ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, February 25, 2010

ಮಹಾಬಲರಿಗೆ ಕಾವ್ಯ-ನಮನ


ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ಹಾಗೂ ಉಡುಪಿ ಮಲೆನಾಡುಗಳಲ್ಲಿ ವ್ಯಾಪಕವಾಗಿಯೂ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಬೇರೆ ಬೇರೆ ಪ್ರಾಕಾರಗಳಿಂದಲೂ ಕಂಗೊಳಿಸುವ ಕಲೆ ಯಕ್ಷಗಾನ. ಬಡಗು,ತೆಂಕು ಮತ್ತು ಬಡಾಬಡಗು ಪ್ರಾಕಾರಗಳು ಮುಖ್ಯವಾದವುಗಳು. ಅವುಗಳಲ್ಲಿ ನವರಸಗಳನ್ನೂ, ಮುನಿ ಭರತೇಶನ ಭರತನಾಟ್ಯದ ಹಲವು ಭಂಗಿಗಳನ್ನೂ, ಸಾಟಿಯಿಲ್ಲದ ಅತಿ ವಿಶಿಷ್ಟ ವೇಷಭೂಷಣಗಳನ್ನೂ, ಸಂಗೀತದ ಅನೇಕ ಸುಲಲಿತ ರಾಗಗಳನ್ನೂ-ತಾಳಗಳನ್ನೂ,ಅತ್ಯುಕೃಷ್ಟ ಹಾವ-ಭಾವ ಭಂಗಿಗಳನ್ನೂ, ಹಿತಮಿತವಾದ ಹಿಮ್ಮೇಳ ವಾದ್ಯಗಳೊಂದಿಗೆ ದೃಶ್ಯಮಾಧ್ಯಮದ ಮುಖಾಂತರ ದಶಾವತಾರದ ವಿಭಿನ್ನ ಪ್ರಸಂಗಗಳನ್ನು ಪ್ರದರ್ಶಿಸಿ, ಜನರಲ್ಲಿ ರಾಮಾಯಣ-ಮಹಾಭಾರತವೇ ಮೊದಲಾದ ಕಥೆಗಳನ್ನು ಜಾಗೃತಗೊಳಿಸಿ, ಸಮಾಜದ ಒಳಿತಿಗೆ ಜನರ ಮನೋಭೂಮಿಕೆಯನ್ನು ಪ್ರಚುರಪಡಿಸುವ ಕಲೆ ಅತ್ಯಂತಹೆಮ್ಮೆಯ ಕಲಾ ವೈಭವ. ಒಮ್ಮೆ ಇನ್ನೂ ನೋಡಿರದೆ ಹೊಸದಾಗಿ ಒಮ್ಮೆ ನೋಡಿದವರನ್ನೂ ಕೂಡ ತನ್ನತ್ತ ಕೈಬೀಸಿ ಸೆಳೆದುಕೊಳ್ಳುವ ಸಮಗ್ರ ಕಲಾ ಸಂಪತ್ತು ! ದಶಕಗಳ ಕಾಲ ಕ್ಷೇತ್ರದಲ್ಲಿ ಸತತ ತನ್ನನ್ನು ತೊಡಗಿಸಿಕೊಂಡು, ಕವಿ-ಸಾಹಿತಿಗಳಂತೆ ಅದನ್ನೇ ಬದುಕಿ, ಅದರಬಗ್ಗೆ ಸದಾ ಚಿಂತಿಸುತ್ತಾ, ಬಡಾಬಡಗಿಗೆ ತನ್ನದೇ ಆದ ಛಾಪು ಒತ್ತುವಲ್ಲಿ ಸಂಪೂರ್ಣ ಯಶಸ್ವಿಯಾದ ಡಾ| ದಿ|ಶ್ರೀ ಮಹಾಬಲ ಹೆಗಡೆ, ಕೆರೆಮನೆ ಇವರು ಕಳೆದ ೨೯ ಅಕ್ಟೋಬರ್ ೨೦೦೯ ಗುರುವಾರ ದಕ್ಷಿಣ ಕನ್ನಡದ ವಿಟ್ಲದ ಸಮೀಪದ ಅಳಿಕೆಯಲ್ಲಿ ತಮ್ಮ 'ವೇಷ'ವನ್ನು ಮುಗಿಸಿದರು.


ಕೆರೆಮನೆ ಮೇಳದಲ್ಲಿ ದಿ|ಶ್ರೀ ಶಿವರಾಮ ಹೆಗಡೆ ದಿ |ಶ್ರೀ ಶಂಭು ಹೆಗಡೆ ದಿ| ಶ್ರೀ ಮಹಾಬಲ ಹೆಗಡೆ ಇವರೆಲ್ಲ ನಡೆದಾಡುವ ವಿಶ್ವವಿದ್ಯಾಲಯಗಳಂತೆ ಇದ್ದರು ಎಂದರೆ ತಪ್ಪಾಗಲಾರದು, ದಿನಂಪ್ರತಿ ಓದುತ್ತ, ಹೊಸತನವನ್ನು ತಮ್ಮಲ್ಲಿ ಅಳವಡಿಸಿಕೊಳ್ಳುತ್ತ ಕಲಾಪ್ರಕಾರಕ್ಕೆ ಮೆರುಗನ್ನೂ 'ಚಿನ್ನ-ಬೆಳ್ಳಿಯಕಿರೀಟವನ್ನೂ ', ರಾಷ್ಟ್ರ-ರಾಜ್ಯ ಪ್ರಶಸ್ತಿಗಳನ್ನೂ ತಂದುಕೊಟ್ಟ ಮಹನೀಯರು. ಶಂಭು ಹೆಗಡೆಯವರ ಅತಿ ಪರಿಶ್ರಮದಿಂದ ವಿದೇಶಗಳಲ್ಲೂ ಕಲೆ ಮಾನ್ಯತೆ ಪಡೆಯಿತು ! ಅದರಲ್ಲಂತೂ ಸರಕಾರ ಕೊಟ್ಟ ಮಾಶಾಸನವನ್ನು ಧಿಕ್ಕರಿಸಿ ವಾಪಸ್ಸಾಗಿಸಿದ ದಿ| ಮಹಾಬಲ ಹೆಗಡೆ ಬಹಳ ಸ್ವಾಭಿಮಾನೀ ವ್ಯಕ್ತಿಯಾಗಿದ್ದರು; ಯಾರಿಗಾಗಿ ಕಲೆಯಲ್ಲ-ಬದಲಾಗಿ ತನ್ನ ಸಂತುಷ್ಟಿಗಾಗಿ ತಾನು ಹಾಡಿ-ಕುಣಿಯುತ್ತೇನೆಂಬ ಛಲಹೊಂದಿದ್ದರು, ನಮ್ಮ ಹಿರಿಯ ಸಾಹಿತಿ ಮುತ್ಸದ್ದಿ ದಿ| ಕೋಟ ಶ್ರೀ ಶಿವರಾಮ ಕಾರಂತರ ಬಾಯಿಂದಲೂ ಶಹಬಾಸ್ ಪಡೆದವರು!

ಒಂದೇ ವರ್ಷದಲ್ಲಿ ಅಣ್ಣ-ತಮ್ಮ [ಮಹಾಬಲ-
ಶಂಭು] ಇಬ್ಬರನ್ನೂ ಕಳೆದುಕೊಂಡು ಯಕ್ಷಗಾನಕ್ಷೇತ್ರ ನಿಜವಾಗಿಯೂ ಬಡವಾಯಿತು, || ಜಾತಸ್ಯ ಮರಣಂ ಧ್ರುವಂ || ಬಂದವರು ಮರಳಲೇ ಬೇಕಲ್ಲವೇ ? ಎಲ್ಲಿಂದ ಬಂದೆವೆಂಬುದು ಗೊತ್ತಿಲ್ಲ, ಎಲ್ಲಿಗೆ ಹೊರಟೆವೆಂಬುದು ತಿಳಿದಿಲ್ಲ, ಆದರೆ ಪ್ರಕ್ರಿಯೆ ನಡೆದೇ ಇದೆ! ಇರುವವರೆಗೆ ನಾವು ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಳ್ಳುತ್ತೇವೆ. ಬಂದು-ಹೋಗುವ ನಡುವಿನ ಕಾಲ ಯಾರಿಗೆ ಎಷ್ಟೆಂಬುದು ಯಾರಿಂದಲೂ ಗುರುತಿಸಲ್ಪಟ್ಟಿಲ್ಲ ! ಇದೇ ಜೀವನ. ಶ್ರೀಯುತ ಶಂಭು ಹೆಗಡೆ ಅನೇಕ ಸಲ ವೇದಿಕೆಯಲ್ಲಿ " ಶರಣರ ಬದುಕಿನ ಅರ್ಥವನ್ನು ಮರಣದಲ್ಲಿ ನೋಡು ಅಂತ ಪ್ರಾಜ್ಞರು ಹೇಳಿದ್ದಾರೆ " ಎನ್ನುತ್ತಿದ್ದುದನ್ನು ಕೇಳಿದ್ದೆ, ಅವರೂ ಅದಕ್ಕೆ ಅಷ್ಟುಬೇಗ ಸಾಕ್ಷೀಭೂತರಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಯಾವ ದೇವರನ್ನು ನಂಬಿ ನೆಚ್ಚಿ ನಡೆದರೋ ಅಂತಹ ದಿವ್ಯ ಸಾನ್ನಿಧ್ಯದಲ್ಲಿ, ಅದೂ ಮರ್ಯಾದಾಪುರುಷೋತ್ತಮನಾದ 'ಶ್ರೀರಾಮನಾಗಿ' , ಆವೇಷದಲ್ಲಿ ತನ್ನ ಬದುಕಿನ ವೇಷವನ್ನು ತೆರೆಗೆ ಸರಿಸಿಬಿಟ್ಟರು ಎಂಬುದನ್ನು ಟಿ.ವಿ. ಬಿತ್ತರಿಸಿದಾಗ ತಡೆಯಲಾರದೆ ಆತ್ತೆ, ಎರಡುದಿನಗಳ ತರುವಾಯ ಅವರ ಮಗ ಶಿವಾನಂದರಿಗೆ ದೂರವಾಣಿಯಲ್ಲಿ ಮಾತನಾಡಿದೆ-ಮನಸಂತೈಸಿಕೊಂಡೆ. ಮಹಾಬಲರು 'ಚೌಕಿ'ಗೆ ತೆರಳಿದಾಗ ಅಂಥದಕ್ಕೆ ಆಸ್ಪದ ದೊರೆಯಲಿಲ್ಲ. ಹೀಗಾಗಿ ಭಾವಜೀವಿಯಾದ ನನ್ನ ಕಣ್ಣ ಹನಿಗಳೇ ಅವರಿಗೆ ಕಾಣಿಕೆಯಾದವು. ಇಂದು ಅವರಬಗ್ಗೆ ಕಾರ್ಯಕ್ರಮ ಏರ್ಪಟ್ಟಿದೆ -ಬೆಂಗಳೂರಿನ ಮಲ್ಲೇಶ್ವರದ-ಹವ್ಯಕ ಸಭಾಂಗಣದಲ್ಲಿ, ನಾಡಿದ್ದು ಭಾನುವಾರ ೨೮.೦೨.೨೦೧೦ ರಂದು[ಕಾರ್ಯಕ್ರಮದ ರೂವಾರಿಯಾದ ಶ್ರೀ ಜಿ.ಎಸ್.ಹೆಗಡೆಯವರು ತಮ್ಮ 'ಸಪ್ತಕ'ಎಂಬ ಟ್ರಸ್ಟ್ ವತಿಯಿಂದ ಇದನ್ನು ಆಯೋಜಿಸಿದ್ದಾರೆ,ನನಗೆ ಅವರು ಕಳಿಸಿದ ಆಮಂತ್ರಣದ ಪ್ರತಿಯನ್ನು ತಮಗೆಲ್ಲಾ ಇಲ್ಲಿ ಕೊಡುತ್ತಿದ್ದೇನೆ],ವಿಷಯ ತಿಳಿದು ಬಹಳ ಸಂಬ್ರಮಿಸಿದವರಲ್ಲಿ ನಾನೂ ಒಬ್ಬ. ಅವರ ಸಂಗೀತ,ಶಹನಾಯಿವಾದನ ಇದರ ಬಗ್ಗೆ ಕೇಳಿ ಗೊತ್ತೇ ಹೊರತು ಅದನ್ನು ಆಸ್ವಾದಿಸುವ ಅವಕಾಶ-ಅನುಕೂಲ ನನಗೊದಗಲಿಲ್ಲ. ಆದರೂ ಅವರ ಪಾತ್ರಗಳನ್ನು ಮನಸಾರೆ ಕಣ್ತುಂಬಿಸಿಕೊಂಡು ಚಪ್ಪಾಳೆ ತಟ್ಟಿದವರಲ್ಲಿ ಚಿಕ್ಕ ಪ್ರೇಕ್ಷಕನಾಗಿ ನಾನೂ ಒಬ್ಬ. ಗತಿಸಿದ ಎರಡೂ ನಕ್ಷತ್ರಗಳಿಗೆ ಭಗವಂತ ಶ್ರೀ ಇಡಗುಂಜಿ ಮಹಾಗಣಪತಿ ಸದ್ಗತಿ ಕೊಡಲಿ, ಅವರು ಮತ್ತೆ ಹುಟ್ಟಿ ಯಕ್ಷಗಾನವನ್ನು ಮುನ್ನಡೆಸಲಿ ಎಂದು ಪ್ರಾರ್ಥಿಸಿ ಸ್ವಸಂತೋಷಕ್ಕಾಗಿ ಬರೆದುಕೊಂಡ ಹಾಡನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ --

ಖ್ಯಾತ ಹಿಂದುಸ್ತಾನೀ ಗಾಯಕ ಶ್ರೀ ವೆಂಕಟೇಶಕುಮಾರ್ ಹಾಡಿರುವ 'ತೊರೆದು ಜೀವಿಸಬಹುದೇ ಹರಿನಿನ್ನ ಚರಣಗಳ....' ಹಾಡಿನ ದಾಟಿಯಲ್ಲಿ ಇದನ್ನು ಬರೆದಿದ್ದೇನೆ.

ಮಹಾಬಲರಿಗೆ ಕಾವ್ಯ-ನಮನ
ಬಿಡದೆ ಬಾಧಿಸುತಿಹುದು ಭೀಷ್ಮ ನಿನ್ನಯ ನೆನಪು
ನಡೆದೆ ಎಲ್ಲಿಗೆ ಹೇಳು ಇನ್ನೆಲ್ಲಿ ಒನಪು ?

ಬೇರೆ ಹಲವರು ಇಲ್ಲಿ ಪಾತ್ರ ಮಾಡಲುಬಹುದು
ನಾನಾ ರಾಗದಿ ಹಾಡಿ ಕುಣಿಯಬಹುದು
ಯಾರು ಸಾಟಿಯು ನಿನಗೆ ಯಕ್ಷರಂಗದಲಿ
ಮೀರಿ ನಿಂತಿಹರಿಲ್ಲ ನಿನ್ನ ತಿಟ್ಟಿನಲಿ

ಇಡಗುಂಜಿ ಮೇಳದಲಿ ಬಡಗುತಿಟ್ಟಿನ ವೇಷ
ಗಡಗುಡಿಸಿ ನಡುಗಿಸಿದೆ ನೀನು ಜಮದಗ್ನಿ
ಬೆಡಗು ನಾ ಮರೆವೆನೇ ಬಿಲ್ಲ ಹಬ್ಬದ ಕಂಸ
ಎಡಬಿಡದೆ ನೋಡಿದೆನು ಕೃಷ್ಣ -ಕೌರವರ

ಕೆರೆಮನೆಯ ಅಂಗಳದಿ ಆಡಿಬೆಳೆದಿಹ ಕೂಸು
ನೆರೆದೇಶದಂಗಳಕೆ ಜಿಗಿದು ಬಂತು
ಹರಕೆ ತೀರಿಸಿ ಜಗದ ಪಾತ್ರವನು ಮುಗಿಸುತ್ತ
ಗರಿಕೆಪೂಜೆಯ ನೀಡೆ ಗಣಪನೈದಿದೆಯಾ ?
------------
ಸತ್ಕಾರ್ಯವನ್ನು ಕೈಗೊಂಡಿರುವ ಶ್ರೀ ಜಿ.ಎಸ್.ಹೆಗಡೆಯವರನ್ನು ಅಭಿನಂದಿಸುತ್ತಾ , ತಮ್ಮನ್ನೆಲ್ಲಾ ಆಮಂತ್ರಿಸುತ್ತಿದ್ದೇನೆ - ಬನ್ನಿ ಸ್ನೇಹಿತರೇ, ಕಾರ್ಯಕ್ರಮವನ್ನು ಚಂದಗಾಣಿಸೋಣ ಬನ್ನಿ, ಮೇರು ನಟನಿಗೆ ನಮನ ಹೇಳೋಣ ಬನ್ನಿ !

6 comments:

  1. ಮೇರು ಕಲಾವಿದರಿಗೊಂದು ನನ್ನ ನಮನ. ನಿಮ್ಮ ಕಾವ್ಯನಮನವು ಅರ್ಥಪೂರ್ಣವಾಗಿದೆ. ಆಗಬೇಕಾದ್ದೇ ಆಗುತ್ತಿದೆ. ಸಮಾರಂಭ ಯಶಸ್ವಿಯಾಗಲಿ. ಧನ್ಯವಾದ

    ReplyDelete
  2. ಸಮಾನ ಶೀಲೇಶು ವ್ಯಸನೇಶು ಸಖ್ಯಂ ಎನ್ನುತ್ತಾರಲ್ಲವೇ ಬಹುಶಃ ನಿಮ್ಮಂಥ ಸಮಾನ ಮನಸ್ಕರಿರುವಾಗ ಕಲಾವಿದರೂ ತೃಪ್ತಿ ಪಡುತ್ತಾರೆ, ಧನ್ಯವಾದಗಳು

    ReplyDelete
  3. ಪ್ರಿಯ ವ್.ಅರ್.ಭಟ್ಟರೆ,ಯಕ್ಷಗಾನದಲ್ಲಿ ಪಾತ್ರವಾಗಿ ಅದರ ಅ೦ತರ್ಯವನ್ನು ತೆರೆದಿಡುವ ಮೇರು ಕಲಾವಿದರಾಗಿದ್ದವರು ಮಹಾಬಲರು.ಅವರು ಯಕ್ಷಗಾನಕ್ಕೊಬ್ಬ ಮಹಾ ಬಲರೇ ಸರಿ.ಅವರ ನೆನಪಿನ ಕಾರ್ಯಕ್ರಮ ಯಶಸ್ವಿಯಾಗಲಿ.ಆಯೋಜಿಸಿದವರಿಗೆ,ತಿಳಿಸಿದ ನಿಮಗೆ ಅಭಿನ೦ದನೆ.

    ReplyDelete
  4. ತಮ್ಮ ನುಡಿ ನಮನ ದಿ.ಮಹಬಲ ಹೆಗಡೆಯವರ ಬಗ್ಗೆ ಚೆನ್ನಾಗಿದೆ. ಮೇರುನಯಕ್ಷಗಾನ ಕಲಾವಿದರಾದ ಷ೦ಭ್ಹಣ್ಣ ಮತ್ತು ಮಹಬಲರಿಗೆ ನಮ್ಮ ಹೃತ್ಪುವ್ರಕ ನಮನಗಳು. ಕಾರ್ಯಕ್ರಮ ಯಶಸ್ವಿಯಾಗಲಿ. ತಾರ್‍ಈಖು ೨೮ ರ ಬದಲಿ ೨೦ ಎ೦ದು ತಪ್ಪಾಗಿ ಮುದ್ರಿತವಾಗಿರಬಹುದು. ದಯವಿಟ್ಟು ಪರಿಶೀಲಿಸಿ.

    ReplyDelete
  5. ಕೂಸು ಮುಳಿಯ ಮತ್ತು ಸೀತಾರಾಮ್ ಅವರಿಗೆ ಧನ್ಯವಾದಗಳು, ಲೇಖನ ಅಗತ್ಯಕ್ಕೆ ತಕ್ಕಂತೆ ಸಂಕ್ಷೇಪಮಾಡಿದ್ದೇನೆ, ಇಲ್ಲದಿದ್ದರೆ ಇಷ್ಟಕ್ಕೆ ಮುಗಿಯುವ ವಿಷಯವಲ್ಲ, ಮಹಾಬಲರ ಹತ್ತಿರದ ಸಂಪರ್ಕ ಇರುವವರಿಗೆ ಅವರ ಸೌಜನ್ಯ, ಹಾಸ್ಯ ಎಲ್ಲ ಮುಖಗಳ ಪರಿಚಯವಿದೆ, ಇಂದು ಕಾಣುವ ವ್ಯಕ್ತಿ ನಾಳೆ ಇರದ ಈ ಜೀವನ ಎಂತಹ ವಿಚಿತ್ರ ಸೃಷ್ಟಿ ನಿಯಮ ನೋಡಿ, ಕಣ್ತಪ್ಪಿನಿಂದ ತಪ್ಪಾಗಿದ್ದ ದಿನಾಂಕವನ್ನು ಸರಿಪಡಿಸಿದ್ದೇನೆ, ಇದನ್ನು ತಿದ್ದಿ ಗುರ್ತಿಸಿದ ಸೀತಾರಾಮ್ ರವರ ಉಪಕಾರ ಸ್ಮರಿಸುತ್ತಿದ್ದೇನೆ.

    ReplyDelete
  6. ಮಹಾಬಲರೆಂದರೆ ಮಹಾಬಲರೇ! ಅವರಿಗೆ ಅವರೆ ಸಾಟಿ. ನಮ್ಮ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಮಹಾಬಲರು ಬಹಳ ವಿಟ್ಟಿ ವ್ಯಕ್ತಿತ್ವದವರಾಗಿದ್ದರು. ಒಮ್ಮೆ ನಾನು ನನ್ನ ತಂದೆ-ತಾಯಿ ಅವರ ಮನೆಗೆ ಹೋದ ಸಂದರ್ಭ! ತುಂಡು ಪಂಚೆಧಾರಿ ಮಹಾಬಲ ಹೆಗೆಡೆ ತೆಂಗಿನಗಿಡಕ್ಕೆ ನೀರು ಹಾಯಿಸುತ್ತಿದ್ದರು. ಕೈಯಲ್ಲಿ ಒಂದು ಬಕೇಟು! " ಓಹೋ ಭಟ್ರೆ ಬನ್ನಿ...ಬನ್ನಿ.....ನೋಡಿ ನನ್ನ ಈ ವೇಶ! ರಾಷ್ಟ್ರ ಪ್ರಶಸ್ತಿ ವಿಜೇತಾ ಸಗಣಿ ಬಾಲ್ಡಿ ಎಳೆತಾ!" ಎಂದು ಹೆಳುತ್ತಾ ನಮ್ಮನ್ನು ಸ್ವಾಗತಿಸಿದ್ದರು! ಅನೇಕ ಸಾರಿ ನಮ್ಮ ಮನೆಗೆ ಬಂದಿದ್ದರು. ವರುಷಕ್ಕೊಮ್ಮೆಯಾದರೂ ನಾವು ಅವರ ಮನೆಗೆ ಹೋಗುತ್ತಿದ್ದೆವು! ಅಬಾಲವ್ರುದ್ಧರಾದಿಯಾಗಿ ಎಲ್ಲರಿಗೂ ಸೇರುವ ವ್ಯಕ್ತಿತ್ವದವರಾದ ಮಹಾಬಲರು ಮಹಾಬಲರೇ ಸೈ! ಅವರನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.

    ReplyDelete