರಯಾಣಿಕರ ಕಥೆ ಏನು? ಅದೇ ರೀತಿ  ಶಾಲೆಯಲ್ಲಿ ತರಗತಿಯೆಂಬ ಬಸ್ಸಿನ ಚಾಲಕನಾಗುವ ಶಿಕ್ಷಕನಿಗೆ ಚಾಲನೆಯೇ ಬರದಿದ್ದರೆ ಅಥವಾ ಅಲ್ಪಸ್ವಲ್ಪ ಬರುತ್ತಿದ್ದರೆ ಅಪಘಾತ ಕಟ್ಟಿಟ್ಟದ್ದು!  ಶಿಕ್ಷಕ ಒಂದರ್ಥದಲ್ಲಿ ಗುರುವೇ ಆಗಿರುತ್ತಾನೆ. ಇವತ್ತಿನ ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ನಾವು ದುಶ್ಶಾಸನನಂತಹ, ಕೀಚಕನಂತಹ ಶಿಕ್ಷಕರನ್ನು ಕಾಣುತ್ತಲೇ ಇರುತ್ತೇವೆ. 

ಇವತ್ತಿನ ಮಾಧ್ಯಮಗಳು ನೇರವಾಗಿ ತೋರಿಸುವ ಕಾಮಪ್ರಚೋದಕ ದೃಶ್ಯಗಳು ಸಹಜವಾಗಿ ಹಲವರಿಗೆ ತೊಂದರೆಯನ್ನುಂಟುಮಾಡುತ್ತವೆ. ವರದಿಗಳ ನೆಪದಲ್ಲಿ ಅಲ್ಲಿ ಬಿಂಬಿತವಾಗುವ ನೀತಿಬಾಹಿರವಾದ ವ್ಯವಹಾರಗಳ ಮಾಹಿತಿಗಳ ಮಹಾಪೂರ ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ಅಧೋಗತಿಯಲ್ಲಿ ಅಗಾಧ ಪರಿಣಾಮ ಬೀರುತ್ತವೆ; ಇಂತಹ ಮಕ್ಕಳು ಹಲವರು ಮುಂದೆ ಶಿಕ್ಷಕರೋ, ರಾಜಕಾರಣಿಗಳೋ, ವೈದ್ಯರೋ, ತಂತ್ರಜ್ಞರೋ, ಕಲಾವಿದರೋ ಇನ್ನೇನೋ ಆದರೂ ಅವರ ಮನದಲ್ಲಿ ಕುಳಿತ ವಿಕೃತ ಛಾಯೆ ಹೋಗುವುದೇ ಇಲ್ಲ. ತುಂಬಿದ ಸಭೆಯಲ್ಲಿ ದುಶ್ಶಾಸನ ದ್ರೌಪದಿಯ ಸೀರೆಯನ್ನು ಸೆಳೆದ ಎಂಬುದನ್ನು ನಾವೆಲ್ಲಾ ಕೇಳಿದ್ದೆವು ಅಷ್ಟೇ ಹೊರತು ಕಂಡಿರಲಿಲ್ಲ; ಆದರೆ ತುಂಬಿದ ವಿಧಾನಸೌಧದಲ್ಲಿ ನೀಲಿಚಿತ್ರಗಳನ್ನು ನಿರಂತರ ನೋಡುವ ’ಜನನಾಯಕ’ರೆನಿಸಿದ ಮಂದಿ ಇಂದು ಎಲ್ಲೆಲ್ಲೂ ಇದ್ದಾರೆ! ಅಂಥವರಿಗೆ ಶಿಕ್ಷೆಗಿಂತಾ ರಕ್ಷಣೆ ಒದಗಿಸುವುದು ಅವ್ರದೇ ಪಕ್ಷದ ಕೆಲವು ಪ್ರಮುಖರ ಕೈವಾಡವಾಗುತ್ತದೆ. ಸಗರ ಚಕ್ರವರ್ತಿಯ ೬೦,೦೦೦ ಪುತ್ರರು ಹಿಂದಕ್ಕೆ ದೇಶದಲ್ಲಿ ಭೂಮಿಯನ್ನು ಬಗೆದು ನಿರ್ನಾಮವಾದರು ಎಂಬುದು ಅನೇಕರಿಗೆ ತಿಳಿದಿರಬಹುದು, ಆದರೆ ಅದೇ ಕೆಲಸವನ್ನು ಈ ನಮ್ಮ ಕರ್ನಾಟಕವೂ ಸೇರಿದಂತೇ ದೇಶದ ಅನೇಕಕಡೆ ಧೂರ್ತ ರಾಜಕಾರಣಿಗಳು ನಡೆಸಿಯೇ ಇದ್ದಾರೆ; ಭೂಮಿಯ ಒಡಲನ್ನೇ ಬಗೆದಿದ್ದಾರೆ. ಜನಸಂಖ್ಯೆ ಜಾಸ್ತಿಯಾಗುತ್ತಾ ಘನ/ದ್ರವತ್ಯಾಜ್ಯಗಳೂ ರಾಸಾಯನಿಕಗಳೂ ಪುಣ್ಯನದಿಗಳನ್ನು ಸೇರಿ ಅವುಗಳ ಪಾವಿತ್ರ್ಯತೆಯನ್ನು ದಿನೇ ದಿನೇ ಹಾಳುಗೆಡವುತ್ತಿವೆ; ಗಂಗೆ ಹರಿಯುತ್ತಾ ಮುಂದೆ ಮಲಿನವಾಗಿದ್ದಾಳೆ. ಹಣಕ್ಕಾಗಿ ಕೊಲೆ-ಸುಲಿಗೆ-ದರೋಡೆಗಳು ಹೆಚ್ಚುತ್ತಲೇ ಇವೆ. ದಿಢೀರ್ ಶ್ರೀಮಂತಿಕೆಗೆ ಅಡ್ಡದಾರಿಯಲ್ಲಿ ಪ್ರಯತ್ನಗಳೂ ಕೂಡ ಹಾಗೇ ಮುಂದುವರಿಯುತ್ತಲೇ ಇವೆ. ಶರವೇಗದಲ್ಲಿ ಓಡಾಡಲಿಕ್ಕಾಗಿ ಅಗಲಗಲದ ಪಥಗಳು ನಿರ್ಮಾಣಗೊಳ್ಳುವ ನೆಪದಲ್ಲಿ ಅಳಿದುಳಿದ ಕಾಡುಗಳೂ ಗಿಡಮರಗಳೂ ಕಡಿಯಲ್ಪಡುತ್ತಿವೆ. ಎಲ್ಲೆಲ್ಲೂ ಭೂಮಿ-ಸೈಟು ಕಬಳಿಕೆಯ ವ್ಯವಹಾರ ಜಾಸ್ತಿಯಾಗುತ್ತಿದೆ. ಬ್ರಷ್ಟಾಚಾರಿಯೇ ಈ ಕಡೆ ಬ್ರಷ್ಟಾಚಾರ ನಿರ್ಮೂಲನೆಯ ಆಂದೋಲನಕ್ಕೆ ಚಾಲನೆ ನೀಡುತ್ತಾನೆ ಮತ್ತು ತನ್ನ ಬ್ರಷ್ಟಾಚಾರ ಕಾರ್ಯವನ್ನು ಆ ಕಡೆಯಿಂದ ಮುಂದುವರಿಸುತ್ತಾನೆ! ನೀತಿ ಬೋಧೆಯನ್ನು ನೀಡುವ ಅನೇಕ ಜನ ನೀತಿ ತಪ್ಪಿ ನಡೆದ ಹೆಜ್ಜೆಗುರುತುಗಳು ಕಾಣುತ್ತವೆ.  

ಇದನ್ನೆಲ್ಲಾ ನೋಡುತ್ತಿರುವಾಗ ಕೆಲವೊಮ್ಮೆ ಅನಿಸುತ್ತದೆ: ಪೂರ್ವಜರು ಹಾಕಿಕೊಟ್ಟ ಆದರ್ಶಗಳು ಕೇವಲ ವೇದಿಕೆಯ ಭಾಷಣಗಳಿಗೆ ಸೀಮಿತವಾಗಿವೆ. ನಾವೆಲ್ಲಾ ಓದುವಾಗ ಪ್ರಾಥಮಿಕ ಶಾಲೆಯಲ್ಲಿ ’ಕಥಾರೂಪ ಇತಿಹಾಸ’ಎಂಬ ಪಠ್ಯವೊಂದಿತ್ತು. ಆ ಕಾಲದಲ್ಲೇ ಸಚಿತ್ರವಾಗಿ ಅಚ್ಚಿಸಲಾಗಿದ್ದ ಆ ಹೊತ್ತಗೆ ನನಗಂತೂ ಬಹಳ ಮುದನೀಡಿತ್ತು. ರಾಜಕಾರಣಿಗಳ ವಿಕೃತ ಧೋರಣೆಯಿಂದ, ವೋಟಿಗಾಗಿ ಒಡೆದಾಳುವ ನೀತಿಯಿಂದ ಇಂದು ಅಂತಹ ಪಠ್ಯಗಳು ಇಲ್ಲವೇ ಇಲ್ಲ. ಯಾವುದು ನಿಜವಾದ ನಮ್ಮ ಇತಿಹಾಸವೋ ಅದರ ಬದಲು ಕೇವಲ ಬ್ರಿಟಿಷರ ಬಗ್ಗೆ ಹೇಳುವುದೇ ಇತಿಹಾಸವಾಗಿ ಬಿಂಬಿತವಾಗುತ್ತದೆ. ರಾಮಾಯಣ ಮಹಾಭಾರತಗಳು ಈ ನೆಲದ ಮೂಲ ಇತಿಹಾಸಗಳೇ ಹೊರತು ಅವು ಕೇವಲ ಮಾಹಾಕಾವ್ಯಗಳಲ್ಲ! ಯಾರನ್ನೋ ಒಲಿಸಿಕೊಳ್ಳುವ ಸಲುವಾಗಿ ಹಿಂದೂಸ್ಥಾನದ ಮೂಲನಿವಾಸಿಗಳ ಆಶಯಗಳನ್ನೂ ಆದರ್ಶಗಳನ್ನೂ ಬಲಿಕೊಡಬೇಕಾಗಿಲ್ಲ. ಯಾರು ಇಲ್ಲಿಗೆ ಹೊರಗಿನಿಂದ ಬಂದರೋ ಅವರು ಇಲ್ಲಿನ ನಮ್ಮ ಸಂಸ್ಕೃತಿಯನ್ನು ಅಭ್ಯಸಿಸಿ ನಮಗೆ ತೊಂದರೆಯಾಗದಂತೇ ಬದುಕಬೇಕಾದ್ದು ಆಗಬೇಕಾದ ಕೆಲಸ; ವಿಪರ್ಯಾಸ ಎಂದರೆ ರಾಜಕೀಯದ ಹೊಲಗೇಡಿನಲ್ಲಿ ಎಲ್ಲದಕ್ಕೂ ಕೆಟ್ಟಬಣ್ಣಹಚ್ಚುವಲ್ಲಿ ಧೂರ್ತರು ನಿರತರಾಗಿದ್ದಾರೆ. ಭಗವದ್ಗೀತೆಯನ್ನು ಇಡೀ ಜಗತ್ತಿನ ಜನ ಮೆಚ್ಚಿದ್ದಾರೆ-ಆದರೆ ನಮ್ಮಲ್ಲಿನ ವೋಟಿನ ರಾಜಕಾರಣಿಗಳು ಮೆಚ್ಚುವುದಿಲ್ಲ! ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಪಾಠಗಳನ್ನು ಬೋಧಿಸುವ ಅಂತಹ ಮಾರ್ಗದರ್ಶಕ ಮ್ಯಾನೇಜ್ಮೆಂಟ್ ಗ್ರಂಥವನ್ನು ಈ ಜಗತ್ತಿನಲ್ಲಿ ಯಾರೇ ಕೊಂಡಾಡಿದರೂ ರಾಜಕಾರಣಿಗಳಿಗೆ ಅದರಲ್ಲಿ ಹಿಂದೂಮತ ಮಾತ್ರ ಕಾಣಿಸುತ್ತದೆ! ಗೀತೆಯ ಕೆಲವು ಮಾಹಿತಿಗಳನ್ನು ಪಠ್ಯದಲ್ಲಿ ಅಳವಡಿಸ ಹೊರಟರೆ ಅದಕ್ಕೆ ಅಡ್ಡಗಾಲು ಹಾಕುವಲ್ಲಿ ವೋಟ್ಬ್ಯಾಂಕ್ ರಾಜಕಾರಣಿಗಳು ಕುತಂತ್ರ ನಡೆಸುತ್ತಾರೆ.

ಸಂವಿಧಾನದಲ್ಲಿರುವ ಅಷ್ಟೂ ವಿಷಯಗಳಿಗೆ ಕಾನೂನು ರೀತಿಯಲ್ಲಿ ಕಳ್ಳಮಾರ್ಗಗಳನ್ನು ಹುಡುಕಿಕೊಂಡ ರಾಜಕಾರಣಿಗಳು ಸಂವಿಧಾನವನ್ನು ಪರಿಷ್ಕರಿಸಲು ಮುಂದಾಗುವುದಿಲ್ಲ. ಸ್ವಿಸ್ ಬ್ಯಾಂಕಿನಲ್ಲಿ ಠೇವಿರಿಸಿದ ಕಪ್ಪುಹಣವನ್ನು ತರುವುದಕ್ಕೆ ಯಾರಿಗೂ ಮನಸ್ಸಿಲ್ಲ; ಭಾರತ ಬಡರಾಷ್ಟ್ರವಲ್ಲ, ಆದರೆ ಬಡತನವೆಂಬ ಸೋಗುಹಾಕಿದ ಕೆಲವುಜನ ಹಾಗೆ ಹೇಳುತ್ತಿದ್ದಾರೆ. ಅಂಥವರು ವಿದೇಶಗಳಲ್ಲಿ ಠೇವು ಇಟ್ಟ, ಹೂಡಿಕೆಮಾಡಿದ ಹಣ ಹಾಗೇ ಹೋಗಿಬಿಟ್ಟಿದ್ದರೆ ಆಗ ಸರಿಯಾಗುತ್ತಿತ್ತು! ದೇಶದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಮದುವೆ-ಮಂಗಲಕಾರ್ಯಗಳಲ್ಲಿ ತಿಂದು ಬಿಸಾಡಿದ ಎಂಜಲು ಎಲೆಗಳಲ್ಲಿ ಸಿಗುವ ಮಿಕ್ಕ ಕೂಳಿಗಾಗಿ ಬೀದಿನಾಯಿ-ಹಂದಿಗಳ ಜೊತೆ ಸೆಣಸಿ ಬದುಕುವ ಅನಾಥರಿದ್ದಾರೆ. ಬಿಸಿಲ ಬೇಗೆಯನ್ನು ಸಹಿಸಿ ಬಿಂದಿಗೆ ಹಿಡಿದು ಕಿಲೋಮೀಟರುಗಟ್ಟಲೆ ಸಾಗಿ ಕುಡಿಯುವ ನೀರಿಗಾಗಿ ನಿತ್ಯವೂ ಹವಣಿಸುವ ಜನ ಇದ್ದಾರೆ. ಯಾವುದೋ ನೆಪದಲ್ಲಿ ಮನೆ-ಮಠವನ್ನು ಕಳೆದುಕೊಂಡ ನಿರ್ಗತಿಕರಿದ್ದಾರೆ. ವಿದೇಶೀ ಸಂಸ್ಕೃತಿಯ ಮುನ್ನುಗ್ಗುವಿಕೆಯ ಪ್ರಲೋಭನೆಯಿಂದ ಮಕ್ಕಳಿಂದ ವೃದ್ಧಾಶ್ರಮಕ್ಕೆ ತಳ್ಳಲ್ಪಟ್ಟ ಮಾತಾಪಿತೃಗಳಿದ್ದಾರೆ. ಲಿವ್-ಇನ್/ಲಿವ್-ಔಟ್ ವ್ಯವಹಾರಗಳು ಬಂದು ನಮ್ಮ ಮೂಲ ಸಂಸ್ಕೃತಿ ಬಲಿಯಾಗಿ ಸಮಾಜ ನೈತಿಕವಾಗಿ ಹಡಾಲೆದ್ದು ಹೋಗುತ್ತಿದೆ. ’ಸ್ತ್ರೀಯೊಬ್ಬಳು ಕಲಿತರೆ ಶಾಲೆಯೊಂದನ್ನು ತೆರೆದಂತೇ’ ಎಂಬುದು ಹಿಂದಿನಮಾತು ಈಗ ಅದು ಬದಲಾಗಿದೆ: ’ಸ್ತ್ರೀ ಯೊಬ್ಬಳು ಕಲಿತು ಮುಂದೆ ಸಾಗಿದರೆ ಅಪ್ಪ-ಅಮ್ಮನಿಗೆ ನಾಮ ಬಳಿದಂತೇ’ ಎನ್ನಬೇಕಾದ ಕಾಲ ಬಂದಾಗಿದೆ. ಹೊತ್ತುಹೆತ್ತು ಕಷ್ಟಪಟ್ಟು ತಮ್ಮ ಹೊಟ್ಟೆ-ಬಟ್ಟೆ ಕಟ್ಟಿ ಓದಿಸಿದ ಹುಡುಗಿ ಲವ್-ಜಿಹಾದ್ ನಂತಹ ಮಾರಕ ಪಿಡುಗುಗಳಿಗೆ ತಮ್ಮೆದುರೇ ಬಲಿಯಾಗುವಾಗ, ಯಾರದೋ ಜೊತೆಯಲ್ಲಿ ಲಿವ್-ಇನ್ ನಡೆಸಲು ತೊಡಗಿದಾಗ ಹಡೆದಪ್ಪ-ಅಮ್ಮಂದಿರ ಸ್ಥಿತಿ ಏನಾಗಬೇಡ!  

ಹೇಳುತ್ತಾ ಹೋದರೆ ಒಂದೊಂದೂ ಒಂದೊಂದು ಕಥೆಯಾಗಿ ಧಾರಾವಾಹಿಯಾಗಿ ಪ್ರವಹಿಸುತ್ತದೆ. ಸ್ವಾತಂತ್ರ್ಯಬಂದ ನಂತರ ದೇಶ ನಮಗೇನು ಕೊಟ್ಟಿತು ಎಂಬ ಪ್ರಶ್ನೆಯನ್ನು ಕೇಳುವ ನಾವು ದೇಶಕ್ಕಾಗಿ ಪೂರ್ವಜರು ಕೊಟ್ಟುಹೋದದ್ದನ್ನಾದರೂ ಉಳಿಸಿದ್ದೇವೆಯೇ ಎಂಬುದನ್ನು ಅವಲೋಕಿಸಿದರೆ ಉತ್ತರ ಬಹುತೇಕ ನಕಾರಾತ್ಮಕವಾಗಿ ಸಿಗುವ ಕಾಲ ಬಹಳದೂರ ಇಲ್ಲ! ಆ ಕಾಲ ಬಾರದಿರಲಿ, ನಮ್ಮಲ್ಲಿನ ಉಚ್ಚ ಸಂಸ್ಕೃತಿ, ಪರಿಸರ, ನಿಸರ್ಗ ನಮ್ಮ ಮುಂದಿನ ಪೀಳಿಗೆಗಳಿಗೂ ಇರಲಿ, ಶ್ರೀರಾಮನಾಳಿದ್ದ ಭಾಗಶಃ ಭಾರತ ಸಂಪೂರ್ಣ ರಾಮರಾಜ್ಯವಾಗಲಿ ಎಂದು ಹಾರೈಸುತ್ತಿದ್ದೇನೆ.

ಸತ್ಪುರುಷರ, ಮಹಾಮಹಾ ಮನೀಷಿಗಳ ತಪೋಭೂಮಿಯಾದ ಈ ಭವ್ಯ ಭಾರತದಲ್ಲಿ ಎಲ್ಲಲ್ಲೂ ಪುಣ್ಯಪುರುಷರು ಉದಯಿಸಲಿ; ಅರ್ಷೇಯ ಉಚ್ಚ ಸಂಸ್ಕೃತಿ ಉಳಿದುಕೊಳ್ಳಲಿ ಎಂಬುದು ನನ್ನ ಆಶಯವಾಗಿದೆ.ಇನ್ನೂ ಬೇಕು ಬೇಕು ಎನ್ನುತ್ತಿರುವಂತೆಯೇ ಇನ್ನಿಲ್ಲವಾಗಿ ದಿವ್ಯ ಬೆಳಕಿನಲ್ಲಿ ಲೀನವಾಗುವ ಬಯಕೆ ಆಗಾಗ ಬರುತ್ತದೆ. ಪುಣ್ಯಪುರುಷರ ಯಶೋಗಾಥೆಗಳು ನಮ್ಮೆಲ್ಲರ ಜೀವನಕ್ರಮದಲ್ಲಿ ಅಳವಡಿತವಾಗಲಿ, ತಾಪಸಿಗಳ ತಪದ ಪುಣ್ಯಫಲ ಸದಾ ನಮಗೆ ದೊರಕುತ್ತಿರಲಿ ಎಂದು ಬಯಸುತ್ತೇನೆ. ಹಿಮಾಲಯದ ಉತ್ತುಂಗದಲ್ಲಿ ಈ ದೇಶದ ಉನ್ನತಿಗಾಗಿ ನಿಸ್ವಾರ್ಥರಾಗಿ, ನಿಸ್ಪೃಹರಾಗಿ, ತಮ್ಮ ಐಹಿಕ ಬದುಕನ್ನು ಕಡೆಗಣಿಸಿ ಇಂದಿಗೂ ತಪಗೈಯ್ಯುತ್ತಿರುವ ಅನೇಕ ಸಂತ-ಮಹಂತ-ಸನ್ಯಾಸಿಗಳ ಪದತಲಕ್ಕೆ ಈ ಸಂದರ್ಭದಲ್ಲಿ ನಮಿಸುವ ಬಯಕೆಯಾಗುತ್ತದೆ. ನಮ್ಮಷ್ಟಕ್ಕೇ ನಾವಂದುಕೊಂಡುಬಿಟ್ಟಿದ್ದೇವೆ--’ಓಹೋ ನಾವೇನೂ ಕಮ್ಮಿ ಇಲ್ಲಾ’ಅಂತ! ನಾವು ಅರಿತಿದ್ದು ಏನೂ ಇಲ್ಲಾ ಎಂಬುದು ಸ್ವಲ್ಪ ವಿವೇಚಿಸಿದರೆ ಗೊತ್ತಾಗುತ್ತದೆ. ಅರಿವಿನ ದಾಹ ಇಂಗದ ದಾಹವಾಗುತ್ತದೆ. ನಮ್ಮಲ್ಲಿನ ಕತ್ತಲನ್ನು ಕಳೆದು ಬೆಳಕು ನಮ್ಮೊಳಗೆ ಪ್ರವಹಿಸಲಿ, ಪ್ರಜ್ವಲಿಸಲಿ, ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವಂತಾಗಲಿ ಎಂಬುದು ಉತ್ಕಟೇಚ್ಛೆ. ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರ ಅದ್ಭುತ ಗೀತೆಯ ಗಾಯನವನ್ನು ಕೇಳುತ್ತಾ, ವಿರಮಿಸೋಣ, ಎಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು,

ಜೈ ಹಿಂದ್       ಜೈ ಹಿಂದ್


ಜೈ ಹಿಂದ್ 


4 comments:

  1. ಸ್ವೇಚ್ಛಾಚಾರವು ಸ್ವಾತಂತ್ರ್ಯವಲ್ಲ ಎನ್ನುವ ಪರಿಕಲ್ಪನೆ ಮನುಜನ ಮನದಲೂ ನಾಟಬೇಕಿದೆ.

    ಭಾರತದ ಗಿರಿಮೆಯನ್ನು ಸಾರುವ ಕೆಲಸವೂ ಆಗಬೇಕಿದೆ.

    ಇನ್ನಾದರೂ ಸಂವಿದಾನವನ್ನು ಕಾಲಕ್ಕೆ ತಕ್ಕಂತೆ ಪೂರ್ವಾಗ್ರಹ ಪೀಡಿತವಲ್ಲದೆ ಹೊಸದಾಗಿ ಬರೆಯ ಬೇಕಿದೆ.

    ಸ್ವಾತಂತ್ರ್ಯೋತ್ಸವದ ಈ ಸಿಹಿಗಳಿಗೆಯಲ್ಲಿ ಇದು ಉತ್ತಮ ಬರಹ.

    ReplyDelete
  2. ಮೀಸಲಾತಿಯಲ್ಲಿ ವಿದ್ಯೆಕಲಿಸಲು ಬಾರದವ ಶಿಕ್ಷಕನಾಗಿ ಹುದ್ದೆ ಪಡೆದ-ಬೋಧಿಸಿದ!! ಆತನಿಂದ ಯಾವ ಮಟ್ಟದ ವಿದ್ಯೆಯನ್ನು ವಿದ್ಯಾರ್ಥಿಗಳು ಪಡೆಯಲು ಸಾಧ್ಯ? ಚಾಲಕನೊಬ್ಬ ಸರಿಯಾಗಿ ವಾಹನ ಚಲಿಸದಿದ್ದರೆ ಪ್ರಯಾಣಿಕರ ಕಥೆ ಏನು?.....
    well said

    ReplyDelete
  3. ಮೀಸಲಾತಿಯಲ್ಲಿ ವಿದ್ಯೆಕಲಿಸಲು ಬಾರದವ ಶಿಕ್ಷಕನಾಗಿ ಹುದ್ದೆ ಪಡೆದ-ಬೋಧಿಸಿದ!! ಆತನಿಂದ ಯಾವ ಮಟ್ಟದ ವಿದ್ಯೆಯನ್ನು ವಿದ್ಯಾರ್ಥಿಗಳು ಪಡೆಯಲು ಸಾಧ್ಯ? ಚಾಲಕನೊಬ್ಬ ಸರಿಯಾಗಿ ವಾಹನ ಚಲಿಸದಿದ್ದರೆ ಪ್ರಯಾಣಿಕರ ಕಥೆ ಏನು?

    well said

    ReplyDelete
  4. prasakta vidyamaanada melU beLaku chelliddiri sir......

    uttama baraha....

    thank you...

    ReplyDelete