ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 15, 2013

ಸಿಂಪಲ್ಲಾಗ್ ಒಂದ್ ಗೌಡಾ ಇನ್ನೊಂದ್ ಡಬ್ಬಲ್ ಡಾಕ್ಟರೇಟು !

ಚಿತ್ರಋಣ : ಅಂತರ್ಜಾಲ 
ಸಿಂಪಲ್ಲಾಗ್ ಒಂದ್ ಗೌಡಾ ಇನ್ನೊಂದ್ ಡಬ್ಬಲ್ ಡಾಕ್ಟರೇಟು !

[ ಅತ್ಮೀಯ ಓದುಗ ಮಿತ್ರರೇ, ಕಾಲದ ಗತಿ ಹೇಗೆಂದರೆ ಮನುಷ್ಯ ಕೈ ಇಟ್ಟಲೆಲ್ಲಾ ಭ್ರಷ್ಟಾಚಾರ ಹುಟ್ಟುತ್ತಲೇ ಇರುತ್ತದೆ. ಇತರೆ ಪ್ರಾಣಿಗಳು ನಡೆದಾಡಿದ ಜಾಗದಲ್ಲಿ ಗರಿಕೆಯಾದರೂ ಹುಟ್ಟಬಹುದು, ಚಿಗುರಬಹುದು ಆದರೆ ಮಾನವ ನಡೆದಾಡುವ ಹಾದಿಯಲ್ಲಿ ಅದೂ ಸಾಧ್ಯವಿಲ್ಲ. ಈಗೀಗ ಎಲ್ಲಿ ನೋಡಿದರೂ ಹುಟ್ಟುವ ಹುಲ್ಲುಗಳ ಗೋಜೇ ಬೇಡವೆಂಬ ಕಾರಣದಿಂದ ಬೇಡದೆಡೆಯಲ್ಲೂ ಅಗಲಗಲದ ಚತುಷ್ಪಥಗಳನ್ನೋ ಮರ್ದೊಂದನ್ನೋ ಮಾಡಿ, ತನ್ಮೂಲಕ ಒಂದಷ್ಟು ಕೋಟಿ ಸಾರ್ವಜನಿಕ ಕಾಂಚಾಣವನ್ನು ರಾಜಕಾರಣಿಗಳು ಕಬಳಿಸಿದ್ದಾಗಿದೆ! ವಿದ್ಯೆ, ಸಾಹಿತ್ಯ, ಸಂಸ್ಕ್ರ್ಋತಿ, ಸಂಶೋಧನೆ, ಸೇವೆ, ಆಧ್ಯಾತ್ಮ ಇತ್ಯಾದಿ ಹಲವು ರಂಗಗಳಲ್ಲೂ ರಾಜಕೀಯ ಸೇರಿಕೊಂಡು ಮಾನವೀಯ ಜೀವನ ಮೌಲ್ಯಗಳ ಮೌಲ್ಯಗಳು ತೀರಾ ನಿಕೃಷ್ಟವಾಗಿವೆ, ಕಡೆಗಣಿಸಲ್ಪಟ್ಟಿವೆ. ಕೊಡಮಾಡುವ ಪ್ರಶಸ್ತಿಗಳೂ ಮತ್ತು ಪದವಿಗಳೂ ಶಿಷ್ಟಾಚಾರದ ಮುಸಿಕಿನಲ್ಲೇ ಭ್ರಷ್ಟಾಚಾರದ ಒಳತೋಟಿಯನ್ನು ಆಧರಿಸಿವೆ, ಆತುಕೊಂಡಿವೆ! ತುಮಕೂರು ವಿವಿ ಯ ಬಗ್ಗೆ ವರ್ಷದ ಹಿಂದೆ ಗುಸುಗುಸು ಸುದ್ದಿಯಿತ್ತು. ಈಗೀಗ ಎಲ್ಲಾ ವಿವಿಗಳೂ ಅದೇ ನಡೆಯನ್ನೇ ಅನುಕರಿಸುತ್ತಿವೆ. ಯಡ್ಯೂರಪ್ಪನವರ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವಿದೇಶೀ ವಿವಿಯೇ ಅವರಿಗೆ ಗೌಡಾ ನೀಡಿದಾಗ, ಕರೀನಿಲುವಂಗಿ ಧರಿಸಿ ತಲೆಗೆ ಜರಿಯ ಗೊಂಡೆಸುತ್ತಿದ ಟೋಪಿಯನ್ನು ಧರಿಸಿನಿಂತ ಸನ್ಮಾನ್ಯ ಯಡ್ಯೂರ್ ಅವರ ಸರ್ವಾಭರಣ ಸೇವೆಯನ್ನು ನೋಡಿ ಜನ ಬಾಯ್ತುಂಬಾ ನಕ್ಕಾಗಿದೆ. ಇತ್ತೀಚೆಗೆ ಗೌಡಾ ಪಡೆದ, ತರಂಗದ ಸಂಪಾದಕಿ ಸಂಧ್ಯಾ ಪೈ ಅವರು, ತಮಗಾದ ಅತೀವ ಸಂತೋಷವನ್ನು ತೋರಿಸಿಕೊಳ್ಳುತ್ತಾ, ತಮ್ಮನ್ನು ಇನ್ನುಮುಂದೆ ’ಡಾ|| ಸಂಧ್ಯಾ ಪೈ’ ಎಂದೇ ಕರೆಯಬೇಕು ಎಂಬ ರೀತಿ, ಅವರ ಸಂಪಾದಕೀಯದ ಕೊನೆಯಲ್ಲಿ ಹಾಗೇ ಸಹಿಮಾಡಿದ್ದು ಹಲವರ ನಗೆಗೆ ಗ್ರಾಸವಾಗಿದೆ. ಇನ್ನೂ ಕೆಲವರು[ಗೌಡಾ ಪಡೆದ ಜನ] ನನಗೆ ಮಿಂಚಂಚೆ ಕಳಿಸುವಾಗ ’ಡಾ|’ ಎಂದು ಬರೆದುಕೊಳ್ಳುವುದನ್ನು ನಾನು ಪರಾಂಬರಿಸುತ್ತಲೇ ಇದ್ದೇನೆ.

ಕಾಲವೊಂದು ಹೀಗಿತ್ತು: ಸಮಾಜ ತಮ್ಮ ಕೆಲಸವನ್ನೋ, ಸೇವೆಯನ್ನೋ, ಸಾಧನೆಯನ್ನೋ ಕಂಡು ಕೊಡಮಾಡಿದ ಹಾರ-ತುರಾಯಿಗಳನ್ನು ಸಂಬಂಧಿಸಿದ ವ್ಯಕ್ತಿಗಳು ಕೈಯಲ್ಲಿ ಮುಟ್ಟಿ ಪಕ್ಕಕ್ಕೆ ಇರಿಸಿಬಿಡುತ್ತಿದ್ದರು. ಹಿಂದಿನಕಾಲದ ನಮ್ಮ ಜನ ದೇವರ ಪ್ರಸಾದವಾಗಿ ದೊರೆಯುವ ಹಾರವನ್ನು ಬಿಟ್ಟರೆ, ಮದುವೆಯ ಹಾರವನ್ನು ಮಾತ್ರ  ಪೂರ್ಣಧಾರಣೆ ಮಾಡುತ್ತಿದ್ದರೇ ವಿನಃ ಸಭೆಗಳಲ್ಲಿ ತಮಗೆ ಅರ್ಪಿಸುವ ಹಾರವನ್ನು ಪೂರ್ತಿಯಾಗಿ ಧರಿಸಿಕೊಂಡು ಛಾಯಾಚಿತ್ರ ಗ್ರಹಣಕ್ಕೆ ಪೋಸು ನೀಡಿದ್ದು  ತೀರಾ ತೀರಾ ಕಮ್ಮಿ. ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೆಂಗಸರು ತಾವು ಮದುವೆಯಾಗಿ ಇನ್ನೊಬ್ಬರ ಮಡದಿಯಾಗಿ ಸಂಸಾರಿ ಎಂಬುದನ್ನೂ ಮರೆತು, ಅರೆತೆರೆದ ದಿರಿಸುಗಳ ಮೂಲಕ [ಅಥವಾ ಅಂತಹ ಛಾಯಾಚಿತ್ರಗಳ ಮೂಲಕ] ಇತರರಿಗೆ ಸೌಂದರ್ಯವನ್ನು ಪ್ರದರ್ಶಿಸಿ ಷಹಭಾಸು ಗಿಟ್ಟಿಸುವ ಮನೋವೃತ್ತಿಯವರಾಗಿದ್ದಾರೆ; ತಾವು ಸಿನಿಮಾ ನಟೀಮಣಿಗಳಿಗಿಂತ ಏನೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತು ಮಾಡಲು ಮುಂದಾದ ಹಾಗೇ ತೋರುತ್ತದೆ.  ಅದೇರೀತಿ, ಅನೇಕ ಮಠಾಧೀಶರು, ಧರ್ಮಾಧಿಕಾರಿಗಳು/ಧರ್ಮದರ್ಶಿಗಳು ತಮಗೊಂದು ಗರಿಯೆಂಬ ಕಾರಣಕ್ಕಾಗಿ ಗೌಡಾವನ್ನು ಪಡೆದುಕೊಂಡಿದ್ದಾರೆ! ಅಂಥವರು ಸಮಾಜದಲ್ಲಿ ಶ್ರೀಸಾಮಾನ್ಯನಿಗಿಂತಾ ಎತ್ತರದಲ್ಲಿ ನಿಲ್ಲುವವರಾಗಿದ್ದು ಕೊಡುವ ಕೈಯ್ಯವರಾಗಿರಬೇಕೇ ಹೊರತು ಚಾಚುಚ ಕೈ ಅವರದಾಗಬಾರದು. ದೇಶದ ಪ್ರಜೆಗಳು ಗೌರವದಿಂದ ಕಾಣುವುದಷ್ಟನ್ನೇ ಅವರು ಉಳಿಸಿಕೊಂಡರೆ ಅದು ಅವರಿಗೂ ಕ್ಷೇಮ, ಸ್ವಸ್ಥ ಸಮಾಜಕ್ಕೂ ಉತ್ತಮ ನೇಮ. ಅದುಬಿಟ್ಟು ಇದ್ದ ಬದ್ದ ಪ್ರಶಸ್ತಿಗಳೆಲ್ಲಾ ತಮಗೂ ಬರಲಿ ಎಂಬ ಧೋರಣೆ ಇದೆಯಲ್ಲಾ ಅದು ಇಂಥವರನ್ನು ಆ ಪದದಿಂದ ಕೆಳಗಿಳಿಸುವುದಕ್ಕೆ ಸಹಕಾರಿಯಾಗುತ್ತದೆ ಎಂದಷ್ಟೇ ಹೇಳಬಯಸುತ್ತೇನೆ.

ಇನ್ನು ವೇದಿಕೆಗಳಲ್ಲಿ ಅವಕಾಶ ಸಿಗುವಂತೇ ಮಾಡಿಕೊಳ್ಳುವ, ಅಲ್ಲಿ ಹಾರ-ತುರಾಯಿ ಹಾಕಿಸಿಕೊಂಡು ಅದನ್ನು ೧೦ನಿಮಿಷ ಹಾಗೇ ಇಟ್ಟು ಎಲ್ಲರಿಗೂ ಪ್ರದರ್ಶಿಸುವ ಗೀಳು ಅನೇಕರದ್ದಾಗಿದೆ. ತಮಗೂ ಮಾನ್ಯತೆ ಬೇಕು, ತಮಗೂ ಬಿಟ್ಟಿಯಲ್ಲಿ ಹಣ ಸಿಗಬೇಕು, ತಮಗೂ ಎಲ್ಲರಿಂದ ಗೌರವ ಸಿಗಬೇಕು ಎಂಬೀ ಹಪಾಹಪಿಯಲ್ಲಿ, ಹಾತೊರೆಯುವಿಕೆಯಲ್ಲಿ, ಸಾಮಾಜಿಕ ಮಾನದಂಡಗಳು ನಮ್ಮೆದುರೇ ನಿಂತು ನಮ್ಮನ್ನು ಅಣಕಿಸಿ ನಗುವಂತೇ ಭಾಸವಾಗುತ್ತದೆ. ಇಂದಿನ ವಿಶ್ವವಿದ್ಯಾಲಯಗಳಲ್ಲಿ ಅವಿದ್ಯಾ ’ಪಂಡಿತ’ರೇ ಹೆಚ್ಚಾಗಿ ಅಲ್ಲಿನ ಆಡಳಿತ ಕಲುಷಿತಗೊಂಡಿದೆ. ಅರ್ಹತೆಯಿಲ್ಲದವರೂ ಅಪಾತ್ರರೂ ಮಾನ್ಯತೆಯನ್ನು ಖರೀದಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ!! ಬಹಳ ಹಿಂದೆಯೇ, ’ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ’ ಎಂಬೊಂದು ಲೇಖನ ಬರೆದಿದ್ದೆ; [  http://nimmodanevrbhat.blogspot.in/2010/11/blog-post.html] ಅದೂ ಇದನ್ನೇ ಪ್ರತಿಬಿಂಬಿಸಿದ ಲೇಖನವಾಗಿತ್ತು. ನನಗೆ ಗೊತ್ತಿರುವ ಕೆಲವು ಮಂದಿ, ಕೆಲಸಕ್ಕೆ ಬಾರದ ತಮ್ಮ ಪುಸ್ತಕಗಳನ್ನು, ಇನ್ನೂ ಯಾರೂ ನೆಟ್ಟಗೆ ಓದುವ ಮೊದಲೇ, ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಪ್ರಶಸ್ತಿಯೊಂದನ್ನು ಖರೀದಿಸಿ ತಂದರು!!  ಆ ಪ್ರಶಸ್ತಿ ನಮ್ಮ ಪ್ರಖ್ಯಾತ ಕವಿಯೋರ್ವರ ಹೆಸರಿನಲ್ಲಿ ಇರುವುದರಿಂದ ಇಲ್ಲಿ ಅದನ್ನು ಹೆಸರಿಸಬಯಸುವುದಿಲ್ಲ. ಖರೀದಿಸಿದ ಮಾರನೇದಿನದಿಂದಲೇ ಆ ಪುಸ್ತಕಗಳ ಮುಖಪುಟದಲ್ಲೇ ’.....ಪ್ರಶಸ್ತಿ ಪಡೆದಿದೆ’ ಎಂದು ಅಚ್ಚಿಸಲಾಯ್ತು!! ನನ್ನ ಮಿತ್ರ ಬರಹಗಾರರೊಬರಲ್ಲಿ ನಾನು ಆಗಲೇ ಭವಿಷ್ಯ ನುಡಿದಿದ್ದೇನೆ: "ನೋಡಿ ಮುಂದಿನಸರ್ತಿ ಜ್ಞಾನಪೀಠ ಪ್ರಶಸ್ತಿ ಕೂಡ ಇಂಥವರಿಗೇ ಸಲ್ಲುತ್ತದೆ" ಎಂದು.  

ವಿಶ್ವವಿದ್ಯಾನಿಯಲಗಳು ಕೊಡಮಾಡುವ ಗೌಡಾಕ್ಕೆ ಯಾವ ಗೌರವವೂ ಇಲ್ಲ! ಅದನ್ನು ಪಡೆಯುವುದೇ ಅಗೌರವವಾಗಿದೆ; ಯಾಕೆಂದರೆ ಎಲ್ಲರೂ ಪಡೆದವರನ್ನು ಸಂಶಯದಿಂದಲೇ ನೋಡುವಂತಾಗಿದೆ. ಡಾಕ್ಟರೇಟ್ ಪಡೆಯಲು ಮಂಡಿಸುವ ಪ್ರಬಂಧಗಳನ್ನು ಯಾರೂ ಓದಿದ ಹಾಗೇ ಕಾಣಿಸುತ್ತಿಲ್ಲ. ಹಾಗೆ ನೋಡಿದರೆ ಇಂದು ಡಾಕ್ಟರೇಟ್ ಗಳಿಸಲು ಮಂಡಿಸುವ ಪ್ರಬಂಧಕ್ಕೆ ಪೂರಕವಾದ ವಿಷಯಗಳ ಆಯ್ಕೆಯನ್ನು ನೋಡಿದರೇ ಅವರೆಂಥಾ ಡಾಕ್ಟರು ಎಂಬುದು ನಮಗೆ ಸ್ಪಷ್ಟವಾಗಿಬಿಡುತ್ತದೆ. ಹೀಗೇ ಸ್ಥಾನಮಾನ ಪಲ್ಲಟವಾದ ’ಡಾ’ ಮತ್ತು ’ಗೌಡಾ’ ಗಳ ಬಗ್ಗೆ ನನಗೆ ಹಿರಿಯ ಮಿತ್ರರಾದ ಮಾನ್ಯ ಎಂ. ಎಸ್. ಹೆಬ್ಬಾರ್ ಅವರು ಮಿಂಚಂಚೆ ಕಳಿಸಿದ್ದಾರೆ. ಅದನ್ನು ನೀವೇ ಓದಿ:
----------
ಶ್ರೀ  ವಿ. ಆರ್. ಭಟ್ಟರೇ,

ಡಾ|| ಸಂಧ್ಯಾರವರ ಬಗ್ಗೆ ಶ್ರೀ ಜೋಷಿಯವರ ನಿರ್ಭೀತ ನುಡಿಗಳನ್ನು ಈಗ ತಾನೇ ಓದಿದೆ.
ನಿಮ್ಮಂಥಹ ಬರಹಗಾರು ಬರೆದರೇ ಅದಕ್ಕೆ ಸ್ವಲ್ಪ ಬೆಲೆ.

ಹಾಗಾಗಿ ನನ್ನ ಬಹುದಿನದ ಅನಿಸಿಕೆಯನ್ನು ನಿಮ್ಮ ಮಾತಿನ ಮೋಡಿಯಲ್ಲಿ ಮೂಡಿ ಬಂದರೆ ಸರಿ ಅನಿಸಿತು.
ಗೌರವ ಡಾಕ್ಟರ್ ಪದವಿಯಲ್ಲಿ " ಕೊಡು ಮತ್ತು ತೆಗೆದಿಕೋ" ಎಂಬ ಎರಡು ಪದಗಳಿವೆ. ಸೃಷ್ಠಿ ನಿಯಮದಂತೆ ಕೊಡುವವನ ಕೈ ಮೇಲೆ ಹಾಗೂ ತೆಗೆದು ಕೊಳ್ಳುವವನ ಕೈ ಕೆಳಗೆ ( ದೇಹಿ! )
ನಿಯಮದ ಪ್ರಕಾರ ಸಮಾಜವನ್ನೇ ತಿದ್ದುವ ಮಠಾಧೀಶರುಗಳು ಕೊಡುವವರೇವಿನಹ ತೆಗೆದುಕೊಳ್ಳುವವರಲ್ಲ.
ಘನವೆತ್ತ ಧರ್ಮಾದೀಶ ಧರ್ಮಸ್ಥಳದ ಶ್ರೀ ಹೆಗ್ಗಡೆಯವರು " ಗೌ. ಡಾ."ಪದವಿಗೆ ಕೈ ಚಾಚಿದ್ದು / ಒಪ್ಪಿಕೊಂಡಿದ್ದು - ಧರ್ಮಸ್ಥಳದಲ್ಲಿ / ಧಾರ್ಮಿಕತೆಯಲ್ಲಿ ಗೌರವಯಿಟ್ಟ ನನಗೆ ಮುಜುಗರವೆನಿಸಿತ್ತು. ರೀತಿ ಉದಹರಿಸಲು ಅನೇಕ ಮಠಾಧೀಶರುಗಳೂ ಇದ್ದಾರೆ ಅನ್ನಿ.
ನಿಮ್ಮ ನಿರ್ಭೀತ ನುಡಿಗಳು ಹೊರಹೊಮ್ಮೀತೇ?

ಇತಿ, ನಿಮ್ಮ ಪ್ರೀತಿಯ
. ಶ್ರೀ. ಹೆಬ್ಬಾರ.

-------------


ಹೆಬ್ಬಾರರ ಅನಿಸಿಕೆ ಎಲ್ಲರ ಅನಿಸಿಕೆ ಎಂಬುದನ್ನು ನಾವು ಮನಗಾಣಬೇಕಾಗಿದೆ. ಅವರ ಮಿಂಚಂಚೆಗೆ ಉತ್ತರಿಸುತ್ತಾ ಹಾಸ್ಯ ರಸಾಯನವೊಂದನ್ನು ಬರೆಯುತ್ತೇನೆಂದು ತಿಳಿಸಿದ್ದೆ. ಅದರಂತೇ ಈ ಕೆಳಗೆ ಆ ಕೆಲಸವನ್ನು ನಡೆಸಿಕೊಡುತ್ತಿದ್ದೇನೆ, ಓದಿ ಚಣಕಾಲ ನಿಮಗೆ ರಂಜನೀಯವಾಗುವುದರ ಜೊತೆಗೆ ವಿವಿಗಳ ಇಂದಿನ ಸ್ಥಿತಿಗತಿಗಳ ಬಗ್ಗೆಯೂ ಪರೋಕ್ಷ ತಿಳಿಹೇಳುವ ರಸಾಯನ, ನಿಮ್ಮೆಲ್ಲರಗಾಗಿ ಇಲ್ಲಿದೆ: ]

-------------------------------------------------------------------------------------------

"ಅಲ್ಲಲೇ ಸೀನ, ಎಸ್ಟ್ ದಿನ ಅಂತ ಇಂಗೇ ಇರ್ತೀಯ? ವಸಿ ರೊಕ್ಕ ಕರ್ಚ್ಮಾಡುದ್ರೆ ದಿಲ್ ದಾರ್ ಆಗಿ ಮೆರೀಬೋದ್ ಕಣ್ಮಗಾ. ಕೆಲ್ಸಾ ಮಾಡೋದಂತೂ ಮಾಡ್ಲೇ ಬೇಕಾ? ಡಾಕ್ಟರೇಟ್ ಮಾಡ್ಕೊಂಬುಟ್ರೆ ಸಂಬ್ಳಾನೂ ಜಾಸ್ತಿ ಸಿಗುತ್ತೆ ಏನೇ ಮಾಡ್ಲಿ ಯಾರೂ ಜಾಸ್ತಿ ತಗಾದೆ ಎತ್ತೋಕೂ ಬರಲ್ಲ. ಏನಂತೀಯಾ?"

"ಒಳ್ಳೇ ಐಡ್ಯಾ ಕಣೋ ಮಂಜ. ಸುಮ್ನೇ ನಿಂಗೆ ಕಳ್ ಮಂಜ ಅಂತೆಲ್ಲಾ ಕರೀತಾರಲ್ಲಾ ಅಂತವ್ರೀಗೆ ತಲೆಯಿಲ್ಲ. ಯಾರೋ ಪೋಲೀಸಪ್ಪಗಳು ಇಲ್ದೇ ಹೋದ ಅಪವಾದ ಮಡಗ್ತರೆ ಅಂದ್ರೆ ಜನಾನಾರು ತಿಳ್ಕಬೇಕಾ ಇಲ್ವಾ?"

"ಹೌದ್ ಕಣಯ್ಯಾ ಸೀನಾ ಆ ಕತೆ ಬುಡು ಈಗೆ ನಿನ್ ಕತೆ ಯೋಳಪ್ಪ. ಏನ್ ನಾನ್ ಯೋಳ್ದಂಗೆ ಮಾಡ್ಕತೀಯ ಅತ್ವಾ ಅಂಗಂಗೇ ಇದ್ಕತೀಯ?"

"ಏನಯ್ಯಾ ಮಾಡ್ಬಕು? ನಂಗೆ ಡಿಗ್ರಿ ಎಲ್ಲಾ ಆಗದೆ ಅದೇನೋ ಸರಿ. ಆದ್ರೆ ಈ ಥೀಸಿಸ್ ಗೀಸಿಸ್ ಅವೆಲ್ಲಾ ನಂಗೆ ತಿಳೀದು. ನಿಂತಾವ ಏನಾರ ಐಡ್ಯಾ ಇದ್ರೆ ಮಾಡ್ಬೋದಪ್ಪ."

" ಅದ್ಕ್ಯಾಕಯ್ಯ ತೊಂದ್ರೆ? ’ನಾಯಿ ಬಾಲ ಡೊಂಕು’ ಹನ್ನೋದ್ನೇ ಥೀಸಿಸ್ ಆಗಿ ಇಟ್ಕ. ಬರೀ ಬರೀ ಬರೀ ಒಂದಷ್ಟ ಸಾವರ ಪೇಜ್ ಬರ್ದ್ಬುಡು. ಚೆನ್ನಾಗಿ ಕಂಪೂಟ್ರಗೆ ಪುಸ್ತ್ಕ ಮಾಡಿಸ್ಕ್ಯಂಡು ನಮ್ಮ ಕಾಳಪ್ನೋರ ಹತ್ರ ಕೊಟ್ಬುಟ್ಟು ಪ್ರೈವೇಟ್ ಆಗಿ ಮಾತಾಡ್ಕ ಬತ್ತೀನಿ."

"ಓ ಅಂಗೇನ್ಲಾ ಸಿವಾ ನಂಗವೆಲ್ಲಾ ಗೊತ್ತಿಲ್ಲ. ಅಯ್ತ್ಕಣಪ್ಪ ಒಸಿ ದಿವ್ಸ ಬಿಟ್ಕಂಡು ನಾನಿಂಗೆ ಫೋನಾಕ್ತಿನಿ. ನೀನು ಬಂದ್ಬುಟ್ಟು ಪುಸ್ತ್ಕ ಇಸ್ಕಂಡೋಗಿ ಅದೇನ್ ಮಾಡಿಯೋ ನೋಡು."

"ಬರೇ ಪುಸ್ತ್ಕ ನಡೀದ್ ಕಣಮ್ಮೀ ಜೊತೇಲೇ ಒಂದಷ್ಟ್ ಕಾಸ್ನೂ ಮಡಗ್ಬುಡು."

" ಹೌದಾ? ಎಷ್ಟ್ ಕರ್ಚಾಯ್ತದೆ? "

" ಒಟ್ಟೆಷ್ಟು ಅಂತಾವ ಆಮೇಲೆ ಯೋಳ್ತೀನಿ ನಾನಿನ್ನೂ ಮಾತಾಡಿಲ್ಲ. ಮೊನ್ನೆ ತಾವರೇಕೆರೆ ಜಂಗಮಯ್ನೋರ ಮನೆ ಮದ್ವೇಲಿ ಭೇಟಿ ಆಗಿದ್ದೆ. ನನ್ ಕಾಣುತ್ಲೇ ನಗ್ಯಾಡ್ಬುಟ್ಟು ಇಸ್ ಮಾಡುದ್ರು. ಆಮೇಲೆ ಅದೇನೋ ಅರ್ಜೆಂಟೈತೆ ಅಂತ ಬೇಗ ಒಂಟೋದ್ರು. ಐವತ್ತ್ ಸಾವರ ಮಡಗು ಆಮೇಲೆ ನೋಡ್ಕಳೋಮಿ."

" ಸಿವಾ ನಾ ಇಲ್ಲೀಗಂಟ ದುಡ್ದುದ್ದೇ ಕಮ್ಮಿ ಐತ್ ಕಣ್ಲಾ. ಅಬ್ಬಬ್ಬಾಂದ್ರೆ ೨೮-೩೦ ಆಗ್ಬೋದು. ಅಷ್ಟಕ್ಕಾದ್ರೆ ಓಕೆ. ಆಮೇಲೆ ಜಾಸ್ತಿ ಗೀಸ್ತಿ ಆದ್ರೆ ಇನ್ನೇನಾರ ಉಪಾಯಮಾಡಿ ನೋಡೋಮಿ."

" ಹಾಯ್ತ್ ಕಣಪ್ಪಾ ಅಂಗೇ ಆಗ್ಲಿ"

___________________________

[ವನಕಪಿ ಯುನಿವರ್ಸಿಟಿಯಲ್ಲಿ]

"ಸಾರ್ ನಾನು ಉಗನೇಸ್ವರ ದೊಡ್ಡಿ ಮಂಜ. ಪರ್ಚಯ ಐತಲ್ವಾ? ಅದೇ ಕಳೆದ್ ತಿಂಗ್ಳು ಜಂಗಮಯ್ನೋರ ಮನೆ ಮದ್ವೇಲಿ ಭೇಟಿ ಆಗಿದ್ವಲಾ....."

" ಓ ಮಂಜ ಅಂತ್ಲಾ ಆಗ್ಲಿ ಏನ್ ವಿಸ್ಯ?"

" ಏನಿಲ್ಲಾ ನನ್ ಪ್ರೆಂಡೊಬ್ಬ ಡಾಕ್ಟರೇಟು ಮಾಡ್ಬೇಕು ಅಂತವನೆ ಸಾರ್. ಶಾನೆ ದಿವ್ಸ ಆಯ್ತು. ಚಡ್ಡಿ ದೋಸ್ತು, ಬೇಡಾ ಅಂದ್ರೆ ಕೇಳಾಂಗಿಲ್ಲ. ಅದೂ ಹಿಂದೆಲ್ಲೋ ತಾವು ಪರ್ಚಯ ಅದೀರಿ ಅಂತ ಯೋಳ್ಬುಟ್ಟಿದ್ನಾ ಬಿಟ್ಟೂ ಬಿಡ್ದಲೇ ಇಡ್ಕಂಬುಟ್ಟವ್ನೆ ಸಾರ್."

" ಅದ್ಸರಿ ಡಾಕ್ಟರೇಟು ಮಾಡೂಕೆ ಥೀಸಿಸ್ ಎಲ್ಲಾ ಬೇಕಲ್ಲಪ್ಪಾ. ಒಂದಷ್ಟ್ ತಿಂಗಳ ನಮ್ಕಡೆ ನಮ್ಮ್ ಹಿಂದೆ ಇದ್ಗಂಬುಟ್ಟು ನಾವು ಗೈಡು ಅಂತ ಬೇರೇ ಜನೀಕ್ಕೆಲ್ಲಾ ಯೋಳ್ಬೇಕು."   

" ಅದೆಲ್ಲಾ ಸರಿ ಸಾರ್. ನಮ್ಮುಡ್ಗ ಬಲ್ ನನ್ಮಗ. ಶಾನೆ ಉಸಾರು. ಅವನಾಗವ್ನೇ ಒಂದ್ ಥೀಸಿಸ್ ಬರ್ದುಬುಟ್ಟವ್ನೆ. ಇಕಳಿ ಇಲ್ಲೇ ತಂದಿವ್ನಿ...ತಮ್ ಕೈಯಾಗೆ ಹಾಕ್ಬುಟ್ಟು ಓಗ್ಬುಟ್ರೆ ಎಲ್ಲಾ ಆಗೋತದೆ ಅಂದ್ಕಂಡು ಬಂದೆ. ತಮ್ದೇನೈತೆ ಅದರ ಬಗ್ಗೆ ನಾವ್ ರೆಡಿ."

"ಎಂತಾ ಥೀಸಿಸ್ ಮಾಡವ್ನಪ್ಪಾ....ಓ ’ನಾಯಿ ಬಾಲ ಡೊಂಕು’ ಅನ್ನೋ ಸಬ್ಜೆಕ್ಟು. ಇಸ್ಯ ಏನೋ ಹೊಸದೇ ಐತೆ. ಲೋಕಕ್ಕೆ ನಾಯಿ ಬಾಲ ಡೊಂಕು ಅನ್ನೋದ್ನ ವಿವರವಾಗಿ ಕಾರಣ ಯೋಳ್ಬುಟ್ಟು ತಿಳಿಸ್ದೋರಿಲ್ಲ. ಆ ಲೆಕ್ದಾಗೆ ನೋಡುದ್ರೆ ಇಸ್ಯ ಗಂಭೀರಾನೇ ಐತೆ. ಆದ್ರೂ....."

" ಸಾರ್..ಆದ್ರೂ ಗೀದ್ರೂ ಅನ್ಬ್ಯಾಡಿ ಸಾರ್. ನಮ್ಮುಡ್ಗ ಬಡವ. ಅಪ್ಪ ಕೂಲಿಮಾಡಿ ಮಗುನ್ನ ಓದಸ್ಯವ್ನೆ. ಈಗೇನೋ ಮಗ ಕಷ್ಟಪಟ್ಟು ಅವನ ಕರ್ಚ್ಗೆ ವರಮಾನ ಮಾಡ್ಕಂಡವ್ನೆ. ಇಂತೋರ್ಗೆ ತಮ್ಮ ಬೆಂಬ್ಲ ಬೇಕು."

" ಹಾಯ್ತಪ್ಪಾ ಮಂಜ, ಬಾಕಿ ಸಮಾಚಾರ ಯೋಳಪ್ಪಾ...ಇಷ್ಟೊತ್ಗಂಟ ನೀ ಯೋಳಿದ್ದೇ ವೇದಾ ಕೇಳಿದ್ದಾಯ್ತು."

" ಸಾರ್ ..ಅದೇ ಯೋಳ್ಲಿಲ್ವಾ ತಮ್ದೇನದೆ ಅದುನ್ನ ತಿಳ್ಸುದ್ರೆ....."

" ಲಕ್ಸ ಕರ್ಚ್ ಬತದೆ ಕಣಪ್ಪಾ ಆಗ್ವಾಂಗಿದ್ರೆ ಯೋಳು."

" ಆಯ್ತು ಸಾರ್. ಹದ್ಕೆ ಏರ್ಪಾಟ್ ಮಾಡ್ಕಂಬತ್ತೀನಿ. ನೀವಿದ್ಕೆ ಬೇಕಾದ ಯವಸ್ತೆನೆಲ್ಲಾ ಮಾಡ್ ಮಡ್ಗಿರಿ ಸಾರ್ ಆಗ್ಬೋದಾ?"

" ಹಾಗೇ ಆಗ್ಲಿ ಮಂಜ ..ಯಾವಾಗ ಬತ್ತೀಯ?"

" ವಾರದೊಳಗೇ ಬತ್ತೀನಿ ಸಾರ್. ಹೋಗ್ಬುಟ್ ಬತ್ತೀನಿ ನಮುಸ್ಕರ."

" ಆಯ್ತಾಯ್ತು. ಹೋಗ್ಬುಟ್ಬಾ."

___________________________

" ನೋಡಯ್ಯಾ ಸೀನ ಪ್ರೊ|ಕಾಳಪ್ಪೋರ್ ತಾವ ಮಾತಾಡಿವ್ನಿ. ಮಾಡ್ತೀನಿ ಅಂದವ್ರೆ. ಎತ್ತದ್ ಮಾತ್ಗೇ ನಿಮ್ಮಪ್ಪ ಕೂಲಿ ಅಂದ್ಬುಟ್ಟೆ. ಹೊಲಮನೆ ಎಲ್ಲಾ ಐತೆ ಅಂದ್ರೆ ಜಾಸ್ತಿ ಡಿಮ್ಯಾಂಡ್ ಮಾಡ್ತರೆ. ಹದ್ಕೇಯ ಈ ಉಪಾಯ. ಐದ್ಲಕ್ಸ ಕರ್ಚಾಯ್ತದೆ ಅಂದವ್ರೆ."

" ಅಣಾ ಆ ಪಾಟಿ ಅಣ ನಂತಾವ ಎಲ್ಲೈತೆ ಗುರೂ? ಮೂರ್ ಮಾಡ್ಕೊಳಕ್ ಯೋಳು. ಏನೋ ಬ್ಯಾಂಕು ಪಾಂಕು ಅಲ್ಲಿ ಇಲ್ಲಿ ಚಿಲ್ರೆ ಮಡಗಿದ್ದು, ಚೀಟಿ, ಕೈಸಾಲ ಅಂದ್ಬುಟ್ಟು ಯವಸ್ತೆ ಮಾಡ್ತೀನಿ."

" ನೋಡಯ್ಯಾ ನಿಂಗೆ ಸರ್ಕಾರೀ ನೌಕ್ರೀಲಿ ಈಗ್ಲೇ ತಿಂಗ್ಳಾ ನಲ್ವತ್ತ್ ಬತ್ತದೆ. ಮದ್ವೆ ಬೇರೇ ಆಗಿಲ್ಲ. ಹೊಲದಿಂದ ಬೇರೇ ವರಮಾನ ಬತ್ತದೆ. ಸಣ್ಣ ಕುಟುಂಬ. ದುಡ್ಡೆಲ್ಲಾ ನೀ ಯೇನೋ ಮಾಡಿ?"    

" ಎಲ್ಲಣಾ ಗುರುವೇ? ನೌಕ್ರೀ ಹಿಡ್ಯಕೆ ಮಾಡ್ಕಂಡಿರೋ ಸಾಲಾನೇ ಇನ್ನೂ ತೀರ್ಲಿಲ್ಲ. ಕಂಡೋರ್ಗೇನೋ ಜಾಸ್ತೀನೇರ್ ಕಾಣ್ತದೆ. ಒಳಗಿನ್ ಇಸ್ಯಾನೇ ಬೇರೆ. ಮೂರಕ್ಕೆ ಆಯ್ತದೆ ಅಂತಾದ್ರೆ ಮಾಡ್ಸು.ಯಿಲ್ಲಾ ಬಿಟ್ಟಾಕತ್ಲಗೆ."

" ಸೀನಾ ನಾ ಯೇಳೂದ್ನ ಒಸಿ ಕೇಳ್ಕ: ನಿಂಗೆ ಮುಂದೊಳ್ಳೇದಾಯ್ತದೆ. ಮದ್ವೆ ಗಂಡು ಡಾಕ್ರ್ಟರೇಟು ಮಾಡವ್ನೆ ಅಂದ್ರೆ ಮಾವಂದ್ರಾಗೋರು ಅಂಗೇ ಕೇಳ್ದಸ್ಟು ಸುರೀತರೆ ತಿಳ್ಕ! ಇನ್ನೊಂದ್ಕಿತಾ ಮಾತಾಡ್ಬುಟ್ಟು ನಾಕುಕ್ಕಾದ್ರು ಮಾಡಿ ಅಂತಿವ್ನಿ. ನೋಡಾವ, ಆಗ್ಬೋದಾ ? ಇಲ್ಲಾಂದ್ರೆ ಬುಡು. ನೀ ಕೊಟ್ಟ ಪುಸ್ತ್ಕ ಮತ್ ಕಾಸು ಅವರ್ತಾವ ಕೊಟ್ಟಿವ್ನಿ ಹೋಗಿ ಇಸ್ಕಂಬಾ ಎಲ್ಲೀಂತ ಯೋಳ್ತೀನಿ."

" ಮಂಜಣಾ ಬರೇ ಇದೇ ಆಗೋಯ್ತು ನಿಂದು. ಹೋಗ್ಲಿ, ಹೋಗ್ಬುಟ್ಟು ನಾಕಕ್ಕೆ ಮಾತಾಡ್ಕಂಬಾ ಏನಾರಾ ಮಾಡೋಮಿ."

______________________________

 [ ತಿಂಗಳುಗಳ ಮೇಲೆ ವನಕಪಿ ಯುನಿವರ್ಸಿಟಿಯ ವೇದಿಕೆಯಲ್ಲಿ ಘಟಿಕೋತ್ಸವ ]

ಸನ್ಮಾನ್ಯ ಕುಲಪತಿರವರೂ ಹಿರಿಕರೂ ಆದಂತಾ ರಾಜಾ ಚೋರಗುರುರವರೇ, ಪ್ರೊ.ಬೋಳಪ್ಪರವರೇ, ಕ್ಯಾತ ಸಾಯಿತಿ ಪ್ರೊ.ಅಡ್ಮಲ್ಗೋ ಮಾದೇವರವರೇ, ಪ್ರೊ.ಯಡವಟ್ ದ್ವಾರಕಾನಾತ್ ರವರೇ  ಮತ್ತು ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಶ್ರೀಗಳೇ, ನಾವೆಲ್ಲಾ ಇಂದು  ಇಷ್ಟೊಂದು ಸಂಭ್ರಮಿಸುತ್ತಿರೋದು ನಮ್ಮ ವನಕಪಿ ವಿಶ್ವವಿದ್ಯಾಲಯದ ಮೇಲ್ಮಟ್ಟದ ಸಾಧನೆಗಾಗಿ. ಎಂತೆಂತೋರವರೆ ನಮ್ಮ ವಿಶ್ವವಿದ್ಯಾಲಯ್ದಾಗೆ ಅಂತಂದ್ರೆ ಹೊತ್ತಿಂದೊತ್ಗೆ ಹೊಟ್ಟೆಗನ್ನ ತಿನ್ದಿರೋ ಕಿತ್ತುತಿನ್ನೋ ಬಡತನದಾಗೆ ತಾವಿದ್ಗಂಬುಟ್ಟು, ಜೀವನದಾಗೆ ಏನಾರಾ ಸಾಧುಸ್ಲೇ ಬೇಕು ಅನ್ನೋ ಅಟ ಇಟ್ಕಂಡು ಇಂದು ನಮ್ಮ ಡಾಕ್ಟರೇಟ್ ಪದವಿ ಪಡೆಯೋಮಟ್ಟಕ್ಕೆ ನಮ್ಮ ವಿದ್ಯಾರ್ಥಿಗ್ಳು ಬೆಳದವ್ರೆ. ಒಬ್ಬೊಬ್ಬರ್ದೂ ಇಸ್ಯ ಬಾಳ ವಿಸಿಷ್ಟ್ ವಾಗಿದೆ. ಅದ್ರಲ್ಲಂತೂ ನನ್ನ ಮಾರ್ಗದರ್ಸನದಲ್ಲಿ ದೊಂಬಾರಳ್ಳಿ ಅಂಜಿನಪ್ಪ ಶ್ರೀನಿವಾಸ್[ದೊ.ಅ.ಶ್ರೀನಿವಾಸ್]ರವರು ’ನಾಯಿ ಬಾಲ ಡೊಂಕು’ ಎಂಬ ವಿಸ್ಯದಮೇಲೆ ಮಹತ್ತರವಾದ ಸಂಶೋಧನೆ ನಡೆಸಿ, ತಮ್ಮ ಕಾರ್ಯದಲ್ಲಿ ಯಸಸ್ಸು ಗಳಿಸಿದ್ದಾರೆ.  ಕೂಲಿ ಮಾಡಿ ಬದುಕು ಸಾಗಿಸುತ್ತಿರುವ ಬಡ ಅಪ್ಪನ ಮಗನಾಗಿ ಬೆಳೆದು, ತಮ್ಮ ಕಷ್ಟದ ಬದುಕಿನಲ್ಲೇ ಇಂತಾ ಸಾಹಸವನ್ನು ಮಾಡಿದ ದೊ.ಅ. ಶ್ರೀನಿವಾಸ್ ರವರಿಗೆ ಈ ವೇದಿಕೆಯಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಆಗ್ತಿರೋದು ನಮಗೆಲ್ಲಾ ಎಮ್ಮೆಯ ವಿಸ್ಯ.     
.
.
.
.
.
.
.
_________________________________

[ಮಾರನೇದಿನದ ದಿನಪತ್ರಿಕೆಗಳಲ್ಲಿ]

ಕಳೆದ ಗುರುವಾರ ನಗರದಲ್ಲಿ ವನಕಪಿ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಿತು. ಘಟಿಕೋತ್ಸವದ ಅಂಗವಾಗಿ ೧೫೦ ಜನರಿಗೆ ಡಾಕ್ಟರೇಟ್ ಮತ್ತು ೨೫ ನಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿಪ್ರದಾನ ಮಾಡಲಾಯಿತು. ಕೂಲಿ ಕೆಲಸದವರ ಮಗನಾಗಿ ಹುಟ್ಟಿ, ಪದವಿ ಪಡೆದು, ಸರ್ಕಾರೀ ಗ್ರಂಥಾಲಯದಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದೊ.ಅ. ಶ್ರೀನಿವಾಸ್ ರವರು ’ನಾಯಿ ಬಾಲ ಡೊಂಕು’ ಎಂಬ ವಿಷಯದಮೇಲೆ ಮಂಡಿಸಿದ ಸುದೀರ್ಘ ಸಂಶೋಧನಾ ಪ್ರಬಂಧ ಮತ್ತು ’ಸರಕಾರೀ ಇಲಾಖೆಯಲ್ಲಿ ಹೇರಳ ಹಣಗಳಿಸುವ ಸುಲಭ ಕೈಪಿಡಿ’ ಎಂಬ ಪ್ರಬಂಧ ಎರಡನ್ನೂ ಮಾನ್ಯಮಾಡಿ, ವನಕಪಿ ವಿವಿ ಅವರಿಗೆ ಡಬ್ಬಲ್ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ’ನಿರಪರಾಧೀ ದೇಶಭಕ್ತ ಅಫ್ಜಲ್ ಗುರು’ ಎಂಬ ಪ್ರಬಂಧವನ್ನು ಮಂಡಿಸಿದ ಏಜಾಜ್ ಅಷ್ರಫ್ ಎಂಬ ಪತ್ರಕರ್ತರಿಗೂ ಅಲ್ಪಸಂಖ್ಯಾತ ತಳಹದಿಮೇಲೆ ಡಾಕ್ಟರೇಟ್ ನೀಡಲಾಯ್ತು. ’ಗೋಮಾಂಸ ಭಕ್ಷಣೆಯಿಂದ ಕಬ್ಬಿಣದ ಪೋಷಕಾಂಶ ದೊರೆಯುತ್ತದೆ’ ಎಂಬ ವಿಸ್ತೃತ ವಿಶ್ಲೇಷಣಾ ವರದಿಯನ್ನು [ಕಣ್ತಪ್ಪಿ ಆಗಿದೆ ಎಂದುಕೊಳ್ಳುತ್ತಾ] ಮುದ್ರಿಸಿದ ರೆಹಮಾನ್ ಖಾನ್ ಅವರಿಗೂ ಮತ್ತು ಈ ಸಲದ ಖೋಟಾಕ್ಕಿಂತಾ ಹೆಚ್ಚುವರಿಯಾಗಿ,   ’ಅಪ್ರಬುದ್ಧ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಸಗಣಿ ಸುಬ್ಬರಾಜು ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯ್ತು. ಸಭೆಯಲ್ಲಿ ಕುಲಪತಿ ರಾಜಾ ಚೋರಗುರು, ಪ್ರೊ. ಕಾಳಪ್ಪ, ಪ್ರೊ ಬೋಳಪ್ಪ, ಪ್ರೊ.ಅಡ್ಮಲ್ಗೋ ಮಾದೇವ, ಪ್ರೊ.ಯಡವಟ್ ದ್ವಾರಕಾನಾಥ್ ಹಾಗೂ ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಮಹಾಸ್ವಾಮಿಗಳು ಭಾಗವಹಿಸಿದ್ದರು. ಮಲಗಿಕೊಂಡೇ ಏನೆಲ್ಲಾ ಸಾಧಿಸಬಹುದು ಎಂಬ ರಹಸ್ಯದಬಗ್ಗೆ, ಕ್ಯಾತ ಸಾಹಿತಿ ಪ್ರೊ.ಅಡ್ಮಲ್ಗೋ ಮಾದೇವ ವಿಶದವಾಗಿ ಮಾತನಾಡಿ ವಿವರಿಸಿದರು. ದೇಶದಲ್ಲಿ ಗೌರವ ಡಾಕ್ಟರೇಟನ್ನು ಇನ್ನುಮುಂದೆ ಪ್ರತಿಯೊಬ್ಬನೂ ಪಡೆಯತಕ್ಕದ್ದು ಅದು ಅವರ ಜನ್ಮಸಿದ್ಧ ಹಕ್ಕು ಎಂದು ಇಡಿಮಾಯ್ನಮಿಡಿ ಮಹಾಸಂಸ್ಥಾನ ಮಠದ ಡಾ|ಪರಮವೀರ ಸುದ್ದಿಲಿಂಗ ಅಸಂತ್ರುಪ್ತ ಬೆಳ್ಳಜೊಲ್ಲು ಶ್ರೀಗಳು ಎಲ್ಲರಿಗೂ ಕರೆಯಿತ್ತರು. ಬಾಡೂಟದ ಸುಬ್ಬಯ್ಯರವರ ಕಾರ್ಯಕ್ರಮ ನಿರ್ವಹಣೆಯಲ್ಲಿ, ಪ್ರೊ.ಮುದ್ದೇಗೌಡರು ಕಾರ್ಯಕ್ರಮವನ್ನು ನಿರೂಪಿಸಿದರು.      


Wednesday, March 13, 2013

ಹೊಸ ತಾಳಿಗರಿಯ ಘಮಲಿನ ಗೂಡಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು!

 ಚಿತ್ರಋಣ: ಅಂತರ್ಜಾಲ 
ಹೊಸ ತಾಳಿಗರಿಯ ಘಮಲಿನ ಗೂಡಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು!

ಧರ್ಮಸ್ಥಳದಲ್ಲಿ, ದೇವಳದ ಎದುರಿನ ದೂರದ ಜಾಗಗಳಲ್ಲಿ, ಇರುವ ತೆಂಗಿನಮರಗಳಿಗೆ ಮುಳ್ಳು ಕಟ್ಟುಹಾಕಿದ್ದಾರೆ!! ಸಕಲವನ್ನೂ ಕಾಯುತ್ತಾನೆ-ಕೇಳುತ್ತಾನೆ ಮತ್ತು ಪರಾಂಬರಿಸಿ ನೋಡಿಕೊಳ್ಳುತ್ತಾನೆ ಎಂಬ ಮಂಜುನಾಥನ ಸನ್ನಿಧಿಯಲ್ಲೇ ಕಳ್ಳರೂ ಇದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗುತ್ತದೆ.[ಕಳ್ಳರ ಕರ್ಮಫಲವನ್ನು ಅವರು ಆಮೇಲೆ ಅನುಭವಿಸುತ್ತಾರೆ, ಆದರೆ ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು.] ಇದು ನನ್ನ ಚಿಕ್ಕಂದಿನಲ್ಲಿ ನಾನು ಅಲ್ಲಿ ಕಂಡಿದ್ದು; ಈಗ ಅಷ್ಟಾಗಿ ದೃಷ್ಟಿ ಹಾಯಿಸಲಿಲ್ಲ. ಹಾಗಾದರೆ ಕೋಟ್ಯಂತರ ಜನ ನೆರೆನಂಬಿದ ದೇವಳದ ಅಸ್ಥಿತ್ವವೇ ಸುಳ್ಳೇ? ಅಲ್ಲ. ದೇವರ ಸಾನ್ನಿಧ್ಯವಂತೂ ಇದ್ದೇ ಇದೆ. ದೇವರ ಸಾನ್ನಿಧ್ಯವಿರದ ಜಾಗ ಯಾವುದು ಈ ಜಗದಲ್ಲಿ? ಎಲ್ಲೆಡೆಗೂ ಇದ್ದೇ ಇದೆ. ನಾವು ಕಣ್ಮುಚ್ಚಿ ಹಾಲು ಕುಡಿದರೂ, ಕದದ ಮರೆಯ ಮೂಲೆಯಲ್ಲಿ ಕದ್ದುನಿಂತು ಬಾಳೇಹಣ್ಣು ತಿಂದರೂ ಅದು ಜಗನ್ನಿಯಾಮಕನ ಆವಗಾಹನೆಗೆ ಬರದೇ ಹೋಗುವುದಿಲ್ಲ. ಅಂದಮೇಲೆ ಕಾಶಿ, ಕಾಂಚಿ, ತಿರುಪತಿ, ಧರ್ಮಸ್ಥಳ ಇಂತಹ ಕ್ಷೇತ್ರಗಳ ಅಗತ್ಯತೆ ಎಷ್ಟು? ಇದಕ್ಕೆ ಉತ್ತರಿಸುವುದು ಸಾಮಾನ್ಯರಿಗೆ ಆಗುವ ಕೆಲಸವಲ್ಲ! ಹಿಂದಿನ ತಪೋವನಗಳಲ್ಲಿನ ಸಾಧಕ ಶ್ರೇಷ್ಠರು, ತಮ್ಮ ತಪಸ್ಸಾಧನೆಯಿಂದ ಪಡೆದ ಸಿದ್ಧಿಗಳಿಂದ, ತಾವು ತಂಗಿದ್ದ ಭೂಪ್ರದೇಶಗಳಲ್ಲಿ ವಿಶ್ವಂಭರನನ್ನು ಒಂದೊಂದು ರೂಪದಲ್ಲಿ ಆರಾಧಿಸಿದರು; ಶಿವನೋ ಕೇಶವನೋ, ಗಣಪನೋ ಸ್ಕಂದನೋ ರೂಪ ಯಾವುದೇ ಆದರೂ ಮೂಲ ಒಂದೇ-ಅದು ಅಮೂರ್ತರೂಪ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿದೆ; ಇದನ್ನೇ ಆಧ್ಯಾತ್ಮ ಶಿಖರದ ಉತ್ತುಂಗಕ್ಕೇರಿದವರೂ ನಮಗೆ ತಿಳಿಸಿದ್ದಾರೆ. ಹೀಗಾಗಿ ಹಿಂದೆ ಕಾಲಕಾಲಕ್ಕೆ, ಕಾರಣಾಂತರಗಳಿಂದ ಕೆಲವು ಭೂಭಾಗಗಳು ದೈವತ್ವದ ಪ್ರಖರತೆಯನ್ನು ಪಡೆದವು. ಅಂತಹ ಕ್ಷೇತ್ರಗಳು ಜನಸಾಮಾನ್ಯರ ದುಃಖ-ದುಮ್ಮಾನಗಳಿಗೂ ಅಹವಾಲುಗಳಿಗೂ ಸ್ಪಂದಿಸುವ, ಇಳೆಯಲ್ಲಿನ ’ಕೌಂಟರ್’ ಗಳಾಗಿ ಕೆಲಸಮಾಡಿವೆ-ಮಾಡುತ್ತಿವೆ.   

ಚಿಕ್ಕವರಿರುವಾಗ ನಾವು, ಅಜ್ಜ ಹೊಸದಾಗಿ ಖರೀದಿಸಿದ ಜಮೀನಿಗೆ ಹೋಗುತ್ತಿದ್ದೆವು. ಅದನ್ನು ನೋಡಿಕೊಳ್ಳುವುದಕ್ಕೆ ಅತ್ತೆ-ಮಾವ ಮನೆಮಾಡಿಕೊಂಡಿದ್ದರು. [ಈಗ ಆ ಜಮೀನಿನ ಅರ್ಧಕ್ಕಿಂತ ಹೆಚ್ಚಿನಭಾಗ ಅವರಿಗೂ ಸಂದಿದೆ ಬಿಡಿ.]ನಮಗೋ ರಜಾದಿನಗಳಲ್ಲಿ ಅತ್ತೆಯ ಮನೆಗೆ ಹೋದ ಹಾಗೂ ಆಯ್ತು ಮತ್ತು ಜಮೀನಿಗೂ ಹೋದ ಹಾಗೂ ಆಯ್ತು ಎಂಬ ಅನಿಸಿಕೆ; ಮೇಲಾಗಿ ಅಲ್ಲಿ ಆಗ ಅದು ಕಗ್ಗಾಡು-ರಸ್ತೆಗಿಸ್ತೆ ಎಲ್ಲ ಇರಲೇ ಇಲ್ಲ. ಮುಖ್ಯರಸ್ತೆಯಿಂದ ೪ ಕಿ.ಮೀ. ಕಾಡಿನ ದಾರಿಯಲ್ಲಿ ಸಾಗಬೇಕಿತ್ತು. ದಾರಿಯಲ್ಲಿ ಅಲ್ಲಲ್ಲಿ ಸಿಗುವ ಎತ್ತಿನಗಾಡಿಗಳು[ಯಾರೋ ನಮ್ಮಂತೇ ಹಳ್ಳಿಗರವು-ಭಾರದ ಸಾಮಾನುಗಳನ್ನು ಸಾಗಿಸಲು ಬೇಕಲ್ಲಾ?]ಎತ್ತುಗಳ ಕೊರಳ ಗಂಟೆಗಳ ನಿನಾದ ಸಾಕಷ್ಟು ದೂರ ಕೇಳಿಸುತ್ತಿತ್ತು. ಕಲ್ಲುಗಳನ್ನು ಎಡವುತ್ತಾ, ಅಡ್ಡಡ್ಡ ಸಿಗುವ ಚಿಕ್ಕ-ಪುಟ್ಟ ಹರಿವ ತೊರೆಗಳನ್ನು ನೋಡುತ್ತಾ, ನೀರಿಗೆ ಕಲ್ಲೆಸೆದು ಕೆಲಕಾಲ ಆಟವಾಡುತ್ತಾ, ಕಾಡಿನ ಮಹಾಮಹಾ ಮರಗಳ ಟೊಂಗೆಗಳಮೇಲೆ ಕುಳಿತು-ಜೋತು ಆಟವಾಡುವ ವಿವಿಧ ಹಕ್ಕಿ-ಪಕ್ಷಿ-ಅಳಿಲು-ಕೇಶಳಿಲುಗಳನ್ನು ನಮ್ಮಷ್ಟಕ್ಕೇ ಅಣಕಿಸುತ್ತಾ-ಕರೆಯುತ್ತಾ, ಆ ದಾರಿಯಲ್ಲಿ ನಡೆದು ಹೋಗುವುದು ಅಭ್ಯಾಸವಾಗಿತ್ತು. ತಲೆಯಮೇಲೆ ೧೨-೧೫ ಕೆಜಿ ಭಾರದ ಆಹಾರ ಧಾನ್ಯಗಳ ಮೂಟೆಗಳನ್ನು ಹೊತ್ತಿದ್ದರೂ ನಮಗದರ ಪರಿವೆಯೇ ಇರದಷ್ಟು  ನಿಸರ್ಗ ಸುಖವನ್ನು ಉಣ್ಣುತ್ತಿದ್ದೆವು! ನಮ್ಮ ದಾರಿಯಲ್ಲಿ ಅಲ್ಲಲ್ಲಿ ಜಿಂಕೆಗಳು, ಕಾಡುಹಂದಿಗಳು, ಕಾಡುಕುರಿಗಳು, ಕಡವೆ-ಸಾರಂಗಗಳು, ನವಿಲು-ಕೆಂಬೂತಗಳು ಎಲ್ಲವೂ ಸಿಗುತ್ತಿದ್ದವು; ಮನುಷ್ಯರನ್ನು ಕಂಡತಕ್ಷಣ ಭಯವಿಹ್ವಲವಾಗಿ ಓಡುತ್ತಿದ್ದವು, ಪೊದೆಗಳ ನಡುವೆ ನುಸುಳಿ ಕಣ್ಮರೆಯಾಗುತ್ತಿದ್ದವು!  

ಮಣ್ಣಿನ ಗೋಡೆಗಳ ಪುಟ್ಟ ಮನೆಯಲ್ಲಿ ಕೋಣೆಗಳ ಪ್ರತ್ಯೇಕತೆ ತೀರಾ ಇರಲಿಲ್ಲ. ಲೆಕ್ಕಕ್ಕೆ ಒಂದಿದ್ದ ನೆನಪು-ಅದು ಹೆಂಗಸರಿಗೆ ಬಟ್ಟೆ ಇಟ್ಟುಕೊಳ್ಳಲಿಕ್ಕೆ ಮತ್ತು ತೊಟ್ಟುಕೊಳ್ಳಲಿಕ್ಕೆ ಬೇಕಾಗಿ ಮಾಡಿದ್ದಿರಬೇಕು. ಮಣ್ಣಿನ ಗೋಡೆಗಳ ಮನೆಗೆ ಕಾಡಿನ ವಾಟೆ ಮರಗಳ ಉದ್ದದ ಗೂಟಗಳನ್ನು ಕಡಿದು ಅದನ್ನು ಛಾವಣಿಗೆ ಆಧಾರವಾಗಿ ಕಟ್ಟಿದ್ದರು. ಜೊತೆಗೆ ಬಿದಿರಿನ ಗಳಗಳೂ ಮೇಳೈಸಿದ್ದವು. ವರ್ಷಕ್ಕೊಮ್ಮೆ ಬೇಸಿಗೆಯ ಕೊನೆಯೊಳಗೆ ’ಮನೆ ಹೊದಿಕೆ’ ಎಂಬ, ಛಾವಣಿಯ ಮುಖ್ಯವಸ್ತುವನ್ನು ಬದಲಾಯಿಸುವ ಕ್ರಮ; ವರ್ಷವಿಡೀ ಮಳೆ-ಚಳಿ-ಬಿಸಿಲುಗಳಿಗೆ ಮೈಯ್ಯೊಡ್ಡಿ, ತೂತುಬಿದ್ದು ಸೊರಗಿ ಸೋರುತ್ತಿರುವ ಹಳೆಯದಾದ ತಾಳಿಮಡಲು[ತಾಳಿಗರಿ]ಗಳನ್ನು ಬದಲಿಸಿ ಹೊಸ ತಾಳಿಮಡಲುಗಳನ್ನು ಹೊದೆಸುವುದಕ್ಕೆ ಆ ಹೆಸರು. ಪೂರ್ವಭಾವಿಯಾಗಿ: ಹಿಂದಿನದಿನವೇ ಕಟ್ಟುಮಸ್ತಾದ ಗಂಡು ಕೆಲಸಿಗರು ಬೆಳಗಿನಜಾವದಲ್ಲೇ ಎದ್ದುಹೋಗಿ, ಚೆನ್ನಾಗಿ ಬಲಿತ ತಾಳಿಮಡಲುಗಳನ್ನು ಕಡಿದು ಹೊರೆ ಕಟ್ಟಿಕೊಂಡು ತಂದು ಮನೆಯ ಅಂಗಳದಲ್ಲಿ ಇಟ್ಟಿರುತ್ತಿದ್ದರು. ಹೊಸದಾಗಿ ತಂದ ತಾಳಿಮಡಲುಗಳ ಕಸರನ್ನು ತೆಗೆದು ಒಪ್ಪಗೊಳಿಸಿ ಛಾವಣಿಯ ಮೇಲ್ಗಟ್ಟನ್ನೇರಿದವರಿಗೆ ಕೆಳಗೆ ನಿಂತು ಕೆಲವರು ಕೊಟ್ಟರೆ, ಮೇಲೆ ನಿಂತವರು ಅದನ್ನು ವ್ಯವಸ್ಥಿತಕ್ರಮದಲ್ಲಿ ಹರಡಿ, ಬೆತ್ತದ ದಾರಗಳಿಂದ ಭದ್ರಪಡಿಸುತ್ತಿದ್ದರು. ಮನೆಹೊದಿಕೆ ಮುಗಿದ ಮೇಲೆ ಆ ದಿನ ಮನೆಹೊದಿಕೆಯಲ್ಲಿ ತೊಡಗಿದ ಎಲ್ಲರಿಗೂ ಪಾಯಸದ ಔತಣ!

ಹೊಸದಾಗಿ ಸಿಂಗರಿಸಿಕೊಂಡು ಮದುಮಗಳಂತೇ ಕಾಣುವ ಮನೆಯಲ್ಲಿ, ಆ ಕೆಲವು ರಾತ್ರಿಗಳಲ್ಲಿ ಹೊಸ ತಾಳಿಗರಿಯ ನವಿರಾದ ಘಮಲು ಮೂಗಿಗೆ ಬಡಿಯುತ್ತಿತ್ತು. ಬಿರುಬೇಸಿಗೆಯಲ್ಲೂ ಅಲ್ಲಿ ಕಾಡಿನ ತಂಪಾದ ವಾತಾವರಣವಿರುತ್ತಿದ್ದ ಆ ಕಾಲಮಾನದಲ್ಲಿ, ಹೊಸ ತಾಳಿಗರಿಯ ಘಮಲಿನ ಗೂಡಿನಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು ಈಗಲೂ ಆಗುತ್ತದೆ. ರಾತ್ರಿ ಹೆಚ್ಚುತ್ತಿದ್ದಂತೇ ವನ್ಯಮೃಗಗಳ ಕೂಗುಗಳೂ, ನಿಶಾಚರಿ ಹಕ್ಕಿಗಳ ಕೂಗುಗಳೂ ಕೇಳಿಬರುತ್ತಿದ್ದವು. ಅಕ್ಕ-ಪಕ್ಕದ ಹೊಲ-ಗದ್ದೆಗಳಲ್ಲಿ, ಬೆಳೆಗಳನ್ನು ಕಾಯಲು ಹಾಕಿದ್ದ ಮಾಳಗಳಲ್ಲಿ ಮಲಗಿದ ರೈತರು, ಬೆಳೆ ತಿನ್ನಲು ಬರುವ ಹಂದಿ-ಕಡವೆ ಮೊದಲಾದ ಪ್ರಾಣಿಗಳನ್ನು ಓಡಿಸಲು ಆಗಾಗ ಖಾಲಿ ಡಬ್ಬಗಳನ್ನೋ, ಒಣಮರದ [ಕತ್ತರಿಸಿದ] ಪೊಳ್ಳು ಬೊಡ್ಡೆಗಳನ್ನೋ ಬಡಿಯುತ್ತಾ ’ಹುಯ್ಕೋ’ ಹಾಕುತ್ತಿದ್ದರು. ಆ ಸದ್ದಿಗೇ ಜಮೀನಿಗೆ ಬರುವ ಕಾಡಾಡಿ ಪಶು-ಪಕ್ಷಿಗಳು ಮರಳಿ ಹೋಗಿಬಿಡುತ್ತಿದ್ದವು! ಇಪ್ಪತ್ತೈದು ವರ್ಷಗಳ ನಂತರದಲ್ಲಿ ಈಗ ನೋಡಿದರೆ ನನ್ನ ಬಾಲ್ಯವೇ ಒಂದು ಕಥೆ! ನನ್ನ ಬಾಲ್ಯದ ದಿನಗಳನ್ನು ನೆನೆನೆನೆದು ಅದೆಷ್ಟೋ ಲೇಖನಗಳನ್ನು ಬರೆದು ಮೆಲುಕುಹೊಡೆದಿದ್ದೇನೆ. ಆಗ ಕಾಡಿದ್ದಲ್ಲಿ ಈಗ ಕಾಡಿಲ್ಲ!! ಕಾಡೆಲ್ಲಾ ನಾಡಾದ ಪರಿಸರದಲ್ಲಿ ಗಿಳಿ-ಗೊರವಂಕ-ಕೋಗಿಲೆ-ನವಿಲು-ಅಳಿಲು-ಕೇಶಳಿಲು[ಅತಿ ಅಪರೂಪದ ಕರ್ನಾಟಕದ ಪಶ್ಚಿಮ ಘಟ್ಟದ ತಳಿ]ಗಳಿಲ್ಲ! ಜಿಂಕೆ-ಕಡವೆ-ಸಾರಂಗ ಇವೆಲ್ಲಾ ದೂರ ಬಹುದೂರವಿರುವ ಅಳಿದುಳಿದ ಕಾಡಿನಲ್ಲೆಲ್ಲೋ ಮರೆಯಾಗಿವೆ! ನಾವು ಕಾಲ್ನಡಿಗೆಯಲ್ಲಿ ನಡೆದ, ಕಾನನದ ದಟ್ಟ ಪೊದೆಗಳ ಬೆಟ್ಟಗಳ ನಡುವಿನ ಕಾಲುಹಾದಿಯಲ್ಲಿ ಹರಿವ ತೊರೆಗಳಿಲ್ಲ! ಹೇಳೆಬೇಕೇ? ಕಾಲುಹಾದಿಯೇ ಈಗ ದಾಮರು ರಸ್ತೆಯಾಗಿದೆ-ಮನೆಗಳಿಗೆ ಹಂಚುಗಳು ಹೊದೆಸಲ್ಪಟ್ಟಿವೆ, ಅಲ್ಲಲ್ಲಿ ತಾರಸಿ ಮನೆಗಳೂ ತಲೆ ಎತ್ತುತ್ತಿವೆ!!

ಕೇವಲ ಇಪ್ಪತ್ತೈದು ವರ್ಷಗಳ ಅಂತರದಲ್ಲಿ ಕಾಡಿನ ಭಾಗವೊಂದು ಇತಿಹಾಸದ ಭಾಗವಾಗಿ ಅಳಿದುಹೋಗಿದ್ದರೆ, ಅದಕ್ಕೆ ಮನುಷ್ಯರಾದ ನಮ್ಮೆಲ್ಲರ ’ಕೊಡುಗೆ’ಗಳೇ ಕಾರಣವೆಂದರೆ ತಪ್ಪೇ? ಹೀಗಿರುವಾಗ  ವೇದಗಳ ಕಾಲದಿಂದಾರಭ್ಯ ಇಲ್ಲೀವರೆಗೂ ಪ್ರತಿನಿತ್ಯ ಲಕ್ಷಾಂತರ ಜನರಿಗೆ ತೆರೆದುಕೊಳ್ಳುವ ಕಾಶಿ, ಕಾಲದ ಗತಿಯ ಸಹಜತೆಯಲ್ಲಿ ತನ್ನ ಮೂಲಸ್ವರೂಪದಲ್ಲಿ ಅನೇಕ ಅಳವಡಿಕೆಗಳನ್ನು ಮಾಡಿಕೊಳ್ಳುತ್ತಾ ಬಂದು ಇಂದಿಗೂ ಸ್ಥಿರವಾಗಿದೆ! ಬರುವ ಜನರೆಲ್ಲಾ ತಮ್ಮ ತಮ್ಮ ಕೆಲಸಕ್ಕಷ್ಟೇ ಬರುವಾಗ ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ಚಿಂತಿಸಲು ಜನರಿಗೆ ಪುರ್ಸೊತ್ತಾದರೂ ಸಿಗುತ್ತದೆಯೇ? ಇಲ್ಲ! ಕರ್ನಾಟಕದ ನಮ್ಮ ಗೋಕರ್ಣದಲ್ಲೇ ಮಾಲಿನ್ಯವನ್ನು ನಿಯಂತ್ರಿಸುವುದು ಕಷ್ಟವಾದಾಗ, ಶ್ರೀಮದ್ ರಾಮಚಂದ್ರಾಪುರಮಠದವರು [ಹಿಂದೆ ರಾಜಶಾಸನ ಬದ್ಧವಾಗಿ ಗೋಕರ್ಣ ಅವರದ್ದೇ ಆಗಿತ್ತು ಎಂಬುದು ಗಮನಿಸಬೇಕಾದ ಅಂಶ!]ಅದನ್ನೀಗ ವಹಿಸಿಕೊಂಡು ಸುಸ್ಥಿತಿಗೆ ತರುವತ್ತ ಶ್ರಮಿಸುತ್ತಿದ್ದಾರೆ. ಕಾಶಿಯಾದರೆ ಹಾಗಲ್ಲ; ಅದು ಕೇವಲ ಕರ್ನಾಟಕದ್ದಲ್ಲ, ಇಡೀ ದೇಶದ ಜನರನ್ನು ಸೂಜಿಗಲ್ಲಿನಂತೇ ಆಕರ್ಷಿಸುವ ಪ್ರದೇಶ. ಅಲ್ಲಿ ಕೈಂಕರ್ಯವಿಲ್ಲದ ದಿನವೇ ಇಲ್ಲ!  ಯಾರೋ ಬರುತ್ತಿರುತ್ತಾರೆ-ಯಾರೋ ಹೋಗುತ್ತಿರುತ್ತಾರೆ. ಅತ್ಯಂತ ಪುರಾತನವಾದ ವಿಶ್ವವಿದ್ಯಾನಿಲಯ ಅಲ್ಲಿನ ಹೆಗ್ಗುರುತು. ಅಂದಿನ ಕಾಲದಲ್ಲಿ ಪಾಂಡಿತ್ಯ ಸಂಪಾದನೆಗೆ ಕಾಶಿಗೇ ಜನ ತೆರಳುತ್ತಿದ್ದರು. ದೊಡ್ಡ ದೊಡ್ಡ ಪಂಡಿತರೂ ವಿದ್ವಜ್ಜನರೂ ಬದುಕಿ-ಬಾಳಿ, ಕಾಲಗರ್ಭದಲ್ಲಿ ಲೀನವಾಗಿ ಹೋದ ಜಾಗ ಕಾಶಿಯೆಂಬ ಪ್ರದೇಶ. 

ಅಂದಿನ ಕಾಲಮಾನದಲ್ಲಿ ಕಾಶಿಯೊಂದು ಸಮೃದ್ಧ ನಗರವಾಗಿತ್ತು. ವಾರಣಾ ಮತ್ತು ಅಸಿ ಎರಡೂ ನದಿಗಳು ತುಂಬಿ ಹರಿಯುತ್ತಿದ್ದ ಮಧ್ಯದ ಭೂಭಾಗ ವಾರಣಾಸಿ ಅಥವಾ ಕಾಶಿ. ಇನ್ನೊಂದೆಡೆ ಗಂಗೆಯೂ ಹರಿದು ಬಂದು ಸಿಗುತ್ತಿರುವುದರಿಂದಲೂ, ಕಾಶಿ ಅನೇಕ ತಪೋಧನರಿಗೆ ಹೇಳಿಮಾಡಿಸದಂತಿತ್ತು. ಕಾಶಿ ಪಟ್ಟಣವಾಗುವುದಕ್ಕಿಂತಲೂ ಮುಂಚೆ ಅಲ್ಲಿಯೂ ಕಾಡುಗಳಿದ್ದವು-ದಂಡಕಾರಣ್ಯಗಳಿದ್ದವು. ಕಾಡಿನ ಮಧ್ಯೆ ಹರಿಯುವ ಭಾಗೀರಥಿಯಲ್ಲಿ, ಋಷಿಪುಂಗವರು ಗಂಟೆಗಟ್ಟಲೆ ನಿಂತು ತಮ್ಮ ಸ್ನಾನ-ಧ್ಯಾನ-ಅರ್ಘ್ಯ-ಆಹ್ನಿಕಾದಿಗಳನ್ನು ನಡೆಸುತ್ತಿದ್ದರು. ಯುಗಯುಗಗಳಿಂದ ನಡೆದ ಪುಣ್ಯಕಾರ್ಯಗಳ ಫಲಶ್ರುತಿಯಾಗಿ ಕಾಶಿ ವಿಶೇಷ ದಿವ್ಯಶಕ್ತಿಯ ಪ್ರಭಾವಳಿಯಿಂದ ಶೋಭಿಸಿತು. ಮಾನವನ ಶರೀರದ ಸುತ್ತಲೂ ಒಂದು ಅಗೋಚರ ಪ್ರಭಾವಳಿಯಿದೆ ಎಂಬುದನ್ನು ಈಗೀಗ ವಿಜ್ಞಾನ ಒಪ್ಪಿಕೊಂಡಿದೆ; ಅದು ವ್ಯಕ್ತಿಯಿಂದ ವ್ಯಕ್ತಿಗೆ ಪ್ರತಿಶತ ಪರಿಮಾಣದಲ್ಲಿ ಹೆಚ್ಚುಕಮ್ಮಿ ಇರುತ್ತದೆ. ಪಾಪ-ಎಂಬುದನ್ನೇ ಮಾಡದ ಋಷಿಗಳ ಸುತ್ತ ಇದ್ದ ಪ್ರಭಾವಳಿಯನ್ನು ಯಾರೂ ಲೆಕ್ಕಹಾಕಲು ಸಾಧ್ಯವಿಲ್ಲವಿಲ್ಲಾ ಅಂಥಾ ಸಹಸ್ರ ಸಹಸ್ರ ಸಹಸ್ರ ಋಷಿಗಳು ತಮ್ಮ ಜೀವನದ ಬಹುಭಾಗವನ್ನು ಕಾಶಿಯೆಂಬ ಪ್ರದೇಶದಲ್ಲೇ ಕಳೆದರು. ಅಲ್ಲಿ ನಿತ್ಯವೂ ಸಜ್ಜನರ/ಮುನಿಜನರ ಸಂವಹನ ಸಮಿತಿ ಸಭೆ ಸೇರುತ್ತಿತ್ತು; ಮಾನವ ಜೀವನವನ್ನು ಉತ್ತಮ ಪಡಿಸುವ ಬಗ್ಗೆ ವೇದಗಳ ಅಳವಡಿಕೆಯನ್ನು ತರುವ ಕುರಿತು ಮಾತುಕತೆಗಳು ನಡೆಯುತ್ತಿದ್ದವು. ನಿಸ್ಪೃಹರಾದ ಮುನಿಜನರು ತಮ್ಮ ಮುಂದಿನ ಪೀಳಿಗೆಗಳ ಬಗ್ಗೆ ದೂರಾಲೋಚನೆಯಿಟ್ಟುಕೊಂಡು, ತಮ್ಮ ತಪಸ್ಸಿನಿಂದ ಗಳಿಸಿದ-ತಾವು ಸಲ್ಲಿಸಬಹುದಾದ ಅನರ್ಘ್ಯರತ್ನಗಳನ್ನು ವರ್ಗಾಯಿಸಿಕೊಡುವುದಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಂಡು ಕಾಶಿಯನ್ನೇ ಕೇಂದ್ರವನ್ನಾಗಿ ಮಾಡಿಕೊಂಡರು; ಅದಕ್ಕೆ ಇನ್ನೂ ಹೆಚ್ಚಿನ ಕಾರಣಗಳಿವೆ ಬಿಡಿ.

ಕಾಶಿಯೇ ಮೋಕ್ಷಪ್ರದವೆಂದು ಅನುಭವವೇದ್ಯವಾದ ಅಂಶವನ್ನು ಅಂಥಾ ಮಹನೀಯರು ತಿಳಿಸಿಹೋದರು. ಅದು ಬಾಯಿಂದ ಬಾಯಿಗೆ ಹಬ್ಬುತ್ತಾ ನಿತ್ಯವೂ ದಾಖಲೆಯ ಜನಸಂದೋಹವೇ ಕಾಣತೊಡಗಿತು. ಮೇಲಾಗಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ನೆಲೆಯಾಗಿರುವುದರಿಂದ ಶಿವ-ಶಿವೆ-ಗಂಗೆಯರ ಸಂಪೂರ್ಣ ವಸತಿಯೇ ಅಲ್ಲಿದೆಯೆಂಬ ಭಾವನೆ ಜನರಲ್ಲಿ ಮನೆಮಾಡಿದೆ. ಕಾಶಿಯ ಬೀದಿಗಳುದ್ದಕ್ಕೂ ಅಲ್ಲಲ್ಲಿ ಆಯಾ ಕಾಲಘಟ್ಟದಲ್ಲಿ ಋಷಿಮುನಿಗಳು ದೇವಳಗಳನ್ನು ಸ್ಥಾಪಿಸಿದ್ದಾರೆ. ಬೀದೀ ಅಗಲೀಕರಣ, ನವನಾಗರಿಕತೆಯ ಅನುಸಂಧಾನ ಅಲ್ಲಿ ನಡೆದರೆ ಅಲ್ಲಿರುವ ದೇವಾಲಯಗಳನ್ನೇನು ಮಾಡುತ್ತೀರಿ? ಹೇಳಿಕೇಳಿ ದೇವಾಲಯಗಳ ನಗರಿ ಎಂದೇ ಕಾಶಿಯನ್ನು ಉಲ್ಲೇಖಿಸಿದ್ದಾರಲ್ಲಾ? ಕಾಶಿಯ ಅನೇಕ ದೇವಾಲಯಗಳಿಗೆ ಹೊಂದಿಕೊಂಡಂತೆಯೇ ಮನೆಗಳ ಸಮುಚ್ಛಯಗಳೂ ಇವೆ. ಕೆಲವು ಮನೆಗಳಂತೂ ಹಲವಾರು ಶತಮಾನಗಳದ್ದೇನೋ ಎಂಬಷ್ಟು ಹಳೆಯ ಮನೆಗಳು! ಅವರನ್ನೆಲ್ಲಾ ಎಲ್ಲಿಗೆ ಕಳಿಸೋಣ? ಇನ್ನು ಅಂಗಡಿ-ಮುಂಗಟ್ಟುಗಳು ಅಲ್ಲಿ ಹಾದಿಬೀದಿಗಳಲ್ಲಿ ಹುಟ್ಟುತ್ತಲೇ ಸಾಯುತ್ತಲೇ ಇರುತ್ತವೆ. ಬೀದಿಗಳಲ್ಲೇ ವಾಸಮಾಡುವ ಜನವೂ ಇದ್ದಾರೆ![ಬೆಂಗಳೂರಿನಲ್ಲಿಲ್ಲವೇ? ಮುಂಬೈಯ್ಯಲ್ಲಿಲ್ಲವೇ? ಕೊಲ್ಕತಾದಲ್ಲಿಲ್ಲವೇ? ದೆಹಲಿಯಲ್ಲಿಲ್ಲವೇ? ಚೆನ್ನೈಯಲ್ಲಿಲ್ಲವೇ? ಹಾಗೇ!] ಎಲ್ಲವೂ ಅಡ್ಜಸ್ಟೇಬಲ್. ಅಲ್ಲಿ ಅಂಗಡಿಗಳಲ್ಲೇ ತೂರಿಕೊಂಡು ಸಾಗಿಹೋಗಬೇಕಾಗುವುದು ನಮಗೆ ಮುಜುಗರವಾದರೂ ಅದು ಅಲ್ಲಿನ ಸಹಜ ಪದ್ಧತಿ. ಯಾರೂ ಯಾಕೆಂದು ಪ್ರಶ್ನಿಸುವುದಿಲ್ಲ, ಬೇಡಾ ಎನ್ನುವುದಿಲ್ಲ.  

’ಸುಲಿಗೆ’ ಎಂಬ ಮಾತನ್ನು ಕೇಳಿದೆ. ನಮ್ಮ ಮಹಾನಗರಗಳಲ್ಲಿ ತಲೆ ಎತ್ತಿರುವ ಅದೆಷ್ಟೋ ಬಹುಮಹಡಿ ಆಸ್ಪತ್ರೆಗಳಲ್ಲಿ, ಎಂಜಿನೀಯರಿಂಗ್-ಮೆಡಿಕಲ್ ಕಾಲೇಜುಗಳಲ್ಲಿ, ಇರುವಷ್ಟು ಹೆಚ್ಚಿನ ಪ್ರಮಾಣದ ಸುಲಿಗೆ ಅಲ್ಲಿಲ್ಲವೆಂಬುದನ್ನು ನಾಗರಿಕರಾದ ನಾವು ಕಣ್ಮುಚ್ಚಿ ಒಪ್ಪಬೇಕಾಗುತ್ತದೆ! ಅಲ್ಲಿ ಎಲ್ಲಾ ವೃತ್ತಿಯವರದೂ ಹಾಗೇನೆ; ಬರೇ ಫಂಡ-ಪುರೋಹಿತರಷ್ಟೇ ಅಲ್ಲ, ಅಲ್ಲಿನ ಕ್ಷೌರಿಕರಿಂದ ಹಿಡಿದು ನದಿಯಲ್ಲಿ ನಾವೆ ನಡೆಸುವ ಜನರೂ ಕೂಡ ಒಂದಕ್ಕೆ ಹತ್ತು ಕೇಳುವವರೇ. ೧೯೪೩ನೇ ಇಸವಿಯಲ್ಲಿ ಅಲ್ಲಿಗೆ ಯಾತ್ರೆ ಹೋಗಿದ್ದ ನನ್ನ ಪರಿಚಿತರೊಬ್ಬರಿಗೆ ಈಗ ೯೦ನೇ ವಯಸ್ಸು. ಅವರು ಹೇಳಿದರು: "ನಾವು ದೋಣಿಯಲ್ಲಿ ಹೋಗಬೇಕೆಂದರೆ ಆತ ೧೧ ರೂಪಾಯಿ ಕೊಡಿ ಎಂದ. ನಾವು ಮರಳಿ ಹೊರಟೆವು. ನಾಲ್ಕೇ ಜನ ಇದ್ದೆವು. ನಾವು ಹೊರಟಮೇಲೆ ನಮ್ಮನ್ನು ಪುನಃ ಕರೆದು ತಲಾ ಒಂದೊಂದು ರೂಪಾಯಿ ಕೊಡಿ ಎಂದ. ತೆಗೆದುಕೊಂಡು ಹೋಗಿ ಅಲ್ಲಿನ ಕೆಲಸಮುಗಿದಮೇಲೆ ಮರಳಿ ತಂದುಬಿಟ್ಟು ನಾಲ್ಕು ರೂಪಾಯಿ ತೆಗೆದುಕೊಂಡ. ಹೀಗೇ ಅಲ್ಲಿ ಬಾರ್ಗೇನ್ ಮಾಡಬಹುದು, ಪುರೋಹಿತರ ದಕ್ಷಿಣೆಯಲ್ಲೂ ಬಾರ್ಗೇನ್ ಮಾಡಬಹುದು" ಎಂದರು. ಬಾರ್ಗೇನ್ ವ್ಯವಹಾರ ನಡಾವಳಿ ಇದ್ದ ಕಡೆಗೆಲ್ಲಾ ಹಾಗೇ. ನಾನು ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಮಡದಿಗಾಗಿ ಬ್ಯಾಗ್ ಖರೀದಿಸುತ್ತಿದ್ದೆ-ಆತ ಹೇಳಿದ್ದು ಆರುನೂರು; ನಾನು ಮುನ್ನೂರಕ್ಕೆ ಕೇಳಿದೆ, ಮುನ್ನೂರೈವತ್ತು ಅವನ ಕೈಗೆ ತುರುಕಿ "ಕೊಡುವುದಾದರೆ ಕೊಡು" ಎಂದೆ, ಆತ ಕೊಟ್ಟುಬಿಟ್ಟ! ನನ್ನೆದುರೇ ಅಂಥಾದ್ದೇ ಬ್ಯಾಗನ್ನು ಐನೂರಕ್ಕೂ ಮಾರಿದ್ದಾನೆ ಭೂಪ! ಮಾರುವೇಷದಲ್ಲಿ ಹಲವು ರೀತಿಯ ಡೊನೇಶನ್ ಮತ್ತು ಖರ್ಚುಗಳ ಲೆಕ್ಕದಲ್ಲಿ ನವನಾಗರಿಕ ಸಂಸ್ಥೆಗಳು ವಿಧಿಸುವ ಅನಿಯಮಿತ ಶುಲ್ಕಗಳ ಪದ್ಧತಿ ನಿಯಮಿತ ರೀತಿಗೆ ಬರುವವರೆಗೆ ’ಸುಲಿಗೆ’ ಎಂಬ ಪದ ಊರ್ಜಿತವಾಗುವುದಿಲ್ಲ; ಬದುಕಿಗಾಗಿ ಎಲ್ಲರದೂ ಸುಲಿಗೆಯೇ!!

’ರಾಮ್ ತೇರಿ ಗಂಗಾಮೈಲಿ ಹೋಗಯೀ’ ಎಂಬ ಸಿನಿಮಾವನ್ನು ರಾಜ್ ಕಪೂರ್ ತಯಾರಿಸಿದರಲ್ಲಾ ಆ ಕಾಲಕ್ಕೇ ಕಾಶಿಯಲ್ಲಿ ಗಂಗೆ ಮಲಿನವಾಗಿದ್ದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಕೋಟ್ಯಂತರ ಜನ ತಮ್ಮ ಅಪರ ಕರ್ಮಗಳನ್ನು ನಡೆಸಿಕೊಳ್ಳುತ್ತಾ, ಸತ್ತವರನ್ನು ಅರ್ಧ ಸುಟ್ಟು ನದಿಗೆ ಬಿಸಾಡಿದರೆ, ನಗರದ ಮಲಿನ ನೀರು ನದಿಯನ್ನು ಬಹುದೊಡ್ಡ ಪ್ರಮಾಣದಲ್ಲಿ ಸೇರಿದರೆ, ಗಂಗೆಯಲ್ಲ ಯಾವ ನದಿಯಾದರೂ ಮಲಿನವಾಗದೇ ಇರುವುದಿಲ್ಲ. ಅಷ್ಟಾಗಿಯೂ ಗಂಗೆ ಇನ್ನೂ ತನ್ನತನವನ್ನು ಪೂರ್ತಿ ಕಳೆದುಕೊಳ್ಳದೇ ಇರುವುದು ತನ್ನಲ್ಲಿನ ಆ ದಿವ್ಯತೆಯಿಂದಲೇ. ಆದರೆ ಒಂದು ಮಾತು ಸತ್ಯ: ಗಂಗೆಯ ಶುದ್ಧೀಕರಣ ಮತ್ತು ಅಂತ್ಯಸಂಸ್ಕಾರ-ತದನಂತರದ ಅಸ್ಥಿವಿಸರ್ಜನೆ ಈ ಕೆಲಸಗಳಿಗೆಲ್ಲಾ ಒಂದು ರೀತಿ-ರಿವಾಜು ಜಾರಿಗೆ ತರಬೇಕು. ನಗರದ ಕೊಳಚೆನೀರು ನದಿಗೆ ಬರದಂತೇ ತಡೆಯಬೇಕು. ಹೀಗಾದಲ್ಲಿ ಗಂಗೆಯ ಪಾವಿತ್ರ್ಯತೆ ಸ್ಥಾನಿಕವಾಗಿ ಕಾಶಿಯಲ್ಲಿ ಹದಗೆಡುವುದಿಲ್ಲ. ಇದನ್ನು ಪ್ರತಿಯೊಬ್ಬ ಸನಾತನಿಯೂ ಅರಿಯುವಷ್ಟರ ಮಟ್ಟಿಗೆ ಈ ಬಗ್ಗೆ ಆಂದೋಲನ ನಡೆಯಬೇಕಾಗಿದೆ. ಹರಿದ್ವಾರದಿಂದ ಹಿಡಿದು ಗಂಗೆಯ ಹರಿವಿನುದ್ದಕ್ಕೂ ಗಂಗೆಗೆ ಸೇರುವ ಕಲ್ಮಷಗಳನ್ನು ತಡೆಯಬೇಕಾದುದು ನಮ್ಮ ಜೀವನಧರ್ಮದ ನೈತಿಕ ಹೊಣೆಯಾಗಿದೆ!      

ಪ್ರತಿನಿತ್ಯ ದೇವರ ವಿಗ್ರಹಗಳನ್ನು ಪೂಜಿಸುವ ಮಂದಿಗೆ ’ಮಲಾಪಕರ್ಷಣ ಸ್ನಾನ’ ಮಾಡಿಸುವ ಬಗ್ಗೆ ತಿಳಿದಿರುತ್ತದೆ. ನಿನ್ನೆ ಹಾಕಿದ ಹೂ-ಹಾರ ಮತ್ತಿನ್ನೇನೋ ಅಲಂಕಾರ, ಗಂಧ ವಗೈರೆ ಇಂದು ಬೆಳಗಿನ ಜಾವವೇ ಮಲವೆನಿಸಿಕೊಳ್ಳುತ್ತದೆ. ಅದನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿ ಅಭಿಷೇಚಿಸುವ ಮೊದಲನೆಯ ಅಭಿಷೇಕಕ್ಕೆ ಶಾಸ್ತ್ರಕಾರರು ’ಮಲಾಪಕರ್ಷಣ ಸ್ನಾನ’ ಎಂದಿದ್ದಾರೆ. ಹೊಸ ಹೂ-ಹಾರ, ಗಂಧ-ಚಂದನಗಳಿಂದ ಅಲಂಕೃತಗೊಂಡ ವಿಗ್ರಹ ನಮ್ಮ ಮನಸ್ಸನ್ನು ಪ್ರಸನ್ನೀಕರಿಸುತ್ತದೆ. ದೂರದಿಂದ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ಗುಡಿಗಳಲ್ಲಿನ ವಿಗ್ರಹಗಳ ದರ್ಶನವೇ ಪರಮಭಾಗ್ಯ. ದೇವರ ವಿಗ್ರಹಗಳ ಪಾಣಿಪೀಠಗಳ ಹಿಂದೆಲ್ಲೋ ಅಡಗಿರುವ ಜಿರಲೆಗಳಿಗೆ ಮಲಾಪಕರ್ಷಣ ಸ್ನಾನಕ್ಕಿಂತಾ ಮೊದಲಿನ ವಿಗ್ರಹಗಳ ಸ್ಥಿತಿಯೇ ಪರಮಭಾಗ್ಯ; ಇಲ್ಲಿ ಭಕ್ತರಿಗೆ ಭಾವನೆಗಳಿವೆ-ಜಿರಲೆಗಳಿಗೆ ಕೇವಲ ಹೊಟ್ಟೆಗಳಿವೆ! ತೀರ್ಥಕ್ಷೇತ್ರಗಳಿಗೆ ಹೋಗುವ ಭಕ್ತರಲ್ಲಿನ ಭಾವನೆಗಳು ಹಾಗೆ ಪವಿತ್ರವಾಗಿರುತ್ತವೆ; ಗಂಗೆ ಮಲಿನವೇ ಆಗಿದ್ದರೂ ಅದರಲ್ಲಿ ಕೋಟ್ಯಂತರ ಜನ ಮಿಂದೇಳುತ್ತಾರೆ ಎಂಬುದಕ್ಕೆ ಮೊನ್ನೆಯ ತನಕ ಪ್ರಯಾಗದಲ್ಲಿ ನಡೆದ ಮಹಾಕುಂಭಮೇಳವೇ ಸಾಕ್ಷಿ! ಅನ್ಯಮತೀಯರ ಪೂಜಾ ವಿಧಿ-ವಿಧಾನಗಳಿಗೂ ನಮ್ಮಲ್ಲಿನ ವಿಧಿವಿಧಾನಗಳಿಗೂ ಅಜಗಜಾಂತರವಿರುವುದರಿಂದ ಇನ್ನೆಲ್ಲಿನದೋ ಕ್ಷೇತ್ರವನ್ನು ಕಾಶಿಗೆ ಹೋಲಿಸುವುದು ಸರಿಯಲ್ಲ. ಕಾಶಿಯ ಪಾವೀತ್ರ್ಯತೆ ನಮ್ಮ ಸಂಕುಚಿತತೆಯಿಂದ ನಾಶವಾಗಬಾರದು! ಮಾನಸಿಕವಾಗಿ ಕಾಶಿಯನ್ನು ನಾವು ಶ್ರೇಷ್ಠವೆಂದೇ ನಂಬಿದ ಜನ, ಆ ಮೌಲ್ಯಕ್ಕೆ ಅಧುನಿಕತೆಯ ಸೊಬಗಿಲ್ಲವೆಂಬ ಕಾರಣದಿಂದ ಚ್ಯುತಿಯುಂಟುಮಾಡಬಾರದು; ತನ್ನ ಬಡತನಕ್ಕೆ ಹಳೆಯ-ಹರುಕಲು ಸೀರೆಯನ್ನುಟ್ಟ ಅಮ್ಮನನ್ನು "ಅಮ್ಮಾ" ಎನ್ನದೇ, ನವನಾಗರಿಕತೆಯ ಸುಂದರಿಯ ಎದುರು "ಕೆಲಸದವಳೇ" ಎನ್ನಬೇಕೇ? ಕಾಶಿ ಪುಣ್ಯಧಾಮವೇ ಹೊರತು ಅದು ರಿಸಾರ್ಟ್ ಅಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು!

ಇನ್ನು ಕಾಶಿಯಲ್ಲಿ ಯಾವುದು ಪ್ರಧಾನ ದೈವ ಎಂಬ ಬಗ್ಗೆ ಒಂದು ಚಿಕ್ಕ ವಿವರ: ಎಷ್ಟೇ ಇತಿಹಾಸ, ಪ್ರಾಗೈತಿಹಾಸ ಪುರಾಣಗಳನ್ನು ತೆಗೆದರೂ ಕಾಶಿಗೆ ವಿಶ್ವನಾಥನೇ ಅಧಿದೈವ. ವಿಶ್ವನಾಥನ ಗಣಗಳಲ್ಲಿ ವೀರಭದ್ರ, ಕಾಲಭೈರವ, ಕಪಾಲಭೈರವ ಇತ್ಯಾದಿ ಹಲವು ಪರಿವಾರ ದೇವತೆಗಳು ಬರುತ್ತವೆ. ವಿಶ್ವಕ್ಕೇ ನಾಥನಾದವನು ವಿಶ್ವನಾಥ; ಅದು ಕೇವಲ ಸಾಂಕೇತಿಕವೇ ಹೊರತು ಪರೋಕ್ಷವಾಗಿ ಸನಾತನಿಗಳು ಆ ಪರಬ್ರಹ್ಮನ ಮೂಲಕ್ಕೇ ಪೂಜೆಸಲ್ಲಿಸುತ್ತಾರೆ ಎಂಬುದನ್ನು ಗಮನಿಸಬೇಕು. ಕಾಶಿಯಲ್ಲಿ ಸನಾತನ ಪರಂಪರೆಗೆ ಸೇರಿದ ಹತ್ತೂ ಪ್ರಮುಖ ಪಂಥಗಳವರೂ ಉಪಪಂಥಗಳವರೂ ಇದ್ದಾರೆ, ಇರುತ್ತಾರೆ, ಬರುತ್ತಾರೆ. ಆಯಾಯ ಪಂಥಕ್ಕೆ ಸಂಬಂಧಿಸಿದಂತೇ ಅವರವರು ತಮ್ಮತಮ್ಮ ಆರಾಧ್ಯ ದೈವವೇ ಪ್ರಧಾನದೈವ ಎನ್ನ ತೊಡಗುತ್ತಾರೆ; ಇದು ಕೇವಲ ಈಗಿನದಲ್ಲ, ಅನಾದಿಯಿಂದಲೂ ನಡೆದೇ ಬಂದಿದೆ. ಆದರೆ ಪ್ರಾಜ್ಞರು ಎಲ್ಲಾ ದೇವರುಗಳನ್ನೂ ಪೂಜಿಸಿದ್ದಾರೆ. ದಾಖಲೆಗಳ ಪ್ರಕಾರ [ಜಾನಪದಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಬರುವುದಿಲ್ಲ]ಕಾಶಿಯಲ್ಲಿ ಜ್ಯೋತಿರ್ಲಿಂಗವಿದ್ದು ಅದರ ಪ್ರಭಾವಳಿಯ ಬೆಳಕಿನಿಂದಲೇ ತುಂಬಿದ ನಗರಿ ಅದಾದುದರಿಂದ ಅದಕ್ಕೆ ’ಕಾಶಿ’ ಎಂಬ ಹೆಸರು ಬಂದಿದೆ-ಹೀಗಾಗಿ ವಿಶ್ವನಾಥ ಲಿಂಗವೇ ಕಾಶಿಯೆಂಬ ಬೆಳಕಿನ ನಗರಕ್ಕೆ ಬೆಳಕಿನ ಮೂಲ ಆಕರವಾದ್ದರಿಂದ ವಿಶ್ವನಾಥನೇ ಪ್ರಧಾನದೈವ ಎಂಬುದು ಬಹುಸಂಖ್ಯಾಕ ಸನಾತನಿಗಳು, ಅದಕ್ಕೂ ಮಿಗಿಲಾಗಿ ಋಷಿಸಂದೋಹ ಒಪ್ಪಿದ ವಿಷಯವಾಗಿರುತ್ತದೆ.  

ಇನ್ನು ’ಮತ್ತೆ ಏಕಲವ್ಯ’ದ ಸುತ್ತ ಹತ್ತಾರು ಸರ್ತಿ ಗಿರಕಿ ಹೊಡೆದಿದ್ದೇನೆ. ’ಮತ್ತೆ ಏಕಲವ್ಯ’ ಎಂಬ ನಾಟಕವನ್ನು ಎಡಪಂಥೀಯ ಜನಗಳು ಸೇರಿ ದೆಹಲಿಯಲ್ಲಿ ನಡೆಸಿ ಬಹುಮಾನ ಪಡೆದರಂತೆ! ಏನಪ್ಪಾ ಇಲ್ಲಿನ ಕಥೆ ಎಂದರೆ: ಶೂದ್ರನೆಂಬ ಕಾರಣಕ್ಕೆ ಬಿಲ್ವಿದ್ಯೆಯಿಂದ ದೂರವಿರಿಸಲ್ಪಟ್ಟ ಏಕಲವ್ಯ, ಸ್ವತಃ ತಾನ್ರ್ಏ ತಾನಾಗಿ ಕಲಿತಕೊಂಡಮೇಲೆ, ಆತನ ಬಲಗೈ ಹೆಬ್ಬೆರಳನ್ನು ಬ್ರಾಹ್ಮಣನಾದ ದ್ರೋಣಾಚಾರ್ಯ ಗುರುದಕ್ಷಿಣೆಯಾಗಿ ಪಡೆದನಲ್ಲಾ,  ಅದನ್ನು ಬರೆದ ಗಣೇಶ ಕನಸುಕಂಡು ಹೆದರಿಬೀಳುತ್ತಾನಂತೆ! ಮತ್ತೆ ಮತ್ತೆ ಏಕಲವ್ಯನಿಗೆ ಆದ ’ಅನ್ಯಾಯ’ವನ್ನು  ಕಂಡು ಹೆದರಿ ಬೀಳುವ ಗಣೇಶ ವ್ಯಾಸರಲ್ಲಿ ಕಥೆಯನ್ನು ತಿದ್ದುವಂತೇ ಕೇಳುತ್ತಾನಂತೆ! ---ಇದು ಬರಹಗಾರರೊಬ್ಬರು ಬರೆದ ಅವರ ವಾರದ ಕಸದಗೂಡೆಗಳಲ್ಲಿನ ಒಂದು ಕಥೆ! ನಾನು ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ: ರಾಮಾಯಣ ಮತ್ತು ಮಹಾಭಾರತವನ್ನು ಆಮೂಲಾಗ್ರ ಅರಿಯಲಾಗದ ಮಂದಿ ಕಥೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ ಎಂದು, ಇದು ಅದಕ್ಕೊಂದು ಜ್ವಲಂತ ಉದಾಹರಣೆಯಾಗಿದೆ. ನಾವೂ ಚಿಕ್ಕಂದಿನಲ್ಲಿ, ಶಾಲೆಯ ಪಠ್ಯಗಳಲ್ಲಿ ಏಕಲವ್ಯನ ಕಥೆಯನ್ನು ಓದಿ ಮರುಗಿದ್ದೆವು, ಕೈಬೆರಳು ಕತ್ತರಿಸಿಕೊಟ್ಟ ಕಥೆ ಕೇಳಿದ ನಮಗೆ ದಿನಗಟ್ಟಲೆ ಜ್ವರಬಂದ ರೀತಿ ಆಗಿತ್ತು!ಏಕಲವ್ಯನ ಪೂರ್ವಾಪರಗಳನ್ನು ತುಸು ತಿಳಿಯದೇ ಹೋದರೆ ಆ ಕಥೆಯಲ್ಲಿ ವಿರೋಧಾಭಾಸ ಕಾಡುವುದು ಖಚಿತ; ಹಾಗಾದಾಗ ಮಾತ್ರ ’ಮತ್ತೆ ಏಕಲವ್ಯ’ನನ್ನು ಸೃಷ್ಟಿಸುವ ಜನ ಮೆರೆಯುತ್ತಾರೆ!!  

ವೇಣುವೆಂಬೊಬ್ಬ ಅತಿಕ್ರೂರಿಯಾದ ದೈತ್ಯರಾಜನಿದ್ದ. ಆತ ತನ್ನನ್ನು ಹೊರತು ಬೇರೇ ಯಾವ ದೇವರನ್ನೂ ಪೂಜಿಸಬಾರದು ಎಂದು ಆಜ್ಞೆವಿಧಿಸಿ, ದೇವರನ್ನು ಪೂಜಿಸುವ ಜನರನ್ನೆಲ್ಲಾ ದಂಡಿಸುತ್ತಿದ್ದ ಮತ್ತು ಕೊಲೆಗೈಯ್ಯುತ್ತಿದ್ದ. ವೇದವಿದರನೇಕರು ಸೇರಿ ಅವನನ್ನು ದಂಡಿಸುವ ಮಾಸ್ಟರ್ ಪ್ಲಾನ್ ಮಾಡಿಕೊಂಡು, ಅನಿವಾರ್ಯವಾಗಿ ಅವನನ್ನು ತಮ್ಮ ಮಂತ್ರಶಕ್ತಿಯಿಂದಲೇ ನಿಸ್ತೇಜಗೊಳಿಸಿ ಗತಪ್ರಾಣನನ್ನಾಗಿ ಮಾಡಿದರು. ಆತನ ಶರೀರದ ಕೆಳಭಾಗವನ್ನು ಅರೆದು ಕಾಡಿನಲ್ಲಿ ಬಿಸುಟರು-ಅದರಿಂದ ಜನಿಸಿದ ಜನ ಕುಬ್ಜರೂ ಕಪ್ಪನೆಯ ಬಣ್ಣಹೊಂದಿದವರೂ ಆಗಿ ’ನಿಷಾದ’ರು ಎನಿಸಿದರು. ಅಂತಹ ನಿಷಾದ ಜನಾಂಗದಲ್ಲಿ ಜನಿಸಿದ ಹಿರಣ್ಯಧನು ಎಂಬಾತ ನಿಷಾದರಿಗೆ ರಾಜನಾಗಿದ್ದ; ಮಾತ್ರವಲ್ಲ, ಹಿರಣ್ಯಧನು ಮಗಧದ ರಾಜ ಜರಾಸಂಧ[ಮಾಗಧ]ನಿಗೆ ಸೇವೆಗೈಯ್ಯುತ್ತಿದ್ದ. ಜರೆ ಎಂಬ ರಕ್ಕಸಿಯಿಂದ ಶರೀರದ ಹೋಳುಗರೆಡು ಜೋಡಿ[/ಸಂಧಿ]ಸಲ್ಪಟ್ಟು ಜನ್ಮವೆತ್ತಿದ ಜರಾಸಂಧ, ಅದೇಕಾಲದಲ್ಲಿ ಹಸ್ತಿನಾಪುರದ ಅರಸರ ವಿರೋಧಿಯಾಗಿದ್ದ. ಜರಾಸಂಧನ ಸೇವೆಗೈಯ್ಯುತ್ತಿದ್ದ ಹಿರಣ್ಯಧನುವಿನ ಮಗನೇ ಏಕಲವ್ಯ! ಹಸ್ತಿನಾಪುರದ ಅರಸುಮನೆತನ ದ್ರೋಣರನ್ನು ವಿದ್ಯಾಗುರುವಾಗಿ ನೇಮಿಸಿಕೊಂಡು ಕಲಿಕೆ ಆರಂಭಗೊಂಡಾಗ, ಕಾಡಿನ ಮಜಲಿನಲ್ಲಿ ಓಡಾಡುತ್ತಾ ಬಂದ ಏಕಲವ್ಯ ಅದನ್ನು ಕಂಡ. ತನಗೂ ಶಸ್ತ್ರವಿದ್ಯೆಗಳನ್ನು ಹೇಳಿಕೊಡಿರೆಂದು ದ್ರೋಣರಲ್ಲಿ ಏಕಲವ್ಯ ಬಿನ್ನವಿಸಿದ. ಮೂಲವನ್ನರಿತ ದ್ರೋಣರು ನಿರಾಕರಿಸಿದಮೇಲೆ, ಏಕಲವ್ಯ ದ್ರೋಣರ ಮೃತ್ತಿಕಾ ಮೂರ್ತಿಯನ್ನು ಮಾಡಿಟ್ಟುಕೊಂಡು, ತನಗೆ ಪಿತ್ರಾರ್ಜಿತವಾಗಿ ಬಳುವಳಿಯಾಗಿ ಬಂದ ಮಾಯಾವೀ ವಿದ್ಯೆಯಿಂದ ದ್ರೋಣರ ಆತ್ಮವನ್ನು ಆ ವಿಗ್ರಹದಲ್ಲಿ ಆವಾಹಿಸಿಕೊಂಡು, ಅದರಿಂದ ಪ್ರೇರಿತನಾಗಿ ಬಿಲ್ವಿದ್ಯೆಯನ್ನು ಕಲಿತ. ಕಲಿತವಿದ್ಯೆಯಲ್ಲಿ ಅರ್ಜುನನನ್ನೂ ಮೀರಿಸಿ ಬೆಳೆದ ಆತ ಎಲ್ಲೆಡೆಗೂ ದ್ರೋಣರೇ ತನ್ನ ಗುರುವೆಂದು ಹೇಳಿಕೊಂಡು ತಿರುಗಿದ.  

ಗುರು ದ್ರೋಣರು ಹಸ್ತಿನಾಪುರದ ಹುಡುಗರನ್ನು ಕರೆದುಕೊಂಡು ಒಮ್ಮೆ ಏಕಲವ್ಯನ ವಿದ್ಯಾಭ್ಯಾಸ ನಡೆಯುತ್ತಿದ್ದೆಡೆಗೆ ತೆರಳಿದರು; ಬಾಲಕನ ಸಾಹಸವನ್ನು ಕಂಡು ಬೆರಗಾದರೂ, ತನ್ನ ಮೂರ್ತಿಯನ್ನು ಮಾಡಿಟ್ಟುಕೊಂಡು ತನ್ನಿಚ್ಛೆಯ ವಿರುದ್ಧವಾಗಿ ತನ್ನಾತ್ಮವನ್ನು ಅಲ್ಲಿಗಾವಾಹಿಸಿ, ತನ್ಮೂಲಕ ವಿದ್ಯೆಗಳನ್ನು ಅಭ್ಯಸಿಸಿದ ಏಕಲವ್ಯನನ್ನು ಕಂಡು ಸ್ವಲ್ಪ ಬೇಸರವೂ ಆಯ್ತು. ಅಷ್ಟರಲ್ಲೇ ಹಸ್ತಿನಾಪುರದ ಅರಸುಮಕ್ಕಳಲ್ಲೇ ಬಿಲ್ವಿದ್ಯೆಯಲ್ಲಿ ಎಲ್ಲರಿಗಿಂತಲೂ ಚತುರನೆಂದು ಖ್ಯಾತನಾಗಿದ್ದ ಅರ್ಜುನನಿಗೆ, ಶಬ್ದವೇದಿ ವಿದ್ಯೆಯಿಂದ ಬಾಣಪ್ರಯೋಗಿಸಿ ಬೊಗಳಿದ ನಾಯಿಯ ಬಾಯಿಮುಚ್ಚಿಸಿದ ಏಕಲವ್ಯನ ಚಾತುರ್ಯವನ್ನು ಕಂಡು ದಿಗ್ಭ್ರಮೆಯಾಯ್ತು. ಅರ್ಜುನ ತನ್ನ ಗುರುದ್ರೋಣರಲ್ಲಿ ಏನಾದರೂ ಮಾಡಿ ಬಿಲ್ವಿದ್ಯೆಯಲ್ಲಿ ತನ್ನನ್ನು ಮೀರಿಸುವವರು ಇರಬಾರದು-ಆ ರೀತಿ ನೋಡಿಕೊಳ್ಳಿ ಎಂದು ಪ್ರಾರ್ಥಿಸಿದ. ಕುರುಕ್ಷೇತ್ರದ ಮುಂದಿನ ನಡೆಗಳನ್ನು ಮೊದಲೇ ಅರಿತಿದ್ದ ಕಾರಸ್ಥಾನೀ ಶ್ರೀಕೃಷ್ಣ, ಆ ಸಮಯದಲ್ಲಿ ಗುರುದ್ರೋಣರ ದೇಹದಲ್ಲಿ ತನ್ನಾತ್ಮವನ್ನು ನಿಲ್ಲಿಸಿ "ಗುರುದಕ್ಷಿಣೆಯಾಗಿ ಬಲಗೈ ಹೆಬ್ಬೆರಳು ಕೊಡು" ಎಂದ! ಅನುಮತಿಯಿಲ್ಲದೇ ದ್ರೋಣರ ವಿಗ್ರಹವನ್ನು ಸ್ಥಾಪಿಸಿ ಕಲಿತ ತಪ್ಪಿನ ಅರಿವು ಏಕಲವ್ಯನಿಗೆ ಆಗಿತ್ತಾದರೂ, ಅದು ಅಂತಹ ಗಣನೀಯ ತಪ್ಪೆಂದು ಆತ ಭಾವಿಸಿರಲಿಲ್ಲ. ದ್ರೋಣರ ಇಚ್ಛೆಯಂತೇ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ನೀಡಿದ.  ಇಲ್ಲಿ ಇದಕ್ಕೆ ಶ್ರೀಕೃಷ್ಣ ಕಾರಣನೇ ಹೊರತು ದ್ರೋಣರು ನಿಮಿತ್ತಮಾತ್ರ!! ಪರಶುರಾಮನಲ್ಲಿಗೆ ತನ್ನ ಮೂಲವನ್ನು ತಿಳಿಸದೇ ವಿದ್ಯೆಕಲಿಯಲು ಬಂದ ಕರ್ಣ ಶಾಪಗ್ರಸ್ತನಾಗಿದ್ದನಲ್ಲಾ ಅದೂ ಹಾಗೆಯೇ. ಕರ್ಣ ಮತ್ತು ಏಕಲವ್ಯ ಮುಂದೆ ಪಾಂಡವರ ವಿರೋಧಿಗಳಾದ ಕೌರವರ ಪಕ್ಷಕ್ಕೆ ಸೇರಿಕೊಳ್ಳುವವರು ಎಂಬುದು ದ್ರೋಣರಿಗೂ, ಪರಶುರಾಮರಿಗೂ, ಶ್ರೀಕೃಷ್ಣರಿಗೂ ಮೊದಲೇ ಗೊತ್ತಿತ್ತು. ಭಗವದಿಚ್ಛೆಯಂತೇ ಏಕಲವ್ಯ ಮತ್ತು ಕರ್ಣ ಈ ಇಬ್ಬರೂ ಅಪ್ರತಿಮ ಸಾಧನೆಯನ್ನು ಮಾಡಿದರಾದರೂ ಕಲಿತ ವಿದ್ಯೆ ಪ್ರಯೋಜನಕ್ಕೆ ಬಾರದಂತೇ ಮಾಡಿದ್ದು ಕೃಷ್ಣ ಕಾರಸ್ಥಾನ! ದುಷ್ಟರನ್ನೂ ದುಷ್ಟಗುಣ ಪೋಷಕರನ್ನೂ ಶಿಕ್ಷಿಸುವ ಧರ್ಮವನ್ನು ಪಾಲಿಸಿದ ಶ್ರೀಕೃಷ್ಣ, ಏಕಲವ್ಯನೆಂಬ ಪರಿಣತ ಬದುಕಿದ್ದರೆ ಪಾಂಡವರಿಗೆ ಕಷ್ಟವೆಂಬುದನ್ನರಿತಿದ್ದ. ಒಂದೇ ತಾಯಿಯ ಮಕ್ಕಳೇ ಆದರೂ, ದುಷ್ಟಪಕ್ಷದಲ್ಲಿ ನಿಂತ ಕರ್ಣನಲ್ಲಿಗೆ ಕುಂತಿಯನ್ನು ಕಳುಹಿಸಿ ತೊಟ್ಟಬಾಣವನ್ನು ಮರಳಿ ತೊಡದಂತೇ ಪ್ರತಿಜ್ಞೆಮಾಡಿಸಿಬಿಟ್ಟ! ಕರ್ಣಕಥೆಯನ್ನು ಕೇಳುವಾಗ ಕಣ್ಣೀರು ಒಸರುತ್ತದಾದರೂ, ವೇದವ್ಯಾಸರು, ’ಭಾರತಕಥೆಯ ದುಷ್ಟ ಚತುಷ್ಟಯರ ಸಾಲಿನಲ್ಲಿ ಕರ್ಣನೂ ಒಬ್ಬ’ ಎನ್ನುವುದಕ್ಕೆ ಕಾರಣವಿರಲೇಬೇಕಲ್ಲವೇ?  

ಈ ಹಿನ್ನೆಲೆಯನ್ನರಿಯದ ಜನ ’ಮತ್ತೆ ಏಕಲವ್ಯ’ನನ್ನೋ ’ಮತ್ತೆ ಕರ್ಣ’ನನ್ನೋ ಹುಟ್ಟಿಸುತ್ತಲೇ ಇರುತ್ತಾರೆ. ರಾಮನ ಎದಿರಲ್ಲೇ ರಾವಣ ಎಂದು ಹೆಸರಿಟ್ಟುಕೊಂಡು ಮೆರೆಯುತ್ತಾರೆ! ರಾವಣನ್ನು ದೇವರೆಂದು ಪೂಜಿಸುವ ಜನರೂ ಈ ಲೋಕದಲ್ಲಿದ್ದಾರೆ. ಆದರೆ ಮನುಷ್ಯ ಮಾಡುವುದೆಲ್ಲಾ ಧರ್ಮವಲ್ಲ, ನೀತಿಯಲ್ಲ. ಯಾವುದು ಮನುಷ್ಯ ಜೀವನದಲ್ಲಿ ಸಾಧಿಸಬೇಕಾದ ಅತ್ಯುತ್ತಮ ನೀತಿಯೋ ಅದೇ ಮನುಷ್ಯನ ಜೀವನಧರ್ಮವಾಗುತ್ತದೆ. ಪಾತಕಿಗಳು ಮನೆಯಲ್ಲೇ ಇದ್ದರೂ ಶಿಕ್ಷಿಸದಿರುವುದು ಪಾಕಿಸ್ತಾನಿಗಳ ಮತ್ತು ನಮ್ಮ ದೇಶಸ್ಥ ಮುಸ್ಲಿಮರ ಕರ್ಮ!  ಪಾತಕಿಗಳು, ದುಷ್ಟರು ಯಾರೇ ಆಗಿದ್ದರೂ ಅವರನ್ನು ಅವರ ಕೃತ್ಯವನ್ನವಲಂಬಿಸಿ ದಂಡಿಸುವಂತೇ ಸನಾತನತೆ ನಮಗೆ ಬೋಧಿಸುತ್ತದೆ. ತನ್ನ ಮಗ ನೀತಿ ತಪ್ಪಿ ನಡೆದನೆಂದಾದಾಗ ಸೆರೆವಾಸಕ್ಕೆ ಕಳುಹಿಸಿದ ಶಿವಾಜಿ ಇದೇ ನಮ್ಮ ಭಾರತದ ದೊರೆಯಾಗಿದ್ದ. ಹಸಿದ ಗಿಡುಗದ ಆಹಾರವನ್ನು ತಪ್ಪಿಸಿದ ತಪ್ಪಿಗೆ ತನ್ನನ್ನೇ ದಂಡಿಸಿಕೊಂಡು ತೊಡೆಯ ಮಾಂಸವನ್ನೇರ್ ಕಿತ್ತುಕೊಟ್ಟ ಶಿಬಿ ಇದೇ ನಮ್ಮ ಭಾರತದವ. ಇಂಥಾ ನನ್ನ ಭಾರತದಲ್ಲಿ ಅಸಂಖ್ಯ ಜನ ನೀತಿಗಾಗಿ ಬದುಕು ಸವೆಸಿದ್ದಾರೆ. ವೇದಗಳ ಕಾಲದಲ್ಲಿ ವರ್ಣವ್ಯವಸ್ಥೆ ಆಯ್ಕೆಯ ಪ್ರಶ್ನೆಯಾಗಿತ್ತು; ಅಂದು ಇವತ್ತಿನಂತೇ ಸಾವಿರಾರು ಜಾತಿಗಳಿರಲಿಲ್ಲ!||ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಶಃ|| ಎಂದ ಭಗವಂತ ನಾಲ್ಕುವರ್ಣಗಳನ್ನು ಮೂಲದಲ್ಲಿ ಅವರವರ ಗುಣ-ಕರ್ಮಗಳನ್ನವಲಂಬಿಸಿ ತಾನೇ ಸೃಷ್ಟಿಸಿದ್ದೇನೆ ಎಂದಿದ್ದಾನೆ. ನಂತರವೂ ಯಾರು ಏನೇ ಹೇಳಿದರೂ, ಯಾವುದೇ ರೀತಿಯಲ್ಲಿ ಆಡಿಕೊಂಡರೂ ಬೇರೇ ವರ್ಣಗಳಿಗೆ ಬೋಧಿಸಿದವರು ಬ್ರಾಹ್ಮಣರೇ ಎಂಬುದನ್ನು ಎಲ್ಲಿ ನಿಂತು ಎದೆ ತಟ್ಟಿ ಹೇಳಲೂ ನಾನು ಹೆದರುವುದಿಲ್ಲ!

ಲಕ್ಷೋಪಲಕ್ಷ ಬ್ರಾಹ್ಮಣರು, ತಮ್ಮ ಉಪಾಧ್ಯಾಯ ವೃತ್ತಿಯಿಂದ, ಉಪಜೀವಿತ ನಡೆಸುತ್ತಾ ಹಲವು ’ಏಕಲವ್ಯ’ರುಗಳಿಗೆ ಕಾಲಕಾಲಕ್ಕೆ ಬೋಧಿಸುತ್ತಲೇ ಬಂದರು[ಅದಲ್ಲದಿದ್ದರೆ ಯಾವ ವಿದ್ಯೆಯೂ ಇನ್ನಾರಿಗೂ ಪ್ರಾಪ್ರವಾಗುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕು!]. ಕಾಲದಗತಿಯಲ್ಲಿ ಕಲಿತ ’ಏಕಲವ್ಯ’ರುಗಳ ಮುಂದಿನ ಪೀಳಿಗೆಗಳಲ್ಲಿ ಎಡಪಂಥೀಯ ಅಡ್ನಾಡಿಗಳು ಹುಟ್ಟಿಬಿಟ್ಟರು!! ಇತಿಹಾಸದ ಗರ್ಭದಲ್ಲಿ, ಕೆಲವು ಕಡೆ ಸಂಕುಚಿತ ಮನೋವೃತ್ತಿಯ ಬ್ರಾಹ್ಮಣರು ಇದ್ದರೂ, ಬಹಳಕಡೆ ಉದಾರಿಗಳು ಹೇರಳವಾಗಿದ್ದರು. ಇವತ್ತು ಈ ನನ್ನ ದೇಶದ ಅದೆಷ್ಟೋ ದೇಶವಾಸಿಗಳಲ್ಲಿ, ವರ್ಣಭೇದವನ್ನು ಮರೆತು ಕಲಿತು ಮುಂದೆಬಂದವರಿದ್ದರೆ ಅವರನ್ನು ಕಂಡಾಗ ನನಗೆ ಈ ನೆಲದ ಉಚ್ಚ ಸಂಸ್ಕೃತಿಯ ನೆನಪಾಗುತ್ತದೆ.  ಯಾವುದೋ ಪೂಜೆಯೋ ಪುನಸ್ಕಾರವೋ ನಾಮಕರಣವೋ ಮದುವೆಯೋ--ಬಂದ ಬ್ರಾಹ್ಮಣರನ್ನು ಕಂಡು ಭಕ್ತಿಯಿಂದ ಆದರಿಸುವ ದೇಶವಾಸಿಗಳನ್ನು ಕಂಡಾಗ ಹೃದಯತುಂಬಿಬರುತ್ತದೆ. ಉನ್ನತ ಹುದ್ದೆಗಳಲ್ಲಿ ಆಸೀನರಾದ ಅನೇಕ ಜನ ತಮ್ಮ ಪೂರ್ವಜರಿಗೆ ಬ್ರಾಹ್ಮಣ ಉಪಾಧ್ಯಾಯರುಗಳು ಬೋಧಿಸಿದ ಪಾಠಗಳ ಬಗ್ಗೆ ಹೇಳಿಕೊಂಡು, ಇಂದಿನ ತಮ್ಮ ಈ ಹಂತಕ್ಕೆ ಅವರೇ ಕಾರಣ ಎಂದು ವಿನಮ್ರವಾಗಿ ನುಡಿದಾಗ, ಕ್ಷುಲ್ಲಕರಾಗಿರುವ ಎಡಪಂಥೀಯರು ಮರೆತುಹೋಗುತ್ತಾರೆ. ಕ್ಷತ್ರಿಯನಾದ ಕೌಶಿಕ ತನ್ನ ತಪಸ್ಸಿನಿಂದ-ಕರ್ಮದಿಂದ ಬ್ರಹ್ಮರ್ಷಿಯಾದ-ಬ್ರಾಹ್ಮಣನಾದ. ಕ್ಷತ್ರಿಯರಾದ ಮಹರ್ಷಿ ಮಹೇಶ್ ಯೋಗಿಗಳು ಈ ಕಾಲದಲ್ಲಿ ಜನಿಸಿ ಬ್ರಾಹ್ಮಣ್ಯವನ್ನು ಆಚರಿಸಿದರು! ||ಸಂಸ್ಕಾರಾತ್ ದ್ವಿಜ ಉಚ್ಯತೇ|| ನಮ್ಮ ದೇಶವಾಸಿಗಳು ಸನಾತನವಾದ ಉತ್ತಮ ಸಂಸ್ಕಾರಗಳನ್ನು ಹೊಂದಬೇಕು, ಉತ್ತಮ ಸಂಸ್ಕಾರದಿಂದ ಅವರು ಬ್ರಾಹ್ಮಣರೆನಿಸಬೇಕು ಎಂಬುದು ನನ್ನಂಥವರ ಆಶಯವಾಗಿದೆ, ಅದರ ಬದಲು ವಿನಾಕಾರಣ ’ಮತ್ತೆ ಏಕಲವ್ಯ’, ’ಮತ್ತೆ ಕರ್ಣ’ ಎನ್ನುತ್ತಾ ಕೂತರೆ ತತ್ಪರಿಣಾಮದ ನಷ್ಟ ಎಡಪಂಥೀಯರಿಗೇ ವಿನಃ ಮಿಕ್ಕವರಿಗಲ್ಲ.

ಹಿಂದೂ ಸನಾತನ ಜೀವನಧರ್ಮಕ್ಕೆ ವಾರೀಸುದಾರರು ಇವರೇ ಎಂದು ಯಾರನ್ನು ಬೊಟ್ಟುಮಾಡಿ ಹೇಳುತ್ತೀರಿ? ಅದನ್ನು ಬ್ರಾಹ್ಮಣರು ಮಾಡಿದರೇ? ಕ್ಷತ್ರಿಯರು ಸ್ಥಾಪಿಸಿದರೇ? ವೈಶ್ಯರದೇ ? ಅಥವಾ ಶೂದ್ರರದೇ? ಭಾರತೀಯ ಮೂಲದ ಈ ಜೀವನಧರ್ಮ ಅದು ಎಲ್ಲರದ್ದೂ ಆಗಿದೆ. ಕೇವಲ ’ಬ್ರಾಹ್ಮಣರೇ ಎಲ್ಲದಕ್ಕೂ ಕಾರಣ’ ಎಂದು ದೋಷಾರೋಪಣೆ ಮಾಡುತ್ತಾ ಕೆಲವೊಮ್ಮೆ ’ಒಂದು ಜನಾಂಗ’ವೆಂದು [ಬ್ರಾಹ್ಮಣ ಪದಕ್ಕೆ ಬದಲಾಗಿ] ಪರೋಕ್ಷ ದೂಷಿಸುತ್ತಾ ಬರೆಯುವ ’ಮೇಧಾವಿ’ಗಳೇ ಯಾವುದು ಆ ಒಂದು ಜನಾಂಗ? ವೈಜ್ಞಾನಿಕವಾಗಿ ಕ್ರಿಮಿನಾಶಕವೆಂದು ರುಜುವಾತಾದ ಗೋಮಯ ಬಳಸಲು ತಿಳಿಸಿದರೆ, ಅರಿಯದೇ ಹಳೆಯ ಸಗಣಿಯನ್ನು ಬಳಸಿಕೊಂಡು ಧರ್ಮವನ್ನು ಹೀಗಳೆಯುವ ’ತತ್ವಜ್ಞಾನಿ’ಗಳು ಧರ್ಮದ ಸಂಹಿತೆಗಳನ್ನು ಸಂಪೂರ್ಣವಾಗಿ ಅಭ್ಯಸಿಸುವುದು ಒಳಿತು. ಕೊಡ-ಕೊಳ್ಳುವ ವ್ಯಾವಹಾರಿಕ ಸಂಪರ್ಕ-ಸಂಬಂಧಗಳಿಂದ, ಅಸಂಬದ್ಧ ವಿಷಯಗಳಮೇಲೂ ಮಾಡುವ ವ್ಯರ್ಥ ಪ್ರಲಾಪಗಳನ್ನೇ ’ಥೀಸಿಸ್’ ಎಂದು ಪರಿಗಣಿಸುವ  ವಿಶ್ವವಿದ್ಯಾಲಯಗಳು ಅನೇಕರಿಗೆ ಡಾಕ್ಟರೇಟ್ ನೀಡುತ್ತಿವೆ; ಕೆಲವರಿಗೆ ಯಾವ ಆಧಾರವೂ ಇಲ್ಲದೆಯೂ ಅದನ್ನು ಬಿಕರಿಮಾಡುತ್ತಿವೆ! ತೀರಾ ಇತ್ತೀಚೆಗೆ ನನಗೆ ಗೊತ್ತಿರುವ ವಿಶ್ವವಿದ್ಯಾನಿಲಯವೊಂದರಲ್ಲಿ ಗೌಡಾ ಕೊಡುವ ಪ್ರಕ್ರಿಯೆ ನಡೆಯಿತು-ಅಲ್ಲಿ ಯಾವ ಮಹತ್ಸಾಧನೆಯನ್ನೂ ಮಾಡದ ಮಹಿಳಾ ಸಂಪಾದಕಿಯೋರ್ವರಿಗೆ ಗೌಡಾ ನೀಡಲಾಯ್ತು, ಅವರೊಬ್ಬರಿಗೇ ನೀಡಿದರೆ ಅಪವಾದ ಬರಬಹುದೆಂಬ ಕಾರಣಕ್ಕೆ ಇನ್ನಿಬ್ಬರು ಮಹಿಳೆಯರನ್ನೂ ಯಾದಿಗೆ ಸೇರಿಸಲಾಯ್ತು!  ಗೌಡಾ ಕೊಡುವುದು ಹಲವೆಡೆ ಕುಲಪತಿಗಳ ಏಕಸ್ವಾಮ್ಯದ ಹಕ್ಕಾಗಿರುವುದರಿಂದ ವೈಯ್ಯಕ್ತಿಕ ಸಂಬಂಧಗಳ ಸಂಕೋಲೆ, ಹಣದ ಆಮಿಷ ಈ ಎಲ್ಲವೂ ಕೆಲಸಮಾಡುತ್ತಿವೆ! ಇದು ಅಧುನಿಕ ಅವಿದ್ಯಾನಿಲಯಗಳ ಕಾರ್ಯವೈಖರಿ; ಇಂಥಾ ಅಧುನಿಕ ಅವಿದ್ಯಾನಿಲಯಗಳಲ್ಲಿ ’ಮತ್ತೆ ಏಕಲವ್ಯ’ರು ತಯಾರಾಗುವುದು ಖಚಿತ. ಗೌಡಾಕ್ಕೆ ನಿಜವಾಗಿಯೂ  ಅರ್ಹರಾಗಿದ್ದ ಮಠಾಧೀಶರೊಬ್ಬರಿಗೆ ಅದನ್ನು ಕೊಡಮಾಡಿದಾಗ, ಮೌಲ್ಯರಹಿತ ಗೌಡಾ ಪದವಿ ರೇಜಿಗೆ ಹುಟ್ಟಿಸಿದ್ದರಿಂದ ಅವರು ನಯವಾಗಿ ನಿರಾಕರಿಸಿದ್ದಾರೆ-ಆ ನಿರ್ಧಾರವನ್ನು ಕೈಗೊಂಡ ಅವರಿಗೆ ಅನಂತ ಕೋಟಿ ಪ್ರಣಾಮಗಳು. ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಬಂದ ಕೆಲವು ಲೇಖನಗಳಿಗೆ ಉತ್ತರಿಸುವ ಪ್ರಯತ್ನವಾಗಿ ಈ ಸುದೀರ್ಘ ಲೇಖನ, ನಿಮ್ಮ ತಾಳ್ಮೆಯನ್ನು ಒರೆಗೆಹಚ್ಚುವ ಮನಸ್ಸಲ್ಲ; ವಿಷಯವನ್ನು ಇತ್ಯರ್ಥಗೊಳಿಸುವ ಇರಾದೆ, ನಿಮಗೆಲ್ಲರಿಗೂ ಧನ್ಯವಾದಗಳು.       

Friday, March 8, 2013

ಶಿಕ್ಷಕ ಅಂದು-ಇಂದು

ಶಿಕ್ಷಕ ಅಂದು-ಇಂದು
[ದಯವಿಟ್ಟು ಗಮನಿಸಿ: ಇಂದಿನ ದಿನಮಾನದಲ್ಲಿ ಶಿಕ್ಷಕರಲ್ಲೂ ಎಡಪಂಥೀಯರು ತಯಾರಾಗಿದ್ದಾರೆ; ಸರಕಾರೀ ಶಾಲೆ-ಕಾಲೇಜುಗಳಲ್ಲಿ ಅವರದ್ದೇ ಮೇಲುಗೈ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ಎಂಬುದು ಕನಸಿನ ಮಾತು. ಉತ್ತಮ ಶಿಕ್ಷಕರು ಇಲ್ಲವೆಂದಲ್ಲ, ಅವರಿಗೆ ಪ್ರಾಧಾನ್ಯತೆ ಸಿಗುವುದಿಲ್ಲ. ಶಿಕ್ಷಕ ಮಿತ್ರರೂ ಬಂಧುಗಳೂ ಇದ್ದೀರಿ-ಇದು ಎಲ್ಲರಿಗೂ ಅನ್ವಯವಲ್ಲ ಎಂಬುದನ್ನು ತಮ್ಮಗಳ ಗಮನಕ್ಕೆ ತರುತ್ತಿದ್ದೇನೆ. ಉತ್ತಮ ಶಿಕ್ಷಕರಿಂದ ಕ್ಷಮೆಯಿರಲಿ. ]


[ಚಿತ್ರಗಳ  ಋಣ : ಅಂತರ್ಜಾಲ]
ಶಿಕ್ಷಕ ಅಂದು

ಅರಿತು ತನ್ನೊಳಗಷ್ಟು ಓದುತ್ತ ಗ್ರಂಥಗಳ
ಬೆರೆತು ಸುಜ್ಞಾನಿಗಳೊಡನಾಡಿ ಕಲಿಯುತಲಿ
ಪರಿತಪಿಸಿ ಚಿಂತಿಸುತ ಗಹನವಿದ್ಯೆಗಳನ್ನು
ನುರಿತನಾದವ ಗುರುವು | ಜಗದಮಿತ್ರ 

ಹಂಬಲಿಸಿ ಹಲವು ಹೊತ್ತಗೆಗಳನ್ ಹಗಲಿರುಳು
ತುಂಬಿಸುತಲಾಮನಕೆ ಆಯ್ದ ಸಂಗತಿಯ
ನಂಬಿಬಂದಿಹ ಶಿಷ್ಯ-ವಿದ್ಯಾರ್ಥಿಗಣಕಿಷ್ಟು
ಇಂಬುಗೊಡುವನು ಗುಣಕೆ | ಜಗದಮಿತ್ರ

ಹಳೆಯ ದಿರಿಸಲೆ ತನ್ನ ಬಡತನವ ಮರೆಮಾಚಿ
ಹೊಳೆಯುತಿದ್ದಾವ್ಯಕ್ತಿ ಜ್ಞಾನಮಂಟಪದೊಳ್
ಕಳೆಕಳೆಯ ತೇಜಸ್ಸು ಓಜಸ್ಸು ಪರಿಪಕ್ವ
ಬೆಳೆತೆಗೆದ ಮುಖವಗಲ | ಜಗದಮಿತ್ರ

ಮರದಡಿಗೊ ಮಂದಿರದ ಚಾವಡಿಯಲಲ್ಲೆಲ್ಲೊ
ಸ್ಥಿರಗೊಳಿಸಿ ತನುಮನವ ಕುಳಿತು ಬೋಧಿಸುವ
"ಹರವಾದ ಹರಿವಾಣವೀಭೂಮಿ ವೈಶಾಲ್ಯ 
ತೆರೆದಷ್ಟು ತಿರೆ ಗೂಢ " | ಜಗದಮಿತ್ರ  

ಅರ್ಥಚಿಂತನೆಯಲ್ಲಿ ಸಮಯ ವ್ಯಯಿಸದೆ ಇಹದಿ
ವ್ಯರ್ಥ ಜೀವನವೆಂದು ವೃತ್ತಿ ಹಳಿಯದಲೆ
ಪಾರ್ಥಗಂ ಭಗವಂತ ಗೀತೆ ಪೇಳಿದರೀತಿ
ಸಾರ್ಥಕವು ಗುರುತನವು | ಜಗದಮಿತ್ರ  



ಶಿಕ್ಷಕ ಇಂದು

ಮಸ್ತಕವ ವಸ್ತುಗಳಿಂ  ಕಸದತೊಟ್ಟಿಯ ಮಾಡಿ
ಪುಸ್ತಕಗಳೇಕಿನ್ನು ಸಾಕೆಂದು ಬಗೆದು
ವಾಸ್ತವದಿ ಕಡುಮೂರ್ಖ ಉದರಪೋಷಕ ವೇಷ!
ಜಾಸ್ತಿಯೋದದ ಧನಿಕ | ಜಗದಮಿತ್ರ    

ದಿನವಿಡೀ ತಿರುಗುತ್ತ ತರಗತಿಗೆ ಶಾಸ್ತ್ರಕ್ಕೆ!
ಕನವರಿಸಿ ಹಣರಾಶಿ ಮುಂಭಡ್ತಿಗಳನಂ 
ತನುಕೊಡಹಿ ದೂರವಾಹಿನಿ ನೋಳ್ಪ ನಿಶೆಯಲ್ಲಿ
ಕನಸಿಗನು ರಸಿಕಮಣಿ | ಜಗದಮಿತ್ರ

ಹೊಸಹೊಸಾ ಬಟ್ಟೆಗಳು ಅತ್ತರು ಸುಗಂಧಗಳು
ನಸುಕಿನಿಂದಲೆ ಮೊಳಗ್ವ ಚರವಾಣಿ ಕರೆಗಳ್ !
ಕಸುವಿಟ್ಟು ತೆರೆಳುವನು ಶಾಸಕರ ಸದನಕ್ಕೆ
ವಿಷಯ: ವರ್ಗಾವರ್ಗಿ | ಜಗದಮಿತ್ರ

ಮೂರು ಅಕ್ಷರವಿಲ್ಲ ನಾಲಿಗೆಯ ಸೀಳಿದರೆ
ನಾರುವುದು ನಾಲಿಗೆಯು ವಿಷಯ ವಾಸನೆಯಿಂ
ದೂರಿದರೆ ಕಾರುವನು ಖಾರ ಕೆಂಡದ ಅಗುಳು
ಜಾರುವನು ಶಿಕ್ಷಕನೆ? ಜಗದಮಿತ್ರ   

ಅರಿವು ಮೊದಲೇ ಇಲ್ಲ ರೀತಿ-ನೀತಿಗಳಿಲ್ಲ
ಬರೆದ-’ಪದವಿ’ಗಳಷ್ಟೆ ಅರ್ಹತೆಯು ಅವಗೆ !
ಧರೆಯ ದುಃಖದ ಗೊಡವೆ ಮರೆತ ನಾಸ್ತಿಕವಾದ
ದೊರೆತನಕೆ ಮಿಗಿಲುಂಟೆ?  ಜಗದಮಿತ್ರ  

Saturday, March 2, 2013

ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ

ಚಿತ್ರಋಣ: ಅಂತರ್ಜಾಲ 
ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ
ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ 

ಇದೊಂದು ಪುಣ್ಯ ಕಥೆ; ಜೀವನ ಕಥೆ, ಮಂಕುತಿಮ್ಮನ ’ಕಗ್ಗದ ಕಥೆ’ಯ ಹಿಂದಿನ ಕಥೆ! ಕುತೂಹಲದ ಬಿಸಿಲ ಬೇಗೆಯಲ್ಲಿ ಬಳಲಿದವರ ತೃಷೆಗೆ ತಂಪೆರೆದು ಪೋಷಿಸುವ, ಹಸಿದ ಮನಗಳನ್ನು ಹೊತ್ತುಬರುವ ನನ್ನಂತಹ ಸಾವಿರಾರು ಹಾದಿಹೋಕರಿಗೆ, ಜ್ಞಾನಸುಖದ ಮೃಷ್ಟಾನ್ನವನ್ನು ಉಣಬಡಿಸುವ, ನಿತ್ಯ ಜ್ಞಾನದಾಸೋಹಿ, ಶತಾವಧಾನಿ ಋಷಿ ರಾ. ಗಣೇಶರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು; ಮುಪ್ಪಿನ ಅಮ್ಮನ ಸೇವೆಯಲ್ಲಿ ಕಳೆದ ಎಂಟುವರ್ಷಗಳಿಂದ ತನ್ನನ್ನು ಸಮರ್ಪಿಸಿಕೊಂಡು, ಜೀವನಾವಧಾನಗಳ ವಿಭಿನ್ನ ಘಳಿಗೆಗಳಲ್ಲಿ ನಮ್ಮಂಥವರ ವಿಭಿನ್ನ-ವಿಚಿತ್ರ ಕರೆಗಳನ್ನು ಮನ್ನಿಸಿ ಸಮಸ್ಯಾಪೂರಣ-ಪರಿಹಾರ ಒದಗಿಸುವ ಅವರ ಈ ಕಾರ್ಯಕ್ಕೆ, ನಿತ್ಯ ಸಾವಿರ ಹಸಿದ ಹೊಟ್ಟೆಗಳಿಗೆ ಪುಷ್ಕಳ ಭೋಜನ ನೀಡಿದ ಸತ್ಕಾರದ ಸುಕೃತಫಲ ಪ್ರಾಪ್ತವಾಗಲೆಂದು ಹಾರೈಸುತ್ತೇನೆ. ಕಾಲಾನುಕಾಲದಲ್ಲಿ ಋಷಿಗಳು ವಿಭಿನ್ನರೂಪದಲ್ಲಿ ನಮ್ಮ ಮಧ್ಯೆಯೇ ಇರುತ್ತಾರೆ; ಆದರೆ ನಾವು ದೇವರೆಲ್ಲಿ, ಋಷಿಗಳೆಲ್ಲಿ ಎಂದು ಹುಡುಕುತ್ತಿರುತ್ತೇವೆ. ನಮ್ಮಲ್ಲೇ ಇರುವ ದೇವರನ್ನೂ ನಮ್ಮೊಡನೆಯೇ ಇರುವ ಋಷಿಗಳನ್ನೂ ನಾವು ಕಾಣದಾಗುವುದು ನಮ್ಮ ಮತಿಗೆ ಮುಸುಕಿದ ಮಾಯೆಯಾಗಿದೆ! ಕಾಡಿನಲ್ಲಿ ತರುಗಳ ತಲದಲ್ಲಿ ದೀರ್ಘಕಾಲ ತಪೋನಿರತಾಗಿ ಲೋಕೋಪಕಾರವನ್ನು ಬಯಸುತ್ತಿದ್ದ ಋಷಿಗಳು ಹಿಂದಕ್ಕೆ ಇದ್ದರು. ಅಂತಹ ಋಷಿಗಳೇ ಆಗಾಗ ಆಗಾಗ ಮತ್ತೆ ಮತ್ತೆ ಸಹಜ ಮಾನವ ರೂಪಧರಿಸಿ, ನಮ್ಮ ನಡುವೆಯೇ ಇದ್ದು, ಈ ಲೋಕದ ಎಲ್ಲಾ ಆಗುಹೋಗುಗಳನ್ನೂ ಸಹಿಸಿಯೂ ತಾವು ಬೇರೆ ಎಂಬುದನ್ನು ತಮ್ಮ ವಿಶಿಷ್ಟ ಶಕ್ತಿ-ಸಾಮರ್ಥ್ಯದಿಂದ ಸಾಬೀತುಪಡಿಸುತ್ತಾರೆ; ಆದರೆ ತಾವು ಬೇರೆ ಎಂದು ಅವರೆಂದೂ ಹೇಳಿಕೊಳ್ಳುವುದಿಲ್ಲ!  ಅಂತಹ ಋಷಿಸದೃಶ ಜೀವನ ನಡೆಸಿದ/ನಡೆಸುತ್ತಿರುವ ಕೆಲವರನ್ನು ಹೆಸರಿಸಬಹುದಾದರೆ ಅವರಲ್ಲಿ ಡಿವಿಜಿ ಒಬ್ಬರು ಇನ್ನೊಬ್ಬರು ನಮ್ಮ ಕಣ್ಣಮುಂದೆ ಇರುವ ರಾ. ಗಣೇಶರಾಗಿದ್ದಾರೆ; ಇದು ನನ್ನ ಅಂತರಂಗ ಹೇಳಿದ ಮಾತೇ ವಿನಃ ಯಾವುದೋ ಲಾಭಕ್ಕಾಗಿ ಮಾಡಿದ ಮುಖಸ್ತುತಿಯಲ್ಲ. ವ್ಯಕ್ತಿಯೊಬ್ಬ ಜೀವನದಲ್ಲಿ ಎಷ್ಟು ಸಾಧಿಸಬಹುದೋ ಅದಕ್ಕೂ ಮೀರಿದ ಸಾಧನೆ ಕಂಡುಬಂದಾಗ, ಅಲ್ಲಿ ನಮಗೆ ನಿಂತು ನೋಡುವ ಮನಸ್ಸಾಗುತ್ತದೆ, ಒಂದು ಜೀವಮಾನದಲ್ಲಿ ಸಾಧಿಸಲು ಅಸಾಧ್ಯವಾದುದು ಎನಿಸಿದ್ದನ್ನು, ಸಾಧಿಸಿಕೊಂಡವರು ಸಾಧ್ಯವೆಂದು ತೋರಿಸಿದಾಗ, ಅವರಲ್ಲಿ ಪೂಜ್ಯಭಾವನೆ ಮೂಡುತ್ತದೆ. ಒಂದಲ್ಲ-ಎರಡಲ್ಲ-ನಾಲ್ಕಾರು ಜನ್ಮಗಳನ್ನುತ್ತರಿಸಿ ಬಂದರೂ ಸಾಧಿಸಲಾಗದ ಮಹತ್ತನ್ನು ಸಾಧ್ಯವಾಗಿಸಿಕೊಂಡವರನ್ನು ಕಂಡಾಗ ಅದೊಂದು ದೈವಾಂಶ ಸಂಭೂತ ಜನ್ಮವೆಂದೇ ಒಪ್ಪಿಕೊಳ್ಳಬೇಕಾದುದು ವಿಹಿತ. ಅಂತಹ ಕೆಲವರು ಇಂದಿಗೂ ಈ ನಮ್ಮ ಪುಣ್ಯಭೂಮಿ ಭಾರತದಲ್ಲಿ ಇದ್ದಾರೆ ಎಂಬುದು ’ಸಂಭವಾಮಿ ಯುಗೇ ಯುಗೇ’ ಎಂಬುದರ ಧ್ವನಿ ತರಂಗಗಳ ವ್ಯಾಪ್ತಿಗೆ ಒಳಪಡುತ್ತದೆ! ಅಂತಹ ಋಷಿ ಸದೃಶರೆಲ್ಲರಿಗೂ ನನ್ನ ನಮನಗಳು.

ಈಗಿರುವ ಆರುಕೋಟಿ ಕನ್ನಡಿಗರಲ್ಲಿ ಮೂರು ಕೋಟಿ ಮಂದಿಗಾದರೂ ’ಮಂಕುತಿಮ್ಮನ ಕಗ್ಗ’ದ ಬಗ್ಗೆ ಪ್ರತ್ಯಕ್ಷ/ಪರೋಕ್ಷ ಓದಿ/ಕೇಳಿ/ತಿಳಿದು ಗೊತ್ತು ಎಂಬುದು ನನ್ನ ಅನಿಸಿಕೆ. ನನ್ನ ಓದಿನ ನಡುನಡುವೆ ಮೆಲುಕುಹಾಕುವ ಕಗ್ಗದ ಮುಕ್ತಕಗಳ ಜೊತೆಗೆ, ಕಗ್ಗದ ಮಗ್ಗ ಹೇಗೆ ಹುಟ್ಟಿತು ಎಂಬ ಕಥೆಯಂತೇ ಇರುವ ’ಕಗ್ಗದ ಕಥೆ’ ಎಂಬ ಕವನವೂ ಬಹುಕಾಲ ನನ್ನನ್ನು ಪೀಡಿಸಿತ್ತು. ಕಗ್ಗದ ಆರಂಭಕ್ಕೂ ಮುನ್ನ ಓದುಗರಿಗೆ ಲಭ್ಯವಾಗುವ ಈ ಕವನ "ಸೋಮಿ" ಬರೆದದ್ದು! ಯಾರಾತ ಸೋಮಿ? ಯಾಕೆ ಆತ ಹೀಗೆಲ್ಲಾ ಬರೆದ? ’ತಿಮ್ಮಗುರು’ ಎಂದು ಆ ಕವನದಲ್ಲೇ ಆತ ಹೇಳಿದ್ದಾನೆ ಎಂದಾದಾಗ, ನಮಗೆ ’ತಿಮ್ಮಗುರು’ವೆನಿಸಿದ ಗುಂಡಪ್ಪನವರೇ ಕವನದ ವಸ್ತುವಾದರೆ, ಸೋಮಿ ಯಾರು ಎಂಬುದೇ ನನ್ನ ಪ್ರಶ್ನೆ; ಸಮಸ್ಯೆಯಲ್ಲದ ಸಮಸ್ಯೆಗೆ ಪರಿಹಾರ ಸಿಗುವಲ್ಲಿ ನಾನು ಹೋಲಿಸಿದ ಕಡತಗಳು ಹಲವು, ಆದರೂ ಆ ಕೆಲಸ ಹಾಗೇ ನಿಂತಿತ್ತು. ಮೇಲೆ ಹೇಳಿದಹಾಗೇ ಹಸಿದ ಮಗುವಿನ ಅಳುವಿಗೆ ಎಚ್ಚೆತ್ತ ಅಮ್ಮ ಹೊಟ್ಟೆಗೊಂದಷ್ಟು ನೀಡಿ ರಮಿಸುವಂತೇ, ನನ್ನ ರೋದನಕ್ಕೆ ಎಚ್ಚೆತ್ತ ಗಣೇಶರು ಉತ್ತರಿಸಿದರು: "ಅದು ಡಿವಿಜಿಯವರೇ ಬರೆದಿದ್ದು, ಅವರ ಕೌಟುಂಬಿಕ ಹಿನ್ನೆಲೆಯನ್ನು ಅವರ ಜ್ಞಾಪಕ ಚಿಕ್ರಶಾಲೆಯ ೮ನೇ ಭಾಗ ’ಸಂಕೀರ್ಣ ಸಂಪುಟ’ದಲ್ಲಿ ತಿಳಿದುಕೊಳ್ಳಬಹುದು. ಆ ಕವನವನ್ನು ಅವರು ಅವರ ಸೋದರಮಾವನ ಕುರಿತಾಗಿ ಬರೆದಿದ್ದು" ಎಂಬ ಉತ್ತರ  ನನಗೆ ದೊರೆತಾಗ, ಭಗವಂತ ಎದುರಲ್ಲಿ ಸಿಕ್ಕಾಗ ಯಾವುದನ್ನು ಕೇಳಬೇಕೋ ಅದನ್ನು ಕೇಳುವುದು ಬಿಟ್ಟು ಎಲ್ಲಾಮರೆತ ಭಕ್ತನ ಸ್ಥಿತಿ ಉಂಟಾಯ್ತು. ’ಕಗ್ಗದ ಕಥೆ’ಯ ತುಸು ಅರ್ಥವಿಸ್ತರಣೆಗೆ ಪ್ರಯತ್ನಿಸುತ್ತಾ ಲೇಖನ ಮುಂದರಿಸುತ್ತೇನೆ. 

ನರಸಿಂಹ ಸ್ವಾಮಿಗಳ ಕವನದಲ್ಲಿರುವಷ್ಟೇ ಆತ್ಮೀಯವಾಗಿ ಬಂಧಿಸುವ, ಭಾವಗಳ ಸಂಕೋಲೆಯನ್ನು ಅರಿವಿಲ್ಲದೇ ನಮಗೆ ತೊಡಿಸುವ ಕವನದ ಆರಂಭ ಹೀಗಿದೆ: 

ಹಳ್ಳಿ ಮಕ್ಕಳಿಂಗೆ ಗುರುವು, ಹಳ್ಳಿಗೆಲ್ಲ ಗೆಳೆಯನು,-
"ಒಳ್ಳೆ ಹಾರುವಯ್ಯ", " ಹಸುವು", "ಹಸುಳೆ" ಎನುವರವನನು.
ಮಂಕುತಿಮ್ಮನೆನುತ ಹೆಸರನವನು ಹೇಳಿಕೊಳುವನು;
ಬಿಂಕ ಕೊಂಕು ಒಂದು ಅರಿಯದಿದ್ದ ಸಾಧುವಾತನು.

ಹಳ್ಳಿಯಲ್ಲೊಬ್ಬ ಗುರುವೆನಿಸಿದ, ಹಳ್ಳಿಗರಿಗೆ ಮಿತ್ರನಾಗಿದ್ದ ಆತ ಬ್ರಾಹ್ಮಣನಾದ್ದರಿಂದ ಜನ " ಒಳ್ಳೆ ಹಾರುವಯ್ಯ" ಎಂದರು, ಮಂಕುತಿಮ್ಮ ಎಂದು ತನ್ನನ್ನೇ ತಾನು ಹೆಸರಿಸಿಕೊಳ್ಳುತ್ತಾ ತಮಾಷೆಮಾಡುತ್ತಿದ್ದ, ಅತ್ಯಂತ ಸಾಧು ಸ್ವಭಾವದ ಆತನ ಮುಗ್ಧತೆಗೆ ಜನ "ಹಸು" , "ಹಸುಳೆ" ಎಂದೆಲ್ಲಾ ಕರೆಯುತ್ತಿದ್ದರು. ನಮ್ಮಲ್ಲಿ ಒಂದು ಗಾದೆಯಿದೆ "ಕೆಟ್ಟು ಬ್ರಾಹ್ಮಣರನ್ನು ಸೇರು, ಸೊಕ್ಕಿ ಸೇಠುಗಳನ್ನು ಸೇರು" ಎಂದು, ’ಜೀವನದಲ್ಲಿ ಕೆಟ್ಟೆ’ ಎಂಬ ದಾರಿಕಾಣದ ಸ್ಥಿತಿ ಬಂದಾಗ, ಆಚಾರವಂತ ಬ್ರಾಹ್ಮಣನನ್ನು ಕಂಡರೆ ಆತ ಏನಾದರೊಂದು ಮಾರ್ಗೋಪಾಯವನ್ನು ಕಲ್ಪಿಸಿಕೊಡುವುದಕ್ಕೆ ಸಹಕಾರಿಯಾಗುತ್ತಾನೆ, ಸೊಕ್ಕಿದ್ದರೆ ಮಾರ್ವಾಡಿಗಳನ್ನು ಹೋಗಿ ಕಾಣಬೇಕು, ನಮ್ಮ ಸೊಕ್ಕಿಗೆ ಅವರು ಕಡಿವಾಣ ಹಾಕುವುದರಲ್ಲಿ ಸಂಶಯವಿಲ್ಲ ಎಂಬುದು ಗಾದೆಯ ಧ್ವನ್ಯರ್ಥ. [ಪೂರ್ವಾಗ್ರಹ ಪೀಡಿತರಾಗದೇ ನಾವು ಅವಲೋಕಿಸಿದರೆ ಬ್ರಾಹ್ಮಣರಲ್ಲಿ ಲೋಕೋಪಕಾರಕ ಬುದ್ಧಿ ಬಹುತೇಕರಿಗೆ ಇದ್ದೇ ಇರುತ್ತದೆ. ಕೆಲವರು ಕೃತಿಯಿಂದ ಅದನ್ನು ನಡೆಸುತ್ತಾರೆ, ಇನ್ನು ಕೆಲವರು ಕೈಲಾಗದ್ದಕ್ಕೆ ಪರಿತಪಿಸಿಕೊಳ್ಳುತ್ತಿರುತ್ತಾರೆ. ಇದನ್ನರಿಯದ ಕೆಲವರು ’ಬ್ರಾಹ್ಮಣ್ಯ ಎಂಬ ಟ್ರ್ಯಾಕಿಗೆ ಸಿಕ್ಕಿಹಾಕಿಕೊಂಡರೆ ಹೊರಬರುವುದೇ ಕಷ್ಟ’ ಎಂಬೆಲ್ಲಾ ರೀತಿಯಲ್ಲಿ ಬರೆಯುತ್ತಾ, ಎಡಪಂಥೀಯ ಬ್ರಾಹ್ಮಣರ ಮಾತುಗಳನ್ನು ಅನುಮೋದಿಸುತ್ತಾ, ಭೈರಪ್ಪನವರನ್ನೋ ಕಾರಂತರನ್ನೋ ಆಡಿಕೊಳ್ಳುತ್ತಾ ತೀರಾ ಗುಜರಿ ಅಂಗಡಿ ಕೆಲಸಮಾಡುತ್ತಿರುತ್ತಾರೆ! ಅಂತಹ ಜನರಿಗೆ ಯಾವ ಮಹಾ ಜ್ಞಾನವಿದೆ ಎಂಬ ಹಮ್ಮೋ ದೇವರೇ ಬಲ್ಲ.]ಇರಲಿ, ಕಥೆ ಮುಂದಕ್ಕೇನಾಯ್ತು ನೋಡೋಣ:

ಬಾಳಿದೇತಕೆನುತಲೊಮ್ಮೆ ಯೊಮ್ಮೆ ತಾನೆ ಕೇಳ್ವನು;
ಕೂಳುಹೆಣವು ತಾನೆನುತ್ತಲೊಮ್ಮೆ ನಕ್ಕು ಪೇಳ್ವನು.
ಬೆದರರಾರುಮವನ ಕಂಡು; ಬಳಸಿ ನಿಂತು ಹುಡುಗರು
ಮುದದೊಳವನ ಸಲುಗೆಯಿಂದ, ’ಮೇಷ್ಟ್ರೆ’, ’ಮೇಷ್ಟ್ರೆ’ ಎನುವರು.

ವ್ರಥಾ ಬಿಟ್ಟಿ ಕೂಳು ತಿನ್ನುತ್ತಾ ಬಿದ್ದಿರುವ ತಾನು ಬದುಕುವುದಾದರೂ ಯಾತಕ್ಕೆ ಎಂದು ತನಗೆ ತಾನೇ ಆಡಿಕೊಳ್ಳುತ್ತಿದ್ದನಾತ. ಅವನನ್ನು ಕಂಡರೆ ಯಾರಿಗೂ ಹೆದರಿಕೆಯೆಂಬುದೇನೂ ಇರಲಿಲ್ಲ, ಮಕ್ಕಳು ಅವನನ್ನು ಸುತ್ತುವರಿದು, ಕೈ-ಮೈ ಹಿಡಿದು ಸಲುಗೆಯಿಂದ, "ಮೇಷ್ಟ್ರೆ", "ಮೇಷ್ಟ್ರೆ" ಎನ್ನುತ್ತಿದ್ದರು.   

ಮೂಡಲೂರ ಸುತ್ತಮುತ್ತಣೈದು ಮೈಲಿಯಿಂದಲಿ
ಕೂಡಿ ಬರುವರಣುಗರೋದೆ ತಿಮ್ಮ ಗುರುವಿನೆಡೆಯಲಿ.
ಶಾಲೆಗವನು ಹೊತ್ತುಗೊತ್ತಿಗೊಪ್ಪುವಂತೆ  ಬರುವನು;
ವೇಳೆ ವೆರ್ತವಾಗದಂತೆ ಪಾಠ ಹೇಳುತಿರುವನು;

ಮೂಡಲೂರಿನ ಸುತ್ತಮುತ್ತಣ ಐದು ಮೈಲಿಗಳ ಅಂತರದಲ್ಲಿರುವ ಊರು/ಹಳ್ಳಿಗಳಿಂದ ಜನ ತಂಡೋಪತಂಡವಾಗಿ ತಿಮ್ಮ ಗುರುವನ್ನು ನೋಡಲು ಆಗಾಗ ಬರುತ್ತಿದ್ದರು. ತಾನು ಕೆಲಸಮಾಡುತ್ತಿದ್ದ ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದ ಆತ ವೇಳೆ ವ್ಯರ್ಥವಾಗದಂತೇ ಮಕ್ಕಳಿಗೆ ಹಿತವಾಗಿ ಪಾಠಮಾಡುತಿದ್ದ.

ಆಟ, ಅಮರ, ಮಗ್ಗಿ, ಬರಹ -ಎಲ್ಲ ಕಲಿಸಿಕೊಡುವನು;
ಏಟು, ಪೆಟ್ಟು, ಬಯ್ಲು, ಗದರು -ಒಂದನುಮವನರಿಯನು; 
ಕತೆಯ ಹೇಳಿ ನಗಿಸುತವರ ತುಂಟತನವ ಕಳೆವನು;
ಮಿತದಿನೆಲ್ಲರೊಡನೆ ಮಾತುಕತೆಯನಾಡಿ ನಲಿವನು.

ಕ್ಲಿಷ್ಟಪದಗಳಿಲ್ಲದ್ದರಿಂದ ಈ ಮೇಲಿನ ಸಾಲುಗಳು ಓದುಗರಿಗೆ ಪದಶಃ ಅರ್ಥವಾಗಿರಬಹುದು ಎಂದುಕೊಳ್ಳುತ್ತೇನೆ. ಆಟಗಳನ್ನೂ, ಅಮರಕೋಶ, ಮಗ್ಗಿ[ಕೋಷ್ಟಕ], ಬರಹ ಎಲ್ಲವನ್ನೂ ಆತ ಹೇಳಿಕೊಡುತ್ತಿದ್ದನೇ ಹೊರತು ಮಕ್ಕಳಿಗೆ ಏಟು, ಪೆಟ್ಟು, ಬೈಗುಳ, ಗದರುವಿಕೆ ಇದನ್ನೆಲ್ಲಾ ಪ್ರಯೋಗಿಸಿದವನಲ್ಲ. ಕತೆ ಹೇಳಿ ನಗಿಸುವ ತನ್ನ ವಿಶಿಷ್ಟ ಬೋಧನಾಕ್ರಮದಿಂದ ಎಲ್ಲರ ತುಂಟತನವನ್ನು ಕಳೆಯುತ್ತಿದ್ದ; ಮಿತವಾಗಿ ಎಲ್ಲರೊಡನೆಯೂ ಮಾತನಾಡುತ್ತಿದ್ದ.

ಅವನ ತಾಯಿಯರ್ಧ ಕುರುಡಿ, ಸಿರಿಯನೆಡರಿಗಿಳಿದವಳ್,
ಶಿವನ ನಂಬಿ ಮುದುಕಿ ತನ್ನ ಮಗಳ ಮನೆಗೆ ದುಡಿಯುವಳ್:
ಆಕೆ,-ಅವನ ತಂಗಿ,-ಗಂಡನೊಡನೆ ಸುಖದಿ ಬಾಳ್ವರು;
ಲೋಕಸೇತು ತಿಮ್ಮ ಗುರುವಿಗಲ್ಲೆ; ಅಲ್ಲೆ ವಾಸವು.

ಅರ್ಧ ಕುರುಡಿಯಾದ ಆತನ ತಾಯಿಗೆ ಸಿರಿವಂತಿಕೆ ಎಂಬುದು ಕನಸಿನ ಪದವೇ ಸರಿ. ಬದುಕು ಹೀಗೆ ಎಂದು ಬೇಸರಿಸಿಕೊಳ್ಳದೇ ಶಿವನಿಚ್ಛೆ ಎಂದುಕೊಳ್ಳುತ್ತಾ ಮಗಳ ಮನೆಯಲ್ಲೇ ಆಕೆ ವಾಸವಿದ್ದು ಮಗಳಮನೆಯ ಕಠಿಣ ಮನೆವಾರ್ತೆ ಕೆಲಸಗಳನ್ನು ನಡೆಸುತ್ತಿದ್ದಳು. ತಾಯಿಯೊಟ್ಟಿಗೆ ತಂಗಿಯ ಮನೆಯಲ್ಲೇ ಆತ ವಾಸವಿದ್ದನು.

ಬೇರೆ ಮನೆಯ ಚಿಂತೆಯೇಕೆ ಹೆಂಡರಿಲ್ಲದವನಿಗೆ?
ಆರುಮರಿಯರವನು ಮದುವೆಯಾಗದಿದ್ದುದೇತಕೋ;
ಬಡವನೆಂದೊ; ಚೆಲುವನಲ್ಲವೆಂದೊ; ಹೆಣ್ಣ ಹೆತ್ತವರ್
ಕೊಡಲು ಬಾರದಿದ್ದರೇನೊ ! ಅವನೆ ಬೇಡವೆಂದನೋ!!

ಮದುವೆಯಾಗದೇ ಬ್ರಹ್ಮಚರ್ಯದಲ್ಲೇ ಜೀವನ ಕಳೆಯುತ್ತಿದ್ದ ಆತನಿಗೆ ಬೇರೇ ಮನೆ ಮಾಡಿ ವಾಸಿಸುವ ಚಿಂತೆ ಯಾವಾಗಲೂ ಕಾಡಲಿಲ್ಲ. ಆರುಮರಿ ಪಂಗಡದವನಾದರೂ ಮದುಯಾಗದಿದ್ದುದೇಕೆ ಎಂದು ತಿಳಿಯಲಿಲ್ಲ.  ಬಡವನೆಂದೋ ಸ್ಫುರದ್ರೂಪಿಯಲ್ಲವೆಂದೋ ಹೆಣ್ಣು ಹೆತ್ತವರು ಮುಂದೆಬರಲಿಲ್ಲವೇ? ಅಥವಾ ಅವನೇ ಮದುವೆ ಬೇಡವೆಂದುಕೊಂಡನೋ ತಿಳಿಯದು, ಅಂತೂ ಮದುವೆಯಾಗಲಿಲ್ಲ. 

ಹೇಗೆ ಇರಲಿ: ವರ್ಷವೈದು ದಶಕಗಳನು ಕಳೆದವನ್,
ನೀಗುತಿದ್ದ ನಾಯುವನ್ನು ಸರಳಮನದ ತೃಪ್ತಿಯಿನ್.
ತರಣಿಯುದಿಪ ಮುನ್ನ ಪಾಡಿ ನಾರಸಿಂಹಶತಕಮಂ,
ಇರುಳು ಬರಲು ರಾಮದಾಸ ಕೀರ್ತನೆಗಳ ಪಾಡುವಂ.

ಐವತ್ತು ವರ್ಷ ಆಯುಸ್ಸು ಈ ರೀತಿಯಲ್ಲೇ ಸರಳಮನದ ತೃಪ್ತಿಯಿಂದಲೇ ಕಳೆದುಬಿಟ್ಟನಾತ. ಪ್ರತಿನಿತ್ಯ ಸೂರ್ಯೋದಯಕ್ಕೂ ಮುನ್ನ ಎದ್ದು ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ನಾರಸಿಂಹ ಶತಕ ಎಂಬ ಸ್ತೋತ್ರವನ್ನು ಮಾಡುತ್ತಿದ್ದ ಆತ ರಾತ್ರಿಯಲ್ಲಿ ರಾಮದಾಸರ ಕೀರ್ತನೆಗಳನ್ನು ಹಾಡುತ್ತಿದ್ದ.

ಬಿಡುವುಹೊತ್ತು  ಗುಡಿಯಳೆಲ್ಲೊ ಕುಳಿತು ದೈವಚಿಂತೆಯೊಳ್
ನಡೆಯುತಿದ್ದನವನು ಬಾಳಹೊರೆಯ ಹೊತ್ತು, ನಡೆಯುವೊಲ್
ಭಾನುವಾರ ಬೆಟ್ಟದೊಂದು ಮೊಡಕಸೇರಿ ಕೂಡುವಂ;
ಮೌನದಿಂದ ಗಗನ ಧರೆಯನಪ್ಪುವತ್ತ ನೋಡುವಂ;

ಬಿಡುವಿದ್ದಾಗ ಗುಡಿಗೆ ಹೋಗಿ ಅಲ್ಲೆಲ್ಲೋ ಕುಳಿತು ದೈವಧ್ಯಾನವನ್ನಾತ ನಡೆಸುತ್ತಿದ್ದ. ಬಾಳ ಹೊರೆಯನ್ನು ಹೀಗೇ ಹೊತ್ತು ಆತ ನಡೆಯುತ್ತಿದ್ದ. ಭಾನುವಾರ ಬಂದರೆ ಬೆಟ್ಟವೇರಿ ಅಲ್ಲಿನ ಬಂಡೆಗಳ ಮೇಲೆ ಮೌನವಾಗಿ ಕೂತು ದೂರದಲ್ಲಿ ಆಕಾಶ-ಭೂಮಿ ಒಂದಾದ ಹಾಗೆ ಕಾಣುವ ದಿಕ್ಕಿನತ್ತ ನೋಡುತ್ತಿದ್ದನಾತ.

ದೇಗುಲದೊಳದೊಂದು ಮಬ್ಬು ಮಂಟಪವನು ಸೇರುವಂ;
ಹೋಗಿಬರುವ ಭಕುತ ಜನಕೆ ಮರುಕನೋಟ ತೋರುವಂ.
ಹಳೆಯ ಹಚ್ಚಡವನು ತಲೆಯಿನಡಿಯವರೆಗೆ ಹೊದ್ದವಂ
ಹೊಳೆವ ಕಣ್ಣ ಕಾಣದರ್ಗೆ ಮೂಟೆಯೆಂದೆ ಕಾಣುವಂ.

ದೇಗುಲ ಸೇರಿಕೊಳ್ಳುತ್ತಿದ್ದ ಆತ, ಅಷ್ಟಾಗಿ ಬೆಳಕಿರದ ಮಬ್ಬುಳ್ಳ ಮಂಟಪದ ಮೂಲೆಯಲ್ಲಿ ಮುಡಿಯಿಂದ ಅಡಿಯವರೆಗೂ ಹಳೆಯ ಚಾದರವನ್ನು ಹೊದ್ದು ಕೂತು, ಹೋಗಿ ಬರುವವರ ಕಡೆಗೆ ಮರುಕದ ನೋಟ ಬೀರುತ್ತಿದ್ದ; ಸರಿಯಾಗಿ ಪರಾಂಬರಿಸದವರಿಗೆ ಮೂಟೆಯಂತೇ ಕಾಣುತ್ತಿದ್ದ!

ಗುರುತನರಿತರಾರುಮಾನುಮೇನನಾನುಮೊರೆದೊಡಂ
ಕಿರುನಗೆಯಿನೆ ಮಾರುವೇಳ್ವನ್, ಆಡನತಿಯ ನುಡಿಗಳಂ.
ಅವನ ತಂಗಿಗೊಬ್ಬ ಮಗನು; ಮುದ್ದಿನಿಂದ ಬೆಳೆದನು;
ಇವನೆ ತಿಮ್ಮ ಗುರುಗೆ ಜೀವವಿವನೆ ಲೋಕವೆಲ್ಲವು.

ಯಾರಾದರೂ ಗುರುತು ಹಿಡಿದು ಮಾತನಾಡಿಸ ಹತ್ತಿದರೆ ಕಿರುನಗೆ ಬೀರಿ ಅವರನ್ನು ಸಾಗಹಾಕಿಬಿಡುತ್ತಿದ್ದ; ಜಾಸ್ತಿ ಮಾತನಾಡುತ್ತಿರಲಿಲ್ಲ. ಅವನ ತಂಗಿಗೊಬ್ಬ ಮಗನಿದ್ದು ಮುದ್ದಿನಿಂದ ಬೆಳೆಯುತ್ತಿದ್ದ ಆ ಮಗುವೇ ತಿಮ್ಮ ಗುರುವಿನ ಜೀವವೂ ಭಾವವೂ ಸರ್ವವೂ ಆಗಿದ್ದ.

ಸೋಮಿಯವನು; ಮಾವನಿವನನೆತ್ತಿ, ನಡಸಿ, ಲಾಲಿಸಿ,
ಪ್ರೇಮದಂಗಿ ತೊಡಿಸಿ, ಪದ್ಯ ಕಲಿಸಿ, ಬರಹ ತಿದ್ದಿಸಿ,
ನೋಡಿ ಮುಂಜಿಯಾದುದನ್ನು, ಕೇಳಿ ವಿದ್ಯೆ ಪೆಂಪನು,
ಷೋಡಶಾಬ್ದದುತ್ಸವವನು ಮಾಡಿ ಮಾವ ನಲಿದನು.

ಸೋಮಿ ಎಂಬ ಅಳಿಯನಿಗೆ ತಿಮ್ಮಗುರು ಪ್ರೇಮವೆಂಬ ಅಂಗಿಯನ್ನು ಹಾಕುತ್ತಿದ್ದ, ಪದ್ಯ ಕಲಿಸುತ್ತಿದ್ದ, ಬರಹ ಕಲಿಸುತ್ತಿದ್ದ, ನಡೆಸಿ, ಲಾಲಿಸಿ ಪಾಲಿಸುತ್ತಿದ್ದ. ಮುಂಜಿಯಾದುದನ್ನು ನೋಡಿ ಹೆಚ್ಚಿನ ವಿದ್ಯಾಭಾಸ ಹೇಳಿಕೊಟ್ಟು ಸಂತಸಪಟ್ಟ ತಿಮ್ಮಗುರು, ತನ್ನಳಿಯನ ಷೋಡಶಾಬ್ದವನ್ನು ಉತ್ಸವವಾಗಿ ಆಚರಿಸಿದ.

ಧನ್ಯಳೀಗ ತಾನೆನುತ್ತ ಸೋಮಿಯಜ್ಜಿ ಹಿಗ್ಗಿದಳ್;
ಇನ್ನು ಹತ್ತುವಾರ ಕಳೆಯಲಾಕೆ ಕಣ್ಣು ಮುಚ್ಚಿದಳ್.
ಬಳಿಕ ಮುಂದಿನೋದಿಗೆಂದು ಸೋಮಿಯು ಮೈಲಾರಕೆ
ತೆರಳ್ವುದೆಂದು ಸಿದ್ಧವಾಯಿತವನು ಮೂಟೆ ಕಟ್ಟಿದ.

ಮೊಮ್ಮಗನ ಬೆಳವಣಿಗೆಯನ್ನು ಕಂಡು ಸೋಮಿಯ ಅಜ್ಜಿ ಬಹಳ ಹಿಗ್ಗಿದಳು. ಸಂಭ್ರಮದ ಉತ್ಸವ ನಡೆದ ಎರಡೂವರೆ ತಿಂಗಳಲ್ಲೇ ಅಜ್ಜಿ ಪರಂಧಾಮವನ್ನು ಸೇರಿದಳು. ಅಜ್ಜಿಯ ಅಂತ್ಯಕ್ರಿಯೆಗಳು ನಡೆದಾ ನಂತರ, ತನ್ನ ಮುಂದಿನ ಓದಿಗಾಗಿ ಸೋಮಿ ಮೈಲಾರಕ್ಕೆ ಹೊರಟುನಿಂತ.

ಬಂದಿತವನ ಪಯಣದ ದಿನವವನ ಮೊಗದೊಳುತ್ಸಹ;
ಅಂದು ತಿಮ್ಮಗುರುವಿನ ದನಿಯಲ್ಲಿ ಕೊಂಚ ಗದ್ಗದ.
ಬೆರೆಯಿತಂದು ಮಾವನೊಳಗೆ ಸಂತಸದಲಿ ಚಿಂತೆಯು,
ಕೊರೆಯಿತವನ ಮನವ ಸೋದರಳಿಯನಗಲ್ವ ಬೆಸನವು.

ಸೋಮಿ ಹೊರಡುವ ದಿನ ಬಂದೇ ಬಂತು; ಸೋಮಿಯ ಮುಖದಲ್ಲಿ ಉತ್ಸಾಹ; ಆದರೆ ತಿಮ್ಮಗುರುವಿನ ಗರಳು ಗದ್ಗದಿತವಾಗಿತ್ತು-ಆತ ಮಾತನಾಡಲಾರ, ಆಡದೇ ಇರಲಾರ. ಸೋಮಿ ದೂರಹೋಗುತ್ತಿರುವುದು ಮಾವ ತಿಮ್ಮಗುರುವಿನಲ್ಲಿ ಚಿಂತೆಗೆ ಕಾರಣವಾಗಿತ್ತು, ಸಂತಸದ ಜೊತೆಗೇ ಚಿಂತೆಯೂ ಬೆರೆತು ತಿಮ್ಮಗುರುವಿನ ಮನವನ್ನು ಸದಾ ಅದು ಕೊರೆಯತೊಡಗಿತು.

ಐದುವಾರ ಕಳೆದು ತಿಮ್ಮ ಗುರುವಿಗಾಯ್ತು ವರ್ಗವು;
ಮೂಡಲೂರಿನಿಂದಲವನು ಮಂಡುಗೆರೆಯ ಸೇರ್ದನು.
ಕೆಲವು ತಿಂಗಳಾದ ಬಳಿಕದೊಂದು ಸಂಜೆ ಮಾವನು
ತಲುಪಿದ ಮೈಲಾರವನಾ ಪುರದ ಬೆಡಗ ಕಂಡನು.

ಐದು ವಾರಗಳು ಹಾಗೂ ಹೀಗೂ ಕಳೆದಿದ್ದವು; ತಿಮ್ಮ ಗುರುವಿಗೆ ಮೂಡಲೂರಿನಿಂದ ಮಂಡಗೆರೆಗೆ ವರ್ಗವಾಯ್ತು. ಮಂಡಗೆರೆಗೆ ತೆರಳಿದ ಕೆಲವು ತಿಂಗಳುಗಳ ಬಳಿಕ, ಆತ ಸೋಮಿಯನ್ನು ನೋಡಬೇಕೆಂಬ ತಹತಹವನ್ನು ಹತ್ತಿಕ್ಕಲಾರದೇ ಮೈಲಾರಕ್ಕೆ ನಡೆದ; ಮೈಲಾರ ಪಟ್ಟಣದ ಬೆಡಗನ್ನು ಕಂಡ.

ಅರಸಿಯರಸಿ ಸೋಮಿಯ ವಿದ್ಯಾರ್ಥಿನೆಲೆಯ ಮುಟ್ಟಿದ;
ಬೆರಗುಪಟ್ಟನದರ ಜರಬಿನಂದಗಳನು ನೋಡುತ.
ಬಳಿಯ ಬಯಲಿನಲ್ಲಿ ಸೋಮಿ ಚಂಡನಾಡುತ್ತಿದ್ದನು,
ಗೆಳೆಯರೊಡನೆ ನಾಗರಿಕದ ಪೆರ್ಮೆ ತೋರುತ್ತಿದ್ದನು.

ಸೋಮಿಯ ವಿದ್ಯಾರ್ಥಿನಿಲಯವನ್ನು ಅರಸುತ್ತಾ ಅರಸುತ್ತಾ ಅಂತೂ ತಿಮ್ಮಗುರು ಅಲ್ಲಿಗೆ ಬಂದಾಗ, ಸೋಮಿ ಪಕ್ಕದ ಬಯಲಿನಲ್ಲಿ ಗೆಳೆಯರೊಡನೆ ಚೆಂಡಾಟವಾಡುತ್ತಿದ್ದ. ವಿದ್ಯಾರ್ಥಿನಿಲಯದ ಜರ್ಬನ್ನು ಕಂಡು ತಿಮ್ಮಗುರು ಬೆರಗಾಗಿದ್ದ.

ಮಾತು, ನಗುವು, ನಡಿಗೆಯುಡಿಗೆ-ಎಲ್ಲ ಕೊಂಚ ಹೊಸಬಗೆ,
ರೀತಿ ದೊಡ್ಡದಾಯ್ತು ಮಾವ ತಂದ ಹಳ್ಳಿ ಕಣ್ಣಿಗೆ.
ಆಟಮುಗಿಸಿ ಬರಲಿ ಸೋಮಿಯೆಂದು ಮಾವ ಕುಳಿತನು;
ನೋಟವ ಕೈಸಾಲೆಯಿಂದ ನೋಡಿ ಘಳಿಗೆ ಕಳೆದನು.

ನಗರದ ಜನಜೀವನ ಹಳ್ಳಿಗಳಿಗಿಂತ ಬೇರೆ. ಮಾತು-ನಗು, ನಡಿಗೆ-ಉಡುಗೆ ಎಲ್ಲದರಲ್ಲೂ ಹಳ್ಳಿಗಿಂತ ಪಟ್ಟಣ ಬಹಳ ಭಿನ್ನ. ನಾಗರಿಕತೆಯ ಹೆಸರಿನಲ್ಲಿ ಹೊಸ ಹೊಸ ರೀತಿಯಲ್ಲೇ ಎಲ್ಲವೂ ಕಾಣುತ್ತವೆ. ಹಳ್ಳಿಯ ಸಾಚಾತನ, ಅಲ್ಲಿನ ಸರಳತೆ ಪಟ್ಟಣಿಗರಲ್ಲಿ ಎಂದೂ ಇರುವುದಿಲ್ಲ. ಹಳ್ಳಿಗನಾದ ತಿಮ್ಮಗುರುವಿಗೆ ಇದೆಲ್ಲಾ ಹೊಸತು. ಕೈಸಾಲೆಯಲ್ಲೇ ಅತ್ತಿತ್ತ ನೋಡುತ್ತಾ ಸೋಮಿ ಬರಲಿ ಎಂದು ಕಾದು ಕುಳಿತನಾತ.

ಕತ್ತಲಾಗೆ ಸೋಮಿ ಗೆಳೆಯರೊಡನೆ ನೆಲೆಗೆ ಬಂದನು;
ಅತ್ತಲಿದ್ದ ಮಾವನನಚ್ಚರಿನೋಟದೆ ಕಂಡನು.
"ಏನು ಮಾವ? ಎಂದು ಬಂದೆ? ಹೇಗೆ ಬಂದೆ?"-ಎನ್ನುತ
ಸೋಮಿ ಕೇಳುತಿದ್ದನೊಲಿದು; ಕೆಲದಿ ಕೆಳೆಯರಿದ್ದರು.

ಆಡ್ತಾ ಆಡ್ತಾ ಕತ್ತಲಾವರಿಸಿತು, ಸೋಮಿ ಗೆಳೆಯರೊಟ್ಟಿಗೆ ವಿದ್ಯಾರ್ಥಿನಿಲಯಕ್ಕೆ ಮರಳಿದಾಗ ಅವನಿಗೆ ಅಚ್ಚರಿ ಕಾದಿತ್ತು! ದೂರದಲ್ಲಿ ಮಾವ ಕುಳಿತಿದ್ದುದು ಕಾಣುತ್ತಿತ್ತು. ಗೆಳೆಯರ ಜೊತೆಗೂಡಿ ಮಾವನ ಹತ್ತಿರಕ್ಕೆ ತೆರಳಿದ ಸೋಮಿ " ಏನು ಮಾವ? ಯಾವಾಗ ಬಂದೆ? ಹೇಗೆ ಬಂದೆ? ಎಲ್ಲಾ ಕ್ಷೇಮವೇ?" ಎಂದೆಲ್ಲಾ ಕೇಳತೊಡಗಿದ.

ಮಾವ-"ಎಲ್ಲ ಚೆನ್ನ; ಸೋಮಿ, ನೀನು ಸುಖವೆ?"-ಎಂದನು.
ಆದರೇನು?  ಸೋಮಿ ನಡತೆಯೊಳಗದೇನೊ ಹಿಡಿತವು;
ಭೇದವೇನೊ ಆಯಿತೆಂದು ಮಾವನಿಗಂ ಬಿಗಿತವು.
ಹರಕಲಂಗಿ, ಹುಲುಸುಗಡ್ಡ, ಹಳ್ಳಿರೀತಿ-ಮಾವನು;
ಪುರದ ವೇಷ, ಠೀವಿ ನೋಟ, ಆಂಗ್ಲರೀತಿ- ಅಳಿಯನು.

ಉಭಯ ಕುಶಲೋಪರಿ ಮಾತು ಸಾಗುತ್ತಿದ್ದರೂ, ಸೋಮಿಯನ್ನು ಮಾವ ಅಪಾದಮಸ್ತಕ ನೋಡೇ ನೋಡುತ್ತಾನೆ. ಸೋಮಿಯಲ್ಲಿ ಬಹಳ ಬದಲಾವಣೆಯಾಯ್ತಲ್ಲಾ ಎಂಬ ಅನಿಸಿಕೆ ಮಾವನೊಳಗೆ. ಮಾವನದೋ ಹಳ್ಳಿಯ ಜೀವನ, ಹರುಕಲಂಗಿ, ಹುಲುಸಾದ ಗಡ್ಡ, ಅಳಿಯ ಸೋಮಿಯದೋ ನಗರದ ಜೀವನ, ಠೀವಿಯಲ್ಲಿ ಟಾಕುಟೀಕು, ಆಂಗ್ಲ ಶೈಲಿಯ ವೇಷಭೂಷಣ!

ಕೆಲವು ನಿಮಿಷವಿದ್ದಿತಿಂತು; ಕೆಳೆಯರೆಲ್ಲ ತೆರಳಲು,
ಕಲೆತರಾಗ ಮಾವ ಅಳಿಯ ಹಿಂದಿನಂತೆ ಹರಟಲು.
ಮಾವ ತನ್ನ ಮೂಟೆ ಬಿಚ್ಚಿ,-’ಕೋ’ ಎನುತ್ತ ತೆಗೆದನು,
ಆವುತುಪ್ಪವೆರಡು ಕುಡಿಕೆ,ಅವಲಕ್ಕಿಯು ಬೆಲ್ಲವು,

ಒಂದಷ್ಟು ನಿಮಿಷಗಳ ಕಾಲ ಹೀಗೇ ಸಂದಿತು. ಆಮೇಲೆ ಸೋಮಿಯ ಗೆಳೆಯರೆಲ್ಲಾ ತಂತಮ್ಮ ಜಾಗಕ್ಕೆ ತೆರಳಿದರು. ಆಗ ಮಾವ-ಅಳಿಯ ಮೊದಲಿನಂತೇ ಮಾತುಕತೆಗೆ ಇಳಿದರು. ಮಾವ ತಾನು ತಂದಿದ್ದ ಬಟ್ಟೆಗಂಟು ಬಿಚ್ಚಿದ. ಅದರಿಂದ ಹಸುವಿನ ತುಪ್ಪ-ಎರಡು ಕುಡಿಕೆ, ಅವಲಕ್ಕಿ, ಬೆಲ್ಲ ಇತ್ಯಾದಿಗಳನ್ನು ತೆಗೆಯುತ್ತಾ ಒಂದೊಂದನ್ನೇ ಕೊಡಹತ್ತಿದ.

ಅರಳುಹಿಟ್ಟು, ಕೋಡುಬಳೆಗಳ್-ಇಷ್ಟನವನು ಕೊಟ್ಟನು.
ಮುರಿದು ಸೋಮಿ ಕೋಡುಬಳೆಯನೊಡನೆ ಬಾಯಿಗಿಟ್ಟನು;
ಬೇಗಬೇಗ ಮೇಜಿನೊಳಗೆ ಮಿಕ್ಕುದೆಲ್ಲ ಸುರಿದನು;
ಜಾಗಟೆ ಸದ್ದಾಗೆ ಸಂಜೆಯೂಟಕೆಂದು ಹೊರಟನು.

ಆ ಗಂಟಿನಲ್ಲಿ ಅರಳುಹಿಟ್ಟು, ಕೋಡುಬಳೆಗಳೂ ಇದ್ದವು. ಕೋಡುಬಳೆಯನ್ನು ಮುರಿದು ತಿನ್ನುತ್ತಾ ಸೋಮಿ ಮಿಕ್ಕಿದ ಎಲ್ಲವನ್ನೂ ತನ್ನ ಮೇಜಿನ ಡ್ರಾಯರಿನಲ್ಲಿ ತುರುಕುತ್ತಿದ್ದಾಗಲೇ ಸಂಜೆಯ ಊಟಕ್ಕೆ ಕರೆಬಂತು, ಜಾಗಟೆ ಸದ್ದಿಗೆ ಎದ್ದುನಿಂತ ಸೋಮಿ ಊಟಕ್ಕೆ ಹೊರಟ.

ಮಾವನು "ನಾನೂಟಮಾಡೆ; ಏಕಾದಶಿ" ಎನ್ನಲು,
ಸೋಮಿ ಪೇಟೆಯಿಂದ ಕದಲಿ ದ್ರಾಕ್ಷಿ ತಂದುಕೊಟ್ಟನು.
ಮಾವ ಸಂಜೆ ಸಂಧ್ಯೆ ಮಾಡಿ ಫಲವನುಂಡು ಕುಳಿತನು;
ಸೋಮಿಯೂಟ ಮುಗಿಸಿಬಂದು ಮಾವನ ಬಳಿ ಕುಳಿತನು.

ಮಾವ ತಾನು ಊಟಮಾಡುವುದಿಲ್ಲ-ಇಂದು ಏಕಾದಶಿ ಎಂದಾಗ, ಸೋಮಿ ಪೇಟೆಯಿಂದ ಬಾಳೇಹಣ್ಣು, ದ್ರಾಕ್ಷಿಗಳನ್ನು ತಂದುಕೊಟ್ಟ. ಮಾವ ಕೈಕಾಲು ತೊಳೆದು, ಸಂಧ್ಯಾವಂದನೆ ಮುಗಿಸಿ, ಫಲಾಹಾರ ಭುಂಜಿಸಿ ಕುಳಿತ. ಸೋಮಿ ಹೋಗಿ ಊಟಮುಗಿಸಿಕೊಂಡು ಬಂದ. ಮುಂದೆ ನೋಡೋಣ:

ಮಾತುಕತೆಗಳಾಗ ಸಾವಕಾಶದಿಂದ ಪರಿದುವು,
ಪ್ರೀತಿಮಾತು, ಮನೆಯಮಾತು, ಊರ ಮಾತು-ಎಲ್ಲವು.
ಏನು ಮಾತು! ಏನು ಹರಟೆ! ಏನು ಅಂತರಂಗಗಳ್!
ಏನದೇನೊ ಸವಿಯ ನೆನಪು! ಏನೊ ನಗುತರಂಗಗಳ್!

ಬಳಿಕ ಇಬ್ಬರಲ್ಲೂ ಮಾತುಕತೆಗಳು ನಡೆದವು. ಬಹಳದಿನಗಳ ನಂತರ ಇಬ್ಬರೂ ಭೇಟಿಯಾಗಿದ್ದರು. ಪ್ರೀತಿಮಾತು, ಮನೆಯಲ್ಲಿ ಆಡುತ್ತಿದ್ದ ಸಲುಗೆಯ ಮಾತು, ಊರ ತಿಟ್ಟಿನ ಮಾತು, ಗುಟ್ಟಿನಮಾತು ಎಲ್ಲವೂ ನಡೆದವು. ಯಾವುದೋ ಹಳೆಯ ಘಟನೆಗಳನ್ನು ನೆನೆದು ಇಬ್ಬರೂ ನಕ್ಕರು, ನಗು ಅಲೆಅಲೆಯಾಗಿ ಹೊಮ್ಮಿತು. 

ತಿಳಿದನಾಗ ಮಾವ ತನ್ನ ಸೋಮಿಯೆ ಇವನೆನ್ನುತ,-
ಎಳೆಯನಾಗಿ ತನ್ನ ತೊಡೆಯಳಾಡಿದವನೆ ಎನ್ನುತ.
ಕಳೆಯಲು ಮುಕ್ಕಾಲು ರಾತ್ರಿಯಾಗ ಮಾವನೆದ್ದನು;
ತಲೆಗೆ ತನ್ನ ಮೂಟೆಯನ್ನು ಮರಳಿ ಹೊರಿಸಿ ನಿಂತನು.

ಮಾತಿನಲ್ಲಿ ಮಾವ ತನ್ನ ಮೊದಲಿನ ಸೋಮಿಯನ್ನೇ ಕಂಡ. ಚಿಕ್ಕವನಾಗಿದ್ದಾಗ ತನ್ನ ತೊಡೆಯಮೇಲೆ ಮಲಗಿ ಆಡುತ್ತಿದ್ದ ಅದೇ ಸೋಮಿ ಇಷ್ಟೆತ್ತರಕ್ಕೆ ಬೆಳೆದು ನಿಂತಿದ್ದಾನೆ, ಆದರೂ ಸೋಮಿ ಸೋಮಿಯೇ ಎಂಬುದು ಮಾವನ ಮನಕ್ಕೆ ಖಾತರಿಯಾಯ್ತು. ಮಾತಾಡ್ತಾ ಮಾತಾಡ್ತಾ ಮುಕ್ಕಾಲು ರಾತ್ರಿ ಕಳೆದುಹೋಗಿತ್ತು. ತಂದ ಮೂಟೆಯನ್ನು ಮರಳಿ ತನ್ನ ತಲೆಯಮೇಲೆ ಇರಿಸಿಕೊಳ್ಳುತ್ತಾ ಮಾವ ಎದ್ದುನಿಂತ.

"ಏನು ಮಾವ ಇಷ್ಟು ಬೇಗ?" ಎನುತ ಸೋಮಿಯೆದ್ದನು;
-"ಏನಿದೇನು ಹೊರಟೆ?" ಇನ್ನುಮೆಷ್ಟೊ ಹೇಳಲಿರುವುದು.
ಇಂದು ನಿಲ್ಲು, ಮಾವ; ಊಟಗೈವ ನಾವು ಜೊತೆಯಲಿ"-
ಎಂದು ಸೋಮಿ ಹಂಬಲಿಸುತ ಮಾವನನ್ನು ಬೇಡಿದ.

"ಏನು ಮಾವ, ಇಷ್ಟೊತ್ನಲ್ಲಿ, ಅಷ್ಟು ಬೇಗ ಹೋರಡೋದೇ, ಇಂದು ನಿಲ್ಲು, ನಾಳೆ ಒಟ್ಟಿಗೇ ಊಟಮಾಡಿ ಇನ್ನಷ್ಟು ಬಾಕಿ ಹೇಳಲಿಕ್ಕಿರುವ ಸುದ್ದಿಯನ್ನೆಲ್ಲಾ ಹೇಳಿಮುಗಿಸಿ ಆಮೇಲೆ ಹೊರಟರಾಯ್ತು" ಎಂಬುದು ಸೋಮಿಯ ಆಗ್ರಹ ಪೂರ್ವಕ ವಿನಂತಿ. 

"ಕೇಳು ಸೋಮಿ"-ಎಂದ ಮಾವ-"ವೇಳೆ ಪಯಣಕಿದು ಸರಿ;
ನಾಳೆಯೆನಗೆ ಶಾಲೆಯಿರುವುದದನು ತಪ್ಪಲಾಗದು.
ಮೊನ್ನೆ ರಾತ್ರಿ ಕನಸಿನಲ್ಲಿ ನಿನ್ನ ಕಂಡೆನೇತಕೋ!
ಕಣ್ಣುತುಂಬ ಕಾಣುವಾಶೆ ತಡೆಯಲಾರದಾಯಿತು.

ಇಂತಹ ಸೋದರ ಮಾವಂದಿರು ಅದೆಷ್ಟು ಮಂದಿ ಮಕ್ಕಳಿಗೆ ಸಿಕ್ಕಾರು? "ಸೋಮಿ ಇಂದು ರವಿವಾರ, ಪಯಣಕ್ಕೆ ಸರಿ ಸಮಯ, ಸೋಮವಾರ ನನಗೆ ಶಾಲೆಯಿದೆ, ಹೋಗಲೇಬೇಕು. ಮೊನ್ನೆ ಕನಸಿನಲ್ಲಿ ನಿನ್ನನ್ನು ಕಂಡೆ, ನಿನ್ನನ್ನು ಕಾಣುವಾಶೆ ಬಹಳವಾಗಿ ತಡೆಯದಾದೆ-ಅದಕ್ಕೇ ಹೀಗೆ ಬಂದೆ" ಎಂದ ಮಾವ-ತಿಮ್ಮಗುರು.

ನಿನ್ನೆ ರಜವ ಪಡೆದು ನಡೆದು ಬಂದೆನಿಂದು ರವಿದಿನ;
ತಣ್ಣನೆ ಹೊತ್ತೀಗ ಹೊರಡೆ ದಾರಿ ಬೇಗ ಸವೆವುದು.
ಕೀರುಹೊಳೆಯ ದಡದೊಳಿರುವೆ ಹತ್ತುಗಂಟೆ ಸಮಯಕೆ;
ಪಾರಣೆಯನು ಸತ್ರದಲ್ಲಿ ಮುಗಿಸಿ ದಣಿವನಾರಿಸಿ,

"ನಿನ್ನೆ ಶನಿವಾರ, ರಜವನ್ನು ಪಡೆದು, ನಡೆದು ಇಲ್ಲಿಗೆ ಬಂದೆನಪ್ಪಾ, ಈಗ ಭಾನುವಾರದ ಬೆಳಗಿನಜಾವದ ತಣ್ಣನೆಯ ವಾತಾವರಣದಲ್ಲಿ ನಡೆಯಹೊರಟರೆ ದಾರಿ ದೂರವೆನಿಸದು, ಬೆಳಗಿನ ಹತ್ತುಗಂಟೆಯ ವೇಳೆಗೆ ಕೀರುನದಿಯ ದಡವನ್ನು ಸೇರಿಬಿಡುತ್ತೇನೆ. ಅಲ್ಲಿಯೇ ಸ್ನಾನಾದಿಗಳನ್ನು ಪೂರೈಸಿ, ಛತ್ರದಲ್ಲಿ ದ್ವಾದಶಿಯ ಪಾರಣೆ ಮುಗಿಸಿಕೊಂಡು ಮುಂದಕ್ಕೆ ಸಾಗುತ್ತೇನೆ."  [ನೆನಪಿಡಿ, ಏಕಾದಶಿಯ ಉಪವಾಸದಂದು ಮಾವ ತಿಮ್ಮಗುರು ತನ್ನ ಅಳಿಯ ಸೋಮಿಯಮೇಲಿನ ಪ್ರೀತಿಗಾಗಿ, ಆತನನ್ನು ಕಾಣಲಿಕ್ಕಾಗಿ ಅದೆಷ್ಟೋ ಮೈಲಿಗಳನ್ನು ನಡೆದು ಆತನಲ್ಲಿಗೆ ಬಂದಿದ್ದ!]

ಮರಳಿ ಮೂರು ಘಂಟೆ ನಡೆದು, ಸಂಜೆಗೂರ ಸೇರುವೆ;
ಇರುವೆ ನಾಳೆ ಮಂಡುಗೆರೆಯೊಳುದಯ ಶಾಲೆವೇಳೆಗೆ."
-ಇಂತು ಹೇಳುತಡಿಯನಿಡುತ ಹೊರಟ ತಿಮ್ಮ ಮಾವನು;
ಚಿಂತೆಪಡುತ ಅಳಿಯ ಕೊಂಚ ದೂರ ಕೂಡ ನಡೆದನು.

"ಮರಳಿ ಮತ್ತೆ ಮೂರುಘಂಟೆಯ ಕಾಲ ನಡೆದು ಸಂಜೆಯ ಹೊತ್ತಿಗೆ ಊರನ್ನು ಸೇರಿಕೊಳ್ಳುವೆ. ನಾಳೆ ಸೂರ್ಯೋದಯದ ಸಮಯಕ್ಕೆ ಮಂಡುಗೆರೆಯ ಶಾಲೆಯಲ್ಲಿ ಇರುತ್ತೇನೆ" ಎಂದು ಹೆಜ್ಜೆಹಾಕತೊಡಗಿದ ತಿಮ್ಮಮಾವನ ಜೊತೆಗೆ ಸೋಮಿ ತಾನೂ ಚಿಂತೆಯಿಂದ ಒಂದಷ್ಟು ದೂರ ಹೆಜ್ಜೆ ಹಾಕಿದ.

ಬೆಳಕು ಹರಿಯೆ ವೆಸನದಿಂದ ಸೋಮಿ ನೆಲೆಗೆ ತಿರುಗಿದ;
ತಳಮಳವನು ನುಂಗಿ ಮಾವ ನಡೆದನೆರಡು ಗಾವುದ.
ಒಂದು ತಿಂಗಳಾದ ಬಳಿಕದೊಂದು ದಿವಸ ಸೋಮಿಯ
ತಂದೆಗೊಂದು ಪತ್ರ ಬಂತು, ತಿಮ್ಮಗುರುವಿನಾಶಯ.

ಬೆಳಗಾಗಿ ಬಿಟ್ಟಿತ್ತು, ನಿತ್ಯದ ಕೆಲಸಗಳ ಚಿಂತೆಯಲ್ಲಿ ವ್ಯಸ್ತನಾದ ಸೋಮಿ ತನ್ನ ನೆಲೆಗೆ ಹಿಂದಿರುಗಿದ; ಅಳಿಯನನ್ನು ಬಿಟ್ಟಿರಲಾರದ ತಳಮಳದಲ್ಲೇ ತಿಮ್ಮಗುರು ಎರಡು ಗಾವುದ ದೂರ ನಡೆದ. ಇಬ್ಬರಿಗೂ ಇದು ಕನಸೋ ಎಂಬ ರೀತಿ ಆಗಿಹೋಯ್ತು. ಅದಾದ ತಿಂಗಳೊಳಗೆ ಒಂದು ದಿನ ಸೋಮಿಯ ತಂದೆಗೆ ತಿಮ್ಮಗುರುವಿನಿಂದ  ಪತ್ರವೊಂದು ಬಂತು.

ಅದರೊಳಾತನಿಂತು ಬರೆದನೆರಗಿ ಭಾವನಡಿಯೊಳು:-
"ಇದುವೆ ನನ್ನಕಡೆಯ ಬರಹ; ತಿರುಪತಿಗಾಂ ಬಂದಿಹೆಂ;
ಎನಗೆ ಕೆಲಸ ಸಾಕೆನುತ್ತ ಮೇಲಕೆ ನಾಂ ಬರೆದಿಹೆಂ;
ಋಣದ ರೊಕ್ಕಲೆಕ್ಕವೆಲ್ಲ ಶೇಷ ಬಿಡದೆ ಸಲಿಸಿಹೆಂ;

ಅದರಲ್ಲಿ ಆತ ಹೀಗೆ ಬರೆದಿದ್ದ: "ತೀ|| ಭಾವನವರ ಅಡಿದಾವರೆಗಳಲ್ಲಿ ನಮಸ್ಕಾರಗಳು. ನೀವೆಲ್ಲರೂ ಕ್ಷೇಮವೆಂದು ಭಾವಿಸುತ್ತೇನೆ. ಇದುವೇ ನನ್ನ ಕಡೆಯ ಬರಹ. ನಾನು ತಿರುಪತಿಗೆ ಬಂದಿದ್ದೇನೆ. ನನಗೆ ಕೆಲಸ ಸಾಕೆಂದು ನನ್ನ ಮೇಲಧಿಕಾರಿಗಳಿಗೆ ಬರೆದಿದ್ದೇನೆ ಮತ್ತು ನನ್ನ ಜೀವಿತದ ರೊಕ್ಕದ ಋಣಬಾಧೆಗಳ ಲೆಕ್ಕವನ್ನು ಶೇಷ ಬಿಡದಂತೇ ಚುಕ್ತಾಮಾಡಿದ್ದೇನೆ.

ಮುಂದೆ ಹೀಗೆ ಯಾತ್ರೆ ಕಾಶಿಗೆಂದು ಮನವ ಮಾಡಿಹೆಂ.
ದುಂದುಗವೇನೆನ್ನೊಳಿಲ್ಲ; ವೆಸನಕಿಲ್ಲ ಕಾರಣಂ.
ಸೋಮಿ ಹರೆಯವಾಂತ ಬಳಿಕ ಹಗುರವಾಯಿತೆನ್ನೆದೆ.
ಸ್ವಾಮಿಕೃಪೆಯಿನವನು ಬೆಳೆದು ಸೊಗವ ಯಶವ ಗಳಿಸುಗೆ.

ಮುಂದೆ ಕಾಶೀಯಾತ್ರೆಗೆ ಹೋಗಬೇಕೆಂದುಕೊಂಡಿದ್ದೇನೆ. ದುಂದುವೆಚ್ಚವನ್ನು ಮಾಡುವ ಮನುಷ್ಯ ನಾನಲ್ಲವಾದ್ದರಿಂದ ಚಿಂತೆಗೆ ಕಾರಣವಿಲ್ಲ. ಸೋಮಿ ಇನ್ನೂ ಚಿಕ್ಕ ಹುಡುಗ ಎಂಬುದೇ ತಲೆಯಲ್ಲಿ ಬಹಳ ಕೊರೆಯುತ್ತಿತ್ತು; ಈಗಾತ ಹರೆಯದವನಾದ್ದರಿಂದ ಅದನ್ನು ನೆನೆದು ಹೃದಯ ಹಗುರವಾಯ್ತು. ಸ್ವಾಮಿ ಕೃಪೆಯಿಂದ ಆತ ಬೆಳೆದು, ಸುಖವನ್ನೂ-ಯಶಸ್ಸನ್ನೂ ಗಳಿಸಲಿ.

ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ
ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ. 
ಈಗಳವನು ತನ್ನ ಶಕ್ತಿಯಿಂದ ಬೆಳೆಯೆ ತಕ್ಕನು;
ಈಗಳೆನಗಮಂತರಾತ್ಮ ಸೇವೆಯೊಂದೆ ತಕ್ಕುದು.

ಸೋಮಿಯ ಮೇಲಿನ ಯಾವುದೋ ಮಮತೆ, ಏನೋ ಮೋಹ, ಏನೋ ಋಣಾನುಬಂಧ ನನ್ನನ್ನು ಇಷ್ಟುದಿನ ಕಟ್ಟಿಹಾಕಿತ್ತು. ಈಗ ಆತ ಸ್ವಯಂ ತಾನೇ ಬೆಳೆಯಬಲ್ಲ ಎಂಬುದು ಗೊತ್ತಾಗಿದೆ. ಅಂತರಾತ್ಮದ ಸೇವೆಗೆ-ಚಿಂತನೆಗೆ ಇದು ನನಗೆ ಸಕಾಲ.

ಇಂತಹದಿನ ಬರಲೆನುತ್ತ ಬೇಡಿಕಾಯುತಿದ್ದೆನು;
ಸಂತಸವನು ಸೋಮಿಯೇಳ್ಗೆಯಿಂದಲೀಗ ಕಂಡೆನು.
ಇನ್ನದೇನುಮಿಲ್ಲಮೆನಗೆ ಮನಸು ಬೇಳ್ಪ ಭಾಗ್ಯವು;
ಇನ್ನು ಬೇರೆ ತೋರದೀಗ ಲೋಕದಿ ಕರ್ತವ್ಯವು.

ಇಂಥಾ ದಿನಕ್ಕಾಗಿಯೇ ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಸೋಮಿಯ ಏಳ್ಗೆಯನ್ನು ಕಂಡು ಸಂತಸಪಟ್ಟಿದ್ದೇನೆ. ಮನಸು ಬೇಡುವಂಥಾ ಯಾವುದೇ ಭಾಗ್ಯದಬೇಡಿಕೆ ಎನ್ನೊಳಿಲ್ಲ, ಲೋಕದಲ್ಲಿ ಮಾಡಬೇಕಾದ ಕರ್ತವ್ಯವೂ ಬೇರೆ ಯಾವುದೂ ಕಾಣಿಸುತ್ತಿಲ್ಲ.

ಒದಗಿತೀಗಳಾಯುವ ಶಿವಸೇವೆಗೀವ ಸಮಯವು;
ಇದುವೆ ಸಮಯ ಪುಣ್ಯಯಾತ್ರೆಗಿನ್ನು ತಡವು ಸಲ್ಲದು.
ನಾನು ಮಂಡುಗೆರೆಯೊಳಿದ್ದ ಮನೆಯೊಳೊಂದು ಗೂಡಿನೊಳ್
ಏನೊ ಬರೆದ ಕಡತವೊಂದನಿರಿಸಿರುವೆನು ಗಂಟಿನೊಳ್;

ಪರಮಾತ್ಮನ ಸೇವೆಗೆ ಮಿಕ್ಕ ಆಯುಷ್ಯವನ್ನು ವಿನಿಯೋಗಿಸಲು ಇದು ತಕ್ಕುದಾದ ಸಮಯ. ಇನ್ನು ತಡಮಾಡಬಾರದು-ಪುಣ್ಯಯಾತ್ರೆ ನಡೆಸಲೇಬೇಕು. ನಾನು ಮಂಡುಗೆರೆಯಲ್ಲಿ ವಾಸವಿದ್ದ ಮನೆಯ ಗೋಡೆಯ ಗೂಡಿನಲ್ಲಿ, ಬಟ್ಟೆಯ ಗಂಟಿನಲ್ಲಿ ಏನೋ ಬರೆದ ಕಡತವೊಂದನ್ನು ಇರಿಸಿದ್ದೇನೆ.

ಸೋಮಿಯದನು ನೋಡಿ ತೆಗೆದುಕೊಳುವೊಡಂತು ಮಾಡಲಿ;
ನೀಮದಾರುಮೆನ್ನ ತುಂಬ ನೆನೆಯದಿರಿರಿ-ಮರೆಯಿರಿ.
ಪ್ರೇಮವುಕ್ಕಿ ಬೆಸನ ಕುದಿದೊಡಾಗ ದೀಪವೊಂದನು
ಸೋಮಶಿವನ ಗುಡಿಯೊಳಿರಿಸಿ ’ದೇವಗೆ ನಮೊ’ಯೆನ್ನಿರಿ.

ಸೋಮಿ, ಆ ಗಂಟನ್ನು ತೆರೆದು, ತನಗೇನಾದರೂ ಬೇಕಿದ್ದರೆ ತೆಗೆದುಕೊಳ್ಳಲಿ. ನೀವ್ಯಾರೂ ನನ್ನ ಬಗ್ಗೆ ಬಹಳ ನೆನೆಯಬೇಡಿ, ಮರೆತುಬಿಡಿ. ಮಾನವ ಸಹಜ ಪ್ರೇಮವುಕ್ಕಿ ದುಃಖವುಮ್ಮಳಿಸಿದಾಗ, ಸೋಮಶಿವನ ಗುಡಿಯಲ್ಲಿ ದೀಪವೊಂದನ್ನು ಉರಿಸಿ, ದೇವರಿಗೆ ನಮೋ ಎನ್ನಿರಿ.

ದೇವದೇವನೊಲಿದು ನಿಮ್ಮನೆಲ್ಲ ಹರಸಿ ಸಲಹುವಂ.
ಜೀವಪಥವ ಸುಗಮವೆನಿಸಿ ನಿಮ್ಮನೆಲ್ಲ ನಡಸುವಂ"

ದೇವದೇವನು ಒಲಿದು, ನಿಮ್ಮನ್ನೆಲ್ಲಾ ಹರಸಿ ಸಲಹುತ್ತಾನೆ. ಜೀವನ ಸುಗಮವಾಗಿ ಸಾಗುವಂತೇ ನಡೆಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ." --ಎಂದು ಆ ಪತ್ರ ಸಾರಿತು.

ಆಯಿತಿನಿತು ವ್ಯಾಕುಲವೀಯೋಲೆಯಿಂದ ಸೋಮಿಯ
ತಾಯಿತಂದೆಯರಿಗೆ; ಅವನ ಕಣ್ಣೊಳಶ್ರುವುಕ್ಕಿತು.
ಮಂಡುಗೆರೆಗೆ ಸೋಮಿ ಹೋಗಿ ನೋಡಿದನಾ ಕಡತವ;
ಕಂಡನದೊರಳಿನಿತು ಬಾಳ್ಗೆ ಸಲುವ ತತ್ತ್ವ ಮಥಿತವ.
ಸಖರ ತೃಪ್ತಿಗೆಂದು ಸೋಮಿಯಾಯ್ದು ಹಲವು ಬಂತಿಯ
ಲಿಖಿಸಿದ ಪಡಿಹೊತ್ತಗೆಯಿದು ಮಂಕುತಿಮ್ಮ ಕಂತೆಯ.

ಪತ್ರವನ್ನೋದಿದ ಸೋಮಿಯ ತಂದೆ-ತಾಯಂದಿರು ಅತ್ತರು, ಸೋಮಿಯ ಕಣ್ಣಲ್ಲಿ ಧಾರೆ ಧಾರೆಗಳು ಹರಿದವು. ಆದರೂ ಮಾವನ ಆಜ್ಞೆಯೋ ಎಂಬಂತೇ, ಮಾವ ಬಿಟ್ಟುಹೋದ ಕಡತದಲ್ಲಿ, ಮಾವ ತೊರೆದುಹೋದ ಆ ಮನೆಯಲ್ಲಿ ಅದೇನಿದ್ದೀತು ಎಂಬುದನ್ನು ನೋಡಹೊರಟ ಸೋಮಿಗೆ ಬಾಳಪಥಕೆ ಅನ್ವಯವಾಗಬಲ್ಲ ಬಹುವಿಧ ತತ್ತ್ವಗಳ ರಾಶಿ ರಾಶಿ ಬರಹಗಳು ಕಂಡವು. ಅವುಗಳಲ್ಲಿ ಹಲವು ಬಂತಿಯನ್ನು ಸೋಮಿ ಆಯ್ದುಕೊಂಡ, ಅವುಗಳನ್ನು ಅಕ್ಷರರೂಪಕ್ಕೆ ಅಚ್ಚಿಗೆ ಅಣಿಗೊಳಿಸಿ ಹೊತ್ತಗೆ ರೂಪದಲ್ಲಿ ಸಿದ್ಧಪಡಿಸಿಸುದೇ ’ಮಂಕುತಿಮ್ಮನ ಕಗ್ಗ’ ಎಂಬ ಕಂತೆ ಎಂದು ಸೋಮಿ ಅರ್ಥಾತ್ ಡಿವಿಜಿ ಹೇಳಿದ್ದಾರೆ! ಕಗ್ಗಗಳನ್ನು ತಾನೇ ಹೊಸೆದರೂ, ಕಗ್ಗದ ನೇಪಥ್ಯದಲ್ಲಿ ತನ್ನನ್ನು ಅಣಿಗೊಳಿಸಿದ ಸೋದರ ಮಾವನಿಗೆ ಕೃತಜ್ಞತೆ ಅರ್ಪಿಸಿವ ಸಲುವಾಗಿ ಡಿವಿಜಿ ಹೀಗೆ ಹೇಳಿಕೊಂಡರು. ಈ ಕವನವನ್ನು ನನ್ನೊಳಗೇ ನಾನು ವಾಚಿಸುತ್ತಾ ಹೀಗೆ ಈ ಲೇಖವನ್ನು ಬರೆಯುತ್ತಿರುವಾಗ ಕನಿಷ್ಠಪಕ್ಷ ಹತ್ತುಸಾರಿ ಕಣ್ಣುಗಳಿಂದ ನೀರಿಳಿಯಿತು. ಈ ಕವನದಲ್ಲಿ ಬರುವ ಎಲ್ಲಾ ಪಾತ್ರಗಳೂ ಡಿವಿಜಿಯವರ ಜೀವನದ ನೈಜ ಪಾತ್ರಗಳೇ ಆಗಿವೆ. ಕವನದಲ್ಲಿ ಕಾಣಿಸಿಕೊಂಡ ’ತಿಮ್ಮಗುರು’ ಡಿವಿಜಿಯವರ ಸೋದರಮಾವ ದಿ| ಶ್ರೀ ಗುಂಜೂರು ತಿಮ್ಮಪ್ಪನವರು. ಡಿವಿಜಿಯವರ ಅಜ್ಜಿ[ತಾಯಿಯ ತಾಯಿ] ಸಾಕಮ್ಮ.

ಒಂದು ಕಾಲಕ್ಕೆ ಶೇಕ್ದಾರ ಗುಂಡಪ್ಪನವರ ಮನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ನೂರಾರು ಜನರ ಅತಿಥಿಸತ್ಕಾರವನ್ನು ನಿತ್ಯವೂ ನಡೆಸಿದ್ದ ಸಂಸ್ಥಾನಿಕರ ಮನೆ, ಪ್ಲೇಗುಮಾರಿಯಿಂದ ಹೇಗೆ ಎಲ್ಲವನ್ನೂ ಕಳೆದುಕೊಂಡಿತು ಎಂಬ ವಿಸ್ತಾರವಾದ ಕಥೆಯನ್ನು ಡಿವಿಜಿಯವರ ’ಜ್ಞಾಪಕ ಚಿತ್ರಶಾಲೆ-೮’ ರಲ್ಲಿ[’ಜ್ಞಾಪಕ ಚಿತ್ರಶಾಲೆ’-ಒಟ್ಟೂ ಎಂಟು ಸಂಪುಟಗಳಿದ್ದು ಎಲ್ಲವೂ ಸಂಗ್ರಹಯೋಗ್ಯವಾಗಿವೆ]ಓದಿಕೊಳ್ಳಬಹುದಾಗಿದೆ. ಅನೇಕ ಉಪಕಥೆಗಳು ರಂಜನೀಯವೆನಿಸಿದರೆ, ಅಂದಿನ ಬೆಂಗಳೂರು, ಅಂದಿನ ಕರ್ಣಾಟ ದಕ್ಷಿಣಪ್ರಾಂತ, ಅಂದಿನ ಸರಕಾರ, ಅಂದಿನ ಅಧಿಕಾರಿಗಳು, ಅಂದಿನ ಸರಕಾರ-ಕಾಯ್ದೆ-ಕಟ್ಲೆಗಳ ನಡಾವಳಿ, ಅಂದಿನ ಜನರ ವ್ಯಾವಹಾರಿಕ ವೈಖರಿ, ಅಂದಿನ ಸಮಾಜದಲ್ಲೂ ಜನರಲ್ಲಿ ಇದ್ದ ಮೋಸ ಮತ್ತು ವಂಚನೆ....ಹೀಗೇ ಹಲವು ಹತ್ತು ವಿಷಯಗಳು ವೇದ್ಯವಾಗುತ್ತವೆ. ಮಗುವಾಗಿದ್ದಾಗ, ಚಿಕ್ಕ ಅಜ್ಜ ರಾಮಣ್ಣನ ಅವಿಭಕ್ತಕುಟುಂಬದ ವ್ಯವಹಾರ ನಿರ್ವಹಣೆಯ ದೇಖರೇಕಿಯಲ್ಲಿ ಸುಖವಾಗಿದ್ದ ಡಿವಿಜಿಯವರ ತಂದೆಯ ಸಂಸಾರ, ಕೇವಲ ಪ್ಲೇಗು ಬಂದು ಹೋದಮೇಲೆ ಹೇಗೆ ಎಲ್ಲವನ್ನೂ ಕಳೆದುಕೊಂಡು, ಅನ್ನವನ್ನರಸಬೇಕಾದ ಕಡುದಾರಿದ್ರ್ಯಕ್ಕೆ ಒಳಪಟ್ಟಿತು ಎಂಬುದು ತಿಳಿದಾಗ ನನ್ನಂಥಾ ಓದುಗ ಮರುಗುತ್ತಾನೆ, ಅವಧೂತರಂತಹ ವ್ಯಕ್ತಿಗೂ ಈ ಇಳೆಯಲ್ಲಿ ಅದೆಂತಹ ಕಷ್ಟವಪ್ಪಾ ಎಂದು ತನ್ನೊಳಗೇ ಉಸುರಿಕೊಳ್ಳುತ್ತಾನೆ. ಗಂಡನನ್ನು ಕಳೆದುಕೊಂಡ ಅರೆಗುರುಡು ಅಜ್ಜಿ, ಡಿವಿಜಿಯವರ ಚಿಕ್ಕ ಅಜ್ಜಂದಿರ ವಿನಂತಿಗೆ ಮಣಿದು, ಹೆಂಗಸರೇ ಗತಿಯಿಲ್ಲದ ಮನೆಗೆ ಬಂದು-ಅಲ್ಲಿ ಪ್ರತಿನಿತ್ಯ ಒಂದೂವರೆ ಮೈಲು ಸಾಗಿ ನೀರು ಹೊರುತ್ತಾ ಎಲ್ಲರನ್ನೂ ಸಲಹುವುದು, ವೆಂಕಟರಮಣಯ್ಯನವರಿಗೆ ತನ್ನ ಮಗಳನ್ನು ಕೊಟ್ಟು, ತನ್ಮೂಲಕ ಅವಿಭಕ್ತ ಕುಟುಂಬದ ಏಳ್ಗೆಗೆ ಕಾರಣಳಾಗುವುದು, ಸಾಮಾನ್ಯ ಹೆಂಗಸರು ಹೊರಬಲ್ಲ ಹೊರೆಯಲ್ಲ! ತನ್ನ ತಂದೆ-ತಾಯ್ಗಳೊಟ್ಟಿಗೇ ಇದ್ದ ಸೋದರಮಾವ, ಮದುವೆಯನ್ನೇ ಮಾಡಿಕೊಳ್ಳದೇ ಹಾಗೇ ಇದ್ದು, ಶಿಕ್ಷಕರಾಗಿ ೫೦ ವರ್ಷಗಳ ವಯಸ್ಸಿನ ವರೆಗೂ ನಡೆಸಿ, ಸಾವಿರಾರು ಜನರ ಪ್ರೀತಿಗೆ ಪಾತ್ರವಾಗಿ-ಲೋಕಕ್ಕೆ ಬೇಕಾಗಿದ್ದವರು. ಲಾಯರ್ ಶೇಷಗಿರಿಯಪ್ಪ, ಕೌಟುಂಬಿಕ ವ್ಯವಹಾರ ಚತುರ ರಾಮಣ್ಣ, ವ್ಯಸನಿಕನಾಗಿ ಬೆಳೆದ ಶೀನಣ್ಣ ಇಂತಹ ಹಲವರ ಲೋಪದೋಷಗಳನ್ನೂ ಉನ್ನತಗುಣಗಳನ್ನೂ ಕಲೆಹಾಕಿ, ಹಂಸಕ್ಷೀರ ನ್ಯಾಯದಂತೇ-ಒಳ್ಳೆಯದನ್ನು ಮಾತ್ರ ಅಳವಡಿಸಿಕೊಂಡು, ಮಿಕ್ಕಿದ್ದನ್ನು ಮರೆತು, ’ಡಿವಿಜಿ’ ಎಂಬ ಮೂರ್ತಿ ಅನಾವರಣಗೊಳ್ಳುವ ಹೊತ್ತಿಗೆ, ತಗುಲಿದ ಚಾಣದ ಏಟುಗಳು ಕಮ್ಮಿಯಲ್ಲ!  "ಊಟದ[ಅನ್ನದ ಹುಡುಕಾಟ್] ಅಲೆದಾಟ ಇರುವವರಿಗೆ ಲೇಖನಕಾರ್ಯಕ್ಕೆ ಅವಶ್ಯವಾದ ವಿರಾಮವಾದರೂ ಹೇಗೆ ದೊರೆಯಬೇಕು?" ಎಂದು ಡಿವಿಜಿ ಒಂದು ಕಡೆ ಕೇಳುತ್ತಾರೆ. ಆದರೂ, ತನ್ನ ಬದುಕಿನ ಸಕಲ ಬೇಗುದಿಗಳನ್ನು ಬದಿಗಿಟ್ಟು, ಬದುಕಿನ ಬಂಡಿಗೆ ತಾನು ತನ್ನನ್ನು ಮಾರಿಕೊಳ್ಳದೇ, ಅದರ ಸೂತ್ರವನ್ನೇ ತನ್ನ ಕಯ್ಯಲ್ಲಿ ಹಿಡಿದು ಅಗಾಧ ಕೆಲಸಗಳನ್ನು ಮಾಡಿದ ಈ ಧೀಮಂತ ವ್ಯಕ್ತಿ, "ಅದೊಂದು ಶಕ್ತಿ" ಎನಿಸಿಕೊಳ್ಳಲು ಯೋಗ್ಯ.  ಎಲ್ಲವನ್ನೂ ಮುಗಿಸಿ ಮತ್ತೆ ಡಿವಿಜಿಯವರ ಮುಕ್ತಕವೊಂದನ್ನು ನೆನೆಸಿಕೊಂಡಾಗ ಅವರು ಇದ್ದಹಾಗೇ ಬರೆದರು- ನುಡಿದಹಾಗೇ ನಡೆದರು, ನಡೆದಹಾಗೇ ನುಡಿದರು ಎಂಬುದು ಮನದಟ್ಟಾಗುತ್ತದೆ.    

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ


Thursday, February 28, 2013

ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ!

 ಚಿತ್ರಋಣ: ಅಂತರ್ಜಾಲ 
ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ! 

ವೈದ್ಯರೆದುರೇ ಮನು ಸತ್ತಾಗ ಆತನಿಗಾಗಿ ಬಹಳವಾಗಿ ಅತ್ತವಳು ರಾಜಮ್ಮ. ಆ ಕ್ಷಣದಲ್ಲಿ ರಾಜಮ್ಮನಿಗೂ ಮನುವಿಗೂ ಅಂಥಾದ್ದೇನು ಸಂಬಂಧವೆಂಬುದು ವೈದ್ಯರಿಗೂ ಅರಿಯದು! ರಾತ್ರಿ ಊಟದಹೊತ್ತು, ಸುಬ್ಬು ತಂದ ಕರೆಯನ್ನು ತಿರಸ್ಕರಿಸಿ, "ಬೆಳಿಗ್ಗೆ ಬರ್ತೀನಿಂತ ಹೇಳು" ಎಂದಿದ್ದ ವೈದ್ಯರು, ಸುಬ್ಬು ಮತ್ತೆ ತಡರಾತ್ರಿ ಬಂದು ಕರೆದಾಗ ರಾಜಮ್ಮನ ಮನೆಗೆ ಚಿಕಿತ್ಸೆಗೆ ನಡೆದುಹೋದವರು. ಆ ನಡುರಾತ್ರಿಯಲ್ಲಿ, ಸತ್ತವನ ದೇಹವನ್ನು ಬಿಟ್ಟು ಆ ಮನೆಯಲ್ಲಿ ಇದ್ದುದು ರಾಜಮ್ಮಳೊಬ್ಬಳೇ. ಅದನ್ನೇ ಗಮನಿಸಿದ ವೈದ್ಯರು ಏಕಾಂಗಿಯಾಗಿರುವ ರಾಜಮ್ಮ ಎಲ್ಲಿ ಹೆದರಿಕೊಂಡಾಳು ಎಂಬ ಮಾನವೀಯತೆಯಿಂದ ಬೆಳಗಾಗುವವರೆಗೂ ಅಲ್ಲೇ ಇದ್ದು ಮರಳುತ್ತಾರೆ. ವಾರದ ತರುವಾಯ ವೈದ್ಯರ ಹೆಸರಿಗೆ ರಾಜಮ್ಮನಿಂದ ಬಂದ ಅಂಚೆ ರಾಜಮ್ಮ-ಮನುವಿನ ಕಥೆಯನ್ನು ಬಿಚ್ಚಿಡುತ್ತದೆ! ವೇಶ್ಯೆಯ ಮಗಳಾಗಿ ತಾನು ಜನಿಸಿದ್ದು, ತಾಯಿಗಿದ್ದ ಹಣದ ವ್ಯಾಮೋಹ, "ಯಾರಿಗೂ ಹೃದಯದಲ್ಲಿಸ್ಥಾನಕೊಡಬೇಡ"ವೆಂದು ಬೋಧಿಸಿದ ತಾಯಿ, ಹರೆಯಕ್ಕೆ ಬಂದಾಗ ತನ್ನ ರೂಪಕ್ಕೆ ಮನಸೋತು ತಾಯಿಯಲ್ಲಿ ಪ್ರಸ್ತಾವಿಸಿದ ಸಿರಿವಂತರು, ಅವರಲ್ಲಿ ತನ್ನನ್ನು ಬಹುವಾಗಿ ಆಕರ್ಷಿಸಿದ ಸಿರಿವಂತರ ಮನೆಯ ಯುವಕ ಮನು, ಆತನ ಸಂಪತ್ತನ್ನೆಲ್ಲಾ ಆತ ತನಗಾಗಿ ಸುರಿದಿದ್ದು, ಆತನಿಗೆ ತನ್ನ ಹೃದಯವನ್ನು ತಾನು ಕೊಟ್ಟಿದ್ದು, ಇಬ್ಬರೂ ಪರಸ್ಪರ ಪ್ರೀತಿಸಿದ್ದು, ನಿತ್ಯವೂ ಆತ ಬಂದು ತನ್ನೊಡನೆ ಇರುತ್ತಿದ್ದುದು, ತಮ್ಮನ್ನು ಬೇರ್ಪಡಿಸಲು ತಾಯಿ ಹೇಳಿದ ಸುಳ್ಳು, ಆ ಸುಳ್ಳಿನಿಂದ ಅರೆಹುಚ್ಚನಾದ ಮನು, ಆತನನ್ನು ಹುಡುಕಿ ತೆರಳಿ ಅವನ ಸ್ಥಿತಿಗೆ ಮರುಗಿ, ಅವನೊಟ್ಟಿಗೆ ಊರು ತೊರೆದು ಯಾರಿಗೂ ಹೇಳದೇ ಈ ಊರಿಗೆ ಬಂದು ಕಳೆದಮೂರು ವರ್ಷಗಳಿಂದ ಬದುಕು ನಡೆಸಿದ್ದ ತನ್ನ ಪರಿ, ನೂರಕ್ಕೆ ನೂರು ಮೊದಲಿಂತಾಗದ ಮನುವಿನ ಬಗ್ಗೆ ತನಗಿದ್ದ ನೋವು-ತುಡಿತ ಮತ್ತು ಅವನ ಅಕಾಲಿಕ ಸಾವು, ’ಮನುಷ್ಯರೆನಿಸಿ’ ಪರಿಚಿತರಾಗಿದ್ದು ಸುಬ್ಬು ಎಂಬ ಬಾಲಕ ಮತ್ತು ವೈದ್ಯರು ಮಾತ್ರ --ಎಂಬೀ ಎಲ್ಲದರ ಚಿತ್ರಣವನ್ನು ನೋಡುವಾಗ ವೇಶ್ಯೆಯ ಮಗಳು ಅನಿವಾರ್ಯವಾಗಿ ವೇಶ್ಯೆಯೆಂದು ಗುರುತಿಸಲ್ಪಟ್ಟರೂ, ಅವಳಲ್ಲಿಯೂ ಇರಬಹುದಾದ ಮಾನವೀಯ ಆಂತರ್ಯ, ಅಲ್ಲದೇ, ಗೊಂದಲಗಳ ನಡುವೆಯೂ ಕರ್ತವ್ಯದ ಕರೆಗೆ ಓಗೊಟ್ಟ ವೈದ್ಯ ಆಕೆಯ ಕಾಗದ ತಲ್ಪಿದ ಮರುದಿನ ಸಪತ್ನೀಕನಾಗಿ ಆಕೆಯನ್ನು ಕಾಣಲು ಹೋಗುವುದು-- ಈ ಎಲ್ಲ ಅಂಶಗಳು ಕಥೆಯನ್ನು ಜೀವಂತವಾಗಿಸುತ್ತವೆ. ಚಿಕ್ಕ ಕಥೆಯೊಂದು ಕಾದಂಬರಿಗಿಂತ ಹೆಚ್ಚಿನ ಗಾಢ ಪರಿಣಾಮ ಬೀರುತ್ತದೆ. ಓದುತ್ತಿದ್ದಂತೆಯೇ ದೃಶ್ಯಗಳು ಕಣ್ಣಮುಂದೆ ಹಾದುಹೋದಾಗ ಸಿನಿಮಾ ನೋಡಿದಷ್ಟೇ ತೃಪ್ತಿ ಓದುಗರಿಗಾಗುತ್ತದೆ. ಈ ಕಥೆಯ ಹೆಸರು 'ಮನುವಿನ ರಾಣಿ'. 

ಪುರಾತನ ಜೀವನಕ್ರಮವನ್ನು ತೊರೆದು ಅಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ, ೨೦ನೇ ಶತಮಾನದ ಮೂವತ್ತರ ದಶಕದಲ್ಲಿ, ಜನಜೀವನ ಹೇಗಿತ್ತೆಂಬುದನ್ನು ಕಥೆಗಳಲ್ಲಿ ಪರೋಕ್ಷವಾಗಿ ಹೇಳುತ್ತಾ, ಅಂದಿನ ಸಮಾಜದಲ್ಲಿ ಹೆಣ್ಣಿನ ಜೀವನ ಯಾವೆಲ್ಲಾ ರೀತಿಯಲ್ಲಿ ಇರಬಹುದಿತ್ತು ಎಬುದಕ್ಕೆ ಒತ್ತುಗೊಡುತ್ತಾ, ಕಾದಂಬರಿಯ ಜಾಡಿನಲ್ಲಿ ಸಾಗುವ ಕಥೆಗಳು, ಮಧ್ಯದಲ್ಲೆಲ್ಲೋ ತಿರುವು ಪಡೆದು ಅಡ್ಡಡ್ಡ ಸಾಗಿ ಮತ್ತೆ ಬಂದು ಮುಖ್ಯಹಾದಿಯನ್ನು ಸೇರಿಕೊಳ್ಳುವುದು ಗೌರಮ್ಮನ ಕಥೆಗಾರಿಕೆಯಲ್ಲಿನ ವೈಶಿಷ್ಟ್ಯ; ಸಂಭಾಷಣೆಗಳಲ್ಲಿನ ಬಿಸುಪು ಕಥೆಗಳನ್ನು ಓದುಗರು ಇನ್ನಷ್ಟು ಮೆಚ್ಚುವಂತೇ ಮಾಡುತ್ತವೆ. ಎಳೆಯ ವಿಧವೆಯೊಬ್ಬಳು ತನ್ನನ್ನು ಮದುವೆಯಾಗಲು ತುದಿಗಾಲಲ್ಲಿ ತಹತಹಿಸಿ ನಿಂತ ವಿಧುರನಿಗೇ ಮರ್ಮಾಘಾತವಾಗುವ ಪ್ರಶ್ನೆ ಎಸೆದು ದಿಗಿಲು ಹುಟ್ಟಿಸಿ ಬಾಯಿಮುಚ್ಚಿಸಿದ್ದು ’ಪುನರ್ವಿವಾಹ’ದಲ್ಲಿದ್ದರೆ, ಇನ್ನೋರ್ವ ಹೆಣ್ಣಿನ ಕುಟುಂಬದಲ್ಲಿ ಒಡಕುಮೂಡಬಾರದೆಂಬ ವಿವೇಕದಿಂದ-ತನ್ನ ಜೀವೋತ್ಕರ್ಷದ ಆಯ್ಕೆಯನ್ನೇ ಹಿಂದಕ್ಕೆ ಜರುಗಿಸಿಕೊಂಡ ವಾಣಿಯ ಪಾತ್ರ-’ವಾಣಿಯ ಸಮಸ್ಯೆ’ಯಲ್ಲಿನ ಅತ್ಯಪೂರ್ವ ಚಿತ್ರಣ. ಪ್ರತಿಯೊಂದೂ ಕಥೆಯಲ್ಲಿ ಸಹಜಗತಿ, ನಿರ್ಭೀತ ನಡೆ, ಹೊಸತನವನ್ನು ಸ್ವೀಕರಿಸುತ್ತಾ ಹಳೆಯ ಮೌಢ್ಯಗಳನ್ನು ಪಕ್ಕಕ್ಕೆ ಸರಿಸಿ ನಿಲ್ಲುವ ಹೆಣ್ಣಿನ ಪಾತ್ರಗಳು, ಜೀವ-ಭಾವಗಳ ತಾಕಲಾಟ, ತರ್ಕ, ಅಂದಿನ ಸಾಮಾಜಿಕ ವಿದ್ಯಮಾನ ಇವೆಲ್ಲವನ್ನೂ ಮೇಳೈಸಿ ಕಟ್ಟಿಕೊಟ್ಟ ಶೈಲಿ, ಗೌರಮ್ಮನನ್ನು ಉತ್ತಮ ಕಥೆಗಾರ್ತಿ ಎನ್ನಿಸಿವೆ. ಕಥೆಗಳಲ್ಲಿ ಇರುವ ಬಹುತೇಕ  ಮಹಿಳಾ ಪಾತ್ರಗಳು ಹದಿಹರೆಯದವೇ ಆಗಿದ್ದು, ಹದಿಹರೆಯದಲ್ಲಿನ, ವಯೋಸಹಜ ಸಡಗರ, ಜೀವನೋತ್ಸಾಹ, ಮೋಜು-ಮಸ್ತಿ, ತಮಾಷೆ, ಪ್ರೀತಿ-ಪ್ರೇಮ ಎಲ್ಲವೂ ಸಹಿತ ಓದುಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ.

ಬರೆದ ಎಲ್ಲಾ ಕಥೆಗಳೂ ಒಂದಕ್ಕಿಂತ ಒಂದು ವಸ್ತು-ವಿಷಯದಲ್ಲೂ ಭಿನ್ನವಾಗಿವೆ. ಪೌರಾಣಿಕ ಕಥೆಗಳಷ್ಟೆ ಪ್ರಾಮುಖ್ಯತೆ ಪಡೆದಿದ್ದ ಆ ಕಾಲಘಟ್ಟದಲ್ಲಿ, ಕನ್ನಡದಲ್ಲಿ ಬರಹಗಾರ್ತಿಯರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು ಎನ್ನಬಹುದು. ಶ್ಯಾಮಲಾ ಬೆಳಗಾಂವ್ಕರ್, ಸರಸ್ವತೀಬಾಯಿ ರಾಜವಾಡೆ ಮತ್ತು ಕೊಡಗಿನ ಗೌರಮ್ಮ ಎಂಬೀ ಮೂವರು ಮಾತ್ರ ಬರಹಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ’ರಾಷ್ಟ್ರಬಂಧು’, ’ಜಯಕರ್ನಾಟಕ’, ’ಜಯಂತಿ’, ’ಪ್ರಜಾಮತ’, ’ಕೇಸರಿ’, ’ಕಥಾವಳಿ’ ಮತ್ತು ’ಜೀವನ’ ಮೊದಲಾದ ಪತ್ರಿಕೆಗಳಲ್ಲಿ ಇವರೆಲ್ಲರ ಬರಹಗಳು ಅದರಲ್ಲೂ ಹೆಚ್ಚಾಗಿ ಕಥೆಗಳು ಪ್ರಕಟಗೊಳ್ಳುತ್ತಿದ್ದವು. ವಿಷಯಗಳು ಹೇರಳವಾಗಿದ್ದರೂ ಅಭಿವ್ಯಕ್ತಗೊಳಿಸುವಲ್ಲಿ ಅನೇಕ ಮಹಿಳೆಯರು ಸಫಲರಾಗಿರಲಿಲ್ಲ; ಕೆಲವರಿಗೆ ಅಷ್ಟೊಂದು ಧೈರ್ಯವೂ ಇರಲಿಲ್ಲ; ಇನ್ನು ಕೆಲವರಿಗೆ ಆ ಆರ್ಥಿಕ, ಕೌಟುಂಬಿಕ ಅನುಕೂಲವಿರಲಿಲ್ಲ. ಆ ವಿಷಯದಲ್ಲಿ ಗೌರಮ್ಮ ನಿಜಕ್ಕೂ ಭಾಗ್ಯವಂತೆಯೇ ಸರಿ. ಮಡಿಕೇರಿಯಲ್ಲಿ ಆ ಕಾಲದಲ್ಲಿ ಹೆಸರುವಾಸಿ ವಕೀಲರಾಗಿದ್ದ ಎನ್.ಎಸ್. ರಾಮಯ್ಯ ಮತ್ತು ಅವರ ಪತ್ನಿ ನಂಜಕ್ಕನ ಮಗಳಾಗಿ ೧೯೧೨ ರ ಮಾರ್ಚ್ ೫ ರಂದು ಜನಿಸಿದವರೇ ಕೊಡಗಿನ ಗೌರಮ್ಮ. ಬಾಲ್ಯದಲ್ಲಿಯೇ ತಾಯಿ ಗತಿಸಿಹೋದರೂ ತಂದೆಯೇ ಆಕೆಗೆ ತಂದೆ-ತಾಯಿ ಎರಡೂ ಆಗಿ ಬೆಳೆಸಿದರು. ಅಮ್ಮನ ಪ್ರೀತಿಯನ್ನು ಜಾಸ್ತಿ ಪಡೆಯಲಾಗದಿದ್ದರೂ, ಆಗಿನ ಮನೆತನದ ಬದುಕಿನ ಬಿಗಿವಾತಾವರಣವೂ ಗೌರಮ್ಮನನ್ನು ತೀರಾ ಬಿಗಿಯಾಗಿ ಅಪ್ಪಲಿಲ್ಲ ಎಂಬುದು ವೇದ್ಯ. ಹೀಗಾಗಿ ಚಿಕ್ಕಂದಿನಲ್ಲೇ ಅವರಿವರೊಟ್ಟಿಗೆ ವ್ಯವಹರಿಸುತ್ತಾ ಬೆಳೆಯಬೇಕಾದ ಅನಿವಾರ್ಯತೆ, ಅವರ ವ್ಯಕ್ತಿತ್ವ ವಿಕಸನಕ್ಕೊಂದು ಅವಕಾಶ ಕಲ್ಪಿಸಿತು. ೧೩ನೇ ವಯಸ್ಸಿಗೇ ಅಂದರೆ ೧೯೨೫ ರಲ್ಲೇ, ತಮ್ಮ ಸಂಬಂಧಿಕರೇ ಆದ ಶುಂಠಿಕೊಪ್ಪದ ಬಿ.ಟಿ.ಗೋಪಾಲಕೃಷ್ಣಯ್ಯನವರನ್ನು ವಿವಾಹವಾದ ಗೌರಮ್ಮ, ನಂತರ ತಮ್ಮ ಬರಹಗಳಲ್ಲಿ, ವ್ಯವಹಾರಗಳಲ್ಲಿ ಶ್ರೀಮತಿ ಬಿ.ಟಿ.ಜಿ.ಕೃಷ್ಣ ಎಂದೇ ಗುರುತಿಸಿಕೊಂಡರು. ಪತ್ನಿಯ ವ್ಯಕ್ತಿತ್ವವನ್ನು ಗೌರವದಿಂದ ಕಾಣುವ ಗಂಡಂದಿರು ಆ ಕಾಲಘಟ್ಟದಲ್ಲಿ ಸ್ವಲ್ಪ ಕಮ್ಮಿಯೇ ಎನ್ನಬೇಕು. ಏನಿದ್ದರೂ ಪತಿಯ ನೆರಳಾಗಿ ಹಿಂಬಾಲಿಸಿಕೊಂಡು ಗಂಡ ಹೇಳಿದ್ದನ್ನು ಕಣ್ಮುಚ್ಚಿ ಪಾಲಿಸಿಕೊಂಡು ಹೋಗುವ ಗರತಿಯರ ಕಾಲ, ಗಂಡಂದಿರೆನಿಸಿಕೊಂಡವರು ಅಹಮಿಕೆ ಮೆರೆದ ಕಾಲ ಅದಾಗಿತ್ತು! ಆದರೂ ಬಿ.ಟಿ. ಗೋಪಾಲಕೃಷ್ಣಯ್ಯ ಮಾತ್ರ ಗೌರಮ್ಮನನ್ನು ಆ ರೀತಿ ನಡೆಸಿಕೊಳ್ಳಲಿಲ್ಲ; ಗೌರಮ್ಮ ಸ್ವತಂತ್ರವಾಗಿ ಬದುಕುತ್ತಾ, ಮನೆವಾರ್ತೆಯೊಟ್ಟಿಗೆ ಸಾಮಾಜಿಕ, ರಾಜಕೀಯ, ಕೌಟುಂಬಿಕ ಮತ್ತು ಸಾಹಿತ್ಯಕ  ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಇದು ವರದಾನವಾಯ್ತು.        

ಯಾವಕಾಲದಲ್ಲಿ ಹೆಂಗಸರು ಒಳಮನೆಯಿಂದ ಹೊರಗೆ ಗಂಡಸರೆದುರು ನಿಂತೋ ಕುಳಿತೋ ಮಾತನಾಡಲು ಹಿಂಜರಿಯುತ್ತಿದ್ದರೋ ಅದೇ ಕಾಲದಲ್ಲಿ ಗೌರಮ್ಮ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. ಪ್ರತಿನಿತ್ಯ ಟೆನಿಸ್ ಆಡುವುದು ಮತ್ತು ಈಜುವುದು ಅವರ ಹವ್ಯಾಸವಾಗಿತ್ತು. ಕನ್ನಡದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ. ಬಿ.ಎಂ.ಶ್ರೀ, ಮಾಸ್ತಿ, ರಾಜರತ್ನಂ ಇಂಥವರ ಬರಹಗಳನ್ನೆಲ್ಲಾ ಗೌರಮ್ಮ ಓದುತ್ತಿದ್ದರು. ಓದುತ್ತಾ ಓದುತ್ತಾ ಅವರೊಳಗೇ ಒಬ್ಬ ಕಥೆಗಾರ್ತಿ ಜನಿಸಿದ್ದಳು. ಸಾಮಾಜಿಕ ಶೋಷಣೆ ಮತ್ತು ಮೌಢ್ಯಗಳ ವಿರುದ್ಧ ಆ ಕಥೆಗಾರ್ತಿ ಸದಾ ಬರೆಯತೊಡಗಿದ್ದಳು! ೧೯೩೧ ರಲ್ಲಿ ಪುತ್ರೋತ್ಸವವೂ ಆಗಿ, ಮಗನಿಗೆ ’ವಸಂತ’ ಎಂದು ಹೆಸರಿಟ್ಟಿದ್ದರು. ಸಮೃದ್ಧ ಕುಟುಂಬದ ನೆಮ್ಮದಿಯ ಜೀವನ ಅವರದಾಗಿದ್ದರೂ, ತಾಯಿಯಿಲ್ಲದ ಕೊರಗು ಮಾತ್ರ ಅವರನ್ನು ಸದಾ ಬಾಧಿಸುತ್ತಲೇ ಇತ್ತು. ಮಗನಿಗೆ ಮಾತ್ರ ಆ ನೋವು ತಟ್ಟದಿರಲಿ ಎಂದು ಅವರು ಬಯಸಿದ್ದರು. ಸಮಾಜಮುಖಿ-ಬರಹಗಾರ್ತಿಯಾದ ಅವರಿಗೆ ಸ್ನೇಹಿತರ ವಿಶಾಲ ಬಳವೂ ಇತ್ತು. ಗಾಯಕಿಯಾಗಿದ್ದ ಶಕುಂತಲಾಚಾರ್, ಲೇಖಕಿಯರಾದ ಆರ್. ಕಲ್ಯಾಣಮ್ಮ, ಪದ್ಮಾವತಿ ರಸ್ತಗಿ ಮೊದಲಾದವರು ಅವರ ಸ್ನೇಹಿತರಾಗಿದ್ದು, ಮಾಸ್ತಿ, ಬೇಂದ್ರೆ, ರಾಜರತ್ನಂ ಇವರೆಲ್ಲಾ ’ಮನೆಜನ’ ಎಂಬಷ್ಟು ಬಳಕೆಯಲ್ಲಿದ್ದವರು. ಗೆಳೆಯರಲ್ಲಿ ಬಬ್ಬರಾದ ದ.ಬಾ.ಕುಲಕರ್ಣಿಯವರ ತಾಯಿಯೇ ತನ್ನ ತಾಯಿ ಎಂದು ತಿಳಿದುಕೊಂಡ ಗೌರಮ್ಮ, ಒಂದು ವರ್ಷ, ತುಲಾಸಂಕ್ರಮಣದ ಸಂದರ್ಭದಲ್ಲಿ, ಕಾವೇರಿಯ ತೀರ್ಥೋದ್ಭವದ ಹಬ್ಬಕ್ಕೆ ಬರುವಂತೇ ಅವರಿಗೆ ಕಾಗದ ಬರೆದಿದ್ದರು. ’ತಾಯಿಗೆ ಮಗಳಮನೆಗೆ ಬರಬೇಕೆಂಬ ಹಠವಿದ್ದರೂ ಅನಾರೋಗ್ಯದಿಂದ ಬರಲಾಗುತ್ತಿಲ್ಲ’ ಎಂಬ ಉತ್ತರ ದ.ಬಾ.ಕುಲಕರ್ಣಿಯರಿಂದ ಬಂದು ತಲ್ಪಿದಾಗ, "ಕಣ್ಣೆರಡೂ ಮಂಜಾಗಿ ಹೃದಯ ತುಂಬಿಬಂತು" ಎಂದು ಮತ್ತೆ ಮರಳಿ ಕಾಗದ ಬರೆದಿದ್ದರು. ಮಡಿಕೇರಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಗೌರಮ್ಮ ಹಿಂದೀ ವಿಶಾರದೆಯೂ ಆಗಿದ್ದರು. ಆಂಗ್ಲ ಭಾಷೆಯ ಬಳಕೆಯೂ ಇದ್ದು ಆಂಗ್ಲ ಸಾಹಿತ್ಯವನ್ನೂ ಸಾಕಷ್ಟು ಓದಿಕೊಂಡಿದ್ದರು. ಕುಟುಂಬದ ಹಿರಿಯರು ಅಂದಿನ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸಕ್ರಿಯ ಸದಸ್ಯರಾಗಿ ಪಾಲ್ಗೊಂಡಿದ್ದರ ಪರಿಣಾಮ, ಗೌರಮ್ಮ ರಾಜಕೀಯದಲ್ಲೂ ಆಸಕ್ತರಾಗಿದ್ದರು. ಇದು ಗೌರಮ್ಮನ ಕೌಟುಂಬಕ, ವ್ಯಾವಹಾರಿಕ, ಸಮಾಜಿಕ ಹಿನ್ನೆಲೆ.

ಕೊಡಗಿನ ಬರಹಗಾರರಿಗೆ ಅವರದ್ದೇ ಆದ ಲೋಕದಲ್ಲಿ ವಿಹರಿಸುತ್ತಾ ಬರೆದುಕೊಳ್ಳುವ ನೈಸರ್ಗಿಕ ವಾತಾವರಣ ಆಗ ಹೆಚ್ಚಿನದಾಗಿ ಇತ್ತು ಈಗಲೂ ಹಾಗೆ ಕೆಲಮಟ್ಟಿಗೆ ಇದೆ. ಅಲ್ಲಿನ ಬೆಳಗು, ಅಲ್ಲಿನ ಮಳೆಗಾಲದ ಮುಸಲಧಾರೆ-ಚಳಿಗಾಲದ ಬಿಟ್ಟೂಬಿಡದ ಚಳಿ-ಇಬ್ಬನಿಸುರಿಸುವ ಮಂಜುಮುಸುಕಿದ ವಾತಾವರಣ, ಅಲ್ಲಿನ ಕಾಫೀ ತೋಟ-ಕೆಲಸದ ಸುಗ್ಗಿ-ಕೂಲಿಯಾಳುಗಳಲ್ಲಿನ ಪ್ರೇಮ ಕಥೆಗಳು, ವಿವಿಧ ತೆರನಾದ ಹೂವುಗಳು, ಜೇನು-ದುಂಬಿ-ಕೀಟ ವೈಭವಗಳು, ವನ್ಯಮೃಗಗಳ ಅಟ್ಟಹಾಸಗಳು, ಸೂರ್ಯೋದಯ-ಸೂರ್ಯಾಸ್ತಗಳು, ನಿರ್ಜರ ಜಲಪಾತಗಳು, ಹುಟ್ಟಿ ಹರಿವ ಹಲವು ತೊರೆಗಳು, ನಿತ್ಯಹರಿದ್ವರ್ಣ ಕಾಡುಗಳ ಜೊತೆಜೊತೆಗೇ ಹಸಿರುಟ್ಟ ಗದ್ದೆ-ತೋಟ-ಸಾಗುವಳಿಮಾಡಿದ ಭೂಭಾಗಗಳು...ಹೀಗೇ ಅಲ್ಲಿನ ದೃಶ್ಯ ವೈವಿಧ್ಯ, ಅಲ್ಲಿನ ವರ್ಣ ವೈವಿಧ್ಯ ನಯನಾನಂದಕರ ಮತ್ತು ಮನೋಲ್ಲಾಸಕರ. ಅಂತಹ ಯಾವೊಂದೂ ವಿಷಯವಸ್ತುವನ್ನು ಆದಿಯಲ್ಲಿ ನೆಚ್ಚಿಕೊಳ್ಳದೇ ತೀರಾ ಬೇರೆಯದೇ ಆದ ಆಯಾಮದಲ್ಲಿ ಬರವಣಿಗೆಗೆ ತೊಡಗಿದ್ದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ವಿಷಯ. ಇಷ್ಟೇ ಅಲ್ಲ, ನಮ್ಮ ಗೌರಮ್ಮ ಸ್ವಲ್ಪ ಹಠಮಾರಿ ಕೂಡಾ; ಅಂದುಕೊಂಡಿದ್ದು ಆಗಲೇಬೇಕೆಂಬ ಜಾಯಮಾನ ಅವರದ್ದು; ತನ್ನ ನಿರ್ಧಾರದಲ್ಲಿ ತಪ್ಪಿರಲು ಸಾಧ್ಯವಿಲ್ಲಾ ಎಂಬ ದಾರ್ಷ್ಟ್ಯವೂ ಅವರಲ್ಲಿತ್ತು! ಕೊಡಗಿಗೆ ಗಾಂಧೀಜಿ ಬಂದಾಗ ವ್ಯವಸ್ಥಾಪಕರು ಅವರನ್ನು ಗುಂಡುಕುಟ್ಟಿಯಲ್ಲಿ, ಗೌರಮ್ಮನ ಮನೆಯ ಪಕ್ಕದ ಮನೆಯಲ್ಲೇ ಉಳಿದುಕೊಳ್ಳುವಂತೇ ಏರ್ಪಾಟುಮಾಡಿದ್ದು ಗೌರಮ್ಮನಿಗೂ ಗೊತ್ತಾಗಿಬಿಟ್ಟಿತ್ತು. ಗಾಂಧೀಜಿಯ ಪಾದಧೂಳಿ ತಮ್ಮ ಮನೆಗೂ ಬೀಳಲೆಂಬುದು ಅವರ ಅಪೇಕ್ಷೆಯಾಗಿತ್ತಾದರೂ ವ್ಯವಸ್ಥಾಪಕರು ಅದನ್ನು ಪುರಸ್ಕರಿಸಲಿಲ್ಲ. ತನ್ನ ಮನೆಗೆ ಗಾಂಧೀಜಿಯವರು ಬರುವುದಿಲ್ಲವೆಂಬುದನ್ನು ಕೇಳಿದಾಗಿನಿಂದ ಉಪವಾಸಕ್ಕೆ ಕುಳಿತ ಗೌರಮ್ಮನ ಈ ಸುದ್ದಿ ಗಾಂಧೀಜಿ ಉಳಿದುಕೊಂಡಿದ್ದ ಮನೆಯಲ್ಲೂ ಸದ್ದುಮಾಡಿದಾಗ, ಗಾಂಧೀಜಿ ಗೌರಮ್ಮನ ಮನೆಗೆ ಹೊರಡಲನುವಾದರು. ಅದನ್ನು ಕೇಳಿ ಸ್ವತಃ ಗೌರಮ್ಮ ತಾವೇ ಅಲ್ಲಿಗೆ ಹೋಗಿ ಗಾಂಧೀಜಿಯನ್ನು ಕರೆತಂದರು; ಅಭೂತಪೂರ್ವ ಆತಿಥ್ಯದ ಜೊತೆಗೆ ಕೊರಳಲ್ಲಿದ್ದ ಕರಿಮಣಿ[ತಾಳಿಯೊಂದನ್ನುಳಿದು ಇಡೀ ಸರವೇನೂ ಬಂಗಾರದ್ದಾಗಿರಲಿಲ್ಲ], ಓಲೆ ಮತ್ತು ನತ್ತು ಇವುಗಳನ್ನು ಬಿಟ್ಟು ಮಿಕ್ಕೆಲ್ಲಾ ತನ್ನ ಬಂಗಾರದ ಆಭರಣಗಳನ್ನು ಗಾಂಧೀಜಿಯ ಹರಿಜನ ಸೇವಾಕಾರ್ಯಕ್ಕೆ ದಾನವಾಗಿ ನೀಡುತ್ತಾ, "ಬದುಕಿನಲ್ಲಿ ಇನ್ನುಮುಂದೆ ಓಲೆ-ನತ್ತು ಎರಡನ್ನು ಬಿಟ್ಟು ಇನ್ನೇನನ್ನೂ ಇನ್ನೆಂದೂ ಧರಿಸುವುದಿಲ್ಲ"ವೆಂದು ಪಣತೊಟ್ಟರು! ಸಾತ್ವಿಕರಾದ ಗಾಂಧೀಜಿಯ ಕಣ್ಣಲ್ಲಿ ಈ ಸಂದರ್ಭದಲ್ಲಿ ಆನಂದಬಾಷ್ಪ ಉದುರದೇ ಇರಲಿಲ್ಲ. ಆದರೆ ಇದ್ಯಾವುದೂ ಗೌರಮ್ಮನವರ ಕಥೆಗಳಲ್ಲಿ ಪ್ರತಿಫಲಿಸಲಿಲ್ಲವೆಂಬುದನ್ನು ಗಮನಿಸಬೇಕು![ಇವತ್ತು ೧೦ ರೂಪಾಯಿ ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರೆಸಿಕೊಳ್ಳುವ ಜನ ಎಷ್ಟಿಲ್ಲ!] ತಾನು ಬದುಕಿದ ರೀತಿಯಿಂದಲೇ ತಾನು ಮಾದರಿ ಹೇಗೆ ಎಂಬುದನ್ನು ಗೌರಮ್ಮ ಈ ವಿಧದಲ್ಲಿ ತೋರಿಸಿಕೊಟ್ಟಿದ್ದಾರೆ.

ಬಡತನದಲ್ಲಿ ಹೊಟ್ಟೆಪಾಡಿಗಾಗಿ ಹೆಣಗಾಡುವವರಿಗೆ ಅಗ್ಗದ ಆಮಿಷ ದೊರೆತಾಗ, ಸಂದೇಹಗಳ ತಾಕಲಾಟದಲ್ಲಿ ಜಾತಿಬಿಟ್ಟು, ಮತಾಂತರಗೊಳ್ಳುವ ಮತ್ತು ಪ್ರೀತಿ-ಪ್ರೇಮ-ಪ್ರಣಯದ ಗುಂಗಿನಲ್ಲಿ ಎಲ್ಲಾಬಿಟ್ಟು ಮತಾಂತರಗೊಳ್ಳುವ ಒಂದೆರಡು ಕಥೆಗಳನ್ನು ಬರೆಯಬೇಕೆಂಬ ಇಚ್ಛೆ ಅವರದಾಗಿತ್ತು ಎನಿಸುತ್ತದೆ. ನಂತರ ಕೆಲವು ಕಥೆಗಳನ್ನು, ಕೊಡಗಿನ ನಿಸರ್ಗದ ಸುತ್ತ ಪೇರಿಸಿದ ರಮಣೀಯ ದೃಶ್ಯ ವೈಭವಗಳನ್ನೂ ಸಮೀಕರಿಸಿ ಬರೆಯುತ್ತಿದ್ದರೋ ಏನೋ. ಆದರೆ ಇಂತಹ ಅನೇಕ ಕಥೆಗಳನ್ನು ಬರೆಯುವುದಕ್ಕೆ ಅವರಿಗೆ ಅವಕಾಶವುಳಿಯಲಿಲ್ಲ. ಅರ್ಧ ಬರೆದ ಕಥೆಯ ಮಸಿ ಹಸಿಹಸಿಯಾಗಿ ಇನ್ನೂ ಹಾಗೇ ಇದ್ದಂತೆಯೇ ಈಜಲು ಹೋದ ಗೌರಮ್ಮ ಮರಳಿಬಾರದ ಲೋಕಕ್ಕೆ ತೆರಳಿದಾಗ ಅವರಿಗೆ ೨೯ ವಯಸ್ಸು. ತಮ್ಮ ಪ್ರಥಮ ಕಥಾಸಂಕಲನಕ್ಕೆ ’ಕಂಬನಿ’ ಎಂದು ಪ್ರಕಟಣಾ ಪೂರ್ವವೇ ಹೆಸರಿಸಿದ್ದ ಅವರು, ಪ್ರಕಟಿಸುವ ಜವಾಬ್ದಾರಿಯನ್ನು ದ.ಬಾ.ಕುಲಕರ್ಣಿಯವರಿಗೆ ವಹಿಸಿದ್ದರು. ’ಕಂಬನಿ’ ಹೊರಬರುವ ಮುನ್ನವೇ ಗೌರಮ್ಮ ಎಲ್ಲರ ಕಣ್ಣಲ್ಲೂ ಕಂಬನಿ ಹರಿಸಿಬಿಟ್ಟರು! ಅವರ ನಿಧನಾನಂತರ ’ಕಂಬನಿ’ ಮತ್ತು ’ಚಿಗುರು’ ಎರಡೂ ಕಥಾ ಸಂಕಲನಗಳು ಪ್ರಕಟಗೊಂಡವು. ’ಹೆಣ್ಣುಮಕ್ಕಳ ಕೃತಿ ಎಂಬ ಪೊಳ್ಳು ಸಹಾನುಭೂತಿಯ ಹೊರೆಯನ್ನು ಬಿಟ್ಟರೆ ನಮ್ಮ ಕೃತಿಗಳನ್ನು ವಿಮರ್ಶಿಸಿ ಬರೆಯುವ ಒಬ್ಬ ಪುಣ್ಯಾತ್ಮರೂ ಇಲ್ಲ’ ಎಂದು ’ರಂಗವಲ್ಲಿ’ ಕಥಾಸಂಗ್ರಹದಲ್ಲಿ [೧೯೩೭ರಲ್ಲಿ] ಅವರು ಹೇಳಿದ್ದರು. ಹಬ್ಬಕ್ಕೋ ಹುಣ್ಣಿಮೆಗೋ ಬರುತ್ತಲೇ ಇರುತ್ತಿದ್ದ ಬೇಂದ್ರೆಯವರಿಗೆ ಮುನ್ನುಡಿ ಬರೆದುಕೊಡುವಂತೇ ಕೇಳಿದ್ದರ ಪರಿಣಾಮವಾಗಿ, ಬೇಂದ್ರೆಯವರು ’ಕಟುಮಧುರ ಕತೆಗಾರ್ತಿ’ ಎಂದು ಬರೆದು ಹರಸಿದ ಮುನ್ನುಡಿ ಗೌರಮ್ಮ ಬದುಕಿರುವಾಗ ಅವರಿಗೆ ಸಿಗಲೇ ಇಲ್ಲ; ಸಿಕ್ಕಿದ್ದರೆ ಅವರು ಅದೆಷ್ಟು ಸಂತಸಪಡುತ್ತಿದ್ದರೋ ಅದನ್ನು ಪದಗಳಲ್ಲಿ ಹೇಳುವುದು ಸಾಧ್ಯವಾಗುವುದಿಲ್ಲ; ಬಾವುಕ ಜೀವಿಗಳಿಗೆಲ್ಲರಿಗೂ ಇಂತಹ ಮೆಚ್ಚುಗೆಯ ನುಡಿಗಳೇ ಬಹುದೊಡ್ಡ ಪುರಸ್ಕಾರಗಳಲ್ಲವೇ? ಗೌರಮ್ಮ ಬದುಕಿದ್ದರೆ ಈಗವರಿಗೆ ೧೦೩ ವರ್ಷಗಳ ವಯೋಮಾನ ಇರುತ್ತಿತ್ತು; ಇದ್ದ ೨೯ ವರ್ಷಗಳಲ್ಲೇ ೨೭ಕ್ಕೂ ಅಧಿಕ ಮನೋಜ್ಞ ಕಥೆಗಳನ್ನು ಬರೆದ ಗೌರಮ್ಮ ಪ್ರಾಯಶಃ ನೂರಕ್ಕೆ ನೂರು ಬಾರಿಸಿಬಿಡುತ್ತಿದ್ದರು-ಸೆಂಚುರಿ ಬಾರಿಸಿ ಜಗದ್ವಿಖ್ಯಾತಿ ಗಳಿಸಿ, ಲಾಬಿ-ಮಸಲತ್ತು ರಹಿತವಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಿದ್ದರು ಎಂಬುದು ಸಂಶಯಾತೀತ. ಶ್ರೇಷ್ಠ ಸಾಮಾಜಿಕ ಕಥೆಗಳಲ್ಲಿ ಹಲವು ಹೆಣ್ಣುಮಕ್ಕಳ ಪಾತ್ರಗಳನ್ನು ಚಿತ್ರಿಸಿದ ಕೊಡಗಿನ ಗೌರಮ್ಮ, ಕಥೆಯೊಂದಕ್ಕೆ ತಾನೇ ವಸ್ತುವಾಗಿ ಕಥೆಯಾದರು; ಕನ್ನಡ ಸಾರಸ್ವತ ಲೋಕದ ಮಿನುಗುವ ನಕ್ಷತ್ರಗಳಲ್ಲಿ ಒಂದು ನಕ್ಷತ್ರವಾದರು.        

Sunday, February 24, 2013

ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಚಿತ್ರಋಣ: ಅಂತರ್ಜಾಲ   
ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಮುದ್ಗಲ ಮಹರ್ಷಿಗಳು ನದಿ ದಾಟುವ ಅವಸರದಲ್ಲಿದ್ದಾಗ, ಗುಹನೆಂಬ ಬೆಸ್ತರವ ಹರಿಗೋಲನ್ನು ನಡೆಸುತ್ತಿದ್ದ. ಹರಿಗೋಲನ್ನೇರಿ ಕುಳಿತ ಮುದ್ಗಲರು ರಾಮನ ಕಥೆಯನ್ನು ಗುಹನಿಗೆ ತಿಳಿಸಿ, ಆತ ಲೋಕೋಪಕಾರಾರ್ಥವಾಗಿ ಜನಿಸಿದಾತ ಎಂದಿದ್ದೇ ತಡ ಮರುಕ್ಷಣವೇ ಗುಹ ರಾಮನಲ್ಲಿ ಆಸಕ್ತನಾದ. ರಾಮಧ್ಯಾನ ನಿರತನಾಗಿ ತನ್ನ ವೃತ್ತಿಗೇ ಹೋಗದೇ ಕುಟುಂಬ ನಿರ್ವಹಣೆ ಕಷ್ಟವಾಯ್ತು; ಮಡದಿ, ಓಲೆಯನ್ನೇ ಮಾರಾಟಮಾಡಿ ಹೊಟ್ಟೆತುಂಬಿಸಿಕೊಳ್ಳುವುದಕ್ಕಾಗಿ ದಿನಸಿ ತರಲು ಕಳಿಸಿದರೆ, ಕೈಗೆ ಸಿಕ್ಕ ಹಣದಿಂದ ಆತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇದ್ದ ಮಣ್ಣಿನ ರಾಮವಿಗ್ರಹವನ್ನು ಕೊಂಡುತಂದು ಗುಡಿಸಲಲ್ಲಿ ಪೂಜೆಗೆ ಇಟ್ಟ.  ಜ್ಞಾನದೃಷ್ಟಿಯಿಂದ ಇದನ್ನರಿತ ಮುದ್ಗಲರು ಮತ್ತೆ ವಾರದಲ್ಲೇ ಮರಳಲು, ಗುಹನ ಹೆಂಡತಿ ತಾನೇ ಹರಿಗೋಲು ನಡೆಸಿ ದಾಟಿಸುವುದಾಗಿ ತಿಳಿಸಿ, ಗುಹನ ವೈರಾಗ್ಯವನ್ನು ಮುನಿಗೆ ಅರುಹಲು, ಮುದ್ಗಲರು ಧ್ಯಾನಕ್ಕೆ ಕುಳಿತ ಗುಹನನ್ನೇ ಕರೆದು, ಸಂಸಾರವಂದಿಗನಾದವನು  ವೃತ್ತಿಯನ್ನೂ ನಡೆಸುತ್ತಾ ಹೇಗೆ ಅದರಲ್ಲೇ ರಾಮನನ್ನು ಆರಾಧಿಸಬಹುದು ಎಂದು ಆಜ್ಞಾಪಿಸಿ, ರಾಮ ಎಂದಾದರೊಂದು ದಿನ ಬಂದು ನಿನಗೆ ದರ್ಶನವಿತ್ತಾಗ, ರಾಮನ ಪಾದಕ್ಕಂಟಿರುವ ಧೂಳನ್ನು ತೊಳೆದು ಆಮೇಲೆ ನಿನ್ನ ತೆಪ್ಪದಲ್ಲಿ ಕುಳ್ಳಿರಿಸಿಕೋ ಎಂದು ಹೇಳಿದರು. ಅನೇಕ ತಿಂಗಳುಗಳ ತರುವಾಯ ಶ್ರೀರಾಮ, ಸೀತಾ-ಲಕ್ಷ್ಮಣರೊಡಗೂಡಿ ಅಲ್ಲಿಗೈತಂದ. ಹರಿಗೋಲನೇರಲು ಬಂದ ಮೂವರು ದಾರಿಹೋಕರನ್ನು[ರಾಮ-ಸೀತಾ-ಲಕ್ಷ್ಮಣರು ಎಂಬುದು ಗುಹನಿಗೆ ಗೊತ್ತಿಲ್ಲ] ಇನ್ನೇನು ಹರಿಗೋಲಲ್ಲಿ ಕುಳ್ಳಿರಿಸಿಬೇಕೆಂದುಕೊಳ್ಳುವಾಗ ತೆಪ್ಪದಲ್ಲಿ ತಾನು ಪೂಜಿಸುತ್ತಿದ್ದ ರಾಮ ವಿಗ್ರಹಕ್ಕೂ ಹೊರಗೆ ನೆಲದಲ್ಲಿ ನಿಂತಿರುವ ಶ್ರೀರಾಮನಿಗೂ ಹೋಲಿಕೆ ಇರುವುದನ್ನು ಗುಹ ಕಂಡ. ಪಾದದಲ್ಲಿ ಬಹಳ ಧೂಳಿದೆಯೆಂದೂ ತೊಳೆಯಲು ಅನುವುಮಾಡಿಕೊಡಬೇಕೆಂದು ರಾಮನಲ್ಲಿ ವಿನಂತಿಸಿದ! ಗುಹನೆಂದುಕೊಂಡಿದ್ದು ರಾಮ ಕಾಡಿನ ದಾರಿಯಲ್ಲಿ ಓಡಾಡುವಾಗ ಪಾದಕ್ಕೆ ಕೊಳೆ ಅಂಟಿರುವುದರಿಂದ ಅದನ್ನು ಮಹರ್ಷಿಗಳು ತೊಳೆಯಲು ಹೇಳಿದ್ದಾರೆಂದು, ಆದರೆ ಅದರ ಫಲವೇನೆಂಬುದು ಗುಹನ ಅರಿವಿಗೆ ಇರಲಿಲ್ಲ.  ಸಂತೋಷದಿಂದ ಶೀರಾಮ ಪಾದವನ್ನಿತ್ತಾಗ ಗುಹ ರಾಮಪಾದವನ್ನು ತೊಳೆದ, ಕೃತಾರ್ಥನಾದ ಆತನ ಜನ್ಮ ಜನ್ಮಾಂತರ ಪಾಪಗಳು ಆ ಕ್ಷಣದಲ್ಲೇ ನಶಿಸಿಹೋಗಿ ಮರುಜನ್ಮದಲ್ಲಿ ರಾಜೋಚಿತ ಭೋಗಭಾಗ್ಯಗಳನ್ನು ಅನುಭವಿಸುತ್ತಾ ಔನ್ನತ್ಯದೆಡೆಗೆ ಸಾಗಲು ಅದು ಕಾರಣವಾಯ್ತು, ಜೊತೆಗೆ ಈಗಿರುವ ಜನ್ಮದಲ್ಲೂ ಅವನ ಕಷ್ಟಗಳೆಲ್ಲಾ ನಿವಾರಣೆಯಾಗಿ ನೆಮ್ಮದಿಯ ಸಂಸಾರವನ್ನು ನಡೆಸಿದ. ಇದು ಶ್ರೀರಾಮನ ಅನುಗ್ರಹ!! ಇಂತಹ ಅನೇಕ ಉಪಕಥೆಗಳು ನಮ್ಮ ರಾಮಾಯಣ-ಮಹಾಭಾರತ ಕಾವ್ಯಗಳಲ್ಲಿ ಓದಸಿಗುತ್ತವೆ.      

ಒಳ್ಳೆಯದು ಎಲ್ಲಿದ್ದರೂ ಬರಲಿ ಎನ್ನುವ ಅದೆಷ್ಟೋ ಮಂದಿಗೆ ತಮ್ಮ ಕಣ್ಣೆದುರೇ ಇರುವ ಒಳ್ಳೆಯ ವಿಷಯಗಳು ಕಾಣುವುದೇ ಇಲ್ಲ. ವಿದೇಶೀ ಕವಿ-ಸಾಹಿತಿಗಳ ಬಗ್ಗೆ ಅಪಾರವಾದ ಹೊಗಳಿಕೆ ಹಾಕಿದರೆ ತಮ್ಮ ಓದಿನ ವೈಶಾಲ್ಯ ಅಲ್ಲೀತನಕವೂ ಹಬ್ಬಿದೆ ಎಂದು ಮಿಕ್ಕದ ಜನ ತಿಳಿದುಕೊಳ್ಳಲಿ ಎಂಬ ’ಹೋಡ್ ಬುದ್ಧಿವಂತರು’ ಇನ್ನು ಕೆಲವು ಜನ. ಈ ಜಗತ್ತಿನಲ್ಲಿ ರಾಮಾಯಣ ಬರೆದ ವಾಲ್ಮೀಕಿ ಮತ್ತು ಮಹಭಾರತ ಬರೆದ ವೇದವ್ಯಾಸರಂತಹ ಕವಿಗಳು ಮತ್ತೆ ಇದುವರೆಗೂ ಹುಟ್ಟಿಬರಲೇ ಇಲ್ಲ; ಆ ಕಾವ್ಯಗಳು ಬರೇ ಕಾವ್ಯಗಳಲ್ಲಾ ಈ ಭವ್ಯ ಭಾರತದ ಪೂರ್ವೇತಿಹಾಸಗಳು. ಅಲ್ಲಿ ಪ್ರತೀ ಪಾತ್ರವೂ ಬರೇ ಪಾತ್ರವಲ್ಲಾ ಜೀವಂತ ನಡೆದಾಡಿದ ವ್ಯಕ್ತಿಗಳ ವ್ಯಕ್ತಿತ್ವ ಚಿತ್ರಣ. ನೀತಿಬೋಧಕವೂ ನವರಸಭರಿತವೂ ಆದ ಇಂತಹ ಕಾವ್ಯಗಳನ್ನು ಓದುವ ಬದಲು ಯಾರೋ ಒಂದಷ್ಟು ಜನ ಬರೆದ ಕೆಲಸಕ್ಕೆ ಬಾರದ ಕಥೆ-ಕಾದಂಬರಿಗಳನ್ನಷ್ಟೇ ಓದುವುದರಿಂದ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಯಾವ ಒಳ್ಳೆಯ ಅಂಶವನ್ನೂ ಕಲಿಯಲು ಸಾಧ್ಯವಿಲ್ಲ. ಬದುಕಿಗೊಂದು ಉತ್ತಮ ಪಾಠವಾಗಬಲ್ಲ ಈ ಕಾವ್ಯಗಳ ಪ್ರತೀ ಅಧ್ಯಾಯಗಳೂ ಅರ್ಥಪೂರ್ಣ; ಯಾವುದನ್ನೂ ಬೇಡ ಅತಿಯಾಯ್ತು ಎನ್ನುವ ಹಾಗಿಲ್ಲ. ಇಬ್ಬಂದಿತನ ಯಾ ದ್ವಂದ್ವ ಎದುರಾದಾಗ ಹೇಗೆ ನಿಭಾಯಿಸಬೇಕೆಂಬುದನ್ನೂ ಇಂತಹ ಕಾವ್ಯಗಳ ಓದಿನಿಂದ ತಿಳಿದುಕೊಳ್ಳಬಹುದಾಗಿದೆ. ಈ ಕಾವ್ಯಗಳಲ್ಲಿ ಮುಖ್ಯ ಕಥಾನಕಕ್ಕೆ ಸಹಕಾರಿಯಾಗಿ ಬರುವ ಉಪಕಥೆಗಳು ರಂಜನೀಯವೂ ನೀತಿಬೋಧಕವೂ ಆಗಿದ್ದು ಒಂದೊಂದು ಕಥೆ ಒಂದೊಂದು ವಿಭಿನ್ನ ಮಜಲನ್ನೇ ತೆರೆದಿಡುತ್ತದೆ! ನವನಾಗರಿಕತೆಯ ನೆಪದಲ್ಲಿ ನವಜನಾಂಗ, "ರಾಮಾಯಣ-ಮಹಾಭಾರತಗಳು ನಿವೃತ್ತರು ಓದಿಕೊಳ್ಳಬಹುದಾದ ಕಥೆಗಳೆ"ಂದು ಪಕ್ಕಕ್ಕಿಟ್ಟಿದ್ದರಿಂದಲೂ, ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಭ್ರಷ್ಟರಾಜಕಾರಣಿಗಳು "ಅವು ಸನಾತನ ಧರ್ಮದವಾಗಿದ್ದು ಇತರ ಮತಗಳವರಿಗೆ ಅವುಗಳು ಅಡ್ಡಿಪಡಿಸುತ್ತವೆ" ಎಂಬ ಕಾರಣಗಳನ್ನು ಕೊಟ್ಟೂ, ಅವುಗಳನ್ನು ಪ್ರಾಥಮಿಕ ಪಠ್ಯಕ್ರಮದಿಂದ ತೆಗೆದುಹಾಕಿದ್ದು ಈ ದೇಶದ ಮೂಲನಿವಾಸಿಗಳ ಇಂದಿನ-ಮುಂದಿನ ಪೀಳಿಗೆಗಳು ಅನುಭವಿಸಿದ ನಿಜವಾದ ನಷ್ಟ.

ಏನನ್ನೂ ಅರಿಯದ ಜನ, ಏನನ್ನೂ ಓದದ ಜನ ಎಡಪಂಥೀಯರಾಗುತ್ತಾರೆ. ಯಾಕೆಂದರೆ ಅವರಿಗೆ ಯಾವುದೂ ಅರ್ಥವಾಗುವುದಿಲ್ಲ. ಇಲ್ಲಿ "ಕೆಳವರ್ಗದವನಾದ್ದರಿಂದ ಗುಹ ರಾಮನ ಪಾದವನ್ನು ತೊಳೆಯಬೇಕು ಎಂದು ಮಹರ್ಷಿಗಳು ಹೇಳಿದ್ದಾರೆ" ಎಂದು ಅಪಾರ್ಥಕಲ್ಪಿಸಿ ಮಾಧ್ಯಮಗಳಲ್ಲಿ ವಾದಿಸುತ್ತಾ ಕೂರುತ್ತಾರೆ! ಯಾಕೆ ಮಹರ್ಷಿಗಳು ಹಾಗೆ ಹೇಳಿದರು, ಅಲ್ಲಿಗೆ ಅವರು ಬರುವ ಔಚಿತ್ಯವಾದರೂ ಇತ್ತೇ? ಅಥವಾ ರಾಮನಾದರೂ ಅಲ್ಲಿಗೇ ಬರಬೇಕಾಗಿತ್ತೇ ಎಂಬುದರ ಬಗ್ಗೆ ಚಿಂತನೆ ನಡೆಸುವುದಿಲ್ಲ. ಇದೇ ರೀತಿ "ಮಹಾಭಾರತದಲ್ಲಿ ತುಂಡು ಭೂಮಿಗಾಗಿ ದಾಯಾದಿಗಳು ಕಾದಾಡುವಂತೇ ಮಾಡಿದ ಕೃಷ್ಣನಿಗೆ ಏನುಸಿಕ್ಕಿತು? ಲಕ್ಷಾಂತರ ಜನ ಮಡಿದು ನಂತರ ಯುದ್ಧಗೆದ್ಧ ಪಾಂಡವರು ಕೇವಲ ಕೆಲವೇ ಕಾಲ ರಾಜ್ಯಭಾರ ಮಾಡಿದರು-ಇದೆಲ್ಲಾ ಸರಿಯೇ?" ಎಂದು ಕೆಲವರು ವಾದಿಸಿದರೆ, ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವ ಮನುಷ್ಯನೇ ಅಲ್ಲವೆಂದೊ, ಸೀತೆಯನ್ನು ಮುಟ್ಟದಿದ್ದರೂ ಪರಸ್ತ್ರೀಯನ್ನು ಬಯಸಿದವ ಎಂಬ ಮಾತ್ರಕ್ಕೆ ರಾವಣನನ್ನು ವಧಿಸಲಾಯ್ತೆಂದೂ ವಾದಿಸುತ್ತಾರೆ. ಆದರೆ ಮೂಲಕಥೆಗಳ ಹಂದರದ ವಿಶಾಲ ಪರಿಕಲ್ಪನೆಯಾಗಲೀ, ಕಥೆಗಳ ಆಳಗಲಗಳಾಗಲೀ ಆಮೂಲಾಗ್ರವಾಗಿ ತಿಳಿಯದ ಅಜ್ಞಾನಿಗಳ ಅಥವಾ ಅರ್ಧ ಓದಿಕೊಂಡವರ ವಿತಂಡ ವಾದ ಇದಾಗಿರುತ್ತದೆ. ಭಾರತದ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನು ಇಂದು ಓದಿಕೊಂಡವರೆಷ್ಟು ಎಂದರೆ ಬೆರಳೆಣಿಕೆಯಷ್ಟು ಎಂದರೆ ತಪ್ಪಲ್ಲ. ಕೇವಲ ರಾವಣವಧೆಯಷ್ಟೇ ರಾಮಾಯಣವಲ್ಲ, ಕೇವಲ ಕುರುಕ್ಷೇತ್ರ ಯುದ್ಧವಷ್ಟೇ ಮಹಭಾರತವಲ್ಲ. ಆದರೆ ಚಿಲ್ಲರೆ ವಿಷಯಗಳನ್ನಷ್ಟೇ ಓದಿಕೊಂಡ ಎಡಪಂಥೀಯ ಜನ ತಮ್ಮ ಚಿಲ್ಲರೆ ಬುದ್ಧಿಯಿಂದ ಹೊರಬರಬೇಕಾದರೆ ಈ ಕಾವ್ಯಗಳನ್ನು ಪದಪದಗಳನ್ನೂ ಬಿಡದಂತೇ ಓದಿಕೊಳ್ಳಬೇಕು. ಗೋರಖ್ ಪುರ ಪ್ರೆಸ್ ನವರು ಹಿಂದಿ, ಇಂಗ್ಲೀಷ್ ಮತ್ತು ಇನ್ನಿತರ ಭಾಷೆಗಳಲ್ಲಿ ಅವುಗಳನ್ನು ಹೊರತಂದಿದ್ದಾರೆ, ವರ್ಷದಲ್ಲೇ ಕನ್ನಡದಲ್ಲೂ ಅವು ಲಭ್ಯವಾಗಲಿಕ್ಕಿವೆ. ರಾಮಕೃಷ್ಣಾಶ್ರಮದವರು ಇಂಥಾ ಮಹಾನ್ ಕಾವ್ಯಗಳ ಅರ್ಥವನ್ನು ಹೊರತಂದಿದ್ದಾರೆ, ರಾಷ್ಟ್ರೋತ್ಥಾನ ಪ್ರಕಾಶನದವರೂ ಸಹ ರಾಮಾಯಣ-ಭಾರತ ಕಥೆಗಳನ್ನು ಕನ್ನಡದಲ್ಲಿ ಮುದ್ರಿಸಿದ್ದಾರೆ. ಆದರೆ ಅವುಗಳ ಪ್ರಯೋಜನ ಪಡೆದುಕೊಂಡವರೆಷ್ಟು? ತಾವೂ ಬುದ್ಧಿಜೀವಿಗಳು, ತಮಗೂ ಎಲ್ಲಾ ಗೊತ್ತಿದೆ ಎಂದು ಪೋಸುಕೊಡುವ ಎಡಪಂಥೀಯರೇನಾದರೂ ಇವುಗಳನ್ನು ಓದಿದ್ದಾರ್ಯೇ? ಖಂಡಿತಕ್ಕೂ ಇಲ್ಲ!

ನಾವು ಪ್ರಾಥಮಿಕ ಶಾಲೆಯಲ್ಲಿ ಓದುವ ಹಂತದಲ್ಲಿ ನಮಗೆ ’ಕಥಾರೂಪ ಇತಿಹಾಸ’ವೆಂಬ ಹೊತ್ತಗೆ, ಪಠ್ಯದಲ್ಲಿರದಿದ್ದರೂ ಓದಲು ದೊರೆತಿತ್ತು. ಅದರಲ್ಲಿ ಭಾರತದ ಪ್ರಾಗೈತಿಹಾಸದ ಕಥೆಗಳೂ ಮತ್ತು ವರ್ಣಮಯ ಚಿತ್ರಗಳೂ ಇದ್ದವು. ಚಿಕ್ಕ ವಯಸ್ಸಿಗರಾದ ನಮಗೆ ತಾಟಿಕೆಯ ವಧೆಯಂತಹ ಚಿತ್ರಗಳನ್ನು ಕಣ್ಣರಳಿಸಿ ನೋಡುವುದು ಬಹಳ ಉಲ್ಲಾಸದಾಯಕವಾಗಿತ್ತು. ಮನೆಯ ಹಿರಿಯರು ರಾಕ್ಷಸರ ರಾಕ್ಷಸೀ ಕೃತ್ಯಗಳನ್ನು ತಿಳಿಸಿ ಹೇಳಿ, ಅದಕ್ಕಾಗಿ ರಾಮ ಬಾಣ ಹೊಡೆದು ಆಕೆಯನ್ನು ಕೊಂದ ಎಂದು ಅರ್ಥ ಬಿಡಿಸಿ ಹೇಳುತ್ತಿದ್ದರು. ಇವತ್ತು ಅಂತಹ ಪುಸ್ತಕಗಳು ಪಠ್ಯಗಳಲ್ಲಿರಲಿ ಶಾಲಾ ವಾಚನಾಲಯ[ಲೈಬ್ರರಿ]-ಇದ್ದರೆ ಅಲ್ಲೂ ನೋಡಸಿಗುವುದಿಲ್ಲ; ಇದಕ್ಕೆಲ್ಲಾ ಕಾರಣವೇನು ಗೊತ್ತೇ ಎಡಪಂಥೀಯತೆ. ಇಡೀ ಜಗತ್ತೇ ಭಗವದ್ಗೀತೆಯನ್ನು ’ಬೆಸ್ಟ್ ಮ್ಯಾನೇಜ್ ಮೆಂಟ್ ಬುಕ್’ ಎಂದು ಕೊಂಡಾಡಿದ್ದರೂ ಗೀತೆ ಹುಟ್ಟಿದ ಈ ನೆಲದ ನಮ್ಮ ಮಕ್ಕಳಿಗೇ ಅದನ್ನು ಬೋಧಿಸುವ ಹಾಗಿಲ್ಲ, ಅದಕ್ಕೆ ಹಿಂದೂ ಧರ್ಮಗ್ರಂಥವೆಂಬ ಹಣೆಪಟ್ಟಿ ಬರೆದ ಎಡಪಂಥೀಯ ಜನ, ರಾಜಕಾರಣಿಗಳನ್ನೂ ಸೇರಿಸಿಕೊಂಡು ರಾಜಕೀಯ ಮಾಡಿದ್ದಾರೆ! ನಮ್ಮ ಯುವ ಪೀಳಿಗೆಗೂ ಗೀತೆಯ ಬಗ್ಗೆ ಏನೂ ಗೊತ್ತಿಲ್ಲ!! ಯಾಕೆಂದರೆ ಭಗವದ್ಗೀತೆಯಲ್ಲಿ ಏನಿದೆ ಎಂಬುದನ್ನು ಅವರು ತೆರೆದು ನೋಡಿದವರೇ ಅಲ್ಲ! ಯಾರೋ ಬೇಡಾ ಎಂದು ಕೂಗುವಾಗ ಅವರಲ್ಲಿಯೂ ಕೆಲವರು ಬೇಡಾ ಎಂದು ಕೂಗುತ್ತಾರೆ. ಬರಿದೇ "ಬೇಡಾ" ಎನ್ನುವ ಸಮೂಹ ಸನ್ನಿಗೆ ಒಳಗಾಗುವ ಬದಲು ಯುವಪೀಳಿಗೆಯ ಜನ ಆಂಗ್ಲ ಮಾಧ್ಯಮದಲ್ಲಿ ಅನುವಾದಗೊಂಡ ಗೀತೆಯನ್ನಾದರೂ ಓದಿ ತಿಳಿಯಲು ಪ್ರಯತ್ನಿಸಬಹುದಿತ್ತು-ಆದರೆ ಅದು ಅವರ್ಯಾರಿಗೂ ಬೇಕಾದಹಾಗೆ ಕಾಣಿಸಲಿಲ್ಲ! ಯುವ ಪೀಳಿಗೆಯಲ್ಲಿನ ಸಾಫ್ಟ್ ವೇರ್ ತಂತ್ರಜ್ಞರಲ್ಲಿ ವಿಚ್ಛೇದನಗಳು ಯಾಕೆ ಹೆಚ್ಚುತ್ತಿವೆ ಎಂಬುದರ ಬಗ್ಗೆ ಅವರು ಚಿಂತನ-ಮಂಥನ ನಡೆಸಿಕೊಂಡಿದ್ದರೆ ಅಲ್ಲಿ ಗೀತೆಯ ಪ್ರಸ್ತುತಿ ಕಾಣುತ್ತಿತ್ತು!! ಕೈಲಾಗದೇ ಸೋತರೆ, ಜಾಬು ಕಳೆದುಕೊಂಡು/ಉದ್ಯಮದಲ್ಲಿ ನಷ್ಟ ಅನುಭವಿಸಿ ದಿಗ್ಮೂಢರಾದರೆ, ವಾಸಿಯಾಗದ ಕಾಯಿಲೆಗಳಿಂದ ಬಳಲುವ ಪ್ರಸಂಗ ಎದುರಾದರೆ ಅಲ್ಲಿ ಗೀತೆಯ ಮಹತ್ವ ಬೆಳಕಿಗೆ ಬರುತ್ತದೆ.    

ರಾಮಾಯಣ-ಮಹಾಭಾರತಗಳನ್ನು ಹಿಂದಕ್ಕೆ ಮನೆ ಮನೆಗಳಲ್ಲಿ ಪೂಜಿಸಿ, ವಾಚಿಸಿ, ಸಪ್ತಾಹಗಳನ್ನು ನಡೆಸುತ್ತಿದ್ದರು. ಇಂದು ಅಂತಹ ಪೂಜನೀಯ ಕೆಲಸಗಳು ನಡೆಯುವುದಿರಲಿ, ವಾಚಿಸುವ ಗಮಕಿಗಳೂ ಇಲ್ಲ, ಕೇಳಲು ಆಸೆಪಡುತ್ತಿದ್ದ ಶ್ರೋತ್ರವರ್ಗವೂ ಇಲ್ಲ. ನವರಸಗಳು ತುಂಬಿದ ಪದ್ಯಗಳನ್ನು ನವರಸ ಭಾವ ಪೂರಿತವಾಗಿ, ರಾಗಪೂರಿತವಾಗಿ ಗಮಕಿಗಳು ಹಾಡಿದಾಗ, ವಿದ್ವಾಂಸರು ಅರ್ಥವಿವರಿಸಿದಾಗ, ಅದೆಂತಹ ಅನನ್ಯ ಅನುಭವ ಗೊತ್ತೇ? ನಮ್ಮ ಜೀವನದ ಕುಂದುಕೊರತೆಗಳನ್ನು ಕಾವ್ಯಗಳಲ್ಲಿನ ಪಾತ್ರಗಳೂ ಅನುಭವಿಸಿದ್ದವು ಎಂಬುದರ ಜೊತೆಗೆ ಎದುರಾದ ಸಮಸ್ಯೆಗಳನ್ನು ಅವರು ಹೇಗೆ ನಿಭಾಯಿಸಿದರು ಎಂಬುದನ್ನು ತಿಳಿದಾಗ ಮನಸ್ಸು ನಿರಾಳವಾಗುತ್ತಿತ್ತು. ಮನಸ್ಸಿಗೆ ದುರಹಂಕಾರದ ಮೋಡ ಕವಿಯುತ್ತಿರಲಿಲ್ಲ. ಜೀವನದಲ್ಲಿ ಅತಿಯಾಸೆ-ಕೊಳ್ಳುಬಾಕತನ ಮೈಗೂಡುತ್ತಿರಲಿಲ್ಲ, ಹಾಸಿಗೆ ಇದ್ದಷ್ಟೇ ಕಾಲುಚಾಚುವ ಮನೋವೃತ್ತಿ ಬೆಳೆದು, ಒಂದೇ ಒಂದು ದಿನವೂ ಎದೆನೋವಾಗಲೀ ಹೃದ್ರೋಗವಾಗಲೀ, ಮಧುಮೇಹ-ಅಧಿಕರಕ್ತದೊತ್ತಡವಾಗಲೀ ಕಾಣಿಸಿಕೊಳ್ಳುತ್ತಿರಲಿಲ್ಲ! ಇದನ್ನೆಲ್ಲಾ ಹೇಳಿದರೆ ಅಸಡ್ಡೆಮಾಡುವ ಇಂದಿನ ಜನರಿಗೆ, ಆ ಗಾಳಿ ತಾಗದಿರುವುದಕ್ಕೆ ಸರಕಾರದ ’ತ್ಯಾಜ್ಯ ವಿಲೇವಾರಿ’ಪದ್ಧತಿಯ ಶಿಕ್ಷಣವೇ ಕಾರಣ ಎನ್ನಬಹುದಾಗಿದೆ. ಯಾವುದು ಜೀವನಕ್ಕೆ ಪ್ರಮುಖವಾಗಿ ಬೇಕೋ ಅಂಥಾದ್ದೇ ಪಠ್ಯಕ್ರಮದಲ್ಲಿ ಇರುವುದಿಲ್ಲ, ಯಾವುದು ಬೇಡದ ತ್ಯಾಜ್ಯವೋ ಅಂಥಾದ್ದನ್ನೆಲ್ಲಾ ತುಂಬಿಸಿದ ಪಠ್ಯಕ್ರಮವನ್ನು ನಾವಿಂದು ನಮ್ಮ ಮಕ್ಕಳಿಗೆ ಬೋಧಿಸುತ್ತಿದ್ದೇವೆ, ಇದು ಈಗಲ್ಲಾ ನಾವು ಚಿಕ್ಕವರಿರುವಾಗಿನಿಂದ ಅಂದರೆ ಸುಮಾರು ೨೮ ವರ್ಷಗಳ ಹಿಂದೆಯೇ ಆರಂಭವಾಯ್ತು!

ಹೋಗಲಿಬಿಡಿ, ನಮ್ಮಂಥಾ ಕೆಲವು ಆಸಕ್ತರು ಸ್ವಾಧ್ಯಾಯದಿಂದ ಅನೇಕ ವಿಷಯಗಳನ್ನು ಅರಿತೆವು, ಓದಿಕೊಂಡೆವು. ಆದರೆ ಇಂದಿನ ಮಕ್ಕಳಿಗೆ ಅದೂ ಕೂಡ ಲಭ್ಯವಾಗದೇ ಹೋಗಬಹುದು, ಓದುವ ಗೀಳೇ ಇರದಿರಬಹುದು. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಬರಬೇಕಿದ್ದರೆ, ನಮ್ಮ ಮಕ್ಕಳು ಸುಲಲಿತ ಜೀವನ ಕ್ರಮವನ್ನು ಅನುಸರಿಸಬೇಕಿದ್ದರೆ ಅವರಿಗೆ ಖಾಸಗಿಯಾಗಿ ನಾವು ರಾಮಾಯಣ-ಮಹಾಭಾರತಗಳನ್ನು ಬೋಧಿಸಬೇಕು. ಬಿಡುವಿನಲ್ಲಿ, ಶಾಲಾರಜಾದಿನಗಳಲ್ಲಿ ಆ ಕೆಲಸ ನಡೆಯಬೇಕು. ನಮ್ಮ ಮಕ್ಕಳು ಪಠ್ಯಕ್ರಮದಲ್ಲಿ ’ಆರ್ಯರು ಭಾರತಕ್ಕೆ ಬಂದರು’ ಎಂಬಂಥಾ ತಿರುಚಿದ ಇತಿಹಾಸವನ್ನು ಓದುತ್ತಿದ್ದಾರೆ; ಇದು ಸರಿಯಲ್ಲ. ಆರ್ಯರು ಭಾರತಕ್ಕೆ ಬರಲಿಲ್ಲ, ಬದಲಾಗಿ ಭಾರತ ಆರ್ಯರದ್ದೇ ಆಗಿದೆ, ಇಲ್ಲಿ ಆರ್ಯರು-ದ್ರಾವಿಡರು ಎಂಬ ಭೇದ ಇರಲಿಲ್ಲ, ಅದನ್ನು ಹುಟ್ಟಿಸಿದವರು ಬ್ರಿಟಿಷರು. ಸನಾತನಿಗಳನ್ನು ದಾರಿ ತಪ್ಪಿಸಿದವರು ಮ್ಲೇಚ್ಛರು. ಪರಕೀಯರ ಅಟ್ಟಹಾಸದಿಂದ ನೊಂದ ಸನಾತನಿಗಳಿಗೆ ಈಗ ಪಠ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ತಮ್ಮದೇ ಆದ ನಿಜವಾದ ಇತಿಹಾಸವನ್ನು ಬೋಧಿಸುವ ಹಾಗಿಲ್ಲ-ಕಲಿಯಲು ಅವಕಾಶವಿಲ್ಲ! ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರೆಂದರೆ ಚಾಚಾ ನೆಹರೂ ಎಂಬಲ್ಲಿಂದ ಹೇಳುತ್ತಾರೆಯೇ ಹೊರತು ಸುಭಾಸ್ ಚಂದ್ರ ಬೋಸರು ಸ್ವಾತಂತ್ರ್ಯಾ ನಂತರವೂ ಬದುಕಿದ್ದ ಬಗ್ಗೆ ನಮಗೇ ಅರಿವಿರಲಿಲ್ಲ, ಇನ್ನು ಅವರಿಗೆ ಹೇಗೆ? ಭಗತ್ ಸಿಂಗ್, ಮಂಗಲಪಾಂಡೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ವೀರ ಸಾವರ್ಕರ್ ಇಂತಹ ಅನೇಕರ ಬಗ್ಗೆ ಇಂದಿನ ಪಠ್ಯಕ್ರಮದಲ್ಲಿ ಅಳವಡಿಸಲ್ಪಟ್ಟ ಇತಿಹಾಸ ಏನನ್ನೂ ಹೇಳುವುದಿಲ್ಲ. ನಿಜದ ಅರಿವಿಲ್ಲದವರಿಗೆ ದೇಶಭಕ್ತಿಯಾದರೂ ಎಲ್ಲಿ ಮೂಡೀತು? ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬ ಪ್ರಜ್ಞೆ ಹೇಗೆ ಬೆಳೆದೀತು?

ಸನಾತನಿಗಳಲ್ಲಿ ನನ್ನದೊಂದು ವಿನಂತಿ ಈ ರೀತಿ ಇದೆ: ನಮ್ಮ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನೂ ಜೊತೆಗೆ ಭಾರತದ ನಿಜವಾದ ಇತಿಹಾಸವನ್ನೂ ನಮ್ಮ ಮಕ್ಕಳಿಗೆ ರಜಾದಿನಗಳಲ್ಲಿ ಬೋಧಿಸುವಂತೇ ಅನುಕೂಲ ಕಲ್ಪಿಸಿಕೊಡಿ. ಅದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಆದಷ್ಟು ಒದಗಿಸಿ. ಸಂಘಗಳು ತಮ್ಮ ಶಾಖೆಗಳಲ್ಲಿ ಈ ಕೆಲಸವನ್ನು ಮಾಡುವಂತಾದರೆ ಬಹಳ ಒಳ್ಳೆಯದು. ಚಳಿಗಾಲದಲ್ಲಿ[ಅಕ್ಟೋಬರ್-ಡಿಸೆಂಬರ್ ಪ್ರಾದೇಶಿಕ ರಜಾದಿನಗಳಲ್ಲಿ ನೋಡಿಕೊಂಡು] ಮತ್ತು ಬೇಸಿಗೆಯಲ್ಲಿ ಈ ಬೋಧನಾಕ್ರಮವನ್ನು  ಶಿಬಿರಗಳ ಮೂಲಕ ಆಯೋಜಿಸಬೇಕು. ಬಂದ ಮಕ್ಕಳಿಗೆ ಉಚಿತವಾದ ಕೊಡುಗೆಗಳನ್ನು ಉಳ್ಳವರು ಕೊಡಲು ಮುಂದಾಗಬೇಕು. ಊಟ-ತಿಂಡಿ-ವಸತಿ ವ್ಯವಸ್ಥೆಯ ಜೊತೆಗೆ ಯೋಗ-ವ್ಯಾಯಾಮ-ಪ್ರಾಣಾಯಾಮಗಳನ್ನೂ ಸೇರಿಸಿ ವಾರ ಅಥವಾ ತಿಂಗಳದಿನ ಇಂತಹ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಅಲ್ಲಲ್ಲಿಯ ಭಾಷೆಗಳಲ್ಲಿಯೇ ನಡೆಸಬೇಕು. ನಮ್ಮ ಮುಂದಿನ ಜನಾಂಗ ಎಡಪಂಥೀಯವಾಗಿ ಬೆಳೆಯಬಾರದು, ಅವರಿಗೆ ಅಜ್ಞಾನ-ಅವಿದ್ಯೆ-ಅಧ್ಯಾಸಗಳೆಂಬ ಮೋಡ ಕವಿಯಬಾರದು. ಅವರು ನೀತಿವಂತರಾಗಿ, ಉತ್ತಮ ರೀತಿ-ರಿವಾಜು ಉಳ್ಳವರಾಗಿ ಬೆಳೆಯಬೇಕು. ಜೊತೆಗೇ ದೇಶಭಕ್ತಿಯೂ ಸನಾತನತೆಯೂ ಮೈಗೂಡಬೇಕು. ಈ ಕೆಲಸವನ್ನು ಸರಕಾರವಂತೂ ಮಾಡುವುದಿಲ್ಲ ಏಕೆಂದು ಮೊದಲೇ ಹೇಳಿದ್ದೇನಲ್ಲಾ! ಸರಕಾರ ಮಾಡದ ಈ ಉನ್ನತ ಕೆಲಸವನ್ನು ನಾವು ಸನಾತನ ಭಾರತೀಯರು ಮಾಡಬೇಕು. ತನ್ಮೂಲಕ, ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು. ಇದಕ್ಕೆ ದೇಶಭಕ್ತರ ಸಹಕಾರವನ್ನು ಕೋರುತ್ತೇನೆ, ಸಂಬಂಧಿಸಿದ ಸಂಘಟನೆಗಳ-ಶಾಖೆಗಳ-ಪದಾಧಿಕಾರಿಗಳ ಸಹಕಾರವನ್ನು ಕೋರುತ್ತೇನೆ, ಧನ್ಯವಾದಗಳು.