ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, February 24, 2012

ಒತ್ತಡ-ನಿಗ್ರಹ


ಒತ್ತಡ-ನಿಗ್ರಹ

ಅನುಗಾಲವೂ ಚಿಂತೆ ಈ ಜೀವ ಜೀವನಕೆ
ತನುಮನಕೆ ಇಲ್ಲ ಸುಖ ಎಲ್ಲ ಸಂದೇಹ
ಕನಸುಗಳು ಏರುತ್ತ ತಕತಕನೆ ಕುಣಿವಾಗ
ಮನಸು ಬಳಲುತಲಿಹುದು | ಜಗದಮಿತ್ರ

ಅಧಿಕಾರ ಬೇಕೆಂಬ ಆಸೆ ಒಂದೆಡೆಯಲ್ಲಿ
ಪದಕುಸಿವ ಭಯವಿಹುದು ಇನ್ನೊಂದು ಕಡೆಗೆ
ಬೆದಕುತ್ತ ಹಲವರಲಿ ಅಂಗಲಾಚುವ ಕಾಲ
ಬದುಕು ಹೋರಾಟವೈ | ಜಗದಮಿತ್ರ

ಒಡೆಯನಣತಿಯ ಮೀರೆ ಹದಗೆಡುಗು ಜೀವನವು
ಬಿಡುಗಡೆಗೆ ಬಯಸುವುದು ಸೋತ ತನುಮನವು
ಕಡೆಗೊಮ್ಮೆ ತನುವೆದುರು ಮನಸೋತು ಮಣಿದಾಗ
ಕೆಡುಗು ದೇಹಸ್ಥಿತಿಯು | ಜಗದಮಿತ್ರ

ಸಿರಿವಂತ ನೆಂಟರನು ಕಂಡೊಮ್ಮೆ ಕುಳಿತಾಗ
ಕರೆವಂತೆ ಧನಿಕನಾಗುವ ಆಸೆ ಮನಕೆ !
ಹರಸಾಹಸದಿ ನಿತ್ಯ ಹಣಗಳಿಸುವಾಸೆಯಲಿ
ತಿರುಚಿ ಕೊಂಬುದು ಹೃದಯ | ಜಗದಮಿತ್ರ

ಸತಿಯಾಸೆ ಅತಿಯಾಗೆ ಪತಿಗಧಿಕದೊತ್ತಡವು
ಪತಿಯಾಸೆ ಅತಿಯಾಗೆ ಸತಿಗಕ್ಕು ನೋವು
ಸತಿಪತಿಗಳಿಬ್ಬರಿಗೂ ಅತಿಯಾಸೆ ಜೋರಾಗೆ
ಕಥೆಗೆ ಮಂಗಳವಕ್ಕು ! ಜಗದಮಿತ್ರ

ಮಕ್ಕಳಿಗೆ ಶಿಕ್ಷಣದಿ ಹೆಚ್ಚು ಗುಣಪಡೆವಂತೆ
ಇಕ್ಕಳದ ಅಡಕೊತ್ತು ಇಟ್ಟು ಹೆದರಿಸುತ
ಹೊಕ್ಕಳಿನ ಬಳ್ಳಿಕೊಯ್ಯುವಮುಂಚೆಯೇ ಶಾಲೆ !
ಮಕ್ಕಳಾಟವೆ ಬದುಕು ? ಜಗದಮಿತ್ರ

ಯುಗಧರ್ಮ ನಗಧರ್ಮ ಆಗಿಹುದು ಈ ದಿನದಿ
ಬಗೆಬಗೆಯ ಹಾದಿಯಲಿ ಮೋಸ-ವಂಚನೆಯು !
ನಗುನಗುತ ಬಂದವರೆ ನುಗ್ಗಿ ಕದ್ದೊಯ್ಯುವರು
ನಗಕೆ ಚೋರರ ಭಯವು | ಜಗದಮಿತ್ರ

ನಿತ್ಯ ಕುಳಿತಾಗೊಮ್ಮೆ ಬರೆದು ಕರ್ಮಂಗಳನು
ಸತ್ಯ-ಮಿಥ್ಯದ ಲೆಕ್ಕ ಒಪ್ಪಿಸುತ ಮನಕೆ
ತಥ್ಯದೊಳ್ ಪರಮಾತ್ಮ ಅಡಗಿಹನು ಮನದೊಳಗೆ
ಪಥ್ಯ ಸರಳತೆ ಇಹಕೆ | ಜಗದಮಿತ್ರ

ತಾಪ-ತ್ರಯಗಳಿಂ ಬೇಯುವುದು ಜೀವನವು
ಕೋಪ ಮೋಹಾದಿ ಮದ-ಮಾತ್ಸರ್ಯ ಗುಣಗಳ್
ವ್ಯಾಪಾರ ನಡೆದಿಹುದು ನಮಗರಿವೆ ಇಲ್ಲದಲೆ
ದೀಪಬುಡ ಕತ್ತಲವು | ಜಗದಮಿತ್ರ

ಯೋಗ-ಧ್ಯಾನವು ಬೇಕು ಭೋಗವೈಖರಿ ಜೊತೆಗೆ
ಕಾಗೆ-ಕುನ್ನಿಗೆ ಹಾರ ಇಡಬೇಕು ಬದುಕೆ
ಸಾಗರವು ಸಂಸಾರ ಆಗುವುದು ಸಾಕಾರ
ನೀಗು ಒತ್ತಡ ನಿರತ | ಜಗದಮಿತ್ರ

Thursday, February 23, 2012

ನೀತಿ ತಪ್ಪಿ ನಡೆದೆ...ಲಕ್ಷ್ಮಣಾ......


ನೀತಿ ತಪ್ಪಿ ನಡೆದೆ...ಲಕ್ಷ್ಮಣಾ......

ರಾಜಾರಾಮನ ರಾಜಸಭೆ ಸೇರಿದೆ. ವಂದಿಮಾಗಧರು, ಪಂಡಿತ-ವಿದ್ವನ್ಮಣಿಗಳು, ಕಲಾವಿದರು, ಸಂಗೀತಗಾರರು, ಅರಮನೆ ಆಡಳಿತ ವರ್ಗ ಎಲ್ಲಾ ಸೇರಿದ ಶ್ರೀರಾಮನ ಒಡ್ಡೋಲಗ. ಬಹುತೇಕ ರಾಮಾವತಾರ ಮುಕ್ತಾಯಕ್ಕೆ ಬಂದ ಸಮಯ. ಪ್ರಭು ಶ್ರೀರಾಮನ ರಾಮರಾಜ್ಯ ಬಹಳ ಪ್ರಸಿದ್ಧಿ ಪಡೆದಿದೆ. ಪ್ರಜೆಗಳೆಲ್ಲ ಉಂಡುಟ್ಟು ಸುಖದಿಂದಿರುವಾಗ, ರಾಜಕಾರ್ಯದಲ್ಲಿ ರಾಮಾದಿಗಳು ತೊಡಗಿರುವ ವೇಳೆ ಕಾಲ ಪುರುಷ ಶ್ರೀರಾಮನನ್ನು ನೋಡಬೇಕು ಎಂದು ಬರುತ್ತಾನೆ. ಸಿಂಹಾಸನಾರೂಢ ರಾಮಚಂದ್ರನಿಗೆ ದೂರದಲ್ಲಿ ಬಂದು ನಿಂತಿರುವ ಕಾಲಪುರುಷ ಕಾಣಿಸುತ್ತಾನೆ, ರಘುವೀರ ಆತನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತ ಬಂದಾಗಲೇ ಗೊತ್ತು ರಾಮನಿಗೆ ’ನಮ್ಮ ಕಾಲ ಸನ್ನಿಹಿತವಾಗಿದೆ’ ಎಂದು ! ಆದರೂ ಪ್ರತ್ಯಕ್ಷ ಅವನಲ್ಲಿ ಕೇಳಲು ಹೋಗುವುದಿಲ್ಲ. ಬಂದ ಕಾಲ ಆತಿಥ್ಯ ಸ್ವೀಕಾರಮಾಡಿದ ಮೇಲೆ ಮತ್ತೇನಾಗಬೇಕೆಂಬ ಪ್ರಶ್ನೆ ಕೇಳುತ್ತಾನೆ ಶ್ರೀರಾಮ. ’ ರಾಮನ ಕೂಡ ಏಕಾಂತದಲ್ಲಿ ಮಾತನಾಡಬೇಕು, ಅಲ್ಲಿಗೆ ಯಾರೂ ಬರಕೂಡದು’ ಎಂಬ ಶರತ್ತನ್ನು ವಿಧಿಸಿ ಕಾಲಪುರುಷ ರಾಮನಿಗೆ ಹೇಳುತ್ತಾನೆ. ರಾಮ ತಮ್ಮ ಲಕ್ಷ್ಮಣನನ್ನು ಕರೆದು ಏಕಾಂತದ ಮಾತುಕತೆಗೆ ಏರ್ಪಾಟುಮಾಡುವಂತೆಯೂ, ಏಕಾಂತಕ್ಕೆ ಭಂಗ ಬಂದರೆ ದೇಹಾಂತ ಶಿಕ್ಷೆ ವಿಧಿಸಲಾಗುವುದು ಎಂದು ಕಾಲನ ಇಚ್ಛೆಯಂತೆ ತಮ್ಮನಿಗೆ ಹೇಳುತ್ತಾನೆ. ಅಣ್ಣನ ಮಾತನ್ನು ಎಂದೂ ಎಂದೆಂದೂ ಶಿರಸಾವಹಿಸಿದ ತಮ್ಮ ಲಕ್ಷ್ಮಣ ಅಂದೂ ಕೂಡ ಹಾಗೇಯೇ ನಡೆದುಕೊಳ್ಳುತ್ತಾನೆ. ಏಕಾಂತ ಪ್ರಾರಂಭವಾಗುತ್ತದೆ. ಅಲ್ಲಿ ಕಾಲಪುರುಷ ರಾಮನಿಗೆ ಅವತಾರ ಸಮಾಪ್ತಿಗೊಳಿಸಿ ಭುವಿಯಲ್ಲಿ ಸ್ಥಿರವಾಗಿರದೇ ವೈಕುಂಠಕ್ಕೆ ಮರಳಲು ನೆನಪಿಸುತ್ತಿರುತ್ತಾನೆ.

ಎಲ್ಲೆಲ್ಲೋ ಅಂಡಲೆಯುತ್ತಿದ್ದ ದೂರ್ವಾಸರು ತಿರುಗುತ್ತಾ ತಿರುಗುತ್ತಾ ಅಯೋಧ್ಯೆಗೆ ಬಂದುಬಿಡುತ್ತಾರೆ. ಬಂದವರನ್ನು ಲಕ್ಷ್ಮಣ ಅಣ್ಣನ ಪರವಾಗಿ ಸ್ವಾಗತಿಸಿ, ಅರ್ಘ್ಯ-ಪಾದ್ಯಗಳನ್ನಿತ್ತು ಸತ್ಕರಿಸುತ್ತಾನೆ. ತಾನು ರಾಮನನ್ನು ನೋಡಲೆಂದೇ ಬಂದಿರುವುದಾಗಿಯೂ ತನಗೆ ತುರ್ತಾಗಿ ರಾಮನನ್ನು ನೋಡಲೇ ಬೇಕೆಂದೂ ದೂರ್ವಾಸರು ಸಾರುತ್ತಾರೆ. ಒಂದು ಕಡೆ ಅಣ್ಣನ ಆಜ್ಞೆ, ಇನ್ನೊಂದು ಕಡೆ ಮುನಿಯ ಅಪೇಕ್ಷೆ. ಮುನಿಯೆಂದರೆ ಆತ ಮುನಿಯುವ ಮುನಿ, ಬಹಳ ಜನ ಅವರಿಂದ ದೂರವೇ ವಾಸವಿದ್ದರೆ ಸಾಕು ಎಂಬಂತೆ ಹೆದರಿಕೆ ಉಂಟುಮಾಡಿರುವ ಕೋಪದ ಪ್ರತಿರೂಪವಾದ ದೂರ್ವಾಸ ! ತಲೆನೋವು ತಂದುಕೊಂಡ ಲಕ್ಷ್ಮಣ ಏನು ಮಾಡಬೇಕೆಂದು ತೋಚದೆ ಕಂಗಾಲಾಗುತ್ತಾನೆ. ದೂರ್ವಾಸರ ಕೋಪ ಪ್ರಾರಂಭವಾಗಿರುತ್ತದೆ. ರಾಮದರ್ಶನ ಬಯಸಿಬಂದ ಯಾರಿಗೇ ಆಗಲಿ ಲಕ್ಷ್ಮಣ ಇಲ್ಲಾ ಎಂದಿರಲಿಲ್ಲ. ಅಣ್ಣನ ಆಜ್ಞೆಯಿದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಅಂದರೂ ದೂರ್ವಾಸರು ಕೇಳಬೇಕಲ್ಲ ! ಲಕ್ಷ್ಮಣ ಶತಪಥ ತಿರುಗುತ್ತ ಅಣ್ಣ ಎಲ್ಲಾದರೂ ಕಿಟಕಿಯಲ್ಲಾದರೂ ಕಾಣಸಿಗುವನೇ ಎಂದು ನೋಡುತ್ತಾನೆ. ಉಹುಂ ! ಇಲ್ಲ, ಮಾತಿಗೆ ಅಣ್ಣ ಸಿಗುತ್ತಿಲ್ಲ. ಏನುಮಾಡಲಿ ಏನುಮಾಡಲಿ ಎಂದು ಕೈಕೈ ಹೊಸಕಿಕೊಳ್ಳುತ್ತ ಕೊನೆಗೊಮ್ಮೆ ಮುನಿಯ ಆವೇಶ,ಆಕ್ರೋಶ ತಾಳಲಾರದೆ ದೂರ್ವಾಸರನ್ನು ಒಳಗೆ ಪ್ರವೇಶಕ್ಕೆ ಬಿಟ್ಟುಬಿಡುತ್ತಾನೆ. ಏಕಾಂತಕ್ಕೆ ಭಂಗಬಂತೆಂದು ಕಾಲಪುರುಷ ಕೆಲಕ್ಷಣಗಳಲ್ಲೇ ಹೊರಟುಹೋಗುತ್ತಾನೆ,ಹೋಗುವ ಮುನ್ನ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆ ನೀಡುವಂತೆ ತಾಕೀತು ಮಾಡಿ ಹೋಗುತ್ತಾನೆ. ಆ ಬಳಿಕ ರಾಮ ಬಂದ ದೂರ್ವಾಸರನ್ನು ಉಪಚರಿಸಿದ ನಂತರ ಆಜ್ಞೆಯ ಉಲ್ಲಂಘನೆ ಆಗಿದ್ದಕ್ಕೆ ಪ್ರೀತಿಯ ತಮ್ಮನಲ್ಲಿ ಪ್ರಸ್ತಾವಿಸಿ ಶಿಕ್ಷೆಯನ್ನು ಅಂಗೀಕಾರಮಾಡದೇ ವಿಧಿಯಿಲ್ಲ ಎನ್ನುತ್ತಾನೆ.

ಪ್ರಜಾಪಾಲಕ ಸಾರ್ವಭೌಮ ರಾಮ ಇಂದು ಈ ವಿಷಯದಲ್ಲಿ ನಿರ್ವೀರ್ಯನಾಗಿದ್ದಾನೆ. ಸಾವಿರ ಸಾವಿರ ಜನರ ಆರ್ತನಾದ ಆಲಿಸಿ ಮನ್ನಿಸುವ-ಅವರ ಅಹವಾಲು ಸ್ವೀಕರಿಸಿ ಪರಿಹಾರ ಒದಗಿಸುವ ಕೈ ಇಂದು ಪರಿಹಾರವಿಲ್ಲದ ಬರಿಗೈಯ್ಯಾಗಿ ಬೆವರ ಹನಿಗಳೂ ಬತ್ತಿಹೋದ ಸ್ಥಿತಿಯಲ್ಲಿವೆ.ಕಣ್ಣಾಲಿಗಳು ತುಂಬಿ ಬಂದರೂ ಹನಿಗಳುದುರಿದರೆ ಸಭಿಕರು ನೋಡಿ ಏನೆಂದಾರು ಎಂಬ ಅನಿಸಿಕೆ ಕಾಡುತ್ತಿದೆ. ಕಾಡಿನಲ್ಲೂ ನಾಡಿನಲ್ಲೂ ತನ್ನ ಜೊತೆಗೇ ಇದ್ದು, ತನಗೆ ಬೇಕಾದ ಎಲ್ಲಾ ಕೆಲಸಗಳನ್ನು ಪೂರೈಸುತ್ತಿದ್ದ, ತನ್ನ ಶರೀರದ ಒಂದು ಅವಿಭಾಜ್ಯ ಅಂಗವಾದ ನಲ್ಮೆಯ ತಮ್ಮ ಲಕ್ಷ್ಮಣ ಇಂದು ಭಾಜ್ಯವಾಗಿ ದೂರಹೊಗಬೇಕಾಗಿ ಬಂದಿದೆ. ಲಕ್ಷೋಪಲಕ್ಷ ಜೀವಜಂತುಗಳಿಗೆ ಜೀವಿತವನ್ನು ವಿಸ್ತರಿಸಿದ ರಾಮ, ಕಲ್ಲಾಗಿ ಬಿದ್ದ ಅಹಲ್ಯೆಗೆ ಜೀವ ತುಂಬಿದ ರಾಮ, ಶರಣು ಎಂದ ವಿಭೀಷಣಗೆ ಪಟ್ಟಗಟ್ಟಿದ ರಾಮ, ಅಳಿಲು ಸೇವೆಯನ್ನೂ ಪರಿಗಣಿಸುತ್ತ ಅಳಿಲಿಗೂ ಪ್ರೀತಿಯ ಹಸ್ತರೇಖೆ ಎಳೆದು ಹರಸಿದ ರಾಮ ಅಧೀರನಾಗಿದ್ದಾನೆ! ತನ್ನಷ್ಟಕ್ಕೇ ತಾನು ಎಲ್ಲವನ್ನೂ ನೆನೆನೆನೆದು ಗಡಗಡ ನಡುಗುತ್ತಿದ್ದಾನೆ! ಆದರೆ ಹೊರಗಡೆ ವ್ಯಕ್ತಪಡಿಸಲಾರದ ರಾಜಾರಾಮ ಅವನು! ರಾಜನಾಗಿ ವಿಧಿಸಿದ್ದ ಕರಾರಿನ ಪ್ರಕಾರ ಶಿಕ್ಷೆ ನೀಡಲೇಬೇಕು. ತಮ್ಮನ ಮೇಲೆ ಇರುವ ಪ್ರೀತಿ ಅಂತಹುದು, ಅದು ಹೇಳಬರುವಂತಿಲ್ಲ. ಬಾಲ್ಯದಿಂದ ಇದುತನಕ ಆಡಿ ಅನುಭವಿಸಿದ ಆ ಪ್ರೀತಿಯನ್ನು, ಆ ಪ್ರೀತಿಯ ಬಂಧನವನ್ನು, ಆ ಪ್ರೇಮ ಸಂಕೋಲೆಯನ್ನು ಹರಿಯಲಾರದ, ಹರಿಯದಿರಲಾರದ ಇಬ್ಬಂದಿತನದಲ್ಲಿ ಸಿಕ್ಕಿ ರಾಮ ನಲುಗಿದ್ದಾನೆ. ದೃಷ್ಟಿ ಬೇರೆಕಡೆಗಿಟ್ಟು ಕೊನೆಗೊಮ್ಮೆ ಮತ್ತೊಮ್ಮೆ ಖಡಾಖಂಡಿತವಾಗಿ ಹೇಳಿದ್ದಾನೆ -

" ಲಕ್ಷ್ಮಣಾ, ಮಾಡಿದ ತಪ್ಪಿಗೆ ದೇಹಾಂತ ಶಿಕ್ಷೆ ವಿಧಿಸಿದ್ದೇನೆ, ಹೋಗು ಅನುಭವಿಸು "

ಲಕ್ಸ್ಮಣ ಅಂದು ಸೀತೆಗಾಗಿ ಮರುಗಿದ, ಇಂದು ತನಗಾಗಿ ಅಲ್ಲ, ಅಣ್ಣನ ಸಾಂಗತ್ಯ ತಪ್ಪಿಹೋಗುತ್ತಿರುವುದಕ್ಕೆ ಪರಿತಪಿಸುತ್ತಾ ಕೆಲ ಕ್ಷಣ ಕಳೆಯುತ್ತಾನೆ. ಅವನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲಾ ಘಟನೆಗಳನ್ನೂ ಮೆಲುಕು ಹಾಕುತ್ತಾನೆ.

ರಾಮನಿಲ್ಲದ ಬದುಕು ಗೊತ್ತೇ ಇಲ್ಲ ಲಕ್ಷ್ಮಣನಿಗೆ, ರಾಮ ಸೀತೆಯನ್ನಾದರೂ ಬಿಟ್ಟಿದ್ದ ದಿನಗಳಿವೆ ಆದರೆ ತಮ್ಮ ಲಕ್ಷ್ಮಣನನ್ನು ಬಿಟ್ಟಿರಲಿಲ್ಲ. ಸದಾ ಅಣ್ಣನ ಅನುವರ್ತಿಯಾಗಿ ಅದರಲ್ಲೇ ಸಂಪೂರ್ಣ ತೃಪ್ತ ಲಕ್ಷ್ಮಣ. ಅಣ್ಣನ ಸಲ್ಲಕ್ಷಣಗಳನ್ನು ಸಂಪೂರ್ಣ ಮೈಗೂಡಿಸಿಕೊಂಡ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನಾದರೂ ಬಿಟ್ಟು ಬದುಕಿಯಾನು ಆದರೆ ಅಣ್ಣನಿಂದ ಅಗಲುವಿಕೆ ಕನಸಲ್ಲೂ ಸಾಧ್ಯವಾಗದ ಮಾತು. ತನ್ನ ಪಕ್ಕದಲ್ಲೇ ಅಣ್ಣ ಕುಳಿತು ವಿಜ್ರಂಭಿಸಿದ ಸಿಂಹಾಸನಕ್ಕಾಗಿ ಆ ಆಳುವ ಖುರ್ಚಿಗಾಗಿ ಲಕ್ಷ್ಮಣ ಎಂದೂ ಹಂಬಲಿಸಲಿಲ್ಲ,ಹಪಹಪಿಸಲಿಲ್ಲ! ತಂದೆಯ ಪರೋಕ್ಷ ಆಜ್ಞೆಯಂತೆ ಕಾಡಿಗೆ ರಾಮ ತೆರಳುವಾಗ ಹಠದಿಂದ ಹಿಂಬಾಲಿಸಿದ ವ್ಯಕ್ತಿ ಲಕ್ಷ್ಮಣ. ರಾಮನೊಟ್ಟಿಗೆ ಕಾಡಿನಲ್ಲಿ ಹದಿನಾಲ್ಕು ವರುಷಗಳನ್ನು ಕಳೆದುಬಂದಿದ್ದ. ಕಾಡಲ್ಲಿರುವಾಗ ಕ್ರೂರ ರಕ್ಕಸರನ್ನು ಸದೆಬಡಿದಿದ್ದು, ಕಂದಮೂಲಾದಿ ಫಲಗಳನ್ನು ಅಣ್ಣ-ಅತ್ತಿಗೆಯರ ಜೊತೆಗೆ ಹಂಚಿ ತಿಂದು ನಾರುಟ್ಟು ಬದುಕಿದ್ದು, ಮದುವೆಯಾಗುವಂತೆ ಹಿಂಸಿಸಿದ ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದು, ಸೀತಾಮಾತೆಯ ಆಜ್ಞೆಯಂತೆ ಜಿಂಕೆ ಹುಡುಕಿ ಹೊರಟ ’ ರಾಮನ ಕೂಗ ’ ನ್ನು ಅನುಸರಿಸಿ ಹೊರಡುತ್ತಾ ಲಕ್ಷ್ಮಣ ತನ್ನ ಹೆಸರಲ್ಲೇ ಸತ್ಯ ಶಪಥದ ರಕ್ಷಣಾ ರೇಖೆ ಬರೆದಿದ್ದು.........ಒಂದೇ ಎರಡೇ ಮರೆಲಸಾಧ್ಯ ದಿನಗಳವು. ತಂದೆ-ತಾಯಿ ಬಂಧು ಬಳಗದ ಎಲ್ಲರ ಪ್ರೀತಿಯನ್ನು ಕೇವಲ ತನ್ನಣ್ಣನಲ್ಲೇ ಕಂಡಿದ್ದ ಲಕ್ಷ್ಮಣ. ಅಣ್ಣನೇ ಆತನಿಗೆ ಜಗತ್ತು ! ಅದರ ಹೊರತು ಮಿಕ್ಕುಳಿದಿದ್ದೆಲ್ಲಾ ಗೌಣ ಆತನಿಗೆ. ಊಟ ಬಿಟ್ಟಾನು-ನಿದ್ದೆ ಬಿಟ್ಟಾನು, ಅಣ್ಣನನ್ನು ಮಾತ್ರ ಬಿಡ. ಅಣ್ಣನ ಸೇವೆ ಮಾಡಿ, ಅಣ್ಣ ಉಂಡು ಪ್ರೀತಿಯಿಂದ ತನ್ನ ತಲೆ ನೇವರಿಸಿ ತನ್ನ ಮೇಲೊಮ್ಮೆ ಬಾಚಿ ಅಪ್ಪುತ್ತ ಏನೇ ಹೇಳಿದರೂ, ಕೇಳಿದರೂ ಅದನ್ನು ಕೊಟ್ಟುಬಿಡುತ್ತಿದ್ದ,ಮಾಡಿಬಿಡುತ್ತಿದ್ದ ಲಕ್ಷ್ಮಣ ಅಣ್ಣ ಮಲಗಿದ ಮೇಲೆ ಅಣ್ಣನ ಪದತಲದಲ್ಲಿ ಕೆಳಗಡೆ ಹಾಸಿಕೊಂಡು ಮಲಗಿ ನಿದ್ರಿಸುತ್ತಿದ್ದ ಲಕ್ಷ್ಮಣ, ಅಣ್ಣನ ಕಣ್ಣ ನೋಟ ಮಾತ್ರದಿಂದಲೇ ಅದರ ಅರ್ಥಗ್ರಾಹಿಯಾಗಿ ಕೆಲಸ ಪೂರೈಸುತ್ತಿದ್ದ ಲಕ್ಷ್ಮಣ ಅಣ್ಣ ಕೊಟ್ಟ ಶಿಕ್ಷೆಗೆ ಹೆದರಿದ್ದಾನೆ! ಅಲ್ಲಲ್ಲ ಅಣ್ಣನನ್ನು ತೊರೆದುಹೋಗುವುದಕ್ಕೆ ಹೆದರಿದ್ದಾನೆ! ಮತ್ತೆಂದೂ ಸಿಗಲಾರದ ಅಣ್ಣನ ಆ ಪ್ರೀತಿಯ ಅಪ್ಪುಗೆಗೆ, ಸಾಂತ್ವನದ ನುಡಿಗಳಿಗೆ, ಕರುಣಾರ್ದ್ರ ಹೃದಯಕ್ಕೆ, ಆ ನೀತಿಗೆ-ಆ ರೀತಿಗೆ, ಆ ಸಮ್ಮೋಹಕ ವ್ಯಕ್ತಿತ್ವಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡ ಲಕ್ಷ್ಮಣ ಅದನ್ನೆಲ್ಲ ಕಳೆದುಕೊಳ್ಳುವ ಭಯದಿಂದ ಮನದಲ್ಲಿ ನರಳಿದ್ದಾನೆ, ಅಣ್ಣನಲ್ಲಿ ಹೇಳಲಾರ, ಅಣ್ಣನ ಮನಸ್ಸಿಗೆ ಎಂದೂ ನೋವು ತರಲಾರ, ಅಣ್ಣನ ಅಣತಿಗೆ ವಿರುದ್ಧವಾಗಿ ನಡೆಯಲಾರ, ಅಣ್ಣನ ಅಪೇಕ್ಷೆಯನ್ನು ಉಪೇಕ್ಷಿಸಲಾರ, ಅಣ್ಣನ ಮುಖಾರವಿಂದದಲ್ಲಿ ಕಂಡಿರುವ ಆ ಮುಗ್ಧ-ಮನಮೋಹಕ ಮುಗುಳು ನಗುವನ್ನು ಕಸಿದುಕೊಳ್ಳಲಾರ, ಅಣ್ಣನ ಸುಮಧುರ ಪಾದಸ್ಪರ್ಶವನ್ನು ತಪ್ಪಿಸಿಕೊಳ್ಳಲಾರ, ಅಣ್ಣನ ಹುಸಿಕೋಪವನ್ನು ನೋಡದೇ ಇರಲಾರ, ಚಂದದಿ ಅಣ್ಣ ಸಿಂಹಾಸನದಲ್ಲಿ ಕುಳಿತು ಧರ್ಮರಾಜ್ಯಭಾರ ಮಾಡುವುದನ್ನು ಕಣ್ತುಂಬಿಸಿಕೊಳ್ಳದೇ ಇರಲಾರ--ಇದೆಲ್ಲ ಪುನಃ ತನಗೆ ಸಿಕ್ಕೀತೆ --ಕಾಡುತ್ತಿದೆ ಮನಸ್ಸು. ಕನಸಲ್ಲೂ ಮನಸಲ್ಲೂ ರಾಮಣ್ಣನನ್ನೇ ತುಂಬಿಸಿಕೊಂಡು ಅವನ ನಗುವಲ್ಲೇ ತನ್ನ ನಗುವನ್ನ ಕಂಡ,ತನ್ನ ನಲಿವನ್ನ ಕಂಡ ನಿಸ್ಪ್ರಹ ಲಕ್ಷ್ಮಣ ಕ್ಷಣ ಕ್ಷಣದಲ್ಲೂ ಮನಸಾ ಪೂಜಿಸುವ, ಆರಾಧಿಸುವ, ಆಸ್ವಾದಿಸುವ, ಆಲಂಗಿಸುವ, ಆಲೈಸುವ ಆ ಪ್ರೇಮಮುದಿತ ರಾಮನಿಗಾಗಿ ಹಂಬಲಿಸುತ್ತಿದೆ ಮನಸ್ಸು. ಇನ್ನೆಲ್ಲಿ ನನ್ನ ರಾಮ ಇನ್ನೆಲ್ಲಿ ನನ್ನ ರಾಮಣ್ಣ, ಇನ್ನೆಲ್ಲಿ ಆ ಪ್ರೇಮ, ಇನ್ನೆಲ್ಲಿ ಆ ಕರುಳಿನ ಪ್ರೀತಿಯ ಹರಹು- ಹೊಕ್ಕುಳ ಬಳ್ಳಿಯ ಸಂಬಂಧ ? ಮನದಲ್ಲೇ ಅತ್ತಿದ್ದಾನೆ ಲಕ್ಷ್ಮಣ,ಪುನಃ ಸಿಗಲಾರದ ಈ ಅಣ್ಣ-ತಮ್ಮರ ಬಾಂಧವ್ಯಕ್ಕೆ ಮರುಗಿದ್ದಾನೆ ತಾನು. ಕಾಲ ಕಳೆದುಹೋಗುತ್ತಿದೆ, ಕಾಲನಪ್ಪಣೆಯಾಗಿದೆ, ಮೇಲಾಗಿ ರಾಜಾರಾಮನ ಆಜ್ಞೆಯಾಗಿದೆ! ಆಗಲೇ ಸತ್ತುಹೋದ ಅನುಭವದಿಂದ ಬತ್ತಿಹೋಗಿ ಹೊಲಿದುಕೊಂಡ ತುಟಿಗಳು, ನಿಂತ ನೀರಿನ ಮಡುಗಳಾದ ಕಣ್ಣಾಲಿಗಳು,ಕಬ್ಬಿಣದ ಕವಾಟದಂತೆ ಕೇಳಿಸದೆ ಕಿವುಡಾದ ಕಿವಿಗಳು,ಕಾಲಿಬಿಟ್ಟ ಬಂದೂಕಿನಂತೆ ನಿಸ್ತೇಜವಾದ ನಾಸಿಕ, ಸ್ವಂತಿಕೆ ಕಳೆದುಕೊಂಡ ಮೈಮನ, ಜಡಗಟ್ಟಿ ಮರಗಟ್ಟಿ ಹೋಗಿದ್ದಾನೆ ಲಕ್ಷ್ಮಣ, ಆ ಹರಹಿನಲ್ಲೇ ತೊರೆದುಹೋಗುವ ಕಾಲಕ್ಕೆ ಅಣ್ಣನನ್ನೊಮ್ಮೆ ಭಕ್ತಿಯಿಂದ ನೆನೆದುಕೊಂಡಿದ್ದಾನೆ.ಇದು ಮಹಾಕವಿ ವಾಲ್ಮೀಕಿ ಬರೆದ ರಾಮಾಯಣದ ಕಥಾಭಾಗ. ಹಿಂದೆಯೂ ನನ್ನೊಂದು ಕವನಕ್ಕೆ ಪೂರಕವಾಗಿ ಇದನ್ನು ಹೇಳಿದ್ದೆ.

ಇವತ್ತಿನ ನಮ್ಮ ರಾಜಕೀಯದ ಮಾಜಿಗಳ ಭೋಜನಾಂತರ್ಗತ ಸಂದೇಶವನ್ನು ಅನೇಕರು ಈಗಲೇ ತಿಳಿದಿದ್ದೇವೆ! ಹಣಬಲವೋ ಜನಬಲವೋ ಅಥವಾ ಹಣದ ಆಸೆಗೆ/ಅಧಿಕಾರದ ಅಸೆಗೆ ಹಲ್ಕಿರಿದು ಬರುವ ಗೋಸುಂಬೆ ತೆರನ ಬಾಲಬಡುಕರ ಬಲವೋ ರಾಜಕೀಯ ಸ್ಥಿತ್ಯಂತರ ಕಾಣುತ್ತಿದೆ! ನೆಲಗಳ್ಳತನದಲ್ಲಿ ಆರೋಪಗಳನ್ನು ಹೊತ್ತ ಯಡ್ಯೂರಪ್ಪ ಜನರ ಒತ್ತಡಕ್ಕೆ ಮಣಿದು ಖುರ್ಚಿ ಬಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದೊಮ್ಮೆ ಪಕ್ಷದ ಮುಖಂಡರು ಅಸ್ತು ಎನ್ನದಿದ್ದರೆ ಪಕ್ಷ ಒಡೆಯಲು ಸಿದ್ಧವಿರುವುದೂ ಅಷ್ಟೇ ’ಅಪಾರ’ದರ್ಶಕ ! ಯಾರ ಕೈಗೆ ಅಧಿಕಾರ ಕೊಟ್ಟು ಮೂಗುದಾರವನ್ನು ತನ್ನ ಕೈಲೇ ಇರಿಸಿಕೊಂಡು ಕುಣಿಸಬೇಕೆಂದುಕೊಂಡಿದ್ದಿತ್ತೋ ಹಿಂದೆ ಸ್ನೇಹಿತ, ಮಿತ್ರ, ಆಪ್ತ ಎನಿಸಿದ್ದ ಅದೇ ವ್ಯಕ್ತಿ-ಅನಾಯಾಸವಾಗಿ ತನಗೆ ಒದಗಿಬಂದ ಅವಕಾಶದಲ್ಲಿ ತನ್ನತನವನ್ನು ಮೆರೆದು ರಾಜ್ಯದ ಜನತೆಗೆ ಒಳಿತನ್ನು ಮಾಡಲು ಇನ್ನೇನು ಕೂರಬೇಕೆನ್ನುವ ಹೊತ್ತಲ್ಲೇ ಕಿಬ್ಬದಿಯ ಕೀಲು ಮುರಿದಂತೇ ಪರೋಕ್ಷ ಝಾಡಿಸಿ ಒದ್ದಿರುವುದು ಕಣ್ಣಲ್ಲಿ ಕಂಡರೂ ಪರಾಂಬರಿಸಬೇಕಿಲ್ಲದ ವಿಷಯ !

ಕೊಟ್ಟ ಒಂದು ಮಾತಿಗೆ ತಪ್ಪಿ ನಡೆದಿದ್ದಕ್ಕೆ ಶ್ರೀರಾಮ ಒಪ್ಪಿನಡೆದ; ತನಗತೀ ಪ್ರಿಯನಾಗಿದ್ದ ತಮ್ಮ ಲಕ್ಷ್ಮಣನನ್ನು ಅಗಲಿರಲಾರದ ಸ್ಥಿತಿಯಲ್ಲೂ ಅಗಲಿದ, ದೇಹಾಂತ ಶಿಕ್ಷೆ ವಿಧಿಸಿದ. ಅದರೆ ಅದು ಇಂದಿಗೆ ಕಥೆಯಾಗಿ ಪುಸ್ತಕವಾಗಿ ಕುಳಿತಿದೆಯೇ ಹೊರತು ಯಾರಿಗೆ ಆ ಆದರ್ಶ ಬೇಕಾಗಿದೆ ಸ್ವಾಮೀ ? ರಾಜೀನಾಮೆ ಕೊಟ್ಟು ಬೇಡವೆಂದು ಕಾಣಿಸಿಕೊಳ್ಳದೇ ಉತ್ತರಭಾರತಕ್ಕೆ ಓಡಿದರೂ ಅಂದಿನ ರಾಜ್ಯಪಾಲರು ಅದನ್ನು ಅಂಗೀಕರಿಸದೇ ಹಾಗೇ ಇರಿಸಿದ ಘಟನೆ ನಡೆದಿದ್ದು ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ. ಅಂದಿನ ರಾಜಕೀಯದವರಿಗೆ ಕೊನೇ ಪಕ್ಷ ಒಂದು ರೀತಿ ಮರ್ಯಾದೆ ಇತ್ತು; ಇವತ್ತು ಮರ್ಯಾದೆ ಎಂದರೇನು ಎಂದು ರಾಜಕೀಯದವರೇ ನಮ್ಮನ್ನು ಹಂಗಿಸಲು ಮುಂದಾಗುತ್ತಾರೆ. ಎಂತೆಂಥವರಿದ್ದಾರೆ: ನೇರವಾಗಿ ವಿಧಾನಸೌಧದಲ್ಲೇ ಲಂಚ ಪಡೆದವರಿದ್ದಾರೆ, ಮಿತ್ರನ ಹೆಂಡತಿಯನ್ನು ಭೋಗಿಸಿದವರಿದ್ದಾರೆ, ನರ್ಸ್ ಗಳನ್ನು ಅಪ್ಪಿಮುದ್ದಾಡಿ ಕೋರ್ಟಿನಲ್ಲಿ ಅವಳೊಡನೆಯೇ ರಾಜಿಮಾಡಿಕೊಂಡ ಡ್ಯಾನ್ಸ್ ರಾಜಾಗಳಿದ್ದಾರೆ,ಶಾಸಕಾಂಗ ಸಭೆಯಲ್ಲೇ ಕೂತು ನೀಲಿಚಿತ್ರದ ಮಜಾ ತೆಗೆದುಕೊಂಡ ಮಹಿಮಾನ್ವಿತರಿದ್ದಾರೆ! ಸಾಕೋ ಬೇಕೋ ?

ಇವರನ್ನೆಲ್ಲಾ ಆಡಿಸಲು ತನ್ನಿಂದ ಸಾಧ್ಯವಾಗುವುದಿಲ್ಲಾ ಅದಕ್ಕೇ ತನಗೆ ಮುಖ್ಯಮಂತ್ರಿ ಗಾದಿ ಬೇಡಾ ಎಂದಿದ್ದರಂತೆ ದಿ| ವಿ.ಎಸ್.ಆಚಾರ್ಯ ! ಅವರ ದೂರಾಲೋಚನೆ ಎಷ್ಟು ನಿಜವಾಗಿದೆ ಅಲ್ಲವೇ? ಹಾಸಿಗೆ ಕೆಳಗೆ ತೂರಿದರೆ ರಂಗೋಲಿ ಕೆಳಗೆ ನುಸುಳಿಕೊಳ್ಳುವ ಮನೆಹಾಳ ನಿಸ್ಸೀಮರಿರುವಾಗ ಪ್ರಜಾರಾಜ್ಯದ ಪ್ರಜೆಗಳ ಸುಖ ಯಾರಿಗೆ ಬೇಕಾಗಿದೆ? ಕಥೆಯೊಂದು ಹೀಗಿದೆ : ಅಕ್ಬರ್ ರಾಜನಾಗಿದ್ದಾಗ ಅವನಿಗೆ ಚಾಣಾಕ್ಷ ಮಂತ್ರಿಯಾಗಿದ್ದಾತ ಬೀರ್ಬಲ್. ಒಮ್ಮೆ ರಾಜಭಕ್ತಿಯನ್ನು ಪರಿಶೀಲಿಸುವ ಆಸೆಯಿಂದ ಬೀರ್ಬಲ್ ಪ್ರಜೆಗಳಿಗೆ ಒಂದು ಪರೀಕ್ಷೆ ಒಡ್ಡಿದ. ಹೊಸದಾಗಿ ಕಟ್ಟಿಸಿದ ಟಾಕಿಯೊಂದಕ್ಕೆ ಮೇಲ್ಭಾಗದಲ್ಲಿ ಚಿಕ್ಕ ಕೊಳವೆಯ ಕಿಂಡಿಯೊಂದನ್ನು ಬಿಟ್ಟು ಪ್ರತಿಯೊಬ್ಬರೂ ಒಂದೊಂದು ಚೊಂಬು ಹಾಲು ಸುರಿಯುವಂತೇ ಡಂಗುರ ಹೊಡೆಸಿದ. ರಾಜನಮೇಲಿನ ನಿಚ್ಚಳ ಭಕ್ತಿಯಿದ್ದವರು ಕಮ್ಮಿ ಇದ್ದರು! ಅರೆಮನಸ್ಸಿನಿಂದಲೇ ರಾಜನ ಟಾಕಿಗೆ ಚೊಂಬು ಹಾಲನ್ನು ನಾವೇಕೆ ಸುರಿಯಬೇಕೆಂದುಕೊಂಡು ’ಹಲವರು ಹಾಲನ್ನು ಹಾಕಿದಾಗ ತಾನೊಬ್ಬನೇ ನೀರು ಹಾಕಿದರೆ ತಾನು ಹಾಕಿದ್ದು ಹಾಲೇ ಎಂದು ತಿಳಿಯುತ್ತಾರೆ, ಯಾರಿಗೂ ಗೊತ್ತಾಗುವುದಿಲ್ಲ’ ಎಂದುಕೊಂಡು ಮುಚ್ಚಿದ ಬಾಯ ಚೊಂಬು ಹಿಡಿದು ಒಬ್ಬೊಬ್ಬರೂ ನಿಧಾನವಾಗಿ ಬಿಟ್ಟೂ ಬಿಟ್ಟೂ ಬಂದು ಟಾಕಿಗೆ ಸುರುವಿದರು! ಗೊತ್ತಾದ ಹೊತ್ತಿಗೆ ಬೀರ್ಬಲ್ ಅಕ್ಬರನ ಎದುರಲ್ಲಿ ಟಾಕಿಯ ಕೆಳಭಾಗದ ನಳವನ್ನು ತಿರುಗಿಸಿದ್ದಾನೆ. ಏನಾಶ್ಚರ್ಯ ಪರಿಶುದ್ಧ ಗಂಗಾಭವಾನಿ ಹೊರಗೆ ಹರಿದು ಬಂದಿದ್ದಾಳೆ ! ಅಕ್ಬರನ ಕಾಲಕ್ಕೇ ಪ್ರಜೆಗಳು ಈ ರೀತಿ ಇದ್ದರೆಂದಮೇಲೆ ಇಂದಿನ ಪ್ರಜೆಗಳಲ್ಲಿ ತಾವು ಮಾಡಿಸಿಕೊಂಡು ಹೋಗುವ ಸರಕಾರೀ ಮೊಹರಿನ ಅವಶ್ಯಕತೆಯ ಕೆಲಸಗಳಿಗಾಗಿ ಲಂಚ ನೀಡದೇ ಇರುವವರೆಷ್ಟು? ತಾವೊಬ್ಬರೇ ಒಳಗಿಂದಲೇ ಮನೆಗೇ ಹೋಗಿ ಕೊಟ್ಟು ಕೆಲಸಮಾಡಿಸಿಕೊಂಡರೆ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡ ಮಹನೀಯರೆಷ್ಟು ಎಂದು ಪ್ರಜೆಗಳಾದ ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಯಥಾ ಪ್ರಜಾ ತಥಾ ರಾಜಾ ಎಂದು ಸಂಸ್ಕೃತ ತನ್ನ ಹೇಳಿಕೆಯನ್ನು ಬದಲಿಸಿಕೊಳ್ಳಲು ಸೂಚಿಸಿದೆ, ಇದಕ್ಕೆ ಕಾರಣ: ಪ್ರಜಾಸತ್ತೆ! ಪ್ರಜೆ ಸಾಯದೇ ಬದುಕಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ತನ್ನೊಳಗೆ ಹರಿಶ್ಚಂದ್ರನನ್ನು ಕಂಡುಕೊಳ್ಳಬೇಕಾಗುತ್ತದೆ. ಯಾವಾಗ ಪ್ರಜಾಮೂಲದಿಂದ ಲಂಚ ಎಂಬ ಶಬ್ದವೇ ನಾಶವಾಗುತ್ತದೋ ಆಗ ರಾಜಕೀಯ ಒಂದು ಹಿಡಿತಕ್ಕೆ ಬರುತ್ತದೆ. ಪ್ರಜಾರಾಜ್ಯಕ್ಕೊಂದು ಘನತೆ, ಮರ್ಯಾದೆ ಇರುತ್ತದೆ. ಮೇವು ಕಂಡಲ್ಲಿ ಪಶುವೊಂದು ಸಹಜವಾಗಿ ನುಗ್ಗುವಂತೇ ರಾಜಕೀಯ ಆಡುಂಬೊಲದಲ್ಲಿ ಧನದಾಹದ ಹೆಬ್ಬುಲಿಗಳೇ ಸೇರಿಕೊಂಡು ಆಡುಗಳು ಬಲಿಯಾಗಿವೆ! ಪ್ರಜಾಸತ್ತೆ ಎಂಬ ನದಿ ಮಲಿನವಾಗಿದೆ; ಕೆಲವು ಕಡೆ ಹೂಳುತುಂಬಿದೆ; ಇನ್ನೂ ಎಲವುಕಡೆ ನೀತಿ-ನಿಯಮಗಳೆಂಬ ನೀರಿಲ್ಲದ ಬರಡು ನದಿಯಾಗಿದೆ! ಸಾಕ್ಷಾತ್ ದೂರ್ವಾಸನೋ ಕಾಲಪುರುಷನೋ ಬಂದರೂ ಅವರಿಗೇ ತಿರುಮಂತ್ರ ಹಾಕುವ ಪ್ರತ್ಯಂಗಿರಾ ದೇವಿಯ ಕಳ್ಳ ಭಕ್ತರು ವಿಧಾನಸೌಧ ಸೇರಿದ್ದಾರೆ-ಸೂರೆ ಹೊಡೆಯುತ್ತಿದ್ದಾರೆ!

ಕೆಲವರು ೫೦ ವರ್ಷದಿಂದ ಮೇದರೆ ಇನ್ನೂ ಕೆಲವರು ೪೦ ರಿಂದ ಮತ್ತೆ ಕೆಲವರು ೩೦...೨೦..೧೦...೫ ಹೀಗೇ ಶಕ್ತ್ಯಾನುಸಾರ ಮೇಯುತ್ತಲೇ ಸಮಯ ಸರಿದುಹೋಗುತ್ತಿದೆ; ಬಡರೈತ, ಬಡಪ್ರಜೆ ಹೊತ್ತಿನ ತುತ್ತಿಗೂ ಅಲ್ಲಿಲ್ಲಿ ತೂರಾಡುತ್ತಾ ಕೈಒಡ್ಡುವ ಪ್ರಸಂಗ ನಡೆದೇ ಇದೆ. ಕಾಡುಗಳು ನಾಶವಾಗಿ ಕಾಡುಪ್ರಾಣಿಗಳು ಹಸಿದು ಊರಿಗೆ ನುಗ್ಗಿ ಹಳ್ಳಿಗಳ ರೈತರ ವಸಾಹತುಗಳನ್ನು ನಾಶಪಡಿಸಿದರೆ, ಕಾಡುನಾಶಕ್ಕೆ ಕಾರಣವನ್ನು ಹುಡುಕಿದರೆ ಇದೇ ಕಳ್ಳರು ಅಲ್ಲೂ ಸಿಗುತ್ತಾರೆ! ಒಂದುಕಾಲಕ್ಕೆ ಶ್ರೀಗಂಧ ಭರಿತ ನಾಡಾದ ಕರ್ನಾಟಕ ಇಂದು ಅಪರೂಪಕ್ಕೆ ಔಷಧಿಗೂ ಗಂಧದ ಮರಗಳು ಸಿಗದಂತಹ ಪ್ರದೇಶವಾಗಿದೆ! ಶ್ರೀಮಂತೆಯಾಗಿದ್ದ ಭೂಮಿಯಾಯಿಯ ಬಸಿರನ್ನೇ ಬಗೆದು ಅದಿರುಗಳನ್ನು ಬರಿದಾಗಿಗಿಸಿ ಕೈಚೆಲ್ಲುವ ಹಂತಕ್ಕೆ ಆಳುವ ಪ್ರಭುಗಳು ಮುನ್ನಡೆದಿದ್ದಾರೆ. ತಮ್ಮ ಖುರ್ಚಿ, ತಮ್ಮ ಬೊಕ್ಕಸ ಇವುಗಳ ಬಗ್ಗೆ ಮಾತ್ರ ಸದಾ ಆಸಕ್ತರಾದ ಈ ಖೂಳರಿಗೆ ಕೂಳೂ ಸಿಗದಂತೇ ಗಡೀಪಾರು ಮಾಡಬೇಕಾದ ಜನಸಾಮಾನ್ಯರಾದ ಮತದಾರರು ಆಡಳಿತ ಕೇಂದ್ರವಾದ ಬೆಂಗಳೂರಿಗೆ ಬರುವುದಕ್ಕೂ ಕಾಸಿಲ್ಲದ ಸ್ಥಿತಿಯಲ್ಲಿ ಮರುಗಿದ್ದಾರೆ. ಕೈಲಾಗದ ಅನಿವಾರ್ಯತೆಗೆ, ಚುನಾವಣೆಯ ಸಂದರ್ಭದ ಮುಖ ತೋರಿಸಿ ಹಲ್ಲುಗಿಂಜುವ ನೇತಾರ ಪುಡಿಗಾಸಿಗೆ ಕಯ್ಯೊಡ್ಡಿ, ಕುಡಿಸಿದ ಅಮಲಿನಲ್ಲಿ ಧಣಿಹೇಳಿದ ಗುರುತಿಗೆ ಒತ್ತುವ ದಯನೀಯ ಸ್ಥಿತಿಯಲ್ಲಿರುವ ಜನಾಂಗಕ್ಕೆ ತಿಳಿಸಿಹೇಳಿದರೂ ಅವರು ಅರಿಯುತ್ತಿಲ್ಲ; ತಿಳಿಸಿ ಹೇಳುವವರಿಗೂ ಇಷ್ಟವಿಲ್ಲ! ಸುಶಿಕ್ಷಿತರಿಗೆ ಮತದಾನವೇ ಬೇಡವಾದರೆ ಅಶಿಕ್ಷಿತರಿಗೆ ಮತದಾನ ಮತ್ತೆ ಮತ್ತೆ ಬರುವ ಹೆಂಡದ ಹಬ್ಬವಾಗಿದೆ!

’ನೀತಿ ಇದು’ ಎಂದು ಸರಿಯಾದ ಮಾರ್ಗದಲ್ಲಿ ನಡೆವ ಮನಸ್ಸುಳ್ಳ ಪ್ರಬುದ್ಧ ರಾಜಕಾರಣಿಗಳ ಸಂಖ್ಯೆ ಕಮ್ಮಿ ಇದೆ. ಅವರ ಮಾತು ನಡೆಯುತ್ತಿಲ್ಲ. ಅಪರಾಧ ಮಾಡದೇ ಇದ್ದರೂ ಅಪರಾಧಿಯಂತೇ ತಲೆತಗ್ಗಿಸಿ ಕೂರಬೇಕಾದ ಅಶೋಕವನದ ಸೀತೆಯ ಅರಣ್ಯ ರೋದನದಂತೇ ಒಬ್ಬಿಬ್ಬರು ಕೂಗುತ್ತಿದ್ದಾರೆ-ಅವರ ಕೂಗು ಯಾರಿಗೂ ಕೇಳಿಸುತ್ತಿಲ್ಲ! ಪಕ್ಷ-ಪಕ್ಷಗಳಲ್ಲಿ ಇದ್ದ ಕೆಟ್ಟ ರಾಜಕೀಯ ಪಕ್ಷಗಳಲ್ಲೇ ಬಣಗಳಾಗಿ ವಿಜೃಂಭಿಸಿ ಯಾರು ಮಿತ್ರ ಯಾರು ಶತ್ರು ಎಂಬೆಲ್ಲಾ ಕೆಟ್ಟ ಭಾವಗಳನ್ನು ಒಡಮೂಡಿಸಿ ಶಾಸಕಾಂಗ ಎಂಬುದೊಂದು ಡೊಂಬರಾಟದ ಕಂಪನಿಯಾಗಿದೆ, ಅದರ ಪ್ರೋತ್ಸಾಹದಿಂದ ನಡೆಯುವ ಸರಕಾರ ಸರ್ಕಸ್ ಕಂಪನಿಯಾಗಿದೆ! ಅನೀತಿಯನ್ನೇ ನೀತಿ ಎಂದು ಸಾರುವ ದುಡ್ಡಿನ ದೊಡ್ಡಪ್ಪಗಳು ಪ್ರಜಾಸೇವೆಗೆ ಇದ್ದ ಜಾಗವನ್ನು ರಾಜಕೀಯ ಇಂಡಸ್ಟ್ರಿ ಮಾಡಿದ್ದಾರೆ; ಅದರಿಂದ ಬೇಜ್ಜಾನು ಹಣ ಗುಂಜುತ್ತಾರೆ! ಅಧಿಕಾರ ಹಿಡಿದವರ ಹಾಗೂ ಅವರ ಬಂಟರ ಬಳಗಕ್ಕೇ ಖಾಸಗೀ ತಾಂತ್ರಿಕ/ಮೆಡಿಕಲ್ ಕಾಲೇಜುಗಳನ್ನು ನಡೆಸಲು ಅನುಮತಿ, ಪೆಟ್ರೋಲ್ ಬಂಕ್ ನಡೆಸಲು ಅನುಮತಿ ಇತ್ಯಾದಿಯಾಗಿ ಅಧಿಕ ಇಳುವರಿಯ ಆಯಕಟ್ಟಿನ ಜಾಗಗಳಲ್ಲಿ ಆ ಧನದಾಹೀ ಹುಲಿಗಳು ಅಡಗಿ ಕೂತಿವೆ; ಸದಾ ಮೇಯುತ್ತಲೇ ಇರುತ್ತವೆ!

ಗತಿ ಮುಂದಿನದೇನು? ಎಂದರೆ ಎಲ್ಲರೂ ಆಕಾಶದತ್ತ ಮುಖಮಾಡಿ ಬರಗಾಲದ ಭೂಮಿಯಲ್ಲಿ ಗದ್ದೆ ನಾಟಿ ಮಾಡಿಕೊಂಡು ಆಕಾಶದತ್ತ ಹಣುಕುವ ಬಡರೈತರಂತೇ ಕಾಣುತ್ತಾರೆ! ರಾಜಕೀಯದ ಇಂತಹ ಡೊಂಬರಾಟಗಳನ್ನು ನಿಯಂತ್ರಿಸುವ ಸಲುವಾಗಿ ಜನಲೋಕಪಾಲ ಮಸೂದೆ ಶೀಘ್ರ ಜಾರಿಗೆ ಬರಬೇಕಾಗಿದೆ. ಕೆಲವರು ಹೇಳುತ್ತಾರೆ ಮುದುಕು ರಾಜಕಾರಣಿಗಳು ಆಸ್ತಿ-ಪಾಸ್ತಿ ನ್ಯಾಯವತ್ತಾಗಿ ಮಾಡಿಕೊಂಡರು ಎಂದು; ಆ ಕಾಲಕ್ಕೆ ರೈಟ್ ಟಿ ಇನ್ಫಾರ್ಮೇಷನ್ ಆಕ್ಟ್ ಇರಲಿಲ್ಲ, ಲೋಕಾಯುಕ್ತ ಇರಲಿಲ್ಲ. ಹಾಗೊಮ್ಮೆ ಇದ್ದಿದ್ದರೆ, ಗಣಕಯಂತ್ರಗಳಲ್ಲಿ ಸರಕಾರೀ ಕಡತಗಳು ನೋಡಸಿಗುವಂತಿದ್ದರೆ ೫೦-೬೦ ವರ್ಷಗಳ ಕಾಲ ಯಾರೂ ಹಾಗೇ ರಾಜಕೀಯದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಆಗ ಗಂಟುಕಟ್ಟಿದವರು ಭದ್ರವಾದರು-ಈಗ ಬಂದವರು ಪ್ರಯತ್ನಿಸಿ ಕೆಲವರು ವಿಫಲರದರು; ಇನ್ನೂ ಕೆಲವರು ಉಂಡೂ-ಕೊಂಡೂ ಹೋದರು! ಯಾರ್ಯಾರು ಎಷ್ಟೆಷ್ಟು ನುಂಗಿದರು ಎಂಬುದಕ್ಕೆ ದಾಖಲೆ ಸಿಗದಂತೇ ಆಗಿಬಿಟ್ಟಿದೆ-ಹೀಗಾಗಿ ಅವರು ಗೆದ್ದೆವೆಂದು ವೃದ್ಧನಾರೀ ಪತಿವೃತೆ ಎಂಬಂತಾಡುತ್ತಿದ್ದಾರೆ. ಈ ರಾಜ್ಯದ ’ಮುತ್ಸದ್ಧಿಗಳು’ ಎನಿಸಿಕೊಳ್ಳುವ ಕೆಲವು ಮುದುಕರಿಗೆ 'ಮೊಸಳೆಕಣ್ಣೀರಿನ ಕರಾಮತ್ತು ಕೆಲಸಮಾಡುವುದು' ಗೊತ್ತಿದೆ! ಅಂತಹ ’ಮುತ್ಸದ್ಧಿಗಳು’ ರಾಜ್ಯಕ್ಕಾಗಿಯಾಗಲೀ ದೇಶಕ್ಕಾಗಿಯಾಗಲೀ ಕೊಟ್ಟ ಕೊಡುಗೆಗಳೇನೂ ಇಲ್ಲ!! ಪ್ರಜಾತಂತ್ರದಲ್ಲಿ ಪ್ರಜೆಗಳಿಂದ ಬಂದ ಹಣವನ್ನೇ ಪ್ರಜೆಗಳಿಗಾಗಿ ಸ್ವಲ್ಪವಾದರೂ ಪ್ರಾಯೋಗಿಕವಾಗಿ ಬಳಸಿದ್ದರೆ ಇಲ್ಲಿನವರೆಗೆ ಈ ಸ್ಥಿತಿ ಇರುತ್ತಿರಲಿಲ್ಲ! ಮೇಲಿನ ಟಾಕಿಗೆ ಹಾಲು ತುಂಬಿದ ಕಥೆಯಂತೇ ಆಳುವ ದೊರೆಗಳಲ್ಲಿ ಬಹುತೇಕರು ಟಾಕಿಗೆ ಸುರಿದಿದ್ದು ನೀರನ್ನೇ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ.

ಎತ್ತಣ ಮಾಮರ ಎತ್ತಣ ಕೋಗಿಲೆ ಎಂದಂತೇ ಎತ್ತಣ ರಾಮಾಯಣ ಎತ್ತಣ ರಾಜಕಾರಣ ? ಯಾವುದೇ ರೀತಿ-ನೀತಿ ಇಲ್ಲದ ದುಷ್ಟರಿಂದ, ಲಜ್ಜೆಗೆಟ್ಟ ಪಾತಕಿಗಳೂ ಧನಪಿಶಾಚಿಗಳೂ ಕುಣಿಯುವ ರಂಗಸ್ಥಳವಾಗಿ ವಿಧಾನಸೌಧ ಆಶ್ರಯ ನೀಡುತ್ತಿದೆ. ತಮ್ಮನ್ನೇ ಸರಿಪಡಿಸಿಕೊಳ್ಳಲಾರದ ಜನ [ಯಾವುದೇ ಪಕ್ಷವಿರಲಿ]ಪ್ರಜೆಗಳ ಕುಂದುಕೊರತೆಗಳನ್ನು ಲಕ್ಷ್ಯಿಸುವರೇ? ಉತ್ತರವನ್ನು ನಿಮ್ಮೆಲ್ಲರ ಊಹೆಗೆ ಬಿಟ್ಟು ಪೂರ್ಣವಿರಾಮ ಹಾಕಿದ್ದೇನೆ.

Sunday, February 19, 2012

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಪಶುಪತಿನಾಥ ಮಂದಿರದ ಮುಖ್ಯ ಮಹಾದ್ವಾರ

ಅರಿಯದೇ ಅರ್ಚಿಸಿದರೂ ಮರೆಯದೇ ಮರ್ಯಾದೆಕೊಡುವ ಮುಗ್ಧನಿವ ಮಹಾದೇವ !

ಶಿವನ ಕುರಿತು ಸಾವಿರ ಸಾವಿರ ಕಥೆಗಳು ನಮಗೆ ದೊರೆಯುತ್ತಲೇ ಇರುತ್ತವೆ. ಈ ಲೋಕದ ಸೃಷ್ಟಿ, ಸ್ಥಿತಿ, ಲಯ[ನಾಶ] ಈ ಮೂರೂ ಕಾರ್ಯಗಳು ಏಕಮೂಲದ ಶಕ್ತಿಯಿಂದ ನಡೆದರೂ ಶಿವನನ್ನು ಲಯಕರ್ತನೆಂದು ದೂರಿ ಆತನನ್ನು ದೂರವೇ ಇಡುವ ಮಂದಿಯೂ ಇದ್ದಾರೆ; ಅದು ಹೊಸದೇನೂ ಅಲ್ಲ. ಪಾಲಿಗೆ ಬಂದ ಕೆಲಸವನ್ನು ಅನಿವಾರ್ಯವಾಗಿ ಪಾಲಿಸುವ ಶಿವ ಮಾರ್ಕಾಂಡೇಯನ ಭಕ್ತಿಗೆ ಒಲಿದು ಮೃತ್ಯುಂಜಯನೂ ಆಗಿದ್ದಾನೆ, ಕಣ್ಣ[ಪ್ಪ]ನ ಕಣ್ಣಿಗೆ ತನ್ನನ್ನೇ ಮಾರಿಕೊಂಡಿದ್ದಾನೆ! ಶಿವನನ್ನು ತಪಿಸಿ ಕರೆದು ಅರ್ಜುನ ಪಾಶುಪತಾಸ್ತ್ರವನ್ನೇ ಪಡೆದರೆ ರಾವಣ ಆತ್ಮ ಲಿಂಗವನ್ನೇ ಪಡೆದಿದ್ದ ಎಂಬುದು ಈ ನೆಲದ ಕಥೆ. ಇಂತಹ ನಮ್ಮ ಬೋಲೇನಾಥ ಯಾ ಬೋಳೇ ಶಂಕರ ಪುರಾಣದ ಭಾಗವತದ ಕಥಾಭಾಗಗಳಲ್ಲಿ ರಕ್ಕಸರಿಗೆ ವರಗಳನ್ನು ಕರುಣಿಸಿ ಸಂದಿಗ್ಧದಲ್ಲಿ ಸಿಲುಕಿಕೊಳ್ಳುವುದನ್ನೂ ಕೂಡ ಕಾಣಬಹುದಾಗಿದೆ. ಭೂತಗಣಗಳಿಗೆ, ರಕ್ಕಸರಿಗೆ ಪ್ರಿಯ ದೈವ ಶಿವನೇ ಆದರೂ ಪರೋಕ್ಷ ಅವರುಗಳ ನಿಯಂತ್ರಣಕ್ಕೂ ಆತ ಕಾರಣನಾಗಿದ್ದಾನೆ.

ಅಲಂಕಾರ ಪ್ರಿಯೋ ವಿಷ್ಣುಃ
ಅಭಿಷೇಕ ಪ್ರಿಯಃ ಶಿವಃ |.....

ಒಂದು ಚೊಂಬು ನೀರನ್ನು ನಿಷ್ಕಲ್ಮಶ ಹೃದಯದಿಂದ ಲಿಂಗರೂಪೀ ಶಿವನಮೇಲೆ ಎರಚಿದರೆ ಆತ ಸಂತೃಪ್ತ! ಸರಳತೆಯಲ್ಲಿ ಅತಿ ಸರಳ ಪೂಜೆ ಶಿವನ ಪೂಜೆ. ಇದೇ ಶಿವ ಕ್ರುದ್ಧನಾದರೆ ಮಾತ್ರ ಆಡುವುದು ತಾಂಡವ ! ಶಿವತಾಂಡವದ ಡಮರು ನಿನಾದಕ್ಕೆ ಸಮಸ್ತಲೋಕಗಳೂ ಅಂಜುತ್ತವೆ ಎಂಬುದು ಪ್ರತೀತಿ. ನರ್ತನದಲ್ಲಿಯೂ ಈತನದೇ ಮೊದಲಸ್ಥಾನವಾದ್ದರಿಂದ ನಟರಾಜ ಎಂಬ ಹೆಸರಿನಿಂದಲೂ ಪೂಜಿಸಲ್ಪಡುತ್ತಾನೆ.

ರಾತ್ರಿಯ ದೀಪಗಳಲ್ಲಿ ಪಶುಪತಿನಾಥ ದೇವಸ್ಥಾನ ಸಮುಚ್ಛಯ

ಶಿವನಿಲ್ಲದೇ ಶುಭ ಸಾಧ್ಯವೇ? ಶಿವ ಎಂದರೆ ಶುಭ ಎಂದೇ ಅಲ್ಲವೇ? ಮುಕ್ಕಣ್ಣ ತನ್ನ ಮೂರನೇ ಕಣ್ಣು ತೆರೆಯುವುದೂ ಕೂಡ ಕೋಪಗೊಂಡಾಗ ಎಂಬುದು ಸತ್ಯ. ಈ ಭೂಮಿ ಕಾಯುವುದೂ ಆರುವುದೂ ಬೇಗ ಹೇಗೋ ಹಾಗೇ ಈಶ್ವರನ ಸಿಟ್ಟು. ಅದು ಬಂದಷ್ಟೇ ಬೇಗ ಹೋಗುವುದೂ ಜನಜನಿತ. ಶಿವನನ್ನು ತಂಪಾಗಿರಿಸಿದರೆ ಜಗತ್ತಿಗೇ ತಂಪು ಎಂಬ ಕಾರಣದಿಂದ ಜಲಾಭಿಷೇಕ ನಡೆಸುವುದು ಸರ್ವವಿದಿತ. ಈಶ್ವರ ತನ್ನ ಅದಮ್ಯ ಶಕ್ತಿಯನ್ನು ತೇಜೋರೂಪದಲ್ಲಿ ಪ್ರಕಟಗೊಳಿಸಿದ್ದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಎಂಬುದು ಆಸ್ತಿಕರ ಅನಿಸಿಕೆ; ಇದು ವೈಜ್ಞಾನಿಕವಾಗಿಯೂ ಗಣಿಸಬಹುದಾದ ಅಂಶ!

ಕಾಶೀ ವಿಶ್ವನಾಥ ಜ್ಯೋತಿರ್ಲಿಂಗ

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ |
ಉಜ್ಜಯಿನ್ಯಾಮ್ ಮಹಾಕಾಳಮೋಂಕಾರಮಮಲೇಶ್ವರಮ್ ||

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್|
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ|
ಹಿಮಾಲಯೇ ತು ಕೇದಾರಂ ಘೃಷ್ಮೇಶಂ ಚ ಶಿವಾಲಯೇ ||

ಏತಾನಿಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ |
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಭವ್ಯ ಭಾರತದ ಇಂತಿಂತಹ ಪ್ರದೇಶಗಳಲ್ಲಿ ಜ್ಯೋತಿರ್ಲಿಂಗಗಳಿವೆ ಎಂಬುದನ್ನು ನೆನಪಿಸುವಂತೇ ರಚಯಿತವಾದ ಈ ಸ್ತೋತ್ರವನ್ನು ಬೆಳಿಗ್ಗೆ ಮತ್ತು ಸಾಯಂಕಾಲ ಪಠಿಸಿದರೆ ಏಳು ಜನ್ಮಗಳ ಸಂಚಿತ ಕರ್ಮಗಳು ನಾಶವಾಗುತ್ತವೆ ಎಂದು ತಿಳಿಸಿದ್ದಾರೆ. ಜ್ಯೋತಿರ್ಲಿಂಗಗಳ ದರ್ಶನ ಎಲ್ಲರಿಗೂ ಸಾಧ್ಯವಲ್ಲ! ಅದಕ್ಕೆ ಬರೇ ಹಣವಿದ್ದರೆ ಸಾಲದು, ಯೋಗಬೇಕು! ಮೊದಲು ಮನಸ್ಸು ಸಿದ್ಧವಾಗಬೇಕು. ಆಮೇಲೆ ಯಾತ್ರೆಗೆ ಅನುಕೂಲಕರವಾದ ದೈಹಿಕ ಅನುಕೂಲವಿರಬೇಕು, ಸಮಯ ದೊರೆಯಬೇಕು, ಸಾಂಸಾರಿಕ ತಾಪತ್ರಯಗಳಿಂದ ತುಸು ಬಿಡುಗಡೆ ದೊರೆಯಬೇಕು. ಈ ಎಲ್ಲಾ ಕ್ಷೇತ್ರಗಳಲ್ಲೂ ವಿಶಿಷ್ಟವಾದ ಪೂಜೆಗಳು ಜರುಗುತ್ತವೆ. ಶಿವಪೂಜಾ ವೈಭವಗಳನ್ನು ಈ ಹನ್ನೆರಡು ಕ್ಷೇತ್ರಗಳಲ್ಲಿ ಪಡೆಯಬಹುದಾಗಿದೆ.

ಶ್ರೀ ಪಶುಪತಿನಾಥ ಲಿಂಗ ಚಿತ್ರ-೧

ಶ್ರೀ ಪಶುಪತಿನಾಥ ಲಿಂಗ ಚಿತ್ರ-೨

ಪಂಚ ಮುಖಗಳುಳ್ಳ ಶ್ರೀ ಪಶುಪತಿನಾಥನ ಪ್ರಧಾನ ಲಿಂಗ

ಇವೆಲ್ಲವುಗಳಿಗಿಂತ ನಮ್ಮ ಅವಿಭಜಿತ ಭಾರತದ ಒಂದು ಭಾಗವಾಗಿದ್ದ ನೇಪಾಳದಲ್ಲಿ ಶಿವ ಪಶುಪತಿನಾಥನಾಗಿದ್ದಾನೆ! ಈ ಕುರಿತು ಸ್ವಲ್ಪ ತಿಳಿದುಕೊಳ್ಳೋಣ. ಭಕ್ತಜನ ಬೋಲೇನಾಥ ಎಂದು ಕರೆಯುವ ಶಿವ ಪಶುಪತಿ ಎನಿಸಿದ ಬಗ್ಗೆ ಅಲ್ಲಿನ ಪ್ರಾದೇಶಿಕ ಕಥೆಗಳು ಹಲವು. ನಂದೀವಾಹನನಾದ ಶಂಕರ ಸಹಜವಾಗಿ ಪಶುಪತಿಯೆನಿಸಿದರೂ ಅಲ್ಲಿರುವ ಕಥೆಗಳೇ ಬದಲು !

ಮೊದನಲೆಯ ಕಥೆ ಸಾರುವುದು ಶಿವ-ಪಾರ್ವತಿ ಸುತ್ತಾಡುತ್ತಾ ಬಾಗ್ಮತೀ ದಡಕ್ಕೆ ಬಂದಾಗ ಶಿವನಿಗೆ ಜಿಂಕೆಯಾಗಿ ವಿಹರಿಸುವ ಆಸೆಯಾಗುತ್ತದೆ. ಪರಮಾತ್ಮನಾತ ಕೇಳಬೇಕೇ ? ಆ ಕ್ಷಣದಲ್ಲೇ ಶಿವ-ಪಾರ್ವತಿ ಹರಿಣಗಳಾಗಿ ಅಲ್ಲಿನ ಕಾಡಿನಲ್ಲಿ ವಿಹರಿಸತೊಡಗಿದರಂತೆ. ದೇವತೆಗಳು ದೇವಲೋಕದಲ್ಲಿ ಶಿವನ ಬರವನ್ನು ಕಾದೇ ಕಾದರು! ಶಿವ-ಸತಿಯರ ಪತ್ತೆಯೇ ಇರಲಿಲ್ಲ. ಭೂಮಿಗೆ ಬಂದು ಹುಡುಕುತ್ತಾ ಹುಡುಕುತ್ತಾ ಬಾಗ್ಮತೀ ನದಿಯ ದಡದಲ್ಲಿ ಹರಿಣದ ರೂಪದಲ್ಲಿರುವ ಶಿವ-ಪಾರ್ವತಿಯರನ್ನು ಕಂಡು ಬೆನ್ನಟ್ಟಿದರು! ಶಿವ ಭುವಿಯಲ್ಲೇ ಇರುವ ಮನದಿಚ್ಛೆಯಿಂದ ಅಲ್ಲಿ ತಪ್ಪಿಸಿಕೊಳ್ಳಲೆತ್ನಿಸಿದ. ಓಡತೊಡಗಿದ ಶಿವನನನ್ನು ಹಿಡಿಯುವಾಗ ಮೃಗದ ಕೊಂಬು ಕಿತ್ತು ದೇವನೊಬ್ಬನ ಕೈಗೆ ಬಂತು. ಶಿವನ ಕೋಪಕ್ಕೆ ಹೆದರಿದ ದೇವತೆಗಳು ಅಲ್ಲೇ ನಿಂತು ಆ ಕೊಂಬನ್ನು ಭೂಮಿಯಲ್ಲಿ ನೆಟ್ಟು ಪ್ರಾರ್ಥಿಸಿತೊಡಗಿದರು; ಪೂಜಿಸತೊಡಗಿದರು. "ಹೇ ಪಶುಪತೇ ಕೃಪಯಾ ದೇವಲೋಕಮಾಗಚ್ಛತು " ಎಂದು ಪರಿಪರಿಯಾಗಿ ಕೇಳಿಕೊಂಡಾಗ ಶಿವ ದೇವಲೋಕಕ್ಕೆ ಮರಳಿದನಾದರೂ ಕೊಂಬು ಮಾತ್ರ ಭುವಿಯಲ್ಲೇ ಉಳಿಯಿತು. ಭುವಿಯ ಭಕ್ತರ ಸಂತೋಷಕ್ಕಾಗಿ, ಇಲ್ಲಿನ ಜನರ ಸಂಕಷ್ಟಗಳ ನಿವಾರಣೆಗಾಗಿ ಅದನ್ನೇ ಪೂಜಿಸಲಿ ಎಂದ ಪರಶಿವ ಪಶುಪತಿಯಾಗಿ ಆ ಜಾಗದಲ್ಲುಳಿದ! ಮುಗ್ಧ ಶಿವ ಏನು ಕೇಳಿದರೂ ಕೊಡುವ ಸ್ವಭಾವದವನಾದ್ದರಿಂದ ಅಲ್ಲಿನ ಜನ ಪ್ರೀತಿಯಿಂದ ಬೋಲೇನಾಥ ಎಂದೂ ಕರೆಯತೊಡಗಿದರು.

ಎರಡನೆಯ ಕಥೆ ಹೀಗಿದೆ: ದಕ್ಷಯಜ್ಞದಲ್ಲಿ ಕುಂಡಕ್ಕೆ ಹಾರಿ ಆತ್ಮಾರ್ಪಣೆ ಮಾಡಿಕೊಂಡ ಸತಿಯನ್ನು ಎತ್ತಿಕೊಂಡ ಹೊರಟ ಶಿವ. ಸತಿಯ ಶರೀರದ ಭಾಗಗಳು ಆಗಲೇ ಅಲ್ಲಲ್ಲಿ ಕುಸಿದು ಬೀಳತೊಡಗಿದ್ದವು. ಹಾಗೆ ಬಿದ್ದ ಸ್ಥಳಗಳಲ್ಲೆಲ್ಲಾ ದೇವೀ ದೇವಾಲಯಗಳು ಸ್ಥಾಪಿತವಾದವು. ಅಂತಹ ದೇವಾಲಯವೊಂದು ಗುಹ್ಯೇಶ್ವರೀ ದೇವಿ ಸ್ಥಾನ. ಅದು ಪಶುಪತಿನಾಥ ಮಂದಿರದ ಸಮುಚ್ಛಯದಲ್ಲೇ ಇದೆ! ಸತಿಗಾಗಿ ಶಿವ ಅಲ್ಲಿ ನೆಲೆಸಿದ ಎಂಬುದು ಈ ಕಥೆಯ ಐತಿಹ್ಯ.

ಕಥೆ ಮೂರು : ಭೂಮಂಡಲವನ್ನು ಒಂದು ಕಾಲಕ್ಕೆ ನಾಗಗಳು ಆಳುತ್ತಿದ್ದವು. ಅವುಗಳಲ್ಲಿ ವಾಸುಕಿ ಒಬ್ಬ. ವಾಸುಕಿ ತನ್ನ ಆಡಳ್ತೆಯ ಪ್ರದೇಶವಾದ ನೇಪಾಳದಲ್ಲಿ ಶಿವನನ್ನು ಪೂಜಿಸುವ ಸಲುವಾಗಿ ಶಿವಲಿಂಗವೊಂದನ್ನು ಸ್ಥಾಪಿಸಿದ. ಅದೇ ಪಶುಪತಿನಾಥ ಲಿಂಗ !

ಹಗಲು ವೀಕ್ಷಣೆಯಲ್ಲಿ ಪಶುಪತಿನಾಥ ದೇಗುಲದ ವಿಮಾನ ಗೋಪುರ

ಕಥೆ ನಾಲ್ಕು : ಬೌದ್ಧಾವತಾರೀ ಮಹಾವಿಷ್ಣು ತನ್ನ ಸಿದ್ಧಿಗಾಗಿ ನೇಪಾಳದ ಮಂಡಿಹಾಟು ಪ್ರದೇಶದಲ್ಲಿ ಪಂಚಾಗ್ನಿಯನ್ನು ಸೃಷ್ಟಿಸಿ ತಪಸ್ಸು ನಡೆಸಿದ. ಅಲ್ಲಿನ ಆ ಉಷ್ಣತೆಗೆ ಮಣಿಮತಿ ಎಂಬ ನದಿಯ ಉಗಮವಾಯಿತು. ಸ್ಥಾನಿಕವಾಗಿ ಅಲ್ಲಿದ್ದ ಪಾರ್ವತೀ ದೇವಿ ಪ್ರಸನ್ನಳಾಗಿ ಬುದ್ಧನಿಗೆ ವಜ್ರಯೋಗಿನಿಯಾಗಿ ಕಂಡು ವರವನ್ನು ನೀಡಲು ಮುಂದಾದಳು. ಬುದ್ಧ ತಪಗೈದ ಆ ಪ್ರದೇಶದಲ್ಲಿ ಆತ ಲಿಂಗವೊಂದನ್ನು ಸ್ಥಾಪಿಸಲೆಂದೂ, ಅಲ್ಲಿ ಬೌದ್ಧರು ಮತ್ತು ಹಿಂದೂ ಸಮುದಾಯದವರು ಪರಸ್ಪರ ಸೌಹಾರ್ದಯುತ ಬದುಕು ಬದುಕುವರೆಂದು ತಿಳಿಸಿ ಅಂತರ್ಧಾನಳಾದಳು. ವಜ್ರಯೋಗಿನಿಯ ಇಚ್ಛೆಯಂತೇ ಬಾಗ್ಮತಿ ಮತ್ತು ಮಣಿಮತಿ ನದಿಗಳ ಸಂಗಮದ ಜಾಗದಲ್ಲಿ ಸ್ವತಃ ಬುದ್ಧನೇ ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿದ. ಅದೇ ಇಂದಿನ ಪಶುಪತಿನಾಥ ಲಿಂಗ !

ಮೂಲ ಭಟ್ಟ ಮತ್ತು ಸಹಭಟ್ಟ : ಕನ್ನಡ ಕರಾವಳಿಯ ಪುರೋಹಿತರು, ಅಲ್ಲಿನ ಸಾಂಪ್ರದಾಯಿಕ ಪೂಜಾ ತೊಡುಗೆಯಲ್ಲಿ

ಒಂದುಕಾಲಕ್ಕೆ ಕನ್ನಡದ ಪ್ರಥಮ ದೊರೆ ಬನವಾಸಿಯ ಮಯೂರವರ್ಮ ತನ್ನ ಸಾಮ್ರಾಜ್ಯ ವಿಸ್ತರಣೆಯ ದಂಡಯಾತ್ರೆಯಲ್ಲಿ ಅನೇಕ ರಾಜ್ಯಗಳನ್ನು ಜಯಿಸುತ್ತಾ ನೇಪಾಳಕ್ಕೆ ಬಂದ. ಅಲ್ಲಿಯೂ ಜಯಭೇರಿ ಬಾರಿಸಿ ತನ್ನ ಸಂಸ್ಥಾನದ ಭಾಗವಾಗಿ ನೇಪಾಳವನ್ನು ಸ್ವೀಕರಿಸಿದ! ತನ್ನ ಇಷ್ಟದಂತೇ ಅಲ್ಲಿನ ಪಶುಪತಿನಾಥನನ್ನು ಪೂಜಿಸಲು ಕರ್ನಾಟಕದ ಕರಾವಳಿಯ ಬ್ರಾಹ್ಮಣ ಪುರೋಹಿತರನ್ನೇ ನೇಮಿಸಿದ.

ಪಶುಪತಿನಾಥನ ಹಿಂದೆ ಇಂತಹ ಹಲವು ಐತಿಹ್ಯಗಳಿವೆ. ಕ್ರಿಸ್ತನ ಮರಣಾನಂತರ ೪೦೦ ವರ್ಷಗಳಿಂದ ದೇವಾಲಯ ಇದ್ದ ದಾಖಲೆ ಸಿಗುತ್ತದೆ. ಬೌದ್ಧ ಧರ್ಮದ ಉಚ್ಛ್ರಾಯ ಸ್ಥಿತಿಯಲ್ಲಿ ಕೆಲವು ಮೌಢ್ಯಗಳು ಸೇರಿಕೊಂಡು ಅಲ್ಲಿ ದೇವದೇವನ ಸಂಪ್ರೀತಿಗಾಗಿ ಮಾನವ ಬಲಿಯನ್ನು ನಡೆಸುತ್ತಿದ್ದರು. ಕೇದಾರದಲ್ಲಿ ತಪಸ್ಸು ನಡೆಸಿದ ಆದಿ ಶಂಕರರು ನೇಪಾಳದ ಕಂಠ್ಮಂಡುವಿನ ಪಶುಪತಿನಾಥ ದೇವಸ್ಥಾನಕ್ಕೆ ತೆರಳಿ ಆಗ ಅಲ್ಲಿ ಆಡಳಿತ ನಡೆಸುತ್ತಿದ್ದ ರಾಜನನ್ನು ಕರೆದು ನರಬಲಿಯನ್ನು ನಿಲ್ಲಿಸುವಂತೇ ತಿಳಿಸಿಹೇಳಿದರು, ಮಾತ್ರವಲ್ಲ ನಡೆಸಬೇಕಾದ ಪೂಜಾವಿಧಾನಗಳ ಬಗ್ಗೆಯೂ ತಿಳಿಸಿದರು. ಅಲ್ಲಿರುವ ಮೌಢ್ಯಗಳನ್ನು ತೆಗೆದುಹಾಕಿ ಹೊಸದಾಗಿ ಆ ಲಿಂಗವನ್ನು ಕಳಾಪೂರ್ಣವಾಗುವಂತೇ ಮಾಡಿದರು. ಶಂಕರರ ಅಣತಿಗೆ ಮಣಿದ ಮಹಾರಾಜ ಸಾತ್ವಿಕ ಪೂಜೆಗೆ ಒಪ್ಪಿದನಲ್ಲದೇ ಪೂಜೆ ಸಮರ್ಪಕವಾಗಿ ನಡೆಯಲು ಭಾರತದ ದಕ್ಷಿಣ ಭೂಪ್ರದೇಶದಿಂದ ವೇದ-ವೇದಾಂಗಗಳನ್ನು ಓದಿಕೊಂಡ ಬ್ರಾಹ್ಮಣರನ್ನು ಕಳುಹಿಸಬೇಕಾಗಿ ಪ್ರಾರ್ಥಿಸಿದ. ಶಂಕರರು ಒಪ್ಪಿ ಪೂಜೆ ಸರಿಯಾದ ಕ್ರಮದಲ್ಲಿ ನಡೆಯಲು ಆರಂಭವಾಯ್ತು. ಅಂದಿನಿಂದ ಸದಾ ಕರ್ನಾಟಕದ ಅದರಲ್ಲೂ ಕರಾವಳೀ ಪ್ರಾಂತದ ಬ್ರಾಹ್ಮಣ ಪುರೋಹಿತರು ಪಶುಪತಿನಾಥನ ಪೂಜೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಮ್ಮ ರಾಜ್ಯಕ್ಕೂ ಮತ್ತು ಪಶುಪತಿನಾಥನಿಗೂ ಇರುವ ನೇರ ಸಂಬಂಧ !

ಕೈಲಾಸ ಮಾನಸ ಸರೋವರದ ಒಂದು ವಿಹಂಗಮ ದೃಶ್ಯ

ಅಲ್ಲಿ ಪೂಜೆಗೆ ಒಟ್ಟೂ ಐದು ಮಂದಿ ಬ್ರಾಹ್ಮಣರು ಇರುತ್ತಾರೆ. ಮುಖ್ಯ ಪುರೋಹಿತನನ್ನು ಮೂಲ ಭಟ್ಟ ಅಥವಾ ರಾವಳ ಎಂಬುದಾಗಿ ಕರೆಯುತ್ತಾರೆ. ದೇವಸ್ಥಾನದ ವ್ಯಾವಹಾರಿಕ ಆಗುಹೋಗುಗಳ ಕುರಿತು ಕಾಲಕಾಲಕ್ಕೆ ಈತ ನೇರವಾಗಿ ನೇಪಾಳದ ರಾಜನಿಗೆ ವರದಿ ಒಪ್ಪಿಸಬೇಕಿತ್ತು. ರಾಜನೊಡನೆ ನೇರ ಸಂಪರ್ಕ ಇರುವುದು ಮೂಲ ಭಟ್ಟನಿಗೆ ಮಾತ್ರ! ಅಂದರೆ ಎಂತಹ ಆದ್ಯತೆ ನೀಡಿದ್ದರು ಎಂಬುದನ್ನು ಗಮನಿಸಬಹುದಾಗಿದೆ. ಕ್ರಿ.ಶ. ೨೦೦೯ ರಲ್ಲಿ ರಾಜಾಧಿಕಾರ ತಪ್ಪಿ ಪ್ರಜಾತಂತ್ರ ಆಡಳಿತಕ್ಕೆ ಬಂತು. ಮಾವೋವಾದಿಗಳು ಬ್ರಾಹ್ಮಣ ಪೂಜೆಯನ್ನು ವಿರೋಧಿಸಿ ತಾವೇ ಪೂಜೆ ಮಾಡುತ್ತೇವೆ ಎಂದು ಅಲ್ಲಿರುವ ಭಟ್ಟರುಗಳನ್ನು ಹಿಡಿದರು, ಬಡಿದರು. ಲಿಂಗವನ್ನು ಸ್ಪರ್ಶಿಸುವುದಕ್ಕೆ ಐದುಮಂದಿ ಬ್ರಾಹ್ಮಣ ಪುರೋಹಿತರ ಹೊರತು ಮತ್ತೆ ಯಾರಿಗೂ ಅವಕಾಶವಿರಲಿಲ್ಲ. ಆಗಮೋಕ್ತ ರೀತ್ಯಾ ದೇವಾಲಯದ ಪೂಜೆಗಳು ನಡೆಯುತ್ತಿದ್ದವು. ಇದನ್ನೇ ವಿರೋಧಿಸಿ ಕೆಲಕಾಲ ಗಲಭೆ-ಹಿಂಸೆ ನಡೆಯಿತು. ಕಟ್ಲೆ ನೇಪಾಳದ ಪರಮೋಚ್ಚ ನ್ಯಾಯಾಲಯದ ಕಟ್ಟೆಗೇರಿತು. ನ್ಯಾಯಾಲಯ ದೇವಸ್ಥಾನದಲ್ಲಿ ಯಾರೇ ಆದರೂ ಪೂಜೆ ಮಾಡಬಹುದೆಂಬ ಆಜ್ಞೆ ಹೊರಡಿಸಿದ ಕೆಲವೇ ದಿನಗಳಲ್ಲಿ ಕೆಲವು ಅವಘಡಗಳು ಘಟಿಸಿದವು! ನೇಪಾಳದ ಜನ ಮತ್ತೆ ಪೂಜೆಯ ಸಲುವಾಗಿ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿ ನಡೆದರು! ಪುನಃ ಅಲ್ಲಿ ನಮ್ಮ ಕರಾವಳಿಯ ಬ್ರಾಹ್ಮಣರನ್ನೇ ಪೂಜೆಗೆ ನಿಯಮಿಸಲಾಗಿದೆ!

ಅಂತೂ ಪಶುಪತಿಯ ಪೂಜೆಗೆ ಇಷ್ಟೆಲ್ಲಾ ಕಥೆಗಳು ಕಾಲಕಾಲಕೂ ಜನಿಸಿದವು ಎಂಬುದು ಆತನ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಭೋಲೇನಾಥನ ಸನ್ನಿಧಾನ ನೋಡಲೂ ಕೂಡ ಸಹಜವಾಗಿ ರಮಣೀಯವಾಗಿದೆ. ಹಿಮಾಲಯದವರೆಗೂ ತೆರಳುವ ಭಕ್ತರು ಅನುಕೂಲವಿದ್ದರೆ ನೇಪಾಳದ ಕಂಠ್ಮಂಡುವಿನ ಪಶುಪತಿನಾಥನನ್ನೂ ದರ್ಶಿಸಿದರೆ ಒಳ್ಳೆಯದು. ಅದರಂತೇ ಶಿವನ ವಾಸಸ್ಥಳವೆಂದು ಪ್ರಚಲಿತವಾದ ಆದರೆ ವಿಪರ್ಯಾಸವಾಗಿ ಈಗ ಚೈನಾ ಆಳ್ವಿಕೆಯ ಭೂಭಾಗಕ್ಕೆ ಸೇರ್ಪಡೆಯಾದ ಕೈಲಾಸ-ಮಾನಸ ಸರೋವರ ಕೂಡ ನೋಡಲೇಬೇಕಾದ ರಮಣೀಯ ಸ್ಥಳಗಳಲ್ಲಿ ಒಂದು. ಇಲ್ಲೆಲ್ಲಾ ಹೋಗಲು ಎದೆಗಾರಿಕೆ ಬೇಕು! ಪ್ರಯಾಣ ದುರ್ಗಮ, ಹವಮಾನದ ವೈಪರೀತ್ಯಗಳನ್ನು ಲೆಕ್ಕಿಸುತ್ತಾ, ಸಿಗಬಹುದಾದ ಹೆಲಿಕಾಪ್ಟರ್ ಗಳಲ್ಲಿ ಧೈರ್ಯಗೆಡದೇ ಕೂತು, ಆಮ್ಲಜನಕದ ಕೊರತೆ ಬಾಧಿಸಿದರೂ ತಾಳಿಕೊಂಡು ದರ್ಶಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ದೂರದಲ್ಲಿ ಕೈಲಾಸ ಪರ್ವತ ಹಿನ್ನೆಲೆಯಾಗುಳ್ಳ ಮಾನಸ ಸರೋವರದ ಚಿತ್ರ

ಪರಶಿವನ ಆರಾಧನೆಗೆ ಪ್ರಮುಖವಾಗಿ ಬಳಸುವುದು ರುದ್ರ: ನಮಕ-ಚಮಕಗಳು. ಸುಶ್ರಾವ್ಯ ಸ್ವರಮೇಳದಲ್ಲಿ ರುದ್ರಾಭಿಷೇಕ ನಡೆಸಿದಾಗ, ಅದನ್ನು ಕೇಳುವ ಮನಸ್ಸಿಗೆ ಸಿಗುವ ಆನಂದ ಇನ್ನಾವ ಮಂತ್ರದಿಂದಲೂ ಸಿಗುವುದು ಆಸಾಧ್ಯ! ಜೀವವೈಜ್ಞಾನಿಕ ವಿಶ್ಲೇಷಣೆಯಂತೇ ನರಮಂಡಲ ಮತ್ತು ಮೆದುಳಿನ ಸಂತುಲಿತ ಕ್ರಿಯೆಗೆ ಸ್ವಸ್ಥ ಮನಸ್ಸು ನಮ್ಮದಾಗುವುದಕ್ಕೆ ಈ ವೇದಮಂತ್ರಗಳ ಅದರಲ್ಲೂ ರುದ್ರ ಪಠಣ, ಶ್ರವಣ ಮತ್ತು ಮನನ ಕಾರಣ ಎಂಬುದಾಗಿ ತಿಳಿದುಬಂದಿದೆ. ರಕ್ತದೊತ್ತಡ ಸಮತೋಲನವಿಲ್ಲದ ಜನ ರುದ್ರಾಭಿಷೇಕ ನಡೆಯುವ ಸ್ಥಳದಲ್ಲಿ ಆಗಾಗ ಕೂರುವುದರಿಂದ, ರುದ್ರಾಕ್ಷಿಯ ಮಾಲೆ ಧರಿಸುವುದರಿಂದ ಅದರಿಂದ ಪರಿಹಾರ ಕಾಣಬಹುದಾಗಿದೆ! ಅಭಿಷೇಕ ಮಾಡಿ ತೆಗೆದ ತೀರ್ಥವನ್ನು ಪ್ರಾಶನಮಾಡುವುದರಿಂದ, ಪ್ರೋಕ್ಷಿಸಿಕೊಳ್ಳುವುದರಿಂದ ಶಾರೀರಿಕ ಬಾಧೆಗಳನ್ನು ಕಳೆದುಕೊಳ್ಳುವುದು ತಿಳಿದುಬಂದ ವಿಷಯ! ಇಂದು ನಾವು ತಿಳಿದ ವಿಜ್ಞಾನಕ್ಕಿಂತ ಹೆಚ್ಚಿನ ಆಳವಾದ ಜ್ಞಾನ ನಮ್ಮ ಋಷಿಮುನಿಗಳಿಗೆ ಇತ್ತು ಎಂಬುದಕ್ಕೆ ಇದಕ್ಕಿಂತ ಬೇರೇ ಉದಾಹರಣೆ ಬೇಕೇ ?

ಬೇಡನೊಬ್ಬ ಬೇಟೆಗೆ ತೆರಳಿ ಏನೂ ಸಿಗದೇ, ದಾರಿತಪ್ಪಿ, ಹಸಿದ ಹೊಟ್ಟೆಯಲ್ಲಿ ದಟ್ಟ ಕಾನನದಲ್ಲಿ ರಾತ್ರಿ ಕಳೆಯಬೇಕಾಗಿ ಬಂತು. ಮನೆಯಲ್ಲಿರುವ ಹಸಿದ ಹೆಂಡತಿ-ಮಕ್ಕಳನ್ನು ನೆನೆಯುತ್ತಾ, ಮೇಲೆರಗಬಹುದಾದ ಹಿಂಸ್ರ ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಹತ್ತಿರವೇ ಇದ್ದ ಮರವೊಂದನ್ನು ಏರಿದ. ಬೇಸರ ಕಳೆಯಲು ತನಗೇ ಅರಿವಿಲ್ಲದೇ ಎಲೆಗಳನ್ನು ಕಿತ್ತು ಕಿತ್ತು ನೆಲಕ್ಕೆ ಬಿಸುಟ. ನೆಲದಲ್ಲಿ ನೆಲೆಯಾಗಿದ್ದ ಶಿವಲಿಂಗ ಆತನಿಗೆ ಗೋಚರಿಸಲೂ ಇಲ್ಲಾ; ಹತ್ತಿದ ಮರ ಬಿಲ್ವ ವೃಕ್ಷವೆಂಬುದೂ ತಿಳಿದಿಲ್ಲ! ಬೆಳಗಿನ ಜಾವ ಸಾಕ್ಷಾತ್ ಪರಶಿವ ಬೇಡನ ಮುಂದೆ ಪ್ರತ್ಯಕ್ಷನಾಗಿದ್ದ!! ಬೇಡನ ಅಜ್ಞಾನದಲ್ಲೂ ಆತನ ಪೂಜೆಯನ್ನು ಮೆಚ್ಚಿದ ಬೀರೇಶ್ವರ ಬೇಡನ ಸಂಕಷ್ಟವನ್ನು ನೀಗಿದ ಮಾತ್ರವಲ್ಲ ಆ ಜನ್ಮಾನಂತರ ಭವದ ಬಂಧನದಿಂದ ಮುಕ್ತಿಯನ್ನು ಕರುಣಿಸಿದ! ದೇವ-ದಾನವರು ಸಮುದ್ರ ಮಥನ ಮಾಡಿದಾಗ ಮೊದಲು ಉಕ್ಕಿದ ಹಾಲಾಹಲದಿಂದ ಲೋಕಗಳು ಕಂಗೆಟ್ಟವು. ಹರಿದುಬಂದ ಹಾಲಹಲವೆಂಬ ನಂಜನ್ನು ನಂಜಿಲ್ಲದ ಶಿವ ಭುಂಜಿಸಿದ..ನಂಜುಂಡೇಶ್ವರನಾದ. ಶಿವನ ಉಳಿವಿಗೆ ಹಾವನ್ನು ಕೊರಳಲ್ಲಿ ಬಂಧಿಸಿ ನಂಜು ಒಳಸೇರದಂತೇ ಅರ್ಧಾಂಗಿ ಪಾರ್ವತಿ ತಡೆದಿದ್ದರಿಂದ ಕಂಠ[ಕತ್ತು]ನೀಲಿಯಾದ ಶಿವ ನೀಲಕಂಠನಾದ!

ಶಂಕರ ಆತ್ಮಲಿಂಗವನ್ನೇ ನಮ್ಮ ಕರ್ನಾಟಕದ ಮಂದಿಗೆ ಕೊಟ್ಟ-ಇಷ್ಟು ಪ್ರೀತಿ ಸಾಲದೇ? ಯಾವುದೇ ಜಾತಿ-ಮತಗಳ ಭೇದವಿಲ್ಲದೇ ಸಾಂಪ್ರದಾಯಿಕ ಕ್ರಮದಲ್ಲಿ ಮುಟ್ಟು ಪೂಜಿಸಬಹುದಾದ ಗೋಕರ್ಣ ನಮ್ಮ ಕನ್ನಡಿಗರ ಹೆಮ್ಮೆ ! ವಿಶ್ವಮಾನವ ತತ್ವದಿಂದ ವಿದೇಶಿಗರಿಗೂ ಸಂಸ್ಕಾರ ಕಲಿಸಿ ಅಲ್ಲೀಗ ಆಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ-ಇದು ನಮ್ಮ ಕನ್ನಡಿಗರ ಕೊಡುಗೆ-ಇಡೀ ಜಗತ್ತಿಗೆ ! ಅಂತಹ ಶಿವನನ್ನು ಈ ದಿನ ಅಹೋರಾತ್ರಿ ಪೂಜಿಸುವ ಕೈಂಕರ್ಯ ಲೋಕದಲ್ಲಿ. ಶಿವ ಪೂಜೆ ಈ ದಿನ ಮಾತ್ರವಲ್ಲ ನಿತ್ಯವೂ ನಡೆಯಲಿ, ಬದುಕಿನ ಜಂಜಡಗಳನ್ನು ಪರಿಹರಿಸಿಕೊಳ್ಳಲು ಸಹಕಾರಿಯಾಗಲಿ ಎಂಬುದು ನಿಮ್ಮೆಲ್ಲರಲ್ಲಿ ನನ್ನ ಪ್ರಾರ್ಥನೆ. ಸರ್ವರಿಗೂ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು. ಶಂಭುವಿಗೆ ಮನಸಾ ಬಿಲ್ವಪತ್ರೆಯೊಂದನ್ನು ಅರ್ಪಿಸುವ ಮೂಲಕ ಈ ಲೇಖನಕ್ಕೆ ಶಿವಾಯನಮಃ ಎನ್ನೋಣವೇ ? :


ಅಜ್ಞಾನೇನ ಕೃತಂ ಪಾಪಂ ಜ್ಞಾನೇನಾಪಿ ಕೃತಂ ಚ ಯತ್ |
ತತ್ಸರ್ವಂ ನಾಶಯಾಮಾತು ಏಕಬಿಲ್ವಂ ಶಿವಾರ್ಪಣಂ ||

Thursday, February 16, 2012

ಮರೆಯಾದ ಆಚಾರ್ಯರು, ಮರೆಯಾಗುತ್ತಿದ್ದ ಆಯುರ್ವೇದ ಮತ್ತಷ್ಟು ....



ಮರೆಯಾದ ಆಚಾರ್ಯರು, ಮರೆಯಾಗುತ್ತಿದ್ದ ಆಯುರ್ವೇದ ಮತ್ತಷ್ಟು ....

ಹಾಗೆ ನೋಡಿದರೆ ಸಜ್ಜನರಿಗೆ ಅದೊಂದು ದುಃಸ್ವಪ್ನ! ಹಾಗೆ ಉಡುಪಿಯಿಂದ ಬಂದ ಆಚಾರ್ಯರು ಹೀಗೆ ಮೊನ್ನೆ ಕುಸಿದು ಇಹಲೋಕವನ್ನೇ ತ್ಯಜಿಸಿದರು. ಸುದ್ದಿ ತಿಳಿದಾಗ ಕ್ಷಣಕಾಲ ಎಲ್ಲೆಲ್ಲೂ ಜನ ಸ್ತಂಭೀಭೂತರಾದರು! ವೇದವ್ಯಾಸರು ಹಿಂದೆ ವೇದಗಳನ್ನು ವಿಂಗಡಿಸಿದಂತೇ ಈ ವೇದವ್ಯಾಸರು ಜನಸಂಘದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ವಿಂಗಡಿಸುತ್ತಾ ಜನಸೇವೆಯಲ್ಲಿ ತೊಡಗಿಸಿಕೊಂಡು ಬೆಳಗಿನ ತಿಂಡಿಯನ್ನೂ ಬಿಟ್ಟು ಕಾರ್ಯತತ್ಪರರಾಗಿದ್ದರು ಎಂದಮೇಲೆ ಜನ ಅವರನ್ನು ಮರೆತಾರ್ಯೇ ? ಸಜ್ಜನ ರಾಜಕಾರಣಿಗಳಿಗೆ ಇವತ್ತು ಕಾಲವಲ್ಲ. ಆದರೂ ಕಣದಲ್ಲಿ ಇದ್ದಮೇಲೆ ಕರ್ತವ್ಯ ಮಾಡಲೇಬೇಕಲ್ಲಾ ? ನಮ್ಮ ಯಕ್ಷಗಾನದಲ್ಲಿ ಭಾಗವತರಿಗೆ ಸೂತ್ರಧಾರರು ಎನ್ನುತ್ತಾರೆ-ಇಡೀ ಆಟ ನಡೆಯುವುದು ಅವರು ಹೇಳುವ ಹಾಡುಗಳ ಮೇಲೆ! ಅದೇ ರೀತಿ ಭಾಜಪದ ಮೇಳಕ್ಕೆ ಸೂತ್ರಧಾರನಾಗಿ ಮರೆಯಲ್ಲಿ ನಿಂತೇ ಜನಸೇವೆಯಲ್ಲಿ ತೊಡಗಿದ್ದ ನಿಸ್ಪೃಹ ವ್ಯಕ್ತಿ ಡಾ| ವಿ.ಎಸ್. ಆಚಾರ್ಯ. ಸತ್ತ ಎಮ್ಮೆಗೆ ಹತ್ತು ಸೇರು ಹಾಲು ಎಂಬುದು ನಮ್ಮಲ್ಲಿನ ಗಾದೆ, ಜನ ಹೋದವರನ್ನು ಸ್ಮರಿಸಿ ಹಾಗಿದ್ದರು ಹೀಗಿದ್ದರು ಎಂಬುದು ಸಹಜವೇ; ಆಚಾರ್ಯರ ವಿಷಯದಲ್ಲಿ ಹಾಗಿಲ್ಲ, ಅದು ಪ್ರಜೆಗಳ ಆಂತರ್ಯದ ಮಾತು, ಕುಟುಂಬದ ಹಿರಿಯನೊಬ್ಬ ಅಗಲಿದ ನೋವು ಇದ್ದಂತೇ!

ಬ್ರಾಹ್ಮಣ ವಿರೋಧೀ ಭಾವದವರಿಗೆ ಒಂದು ಮಾತು ಹೇಳಬೇಕು: ೪೦ ವರ್ಷಗಳ ಹಿಂದೆಯೇ ಉಡುಪಿಯಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಇದೇ ವಿ.ಎಸ್. ಆಚಾರ್ಯರು. ರಾಜಕಾರಣಿಗಳಿಗೆ ಆ ಕೆಲಸ ಮಾಡಬೇಕೆಂದೇನೂ ಇರಲಿಲ್ಲ; ಮಾಡದೇ ಇರುವ ಜನ ಇವರಾಗಿರಲಿಲ್ಲ! ಉತ್ತರ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ಎನ್ನುವ ಮಂದಿ ಕಣ್ಣು ತೆರೆದರೆ ಇವತ್ತಿನ ಮಹಾನಗರಗಳಲ್ಲಿ ಮ್ಯಾನ್‍ಹೋಲ್‍ಗಳಲ್ಲಿಳಿದು ಎದೆಮಟ್ಟದ ಹೊಲಸುನೀರಲ್ಲಿ ನಿಂತೇ ಕೆಲಸಮಾಡುವ ಜನರು ಕಾಣಸಿಗುತ್ತಾರೆ. ಇದು ಮಲಹೊರುವ ಪದ್ಧತಿಯಲ್ಲವೇ? ಶಿಕ್ಷಿತ ಜನಾಂಗ ಕೈಗೆ ಮಣ್ಣು ಹತ್ತಿದರೆ ಡೆಟ್ಟಾಲ್ ಹಾಕಿ ತೊಳೆಯುವ ಈ ಕಾಲದಲ್ಲೂ ಮಹಾನಗರದ ಗಲ್ಲಿಗಲ್ಲಿಗಳಲ್ಲಿ ಅಲ್ಲಲ್ಲಿ ಮಲಶೋಧಿಸುವ ಕೊಳವೆಗಳಲ್ಲಿ ಸಿಲುಕಿದ ಘನ ಕಲ್ಮಶಗಳನ್ನೂ ಕಸಗಳನ್ನೂ ಸ್ವತಃ ಕೈಯ್ಯಿಂದಲೇ ತೆಗೆಯುವ ಜನರಿಗೆ ಯಾವ ಡೆಟ್ಟಾಲ್ ಯಾರು ನೀಡಿದ್ದಾರೆ? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಸಂದಿವೆ, ಇಲ್ಲೀವರೆಗೂ ಬರೇ ಭಾಜಪವೇನೂ ಅಧಿಕಾರದಲ್ಲಿರಲಿಲ್ಲವಲ್ಲ, ಹಾಗಾದ್ರೆ ಉಳಿದ ಪಕ್ಷಗಳು ಅವುಗಳ ಕಾರ್ಯಕರ್ತರು ಏನು ಮಾಡಿದರು ? ಅನೇಕಬಾರಿ ಓಡಾಡುವಾಗ ನಾನು ರಸ್ತೆಗಳಲ್ಲಿ ನಿಂತು ನೋಡುವುದಿದೆ; ಯಾರೋ ಅನಾಥ ಮಕ್ಕಳು ಕಸ ವಿಲೇವಾರಿಗೆ ಬರುತ್ತಾರೆ. ಅಪ್ಪ ಇಲ್ಲ-ಅಮ್ಮ ಇಲ್ಲ, ಹೆಚ್ಚುಕಮ್ಮಿ ಆದರೆ ಕೇಳುವುದಕ್ಕೆ ಯಾರೂ ದಿಕ್ಕಿಲ್ಲ!-ಇಂಥಾ ಪಾಪದವರ ಬದಲಿಗೆ ಪರ್ಯಾಯ ಯಂತ್ರಗಳ ಬಗ್ಗೆ ಯಾವುದೇ ಆಲೋಚನೆ ಇಲ್ಲೀವರೆಗೂ ಬರಲಿಲ್ಲವೇ ?

ಭಾಜಪದ ಮಂದಿಯೇ ಒಪ್ಪುವಂತೇ ಭಾಜಪದ ಸರಕಾರದ ಪ್ರತೀ ಮುಂಗಡಪತ್ರದಲ್ಲೂ ಮತ್ತು ಚುನಾವಣಾ ಪ್ರಣಾಳಿಕೆಯಲ್ಲೂ ಆಚಾರ್ಯರೇ ಪ್ರಧಾನ ಅಧ್ವರ್ಯುಗಳಾಗಿ ಇರುತ್ತಿದ್ದರು. ಹುಂಬ ಯಡ್ಯೂರಣ್ಣನವರ ಡೊಂಬರಾಟ ಆರಂಭವಾದಗಲೂ ಅನಿವಾರ್ಯವಾಗಿ ಪಕ್ಷದ ಹಿತಾಸಕ್ತಿಯಿಂದ ಅವರ ಜೊತೆಗಿದ್ದವರು ಆಚಾರ್ಯರು! ೭೪ ವಯೋಮಾನದ ಈ ಮಂತ್ರಿಗೆ ಹಗಲಿರುಳೂ ಜನತಾ ಜನಾರ್ದನನ ಕುರಿತೇ ಯೋಚನೆ. ಜನರಿಗೆ ಹೇಗೆ ಮಾಡಿದರೆ ಒಳಿತಾದೀತು ಎಂಬುದೇ ಅವರ ಚಿಂತನೆ. ಇಡೀ ವಿಧಾನ ಪರಿಷತ್ತಿನ ಕಲಾಪ ಮುಗಿದರೂ ಇನ್ನೂ ಅದೇ ಕುರ್ಚಿಯಲ್ಲೇ ಕುಳಿತು ಆ ದಿನದ ಮಂಡನೆಗಳನ್ನು ಆಮೂಲಾಗ್ರವಾಗಿ ಪರಿಶೋಧಿಸುವ/ಅವಲೋಕಿಸುವ ವ್ಯಕ್ತಿಯೊಬ್ಬರಿದ್ದರೆಂದರೆ ಅವರೇ ಆಚಾರ್ಯರಾಗಿದ್ದರು. ತನ್ನ ಮಕ್ಕಳಗಿಂತಲೂ ಕಿರಿಯ ವಯಸ್ಸಿನ ಶಾಸಕರು ಹಗರಣಗಳಲ್ಲಿ ಸಿಲುಕಿಕೊಂಡಾಗ ನಿಜವಾಗಿ ನೋವುಂಡವರು ಇದೇ ಆಚಾರ್ಯರು. ಜನತಂತ್ರದ ಅಪಮೌಲ್ಯವಾಗಕೂಡದು ಎಂಬ ಅನಿಸಿಕೆಯಿಂದ ಎಲ್ಲೆಲ್ಲೂ ಪೈಸೆಯನ್ನೂ ಸ್ವಂತಕ್ಕಾಗಿ ಖರ್ಚುಮಾಡದೇ ಇದ್ದ ಇವರು ದಕ್ಷಿಣ ಕನ್ನಡದೆಡೆ ಎಲ್ಲೇ ಹೋದರೂ ಐಬಿಗಳಲ್ಲಿರದೇ ಕೆಲಸ ಮುಗಿಸಿ ನೇರವಾಗಿ ತನ್ನ ಮನೆಗೇ ತೆರಳುತ್ತಿದ್ದರು!

ಮೀಸಾ ಕಾಯಿದೆಯಡಿ ಬಂಧಿಸಲ್ಪಟ್ಟು ಜೈಲು ಸೇರಿದಾಗ ಅವರಿಗಿನ್ನೂ ಮೂರನೆಯ ಚಿಕ್ಕ ಮಗುವೊಂದಿತ್ತು. ಆ ಮಗು ವಿಪರೀತ ಭೇದಿಯಿಂದ ನರಳುತ್ತಿತ್ತು. ಸ್ವತಃ ವೈದ್ಯರಾದ ಇವರು ಮನೆಯಿಂದ ಸುದ್ದಿ ಬಂದಾಗ ವಿನಂತಿಸಿ ಒಮ್ಮೆ ಹೋಗಲು ಅವಕಾಶ ಪಡೆದರೂ ಮಗುವಿನ ಆರೋಗ್ಯ ಸುಧಾರಿಸುವವರೆಗೆ ಮನೆಯಲ್ಲಿರಲು ಅವಕಾಶ ದೊರೆಯಲಿಲ್ಲ. ಹೋಗಿ ಅರ್ಧಗಂಟೆ ನೋಡಿ ಮರಳಿ ಬಂದಿದ್ದರು. ದಿನಗಳೆರಡರಲ್ಲೇ ಆ ಮಗು ಅಸು ನೀಗಿತು. ಸಮಾಜ ಸೇವೆಗಾಗಿ ನಿಂತ ಯುವ ನೇತಾರನೊಬ್ಬ ತನ್ನದೇ ಮಗುವನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ಆದರೂ ತನ್ನೆಲ್ಲಾ ವೈಯ್ಯಕ್ತಿಕ ನೋವುಗಳನ್ನೂ ಬದಿಗೊತ್ತಿ ದೇಶದ/ರಾಜ್ಯದ ಜನತೆಯ ಹಿತಾಸಕ್ತಿಯೆಡೆಗೆ ಮನಮಾಡಿದವರು ಆಚಾರ್ಯರು! ಭಾಜಪದಲ್ಲಿರುವ ಮೊಂಡರು, ಶುಂಠರು, ಜಾತೀವಾದಿಗಳು, ಸಮಾಜಘಾತುಕರು, ಗಣಿಧಣಿಗಳು, ಲಂಪಟರು ತನ್ನ ಮಾತಿಗೆ ಸೊಪ್ಪುಹಾಕದಿದ್ದರೂ ಎಲ್ಲರನ್ನೂ ಸಹೃದಯ ಮನೋಭಾವದಿಂದ ಕಂಡು ಎಲ್ಲರಿಗೂ ಹಿತವಚನಗಳನ್ನು ಹೇಳುತ್ತಿದ್ದರು. ಅಷ್ಟೇ ಏಕೆ ಯಡ್ಯೂರಣ್ಣ ರಾಜೀನಾಮೆ ಕೊಟ್ಟಾಗ ಅನಾಯಾಸವಾಗಿ ದೊರೆಯುತ್ತಿದ್ದ ಮುಖ್ಯಮಂತ್ರಿ ಗದ್ದುಗೆ ತನಗೆ ಬೇಡ, ತನ್ನ ವಯಸ್ಸು ಜಾಸ್ತಿ ಆಗಿದೆ, ಒತ್ತಡ ಜಾಸ್ತಿಯಾಗುತ್ತದೆ - ಸದಾನಂದ ಗೌಡರು ಆ ಜಾಗಕ್ಕೆ ಹಡಂಗ ಎಂದು ಸೂಚಿಸಿದವರು ಇದೇ ಆಚಾರ್ಯರು ಎಂಬುದು ಬಹಳ ಜನರಿಗೆ ತಿಳಿದಿಲ್ಲ! ಮೌಲ್ಯಗಳಿಗೆ ಮೌಲ್ಯವೇ ಕಳೆದುಹೋಗಿರುವ ಇಂದಿನ ದಿನಮಾನದಲ್ಲಿಯೂ ಮೌಲ್ಯಾಧಾರಿತ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳುವುದು ಆಚಾರ್ಯರ ಇಚ್ಛೆಯಾಗಿತ್ತು; ಈ ಕಾರಣದಿಂದಲೇ ವಿಪಕ್ಷಗಳ ಜನರೂ ಸೇರಿದಂತೇ ಎಲ್ಲರಿಗೂ ಬೇಕಾಗಿದ್ದರು! ರಾಜ್ಯ ಕಂಡ ಮುತ್ಸದ್ಧಿಗಳಲ್ಲಿ ಒಬ್ಬರಾದ ಆಚಾರ್ಯರು ಪಾಠಮಾಡುತ್ತಲೇ ಮತ್ತೆಲ್ಲೋ ಕಾಣದ ಶಾಲೆಗೆ ನಡೆದುಹೋದರು ! ಜನರ ಜೀವನಾಡಿಯಾಗಿದ್ದ ಅವರು ಜನಸಂಪರ್ಕಕ್ಕಾಗಿ ೨೦೦೭ ರಿಂದ ಬ್ಲಾಗ್ ಕೂಡ ಬರೆಯುತ್ತಿದ್ದರು [ http://drvsacharya.blogspot.in]. ಇದೇ ಫೆಬ್ರುವರಿ ೯ ರಂದು ಅವರ ಕೊನೆಯ ಬ್ಲಾಗ್ ಪೋಸ್ಟ್ ಪ್ರಕಟಿಸಲ್ಪಟ್ಟಿತ್ತು ಎಂದು ತಿಳಿದುಬರುತ್ತದೆ. ಅವರ ಆ ದಿವ್ಯ ಚೇತನಕ್ಕೊಂದು ಸಾಷ್ಟಾಂಗ ನಮನ.

ಎರಡನೆಯದಾಗಿ, ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿ-ಪರಂಪರೆಯಬಗ್ಗೆ ಭಾರತೀಯ ಮೂಲದ ಪದ್ಧತಿಯಿಂದಲೇ ಅವಲೋಕನ ಮಾಡುವುದಕ್ಕೆ ನಮ್ಮ ಶತಾವಧಾನಿಗಳು ಮುಂದಾಗಿದ್ದಾರೆ. ಇದುವರೆಗೆ ಸಂಶೋಧಿಸುತ್ತೇವೆ ಎಂದುಕೊಂಡು ವಿದೇಶೀ ಸಂಶೋಧನಾ ರೀತ್ಯಾ ನಮ್ಮ ಸಂಸ್ಕೃತಿಯ ಕುರಿತು ಸಂಶೋಧನೆಗಳು ನಡೆದಿವೆ, ಅವೆಲ್ಲವೂ ಪೂರ್ವಾಗ್ರಹ ಪೀಡಿತವೇ ಆಗಿವೆ. ಇಲ್ಲಿಯದೇ ಸಂಶೋಧನಾ ಪದ್ಧತಿಯಲ್ಲೇ ಇಲ್ಲಿನ ಸಂಸ್ಕೃತಿಯ ಸಂಶೋಧನೆ ನಡೆದರೆ ಉತ್ತಮವೆಂಬ ಅಭಿಲಾಷೆಯಿಂದ ಇದೇ ಫೆಬ್ರುವರಿ ೨೧, ೨೨, ೨೩ ದಿನಾಂಕಗಳಂದು ಸಾಯಂಕಾಲ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಸಂಶೋಧನಾ ಪರಿಷತ್ ಆಶ್ರಯದಲ್ಲಿ ಈ ಕೆಲಸ ಜರುಗುತ್ತದೆ-ಸಂಜೆ ೬:೩೦ ರಿಂದ ೮:೦೦ರ ವರೆಗೆ. ಆಸಕ್ತರು ಭಾಗವಹಿಸಬಹುದಾಗಿದೆ; ತಿಳಿದುಕೊಳ್ಳುವ ಮನಸ್ಸಿಗೆ ಸುಗ್ರಾಸ ’ಭೋಜನ’ ಸಿಗುತ್ತದೆ! ಈ ಕೆಳಗೆ ಇರುವ ಆಮಂತ್ರಣವನ್ನು ಕ್ಲಿಕ್ಕಿಸಿ ಹಿಗ್ಗಿಸಿ ಓದಿಕೊಳ್ಳಿ:


ಮರೆಯಾಗುತ್ತಿರುವ ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ೩೦೦೦ ವರ್ಷಗಳಿಗೂ ಹಿಂದೆಯೇ ಬಳಕೆಯಿದ್ದ ಇತಿಹಾಸವುಳ್ಳ, ಚರಕ-ಸುಶ್ರುತರಾದಿಯಾಗಿ ಅನೇಕ ಆಯುರ್ವೇದಾಚಾರ್ಯರುಗಳಿಂದ ಬಳಸಲ್ಪಟ್ಟು ಅಂದಿನ ರಾಜಮಹಾರಾಜರುಗಳಿಗೂ ಪ್ರಜೆಗಳಿಗೂ ಉಪಯೋಗಕರವಾಗಿದ್ದ ಆಯುರ್ವೇದ ಭವಿಷ್ಯದ ಭಾರತದ ರೋಗಿಗಳನ್ನು ನಿರೋಗಿಗಳನ್ನಾಗಿ ಮಾಡಲಿ ಎಂಬುದು ನನ್ನ ಬಯಕೆ. ಆಯುರ್ವೇದದ ಹಲವು ಮೂಲಿಕೆಗಳನ್ನೂ ಔಷಧ ತಯಾರಿಕಾ ಸೂತ್ರಗಳನ್ನೂ ವಿದೇಶೀಯರು ಈಗಾಗಲೇ ಅರಿತಿದ್ದಾರೆ. ಜಾಗತಿಕ ವಾಣಿಜ್ಯ ಮಾರುಕಟ್ಟೆಯಲ್ಲಿ ಲಾಭಗಳಿಸುವ ಹುನ್ನಾರದಿಂದ ಆಯುರ್ವೇದಕ್ಕೇ ಪೇಟೆಂಟ್ ಪಡೆಯಲು ಅವರೆಲ್ಲಾ ಮುಂದಾಗುತ್ತಿದ್ದರೆ ನಾವೆಲ್ಲಾ ಕುರುಡು ಅನುಯಾಯಿಗಳಾಗಿ ಅವರ ಕೆಮಿಕಲ್ ಔಷಧೀಯ ಕ್ರಮವನ್ನು ಅನುಸರಿಸುತ್ತಿದ್ದೇವೆ!

ವೈದ್ಯರೊಬ್ಬರು ವಾರಪತ್ರಿಕೆಯೊಂದರಲ್ಲಿ ಕಳೆದವಾರ ಅರ್ಬುದ ರೋಗದ ಕುರಿತು ಬರೆದಿದ್ದಾರೆ. ಕ್ಯಾನ್ಸರ್ ರೋಗಕ್ಕೆ ಆಯುರ್ವೇದದಲ್ಲಿ ಅರ್ಬುದ ರೋಗ ಎನ್ನುತ್ತಾರೆ. ಅಂತಹ ಅರ್ಬುದ ರೋಗದಲ್ಲಿ ಹಲವು ವಿಧಗಳಿವೆ. ಆಂಗ್ಲ ಔಷಧೀಯ ಪದ್ಧತಿಯಲ್ಲಿ ಒಂದೊಂದಕ್ಕೂ ವಿಭಿನ್ನ ಕಾರಣಗಳನ್ನು ಹೇಳುತ್ತಾರಾದರೂ ಆಯುರ್ವೇದ ಹೇಳುವುದು ಅರ್ಬುದ ರೋಗಕ್ಕೆ ಸೇವಿಸುವ ದೂಷಿತ ಆಹಾರ, ಆಹಾರದಲ್ಲಿನ ಕೆಮಿಕಲ್ ಜೀವಕೋಶ ನಿರೋಧಕ ಅಂಶಗಳು, ಕಲ್ಮಶಗೊಂಡ ರಕ್ತ ಇವೇ ಕಾರಣಗಳಾಗಿರುತ್ತವೆ! ಲೇಖನ ಬರೆದ ವೈದ್ಯರು ರೋಗಿಯೊಬ್ಬಳ ಸತ್ಯಕಥೆಯನ್ನು ಉದಾಹರಿಸಿದ್ದಾರೆ. ಅವಳ ತಂದೆಯೂ ವೈದ್ಯರಾಗಿದ್ದು ವಿದೇಶದ ವರೆಗೂ ಅವಳನ್ನು ಕರೆದೊಯ್ದು ಚಿಕಿತ್ಸೆ, ಕೀಮೋಥೆರಪಿ ಎಲ್ಲಾ ಮಾಡಿಸಿದರೂ ಯಾವುದೇ ಪರಿಣಾಮ ಕಾಣದೇ ಮತ್ತೆ ಮರುಕಳಚಿದ ಅರ್ಬುದ ರೋಗವನ್ನು ಕೇವಲ ಭಾರತೀಯ ಮೂಲದ ಶುದ್ಧ ಅರಿಷಿನಪುಡಿ ಮತ್ತು ಕಾಣುಮೆಣಸಿನ ಕಷಾಯ ಪರಿಹಾರ ಮಾಡಿದೆ ಎಂದರೆ ಆಯುರ್ವೇದದ ಮಹತ್ವ ನಮಗೆ ಅರಿವಾಗಬಹುದು! ಹೀಗೆ ಕಂಡುಕೊಂಡ ಪರಿಹಾರವನ್ನು ದಾಖಲೆ ಸಮೇತ ವಿದೇಶೀ ವೈದ್ಯರಲ್ಲಿ ತೋರಿಸಿದರೂ ಆಯುರ್ವೇದ ಚಿಕಿತ್ಸೆಯನ್ನು ಅವರು ಒಪ್ಪುವ ಮನಸ್ಸು ಮಾಡಲಿಲ್ಲ ಎಂದು ನಮ್ಮ ಈ ವೈದ್ಯ ಬರೆದಿದ್ದಾರೆ; ಎಂತಹ ವಿಪರ್ಯಾಸ! ಒಳಗೊಳಗೇ ಅದರಲ್ಲೇನೋ ಇದೆ ಎಂಬ ಅನಿಸಿಕೆಯಿರುವ ನಾಸ್ತಿಕವಾದಿಗಳಂತೇ ಆ ವೈದ್ಯರು ತಮ್ಮಿಂದಾಗದ್ದನ್ನು ಆಯುರ್ವೇದ ಸಾಧಿಸಿದಾಗ ಒಪ್ಪಲು ಸಿದ್ಧರಾಗಲಿಲ್ಲ!

ಆಯುರ್ವೇದದಲ್ಲಿ ಭಾರತೀಯ ಮೂಲದ ಹಳೆಯ ಕಂಪನಿಯೊಂದು ಬೆಂಗಳೂರಿನಲ್ಲೇ ಇದೆ. ಹಿಮಾಲಯ ಡ್ರಗ್ ಕಂಪನಿ ಎಂದು ಅದರ ಹೆಸರು. ಅದು ನೂರಾರು ಆಯುರ್ವೇದೀಯ ಔಷಧಗಳನ್ನು ತಯಾರಿಸುತ್ತದೆ! ಕೆಲವಂತೂ ವಿದೇಶಗಳಿಗೂ ರಫ್ತಾಗುತ್ತವೆ-ಆ ಮೂಲಕ ಕಂಪನಿಯ ಆದಾಯ ಹೆಚ್ಚಿಸಿ ಕಂಪನಿಯ ಬೆಳವಣಿಗೆಗೆ ಕಾರಣವಾಗಿವೆ. ಉದಾಹರಣೆಗೆ ಲಿವ್-೫೨ ಎಂಬ ಔಷಧ ಮನುಷ್ಯರಿಗೂ ಪಶುಗಳಿಗೂ ಉಪಯೋಗಕ್ಕೆ ಬರುವ ಉತ್ಕೃಷ್ಟ ಔಷಧವಾದರೆ, ಸ್ಪೆಮೆನ್ ಪೋರ್ಟ್ ಎಂಬ ಮಾತ್ರೆ ಮುದುಕರಲ್ಲಿ ವೀರ್ಯೋತ್ಫಾದಕ ಗ್ರಂಥಿಗಳ ವಿಕೃತ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತವೆ. ಸಿಸ್ಟೋನ್ ಎಂಬ ಮಾತ್ರೆ ಮೂತ್ರಾಶಯದ ಕಲ್ಲುಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ! ಯಾವುದೇ ಅಡ್ಡಪರಿಣಾಮಗಳಿಲ್ಲದೇ ಬಳಸಿ ಆರೋಗ್ಯ ಮರಳಿ ಗಳಿಸಬಹುದಾದ ಆಯುರ್ವೇದವನ್ನು ಭಾರತೀಯರಾಗಿ ನಾವು ಅನೇಕಬಾರಿ ಅಲ್ಲಗಳೆಯುತ್ತೇವೆ. ಚರಕ-ಸುಶ್ರುತಾಚಾರ್ಯರುಗಳು ಅಂದೇ ಆಪರೇಷನ್ ಕೂಡ ಮಾಡಿದ್ದರಂತೆ! ಆದರೆ ಈ ನಡುವೆ ಸರಿಯಾದ ಪರಿಣತರಿಲ್ಲದೇ ಆ ವಿದ್ಯೆ ಕೈಬಿಟ್ಟು ಹೋಗಿತ್ತು, ಅರೆಜೀವವಾಗಿದ್ದ ಅದಕ್ಕೆ ಮತ್ತೆ ಜೀವಬಂದಿದೆ! ಭಾರತೀಯ ಮೂಲದ ಯಾವುದೇ ತತ್ವದಲ್ಲೂ ಸತ್ವವಿದೆ; ಅದು ಫೀನಿಕ್ಸ್ ಪಕ್ಷಿಯಂತೇ ಮತ್ತೆ ಜನಿಸುತ್ತದೆ ಹೊರ್ತು ಸಾಯುವುದಿಲ್ಲ!

ಬಡರೈತರಿಗೆ ಹಿಮಾಲಯ ಡ್ರಗ್ ಕಂಪನಿ ಯೋಜನೆಯೊಂದನ್ನು ಇದೀಗಾಗಲೇ ಜಾರಿಗೊಳಿಸಿದೆ. ಸಾಮಾನ್ಯ ಗದ್ದೆಯಲ್ಲೂ ಬೆಳೆಯಲು ಆಗಬಹುದಾದ ಬೀಜಗಳನ್ನು ಅದೇ ಒದಗಿಸಿ ಬೆಳೆದ ಮೂಲಿಕೆಗಳನ್ನು ಅದೇ ಕಂಪನಿ ಸ್ವೀಕರಿಸುತ್ತದೆ. ಬೆಳೆಗಾರನಿಗೆ ತಿಂಗಳಿಗೆ ೪೦೦೦ ರೂಪಾಯಿ ಸಂಬಳದಂತೇ ಅದು ಕೊಡಮಾಡುತ್ತದೆ. ಈಗಾಗಲೇ ಬೆಂಗಳೂರಿನ ಕೇಂದ್ರ ಕಾರಾಗ್ರಹದ ಖೈದಿಗಳೂ ಮತ್ತು ಬೆಂಗಳೂರಿನ ಹೊರವಲಯದ ಕೆಲವು ರೈತರು ಇದರ ಪ್ರಯೋಜನ ಪಡೆದಿದ್ದಾರೆ. ನೇರವಾಗಿ ರೈತರ ಸಂಪರ್ಕಕ್ಕೆ ಅವಕಾಶ ನೀಡುವುದರಿಂದ ರೈತರಿಗೆ ಹಣದ ಭರವಸೆ ಇದೆ, ಅಲ್ಲದೇ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ವರ್ಷಕ್ಕೆ ಎಕರೆಯೊಂದಕ್ಕೆ ೫೦,೦೦೦ ರೂ ನಿಗದಿತ ಹಣವನ್ನು ರೈತರು ಯಾವುದೇ ಒತ್ತಡವಿಲ್ಲದೇ ಗಳಿಸಬಹುದಾಗಿದೆ. ಇಂತಹ ಅವಕಾಶವನ್ನು ಕನ್ನಡ ನೆಲದಲ್ಲೇ ಹುಟ್ಟಿಬೆಳೆದ ಈ ಕಂಪನಿ ಕನ್ನಡಿಗರಿಗಾಗಿ ಕೊಡುತ್ತಿದ್ದು ನಂತರ ಆಂಧ್ರ ಮತ್ತು ತಮಿಳುನಾಡು ರಾಜ್ಯಕ್ಕೂ ಇದನ್ನು ವಿಸ್ತರಿಸಲು ಕಂಪನಿ ಮುಂದಾಗುತ್ತಿದೆ. ವಿದೇಶಗಳಲ್ಲೂ ಕಛೇರಿಗಳನ್ನು ಹೊಂದಿರುವ ಈ ಕಂಪನಿಯಂತೇ ಇನ್ನೂ ಹಲವು ಕಂಪನಿಗಳು ಹುಟ್ಟಲಿ, ಬೆಳೆಯಲಿ ಮತ್ತು ಆಯುರ್ವೇದದ ಬಳಕೆ ಎಲ್ಲೆಲ್ಲೂ ಜಾರಿಗೆ ಬಂದು ಜನರೆಲ್ಲಾ ಆರೋಗ್ಯದಿಂದ ಬದುಕಲಿ ಎಂಬುದು ನನ್ನ ಹಾರೈಕೆಯಾಗಿದೆ. ಹಿಮಾಲಯ ಡ್ರಗ್ ಕಂಪನಿಯ ವಿವರಗಳ ಕೊಂಡಿ ಇಲ್ಲಿದೆ:

http://www.himalayahealthcare.com


Saturday, February 11, 2012

ದೀಪಂ ದೇವ ದಯಾನಿಧೇ -೪


ದೀಪಂ ದೇವ ದಯಾನಿಧೇ -೪
[ಜಗದ್ಗುರು ಶ್ರೀ ಶಂಕರಾಚಾರ್ಯರ ಅತಿ ಸಂಕ್ಷಿಪ್ತ ಜೀವನ ಚರಿತ್ರೆ]

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ |
ಸಮೂಢಮಸ್ಯ ಪಾಗ್ಂಸುರೇ||

ಆಸ್ತಿಕ ಬಂಧುಗಳಿಗೆ ಶಂಕರರ ಜೀವನಾವಲೋಕನದ ಸಂಕ್ಷಿಪ್ತ ರೂಪದ ಬರಹದ ಈ ಭಾಗಕ್ಕೆ ಮತ್ತೆ ಸ್ವಾಗತ.

ಎರಡನೇ ವಯಸ್ಸಿಗೆ ತಂದೆಯಿಂದ ಚೌಲಕರ್ಮ ಮುಗಿಸಿಕೊಂಡ ಬಾಲಕ ಶಂಕರ ೩ನೇ ವಯಸ್ಸಿನೊಳಗೇ ಸಾಹಿತ್ಯ, ವ್ಯಾಕರಣಗಳನ್ನೂ, ಭಾರತದ ಪುರಾಣೇತಿಹಾಸಗಳನ್ನೂ ಸಂಪೂರ್ಣವಾಗಿ ತಿಳಿದು ನೋಡುಗರನ್ನು ನಿಬ್ಬೆರಗಾಗಿಸಿದ್ದ. ತಂದೆಯ ಮರಣಾನಂತರ ತಾಯಿಯ ಆಶ್ರಯದಲ್ಲಿ ಐದನೇ ವಯಸ್ಸಿಗೆ ಉಪನಯನವಾಗಿ ಎಂಟನೇ ವಯಸ್ಸು ಆರಂಭವಾಗುವ ಹೂತ್ತಿಗೆ ಅಧ್ಯಯನ ಮುಗಿಸಿದ ಶಂಕರರ ಬಾಲ್ಯವನ್ನು ತಿಳಿದರೇ ಅವರು ಅವತಾರ ಪುರುಷರೆಂಬುದು ಗೊತ್ತಾಗುತ್ತದೆ. ಗುರುಕುಲ ನೆಪಮಾತ್ರಕ್ಕೆ ಅವರಿಗೆ ಗುರುಕುಲವಾಗಿತ್ತೇ ಹೊರತು ವೇದ-ವೇದಾಂಗಗಳು ಅವರಲ್ಲೇ ಹುದುಗಿದ್ದವು! ಗುರುಗಳು ಹೇಳಿಕೊಡುವ ಮುನ್ನವೇ ಶಂಕರರೇ ಕೆಲವನ್ನು ಹೇಳಿಬಿಡುತ್ತಿದ್ದರು. ಜನಸಾಮಾನ್ಯರಿಗೆ ಒಂದೊಂದು ವೇದಕ್ಕೆ ೧೨ ವರ್ಷಗಳಂತೇ ಚತುರ್ವೇದಗಳನ್ನು ಸಮರ್ಪಕವಾಗಿ ಓದಿ ಮುಗಿಸಲು ೪೮ ವರ್ಷಗಳು ಬೇಕು. ಸರಿಸುಮಾರು ೮ ವಯಸ್ಸಿಗೆ ಉಪನಯನ ಸಂಸ್ಕಾರ ನಡೆದರೆ ಅದಕ್ಕೆ ೪೮ ವರ್ಷ ಸೇರಿಸಿ ಅಂದರೆ ೫೬ ವಯಸ್ಸಿನ ವರೆಗೂ ವೇದವನ್ನು ತಿಳಿದುಕೊಳ್ಳುವುದೇ ಆಗುತ್ತದೆ. ಅಂಥಾದ್ದರಲ್ಲಿ ಶಂಕರರು ಕೇವಲ ಮೂರೇ ವರ್ಷಗಳಲ್ಲಿ ವೇದ-ವೇದಾಂಗ, ಶಾಸ್ತ್ರ, ತರ್ಕ, ನ್ಯಾಯ-ಮೀಮಾಂಸೆ ಎಲ್ಲದರಲ್ಲೂ ಪಾರಂಗತರಾಗಿಬಿಟ್ಟಿದ್ದರು ! ಇಂದಿನ ವಿಜ್ಞಾನಕ್ಕೆ ಇದೊಂದು ಸವಾಲು! ಶಂಕರರ ಪಾಂಡಿತ್ಯಕ್ಕೆ ಸಾಕ್ಷಿಯಾಗಿ ಅವರ ದಿವ್ಯ ಕೃತಿಗಳು ಇಂದಿಗೂ ಎಲ್ಲೆಲ್ಲೂ ಲಭಿಸುತ್ತವೆ. ಆಧುನಿಕ ವಾಹನಸಾರಿಗೆ ಇರದ ಆ ಕಾಲದಲ್ಲಿ ಶಂಕರರು ಅಸೇತು ಹಿಮಾಚಲದವರೆಗೂ ಬಂಗಾಳದಿಂದ ದ್ವಾರಕೆಯ ವರೆಗೂ ಭಾರತದುದ್ದಗಲಕ್ಕೂ ಸಂಚರಿಸಿರುವುದು ನಮಗೆ ತಿಳಿದೇ ಇರುವ ವಿಷಯ ಅಲ್ಲವೇ ? ಇರಲಿ, ಮುಂದೆ ನೋಡೋಣ.

ಹೀಗೇ ಗುರುಕುಲ ವಿದ್ಯಾಭ್ಯಾಸ ಮುಗಿದು ಬಾಲಕ ಶಂಕರ ಮನೆಗೆ ಮರಳಿದ. ಬಾಲಕನ ಪಾಂಡಿತ್ಯ ಆ ವೇಳೆಗಾಗಲೇ ಎಲ್ಲೆಲ್ಲೂ ಜನಜನಿತವಾಗಿ ಅನೇಕ ಪಂಡಿತ್ತೋತ್ತಮರು ತಾವು ಬಿಡಿಸಲಾಗದ ಸಮಸ್ಯೆಗಳನ್ನು ಹೊತ್ತು ಶಂಕರನಲ್ಲಿಗೆ ಬರುತ್ತಿದ್ದರು. ಅದೇನು ಮಹಾ ಎಂಬಂತೇ ಶಂಕರ ಅವುಗಳನ್ನೆಲ್ಲಾ ಅರೆನಿಮಿಷದಲ್ಲೇ ಬಗೆಹರಿಸಿಬಿಡುತ್ತಿದ್ದ. ಹೀಗಾಗಿ ಕಾಲಡಿಯ ಶಂಕರನ ಮನೆಯೇ ಒಂದು ಗುರುಕುಲದ ರೀತಿ ಆಗಿಬಿಟ್ಟಿತ್ತು. ತಾಯಿಗೆ ಶಂಕರ ಮಹಾಜ್ಞಾನಿ ಎಂಬುದು ಅರ್ಥವಾಗಿ ಹೋಗಿತ್ತು. ಶಂಕರನ ಗಹನ ಪಾಂಡಿತ್ಯವನ್ನು ತಿಳಿದ ಕೇರಳದ ಆ ಪ್ರದೇಶದ ರಾಜ ರಾಜಶೇಖರ ಪಲ್ಲಕ್ಕಿ ಸಹಿತ ಹಾರ-ತುರಾಯಿ, ಛತ್ರ-ಚಾಮರಾದಿ ಸಕಲ ರಾಜಮರ್ಯಾದೆಯ ಗೌರವದೊಂದಿಗೆ ತನ್ನ ಮಂತ್ರಿಯನ್ನೂ ಸಕಲ ಪರಿವಾರವನ್ನೂ ಶಂಕರನಲ್ಲಿಗೆ ಕಳುಹಿಸಿ ಅರಮನೆಗೆ ಬರಬೇಕೆಂದು ವಿನಂತಿಸಿದ. ಆಗಲೇ ವಿರಕ್ತನಾಗಿದ್ದ ಶಂಕರ ಧನ-ಕನಕದ ಹೊರೆಹೊತ್ತು ರಾಜಮರ್ಯಾದೆ ನೀಡಿ ಕರೆದೊಯ್ಯಲು ಬಂದ ಮಂತ್ರಿಗೆ ತನಗವ್ಯಾವವೂ ಬೇಡವೆಂದೂ ಅಂಥದ್ದರಲ್ಲಿ ಆಸಕ್ತಿ ಇಲ್ಲವೆಂದೂ ಹಲವು ಕೆಲಸಗಳಲ್ಲಿ ನಿರತನಾಗಿರುವುದರಿಂದ ಅರಮನೆಗೆ ಬರಲಾಗುವುದಿಲ್ಲವೆಂದು ನಯವಾಗಿ ಹೇಳಿಕಳುಹಿಸಿದ!

ರಾಜಾ ರಾಜಶೇಖರನಿಗೆ ಎಲ್ಲಿಲ್ಲದ ಆಶ್ಚರ್ಯ! ಕೊಟ್ಟ ಯಾವುದನ್ನೂ ಸ್ವೀಕರಿಸದ ರಾಜಮರ್ಯಾದೆಯೂ ಬೇಡವೆಂದ ಬಾಲ ಪಂಡಿತ ಮಹಾಮಹೋಪಾಧ್ಯಾಯನನ್ನು ನೋಡುವ ಕಾತರದಿಂದ ರಾಜ ಖುದ್ದಾಗಿ ತಾನೇ ಶಂಕರನ ಮನೆಗೆ ಧಾವಿಸಿ ಬಂದ! ತಾನೊಂದಷ್ಟು ಗ್ರಂಥಗಳನ್ನು ಬರೆದಿರುವೆನೆಂದೂ ಅವುಗಳಲ್ಲಿರಬಹುದಾದ ದೋಷಗಳನ್ನು ಸರಿಪಡಿಸಿಕೊಡಬೇಕೆಂದೂ ಪ್ರಾರ್ಥಿಸಿಕೊಂಡ. ತನ್ನೆದುರಲ್ಲೇ ರಾಜನೇ ಅದನ್ನು ಓದುವಂತೇ ಮಾಡಿದ ಶಂಕರ ರಾಜನ ಶಾಸ್ತ್ರಪಾಂಡಿತ್ಯಕ್ಕೆ ತಲೆದೂಗಿದನಲ್ಲದೇ ಗ್ರಂಥಗಳಲ್ಲಿರುವ ದೋಷಗಳನ್ನು ಸರಿಪಡಿಸಿ ಸಂತೋಷ ವ್ಯಕ್ತಪಡಿಸಿದ. ರಾಜನೂ ಸಂತುಷ್ಟನಾಗಿ ಮತ್ತೆ ತಾನು ತಂದಿದ್ದ ನಿಧಿಯನ್ನು ಅರ್ಪಿಸಲಾಗಿ ತನಗೆ ಅದರ ಅವಶ್ಯಕತೆಯಿಲ್ಲವೆಂದೂ ಅಗತ್ಯವಿರುವ ಬಡಜನರಿಗೆ ಅದನ್ನು ತನ್ನ ಪರವಾಗಿ ಹಂಚಿಬಿಡಬೇಕೆಂದೂ ಶಂಕರ ಸಾರಿದ. ರಾಜನಿಗೆ ಪುನರಪಿ ಆಶ್ಚರ್ಯವೇ ಕಾದಿತ್ತು! ರಾಜನಿಗೆ ಆಕ್ಷಣಕ್ಕೆ ಶಂಕರರ ಅಂತಃಕರಣ ಅರ್ಥವಾಗಲಿಲ್ಲ. ಜೀವನದಲ್ಲಿ ಯಾರ್ಯಾರು ಏನೇನು ಸಾಧಿಸುತ್ತಾರೆ ಖ್ಯಾತಿಯನ್ನೋ ಕುಖ್ಯಾತಿಯನ್ನೋ ಪಡೆಯುತ್ತಾರೆ ಎಂಬುದು ಸಾಮಾನ್ಯವಾಗಿ ಹೇಳಲು ಬರುವುದಿಲ್ಲ. ಪೂರ್ವಸಂಸ್ಕಾರ ಮತ್ತು ಬೆಳೆದ ಪರಿಸರ ಇವೆರಡನ್ನು ಅವಲಂಬಿಸಿ ಕೆಲವರು ಮಹಿಮಾನ್ವಿತರಾಗಿ ಲೋಕೋಪಕಾರಿಗಳಾದರೆ ಇನ್ನು ಕೆಲವರು ಸಮಾಜಘಾತುಕರೋ ದರೋಡೆಕೋರರೋ ಆಗುತ್ತಾರೆ. ಸಮಯಾನುಸಾರ ಯವುದೋ ಅಗೋಚರ ತಿರುವಿನಿಂದ ಉತ್ತಮರಾಗಿ ಬಾಳುವವರೂ ಇದ್ದಾರೆ. ಶಂಕರರು ಲೋಕೋಪಕಾರಿಯಾಗುವ ಸನ್ಯಾಸಿಯಾಗಬೇಕೆಂಬುದು ಪರಶಿವನ ಇಚ್ಛೆಯಾಗಿತ್ತು! ಆದರೆ ಆ ದಿವ್ಯ ಸಂಕಲ್ಪ ಆ ಸಮಯದಲ್ಲಿ ಯಾರಿಗೂ ತಿಳಿದಿರಲಿಲ್ಲ.

ಬಾಲಕ ಶಂಕರ ಒಮ್ಮೆ ಮನೆಯಲ್ಲಿ ಅಮ್ಮನ ಶುಶ್ರೂಷೆ ನೋಡಿಕೊಳ್ಳುತ್ತಾ ಇದ್ದಾಗ ಈರ್ವರು ತೇಜಸ್ವೀ ಬ್ರಾಹ್ಮಣರು ಮಧ್ಯಾಹ್ನದ ಹೊತ್ತು ಅಲ್ಲಿಗೆ ಬಂದರು. ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದ ಮನೆಯದು. ಬಂದ ಅತಿಥಿಗಳಿಗೆ ಕೈ-ಕಾಲು-ಮುಖ ತೊಳೆಯಲು ನೀರು ಕೊಟ್ಟು ಒಳಗೆ ಕರೆದು ಯಥೋಚಿತ ಆಸನಗಳನ್ನು ನೀಡಿದ ಶಂಕರರ ತಾಯಿ ಹಣ್ಣು-ಹಂಪಲು ಮತ್ತು ಹಾಲನ್ನು ನೀಡಿ ತುಸುಹೊತ್ತು ವಿಶ್ರಮಿಸಲು ಅನುವುಮಾಡಿಕೊಟ್ಟಳು. ಆಮೇಲೆ ಅತಿಥಿಗಳಿಗೆ ಊಟನೀಡಿದಳು. ಶಂಕರ ಬಂದ ಆ ಬ್ರಾಹ್ಮಣರ ಜೊತೆ ಸದಾ ವೇದ-ಶಾಸ್ತ್ರಾದಿಗಳ ಕುರಿತು ಮಾತನಾಡುತ್ತಲೇ ಇದ್ದ. ಆ ವಯಸ್ಸಿನ ಶಂಕರನ ಅಗಾಧ ಪಾಂಡಿತ್ಯ ನೋಡಿ ಬ್ರಾಹ್ಮಣರಿಗೆ ಅತ್ಯಾಶ್ಚರ್ಯವಾಗಿತ್ತು! ಭೋಜನಾನಂತರ ಹೊರಟು ನಿಂತ ಅವರಲ್ಲಿ ಆರ್ಯಾಂಬೆಯು " ಪಂಡಿತೋತ್ತಮರೇ, ನನ್ನ ಮಗು ಶಂಕರ ವೇದ-ವೇದಾಂಗಗಳನ್ನೂ ಶಾಸ್ತ್ರ-ತರ್ಕಾದಿಗಳನ್ನೂ ಓದಿದ್ದು ನನಗೆ ಖುಷಿತಂದಿದೆ ಆದರೆ ಅವನ ಭವಿಷ್ಯದ ಬಗ್ಗೆ ನನಗೆ ತಿಳಿದುಕೊಳ್ಳಬೇಕಾಗಿತ್ತು ದಯಮಾಡಿ ತಿಳಿಸಿಕೊಡುತ್ತೀರಾ ?" ಎಂದಳು. " ಅಮ್ಮಾ ಶಂಕರನಿಗೆ ಆಯುಷ್ಯ ತುಂಬಾ ಕಮ್ಮಿ, ೮ನೇ ವಯಸ್ಸಿಗೆ ಆತ ........ಗತಿಸುತ್ತಾನೆ " ಎಂಬುದನ್ನು ದುಃಖಪಡುತ್ತಲೇ ತಿಳಿಸಿದರು. ಅದಾಗಲೇ ೮ನೇ ವರ್ಷ ಮುಗಿಯುವ ಸಮಯ ಬಂದಿತ್ತು. ವಿಷಯ ತಿಳಿದ ಆರ್ಯಾಂಬೆ ಬ್ರಾಹ್ಮಣರಲ್ಲಿ ಗೋಗರೆದು ಇನ್ನೊಮ್ಮೆ ಪರಿಶೀಲಿಸುವಂತೇ ಜಾತಕ ನೀಡಿದಳು. ಜಾತಕ ನೋಡಿದ ಅವರು " ತಾಯೀ, ೮ನೇ ವರ್ಷಕ್ಕೆ ಸನ್ಯಾಸವಾಗುವ ಯೋಗಕಾಣುತ್ತದೆ. ಸಾಧನೆ ಮತ್ತು ತಪಸ್ಸಿನಿಂದ ೮ ವರ್ಷ ಹೆಚ್ಚಿಗೆ ಬದುಕುತ್ತಾನೆ, ನಂತರ ಅವನಲ್ಲಿಯೇ ಅಡಕವಾಗಿರುವ ದೈವಿಕ ಶಕ್ತಿಯಿಂದ ಇನ್ನೂ ಹದಿನಾರು ವರ್ಷ ಹೆಚ್ಚಿಗೆ ಜೀವಿಸುತ್ತಾನೆ, ಒಟ್ಟೂ ೩೨ ವರ್ಷ ಪರಮಾಯುಷ್ಯ " ಎಂದು ತಮಗೆ ವೇದ್ಯವಾಗಿದ್ದನ್ನು ವಿಷದಪಡಿಸಿದ್ದಾರೆ. ಮುಳುಗುವವನಿಗೆ ಹುಲ್ಲುಕಡ್ಡಿಯೊಂದು ಸಿಕ್ಕಂತೇ ಬತ್ತದ ಬದುಕುವ ಸೆಲೆಯೊಂದು ಕಾಣಿಸಿ ಆರ್ಯಾಂಬೆ ಇದ್ದುದರಲ್ಲೇ ದೇವರು ಇಟ್ಟಹಾಗಾಗಲೆಂದು ತನ್ನನ್ನೇ ತಾನು ಸಮಾಧಾನಪಡಿಸಿಕೊಳ್ಳುತ್ತಾ ಅತಿಥಿಗಳನ್ನು ನಮಸ್ಕರಿಸಿ ಬೀಳ್ಕೊಟ್ಟಿದ್ದಾಳೆ.

ತಮ್ಮ ಮಗ ಎಲ್ಲರಂತೇ ಮದುವೆಯಾಗಿ ಸುಂದರ ಕುಟುಂಬಜೀವನವನ್ನು ನಡೆಸಲಿ ಎಂಬ ಬಯಕೆ ಎಲ್ಲಾ ತಾಯಿಯರಂತೇ ಆರ್ಯಾಂಬೆಗೂ ಇತ್ತು. ಆಗಲೇ ವೃದ್ಧಾಪ್ಯವಾಗಿದ್ದರಿಂದ ಬ್ರಾಹ್ಮಣರ ಮಾತನ್ನು ಕೇಳಿ ಆಕೆಗೆ ಚಣಕಾಲ ಮುಪ್ಪಿನ ಆ ಶರೀರದಲ್ಲಿ ಇದ್ದಬದ್ದ ಶಕ್ತಿಯೂ ಉಡುಗಿ ಹೋದಂತೇ ಭಾಸವಾಯಿತು. ಹಿಂದೊಮ್ಮೆ ಆರಾಧ್ಯದೈವವಾದ ವೃಷಾಚಲೇಶ್ವರ ಕನಸಲ್ಲಿ ಬಂದು ಅಲ್ಪಾಯುಷಿಯಾಗಿ ಲೋಕೋತ್ತರ ಕೀರ್ತಿವಂತನೂ ಭಾರತವನ್ನು ಬೆಳಗುವವನೂ ಆದ ಮಗ ಜನಿಸುತ್ತಾನೆ ಎಂದಿದ್ದು ನೆನಪಿಗೆ ಬಂತು. ದೇವರ ಬಯಕೆಯೇ ಹಾಗಿರುವಾಗ ಎಲ್ಲಾ ತಾಯಿಯರಂತೇ ತಾನು ಮಗ ದೀರ್ಘಾಯುವಾಗಲಿ ಎಂದು ಬಯಸುವುದು ತಪ್ಪು ಎಂದುಕೊಂಡರೂ ಸನ್ಯಾಸಿಯಾಗಿ ತನ್ನನ್ನು ತೊರೆದು ಹೋಗುವ ಮಗನ ಚಿತ್ರಣವೊಂದು ಮನಃಪಟಲದಲ್ಲಿ ಹಾದು ಹೋಯಿತು. ನಿಂತಲೇ ಆ ಹಗಲುಗನಸಿನಲ್ಲಿದ್ದ ಆರ್ಯಾಂಬೆಯನ್ನು ಬ್ರಾಹ್ಮಣರು ಮಾತನಾಡಿಸಿ

" ಅಮ್ಮಾ ನಾವಿನ್ನು ಬರುತ್ತೇವೆ. ನಿಮ್ಮ ಮಗ ಸಾಮಾನ್ಯನಲ್ಲ! ಅಳಿದುಹೋಗುತ್ತಿರುವ ಸನಾತನ ಧರ್ಮವನ್ನು ಪುನರ್ಪ್ರತಿಷ್ಠಾಪಿಸುವ ಸಲುವಾಗಿ ಧರೆಗಿಳಿದ ಸಾಕ್ಷಾತ್ ಭಗವಂತ. ಲೋಕಕ್ಕೇ ಮಾರ್ಗದರ್ಶನ ಮಾಡಬಲ್ಲ ಮಹಾಮಹಿಮ. ಅಧರ್ಮ ತಾಂಡವವಾಡುತ್ತಿರುವ ಭಾರತದಲ್ಲಿ ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸುವ ಸಲುವಾಗಿಯೇ ಆತನ ಜನನವಾಗಿದೆ. ಶಂಕರನಿಂದ ಲೋಕಕಲ್ಯಾಣವಾಗಲಿ " ಎಂದು ಹೇಳುತ್ತಾ ಹೊರಟುಬಿಟ್ಟರು.

ಬಾಲಕ ಶಂಕರನಿಗೆ ತಾಯಿ ಅತಿಥಿಗಳೊಡನೆ ನಡೆಸಿದ ಸಂವಾದದ ಸಾರಾಂಶ ತಿಳಿದು ಹೋಗಿತ್ತು. ತನಗಿರುವ ಆಯುಷ್ಯ ಅಲ್ಪವಾಗಿದ್ದುದರಿಂದ ಹೇಗಾದರೂ ಮಾಡಿ ಅಮ್ಮನನ್ನು ಒಪ್ಪಿಸಿ ತಾನು ಸನ್ಯಾಸ ಸ್ವೀಕರಿಸಿ ಲೋಕೋಪಕಾರಕ್ಕೆ ಹೊರಡಬೇಕು ಎಂದು ಶಂಕರ ಭಾವಿಸಿದ. ಮದುವೆಯಾಗಿ ಸಂಸಾರ ಬಂಧನದಲ್ಲಿ ಸಿಲುಕಿದರೆ ಹೊರಜಗತ್ತಿಗೆ ಕೊಡಬೇಕಾದ ಮಾರ್ಗದರ್ಶನ ಪೂರ್ಣವಾಗುವುದಿಲ್ಲ, ತನ್ನ ಕಾರ್ಯಗಳಲ್ಲಿ ತಾನು ಯಶಸ್ಸು ಕಾಣಬೇಕಾದರೆ ಕಾಷಾಯ ವಸ್ತ್ರ ಧಾರಿಯಾಗಿ ಸನ್ಯಾಸಿಯಾಗುವುದು ವಿಹಿತವಾಗಿದೆ ಎಂದು ಆತ ನಿರ್ಧರಿಸಿದ.

ಸನಾತನ ಧರ್ಮಕ್ಕೆ ಯಾರೂ ಸಂಸ್ಥಾಪಕರಿಲ್ಲ. ಅನೇಕಾನೇಕ ಋಷಿಮುನಿಗಳಿಗೆ ಅವರ ದಿವ್ಯದೃಷ್ಟಿಗೆ ಗೋಚರವಾಗಿ ಬಾಯಿಂದ ಬಾಯಿಗೆ ಹರಿದ ಜ್ಞಾನಧಾರೆಗಳಾದ ವೇದಗಳನ್ನು ವೇದವ್ಯಾಸರು ವಿಂಗಡಿಸಿದರಷ್ಟೇ ವಿನಃ ವೇದಗಳು ಅಪೌರುಷೇಯ. ಇಂಥಾ ಜ್ಞಾನಭಂಡಾರ ಕೇವಲ ಎಲ್ಲೋ ಬಿದ್ದು ಕೆಲವು ಪುರೋಹಿತರುಗಳು ಮಾತ್ರ ಬಳಸಿ ಅಳಿದುಹೋಗಬಾರದೆಂಬ ವಾಂಛೆಯಿಂದ ಶಂಕರರು ಸನಾತನ ಧರ್ಮದ ಆಧಾರ ಸ್ತಂಭಗಳಾದ ವೇದ-ವೇದಾಂಗಗಳನ್ನು ಸಮರ್ಪಕವಾಗಿ ಎಲ್ಲರಿಗೂ ಲಭಿಸುವಂತೆಯೂ ಪ್ರಾಣಿಹಿಂಸೆ-ಬಲಿ ಮೊದಲಾದ ಗೊಡ್ಡು ಸಂಪ್ರದಾಯಗಳನ್ನು ತಡೆಯುವಂತೆಯೂ ಮಾಡುವ ಅವಶ್ಯಕತೆಯಿತ್ತು. ಕುಳಿತಲ್ಲೇ ಅದಾಗಲೇ ಶಂಕರ ಇವುಗಳನ್ನೆಲ್ಲಾ ಮೂರ್ತರೂಪದಲ್ಲಿ ಕಂಡು ಸಂಕಲ್ಪಿಸಿಬಿಟ್ಟಿದ್ದ. ಮಾನವರಿಗೆ ಸಹಜವಾಗಿ ಅನುಕೂಲಕರವಾದ ಸನಾತನಧರ್ಮ ಪ್ರಳಯಕಾಲದಲ್ಲೂ ಸಂಪೂರ್ಣ ವಿನಾಶವಾಗದ ಅಂಶಗಳಲ್ಲೊಂದು. ಆದರೂ ಆ ಕಾಲಘಟ್ಟದಲ್ಲಿ ಅನ್ಯಾಯ-ಅಧರ್ಮಗಳೇ ಜಾಸ್ತಿಯಾಗಿ ಧರ್ಮಯಾವುದು ಅಧರ್ಮಯಾವುದು ಎಂಬುದು ಅನೇಕರಿಗೆ ತಿಳಿಯದಂತಾಗಿತ್ತು. ಹಲವು ಕ್ಲೀಷೆಗಳಿಗೆ ಒಳಗಾಗಿದ್ದ ಆಚರಣೆಗಳು ಯಾರ್ಯಾರದೋ ಅಂಧಾನುಕರಣೆಗಳನ್ನೂ ಸೇರಿಸಿಕೊಂಡು ಮೂಲದಲ್ಲಿ ಇದ್ದ ನಿಜವಾದ ಆಚಾರ-ವಿಚಾರಗಳು ಬದಲಾಗಿಬಿಟ್ಟಿದ್ದವು. ಅಂತಹ ಧರ್ಮಗ್ಲಾನಿಯ ಸನ್ನಿವೇಶದಲ್ಲಿ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣ ಸಾರಿದಂತೇ ದೇವರು ಒಂದಲ್ಲಾ ಒಂದು ರೂಪದಿಂದ ಧರ್ಮವನ್ನು ರಕ್ಷಿಸಲೇ ಬೇಕಿತ್ತು. ಆ ಕೆಲಸಕ್ಕಾಗಿ ತನ್ನನ್ನೇ ಪರಮೇಶ್ವರ ಶಂಕರನ ರೂಪದಲ್ಲಿ ನಿಯೋಜಿಸಿಕೊಂಡಿದ್ದ! ಸನಾತನ ಧರ್ಮದ ಮೂಲ ಸೂತ್ರಗಳು ಯಾವ ಕಾಲದಲ್ಲೂ ಯಾರಿಗೇ ಆದರೂ ಸಮನ್ವಯವಾಗುವ ಬದುಕುವ ಕಲೆಯನ್ನು ತಿಳಿಸುತ್ತವೆ ಎಂಬುದನ್ನು ನಾವೆಲ್ಲಾ ಅರಿಯಬೇಕಿದೆ.

[ಮೂರ್ತಿ ಪೂಜೆ ಬೇಕೋ ಬೇಡವೋ ಎಂಬುದು ಹಲವರ ಪ್ರಶ್ನೆ. ಆಗಾಗ ಇದು ಅಲ್ಲಲ್ಲಿ ಕೇಳಿಬರುತ್ತಲೇ ಇರುತ್ತದೆ. ಮೂರ್ತಿ ಪೂಜೆಯ ವಿಚಾರದಲ್ಲಿ ಶಂಕರರು ಖಡಾಖಂಡಿತವಾಗಿ ತಮ್ಮ ನಿರ್ಧಾರ ಪ್ರಕಟಿಸಿರುವುದನ್ನು ಈಗಲೇ ಹೇಳಿಬಿಡುತ್ತೇನೆ: ಜನಸಾಮಾನ್ಯರಾಗಿ ಪ್ರಾಪಂಚಿಕ ವ್ಯವಹಾರ ನಿರತ ನಮ್ಮಂಥವರಿಗೆ ಮನಸ್ಸಿಗೆ ಏಕಾಗ್ರತೆ ಬರುವುದು ಸುಲಭವಲ್ಲ. ಏಕಾಗ್ರತೆ ಎಂದರೆ ಕೇವಲ ತಾದಾತ್ಮ್ಯತೆಯಲ್ಲ. ಒಬ್ಬ ಓದುವಾಗ ಓದುವ ವಿಷಯಕ್ಕಷ್ಟೇ ಮನಸ್ಸನ್ನು ಸೀಮಿತಗೊಳಿಸಬಹುದು-ಅದು ಬೇರೇ ಪ್ರಶ್ನೆ. ಇಹವನ್ನು ಸಂಪೂರ್ಣ ಮರೆತು, ಭವದ ರಾಗದ್ವೇಷಗಳನ್ನು ಮರೆತು ಸಮಾಧಿಸ್ಥಿತಿಯನ್ನು ಸಾಧಿಸುವುದು ಸಾಮಾನ್ಯರಿಗೆ ಸಿದ್ಧಿಸುವುದಿಲ್ಲ. ಅಷ್ಟಾಂಗಯೋಗ ನಿರತರಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವುಗಳನ್ನು ನಡೆಸುತ್ತಾ ಇರುವಾಗ ನಿದಿಧ್ಯಾಸನ ಕ್ರಿಯೆ ನಡೆಸುತ್ತಾ ಸಮಾಧಿ ತಲ್ಪುವುದು ಲಕ್ಷದಲ್ಲಿ ಕೇವಲ ಬೆರಳೆಣಿಕೆಯ ಮಂದಿಗೆ ಮಾತ್ರ ಸಾಧ್ಯ! ಅಂಥವರಿಗೂ ಸಮಾಧಿ ಸ್ಥಿತಿಯಿಂದ ಅವರು ವಿಮುಖರಾದಾಗ ಮತ್ತೆ ಲೌಕಿಕದ ವ್ಯಾಪಾರ ಅಂಟಿಕೊಳ್ಳುತ್ತದೆ. ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ-ಮತ್ತೆ ಸಮಾಧಿ-ಮತ್ತೆ ಲೌಕಿಕ ಜೀವನ ಈ ಚಕ್ರ ನಿರಂತರ ನಡೆದು ತುರ್ಯಾವಸ್ಥೆಗೆ ತಲುಪುವವರೆಗೆ ಅಮೂರ್ತ ಪರಮಾತ್ಮನ ಮೂರ್ತರೂಪಗಳನ್ನು ಕಾಣುತ್ತಲೇ ಇರಬೇಕಾಗುತ್ತದೆ. ಯಾವಾಗ ವ್ಯಕ್ತಿ ಐಹಿಕ ಬಂಧನವನ್ನು ಯಾವ ಮೋಹವೂ ಇಲ್ಲದೇ ಕಿತ್ತೆಸೆದು ಪಾರಮಾರ್ಥಿಕ ಆನಂದಾನುಭೂತಿಯನ್ನು ಪಡೆಯಲು ಅರ್ಹನಾಗುತ್ತಾನೋ ಆ ಹಂತದವರೆಗೂ ಮೂರ್ತಿ ಪೂಜೆ ಅನಿವಾರ್ಯ. ಅದೊಂದು ಸ್ಲ್ಯಾಬ್ ಇದ್ದ ಹಾಗೇ. ಅಲ್ಲಿಂದಾಚೆ ಆ ವ್ಯಕ್ತಿ ಮೂರ್ತಿಗಳನ್ನು ಪೂಜಿಸುವ ಬದಲು ಭಗವಂತನನ್ನು ಅಮೂರ್ತರೂಪದಲ್ಲೇ ಕಾಣುತ್ತಾನೆ.

ವ್ಯಕ್ತಿ ಆ ಹಂತಕ್ಕೆ ತಲುಪಿದ್ದಾನೆ ಎಂದು ಗುರ್ತಿಸುವುದು ಹೇಗೆ ಎಂದರೆ-- ಮಹಾತ್ಮರು ಎಂದು ಸುತ್ತ ಇರುವ ಹಲವರು ಸಹಜ ಅನುಭವದಿಂದ ಅದನ್ನು ಒಪ್ಪುತ್ತಾರೆ. ಸಾಧನೆ ಮಾಡಿದ ವ್ಯಕ್ತಿಯ ಯೋಜನೆಗಳು, ಯೋಚನೆಗಳು ಕೇವಲ ಸಂಕಲ್ಪಮಾತ್ರದಿಂದಲೇ ಘಟಿಸುತ್ತವೆ! ಯಾವ ವಿಜ್ಞಾನಕ್ಕೂ ನಿಲುಕದ ಅಘಟಿತ ಘಟನಾ ವಿಷಾರದನಾಗುವ ವ್ಯಕ್ತಿ ಸುತ್ತಲೂ ಇರುವ ಜನರ ಲೌಕಿಕವಾದ ತಾಪತ್ರಯಗಳೆನಿಸಿದ ಅದಿದೈವಿಕ-ಅದಿಭೌತಿಕ-ಆಧ್ಯಾತ್ಮಿಕ ಆದಿ-ವ್ಯಾಧಿಗಳನ್ನು ತನ್ನ ತಪೋಬಲದಿಂದ ನಿವಾರಿಸಬಲ್ಲ ಶಕ್ತಿಯನ್ನು ಪಡೆಯುತ್ತಾನೆ. ಇನ್ನೊಬ್ಬರ ಪೂರ್ವಕುಕೃತ ಸಂಚಿತ ಫಲಗಳಿಂದುಟಾದ ರೋಗಗಳನ್ನೂ ಬವಣೆಗಳನ್ನೂ ಪರಿಹರಿಸುವ ತಾಕತ್ತನ್ನು ಪಡೆದ ವ್ಯಕ್ತಿ ಪಾರಮಾರ್ಥಿಕ ಸಾಧನೆಯ ಆ ಮಟ್ಟಕ್ಕೆ ಏರಿದ್ದಾನೆ-ದೈವತ್ವವನ್ನು ಪಡೆದಿದ್ದಾನೆ, ಅಮೂರ್ತದಲ್ಲಿ ಆನಂದಲೋಕದಲ್ಲಿ ವಿಹರಿಸುವ ಅಲೌಕಿಕ ಅತಿಮಾನುಷ ಶಕ್ತಿಯನ್ನು ಗಳಿಸಿದ್ದಾನೆ, ಆತ್ಮ-ಪರಮಾತ್ಮನಲ್ಲಿ ವಿಲೀನಗೊಳ್ಳುವ ಕ್ರಿಯೆಗೆ ಸಜ್ಜಾಗಿದೆ ಎಂಬುದು ತಿಳಿಯಬೇಕಾದ ಅಂಶ. ಅಲ್ಲಿಯವರೆಗೂ ಬರಿದೇ ಮೂರ್ತಿ ಪೂಜೆ-ಯಜ್ಞ-ಯಾಗ ಇವೆಲ್ಲಾ ಬೇಡಾ ತಾನು ಆ ಹಂತವನ್ನು ಬಿಟ್ಟು ಮೇಲೇರಿಬಿಟ್ಟಿದ್ದೇನೆ, ಅದೆಲ್ಲಾ ನರ್ಸರಿ-ಪ್ರೈಮರಿ ಹುಡುಗರ ಹಂತ ಎಂಬುದು ಮತ್ತದೇ ಅಜ್ಞಾನವಾಗುತ್ತದೆ! ಉದಾಹರಣೆಯಾಗಿ ಇತ್ತೀಚಿನವರೆಗೂ ಇದ್ದ ಸನ್ಯಾಸಿಗಳಲ್ಲಿ ಭಗವಾನ್ ಶ್ರೀಧರರು ಸಂಪೂರ್ಣ ಮೋಕ್ಷಶ್ರೀಯನ್ನು ಧರಿಸಿದ್ದರು-ಲೋಕದ ಹಲವರ ಸಂಕಷ್ಟಗಳನ್ನು ಯಾವುದೇ ಪವಾಡ ಮಾಡದೇ ಆದರೆ ಪವಾಡ ನಡೆದ ರೀತಿಯಲ್ಲೇ ಬಗೆಹರಿಸಿದ್ದಾರೆ. ಅದೇ ಹಂತವನ್ನು ರಮಣಮಹರ್ಷಿಗಳೂ ತಲ್ಪಿದ್ದರು, ಶಿರಡೀ ಸಾಯಿಬಾಬಾ ಕೂಡ. ಅವರೆಲ್ಲಾ ಮೂರ್ತಿಪೂಜೆಯನ್ನು ನಿಷೇಧಿಸಲಿಲ್ಲ, ಬದಲಾಗಿ ಅವರೂ ಅನೇಕ ವಿಗ್ರಹಗಳಲ್ಲಿ ದೇವರನ್ನು ಕಂಡರು. ವಿಗ್ರಹವೇ ದೇವರಲ್ಲಾ ವಿಗ್ರಹದ ಆವಾಸಿ ದೇವರೆಂಬುದು ಸತ್ಯ. ಆದರೆ ಅಮೂರ್ತರೂಪ ಮೂರ್ತರೂಪದಲ್ಲಿ ತನ್ನನ್ನು ಲೋಕಕ್ಕೆ ತೋರಗೊಡುವಾಗ ಅದೆಲ್ಲಾ ಸುಳ್ಳು ಎಂಬ ವಿತಂಡ ವಾದವನ್ನು ನಾನು ಒಪ್ಪುವುದಿಲ್ಲ. ಶಂಕರರ ತತ್ವಗಳು ಸರಿಯಾಗೇ ಇವೆ. ಆಧುನಿಕ ವಿಜ್ಞಾನದಲ್ಲಿ ಉನ್ನತ ಮಟ್ಟದ ಪರಮಾಣು ವಿಭಜನೆಯ ಕಾಲದಲ್ಲಿ ಅದ್ವೈತ ಸತ್ಯವನ್ನು ಅನುಭವಿಸಿದುದಾಗಿ ವಿಶಿಷ್ಟಾದ್ವೈತ ಸಂಪ್ರದಾಯದವರಾಗಿದ್ದ ವಿಜ್ಞಾನಿ ಡಾ|ರಾಜಾರಾಮಣ್ಣ ಹೇಳಿದ್ದಾರೆ-ತಮ್ಮ 'YEARS OF PILGRIMAGE' ಎಂಬ ಅತ್ಮಚರಿತ್ರೆಯಲ್ಲಿ ! ಮೊಲಕ್ಕೆ ಮೂರೇ ಕಾಲು ಎಂಬುದು ಎಷ್ಟು ಹಾಸ್ಯಾಸ್ಪದವೋ ’ಕಾಣಲಾಗದವರ’ ಪಾಲಿಗೆ ಮೊಲಕ್ಕೇ ಮೂರೇ ಕಾಲು ಎಂಬುದೂ ಅಷ್ಟೇ ಸತ್ಯ-ಅದು ಅವರ ತಪ್ಪಲ್ಲ , ಅವರ ಬೌದ್ಧಿಕ ಸಾಧನೆಯ ಮಟ್ಟ ಅಷ್ಟೇ! ]

ಲೋಕದ ನೋವನು ಮಡಿಲಲಿ ಧರಿಸುತ
ನಾಕವ ಕರುಣಿಸೆ ತಾ ಮುನ್ನಡೆದ |
ಆ ಕರುಣಿಯ ವಯ ಅಲ್ಪವು ಎನಿಸಲು
ಸಾಕು ಎಂದನವ ಈ ಲೌಕಿಕಕೆ ||

ಏಕವನೇಕವು ಮೂರ್ತವಮೂರ್ತವು
ಪಾಕದೊಳಾಮನ ಸಿದ್ಧಿಯಪಡೆದು |
ಚಾಕರಿ ಧರ್ಮದ ಪುನರುಜ್ಜೀವನ
ಏಕಾಂಗಿಯು ತೆರಳಿದ ಸಾಧನೆಗೆ ||

ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್‍ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ |
ಮಾಯಾವೀವ ವಿಜೃಂಭಿಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


.........ಮುಂದುವರಿಯುತ್ತದೆ

Friday, February 10, 2012

ಬಡೇ ಅಚ್ಛೇ ಲಗ್ತೇ ಹೈಂ ಯೇ ಧರತೀ ಯೇ ನದಿಯಾಂ ಯೇ ರೈನಾ ಔರ್ ತುಮ್ .........

ಬಡೇ ಅಚ್ಛೇ ಲಗ್ತೇ ಹೈಂ
ಯೇ ಧರತೀ.. ಯೇ ನದಿಯಾಂ.. ಯೇ ರೈನಾ.. ಔರ್ ತುಮ್ .........

ಮಾನವ ಜೀವನದ ಮಜಲುಗಳಲ್ಲಿ ನೋವು-ನಲಿವು, ಸುಖ-ದುಃಖ, ಅಳು-ನಗು ಇವೆಲ್ಲಾ ಇದ್ದಿದ್ದೇ. ಅದೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಲೌಕಿಕ ವ್ಯಮೋಹ ಹೇಗೆ ನಮ್ಮನ್ನು ಬಂಧಿಸುತ್ತದೆ ಎಂದು ಯೋಚಿಸುವಾಗ ಸಾಮಾನ್ಯದವರು ಈ ಮೋಹಪಾಶದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಬಿಟ್ಟುಬಿಡೋಣ ಎಂದುಕೊಂಡರೂ ಬಿಡಲಾರದ ಗಟ್ಟಿಯ ಬೆಸುಗೆ ಈ ಜೀವನ. ಎಷ್ಟೇ ನೋವಿನ ಎಳೆಗಳಿದ್ದರೂ ಮರುಭೂಮಿಯಲ್ಲಿ ಸಿಗಬಹುದಾದ ಒಂದೆರಡು ಓಯಸೀಸ್ ಗಳಂತೇ ಸಿಗುವ ಪ್ರೀತಿಗಾಗಿ ಹಗಲಿರುಳೂ ನೆನೆಸುತ್ತೇವೆ. ಆ ಪ್ರೀತಿ ಸದಾ ಸಿಗಲೆಂದು ಅಪೇಕ್ಷಿಸುತ್ತೇವೆ; ನಿರೀಕ್ಷಿಸುತ್ತೇವೆ. ಸಿಗುತ್ತದೋ ಬಿಡುತ್ತದೋ ಒಟ್ಟಿನಲ್ಲಿ ಅದರಿಂದ ಸಿಗುವ ತೃಪ್ತಿಯನ್ನು ಕಳೆದುಕೊಳ್ಳಲು ನಾವು ಸಿದ್ಧರಿಲ್ಲ. ಅದೊಂಥರಾ ಬೆಳಗಿನ ಜಾವದ ಸಕ್ಕರೆ ನಿದ್ದೆಯಂತೇ. ಬೆಳಗಿನ ಜಾವ ಸಿಗುವುದು ಸಕ್ಕರೆ ಸವಿಯ ನಿದ್ದೆಯೇನೋ ಸರಿ, ಆ ನಿದ್ದೆ ಆಲಸ್ಯಕ್ಕೆ ಕಾರಣವಾಗುತ್ತದೆ ಎಂಬುದು ಆಯುರ್ವೇದ ತಿಳಿಸುವ ಸತ್ಯ. ಆದರೂ ಅದನ್ನೂ ನಾವು ಆದಷ್ಟೂ ತಪ್ಪಿಸಿಕೊಳ್ಳುವುದಿಲ್ಲ. ಯಾರೋ ಹೇಳಿದ್ದರು "ಮೊಬೈಲ್ ನಲ್ಲಿ ಅಲಾರ್ಮ ಸೆಟ್ ಮಾಡಿದ್ದೇನೆ. ಎಲ್ಲರೂ ಬೆಳಿಗ್ಗೆ ೫ ಗಂಟೆಗೇ ಎದ್ಬಿಡಿ..........[ನಿಧಾನವಾಗಿ ಹೇಳ್ತಾರೆ] ಆದರೆ ನನ್ನನ್ನು ಹೊರತುಪಡಿಸಿ !" ಚಳಿಗಾಲದ ಬೆಳಗಿನ ಚಳಿಯಲ್ಲಿ ಶಾಲು ಹೊದೆದು ಬಿಸಿ ಬಿಸಿ ಕಾಫಿ ಕುಡಿಯುವುದೂ ಒಂಥರಾ ಖುಷಿ; ಅದರಲ್ಲೇನೋ ಅಗೋಚರ ಮಜಾ! ಶುಚಿಯ ಕೊರತೆ ಇರುವ ಬೀದಿ ಬದಿಯ ತಿಂಡಿಗಳನ್ನು ಅಲ್ಲಲ್ಲೇ ತಿನುವುದೂ ಇನ್ನೊಂಥರಾ ಮಜಾ! ಹೀಗೇ ಗೊತ್ತಿದ್ದೂ ಬಿಡಲಾಗದ ಸಂಗತಿಗಳು ಇದ್ದೇ ಇವೆ. ಜೀವನವೆಂಬ ಹರಿಯುವ ನದಿಯಲ್ಲಿ ಸಿಗುವ ಚಿಕ್ಕಪುಟ್ಟ ನೆನಪಿನ ನಡುಗಡ್ಡೆಗಳನ್ನು ತೋರಿಸುವ ಇರಾದೆಯಿಂದ ಬರೆಯಲು ಮನ ಮಾಡಿದ್ದೇನೆ.

ಪಾಕಿಸ್ತಾನದ ಭೂಟ್ಟೋ ಗತಿಸಿ ಬಹಳ ವರ್ಷಗಳೇ ಕಳೆದವು. ಅವರ ಬಗ್ಗೆ ಅಲ್ಲಲ್ಲಿ ಓದುವಾಗ ಅವರ ಅಂತ್ಯದ ಒಂದೆರಡು ದಿನಗಳನ್ನು ಓದಿ ಬಹಳ ಬೇಸರವಾಗಿತ್ತು. ಇನ್ನೇನು ನಾಳೆ ಬೆಳಗಾದರೆ ಗಲ್ಲಿಗೇರಿಸುತ್ತಾರೆ ಎಂಬ ಹಂತದಲ್ಲಿ ಮಗಳು ಬೆನಜೀರ್ ಜೈಲಿಗೆ ಬರುತ್ತಾಳೆ. ಅದು ಆ ಅಪ್ಪ-ಮಗಳ ಕೊನೆಯ ಭೇಟಿ. ಅದು ಅವಳಿಗೂ ಗೊತ್ತು, ಆ ಅಪ್ಪನಿಗೂ ಗೊತ್ತು. ಆದರೂ ಎಲ್ಲೋ ದೇವರು ತನ್ನಪ್ಪನನ್ನು ಸಾವಿನ ದವಡೆಯಿಂದ ತಪ್ಪಿಸಬಹುದು ಎಂಬುದು ಅವಳ ಅನಿಸಿಕೆಯಾಗಿತ್ತು. ಆದರೂ ಅಪ್ಪ ಬಹುವಾಗಿ ಇಷ್ಟಪಡುತ್ತಿದ್ದ ಸಿಗರೇಟ್ ಹಿಡಿದು ಅದನ್ನು ಕೊಟ್ಟು ಮಾತನಾಡಿಸಿಕೊಂಡು ಹೋಗಲು ಬಂದಿದ್ದಳು. ಜೈಲರ್ ಅನುಮಾನಿಸುತ್ತಲೇ ಆಕೆಯ ತಂದೆಯನ್ನು ಇರಿಸಿರುವ ಕೋಣೆಯಿರುವ ವಾರ್ಡ್ ಗೆ ಬಿಟ್ಟಿದ್ದಾನೆ. ಆಕೆ ನಿಧಾನವಾಗಿ ಅಳುತಡೆದುಕೊಂಡು ಹೆಜ್ಜೆ ಹಾಕುತ್ತಾ ಅಪ್ಪನಿದ್ದ ಕೋಣೆಯೆಡೆಗೆ ಬರುತ್ತಾಳೆ. ಅಪ್ಪ ಕೋಣೆಯಲ್ಲಿ ಸರಳುಗಳ ಹಿಂದೆ ಅದೆಲ್ಲೋ ಮೂಲೆಯಲ್ಲಿ ಕೂತಿದ್ದವ ಎದ್ದುಬರುತ್ತಾನೆ. ಅಪ್ಪ-ಮಗಳು ಮತ್ತು ಮೌನರೋದನ. ಇಬ್ಬರ ಕಣ್ಣುಗಳಿಂದಲೂ ಧಾರಾಕಾರವಾಗಿ ನೀರು ಹರಿಯುತ್ತದೆ. "ಅಪ್ಪ ಹೇಗಿದ್ದೀಯಪ್ಪಾ?" ಮಗಳ ಪ್ರಶ್ನೆಗೆ ಉತ್ತರಿಸುವ ಮನೋಸ್ಥಿತಿಯಲ್ಲಿ ಭುಟ್ಟೋ ಇರಲಿಲ್ಲ. ಆದರೂ ಮಾತನಾಡಲೇಬೇಕು. ಇಬ್ಬರೂ ತುಸುಹೊತ್ತು ಮಾತನಾಡಿದ್ದಾರೆ. ಆಕೆಯನ್ನು ಕೋಣೆಯೊಳಗಡೆ ಬಿಡಲಿಲ್ಲ. ಬಾಗಿಲ ಕಂಬಿಗಳ[ಸರಳುಗಳ]ಮೇಲೆ ಅಪ್ಪ ಇಟ್ಟ ಕೈಗಳನ್ನು ಪ್ರೀತಿಯಿಂದ ಮಗಳು ಸ್ಪರ್ಶಿಸುತ್ತಾಳೆ. ಆ ದಿವ್ಯ ಸ್ಪರ್ಶ ಇಬ್ಬರಿಗೂ ಅದೇನೋ ಕಾಣದ ತೃಪ್ತಿಯನ್ನು ನೀಡುತ್ತದೆ! ಅಗಲಿರಲಾರದ ಅಪ್ಪ-ಬಿಟ್ಟಿರಲಾರದ ಮಗಳು ಈ ಮೂರ್ತರೂಪಗಳ ಮುಂದೆ ಅಮೂರ್ತವಾಗಿ ನಿಂತು ಕೊಂಡೊಯ್ಯುವ ವಿಧಿ ಅಟ್ಟಹಾಸ ಮಾಡುತ್ತಿರುವಂತೇ ಭಾಸ! ತಾನು ತಂದಿದ್ದ ಸಿಗರೇಟಿನ ಪೊಟ್ಟಣವನ್ನು ಅಪ್ಪನಿಗೆ ನೀಡುತ್ತಾಳೆ ಮಗಳು. ಉಕ್ಕೇರಿಬರುವ ಭಾವದ ಅಲೆಗಳನ್ನು ತಡೆಯಲಾರದೇ ಇಬ್ಬರೂ ಗೋಳಿಡುತ್ತಾರೆ. ಆಯ್ತು ಅದೇ ಕೊನೆ.....ನಾಳೆಯಾದರೆ ಆ ಅಪ್ಪ ಇನ್ನೆಲ್ಲೂ ಸಿಗುವುದಿಲ್ಲ..ಆ ಅಪ್ಪನಿಗೆ ಮಗಳು ಮತ್ತೆ ಸಿಗುವುದಿಲ್ಲ. ಹೋಗುವ ಮುನ್ನ ಆ ರಾತ್ರಿ ಪೂರ್ತಿ ಆ ಇಬ್ಬರ ಮನದಲ್ಲಿ ಅದೆಷ್ಟು ನೋವಿತ್ತು, ಆಕ್ರಂದನವಿತ್ತು ? ಲೆಕ್ಕಹಾಕಲು ಅಸಾಧ್ಯವಾದ ಆದರೂ ಗ್ರಹಿಸಿಕೊಳ್ಳಬಹುದಾದ ಅಮೂಲ್ಯ ಸಂಬಂಧದ ಮೌಲ್ಯ ಇದು.

ಇಹ ಜೀವನದಲ್ಲಿ ಒಂದೊಂದೂ ಭಾವಗಳು ಭಿನ್ನ ಭಿನ್ನ. ಭಾವಗಳನ್ನು ತಹಬಂದಿಗೆ ತರುವುದು ನಿಜವಾಗಿಯೂ ಪ್ರಯಾಸದ ಕೆಲಸ. ಹುಡುಗ-ಹುಡುಗಿ ಹದಿಹರೆಯದಲ್ಲಿ ಪರಸ್ಪರರ ಸೌಂದರ್ಯಕ್ಕೆ ಮರುಳಾಗುತ್ತಾರೆ. ಸಿನಿಮಾಗಳಲ್ಲಿ ಕಾಣುವ ನಾಯಕ-ನಾಯಕಿರಲ್ಲಿ ತಮ್ಮನ್ನು ಕಲ್ಪಿಸಿಕೊಂಡು ಯಾವುದೋ ಪ್ರೇಮಕಥೆಯ ಸಿನಿಮಾದಂತೇ ವರ್ತಿಸುತ್ತಾರೆ. ಅಸಲಿಗೆ ಅಲ್ಲಿರುವುದು ದೈಹಿಕ ವ್ಯಾಮೋಹ. ಹುಡುಗನೋ ಹುಡುಗಿಯೋ ಯಾವುದೋ ತೊಂದರೆಯಲ್ಲಿ ಸಿಲುಕಿದರೆ, ಅಪಘಾತದಿಂದ ವಿರೂಪಗೊಂಡರೆ ಆಗ ಪರಸ್ಪರರ ಪ್ರೀತಿ ಅಳಿದುಹೋಗುತ್ತದೆ! ಇಲ್ಲಿ ಪ್ರೀತಿ ಎಂಬುದು ಬಹುತೇಕ ಈರುಳ್ಳಿಯ ಮೇಲ್ಕವಚದ ಒಳಗಿನ ತೆಳು ಪಾರದರ್ಶಕ ಸಿಪ್ಪೇಯಂತೇ ಅಷ್ಟೇ ಇರುತ್ತದೆ! ಪ್ರೇಮಕ್ಕಿಂತ ಪರಸ್ಪರರನ್ನು ಪಡೆದುಕೊಳ್ಳುವ ಕಾಮದ ತೆವಲು ಈ ಪ್ರೇಮವೆಂಬ ಸಿಪ್ಪೆಯಲ್ಲಿ ಮುಚ್ಚಿರುತ್ತದೆ. ಎಷ್ಟೋ ಸರ್ತಿ ಅವರಿನ್ನೂ ಓದು ಮಗಿಸುವ ಮುನ್ನವೇ ಅಪ್ಪ-ಅಮ್ಮನ ಕಣ್ತಪ್ಪಿಸಿ ಸುತ್ತಲು ತೊಡಗುತ್ತಾರೆ. ಹಾಗಂತ ಇಬ್ಬರಿಗೂ ಅಪ್ಪ-ಅಮ್ಮಂದಿರ ಪ್ರೀತಿ ಬೇಕು, ಆದರೂ ತಮಗೆ ಬೇಕಾದ ಅದೇನೋ ಈ ಹೊಸ ಪ್ರೀತಿಯಲ್ಲಿ ಅಪ್ಪ-ಅಮ್ಮಂದಿರಿಗೆ ತಾವು ಮಾಡುತ್ತಿರುವುದು ಮೋಸ ಎನಿಸಿದರೂ ಅದು ಗೌಣವಾಗುತ್ತದೆ; ಈ ಪ್ರೀತಿಯೇ ಹೆಚ್ಚೆನಿಸುತ್ತದೆ. ಆಯ್ತು ಅಂತೂ ಹೇಳಿದರೆ ಮದುವೆಗೆ ಭಂಗ ಎಂದು ಓಡಿಹೋಗಿ ಮತ್ತೆಲ್ಲೋ ಮದುವೆಯಾಗಿ ಮುಂದೆ ಜೀವನಕ್ಕೆ ಆಧಾರವೇ ಇಲ್ಲದಾದಾಗಲೋ ಅಥವಾ ಪರಸ್ಪರರ ಕೊಡು-ಕೊಳ್ಳುವಿಕೆ ಬೇಸರಬಂದಮೇಲೋ ಅಥವಾ ಇಬ್ಬರಲ್ಲಿನ ವಿಶ್ವಾಸ ಕಮ್ಮಿಯಾದಾಗಲೋ ಮತ್ತೆ ಮನಗೆ ಮರಳುತ್ತಾರೆ. ಅಪ್ಪ-ಅಮ್ಮನಿಗೆ ಓಡಿಹೋದಗಲೂ ಗೋಳು, ಮತ್ತೆ ಬಂದಾಗಲೂ ಗೋಳು. ಆದರೂ ಮಕ್ಕಳನ್ನು ಬಿಡುವ ಮನಸ್ಸು ಅವರದಲ್ಲ! ಇದು ಗೊತ್ತಿದ್ದೂ ನಡೆದೇ ಇರುವ ಕಾಲೇಜು ಪ್ರೇಮ ಕಥೆ.

ಒಮ್ಮೆ ಚಿಕ್ಕವನಿದ್ದಾಗ ನಾನು ನಮ್ಮ ಹಳ್ಳಿಯಲ್ಲಿ ದೂರದ ಬೆಟ್ಟಕ್ಕೆ ಹೋಗಿದ್ದೆ. ಬೇಸಿಗೆಯ ದಿನವಾದ್ದರಿಂದ ಮಳೆಬರುವ ಲಕ್ಷಣವೇನೂ ಇರಲಿಲ್ಲ. ಸಂಜೆ ಸುಮಾರು ೫ ಗಂಟೆ. ಬೆಟ್ಟವಿಳಿದು ಬರುವಾಗ ಜೋರಾಗಿ ಮಳೆ ಶುರುವಾಗಿಬಿಡ್ತು. ಬೆಟ್ಟದ ತಪ್ಪಲಿನಲ್ಲಿ ಮೊದಲು ಸಿಗುವುದು ಹರಿಜನರ ಮನೆಗಳು. ಅಲ್ಲಿನ ಕಾಲು ದಾರಿಯಲ್ಲಿ ಮರವೊಂದರ ಕೆಳಗೆ ನಿಂತಿದ್ದೆ. ದೂರದಲ್ಲಿ ಚಿಕ್ಕ ಗುಡಿಸಲು ಕಾಣುತ್ತಿತ್ತು. ಅವರೆಲ್ಲಾ ನಮ್ಮ ಪರಿಚಯದವರೇ. ಹಾಗಂತ ನಾನು ಮಳೆಯೆಂದು ಅವರ ಗುಡಿಸಲೊಳಗೆ ನುಗ್ಗಿ ನಿಲ್ಲಲು ಅಲ್ಲಿರುವ ಜಾಗವೇ ಚಿಕ್ಕದು...ಪಾಪ. ಅಲ್ಲಿನ ಗಂಡ-ಹೆಂಡತಿ ಅವರ ಇಬ್ಬರು ಮೂವರು ಮಕ್ಕಳು, ಪಾತ್ರೆ-ಪಗಡೆ, ಸಾಮಾನು. ಇನ್ನೆಲ್ಲಿರಬೇಕು ಜಾಗ? ಒಂದೆರಡು ನಿಮಿಷಗಳು ನಿಂತೇ ಇದ್ದಿದ್ದನ್ನು ಅವರಲ್ಲಿ ಯಾರೋ ನೋಡುತ್ತಿರಬೇಕು. ಅವರಿಗೆ ನನ್ನ ಗುರ್ತು ಸಿಕ್ಕಿದೆ. ಆದರೂ ಭಟ್ಟರ ಮನೆ ಹುಡುಗ ತಾವು ಕೊಡುವ ಕೊಡೆಯನ್ನು ಬಳಸಬಹುದೇ ಎಂಬ ತೋರಿಸಿಕೊಳ್ಳಲಾಗದ ಭಯ. ಆಗಿನ್ನೂ ನಮ್ಮಲ್ಲಿ ತಾಳಿಮಡ್ಲಿನ[ತಾಳೆಗರಿಯ] ಛತ್ರಿ ಮರೆಯಾಗಿ ಉದ್ದಕಾವಿನ ಕೊಡೆಗಳು ಬಂದಿದ್ದವು. ಅಂತೂ ಕೀಳರಿಮೆಯಿಂದಲೇ ಒಂದು ಛತ್ರಿಯನ್ನು ಹಿಡಿದು ಓಡಿ ಬಂದು ಕೊಟ್ಟರು. ನಾನು ಕೊಡೆಯನ್ನು ಬಿಡಿಸಿಕೊಂಡು ನಿಂತಿದ್ದನ್ನು ನೋಡಿ ಸಂತಸಪಟ್ಟರು. ನಾನು ಮಳೆಯಲ್ಲಿ ನೆನೆಯುತ್ತಾ ನಿಂತಾಗಿನ ಅವರ ಮನದ ಮೂಕ ಯಾತನೆ ಮತ್ತು ನಾನು ಕೊಡೆಬಿಡಿಸಿ ನಿಂತಾಗ ಆದ ಸಂತೋಷದ ಪುಳಕಿತ ಭಾವನೆ ಈ ಎರಡನ್ನೂ ಅಳೆಯಲು ಸಾಧ್ಯವೇ? ಮಳೆನಿಂತಮೇಲೆ ಕೃತಜ್ಞತೆಯೊಂದಿಗೆ ಛತ್ರಿ ಮರಳಿಸಿದೆ. ಈ ಹಿಂದೆ ಕೂಡ ಒಮ್ಮೆ ಇದನ್ನು ಬರೆದಿದ್ದೆ. ಈಗಲೂ ಅವರ ಆ ಮೃದುಮಧುರ ಬಾಂಧವ್ಯದ ನೆನಪು ಬಂತು .. ನಿಮ್ಮಲ್ಲಿ ಹೇಳಿಕೊಂಡೆ.


ನಾನು ಮತ್ತು ಹಿರಿಯ ಸ್ನೇಹಿತರಾದ ಶಿವಗುರು ಒಮ್ಮೆ ಮೊನ್ನೆ ಗತಿಸಿದ ಸಿ.ವಿ.ಎಲ್ ಶಾಸ್ತ್ರಿಗಳ ಭೇಟಿಗೆ ಹೋಗಬೇಕೆಂದುಕೊಂಡೆವು. ಎಲ್ಲೋ ಒಂದೆರಡು ಸಮಾರಂಭಗಳಲ್ಲಿ ಅವರನ್ನು ಕಂಡಿದ್ದೆ. ಇನ್ಯಾವುದೋ ಹಬ್ಬದ ಸಮಾರಂಭವೊಂದರಲ್ಲಿ ನಾವೆಲ್ಲಾ ಸೇರಿದ್ದರೂ ಶಾಸ್ತ್ರಿಗಳು ಬಹಳ ಕಾರ್ಯ ನಿರತರಾಗಿ ಮಾತನಾಡಲು ಆಗಿರಲಿಲ್ಲ. ಶಾಸ್ತ್ರಿಗಳ ಕಚೇರಿಯಲ್ಲಿ ಅವರನ್ನು ಭೇಟಿಯಾಗಲು ಸಮಯವನ್ನು ನಿಗದಿ ಪಡಿಸಿಕೊಂಡು ಗೊತ್ತಾದ ಆ ದಿನ ಗಾಂಧಿನಗರದ ಅವರ ಕಚೇರಿಯಲ್ಲಿ ಕೂತಿದ್ದೆವು. ಹೋಗಿ ಕೆಲವು ನಿಮಿಷಗಳಲ್ಲೇ ಒಬ್ಬಾತ ಬಂದು "ಏನ್ ತಗೋತೀರಿ ಸರ್? ಕಾಫಿ-ಟೀ-ಬಾದಾಮಿಹಾಲು-ಲೆಮನ್ ಟೀ " ಎಂದೆಲ್ಲಾ ಕೇಳಿದ. ನಾವು ಲೆಮನ್ ಟೀ ಕುಡಿದೆವು. ಕೆಲವು ಹೊತ್ತು ಶಾಸ್ತ್ರಿಗಳು ಇರಲಿಲ್ಲ. ಹೊರಗೆಲ್ಲೋ ಕೆಲಸಕ್ಕೆ ಹೋಗಿದ್ದವರು ಆಮೇಲೆ ಬಂದರು. ಬಂದ ತಕ್ಷಣವೇ ನಮ್ಮನ್ನು ಅವರ ಕೊಠಡಿಗೆ ಕರೆದರು. ಮತ್ತೆ ಒತ್ತಾಯಪೂರ್ವಕವಾಗಿ ಟೀ. ಶಾಸ್ತ್ರಿಗಳ ಬಗೆಗೆ ಕೇಳಿದ್ದೆನಾದರೂ ಹತ್ತಿರದ ಒಡನಾಟವಿರಲಿಲ್ಲ. ಅಂದು ಅದು ಆರಂಭವಾಗಿತ್ತು. ರಾಮನಗರ ಮೂಲದ ಶಾಸ್ತ್ರಿಗಳು ಬಾಲ್ಯವನ್ನು ಕಷ್ಟದಲ್ಲೇ ಕಳೆದರು. ಹಾಗಾಗಿ ಅವರಿಗೆ ಬಡತನ-ಶ್ರೀಮಂತಿಕೆಗಳೆರಡರ ಅನುಭವವೂ ಇತ್ತು. ಬಡವರನ್ನು ಕಂಡರೆ ಎಲ್ಲಿಲ್ಲದ ವಾತ್ಸಲ್ಯ. ಅವರಲ್ಲಿ ಜಾತಿ-ಭೇದ ಇರಲಿಲ್ಲ. ಶಾಸ್ತ್ರೀಜಿ ಎಂದರೆ ಸದಾ ಎಲ್ಲರಿಗೂ ಬೇಕು. ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಹಲವು ಕನ್ನಡ ಸಿನಿಮಾಗಳನ್ನು ನಿರ್ಮಿಸಿದ ಅವರು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕೆಲಸಮಾಡಿದ್ದರು. ಹಲವು ಸಂಘ-ಸಂಸ್ಥೆಗಳು ಅವರ ಮಾರ್ಗದರ್ಶನದಲ್ಲೇ ರೂಪುಗೊಂಡಿದ್ದವು. ಗೋಕಾಕ್ ಚಳುವಳಿಗೆ ಕಾರಣೀಭೂತರೇ ಶಾಸ್ತ್ರಿಗಳು!

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರಾಗಿ ಸಂಸ್ಥೆಯ ಏಳಿಗೆಗಾಗಿ ವಿಶಿಷ್ಟವಾದ ಕೆಲಸಗಳನ್ನು ಮಾಡಿದರು. ಅಂಥಾ ಮೇರು ವ್ಯಕ್ತಿಯ ಮೇಜಿನ ಇನ್ನೊಂದು ತುದಿಯಲ್ಲಿ ನಾನು ಮಾತನಾಡುತ್ತಾ ಕೂತಿದ್ದೆ. ಅವರೂ ಕೂಡ ಮಾತನಾಡುತ್ತಾ " ನಮ್ಮ ಕಚೇರಿಗೆ ಯಾರೇ ಎಷ್ಟೇ ಹೊತ್ತಿಗೆ ಬರಲಿ ಒಂದರ್ಧ ಕಾಫಿಯನ್ನಾದರೂ ಕುಡಿದು ಹೋಗಬೇಕೆಂಬುದು ನನ್ನ ಅನಿಸಿಕೆ. ಯಾರೋ ಒಬ್ಬಾತ ಹಳ್ಳಿಯಿಂದ ಕೆಲಸ ಕೇಳಿ ಬಂದ. ಆತನಿಗೆ ಜಾಸ್ತಿ ವಿದ್ಯಾರ್ಹತೆಯೂ ಇರಲಿಲ್ಲ. ಕಾಫಿ-ಟೀ ಮಾಡೋಕೆ ಬರುತ್ತಾ? ಕೇಳಿದೆ. ಬರುತ್ತೆ ಅಂದ. ಅಂದಿನಿಂದ ಅವನಿಗೂ ಒಂದು ಕೆಲಸ, ನಮಗೂ ಬಂದ ಅತಿಥಿಗಳಿಗೆ ಏನೋ ಕೊಟ್ಟ ತೃಪ್ತಿ " ಹೀಗಿತ್ತು ಶಾಸ್ತ್ರಿಗಳ ಮಾತು. ಅವರ ಮನೆ ಮತ್ತು ಕಚೇರಿಗಳಲ್ಲಿ ಹಲವು ಹುಡುಗರು [ಜಾಸ್ತಿ ಕೆಲಸಕೊಡಲಾಗದಿದ್ದರೂ] ಇದ್ದರು. "ದೇವರು ನಮಗೆಲ್ಲೋ ಕೊಡ್ತಾನೆ-ನಾಕು ಮಂದಿ ಬದುಕಿಕೊಳ್ಳಲಿ ಪಾಪ" ಎನ್ನುತ್ತಿದ್ದರು. ಎಂತಹ ಆಂತರ್ಯ ಶಾಸ್ತ್ರಿಗಳದು ! ಆವರ ಆಂತರ್ಯದ ಸಾಮಾಜಿಕ ಕಳಕಳಿಗೆ ಬೆಲೆಕಟ್ಟಲಾದೀತೇ ? ಗತಿಸಿದ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸದಿದ್ದರೆ ಅದು ನಿಜಕ್ಕೂ ನಾನು ಮಾಡುವ ಅಪರಾಧ ಎಂಬ ಪ್ರಜ್ಞೆ ಕಾಡುತ್ತಿತ್ತು.ಅದಕ್ಕೇ ಅದನ್ನೂ ನಿಮ್ಮ ಮುಂದೆ ಹೀಗಿಟ್ಟಿದ್ದೇನೆ.


ನಟ ಕರಿಬಸವಯ್ಯ ಕೀರ್ತನೆ ದಾಸರ ಮಗ. ತಂದೆ ಮಾಡುವ ಹರಿಕೀರ್ತನೆಗಳ ಪ್ರಭಾವದಿಂದಲೋ ಪರಿಣಾಮದಿಂದಲೋ ಅವರ ಮನಸ್ಸು ಮಾತ್ರ ಅವರ ಬಣ್ಣಕ್ಕೆ ತದ್ವಿರುದ್ಧವಾಗಿತ್ತು! ಯಾವ ವರ್ಗವಾದರೇನು ಜಾತಿಯಾದರೇನು ಸ್ವಾಮೀ ನೀತಿಯೆಲ್ಲರಿಗೂ ಒಂದೇ ಅಲ್ಲವೇ? ಅವರ ಆಂತರ್ಯದಲ್ಲಿ ಯಾವ ಕಲ್ಮಶವೂ ಇದ್ದಿದ್ದು ಕಾಣೆ. ಎರಡು ವರ್ಷಗಳ ಕೆಳಗೆ ಮಗಳನ್ನು ಕಳೆದುಕೊಂಡಮೇಲೆ ಸ್ವಲ್ಪದಿನ ಖಿನ್ನರಾಗಿದ್ದರು. ಆದರೂ ತನ್ನ ವೃತ್ತಿಯಲ್ಲಿ ಮುಂದುವರಿಯುತ್ತಾ ಯಾರಲ್ಲೇ ಯಾವುದೇ ಸಹಾಯ ಬಯಸಿ ತೆರಳಿದವರಲ್ಲ. ಅವರ ಆ ಗಂಭೀರ ಹಾಸ್ಯಪಾತ್ರಗಳು ಹಲವು ಕಾಲ ಜನರನ್ನು ರಂಜಿಸಿವೆ ರಂಜಿಸುತ್ತವೆ. ಹಾಸ್ಯನಟನಾಗಿ ಸತ್ತೂ ಬದುಕಿದ ಕೆಲವರಲ್ಲಿ ಕರಿಬಸವಯ್ಯ ಒಬ್ಬರು. ಒಳ್ಳೇತನವೇ ಮೈವೆತ್ತ ಮನುಷ್ಯ. ಕಿರಿಯ ಕಲಾವಿದರನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು ಎಂದು ಕೇಳ್ಪಟ್ಟೆ. ಮಾಡುವ ಪಾತ್ರ ಯಾವುದೇ ಇರಲಿ ಪಾತ್ರವೇ ತಾನಾಗುತ್ತಿದ್ದ ಅಪ್ಪಟ ಕಲಾವಿದ. ಕನಕಪುರದೆಡೆಗೆ ಕೀರ್ತನೆಗೆ ಹೋಗಿದ್ದ ಅವರು ರಾತ್ರಿ ಅಲ್ಲೇ ತಂಗಿದ್ದು ಮಾರನೇ ಬೆಳಿಗ್ಗೆ ಮಡದಿಯನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಗೊತ್ತುವಳಿ ಸಮಯ ಬೇಗ ಇದ್ದಿದ್ದರಿಂದ ಬೆಳಗಿನ ಜಾವವೇ ಎದ್ದು ಹೊರಟಿದ್ದಾರೆ. ದಣಿದ ದೇಹಕ್ಕೆ ಕಾರು ಚಲಾಯಿಸುತ್ತಾ ನಿದ್ದೆಯ ಜೋಂಪು ಹತ್ತಿದೆ. ಕಾರು ೨೦-೨೫ ಅಡಿ ಆಳದ ಗದ್ದೆಯಲ್ಲಿ ೩-೪ ಪಲ್ಟಿಯಾಗಿ ಬಿದ್ದಿತ್ತಂತೆ. ದಾರಿಹೋಕ ಹುಡುಗರು ಗುರ್ತು ಹಿಡಿದು ಅವರನ್ನು ಆಸ್ಪತ್ರೆಗೆ ತಲ್ಪಿಸಿದರು. ಆಮೇಲೆ ವಿಷಯ ಮೆನೆಗೆ ತಿಳಿದು ಇಲ್ಲಿನ ಬಸವೇಶ್ವರ ನಗರದ ಪ್ರಿಸ್ಟೀನ್ ಆಸ್ಪತ್ರೆಗೆ ಸಾಗಿಸಿದರು. ವಿಧಿ ಎರಡು ದಿನ ಬಿಟ್ಟಿತೇ ಹೊರತು ಮೂರನೇ ದಿನ ಕರೆದೊಯ್ದಿತು. ಕುಟುಂಬವನ್ನು ಅಗಲುವ ಘಳಿಗೆ ಹತ್ತಿರ ಬಂದಾಗಿನ ಅವರ ಮನದಲ್ಲಿ ಯಾವ ಭಾವ ಇದ್ದಿರಬಹುದು? ಕಳೆದುಕೊಂಡ ಅವರ ಮಡದಿಗೆ ಯಾವ ನೋವು ಇರಬಹುದು ? ಇದೆಲ್ಲಾ ಮೀಟರ್ ಹಿಡಿದು ಅಳೆಯಲು ಬರುವ ಅಂಶವಲ್ಲ! ಕರಿಬಸವಯ್ಯ ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ.

ಕೊನೆಯದಾಗಿ ಟೈಟಲ್ ಸಾಂಗು ! ಬಡೇ ಅಚ್ಛೇ ಲಗ್ತೇ ಹೈಂ ....! ರಾಮ್ ಕಪೂರ್ ಮತ್ತು ಸಾಕ್ಷಿ ತನ್ವರ್ ನಟಿಸಿರುವ ಈ ಧಾರಾವಾಹಿ ಬಹುತೇಕರಿಗೆ ಆಪ್ಯಾಯಮಾನ. ನಾನು ಯಾವುದೇ ಧಾರಾವಾಹಿ ನೋಡಿ ಅದಕ್ಕೆ ಅಂಟಿಕೊಂಡವನಲ್ಲ. ಆದರೂ ಈ ಧಾರಾವಾಹಿ ಮಾತ್ರ ನನ್ನನ್ನು ಬಿಡಲೇ ಇಲ್ಲ. ರಾತ್ರಿ ಹತ್ತೂವರೆ ಆಯ್ತೆಂದರೆ ಅದನ್ನು ನೋಡುವ ಬಯಕೆ! ಅನುಕೂಲವಂತ ಬ್ಯುಸಿನೆಸ್ ಮನ್ ಆಗಿರುವ ರಾಮ್ ಕಪೂರ್ ೪೦ ರ ವಯಸ್ಸಿಗ. ಮದುವೆಯೇ ಬೇಡ ಎಂದುಕೊಂಡಿದ್ದಾತ. ೩೦ ರ ಆಸುಪಾಸಿನ ಹುಡುಗಿ ಪ್ರಿಯಾಗೆ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಸಂಬಂಧ ಕೂಡಿಬರುತ್ತಿರಲಿಲ್ಲ. ರಾಮ್ ಕಪೂರ್ ಮಲತಂಗಿ ನತಾಶಾ ಪ್ರಿಯಾಳ ತಮ್ಮ ಕಾರ್ತೀಕ್ ನನ್ನು ಪ್ರೀತಿಸುತ್ತಾಳೆ. ಅವರಿಬ್ಬರೂ ಮದುವೆಯಾಗುವುದಾಗಿ ಸುದ್ದಿ ಬಂದಾಗ ರಾಮ್ ಕಪೂರ್ ಮಲತಾಯಿ ಆತ ಪ್ರಿಯಾಳನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಾಳೆ. ಇಬ್ಬರ ಮನೆಗಳಲ್ಲೂ ಒತ್ತಾಯ ಆರಂಭವಾಗಿ ಮನೆಗಳವರ ಇಷ್ಟಕ್ಕೆ ಕಟ್ಟುಬಿದ್ದು ಅಂತೂ ಮದುವೆಗೆ ಒಪ್ಪುತ್ತಾರೆ.

ಅಷ್ಟರಲ್ಲಿ ನತಾಶಾಳ ಮದುವೆ ಜರುಗಿ ಆಕೆ ಮಧ್ಯಮ ವರ್ಗದ ಕುಟುಂಬಕ್ಕೆ ಹೊಂದಿಕೊಳ್ಳಲು ಪ್ರಯಾಸಪಟ್ಟರೂ ಅಲ್ಲಿನ ಜನರ ಪ್ರೇಮ-ವಾತ್ಸಲ್ಯವನ್ನು ಕಂಡು ಹೊಂದಿಕೊಳ್ಳುತ್ತಾಳೆ.ರಾಮ್ ಕಪೂರ್ ಮತ್ತು ಪ್ರಿಯಾ ಇಬ್ಬರ ಸ್ವಭಾವಗಳಲ್ಲೂ ಇಷ್ಟಾನಿಷ್ಟಗಳಲ್ಲೂ ಅವರದ್ದು ಪೂರ್ವ-ಪಶ್ಚಿಮ. ಒತ್ತಾಯಕ್ಕೇ ಮದುವೆಯಾದರೂ ನಿಧಾನವಾಗಿ ಅವರಲ್ಲಿ ಅದೇನೋ ಒಂಥರಾ ಬಿಟ್ಟಿರಲಾರದ ಭಾವ, ಒಳಗೊಳಗೇ ಎದ್ದ ಅನನ್ಯತೆಯ ಅನುಭವ! ಮಧುಚಂದ್ರಕ್ಕೆಂದು ಆಷ್ಟ್ರೇಲಿಯಾಕ್ಕೆ ತೆರಳಿದಾಗ ಅವರಿಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ! ಅಲ್ಲಿಯವರೆಗೂ ನೋವು-ನಲಿವು, ನಗು-ಅಳುಗಳನ್ನು ಹಂಚಿಕೊಂಡಿದ್ದರೂ ಪರಸ್ಪರ ಅಷ್ಟೊಂದು ಪ್ರೇಮ ಬಂಧನದಲ್ಲಿ ಕಟ್ಟುಬಿದ್ದಿರಲಿಲ್ಲ.

ಅಪೇಕ್ಷಾ ಮತ್ತು ಕೃಷ್ಣಾ ಎಂಬಿಬ್ಬರು ಅಪರಿಚಿತ ಮಹಿಳೆಯರ ಮಧ್ಯ ಪ್ರವೇಶದಿಂದ ಪ್ರಿಯಾಗೆ ಗಲಿಬಿಲಿಯದರೂ ರಾಮ್ ತಮ್ಮ ಗತಕಾಲದ ಜೀವನವನ್ನು ತಿಳಿಸಿ ಅಪೇಕ್ಷಾ ತನ್ನ ನಿಜವಾದ ತಂಗಿಯೆಂದೂ ಮತ್ತು ಕೃಷ್ಣಾ ತನ್ನ ತಾಯಿಯೆಂದೂ ...ಇನ್ನೊಬ್ಬ ಗಂಡಸನ್ನು ಬಯಸಿ ತನ್ನಪ್ಪನನ್ನು ತೊರೆದು ಅಪ್ಪನ ದಾರುಣ ಸಾವಿಗೆ ಕಾರಣಳಾದ ತಾಯಿ ಮತ್ತು ತಂಗಿಯರ ಸಂಪರ್ಕವನ್ನೇ ತಾನು ತೊರೆದಿದ್ದನ್ನು ವಿವರಿಸಿದಾಗ ಪ್ರಿಯಾಗೆ ಖುಷಿಯಾಗುತ್ತದೆ. ಮತ್ತದೇ ಪ್ರೀತಿ-ಪ್ರೇಮ ಮುಂದುವರಿದು ಸಂಸಾರ ಸರಾಗವಾಗಿ ಸಸಾರವಾಗಿ ನಡೆಯುತ್ತಿರುವಾಗ ಅಕಸ್ಮಾತ್ ಆಸ್ಪತ್ರೆಯೊಂದಕ್ಕೆ ತಪಾಸಣೆಗೆ ಹೋಗಿದ್ದ ಪ್ರಿಯಾಗೆ ಸ್ತನದಲ್ಲಿ ಅರ್ಬುದರೋಗ ಇರುವುದಾಗಿ ತಿಳಿದುಬಂದಾಗ ಇಡೀ ಜೀವನ ಒಂದು ದಾರುಣ ಸ್ಥಿತಿಗೆ ತಲುಪುತ್ತದೆ. ೧೪೯ ಕಂತುಗಳನ್ನು ಮುಗಿಸಿರುವ ಈ ಧಾರಾವಾಹಿಯ ವಿಶೇಷತೆ ಎಂದರೆ ಒಂದೇ ದಿನವೂ ಬೇಸರ ತರಿಸಲಿಲ್ಲ. [ನಾನು ನೋಡಿದ್ದು ನಡುನಡುವೆ ಕೆಲವು ದಿನಗಳು ಮಾತ್ರ] ಎಲ್ಲೂ ಎಳೆತವಿಲ್ಲದ ಮೃಧು-ಮಧುರ ಭಾವಗಳನ್ನು ಎಳೆ ಎಳೆಯಾಗಿ ಹೂವಿನ ಪಕಳೆ ಬಿಡಿಸಿದಷ್ಟೇ ನಾಜೂಕಾಗಿ ಹೆಣೆದ, ನಿರ್ದೇಶಿಸಿದ ವೈಖರಿ ನಿಜಕ್ಕೂ ಮನತಟ್ಟುತ್ತದೆ. ಮಾಮೂಲು ಧಾರಾವಾಹಿಗಳಲ್ಲಿರುವ ಹೊಡೆದಾಟ, ಬಡಿದಾಟ ಇಂತಹ ಅತಿರೇಕಗಳನ್ನು ಬಿಟ್ಟು ಸೂರಜ್ ಬರ್ಜಾತ್ಯ ಅವರ ಕೌಟುಂಬಿಕ ಸಿನಿಮಾಗಳಂತೇ ನಯ-ನಾಜೂಕಿನ ಬಲುಸೊಬಗಿನ ಧಾರಾವಾಹಿ...ನನಗಂತೂ ಬಹಳ ಹಿಡಿಸಿದೆ. ಅದರ ಟೈಟಲ್ ಸಾಂಗ್ ಕೇಳುತ್ತಾ ಕಲಾವಿದರೆಲ್ಲರಿಗೂ ಕೃತಜ್ಞನಾಗಿ ನಿಮ್ಮಿಂದ ಸದ್ಯಕ್ಕೆ ಬೀಳ್ಕೊಳ್ಳುತ್ತಿದ್ದೇನೆ, ನಮಸ್ಕಾರ.




Tuesday, February 7, 2012

ಹರಿಣವೊಂದು ಮರಳಿ ಬಂದು ........


ಹರಿಣವೊಂದು ಮರಳಿ ಬಂದು ........

ಒಂದೂರಿನಲ್ಲಿ ಒಬ್ಬ ಮಹಾರಾಜನ ಸಂಸ್ಥಾನವಿತ್ತು. ಅರಮನೆಯ ಕಲ್ಪನೆ ಮಾಡಿಕೊಳ್ಳಿ ಮತ್ತದಕ್ಕೆ ವಿವರಣೆ ಬೇಡ. ಅಂತಃಪುರದಲ್ಲಿ ರಾಜನ ಪಟ್ಟದ ರಾಣಿ. ಈ ರಾಣಿ ಬಹಳ ದಢೂತಿ, ತಿಂದೂ ತಿಂದೂ ತಿಂದೂ ಶರೀರ ನಡೆಯಲಾಗದಷ್ಟು ಭಾರವಾಗಿತ್ತು. ಆದರೂ ಜಿಹ್ವಾಚಾಪಲ್ಯ ಮಾತ್ರ ನಿಂತಿರಲಿಲ್ಲ; ಬೇಡುತ್ತಲೇ ಇತ್ತು. ಬೇಕಾದ್ದು ಸಿಗುವಾಗ ಆ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವ ವಿಚಾರ ರಾಣಿಗೆ ಬರಲೇ ಇಲ್ಲ. ಇಡೀ ದಿನ ಮಲಗಿರುವುದು, ವಿಶಾಲವಾದ ಆ ಮಹಲಿನಲ್ಲಿ ಅಲ್ಲಿಲ್ಲಿ ಕೂತು ಕಾಲಹರಣಮಾಡುವುದು ಮಾಡುತ್ತಿದ್ದಳು. ಅವಳಿಗೊಬ್ಬ ಮುದುಕಿ ಮುಖ್ಯ ಬಾಣಸಿಗಳಾಗಿ ಕೆಲಸ ಮಾಡುತ್ತಿದ್ದಳು. ನಿತ್ಯವೂ ತರತರದ ನೈವೇದ್ಯ ತಯಾರಾಗುತ್ತಿತ್ತು. ನಾನಾ ವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಯ ಪೂರ್ವದಲ್ಲೇ ಮಹಾರಾಣೀಸಾಹೇಬಳನ್ನು ಕೇಳಿ ತಯಾರಿಸುತ್ತಿದ್ದರು. ಮಾಡಿದ ಅಡುಗೆಯಲ್ಲೂ ಅದಿಲ್ಲಾ ಇದಿಲ್ಲಾ ಎನ್ನುತ್ತಾ ಮಲೆದಾಡುವುದು ರಾಣಿಯ ಸ್ವಭಾವ. ಅಡುಗೆ ಅಜ್ಜಿಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳುವುದು ಸಾಧ್ಯವಿರಲಿಲ್ಲ.

ಹೀಗೇ ಒಂದು ದಿನ ಅಡುಗೆ ಸಿದ್ಧವಾಗಿತ್ತು. ಲಡ್ಡು, ಶ್ಯಾವಿಗೆ, ಕೋಸಂಬರಿ ನಾನಾ ಸೋಪಸ್ಕರಗಳು ಮೇಜವಾನಿಗೆ ಊಟದ ಮೇಜಿನಮೇಲೆ ಇಡಲ್ಪಟ್ಟಿದ್ದವು. ಅಡುಗೆ ಅಜ್ಜಿ ರಾಣಿಯನ್ನು ಊಟಕ್ಕೆ ಎಬ್ಬಿಸಿ ಕರೆತಂದಳು. ರಾಣಿ ಬಂದವಳೇ ಎಲ್ಲವನ್ನೂ ತೋರಿಸು ಎಂದಳು. ಮುಚ್ಚಳ ತೆಗೆದು ಬಿಸಿಬಿಸಿಯಾಗಿರುವ ಎಲ್ಲಾ ಪದಾರ್ಥಗಳನ್ನೂ ಅಡುಗೆಯಾಕೆ ತೋರಿಸಿದಳು. ಎಲ್ಲವನ್ನೂ ಕಣ್ತುಂಬಾ ನೋಡಿದ ರಾಣಿ ತನಗಿವತ್ತು ಜಿಂಕೆಯ ಮಾಂಸವನ್ನು ತಿನ್ನುವ ಆಸೆಯಾಗಿದೆ, ಜಿಂಕೆಮಾಂಸ ತರಿಸಿ ಅಡುಗೆ ಮಾಡು ಆಮೇಲೇ ನಾನು ಊಟಮಾಡುವುದು ಎಂದು ಹಠಮಾಡತೊಡಗಿದಾಗ ಅಡುಗೆ ಅಜ್ಜಿ ನಾಳೆ-ನಾಡಿದ್ದರಲ್ಲಿ ಅದನ್ನೇ ಮಾಡಿಕೊಡುತ್ತೇನೆ ಇವತ್ತು ಹೇಗಾದರೂ ದಯವಿಟ್ಟು ಸ್ವೀಕರಿಸಿ ಎಂದು ಅಂಗಲಾಚಿದಳು. ರಾಣಿ ಅರೆ ಮನಸ್ಸಿನಿಂದಲೇ ಊಟ ಪೂರೈಸಿದಳು. ಅಡುಗೆಯ ಅಜ್ಜಿ ದೂತರ ಮುಖೇನ ಮಹಾರಾಜರಿಗೆ ವಿಷಯ ತಿಳಿಸಿ ಹರಿಣದ ಮಾಂಸ ತರಿಸಿಕೊಡುವಂತೇ ಕೇಳಿಕೊಂಡಳು.

ಮಹಾರಾಜಾಧಿರಾಜನ ಸಭೆ ಮುಗಿದ ತರುವಾಯ ದೂತನಿಂದ ವಿಷಯ ತಿಳಿದು ರಾಜ ಅಂತಃಪುರಕ್ಕೈತಂದ. ಬಿಜಯಂಗೈದ ಮಹಾರಾಜನನ್ನು ರಾಣಿ ಆದರಿಸಲಿಲ್ಲ. ಆಕೆ ಮಲಗೇ ಇದ್ದಳು. ಕೊನೆಗೊಮ್ಮೆ ರಾಜ ಕರೆದಾಗ ಎದ್ದಳು. ರಾಜ ಕೇಳಿದ ಯಾಕೆ ಸರಿಯಾಗಿ ಊಟಮಾಡಲಿಲ್ಲವಂತೆ ? ಎಂದು. ತನಗೆ ಜಿಂಕೆಯ ಮಾಂಸದ ಬಯಕೆ ಇರುವುದನ್ನು ಆಕೆ ತಿಳಿಸಿ ತುರ್ತಾಗಿ ಅದರ ವ್ಯವಸ್ಥೆಯಾಗಬೇಕು ಎಂದಳು. ರಾಜ ಅರಮನೆಯ ಹಜಾರದೆಡೆಗೆ ನಡೆದುಬಂದ. ದೂತರ ಮುಖಾಂತರ ಅರಮನೆಯ ಬೇಟೆಗಾರನನ್ನು ಕರೆಸಿದ. ಬೇಟೆಗಾರನಿಗೆ ಹರಿಣವೊಂದನ್ನು ತರಿದು ಮಾಂಸವನ್ನು ತರುವಂತೇ ಆಜ್ಞಾಪಿಸಿದ. ರಾಜಾಜ್ಞೆ ಶಿರಸಾವಹಿಸಿದ ಬೇಟೆಗಾರ ಕಾಡಿಗೆ ತೆರಳಿದ. ಕಾಡಲ್ಲಿ ಅಲೆದೂ ಅಲೆದೂ ಬಹುದೂರ ಪ್ರಯಾಣಿಸುತ್ತಾ ಇದ್ದಾಗ ಸುಸ್ತಾಗಿ ನಿದ್ದೆ ಬರುವ ರೀತಿ ಆಯ್ತು. ನೆಲದಮೇಲೆ ಮಲಗಿದರೆ ಹುಲಿ-ಸಿಂಹಗಳೋ ಕರಡಿಗಳೋ ಬರಬಹುದಲ್ಲ. ಸುರಕ್ಷತೆಗಾಗಿ ಹತ್ತಿರದಲ್ಲೇ ಇದ್ದ ಪ್ರಾಣಿಗಳು ಏರಲಾರದ ಮರವೊಂದನ್ನೇರಿ ಅಗಲದ ಟೊಂಗೆಯಮೇಲೆ ತನ್ನನ್ನು ಹಗ್ಗದಿಂದ ಬೀಳದಂತೇ ಬಂಧಿಸಿಕೊಂಡು ನಿದ್ದೆ ಮಾಡಿದ.

ಸಮಯ ಮೀರಿ ಹೋಗುತ್ತಿತ್ತು. ರಾಜನ ಆಸ್ಥಾನಕ್ಕೆ ಬೇಗ ಮರಳಿ ಹೋಗಬೇಕಾಗಿತ್ತು. ಬೇಟೆ ಸಿಗದ್ದಕ್ಕೆ ಬೇಸರದಿಂದಲೇ ಎಚ್ಚರಗೊಂಡ ಬೇಡ ದೂರದ ಜಾಗವೊಂದರಲ್ಲಿ ಹರಿಣದ ಮರಿಯೊಂದು ಜಿಗಿಯುವುದನ್ನು ಕಂಡ. ಅಹಹಾ ಎಂತಹ ಸುಂದರ ಮರಿ. ಆ ಪುಟ್ಟ ಮರಿಯ ಜೊತೆ ತಾಯಿ ಹರಿಣವೂ ಇರಲೇಬೇಕೆಂದು ಮರವಿಳಿದು ಬೇಗನೇ ಹುಡುಕುತ್ತಿದ್ದ. ಹುಲ್ಲೆಯ ಮರಿ ಜಿಗಿಜಿಗಿದು ಹಾರುತ್ತಾ ಹಸಿರು ಹುಲ್ಲನ್ನು ಅಲ್ಪ ತಿನ್ನುತ್ತಾ ಆಟವಾಡುತ್ತಿತ್ತು. ಅನತಿ ದೂರದಲ್ಲಿ ಅಮ್ಮ ಜಿಂಕೆ ಮೇಯುತ್ತಿದ್ದುದನ್ನು ಕಂಡ ಬೇಡ ಅದರೆಡೆಗೆ ಬಾಣ ನೆಟ್ಟ. ಇನ್ನೇನು ಬಾಣಬಿಡಬೇಕು....ಅಷ್ಟರಲ್ಲಿ ಆ ಅಮ್ಮ ಜಿಂಕೆ ಬೇಡನೆಡೆಗೇ ನಡೆದು ಬಂತು. ಬೇಡ ಕ್ಷಣಕಾಲ ತನ್ನ ಕಣ್ಣುಗಳನ್ನೇ ನಂಬದಾದ. ಬೇಕಾಗಿದ್ದ ವಸ್ತು ನಿರಾಯಾಸವಾಗಿ ದೊರೆತ ಖುಷಿಯಲ್ಲಿ ಬಾಣವನ್ನು ತಡೆಹಿಡಿದ. ಮುಂದೆ ಬಂದ ಜಿಂಕೆ ಬೇಡನ ಮುಂದೆ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳಿಕೊಂಡಿತು.

" ಅಯ್ಯಾ ಅರಮನೆ ಬೇಟೆಗಾರನೇ, ದಯವಿಟ್ಟು ನನ್ನ ಮಾತು ಕೇಳು. ನನ್ನ ಪತಿರಾಯನಿಗೆ ಆರೋಗ್ಯ ಸರಿಯಿಲ್ಲ. ಆತ ಆಹಾರ ತಿನ್ನಲಾರದೇ ಬಳಲುತ್ತಿದ್ದಾನೆ. ದೂರದ ನಮ್ಮ ವಸತಿಯೆಡೆಯಲ್ಲಿ ಮಲಗಿದ್ದಾನೆ. ಆತನಿಗೆ ಔಷಧಿಯ ಹುಲ್ಲನ್ನು ತೆಗೆದುಕೊಂಡು ಹೋಗಿ ಕೊಟ್ಟು ಮರಳಿ ನಿನ್ನಲ್ಲಿಗೆ ಬರುತ್ತೇನೆ. ಅ ಮೇಲೆ ನೀನು ನನ್ನನ್ನು ವಧಿಸುವವನಾಗು. ನಾನು ವಚನಬ್ರಷ್ಟಳಾಗಲಾರೆ, ಕೊಟ್ಟ ಮಾತಿನ ಪ್ರಕಾರ ಮರಳಿ ನಿನಗೆ ಶರಣಾಗುತ್ತೇನೆ, ದಯಮಾಡಿ ಅಲ್ಲಿನ ತನಕ ನನಗೆ ಅವಕಾಶ ಕೊಡು " ಎಂದು ಪ್ರಾರ್ಥಿಸಿತು. ಕಟುಕನಾದ ಬೇಡನೂ ಚಣಕಾಲ ಆಲೋಚಿಸಿದ. ದೈವವೇ ತನಗೆ ಹರಿಣವನ್ನು ತೋರಿಸಿತ್ತು, ಅಂತಹ ದೈವವನ್ನೇ ನಂಬಿ, ಹರಿಣ ಮರಳಿಬರುತ್ತದೆ ಎಂಬ ಅನಿಸಿಕೆಯಿಂದ, ಸಾಯುವ ಮುನ್ನ ತನ್ನ ಪತಿಗಾಗಿ ಔಷಧವನ್ನು ಕೊಟ್ಟುಬರುವ ಅವಕಾಶವನ್ನು ನೀಡಬೇಕು ಎಂದು ನಿರ್ಧರಿಸಿ ಒಪ್ಪಿಗೆ ನೀಡಿದ. ಬೇಡನ ಅನುಮತಿ ಪಡೆದ ಜಿಂಕೆ ಆತನಿಗೆ ನಮಿಸಿ ತನ್ನ ಏನೂ ಅರಿಯದ ಪುಟ್ಟ ಮರಿಯೊಡನೆ ಪತಿಯೆಡೆಗೆ ತೆರಳಿತು.

ಬೇಗ ಬರುತ್ತೇನೆಂದಿದ್ದ ಮಡದಿ ತಡವಾಗಿ ಬಂದಿದ್ದು ಗಂಡು ಹರಿಣಕ್ಕೆ ಆಶ್ಚರ್ಯವಾಗಿತ್ತು! ಬಂದ ಮಡದಿಯ ಮುಖದಲ್ಲಿ ಎಂದಿನ ಹುರುಪಿನ ಕಳೆ ಇರಲಿಲ್ಲ. ಬಹುಶಃ ತನ್ನ ಅನಾರೋಗ್ಯದಿಂದ ಪತ್ನಿಗೆ ಬೇಜಾರಾಗಿರಬೇಕೆಂದು ಯೋಚಿಸಿತು ಗಂಡು ಜಿಂಕೆ. ಪತಿರಾಯನಿಗೆ ಅವಸರದಲ್ಲಿ ಔಷಧಯುಕ್ತ ಹುಲ್ಲನ್ನು ನೀಡಿ ತಾನು ತಡವಾಗಿ ಬಂದಿದ್ದಕ್ಕೆ ಕಾರಣ ತಿಳಿಸಿತು. ವಚನ ನೀಡಿದ ತಾನು, ಇನ್ನೂ ಬೆಳೆಯ ಬೇಕಾದ ಕಂದಮ್ಮನನ್ನೂ ಔಷಧದ ಹುಲ್ಲನ್ನೂ ತಲುಪಿಸಿ ಮರಳಿ ಹೋಗಲು ಬಂದಿರುವುದಾಗಿ ತಿಳಿಸಿತು. ಔಷಧಿಯ ಹುಲ್ಲನ್ನು ತಿಂದ ಪತಿರಾಯ ಪತ್ನಿಹುಲ್ಲೆಯೊಡನೆ ಮಾತಿಗಿಳಿದ. ನಮಗಿನ್ನೂ ಚಿಕ್ಕ ಮಗುವಿದೆ. ನಾನು ಹೋದರೆ ನಿಮಗೇನೂ ತೊಂದರೆಯಾಗಲಾರದು. ನೀನಾದರೋ ಮರಿಗೆ ಹಾಲೂಡಿಸಬೇಕಾಗುತ್ತದೆ. ನೀನು ಗತಿಸಿದರೆ ಮರಿಗೆ ಹಾಲು ಕೊಡುವವರಾರು ? ಹೇಗೂ ಶೀಕಿಗೆ ಬಿದ್ದವ ತಾನು. ಬೇಡನಿಗೆ ನೀನಿತ್ತ ವಚನ ಪೂರೈಕೆಗಾಗಿ ತಾನೇ ಅಲ್ಲಿಗೆ ಹೋಗಿ ತನನ್ನೇ ಅವನಿಗೆ ಅರ್ಪಿಸಿಕೊಳ್ಳುವುದಾಗಿ ಹೇಳಿತು ಗಂಡು ಹರಿಣ. ಹೆಣ್ಣು-ಗಂಡು ಜಿಂಕೆಗಳು ಮಾತನಾಡುತ್ತಿರುವ ವಿಷಯವನ್ನು ಆಲಿಸುತ್ತಿದ್ದ ಮರಿ ಜಿಂಕೆ ಅಪ್ಪ-ಅಮ್ಮರಲ್ಲಿ ಯಾರನ್ನೂ ಕಳೆದುಕೊಂಡು ಬದುಕಲು ನನಗಿಷ್ಟವಿಲ್ಲಾ ತಾನೇ ಅಲ್ಲಿಗೆ ಹೋಗುವುದಾಗಿ ಹೇಳಿತು. ವಿಷಯ ಇತ್ಯರ್ಥವಾಗದೇ ಆ ಇಡೀ ಹರಿಣ ಕುಟುಂಬ ಬೇಡನೆಡೆಗೆ ನಡೆದುಬಂತು.

ಬೇಡನಿಗೆ ಆಶ್ಚರ್ಯವೋ ಆಶ್ಚರ್ಯ! ತಾನು ಬಯಸಿದ್ದು ಒಂದೇ ಹರಿಣ. ಈಗ ದೊರೆಯುವುದು ಒಂದಕ್ಕಿಂತಾ ಹೆಚ್ಚು ! ದೂರದಿಂದಲೇ ನಗುತ್ತಿದ್ದ ಆ ಬೇಡ. ಹರಿಣಗಳು ಬೇಡನ ಹತ್ತಿರಕ್ಕೆ ನಡೆತಂದವು. ತಮ್ಮಲ್ಲಿ ಇತ್ಯರ್ಥವಾಗದ ವಿಷಯವನ್ನೂ ಮತ್ತು ಕೊಟ್ಟವಚನವನ್ನು ಪಾಲಿಸುವ ಧರ್ಮ ಸಮ್ಮತ ನಡೆಯನ್ನೂ ತಿಳಿಸಿ ತಾವು ಮರಳಿ ಬಂದುದಾಗಿ ಹೇಳಿದವು. ವಿಷಯ ತಿಳಿದ ಬೇಡನ ಮನಸ್ಸು ವಿಲವಿಲನೆ ಒದ್ದಾಡಿತು. ಅವರೊಳಗಿನ ಕುಟುಂಬದ ಆ ಪ್ರೀತಿಯನ್ನು ಅಗಲಿರಲಾರದ ಆ ಬದುಕನ್ನೂ ನೆನೆದು ವಧಿಸಲು ಬಳಸುವ ಬಾಣವನ್ನು ಪುನಃ ಅದರ ಸ್ವಸ್ಥಾನಕ್ಕೆ ಸೇರಿಸಿದ. ಹರಿಣಗಳಿಗೆ ಮಂಡಿಯೂರಿ ಕಣ್ಣೀರ್ಗರೆದು ಕೈಮುಗಿದ. ತಾನು ಉಪವಾಸವೇ ಇದ್ದರೂ ಚಿಂತೆಯಿಲ್ಲಾ ನಿಮ್ಮಂತಹ ಕುಟುಂಬವನ್ನು ನಾಶಮಾಡಲಾರೆ. ಇಂದಿನಿಂದ ನನಗಿದೊಂದು ಪಾಠ. ಇನ್ನು ಮೇಲೆ ನಾನು ಪ್ರಾಣಿಗಳನ್ನು ವಧಿಸಲಾರೆ ಎಂದು ತಿಳಿಸಿ ಅವುಗಳಿಂದ ಬೀಳ್ಕೊಂಡ.

ಬೇಡನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದ ಮಹಾರಾಜ, ಆತ ಬಂದ ಸುದ್ದಿ ತಲುಪಿ ಅರಮನೆಯ ಹಜಾರಕ್ಕೆ ಬಂದ. ಬಂದರಾಜನನ್ನು ಕಂಡು ಬೇಡ ಸಾಷ್ಟಾಂಗ ವಂದಿಸಿದ. ಬಿಲ್ಲು-ಬತ್ತಳಿಕೆಗಳನ್ನು ರಾಜನ ಪಾದಕ್ಕೆ ಅರ್ಪಿಸಿ ತಾನಿನ್ನು ಅರಮನೆ ಬೇಟೇಗಾರನ ಹುದ್ದೆಯಿಂದ ನಿವೃತ್ತಿ ಬಯಸಿದ್ದಾಗಿ ತಿಳಿಸಿದ. ಮತ್ತು ಜಿಂಕೆಯ ಮಾಂಸವನ್ನು ತರದಿದ್ದುದಕ್ಕೆ ಕಾರಣವನ್ನೂ ವಿವರಿಸಿದ. ಬೇಡನ ಆಂತರ್ಯದ ಬದಲಾವಣೆಯನ್ನು ಕಂಡು ಚಕಿತಗೊಂಡ ಮಹಾರಾಜ ಅವನಿಗೆ ನೂರು ವರಹಗಳನ್ನೂ ಹೊನ್ನಸರವನ್ನೂ ಕೊಟ್ಟು ಸತ್ಕರಿಸಿದ. ತನ್ನ ರಾಜ್ಯದಲ್ಲಿ ಇಂತಹ ಅಪ್ಪಟ ಹೃದಯ ವೈಶಾಲ್ಯತೆ ಇರುವ ವ್ಯಕ್ತಿಯನ್ನು ಕಂಡು ತಾನು ಬಹಳ ಸಂತುಷ್ಟನಾಗಿದ್ದೇನೆ ಮಾತ್ರವಲ್ಲಾ ಆ ನೆನಪಿನಲ್ಲಿ ಈ ದಿನದಿಂದಲೇ ಅರಮನೆಯಲ್ಲಿ ಮಾಂಸಾಹಾರವನ್ನು ನಿಷೇಧಿಸುವುದಾಗಿ ಘೋಷಿಸಿದ. ಅಂದಿನಿಂದ ರಾಣಿಯ ನಡವಳಿಕೆಯಲ್ಲೂ ಹಲವು ಮಾರ್ಪಾಟುಗಳಾದವು. ಕಟುಕ ಹೃದಯದ ಬೇಡನೊಬ್ಬ ದಯೆ, ಕರುಣೆ, ವಾತ್ಸಲ್ಯದ ಪಾಠವನ್ನು ಆ ಇಡೀ ಅರಮನೆಗೇ ಬೋಧಿಸಿದ್ದ!

ಮನುಷ್ಯರಾದ ನಾವು ನಮ್ಮ ಹೊಟ್ಟೆಗಾಗಿ ಹಲವು ಪ್ರಾಣಿಗಳನ್ನು ವಧಿಸುತ್ತೇವೆ. ಹರಣಮಾಡುವ ಜೀವಗಳ ಸಂಖ್ಯೆಗೆ ಲೆಕ್ಕವಿಲ್ಲ! ಆಹಾರಕ್ಕಾಗಿಯೋ, ಚರ್ಮದ ಉಡುಗೆ-ತೊಡುಗೆಗಳಿಗಾಗಿಯೋ ಪ್ರಾಣಿಗಳ ವಧೆ ನಡೆದೇ ಇದೆ. ನಮಗೆಲ್ಲಾ ಕುಟುಂಬ ವ್ಯವಸ್ಥೆ ಇರುವಂತೇ ಅವುಗಳಿಗೂ ಇರಬಹುದಲ್ಲಾ ಎಂಬುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ತರಕಾರಿಗಳಿಗೆ/ ಆಹಾರ ಧಾನ್ಯಗಳಿಗೆ ಜೀವನವೇ ಅಷ್ಟು! ಅವುಗಳಿಗೆ ಆ ಮಟ್ಟದ ಮೆದುಳೆಂಬ ಅಂಗವನ್ನು ಪರಮಾತ್ಮ ನೀಡಿಲ್ಲ. ಹೀಗಾಗಿ ಅವುಗಳ ಸೇವನೆ ಯಾವುದೇ ವಧೆಯಲ್ಲ. ಆದರೂ ಧಾನ್ಯಗಳೂ ಬೀಜಗಳೂ ಹಾಗೇ ಇರುತ್ತಿದ್ದರೆ ಇನ್ನೊಂದು ಹುಟ್ಟಿಗೆ ಕಾರಣವಾಗುತ್ತವಾದ್ದರಿಂದ ಅವುಗಳನ್ನು ಸಂಸ್ಕರಿಸಿ ಭುಂಜಿಸುವಾಗ ಭಾವುಕರು ಅನ್ನಬ್ರಹ್ಮನಿಗೆ ಕೈಮುಗಿದು ಬದುಕುವುದಕ್ಕಾಗಿ ಮಾತ್ರ ನಿನ್ನನ್ನು ಸೇವಿಸಬೇಕಾಗಿ ಬಂದುದಾಗಿ ಪ್ರಾರ್ಥಿಸುತ್ತಾರೆ. ಇಂದಿನ ನವಜನಾಂಗ ತಿನ್ನುವುದಕ್ಕಾಗೇ ಬದುಕುತ್ತದೆ ಎಂಬುದು ವಿಪರ್ಯಾಸ!

ಉತ್ತಮ ಸಂಸ್ಕಾರಗಳು ಮನುಷ್ಯನನ್ನು ದೈವತ್ವದೆಡೆಗೆ ಕೊಂಡೊಯ್ಯುತ್ತವೆ. ಅಂತಹ ಉತ್ತಮ ಸಂಸ್ಕಾರಗಳು ನಮಗೊದಗಬೇಕಾದರೆ ನಾವು ಅವುಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ. ನನ್ನ ಹಲವು ಲೇಖನಗಳನ್ನು ಓದುವ ಅನೇಕ ’ಟ್ಯಾಬ್ಲಾಯ್ಡ್ ಕಲಾವಿದರು’ ಗುಂಪು ಗುಂಪಾಗಿ ಬಂದು ವಿಷಕಾರುವ ಬ್ರಾಹ್ಮಣ, ಕೆಟ್ಟ ಬ್ರಾಹ್ಮಣರ ಕುಲ ಎಂದೆಲ್ಲಾ ಆಡುವುದನ್ನು ಅವಲೋಕಿಸಿದ್ದೇನೆ. ಅದು ಅವರ ತಪ್ಪಲ್ಲ. ಅದು ಅವರ ಅಜ್ಞಾನ. ಅವರ ಜೀವಿತದಲ್ಲಿ ಮೊಲಕ್ಕೆ ಮೂರೇ ಕಾಲು ಎಂಬುದನ್ನು ಅವರು ನಂಬುತ್ತಾರೆ, ಅದಷ್ಟೇ ಅವರಿಗೆ ಕಾಣಸಿಗುತ್ತದೆ. ಮೊಲದ ಓಟದ ಪರಿಮಿತಿಗೆ ಇವರ ಓಟ ಹೋಗಲಾಗದುದರಿಂದ ಹಾರುವ ಮೊಲಕ್ಕಿರುವುದು ಮೂರೇ ಕಾಲು ಎಂದು ದೂರದಲ್ಲಿರುವ ಅವರಿಗೆ ಭಾಸವಾಗುವುದು ಸತ್ಯ. ಮಾಂಸಾಹಾರ ಜನ್ಯ ಅಹಂಕಾರ, ತಾಮಸ ಬುದ್ಧಿಯಿಂದ ಅವರ ಸಂಸ್ಕಾರಗಳು ಆ ಮಟ್ಟದಲ್ಲೇ ಆಡುತ್ತಿರುತ್ತವೆ. ತಪ್ಪಿದ್ದರೂ ಯಾವತ್ತೂ ಯಾರಲ್ಲೂ ಕ್ಷಮೆ ಬೇಡುವ ಪರಿಪಾಟ ಅವರದ್ದಾಗುವುದಿಲ್ಲ. " ಬ್ರಾಹ್ಮಣರು ಜರಿದರು, ಬ್ರಾಹ್ಮಣರು ನಮ್ಮನ್ನು ಹತ್ತಿಕ್ಕಿದರು, ಬ್ರಾಹ್ಮಣರು ತಮಗೆ ಸಹಪಂಕ್ತಿ ಕೊಡುವುದಿಲ್ಲ. ಬ್ರಾಹ್ಮಣರು ತಮ್ಮನ್ನು ಕೀಳಾಗಿ ಕಾಣುತ್ತಾರೆ " ಎಂಬ ಘೋಷವಾಕ್ಯ ಎಲ್ಲೆಲ್ಲೂ ರಾರಾಜಿಸುತ್ತದೆ.

ನನ್ನ ದೇಶಬಾಂಧವರೇ,ನಿಮಗಿದೋ ನನ್ನ ಆತ್ಮೀಯ ಕರೆ: ಬನ್ನಿ ಎಲ್ಲರೂ ಬ್ರಾಹ್ಮಣರಾಗಿ. ನಾವು ’ವೇದಸುಧೆ’ಯಲ್ಲಿ ಅದನ್ನೇ ಹೇಳುತ್ತಲೇ ಬಂದಿದ್ದೇವೆ. ಮಾಂಸಾಹಾರ ವರ್ಜಿಸಿ;ಶಾಕಾಹಾರಿಗಳಾಗಿ. ಉತ್ತಮ ಸಂಸ್ಕಾರಗಳು ನಿಮ್ಮದಾಗಲಿ. ಭಾರತೀಯ ಮೂಲದ ಉತ್ತಮ ಗ್ರಂಥಗಳು, ಮಹಾಕಾವ್ಯಗಳೂ, ವೇದ-ವೇದಾಂಗಗಳೂ ನಿಮ್ಮ ನಿಲುವಿಗೆ ದೊರೆಯಲಿ ಎಂದು ಆಹ್ವಾನಿಸುತ್ತಿದ್ದೇನೆ. ಬರಿದೇ ಜರಿಯುವುದರಲ್ಲಿ ಹುರುಳಿರುವುದಿಲ್ಲ. ಯಾರೋ ಮೊನ್ನೆ ಅನಾನಿಮಸ್ಸೆಂಬ ಹೆಸರಲ್ಲಿ ತಮಗೆ ಮೇಲ್ಮಟ್ಟಕ್ಕೆ ಬರಲು ಅವಕಾಶ ಕೊಡುತ್ತಿಲ್ಲಾ ಎಂದು ಆಕ್ರೋಶ ತೋಡಿಕೊಂಡಿದ್ದಾರೆ. ನೋಡೀ, ಎಲ್ಲರಿಗೂ ಆ ಅವಕಾಶಗಳು ಹಿಂದೂ ಇದ್ದವು, ಈಗಲೂ ಇವೆ, ಮುಂದೂ ಇರುತ್ತವೆ: ಇದಕ್ಕೆ ಉತ್ತಮ ಉದಾಹರಣೆ ಮಹರ್ಷಿ ಮಹೇಶ್ ಯೋಗಿಗಳು. ಅವರು ಹುಟ್ಟಾ ಬ್ರಾಹ್ಮಣರಲ್ಲ! ಆದರೆ ಬ್ರಾಹ್ಮಣ್ಯವನ್ನು ಅನುಸರಿಸಿದರು; ಬ್ರಾಹ್ಮಣರಾದರು!

ಮೊನ್ನೆ ಉಡುಪಿಯ ಹತ್ತಿರದ ಸೇಂಟ್ ಮೇರೀಸ್ ದ್ವೀಪದಲ್ಲಿ ವಿದೇಶೀಯರನ್ನು ಸ್ವಾಗತಿಸಿ ಅರೆಬೆತ್ತಲೆ ಕುಣಿತವನ್ನು ನಡೆಸಿದ್ದಾರೆ. ನಿನ್ನೆ ಮಂತ್ರಿಯೊಬ್ಬರು ವಿಧಾನಸಭೆಯಲ್ಲಿ ಕಾಮಕೇಳಿಯ ದೃಶ್ಯವಿಹಾರಕ್ಕೆ ನಾಂದಿ ಹಾಡಿದ್ದಾರೆ! ಇದೆಲ್ಲಾ ನಡೆಯುತ್ತಿರುವುದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಪ್ರಜಾಸತ್ತೆಯ ಅನಿವಾರ್ಯ ಅಂಗವಾದ ಚುನಾವಣೆಗಳಲ್ಲಿ ಬಹುತೇಕ ರೌಡಿಗಳೇ ಸ್ಪರ್ಧಿಸುತ್ತಾರೆ! ಹಿಂದೊಂದು ಕಾಲಕ್ಕೆ ಆಳುವ ರಾಜರು ದೈವತ್ವವನ್ನು ಪಡೆದಿರುತ್ತಿದ್ದರು. ಪ್ರಜೆಗಳನ್ನು ದೇವರೆಂದು ರಾಜರೂ ರಾಜರನ್ನು ದೇವರೆಂದು ಪ್ರಜೆಗಳೂ ಪೂಜನೀಯ ಭಾವದಿಂದ ಕಾಣುತ್ತಿದ್ದರು. ಕರ್ನಾಟಕದ ಎಷ್ಟೊಂದು ಮನೆಗಳಲ್ಲಿ ಮೈಸೂರು ಮಹಾರಾಜರ ಫೊಟೋ ಇಲ್ಲ ? ಮೈಸೂರಿನ ಆಡಳಿತವಿದ್ದ ಪ್ರದೇಶಗಳಲ್ಲಿ ದಸರಾ ಬೊಂಬೆಗಳಲ್ಲಿ ಪ್ರಮುಖವಾಗಿ ಕಾಣುವುದು ರಾಜ-ರಾಣಿಯರನ್ನು ! ರಾಜ-ರಾಣಿಯರನ್ನು ಜನ ಆದರದಿಂದ ಪೂಜಿಸುವ ಮಟ್ಟಕ್ಕೆ ಏರಿಸಿದ್ದರು ಎಂದಮೇಲೆ ರಾಜ-ರಾಣಿಯ ಔನ್ನತ್ಯ ಎಂತಹದಿದ್ದೀತು? ಬ್ರಿಟಿಷರು ಇದ್ದಾಗಲೂ ಇಲ್ಲಿನ ನೈತಿಕ ಮೌಲ್ಯಗಳಿಗೆ ಅವರು ಭಾರೀ ಗೌರವ ಕೊಟ್ಟಿದ್ದರು. ಇದನ್ನು ಸ್ವತಃ ನನ್ನಜ್ಜ ಹೇಳಿದ್ದರ ಜೊತೆಗೆ ಮೊನ್ನೆ ಬೆಂಗಳೂರಿಗೆ ಬಂದಿದ್ದ, ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಚೆನ್ನೈ ಮೂಲದ ಕಲ್ಯಾಣಮ್ ಕೂಡ ಹೇಳಿದ್ದಾರೆ.

ಬರಿದೇ ಬ್ಲೈಂಡ್ ಫಾಲೋವರ್ಸ್ ಆಗಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಬೇಡಿ: ಅದು ನಮ್ಮ ಉದ್ಧಾರಕ್ಕಿರುವುದಲ್ಲ ಬದಲಿಗೆ ವಿನಾಶಕ್ಕೆಳಸುವುದು. ಭಾರತೀಯ ಮೂಲ ಗ್ರಂಥಗಳ ಬಗ್ಗೆ ಮಿತ್ರ ಶ್ರೀವತ್ಸ ಜೋಶಿ ಕಳೆದ ಭಾನುವಾರ ’ವಿಜಯ ಕರ್ನಾಟಕ’ದಲ್ಲಿ ಅವರ ’ಪರಾಗಸ್ಪರ್ಶ’ ಅಂಕಣದಲ್ಲಿ ’ಅಗ್ನಿಮೀಳೇ ಪುರೋಹಿತಂ’ ಎಂಬ ಲೇಖನ ಬರೆದಿದ್ದನ್ನು ಅನೇಕರು ಓದಿರಬಹುದಲ್ಲ ? ಮೂಲವನ್ನೇ ಗೌರವಿಸದೇ ಕಣ್ಣಿಗೆ ಹಳದಿಬಣ್ಣದ ಪಟ್ಟಿಕಟ್ಟಿಕೊಂಡು ಎಲ್ಲವೂ ಹಳದಿಯಾಗಿ ಕಾಣುತ್ತಿದೆ-ಏನೂ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಬರಬೇಡಿ. ಹೆಂಡವನ್ನು ರುಚಿ ನೋಡಲೆಂದು ಮೊದಲು ಕುಡಿಯುತ್ತಾರಂತೆ, ಆಮೇಲೆ ಒಳಗೆ ಸೇರಿದ ಹೆಂಡ ಹೊರಗಿನ ಹೆಂಡವನ್ನು ಬಾ ಎನ್ನುತ್ತದಂತೆ, ಆಮೇಲೊಂದು ದಿನ ಅದೇ ಹೆಂಡ ಹೊರಗೆ ನಿಂತು ಬಾ ಎಂದು ಕುಡುಕನನ್ನು ಹೊಂಡದಲ್ಲಿ ಮುಚ್ಚಿಸುತ್ತದಂತೆ! ಇವತ್ತಿನ ಮನೆಗಳಲ್ಲಿ ಟೆರೇಸ್ ಗಾರ್ಡನ್ ಮಾಡಿ ಕುಳಿತು ಹೆಂಡದ ಪಾರ್ಟಿಗಳನ್ನು ನಾವು ಮಾಡುವುದಕ್ಕೆ ಸನ್ನದ್ಧರಾಗುತ್ತಿದ್ದೇವೆ. ಯಾವುದೆಲ್ಲಾ ನಮಗೆ ಬೇಡವೋ ಅವಷ್ಟೂ ಬಂದಿವೆ, ಬರುತ್ತಿವೆ, ಬರುತ್ತವೆ. ಅವುಗಳನ್ನು ತರಲು ಆ ಯಾ ಸಂಸ್ಕೃತಿಗೆ ಇದೀಗಾಗಲೇ ಮನಸೋತ ವಿಟಪುರುಷರು ರಾಯಭಾರಿಗಳಾಗಿದ್ದಾರೆ! ಮಹಾತ್ಮರನ್ನೂ, ಪ್ರಸಿದ್ಧ ಕ್ಷೇತ್ರಗಳನ್ನೂ ಕುಡಿದ ಅಮಲಿನಲ್ಲಿ ನಾವು ಚಿತ್ರಿಸ ಹೊರಡುತ್ತೇವೆ; ನಮ್ಮ ಮೇಲೇ ನಾವು ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ. ಅರಿತೋ ಅರಿಯದೆಯೋ ಕುರಿಮೆಂದೆಯಲ್ಲಿರುವ ಇನ್ನೊಂದು ಕುರಿಯಂತೇ ಎಡಪಂಥದ ಬುದ್ಧಿಜೀವಿಗಳು ಎನಿಸಿಕೊಳ್ಳುವುದಕ್ಕೆ ಯುವ ಜನಾಂಗ ಇಷ್ಟಪಡುತ್ತದೆ.

ಯಾವ ನೆಲದಲ್ಲಿ ಸಂತರು, ಹರಿದಾಸರು ಗೋಪಾಲಬುಟ್ಟಿಯನ್ನೂ ಹರಿದೀಕ್ಷೆಯನ್ನೂ ಪಡೆದರೋ ಅದೇ ನೆಲದಲ್ಲಿ ’ಬಾಟಲಿ’ಯನ್ನೂ ’ಬುದ್ಧಿಜೀವಿಚೀಲ’ವನ್ನೂ ದೀಕ್ಷೆಯಾಗಿ ನಾವಿಂದು ಪಡೆಯಹೊರಟಿದ್ದೇವೆ! ಹಿಂದೆ ಇದ್ದವರಿಗೆ ಆಗಿಹೋದವರಿಗೆ ಬುದ್ಧಿ ಇರಲಿಲ್ಲಾ ಆವರೆಲ್ಲಾ ಮಂಕುದಿಣ್ಣೆಗಳೆಂದು ಅವರೆಲ್ಲರುಗಳ ಮೇಲೆ ಗೂಬೆ ಕೂರಿಸುತ್ತಾ ಲೋಕೋಪಕಾರಕ್ಕಾಗಿ ನಮ್ಮ ಜನನವಾಗಿದೆ ಎಂದೇ ಭಾವಿಸುತ್ತೇವೆ; ಹಾಗೇ ಅಹಂಕಾರದಿಂದ ಮೆರೆಯತೊಡಗುತ್ತೇವೆ. ’ಅಗ್ನಿಮೀಳೇ ಪುರೋಹಿತಂ’ ಎಂಬುದರ ಅರ್ಥಕ್ಕೆ ಅನರ್ಥಹಚ್ಚಿ ಓಹೋ ಪುರೋಹಿತರು ತಮಗೆ ಮಾತ್ರ ಅಗ್ನಿ ಎಂದು ಹೇಳುತ್ತಾರೆ ಎಂದುಕೊಳ್ಳುತ್ತೇವೆ; ಸಂಸ್ಕೃತಿಯ ಆಕರವಾದ ತಾಯಿ ಸಂಸ್ಕೃತಕ್ಕೆ ’ಸತ್ತ ಭಾಷೆ’ ಎಂಬ ಬಿರುದು ಕೊಟ್ಟಿದ್ದೇವೆ. ಒಬ್ಬ ಕುಣಿದ ಎಂದು ಇನ್ನೊಬ್ಬ ಕುಣಿದ, ಇನ್ನೊಬ್ಬ ಕುಣಿದಾ ಎಂದು ಮತ್ತೊಬ್ಬ ಕುಣಿದ ....ಹೀಗೇ ಬ್ರಾಹ್ಮಣರು ನಮ್ಮನ್ನು ತುಳಿದರು ಎನ್ನುತ್ತಾ ಹೊರಗೆ ತೋರಗೊಡದೇ ಬಚ್ಚಿಟ್ಟ ವಿಷಗಳಿಂದ ಬುಸುಗುಟ್ಟುವ ಕಾಳಿಂಗಗಳಾಗಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಇನ್ನಾದರೂ ಅರಿಯಲು ನೀವೆಲ್ಲಾ ಮೇಲಿನ ಕಥೆಯ ಬೇಡನಲ್ಲಾದ ಬದಲಾವಣೆಯನ್ನು ತಂದುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ; ಅದನ್ನೇ ಸ್ವಾಗತಿಸುತ್ತೇನೆ.


[ಈಗ ಸಮಷ್ಟಿಯಲ್ಲಿನ ನಮ್ಮ ಎಂಬುದನ್ನು ಇಲ್ಲಿಗೆ ನಿಲ್ಲಿಸುತ್ತಾ ] ಬ್ರಾಹ್ಮಣರೆನಿಸಿದ ನಮ್ಮ ಬಗ್ಗೆ :

ಇನ್ನು ಜಾತಿಯಿಂದಲೂ ನೀತಿಯಿಂದಲೂ ವಸುಧೈವ ಕುಟುಂಬಕಮ್ ಎಂಬುದನ್ನು ನಂಬಿ, ಕೆಲವು ಆದರ್ಶಗಳನ್ನು ಆತು, ಬೈಸಿಕೊಳ್ಳುವ ಬ್ರಾಹ್ಮಣರಾದರೂ ಸಮಸ್ತರಿಗೂ ಒಳಿತಾಗಲಿ ಎಂದೇ ನಾವು ಸದಾ ಹಾರೈಸಿದ್ದೇವೆ; ಹಾರೈಸುತ್ತಿದ್ದೇವೆ; ಹಾರೈಸುತ್ತೇವೆ:

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು ||

Monday, February 6, 2012

ನಾನರಿಯದೇ ನಿನ್ನ


ನಾನರಿಯದೇ ನಿನ್ನ

ನಾನರಿಯದೇ ನಿನ್ನ ನೆನೆಯಿತದೋ ನನ್ನ ಮನ
ಅನವರತ ಕನವರಿಸುತಾ |
ತಾನು ತನ್ನದು ಎಂಬ ಮೋಹ-ದುರಭಿಮಾನ
ಕೆನೆಯಿತದೋ ಬರಸೆಳೆಯುತಾ || ಪ ||

ಹೀನ ಬುದ್ಧಿಯಲೊಮ್ಮೆ ನಾನುಲಿದೆ ಬಾಲಿಶವ
ಹಾನಿ ಲೆಕ್ಕವ ಗಣಿಸುತಾ |
ಕಾನ ಗಿರಿಯಲಿ ನಿಂದು ತಪಗೈದ ಯೋಗಿವರ
’ನಾನು’ ಎಂಬುದ ಕಳೆಯುತಾ || ೧ ||

ಮಾನವೇನ್ ಪ್ರಾಣವೇನ್ ಸಕಲ ನಿನಗರ್ಪಣವು
ಧೇನಿಸುವೆ ಸಾಲಂಕೃತಾ |
ಗಾನಮಾಡುವೆ ಭಜಿಸಿ ನಾಮದಷ್ಟೋತ್ತರವ
ಪಾನಮಾಡುತ ಸಂತತಾ || ೨ ||

ಸ್ನಾನಮಾಡುವೆನಲ್ಲಿ ಸ್ಫಟಿಕಶುಭ್ರತೀರ್ಥ
ಧ್ಯಾನದಲಿ ಕುಳಿತುಕೊಳುತಾ |
ದಾನ-ದರುಶನ ನೀಡು ಶ್ರೀಸ್ವಾಮಿ ಶ್ರೀಧರನೆ
ಆನಂದಘನನಾಗುತಾ || ೩ ||

Thursday, February 2, 2012

ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !


ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !

[ಮುಂದುವರಿದು ಓದಿ ಮುಗಿಸೋಣವೇ ?....]

ಬಸವನ ಕೊಟ್ಗೆ ಬೀಜದ ಮರ ಎಂಬ ಮರವೊಂದು ಜಮೀನಿನ ಮನೆಯ ಹತ್ತಿರವೇ ಇತ್ತು. ಅದರ ಕಾಯಿಗಳು ಒಂಥರಾ ಅಡ್ಡ ವಾಸನೆಯುಳ್ಳವು. ಅದರ ಹೊರಕವಚ ಒಡೆದು ತೆಗೆದಾಗ ಒಳಗೆ ಬಾದಾಮಿಯಂತಹ ಬೀಜ-ಎಂತಹ ರುಚಿ! ಅಂತಹ ನಾಕಾರು ಕಾಯಿಗಳು ಸಿಕ್ಕರೆ ನಮ್ಮ ಪುಣ್ಯ. ಎತ್ತರದ ಮರದಲ್ಲಿ ತೂಗಾಡುವ ಕಾಯಿಗಳು ಗಾಳಿಗೇ ಬೀಳಬೇಕೇ ವಿನಃ ನಾವು ಬೀಸಿ ಎಸೆದ ಕಲ್ಲುಗಳು ತಾಗುತ್ತಲೇ ಇರಲಿಲ್ಲ. ಆದರೂ ಗಾಳಿಬೀಸಿ ಬೀಜದ ಉದುರುವಿಕೆಗಾಗಿ ಗಂಟೆಗಟ್ಟಲೆ ನಾವು ಕಾದು ಕೂತಿರುತ್ತಿದ್ದೆವು. ಮರದ ಪಕ್ಕದಲ್ಲೇ ಇನ್ನೊಂದೆರಡು ಚಿಕ್ಕಮರಗಳು. ಮರಕೋತಿ ಆಟಕ್ಕೆ ಕೋತಿಗಳೇ ಆಗಿದ್ದ ನಮಗೆ ಹೇಳಿಮಾಡಿಸಿದ್ದ ಜಾಗ ! ಅಲ್ಲೇ ಕೆಲವೊಮ್ಮೆ ಅಡಗಿಕೊಳ್ಳುವ ಆಟ, ಕಿವರ್ ಬಿಟ್ ಕಿವರ್ಯಾರು ?-ಆಟ ಎಲ್ಲಾ ನಡೆಯುತ್ತಿತ್ತು.

ಕಾಡಿನ ತುಂಬಾ ಎಲ್ಲೇ ಓಡಾಡಿದರೂ ಒಂದಿಲ್ಲೊಂದು ಕಾಡ ಮರದ ಘಮ ಮೂಡಿಗೆ ಬಡಿಯುತ್ತಿತ್ತು. ಅದು ಇಂತಿಂಥದ್ದೇ ಎಂದು ಗುರ್ತು ಹಿಡಿಯಲಾಗದಿದ್ದರೂ ಕೆಲವು ಔಷಧೀಯ ಮೂಲಿಕೆಗಳೂ ಅಂತಹ ಮರಗಳಲ್ಲಿರುತ್ತಿದ್ದವು. ಕೆಲವೊಮ್ಮೆ ಹಾದುಹೋಗುವಾಗ ಇಂದು ನಾವು ಉಪಯೋಗಿಸುವ ವಿಕ್ಸ್ ಪರಿಮಳ ಬರುತ್ತಿತ್ತು. ಇನ್ನೂ ಕೆಲವೊಮ್ಮೆ ಮಸಾಲೆಗೆ ನಾವು ಬಳಸುವ ದಾಲ್ಚಿನಿ ಎಲೆಯ ಸುಗಂಧ! ನಡುನಡುವೆ " ಅದೋ ಅಲ್ನೋಡು ಹುಲಿ ಹೆಜ್ಜೆ " ಎಂದು ಮಾವನ ಮಕ್ಕಳು ತೋರಿಸುತ್ತಿದ್ದರು. ಹುಲಿಯ ಹೆಜ್ಜೆ ಗುರುತು ಕಂಡ ನಮಗೆ ಒಳಗೊಳಗೇ ನಡುಕ! ಆದರೂ ಹುಲಿಯನ್ನು ಎಲ್ಲಾದರೂ ಜೀವಂತ ಕಾಣುವ ತವಕ!-- ಈ ಎರಡೂ ಭಾವನೆಗಳ ತಾಕಲಾಟದಲ್ಲಿ ಒಮ್ಮೊಮ್ಮೆ ನಡುಕ ಜಾಸ್ತಿಯಾದ್ರೆ ಇನ್ನೊಮ್ಮೊಮ್ಮೆ ತವಕ ಜಾಸ್ತಿ ! ಹುಲಿಗಳ ಇರುವಿಕೆ ಮತ್ತು ಓಡಾಟವಂತೂ ಖಾತ್ರಿಯಾಗಿತ್ತು. ಆದರೆ ಅಂದೆಲ್ಲಾ ಪ್ರಾಣಿಗಳು ಹಾಗೆ ಏಕಾಏಕಿ ಮನುಷ್ಯರ ವಸಾಹತುಗಳಿಗೆ ಹಗಲು ಹೊತ್ತು ಭೇಟಿ ನೀಡುತ್ತಿರಲಿಲ್ಲ. ಬೆಳಗಿನ ೫ ಗಂಟೆಯೊಳಗೆ ಅವುಗಳ ಓಡಾಟ ಮುಗಿದು ಅವು ಕಾಡನ್ನೋ ಕಾಡೊಳಗಿನ ಗವಿಗಳನ್ನೋ ಸೇರಿಬಿಡುತ್ತಿದ್ದವು. ಅವು ಹೊರಬರುವುದೇ ರಾತ್ರಿ ಹೊತ್ತಿನಲ್ಲಿ; ನಮಗೆ ನಡುಕ ಜೋರಾಗುವುದೂ ಆದೇ ಕತ್ತಲಲ್ಲಿ.

ಒಮ್ಮೆ ನಾವು ಜಮೀನಿನಲ್ಲಿರುವ ರಾತ್ರಿ, ಹುಲಿಯೊಂದು ಭಯಂಕರವಾಗಿ ಆರ್ಭಟಿಸಿತ್ತು. ಹಾಂಕೂಂ ಹಾಂಕೂಂ ಹಾಂಕೂಂ......ಸದ್ದಿಗೆ ನಮಗೆಲ್ಲಾ ಚಳಿಯಲ್ಲೂ ಬೆವರು ಹರಿಯುತ್ತಿತ್ತು, ಉಚ್ಚೆಗೆ ಅವಸರವಾದರೂ ಬಚ್ಚಲು ಹೊರಗೆ ಇದ್ದಿದ್ದರಿಂದ ಹೋಗಲು ಭಯವಾಗುತ್ತಿತ್ತು. ಇನ್ನು ಹೊರಗಡೆ ಜಮೀನಿನ ಜಾಗದಲ್ಲಿ ಎಲ್ಲಾದರೂ ಉಚ್ಚೆಗೆ ಹೋಗೋಣ ಎಂದರೆ ಅಲ್ಲೇ ಎಲ್ಲಾದರೂ ಹುಲಿ ಕೂತಿದ್ದರೆ ಎಂಬ ಅನಿಸಿಕೆ ಬೇರೆ. ಯಾರಲ್ಲೂ ಹೇಳಿಕೊಳ್ಳಲಾರೆವು, ಒತ್ತಡ ತಾಳಿಕೊಳ್ಳಲಾರೆವು. ಹಾಗೂ ಇದ್ದಬದ್ದ ದೇವರನ್ನೆಲ್ಲಾ ನೆನೆಯುತ್ತಾ ಚಾದರವನ್ನು ಮುಸುಕುಹಾಕಿಕೊಂಡು ಮಲಗಿ ಗಂಟೆಗಟ್ಟಲೆ ಕಳೆದು ನಿಧಾನವಾಗಿ ಮಾವನ ಮಕ್ಕಳನ್ನು ಕರೆದು ಎಬ್ಬಿಸಿಕೊಂಡು ಬಚ್ಚಲಿಗೆ ಹೋಗಿದ್ದೆವು. ಬಚ್ಚಲಿಗೆ ಹೋಗುವಾಗ ಕೈಕಾಲು ತರತರ ತರತರ. ಮತ್ತೆ ಮನೆಯೊಳಗೆ ಬಂದಮೇಲೇ ಬದುಕುವುದು ಗ್ಯಾರಂಟಿ ಎಂದು ಅಂದುಕೊಂಡಿದ್ದು! [ಹಗಲು ಹೊತ್ತಾದರೆ ನಾವು ಬಿಡುತ್ತಿರಲಿಲ್ಲ ಓಹೊಹೊ ಹಾಗೇನೂ ತಿಳೀಬೇಡಿ , ಕತ್ತಲೆಯಲ್ಲಿ ಏನೋ ಪಾಪ ಅಂತಾ ಸುಮ್ನಿದ್ದೆವಪ್ಪ!] ಮಾರನೇ ಬೆಳಿಗ್ಗೆ ಪಕ್ಕದ ಮರಾಠಿ ಕೇರಿಯಿಂದ ಬಂದ ಸುದ್ದಿ ಆಘಾತಕಾರಿಯಾಗಿತ್ತು. ಅಲ್ಲೊಂದು ಮನೆಯ ಬಾಗಿಲಿರದ ತಟ್ಟಿಯ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಕರುವೊಂದನ್ನು ಮುರಿದು ಎಳೆದುಕೊಂಡು ಹೋಗಿತ್ತು! ಪಾಪದ ಜೀವವೊಂದರ ಹರಣವಾಗಿತ್ತು- ಅದು ಇನ್ನೊಂದು ರಕ್ಕಸ ಜೀವಕ್ಕೆ ಆಹಾರವಾಗಿತ್ತು.

ಒಂದು ಬೆಳಿಗ್ಗೆ ಅತ್ತೆ ಘಟನೆಯೊಂದನ್ನು ಹೇಳಿದ್ದಳು. ಬೆಳಗಿನ ಆರುಗಂಟೆಗೆ ಎಂದಿನಂತೇ ತಣ್ಣಗಿನ ವಾತಾವರಣ. ಇನ್ನೇನು ಬೆಳಕು ಪೂರ್ತಿ ಹರಿದಿಲ್ಲ. ಅಂತಹ ಸಮಯದಲ್ಲಿ ಮನೆಗೆ ಕುಡಿಯುವ ನೀರು ತರುವ ಸಲುವಾಗಿ ಜಮೀನಿನ ಕೆಳಭಾಗದಲ್ಲಿದ್ದ ಬಾವಿಗೆ ಹೋಗಿದ್ದಳು. ಹೋದವಳೇ ಪುಸಕ್ಕನೆ ಬಿಂದಿಗೆಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟು ನೇರು ಸೇದುತ್ತಿರುವಾಗ ಎಡಕ್ಕೆ ತಿರುಗಿ ನೋಡಿಬಿಟ್ಟಿದ್ದಾಳೆ. ನಾಲ್ಕು ಮಾರು ದೂರದಲ್ಲಿ ಪರ್ವತದಂತಹ ಕಪ್ಪು ಆಕೃತಿ ಬಾಳೆಮರಗಳ ಮಧ್ಯೆ ನಿಂತುಬಿಟ್ಟಿದೆ! ಹಗ್ಗ ಕೈಬಿಟ್ಟವಳೇ " ಅಯ್ಯಯ್ಯೋ ಅಪ್ಪೋ ನಾ ಸತ್ನೋ " ಎಂದು ಕೂಗುತ್ತಾ ಮನೆಗೆ ಓಡಿದ್ದಾಳೆ. ಬಂದಿದ್ದು ಶ್ರೀಮಾನ್ ಗಜರಾಜರು ! ಅವರು ಒಂಟಿ ಸಲಗ ಬೇರೆ ಆಗಿದ್ದರು ಎಂಬುದು ಮಾವನ ಅಂಬೋಣ. ಉದ್ದುದ್ದ ದಂತಗಳನ್ನು ಹೊಂದಿದ್ದ ಆ ಆನೆ ಬಹಳ ಎತ್ತರವಾಗಿದ್ದುದು ಸತ್ಯವಂತೆ. ಅಲ್ಲಿಂದ ಮೇಲೆ ಅತ್ತೆ ಶಾಸ್ತ್ರಗಳನ್ನೆಲ್ಲಾ ಬದಿಗಿಟ್ಟು ಬೆಳ್ಳಂಬೆಳಿಗ್ಗೆ ನೀರು ತರುವುದಕ್ಕೇ ಹೋಗುವುದನ್ನೇ ನಿಲ್ಲಿಸಿದಳಂತೆ.

ಒಮ್ಮೆ ನಾವು ಮಾಳದಲ್ಲಿ ಇದ್ದಾಗ ಸುಮ್ಮನೇ ಅಲ್ಲಿರುವ ಸಾಮಾನುಗಳನ್ನು ತಡಕಾಡುತ್ತಿದ್ದೆವು. ಮೊದಲು ನಮಗೆ ಕಣ್ಣಿಗೆ ಬಿದ್ದಿದ್ದು ಬೀಡಿ ಕಟ್ಟು ಮತ್ತು ಬೆಂಕಿಪೊಟ್ಟಣ. ಅಲ್ಲಿ ನಾವು ಮಕ್ಕಳ ಹೊರತು ಬೇರೇ ಯಾರೂ ಇರಲಿಲ್ಲ. ನಮ್ಮದೇ ರಾಜ್ಯ! -ಕೇಳಬೇಕೇ ? ಮನೆ ದೂರದಲ್ಲಿ ಕಾಣುತ್ತಿದ್ದರೂ ಮಾಳದಲ್ಲಿ ಏನು ನಡೆಯುತ್ತಿದೆ ಎಂಬುದು ಮನೆಯಲ್ಲಿರುವವರಿಗೆ ತಿಳೀತಾ ಇರ್ಲಿಲ್ಲ. ಮಾವನ ಗಂಡುಮಕ್ಕಳು ಸೇರಿದಂತೇ ನಾವು ಒಂದು ಚಾನ್ಸ್ ತೆಗೆದುಕೊಳ್ಳೋಣ ಏನೋ ಮಜಾ ಇರ್ಬೇಕು ಅದರಲ್ಲಿ ಎಂದು ಅಂದುಕೊಳ್ಳುತ್ತಿದ್ದೆವು. ನಿತ್ಯವೂ ಮಾವ ಅಗ್ನಿಯನ್ನು ತ್ರಿಕಾಲವಲ್ಲ ಅದೆಷ್ಟೋ ಕಾಲ ಆವಾಹನೆ ಮಾಡಿ ಹೊಗೆ ಬಿಡುವುದನ್ನೂ ಹೊಗೆ ಬಿಡುತ್ತಾ ಅದೇನೋ ಒಂದು ರೀತಿ ಗಮ್ಮತ್ತು ಇರುವ ಮುಖಭಾವ ಪಡೆಯುವುದನ್ನೂ ನೋಡಿದ್ದೆವು. ಅಲ್ಲೀಗ ತಡೆಹಾಕಲು ಯಾರೂ ಇರಲಿಲ್ಲ. ಮಕ್ಕಳಿಗೆಲ್ಲರಿಗೂ ಒಂದೇ ಆಸೆ, ಅದು ಹೇಗಿರುತ್ತದೆ ಎಂದು ನೋಡಬೇಕೆಂಬುದು. ಕಡ್ಡಿ ಗೀರಿ ಬೆಂಕಿ ಹಚ್ಚಿ ಸೇದಲು ಪ್ರಯತ್ನಿಸಿದೆವು. ಕೆಮ್ಮು...ವಾಕರಿಕೆ...ಥೂ.....ಹಾಳಾದ್ದು...ಬಾಯೆಲ್ಲಾ ಕೆಟ್ಟ ನಾತ! ಗಂಟೆಗಟ್ಟಲೆ ಹೊಟ್ಟೆ ತೊಳೆಸಿದಂತಾಗಿತ್ತು. ಇಂಥಾ ಹೊಲಸು ನಾತ ಮಾವನಿಗೆ ಅದೇನು ತೃಪ್ತಿ ಕೊಡುತ್ತದೋ ದೇವರೇಬಲ್ಲ. ಅಂದಿನಿಂದ ಮತ್ತೆ ಅದಕ್ಕೆ ಮತ್ತೆ ತಲೆಹಾಕಲಿಲ್ಲ.

ಇನ್ನೊಂದು ದಿನ ಬೆಳಿಗ್ಗೆ ಯಾವುದೋ ತುರ್ತಿನ ಕೆಲಸದಲ್ಲಿ ಮನೆಗೆ ಮರಳಿದ ಮಾವ ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದರು. ಆಡುತ್ತಾ ಆಡುತ್ತಾ ಮಾಳಕ್ಕೆ ಹೋದ ನಾವು, ಹಾಸಿದ್ದ ಗೋಣೀಚೀಲದ ಕೆಳಗೆ ಮಲಗಿಸಿಟ್ಟ ಕೋವಿಯನ್ನು ಕಂಡಿದ್ದೆವು. ಇರುವವರೆಲ್ಲಾ ಬಹಳ ಗುರಿಕಾರರೇ ಆಗಿದ್ದರು! ನಾಮೇಲು ತಾಮೇಲು ಎಂದು ಕೋವಿ ಎತ್ತಿಕೊಂಡು ಗುರಿ ಹಿಡಿಯಲು ತೊಡಗಿದ್ದೆವು. ಬಂದೂಕಿನ ಅಗುಳಿಯನ್ನು ಎಳೆಯುತ್ತಿದ್ದಂತೇ ಅದು ಹಿಂದಕ್ಕೆ ಒದೆಯುವುದಂತೆ ಎಂದು ಮಾವನ ಮಕ್ಕಳು ಹೇಳಿದರು. ಬಂದೂಕು ಎಳೆದವನ ಗತಿ ಏನಾಗಬೇಡ!! ಮೊದಲೇ ಬಂದೂಕನ್ನು ಅದು ವರೆಗೂ ಕಂಡಿದ್ದು ಚಿತ್ರದಲ್ಲಷ್ಟೇ ಆಗಿತ್ತು. ಜಮೀನಿಗೆ ಬಂದಮೇಲಷ್ಟೇ ಕೋವಿಯ ಪ್ರತ್ಯಕ್ಷ ದರ್ಶನವಾಗಿದ್ದು! ಅಗುಳಿ ಎಳೆದು ಹಿಡಿದಿದ್ದೇನೆ.....ಬಿಟ್ಟರೆ ಕೋವಿ ಹಿಂದಕ್ಕೆ ಒದ್ದರೆ ನನ್ನ ಗತಿ ಏನು ಎಂಬ ಹೆದರಿಕೆ. ಇಡೀ ಶರೀರವೆಲ್ಲಾ ಕಂಪಿಸಿ "ಅಯ್ಯೋ ಬದುಕಿದ್ದರೆ ಇನ್ನು ಜಮೀನಕಡೆ ತಲೆ ಹಾಕಬಾರದು" ಎಂದುಕೊಂಡಿದ್ದೆ. ಅಷ್ಟರಲ್ಲೇ ಮಾವ ಯಾವುದೋ ಕೆಲಸಕ್ಕೆ ಹೋದವರು ಕೋವಿಯನ್ನು ಮಾಳದಲ್ಲೇ ಬಿಟ್ಟಿದ್ದು ನೆನಪಾಗಿ ಓಡೋಡಿ ಬಂದರು. ವಾಸ್ತವಕ್ಕೆ ಕೋವಿಯಲ್ಲಿ ಈಡು ತುಂಬಿರಲಿಲ್ಲವಂತೆ. ಅದು ಖಾಲೀ ಇತ್ತು. ಹೀಗಾಗಿ ನನ್ನ ಕೈಯ್ಯಿಂದ ಅದನ್ನು ಕಸಿದುಕೊಂಡರು! ಎಲ್ಲರನ್ನೂ ಒಂದಷ್ಟು ಬೈದು ಹೋದರು.

ಗದ್ದೆಯ ಬದಿಯಲ್ಲಿ ಬೆಳ್ಳಕ್ಕಿಗಳ ವಿಹಾರವಂತೂ ಸದಾ ಇರುತ್ತಿತ್ತು. ಒಂಟಿಕಾಲಲ್ಲಿ ನಿಲ್ಲುವ ಬಕಗಳೂ ಇದ್ದವು. ಹಾರುತ್ತಾ ಕೂಗುತ್ತಾ ಅಲ್ಲಲ್ಲಿ ಹಿಂಡು ಹಿಂಡಾಗಿ ಗದ್ದೆಯ ಕೀಟಗಳನ್ನೋ ಹುಳ-ಹುಪ್ಪಡಿಗಳನ್ನೋ ತಿನ್ನುತ್ತಿದ್ದವು. ಹಸಿರುಟ್ಟ ಗದ್ದೆಗಳಲ್ಲಿ ಬಿಳಿಯ ರಂಗೋಲಿ ಇಟ್ಟಂತೇ ಕಾಣುವ ಆ ದೃಶ್ಯದಲ್ಲಿ ರಂಗೋಲಿಗೆ ನಿರ್ದಿಷ್ಟವಾದ ಆಕಾರವಂತೂ ಇರಲಿಲ್ಲ! ಬದಲಾಗುವ ಬಿಳಿಯ ರಂಗೋಲಿಗಳ ಪಕ್ಕದಲ್ಲೇ ಉರ್ಸಾನಕ್ಕಿಗಳೆಂಬ ಹಕ್ಕಿಗಳೂ ಬರುತ್ತಿದ್ದವು. ಅವುಗಳ ಬಣ್ಣ ಗಾಢ ಕಂದು. ಗದ್ದೆಯ ಬದುವಿನ ಏರಿಯಲ್ಲಿ ಅಲ್ಲಲ್ಲಿ ಹೂ ಗಿಡಗಳಿದ್ದವು. ಮಾಗಿ, ಮಲ್ಲಿಗೆ, ಜಾಜಿ-ಜೂಜಿ ಹೀಗೇ ಹಲವು ತೆರನಾದ ಹೂಗಳು ಬಿಡುತ್ತಿದ್ದವು. ಅವುಗಳ ಮಕರಂದ ಹೀರಲು ಹಲವು ವಿಧದ ದುಂಬಿಗಳೂ ಚಿಕ್ಕ ಪುರ್ಲೆ ಹಕ್ಕಿಗಳೂ ಬರುತ್ತಿದ್ದವು. ಅಂಗೋಡಂಗ ಫಲವಿರಬೇಕು ಇವತ್ತು ನಮಗೆ ಹಣ್ಣು ಸಿಗದಿದ್ದರೂ ನಾಳೆ ಮತ್ತಿನ್ಯಾರೋ ಜನಾಂಗ ತಿನ್ನುತ್ತದೆ ಬಿಡು ಎಂಬ ಅವನದೇ ಉದಾತ್ತ ಭಾವದಿಂದ ಅಜ್ಜ ಜಮೀನಿನ ಹಲವೆಡೆ ಸಾಧ್ಯವಾಗುವಲ್ಲೆಲ್ಲಾ ಮಾವು, ಪೇರಲೆ, ಚಿಕ್ಕು, ಹಲಸು ಹೀಗೇ ಹಣ್ಣುಬಿಡುವ ಸಸ್ಯ ವೈವಿಧ್ಯವನ್ನು ನೆಡಿಸಿದ್ದ. ಕೆಲವೊಮ್ಮೆ ತಾನೇ ಸ್ವತಃ ನಿಂತು ಮಣ್ಣು-ಗೊಬ್ಬರಗಳ ಕೆಲಸ ಮಾಡಿದ್ದೂ ಇದೆ. ನಮ್ಮೂರಲ್ಲೂ ಅಷ್ಟೇ: ಬೆಳೆದ ಹಣ್ಣುಗಳನ್ನು ಅಲ್ಲಿರಬಹುದಾದ ಎಲ್ಲರಿಗೂ ಅಜ್ಜ ಹಂಚುತ್ತಿದ್ದ, ಹಂಚಿಯೇ ತಿನ್ನಬೇಕೆಂಬ ಅಭ್ಯಾಸ ಅಜ್ಜನದಾಗಿತ್ತು.

ಜಮೀನಿನ ಕೆಳಭಾಗದಲ್ಲಿ ಉದ್ದಕ್ಕೂ ಹರಿಯುವ ದೊಡ್ಡ ಹಳ್ಳವೊಂದಿತ್ತು ಎಂದಿದ್ದೆನಲ್ಲಾ ..ಅದರಲ್ಲಿ ನಾವು ಈಜಲು ಹೋಗುತ್ತಿದ್ದೆವು. ಆ ಹಳ್ಳದಲ್ಲಿ ವಾಟೆಚಪ್ಪಿನ ಸಂದಿಗಳಿಂದ ಹಾಯ್ದು ಬರುವ ತಣ್ಣನೆಯ ಸ್ಫಟಿಕಸದೃಶ ನೀರು ಹರಿಯುತ್ತಿತ್ತು. ಯಾರೂ ಗಲೀಜು ಮಾಡಿರದ ಪರಿಶುದ್ಧ ನೀರು ಅದು. ಪೊಡವಿಯ ಅಡವಿಯ ನಡುನಡುವೆ ಹುದುಗಿರುವ ಗಿಡಗೋಪಾಲಕೃಷ್ಣನ ಮೂಲಿಕಾ ತೀರ್ಥ ಅದಾಗಿತ್ತು! ಅದರಲ್ಲಿ ಅದೆಷ್ಟು ಖನಿಜಪದಾರ್ಥಗಳು ಇದ್ದವೋ ಶಿವನೇ ಬಲ್ಲ. ಹಳ್ಳದಲ್ಲಿ ಬಂಡೆಗಳಿದ್ದವು, ಚಿಕ್ಕ ಚಿಕ್ಕ ಕಲ್ಲುಗಳಿದ್ದವು. ಹಾಗೆಯೇ ಹಾವಸೆಯೂ ಇದ್ದಿದ್ದರಿಂದ ಜಾರುತ್ತಿತ್ತು. ಕಲ್ಲಿನಮೇಲೆ ಕಾಲಿರಿಸಿ ’ಕಾಸು ಎಣಿಸಿಕೊಂಡ’ ಅನುಭವ ಇದೆ ಬಿಡಿ. ಆದರೆ ಇನ್ನೂ ಎಳೆಯ ಪ್ರಾಯ ಆಗಿದ್ದರಿಂದ ಬಿ.ವಿ.ಪಂಡಿತರ ತೈಲ ಹಚ್ಚಿಕೊಳ್ಳುವ ಪ್ರಮೇಯ ಆಗ ಬಂದಿರಲಿಲ್ಲ! ಕೆಲವೊಮ್ಮೆ ನೀರಿನಲ್ಲೇ ಅಟ್ಟಾಡಿಸಿಕೊಂಡು ಮುಖ ಮೂತಿ ಜರಿದುಕೊಂಡೋ ಕುಂಡೆಗೆ ಹೊಡೆತಬಿದ್ದು ನೊಂದುಕೊಂಡೋ ಉಜ್ಜಿಕೊಳ್ಳುತ್ತಾ ಕೂತಿದ್ದಿದೆ. ಮುಖವಡಿಯಾಗಿ ಬಿದ್ದರೂ ಮೂಗಿಗೆ ಏನೂ ಆಗಿಲ್ಲಾ ಎನ್ನುವ ಇವತ್ತಿನ ಅಂಹಕಾರಿಗಳಂತೇ ನಾವು ಬಿಟ್ಟುಕೊಡುವ ಜನವಾಗಿರಲಿಲ್ಲ! ಕಾಲಲ್ಲಿ ಆದ ಗಾಯಗಳು ವಾರಗಟ್ಟಲೆ ನೋವು ಕೊಟ್ಟರು ಹಳ್ಳದಲ್ಲಿ ಆಡುವ ಖುಷಿ ಇವತ್ತಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಸಿಗುವುದಿಲ್ಲ!

ಹಳ್ಳದಲ್ಲಿ ಅಲ್ಲಲ್ಲಿ ಹಲವಾರು ಕಾಲುಗಳಿರುವ ಊದ್ದದ ಒಂದು ರೀತಿ ಹುಳಗಳಿರುತ್ತಿದ್ದವು. ಅವು ನೀರಲ್ಲಿ ಈಜಾಡುತ್ತಾ ಬಂಡೆಗಳ ಸಂದಿನಲ್ಲಿ ಸೇರಿಕೊಂಡು ಬಿಡುತ್ತಿದ್ದವು. ಅವುಗಳು ಹೆಸರು ಅಂದಿಗೆ ನಮಗೆ ಗೊತ್ತಾಗಿರಲಿಲ್ಲ. ನಂತರ ತಿಳಿದಿದ್ದು ಅವು ಸೀಗಡೀ ಮೀನುಗಳು ಎಂದು. ಅವುಗಳನ್ನು ನಾವು ಹಿಡಿಯಲು ಪ್ರಯತ್ನಿಸುತ್ತಿದ್ದೆವು. ಇನ್ನೇನು ಮರಿ ಸೀಗಡಿಯೊಂದು ಸಿಕ್ಕೇ ಬಿಟ್ಟಿತು ಎಂದುಕೊಳ್ಳುವಷ್ಟರಲ್ಲಿ ಅದು ಸದ್ದಿಲ್ಲದೇ ಅದೆಲ್ಲೋ ಮಾಯವಾಗಿಬಿಡುತ್ತಿತ್ತು! ಸ್ವಲ್ಪ ದೊಡ್ಡ ಸೀಗಡಿಯಾದರೆ ಅಕಸ್ಮಾತ್ ಸಿಕ್ಕಿದರೂ ಕಚ್ಚುತ್ತದೇನೋ ಎಂಬ ಅಂಜಿಕೆ ನಮ್ಮಲ್ಲಿ. ಮಾವನ ಮಕ್ಕಳು ತಾವು ಅದನ್ನು ಕೈಲಿ ಮುಟ್ಟಿದ್ದೇವೆ ಎಂದಾಗ ನಾವೇಕೆ ಕಮ್ಮಿಯಾಗಬೇಕು ಹೇಳಿ ! ಹಿಡಿದು ಒಮ್ಮೆ ಮುಟ್ಟಿ ಮತ್ತೆ ನೀರಿಗೇ ಬಿಡುವುದು ನಮ್ಮ ಇಚ್ಛೆ! ಸೀಗಡಿ ಹಿಡಿದೇ ತೀರಬೇಕೆಂಬ ಛಲ ಹೊತ್ತು ಗಂಟೆಗಟ್ಟಲೆ ಅಲೆದಿದ್ದಿದೆ! ಮನೆಯಿಂದ ಕೂಗು ಕೇಳಿಸಿ ಇನ್ನೇನು ಬಡಿಗೆ ಬರುತ್ತದೆ ಎಂಬ ಡೌಟು ಬರುವವರೆಗೂ ನಾವು ಹೊರಡುವ ಪ್ರಮೇಯವೇ ಇರಲಿಲ್ಲ! ಅದು ಹೊತ್ತುಗೊತ್ತಿನ ಪ್ರಶ್ನೆಯಲ್ಲ, ಆಡುವುದೊಂದೇ ಗೊತ್ತು!

ತೋಟದಲ್ಲಿ ಗೊನೆಕಿತ್ತನಂತರ ಹಾಗೇ ಬಿದ್ದ ಬಾಳೆಮರಗಳನ್ನು ಕಡಿದುರುಳಿಸಿದಾಗ ಕತ್ತಲಲ್ಲಿ ಕಾಡುಗಳ್ಳರು ಕರಗಾಸ [ಗರಗಸ] ಕಾಮಗಾರಿ ನಡೆಸಿ ಶ್ರೀಗಂಧದ ಮರಗಳನ್ನು ಕಡಿದು ಪಡೆದ ಸಂತೃಪ್ತಿಗಿಂತಾ ಅಧಿಕ ತೃಪ್ತಿ ನಮ್ಮದಾಗುತ್ತಿತ್ತು! ಅಂತಹ ಬಾಳೆ ದಿಮ್ಮಿಗಳನ್ನು ನಿಧಾನಕ್ಕೆ ಎಳೆದೊಯ್ದು ಹಳ್ಳಕ್ಕೆ ರವಾನಿಸಿಕೊಂಡು ಅಲ್ಲಿ ನಾಕಾರು ದಿಮ್ಮಿಗಳನ್ನು ಒಂದರ ಪಕ್ಕ ಇನ್ನೊಂದು ಜೋಡಿಸಿಕೊಳ್ಳುತ್ತಿದ್ದೆವು. ಬಿದಿರ ಗೂಟಗಳನ್ನು ತಂದು ಆ ಕೊನೆಗೆ ಈ ಕೊನೆಗೆ ಮತ್ತು ಮಧ್ಯಕ್ಕೆ ಒಂದೊಂದು ಬರುವಂತೇ ಅಡ್ಡಡ್ಡ ಅವುಗಳ ಮಧ್ಯೆ ತೂರಿಸಿಬಿಟ್ಟರೆ ತೆಪ್ಪ ರೆಡಿ ! ನಂತರ ಬಹಳ ಹೊತ್ತು ಮಕ್ಕಳು ಸ್ವಾಮಿಗಳ ’ತೆಪ್ಪೋತ್ಸವ’! ಹಳ್ಳದಲ್ಲಿ ಉದ್ದಕ್ಕೂ ಅಗಲಕ್ಕೂ ಒಂದಷ್ಟು ದೂರ ಕ್ರಮಿಸುವುದು. ತೆಪ್ಪವನ್ನು ಗಿರಿಗಿಟ್ಲೆಯಂತೇ ತಿರುಗಿಸುವುದು. ಹೀಗೇ ಅದರಲ್ಲಿಯೇ ಆಟ. ಸುಮಾರು ಆಳವಿದ್ದ ಕೆಲ ಭಾಗಗಳಲ್ಲಿ ಈಜು ಹೊಡೆಯುವುದು ಬಲು ಮೋಜು! ಹಾಗೆ ಈಜು ಹೊಡೆಯುವಾಗ ತೆಪ್ಪದ ಕೆಳಗೆ ಮುಳುಗಿ ಅಡಗಿದ್ದ ನನ್ನನ್ನು ನೀರಲ್ಲಿ ಮುಳುಗಿ ಹೋಗೇಬಿಟ್ಟ ಎಂದು ಹೆದರಿ ಓಡಿ ಮಾವನನ್ನು ಕರೆತಂದಿದ್ದರು ಉಳಿದ ಮಕ್ಕಳು!

ಮರವೊಂದಕ್ಕೆ ಬಾವಿ [ತೆಂಗಿನನಾರಿನ] ಹಗ್ಗ ಕಟ್ಟಿ ಕೆಳಗೆಬಿಟ್ಟುಕೊಂಡು ಅದಕ್ಕೊಂದು ಹಲಗೆ ತುಂಡು ಸಿಕ್ಕಿಸಿಕೊಂಡು ’ಉಯ್ಯಾಲೆ ಸೇವೆ ’ ನಡೆಯುತ್ತಿತ್ತು. ತೂಗೀ ತೂಗೀ ತೂಗೀ ಹಗ್ಗ ಸವೆದು ಹರಿದು ಬಿದ್ದಾಗ ತಿರುಪತಿ ತಿಮ್ಮಪ್ಪಸ್ವಾಮಿ ಗೋವಿಂದಾ...ಗೋವಿಂದ! ದೀಪಾವಳಿಯಲ್ಲಿ ಆಕಾಶಬುಟ್ಟಿಯನ್ನು ಮನೆಯಲ್ಲೇ ತಯಾರುಮಾಡುವ ವೈಖರಿ ಹಿಂದಕ್ಕೆ ಇತ್ತು. ಬಿದಿರುಕಡ್ಡಿಗಳು, ಬಣ್ಣದ ಕಾಗದದ ತುಂಡುಗಳು, ಅಂಟು, ದಾರ ಇವುಗಳಿಂದ ನಾಜೂಕಾಗಿ ಜೋಡಿಸಿ ಮಾಡುವ ದೊಡ್ಡ ಆಕಾಶಬುಟ್ಟಿ ರೆಕ್ಕೆ ಪುಕ್ಕಗಳನ್ನು ಹಾರಿಸುತ್ತಾ ಎತ್ತರದ ಮರದ ಕೊಂಬೆಗೆ ಅಡ್ಡಲಾಗಿ ಹೊರಚಾಚುವಂತೇ ಕಟ್ಟಿದ್ದ ಗೂಟವೊಂದರ ತುದಿಗೆ ಕಟ್ಟಲಾದ ಗಡಗಡೆ [ಚಿಕ್ಕ ರಾಟಿ]ಯ ಮೂಲಕ ನಿತ್ಯವೂ ಮೇಲೇರಿ ಕೆಳಗಿಳಿದು ಮಾಡುತ್ತಿತ್ತು! ವಿದ್ಯುತ್ತಿರದ ಕಾರಣ ಅದರಲ್ಲಿ ಮೊಂಬತ್ತಿಯನ್ನೋ ಹಣತೆಯನ್ನೋ ಇಡುವ ವ್ಯವಸ್ಥೆ ಇರುತ್ತಿತ್ತು, ಬೆಂಕಿ ಸುತ್ತಲ ಕಾಗದಕ್ಕೆ ತಾಗದ ರೀತಿ ಇರುತ್ತಿತ್ತು. ದೀಪ ಹಚ್ಚಿದ ಆಕಾಶಬುಟ್ಟಿ ಧ್ವಜಾರೋಹಣದಂತೇ ಮೇಲೇರುವುದನ್ನು ನೋಡುವುದೇ ಬಲುಖುಷಿಯ ಕೆಲಸವಾಗಿತ್ತು. ಇಬ್ಬನಿ ಬಿದ್ದು ಬಣ್ಣದ ಕಾಗದ ಕಳಾಹೀನವಾಗದಿರಲಿ ಎಂಬ ಕಾರಣಕ್ಕೆ ಆಕಾಶಬುಟ್ಟಿ ನಿಲ್ಲುವ ಆ ಎತ್ತರಕ್ಕೂ ಮಾರು ಮೇಲೆ ಅದೇ ಮರದ ಸಹಾಯದಿಂದ ತಾಳೆಯಗರಿಯ ಛಾವಣಿಯನ್ನು ಮಾವ ಕಟ್ಟಿದ್ದು ಇನ್ನೂ ನೆನಪಿಗೆ ಬರುತ್ತಿದೆ.

ಅಜ್ಜನ ಇಂತಹ ಪ್ರೀತಿಯ ಅಶ್ರಯದಲ್ಲಿ ಬೆಳೆದ ಮಕ್ಕಳು ಅನುಭವಿಸಿದ ಆನಂದ ಇಂದಿನ ಮಕ್ಕಳಿಗೆ ಲಭ್ಯವಿಲ್ಲ. ಕಾಡುಗಳೂ ನಾಶವಾಗಿ ನಾಡೆಲ್ಲಾ ಕಾಂಕ್ರೀಟು ಕಾಡುಗಳಾದ ಪರಿಣಾಮ ಮುಂದೊಂದು ದಿನ ಇವೆಲ್ಲಾ ಕೇವಲ ಕಟ್ಟುಕಥೆಗಳಂತೇ ಕಾಣಿಸಿದರೆ ಆಶ್ಚರ್ಯವಿಲ್ಲ. ಇವತ್ತಿನ ಮಕ್ಕಳು ಬರೇ ಪೋಗೋ ಮತ್ತು ಇನ್ನಿತರ ವಾಹಿನಿಗಳಲ್ಲಿ ಕಾಣಸಿಗುವ ಕಾಲ್ಪನಿಕ ಆನಿಮೇಟೆಡ್ ಕಾಡನ್ನು ನೋಡಬೇಕಾಗಿದೆ. ನ್ಯಾಷನಲ್ ಜಿಯೋಗ್ರಾಫಿಕ್, ಡಿಸ್ಕವರಿ ಇಂತಹ ಕೆಲವು ಮಾಧ್ಯಮವಾಹಿನಿಗಳು ಕಾಡುಗಳನ್ನೂ ವನಚರಗಳನ್ನೂ ಅವುಗಳ ಬದುಕಿನ ಮಜಲುಗಳನ್ನೂ ತೋರಿಸುತ್ತಿರುವುದು ನಿಜಕ್ಕೂ ಆನಂದದಾಯಕ. ಮುಂದಿನ ಪೀಳಿಗೆಗೆ ಅಲ್ಪವಾದರೂ ಕಾಡುಗಳನ್ನು ನಾವು ಉಳಿಸುತ್ತೇವೇಯೇ ಎಂಬುದು ಚಿಂತನಾಕಾರಕ, ನಮಸ್ಕಾರ.

Tuesday, January 31, 2012

ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !


ಅಜ್ಜನ ರಾಮರಾಜ್ಯದಲ್ಲಿ ಹುಲಿ-ಆನೆಗಳಿಗಾಗಿ ತವಕಿಸುತ್ತ ಕಳೆದ ದಿನಗಳು !

ಚಳಿಗಾಲದ ಸಂಜೆಯ ಚುಮು ಚುಮು ಚಳಿಯಲ್ಲಿ ಅಜ್ಜ ಕೇರಿಯ ಯಾರೊಟ್ಟಿಗೋ ಮಾತು-ಕಥೆಯಾಡುತ್ತಿರುವಾಗ ಎಡತಡಸುವ ಚಿಕ್ಕ ಹುಡುಗ ನಾನಾಗಿದ್ದೆ. ಅಡ್ಡ ಬರುವುದಕ್ಕೆ ಸಿಟ್ಟುಬಂದರೂ ಮೊಮ್ಮಗನ ಮೇಲಿನ ವ್ಯಾಮೋಹಕ್ಕೇನೂ ಕೊರತೆಯಿರಲಿಲ್ಲ; ಹಾಗೆ ಕರೆದು ತನ್ನ ಕಾಲ ಸಂದಿಯಲ್ಲಿ ಕೂರಿಸಿಕೊಂಡಾಗ ಅಜ್ಜ ಹೊದ್ದ ಪಂಚೆಯೋ ಶಾಲೋ ನನ್ನನ್ನೂ ಮುಚ್ಚುತ್ತಿತ್ತು. ಅಜ್ಜನ ಮೈಯ್ಯ ಶಾಖ ಆ ಬಟ್ಟೆಯೊಳಗೇ ಇದ್ದು ಹೊರಗಿನ ಚಳಿ ತಾಗದೇ ಒಂಥರಾ ಹಾಯೆನಿಸುವ ಖುಷಿ ಬೇರೆ. ರೈತರ ಮನೆಯಾಗಿದ್ದರಿಂದ ರೈತಾಪಿ ವರ್ಗದ ಅನೇಕ ಕಷ್ಟಸುಖಗಳ ಕಥಾನಕಗಳು ಮಾತುಕಥೆಗಳಲ್ಲಿ ಅಡಕವಾಗೇ ಇರುತ್ತಿದ್ದವು. ಬೆಳೆದ ಫಸಲಿಗೆ ಸಿಗಬಹುದಾದ ಧಾರಣೆಯಿಂದ ಹಿಡಿದು ಬೆಳೆಗಳಿಗೆ ತಗಲುವ ಬಾಧೆಗಳು, ಗಂಟಿ[ದನ]ಕರುಗಳ ರೋಗ-ರುಜಿನಗಳು, ಆಹಾರ-ಧಾನ್ಯಗಳು, ಮದುವೆ-ಮುಂಜಿ ಕಾರ್ಯಕಟ್ಲೆ ಸುದ್ದಿಗಳು ಹೀಗೇ ವೈವಿಧ್ಯಮಯ ವಿಚಾರಗಳು ಜಗಲಿಯಲ್ಲಿ ಮಂಡಿಸಲ್ಪಡುತ್ತಿದ್ದವು. ಅಜ್ಜ ಹಾಗೆ ಸಿಗುವುದು ತೀರಾ ಅಪರೂಪ; ಇದು ನಿತ್ಯದ ವೈಖರಿಯಲ್ಲ, ಅಪರೂಪಕ್ಕೆ ೧೫ ದಿನಕ್ಕೋ ೨೨ ದಿನಕ್ಕೋ ಸಿಗುವ ಅವಕಾಶ. ಒಮ್ಮೊಮ್ಮೆ ಈ ಕೂಟ ಚಾ ಕುಡಿಯುವುದರೊಂದಿಗೆ ಮುಗಿಯುತ್ತಿತ್ತು. ಚಾ ಕುಡಿದರೆ ಆಗುವ ಅಡ್ಡ-ಉದ್ದ ಪರಿಣಾಮಗಳ ಬಗ್ಗೆ ನಮಗೆ ಅರಿವಿರದ್ದರಿಂದ ’ಬರಿದೇ ಮಕ್ಕಳು ಚಾ ಕುಡಿಯಬಾರದೆಂದು ಹೇಳ್ತಾರೆ ತಾವು ಮಾತ್ರ ಕುಡೀತಾರೆ’ ಎಂಬ ಗೊಣಗಿಕೊಳ್ಳುವಿಕೆಯಿಂದ ಸುಮ್ಮನಾಗುತ್ತಿದ್ದೆವು.

ಅಜ್ಜ ಸ್ವಾತಂತ್ರ್ಯ ಪೂರ್ವದಲ್ಲಿ ೧೯೧೭ರಲ್ಲಿ ಜನಿಸಿದ್ದ. ತಕ್ಕಮಟ್ಟಿಗೆ ಸ್ವಾತಂತ್ರ್ಯ ಸಂಗ್ರಾಮಗಳ ಗಾಳಿ ಅಜ್ಜನಿಗೆ ತಟ್ಟಿದ್ದರೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂದು ಯಾವತ್ತೂ ಅಜ್ಜ ಹೇಳಿಕೊಳ್ಳಲಿಲ್ಲ. ಮನೆಯಲ್ಲಿ ಅಜ್ಜನ ತಂದೆಯವರಿಗೆ ಮೂರ್ನಾಲ್ಕು ಮಕ್ಕಳು. ಸಹಜವಾಗಿ ಕಿತ್ತು ತಿನ್ನುವ ಬಡತನ. ಆ ಕಾಲಕ್ಕೆ ಏನೂ ಇರಲಿಲ್ಲವಂತೆ. ಬಡತನ ಎಷ್ಟಿತ್ತೆಂದರೆ ಆನಬಾಳೇಕಾಯಿ[ದಪ್ಪ ಬಾಳೇಕಾಯಿ]ಪಲ್ಯವನ್ನು ಬೆಳಿಗ್ಗೆಯ ತಿಂಡಿಯಾಗಿ ತಿನ್ನುತ್ತಿದ್ದರಂತೆ. ಅಂದು ಇಂದಿನಂತೇ ಅಂಗಡಿಮುಂಗಟ್ಟುಗಳು ತಾಲೂಕು ಬಿಟ್ಟು ಹಳ್ಳಿಗಳಲ್ಲಿ ಇರಲಿಲ್ಲ. ಹಿಟ್ಟಿನ, ಅವಲಕ್ಕಿಯ ಗಿರಣಿಗಳು ಇರಲಿಲ್ಲ. ಎಲ್ಲವೂ ಮನೆಯಲ್ಲೇ ಇರುವ ಬೀಸುವ ಒಳಕಲ್ಲು, ಗೋಧಿ ಕಲ್ಲು, ಅವಲಕ್ಕಿ ಕುಟ್ಟುವ ಕಲ್ಲು ಇವುಗಳಲ್ಲೇ ಆಗಬೇಕು! ಅವಲಕ್ಕಿ ಮತ್ತು ಅಕ್ಕಿಗಳನ್ನು ಒನಕೆಯಿಂದ ಕುಟ್ಟಿಯೇ ತಯಾರಿಸುತ್ತಿದ್ದರಂತೆ. ಚಿಟಗನಕ್ಕಿ ಭತ್ತದ ಅವಲಕ್ಕಿ ತಿನ್ನಲು ತುಂಬಾ ರುಚಿಯಿರುತ್ತಿತ್ತು. [ಆ ತಳಿಯ ಭತ್ತದ ಅವಲಕ್ಕಿ ನಾನು ಚಿಕ್ಕವನಿರುವಾಗ ಕೂಡ ನನಗೆ ಸಿಕ್ಕಿತ್ತು!] ಆದರೆ ಪ್ರತಿದಿನ ಮಾಡಿಕೊಳ್ಳುವಷ್ಟು ಅಜ್ಜ ಸಿರಿವಂತನಾಗಿರಲಿಲ್ಲ. ಆ ಕಾಲಕ್ಕೆ ದೋಸೆ ಎಂಬುದು ಒಂದು ವಿಶೇಷ ಕಜ್ಜಾಯವಾಗಿತ್ತು ಎಂದು ಅಜ್ಜ ಹೇಳುತ್ತಿದ್ದುದು ನೆನಪಿದೆ! ಅಜ್ಜ ೧೬ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ; ಕುಟುಂಬದ ಭಾರ ಹೆಗಲಿಗೆ ಬಿತ್ತು. ಆಗಲೇ ಅಣ್ಣ-ತಮ್ಮಂದಿರಿಗೆ ಮದುವೆ ಬೇರೆ. ಅಣ್ಣ-ತಮ್ಮಂದಿರು ಇರುವ ಭೂಮಿ ಹಿಸ್ಸೆಮಾಡಿಕೊಂಡು ಬೇರೇ ಬೇರೆಯಾಗಿದ್ದರು.

ಅಜ್ಜನಿಗೆ ಮುಂದೆ ನಾಕು ಗಂಡು ಎರಡು ಹೆಣ್ಣು ಒಟ್ಟಿಗೆ ಆರು ಮಕ್ಕಳು ಜನಿಸಿದರು. ಮಕ್ಕಳ ಲಾಲನೆ-ಪಾಲನೆ ಜೊತೆಗೆ ಅಜ್ಜ-ಅಜ್ಜಿ ಇಬ್ಬರೂ ಇರುವ ಅಡಕೆಯ ತೋಟದಲ್ಲಿ ಸ್ವತಃ ಗೇಯುತ್ತಿದ್ದರು. ಅಜ್ಜಿ ಕೊಟ್ಟಿಗೆಯಿಂದ ಆಕಳ ಗೊಬ್ಬರವನ್ನು ಹೆಡಗೆಗಳಲ್ಲಿ ಹೊತ್ತು ತಾನೂ ಸಹಕರಿಸುತ್ತಿದ್ದಳಂತೆ. ಒಮ್ಮೆ ಚಿಕ್ಕ ಮಗುವಾಗಿದ್ದ ಚಿಕ್ಕಪ್ಪನನ್ನು ತೋಟದ ಅಡಕೆಮರದ ಮರದ ಬೊಪ್ಪೆಯ[ಬುಡದ]ಮೇಲೆ ಮಲಗಿಸಿಟ್ಟು ತುಸುದೂರದಲ್ಲಿ ಕೆಲಸಮಾಡುತ್ತಿರುವಾಗ ಮಗು ಹೊರಳಿ ಅಂಬೆ ಹರೆದು ನೀರಿಲ್ಲದ ಚಿಕ್ಕ ೭-೮ ಅಡಿಯ ಬಾವಿಗೆ ಬಿದ್ದುಬಿಟ್ಟಿತಂತೆ! ದೇವರು ದೊಡ್ಡವನು-ಮಗು ಸಾಯಲಿಲ್ಲ, ಚಿಕ್ಕಪುಟ್ಟ ಪೆಟ್ಟುಗಳಾಗಿದ್ದವಂತೆ. ಆಗೆಲ್ಲಾ ಕತ್ತಲ ಕಾಲ; ವಿದ್ಯುದ್ದೀಪ ಇನ್ನೂ ಬಂದಿರಲಿಲ್ಲ. ರಾತ್ರಿ ಚಿಮಣಿ ಬುಡ್ಡಿ ದೀಪವೇ ಎಲ್ಲದಕ್ಕೂ. ಒಮ್ಮೆ ಬುಡ್ಡಿಯನ್ನು ದೂರದಲ್ಲಿಟ್ಟು ಆಗ ಮಗುವಾಗಿದ್ದ ಇನ್ನೊಬ್ಬ ಚಿಕ್ಕಪ್ಪನನ್ನು ಮಲಗಿಸಿ ಹೋಗಿದ್ದರೆ ಆ ಪುಣ್ಯಾತ್ಮ ಸೂರ್ಯನನ್ನು ಹಣ್ಣೆಂದು ಭಾವಿಸಿದ ಹನುಮನಂತೇ ಬೆಂಕಿಯ ಜೊತೆ ಸರಸವಾಡಲು ಬುಡ್ಡಿಯನ್ನೇ ಬರಸೆಳೆದು ಅಜ್ಜಿ ಓಡಿಬರುವಷ್ಟರಲ್ಲಿ ಹೊಟ್ಟೆಯ ಕೆಲಭಾಗ ಸುಟ್ಟುಹೋಗಿತ್ತು! ಇಲ್ಲೂ ಅಷ್ಟೇ ಭಗವಂತ ದೊಡ್ಡವನು; ತೀರಾ ಸಾಯುವಷ್ಟು ಸುಟ್ಟಿರಲಿಲ್ಲ, ಆದರೂ ಕಲೆ ಈಗಲೂ ಇದೆ.

ಸಂಸಾರದ ಭಾರವನ್ನು ಹೊತ್ತ ಅಜ್ಜನಿಗೆ ಇರುವ ತೋಟದ ಗಳಿಕೆ ವರ್ಷದ ಮೂರುತಿಂಗಳೂ ಸಾಲುವಷ್ಟಿರಲಿಲ್ಲವಂತೆ. ಆಗ ಮರ್ಯಾದೆಗೆ ಬಹುದೊಡ್ಡ ಮೌಲ್ಯವಿದ್ದಕಾಲ. ಯಾರಾದರೂ ನೆಂಟರು-ಇಷ್ಟರು ಬಂದರೆ ಸತ್ಕರಿಸಬೇಕು. ಊರೂರು ಅಲೆಯುವ ಸಂಭಾವನೆ ಬೇಡುವವರು, ಯಾವುದೋ ವಂತಿಗೆ-ವರಾಡಿಯವರು, ಭಿಕ್ಷುಕರು ಅವರು ಇವರು ಅಂತ ಯಾರ್ಯಾರೋ ಬರುತ್ತಿದ್ದರಂತೆ. ಊಟದ ಹೊತ್ತಿಗೆ ಬಂದ ಯಾರನ್ನೂ ಹಾಗೇ ಕಳಿಸುವ ವೈವಾಟು ನಮ್ಮಲ್ಲಿರಲಿಲ್ಲ. ಕಷ್ಟದ ದಿನಗಳಲ್ಲಿ ಅಜ್ಜ ಕೈಚೆಲ್ಲಿ ಕೂತಿರಲಿಲ್ಲ. ಬೇರೆಯವರ ಮನೆ ಕೂಲಿ ಕೆಲಸಮಾಡಿ ದುಡಿಯುತ್ತಿದ್ದರು. ನಮ್ಮಲ್ಲಿನ ರೈತಾಪಿ ಕೆಲಸಗಳಾದ ಕೊಟ್ಟೆಕಟ್ಟುವುದು[ ಅದು ಈಗ ಬರೇ ಇತಿಹಾಸದ ಪುಟದಲ್ಲಿ ಮಾತ್ರ ಕೇಳಸಿಗುತ್ತದೆ] ಕೊನೆಕೊಯ್ಯುವುದೇ ಮೊದಲಾಗಿ ಮರಗೆಲಸ[ಮರದಮೇಲಿನ ಕೆಲಸ]ಗಳನ್ನೂ ಮಾಡಿ ಮಕ್ಕಳನ್ನೂ ಹೆಂಡತಿಯನ್ನೂ ಸಲಹಿದ್ದು ಕೇಳಿದ್ದೇನೆ. ಇಂತಹ ಅಜ್ಜ ಕಲಿತಿದ್ದು ಕನ್ನಡ ಪ್ರಾಥಮಿಕದ ಮೂರನೇ ತರಗತಿಯನ್ನು. ಆದರೂ ಆತನ ವ್ಯವಹಾರದ ಶಿಸ್ತು ಸಿಪಾಯಿಯ ಶಿಸ್ತಿನಂತಿತ್ತು. ಹಲವರ ಒಡನಾಟದಿಂದ ಅಜ್ಜ ಅನೇಕ ಆಂಗ್ಲ ಮತ್ತು ಹಿಂದೀ ಪದಗಳನ್ನು ಅರ್ಥಮಾಡಿಕೊಳ್ಳುತ್ತಿದ್ದ, ಅಂಥವರ ಜೊತೆ ಅಂತಂಥದೇ ಶಬ್ದಗಳನ್ನು ಬಳಸುವುದನ್ನು ನೋಡಿದ ನನಗೇ ಆಶ್ಚರ್ಯವಾಗುತ್ತಿತ್ತು.

ಸರಿಯಾಗಿ ಉಳಿದುಕೊಳ್ಳಲು ಮನೆಯೂ ಇಲ್ಲದ ಗುಡಿಸಲಿನ ವಾತಾವರಣವಿದ್ದ ಕಾಲದಲ್ಲಿ ಅಜ್ಜನಿಗೆ ಹೇಗಾದರೂ ಮಾಡಿ ಚಿಕ್ಕ ಮನೆ ಕಟ್ಟುವ ಅಸೆಯಾಯ್ತು. ದುಡಿಯುವ ದುಡ್ಡಿನಲ್ಲಿ ಬಿಡಿಗಾಸೂ ಉಳಿಯುತ್ತಿರಲಿಲ್ಲ. ಅದಕ್ಕಾಗಿ ಅಜ್ಜ ಅಡಕೆ ವ್ಯಾಪಾರಕ್ಕೆ ತೊಡಗಿದ. ವ್ಯಾಪಾರ ಅಜ್ಜನ ಕೈಹಿಡಿಯಿತು ಎಂದು ಅವರ ಜೀವನದ ಗತಿಯೇ ಹೇಳುತ್ತದೆ. ಇದೇ ಸಮಯದಲ್ಲಿ ಮಹಾತ್ಮರಾದ ಭಗವಾನ್ ಶ್ರೀಧರರು ನಮ್ಮಲ್ಲಿಗೆ ಬಿಜಯಂಗೈದಿದ್ದರು. ಅಜ್ಜ ಭಕ್ತಿಯಿಂದ ಪಾದಪೂಜೆ ನಡೆಸಿದ್ದನಂತೆ. " ತಮ್ಮಾ ಕರಿಕಾನಮ್ಮನ ದೇವಸ್ಥಾನ ಕಟ್ಟುವುದಕ್ಕೆ ನನ್ನ ಜೊತೆಗೆ ಬಂದವರಿಗೆ ಏನಾದರೂ ಕೊಡು ಅದು ನಿನಗೆ ಮೂರುಪಟ್ಟಾಗುವುದು" ಎಂದಿದ್ದರಂತೆ. [ಆಗ ಜಾಗ್ರತ ಸ್ಥಳವಾದ ಹೊನ್ನಾವರ ತಾಲೂಕಿನ ಶ್ರೀಕರಿಕಾನ್ ಪರಮೇಶ್ವರೀ ದೇಗುಲವನ್ನು ಕಟ್ಟಲು ಅನೇಕ ಜನ ಸೇರಿ ಸಂಕಲ್ಪಿಸಿದ್ದರೂ ಅದು ದೈವೀಶಕ್ತಿಯಿರುವ ಜನರಿಂದ ಮಾತ್ರ ಸಾಧ್ಯ ಎಂಬ ಕಾರಣಕ್ಕೆ ನಿಂತುಹೋಗಿದ್ದು ಶ್ರೀಧರರು ಅದನ್ನು ತಿಳಿದು ತಾವೇ ಆ ಕೆಲಸ ಮುಗಿಸಿಕೊಡಲು ಮುಂದೆ ನಿಂತಿದ್ದರು.] ಸರ್ವಸಂಗ ಪರಿತ್ಯಾಗಿಯಾದ ಪರಮಹಂಸ ಸನ್ಯಾಸಿಯೊಬ್ಬರು ನಿಸ್ಪೃಹರಾಗಿ ಸ್ವತಃ ತನ್ನಲ್ಲಿ ಏನಾದರೂ ಕಟ್ಟಡಕ್ಕೆ ಕೊಡು ಎಂದಿದ್ದನ್ನು ಕೇಳಿ ಅಜ್ಜನಿಗೆ ಮನಸ್ಸು ಬಹಳ ಆರ್ದ್ರವಾಯ್ತು. ಅಂದಿನ ಕಾಲಕ್ಕೆ ವ್ಯಾಪಾರದಲ್ಲಿ ಬಳಸುತ್ತಿದ್ದ ಒಂದು ಸಾವಿರವನ್ನು ಅಜ್ಜ ಗುರುಗಳ ಜೊತೆಗಾರರಿಗೆ ನೀಡಿದನಂತೆ. ಕೈಲಿದ್ದ ನಗದನ್ನೆಲ್ಲ ಅಜ್ಜ ದೇವರಿಗೆ ನೀಡಿದ್ದ, ಮುಂದಿನ ಖರ್ಚಿಗೆ ದುಡ್ಡು ಬೇಕೆಂದರೆ ಇದ್ದ ಅಡಕೆ ಮಾರಬೇಕು. ಖರೀದಿಸಿದ ಅಡಕೆ ಮನೆಯಲ್ಲಿ ರಾಶಿ ಬಿದ್ದಿತ್ತು. ಅದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಒಯ್ದಾಗ ಅಜ್ಜನಿಗೆ ಅದಕ್ಕೆ ತಗುಲಿದ ವೆಚ್ಚಕ್ಕೆ ಮೂರುಪಟ್ಟು ಹಣ ಬಂತು ! ಸದ್ಗುರುಗಳ ಸಂಕಲ್ಪವನ್ನು ಅಜ್ಜ ಕೊನೆಯವರೆಗೂ ನೆನೆಯುತ್ತಿದ್ದ.

ಹೀಗೇ ಮುಂದೆ ವ್ಯಾಪಾರದಲ್ಲಿ ಅಷ್ಟಿಷ್ಟು ಹಣಗಳಿಸಿ ಮನೆಯೊಂದನ್ನು ಅಜ್ಜ ಕಟ್ಟಿದ. ಅದೂ ಆ ಕಾಲಕ್ಕೆ ಮಹಡಿ ಮನೆ. ಕೈಲಾಗುತ್ತಿಲ್ಲ; ಮನಸ್ಸು ಕೇಳುತ್ತಿಲ್ಲ. ಖರ್ಚಿಗೆ ಪೂರ್ತಿ ಹಣವಿಲ್ಲ. ಯಾರೋ ಉದ್ರಿಯಲ್ಲಿ ಬಿಜಗರ, ಮೊಳೆ, ಕಬ್ಬಿಣ-ಹಿತ್ತಾಳೆ ಸಾಮಗ್ರಿಗಳನ್ನು ಕೊಟ್ಟರು. ಇನ್ಯಾರೋ ಗೋಡೆಕಟ್ಟಲು ಕಲ್ಲು[ನಮ್ಮಲ್ಲಿನ ಲ್ಯಾಟರೈಟ್] ತರಿಸಿಕೊಟ್ಟರು. ಅದ್ಯಾರೋ ಮರದ ತೊಲೆಗಳನ್ನೂ ದಿಮ್ಮಿಗಳನ್ನೂ ಕೊಟ್ಟರು, ಮತ್ತಿನ್ಯಾರೋ ಗಿಲಾಯಿಮಾಡಿ ಬಣ್ಣ-ಸುಣ್ಣ ಬಳಿಯಲು ಅನುಕೂಲ ಮಾಡಿಕೊಟ್ಟರು! ಇದೆಲ್ಲಾ ನಡೆದುದು ಗುರು ಶ್ರೀಧರರ ಕೃಪೆಯಿಂದ ಎಂಬುದು ಅಜ್ಜನ ಅನಿಸಿಕೆಯಾಗಿತ್ತು; ಅದು ಸತ್ಯವೂ ಕೂಡ. ಎಲ್ಲೆಲ್ಲೂ ಅಜ್ಜನಿಗೆ ತುಂಬಾ ವ್ಯಕ್ತಿಮೌಲ್ಯ[ಕ್ರೆಡಿಬಲಿಟಿ] ದೊರೆತಿತ್ತು. ಹೇಗೋ ತಮಗೆ ಹಣ ಮರಳಿಸುವನೆಂಬ ನಂಬಿಕೆ ಎಲ್ಲರದಾಗಿತ್ತು. ಅಜ್ಜನ ಸ್ನೇಹ ಬಯಸಿ ಅನೇಕ ಜನ ಒಡನಾಡುತ್ತಿದ್ದರು. ಯಾರೋ ಆರ್ತರು, ಯಾರೋ ಅನಾಥರು, ಯಾರೋ ಬಡವರು ದೇಹಿ ಎಂದರೆ ಅಜ್ಜ ಕೂಡ ಹಾಗೇ ಕೈ ತಿರುಗಿಸುತ್ತಿರಲಿಲ್ಲ. ಅನೇಕ ಜನರಿಗೆ ಅಜ್ಜ ದಾರಿ ಕಲ್ಪಿಸಿದ್ದನ್ನು ನಾನು ಕೇಳಿಬಲ್ಲೆ. ಇಂತಹ ಅಜ್ಜನ ಮೊಮ್ಮಗನಾಗಿ ನಾನು ಜನಿಸಿದ್ದು ನನ್ನ ಪುಣ್ಯ ಎಂದು ಏಷ್ಟೋ ಸರ್ತಿ ನಾನಂದುಕೊಂಡಿದ್ದೇನೆ.


ಅಜ್ಜ ಊರಲ್ಲಿ ಜಮೀನು ಖರೀದಿಸಿದ. ಹಲವು ದೋಸ್ತರ ಬಳಗದೊಂದಿಗೆ ಕುಮಟಾದಲ್ಲಿ ಅಡಕೆ ಮಂಡಿ ಆರಂಭಿಸಿದ. ಆರಂಭಿಸಿದ ವರ್ಷವೊಂದರಲ್ಲೇ ಊರಕಡೆಯ ಆ ದೋಸ್ತರೆಲ್ಲಾ ತಮಗೆ ಬೇಕಾದವರಿಗೆ ಸಾಲ ಕೊಡು ಎಂದು ಚೀಟಿಕೊಟ್ಟು [ಇಂದಿನ ಎಮ್ಮೆಲ್ಲೆ ಶಿಫಾರಸ್ಸಿನ ಹಾಗೇ!] ಕುಮಟಾದಲ್ಲಿರುತ್ತಿದ್ದ ಅಜ್ಜನ ಹತ್ತಿರ ಕಳಿಸುತ್ತಿದ್ದರು. ದುಡಿವ ಬಂಡವಾಳ ಖಾಲಿಯಾಗುತ್ತಾ ನಡೆದಾಗ ವ್ಯವಹಾರ ನಿಭಾಯಿಸುವುದು ಕಷ್ಟವಾಗಿ ಅದನ್ನು ಗಮನಿಸಿದ ಅಜ್ಜ ಸಾಲ ಕೊಡುವುದಕ್ಕೆ ಮೂಲ ಬಂಡವಾಳ ಜಾಸ್ತಿ ಕ್ರೋಡೀಕರಿಸಬೇಕೆಂದು ಕೇಳಿದ್ದಕ್ಕೆ ಎಲ್ಲಾ ದೋಸ್ತರ ಕಣ್ಣೂ ಕೆಂಪಗಾಗಿದೆ; ತೊಡಗಿಸಿದ ಬಂಡವಾಳದ ಭಾಗವನ್ನು ಮರಳಿ ಕೊಡುವಂತೇ ಹಿಂದೆಬಿದ್ದಿದ್ದಾರೆ. ಗುರುವನ್ನು ಸ್ಮರಿಸಿ ಇಡೀ ಮಂಡಿಯ ವ್ಯವಹಾರವನ್ನು ಒಬ್ಬನೇ ವಹಿಸಿಕೊಂಡು ಕೇವಲ ಅತಿ ಸಣ್ಣ ಸಮಯಾವಧಿಯಲ್ಲಿ ಎಲ್ಲರ ಹಣವನ್ನೂ ಮರಳಿಸಿದ ಛಾತಿ ಅಜ್ಜನದು. ಮಾತ್ರವಲ್ಲ ಅಲ್ಲೇ ದುಡಿದು ಅದೇ ಜಾಗವನ್ನು ಖರೀದಿಸಿದ್ದೂ ಆಯ್ತು! ಅದೇ ಸಮಯಕ್ಕೆ ಸ್ವಲ್ಪ ಕಾಸು ಹೊಂದಿಸಿ ಮಕ್ಕಳ ಮುಂದಿನ ಜೀವನಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಮ್ಮೂರಿಂದ ೧೦ ಕಿ.ಮೀ ದೂರದಲ್ಲಿ ಜಮೀನನ್ನೂ ಖರೀದಿಸಿದ.

ಅಜ್ಜ ಖರೀದಿಸಿದ ದೂರದ ಆ ಜಮೀನು ಕಾಡ ಮಧ್ಯೆ ಇತ್ತು. ಒಂದು ಕಡೆ ತೊರೆಯೊಂದು ಚಿಕ್ಕ ನದಿಯಾಗಿ ಹರಿಯುತ್ತಿತ್ತು. ಇನ್ನೊಂದೆಡೆ ದಟ್ಟ ಕಾಡು. ಜಮೀನಿಗೆ ೩ ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. ನಡೆಯುವಾಗ ಆ ಕಾಲು ಹಾದಿ ಕಾಡ ಮಧ್ಯೆಯೇ ಹಾದುಹೋಗುತ್ತಿತ್ತು. ಹಾದಿಯ ಕೆಲವೆಡೆ ಚಿಕ್ಕ ಪುಟ್ಟ ತೊರೆಗಳು ಹರಿಯುವುದನ್ನು ನೋಡಬಹುದಿತ್ತು. ಎಲ್ಲೆಲ್ಲೂ ಹಸಿರು ತುಂಬಿದ ಮರಗಳು. ಮರಗಳ ಮೇಲೆ ಹಲವುವಿಧದ ವನಚರಗಳು, ಪಕ್ಷಿಗಳು. ಝೀಂಕರಿಸುವ ಜೀರುಂಡೆಗಳು, ಬಿಸಿಲ ಹೊತ್ತಿಗೆ ಗುಟುರ್ ಗುಟುರ್ ಎಂದು ವಿಶಿಷ್ಟವಾಗಿ ಧ್ವನಿಹೊಮ್ಮಿಸುವ ಹಕ್ಕಿಗಳು. ಕೇಶಳಿಲು-ಕೆಂಬೂತಗಳು. ನವಿಲು-ಗಿಳಿಗಳು. ಸಿಳ್ಳೆ ಕ್ಯಾತ-ಮಸಿಮಂಗ[ಕೋಡ] ಮತ್ತು ಬಿಳಿಮಂಗಗಳು....ಹೀಗೇ ಹತ್ತಾರು ಜೀವವೈವಿಧ್ಯವನ್ನು ನಾವು ಚಿಕ್ಕಮಕ್ಕಳು ಅಲ್ಲಿ ಕಂಡಿದ್ದೇವೆ. ಶಾಲೆಗೆ ರಜಾ ಬರುವುದನ್ನೇ ಕಾಯುತ್ತಿದ್ದ ನಾವು ಅಲ್ಲಿಗೆ ತೆರಳಲು ತುದಿಗಾಲಿನಲ್ಲಿರುತ್ತಿದ್ದೆವು. ಜಮೀನು ನೋಡಿಕೊಳ್ಳಲು ಅಜ್ಜ ಮಗಳು-ಅಳಿಯನನ್ನು ಅಲ್ಲಿ ಬಿಟ್ಟಿದ್ದ; ವಿಷಯವಿಷ್ಟೇ ಒಬ್ಬ ಮಗಳು-ಅಳಿಯನಿಗೆ ಮನೆಯಲ್ಲಿ ತೀರಾ ಏನೂ ಇರಲಿಲ್ಲ. ಅವರನ್ನೂ ಅಜ್ಜನೇ ನೋಡಬೇಕಾದ ಸ್ಥಿತಿ ಇತ್ತು. ಕೊಂಡ ಜಮೀನಿನಲ್ಲಿ ಅರ್ಧವನ್ನು ಕೊಡುವ ಮನಸ್ಸಿನಲ್ಲಿ ಅವರನ್ನೇ ಆ ಜಮೀನಿನ ಉಸ್ತುವಾರಿಗೆ ಬಿಟ್ಟಿದ್ದ. ಆಗಾಗ ಖರ್ಚಿಗೆ [ಇನ್ನೂ ಹೊಸ ಜಮೀನಾಗಿದ್ದುದರಿಂದ ಅಲ್ಲಿ ಏನೂ ಇರಲಿಲ್ಲ]ಹಣ, ಧವಸ-ಧಾನ್ಯಗಳನ್ನು ಕಳುಹಿಸಿಕೊಡುತ್ತಿದ್ದ. ನಾವು ಮಕ್ಕಳು ಅತ್ತೆಮನೆಗೆ ಹೋಗುತ್ತೇವೆ ಎಂಬ ನೆವದಿಂದ ಜಮೀನಿಗೆ ತೆರಳಲು ಅವಕಾಶ ಹುಡುಕುತ್ತಿದ್ದೆವು!

ಹೊಸದಾಗಿ ಖರೀದಿಸಿದ ಜಮೀನಿನ ಕೆಲವು ಭಾಗದಲ್ಲಿ ಗದ್ದೆಗಳು ಇದ್ದವು. ಹಸಿರು ತುಂಬಿದ ಗದ್ದೆಗಳ ಮಧ್ಯೆ ರಾತ್ರಿಯ ಹೊತ್ತಿನ ಕಾವಲಿಗಾಗಿ ಒಂದೆರಡು ಮಾಳಗಳನ್ನು ನಿರ್ಮಿಸಲಾಗಿತ್ತು. ಮಾಳಗಳಲ್ಲಿ ಆಳುಗಳಾಗಲೀ ನಮ್ಮ ಮಾವನಾಗಲೀ [ಅತ್ತೆಯ ಯಜಮಾನ್ರು]ಇರುತ್ತಿದ್ದು ಆಗಾಗ ಎದ್ದು ಬೆಳೆದ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಪಡಿಸಿದಂತೇ ಏನಾದರೂ ಸದ್ದುಮಾಡುವುದು, ಹಳೆಯ [ಎಣ್ಣೆತುಂಬಲು ಬಳಸುವ ದೊಡ್ಡ ಸೈಜಿನ ] ಡಬ್ಬಿಕಡಿ ಬಡಿಯುವುದು ಇತ್ಯಾದಿ ನಡೆಸಿ ಆ ಶಬ್ದಕ್ಕೆ ಪ್ರಾಣಿಗಳು ಹೆದರಿ ಜಮೀನಿಗೆ ಕಾಲಿಡದಂತೇ ರಕ್ಷಿಸುತ್ತಿದ್ದರು. ಪ್ರಾಣಿಗಳಿಗೂ ಕಾಡಿನಲ್ಲೇ ಸಾಕಷ್ಟು ತಿಂಡಿ-ತೀರ್ಥ ಲಭ್ಯವಿತ್ತಾದ್ದರಿಂದ ಅವೂ ಹೊಟ್ಟೆಗಾಗಿ ಅನಿವಾರ್ಯವಾಗಿ ಮಾನವ ನಿರ್ಮಿತ ಪ್ರದೇಶಗಳಿಗೋ ಗದ್ದೆ-ತೋಟಗಳಿಗೋ ನುಗ್ಗುತ್ತಿರಲಿಲ್ಲ. ಎಲ್ಲೋ ಆಹಾರಕ್ಕಾಗಿ ಅಲೆಯುವಾಗ ಅಪ್ಪಿತಪ್ಪಿ ಬಂದರೆಮಾತ್ರ ಬೆಳಗಿನ ಜಾವದವರೆಗೂ ಕೈಲಾಗುವಷ್ಟನ್ನು ತಿಂದು ಮುಗಿಸಿಯೇ ಹೋಗುವುದು ಅವುಗಳ ಅಭ್ಯಾಸವಾಗಿತ್ತು. ಒಂದೆರಡು ಬಾರಿ ಇದನ್ನು ನೋಡಿದ ಜಮೀನಿನ ಉಸ್ತುವಾರೀ ಅಧಿಕಾರಿ ಮಾವ ಅದಕ್ಕೆ ಪರಿಹಾರವಾಗಿ ಮಾಳಹಾಕಿ ಕಾವಲುಕಾಯುವ ರೂಢಿ ಬೆಳೆಸಿದ್ದರು; ಅದು ಇಂದಿಗೂ ಕಾಡ ಪಕ್ಕದ ಹಳ್ಳಿಗಳಲ್ಲಿ ಅಲ್ಲಲ್ಲಿ ತೋರಿಬರುವ ನಡಪತ್ತು.

ಜಮೀನಿರುವ ಆ ಪ್ರದೇಶಕ್ಕೆ ಕೊಟ್ಗೆಮಕ್ಕಿ ಎಂಬ ಹೆಸರು. ಕೊಟ್ಗೆಮಕ್ಕಿಗೆ ನಾವು ಹೋದಾಗ ನಮಗೆ ಹಗಲಿರುಳೂ ಕಥೆಗಳಲ್ಲಿ ಕೇಳಿದ್ದ ಕಾಡುಪ್ರಾಣಿಗಳನ್ನೂ ಪಕ್ಷಿಗಳನ್ನೂ ಕಾಂಬ ಆಸೆ. ಒಮ್ಮೆ ಜಮೀನಿಗೆ ಹರಿದು ಬರುವ ನೀರು ನಿಂತುಹೋಗಿತ್ತು. ಕಾನ ದಾರಿಯಲ್ಲಿ ದೂರದ ಕೆಂಬಾಲ್ ಕಡೆಗೆ ಕಿಲೋಮೀಟರುಗಟ್ಟಲೆ ನಡೆದು ಅದರ ಮೂಲದೆಡೆಗೆ ಹೋಗಿ ಎಲ್ಲಿ ಏನಾಗಿದೆ ಎಂಬುದನ್ನು ಹುಡುಕಬೇಕಿತ್ತು. ಮಾವನ ಮಕ್ಕಳು ಮತ್ತು ನಾವು ಹಾಗೊಮ್ಮೆ ಕಾಡ ಹಾದಿಯಲ್ಲಿ ಸಾಗಿಬರುವ ಆ ನೀರ ಅವಳೆಯ ಪಕ್ಕದಲ್ಲೇ ನಡೆಯುತ್ತಾ ಸಾಗುತ್ತಿದ್ದೆವು. ಮಾವನ ಮಕ್ಕಳಿಗೆ ಅದಾಗಲೇ ಕಾಡುಜೀವನ ಕರಗತವಾಗಿತ್ತು. " ಅಗೋ ಅಲ್ಲಿನೋಡು ಆನೆ ಹೆಜ್ಜೆ ಇಲ್ಲಿ ನೋಡು ಹಂದಿ ಅಗೆದಿದ್ದು " ಎನ್ನುತ್ತಾ ಅವರು ಮುಂದೆಸಾಗಿದರೂ ನಾವು ಅದರ ಹತ್ತಿರವೇ ನಿಂತು ಆನೆ ಎಷ್ಟು ಹೊತ್ತಿಗೆ ಬಂದು ಹೋಗಿರಬಹುದು? ಹೇಗಿತ್ತೋ ಏನೋ? ಹಂದಿ ಯಾವ ರೀತಿ ಅಗೆಯುತ್ತದೆ?-ಎಂಬುದನ್ನೆಲ್ಲಾ ಮನಸ್ಸಲ್ಲೇ ಊಹಿಸಿಕೊಳ್ಳುತ್ತಾ ತೆರಳುತ್ತಿದ್ದೆವು. ಇದನ್ನೆಲ್ಲಾ ನೋಡಿದ ಮಾವನ ಮಕ್ಕಳು ನಮ್ಮನ್ನು ಛೇಡಿಸುವುದಿತ್ತು. ಹಾದಿಯಲ್ಲಿ ಕೆಲವೊಮ್ಮೆ ಆನೆಯ ಲದ್ದಿಗಳನ್ನೂ ನೋಡಿದ್ದಿದೆ. ಎಲ್ಲಾದರೂ ಜಿಂಕೆ, ಕಡವೆ , ಸಾರಂಗಗಳು ನಮಗೆ ಕಾಣಸಿಗಬಹುದೇ ಎಂಬ ಬಾಲ್ಯ ಸಹಜ ಕುತೂಹಲದಿಂದ ಕಣ್ಣರಳಿಸಿ ಹುಡುಕುತ್ತಿದ್ದೆವು. ಯಾವುದೋ ಸರಸರ ಸಪ್ಪಳ ಕೇಳಿದರೆ ಕಾಡುಕೋಳಿ ಓಡಿಹೋಗಿರಬೇಕು ನೋಡಲಾಗುತ್ತಿತ್ತಲ್ಲಾ ಅಯ್ಯೋ ದೇವರೇ ಎಂದು ವಿಷಾದಪಡುವುದೂ ಇತ್ತು! ನೀರಿನ ಅವಳೆಗೆ ಮರದ ಬೊಡ್ಡೆಯೊಂದು ಅಡ್ಡ ಬಿದ್ದು ನೀರು ಬೇರೆಡೆಗೆ ಹರಿದುಹೋಗುತ್ತಿತ್ತಾದ್ದರಿಂದ ನೀರು ಕೆಳಪ್ರಾಂತದಲ್ಲಿರುವ ನಮ್ಮ ಜಮೀನಿಗೆ ಬರುವುದು ನಿಂತಿತ್ತು, ಇದು ಗಾಳಿ-ಮಳೆಯ, ಪ್ರಾಣಿಗಳ ಓಡಾಟದ ಪರಿಣಾಮವಾಗಿ ಆಗಾಗ ಮರುಕಳಿಸುವ ನೈಸರ್ಗಿಕ ಪ್ರಕ್ರಿಯೆಯಾಗಿತ್ತು.

ಜಮೀನಿನಲ್ಲಿ ಹಾಕಿರುವ ಮಾಳಗಳಲ್ಲಿ ಸಾಯಂಕಾಲದ ಹೊತ್ತಿಗೆ ಹೋಗಿ ಕೂತುಬಿಟ್ಟರೆ ಮಾವನ ಮಕ್ಕಳ ಜೊತೆಗೆ ಹುಲಿ, ಕರಡಿ, ಕತ್ತೆಕಿರುಬ ಮೊದಲಾದ ಪ್ರಾಣಿಗಳ ಸುದ್ದಿ. ಅವರುಗಳೂ ಆಗಾಗ " ಹುಲಿ ನಾಕು ದಿನದ ಕೆಳಗೆ ಅಲ್ಲಿ ಬಂದಿತ್ತು ಇಲ್ಲಿ ಬಂದಿತ್ತು " ಎಂಬ ಘಟನೆಗಳನ್ನು ಮೆಲುಕುಹಾಕುತ್ತಿದ್ದರು. ಜಮೀನಿನಲ್ಲಿ ಮಾವ ಸಾಕಿದ ಹಸುಕರು-ಹೋರಿಗಳು ನಿತ್ಯ ಕಾಡಿಗೆ ಹಸಿರು ಮೇವರಸಿ ಹೋಗುತ್ತಿದ್ದವು. ಸಾಯಂಕಾಲ ೫ ಗಂಟೆಗೆಲ್ಲಾ ಅವುಗಳನ್ನು ಹುಡುಕಿ ಮರಳಿಸಿಕೊಂಡು ಬರುತ್ತಿದ್ದರು. ಒಮ್ಮೆ ಒಂದು ಹೋರಿ ಗುಂಪಿನಿಂದ ಬೇರೆಯಾಗಿಬಿಟ್ಟಿತ್ತು. ಆ ದಿನ ಮಾವನವರಿಗೆ ಅದು ಹೇಗೂ ಹುಲಿಯ ಬಾಯಿಗೆ ಬಿತ್ತು ಎಂದೇ ಅನಿಸಿತ್ತಂತೆ. ಆ ರಾತ್ರಿ ಮಾವ ಮತ್ತು ಮನೆಯವರೆಲ್ಲಾ ಬಹಳ ಹೊತ್ತು ಚಿಂತೆಗೀಡಾಗಿದ್ದರು. ಮಾವ ಇನ್ನೇನು ಸರಿಯಾಗಿ ಊಟವನ್ನೂ ಮಾಡದೇ "ದೇವರು ಇಟ್ಟಹಾಗಾಗಲಿ” ಎಂದುಕೊಂಡು ಕೋವಿ ಹೆಗಲಿಗೇರಿಸಿಕೊಂಡು ಗದ್ದೆಯ ಮಾಳಕ್ಕೆ ಹೊರಟಿದ್ದಾಗ ಕೊಟ್ಟಿಗೆಯ ಹತ್ತಿರ ಬೆದರಿದ ಧ್ವನಿಯಲ್ಲಿ "ಅಂಬಾ ಅಂಬಾ " ಎಂದು ಒಂದೇ ಸಮನೆ ಕೂಗುತ್ತಿದ್ದ ಹೋರಿ ಕಂಡುಬಂದಿತ್ತು. ನಿಜ ಅದನ್ನು ಹುಲಿ ಅಟ್ಟಿಸಿಕೊಂಡು ಮೈಮೇಲೆ ಹಾರಿ ತನ್ನ ಪಂಜಾಗಳಿಂದ ಸಾಕಷ್ಟು ಹೊಡೆದಿತ್ತು. ಇಡೀ ಮೈಯ್ಯೆಲ್ಲಾ ರಕ್ತಸಿಕ್ತವಾಗಿತ್ತು. ಆದರೂ ಆ ಹೋರಿ ತಪ್ಪಿಸಿಕೊಂಡು ಬದುಕುಳಿದು ಬಂದಿತ್ತು! ಆ ಹೋರಿಯನ್ನು ನಾನೂ ಕಣ್ಣಾರೆ ಕಂಡಿದ್ದೇನೆ. ಅದರ ಮೈಮೇಲೆ ಕೆಲವೆಡೆ ಮಾಸಿದ ಗಾಯದ ಕಲೆಗಳಿದ್ದವು. [ಇದಾದ ಕೆಲವು ವರ್ಷಗಳನಂತರ ’ಗಾಂವ್ ಕಾ ಶೇರ್’ ಹಿಂದೀ ಪಾಠವನ್ನು ನಾನೋದಿದ್ದೆ. ಅದರಲ್ಲಿರುವ ಹೋರಿಗೂ ನಾನು ಹೇಳಿದ ಹೋರಿಗೂ ವ್ಯತ್ಯಾಸ ಕಾಣಲಿಲ್ಲ.] ಇಂತಹ ರೋಮಾಂಚಕ ಕಾನನದ ಕಥೆಗಳು ಮಕ್ಕಳಾದ ನಮ್ಮನ್ನು ಬಹಳವಾಗಿ ತಟ್ಟುತ್ತಿದ್ದವು.

ಹುಲಿ ಹೇಗಿರಬಹುದು? ಅದು ಪೊದೆಯೊಳಗೆ ಅಡಗಿ ಕೂತು ಹೇಗೆ ಕದ್ದು ನೋಡಬಹುದು? ಹುಲಿಗೂ ಚಿರತೆಗೂ ಎದುರಾ ಬದುರಾ ಸಿಕ್ಕಿ ಜಗಳವಾದರೆ ಯಾವುದು ಗೆಲ್ಲಬಹುದು? ಚಿರತೆಯ ಕೂಗು ಹುಲಿಯ ಕೂಗಿಗಿಂತ ಭಿನ್ನ ಹೇಗೆ ? ಅಷ್ಟೆತ್ತರದ ಆನೆ ಮನಸ್ಸು ಮಾಡಿ ಕಾಲಿನಿಂದ ಝಾಡಿಸಿ ಒದ್ದರೆ ಹುಲಿಯೆಲ್ಲಾ ಯಾವ ಮಹಾ ಅಲ್ಲವೇ? ---ಎಂಬೀಥರದ ನೂರಾರು ಪ್ರಶ್ನೆ-ಮರುಪ್ರಶ್ನೆಗಳು ಉದ್ಭವಿಸಿ ಹುಲಿಯ ಬರುವಿಕೆಯನ್ನು ನಿರೀಕ್ಷಿಸುತ್ತಾ ಮಾಳದಲ್ಲೇ ಕಾಯುತ್ತಿದ್ದೆವು! [ಅಂದಿಗೆ ನಮಗೆ ನ್ಯಾಷನಲ್ ಜಿಯಾಗ್ರಫಿಕ್ ಮುಂತಾದ ವಾಹಿನಿಗಳಾಗಲೀ, ಟಿವಿ ಮಾಧ್ಯಮವಾಗಲೀ ಇರಲಿಲ್ಲವಲ್ಲಾ...ಅಸಲಿಗೆ ಬಹಳ ಹೊತ್ತು ವಿದ್ಯುತ್ ಸೌಲಭ್ಯ ಇರುವುದೇ ದೊಡ್ಡ ಉಪಕಾರವಾಗುತ್ತಿತ್ತು, ಹಾಗಂತ ಜಮೀನಿನಲ್ಲಿ ನಾವು ಪ್ರಾಥಮಿಕ ಶಾಲೆ ಮುಗಿಸುವವರೆಗೂ ವಿದ್ಯುತ್ ಸೌಲಭ್ಯ ಇರಲಿಲ್ಲ.] ಕತ್ತಲಾದಮೇಲೆ ಬ್ಯಾಟರಿ ಡೌನ್ ಆದ ವಾಹನದಂತೇ ನಮ್ಮ ಗತಿ ! ಒಳಗೊಳಗೇ ಪುಕುಪುಕು ಆರಂಭವಾಗಿ ಕಕ್ಕಸು ಬಂದೇ ಬಿಡುತ್ತದೇನೋ ಎಂದು ಭಾಸವಾಗಿ ನಿಧಾನಕ್ಕೆ ಎತ್ತರದ ಮಾಳದಿಂದ ಕೆಳಗಿಳಿದು ನಾವು ಮಾಳಕ್ಕೆ ಹೋಗಿದ್ದೇ ಸುಳ್ಳು ಎನ್ನುವ ರೀತಿಯಲ್ಲಿ ಮನೆ ಸೇರಿಕೊಳ್ಳುತ್ತಿದ್ದೆವು! [ಯಾರಿಗೋ ಹೇಳಬೇಡಿ,
ಇದು ನಮ್ನಿಮ್ಮಲ್ಲೇ ಆದ್ರಿಂದ ಹೇಳ್ತಾ ಇದೇನೆ; ಹುಲಿ ವಿಷಯ ನೋಡಿ! ಸಾಮಾನ್ಯದ್ದಾದ್ರೆ ತೊಂದ್ರೆ ಇಲ್ಲ, ಹಾಗೆಲ್ಲಾ ಹೆದರೋ ಮರಿಗಳಲ್ಲ ನಾವು ...... ಸುಮ್ನೆ ಯಾಕೆ ಅಂತ ಅಷ್ಟೇ!]


[ ಬಹಳ ವಿಸ್ತೃತವಾದುದರಿಂದ ಮುಂದಿನ ಭಾಗದಲ್ಲಿ ಓದೋಣ ಆಗದೇ... ?]