ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 26, 2010

ಮಾನವ ಜನ್ಮ ದೊಡ್ಡದು-ಅದ ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ'






[ಚಿತ್ರಗಳ ಋಣ : ಅಂತರ್ಜಾಲ ]





'ಮಾನವ ಜನ್ಮ

ದೊಡ್ಡದು-ಅದ

ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ'



[೨೩.೦೨.೨೦೧೦ರ 'ವಿಜಯ ಕರ್ನಾಟಕ' ಲವಲvk ಯಲ್ಲಿ ಬರೆದ +ve ಥಿಂಕಿಂಗ್ ಗೆ ಪ್ರತಿಕ್ರಿಯೆ !]

ಇವತ್ತಿನ ಜೀವ ವಿಕಾಸ ವಾದ, ನಮ್ಮ ನಮ್ಮ ಅನಿಸಿಕೆ ಇವುಗಳನ್ನೆಲ್ಲ ಮೊದಲೇ ತಮ್ಮ ನೈಷ್ಥಿಕ ತಪಸ್ಸಿದ್ಧಿಯಿಂದ ಮುಂದಾಲೋಚಿಸಿದ್ದ ನಮ್ಮ ಋಷಿಮುನಿಗಳು ಎಲ್ಲವನ್ನೂ ಉಪನಿಷತ್ತು-ಪುರಾಣಗಳಲ್ಲಿ ದಾಖಲಿಸಿದರು, ಒಮ್ಮೆ ಹೀಗೆ ಯೋಚಿಸೋಣ ಹಳ್ಳಿಯಲ್ಲಿ ಒಬ್ಬ ಪೆದ್ದ ಇದ್ದ, ಆತನ ಹೆಸರು 'ಗಿಣಿಯ' ಅಂತಿಟ್ಟುಕೊಳ್ಳೋಣ. ಗಿಣಿಯನಿಗೆ ಓದು-ಬರಹ ಬಾರದು, ಅವನ ಪಾಡಿಗೆ ಅವನು ಅಲೆಯುತ್ತಾ , ಬೇಡುತ್ತಾ ಜೀವಿಸುತ್ತಿದ್ದ. ಅವನಿಗೆ ನಾನು ಭಾಷಾಶಾಸ್ತ್ರದ ನಿಘಂಟು ಕೊಟ್ಟರೆ ಆತ ಅದನ್ನು ಬಿಸಾಕಿದರೂ ತಪ್ಪಿಲ್ಲ, ಮಂಗನಿಗೆ ಮಾಣಿಕ್ಯದ ಅರಿವುಂಟೇ ? ಹೀಗೇ ಇವತ್ತು ಇಂಗ್ಲೀಷ್ ಕಲಿತು, ಡಿಗ್ರಿ ಮುಗಿಸಿದ ಮಾತ್ರಕ್ಕೆ ಆಪಾರ ವಿದ್ಯಾ ಆಗರ-ಸಾಗರವಾದ ವೇದ-ಪುರಾಣ-ಮಹಾಕಾವ್ಯಗಳು ನಮಗೆ ಅರ್ಥವಾಗಬೇಕಿಲ್ಲ, ಹೇಗೆ ಬಾವಿಯ ಆಳದಲ್ಲಿ ಬಿದ್ದಿರುವ ಏನನ್ನೋ ಹುಡುಕಲು ನೀರಲ್ಲಿ ಮುಳುಗಬೇಕಾಗುತ್ತದೋ[ಅದಕ್ಕೂ ಜಾಣ್ಮೆ ಬೇಕು,ಯುಕ್ತಿ ಬೇಕು,ಈಜು ಬರಬೇಕು ಅಲ್ಲವೇ ? ] ಆ ಮಹಾನ್ ಗ್ರಂಥಗಳಲ್ಲಿ ಸಂಪೂರ್ಣ ತನ್ಮಗ್ನರಾದರೆ ಮಾತ್ರ ಜ್ಞಾನ ಒಲಿದೀತು. ಅದಕ್ಕೇ ನಮ್ಮ ಸರ್ವಜ್ಞಕವಿ ನೇರವಾಗಿ-ಖಾರವಾಗಿ ಹೇಳುತ್ತಾನೆ -

ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ ಅದನೇನು
ರಂಡೆಯಾಳುವಳೆ | ಸರ್ವಜ್ಞ

ಉಪವಾಸ-ವೃತ ಇವುಗಳನ್ನೆಲ್ಲ ಕೈಗೊಳ್ಳದೆ ರಾಜಕಾರಣಿಗಳ ಥರ ಎಲ್ಲವನ್ನೂ ನುಂಗಿ ಆಪೋಶನ ತೆಗೆದುಕೊಂಡು ಹೊಟ್ಟೆಬೆಳೆಸಿಕೊಂಡು " ನನಗೆ ಸ್ವರ್ಗ ಕೊಡಿ- ತ್ರೀ ಟೈರ್ ಎ.ಸಿ.ಫಸ್ಟ್ ಕ್ಲಾಸ್ " ಅನ್ನಲಿಕ್ಕೆ ಅದು ದುಡ್ಡುಕೊಟ್ಟು ಕೊಂಡು ಕೊಳ್ಳುವ ಯಾವುದೇ ರಂಡೆಯಾಳುವ ಆಸ್ಥಾನವಲ್ಲ ಅಂತಾನೆ ! ಅದರರ್ಥ ನಾವು ಪ್ರಯತ್ನಶಾಲಿಗಳಾಗಬೇಕು, ಇರುವುದರಲ್ಲಿ ಜಪ-ತಪಾದಿ ನಿತ್ಯಾನುಷ್ಥಾನ ಮಾಡಬೇಕು, ಅವಿರತ ಪ್ರಯತ್ನದಿಂದ ಪ್ರಾರ್ಥಿಸಿ, ಒಲಿಸಿ, ಓಲೈಸಿ ಪಡೆಯಬಹುದಾದ ಮಹತ್ತರದ ಸ್ಥಾನ! ಹೇಗೆ ಮುಖ್ಯಮಂತ್ರಿಯಾಗಲು, ಪ್ರಧಾನಮಂತ್ರಿಯಾಗಲು,ರಾಷ್ಟ್ರಪತಿಯಾಗಲು ನಿರಂತರ ರಾಜಕೀಯದ ಒಲವು, ಒತ್ತಾಸೆ, ಅರ್ಪಣೆ-ತಲ್ಲೀನತೆ, ತಕ್ಕ ಮಟ್ಟದ ವಿದ್ಯೆ , ಆಡ್ಯತೆ, ಅರ್ಹತೆ ಬೇಕೋ ಹಾಗೇ ಇಲ್ಲಿಕೂಡ ಅದಕ್ಕೆ ಅದಕ್ಕಿಂತ ಹಿರಿದಾದ 'ಇಂದ್ರಿಯ ನಿಗ್ರಹ'ವೆಂಬ ಯೋಗದ ಅನುಸಂಧಾನ ಬೇಕು.

ನಮಗೆ ಅರ್ಥವಾಗಿಲ್ಲ ಅಂದಮಾತ್ರಕ್ಕೆ ಮಹಾಕವಿಯ/ದಾರ್ಶನಿಕರ ಮಹಾಕಾವ್ಯಗಳು ಅರ್ಥಹೀನ ಎಂಬ ಇತ್ತೀಚಿನ ಪತ್ರಿಕಾ ಹೇಳಿಕೆಗಳೆಲ್ಲ ಬಹಳ ನೋವು ತರಿಸುತ್ತವೆ. ಸರಿಯಾದ ಮಾರ್ಗದರ್ಶನ ಮಾಡಬೇಕಾದ ಪತ್ರಿಕೆಗಳೇ ಹೀಗಾದವೇ? ಜಗದ ಜೀವರಾಶಿಯಲ್ಲಿ ಪಶು-ಪಕ್ಷಿಗಳಾದಿಯಾಗಿ ಎಲ್ಲವೂ ನೋವನ್ನು -ಯಾತನೆಯನ್ನು ಅನುಭವಿಸುತ್ತವೆ, ಜಗಳ ಕಾಯುತ್ತವೆ, ಕಣ್ಣೀರಿಡುತ್ತವೆ. ಇದನ್ನು national geographic, discovery, animal planet ಮುಂತಾದ ಹಲವಾರು ಮಾಧ್ಯಮ ವಾಹಿನಿಗಳಲ್ಲಿ ತಾವು ನೋಡಿರುತ್ತೀರಿ! ಅವುಗಳಿಗೆ ಬಾಗಿ ನಮಿಸಲು, ಕಣ್ಣೀರು ಒರೆಸಿಕೊಳ್ಳಲು ಕೈಯಿಲ್ಲ. ಮೇಲಾಗಿ ಅವು not so evolved ಅಂತ ನಾವು ಹೇಳಬಹುದು. ಅವು ತಪ್ಪು ಮಾಡುವುದಿಲ್ಲ-ಬೇರೆಯವರ ಹಕ್ಕನ್ನು ಕಸಿಯುವುದಿಲ್ಲ ಎನ್ನುವುದೆಲ್ಲ ಸರಿಯಲ್ಲ-ಅವುಗಳನ್ನೇ ನೋಡುತ್ತಿರಿ ತಿಳಿಯುತ್ತದೆ,ಬಹಳ ಹಿಂಸೆಯಿಂದ ಹೆದರಿಕೆಯಿಂದ ಜೀವಿಸುವ ಜೀವನ ಅವುಗಳ ಪಾಡು ! ಒಂದನ್ನೊಂದು ಕೊಂದು ತಿಂದು ತೇಗುತ್ತದೆ, ಅಲ್ಲಿ ಇನ್ನೊಂದೆಡೆ ತಾಯಿಯೋ, ಮಗುವೋ ಯಾವುದನ್ನೋ ಕಳೆದುಕೊಂಡ ಇನ್ನೊಂದು ಸಂಕುಲ ಮರುಗುತ್ತದೆ-ಹಂಬಲಿಸಿ ಗೋಳಿಡುತ್ತದೆ. ಮೂಕ ರೋದನ ಅವುಗಳದು. ಹೀಗಾಗಿ ಮನುಷ್ಯಮಾತ್ರ ತಪ್ಪುಮಾಡಿ ತಪ್ಪಿನ ಅರಿವಾದಾಗ, ತನ್ನ ಮನಸ್ಸಿನಲ್ಲಿ ಸ್ಥಿರತೆ ಇರದಾಗ ದೇವರೆಂಬ ಶಕ್ತಿಯನ್ನು ಜಾಸ್ತಿಯಾಗಿ ಅವಲಂಬಿಸುತ್ತಾನೆ ಎಂಬುದು ಮೂರ್ಖರ ಮಾತಾಗದೆ ಇನ್ನೇನೂ ಇಲ್ಲ! ಈ ಹಿಂದೆ ನಾನು ಹೇಳಿದ ಹಾಗೇ ದಾಸರೆಲ್ಲ ಸಾರಿದರು

ಮಾನವ ಜನ್ಮ ದೊಡ್ಡದು
ಅದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ
.... ಎಂದೆಲ್ಲ ವಿವರಣೆ ಸಹಿತ, with proof ಅವರು ತೋರಿಸಿದ್ದಾರೆ, ಹಾಗಾದರೆ ಅವರೆಲ್ಲಾ ಹುಚ್ಚರೇ?

ಮನುಷ್ಯ ಪ್ರಾಮಾಣಿಕನಾಗಿರಬೇಕು, ಸತ್ ಚಿಂತನೆ, ಸತ್ಕಾರ್ಯ ಇವುಗಳನ್ನು ಮಾಡುತ್ತಾ || ಪರೋಪಕಾರಾರ್ಥಮಿದಂ ಶರೀರಂ || ಎಂಬ ರೀತಿಯಲ್ಲಿ,ಮಾರ್ಗದಲ್ಲಿ ನಡೆಯಬೇಕಾದ್ದು ನಮ್ಮ ಕರ್ತವ್ಯ. ವಿಚಾರಮಾಡಿ ! ಈ ದೇವರೆಂಬ ನಂಬಿಕೆಯೇ ಕೆಟ್ಟದ್ದರ ಯೋಚನೆಯನ್ನು ತಪ್ಪಿಸುತ್ತದೆ!! ಹಲವರು ಕೆಲವರನ್ನು ಪರಿಚಯಿಸುವಾಗ ಇಂಗ್ಲೀಷ್ ನಲ್ಲಿ God Fearing Man ಅಂತ ನನ್ನೆದುರು ಹೇಳಿದ್ದನ್ನು ಕೇಳಿದ್ದೇನೆ, ಯಾಕೆ ? ಅದರರ್ಥ the other man who is introduced by him is dependable,loyal,faithful ಎಂದಲ್ಲವೇ ಆತ ಹೇಳಿರುವುದು?

ಒಂದು ಸತ್ಯವನ್ನು ಒಪ್ಪಿಕೊಳ್ಳೋಣ, ಅದು ಯಾರೇ ಬರೆದಿದ್ದಿರಲಿ, 'ಭಗವದ್ಗೀತೆ' ಎಂಬ guide ಜೀವನಕ್ಕೆ ಯಶೋಗಾಥೆ ಬರೆಯಲು ಉಪಕಾರಿ, ಜಗತ್ತಿನಲ್ಲಿಯೇ ಇಂತಹ ಅದ್ಬುತ ಗ್ರಂಥ ಮತ್ತೊಂದಿಲ್ಲ ! ಪ್ರತಿಯೊಂದು ಹಂತದಲ್ಲಿ ಅದರಲ್ಲಿ ಶ್ರೀಕೃಷ್ಣ ಅರ್ಜುನನನ್ನು ನೆಪವಾಗಿಸಿ ಜೀವನಕ್ಕೆ ಬೇಕಾದ ತತ್ವವನ್ನೆಲ್ಲ ಬೋಧಿಸುತ್ತಾನೆ. ಇವತ್ತು ಚಾನೆಲ್ ಗಳಲ್ಲಿ ಅಡುಗೆ ಹೇಳಿಕೊಡುತ್ತಿದ್ದರೆ,ಕೆಟ್ಟಧಾರಾವಾಹಿಗಳು ಬಿತ್ತರಗೊಳ್ಳುತ್ತಿದ್ದರೆ ನಮ್ಮ ಹೆಂಗಳೆಯರು ಬಹುತೇಕರು ಅದಕ್ಕೆ ಅಂಟಿಕೊಂಡಿರುತ್ತಾರೆ, ಮನೆಯಲ್ಲಿರುವ ಸಣ್ಣ ಮಕ್ಕಳೂ ಅವರನ್ನೇ ಅನುಸರಿಸುತ್ತವೆ, ಅದೇ ದೇವರ ಧ್ಯಾನಕ್ಕೆ, ಒಳಿತಿನ ಚಿಂತನೆಗೆ ಅವರಿಗೆ ಸಮಯವೇ ಇಲ್ಲ, ಇದು ನಮ್ಮ ಗಂಡಸರಲ್ಲೂ ಕಮ್ಮಿಯೇನಿಲ್ಲ, ಮೊನ್ನೆ ಒಬ್ಬ ವ್ಯಕ್ತಿ ನನಗೆ ಹೇಳಿದರು ನನಗೆ ಓದಲಿಕ್ಕೆಲ್ಲ ಸಮಯವೇ ಇರುವುದಿಲ್ಲ! ಯಾವುದಕ್ಕೂ ಸಮಯ ಇರುವುದಿಲ್ಲ ಸ್ವಾಮೀ, ಸಮಯ ಮಾಡಿಕೊಳ್ಳಬೇಕು. ಒಬ್ಬ ವೈದ್ಯನಲ್ಲಿಗೆ ಹೋಗಲು, ಸಿನಿಮಾ ನೋಡಲು, ಹುಟ್ಟಿದಹಬ್ಬ-ಮದುವೆ-ಮುಂಜಿ ಇವುಗಳಿಗೆ ಹೋಗಲು, ಕಚೇರಿಯ ಪಾರ್ಟಿಗೆ ಹೋಗಲು, ಟಿವಿ ನೋಡಲು ಇದಕ್ಕೆಲ್ಲ ಸಮಯ ಮಾಡಿಕೊಳ್ಳುವ ನಿಮಗೆ ಓದುವ ಒಳ್ಳೆಯ ಹವ್ಯಾಸಕ್ಕೆ ಸಮಯವಾದರೂ ಹೇಗೆ ಬರಬೇಕು ಪಾಪ ! ಇನ್ನೊಮ್ಮೆ ಮುಂದಿನ ಜನ್ಮದಲ್ಲಾದರೂ ಬಿಡುವು ಮಾಡಿಕೊಂಡು ಓದಿ!

ನಮ್ಮಂತಹ ಸಮಯವಿಲ್ಲದ ಹುಚ್ಚರು ಅರ್ಥಮಾಡಿಕೊಳ್ಳಲಿ ಅಂತ ಅಂತಹ ಭಗವದ್ಗೀತೆಯ ಸಾರವನ್ನೆಲ್ಲ ಹೀರಿ ನಮ್ಮ ಡೀವೀಜಿ ಎಂಬ ಮಹಾನ್ ದಾರ್ಶನಿಕ ಮಂಕುತಿಮ್ಮನ ಕಗ್ಗ, ಮರುಳು ಮುನಿಯನ ಕಗ್ಗ, ಜೀವನ ಧರ್ಮಯೋಗ --ಈ ಹೊತ್ತಗೆಗಳನ್ನು ಬರೆದರೂ ಅವು ನಮಗೆ ಅರ್ಥವಾಗಬೇಕಲ್ಲ ಸ್ವಾಮೀ, ಇಲ್ಲೂ ಅದೇ ಕಥೆ, ಹಲವು ಸಿಕ್ಕುಗಳನ್ನು ಬಿಡಿಸಿದರೂ ಇನ್ನೂ ಕೆಲವು ನಮಗೆ ಸಿಕ್ಕಾಗೇ ಕಾಣುತ್ತವೆ! ಅಂದಮೇಲೆ ನಮ್ಮ ಯೋಗ್ಯತೆ ನಾವೇ ಅರ್ಥಮಾಡಿಕೊಳ್ಳಬೇಕಲ್ಲವೇ ? ಅದು ಬಿಟ್ಟು ಮಹಾನ್ ಕಾವ್ಯಗಳೆಲ್ಲ ಹಾಗೇ ಯಾರಿಗೂ ಅರ್ಥವಾಗುವುದಿಲ್ಲ ಎಂಬ ದುರ್ಬೋಧನೆ ಸರಿಯೇ ? ಅರ್ಥವಾಗದ , ಅರ್ಥಮಾಡಿಕೊಳ್ಳಲು ತಯಾರಿರದ ನಾವು , ರೆಡಿ ಮೇಡ್ ತಿಂಡಿಗಾಗಿ ಹಾತೊರೆಯುವ ನಾವು ಮೃಗಗಳಿಗಿಂತ ಭಿನ್ನ ಹೇಗೆ ? ನಮಗೆ ನಾವೇ

|| ಮನುಷ್ಯ ರೂಪೇಣ ಮೃಗಾಶ್ಚರಂತಿ || ಅಂದರೆ ತಪ್ಪೇನಿದೆ ?

ಮಾನ್ಯ ಪತ್ರಿಕೆಯವರೇ, ತಮ್ಮಲ್ಲಿಯ ವಿಜ್ಞಾನಿಗಳು ಚರ್ಮ-ಮಾಂಸಗಳಬಗ್ಗೆ , ಮೆದುಳಿನ ಬಗ್ಗೆ, ನಮ್ಮ ಸುತ್ತ ಆವರಿಸಿರುವ ಪ್ರಭಾವಳಿಯ ಬಗ್ಗೆ ಇನ್ನೂ Re-search [search ಅಲ್ಲ !] ಮಾಡುತ್ತಿದ್ದಾರೆ, ಅವುಗಳ ಬಗ್ಗೆ ನಮ್ಮ ವೇದ-ಪುರಾಣಗಳಲ್ಲಿ ಅವುಗಳನ್ನು ಬರೆದವರೇ ನಮೂದಿಸಿದ್ದಾರೆ, ನಮ್ಮ ಚರ್ಮದಲ್ಲಿ ೭ ಪದರಗಳಿವೆ, ನಮ್ಮ ಸುತ್ತ ಇಂತಿಷ್ಟು ವಲಯಗಳಿವೆ ಅಂತೆಲ್ಲ ಮೊದಲೇ ನಿಖರವಾಗಿ ಹೇಳಿದ್ದಾರೆ! [ನಮ್ಮ ನಾಸಾ ದವರೋ ಮತ್ತೆಲ್ಲಿಯ ಪೂಸಾದವರೋ ಕಂಡೆವು ಅಂತ ಹೇಳಿಕೆ ಕೊಟ್ಟರೇ ಸಾಕು,ನಾವು ಪುಳಕಿತರಾಗಿಬಿಡುತ್ತೇವೆ! ] ನಮ್ಮ ಪೂರ್ವಜರಿಗೆ ವಿಜ್ಞಾನ ಗೊತ್ತಿತ್ತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ! ಆದರೆ ಆರ್ಯಭಟನಂತಹ ಮೇಧಾವಿಗಳು ಖಗೋಳವನ್ನು ಕರಾರುವಾಕ್ಕಾಗಿ ಹೇಳಿದ್ದರು! ಆತ ಹೇಳಿದ ರಾಹು-ಕೇತುಗಳು ನೆಪ್ಚೂನ್ ಮತ್ತು ಪ್ಲುಟೋ ಎಂಬ ಹೆಸರನಿಂದ ಶತಮಾನಗಳ ನಂತರ ವಿದೇಶೀ ವಿಜ್ಞಾನಿಗಳಿಂದ ಹೇಳಲ್ಪಟ್ಟವು! ಇಂತಹ ವಿಷಯಗಳಲ್ಲಿ ನಾವು ಬಾಲಗ್ರಹ ಪೀಡಿತರು, ಪೂರ್ವಾಗ್ರಹ ಪೀಡಿತರು, ಅಮೇರಿಕಾಕ್ಕೆ ಕಿವಿಯೊಡ್ಡುವ ಹಿತ್ತಾಳೆ ಕಿವಿಯವರು!

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್|
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||

ಬೇಡನೊಬ್ಬ ತನ್ನ ಜೀವನ ಪರಿವರ್ತನೆಯಿಂದ ಮುನಿಯಾಗಿ, ಕವಿ ವಾಲ್ಮೀಕಿಯಾಗಿ ರಾಮಾಯಣ ಮಹಾಕಾವ್ಯ -ಎಂಥ ಅದ್ಬುತ ಕಾದಂಬರಿಯನ್ನು ಬರೆದನಲ್ಲ, ಅಕ್ಷರ ಜ್ಞಾನವಿಲ್ಲದ ಅವನಲ್ಲಿ ಕುಳಿತು ಇಂತಹ ಮಹಾಕಾದಂಬರಿ ಬರೆಸಿದ ಶಕ್ತಿ ಯಾವುದು ?

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

ಮೂಕನನ್ನು ಮಾತನಾಡಿಸುವ, ಹೇಳವನನ್ನು-ಕುಂಟನನ್ನು ಪರ್ವತವೇರಿಸುವ, ಜಲಪ್ರಳಯದಿಂದ ಭೂಭಾಗವನ್ನೇ ಅಲ್ಲೋಲ-ಕಲ್ಲೋಲ [ಮೊನ್ನೆ ಉತ್ತರ ಕರ್ನಾಟಕದಲ್ಲಿ ನಮ್ಮ ರಾಜಕಾರಣಿಗಳು-ವಿಜ್ಞಾನಿಗಳು ನಿಂತು ಮಳೆ ತಡೆಯಲಾಯಿತೇ?] ಮಾಡುವ-ಮಾಡದಿರುವ, ಸುನಾಮಿ ತರುವ-ತರದಿರುವ ಹಿರಿದಾದ ಒಂದು ಶಕ್ತಿ ಇದೆ ಅನ್ನುವುದನ್ನು ಇನ್ನಾದರೂ ನಂಬಿ. ಆ ಶಕ್ತಿಯನ್ನೇ ನಾವು ದೇವರೆಂದು ಕರೆದರೆ ತಪ್ಪೇ ?

ನಮ್ಮ ವಿಮಾನಗಳು ಬರುವುದಕ್ಕಿಂತ ಮುಂಚೆ ವಿಮಾನ ಎಂಬ ಕಲ್ಪನೆಯಿರದೆ ರಾಮಾಯಣದ ಕವಿ ವಾಲ್ಮೀಕಿ, ಪುಷ್ಪಕ ವಿಮಾನವೆಂದು ಬರೆದನೇ ? ಇಂದು ನಾವು ಅಂತಹ ಒಳ್ಳೆಯ ಶಬ್ಧಗಳನ್ನೆಲ್ಲ ಕೆಟ್ಟ ಸಿನಿಮಾಗಳಿಗೆ ಇತ್ತು ಜಗತ್ತನ್ನು ಉದ್ಧರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದೇವೆ ! ಎಷ್ಟೋ ಸಲ ಕಣ್ಣಿದ್ದೂ ಜಾಣ ಕುರುಡರೂ ಕಿವಿಯಿದ್ದೂ ಜಾಣ ಕಿವುಡರೂ ಬಾಯಿದ್ದೂ ಜಾಣ ಮೂಕರೂ ಆಗಿಬಿಡುತ್ತೇವೆ! ನಮಗೆ ಬೇಕಾದ್ದಕ್ಕೆಲ್ಲ ತೆರೆದುಕೊಳ್ಳುತ್ತೇವೆ- ಈ ತತ್ವವನ್ನು ನಮ್ಮ ಮಹಾಕಾವ್ಯಗಳಲ್ಲಿ ಹೇಳಿಲ್ಲ ! ಹಾಗಾಗಿ ಅವು ಅರ್ಥವಾಗದ, ಅನುಪಯುಕ್ತ ಪುಸ್ತಕದ ಬದನೆಕಾಯಿಗಳು ! ತೃಪ್ತಿಯೇ ತಮಗೆ ?

ಶಂಕರಾಚಾರ್ಯರೆಂಬ ಒಬ್ಬ ಸನ್ಯಾಸಿ ಮನುಷ್ಯಮಾತ್ರನಿಂದ ಸಾಧ್ಯವಾಗದ ಅಗಾಧ ಕೆಲಸಗಳನ್ನು ಕೇವಲ ತನ್ನ ೩೨ ವರ್ಷ ಆಯುಷ್ಯದೊಳಗೆ ಪೂರೈಸಿ ಮಹಾನ್ ಮಹಾನ್ ಉದ್ಗ್ರಂಥಗಳನ್ನೆಲ್ಲ ಕೊಟ್ಟರಲ್ಲ ಅವರೂ ಹುಚ್ಚರೇ ಹಾಗಾದರೆ ?

ಅಲ್ಲ, ನಾವು ಹುಚ್ಚರು, ನಮ್ಮೀ ಸುತ್ತಲ ಭ್ರಮಾ ಜಗತ್ತು ಹುಚ್ಚಿನದು ಹೀಗಾಗಿ ಕಾಮಾಲೆ ರೋಗದವರಿಗೆ ಲೋಕವೆಲ್ಲ ಹಳದಿ ಹೇಗೋ ಹಾಗೇ ನಿಜದ ಅರಿವಿರದೆ ಹುಚ್ಚರಾದ ನಮಗೆ ಮಹಾ ಕವಿಗಳು-ದಾರ್ಶನಿಕರು ಹುಚ್ಚರಾಗಿ ಕಾಣುತ್ತಾರೆ, ಸ್ವಾಮೀ ಪತ್ರಕರ್ತರೇ, ದಯವಿಟ್ಟು ಅದನ್ನು ತಿದ್ದಿ ಬರೆಯಿರಿ, ಇನ್ನಾದರೂ ನಮ್ಮ ಕಾಮಾಲೆ ರೋಗ ವಾಸಿಯಾಗಲಿ ಆಗದೇ ?

ಹಿನ್ನೆಲೆಯಲ್ಲಿ ನಮ್ಮೆಲ್ಲ ದಾಸರಿಗೆ-ಕವಿಜನಸಂದಣಿಗೆ ಬಲಬಂದು ಈ ಸ್ತುತಿಗೀತೆಯನ್ನು ಬರೆಯುತ್ತಿದ್ದೇನೆ, ಆಸ್ತಿಕರೇ, ಬದುಕಿನಲ್ಲಿ ಆಸ್ತೆಯಿರುವ ಮಾಹಾಜನಂಗಳೇ ನೀವು ಓದಿ ಅನುಭವಿಸಿ ಸುಖಿಸಿದರೆ ಅದಕ್ಕಿಂತ ಬೇರೆ Certificate ಬೇಕೇ?

ಈಶನೆನಲೇ ಗಣೇಶನೆನಲೇ

ಈಶನೆನಲೇ ಗಣೇಶನೆನಲೇ ಹರಿ ಕರೆವೆ ನಿನ್ನ ವಿಧದಿ
ಏಸುದಿನದಿ ನಾವ್ ಕಲಿತರು ಬರಡದು ಬರಿದೆ ಮೂರ್ಖತನದಿ !

ವ್ಯಸನಕಳೆಯೇ ಬರೆಯಲು ತೊಡಗುತ ನಾವ್ ಮಸಿಯ ಬಳಿದುಕವಿಗೆ
ಉಸಿರಿನರ್ಥ ಅರಿವಾಗದೆ ಉರಿದೆವು ದಿನದ ಗಳಿಗೆ ಗಳಿಗೆ

ಕುಶಲತನದಿ ತನ್ನ ಕಸುವಿನಲ್ಕಡೆಯುತ ಕೊಡಲು ಮಹಾಕಾವ್ಯ
ವಶವಪ್ಪುದೆ ಈ ಲೋಕದ ಜನತೆಗೆ ಬಯಸುವರದೇ 'ನವ್ಯ'!

ಅತಿಶಯ ಪರಮಾನಂದದ ಚಂದದ ನಿನ್ನ ಸನ್ನಿಧಿಯಲಿ
ಗತಿಯಿದಷ್ಟು ಸರಿ ಬರದು ನನಗೆ ಅಹವಾಲು ಪದತಲದಲಿ

ಇನಿತು ಮೂರ್ಖರು ನಾವ್ ಏನೂ ಅರಿಯೆವು ಮನಸುತುಂಬೀಜಗವು
ಘನತೆಯೆಂಬ
ಗಾಢಾಂಧಕಾರದಲಿ ಎಲ್ಲವ ಮರೆತಿಹೆವು

ಗಣಿಸುನಮ್ಮ ಇತಿ ಮಿತಿಯನೆಲ್ಲ ಮತಿಹೀನರು ನಾವುಗಳು
ಕ್ಷಮಿಸುನಮ್ಮ ತಿದ್ದುತ ಅರೆಗಳಿಗೆಯೂ ಕುಶಲದಿ ಪ್ರಾರ್ಥಿಪೆವು

ಕಾಲೇ ವರ್ಷತು ಪರ್ಜನ್ಯಃ
ಪೃಥಿವೀಂ ಸಸ್ಯ ಸಸ್ಯಶಾಲಿನೀ|
ದೇಶೋಯಂ ಕ್ಷೋಭ ರಹಿತೋ
ಸಜ್ಜನಾಃ ಸಂತು ನಿರ್ಭಯಾಃ ||

ಸ್ವಸ್ತಿಃ
ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಮಹಿಂ ಮಹೀಷಃ|
ಗೋ
ಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾ ಸಮಸ್ತಾ ಸುಖಿನೋ ಭವಂತು||

|| ಅಕ್ಷರದಾತಾ ಸುಖೀ ಭವ ||

9 comments:

  1. ವಾಹ್ ನಿಮ್ಮಈ ಲೇಖನಮಾಲೆ ನನ್ನನ್ನು ರೋಮಾ೦ಚನಗೊಳಿಸಿತು.ನೀವು ಹೇಳುವ ಸತ್ಯ ನಮ್ಮ pre tuned ವಿಚಾರವಾದಿಗಳಿಗೆ ಅರ್ಥವಾಗದಿರುವುದು ವಿಷಾದವಲ್ವೆ?.ಒ೦ದು ಸತ್ ನ೦ಬಿಕೆಯನ್ನು,ವಿಚಾರವನ್ನು ವಿರೋಧಿಸುವುದೇ ಹೆಚ್ಚುಗಾರಿಕೆ ಮತ್ತು ಪ್ರಚಾರ ಗಿಟ್ಟಿಸಲು ಸುಲಭ ಎ೦ದು ತಿಳಿದು ತಮ್ಮ ಮೌಡ್ಯವನ್ನು ಪ್ರಕಟಪಡಿಸುತ್ತಾರೆ ಅಲ್ವೇ? ದೇವರು ಅವರಿಗೆ ಸದ್ಭುದ್ಧಿಯನ್ನು ಕೊಡಲಿ ಎ೦ದು ಪ್ರಾರ್ಥಿಸೋಣ.
    ನಿಮಗೆ ಅಭಿನ೦ದನೆಗಳು

    ReplyDelete
  2. ಮೊದಲು "ಲವಲವಿಕೆ"ಯ +ನಾತ್ಮಕ ವಿಚಾರ ಲೇಖನ ಓದಿ ತದನ೦ತರ ತಮ್ಮ ಲೇಖನ ಓದಿದೆ. ಮನಸ್ಸ ಕ್ಲೇಷೆ ತೆಗೆದು, ಗೊ೦ದಲಗಳನ್ನು ತೊಡೆದು, ನಾವು ತೊಡಗುವ ಕ್ರಿಯೆಯಲ್ಲಿ ಸಕಾರಾತ್ಮಕವಾಗಿ ಅಶಾಭಾವದಿ೦ದ ಮು೦ದುವರೆಯಲು ಸಹಕಾರಿಯಾಗಿ ಕೆಲಸ ಮಾಡುವದೇ ಪ್ರಾರ್ಥನೆ. ಅದನ್ನೇ ವಿರೋಧಿಸುವ ಲೇಖನ ಹೇಗೆ +ನಾತ್ಮಕವಾಗಿರಲು ಸಾಧ್ಯ?
    ಪ್ರಾರ್ಥನೆಯಲ್ಲಿ -ದೇವರು, ದಿ೦ಡರು, ಇತ್ಯಾದಿ ಇತ್ಯಾದಿ ನಮ್ಮ ಅನುಭವಕ್ಕೆ ನಿಲುಕದ ವಿಷಯಗಳಿದ್ದು ಅವನ್ನು ನ೦ಬುವದು ವೈಚಾರಿಕರ ಪ್ರಕಾರ ಮೌಢ್ಯತೆ ಇರಬಹುದು, ಆದರೇ ಅದನ್ನು ನ೦ಬಿ ನಡೆವ ಜನರಲ್ಲಿ ಅದು ಅಶಾಭಾವ ಮೂಡಿಸಿ ಅವರ ಕ್ರಿಯೆಗಳಲ್ಲಿ ಸಾಫ಼ಲ್ಯದ ನ೦ಬುಗೆಯ ಒತ್ತಾಸೆಗಳ ಮಿಳಿತವಾಗಿ- ಕ್ರಿಯೆಗಳು ೧೦೦% ನಷ್ಟು ಧನಾತ್ಮಕವಾಗಿರುವದನ್ನು ವೈಚಾರಿಕರೆ೦ದುಕೊಳ್ಳುವ ಜನ ಮರೆಯಬಾರದು.
    ಪ್ರಾಣಿಗಳಲ್ಲೂ ಹೊ೦ಚು, ಸ೦ಚು, ಸ್ವಾರ್ಥ ಎಲ್ಲಾ ಇದೆ ಬದುಕಲು ಮತ್ತು ಅಹಾರಕ್ಕಾಗಿ-ಇಲ್ಲವೆನಲು ಸಾಧ್ಯವಿಲ್ಲ ಆದರೆ ಮಾನವನ ಹಾಗೇ ಮೋಜಿಗಾಗಿ ಇವೆಲ್ಲ ನಡೆಯಲಿಕ್ಕಿಲ್ಲ ಅವುಗಳಲ್ಲಿ. ಪ್ರಾರ್ಥನೆ ಪ್ರಾಣಿಗಳಲ್ಲೇಕಿಲ್ಲ ಎನ್ನುವ ವಿಷಯ ನಮಗೆ ತಿಳಿಯದ್ದು. ಅದು ಇದೆಯೋ ಇಲ್ಲವೋ ತಿಳಿಯುವಷ್ಟರ ಮಟ್ಟಿಗೆ ನಮ್ಮ ವಿಜ್ಞಾನ ಏರಿಲ್ಲ."ಉಳಿವಾಗಿ ಹೋರಾಟ" ಎಲ್ಲ ಪ್ರಾಣಿ-ವ೦ಶಗಳಲ್ಲಿ ಇದ್ದದ್ದೆ. ಇ೦ತಹ ಹೋರಾಟಗಳು ಸ್ವಾರ್ಥ, ಅಸೂಯೆ ಹಾಗೂ ಕಿ೦ಸೆಯಿ೦ದ ಕೂಡಿದುದವೆ.
    ಈ ನೆಲೆಯಲ್ಲಿ ತಮ್ಮ ಲೇಖನ ಸೂಕ್ತ ಉತ್ತರವನ್ನ ಲವಲವಿಕೆ- ಸಹನೆ ಯರ "+ನಾತ್ಮಕ ವಿಚಾರ"ಕ್ಕೇ ನೀಡಿದೆ ಎ೦ದು ನನ್ನ ನ೦ಬಿಕೆ. ತಾವೂ ಅವರು ನ೦ಬದ ಧಾರ್ಮಿಕ ಗ್ರ೦ಥಗಳ ಹಾಗೂ ನ೦ಬುವ ವಿಜ್ಞಾನ ಮೂಲದಲ್ಲಿ ಹೇಳಿದ್ದಿರಾ...
    ಧನ್ಯವಾದಗಳು.

    ReplyDelete
  3. ಸುಬ್ರಹ್ಮಣ್ಯ ಮುಳಿಯಾಲರೇ, ಪತ್ರಿಕೆಯವರದು ಕೆಲವೊಮ್ಮೆ ಅನುಕೂಲ ಸಿಂಧು, ನಮ್ಮಲಿ ಹೇಳುವಹಾಗೆ ಹೆಸರು ಯಾರದ್ದೋ ಬಸಿರು ಯಾರದ್ದೋ ಅಂತಾರಲ್ಲ ಹಾಗೇ. ಯಾವಯಾವುದೋ ಛಾಯಾಚಿತ್ರಕ್ಕೆ ಇನ್ಯಾವುದೋ ಹೆಸರಿನ ಜೋಡಣೆ, ಅಸಂಬದ್ದ ವಿಷಯಗಳ ಪ್ರಸ್ತಾಪ,ಅನುಚಿತ ಲೇಖನಗಳು ಹೀಗೆ ಒಂಥರಾ ಕಲಸು ಮೇಲೋಗರ! ಆದರೆ ನನಗೆ ಅನಿಸಿದ್ದು ನಮ್ಮ ಚಿಕ್ಕ ಮನಸ್ಸಿನ ನಿಲುವಿಗೆ ಬಾರದ ಮಹಾತ್ಮರೆನಿಸಿಕೊಂಡಿರುವ ವ್ಯಕ್ತಿಗಳು ಬರೆದ ಮಹಾಕಾವ್ಯಗಳನ್ನೇ ಅರ್ಥವಾಗದ್ದು ಎನ್ನುವುದು, ಪ್ರಾರ್ಥನೆ ಬೇಡ ಎನ್ನುವುದು ಇದೆಲ್ಲ ಆಧುನುಕತೆಯ ಮೌಡ್ಯಕ್ಕೆ ಪೂರಕ, ಧನ್ಯವಾದಗಳು

    ಇನ್ನು ಸೀತಾರಾಮ್ ರವರೇ , ತಮ್ಮ ಪ್ರತಿಕ್ರಿಯೆಯಲ್ಲೇ ಎಲ್ಲಾ ಉತ್ತರಗಳೂ ಇರುವುದರಿಂದ ಮತ್ತೆ ಹೊಸದಾಗಿ ಎನ್ನನ್ನೂ ಹೇಳುವ ಅವಶ್ಯಕತೆ ಕಾಣುತ್ತಿಲ್ಲ, ನನಗನಿಸಿದ ಹಾಗೇ ನಿಮಗೂ ಅದು ತಟ್ಟಿದ್ದರಿಂದ ನೀವು ಇಷ್ಟು ಬರೆದಿದ್ದೀರಿ, ಮೊಲಕ್ಕೆ ನಮ್ಮ ಕಣ್ಣಿಂದ ನಾವು ಅದು ಹಾರುವಾಗ ನೋಡಿದ್ದು ಮೂರುಕಾಲು, ಆದರೆ ತಮ್ಮ ದೊಡ್ಡ ಕಣ್ಣಿಂದ 'ಮೊಲಕ್ಕೆ ನಾಲ್ಕುಕಾಲು ಇದೆ, ಆದರೆ ಅದು ಹಾರುವಾಗ ಎಲ್ಲರಿಗೂ ಕಾಣುವುದು ಮೂರುಕಾಲು, ಪ್ರಯತ್ನಿಸಿದರೆ ನೀವು ನಾಲ್ಕು ಕಾಲುಗಳನ್ನೂ ನೋಡಬಹುದೆಂದು' ತಿಳಿಸಿದ, ಅದಕ್ಕೆ ತಕ್ಕ ಮಾರ್ಗವನ್ನೂ ತಿಳಿಸಿದ ನಮ್ಮ ಪೂರ್ವಜರನ್ನು-ಅವರ 'ಇದಮಿಥ್ಥಂ' ಎಂದು ಎತ್ತಿಕೊಟ್ಟ ಸಾರ ಸತ್ವಗಳನ್ನೆಲ್ಲ ಹೀಗಳೆಯುವುದು, ಕೀಳಾಗಿ ಕಾಣುವುದು ನನಗೆ ಅವತ್ತಿನ ಆ +ve ಥಿಂಕಿಂಗ್ ನಲ್ಲಿ ಕಂಡುಬಂದ ವಿಚಾರ, ಇದರಿಂದ ಜನಸಾಮಾನ್ಯ ಓದುಗರು ದ್ವಂದದಲ್ಲಿ ಸಿಲುಕುತ್ತಾರೆ, ಹೀಗಾಗಿ ಇವತ್ತಿನ ನನ್ನ ಭಕ್ತಿ ಸಿಂಚನವನ್ನು ಅದಕ್ಕೆ ಮೀಸಲಾಗಿಟ್ಟೆ, ಕೂಲಂಕಷವಾಗಿ ಅವಲೋಕಿಸಿ ಪ್ರತಿಕ್ರಿಯಿಸಿದ ಇತ್ಯರ್ಥಕ್ಕೆ ಬಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ನಿಮಗೂಧನ್ಯವಾದಗಳು

    ReplyDelete
  4. " || ಆತ್ಮಾ ವಾ ಇದಮೇಕ ಏವಾಗ್ರ ಆಸೀತ್ | ನಾನ್ಯತ್ ಕಿಂಚನ ಮಿಷತ್ | ಸ ಈಕ್ಷತ ಲೋಕಾನ್ನು ಸೃಜಾ ಇತಿ || " ಅಂದಾರ್ರೀ ಭಟ್ಟರೇ. ಪಾಪ ಪತ್ರಿಕೆಯವರಿಗೆ ಮುಂದಾಳುತನದ ಮೋಹ, ಕೆಲವನ್ನು ವಿರೋಧಿಸಿದರೇ ಎಲ್ಲರೂ ಮೆಚ್ಚುತ್ತಾರೆಂಬ ಭ್ರಮೆ !. ನಿಮ್ಮ ಲೇಖನ ಎಂದಿನಂತೆ ವಸ್ತುನಿಷ್ಠ ಮತ್ತು ಮಾಹಿತಿಯುಕ್ತ. ರತ್ನನ ಪದ ಇದೆಯೆಲ್ಲಾ...

    |ಅರ್ಥ ಮಾಡ್ಕಂಡು ಅಂಗಲ್ಲ, ಇಂಗೆ
    ಅನ್ನೋರ್ ಮಾತು ಗಂಗೆ..
    ಅರ್ಥ ಆಗ್ದಿದ್ರೂ ಸಿಕ್ದಂಗ್ ಅನ್ನಾದು,
    ಚಂದ್ರನ್ ಮುಕ್ ಉಗ್ದಂಗೆ..! | :)

    ಅವರಿಗೆ ಅಧ್ಯಯನದ ಕೊರತೆಯಿದೆ. ನಿಮ್ಮ ಪ್ರತಿಕ್ರಿಯೆ ಸರಿಯಾಗಿದೆ. ಧನ್ಯವಾದ.

    ಅಂದಹಾಗೆ " ನ್ಯಾಯೇನ ಮಾರ್ಗೇಣ .." ಇರಬಹುದೇ ??

    ReplyDelete
  5. ಸುಬ್ರಹ್ಮಣ್ಯರೇ, ಮತ್ತೇನು ಹೇಳಲಿ ಅಲ್ಲವೇ ? ನೀವೆಂದ ಹಾಗೇ ಅಚ್ಚಾಯಿಸುವಾಗ ನಾವೇನೆ ಅಂದುಕೊಂಡರೂ ಚಿಕ್ಕ-ಪುಟ್ಟ ಕಲ್ಮಶಗಳು,ಮುದ್ರಾರಾಕ್ಷಸನ ವಕ್ಕರಿಸುವಿಕೆಯಿಂದ ಅಲ್ಲಲ್ಲಿ ಉಳಿದುಬಿಡುತ್ತವೆ, ತಮ್ಮ ಹೇಳಿಕೆಯಂತೆ ಸರಿಪಡಿಸಿದ್ದೇನೆ,ಧನ್ಯವಾದಗಳು

    ReplyDelete
  6. ವಿ.ಆರ್.ಬಿ.ಯವರೇ, ದಾಸ, ಸೂಫಿ, ಶರಣ ಇವರೆಲ್ಲರ ಆಧ್ಯಾತ್ಮದ ಮೂಲ ಸಮಾಜ ಕಲ್ಯಾಣವಾಗಿತ್ತು ಎನ್ನುವುದಕ್ಕೆ ಎರಡುಮಾತಿಲ್ಲ...ಒಬ್ಬೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಧರ್ಮ (ಮಾನವತೆ) ವನ್ನು ಮನವರಿಕೆ ಮಾಡಿಸಿದರು..ಸಮಾಜದಲ್ಲಿ ಪ್ರಭೆ ಇತ್ತೇ ಹೊಅರತು ದ್ವೇಷದ ಜ್ವಾಲೆಯಿರಲಿಲ್ಲ..ಇವರಿಂದ ಕಲಿಯಬೇಕಾದುದು ನಮ್ಮ ಇಂದಿನ ಅಂಧಾನುಕರಣೆಯಲ್ಲಿರುವ ನೇತಾರರಿಗೆ ಬಹಳವಿದೆ ಅಲ್ಲವೇ...ನಿಮ್ಮ ಲೇಖನ ಈ ದಿಶೆಯಲ್ಲಿ ಸಾರ್ಥಕತೆ ಇದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ...ಧನ್ಯವಾದ.

    ReplyDelete
  7. ಆಜಾದ್ ರವರೇ , ನನಗೆ ನಿಮ್ಮೊಳಗಿನ ಆ ಸಂತನನ್ನು-ಆ ಸೂಫಿಯನ್ನು ಕಂಡು ಖುಷಿಯಾಗುತ್ತಿದೆ! ನಿಜಕ್ಕೂ ನೀವು ಅರ್ಥಮಾಡಿಕೊಂಡಷ್ಟನ್ನು ನಮ್ಮ ಪತ್ರಿಕೆಯವರು ಅಥವಾ ರಾಜಕಾರಣಿಗಳು ಅರ್ಥೈಸಿದ್ದರೆ ಯಾವಾಗಲೂ ಸಮಾಜದಲ್ಲಿ ದ್ವೇಷವಾಗಲೀ ಮೇಲು-ಕೀಳೆಂಬ ಭಾವವಾಗಲೀ ಇರುತ್ತಿರಲಿಲ್ಲ, ಹಾಗಾಗಿಯೇ ಹಿಂದೆ ಸಮಾಜದಲ್ಲಿ ಒಬ್ಬ ಕಬೀರ್ದಾಸ್ ಬಂದರು, ಒಬ್ಬ ಶಿಶುನಾಳ ಶರೀಫ್ ಬಂದರು, ಒಬ್ಬ ಶಿರಡಿ ಸಾಯಿ ಬಂದರು. ಅಂದರೆ ಅವರಲ್ಲಿ ಮೂಲ ಸೆಲೆಯ-ನೆಲೆಯ ಗುರುತು ಸ್ಪಷ್ಟವಾಗಿತ್ತು, ನಾನು ಬಹುಮುಖ್ಯ ಎಲ್ಲರಲ್ಲೂ ಕೇಳಿಕೊಳ್ಳುವುದೇನೆಂದರೆ -ಮನುಷ್ಯರಾಗಿ, ಜಗತ್ತಿನ ಒಳಿತಿಗಾಗಿ ನಾವು ಏನುಮಾಡಿದರೆ ಒಳ್ಳೆಯದು ಎಂಬ ಮನುಜಮತವನ್ನು ಬೋಧಿಸುವ ತತ್ವವನ್ನು ಅನುಸರಿಸಿದರೆ ಅದು ತಪ್ಪಲ್ಲವಲ್ಲಾ ? ಮತ್ತೆ ಪ್ರಾರ್ಥನೆಯೇ ಬೇಡ-ಅದೆಲ್ಲ ಸುಮ್ಮನೇ ಎಂಬ ವಾದ ಹುರುಳು ರಹಿತ ಎಂಬುದನ್ನು ಬಿಂಬಿಸುತ್ತಿದ್ದೇನೆ, ನಿಮ್ಮ ಬ್ಲಾಗ್ ನೋಡಿಯೇ ಒಬ್ಬ ತಿಳಿಯಬಹುದು you are evolved ಅಂತ, ನಮ್ಮ ಅನಿಸಿಕೆಗಳ ಹಂಚಿಕೆಯಲ್ಲಿ ಪಾಲ್ಗೊಂಡ ತಮಗೆ ಧನ್ಯವಾದಗಳು.

    ReplyDelete
  8. ಶ್ರೀ ವಿ.ಆರ್. ಭಟ್, ನಿಮ್ಮ ಪ್ರಯತ್ನ, ಭಾವನೆ, ನಿಮ್ಮ ಬದ್ಧತೆ ಮೆಚ್ಚುಗೆಯಾಯ್ತು.ನಮ್ಮ ಋಷಿಮುನಿಗಳು ತಮ್ಮ ಸ್ವಂತಕ್ಕೆ ಎಂದೂ ಯೋಚಿಸಲೇ ಇಲ್ಲ. ನಮ್ಮ ಪ್ರವರದ ಮಂತ್ರವನ್ನೇ ತೆಗೆದುಕೊಂಡರೂ ಇಡೀ ವಿಶ್ವದಲ್ಲಿರುವ ಪ್ರಾಣಿ-ಪಕ್ಷಿ ಗಳಿಗೂ ಶುಭವಾಗಲೀ ಎಂದು ನಿತ್ಯ ಸಂಕಲ್ಪ ಮಾಡುವ ನಾವು ತೀರಾ ಸ್ವಾರ್ಥಿಗಳಾಗಿ ಮಂತ್ರಾರ್ಥ ತಿಳಿದುಕೊಳ್ಳದೆ ಸಂಕಲ್ಪಕ್ಕೂ ದ್ರೋಹಬಗೆಯುತ್ತೇವೆ.ಅಧ್ಯಯನದ ಬಗ್ಗೆ ಬರೆದಿದ್ದೀರಿ. ಇಲ್ಲಿರುವ ಕೊಂಡಿಗಳಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿವೆ. ಡಾ|| ಗೋಪಾಲಕೃಷ್ಣರ ಆಂಗ್ಲ ಉಪನ್ಯಾಸವನ್ನು ಕೇಳಿ ಅದನ್ನು ಕನ್ನಡೀಕರಿಸುವಿರಾದರೆ ಬಹಳ ಜನರಿಗೆ ನಮ್ಮ ವೈಜ್ಞಾನಿಕ ಪರಂಪರೆಯ ಅರಿವು ಮೂಡಿಸಬಹುದು.
    www.vedasudhe.blogspot.com
    www.iish.org

    ReplyDelete
  9. ಸ್ವಲ್ಪ ಸಮಯ ಬೇಕಾಗಬಹುದು, ಖಂಡಿತ ಪ್ರಯತ್ನಿಸುತ್ತೇನೆ,ಧನ್ಯವಾದಗಳು

    ReplyDelete