ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 17, 2012

ಕೂಪಮಂಡೂಕದೊಡನೆ ಸಂವಾದ !

ಚಿತ್ರಕೃಪೆ: ಅಂತರ್ಜಾಲ
ಕೂಪಮಂಡೂಕದೊಡನೆ ಸಂವಾದ !

[ಆತ್ಮೀಯ ಓದುಗಮಿತ್ರರೇ, ಜಗದಮಿತ್ರನ ಕಾವ್ಯದ ೨೯ನೇ ಕಂತನ್ನು ಲೋಕಾರ್ಪಣೆಗೈದಿದ್ದೇನೆ. ವಾಸ್ತವದಲ್ಲಿ ಇದು ೩೩ನೇ ಕಂತು, ೩-೪ ವಿಶೇಷ ಕಂತುಗಳನ್ನು ಇಲ್ಲಿ ಪ್ರಕಟಿಸದೇ ಮುಂಬರುವ ’ಜಗದಮಿತ್ರನ ಕಗ್ಗ’ ಪುಸ್ತಕಕ್ಕಾಗಿ ಕಾಯ್ದಿರಿಸಿದ್ದೇನೆ]

ಮೊಲಕೆ ಮೂರೇಕಾಲು ನಾಕು ಇಲ್ಲೆಂದೆನುತ
ಹೊಲದ ಕೂಪದ ಕಪ್ಪೆ ಆಗುವುದು ತರವೇ?
ಬಿಲವೆ ಮಹಲೆನಗೆಂಬ ಇಲಿಗುಂಟೆ ಹುಲಿಯರಿವು ?
ಗೆಲುವು ಅರಿತಾಮೇಲೆ | ಜಗದಮಿತ್ರ

ಅದು ಕಾಣುವಾವರೆಗೆ ನಿನ್ನರಿವು ಇದಕೆ ಮಿತ
ಇದುವದುವು ಅಳಿಯುವುದು ನವ್ಯದರಿವಿನಲಿ !
ಕೆದಕುತ್ತ ನಡೆವಂಗೆ ಕೊನೆಯಿಲ್ಲ ಶೋಧನೆಗೆ
ಬದುಕು ವೈಶಾಲ್ಯದಲಿ | ಜಗದಮಿತ್ರ

ಮುಕ್ತಮನದಿಂದೊಮ್ಮೆ ನಿತ್ಯ ಹೊಸದನು ಅರಿತು
ವ್ಯಕ್ತಿತ್ವ ಬೆಳೆಸಿಕೊಳು ಹಲವು ಹರವಿನಲಿ
ತ್ಯಕ್ತವಪ್ಪುದೆ ನಿಜವು ತ್ಯಜಿಸೆ ಕೆಲಜನವದನ ?
ಶಕ್ತ ನೀನಾಗರಿತು | ಜಗದಮಿತ್ರ  

ಅಣುವ ಕಾಣುವ ಮುನ್ನ ಅಣುವಿಗಾಗಿಯೆ ಶೋಧ
ಪಣತೊಟ್ಟು ಹುಡುಕಿದರು ಪರಮಾಣುಗಳನು
ಕಣಕಣವು ದೈವತವು ವಿಜ್ಞಾನ ಸೀಮಿತವು
ಗುಣದಲ್ಲೆ ನಿರ್ಗುಣವು | ಜಗದಮಿತ್ರ

ಮಡಿಯುಟ್ಟು ದೇವಳದಿ ಇಡಿದಿನವ ಕಳೆಯುತ್ತ
ಕಡೆಗೊಮ್ಮೆ ಶಿವನೆ ಕೇಶವನೆ ಗತಿಯೆನದೆ
ತೊಡಗಿ ಕರ್ತವ್ಯದಿಂ ನಡೆಸು ಜೀವನವನ್ನು
ಬಡವಧನಿಕನು ನೀನೆ ! ಜಗದಮಿತ್ರ

ಚಂದ್ರಲೋಕಕೆ ತೆರಳಿ ತಂದರದೊ ಮೃತ್ತಿಕೆಯ
ಇಂದ್ರಲೋಕವು ಕಂಡರಚ್ಚರಿಯೆ ತಡದಿ ?
ಮಂದ್ರದಲಿ ಸುಳ್ಳೆಸುಳ್ಳೆನುತ ವಾದಿಪಗಿಲ್ಲಿ
ಸಂದ್ರ ಸಂಶೋಧಕಗೆ | ಜಗದಮಿತ್ರ

ವೇದಗಳು ಹೇಳಿದವು ಮೂಲರೂಪದ ಮಹಿಮೆ
ಶೋಧನೆಗೆ ಆಕಾಶ ಅವಕಾಶ ಇಹದಿ
ಭೇದಿಸಲು ಅದನೊಂದ ಮತ್ತೊಂದು ಕಾಣುವುದು
ಸಾಧನೆಗೆ ಫಲವುಂಟು | ಜಗದಮಿತ್ರ 

ಮಡಿಯು ಪಂಚೆಯಲಲ್ಲ ಮನದಲ್ಲಿ ಭಾವದಲಿ
ಬಡಿದಾಟ ಮೇಲ್ತನಕೆ ಬರಿದೆ ಬಡಿವಾರ
ತೊಡೆದುಹಾಕಾನಿನ್ನ ಕಲ್ಮಶವನನುದಿನವು
ಬಡವ ನೀನ್ ಜ್ಞಾನದೊಳು | ಜಗದಮಿತ್ರ

ಮೆರವಣಿಗೆ ಜೈಕಾರ ಹಿತಮಿತದಿ ಇರಲಷ್ಟೆ
ಬರಹಗಳ ಸುಳ್ಳು ದಾಖಲೆ ಕಂತೆ ಬೇಕೆ ?
ತೆರೆದಿರಿಸು ಮನವನಾಗಸದೆತ್ತರಕೆ ಎಲ್ಲು
ಬಿರಿದು ದೊಡ್ಡವನಾಗು | ಜಗದಮಿತ್ರ

ನಾವು ಕಂಡಿದ್ದೆಲ್ಲ ಸತ್ಯವೇ ಇರಬಹುದು
ಹಾವು ಹುತ್ತದೊಳಿರಲು ತೋರುವುದು ಹೇಗೆ?
ಭಾವುಕತೆ ಬದಿಗೊತ್ತಿ ಮನದ ಮೇಲ್ಸ್ತರದಲ್ಲಿ
ಠಾವು ಅದ್ವೈತಮಯ | ಜಗದಮಿತ್ರ


Thursday, July 5, 2012

ಚಂದಿರನೇತಕೆ ಓಡುವನಮ್ಮಾ ಮೋಡಕೆ ಹೆದರಿಹನೇ ?

ಚಿತ್ರಋಣ: ಅಂತರ್ಜಾಲ

ಚಂದಿರನೇತಕೆ ಓಡುವನಮ್ಮಾ ಮೋಡಕೆ ಹೆದರಿಹನೇ ?
ಕೊನೆಗೂ ಸಿಕ್ಕಿದೆಯಾ ದೇವಕಣ ಎಂದರೆ ಕ್ಷಣದಲ್ಲೇ ಅದು ಎಲ್ಲಿಂದ ಬಂತು ಎಂಬ ಪ್ರಶ್ನೆ ಧುತ್ತನೆ ಎರಗುತ್ತದೆ !
ಪ್ರಪಂಚದ ಸೃಷ್ಟಿಗೆ ಕಾರಣವಾದ ದೇವಕಣ ಯಾನೇ ಹಿಗ್ಗ್ ಬೋಸನ್ ಎಂಬ ಪರಮಾಣುವಿಗಿಂತಾ ಎಷ್ಟೋಪಟ್ಟು ಚಿಕ್ಕದಾದ ಕಣವನ್ನು ಕಂಡುಹಿಡಿದೆವು ಎಂಬುದು ಭಾರತೀಯ ಮೂಲದವರಾದ ಜಿನೇವಾದ ವಿಜ್ಞಾನಿಗಳ ಅಂಬೋಣವಾಗಿದೆ. ಅವರು ಹೇಳಿಕೆಯಿತ್ತ ಮರುಕ್ಷಣ ನನಗೆ ಅನ್ನಿಸಿದ್ದು ದೇವಕಣದ ಉತ್ಫತ್ತಿ ಹೇಗಾಯ್ತು? ಎಂಬುದು! ಸರಿ ಸರಿ ಒಪ್ಪೋಣ, ವೈಜ್ಞಾನಿಕವಾಗಿ ಶತಶತಮಾನಗಳಲ್ಲೂ ಕಂಡಿರದ ಮೈಲಿಗಲ್ಲನ್ನು ಇಂದಿನ ವಿಜ್ಞಾನಿಗಳು ತಲ್ಪಿದ್ದಾರೆ, ಈ ಸಾಧನೆಯ ಹಿಂದಿನ ಪರಿಶ್ರಮ ಕಮ್ಮಿಯದೇನಲ್ಲ ಮತ್ತು ಸಾಧನೆಯೂ ಸಣ್ಣಮಟ್ಟದ್ದೇನಲ್ಲ. ಆದರೆ ಈ ಭೂಮಿ, ಆಕಾಶ, ವಾಯು, ನೀರು. ಅಗ್ನಿ ಈ ಎಲ್ಲಾ ಕಣ್ಣಿಗೆ ಕಾಣುವ ಸಮಸ್ತ ಬ್ರಹ್ಮಾಂಡವನ್ನು ಸೃಜಿಸಿ ಮೆರೆದಿದ್ದು ದೇವಕಣ ಎಂದು ವಿಜ್ಞಾನಿಗಳು ಈಗ ಹೇಳುತ್ತಿದ್ದಾರೆ-ಇದನ್ನು ನಮ್ಮ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮೊದಲೇ ಹೇಳಿದ್ದಾನೆ! :

ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್|
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ||

ಹೇ ಅರ್ಜುನಾ ! ನನ್ನ ಮಹತ್ ಬ್ರಹ್ಮರೂಪೀ ಮೂಲಪ್ರಕೃತಿಯು ಸಮಸ್ತ ಪ್ರಾಣಿಗಳ ಯೋನಿಯಾಗಿದೆ ಅರ್ಥಾತ್ ಗರ್ಭಾದಾನದ ಸ್ಥಾನವಾಗಿದೆ. ನಾನು ಆ ಯೋನಿಯಲ್ಲಿ ಚೇತನ-ಸಮುದಾಯರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ. ಆ ಜಡ ಚೇತನದ ಸಂಯೋಗದಿಂದ ಎಲ್ಲಾ ಜೀವಿಗಳ ಉತ್ಫತ್ತಿಯಾಗುತ್ತದೆ.

ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ |
ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ ||

ಅರ್ಜುನಾ, ನಾನಾ ಪ್ರಕಾರದ ಎಲ್ಲಾ ಯೋನಿಗಳಲ್ಲಿ ಎಷ್ಟು ಮೂರ್ತಿಗಳು ಅರ್ಥಾತ್ ಶರೀರಧಾರೀ ಪ್ರಾಣಿಗಳು ಹುಟ್ಟುತ್ತವೆಯೋ, ಪ್ರಕೃತಿ ಅವೆಲ್ಲದರ ಗರ್ಭವನ್ನು ಧರಿಸುವ ತಾಯಿಯಾಗಿದ್ದಾಳೆ, ನಾನು ಬೀಜವನ್ನು ಸ್ಥಾಪಿಸುವ ತಂದೆಯಾಗಿದ್ದೇನೆ.

ಗೀತೆಯ ಗುಣತ್ರಯ ವಿಭಾಗಯೋಗವೆಂಬ ೧೪ನೇ ಅಧ್ಯಾಯದಲ್ಲಿ ಜಗದ ಹುಟ್ಟು, ವಿನಾಶದ ಬಗೆಗೆ, ಸತ್ವ-ರಜ-ತಮ ಎಂಬ ಮೂರು ಗುಣಗಳ ಬಗೆಗೆ ಅರ್ಜುನನನ್ನು ನೆಪವಾಗಿಟ್ಟು ಜಗಕ್ಕೆ ಬೋಧಿಸಿದ್ದಾನೆ ಭಗವಂತ. ತನ್ನ ಇರವನ್ನು ತಾನು ಪ್ರತ್ಯಕ್ಷ ತೋರ್ಪಡಿಸದೇ ಪರೋಕ್ಷವಾಗಿ ಈ ಜಗದಲ್ಲಿ ಘಟಿಸುವ ಘಟನೆಗಳಿಗೆ ಬೀಜರೂಪದಲ್ಲಿ ನಾನೇ ಇದ್ದೇನೆ ಎನ್ನುತ್ತಾನೆ! 

ಮುಂದುವರಿದು ಪುರುಷೋತ್ತಮಯೋಗವೆಂಬ ೧೫ನೇ ಅಧ್ಯಾಯದಲ್ಲಿ ........

ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||

ಆದಿಪುರುಷ ಪರಮೇಶ್ವರನು ಯಾವುದರ ಬೇರು ಆಗಿದ್ದಾನೋ, ಬ್ರಹ್ಮದೇವರು ಯಾವುದರ ಮುಖ್ಯ ಕಾಂಡವಾಗಿದ್ದಾರೋ, ಆ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಅವಿನಾಶೀ ಎಂದು ಪ್ರಾಜ್ಞರು ಹೇಳುತ್ತಾರೆ; ವೇದಗಳು ಯಾವುದರ ಎಲೆಗಳೆಂದು ಹೇಳಲ್ಪಟ್ಟಿಯೋ ಅಂತಹ ತಲೆಕೆಳಗಾದ ಅಶ್ವತ್ಥವೃಕ್ಷದ ರೂಪವೇ ಈ ಜಗತ್ತು!  ವೇದಗಳ ಅರ್ಥವನ್ನು ಯಾರು ಸಮರ್ಪಕವಾಗಿ ಗ್ರಹಿಸಬಲ್ಲರೋ ಅವರು ತತ್ವದಿಂದ ಮಾತ್ರ ಈ ವೃಕ್ಷದ ಮಹತ್ತನ್ನು ಅರಿಯಬಲ್ಲರು.

ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ |
ಅಶ್ವತ್ಥಮೇನಂ ಸುವಿರೂಢಮೂಲಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ ||

ಲೌಕಿಕದಲ್ಲಿ ಸಹಜವಾಗಿ ಈ ವೃಕ್ಷದ ಆದಿಯಾಗಲೀ, ಅಂತ್ಯವಾಗಲೀ ಯಾರಿಗೂ ಕಾಣಿಸದಿರುವುದರಿಂದಲೂ ಮತ್ತು ಎಲೆಗಳೋಪಾದಿಯಲ್ಲಿರುವ ತತ್ತ್ವಗಳೂ ಕೂಡ ಸಹಜಗತಿಯಲ್ಲಿ ಗೋಚರಿಸದಿರುವುದರಿಂದಲೂ ವೃಕ್ಷದ ಬಗೆಗೆ ಜನರಲ್ಲಿ ತಿಳುವಳಿಕೆ ಮೂಡುವುದಿಲ್ಲ! ಈ ಲೋಕದಲ್ಲಿ ಅಹಂಕಾರ, ಮಮತೆ ಮತ್ತು ವಾಸನಾಬಲವನ್ನು ವೃದ್ಧಿಸುವ ಗುಣವುಳ್ಳ ಈ ಜೀವಸಂಕುಲದ ವೃಕ್ಷದಿಂದ ಹೊರಗೆ ನಡೆಯುವುದೇ ವಿಶಿಷ್ಟ ಸಾಧನೆಯಾಗಿದೆ ಮತ್ತು ಪರಮ ವಿರಾಗಿಗಳಿಗೆ ಮಾತ್ರ ಇದು ಸಾಧ್ಯವಾಗುತ್ತದೆ. 

ಗೀತೆಯ ಈ ಶ್ಲೋಕಗಳನ್ನು ಅವಲೋಕಿಸಿದಾಗ, ವಿವೇಚಿಸಿದಾಗ ಕೃಷ್ಣಹೇಳಿದ್ದು ಔಚಿತ್ಯಪೂರ್ಣವಾಗಿದೆ ಎನಿಸುವುದಿಲ್ಲವೇ? ದಿ| ಶಿವರಾಮ ಕಾರಂತರು ತಮ್ಮ ’ಈ ಜಗತ್ತು’ ಎಂಬ ಖಗೋಳ ಅಧ್ಯಯನದ ಬೃಹದ್ಗ್ರಂಥದಲ್ಲಿ ಉಲ್ಕೆಗಳ ಬಗ್ಗೆ, ಬ್ಲಾಕ್ಹೋಲ್ಗಳ ಬಗ್ಗೆ ಬಹಳವಾಗಿ ಉಲ್ಲೇಖಿಸಿದ್ದಾರೆ. ಈ ಪ್ರಪಂಚದ ಅದೆಷ್ಟೋ ಪ್ರಯೋಗಶಾಲಿಗಳು ಬ್ಲಾಕ್ಹೋಲ್ಗಳನ್ನು ತಿಳಿದುಕೊಳ್ಳಲು ಮುಂದಾಗಿ ಅದರ ಹತ್ತಿರಕ್ಕೆ ಹೋಗಿ, ಮರಳದೇ ಅದೆಲ್ಲಿಗೋ ತೆರಳಿದ್ದಾರೆ-ಅವರ ಯಾವುದೇ ಸುಳಿವೂ ಯಾರಿಗೂ ಲಭ್ಯವಾಗಿಲ್ಲ. ಆಕಾಶಗಂಗೆಯ ಬಗ್ಗೆಯೂ ಕೇಳಿದ್ದೇವೆ, ಆಗಾಗ ಭುವಿಗೆ ಧಾವಿಸಿ ಮರೆಯಾಗುವ ಕೌತುಕಮಯ ಹಾರುವ ತಟ್ಟೆ[ಫ್ಲೈಯಿಂಗ್ ಸಾಸರ್ಸ್]ಗಳ ಬಗ್ಗೆ ಕೇಳಿದ್ದೇವೆ. ಪ್ರತಿನಿತ್ಯ ಇಂತಹ ಹಲವು ನಿಗೂಢ ರಹಸ್ಯಗಳನ್ನು ನಮ್ಮ ಮುಂದೆ ಸವಾಲಾಗಿ ಹೊಮ್ಮಿಸುವ ಜಗನ್ನಿಯಾಮಕ ಶಕ್ತಿಯ ಮೂಲವನ್ನು ಕಾಣುವಲ್ಲಿ ಇದೀಗ ಹೆಜ್ಜೆ ಇರಿಸಿದ್ದೇವೆ ಎನ್ನುತ್ತಿದ್ದೇವೆ!    

ಕಾರಂತರ ’ಈ ಜಗತ್ತ’ನ್ನು ಓದುತ್ತಾ ಇದ್ದ ನನಗೆ ಬಾಲ್ಯದಲ್ಲಿ ಅವರೇ ಕನ್ನಡಕ್ಕೆ ಅನುವಾದಿಸಿ ಅಂಕಲ್ ಪೈ ಪ್ರಕಟಿಸಿದ ’ಅಮರ ಚಿತ್ರಕಥೆ’ಗಳ ಮಾಲಿಕೆಯ ಕೆಲವು ಪೌರಾಣಿಕ ಕಥಾಭಾಗಗಳು ಅಚ್ಚರಿಯನ್ನು ಮೂಡಿಸಿದ್ದರ ಜೊತೆಗೆ ಹಲವು ಸಂದೇಹಗಳೂ ಹುಟ್ಟಿಕೊಂಡಿದ್ದವು. ಕಾರಂತರು ಸ್ವತಃ ನಾಸ್ತಿಕರೆನಿಸಿದರೂ ಆಂತರ್ಯದಲ್ಲಿ ಅವರು ಜಗನ್ನಿಯಾಮಕ ಶಕ್ತಿಯನ್ನು ಅಲ್ಲಗಳೆಯದ ಅಪ್ರತಿಮ ಮೇಧಾವಿಯಾಗಿದ್ದರು. ನಮ್ಮರಿವಿಗೆ ನಿಲುಕದ ಅದೆಷ್ಟೋ ವಿಷಯಗಳಿವೆ ಎಂಬುದು ಅವರಿಗೆ ಸ್ಪಷ್ಟವಿತ್ತು. ಪುರಾಣದಲ್ಲಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರೆಂಬ ರಕ್ಕಸ ಸಹೋದರರ ಬಗ್ಗೆ ಕೇಳಿದ್ದೇವೆ. ಹಿರಣ್ಯಾಕ್ಷ  ಈ ಭೂಮಿಯನ್ನು ಹಾಸಿಗೆಯಂತೇ ಸುತ್ತಿ ಎತ್ತಿಕೊಂಡು ಹೋಗಿಬಿಟ್ಟಿದ್ದ ಎಂಬ ವರ್ಣನೆ ಬರುತ್ತದೆ. ವರಾಹಾವತಾರೀ ಮಹಾವಿಷ್ಣು ಹಿರಣ್ಯಾಕ್ಷನನ್ನು ವಧಿಸಿ ತನ್ನ ಕೋರೆದಾಡೆಗಳಿಂದ ಭೂಮಿಯನ್ನು ಪಾತಾಳದಿಂದ ಮೇಲೆತ್ತಿತಂದು ಸಮುದ್ರದಡದಲ್ಲಿ ಪ್ರತಿಷ್ಠಾಪಿಸಿದ ಎಂದೂ ಒಂದು ಹೇಳಿಕೆ ಸಿಗುತ್ತದೆ. ನನ್ನ ಪ್ರಶ್ನೆ ಇದಾಗಿತ್ತು : ವೈಜ್ಞಾನಿಕವಾಗಿ ನಾವು ನೋಡಿದ ಭೂಮಿಯ ಮೇಲ್ಮೈಯ್ಯಲ್ಲೇ ಸಮುದ್ರಗಳಿವೆಯೇ ಹೊರತು ಸಮುದ್ರದೊಳಗೆ ಭೂಮಿ ಇರುವುದಲ್ಲ. ಮೂರುಪಾಲು ನೀರು ಒಂದುಪಾಲು ನೆಲ ಎಂದು ವರ್ಗೀಕರಿಸಿದ ನಮ್ಮ ನಿಲುವಿಗೆ ಪರದೆ ಎಳೆಯುವುದು ಪರ್ವತಗಳ ಹಿಮ ಕರಗಿದಾಗ, ಅಂಟಾರ್ಕ್ಟಿಕ್ನಲ್ಲಿನ ಹಿಮಗಡ್ಡೆಗಳು ಕರಗಿದಾಗ !  ಜಗತ್ತಿನಲ್ಲಿರುವ ಹಿಮವೆಲ್ಲಾ ಕರಗಿದರೆ ಈ ಭೂಮಿ ಜಲಪ್ರಳಯವನ್ನು ಎದುರಿಸಬೇಕಾಗುವುದು ಅನಿವಾರ್ಯವಷ್ಟೇ ? ಅಂದಮೇಲೆ ನೀರು ಮೂರುಪಾಲಲ್ಲ ನಾಲ್ಕುಪಾಲೇ, ಆದರೆ ನಾಲ್ಕನೇ ಪಾಲು ಹಿಮಗಡ್ಡೆಗಳ ರೂಪದಲ್ಲಿ ಘನೀಕೃತವಾಗಿ ಜಗದ ಜೀವಸಂಕುಲಕ್ಕೆ ಬದುಕಲು ಅವಕಾಶ ಕಲ್ಪಿಸಿದೆ. ಪಾತಾಳವನ್ನು ನಾವಾಗಲೀ ನಮ್ಮ ವಿಜ್ಞಾನವಾಗಲೀ ಸದ್ಯಕ್ಕೆ ಕಂಡಿಲ್ಲ. ಅಭ್ಯಾಸಬಲದಿಂದ ಪಾತಾಳವೆಂದರೆ ಕೈಯ್ಯನ್ನು ಕೆಳಮುಖವಾಗಿಯೂ ಸ್ವರ್ಗ ಅಥವಾ ದೇವಲೋಕವೆಂದರೆ ಕೈಯ್ಯನ್ನು ಮೇಲ್ಮುಖವಾಗಿಯೂ ಹಿಡಿದು ತೋರಿಸುತ್ತೇವೆ-ನೋಡಿದ ಮಹನೀಯರು ನಮ್ಮೊಂದಿಗಿಲ್ಲ!

ಜೀವವೈವಿಧ್ಯಗಳನ್ನು ಅವಲೋಕಿಸುತ್ತಾ ನಡೆದರೆ ಯಾವುದು ಮೊದಲು ಯಾವುದು ನಂತರ ಎಂಬ ತಲೆಬುಡ ಸಿಗದ ವಾದ ಹುಟ್ಟಿಕೊಳ್ಳುತ್ತದೆ: ಬೀಜಮೊದಲೋ ವೃಕ್ಷಮೊದಲೋ? ಕೋಳಿಮೊದಲೋ ಮೊಟ್ಟೆಮೊದಲೋ? ಇಂತಹ ಪ್ರಶ್ನೆಗಳಿಗೆ ಉತ್ತರವೆಂಬುದು ನನಗಂತೂ ಇನ್ನೂ ಸಿಕ್ಕಿಲ್ಲ! ಆದರೆ ಜಗದಲ್ಲಿ ಕೋಟಿ ಕೋಟಿ ವೈವಿಧ್ಯಗಳನ್ನೂ ವೈರುಧ್ಯಗಳನ್ನೂ ಸೃಜಿಸಿದ ಶಕ್ತಿ ಆಯಾಯ ವೈವಿಧ್ಯತೆಗೆ ತಕ್ಕಂತೆ, ಆಕಾರ, ಬಣ್ಣ, ರೂಪ, ಆಹಾರ-ವಿಹಾರಗಳನ್ನೂ ರೂಪಿಸಿತು ಎಂಬುದನ್ನು ಅಲ್ಲಗಳೆಯಲಾಗದಲ್ಲಾ? ಪ್ರಪಂಚದ ಏಳು ಬಿಲಿಯನ್ ಜನಸಂಖ್ಯೆಯಲ್ಲಿ ಒಬ್ಬರ ಹಾಗೇ ಇನ್ನೊಬ್ಬರು ತದ್ರೂಪೀ ವ್ಯಕ್ತಿಗಳಿರುವುದು ಸಾಧ್ಯವಿಲ್ಲ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಛಾಯಾಚಿತ್ರ ಅಥವಾ ಹೆಬ್ಬೆರಳ ಗುರುತು ಪಡೆದು ಜನರನ್ನು ದಾಖಲಾತಿಗಳಲ್ಲಿ ಗುರುತಿಸುವ ದಾರಿಯನ್ನು ಬ್ಯಾಂಕ್ನವರು ನಡೆಸುತ್ತಿದ್ದಾರೆ. ಹೊರನೋಟಕ್ಕೆ ಚಹರೆಗಳಲ್ಲಿ ಹೋಲಿಕೆ ಕಾಣಿಸಿದರೂ ಸೂಕ್ಷ್ಮಗತಿಯ ವ್ಯತ್ಯಾಸಗಳು ಇದ್ದೇ ಇರುತ್ತವೆ! ಈ ಲೋಕದಲ್ಲಿ ಒಬ್ಬರ ಹಾಗೇ ಇನ್ನೊಬ್ಬರು ಇದ್ದರೆ ಕಳ್ಳತನ ಮಾಡಿದವನ ಬದಲಾಗಿ ಮತ್ತಿನ್ಯಾರೋ ಶಿಕ್ಷೆಗೆ ಒಳಪಡಬೇಕಾಗುತ್ತಿತ್ತು ಅಥವಾ ಯಾರದೋ ಆಸ್ತಿಯನ್ನು ಇನ್ಯಾರೋ ಲಪಟಾಯಿಸುತ್ತಿದ್ದರು ಅಲ್ಲವೇ? ಮಾನವ ತಯಾರಿಸಿದ ಬೀಗದ ತಟ್ಟೆಗಳಲ್ಲಿ [ಉದಾಹರಣೆಗೆ ಗಾಡ್ರೆಜ್]೯ ಲೀವರ್ ಮತ್ತು ೧೧ ಲೀವರ್ ಎಂಬುದನ್ನೆಲ್ಲಾ ಕಾಣುತ್ತೇವೆ. ಒಳಗಡೆ ಅಡಕವಾಗಿರುವ ಹಲವು ತಿರುವುಗಳುಳ್ಳ ಅಗುಳಿಗಳ ಜೋಡಣೆಗಳಲ್ಲಿ ವೈವಿಧ್ಯವನ್ನು ರೂಪಿಸುವುದರಿಂದ ಒಂದೇ ಕೀಲಿ ಕೈ ಎಲ್ಲಾ ಬೀಗಗಳನ್ನೂ ತೆಗೆಯಲು ಉಪಯೋಗಿಸಲ್ಪಡುವುದಿಲ್ಲ. ಆದರೂ ಲಕ್ಷ ಸಂಖ್ಯೆಯ ಬೀಗದ ತಟ್ಟೆ ಹಾಗೂ ಕೀಲೀಕೈಗಳನ್ನು ಒತ್ತಟ್ಟಿಗೆ ಇಟ್ಟುಕೊಂಡಾಗ ಹಲವು ಸಾಮ್ಯದ ಬೀಗದ ತಟ್ಟೆಗಳು ನಮಗೆ ಗೋಚರಿಸುತ್ತವೆ!! ಬಿಲಿಯನ್ ಸಂಖ್ಯೆಯ ಬೀಗಗಳು ಒಂದಕ್ಕೊಂದು ಸಾಮ್ಯವಿರದಂತೇ ನಿರ್ಮಿಸಲು ಸಾಧ್ಯವೇ ? ದೂರದ ಮಾತು!  ಇದೇ ಮಾನವ ನಿರ್ಮಿತಕ್ಕೂ ದೇವನಿರ್ಮಿತಕ್ಕೂ ಇರುವ ವ್ಯತ್ಯಾಸ !  

ಇನ್ನು ದೇವಕಣದ ವೇಗದ ಗತಿಯನ್ನು ನಟರಾಜನ ನರ್ತನಕ್ಕೆ ಹೋಲಿಸಿದ್ದಾರೆ ಎಂದು ಕೇಳಿದ್ದೇನೆ. ನಟರಾಜ ನರ್ತಿಸುತ್ತಾನೆ ಎಂದು ಕೇಳಿದ್ದೇವೆಯೇ ಹೊರತು ನೋಡಿದ್ದಂತೂ ಇಲ್ಲ. ಅಮೂರ್ತರೂಪವನ್ನು ಮೂರ್ತಿಯಾಗಿಸಿ ಕುಣಿಸಿ ನಟರಾಜ ಎಂದು ಪೂರ್ವಜರು ಕರೆದಿದ್ದಾರೆ. ಹಲವು ರೂಪಗಳಲ್ಲಿ, ಆಕಾರಗಳಲ್ಲಿ, ದಿರಿಸು-ಧಾರಣೆಗಳಲ್ಲಿ ಅಮೂರ್ತರೂಪವನ್ನು ಮೂರ್ತರೂಪಗೊಳಿಸಿ ಗಣೇಶ, ಶಿವ, ವಿಷ್ಣು, ಅರಹಂತ, ಅಲ್ಲಾ, ಕ್ರಿಸ್ತ ಎಂಬಿತ್ಯಾದಿ ಹೆಸರುಗಳ ಮೂಲಕ ಆತನನ್ನು ಸಂಬೋಧಿಸಿದ್ದೇವೆ. ನಮ್ಮ ಉದರನಿಮಿತ್ತವಾಗಿ ಇತರ ಹಲವು ಜೀವಪ್ರಭೇದಗಳನ್ನು ಬಲಿಗೊಟ್ಟು ’ದೇವರ ಅಪ್ಪಣೆ’ ಎಂದು ಸ್ವಾಹಾಕಾರ ಮಾಡುತ್ತೇವೆ. ಆದರೆ ದೇವರು ಇತರ ಜೀವಿಗಳನ್ನು ಆಹಾರವಾಗಿ ತನಗೆ ಬಲಿನೀಡಿ ಎಂದು ಎಂದೂ ಹೇಳಲಿಲ್ಲ! ನಮಗೆ ಜನ್ಮ ಕೊಟ್ಟ ಅದೇ ಶಕ್ತಿಯೇ ಸಕಲ ಜೀವಜಗತ್ತಿಗೂ ಜನ್ಮನೀಡಿತು. ತನ್ನಿಂದಲೇ ಸೃಜಿಸಲ್ಪಟ್ಟ ಜೀವಿಯನ್ನೇ ತಾನು ಆಹಾರವಾಗಿ ಭುಂಜಿಸುವಷ್ಟು ಅಗ್ಗದ ಶಕ್ತಿ ಅದಲ್ಲ! ಅಸಲಿಗೆ ಆಶಕ್ತಿಯ ಹೊಟ್ಟೆ ಎಲ್ಲಿದೆ? ಕಾಲೆಲ್ಲಿದೆ? ತಲೆ ಯಾವುದು? -ಇದ್ಯಾವುದೂ ನಮಗೆ ತಿಳಿದಿಲ್ಲ. ಕಾಣುವ ಆಕಾಶದ ಬುಡವಾಗಲೀ ತಲೆಯಾಗಲೀ ಅಯ ಅಳತೆಯಾಗಲೀ ನಮಗೆ ಇನ್ನೂ ಸಿಕ್ಕಿಲ್ಲ.

ಚಿಕ್ಕವರಿರುವಾಗ ನಮ್ಮಲ್ಲಿ ಒಗಟುಗಳ ಮಹಾಪೂರವೇ ಹರಿಯುತ್ತಿತ್ತು. ’ಅಜ್ಜಿ ಕೊಟ್ಟ ಹಪ್ಪಳ ತಿನ್ನಲಾಗುವುದಿಲ್ಲ, ಅಜ್ಜ ಕೊಟ್ಟ ನಾಣ್ಯಗಳನ್ನು ಎಣಿಸಲಾಗುವುದಿಲ್ಲ’ --ಎಂಬುದೂ ಕೂಡ ಒಂದು. ಇಲ್ಲಿ ಚಂದ್ರನನ್ನು ಅಜ್ಜಿಯ ಹಪ್ಪಳಕ್ಕೂ ತಾರೆಗಳನ್ನು ಅಜ್ಜನ ನಾಣ್ಯಗಳಿಗೂ ಹೋಲಿಸಲಾಗಿದೆ. ಹೌದು, ಚಂದಿರನನ್ನು ಮುರಿಯಲು ನಮ್ಮಿಂದ ಸಾಧ್ಯವೇ? ತಾರೆಗಳು ಇಂತಿಷ್ಟೇ ಎಂದು ನಿಖರವಾಗಿ ಹೇಳಲು ಸಾಧ್ಯವೇ? ನಮ್ಮ ಬಾಲ್ಯದಲ್ಲಿ ನಮಗೆ ಹಿರಿಯರು ಹೇಳಿಕೊಟ್ಟಿದ್ದ ಒಂದು ಹಾಡು :

ಚಂದಿರನೇತಕೆ ಓಡುವನಮ್ಮಾ
ಮೋಡಕೆ ಹೆದರಿಹನೇ ?
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೇ ?  

ನಾವು ಬಸ್ಸಿನಲ್ಲಿ ಕಿಟಕಿಯ ಪಕ್ಕದ ಆಸನದಲ್ಲಿ ಅಮ್ಮನ ಕಾಲಮೇಲೆ ಕುಳಿತು ಪಯಣಿಸುವಾಗ ರಸ್ತೆಯಲ್ಲಿ ಮರಗಳೂ ಓಡುತ್ತಿದ್ದುದು ನಮ್ಮ ಗಮನಕ್ಕೆ ಬರುತ್ತಿತ್ತು. ಮೇಲಿನ ಹಾಡು ಹೇಳಿಕೊಳ್ಳುತ್ತಾ ಬೆಳದಿಂಗಳ ದಿನಗಳ ಆಕಾಶವನ್ನು ದಿಟ್ಟಿಸಿದಾಗ ಅಲ್ಲಲ್ಲಿ ಒಮ್ಮೊಮ್ಮೆ ಮೋಡಗಳು ಸರಿದುಹೋಗುತ್ತಿದ್ದವು. ಸಾಗುವ ಮೋಡಗಳ ಮಧ್ಯೆ ಆಗೊಮ್ಮೆ ಈಗೊಮ್ಮೆ ಮೋಡಗಳ ಹಿಂದೆ ಮರೆಯಾಗುತ್ತಾ ಮತ್ತೆ ಮತ್ತೆ ಕಾಣಿಸುತ್ತಾ ಇರುವಾಗ ಚಂದಿರ ಹೆದರಿ ಓಡುತ್ತಿರುವಂತೇ, ಇನ್ನೆಲ್ಲೋ ಅವಿತಿಟ್ಟುಕೊಳ್ಳುವಂತೇ ಭಾಸವಾಗುತ್ತಿದ್ದುದು ಸುಳ್ಳಲ್ಲ. ಓಡದ  ತಂಗದಿರನನ್ನೇ ಓಡುವನೆಂದು ತಿಳಿದ ನಮ್ಮ ಬಾಲ್ಯಕಾಲ ನಿಜಕ್ಕೂ ಬಂಗಾರದ ಕಾಲ, ಬಂಗಾರ ಬೆಳೆದ ಕಾಲ. ಬದುಕಿನ ಯಾವೊಂದೂ ಚಿಂತೆಗಳು, ಸಮಸ್ಯೆಗಳು ನಮ್ಮನ್ನು ಬಾಧಿಸದ ಆ ಕಾಲ ಎಷ್ಟು ಸುಂದರ ಎಂದು ಯೋಚಿಸುತ್ತಿರುವಂತೆಯೇ ಈ ಜಗದ ಜೀವನದ ಹಲವು ಮಜಲುಗಳಲ್ಲಿ ದೇವ ರೂಪಿಸಿದ ರಸಮಯ ಸನ್ನಿವೇಶಗಳೂ ಭಾವಬಾಂಧವ್ಯಗಳೂ ನೆನಪಿಗೆ ಬಂದು ಜಗದ್ರೂಪಿ ವೃಕ್ಷದ ಅಗಾಧ ವಿನ್ಯಾಸ ಗುಂಗು ಹಿಡಿಸುತ್ತದೆ; ವಿಜ್ಞಾನಿಗಳು ಈಗ ಕಂಡ ದೇವಕಣವಾದರೂ ಎಲ್ಲಿಂದ ಸೃಷ್ಟಿಯಾಯ್ತು ಎಂಬ ಪ್ರಶ್ನೆ ಉಳಿದುಹೋಗುತ್ತದೆ!   

Tuesday, July 3, 2012

ಪಾರ್ಕಿನ್ಸನ್ಸ್ ಎಂಬ ಹೆಮ್ಮಾರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ !

ಚಿತ್ರಗಳ ಋಣ: ಅಂತರ್ಜಾಲ
ಪಾರ್ಕಿನ್ಸನ್ಸ್ ಎಂಬ ಹೆಮ್ಮಾರಿಗೆ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ !

ವೈಜ್ಞಾನಿಕವಾಗಿ ಗಣಕಯಂತ್ರಗಳಂತಹ ಅದ್ಭುತಗಳನ್ನು ಸೃಜಿಸಿದ ಮನುಷ್ಯ ತನ್ನ ಕೆಲಸಕಾರ್ಯಗಳಿಗಾಗಿ ಸ್ವನಿಯಂತ್ರಿತ ಯಂತ್ರೋಪಕರಣಗಳನ್ನೂ ಸೃಷ್ಟಿಸಿದ, ಓಡಾಟಕ್ಕಾಗಿ ಭೂ-ಜಲ-ವಾಯುಸಾರಿಗೆ ವಾಹನಗಳನ್ನೂ ತಯಾರಿಸಿಕೊಂಡ. ವೈರಿಗಳನ್ನು ಬಗ್ಗುಬಡಿಯಲು ಪರಮಾಣು ಸಂತುಲಿತ ನಿರೋಧಕಗಳನ್ನೂ ವಿನಾಶಕಗಳನ್ನೂ ಮೇಲಾಗಿ ಸೊಳ್ಳೆಯ ಆಕಾರದ ರೋಬೋಟಿಕ್ ಬೇಹುಗಾರಿಕಾ ಯಂತ್ರಗಳನ್ನೂ ಹುಟ್ಟಿಸಿದ. ಆದರೆ ಮಾನವನಿಗೇ ಬಂದೆರಗುವ ಕೆಲವು ಕಾಯಿಲೆಗಳಿಗೆ ವೈದ್ಯರಾಸಾಯನಿಕದಲ್ಲಿ ಪರಿಹಾರ ಕಾಣುವಲ್ಲಿ ಇನ್ನೂ ಯಶಸ್ಸು ಪಡೆದಿಲ್ಲ! ಜೀವರಾಸಾಯನಿಕಗಳಲ್ಲಿ ಕೌತುಕಮಯ ಸಂಗತಿಗಳು ಜೀನ್ಸ್ ರೂಪದಲ್ಲಿ ಅಡಗಿರುತ್ತವೆ ಎಂಬುದನ್ನೂ ಗ್ರಹಿಸಿದ ವಿಜ್ಞಾನಿಗಳಿಗೆ ಯಾವ ಜೀನ್ಸ್ ಎಲ್ಲಿ ಹೇಗೆ ಅನುವಂಶೀಯವಾಗಿ ವರ್ಗಾವಣೆಗೊಳ್ಳುತ್ತದೆ ಎಂಬುದನ್ನು ಕಾಣಲು ಇನ್ನೂ ಸಾಧ್ಯವಾಗಿಲ್ಲ. ವಂಶದಲ್ಲೇ ಇಲ್ಲದ ಅಪರೂಪದ ಕಾಯಿಲೆಗಳು ಅನಿರೀಕ್ಷಿತವಾಗಿ ಅಮರಿಕೊಂಡು ವ್ಯಕ್ತಿಯ ಜೀವನವನ್ನೇ ಹಾಳುಗೆಡವಿ ನಂತರ ಆತನ ವಂಶದಲ್ಲಿ ಅನುವಂಶೀಯವಾಗಿ ಉಳಿದುಬಿಡುವ ಘಟನೆಗಳೂ ಕಾಣಸಿಗುತ್ತವೆ; ಕಾರಣಗಳು ಮಾತ್ರ ನಿಖರವಾಗಿ ತಿಳಿದುಬರುವುದಿಲ್ಲ. ಗಾದೆಯೊಂದು ಹೀಗಿದೆ: ’ಯಾವಹುತ್ತದಲ್ಲಿ ಯಾವ ಹಾವಿರುತ್ತದೋ ಬಲ್ಲವರಾರು?’ ನಿಜ, ಅದು ಯಾರಿಗೂ ಮೊದಲೇ ಗೊತ್ತಾಗುವ ವಿಷಯವಲ್ಲ. ಅದೇ ಗಾದೆ ಹೀಗೂ ಬಳಕೆಯಾಗಬಹುದು: ಕಾಯಿಲೆಯೇ ಇಲ್ಲದ ಹುಡುಗಿ/ಹುಡುಗ ಎಂದು ಒಪ್ಪಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಯಾವುದೋ ಕಾಯಿಲೆ ಕಾಣಿಸಿಕೊಳ್ಳಬಹುದು, ಜೀವಹರಣಗೈಯ್ಯಲೂ ಬಹುದು. ರೋಗಗ್ರಸ್ತ  ಎಂದು ತಿರಸ್ಕರಿಸಲ್ಪಟ್ಟ ವ್ಯಕ್ತಿಗೆ ಬದುಕುಕೊಟ್ಟ ನಂತರ ರೋಗನಿವಾರಣೆಯಾಗಿ ದೀರ್ಘಕಾಲ ಬದುಕಲೂ ಬಹುದು! ಒಟ್ಟಾರೆ ಮಾನವ ಬದುಕಿನಲ್ಲಿ ಪ್ರತಿಯೊಂದೂ ನಮ್ಮ ನಿಯಂತ್ರಣದಲ್ಲೇ ಇದೆ ಎಂದುಕೊಳ್ಳುವುದು ತಪ್ಪು ಎಂಬುದಕ್ಕೆ ಆಧುನಿಕ ಸಮಾಜದಲ್ಲಿ ನಾವು ಕಾಣುತ್ತಿರುವ ಪಾರ್ಕಿನ್ಸನ್ಸ್ ಕಾಯಿಲೆ ಸಾಕ್ಷಿಯಾಗಿ ನಿಲ್ಲುತ್ತದೆ.     

ನಾವೆಲ್ಲಾ ಚಿಕ್ಕವರಿರುವಾಗ, ನಮ್ಮ ಊರಿನಲ್ಲಿ ಯುವಕ ಸಂಘದವರು ನಮ್ಮ ಕನ್ನಡಪ್ರಾಥಮಿಕ ಶಾಲೆಯ ಮಕ್ಕಳ ವಾರ್ಷಿಕೋತ್ಸವದ ರಾತ್ರಿ ಸಾಮಾಜಿಕ ನಾಟಕಗಳನ್ನು ಪ್ರಸ್ತುತಪಡಿಸುತ್ತಿದ್ದರು. ವಾರ್ಷಿಕೋತ್ಸವ ಬಂತೆಂದರೆ ನಮಗೆ ಎಲ್ಲಿಲ್ಲದ ಸಂಭ್ರಮ. ಶಾಲೆಯ ಹಳೆಯ ವಿದ್ಯಾರ್ಥಿಗಳೂ ಸೇರಿದಂತೇ ಹಲವು ಯುವಕರು ಊರ ದೇವಸ್ಥಾನಗಳಲ್ಲಿ ನಾಟಕದ ತಾಲೀಮು ನಡೆಸುತ್ತಿದ್ದರು. ಶಾಲೆಯ ಅಂಗಳದಲ್ಲಿ ನಾವು ಮಕ್ಕಳೆಲ್ಲಾ ಸೇರಿ ’ಶ್ರಮದಾನ’ವೆಂಬ ಕಾರ್ಯದಲ್ಲಿ ಭಾಗಿಗಳಾಗಿ ಕಲ್ಲು-ಮಣ್ಣು ಹೊತ್ತು ವೇದಿಕೆ ಯನ್ನು ಆ ಕಾಲಕ್ಕೆ ಶಾಶ್ವತವಾಗಿ ನಿರ್ಮಿಸಿದ್ದೆವು. [ಅದಕ್ಕೂ ಮೊದಲು ವೇದಿಕೆಯೇ ಇರಲಿಲ್ಲ.]ಅಂತಹ ವೇದಿಕೆಗೆ ಚಪ್ಪರ-ಚಾವಡಿ ಕಟ್ಟಿ, ಮಣ್ಕಿ ಮಡಿವಾಳರ ಬಣ್ಣದ ಪರದೆ-ಸೀನ್ಸ್ಗಳನ್ನೂ,ಅಕ್ಕ-ಪಕ್ಕದಲ್ಲಿ ಕಮ್ಮಿಬಿದ್ದ ಜಾಗಗಳಲ್ಲಿ ಊರ ಹೆಂಗಳೆಯರ ಬಣ್ಣದ ಸೀರೆಗಳನ್ನೂ ಕಟ್ಟುತ್ತಿದ್ದರು. ದೂರದ ಊರಿಂದ ಹಾರ್ಮೋನಿಯಮ್, ತಬಲಾ ಇತ್ಯಾದಿ ಸಂಗೀತ ಪರಿಕರಗಳನ್ನು ನುಡಿಸುವ ಕಲಾವಿದರನ್ನು ಕರೆಸುತ್ತಿದ್ದರು. ಗೋವಿಂದ ಹೆಗಡೆಯವರ ಪರ್ಪೋ ಪೈಪುಗಳು ವೇದಿಕೆಯಲ್ಲಿ ಇಳಿಬಿಡುವ ಸೀನರಿಗಳ ಮೇಲ್ಗಡೆ ಕೆಳಗಡೆ ಕಟ್ಟಲ್ಪಡುತ್ತಿದ್ದವು. ನಾಗೇಶ್ ಶೆಟ್ಟರ ಚಿಮಣಿ[ಸೀಮೆ] ಎಣ್ಣೆ ಗ್ಯಾಸ್ ಲೈಟೂ ಸೇರಿದಂತೇ ಊರ ಕೆಲವು ಮನೆಗಳಿಂದ ಕಾಡಿ-ಬೇಡಿ ತಂದ ಸೀಮೆ ಎಣ್ಣೆ ಗ್ಯಾಸ್ ಲೈಟುಗಳು ಅಲ್ಲಲ್ಲಿ ಇರುತ್ತಿದ್ದು ಕರೆಂಟು ಹೋದರೆ  ಎಮರ್ಜೆನ್ಸಿ ದೀಪಗಳಾಗಿ ಕೆಲಸಮಾಡುತ್ತಿದ್ದವು. ಲೈನ್ಮನ್ ವೆಂಕಟೇಶ ನಮ್ಮ ಕಾರ್ಯಕ್ರಮಕ್ಕೆ ಅನಾಮತ್ತಾಗಿ ಕಂಬದ ಹತ್ತಿರದಿಂದ ಸರ್ವಿಸ್ ವೈರ್ ಹಾಕಿ ಕರೆಂಟು ಪೂರೈಸುತ್ತಿದ್ದ; ಅದಕ್ಕೆ ಯಾವುದೇ ಅನುಮತಿಯ ಅವಶ್ಯಕತೆ ಅಂದಿಗೆ ಇರಲಿಲ್ಲ. ಇಂತಹ ವೇದಿಕೆಗಳಲ್ಲಿ ಲೀಲಾಜಾಲವಾಗಿ ಕನ್ನಡ ಸಿನಿಮಾ ತಾರೆ ಜ್ಯೂಲಿಲಕ್ಷ್ಮಿ ಮಿಂಚಿದಂತೇ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದ ವ್ಯಕ್ತಿ ಜಿ.ಪಿ.ಹೆಗಡೆ. ಊರ ಜನ ಅಕ್ಕರೆಯಿಂದ ಕರೆಯುವುದು ಜೀಪಿ ಎಂದೇ. ಅರೆನಿಮಿಷ ಕೂರದ ಈ ಚಾಲಾಕೀ ವ್ಯಕ್ತಿ ಇಂದು ಅರೆಜೀವವಾಗಿ ಮಲಗಿದ್ದು ನೋಡಿದರೆ ಜೀಪಿ ಎಂಬ ವ್ಯಕ್ತಿ ಅಷ್ಟೆಲ್ಲಾ ಮಾಡಿದ್ದು ಹೌದೇ ಎಂದು ನಾವೇ ಕಕ್ಕಾಬಿಕ್ಕಿಯಾಗಿ, ಅನುಮಾನಾಸ್ಪದವಾಗಿ ತಲೆಕೆರೆದುಕೊಳ್ಳಬೇಕಾದ ಪ್ರಸಂಗ ಒದಗಿದೆ. ಸೊಂಟದ ಕೆಳಭಾಗಕ್ಕೆ ತ್ರಾಣವೇ ಇಲ್ಲದ ಈ ಕಾಯಿಲೆ ಯಾವುದು ಎಂಬುದು ನಮಗೆಲ್ಲಾ ಮೊದಲು ತಿಳಿದಿರಲಿಲ್ಲ; ಅದೇ ಪಾರ್ಕಿನ್ಸನ್ಸ್ !

ನ್ಯೂರಾನ್, ಡೆಂಡ್ರೈಟ್ಸ್ ಮತ್ತು ಆಕ್ಸನ್


ಪಾರ್ಕಿನ್ಸನ್ಸ್ ಎಂಬ ಕಾಯಿಲೆಗೆ ನಿಗದಿತ ಕಾರಣಗಳು ಕಂಡುಬರುವುದಿಲ್ಲವಾದರೂ ಹೀಗಿರಬಹುದು ಹಾಗಿರಬಹುದು ಎಂಬ ಊಹೆಗಳು ಪಟ್ಟಿಮಾಡಲ್ಪಟ್ಟಿವೆ:

೧. ಆಧುನಿಕ ಜೀವನಕ್ರಮದಲ್ಲಿ ಬಳಸಲ್ಪಡುವ ಆಂಗ್ಲ ಅಥವಾ ಅಲೋಪಥಿಕ್ ಔಷಧಿಯ ಪದ್ಧತಿಯಲ್ಲಿ ಅತಿಯಾದ ಮಾನಸಿಕ ತುಮುಲ, ಗೊಂದಲ, ಅನಿಯಂತ್ರಿತ ಭಯ ಮೊದಲಾದವುಗಳನ್ನು ನಿಭಾಯಿಸಲು ಬಳಸುವ ರಾಸಾಯನಿಕಗಳು ಈ ಕಾಯಿಲೆಯ ಲಕ್ಷಣಗಳನ್ನು ಅಭಿವ್ಯಕ್ತಗೊಳಿಸುತ್ತವೆ.

೨. ಶೈ ಡ್ರಾಗರ್ ಸಿಂಡ್ರೋಮ್ ಅಥವಾ ಲಜ್ಜೆಬಡುಕುತನ ಈ ರೋಗದ ಲಕ್ಷಣವನ್ನೇ ಬಿಂಬಿಸುತ್ತದೆ.

೩. ಹಾದಿಬೀದಿಯಲ್ಲಿ ಮಾರಲ್ಪಡುವ ಹೇರಾಯ್ನ್, ಬ್ರೌನ್ ಶುಗರ್ ಮೊದಲಾದ ಡ್ರಗ್ಗಳು ಈ ರೋಗಕ್ಕೆ ಕಾರಣವಾಗುತ್ತವೆ.

೪. ಅಪಧಮನಿ ಮತ್ತು ಅಭಿಧಮನಿ ಅಥವಾ ರಕ್ತನಾಳಗಳು ದಪ್ಪವಾಗಿ ಸಮರ್ಪಕ ರಕ್ತಸಂಚಾರ ಆಗದೇ ಇರುವುದು ಈ ರೋಗಕ್ಕೆ ಕಾರಣವಾಗಬಹುದು.

ಹೀಗೇ ಇಂತಹ ಕೆಲವು ಕಾರಣಗಳನ್ನು ನಮೂದಿಸುತ್ತಾರೆಯೇ ವಿನಃ ಯಾರೂ ನಿಗದಿತವಾಗಿ ಈ ಕಾಯಿಲೆಗೆ ಇದೇ ಕಾರಣ ಎಂದು ಹೇಳುವ ಮಟ್ಟಕ್ಕೆ ಬೆಳೆದಿಲ್ಲ.

ಇರಬಹುದು: ಆಧುನಿಕ ಜೀವನಕ್ರಮದಲ್ಲಿ ನಮ್ಮ ಆಹಾರ-ವ್ಯವಹಾರ ವೈಖರಿಗಳು ಬದಲಾಗಿವೆ; ದೂಷಿತವಾಗಿವೆ. ಕಾಶಿಯಲ್ಲಿ ಪವಿತ್ರವಾದ ಗಂಗೆಯೇ ಮಲಿನವಾದಂತೇ ನಮ್ಮ ದೈನಂದಿನ ಆಹಾರಗಳೂ ರಾಸಾಯನಿಕಗಳಿಂದ ಕಲುಷಿತಗೊಂಡಿವೆ. ಉಸಿರಾಡುವ ಹವೆ ದೂಷಿತ, ಕುಡಿಯುವ ನೀರು ದೂಷಿತ, ಧರಿಸುವ ದಿರಿಸು ದೂಷಿತ, ಸೇವಿಸುವ ಔಷಧಗಳೂ ದೂಷಿತ! ಅನಿವಾರ್ಯವಾಗಿ, ನಮ್ಮ ಅರ್ಜೆಂಟಿಗೆ ಪರಿಹಾರವಾಗಿ, ಎದುರಿಗೆ ಸಿಕ್ಕ ಸುಲಭದ ಸೂತ್ರಗಳನ್ನು ಬಳಸುವ ನಮಗೆ ನಮ್ಮ ಪೂರ್ವಜರು ಬಳಸ್ದುತ್ತಿದ್ದ ಸಾಂಪ್ರದಾಯಿಕ ಕ್ರಮಗಳು ಸುತರಾಂ ಹಿಡಿಸುವುದಿಲ್ಲ. ೩೦೦೦ ವರ್ಷಗಳ ಹಿಂದೆಯೇ ಹೇಳಲ್ಪಟ್ಟ ಭಾರತೀಯ ಆಯುರ್ವೇದದ ಉಪಚಾರಗಳನ್ನು ಅನೌಪಚಾರಿಕವಾಗಿ, ಅನುವಂಶೀಯವಾಗಿ ನಡೆಸಿಬಂದ ನಾಟಿವೈದ್ಯರನ್ನು ’ಅಳಲೇಕಾಯಿ ಪಂಡಿತರು’ ಎಂದು ಹೀಗಳೆದು ಅಸಡ್ಡೆ ಮಾಡಿದ್ದೇವೆ; ಕೆಲವೊಮ್ಮೆ  ಆ ಪಂಡಿತರುಗಳ ’ಅಳಲೇಕಾಯಿ’ ಮದ್ದು ಉತ್ತಮ ಪರಿಣಾಮಗಳನ್ನು ಕೊಡುವುದನ್ನು ಕಂಡರೂ ಒಪ್ಪಿಕೊಳ್ಳದ ಆಧುನಿಕ ಮಂದಿ ನಾವಾಗಿದ್ದೇವೆ.

ಹಾಗಾದರೆ ಪಾರ್ಕಿನ್ಸನ್ಸ್ ಕಾಯಿಲೆ ಮೂಲದಲ್ಲಿ ಎಲ್ಲಿ ಉದ್ಭವಗೊಳ್ಳುತ್ತದೆ ಎಂದರೆ ಅದು ಮೆದುಳಿನಲ್ಲೇ! ನ್ಯೂರಾನ್ ಎಂದರೆ ನರಕೋಶ. ಒಂದು ನ್ಯೂರಾನ್ ಸೋಮಾ ಎನ್ನುವ ಕೋಶಶರೀರವನ್ನೂ, ಡೆಂಡ್ರೈಟ್ಸ್ ಅಥವಾ ಕವಲುಗಳಂತಹ ರಚನೆಗಳನ್ನೂ, ಅಕ್ಸಾನ್ ಎಂಬ ದಾರದಂತಹ ಎಳೆಯನ್ನೂ ಹೊಂದಿರುತ್ತದೆ. ಇಂತಹ ಲಕ್ಷೋಪಲಕ್ಷ ಕೋಶಗಳು ಸೇರಿ ನರಗಳ ರಚನೆಯಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತೀ ಮಾನವನಲ್ಲಿ ೧೦೦ ಬಿಲಿಯನ್ ನ್ಯೂರಾನ್ಗಳು ಇರುತ್ತವೆ ಎನ್ನಲಾಗಿದೆ. ಸರಿಸುಮಾರು ೨೧೪ ಹೆಸರಿಸಲ್ಪಟ್ಟ ನರಗಳು ಇರುತ್ತಿದ್ದು ಒಟ್ಟಾರೆಯಾಗಿ ೪೨೮ ನರಗಳು ಇವೆ ಎನ್ನುವ ಇನ್ನೊಂದು ವಾದದಕ್ಕೆ ಪ್ರತಿವಾದವಾಗಿ ಸಾವಿರಾರು ಇವೆಯೆಂದೂ ಮತ್ತು ಅವು ಮೂರು ಮುಖ್ಯ ವಿಭಾಗಗಳಲ್ಲಿ ಕೆಲಸಮಾಡುತ್ತವೆ ಎಂದೂ ದಾಖಲಿಸಿದ್ದು ತಿಳಿದುಬಂದಿದೆ. ಪ್ರತೀ ನರದಲ್ಲೂ ಸ್ಪಂದಿಸುವ ಸೆನ್ಸರ್ಗಳು ಎಲ್ಲೆಲ್ಲೂ ತುಂಬಿವೆ. [ಪ್ರಾಯಶಃ ಇಂದಿನ ನಮ್ಮ ವಿದ್ಯುನ್ಮಾನೀಯ ಸೆನ್ಸರ್ಗಳ ತಯಾರಿ ಮಾನವ ಶರೀರದ  ಸೆನ್ಸರ್ಗಳನ್ನು ಅವಲೋಕಿಸಿದ ನಂತರವೇ ಜರುಗಿರಬೇಕು] ಇಂತಹ ನ್ಯೂರಾನ್ಗಳ ಸಹಜ ಕಾರ್ಯಪ್ರವೃತ್ತಿಯಿಂದ ನಮ್ಮ ದೇಹ ಸುಲಲಿತವಾಗಿ ತನ್ನ ಕೆಲಸಕಾರ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಯಾವಾಗ ನ್ಯೂರಾನ್ಗಳು ಅಥವಾ ನರಕೋಶಗಳು ಶಿಥಿಲವಾಗುವವೋ ಆಗ ಇಡೀ ಶರೀರ ತನ್ನ ಹತೋಟಿಯನ್ನು ಕಳೆದುಕೊಳ್ಳತೊಡಗುತ್ತದೆ. ಮೆದುಳಿನ ನ್ಯೂರಾನ್ಗಳಲ್ಲಿ ಕೆಲವು ಭಾಗಶಃ ಶಿಥಿಲಾವಸ್ಥೆಗೆ ಬಂದಾಗ ಶರೀರದ ಭಾಗಗಳು ಅಥವಾ ನಮ್ಮ ಅಂಗಾಂಗಗಳು ತಮ್ಮ ಮಾಮೂಲೀ ಗತಿಯನ್ನು ಕಳೆದುಕೊಳ್ಳುತ್ತವೆ. ಅರ್ಧಾಂಗವಾಯು, ಗಾಳಬೀಸು, ವಾತ, ಪಾರ್ಶ್ವವಾಯು ಎಂದೆಲ್ಲಾ ಪೀಡನೆಗೆ ಒಳಗಾದವರಂತೇ ಕಾಲುಗಳಲ್ಲಿ ನಿತ್ರಾಣ, ಕೈಗಳಲ್ಲಿ ನಿತ್ರಾಣ ಮತ್ತು ಪೂರ್ತಿ ಸೊಂಟದ ಕೆಳಭಾಗ ನಿತ್ರಾಣರಾದವರನ್ನು ಕಾಣಬಹುದಾಗಿದೆ. ಬಹುತೇಕ ಈ ಕಾಯಿಲೆಗಳಿಗೆ ಶಿಥಿಲಾವಸ್ಥೆಗೊಳಗಾದ [ಡೀಜನರೇಟಿವ್]ಅಥವಾ ಸೋಂಕು ತಗುಲಿದ ನ್ಯೂರಾನ್ಗಳು ಕಾರಣೀಭೂತವಾಗಿವೆ. ಶಿಥಿಲಾವಸ್ಥೆಗೊಳಪಡುವ ನ್ಯೂರಾನ್ಗಳು ಯಾಕೆ ಹಾಗೆ ರೋಗಗ್ರಸ್ತವಾಗುತ್ತವೆ ಎಂಬುದು ಇನ್ನೂ ಸಮರ್ಪಕವಾಗಿ ನಮ್ಮ ವಿಜ್ಞಾನಿಗಳಿಗೆ ತಿಳಿದುಬಂದಿಲ್ಲ! ಹೀಗಾಗಿ ಪರಿಪೂರ್ಣವಾದ ಔಷಧವೂ ಕೂಡ ಲಭ್ಯವಿಲ್ಲ.   

ಪಾರ್ಕಿನ್ಸನ್ಸ್ ಕಾಯಿಲೆ ಇಂಥವರಿಗೇ ಬರುತ್ತದೆ ಎಂದಾಗಲೀ ಅಥವಾ ಇಂಥವರಿಗೇ ಬರಬೇಕೆಂದಾಗಲೀ ಇಲ್ಲ. ಅದು ಅನುವಂಶೀಯವಾಗಿ ಹರಿಯುತ್ತದೆಂಬ ಬಗ್ಗೆಯೂ ಯಾವುದೇ ಸಾಕ್ಷಿ-ಪುರಾವೆ ಇಲ್ಲ. ಇದ್ದಕ್ಕಿದ್ದಂತೇ [ಪಕ್ಕದಮನೆಯ ವ್ಯಕ್ತಿ ನಮ್ಮ ಜಾಗವನ್ನು ರಾತ್ರೋರಾತ್ರಿ ಅತಿಕ್ರಮಿಸಿಕೊಳ್ಳುವ ರೀತಿ]ಯಾವ ವ್ಯಕ್ತಿಯೂ ಇದರಿಂದ ಬಳಲಬಹುದು. ಇದಕ್ಕೆ ಹೊತ್ತುಗೊತ್ತು ಇರುವುದಿಲ್ಲ; ಅಥವಾ ಹೊತ್ತೇ ಗೊತ್ತಿರುವುದಿಲ್ಲ. ಮೆದುಳಿನಲ್ಲಿ ನರಕೋಶಗಳು ಡೀಜನರೇಟಿವ್ ಆಗಿ ಪರಿವರ್ತಿತವಾಗುವುದು ಮೊದಲೇ ತಿಳಿದುಬರುವ ಅಂಶವೂ ಅಲ್ಲ. ಸಂಭವನೀಯ ಡೀಜನರೇಶನ್ ಕಾಯಿಲೆಗಳ ಯಾದಿ ಈ ರೀತಿ ಇದೆ:

Examples of degenerative diseases

    Amyotrophic Lateral Sclerosis (ALS), a.k.a., Lou Gehrig's Disease
    Alzheimer's disease
    Parkinson's Disease
    Multiple system atrophy
    Niemann Pick disease
    Atherosclerosis
    Progressive supranuclear palsy
    Cancer
    Essential tremor
    Tay-Sachs Disease
    Diabetes
    Heart Disease
    Keratoconus
    Inflammatory Bowel Disease (IBD)
    Prostatitis
    Osteoarthritis
    Osteoporosis
    Rheumatoid Arthritis
    Huntington's Disease
    Chronic traumatic encephalopathy

ಒಬ್ಬ ವೈದ್ಯರಲ್ಲಿಗೆ ಯಾವುದೋ ಕಾರಣದಿಂದ ಸಂದರ್ಶನಕ್ಕೆ ತೆರಳಿದಾಗ ಅಲ್ಲಿ ಒಬ್ಬರ ಪರಿಚಯವಾಯ್ತು. ಅವರ ತಲೆಗೆ ಯಾವುದೋ ಗಾಯವಾಗಿ ಅದರ ಚಿಕಿತ್ಸೆಗಾಗಿ ಆತ ಅಮೇರಿಕಾದಿಂದ ಭಾರತಕ್ಕೆ ಅದೂ ಬೆಂಗಳೂರಿಗೆ ಬಂದಿದ್ದರು! ಹೇಳಿಕೇಳಿ ಅವರು ಮೈಸೂರು ಮೂಲದವರೇ ಆದರೂ ಅವರ ಸಂತತಿ ನೆಲೆಸಿರುವುದು ಅಮೇರಿಕಾದಲ್ಲಿ. ಕೆಲವು ವರ್ಷಗಳ ಹಿಂದೆ ಸೆಂಟ್ರಲ್ ಅಟಾಮಿಕ್ ಪವರ್ ರಿಸರ್ಚ್ ಸೆಂಟರ್ನಲ್ಲಿ ಕೆಲಸಮಾಡುತ್ತಿದ್ದ ಅವರಿಗೆ ವಿಚಿತ್ರ ಕಾಯಿಲೆಯೊಂದು ಕಾಣಿಸಿತ್ತು: ನಡೆಯುತ್ತಿರುವಂತೆಯೇ ಆ ವ್ಯಕ್ತಿ ಕುಸಿದು ಬಿದ್ದು ಹೋಗುತ್ತಿದ್ದರು. ಮತ್ತು ಅತಿಯಾದ ನೋವು ಕಾಣಿಸಿಕೊಳ್ಳುತ್ತಿತ್ತು. ಅಮೇರಿಕಾದಲ್ಲಿ ಅತಿರಥ ಮಹಾರಥರೆನಿಸಿದ ವೈದ್ಯರುಗಳಿದ್ದಾರಲ್ಲಾ ಹಾಗಾಗಿ ಅವರ ಮಕ್ಕಳು ಅವರನ್ನು ಅಲ್ಲಿನ ಮಹಮಹಾದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ದರು. ಯಾವುದೇ ಆಸ್ಪತ್ರೆಯ ಯಾವುದೇ ವೈದ್ಯರೂ ಅವರಿಗೆ ಪರಿಹಾರ ನೀಡುವುದಿರಲಿ ಇದು ಇಂಥದ್ದೇ ಕಾಯಿಲೆ ಎಂದು ಕಂಡುಹಿಡಿಯುವಲ್ಲಿ ವಿಫಲರಾದರು. "ಇಟ್ ಈಸ್ ನ್ಯೂರೋಲೊಜಿಕಲ್ ಡಿಸಾರ್ಡರ್, ಕಾಂಟ್ ಬಿ ಕ್ಯೂರ್ಡ್, ಬಟ್ ವಿ ವಿಲ್ ಟೀಚ್ ಯೂ ಪೇನ್ ಮ್ಯಾನೇಜಮೆಂಟ್" ಎಂದು ತಿಳಿಸಿ ಪೇನ್ ಬಂದಾಗ ಹೇಗೆ ತಡೆದುಕೊಳ್ಳಬೇಕು ಎಂಬುದನ್ನೂ ಪೇನ್ ಕಿಲ್ಲರ್ ಮಾತ್ರೆಗಳನ್ನು ಉಪಯೋಗಿಸುವ ಕ್ರಮವನ್ನೂ ಹೇಳಿ ಕೈಬಿಟ್ಟರಂತೆ. ಬದುಕಿರುವವರೆಗೆ ಇದು ಯಾವ ಹಣೆಬರಹ ಎಂದುಕೊಂಡ ಅವರು ಭಾರತೀಯ ಆಯುರ್ವೇದವನ್ನು ಒಮ್ಮೆ ಯಾಕೆ ಬಳಸಬಾರದು ಎಂದುಕೊಂಡು ಯಾರ್ಯಾರದೋ ಪರಿಚಯದ ಮೂಲಕ ಒಬ್ಬ ವೈದ್ಯರ ಬಳಿ ಬಂದರು. ವೈದ್ಯರ ಪಂಚಕರ್ಮ ಚಿಕಿತ್ಸೆ ಆರಂಭವಾಗಿ ತಿಂಗಳಲ್ಲಿ ಸಯುವಷ್ಟು ಸಣಕಲಾದರು; ಅದೇ ಮಾರನೇ ತಿಂಗಳು ಮತ್ತೆ ನಿಧಾನವಾಗಿ ಬಲಾಢ್ಯರಾಗುತ್ತಾ ಬಂದರು. ಪಂಚಕರ್ಮದ ನಂತರ ಸತತ ನಾಲ್ಕುವರ್ಷಗಳ ಕಾಲ ಆಯುರ್ವೇದೀಯ ಮೂಲಿಕೆಗಳ ಔಷಧಗಳನ್ನು ಪಡೆದರು, ಬಳಸಿದರು. ಈಗ ಆರಾಮಾಗಿ ಇದ್ದಾರೆ-ಕುಸಿದು ಬೀಳುವ ಪ್ರಮೇಯವೇ ಇಲ್ಲ. ಅವರ ರೋಗಕ್ಕೆ ಕಾರಣ: ದೇಹದಲ್ಲಿ ಅಣುವಿಕಿರಣದಿಂದ ಬಾಡೀ ಟಾಕ್ಸಿನ್ ಬಹಳ ಜಾಸ್ತಿಯಾಗಿತ್ತು. ಇಡೀ ಶರೀರವನ್ನೇ ಹಿಂಡಿ ಅನಗತ್ಯ ಟಾಕ್ಸಿನ್ ಹೊರತೆಗೆದ ಬಳಿಕ ಅವರು ಹುಷಾರಾದರು ಎಂಬ ಕಥೆಯನ್ನು ಹೇಳಿ ವೈದ್ಯರನ್ನೂ ಆಯುರ್ವೇದವನ್ನೂ ತುಂಬಾ ಸ್ಮರಿಸಿಕೊಂಡರು-ಕೊಂಡಾಡಿದರು.      

ಪಾರ್ಕಿನ್ಸನ್ಸ್ ಕಾಯಿಲೆಗೆ ಒಳಗಾದ ವ್ಯಕ್ತಿಗೆ ನೋವು ಎನಿಸುವುದೇನೂ ಕಾಣುವುದಿಲ್ಲವಾದರೂ ನಿತ್ರಾಣ ಸ್ಥಿತಿ ಆತನನ್ನು ದುರ್ಬಲಗೊಳಿಸುವುದರ ಜೊತೆಗೆ ಮಾನಸಿಕ ನೆಮ್ಮದಿ ಇಲ್ಲದಂತೇ ಮಾಡುತ್ತದೆ. ಓಡಾಡಲು ಆಗದ ಪರಿಸ್ಥಿತಿಯಲ್ಲಿ ಇನ್ನೊಬ್ಬರ ನೆರವಿನ ಅಗತ್ಯ ಬೀಳುತ್ತದೆ. ಮೆದುಳಿನ ’ಸಬ್ಸ್ಟೇನ್ಶಿಯಾ ನಿಗ್ರಾ’ ಎಂಬ ಭಾಗದ ನರಕೋಶಗಳು ಶಿಥಿಲವಾದಾಗ ಈ ಸ್ಥಿತಿ ಉಂಟಾಗುತ್ತದೆ. ’ಡೋಪಮೈನ್’ ಎಂಬುದು ನರಗಳಲ್ಲಿ ಸಂದೇಶವಾಹಕವಾಗಿ ಕೆಲಸಮಾಡುವ ರಾಸಾಯನಿಕ. ನರಕೋಶಗಳಲ್ಲಿ ಬಿಡುಗಡೆಯಾಗುವ ಡೋಪಮೈನ್ ನಿಗದಿತ ಗುಣಮಟ್ಟವನ್ನು ಹೊಂದಿರದೇ ಇದ್ದರೆ ಅಥವಾ ಡೋಪಮೈನ್ ಪ್ರಮಾಣದಲ್ಲಿ ವ್ಯತ್ಯಯವುಂಟಾದರೆ ಆಗ  ನರಕೋಶಗಳಲ್ಲಿ ಸಂವಹನ ಕ್ರಿಯೆ ನಿಷ್ಕ್ರಿಯಗೊಳ್ಳಲೂ ಬಹುದು ಅಥವಾ ಬೇರೇಯದೇ ಸಂದೇಶಗಳು ರವಾನಿಸಲ್ಪಟ್ಟು ಆಗಬೇಕಾದ ಕಾರ್ಯ ಆಗದೇ ಯಾವ್ಯಾವುದೋ ಮಾರ್ಪಾಡು ನಡೆಯಬಹುದು. ಮೊದಮೊದಲು ೬೦ ವಯಸ್ಸಿಗೂ ಹಿರಿಯರಲ್ಲಿ ಜನಸಂಖ್ಯೆಯ ೧% ಪ್ರತಿಶತ ಈ ಕಾಯಿಲೆ ಇರುತ್ತದೆ ಎಂದು ತಿಳಿಯಲ್ಪಟ್ಟಿತ್ತಾದರೂ ಕಾಲಕ್ರಮೇಣ ನಡೆದ ಗಣತಿಯಲ್ಲಿ ಹದಿಹರೆಯದ ಅಥವಾ ಮಧ್ಯವಯಸ್ಕರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು ಎಂಬುದು ಸಾಬೀತಾಗಿದೆ. ಹಾಗಾದರೆ ಈ ಡೋಪಮೈನ್ ಬಿಡುಗಡೆ ಸರಿಯಗಿ ಯಾಕೆ ಆಗಲಾರದು ಎಂಬ ಬಗ್ಗೆ ಸದ್ಯಕ್ಕೆ ಯಾರಲ್ಲೂ ಉತ್ತರವಿಲ್ಲ! ಡೋಪಮೈನ್ ಸರಿಯಾಗಿ ಬಿಡುಗಡೆಗೊಳ್ಳುವಂತೇ ಮಾಡುವ ಔಷಧವೂ ಇಲ್ಲ. 


 




ನಾಯಿಸೊಣಂಗಿ ಬಳ್ಳಿ,  ಬೀನ್ಸ್ ಮತ್ತು ಬೀಜಗಳು ಜೊತೆಗೆ ಬೀಜದ ಹುಡಿತುಂಬಿ ತಯಾರಿಸಿದ ಕ್ಯಾಪ್ಸೂಲ್ ಬಾಟ್ಲಿ

ಪಾರ್ಕಿನ್ಸನ್ಸ್ ಕಾಯಿಲೆಗೆ ಕ್ಷಣಿಕ ಪರಿಹಾರವಾಗಿ ಉರ್ಸಣಿಗೆ ಬಳ್ಳಿ, ಚೊಣಗಿಬಳ್ಳಿ, ನಾಯಿಸೊಣಂಗುಬಳ್ಳಿ ನಸುಗುನ್ನಿ ಬಳ್ಳಿ ಎಂದು ಕನ್ನಡದಲ್ಲೂ, ಪಿಲ್ಲಿಯಾಡುಗು ಎಂದು ತೆಲುಗಿನಲ್ಲೂ, ಅಕ್ಲೋಚಿ ಎಂದು ಬೆಂಗಾಲಿಯಲ್ಲೂ ಗುರುತಿಸಲ್ಪಟ್ಟಿರುವ ’ಮ್ಯೂಕುನಾ ಪ್ರೂರೀನ್ಸ್’ [Mucuna pruriens]ಎಂಬ ಸಸ್ಯದ ಬೀಜಗಳನ್ನು ಬಳಸಿಕೊಳ್ಳಬಹುದಾಗಿದೆ! ನೆಲದಲ್ಲಿ ಹಬ್ಬುವ ಈ ಬಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ನೇರಳೆಬಣ್ಣದ ಹೂಗಳು ಬಿಡುತ್ತವೆ. ನಂತರ ಸೋಡಿಗೆಗಳು[ಬೀನ್ಸ್] ಬಿಡುತ್ತವೆ. ಬಲಿತ ಸೋಡಿಗೆಗಳನ್ನು ಕುಯ್ದು, ಒಣಗಿಸಿ, ಅದರಲ್ಲಿರುವ ಬೀಜಗಳನ್ನು ಬಿಡಿಸಿಕೊಳ್ಳುತ್ತಾರೆ. ಆ ಬೀಜಗಳನ್ನು ಹುರಿದು ಮಿಕ್ಸಿಯಲ್ಲಿ ಪುಡಿಮಾಡಿಕೊಂಡು ಅದನ್ನು ಕಷಾಯದ ರೀತಿ ಮಾಡಿಕೊಂಡು ಕುಡಿದರೆ, ಕುಡಿದ ೧೦ ನಿಮಿಷಗಳಲ್ಲಿ ನರಸಂವೇದನೆ ಶೀಘ್ರಗೊಳ್ಳುತ್ತದೆ; ಪಾರ್ಕಿನ್ಸನ್ಸ್ ಇರುವಾತ ಯಾರ ಬೆಂಬಲವೂ ಇಲ್ಲದೇ ನಡೆದಾಡಬಹುದು, ಮಹಡಿ ಏರಬಹುದು. ಆದರೆ ಇದು ಬ್ಯಾಟರಿ ಚಾರ್ಜ್ ಇದ್ದಹಾಗೇ ಎಂಬುದನ್ನು ಮರೆಯಕೂಡದು! ಒಂದುಸಲ ಮರಳಿ ಪಡೆದ ಈ ಭಾಗ್ಯ ಕೇವಲ ಒಂದೆರಡು ಗಂಟೆಮಾತ್ರ ಇರುತ್ತದೆ. ಮತ್ತೆ ಮರಳಿ ಆ ಶಕ್ತಿಯನ್ನು ಗಳಿಸಲು ಪುನಃ ಆ ಬೀಜದ ಕಷಾಯವನ್ನು ಕುಡಿಯಬೇಕು. ಕಷಾಯದ ಪ್ರಮಾಣ ತೀರಾ ಜಾಸ್ತಿಯಾಗಲೂ ಬಾರದು ತೀರಾ ಕಮ್ಮಿಯಾಗಲೂಬಾರದು. ಜಾಸ್ತಿಯಾದರೆ ಅತಿ ಉತ್ಸಾಹವಾಗಿ ನಿಂತಲ್ಲೇ ನಿಲ್ಲುವುದು ಕಷ್ಟವಾಗುತ್ತದೆ; ಕಮ್ಮಿಯಾದರೆ ನಿತ್ರಾಣತನ ಹಾಗೇ ಇರುತ್ತದೆ-ಇದು ಕೇವಲ ವ್ಯಕ್ತಿಗತ ಅನುಭವದಿಂದ ರೋಗಿಯೇ ಪ್ರಮಾಣವನ್ನು ನಿರ್ಧರಿಸಿಕೊಳ್ಳಬೇಕಾದ ವಿಷಯವಾಗಿರುತ್ತದೆ. ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೆಲವು ಮಳಿಗೆಗಳಲ್ಲಿ ಈ ಬೀಜ ತೂಕದ ಲೆಕ್ಕದಲ್ಲಿ ಸಿಗುವುದಾಗಿ ತಿಳಿದುಬಂದಿದೆ, ಮಹಾನಗರಗಳಲ್ಲಿ ಅಲ್ಲಲ್ಲಿ ಹುಡುಕಿದರೆ ಸಿಗಬಹುದು. ಪಾರ್ಕಿನ್ಸನ್ಸ್ ಕಾಯಿಲೆಯವರಿಗಾಗಿಯೇ ಈ ಸಸ್ಯವನ್ನು ಬೆಳೆಸಿ ಬೀಜ ತಯಾರಿಸುವವರೂ ಇದ್ದಾರೆ ಎಂದು ಕೇಳಿದ್ದೇನೆ.        

ಇಂತಹ ಬಳಲುವಿಕೆಯನ್ನು ಕಂಡಾಗ ನನಗೆ ಅನಿಸಿದ್ದಿಷ್ಟು: ನಮ್ಮ ಆಹಾರ-ವಿಹಾರಗಳಲ್ಲಿ ಹಿಂದಿನ ಸಂಪ್ರದಾಯಗಳನ್ನು ವಿವೇಚನೆಯಿಂದ ಅನುಸರಿಸುವುದು ಉತ್ತಮ. ಶರೀರಮಾತ್ರ ನಾವಲ್ಲ, ಮನಸ್ಸೂ ನಾವೇ-ಅಂದರೆ ಮಾನವ ಶರೀರ ಮತ್ತು ಮನಸ್ಸುಗಳ ಮಿಳಿತದಿಂದ ಪರಸ್ಪರ ಸಹಯೋಗದಿಂದ ಜೀವಿ ಎನಿಸಿದ್ದಾನೆ. ಪ್ರತೀ ಜೀವಿಯಲ್ಲೂ ದೇಹ ಮತ್ತು ಮನಸ್ಸುಗಳ ಬಾಂಧವ್ಯವಿರುತ್ತದೆ; ಮನಸ್ಸಿಗೆ ಆಶ್ರಯ ನೀಡಿರುವ ಮೆದುಳಿನ ತಾಕತ್ತು ಬದಲೀ ಪ್ರಮಾಣದಲ್ಲಿರುತ್ತದೆ ಅಷ್ಟೇ. ನಾಯಿಗೆ, ಹಂದಿಗೆ, ಹಾವಿಗೆ ಅಷ್ಟೇ ಏಕೆ ಹಾರುವ ಸೊಳ್ಳೆಗೂ ಮೆದುಳು ಇದ್ದೇ ಇರುತ್ತದೆ. ಮೆದುಳಿನ ಆವಿಷ್ಕಾರ ವಿಧವಿಧವಾಗಿರುತ್ತದೆ, ಆಕಾರ  ಚಿಕ್ಕದು ದೊಡ್ಡದು ಹೀಗೇ ಹಲವು ತೆರನಾಗಿರುತ್ತದೆ. ಯಾವಾಗ ಮನಸ್ಸಿನ ಹತೋಟಿ ತಪ್ಪುತ್ತದೋ ಅಥವಾ ಮನಸ್ಸಿಗೆ ವಿರೋಧವಾಗಿ ನಾವು ಸತತವಾಗಿ ನಡೆದುಕೊಳ್ಳುತ್ತೇವೋ ಆಗ ಇಂತಹ ಡಿಸಾರ್ಡರ್ಗಳು ಘಟಿಸಬಹುದು. ಹಿತಮಿತವಾದ-ಶುಚಿಯಾದ ಆಹಾರ, ನಿಯಮಿತ ವಾಯುವಿಹಾರ, ಸ್ನಾನ-ಪವನ, ಯೋಗ-ಧ್ಯಾನ-ಪ್ರಾಣಾಯಾಮ ಇವುಗಳಿಂದ ಡೀಜನರೇಶನ್ ನಡೆಯದಂತೇ ನಿಯಂತ್ರಿಸಬಹುದಾಗಿದೆ; ಇನ್ನೂ ಕೆಲವರಿಗೆ ಇದೆಲ್ಲವನ್ನೂ ನಡೆಸಿಯೂ ಅಂತಹ ಕಾಯಿಲೆಗಳು ಬಂದರೆ ಅದನ್ನು ಅವರ ಪೂರ್ವಜನ್ಮದ ಕರ್ಮ ಎನ್ನಲಡ್ಡಿಯಿಲ್ಲ.   

Monday, July 2, 2012

ಈಗೆಲ್ಲಾ ಡಿಜಿಟಲ್, ಫೋಟೊಗ್ರಫಿ ಬಹಳ ಈಸಿ ! ಚೌರ್ಯ ಇನ್ನೂ ಈಸಿ !!

 ಚಿತ್ರಋಣ: ಅಂತರ್ಜಾಲ

 ಈಗೆಲ್ಲಾ ಡಿಜಿಟಲ್, ಫೋಟೊಗ್ರಫಿ ಬಹಳ ಈಸಿ ! ಚೌರ್ಯ ಇನ್ನೂ ಈಸಿ !!

ಬದುಕಿನ ಮಜಲುಗಳಲ್ಲಿ ಘಟಿಸಬಹುದಾದ ಘಟನೆಗಳನ್ನು ಚಿತ್ರಗಳರೂಪದಲ್ಲಿ ಸೆರೆಹಿಡಿದಿಡುವ ಬಯಕೆ ಜನರಲ್ಲಿ ಇವತ್ತಿಗೂ ಇದೆ. ಆಗಿಹೋದ ಕಾಲ ಮರಳಿಬರುವುದಿಲ್ಲ; ನಡೆದುಹೋದ ಕಾರ್ಯ ಮತ್ತೆ ಜರುಗುವುದಿಲ್ಲ ಎಂಬ ಕಾರಣಕ್ಕಾಗಿ ಫೋಟೋಗ್ರಫಿ ಎಂಬ ಕುಶಲಕಲೆಯೊಂದು ಹುಟ್ಟಿಕೊಂಡಿತು.

ಕಾಲಘಟ್ಟವೊಂದರಲ್ಲಿ ವಿಜ್ಞಾನದ ಮುನ್ನಡೆ ಅಷ್ಟಾಗಿ ಇನ್ನೂ ಆಗಿರದಿದ್ದಾಗ ಕ್ಯಾಮೆರಾ ಎಂಬ ವಸ್ತುವೇ ಒಂದು ರೋಚಕ ಪರಿಕರವಾಗಿತ್ತು! ಪ್ರಪಂಚದ ದುಬಾರಿ ವಸ್ತುಗಳಲ್ಲಿ ಒಂದಾಗಿದ್ದ ಅದನ್ನು ಜನಸಾಮಾನ್ಯರು ಖರೀದಿಸಲಾಗುತ್ತಿರಲಿಲ್ಲ; ಬದಲಿಗೆ ಹಲವರಿಗೆ ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಡುವುದನ್ನೇ ಕೆಲವರು ವೃತ್ತಿಯನ್ನಾಗಿಸಿಕೊಂಡರು. ಕ್ಯಾಮೆರಾ ಅಷ್ಟೇ ಅವರ ಬಂಡವಾಳ. ಮಿಕ್ಕಿದಂತೇ ಅವರ ಸಮಯ ಮತ್ತು ಸಂಯಮ ಇವುಗಳು ಕೆಲಸಮಾಡಲು ಬೇಕಾದ ಅಂಶಗಳಾಗಿದ್ದವು. ಸ್ವಂತಕ್ಕಾಗಿ ಮನೆ ಕಟ್ಟಿಕೊಳ್ಳಬೇಕೆಂಬ ಆಸೆ ಇವತ್ತಿಗೆ ಹಲವರಿಗೆ ಇರುವಂತೇ ಸ್ವಂತಕ್ಕಾಗಿ ಕ್ಯಾಮೆರಾ ಇಟ್ಟುಕೊಳ್ಳಬೇಕೆಂಬ ಆಸೆ ಬಹುತೇಕರಲ್ಲಿತ್ತು; ಅದರಲ್ಲಿ ಕೆಲವರು ಮಾತ್ರ ಯಶಸ್ಸು ಪಡೆದಿದ್ದರು. ದುಬಾರಿ ವೆಚ್ಚದ ಸಾಮಗ್ರಿಗಳನ್ನು ಬೇಡುತ್ತಿದ್ದ ಅಂದಿನ ಕಪ್ಪು-ಬಿಳುಪಿನ್ ಮೆಕಾನಿಕಲ್ ಕ್ಯಾಮೆರಾ ಬಳಕೆಯ ಮಾಹಿತಿ ಇರದೇ ಬಳಸಿದರೆ ಕೆಲವೊಮ್ಮೆ ಕೆಟ್ಟು ಕೂರುತ್ತಿತ್ತು. ಗೊತ್ತಿಲ್ಲದೇ ಅಗುಳಿ ತೆಗೆದರೆ ಒಳಗಡೆ ಇಟ್ಟಿರುವ ಫಿಲ್ಮ್ ರೋಲ್ ಬೆಳಕನ್ನು ಕಾಣುತ್ತಿದ್ದಂತೇ ಕೆಟ್ಟುಹೋಗುತ್ತಿತ್ತು! ಕತ್ತಲಲ್ಲಿ ಆ ಫಿಲ್ಮ್ ರೋಲ್ ಕ್ಯಾಮೆರಾದೊಳಕ್ಕೆ ಅಳವಡಿಸುವ ಮತ್ತು ಫಿಲ್ಮ್ ರೋಲ್ನ ಕೊನೆಯ ಚಿತ್ರಗ್ರಹಣ ಮುಗಿದಮೇಲೆ ಅದನ್ನು ಮತ್ತೆ ಕತ್ತಲಲ್ಲಿ ಕ್ಯಾಮೆರಾದಿಂದ ಹೊರತೆಗೆದುಕೊಂಡು ಹಾಗೇ ಅದನ್ನು ಡೆವಲಪರ್ ಹಾಕಿ ಪ್ರಾಸೆಸ್ ಮಾಡುವುದು ಕೆಲವರಿಗೆ ಮಾತ್ರ ಕರತಲಾಮಲಕವಾಗಿತ್ತು.

ಮೆಕಾನಿಕಲ್ ಕ್ಯಾಮೆರಾಗಳಲ್ಲಿ ಶಟರ್ ಆಪರೇಷನ್ ಕೆಲವೊಮ್ಮೆ ಸರಿಯಾಗಿ ಆಗದೇ ತೆಗೆಯುವ ಚಿತ್ರಗಳು ಬಾರದೇ ಹೋಗುವ ಪರಿಸ್ಥಿತಿ ಕೂಡ ಇತ್ತು. ಕೊಡಾಕ್,ಯಾಶಿಕಾ, ಮಿನೋಲ್ಟಾ ಮೊದಲಾದ ಕಂಪನಿಗಳು ಹೊಸಹೊಸ ಮಾದರಿಯ ಕ್ಯಾಮೆರಾಗಳನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸುತ್ತಲೇ ಬಂದವು. ’ಎಸ್.ಎಲ್.ಆರ್.’ ಅಥವಾ ಸಿಂಗಲ್ ಲೆನ್ಸ್ ರಿಪ್ಲೆಕ್ಸ್ ಟೆಕ್ನಾಲಜಿ ಬಳಕೆಯಾಗುವ ವರೆಗೆ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಜನರಿಗೆ ಅದು ಸಮಯವನ್ನು ಬೇಡುವ ಕೆಲಸವಾಗಿತ್ತು. ಪ್ಲಾಷ್ ಇರದಿದ್ದಾಗ ಸೂರ್ಯನ ಬಿಸಿಲನ್ನೋ ಬೆಳಕನ್ನೋ ಅವಲಂಬಿಸಿ ಚಿತ್ರ ಸೆರೆಹಿಡಿಯಬೇಕಾಗುತ್ತಿತ್ತು. ಎದುರುಗಡೆಯ ದೃಶ್ಯವನ್ನು ಹೇಗೆ ಚಿತ್ರವನ್ನಾಗಿ ಸೆರೆಹಿಡಿಯಬೇಕೆಂದು ತಿಳಿಯದೇ ಬಳಸಿದರೆ ಚಿತ್ರದಲ್ಲಿ ಬರಬೇಕಾದ ಪೂರಕ ಅಂಶಗಳನ್ನು ಬಿಟ್ಟು ಮಿಕ್ಕವುಗಳೇ ವಿಜೃಂಭಿಸುತ್ತಿದ್ದವು! ನಮ್ಮೂರ ಕಡೆಗಳಲ್ಲಿ ಪ್ರೊಫೆಶನಲ್ ಫೋಟೋಗ್ರಾಫರ್ ಎಂದು ಬರೆದುಕೊಂಡಿರುವ ವೃತ್ತಿನಿರತರೇ ಅಂದಿಗೆ ತೆಗೆದ ಕೆಲವು ಛಾಯಾಚಿತ್ರಗಳಲ್ಲಿ ಕೆಲವರ ಮುಖ ಸೊಟ್ಟಗೆ ಬಂದಿದ್ದು, ಗುಂಪಿನಲ್ಲಿ ನಿಂತವರಲ್ಲಿ ಕೆಲವರ ತಲೆ ಕಾಣಿಸದೇ ಹೋಗಿದ್ದು ಹೀಗೇ ಭಿನ್ನ ಭಿನ್ನ ಕಲಾಕೃತಿಗಳು ಆ ವೃತ್ತಿಪರ ಕಲಾವಿದರಿಗೆ ಗೊತ್ತಿಲ್ಲದಂತೆಯೇ ಸಿದ್ಧವಾಗಿಬಿಡುತ್ತಿದ್ದವು; ಗ್ರಾಹಕರಿಗೂ ಚಿತ್ರಗಳ ಗುಣಮಟ್ಟದ ಬಗ್ಗೆ ತೀರಾ ಜಾಸ್ತಿ ತಿಳಿದಿರದ ಕಾರಣ ಫೋಟೋಗ್ರಾಫರ್ ಕೊಟ್ಟಿದ್ದನ್ನೇ ಮಹಾಪ್ರಸಾದ ಎಂಬ ರೀತಿಯಲ್ಲಿ ಆಲ್ಬಮ್ ಮಾಡಿ ಇಟ್ಟುಕೊಂಡು ಬಂದ ಅತಿಥಿಗಳಿಗೆ ತೋರಿಸುತ್ತಿದ್ದರು.     

ಚಿತ್ರಗ್ರಹಣವನ್ನು ಸಮರ್ಪಕವಾಗಿ ಮಾಡಲು ಬರದ ಹಲವರಿಗಾಗಿ ಫೋಟೋಗ್ರಫಿ ಕಲಿಸುವ ಸ್ಕೂಲ್ಗಳೂ ಹುಟ್ಟಿಕೊಂಡವು. ಅನೇಕ ಜನ ಅಂತಹ ಸ್ಕೂಲ್ಗಳ ಮೊರೆಹೋಗಿ ಕಲಿತರೂ ಅದನ್ನು ವೃತ್ತಿಯನ್ನಾಗಿಸಿಕೊಳ್ಳುವಲ್ಲಿ ಮುಂದಾಗಲಿಲ್ಲ. ಏನೂ ಗೊತ್ತಿರದೇ ಇದ್ದರೂ ಕುತೂಹಲಿಯಾಗಿ ಕಲಿಯಬಯಸಿದ ಕೆಲವರು ಅಲ್ಲಿಲ್ಲಿ ನೋಡೇ ಅಷ್ಟಿಷ್ಟು ಕಲಿತುಕೊಂಡು ಅದನ್ನೇ ತಮ್ಮ ವೃತ್ತಿಯನ್ನಾಗಿ ಆಯ್ದುಕೊಂಡರು. ಈ ಕುತೂಹಲದ ಹಿಂದೆ ಅವರೊಳಗಿದ್ದ ’ಕಲಾವಿದ’ನ ಕೈವಾಡವಿರುತ್ತಿತ್ತು. ಅಭಿಜಾತ ಕಲಾವಿದರಿಗೆ ಕಲಿಕೆ ನೆಪಮಾತ್ರ. ಒಮ್ಮೆ ನೋಡಿದರೆ ಸಾಕು ಅದನ್ನು ಅನುಕರಿಸುವ, ಮತ್ತಷ್ಟು ಕಸರತ್ತುಗಳನ್ನು ಮಾಡಿ ಆ ಕಲೆಯನ್ನು ಉದ್ದೀಪಿಸುವ ಮನೋಭಾವ ಅಂಥಾವ್ಯಕ್ತಿಗಳಲ್ಲಿ ಒಡಮೂಡುತ್ತದೆ. ಅದು ಕೇವಲ ಫೋಟೋಗ್ರಫಿ ರಂಗದಲ್ಲಲ್ಲ, ಯಾವುದೇ ರಂಗವನ್ನು ತೆಗೆದುಕೊಂಡರೂ ಅದಮ್ಯ ಕುತೂಹಲವೇ ಕಲಿಕೆಗೆ ಮೂಲಕಾರಣ ಎನ್ನಬಹುದು. ಛಾಯಾಚಿತ್ರವನ್ನು ಸೆರೆಹಿಡಿಯುವ ಫೋಟೋಗ್ರಾಫರ್ ಕಣ್ಣು ಒಮ್ಮೆ ಮುಂದಿರುವ ದೃಶ್ಯವನ್ನು ಕಂಡಕೂಡಲೇ ಮನದಲ್ಲಿ ಅದರ ಲೋಪದೋಷಗಳು ಕಾಣಿಸಿಕೊಳ್ಳುತ್ತಿದ್ದವು. ಚಿತ್ರ ಹೇಗಿರಬೇಕೆಂಬ ಸಮಗ್ರ ಕಲ್ಪನೆ ಆತನ ಮನದಲ್ಲಿ ಮೂಡುವುದರ ಜೊತೆಗೆ ಕ್ಯಾಮೆರಾದಂತಹ ಉಪಕರಣಗಳಲ್ಲಿನ ದೋಷಗಳೂ ಅವನಿಗೆ ತಿಳಿದಿರುತ್ತಿದ್ದವು. ಹೀಗಾಗಿ ಕಾಯಿಲೆಗಳನ್ನು ಹೇಳದೇ ಬಚ್ಚಿಟ್ಟು ಹುಡುಗಿಯನ್ನು ಮದುವೆಮಾಡುವ ಹಾಗೇ ನ್ಯೂನತೆಗಳನ್ನು ಮರೆಮಾಚಲು ಕೆಲವರು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿದ್ದರು!   

ತಮಾಷೆಯ ಪ್ರಸಂಗವೊಂದು ಹೀಗಿದೆ: ಒಂದು ಮದುವೆಮನೆಯಲ್ಲಿ ಆ ಊರ ದಡ್ಡನೊಬ್ಬ ಕುಳಿತಿದ್ದ. ಆತನಿಗೆ ತನ್ನದೂ ಛಾಯಾಚಿತ್ರ ಇರಲಿ ಎಂಬ ಆಸೆ. ಮದುವೆಗೆ ಬಂದ ಫೋಟೋಗ್ರಾಫರ್ ನ ಹಿಂದೆಬಿದ್ದ ಆತ ತನ್ನ ಫೋಟೋ ತೆಗೆಯುವಂತೇ ದುಂಬಾಲು ಬೀಳುತ್ತಿದ್ದ. ದಡ್ಡನಿಗೆ ಮುಂದಿನ ಎರಡು ಹಲ್ಲುಗಳು ವಕ್ರವಾಗಿ ಮುಂದೆಚಾಚಿದ್ದವು. ಫೋಟೋಗ್ರಾಫರ್ ಒಮ್ಮೆ ಆತನಿಗೆ ಹೇಳಿದ "ನೋಡಣ್ಣಾ ನಿನ್ನ ಫೋಟೋ ತೆಗೆದಿದ್ದು ತೊಳೆಯುವಾಗ ಉಬ್ಬಿರುವ ನಿನ್ನ ಎರಡು ಹಲ್ಲುಗಳು ಕ್ಯಾಮೆರಾಕ್ಕೆ ಸಿಕ್ಕಿಹಾಕಿಕೊಂಡು ರೀಲ್ ಹೊರತೆಗೆಯಲಾಗದೇ ಬಹಳ ಕಷ್ಟವಾಗಿ ಹೋಯ್ತು, ನಿನ್ನ ಮುಂದಿನ ಹಲ್ಲುಗಳು ಉಬ್ಬಿರುವುದರಿಂದ ಫೋಟೋ ಬರಲ್ಲ."  ಕೆಲವುದಿನಗಳು ಸಂದವು. ಊರಕಡೆಗೆ ಫೋಟೋಗ್ರಫಿ ಮಾಡುವವರು ಯಾರೋ ಒಬ್ಬರೋ ಇಬ್ಬರೋ ಇರುತ್ತಾರಲ್ಲ ಹೀಗಾಗಿ ಮತ್ತೊಂದು ಮದುವೆಮನೆಯಲ್ಲಿ ಮತ್ತದೇ ಫೋಟೋಗ್ರಾಫರ್ ಮತ್ತು ಮತ್ತದೇ ದಡ್ಡನ ಮುಖಾಮುಖಿ ನಡೆದೇ ಹೋಯ್ತು. ಈಸರ್ತಿ ದಡ್ಡ ಬಹಳ ಧೈರ್ಯದಿಂದ ಫೋಟೊಗ್ರಾಫರ್ ನ ರಟ್ಟೆ ಹಿಡಿದು ಹೇಳಿದ "ಈ ಸಲ ನನ್ನ ಫೋಟೋ ಬಂದೇ ಬರುತ್ತೆ ಯಾಕೆ ಗೊತ್ತಾ ಮುಂದಿನ ಎರಡು ಹಲ್ಲುಗಳನ್ನು ಕೀಳಿಸಿಕೊಂಡೇ ಬಂದಿದೀನಿ ನೋಡು" ಎಂದ! 

ಬ್ಲಾಕ್ ಅಂಡ್ ವ್ಹೈಟ್ ಸಿನಿಮಾಗಳ ಹಾಗೇ ಛಾಯಾಚಿತ್ರಗಳೂ ಬ್ಲಾಕ್-ಅಂಡ್ ವ್ಹೈಟ್ ಆಗಿದ್ದ ಕಾಲ.ಕೆಲವು ವೃತ್ತಿಪರರು ಬಹಳ ತಾದಾತ್ಮ್ಯತೆಯಿಂದ ಚಿತ್ರಕ್ಕೆ ಪೂರಕವಾದ ಅಂಶಗಳನ್ನು ಸೆರೆಹಿಡಿಯುವಲ್ಲಿ ಒಳ್ಳೆಯ ಹೆಸರುಮಾಡಿದರು. ಬೆಂಗಳೂರಿನ ಮಟ್ಟಿಗೆ ಈ.ಹನುಮಂತ ರಾವ್, ಈಗಲೂ ನಮ್ಮ ನಡುವೆ ಇರುವ ಹಿರಿಯಮಿತ್ರ ಎಮ್.ಎಸ್. ಹೆಬ್ಬಾರ್, ಜಿ.ಕೆ.ವೇಲ್ ಮೊದಲಾದ ಕೆಲವು ಕಲಾವಿದರು ತಮ್ಮತನವನ್ನು ಸಾಬೀತುಗೊಳಿಸಿದರು. ಬಣ್ಣದ ಚಿತ್ರಗಳಿಲ್ಲದ ಆ ಕಾಲಕ್ಕೆ ಕೈಯ್ಯಲ್ಲಿ ಬ್ರಶ್ ಹಿಡಿದು ಬಣ್ಣವನ್ನು ಕೊಡುವ ವ್ಯವಸ್ಥೆಯಲ್ಲೂ ಕೆಲವರು ಯಶಸ್ಸು ಪಡೆದರು. ಆ ಚಿತ್ರಗಳು ಅಂದಿನ ಬಣ್ಣದ ಛಾಯಾಚಿತ್ರಗಳೆನಿಸಿದವು;ಹಲವು ಕಡೆ ಅಂಥವು ಈಗಲೂ ನೋಡಸಿಗುತ್ತವೆ. ಛಾಯಾಚಿತ್ರಗ್ರಹಣಕಾರರಲ್ಲಿ ವ್ಯಕ್ತಿಗಳ ಚಿತ್ರ, ನೈಸರ್ಗಿಕ ದೃಶ್ಯಗಳ ಚಿತ್ರ, ವನ್ಯಜೀವಿ ಚಿತ್ರ ಗ್ರಹಣಕಾರರಾಗಿ ಕೆಲವರು ತಮ್ಮನ್ನು ಆ ಯಾ ವಿಭಾಗಗಳಿಗೆ ಸೀಮಿತಗೊಳಿಸಿಕೊಂಡರು. ಪಟ್ಟಣಗಳಲ್ಲೂ ಸ್ವಲ್ಪ ಜನಸಂಪರ್ಕ ಜಾಸ್ತಿ ಇರುವ ಹಳ್ಳಿಗಳಲ್ಲೂ ಸ್ಟುಡಿಯೋಗಳು ಬಾಗಿಲು ತೆರೆದವು. ಯಾವುದೇ ಉತ್ತಮ ಕಾರ್ಯಕ್ರಮವಿರಲಿ-ಫೋಟೋಗ್ರಫಿ ಎಂಬುದು ಅನಿವಾರ್ಯ ಎನಿಸುವಷ್ಟು ಹಾಸುಹೊಕ್ಕಾಯ್ತು.           

ಈ ಮಧ್ಯೆ ಒಂದೆರಡು ದಶಕಗಳ ಕಾಲ ಕಲರ್ ಕ್ಯಾಮೆರಾಗಳೂ ಬಂದವು. ಅಂತಹ ಕ್ಯಾಮೆರಾಗಳು ಬಂದಾಗ ಅವುಗಳನ್ನು ಖುದ್ದಾಗಿ ನೋಡುವ ಕುತೂಹಲ ನಮ್ಮಂತಹ ಬಹಳ ಮಂದಿಗೆ ಇತ್ತು. ಅವುಗಳಿಂದ ತೆಗೆದ ಚಿತ್ರಗಳು ಹೇಗೆ ಬಣ್ಣಬಣ್ಣಗಳಲ್ಲಿ ದೊರೆಯಬಹುದು ಎಂಬ ಪ್ರಮೇಯವೂ ಕಾಡುತ್ತಿತ್ತು. ಅವುಗಳಲ್ಲಿ ಬಳಸುವ ಫಿಲ್ಮ ರೋಲ್ಗಳು ಮತ್ತು ಚಿತ್ರಗಳನ್ನು ಅಚ್ಚುಮೂಡಿಸಲು ಬಳಸುವ ಮುದ್ರಣಕಾಗದಗಳು ವಿಶಿಷ್ಟ ರಾಸಾಯನಿಕ ಗುಣಧರ್ಮದವು ಎಂಬುದರ ಅರಿವಾಗಲೀ ಪರಿವೆಯಾಗಲೀ ನಮಗೆ ಇರಲಿಲ್ಲ. ಕಲರ್ ಫೋಟೋ ಕರುಣಿಸುವ ನೆಪದಲ್ಲಿ ವೃತ್ತಿಪರರು ಆ ಕಾಲಕ್ಕೆ  ಸ್ವಲ್ಪ ಕಾಸನ್ನೂ ಮಾಡಿಕೊಂಡರು. ಬಣ್ಣದ ಚಿತ್ರಗಳನ್ನು ಮುದ್ರಿಸುವ ಮುದ್ರಕಯಂತ್ರಗಳನ್ನು ತರಿಸಿಕೊಂಡ ಕೆಲವರು ಹಾಕುವ ಬಣ್ಣದಲ್ಲೇ ಪ್ರತಿಶತ ಕಮ್ಮಿ ಮಾಡಲು ತೊಡಗಿದರು. ೩-೪ ಪಾಸ್ಗಳಿರುವಲ್ಲಿ ಒಂದೇ ಪಾಸ್ ಕೊಟ್ಟು ಮುದ್ರಣ ಕಲರ್ಫುಲ್ ಆಗಿ ಬರುತ್ತಲೇ ಇರಲಿಲ್ಲ. ಬೆಂಗಳೊರಿನಲ್ಲಂತೂ ವೃತ್ತಿಪರ ಛಾಯಾಗ್ರಾಹಕರಿಗೆ ಮೆಜೆಸ್ಟಿಕ್ ಏರಿಯಾದಲ್ಲಿ ಒಬ್ಬ ಮಹಾಶಯ ಬಣ್ಣದ ಛಾಯಚಿತ್ರಗಳನ್ನು ಹೋಲ್ ಸೇಲ್ ದರದಲ್ಲಿ [ಕಳಪೆಯಾಗಿ]ಮುದ್ರಿಸಿಕೊಡುತ್ತಿದ್ದ!ಒಂದೇ ಛಾಯಾಚಿತ್ರದ ನೆಗೆಟಿವ್ ಬೆಂಗಳೂರಿನಲ್ಲಿ ಮುದ್ರಣಕಾಣುವುದಕ್ಕೂ ಕುಂದಾಪುರದಲ್ಲಿ ಮುದ್ರಣಕಾಣುವುದಕ್ಕೂ ಗುಣಮಟ್ಟದ ಅಂತರ ಕಾಣಿಸುತ್ತಿತ್ತು. ಕ್ಯಾಮೆರಾಗಳಿಗೆ ರೀಲು ತುಂಬಿ ಸೆಲ್ಲು ತುಂಬಿ ಸುಸ್ತಾದ ಮಂದಿಗೆ ವರದಾನವಾಗಿ ಬಂದಿದ್ದೇ ಡಿಜಿಟಲ್ ಕ್ಯಾಮೆರಾ. 

ಕಾಲಬದಲಾಗಿ ಕಂಪ್ಯೂಟರ್ ಕಾಲಿಟ್ಟಮೇಲೆ ಜಗದ ಎಲ್ಲಾರಂಗಗಳಲ್ಲೂ ಜಾಗೃತಿ ಮೂಡಿತು; ತೀವ್ರಗತಿಯಲ್ಲಿ ನಾನಾ ಆವಿಷ್ಕಾರಗಳೂ ಬದಲಾವಣೆಗಳೂ ಆದವು. ಮನೆ ಕಟ್ಟಿಸುವ ಮೊದಲೇ ಗಣಕಯಂತ್ರದಲ್ಲಿ ಕಟ್ಟುವ ಮನೆಯ ರೂಪರೇಷೆಗಳನ್ನು ಕಂಡು, ಬಣ್ಣ-ಬೇಡಗೆ ಅರಿತುಕೊಂಡು, ಮನೆಯೊಳಗಣ ಕೋಣೆಕೊಠಡಿ ದೇವರಮನೆ, ಮಲಗುವ ಕೋಣೆ, ಬಚ್ಚಲುಮನೆ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ತಿಳಿದುಕೊಂಡು ಆಮೇಲೆ ಮನೆಕಟ್ಟಿಸುವಷ್ಟು ಆಧುನಿಕೀಕರಣ ಆರಂಭವಾಯ್ತು. ಗಣಕಯಂತ್ರದ ಬಳಕೆ ಮತ್ತು ಅಳವಡಿಕೆಯಿಂದ ಆದ ಮಾರ್ಪಾಟುಗಳಲ್ಲಿ ಗುಣಮಟ್ಟದ ಬಗ್ಗೆ ಬಹಳ ಆದ್ಯತೆ ನೀಡಲಾಯ್ತು. ನಿಖರವಾದ ಅಳತೆಯ ಮಾನದಂಡಗಳು ಒಡಮೂಡಿದವು. ಮನೋವೇಗದಂತಹ ವೇಗದಲ್ಲಿ ನಡೆದ ಆವಿಷ್ಕಾರಗಳಲ್ಲಿ ವಿದ್ಯುನ್ಮಾನ ರಂಗದಲ್ಲಿ ಹುಟ್ಟಿಕೊಂಡಿದ್ದು ಡಿಜಿಟಲ್ ತಂತ್ರಜ್ಞಾನ! ಈ ತಂತ್ರಜ್ಞಾನವನ್ನು ವಿದ್ಯುನ್ಮಾನ ಕ್ಷೇತ್ರದ ಎಲ್ಲಾ ಉಪಕರಣಗಳಿಗೂ ಬಳಸಿಕೊಳ್ಳುವ ಪ್ರಯತ್ನ ನಡೆಯಿತು. ಸೆಲ್ಯುಲಾರ್ ಫೋನ್ಗಳೂ ಡಿಜಿಟಲ್ ಕ್ಯಾಮೆರಾಗಳೂ ಹುಟ್ಟಿಕೊಂಡವು. ಬೇಕಾದಾಗ ತೆಗೆದು ನೋಡುವ, ಮುದ್ರಿಸಿಕೊಳ್ಳುವ, ನಕಲುಮಾಡಿಕೊಳ್ಳುವ ಸೌಕರ್ಯ ಮತ್ತು ಸೌಲಭ್ಯಗಳು ಲಭ್ಯವಾದವು.      

ಡಿಜಿಟಲ್ ಕ್ಯಾಮೆರಾ ಬಂದಮೇಲೆ ಫೋಟೋಗ್ರಫಿ ಎನ್ನುವುದು ಬಹಳ ಈಸಿಯಾಗಿದೆ, ಅತಿ ಸರಳ ಮತ್ತು ಸುಲಭವಾಗಿದೆ. ತರಹೇವಾರಿ ಫ್ಲಾಷ್ಗಳು ಜ಼ೂಮ್ ಲೆನ್ಸ್ಗಳು ಕ್ಯಾಮೆರಾದೊಳಗೂ ಇರುವಂತೇ ಅಥವಾ ಅಳವಡಿಕೆಯಾಗಿ ಜೋಡಿಸಿಕೊಳ್ಳುವಂತೇ ಸಿಗುವ ಡಿಜಿಟಲ್ ಕ್ಯಾಮೆರಾವನ್ನು ತರಬೇತುಗೊಳಿಸಿದ ಮಂಗನ ಕೈಲಿ ಕೊಟ್ಟರೂ ಗುಂಡಿ ಅದುಮಿ ಚಿತ್ರತೆಗೆಯಬಲ್ಲದು ! ಸೆರೆಹಿಡಿಯುವ ಮೊದಲೇ ಚಿತ್ರ ಹೇಗೆ ಬರುತ್ತದೆ ಎಂಬುದೂ ತಿಳಿದುಹೋಗುವ, ಅಗತ್ಯಕ್ಕೆ ತಕ್ಕಂತೇ ದೃಶ್ಯಗಳ ಆಯ-ಅಗಲಗಳನ್ನು ಹಿರಿದು-ಕಿರಿದು ಮಾಡಿಕೊಳ್ಳಬಹುದಾದ ಆಯ್ಕೆಗಳ ಅನುಕೂಲತೆಯುಳ್ಳ ಇವತ್ತಿನ ಕ್ಯಾಮೆರಾಗಳಲ್ಲಿ ಚಿತ್ರ ಸೆರೆಹಿಡಿಯುವ ವೃತ್ತಿ ಕಷ್ಟವೇನಲ್ಲ. ಯಾವುದೋ ಕಾಡುಪ್ರಾಣಿಯೋ ಹಕ್ಕಿಯೋ ದುಂಬಿಯೋ ಬೇಕು ಎಂಬ ಕಾರಣಕ್ಕಾಗಿ ಮಾತ್ರ ಸ್ವಲ್ಪ ಸಮಯ ಅಲೆದಾಡಬೇಕಾದೀತೇ ಹೊರತು, ಕಾಡತೂಸಿಗೆ ಮಸಿತುಂಬಿ-ಗುಂಡುತುಂಬಿ ಈಡುಮಾಡಲು ಅಣಿಗೊಳಿಸುವಂತೇ ಕ್ಯಾಮೆರಾವನ್ನೇ ಹದಗೊಳಿಸಿಕೊಳ್ಳುವ ಪ್ರಮೇಯ ಇರುವುದಿಲ್ಲ.

ವಿಪರ್ಯಾಸ ಎಂದರೆ ವೈಜ್ಞಾನಿಕ ಶೋಧಗಳು, ಆವಿಷ್ಕಾರಗಳು ಪೂರಕವಾಗಿರುವಂತೇ ಮಾರಕವೂ ಆಗಿಬಿಡುತ್ತವೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಗುಣಮಟ್ಟದ ಬದುಕಿಗೆ ಗುಣಮಟ್ಟದ ವಸ್ತು-ಯಂತ್ರ-ಕಟ್ಟಡಗಳನ್ನು ಒದಗಿಸಿದ ಗಣಕಯಂತ್ರ ಗುಣಮಟ್ಟದ ಚಿತ್ರಗಳನ್ನು ಕೊಡುವಲ್ಲಿಯೂ ಬಳಕೆಯಾಗುತ್ತಿದೆ. ಗಣಕಯಂತ್ರಕ್ಕೆ ಡಿಜಿಟಲ್ ಕ್ಯಾಮೆರಾ ಅಥವಾ ಮೆಮರಿ ಕಾರ್ಡ್ ಅಳವಡಿಸಿದಾಗ ಅವುಗಳಲ್ಲಿರುವ ಚಿತ್ರಗಳನ್ನು ಗಣಕಯಂತ್ರದಲ್ಲಿ ಕಾಣಬಹುದಾಗಿದೆ, ಬಣ್ಣ-ಆಕಾರ, ಬೆಳಕು, ಹಿನ್ನೆಲೆ ಸನ್ನಿವೇಶ ಎಲ್ಲವುಗಳ ಅಷ್ಟೇ ಏಕೆ ಚಿತ್ರಗಳ ಭಾಗಗಳನ್ನೇ ತಿದ್ದುಪಡಿಮಾಡಬಹುದಾಗಿದೆ.ಚಿತ್ರಗಳನ್ನೂ ವೀಡಿಯೋಗಳನ್ನೂ ತಿದ್ದುಪಡಿ ಮಾಡಬಹುದು ಎಂಬುದನ್ನೇ ದಾಳವಾಗಿ ಬಳಸಿಕೊಂಡು ತಮ್ಮ ತಪ್ಪೇನೂ ಇಲ್ಲ ಎಂದು ಹೆಂಡದಮಂತ್ರಿ ರೇಣುಕಾಚಾರ್ಯ ಮತ್ತು ಚೋರಗುರು ನಿತ್ಯಾನಂದ ಹೇಳಿಕೊಂಡಿದ್ದಾರೆ. ತಿದ್ದುಪಡಿ ಮಾಡುವ ಅನುಕೂಲತೆ ಕಂಡ ಚಿತ್ರಚೋರರು ಮೂಲ ಫೋಟೋಗ್ರಾಫರ್ ಹೆಸರನ್ನು ಅಳಿಸಿ ಅಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಾರೆ.

ಡಿಜಿಟಲ್ ಮೀಡಿಯಾ ಚೌರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ. ಹಲವು ತಂತ್ರಾಂಶಗಳೂ ಮತ್ತು ಸಿನಿಮಾಗಳು ಅಲ್ಲದೇ ಆಡಿಯೋ ಆಲ್ಬಮ್ಗಳು ಕೃತಿಚೋರರಿಂದ ಚೋರಿಮಾಡಲ್ಪಟ್ಟಿವೆ; ಮಾಡಲ್ಪಡುತ್ತಿವೆ. ಆಗಾಗ ಅಲ್ಲಲ್ಲಿ ಗುಲ್ಲೆಬ್ಬಿಸಿದ ಕದ್ದ ಕಥೆಗಳು ಕಾಲಾನಂತರದಲ್ಲಿ ತಣ್ಣಗಾಗಿಹೋಗುತ್ತವೆ; ಚೋರೀಮಾಡುವವರು ತಮ್ಮ ಕೆಲಸವನ್ನು ನಡೆಸೇ ಇರುತ್ತಾರೆ. ಕೃತಿ ಚೌರ್ಯ ಎಂಬುದು ಇಂಟೆಲೆಕ್ಚ್ವಲ್ ಪ್ರಾಪರ್ಟಿಯನ್ನು ಕದ್ದು ಬಳಸುವಿಕೆಗೆ ಇರುವ ಹೆಸರು ಎಂಬುದು ನನಗೆ ಹಲವುದಿನ ಗೊತ್ತೇ ಇರಲಿಲ್ಲ. ಇಂಗ್ಲೀಷಿನಲ್ಲಿ ಪೈರಸಿ ಎಂದು ಕರೆಸಿಕೊಳ್ಳುವ ಈ ಕೆಲಸ ಡಿಜಿಟಲ್ ಮಾಧ್ಯಮಗಳ ಈ ಕಾಲದಲ್ಲಿ ತೀರಾ ಮತ್ತು ತುಂಬಾ ಸುಲಭ. ಹಲವರು ಬರಹಗಳನ್ನೂ ಕದ್ದು ಕಾಪೀ ಮಾಡಿಕೊಂಡು ತಮ್ಮ ಬರಹಗಳೆಂದು ಹೇಳಿಕೊಳ್ಳುತ್ತಾರೆ ಎಂದು ಕೇಳುತ್ತಲೇ ಇದ್ದೇನೆ.

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇದಕ್ಕೆಲ್ಲಾ ಕಡಿವಾಣ ಹಾಕುವುದು ಹೇಗೆ ಎಂಬುದು ಇನ್ನೂ ಯಕ್ಷಪ್ರಶ್ನೆಯೇ ಸರಿ. ನಾಣ್ಯಕ್ಕೆ ತೂತು ಮಾಡಿ ದಾರಕಟ್ಟಿ ಸಾರ್ವಜನಿಕ ಕಾಯ್ನ್ ಬೂತ್ಗಳಲ್ಲಿ ಕರೆಮಾಡಲು ಬಳಸಿ ಕರೆಮುಗಿದ ನಂತರ ಎತ್ತಿಕೊಂಡು ಹೋಗುವ ಕುಚಾತುರ್ಯ ಮೆರೆದ ಕಳ್ಳರೂ ಇದ್ದರಂತೆ, ಒಂದು ರೂಪಾಯಿಯ ನಾಣ್ಯವನ್ನೇ ಹೋಲುವ, ಅದೇ ತೂಕದ ಕಬ್ಬಿಣದ ಬಿಲ್ಲೆಗಳನ್ನು ಮಾಡಿಸಿತಂದು ಅದನ್ನು ಒಂದೊಂದಾಗಿ ಹಾಕಿ ಕರೆಮಾಡುವವರೂ ಇದ್ದರಂತೆ! ಅಷ್ಟೆಲ್ಲಾ ಮಾಡುವವರಿರುವಾಗ ಡಿಜಿಟಲ್ ಮಾಧ್ಯಮಗಳ ಮೂಲಕ ದೊರಕುವ ಸರಕಿಗೆ ಕೈಹಾಕಿ ಬಾಚಿಬರಗಿಕೊಳ್ಳುವುದು ಯಾವ ಮಹಾ ಕೆಲಸ ಹೇಳಿ? ಮೇಲಾಗಿ ಇಲ್ಲಿ ಕಳ್ಳತನದ ಹೆಜ್ಜೆಗುರುತು ಸಿಗುವುದೂ ಕೂಡ ಕಷ್ಟ. ಮುಂಡೇ ಮದುವೇಲಿ ಉಂಡೋನೇ ಜಾಣ ಅಂತಾರಲ್ಲ ಹಾಗೇ ಸಿಕ್ಕಿದ ಸರಕುಗಳನ್ನು ಸ್ವಾಹಾಮಾಡುವ ಸ್ವಭಾವ ಹೆಚ್ಚುಗಾರಿಕೆಯನ್ನು ಕೊಚ್ಚಿಕೊಳ್ಳುವ ಕೆಲವು ವ್ಯಕ್ತಿಗಳಲ್ಲಿ ಕಾಣಸಿಗುತ್ತದೆ. ಪ್ರತಿಭಾನ್ವಿತರು ಎನಿಸಿಕೊಂಡ ಕೆಲವರ ’ಪಾಂಡಿತ್ಯ’ವನ್ನು ಒರೆಗೆ ಹಚ್ಚದ ಹೊರತು ಅವರ ಒಳಹುರುಳು ಗೊತ್ತಾಗುವುದಿಲ್ಲ. ಪಂಡಿತರು ನ್ಯಾಷನಲ್ ಲೆವೆಲ್ಲೋ ಅಥವಾ ಇಂಟರ್ನ್ಯಾಷನಲ್ ಲೆವೆಲ್ಲೋ ಎಂಬುದು ತಿಳಿಯುವುದು ಅವರ ಘನಂದಾರೀ ಕೆಲಸ ಯಾರದೋ ಮೂಲಕ ಬಹಿರಂಗಗೊಂಡಾಗ ಮಾತ್ರ. ಬಿಡದಿ ನಿತ್ಯಾನಂದ ಅವತಾರವೆತ್ತಿದಮೇಲೆ ಹಲವು ಕಾವಿಧಾರಿಗಳು ಒಳಗೊಳಗೇ ಬಸವಳಿದುಹೋಗಿದ್ದಾರಂತೆ. ಅದೇ ರೀತಿ ಘನತೆವೆತ್ತ ಚೋರ ಮಹಾಮಹಿಮರು ಮುಖ್ಯಬೀದಿಯಲ್ಲಿ ತಮ್ಮ ತೇರನ್ನು ಎಳೆಯುವಾಗ ಸಿಕ್ಕಿಹಾಕಿಕೊಂಡರೆ ಆಗ ಆಗಬಹುದಾದ ಸನ್ಮಾನಕ್ಕೆ ಬೆಲೆಕಟ್ಟಲು ಸಾಧ್ಯವೇ?             

"ನಾನು ಅಲ್ಲಿ ಅದು ಮಾಡಿದೆ ಇಲ್ಲಿ ಇದು ಮಾಡಿದೆ", ಊರಿಗೆ ಊರೇ ಮೆಚ್ಚುವ ’ಮಹಾನ್ ಕಲಾವಿದ’ ತಾನು ಎಂಬುದನ್ನು ತಾನೇ ಹೇಳಿಕೊಳ್ಳುವ, ಕಂಡಲ್ಲೆಲ್ಲಾ ಅದನ್ನೇ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಬಯಸುವ, ಪ್ರಶಸ್ತಿಗಳಿಗಾಗಿ ಲಾಬಿ-ವಶೀಲಿಬಾಜಿಗೆ ಇಳಿದಿರುವ ಇಂದಿನ ಕೆಲವು ಛಾಯಾಚಿತ್ರಗ್ರಾಹಕರು ದಯವಿಟ್ಟು ಗಮನಿಸಿ: ನನ್ನಂತಹ ಕೆಲಸಕ್ಕೆ ಬಾರದ ವ್ಯಕ್ತಿಯೂ ಕೂಡ ಇಂದು ಉತ್ತಮ ಛಾಯಾಚಿತ್ರಗಳನ್ನು ತೆಗೆಯಬಲ್ಲ ಎಂಬುದನ್ನು ನಿಮ್ಮೆದುರು ಸಾರಿ ಹೇಳುತ್ತಿದ್ದೇನೆ. ಕಣ್ಣುಗಳು ಸರಿಯಿದ್ದರೆ, ನೋಡುವ ದೃಷ್ಟಿಕೋನ ಸರಿಯಿದ್ದರೆ, ಉಪಕರಣ ಸುಸ್ಥಿತಿಯಲ್ಲಿದ್ದರೆ, ಸ್ವಲ್ಪ ಸಮಯ ವಿನಿಯೋಗಿಸಿದರೆ ಎಂತಹ ಮೂಢನೂ ಛಾಯಾಗ್ರಾಹಕನಾಗಬಹುದು-ಇದು ಡಿಜಿಟಲ್ ಕ್ಯಾಮೆರಾಗಳು ಅನುಗ್ರಹಿಸಿದ ಸರಳೀಕೃತ ಛಾಯಾಗ್ರಹಣ. ಮಿಕ್ಕಿದಂತೇ ಫೋಟೋ ಶಾಪ್, ಕೋರಲ್ ಡ್ರಾ ಮೊದಲಾದ ಕೆಲವು ತಂತ್ರಾಂಶಗಳ ಬಳಕೆ ತಕ್ಕಮಟ್ಟಿಗೆ ಬಳಸಲು ತಿಳಿದಿದ್ದರೆ ಫೋಟೊ ಪರಿಪರಿ ರೂಪವನ್ನು ಪಡೆಯಬಹುದು! ಛಾಯಾಗ್ರಹಣ ಎಂಬುದು ಈ ಕಾಲದಲ್ಲಿ ಗುರುದ್ರೋಣ ಕಲಿಸಬೇಕಾದ ಶಬ್ದವೇದಿ ವಿದ್ಯೆಯಲ್ಲ; ಯಾವ ಛಾಯಾಗ್ರಾಹಕನೂ ಸವ್ಯಸಾಚಿಯೂ ಅಲ್ಲ!   

Tuesday, June 26, 2012

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ


ಪೂರ್ಣಿಮಾ ಸ್ವಾಮಿ ತೆಗೆದ ಈ ಛಾಯಾಚಿತ್ರವನ್ನು ಕರುಣಿಸಿದ್ದು: ಅಂತರ್ಜಾಲ 

ಭಾವಜೀವಿ ಎಚ್.ಎಸ್.ವಿಯವರ ಬಾಳ ಚಂದದ ಬಾಳಿನ ಗೀತೆ

ಭಾವಜೀವಿಯಾದ ವ್ಯಕ್ತಿಗೆ ಕೆಲವು ಹಾಡುಗಳನ್ನು ಆಲಿಸುತ್ತಾ ಕುಳಿತರೆ ಅವು ನಮ್ಮನ್ನು ಬೇರೊಂದು ಲೋಕಕ್ಕೆ ಸೆಳೆದೊಯ್ದು ಅಲ್ಲಿ ಬೀಡು ಬಿಡುವಂತೇ ಮಾಡುತ್ತವೆ ಎಂಬ ಅನಿಸಿಕೆ ಒಮ್ಮೆಯಾದರೂ ಜೀವಿತದಲ್ಲಿ ಬಂದೇ ಬರುತ್ತದೆ. ಎಲ್ಲೋ ಯಾರೋ ಹಾಗೊಮ್ಮೆ ಗುನುಗುನಿಸಿದರೂ ಮೊದಲೆಲ್ಲೋ ಕೇಳಿದ ಇಂಪಿನ ಕಂಪು ಕಿವಿಯಲ್ಲಿ ಗುಂಯ್ಯೆನ್ನಲು ಆರಂಭಿಸುತ್ತದೆ; ಮನಸ್ಸು ತಾಳಹಾಕುತ್ತ ಸಾಗುತ್ತದೆ! ಹಾಡಿನ ಜಾಡನ್ನೇ ಹಿಡಿದು ಅದರ ಮೂಲವನ್ನು ಅರಸಿ ಹೊರಟಾಗ ಕವಿತಾ ಪಿತೃವಿನ ಪರಿಚಯ ಅಷ್ಟಿಷ್ಟು ಮಾತ್ರ ದೊರೆಯುತ್ತದೆ. ಆಳಕ್ಕೆ ಇಳಿಯುತ್ತಾ ನಡೆದಾಗ ಸಾವಿರ ಮೆಟ್ಟಿಲ ಬಾವಿಯ ಹಾಗೇ ಇನ್ನೂ ಆಳಕ್ಕೆ ಕಾಣುವ ಕವಿಗಳ ಅದ್ಭುತ ಅಂತರಂಗ ಬಹಿರಂಗಗೊಳ್ಳುತ್ತದೆ. ಸೆಳೆಮಿಂಚಿನ ಬೆಳಕಲ್ಲಿ ಕವಿಯ ಸಾಕ್ಷಾತ್ಕಾರವಾದರೆ ಕೋಲ್ಮಿಂಚಿನ ಭರದಲ್ಲಿ ಅವರ ಕೃತಿಗಳ ಸಾಲು ತೋರಿಬರುತ್ತದೆ. ಕವಿಯೊಬ್ಬ ಹಾಗಿರಬಹುದೇ ಹೀಗಿರಬಹುದೇ ಎಂದು ಕಲ್ಪಿಸಿಕೊಳ್ಳುವ ಸೀಮಿತ ಸಂವಹನದ ಕಾಲವೊಂದಿತ್ತು; ಕವಿ ಸಾಹಿತಿಗಳಿಗೆ ಪತ್ರ ಬರೆದು ಅವರುಗಳ ಅನಿಸಿಕೆಗಳಿಗಾಗಿ ಕಾಯುವ ಅದಮ್ಯ ಭಾವವೂ ಇರುತ್ತಿತ್ತು. ಇಂದು ಅಂತರ್ಜಾಲದ ಕಾಲಘಟ್ಟದಲ್ಲಿ ಜಗತ್ತು ಕಿರಿದಾಗಿದೆ; ಕವಿ-ಸಾಹಿತಿಗಳ ಛಾಯಾಚಿತ್ರಗಳೂ ಮಾತುಗಳೂ ಅಲ್ಲಲ್ಲಿ ನೋಡ/ಕೇಳ ಸಿಗುತ್ತವೆ.

ನಮ್ಮ ಗೋಕರ್ಣದ ಗೌರೀಶ್ ಕಾಯ್ಕಿಣಿಯವರು ಉದಯೋನ್ಮುಖ ಬರಹಗಾರರನ್ನು ಕುರಿತು ಹೀಗೆ ಹೇಳುತ್ತಿದ್ದರಂತೆ: "ಅವರು ಬರೆಯಲಿ ಬಿಡಿ, ಒಳ್ಳೆಯದೇ, ದಿನಕ್ಕೆ ಎಷ್ಟುಗಂಟೆ ಅವರು ಬರವಣಿಗೆಯಲ್ಲಿ ತೊಡಗಿರುತ್ತಾರೋ ಅಷ್ಟುಕಾಲ ಅವರಿಂದ ಕೆಟ್ಟ ಯೋಚನೆ, ಸಮಾಜ ಘಾತುಕ ಯೋಚನೆ ದೂರವಿರುತ್ತದೆ. ಬರವಣಿಗೆಯಲ್ಲಿ ಅವರು ಮಹತ್ತರವಾದುದನ್ನು ಸಾಧಿಸಲಾಗದಿದ್ದರೂ ಸಮಾಜಕ್ಕೆ ಅವರ ಆ ಕೆಲಸದಿಂದ ಕೆಲವು ಒಳ್ಳೆಯವ್ಯಕ್ತಿಗಳು ದೊರೆತಂತಾಗುತ್ತದೆ." ಬರವಣಿಗೆ ಸಹ್ಯವಾಗಿಲ್ಲ ಎಂದೆನಿಸಿ ಯಾರೋ ಓದುಗರು ಕೆಲವು ಬರಹಗಾರರ ಬಗ್ಗೆ ಹೇಳಿದಾಗ ಕಾಯ್ಕಿಣಿ ಹಾಗೆ ಹೇಳಿದ್ದರಂತೆ. ಬರವಣಿಗೆ ಸಹ್ಯವೋ ಅಸಹ್ಯವೋ ಅದು ಓದುಗರಿಗೆ ತಿಳಿದಿರುತ್ತದೆ; ಶಿರಸಿ ಪೇಟೆಗೆ ಹೋದರೆ ಜನ ಬೆಂಡೆಗದ್ದೆ ಜಿಲೇಬಿಯನ್ನು ಹುಡುಕಿ ಹೋಗುತ್ತಾರೆ, ರುಚಿಯಾದ ಚೂಡಾಕ್ಕೆ ಕುಮಟಾದ ಅಲಕಾ ಕೆಫೆಯನ್ನೇ ಹುಡುಕಿ ಹೋಗುತ್ತಾರೆ!  ಧಾರವಾಡದ ಬಾಬು ಸಿಂಗ್ ಠಾಕೂರ್ ಪೇಡಾ ಹದವನ್ನು ಬೇರಾರೂ ಕೊಡಲು ಸಾಧ್ಯವಾಗಿಲ್ಲ! ಅದೇರೀತಿ ಬರವಣಿಗೆಯೂ ಸಹ ತನ್ನ ಯುನಿಕ್ ನೆಸ್ ನಿಂದ ಕೂಡಿರುತ್ತದೆ. ಕೆಲವರು ಬರೆದದ್ದನ್ನು ಓದುತ್ತಿದ್ದರೆ ಅಲ್ಲಿಂದ ತಪ್ಪಿಸಿಕೊಳ್ಳುವ ಮನಸ್ಸಾಗುತ್ತದೆ, ಇನ್ನು ಕೆಲವರ ಬರವಣಿಗೆಗೆ ನಮ್ಮನ್ನೇ ಒಪ್ಪಿಸಿಕೊಳ್ಳಬೇಕೆನಿಸುತ್ತದೆ. ನಮ್ಮನ್ನೇ ಓದಿಗೆ ಒಪ್ಪಿಸಿಕೊಳ್ಳುವ ಸೆಳವನ್ನು ತನ್ನ ಬರಹಗಳಲ್ಲಿ ತೋರಿದ ಕೆಲವು ಮಹಾನುಭಾವರಲ್ಲಿ ನಮ್ಮ ಪ್ರೀತಿಯ ಎಚ್.ಎಸ್.ವಿ ಕೂಡ ಒಬ್ಬರು.

ಕನ್ನಡ ಸಾಹಿತ್ಯಲೋಕದಲ್ಲಿ ಕಥೆ, ಕವನ, ಕಥನ ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಮುಂತಾದ ವಿಷಯಗಳಲ್ಲಿ ಬೆಳೆತೆಗೆದವರು ಡಾ| ಎಚ್. ಎಸ್. ವೆಂಕಟೇಶಮೂರ್ತಿ. ಎಚ್.ಎಸ್.ವಿಯವರನ್ನು ಪರಿಚಯಿಸಬೇಕೆ ಎಂಬುದು ಪ್ರಸಕ್ತ ನನ್ನ ಮುಂದಿರುವ ಪ್ರಶ್ನೆ! ಯಾಕೆಂದರೆ ಚಿಕ್ಕ ಹುಡುಗನಿಂದ ಮುಪ್ಪಾನ ಮುದುಕರವೆಗೂ ಎಲ್ಲರೊಡನೆ ಬೆರೆತು, ಎಲ್ಲರ ನಡುವೆ ಓಡಾಡಿಕೊಂಡು ಜೀವನ ನಡೆಸುತ್ತಿರುವ ಕವಿ ಎಚ್.ಎಸ್.ವಿ; ಯಾರನ್ನೇ ಕೇಳಿದರೂ ಅವರ ಭಾವಚಿತ್ರ ತೋರಿಸಿ’ಇವರೇ ಎಚ್.ಎಸ್.ವಿ’ ಎಂದು ಬೊಟ್ಟುಮಾಡಿ ತೋರಿಸುವಷ್ಟು ಚಿರಪರಿಚಿತರು. ಹಾಗಾಗಿ ಪರಿಚಿತರನ್ನೇ ಮತ್ತೆ ಪರಿಚಯಿಸುವುದು ದುಸ್ಸಾಹಸದ ಕೆಲಸ ಎನಿಸುತ್ತದೆಯಾದರೂ ಅವರ ಬದುಕಿನ ಕೆಲವು ನೋಟಗಳನ್ನು ಮೆಲುಕುಹಾಕುವ ಪ್ರಯತ್ನಕ್ಕಾಗಿ ಬರೆಯುತ್ತಿದ್ದೇನೆ.  

June 23, 1944ರಂದು ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮದಲ್ಲಿ ನಾರಾಯಣ ಭಟ್ಟರು ಮತ್ತು ನಾಗರತ್ನಮ್ಮನ ಮಗನಾಗಿ ಎಚ್ ಎಸ್ ವೆಂಕಟೇಶಮೂರ್ತಿ ಜನಿಸಿದರು. ತಾಯಿ ಶಿಕ್ಷಕಿಯಾಗಿದ್ದರು. ಪ್ರಾಥಮಿಕ ಶಿಕ್ಷಣ ಹೋದಿಗ್ಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗ. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭಿಸಿದರು ಎನ್ನುತ್ತದೆ ಅವರ ಅನಾತ್ಮಕಥನದ ಕಥಾಭಾಗ. ಅಂದಹಾಗೇ ಸದ್ರಿ ಎಚ್.ಎಸ್.ವಿಯವರನ್ನು ಖುದ್ದಾಗಿ ನಾನು ನೋಡಿದ್ದು ಅವರ ’ಅನಾತ್ಮಕಥನ’ದ ಮೊದಲ ಭಾಗ ಬಿಡುಗಡೆಗೊಂಡ ದಿನ; ಅದಕ್ಕೂ ಮೊದಲು ಅವರ ಸಮಗ್ರ ಕೃತಿಗಳ ಬಿಡುಗಡೆ ಇತ್ತಾದರೂ ಆ ಕಾರ್ಯಕ್ರಮಕ್ಕೆ ನನಗೆ ಹೋಗಲಾಗಿರಲಿಲ್ಲ. ಅನಾತ್ಮಕಥನದ ಮೊದಲಭಾಗವನ್ನು ರವಿ ಬೆಳಗೆರೆಗೆ ಅರ್ಪಿಸಿದ್ದು ನನಗೆ ನಿಜಕ್ಕೂ ಸೋಜಿಗ ಹುಟ್ಟಿಸಿದೆ. ರವಿ ಬೆಳಗೆರೆ ವಿಶಿಷ್ಟ ಛಾಪಿನ ಬರಹಗಾರ ಎನ್ನುವುದು ಸುಳ್ಳಲ್ಲವಾದರೂ ಬಹುತೇಕ ಅವರ ಬರವಣಿಗೆಗಳು ಧನಾತ್ಮಕವಾಗಿರುವುದಿಲ್ಲ; ಯಾರನ್ನೋ ಹೀಗಳೆಯಲಿಕ್ಕೆ, ಯಾರನ್ನೋ ಛೇಡಿಸಲಿಕ್ಕೆ, ಇನ್ಯಾರದೋ ತೇಜೋವಧೆಗೆ, ಮತ್ಯಾವುದೋ ಕೃತ್ಯವನ್ನು ತನಗೆ ಬೇಕಾದಂತೇ ತಿರುಗಿಸಿ ಹೇಳಲಿಕ್ಕೆ, ಕಾಮ-ಕ್ರೌರ್ಯಗಳನ್ನು ವೈಭವೀಕರಿಸಿ ಓದುಗರಲ್ಲಿ ಗಲಿಬಿಲಿ ಉಂಟುಮಾಡಲಿಕ್ಕೆ ಅವರ ಬರಹಗಳು ಸೀಮಿತವೆಂಬುದು ಅವರ ಜೀವಿತದ ಇಲ್ಲಿಯವರೆಗಿನ ಪ್ರತೀ ಅಧ್ಯಾಯವೂ ಹೇಳುತ್ತದೆ. ಇದೆಲ್ಲಾ ಗೊತ್ತಿದ್ದೂ ರಾತ್ರಿಕಂಡ ಬಾವಿಯಲ್ಲಿ ಹಗಲು ಬಿದ್ದರು ಅನ್ನೋ ಹಾಗೇ ಬೆಳಗೆರೆಗೆ ತಮ್ಮ ಕೃತಿಯನ್ನು ಅರ್ಪಿಸಿದ್ದಾರೆ!

ಭದ್ರಾವತಿಯಲ್ಲಿ ಡಿಪ್ಲೋಮಾ ಮಾಡುತ್ತಿರುವಾಗ ಹುಡುಗ ಎಚ್.ಎಸ್.ವಿ ಮತ್ತು ಅವರ ಗೆಳೆಯರು ಉಳಿದುಕೊಂಡಿದ್ದ ಪಕ್ಕದ ಮನೆಯಲ್ಲಿ ನವದಂಪತಿ ವಾಸವಿದ್ದರಂತೆ; ಅವರ ಮನೆತನದ ಹೆಸರು ಹಾಲಬಾವಿ ಯೋ ಹಂಸಬಾವಿಯೋ ಇರಬೇಕು. ನವದಂಪತಿಯಲ್ಲಿ ಹರೆಯದ ಹೆಂಡತಿಯನ್ನು ಕಂಡು ಥೇಟ್ ಅಂಥದ್ದೇ ಹುಡುಗಿ ತನ್ನವಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹಂಬಲಿಸಿದವರು ಎಚ್.ಎಸ್.ವಿ! ಉಕ್ಕೇರುತ್ತಿರುವ ಹರೆಯ ಮತ್ತೂ ಮತ್ತೂ ಕದ್ದು ಆಕೆಯನ್ನು ನೋಡುವ ಹುಚ್ಚನ್ನು ಹಿಡಿಸಿತ್ತು ಎಂದಿದ್ದಾರೆ: ತಮ್ಮ ಅನಾತ್ಮಕಥನದಲ್ಲಿ. ಕಪ್ಪಗಿನ ಹುಡುಗಿಯನ್ನು ಮನದುಂಬಿಕೊಂಡ ಕವಿಹೃದಯಕ್ಕೆ ಭದ್ರಾವತಿ ಬಿಟ್ಟ ಕೆಲವು ದಿನ ಒಮ್ಮುಖ ವಿರಹವೇದನೆ ಕಾಡಿತ್ತು; ಯಾರಲ್ಲಿಯೂ ಹೇಳಿಕೊಳ್ಳಲೂ ಆಗದ ಮನದಲ್ಲೇ ಅನುಭವಿಸುತ್ತ ಬಚ್ಚಿಟ್ಟುಕೊಳ್ಳಲೂ ಆಗದ ಭಾವದ ಹಾವುಗಳು ಮನವೆಂಬ ಬುಟ್ಟಿಯ ಮುಚ್ಚಳವನ್ನು ತಮ್ಮ ಹೆಡೆಯಿಂದ ತಟ್ಟಿ ತೆರೆಯಲು ಹೊರಡುತ್ತಿದ್ದವು!

ಕಾವ್ಯರಚನೆಯಲ್ಲಿ ಎಳವೆಯಲ್ಲೇ ಆಸಕ್ತಿ ಹೊಂದಿದ ಎಚ್.ಎಸ್.ವಿಯವರು ಪ್ರೌಢ ವಿದ್ಯಾಭ್ಯಾಸವನ್ನು ಹೊಳಲ್ಕೆರೆಯ ಮಲ್ಲಾಡಿಹಳ್ಳಿ ಮಾದಣ್ಣನವರ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಮಾಡಿ ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದುಕೊಂಡರು. ಸುಮಾರು ಮೂವತ್ತು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿರಾಗಿದ್ದಾರೆ. ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಅಂದರೆ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ ಇತ್ಯಾದಿಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಅನಾಯಾಸವಾಗಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಎಚ್.ಎಸ್ಸ್.ವಿ ಚಿತ್ರಕಲೆಯಲ್ಲೂ ನಿಪುಣರು ಎಂಬುದು ಹಲವರಿಗೆ ಗೊತ್ತಿಲ್ಲ! 


ಅನಿರೀಕ್ಷಿತವಾಗಿ ಎದುರುಬದುರು ಮನೆಯವರಾಗಿ, ಸಿಕ್ಕು-ಆಪ್ತರಾಗಿ ಅಪ್ಪಟ ಸ್ನೇಹಿತರಾದವರು ಎಚ್.ಎಸ್.ವಿ ಮತ್ತು ಬಿ.ಆರ್ ಲಕ್ಷ್ಮಣರಾವ್. ಲಕ್ಷ್ಮಣರಾಯರನ್ನು ಕೆದಕಿದರೆ ದಿನಗಟ್ಟಲೆ ಏಕೆ ತಿಂಗಳುಗಟ್ಟಲೆ  ಎಚ್.ಎಸ್.ವಿ ಯವರ ಬಗ್ಗೆ ಹೇಳುತ್ತಾರೆ. ಅಂದಹಾಗೇ ಸ್ನೇಹಕ್ಕೆ ಅಪಾರವಾದ ಗೌರವ ಕೊಡುತ್ತಾ ಲಕ್ಷ್ಮಣರಾಯರಲ್ಲಿನ ಕವಿಯನ್ನು ಗುರುತಿಸಿದ್ದೂ ಇದೇ ಎಚ್.ಎಸ್.ವಿಯವರೇ ಅಂದರೆ ತಪ್ಪಲ್ಲ; ಹಾಗಂತ ಬಿ.ಆರ್.ಎಲ್ ಬಾಯಲ್ಲೇ ನಾನು ಕೇಳಿದ್ದೇನೆ. ಈ ಇಬ್ಬರ ಆ ಸ್ನೇಹ ಹಸಿರಾಗಿರಲಿ. 

ಕಮಲ ಕೆಸರಿನಲ್ಲೇ ಅರಳಬಹುದಾದರೂ, ಬಹುತೇಕ ಜೀವಕೋಟಿಗಳ, ಸಸ್ಯಕೋಟಿಗಳ, ವ್ಯಕ್ತಿಗಳ ಬೆಳವಣಿಗೆಯಲ್ಲಿ ಅವುಗಳ/ಅವರುಗಳ ಎಳವೆಯ ಪರಿಸರ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಬಾಲ್ಯದಲ್ಲಿ ತಮ್ಮ ತಾಯಿಯ ತವರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿನ ಮೇಲೆ ಮಾಡಿದ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ ನೀಡಿದವು ಎನ್ನುತ್ತಾರೆ ಎಚ್.ಎಸ್.ವಿ.  ಬದುಕೇ ಬರವಣಿಗೆ ಎನಿಸಿದಾಗ ಬರಹಗಾರನಿಗೆ ಬಿಡುವೆಲ್ಲಿಯದು? ದಿನನಿತ್ಯದ ತಮ್ಮ ಹಲವು ಸಾಹಿತ್ಯಕ ಕೆಲಸಗಳ ನಡುವೆಯೇ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡವರು ಎಚ್.ಎಸ್.ವಿ. ’ಚಿನ್ನಾರಿಮುತ್ತ’, ’ಕೊಟ್ರೇಶಿ ಕನಸು’, ’ಕ್ರೌರ್ಯ’, ’ಕೊಟ್ಟ’, ’ಮತದಾನ’ ಚಲನಚಿತ್ರಗಳಿಗೆ ಹಾಡುಗಳನ್ನು ಬರೆದುಕೊಟ್ಟಿದ್ದರೆ ಇನ್ನೂ ಕೆಲವಕ್ಕೆ ಸಂಭಾಷಣೆ ಬರೆದುಕೊಟ್ಟಿದ್ದಾರೆ. ದೂರದರ್ಶನ ’ಯಾವ ಜನ್ಮದ ಮೈತ್ರಿ’, ’ಸವಿಗಾನ’, ’ಮುಕ್ತ’ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ಬರೆದುಕೊಟಿದ್ದಾರೆ. ’ಮಕ್ಕಳ ಗೀತೆಗಳು’, ’ಅನಂತ ನಮನ’, ’ತೂಗುಮಂಚ’, ’ಸುಳಿಮಿಂಚು’, ’ಅಪೂರ್ವ ರತ್ನ’, ’ಭಾವಭೃಂಗ’- ಧ್ವನಿ ಸುರಳಿಗಳಾಗಿದ್ದು, ಮಾರುಕಟ್ಟೆಯಲ್ಲಿ ಲಭಿಸುತ್ತಿವೆ. 
 

ಪ್ರತಿಭೆಗೆ ದೊರೆತ ವಿಶೇಷ ಗೌರವ ಪುರಸ್ಸರಗಳು:

* ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
* ರಾಜ್ಯೋತ್ಸವ ಪ್ರಶಸ್ತಿ
* ದೇವರಾಜ ಬಹದ್ದೂರ್ ಪ್ರಶಸ್ತಿ
* ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ
* ಬಿ.ಎಚ್. ಶ್ರೀಧರ ಪ್ರಶಸ್ತಿ
* ಆರ್ಯಭಟ ಸಾಹಿತ್ಯ ಪ್ರಶಸ್ತಿ
* ಮೈಸೂರು ಅನಂತಸ್ವಾಮಿ ಪ್ರಶಸ್ತಿ
* ೨ ಬಾರಿ ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ
* ಅರವತ್ತು ತುಂಬಿದ ಸಂದರ್ಭದಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಅಭಿನಂದನಗ್ರಂಥ ’ಗಂಧವ್ರತ.’


ಪ್ರಕಟಿತ ಬರಹಗಳು:
===================

ಪರಿವೃತ್ತ(೧೯೬೮)
ಬಾಗಿಲು ಬಡಿವ ಜನಗಳು(೧೯೭೧)
ಮೊಖ್ತಾ(೧೯೭೪)
ಸಿಂದಬಾದನ ಆತ್ಮಕಥೆ(೧೯೭೭)
ಒಣ ಮರದ ಗಿಳಿಗಳು(೧೯೮೧)
ಮರೆತ ಸಾಲುಗಳು(೧೯೮೩)
ಸೌಗಂಧಿಕ(೧೯೮೪)
ಇಂದುಮುಖಿ(೧೯೮೫)
ಹರಿಗೋಲು(೧೯೮೫)
ವಿಸರ್ಗ(೧೯೮೮)
ಎಲೆಗಳು ನೂರಾರು(೧೯೮೯)
ಅಗ್ನಿಸ್ತಂಭ(೧೯೯೦)
ಎಷ್ಟೊಂದು ಮುಖ(೧೯೯೦)
ಅಮೆರಿಕದಲ್ಲಿ ಬಿಲ್ಲುಹಬ್ಬ(೧೯೯೭)
ವಿಮುಕ್ತಿ(೧೯೯೮)
ಭೂಮಿಯೂ ಒಂದು ಆಕಾಶ(೨೦೦೦)
ಮೂವತ್ತು ಮಳೆಗಾಲ(೨೦೦೧)

ಪ್ರಕಟಗೊಂಡ ಕಥೆಗಳು
=======================

ಬಾಣಸವಾಡಿಯ ಬೆಂಕಿ(೧೯೮೦)
ಪುಟ್ಟಾರಿಯ ಮತಾಂತರ(೧೯೯೦)

ಕಾದಂಬರಿಗಳು
=============

ತಾಪಿ(೧೯೭೮)

ಸಾಹಿತ್ಯಚರಿತ್ರೆ
===============

ಕೀರ್ತನಕಾರರು(೧೯೭೫)

ವಿಮರ್ಶೆ
========

ನೂರು ಮರ, ನೂರು ಸ್ವರ(೧೯೮೩)
ಮೇಘದೂತ(೧೯೮೯)
ಕಥನ ಕವನ(೧೯೯೦)
ಆಕಾಶದ ಹಕ್ಕು(೨೦೦೧)

ಅನುಭವ ಕಥನ
================

ಕ್ರಿಸ್ಮಸ್ ಮರ(೨೦೦೦)


ಸಂಪಾದನೆ
==========

ಶತಮಾನದ ಕಾವ್ಯ(೨೦೦೧)


ನಾಟಕಗಳು
===========

ಹೆಜ್ಜೆಗಳು(೧೯೮೧)
ಒಂದು ಸೈನಿಕ ವೃತ್ತಾಂತ(೧೯೯೩)
ಕತ್ತಲೆಗೆ ಎಷ್ಟು ಮುಖ(೧೯೯೯)
ಚಿತ್ರಪಟ(೧೯೯೯)
ಉರಿಯ ಉಯ್ಯಾಲೆ(೧೯೯೯)
ಅಗ್ನಿವರ್ಣ(೧೯೯೯)
ಸ್ವಯಂವರ(ಅಪ್ರಕಟಿತ);


ಅನುವಾದ
========

ಋತುವಿಲಾಸ(ಕಾಳಿದಾಸನ ಋತುಸಂಹಾರದ ಅನುವಾದ: ೧೯೮೮)


ಪ್ರಬಂಧ
=========
ಕನ್ನಡದಲ್ಲಿ ಕಥನ ಕವನಗಳು(ಪಿ.ಎಚ್.ಡಿ ಪ್ರಬಂಧ:೧೯೮೭)


ಮಕ್ಕಳ ಸಾಹಿತ್ಯ
===============

ಸಿ.ವಿ.ರಾಮನ್(೧೯೭೪)
ಹೋಮಿ ಜಹಾಂಗೀರ ಭಾಭಾ(೧೯೭೫)
ಸೋದರಿ ನಿವೇದಿತಾ(೧೯೯೫)
ಬಾಹುಬಲಿ(೨೦೦೦)


ಕವನಗಳು
==========

ಹಕ್ಕಿಸಾಲು(೧೯೮೭)
ಹೂವಿನ ಶಾಲೆ(೧೯೯೭)
ಸೋನಿ ಪದ್ಯಗಳು(೨೦೦೧)
ನದೀತೀರದಲ್ಲಿ


ಸಂದ ಪ್ರಶಸ್ತಿಗಳು
==================

ಸಿಂದಬಾದನ ಆತ್ಮಕಥೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೭೭
ತಾಪಿ-ದೇವರಾಜ ಬಹಾದ್ದೂರ ಪ್ರಶಸ್ತಿ-೧೯೭೮
ಅಮಾನುಷರು-ಸುಧಾ ಬಹುಮಾನ೧೯೮೧
ಹೆಜ್ಜೆಗಳು- ರಂಗಸಂಪದ ಬಹುಮಾನ-೧೯೮೦
ಇಂದುಮುಖಿ-ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ-೧೯೮೫
ಹರಿಗೋಲು-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೫
ಅಗ್ನಿಮುಖಿ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೮೬
ಋತುವಿಲಾಸ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ-೧೯೮೮
ಎಷ್ಟೊಂದು ಮುಗಿಲು ಬಿ.ಎಚ್.ಶ್ರೀಧರ ಪ್ರಶಸ್ತಿ-೧೯೯೦
ಒಂದು ಸೈನಿಕ ವೃತ್ತಾಂತ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೩
ಹೂವಿನ ಶಾಲೆ-ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-೧೯೯೭
ಸ್ವಯಂವರ(ಅಪ್ರಕಟಿತ)-ಉಡುಪಿ ರಂಗಭೂಮಿ ಪುರಸ್ಕಾರ

’ಕವಿನೆನಪುಗಳು’ ಮಾಲಿಕೆಯಲ್ಲಿ ಆಗಿಹೋದ ಮತ್ತು ಈಗಿರುವ ಕವಿಗಳ ಕುರಿತು ಆಗಾಗ ಬರೆಯುತ್ತಲಿದ್ದೇನೆ. ಕವಿ-ಸಾಹಿತಿಗಳನ್ನು ನೇರವಾಗಿ ನೋಡುವುದು ನನಗಿಷ್ಟವಾದ ವಿಷಯ. ಅವರ ಜೊತೆ ಒಂದಷ್ಟು ಸಮಯ ಕಳೆದರೆ ಅಲ್ಲಿ ಸಿಗಬಹುದಾದ ಅಮೃತತುಲ್ಯ ಜ್ಞಾನಧಾರೆಯಲ್ಲಿ ಹಾಗೊಮ್ಮೆ ಮೀಯುವಾಸೆ. ’ಆರಂಕುಶಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ಎಂದ ಪಂಪನಂತೇ ಭಾವುಕ ಮನಕ್ಕೆ ಜನ್ಮವಿದ್ದರೆ ಮತ್ತಿದೇ ಕನ್ನಡದಲ್ಲೇ ಪುನರಪಿ ಹುಟ್ಟುವ ಬಯಕೆ! ಸರಳ ಸಜ್ಜನ ಎಚ್.ಎಸ್.ವಿಯವರು ನನ್ನ ಬ್ಲಾಗಿಗೂ ಒಮ್ಮೆ ಬಂದು ಹರಸಿದ್ದಾರೆ. ಜೂನ್ ತಿಂಗಳು ಬಂದಾಗ ಅವರ ಹುಟ್ಟುಹಬ್ಬದ ನೆಪದಲ್ಲಿ ಹಲವು ಜನ ಅವರನ್ನು ಕಾಣಬಯಸುತ್ತಾರೆ. ಮೊನ್ನೆಯಂತೂ ಅವರೇ ಬರೆದ ಕಾವ್ಯಗಳಧಾರೆ ಗಾಯಕ/ಗಾಯಕಿಯರ ಕಂಠಗಳಲ್ಲಿ ಹೊರಹೊಮ್ಮಿತು ಎಂದು ಕೇಳಿಯೇ ಸಂತಸಪಟ್ಟವರಲ್ಲಿ ನಾನೂ ಒಬ್ಬನಾಗಿದ್ದೇನೆ. ಎಚ್.ಸ್.ವಿಯವರು ಬಹುಕಾಲ ನಮ್ಮೊಟ್ಟಿಗಿರಲಿ, ನಮ್ಮಂಥವರಿಗೆ ಇನ್ನೂ ಹಲವು ಕೃತಿಗಳನ್ನು ಬಡಿಸಲಿ, ಬರಹಗಳ ಗದ್ದೆ-ತೋಟಗಳಲ್ಲಿ ಫಸಲು ಹುಲುಸಾಗಿ ಬರುವಂತೇ ಪ್ರೇರೇಪಿಸಲಿ ಎಂಬ ಪ್ರಾರ್ಥನೆಯೊಂದಿಗೆ ಎಚ್.ಎಸ್.ವಿಯವರಿಗೆ ನನ್ನ ವಂದನೆಗಳು, ಅಭಿನಂದನೆಗಳು.

’ನಮ್ಮೂರಲ್ಲಿ’ ಎಂಬ ಸಿನಿಮಾಕ್ಕಾಗಿ ಎಚ್.ಎಸ್.ವಿ ಬರೆದ ಒಂದು ಅಪರೂಪದ ಹಾಡು ನಿಮಗಾಗಿ :    

Wednesday, June 20, 2012

ಮಳೆಹುಡುಗಿ



ಚಿತ್ರಋಣ: ಅಂತರ್ಜಾಲ 

ಅರಿಕೆ : 


ನನ್ನಾತ್ಮೀಯ ಓದುಗ ಬಳಗವೇ, ಮಿತ್ರರೇ, 

ಫೇಸ್ ಬುಕ್ ಸಾಮಾಜಿಕ ತಾಣದಲ್ಲಿ ದಿನವಹಿ ಅನೇಕರು ನನ್ನ ಸ್ನೇಹಕೋರುತ್ತಿದ್ದೀರಿ, ಅನೇಕರು ನನ್ನ ಬರಹಗಳನ್ನು ಆಸ್ವಾದಿಸುತ್ತಿದ್ದೀರಿ. ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ನಿಮಗೆ ವೈಯ್ಯಕ್ತಿಕವಾಗಿ ನಾನು ಸ್ಪಂದಿಸಲಾಗದಿದ್ದರೂ ಸಾಮೂಹಿಕವಾಗಿ ನಿಮ್ಮೆಲ್ಲರಿಗೂ ಆಗಾಗ ನನ್ನ ಬರಹಗಳ ಮೂಲಕ ಸಿಗುತ್ತಲೇ ಇದ್ದೇನೆ. ಯಾರನ್ನೇ ಆಗಲಿ ಕಡೆಗಣಿಸಿದೆನೆಂಬ ಭಾವನೆ ಬೇಡ. ಬರಹಗಾರನಿಗೆ ಸಮಯದ ಅಭಾವ ಸಹಜ, ಸಿಗುವ ಸಮಯದಲ್ಲಿ ಕೆಲಹೊತ್ತು ಭಾವಲೋಕ, ಕೆಲಹೊತ್ತು ಅಧ್ಯಯನ, ಕೆಲಹೊತ್ತು ಅಧ್ಯಾಪನ, ಇನ್ನೂ ಕೆಲಹೊತ್ತು ಉದರನಿಮಿತ್ತದ ಕೆಲಸಗಳು ಹೀಗೇ ಸಮಯದ ಹೋಳುಗಳು ಹಂಚಿ ಹೋಗುತ್ತವೆ. ’ಉದ್ದಿಮೆ ಮೀಡಿಯಾ ನೆಟ್ವರ್ಕ್ಸ್’ ಮಾಡಿದಾಗಿನಿಂದ ಬರಹವನ್ನೇ ಉದ್ಯಮವನ್ನಾಗಿಯೂ ಅಂಗೀಕರಿಸಿದ್ದೇನೆ; ಅದರಲ್ಲೇ ಪ್ರಾಮಾಣಿಕತೆಯಿಂದ ದೇವರನ್ನೂ ಕಾಣಲು ಪ್ರಯತ್ನಿಸುತ್ತೇನೆ. ಈ ನಡುವೆ ಹತ್ತಿರದ ನೆಂಟರುಗಳ/ಸ್ನೇಹಿತರುಗಳ ಮನೆಗಳಲ್ಲಿ ನಡೆದ ಕಾರ್ಯಕ್ರಮಗಳಿಗೆ ನಾನು ಅಷ್ಟಾಗಿ ಹೋಗಲಾಗಲಿಲ್ಲ; ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಅಡಗಿಹೋಗಿದ್ದರಿಂದ ಬ್ಲಾಗ್ ಬರವಣಿಗೆಗಳಿಗೂ ವಿಳಂಬನೀತಿ ಅನುಸರಿಸಿದ್ದೇನೆ. ಆಮಂತ್ರಿಸಿದ್ದರೂ ಆಗಮಿಸದಿದ್ದುದಕ್ಕೆ ಹಲವರ ಆಕ್ಷೇಪಣೆಗಳನ್ನೂ ಎದುರಿಸಿದ್ದೇನೆ; ಅನಿವಾರ್ಯತೆಯಿಂದ ಭಾಗವಹಿಸಲಾಗದ್ದು ಮುಂದೆ ಅವರಿಗೆ ಅರಿವಾದಾಗ ಸರಿಹೋಗುತ್ತದೆಂಬ ವಿಶ್ವಾಸವನ್ನೂ ಇಟ್ಟುಕೊಂಡಿದ್ದೇನೆ. 

ಅಪರೂಪಕ್ಕೊಮ್ಮೆ ಹೀಗೆ ಮಳೆಯಲ್ಲಿ ತೆರಳುವಾಗ ಮಳೆಯೆಂಬ ಹುಡುಗಿಯ ನೆನಪಾಯ್ತು. ಅವಳ ಅಪ್ಪ-ಅಮ್ಮ, ಬೇರು-ಬಿತ್ತು ಎಲ್ಲದರ ವಿವರಗಳನ್ನು ಲೆಕ್ಕಹಾಕಲು ಕುಳಿತ ಮನದಲ್ಲಿ ಹೊಸದೊಂದು ಭಾವಗೀತೆ ಹುಟ್ಟಿಕೊಂಡಿತು. ಅದನ್ನೇ ಇವತ್ತು ನಿಮಗೆ ಉಪಾಹಾರವಾಗಿ ಬಡಿಸುತ್ತಿದ್ದೇನೆ. ನಿಮ್ಮೆಲ್ಲರ ಸ್ನೇಹಕ್ಕೆ, ಪ್ರೀತಿಗೆ, ನಿಮ್ಮ ಒಡನಾಟಕ್ಕೆ, ನಿಮ್ಮ ಓದಿಗೆ-ಸ್ಪಂದಿಸುವಿಕೆಗೆ ಸತತ ಆಭಾರಿಯಾಗಿದ್ದೇನೆ. ನೇರವಾಗಿ ಸಂವಹಿಸಲಾಗದಿದ್ದರೂ ನನ್ನ ಕೃತಿಗಳ ಮೂಲಕ ನಿಮ್ಮೊಡನೆ ವಿ.ಆರ್.ಭಟ್ ಎನಿಸಿದ್ದೇನೆ. ಸದಭಿರುಚಿಯ ಸಾಹಿತ್ಯದ ಓದಿನ ಗೀಳು ನಿಮ್ಮಲ್ಲಿ ಸದಾ ಉಕ್ಕುತ್ತಿರಲಿ, ಬರೆಯುವ ಕೆಲವು ಕೃತಿಗಳಾದರೂ ನಿಮ್ಮೆಲ್ಲರನ್ನೂ ರಂಜಿಸಲಿ ಎಂದು ಆಶಿಸುತ್ತಾ, ಬಯಸುತ್ತಾ ನಿಮ್ಮನ್ನು ಉಪಾಹಾರಕ್ಕೆ ಆಹ್ವಾನಿಸುತ್ತಿದ್ದೇನೆ-ಹೀಗೆ ಬನ್ನಿ, ಧನ್ಯವಾದಗಳು:      


ಮಳೆಹುಡುಗಿ 

ಶರಧಿಯೊಡಲಿನ ನೀರೆ ಸೂರ್ಯನಿಗೆ ಮನಸೋತು
ಹೊರಹೊರಟು ಗುಪ್ತಮಾರ್ಗದಿ ನಭಕೆ ನೆಗೆದು
ಭರದಿಂದ ಸಾಗುತ್ತ ಬರಸೆಳೆಯೆ ರವಿಯವನ
ಶರವೇಗದಲಿ ಹೇಗೆ ನಡೆವಳದೊ ಕಾಣೆ !


ಹಿರಿಹೊನ್ನ ಕಿರಣಗಳ ಬೆಡಗುರಾಯನ ಕಂಡು
ಗರಿಗರಿಯ ದಿರಿಸುಗಳ ಧರಿಸಿ ನಡೆಯುವಳೋ?
ಬರಿದಾಗಿ ಒಣಗುತ್ತ ಬಾಯ್ದೆರೆದ ಬಯಲುಗಳ
ಸರಸರನೆ ದಾಟುತ್ತ ಮುಂದೆ ಸಾಗುವಳೋ?


ಚರನಂತೆ ಗೋಚರಿಸಿ ಬಿರುಗಣ್ಣ ತೆರದಷ್ಟು
ತಿರೆಯೆಡೆಗೆ ತಿರುಗಿದನ ಹಿಡಿದು ಕಾಡುವಳೋ?
ಹರವಾದ ವಸುಧೆಯನು ಬೆಳಬೆಳಗಿ ರಂಜಿಸಿದ
ದೊರೆರಾಯನಾಟಕ್ಕೆ ಮರುಳಾಗಿರುವಳೋ?


ಹರಿಯನ್ನು ಹರನನ್ನು ಸರಸಿಜೋದ್ಭವನನ್ನು
ಗುರಿಹಿಡಿದು ತಲ್ಪಿದಳು ಹೆಣ್ಣುತಾನವಳು
ಅರಿವುಂಟೆ ಈ ಜಗಕೆ ಮಹಿಳೆಯೊಳತೋಟಿಯದು ?
ಮೆರೆಯುವಳು ಎಲ್ಲೆಡೆಗು ಭಾವರೂಪದೊಳು


ಅರೆರೆ ಅಲ್ಲೇನಾಯ್ತು ನಡುನಡುವೆ ನಿಂತಿಹಳು ?
ಮರೆಯಾದ ಮಿತ್ರನನು ಹುಡುಕಿಸೋಲುವಳೇ?
ಹಿರಿಯಲೋಸುಗ ನುಗ್ಗಿ ಪೈಪೋಟಿ ಅನುಭವಿಸಿ
ಬರಿಗೈಯ್ಯ ತಿರುವಿದನ ಕಂಡು ಬಳಲಿಹಳೇ?


ಸೊರಗಿ ಸೊಂಟದ ನೋವು ಸಿಗದಕ್ಕೆ ಸಮಯದಲಿ
ಮರುಗಿ ಮಮ್ಮಲ ತನ್ನ ಒಮ್ಮುಖದ ನಡೆಗೆ
ಕರಗಿ ಕಂಬನಿಯಾಗಿ ಹರಿದಿಹಳು ಭುವಿಯಲ್ಲಿ
ನೆರೆಬಂತು ನದಿಗೆಲ್ಲ ಅವಳ ಕೋಪದಲಿ !



Sunday, June 17, 2012

ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ!

ಚಿತ್ರಋಣ: ಅಂತರ್ಜಾಲ
ಕನ್ನಡಭಾಷೆಯ ಬೆಳವಣಿಗೆಗೆ ಸ್ವರ ವ್ಯಂಜನಗಳು ತಡೆಹಾಕಿಲ್ಲ; ತಡೆಹಾಕಿದ್ದು ವಿಕಲಮನದ ವ್ಯಕ್ತಿಗಳು ಮಾತ್ರ! 

ಇಂತಹ ವಿಷಯಗಳನ್ನು ಬರೆಯುತ್ತಲೇ ಇದ್ದೇನೆ. ಇತ್ತೀಚೆಗೆ ದಿನಪತ್ರಿಕೆಯೊಂದನ್ನು ವೇದಿಕೆಯಾಗಿ ಬಳಸಿಕೊಂಡು ಕನ್ನಡದ ಸ್ವರ ವ್ಯಂಜನಗಳ ಬಗ್ಗೆ, ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಬಗ್ಗೆ ಪುಂಕಾನುಪುಂಕವಾಗಿ ಲೇಖನಗಳನ್ನು ವಿಶದೀಕರಿಸುವ ಹೊಸ ಅನಾಮಧೇಯ ಸಂಘವೊಂದು ಬೆಳೆಯುತ್ತಿದೆ! ಕನ್ನಡದ ಬೆಳವಣಿಗೆಗೆ ನಮ್ಮ ಭಾಷೆಯಲ್ಲಿನ ಕೆಲವು ಅಕ್ಷರಗಳ ಮತ್ತು ಮಹಾಪ್ರಾಣಗಳ ಬಳಕೆಯೇ ಕಾರಣ ಎಂಬ ಅವರ ವಿಚಿತ್ರಗತಿಯ ಅನಿಸಿಕೆ ತೀರಾ ಬಾಲಿಶವಾಗಿ ತೋರಿಬರುತ್ತಿದೆ. ಭಾಷಾ ಬೆಳವಣಿಗೆಗೆ ಭಾಷೆಯ ಮೂಲಾಕ್ಷರಗಳು, ಸ್ವರಗಳು, ವ್ಯಂಜನಗಳು ಅಡ್ಡಿಯಾಗಿವೆ ಎಂದು ಇದೇ ಹೊಸದಾಗಿ ಮತ್ತು ನನ್ನ ಜೀವಿತಾವಧಿಯಲ್ಲಿ ಇದೇ ಮೊದಲಾಗಿ ನಾನು ಕೇಳುತ್ತಿದ್ದೇನೆ. ಮಹಾಪ್ರಾಣದ ಉಪಯೋಗ ಬೇಡ ಎನ್ನುವ ಆ ಸಂಘದ ಸದಸ್ಯರು ’ಭಟ್ಟ’ ಎನ್ನುವ ಪದವನ್ನು ’ಬಟ್ಟ’ ಎಂದು ಬರೆದರೆ ’ಮಧ್ಯ’ ಎನ್ನುವ ಪದವನ್ನೂ ಹಾಗೇ ಬಳಸಬೇಕಾಯ್ತಲ್ಲವೇ? ಈಗಾಗಲೇ ಅಪಭ್ರಂಶವನ್ನೇ ಕನ್ನಡವೆಂದು ಆಡತೊಡಗಿದ ಕೆಲವರಿಗೆ ’ಮಧ್ಯ’ಕ್ಕೂ ’ಮದ್ಯ’ಕ್ಕೂ ಅಂತರವೇ ಇಲ್ಲಾ ಅನ್ನಿ!   

ಈ ಬೆಳವಣಿಗೆಗೆ ಕಾರಣ ಭಾಷೆಯಲ್ಲ, ಬದಲಾಗಿ ಕನ್ನಡದಲ್ಲಿ ಸಂಸ್ಕೃತವೆಂಬ ’ಪುರೋಹಿತಶಾಹಿ ಭಾಷೆ’ಯ ಪದಗಳು ಬೇಡ ಎಂಬ ಅನಿಸಿಕೆ ಅವರದಾಗಿದೆ. ಮೊನ್ನೆ ಒಬ್ಬ ಪತ್ರಕರ್ತರಲ್ಲಿ ನಾನು ಮಾತನಾಡುತ್ತಿದ್ದೆ: ಎಡಪಂಥೀಯರಾದರೆ ಜನ ಬೇಗ ಗುರುತಿಸುತ್ತಾರೆ ಅದೇ ಬಲಪಂಥೀಯರ ಜೊತೆಗಿದ್ದರೆ ಹತ್ತರ ಜೊತೆ ಹನ್ನೊಂದರಂತೇ ಇರಬೇಕಾಗುತ್ತದೆ ಎಂದು ನಕ್ಕೆ. ಅದಕ್ಕೆ ಅವರೂ ಸಮ್ಮತಿ ಸೂಚಿಸಿದರು. ತಾವು ಎಲ್ಲರಿಗಿಂತ ಭಿನ್ನ ಎಂಬುದನ್ನು ಎತ್ತಿ ತೋರಿಸಿ ತಮಗೆ ಅದ್ದೂರಿಯ ಪ್ರಚಾರ, ಸ್ಥಾನಮಾನ ಸಿಗಲಿ ಎಂಬ ಉದ್ದೇಶದಿಂದ ’ಎಡಪಂಥ’ವೆಂಬ ವಾಮಮಾರ್ಗದಿಂದ ಸಮಾಜಕ್ಕೆ ಹೊಸವ್ಯಕ್ತಿಯಾಗಿ ಪ್ರವೇಶಿಸುವುದು ನಿಜಕ್ಕೂ ಸ್ವಾಗತಾರ್ಹವಲ್ಲ. ಪುರದ ಹಿತವನ್ನೇ ಬಯಸುವ ಜನರಿಗೆ ಪುರೋಹಿತರು ಎನ್ನುತ್ತೇವೆ. ’ಪುರೋಹಿತಶಾಹಿ’ ಎಂಬ ಪದವನ್ನು ಯಾವ ಪುಣ್ಯಾತ್ಮ ಸೃಷ್ಟಿಸಿದನೋ ನನ್ನರಿವಿಗಿಲ್ಲ. ಪುರೋಹಿತರು ಮಾಡಿಸುವ ಯಾಗ, ಯಜ್ಞ, ಹೋಮ ನೇಮಗಳು ಸಮಾಜದ ಒಳಿತಿಗಾಗಿ ವೇದಗಳಲ್ಲಿ ಹೇಳಲ್ಪಟ್ಟಿವೆ ಮತ್ತು ವೈಜ್ಞಾನಿಕವಾಗಿ ಈಗಾಗಲೇ ಅವುಗಳ ಉತ್ತಮ ಪರಿಣಾಮಗಳು ನಿಷ್ಕರ್ಷೆಗೆ ಒಳಗಾಗಿವೆ. ಅಷ್ಟಕ್ಕೂ ಯಾವ ಪುರೋಹಿತನೂ ಇಂಥಾ ಹೋಮವನ್ನು ಮಾಡಿಸಲೇ ಬೇಕು ಎಂದು ತಾನಾಗಿ ಯಾರನ್ನೂ ಹುಡುಕಿ ಹೋಗಿ ಹೇಳಿದ್ದು ಸುಳ್ಳು. ಮಾಡುವ ಪೂಜೆ, ಹೋಮ-ನೇಮಗಳಿಂದ ಏನೂ ಸಿಗದಿದ್ದರೂ ಕೊನೇಪಕ್ಷ ಕರ್ತೃವಿಗೆ ಮಾನಸಿಕ ನೆಮ್ಮದಿ ಸಿಗುತ್ತದೆ.

ವೇದಮಂತ್ರಗಳು, ಉಪನಿಷತ್ತು-ಭಾಷ್ಯಗಳು ಮೊದಲಾದವೆಲ್ಲಾ ಸಂಸ್ಕೃತದಲ್ಲಿ ಉಪಲಬ್ಧವಿದ್ದುದರಿಂದ ಅವುಗಳನ್ನು ತಿಳಿದುಕೊಳ್ಳಲು ಪುರೋಹಿತವರ್ಗ ಸಂಸ್ಕೃತಭಾಷೆಯನ್ನು ಓದಿತೇ ಹೊರತು ಅದು ಯಾರಿಗೂ ಗೊತ್ತಾಗದ ಭಾಷೆಯಾಗಿ ತಮಗೆ ಮಾತ್ರ ಸೀಮಿತವಾಗಿರಲಿ ಎಂಬ ದುರುದ್ದೇಶ ಅವರದಲ್ಲ. ಅಷ್ಟಕ್ಕೂ ಭಾರತೀಯ ಮೂಲದ ಸಂಸ್ಕೃತ ಭಾಷೆಯಷ್ಟು ಸೊಗಸಾದ ಭಾಷೆ ಪ್ರಪಂಚದಲ್ಲೇ ಇನ್ನೊಂದಿಲ್ಲ ಎಂಬುದನ್ನು ಎಲ್ಲೇ ನಿಂತು ಹೇಳಲೂ ಹೆದರುವ ವ್ಯಕ್ತಿ ನಾನಲ್ಲ. ಭಾರತೀಯ ಮೂಲ ಸಂಸ್ಕೃತಿಯನ್ನು ಸಾರಿದ್ದೇ ಸಂಸ್ಕೃತ ಎಂದರೆ ತಪ್ಪಲ್ಲ. ಅಂತಹ ಸಂಸ್ಕೃತ ಭಾಷೆಯನ್ನು ಪುರೋಹಿತವರ್ಗಗಳು, ಬ್ರಾಹ್ಮಣರು ಬಳಸಿದ್ದಾರೆ, ಬಳಸುತ್ತಿದ್ದಾರೆ ಮತ್ತು ಬಳಸುತ್ತಾರೆ ಎಂಬ ಏಕೈಕ ಕಾರಣಕ್ಕೆ ಅದನ್ನು ’ಸತ್ತ ಭಾಷೆ’ ಎಂದು ದೂರುವುದು ಕಾಣುತ್ತಿದೆ; ಈ ಬೆಳವಣಿಗೆ ವಿಷಾದನೀಯ ಮತ್ತು ಖಡಾಖಂಡಿತವಾಗಿಯೂ ಖಂಡನೀಯ. ಭಾಷೆ ಚೆನ್ನಾಗಿರಬೇಕೆಂದರೆ ಅದಕ್ಕೆ ಅದರದ್ದೇ ಆದ ನಿರ್ದಿಷ್ಟ ಛಂದಸ್ಸು, ವ್ಯಾಕರಣಗಳ ನಿರ್ಬಂಧನೆ ಇರಲೇಬೇಕು. ಬೇರೇ ಭಾಷೆಗಳಿಂದ ಪದಗಳನ್ನು ಸ್ವೀಕರಿಸಬಹುದೇ ಹೊರತು ತನ್ನ ಮೂಲಸ್ವರೂಪದಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳಬಾರದು-ಆಗಮಾತ್ರ ಭಾಷೆ ಸದಾ ಎತ್ತರದ ಸ್ಥಾನದಲ್ಲಿರುತ್ತದೆ ಎಂಬುದು ಭಾಷಾತಜ್ಞರ ಅನಿಸಿಕೆಯಾಗಿದೆ; ಅದು ನನ್ನ ಅನಿಸಿಕೆಯೂ ಕೂಡಾ.

ಹರಿಯುವ ನದಿಯು ಕಾಲಕ್ರಮದಲ್ಲಿ ತನ್ನ ಪಾತ್ರವನ್ನು ಅಲ್ಲಲ್ಲಿ ಬದಲಾಯಿಸಿದಂತೇ ನಮ್ಮ ಕನ್ನಡ ಆಗಾಗ ಬದಲಾಗಿದೆ! ನದಿಯಲ್ಲಿ ಹೂಳು ಸೇರಿಕೊಂಡಂತೇ ಕನ್ನಡದಲ್ಲಿ ಬೇರೇ ಭಾಷೆಗಳ ಪದಗಳೂ ಅತಿಯಾಗಿ ವಿಜೃಂಭಿಸುತ್ತಿವೆ. ಸಂಸ್ಕೃತವೊಂದನ್ನುಳಿದು ಉಳಿದ ಭಾಷೆಗಳ ಅತಿಯಾದ ಪ್ರಭಾವವೇ ಕನ್ನಡದಮೇಲೆ ಜಾಸ್ತಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡ ತನ್ನ ಮೂಲವನ್ನೇ ಮರೆತು ಹಲವನ್ನು ಸ್ವೀಕರಿಸಿದರೆ ಆಗ ಬೆಳವಣಿಗೆಯ ಬದಲಿಗೆ ವಿನಾಶದ ಹಾದಿ ಹಿಡಿಯಬೇಕಾದೀತು! ಕೇವಲ ’ಪುರೋಹಿತಶಾಹಿಯ ಭಾಷೆ’ ಎಂಬ ಒಂದೇ ಕಾರಣಕ್ಕೆ ಸಂಸ್ಕೃತವನ್ನು ದೂರುತ್ತಾ ಕನ್ನಡದಿಂದ ಸಂಸ್ಕೃತವನ್ನು ಆಮೂಲಾಗ್ರವಾಗಿ ಕಿತ್ತೆಸೆಯಲು ಹೊರಟ ಅಸಂಘಟಿತ ’ಅನಾಮಧೇಯ ಸಂಘ’ದವರು ಕನ್ನಡದಲ್ಲಿನ  ಹಲವು ಮೂಲ ಪದಗಳು ಸಂಸ್ಕೃತದ ಕೊಡುಗೆಗಳೇ ಆಗಿವೆ ಎಂಬುದನ್ನು ಕಿಂಚಿತ್ತಾದರೂ ಯೋಚಿಸಬೇಕಾಗುತ್ತದೆ. ಉದಾಹರಣೆಗೆ: ನೀರು ಎಂಬ ಪದಕ್ಕೆ ಕನ್ನಡದಲ್ಲಿ ಯಾವ ಪದವನ್ನು ಬಳಸುತ್ತೀರಿ? ಜಲ, ಉದಕ...ಇವೆಲ್ಲಾ ಸಂಸ್ಕೃತಮೂಲದವೇ ಆಗಿವೆ. ಬ್ರಾಹ್ಮಣರ ಭಾಷೆ ಎಂಬ ಕಾರಣಕ್ಕೆ ಇತ್ತೀಚೆಗೆ ಸಂಸ್ಕೃತ ವಿಶ್ವವಿದ್ಯಾಲಯವನ್ನೂ ಮುಚ್ಚಿಸುವ ತರಾವರಿ ಪ್ರಯತ್ನಗಳು ನಡೆದಿವೆ!

ದೇಶವಾಸಿಗಳ ಔನ್ನತ್ಯವನ್ನು ಬಯಸಿದ ಸಮಾಜದ ಒಂದು ಸ್ವಸ್ಥ ವರ್ಗ, ಮಾನವ ಬದುಕಿನ ಉತ್ತಮ ಅಂಶಗಳನ್ನು ಕಲೆಹಾಕಿದ ಅಥವಾ ಬದುಕುವ ಕಲೆಯನ್ನು ತಿಳಿಸಿಕೊಡುವ ಉನ್ನತ ಆಕರ ಗ್ರಂಥಗಳನ್ನು ಬಳಸುವ ಸಲುವಾಗಿ, ಅತಿವಿಶಿಷ್ಟವಾದ ದೇವನಾಗರೀ ಲಿಪಿಯನ್ನು ಕಲಿಯುತ್ತದೆ, ಸಂಸ್ಕೃತ ಭಾಷೆಯನ್ನು ಕಲಿಯುತ್ತದೆ ಎಂದಾದಾಗ, "ತಮ್ಮ ಬೇಳೇ ಬೇಯಿಸಿಕೊಳ್ಳುವ ಸಲುವಾಗಿ-ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತ ಭಾಷೆ ಬಳಸಿಕೊಳ್ಳುತ್ತಾರೆ-ಹೋಮ-ನೇಮ ಮಾಡಿಸುತ್ತಾರೆ" ಎಂಬ ಅಪವಾದ ಹೊರಬೇಕಾಗಿ ಬಂದಿರುವುದು ಸಮಾಜದಲ್ಲಿ ಎಡಪಂಥೀಯ ರಕ್ಕಸಕುಲದ ಬೆಳವಣಿಗೆ ಸಂಖ್ಯೆಯಲ್ಲಿ ವಿಪರೀತವಾಗುತ್ತಿರುವುದನ್ನು ತಿಳಿಸುತ್ತದೆ. ವಿದೇಶೀ ಮೂಲದ, ಲಂಗುಲಗಾಮು ರಹಿತ ಸ್ವೇಚ್ಛಾಚಾರದ ಲಿವ್-ಇನ್ ಭಾರತಕ್ಕೆ ಬಂದಮೇಲಂತೂ ದೇಶವಾಸಿಗಳ ಮೂಲ ಸಂಸ್ಕೃತಿಯ ಮೇಲೆ ಅದರ ಅಡ್ಡ ಪರಿಣಾಮ ಈಗಾಗಲೇ ಆಗುತ್ತಿದೆ ಎಂಬುದು ದೃಗ್ಗೋಚರವಾದ ವಿಷಯ. ನಾನು ಹಿಂದೊಮ್ಮೆ ಬರೆದಿದ್ದೆ: ಮರಾಠೀ ಮೂಲದ ಉದ್ಯಮಿಯೊಬ್ಬರು, ಕಳೆದ ಸಾಲಿನಲ್ಲಿ ಮುಂಬೈಯಲ್ಲಿ ಅದ ಏಕಕಾಲದ ಅತಿವೃಷ್ಟಿಯಂದು ಯಾರ್ಯಾರೋ ಯಾರ್ಯಾರಿಗೋ ತಮ್ಮ ಮನೆಗಳಲ್ಲಿ ಅತಿಥಿಗಳಾಗಿ ಕರೆದು ಆಶ್ರಯ ನೀಡಿ ಸತ್ಕರಿಸಿದ್ದನ್ನು ನೆನೆದರು-ಭಾರತೀಯ ಸಂಸ್ಕೃತಿಯನ್ನು ನೆನೆದು ಕಣ್ಣೀರಾದರು ಎಂದು. ಹೆಚ್ಚಿನ ಆರ್ಥಿಕತೆ ಇದ್ದರೂ ಇಲ್ಲದಿದ್ದರೂ ಇರುವುದರಲ್ಲೇ ಸಂತೃಪ್ತಭಾವವನ್ನು ಪಡೆಯುವ ಕಲೆಯನ್ನು ನಮ್ಮ ಸಂಸ್ಕೃತಿ ಕಲಿಸಿಕೊಟ್ಟಿದೆಯೇ ವಿನಃ ಕ್ರೆಡಿಟ್ ಕಾರ್ಡ್ ಕಲ್ಚರನ್ನಲ್ಲ! ’ಢೋಂಗೀ ಧನಿಕ’ರಾಗಿ ಒಳಗೊಳಗೇ ಅನುಭವಿಸುವ ಆರ್ಥಿಕ-ಮಾನಸಿಕ ಒತ್ತಡಗಳನ್ನಲ್ಲ. 

ದಿನಪತ್ರಿಕೆಯೊಂದರ ಸಂಪಾದಕರು ಬದಲಾಗುತ್ತಿದ್ದಂತೆಯೇ ಆ ಪತ್ರಿಕೆಯ ಅಂಕಣಗಳೂ, ಅಂಕಣಕಾರರೂ ಬದಲಾಗಿದ್ದು ಕಾಣಿಸುತ್ತಿದೆ. ಸಮಾಜಕ್ಕೆ ನೀತಿಯನ್ನು, ಸನ್ಮಾರ್ಗವನ್ನು ಬೋಧಿಸುವ ನೈತಿಕ ಜವಾಬ್ದಾರಿಯನ್ನು ಮಾಧ್ಯಮ ಮಾಡುತ್ತಿತ್ತು; ಆದರೆ ಈಗ ಅದು ಹಾಗಿಲ್ಲ. ’ಮಾಧ್ಯಮ’ ಎಂಬುದು ’ಹೆಚ್ಚಿನ ಸಂಪಾದನೆಯ-ಮಾಧ್ಯಮ’ವಾಗಿ ಪರಿಣಮಿಸಿದ ಈ ಕಾಲದಲ್ಲಿ ಬೇಕಾದ್ದು-ಬೇಡಾದ್ದು ಎಲ್ಲವನ್ನೂ ಸೇರಿಸಿಕೊಂಡು ಪತ್ರಿಕೆಯೋ ವಾಹಿನಿಯೋ ಸಮಾಜವನ್ನು ತಲ್ಪುತ್ತಿದೆ. ದಿನವೂ ವಾಹಿನಿಗಳಲ್ಲಿ ಕೆಟ್ಟಘಟನೆಗಳು, ಕೊಲೆ-ಸುಲಿಗೆ-ದರೋಡೆಗಳು ವೈಭವೀಕರಿಸಲ್ಪಡುತ್ತಿವೆ. ಒಬ್ಬಾತ ಹನ್ನೆರಡು ಮದುವೆಯಾಗಿದ್ದ, ಪೋಲೀಸರು ಕೇಳಿದಾಗ ಆತ ಹೇಳಿದ: "ಟಿವಿ ಯಲ್ಲಿ ಒಬ್ಬ ಮಾಡಿದ್ದನ್ನು ತೋರಿಸಿದ್ದರು ಅದೇರೀತಿ ನಾನೂ ಮಾಡಿದೆ!" ನಿತ್ಯವೂ ವೀಕ್ಷಕರಲ್ಲಿ, ಓದುಗರಲ್ಲಿ ಮಕ್ಕಳ ಸಂಖ್ಯೆಯೂ ಒಂದು ಭಾಗವಿರುತ್ತದಷ್ಟೇ? ಕೆಟ್ಟದನ್ನೇ ಒಳ್ಳೆಯದೇನೋ ಎಂಬಂತೇ ಎತ್ತಿ ಎತ್ತಿ ತೋರಿಸುವ, ಓದಿಸುವ ಮಾಧ್ಯಮವಿರುವಾಗ ಎಳೆಯ ಮಕ್ಕಳ ಮನಸ್ಸಿನಮೇಲೆ ಅದು ವ್ಯತಿರಿಕ್ತ ಪರಿಣಾಮ ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ವರದಿಯಾದ ಒಂದು ಘಟನೆ ಹೀಗಿದೆ: ಮನೆಯಲ್ಲಿ ಹೋಳಿಗೆ ಮಾಡುತ್ತಿದ್ದರು, ಅನುಕೂಲಸ್ಥರ ಮಹಡಿಮನೆ, ಬಾಲಕ ಮಹಡಿಗೆ ತೆರಳಿದ. ನೇಣುಹಾಕಿಕೊಳ್ಳುವ ದೃಶ್ಯವನ್ನು ಆತ ಟಿವಿಯಲ್ಲಿ [’ಮರುಸೃಷ್ಟಿ’ಯಲ್ಲಿ]ನೋಡಿದ್ದನಂತೆ-ಅದನ್ನು ಕ್ರಿಯಾತ್ಮಕವಾಗಿ ನಡೆಸಿದ. ಹೋಳಿಗೆಮಾಡಿ ಮುಗಿಯುವ ವೇಳೆಗೆ ಮನೆಜನ ಬಾಲಕನನ್ನು ಹುಡುಕಿದರು-ಬಾಲಕ ಸತ್ತುಹೋಗಿದ್ದ! ಸಂವೇದನೆಯೇ ಇಲ್ಲದ ಮತ್ತು ಸಂಪಾದನೆಯೇ ಮುಖ್ಯವಾದ ಮಾಧ್ಯಮಗಳಿಂದ ಸುಸಂಸ್ಕೃತ ಸಮಾಜವನ್ನು ನಿರೀಕ್ಷಿಸಲು ಸಾಧ್ಯವೇ?

ಹೊಸ ಸಂಪಾದಕತ್ವದಲ್ಲಿ ಜನರನ್ನು ತಲ್ಪುತ್ತಿರುವ ದಿನಪತ್ರಿಕೆಯೊಂದು ಜನರಿಗೆ ’ಬಯ್ಗುಳ’ದ ಬಗ್ಗೆ ಅಂಕಣವನ್ನೇ ಆರಂಭಿಸಿದ ಹಾಗಿದೆ! ಸಭ್ಯ ಮತ್ತು ಸ್ವಸ್ಥ ಸಮಾಜಕ್ಕೆ ಬಯ್ಗುಳದ ಬಗ್ಗೆಯೂ ಹೊಸದಾಗಿ ತಿಳುವಳಿಕೆ ನೀಡಬೇಕೇ? ನೋಡೀ ಸ್ವಾಮೀ ಸಂಸ್ಕೃತದಂತಹ ’ಪುರೋಹಿತಶಾಹಿ ಭಾಷೆ’ ಇಂತಹ ಕೆಟ್ಟ ಯೋಜನೆ ಮತ್ತು ಯೋಚನೆಗಳನ್ನು ಒಪ್ಪಿಕೊಳ್ಳುವುದಿಲ್ಲ! ನವಿಲು ಕುಣಿಯಿತು ಎಂದು ಕೆಂಬೂತನೂ ...ಎಂಬ ಗಾದೆ ನಿಮಗೆ ತಿಳಿದೇ ಇದೆ. ನಾಯಿಗೆ ಆಹಾರ ಸಿಗದಾಗ, ಸಿಕ್ಕ ಹಳೆಯ ಎಲುಬಿನ ತುಂಡನ್ನೇ ಅಗಿಯುತ್ತಾ, ತನ್ನ ದವಡೆಯಲ್ಲಿ ಗಾಯವಾಗಿ ಸೋರುವ ರಕ್ತವನ್ನೇ ತಾನು ಚಪ್ಪರಿಸುತ್ತದಂತೆ, ಅದೇರೀತಿ ಸುದ್ದಿಮನೆಯಲ್ಲಿ ಸಿಗುವ ಸುದ್ದಿಗಳು ಸಾಲದಾದಾಗ ಯಾ ಹೊಸತನವನ್ನು ಕೊಡುವ ಹುಚ್ಚುಹಂಬಲ ಅತಿಯಾದಾಗ ’ಬಯ್ಗುಳ’ದಂತಹ ವಿಪರೀತ ಅಂಕಣಗಳು ಒಡಮೂಡಲು ಸಾಧ್ಯ; ಇದಕ್ಕೆ ಸಂಪಾದಕರು ಕಾರಣವೋ ವರದಿಗಾರರು ಕಾರಣವೋ ಓದುಗರೇ ಹುಡುಕಬೇಕಾಗಿದೆ.

ಸರ್. ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲದಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ’ಪತ್ರಿಕಾಕರ್ತರನ್ನು ಗೌರವಿಸುವ ಕಾರ್ಯಕ್ರಮ’ಕ್ಕೆ ಒಮ್ಮೆ ಡೀವೀಜಿಯವರು ಹೋಗಿದ್ದರಂತೆ. ಮೈಸೂರು ಸರಕಾರ ಪತ್ರಿಕಾಕರ್ತರನ್ನು ಹೊಗಳಿ ಅವರಿಗೆ ಒಂದಷ್ಟು ಹಣಕೊಟ್ಟು ಕಳಿಸುವ ಇರಾದೆ ಮಹಾರಾಜರ ಕಾಲದಲ್ಲೂ ಇತ್ತು ಎನಿಸುತ್ತದೆ. ಸನ್ಮಾನ ಮುಗಿದು ಡೀವೀಜಿ ಬೆಂಗಳೂರಿಗೆ ಮರಳಿ ಬಂದ ಕೆಲವೇ ದಿನಗಳಲ್ಲಿ ಅವರಿಗೆ  ೨೦೦ ರೂ. ತಲ್ಪಿತಂತೆ! ತನಗೆ ತಲ್ಪಿದ ಇನ್ನೂರು ರೂಪಾಯಿಯನ್ನು ಹಿಡಿದುಕೊಂಡು ನೇರವಾಗಿ ಸಂಬಂಧಪಟ್ಟ ಕಚೇರಿಗೆ ತೆರಳಿದ ಡೀವೀಜಿಯವರು ಯಾಕೆ ಹಾಗೆ ತನಗೆ ಹಣ ಕಳಿಸಿದ್ದು ಎಂದು ಕೇಳಿದರಂತೆ. "ನೀವು ಮೈಸೂರಿಗೆ ಬರ-ಹೋಗುವ ಖರ್ಚೂ ಸೇರಿದಂತೇ ನಿಮಗೆ ಖರ್ಚುಗಳಿರುತ್ತವೆ-ಅದಕ್ಕಾಗಿ" ಎಂದು ಬಂದ ಉತ್ತರಕ್ಕೆ ದಂಗಾದ ಡೀವೀಜಿ ಆ ಇನ್ನೂರು ರೂಪಾಯಿಗಳನ್ನು ಸರಕಾರಕ್ಕೆ ಮರಳಿಸಿದರು. ಪತ್ರಕರ್ತನಿಗೆ ತನ್ನ ದಿನನಿತ್ಯದ ಖರ್ಚಿನ ಭಾಗವಾಗಿ ಪತ್ರಿಕೆಗೆ ವರದಿಮಾಡಲು ವಿನಿಯೋಗಿಸುವ ಸಮಯ-ಪರಿಕರಗಳೂ ಸೇರಿವೆ ಎಂಬುದು ಅವರ ಅನಿಸಿಕೆಯಾಗಿತ್ತಂತೆ. ಹಣವನ್ನೇ ಗುರಿಯಾಗಿಸಿಕೊಂಡು ಅವರೆಂದೂ ಪತ್ರಿಕಾಕರ್ತರಾಗಲಿಲ್ಲ; ಡೀವೀಜಿ ತಮ್ಮ ತಪ್ಪುಗಳನ್ನು ಬರೆದುಬಿಡುತ್ತಾರೆ ಎಂಬ ಹೆದರಿಕೆಯೂ ಸರಕಾರಕ್ಕೆ ಇಲ್ಲದಿರಲಿಲ್ಲ! ಅಂದಿನ ಸರಕಾರದ ಕೆಲಸಕ್ಕೆ ಮುಂಚಿತವಾಗಿ ಸಲಹೆ ಪಡೆಯುವ ಸಲುವಾಗಿ ಸ್ವತಃ ವಿಶ್ವೇಶ್ವರಯ್ಯನವರೇ ಡೀವೀಜಿಯವರ ಕಚೇರಿಗೆ ಬರುತ್ತಿದ್ದರಂತೆ!! 

ಹಲವು ಬೇಡದ ಹೂರಣಗಳನ್ನು ತುಂಬಿಸಿ ವರದಿಯನ್ನು ಒಪ್ಪಿಸಿ, ಟಿ.ಆರ್.ಪಿ ಹೆಚ್ಚಿಸಿಕೊಂಡಿದ್ದೇವೆಂದು ಬಡಾಯಿಕೊಚ್ಚಿಕೊಳ್ಳುವುದಕ್ಕಿಂತಾ, ಸಮಾಜಮುಖಿಯಾಗಿ ಕೆಲವೇ ವರದಿಗಳನ್ನು ಸಲ್ಲಿಸುವುದು ಹಿತಕರವೆನಿಸುತ್ತದೆ. ಕೆಲಸಕ್ಕೆ ಬಾರದ ವ್ಯಕ್ತಿಗಳ ಒಣಕಥೆಗಳನ್ನೂ ಜಂಬದ ಸರಕುಗಳನ್ನೂ ಬಿಂಬಿಸುವುದಕ್ಕಿಂತಾ ಸಶಕ್ತವಾದ ಮತ್ತು ಮೊನಚಾದ ಲೇಖನಗಳು ಪ್ರಕಟಿಸಲ್ಪಟ್ಟರೆ, ಅವು ಖಡ್ಗದಂತೇ ಕೆಲಸಮಾಡಬಲ್ಲವು ಮತ್ತು ಆಳುವ ಪ್ರಭುಗಳಿಗೆ [ಅವರಿಗೆ ಒಪ್ಪಿಕೊಳ್ಳುವ ಸ್ವಭಾವ ಇದ್ದರೆ] ಹೇಗೆ ನಡೆದುಕೊಳ್ಳಬೇಕೆಂಬುದನ್ನು ತಿಳಿಹೇಳಬಲ್ಲವು; ಅಶಕ್ತವಾದ ಮತ್ತು ರೋಗಗ್ರಸ್ತ ಮನಸ್ಸುಗಳ ವಿಚಿತ್ರ ತೆವಲುಗಳುಳ್ಳ ಬರಹಗಳಿಗಿಂತ ಈ ದಾರಿ ಉತ್ತಮವೆನಿಸುತ್ತದೆ. ಎಲ್ಲಿಯವರೆಗೆ ಎಡಪಂಥೀಯ ಅಧುನಿಕ ರಾಕ್ಷಸರ ಮನದಲ್ಲಿ, ಬಾಯಲ್ಲಿ, ಕೃತಿಯಲ್ಲಿ  ಸುಖಾಸುಮ್ನೇ ’ಪುರೋಹಿತಶಾಹಿ’ ಮತ್ತು ಪುರೋಹಿತಶಾಹಿ ಭಾಷೆ [ಸಂಸ್ಕೃತ]’ ಎಂಬ ಧೋರಣೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಸ್ವಸ್ಥ ಸಮಾಜದ ನಿರ್ಮಾಣ ’ಕನ್ನಡಿಯಲ್ಲಿ ಕಂಡ ಗಂಟಾ’ಗಿರುತ್ತದೆಯೇ ವಿನಃ ಅದು ನಮಗೆಟುವುಕಿದಿಲ್ಲ! ಕನ್ನಡದ ಬೆಳವಣಿಗೆಯೂ ಆಗ ಸಾಧ್ಯವಾಗುವುದಿಲ್ಲ.