ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, June 25, 2010

’ಇದು ದೀಪ ಇರುತ್ತದೆ’!!!


’ಇದು ದೀಪ ಇರುತ್ತದೆ’!!!


ದೀಪಕ್ಕೆ ’ಇದು ದೀಪ ಇರುತ್ತದೆ’ ಎಂದು ಯಾರೂ ಬೋರ್ಡು ಹಾಕುವುದಿಲ್ಲ ಅಲ್ಲವೇ? ದೀಪವನ್ನು ನೋಡಿದ ತಕ್ಷಣ ನಮಗೆ ಗೊತ್ತು ಅದು ದೀಪ್ ಎಂಬುದು! ಯಾಕೆಂದರೆ ಅದು ಸುತ್ತಲ ಪ್ರದೇಶಕ್ಕೆ ಬೆಳಕು ಹರಿಸಿರುತ್ತದೆ. ಹಾಗೆಯೇ ಜ್ಞಾನಿಗಳು, ಮಹಾತ್ಮರು ಎಲ್ಲರ ಬದುಕು. ಅವರು ತಾವು ಇಂಥವರು ಅಂಥವರು ಮೆಂತೆ ಕದ್ದವರು ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಅದೆಲ್ಲಾ ಏನಿದ್ದರೂ ರಾಜಕೀಯದವರಿಗೆ ಬಿಟ್ಟಿದ್ದು. ಇತ್ತೀಚಿನ ರಾಜಕೀಯದ ಹಲವು ದುಂದುಗಾರಿಕೆಗಳಲ್ಲಿ ಸಮಾವೇಶಗಳೂ ಒಂದು. ಸಾಧನೆ ಮಾಡಿದ್ದರೆ ಅದನ್ನು ಜನತೆ ಮೆಚ್ಚುತ್ತಾರೆ, ಅದಕ್ಕಾಗಿ ಸಮಾವೇಶ ಯಾತಕ್ಕೆ ಬೇಕು ? ಹಿಂದೆ ರಾಮರಾಜ್ಯವನ್ನು ನಾವು ಕೇಳಿಲ್ಲವೇ? ಅಂತಹ ಅನ್ವರ್ಥಕ ನಾಮ ಪಡೆದ ರಾಜ್ಯ ಅದಾಗಿತ್ತು, ಅಲ್ಲೆಲ್ಲೂ ಈ ಥರದ ಸಮಾವೇಶಗಳು ನಡೆದಿರಲಿಲ್ಲ ಅಲ್ಲವೇ? ನಡೆದಿದ್ದಾದರೆ ಅದು ಉಲ್ಲೇಖಗೊಳ್ಳುತ್ತಿತ್ತು.

ಇಂದಿನ ಜನತೆ ಪಾಲಾಗಿ ಹೋಗಿದ್ದಾರೆ, ಕೈ ಬೆಂಬಲಿಗರು,ಕಮಲ ಬೆಂಬಲಿಗರು,ತೆನೆಹೊತ್ತ ಮಹಿಳೆ ಬೆಂಬಲಿಗರು ಹೀಗೆಲ್ಲ ಹಲವಾರು ಬೆಂಬಲಿಗರುಗಳು--ಆ ಬೆಂಬಲಿಸುವಿಕೆಗೆ ಅರ್ಥವೇ ಇಲ್ಲ! ಪಕ್ಷದ ಕಾರ್ಯಕರ್ತನಾಗಿ ಕಾಸು ಹೊಡೆಯುವ ಪ್ಲಾನು! ಅಲ್ಲಿ ನ್ಯಾಯ-ನೀತಿ-ಧರ್ಮ ಎಲ್ಲ ಬರೇ ಪುಸ್ತಕಗಳಲ್ಲಿವೆ. ನಾನು ಈ ಮೊದಲೇ ಬರೆದಂತೆ ಹಳ್ಳಿ ಹಳ್ಳಿಗಳಲ್ಲೂ ಈ ರಾಜಕೀಯ ಹೊಕ್ಕು ಅಕ್ಕ-ಅಣ್ಣ ಎಂದುಕೊಂಡಿದ್ದ ಮಂದಿಯೆಲ್ಲ ಈಗ ಆ ಪಕ್ಸದ ಅಧ್ಯಕ್ಸರು ಈ ಪಕ್ಸದ ಕಾರ್ಯಕರ್ತ್ರು ಅಂತಲೇ ಗುರುತಿಸಿಕೊಳ್ಳುತ್ತಾರೆ....ಏನಾಗಿದೆ ನಮ್ಮ ಜನರಿಗೆ? ನಮಗೆ ಬೇಕಾದುದು ಒಳ್ಳೆಯ ಸೌಲಭ್ಯಸಹಿತ ಸಂತೃಪ್ತ ಜೀವನ-ಅದನ್ನು ದೊರಕಿಸಿ ಕೊಡುವಂತಹ ಸರಿಯಾದ ವ್ಯಕ್ತಿ ಯಾರೋ ಅವನಿಗೆ ಪಕ್ಷಭೇದವಿಲ್ಲದೇ ಮತದಾನ ಮಾಡಬೇಕು. ಮೇಲಾಗಿ ಇಡೀ ದೇಶದಲ್ಲಿ ಎರಡೇ ಪಕ್ಷಗಳಿದ್ದರೆ ಆಗ ದಿನಬೆಳಗಾಗಿನ ದ್ಯಾವು,ಸಿದ್ದು,ಜಾನು, ರಾಮು ಇವರೆಲ್ಲರ ಕಿತ್ತಾಟ-ತೇಪೆ ಹಚ್ಚಿಕೊಂಡು ರಾಜಕೀಯ ಅಧಿಕಾರ-ದುಡ್ಡಿನ ಲಾಲಸೆಗಾಗಿ ತೆಕ್ಕೆಹಾಕಿಕೊಳ್ಳುವುದು ನಿಲುತ್ತದೆ, ಪಕ್ಷಾಟನೆ- ಕುದುರೆ ವ್ಯಾಪಾರ ಎಲ್ಲಾ ಮಾಯವಗಿ ಜನತೆ ನಿರುಂಬಳರಾಗುತ್ತಾರೆ! ಆದರೆ ’ಅಂದಕಾಲತ್ತಿಲ್’ ಎಂಬಂತೆ ಸ್ವಾತಂತ್ರ್ಯ ಬಂದಾಗ ಅರ್ಜೆಂಟಾಗಿ ಮಾಡಿದ ನಮ್ಮ ಸಂವಿಧಾನದಲ್ಲಿ ಅನೇಕ ನ್ಯೂನತೆಗಳಿವೆ-ಅವುಗಳು ಹಾಗೇ ಇರುವವರೆಗೂ ರಾಜಕೀಯದವರ ಆಸ್ತಿ ಬೆಳೆಯುತ್ತದೆ-ಹಲವಾರು ಅನುಪಯುಕ್ತ ಸಮಾವೇಶಗಳು ನಡೆಯುತ್ತಲೇ ಇರುತ್ತವೆ!

ಎಲ್ಲಿಯವರೆಗೆ ಸಂವಿಧಾನದ ತಿದ್ದುಪಡಿ ಆಗುವುದಿಲ್ಲವೋ ಅಲ್ಲೀವರೆಗೆ ನ್ಯಾಯವೇ ಮೂರ್ತಿವೆತ್ತಂತ ವೆಂಕಟಾಚಲೈಯ್ಯ, ಸಂತೋಷ ಹೆಗ್ಡೆ ಇಂಥವರಿಗೆಲ್ಲ ನೋವು ಸಹಜ! ಕಥೆಯೋಮ್ದು ನೆನಪಿದೆ -ನೀನು ಹೊಡೆದ ಹಾಗೇ ಮಾಡು, ನಾನು ಸತ್ತಹಾಗೇ ನಟಿಸುತ್ತೇನೆ’ ಎಂದು, ಅದೇ ರೀತಿ ನೀವು ಹಿಡಿದ ಹಾಗೇ ಮಾಡು, ನಾವು ಶಿಕ್ಷಿಸಿದ ಹಾಗೇ ಮಾಡುತ್ತೇವೆ ಎಂದು ಆಳುವ ದೊರೆಗಳು ಹೇಳಿದ್ದನ್ನು ಕೇಳಿಕೊಂಡು ಬಿದ್ದಿರುವ ಕೆಲಸ ಸದ್ಯ ಲೋಕಾಯುಕ್ತ ಸ್ಥಾನದ್ದು! ಅದರಲ್ಲೂ ಕಳ್ಳರನು-ಖೂಳರನ್ನು ಹಿಡಿಯುವಗಲೇ ಫೋನು,ಬೆದರಿಕೆ ಇತ್ಯಾದಿ! ಯಾಕಾಗಿ ಮಾಡಬೇಕು ಇದನ್ನು, ನಮ್ಮ ಜನರಿಗೆ ದಮ್ಮಿದ್ದರೆ ಎದ್ದು ಬಂದು ಚಳುವಳಿ ನಡೆಸಿ ಲೋಕಯುಕ್ತರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಿಸಲಗುವುದಿಲ್ಲವೇ? ಇದು ಲೋಕಾಯುಕ್ತರಿಗೆ ಮಾತ್ರವಲ್ಲ- ಎಲ್ಲ ಆ.ಭಾ.ಸೇ, ಆ.ಕ.ಸೇ ಮುಂತಾದ ಬ್ಯೂರೋಕ್ರಾಟ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. ಎತ್ತಾಕಿ ಅವನನ್ನು ಎಂದರೆ ಅಲ್ಲಿಂದ ರಾತ್ರೋ ರಾತ್ರಿ ವರ್ಗಾವಣೆ- ಏನು ಅ ಅಧಿಕಾರಿಗೆ ನಮಗಿರುವಂತೆ ಹೆಂಡತಿ-ಮಕ್ಕಳು ಇರುವುದಿಲ್ಲವೇ, ಸಂಸಾರದ ಆರೋಗ್ಯ,ಮಕ್ಕಳ ವಿದ್ಯಾಭ್ಯಾಸ ಇವೆಲ್ಲದರ ಕುರಿತು ವರ್ಗಾಯಿಸುವಾಗ ದೊರೆಗಳು ವಿಚಾರಿಸುತ್ತಾರೆಯೇ? ಇಲ್ಲವಲ್ಲ. ತನ್ನ ಬಚಾವಿಗಾಗಿ, ತನ್ನ ಉಳಿವಿಗಾಗಿ ತನ್ನಿಂದ ಆದ ಹೆಚ್ಚಿನ ಕಾಣಿಕೆಯನ್ನು ಕಾಣದ ಕೈಗೆ ಕೊಡಬೇಕಾಯಿತು ಆತ! ಅಲ್ಲಿಂದಲೇ ಶುರು ಬ್ರಷ್ಟಾಚಾರ! ಬ್ರಷ್ಟಾಚಾರದ ನಿರ್ಮೂಲನೆ ಮೇಲಿಂದ ಕೆಳತನಕ ಆಗ್ಬೇಕೇ ಹೊರತು ಕೆಳಗಿನಿಂದ ಮೇಲೆ ಹೋಗುತ್ತಾ ಹೋದರೆ ಶತಶತಮಾನಗಳು ಕಳೆದರೂ ಅದು ಲಂಗು-ಲಗಾಮು ಇಲ್ಲದೇ ಬೆಳೆಯುತ್ತದೆ! ಇದನ್ನು ನೋಡಿದಾಗ ನಮಗೆ ರಾಜರುಗಳ ಆಳ್ವಿಕೆಯೇ ಮೇಲೆಸುತ್ತದೆ ಅಲ್ಲವೇ?

ಇನ್ನೊಂದನ್ನು ತಮ್ಮೆಲ್ಲರಲ್ಲಿ ಹೇಳಬೇಕಾಗಿದೆ, ಇವತ್ತು ಜನಸಂಖ್ಯೆಯ ದೃಷ್ಟಿಯಲ್ಲಿ ಮೈನಾರಿಟಿ ಎಂಬುದು ಆ ಮಟ್ಟದಲ್ಲಿ ಇಲ್ಲ, ಎಲ್ಲಾ ಮೈನಾರಿಟಿ ಈಗ ಬದಲಾಗಿ ಮೆಜಾರಿಟಿಗೆ ಬಂದಿದೆ! ಮೈನಾರಿಟಿ-ಮೆಜಾರಿಟಿ, ಆ ಕೋಮು -ಈ ಕೋಮು,ಆ ಜಾತಿ-ಈಜಾತಿ, ಹಿಂದ-ಅಹಿಂದ,ಮೀಸಲಾತಿ-ಒಳಮೀಸಲಾತಿ ಇವೆಲ್ಲ ಯಾತಕ್ಕೆ ಸ್ವಾಮೀ? ಭಾರತ ಒಂದೇ, ಇಲ್ಲಿನ ಪ್ರಜೆಗಳೆಲ್ಲ ಒಂದೇ ಎಂಬ ಏಕರೂಪದ, ತಾರತಮ್ಯವಿರದ ಆಢಳಿತವನ್ನು ಇಟ್ಟು ಯಾರು ಪರಿಶ್ರಮದಿಂದ ಮೇಲೆಬರುತ್ತಾರೋ ಅಂತವರಿಗೆ ಆದ್ಯತೆ ಕೊಟ್ಟರೆ ಅಲ್ಲಿಗೆ ಬಹುಪಾಲು ಬ್ರಷ್ಟಾಚಾರ ವೇಗವಾಗಿ ಕಡಿಮೆಯಾಗುತ್ತದೆ. ಸುಳ್ಳು ಸರ್ಟಿಫಿಕೇಟ್ ಗಳು,ಜಾತಿ ಪತ್ರಗಳು, ಆದ್ಯತಾ ಪತ್ರಗಳು, ಶಾಸಕ-ಸಂಸದ-ಮಂತ್ರಿಗಳ ಪರ್ಸನಲ್ ಆದ್ಯತೆಗಳು ಎಲ್ಲವೂ ಹೊರಹೊರಟು ಟ್ರಾನ್ಸ್ಪರಂಟ್ ಆಢಳಿತವಾಗುತ್ತದೆ. ಖಜಾನೆಗೆ ಬರುವ ಮತ್ತು ಹೋಗುವ ಹಣದ ಲೆಕ್ಕದ ಜೊತೆಗೆ ಸರಕಾರೀ ಕೆಲಸಗಳನ್ನು ಮಾಡುವ ಗುತ್ತಿಗೆದಾರರಿಗೆ ಕೆಲವೊಂದು ನಿಬಂಧನೆಗಳನ್ನು ಹಾಕಿದರೆ ಅಲ್ಲಿ ಬ್ರಷ್ಟಚಾರ ಕಮ್ಮಿ ಆಗುತ್ತದೆ. ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಬಹುಕಾಲ ತಿಂದು ಬದುಕಿರುವ ಹಳೆಯ ಭೂತಗಳಮೇಲೆ ಸ್ವತಂತ್ರ ಲೋಕಾಯುಕ್ತರು ತಮ್ಮ ಮಾಂತ್ರಿಕತೆಯನ್ನು ಮೆರೆದರೆ ಅಲ್ಲಿಗೆ ಹಲವು ಹಂತಗಳ ಬ್ರಷ್ಟಾಚಾರ ಕಮ್ಮಿ ಆಗುತ್ತದೆ. ಆದರೆ ನಮ್ಮ ಸ್ಥಿತಿ ಹೇಗಿದೆ ಎಂದರೆ ಬೆಕ್ಕಿಗೆ ಘಂಟೆ ಕಟ್ಟುವವರಾರು ಎಂಬಂತಾಗಿದೆ! ಇದನ್ನೆಲ್ಲ ಗ್ರಹಿಸಿಯೇ ಸರಿಯಾದ ವ್ಯಕ್ತಿ ಲೋಕಾಯುಕ್ತರಾಗಿರಲು ಹೇಸುತ್ತಾರೆ, ಈಗ ಶ್ರೀ ಹೆಗ್ಡೆಯವರಿಗೆ ಆಗಿದ್ದೂ ಅಷ್ಟೇ!

ತಮ್ಮೊಳಗೇ ಕಿತ್ತಾಟ, ಮುಸುಕಿನ ಗುದ್ದಾಟ ಮುಗಿಸಿಕೊಳ್ಳದ ಜನ ಸಮಾವೇಶ ಮಾಡುವುದೇತಕ್ಕೆ? ಅಷ್ಟಾಗಿಯೂ ಇವರು ಮಾಡಿದ ಅಂತಹ ಘನಂದಾರೀ ಕೆಲಸ ಯಾವುದೇ ಸರಕಾರ ಮಾಡಲಗದಂತಹ ಅಸಾಮಾನ್ಯ ಕೆಲಸವೇನು? ನೆರೆಪರಿಹಾರದ ಸಮಸ್ಯೆಯೇ ಇನ್ನೂ ಬಗೆಹರಿದಿಲ್ಲ, ಬೇಕಾದಲ್ಲಿ ರಸ್ತೆ ಮಾಡುವುದು ಬಿಟ್ಟು ಬೇಡದಲ್ಲಿ ರಸ್ತೆ, ಬೋರು, ಅಂಡರ್ಪಾಸು ಇತ್ಯದಿ ಮಾಡುತ್ತ ಇದನ್ನೇ ಹೆಗ್ಗಳಿಕೆಯೆನ್ನುವವರಿಗೆ ಏನೆನ್ನಬೇಕು? ಇದಕ್ಕೇ ಹೇಳಿದ್ದು ಸಾಧಿಸಿದವರು ಅದನ್ನು ಸಮಾವೇಶ ಕರೆದು ತೋರಿಸಬೇಕಿಲ್ಲ, ಜನರಿಗೆ ಕಣ್ಣಿದೆ,ಬುದ್ಧಿಯಿದೆ. ಮತದಾರ ದೂರದಿಂದ ನೋಡುತ್ತಿರುತ್ತಾನೆ! ಹೊಗೆಯ ಮೂಲ ಬೆಂಕಿ ಎಂಬುದು ಎಲ್ಲರಿಗೂ ಗೊತ್ತು! ಇದಕ್ಕಾಗಿ ಕೋಟಿಗತ್ತಲೇ ಖರ್ಚುಮಾಡಿ ಸಮಾವೇಶಬೇಕೆ? ಹೋಗಲಿ ಸಮಾವೇಶದಲ್ಲಿ ನಿಜವಾಗಿ ’ಸಾಧನೆ’ಗೈದ ಸಂಪಂಗಿ,ರೇಣುಕ, ಹಾಲಪ್ಪ ಇವರೆಲ್ಲರಿಗೂ ಸನ್ಮಾನವನ್ನಾದರೂ ಮಾಡಿ!

ಕೊನೆಯದಾಗಿ ಒಂದುಮಾತು,ನಿನ್ನೆಯ ಒಂದು ದಿನಪತ್ರಿಕೆಯೊಂದರಲ್ಲಿ ಒಬ್ಬರು ಬರದ್ರು ಇಂಥಾ ಮಂತ್ರಿ-ಅವರೊಳಗೆ ನೀವರಿಯದ ಇಂಥಾ ಒಳ್ಳೆಯ ಮುಖಗಳು ಅಂತ. ಸ್ವಾಮೀ ಹತ್ತುಮಂದಿಯ ಆಸ್ತಿಯಾದ ಭೂಮಿಯಲ್ಲಿ ನಿಸರ್ಗವನ್ನು ದೋಚುವ ಗಣಿಗಾರಿಕೆಯಿಂದ ಗಳಿಸಿದ ಹಣವನ್ನು ತಮ್ಮ ಸ್ಥಾನಭದ್ರತೆಗೆ ಉಪಯೋಗಿಸುತ್ತಿದ್ದಾರೆ, ಅದಿಲ್ಲಾ ಅವರು ಮುಂದೆ ಅಧಿಕಾರಕ್ಕೆ ಬರುವುದಿಲ್ಲ! ಅಧಿಕಾರವಿಲ್ಲದಿದ್ದರೆ ಗಣಿ ಕೈತಪ್ಪಿ ಹೋಗುತ್ತದೆ! ಹೀಗಾಗೇ ಬರೆದ ಆ ಮಹನೀಯರಿಗೊಂದು ಹೇಳುತ್ತೇನೆ ನಾವರಿಯದ ಅ ಮುಖ ನಾವರಿಯದಿದ್ದರೂ ಅರಿತೇ ಇರುವುದು! ಅಲ್ಲಿ ಸ್ವಾರ್ಥವೇ ಇದೆ! ನಮ್ಮ ಹಿಂದಿನ ಜನಾಂಗ ನಿಸರ್ಗವನ್ನು ಇಷ್ಟೊಂದು ದೋಚಿರಲಿಲ್ಲ! ನನಗೂ ಒಂದಷ್ಟು ಅನುಕೂಲ ಕೊಡಿ-ಹಲ್ವಾರು ಜನರಿಗೆ ದಿನಾ ಅನ್ನಸತ್ರ ಮಾಡುತ್ತೇನೆ, ಹಲವು ಚಿಕ್ಕ-ಪುಟ್ಟ ಸೌಲಭ್ಯ ಕೊಡಿಸುತ್ತೇನೆ, ಸಾಮೂಹಿಕ ಮದುವೆಮಾಡಿಸುತ್ತೇನೆ--ಇದೆಲ್ಲಾ ರಾಜಕೀಯದವರ ಅಂಗಸೌಷ್ಟವ ಸ್ವಾಮೀ, ಅದಕ್ಕಿಂತಾ ಭಿನ್ನವಾದ ಬೇರಾವ ರೀತಿಯ ಮುಖವಿದೆಯೇ ಹೇಳಿ? ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ ಬಹಳಕಾಲ ಬರೋದಿಲ್ಲ ಅನ್ನೋ ಗಾದೆ ಇದ್ಯಲ್ಲ ಹಾಗೇ ಜನಸಾಮಾನ್ಯನಿಗೆ ಅವನು ದುಡಿದು ತಿನ್ನಲು ಅನುಕೂಲವಾಗುವ ಪರಿಸರ ನಿರ್ಮಿಸಬೇಕೇ ಹೊರತು ಕ್ಷಣಿಕ ಆಮಿಷಗಳು-ದಾಸೋಹಗಳು ಜನರಲ್ಲಿ ಆಲಸ್ಯವನ್ನು ಬೆಳೆಸುತ್ತವೆ, ಜನ ತಮ್ಮತನವನ್ನು ಕಳೆದುಕೊಳ್ಳುತ್ತಾರೆ-ಇದು ಸಮಾಜಕ್ಕೆ ಅಂಟುವ ಪಾರ್ಕಿನ್ಸನ್ ಕಾಯಿಲೆಯಾಗುತ್ತದೆ. ದಾಸೋಹ ನಡೆಸಲು ಮಠ-ಮಾನ್ಯಗಳಿವೆ,ಮಂದಿರ-ಮಸೀದಿಗಳಿವೆ, ಅವುಗಳನ್ನು ನಡೆಸುವುದಕ್ಕಿಂತ ಆ ಅನಿವಾರ್ಯತೆ ಜನರಲ್ಲಿ ತಲೆದೋರದಂತೆ ನೋಡಿಕೊಳ್ಳಿ! ವೀರ ಮಯೂರವರ್ಮರು-ಹೊಯ್ಸಳರು-ವಿಜಯನಗರದ ಅರಸರು ಆಳಿದ ಈ ನಾಡಿನಲ್ಲಿ ಸ್ವಾವಲಂಬನೆಯ ಮಂತ್ರ ಹೇಳಿಕೊಡಿ, ಭಿಕ್ಷಾಟನೆ ಬೇಡ ಅಲ್ಲವೇ? ನಮ್ಮಲ್ಲಿನ ರಾಜಕೀಯಕ್ಕೆ ಸದ್ಯ ಎಚ್.ಎನ್ ರಂತಹ ಶಿಕ್ಷಣ ಕೊಡುವವರು, ನಿಜಲಿಂಗಪ್ಪ-ಕಡಿದಾಳು ಮಂಜಪ್ಪ ಥರದವರು ಬೇಕು. ಆವರು ನಿತ್ಯ ಅವರ ಮನೆಗಳಲ್ಲಿ ದಾಸೋಹ ಮಾಡಲಿಲ್ಲ, ಪತ್ರಿಕೆಗಳಲ್ಲಿ ಬಹಳ ಕಾಣಿಸಿಕೊಳ್ಳಲಿಲ್ಲ ಬದಲಿಗೆ ಜನಸಾಮಾನ್ಯನ ಮನೆಯಲ್ಲಿ ದಿನದ ದಿನಸಿಗೆ ಕೊರತೆ ಆಗದಂತೆ ನೋಡಿಕೊಂಡರು, ಅವರ ಮನೆಗಳಲ್ಲಿ ದಿನವೂ ದೀಪ ಬೆಳಗುವಂತೆ ಕಣ್ಣಿಟ್ಟು ಕಾದರು! ಅವರು ಮಡಿದಾಗ ಅವರ ಅಂತ್ಯಕಿಯೆಗೆ ಹೊರತಾಗಿ ಅವರಲ್ಲಿ ಬೇರಾವ ಕಾಸೂ ಇರಲಿಲ್ಲ-ಹೇಳಿಕೊಳ್ಳುವಂತಹ ಸ್ಥಿರಾಸ್ತಿಯೂ ಇರಲಿಲ್ಲ! [ಆದ್ರೆ ಆಂಧ್ರದಲ್ಲಿ ವೈ ಎಸ್ ಆರ್ ಸತ್ತಾಗ ಅವರ ಪರಿವಾರದ ಆಸ್ತಿ ೩೩ಸಾವಿರ ಕೋಟಿ ರೂಪಾಯಿ ಅಂತ ಹಲವು ಮಿಂಚಂಚೆಗಳು ಇನ್ನೂ ಪ್ರಚಲಿತದಲ್ಲಿವೆ -ಇವರೂ ಬದುಕಿದ್ದಾಗ ದಾಸೋಹಿಗಳಾಗಿದ್ದರು,ಈ ಮಿಂಚಂಚೆ ತಮಗೂ ಬಂದಿರಬಹುದು!] ಅಂತಹ ಸುಪುತ್ರರು ಬೇಕು ಕರ್ನಾಟಕಕ್ಕೆ, ಅಂತಹ ನಿಸ್ಪೃಹರು ಬೇಕು ನಮ್ಮ ದೇಶಕ್ಕೆ !

ಬಹಳ ಕೊರೆದುಬಿಟ್ಟೆನೇ? ಬೇಸರವಾಯಿತೇ? ಎಂದಿನಂತೆ ಒಂದು ಚಿಕ್ಕ ಹಾಡಿನೊಂದಿಗೆ ಮಂಗಳ ಹಾಡೋಣ ಅಲ್ಲವೇ?


ಬೆಳ್ಳಿ ಮೂಡಿತೋ ಕೋಳಿ ಕೂಗಿತೋ
ಭೂಮ್ಯಾಗೆ ಹಣವಚೆಲ್ಲಿ ಮಂಕ್ರಿಯಪ್ಪ ಕಾರೇರಿ ಬಂದ ................

ಮಳೆ-ಬಿಸಿಲು ಎಲ್ಲೆಲ್ಲೂ ಚೆಲ್ಲಾಡೈತೆ
ಸ್ಯಾಮಿಯಾನ್ದ ಮೇಲ್ ಮಂಜು ಹನಿ ಇಂಗೋಗೈತೆ
ಫ್ಲೆಕ್ಸು ಹಾರುತಿದೆ ಧೂಳು ಹರಡುತಿದೆ
ಜನತೆ ನೋಡುತಿದೆ ಹಣೆ ಚಚ್ಚಿಕೊಳ್ಳುತಿದೆ !

ಯಾಕ್ಲಾ ಲೂಸ್ ಮಾದ ಗುರ್ ಗುಟ್ತೀಯ್ಯಾ......?
ಎಣ್ಣೆ ಸಾಕಾಯಕಿಲ್ವಾ.....?

ರೈತರಿಗೆ ಹೊಸ ಸೌಲತ್ತನ್ನು
ಕೊಡುವೆನೆಂದು ಕಿತ್ತು ಭೂಮಿಯನ್ನು
ಕೈತೋರಿಸಿ ಅವರ್ಗೆ ಆಕಾಸ್ನಾಗೆ
ಹಾರೋದರು ಬೇಗ ಇಮಾನ್ದಾಗೆ
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಗಣಿಗಳಲಿ ಧಣಿಗಳು ಚೆನ್ನಾಗ್ಮೆದ್ದು
ಗಡಿಭಾಗದ ಜನಕ್ಕೊರ್ಸಿ ’ಜೇನುಕೈನ’
ಪೇಪರ್ನಾಗೆ ಮಿಂಚಿ ನಾ ನಾ ಥರ
ಆಗವ್ರೆ ಬಲು ಜೋರು ಶಿವನೇ ಹರ
ಓಹೋ ಹೋ ಹೋ ಹೋ ಹೋ ಆಹಾಹಾ......ಹೋ

ನೆರೆಕಂಬಳ ಗ್ಲೋಬಲ್ ಇನ್ವಸಟ್ಮಂಟು
ಎಲ್ಲಾದ್ರಾಗೂ ಉಂಟು ನೋಟಿನ ನಂಟು!
ತಮ್ಮೊಳಗೇ ತಾವ್ಯಾರು ತೋರ್ಸ್ಗಂಬುದು
ಈ ಇಸ್ಯಕ್ಕೊಂದಷ್ಟು ಖರ್ಚಾಕೋದು
ಯೇ ಹೇ ಹೇ ಹೇ ಹೇ ಹೇ ಆಹಾಹಾ........ಹೋ

ಏ ಏ ಎಲ್ಲಾಪ್ಪಾ ಇವ್ರೂ ಏಳ್ಲಾ ಮಾದ ಹೊತ್ತಾಯ್ತದೆ, ಹೊಟ್ಟೆ ಚುರುಗುಟ್ತೈತೆ ಮನೇಲಿ ಹಿಟ್ಟು ಆಗೋಗದೆ....ಮಂಕ್ರಿಯಪ್ಪೋರ್ನ ಕೇಳ್ದೆ ಒಸಿ ಇರು ಇನ್ನೊಂದ್ಕಿತಾ ಇಲೆಕ್ಸನ್ನಾಗೆ ಬತ್ತೀನಿ ಅಂತಂದ್ರು...ಹೋಗುದ್ಕೆ ಕೈಗೊಂದ್ ಕೆಂಪ್ ನೋಟ್ ಕೊಟ್ಟವ್ರೆ..ಭಾಳಾ ವಳ್ಳೆ ಜನ ನಮ್ಮ ಮಂಕ್ರಿಯಪ್ಪ್ನೋರು...ಊಟಿಲ್ಲಾ ಅಂದ್ರೆ ತಮ್ಮನೆತಾವ ಮಾಡ್ಕಂಡೋಗ್ಬುಡು ಅಂದ್ರು....ಏಳ್ರಪೋ .....ಹೇ ಹೇ...ಹೇ........

Thursday, June 24, 2010

ಐಷಾರಾಮೀ ಅವತಾರಿಗಳು!!




ಐಷಾರಾಮೀ ಅವತಾರಿಗಳು!!


ನಮ್ಮ ಸುತ್ತಲ ಹತ್ತು ರಾಜ್ಯಗಳಲ್ಲಿ ಹುಡುಕಿದರೆ ಸಿಗುವವರು ಹಲವು ಅವತಾರಿಗಳು. ಇವರೆಲ್ಲ ಅವತಾರಿಗಳಲ್ಲ ಬದಲಾಗಿ ನಿತ್ಯಾನಂದನದ್ದಲ್ಲದ ಇನ್ನೊಂದು ರೀತಿಯ ದಗಾಕೋರರು. ಅಂಥಾ ಬಾಬಾ ಇಂಥಾ ಬಾಬಾ ಅಂತೆಲ್ಲ ಕರೆದುಕೊಳ್ಳುವ ಇವರು ಅಸಲಿಗೆ ಯಾರಿಗೂ ಒಳಿತನ್ನು ಮಾಡುವ ಶಕ್ತಿಯನ್ನಾಗಲೀ, ಮಂತ್ರಶಕ್ತಿಯನ್ನಾಗಲೀ ಹೊಂದಿದವರಲ್ಲ. ಇವರ ಕೆಲಸ ಏನೆಂದರೆ ನಾಳೆ ಯಾವ ಪ್ಲಾನು ಹಾಕಿ ವಸೂಲಿ ಮಾಡುವುದು ಎನ್ನುವುದು. ಇವರಲ್ಲಿ ಕೆವರು ಕಾವಿ ವೇಷ ತೊಟ್ಟರೆ ಇನ್ನು ಕೆಲವರು ಶುಭ್ರವಾದ ರೇಷ್ಮೆ ಬಟ್ಟೆ ತೊಡುವವರು. ದಿನವಿಡೀ ಸ್ಥಳೀಯ ಮಾಧ್ಯಮಗಳಲ್ಲಿ ಶೋಭಿಸುತ್ತ ಜನಸಾಮಾನ್ಯರನ್ನು ಹಾದಿ ತಪ್ಪಿಸುವ ಬಕಗಳು!

ಯಾವ ಮಹಾತ್ಮನೂ ಈ ಜಗದಲ್ಲಿ ತಾನು ಮಹಾತ್ಮ ತಾನು ಅವತಾರಿ ಎಂದು ಘೋಷಿಸುವುದಿಲ್ಲ! ಅದನ್ನು ಸಮಾಜ, ಜನರು ಗುರುತಿಸುತ್ತಾರೆ. ಆದರೆ ಇಂತಹ ಬಾಬಾಗಳಲ್ಲಿ ಹಾಗಲ್ಲ ಇವರ ಆರಂಭಿಕ ಹಂತವೇ ಒಂಥರಾ ಉದ್ಭವ ಮೂರ್ತಿಯಂತೇ ರಾತ್ರೋರಾತ್ರಿ! ಸುತ್ತ ವ್ಯವಸ್ಥಿತ ಗುಂಪುಗಳನ್ನು ’ಸೇವೆಗೆ’ ಅಪಾಯಿಂಟ್ ಮಾಡಿಕೊಳ್ಳುವುದು! ಇಂತಹ ಸಾಲಿನಲ್ಲಿ ಅನೇಕರು ಇದ್ದರೂ ನಮಗೆ ಅತೀ ಹತ್ತಿರದ ಮತ್ತು ಅಬ್ಬರದ ಪ್ರಚಾರ ಪಡೆದ ಬಾಬಾ ಅಂದರೆ ’ಅಮ್ಮ-ಭಗವಾನ್’! ಯಕ್ಕಶ್ಚಿತ್ತ ಸಾಮಾನ್ಯ ಇನ್ಶೂರನ್ಸ್ ಕಾರ್ಯಕರ್ತನೊಬ್ಬ ತನಗೆ ಜ್ಞಾನೋದಯವಾಯಿತು ಎಂದು ಹೆಂಡತಿಯ ಸಮೇತ ಪೀಠಮಾಡಿಸಿ ಕೂತು ಆರ್ಥಿಕವಾಗಿ ದೇಶದುದ್ದಗಲ ಬೆಳೆದು ಹೆಮ್ಮೆರವಾಗಿ ನಿಂತಿರುವುದು! ತಮ್ಮ ಮನೆಯ ಅಪ್ಪ-ಅಮ್ಮನನ್ನೇ ವೃದ್ಧಾಶ್ರಮದಲ್ಲಿಟ್ಟಿರುವ ಅನೇಕ ಭಕ್ತರು ಈ ಅಮ್ಮ-ಭಗವಾನ್ ಎಂದು ಅವರೇ ಹೇಳಿಕೊಟ್ಟು ಕರೆಸಿಕೊಳ್ಳುವವರನ್ನು ಆರಾಧಿಸುವುದು. ಮೂಲತಃ ಆಂಧ್ರದವನಾದ ಈ ಮನುಷ್ಯನ ಪರಿವಾರ ಗಣದಲ್ಲಿ ಗಡಿ ಭಾಗದ ಮತ್ತು ಆಂಧ್ರಮೂಲದ ಜನಗಳೇ ಜಾಸ್ತಿ! ಇದು ’ಕಲ್ಕಿ’ಯ ಆವಾಹನೆ !

’ನೇಮಂ’ ಆಶ್ರಮವೆಂಬ ಪಂಚತಾರಾ ವ್ಯವಸ್ಥೆಯ ಕಟ್ಟಡ ಕಟ್ಟಿಕೊಂಡು ಅಲ್ಲಿ ಬಗೆಬಗೆಯ ಹೊಸ ಹೊಸ ವಿನ್ಯಾಸದ ಪೀಠಗಳನ್ನು, ಆಸನಗಳನ್ನು, ಪಲ್ಲಂಗಗಳನ್ನು ಮಾಡಿಸಿಕೊಂಡು ಗಟ್ಟಿಯಾಗಿ ತಳವೂರಿ ಕೂತಿದ್ದಾನೆ ಈ ಮನುಷ್ಯ. ಪ್ರಾರಂಭದಲ್ಲಿಯ ಛಾಯಚಿತ್ರಗಳನ್ನು ನೀವು ನೋಡಬೇಕು, ಆಗ ಬರೇ ಸಾದಾ ಬಿಳೀ ಗ್ರನೈಟು ಕಲ್ಲು ಹಾಸಿದ ನೆಲದ ಕಟ್ಟಡ ಬಾಗಿಲ ಮುಂತೆ ನಿಂತು ಹಳದಿ ಬಟ್ಟೆ ಧರಿಸಿ, ತಲೆಗೂ ಅದನ್ನೇ ಕಟ್ಟಿಕೊಂಡು, ತನ್ನೆರಡೂ ಕೈಗಳನ್ನು ಮುಂದೆ ಚಾಚಿ ನಿಂತು ಪೋಸು ಕೊಟ್ಟಿದ್ದನ್ನು ಅನೇಕರು ತಪ್ಪಾಗಿ ನಮಗೆ ತಿಳಿಹೇಳಿದ್ದು " ಕಲ್ಕಿ ಬಂದಿದ್ದಾರೆ, ಅಗೋ ನೋಡಿ ನಿಮ್ಮ ಕಷ್ಟಗಳನ್ನೆಲ್ಲ ನನ್ನ ಕೈಗೆ ಹಾಕಿ ಎಂದು ಕರೆಯುತ್ತಾರೆ" ಎಂದು! ಅಲ್ಲಿ ಆತ ಕೈ ಚಾಚಿದ್ದು ಬನ್ನಿ ಭಕ್ತರೇ ಮತ್ತಷ್ಟು ಜನರನ್ನು ಕರೆತನ್ನಿ, ಹಣ-ಕಾಣಿಕೆ ನೀಡಿ, ಪೂಜೆ ಮಾಡಿ, ಆರತಿ ಎತ್ತಿ ಎಂದು! --ಇದು ನಕಲಿ ಕಲ್ಕಿಗೆ ಆಸನ


ಹಲವರು ಜನ ಪ್ರತಿಮೆಗಳನ್ನಿಟ್ಟು ಪೂಜಿಸಿದರು, ಫೋಟೋ ಇಟ್ಟು ಧ್ಯಾನಿಸಿದರು. ಮನೆಗಳಲ್ಲಿ,ಕಛೇರಿಗಳಲ್ಲಿ,ಆಸ್ಪತ್ರೆಗಳಲ್ಲಿ,ಉದ್ದಿಮೆಯ ಜಾಗಗಳಲ್ಲಿ, ಸ್ಕೂಲು-ಕಾಲೇಜುಗಳಲ್ಲಿ ಎಲ್ಲಿಲ್ಲ ಹೇಳಿ? ಪ್ರಾಯಶಃ ಗಣಕ ಯಂತ್ರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾರವಾದ ವಸ್ತುಗಳಲ್ಲಿ ಈ ಗಂಡ-ಹೆಂಡಿರ ಫೋಟೋ ಪ್ರಮುಖ ಸ್ಥಾನ ವಹಿಸಿದೆ! ಫೋಟೋಗಳಿಗೆ ಚಿಕ್ಕ ಪೀಠಗಳು, ಬಣ್ಣದ ಹಾರಗಳು, ಹೂವುಗಳು, ಸುಗಂಧ ದ್ರವ್ಯಗಳು, ಫೋಟೋಗಳಲ್ಲಿ ಅವರು ಕಂಡುಬಿಟ್ಟರೆ ಸಾಕು ಅಡ್ಡಡ್ಡ ಉದ್ದಂಡ ನಮಸ್ಕರಿಸುವವರು, ಪ್ಯಾಂಟಿನಜೇಬಿನಲ್ಲಿಯೇ ಕೈಮುಗಿಯುವ ಪ್ರತಿಷ್ಠೆಯ ಜನರು, ಹಾಲು ಹರಿಯುತ್ತಿದೆ-ಜೇನು ತೊಟ್ಟಿಕ್ಕುತ್ತಿದೆ ಎನ್ನುವವರು, ಅರಿಶಿನ-ಕುಂಕುಮ ಉದುರುತ್ತಿದೆ ಎನ್ನುವವರು ಒಂದೇ ಎರಡೇ -ಜನ ಮಳ್ಳೋ ಜಾತ್ರೆ ಮಳ್ಳೋ ಎಂದಿದ್ದು ಇದಕ್ಕೇ ಇಅರಬೇಕು--ಇದು ಈ ಕಲ್ಕಿಗೆ ಪಾದ್ಯ

ಜನ ತರಹೇವಾರಿಯಲ್ಲಿ ಅನೇಕರನ್ನು ಸೇರಿಸುವುದು, ಅಲ್ಲಲ್ಲಿ ಮೀಟಿಂಗ್ ಸಂಘಟಿಸುವುದು, ಕಲ್ಕಿಯ ಬಗ್ಗೆ ಬಹಳ ವಾಕ್ಚಾತುರ್ಯ ಉಪಯೋಗಿಸಿ ವಟಗುಡುವ ಹದಿಹರೆಯದ ಸುಂದರ ಹೆಣ್ಣು ಆಚಾರ್ಯರುಗಳು-ಪ್ರಾಚಾರ್ಯರುಗಳು, ಈ ಆಚಾರ್ಯರುಗಳನ್ನು ನೋಡಲು ಹಸಿದ ಕಣ್ಣು-ಮೈಮನ ಹೊತ್ತು ಬಂದ ಪಡ್ಡೆ ಹುಡುಗರು-ಹೈಕಳು-ವಿಷಯಲಂಪಟರು ಛೆ ಛೆ ಹೇಳತೀರದು....ಕಲ್ಕೀ ಗುಣಗಾನ ವೈಭವ, ಕಣ್ಣಾರೆ ನೀವು ನೊಡಬೇಕು. ಅಲ್ಲಿ ಬಂದವರಿಗೆಲ್ಲ ಕೆಲವೊಮ್ಮೆ ತಿಂಡಿ-ಊಟ, ತರಾವರಿ ವ್ಯವಸ್ಥೆ!--ಇದು ಡೂಪ್ಲಿಕೇಟ್ ಕಲ್ಕಿಗೆ ಅರ್ಘ್ಯ

ಮನೆಗಳಲ್ಲಿ ಮಹಿಳೆಯರದೇ ಒಡ್ಡೋಲಗ. ಹಾಲಿನ ಅಭಿಷೇಕ, ಪಂಚಾಮೃತದ ಅಭಿಷೇಕ, ಎಳೆನೀರಿನ ಅಭಿಷೇಕ,ದೇವರಿಗೆ ಹೇಳುವ ಮಂತ್ರಗಳನ್ನು ಪುರೋಹಿತರಿಂದ ಹೇಳಿಸಿ ಅಭಿಷೇಕ---ಇತಿ ಸ್ನಾನಂ||

ಸ್ನಾನಾನಂತರೇ ಆಚಮನೀಯಂ [ಸ್ನಾನದ ತರುವಾಯ ಬಾಯಿತೂಳೆಯಲು ನೀರು] ಇದಕ್ಕೆಲ್ಲ ಕಲ್ಕಿಗೆ ಉಪಯೋಗಿಸುವುದು ಪನ್ನೀರು, ರೋಸ್ ವಾಟರ್, ವಿ ಐ ಪಿ ಅವತಾರಿಗೆ ತಕ್ಕುದಾದ ವ್ಯವಸ್ಥೆ ಇಡಬೇಕಷ್ಟೇ ?

ಭೂಷಣಕ್ಕೆ ಅಂದರೆ ತೊಟ್ಟುಕೊಳ್ಳಲು ರೇಷ್ಮೆ ವಸ್ತ್ರಗಳು, ದಿರಿಸುಗಳು, ಅಮ್ಮಗೆ ತುಟ್ಟಿಯ ರೇಷ್ಮೆ ಸೀರೆ,ಝರಿ ಶಾಲು ಇತ್ಯಾದಿಗಳು ಭಕ್ತರಮನೆಗಳಲ್ಲಿ! ಅವುಗಳನ್ನು ’ನೇಮಂ’ ಗೆ ಹೋಗುವಾಗ ಕೊಂಡೊಯ್ದು ತಲ್ಪಿಸುವುದು! ಫಾರಿನ್ ಸೆಂಟ್ ಗಳನ್ನೂ ಕೊಡುತ್ತಾರೆ, ಭುವಿಗೆ ಬಂದ ಕಲ್ಕಿಯನ್ನು ಇಲ್ಲೇ ಉಳಿಸಿಕೊಳ್ಳಬೇಕಲ್ಲ! ಅದಕ್ಕೇ ಆದರೆಕಲ್ಕಿ ಕಾಲ ಕಾಲಕ್ಕೆ ಎಡಮುದುಕು ಚಹರೆ ತೋರುತ್ತಿದ್ದಾರಲ್ಲ! ಕಲ್ಕಿ ಬಹಳಕಾಲ ಇರುವುದಿಲ್ಲವೇ? ಛೆ ಛೆ ಅವತಾರಿಗಳು ತಮ್ಮ ಅವತಾರಗಳನ್ನು ಬಂದಕಾರಣ ಮುಗಿದ ಮೇಲೆ ಮುಗಿಸಿಹೊರಡುತ್ತಾರಲ್ಲವೇ? ಹಾಗಾದರೆ ೨೦೧೨ಕ್ಕೆ ಪ್ರಳಯವಾಗುವುದು ಗ್ಯಾರಂಟಿ ಅಂದಾಯ್ತು ಅಲ್ಲವೇ? ಆದರೆ ಒಂದು ಯುಗಕ್ಕೆ ನಾಲ್ಕು ಪಾದಗಳು ಎನ್ನುತ್ತದೆ ವೇದ. ಕಲಿಯುಗದ ಪ್ರಥಮಪಾದದಲ್ಲಿ ನಾವಿದ್ದೇವೆ, ಅಂದಮೇಲೆ ಪ್ರಳಯವೆಲ್ಲಿ ಬಂತು? ಒಹೋ ೨೦೧೨ಕ್ಕೆ ಪ್ರಳಯ ಎನ್ನುವುದೆಲ್ಲ ಕಟ್ಟು ಕಥೆ! ನಮ್ಮ ಈ ಕಲ್ಕಿ ಹತ್ತಿರ ಸದ್ಯಕ್ಕೆ ಖಡ್ಗ ಮತ್ತು ಬಿಳೇ ಕುದುರೆ ಎಲ್ಲ ಇಲ್ಲವಲ್ಲ? ಅದರ ತಯಾರಿ ಇನ್ನೂ ಆಗಿಲ್ಲವೆಂತಲೋ ಬಿಡಿ.

ಮಾಲೆಗಳೆಂದರಾಯಿತೆ ಬಹುಶಃ ತಿರುಪತಿ ತಿಮ್ಮಪ್ಪನಿಗೂ ಇಂತಹ ಮಾಲೆಗಳು ಸಿಗಲಿಕ್ಕಿಲ್ಲ! ಅಷ್ಟು ಮಾಲೆಗಳು, ಬಣ್ಣ ಬಣ್ಣದ ಹೂವುಗಳಿಂದ ಮಾಡಲ್ಪಟ್ಟವು, ರೇಷ್ಮೆ ಗೂಡುಗಳಿಂದ ಮಾಡಲ್ಪಟ್ಟವು ಎಲ್ಲವನ್ನೂ ಕಲ್ಕ್ಯಾರ್ಪಣಗೈಯ್ಯುವುದು ಕಲ್ಕಿ ಭಕ್ತರ ಬಯಕೆ. ಅದರಲ್ಲೂ ಕಲ್ಕಿ ಮೊದಲು ಹೇಳಿಕೊಟ್ಟ ಶ್ಲೋಕವೇ ಬೇರೆ, ಈಗ ಅನುಗ್ರಹಿಸುವ ’ಮೂಲಮಂತ್ರ’ವೆಂಬ ಶ್ಲೋಕವೇ ಬೇರೆ. ಮೂಲಮಂತ್ರದ ಅರ್ಥವೇ ಗೊತ್ತಿರದ ಇಂಥವ್ರಿಗೆ ಮೂಲಮಂತ್ರ ಎಂಬ ಶಬ್ಧದ ಪ್ರಯೋಗಮಾಡಬೇಕೆಂಬುದು ಗೊತ್ತು! ಇದು ನಿತ್ಯಾನಂತನಿಂದ ಬಳುವಳಿ ಪಡೆದಿದ್ದಿರಬಹುದು!
ಮೊದಲು ಅವರ ಶ್ಲೋಕ ಹೀಗೆನ್ನುತ್ತಿತ್ತು

ಭಗವತಿ ಪದ್ಮಾವತೀ ಸಮೇತ ಕಲ್ಕಿ ಭಗವತೇ ನಮಃ |

ಆದರೆ ಅದು ನಗೆಪಾಟಲಾದಮೇಲೆ ಹೀಗೆ ಪರಿಷ್ಕರಿಸಲಾಗಿದೆ--

ಭಗವತೀ ಸಮೇತ ಕಲ್ಕಿ ಭಗವತೇ ನಮಃ |

ಇದುವರೆಗೆ ಯಾವ ಗುರುವೂ ತನ್ನನ್ನೇ ಹೀಗೆ ಜಪಿಸಿ ಎಂದು ಹೇಳಿಲ್ಲ-ಹೇಳಿದ್ದು ಕೇಳಿಲ್ಲ! ಆದಿ ಶಂಕರರನ್ನೂ ಸೇರಿದಂತೆ ಎಷ್ಟೊಂದು ಜನ ಸಾಧು-ಸಂತರು ಬಂದರೂ ಅವರೆಲ್ಲ ತನ್ನನ್ನೇ ಜಪಿಸಿ ಎನ್ನಲಿಲ್ಲ. -ಹೀಗೇ ಇದು ಈ ಕಲ್ಕಿಗೆ ಮಾಲಾರ್ಪಣೆ

ಧೂಪ ದೀಪ ಹೇಗೂ ನಮ್ಮ ಹಿಂದೂ ಪೂಜೆಗಳಲ್ಲಿ ಅತಿ ಸಹಜ. ಭಕ್ತರೆನಿಸಿಕೊಂಡವರು ಹಾರುತ್ತಾ ಕುಣಿಯುತ್ತಾ ಆರತಿ ಮಾಡುವವರಿದ್ದಾರೆ, ಅಮ್ಮ-ಭಗವಾನರ ಕೃಪೆಯಿಂದಲೇ ತಾವು ಬದುಕಿದೆವು ಅನ್ನುವವರಿದ್ದಾರೆ. ಅವರಿಂದಲೇ ನಮ್ಮ ಕಷ್ಟಗಳೆಲ್ಲ ಪರಿಹಾರವಾದವು ಎಂದು ಗೋಳೋ ಎಂದು ಅಳುವವರಿದ್ದಾರೆ! ನಮ್ಮ ದುಃಖತಪ್ತ ಜನರಿಗೆ, ಕಷ್ಟದಲ್ಲಿರುವ ಜನರಿಗೆ ಸಾಂತ್ವನ ಹೇಳಲು,ಧೈರ್ಯತುಂಬಲು ಕೆಲವು ಜನ ಬೇಕು. ಇದನ್ನೇ ನಾಯ್ಡು ದುರುಪಯೋಗ ಮಾಡಿಕೊಂಡು ಕಲ್ಕಿಯಾದ! ಒನ್ಸ್ ವೀಕನೆಸ್ ಈಸ್ ಅದರ್ಸ್ ಗೇನ್ !


ಇಷ್ಟು ಸಾಕು ಎನಿಸುತ್ತದೆ,

ಅಭ್ಯುತ್ಥಾನಮ್ ಸ್ವಾಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ|
ಸ್ನಾನಂ ವಾಸೋ ಭೂಷಣಾಂಗಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ||

ಈ ರೀತಿ ಸುಮಾರಾಗಿ ನಮ್ಮ ಸಂಸ್ಕೃತದಲ್ಲಿ ಹೇಳುವಂತೆ ಷೋಡಷೋಪಚಾರ ಮಾಡಿದ್ದೇನೆ. ನನ್ನ ಪ್ರೀತಿಯ ಮಹಾಜನಗಳೇ ಕಲ್ಕಿ ಭೂಮಿಯ ಮೇಲೆ ಇನ್ನೂ ಹುಟ್ಟಿಲ್ಲ! ಇಷ್ಟು ಬೇಗ ಹುಟ್ಟುವುದೂ ಇಲ್ಲ! ಒಂದೊಮ್ಮೆ ಆತ ಹುಟ್ಟಿದ್ದರೂ ಪ್ರಬುದ್ಧ ಸ್ಥಿತಿಗೆ, ಪ್ರಕಾಶಮಾನ ಸ್ಥಿತಿಗೆ ಬರುವುದು ಕಲಿಯುಗದ ನಾಲ್ಕನೇ ಪಾದದಲ್ಲಿ! ಹೀಗಾಗಿ ಯಾರೋ ದಾರಿ ಹೋಕರು ಟವೆಲ್ ಹಾರಿಸಿ ತಾನೇ ಕಲ್ಕಿ ಬಂದಿದ್ದೇನೆ-ಜನರ ಕಷ್ಟಗಳನ್ನೆಲ್ಲ ನುಂಗಿಹಾಕುತ್ತೇನೆ ಅಂದಾಗ ಹೋಗಿ ದಬಕ್ಕನೆ ಬೋರಲು ಬೀಳುವುದು ಬಹಳ ವಿಷಾದನೀಯ, ಈ ವಿಷಯದಲ್ಲಿ ಈ ಕಲ್ಕಿ ಲಕ್ಕಿ! ದಿನವೂ ಐಷಾರಾಮೀ ಬದುಕನ್ನು ಬದುಕುತ್ತಿರುವ ಪಂಚತಾರಾ ದಂಪತಿ ಅಮ್ಮ-ಭಗವಾನ್ ಎನಿಸಿಕೊಳ್ಳಲು ನಾಚಿಕೆ ಪಡುತ್ತಿಲ್ಲ ನೋಡಿ, ನೀವೂ ಹೋಗಬಹುದು-ಆರತಿ ಮಾಡಬಹುದು! ನೇಮಂ.......ನೇಮಂ ! ಶಿಸ್ತಾಗಿ ಇಸ್ತ್ರಿ ಮಾಡಿದ ಗರಿಗರಿಯಾದ ರೇಷ್ಮೆ ಬಟ್ಟೆಗಳನ್ನು ತೊಟ್ಟು ಗಂಡ-ಹೆಂಡತಿ ತಮ್ಮ ಕಾಲ್ಕೆಳಗೆ ಹಲವರನ್ನು ಅಡ್ಡಬೀಳಿಸುವ ಜಾಗವೇ ನೇಮಂ ! ಪುಣ್ಯಾತಗಿತ್ತಿ ಅಮ್ಮ ಎನಿಸಿಕೊಂಡವಳಿಗೆ ಹುಬ್ಬು ಡ್ರೆಸ್ ಮಾಡಲು ಅದ್ಯಾವ ಹೆಣ್ಣುಮಗಳಿದ್ದಳೊ ಗೊತ್ತಿಲ್ಲ. ಅಂತೂ ಈ ದಂಪತಿ ಪಟ್ಟಾಗಿ ಬಂದು ಆಸೀನರಾದರೆ ಅಲ್ಲಿ ಬಹಳ ಮಂದಿ ತಮ್ಮ ತನವನ್ನೇ ಕಳೆದುಕೊಳ್ಳುತ್ತಾರೆ-ಅದೇ ನೇಮಂ! ಅಶ್ರಮದ ಒಳಗೆ ನಡೆಯುವ ಹದಿಹರೆಯದ ಹೆಣ್ಣು ಆಚಾರ್ಯರುಗಳ ನೇಮಂ ಎಲ್ಲ ಇನ್ನೂ ಹೊರಬರುವುದರಲ್ಲಿದೆ, ಕಾಯುತ್ತಿರಿ ಇದು ಮತ್ತೊಂದು ನಿತ್ಯ ಆನಂದ ಪರಮಹಂಸ ಸ್ಥಿತಿ!

ಉಪಚಾರದ ಕೊನೆಯ ಘಟ್ಟ- ಪ್ರಣಾಮ-ಇದನ್ನು ಮಾತ್ರ ಗೋವಿಂದನಿಗೆ ಇಟ್ಟುಬಿಡೋಣ, ಯಾಕೆಂದರೆ ಎಲ್ಲಿಯವರೆಗೆ ನಾಮ ಹಾಕಿಸಿಕೊಳ್ಳುವವರಿರುತ್ತಾರೋ ಅಲ್ಲೀವರೆಗೆ ನಾಮಹಾಕುವವರೂ ಇರುತ್ತಾರಂತೆ! ನಾಮವನ್ನೇ ಪ್ರಧಾನವಾಗಿ ಹೊಂದಿದ ತಿಮ್ಮಪ್ಪಾ ನಮಗೆ ಮಾತ್ರ ಬೇರೆಯವರು ನಾಮಹಾಕದಂತೆ ಕಾಪಾಡಪ್ಪಾ ಎಂದು ಅವನಿಗೇ ನಮಿಸಿಬಿಡೋಣ ಎಂಬುದು ದೃಢವಾದ ತೀರ್ಮಾನ. ಹೇ ಭಗವಂತ ನೀನು ಕಳೆದ ಒಂಬತ್ತು ಅವತಾರಗಳಲ್ಲೂ ಪಟ್ಟ ಪಾಡು ಅಷ್ಟಿಷ್ಟಲ್ಲ, ನಿನ್ನ ಹತ್ತನೆಯ ಅವತಾರದ ಜಾಗಕ್ಕೆ ನಾವು ಭೂಲೋಕದ ಮಂದಿ ಈಗಾಗಲೇ ಒಬ್ಬನನ್ನು ಕುಳ್ಳಿರಿಸಿಬಿಟ್ಟಿದ್ದೇವೆ. ಇಲ್ಲೀವರೆಗೆ ನೀನು ನಮಗೆ ನಾಮ ಹಾಕಿಸುತ್ತಿದ್ದೆಯಲ್ಲ ಈಗ ನಿನಗೂ ಭೂಸುರರ ಬಿಸಿ ತಟ್ಟಲಿ ಎಂಬ ಸಲುವಾಗಿ ನಾಮ ಹಾಕಿಬಿಟ್ಟಿದ್ದೇವೆ! ಹೇಗೆ ಆಗದೇ? ನೀನು ಕಾವೇರೀ ತೀರದಲ್ಲಿ ಮುಂದೆಂದೋ ಬರುವೆಯೆಂದು ಹೇಳುತ್ತಾರೆ. ಆದರೆ ಸದ್ಯ ನೀನು ಬಂದರಂತೂ ಜನ ಜಾಗದಲ್ಲಿರುವ ಈ ಕಲ್ಕಿಯಿಂದ ’ಪ್ರಸಾದ’ಪಡೆದು ನಿನ್ನನ್ನೇ ಡೂಫ್ಲಿಕೇಟು ಎಂದು ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ! ಇಲ್ಲಿ ಜನ ಹಾಗೆ ’ಪ್ರಸಾದ’ ಸ್ವೀಕರಿಸುವಾಗ ನೋಡಲಿರಲಿ ಅಂತ ಹುಡುಕಿದರೆ ನಮ್ಮ ಲೋಕಾಯುಕ್ತರೂ ಬಿಟ್ಟು ಬಿಟ್ಟು ಹೋಗುತ್ತಿದ್ದಾರೆ, ನಾವು ಅಸಹಾಯರು ದೇವಾ... ತಿರುಪತೀ ವೆಂಕಟರಮಣ ಸ್ವಾಮೀ ಪಾದಾರವಿಂದಕ್ಕೆ ಗೋವಿಂದಾ....ಗೋವಿಂದಾ.......ಗೋವಿಂದ!!

Tuesday, June 22, 2010

ಹೀಗೆರಡು ಕಥೆಗಳು

ಹೀಗೆರಡು ಕಥೆಗಳು

ತಂಪಿನ ವಾತವರಣದಲ್ಲಿ ಕಾಪಿ ಕುಡಿಯುತ್ತ ಕುಳಿತ ಶಾಂತಾಳಿಗೆ ಹಳೆಯ ನೆನಪುಗಳು ಕಾಡಿದವು. ಟಿವಿಯಲ್ಲಿ ಹಲವು ಸಲ ಕಂಡಿದ್ದರೂ ತನ್ನ ಪ್ರೀತಿಯ ಪ್ರಶಾಂತ್ ಅದೇ ಥರದ ವ್ಯಕ್ತಿ ಅಂತ ತಿಳಿದಿರಲಿಲ್ಲ ಅವಳಿಗೆ. ಜೀವನ ಹೂ ಬನವಾಗಿತ್ತು. ಬಗೆಬಗೆಯ ಡ್ರೆಸ್ ಗಳು, ವಿವಿಧ ಲಿಪ್ ಸ್ಟಿಕ್-ಮೇಕಪ್ ಸಾಮಗ್ರಿಗಳು, ತರಾವರಿ ಚಪ್ಪಲಿಗಳು, ನೂರೆಂಟು ನಮೂನೆಯ ಆಭರಣಗಳು, ಲೇಟೆಸ್ಟ್ ಸೆಲ್ ಫೋನ್ ಹ್ಯಾಂಡ್ ಸೆಟ್ ಗಳು ಇವೆಲ್ಲವನ್ನೂ ಪಡೆದು ರಾಣಿಯಂತೆ ಮೆರೆದಿದ್ದಳು! ಅಪ್ಪ-ಅಮ್ಮ ಅಡ್ಡಿ ಮಾಡಿರಲಿಲ್ಲ, ಮಗಳು ಏನು ಮಾಡಿದರೂ ಸೈ ಎನ್ನುವ ಪರಿಪಾಟದವರಾಗಿದ್ದರು. ಮಗಳು ಕಾಲೇಜಿನಲ್ಲಿ ಏನು ಓದಿದಳು, ಎಲ್ಲಿ ಕುಳಿತಳು, ಯಾಕೆ ಇಷ್ಟು ತಡವಾಗಿ ಮನೆ ಸೇರಿದಳು--ಇದನ್ನೆಲ್ಲ ವಿಚಾರಿಸುವ ಜನವೇ ಅಲ್ಲ ಅವರು! ಹೀಗಾಗಿ ತಾನು ಗಂಡು ಬೀರಿಯಾಗೇ ಬೆಳೆದಳು! ಅಂದದಲ್ಲಿ ಯಾವ ಸಿನಿಮಾ ಹೀರೋಯಿನ್ ಗೂ ಕಮ್ಮಿ ಇರಲಿಲ್ಲ, ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಸುಶ್ಮಿತಾ ಸೇನ್ ಎಲ್ಲರ ಒನಪು ಒಯ್ಯಾರದ ಜೊತೆಗೆ ಬಿಪಾಷಾ ಬಸುವಿನ ಮಾದಕತೆ ತುಂಬಿಕೊಂಡವಳು, ಇದನ್ನೆಲ್ಲ ತನ್ನ ಶಾಶ್ವತ ಬೆಡಗು ಎಂದು ಭಾವಿಸಿ ಅನೇಕ ಹುಡುಗರ ನಿದ್ದೆಗೆಡಿಸಿದ್ದಳು. ಪಡ್ಡೆ ಹೈಕಳು ಲೋ ಜೀನ್ಸ್ ತೊಟ್ಟು ನಡೆವಾಗ ಅವರ ತೆಳು ಸೊಂಟಕ್ಕೆ ಮಾರುಹೋಗುತ್ತಿದ್ದ ತಾನು ಅನೇಕರನ್ನು ಬಯಸುವ ಮನೋಭಾವನೆ ಹೊಂದಿದ್ದಳು. ರಮೇಶನ ಕೂದಲು ಚೆನ್ನಾಗಿದ್ದರೆ ನವೀನನ ಕಣ್ಣು ಚೆನ್ನಾಗಿತ್ತು, ರೋಹಿತ್ ನ ಎತ್ತರ ಇಷ್ಟವಾದರೆ ಪ್ರತೀಕ್ ನ ಮುಖ ತುಂಬಾ ಮುಗ್ಧವಾಗಿತ್ತು. ಯಾರನ್ನೂ ದೂರವಿಡಲು ಮನಸಾಗುತ್ತಿರಲಿಲ್ಲ. ಕೊನೆಗೊಮ್ಮೆ ಎಲ್ಲವನ್ನೂ ಒಬ್ಬನಲ್ಲೇ ಪಡೆಯಲಾಗದಿದ್ದರೂ ಇರಲಿ ಎಂದು ಪ್ರಶಾಂತ್ ನನ್ನು ಪ್ರೀತಿಸಲು ಪ್ರಾರಂಭಿಸಿದಳು.

ಅತ್ತ ಪ್ರಶಾಂತನ ಕಥೆಯೇ ಬೇರೆ ಇದ್ದುದು ಇವಳಿಗೆ ತಿಳಿದಿರಲಿಲ್ಲ. ಅದೊಂದು ಬಣ್ಣದ ಚಿಟ್ಟೆ ಎಂಬುದು ಅರಿವಿಗೆ ಬಂದಿರಲಿಲ್ಲ, ಹೀಗಾಗಿ ಹೋಟೆಲ್, ಐಸ್ ಕ್ರೀಮ್ ಪಾರ್ಲರ್, ಸೈಬರ್ ಕೆಫೆ,ಪಾರ್ಕು ಅಂತೆಲ್ಲ ಹಲವು ಕಡೆ ಜೊತೆಗೇ ಓಡಾಡುತ್ತಿದ್ದಳು. ದಿನಗಳೆದಂತೆ ಅವನಲ್ಲಿ ತುಂಬಾ ಅನುರಕ್ತನಾಗಿದ್ದಳು. ಅವನ ಜೊತೆಗಿರುವಾಗ ತಾನು ಏನುಮಾಡುತ್ತಿದ್ದೇನೆ ಎಂಬುದನ್ನೇ ಮರೆತುಬಿಡುತ್ತಿದ್ದಳು.

ಹೀಗೇ ಒಂದು ದಿನ ದೂರದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಿಬರೋಣವೆಂದ ಪ್ರಶಾಂತನಿಗೆ ಅಂಟಿಕೊಂಡು ಹೊರಟೇ ಬಿಟ್ಟಳು. ಮೈಸೂರಿನಲ್ಲಿ ರಾತ್ರಿ ಉಳಿದು ಮಾರನೇದಿನ ಹೋಗೋಣವೆಂಬ ಆತನ ಒತ್ತಯಾಕ್ಕೆ ಒಲ್ಲೆ ಎನ್ನಲಾಗಲಿಲ್ಲ. ಆ ರಾತ್ರಿ ಆ ರಾತ್ರಿ ಅವಳು ಬಯಸಿದ ರಾತ್ರಿಯೂ ಆಗಿತ್ತು. ಅಂದು ಆತ ಲೊಚ ಲೊಚನೆ ಕೊಟ್ಟ ಸಿಹಿ ಮುತ್ತುಗಳ ನೆನಪಾದರೆ ಇಂದಿಗೂ ಮೈ ರೋಮಾಂಚನವಾಗುತ್ತದೆ! ಆತನ ಬರಿಮೈಯ ಬಿಸಿಯಪ್ಪುಗೆ, ಉದ್ವೇಗದ ಪ್ರೀತಿ, ಆಮೇಲೆ ಅವನು ಕೊಟ್ಟ ಶರೀರ ಸುಖ ಇದನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ.

ಮರಳಿ ತಿಂಗಳಾಗುವಾಗ ಇದ್ದಕಿದ್ದಲ್ಲೇ ವಾಂತಿಗೆ ಶುರುವಾಯಿತು. ಚಿಕಿತ್ಸೆಗಾಗಿ ವೈದ್ಯರನ್ನು ಕಂಡಾಗ ಅವರು ಕುರುಹು ನೋಡಿ ಪುನಃ ಪರೀಕ್ಷೆಮಾಡಿ ಬಸುರಿ ಎಂದು ಹೇಳಿಬಿಟ್ಟರು. ಅಲ್ಲಿಯವರೆಗೆ ಜೊತೆಗಿದ್ದ ಪ್ರಶಾಂತ ಆವತ್ತಿನಿಂದ ಜೊತೆಯನ್ನೇ ತೊರೆದ. ಎಲ್ಲೂ ಹೇಗೂ ಸಿಗದೇ ಕಣ್ಮರೆಯಾದ. ತಿಂಗಳದಿನ ದಿನವೂ ಎಲ್ಲೋ ಹೇಗೋ ತನ್ನೊಂದಿಗೆ ಸುಖಿಸುತ್ತಿದ್ದ ಆತನಿಗೆ ಬಸುರಿ ಎಂಬ ಸುದ್ದಿ ತಿಳಿದ ತಕ್ಷಣ ತಾನು ಬೇಡವಾಗಿದ್ದಳು.

ಕಥೆಯನ್ನು ತಿಳಿಯದ ಮನೆಯಲ್ಲಿ ಮಗಳಿಗೆ ಯಾಕೋ ಆರೋಗ್ಯ ಸರಿಯಿಲ್ಲವೆಂದಷ್ಟೇ ಗೊತ್ತಿತ್ತು. ಅದೇನು ಮಹಾ ದಿನವೆರಡು ದಿನಗಳಲ್ಲಿ ಮಾಮೂಲೀ ಸರಿಹೋಗುತ್ತದೆ ಎಂದುಕೊಂಡಿದ್ದರು. ಪಾಪ ಅವರಿಗೇನು ಗೊತ್ತು ರಾಣಿಯ ಮೇಜವಾನಿ!ಆಮೇಲೆ ನಡೆದಿದ್ದೇ ಬೇರೆ. ಎಚ್ಚರ ತಪ್ಪಿ ಬಿದ್ದಿದ್ದ ತನ್ನನ್ನು ಯರೋ ಆಸ್ಪತ್ರೆಗೆ ಸೇರಿಸಿದ್ದರು. ಚೀಲದಲ್ಲಿರುವ ಮಾಹಿತಿಯಿಂದ ಮನೆಗೆ ತಿಳಿಸಿ ವೈದ್ಯರು ಅಪ್ಪ-ಅಮ್ಮನನ್ನು ಕರೆಸಿದ್ದರು. ವಿಷಯ ತಿಳಿದ ಅವರು ಕಕ್ಕಾವಿಕ್ಕಿಯಾಗಿ ಕುಸಿದು ತಲೆಗೆ ಕೈಹಚ್ಚಿ ಕುಳಿತಿದ್ದರು. ತನ್ನೊಂದಿಗೆ ಕೇಳಿದರು. ಪರಿಸ್ಥಿತಿ ತನ್ನ ಕೈಮೀರಿ ಹೋಯಿತು ಎಂದು ಆಗ ಅರಿವಿಗೆ ಬಂದ ತನಗೆ ಅಬಾರ್ಷನ್ ಮಾಡಿಸಲಾಯಿತು. ಜೊತೆಗೆ ವೈದ್ಯರು ತನಗೆ ಎಚ್.ಐ.ವಿ ಸೋಂಕು ತಗುಲಿರುವುದಾಗಿ ಹೇಳಿದರು. ರಾಣಿಯಂತೆ ಮೆರೆದ ತಾನು ಶರೀರದ ಕಸುವನ್ನೆಲ್ಲ ಕಳಕೊಂಡು ದಾಸಿಯಂತೆ,ಭಿಕ್ಷುಕಿಯಂತೆ ಕುಬ್ಜಳಾಗಿಬಿಟ್ಟಿದ್ದಳು.

-------------೦------------

ಬಹಳ ಜನ ಸೇರಿದ್ದರು ಅಲ್ಲಿ. ಯಾಕೆ ಎಂಬುದು ಹಿಂದೆ ನಿಂತವರಿಗೆ ಗೊತ್ತಾಗುತ್ತಿರಲಿಲ್ಲ. ರೈಲ್ವೇ ಲೈನಿಗೆ ಯಾರೋ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ ಎಂಬುದಷ್ಟೇ ತಿಳಿದ ಸುದ್ದಿ. ಅಂತೂ ಇಂತೂ ನುಗ್ಗುತ್ತ ನುಗ್ಗುತ್ತ ಮುಂದೆ ಹೋಗಿ ನೋಡಿದರೆ ಅಭಿಷೇಕ್! ಅಭಿಷೇಕ್ ಬಹಳ ಸ್ಫುರದ್ರೂಪಿ ಯುವಕ, ಆಗತಾನೇ ಮದುವೆಯಾಗಿದ್ದ. ೭-೮ ವರ್ಷಗಳಿಂದ ಕೆಲಸಮಾಡಲು ಬಂದು ಹತ್ತಿರದ ಓಣಿಯಲ್ಲೇ ಉಳಿದುಕೊಂಡ ಆತನಿಗೆ ಯಾವುದೇ ದುಶ್ಚಟಗಳಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು.ಹಾಗೆ ನೋಡಿದರೆ ಆತನ ಮನೆಗೆ ಬರಹೋಗುವವರೂ ಕಡಿಮೆಯೇ. ವೃತ್ತಿಯ ಹೊರತು ಇನ್ನಾವುದೇ ವ್ಯವಹಾರಗಳಲ್ಲಿ ತೊಡಗಿಕೊಂಡ ವ್ಯಕ್ತಿಯಲ್ಲ ಆತ.

ಸಖರಾಯಪಟ್ಟಣದ ಅಭಿಷೇಕ್ ಗೆ ಇದ್ದುದೊಂದೇ ಆಸೆ. ತಾನು ಹೇಗಾದರೂ ಮಾಡಿ ದುಡಿಯಬೇಕು. ಮನೆಯಲ್ಲಿರುವ ಅಪ್ಪ-ಅಮ್ಮನನ್ನು ಬಡತನದ ಬವಣೆಯಿಂದ ಪಾರುಮಾಡಬೇಕು. ತಂಗಿಗೊಬ್ಬ ಒಳ್ಳೆಯ ಗಂಡನ್ನು ನೋಡಿ ಮದುವೆ ಮಾಡಬೇಕು. ಅಮೇಲೆ ತಾನು ಮದುವೆಯಾಗಿ ಹಾಯಾಗಿ ಇರಬೇಕು ಎಂಬುದು.

ನಮ್ಮ ಎಣಿಕೆಗಳೇ ಒಂದು, ವಿಧಿಲಿಖಿತವೇ ಇನ್ನೊಂದು ಅಲ್ಲವೇ? ಅಭಿಷೇಕ್ ಬೆಂಗಳೂರಿಗೆ ಬಂದು ಕೆಲಸ ಆರಂಭಿಸಿದ್ದು ನಿಜ, ದುಡಿದದ್ದನ್ನು ಒದಷ್ಟು ಊರಿಗೆ ಕೊಟ್ಟು ತಂದೆ ಮಾಡಿದ್ದ ಸಾಲವನ್ನು ತೀರಿಸಿದ್ದು ನಿಜ. ತಂಗಿಯನ್ನು ಅಂತೂ ಕಷ್ಟಪತ್ತು ಮದುವೆ ಮಾಡಿದ್ದೂ ಸತ್ಯ. ತಾನು ಮದುವೆಯಾಗಿದ್ದೂ ಅಷ್ಟೇ ಸತ್ಯ.

ಮದುವೆಯಾಗುವಾಗ ಬಹಳ ಮುದ್ದಾಗಿ ಕಂಡ ಹುಡುಗಿ ಮದುವೆಯಾದ ಕೆಲಸಮಯದ ನಂತರ ಬಣ್ಣ ಬದಲಾಯಿಸಿದ್ದಳು! ಅವಳಿಗೆ ತನ್ನ ಕಡೆಯವರನ್ನು ಬಿಟ್ಟರೆ ಗಂಡನ ಮನೆಯವರಾಗಲೀ ನೆಂಟರಿಷ್ಟರಾಗಲೀ ಬಂದರೆ ಹಿಡಿಸುತ್ತಿರಲಿಲ್ಲ. ನೋಡಲು ಅತಿ ಸುಂದರಿಯಾಗಿದ್ದ ಮುಗ್ಧಳಂತೇ ಕಾಣುತ್ತಿದ್ದ ಹುಡಿಗಿಗೆ ಗಂಡನ ಜುಟ್ಟುಹಿಡಿದು ಮಣಿಸುವ ಸ್ವಭಾವವಿತ್ತು. ಮನೆಯಲ್ಲಿ ತಂದೆ-ತಾಯಿ, ಸ್ಕೂಲಲ್ಲಿ ಶಿಕ್ಷಕರು ಹೆದರಿಸದಷ್ಟು ಹೆದರಿಕೆ ಉಂಟುಮಾಡುವ ಕಠಿಣ ಮನಸ್ಕಳಾಗಿದ್ದಳು ಆ ಹುಡುಗಿ! ಗೋಮುಖ ವ್ಯಾಘ್ರ ಅಂದರೆ ಅವಳೇ ಎನ್ನುವಷ್ಟು ಧೂರ್ತೆಯಾಗಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಅಭಿಷೇಕ್ ನ ತಂದೆಗೆ ಆರೋಗ್ಯ ಹದಗೆಟ್ಟಿತು. ಸಾಕಷ್ಟು ಉಪಚಾರಗಳಾದಮೇಲೆ ತಿಳಿದಿದ್ದು ಅವರಿಗೆ ಲಿವರ್ ಕ್ಯಾನ್ಸರ್ ಇದೆ ಎಂಬುದು! ಮನುಷ್ಯನ ಲಿವರ್ ಹೇಗೆ ಎಂದರೆ ಅದರ ಹತ್ತರಲ್ಲಿ ಒಂದು ಭಾಗ ಕೆಲಸಮಾಡುತ್ತಿದ್ದರೂ ಅದು ಮಾಮೂಲೀಯಾಗಿ ಕಾಣುತ್ತದೆ. ಹೊರನೋಟಕ್ಕೆ ಇಡೀ ಲಿವರ್ ಸರಿ ಇದೆ ಎಂಬರೀತಿ ಇರುತ್ತದೆ. ಯಾವಾಗ ಕೊನೇ ಹಂತ ತಲ್ಪುತ್ತದೋ ಆಗ ಮಾತ್ರ ಗೊತ್ತಗುವುದು ಲಿವರ್ ಕ್ಯಾನ್ಸರ್! ಈ ವಿಷಯ ಕೇಳಿ ಅಭಿಷೇಕ್ ತುಂಬಾ ನೊಂದ. ಅಮ್ಮ ನೋಯದಿರಲೀ ಎಂದು ಅಮ್ಮನಿಗೆ ರಿಪೋರ್ಟ್ ನಲ್ಲಿ ಬಂದಿದ್ದನ್ನು ಮರೆಮಾಚಿದ್ದ. ಒಳಗೆ ತಡೆಯಲಾರದ ಬೇಗುದಿ ಹೊತ್ತ ಅಭಿಷೇಕ್ ಗೆ ಮನಸ್ಸಿಲ್ಲುದ್ದುದು ಅಪ್ಪನಿಗೆ ಹೇಗಾದರೂ ಅದನ್ನು ವಾಸಿಮಾಡಿಸಲು ಸಾಧ್ಯವೇ ಎಂಬುದು. ತನ್ನ ಸಂಬಳ ಅಂತಹ ಕಾಯಿಲೆಯ ಉಪಚಾರಕ್ಕೆಲ್ಲ ಸಾಲುತ್ತಿಲ್ಲ, ಅದಕ್ಕಾಗಿ ಹೇಗಾದರೂ ಮಾಡಿ ಸಾಲಮಾಡಿಯಾದರೂ ಅಪ್ಪನನ್ನು ಬದುಕಿಸಬೇಕೆಂಬ ಬಯಕೆ ಮತ್ತು ಕರ್ತವ್ಯಪ್ರಜ್ಞೆ ಅವನನ್ನು ಕಾಡುತ್ತಿತ್ತು.

ಮನೆಯಲ್ಲಿ ವಿಷಯ ತಿಳಿದ ಅರ್ಧಾಂಗಿ ಕಾಳಿಯಾಗಿದ್ದಳು. ಸಂಬಳದಲ್ಲಿ ಒಂದು ಪೈಸೆ ಸಹ ಆತನ ಅಪ್ಪನ ಖರ್ಚಿಗಾಗಿ ಕೊಡಲು ಸಿದ್ಧಳಿಲ್ಲವೆಂದು ಘೋಷಿಸಿಬಿಟ್ಟಿದ್ದಳು. ಆಗತಾನೇ ಜಾಗತಿಕ ಆರ್ಥಿಕ ಮುಗ್ಗಟ್ಟು ಒಕ್ಕರಿಸಿದುದರಿಂದ ಜಾಸ್ತಿ ರಜವನ್ನು ಹಾಕಿದರೆ ಕಂಪನಿಯಲ್ಲಿ ಕೆಲಸದಿಂದ ತೆಗೆಯಬಹುದೇಂಬ ಆತಂಕ ಬೇರೆ. ಸ್ನೇಹಿತರಲ್ಲಿ ಸಾಲ ಕೇಳೋಣವೆಂದು ಒಬ್ಬಿಬ್ಬರನ್ನು ವಿಚಾರಿಸಿದಾಗ ಅವರಲ್ಲಿ ಹುಟ್ಟುವುದು ೨೫-೩೦ ಸಾವಿರ, ಲಕ್ಷಗಟ್ಟಲೇ ಹಣ ಪಾವತಿಸಬೇಕಾಗಿರುವುದೆಲ್ಲಿ ಈ ಅಲ್ಪ ಹಣವೆಲ್ಲಿ, ಅದೂ ಪಡೆದ ಸಾಲವನ್ನು ಮರಳಿಸುವ ದಾರಿಯಾವುದು? ಸಮಸ್ಯೆಗಳ ತಿಕ್ಕಾಟ ಗಂಭೀರ ಹಂತಕ್ಕೆ ತಲ್ಪಿತು. ಅಭಿಷೇಕ್ ರಾತ್ರಿ ಬಹುಹೊತ್ತಿನತನಕ ಚಿಂತಿಸುತ್ತಿದ್ದ. ಬೇಳಗಾಗಬೇಕು. ಆಗ ಅತೀವವಾಗಿ ನೊಂದ ದುರ್ಬಲ ಮನಸ್ಸಿನಲ್ಲೇ ತನ್ನ ತಂದೆ-ತಾಯಿಯ ಕ್ಷಮೆ ಬೇಡಿ ಹೊರ ಹೊರಟ ಅಭಿಷೇಕ್ ರೈಲ್ವೇ ಲೈನಿಗೆ ಧುಮುಕಿದ್ದ. ಧುಮುಕಿ ಇಹಲೋಕ ತೊರೆದಿದ್ದ. ಹಕ್ಕಿ ಸಾತಂತ್ರ್ಯ ಪಡೆದಿತ್ತು- ಹೆಂಡತಿಯಿಂದ, ಮರುಗಿತ್ತು ತಂದೆ-ತಾಯಿಯನ್ನು ಪೊರೆಯಲಾಗದ ಅಸಹಾಯಕತೆಯಿಂದ.

Monday, June 21, 2010

ಡಿಫರೆಂಟಾಗಿ ಮೀಸೆ ಪುರಾಣ !!


[ಚಿತ್ರಗಳ ಕೃಪೆ : ಅಂತರ್ಜಾಲ ]

ಡಿಫರೆಂಟಾಗಿ ಮೀಸೆ ಪುರಾಣ !!

ವಕ್ರತುಂಡ ಮಹಾಕಾಯ

ಮಂಗತಿಂತೋ ಬಾಳೇಕಾಯ ||

-ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಸೆಗಾಗಿ ಅಂತ ಉದ್ದುದ್ದ ಬೆಳೆದ ಗಡ್ಡ ನೀವುತ್ತ ಬಂದ ನಮ್ಮ ಕುಂದಾಪುರ ಆಚಾರಿ. ನೀವೇನೇ ಅಂದರೂ ನಮ್ಮ ಮೀಸೆ ಸುಬ್ರಾವ್ ಸಂಗಡ ನಾವೆಲ್ಲಾ ಸೇರಿಕೊಂಡರೆ ಆ ದಿನ್ನವೇ ಬ್ಬೇರೆ [ಇಲ್ಲಿ ಒತ್ತು ಕೊಟ್ಟು ಹೇಳಿರುವುದೇ ಅದಕ್ಕೆ!].ಮೀಸೆ ಅಂದಾಕ್ಷಣ ನೆನಪಿಗೆ ಹಲವರು ಬರುತ್ತಾರೆ, ಯಾಕೇಂತ ನಿಮಗೆ ಹೊಸದಾಗಿ ಹೇಳೊದೇನೂ ಬೇಡ! ಹುರಿಮೀಸೆ, ಕುರಿಮೀಸೆ, ಬೆಕ್ಕಿನ ಮೀಸೆ, ಜಿರಲೆ ಮೀಸೆ, ಗಿರಿಜಾ ಮೀಸೆ, ವಿರಜಾ ಮೀಸೆ, ಕಡ್ಡಿ ಮೀಸೆ, ಬಂಗಾರು ಮೀಸೆ, ಚಿಗುರು ಮೀಸೆ, ಮೊಟ್ಟೆ ಮೀಸೆ, ಪೊದೆಮೀಸೆ, ಫಿಲ್ಟರ್ ಮೀಸೆ ಹೀಗೇ ಮೀಸೆಗಳನ್ನು ಲಿಸ್ಟ್ ಹಾಕುತ್ತ ಹೋದರೆ ಮೀಸೆಯ ಬಹುದೊಡ್ಡ ಲೋಕ ತೆರೆದುಕೊಳ್ಳುತ್ತದೆ.

ಯಾಕೇಂದ್ರೆ ಬಹುತೇಕ ನಮ್ಮಲ್ಲಿನ ಗಂಡಸರ ಐನಾತಿ ಆಸ್ತಿಯೇ ಮೀಸೆ! "ಸಾ ಮೀಸೆ ಟ್ರಿಮ್ ಮಾಡ್ಲಾ?" ಅಂತ ಹಜಾಮ ಕೇಳದ್ರೆ ಹುಷಾರಪ್ಪಾ ಸ್ವಲ್ಪ ಎಡಕ್ಕೆ ಸ್ವಲ್ಪ ಬಲಕ್ಕೆ ಸ್ವಲ್ಪ ಮೇಲೆ ಸ್ವಲ್ಪ ಕೆಳಗೆ ಎಂದೆಲ್ಲ ಅವನ ಕತ್ತರಿಗೆ ನಾವು ಕನ್ನಡಿಯಲ್ಲಿ ನೋಡುತ್ತಾ ಗೈಡ್ ಮಾಡುವಷ್ಟು ಜಗದಗಲದ ಮೌಲ್ಯ ಪಡೆದಿರುವುದು ಮೀಸೆ!

ದಶಕಂಠನಳಿದ ಮರುದಿನ
ಉಳಿದ ಕಪಿಗಳು ಸೇರಿ
ಅವನ ಮತ್ತವನ ಸೋದರ ಕುಂಭಕರ್ಣನ
ಹರವಾದ ಎದೆಯ ಮೆಲೆ ಹತ್ತಿ ಮನಸೋ ಇಚ್ಛೆ ಥಕಥಕ ತೈ
ಎಂದು ತಾವ್ ಕುಣಿದೂ...........
ಮಸಣವಾಗಿರ್ಪ ವಸುಧೆಯ ಭಾಗದೋಳ್
ಅಸುರ ಭುಜಬಲರು ನಿಸ್ಸಹಾಯರಾಗಿ ಮಲಗಿರಲು
ಗಸಗಸನೆ ಅವರ ಮೀಸೆಯಂ ಹಸಿ ಹುಲ್ಲು ಕೊಯ್ದಂತೇ ಕುಯ್ದು
ಮತ್ತೆ ಪ್ರೀತಿಯಿಂದವುಗಳಂ ತಂದು ನಾಟಿ ಮಾಡಿ ನೀರೆರೆಯಲ್ಕೆ
ನಸುನಕ್ಕ ರಾಮ ಕಪಿವೃಂದವಂ ಕರೆಯುತ್ತ ಏನದೇನೆನ್ನಲಾಗ
ಪಶುಗಳೈ ನೀವು ನಿಮಗ್ಯಾಕೆ ಮಂಡೆ ಸರಿಯಿಲ್ಲ
ಅಶುತೋಷ ಕೊಟ್ಟಿರ್ಪ ವರವಿಕ್ಕು ಪೆಂಡಿಂಗಲ್ಲಿ ಅದನ್ನು
ಖುಷಿಯಾಗಿ ನಿಮಗೀವೆ ನಡೆಯಿರೆಂದೆನಲು ಹರುಷಗೋಂಡಾ ಮಂಗಗಳ್
ಹಸನು ಮಾಡೆಮ್ಮ ಬದುಕ ನಮ್ಮನು ಮನುಜರಿಂ ಬೇರ್ಪಡಿಸು
ಅತಿಶಯದಿ ಅವರ್ಗೆ ಗುರುತಿರ್ಪಂತೆ ಪುಕ್ಸಟೆ ಬೆಳೆವಂತ ಪೊದೆ ಮೀಸೆಯಂ ಅನುಗ್ರಹಿಸಿ
ಅಶನವಶನಾದಿಗಳನೆಲ್ಲ ತೆಗೆದುಕೊಂಡಂತೆ ಮೀಸೆಯ ಬೆಳೆಯಗೊಡೆಂದು ಬೇಡಿದರು
ಕುಶಲದಲಿ ಭಕ್ತವತ್ಸಲ ತಾನು ಮುನ್ನಡೆದು
ಕೃಷವಾದ ದಣಿದ ಕಪಿಗಳನೆಲ್ಲ ಸಂತೈಸಿ
ಅಶರೀರವಾಗಿ ಅಡಗಿದ್ದು ಶರೀರದಲಿ
ಸಶರೀರಿಯಾಗಿ ಮೂಗಿನ ಕೆಳಗೆ ಬೆಳೆದು ನೆಲೆನಿಂತು
ಕಸದೋಪಾದಿಯಲಿ ಗರಿಕೆ ಹುಲ್ಲಿನಂದದಲಿ
ಮಿಸುನಿಗೂ ಮಿಕ್ಕ ಬೆಲೆ ಪಡೆದು ಬದುಕೆಂದು
ಹರಸಿ ಪರಮ ಸಂತೋಷದಿಂದಾ.....ಆಆಆಅ.....ಆಆಆಆಆ.....ಆ.

ಬೋಲೋ ಮೀಸೆಮಹಾರಾಜಕೀ ಜೈ.... [ಮೀಸೆ ಮಹಾರಾಜನ ಥರವೇ ಅಲ್ಲವೇ? ]

ನಮ್ಮಲ್ಲಿ ಹಿಂದಕ್ಕೆ ಒಬ್ಬ ಬೇಳೆರಾಯ ಅಂತಿದ್ದ! ಬೇಳೆ ದರ ಜಾಸ್ತಿ ಅಂತ ಹೇಳುತ್ತಿಲ್ಲ. ನಿಜವಾಗಿಯೂ ಆ ಹೆಸರಿನ ವ್ಯಕ್ತಿಯೊಬ್ಬನಿದ್ದ. ಅವನು ಬೇಳೆ ಮಾರುತ್ತಿದ್ದುದೇನೂ ಕಂಡು ಬಂದಿಲ್ಲ, ಆದರೂ ಅವನಿಗೆ ಅದ್ಯಾಕೆ ಆ ಹೆಸರೋ ಗೊತ್ತಿಲ್ಲ! ಇರಲಿ, ನಮ್ಮ ಕಣ್ಣಿರೋದು ಸದ್ಯ ಅವನ ಮೀಸೆ ಮೇಲೆ! ಅವನಿಗೆ ಫಿಲ್ಟರ್ ಮೀಸೆ ಇತ್ತು. ನಾವೆಲ್ಲ ಆತ ನಮ್ಮನೆಗೆ ಬಂದಾಗ ಚಾ ಮಾಡಿದರೆ ಸೋಸದೇ ಹಾಗೇ ಕೊಡಿ ಬೇಳೆರಾಯರಿಗೆ ಅಂತ ತಮಾಷೆ ಮಾಡುತ್ತಿದ್ದೆವು. ಆತನ ಮೀಸೆಯ ಒರಿಜಿನಲ್ ಕಲರ್ ಬೆಳ್ಳಗಿದ್ದರೂ [ಆತ ಎಡಮುದುಕನಾಗಿದ್ದ] ಮೀಸೆ ಫಿಲ್ಟರ್ ಕೆಲಸ ಮಾಡೀ ಮಾಡೀ ಕಲರ್ ಕಲರ್ ವ್ಹಾಟ್ ಕಲರ್ ಅನ್ನೋ ರೀತಿ ಆಗುತ್ತಿತ್ತು. ಅದರಲ್ಲೂ ಆತ ಬ್ರಹ್ಮಾನಂದದಿಂದ ಎಲೆ ಅಡಿಕೆ ಹಾಕಿಕೊಂಡು ಅಗಿದಗಿದು ಆಗಾಗ ಪ್ಸೋ ಪ್ಸೋ ಪ್ಸೋ ಪ್ಸೋ ಪು ಅಂತ ಅದನ್ನು ಉಗುಳುವಾಗ ಶೇಕಡಾ ೨೦ ಮೀಸೆಯಲ್ಲಿ ಪಾಸಾಗದೇ ಮರಳುತ್ತಿತ್ತು. ಹೀಗೆ ಹೊರಳಿ ಮರಳುವ ಮಧ್ಯೆ ಮೀಸೆಗೆಲ್ಲ ಕೆಂಪು ಬಣ್ಣವನ್ನು ಕೊಟ್ಟು ಮೇಲರ್ಧಬಿಳಿ-ಕೆಳಾರ್ಧ ಕೆಂಪು ಆಗಿರುವ ಮೀಸೆಯನ್ನು ನೋಡಿದರೆ ಸ್ಕೂಲ್ ಹುಡುಗರ ಯುನಿಫಾರ್ಮ್ ನೆನೆಪಾಗುತ್ತಿತ್ತು! ಅಂತಹ ಅದ್ಬುತ ಮೀಸೆಯನ್ನು ಹದವಾಗಿ ಸ್ನಾನ ಮಾಡಿಸಿ,ಕೊಬ್ಬರಿ ಎಣ್ಣೆ ಉಜ್ಜಿ ನಯವಾಗಿ ಹೊಳೆವಂತೆ ಮಾಡಿ, ಅದರ ಹಿಂಡಲ್ಲೇ ಬಾಯಗಲಿಸಿ ನಗುವ ನಗುವಿನ ಸೌಂದರ್ಯವೇ ಬ್ಬೇರೆ!

"ಏನ್ ರಾಯ್ರೇ ಬರಲೇ ಇಲ್ಲ ಬಹಳ ದಿವ್ಸ ಆಯ್ತು" ಅಂದ್ರೆ

"ಆರಾಮಿರ್ಲಿಲ್ಲ, ಘಟ ಇದ್ರೆ ಮಠ ನೋಡ್ಕಂಡ ಬಿಡು,ಶರೀರ ಮುಖ್ಯ ಅಲ್ಲವೇ " ಎಂದುಕೊಂಡು
ನಕ್ಕು ಬಿಟ್ಟರೆ ರಾಯರ ಫಿಲ್ಟರ್ ಮೀಸೆಗೆ ಬೀಳದ ಜನವೇ ಇಲ್ಲ! ಇರ್ಲಿ ಪಾಪ ಮುದುಕ ಈಗಿಲ್ಲ, ಬನ್ನಿ ಹೀಗೆ ಮತ್ಯಾವ್ದೋ ಕೇಸ್ ನೋಡೊಣ-

ಮೀಸೆ ಅಂದುಬಿಟ್ಟರಾಯಿತೇ, ನೀವೇ ಹೇಳಿ ನೋಡುವಾ, ನಮ್ಮ ಬಂಗಾರು ಆಡಳಿತದಲ್ಲಿದ್ದಾಗ ಬಹಳಮಂದಿ ಅವರ ಭಕ್ತರೆಲ್ಲ ಅದೇ ಥರ ಮೀಸೆ ಬೆಳೆಸಿದ್ದರು. ಇನ್ನೂ ಕೆಲವರು ಅವರ ಥರ ಮಾಡಲು ಹೋಗಿ ಅದು ಆಕಡೆಗೂ ಈಕಡೆಗೂ ಇಲ್ಲದೇ ಏನೋ ವಿಚಿತ್ರ ಶೇಪ್ ಪಡೆದಾಗ ಸದ್ಯ ಬೇಡ ಬಿಡು ಎಂದು ಸಂಪೂರ್ಣ ಬೋಳಿಸಿಕೊಂಡಿದ್ದರು!

ಅಣ್ಣಾವ್ರ ಸಿನಿಮಾ ಪಾತ್ರಗಳಲ್ಲಿರುವ ಕೆಲವು ಮೀಸೆಯ ಇಷ್ಟೈಲ್ ನೋಡಿ ತಾವೂ ಅದೇ ರೀತಿ ಬಿಟ್ಟುಕೊಂಡವರು ಕೆಲವರಾದರೆ, ಅಂಬರೀಸು ಜೈಜಗದೀಸು ರಜನೀಕಾಂತು ಇವ್ರದ್ದೆಲ್ಲ ಒಂದೊಂದ್ಕಿತಾ ಒಂದೊಂದು ಪಾರ್ಟ್ ಬಂದಾಗ ಅರ್ಜಿನಮೂನೆ ಅಂದಾಂಗೆ ಅದೇ ನಮೂನೆ ಮೀಸೆ ಹೊತ್ತ ಮಹನೀಯರು ಹಲವರು.

ಅದೇ ಕಾಲಕ್ಕೆ ’ಮೀಸೆ ಹೊತ್ತ ಗಂಡಸಿಗೇ ಡಿಮಾಂಡಪ್ಪೋ ಡಿಮಾಂಡು....’ ಹಾಡು ಬರುತ್ತಿತ್ತು. "ಏನೂ ಇರ್ಲಿ ಒಂದ್ ಇಷ್ಯ ಗ್ಯಾರಂಟಿ ಮೀಸೆ ಇಲ್ದೇ ಇದ್ರೆ ಅಂವ ಗಂಡಸೇ ಅಲ್ಲ" ಅಂತ ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದ ಕುಂದಾಪುರ.

ಇನ್ನು ನಾವು ಮದುವೆಗೆ ಹೋದಾಗ ಬಹಳ ಸಮಯ ಸಿಗುತ್ತಿತ್ತು. ಊಟಕ್ಕೆ ತಯಾರಾಗುವವರೆಗೆ ಯಾಉ ಯಾವ ರೀತಿ ಮೀಸೆ ಬಿಟ್ಟಿದ್ದಾರೆ, ಯಾರಿಗೆ ಅದು ಯಾವರೀತಿ ಕಾಣುತ್ತದೆ ಎಂಬೆಲ್ಲ ವಿಷಯದ ಮೇಲೆ ಮನದಲ್ಲೇ ಪ್ರಬಂಧ ಬರೆಯಲ್ಪಡುತ್ತಿತ್ತು. ಒಮ್ಮೆ ಒಬ್ಬ ಸುಮಾರು ೨೪-೨೫ ವರ್ಷದ ಹುಡುಗ ಅಂತ್ರಟಿಕೆ ಮೀಸೆ ಬಿಟ್ಟಿದ್ದನ್ನು ಕಂಡಿದ್ದು ಇನ್ನೂ ನೆನೆಪಿದೆ! ಅಂತ್ರಟಿಕೆ ಅಂದ್ರೆ ಅರ್ಥ ಆಯ್ತೇ? ಅದು ಮೂಗಿಗೂ ಮೇಲ್ದುಟಿಗೂ ಇರುವ ಜಾಗವನ್ನು ಭೂಮಧ್ಯರೇಖೆ ಹಾದುಹೋದ ಹಾಗೇ ಮಧ್ಯದಲ್ಲಿ ಒಂದು ನಾಮ ಎಳೆದ ರೀತಿ ಇತ್ತು.[ಅಂತ್ರಟಿಕೆ ಅಂದರೆ ಮೇಲೂ ಅಲ್ಲ ಕೆಳಗೂ ಅಲ್ಲ ಅಂತ] ಆತನನ್ನು ನೋಡಿದರೇ ನಗುಬರಿಸುತ್ತಿತ್ತು! ಬಹಳ ಜನ ಆತನನ್ನು ನೋಡಿ ನಗುತ್ತಿದ್ದರೂ ಆತನೂ ನಗುತ್ತಿದ್ದ, ಆದರೆ ವಿಷಯ ಆತನ ಮೀಸೆಯೇ ಆಗಿತ್ತು!ಅದು ಅವನಿಗೆ ತಿಳಿದಿರಲಿಲ್ಲ. ಬಿಟ್ಟಾಕಿ ಮಾಣಿ ಪೋರ ಪಾಪ ಹೋಗ್ಲಿ.

ಸಾಹಿತಿಗಳೂ ಮೀಸೆಯಲ್ಲೇನೂ ಕಮ್ಮಿ ಇಲ್ಲ. ಹಿರಿಯ ಕವಿಗಳಲ್ಲಿ ಪೊದೆ ಮೀಸೆಯ ಕವಿಗಳನ್ನೂ, ಕಡ್ಡಿ ಮೀಸೆಯ ಕವಿಗಳನ್ನೂ ಕಾಣಬಹುದಾಗಿದೆ. ಪೊದೆ ಮೀಸೆ ಎಂದರೆ ಅದು ಹದವಗಿ ಪಾರ್ಕಿನಲಿ ಬೆಳೆಸಿದ ಕ್ರೋಟನ್ ಸಸ್ಯದ ಥರ ಇರುತ್ತದೆ,ಆಕಾರದಲ್ಲಿ ಗಿಡಗಳ ಪೊದೆಯನ್ನೇ ಹೋಲುವುದರಿಂದ ಅನ್ವರ್ಥನಾಮವನ್ನು ಕೊಡಲಾಗಿದೆ! ಕಡ್ಡಿ ಮೀಸೆ ಎಂದರೆ ತುಟಿಯ ಮೇಲ್ಭಾಗದಲ್ಲಿ ಇನ್ನೇನು ಒಂದು ಎಮ್ ಎಮ್ ಕೆಳಗೆ ಬಂದರೆ ತುಟಿಯೇ ಎಂಬಲ್ಲಿ ಸ್ಥಾನ ಪಡೆದಿರುವ ವಕ್ರ ರೆಖಾಕಾರದ ಮೀಸೆ. ಅವರಿಗೆ ಮೀಸೆ ಬೇಕು ಆದರೆ ಜಾಸ್ತಿ ಬೇಡ. ಹದವಾಗಿ ರಂಗೋಲಿ ಎಳೆ ಬಿಟ್ಟ ಹಾಗೇ ಒಂದೇ ಕಡ್ಡಿಯನ್ನು ತಲೆಕೆಳಗಾದ ಆಂಗ್ಲ ಸಿ ಅಕ್ಷರದಂತೆ ಇಟ್ಟುಕೊಳ್ಳುವುದು. ಇದನ್ನು ಬಹಳಕಡೆ ನೋಡಿದ್ದಿದೆ.

ಗಿರಿಜಾಮೀಸೆಯನ್ನು ಬಿಡುವವರು ವೀರಪ್ಪನ್ ಅಥವಾ ಅದೇ ರೀತಿಯ ಮೀಸೆಯನ್ನೇ ಬಲವಾಗಿ ನೀವಿಕೊಳ್ಳುತ್ತ ಅದರ ಆಕಾರದಲ್ಲೇ ಹೆದರಿಸುವವರು. ನೋಡಿ ವೀರಪ್ಪನ್ ನನ್ನು[ಫೋಟೊ ನೋಡಿ ಆತ್ ಈಗಿಲ್ಲ!] ನೋಡಲು ಗಾಳಿಗೆ ಹಾರಿ ಹೋಗುವಂತಿದ್ದರೂ ತುಂಬಾಲೆಯ ಶರೀರವಾದರೂ ಕೆ.ಜಿಯಷ್ಟು ಮೀಸೆ ಹೊತ್ತಿದ್ದ! ಜನ ಆ ಮೀಸೆಯನ್ನು ನೋಡಿಯೇ ಗಡ ಗಡ ಗಡ ಗಡ ...ಎನ್ನುತ್ತಿದ್ದರು. ನಮ್ಮ ಪೋಲೀ ಸಣ್ಣಗಳೆಲ್ಲ ಚಡ್ಡಿಯಲ್ಲಿ ಚೇಳು ಕುಟುಕಿದ ಹಾಗೇ ಯಮಯತಾನೆ ಪಡುತ್ತಿದ್ದರು. ಇತ್ತ ಕರ್ತವ್ಯ ಅತ್ತ ಜೀವಭಯ ! ಉಸ್ಸಪ್ಪಾ ವೀರಪ್ಪಾ ಸದ್ಯ ಸತ್ಯಲ್ಲ!

ಕೆಲವರಿಗೆ ಬೆಕ್ಕಿನ ಪ್ರವೃತ್ತಿ, ಉಣ್ಣುವುದು-ತಿನ್ನುವುದು ಎಲ್ಲಾ ಬೆಕ್ಕಿನ ಥರವೇ! ಅವರ ಮೀಸೆ ಕೂಡ ಹಾಗೇ. ಯಾಕೆಂದರೆ ಪಾಪ ಅವರಿಗೆ ಜಾಸ್ತಿ ಮೀಸೆ ಬೆಳೆಯೋದಿಲ್ಲ, ಆದಕಾರಣ ಅವರು ಮೀಸೆಯ ಜಾಗದಲ್ಲಿ ಅಡ್ಡಡ್ಡ ತಿರುವಿದ ಉದ್ದನೆಯ ಕೆಲವು ಕೂದಲನ್ನು ಬಿಟ್ಟಿರುತ್ತಾರೆ. ಇಂಥವರಿಗೆ ತಲೆಯೂ ಕೂಡ ನವಿಲು ಕೋಸಿನಥರ ಅದರ ಮೇಲೆ ನಾಲ್ಕೇ ನಾಲ್ಕು ಕೂದಲು.

ಜಿರಲೆ ಮೀಸೆ ಇನ್ನೂ ವಿಚಿತ್ರ, ಅಲ್ಲಿ ಮೀಸೆ ಒಮ್ಮೆ ಅಡಗುತ್ತದೆ ಇನ್ನೊಮ್ಮೆ ಹೌದೋ ಅಲ್ಲವೋ ಎಂಬಂತೆ ಕಾಣಿಸುತ್ತದೆ, ಇದು ಜಿರಲೇ ಮೀಸೆ. ಜಿರಲೆ ತಿಂದ ಮೀಸೆ ಬೇರೆ- ಮೀಸೆಯ ಮಧ್ಯೆ ಮಧ್ಯೆ ಗ್ಯಾಪ್ ಬಿಟ್ಟಿದ್ದರೆ ಅದು ಜಿರಲೆ ತಿಂದ ಮೀಸೆ!

ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಣಸಿಗುವ ನಾ ಮೇಲೋ ತಾ ಮೇಲೋ ಎಂದು ತಿರು ತಿರುವಿ ಬಿಡುವ ತುದಿ ಮೇಲಾದ ಮೀಸೆ ಹುರಿ ಮೀಸೆ!ಉದ್ದ ಹುರಿಯಂತೆ ತಿರುತಿರುವಿ ಬಿಡುವ ಈ ಮೀಸೆಯಲ್ಲಿ ಎನೋ ಸಾಧಿಸಿದ ಹಂಬಲವಿರುತ್ತದೆ-ಸಾಧನೆ ಶೂನ್ಯವಾದರೂ ಮೀಸೆಗೇನ್ರಿ ಬಂತು ಬರಗಾಲ, ಅದೇ ಬರಗಾಲ ಬಂದ್ರೂ ಮೀಸೆಗೆ ಬರಗಾಲವಿಲ್ಲ ಅಲ್ಲಿ!

ಕೆಲವರದು ಮೊಟ್ಟೆ ಮೀಸೆ-ಥೇಟ್ ಕೋಳಿ ಮೊಟ್ಟೆಯ ಹಾಗೇ ಸಕತ್ ಮಿಲಿಟ್ರಿ ಕಟ್ ಮಾಡಿಸಿ ಕಾಪಿಡುವ ಮೀಸೆ ಮೊಟ್ಟೆ ಮೀಸೆ, ಈ ಮೀಸೆ ಪೊದೆ ಮೀಸೆಯ ಒಡಹುಟ್ಟಿದ ಮೀಸೆ ಎನ್ನಬಹುದು!

ಹಳ್ಳಿಯಲ್ಲಿ ಗುಂಯ್ಗುಡುವ ದೊಡ್ಡ ನೊಣವನ್ನು ನೋಡಿರುತ್ತೀರಿ, ಇಂಥ ನೊಣ ತಲೆಕೆಳಗಾಗಿ ಅಥವಾ ತಲೆ ಮೇಲಾಗಿ ಮೂಗಿನ ಕೆಳಗೆ ಏನೋ ತಿನ್ನುತ್ತ ಕೂತ ಸ್ಟೈಲಿನ ಮೀಸೆಯೊಂದಿದೆ. ಅದನ್ನು ಫ್ರೆಂಚ್ ಮೀಸೆ ಎನ್ನುತ್ತಾರಂತೆ! ನೊಣದಷ್ಟೇ ಜಾಗದಲ್ಲಿ ಬೆಳೆಸಿ ಬಾಕಿ ಎಲ್ಲಾ ಜಾಗವನ್ನೂ ನುಣ್ಣಗೆ ಬೋಳಿಸಿ ಬೆಳೆಸುವ ಕಲಾವಿದರಿಗೆ ರಾಜ್ಯಪ್ರಶಸ್ತಿ ಕೊಟ್ಟರೂ ಕಮ್ಮಿಯೇ!

ಕುಡಿಮೀಸೆ ಗಂಡು ಬಲು ಅಂದ....ಹಾಡನ್ನು ಸ್ವಲ್ಪ ಹಳಬರು ಕೇಳಿದ್ದಾರೆ, ಈಗೆಲ್ಲ ಅವು ಬಾಕ್ಸ್ ಗಳಲ್ಲೂ ಇರುವುದು ಡೌಟು! ಈಗೇನಿದ್ದರೂ ಈ ಟಚ್ಚಲಿ ಏನೋ ಇದೆ ಅಲ್ಲವೇ? ಕಾಲಾಯ ತಸ್ಮೈ ನಮಃ || ಕುಡಿ ಮೀಸೆ ಎಂದರೆ ಆಗತಾನೇ ಕುಡಿಯೊಡೆಯತೊಡಗಿದ್ದು. ಅದು ಎಷ್ಟರ ಮಟ್ಟಿಗೆ ಅಂದವೋ ಹುಡುಗಿಯರನ್ನೇ ಕೇಳಬೇಕು.

ಮರೆತೇ ಬಿಟ್ಟಿದ್ದೆ--ಈಗೀಗ ಕುದುರೆ ಲಾಳಾಕೃತಿಯ ಮೀಸೆ ಬೆಳೆಸಿ ಅದನ್ನು ಗಡ್ಡಕ್ಕೂ ಸೇರಿಸಿ ಮಧ್ಯದಲ್ಲಿ ಸಣ್ಣ ಬಕ್ರೀ ಕಾ ದಾಡಿ ಎಂಬ ಕುರಿ ಗಡ್ಡವನ್ನು ಕೆಳತುಟಿಯ ಇಮ್ಮೀಡಿಯೇಟ್ ಕೆಳಗೆ ಬಿಟ್ಟು ಜುಗಲ್ ಬಂದಿ ಮಾಡುವ ಕಾರ್ಪೋರೇಟ್ ಕಲಾವಿದರಿದ್ದಾರೆ ! ನಿಜವಾಗಿಯೂ ಜಗದಲ್ಲಿ ಕುಶಲಕರ್ಮಿಗಳಿಗೆ ಅವಾರ್ಡ್ ಇದ್ದರೆ ಅದನ್ನು ಇವರಿಗೇ ಮೀಸಲಿಡಬೇಕು!

ಎಲ್ಲದರಲ್ಲೂ ಪ್ರಾಧಾನ್ಯತೆ, ಮೀಸಲಾತಿ, ಒಳಮೀಸಲಾತಿ ಎನ್ನುವ ಹೆಂಗಸರೂ ಕಮ್ಮಿ ಎಂದು ತಿಳಿದರೆ ನಮಗಿಂತಾ ಪೆದ್ದರು ಬೇರೆ ಇಲ್ಲ! ಹೆಂಗಸರಿಗೂ ಮೀಸೆ ಇದೆ ಕಣ್ರೀ! ಆದರೆ ಪಾಪ ಈ ವಿಷಯದಲ್ಲಿ ಮಾತ್ರ ಅವರು ಮೀಸೆಲಾತಿ ಕೇಳೋದಿಲ್ಲ. ಇದ್ರಲ್ಲಾದ್ರೂ ಆ ಗಂಡಸ್ರು ಏನಾದ್ರೂ ಮಾಡ್ಕೊಂಡು ಹಾಳಾಗ್ ಹೋಗ್ಲಿ ಅಂತ ಬಿಟ್ಟುಬಿಟ್ಟಿದ್ದಾರೆ. ಅಪರೂಪಕ್ಕೆ ಬಂದರೆ ಅದನ್ನು ನಿವಾಳಿಸಿ ಕಿತ್ತೆಸೆಯಲು ವ್ಯಾಕ್ಸಿಂಗ್ ಮೊರೆ ಹೊಕ್ಕಿದ್ದಾರೆ! ಕಾಣುತ್ತಿಲ್ಲವೇ ನಿಮಗೆ ವೀಟ್ ಎಂಬ ಕ್ರೀಮಿನ ಜಾಹೀರಾತಿನಲ್ಲಿ ಕತ್ರೀನಾ ಕಬಡ್ಡಿ!

ಇದ್ದುದನು ಹೋಗಾಡೆ ಎದ್ದು ಮತ್ತೆ ತಾ ಬಕ್ಕು
ಮುದ್ದು ಮುಖದಲಿ ಕೆಲವರ್ಗೆ ಸೊಕ್ಕು ಮಿಕ್ಕೆಲವರ್ಗೆ
ಬಿದ್ದು ನಗಿಸುವ ಅಸಹ್ಯಕರ ತಾನಕ್ಕು
ಮುದ್ದೆ ತಿಂದರೂ ನಿದ್ದೆ ಮರೆತರೂ ಕದ್ದಾದರೊಮ್ಮೆ
ಮೀಸೆಯ ಮುಟ್ಟಿ ನೋಡಿಕೋ ಎಂದ | ಮರ್ಮಜ್ಞ

ಕೋಟಿ ವಿದ್ಯೆಗಳಲ್ಲಿ ಮೇಟಿವಿದ್ಯೆಯೆ ಮೇಲು
ನೀಟಾಗಿ ಮೀಸೆಬಿಟ್ಟವ ಮೇಲು ಮೀಸೆಯಂ
ಘಾಸಿಗೊಳಿಸಿದರೆ ಮುಖದ ಅಂದವೇ ಕೆಡುಗು| ಮರ್ಮಜ್ಞ


ನೆರೆಬಂದ ಕಾಲಕ್ಕೆ ಕರೆದು ದಾನವ ಮಾಡು
ಹುರಿಮೀಸೆ ತಿರುವಿ ಮನಸಾರೆ ಆ ’ಕೈ’ಗೆ
ಬರಬರನೆ ಸುರಿಯೆ ಸಂಪದವಕ್ಕು ಬೇಕಾದರ್ಗೆ
ಹರಿಯ ರೂಪದ ನರಿಯು ನೋಡ | ಮರ್ಮಜ್ಞ

ಮೀಸಾ ಯಾಕ್ಟು ಹಾಕಿದ್ದ ನಮ್ಮ ಇಂದ್ರಮ್ಮ ನಮಗೆಲ್ಲ ಮೀಸೆಯನ್ನು ನೆನಪಿಟ್ಟುಕೊಳ್ಳಲು ಆ ಕಾಯ್ದೆಗೇ ಹಾಂಗೆಸ್ರು ಇಟ್ಟುಬುಟ್ಟವ್ರೇ ಕಣ್ಲಾ ಅಂದ ಮೀಸೆ ಎಳ್ಕೋತ ಕಣ್ತಿರುವಿ ಲೂಸ್ ಮಾದ!

|| ಇತಿ ಶ್ರೀ ಮೀಸೆ ಪುರಾಣಕ್ಕೆ ಸದ್ಯಕ್ಕೆ ಪೂರ್ಣವಿರಾಮಂ ||

[ಮೀಸೆ ಪುರಾಣದ ಮುಂದಿನ ಭಾಗಕ್ಕಾಗಿ ಕಾದಿರಿ , ಮುಂದಿನವಾರದಲ್ಲಿ !]

Sunday, June 20, 2010

ಅಪ್ಪನ ಪ್ರೀತಿ


ಜಗತ್ತಿನಲ್ಲಿ ಅಪ್ಪ-ಅಮ್ಮ ಜೀವಂತ ದೈವಗಳು ಎಂಬುದನು ತಿಳಿದೇ ಇದ್ದೇವೆ. [ನಮ್ಮಲ್ಲಿ ನಾವು ಅಪ್ಪನನ್ನು ಪ್ರೀತಿಯಿಂದ ಅತೀ ಹತ್ತಿರದ ಭಾವನೆಯ ಅನುಭೂತಿಗಾಗಿ ಏಕವಚನದಿಂದಲೇ ಕರೆಯುತ್ತೇವೆ!] ಅಮ್ಮ ಎಷ್ಟು ಮುಖ್ಯವೋ ಅಪ್ಪನೂ ಅಷ್ಟೆ ಪ್ರಾಮುಖ್ಯ. ಅಮ್ಮ-ಅಪ್ಪ ಈರ್ವರು ಒಂದೇ ನಾಣ್ಯದ ಎರಡು ಮುಖಗಳು. ಅಮ್ಮನನ್ನು ನೆನೆದು ಅಪ್ಪನನ್ನು ಮರೆತರೆ ಅದು ಅರ್ಧವಾದಕೆಲಸ. ಮಗುವಿಗೆ ಅಪ್ಪನಿಲ್ಲದೇ ಅಮ್ಮನಿಲ್ಲ ಅಲ್ಲವೇ? ಇಂದಿನ ನಿಫ್ಟ್ ಎಂಬ ತಂತ್ರಜ್ಞಾನ ಕಾಲ ಬಂದು ತಂದೆಯಿಲ್ಲದೇ ಮಗುಹುಟ್ಟುವ ಕಾಲ ಬೆಳೆದರೂ ಅದು ನಿಸರ್ಗ ಇಷ್ಟಪಡುವ ಕೆಲಸವಲ್ಲ, ಅದು ಪೂರಕವೂ ಅಲ್ಲ. ಅಲ್ಲೂ ಪರೋಕ್ಷವಾಗಿವೀರ್ಯದಾನಮಾಡಿದ ತಂದೆಯೊಬ್ಬ ಇದ್ದೇ ಇರುತ್ತಾನೆ. ಮಗುವಿನ ಬೆಳವಣಿಗೆಯಲ್ಲಿ ಅಪ್ಪ ಎಂದರೆ ಅದು ಧೈರ್ಯದ ಇನ್ನೊಂದುರೂಪ! ಏನೇ ಸಮಸ್ಯೆ ಇರಲಿ ಅಪ್ಪ ಬಗೆಹರಿಸಿಬಿಡುತ್ತಾನೆ ಎಂಬ ಅಚಲ ನಂಬಿಕೆ ಅಪ್ಪನಮೇಲೆ. ಮೆತ್ತಗಿರುವ-ಜಾರುವ ಹಸಿನೆಲದಮೇಲೆ ನಿಧಾನವಾಗಿ ಅನುಮಾನಿಸಿ ಕಾಲಿಡುವಾಗ, ಶಾಲೆಯಲ್ಲಿ ಬೇರೆ ಸಹಪಾಠಿಗಳು ತೊಂದರೆ ಕೊಟ್ಟರೆ ಅವರನ್ನೆಲ್ಲನಿಭಾಯಿಸುವಾಗ, ಶಾಲೆಯ ಪರೀಕ್ಷೆಗಳನ್ನು ಬರೆಯುವಾಗ, ಸೈಕಲ್ ಕಲಿಯುವಾಗ ಇನ್ನೂ ಹಲವು ಪ್ರಾಥಮಿಕ ಸನ್ನಿವೇಶಗಳಲ್ಲಿಅಪ್ಪನಿರದಿದ್ದರೆ ಅದು ಸಪ್ಪೆ, ಗೌಣ.

ಅಪ್ಪ ನನಗೇನು ಕೊಟ್ಟ ಎನ್ನುವ ಹಲವರ ಅನಿಸಿಕೆ ತರವಲ್ಲ. ಅಪ್ಪ ನಮಗೆ ಜನ್ಮ ಕೊಟ್ಟ! ಸಾಕಷ್ಟು ಕಾಲ ಅನ್ನ ಕೊಟ್ಟ. ತಕ್ಕಮಟ್ಟಿಗೆವಿದ್ಯೆ ಕೊಟ್ಟ. ಬದುಕುವ ಕಲೆ ಹೇಳಿಕೊಟ್ಟ. ತನ್ನಿಂದಾದ ರೀತಿಯಲ್ಲಿ ಜ್ಞಾನ ಕೊಟ್ಟ, ಸಂಸ್ಕಾರ ಕೊಟ್ಟ. ಅಪ್ಪ ಇನ್ನೇನೂಕೊಡಬೇಕಾಗಿಲ್ಲ! ಅಲ್ಲಿಗೆ ಅಪ್ಪನ ಕರ್ತವ್ಯ ಒಂದರ್ಥದಲ್ಲಿ ಮುಗಿಯಿತು. ಅಣ್ಣತಮ್ಮಂದಿರಿದ್ದರೆ ಅಪ್ಪ ಆಸ್ತಿ ಪಾಲುಮಾಡುವಾಗಪಕ್ಷಪಾತ ಮಾಡಿದ ಎಂದು ಗುದ್ದಾಡುವವರಿದ್ದಾರೆ. ಅಪ್ಪನಿಗೇ ಪಾಲು ಕೊಟ್ಟು ಹೊರದಬ್ಬುವವರೂ ಇದ್ದಾರೆ! ಪೇಟೆ-ಪಟ್ಟಣಗಳಲ್ಲಿಅಪ್ಪ-ಅಮ್ಮರನ್ನು ವೃದ್ಧಾಶ್ರಮದಲ್ಲಿ ಬಿಟ್ಟುಬರುವವರಿದ್ದಾರೆ. ಇಂತಹ ಎಲ್ಲರಲ್ಲಿ ನನ್ನ ಪ್ರಾರ್ಥನೆ ಇಷ್ಟೇ- ನಮಗೆ ನಮ್ಮ ಅಪ್ಪ ಹೇಗೋಹಾಗೇ ಮುಂದೆ ನಾವೂ ಅಪ್ಪನ ಸ್ಥಾನವನ್ನು ಪಡೆದಿದ್ದೇವೆ ಯಾ ಪಡೆದಿರುತ್ತೇವೆ ಅಲ್ಲವೇ? ಒಂದೊಮ್ಮೆ ನಮ್ಮ ಅಪ್ಪನನ್ನು ನಾವುದೂರಮಾಡಿದರೆ ಮುಂದೆ ನಮ್ಮನ್ನೂ ನಮ್ಮ ಮಗು/ಮಕ್ಕಳು ದೂರಮಾಡಿಯೇ ಮಾಡುವುದು ಪ್ರಕೃತಿ ಸಹಜ ಧರ್ಮ!

ನಾವು ಹುಟ್ಟುವ ಪೂರ್ವ, ಅಮ್ಮನ ಹೊಟ್ಟೆಯಲ್ಲಿರುವಾಗ, ಅಮ್ಮನಿಗೆ ಬೇಕಾದ ಎಲ್ಲಾರೀತಿಯ ವೈದ್ಯಕೀಯ-ಆಹಾರಸೌಲಭ್ಯಗಳನ್ನು ಪೂರೈಸಿದ್ದು ಅಪ್ಪ, ನಮ್ಮ ಎಳವೆಯಲ್ಲಿ ನಾವು ರಾತ್ರಿಯೆಲ್ಲ ಅಳುವಾಗ ಹಗಲಿಡೀ ಕೆಲಸಮಾಡಿ ದಣಿದ ಅಪ್ಪಅಮ್ಮನಜೊತೆಗೂಡಿ ನಮ್ಮನ್ನು ರಮಿಸಿದ್ದಿಲ್ಲವೇ? ರಾತ್ರಿಗಳಲ್ಲಿ ತನ್ನ ಹೆಗಲಮೇಲೆ ಹೊತ್ತು ಓಡಾಡಿ ನಮ್ಮ ಅಳುವಿಗೆ ಕಾರಣಹುಡುಕುತ್ತ ಅಪ್ಪ ತನ್ನ ಮಂಜಾದ ಕಣ್ಣನ್ನು ಒರೆಸಿಕೊಳ್ಳಲಿಲ್ಲವೇ? ವಾಂತಿ-ಭೇದಿ-ಜ್ವರ-ಶೀತ ಬಾಧಿಸಿ ನಾವು ಸೋತುಸಣಕಲಾದಾಗ ಮನಸಾ ಅಮ್ಮನಂತೆ ಮರುಗಿದ್ದು ಅಪ್ಪನಲ್ಲವೇ? ಪರೀಕ್ಷೆಗಳಲ್ಲಿ ನಾವು ಕಡಿಮೆ ಅಂಕಗಳನ್ನುಪಡೆದಾಗ/ಅನುತ್ತೀರ್ಣರಾದಾಗ ನಮ್ಮ ಅಳುವಿನಲ್ಲಿ "ಹೆದರಬೇಡ, ಜಗತ್ತು ವಿಶಾಲವಾಗಿದೆ, ಹುಟ್ಟಿಸಿದ ದೇವರುಹುಲ್ಲುಮೇಯಿಸುವುದಿಲ್ಲ, ನೀನು ಒಂದಲ್ಲ ಒಂದುದಿನ ಗೆದ್ದೇ ಗೆಲ್ಲುತ್ತೀಯ" ಎಂದು ಆತ್ಮವಿಶ್ವಾಸ ಉಳಿಸಿ-ಬೆಳೆಸಿದ್ದು ಅಪ್ಪನಲ್ಲವೇ? ಸ್ಥಿತಿವಂತರ ಮಕ್ಕಳು ಹಲವು ಸೌಕರ್ಯ ಪಡೆದು ಓದುವಾಗ ತನ್ನಮಕ್ಕಳಿಗೆ ತನ್ನಿಂದ ಅಷ್ಟು ಕೊಡಲಾಗಲಿಲ್ಲವಲ್ಲ ಎಂದುನೊಂದುಕೊಂಡ ಮಹಾನುಭಾವ ಅಪ್ಪನಲ್ಲವೇ? ತನ್ನ ಅರ್ಥಿಕ ಸಂಕಷ್ಟಗಳೇನೇ ಇದ್ದರೂ ನಮಗೆಲ್ಲ ಏನೂ ತೊಂದರೆಯಾಗದಂತೆ, ನಮಗದರ ಬಿಸಿ ತಟ್ಟದಂತೆ ಸಾಕಿ-ಸಲಹಿದ ವಾತ್ಸಲ್ಯಮಯಿ ಅಪ್ಪನಲ್ಲವೇ? ತನ್ನ ಹಲವು ನೋವನ್ನು ಮರೆತು ನಮ್ಮ ಏಳಿಗೆಯನ್ನುಸದಾ ಬಯಸಿ ಹಲವು-ಹತ್ತು ಶಾಲೆ-ಕಾಲೇಜುಗಳಿಗೆ ಅಲೆದಾಡಿ ನಮಗಾಗಿ,ನಮ್ಮ ವಿದ್ಯಾರ್ಜನೆಗಾಗಿ ಹುಡಿಕಿ ಒದಗಿಸಿದ್ದುಕರುಣಾಮಯಿ ಅಪ್ಪನಲ್ಲವೇ ? ಎಲ್ಲಿಲ್ಲ ಅಪ್ಪ? ಅಪ್ಪನನ್ನು ನೆನೆಯದವ ಬೆಪ್ಪ!

ಅಪ್ಪನನ್ನು ನೆನೆಯಲು ಒಂದೇ ಒಂದು ದಿನ ಸಾಕೇ ? ಇಲ್ಲವಲ್ಲ? ವಿದೇಶಗಳಲ್ಲಿ ಅಲ್ಲಿನ ಸಂಸ್ಕೃತಿಗಳಲ್ಲಿ ಅಪ್ಪ-ಅಮ್ಮ ಬೇರಾಗಿರುವನರಕ ಸದೃಶ ಸನ್ನಿವೇಶಗಳಲ್ಲಿ, ಮಕ್ಕಳಿಗೆ ಅಪ್ಪ ಯಾರೆಂದೇ ಅರಿವಿರದ ಜೀವನಕ್ರಮದಲ್ಲಿ, "ಹಾಯ್ ದಿಸ್ ಈಸ್ ಯುವರ್ ಡ್ಯಾಡ್ " ಎಂದು ತೋರಿಸುವ ದಿನ ಅಪ್ಪನದಿನ ಅರ್ಥಾತ್ ಫಾದರ್ಸ್ ಡೇ. ನಮ್ಮಲ್ಲಿ ಹುಟ್ಟಿದಾರಭ್ಯ ಅಂತ್ಯದವರೆಗೆ ಬುದ್ಧಿತಿಳಿದಾಗಿಂದಯಾವ ಕೆಲಸ್ವನ್ನು ಮಾಡಬೇಕಾದರೂ ತಂದೆ-ತಾಯಿಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುವುದು ನಮ್ಮ ಸಂಸ್ಕೃತಿಅಲ್ಲವೇ? ಈಗಿನ ಬೆಳವಣಿಗೆಗಳಲ್ಲಿ ಅಪ್ಪನಿಗೇ ಪಿಸ್ತೂಲು ತೋರಿಸುವ, ಅಪ್ಪನನ್ನೇ ಮುಗಿಸುವ ಹಲವು ರಾಕ್ಷಸರಿರಬಹುದು ಆದರೆಅದು ನಮ್ಮ ಮೂಲ ಸಂಸ್ಕಾರವಲ್ಲವಷ್ಟೇ? ಆಂಗ್ಲಭಾಷೆಯ ವ್ಯಾಮೋಹದಿಂದ ಅಪ್ಪನನ್ನು ಡ್ಯಾಡ್, ಡ್ಯಾಡೀ ಎಂದೆಲ್ಲ ಅಪಸ್ವರದಿಂದಕರೆಯುವುದು ಎಷ್ಟು ಅಸಹನೀಯ ಅಲ್ಲವೇ ? ನಮ್ಮಲ್ಲಿಯ ಭಾಷೆಗಳಲ್ಲಿರುವಂತೆ ಅಪ್ಪಾ, ಬಪ್ಪಾ, ಪಾಪಾ ಅಂತೆಲ್ಲ ಅಲ್ಲಲ್ಲಿಗೆತಕ್ಕಂತೆ ಕರೆದರಾಗುವುದಿಲ್ಲವೇ ? ಅದಕ್ಕೇ ನನಗನ್ನಿಸಿದ್ದು ನಮ್ಮ ಆರ್ಷೇಯ ಸಂಸ್ಕೃತಿಯಲ್ಲಿ ಮಾತಾ-ಪಿತರನ್ನುಪೂಜಿಸುವ,ನಮಿಸುವ,ಗೌರವಿಸುವ,ಸತ್ಕರಿಸುವ,ಆದರಿಸುವ,ಆರಾಧಿಸುವ,ಸೇವಿಸುವ ಕಾರ್ಯಗಳು ಪ್ರತೀ ಹಂತದಲ್ಲಿವೆಎಂದಮೇಲೆ ನಮ್ಮ ಭಾರತೀಯ ಸತ್ಸಂಪ್ರದಾಯ ಎಷ್ಟು ಅರ್ಥಪೂರ್ಣ ಅಲ್ಲವೇ? ಏನೂ ಇರಲಿ ಭರಿಸಲಾಗದ ಋಣಗಳಲ್ಲಿ ಅಪ್ಪನಋಣವೂ ಒಂದೆಂದು ಹೇಳಿದರೆ ತಪ್ಪಾಗದಲ್ಲ? ಬನ್ನಿ ಹಾಗಾದರೆ ಅಪ್ಪನಿಗೆ ಒಮ್ಮೆ ಎರಗೋಣ,ನೆನೆಯೋಣ,ನಮಿಸೋಣ>>

ಅಪ್ಪನ ಪ್ರೀತಿ

ತಂದೆ ನಿನ್ನಯ ಋಣವ ಎನಿತು ಮರೆಯಲಿ ನಾವು
ಮಂದಹಾಸದಿ ಎಲ್ಲ ಕಷ್ಟ ಕಳೆವುದಕೆ
ಚಂದಿರನ ತೋರಿಸುವ ಕಾಲದಿಂದಲೂ
ಒಂದಿನಿತು ಬರವಿಲ್ಲ ಪ್ರೀತಿ ಸೆಳವದಕೆ

ಮಗುಚಾಡಿ ಮಲಗಿದ್ದು ಅಂಬೆ ಹರೆವಾಗೆಲ್ಲ
ನಗುತೋಡಿ ಬಂದು ಅಪ್ಪುತ ಮುದ್ದು ಮಾಡಿ
ಬಗೆಯ ಆರ್ಥಿಕ ಕಷ್ಟ ನಿನಗಿರಲು ಅದುಮಿಟ್ಟು
ಮೊಗೆದು ಬಡಿಸಿದೆ ನಮ್ಮ ಜೋಪಾನಮಾಡಿ

ಅಮ್ಮನಿಗೆ ಜೊತೆಯಾಗಿ ಸಮ್ಮತಿಸಿ ನೂರೆಂಟು
ಬೊಮ್ಮ-ಹನುಮರ ರೀತಿ ಹಲವು ಬೊಂಬೆಗಳ
ಚಿಮ್ಮಿ ನೆಗೆಯುವ ಜಿಂಕೆ-ಕುದುರೆಗಳ ತಂದಿತ್ತು
ಸುಮ್ಮನಾಗಿಸಿ ನಕ್ಕೆ ನಿನ್ನ ಕೂಸುಗಳ

ಬೆಳೆದು ದಡ ಸೇರಿದನು ಹದವರಿತು ನೆನೆನೆನೆದು
ಕಳೆದ ಕಷ್ಟದ ದಿನವ ಹಂಬಲಿಸಿ ಮರುಗಿ
ಮಳೆಯು ಭೋರ್ಗರೆದಂತೆ ನದಿಗೆ ನೆರೆ ಬಂದಂತೆ
ತೊಳೆದು ಮನಹಗುರಾಯ್ತು ತಾನೇ ತಾನಾಗಿ

ಬೆಳಗು ಬೈಗಿನಲೊಮ್ಮೆ ಅಪ್ಪ ಹತ್ತಿರವಿರಲು
ಎಳೆವೆಯದು ನಮಗಿರಲಿ ಎಂಬ ಕನಸಿನಲಿ
ಅಳುವ ನಮ್ಮೆಲ್ಲರನು ರಮಿಸಿ ಸಂತೈಸುತ್ತ
ಬೆಳಗಿದೆಯೊ ಹಣತೆಯನು ನಮ್ಮ ಹೃದಯದಲಿ

Saturday, June 19, 2010

ಶ್ರೀಕೃಷ್ಣನ ನೆನೆದು


ಶ್ರೀಕೃಷ್ಣನನ್ನು ನಾವು ನೋಡುವುದು ಬರೇ ನವನೀತ ಚೋರ, ಹೆಂಗಸರ ಮಳ್ಳ, ಕಪಟ ರಾಜಕಾರಣಿ ಎಂದೆಲ್ಲ ಹೌದಷ್ಟೇ ? ಆದರೆ ಕೃಷ್ಣ ಬದುಕಲ್ಲಿ ತನ್ನ ಸ್ವಾರ್ಥಕ್ಕಾಗಿ ಯಾವರೀತಿ ಬದುಕಿದ ಅಥವಾ ತಾನು ಎಷ್ಟು ಕೋಟಿ ನುಂಗಿದ ಎಂದು ಯಾವತ್ತಾದರೂ ಯಾರಾದರೂ ನೋಡಿದೆವೇ ? ಇಲ್ಲವಲ್ಲ ? ಕೃಷ್ಣ ನಮ್ಮ ಥರದಲ್ಲೇ ಮನುಷ್ಯನಾಗಿದ್ದ ಎಂದಮೇಲೆ ಅವನಿಗೆ ನಮ್ಮಂತೆ ಬೇಕು-ಬೇಡಗಳು ಜೀವನದಲ್ಲಿ ಇರುತ್ತಿದ್ದವಲ್ಲ, ಆದರೆ ಅವುಗಳ ಬಗ್ಗೆ ಆತ ಒಂದು ಕ್ಷಣವೂ ಚಕಾರವೆತ್ತಲಿಲ್ಲ. ಮಳೆಬಂದಾಗ ಇಂದ್ರನ ಮಾತು ಕೇಳಿಸಲು, ಇಂದ್ರನಿಗೆ ಬುದ್ಧಿ ಕಲಿಸಲು ಮಂದರಗಿರಿಯನ್ನೇ ಅದೂ ಕಿರುಬೆರಳಿಂದ ಎತ್ತಿ ಹಿಡಿದ, ಚಂದಿರನ ಪ್ರತಿಬಿಂಬವನ್ನು ಹಾಲ ಬಿಂದಿಗೆಯಲ್ಲಿ ಕಂಡು ಶ್ಯಮಂತಕ ಮಣಿಯ ಕಳ್ಳ ಎನಿಸಿಕೊಂಡ, ಹಂದರದಲ್ಲಿ ಹದಿನಾರು ಸಾವಿರ ಕನ್ನಿಕೆಯರನ್ನು ಬಿಡಿಸಿ ಅವರು ಅನಾಥರಾಗದಿರಲಿ ಎಂಬ ಕೇವಲ ಆ ಒಂದು ದೃಷ್ಟಿಯಿಂದ ಅವರೆಲ್ಲ ತನ್ನ ಹೆಂಡಿರು ಎಂದ-ಆದರೆ ಭೋಗಿಸಲಿಲ್ಲ,ಬಳಸಲಿಲ್ಲ-ಬದುಕು ಕೊಟ್ಟ!, ಕುಂತಿಯ ಮಗ ನೀನು ಕರ್ಣಾ ನಿನಗೆ ತಮ್ಮಂದಿರೊಟ್ಟಿಗೆ ಯುದ್ಧ ಬೇಡವೆಂದ, ದಾಸಿಯ ಮಗ ವಿದುರನ ಮನೆಯಲ್ಲಿ ಬಿಂದು ಹಾಲನ್ನು ಕುಡಿದು ಹಾಲಿನ ಸಿಂಧು-ಸಾಗರವನ್ನೇ ಹರಿಸಿದ, ಬಾಲ್ಯ ಸ್ನೇಹಿತ ಕುಚೇಲನನ್ನು ಅಂಗಳದ ವರೆಗೆ ಓಡೋಡಿ ಬಂದು ಮಂಗಳ ವಾದ್ಯಗಳೊಂದಿಗೆ ಸ್ವಾಗತಿಸಿ-ಆತನ ಪಾದ ಪೂಜೆ ಮಾಡಿ, ಆತ ಸಂಕೋಚದಿಂದ ಕೊಡದೇ ಇದ್ದ ಬೇಡಿ ತಂದ ಅವಲಕ್ಕಿಯನ್ನು ಕಟ್ಟಿತಂದಿದ್ದ ಚಿಂದಿಯನ್ನು ಬಿಡಿಸಿ ಮುದದಿಂದ ಮೆದ್ದು-ಮನಸಾರೆ ಸ್ವೀಕರಿಸಿ ಬಂದ ಕಾರಣವನ್ನು ಆತ ಹೇಳದೇ ಇದ್ದರೂ ಆತನ ಕಣ್ಣಲ್ಲೇ ಅದನ್ನು ಗ್ರಹಿಸಿ ಅನುಗ್ರಹಿಸಿದ ಅತಿಮಾನುಷ ಶಕ್ತಿ ನಮ್ಮ ಕೃಷ್ಣನಲ್ಲವೇ ? ಜನಸಾಮಾನ್ಯರ ಮಧ್ಯೆ ಇದ್ದೂ ಎಲ್ಲರಲ್ಲಿ ಒಬ್ಬನಾಗಿ ಅತಿ ಸಾಮಾನ್ಯರಂತೆ ಬದುಕಿದ ಕೃಷ್ಣ ತನಗಾಗಿ ಏನನ್ನೂ ಇಟ್ಟುಕೊಳ್ಳಲಿಲ್ಲ! ತನ್ನ ಬದುಕಿನಲ್ಲಿ ಹುಟ್ಟಿದಾರಭ್ಯ ತರಾವರಿ ಸಮಸ್ಯೆಗಳು ಎದುರಾಗುತ್ತಿದ್ದರೂ ಅವೆಲ್ಲಕ್ಕೂ ಸಾವಧಾನವಾಗಿ, ಬಹುತಾಳ್ಮೆಯಿಂದ-ಬಹು ಜಾಣ್ಮೆಯಿಂದ ಬೆಣ್ಣೆಯ ಮೇಲಿನ ಕೂದಲನ್ನೋ ಕಣ್ಣಲ್ಲಿ ಬಿದ್ದ ಕೂದಲನ್ನೋ ತೆಗೆವಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದ.

ಜಗದ್ಗುರು ಎಂದು ನಾಮಫಲಕವನ್ನು ಕೃಷ್ಣ ಹಾಕಿಕೊಳ್ಳಲಿಲ್ಲ. ನಮ್ಮ ಜನರಲ್ಲೇ ಇರುವ ಅನೇಕ ಜ್ಞಾನಿಗಳು ಅವನ ರೂಪವನ್ನು ಅರಿತು ಅವನೊಬ್ಬ ಕಾರಣೀಭೂತ ವಿಭೂತಿ ಪುರುಷ ವ್ಯಕ್ತಿತ್ವ ಎಂದು ಹಾಗೆ ಕರೆದು ಗೌರವಿಸಿದರು. ಜಗತ್ತಿಗೇ ಅಪ್ರತಿಮ ಕೊಡುಗೆಯಾಗಿ ಶ್ರೀಮದ್ಭಗವದ್ಗೀತೆಯನ್ನು ಕರುಣಿಸಿದ ಕೃಷ್ಣ ಹಿಂದಿನ-ಇಂದಿನ-ಮುಂದಿನ ಅಥವಾ ಸಾರ್ವಕಾಲಿಕ ಸತ್ಯವನ್ನು-ತಥ್ಯವನ್ನು ಬೋಧಿಸಿದ, ಬೋಧಿಸಿ ಗುರುವಾದ! ಇವತ್ತಿಗೂ ಅದರ ಒಂದೊಂದು ಅಂಶವೂ ಅತಿಮೌಲ್ಯಯುತ. ಹಲವು ತೆರನಾದ ಮಾರ್ಗದರ್ಶಕರು, ನಿರ್ದೇಶಕರು, ನಿರ್ಮಾಪಕರು, ಸನ್ಯಾಸಿಗಳು, ವಿಜ್ಞಾನಿಗಳು ಕಾಯಂ ಅಭ್ಯಸಿಸುತ್ತ ಅಳವಡಿಸಿಕೊಳ್ಳಲು ಬಯಸುವ, ಜಗತ್ತಿಗೇ ಭಾರತಕೊಟ್ಟ, ಮಹಾಭಾರತ ಕೊಟ್ಟ ಮಹಾನ್ ಕೊಡುಗೆ ನಮ್ಮ ಭಗವದ್ಗೀತೆ. ಬ್ರಹ್ಮಲೀನ ಪೂಜ್ಯ ಶ್ರೀ ಜಯದಯಾಲ ಗೋಯಂದಕಾ ರವರು ಅತೀ ಕಡಿಮೆ ವೆಚ್ಚದಲ್ಲಿ ತನ್ನ ಸೇವಾರೂಪವಾಗಿ ಗೀತಾ ಪ್ರೆಸ್, ಗೋರಖಪುರ ಇದರಮೂಲಕ ಹರಿಸುತ್ತಿರುವ ಸೇವಾಸುಧೆ ಈ ಭಗವದ್ಗೀತೆಯ ಪ್ರತಿಗಳ ಪ್ರಸರಣೆ. ಗೀತಾಮೃತವನ್ನು ಅಂದು ಕರುಣಿಸಿದ ಶ್ರೀಕೃಷ್ಣನನ್ನೂ ಅದನ್ನು ಬಹುಭಾಷೆಗಳಲ್ಲಿ ಮುದ್ರಿಸಿ ಸ್ವಂತಖರ್ಚಿನಲ್ಲಿ ವಿತರಿಸಿದ ಶ್ರೀ ಜಯದಯಾಲರನ್ನೂ ಹಲವು ಬಾರಿ ನೆನೆಯೋಣ, ನಮ್ಮ ಹಲವು ಕಾರ್ಯಕ್ರಮಗಳಲ್ಲಿ ನಮ್ಮ ಪ್ರೀತಿಪಾತ್ರರಿಗೆ ಒಂದೊಂದು ಪ್ರತಿಯನ್ನು ಕೊಡುವ ಮೂಲಕ ಅದರಲ್ಲಿರುವ ಜ್ಞಾನವನ್ನು-ವಿಜ್ಞಾನವನ್ನು ಎಲ್ಲೆಡೆ ಪಸರಿಸೋಣ ಅಲ್ಲವೇ ?


ಶ್ರೀಕೃಷ್ಣನ ನೆನೆದು


ಗುರುತರದ ಭಾರ ನಗುಮೊಗದಿ ಹೊತ್ತು
ಸಿರಿ ಕೃಷ್ಣ ನಿಂತ ಜಗದಿ
ಅರಿವುಂಟುಮಾಡಿ ನಿಜ ಬದುಕಿನರ್ಥ
ತೆರೆದಿಟ್ಟ ಗೀತೆ ಇಹದಿ

ಬಲುನೋವ ಸಹಿಸಿ ನಲಿವೆಲ್ಲ ತ್ಯಜಿಸಿ
ಅಲೆದಲೆದು ರಾಜಕಾರ್ಯ
ನೆಲೆನಿಂತು ಹಲವು ಸಂಕುಲವ ನಡೆಸಿ
ಒಲಿದಿತ್ತ ಬಾಳು ನವ್ಯ

ನಡೆತಂದ ಬಡವ ಸ್ನೇಹದಿ ಕುಚೇಲ
ಒಡಹುಟ್ಟಿದಂತ ಪ್ರೀತಿ
ಒಡೆದಾಡಲಿಲ್ಲ ಬಡತನದ ಕಷ್ಟ
ಬಿಡುಗಣ್ಣಲರಿತ ರೀತಿ !

ಘನ ಘೋರ ಕ್ರೂರ ತನ್ನ ಮಾವ ಕಂಸ
ಅನಗತ್ಯವಾಗಿ ಜನರ
ಮನಬಂದರೀತಿ ಹುರಿದುಂಬ ಭೀತಿ
ನೆನೆದಲ್ಲಿ ಕೃಷ್ಣ ಕುವರ

ಹದಿನಾರು ಸಾವ್ರ ಹೆಂಗಳೆಯರನ್ನು
ಹುದುಗಿಟ್ಟು ಕಾರಾಗೃಹದಿ
ಹದಮೀರಿ ನಡೆದ ನರಕಾಸುರನ್ನ
ಸದೆಬಡಿದು ಬಿಡಿಸಿ ಭರದಿ

ಇದಕಂಡ ನಮ್ಮ ಬಹು ಜನತೆಯೆಲ್ಲ
ವದರಿದರು ಕಪಟನೆನುತ
ಎದುರಿರುವ ಸತ್ಯ ಅರಿತಿಲ್ಲ ಕೊನೆಗೂ
ಬದುಕನ್ನು ನೀಡ್ದ ಪಾಠ

ಕೌರವಗೆ ಸಾರಿ ಪ್ರತಿ ಬಾರಿ ಬಾರಿ
ರೌರವದ ನರಕ ನೆನೆದು
ಗೌರವಕೆ ಕುತ್ತು ತಂದಿತ್ತ ಹೊತ್ತು
ಸೌರವಗೂ ವಿಷಯ ಪೇಳ್ದು

ನವನೀತ ಕಳ್ಳ ಹೆಂಗಸರ ಮಳ್ಳ !
ಭವರೋಗ ವೈದ್ಯ ನಿನ್ನ
ಅವನಿಯೊಳು ಜನತೆ ಆಡಿಹರು ಹಲವು
ಅವತಾರಿ ಕ್ಷಮಿಸೊ ಮುನ್ನ


ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೇ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ ||

Friday, June 18, 2010

ಐಲವಾಯು!


ಐಲವಾಯು!

ಪ್ರಾಣವಾಯು, ಅಪಾನವಾಯು, ಉದಾನವಾಯು ಇವುಗಳ ಬಗ್ಗೆಲ್ಲ ತಿಳಿದಿರುವುದು ಸಹಜ. ಯಾಕೆಂದರೆ ಅವೆಲ್ಲ ಶರೀರದ ವ್ಯವಸ್ಥೆಗೆ ಸಂಬಂಧಿಸಿದ್ದಾಗಿರುವುದರಿಂದ ಅವು ಜೀವನದ ಹಲವು ಘಟ್ಟಗಳಲ್ಲಿ ಸುದ್ದಿಗೆ ಬರುವಂತ ವಿಷಯಕ್ಕೆ ವಸ್ತುಗಳು. ಆದರೆ ಐಲವಾಯು ಎಂಬುದೊಂದಿದೆ ಎಂದರೆ ನೀವು ಆಶ್ಚರ್ಯಪಡಬೇಕು! ವಸ್ತುಶಃ ನಿಜ ಇದು! ಹೌದಾ ಹಾಗಾದ್ರೆ ಎಷ್ಟೆಲ್ಲಾ ವಿಜ್ಞಾನ ತತ್ವಜ್ಞಾನ ಪುಸ್ತಕಗಳನ್ನು ಮತ್ತು ವೇದ ಪುರಾಣಗಳನ್ನೂ ಓದಿದ್ದೇವೆ, ಅನೇಕ ಕವಿ-ಸಾಹಿತಿಗಳ ಕೃತಿಗಳನ್ನೊ ಓದಿದ್ದೇವೆ. ಇದುವರೆಗೆ ನಾವು ಈ ವಾಯುವಿನ ಬಗ್ಗೆ ಕೇಳಲೇ ಇಲ್ಲವಲ್ಲ ಎಂದು ಕಾತುರಾಗುವುದು ಸಹಜ. ಈ ವಾಯುವಿನ ಸಂಶೋಧನೆ ಸುಮಾರು ೨೦-೨೧ ವರ್ಷಗಳ ಹಿಂದೆ ನಡೆಯಿತು. ಇದರ ಸಂಶೋಧನೆಗೆ ಬಹಳ ಕಾಲ ಹಿಡಿಯಲಿಲ್ಲವಾದರೂ ಇದರ ಪರಿಶೋಧನೆಗೆ ಪರಿತಪಿಸಬೇಕಾಗಿತ್ತು! ಹೀಗಾಗಿ ಈ ವಾಯುವಿಗಿರುವ ಮೌಲ್ಯ ಜಗತ್ತಿನಲ್ಲಿ ಇಂದಿಗೂ ಬೇರಾವ ವಾಯುವಿಗೂ ಇಲ್ಲ!

ಸರಿಸುಮಾರು ೨೦-೨೧ ವರ್ಷಗಳ ಹಿಂದೆ ನಮ್ಮ ಕರಾವಳಿಯ ಹಳ್ಳಿಯ ರಸ್ತೆಗಳಲ್ಲಿ ಸೈಕಲ್ ಗಳದೇ ಕಾರುಬಾರು! ಯಾಕೆಂದರೆ ಸೈಕಲ್ ಬಡವರ-ಜನಸಮಾನ್ಯರ ಬದುಕಿನ ಜೀವನಾಡಿ ಅಲ್ಲವೇ? ಹೀಗಾಗಿ ತುಂಬಾ ಮಂದಿ ಉಪಯೋಗಿಸುವ ಅಗ್ಗದ ವಾಹನವೆಂದರೆ ಸೈಕಲ್. ಎಷ್ಟೋ ಮನೆಗಳಲ್ಲಿ ಕಾರು, ಜೀಪುಗಳಿದ್ದರೂ ಅರ್ಜೆಂಟಿಗೆ ಅಂತ ಒಂದು ಸೈಕಲ್ ಇದ್ದೇ ಇರುತ್ತಿತ್ತು. ಯಾವುದೇ ಇಂಧನವನ್ನು ಬೇಡದ ನಾವು ತುಳಿದಂತೆ ನಡೆಯುವ ಬಡಪಾಯಿ ಸಂಗಾತಿ ಇದು. ಇಂತಹ ಸೈಕಲ್ ಗಳನ್ನು ಒಬ್ಬೊಬ್ಬರು ಒಂದೊಂದು ರೀತಿ ಇಟ್ಟುಕೊಳ್ಳುತ್ತಿದ್ದರು.

ಕೆಲವರು ಮಳೆಗಾಲ ಪ್ರಾರಂಭವಯಿತೆಂದರೆ ಅದಕ್ಕೆ ತುಕ್ಕು ಹಿಡಿಯದಿರಲೆಂದು ರಿಮ್ಮು, ಜಿಮ್ಮು ಹೊಳೆಯುವ ಭಾಗಗಳುಗಳಿಗೆಲ್ಲ ಚಿನ್ನದ ಬಣ್ಣದ ಯಾವುದೋ ದ್ರವ್ಯವನ್ನು ಲೇಪಿಸುತ್ತಿದ್ದರು. ಇನ್ನು ಕೆಲವರು ಸೈಕಲ್ಲಿಗೆ ಅಲಂಕಾರವನ್ನು ಬಹಳ ಕಾಳಜಿಯಿಂದ ಮಾಡುತ್ತಿದ್ದರು. ಅದಕ್ಕೆ ಹಿಡಿಕೆ[ಹ್ಯಾಂಡಲ್]ಗೆ ಮೆತ್ತಗಿನ ರಬ್ಬರಿನ ಕವಚ, ಸೀಟಿಗೆ ಬಹುಬಣ್ಣದ ಲೇಟೆಸ್ಟ್ ಕವರು, ಸೀಟಿನ ಮುಂದಿನ ಹಾರೆಗೆ ಲೇಸು ಹಚ್ಚಿದ ಪ್ಲಾಸ್ಟೀಕು ಕವರು, ಮಡ್ ಗಾರ್ಡ್ ಕೊನೆಗೆ ಬಲೂನು ಆಕೃತಿಯ ರಬ್ಬರ್ ಹಾಳೆ, ಚಕ್ರಗಳ ನಡುವೆ ಸುತ್ತುವ ಬಣ್ಣ ಬಣ್ಣಗಳುಳ್ಳ ಗೊಂಡೆಯ ದಂಡೆ, ಬ್ರೇಕಿನ ಹಿಡಿಕೆಗೆ ಯಾವುದಾದರೂ ಬಣ್ಣದ ಪ್ಲಾಸ್ಟಿಕ್ ಕವರು ಹೀಗೆ ಸರ್ವರೀತಿಯಲ್ಲಿ ಒಳ್ಳೇ ಮದುಮಗಳು ಸಜ್ಜುಗೊಂಡಂತೆ ರೆಡಿಯಾಗುತ್ತಿತ್ತು ಸೈಕಲ್ಲು. ಕೆಲವರು ಹಳ್ಳಿಗಳಲ್ಲಿ ದಿನಾಲೂ ಎಮ್ಮೆ ಮೀಸಿದಂತೆ ಸೈಕಲ್ಲನ್ನೂ ಮೀಸುತ್ತಿದ್ದರು. ಹಳ್ಳಿಗಳ ಮಣ್ಣು ರಸ್ತೆಗಳಲ್ಲಿ ಓಡಾಡಿ ಕೊಳೆ ಹಿಡಿದ ಸೈಕಲ್ಲಿನ ಗಾಲಿಗಳು ತೊಳೆದು ನಿಲ್ಲಿಸಿದಾಗ ಹೊಸದೇನೋ ಎನ್ನಿಸುವಷ್ಟು ಮಿರಿಮಿರಿ ಮಿಂಚುತ್ತಿದ್ದವು. ಬಹುಶಃ ಜೀವವಿದ್ದರೆ ಆ ಸೈಕಲ್ಲಿಗೆ ಸ್ನಾನಮಾಡಿಸಿ ಮೈಯ್ಯುಜ್ಜಿಕೊಟ್ಟಾಗ ತುಂಬಾ ಹಾಯೆನಿಸುತ್ತಿತ್ತೋ ಏನೋ! ಅಂತೂ ಸೈಕಲ್ಲುಗಳು ದಿನಾಲೂ ತಯಾರಿಗೊಳ್ಳುವ ಸುಂದರ ವಧುಗಳಾಗಿದ್ದವು! ಆದರೆ ಈ ವಧುಗಳಿಗೆ ಗಂಡು ಬೇಕಾಗಿರಲಿಲ್ಲ ಅಷ್ಟೇ!

ಆ ಕಾಲದಲ್ಲಿ ಇವತ್ತಿನ ರೀತಿಯಲ್ಲಿ ಮನೆಮನೆಯಲ್ಲಿ ಟಿವಿಗಳಿರಲಿಲ್ಲ. ಅಸಲಿಗೆ ಬಾಂಬೆ ಯಿಂದ ಬಂದ ನಮ್ಮ ಪಕ್ಕದ ಮನೆಯ ಚಿಕ್ಕಪ್ಪ ಟಿವಿ ಸುದ್ದಿ ಹೇಳುತ್ತಿದ್ದರೆ ನಾವೆಲ್ಲಾ ಕಣ್ಣನ್ನು ಹಿಗ್ಗಿಸಲಾಗುವಷ್ಟೂ ಹಿಗ್ಗಿಸಿ, ಕತ್ತು ಉದ್ದಮಾಡಿ, ಶಿಸ್ತಾಗಿ ಕೂತು ಕೇಳುವ ಅತಿಕೌತುಕದ ವಿಷಯ ಅದಾಗಿತ್ತು! ಟಿವಿ ಹೇಗಿರುತ್ತದೆ ಅದರಲ್ಲಿ ಹೊರಗಿನ ಜನ ಯಾರಿಗೂ ತಿಳಿಯದಂತೆ ಒಳಗೆ ಬಂದು ಹೇಗೆ ಕುಣಿಯುತ್ತಾರೆ ಎಂಬುದು ಅರ್ಥವಾಗುತ್ತಿರಲಿಲ್ಲ. ಅದರ ಪ್ರಸಾರ ಹೇಗೆ ಎಂಬುದು ಪ್ರಾಯಶಃ ಆ ನಮ್ಮ ಚಿಕ್ಕಪ್ಪನಿಗೂ ಆಗ ತಿಳಿದಿರಲಿಲ್ಲ. ಕಪ್ಪು-ಬಿಳುಪು ಬಣ್ಣದಲ್ಲಿ ಕಾಣಿಸುತ್ತಿತ್ತಂತೆ. ಅಪರೂಪಕ್ಕೆ ವರುಷಕ್ಕೊಮ್ಮೆ ಬರುವ ಆ ಚಿಕ್ಕಪ್ಪ ಬರುವ ದಾರಿಯಲ್ಲಿ ಧಾರವಾಡದ ಪೇಡಾವನ್ನು ತರುತ್ತಿದ್ದರು. ಅವರ ಮನೆಯ ಸಹೋದರರ ಮಕ್ಕಳಿಗೂ ಸೇರಿದಂತೆ ನಮಗೂ ಅದರಲ್ಲಿ ಪಾಲು ಕೊಡುತ್ತಿದ್ದರು. ಅದರ ಅದ್ಬುತ ರುಚಿ ಮರೆಯಲಾರದ ’ಸ್ವಾಹಾನುಭವ’! ಅವರು ಊರಿಗೆ ಬಂದಾಗ ಆಗೀಗ ಕಾರಣಮಾಡಿಕೊಂಡು ಅವರನ್ನು ಮಾತಾಡಿಸಲು ಹೋಗುವುದಿತ್ತು. ನಮಗೆ ಬರಬಹುದಾದ ಸಂಭಾವನೆ ಬರಲಿ ಎಂಬ ’ಮಾಮೂಲೀ’ ಕೇಳುವ ವಿಸಿಟ್ ಅದಾಗಿರುತ್ತಿತ್ತು. ಪಾಪ ಆ ಚಿಕ್ಕಪ್ಪ ಬರಿಗೈಲಿ ಎಂದಿಗೂ ವಾಪಸ್ಸು ಕಳಿಸುತ್ತಿರಲಿಲ್ಲ. ಅವರಿಗೆ ಬಾಂಬೆಯ ಜೀವನ ಅಭ್ಯಾಸವಾಗಿಹೋದಂತಿತ್ತು. ಊಟಕ್ಕೆ ಚಪಾತಿಯೇ ಇರಬೇಕಾಗುತ್ತಿತ್ತು. ದಿನಾಲೂ ದಾಡಿಮಾಡಿಕೊಳ್ಳಬೇಕಾಗುತ್ತಿತ್ತು. ಆಗಾಗ ಅವರು ತಮ್ಮ ಮಕ್ಕಳು ಅತ್ತರೆ ಸುಮ್ಮನಿರಿಸಲು ಶುಶ್ರಾವ್ಯವಾಗಿ ಓಂ ಜೈ ಜಗದೀಶಹರೇ ಹಾಡನ್ನು ಹಾಡುತ್ತಿದ್ದರು. ಹೀಗಾಗಿ ನಮಗೆಲ್ಲರಿಗೆ ಏನಾದರೊಂದು ಹೊಸತನ್ನು ವರುಷಕ್ಕೊಮ್ಮೆ ತರುವ ಕ್ರಿಸ್ ಮಸ್ ತಾತನಂತೆ ಅವರಾಗಿದ್ದರು!

ಚಿಕ್ಕವರಿರುವಾಗ ನಾವು ಅಷ್ಟಾಗಿ ಸಿನಿಮಾ ನೋಡಿರಲಿಲ್ಲ. ಒಮ್ಮೆ ನಮ್ಮ ಬಾಂಬೇ ಚಿಕ್ಕಪ್ಪ ಬಂದಾಗ ನಾವೆರಡು-ಮೂರು ಮನೆಯವರು ಸೇರಿ ಬಾಡಿಗೆ ಕಾರು ಹಿಡಿದು ಸಿನಿಮಾ ನೋಡಬೇಕೆಂದು ತೀರ್ಮಾನವಾಯಿತು. ಅದು ಯಾವುದೋ ನಮ್ಮ ಅಣ್ಣಾವ್ರ ಸಿನಿಮಾ. ಅಂಬಾಸಿಡರ್ ಕಾರಿನಲ್ಲಿ ಕಮ್ಮೀ ಕಮ್ಮೀ ಅಂದರೂ ಹದಿನಾಲ್ಕು ಜನ ಹಿಡಿಸುತ್ತಿದ್ದರು! ಆ ಕಮ್ಪನಿಯ ಕಾರು ಇವತ್ತಿಗೂ ಅದೇ ತನ್ನತನ ಉಳಿಸಿಕೊಂಡಿದೆ-ಆದರೆ ಸೀಟು ಅಷ್ಟೊಂದು ಹಿಡಿಸುವುದಿಲ್ಲ ಈಗ! ಹಾಳಾದ ಜ್ವರ ನನಗೆ ಅದೇದಿನ ಒಕ್ಕರಿಸಬೇಕೆ? ನಾನು ಹೋಗಲು ನಮ್ಮ ಮನೆಯ ಹಿರಿಯರು ಅಪ್ಪಣೆಕೊಡಲಿಲ್ಲ. ಮ್ಯಾಟನಿ ಬಿಟ್ಟು ಮಿಕ್ಕುಳಿದ ಶೋ ಗೆ ಹೋದರೆ ನಟನಟಿಯರಿಗೆ ಸುಸ್ತಾಗಿಬಿಟ್ಟಿರುತ್ತದೆ ಅವರು ಚೆನ್ನಾಗಿ ಆಕ್ಟ್ ಮಾಡುವುದಿಲ್ಲ ಹೀಗಾಗಿ ಇನ್ನೊಮ್ಮೆ ಮುಂದಿನವಾರ ಇನ್ನಷ್ಟು ಜನ ಸೇರಿ ಹೋಗೋಣ ಎಂದಿದ್ದರು ನಮ್ಮ ಚಿಕ್ಕಪ್ಪ. ಹೇಗಾದರೂ ಮಾಡಿ ಸಿನಿಮಾಗೆ ಅವರೊಟ್ಟಿಗೆ ಹೋಗುವ ಆಸೆ. ಆಂತೂ ಕೂಗಿ ಕಬ್ಬರಿದು ಹಠಮಾಡಿದ ಮೇಲೆ ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟ ಹಾಗೇ ಅನುಮತಿ ಸಿಕ್ಕಿತು. ನನಗೆ ಆಗಾದ ಸಂತೋಷ ಬಹುತೇಕರಿಗೆ ದೇಶಕ್ಕೆ ಸ್ವಾತಂತ್ರ್ಯಬಂದಾಗಲೂ ಆಗಿರಲಿಕ್ಕಿಲ್ಲ!

ಅಂತೂ ನಾನೂ ಸೇರಿದಂತೆ ನಾವು ಸಿನಿಮಾ ನೋಡಲು ಹೊರಟೆವು. ಕಿರ್ರನೆ ಕಿರುಚಿದ ಬೆಲ್ಲು ನಮಗೆ ಹೊಸದು. ಒಮ್ಮೆ ನಾವೆಲ್ಲಾ ಬೆಚ್ಚಿದೆವು-ಕಾಡಿನಿಂದ ನಾಡಿಗೆ[ಊರಿಗೆ]ಬಂದ ಜಿಂಕೆಮರಿಗಳ ಸ್ಥಿತಿ ನಮ್ಮದಾಗಿತ್ತು. ಸಿನಿಮಾ ಶುರುವಿಟ್ಟಿತು. ಅದೇನೋ ಬಾಲ್ಕನಿಯಂತೆ ಅದರಲ್ಲಿ ಕುಳಿತುಕೊಂಡಿದ್ದೆವು. ಜನ್ಮದಲ್ಲಿಯೇ ನೋಡಿರದ ಮೆತ್ತನ ಸೀಟುಗಳನ್ನು ಬಹಳಸಲ ಮುಟ್ಟಿ ಮುಟ್ಟಿ ನೋಡಿದೆವು. ಓ ಬದುಕೇ ನೀನೆಂಥ ಸುಂದರ! ಸ್ವರ್ಗದಲ್ಲಿರುವಷ್ಟು ಸುಖಪಟ್ಟೆವು! ಸಿನಿಮಾದಲ್ಲಿ ಅನೇಕ ಪಾತ್ರಧಾರಿಗಳು ಬಂದು ಹೋಗುತ್ತಿದ್ದರು.ನಡು ನಡುವೆ ಅಂದಿನ ಸಿನಿಮಾಗಳಲ್ಲಿ ಸ್ಲೋ ಮೋಶನ್ ಇರುತ್ತಿತ್ತು. ಆಗೆಲ್ಲ ನಾನಂದುಕೊಳ್ಳುವುದು ಅಜ್ಜ ಹೇಳಿದ್ದು ನಿಜ-ಪಾತ್ರಧಾರಿಗಳಿಗೆ ಕುಣಿದೂ ಕುಣಿದೂ ಸುಸ್ತಾಗಿಬಿಟ್ಟಿದೆ ಪಾಪ! ಪಾತ್ರಧಾರಿಗಳು ಎಲ್ಲಿರುತ್ತಾರೆ ಮತ್ತು ಹೇಗೆ ವೇದಿಕೆಯ ಮೇಲೆ ಬರುತ್ತಾರೆ ಎಂಬುದು ತಿಳಿದಿರಲಿಲ್ಲ. ನಮ್ಮ ಮೇಲ್ಗಡೆ ಇರುವ ಮಹಡಿಯಿಂದ ಪರದೆಯ ಹಿಂದುಗಡೆಗೇ ನೇರ ಇಳಿಯಲು ವ್ಯವಸ್ಥೆ ಇದೆ ಎಂದುಕೊಂಡಿದ್ದೆ ನಾನು. ಬಾಯಿತೆಗೆದರೆ ಸಿನಿಮಾನೋಡುವಾಗ ಮಾತನಾಡಬೇಡ ಎನ್ನುತ್ತಿದ್ದರು ನಮ್ಮ ಗುಂಪಿನವರು. ಅವರಿಗೆಲ್ಲ ಸಿನಿಮಾ ಅರ್ಥವಾಗುತ್ತಿತ್ತು. ನನಗೆ ವಯಸ್ಸು ೮-೯ ಇರುವುದರಿಂದ ಅಷ್ಟೊಂದು ಅರ್ಥಮಾಡಿಕೊಳ್ಳುವ ಮನೋ ಬೆಳವಣಿಗೆ ಅಂದಿಗೆ ಆಗಿರಲಿಲ್ಲ. ಹೀಗಾಗಿ ನನ್ನ ಕುತೂಹಲವಿರುವುದು ನಟ-ನಟಿಯರು ಎಲ್ಲಿರುತ್ತಾರೆ ಮತ್ತು ಹೇಗೆ ಅಷ್ಟು ಬೇಗ ದಿರಿಸುಗಳನ್ನು ಮತ್ತು ಇನ್ನಿತರ ಚಪ್ಪಲಿ ಮುಂತಾದವಸ್ತುಗಳನ್ನು ಬದಲಿಸಿಕೊಂಡು ಬರುತ್ತಾರೆ ಎಂಬುದರ ಮೇಲಿತ್ತು. ಅರ್ಥವಾಗಿರಲಿಲ್ಲ-ಅರ್ಥ ಮಾಡಿಸಿದವರೂ ಇಲ್ಲ. ಜ್ವರ ಬಂದಿದೆಯೆಂಬ ಕಾರಣಕ್ಕೆ ಹೋಗದಂತೆ ತಡೆಯಲು ಚಿಕ್ಕಪ್ಪ ಆರೋಗ್ಯದ ಹಿತಾರ್ಥ ಹೇಳಬೇಕಾಗಿ ಬಂದು ಹೇಳಿದ ಆ ಸುಳ್ಳು ಬಹುವರ್ಷಗಳವರೆಗೆ [೩-೪ ವರ್ಷಗಳವರೆಗೆ] ಹಾಗೇ ಅಚ್ಚೊತ್ತಿ ಬೇರೇ ನನ್ನ ಸಹಪಾಠಿಗಳಿಗೆಲ್ಲ ನನಗೆ ಸಿನಿಮಾ ಬಗ್ಗೆ ಬಹಳಗೊತ್ತಿರುವವನಂತೆ ಅದನ್ನೇ ಮನದಟ್ಟು ಮಾಡಿಸಿದ್ದೆ! ಅಂತೂ ಕೆಲವರುಷ ನಮ್ಮಲ್ಲಿಯ ಯಾವ ಮಕ್ಕಳೂ ಮ್ಯಾಟನಿ ಶೋ ಬಿಟ್ಟು ಮಿಕ್ಕುಳಿದ ಶೋ ಗಳಿಗೆ ಹೋಗುತ್ತಿರಲಿಲ್ಲ. ಇದೊಂಥರ ಕೂಗುಮಾರಿಯ ಹಬ್ಬುರೋಗದಂತೆ ಮಕ್ಕಳಲ್ಲೇ ಸುತ್ತುಹಾಕುತ್ತಿತ್ತು!

ಆ ಕಾಲದಲ್ಲಿ ಶಹರಗಳಲ್ಲಿ ಸಿನಿಮಾಗಳು ಬಿಡುಗಡೆಯಾದ ನಂತರ ಅವುಗಳ ಹೆಸರಿನಲ್ಲಿ ಅನೇಕ ವಸ್ತುಗಳು ಬರುತ್ತಿದ್ದವು. ಅಥವಾ ಅನೇಕ ವಸ್ತುಗಳ ಮೇಲೆ ಸಿನಿಮಾ ಹೆಸರೋ, ನಟ-ನಟಿಯರ ಹೆಸರೋ, ಯಾವುದೋ ಸಣ್ಣ ಡೈಲಾಗೋ ಅಚ್ಚಿಸಲ್ಪಟ್ಟು ಮಾರಾಟ ಜಾಸ್ತಿಮಾಡಿಸಿಕೊಳ್ಳುತ್ತಿತ್ತು! ಹೀಗಿರುವಾಗ ನಮ್ಮ ಮಿತ್ರ ಸೈಕಲ್ಲಿನ ಅನೇಕ ಕವರುಗಳ ಮೇಲೆ ಕೂಡ ಅಂತಹ ಅಕ್ಷರಗಳು ಬಣ್ಣ ಬಣ್ಣಗಳಲ್ಲಿ ಪ್ರಿಂಟ್ ಆಗಿರುತ್ತಿದ್ದವು. ಅವುಗಳನ್ನೆಲ್ಲ ಕೈಯ್ಯಲ್ಲಿ ಮುಟ್ಟಿನೋಡಿ ಹೇಗೆ ಮುದ್ರಿಸಿರಬಹುದು ಎಂಬುದನ್ನು ತಿಳಿದುಕೊಳ್ಳುವ ಆಸೆಯಾಗುತ್ತಿತ್ತು. ಹಲವ್ಯ್ ಸೈಕಲ್ ಓನರ್ ಗಳಿಗೆ ಬಗೆಬಗೆಯ ಚಿತ್ತಾರ-ಹೆಸರು ಮುದ್ರಿಸಿದ ಕವರುಗಳನ್ನು -ಲೇಟೆಸ್ಟ್ ಆಗಿ ಬಂದವುಗಳನ್ನು ಹಾಕಿಕೊಳ್ಳುವುದು ಘನತೆಯ ಪ್ರಶ್ನೆಯಾಗಿತ್ತು! ಹೀಗೇ ಹಲವಾರು ಮುದ್ರಿತ ಅಕ್ಷರಗಳ ಸೀಟ್ ಕವರ್ ಗಳಲ್ಲಿ ಒಂದರಮೇಲೆ ನನ್ನ ಸ್ನೇಹಿತನೊಬ್ಬ ಓದಿದ್ದು ’ ಐಲವಾಯು’! ಓದಿದ್ದೇ ಓದಿದ್ದು ಅವನಿಗೆ ಅದರ ಅರ್ಥ ತಿಳಿಯಲಿಲ್ಲ, ಅರ್ಥ ತಿಳಿಯುವ ಕುತೂಹಲವಾಯಿತು. ಆ ಕ್ಷಣದಿಂದ ನಮ್ಮಿಬ್ಬರದೂ ಅದರ ಅರ್ಥವೇನು, ಅದು ಯಾವ ಭಾಷೆಯ ಶಬ್ಧ, ಅದು ಯಾವ ಸಿನಿಮಾ ಹೆಸರು ಎಂಬುದನ್ನು ತಿಳಿಯುವ ಬೇಟೆಗೆ ಚಾಲನೆ ನೀಡಲಾಯಿತು.

ಹೀಗೆ ಪ್ರಾರಂಭವಾದ ಬೇಟೆಯಲ್ಲಿ ಯಾರೂ ನಮಗೆ ಅದರ ಅರ್ಥ ಹೇಳುವವರಿರಲಿಲ್ಲ! ಮುದುಕರಿಗೆ ಅದರಬಗ್ಗೆ ಗೊತ್ತಿಲ್ಲ-ಗಂಧಗಾಳಿ ಇಲ್ಲ, ಯುವಕರಿಗೆ ಬಹಳ ಅಧೀಕ್ಷಣಿ-ಅವರು ಹೇಳುವುದಿಲ್ಲ! ಯಾರನ್ನು ಹಿಡಿಯುವುದು. ಚಿಂತಿಸಿ ಕೊನೆಗೊಮ್ಮೆ ಕಾಲೇಜಿಗೆ ಹೋಗುವ ಕೆಲವು ಹೆಣ್ಣುಮಕ್ಕಳ ಹತ್ತಿರ ಕೇಳಿದೆವು- ಅವರೆಲ್ಲ ಪಿಸಪಿಸನೇ ನಕ್ಕು ಸುಮ್ಮನಾದರು. ಪಾಪ ನಮ್ಮ ಪಾಡು ಬೇಡ! ಧೈರ್ಯಗೆಡಲಿಲ್ಲ! ಧೈರ್ಯಂ ಸರ್ವತ್ರ ಸಾಧನಂ!--ಮೇಷ್ಟ್ರು ಹೇಳಿದ್ದರು. ಒಂದು ವಿಷೇಶವೆಂದರೆ ನಮ್ಮ ಊರಲ್ಲಿ ನಾವು ಗಂಡು ಟೀಚರ್ ಗಳನ್ನಲ್ಲದೇ ಹೆಣ್ಣು ಟೀಚರ್ ಗಳನ್ನೂ ’ಸರ್’ ಎಂದೇ ಸಂಬೋಧಿಸುತ್ತಿದ್ದೆವು! ನಮಗೆ ಪಾರಿಭಾಷಿಕ ಶಬ್ಢದ ಅರ್ಥ ಗೊತ್ತಿರದೆ ಆ ವಿಪರ್ಯಾಸ ನಡೆಯುತ್ತಿತ್ತು. ಆದರೂ ಚಿಕ್ಕಮಕ್ಕಳೆಂಬ ಕಾರಣಕ್ಕೋ ಅಥವಾ ಅವರಲ್ಲಿಯೂ ಹಲವರಿಗೆ ಆಂಗ್ಲ ಭಾಷೆ ಬರದೇ ಇದ್ದುದಕ್ಕೋ ಯಾರೂ ನಮಗೆ ಹಾಗೆ ಹೇಳಬಾರದು ಎಂದು ಹೇಳಿಕೊಟ್ಟಿದ್ದಾಗಲೀ ತಾಕೀತುಮಾಡಿದ್ದಾಗಲೀ ಇರಲಿಲ್ಲ! ’ಸರ್’ ಎಂಬುದು ಲಿಂಗಭೇದವನ್ನು ಅವಲಂಬಿಸಿದ್ದು ಎಂಬುದು ನಮಗಂದಿ ತಿಳಿದಿರಲಿಲ್ಲ. ’ಸರ್’ ಎಂಬುದೊಂದು ದೊಡ್ಡ ಗೌರವವಾಚಕ ಶಬ್ಧ ಎಂದೇ ತಿಳಿದ ಮೂರ್ಖ ವಿದ್ಯಾರ್ಥಿಗಳು ನಾವಾಗಿದ್ದೆವು. ಇರಲಿ.

ಅಂತೂ ಮೋದಲೇ ಹೇಳಿದಂತೆ ಧೈರ್ಯದಿಂದ ನಮ್ಮ ಬೇಟೆ ಮುಂದುವರಿಯಿತು. ನಮ್ಮಲ್ಲಿರುವ ಸರ್ವಶಕ್ತಿಯನ್ನೂ ಉಪಯೋಗಿಸಿ ಸುತ್ತುತ್ತ ಕೇಳುತ್ತಿದ್ದೆವು. ಒಂದುದಿನ ಯಾವುದೋ ಪಕ್ಕದ ಹಳ್ಳಿಯ ಕಾಲೇಜು ಕನ್ಯೆಯೊಬ್ಬಳು ದಾರಿಯಲ್ಲಿ ಸಿಕ್ಕಳು. ಅವಳಲ್ಲಿ ಕೇಳಿ ನೋಡೊಣ ಎಂದುಕೊಂಡು ಹತ್ತಿರಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ನನ್ನನ್ನು ದುರುಗುಟ್ಟಿ ನೋಡಿದ ಆ ಹುಡುಗಿ ನನ್ನ ಸ್ನೇಹಿತನಿಗೆ ಕಪಾಳಮೊಕ್ಷ ಕಾಣಿಸಿದಳು. ನಮ್ಮ ಪ್ರಸಾದವೆಲ್ಲ ಒಣಗಿಹೋಗಿ ಅ ದಿನದಿಂದ ಬಹಳಕಾಲದವರೆಗೆ ’ ದೈರ್ಯಂ ಸರ್ವತ್ರ ಸಾಧನಂ ’ ಹೇಳಿಕೆಯನ್ನು ಹೇಳಿಕೊಟ್ಟವರಿಗೆ ಮನಸ್ಸಿನಲ್ಲೇ ಗೊತ್ತಿರುವ ಶಾಪ ಹಾಕುತ್ತ ಆ ಹೇಳಿಕೆಯನ್ನು ಹಾಗೇ ಪಕ್ಕಕ್ಕೆ ತಳ್ಳಿದ್ದೆವು.

ಕಾಲಾನಂತರದಲ್ಲಿ ಯಾವುದೋ ಒಂದುದಿನ ಇನ್ನೊಂದು ಸೈಕಲ್ ಮೇಲೆ ಅದೇ ಬರಹ ಕಂಡಿತು. ಅದು 'ಐ ಲವ್ ಯೂ' ಎಂಬುದು ನಮಗೆ ಗೊತ್ತಾಗಿದ್ದು ಆ ದಿನ. ಅದರ ಅರ್ಥವನ್ನು ಸ್ವಲ್ಪ ಸ್ವಲ್ಪ ಸಹಜವಾಗಿ ತಿಳಿದುಕೊಳ್ಳುವ ಮಟ್ಟಿಗೆ ನಾವು ಬೆಳೆದಿದ್ದೆವು. ಆದರೆ ಆ ಪದದ ಬಳಕೆಯನ್ನು ಮಾತ್ರ ಇನ್ನೆಂದೂ ಮಾಡಬಾರದಷ್ಟು ನಿಶ್ಚೇಷ್ಟಿತಗೊಂಡ ಮನಸ್ಸು ನಮ್ಮದಾಗಿತ್ತು! ಹೀಗೆ ಜೀವನದಲ್ಲಿ ಇದುವರೆಗೂ ಕೂಡ ಈ ಐಲವಾಯುವನ್ನು ಉಪಯೋಗಿಸುವಾಗ ಬಹಳ ಜಾಗರೂಕರಾಗಿರುತ್ತಿದ್ದೇವೆ. ಯಾವುದು ಜಗತ್ತಿನಲ್ಲಿ ಪ್ರಾಮುಖ್ಯವೋ ಅದರ ಅರ್ಥಗೊತ್ತಿರದೇ ಅಪಾತ್ರರಿಗೆ ಅದನ್ನು ಹೇಳಿಕೊಂಡಾಗ ಆದ ಅಪಘಾತ, ಈಗಲೂ ಆತಂಕ ಒಡ್ಡುತ್ತದೆ. ಐಲವಾಯು ವಿನ ಮಹಾತ್ಮೆಯೇ ಹಾಗೆ. ಎಲ್ಲಸ್ನೇಹಿತರಮೇಲೂ ಪ್ರೀತಿಯಿಂದ, ಸ್ನೇಹದಿಂದ, ಅಕ್ಕರೆಯಿಂದ, ಮಮತೆಯಿಂದ, ವಾತ್ಸಲ್ಯದಿಂದ ’ಐಲವಾಯು’ ಶಬ್ಧ ಪ್ರಯೋಗಿಸಲೇ ? ಯಾಕೆಂದರೆ ಅದರ ವಿಸ್ತಾರ ಬಹುದೊಡ್ಡದು ಅಲ್ಲವೇ?

Thursday, June 17, 2010

ಗೋವು ಮತ್ತು ಮಾನವ



ಗೋವು ಮತ್ತು ಮಾನವ


ಇದುವರೆಗೆ ತಾವೆಲ್ಲ ಗೋವಿನ ಬಗ್ಗೆ ಕೇಳುತ್ತಲೇ ಬಂದಿದ್ದೀರಿ. ಇದು ಇತ್ತೆಚೆಗೆ ಬಹಳ ದೊಡ್ಡ ಚರ್ಚಾ ವಿಷಯವಾಗಿದೆ ಕಾರಣ ಸರಕಾರ ಗೋಹತ್ಯಾ ನಿಷೇಧ ಮಸೂದೆಯನ್ನು ಜಾರಿಗೊಳಿಸಲಿದೆ. ಇದರ ಕುರಿತು ನಮ್ಮ ಕೆಲವು ಕುರಿ ಸಾಹಿತಿಗಳು ಬೀದಿಗಿಳಿದಿದ್ದಾರೆ. ಅವರು ಪ್ರಜ್ಞಾಶೂನ್ಯರಾಗಿ,ಹಿತ್ತಾಳೆ ಕಿವಿಯವರಾಗಿ ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಹುತೇಕ ಬುದ್ಧಿಜೀವಿಗಳೆನಿಸಿ ಅರ್ಧ ಜೀನ್ಸ್ ಮತ್ತು ಮೇಲರ್ಧ ಕುರ್ತಾ ಹಾಕಿ, ಹಳ್ಳಿಗಳಲ್ಲಿ ಹಾವುಗೋಲರು ಬಳಸುವಂತ ಚೀಲವನ್ನು ಹೆಗಲಿಗೆ ಹಾಕಿ ಹೊರಟರೆ ಯವುದೇ ರಾಜಕೀಯ ಮಾಡಲೂ ಹಿಂದೆಗೆಯುವ ಮನೋವೃತ್ತಿ ಅವರದಲ್ಲ. ಒಮ್ಮೊಮ್ಮೆ ಅನಿಸುತ್ತದೆ ಇಂಥವರಿಗೆಲ್ಲ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದಾರಲ ಎಂಬುದು, ಆದರೂ ನನಗೆ ನಾನೇ ಅಂದುಕೊಂಡಿದ್ದೇನೆ ಅವರಿಗೆಲ್ಲ ಕೊಟ್ಟ ಪ್ರಶಸ್ತಿ ನಮ್ಮ ಯಡ್ಯೂರಣ್ಣನವರಿಗೆ ಅವರನ್ನೇ ತಿಳಿಯದ ಅದ್ಯಾವುದೋ ದೇಶ ಗೌರವ ಡಾಕ್ಟರೇಟ್ ಕೊಟ್ಟಹಾಗೆ ಅಂತ! ಹಾಗಾಗಿ ಸರಸ್ವತಿ ತನ್ನ ಪೀಠದ ಮಹತ್ವನ್ನು ಕಳೆದುಕೊಂಡು ರಾಜಕೀಯದ ದಾಳದಿಂದ ನಲುಗಿದ್ದಾಳೆ ಎನ್ನಲು ಯಾವುದೇ ಸಂಕೋಚವಿಲ್ಲ. ಈ ಸಾಹಿತಿಗಳಿಗೆ/ನಟರಿಗೆ ಮುದಿವಯದಲ್ಲಿ ಮಾಡಲು ಬೇರೆ ಕೆಲಸವಿಲ್ಲ! ಅಬ್ಬರದ ಪ್ರಚಾರ ಸಿಗುತ್ತದೆ ಎಂಬುದೂ ಕೂಡ ಇನ್ನೊಂದು ಕಾರಣ! ಅಂತೂ ನಮ್ಮ ಕೆಲವು ಗಿರಿಗಳು,ಮೂರ್ತಿಗಳು ಗೋಹತ್ಯೆಯನ್ನು ನಿಷೇಧಿಸುವುದರ ವಿರುದ್ಧ ಕುಣಿಯುತ್ತಿದ್ದಾರೆ. ಬಹುಶಃ ಹುಟ್ಟಿದಾರಭ್ಯ ಇಲ್ಲೀವರೆಗೆ ಅವರು ಊಂಡ ಹಾಲು ನಾಯಿಯದ್ದೋ, ಕತ್ತೆಯದ್ದೋ ಇರಬೇಕು!

ಸಾಧುತ್ವಕ್ಕೆ ಪರ್ಯಾಯ ರೂಪವೇ ಗೋವು. ತನ್ನ ಸ್ಥಿತಿಗತಿ ಹೇಗೇ ಇದ್ದರೂ ಸಾಕಿದ ಒಡೆಯನ ಮನೆಯನ್ನು ತನ್ನೀಂದಾದ ಎಲ್ಲ ಉತ್ಪನ್ನಗಳಿಂದ ತುಂಬಿಸುವ ಗೋವು ಯಾವರೀತಿಯಿಂದಲೂ ನಿರುಪಯೋಗಿ ಎನಿಸುವುದಿಲ್ಲ. ಹುಟ್ಟಿನಿಂದ ಸಾಯುವವರೆಗೂ ಅದರ ಕೊಡುಗೆಗಳು ಹಲವು-ಹತ್ತು.

ಇಟ್ಟರೆ ಸಗಣಿಯಾದೆ
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆಮಾನವ

--ಈ ಹಾಡನ್ನು ತಾವು ಕೇಳಿರುತ್ತೀರಿ. ಕೊನೇಪಕ್ಷ ಒಬ್ಬ ಕವಿಯಾದರೂ ಗೋವನ್ನು ಆ ಕಾಲಕ್ಕೇ ನೆನೆಸಿಕೊಳ್ಳುವ ಪುಣ್ಯಕೆಲಸಮಾಡಿದ್ದ.

ಒಂದು ಸಗಣಿಯಿಂದ ಈ ಮೇಲೆ ಹೇಳಿದ ಉತ್ಫನ್ನಗಳನ್ನು ಕೊಡುವ ಗೋವು ಮುಂದುವರಿದು

ಹಾಯ ಹರಿಗೋಲಾದೆ
ರಾಯಭೇರಿಗೆಯಾದೆ
ರಾಯರ ಕಾಲಿಗೆ ಮುಳ್ಳೊತ್ತುವಾದೆ

ನದೀದಾಟಲು ಬಳಸುವ ಹರಿಗೋಲಿಗೆ ಒಳಗೆ ಹೊದಿಕೆಯಾಯಿತು ದನದ ಚರ್ಮ, ಭೇರಿ-ನಗಾರಿ ಬಾರಿಸಲು ಅದಕ್ಕೂ ಹೊದಿಕೆಯಾಯಿತು, ಮಾನವನ ಕಾಲಿಗೆ ಚಪ್ಪಲಿಯಾಯಿತು ದನದ ಚರ್ಮ ಆದರೂ ಮಾನವ ಮಾತ್ರ ದನವನ್ನು ನೆನೆಸಿಕೊಳ್ಳದ ನಿಷ್ಕರುಣಿ.

ಗೊಡ್ಡು ದನಗಳನ್ನು ಕಸಾಯಿಖಾನೆಗೆ ಕಳಿಸಬೇಕೆಂದು ಮುದುಕಾದ ಕೆಲವು ಸಾಹಿತಿಗಳು ಹೇಳುತ್ತಿರುವಾಗ ಅವರನ್ನೇ ನಿಷ್ಪ್ರಯೋಜಕರು ಎಂದು ದೂರದ ಹಿಮಾಲಯದಲ್ಲಿ ಬಿಟ್ಟುಬಂದುಬಿಡಬೇಕು ಎನಿಸುತ್ತಿದೆ! ಆದರೆ ಮುದುಕರಿಗಿಂತ ಅರೆಮುದುಕರು ಅನಂತ ಮೂತಿಯುಳ್ಳವರಾಗಿರುತ್ತಾರೆ. ತಮ್ಮ ಮೂತಿಯನ್ನು ತೂರಿಸದ ಜಾಗವೇ ಇರುವುದಿಲ್ಲ ಅವರಿಗೆ. ಯಾವೊಬ್ಬ ಮನುಷ್ಯನೂ ಆಕಳಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಎಂದೂ ಅದನ್ನು ಕಡಿದು ತಿನ್ನಬೇಕೆಂದು ಬಯಸುವುದಿಲ್ಲ. ಮನುಷ್ಯ ತನ್ನ ತಂದೆ-ತಾಯಿಯನ್ನೇ ಮುದಿವಯಸ್ಸಿಗೆ ವೃದ್ಧಾಶ್ರಮಕ್ಕೆ ಕಳಿಸುವಲ್ಲಿ ತೊಡಗಿದ್ದಾನೆ ಅಂದರೆ ಗೋವೆಲ್ಲ ಯಾವಲೆಕ್ಕ ಅಲ್ಲವೇ. ಆದರೆ ಗೋವುಗಳಿರುವುದು ಹಳ್ಳಿಗಳಲ್ಲಿ ಜಾಸ್ತಿ. ಹಳ್ಳಿಗರಿಗೆ ಗೋವೂ ಕೂಡ ಆಸ್ತಿ. ಹಾಲು ಹೈನ ಅರ್ಥಾತ್ ಮೊಸರು,ಮಜ್ಜಿಗೆ, ಬೆಣ್ಣೆ,ತುಪ್ಪ ಇವುಗಳನ್ನೆಲ್ಲ ಒದಗಿಸುವ ಆಕಳ ಮೂತ್ರ ಮತ್ತು ಮಲ ಕೂಡ ಪ್ರಯೋಜನಕಾರಿ ಎಂದು ರೈತರಿಗೆ ಗೊತ್ತು. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ತೊಂದರೆಯಾಗುತ್ತದೆ ಎಂಬ ಸೋಗುಹಾಕಿ ಮೂತಿ ತೂರಿಸುತ್ತ ಬಹಳ ಕೆಟ್ಟ ಚಳುವಳಿಗೆ ಅಡಿಯಿಡುತ್ತಿರುವ ಓ ನಮ್ಮ ಕನ್ನಡದ ಬುದ್ಧಿಜೀವಿ ಮುದಿ[ಸಂಬಂಧಪಟ್ಟವರಿಗೆ ಮಾತ್ರ,ಕ್ಷಮಿಸಿ ಎಲ್ಲರಿಗೂ ಅನ್ವಯಿಸುವುದಿಲ್ಲ]ಸಾಹಿತಿಗಳೇ ನಿಮಗೆ ಮತ್ತೊಮ್ಮೆ ಡಾಕ್ಟರೇಟ್ ಖರೀದಿಸುವ ಹುಚ್ಚೇ? ಅಲ್ಲವೇ ಹಾಗಾದ್ರೆ ಮನೆಯಲ್ಲೋ ಯಾವುದೋ ಆಶ್ರಮದಲ್ಲೋ ಭಜನೆಗೆ ಕುಳಿತುಕೊಳ್ಳಿ. ಅದೂ ಸಾಧ್ಯವಿಲ್ಲದಿದ್ದರೆ ನಿತ್ಯಾನಂದನನು ಸೇರಿ!

ತನ್ನೆದುರು ತನ್ನದೇ ಎಳೆಗರುವನ್ನು ಎಳೆದು ಪಕ್ಕಕ್ಕೆ ಕಟ್ಟಿ ಹಾಲು ಹಿಂಡುವ ಮನುಜನ ನೋಡಿ ದುಖಿಸುವುದಿಲ್ಲ ದನ, ನೆತ್ತಿಯ ಮೇಲೆ ಕುಳಿತ ಕಾಗೆ ಕಿವಿಯ ಉಣ್ಣಿಯನ್ನು ತಿನ್ನುವ ರಕ್ತಹೀರುವಾಗ ನೆಪದಲ್ಲಿ ಕಣ್ಮುಚ್ಚಿ ಮಲಗುವ ಮೃದುಲ ಮನಸ್ಸಿನದು ನಮ್ಮ ದನ, ಶಿಖದಿಂದ ನಖದವರೆಗೆ ಉಂಡುಟ್ಟು ತೇಗಿ ಸುಖಿಸಲು ಸಹಕಾರಿಯಾಯ್ತು ನಮ್ಮ ದನ, ಹೊಟ್ಟೆಗೆ ಕೊಡಲಿ-ಕೊಡದಿರಲಿ ಹೇಳಲುಬಾರದ,ಸಂಪು-ಹರತಾಳ-ಧರಣಿ ಗೊತ್ತಿರದ ಹೊತ್ತಿಗೆ ಹೋದರೆ ಇರುವ ಹಾಲನ್ನು ಸಿಷ್ಕಪಟವಾಗಿ ಸುರಿಸುವ ಧಾರಾಳಿ ನಮ್ಮ ದನ, ಉಳುವ ಯೋಗಿಗೆ ಬಸವನಾಗಿದ್ದು ಬೆಂಬಲಿಸಿ ಹಗಲಿರುಳು ನೊಗವಿಡಿದು ಜಗ್ಗಿ ಜಗ್ಗಿ ಬಂಡಿ ಎಳೆಯುವ ಬಡಗೋವು ನಮ್ಮ ದನ,ಕಾಯಿಲೆಗೆ ಚಿಂತಿಸದೆ, ನೋವಿಗೆ ಕೊರಗದೇ ಮಳೆಯಲ್ಲೂ ಬಿಸಿಲಲ್ಲೂ ರೈತನ ನರನಾಡಿಗಳಲ್ಲಿ ನವಚೇತನವನ್ನು ತನ್ನ ಕಾರ್ಯರೂಪದಿಂದ ಹರಿಸುತ್ತದೆ ನಮ್ಮ ದನ,ಕರೆದಲ್ಲಿಗೆ ಬಂದು-ಎಳೆದಲ್ಲಿಗೆ ಹೋಗಿ ಗೊತ್ತುಗುರಿಯನ್ನೇ ಅರಿಯದೇ ತನಗೆ ಕೊಟ್ಟ ಕೆಲಸ ಮಾಡುವುದು ನಮ್ಮ ದನ, ತನ್ನೆಜಮಾನ ಆತನ ಮನೆ-ಮಡದಿ-ಮಕ್ಕಳು ಉಂಡುಟ್ಟು ಸುಖಿಸಲಿ ಎಂಬ ಮನೋಧರ್ಮದ್ದು ನಮ್ಮ ದನ, ಹೆಚ್ಚೇಕೆ ಒಡೆಯನ ದುಃಖದ ಅರಿವಾದರೆ ತನ್ನ ಕಣ್ಣಲ್ಲಿ ಸುಮ್ಮನೇ ಕಂಬನಿಸುರಿಸುವ ನಿಸ್ಪೃಹ ನಿಸ್ವಾರ್ಥ ಭಾವ ಜೀವಿ ನಮ್ಮ ದನ; ಇದ ಮರೆತರೆ ನಮ್ಮ ಧನಿಕತನ ಕರಗುತಾ ಬರುವುದು ದರಿದ್ರತನ!

ದನವನ್ನು ಬಿಟ್ಟು ಬೇರಾವ ಪ್ರಾಣಿಯ ಮಲ-ಮೂತ್ರಗಳನ್ನು ನಾವು ಭುಂಜಿಸುವುದಿಲ್ಲ! ಯಾಕೆಂದರೆ ಕೇವಲ ಭಾರತೀಯ ಗೋವಲ್ಲಿ ಮಾತ್ರ ಬಹಳ ಔಷಧೀಯ ಗುಣಗಳಿವೆ. ಗೋಮೂತ್ರ,ಗೋಮಯ,ಗೋಅರ್ಕ ಹೀಗೇ ವಿವಿಧ ರೂಪದಲ್ಲಿ ನಾವು ಗೋವಿನ ತ್ಯಾಜ್ಯವನ್ನು ಬಳಸುತ್ತೇವೆ. ಗೋಮೂತ್ರ ಬಳಕೆಯಿಂದ ಕ್ಯಾನ್ಸರ್ ಮತ್ತು ಕಾಮಾಲೆ ಕಾಯಿಲೆಗಳು ವಾಸಿಯಾಗುತ್ತವೆ. ದಿನಾಲೂ ಗೋಮೂತ್ರ ಸೇವಿಸಿದರೆ ರಕ್ತ ಶುದ್ಧಿಗೊಳ್ಳುತ್ತದೆ. ಗೋಮಯದಿಂದ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗುತ್ತದೆ. ಅದು ಬಿಟ್ಟು ಬಂಗಾರದ ಮೊಟ್ಟೆಗೆ ಆಸೆ ಪಟ್ಟು ಕೋಳಿಯನ್ನು ಕತ್ತರಿಸಿದಂತೇ ಒಂದೇ ದಿನ ಕಡಿದು ಮುಗಿಸಿದರೆ ರಾತ್ರಿಯೋ ಮಾರನೇದಿನವೋ ನಮಗೆ ಸಗಣಿ ಬರುತ್ತದೆಯೇ ವಿನಃ ಅದರಿಂದಾಗುವ ನಷ್ಟ ಹೇಳಲಸದಳ.

ನಾವು ಬಾಲ್ಯದಲ್ಲಿ ಗೋಮಾಳದಲ್ಲಿ ಮಿಳಿತರಾಗಿ ಗೋಪಾಲನಂತೆ ಆಟವಾಡಿದ ನೆನಪು ಮರುಕಳಿಸುತ್ತದೆ. ಆಗೆಲ್ಲ ಆವಿಗೆ ಹಲವಾರು ದೇವ,ದೇವಿಯರ, ಪುಣ್ಯ ನದಿಗಳ ಹೆಸರನ್ನೇ ಇಟ್ಟು ಸಂಬೋಧಿಸುತ್ತಿದ್ದರು. ನಾನು ತಿಳಿದಂತೆ ಭಾರತೀಯ ಗೋತಳಿ ಬಹಳ ಬುದ್ಧಿವಂತ ತಳಿ ಕೂಡ. ಅವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಿದ್ದವು. ನಾವು ಹೆಸರಿಟ್ಟು ಕರೆದರೆ ದೂರದಿಂದ ಕಿವಿನಿಮಿರಿಸಿ ನೋಡಿ ಕೂಗುತ್ತಿದ್ದವು. ಕೆಲವೊಮ್ಮೆ " ಬಾ " ಎಂದು ಕರೆದರೆ ಬಂದೂಬಿಡುತ್ತಿದ್ದವು. ಅವುಗಳ ಮೈನೀವಿ ಹುಲ್ಲುಕಿತ್ತು ತಿನಿಸಿದರೆ, ಅವುಗಳ ಕೊರಳ ಗಂಗಾಧರವೆಂಬ ಭಾಗವನ್ನು ಉಜ್ಜಿ-ತುರಿಸಿದರೆ, ಅವುಗಳ ಕೋಡುಗಳನ್ನು ಹಿಡಿದು ಸ್ವಚ್ಛಗೊಳಿಸಿದರೆ ಅವುಗಳಿಗೆ ಬಹಳ ಹಾಯೆನಿಸುತ್ತಿತ್ತು. ಕಪಿಲೆ-ನಂದಿನಿ-ಗೀತಾ ಇವಲ್ಲದೇ ರೇಣುಕಾ, ಶರಾವತಿ, ಬೆಳ್ಳಿ, ಕಮಲಿ ಮತ್ತು ವಸುಂಧರೆ ಎಂಬ ಆಕಳುಗಳ ಮಧ್ಯೆ ನಂದಿವಿಶಾಲ,ಗಣಪ,ಕರಿಯ ಮುಂತಾದ ಗೂಳಿಗಳೂ ಇದ್ದವು. ನೆಂಟರೊಬ್ಬರ ನಿಸರ್ಗವರ್ಣನೆಗೆ ಮನಸೋತ ನಾನು ಒಂದು ಮುದ್ದಾದ ಕೌಲುಬಣ್ಣದ ಹೆಂಗರುವಿಗೆ " ಮೇದಿನಿ" ಎಂಬ ಉತ್ತರಕನ್ನಡದ ಪರ್ವತವೊಂದರ ಹೆಸರನ್ನು ಇಟ್ಟಿದ್ದೆ. ಸುಮಾರು ೩೦-೩೪ ಬಾಲಗಳಿದ್ದವು.[ಆಕಳುಗಳು ಮತ್ತು ಕರುಗಳನ್ನು ಬಾಲದ ಲೆಕ್ಕಾಚಾರದಲ್ಲಿ ಹೇಳುತ್ತಿದ್ದರು].ಇಂದು ಅವೆಲ್ಲ ಮರೆಯಾಗಿ ಒಂದೆರಡು ಜರ್ಸಿ ದನಗಳು ಬಂದು ಕೂತಿರುವುದು ನನಗೆ ತಡೆಯಲಾರದ ಭಾವನೆಗಳನ್ನು ತಂದು ಎದುರಿಗೆ ರಾಶಿಹಾಕಿದಂತಾಗಿದೆ. ಇದು ಕಥೆಯಲ್ಲ-ಜೀವನ! ಇಂದಿಗೆ ಇದು ನಮ್ಮ ಹಳ್ಳಿ ಮನೆಯ ಕಥೆ. ನಾಳೆ ಎಲ್ಲರ ಮನೆಯ ಕಥೆ!

ಉಪಕಾರಿ ನಾನು ಎನ್ನುಪಕೃತಿಯು ತನದೆಂಬ
ವಿಪರೀತ ಮತಿಯುಳಿದು ವಿಪುಲಾಶ್ರಯವ ನೀವ
ಸುಫಲ ಫಲಭರಿತ ಮಾದಪದಂತೆ ..... ಕವಿಯ ಈ ಭಾವವನ್ನು ನೋಡಿ. ಮನುಷ್ಯ ಉಪಕಾರಿಯಾಗುವುದಂತೂ ತೀರಾ ಕಡಿಮೆ, ಆದರೆ ಅಪಕಾರಿಯಾಗುವುದು, ಅಪಾಯಕರಿಯಾಗುವುದು ಬೇಡ ಅಲ್ಲವೇ?

ಕಾಲ, ದೇಶ, ಭಾಷೆಗಳ ಭಿನ್ನತೆ ಮಧ್ಯೆ ತಲೆದೋರಬಹುದು, ಆದರೆ ಸದ್ಯಕ್ಕೆ ನಾವು ಮಾತನಾಡುತ್ತಿರುವುದು ಕರ್ನಾಟಕದ ವಿಷಯ. ಇಲ್ಲಿನ ಜನ ಸುಸಂಸ್ಕೃತರು,ಸಜ್ಜನರು, ನಿರುಪದ್ರವಿಗಳು, ಬುದ್ಧಿಜೀವಿಗಳು, ಧಾರಾಳಿಗಳು, ಬಹುಭಾಷಾಪ್ರಿಯರು, ಕುಲೀನರು ಎಂಬೆಲ್ಲಾ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಆದರೆ ನಮ್ಮಲ್ಲೇ ಅಕ್ಕಿಯಲ್ಲಿನ ಹುಳಗಳಂತೆ ಕೆಲವು ಖುಳಗಳು ವರ್ತಿಸುತ್ತವೆ. ಹಸಿದ ಹುಲಿಯು ಹಿಡಿದ ಬೇಟೆಯನ್ನು ಎಳೆದೊಯ್ವ ಮಾರ್ಗಮಧ್ಯೆ ಅಡ್ಡಬಂದರೆ ಆ ಹುಲಿಯಾದರೂ ಸ್ವಲ್ಪ ಹೆದರೀತು, ಆದರೆ ಈ ಹುಳಗಳುಮಾತ್ರ ತಮ್ಮ ಕಸುವಿರುವಷ್ಟನ್ನೂ ಉಪಯೋಗಿಸಿ ಒದ್ದಾಡಿ ಪ್ರಚಾರಬಯಸುತ್ತವೆ, ಅರ್ಥವಿರದ ಅವರ ಒದ್ದಾಟ ಹಲವರಿಗೆ ಹಲವೊಮ್ಮೆ ಇರುಸು-ಮುರುಸಿಗೆ ಕಾರಣವಾಗಿದೆ.

ರವಿ ಬೆಳಗೆರೆ ಒಮ್ಮೆಟಿವಿಯಲ್ಲಿ ತೋರಿಸುತ್ತಿದ್ದರು. ನೋಡಲಾರದ,ನೋಡಬಾರದ ದುಸ್ಥಿತಿ. ಕಟುಕ,ನೀಚ,ಪಾಪಿ ಮಾನವ ದನಗಳ ಕಾಲು ಕಟಕ್ಕನೆ ಮುರಿದು ಅವುಗಳನ್ನು ಲಾರಿಗೆ ಏರಿಸುವುದು, ಎಳೆಯ ಗಂಡುಕರುಗಳನ್ನು ಅವುಗಳ ಬಾಯಿ ಹೊಲಿದು ಕೂಡಿಹಾಕುವುದು, ಮುದಿ ಎತ್ತಿನ ಕಣ್ಣಿಗೆ ಕರದ ಪುಡಿ ಹಾಕಿ ಕಣ್ಣೊಳಗೆ ಕೈಬೆರಳು ಹಾಕಿ ಉಜ್ಜುವುದು..ಛೆ ಇಂಥಾ ಕಟುಕರೂ ರಕ್ಷಸರಲ್ಲವೇ, ಇಂಥವರಿಗೆ ದನಕರುಗಳನ್ನು ಮಾರುವ ನಾವು ರಾಕ್ಷಸರಲ್ಲವೇ ? ಇಂತಹ ಅನೇಕ ಘಟನೆಗಳನ್ನು ಕಣ್ಣೀರು ಬಂದು ಬರೆಯಲಾರದೆ ಕೈಬಿಟ್ಟಿದ್ದೇನೆ. ಹಲವನ್ನು ನೀವೇ ಊಹಿಸಿಕೊಳ್ಳಿ. ಮಾನವನ ಬದುಕಿನ ಅನಿವಾರ್ಯ ಸಂಗಾತಿಯಾಗಿ ಭಾಜ್ಯಗೊಳ್ಳುವ-ಭೋಜ್ಯಗೊಳ್ಳುವ ನಮ್ಮ ಹಸು-ಕರುಗಳು ಇಂತಹ ಪ್ರಾರಬ್ಧವನ್ನು ನಮ್ಮಿಂದ ಅನುಭವಿಸುವಂತೆ ವಿಧಿ ಬರೆಯಿತೇ ? ಬಯಲು ಸೀಮೆಯಲ್ಲಿ ಬರಗಾಲದಲ್ಲಿ ನೀರಿಲ್ಲದೇ-ಮೇವಿಲ್ಲದೆ ಅನೇಕ ಸಾವಿರ ಹಸು-ಕರುಗಳು ಸಾಯುತ್ತವೆ, ಎಷ್ಟೋ ಸಾವಿರಸಂಖ್ಯೆಯಲ್ಲಿ ಮಾರಲ್ಪಟ್ಟು ಇಂತಹ ಕಟುಕರ ಕೈಗೆ ಸಿಕ್ಕಿಹಾಕಿಕೊಳ್ಳುತ್ತವೆ. ತನ್ನೆ ಅನಿವಾರ್ಯತೆಯಲ್ಲಿ ಒಡೆಯನಿಗೆ ಭಾರವಾದ ಗೋಮಾತೆ ಹರಿಶ್ಚಂದ್ರನಂತೆ ತನ್ನನ್ನೇ ತಾನು ಮಾರಿಕೊಳ್ಳುತ್ತದೆ, ಹಾಗೆ ಮಾರಾಟಗೊಳ್ಳುವ ಕಡೆಯ ಕ್ಷಣದಲ್ಲಿ ಒಡೆಯನ ಕಡೆಗೇ ಹರಿಸಿದ ದಯಾರ್ದ್ರ ನೋಟ ಹೇಗಿರಬಹುದು ಊಹಿಸಬಲ್ಲಿರೇ ?

ಸಹೃದಯೀ ಮಿತ್ರರೇ ತಾವೆಲ್ಲ ಕಲೆತು ಚಿಂತನ-ಮಂಥನ ನಡೆಸಿ. ದನ ತಿನ್ನುವವರಿಗಿಂತ ದನತಿನ್ನದೇ ಇರುವ ಕುರಿಗಳ ಕಾಟ ಯಾಕೋ ತುಂಬಾ ಅತಿ ಅನಿಸುತ್ತದೆ. ಈ ಕುರಿಗಳನ್ನು ಎಲ್ಲಿಗೆ ಅಟ್ಟಿಸಿ ಓಡಿಸಬೇಕೋ ತಿಳಿಯದಾಗಿದೆ.

ಗೋವನ್ನು ಮಾತೆ ಎಂದು ಪೂಜಿಸುವ ಉಚ್ಚಕುಲಪ್ರಸೂತರೇ ನಿಮಗೆ ಹಬ್ಬದಲ್ಲಿ ಪೂಜೆಗಾಗಲೀ, ಗೃಹಪ್ರವೇಶಕ್ಕೂ ಮುನ್ನ ಗೋಪ್ರವೇಶ ಮಾಡಿಸಲಾಗಲೀ ಕೂಡ ಭಾರತೀಯ ಗೋವು ಸಿಗದಾಗಿದೆ-ಈಗಾಗಲೇ. ಅಳಿದುಳಿದ ಕೆಲವೇ ತಳಿಗಳಪೈಕಿ ಕೇವಲ ಕೇವಲ ಬಹು ಕ್ಷೀಣಸಂಖ್ಯೆಯಲ್ಲಿ ಅವುಗಳು ಕಂಡುಬರುತ್ತಿವೆ. ಇದರ ಸಲುವಾಗಿ ಅನೇಕ ಸಾಧು-ಸಂತರೂ ಮುಂದಾಗಿ ತಾವು ಅನೇಕ ರಕ್ಷಣಾಪಥಗಳನ್ನು ಹಾಕಿಕೊಂಡಿದ್ದಾರೆ, ನಾವೆಲ್ಲ ನಮ್ಮ ಮುಂದಿನ ಪೀಳಿಗೆಗೆ ಕೊಡಬಹುದಾದ ಬಹಳ ಉಪಯುಕ್ತ ಅಂಶಗಳಲ್ಲಿ ಧೇನುವೂ ಒಂದು. ಭಕ್ಷಿಸದೇ ರಕ್ಷಿಸಿದವರನ್ನು ಸುರಧೇನುವಾಗಿ ಪೊರೆಯಬಲ್ಲ. ತನ್ನ ಮಲ-ಮೂತ್ರಾದಿಗಳಿಂದಲೂ ನಮ್ಮ ರೋಗ-ರುಜಿನಕಳೆವ ಕಪಿಲೆ-ನಂದಿನಿ-ಕಾಮಧೇನುಗಳು ಬಹುಕಾಲ ಬದುಕಲಿ, ಮನುಕುಲ ಉದ್ಧಾರವಾಗಲಿ ಅಲ್ಲವೇ ?

Wednesday, June 16, 2010

ರಾಕ್ಷಸರು!


ರಾಕ್ಷಸರು ಎಲ್ಲಿದ್ದಾರೆ ಈ ಜಗದಲ್ಲಿ? ಜಗತ್ತಿನಲ್ಲಿ ಹಲವು ರೀತಿಯಲ್ಲಿ ನಮಗೆ ರಾಕ್ಕಸರು ಸಿಗುತ್ತಾರೆ. ರಾಕ್ಷಸರು ಎಂದ ಮಾತ್ರಕ್ಕೆ ವಿರೂಪಿಗಳು, ಕೋರೆ ಹಲ್ಲುಳ್ಳವರು ಎಂಬ ಚಿತ್ರ ನಮ್ಮ ಮನಃಪಟಲದ ಮೇಲೆ ಬಂದು ನಿಲ್ಲುತ್ತದೆ. ಆದರೆ ರಾಕ್ಷಸರೂ ಮನುಷ್ಯರೇ, ಅವರಲ್ಲಿನ ರಕ್ಕಸಗುಣದಿಂದ ಅವರು ರಾಕ್ಷಸರಾಗುತ್ತಾರೆ. ಜನಸಾಮಾನ್ಯರಿಗೆ ನಾನಾ ರೀತಿಯಲ್ಲಿ ಉಪಟಳ ಕೊಡುವ ಎಲ್ಲರೂ ರಾಕ್ಷಸರೇ ಆಗಿರುತ್ತಾರೆ. ನಮ್ಮ ಮಧ್ಯೆಯೇ ನೋಡಿ ಪಂಚಾಗ್ನಿಯ ಪರಮಹಂಸ ಎಂದುಕೊಂಡು ನಂಬಿಸಿ ನಾಮವೆಳೆವವ ಒಬ್ಬನಾದರೆ ಉದ್ಯೋಗವರಸಿ ಬಂದ ವ್ಯಕ್ತಿಯ ಕಿಡ್ನಿ ಮುಂತಾದ ಅಂಗಾಂಗಗಳನು ಕದ್ದು ಮಾರುವವರು ಇನ್ನೊಂದೆಡೆ, ಸಾರಾಯಿ ತಯಾರುಮಾಡಿ ಸಾವಿರ್ ಸಾವಿರ ಸಂಸಾರಗಳನ್ನು ಬೀದಿಪಾಲುಮಾಡಿ ರಾಜಕೀಯದಲ್ಲಿ ತಾವು ಮುನ್ನಡೆದು ಮೆರೆಯುವರು ಕೆಲವರಾದರೆ, ರೈತರ ಭೂಮಿಯನ್ನು ವಿನಾಕಾರಣ ಕಸಿದು ಅವರನ್ನೆಲ್ಲ ಅನಾಥರನ್ನಾಗಿ ಮಾಡುವವರು ಕೆಲವರು, ನೆರೆ ಸಂತ್ರಸ್ತರಿಗೆ ಕೊಡಲೆಂದು ಸಂಗ್ರಹಿಸಿ ತಾವೇ ತಿಂದು ತೇಗುವವರು ಇನ್ನೂ ಕೆಲವರು, ದುಪ್ಪಟ್ಟು ಹಣ ಶೀಘ್ರಕೊಡುತ್ತೇವೆ ಎಂದು ಠೇವಣಿ ಪಡೆದು ನಾಮವೆಳೆವವರು ಮತ್ತೂ ಕೆಲವರು,ಅನಾಥ-ವೃದ್ಧರಿಗೆ ಆಶ್ರಯ ಕೊಡುವ ನೆಪದಲ್ಲಿ ಅವರನ್ನು ನೋಡಲಾರದ ಸ್ಥಿತಿಯಲ್ಲಿಟ್ಟು ಹಣಬಾಚುವವರು, ವಿದೇಶದಲ್ಲಿ ಕುಳಿತು ಗ್ಯಾಂಗು,ಮಾಫಿಯಾ ವ್ಯವಹಾರ ನಡೆಸುವವರು ಕೆಲವರು, ಶಿಕ್ಷಣ-ವೈದ್ಯಕೀಯ ಸೇವೆ ಈ ಎಲ್ಲಾ ರೀತಿಯಲ್ಲಿಯೂ ಮುಖವಾಡ ಧರಿಸಿ ಚೆನ್ನಾಗಿ ಮೇಯುವವರು ಹಲವರು ಅಲ್ಲವೇ? ಇಂಥವರನ್ನೆಲ್ಲಾ ರಾಕ್ಷಸರು ಎಂದು ಸಂಬೋಧಿಸಿದ್ದಾನೆ ಜಗದಮಿತ್ರ. ಜನಸಂತತಿ ಹಲ್ಲಿನ ಮಧ್ಯೆ ಇರುವ ನಾಲಿಗೆಯಂತೆ ಬದುಕಲು ಪ್ರಯತ್ನಿಸುವಾಗ ಇಂತಹ ಕುತ್ಸಿತ,ಕುಟಿಲ, ಕಪಟ,ಖೂಳ ರಕ್ಕಸತನವನ್ನು ನೆನೆಪಿಸಿಕೊಂಡು, ಪರಾಮರ್ಶಿಸಿಕೊಂಡು ಬದುಕಬೇಕು ಎಂದಿದ್ದಾನೆ ಜಗದಮಿತ್ರ. ಬೇಸರಗೊಡ ತನ್ನ ಮನದಿಂದ ಜನತೆಗಾಗಿ ಮೀಟಿ ತೆಗೆದ ರಾಗಗಳನ್ನು ಶಬ್ಧಗಳಲ್ಲಿ ಈ ರೀತಿ ಪೋಣಿಸಿಕೊಟ್ಟಿದ್ದಾನೆ ಜಗದಮಿತ್ರ--

ರಾಕ್ಷಸರು!

ಪಂಚಾಗ್ನಿ ಪರಮಹಂಸಾದಿ ಶಬ್ಧಗಳ
ಮಿಂಚಿನಾವೇಗದಲಿ ಬಳಸುತ್ತ ಜನಕೆ
ಸಂಚುಮಾಡುತ ಹಲವು ಮಿಥ್ಯ ಸತ್ಯವದೆಂದು
ವಂಚಿಸುವರೈ ನೋಡ | ಜಗದಮಿತ್ರ

ಉದ್ಯೋಗವೀವೆನುತ ಕರೆದು ಯುವಪೀಳಿಗೆಯ
ಸಾಧ್ಯವಿರುವೆಲ್ಲರೀತಿಯಲಿ ಹಣಪಡೆದು
ವೇದ್ಯವಾಗದರೀತಿ ಅಂಗಾಂಗ ಕಡಿದಿರಿಸಿ
ಮೇಧ್ಯ ಭಕ್ಷಿಸುತಿಹರು | ಜಗದಮಿತ್ರ

ಸಾರಾಯಿ ಮಾರುತ್ತ ಸಾರಾಸಗಾಟಾಗಿ
ಪಾರಾಯಣ ಭಜನೆ ಹೊರಗೆ ತೋರಿಕೆಗೆ
ಯಾರು ಏನಾದರೇನ್ ರಾಜಕೀಯದಿ ತಾವು
ಜೋರಾಗಿ ಬದುಕುವರು | ಜಗದಮಿತ್ರ

ಇದ್ದುದನು ಹೇಳಿದರೆ ಎದ್ದು ತಾವೆದೆಗೊದೆದು
ಗೆದ್ದು ತಾವಾಳಿಹರು ರಾಜ್ಯ-ದೇಶವನು
ಸದ್ದಿರದೆ ಮಾರುತ್ತ ಮಣ್ಣಮಕ್ಕಳ ಭೂಮಿ
ಮೆದ್ದು ಮೆರೆವರು ಜಗದಿ| ಜಗದಮಿತ್ರ

ಹುಂಡಿಯನು ಹಿಡಿದಿಡಿದು ಕಂಡಕಂಡಲ್ಲೆಲ್ಲ
ದಂಡೆದ್ದುಹೋಗಿ ಧನಕನಕ ಸಂಗ್ರಹಿಸಿ
ಉಂಡಿರದ ಆ ಜನಕೆ ಪರಿಹಾರವೀವೆನುತ
ಉಂಡು ಕೈ ತಿರುವಿದರು | ಜಗದಮಿತ್ರ

ದುಪ್ಪಟ್ಟು ಹಣವೆನುತ ಆಸೆ-ಆಮಿಷ ತೋರಿ
ಉಪ್ಪಿಟ್ಟು-ಕೇಸರೀಬಾತು ನೀಡುತಲಿ
ತಪ್ಪೇನು ಗೊತ್ತಿರದ ಜನಗಳಿಗೆ ನೀಡಿಹರು
ಕಪ್ಪೆ-ಕಲ್ಲಿನ ಚೀಲ | ಜಗದಮಿತ್ರ

ಅನಾಥ-ವೃದ್ಧರಿಗೆ ಆಶ್ರಯವ ಈವೆಂದು
ಕನಾತು ಕಟ್ಟಿ ಕೋಣೆಯ ಮೂರು ತೋರಿ
ದುರ್ನಾತ ಹೊಡೆವಂತ ಹಂದಿಗೂಡಲಿ ಕೂಡಿ
ನಾನಾಥರದಿ ಮೆಲ್ವರ್ | ಜಗದಮಿತ್ರ

ತಂತ್ರಗಾರಿಕೆಯಿಂದ ಯಂತ್ರೋಪಕರಣವನು
ಮಂತ್ರಿಮಾಗಧರಿಂದ ಮರೆಯಲ್ಲಿ ಪಡೆದು
ಕಂತ್ರಿಬುದ್ಧಿಯ ಬಳಸಿ ದೇಶದ್ರೋಹಿಗಳಾಗಿ
ಸಂತ್ರಸ್ತರನು ಮಾಳ್ಪರ್ | ಜಗದಮಿತ್ರ

Tuesday, June 15, 2010

ಜಗವೆಂಬ ಮನೆಯ ನೆನೆದು

ಸುಮ್ಮನೆ ಕುಳಿತೊಮ್ಮೆ ವಿಚಾರಿಸುತ್ತಿದ್ದರೆ ಮನಸ್ಸಿಗೆ ಹಲವು ಬಾರಿ ಅನ್ನಿಸುವುದು ಯಾಕಪ್ಪಾ ದಿನಬೆಳಗಾದರೆ ಜಗಳ,ದೊಂಬಿ,ಲೂಟಿ,ಬಾಂಬು....ಇವುಗಳಿಗೆಲ್ಲ ಇತಿಶ್ರೀ ಹಾಡಿ ಇಡೀ ಜಗತ್ತೇ ಒಂದು ಮನೆಯ ಥರ ಅಂತ ಭಾವಿಸಿ ಎಲ್ಲರೂ ಭ್ರಾತೃತ್ವ ಭಾವದಿಂದ ಸುಖವಾಗಿರಬಹುದಲ್ಲ ಅಂತ.

ಒಂದು ಕಡೆ ಮತಾಂಧರು ಇನ್ನೊಂದು ಕಡೆ ರಾಜಕೀಯ ಪಕ್ಷಪಾತಿಗಳು, ಮಗುದೊಂದೆಡೆ ಸಾಮಾಜಿಕ ಹಿತಾಸಕ್ತಿ-ಸೌಲಭ್ಯ ತಮಗೆ ಸಿಕಿಲ್ಲವೆಂಬವರು. ಹೀಗಾಗಿ ಅಂತೂ ಸೃಷ್ಟಿಸಿದ ಭಗವಂತ ಜಗದಲ್ಲಿ ಸುಂದೋಪಸುಂದರು ಸುಂದರಿಗಾಗಿ ಹೊಡೆದಾಡಿ ಸತ್ತಂತೆ ನಮ್ಮ ಅಳಿವು-ಉಳಿವನ್ನು ನಮ್ಮವರ ಕೈಯ್ಯಲ್ಲೇ ಕೊಟ್ಟು ಬಹಳ ಚಾಲಾಕಿತನ ಮೆರೆದನಲ್ಲ ಅಲ್ಲವೇ ? ಇದರ ಅರ್ಥವೇ ತಿಳಿಯದೇ ಬಿನ್-ಲಾಡೆನ್ ಅಂತೆ ಡೇವಿಡ್ ಹೆಡ್ಲಿಯಂತೆ ಎಂತೆಂತಹ ರಾಕ್ಷಸರು ಹುಟ್ಟಿದರು ನೋಡಿ! ಒಂದು ಕಡೆ ದಾವೂದ್ ಇಬ್ರಾಹಿಂ ಇನ್ನೊಂದುಕಡೆ ರವಿಪೂಜಾರಿ ಇವರೆಲ್ಲರ ಅಂತಿಮ ಗುರಿ ಏನು? ಇವರಿಗಾಗಿ ಪ್ರತ್ಯೇಕ ಆಯುಷ್ಯ ಕೊಟ್ಟು ಹೆಚ್ಚಿಸಲಾಗಿದೆಯೇ ? ಎಲ್ಲರೂ ಬಂದ ಹಾಗೇ ವಾಪಸ್ ಹೋಗಲೇಬೇಕೆಂಬ ಅರಿವು ಬಾಂಬಣ್ಣಗಳಿಗಿಲ್ಲವೇಕೆ?

ಪೂಜನೀಯ ಶ್ರೀ ಶ್ರೀ ರವಿಶಂಕರರು ಜಗತ್ ಹಿತಾರ್ಥ ಎಂತಹ ಅದ್ಬುತ ಕೆಲಸವನ್ನು ಮಾಡುತ್ತಿದ್ದಾರೆ ನೋಡಿ.ಅದರಲ್ಲಿ ಅವರ ಸ್ವಾರ್ಥ ಅಡಗಿದೆಯೇ ? ಇಲ್ಲವಲ್ಲ? ಅವರು ಸನ್ಯಾಸಿಯಲ್ಲ,ಪರಮಹಂಸ ಅಲ್ಲ, ಮತ ಪ್ರಚಾರಕ ಅಲ್ಲ, ಸಾದಾ ಮನುಷ್ಯ ಕೂಡ ಅಲ್ಲ. ಹಾಗಾದರೆ ಅವರು ಯಾರು ? ಅವರೊಬ್ಬ ತತ್ವಜ್ಞಾನಿ ಎಂದರೆ ತಪ್ಪೇ? ಜಗತ್ತೇ ತನ್ನ ಮನೆ, ತನಗೆ ಯಾರೂ ವೈರಿಗಳಿಲ್ಲ, ಎಲ್ಲರೂ ನಮ್ಮೊಳಗಿನ ಸಾಮರ್ಥ್ಯವನ್ನು ವರ್ಧಿಸಿಕೊಂಡು, ರೋಗ ರುಜಿನಗಳನ್ನು ದೂರವಿಟ್ಟು ಇರುವಷ್ಟು ಕಾಲ ಸುಖವಾಗಿ,ಸಹಜವಾಗಿ ಬದುಕೋಣ ಎಂಬ ಅವರ ಮಹತ್ತರ ಸಂದೇಶ ನಮಗರ್ಥವಾಗಲು ಇನ್ನೆಷ್ಟು ಕಾಲ ಬೇಕಾಗಬಹುದು?

ಪ್ರಕೃತಿಯಲ್ಲಿ ಮನುಷ್ಯ ಹುಟ್ಟಾ ಮಾಂಸಾಹಾರಿಯಲ್ಲ, ಅವನಿಗೆ ಮಾಂಸಾಹರಕ್ಕೆ ಬೇಕಾಗುವ ಹಲ್ಲುಗಳೂ ಇಲ್ಲ-ಜೀರ್ಣಾಂಗವೂ ಆ ರೀತಿ ಇಲ್ಲ. ಆದರೆ ಇಂದು ನಮ ಮೋಜು-ಮಜಕ್ಕಾಗಿ ಹಲವು ಹತ್ತು ರೀತಿಯ ಪ್ರಾಣಿ-ಪಕ್ಷಿಗಳನ್ನು ಬಲಿಗೊಟ್ಟು ಭುಂಜಿಸುವುದು ಯಾವ ನ್ಯಾಯ? ಅವುಗಳಿಗೂ ಅವುಗಳದೇ ಆದ ಕುಟುಂಬ-ಸಂಸಾರ-ಮಕ್ಕಳು-ಮರಿ ಇರುವುದಿಲ್ಲವೇ? ಅವುಗಳನ್ನು ಅಗಲಿಸಿದ ಪಾಪ ನಮಗಲ್ಲವೇ? ಅಲ್ಲದೇ ಮಾಂಸಾಹಾರಕ್ಕೆ ಹಾಕುವ ಕಡು ಮಸಾಲೆಯಲ್ಲಿ ಕಚಡಾ ಕಲ್ಲು ಹುರಿದು ತಿಂದರೂ ರುಚಿಯೆಂಬ ಮಿತ್ರರೊಬ್ಬರ ಹೇಳಿಕೆಯನ್ನು ಹಿಡಿದು ವಿವೇಚಿಸಿದರೆ ಅಲ್ಲಿ ನಾವು ಕಾಣುವುದು ಸತ್ಯವಷ್ಟೇ? ಕಡು ಮಸಾಲೆ ಹಾಕಿದ ಯಾವ ಪದಾರ್ಥವೇ ಆಗಲಿ ಅದು ಮಸಾಲೆಯ ರುಚಿಯಿಂದ ರುಚಿಕಟ್ಟಾಗಿರುವುದೇ ಹೊರತು ಅಲ್ಲಿ ಮಾಂಸದಿಂದ ಮಾತ್ರ ರುಚಿ ಬರುತ್ತದೆ ಎಂದರೆ ಅದು ಸುಳ್ಳೆಂದು ನನ್ನ ಅನಿಸಿಕೆ. ಇನ್ನು ಮದ್ಯವನ್ನು ದೂರ ದಬ್ಬಿದರೆ ಜಗತ್ತು ಬಹಳಪಾಲು ಸುಧಾರಿಸಿದ ಹಾಗೇ. ಇದಕ್ಕಾಗಿ ಒಂದು ಸಣ್ಣ ಉದಾಹರಣೆ ನೋಡಿ-- ತಂದೆಯೊಬ್ಬ ಮದ್ಯ ಸೇವಿಸಿದ್ದ. ತನ್ನ ಹೊಸ ಕಾರನ್ನು ತಾನೇ ತೊಳೆಯುತ್ತಿದ್ದ. ಆಡುತ್ತಿರುವ ಆತನ ನಾಲ್ಕು ವಯಸ್ಸಿನ ಪುಟ್ಟ ಮಗ ಸಣ್ಣ ಕಲ್ಲೊಂದನ್ನು ಹಿಡಿದು ಕಾರಿನ ಮೇಲೆ ಗೀಚಿ ಬಿಟ್ಟ. ಸಹಿಸಲಸಾಧ್ಯ ಕೋಪವುಕ್ಕಿದ ತಂದೆ ತನ್ನೆದುರಿಗಿರುವ ಮಗನ ಕೈಮೇಲೆ ಸುತ್ತಿಗೆಯಿಂದ ಜಜ್ಜಿ ಬಜ್ಜಿಯಾಗುವಷ್ಟು ಮಾಡಿಬಿಟ್ಟ. ತಂದೆ ಏನುಮಾಡಿದನೆಂಬ ಅರಿವಿಲ್ಲದ ಕಂದ ನೋವಿನಲ್ಲೇ ತನ್ನ ಕೈಯ್ಯನ್ನು ನೋಡುತ್ತ " ಅಪ್ಪಾ, ನನ್ನ ಬೆರಳುಗಳು ಯಾವಾಗ ಮತ್ತೆ ಬೆಳೆಯುತ್ತವೆ ? " ಎಂಬ ಪ್ರಶ್ನೆ ಕೇಳಿದ. ಈ ಮಾತನ್ನು ಕೇಳಿದ ತಂದೆಗೆ ಮದ್ಯದ ಅಮಲು ಒಮ್ಮೆಗೇ ಇಳಿದು ಹೋಯಿತು! ಹುಚ್ಚನಂತಾದ ಆತ ಕಾರನ್ನು ಒದೆಯಲು ಹೋದಾಗ ಅಲ್ಲಿ ನಾಲ್ಕು ಶಬ್ಧಗಳು ಕಂಡವು. " ಐ ಲವ್ ಯು ಡ್ಯಾಡ್ " ! ಆ ಮನುಷ್ಯನಿಗೆ ತಪ್ಪಿನ ಅರಿವಾಗುವ ಹೊತ್ತಿಗೆ ಬಹಳ ತಡವಾಗಿತ್ತು. ಮಗು ರಕ್ತಸ್ರಾವದಿಂದ ತೀರಿಹೋಗಿತ್ತು. ಬೇಸತ್ತ ಆ ಮನುಷ್ಯ ಆತ್ಮಹತ್ಯೆ ಮಾಡಿಕೊಂಡ. --ಇದು ಒಂದು ಸಣ್ಣ ಘಟನೆ ಅಷ್ಟೇ. ಪ್ರಪಂಚದಾದ್ಯಂತ ಮದ್ಯದ ಅಮಲಿನಲ್ಲಿ ನಡೆಯುವ ಅವಘಡಗಳಿಗೇನು ಲೆಕ್ಕವಿದೇಯೇ. ಸುಂದರ ತರುಣಿಯರನ್ನು ಬಯಸುವ ತರುಣರು ಬೀದಿ ನಾಯಿಗಳ ಥರ ಬಡಿದಾಡುವುದನ್ನು ಅನೇಕ ಕಡೆ ಕಾಣಬಹುದಾಗಿದೆ. ಸಿನಿಮಗಳಲ್ಲೂ ತ್ರಿಕೋನ ಮತ್ತು ಬಹುಕೋನ ಪ್ರೇಮ ಕಥೆ ಎಂದು ಬಣ್ಣಿಸಲ್ಪಡುವ ಈ ಘಟನೆಗಳು ನಿಜವಾಗಿ ಪ್ರೇಮವಿಲ್ಲದ ಕಾಮಕ್ರೀಡೆಗಳು. ನಿಜವಾದ ಪ್ರೇಮ ತ್ಯಾಗದಿಂದ ಕೂಡಿರುತ್ತದೆ. ಅಲ್ಲಿ ತನಗೇ ಎಲ್ಲವೂ, ತನದೇ ಎಲ್ಲವೂ ಎಂಬ ಇನ್ನಿಲ್ಲದ ಸ್ವಾರ್ಥ ಇರುವುದಿಲ್ಲ. ಇದನ್ನು ತಿಳಿದೇ ಆಂಗ್ಲರು ಹೇಳಿದರು- ಬ್ಯೂಟಿ ಈಸ್ ಬಟ್ ಸ್ಕಿನ್ ಡೀಪ್ - ಎಂದು, ಅದರರ್ಥ ಕೇವಲ ಹರೆಯದ ಹುಮ್ಮಸ್ಸಿನಲ್ಲಿ, ದಷ್ಟಪುಷ್ಟವಾದ ಅಂಗಾಂಗಗಳನ್ನು ಹೋಂದಿದ ಸೌಂದರ್ಯವತಿ ಸಿಕ್ಕರೆ ನೆನಪಿರಲಿ ಸೌಂದರ್ಯ ಶಾಶ್ವತವಲ್ಲ ಎಂದು! ಆದರೆ ಆಗುತ್ತಿರುವುದೇ ಬೇರೆ. ನಾವು ಮೊದಲಾಗಿ ನೋಡುವುದೇ ಸೌಂದರ್ಯವನ್ನು. ಅದೂ ನಮ್ಮ ಕುದುರೆ ಒಂದನ್ನರಸಿ ಮುಗಿಸಿದರೆ ತೃಪ್ತವಾಗುವುದಿಲ್ಲ-ಬದಲಾಗಿ ಹಲವನ್ನು ಬಯಸುತ್ತದೆ. ಅಲ್ಲಿ ನಾವು ರಾಜಸರಾಗುತ್ತೇವೆ; ಕಾಮುಕರಾಗುತ್ತೇವೆ; ವಿಷಯಲಂಪಟರಾಗುತ್ತೇವೆ. ಇದನ್ನು ತಮ್ಮ ದೂರ ದೃಷ್ಟಿಯಿಂದಲೇ ಅರಿತ ಬಹುಸೂಕ್ಷ್ಮಗ್ರಾಹಿ ಆದಿ ಶಂಕರರು ಹೇಳಿದರು--

ನಾರೀಸ್ತನಭರನಾಭೀದೇಶಂ
ದೃಷ್ಟ್ವಾ ಮಾಗಾ ಮೋಹಾವೇಶಂ |
ಏತನ್ಮಾಂಸವಸಾದಿ ವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||

ಎಂತಹ ಪ್ರಭುದ್ಧ ಹೇಳಿಕೆ ನೋಡಿ! ಅದಕ್ಕೇ ಅಲ್ಲವೇ ಮಹಾತ್ಮರು ಯಾವಾಗಲೂ ಸಾಮಾನ್ಯರಿಗಿಂತ ಭಿನ್ನವಾಗಿರುತ್ತಾರೆ ಎನ್ನುವುದು?

ಹೀಗಾಗಿ ಮದ್ಯ,ಮಾಂಸ,ಮಾನಿನಿ ಈ ಮೂರು ಮನುಷ್ಯನ ಸ್ವಭಾವವನ್ನು ಬದಲಿಸುತ್ತವೆ ಎಂಬುದು ಮಥಿತ ಅಂಶವಷ್ಟೇ? ಇದನ್ನರಿತು ನಮ್ಮ ಮಹಾತ್ಮಾ ಗಾಂಧೀಜಿ ಈ ಮೂರನ್ನೂ ಬಹಳ ದೂರವಿಟ್ಟಿದ್ದರು ಅಲ್ಲವೇ ? ಇದರ ಒಳಹೊರಗಿನ ಇನ್ನೊಂದು ಗಾದೆ ಹೆಣ್ಣು-ಹೊನ್ನು-ಮಣ್ಣು ಈ ಮೂರನ್ನು ಬೆನ್ನತ್ತಿ ಹೋದರೆ ಸುಖವಿಲ್ಲ ಎಂಬುದಲ್ಲವೇ?

ಜಗದ ಯಾವ ಮೂಲೆಯಿಂದಲೂ ಒಳ್ಳೆಯದು ಹರಿದು ಬರಲಿ, ಅದನ್ನು ನಾವೆಲ್ಲ ಸ್ವೀಕರಿಸಲು ನಮಗೇನೂ ತೊಂದರೆಯಿಲ್ಲವಲ್ಲ. ಆದರೆ ಜಗತ್ತಿಗೆ ಬಹಳಷ್ಟು ಒಳ್ಳೆಯ ಕೊಡುಗೆಗಳನ್ನು ನಮ್ಮ ಭಾರತ ಕೊಟ್ಟಿದೆ-ಕೊಡುತ್ತಿದೆ ಎಂಬುದು ನಮಗೆ ಹೆಮ್ಮೆ ಅಷ್ಟೇ! ಧರ್ಮ ಯಾವುದೇ ಆದರೂ ದೇವರು ಒಬ್ಬನೇ! ಹೇಗೆ ಕೆಲವೊಂದು ಪ್ರದೇಶಗಳಿಗೆ ಹೋಗಲು ಹಲವು ಮಾರ್ಗಗಳಿರುತ್ತವೆಯೋ ಹಾಗೇ ದೇವರು ಎಂಬ ಆ ಶಕ್ತಿಸ್ವರೂಪವನ್ನು ತಲ್ಪಲು ಬಹಳ ರೂಪಗಳಲ್ಲಿ ನಾವು ಪೂಜಿಸುತ್ತೇವೆ, ಪ್ರಾರ್ಥಿಸುತ್ತೇವೆ, ಭಜಿಸುತ್ತೇವೆ, ಆರಾಧಿಸುತ್ತೇವೆ, ಸೇವಿಸುತ್ತೇವೆ, ಆಸ್ವಾದಿಸುತ್ತೇವೆ. ಆತ ಅಲ್ಲಾಹುವೋ ಕ್ರಿಸ್ತನೋ ಬುದ್ಧನೋ ಮಹಾವೀರನೋ ಗಣೇಶನೋ ಯಾರೇ ಆಗಿದ್ದರೂ ಅವೆಲ್ಲ ಆ ಮೂಲ ರೂಪದ ಹೊರಮುಖಗಳು ಎಂದು ನಾವೇಕೆ ಇನ್ನೂ ತಿಳಿದಿಲ್ಲ? ಈ ನಿಜದ ತತ್ವವನ್ನು ಅವಲೋಕಿಸಿದರೆ, ಆಹ್ವಾನಿಸಿದರೆ, ಅಭಿವಂದಿಸಿದರೆ,ಅನುಸರಿಸಿದರೆ ನಮ್ಮಲ್ಲಿ ಬಹಳಮಟ್ಟಿಗಿನ ಭಿನ್ನಾಭಿಪ್ರಾಯಗಳು ತಗ್ಗಬಹುದಲ್ಲ ಅಲ್ಲವೇ? ಹೀಗೇ ಇದೇ ವಿಚಾರವನು ಮಥಿಸುತ್ತ ಮಥಿಸುತ್ತ ತೆಗೆದ ಅಲ್ಪ ಪ್ರಮಾಣದ ನವನೀತ ನಿಮ್ಮ ಮುಂದೆ- ತಿಂದು ರುಚಿ ನೋಡಿ ಹೇಳಿ ಆಗದೇ ?


ಜಗವೆಂಬ ಮನೆಯ ನೆನೆದು

ಹೀಗೊಮ್ಮೆ ನನ್ನ ಕನಸು
ಜಗವೊಂದು ಮನೆಯಾಗಿ
ಹಾಯಾಗಿ ಬದುಕಬಹುದೇ ?

ಮುರಿದ ಹಕ್ಕಿಯ ರೆಕ್ಕೆಗಳ
ತಿರುವಿ ಹೊಲಿಯುತ್ತ
ಮರಳಿ ಹಕ್ಕಿಯ ಮುದದಿ ಹಾರಗೊಡಬಹುದೇ ?

ಕಿರಿದಾಯ್ತು ಜಗವು
ಗಣಕ ಯಂತ್ರದ ಜಾಲ
ಬೋಗಿಗಳ ಕೊಂಡಿ ಬೆಸೆದಿರಲು ಅಹುದಲ್ಲ ?

ಜಗದಿ ಮಾನವ ಧರ್ಮ
ಸ್ತ್ರೀ-ಪುರುಷ ಜಾತಿಗಳು
ವಯದ ಮಿತಿಯರಿತು ನಡೆವೊಲು ನಲಿವದಹುದೇ ?

ನಮಗೆ ಪಕ್ಷವು ಬೇಡ
ಗುಂಪುಗಾರಿಕೆ ಬೇಡ
ಮುಗುದರಾಗಲು ಮಾರ್ಗತೆರೆಯಬಹುದೇ ?

ಬಡತನವ ಓಡಿಸಲು
ಸಿರಿತನಕೆ ಮಿತಿಯಿಡಲು
ಹಂಚಿ ತಿನ್ನುವ ತತ್ವ ಅಳವಡಿಸಬಹುದೇ?

ಕಾಯಿಲೆಗೆ ಪಾಷಾಣ
ಕಂಡು ಎಲ್ಲರು ಸೇರಿ
ನೋವಿರದ ಜಗವನ್ನು ಕಟ್ಟಬಹುದೇ ?

ವಾಯಿದೆಯ ಭಯವಿರದ
ಜಾಯಮಾನಕೆ ಒಗ್ಗಿ
ಕಾಯವಿಳಿಯುವವರೆಗೂ ಸುಖಿಸಬಹುದೇ?

ಹಮ್ಮಿರದ-ಭಿಮ್ಮಿರದ
ಸಾಮಾನ್ಯರಂತಿದ್ದು
ಒಂದೇ ವಿನಿಮಯವನ್ನು ಪಡೆಯಬಹುದೇ?

ಕಾಡು ಕಡಿಯದೆ ನಾಡು
ಜಗವೆಂಬ ಹಂಬಲದಿ
ಕೂಡಿದ್ದು ನಾಳೆಗಳ ಸ್ವಾಗತಿಸಬಹುದೇ ?

Monday, June 14, 2010

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!


ಅಂತೂ ಇಂತೂ ನಿತ್ಯಾನಂದನ ಬಿಡುಗಡೆಯಾಯ್ತು! ಆತನ ಭಕ್ತರ ಮನಸ್ಸಿಗೆ ಕಾಡಿನಿಂದ ಶ್ರೀರಾಮ ವನವಾಸ ಮುಗಿಸಿ ಬಂದದ್ದಕ್ಕಿಂತ ತುಸು ಹೆಚ್ಚೇ ಖುಷಿಯಾಯ್ತು. ಛೆ ಛೆ ನಮ್ಮ ಸ್ವಾಮೀಜಿ ಹಾಗಲ್ಲ- ತುಂಬಾ ಸೆನ್ಸಿಟಿವೆ ಮ್ಯಾಟರು ಎನ್ನುತ್ತಿರುವ ನಿತ್ಯಭಕ್ತಾನಂದರುಗಳಿಗೆಲ್ಲ ನಮೋನ್ನಮಃ ! ಭಾರತಮಾತೆ ಬಹುಶಃ ಬಹಳದಿನಗಳಮೇಲೆ ಪುರುಸೊತ್ತು ಮಾಡಿಕೊಂಡು ಒಮ್ಮೆ ನಕ್ಕಿರಬೇಕು! ಸ್ವಲ್ಪ ಕಣ್ಣು ಕ್ಲೀಯರ್ ಇದ್ದವರಿಗೆ ಪಂಚಾಗ್ನಿ ಎಂದು ಹೆಸರಿಸಿದ ಚಳಿಗೆ ಹಾಕಿಕೊಳ್ಳುವ ಬೆಂಕಿಯ ಮಧ್ಯೆ ಆಗಾಗ ಸಣ್ಣಗೆ ಕಣ್ಣು ಕಿರಿದಾಗಿ ತೆರೆದು ಮೀಡಿಯಾದವರ ಕ್ಯಾಮರಾ ನೋಡುತ್ತಿದ್ದ ನಿತ್ಯಾನಂದನನ್ನು ನೋಡಲು ಕಣ್ಣುಗಳೆರಡೂ ಸಾಲದು! ನಿತ್ಯ ಬರುತ್ತಿದ್ದಂತೆ ಇಡೀ ಆಶ್ರಮಕ್ಕೆ ಆಶ್ರಮವೇ ಎದ್ದು ಕುಣಿಯಿತು. ಪೂರ್ಣಕುಂಭ ಸ್ವಾಗತ ಬೇರೆ! ಲೋಕದಲ್ಲಿ ಇನ್ನೆಲ್ಲೂ ಸಿಗದ ಆನಂದವನ್ನು ಪಡೆಯುತ್ತಿರುವ ಎಲ್ಲಾ ಆನಂದಗಳು-ಮಾತಾನಂದಗಳು ಖುದ್ದು ಹಾಜರಿದ್ದು ನಿತ್ಯಾನಂದವನ್ನು ಬರಮಾಡಿಕೊಂಡರು. ಜನಮರುಳೋ ಜಾತ್ರೆ ಮರುಳೋ ಎಂಬಂತೆ ಹಲವು ಜನ ಹೆಚ್ಚಿನ ಶಿಕ್ಷಣ ಪಡೆದ ಭಕ್ತರೂ ಇದ್ದರು. ಅಂದಹಾಗೆ ಈ ಪಂಚಾಗ್ನಿಗೆ ಸೀಮೆ ಎಣ್ಣೆ ಸುರಿದು ಶಾಸ್ತ್ರೋಕ್ತವಾಗಿ ಬೆಂಕಿ ಹಚ್ಚಲಾಯಿತು! ಅಲ್ಪ ಸ್ವಲ್ಪ ಹೊಗೆಉಗುಳುತ್ತ ಆಗಾಗ ಅರ್ಧ ಅಡಿ ಎತ್ತರಕ್ಕೆ ಉರಿದ ಬೆಂಕಿಯನ್ನೇ ಮಾಧ್ಯಮದವರು ಕಷ್ಟಪಟ್ಟು ಕವರೇಜ್ ಮಾಡಿ ಸಾರ್ವಜನಿಕರಿಗೆ ಪಂಚಾಗ್ನಿ ಎಂದು ತೋರಿಸಬೇಕಾಯಿತು! ಇಂತಹ ಅಡ್ಡಕಸುಬಿ ಖಡ್ಡ ಸ್ವಾಮಿಗಳು ಬಹಳ ಒಳ್ಳೆಯ ಶಬ್ಢಗಳನ್ನೆಲ್ಲ ದುರುಪಯೋಗ ಮಾಡುತ್ತಾರಲ್ಲ ಎಂಬುದೇ ಖೇದದ ಮಾತು. ಅಂತೂ ಪಂಚಾಗ್ನಿ ಪ್ರಾಯಶ್ಚಿತ್ತ ಲೋಕ ಮಾಡಿದ ತಪ್ಪಿಗೆ ಎಂದೂ ಭಕ್ತರು ಟಿ.ವಿಯಲ್ಲಿ ಕೂತು ಹೇಳಿಕೆ ಕೊಟ್ಟರು! ಈ ಲೋಕಕಲ್ಯಾಣಾಥದ ಪ್ರಾಯಶ್ಚಿತ್ತದ ೨೧ ದಿನಗಳ ಕಾಲ ಪ್ರತೀ ದಿನ ಗಾಂಜಾ-ಆಫೀಮು ಬಳಕೆಯೂ ಇದ್ದರೆ ಬಿದ್ದ ಮಳೆಯ ಚಳಿಗೆ ಸ್ವಲ್ಪ ಬೆಚ್ಚಗೆ ಹಚ್ಚಗೆ ಇರಬಹುದಾಗಿತ್ತು ಆದರೆ ಅದು ಇನ್ನೂ ಪ್ರಾರಂಭವಾಗಿಲ್ಲ ಅನಿಸುತ್ತದೆ.

ಪಂಚಾಗ್ನಿಯ ವರ್ಣನೆ ಕೆಲವು ವೇದ-ಪುರಾಣ ಭಾಗಗಳಲ್ಲಿ ಇದೆ ಎಂಬುದನ್ನು ಕೇಳಿದ್ದೇನೆ. ವ್ಯಕ್ತಿ ತನಗೆ ತಾನೇ ಪ್ರಾಯಶ್ಚಿತ್ತಕ್ಕಾಗಿ ೪೫ ದಿನಗಳ ಕಾಲ ಚತುರಸ್ರ ಮಂಡಲ ಅಂದರೆ ಚೌಕಾಕಾರದ ಕುಂಡವನ್ನು ಸುತ್ತಲೂ ಕೊರೆದು, ಅದರಲ್ಲಿ ವ್ಯಕ್ತಿ ತಾನು ಕುಳಿತಾಗ ಹೊರಗೆ ಕಾಣದಷ್ಟು ಎತ್ತರದವರೆಗಿನ ಬೆಂಕಿಯನ್ನು ನಾಲ್ಕೂ ದಿಕ್ಕಿನಲ್ಲಿ ಉರಿಸಿದರೆ ಮೇಲಿಂದ ಉರಿವ ಸೂರ್ಯ ಐದನೆಯ ಅಗ್ನಿ ಎಂಬುದನ್ನೂ ಪರಿಗಣಿಸಿ, ಸತತ ನಲವತ್ತೈದು ದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚೆ ಆರಂಭಿಸಿ ಅಪರಾಹ್ನದವರೆಗೆ ಪ್ರತಿನಿತ್ಯ ನಡೆಸುವ ಪ್ರಾಯಶ್ಚಿತ್ತ ವಿಧಿ ಇದು. ಇದನ್ನು ಹೋಗಿ ಯವುದೋ ಚಿಲ್ಲರೆ ಬೆಂಕಿಗೆ ಹೋಲಿಸಿ ಪಂಚಾಗ್ನಿ ಎಂದರೆ-ಹೇಳಿದ್ದನ್ನು ನಾವೆಲ್ಲ ಕೋಲೆ ಬಸವನ ಥರ ಸರಿಯೆಂದು ನಂಬಿದರೆ ಜಗತ್ತಿನಲ್ಲಿ ಮೂರ್ಖರ ಸಂಖ್ಯೆ ಜಾಸ್ತಿಯಾದೀತು ಎಂಬುದು ನಮ್ಮ ಅಂಬೋಣ!

ಪರಮಹಂಸರದು ಅತೀತಾಶ್ರಮ-ಅವರು ಏನುಬೇಕಾದರೂ ಮಾಡಬಹುದು ಎಂದೆಲ್ಲ ಹುಚ್ಚು ಹೇಳಿಕೆ ಕೊಡುವ ಆಧ್ಯಾತ್ಮಿಕವಾಗಿ ಏನೂ ಓದದ-ಅರಿಯದ ಆನಂದಗಳನ್ನು-ಮಾತಾನಂದಗಳನ್ನು ನೋಡಿದರೆ ಪಾಪ ಅನ್ನಿಸುತ್ತಿತ್ತು. ಅಲ್ಲಾ ಸ್ವಾಮೀ ನಮಗೆ ಸನ್ಮಾರ್ಗ ಬೋಧಿಸುವ ಸರಿಯಾದ ಸನ್ಯಾಸಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಇರುವಾಗ ಇವರಿಗೆಲ್ಲ ಯಾವ ಮಂಕು ಕವಿದಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅನೇಕ ಕಾಂತರು-ಕಾಂತೆಯರೂ-ಕಾಂತಿಯರೂ ಬಂದು ದೊಪ್ಪೆಂದು ಅಡ್ಡಬೀಳುವ ಪ್ರಕ್ರಿಯೆಗೆ ಮತ್ತೆ ಚಾಲನೆ ದೊರೆತಿದೆ. ಒಟ್ಟಿನಲ್ಲಿ ನಿತ್ಯಾನಂದನಿಗೆ ಪುಗಸಟ್ಟೆ ಪ್ರಚಾರ ಸಿಕ್ಕಂತಾಯ್ತು. ನಮ್ಮ ಸಮಾಜವೇ ಹೀಗೆ. ಇಂತಹ ಹಗಲುಗಳ್ಳರನ್ನೇ ನಂಬುವುದು,ಅವರು ಎಲ್ಲರ ಮಧ್ಯೆ ವಿಜೃಂಭಿಸುವಂತೆ ಮಾಡುವುದು. ನೆನೆಪಿರಲಿ-ಬಿಡದಿಗೆ ಭಕ್ತರು ಹೆಚ್ಚುವ ಕಾಲ ಬಂದಿದೆ! ನಿತ್ಯಾನಂದನಿಗೆ ಶುಕ್ರದೆಸೆ ಬಂದಿದೆ. ನಾವೂ ಯಾಕೆ ಕಮ್ಮಿ ಎನಿಸಿಕೊಳಬೇಕು? ನಾವೆಲ್ಲ ಸೇರಿ ಒಂದು ಭಜನೆ ಹಾಡಿದರೆ ಹೇಗೆ? ತಗಳಿ-- ಭಜನೆ ನಾನೇ ರಚಿಸಿ ಕೊಟ್ಟಿದ್ದೇನೆ >>>

ಪಂಚಾಗ್ನಿಯ ನಡುವೆ ಜೀವಂತ ಕಂಡ ಪರಮಹಂಸ !!

[ರಾಮ ಮಂತ್ರವ ಜಪಿಸೋ ಎಂಬಂತೆ ]

ಪಂಚಾಗ್ನಿಯ ಉರಿಸೋ ನಿತ್ಯನೇ ನಿನ್ನ
ಪಂಚಾಗ್ನಿಯ ಉರಿಸೋ

ನಾರೀನರರ ಮಧ್ಯೆ ಕೆದಕಿ ವರ್ತುಳ ಕೊರೆದು
ನೂರಾರು ಲೀಟರು ಸೀಮೆ ಎಣ್ಣೆಯ ಸುರಿದು
ಭಾರೀ ಜನಸ್ತೋಮ ಮತ್ತೆ ಮೀಡಿಯಾದವರು
ಹಾರಿ ಬಂದು ನೋಡಿ ದಂಗುಬಡಿಸಿಕೊಂಬ

ಪಂಚಾಗ್ನಿಯು ಎಂದರೇನೆಂದು ತಿಳಿಯದೆ
ಹೊಂಚು ಹಾಕಿ ಜನಕೆಳೆಯೊ ನಾಮವನು
ಮಂಚವೇರಿ ಮುದದಲಿ ನರ್ತಿಸು ಮತ್ತೆ
ಕೊಂಚ ನೆನೆಪಿರಲಿ-ಸೀಡಿ ಕ್ಯಾಮರಾಗಳು!

ಓದಿದವರಿಗೆಲ್ಲ ಮಂಕು ಬೂದಿಯ ಎರಚಿ
ಮಾಧವ ಕಲೆ ಕಲಿಸಿದೆಯೊ ನೀ ಗುರುವೇ ?
ಆದಿನಾರಾಯಣ ತಾನೇ ಎಂದರೂ
ಖೇದ ನಮಗೆ ಜನ ನಂಬುತಾ ಕೆಟ್ಟರು!

’ಪರಮಹಂಸ’ ಶಬ್ಧವನೆಲ್ಲ ಬಳಸುತ
ಚರಮ ಹರಿಯುವಂತ ನೋವುತಾರದಿರೊ
ಕರುಮನಮದು ಅನುಭವಿಸಿ ತೀರಲು
ಮರಿಮಕ್ಕಳು ಕಾವಿ ನೋಡಿ ಹೆದರಲು !

ಕಾಂತರನೇಕರು ನಿನ್ನ ಭಕುತರು
ಕಾಂತಿಯರೂ ಕಾವಿ ತೊಟ್ಟು ಬಂದರು
ಆಂತರ್ಯದಿ ಎರ್ರೋಟಿಕ್ ಪ್ಲೆಷರು
ಶಾಂತಿಮಾಡು ನೀ ಕಾವಿಯ ತೆರೆದು !

ಬಿಡದಿಯ ಭಕ್ತರ ದಂಡನು ತೊರೆದು
ತಡಮಾಡದೆ ಹಿಮಾಲಯ ಹಿಡಿದು
ಬಿಡದೇ ಖಾಕಿಗಳು ನಿನ್ನ ಹುಡುಕಲು
ಅಡಿಗಡಿಗೂಮ್ಮೆ ನಗುತಲಿ ತಾ ಬಂದೆ !

Sunday, June 13, 2010

ಕಥೆ ಬರೆಯುವರ ಕಥೆಯೊಳಗಿನ ಕಥೆ


ಕಥೆ ಬರೆಯುವರ ಕಥೆಯೊಳಗಿನ ಕಥೆ

ಕಥೆ ಬರೆಯಬೇಕೆಂದು ಕೂಚು ಭಟ್ಟರು ನಿರ್ಧರಿಸಿಬಿಟ್ಟರು. ಆದರೆ ಯಾವ ಕಥೆ ಬರೆಯಬೇಕೆಂಬುದೇ ಹೊಳೆಯಲಿಲ್ಲ. ಕಥೆಯ ಕಥೆಗಾಗಿ ಹುಡುಕಿ ಹುಡುಕಿ ಪರಿತಪಿಸಿದರು. ಕೊನೆಗೂ ಕಥೆಯ ಕಥಾವಸ್ತು ಸಿಗದ ಕಾರಣ ಏನುಬರೆಯಬೇಕೆಂದು ಆಲೋಚಿಸುತ್ತ ಬಹಳ ಚಿಂತಾಕ್ರಾಂತರಾಗಿದ್ದರು. ಹುಟ್ಟಿ ಬೆಳೆದು ಐವತ್ತು ವರುಷ ಕಳೆದು ಹೋಯಿತು, ಆದರೆ ಕಥೆ ಬರೆಯಲೇ ಇಲ್ಲವಲ್ಲ ಎಂಬುದು ಇನ್ನೊಂದು ಕಳವಳ. ಅಂತೂ ಬರೆಯಲು ಬಹಳ ಉತ್ಸುಕರಾಗಿದ್ದರು. ಇಂದು ಬರೆಯಬೇಕು ನಾಳೆ ಬರೆಯಬೇಕು ಎಂದೆಲ್ಲ ಎಣಿಕೆ ಮನದ ತುಂಬಾ. ಯಾರೋ ಹೇಳಿದರು "ಕೂಚು ಭಟ್ಟರೇ ನೀವು ಕಥೆಬರೆಯಲು ಒಂದು ಒಳ್ಳೆಯ ಮುಹೂರ್ತದಲ್ಲಿ ಶುರುಮಾಡಿ" ಎಂದು. ಭಟ್ಟರಿಗೂ ಅದು ಸಹಜವಾಗಿ ಹೌದೆನಿಸಿ ಅದಕ್ಕೆ ತಯಾರಿ ನಡೆಸುತ್ತಿದ್ದರು. ಪುರೋಹಿತರನ್ನು ಕೇಳಿ ಕಥೆ ಬರೆಯಲು ಒಂದು ಒಳ್ಳೆಯ ಮುಹೂರ್ತ ಮತ್ತು ಪ್ರಾರಂಭಿಕ ಪೂಜೆ ಒಂದನ್ನು ಗೊತ್ತು ಪಡಿಸಿಕೊಂಡರು. ದಿನ ಕಳೆಯುತ್ತ ಕಳೆಯುತ್ತ ಅಂತೂ ಭಟ್ಟರ ಕಥೆ ಬರೆಯುವಿಕೆಯ ಪ್ರಾರಂಭದ ದಿನ ಬಂದೇ ಬಿಟ್ಟಿತು. ಪೂಜೆಯೂ ನಡೆದೇ ಹೋಯಿತು. ಆದರೆ ಕಥೆಯ ಹೆಸರಾಗಲೀ ಕಥೆಯ ಕಥಾವಸ್ತುವಾಗಲೀ ಭಟ್ಟರಿಗೇ ತಿಳಿದಿರಲಿಲ್ಲ! ಅಂತೂ ಭಟ್ಟರು ಕಥೆ ಬರೆಯಲು ಕುಳಿತೇ ಬಿಟ್ಟರು!

ಹಾಗೂ ಹೀಗೂ ಒಂದು ಮರದ ಪೀಠಹತ್ತಿ ಕುಳಿತು ಕಥೆಬರೆಯುತ್ತಿದ್ದರು.

|| ಪೀಠಸ್ಥ ಕೂಚು ಭಟ್ಟಂ ದೃಷ್ಟ್ವಾ ಪುನರ್ಜನ್ಮಂ ನವಿದ್ಯತೇ ||
ಎನ್ನಬಹುದಾದ ಘನಗಾಂಭೀರ್ಯ ಪೀಠವೇರಿ ಕುಳಿತ ನಮ್ಮ ಕೂಚುಭಟ್ಟರದು. ಹಳೆಯ ಕಾಲದ ದೊಡ್ಡ ಋಷಿಗಳೆಲ್ಲ ಪುರಾಣ ಬರೆಯಲು ಕುಳಿತ ಹಾಗೇ ಶ್ರೀಮದ್ಗಾಂಭೀರ್ಯದ ಪೋಸುಕೊಡುತ್ತ ಬರೆಯುತ್ತಿದ್ದರು. ಠಾಕು ಠೀಕಾಗಿ ಕುಳಿತ ಕೂಚುಭಟ್ಟರಿಗೆ ಪೀಠದ ಕೀಲು ಕಟಕ್ ಎಂದು ತುಂಡಾಗಿದ್ದು ತಿಳಿಯಲೇ ಇಲ್ಲ. ಕ್ಷಣಾರ್ಧದಲ್ಲಿ ಭಟ್ಟರು ದುರ್ಯೋಧನ ಪೀಠದಿಂದ ಬಿದ್ದ ರೀತಿ ಪೀಠಸಮೇತ ಬಿದ್ದರು. ಸದ್ಯಕ್ಕೆ ಅಲ್ಲಿ ಯಾರೂ ಇರಲಿಲ್ಲವಾಗಿ ಯಾವುದೇ ಸಂಕೋಚವಿಲ್ಲದೇ ಸೊಂಟ ನೀವಿಕೊಂಡು ಎದ್ದು ನಿಂತಿತು ಸವಾರಿ! ಆದರೂ ಬಿದ್ದ ಕ್ಷಣದಲ್ಲಿ ಕಳಕ್ ಅಂತ ಸೊಂಟದಲ್ಲಿ ಎನೋ ಶಬ್ಧ ಬಂತಲ್ಲ, ಅದು ಬಂದಾಗ ಬಂದ ನೋವು ಇನ್ನೂ ಹೋಗಿರಲಿಲ್ಲ. ಉಜ್ಜುತ್ತ ಉಜ್ಜುತ್ತ ಗಂಟೆಯೇ ಕಳೆದರೂ ಭಟ್ಟರ ಸೊಂಟದ ಕಥೆ ದೊಡ್ಡ ಕಥೆಯಾಯಿತು; ಭಟ್ಟರಿಗೆ ವ್ಯಥೆಯಾಯಿತು. ಆದರೂ ಗುಣವಾದಮೇಲೆ ಮತ್ತೆ ಕಥೆಬರೆದರಾಯಿತು ಅಂದುಕೊಂಡರು.

ಪೀಠ ಮುರಿದಿದ್ದು ಮನೆಯಲ್ಲಿ ಎಲ್ಲರಿಗೂ ಕಾಣುತ್ತಿತ್ತು. ಭಟ್ಟರ ಕ್ವಿಂಟಾಲು ತೂಕಕ್ಕೆ ಹಳೆಯ ಮರದ ಕೀಲು ಕಟ್ಟನೇ ತನ್ನ ಅವಸಾನವನ್ನು ಕಂಡುಕೊಂಡಿತ್ತು. ಭಟ್ಟರು ಅದಕ್ಕಾಗಿ ಪಶ್ಚಾತ್ತಾಪ ಪಟ್ಟವರಲ್ಲ; ಶಕುನವಾಗಲಿಲ್ಲವೆಂದು ಹಳವಡಿಸಲೂ ಇಲ್ಲ. ಆದರೂ ಬಿದ್ದಾಗ ಆದ ನೋವು ಆಗಾಗ ಮರುಕಳಿಸಿ ಭಟ್ಟರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಆಡುವಂತಿಲ್ಲ-ಅನುಭವಿಸುವಂತಿಲ್ಲ! ಕಟ್ಟಾ ಸ್ವಾಭಿಮಾನಿಯಾದ ಕೂಚುಭಟ್ಟರು ಯಾರಲ್ಲಿಯೂ ತನ್ನ ಈ ದುಗುಡವನ್ನು ಹೇಳಿಕೊಳ್ಳಲಾರರು. ಆಯೊಡೆಕ್ಸ್ ಮತ್ತು ಇನ್ನೂ ಅನೇಕ ಎಲ್ಲಾ ಬ್ರಾಂಡಿನ ನೋವು ನಿವಾರಕ ತೈಲ-ಲೇಪನ ಪದಾರ್ಥಗಳನ್ನು ಹಚ್ಚಿ ನೋಡಿದ್ದಾಯಿತು. ಹಚ್ಚಿದಷ್ಟೇ ಹೊತ್ತು! ಅಮೇಲೆ ಮತ್ತೆ ಆ ಅಸಾಧ್ಯ ನೋವು ಹಾಜರು. ಕಾಣದ ದೇವರಿಗೆಲ್ಲ ಕಮುಗಿದು ಒಳಗೊಳಗೇ ಪ್ರಾರ್ಥನೆ-ಹರಕೆ ಎಲ್ಲವೂ ನಡೆಯಿತು. ಮನೆಯಲ್ಲಿ ಇನ್ಯಾರಿಗೂ ವಿಷಯ ಗೊತ್ತೇ ಇಲ್ಲ. ಹೇಳಿಕೊಳ್ಳಲು ಭಟ್ಟರೇನು ಇದಕ್ಕೆಲ್ಲ ಹೆದರುವ ಸಣ್ಣಮರಿಯೇ ? ಛೆ ಛೆ. ನಾಳೆ ಕಥೆಯನ್ನು ಬರೆಯುವ ಉದ್ಧಾಮ ಪಂಡಿತರು ಈ ಇಷ್ಟುಸಣ್ಣ ನೋವಿಗೆಲ್ಲ ದೊಡ್ಡದೇನೋ ಆದಂತೆ ಆಡುವುದೇ ? ಆ ಥರದ ವ್ಯಕಿಯೇ ಅಲ್ಲ ಭಟ್ಟರು! ಈ ನೋವೆಲ್ಲ ಏನೂ ಅಲ್ಲ ಅವರಿಗೆ. ಆದರೆ ನೋವು ಬಂದಾಗ ಮಾತ್ರ ತಿರುಪತಿ ವೆಂಕಟರಮಣ ಧರ್ಮಸ್ಥಳದ ಮಂಜುನಾಥ ಎಲ್ಲರೂ ನೆನಪಾಗುತ್ತಾರೆ!

ಪತ್ರಿಕೆಯಲ್ಲಿ ಬರುವ ಹಲವು ಕಥೆಗಳನ್ನು ಓದಿದ್ದರು ಭಟ್ಟರು. ಇನ್ನೂ ಆಗಾಗ ಓದುತ್ತಲೂ ಇದ್ದರು. ಹಿರಿ-ಕಿರಿಯ ಸಾಹಿತಿಗಳ ನೆರೆ-ಕರೆಯ ಬರಹಗಳು,ಕಥೆಗಳು ಆಹಾ ಅದೇನಂತೀರಿ ಅದನ್ನೆಲ್ಲ ಚಾಚೂ ಬಿಡದೇ ಪ್ರಯತ್ನ ಪೂರ್ವಕ ಓದಿ ಮುಗಿಸುತ್ತಿದ್ದರು. ಅವುಗಳ ಪ್ರಭಾವದಿಂದಲಾದರೂ ತಾನು ಬರೆಯಬಹುದೇನೋ ಎಂಬ ಆಸೆ ಭಟ್ಟರಿಗೆ. ಛೆ ಎಂತೆಂಥಾ ದಡ್ಡರೆಲ್ಲ ಮುಂದೆ ಬಂದು ಬಿಟ್ಟರು, ತಾನು ಮಾತ್ರ ಬರೆಯಲೇ ಇಲ್ಲವಲ್ಲ ಎಂಬುದೇ ನಮ್ಮ ಕೂಚು ಭಟ್ಟರ ಇರಾದೆ. ಮನಸ್ಸಿಗೆ ಈ ಥರ ಬೇಸರವಾದಾಗ ಎಫ್ ಎಮ್ ರೇಡಿಯೋ ಹಾಕಿಕೊಳ್ಳುವರು. ಅಲ್ಲಿ ಮಾತನಾಡುವ ರೇಡಿಯೋ ಜಾಕಿಗೂ ತನಗೂ ಏನು ಅಭ್ಯಂತರ, ರೇಡಿಯೋದಲ್ಲಿ ಜಾಕಿ ಹೇಗೆ ಸುಲಲಿತವಾಗಿ ಮಜವಾಗಿ ಸನ್ನಿವೇಶಕ್ಕೆ ತಕ್ಕಂತೆ ಮಾತು ಹೊಸೆದು ಕಥೆ ಕಟ್ಟುತ್ತಾರೋ ಅದೇ ರೀತಿ ತಾನೂ ಕಥೆಬರೆಯಲೇಬೇಕೆಂದುಕೊಳ್ಳುವರು.ಅದು ಹೆಗೆ ಅವರಿಗೆಲ್ಲ ವಿಷಯ ಸಿಗುತ್ತದೆ ಎಂಬುದೇ ಇವರಿಗೆ ಅರ್ಥವಾಗಲಿಲ್ಲ! ಒಂದು ಗುಟ್ಟು- ಇದು ನಿಮ್ಮಲ್ಲೇ ಇರಲಿ --ಎಲ್ಲಾದರೂ ಯಾರಾದರೂ ಕಥೆ ಬರೆಯಲು ಹೇಳಿಕೊಡುವ ತರಗತಿ ನಡೆಸುತ್ತಿದ್ದರೆ ಭಟ್ಟರಿಗೆ ಸೇರಿಬಿಡೋಣವೆನ್ನಿಸಿತ್ತು! ಆದರೆ ಕಥೆಯನ್ನೋ ಕಾವ್ಯವನ್ನೋ ಬರೆಯಲು ತರಬೇತಿ ಕೊಡಲಾಗುವ ಶಾಲೆ ಮಾತ್ರ ಸಿಗಲೇ ಇಲ್ಲ. ಹೀಗಾಗಿ ಪಾಪಿ ಹೋದಲ್ಲಿ ಮೊಳಕಾಲು ನೀರು ಎಂದಂತೆ ಬಹಳ ಹತಾಶರಗಿದ್ದರು ನಮ್ಮ ಕೂಚು!--ಯಾರಿಗೂ ಹೇಳಬೇಡಿ, ಯಾಕೆಂದರೆ ಇದು ಅವರ ಮನೆಯವರಿಗೂ ಗೊತ್ತಿಲ್ಲ!

ಭಟ್ಟರ ಹೆಂಡತಿ ವಿಶಾಲಾಕ್ಷಮ್ಮ ಮಹಾ ಸಾಧ್ವಿ. ಯಾವಾಗಲೂ ತಾನಾಯಿತು ತನ್ನ ಕೆಲಸವಾಯಿತು ಅಂತ ಇರುವವಳು. ಎಂದೂ ತನಗೆ ಅದು ಬೇಕು ಇದು ಬೇಕು ಎಂದು ಕೇಳಿದವಳಲ್ಲ. ಗಂಡ ಹೊಸ ಸೀರೆ ಕೊಡಿಸದೇ ವರುಷವೇ ಕಳೆದಿದ್ದರೂ ಅದಕ್ಕಾಗಿ ತಲೆಕೆಡಿಸಿಕೊಂಡವಳಲ್ಲ,ಮರುಗುವವಳೂ ಅಲ್ಲ. ಹೇಗೂ ಗಂಡನ ವ್ಯಕ್ತಿತ್ವದ ಅರಿವಿದೆ. ಗಂಡನ ಹತ್ತಿರ ಕೇಳಿ ಸುಮ್ಮನೇ ಬೈಸಿಕೊಳ್ಳುವುದಕ್ಕಿಂತ ಕೇಳದಿರುವುದೇ ವಾಸಿ ಎಂಬುದು ಅವಳ ಅನಿಸಿಕೆ. ಹೀಗಾಗಿ ಅವಳು ಆದಷ್ಟೂ ಅಂತರ್ಮುಖಿಯಾಗಿಯೇ ಇರುತ್ತಿದ್ದಳು. ಭಟ್ಟರಿಗೆ ಅವಳ ಕೂಡ ಮಾತನಾದಲು ಪುರುಸೊತ್ತೆಲ್ಲಿದೆ? ಕಥೆಬರೆಯುವ ಹಂಬಲದಲ್ಲಿರುವ ಮಹಾನ್ ಲೇಖಕ ಅವರು ಹೀಗಾಗಿ ಯಾರೊಂದಿಗೆ ಸುಖಾಸುಮ್ಮನೇ ಲೋಕಾಭಿರಾಮವಾಗಿ ಎರಡು ಸಿಹಿಮಾತು ಹಂಚಿಕೊಳ್ಳುವ ಪ್ರವೃತ್ತಿ ನಮ್ಮ ಕೂಚಿನದ್ದಲ್ಲ! ಕುಂಬಳಕಾಯಿ ಮಜ್ಜಿಗೆ ಹುಳಿ ಎಂದರೆ ಗಂಡನಿಗೆ ಪ್ರೀತಿ ಎಂಬುದು ಅವಳಿಗೆ ಗೊತ್ತಿರುವ ಆಪ್ತ ವಿಷಯಗಳಲ್ಲೊಂದು. ಹೀಗಾಗಿ ಭಟ್ಟರ ಅವಕೃಪೆಗೆ ಪಾತ್ರಳಾಗದಿರಲೆಂದುಕೊಂಡು ಆಗಾಗ ಮಜ್ಜಿಗೆ ಹುಳಿ ಮಾಡೋಳು. ಭಟ್ಟರು ಈ ವಿಷಯದಲ್ಲಿ ಮಾತ್ರ ತುಂಬಾ ತೃಪ್ತರು. ಊಟಮಾಡುವಾಗ ಯಾವುದೋ ಯಂತ್ರದ ಥರ ಸೊರ ಸೊರ ಸೊರ ಎಂದು ದೊಡ್ಡ ಸದ್ದು ಮಾಡುತ್ತ ಮಾಡುವುದು ನಮ್ಮ ಕೂಚಿನ ವೈಖರಿ. ಹೆಂಡತಿ ಮಜ್ಜಿಗೆ ಹುಳಿ ಮಾಡಿದ ದಿನ ಎಅಡು ತುತ್ತು ಜಾಸ್ತಿಯೇ ಉಂಡು ಬಲಗೈಯ ಎಲ್ಲಾ ಬೆರಳುಗಳನ್ನೂ ಗಂಟಲವರೆಗೆ ಎಳೆದುಕೊಂಡು ಚೀಪಿದರಷ್ಟೇ ಅವರ ಊಟ ಮುಗಿಯುತ್ತಿತ್ತು!ಊಟದ ನಂತರ ಮಾಳಿಗೆಯ ಕೋಣೆಯ ಮಂಚದಮೇಲೆ ಕಾಲು ಚಾಚಿ ಮಲಗಿದರೆ ’ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ’! ನಂತರ ಚಾಲೂ ಹಚ್ಚುವ ಗರಗಸ ಕಾಮಗಾರಿ [ಗೊರಕೆ] ಗೊಂಡಾರಣ್ಯದಲ್ಲಿ ದಪ್ಪನೆಯ ದಿಮ್ಮಿಯನ್ನು ಹಲಗೆಯಾಗಿ ಕತ್ತರಿಸುವಾಗ ಆಗುವಂತ ಸದ್ದು!

’ಮಾವಿನ ಹಣ್ಣಿನ ಸೀಕರಣೆ’ ಎಂದು ಹೆಸರಿಡಲೇ ಓ ಬೇಡ ಬೇಡ ಹಾಗಾದ್ರೆ ’ಮಣ್ಣಿನಮಗ’ ಎಂದು ಆರಂಭಿಸಲೇ ಛೆ ಛೆ ಬೇಡವೇ ಬೇಡ....ಮತ್ತೆ ಹಾಗಾದ್ರೆ ’ದೋಣಿಸಾಗಲಿ ಮುಂದೆ ಹೋಗಲಿ’ ಎಂದು ಬರೆಯಲೇ ಹೀಗೇ ಕಥೆಗೊಂದು ನಾಮಕರಣ ಮಾಡಿಕೊಂಡು ಬರೆಯಲು ಪ್ರಯತ್ನಿಸುತ್ತಿದ್ದರು. ಕಥೆ ಎರಡು ಪುಟ ಅಬ್ಬಬ್ಬ ಅಂದ್ರೆ ಮೂರು ಪುಟಗಳಲ್ಲಿ ಮುಗಿದು ಹೋಗಬೇಕೆಂಬ ಆಸ್ತೆಯಿದ್ದ ಆಜಾನುಭಾಹು ನಮ್ಮ ಕೂಚು ಭಟ್ಟರು, ಓದಿ ಓದಿ ಓದಿ ಮರುಳಾದೆಯಾ ಕೂಚು ಭಟ್ಟ ಅಂತಾರಲ್ಲ ಬಹುಶಃ ಆ ಗಾದೆ ಈ ಭಟ್ಟರಿಂದಾಗಿಯೇ ಹುಟ್ಟಿರಬೇಕು! ಕಥೆಯಲ್ಲಿ ಸಸ್ಪೆನ್ಸ್ ಇರಬೇಕು, ಕಥೆ ಮಾದಕವಾಗಿರಬೇಕು, ಕಥೆಯಲ್ಲಿ ಬರುವ ಪಾತ್ರಗಳು ಜನರ ಮನಸ್ಸನ್ನು ಬಹಳ ಆಕರ್ಷಿಸಬೇಕು.ಕಥೆ ಮಾರ್ದವತೆಯಿಂದ ಕೂಡಿರಬೇಕು, ಕಥೆಯಲ್ಲಿ ಆದರ್ಶಗಳಿರಬೇಕು, ಕಥೆಯಲ್ಲಿ ಒಂದು ಕ್ಲೈಮ್ಯಾಕ್ಸ್ ಇರಬೇಕು....ಒಂದೇ ಎರಡೇ ನಮ್ಮ ಭಟ್ಟರ ಕಥೆಯಲ್ಲಿನ ಸಾಧ್ಯತೆಗಳ ಕಲ್ಪನೆ. ಅದ್ಭುತ ಪರಿಕಲ್ಪನೆ ನಮ್ಮ ಕೂಚಿನದು!

ಅಗಾಗ ನಮ್ಮ ಕೂಚು ಭಟ್ಟರಿಗೆ ಕಾಪಿ ಕುಡಿಯುವ ಚಟ, ಒಂದು ಸಿಪ್ಪು ಕಾಪಿ ಹೀರಿ, ತಟಕ್ಕನೆ ಲೈಟರ್ ಒತ್ತಿ ಸಿಗರೇಟು ಹಚ್ಚಿದರೆ ಪರಮಾತ್ಮನಾದಷ್ಟು ಸುಖ! ಸುಖವೆಂದರೆ ಇದೇ ಏನೋ ಅನ್ನಿಸಿಬಿಟ್ಟಿತ್ತು ನಮ್ಮ ಕೂಚಿಗೆ! ಮಕ್ಕಳು ಎದುರು ಬಂದರೆ ದುರುಗುಟ್ಟುವ ಹವ್ಯಾಸಿ ಕಲಾವಿದ ನಮ್ಮ ಕೂಚು! ಅಡ್ಡ ಕಸುಬಿಗಳೆಲ್ಲ ಹಾಗೇ ಅಂದುಕೊಳ್ಳಬೇಡಿ ನಮ್ಮ ಕೂಚು ಅಡ್ಡ-ಉದ್ದ ಎರಡನ್ನೂ ಬಲ್ಲವರು. ಪೋರಗಳು ಪಕ್ಕದ ಮನೆಯಲ್ಲೋ ಪಕ್ಕದ ಬೀದಿಯಲ್ಲೋ ಪೋಲಿ ಅಲೆಯುವುದು ಸಹಿಸಲಾರದ ನಗ್ನ ಸತ್ಯವಾಗಿ ಭಟ್ಟರನ್ನು ಕಾಡುತ್ತಿತ್ತು. ಆಗಾಗ ಒಳಗೊಳಗೇ ಸಿಗರೇಟು ಉರಿದಂತೆ ಉರಿದುಹೋಗುತ್ತಿದ್ದರು.

ಅಂತೂ ನಮ್ಮ ಭಟ್ಟರು ’ರಾಧಿಕಾ-ಕುಮಾರಕೃಷ್ಣ’ ಆಖ್ಯಾಯಿಕೆಯನ್ನು ಬರೆಯತೊಡಗೇ ಬಿಟ್ಟರು! ಪ್ರಾಯಶಃ ಎಲ್ಲೋ ಯಾವುದೋ ಅಡ್ಡವಾಸನೆ ಬಂದಿತ್ತೋ ಏನೋ ಅಂತೂ ನಮ್ಮ ಕೂಚು ತೆರೆಯಿತು ಬಾಟಲಿಯ ಬೂಚು! ಕಥೆಯಲ್ಲಿ ರಾಧಿಕಾ ಎಂಬ ಹೆಣ್ಣು ಮಗಳನ್ನೂ ಮತ್ತು ಕುಮಾರಕೃಷ್ಣ ನೆಂಬ ಕೃಷ್ಣನ ಪ್ರಾಯವನ್ನೂ ಬಣ್ಣಿಸಬೇಕೆಂಬುದು ಭಟ್ಟರ ಬಯಕೆ. ನಡುನಡುವೆ ಹಾಸ್ಯಮಿಶ್ರಿತ ತಹಬಂದಿಯಿರಲಿ ಎಂಬುದು ಕೂಚು ಅವರ ತಹತಹ. ಪ್ರಾಯವನ್ನು ವರ್ಣಿಸಲು ತೊಡಗಬೇಕು. ರಾಧಿಕೆಯ ಬಳುಕುವ ಸೊಂಟವನ್ನು ಹಿಡಿದುಕೊಂಡಿದ್ದರು [ಕಥೆಯ ಆ ಭಾಗದಲ್ಲಿ] ಅಷ್ಟರಲ್ಲಿ ಭಟ್ಟರ ಸೊಂಟದ ನೋವು ತೀವ್ರ ಉಲ್ಬಣವಾಯಿತು. ಕುಮಾರಕೃಷ್ಣನ್ ಪ್ರವೇಶವೇ ಇನ್ನೂ ಆಗಿರಲಿಲ್ಲ, ಆಗಲೇ ಆತಂಕ,ಗಡಿಬಿಡಿ. ಮಧ್ಯೆ ಮಧ್ಯೆ ತನಗೆ ತಾನೇ ಅಂದುಕೊಳ್ಳುವರು " ಆಯೊಡೆಕ್ಸ್ ಹಚ್ಚಿರಿ ಮತ್ತೆ ಓಡಾಡಿರಿ [೩ ಸರ್ತಿ ರಿಪೀಟ್ ಮಾಡಿ! ]" ಶಿವಪೂಜೆಯಲ್ಲಿ ಕರಡಿ ಬಂದಹಾಗೇ ಕಥೆಬರೆಯುವಾಗ ಈ ಹಾಳಾದ ಸೊಂಟನೋವೊಂದು ಬಿಡುವುದಿಲ್ಲವಲ್ಲ ಎಂಬುದು ಕೂಚಿನ ಅಹವಾಲು.

ಅಂತೂ ಕುಮಾರಕೃಷ್ಣನ ಪ್ರವೇಶ ಯಾರಿಗೂ ತಿಳಿಯದ ರೀತಿಯಲ್ಲಿದ್ದರೂ ತಿಳಿದು ಆಯಿತು! ಕುಮಾರ ದೂರದಿಂದ ರಾಧಿಕೆಯನ್ನು ಕಂಡಿದ್ದೂ ಆಯಿತು. ರಾಧಿಕೆಯನ್ನು ಕಂಡ ಕುಮಾರ ಮನದ ತುಂಬ ಅವಳ ಸೌಂದರ್ಯವನ್ನೇ ತುಂಬಿಕೊಂಡು ಆ ದಿನದ ಮಟ್ಟಿಗೆ ಕೈಗೆ ಸಿಗಲಿಲ್ಲವಲ್ಲ ಎಂದು ಹಪಹಪಿಸಿದ್ದೂ ಆಯಿತು. ಇದಕ್ಕೇನಾದರೂ ಮಾಡಬೇಕೆಂದು ಮನದಲ್ಲೇ ಪ್ಲಾನು ಮಾಡಿ ಕೈನಡೆಯುವಾಗ ಅಧಿಕಾರದಲ್ಲಿರುವಾಗ ಇದಕ್ಕೊಂದು ಮಾರ್ಗಸೂಚಿ ಹಾಕಿಕೊಳ್ಳೋಣವೆಂದು ತೀರ್ಮಾನಿಸಿ ರಾಧಿಕೆಯ ಬೆನ್ನ ಹಿಂದೆ ಅನೇಕ ರೀತಿಯಲ್ಲಿ ಬೆನ್ನಟ್ಟಿ ಹೋಗಿದ್ದೂ ಆಯಿತು. ಅಂತೂ ಹಾಗೂ ಹೀಗೂ ತಂತ್ರ ಪ್ರತಿತಂತ್ರದಿಂದ ರಾಧಿಕೆಯನ್ನು ತನ್ನ ವಶಕ್ಕೆ ಪಡೆದ ಕುಮಾರಕೃಷ್ಣ ಅವಳಿಗಾಗಿ ಇರಲಿ ಎಂದು ಉಡುಗೊರೆಯಾಗಿ ವೈಭವೋಪೇತ ಮಹಲೊಂದನ್ನು ಕಟ್ಟಿಸಿಕೊಟ್ಟ. ಎಂದೂ ತನ್ನ ಆಪ್ತ ಗೋಪಿಕೆಯೊಡನೆಯೂ ಅಷ್ಟಾಗಿ ನಗದ ಕುಮಾರ ರಾಧಿಕೆಗಾಗಿ ತನ್ನ ಬಾಯಗಲಿಸಿ ನಕ್ಕ! ನವಿಲುಗರಿಯಂತೆ ಎದ್ದಿರುವ ಎರಡೇ ಕೂದಲನ್ನು ನೋಡಿ ರಾಧಿಕೆ ಎಣ್ಣೆಮುಖದ ಕುಮಾರಕೃಷ್ಣನನ್ನು ಪ್ರೀತಿಸಲು ಒಡಂಬಡಿಕೆಯಾಯಿತು. ಪ್ರೀತಿ ಬೆಳೆದು ಬೆಳೆದು ಹತ್ತಿರ ಹತ್ತಿರ ಹತ್ತಿರವಾಗಿ ರಾಧಿಕಾ-ಕುಮಾರಕೃಷ್ಣರ ಮಿಲನ ಮಹೋತ್ಸವವಾಯ್ತು! ಛೆ ಛೆ ಸಿಟ್ಟು ಬಂತು ಅಂತ ತನ್ನತನವನ್ನು ಅವರು ಕಳೆದುಕೊಳ್ಳುತ್ತಾರೆಯೇ? ಕೂಚು ಭಟ್ಟರು ಅದನ್ನೆಲ್ಲ ಮೆಟ್ಟಿನಿಂತ ಮಹನೀಯರಲ್ಲವೇ ಎಂಬುದು ನೆನೆಪಾದ ತಕ್ಷಣ ಮತ್ತೆ ಮಾಮೂಲೀ ಕೂಚು ಭಟ್ಟರ ರೂಪಕ್ಕೆ ವರ್ಗಾವಣೆ.

ತನ್ಮಧ್ಯೆ ನಮ್ಮ ಕೂಚು ಭಟ್ಟರಿಗೆ ಸೊಂಟನೋವು ಜಾಸ್ತಿಯಾಯಿತು. ಕೋಪಗೊಂಡ ಕೂಚು " ಆ ಒಂದು ಆ ಎರಡು ಆ ಮೂರು " ಎನ್ನುತ್ತ ಆಚೀಚೆ ಸುಮ್ಮನೇ ಹೆಜ್ಜೆ ಹಾಕಿದರು. ಎಫ್ ಎಮ್ ನಲ್ಲಿ ರಾಧಿಕೆ ನಿನ್ನ ಸರಸವಿದೇನೆ ... ಹಾಡು ಅನಿರೀಕ್ಷಿತವಾಗಿ ತೇಲಿಬಂದಿತ್ತು. ಆದರೆ ಹಾಳಾದ ಸೊಂಟನೋವಿನಲ್ಲಿ ರೇಡಿಯೋವನ್ನೇ ಕಿತ್ತು ಪಕ್ಕದ ರಸ್ತೆಗೆ ಬಿಸುಡುವಷ್ಟು ಸಿಟ್ಟು. ತೈಲಧಾರೇ ಯಂತೆ ಮನಸು ಕೊಡೊ ಕಥೆಯಲ್ಲಿ ಶಂಭೋ ಎಂದು ತಮಾಷೆಗಾಗಿ ಹಾಡುತ್ತ ಸ್ವಲ್ಪ ಸಮಯದಲ್ಲಿ ನೋವು ಕಮ್ಮಿಯಾದಾಗ ಮತ್ತೆ ಕಥೆಯ ಮುಂದುವರಿಕೆ!

ಬೆಳ್ಳಗಿನ ರಾಧಿಕೆಗೂ ಕರ್ರಗಿನ ಕುಮಾರಕೃಷ್ಣನಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದಿರೇ ಈ ಲೋಕವೇ ಹೀಗೆ. ದುಡ್ಡಿನ ಮುಂದೆ ಸಕಲವೂ ನಗಣ್ಯ. ಕೇವಲ ಕಾಂಚಾಣದ ಝಣ ಝಣವೇ ಎಲ್ಲಕ್ಕೂ ಮಾನ್ಯ ಅಲ್ಲವೇ? ಅಂತೂ ರಾಧಿಕೆಯನ್ನು ಅಪ್ಪಿ ಮುದ್ದಾಡಿದ ಕುಮಾರ ಬಗ್ಗೆ ಸಮಾಜ ಬಹಳ ಆಡಿಕೊಂಡಿತು. ಮನೆಯಲ್ಲಿ ಭಾಮಾನಿತ ಅರ್ಥಾತ್ ಸತ್ಯಭಾಮೆ ದೊಡ್ಡ ರಂಪವನ್ನೇ ಮಾಡಿದಳು. ಹಲವರ ಬಾಯಿಂದ ಕೇಳಿದ್ದಳಾದರೂ ಗಂಡ ತನ್ನನ್ನು ಕಡೆಗಣಿಸಿ ರಾಧಿಕೆಯನ್ನು ಸೇರುತ್ತಾನೆಂದು ಕನಸಲ್ಲೂ ಎಣಿಸಿರಲಿಲ್ಲ. ಕುಮಾರಕೃಷ್ಣ ಇದಕ್ಕೆಲ್ಲ ಸಿದ್ಧನಾಗಿಯೇ ಇದ್ದ. ಆತನಿಗೆ ಯಾವ ನಲ್ಲಿ ತಿರುಗಿಸಿದರೆ ಎಲ್ಲಿ ನೀರು ಬರುತ್ತದೆಂಬುದು ಗೊತ್ತಿತ್ತು. ಹೀಗಾಗಿ ಭಾಮಾನಿತ ಸುಮ್ಮನಿರುವಂತೆ ಅವಳಿಗೊಂದು ವ್ಯವಸ್ಥೆ ಕಲ್ಪಿಸಿ ಅಲ್ಲಿ ಆಕೆ ಮುಂಚೂಣಿಯಲ್ಲಿದ್ದು ಎಲ್ಲವನ್ನೂ ನೋಡಿಕೊಳ್ಳಲು ಕೆಲಸ ಒಪ್ಪಿಸಿದ. ಅಲ್ಲಿ ಆಕೆ ಬ್ಯುಸಿಯಾಗಿರುವಾಗ ಇಲ್ಲಿ ತಾನು ಹಸ್ತಿನಾಪುರದ ರಾಜಕಾರ್ಯವನ್ನು ಬೇರೆಯವರಿಗೆ ವಹಿಸಿಕೊಟ್ಟಾಗ ಕುಮಾರಕೃಷ್ಣನಿಗೆ ಇನ್ನೇನು ಕೆಲಸ? ಆತ ನೆನಪಾದಾಗೆಲ್ಲ ರಾಧಿಕೆಯ ಮನೆಗೆ ನಡೆದ. ಆಕೆಯನ್ನು ಯಥೇಚ್ಛ ಭೋಗಿಸಿದ. ಹರುಷಗೊಂಡ. ಆಕೆ ಕರೆದಲ್ಲಿಗೆ ಪೂಜೆ-ಪುನಸ್ಕಾರ, ನಾಗಬನ-ದೇವಸ್ಥಾನವೆಂದು ತಿರುಗಿದ. ಕೊನೆಗೂ ಅನಾಯಾಸವಾಗಿ ರಾಧಿಕೆಗೆ ಮಗುವೊಂದನ್ನು ಕರುಣಿಸಿದ! ರಾಜಕಾರ್ಯದಲ್ಲಿ ಬಿಡುವಿರುವಾಗ ಮಾಡುವ ಮಹೋನ್ನತ ಕೆಲಸಗಳಲ್ಲಿ ಇದೂ ಒಂದು ತಾನೇ?

ಕಿಟಾರನೆ ಕೀಚುತ್ತ ಬಾಗಿಲು ಡಬ್ಬೆಂದು ಮುಚ್ಚಿಕೊಂಡಿತು.ಗಾಳಿಗೆ ಇರಬೇಕು ಎಂದುಕೊಂಡರು ಕೂಚು. ಅದು ಹಾಗಾಗಿರಲಿಲ್ಲ. ಬದಲಿಗೆ ಅವರ ಮಗಳು ಶಾಲಿನಿ ಹಾಗಿಂದ ಅಲ್ಲೇಲ್ಲೋ ಹೋಗುವಾಗ ರೂಮಿನ ಬಾಗಿಲಿಗೆ ಕೈ ತಾಗಿ ಬಾಗಿಲು ಮುಂದೆ ಬಂದು ಬಡಿದುಕೊಂಡಿತ್ತು. ಶಾಲಿನಿಗೂ ಮದುವೆಯ ವಯಸ್ಸು ಹತ್ತಿರ ಬಂದಿದೆ. ಡಿಗ್ರಿ ಮುಗಿಸಿ ಮನೆಯಲ್ಲೇ ಇದ್ದಾಳೆ. ಜಾಬಿಗೆಲ್ಲ ಕಳಿಸುವಷ್ಟು ಕೆಳದರ್ಜೆ ಮನುಷ್ಯರಲ್ಲ ನಮ್ಮ ಕೂಚು. ಮೇಲಾಗಿ ಹುಡುಗಿಯರು ಹೊರಗೆ ಕೆಲಸಮಾಡುವಾಗ ಸಹೋದ್ಯೋಗಿಗಳ ಕಾಟ, ಅಕಸ್ಮಾತ್ ಸಲುಗೆ ಬೆಳೆದರೆ ಲವ್ ಮ್ಯಾರೇಜ್ ಇದೆಲ್ಲಾ ಯಾಕೆ ಅಂತ ಆ ವಿಚಾರವನ್ನೇ ಬದಿಗಿಟ್ಟು " ಮಗಳೇ ನೀನು ಇಲ್ಲಿರುವಷ್ಟು ದಿನ ಆರಾಮಾಗ್ ಇದ್ದು ಬಿಡು, ಮುಂದೆ ಮದುವೆ ಆದ ಮೇಲೆ ನೌಕರಿಗೆ ಹೋಗಬೇಕಾಗಿ ಬಂದರೆ ಅನಿವಾರ್ಯ ಆಗ ಯಜಮಾನರನ್ನು ಕೇಳಿ ಹೋಗು" ಎಂದುಬಿಟ್ಟಿದ್ದರು. ಅವರು ಕಡ್ಡಿ ತುಂಡು ಮಾದಿದ ಹಾಗೇ ಹೇಳಿದಮೇಲೆ ಮುಗಿದೇ ಹೋಯಿತು. ಸಾಕ್ಷಾತ್ ಪರಶಿವನೇ ಬಂದರೂ ಭಟ್ಟರ ನಿರ್ಧಾರದಲ್ಲಿ ಬದಲಾವಣೆ ಇರುವುದಿಲ್ಲ!ಬಾಗಿಲ ಸದ್ದಾಯಿತಾದರೂ ಮಗಳು ಕೋಣೆಯೊಳಗೆ ಬರಲಿಲ್ಲ. ಬದಲಾಗಿ ಬಾಗಿಲು ಬಡಿದುಕೊಂಡಿದ್ದಕ್ಕೆ ದೂರದಿಂದಲೇ ಕ್ಷಮೆ ಕೇಳಿಕೊಂಡು ಹೋದಳು. ತಂದೆಯ ಹತ್ತಿರ ಜಾಸ್ತಿ ಹೋದರೂ ಕಷ್ಟ, ಅವರು ಯಾವಾಗ ಜಮದಗ್ನಿ, ಯಾವಾಗ ದೂರ್ವಾಸ ಎಂದು ತಿಳಿಯುವುದಿಲ್ಲ! ಅಕಸ್ಮಾತ ದೂರ್ವಾಸರೂಪತಾಳಿದ್ದರೆ ಅಂದಿಗೆ ಒಮ್ಮೆ ಅಲ್ಲಿ ಕಪಾಳಮೋಕ್ಷ ಕಟ್ಟಿಟ್ಟ ಬುತ್ತಿ! ಹೀಗಾಗಿ ಭಟ್ಟರ ಕೋಣೆಗಾಗಲೀ ಅವರು ಕುಂತಾಗ ಅವರ ಹತ್ತಿರವಾಗಲೀ ಸಾಧ್ಯವಾದಷ್ಟು ಮನೆಯವಯಾರೂ ಹೋಗುತ್ತಿರಲಿಲ್ಲ.

ಕೂಚು ಪೆನ್ನು ನಿಲ್ಲಿಸಿದರು. ಮತ್ತದೇ ಸೊಂಟನೋವು! ನಗುವಾಗ ನೂರು ನೆಂಟರು ಅಳುವಾಗ ಯಾರು ಇಲ್ಲಾ.. ಎಫ್ ಎಮ್ ನಲ್ಲಿ ಹಾಡು! ಕಥೆ ಬರೆದ ಸಂತೋಷವನ್ನು ಹಂಚಿಕೊಳ್ಳುವುದಾದರೆ ಹಲವರು ಬರುತ್ತಾರೆ. ಆದರೆ ಸೊಂಟನೋವಿನಲ್ಲಿ ನಾನು ಬಳಲುವಾಗ ಯಾರೂ ಬರುವುದಿಲ್ಲ. ಅಂದಮೇಲೆ ಈ ಜಗತ್ತು ಬರೇ ಸ್ವಾರ್ಥಿಗಳಿಂದ ಕೂಡಿದೆ. ಇಂತಹ ಸ್ವಾರ್ಥ ಜನರಿಗೆ ನಾನಾಗಿ ಯಾಕೆ ಕಥೆಬರೆದುಕೊಡಲಿ ಎಂಬ ಅಲೆ ಮನದಲ್ಲಿ ಬಂದ ತಕ್ಷಣ ಕೂಚು ಎದ್ದು ಕಿಟಕಿಯಲ್ಲಿ ಆಚೆ ನೋಡುತ್ತಿದ್ದರು. ದೂರದಲ್ಲಿ ಕಾಗೆಯೊಂದು ಸತ್ತ ಹೆಗ್ಗಣವನ್ನು ಕುಕ್ಕಿ ತಿನ್ನುವುದನ್ನು ಕಂಡು ಮತ್ತಷ್ಟು ಗಂಭೀರನಾದ ಕೂಚು ಕಥೆಯಲ್ಲಿರುವ ಭಾವಗಳನ್ನು ಅವಲೋಕಿಸಿದರು. ಜೋರಾಗಿ ತನಗೆ ತಾನೇ ಹೇಳಿಕೊಂಡರು " ಇನ್ನೇನಾದರೂ ಕಥೆ ಬರೆದರೆ ಅದು ನನಗೆ, ಕೇವಲ ನನಗೆ ಹೊರತು ಬೇರೆ ಯಾರಿಗೂ ಅಲ್ಲ,ಸ್ವಸಂತೋಷಕ್ಕಾಗಿ ನನಗಾಗಿ ನಾನು ಬರೆದುಕೊಳ್ಳುವುದೇ ಹೊರತು ಯಾರೋ ಖುಷಿಪಟ್ಟರೆ ನನಗೇನು ಸಿಕ್ಕೀತು " ಎಂದು ತಾನೂ ಸ್ವಾರ್ಥಿಯಾದರು,ಕಥೆಯನ್ನು ತನಗೆ ಬೇಕಾದ ರೀತಿ, ಬೇಕಾದ ಹಾಗೆ ಬರೆಯಲು ಉಪಕ್ರಮಿಸಿದರು.