ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, July 26, 2011

ಜಾವದ ಅಪ್ಸರೆ


ಜಾವದ ಅಪ್ಸರೆ

ಮುಂಜಾವಿನ ಘಳಿಗೆಯಲ್ಲಿ ಮಂಜು ಕವಿದ ಕಣಿವೆಯಲ್ಲಿ
ರಂಜಿಸಿಹುದು ಹಕ್ಕಿಯದರ ಸುಪ್ರಭಾತವು
ಅಂಜುತಲೇ ಮುಂದೆ ಸಾಗೆ-ನಂಜುಸುರಿದ ಮನಸಿನಲ್ಲಿ
ಸಿಂಜಿನಿಗಳ ಘಲಿರುನಾದ ಸೆಳೆಯುತಿದ್ದಿತು

ಬಡಿತ ತೀವ್ರಗೊಂಡ ಎದೆಯ ಕದವ ತಟ್ಟಿ ಬಂದೆನೆನುತ
ಕಡಿತವಿರದ ಪ್ರೀತಿ ಬಯಸಿ ನನ್ನ ಮುಂದಕೆ
ಹಿಡಿತ ತಪ್ಪಿ ಮನವದಲ್ಲಿ ಕುಡಿದ ಮಂಗನಂತೆ ಕುಣಿದು
ನಡತೆ ಸರಿಯೆ ನೋಳ್ಪ ಪರಿಯ ಮರೆತು ಹಿಂದಕೆ

ಕಮಲಮುಖಿಯ ಮೊಗದಲೆರಡು ಚಿಕ್ಕಚಿಕ್ಕ ಕಮಲವರಳಿ
ವಿಮಲ ಮನದ ಭಾವಬಣ್ಣ ಹೊರಗೆ ಸೂಸುತ
ಸುಮಲತೆಗಳು ಬಾಗಿ ಬಳುಕಿ ಮರವನಾತು ಬದುಕಬಯಸಿ
ಅಮಲುತರುವ ಸನ್ನಿವೇಶ ಬೆಳಗಿನಲ್ಲಿಯೇ !

ಯಾವ ಶಿಲ್ಪಿ ಕಡೆದನವಳ ಜೀವಸವೆದು ಜೀವತುಂಬಿ
ದೇವಲೋಕದಿಂದ ಇಳಿದ ಚಲುವಿನಪ್ಸರೆ
ಮಾವ ನಿನ್ನ ಮಗಳು ನನಗೆ ಎನಲು ಮನದಿ ಭಯವುತುಂಬಿ
ಜಾವದಲ್ಲೆ ಕದ್ದು ನಡೆವ ನೇಮದಕ್ಕರೆ !

ಮೂರುಲೋಕಕೆಲ್ಲ ಗಂಡ ಭಾರಿ ಮಲ್ಲ ಆಕೆಯೆದುರು
ಪಾರಿಜಾತ ತರುವ ಗೊಲ್ಲ ತಾನು ಎನುತಲಿ
ಸೂರೆಹೊಡೆಯೆ ಮೈಯ್ಯ ಸುಖವ ದೂರದಲ್ಲಿ ಯಾರೊ ಕಂಡು
ಹಾರಿಬಿದ್ದ ಮಂಚದಲ್ಲಿ ಕನಸು ನಗುತಲಿ !

7 comments:

  1. Sundaravagide..
    Navya padagalu naviragi koodikondive..

    ನನ್ನ 'ಮನಸಿನಮನೆ'ಗೂ ಬನ್ನಿ: http://manasinamane.blogspot.com/Sundaravagide..
    Navya padagalu naviragi koodikondive..

    ನನ್ನ 'ಮನಸಿನಮನೆ'ಗೂ ಬನ್ನಿ: http://manasinamane.blogspot.com/

    ReplyDelete
  2. Very nice poem ಭಟ್ಟರೆ. ಸೊಗಸಾದ ಲಯ, ನವಿರಾದ ಭಾವ, ಹದವಾದ ಪ್ರಸ್ತುತಿ.

    ReplyDelete
  3. ನಮಸ್ತೆ. ನಿಮ್ಮ ಕವನ ಚೆನ್ನಾಗಿದೆ. ಲಲಿತಗತಿ ಲಯಗಳು ಇವೆ. ಹಾಡಿಕೊಂಡು ಓದಬಹುದು. ಈ ಕಾಲದಲ್ಲಿ ಇದನ್ನು ಗಮನದಲ್ಲಿಡುವ ಕವಿಗಳು ವಿರಳರು. ಕವನದಲ್ಲಿ ಈ ಗೇಯರೂಪ ಇದ್ದರೇನೆ ಚೆನ್ನ. ಅಭಿನಂದನೆಗಳು

    ReplyDelete
  4. ಅಬ್ಬಬ್ಬಾ, ಎಂತಹ ಸುಂದರ ಅನುಭವ ಎಂದುಕೊಳ್ಳುತ್ತಿದ್ದೆ. ಕನಸು ಎನ್ನುವದು ತಿಳಿದಾಗ ಅಯ್ಯೊ ಎನಿಸಿತು!

    ReplyDelete
  5. ಅದ್ಭುತ ರಚನೆ. ತುಂಬಾ ಸೊಗಸಾದ ಲಾಲಿತ್ಯದ ಕವನ.

    ReplyDelete
  6. ಭಟ್ಟರೇ, ಬಹಳ ಚೆನ್ನಾಗಿ ಬಂದಿದೆ. ಪದಬಳಕೆ ಕೂಡ ನೈಸ್, ಖುಷಿಯಾಯ್ತು.

    ReplyDelete
  7. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು

    ReplyDelete