ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 8, 2013

ಶಿಕ್ಷಕ ಅಂದು-ಇಂದು

ಶಿಕ್ಷಕ ಅಂದು-ಇಂದು
[ದಯವಿಟ್ಟು ಗಮನಿಸಿ: ಇಂದಿನ ದಿನಮಾನದಲ್ಲಿ ಶಿಕ್ಷಕರಲ್ಲೂ ಎಡಪಂಥೀಯರು ತಯಾರಾಗಿದ್ದಾರೆ; ಸರಕಾರೀ ಶಾಲೆ-ಕಾಲೇಜುಗಳಲ್ಲಿ ಅವರದ್ದೇ ಮೇಲುಗೈ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ಎಂಬುದು ಕನಸಿನ ಮಾತು. ಉತ್ತಮ ಶಿಕ್ಷಕರು ಇಲ್ಲವೆಂದಲ್ಲ, ಅವರಿಗೆ ಪ್ರಾಧಾನ್ಯತೆ ಸಿಗುವುದಿಲ್ಲ. ಶಿಕ್ಷಕ ಮಿತ್ರರೂ ಬಂಧುಗಳೂ ಇದ್ದೀರಿ-ಇದು ಎಲ್ಲರಿಗೂ ಅನ್ವಯವಲ್ಲ ಎಂಬುದನ್ನು ತಮ್ಮಗಳ ಗಮನಕ್ಕೆ ತರುತ್ತಿದ್ದೇನೆ. ಉತ್ತಮ ಶಿಕ್ಷಕರಿಂದ ಕ್ಷಮೆಯಿರಲಿ. ]


[ಚಿತ್ರಗಳ  ಋಣ : ಅಂತರ್ಜಾಲ]
ಶಿಕ್ಷಕ ಅಂದು

ಅರಿತು ತನ್ನೊಳಗಷ್ಟು ಓದುತ್ತ ಗ್ರಂಥಗಳ
ಬೆರೆತು ಸುಜ್ಞಾನಿಗಳೊಡನಾಡಿ ಕಲಿಯುತಲಿ
ಪರಿತಪಿಸಿ ಚಿಂತಿಸುತ ಗಹನವಿದ್ಯೆಗಳನ್ನು
ನುರಿತನಾದವ ಗುರುವು | ಜಗದಮಿತ್ರ 

ಹಂಬಲಿಸಿ ಹಲವು ಹೊತ್ತಗೆಗಳನ್ ಹಗಲಿರುಳು
ತುಂಬಿಸುತಲಾಮನಕೆ ಆಯ್ದ ಸಂಗತಿಯ
ನಂಬಿಬಂದಿಹ ಶಿಷ್ಯ-ವಿದ್ಯಾರ್ಥಿಗಣಕಿಷ್ಟು
ಇಂಬುಗೊಡುವನು ಗುಣಕೆ | ಜಗದಮಿತ್ರ

ಹಳೆಯ ದಿರಿಸಲೆ ತನ್ನ ಬಡತನವ ಮರೆಮಾಚಿ
ಹೊಳೆಯುತಿದ್ದಾವ್ಯಕ್ತಿ ಜ್ಞಾನಮಂಟಪದೊಳ್
ಕಳೆಕಳೆಯ ತೇಜಸ್ಸು ಓಜಸ್ಸು ಪರಿಪಕ್ವ
ಬೆಳೆತೆಗೆದ ಮುಖವಗಲ | ಜಗದಮಿತ್ರ

ಮರದಡಿಗೊ ಮಂದಿರದ ಚಾವಡಿಯಲಲ್ಲೆಲ್ಲೊ
ಸ್ಥಿರಗೊಳಿಸಿ ತನುಮನವ ಕುಳಿತು ಬೋಧಿಸುವ
"ಹರವಾದ ಹರಿವಾಣವೀಭೂಮಿ ವೈಶಾಲ್ಯ 
ತೆರೆದಷ್ಟು ತಿರೆ ಗೂಢ " | ಜಗದಮಿತ್ರ  

ಅರ್ಥಚಿಂತನೆಯಲ್ಲಿ ಸಮಯ ವ್ಯಯಿಸದೆ ಇಹದಿ
ವ್ಯರ್ಥ ಜೀವನವೆಂದು ವೃತ್ತಿ ಹಳಿಯದಲೆ
ಪಾರ್ಥಗಂ ಭಗವಂತ ಗೀತೆ ಪೇಳಿದರೀತಿ
ಸಾರ್ಥಕವು ಗುರುತನವು | ಜಗದಮಿತ್ರ  



ಶಿಕ್ಷಕ ಇಂದು

ಮಸ್ತಕವ ವಸ್ತುಗಳಿಂ  ಕಸದತೊಟ್ಟಿಯ ಮಾಡಿ
ಪುಸ್ತಕಗಳೇಕಿನ್ನು ಸಾಕೆಂದು ಬಗೆದು
ವಾಸ್ತವದಿ ಕಡುಮೂರ್ಖ ಉದರಪೋಷಕ ವೇಷ!
ಜಾಸ್ತಿಯೋದದ ಧನಿಕ | ಜಗದಮಿತ್ರ    

ದಿನವಿಡೀ ತಿರುಗುತ್ತ ತರಗತಿಗೆ ಶಾಸ್ತ್ರಕ್ಕೆ!
ಕನವರಿಸಿ ಹಣರಾಶಿ ಮುಂಭಡ್ತಿಗಳನಂ 
ತನುಕೊಡಹಿ ದೂರವಾಹಿನಿ ನೋಳ್ಪ ನಿಶೆಯಲ್ಲಿ
ಕನಸಿಗನು ರಸಿಕಮಣಿ | ಜಗದಮಿತ್ರ

ಹೊಸಹೊಸಾ ಬಟ್ಟೆಗಳು ಅತ್ತರು ಸುಗಂಧಗಳು
ನಸುಕಿನಿಂದಲೆ ಮೊಳಗ್ವ ಚರವಾಣಿ ಕರೆಗಳ್ !
ಕಸುವಿಟ್ಟು ತೆರೆಳುವನು ಶಾಸಕರ ಸದನಕ್ಕೆ
ವಿಷಯ: ವರ್ಗಾವರ್ಗಿ | ಜಗದಮಿತ್ರ

ಮೂರು ಅಕ್ಷರವಿಲ್ಲ ನಾಲಿಗೆಯ ಸೀಳಿದರೆ
ನಾರುವುದು ನಾಲಿಗೆಯು ವಿಷಯ ವಾಸನೆಯಿಂ
ದೂರಿದರೆ ಕಾರುವನು ಖಾರ ಕೆಂಡದ ಅಗುಳು
ಜಾರುವನು ಶಿಕ್ಷಕನೆ? ಜಗದಮಿತ್ರ   

ಅರಿವು ಮೊದಲೇ ಇಲ್ಲ ರೀತಿ-ನೀತಿಗಳಿಲ್ಲ
ಬರೆದ-’ಪದವಿ’ಗಳಷ್ಟೆ ಅರ್ಹತೆಯು ಅವಗೆ !
ಧರೆಯ ದುಃಖದ ಗೊಡವೆ ಮರೆತ ನಾಸ್ತಿಕವಾದ
ದೊರೆತನಕೆ ಮಿಗಿಲುಂಟೆ?  ಜಗದಮಿತ್ರ  

Saturday, March 2, 2013

ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ

ಚಿತ್ರಋಣ: ಅಂತರ್ಜಾಲ 
ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ
ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ 

ಇದೊಂದು ಪುಣ್ಯ ಕಥೆ; ಜೀವನ ಕಥೆ, ಮಂಕುತಿಮ್ಮನ ’ಕಗ್ಗದ ಕಥೆ’ಯ ಹಿಂದಿನ ಕಥೆ! ಕುತೂಹಲದ ಬಿಸಿಲ ಬೇಗೆಯಲ್ಲಿ ಬಳಲಿದವರ ತೃಷೆಗೆ ತಂಪೆರೆದು ಪೋಷಿಸುವ, ಹಸಿದ ಮನಗಳನ್ನು ಹೊತ್ತುಬರುವ ನನ್ನಂತಹ ಸಾವಿರಾರು ಹಾದಿಹೋಕರಿಗೆ, ಜ್ಞಾನಸುಖದ ಮೃಷ್ಟಾನ್ನವನ್ನು ಉಣಬಡಿಸುವ, ನಿತ್ಯ ಜ್ಞಾನದಾಸೋಹಿ, ಶತಾವಧಾನಿ ಋಷಿ ರಾ. ಗಣೇಶರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು; ಮುಪ್ಪಿನ ಅಮ್ಮನ ಸೇವೆಯಲ್ಲಿ ಕಳೆದ ಎಂಟುವರ್ಷಗಳಿಂದ ತನ್ನನ್ನು ಸಮರ್ಪಿಸಿಕೊಂಡು, ಜೀವನಾವಧಾನಗಳ ವಿಭಿನ್ನ ಘಳಿಗೆಗಳಲ್ಲಿ ನಮ್ಮಂಥವರ ವಿಭಿನ್ನ-ವಿಚಿತ್ರ ಕರೆಗಳನ್ನು ಮನ್ನಿಸಿ ಸಮಸ್ಯಾಪೂರಣ-ಪರಿಹಾರ ಒದಗಿಸುವ ಅವರ ಈ ಕಾರ್ಯಕ್ಕೆ, ನಿತ್ಯ ಸಾವಿರ ಹಸಿದ ಹೊಟ್ಟೆಗಳಿಗೆ ಪುಷ್ಕಳ ಭೋಜನ ನೀಡಿದ ಸತ್ಕಾರದ ಸುಕೃತಫಲ ಪ್ರಾಪ್ತವಾಗಲೆಂದು ಹಾರೈಸುತ್ತೇನೆ. ಕಾಲಾನುಕಾಲದಲ್ಲಿ ಋಷಿಗಳು ವಿಭಿನ್ನರೂಪದಲ್ಲಿ ನಮ್ಮ ಮಧ್ಯೆಯೇ ಇರುತ್ತಾರೆ; ಆದರೆ ನಾವು ದೇವರೆಲ್ಲಿ, ಋಷಿಗಳೆಲ್ಲಿ ಎಂದು ಹುಡುಕುತ್ತಿರುತ್ತೇವೆ. ನಮ್ಮಲ್ಲೇ ಇರುವ ದೇವರನ್ನೂ ನಮ್ಮೊಡನೆಯೇ ಇರುವ ಋಷಿಗಳನ್ನೂ ನಾವು ಕಾಣದಾಗುವುದು ನಮ್ಮ ಮತಿಗೆ ಮುಸುಕಿದ ಮಾಯೆಯಾಗಿದೆ! ಕಾಡಿನಲ್ಲಿ ತರುಗಳ ತಲದಲ್ಲಿ ದೀರ್ಘಕಾಲ ತಪೋನಿರತಾಗಿ ಲೋಕೋಪಕಾರವನ್ನು ಬಯಸುತ್ತಿದ್ದ ಋಷಿಗಳು ಹಿಂದಕ್ಕೆ ಇದ್ದರು. ಅಂತಹ ಋಷಿಗಳೇ ಆಗಾಗ ಆಗಾಗ ಮತ್ತೆ ಮತ್ತೆ ಸಹಜ ಮಾನವ ರೂಪಧರಿಸಿ, ನಮ್ಮ ನಡುವೆಯೇ ಇದ್ದು, ಈ ಲೋಕದ ಎಲ್ಲಾ ಆಗುಹೋಗುಗಳನ್ನೂ ಸಹಿಸಿಯೂ ತಾವು ಬೇರೆ ಎಂಬುದನ್ನು ತಮ್ಮ ವಿಶಿಷ್ಟ ಶಕ್ತಿ-ಸಾಮರ್ಥ್ಯದಿಂದ ಸಾಬೀತುಪಡಿಸುತ್ತಾರೆ; ಆದರೆ ತಾವು ಬೇರೆ ಎಂದು ಅವರೆಂದೂ ಹೇಳಿಕೊಳ್ಳುವುದಿಲ್ಲ!  ಅಂತಹ ಋಷಿಸದೃಶ ಜೀವನ ನಡೆಸಿದ/ನಡೆಸುತ್ತಿರುವ ಕೆಲವರನ್ನು ಹೆಸರಿಸಬಹುದಾದರೆ ಅವರಲ್ಲಿ ಡಿವಿಜಿ ಒಬ್ಬರು ಇನ್ನೊಬ್ಬರು ನಮ್ಮ ಕಣ್ಣಮುಂದೆ ಇರುವ ರಾ. ಗಣೇಶರಾಗಿದ್ದಾರೆ; ಇದು ನನ್ನ ಅಂತರಂಗ ಹೇಳಿದ ಮಾತೇ ವಿನಃ ಯಾವುದೋ ಲಾಭಕ್ಕಾಗಿ ಮಾಡಿದ ಮುಖಸ್ತುತಿಯಲ್ಲ. ವ್ಯಕ್ತಿಯೊಬ್ಬ ಜೀವನದಲ್ಲಿ ಎಷ್ಟು ಸಾಧಿಸಬಹುದೋ ಅದಕ್ಕೂ ಮೀರಿದ ಸಾಧನೆ ಕಂಡುಬಂದಾಗ, ಅಲ್ಲಿ ನಮಗೆ ನಿಂತು ನೋಡುವ ಮನಸ್ಸಾಗುತ್ತದೆ, ಒಂದು ಜೀವಮಾನದಲ್ಲಿ ಸಾಧಿಸಲು ಅಸಾಧ್ಯವಾದುದು ಎನಿಸಿದ್ದನ್ನು, ಸಾಧಿಸಿಕೊಂಡವರು ಸಾಧ್ಯವೆಂದು ತೋರಿಸಿದಾಗ, ಅವರಲ್ಲಿ ಪೂಜ್ಯಭಾವನೆ ಮೂಡುತ್ತದೆ. ಒಂದಲ್ಲ-ಎರಡಲ್ಲ-ನಾಲ್ಕಾರು ಜನ್ಮಗಳನ್ನುತ್ತರಿಸಿ ಬಂದರೂ ಸಾಧಿಸಲಾಗದ ಮಹತ್ತನ್ನು ಸಾಧ್ಯವಾಗಿಸಿಕೊಂಡವರನ್ನು ಕಂಡಾಗ ಅದೊಂದು ದೈವಾಂಶ ಸಂಭೂತ ಜನ್ಮವೆಂದೇ ಒಪ್ಪಿಕೊಳ್ಳಬೇಕಾದುದು ವಿಹಿತ. ಅಂತಹ ಕೆಲವರು ಇಂದಿಗೂ ಈ ನಮ್ಮ ಪುಣ್ಯಭೂಮಿ ಭಾರತದಲ್ಲಿ ಇದ್ದಾರೆ ಎಂಬುದು ’ಸಂಭವಾಮಿ ಯುಗೇ ಯುಗೇ’ ಎಂಬುದರ ಧ್ವನಿ ತರಂಗಗಳ ವ್ಯಾಪ್ತಿಗೆ ಒಳಪಡುತ್ತದೆ! ಅಂತಹ ಋಷಿ ಸದೃಶರೆಲ್ಲರಿಗೂ ನನ್ನ ನಮನಗಳು.

ಈಗಿರುವ ಆರುಕೋಟಿ ಕನ್ನಡಿಗರಲ್ಲಿ ಮೂರು ಕೋಟಿ ಮಂದಿಗಾದರೂ ’ಮಂಕುತಿಮ್ಮನ ಕಗ್ಗ’ದ ಬಗ್ಗೆ ಪ್ರತ್ಯಕ್ಷ/ಪರೋಕ್ಷ ಓದಿ/ಕೇಳಿ/ತಿಳಿದು ಗೊತ್ತು ಎಂಬುದು ನನ್ನ ಅನಿಸಿಕೆ. ನನ್ನ ಓದಿನ ನಡುನಡುವೆ ಮೆಲುಕುಹಾಕುವ ಕಗ್ಗದ ಮುಕ್ತಕಗಳ ಜೊತೆಗೆ, ಕಗ್ಗದ ಮಗ್ಗ ಹೇಗೆ ಹುಟ್ಟಿತು ಎಂಬ ಕಥೆಯಂತೇ ಇರುವ ’ಕಗ್ಗದ ಕಥೆ’ ಎಂಬ ಕವನವೂ ಬಹುಕಾಲ ನನ್ನನ್ನು ಪೀಡಿಸಿತ್ತು. ಕಗ್ಗದ ಆರಂಭಕ್ಕೂ ಮುನ್ನ ಓದುಗರಿಗೆ ಲಭ್ಯವಾಗುವ ಈ ಕವನ "ಸೋಮಿ" ಬರೆದದ್ದು! ಯಾರಾತ ಸೋಮಿ? ಯಾಕೆ ಆತ ಹೀಗೆಲ್ಲಾ ಬರೆದ? ’ತಿಮ್ಮಗುರು’ ಎಂದು ಆ ಕವನದಲ್ಲೇ ಆತ ಹೇಳಿದ್ದಾನೆ ಎಂದಾದಾಗ, ನಮಗೆ ’ತಿಮ್ಮಗುರು’ವೆನಿಸಿದ ಗುಂಡಪ್ಪನವರೇ ಕವನದ ವಸ್ತುವಾದರೆ, ಸೋಮಿ ಯಾರು ಎಂಬುದೇ ನನ್ನ ಪ್ರಶ್ನೆ; ಸಮಸ್ಯೆಯಲ್ಲದ ಸಮಸ್ಯೆಗೆ ಪರಿಹಾರ ಸಿಗುವಲ್ಲಿ ನಾನು ಹೋಲಿಸಿದ ಕಡತಗಳು ಹಲವು, ಆದರೂ ಆ ಕೆಲಸ ಹಾಗೇ ನಿಂತಿತ್ತು. ಮೇಲೆ ಹೇಳಿದಹಾಗೇ ಹಸಿದ ಮಗುವಿನ ಅಳುವಿಗೆ ಎಚ್ಚೆತ್ತ ಅಮ್ಮ ಹೊಟ್ಟೆಗೊಂದಷ್ಟು ನೀಡಿ ರಮಿಸುವಂತೇ, ನನ್ನ ರೋದನಕ್ಕೆ ಎಚ್ಚೆತ್ತ ಗಣೇಶರು ಉತ್ತರಿಸಿದರು: "ಅದು ಡಿವಿಜಿಯವರೇ ಬರೆದಿದ್ದು, ಅವರ ಕೌಟುಂಬಿಕ ಹಿನ್ನೆಲೆಯನ್ನು ಅವರ ಜ್ಞಾಪಕ ಚಿಕ್ರಶಾಲೆಯ ೮ನೇ ಭಾಗ ’ಸಂಕೀರ್ಣ ಸಂಪುಟ’ದಲ್ಲಿ ತಿಳಿದುಕೊಳ್ಳಬಹುದು. ಆ ಕವನವನ್ನು ಅವರು ಅವರ ಸೋದರಮಾವನ ಕುರಿತಾಗಿ ಬರೆದಿದ್ದು" ಎಂಬ ಉತ್ತರ  ನನಗೆ ದೊರೆತಾಗ, ಭಗವಂತ ಎದುರಲ್ಲಿ ಸಿಕ್ಕಾಗ ಯಾವುದನ್ನು ಕೇಳಬೇಕೋ ಅದನ್ನು ಕೇಳುವುದು ಬಿಟ್ಟು ಎಲ್ಲಾಮರೆತ ಭಕ್ತನ ಸ್ಥಿತಿ ಉಂಟಾಯ್ತು. ’ಕಗ್ಗದ ಕಥೆ’ಯ ತುಸು ಅರ್ಥವಿಸ್ತರಣೆಗೆ ಪ್ರಯತ್ನಿಸುತ್ತಾ ಲೇಖನ ಮುಂದರಿಸುತ್ತೇನೆ. 

ನರಸಿಂಹ ಸ್ವಾಮಿಗಳ ಕವನದಲ್ಲಿರುವಷ್ಟೇ ಆತ್ಮೀಯವಾಗಿ ಬಂಧಿಸುವ, ಭಾವಗಳ ಸಂಕೋಲೆಯನ್ನು ಅರಿವಿಲ್ಲದೇ ನಮಗೆ ತೊಡಿಸುವ ಕವನದ ಆರಂಭ ಹೀಗಿದೆ: 

ಹಳ್ಳಿ ಮಕ್ಕಳಿಂಗೆ ಗುರುವು, ಹಳ್ಳಿಗೆಲ್ಲ ಗೆಳೆಯನು,-
"ಒಳ್ಳೆ ಹಾರುವಯ್ಯ", " ಹಸುವು", "ಹಸುಳೆ" ಎನುವರವನನು.
ಮಂಕುತಿಮ್ಮನೆನುತ ಹೆಸರನವನು ಹೇಳಿಕೊಳುವನು;
ಬಿಂಕ ಕೊಂಕು ಒಂದು ಅರಿಯದಿದ್ದ ಸಾಧುವಾತನು.

ಹಳ್ಳಿಯಲ್ಲೊಬ್ಬ ಗುರುವೆನಿಸಿದ, ಹಳ್ಳಿಗರಿಗೆ ಮಿತ್ರನಾಗಿದ್ದ ಆತ ಬ್ರಾಹ್ಮಣನಾದ್ದರಿಂದ ಜನ " ಒಳ್ಳೆ ಹಾರುವಯ್ಯ" ಎಂದರು, ಮಂಕುತಿಮ್ಮ ಎಂದು ತನ್ನನ್ನೇ ತಾನು ಹೆಸರಿಸಿಕೊಳ್ಳುತ್ತಾ ತಮಾಷೆಮಾಡುತ್ತಿದ್ದ, ಅತ್ಯಂತ ಸಾಧು ಸ್ವಭಾವದ ಆತನ ಮುಗ್ಧತೆಗೆ ಜನ "ಹಸು" , "ಹಸುಳೆ" ಎಂದೆಲ್ಲಾ ಕರೆಯುತ್ತಿದ್ದರು. ನಮ್ಮಲ್ಲಿ ಒಂದು ಗಾದೆಯಿದೆ "ಕೆಟ್ಟು ಬ್ರಾಹ್ಮಣರನ್ನು ಸೇರು, ಸೊಕ್ಕಿ ಸೇಠುಗಳನ್ನು ಸೇರು" ಎಂದು, ’ಜೀವನದಲ್ಲಿ ಕೆಟ್ಟೆ’ ಎಂಬ ದಾರಿಕಾಣದ ಸ್ಥಿತಿ ಬಂದಾಗ, ಆಚಾರವಂತ ಬ್ರಾಹ್ಮಣನನ್ನು ಕಂಡರೆ ಆತ ಏನಾದರೊಂದು ಮಾರ್ಗೋಪಾಯವನ್ನು ಕಲ್ಪಿಸಿಕೊಡುವುದಕ್ಕೆ ಸಹಕಾರಿಯಾಗುತ್ತಾನೆ, ಸೊಕ್ಕಿದ್ದರೆ ಮಾರ್ವಾಡಿಗಳನ್ನು ಹೋಗಿ ಕಾಣಬೇಕು, ನಮ್ಮ ಸೊಕ್ಕಿಗೆ ಅವರು ಕಡಿವಾಣ ಹಾಕುವುದರಲ್ಲಿ ಸಂಶಯವಿಲ್ಲ ಎಂಬುದು ಗಾದೆಯ ಧ್ವನ್ಯರ್ಥ. [ಪೂರ್ವಾಗ್ರಹ ಪೀಡಿತರಾಗದೇ ನಾವು ಅವಲೋಕಿಸಿದರೆ ಬ್ರಾಹ್ಮಣರಲ್ಲಿ ಲೋಕೋಪಕಾರಕ ಬುದ್ಧಿ ಬಹುತೇಕರಿಗೆ ಇದ್ದೇ ಇರುತ್ತದೆ. ಕೆಲವರು ಕೃತಿಯಿಂದ ಅದನ್ನು ನಡೆಸುತ್ತಾರೆ, ಇನ್ನು ಕೆಲವರು ಕೈಲಾಗದ್ದಕ್ಕೆ ಪರಿತಪಿಸಿಕೊಳ್ಳುತ್ತಿರುತ್ತಾರೆ. ಇದನ್ನರಿಯದ ಕೆಲವರು ’ಬ್ರಾಹ್ಮಣ್ಯ ಎಂಬ ಟ್ರ್ಯಾಕಿಗೆ ಸಿಕ್ಕಿಹಾಕಿಕೊಂಡರೆ ಹೊರಬರುವುದೇ ಕಷ್ಟ’ ಎಂಬೆಲ್ಲಾ ರೀತಿಯಲ್ಲಿ ಬರೆಯುತ್ತಾ, ಎಡಪಂಥೀಯ ಬ್ರಾಹ್ಮಣರ ಮಾತುಗಳನ್ನು ಅನುಮೋದಿಸುತ್ತಾ, ಭೈರಪ್ಪನವರನ್ನೋ ಕಾರಂತರನ್ನೋ ಆಡಿಕೊಳ್ಳುತ್ತಾ ತೀರಾ ಗುಜರಿ ಅಂಗಡಿ ಕೆಲಸಮಾಡುತ್ತಿರುತ್ತಾರೆ! ಅಂತಹ ಜನರಿಗೆ ಯಾವ ಮಹಾ ಜ್ಞಾನವಿದೆ ಎಂಬ ಹಮ್ಮೋ ದೇವರೇ ಬಲ್ಲ.]ಇರಲಿ, ಕಥೆ ಮುಂದಕ್ಕೇನಾಯ್ತು ನೋಡೋಣ:

ಬಾಳಿದೇತಕೆನುತಲೊಮ್ಮೆ ಯೊಮ್ಮೆ ತಾನೆ ಕೇಳ್ವನು;
ಕೂಳುಹೆಣವು ತಾನೆನುತ್ತಲೊಮ್ಮೆ ನಕ್ಕು ಪೇಳ್ವನು.
ಬೆದರರಾರುಮವನ ಕಂಡು; ಬಳಸಿ ನಿಂತು ಹುಡುಗರು
ಮುದದೊಳವನ ಸಲುಗೆಯಿಂದ, ’ಮೇಷ್ಟ್ರೆ’, ’ಮೇಷ್ಟ್ರೆ’ ಎನುವರು.

ವ್ರಥಾ ಬಿಟ್ಟಿ ಕೂಳು ತಿನ್ನುತ್ತಾ ಬಿದ್ದಿರುವ ತಾನು ಬದುಕುವುದಾದರೂ ಯಾತಕ್ಕೆ ಎಂದು ತನಗೆ ತಾನೇ ಆಡಿಕೊಳ್ಳುತ್ತಿದ್ದನಾತ. ಅವನನ್ನು ಕಂಡರೆ ಯಾರಿಗೂ ಹೆದರಿಕೆಯೆಂಬುದೇನೂ ಇರಲಿಲ್ಲ, ಮಕ್ಕಳು ಅವನನ್ನು ಸುತ್ತುವರಿದು, ಕೈ-ಮೈ ಹಿಡಿದು ಸಲುಗೆಯಿಂದ, "ಮೇಷ್ಟ್ರೆ", "ಮೇಷ್ಟ್ರೆ" ಎನ್ನುತ್ತಿದ್ದರು.   

ಮೂಡಲೂರ ಸುತ್ತಮುತ್ತಣೈದು ಮೈಲಿಯಿಂದಲಿ
ಕೂಡಿ ಬರುವರಣುಗರೋದೆ ತಿಮ್ಮ ಗುರುವಿನೆಡೆಯಲಿ.
ಶಾಲೆಗವನು ಹೊತ್ತುಗೊತ್ತಿಗೊಪ್ಪುವಂತೆ  ಬರುವನು;
ವೇಳೆ ವೆರ್ತವಾಗದಂತೆ ಪಾಠ ಹೇಳುತಿರುವನು;

ಮೂಡಲೂರಿನ ಸುತ್ತಮುತ್ತಣ ಐದು ಮೈಲಿಗಳ ಅಂತರದಲ್ಲಿರುವ ಊರು/ಹಳ್ಳಿಗಳಿಂದ ಜನ ತಂಡೋಪತಂಡವಾಗಿ ತಿಮ್ಮ ಗುರುವನ್ನು ನೋಡಲು ಆಗಾಗ ಬರುತ್ತಿದ್ದರು. ತಾನು ಕೆಲಸಮಾಡುತ್ತಿದ್ದ ಶಾಲೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದ ಆತ ವೇಳೆ ವ್ಯರ್ಥವಾಗದಂತೇ ಮಕ್ಕಳಿಗೆ ಹಿತವಾಗಿ ಪಾಠಮಾಡುತಿದ್ದ.

ಆಟ, ಅಮರ, ಮಗ್ಗಿ, ಬರಹ -ಎಲ್ಲ ಕಲಿಸಿಕೊಡುವನು;
ಏಟು, ಪೆಟ್ಟು, ಬಯ್ಲು, ಗದರು -ಒಂದನುಮವನರಿಯನು; 
ಕತೆಯ ಹೇಳಿ ನಗಿಸುತವರ ತುಂಟತನವ ಕಳೆವನು;
ಮಿತದಿನೆಲ್ಲರೊಡನೆ ಮಾತುಕತೆಯನಾಡಿ ನಲಿವನು.

ಕ್ಲಿಷ್ಟಪದಗಳಿಲ್ಲದ್ದರಿಂದ ಈ ಮೇಲಿನ ಸಾಲುಗಳು ಓದುಗರಿಗೆ ಪದಶಃ ಅರ್ಥವಾಗಿರಬಹುದು ಎಂದುಕೊಳ್ಳುತ್ತೇನೆ. ಆಟಗಳನ್ನೂ, ಅಮರಕೋಶ, ಮಗ್ಗಿ[ಕೋಷ್ಟಕ], ಬರಹ ಎಲ್ಲವನ್ನೂ ಆತ ಹೇಳಿಕೊಡುತ್ತಿದ್ದನೇ ಹೊರತು ಮಕ್ಕಳಿಗೆ ಏಟು, ಪೆಟ್ಟು, ಬೈಗುಳ, ಗದರುವಿಕೆ ಇದನ್ನೆಲ್ಲಾ ಪ್ರಯೋಗಿಸಿದವನಲ್ಲ. ಕತೆ ಹೇಳಿ ನಗಿಸುವ ತನ್ನ ವಿಶಿಷ್ಟ ಬೋಧನಾಕ್ರಮದಿಂದ ಎಲ್ಲರ ತುಂಟತನವನ್ನು ಕಳೆಯುತ್ತಿದ್ದ; ಮಿತವಾಗಿ ಎಲ್ಲರೊಡನೆಯೂ ಮಾತನಾಡುತ್ತಿದ್ದ.

ಅವನ ತಾಯಿಯರ್ಧ ಕುರುಡಿ, ಸಿರಿಯನೆಡರಿಗಿಳಿದವಳ್,
ಶಿವನ ನಂಬಿ ಮುದುಕಿ ತನ್ನ ಮಗಳ ಮನೆಗೆ ದುಡಿಯುವಳ್:
ಆಕೆ,-ಅವನ ತಂಗಿ,-ಗಂಡನೊಡನೆ ಸುಖದಿ ಬಾಳ್ವರು;
ಲೋಕಸೇತು ತಿಮ್ಮ ಗುರುವಿಗಲ್ಲೆ; ಅಲ್ಲೆ ವಾಸವು.

ಅರ್ಧ ಕುರುಡಿಯಾದ ಆತನ ತಾಯಿಗೆ ಸಿರಿವಂತಿಕೆ ಎಂಬುದು ಕನಸಿನ ಪದವೇ ಸರಿ. ಬದುಕು ಹೀಗೆ ಎಂದು ಬೇಸರಿಸಿಕೊಳ್ಳದೇ ಶಿವನಿಚ್ಛೆ ಎಂದುಕೊಳ್ಳುತ್ತಾ ಮಗಳ ಮನೆಯಲ್ಲೇ ಆಕೆ ವಾಸವಿದ್ದು ಮಗಳಮನೆಯ ಕಠಿಣ ಮನೆವಾರ್ತೆ ಕೆಲಸಗಳನ್ನು ನಡೆಸುತ್ತಿದ್ದಳು. ತಾಯಿಯೊಟ್ಟಿಗೆ ತಂಗಿಯ ಮನೆಯಲ್ಲೇ ಆತ ವಾಸವಿದ್ದನು.

ಬೇರೆ ಮನೆಯ ಚಿಂತೆಯೇಕೆ ಹೆಂಡರಿಲ್ಲದವನಿಗೆ?
ಆರುಮರಿಯರವನು ಮದುವೆಯಾಗದಿದ್ದುದೇತಕೋ;
ಬಡವನೆಂದೊ; ಚೆಲುವನಲ್ಲವೆಂದೊ; ಹೆಣ್ಣ ಹೆತ್ತವರ್
ಕೊಡಲು ಬಾರದಿದ್ದರೇನೊ ! ಅವನೆ ಬೇಡವೆಂದನೋ!!

ಮದುವೆಯಾಗದೇ ಬ್ರಹ್ಮಚರ್ಯದಲ್ಲೇ ಜೀವನ ಕಳೆಯುತ್ತಿದ್ದ ಆತನಿಗೆ ಬೇರೇ ಮನೆ ಮಾಡಿ ವಾಸಿಸುವ ಚಿಂತೆ ಯಾವಾಗಲೂ ಕಾಡಲಿಲ್ಲ. ಆರುಮರಿ ಪಂಗಡದವನಾದರೂ ಮದುಯಾಗದಿದ್ದುದೇಕೆ ಎಂದು ತಿಳಿಯಲಿಲ್ಲ.  ಬಡವನೆಂದೋ ಸ್ಫುರದ್ರೂಪಿಯಲ್ಲವೆಂದೋ ಹೆಣ್ಣು ಹೆತ್ತವರು ಮುಂದೆಬರಲಿಲ್ಲವೇ? ಅಥವಾ ಅವನೇ ಮದುವೆ ಬೇಡವೆಂದುಕೊಂಡನೋ ತಿಳಿಯದು, ಅಂತೂ ಮದುವೆಯಾಗಲಿಲ್ಲ. 

ಹೇಗೆ ಇರಲಿ: ವರ್ಷವೈದು ದಶಕಗಳನು ಕಳೆದವನ್,
ನೀಗುತಿದ್ದ ನಾಯುವನ್ನು ಸರಳಮನದ ತೃಪ್ತಿಯಿನ್.
ತರಣಿಯುದಿಪ ಮುನ್ನ ಪಾಡಿ ನಾರಸಿಂಹಶತಕಮಂ,
ಇರುಳು ಬರಲು ರಾಮದಾಸ ಕೀರ್ತನೆಗಳ ಪಾಡುವಂ.

ಐವತ್ತು ವರ್ಷ ಆಯುಸ್ಸು ಈ ರೀತಿಯಲ್ಲೇ ಸರಳಮನದ ತೃಪ್ತಿಯಿಂದಲೇ ಕಳೆದುಬಿಟ್ಟನಾತ. ಪ್ರತಿನಿತ್ಯ ಸೂರ್ಯೋದಯಕ್ಕೂ ಮುನ್ನ ಎದ್ದು ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ನಾರಸಿಂಹ ಶತಕ ಎಂಬ ಸ್ತೋತ್ರವನ್ನು ಮಾಡುತ್ತಿದ್ದ ಆತ ರಾತ್ರಿಯಲ್ಲಿ ರಾಮದಾಸರ ಕೀರ್ತನೆಗಳನ್ನು ಹಾಡುತ್ತಿದ್ದ.

ಬಿಡುವುಹೊತ್ತು  ಗುಡಿಯಳೆಲ್ಲೊ ಕುಳಿತು ದೈವಚಿಂತೆಯೊಳ್
ನಡೆಯುತಿದ್ದನವನು ಬಾಳಹೊರೆಯ ಹೊತ್ತು, ನಡೆಯುವೊಲ್
ಭಾನುವಾರ ಬೆಟ್ಟದೊಂದು ಮೊಡಕಸೇರಿ ಕೂಡುವಂ;
ಮೌನದಿಂದ ಗಗನ ಧರೆಯನಪ್ಪುವತ್ತ ನೋಡುವಂ;

ಬಿಡುವಿದ್ದಾಗ ಗುಡಿಗೆ ಹೋಗಿ ಅಲ್ಲೆಲ್ಲೋ ಕುಳಿತು ದೈವಧ್ಯಾನವನ್ನಾತ ನಡೆಸುತ್ತಿದ್ದ. ಬಾಳ ಹೊರೆಯನ್ನು ಹೀಗೇ ಹೊತ್ತು ಆತ ನಡೆಯುತ್ತಿದ್ದ. ಭಾನುವಾರ ಬಂದರೆ ಬೆಟ್ಟವೇರಿ ಅಲ್ಲಿನ ಬಂಡೆಗಳ ಮೇಲೆ ಮೌನವಾಗಿ ಕೂತು ದೂರದಲ್ಲಿ ಆಕಾಶ-ಭೂಮಿ ಒಂದಾದ ಹಾಗೆ ಕಾಣುವ ದಿಕ್ಕಿನತ್ತ ನೋಡುತ್ತಿದ್ದನಾತ.

ದೇಗುಲದೊಳದೊಂದು ಮಬ್ಬು ಮಂಟಪವನು ಸೇರುವಂ;
ಹೋಗಿಬರುವ ಭಕುತ ಜನಕೆ ಮರುಕನೋಟ ತೋರುವಂ.
ಹಳೆಯ ಹಚ್ಚಡವನು ತಲೆಯಿನಡಿಯವರೆಗೆ ಹೊದ್ದವಂ
ಹೊಳೆವ ಕಣ್ಣ ಕಾಣದರ್ಗೆ ಮೂಟೆಯೆಂದೆ ಕಾಣುವಂ.

ದೇಗುಲ ಸೇರಿಕೊಳ್ಳುತ್ತಿದ್ದ ಆತ, ಅಷ್ಟಾಗಿ ಬೆಳಕಿರದ ಮಬ್ಬುಳ್ಳ ಮಂಟಪದ ಮೂಲೆಯಲ್ಲಿ ಮುಡಿಯಿಂದ ಅಡಿಯವರೆಗೂ ಹಳೆಯ ಚಾದರವನ್ನು ಹೊದ್ದು ಕೂತು, ಹೋಗಿ ಬರುವವರ ಕಡೆಗೆ ಮರುಕದ ನೋಟ ಬೀರುತ್ತಿದ್ದ; ಸರಿಯಾಗಿ ಪರಾಂಬರಿಸದವರಿಗೆ ಮೂಟೆಯಂತೇ ಕಾಣುತ್ತಿದ್ದ!

ಗುರುತನರಿತರಾರುಮಾನುಮೇನನಾನುಮೊರೆದೊಡಂ
ಕಿರುನಗೆಯಿನೆ ಮಾರುವೇಳ್ವನ್, ಆಡನತಿಯ ನುಡಿಗಳಂ.
ಅವನ ತಂಗಿಗೊಬ್ಬ ಮಗನು; ಮುದ್ದಿನಿಂದ ಬೆಳೆದನು;
ಇವನೆ ತಿಮ್ಮ ಗುರುಗೆ ಜೀವವಿವನೆ ಲೋಕವೆಲ್ಲವು.

ಯಾರಾದರೂ ಗುರುತು ಹಿಡಿದು ಮಾತನಾಡಿಸ ಹತ್ತಿದರೆ ಕಿರುನಗೆ ಬೀರಿ ಅವರನ್ನು ಸಾಗಹಾಕಿಬಿಡುತ್ತಿದ್ದ; ಜಾಸ್ತಿ ಮಾತನಾಡುತ್ತಿರಲಿಲ್ಲ. ಅವನ ತಂಗಿಗೊಬ್ಬ ಮಗನಿದ್ದು ಮುದ್ದಿನಿಂದ ಬೆಳೆಯುತ್ತಿದ್ದ ಆ ಮಗುವೇ ತಿಮ್ಮ ಗುರುವಿನ ಜೀವವೂ ಭಾವವೂ ಸರ್ವವೂ ಆಗಿದ್ದ.

ಸೋಮಿಯವನು; ಮಾವನಿವನನೆತ್ತಿ, ನಡಸಿ, ಲಾಲಿಸಿ,
ಪ್ರೇಮದಂಗಿ ತೊಡಿಸಿ, ಪದ್ಯ ಕಲಿಸಿ, ಬರಹ ತಿದ್ದಿಸಿ,
ನೋಡಿ ಮುಂಜಿಯಾದುದನ್ನು, ಕೇಳಿ ವಿದ್ಯೆ ಪೆಂಪನು,
ಷೋಡಶಾಬ್ದದುತ್ಸವವನು ಮಾಡಿ ಮಾವ ನಲಿದನು.

ಸೋಮಿ ಎಂಬ ಅಳಿಯನಿಗೆ ತಿಮ್ಮಗುರು ಪ್ರೇಮವೆಂಬ ಅಂಗಿಯನ್ನು ಹಾಕುತ್ತಿದ್ದ, ಪದ್ಯ ಕಲಿಸುತ್ತಿದ್ದ, ಬರಹ ಕಲಿಸುತ್ತಿದ್ದ, ನಡೆಸಿ, ಲಾಲಿಸಿ ಪಾಲಿಸುತ್ತಿದ್ದ. ಮುಂಜಿಯಾದುದನ್ನು ನೋಡಿ ಹೆಚ್ಚಿನ ವಿದ್ಯಾಭಾಸ ಹೇಳಿಕೊಟ್ಟು ಸಂತಸಪಟ್ಟ ತಿಮ್ಮಗುರು, ತನ್ನಳಿಯನ ಷೋಡಶಾಬ್ದವನ್ನು ಉತ್ಸವವಾಗಿ ಆಚರಿಸಿದ.

ಧನ್ಯಳೀಗ ತಾನೆನುತ್ತ ಸೋಮಿಯಜ್ಜಿ ಹಿಗ್ಗಿದಳ್;
ಇನ್ನು ಹತ್ತುವಾರ ಕಳೆಯಲಾಕೆ ಕಣ್ಣು ಮುಚ್ಚಿದಳ್.
ಬಳಿಕ ಮುಂದಿನೋದಿಗೆಂದು ಸೋಮಿಯು ಮೈಲಾರಕೆ
ತೆರಳ್ವುದೆಂದು ಸಿದ್ಧವಾಯಿತವನು ಮೂಟೆ ಕಟ್ಟಿದ.

ಮೊಮ್ಮಗನ ಬೆಳವಣಿಗೆಯನ್ನು ಕಂಡು ಸೋಮಿಯ ಅಜ್ಜಿ ಬಹಳ ಹಿಗ್ಗಿದಳು. ಸಂಭ್ರಮದ ಉತ್ಸವ ನಡೆದ ಎರಡೂವರೆ ತಿಂಗಳಲ್ಲೇ ಅಜ್ಜಿ ಪರಂಧಾಮವನ್ನು ಸೇರಿದಳು. ಅಜ್ಜಿಯ ಅಂತ್ಯಕ್ರಿಯೆಗಳು ನಡೆದಾ ನಂತರ, ತನ್ನ ಮುಂದಿನ ಓದಿಗಾಗಿ ಸೋಮಿ ಮೈಲಾರಕ್ಕೆ ಹೊರಟುನಿಂತ.

ಬಂದಿತವನ ಪಯಣದ ದಿನವವನ ಮೊಗದೊಳುತ್ಸಹ;
ಅಂದು ತಿಮ್ಮಗುರುವಿನ ದನಿಯಲ್ಲಿ ಕೊಂಚ ಗದ್ಗದ.
ಬೆರೆಯಿತಂದು ಮಾವನೊಳಗೆ ಸಂತಸದಲಿ ಚಿಂತೆಯು,
ಕೊರೆಯಿತವನ ಮನವ ಸೋದರಳಿಯನಗಲ್ವ ಬೆಸನವು.

ಸೋಮಿ ಹೊರಡುವ ದಿನ ಬಂದೇ ಬಂತು; ಸೋಮಿಯ ಮುಖದಲ್ಲಿ ಉತ್ಸಾಹ; ಆದರೆ ತಿಮ್ಮಗುರುವಿನ ಗರಳು ಗದ್ಗದಿತವಾಗಿತ್ತು-ಆತ ಮಾತನಾಡಲಾರ, ಆಡದೇ ಇರಲಾರ. ಸೋಮಿ ದೂರಹೋಗುತ್ತಿರುವುದು ಮಾವ ತಿಮ್ಮಗುರುವಿನಲ್ಲಿ ಚಿಂತೆಗೆ ಕಾರಣವಾಗಿತ್ತು, ಸಂತಸದ ಜೊತೆಗೇ ಚಿಂತೆಯೂ ಬೆರೆತು ತಿಮ್ಮಗುರುವಿನ ಮನವನ್ನು ಸದಾ ಅದು ಕೊರೆಯತೊಡಗಿತು.

ಐದುವಾರ ಕಳೆದು ತಿಮ್ಮ ಗುರುವಿಗಾಯ್ತು ವರ್ಗವು;
ಮೂಡಲೂರಿನಿಂದಲವನು ಮಂಡುಗೆರೆಯ ಸೇರ್ದನು.
ಕೆಲವು ತಿಂಗಳಾದ ಬಳಿಕದೊಂದು ಸಂಜೆ ಮಾವನು
ತಲುಪಿದ ಮೈಲಾರವನಾ ಪುರದ ಬೆಡಗ ಕಂಡನು.

ಐದು ವಾರಗಳು ಹಾಗೂ ಹೀಗೂ ಕಳೆದಿದ್ದವು; ತಿಮ್ಮ ಗುರುವಿಗೆ ಮೂಡಲೂರಿನಿಂದ ಮಂಡಗೆರೆಗೆ ವರ್ಗವಾಯ್ತು. ಮಂಡಗೆರೆಗೆ ತೆರಳಿದ ಕೆಲವು ತಿಂಗಳುಗಳ ಬಳಿಕ, ಆತ ಸೋಮಿಯನ್ನು ನೋಡಬೇಕೆಂಬ ತಹತಹವನ್ನು ಹತ್ತಿಕ್ಕಲಾರದೇ ಮೈಲಾರಕ್ಕೆ ನಡೆದ; ಮೈಲಾರ ಪಟ್ಟಣದ ಬೆಡಗನ್ನು ಕಂಡ.

ಅರಸಿಯರಸಿ ಸೋಮಿಯ ವಿದ್ಯಾರ್ಥಿನೆಲೆಯ ಮುಟ್ಟಿದ;
ಬೆರಗುಪಟ್ಟನದರ ಜರಬಿನಂದಗಳನು ನೋಡುತ.
ಬಳಿಯ ಬಯಲಿನಲ್ಲಿ ಸೋಮಿ ಚಂಡನಾಡುತ್ತಿದ್ದನು,
ಗೆಳೆಯರೊಡನೆ ನಾಗರಿಕದ ಪೆರ್ಮೆ ತೋರುತ್ತಿದ್ದನು.

ಸೋಮಿಯ ವಿದ್ಯಾರ್ಥಿನಿಲಯವನ್ನು ಅರಸುತ್ತಾ ಅರಸುತ್ತಾ ಅಂತೂ ತಿಮ್ಮಗುರು ಅಲ್ಲಿಗೆ ಬಂದಾಗ, ಸೋಮಿ ಪಕ್ಕದ ಬಯಲಿನಲ್ಲಿ ಗೆಳೆಯರೊಡನೆ ಚೆಂಡಾಟವಾಡುತ್ತಿದ್ದ. ವಿದ್ಯಾರ್ಥಿನಿಲಯದ ಜರ್ಬನ್ನು ಕಂಡು ತಿಮ್ಮಗುರು ಬೆರಗಾಗಿದ್ದ.

ಮಾತು, ನಗುವು, ನಡಿಗೆಯುಡಿಗೆ-ಎಲ್ಲ ಕೊಂಚ ಹೊಸಬಗೆ,
ರೀತಿ ದೊಡ್ಡದಾಯ್ತು ಮಾವ ತಂದ ಹಳ್ಳಿ ಕಣ್ಣಿಗೆ.
ಆಟಮುಗಿಸಿ ಬರಲಿ ಸೋಮಿಯೆಂದು ಮಾವ ಕುಳಿತನು;
ನೋಟವ ಕೈಸಾಲೆಯಿಂದ ನೋಡಿ ಘಳಿಗೆ ಕಳೆದನು.

ನಗರದ ಜನಜೀವನ ಹಳ್ಳಿಗಳಿಗಿಂತ ಬೇರೆ. ಮಾತು-ನಗು, ನಡಿಗೆ-ಉಡುಗೆ ಎಲ್ಲದರಲ್ಲೂ ಹಳ್ಳಿಗಿಂತ ಪಟ್ಟಣ ಬಹಳ ಭಿನ್ನ. ನಾಗರಿಕತೆಯ ಹೆಸರಿನಲ್ಲಿ ಹೊಸ ಹೊಸ ರೀತಿಯಲ್ಲೇ ಎಲ್ಲವೂ ಕಾಣುತ್ತವೆ. ಹಳ್ಳಿಯ ಸಾಚಾತನ, ಅಲ್ಲಿನ ಸರಳತೆ ಪಟ್ಟಣಿಗರಲ್ಲಿ ಎಂದೂ ಇರುವುದಿಲ್ಲ. ಹಳ್ಳಿಗನಾದ ತಿಮ್ಮಗುರುವಿಗೆ ಇದೆಲ್ಲಾ ಹೊಸತು. ಕೈಸಾಲೆಯಲ್ಲೇ ಅತ್ತಿತ್ತ ನೋಡುತ್ತಾ ಸೋಮಿ ಬರಲಿ ಎಂದು ಕಾದು ಕುಳಿತನಾತ.

ಕತ್ತಲಾಗೆ ಸೋಮಿ ಗೆಳೆಯರೊಡನೆ ನೆಲೆಗೆ ಬಂದನು;
ಅತ್ತಲಿದ್ದ ಮಾವನನಚ್ಚರಿನೋಟದೆ ಕಂಡನು.
"ಏನು ಮಾವ? ಎಂದು ಬಂದೆ? ಹೇಗೆ ಬಂದೆ?"-ಎನ್ನುತ
ಸೋಮಿ ಕೇಳುತಿದ್ದನೊಲಿದು; ಕೆಲದಿ ಕೆಳೆಯರಿದ್ದರು.

ಆಡ್ತಾ ಆಡ್ತಾ ಕತ್ತಲಾವರಿಸಿತು, ಸೋಮಿ ಗೆಳೆಯರೊಟ್ಟಿಗೆ ವಿದ್ಯಾರ್ಥಿನಿಲಯಕ್ಕೆ ಮರಳಿದಾಗ ಅವನಿಗೆ ಅಚ್ಚರಿ ಕಾದಿತ್ತು! ದೂರದಲ್ಲಿ ಮಾವ ಕುಳಿತಿದ್ದುದು ಕಾಣುತ್ತಿತ್ತು. ಗೆಳೆಯರ ಜೊತೆಗೂಡಿ ಮಾವನ ಹತ್ತಿರಕ್ಕೆ ತೆರಳಿದ ಸೋಮಿ " ಏನು ಮಾವ? ಯಾವಾಗ ಬಂದೆ? ಹೇಗೆ ಬಂದೆ? ಎಲ್ಲಾ ಕ್ಷೇಮವೇ?" ಎಂದೆಲ್ಲಾ ಕೇಳತೊಡಗಿದ.

ಮಾವ-"ಎಲ್ಲ ಚೆನ್ನ; ಸೋಮಿ, ನೀನು ಸುಖವೆ?"-ಎಂದನು.
ಆದರೇನು?  ಸೋಮಿ ನಡತೆಯೊಳಗದೇನೊ ಹಿಡಿತವು;
ಭೇದವೇನೊ ಆಯಿತೆಂದು ಮಾವನಿಗಂ ಬಿಗಿತವು.
ಹರಕಲಂಗಿ, ಹುಲುಸುಗಡ್ಡ, ಹಳ್ಳಿರೀತಿ-ಮಾವನು;
ಪುರದ ವೇಷ, ಠೀವಿ ನೋಟ, ಆಂಗ್ಲರೀತಿ- ಅಳಿಯನು.

ಉಭಯ ಕುಶಲೋಪರಿ ಮಾತು ಸಾಗುತ್ತಿದ್ದರೂ, ಸೋಮಿಯನ್ನು ಮಾವ ಅಪಾದಮಸ್ತಕ ನೋಡೇ ನೋಡುತ್ತಾನೆ. ಸೋಮಿಯಲ್ಲಿ ಬಹಳ ಬದಲಾವಣೆಯಾಯ್ತಲ್ಲಾ ಎಂಬ ಅನಿಸಿಕೆ ಮಾವನೊಳಗೆ. ಮಾವನದೋ ಹಳ್ಳಿಯ ಜೀವನ, ಹರುಕಲಂಗಿ, ಹುಲುಸಾದ ಗಡ್ಡ, ಅಳಿಯ ಸೋಮಿಯದೋ ನಗರದ ಜೀವನ, ಠೀವಿಯಲ್ಲಿ ಟಾಕುಟೀಕು, ಆಂಗ್ಲ ಶೈಲಿಯ ವೇಷಭೂಷಣ!

ಕೆಲವು ನಿಮಿಷವಿದ್ದಿತಿಂತು; ಕೆಳೆಯರೆಲ್ಲ ತೆರಳಲು,
ಕಲೆತರಾಗ ಮಾವ ಅಳಿಯ ಹಿಂದಿನಂತೆ ಹರಟಲು.
ಮಾವ ತನ್ನ ಮೂಟೆ ಬಿಚ್ಚಿ,-’ಕೋ’ ಎನುತ್ತ ತೆಗೆದನು,
ಆವುತುಪ್ಪವೆರಡು ಕುಡಿಕೆ,ಅವಲಕ್ಕಿಯು ಬೆಲ್ಲವು,

ಒಂದಷ್ಟು ನಿಮಿಷಗಳ ಕಾಲ ಹೀಗೇ ಸಂದಿತು. ಆಮೇಲೆ ಸೋಮಿಯ ಗೆಳೆಯರೆಲ್ಲಾ ತಂತಮ್ಮ ಜಾಗಕ್ಕೆ ತೆರಳಿದರು. ಆಗ ಮಾವ-ಅಳಿಯ ಮೊದಲಿನಂತೇ ಮಾತುಕತೆಗೆ ಇಳಿದರು. ಮಾವ ತಾನು ತಂದಿದ್ದ ಬಟ್ಟೆಗಂಟು ಬಿಚ್ಚಿದ. ಅದರಿಂದ ಹಸುವಿನ ತುಪ್ಪ-ಎರಡು ಕುಡಿಕೆ, ಅವಲಕ್ಕಿ, ಬೆಲ್ಲ ಇತ್ಯಾದಿಗಳನ್ನು ತೆಗೆಯುತ್ತಾ ಒಂದೊಂದನ್ನೇ ಕೊಡಹತ್ತಿದ.

ಅರಳುಹಿಟ್ಟು, ಕೋಡುಬಳೆಗಳ್-ಇಷ್ಟನವನು ಕೊಟ್ಟನು.
ಮುರಿದು ಸೋಮಿ ಕೋಡುಬಳೆಯನೊಡನೆ ಬಾಯಿಗಿಟ್ಟನು;
ಬೇಗಬೇಗ ಮೇಜಿನೊಳಗೆ ಮಿಕ್ಕುದೆಲ್ಲ ಸುರಿದನು;
ಜಾಗಟೆ ಸದ್ದಾಗೆ ಸಂಜೆಯೂಟಕೆಂದು ಹೊರಟನು.

ಆ ಗಂಟಿನಲ್ಲಿ ಅರಳುಹಿಟ್ಟು, ಕೋಡುಬಳೆಗಳೂ ಇದ್ದವು. ಕೋಡುಬಳೆಯನ್ನು ಮುರಿದು ತಿನ್ನುತ್ತಾ ಸೋಮಿ ಮಿಕ್ಕಿದ ಎಲ್ಲವನ್ನೂ ತನ್ನ ಮೇಜಿನ ಡ್ರಾಯರಿನಲ್ಲಿ ತುರುಕುತ್ತಿದ್ದಾಗಲೇ ಸಂಜೆಯ ಊಟಕ್ಕೆ ಕರೆಬಂತು, ಜಾಗಟೆ ಸದ್ದಿಗೆ ಎದ್ದುನಿಂತ ಸೋಮಿ ಊಟಕ್ಕೆ ಹೊರಟ.

ಮಾವನು "ನಾನೂಟಮಾಡೆ; ಏಕಾದಶಿ" ಎನ್ನಲು,
ಸೋಮಿ ಪೇಟೆಯಿಂದ ಕದಲಿ ದ್ರಾಕ್ಷಿ ತಂದುಕೊಟ್ಟನು.
ಮಾವ ಸಂಜೆ ಸಂಧ್ಯೆ ಮಾಡಿ ಫಲವನುಂಡು ಕುಳಿತನು;
ಸೋಮಿಯೂಟ ಮುಗಿಸಿಬಂದು ಮಾವನ ಬಳಿ ಕುಳಿತನು.

ಮಾವ ತಾನು ಊಟಮಾಡುವುದಿಲ್ಲ-ಇಂದು ಏಕಾದಶಿ ಎಂದಾಗ, ಸೋಮಿ ಪೇಟೆಯಿಂದ ಬಾಳೇಹಣ್ಣು, ದ್ರಾಕ್ಷಿಗಳನ್ನು ತಂದುಕೊಟ್ಟ. ಮಾವ ಕೈಕಾಲು ತೊಳೆದು, ಸಂಧ್ಯಾವಂದನೆ ಮುಗಿಸಿ, ಫಲಾಹಾರ ಭುಂಜಿಸಿ ಕುಳಿತ. ಸೋಮಿ ಹೋಗಿ ಊಟಮುಗಿಸಿಕೊಂಡು ಬಂದ. ಮುಂದೆ ನೋಡೋಣ:

ಮಾತುಕತೆಗಳಾಗ ಸಾವಕಾಶದಿಂದ ಪರಿದುವು,
ಪ್ರೀತಿಮಾತು, ಮನೆಯಮಾತು, ಊರ ಮಾತು-ಎಲ್ಲವು.
ಏನು ಮಾತು! ಏನು ಹರಟೆ! ಏನು ಅಂತರಂಗಗಳ್!
ಏನದೇನೊ ಸವಿಯ ನೆನಪು! ಏನೊ ನಗುತರಂಗಗಳ್!

ಬಳಿಕ ಇಬ್ಬರಲ್ಲೂ ಮಾತುಕತೆಗಳು ನಡೆದವು. ಬಹಳದಿನಗಳ ನಂತರ ಇಬ್ಬರೂ ಭೇಟಿಯಾಗಿದ್ದರು. ಪ್ರೀತಿಮಾತು, ಮನೆಯಲ್ಲಿ ಆಡುತ್ತಿದ್ದ ಸಲುಗೆಯ ಮಾತು, ಊರ ತಿಟ್ಟಿನ ಮಾತು, ಗುಟ್ಟಿನಮಾತು ಎಲ್ಲವೂ ನಡೆದವು. ಯಾವುದೋ ಹಳೆಯ ಘಟನೆಗಳನ್ನು ನೆನೆದು ಇಬ್ಬರೂ ನಕ್ಕರು, ನಗು ಅಲೆಅಲೆಯಾಗಿ ಹೊಮ್ಮಿತು. 

ತಿಳಿದನಾಗ ಮಾವ ತನ್ನ ಸೋಮಿಯೆ ಇವನೆನ್ನುತ,-
ಎಳೆಯನಾಗಿ ತನ್ನ ತೊಡೆಯಳಾಡಿದವನೆ ಎನ್ನುತ.
ಕಳೆಯಲು ಮುಕ್ಕಾಲು ರಾತ್ರಿಯಾಗ ಮಾವನೆದ್ದನು;
ತಲೆಗೆ ತನ್ನ ಮೂಟೆಯನ್ನು ಮರಳಿ ಹೊರಿಸಿ ನಿಂತನು.

ಮಾತಿನಲ್ಲಿ ಮಾವ ತನ್ನ ಮೊದಲಿನ ಸೋಮಿಯನ್ನೇ ಕಂಡ. ಚಿಕ್ಕವನಾಗಿದ್ದಾಗ ತನ್ನ ತೊಡೆಯಮೇಲೆ ಮಲಗಿ ಆಡುತ್ತಿದ್ದ ಅದೇ ಸೋಮಿ ಇಷ್ಟೆತ್ತರಕ್ಕೆ ಬೆಳೆದು ನಿಂತಿದ್ದಾನೆ, ಆದರೂ ಸೋಮಿ ಸೋಮಿಯೇ ಎಂಬುದು ಮಾವನ ಮನಕ್ಕೆ ಖಾತರಿಯಾಯ್ತು. ಮಾತಾಡ್ತಾ ಮಾತಾಡ್ತಾ ಮುಕ್ಕಾಲು ರಾತ್ರಿ ಕಳೆದುಹೋಗಿತ್ತು. ತಂದ ಮೂಟೆಯನ್ನು ಮರಳಿ ತನ್ನ ತಲೆಯಮೇಲೆ ಇರಿಸಿಕೊಳ್ಳುತ್ತಾ ಮಾವ ಎದ್ದುನಿಂತ.

"ಏನು ಮಾವ ಇಷ್ಟು ಬೇಗ?" ಎನುತ ಸೋಮಿಯೆದ್ದನು;
-"ಏನಿದೇನು ಹೊರಟೆ?" ಇನ್ನುಮೆಷ್ಟೊ ಹೇಳಲಿರುವುದು.
ಇಂದು ನಿಲ್ಲು, ಮಾವ; ಊಟಗೈವ ನಾವು ಜೊತೆಯಲಿ"-
ಎಂದು ಸೋಮಿ ಹಂಬಲಿಸುತ ಮಾವನನ್ನು ಬೇಡಿದ.

"ಏನು ಮಾವ, ಇಷ್ಟೊತ್ನಲ್ಲಿ, ಅಷ್ಟು ಬೇಗ ಹೋರಡೋದೇ, ಇಂದು ನಿಲ್ಲು, ನಾಳೆ ಒಟ್ಟಿಗೇ ಊಟಮಾಡಿ ಇನ್ನಷ್ಟು ಬಾಕಿ ಹೇಳಲಿಕ್ಕಿರುವ ಸುದ್ದಿಯನ್ನೆಲ್ಲಾ ಹೇಳಿಮುಗಿಸಿ ಆಮೇಲೆ ಹೊರಟರಾಯ್ತು" ಎಂಬುದು ಸೋಮಿಯ ಆಗ್ರಹ ಪೂರ್ವಕ ವಿನಂತಿ. 

"ಕೇಳು ಸೋಮಿ"-ಎಂದ ಮಾವ-"ವೇಳೆ ಪಯಣಕಿದು ಸರಿ;
ನಾಳೆಯೆನಗೆ ಶಾಲೆಯಿರುವುದದನು ತಪ್ಪಲಾಗದು.
ಮೊನ್ನೆ ರಾತ್ರಿ ಕನಸಿನಲ್ಲಿ ನಿನ್ನ ಕಂಡೆನೇತಕೋ!
ಕಣ್ಣುತುಂಬ ಕಾಣುವಾಶೆ ತಡೆಯಲಾರದಾಯಿತು.

ಇಂತಹ ಸೋದರ ಮಾವಂದಿರು ಅದೆಷ್ಟು ಮಂದಿ ಮಕ್ಕಳಿಗೆ ಸಿಕ್ಕಾರು? "ಸೋಮಿ ಇಂದು ರವಿವಾರ, ಪಯಣಕ್ಕೆ ಸರಿ ಸಮಯ, ಸೋಮವಾರ ನನಗೆ ಶಾಲೆಯಿದೆ, ಹೋಗಲೇಬೇಕು. ಮೊನ್ನೆ ಕನಸಿನಲ್ಲಿ ನಿನ್ನನ್ನು ಕಂಡೆ, ನಿನ್ನನ್ನು ಕಾಣುವಾಶೆ ಬಹಳವಾಗಿ ತಡೆಯದಾದೆ-ಅದಕ್ಕೇ ಹೀಗೆ ಬಂದೆ" ಎಂದ ಮಾವ-ತಿಮ್ಮಗುರು.

ನಿನ್ನೆ ರಜವ ಪಡೆದು ನಡೆದು ಬಂದೆನಿಂದು ರವಿದಿನ;
ತಣ್ಣನೆ ಹೊತ್ತೀಗ ಹೊರಡೆ ದಾರಿ ಬೇಗ ಸವೆವುದು.
ಕೀರುಹೊಳೆಯ ದಡದೊಳಿರುವೆ ಹತ್ತುಗಂಟೆ ಸಮಯಕೆ;
ಪಾರಣೆಯನು ಸತ್ರದಲ್ಲಿ ಮುಗಿಸಿ ದಣಿವನಾರಿಸಿ,

"ನಿನ್ನೆ ಶನಿವಾರ, ರಜವನ್ನು ಪಡೆದು, ನಡೆದು ಇಲ್ಲಿಗೆ ಬಂದೆನಪ್ಪಾ, ಈಗ ಭಾನುವಾರದ ಬೆಳಗಿನಜಾವದ ತಣ್ಣನೆಯ ವಾತಾವರಣದಲ್ಲಿ ನಡೆಯಹೊರಟರೆ ದಾರಿ ದೂರವೆನಿಸದು, ಬೆಳಗಿನ ಹತ್ತುಗಂಟೆಯ ವೇಳೆಗೆ ಕೀರುನದಿಯ ದಡವನ್ನು ಸೇರಿಬಿಡುತ್ತೇನೆ. ಅಲ್ಲಿಯೇ ಸ್ನಾನಾದಿಗಳನ್ನು ಪೂರೈಸಿ, ಛತ್ರದಲ್ಲಿ ದ್ವಾದಶಿಯ ಪಾರಣೆ ಮುಗಿಸಿಕೊಂಡು ಮುಂದಕ್ಕೆ ಸಾಗುತ್ತೇನೆ."  [ನೆನಪಿಡಿ, ಏಕಾದಶಿಯ ಉಪವಾಸದಂದು ಮಾವ ತಿಮ್ಮಗುರು ತನ್ನ ಅಳಿಯ ಸೋಮಿಯಮೇಲಿನ ಪ್ರೀತಿಗಾಗಿ, ಆತನನ್ನು ಕಾಣಲಿಕ್ಕಾಗಿ ಅದೆಷ್ಟೋ ಮೈಲಿಗಳನ್ನು ನಡೆದು ಆತನಲ್ಲಿಗೆ ಬಂದಿದ್ದ!]

ಮರಳಿ ಮೂರು ಘಂಟೆ ನಡೆದು, ಸಂಜೆಗೂರ ಸೇರುವೆ;
ಇರುವೆ ನಾಳೆ ಮಂಡುಗೆರೆಯೊಳುದಯ ಶಾಲೆವೇಳೆಗೆ."
-ಇಂತು ಹೇಳುತಡಿಯನಿಡುತ ಹೊರಟ ತಿಮ್ಮ ಮಾವನು;
ಚಿಂತೆಪಡುತ ಅಳಿಯ ಕೊಂಚ ದೂರ ಕೂಡ ನಡೆದನು.

"ಮರಳಿ ಮತ್ತೆ ಮೂರುಘಂಟೆಯ ಕಾಲ ನಡೆದು ಸಂಜೆಯ ಹೊತ್ತಿಗೆ ಊರನ್ನು ಸೇರಿಕೊಳ್ಳುವೆ. ನಾಳೆ ಸೂರ್ಯೋದಯದ ಸಮಯಕ್ಕೆ ಮಂಡುಗೆರೆಯ ಶಾಲೆಯಲ್ಲಿ ಇರುತ್ತೇನೆ" ಎಂದು ಹೆಜ್ಜೆಹಾಕತೊಡಗಿದ ತಿಮ್ಮಮಾವನ ಜೊತೆಗೆ ಸೋಮಿ ತಾನೂ ಚಿಂತೆಯಿಂದ ಒಂದಷ್ಟು ದೂರ ಹೆಜ್ಜೆ ಹಾಕಿದ.

ಬೆಳಕು ಹರಿಯೆ ವೆಸನದಿಂದ ಸೋಮಿ ನೆಲೆಗೆ ತಿರುಗಿದ;
ತಳಮಳವನು ನುಂಗಿ ಮಾವ ನಡೆದನೆರಡು ಗಾವುದ.
ಒಂದು ತಿಂಗಳಾದ ಬಳಿಕದೊಂದು ದಿವಸ ಸೋಮಿಯ
ತಂದೆಗೊಂದು ಪತ್ರ ಬಂತು, ತಿಮ್ಮಗುರುವಿನಾಶಯ.

ಬೆಳಗಾಗಿ ಬಿಟ್ಟಿತ್ತು, ನಿತ್ಯದ ಕೆಲಸಗಳ ಚಿಂತೆಯಲ್ಲಿ ವ್ಯಸ್ತನಾದ ಸೋಮಿ ತನ್ನ ನೆಲೆಗೆ ಹಿಂದಿರುಗಿದ; ಅಳಿಯನನ್ನು ಬಿಟ್ಟಿರಲಾರದ ತಳಮಳದಲ್ಲೇ ತಿಮ್ಮಗುರು ಎರಡು ಗಾವುದ ದೂರ ನಡೆದ. ಇಬ್ಬರಿಗೂ ಇದು ಕನಸೋ ಎಂಬ ರೀತಿ ಆಗಿಹೋಯ್ತು. ಅದಾದ ತಿಂಗಳೊಳಗೆ ಒಂದು ದಿನ ಸೋಮಿಯ ತಂದೆಗೆ ತಿಮ್ಮಗುರುವಿನಿಂದ  ಪತ್ರವೊಂದು ಬಂತು.

ಅದರೊಳಾತನಿಂತು ಬರೆದನೆರಗಿ ಭಾವನಡಿಯೊಳು:-
"ಇದುವೆ ನನ್ನಕಡೆಯ ಬರಹ; ತಿರುಪತಿಗಾಂ ಬಂದಿಹೆಂ;
ಎನಗೆ ಕೆಲಸ ಸಾಕೆನುತ್ತ ಮೇಲಕೆ ನಾಂ ಬರೆದಿಹೆಂ;
ಋಣದ ರೊಕ್ಕಲೆಕ್ಕವೆಲ್ಲ ಶೇಷ ಬಿಡದೆ ಸಲಿಸಿಹೆಂ;

ಅದರಲ್ಲಿ ಆತ ಹೀಗೆ ಬರೆದಿದ್ದ: "ತೀ|| ಭಾವನವರ ಅಡಿದಾವರೆಗಳಲ್ಲಿ ನಮಸ್ಕಾರಗಳು. ನೀವೆಲ್ಲರೂ ಕ್ಷೇಮವೆಂದು ಭಾವಿಸುತ್ತೇನೆ. ಇದುವೇ ನನ್ನ ಕಡೆಯ ಬರಹ. ನಾನು ತಿರುಪತಿಗೆ ಬಂದಿದ್ದೇನೆ. ನನಗೆ ಕೆಲಸ ಸಾಕೆಂದು ನನ್ನ ಮೇಲಧಿಕಾರಿಗಳಿಗೆ ಬರೆದಿದ್ದೇನೆ ಮತ್ತು ನನ್ನ ಜೀವಿತದ ರೊಕ್ಕದ ಋಣಬಾಧೆಗಳ ಲೆಕ್ಕವನ್ನು ಶೇಷ ಬಿಡದಂತೇ ಚುಕ್ತಾಮಾಡಿದ್ದೇನೆ.

ಮುಂದೆ ಹೀಗೆ ಯಾತ್ರೆ ಕಾಶಿಗೆಂದು ಮನವ ಮಾಡಿಹೆಂ.
ದುಂದುಗವೇನೆನ್ನೊಳಿಲ್ಲ; ವೆಸನಕಿಲ್ಲ ಕಾರಣಂ.
ಸೋಮಿ ಹರೆಯವಾಂತ ಬಳಿಕ ಹಗುರವಾಯಿತೆನ್ನೆದೆ.
ಸ್ವಾಮಿಕೃಪೆಯಿನವನು ಬೆಳೆದು ಸೊಗವ ಯಶವ ಗಳಿಸುಗೆ.

ಮುಂದೆ ಕಾಶೀಯಾತ್ರೆಗೆ ಹೋಗಬೇಕೆಂದುಕೊಂಡಿದ್ದೇನೆ. ದುಂದುವೆಚ್ಚವನ್ನು ಮಾಡುವ ಮನುಷ್ಯ ನಾನಲ್ಲವಾದ್ದರಿಂದ ಚಿಂತೆಗೆ ಕಾರಣವಿಲ್ಲ. ಸೋಮಿ ಇನ್ನೂ ಚಿಕ್ಕ ಹುಡುಗ ಎಂಬುದೇ ತಲೆಯಲ್ಲಿ ಬಹಳ ಕೊರೆಯುತ್ತಿತ್ತು; ಈಗಾತ ಹರೆಯದವನಾದ್ದರಿಂದ ಅದನ್ನು ನೆನೆದು ಹೃದಯ ಹಗುರವಾಯ್ತು. ಸ್ವಾಮಿ ಕೃಪೆಯಿಂದ ಆತ ಬೆಳೆದು, ಸುಖವನ್ನೂ-ಯಶಸ್ಸನ್ನೂ ಗಳಿಸಲಿ.

ಏನೊ ಮಮತೆ, ಏನೊ ಮೋಹ, ಏನೊ ಋಣದ ಬಂಧನ
ಎನ್ನನಿಷ್ಟುದಿನವು ಕಟ್ಟಿ ನಿಲಿಸಿತವನ ಕಾರಣ. 
ಈಗಳವನು ತನ್ನ ಶಕ್ತಿಯಿಂದ ಬೆಳೆಯೆ ತಕ್ಕನು;
ಈಗಳೆನಗಮಂತರಾತ್ಮ ಸೇವೆಯೊಂದೆ ತಕ್ಕುದು.

ಸೋಮಿಯ ಮೇಲಿನ ಯಾವುದೋ ಮಮತೆ, ಏನೋ ಮೋಹ, ಏನೋ ಋಣಾನುಬಂಧ ನನ್ನನ್ನು ಇಷ್ಟುದಿನ ಕಟ್ಟಿಹಾಕಿತ್ತು. ಈಗ ಆತ ಸ್ವಯಂ ತಾನೇ ಬೆಳೆಯಬಲ್ಲ ಎಂಬುದು ಗೊತ್ತಾಗಿದೆ. ಅಂತರಾತ್ಮದ ಸೇವೆಗೆ-ಚಿಂತನೆಗೆ ಇದು ನನಗೆ ಸಕಾಲ.

ಇಂತಹದಿನ ಬರಲೆನುತ್ತ ಬೇಡಿಕಾಯುತಿದ್ದೆನು;
ಸಂತಸವನು ಸೋಮಿಯೇಳ್ಗೆಯಿಂದಲೀಗ ಕಂಡೆನು.
ಇನ್ನದೇನುಮಿಲ್ಲಮೆನಗೆ ಮನಸು ಬೇಳ್ಪ ಭಾಗ್ಯವು;
ಇನ್ನು ಬೇರೆ ತೋರದೀಗ ಲೋಕದಿ ಕರ್ತವ್ಯವು.

ಇಂಥಾ ದಿನಕ್ಕಾಗಿಯೇ ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಸೋಮಿಯ ಏಳ್ಗೆಯನ್ನು ಕಂಡು ಸಂತಸಪಟ್ಟಿದ್ದೇನೆ. ಮನಸು ಬೇಡುವಂಥಾ ಯಾವುದೇ ಭಾಗ್ಯದಬೇಡಿಕೆ ಎನ್ನೊಳಿಲ್ಲ, ಲೋಕದಲ್ಲಿ ಮಾಡಬೇಕಾದ ಕರ್ತವ್ಯವೂ ಬೇರೆ ಯಾವುದೂ ಕಾಣಿಸುತ್ತಿಲ್ಲ.

ಒದಗಿತೀಗಳಾಯುವ ಶಿವಸೇವೆಗೀವ ಸಮಯವು;
ಇದುವೆ ಸಮಯ ಪುಣ್ಯಯಾತ್ರೆಗಿನ್ನು ತಡವು ಸಲ್ಲದು.
ನಾನು ಮಂಡುಗೆರೆಯೊಳಿದ್ದ ಮನೆಯೊಳೊಂದು ಗೂಡಿನೊಳ್
ಏನೊ ಬರೆದ ಕಡತವೊಂದನಿರಿಸಿರುವೆನು ಗಂಟಿನೊಳ್;

ಪರಮಾತ್ಮನ ಸೇವೆಗೆ ಮಿಕ್ಕ ಆಯುಷ್ಯವನ್ನು ವಿನಿಯೋಗಿಸಲು ಇದು ತಕ್ಕುದಾದ ಸಮಯ. ಇನ್ನು ತಡಮಾಡಬಾರದು-ಪುಣ್ಯಯಾತ್ರೆ ನಡೆಸಲೇಬೇಕು. ನಾನು ಮಂಡುಗೆರೆಯಲ್ಲಿ ವಾಸವಿದ್ದ ಮನೆಯ ಗೋಡೆಯ ಗೂಡಿನಲ್ಲಿ, ಬಟ್ಟೆಯ ಗಂಟಿನಲ್ಲಿ ಏನೋ ಬರೆದ ಕಡತವೊಂದನ್ನು ಇರಿಸಿದ್ದೇನೆ.

ಸೋಮಿಯದನು ನೋಡಿ ತೆಗೆದುಕೊಳುವೊಡಂತು ಮಾಡಲಿ;
ನೀಮದಾರುಮೆನ್ನ ತುಂಬ ನೆನೆಯದಿರಿರಿ-ಮರೆಯಿರಿ.
ಪ್ರೇಮವುಕ್ಕಿ ಬೆಸನ ಕುದಿದೊಡಾಗ ದೀಪವೊಂದನು
ಸೋಮಶಿವನ ಗುಡಿಯೊಳಿರಿಸಿ ’ದೇವಗೆ ನಮೊ’ಯೆನ್ನಿರಿ.

ಸೋಮಿ, ಆ ಗಂಟನ್ನು ತೆರೆದು, ತನಗೇನಾದರೂ ಬೇಕಿದ್ದರೆ ತೆಗೆದುಕೊಳ್ಳಲಿ. ನೀವ್ಯಾರೂ ನನ್ನ ಬಗ್ಗೆ ಬಹಳ ನೆನೆಯಬೇಡಿ, ಮರೆತುಬಿಡಿ. ಮಾನವ ಸಹಜ ಪ್ರೇಮವುಕ್ಕಿ ದುಃಖವುಮ್ಮಳಿಸಿದಾಗ, ಸೋಮಶಿವನ ಗುಡಿಯಲ್ಲಿ ದೀಪವೊಂದನ್ನು ಉರಿಸಿ, ದೇವರಿಗೆ ನಮೋ ಎನ್ನಿರಿ.

ದೇವದೇವನೊಲಿದು ನಿಮ್ಮನೆಲ್ಲ ಹರಸಿ ಸಲಹುವಂ.
ಜೀವಪಥವ ಸುಗಮವೆನಿಸಿ ನಿಮ್ಮನೆಲ್ಲ ನಡಸುವಂ"

ದೇವದೇವನು ಒಲಿದು, ನಿಮ್ಮನ್ನೆಲ್ಲಾ ಹರಸಿ ಸಲಹುತ್ತಾನೆ. ಜೀವನ ಸುಗಮವಾಗಿ ಸಾಗುವಂತೇ ನಡೆಸುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ." --ಎಂದು ಆ ಪತ್ರ ಸಾರಿತು.

ಆಯಿತಿನಿತು ವ್ಯಾಕುಲವೀಯೋಲೆಯಿಂದ ಸೋಮಿಯ
ತಾಯಿತಂದೆಯರಿಗೆ; ಅವನ ಕಣ್ಣೊಳಶ್ರುವುಕ್ಕಿತು.
ಮಂಡುಗೆರೆಗೆ ಸೋಮಿ ಹೋಗಿ ನೋಡಿದನಾ ಕಡತವ;
ಕಂಡನದೊರಳಿನಿತು ಬಾಳ್ಗೆ ಸಲುವ ತತ್ತ್ವ ಮಥಿತವ.
ಸಖರ ತೃಪ್ತಿಗೆಂದು ಸೋಮಿಯಾಯ್ದು ಹಲವು ಬಂತಿಯ
ಲಿಖಿಸಿದ ಪಡಿಹೊತ್ತಗೆಯಿದು ಮಂಕುತಿಮ್ಮ ಕಂತೆಯ.

ಪತ್ರವನ್ನೋದಿದ ಸೋಮಿಯ ತಂದೆ-ತಾಯಂದಿರು ಅತ್ತರು, ಸೋಮಿಯ ಕಣ್ಣಲ್ಲಿ ಧಾರೆ ಧಾರೆಗಳು ಹರಿದವು. ಆದರೂ ಮಾವನ ಆಜ್ಞೆಯೋ ಎಂಬಂತೇ, ಮಾವ ಬಿಟ್ಟುಹೋದ ಕಡತದಲ್ಲಿ, ಮಾವ ತೊರೆದುಹೋದ ಆ ಮನೆಯಲ್ಲಿ ಅದೇನಿದ್ದೀತು ಎಂಬುದನ್ನು ನೋಡಹೊರಟ ಸೋಮಿಗೆ ಬಾಳಪಥಕೆ ಅನ್ವಯವಾಗಬಲ್ಲ ಬಹುವಿಧ ತತ್ತ್ವಗಳ ರಾಶಿ ರಾಶಿ ಬರಹಗಳು ಕಂಡವು. ಅವುಗಳಲ್ಲಿ ಹಲವು ಬಂತಿಯನ್ನು ಸೋಮಿ ಆಯ್ದುಕೊಂಡ, ಅವುಗಳನ್ನು ಅಕ್ಷರರೂಪಕ್ಕೆ ಅಚ್ಚಿಗೆ ಅಣಿಗೊಳಿಸಿ ಹೊತ್ತಗೆ ರೂಪದಲ್ಲಿ ಸಿದ್ಧಪಡಿಸಿಸುದೇ ’ಮಂಕುತಿಮ್ಮನ ಕಗ್ಗ’ ಎಂಬ ಕಂತೆ ಎಂದು ಸೋಮಿ ಅರ್ಥಾತ್ ಡಿವಿಜಿ ಹೇಳಿದ್ದಾರೆ! ಕಗ್ಗಗಳನ್ನು ತಾನೇ ಹೊಸೆದರೂ, ಕಗ್ಗದ ನೇಪಥ್ಯದಲ್ಲಿ ತನ್ನನ್ನು ಅಣಿಗೊಳಿಸಿದ ಸೋದರ ಮಾವನಿಗೆ ಕೃತಜ್ಞತೆ ಅರ್ಪಿಸಿವ ಸಲುವಾಗಿ ಡಿವಿಜಿ ಹೀಗೆ ಹೇಳಿಕೊಂಡರು. ಈ ಕವನವನ್ನು ನನ್ನೊಳಗೇ ನಾನು ವಾಚಿಸುತ್ತಾ ಹೀಗೆ ಈ ಲೇಖವನ್ನು ಬರೆಯುತ್ತಿರುವಾಗ ಕನಿಷ್ಠಪಕ್ಷ ಹತ್ತುಸಾರಿ ಕಣ್ಣುಗಳಿಂದ ನೀರಿಳಿಯಿತು. ಈ ಕವನದಲ್ಲಿ ಬರುವ ಎಲ್ಲಾ ಪಾತ್ರಗಳೂ ಡಿವಿಜಿಯವರ ಜೀವನದ ನೈಜ ಪಾತ್ರಗಳೇ ಆಗಿವೆ. ಕವನದಲ್ಲಿ ಕಾಣಿಸಿಕೊಂಡ ’ತಿಮ್ಮಗುರು’ ಡಿವಿಜಿಯವರ ಸೋದರಮಾವ ದಿ| ಶ್ರೀ ಗುಂಜೂರು ತಿಮ್ಮಪ್ಪನವರು. ಡಿವಿಜಿಯವರ ಅಜ್ಜಿ[ತಾಯಿಯ ತಾಯಿ] ಸಾಕಮ್ಮ.

ಒಂದು ಕಾಲಕ್ಕೆ ಶೇಕ್ದಾರ ಗುಂಡಪ್ಪನವರ ಮನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ನೂರಾರು ಜನರ ಅತಿಥಿಸತ್ಕಾರವನ್ನು ನಿತ್ಯವೂ ನಡೆಸಿದ್ದ ಸಂಸ್ಥಾನಿಕರ ಮನೆ, ಪ್ಲೇಗುಮಾರಿಯಿಂದ ಹೇಗೆ ಎಲ್ಲವನ್ನೂ ಕಳೆದುಕೊಂಡಿತು ಎಂಬ ವಿಸ್ತಾರವಾದ ಕಥೆಯನ್ನು ಡಿವಿಜಿಯವರ ’ಜ್ಞಾಪಕ ಚಿತ್ರಶಾಲೆ-೮’ ರಲ್ಲಿ[’ಜ್ಞಾಪಕ ಚಿತ್ರಶಾಲೆ’-ಒಟ್ಟೂ ಎಂಟು ಸಂಪುಟಗಳಿದ್ದು ಎಲ್ಲವೂ ಸಂಗ್ರಹಯೋಗ್ಯವಾಗಿವೆ]ಓದಿಕೊಳ್ಳಬಹುದಾಗಿದೆ. ಅನೇಕ ಉಪಕಥೆಗಳು ರಂಜನೀಯವೆನಿಸಿದರೆ, ಅಂದಿನ ಬೆಂಗಳೂರು, ಅಂದಿನ ಕರ್ಣಾಟ ದಕ್ಷಿಣಪ್ರಾಂತ, ಅಂದಿನ ಸರಕಾರ, ಅಂದಿನ ಅಧಿಕಾರಿಗಳು, ಅಂದಿನ ಸರಕಾರ-ಕಾಯ್ದೆ-ಕಟ್ಲೆಗಳ ನಡಾವಳಿ, ಅಂದಿನ ಜನರ ವ್ಯಾವಹಾರಿಕ ವೈಖರಿ, ಅಂದಿನ ಸಮಾಜದಲ್ಲೂ ಜನರಲ್ಲಿ ಇದ್ದ ಮೋಸ ಮತ್ತು ವಂಚನೆ....ಹೀಗೇ ಹಲವು ಹತ್ತು ವಿಷಯಗಳು ವೇದ್ಯವಾಗುತ್ತವೆ. ಮಗುವಾಗಿದ್ದಾಗ, ಚಿಕ್ಕ ಅಜ್ಜ ರಾಮಣ್ಣನ ಅವಿಭಕ್ತಕುಟುಂಬದ ವ್ಯವಹಾರ ನಿರ್ವಹಣೆಯ ದೇಖರೇಕಿಯಲ್ಲಿ ಸುಖವಾಗಿದ್ದ ಡಿವಿಜಿಯವರ ತಂದೆಯ ಸಂಸಾರ, ಕೇವಲ ಪ್ಲೇಗು ಬಂದು ಹೋದಮೇಲೆ ಹೇಗೆ ಎಲ್ಲವನ್ನೂ ಕಳೆದುಕೊಂಡು, ಅನ್ನವನ್ನರಸಬೇಕಾದ ಕಡುದಾರಿದ್ರ್ಯಕ್ಕೆ ಒಳಪಟ್ಟಿತು ಎಂಬುದು ತಿಳಿದಾಗ ನನ್ನಂಥಾ ಓದುಗ ಮರುಗುತ್ತಾನೆ, ಅವಧೂತರಂತಹ ವ್ಯಕ್ತಿಗೂ ಈ ಇಳೆಯಲ್ಲಿ ಅದೆಂತಹ ಕಷ್ಟವಪ್ಪಾ ಎಂದು ತನ್ನೊಳಗೇ ಉಸುರಿಕೊಳ್ಳುತ್ತಾನೆ. ಗಂಡನನ್ನು ಕಳೆದುಕೊಂಡ ಅರೆಗುರುಡು ಅಜ್ಜಿ, ಡಿವಿಜಿಯವರ ಚಿಕ್ಕ ಅಜ್ಜಂದಿರ ವಿನಂತಿಗೆ ಮಣಿದು, ಹೆಂಗಸರೇ ಗತಿಯಿಲ್ಲದ ಮನೆಗೆ ಬಂದು-ಅಲ್ಲಿ ಪ್ರತಿನಿತ್ಯ ಒಂದೂವರೆ ಮೈಲು ಸಾಗಿ ನೀರು ಹೊರುತ್ತಾ ಎಲ್ಲರನ್ನೂ ಸಲಹುವುದು, ವೆಂಕಟರಮಣಯ್ಯನವರಿಗೆ ತನ್ನ ಮಗಳನ್ನು ಕೊಟ್ಟು, ತನ್ಮೂಲಕ ಅವಿಭಕ್ತ ಕುಟುಂಬದ ಏಳ್ಗೆಗೆ ಕಾರಣಳಾಗುವುದು, ಸಾಮಾನ್ಯ ಹೆಂಗಸರು ಹೊರಬಲ್ಲ ಹೊರೆಯಲ್ಲ! ತನ್ನ ತಂದೆ-ತಾಯ್ಗಳೊಟ್ಟಿಗೇ ಇದ್ದ ಸೋದರಮಾವ, ಮದುವೆಯನ್ನೇ ಮಾಡಿಕೊಳ್ಳದೇ ಹಾಗೇ ಇದ್ದು, ಶಿಕ್ಷಕರಾಗಿ ೫೦ ವರ್ಷಗಳ ವಯಸ್ಸಿನ ವರೆಗೂ ನಡೆಸಿ, ಸಾವಿರಾರು ಜನರ ಪ್ರೀತಿಗೆ ಪಾತ್ರವಾಗಿ-ಲೋಕಕ್ಕೆ ಬೇಕಾಗಿದ್ದವರು. ಲಾಯರ್ ಶೇಷಗಿರಿಯಪ್ಪ, ಕೌಟುಂಬಿಕ ವ್ಯವಹಾರ ಚತುರ ರಾಮಣ್ಣ, ವ್ಯಸನಿಕನಾಗಿ ಬೆಳೆದ ಶೀನಣ್ಣ ಇಂತಹ ಹಲವರ ಲೋಪದೋಷಗಳನ್ನೂ ಉನ್ನತಗುಣಗಳನ್ನೂ ಕಲೆಹಾಕಿ, ಹಂಸಕ್ಷೀರ ನ್ಯಾಯದಂತೇ-ಒಳ್ಳೆಯದನ್ನು ಮಾತ್ರ ಅಳವಡಿಸಿಕೊಂಡು, ಮಿಕ್ಕಿದ್ದನ್ನು ಮರೆತು, ’ಡಿವಿಜಿ’ ಎಂಬ ಮೂರ್ತಿ ಅನಾವರಣಗೊಳ್ಳುವ ಹೊತ್ತಿಗೆ, ತಗುಲಿದ ಚಾಣದ ಏಟುಗಳು ಕಮ್ಮಿಯಲ್ಲ!  "ಊಟದ[ಅನ್ನದ ಹುಡುಕಾಟ್] ಅಲೆದಾಟ ಇರುವವರಿಗೆ ಲೇಖನಕಾರ್ಯಕ್ಕೆ ಅವಶ್ಯವಾದ ವಿರಾಮವಾದರೂ ಹೇಗೆ ದೊರೆಯಬೇಕು?" ಎಂದು ಡಿವಿಜಿ ಒಂದು ಕಡೆ ಕೇಳುತ್ತಾರೆ. ಆದರೂ, ತನ್ನ ಬದುಕಿನ ಸಕಲ ಬೇಗುದಿಗಳನ್ನು ಬದಿಗಿಟ್ಟು, ಬದುಕಿನ ಬಂಡಿಗೆ ತಾನು ತನ್ನನ್ನು ಮಾರಿಕೊಳ್ಳದೇ, ಅದರ ಸೂತ್ರವನ್ನೇ ತನ್ನ ಕಯ್ಯಲ್ಲಿ ಹಿಡಿದು ಅಗಾಧ ಕೆಲಸಗಳನ್ನು ಮಾಡಿದ ಈ ಧೀಮಂತ ವ್ಯಕ್ತಿ, "ಅದೊಂದು ಶಕ್ತಿ" ಎನಿಸಿಕೊಳ್ಳಲು ಯೋಗ್ಯ.  ಎಲ್ಲವನ್ನೂ ಮುಗಿಸಿ ಮತ್ತೆ ಡಿವಿಜಿಯವರ ಮುಕ್ತಕವೊಂದನ್ನು ನೆನೆಸಿಕೊಂಡಾಗ ಅವರು ಇದ್ದಹಾಗೇ ಬರೆದರು- ನುಡಿದಹಾಗೇ ನಡೆದರು, ನಡೆದಹಾಗೇ ನುಡಿದರು ಎಂಬುದು ಮನದಟ್ಟಾಗುತ್ತದೆ.    

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ


Thursday, February 28, 2013

ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ!

 ಚಿತ್ರಋಣ: ಅಂತರ್ಜಾಲ 
ಓಲೆ-ನತ್ತನ್ನು ಬಿಟ್ಟು ಬಾಕಿ ಎಲ್ಲ ಆಭರಣವನ್ನೂ ದಾನಮಾಡಿದ ಗೌರಮ್ಮ ಮತ್ತೆ ಮತ್ತೆ ಎದುರಾಗುತ್ತಾಳೆ! 

ವೈದ್ಯರೆದುರೇ ಮನು ಸತ್ತಾಗ ಆತನಿಗಾಗಿ ಬಹಳವಾಗಿ ಅತ್ತವಳು ರಾಜಮ್ಮ. ಆ ಕ್ಷಣದಲ್ಲಿ ರಾಜಮ್ಮನಿಗೂ ಮನುವಿಗೂ ಅಂಥಾದ್ದೇನು ಸಂಬಂಧವೆಂಬುದು ವೈದ್ಯರಿಗೂ ಅರಿಯದು! ರಾತ್ರಿ ಊಟದಹೊತ್ತು, ಸುಬ್ಬು ತಂದ ಕರೆಯನ್ನು ತಿರಸ್ಕರಿಸಿ, "ಬೆಳಿಗ್ಗೆ ಬರ್ತೀನಿಂತ ಹೇಳು" ಎಂದಿದ್ದ ವೈದ್ಯರು, ಸುಬ್ಬು ಮತ್ತೆ ತಡರಾತ್ರಿ ಬಂದು ಕರೆದಾಗ ರಾಜಮ್ಮನ ಮನೆಗೆ ಚಿಕಿತ್ಸೆಗೆ ನಡೆದುಹೋದವರು. ಆ ನಡುರಾತ್ರಿಯಲ್ಲಿ, ಸತ್ತವನ ದೇಹವನ್ನು ಬಿಟ್ಟು ಆ ಮನೆಯಲ್ಲಿ ಇದ್ದುದು ರಾಜಮ್ಮಳೊಬ್ಬಳೇ. ಅದನ್ನೇ ಗಮನಿಸಿದ ವೈದ್ಯರು ಏಕಾಂಗಿಯಾಗಿರುವ ರಾಜಮ್ಮ ಎಲ್ಲಿ ಹೆದರಿಕೊಂಡಾಳು ಎಂಬ ಮಾನವೀಯತೆಯಿಂದ ಬೆಳಗಾಗುವವರೆಗೂ ಅಲ್ಲೇ ಇದ್ದು ಮರಳುತ್ತಾರೆ. ವಾರದ ತರುವಾಯ ವೈದ್ಯರ ಹೆಸರಿಗೆ ರಾಜಮ್ಮನಿಂದ ಬಂದ ಅಂಚೆ ರಾಜಮ್ಮ-ಮನುವಿನ ಕಥೆಯನ್ನು ಬಿಚ್ಚಿಡುತ್ತದೆ! ವೇಶ್ಯೆಯ ಮಗಳಾಗಿ ತಾನು ಜನಿಸಿದ್ದು, ತಾಯಿಗಿದ್ದ ಹಣದ ವ್ಯಾಮೋಹ, "ಯಾರಿಗೂ ಹೃದಯದಲ್ಲಿಸ್ಥಾನಕೊಡಬೇಡ"ವೆಂದು ಬೋಧಿಸಿದ ತಾಯಿ, ಹರೆಯಕ್ಕೆ ಬಂದಾಗ ತನ್ನ ರೂಪಕ್ಕೆ ಮನಸೋತು ತಾಯಿಯಲ್ಲಿ ಪ್ರಸ್ತಾವಿಸಿದ ಸಿರಿವಂತರು, ಅವರಲ್ಲಿ ತನ್ನನ್ನು ಬಹುವಾಗಿ ಆಕರ್ಷಿಸಿದ ಸಿರಿವಂತರ ಮನೆಯ ಯುವಕ ಮನು, ಆತನ ಸಂಪತ್ತನ್ನೆಲ್ಲಾ ಆತ ತನಗಾಗಿ ಸುರಿದಿದ್ದು, ಆತನಿಗೆ ತನ್ನ ಹೃದಯವನ್ನು ತಾನು ಕೊಟ್ಟಿದ್ದು, ಇಬ್ಬರೂ ಪರಸ್ಪರ ಪ್ರೀತಿಸಿದ್ದು, ನಿತ್ಯವೂ ಆತ ಬಂದು ತನ್ನೊಡನೆ ಇರುತ್ತಿದ್ದುದು, ತಮ್ಮನ್ನು ಬೇರ್ಪಡಿಸಲು ತಾಯಿ ಹೇಳಿದ ಸುಳ್ಳು, ಆ ಸುಳ್ಳಿನಿಂದ ಅರೆಹುಚ್ಚನಾದ ಮನು, ಆತನನ್ನು ಹುಡುಕಿ ತೆರಳಿ ಅವನ ಸ್ಥಿತಿಗೆ ಮರುಗಿ, ಅವನೊಟ್ಟಿಗೆ ಊರು ತೊರೆದು ಯಾರಿಗೂ ಹೇಳದೇ ಈ ಊರಿಗೆ ಬಂದು ಕಳೆದಮೂರು ವರ್ಷಗಳಿಂದ ಬದುಕು ನಡೆಸಿದ್ದ ತನ್ನ ಪರಿ, ನೂರಕ್ಕೆ ನೂರು ಮೊದಲಿಂತಾಗದ ಮನುವಿನ ಬಗ್ಗೆ ತನಗಿದ್ದ ನೋವು-ತುಡಿತ ಮತ್ತು ಅವನ ಅಕಾಲಿಕ ಸಾವು, ’ಮನುಷ್ಯರೆನಿಸಿ’ ಪರಿಚಿತರಾಗಿದ್ದು ಸುಬ್ಬು ಎಂಬ ಬಾಲಕ ಮತ್ತು ವೈದ್ಯರು ಮಾತ್ರ --ಎಂಬೀ ಎಲ್ಲದರ ಚಿತ್ರಣವನ್ನು ನೋಡುವಾಗ ವೇಶ್ಯೆಯ ಮಗಳು ಅನಿವಾರ್ಯವಾಗಿ ವೇಶ್ಯೆಯೆಂದು ಗುರುತಿಸಲ್ಪಟ್ಟರೂ, ಅವಳಲ್ಲಿಯೂ ಇರಬಹುದಾದ ಮಾನವೀಯ ಆಂತರ್ಯ, ಅಲ್ಲದೇ, ಗೊಂದಲಗಳ ನಡುವೆಯೂ ಕರ್ತವ್ಯದ ಕರೆಗೆ ಓಗೊಟ್ಟ ವೈದ್ಯ ಆಕೆಯ ಕಾಗದ ತಲ್ಪಿದ ಮರುದಿನ ಸಪತ್ನೀಕನಾಗಿ ಆಕೆಯನ್ನು ಕಾಣಲು ಹೋಗುವುದು-- ಈ ಎಲ್ಲ ಅಂಶಗಳು ಕಥೆಯನ್ನು ಜೀವಂತವಾಗಿಸುತ್ತವೆ. ಚಿಕ್ಕ ಕಥೆಯೊಂದು ಕಾದಂಬರಿಗಿಂತ ಹೆಚ್ಚಿನ ಗಾಢ ಪರಿಣಾಮ ಬೀರುತ್ತದೆ. ಓದುತ್ತಿದ್ದಂತೆಯೇ ದೃಶ್ಯಗಳು ಕಣ್ಣಮುಂದೆ ಹಾದುಹೋದಾಗ ಸಿನಿಮಾ ನೋಡಿದಷ್ಟೇ ತೃಪ್ತಿ ಓದುಗರಿಗಾಗುತ್ತದೆ. ಈ ಕಥೆಯ ಹೆಸರು 'ಮನುವಿನ ರಾಣಿ'. 

ಪುರಾತನ ಜೀವನಕ್ರಮವನ್ನು ತೊರೆದು ಅಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ, ೨೦ನೇ ಶತಮಾನದ ಮೂವತ್ತರ ದಶಕದಲ್ಲಿ, ಜನಜೀವನ ಹೇಗಿತ್ತೆಂಬುದನ್ನು ಕಥೆಗಳಲ್ಲಿ ಪರೋಕ್ಷವಾಗಿ ಹೇಳುತ್ತಾ, ಅಂದಿನ ಸಮಾಜದಲ್ಲಿ ಹೆಣ್ಣಿನ ಜೀವನ ಯಾವೆಲ್ಲಾ ರೀತಿಯಲ್ಲಿ ಇರಬಹುದಿತ್ತು ಎಬುದಕ್ಕೆ ಒತ್ತುಗೊಡುತ್ತಾ, ಕಾದಂಬರಿಯ ಜಾಡಿನಲ್ಲಿ ಸಾಗುವ ಕಥೆಗಳು, ಮಧ್ಯದಲ್ಲೆಲ್ಲೋ ತಿರುವು ಪಡೆದು ಅಡ್ಡಡ್ಡ ಸಾಗಿ ಮತ್ತೆ ಬಂದು ಮುಖ್ಯಹಾದಿಯನ್ನು ಸೇರಿಕೊಳ್ಳುವುದು ಗೌರಮ್ಮನ ಕಥೆಗಾರಿಕೆಯಲ್ಲಿನ ವೈಶಿಷ್ಟ್ಯ; ಸಂಭಾಷಣೆಗಳಲ್ಲಿನ ಬಿಸುಪು ಕಥೆಗಳನ್ನು ಓದುಗರು ಇನ್ನಷ್ಟು ಮೆಚ್ಚುವಂತೇ ಮಾಡುತ್ತವೆ. ಎಳೆಯ ವಿಧವೆಯೊಬ್ಬಳು ತನ್ನನ್ನು ಮದುವೆಯಾಗಲು ತುದಿಗಾಲಲ್ಲಿ ತಹತಹಿಸಿ ನಿಂತ ವಿಧುರನಿಗೇ ಮರ್ಮಾಘಾತವಾಗುವ ಪ್ರಶ್ನೆ ಎಸೆದು ದಿಗಿಲು ಹುಟ್ಟಿಸಿ ಬಾಯಿಮುಚ್ಚಿಸಿದ್ದು ’ಪುನರ್ವಿವಾಹ’ದಲ್ಲಿದ್ದರೆ, ಇನ್ನೋರ್ವ ಹೆಣ್ಣಿನ ಕುಟುಂಬದಲ್ಲಿ ಒಡಕುಮೂಡಬಾರದೆಂಬ ವಿವೇಕದಿಂದ-ತನ್ನ ಜೀವೋತ್ಕರ್ಷದ ಆಯ್ಕೆಯನ್ನೇ ಹಿಂದಕ್ಕೆ ಜರುಗಿಸಿಕೊಂಡ ವಾಣಿಯ ಪಾತ್ರ-’ವಾಣಿಯ ಸಮಸ್ಯೆ’ಯಲ್ಲಿನ ಅತ್ಯಪೂರ್ವ ಚಿತ್ರಣ. ಪ್ರತಿಯೊಂದೂ ಕಥೆಯಲ್ಲಿ ಸಹಜಗತಿ, ನಿರ್ಭೀತ ನಡೆ, ಹೊಸತನವನ್ನು ಸ್ವೀಕರಿಸುತ್ತಾ ಹಳೆಯ ಮೌಢ್ಯಗಳನ್ನು ಪಕ್ಕಕ್ಕೆ ಸರಿಸಿ ನಿಲ್ಲುವ ಹೆಣ್ಣಿನ ಪಾತ್ರಗಳು, ಜೀವ-ಭಾವಗಳ ತಾಕಲಾಟ, ತರ್ಕ, ಅಂದಿನ ಸಾಮಾಜಿಕ ವಿದ್ಯಮಾನ ಇವೆಲ್ಲವನ್ನೂ ಮೇಳೈಸಿ ಕಟ್ಟಿಕೊಟ್ಟ ಶೈಲಿ, ಗೌರಮ್ಮನನ್ನು ಉತ್ತಮ ಕಥೆಗಾರ್ತಿ ಎನ್ನಿಸಿವೆ. ಕಥೆಗಳಲ್ಲಿ ಇರುವ ಬಹುತೇಕ  ಮಹಿಳಾ ಪಾತ್ರಗಳು ಹದಿಹರೆಯದವೇ ಆಗಿದ್ದು, ಹದಿಹರೆಯದಲ್ಲಿನ, ವಯೋಸಹಜ ಸಡಗರ, ಜೀವನೋತ್ಸಾಹ, ಮೋಜು-ಮಸ್ತಿ, ತಮಾಷೆ, ಪ್ರೀತಿ-ಪ್ರೇಮ ಎಲ್ಲವೂ ಸಹಿತ ಓದುಗರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ.

ಬರೆದ ಎಲ್ಲಾ ಕಥೆಗಳೂ ಒಂದಕ್ಕಿಂತ ಒಂದು ವಸ್ತು-ವಿಷಯದಲ್ಲೂ ಭಿನ್ನವಾಗಿವೆ. ಪೌರಾಣಿಕ ಕಥೆಗಳಷ್ಟೆ ಪ್ರಾಮುಖ್ಯತೆ ಪಡೆದಿದ್ದ ಆ ಕಾಲಘಟ್ಟದಲ್ಲಿ, ಕನ್ನಡದಲ್ಲಿ ಬರಹಗಾರ್ತಿಯರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು ಎನ್ನಬಹುದು. ಶ್ಯಾಮಲಾ ಬೆಳಗಾಂವ್ಕರ್, ಸರಸ್ವತೀಬಾಯಿ ರಾಜವಾಡೆ ಮತ್ತು ಕೊಡಗಿನ ಗೌರಮ್ಮ ಎಂಬೀ ಮೂವರು ಮಾತ್ರ ಬರಹಗಳಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ’ರಾಷ್ಟ್ರಬಂಧು’, ’ಜಯಕರ್ನಾಟಕ’, ’ಜಯಂತಿ’, ’ಪ್ರಜಾಮತ’, ’ಕೇಸರಿ’, ’ಕಥಾವಳಿ’ ಮತ್ತು ’ಜೀವನ’ ಮೊದಲಾದ ಪತ್ರಿಕೆಗಳಲ್ಲಿ ಇವರೆಲ್ಲರ ಬರಹಗಳು ಅದರಲ್ಲೂ ಹೆಚ್ಚಾಗಿ ಕಥೆಗಳು ಪ್ರಕಟಗೊಳ್ಳುತ್ತಿದ್ದವು. ವಿಷಯಗಳು ಹೇರಳವಾಗಿದ್ದರೂ ಅಭಿವ್ಯಕ್ತಗೊಳಿಸುವಲ್ಲಿ ಅನೇಕ ಮಹಿಳೆಯರು ಸಫಲರಾಗಿರಲಿಲ್ಲ; ಕೆಲವರಿಗೆ ಅಷ್ಟೊಂದು ಧೈರ್ಯವೂ ಇರಲಿಲ್ಲ; ಇನ್ನು ಕೆಲವರಿಗೆ ಆ ಆರ್ಥಿಕ, ಕೌಟುಂಬಿಕ ಅನುಕೂಲವಿರಲಿಲ್ಲ. ಆ ವಿಷಯದಲ್ಲಿ ಗೌರಮ್ಮ ನಿಜಕ್ಕೂ ಭಾಗ್ಯವಂತೆಯೇ ಸರಿ. ಮಡಿಕೇರಿಯಲ್ಲಿ ಆ ಕಾಲದಲ್ಲಿ ಹೆಸರುವಾಸಿ ವಕೀಲರಾಗಿದ್ದ ಎನ್.ಎಸ್. ರಾಮಯ್ಯ ಮತ್ತು ಅವರ ಪತ್ನಿ ನಂಜಕ್ಕನ ಮಗಳಾಗಿ ೧೯೧೨ ರ ಮಾರ್ಚ್ ೫ ರಂದು ಜನಿಸಿದವರೇ ಕೊಡಗಿನ ಗೌರಮ್ಮ. ಬಾಲ್ಯದಲ್ಲಿಯೇ ತಾಯಿ ಗತಿಸಿಹೋದರೂ ತಂದೆಯೇ ಆಕೆಗೆ ತಂದೆ-ತಾಯಿ ಎರಡೂ ಆಗಿ ಬೆಳೆಸಿದರು. ಅಮ್ಮನ ಪ್ರೀತಿಯನ್ನು ಜಾಸ್ತಿ ಪಡೆಯಲಾಗದಿದ್ದರೂ, ಆಗಿನ ಮನೆತನದ ಬದುಕಿನ ಬಿಗಿವಾತಾವರಣವೂ ಗೌರಮ್ಮನನ್ನು ತೀರಾ ಬಿಗಿಯಾಗಿ ಅಪ್ಪಲಿಲ್ಲ ಎಂಬುದು ವೇದ್ಯ. ಹೀಗಾಗಿ ಚಿಕ್ಕಂದಿನಲ್ಲೇ ಅವರಿವರೊಟ್ಟಿಗೆ ವ್ಯವಹರಿಸುತ್ತಾ ಬೆಳೆಯಬೇಕಾದ ಅನಿವಾರ್ಯತೆ, ಅವರ ವ್ಯಕ್ತಿತ್ವ ವಿಕಸನಕ್ಕೊಂದು ಅವಕಾಶ ಕಲ್ಪಿಸಿತು. ೧೩ನೇ ವಯಸ್ಸಿಗೇ ಅಂದರೆ ೧೯೨೫ ರಲ್ಲೇ, ತಮ್ಮ ಸಂಬಂಧಿಕರೇ ಆದ ಶುಂಠಿಕೊಪ್ಪದ ಬಿ.ಟಿ.ಗೋಪಾಲಕೃಷ್ಣಯ್ಯನವರನ್ನು ವಿವಾಹವಾದ ಗೌರಮ್ಮ, ನಂತರ ತಮ್ಮ ಬರಹಗಳಲ್ಲಿ, ವ್ಯವಹಾರಗಳಲ್ಲಿ ಶ್ರೀಮತಿ ಬಿ.ಟಿ.ಜಿ.ಕೃಷ್ಣ ಎಂದೇ ಗುರುತಿಸಿಕೊಂಡರು. ಪತ್ನಿಯ ವ್ಯಕ್ತಿತ್ವವನ್ನು ಗೌರವದಿಂದ ಕಾಣುವ ಗಂಡಂದಿರು ಆ ಕಾಲಘಟ್ಟದಲ್ಲಿ ಸ್ವಲ್ಪ ಕಮ್ಮಿಯೇ ಎನ್ನಬೇಕು. ಏನಿದ್ದರೂ ಪತಿಯ ನೆರಳಾಗಿ ಹಿಂಬಾಲಿಸಿಕೊಂಡು ಗಂಡ ಹೇಳಿದ್ದನ್ನು ಕಣ್ಮುಚ್ಚಿ ಪಾಲಿಸಿಕೊಂಡು ಹೋಗುವ ಗರತಿಯರ ಕಾಲ, ಗಂಡಂದಿರೆನಿಸಿಕೊಂಡವರು ಅಹಮಿಕೆ ಮೆರೆದ ಕಾಲ ಅದಾಗಿತ್ತು! ಆದರೂ ಬಿ.ಟಿ. ಗೋಪಾಲಕೃಷ್ಣಯ್ಯ ಮಾತ್ರ ಗೌರಮ್ಮನನ್ನು ಆ ರೀತಿ ನಡೆಸಿಕೊಳ್ಳಲಿಲ್ಲ; ಗೌರಮ್ಮ ಸ್ವತಂತ್ರವಾಗಿ ಬದುಕುತ್ತಾ, ಮನೆವಾರ್ತೆಯೊಟ್ಟಿಗೆ ಸಾಮಾಜಿಕ, ರಾಜಕೀಯ, ಕೌಟುಂಬಿಕ ಮತ್ತು ಸಾಹಿತ್ಯಕ  ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಇದು ವರದಾನವಾಯ್ತು.        

ಯಾವಕಾಲದಲ್ಲಿ ಹೆಂಗಸರು ಒಳಮನೆಯಿಂದ ಹೊರಗೆ ಗಂಡಸರೆದುರು ನಿಂತೋ ಕುಳಿತೋ ಮಾತನಾಡಲು ಹಿಂಜರಿಯುತ್ತಿದ್ದರೋ ಅದೇ ಕಾಲದಲ್ಲಿ ಗೌರಮ್ಮ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡರು. ಪ್ರತಿನಿತ್ಯ ಟೆನಿಸ್ ಆಡುವುದು ಮತ್ತು ಈಜುವುದು ಅವರ ಹವ್ಯಾಸವಾಗಿತ್ತು. ಕನ್ನಡದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ. ಬಿ.ಎಂ.ಶ್ರೀ, ಮಾಸ್ತಿ, ರಾಜರತ್ನಂ ಇಂಥವರ ಬರಹಗಳನ್ನೆಲ್ಲಾ ಗೌರಮ್ಮ ಓದುತ್ತಿದ್ದರು. ಓದುತ್ತಾ ಓದುತ್ತಾ ಅವರೊಳಗೇ ಒಬ್ಬ ಕಥೆಗಾರ್ತಿ ಜನಿಸಿದ್ದಳು. ಸಾಮಾಜಿಕ ಶೋಷಣೆ ಮತ್ತು ಮೌಢ್ಯಗಳ ವಿರುದ್ಧ ಆ ಕಥೆಗಾರ್ತಿ ಸದಾ ಬರೆಯತೊಡಗಿದ್ದಳು! ೧೯೩೧ ರಲ್ಲಿ ಪುತ್ರೋತ್ಸವವೂ ಆಗಿ, ಮಗನಿಗೆ ’ವಸಂತ’ ಎಂದು ಹೆಸರಿಟ್ಟಿದ್ದರು. ಸಮೃದ್ಧ ಕುಟುಂಬದ ನೆಮ್ಮದಿಯ ಜೀವನ ಅವರದಾಗಿದ್ದರೂ, ತಾಯಿಯಿಲ್ಲದ ಕೊರಗು ಮಾತ್ರ ಅವರನ್ನು ಸದಾ ಬಾಧಿಸುತ್ತಲೇ ಇತ್ತು. ಮಗನಿಗೆ ಮಾತ್ರ ಆ ನೋವು ತಟ್ಟದಿರಲಿ ಎಂದು ಅವರು ಬಯಸಿದ್ದರು. ಸಮಾಜಮುಖಿ-ಬರಹಗಾರ್ತಿಯಾದ ಅವರಿಗೆ ಸ್ನೇಹಿತರ ವಿಶಾಲ ಬಳವೂ ಇತ್ತು. ಗಾಯಕಿಯಾಗಿದ್ದ ಶಕುಂತಲಾಚಾರ್, ಲೇಖಕಿಯರಾದ ಆರ್. ಕಲ್ಯಾಣಮ್ಮ, ಪದ್ಮಾವತಿ ರಸ್ತಗಿ ಮೊದಲಾದವರು ಅವರ ಸ್ನೇಹಿತರಾಗಿದ್ದು, ಮಾಸ್ತಿ, ಬೇಂದ್ರೆ, ರಾಜರತ್ನಂ ಇವರೆಲ್ಲಾ ’ಮನೆಜನ’ ಎಂಬಷ್ಟು ಬಳಕೆಯಲ್ಲಿದ್ದವರು. ಗೆಳೆಯರಲ್ಲಿ ಬಬ್ಬರಾದ ದ.ಬಾ.ಕುಲಕರ್ಣಿಯವರ ತಾಯಿಯೇ ತನ್ನ ತಾಯಿ ಎಂದು ತಿಳಿದುಕೊಂಡ ಗೌರಮ್ಮ, ಒಂದು ವರ್ಷ, ತುಲಾಸಂಕ್ರಮಣದ ಸಂದರ್ಭದಲ್ಲಿ, ಕಾವೇರಿಯ ತೀರ್ಥೋದ್ಭವದ ಹಬ್ಬಕ್ಕೆ ಬರುವಂತೇ ಅವರಿಗೆ ಕಾಗದ ಬರೆದಿದ್ದರು. ’ತಾಯಿಗೆ ಮಗಳಮನೆಗೆ ಬರಬೇಕೆಂಬ ಹಠವಿದ್ದರೂ ಅನಾರೋಗ್ಯದಿಂದ ಬರಲಾಗುತ್ತಿಲ್ಲ’ ಎಂಬ ಉತ್ತರ ದ.ಬಾ.ಕುಲಕರ್ಣಿಯರಿಂದ ಬಂದು ತಲ್ಪಿದಾಗ, "ಕಣ್ಣೆರಡೂ ಮಂಜಾಗಿ ಹೃದಯ ತುಂಬಿಬಂತು" ಎಂದು ಮತ್ತೆ ಮರಳಿ ಕಾಗದ ಬರೆದಿದ್ದರು. ಮಡಿಕೇರಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಗೌರಮ್ಮ ಹಿಂದೀ ವಿಶಾರದೆಯೂ ಆಗಿದ್ದರು. ಆಂಗ್ಲ ಭಾಷೆಯ ಬಳಕೆಯೂ ಇದ್ದು ಆಂಗ್ಲ ಸಾಹಿತ್ಯವನ್ನೂ ಸಾಕಷ್ಟು ಓದಿಕೊಂಡಿದ್ದರು. ಕುಟುಂಬದ ಹಿರಿಯರು ಅಂದಿನ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸಕ್ರಿಯ ಸದಸ್ಯರಾಗಿ ಪಾಲ್ಗೊಂಡಿದ್ದರ ಪರಿಣಾಮ, ಗೌರಮ್ಮ ರಾಜಕೀಯದಲ್ಲೂ ಆಸಕ್ತರಾಗಿದ್ದರು. ಇದು ಗೌರಮ್ಮನ ಕೌಟುಂಬಕ, ವ್ಯಾವಹಾರಿಕ, ಸಮಾಜಿಕ ಹಿನ್ನೆಲೆ.

ಕೊಡಗಿನ ಬರಹಗಾರರಿಗೆ ಅವರದ್ದೇ ಆದ ಲೋಕದಲ್ಲಿ ವಿಹರಿಸುತ್ತಾ ಬರೆದುಕೊಳ್ಳುವ ನೈಸರ್ಗಿಕ ವಾತಾವರಣ ಆಗ ಹೆಚ್ಚಿನದಾಗಿ ಇತ್ತು ಈಗಲೂ ಹಾಗೆ ಕೆಲಮಟ್ಟಿಗೆ ಇದೆ. ಅಲ್ಲಿನ ಬೆಳಗು, ಅಲ್ಲಿನ ಮಳೆಗಾಲದ ಮುಸಲಧಾರೆ-ಚಳಿಗಾಲದ ಬಿಟ್ಟೂಬಿಡದ ಚಳಿ-ಇಬ್ಬನಿಸುರಿಸುವ ಮಂಜುಮುಸುಕಿದ ವಾತಾವರಣ, ಅಲ್ಲಿನ ಕಾಫೀ ತೋಟ-ಕೆಲಸದ ಸುಗ್ಗಿ-ಕೂಲಿಯಾಳುಗಳಲ್ಲಿನ ಪ್ರೇಮ ಕಥೆಗಳು, ವಿವಿಧ ತೆರನಾದ ಹೂವುಗಳು, ಜೇನು-ದುಂಬಿ-ಕೀಟ ವೈಭವಗಳು, ವನ್ಯಮೃಗಗಳ ಅಟ್ಟಹಾಸಗಳು, ಸೂರ್ಯೋದಯ-ಸೂರ್ಯಾಸ್ತಗಳು, ನಿರ್ಜರ ಜಲಪಾತಗಳು, ಹುಟ್ಟಿ ಹರಿವ ಹಲವು ತೊರೆಗಳು, ನಿತ್ಯಹರಿದ್ವರ್ಣ ಕಾಡುಗಳ ಜೊತೆಜೊತೆಗೇ ಹಸಿರುಟ್ಟ ಗದ್ದೆ-ತೋಟ-ಸಾಗುವಳಿಮಾಡಿದ ಭೂಭಾಗಗಳು...ಹೀಗೇ ಅಲ್ಲಿನ ದೃಶ್ಯ ವೈವಿಧ್ಯ, ಅಲ್ಲಿನ ವರ್ಣ ವೈವಿಧ್ಯ ನಯನಾನಂದಕರ ಮತ್ತು ಮನೋಲ್ಲಾಸಕರ. ಅಂತಹ ಯಾವೊಂದೂ ವಿಷಯವಸ್ತುವನ್ನು ಆದಿಯಲ್ಲಿ ನೆಚ್ಚಿಕೊಳ್ಳದೇ ತೀರಾ ಬೇರೆಯದೇ ಆದ ಆಯಾಮದಲ್ಲಿ ಬರವಣಿಗೆಗೆ ತೊಡಗಿದ್ದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ವಿಷಯ. ಇಷ್ಟೇ ಅಲ್ಲ, ನಮ್ಮ ಗೌರಮ್ಮ ಸ್ವಲ್ಪ ಹಠಮಾರಿ ಕೂಡಾ; ಅಂದುಕೊಂಡಿದ್ದು ಆಗಲೇಬೇಕೆಂಬ ಜಾಯಮಾನ ಅವರದ್ದು; ತನ್ನ ನಿರ್ಧಾರದಲ್ಲಿ ತಪ್ಪಿರಲು ಸಾಧ್ಯವಿಲ್ಲಾ ಎಂಬ ದಾರ್ಷ್ಟ್ಯವೂ ಅವರಲ್ಲಿತ್ತು! ಕೊಡಗಿಗೆ ಗಾಂಧೀಜಿ ಬಂದಾಗ ವ್ಯವಸ್ಥಾಪಕರು ಅವರನ್ನು ಗುಂಡುಕುಟ್ಟಿಯಲ್ಲಿ, ಗೌರಮ್ಮನ ಮನೆಯ ಪಕ್ಕದ ಮನೆಯಲ್ಲೇ ಉಳಿದುಕೊಳ್ಳುವಂತೇ ಏರ್ಪಾಟುಮಾಡಿದ್ದು ಗೌರಮ್ಮನಿಗೂ ಗೊತ್ತಾಗಿಬಿಟ್ಟಿತ್ತು. ಗಾಂಧೀಜಿಯ ಪಾದಧೂಳಿ ತಮ್ಮ ಮನೆಗೂ ಬೀಳಲೆಂಬುದು ಅವರ ಅಪೇಕ್ಷೆಯಾಗಿತ್ತಾದರೂ ವ್ಯವಸ್ಥಾಪಕರು ಅದನ್ನು ಪುರಸ್ಕರಿಸಲಿಲ್ಲ. ತನ್ನ ಮನೆಗೆ ಗಾಂಧೀಜಿಯವರು ಬರುವುದಿಲ್ಲವೆಂಬುದನ್ನು ಕೇಳಿದಾಗಿನಿಂದ ಉಪವಾಸಕ್ಕೆ ಕುಳಿತ ಗೌರಮ್ಮನ ಈ ಸುದ್ದಿ ಗಾಂಧೀಜಿ ಉಳಿದುಕೊಂಡಿದ್ದ ಮನೆಯಲ್ಲೂ ಸದ್ದುಮಾಡಿದಾಗ, ಗಾಂಧೀಜಿ ಗೌರಮ್ಮನ ಮನೆಗೆ ಹೊರಡಲನುವಾದರು. ಅದನ್ನು ಕೇಳಿ ಸ್ವತಃ ಗೌರಮ್ಮ ತಾವೇ ಅಲ್ಲಿಗೆ ಹೋಗಿ ಗಾಂಧೀಜಿಯನ್ನು ಕರೆತಂದರು; ಅಭೂತಪೂರ್ವ ಆತಿಥ್ಯದ ಜೊತೆಗೆ ಕೊರಳಲ್ಲಿದ್ದ ಕರಿಮಣಿ[ತಾಳಿಯೊಂದನ್ನುಳಿದು ಇಡೀ ಸರವೇನೂ ಬಂಗಾರದ್ದಾಗಿರಲಿಲ್ಲ], ಓಲೆ ಮತ್ತು ನತ್ತು ಇವುಗಳನ್ನು ಬಿಟ್ಟು ಮಿಕ್ಕೆಲ್ಲಾ ತನ್ನ ಬಂಗಾರದ ಆಭರಣಗಳನ್ನು ಗಾಂಧೀಜಿಯ ಹರಿಜನ ಸೇವಾಕಾರ್ಯಕ್ಕೆ ದಾನವಾಗಿ ನೀಡುತ್ತಾ, "ಬದುಕಿನಲ್ಲಿ ಇನ್ನುಮುಂದೆ ಓಲೆ-ನತ್ತು ಎರಡನ್ನು ಬಿಟ್ಟು ಇನ್ನೇನನ್ನೂ ಇನ್ನೆಂದೂ ಧರಿಸುವುದಿಲ್ಲ"ವೆಂದು ಪಣತೊಟ್ಟರು! ಸಾತ್ವಿಕರಾದ ಗಾಂಧೀಜಿಯ ಕಣ್ಣಲ್ಲಿ ಈ ಸಂದರ್ಭದಲ್ಲಿ ಆನಂದಬಾಷ್ಪ ಉದುರದೇ ಇರಲಿಲ್ಲ. ಆದರೆ ಇದ್ಯಾವುದೂ ಗೌರಮ್ಮನವರ ಕಥೆಗಳಲ್ಲಿ ಪ್ರತಿಫಲಿಸಲಿಲ್ಲವೆಂಬುದನ್ನು ಗಮನಿಸಬೇಕು![ಇವತ್ತು ೧೦ ರೂಪಾಯಿ ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರೆಸಿಕೊಳ್ಳುವ ಜನ ಎಷ್ಟಿಲ್ಲ!] ತಾನು ಬದುಕಿದ ರೀತಿಯಿಂದಲೇ ತಾನು ಮಾದರಿ ಹೇಗೆ ಎಂಬುದನ್ನು ಗೌರಮ್ಮ ಈ ವಿಧದಲ್ಲಿ ತೋರಿಸಿಕೊಟ್ಟಿದ್ದಾರೆ.

ಬಡತನದಲ್ಲಿ ಹೊಟ್ಟೆಪಾಡಿಗಾಗಿ ಹೆಣಗಾಡುವವರಿಗೆ ಅಗ್ಗದ ಆಮಿಷ ದೊರೆತಾಗ, ಸಂದೇಹಗಳ ತಾಕಲಾಟದಲ್ಲಿ ಜಾತಿಬಿಟ್ಟು, ಮತಾಂತರಗೊಳ್ಳುವ ಮತ್ತು ಪ್ರೀತಿ-ಪ್ರೇಮ-ಪ್ರಣಯದ ಗುಂಗಿನಲ್ಲಿ ಎಲ್ಲಾಬಿಟ್ಟು ಮತಾಂತರಗೊಳ್ಳುವ ಒಂದೆರಡು ಕಥೆಗಳನ್ನು ಬರೆಯಬೇಕೆಂಬ ಇಚ್ಛೆ ಅವರದಾಗಿತ್ತು ಎನಿಸುತ್ತದೆ. ನಂತರ ಕೆಲವು ಕಥೆಗಳನ್ನು, ಕೊಡಗಿನ ನಿಸರ್ಗದ ಸುತ್ತ ಪೇರಿಸಿದ ರಮಣೀಯ ದೃಶ್ಯ ವೈಭವಗಳನ್ನೂ ಸಮೀಕರಿಸಿ ಬರೆಯುತ್ತಿದ್ದರೋ ಏನೋ. ಆದರೆ ಇಂತಹ ಅನೇಕ ಕಥೆಗಳನ್ನು ಬರೆಯುವುದಕ್ಕೆ ಅವರಿಗೆ ಅವಕಾಶವುಳಿಯಲಿಲ್ಲ. ಅರ್ಧ ಬರೆದ ಕಥೆಯ ಮಸಿ ಹಸಿಹಸಿಯಾಗಿ ಇನ್ನೂ ಹಾಗೇ ಇದ್ದಂತೆಯೇ ಈಜಲು ಹೋದ ಗೌರಮ್ಮ ಮರಳಿಬಾರದ ಲೋಕಕ್ಕೆ ತೆರಳಿದಾಗ ಅವರಿಗೆ ೨೯ ವಯಸ್ಸು. ತಮ್ಮ ಪ್ರಥಮ ಕಥಾಸಂಕಲನಕ್ಕೆ ’ಕಂಬನಿ’ ಎಂದು ಪ್ರಕಟಣಾ ಪೂರ್ವವೇ ಹೆಸರಿಸಿದ್ದ ಅವರು, ಪ್ರಕಟಿಸುವ ಜವಾಬ್ದಾರಿಯನ್ನು ದ.ಬಾ.ಕುಲಕರ್ಣಿಯವರಿಗೆ ವಹಿಸಿದ್ದರು. ’ಕಂಬನಿ’ ಹೊರಬರುವ ಮುನ್ನವೇ ಗೌರಮ್ಮ ಎಲ್ಲರ ಕಣ್ಣಲ್ಲೂ ಕಂಬನಿ ಹರಿಸಿಬಿಟ್ಟರು! ಅವರ ನಿಧನಾನಂತರ ’ಕಂಬನಿ’ ಮತ್ತು ’ಚಿಗುರು’ ಎರಡೂ ಕಥಾ ಸಂಕಲನಗಳು ಪ್ರಕಟಗೊಂಡವು. ’ಹೆಣ್ಣುಮಕ್ಕಳ ಕೃತಿ ಎಂಬ ಪೊಳ್ಳು ಸಹಾನುಭೂತಿಯ ಹೊರೆಯನ್ನು ಬಿಟ್ಟರೆ ನಮ್ಮ ಕೃತಿಗಳನ್ನು ವಿಮರ್ಶಿಸಿ ಬರೆಯುವ ಒಬ್ಬ ಪುಣ್ಯಾತ್ಮರೂ ಇಲ್ಲ’ ಎಂದು ’ರಂಗವಲ್ಲಿ’ ಕಥಾಸಂಗ್ರಹದಲ್ಲಿ [೧೯೩೭ರಲ್ಲಿ] ಅವರು ಹೇಳಿದ್ದರು. ಹಬ್ಬಕ್ಕೋ ಹುಣ್ಣಿಮೆಗೋ ಬರುತ್ತಲೇ ಇರುತ್ತಿದ್ದ ಬೇಂದ್ರೆಯವರಿಗೆ ಮುನ್ನುಡಿ ಬರೆದುಕೊಡುವಂತೇ ಕೇಳಿದ್ದರ ಪರಿಣಾಮವಾಗಿ, ಬೇಂದ್ರೆಯವರು ’ಕಟುಮಧುರ ಕತೆಗಾರ್ತಿ’ ಎಂದು ಬರೆದು ಹರಸಿದ ಮುನ್ನುಡಿ ಗೌರಮ್ಮ ಬದುಕಿರುವಾಗ ಅವರಿಗೆ ಸಿಗಲೇ ಇಲ್ಲ; ಸಿಕ್ಕಿದ್ದರೆ ಅವರು ಅದೆಷ್ಟು ಸಂತಸಪಡುತ್ತಿದ್ದರೋ ಅದನ್ನು ಪದಗಳಲ್ಲಿ ಹೇಳುವುದು ಸಾಧ್ಯವಾಗುವುದಿಲ್ಲ; ಬಾವುಕ ಜೀವಿಗಳಿಗೆಲ್ಲರಿಗೂ ಇಂತಹ ಮೆಚ್ಚುಗೆಯ ನುಡಿಗಳೇ ಬಹುದೊಡ್ಡ ಪುರಸ್ಕಾರಗಳಲ್ಲವೇ? ಗೌರಮ್ಮ ಬದುಕಿದ್ದರೆ ಈಗವರಿಗೆ ೧೦೩ ವರ್ಷಗಳ ವಯೋಮಾನ ಇರುತ್ತಿತ್ತು; ಇದ್ದ ೨೯ ವರ್ಷಗಳಲ್ಲೇ ೨೭ಕ್ಕೂ ಅಧಿಕ ಮನೋಜ್ಞ ಕಥೆಗಳನ್ನು ಬರೆದ ಗೌರಮ್ಮ ಪ್ರಾಯಶಃ ನೂರಕ್ಕೆ ನೂರು ಬಾರಿಸಿಬಿಡುತ್ತಿದ್ದರು-ಸೆಂಚುರಿ ಬಾರಿಸಿ ಜಗದ್ವಿಖ್ಯಾತಿ ಗಳಿಸಿ, ಲಾಬಿ-ಮಸಲತ್ತು ರಹಿತವಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಿದ್ದರು ಎಂಬುದು ಸಂಶಯಾತೀತ. ಶ್ರೇಷ್ಠ ಸಾಮಾಜಿಕ ಕಥೆಗಳಲ್ಲಿ ಹಲವು ಹೆಣ್ಣುಮಕ್ಕಳ ಪಾತ್ರಗಳನ್ನು ಚಿತ್ರಿಸಿದ ಕೊಡಗಿನ ಗೌರಮ್ಮ, ಕಥೆಯೊಂದಕ್ಕೆ ತಾನೇ ವಸ್ತುವಾಗಿ ಕಥೆಯಾದರು; ಕನ್ನಡ ಸಾರಸ್ವತ ಲೋಕದ ಮಿನುಗುವ ನಕ್ಷತ್ರಗಳಲ್ಲಿ ಒಂದು ನಕ್ಷತ್ರವಾದರು.        

Sunday, February 24, 2013

ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಚಿತ್ರಋಣ: ಅಂತರ್ಜಾಲ   
ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು.

ಮುದ್ಗಲ ಮಹರ್ಷಿಗಳು ನದಿ ದಾಟುವ ಅವಸರದಲ್ಲಿದ್ದಾಗ, ಗುಹನೆಂಬ ಬೆಸ್ತರವ ಹರಿಗೋಲನ್ನು ನಡೆಸುತ್ತಿದ್ದ. ಹರಿಗೋಲನ್ನೇರಿ ಕುಳಿತ ಮುದ್ಗಲರು ರಾಮನ ಕಥೆಯನ್ನು ಗುಹನಿಗೆ ತಿಳಿಸಿ, ಆತ ಲೋಕೋಪಕಾರಾರ್ಥವಾಗಿ ಜನಿಸಿದಾತ ಎಂದಿದ್ದೇ ತಡ ಮರುಕ್ಷಣವೇ ಗುಹ ರಾಮನಲ್ಲಿ ಆಸಕ್ತನಾದ. ರಾಮಧ್ಯಾನ ನಿರತನಾಗಿ ತನ್ನ ವೃತ್ತಿಗೇ ಹೋಗದೇ ಕುಟುಂಬ ನಿರ್ವಹಣೆ ಕಷ್ಟವಾಯ್ತು; ಮಡದಿ, ಓಲೆಯನ್ನೇ ಮಾರಾಟಮಾಡಿ ಹೊಟ್ಟೆತುಂಬಿಸಿಕೊಳ್ಳುವುದಕ್ಕಾಗಿ ದಿನಸಿ ತರಲು ಕಳಿಸಿದರೆ, ಕೈಗೆ ಸಿಕ್ಕ ಹಣದಿಂದ ಆತ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇದ್ದ ಮಣ್ಣಿನ ರಾಮವಿಗ್ರಹವನ್ನು ಕೊಂಡುತಂದು ಗುಡಿಸಲಲ್ಲಿ ಪೂಜೆಗೆ ಇಟ್ಟ.  ಜ್ಞಾನದೃಷ್ಟಿಯಿಂದ ಇದನ್ನರಿತ ಮುದ್ಗಲರು ಮತ್ತೆ ವಾರದಲ್ಲೇ ಮರಳಲು, ಗುಹನ ಹೆಂಡತಿ ತಾನೇ ಹರಿಗೋಲು ನಡೆಸಿ ದಾಟಿಸುವುದಾಗಿ ತಿಳಿಸಿ, ಗುಹನ ವೈರಾಗ್ಯವನ್ನು ಮುನಿಗೆ ಅರುಹಲು, ಮುದ್ಗಲರು ಧ್ಯಾನಕ್ಕೆ ಕುಳಿತ ಗುಹನನ್ನೇ ಕರೆದು, ಸಂಸಾರವಂದಿಗನಾದವನು  ವೃತ್ತಿಯನ್ನೂ ನಡೆಸುತ್ತಾ ಹೇಗೆ ಅದರಲ್ಲೇ ರಾಮನನ್ನು ಆರಾಧಿಸಬಹುದು ಎಂದು ಆಜ್ಞಾಪಿಸಿ, ರಾಮ ಎಂದಾದರೊಂದು ದಿನ ಬಂದು ನಿನಗೆ ದರ್ಶನವಿತ್ತಾಗ, ರಾಮನ ಪಾದಕ್ಕಂಟಿರುವ ಧೂಳನ್ನು ತೊಳೆದು ಆಮೇಲೆ ನಿನ್ನ ತೆಪ್ಪದಲ್ಲಿ ಕುಳ್ಳಿರಿಸಿಕೋ ಎಂದು ಹೇಳಿದರು. ಅನೇಕ ತಿಂಗಳುಗಳ ತರುವಾಯ ಶ್ರೀರಾಮ, ಸೀತಾ-ಲಕ್ಷ್ಮಣರೊಡಗೂಡಿ ಅಲ್ಲಿಗೈತಂದ. ಹರಿಗೋಲನೇರಲು ಬಂದ ಮೂವರು ದಾರಿಹೋಕರನ್ನು[ರಾಮ-ಸೀತಾ-ಲಕ್ಷ್ಮಣರು ಎಂಬುದು ಗುಹನಿಗೆ ಗೊತ್ತಿಲ್ಲ] ಇನ್ನೇನು ಹರಿಗೋಲಲ್ಲಿ ಕುಳ್ಳಿರಿಸಿಬೇಕೆಂದುಕೊಳ್ಳುವಾಗ ತೆಪ್ಪದಲ್ಲಿ ತಾನು ಪೂಜಿಸುತ್ತಿದ್ದ ರಾಮ ವಿಗ್ರಹಕ್ಕೂ ಹೊರಗೆ ನೆಲದಲ್ಲಿ ನಿಂತಿರುವ ಶ್ರೀರಾಮನಿಗೂ ಹೋಲಿಕೆ ಇರುವುದನ್ನು ಗುಹ ಕಂಡ. ಪಾದದಲ್ಲಿ ಬಹಳ ಧೂಳಿದೆಯೆಂದೂ ತೊಳೆಯಲು ಅನುವುಮಾಡಿಕೊಡಬೇಕೆಂದು ರಾಮನಲ್ಲಿ ವಿನಂತಿಸಿದ! ಗುಹನೆಂದುಕೊಂಡಿದ್ದು ರಾಮ ಕಾಡಿನ ದಾರಿಯಲ್ಲಿ ಓಡಾಡುವಾಗ ಪಾದಕ್ಕೆ ಕೊಳೆ ಅಂಟಿರುವುದರಿಂದ ಅದನ್ನು ಮಹರ್ಷಿಗಳು ತೊಳೆಯಲು ಹೇಳಿದ್ದಾರೆಂದು, ಆದರೆ ಅದರ ಫಲವೇನೆಂಬುದು ಗುಹನ ಅರಿವಿಗೆ ಇರಲಿಲ್ಲ.  ಸಂತೋಷದಿಂದ ಶೀರಾಮ ಪಾದವನ್ನಿತ್ತಾಗ ಗುಹ ರಾಮಪಾದವನ್ನು ತೊಳೆದ, ಕೃತಾರ್ಥನಾದ ಆತನ ಜನ್ಮ ಜನ್ಮಾಂತರ ಪಾಪಗಳು ಆ ಕ್ಷಣದಲ್ಲೇ ನಶಿಸಿಹೋಗಿ ಮರುಜನ್ಮದಲ್ಲಿ ರಾಜೋಚಿತ ಭೋಗಭಾಗ್ಯಗಳನ್ನು ಅನುಭವಿಸುತ್ತಾ ಔನ್ನತ್ಯದೆಡೆಗೆ ಸಾಗಲು ಅದು ಕಾರಣವಾಯ್ತು, ಜೊತೆಗೆ ಈಗಿರುವ ಜನ್ಮದಲ್ಲೂ ಅವನ ಕಷ್ಟಗಳೆಲ್ಲಾ ನಿವಾರಣೆಯಾಗಿ ನೆಮ್ಮದಿಯ ಸಂಸಾರವನ್ನು ನಡೆಸಿದ. ಇದು ಶ್ರೀರಾಮನ ಅನುಗ್ರಹ!! ಇಂತಹ ಅನೇಕ ಉಪಕಥೆಗಳು ನಮ್ಮ ರಾಮಾಯಣ-ಮಹಾಭಾರತ ಕಾವ್ಯಗಳಲ್ಲಿ ಓದಸಿಗುತ್ತವೆ.      

ಒಳ್ಳೆಯದು ಎಲ್ಲಿದ್ದರೂ ಬರಲಿ ಎನ್ನುವ ಅದೆಷ್ಟೋ ಮಂದಿಗೆ ತಮ್ಮ ಕಣ್ಣೆದುರೇ ಇರುವ ಒಳ್ಳೆಯ ವಿಷಯಗಳು ಕಾಣುವುದೇ ಇಲ್ಲ. ವಿದೇಶೀ ಕವಿ-ಸಾಹಿತಿಗಳ ಬಗ್ಗೆ ಅಪಾರವಾದ ಹೊಗಳಿಕೆ ಹಾಕಿದರೆ ತಮ್ಮ ಓದಿನ ವೈಶಾಲ್ಯ ಅಲ್ಲೀತನಕವೂ ಹಬ್ಬಿದೆ ಎಂದು ಮಿಕ್ಕದ ಜನ ತಿಳಿದುಕೊಳ್ಳಲಿ ಎಂಬ ’ಹೋಡ್ ಬುದ್ಧಿವಂತರು’ ಇನ್ನು ಕೆಲವು ಜನ. ಈ ಜಗತ್ತಿನಲ್ಲಿ ರಾಮಾಯಣ ಬರೆದ ವಾಲ್ಮೀಕಿ ಮತ್ತು ಮಹಭಾರತ ಬರೆದ ವೇದವ್ಯಾಸರಂತಹ ಕವಿಗಳು ಮತ್ತೆ ಇದುವರೆಗೂ ಹುಟ್ಟಿಬರಲೇ ಇಲ್ಲ; ಆ ಕಾವ್ಯಗಳು ಬರೇ ಕಾವ್ಯಗಳಲ್ಲಾ ಈ ಭವ್ಯ ಭಾರತದ ಪೂರ್ವೇತಿಹಾಸಗಳು. ಅಲ್ಲಿ ಪ್ರತೀ ಪಾತ್ರವೂ ಬರೇ ಪಾತ್ರವಲ್ಲಾ ಜೀವಂತ ನಡೆದಾಡಿದ ವ್ಯಕ್ತಿಗಳ ವ್ಯಕ್ತಿತ್ವ ಚಿತ್ರಣ. ನೀತಿಬೋಧಕವೂ ನವರಸಭರಿತವೂ ಆದ ಇಂತಹ ಕಾವ್ಯಗಳನ್ನು ಓದುವ ಬದಲು ಯಾರೋ ಒಂದಷ್ಟು ಜನ ಬರೆದ ಕೆಲಸಕ್ಕೆ ಬಾರದ ಕಥೆ-ಕಾದಂಬರಿಗಳನ್ನಷ್ಟೇ ಓದುವುದರಿಂದ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಯಾವ ಒಳ್ಳೆಯ ಅಂಶವನ್ನೂ ಕಲಿಯಲು ಸಾಧ್ಯವಿಲ್ಲ. ಬದುಕಿಗೊಂದು ಉತ್ತಮ ಪಾಠವಾಗಬಲ್ಲ ಈ ಕಾವ್ಯಗಳ ಪ್ರತೀ ಅಧ್ಯಾಯಗಳೂ ಅರ್ಥಪೂರ್ಣ; ಯಾವುದನ್ನೂ ಬೇಡ ಅತಿಯಾಯ್ತು ಎನ್ನುವ ಹಾಗಿಲ್ಲ. ಇಬ್ಬಂದಿತನ ಯಾ ದ್ವಂದ್ವ ಎದುರಾದಾಗ ಹೇಗೆ ನಿಭಾಯಿಸಬೇಕೆಂಬುದನ್ನೂ ಇಂತಹ ಕಾವ್ಯಗಳ ಓದಿನಿಂದ ತಿಳಿದುಕೊಳ್ಳಬಹುದಾಗಿದೆ. ಈ ಕಾವ್ಯಗಳಲ್ಲಿ ಮುಖ್ಯ ಕಥಾನಕಕ್ಕೆ ಸಹಕಾರಿಯಾಗಿ ಬರುವ ಉಪಕಥೆಗಳು ರಂಜನೀಯವೂ ನೀತಿಬೋಧಕವೂ ಆಗಿದ್ದು ಒಂದೊಂದು ಕಥೆ ಒಂದೊಂದು ವಿಭಿನ್ನ ಮಜಲನ್ನೇ ತೆರೆದಿಡುತ್ತದೆ! ನವನಾಗರಿಕತೆಯ ನೆಪದಲ್ಲಿ ನವಜನಾಂಗ, "ರಾಮಾಯಣ-ಮಹಾಭಾರತಗಳು ನಿವೃತ್ತರು ಓದಿಕೊಳ್ಳಬಹುದಾದ ಕಥೆಗಳೆ"ಂದು ಪಕ್ಕಕ್ಕಿಟ್ಟಿದ್ದರಿಂದಲೂ, ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿರುವ ಭ್ರಷ್ಟರಾಜಕಾರಣಿಗಳು "ಅವು ಸನಾತನ ಧರ್ಮದವಾಗಿದ್ದು ಇತರ ಮತಗಳವರಿಗೆ ಅವುಗಳು ಅಡ್ಡಿಪಡಿಸುತ್ತವೆ" ಎಂಬ ಕಾರಣಗಳನ್ನು ಕೊಟ್ಟೂ, ಅವುಗಳನ್ನು ಪ್ರಾಥಮಿಕ ಪಠ್ಯಕ್ರಮದಿಂದ ತೆಗೆದುಹಾಕಿದ್ದು ಈ ದೇಶದ ಮೂಲನಿವಾಸಿಗಳ ಇಂದಿನ-ಮುಂದಿನ ಪೀಳಿಗೆಗಳು ಅನುಭವಿಸಿದ ನಿಜವಾದ ನಷ್ಟ.

ಏನನ್ನೂ ಅರಿಯದ ಜನ, ಏನನ್ನೂ ಓದದ ಜನ ಎಡಪಂಥೀಯರಾಗುತ್ತಾರೆ. ಯಾಕೆಂದರೆ ಅವರಿಗೆ ಯಾವುದೂ ಅರ್ಥವಾಗುವುದಿಲ್ಲ. ಇಲ್ಲಿ "ಕೆಳವರ್ಗದವನಾದ್ದರಿಂದ ಗುಹ ರಾಮನ ಪಾದವನ್ನು ತೊಳೆಯಬೇಕು ಎಂದು ಮಹರ್ಷಿಗಳು ಹೇಳಿದ್ದಾರೆ" ಎಂದು ಅಪಾರ್ಥಕಲ್ಪಿಸಿ ಮಾಧ್ಯಮಗಳಲ್ಲಿ ವಾದಿಸುತ್ತಾ ಕೂರುತ್ತಾರೆ! ಯಾಕೆ ಮಹರ್ಷಿಗಳು ಹಾಗೆ ಹೇಳಿದರು, ಅಲ್ಲಿಗೆ ಅವರು ಬರುವ ಔಚಿತ್ಯವಾದರೂ ಇತ್ತೇ? ಅಥವಾ ರಾಮನಾದರೂ ಅಲ್ಲಿಗೇ ಬರಬೇಕಾಗಿತ್ತೇ ಎಂಬುದರ ಬಗ್ಗೆ ಚಿಂತನೆ ನಡೆಸುವುದಿಲ್ಲ. ಇದೇ ರೀತಿ "ಮಹಾಭಾರತದಲ್ಲಿ ತುಂಡು ಭೂಮಿಗಾಗಿ ದಾಯಾದಿಗಳು ಕಾದಾಡುವಂತೇ ಮಾಡಿದ ಕೃಷ್ಣನಿಗೆ ಏನುಸಿಕ್ಕಿತು? ಲಕ್ಷಾಂತರ ಜನ ಮಡಿದು ನಂತರ ಯುದ್ಧಗೆದ್ಧ ಪಾಂಡವರು ಕೇವಲ ಕೆಲವೇ ಕಾಲ ರಾಜ್ಯಭಾರ ಮಾಡಿದರು-ಇದೆಲ್ಲಾ ಸರಿಯೇ?" ಎಂದು ಕೆಲವರು ವಾದಿಸಿದರೆ, ಬಸುರಿ ಹೆಂಡತಿಯನ್ನು ಕಾಡಿಗಟ್ಟಿದವ ಮನುಷ್ಯನೇ ಅಲ್ಲವೆಂದೊ, ಸೀತೆಯನ್ನು ಮುಟ್ಟದಿದ್ದರೂ ಪರಸ್ತ್ರೀಯನ್ನು ಬಯಸಿದವ ಎಂಬ ಮಾತ್ರಕ್ಕೆ ರಾವಣನನ್ನು ವಧಿಸಲಾಯ್ತೆಂದೂ ವಾದಿಸುತ್ತಾರೆ. ಆದರೆ ಮೂಲಕಥೆಗಳ ಹಂದರದ ವಿಶಾಲ ಪರಿಕಲ್ಪನೆಯಾಗಲೀ, ಕಥೆಗಳ ಆಳಗಲಗಳಾಗಲೀ ಆಮೂಲಾಗ್ರವಾಗಿ ತಿಳಿಯದ ಅಜ್ಞಾನಿಗಳ ಅಥವಾ ಅರ್ಧ ಓದಿಕೊಂಡವರ ವಿತಂಡ ವಾದ ಇದಾಗಿರುತ್ತದೆ. ಭಾರತದ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನು ಇಂದು ಓದಿಕೊಂಡವರೆಷ್ಟು ಎಂದರೆ ಬೆರಳೆಣಿಕೆಯಷ್ಟು ಎಂದರೆ ತಪ್ಪಲ್ಲ. ಕೇವಲ ರಾವಣವಧೆಯಷ್ಟೇ ರಾಮಾಯಣವಲ್ಲ, ಕೇವಲ ಕುರುಕ್ಷೇತ್ರ ಯುದ್ಧವಷ್ಟೇ ಮಹಭಾರತವಲ್ಲ. ಆದರೆ ಚಿಲ್ಲರೆ ವಿಷಯಗಳನ್ನಷ್ಟೇ ಓದಿಕೊಂಡ ಎಡಪಂಥೀಯ ಜನ ತಮ್ಮ ಚಿಲ್ಲರೆ ಬುದ್ಧಿಯಿಂದ ಹೊರಬರಬೇಕಾದರೆ ಈ ಕಾವ್ಯಗಳನ್ನು ಪದಪದಗಳನ್ನೂ ಬಿಡದಂತೇ ಓದಿಕೊಳ್ಳಬೇಕು. ಗೋರಖ್ ಪುರ ಪ್ರೆಸ್ ನವರು ಹಿಂದಿ, ಇಂಗ್ಲೀಷ್ ಮತ್ತು ಇನ್ನಿತರ ಭಾಷೆಗಳಲ್ಲಿ ಅವುಗಳನ್ನು ಹೊರತಂದಿದ್ದಾರೆ, ವರ್ಷದಲ್ಲೇ ಕನ್ನಡದಲ್ಲೂ ಅವು ಲಭ್ಯವಾಗಲಿಕ್ಕಿವೆ. ರಾಮಕೃಷ್ಣಾಶ್ರಮದವರು ಇಂಥಾ ಮಹಾನ್ ಕಾವ್ಯಗಳ ಅರ್ಥವನ್ನು ಹೊರತಂದಿದ್ದಾರೆ, ರಾಷ್ಟ್ರೋತ್ಥಾನ ಪ್ರಕಾಶನದವರೂ ಸಹ ರಾಮಾಯಣ-ಭಾರತ ಕಥೆಗಳನ್ನು ಕನ್ನಡದಲ್ಲಿ ಮುದ್ರಿಸಿದ್ದಾರೆ. ಆದರೆ ಅವುಗಳ ಪ್ರಯೋಜನ ಪಡೆದುಕೊಂಡವರೆಷ್ಟು? ತಾವೂ ಬುದ್ಧಿಜೀವಿಗಳು, ತಮಗೂ ಎಲ್ಲಾ ಗೊತ್ತಿದೆ ಎಂದು ಪೋಸುಕೊಡುವ ಎಡಪಂಥೀಯರೇನಾದರೂ ಇವುಗಳನ್ನು ಓದಿದ್ದಾರ್ಯೇ? ಖಂಡಿತಕ್ಕೂ ಇಲ್ಲ!

ನಾವು ಪ್ರಾಥಮಿಕ ಶಾಲೆಯಲ್ಲಿ ಓದುವ ಹಂತದಲ್ಲಿ ನಮಗೆ ’ಕಥಾರೂಪ ಇತಿಹಾಸ’ವೆಂಬ ಹೊತ್ತಗೆ, ಪಠ್ಯದಲ್ಲಿರದಿದ್ದರೂ ಓದಲು ದೊರೆತಿತ್ತು. ಅದರಲ್ಲಿ ಭಾರತದ ಪ್ರಾಗೈತಿಹಾಸದ ಕಥೆಗಳೂ ಮತ್ತು ವರ್ಣಮಯ ಚಿತ್ರಗಳೂ ಇದ್ದವು. ಚಿಕ್ಕ ವಯಸ್ಸಿಗರಾದ ನಮಗೆ ತಾಟಿಕೆಯ ವಧೆಯಂತಹ ಚಿತ್ರಗಳನ್ನು ಕಣ್ಣರಳಿಸಿ ನೋಡುವುದು ಬಹಳ ಉಲ್ಲಾಸದಾಯಕವಾಗಿತ್ತು. ಮನೆಯ ಹಿರಿಯರು ರಾಕ್ಷಸರ ರಾಕ್ಷಸೀ ಕೃತ್ಯಗಳನ್ನು ತಿಳಿಸಿ ಹೇಳಿ, ಅದಕ್ಕಾಗಿ ರಾಮ ಬಾಣ ಹೊಡೆದು ಆಕೆಯನ್ನು ಕೊಂದ ಎಂದು ಅರ್ಥ ಬಿಡಿಸಿ ಹೇಳುತ್ತಿದ್ದರು. ಇವತ್ತು ಅಂತಹ ಪುಸ್ತಕಗಳು ಪಠ್ಯಗಳಲ್ಲಿರಲಿ ಶಾಲಾ ವಾಚನಾಲಯ[ಲೈಬ್ರರಿ]-ಇದ್ದರೆ ಅಲ್ಲೂ ನೋಡಸಿಗುವುದಿಲ್ಲ; ಇದಕ್ಕೆಲ್ಲಾ ಕಾರಣವೇನು ಗೊತ್ತೇ ಎಡಪಂಥೀಯತೆ. ಇಡೀ ಜಗತ್ತೇ ಭಗವದ್ಗೀತೆಯನ್ನು ’ಬೆಸ್ಟ್ ಮ್ಯಾನೇಜ್ ಮೆಂಟ್ ಬುಕ್’ ಎಂದು ಕೊಂಡಾಡಿದ್ದರೂ ಗೀತೆ ಹುಟ್ಟಿದ ಈ ನೆಲದ ನಮ್ಮ ಮಕ್ಕಳಿಗೇ ಅದನ್ನು ಬೋಧಿಸುವ ಹಾಗಿಲ್ಲ, ಅದಕ್ಕೆ ಹಿಂದೂ ಧರ್ಮಗ್ರಂಥವೆಂಬ ಹಣೆಪಟ್ಟಿ ಬರೆದ ಎಡಪಂಥೀಯ ಜನ, ರಾಜಕಾರಣಿಗಳನ್ನೂ ಸೇರಿಸಿಕೊಂಡು ರಾಜಕೀಯ ಮಾಡಿದ್ದಾರೆ! ನಮ್ಮ ಯುವ ಪೀಳಿಗೆಗೂ ಗೀತೆಯ ಬಗ್ಗೆ ಏನೂ ಗೊತ್ತಿಲ್ಲ!! ಯಾಕೆಂದರೆ ಭಗವದ್ಗೀತೆಯಲ್ಲಿ ಏನಿದೆ ಎಂಬುದನ್ನು ಅವರು ತೆರೆದು ನೋಡಿದವರೇ ಅಲ್ಲ! ಯಾರೋ ಬೇಡಾ ಎಂದು ಕೂಗುವಾಗ ಅವರಲ್ಲಿಯೂ ಕೆಲವರು ಬೇಡಾ ಎಂದು ಕೂಗುತ್ತಾರೆ. ಬರಿದೇ "ಬೇಡಾ" ಎನ್ನುವ ಸಮೂಹ ಸನ್ನಿಗೆ ಒಳಗಾಗುವ ಬದಲು ಯುವಪೀಳಿಗೆಯ ಜನ ಆಂಗ್ಲ ಮಾಧ್ಯಮದಲ್ಲಿ ಅನುವಾದಗೊಂಡ ಗೀತೆಯನ್ನಾದರೂ ಓದಿ ತಿಳಿಯಲು ಪ್ರಯತ್ನಿಸಬಹುದಿತ್ತು-ಆದರೆ ಅದು ಅವರ್ಯಾರಿಗೂ ಬೇಕಾದಹಾಗೆ ಕಾಣಿಸಲಿಲ್ಲ! ಯುವ ಪೀಳಿಗೆಯಲ್ಲಿನ ಸಾಫ್ಟ್ ವೇರ್ ತಂತ್ರಜ್ಞರಲ್ಲಿ ವಿಚ್ಛೇದನಗಳು ಯಾಕೆ ಹೆಚ್ಚುತ್ತಿವೆ ಎಂಬುದರ ಬಗ್ಗೆ ಅವರು ಚಿಂತನ-ಮಂಥನ ನಡೆಸಿಕೊಂಡಿದ್ದರೆ ಅಲ್ಲಿ ಗೀತೆಯ ಪ್ರಸ್ತುತಿ ಕಾಣುತ್ತಿತ್ತು!! ಕೈಲಾಗದೇ ಸೋತರೆ, ಜಾಬು ಕಳೆದುಕೊಂಡು/ಉದ್ಯಮದಲ್ಲಿ ನಷ್ಟ ಅನುಭವಿಸಿ ದಿಗ್ಮೂಢರಾದರೆ, ವಾಸಿಯಾಗದ ಕಾಯಿಲೆಗಳಿಂದ ಬಳಲುವ ಪ್ರಸಂಗ ಎದುರಾದರೆ ಅಲ್ಲಿ ಗೀತೆಯ ಮಹತ್ವ ಬೆಳಕಿಗೆ ಬರುತ್ತದೆ.    

ರಾಮಾಯಣ-ಮಹಾಭಾರತಗಳನ್ನು ಹಿಂದಕ್ಕೆ ಮನೆ ಮನೆಗಳಲ್ಲಿ ಪೂಜಿಸಿ, ವಾಚಿಸಿ, ಸಪ್ತಾಹಗಳನ್ನು ನಡೆಸುತ್ತಿದ್ದರು. ಇಂದು ಅಂತಹ ಪೂಜನೀಯ ಕೆಲಸಗಳು ನಡೆಯುವುದಿರಲಿ, ವಾಚಿಸುವ ಗಮಕಿಗಳೂ ಇಲ್ಲ, ಕೇಳಲು ಆಸೆಪಡುತ್ತಿದ್ದ ಶ್ರೋತ್ರವರ್ಗವೂ ಇಲ್ಲ. ನವರಸಗಳು ತುಂಬಿದ ಪದ್ಯಗಳನ್ನು ನವರಸ ಭಾವ ಪೂರಿತವಾಗಿ, ರಾಗಪೂರಿತವಾಗಿ ಗಮಕಿಗಳು ಹಾಡಿದಾಗ, ವಿದ್ವಾಂಸರು ಅರ್ಥವಿವರಿಸಿದಾಗ, ಅದೆಂತಹ ಅನನ್ಯ ಅನುಭವ ಗೊತ್ತೇ? ನಮ್ಮ ಜೀವನದ ಕುಂದುಕೊರತೆಗಳನ್ನು ಕಾವ್ಯಗಳಲ್ಲಿನ ಪಾತ್ರಗಳೂ ಅನುಭವಿಸಿದ್ದವು ಎಂಬುದರ ಜೊತೆಗೆ ಎದುರಾದ ಸಮಸ್ಯೆಗಳನ್ನು ಅವರು ಹೇಗೆ ನಿಭಾಯಿಸಿದರು ಎಂಬುದನ್ನು ತಿಳಿದಾಗ ಮನಸ್ಸು ನಿರಾಳವಾಗುತ್ತಿತ್ತು. ಮನಸ್ಸಿಗೆ ದುರಹಂಕಾರದ ಮೋಡ ಕವಿಯುತ್ತಿರಲಿಲ್ಲ. ಜೀವನದಲ್ಲಿ ಅತಿಯಾಸೆ-ಕೊಳ್ಳುಬಾಕತನ ಮೈಗೂಡುತ್ತಿರಲಿಲ್ಲ, ಹಾಸಿಗೆ ಇದ್ದಷ್ಟೇ ಕಾಲುಚಾಚುವ ಮನೋವೃತ್ತಿ ಬೆಳೆದು, ಒಂದೇ ಒಂದು ದಿನವೂ ಎದೆನೋವಾಗಲೀ ಹೃದ್ರೋಗವಾಗಲೀ, ಮಧುಮೇಹ-ಅಧಿಕರಕ್ತದೊತ್ತಡವಾಗಲೀ ಕಾಣಿಸಿಕೊಳ್ಳುತ್ತಿರಲಿಲ್ಲ! ಇದನ್ನೆಲ್ಲಾ ಹೇಳಿದರೆ ಅಸಡ್ಡೆಮಾಡುವ ಇಂದಿನ ಜನರಿಗೆ, ಆ ಗಾಳಿ ತಾಗದಿರುವುದಕ್ಕೆ ಸರಕಾರದ ’ತ್ಯಾಜ್ಯ ವಿಲೇವಾರಿ’ಪದ್ಧತಿಯ ಶಿಕ್ಷಣವೇ ಕಾರಣ ಎನ್ನಬಹುದಾಗಿದೆ. ಯಾವುದು ಜೀವನಕ್ಕೆ ಪ್ರಮುಖವಾಗಿ ಬೇಕೋ ಅಂಥಾದ್ದೇ ಪಠ್ಯಕ್ರಮದಲ್ಲಿ ಇರುವುದಿಲ್ಲ, ಯಾವುದು ಬೇಡದ ತ್ಯಾಜ್ಯವೋ ಅಂಥಾದ್ದನ್ನೆಲ್ಲಾ ತುಂಬಿಸಿದ ಪಠ್ಯಕ್ರಮವನ್ನು ನಾವಿಂದು ನಮ್ಮ ಮಕ್ಕಳಿಗೆ ಬೋಧಿಸುತ್ತಿದ್ದೇವೆ, ಇದು ಈಗಲ್ಲಾ ನಾವು ಚಿಕ್ಕವರಿರುವಾಗಿನಿಂದ ಅಂದರೆ ಸುಮಾರು ೨೮ ವರ್ಷಗಳ ಹಿಂದೆಯೇ ಆರಂಭವಾಯ್ತು!

ಹೋಗಲಿಬಿಡಿ, ನಮ್ಮಂಥಾ ಕೆಲವು ಆಸಕ್ತರು ಸ್ವಾಧ್ಯಾಯದಿಂದ ಅನೇಕ ವಿಷಯಗಳನ್ನು ಅರಿತೆವು, ಓದಿಕೊಂಡೆವು. ಆದರೆ ಇಂದಿನ ಮಕ್ಕಳಿಗೆ ಅದೂ ಕೂಡ ಲಭ್ಯವಾಗದೇ ಹೋಗಬಹುದು, ಓದುವ ಗೀಳೇ ಇರದಿರಬಹುದು. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಬರಬೇಕಿದ್ದರೆ, ನಮ್ಮ ಮಕ್ಕಳು ಸುಲಲಿತ ಜೀವನ ಕ್ರಮವನ್ನು ಅನುಸರಿಸಬೇಕಿದ್ದರೆ ಅವರಿಗೆ ಖಾಸಗಿಯಾಗಿ ನಾವು ರಾಮಾಯಣ-ಮಹಾಭಾರತಗಳನ್ನು ಬೋಧಿಸಬೇಕು. ಬಿಡುವಿನಲ್ಲಿ, ಶಾಲಾರಜಾದಿನಗಳಲ್ಲಿ ಆ ಕೆಲಸ ನಡೆಯಬೇಕು. ನಮ್ಮ ಮಕ್ಕಳು ಪಠ್ಯಕ್ರಮದಲ್ಲಿ ’ಆರ್ಯರು ಭಾರತಕ್ಕೆ ಬಂದರು’ ಎಂಬಂಥಾ ತಿರುಚಿದ ಇತಿಹಾಸವನ್ನು ಓದುತ್ತಿದ್ದಾರೆ; ಇದು ಸರಿಯಲ್ಲ. ಆರ್ಯರು ಭಾರತಕ್ಕೆ ಬರಲಿಲ್ಲ, ಬದಲಾಗಿ ಭಾರತ ಆರ್ಯರದ್ದೇ ಆಗಿದೆ, ಇಲ್ಲಿ ಆರ್ಯರು-ದ್ರಾವಿಡರು ಎಂಬ ಭೇದ ಇರಲಿಲ್ಲ, ಅದನ್ನು ಹುಟ್ಟಿಸಿದವರು ಬ್ರಿಟಿಷರು. ಸನಾತನಿಗಳನ್ನು ದಾರಿ ತಪ್ಪಿಸಿದವರು ಮ್ಲೇಚ್ಛರು. ಪರಕೀಯರ ಅಟ್ಟಹಾಸದಿಂದ ನೊಂದ ಸನಾತನಿಗಳಿಗೆ ಈಗ ಪಠ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ತಮ್ಮದೇ ಆದ ನಿಜವಾದ ಇತಿಹಾಸವನ್ನು ಬೋಧಿಸುವ ಹಾಗಿಲ್ಲ-ಕಲಿಯಲು ಅವಕಾಶವಿಲ್ಲ! ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರೆಂದರೆ ಚಾಚಾ ನೆಹರೂ ಎಂಬಲ್ಲಿಂದ ಹೇಳುತ್ತಾರೆಯೇ ಹೊರತು ಸುಭಾಸ್ ಚಂದ್ರ ಬೋಸರು ಸ್ವಾತಂತ್ರ್ಯಾ ನಂತರವೂ ಬದುಕಿದ್ದ ಬಗ್ಗೆ ನಮಗೇ ಅರಿವಿರಲಿಲ್ಲ, ಇನ್ನು ಅವರಿಗೆ ಹೇಗೆ? ಭಗತ್ ಸಿಂಗ್, ಮಂಗಲಪಾಂಡೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅಹಲ್ಯಾಬಾಯಿ ಹೋಳ್ಕರ್, ವೀರ ಸಾವರ್ಕರ್ ಇಂತಹ ಅನೇಕರ ಬಗ್ಗೆ ಇಂದಿನ ಪಠ್ಯಕ್ರಮದಲ್ಲಿ ಅಳವಡಿಸಲ್ಪಟ್ಟ ಇತಿಹಾಸ ಏನನ್ನೂ ಹೇಳುವುದಿಲ್ಲ. ನಿಜದ ಅರಿವಿಲ್ಲದವರಿಗೆ ದೇಶಭಕ್ತಿಯಾದರೂ ಎಲ್ಲಿ ಮೂಡೀತು? ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬ ಪ್ರಜ್ಞೆ ಹೇಗೆ ಬೆಳೆದೀತು?

ಸನಾತನಿಗಳಲ್ಲಿ ನನ್ನದೊಂದು ವಿನಂತಿ ಈ ರೀತಿ ಇದೆ: ನಮ್ಮ ಪ್ರಾಗೈತಿಹಾಸವಾದ ರಾಮಾಯಣ-ಮಹಾಭಾರತಗಳನ್ನೂ ಜೊತೆಗೆ ಭಾರತದ ನಿಜವಾದ ಇತಿಹಾಸವನ್ನೂ ನಮ್ಮ ಮಕ್ಕಳಿಗೆ ರಜಾದಿನಗಳಲ್ಲಿ ಬೋಧಿಸುವಂತೇ ಅನುಕೂಲ ಕಲ್ಪಿಸಿಕೊಡಿ. ಅದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಆದಷ್ಟು ಒದಗಿಸಿ. ಸಂಘಗಳು ತಮ್ಮ ಶಾಖೆಗಳಲ್ಲಿ ಈ ಕೆಲಸವನ್ನು ಮಾಡುವಂತಾದರೆ ಬಹಳ ಒಳ್ಳೆಯದು. ಚಳಿಗಾಲದಲ್ಲಿ[ಅಕ್ಟೋಬರ್-ಡಿಸೆಂಬರ್ ಪ್ರಾದೇಶಿಕ ರಜಾದಿನಗಳಲ್ಲಿ ನೋಡಿಕೊಂಡು] ಮತ್ತು ಬೇಸಿಗೆಯಲ್ಲಿ ಈ ಬೋಧನಾಕ್ರಮವನ್ನು  ಶಿಬಿರಗಳ ಮೂಲಕ ಆಯೋಜಿಸಬೇಕು. ಬಂದ ಮಕ್ಕಳಿಗೆ ಉಚಿತವಾದ ಕೊಡುಗೆಗಳನ್ನು ಉಳ್ಳವರು ಕೊಡಲು ಮುಂದಾಗಬೇಕು. ಊಟ-ತಿಂಡಿ-ವಸತಿ ವ್ಯವಸ್ಥೆಯ ಜೊತೆಗೆ ಯೋಗ-ವ್ಯಾಯಾಮ-ಪ್ರಾಣಾಯಾಮಗಳನ್ನೂ ಸೇರಿಸಿ ವಾರ ಅಥವಾ ತಿಂಗಳದಿನ ಇಂತಹ ಕಾರ್ಯಕ್ರಮಗಳನ್ನು ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಅಲ್ಲಲ್ಲಿಯ ಭಾಷೆಗಳಲ್ಲಿಯೇ ನಡೆಸಬೇಕು. ನಮ್ಮ ಮುಂದಿನ ಜನಾಂಗ ಎಡಪಂಥೀಯವಾಗಿ ಬೆಳೆಯಬಾರದು, ಅವರಿಗೆ ಅಜ್ಞಾನ-ಅವಿದ್ಯೆ-ಅಧ್ಯಾಸಗಳೆಂಬ ಮೋಡ ಕವಿಯಬಾರದು. ಅವರು ನೀತಿವಂತರಾಗಿ, ಉತ್ತಮ ರೀತಿ-ರಿವಾಜು ಉಳ್ಳವರಾಗಿ ಬೆಳೆಯಬೇಕು. ಜೊತೆಗೇ ದೇಶಭಕ್ತಿಯೂ ಸನಾತನತೆಯೂ ಮೈಗೂಡಬೇಕು. ಈ ಕೆಲಸವನ್ನು ಸರಕಾರವಂತೂ ಮಾಡುವುದಿಲ್ಲ ಏಕೆಂದು ಮೊದಲೇ ಹೇಳಿದ್ದೇನಲ್ಲಾ! ಸರಕಾರ ಮಾಡದ ಈ ಉನ್ನತ ಕೆಲಸವನ್ನು ನಾವು ಸನಾತನ ಭಾರತೀಯರು ಮಾಡಬೇಕು. ತನ್ಮೂಲಕ, ನಮ್ಮ ಮಕ್ಕಳು ರಾಮಾಯಣ-ಮಹಾಭಾರತ ಮತ್ತು ಭಾರತದ ನಿಜವಾದ ಇತಿಹಾಸ ಓದಬೇಕು. ಇದಕ್ಕೆ ದೇಶಭಕ್ತರ ಸಹಕಾರವನ್ನು ಕೋರುತ್ತೇನೆ, ಸಂಬಂಧಿಸಿದ ಸಂಘಟನೆಗಳ-ಶಾಖೆಗಳ-ಪದಾಧಿಕಾರಿಗಳ ಸಹಕಾರವನ್ನು ಕೋರುತ್ತೇನೆ, ಧನ್ಯವಾದಗಳು.    

Saturday, February 23, 2013

ಮಹಾಕುಂಭಮೇಳ: ೧೪೪ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಾತ್ರ ಘಟಿಸುವ ಮಹಾಜಾತ್ರೆ

ಚಿತ್ರಗಳ ಕೃಪೆ : ಶ್ರೀ ಸೂರ್ಯನಾರಾಯಣ ಭಜರಂಗದಳ ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆ
ಮಹಾಕುಂಭಮೇಳ: ೧೪೪ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಾತ್ರ ಘಟಿಸುವ ಮಹಾಜಾತ್ರೆ


ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||

ಕುಂಭಮೇಳದ ಬಗ್ಗೆ ಒಂದಷ್ಟು ಓದಬಯಸುವ ಆಸ್ತಿಕ ಸನಾತನಿಗಳಿಗೆ ಆದರದ ಸ್ವಾಗತ. ಕುಂಭಕ್ಕೆ ಸನಾತನ ಧರ್ಮ ವಿಶೇಷ ಮಹತ್ವವನ್ನು ನೀಡಿದೆ. ಅದಕ್ಕೆ ಹಲವಾರು ಕಾರಣಗಳಿವೆಯಾದರೂ, ಸಮುದ್ರ ಮಥನದ ಕಾಲದಲ್ಲಿ ಘಟಿಸಿತ್ತು ಎನ್ನಲಾದ ಅಮೃತ ಬಿಂದು ಚೆಲ್ಲಿದ ಘಟನೆಯೇ ಪ್ರಮುಖವಾಗಿ ಕಾರಣವಾಗುತ್ತದೆ. ಭಾಗವತ ಪುರಾಣ, ವಿಷ್ಣು ಪುರಾಣ, ರಾಮಾಯಣ ಮತ್ತು ಮಹಾಭಾರತಗಳಲ್ಲಿ ಈ ಕುರಿತು ಹೇಳಿಕೆಗಳು ದೊರೆಯುತ್ತವೆ. ಗಂಗೆ, ಯಮುನೆ, ಸರಸ್ವತಿ, ನರ್ಮದೆ, ಶಿಪ್ರೆ ಈ ನದಿಗಳೇ ಕುಂಭಮೇಳಗಳ ಪ್ರಮುಖ ನದಿಗಳಾಗಿವೆ. ದೂರ್ವಾಸರಿಂದ ಶಾಪಗ್ರಸ್ತರಾದ ದೇವತೆಗಳು, ದಾನವರೊಡನೆ ಹೋರಾಡಲು ಅಶಕ್ತರಾಗಿ, ಏನೂ ಮಾಡಲೂ ತೋಚದೇ, ಬ್ರಹ್ಮನಲ್ಲಿಗೆ ತೆರಳಿದರು. ಬ್ರಹ್ಮ ಶಿವನಲ್ಲಿಗೂ, ಶಿವ ವಿಷ್ಣುವಿನಲ್ಲಿಗೂ ಅವರನ್ನು ಕಳಿಸಿದ್ದಾಯ್ತು. ತ್ರಿಮೂರ್ತಿಗಳು ಮೂವರೂ ಸೇರಿ ಕ್ಷೀರಸಮುದ್ರವನ್ನು ಮಥಿಸಲು ಸೂಚಿಸಿದರು. ಮೇರುಪರ್ವತವನ್ನು ಕಡೆಗೋಲಾಗಿಯೂ ವಾಸುಕಿಯನ್ನೇ ಹಗ್ಗವಾಗಿಯೂ ಬಳಸಿ ಕಡೆದ ಈ ಕೆಲಸದಲ್ಲಿ ದಾನವರೂ ಪಾಲ್ಗೊಂಡರು. ಮಥನಗೊಂಡ ಕ್ಷೀರಸಾಗರದಲ್ಲಿ ಹಲವು ಸುವಸ್ತುಗಳು ಕಾಣಿಸಿಕೊಂಡವು. ಎದುರಿಗೆ ಬಂದ ಹಾಲಹಲವನ್ನು ಶಿವ ತಾನೇ ಕುಡಿದು ಎಲ್ಲರನ್ನೂ ರಕ್ಷಿಸಿದ. ನಂತರ ಅಮೃತ ಕಲಶಹೊತ್ತ ಧನ್ವಂತರಿ ಹೊರಬಂದ. ಅಮೃತಕುಂಭ ಬಂದಾಗ ದೇವತೆಗಳು-ದಾನವರು ಎರಡೂ ಪಂಗಡಗಳಲ್ಲಿ ನಮಗೆ ಮೊದಲು ತಮಗೆ ಮೊದಲು ಎಂಬ ಜಗಳ ಹುಟ್ಟಿಕೊಂಡಿತು. ಜಗಳ ಬಗೆಹರಿಸಲು ಮೋಹಿನಿಯ ರೂಪಧರಿಸಿ ಬಂದ ಮಹಾವಿಷ್ಣುವನ್ನು ಕಂಡು ದಾನವರು ಮೋಹಗೊಂಡರು. ಅಮೃತಕುಂಭವನ್ನು ಮೋಹಿನಿ ಎರಡೂ ಗುಂಪುಗಳಿಗೆ ಕೊಡುವ ಮೊದಲು ಎತ್ತೊಯ್ಯುತ್ತಿದ್ದಾಗ ಅದರಿಂದ ನಾಲ್ಕು ಹನಿಗಳು ಉದುರಿದವು. ಇವು ಕ್ರಮವಾಗಿ ಪ್ರಯಾಗ, ನಾಸಿಕ, ಉಜ್ಜೈನಿ ಮತ್ತು ಹರಿದ್ವಾರಗಳಲ್ಲಿ ಬಿದ್ದವು. ಅಮೃತದ ಹನಿಗಳು ಬಿದ್ದ ಕ್ಷೇತ್ರಗಳಲ್ಲಿ ನದಿಗಳು ಅಮೃತಸದೃಶ ಫಲನೀಡುತ್ತವೆ ಎಂಬ ಅನಿಸಿಕೆಯಿಂದ ಅಂದಿನಿಂದ ಇಂದಿನವರೆಗೂ ಕುಂಭಮೇಳಗಳು ನಡೆಯುತ್ತಾ ಬಂದಿವೆ. 


ಹೂಯೆನ್ ತ್ಸಾಂಗ್ ಎಂಬ ಚೀನೀ ಯಾತ್ರಿಕ ಹರ್ಷವರ್ಧನನ ಕಾಲದಲ್ಲಿ[ಸುಮಾರು ೬೦೦ ಸಿ.ಈ] ಭಾರತಕ್ಕೆ ಬಂದಿದ್ದ. ಆಗಲೇ ಕುಂಭಮೇರ್ಳ ನಡೆಯುತ್ತಿರುವ ಬಗ್ಗೆ ಆತ ತನ್ನ ಬರಹಗಳಲ್ಲಿ ದಾಖಲಿಸಿದ್ದಾನೆ. ಅದಕ್ಕಿಂತಲೂ ಹಿಂದಿನ ದಾಖಲಿತ ಪುರಾವೆಗಳು ನಮಗೆ ಈಗ ಲಭ್ಯವಿಲ್ಲ; ಅವು ಇತಿಹಾಸದಲ್ಲಿ ಕಾರಣಾಂತರಗಳಿಂದ ಲುಪ್ತವಾಗಿವೆ. ಏನೇ ಇರಲಿ, ಪೂರ್ಣಕುಂಭಕ್ಕೂ ಕೂಡ ಅದೇ ಒಂದು ಹಿನ್ನೆಲೆಯಲ್ಲಿ ಬಹಳ ಮಹತ್ವವನ್ನು ಇತ್ತಿದ್ದಾರೆ. ಸನಾತನಿಗಳಲ್ಲಿ ಮಂಗಳಕಳಶಗಳಿಲ್ಲದ ಪೂಜೆಯೇ ಇಲ್ಲವೆನ್ನಬೇಕು. ಪೂಜೆ ಇದೆಯೆಂತಾದರೆ ಅಲ್ಲಿ ಕೊನೇಪಕ್ಷ ಒಂದು ಕಳಶವನ್ನಾದರೂ ಪೂಜಿಸುತ್ತಾರೆ. 


ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಕಲಶೇಸ್ಮಿನ್ ಸನ್ನಿಧಿಂ ಕುರು ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿಸ್ತಥಾ |
               ಆಗಚ್ಛಂತು ಪವಿತ್ರಾಣಿ ಪೂಜಾರ್ಥಂ ಸತತಂ  ಮಮ ||              

ಹೀಗೆ ಮಂತ್ರವನ್ನು ಪಠಿಸುತ್ತಾ ನದಿಗಳನ್ನೂ ಪುಣ್ಯ ಪುಷ್ಕರಣಿಗಳ ತೀರ್ಥವನ್ನೂ ಕಲಶಗಳಲ್ಲಿ ಆವಾಹಿಸಿ ಪೂಜಿಸುತ್ತಾರೆ. ಯಾವುದೇ ಆರಾಧನೆಯಿದ್ದರೂ ಅಲ್ಲಿ ಕಲಶದಲ್ಲಿ ನೀರು ಇದ್ದೇ ಇರುತ್ತದೆ. ನೀರಿಲ್ಲದೇ ಕಲಶ ಅಪೂರ್ಣ, ಕಲಶವಿಲ್ಲದೇ ಪೂಜೆ ಅಪೂರ್ಣ. ಈ ಕಲಶವನ್ನೇ ಇನ್ನೊಂದು ಪದದಲ್ಲಿ ಕುಂಭ ಅಥವಾ ಪೂರ್ಣಕುಂಭ ಎಂತಲೂ ಕರೆಯುತ್ತೇವೆ. ಕುಂಭಗಳು ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ, ಮಣ್ಣು ಈ ರೀತಿಯಾಗಿ ಅವರವರ ಶಕ್ತ್ಯಾನುಸಾರ ಆಯಾ ಮೂಲವಸ್ತು/ಲೋಹ/ಮಿಶ್ರಲೋಹ/ಮಣ್ಣು ಗಳಿಂದ ತಯಾರಿಸಿಕೊಂಡಿರಬಹುದು/ಖರೀದಿಸಿ ಬಳಸಬಹುದು. ಆದರೆ ಕಬ್ಬಿಣ, ಪ್ಲಾಸ್ಟಿಕ್ ಬಳಕೆಗೆ ಪ್ರಾಶಸ್ತ್ಯವಿಲ್ಲ! ಕುಂಭಮೇಳಗಳು ಭಾರತದಲ್ಲಿ ಪ್ರಮುಖವಾಗಿ ನಾಲ್ಕು ಪ್ರದೇಶಗಳಲ್ಲಿ ನಡೆಯುತ್ತವೆ: ಪ್ರಯಾಗ, ಸಾಸಿಕ, ಉಜ್ಜೈನಿ ಮತ್ತು ಹರಿದ್ವಾರ ಇವೇ ಆ ಕ್ಷೇತ್ರಗಳಾಗಿದ್ದು ಮೂರು ವರ್ಷಗಳಿಗೊಮ್ಮೆ ಕ್ರಮವಾಗಿ ಒಂದೊಂದು ಕ್ಷೇತ್ರಗಳಲ್ಲಿ ಮೇಳ ಜರುಗುತ್ತಾ, ಪ್ರತೀ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಸರದಿಯಲ್ಲಿ ನಡೆಯುತ್ತದೆ. ಪೂರ್ಣಕುಂಭಮೇಳ ಹೀಗೆ ನಡೆದರೂ ಪ್ರಯಾಗ ಮತ್ತು ಹರಿದ್ವಾರಗಳಲ್ಲಿ ಪ್ರತೀ ಆರುವರ್ಷಗಳಿಗೊಮ್ಮೆ ಅರ್ಧಕುಂಭಮೇಳ ನಡೆಯುತ್ತದೆ. ಪ್ರತೀ ೧೪೪ನೇ ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ಮಹಾಕುಂಭಮೇಳ ಜರುಗುತ್ತದೆ-ಅದು ಈ ಸರ್ತಿ[೨೦೧೩]ನಡೆಯುತ್ತಿದೆ. 


ಕುಂಭಮೇಳಗಳು ನಡೆಯುವುದಕ್ಕೆ ಸೂರ್ಯ[ಸೂರ್ಯನನ್ನು ಸನಾತನಿಗಳು ಗ್ರಹವೆಂದೇ ಕರೆಯುತ್ತಾರೆ], ಚಂದ್ರ ಮತ್ತು ಗುರು[ಬೃಹಸ್ಪತಿ] ಗ್ರಹಗಳ ಚಲನೆ ಕಾರಣವಾಗುತ್ತದೆ. ಗುರುವು ವೃಷಭರಾಶಿಯಲ್ಲೂ ಮತ್ತು ಸೂರ್ಯ ಮಕರರಾಶಿಯಲ್ಲೂ ಇದ್ದಾಗ ಕುಂಭಮೇಳ ಪ್ರಯಾಗದಲ್ಲಿ ನಡೆಯುತ್ತದೆ. ಗುರು ಮತ್ತು ಸೂರ್ಯ ಎರಡೂ ಸಿಂಹರಾಶಿಯಲ್ಲಿದ್ದಾಗ ನಾಸಿಕದಲ್ಲಿ ನಡೆಯುತ್ತದೆ. ಗುರು ಮತ್ತು ಸೂರ್ಯ ಎರಡೂ ವೃಶ್ಚಿಕರಾಶಿಯಲ್ಲಿದ್ದಾಗ ಮೇಳ ಉಜ್ಜೈನಿಯಲ್ಲಿ ನಡೆಯುತ್ತದೆ. ಸೂರ್ಯ ಕುಂಭರಾಶಿಯಲ್ಲಿದ್ದಾಗ ಕುಂಭಮೇಳ ಹರಿದ್ವಾರದಲ್ಲಿ ಘಟಿಸುತ್ತದೆ. ಕುಂಭಮೇಳಗಳು ಘಟಿಸುವಲ್ಲಿ ಸುಮಾರು ೧೦-೧೪ ವಿವಿಧ ಅಖಾಡಾಗಳ ಹಿಂದೂ ಜನ ಅಲ್ಲಿಗೆ ಸ್ನಾನಕ್ಕೆ ಬರುತ್ತಾರೆ. ಶೈವರು, ಶಾಕ್ತರು, ವೈಷ್ಣವರು, ಗಾಣಪತ್ಯರು, ಸ್ಕಾಂದರು, ನಾಗಾಸಾಧುಗಳೇ ಮೊದಲಾದ ವಿಭಿನ್ನ ಪಂಥಗಳ ಸನಾತನಿಗಳು ಈ ಮೇಳಗಳಲ್ಲಿ ಭಾಗವಹಿಸುತ್ತಾರೆ. ಮೇಳ ಸರಿಸುಮಾರು ಒಂದೂವರೆಯಿಂದ ಎರಡು ತಿಂಗಳ ಕಾಲ ಘಟಿಸುತ್ತದೆ. ಪುಣ್ಯನದಿಗಳ ಸಂಗಮದಲ್ಲಿ ಶಾಹಿಸ್ನಾನವೆಂಬ ಪುಣ್ಯಸ್ನಾನವೇ ಪ್ರಧಾನವಾದ ಕುಂಭಮೇಳದಲ್ಲಿ, ಸಂನ್ಯಾಸಿಗಳಿಗೆ ಧರ್ಮದೀಕ್ಷೆ, ಪೂಜೆ-ಪುನಸ್ಕಾರ, ಹೋಮ-ಹವನ, ಪುರಾಣ-ಪ್ರವಚನ-ಪಾರಾಯಣಗಳು, ಭಜನೆ-ಭಕ್ತಿ ಸಂಗೀತ-ನಾಮ ಸಂಕೀರ್ತನೆಗಳು, ಹರಿ-ಹರಕಥಾಕಾಲಕ್ಷೇಪಗಳು, ಧರ್ಮೋಪನ್ಯಾಸಗಳು, ಚಿಂತನ-ಮಂಥನ ಶಿಬಿರಗಳು, ಆಯುರ್ವೇದೀಯ ಚಿಕಿತ್ಸಾ ಶಿಬಿರಗಳು, ಯೋಗ-ಧ್ಯಾನ ತರಬೇತಿಗಳು, ಸಂಕಲ್ಪಸ್ನಾನ, ದಾನ-ಅನ್ನದಾನ, ಸಂನ್ಯಾಸಿಗಳ-ಸಾಧುಸಂತರ ಸೇವೆ, ಪ್ರಸಾದ ಭೋಜನ  ಮೊದಲಾದ ಪುಣ್ಯಕಾರ್ಯಗಳು ನಡೆಯುತ್ತವೆ. ದಕ್ಷಿಣ ಭಾರತದ ಕರ್ನಾಟಕದಲ್ಲೂ ಕಾವೇರಿ-ಕಪಿಲಾ, ತುಂಗಾ-ಭದ್ರಾ, ಭೀಮಾ-ಅಮರಜಾ ಮೊದಲಾದ ನದಿಗಳ ಸಂಗಮ ಕ್ಷ್ರ್ಎತ್ರಗಳು ತಿರುಮಕೊಡಲು ನರಸೀಪುರದಂತಹ ತ್ರಿವೇಣಿ ಸಂಗಮಗಳೂ ಇವೆ. ತಿರುಮಕೊಡಲು ನರಸೀಪುರದಲ್ಲಿ ಅನೇಕ ವರ್ಷಗಳಿಂದ ಕುಂಭಮೇಳವನ್ನು ನಡೆಸಲಾಗುತ್ತಿದೆ, ಈ ವರ್ಷವೂ ಅದು ಇನ್ನೇನು ಆರಂಭಗೊಳ್ಳುತ್ತಿದೆ.    



ನತೋಸ್ಮಿ ತುಂಗಾಂ ವಿಲತಸ್ತರಂಗಾಂ ಅಘೌಘಭಂಗಾಂ ಹರಿಪಾದಸಂಗಾಂ |
ನತೋಸ್ಮಿ ಭದ್ರಾಂ ಹೃತಪಾಪನಿದ್ರಾಂ ವಿಮುಕ್ತಿ ಪದ್ಯಾಂ ವಿಮಲೈಕ ಸಾಧ್ಯಾಂ||

ಸ್ನಾನಕ್ಕೆ ವಿಶಿಷ್ಟ ಮಹತ್ವವನ್ನು ನೀಡಿದ ಸನಾತನ ಧರ್ಮದಲ್ಲಿ ನದಿಗಳಿಗೆ ಅತ್ಯಂತ ಮಹತ್ವದ ಸ್ಥಾನವನ್ನು ಕಲ್ಪಿಸಿದ್ದಾರೆ. ಪಾಪಿಗಳು, ಪಾಮರರು, ಜನಸಾಮಾನ್ಯರು ಸ್ನಾನಮಾಡುವುದರಿಂದ ನದಿಗಳು ಅಪವಿತ್ರವಾದರೆ ಸಂತ-ಮಹಂತ-ಸಂನ್ಯಾಸಿಗಳು-ಯೋಗಿಗಳು ಸ್ನಾನಮಾಡುವುದರಿಂದ ನದಿಗಳು ಪವಿತ್ರಗೊಳ್ಳುತ್ತವೆ ಎಂದು ಧರ್ಮ ಹೇಳುತ್ತದೆ. ಜನಸಾಮಾನ್ಯರಿಗೆ ನಿತ್ಯವೂ ಸಂಗಮಗಳಲ್ಲಿ ಸಾಧು-ಸಂತರು ದೊರೆಯುವುದು ಕಷ್ಟ. ಕುಂಭಮೇಳಗಳ ಸಮಯದಲ್ಲಿ ಸ್ನಾನದ ಜೊತೆಜೊತೆಗೇ ಸ್ಥಳದಲ್ಲಿಯೇ ಸಾಧು-ಸಂತರ ದರ್ಶನ, ಪಾದಸ್ಪರ್ಶನ, ಪಾದಸೇವನ, ಸಂತಭಿಕ್ಷೆ ಮೊದಲಾದ ಕಾರ್ಯಗಳಿಗೆ ಅವಕಾಶವೊದಗುತ್ತದೆ. ನಿತ್ಯವೂ ಸಂಗಮದಲ್ಲಿ ಸ್ನಾನಮಾಡಲಾಗದ ಸಾಧು-ಸಂತರಿಗೆ ಈ ಸಮಯದಲ್ಲಿ ಅಂಥಾ ಅವಕಾಶ ಲಭಿಸುತ್ತದೆ. ಈ ಕಾರಣಗಳಿಂದ ಕುಂಭಮೇಳಗಳು ನಡೆಯುತ್ತವೆ.  



ಅಸಂಖ್ಯ ಸಾಧು-ಸಂತರು ಭಾಗವಹಿಸುವ ಕುಂಭಮೇಳಗಳಲ್ಲಿ ಒಂದೊಂದು ಅಖಾಡಾಗಳಿಗೂ ಸಂಬಂಧಿಸಿದಂತೇ ಅವರವರ ಪ್ರವೇಶ ಮಾರ್ಗಗಳು, ತಾತ್ಕಾಲಿಕ ವಸಾಹತುಗಳು ಆಯಾ ಕ್ಷೇತ್ರಗಳಲ್ಲಿ ನಿರ್ಮಾಣಗೊಳ್ಳುತ್ತವೆ. ಬಂದ ಭಕ್ತನಿಗೆ ಕಣ್ಣು ಹರಿಸಿದಷ್ಟೂ ಎಲ್ಲೆಲ್ಲೂ ಭಗವಾಧ್ವಜಗಳೇ ಕಾಣಿಸುವುದರ ಜೊತೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾಧು-ಸಂತರು ಸಂಗಮದೆಡೆಗೆ ತೆರಳುತ್ತಿರುವುದು ಕಾಣುತ್ತದೆ. ಆಗಾಗ ಮೆರವಣಿಗೆಗಳಲ್ಲಿ ಸಾಗುವ ಮಂಡಲೇಶ್ವರ, ಮಹಾಮಂಡಲೇಶ್ವರ ಮೊದಲಾದ ಹಿರಿಯ ಸಂತರನ್ನು ನಾವು ಕಾಣಬಹುದಾಗಿರುತ್ತದೆ. ಪ್ರಾದೇಶಿಕವಾಗಿ ನಡೆಯುವ ಜಾತ್ರೆಗಳೇ ದೊಡ್ಡದೆನಿಸಿದರೆ ಕುಂಭಮೇಳಗಳು ನಾವರಿಯದ ಬೃಹದ್ ಗಾತ್ರದವಾಗಿರುತ್ತವೆ. ಎಲ್ಲಿ ನೋಡಿದರೂ ಜನ ಜನ ಜನ. ಅಬಾಲವೃದ್ಧರಾದಿಯಾಗಿ ಕುಂಟರು, ಕುರುಡರು, ಹೆಳವರು, ಅಶಕ್ತರೂ ಸಹ ಇತರರ ಸಹಾಯ ಪಡೆದು ಪುಣ್ಯಸ್ನಾನದಲ್ಲಿ ಭಾಗವಹಿಸುತ್ತಾರೆ. ಭಜನೆ, ವಾದ್ಯಘೋಷ, ವೇದಘೋಷ, ಅಖಂಡ ನಾಮಸ್ಮರಣೆ ಇವೆಲ್ಲಾ ಸತತ ನಡೆದೇ ಇರುತ್ತವೆ. ಸರಕಾರ ಕಲ್ಪಿಸುವ ವಿದ್ಯುದ್ದೀಪಗಳಿಂದ ಅಲಂಕೃತವಾದ ಮೇಳಪುರಿಯಂತೂ ಇಂದ್ರನಗರಿಯಂತೇ ಕಂಗೊಳಿಸುತ್ತದೆ. 


ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲಸಕ್ಕರೆಯಾಗಿ ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು-ಮಂಕುತಿಮ್ಮ

ಕಷ್ಟಗಳು ಮನುಷ್ಯ ಸಹಜ. ಸುಖದ ಜೊತೆಗೆ ದುಃಖ ಎಂಬುದು ಅದರ ಇನ್ನೊಂದು ಮುಖ. ಸದಾ ದುಃಖವೇ ಇರುವುದಿಲ್ಲ, ಸದಾ ಸುಖವೂ ಇರುವುದಿಲ್ಲ; ಅವು ಬದಲಾಗುತ್ತಿರುತ್ತವೆ. ಭುವಿಯ ಬದುಕಿಗೆ ಬರುವ ಜೀವಾತ್ಮನ ಬದುಕಿನ ಚಹರೆಗಳೂ ಬದಲಾಗುತ್ತಿರುತ್ತವೆ. ಹಿಂದೆ ಯಾರದೋ ಆಗಿದ್ದ ಆಸ್ತಿ ಇಂದು ನಮ್ಮದಾಗಿರಬಹುದು, ನಾಳೆ ಇನ್ನಾರದೋ ಆಗಲಿದೆ! ಪರಿವರ್ತನೆ ಜಗದ ನಿಯಮ ಎಂದು ಗೀತೆ ಸಾರುತ್ತದೆ. ನಾವು ಇಲ್ಲೇ ಶಾಶ್ವತವಾಗಿ ನೆಲೆಸಿ ಎಲ್ಲದನ್ನೂ ನಮ್ಮದನ್ನಾಗೇ ಇರಿಸಿಕೊಳ್ಳುತ್ತೇವೆ ಎಂಬುದು ಆಗದಮಾತು. ನಮಗಿಂತಾ ಮೂರು-ನಾಲ್ಕು ತಲೆಮಾರಿನ ಹಿಂದಿನ ನಮ್ಮ ಪೂರ್ವಜರ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ! ನಮ್ಮ ನಂತರದ ನಾಲ್ಕು ತಲೆಮಾರಿನವರಿಗೂ ನಮ್ಮ ಬಗೆಗೆ ತಿಳುವಳಿಕೆ ಇರುವುದಿಲ್ಲ. ಗೋಡೆಗೆ ಆನಿಸಿದ ಪೂರ್ವಜರ ಚಿತ್ರಪಟಗಳು ಕಾಲಾನುಕ್ರಮದಲ್ಲಿ ಹಾಳಾಗಿಹೋದಮೇಲೆ ಅಲ್ಲಿ ಬೇರೇ ಚಿತ್ರಪಟಗಳು ಬರಬಹುದು ಅಥವಾ ಗೋಡೆಯೇ ಕುಸಿದು ಹೊಸದಾಗಿ ನಿರ್ಮಾಣಗೊಳ್ಳಬಹುದು! ನಾನು -ನನ್ನದು-ನಮ್ಮದು ಎಂಬ ಆ ಸಂಕುಚಿತ ಭಾವದ ಅಭಾವ ಉಂಟಾಗಬೇಕಾದರೆ ನಾವು ಮಹಾಕುಂಭಮೇಳಗಳಂತಹ ಮೇಳ ನೋಡಬೇಕು. ನಮ್ಮ ಕಷ್ಟಗಳೆಲ್ಲಾ ಒಮ್ಮೆ ಮರೆತುಹೋಗುತ್ತವೆ. ದೈವಸಾನ್ನಿಧ್ಯದಲ್ಲೇ ನಾವಿರುವಂತಹ ಬೇರೊಂದೇ ಲೋಕದ ಅನುಭವವನ್ನು ಕುಂಭಮೇಳ ನಮಗೆ ನೀಡುತ್ತದೆ. ಅನುಕೂಲವುಳ್ಳವರು ದಾನ ಮಾಡುತ್ತಾರೆ, ಅನುಕೂಲವಿಲ್ಲದವರು ದಾನ ಸ್ವೀಕರಿಸುತ್ತಾರೆ. ಪ್ರಸಾದ ಭೋಜನ ಮಾಡುವಾಗ ಸಾಲಿನಲ್ಲಿ ಬಡವ-ಬಲ್ಲಿದ-ಭಿಕ್ಷುಕ ಎಂಬ ಭೇದವಿಲ್ಲದೇ ಎಲ್ಲರೂ ಕುಳಿತು ಅನ್ನಬ್ರಹ್ಮನನ್ನು ನೆನೆದು ಪ್ರಸಾದ ಭುಂಜಿಸುತ್ತಾರೆ. ಭಗವಂತ ಕೊಟ್ಟ ಅವಕಾಶದಲ್ಲಿ ನಾವು ನಮ್ಮದೇ ಒಳಗವಚಗಳನ್ನು ನಿರ್ಮಿಸಿಕೊಂಡು ಒಳ ಅವಕಾಶವನ್ನು ಹುಟ್ಟಿಸಿಕೊಳ್ಳುತ್ತೇವೆ. ಮಡಕೆಯ ಒಳಗೆ ಇರುವ ಅವಕಾಶ [ಜಾಗ] ಮಡಕೆಯೊಡೆದಾಗ ಹೊರಗಿನ ಅವಕಾಶದಲ್ಲಿ ಲೀನವಾಗುತ್ತದೆ. ಮಡಕೆಯೊಳಗೆ ಇರುವ ಜಾಗ ಹೊರಗಿನ ಜಾಗಕ್ಕೆ ಸೇರಿದಾಗ ಹೊರಗಿನ ಜಾಗ ಹೆಚ್ಚಾಯಿತೋ? ಇಲ್ಲ. ಹೊರಗಿನ ಜಾಗದಲ್ಲಿ ಮಡಕೆಯನ್ನೇರ್ಪಡಿದರೆ ಅಲ್ಲಿನ ಜಾಗದಲ್ಲಿ ಕಮ್ಮಿಯೇನೂ ಆಗುವುದಿಲ್ಲ, ಬದಲಾಗಿ ಆ ಜಾಗ ಮಡಕೆಯೊಳಗೆ ಇರುತ್ತದೆ, ಅಷ್ಟೇ. ನದಿಗಳು ವರ್ಷಪೂರ್ತಿ ಹರಿದು ಸಮುದ್ರಕ್ಕೆ ಸೇರಿ ಸೇರಿ ಸೇರಿ ಸಮುದ್ರ ಉಕ್ಕಿಯೋಯ್ತೋ? ಇಲ್ಲ! ಯಾಕೆಂದರೆ ಸಮುದ್ರದ ನೀರೇ ಸೂರ್ಯನ ಕೃಪೆಯೆಂಬ ಕಿರಣಗಳಿಂದ ಆವಿಯಾಗಿ, ಘನೀಕರಿಸಿ ಮೋಡವಾಗಿ, ಮಳೆಯಾಗಿ, ಭೂಮಿಯಲ್ಲಿ ಇಂಗಿ, ಮತ್ತೆ ಬಿಂದುವಾಗಿ-ಹನಿಹನಿ ಸೇರಿ ಹರಿವತೊರೆಯಾಗಿ, ಹಳ್ಳ-ನದಿಯಾಗಿ ಕೊನೆಗೊಮ್ಮೆ ಸಿಂಧುವನ್ನು ಸೇರುವುದೇ ಪ್ರಕೃತಿ ನಿಯಮ. ಈ ಚಾಲನೆಗೆ ಸೃಷ್ಟಿಕರ್ತ ಭಗವಂತ ನಮ್ಮಿಂದ ಪ್ರತಿಫಲವಾಗಿ ಏನನ್ನೂ ಕೇಳುವುದಿಲ್ಲ; ಬದಲಾಗಿ ಕಾಲಕಾಲಕ್ಕೆ ಮಳೆಯಾದರೇ ಭೂಮಿತಾಯಿ ಹಸಿರುಡುತ್ತಾಳೆ, ಫಲಭರಿತವಾಗುತ್ತಾಳೆ. ಅಂತಹ ಅನನ್ಯ ದಿವ್ಯ ಶಕ್ತಿಯ ನೆನಪಿನಲ್ಲಿ, ಆ ದಿವ್ಯ ಸ್ಮರಣೆಯಲ್ಲಿ ಕೆಲಹೊತ್ತು ಕಳೆಯುವ ಮಂಗಲಮಯ ಸನ್ನಿವೇಶವೇ ಕುಂಭಮೇಳ.




ಸಲಿಲ ಗಂಗೆ ಜಲತರಂಗೆ ತುಂಗೆ ಭದ್ರೆ ಪಾವನ
ಜಲಲ ಜಲದಿ ಮಿಂದು ಧನ್ಯವಾಯಿತೆನ್ನ ಜೀವನ
ಕಲಿಕಲ್ಮಷ ಅಘನಾಶಿನಿ ಯಮುನೆ ಸಿಂಧು ಸರಸತೀ
ನಲಿಯುತ ಕಾವೇರಿ ಕಪಿಲೆ ಅದದೊ ಆ ಶರಾವತಿ

ಒಲಿದು ಕಾಳಿ ಕೃಷ್ಣೆ ಭೀಮೆ ಅಮರಜಾ ನರ್ಮದಾ
ಬೆಳೆದ ಶಿಪ್ರ ಅಲಕನಂದ ಕುಮುದ್ವತಿಯರಾಮುದ
ಮಲಪ್ರಭಾ ಆ ಘಟಪ್ರಭಾ ಚಂದ್ರಭಾಗ ಫಲ್ಗುಣಿ
ಹಲವ ನೆನೆವೆ ಗೋದಾವರಿ ಗಂಡಕಿ ನೇತ್ರಾವತಿ

ಇಳೆಯ ಖುಷಿಗೆ ಬೆಳೆಯ ತೃಷೆಗೆ ಬೆಳಕನೀಡೆ ಹರಸುತ
ಕಲಕಲಕಲ ಕಲರವದೊಳು ಮಂದಗಮನೆ ಹರಿಯುತ
ಬಲಗೊಳಿಸುವ ನದಿತಾಯ್ಗಳೆ ಬೆಳಗಲೆಮ್ಮ ಭಾರತ
ಮಿಲನಗೊಂಡ ನಿಮ್ಮ ಕಂಡೆ ಕುಂಭಮೇಳ ಸಾರುತ

ಕೊಳೆತೊಳೆಯಿತು ಮನ ಹರುಷದಿ ಪಡೆದು ಆಯ್ತನನ್ಯವು
ಬಳುವಳಿಯದು ನೆನಪಸಾರ ನೀವದೆಷ್ಟು ಧನ್ಯವು ! 
ಥಳ ಥಳ ಥಳ ಹೊಳೆವ ಜ್ಯೋತಿ ಮಂಗಳನೀರಾಜನ
ಅಲೆಅಲೆಯಲು ನರ್ತಿಸುತಿಹ ನೀವು ಅದಕೆ ಭಾಜನ

[ನದಿತಾಯಂದಿರಿಗೆ ಸ್ವರಚಿತ ಕವನದಾರತಿ]



ರಾಮಾಯಣದ ಶ್ರೀರಾಮಚಂದ್ರಮನ ಪೂರ್ವಜ ರಾಜರ್ಷಿ ಭಗೀರಥ, ತನ್ನ ಪೂರ್ವಜ ಸಗರಚಕ್ರವರ್ತಿಯ ಪುತ್ರರೆನಿಸಿ, ಕಪಿಲಮಹರ್ಷಿಯ ಶಾಪದಿಂದ ಬೂದಿಯಾಗಿಬಿದ್ದಿದ್ದ ಸಾವಿರ ಜೀವಾತ್ಮರಿಗೆ ಸದ್ಗತಿಯನ್ನೊದಗಿಸುವ ಸಲುವಾಗಿ, ತನ್ನ ಅಖಂಡ ತಪಸ್ಸಿನಿಂದ ದೇವಗಂಗೆಯನ್ನು ಭೂಮಿಗೆ ತಂದ-ಆಕೆಯೇರ್ ಭಾಗೀರಥಿ. ಅಂತಹ ದೇವಗಂಗೆ-ಭಾಗೀರಥಿ ಮಹರ್ಷಿ ಜಹ್ನುವಿನಿಂದ ಆಪೋಷಣೆಗೊಳಗಾಗಿ, ಆತನ ಕಿವಿಯಿಂದ ಹೊರಹೊರಟು ಜಾಹ್ನವಿಯಾದಳು. [ಕಾಶಿಯಲ್ಲಿ ಆಕೆಯ ಸುತ್ತ ಸಾವಿರಾರು ಕಥೆಗಳು ಜನರ ಬಾಯಲ್ಲಿವೆ. ಅಂತಹ ಕಥೆಗಳಲ್ಲಿ ಪಂಡರಾಪುರದ ಸಂಸ್ಥಾಪಕ ಪುಂಡಲೀಕನ ಕಥೆಯೂ ಒಂದು. ಕಾಶಿಯಲ್ಲಿರುವ ಸ್ನಾನ ಘಟ್ಟಗಳಲ್ಲಿ ಕೋಟ್ಯಂತರ ಭಕ್ತರಿಗೆ ದಿವ್ಯಾನುಭವಗಳು ಆಗಿವೆ.] ನಂತರ ವಿವಿಧ ಹಂತಗಳಲ್ಲಿ ವಿವಿಧ ಹೆಸರುಗಳಲ್ಲಿ ಹರಿದ ಗಂಗಾಮಾಯಿ, ಪ್ರಯಾಗದಲ್ಲಿ, ಸೂರ್ಯಪುತ್ರಿ-ಯಮನ ಸಹೋದರಿಯಾದ ಯಮುನೆಯನ್ನೂ ಜ್ಞಾನವಾಹಿನಿಯಾದ ಸರಸ್ವತಿಯನ್ನೂ ಸಂಗಮಿಸುತ್ತಾಳೆ. ಅಂತಹ ಕ್ಷೇತ್ರವನ್ನು ಧರ್ಮಸೂತ್ರಗಳು ದಾಖಲಿಸಿವೆ. ಬೆಳ್ಳಗಿನ ಅಲೆಗಳ ನದಿಗೆ ಕಪ್ಪುನೀರಿನ ನದಿಯು ಸೇರುವ ಸ್ಥಳದಲ್ಲಿ, ಅಕ್ಷಯವಾದ ಆಲದಮರವಿದೆ. ಅಂತಹ ಸಂಗಮದ ಕ್ಷೇತ್ರ ತೀರ್ಥರಾಜ ಪ್ರಯಾಗವೆನಿಸಿದೆ. ಪ್ರಾಗೈತಿಹಾಸಿಕ ದಾಖಲೆಗಳು ಹೇಳುವ ಇಂತಹ ಪುಣ್ಯ ಸ್ಥಳಗಳಲ್ಲಿ ಸ್ನಾನಮಾಡುವುದು ಸನಾತನಿಗಳಲ್ಲಿ ಹೆಚ್ಚಿನ ಜನರಿಗೆ ಜೀವನದಲ್ಲಿ ಒಮ್ಮೆಮಾತ್ರ ಸಿಗುವ ಭಾಗ್ಯ. ಅದಕ್ಕಾಗಿ ಕುಂಭಮೇಳದಂತಹ ಜಾತ್ರೆಗಳು ನಡೆಸಲ್ಪಡುತ್ತವೆ. 


ಈ ಸರ್ತಿ ನಮ್ಮ ಜೀವಿತಾವಧಿಯಲ್ಲೇ ೧೪೪ ವರ್ಷಕ್ಕೊಮ್ಮೆ ಜರುಗುವ ಮಹಾಕುಂಭಮೇಳ ಈಗ ಪ್ರಯಾಗದಲ್ಲಿ ನಡೆಯುತ್ತಿದೆ. ಆರಂಭದಾರಭ್ಯ ಇಲ್ಲೀವರೆಗೆ ಸರಿಸುಮಾರು ೪೫-೫೦ ಕೋಟಿ ಜನ ಶಾಹಿಸ್ನಾನ ಮಾಡಿ ಪುನೀತರಾಗಿದ್ದಾರೆ. ಜನವರಿ ೨೭ ರಿಂದ ಆರಂಭಗೊಂಡ ಈ ಮಹಾಕುಂಭಮೇಳದಲ್ಲಿ ಕೆಳಕಂಡ ಹಬ್ಬಗಳ ಆಚರಣೆಗಳು ನಡೆದಿವೆ/ನಡೆಯುತ್ತವೆ:

• 14 January 2013 (Monday) – Makar Sankranti
• 27 January 2013 (Sunday) – Paush Purnima
• 6 February 2013 (Wednesday) – Ekadashi Snan
• 10 February 2013 (Sunday) – Mauni Amavasya Snan (Main Bathing Day)
• 15 February 2013 (Friday) – Vasant Panchami Snan
• 17 February 2013 (Sunday) – Rath Saptami Snan
• 21 February 2013 (Thursday) – Bhisma Ekadashi Snan
• 25 February 2013 (Monday) – Maghi Purnima Snana
• 10 March 2013 (Sunday) – Mahashivratri



ಸ್ಥಾನಿಕ ಸರಕಾರ ಮಹಾಕುಂಭಮೇಳದಲ್ಲಿ ಅತ್ಯುತ್ತಮ ವ್ಯವಸ್ಥೆಯನ್ನು ಕಲ್ಪಿಸಿದೆ. ಸಾವಿರ ಜನ ಸೇರಿದ ಜಾಗದಲ್ಲೇ ಅನಾನುಕೂಲಗಳು, ಕೊರತೆಗಳು, ವ್ಯವಸ್ಥೆಯಲ್ಲಿನ ದೋಷಗಳು ಕಾಣುತ್ತವೆ, ಹೀಗಿರುವಾಗ ಕೋಟ್ಯಂತರ ಜನ ತಿಂಗಳಾನುಗಟ್ಟಲೆ ನಿತ್ಯ ಹರಿದು ಬಂದು-ಹೋಗಿ ಮಾಡುತ್ತಿರುವಾಗ ಯಾವ ಮಟ್ಟದ ವ್ಯವಸ್ಥೆ ಮಾಡಿರಬಹುದೆಂಬುದನ್ನು ನಾವು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರೊಬ್ಬರೂ ಕೊರತೆಯಾಯ್ತು ಎಂದುಕೊಳ್ಳುವಂತೇ ಇರದ ಕುಂಭಮೇಳ ಎನ್ನಿಸಿದೆ. ತಾತ್ಕಾಲಿಕವಾಗಿ ಹಾಕಿರುವ ತಂಬು-ಗುಡಾರಗಳಲ್ಲಿ ಯಾತ್ರಿಕರು ತಂಗಬಹುದಾಗಿದೆ. ಕುಡಿಯುವ ನೀರಿಗೆ, ಶೌಚಕ್ಕೆ, ಊಟೋಪಚಾರಗಳಿಗೆ, ಸಾಮಾನು ವಗೈರೆ ಬಂದೋಬಸ್ತಾಗಿ ಇಟುಕೊಳ್ಳಲಿಕ್ಕೆ, ರಕ್ಷಣೆಗೆ, ಸಂವಹನಮಾಧ್ಯಮಗಳಿಗೆ, ಮಾಧ್ಯಮಗಳಿಗೆ, ಸಾಗಾಟ-ಸಾರಿಗೆಗೆ, ಕಳೆದುಹೋದವರನ್ನು ಹುಡುಕಲಿಕ್ಕೆ ಎಲ್ಲದಕ್ಕೂ ಪ್ರತ್ಯೇಕ ವಿಭಾಗಗಳಿವೆ. ವಿಶ್ವಹಿಂದೂ ಪರಿಷತ್ತಿನ ವಿರಾಟ್ ಸಭಾಂಗಣದಲ್ಲಿ ಧರ್ಮಸಮ್ಮೇಳನಗಳು ನಿತ್ಯವೂ ನಡೆಯುತ್ತಿವೆ. ಜಗತ್ತಿನಲ್ಲಿಯೇ ಇಷ್ಟುದೊಡ್ಡ ಪ್ರಮಾಣದ ಜಾತ್ರೆ ಇನ್ನೊಂದಿಲ್ಲ ಎಂಬುದು ವಿಶೇಷವಾಗಿದೆ. ಕುಂಭಮೇಳದಲ್ಲಿ ಭಾಗವಹಿಸಿಬಿಟ್ಟರೆ ಮುಗಿಯುವವರೆಗೂ ಇದ್ದುಬಿಡುವ ಮನಸ್ಸಾಗುತ್ತದೆ, ನೋಡಿಮುಗಿಯಿತು ಎಂಬ ಭಾವನೆ ಬರುವುದಿಲ್ಲ; ಇನ್ನೂ ಇನ್ನೂ ನೋಡಬೇಕು, ಮತ್ತಷ್ಟು ಕಣ್ತುಂಬಿಸಿಕೊಳ್ಳಬೇಕು, ನಾನಾ ರೀತಿಯ ಸಾಧು-ಸಂತರನ್ನೂ ಅವರ ವೈಶಿಷ್ಟ್ಯಗಳನ್ನೂ ಕಂಡು-ಕೇಳಿ ತಿಳಿದುಕೊಳ್ಳಬೇಕು ಎನಿಸುತ್ತದೆ. ಇದ್ದರೆ ಇಂಥಾದ್ದೊಂದು ಧರ್ಮವಿರಬೇಕೆಂಬ ಧನ್ಯತೆ ಒಳಗಿನಿಂದ ಹರಿದುಬರುತ್ತದೆ; ಹೊರನಡೆವಾಗ ಹೃದಯ ತುಂಬಿಬಂದು ಕಣ್ಣುಗಳು ತಂತಾನೇ ಆನಂದಬಾಷ್ಪವನ್ನು ಉದುರಿಸುತ್ತವೆ. ತೀರ್ಥರಾಜ ಪ್ರಯಾಗ ಎಂದೂ ಮರೆಯದಂತೆ ಮನದಲ್ಲಿ ಉಳಿದುಹೋಗುತ್ತದೆ. ಸಾಧ್ಯವಾದವರು ಹೋಗಿಬನ್ನಿ, ಸಾಧ್ಯವಾಗದವರು ಕೇಳಿ-ತಿಳಿದು ಆನಂದಿಸಿ, ತೀರ್ಥರಾಜ ಪ್ರಯಾಗಕ್ಕೊಮ್ಮೆ ಸಾಷ್ಟಾಂಗ ನಮಸ್ಕಾರ, ಗಂಗಾ-ಯಮುನಾ-ಸರಸ್ವತಿಯರಿಗೂ ಪ್ರತ್ಯೇಕ ಪ್ರತ್ಯೇಕ ನಮಸ್ಕಾರಗಳು, ಮಹಾಕುಂಭಮೇಳ-ತೀರ್ಥಸ್ನಾನದ ಪುಣ್ಯಕಥೆಯನ್ನು ಕೇಳಿದ ನಿಮಗೂ ನಮಸ್ಕಾರ.                

ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ ||