ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 30, 2011

ಹತ್ತಾರು ಜನ ಸೇರಿ ಮನೆಯೊಂದ ಕದ್ದರು ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !


ಹತ್ತಾರು ಜನ ಸೇರಿ ಮನೆಯೊಂದ ಕದ್ದರು
ಸಿಕ್ಕಿಬಿದ್ದವನೊಬ್ಬ ಶಿಕ್ಷೆಗೊಳಗಾದ !

ನಿಮ್ಮ ಹತ್ತಿರ ಹೇಳಲೇಬೇಕಾದ ಕೆಲವು ಅಂಶಗಳು ಇದ್ದವು. ಹೇಳದೇ ಇದ್ದರೂ ಎಂದಾದರೂ ನಿಮ್ಮ ಗಮನಕ್ಕೆ ಬರಬಹುದು, ಆದರೆ ತಡವಾಗಿ ಗಮನಕ್ಕೆ ಬಂದಾಗ ಸ್ವಲ್ಪ ಪಶ್ಚಾತ್ತಾಪವಾಗಬಹುದು. ಕೋತಿ ಬೆಣ್ಣೆಯನ್ನು ತಿಂದುಕೊಂಡು ಮೇಕೆಬಾಯಿಗೆ ಒರೆಸಿದ ಕತೆ ಇದು. ಹೀಗೇ ಚಿಂತಿಸುತ್ತಿದ್ದಾಗ ಮನದಲ್ಲಿ ಕೆಲವು ರಾಜಕೀಯದ ದುಗುಡಗಳು ರಕ್ಕಸರೂಪ ತಳೆದವು. ರೂಪತಳೆದ ರಕ್ಕಸರು ತಾವು ತಾವೇ ಹೊಡೆದಾಡಲು ನಿಂತಾಗ ತಡೆಯುವವರೇ ಇಲ್ಲವಾಗಿ ನಿತ್ರಾಣನಾಗುವ ಸ್ಥಿತಿಯಿತ್ತು. ಹಾಗಾಗುವ ಮುನ್ನ ನನ್ನನ್ನು ಬಚಾವ್ ಮಾಡ್ಕೊಳ್ಳುವುದಕ್ಕೆ ದಾರಿ ಹುಡುಕುತ್ತಿರುವಾಗ ನನಗೆ ದಕ್ಕಿದ ಅಂಶಗಳು ಇಷ್ಟು:

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ಉದ್ಭವವಾಗಿದ್ದು ನಮ್ಮ ಮತದಾರರ ತಪ್ಪು ಮುಂಧೋರಣೆಯ ಪರಿಣಾಮವೇ. ಅದರಲ್ಲೂ ನಮ್ಮ ಸಂವಿಧಾನದಲ್ಲಿನ ಲೋಪದೋಷಗಳು ಮೆರವಣಿಗೆ ಹೊರಟಾಗ ಪ್ರಜಾಪ್ರಭುತ್ವವೇ ಬಸವಳಿಯುತ್ತದೆ! ಅಂಬೇಡ್ಕರ್ ಕಾಲದ ಸಂವಿಧಾನದ ಕರಡನ್ನು ಇನ್ನೂ ತಿದ್ದದೇ ಇರುವುದು ಮೊದಲ ತಪ್ಪಾಗಿದೆ. ಇವತ್ತಿನ ನೂರಿಪ್ಪತ್ತು ಕೋಟಿ ಜನಸಂಖ್ಯೆಯನ್ನು ಏಕಛತ್ರದಡಿಯಲ್ಲಿ ನಿಭಾಯಿಸುವಲ್ಲಿ ಈಗಿರುವ ಸಂವಿಧಾನದ ಕೆಲವು ಕಟ್ಟುಪಾಡುಗಳು ನ್ಯೂನತೆ ಹೊಂದಿರುವುದು ಕಂಡುಬರುತ್ತದೆ.

ಕರ್ನಾಟಕದಲ್ಲಿ ಬಿಜೆಪಿ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿರುವಂತೇ ಗಂಜಿಯಲ್ಲಿ ಬಿದ್ದ ನೊಣದ ರೀತಿ ಆಗಿಬಿಟ್ಟಿತ್ತು. ಆರಕ್ಕೇಳದ ಮೂರಕ್ಕಿಳಿಯದ ಬಿಜೆಪಿಯ ಶಾಸಕರ ಸಂಖ್ಯೆಯಲ್ಲಿ ಯಡ್ಯೂರಪ್ಪ ಪಕ್ಷವನ್ನು ಸಂಭಾಳಿಸುತ್ತಾ ವಿರೋಧ ಪಕ್ಷದ ನಾಯಕ್ ಸ್ಥಾನದಲ್ಲಿ ಕೊತು ಭಜನೆಯಲ್ಲಿ ಕಾಲ ಕಳೆದಿದ್ದು ಬಹಳ ಸಮಯವಾಗಿತ್ತು. ಪ್ರತೀಬಾರಿ ತಾಳತಂಬೂರಿ ಕೈಯೊಳಗೆ ವಿಠಲನ ಭಜನೆ ಮನದೊಳಗೆ ಎಂದುಕೊಂಡು ನಾವು ಯಾವುದಕ್ಕೂ ಅಡ್ಡಿಪಡಿಸುವವರಲ್ಲ, ನಮಗೆ ಸಂಖ್ಯಾಬಲ ಕಮ್ಮಿ ಇದೆ, ನಾವು ವಿರೋಧಪಕ್ಷದ ಸ್ಥಾನದಲ್ಲಿ ಕೂತುಕೊಳ್ಳುತ್ತೇವೆ ಎಂಬ ಮಾತನ್ನು ಉದ್ಗರಿಸುತ್ತಾ ಸೈಲೆಂಟಾಗಿ ವಿಧಾನಸಭೆಯಲ್ಲಿ ಕೂತ ಜನ ಬಿಜೆಪಿಯವರು. ಆಳುವ ಪಕ್ಷಗಳ ತಪ್ಪುಗಳನ್ನು ಅತಿಸೂಕ್ಷ್ಮವಾಗಿ ಗಮನಿಸುವ ಬುದ್ಧಿಮತ್ತೆಯಾಗಲೀ ನುಂಗಣ್ಣಗಳ ಜಾಡನ್ನು ಹಿಡಿದು ಜಾಲಾಡಿ ಅವರನ್ನು ಹಣ್ಣುಗಾಯಿ-ನೀರುಗಾಯಿ ಮಾಡುವ ಜಾಯಮಾನವಾಗಲೀ ಬಿಜೆಪಿಯ ಜನಕ್ಕಿರಲಿಲ್ಲ.

ಕೆಲವೊಮ್ಮೆ ಅಪರೂಪಕ್ಕೆ ಎಲ್ಲೋ ಕತ್ತಲಲ್ಲಿ ಯಾರೋ ದಾರಿಹೋಕನನ್ನು ಕಂಡು ಬೊಗಳುವ ನಾಯಿಗಳಂತೇ ವಿಧಾನ ಸಭೆಯಲ್ಲಿ ಅಡ್ಡಡ್ಡ ಮುಖಹಾಕಿ ಕೂಗಿದ್ದು ಬಿಟ್ಟರೆ ದಾಖಲೆ ಸಮೇತ ಯಾರನ್ನೂ ಹಿಡಿಯುವ ದಾರ್ಷ್ಟ್ಯತನ ಯಾರಲ್ಲೂ ಕಾಣಲಿಲ್ಲ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕೆಳಗಿಳಿದ ನಂತರ ಯಾವೆಲ್ಲಾ ಮುಖ್ಯಮಂತ್ರಿಗಳು ಬಂದರೋ ಎಲ್ಲರೂ ಬೇಕಷ್ಟು ಆಸ್ತಿಗಳನ್ನು ಮಾಡಿಕೊಂಡವರೇ. ಯಾರೂ ಸಂಭಾವಿತರೇನಲ್ಲ. ಕನ್ನಡದ ನಟ ರಾಜ್‍ಕುಮಾರ್ ರ ಬಿಡುಗಡೆಗೆ ವೀರಪ್ಪನ್‍ಗೆ ಕೊಡಲು ಹೊಂದಿಸಿದ ಹಣ ಎಲ್ಲಿಂದ ಬಂತು ಎಂಬುದು ಇನ್ನೂವರೆಗೂ ನಿಗೂಢ! ಎಸ್ಸೆಮ್ ಕೃಷ್ಣ ಸರಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರನ್ನು ಸಿಂಗಪೂರ್ ಮಾಡಲು ಹೊರಟವರು-ಗಾಡಿ ಮುಗ್ಗರಿಸಿಬಿಟ್ಟಿತ್ತು; ಆದರೆ ದಾಖಲಾತಿಗಳಲ್ಲಿ ಖರ್ಚುಗಳು ಕಮ್ಮಿಯೇನಿರಲಿಲ್ಲ! ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಪಡಾಬಿದ್ದ ಜಮೀನುಗಳು ರೆಕ್ಕೆ-ಪುಕ್ಕ ಬಲಿತ ಹಕ್ಕಿಗಳಂತೇ ಗರಿಗೆದರಿ ಮೈಕೊಡವಿಕೊಂಡು ಸೈಟುಗಳಾಗಿ ಬದಲಾದವು, ಬದಲಾದ ಸೈಟುಗಳು ಯಾರ್ಯಾರದೋ ಕೈವಶವಾದವು !

ಯಾವುದೇ ಕಳ್ಳತಂತ್ರಗಳು ನಡೆದು ಆಳುವ ಜನ ತಿಮಿಂಗಲಗಳ ಥರಾ ಕಬಳಿಸುತ್ತಾ ಸಾಗಿದ್ದರೂ ಯಡ್ಯೂರಪ್ಪ ಕಂಬಳಿಹೊದ್ದು ಮಲಗಿಬಿಟ್ಟಿದ್ದರು. ಆಗ ದಾಖಲಾತಿಗಳು ಆಳುವವರ ಅದೃಷ್ಟಕ್ಕೋ ಎನ್ನುವಂತೇ ಗಣಕೀಕೃತವಾಗಿರಲಿಲ್ಲ. ರೈಟ್ ಟು ಇನ್ಫಾರ್ಮೇಷನ್ ಕಾಯಿದೆ ಜಾರಿಗೆ ಬಂದಿರಲಿಲ್ಲ! ಹೀಗಾಗಿ ಸಮರ್ಪಕವಾದ ಸರ್ಕಾರೀ ದಾಖಲಾತಿಗಳ ಕ್ರೋಢೀಕರಣವೂ ಅಷ್ಟು ಸಲೀಸಾಗಿರಲಿಲ್ಲ. ಮಣ್ಣಿನ ಮಗನಾಗಿ ಭೂಮಿಯನ್ನೇ ಅತಿಯಾಗಿ ಪ್ರೀತಿಸುವ ಗೌಡರ ಕುಟುಂಬದ ಮೂಲಮಂತ್ರ ಭೂಮಿಯನ್ನು ವಶಕ್ಕೆ ಪಡೆಯುವುದು, ಬೇನಾಮಿ ಹೆಸರಲ್ಲಿ ಅದನ್ನು ಖಾತೆಬರೆಸಿಕೊಳ್ಳುವುದು ಆಗಿತ್ತು. ತಮ್ಮ ಅನುಕೂಲಕ್ಕೆ ಹೇಗೆಲ್ಲಾ ಬೇಕೋ ಹಾಗೆಲ್ಲಾ ಆಳುವ ಪಕ್ಷದೊಳಗೇ ತೂರಿಕೊಂಡು ಕೆಲಸಮಾಡಲು ನೋಡಿದ ಕುತ್ಸಿತ ರಾಜಕೀಯ ಅವರದ್ದು. ಯಾವ ಪಕ್ಷಬಂದರೂ ಅವರೊಂದಿಗೆ ತಾವಿದ್ದೇವೆ ಎನ್ನುವ ಹೇಳಿಕೆಕೊಡುತ್ತಾ ಸಮಯ ಸಿಕ್ಕಾಗಲೆಲ್ಲಾ ದುರುಪಯೋಗ ಪಡಿಸಿಕೊಂಡ ಜನ ಅವರು.

ಇಂತಹ ಸಮಯದಲ್ಲಿ ಜನತಾದಳ ಇಬ್ಭಾಗವಾದಾಗ ಹುಟ್ಟಿಕೊಂಡ ಜನತಾದಳ [ಸೆಕ್ಯೂಲರ್] ಎಂಬ ಹೆಸರಿನ ಪಕ್ಷಕ್ಕೆ ರಾಷ್ಟ್ರೀಯ ಪಕ್ಷವೆಂದು ಸ್ವಘೋಷಣೆ ಮಾಡಿಕೊಂಡಿದ್ದೂ ಅಲ್ಲದೇ ಮುಂದೆ ಅದರಲ್ಲಿ ತಮ್ಮ ಅನುಕೂಲಕ್ಕಾಗಾಗಿ ಎಳೆದು ಸೇರಿಸಿಕೊಂಡಿದ್ದ ಸಿದ್ಧರಾಮಯ್ಯ, ಸಿಂಧ್ಯಾ ಮೊದಲಾದವರನ್ನು ಬೇಷರತ್ತಾಗಿ ಓಡಿಸಿ ಅಪ್ಪ ರಾಷ್ಟ್ರಾಧ್ಯಕ್ಷ ಮಗ ರಾಜ್ಯಾಧ್ಯಕ್ಷ ಆಗಿ ಮನೆಯ ಪಕ್ಷವೆಂದು ಜಗಜ್ಜಾಹೀರು ಪಡಿಸಿದ ಏಕಮೇವಾದ್ವಿತೀಯ ಸಾಹಸ ಗೌಡರದು. ತಾನು ಜನಾನುರಾಗಿ ಮಣ್ಣಿನ ಮಕ್ಕಳ ಆರೈಕೆ ಮಾಡುತ್ತೇನೆನ್ನುತ್ತಾ ತಿರುಗಿದ ದೊಡ್ಡ ಗೌಡರು ಅದೃಷ್ಟ ಖುಲಾಯಿಸಿ ಪ್ರಧಾನ ಮಂತ್ರಿಯಾದಾಗ ೧೫-೨೦ ಬಾರಿ ಇಡೀ ಬೆಂಗಳೂರಿಗೆ ಮಾವಿನ ತೋರಣ ಹಾಕಿಸಿ ಟ್ರಾಫಿಕ್ ಜಾಮ್ ಮಾಡಿಸಿ ಭೇಟಿಕೊಟ್ಟಿದ್ದು ಬಿಟ್ಟರೆ ತಮ್ಮ ತವರು ಜಿಲ್ಲೆ ಹಾಸನದ ಅಭಿವೃದ್ಧಿಗೂ ಕಡ್ಡೀಕೆಲಸ ಮಾಡಿದವರಲ್ಲ!

ಚುನಾವಣೆಯಲ್ಲಿ ಗೆದ್ದವರು ಅತಂತ್ರರಾದಾಗ ತಾವು ಸಪೋರ್ಟ್ ಕೊಡುತ್ತೇವೆ ಎಂದು ಸೂಟ್ ಕೇಸ್ ವ್ಯವಹಾರ ಆರಂಭಿಸಿದ ಗೌರವಕ್ಕೆ ಪಾತ್ರವಾದುದೂ ಅದೇ ಪಕ್ಷ. ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರಕಾರ ರಚಿಸಿ ಅಲ್ಲಿ ತಮ್ಮ ಬೇಳೆ ಬೇಯಲು ತಡವಾದಾಗ ಕಳ್ಳ ದಾರಿ ಹುಡುಕಿ " ಮಗನೇ ಹೀಗೆ ಮಾಡಿಬಿಡೋಣ " ಎಂದು ಕುಮಾರನಿಗೆ ಕಿವಿಯೂದಿ ತಾನು ಮುಖದ ಮೇಲೆ ಟವೆಲ್ ಹಾಕಿಕೊಂಡವರ ರೀತಿ ಏನೂ ಕಾಣಲಿಲ್ಲ ಎಂದುಕೊಳ್ಳುತ್ತಾ ಇತ್ತ ಮಗನನ್ನು ಬಿಜೆಪಿಯವರ ಜೊತೆ ಕಳಿಸಿ ಮತ್ತೆ ಹೊಸ ಸಮ್ಮಿಶ್ರ ಸರಕಾರ ತಂದು ಕಾಂಗ್ರೆಸ್‍ನ್ನು ದೇಶದಿಂದಲೇ ಉಚ್ಛಾಟಿಸಲು ಹೊರಟಿದ್ದ ನಿಸ್ಸೀಮ ಗೌಡರು ತಮ್ಮ ದಾಳವನ್ನು ಪ್ರಯೋಗಿಸುತ್ತಲೇ ಇದ್ದರು. ಯಾವಾಗ ತಾನು ಹೇಳಿದ್ದನ್ನು ಸಖ್ಯದಲ್ಲಿರುವ ಇತರ ಪಕ್ಷಗಳು ಕೇಳುವುದಿಲ್ಲವೋ ಆಗೆಲ್ಲಾ ಭೂತೋಚ್ಛಾಟನೆ ಮಾಡಿದಂತೇ ಅವರನ್ನು ಉಚ್ಛಾಟಿಸುವ ಮನೋಧರ್ಮ ಬೆಳೆಸಿಕೊಂಡ ಅಪ್ಪ-ಮಕ್ಕಳು ಹರದನ ಹಳ್ಳಿಯ ೧೧ ಎಕರೆ ಕೃಷಿ ಜಮೀನಷ್ಟೇ ಮೂಲವಾಗಿ ಹೊಂದಿದ್ದವರು ಇಂದು ಸಾವಿರಾರು ಎಕರೆ ಕೃಷಿಭೂಮಿ, ಕೋಟಿಗಟ್ಟಲೆ ಆಸ್ತಿಮಾಡಿರುವುದು ಜನರ ಕಣ್ಣಿಗೆ ಕಂಡರೂ ಲೋಕಾಯುಕ್ತರಿಗೆ ಸಿಗುವ ಕಡತಗಳು ಮಾಯವಾಗಿವೆ! ಅಸಲಿಗೆ ಅವರು ಗುಳುಂ ಮಾಡುವ ಹೊತ್ತಿಗೆ ಲೋಕಾಯುಕ್ತರಿಗೆ ಅಷ್ಟು ಸ್ವಾತಂತ್ರ್ಯವೇ ಇರಲಿಲ್ಲ!

ಬಿಜೆಪಿಯ ಅಳಿವು ಉಳಿವೇ ಪ್ರಶ್ನೆಯಾಗಿದ್ದಾಗ ತಾವು ಅದನ್ನು ಬಲಪಡಿಸಿದರೆ ಅದರಿಂದ ಅಧಿಕಾರವೂ ಆ ಮೂಲಕ ಎಲ್ಲಾ ಲಾಭವೂ ತಮದಾಗಬಹುದೆಂಬ ಮುಂಧೋರಣೆ ತಳೆದಿದ್ದ ರೆಡ್ಡಿ ಬ್ರದರ್ಸ್ ಬಿಜೆಪಿಯ ಬಾಗಿಲು ತಟ್ಟಿದ್ದರು. ರೋಗಿ ಬಯಸಿದ್ದೂ ಹಾಲು ವೈದ್ಯರು ಹೇಳಿದ್ದೂ ಹಾಲು ಎನ್ನುವ ಹಾಗೇ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಬಿಜೆಪಿಗೆ ಆರ್ಥಿಕ ಸ್ವಾತಂತ್ರಬರುವಂತೇ ಫಂಡಿಂಗ್ ಮಾಡಿಕೊಂಡು ನಿಧಾನವಾಗಿ ಬಿಜೆಪಿಯೊಳಗೆ ಕುಕ್ಕರಿಸಿದವರೇ ರೆಡ್ಡಿಬ್ರದರ್ಸ್ ! ಅಂದಿನ ದಿನಗಳಲ್ಲಿ ಆಗಷ್ಟೇ ಇನ್ನೂ ಕೋಟಿಗಳ ಲೆಕ್ಕದಲ್ಲಿ ಚಿಗಿತಿದ್ದ ಗಣಿದೊರೆಗಳು ಮುಂದೆ ಸಾವಿರಕೋಟಿ ಲಕ್ಷಕೋಟಿ ಎಣಿಸಬಹುದೆಂಬ ಕಾರಣಕ್ಕೆ ಹಾಗೆ ಬಂದರು ಎಂಬುದು ಬಿಜೆಪಿಗೂ ಮೊದಲು ತಿಳಿಯಲಿಲ್ಲ! ಅದು ’ ಆ ಮಟ್ಟಕ್ಕಿದೆ ’ ಎಂದು ಅರ್ಥವಗುವಾಗ ತಡವಾಗಿ ಹೋಗಿತ್ತು ! ಆಕ್ಟೋಪಸ್‍ನಂತೇ ಅವರು ಬಿಜೆಪಿಯನ್ನು ಆಕ್ರಮಿಸಿಕೊಂಡುಬಿಟ್ಟಿದ್ದರು. ಸೋತವ ಸತ್ತ ಅನ್ನುವ ಕಾಲ ಇದಾದ್ದರಿಂದ ಗೆಲ್ಲುವ ತಂತ್ರವನ್ನು ಹೆಣೆಯುವಲ್ಲಿ ಬೆಕ್ಕಿಗೆ ಬೆಣ್ಣೆ ತೂಗಲು ಬಂದ ಮಂಗಗಳು ಅವರಾದರು! ಹೊಸದಾಗಿ ಮದುವೆಯಾದ ದಂಪತಿ ತಮ್ಮಲ್ಲಿನ ದೌರ್ಬಲ್ಯಗಳ ಅರಿವಿರದೇ ಅನ್ಯೋನ್ಯವಾಗಿರುವಂತೇ ಈ ಮೈತ್ರಿ ಬೆಳೆಯುತ್ತಲೇ ಸಾಗಿತು.

ತಮಗೆ ಎರಡು ವರ್ಷಗಳ ನಂತರ ಅಧಿಕಾರ ಕೊಡುವುದಾಗಿ ನಂಬಿದ್ದ ಯಡ್ಯೂರಪ್ಪನವರಿಗೆ ಯಾವಾಗ ಭ್ರಮನಿರಸನವಾಯಿತೋ, ಎರಡು ವರ್ಷಗಳು ಮುಗಿದರೂ " ಯಡ್ಯೂರಪ್ಪನವರಿಗೆ ಮುಖ್ಯಮಂತ್ರಿಯಾಗುವ ಯೋಗವೇ ಇಲ್ಲವೆಂದು ಜ್ಯೋತಿಷಿಗಳು ಹೇಳಿದ್ದಾರೆ " ಎಂಬ ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಾ ತಾನೇ ಮುಂದುವರಿಯಲು ಹಪಹಪಿಸಿದ ಅಧಿಕಾರದಾಹೀ ಜನ ಕುಮಾರಸ್ವಾಮಿ. ಕುಮಾರಸ್ವಾಮಿಯ ಕಾಲಘಟ್ಟದಲ್ಲಿಯೇ ಗಣಿರಾಜಕರಣ ತಾರಕ್ಕಕ್ಕೇರಿತ್ತು ಎಂಬುದು ಸುಳ್ಳಲ್ಲ. ಪಡೆಯುವ ಕಪ್ಪುಹಣ ಸಾಲದಾಗಿ ರೆಡ್ಡಿಗಳ ಜತೆ ವೈರತ್ವ ಕಟ್ಟಿಕೊಂಡು ಅನಿಲ್ ಲಾಡು-'ಕೇಸ್ರೀಬಾತು' ಮುಂತಾದ ಜನರನ್ನು ಬೆನ್ನುತಟ್ಟಿ ಬೆಳೆಸಿದ [ಅಪ]ಖ್ಯಾತಿ ಆ ಸರಕಾರಕ್ಕೆ ಸಲ್ಲಬೇಕು. ಜನರೊಂದಿಗೆ ಹಳ್ಳಿಗಳಲ್ಲೇ ರಾತ್ರಿಕಳೆಯುತ್ತೇನೆ ಎಂಬ ಹೊಸ ಪ್ರಹಸನ ಆರಂಭಿಸಿ ಉತ್ತರಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಏನೇನೂ ಅನುಕೂಲವಿಲ್ಲದ ಮನೆಗಳಲ್ಲಿ ವಿಶ್ವಾಮಿತ್ರ ಸೃಷ್ಟಿಯಂತೇ ಹೊಸದಾಗಿ ಎಲ್ಲಾ ಅನುಕೂಲಗಳನ್ನೂ ತನ್ನ ಬರುವಿಕೆಯೊಳಗೆ ನಿರ್ಮಿಸಲು ಆದೇಶಿಸಿ, ತನಗೆ ಬೇಕಾದ ಜನ ಆ ಕೆಲಸವನ್ನು ಪೂರೈಸಿದಾಗ ಅಲ್ಲಿಗೆ ಹೋಗಿದ್ದು ಮಾಧ್ಯಮಕ್ಕೆ ಪೋಸುಕೊಟ್ಟು ಅಲ್ಲಿಂದ ಹೊರಟುಹೋದಮೇಲೆ ಮಡಗಿದ್ದ ಎಲ್ಲಾ ಸವಲತ್ತುಗಳನ್ನೂ ಆ ಮನೆಗಳ ಬಡಪಾಯಿಗಳಿಂದ ಕಿತ್ತುಕೊಂಡ ಹೆಗ್ಗಳಿಕೆ ಕುಮಾರಣ್ಣನಿಗೆ ಸಲ್ಲಬೇಕು !

ಚುನಾವಣೆ ಹೇಗೂ ಇರಲಿ, ಯಾರು ಬಂದರೂ ಅಧಿಕಾರ ನಮ್ಮ ಕೈಯ್ಯಲ್ಲೇ ಎಂಬ ಹಿಂಬಾಗಿಲ ತಂತ್ರ ಆರಂಭಿಸಿದ ಜೆಡಿಎಸ್ ಎಂಬ ಅಪ್ಪ-ಮಕ್ಕಳ ಪಕ್ಷ ಅಧಿಕಾರಕ್ಕಾಗಿ ಏನೇನು ಮಾಡಬೇಕೋ ಅಷ್ಟನ್ನೂ ಮಾಡಿ ಆ ಕಸರತ್ತು ಫಲಕೊಡದಾದಾಗ ಆಳುವ ಪಕ್ಷವನ್ನು ಉರುಳಿಸುವ ಕುತಂತ್ರವನ್ನು ಹೆಣೆಯತೊಡಗಿದರು. ಇಂತಹ ಸಮಯದಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಸನ್ನಿವೇಶದಲ್ಲಿ ಕಮಲಪಾಳಯಕ್ಕೆ ’ಆಪರೇಶನ್ ಕಮಲ’ ಎಂಬ ಹೊಸ ಸರ್ಕಸ್ಸು ಆರಂಭಿಸಬೇಕಾಗಿ ಬಂತು. ಕುಮಾರಣ್ಣ ಕಲಿಸಿದ ಕುದುರೆವ್ಯಾಪಾರದ ’ನೀತಿ’ಯನ್ನು ಸಹೋದ್ಯೋಗಿಗಳಾಗಿ ಇವರೂ ಕಲಿತಿದ್ದರಲ್ಲಾ ಅದು ಇಲ್ಲಿ ಉಪಕಾರಕ್ಕೆ ಬಂತು! ಆ ಕೆಲಸಕ್ಕೆ ಉಪಯೋಗಿಸಿದ ಹಣಕ್ಕೆ ಬಡ್ಡಿ, ಚಕ್ರಬಡ್ಡಿ ಸಮೇತ ವಸೂಲಾಗಬೇಕು---ಅದಕ್ಕಾಗಿ ತಮಗೆ ಗಣಿಗಳಲ್ಲಿ ಏನಾದರೂ ಮಾಡಲು ಬಿಡಿ ಎಂದು ’ ಬ್ಲ್ಯಾಕ್ ಮೇಲ್’ ತಂತ್ರ ಆರಂಭಿಸಿದ್ದೂ ಅದೇ ಜನ[ರೆಡ್ಡಿ ಬ್ರದರ್ಸ್ ].

ಯಡ್ಯೂರಪ್ಪ ಗಣಿಗಳ ಬಗ್ಗೆ ಅಷ್ಟು ಆಸಕ್ತಿ ತಳೆದವರಾಗಿರಲಿಲ್ಲ. ತನ್ನ ಕುರ್ಚಿಯ ಭದ್ರೆತೆಗಾಗಿ ಗಣಿಧಣಿಗಳು ಹೇಳುವ ಮಾತುಗಳನ್ನು ಅಕ್ಷರಶಃ ಪಾಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಯಡ್ಯೂರಪ್ಪರದಾಗಿತ್ತು. ಸದಾ ತಮ್ಮಮಾತು ನಡೆಯಬೇಕೆಂಬ ಅಪೇಕ್ಷೆಯಲ್ಲಿರುವ ಅನಂ‍ಕುಮಾರ್ ಪಕ್ಷದೊಳಗೇ ತನಗೆ ಪ್ರತ್ಯೇಕ ಬಣವನ್ನೂ ಸೃಷ್ಟಿಸಿಕೊಂಡಿದ್ದ ಜನ. ಹೊರಗಿನಿಂದ ಯಡ್ಯೂರಪ್ಪನವರಿಗೆ ಬೆಂಬಲ ಕೊಟ್ಟರೂ " ನಾವೆಲ್ಲಾ ಸೇರಿ ಬಿಜೆಪಿ ಸರಕಾರವನ್ನು ಯಶಸ್ವಿಗೊಳಿಸಬೇಕು " ಎಂದು ಮೇಜು ಮುರಿಯುವಷ್ಟು ಗುದ್ದಿ ಹೇಳಿದರೂ ಆ ಗುದ್ದು ಯಡ್ಯೂರಪ್ಪನವರಿಗೇ ಪರೋಕ್ಷವಾಗಿ ಬೀಳುತ್ತಿತ್ತು. ಹೀಗೇ ಆ ಕಡೆ ಕುಮಾರ ಈ ಕಡೆ ಅನಂತ ಇನ್ನೊಂದು ಕಡೆ ರೆಡ್ಡಿಬ್ರದರ್ಸ್ ಈ ಮೂರೂ ದಿಕ್ಕುಗಳಿಂದ ಥರಥರದ ಮಹಾಮಹಾ ಅಸ್ತ್ರಗಳು ಪ್ರಯೋಗಿಸಲ್ಪಟ್ಟಾಗಲೆಲ್ಲಾ ದೇವರು-ಹೋಮ-ತೀರ್ಥಯಾತ್ರೆ ಅಂತ ಹೆಗಲಿಗೆ ಶಾಲು ಹೊದ್ದು ಕೈಮುಗಿದುಕೊಂಡು ದೇವರನ್ನು ಮೋರೆಹೋದ ಜನ ಯಡ್ಯೂರಪ್ಪ !

ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವ ಚಿಂತನೆಯಲ್ಲಿದ್ದ ಯಡ್ಯೂರಪ್ಪರ ಹೃದಯದ ಬಾಗಿಲು ತಟ್ಟಿದ ವ್ಯಕ್ತಿ ಶೋಭಾ. ಅವರ ವೈಯ್ಯಕ್ತಿಕ ವಿಷಯ ಏನೇ ಇದ್ದರೂ ವ್ಯವಹಾರದಲ್ಲಿ ಚಾಣಾಕ್ಷೆ ಮತ್ತು ಸಾಕಷ್ಟು ಓದಿಕೊಂಡಿದ್ದು, ಆರೆಸ್ಸೆಸ್ ಮೂಲದ ಸಂಸ್ಕೃತಿಯನ್ನು ಹೊಂದಿದ್ದರಿಂದ ಮಿಕ್ಕೆಲ್ಲಾ ಧೂರ್ತರಿಗಿಂತ ಆವಳೇ ವಾಸಿ ಎಂಬುದೂ ಯಡ್ಯೂರಪ್ಪನವರಿಗೆ ಸ್ವಲ್ಪ ಕಷ್ಟವನ್ನೇ ತಂದಿತು. ಶೋಭಾ ಚೆನ್ನಾಗೇ ಕೆಲಸ ನಿರ್ವಹಿಸಿದರೂ ಧೂರ್ತರಾಜಕಾರಣಿಗಳನ್ನು ನಿಯಂತ್ರಿಸುವಲ್ಲಿ ’ಒಳಗಿನಿಂದ’ ಕೆಲಸಮಾಡುತ್ತಿದ್ದಳು. ಇದು ರೇಣುಕಾಚಾರ್ಯ, ಬೇಳೂರು ಮುಂತಾದ ಹಲವಾರು ಹಗಲುದರೋಡೆ ಶಾಸಕರಿಗೆ ನುಂಗಲಾರದ ತುತ್ತಾಗಿತ್ತು. ಈ ಸಮಯವನ್ನೇ ಕತ್ತೆಕಿರುಬ ಎಂಬ ಪ್ರಾಣಿ ದೂರದಿಂದ ಕೈಲಾಗದ ಪ್ರಾಣಿಯನ್ನು ಕಂಡು ಬೆನ್ನತ್ತು ಬರುವಂತೇ ಕುಮಾರಣ್ಣ ಬಳಸಿಕೊಂಡ! ಮತ್ತೆ ಕುದುರೆ ವ್ಯಾಪಾರ ಜೋರಾಗಿ ನಡೆಯಿತು. ಯಾವಾಗಲೆಲ್ಲಾ ಸಾಧ್ಯವಾಗುವುದೋ ಆವಾಗೆಲ್ಲಾ ನಾನಾವಿಧದ ಸರ್ಕಸ್ಸು ಮಾಡಿ ಕುರ್ಚಿ ಹಿಡಿಯಲು ನೋಡಿದಾತ ಕುಮಾರ.

ರಾಜಕೀಯ ಬರೇ ಸಂಬಳದ್ದಾದರೆ ಯಾರೂ ಆ ಕೆಲಸ ಮಾಡಲು ಹಿಂದೆಮುಂದೆ ನೋಡುತ್ತಿದ್ದರೇನೋ ! ಆದರೆ ರಾಜಕೀಯ ಇವತ್ತಿಗೆ ಒಂದು ಉದ್ಯಮ! it is an industry by all means ! ರಾಜಕೀಯ ಪ್ರಜಾಸೇವೆಗೆ ಎಂಬುದು ಗಾಂಧೀಜಿಯ ಕಾಲಕ್ಕೇ ಮುಗಿದುಹೋದ ವಿಷಯ. ನೆಹರೂ ಕಾಲದಿಂದಲೇ ರಾಜಕೀಯ ಹದಗೆಟ್ಟುಹೋಯಿತು. ಪಾರ್ಟಿ ಫಂಡಿಂಗ್ ವ್ಯವಹಾರ ಆಗಿನಿಂದಲೇ ಆರಂಭಗೊಂಡಿದ್ದು! ಫಂಡಿಂಗ್ ಮಾಡುವವರಿಗೆ ಅದರ ನಾಲ್ಕುಪಟ್ಟು ಇನ್ನೂ ಕೆಲವರಿಗೆ ಹತ್ತಾರುಪಟ್ಟು ಮರಳಿಪಡೆಯಬಹುದೆಂಬ ಅನಿಸಿಕೆಯೂ ಶುರುವಾಯ್ತು! ಯಾವಾಗ ಈ ಫಂಡಿಂಗ್ ದಂಧೆಯಲ್ಲಿಯೇ ಪೈಪೋಟಿ ಆರಂಭವಾಯಿತೋ ಆಗ ಪ್ರತಿಯೊಬ್ಬರೂ ತಂತಮ್ಮ ಉಳಿವಿಗಾಗಿ ಶಾಸಕ, ಸಂಸದ ಸ್ಥಾನದ ಭದ್ರತೆಗಾಗಿ ಜಾಸ್ತಿ ಜಾಸ್ತಿ ಇನ್ವೆಷ್ಟ್ ಮಾಡಲೇಬೇಕಾಯಿತು.

ಈಗಂತೂ ರಾಜಕೀಯ ಹೇಗಾಗಿದೆಯೆಂದರೆ ಖೂಳರು, ರಕ್ಕಸರು ಮಾತ್ರ ರಾಜಕೀಯ ನಡೆಸುವಂತಾಗಿದೆ ಎಂಬುದು ಪ್ರಜಾಪ್ರಭುತ್ವದ ಅಥವಾ ಪ್ರಜಾಸತ್ತೆ ಸತ್ತನಂತರ ಭೂತವಾಗಿ ಕಾಡುತ್ತಿದೆ ! ಹಾಗನಿಸಿದಾಗಲೆಲ್ಲಾ ನಮಗನಿಸುವುದು ಹಿಂದಿನ ರಾಜರ ಆಳ್ವಿಕೆಗಳೇ ಎಷ್ಟೋ ವಾಸಿಯಾಗಿತ್ತೆಂಬುದು. ಹಣವಿದ್ದರೇ ಸಾಕು- ಕ್ರಿಮಿನಲ್ ಆದರೂ ಪರವಾಗಿಲ್ಲ, ಅರೆಹುಚ್ಚನಾದರೂ ಪರವಾಗಿಲ್ಲ, ಅವಿದ್ಯಾವಂತನಾದರೂ ಪರವಾಗಿಲ್ಲ, ಒಂದೆರಡು ಕೊಲೆಸುಲಿಗೆ ದರೋಡೆ ಮಾಡಿ ತನ್ನ ಸುತ್ತಲ ಸಮಾಜವನ್ನು ಹೆಸರಿಸಿ ಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಆ ಮೂಲಕ ಅಧರ್ಮದಿಂದ ಅನ್ಯಾಯದಿಂದ ವಾಮಮಾರ್ಗದಿಂದ ಗಳಿಸಿದ ಹಣಚೆಲ್ಲಿ ಚುನಾವಣೆಗೆ ನಿಲ್ಲುವುದು, ಆರಿಸಿಬರುವುದು, ಅಧಿಕಾರ ಹಿಡಿದು ನಮ್ಮನ್ನು ಆಳುವುದು, ಆಳುವಾಗ ಸರಕಾರದ ಹಣ/ಆಸ್ತಿಗಳಲ್ಲಿ ತಮಗೆ ಸಿಗುವಷ್ಟನ್ನೂ ಕಬಳಿಸುವುದು---ಮತ್ತೆ ಮುಂದಿನ ಚುನಾವಣೆಗೆ ವಿರೋಧೀ ಸ್ಥಾನದಲ್ಲಿ ನಿಲ್ಲುವವರನ್ನು ಬಡಿಯಲು ಬೇಕಾಗುವ ಎಲ್ಲಾ ’ವ್ಯವಸ್ಥೆ’ಗಳನ್ನೂ ಮಾಡಿಕೊಳ್ಳುವುದು--ಹೀಗೇ ಇದೊಂದು ಅಧಿಕಾರ ದಾಹೀ ವರ್ತುಲ ನಡೆದೇ ಇದೆ.

ಇಲ್ಲಿ ಯಾರೂ ಸಮಾಜ ಸೇವಕರಿಲ್ಲ. ಪಕ್ಷಾತೀತವಾಗಿ ಎಲ್ಲರೂ ಒಂದೇ. ಹೊರಗೆ ವಿರುದ್ಧವಾಗಿ ಹೇಳಿಕೆಕೊಡು ಜನ ಒಳಗೆ ಒಂದೇ ಮೇಜಿನಮೇಲೆ ಕೈಯ್ಯೂರಿ ಕುಳಿತು ತಿಂದು-ಕುಡಿದು ಮಾಡುತ್ತಾರೆ. ’ರಾಜಕಾರಣಿಗಳಿಗೆ ಆಟ ಪ್ರಜೆಗಳಿಗೆ ಪ್ರಾಣಸಂಕಟ ’ ಎಂಬಂತಾಗಿದೆ. ಇಷ್ಟಾದರೂ ನಮ್ಮ ಜನ ಸಮಾಜದಲ್ಲಿ ಹುಳುಕು ರಾಜಕೀಯದವರು ಮತ್ತೆ ಚಿಗುರಿಸುವ ಜಾತಿ, ಮತಗಳ ವೈಷಮ್ಯಗಳನ್ನು ನಾವೆಲ್ಲಾ ಲಕ್ಷ್ಯಿಸುವುದೇ ಇಲ್ಲ. ಜಾತಿಗೊಬ್ಬ ಸ್ವಾಮಿ, ಮತಕ್ಕೊಬ್ಬ ಗುರು-- ಜಾತೀವಾರು ಪಡೆಯಬೇಕಾದ ಸೌಲಭ್ಯಗಳಿಗೂ ಅಲ್ಲದೇ ಪಡೆಯಲು ಅನರ್ಹವಾದ ಸವಲತ್ತುಗಳೂ ಬೇಕೆಂದು ವಿಧಾನಸಭೆಯ ಮುಂದೆ ಧರಣಿ ಕೂರಲು ಅಂತಹ ಸ್ವಾಮೀ ವೇಷದವರನ್ನು ಸೃಜಿಸಿಕೊಂಡಿದ್ದಾರೆ ! ಸಂಖ್ಯಾಬಲವನ್ನು ತೋರಿಸಲು ಜಾತೀವಾರು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದೂ ಇಲ್ಲಿನ ಮರ್ಮವಾಗಿದೆ ! ಒಂದುಕಾಲಕ್ಕೆ ಹಾಗೆ ಕರೆಸಿಕೊಂಡಿದ್ದ ಅಲ್ಪಸಂಖ್ಯಾತರು ನಿಯಂತ್ರಣವಿಲ್ಲದೇ ದೇಶಕ್ಕೆ ಸಮರೋಪಾದಿಯಲ್ಲಿ ಮಕ್ಕಳನ್ನು ಹೆತ್ತುಗೊಡುತ್ತಾ ಇದ್ದರೂ ಅವರಿಗೆ ಫ್ಯಾಮಿಲಿ ಪ್ಲಾನಿಂಗ್ ಅಪ್ಲೈ ಆಗುತ್ತಿಲ್ಲ ! ಇಲ್ಲೂ ವೋಟ್ ಬ್ಯಾಂಕ್ ರಾಜಕಾರಣದ ಹಾವು ಹೆಡೆಯೆತ್ತುತ್ತದೆ!

ಆರ್ಥಿಕವಾಗಿ ಬಡವರು / ಹಿಂದುಳಿದವರು ಎಲ್ಲಾ ಜಾತಿಗಳಲ್ಲೂ ಎಲ್ಲಾ ವರ್ಗಗಳಲ್ಲೂ ಇದ್ದಾರೆ. ನಿಜವಾದ ಬಡತನದ ತೊಳಲಾಟದಲ್ಲಿರುವ ಜನರಿಗೆ ಸಿಗಬೇಕಾದ ಸವಲತ್ತುಗಳು ಕೇವಲ ಮೀಸಲಾತಿಗಳೆಂಬ ಸ್ಲ್ಯಾಬ್‍ಗಳಿಂದ ಕೈತಪ್ಪಿ ಹೋಗಿ ಅವರು ಪರದಾಡುವುದನ್ನು ನೋಡಿದಾಗ ಪಶ್ಚಾತ್ತಾಪವಾಗುತ್ತದೆ. ವಿಧಿಯಿಚ್ಛೆಯೇ ಹೀಗಿರುವಾಗ ಪ್ರಜೆಗಳೇನು ಮಾಡಲು ಸಾಧ್ಯ ಎಂಬುದು ಉತ್ತರ ಸಿಗದ ಸಿಕ್ಕಾಗಿದೆ. ಹೀಗಾಗಿ ರಾಜಕಾರಣದಲ್ಲಿ ಯಾರೂ ಸಂಭಾವಿತರಲ್ಲ. ಸಂಭಾವಿತರಾಗಿರುವ ಕೆಲವೇ ಜನ ಒಬ್ಬ ಸುರೇಶ್ ಕುಮಾರ್ ರಂತೇ, ಒಬ್ಬ ಕಾಗೇರಿಯಂತೇ, ಒಬ್ಬ ವಿ.ಎಸ್ ಆಚಾರ್ಯರಂತೇ ’ಕೆಲಸಕ್ಕೆಬಾರದವರು’ ಎನಿಸಿಕೊಳ್ಳುತ್ತಾರೆ. ಯಾಕೆಂದರೆ ಅವರು ಹಣಪಡೆದು ಸರ್ಕಸ್ಸು ತೋರಿಸುವ ಜನವಲ್ಲ! ಹೀಗಾಗಿ ಇಂದಿನ ರಾಜಕೀಯದ ನಾಟಕಕ್ಕೆ ಬಲಿಯಾದ ಯಡ್ಯೂರಪ್ಪ ಕೇವಲ ಒಂದು ಸ್ಯಾಂಪಲ್ಲು! ಹತ್ತಾರು ಜನ ಸೇರಿ ಕದ್ದಮನೆಯಲ್ಲಿ ಹಿಡಿಯಲು ಯಾರೋ ಬಂದಾಗ ಸಿಕ್ಕಿಬಿದ್ದೊಬ್ಬಾತ ಮಾತ್ರ ಶಿಕ್ಷೆಗೊಳಗಾದ ಪರಿ ಇದಾಗಿದೆ ಅಂತ ನಿಮಗನಿಸುವುದಿಲ್ಲವೇ ?

ಈ ಹಿಂದೆ ಕರ್ನಾಟಕದ ಯಾವುದೇ ಮುಖ್ಯಮಂತ್ರಿ ಇದುವರೆಗೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪರದಾಡದಷ್ಟು ಒದ್ದಾಟವನ್ನು ಯಡ್ಯೂರಪ್ಪ ನಡೆಸುತ್ತಲೇ ಅಪ್ಪ-ಮಕ್ಕಳಾಗಲೀ ಇಡೀ ಕಾಂಗ್ರೆಸ್ ತಳಿಯಾಗಲೀ ಕೊಡಲಾಗದ ಪ್ರಗತಿಯನ್ನು ಈ ರಾಜ್ಯದ ಜನತೆಗೆ ಅದರಲ್ಲೂ ಬೆಂಗಳೂರಿಗೆ ಮೂರೇ ವರ್ಷದಲ್ಲಿ ಕೊಟ್ಟಿರುವುದು ಕಣ್ಣಿಗೆ ಕಾಣುವ ಅಂಶವಾಗಿದೆ. ಆ ಮಟ್ಟಿಗೆ ವೈಯ್ಯಕ್ತಿಕವಾಗಿ ಅವರಿಗೆ ನಾನು ಆಭಾರಿ, ಬಹುಶಃ ತಾವೂ ಕೂಡಾ ! ಅವರ ಮುಂದಿನ ನಡೆಗೆ ಶುಭಕೋರೋಣ.

15 comments:

  1. ಇಂದಿನ ರಾಜಕಾರಣಕ್ಕೆ ಸರಿಯಾದ ಕನ್ನಡಿ ಹಿಡಿದಿದ್ದೀರಿ. ರಾಜಕಾರಣಿಗಳೆಲ್ಲಾ ಮಫಿಯಾ ದಾದಾಗಳಾದಾಗ, ಬಡ ಪ್ರಜೆಗಳ ಗತಿ ಎನು?

    ReplyDelete
  2. ಸರಿಯಾಗಿ ಬರೆದಿದ್ದೀರಿ. ಈ ರಾಜಕೀಯ ನಾಟಕಗಳು ಬೇಸರ ತರಿಸಿವೆ.

    ReplyDelete
  3. ಇದಕ್ಕಿಂತಾ ಮತ್ತೇನೂ ಹೇಳಲು ಸಾಧ್ಯವೇ ಇಲ್ಲ... ಕೇಳುವವರೋ?

    ReplyDelete
  4. Neevu helidanteye namma samvidhanadalli kelavu badalavanegalagabekide..

    ReplyDelete
  5. ರಾಜಕೀಯ ಪ್ರಹಸನಗಳನ್ನು ನೋಡುತ್ತಿದ್ದರೆ ಜುಗುಪ್ಸೆಯೆನಿಸುತ್ತದೆ.

    ReplyDelete
  6. Chelo ajro, Aadre BHATTA TINDAVARELL (paksha kooda) BACHAVAGI upadeshada jaagadalliddare, UMI tindava taledandavaada

    ReplyDelete
  7. ತುಂಬಾ ಅಧ್ಯನ ಮಾಡಿ ವಿವರಿಸಿದ್ದಿರಾ... ತಮ್ಮ ಮಾತು ನಿಜ. ಆದರೆ ದೇವೇಗೌಡ , ಕುಮಾರ, ಎಸ್ಸೇಮ್ಮು,ಧರ್ಮ, ಖರ್ಗೆ, ಎಲ್ಲರು ಗಳ ಹಿಡಿಯುವವರೇ ಎಂದು ಜಗತ್ತಿಗೆ ಗೊತ್ತಿದ್ದದ್ದೇ ಆದರೆ ಚೆಡ್ಡಿ ಮೂಲದ ಜನ ಗಳ ಹಿಡಿಯುವದಿಲ್ಲ ಎಂಬ ಅಚಲ ನಂಬಿಕೆಯ ಮತದಾರನನ್ನು ವಂಚಿಸಿದ ಎಡ್ಡಿ ಯಿಂದ ಹೆಚ್ಚು ಬ್ರಮ ನಿರಸನವಾಗಿ ಜನರಲ್ಲಿ ರಾಜಕೀಯದವರ ಮೇಲೇ ಆಕ್ರೋಶವಿದೆ. ಎಡ್ಡಿ ಹಾಳಾಗಲು ರೆಡ್ಡಿ ರೆನುಕರು ಕಾರಣವಿರಬಹುದು. ಹಾಳಪ್ಪ ಬೋಳೂರು ರಿರಬಹುದು. ಆದರೆ ಅವರಿಗೆ ಒಡ್ಡಿಕೊಂಡು ಚೆಡ್ಡಿ ಮಾನ ತೆಗೆದದ್ದು ಯೆದ್ದಿಯವರೇ ಅಲ್ಲವೇ?
    ಆದರೆ ತಮ್ಮ ಮಾಹಿತಿ ಸರಿ. ಹಿಂದೆ ಇಷ್ಟೊಂದು ಸುದ್ಧಿಯಾಗದ ವಿಷಯಗಳು ಇಂದು ಆಗುತ್ತಿವೆ, ಇದಕ್ಕೆ ಮಾಹಿತಿ ಸ್ವಾತಂತ್ರ, ಮಾಧ್ಯಮದ ಅಬ್ಬರ, ಸಂತೋಷರಂತ ಹಳ ಕೆಲ ಅಧಿಖಾರಿಗಳ ಕಾರ್ಯ ವೈಖರಿಯು ಕಾರಣವಿದೆ.
    ಆದರೆ ಹಿಂದಿನವರನ್ನು ಸಿಗಿಯುವ ದಿನಗಳು ದೂರವಿಲ್ಲ.

    ReplyDelete
  8. ಸರ್ ನೀವು ಹೇಳಿರುವುದೆಲ್ಲ ದಿಟವೇ .... ರಾಜ ಕಾರಣದಲ್ಲೇ ಮುಳುಗಿ ಎದ್ದರು
    ಕೆಲವು ಹುನ್ನಾರಗಳು, ತಂತ್ರಗಳು ರಾಜಕಿಯದವ್ರಿಗೆ ಅರ್ಥವಾಗೋದಿಲ್ಲ,
    ಇನ್ನು ನಮ್ಮಂಥ ನರ ಮನುಷ್ಯರಿಗೆ ಅರ್ಥವಾಗುವುದೆಂತು ..... ಈ ಅಪ್ಪ
    ಮಕ್ಕಳು ಎಲ್ಲರನ್ನು ಹೊಸಕಿ ಹಾಕುವುದಕ್ಕೆ ನೋಡ್ತಾರೆ, ಇನ್ನು ದೇವೇ ಗೌಡ್ರು
    ಹೇಳೋದು ನೋಡಿ ,,,, ಅವರ ಪಕ್ಷ (ಮಕ್ಕಳು) ಅದಿಕಾರಕ್ಕೆ ಬರ್ದೇ ಇದ್ರೆ ಅವರು
    ಸತ್ತ ಮೇಲೆ ಮುಕ್ತಿ ಸಿಗೊಲ್ವಂತೆ .... ಅಂದ್ರೆ ಅವ್ರಿಗೆ ಅಧಿಕಾರದ ದುರಾಸೆ ಎಷ್ಟರ ಮಟ್ಟಿಗೆ
    ಇದೆ ನೋಡಿ .........

    ReplyDelete
  9. ನೀವು ಹೇಳಿರುವುಸು ಸರಿಯಾಗೇ ಇದೆ.
    ಜೆ ಡಿ ಎಸ ಆಗಲಿ, ಪಾದಯಾತ್ರೆಯ ಕಾಂಗ್ರೆಸ್ಸ್ ಅಗಲಿ ಅವರೆಲ್ಲರಿಗಿಂತ ಜನ ಯಡ್ಯುರಪ್ಪ ಬಗ್ಗೆ ಬೇಸರಿಸಿಕೊಳ್ಳಲು ಇನ್ನು ಕೆಲವು ಕಾರಣ ಇದೆ. ತನ್ನ ಹುಚ್ಚು ನಿರ್ದಾರ ದಿಂದ, ಉಪಯೋಗ ವಿಲ್ಲದ ಘೋಷಣೆಗಳಿಂದ. ತೀರ ಇತ್ತೀಚಿನ ಉದಾಹರಣೆ ಎಂದರೆ ಆಣೆ ಪ್ರಮಾಣ. ನಿಜಕ್ಕೂ ಜನರಿಗೆ ಆಪರೇಷನ್ ಕಮಲ ದ ಬಗ್ಗೆ ತೀರ ಕೆಟ್ಟ ಅಭಿಪ್ರಾಯ ಇಲ್ಲ. ಪಾಪ ಅವರಿಗೆ ಬಹುಮತ ಇಲ್ಲ, ೪-೫ ಜನ ಪಕ್ಷಕ್ಕೆ ತಗೊಂಡರೆ ಏನೂ ನಷ್ಟವಿಲ್ಲ ಅನ್ನುತ್ತಿದ್ದರು. ಶಿವಮೊಗ್ಗ ಊರನ್ನೇ ಕೊಳ್ಳೆ ಹೊಡೆದಾಗಳು ಅಷ್ಟು ಬೈತಿರಲಿಲ್ಲ.

    ಆದ್ರೆ ಈಗ ಕಳೆದ ಒಂದು ವಾರದಿಂದ ನಡೀತಾ ಇರೋ ವಿದ್ಯಮಾನ ಇದೆಯಲ್ಲ.. ನಿಜಕ್ಕೂ ಅಸಹ್ಯ. ಈಗಲೂ ಅವಕಾಶಕ್ಕಾಗಿ ಕಾಡು ಕೂತಿರೋ ಕುಮಾರ ಸ್ವಾಮೀ, ನಾನು ಅಧಿಕಾರಕ್ಕಾಗಿ ಪ್ರಯತ್ನಿಸೋಲ್ಲ ಅಂತ ಟೀವಿ ಗಳ ಮುಂದೆ ಬಾಯಿ ಬದಕೋ ತಾನೇ. ವಿರೋಧ ಪಕ್ಷ ಎಲ್ಲಿ ನಾಪತ್ತೆ ಆಗಿದೆಯೋ ನಾಕಾಣೆ. ದುರಂತ ಅಂದ್ರೆ ಮಾಧ್ಯಮ ದವರು ತೀರ ಅದೊಂದೇ ಸುದ್ದಿ ಅನ್ನೋ ರೀತಿ ಬಿಂಬಿಸ್ತಾ ಇರೋದು.

    ReplyDelete
  10. tumba samyochita lekhana sir,

    yaru bandru onde anno bhavane bandu bittide,

    ellaru aste

    ReplyDelete
  11. ಹೌದು ಈ ದೇಶದ/ ರಾಜ್ಯದ ಕಥೆ ಹೀಗೇ ನಡೆಯುತ್ತಿದೆ, ಭತ್ತ ತಿನ್ನುವವ ಆರಾಮಾಗಿರುತ್ತಾನೆ ಉಮಿ ತಿನ್ನುವವ ಶಿಕ್ಷೆಗೊಳಗಾಗುತ್ತಾನೆ!

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೊ ಅನಂತಾನಂತ ನಮನಗಳು.

    ReplyDelete
  12. We have all learned lesson from this people. In public, we have teach them a lesson, when they come to public, we have to kick them out from public places not to speech in public place, What were the properties they acquired, public should go their & acquire and give to the some blind school, or social service body which is really doing good. Then each one will think, we can not face public if they do mischief.

    ReplyDelete
  13. ATTAVAR NARYAN-

    IT REAL STORY OF KARNATA (KARA NATAKA)

    BHARATHA JANANIYA TANUJATHE JAYAHE KARNATAKA MAATHE.

    ReplyDelete