ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 5, 2010

ನಧೀಂ ಧೀಂ ತನ ........!!

ನಮ್ ಪಂಚರ್ ಶಾಪು

ನಧೀಂ ಧೀಂ ತನ ........!!


" ಯಾಕ್ಲಾ ವಾರ್ದ ಕೆಳಗೆ ಭೇಟಿ ಆಗಿದ್ದು ನೆಪ್ಪಿಲ್ವಾ ? "

" ಅಣಾ ನೆಪ್ಪೈತಣಾ ಏಳಣಾ ಹೇನಿಸ್ಯ ? "

" ಹೇನಿಲ್ಲಪ್ಪಾ ಬೆಂಗ್ಳೂರಾಗೆ ಮನೆಮನೆಗೂ ಕೊಳ್ವೆ ಬಾವಿ ಆಕುಸ್ತಾರಲ್ಲ ಜನ ಇರ್ವ್ಗೇನಾರ ತಲೆ ಐತ ? "

" ಯಾಕಣಾ, ಅವರ್ದುಡ್ಡು ಅವ್ರು ಹೊಡಸ್ಕೊಂಡ್ರೆ ನಿಂಗೇನು ಹೊಟ್ಟೆಕಿಚ್ಚು ನೀನೂ ಹೊಡಸ್ಕೋ ಬೇಕಾರೆ "

" ಅಲ್ಲಾಲೇ ಅದ್ರೊಳಗೆ ನೀರ್ಗೊಳೆಲ್ಲಾ ಎಲ್ಲಿಂದ ಬತ್ತದೆ ? ಇರೋ ಭೂಮಿ ಒಂದೇ ಅಲ್ವಾ, ಭೂಮಿನಲ್ಲೇ ನೀರಿರಿಕಿಲ್ಲಾ ಅಂದ್ಮೇಲೆ ಇವ್ರು ಹಿಂಗ್ಮಾಡುದ್ರೆ ಇನ್ನೂ ಅವಾಂತ್ರ ಅಲ್ವೇನ್ಲ ? "

" ಮತ್ತೆ ಏನ್ಮಾಡ್ಬೇಕೂಂತೀಯ ? "

" ಕಾರ್ಪೋರೇಸನ್ ನೋರು ಸಲ್ಪ ಕೇಳಿ ಹೇಳಿ ಮಾಡಿ ಏರಿಯಾಗೆ ತಕ್ನಾಗೆ ಒಂದೇನಾರ ಕಾಮನ್ ಪರಿಹಾರ ಮಾಡುದ್ರೆ ಆಯ್ತಿತ್ತು ಇದ್ನೆಲ್ಲಾ ಯಾರು ಕೇಳೋರು-ಹೇಳೋರು ? "

" ಅಂಗಂತ್ಯಾ ಇರು ನೋಡವ ಯಾರಾರು ಬತ್ತಾರೇನೋ ಕೇಳಾಕೆ "

" ಎಲ್ಲಾ ಬತ್ತಾರೆ, ಇನ್ನು ಮತ್ತೆ ಇಲೆಕ್ಸನ್ ಬರ್ಬೇಕು ಅಲ್ಲೀಗಂಟ ಯಾರೂ ಬರಾಕಿಲ್ಲ, ಅಪ್ಪಿತಪ್ಪಿ ಬಂದ್ರೂನೂ ಸುಮ್ನೆ ಹೂಂ ಗುಟ್ ಎದ್ದೋಯ್ತರೆ "

" ಜನಗಳಿಗೆ ಬುದ್ಧಿ ಇನ್ನೂ ಬಂದಿಲ್ಲಾ ಸಿವಾ ಹಂಗೇನಾರ ಬಂದಿದ್ರೆ ಕಾರ್ಪೋರೇಟರ್ ನ ಕರ್ದು ಕಾರಿಂದ ಇಳ್ಸಿ ಮಾಡ್ತೀಯ ಮಾಡೋಹಾಗೆ ಮಾಡ್ಬೇಕಾ ಅಂತ ಕೇಳ್ತಿದ್ರು "

" ಹೋಕ್ಕೊಳ್ಳಿ ಬಿಡು ಊರಿಗಾದಂಗ್ ಪೋರಂಗಾತದೆ "

--------------

" ಆಣಾ ಅದೇನ್ಲಾ ಧಾರವಡ್ದಾಗೆ ತಲೆಬುಲ್ಡೆಗೋಳು ಸಿಕ್ಕಾವಂತೆ "

" ಇಂದೆಲ್ಲೋ ಏನೋ ಆಗೋಗಿದ್ ಕಥೆ ಕಣ್ಲಾ, ಸಿಕ್ಕೈತಲ್ಲಾ ನಮ್ ಜನ ಅದಕ್ಕೆ ದೇವಸ್ಥಾನ ಕಟ್ಟುಸ್ತರೆ "

" ಅಲ್ಲಣೋ ಹದೆಲ್ಲಾ ಹಷ್ಟು ಮುಖ್ಯ ಆಗಿರ್ಲಿಲ್ಲಾ ಅಂತ್ಯಾ ? "

"ಹಲ್ಲಯ್ಯಾ, ಹುತ್ತರ ಕರ್ನಾಟಕದಾಗೆ ಇರೋ ಜನ್ವೇ ಅಂಗಾಗೋಯ್ತವ್ರೆ, ಕಳ್ದ್ ಸರ್ತಿ ಮಳೆ ಬಂದಾಗ ನೆಲಕಚ್ದ ಜನಗೋಳೆಷ್ಟು, ಅದ್ರಲ್ಲಿ ಉಳ್ಕೊಂಡಿರೋರ್ನ ಯಾರಾರಾ ಕೇಳಾರಾ ಇಲ್ಲೀತಂಕ ? "

" ಮನೆ ಕಟ್ಟುಸ್ಯವ್ರಂತೆ ಅವರ್ಗೋಳ್ಗೆ ? "

" ನೂರ್ಜನಕ್ಕೆ ಒಬ್ಬಂಗೆ ಮನೆ ಕೊಟ್ರೆ ಅದು ಸಾಕೇನ್ಲಾ? ಬಾಕಿ ಜನ ಎಲ್ಲಿಗೋಯ್ತರೆ ? "

" ಎಲ್ಲರ್ಗೂ ಸೇರ್ಸಿ ಒಂದು ಭವನಾನಾರಾ ಕಟ್ಟಿದ್ರೆ ಒಂದಷ್ಟ್ ದಿನ ಕಳ್ದಿರೋದು "

" ನಂಗ್ಯಾಕೋ ಡೌಟು ಕಣ್ಲಾ ಆ ತಲೆಬುಲ್ಡೆ ಎಲ್ಲಾ ಕಳುದ್ಸಲ ಮಳೆಬಂದಾಗ ಹೂತಾಕಿದ್ದೇ ಇರ್ಬೈದು "

" ಗೊತ್ತಾಯಾಕಿಲ್ಲ ಕಣಣ್ಣೋ ಇದ್ರೂ ಇರಬೈದು "

---------------------

" ಅಣೋ ನವಂಬರ್ ಬಂತಲ್ಲ, ರಾಜ್ಜೋಸ್ತವ ಮಡೀಕತಾರೆ ನಮ್ಮೈಕ್ಳು, ಅಂದಂಗೆ ನಮ್ ಕನಡಾ ಬಾಸೆಗೆ ಅದೇನೋ ಸ್ತಾನಾ ಮಾನಾ ಸಿಗ್ಬೇಕು ಹಂತಿದ್ರಲ್ಲ ಸಿಕ್ಕೈತೇನಣಾ ? "

" ಇರಲೇ ಸುಮ್ಕೆ, ಅದೆಲ್ಲಾ ನಡೀತಾನೇ ಇರ್ತದೆ, ನಮ್ದು ಪ್ರಜಾಪ್ರಬುತ್ವ ಹಲ್ವೇನ್ಲ,ಹಿಲ್ಲೆಲ್ಲಾ ಇಂಗೇಯ ಅಲ್ಲಿಲ್ದೇ ಹಿದ್ದಾಗ ಕಡ್ಲೆ ಕಡ್ಲೆ ಹಿಲ್ದೇ ಹಿದ್ದಾಗ ಅಲ್ಲು "

" ಯಾಕೆ ನಮ್ಗೆ ಸ್ತಾನಾ ಮಾನಾ ಕೊಡಾಕಿಲ್ವಾ ? "

" ದಮ್ಮಿಲ್ಲ ಕಣ್ಲಾ ನಮ್ ಕನಡಾ ಜನೀಕ್ಕೆ ದಮ್ಮಿದ್ರೆ ಜಾಡ್ಸಿ ಇಸ್ಕೊಂಡಿರೋರು "

" ಹಲ್ಲಣಾ ಗೌರವ್ದಿಂದಾ ಕೊಡೋದಲ್ವಾ ರಾಸ್ಟ್ರಪತಿಗೋಳು "

" ಹದೆಲ್ಲಾ ಆಯಕಿಲ್ಲಾ ಕಣ್ಲಾ ಕಂಡೂ ಕಂಡೂ ಸಾಕಾಗೋಗದೆ ಇನ್ನೇನಿದ್ರೂ ಹಕ್ಕು ಕೇಳಿ ಪಡ್ಕಂಬುದೇಯ "

" ಹಲ್ಲೂ ಬರೇ ರಾಜ್ಕೀಯ ಹಿದೇಂತ್ಯಾ ? "

" ಎಲ್ಲಾಯ್ಯಾ ಹುಟ್ದೇ ಸಿವಾ ನೀನು ಹಷ್ಟೂ ತಿಳೀದ್ ಬುದ್ದು, ನ್ಯಾಯ ಹಿದ್ರೆ ಹಿಷ್ಟೆಲ್ಲಾ ವರ್ಸ ಕಾಯಸ್ತಾ ಹಿದ್ರೇನ್ಲಾ ? "

----------------------

" ಹದೇನೋ ಯೋಗ್ರಾಜ ಭಟ್ರ್ ಪಂಚ್ರಂಗಿ ಸಿನ್ಮಾ ಬಂದೈತಂತೆ "

" ಮಾಡ್ತಾನೇ ಇರ್ತಾರೆ ಕಣ್ಲಾ, ಹಾದ್ರೆ ಹವ್ರ ಡೈಲಾಗೈತಲ್ಲ ಹದ್ನ ಕೇಳ್ನೋಡು ಒಸಿ ಏನಾರ ನಮ್ಗೆ ಪ್ರಯೋಜ್ನಕ್ ಬತ್ತದ "

" ನಾವು ಆದಿಬೀದಿಲಿ ಆಡ್ಕತೀವಲ ಹದ್ನೇ ಬರ್ದವ್ರೆ ಕಣಣ್ಣೋ "

" ಕಥೆ ಏನಾರ ಐತೇನ್ಲಾ ಹದ್ರಾಗೆ ? "

" ಜಾಸ್ತಿ ಹೇನೂ ಹಿದ್ದಂಗಿಲ್ಲ ಆದ್ರೆ ಸಾನೆ ಪ್ರಚಾರ ಮಡ್ಗವ್ರೆ "

" ಮಡ್ಗ್ಲಿ ಕಣ್ಲಾ ಹದ್ರಿಂದ್ಲಾದ್ರೂ ಜನ ಕನಡಾ ಸಿನ್ಮಾ ನೋಡ್ತರೆ ಹಿಲ್ಲಾಂದ್ರೆ ಬರೀ ತಮ್ಳು ತೆಲ್ಗೇ ಹಾಗಿರೋದು "

"ಹದೇನೋ ಹಿನ್ನೊಂದು ಕರೀಚಿರ್ತೆ ಕೂಡ ಬಂದೈತಂತೆ ? "

" ಹೆಲ್ಲೋ ಅದೂ ಬದ್ಕೈತಂತಾ ಹೀಗಿನ್ಕಾಲ್ದಲ್ಲಿ ? ಹೆಲ್ಲೋ ಉಳ್ಕಂಡಿರಾದು ಕಾಡಿಂದ ತಪ್ಪೊಸ್ಕೊಂಡಿರ್ಬೇಕು "

" ಹಲ್ಲಣೋ ಅದು ಸಿನ್ಮಾ ಹೆಸ್ರು "

" ಹೇನೆಲ್ಲಾ ಮಾಡ್ತಾರಯ್ಯ, ಹಾ ಹುಪೇಂದ್ರ ’ಗೋಕರ್ಣ’ ಹಂತಾವ ಸಿನ್ಮಾ ಮಾಡ್ದ್ನಲ್ಲ ಹಾಗ ನಮ್ಮೂರ್ ಅಜ್ಜಿ-ತಾತಂದ್ರು ಗೋಕರ್ಣ ದೂರದೆ ಹಿಲ್ಲೇ ಸಿನ್ಮಾನಾದಾಗಾದ್ರೂ ನೋಡವ ಅಂತ ಹೋಗಿದ್ರಂತೆ, ಏನ್ಕೇಳ್ತೀಯ ಪಾಪ ಅದ್ರಾಗೆ ಇರೋ ಇಸ್ಯಾನೇ ಬೇರೆ ಇತ್ತು, ಸಿವ್ಸಿವಾ ಹಂತಾನೇ ಹಂತೂ ಓಗಿದ್ದಕ್ಕೆ ಕೂತಿದ್ದು ಬಂದವ್ರೆ "


----------------------

" ಹಣಾ ನಮ್ ರಾಚಂಗೌ ಹಿದಾರಲ್ಲ ಅವ್ರ ವರ್ಕ್ಸಾಪ್ನಾಗೆ ಭಾಳ ವ್ಯವಾರ ನಡ್ದದಂತೆ ? "

" ಹಿದೆಲ್ಲಾ ಮಾಮೂಲೀ ಕಣ್ಲಾ ನಿಂಗೇನೂ ತಿಳ್ಯಾಕಿಲ್ಲ ಯಾವಾಗ್ ನೋಡ್ದ್ರು ಹಿಂತದ್ನೇ ಹಿಡ್ಕಂಬತ್ತೀಯ, ಹಲ್ಲಯ್ಯ ಹವ್ರಗೆ ತಾಕತ್ತಿಲ್ಲ, ತಾಕತ್ತಿದ್ದ್ರೆ ಏನಾರಾ ಸಲ್ಪ ಕೆಲ್ಸಾ ಮಾಡಿರೋರು, ಹವ್ರು ಮಾಡೋರೂ ಹಲ್ಲ, ಮದ್ಯ ಕೈಹಾಕೋ ಜನೀನ್ನ ಕಂಟ್ರೋಲ್ ಮಾಡಾಕು ನಾಲಾಯ್ಕು ಆ ಪಾಲ್ಟಿ "

" ಓಗ್ಲಿ ಬಿಡು ನಮ್ಗ್ಯಾಕೆ ನಾವೇನ್ ನರ್ಸ್ ಆಯಾಕೋಯ್ತೀವ.... ಆಗೋರ್ ನೋಡ್ಕತರೆ ಬಿಡು "

-------------------------

" ಅಣಾ ಸಲ್ಪ ಸೈಕಲ್ ರಿಪೇರಿ ಇತ್ತು ಹಿಲ್ಲಲ್ಲಾರ ಶಾಪ್ ಹೈತಾ "

" ಹಿಲ್ಲಕಣೋ ನಮ್ ಬಂಗಾರು ಹವ್ರಲ್ಲ ಹವ್ರು ಹವ್ರ ಮಕ್ಳು ಸೇರಿ ಹೊಸ್ತಾಗಿ ಒಂದ್ ಶಾಪ್ ಮಡೀಕಂಡು ಸಾನೆ ಪ್ರಯತ್ನ ಮಾಡ್ದ್ರು, ಆದ್ರೂ ಗಿರಾಕಿ ಕುದ್ರಲಿಲ್ಲ......ಮೊದ್ಲೆಂಗೂ ಅಡ್ಡಡ್ಡ ಯಾಪಾರ ಎಲ್ಲಾ ಹಬ್ಯಾಸ ಹಿತ್ತಲ್ಲಾ ಯಾವಾಗ್ ಇರೋಬರೋ ಸೈಕಲ್ಲೆಲ್ಲಾ ಪಂಚರ್ ಆಗೋದ್ವೋ ಸಾಯ್ಲತ್ಲಗೆ ಅಂತಾನೆಯ ಬಾಗ್ಲಾಕ್ಬುಟ್ಟು ದಾರಿನಾಗೆ ತಿರೀಕಂಡಿದ್ರು, ಯಾರೋ ಕೈ ತಾಗ್ಸಿದ್ದೇ ಕಣ್ಲಾ ಮತ್ತೆ ಹೀಗ ’ ಹ್ಯಾಂಡ್ ಗ್ಲೌಸ್’ ಶಾಪ್ನಾಗೆ ಕೆಲ್ಸಕ್ಕೆ ಸೇರ್ಕಬುಟರೆ "

" ಹಲ್ಲೇನಾರ ಹಿವ್ರಿಗೆ ಜಾಸ್ತಿ ದುಡ್ಡು ಕಾಸು ಸಿಗ್ತದಾ ? "

" ಅಳೇ ಪಿರೂತಿ ಇಸ್ವಾಸ ಇಂದ್ರೊಡ್ತಿ ಕಾಲದ್ದು! ಹೆಲ್ಲಾನಾ ಬರೇ ದುಡ್ಗೇ ಮಾಡಕಾಯ್ತದಾ... ನಟಿ ಮುದ್ಕಾದ್ಮ್ಯಾಕೂ ತಂಗೆ ಹೀರೋಯಿಣಿ ಬೇಕೂಂದ್ರೆ ಕೊಡ್ತಾರೇನ್ಲ ....ಹೆಲ್ಲಾ ಅಂಗೇಯ ಮರ್ಕೆಟ್ನಾಗೆ ಚಾಲ್ತಿಲಿರೋರ್ನ ಮಡೀಕತರೆ "

" ಮತ್ತೀಗ ಸೈಕಲ್ ಶಾಪು ? ಬೇರೆ ಯಾರಾನಾ ನಡುಸ್ತರ ? "

" ಅದು ಎದ್ದೋಗ್ ಯಾವ್ಕಾಲ ಆಯ್ತು ನೀ ಹೀಗ್ಕೇಳ್ತೀಯಲ, ಸೈಕಲ್ನೆಲ್ಲಾ ಪುಡಿ ಕಾಸಿಗೆ ಮಾರಾಟ ಮಾಡಕೂ ಹಾಗ್ದಲೇಯ ಪಂಚರ್ ಹಂಗ್ಡೀಲು ಕಾಸ್ಬರ್ದೆ ಟೆಬಲ್ಲು ಖುರ್ಚಿ ಸಮೇತ ಎಲ್ಲಾ ಅಂಗಂಗೇ ಬಿಟ್ಬುಟ್ಟವ್ರೆ "

----------------------

" ಹಿನ್ನೆನಿಸ್ಯ ಅಣಾ ನಂಗೆ ನೀ ಸಿಕ್ಬುಟ್ರೆ ಹೊಳ್ಳೇ ಸ್ವರ್ಗಾನೇ ಸಿಕ್ದಂಗೆ "

" ಯಾಕ್ಲಾ ಹಂತಾದ್ದೇನ್ಕಂಡೆ ನನ್ತಾವ ? "

" ಒಂದ್ವಾರ್ಕೆ ಸಾಕಾಗ್ವಷ್ಟು ಬ್ಯಾಟ್ರಿ ಚಾರ್ಜ್ ಮಾಡ್ಕಬುಟ್ರೆ ಆಮೇಲೆ ನಿಧಾನ್ಕೆ ಮುಂದಿನ್ವಾರ ಬಂದ್ರಾಯ್ತಲ ಇಂಗೇ ಮಾಡ್ತಾನೇ ಇರಾದು "

" ಹಲ್ಲಯ್ಯ ನೀ ಬ್ಯಾಟ್ರೀ ಹಂದಲ್ಲ ಹೇಳ್ತಾನೂವೆ ನೆಪ್ಪಾಯ್ತು ಆ ಬಿ ಎಸ್ ಎನ್ ಎಲ್ ದವ್ರು ೩ ಜಿ ಹಂತ ಏನೇನೋ ಮೊಬೈಲ್ ಬಿಟ್ಟವ್ರಂತೆ "

" ಹಲ್ಲಣೋ ಇರೋ ನೆಟ್ ವರ್ಕೇ ಸರ್ಯಾಗಿ ಕೆಲ್ಸಮಾಡಾಕಿಲ್ಲ ಇನ್ ೩ಜಿ ಬೇರೆ ಕೊಡ್ತರೆ ತಕ ತಕ "

" ಯಾಕೋ ಸರಿಯಾಗ್ ಬರಾಕಿಲ್ಲಾ ಹಂತ್ಯಾ ? "

" ಹಲ್ಲಿ ಕಾಲ್ ಸೆಂಟರ್ ಗೆ ಮೊಬೈಲ್ ಸಿಗ್ನಾಲ್ ಬತ್ತ ಹಿಲ್ಲಾಂತ ಫೋನ್ ಮಾಡು, ಎತ್ತಕೇ ಮೂರ್ಗಂಟೆ ಅದಾಗುತ್ಲೂವೆ ನಿನ್ ಎಸ್ರೂನೆಲ್ಲಾ ಕೆಳ್ವಷ್ಟೊತ್ಗೇ ಮತ್ತೆ ಕಟ್ಟಾಗೋತದೆ, ಪ್ರಯತ್ನ ಮಾಡೀ ಮಾಡೀ ನೀನು ಕಂಪ್ಲೇಟ್ ಕೋಡಾಕೋದ್ರೆ ಹಲ್ಲಿರೋ ಜನ ಫೋನ್ ಎತ್ತಿಟ್ಬುಟ್ಟು ಮ್ಯೂಜಿಕ್ ಹಾಕಿ ಒಂಟೋಯ್ತರೆ ನೀನು ಕಿವಿಮೇಲ್ ಹೂವಿಟ್ಗಂಡು ಮ್ಯೂಜಿಕ್ ಕೇಳ್ತಾನೆ ಇರು "

" ಯಾಕ್ಲಾ ಹಿದ್ನ ಯಾರೂ ಕೇಳಾಕಿಲ್ವಾ ? "

" ಕಳ್ದ ನಾಲ್ಕ್ ತಿಂಗ್ಳಿಂದ ಯೋಳ್ತಾನೇ ಇವ್ನಿ ಇನ್ನೇನು ಬಸ್ರಾದ್ ನನ್ನೆಂಡ್ರು ಅಡದ್ರೂನೂವೆ ಅವರು ಸಮಸ್ಯೆನ ಕಿವಿಗಾಕ್ಕೊಳಾಕಿಲ್ಲ "

" ಮತ್ತೆ ಯಾಕಂತೆ ಹಂತ ಯಾರೂ ಕೇಳೋರಿಲ್ವ ? "

" ಅದೊಂಥರಾ ಅಂಗೇ ಆಗ್ಬುಟ್ಟದೆ, ಬರೇ ಮ್ಯೂಜಿಕ್ ಕಂಪ್ನಿ, ಆದ್ರೆ ಜಾಹೀರಾತ್ಗೇನ್ ಕಮ್ಮಿ ಹಿಲ್ಲ ಬೆಳಗಾಗುತ್ಲೂವೆ ಯವ್ಯಾವ್ದೋ ನಂಬರಿಂದ ಕಾಲ್ ಬತ್ತದೆ, ಯಾರ್ದಪಾ ಹಂತಾ ಅರ್ಜೆಂಟು ಹಂತಾ ತಗಂಡ್ರೆ ಅದೇನೆಲ್ಲಾ ಮ್ಯೂಜಿಕ್ಕು, ಮಾತು ಆಮೇಲೆ ೩-೪ ಮಿನಿಟು ಹಾದ್ಮೇಲೇನೇ ನಿಂಗೊತ್ತಾಗೋದು ಹದು ಬಿ. ಎಸ್. ಎನ್.ಎಲ್ಲು ಹಂತಾವ "

" ಬರ್ಲೇನಣಾ ? ಹಲ್ಲಿ ತಮ್ಮ ಕಾಯ್ತವ್ನೆ "

" ಅಂಗಂತ್ಯಾ ? ಆಯ್ತು ಓಗ್ಬುಟ್ಬಾ ಮುಂದಿನವಾರ ಸಿಗವ ಮತ್ತೆ...ಒಸ್ತೇನಾರ ಬಾಟ್ಲು ಗೀಟ್ಲು ಬಂದುದ್ರೆ ಒಸಿ ತಗಂಬಾ ಸಲ್ಪ ಹಾಕ್ಕಂಡು ಒಂದೆಲ್ಡಗಂಟೆ ಗಂಟ ಹಿಲ್ಲೇ ಹಿದ್ದು ಓಗವ, ನಾವದ್ನ ಕುಡುದ್ರೆ ಸಲ್ಪ ನೀರಾರು ಉಳ್ಕತದೆ ಆಯ್ತಾ ಹಾಂ ಓಗ್ಬುಟ್ಬಾ
"

Saturday, September 4, 2010

ಲಿವಿಂಗ್ ಇನ್ ದಿ ಹೆವನ್ !


ಲಿವಿಂಗ್ ಇನ್ ದಿ ಹೆವನ್ !

ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್ [ ಪಾರ್ಟ್-೧ ]

ಬುದ್ಧ ಧ್ಯಾನಾಸಕ್ತನಾಗಿದ್ದ ವೇಳೆ ಅವನಿಗೂ ಕೆಲವು ಉಪದ್ರವಗಳಿದ್ದವು ! ಏನಪ್ಪಾ ಇದುವರೆಗೂ ಕೇಳದ ಹೊಸ ಕಥೆ ಅಂತ ಹುಬ್ಬೇರಿಸಬೇಡಿ. ಬುದ್ಧನಿಗೆ ತೊಂದರೆ ಕೊಟ್ಟ ಉಪದ್ರವಿಗಳು ಬೇರಾರೂ ಅಲ್ಲ-ಬದಲಾಗಿ ಅವನೊಳಗಿನ ಬತ್ತಿರದ ಆಸೆಗಳು! ಧ್ಯಾನದಲ್ಲಿ ಆತನ ಹೆಂಡತಿ ಮತ್ತು ಮಗು ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಹೆಂಡತಿ ಕೇಳುತ್ತಾಳೆ " ಯಾಕೆ ಸ್ವಾಮೀ ನಮ್ಮನ್ನೆಲ್ಲ ಮರೆತು ಇಲ್ಲಿಗೆ ಬಂದಿರಿ? ರೂಪವತಿಯಾದ ನನ್ನನ್ನೂ ಇಗೋ ನೋಡಿ ಇಷ್ಟು ಸುಂದರವಾದ ಮಗುವನ್ನೂ ತೊರೆದು ಇಲ್ಲಿಗೆ ಬಂದಿರಲ್ಲ ಇದು ನ್ಯಾಯವೇ ? " ಬುದ್ಧ ತನ್ನ ಮನವನ್ನು ಸ್ಥಿಮಿತಕ್ಕೆ ತಂದುಕೊಂಡ, ಮತ್ತು ಮನಸ್ಸಿಗೆ ಹೇಳಿದ " ಎಲೈ ಮನವೇ ನನಗೆ ಆ ಭಾವನೆಗಳು ಬೇಡ, ಆ ಆಸೆಗಳನ್ನು ಕತ್ತರಿಸಿ ತುಂಡು ತುಂಡು ಮಾಡು ಮತ್ತು ಎಲ್ಲಾದರೂ ಬಿಸಾಡಿಬಿಡು. ಆತ ಮನಸ್ಸನ್ನು ಹಾಗೆ ಹೇಳೀ ಹೇಳೀ ಹೇಳೀ ಗೆದ್ದ. ಯಾವಾಗ ಆತ ಸಂಪೂರ್ಣ ಗೆದ್ದನೋ ಆತನೇ ಘೋಷಿಸಿದ " ಆಸೆಯೇ ದುಃಖಕ್ಕೆ ಮೂಲ" !

ಏಸುಕ್ರಿಸ್ತ ಗುಡ್ಡದ ಮೇಲೆ ಧ್ಯಾನಾಸಕ್ತನಾಗಿದ್ದವೇಳೆ ಬಹಳ ಜನ ಅನುಯಾಯಿಗಳು ಬಂದು "ನೀವು ಇಲ್ಲಿ ಏನುಮಾಡುತ್ತೀರಿ ಸ್ವಾಮೀ, ಬೇಕಾದ ಸಾಮಗ್ರಿಗಳಿರುವ ಖಜಾನೆಯೇ ಊರಲ್ಲಿರುವಾಗ ಈ ಗುಡ್ಡದಲ್ಲಿ ಅದೇನು ಕಂಡಿರಿ ? " ಏಸುವು ಮಾತನಾಡಿರಲಿಲ್ಲ, ಮೌನದಲ್ಲಿ ಹಾಗೇ ಮುನ್ನಡೆದಿದ್ದ. ಆತ ಧ್ಯಾನದಲ್ಲಿ ಪಡೆದದ್ದನ್ನೇ ಶಾಂತಿಯೆಂದು ಬೋಧಿಸಿದ. ಉತ್ತರ ಅಮೇರಿಕಾದ ಮರುಭೂಮಿಗಳಲ್ಲಿ ವಾಸಿಸಿದ್ದ ಸಂತ ಅಂತೋನಿ ಬಹಳ ದಾರ್ಶನಿಕನಾಗಿದ್ದ. ಧ್ಯಾನಾಸಕ್ತನಾಗಿ ತಿರುಗಾಡುವಾಗ ಆತನಿಗೆ ಆತನ ಪೂರ್ವಾಶ್ರಮದ ರೋಮನ್ ಚಕ್ರಾಧಿಪತ್ಯದ ರಾಜಮಹಲುಗಳೂ, ವೈಭವದ ಸಿಂಹಾಸನಗಳೂ, ರಾಜೋಪಚಾರ ಸೇವೆಗಳೂ ನೆನೆಪಿಗೆ ಬಂದವು, ಅವು ಹಾಗೇ ಆತನ ಎದುರಲ್ಲಿ ಮೂರ್ತರೂಪ ಪಡೆದು ಆತನನ್ನು ಸಾಯುವ ಸ್ಥಿತಿಗೆ ತಳ್ಳಿದಾಗ ಆತನೆಂದುಕೊಂಡ ಅವುಗಳನ್ನೆಲ್ಲ ದೂರ ಅಟ್ಟಿದರೇನೆ ತನಗೆ ಬೇಕಾದ್ದು ಸಿಗುತ್ತದೆ, ಅಂತೇಯೇ ಆತ ಅವುಗಳನ್ನೆಲ್ಲ ಮನಸ್ಸಲ್ಲೇ ಸೇರಿಸಿ ನಿವಾಳಿಸಿ ಎಸೆದ!

ಪ್ರಾಚೀನ ಹಿಂದೂಸ್ಥಾನದ ಅನೇಕ ಋಷಿಮುನಿಗಳು ಯಾಕೆ ಎಲ್ಲವನ್ನೂ ಬಿಟ್ಟು ತಪಸ್ಸನ್ನಾಚರಿಸಿದರು ? ಮಾಡಲಿಕ್ಕೆ ಬೇರೆ ಕೆಲಸವಿಲ್ಲವೆಂದೇ? ಅಥವಾ ಸನ್ಯಾಸಿಗಳಾದರೆ ಹಾಯಾಗಿರಬಹುದೆಂದೇ ? ಅಲ್ಲವಲ್ಲ ! ವಾಸ್ತವದಲ್ಲಿ ಸನ್ಯಾಸಧರ್ಮ ಅತಿ ಕಠಿಣ! ಅವರು ಸರ್ವಸಂಗ ಪರಿತ್ಯಾಗಿಗಳಾಗಿ ಎಲ್ಲಾ ಬಯಕೆಗಳನ್ನೂ ದಮನಮಾಡಿಕೊಂಡು ತನ್ಮೂಲಕ ನಿರಾಕಾರ ಮೂಲಸ್ವರೂಪ ಪರಮಾತ್ಮನ ಸಾಯುಜ್ಯವನ್ನು ಸಾಕಾರ ರೂಪದಲ್ಲಿ ಕಾಣುತ್ತಾರೆ! ನಮಗೆ ಇರುವ ಪಂಚೇಂದ್ರಿಯಗಳ ಮೂಲ ಹುಡುಕಿ ನೋಡಿದರೆ ಅದೆಲ್ಲಾ ಒಂದೇ ಮೂಲರೂಪಕ್ಕೆ ಸೇರಿದ್ದು! ಉದಾಹರಣೆಗೆ ಸೂರ್ಯನ ಬೆಳಕನ್ನು ಬೇರೆ ಬೇರೆ ರೀತಿಯ ಸ್ಪಟಿಕದ ಅಥವಾ ರಾಹುಗನ್ನಡಿಯ ಮೂಲಕ ಹಾಯಿಸಿದಾಗ ನಮಗೆ ಬೇರೆ ಬೇರೆ ಬಣ್ಣಗಳ ಮತ್ತು ಆಕಾರಗಳ ದರ್ಶನವಾಗುತ್ತದೆ. ಅವುಗಳಲ್ಲಿ ಕಾಮನಬಿಲ್ಲೂ ಒಂದು ಅಲ್ಲವೇ ? ಕಾಮನಬಿಲ್ಲಿನಲ್ಲಿ ಏಳು ಬೇರೆ ಬೇರೆ ಬಣ್ಣಗಳನ್ನು ನಾವು ಕಾಣುತ್ತೇವೆ. ಆದರೆ ಅವೆಲ್ಲಾ ಬಣ್ಣಗಳೂ ಸೇರಿದಾಗ ಬಿಳಿಯಬಣ್ಣವೇ ಆಗುತ್ತದೆ! ಕೆಲವು ಬೇರೆ ಬೇರೆ ದಪ್ಪದ ಗಾಜಿನ ಜಾಡಿಗಳಲ್ಲಿ ಒಂದೇ ವಸ್ತುವನ್ನು ಇಡುತ್ತ ಬನ್ನಿ: ಅದು ಬೇರೆ ಬೇರೆ ಗಾತ್ರಗಳಲ್ಲಿ ಗೋಚರಿಸುತ್ತದೆ. ನೀರಿನ ತೊಟ್ಟಿಯೊಂದರಲ್ಲಿ ನಾಣ್ಯವನ್ನು ಹಾಕಿ ತಳದಲ್ಲಿ ಕುಳಿತ ಅದನ್ನು ನೇರವಾಗಿ ತಾಕುವಂತೆ ಒಂದು ಕೋಲನ್ನು ಇಳಿಸಿ, ನೀವು ಮೇಲಿಂದ ನೋಡಿದ ಜಾಗಕ್ಕೆ ಕೋಲು ಇಳಿದಾಗ ನಿಜವಾಗಿಯೂ ನಾಣ್ಯ ಅಲ್ಲಿರುವುದಿಲ್ಲ ಬದಲಿಗೆ ಅದು ಅಲ್ಲಿಗೆ ಹತ್ತಿರದಲ್ಲೇ ಆಚೀಚೆ ಇರುತ್ತದೆ.

ಹೀಗೇ ನಮ್ಮೊಳಗೆ ಕುಳಿತ ಯಾವುದೋ ಒಂದು ’ಏನೋ’ ಕಣ್ಣಿನಿಂದ ಸುಂದರವಾದ ದೃಶ್ಯಗಳನ್ನು ನೋಡಬಯಸುತ್ತದೆ, ಕಿವಿಯಿಂದ ಇಂಪಾದ ಸಂಗೀತವನ್ನು ಕೇಳಬಯಸುತ್ತದೆ, ನಾಲಿಗೆಯಿಂದ ರುಚಿರುಚಿಯಾದ ತಿನಿಸುಗಳನ್ನು ತಿನ್ನಬಯಸುತ್ತದೆ, ಮೂಗಿನಿಂದ ಆಹ್ಲಾದಕರ ಸುಗಂಧವನ್ನು ಹೀರಬಯಸುತ್ತದೆ, ಚರ್ಮದಿಂದ ಮೆತ್ತನೆಯ ವಸ್ತುವನ್ನು ಸ್ಪರ್ಶಿಸಲು ಹಾತೊರೆಯುತ್ತದೆ. ಇವಿಷ್ಟನ್ನು ಬಿಟ್ಟು ಈ ಲೋಕದಲ್ಲಿ ಬೇರೇ ಏನೂ ಇಲ್ಲವೇ ಇಲ್ಲ. ಮಾನವನ ಮಿಕ್ಕುಳಿದ ಎಲ್ಲಾ ಆಸೆಗಳೂ ಇವುಗಳ ಸುತ್ತ ಬೆಸೆದ ಹಲವು ಮಜಲುಗಳಲ್ಲಿ ಹೂಡಲ್ಪಟ್ಟಿವೆ. ಕಾಣಬೇಕಾದ ಸೌಂದರ್ಯಕ್ಕೆ ಯಾರೋ ಅಡ್ಡಿಪಡಿಸಿದರೆ, ಮೂಗಿಗೆ ಕೆಟ್ಟ ವಾಸನೆ ಬಡಿದರೆ,ಚರ್ಮಕ್ಕೆ ಚುಚ್ಚುವ ಅಥವಾ ಗಟ್ಟಿಯ ವಸ್ತು ತಾಗಿದರೆ, ಕಿವಿಗೆ ಕರ್ಕಶಧ್ವನಿ ಕೇಳಿಸಿದರೆ, ನಾಲಿಗೆಗೆ ರುಚಿಯಿರದ ಪದಾರ್ಥಗಳು ತಾಗಿದರೆ ನಾವು ಕೋಪಗೊಳ್ಳುತ್ತೇವೆ! ಕೋಪ ಎಂಬುದು ನಮ್ಮೊಳಗಿನ ಆರುವೈರಿಗಳಲ್ಲಿ ಒಂದು ಎಂದು ಕೇಳಿದ್ದೇವಷ್ಟೇ? ಈ ಆರುವೈರಿಗಳೂ ಐದು ದಾರಿಗಳಿಂದ ಒಂದೆಡೆ ಸೇರಿ ನಮ್ಮ ಮೂಲರೂಪದ ಆತ್ಮನನ್ನು ನಮ್ಮೊಳಗಿಂದ ಹೊರಗೆಳೆದು ಆತನಿಗೆ ಬೇಡದ್ದನ್ನು ಅಂಟಿಸಿ ಆತನ ತೇಜೋವಧೆ ಮಾಡುತ್ತವೆ. ಯಾವಾಗ ಆ ಆತ್ಮ ಇವುಗಳ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೋ ಆವಾಗ ಇವುಗಳು ಆಡಿದ್ದೇ ಆಟ! ತನ್ನ ಮೂಲಸ್ವರೂಪವನ್ನು ಮರೆತ ಆತ್ಮ ತನ್ನ ನೈಜತೆಯನ್ನು ತೊರೆದು ಲೌಕಿಕಾಧೀನವಾಗಿ ಇಲ್ಲದ ಉಪದ್ವ್ಯಾಪಕ್ಕೆ ಈಡಾಗುತ್ತಾನೆ.[ಆತ್ಮ ಪರಮಾತ್ಮನ ರೂಪ ಎಂಬ ಕಾರಣಕ್ಕೆ ಪುಲ್ಲಿಂಗ ಸಾಂಕೇತಿಕವಾಗಿ ಬಳಸಿದ್ದೇನೆ]

ಹಾಗಾದರೆ ನಾವು ವಿಜ್ಞಾನವನ್ನು ನೋಡೋಣ. ಇಲ್ಲಿ ಕಿವಿ-ಮೂಗು-ಬಾಯಿ[ಗಂಟಲು] ಒಂದೇ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ದೆರ್ ಈಸ್ ಇಂಟರ್ ಕನೆಕ್ಟಿವಿಟಿ. ಇನ್ನುಳಿದದ್ದು ಎರಡೇ ಒಂದು ಕಣ್ಣು ಇನ್ನೊಂದು ಚರ್ಮ. ನಾನು ಅನೇಕಾವರ್ತಿ ಕಣ್ಣಿಗೆ ಕಾಯಿಲೆಬಂದಾಗ ಉಪಯೋಗಿಸಿದ ಆಲೋಪಥಿ ಔಷಧ ದ್ರವ್ಯ ಪರೋಕ್ಷ ಬಾಯಿಗೆ ಕಹಿ ಕಹಿಯಾಗಿ ಬಂದಿದ್ದನ್ನು ಹಲವಾರು ಸಲ ನೆನೆಸಿಕೊಂಡಿದ್ದೇನೆ! ಅಂದಮೇಲೆ ಕಣ್ಣಿಗೂ ಆ ಕನೆಕ್ಟಿಂಗ್ ಪಾಯಿಂಟ್ ಗೂ ಏನೋ ಅವಿನಾಭಾವ ಸಂಪರ್ಕ ಸಂಬಂಧ ಇರಲೇಬೇಕಲ್ಲವೇ? ಚರ್ಮ ನಮ್ಮನ್ನು ಎಲ್ಲೆಲ್ಲೂ ಆವರಿಸಿಕೊಂಡಿದೆ! ಹಾಗಾದ್ರೆ ಈ ಎಲ್ಲವೂ ಒಂದೇ ಮೂಲ ಕನೆಕ್ಟಿಂಗ್ ಪಾಯಿಂಟ್ ಸೇರುತ್ತವೆ. ಆಗಲೇ ನಮಗೆ ಲೌಕಿಕದ ಎಲ್ಲದರ ಅನುಭೂತಿ ಸಿಗುವುದು. ಒಳಗಿರುವ ಒಂದೇ ’ಏನೋ’ ಅದು/ಅವನು ಹೊರಗಡೆಗೆ ತನ್ನ ಕಿರಣಗಳನ್ನು ಕಣ್ಣು, ಮೂಗು, ಬಾಯಿ, ಕಿವಿ, ಚರ್ಮಗಳ ಮೂಲಕ ಹರಿಬಿಟ್ಟಾಗ ನಮಗೆ ಇವೆಲ್ಲಾ ಬೇರೆ ಬೇರೆ ಎಂಬ ಅನಿಸಿಕೆಯಾಗುತ್ತದೆ. ಆ ಒಳಗಿರುವ ’ಏನೋ’ ಎಂದೆನಲ್ಲ ಅದೇ ಮನಸ್ಸು. ಮನಸ್ಸು ಆತ್ಮನ ಒಂದು ಭಾಗ. ಯಾವಾಗ ಶರೀರದಲ್ಲಿ ಆತ್ಮ ಇರುವುದಿಲ್ಲವೋ ಆಗ ಕಣ್ಣು ತೆರೆದೇ ಇದ್ದರೂ ಆ ಹೆಣ ನೋಡಲಾರದು, ಕಿವಿಯಿಂದ ಕೇಳಲಾರದು,. ಬಾಯಿಂದ ತಿನ್ನಲಾರದು ಹೀಗೇ ಈ ಎಲ್ಲಾ ಕೆಲಸಗಳು ಸ್ವಸ್ಥಸ್ಥಿತಿಯಲ್ಲಿ ನಡೆಯಬೇಕಾದರೆ ಶರೀರದ ಒಳಗೆ ಆತ್ಮನಿರಬೇಕು. ಆ ಆತ್ಮದ ಭಾಗವಾದ ಮನಸ್ಸಿರಬೇಕು.

ನಮ್ಮ ಆಧುನಿಕ ವೈದ್ಯ ವಿಜ್ಞಾನ ಇಷ್ಟೆಲ್ಲಾ ಮುಂದುವರಿದರೂ ಮನಸ್ಸಿನ ರೂಪವನ್ನು ಕಂಡುಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ನಾವು ಬರೇ ಮೆಮರಿ ಸೆಲ್ಸ್ ಅಂತೀವಿ ಅಷ್ಟೇ! ಆದರೆ ಆ ಮೆಮರಿ ಸೆಲ್ಸ್ ಹೆಣದಲ್ಲಿ ಯಾಕೆ ಕೆಲಸಮಾಡುವುದಿಲ್ಲ? ನೋಡಿ ತಾವು ಕೇಳಿರುತ್ತೀರಿ-ಯಾರಾದರೂ ಆತ್ಮಹತ್ಯೆಗೆ ಪ್ರಯತ್ನಿಸಿ ಕೋಮಾದಲ್ಲಿದ್ದರೆ ವೈದ್ಯ ಪರಿಭಾಷೆಯಲ್ಲಿ ಅವರು ಹೇಳುತ್ತಾರೆ ’ ಮೈಂಡ್ ಈಸ್ ಇನ್ಸಲ್ಟೆಡ್ ಟು ದಿ ಮ್ಯಾಕ್ಸಿಮಮ್’ ! ಹಾಗಾದ್ರೆ ಮನಸ್ಸಿಗೆ ಇನ್ಸಲ್ಟ್ ಅಂದ್ರೆ ಏನು? ಯಾವುದನ್ನು ನಮ್ಮೊಳಗಿನ ಆತ್ಮ ಸ್ವೀಕರಿಸಲು ಇಷ್ಟಪಡುವುದಿಲ್ಲವೋ ಅದನ್ನು ಅದಕ್ಕೆ ಬಲವಂತವಾಗಿ ನಮ್ಮ ಇಂದ್ರಿಯಗಳ ಮೂಲಕ ನಾವು ತುರುಕಿದರೆ ಅದು ಮನಸ್ಸಿಗೆ ನಾವು ಮಾಡುವ ಇನ್ಸಲ್ಟ್ ಆಗಿರುತ್ತದೆ. ಈ ಇನ್ಸಲ್ಟ್ ಬೇರೆಯವರ ಕೃತ್ಯದಿಂದ ಆದದ್ದೂ ಆಗಿರಬಹುದು. ಇನ್ಸಲ್ಟ್ ನಲ್ಲಿ ಎರಡು ವಿಧ, ಒಂದು ಬಾಹ್ಯ ಮತ್ತೊಂದು ಆಂತರಿಕ. ಬಾಹ್ಯವಾಗಿ ನಡೆದ ಇನ್ಸಲ್ಟ್ ಬಹಳ ಮೊನಚಾಗಿ ಇಲ್ಲದಿದ್ದರೆ ಅದು ಯಾವುದೇ ವಿಪತ್ತಿಗೆ ಕಾರಣವಾಗುವುದಿಲ್ಲ, ಒಂದೊಮ್ಮೆ ಬಾಹ್ಯದಲ್ಲಿ ನಡೆಯುವ ಇನ್ಸಲ್ಟ್ ಬಹಳ ಮೊನಚಾಗಿದ್ದರೆ ಅದು ಆಂತರಿಕ ಇನ್ಸಲ್ಟ್ ಆಗಿ ಪರಿವರ್ತಿತಗೊಳ್ಳುತ್ತದೆ. ಈ ಇನ್ಸಲ್ಟ್ ನಮ್ಮ ಮನಸ್ಸಿಗೆ ಒತ್ತಡ ತಂದೂ ತಂದೂ ಮನಸ್ಸು ನಮ್ಮನ್ನು ತ್ಯಜಿಸುವಂತೆ ಮಾಡುತ್ತದೆಯಲ್ಲಾ ಆಗಲೇ ಬಹುತೇಕರಿಗೆ ಹೃದಯಸ್ತಂಭನವಾಗುತ್ತದೆ!

ಮನಗೆದ್ದು ಮಾರುಗೆಲ್ಲು ಎಂಬ ಗಾದೆಯೊಂದಿದೆ. ಸಂಸ್ಕೃತದಲ್ಲಿ || ಮನಏವ ಮನುಷ್ಯಾಣಾಂ || ಎಂದಿದ್ದಾರೆ.ಇದರ ಅರ್ಥ ಅಂತರಾತ್ಮ ಯಾವುದನ್ನು ಒಪ್ಪಿ ಮಾಡುತ್ತದೋ ಅಲ್ಲಿ ಸಿದ್ಧಿಯಿದೆ.ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ನಮ್ಮೊಳಗೇ ಅಳುಕು ಇದ್ದರೆ ಅಲ್ಲಿ ನಮಗೆ ಯಶಸ್ಸು ಸಿಗುವುದಿಲ್ಲ! ವಿದ್ಯಾರ್ಥಿಯೊಬ್ಬ ಓದಿರುವುದಿಲ್ಲ, ಪರೀಕ್ಷೆಗೆ ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ--ಆದರೆ ಮನೆಗೆ ಹೇಳುವುದಿಲ್ಲ. ಅಲ್ಲಿ ಆತನ ಮನಸ್ಸು ಕಳ್ಳತನಮಾಡಿದ್ದನ್ನು ದಾಖಲಿಸಿಕೊಳ್ಳುತ್ತದೆ, ಮತ್ತು ಆಗಾಗ ಅವನನ್ನೇ ತಿವಿಯುತ್ತಿರುತ್ತದೆ. ಅದಕ್ಕೇ ಕೊಲೆಸುಲಿಗೆ ಮಾಡುವವರು ಅಂತರಾತ್ಮದ ಮಾತು ಕೇಳದೇ ಮದ್ಯ ಸೇವಿಸಿ ಅಂತಹ ದುಷ್ಕೃತ್ಯಗಳಲ್ಲಿ ತೊಡಗುತ್ತಾರೆ. ಸಹಜಸ್ಥಿತಿಯಲ್ಲಿ ಅವರಿಗೆ ಆ ಕೆಲಸ ಸಾಧ್ಯವಾಗುವುದಿಲ್ಲ, ಮಾಡಿದಮೇಲೆ ಮಾಡಿದ ತಪ್ಪಿನ ಅರಿವಾಗಿ ಕೊರಗುತ್ತಾರೆ ಕೆಲವರು, ಮತ್ತೆ ಮಾಡುತ್ತ ತಮ್ಮಲ್ಲಿ ನೆಗೆಟಿವ್ ಡೆಪಾಸಿಟ್ಸ್ ಜಾಸ್ತಿ ಮಾಡಿಕೊಳ್ಳುತ್ತಾರೆ ಇನ್ನೂ ಕೆಲವರು ಹೀಗೇ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ’ಒಳಗಿನ ಕರೆ’ಯನ್ನು ಮನ್ನಿಸಿ ನಡೆದವ ಎಡಹುವುದಿಲ್ಲ. ಅಕಸ್ಮಾತ್ ಎಡವಿದ್ದರೆ ಅವನಲ್ಲಿ ಇಬ್ಬಂದಿತನವಿತ್ತು ಎಂತಲೇ ಲೆಕ್ಕ.

"ಬೀಸಿಬರುವ ಚಂಡಮಾರುತವನ್ನೂ, ಧಗಧಗಿಸುವ ಬೆಂಕಿಯನ್ನೂ, ಪ್ರಳಯಕಾಲದಂತೇ ಉಕ್ಕೇರಿದ ಸಮುದ್ರದ ಅಲೆಗಳನ್ನೂ ನೀನು ನಿಗ್ರಹಿಸ ಬಲ್ಲೆ, ಪರ್ವತದ ಬುಡವನ್ನೇ ಅಲ್ಲಾಡಿಸಬಲ್ಲೆ, ಶ್ರೀರಾಮಾ ಆದರೆ ಮನೋ ನಿಗ್ರಹ ಅದಕ್ಕಿಂತ ಕಠಿಣ" ಎಂದು ಗುರು ವಶಿಷ್ಠರು ತಮ್ಮ ಯೋಗವಾಶಿಷ್ಠದಲ್ಲಿ ಹೇಳಿದ್ದಾರೆ. ಘರ್ಜಿಸುವ ಸಿಂಹವನ್ನಾಗಲೀ, ಮದವೇರಿದ ಆನೆಯನ್ನಾಗಲೀ, ಕಡಿಯಬರುವ ಚಾಂಡಾಲನನ್ನಾಗಲೀ ನಿಗ್ರಹಿಸಬಹುದು-ಆದರೆ ಈ ಮನಸ್ಸೆಂಬುದನ್ನು ನಿಗ್ರಹಿಸುವುದು ಕಷ್ಟ ಎನ್ನುತ್ತವೆ ಹಲವು ಉಲ್ಲೇಖಗಳು. ಇವತ್ತು ನಾವಿದನ್ನೆಲ್ಲ ವೆಬ್ ಮೂಲಕ ಓದುತ್ತಿದ್ದೇವೆ, ನಮ್ಮ ಮೊಬೈಲ್ ಮೂಲಕ ಸಂಪರ್ಕಿಸುತ್ತೇವೆ, ಸಿನಿಮಾಗಳನ್ನು ನೋಡಿ ಸಂತಸಪಡುತ್ತೇವೆ, ಬೇಕಾದವರ ಪ್ರೀತಿಗೆ ಪಾತ್ರರೆಂದು ಹೆಮ್ಮೆಯಿಂದ ಬೀಗುತ್ತೇವೆ, ತಿಂಗಳಿಗೋ ವರ್ಷಕ್ಕೋ ಲೇಖನ ಬರೆದು ಕೆಲವಾರು ಒಳ್ಳೆಯ ಪ್ರತಿಕ್ರಿಯೆಗಳು ಬಂದದ್ದಕ್ಕೆ ಪುಳಕಗೊಳ್ಳುತ್ತೇವೆ, ಯಾವುದೋ ಜಾತ್ರೆ ಎಲ್ಲೋ ಹುಟ್ಟು ಹಬ್ಬ, ಮದುವೆ-ಮುಂಜಿ ಅಂತೂ ನಾವು ನಮಗೆ ಬೇಕಾದ ಹೂರಣಗಳಲ್ಲಿ ಮುಳುಗಿರುತ್ತೇವೆ. ಒಂದಿ ದಿನ ಲ್ಯಾಪ್ ಟಾಪು. ಮೊಬೈಲು, ಇಂಟರ್ನೆಟ್ಟು ಇರದಿದ್ದರೆ ನಮಗೆ ಏನನ್ನೋ ಕಳೆದುಕೊಂಡ ಅನುಭವ! ಇವೆಲ್ಲಾ ಇರದೆಯೂ ನಾವು ಬದುಕಿರಲಾರೆವೇ ? ಹಿಂದೆ ಬದುಕಿರಲಿಲ್ಲವೇ ? ಇದಕ್ಕೆ ಉತ್ತರ ನಾವೇ ಕಂಡುಕೊಳ್ಳಬೇಕು.

[ನಿನ್ನೆಯ ಪ್ರತ್ಯಾಹಾರ ಕಾವ್ಯಕ್ಕೆ ಪ್ರತಿಕ್ರಿಯಿಸುತ್ತ ಪೂರ್ಣಿಮಾ ಎಂಬ ಹೆಸರಿನಿಂದ ಈ ಬ್ಲಾಗಿನಲ್ಲೂ ಹಾಗೂ ಅನಾನಿಮಸ್ ಎಂಬ ಅನಾಮಧೇಯರಾಗಿ ’ವೇದಸುಧೆ’ ಬ್ಲಾಗಿನಲ್ಲೂ ಪ್ರತಿಕ್ರಿಯಿಸಿದವಳ/ರ ಕುರಿತು ನನಗೆ ಮರುಕವುಂಟಾಗುತ್ತದೆ. ರೋಷವೇನಿಲ್ಲ! ಪಾಪ ತಿಳುವಳಿಕೆ ಕಮ್ಮಿ ಎನಿಸಿ ಸುಮ್ಮನಾಗಿ ಅದನ್ನು ಅಳಿಸಿಹಾಕಿದ್ದೇನೆ. ’ಬೆದೆಬಂದ ನಾಯಿ’ ಎನ್ನುವ ಕೀಳು ಪದವನ್ನು ಉಪಯೋಗಿಸಿದೆ ಎಂಬುದು ಅವರ ಆರೋಪ. ಇಲ್ಲಿ ಪೂರ್ಣಿಮಾ ಹೇಳುವುದು ನಾನು ಗುಂಡಪ್ಪನವರ ಕಾವ್ಯಕ್ಕೂ ಸ್ಪರ್ಧೆ ಕೊಡಲು ಹೊರಟಿದ್ದೇನಂತೆ, ಹುಳಿಯೆಂದು ದ್ರಾಕ್ಷಿಯನ್ನು ತಿನ್ನದೇ ಇರುವ ನರಿಗೂ ನಿರುಪಯುಕ್ತವಂತೆ ಆ ಬರಹ, ನರರೋಗ ತಜ್ಞರಿಗೆ ಕೈತುಂಬಾ ಕೆಲಸವಂತೆ, ಬ್ಲಾಗಿಗರೆಲ್ಲಾ ಪರಸ್ಪರ ನೆಕ್ಕುವ ದಂಡಂತೆ. ಅವರ ’ಬೆದೆ ಬಂದ’ ಮನಸ್ಥಿತಿಯೇ ಹಾಗೆಲ್ಲಾ ಬರೆಯಲು ಕಾರಣ ಎಂದುಕೊಳ್ಳುತ್ತೇನೆ ನಾನು. ಯಾಕೆಂದರೆ ನಮ್ಮ ಅನಿಯಂತ್ರಿತ ಮನಸ್ಸಿಗೂ ಹಾಗೂ ಬೆದೆಬಂದ ನಾಯಿಗೂ ಬಹಳ ಹೋಲಿಕೆಯಿದೆ. ಆ ನಾಯಿ ಹೇಗೆ ಒಂದೆಡೆ ಕೂರುವುದಿಲ್ಲವೋ ಹಾಗೇ ನಮ್ಮ ಮನಸ್ಸೂ ಕೂಡ, ಅದೇ ಕಾರಣವಾಗಿ ಅವರ ಮನಸ್ಸೂ ಹಾಗೇ ಮಾಡಿತು. ಇಂದ್ರಿಯ ನಿಗ್ರಹದಲ್ಲಿ ಕಾಮವನ್ನು ಗೆಲ್ಲುವುದೂ ಒಂದು ಸಬ್ಜೆಕ್ಟ್ ಅಲ್ಲವೇ ಪೂರ್ಣಿಮಾ / ಅನಾನಿಮಸ್ಸರೇ ? ನೀವದನ್ನು ಗೆದ್ದಿರೇ ? ಆ ಕಾಮ ತುಂಬಿದ ಮನಸ್ಸನ್ನು ಬೆದೆಬಂದ/ನೆಶೆಬಂದ ನಾಯಿಗೆ ಹೋಲಿಸಿದ್ದರಲ್ಲಿ ತಪ್ಪೇನಿದೆ ಹೇಳಿ? ಕಾವ್ಯವನ್ನು ಬರೆಯುವಾಗ ತಲೆಯಿಲ್ಲದೇ ಬರೆಯುವುದಿಲ್ಲ, ಅದರಲ್ಲೂ ಜಗದಮಿತ್ರ ಗುಂಡಪ್ಪನವರನ್ನು ತನ್ನ ಮಾನಸ ಗುರುವೆಂದು ಸ್ವೀಕರಿಸಿ ಬರೆದ ಕಾವ್ಯಗಳು ಕ್ಲೀಷೆಗಳಿಗೆ ಈಡಾಗಬಾರದಲ್ಲ. ನಿಮ್ಮ ಮನಸ್ಸು ಇನ್ನೂ ಕೂಪದೊಳಗಿನ ಮಂಡೂಕ! ಆ ಮಂಡೂಕಕ್ಕೆ ಸಮುದ್ರವನ್ನು ತೋರಿಸಿ, ಆಗ ಶಬ್ದಗಳ ಅರ್ಥ ಸರಿಯಾಗಿ ಧ್ವನಿಸುತ್ತದೆ! ನಿಮಗೆ ಅರ್ಥವಾಗುತ್ತದೆ. ಅದಿಲ್ಲವೋ ನೀವು ಹಾಗೇ ಇರಿ ನಾವು ಬರೆಯುತ್ತಲೇ ಇರುತ್ತೇವೆ-ನಿಮ್ಮ ಆ ಕ್ಷುಲ್ಲಕತನದ ಕಲ್ಲೆಸೆತಕ್ಕೆ ಧಕ್ಕೆಗೆ ಒಳಗಾಗುವ ಪುಕ್ಕಲು ಮನಸ್ಸಲ್ಲ ನಮ್ಮದು, ತಿಳಿದಿರಲಿ! ನಮ್ಮ ಬುನಾದಿ ಭದ್ರವಾಗಿದೆ, ಅದಕ್ಕೆ ಛಾವಣಿಯೂ ತಕ್ಕುದಾಗೇ ಇದೆ. ಇಲ್ಲಿ ಬರೆಯುವ ಯಾವ ಮಾಹಿತಿಯೂ ಕಡತಂದ ಸೌಭಾಗ್ಯವಲ್ಲ ಎಂಬುದು ನಿಮಗೆ ತಿಳಿದರೆ ನೀವು ಮತ್ತೆ ಹಾಗೆ ಬೇಕಾಬಿಟ್ಟಿ ಬರೆಯಲಾರಿರಿ ಅಲ್ಲವೇ ? ನಿಮ್ಮ ಮಿಂಚಂಚೆಯನ್ನು ಕೊಡಿ ಇನ್ನೂ ಬೇಕಾದ್ರೆ ನಿಮಗೆ ಮಾಹಿತಿ ನೀಡೋಣ ಮತ್ತು ನಿಮ್ಮಿಂದ ’ಸಂಸ್ಕಾರ’ ದ ಅರ್ಥ ತಿಳಿದುಕೊಳ್ಳಬೇಕಾಗಿದೆ ಕೊಡುವಿರೇ ? ಇಷ್ಟು ಸಾಕಲ್ಲವೇ ]

ಮನಸ್ಸನ್ನು ಹತೋಟಿಯಲ್ಲಿ, ಸಮಚಿತ್ತದಲ್ಲಿ ನಿಭಾಯಿಸಿದವರು ಹೃದಯ ಸಂಬಂಧೀ ಕಾಯಿಲೆಗಳಿಗೆ ತುತ್ತಾಗುವುದೇ ಇಲ್ಲ. ಆದರೆ ನಮ್ಮಲ್ಲಿ ಬಹುಸಂಖ್ಯಾಕರು ನಾವಿದನ್ನು ಪಾಲಿಸದೇ ವಯಸ್ಸಿಗೆ ತಕ್ಕಂತೇ ಬರುವ ಕಾಯಿಲೆಗಳ ಗುಂಪಿಗೆ ಹೃದಯಸ್ತಂಭನ, ಮಧುಮೇಹ, ರಕ್ತದೊತ್ತಡ ಹೀಗೇ ಹೆಸರಿಸಿ ಇಟ್ಟುಕೊಂಡಿದ್ದೇವೆ. ಸತ್ಯವಾದ ಒಂದು ವಾಕ್ಯ ಕೇಳಿ- ಯಾವಾಗ ಭೌತಿಕ ಶರೀರಕ್ಕೂ ನಮ್ಮೊಳಗಿನ ಸೂಕ್ಷ್ಮ ಶರೀರಕ್ಕೂ[ಮನಸ್ಸು ಎಂದಿಟ್ಟುಕೊಳ್ಳೋಣ!] ಲೆಕ್ಕಾಚಾರದಲ್ಲಿ ಭಿನ್ನತೆ ತೋರಿಬರುತ್ತದೋ ಆವಾಗಲೇ ನಮಗೆ ಇಲ್ಲದ ಕಾಯಿಲೆಗಳು ಅಡರಿಕೊಳ್ಳಲು ತೊಡಗುತ್ತವೆ! ನಿಜವಾಗಿ ಯೋಗಿಯಾದವನು ನಿರೋಗಿಯಾಗುತ್ತಾನೆ! ಹಾಗಾದ್ರೆ ಅವನಿಗೂ ೪೦ ವಯಸ್ಸು ದಾಟುವುದಿಲ್ಲವೇ ? ಆತನಿಗೂ ಹಲವು ಕಾಯಿಲೆಗಳು ಮುಪ್ಪಡರುವ ಶರೀರಕ್ಕೆ ಬರುವುದಿಲ್ಲವೇ ? ಇಲ್ಲಾ ಸ್ವಾಮೀ, ಯೋಗಿಗಳು ಕಾಯಿಲೆಗಳನ್ನೆಲ್ಲ ಮೀರಿನಿಲ್ಲುವ ಅದ್ಬುತ ಚೈತನ್ಯ ಪಡೆದಿರುತ್ತಾರೆ! ನೀವು ಬಾಬಾ ರಾಮದೇವ್ ಅವರನ್ನೇ ಕೇಳಿ, ಅವರು ಅಷ್ಟು ಚೆನ್ನಾಗಿ ಹೊಟ್ಟೆ, ಕೈಕಾಲು ಎಲ್ಲವನ್ನೂ ತಿರುಚುತ್ತ ಯೋಗಮಾಡುತ್ತಾರಲ್ಲ ಅವರಿಗೆ ಯವುದಾದರೂ ಕಾಯಿಲೆ ಇಲ್ಲವೇ ? ಉತ್ತರ ನಾನೇ ಹೇಳುತ್ತೇನೆ-ಇಲ್ಲ! ಕಾಯಿಲೆ ಅವರ ಹತ್ತಿರ ಬರುವುದೂ ಇಲ್ಲ!

ಹೋಗಿ ಭಟ್ಟರೆ ನೀವೆಲ್ಲಾ ಆಗಹೋಗದ್ದನ್ನೇ ಹೇಳುತ್ತೀರಿ ಎನ್ನುವ ಮಟ್ಟಕ್ಕೆ ನೀವೀಗ ತಲ್ಪಿರುತ್ತೀರಿ. ಇದನ್ನೇ ನಾನೊಬ್ಬ ಯೋಗಿಯಾಗಿ ಹೇಳಿದರೆ ನನ್ನ ಶಿಷ್ಯಂದಿರಾಗಲು ತಯಾರಾಗುತ್ತೀರಿ! ಪ್ರತ್ಯಾಹಾರವನ್ನು ಅರಿಯಲು, ಅಳವಡಿಸಿಕೊಳ್ಳಲು ಕೇವಲ ಸನ್ಯಾಸಿಯೇ ಆಗಬೇಕೆಂದೇನಿಲ್ಲ, ಸಂಸಾರಿಗಳೂ ಅದನ್ನು ಸಾಧಿಸಬಹುದು. ಮಹಾಭಾರತದ ಮೂಲಕ ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ಇದನ್ನೇ ಲೋಕಾರ್ಪಣೆ ಮಾಡಿದ್ದಾನೆ. ಇದನ್ನು ಸರಿಯಾಗಿ ಅರಿತರೆ, ಅಳವಡಿಸಿಕೊಂಡರೆ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೊರಟು ಹೋಗುತ್ತದೆ! ಯಾವಾಗ ನಮ್ಮಲ್ಲಿ ಪಾಸಿಟಿವ್ ಎನರ್ಜಿ ನೆಲೆಸುತ್ತದೋ ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಲು ಅದು ಕಾರಣವಾಗುತ್ತದೆ. ಯಾವಾಗ ಸಮಸ್ಯೆಗಳು ನಿವಾರಣೆಯಾಗುತ್ತವೆಯೋ ಆವಾಗ ನಮಗೆ ಜೀವನ ಹಗುರವಾಗುತ್ತದೆ, ನಿಜವಾದ ಆನಂದ ದೊರೆಯತೊಡಗುತ್ತದೆ. ಅದೇ ಸ್ವರ್ಗೀಯ ಆನಂದ! ಆ ಆನಂದವನ್ನು ಪಡೆಯ ಬಯಸುವವರು ನಿತ್ಯವೂ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಹಾಗೆ ಪಾಲಿಸುವುದರಿಂದ ಮಾತ್ರ ಆ ಆನಂದವನ್ನು ಪಡೆಯಲು ಸಾಧ್ಯವೇ ಹೊರತು ಅದು ಕೊಂಡುಕೊಳ್ಳುವ ಪ್ರಕ್ರಿಯೆಯಲ್ಲ!

ಇದನ್ನೆಲ್ಲ ನೋಡಿಯೇ ನಮ್ಮ ಆದಿಶಂಕರರು ಹೇಳಿದರು :

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಂ |
ನಿರ್ಮೋಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಃ ||

ಉಳಿದುದನ್ನು ಮುಂದಿನ ಭಾಗದಲ್ಲಿ ನೋಡೋಣ,

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾವೇವೈಷ್ಯಸಿ ಯುಕ್ತ್ವೈವಮಾತ್ಮಾನಂ ಮತ್ಪರಾಯಣಃ ||

|| ಶ್ರೀ ಕೃಷ್ಣಾಯ ತುಭ್ಯಂ ನಮಃ ||

Friday, September 3, 2010

ಪ್ರತ್ಯಾಹಾರ

ಪ್ರತ್ಯಾಹಾರ

[ ಅನೇಕ ಹಿರಿಯ ಮಿತ್ರರು ಪ್ರತ್ಯಾಹಾರದ ಬಗ್ಗೆ ಬರೆಯಲು ಕೇಳಿದ್ದಾರೆ, ಅದರ ಸ್ಥೂಲರೂಪವನ್ನು ಜಗದಮಿತ್ರ ನಿಮಗೆ ಇಲ್ಲಿ ಕೊಟ್ಟಿದ್ದಾನೆ. ಸ್ನೇಹಿತರೇ ಶ್ರೀಕೃಷ್ಣನ ಜನ್ಮ ದಿನದ ಸಮಯದ ಸುತ್ತ ಬರೆದ ಕೃತಿಗಳನ್ನು ಓದಿ, ಹಲವಾರು ಪನವಾರ ಸ್ವೀಕರಿಸಿದಿರಿ, ಈಗ ಪರಮಾತ್ಮ ಶ್ರೀಕೃಷ್ಣ ಜಗದ್ಗುರುವಾಗಿ ಬೋಧಿಸಿದ ಗೀತೆಯಲ್ಲಿ ಆತನೇ ಹೇಳಿದ ಪ್ರತ್ಯಾಹಾರದ ಬಗ್ಗೆ ಸ್ವಲ್ಪ ಅರಿಯೋಣ ಅಲ್ಲವೇ ? ಪ್ರತ್ಯಾಹಾರ ಎಂಬುದರ ಬಗ್ಗೆ ವಿಸ್ತೃತವಾಗಿ ಓದಲಿದ್ದೀರಿ ಮುಂದಿನ ಲೇಖನದಲ್ಲಿ,ಸದ್ಯಕ್ಕೆ ಈ ಕಾವ್ಯರೂಪ ನೋಡೋಣ ]


ಹತ್ತುಸಾವಿರ ಕೋಟಿ ನಿನ್ನೆದುರು ಬಿದ್ದರೂ
ಎತ್ತಿಡಲು ಬೇಡ ನಿನ್ನದು ಅಲ್ಲದಿರಲು
ಮುತ್ತು ಮಾಣಿಕವು ಮತ್ತೆರಡು ನಿನ್ ಕಣ್ಸೆಳೆಯೆ
ಕುತ್ತು ಅದ ನೀ ಬಯಸೆ | ಜಗದಮಿತ್ರ

ಉತ್ತಿ ಬೀಜವ ಬಿತ್ತು ಪರಮಾತ್ಮನಂ ನೆನೆದು
ಬಿತ್ತ ಬೀಜಕೆ ಫಲವ ನೀ ಗುಣಿಸಬೇಡ
ಅತ್ತು ಕರೆದರೂ ಬಹದು ಲಭ್ಯ ನಿನಗಿಲ್ಲದಿರೆ
ಮತ್ತೆ ಬೇಸರವೇಕೆ ? ಜಗದಮಿತ್ರ

ನುಚ್ಚಿನುಂಡೆಯ ರಾಶಿ ಪಂಚಭಕ್ಷ್ಯಗಳಿಹವು
ಮೆಚ್ಚಿ ನಿನ್ನಿರವರಿತು ತಿನ್ನಲ್ಪವದರ
ಹುಚ್ಚೆದ್ದು ಕುಣಿದು ತನಗೇ ಎಂಬ ಮನವನ್ನು
ಬೆಚ್ಚಿಬೀಳಿಸು ಬೈದು | ಜಗದಮಿತ್ರ

ಯಾರನ್ನೂ ನೆಚ್ಚಿರದೆ ಸ್ವಾವಲಂಬನೆ ನಡೆಸು
ದಾರಿ ಹೋಕನು ನೀನು ನೆನೆಪು ನಿನಗಿರಲಿ
ಊರು ದೊಡ್ಡದೇ ಇರಲಿ ಕೇರಿ ಸಣ್ಣದೇ ಇರಲಿ
ಏರು ಮೇಲ್ಪಂಕ್ತಿಯಲಿ | ಜಗದಮಿತ್ರ

ನೀನೇನೂ ತಂದಿಲ್ಲ ಭುವಿಗೆ ಬರುವಾದಿನದಿ
ಏನೇನೋ ಕೊಂಡೊಯ್ಯಲಾರೆ ಹೊರಡುವೊಲು
ತಾನು ತನ್ನವರೆಂಬ ವ್ಯಾಮೋಹಕಿರಲಿ ಮಿತಿ
ದೀನ ನೀ ತಿಳಿದುನಡೆ | ಜಗದಮಿತ್ರ

ಇದ್ದಿಹುದ ಅನುಭವಿಸು ಇರುವನಕ ಪಡೆದುದನು
ಎದ್ದುಹೋದುದ ಬಯಸಿ ಕರುಬುವುದು ತರವೇ ?
ಉದ್ದುದ್ದ ಪೋಣಿಸುತ ಅತಿಯಾದ ಬಯಕೆಗಳ
ಒದ್ದು ಓಡಿಸು ಹೊರಗೆ | ಜಗದಮಿತ್ರ

ನೀನು ನೀನೇ ಹೊರತು ಅವನಲ್ಲ ವೆಂಬುದನು
ಸಾನುರಾಗದಿ ಮನಕೆ ನೀ ಒತ್ತಿ ಹೇಳು
ಮಾನವನು ನೀನಾಗು ಓದಿ ಜ್ಞಾನವಪಡೆದು
ಹಾನಿ ತಟ್ಟದು ನಿನಗೆ | ಜಗದಮಿತ್ರ

ಅದು ಸಿಗದು ಇದು ಸಿಗದು ಎಂಬ ಹಳವಳಿಕೆಯಲಿ
ಕುದಿಕುದಿದು ಕಂಡಲ್ಲಿ ಅಂಡಲೆಯಬೇಡ
ಒದಗುವುದು ನಿನಗೆಲ್ಲ ಭಾಗ್ಯ ಬರೆದಿರಲಲ್ಲಿ
ಹದಗೊಳಿಸು ನಿನ್ನಮನ | ಜಗದಮಿತ್ರ

Thursday, September 2, 2010

" ಕೃಷ್ಣಾ ಎನಬಾರದೇ ??"

ಚಿತ್ರಗಳ ಕೃಪೆ :ಅಂತರ್ಜಾಲ

" ಕೃಷ್ಣಾ ಎನಬಾರದೇ ??"
[ಕೃಷ್ಣಾಷ್ಟಮಿಯ ಸಡಗರದಲ್ಲಿ ಇದು ಇಂದಿನ ಕೃಷ್ಣ ಜಯಂತಿಯ ವಿಶೇಷ!]



ಚಿತ್ರಾನ್ನ
[ನಿನ್ನೆಯ ಉಪವಾಸದಿಂದ ಹಾಗೇ ಉಳಿದಿರುವ ಅನ್ನಕ್ಕೆ ಒಗ್ಗರಣೆ ಹಾಕಿದ್ದು!]


ಅಮ್ಮ ಗುಮ್ಮನ ಕರೆದಾಗ
ಶಾಲೆಯ ಮಾಸ್ತರು ಬೈದಾಗ
ಮನೆಯಲ್ಲಿ ಅಪ್ಪ ಹೊಡೆದಾಗ
ಚಿಕ್ಕಪ್ಪ ಕೋಪಿಸ್ಕೊಂಡು ಬೈದಾಗ
ಆಚೆಮನೆ ಸೀತಾರಾಂಭಟ್ರು
ನನಗಿಂತ ಮುಂದೆ ರಸ್ತೆಯಲ್ಲಿ ನಡೆಯುತ್ತಿದ್ದವರು
ಬುರ್ರೆನಿಸಿ ಬಾಯ್ತುಂಬ ಉಗುಳಿದ
ಎಲೆಯಡಿಕೆಯ ಕಾರಂಜಿಯ ತುಂತುರು ಹನಿಗಳು
ತಂದ ರಂಗು ಮೈಮೇಲೆ ರಂಗೋಲಿ ಬರೆದಾಗ
ಸಣ್ಣವನಿದ್ದೆ ತಿಳಿಯುತ್ತಿರಲಿಲ್ಲ !
ನಾನಂದು ಕೊಂಡೆ ಇವರೆಲ್ಲಾ ನನ್ನ ವಿರೋಧಿಗಳು !

ಕ್ಲಾಸಿನ ಹುಡುಗ ಸುಬ್ರಹ್ಮಣ್ಯ ದೋಸ್ತಿಬಿಟ್ಟಾಗ
ಸರಕಾರೀ ರೇಷನ್ ಅಂಗಡಿಯವ
ಸಮಯಕ್ಕೆ ಅಕ್ಕಿ-ಸಕ್ಕರೆ-ಸೀಮೆ ಎಣ್ಣೆ ಕೊಡದಾಗ
ದೇವಕಮ್ಮ ಗಂಡನ ಕಿವಿ ಊದಿ
ಯುವಕ ಸಂಘಕ್ಕೆ ವಂತಿಗೆ ನಿರಾಕರಿಸಿದಾಗ
ಸಣ್ಣಗೆ ಬಳುಕುವ ಕೊನೇ ಮನೆ ರಾಧೆ
ನಾ ದೊಡ್ಡವನಾದೆನೆಂದು ಸಂಗವನ್ನೇ ತ್ಯಜಿಸಿದಾಗ
ನಾರಣ ನಮ್ಮ ತೋಟದಲ್ಲಿ ಹಸನಾಗಿದ್ದ
ಹೊಸ ಬಾಳೆಮರದ ಎಲೆಯನ್ನು ಬಗ್ಗಿಸಿ ಕೊಯ್ದಾಗ
ಕೆಲಸಕ್ಕೆ ಬಂದ ಕುಪ್ಪ ಅಪ್ಪನನ್ನು ಹೇಳ್ದೇ ಕೇಳ್ದೇ
ಸಮಯಕ್ಕೂ ಮುಂಚೆ ಹೊತ್ತಾಯಿತೆಂದು ಹಾರೋಡಿ ಹೋದಾಗ
ಇನ್ನೂ ಪೂರ್ತಿ ಹದಿವಯಸ್ಸಿಗೆ ಬಂದಿರಲಿಲ್ಲ !
ನಾನೆಂದು ಕೊಂಡೆ ಇವರೆಲ್ಲಾ ನನ್ನ ಹಿತಶತ್ರುಗಳು !

ಮಂಚ್ಮಾಣಿ ಇಂಗ್ಲೀಷು ಕಲಿಯುತ್ತ
ನಮ್ಮ ಜೊತೆ ಬೆರೆಯದೇ ತಮ್ಮ ಗುಂಪನ್ನೇ ಬೇರೆ ಮಾಡಿಕೊಂಡಾಗ
ಸಂಚಿಹೊನ್ನಮ್ಮನಂಥ ಸುಧಾ ಗೆಳೆಯ ಸದಾನಿಗೆ
ವಿನಾಕಾರಣ ಡೈವೋರ್ಸ್ ಕೊಟ್ಟಾಗ
ಅಕ್ಕ-ತಂಗಿಯರನ್ನು ಸತಾಯಿಸುತ್ತ ಅವರ ದುಡಿಮೆಯಲ್ಲಿ
ಉಂಡು ದುರ್ದುಂಡಿಯಾಗಿ ಬೆಳೆದ ಮಂಜುವನ್ನು ನೋಡಿದಾಗ
ಏನೂ ಅರಿಯದ ಮುಗ್ಧ ನವೀನನನ್ನು
ಏನೋ ಕಾರಣದಿಂದ ಪೋಲೀಸರು ಕರೆದೊಯ್ದಾಗ
ಪರಿಹಾರ ಕೊಡಿಸುವ ನೆಪದಲ್ಲಿ ಸಣ್ಣೀರಿಯ
ಮಗಳನ್ನು ಬುಟ್ಟಿಗೆ ಹಾಕಿಕೊಂಡ ಗಾಜು
ಅವಳನ್ನು ಬಸಿರುಮಾಡಿ ಕೈಕೊಟ್ಟು ಕೈತೊಳೆದುಕೊಂಡಾಗ
ಸ್ವಲ್ಪ ವಯಸ್ಸಿಗೆ ಕಾಲಿಡುತ್ತಿದ್ದೆನಲ್ಲ !
ನಾನಂದುಕೊಂಡೆ ಇವರೆಲ್ಲಾ ದುಶ್ಯಾಸನ ಕುಲದವರು!

ವೃದ್ಧ ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ
ಕಳಿಸಿದ ಮಗ-ಸೊಸೆ ಜಗನ್-ಮೋಹಿನಿಯರನ್ನು ಕಂಡಾಗ
ಪಾಪಿಜನ ಬಿಳಿಯ ದನವನ್ನು ಕದ್ದೊಯ್ದು
ಕತ್ತರಿಸಿ ತಿಂದ ಕಥೆಕೇಳಿದಾಗ
ಆಸರೆ ನೀಡುವ ರಾಜಕಾರಣಿಗಳು
ಪರಿಹಾರ ಕೊಡುವ ಬದಲು ಸಂಗ್ರಹಿಸಿದ
ನಿಧಿಯನ್ನೇ ಕದ್ದು ತಿಂದಾಗ
ಪ್ರಾಮಾಣಿಕರಾದ ಧಣಿಗಳು ಹಾಡಹಗಲೇ
ಗಣಿಯನ್ನು ಮುಕುರಿಕೊಂಡು ತಿಂದು ತೇಗುವಾಗ
ವರದಕ್ಷಿಣೆ ಹೆಚ್ಚಿಗೆ ತಾರದ ನವ ವಧುವನ್ನು
ಅತ್ತೆ-ಮಾವ-ಗಂಡ ಕತ್ತು ಹಿಚುಕಿ ಸಾಯಿಸಿದಾಗ
ವಯಸ್ಕನಾದೆ ಗೊತ್ತಾಗಹತ್ತಿತಲ್ಲ !
ನಾನಂದುಕೊಂಡೆ ಇವರೆಲ್ಲ ಕಲಿಯುಗದ ರಕ್ಕಸರು !

ಕಲಸುಮೇಲೋಗರವಾದ ಈ ಸಮಾಜದಲ್ಲಿ
ಕುಡುಕನ ಕಣ್ಣಿಗೆ ಎರಡೆರಡು ಕಾಣುವಂತೇ
ತುಮುಲಗಳು ಗೊಂದಲಗಳು ವೈಷಮ್ಯಗಳು
ಹಳಸಿದ ಬಾಂಧವ್ಯಗಳು ಕಮರಿದ ಚೈತನ್ಯಗಳು
ಮಧ್ಯೆ ಮಧ್ಯೆ ಕಾಮುಕ ಸ್ವಾಮಿಗಳು
ಒಳಗೊಂದು ಹೊರಗೊಂದು ಎಂದು ಪೇಪರಿನಲ್ಲಿ
ಹೇಳಿಕೆ ಕೊಡುವ ಸನ್ಯಾಸಿಗಳು
ಆ ಸ್ಕೀಮು ಈ ಲಾಭ ಎನ್ನುವ ಬ್ರೋಕರುಗಳು
ಜೀವದ ಬಗ್ಗೆ ಭಯ ಹುಟ್ಟಿಸಿ ಆಧರಿಸಿದವರ
ಸಲುವಾಗಿ ಇನ್ವೆಸ್ಟ್ ಮಾಡಿರೆನ್ನುವ ವಿಮೆಕಂಪನಿಗಳು
ಅಯ್ಯೋ ಶ್ರೀಕೃಷ್ಣಾ ನಿನ್ನ ಅಗತ್ಯ ಇಂದಿಗೂ ಇತ್ತು ನಮಗೆ
ನೀ ಕಲ್ಕಿಯಾಗುವ ಬದಲಿಗೆ !
---------


ಉಂಡೆ [ಬಾಯಲ್ಲಿ ತುಂಬಿಕೊಳ್ಳದೇ ಕೆನ್ನೆಯನ್ನು ಊದಿಸಿದ್ದು]

ಕಾಲೇಜಿಗೆ ಹೋಗುವಾಗ ಕೊಂಕಣಿ ಹುಡುಗಿಯ ಹಿಂದೆ ಇಬ್ಬರು ಕೊಂಕಣಿ ಹುಡುಗರು ನಡೆದುಕೊಂಡು ಹೋಗುತ್ತಿದ್ದರು. ಒಬ್ಬಾತನಿಗೆ ಅಕ್ಷರಗಳ ಸ್ಪಷ್ಟ ಉಚ್ಚಾರ ಆಗುತ್ತಿರಲಿಲ್ಲ. ಜೊತೆಗಿದ್ದವ ಜೋರಾಗಿ ನಡೆದು ಆ ಹುಡುಗಿಯನ್ನೂ ದಾಟಿ ಮುನ್ನಡೆದಾಗ ಒಬ್ಬನೇ ನಡೆಯಲು ಬೇಜಾರಾಗಿ ಹಿಂದಿದ್ದ ಇನ್ನೊಬ್ಬ ಕೊಂಕಣಿಯಲ್ಲಿ " ಗಾಬಗೇ " ಅಂದ. [ಕೊಂಕಣಿಯಲ್ಲಿ ’ರಾಬರೇ’ ಅಂದರೆ ’ನಿಲ್ಲೋ’ ಅಂತರ್ಥ. ಈತನಿಗೆ ಹೇಳುವಾಗ ರ ಕಾರ ಉಚ್ಚಾರವಾಗದ ಕಾರಣ ಗ ಕಾರವಾಗಿ ಪರಿಣಮಿಸಿತ್ತು. ’ರಾಬಗೇ’ ಎಂದರೆ ’ನಿಲ್ಲೇ’ ಅಂತರ್ಥ! ಇಲ್ಲಿ ಗಾಬಗೇ ರಾಬಗೇ ಎಂಬಂತೇ ಹುಡುಗಿಗೆ ಕೇಳಿಸಿತ್ತು ] ಮರುಕ್ಷಣದಲ್ಲಿ ಕೆನ್ನೆ ಕೆಂಪಾಗಿತ್ತು-ಎದುರಿಗೆ ಹೋಗುತ್ತಿರುವ ಕೊಂಕಣಿ ಭಾಷೆಯ ಹುಡುಗಿ ಅದನ್ನು ತನಗೇ ಉದ್ದೇಶ ಪೂರ್ವಕ ಹೇಳಿದ್ದೆಂದು ಭಾವಿಸಿ ನಿಂತಲ್ಲೇ ಉಂಡೆ ತಿನ್ನಿಸಿದ್ದಳು!

---------



ಮೊಸರನ್ನ [’ಕಣ್ಣು’ ಕೊಡು ಶ್ರೀಕೃಷ್ಣ]

ನಿನ್ನ ವ್ಯಕ್ತಿತ್ವವನು
ನನ್ನೊಳಗೆ ತುಸು ಮಿಳಿಸಿ
ಕನ್ನಯ್ಯ ಕೃಷ್ಣ ಕಾಯುವುದೆನ್ನನು
ಘನ್ನ ಮಹಿಮನೆ ನಿತ್ಯ
ನನ್ನಿನುಡಿಯುವ ನನಗೆ
ಇನ್ನೊಮ್ಮೆ ದಯೆತೋರಿ ದರುಶನವನು ||ಪ ||

ಮುನ್ನ ಮಾಡಿದ ಕರ್ಮ
ಎನ್ನ ಬಿಡದೆಂತೆಂಬ
ಮುನ್ನುಡಿಯ ಬರೆದೆ ನೀನು
ಪನ್ನಗ ಶಯನನೇ
ಪುನ್ನಾಗ ಕರವೀರ
ಸನ್ನಡೆತಯಲಿ ಕೊಡುವೆನು || ೧ ||

ಅಣ್ಣಯ್ಯ ಶ್ರೀಹರಿಯೇ
ಮಣ್ಣ ಗುಡ್ಡಕೇ ಹೊತ್ತೆ
ಕಣ್ಣಿರದ ಶಿಶುವು ನಾನು
ಹಣ್ಣಾಯ್ತು ಮನವಿಂದು
ಸಣ್ಣದೇ ಈ ಜಗವು ?
’ಕಣ್ಣು’ ಕೊಡು ನೋಡಲದನು || ೨ ||
---------


ಬೆಣ್ಣೆ [ಮಕ್ಕಳ ಫಲ]

’ಶ್ರೀ ಸಂತಾನ ಗೋಪಾಲ ಕೃಷ್ಣ’ ಮಂತ್ರವನ್ನು ಶುದ್ಧಮನದಿಂದ ಸಂಕಲ್ಪಯುಕ್ತವಾಗಿ ಪುರೋಹಿತರಿಂದ ಜಪಿಸುವಕಾರ್ಯ ನಡೆಸಿದರೆ ಮಕ್ಕಳನ್ನು ಇನ್ನೂಪಡೆಯದವರು ಮಕ್ಕಳನ್ನು ಪಡೆಯುವುದು ಸಾಧ್ಯ. ಇದು ವಿಜ್ಞಾನಕ್ಕೆ ಕಾಣಸಿಗದ ಸುಜ್ಞಾನ! ಮೈಸೂರಿಗೆ ಹತ್ತಿರದಲ್ಲಿ ಯಾರು ಏನನ್ನೇ ಬೇಡಿದ್ದನ್ನು ಕೊಡುವ [ಅವರವರ ಹುಚ್ಚಿಗೆ ತಕ್ಕಂತೇ ಫಲಕೊಡುವ] ಶ್ರೀಗೋಪಾಲಕೃಷ್ಣನಿದ್ದಾನೆ--ಆತನಿಗೆ ’ಹುಚ್ಚೂರಾಯ’ನೆಂದು ಕರೆಯುತ್ತಾರೆ,ಅಲ್ಲಿಯೂ ಕೂಡ ಪ್ರಾರ್ಥಿಸಿಬಹುದು.

Wednesday, September 1, 2010

ಬೆಣ್ಣೆ ಕದ್ದ ನಮ್ಮಾ ಕೃಷ್ಣ ಬೆಣ್ಣೆ ಕದ್ದನಮ್ಮಾ !!

ಚಿತ್ರಗಳ ಕೃಪೆ : ಅಂತರ್ಜಾಲ

ಬೆಣ್ಣೆ
ಕದ್ದ ನಮ್ಮಾ ಕೃಷ್ಣ ಬೆಣ್ಣೆ ಕದ್ದನಮ್ಮಾ!!


ಕಿಲಾಡಿ ಕಿಟ್ಟ ಎನ್ನುವುದು ನಾವು ಸಾಮಾನ್ಯವಾಗಿ ಮಕ್ಕಳಿಗೆ ಬಳಸುವ ಮಾತು. ಇದು ಹುಟ್ಟಿದ್ದೇ ಶ್ರೀಕೃಷ್ಣ ಜನಿಸಿದ ಮೇಲೆ. ಚಂದ್ರವಂಶದವರಾಗಿಯೂ, ಸ್ವತಃ ಸೋದರಮಾವ ರಾಜನಾಗಿದ್ದರೂ ಅದೇ ಸೋದರಮಾವನ ದೆಸೆಯಿಂದ ಕೃಷ್ಣ ಹುಟ್ಟಿದ್ದು ಸೆರೆಮನೆಯಲ್ಲಿ;ಗಾಢಾಂಧಕಾರದ ಗೂಡಿನಲ್ಲಿ. ಹಡೆಯುವ ಪ್ರತೀ ಮಗುವನ್ನೂ ಮಾವ ಕಂಸ ಕಿತ್ತೆಸೆದು ಸಾಯಿಸುತ್ತಿದ್ದ. ಏಳನೆಯ ಮಗು ಮಹಮ್ಮಾಯಿಯಾಗಿ ಆಗಸದಲ್ಲಿ ಹಾರಿ" ಎಲವೋ ಕಂಸಾ ನಿನ್ನ ಕಾಲ ಸನ್ನಿಹಿತವಾಗಿದೆ, ಮುಂದೆ ಜನಿಸುವ ಎಂಟನೆಯ ಶಿಶುವಿನಿಂದ ನಿನ್ನ ಹತ್ಯೆ ನಡೆಯುತ್ತದೆ" ಎಂದು ಸಾರಿ ಅದೃಶ್ಯವಾಯಿತು. ಇದೇ ಕಾರಣವಾಗಿ ದೇವಕಿ-ವಸುದೇವರಿಗೆ ಸೆರೆವಾಸ. ಯಾರ ಸಹಾಯವೂ ಇಲ್ಲದೇ ಶಾರೀರಿಕ ಮತ್ತು ಮಾನಸಿಕ ನೋವನ್ನು ಯಾರಲ್ಲಿಯೂ ಹೇಳಿಕೊಳ್ಳಲು ಯಾರೂ ತಮ್ಮವರೆಂಬವರು ಸಿಗದ ದೀನ ಸ್ಥಿತಿಯಲ್ಲಿ, ಹೆರಿಗೆಯ ನೋವನ್ನೂ ಮರೆಸಿ ಜನಿಸಿದ ಚಂದ್ರವಂಶದ ಸೂರ್ಯ ಶ್ರೀಕೃಷ್ಣ! ಹುಟ್ಟಿದ ಘಳಿಗೆಯಿಂದಲೇ ಅಸಂಖ್ಯ ಪವಾಡ ನಡೆಸಿದ. ತಂದೆ ತನ್ನನ್ನು ಬುಟ್ಟಿಯಲ್ಲಿ ಹೊತ್ತು ನಡೆವಾಗ ಸುಮ್ಮನೇ ಹೊರಳಿ ಯಮುನೆಗೆ ಒಂದು ಶಾಕ್ ಕೊಟ್ಟ ನೋಡಿ-ಯಮುನೆ ಅರ್ಧಭಾಗವಾಗಿ ದಾರಿ ಬಿಟ್ಟಳು ಬಡಪಾಯಿ ವಸುದೇವನಿಗೆ. ಬುಟ್ಟಿಯಲ್ಲಿದ್ದ ವಾಸುದೇವ ನಕ್ಕ! ಸಾಕಿದ ತಾಯಿ ಯಶೋದೆಯಿಂದ ಲಾಲಿಸಲ್ಪಟ್ಟ ಬಹುಮುದ್ದು ಮಗು ಯಶೋದಾಕೃಷ್ಣ. ಗೋಕುಲ ಸೇರಿದ ಗೋಪಾಲನ ಬಾಲಲೀಲಾ ವಿನೋದಗಳು ಒಂದೆರಡೇ ? ಶಿಶುವಾಗಿರುವಾಗಲೇ ಪೂತನಿಯ ಹಾಲು ಕುಡಿದು ಕಡಬಾಯಲ್ಲಿ ಅದನ್ನು ಅಲ್ಲೇ ಸಣ್ಣಗೆ ಕಣ್ಣುಮಡಿದು ನಗುತ್ತ ಹರಿಬಿಟ್ಟವನನ್ನು ಹೇಳುವುದಾದರೆ ತುಂಟತನವೇ ಮೈವೆತ್ತ ಮಂಗಳಮೂರ್ತಿ ನಮ್ಮ ಬೆಣ್ಣೆಕಳ್ಳ! ಬೆಳೆದ ಗೋವಳ ತನ್ನ ಸಾನುರಾಗದ ಕೊಳಲ ಹರಿಯಬಿಟ್ಟಾಗ ಸೋಲದ ಗೋವುಗಳೂ ಮನುಜರೂ ಇರಲಿಲ್ಲ; ಇಂಪಾದ ವೇಣುವನ್ನು ಊದುತ್ತ ಮರದ ತಂಪಿನಲಿ ಕುಳಿತ ವೇಣುಗೋಪಾಲ ನುಡಿಸದ ರಾಗವಿಲ್ಲ!

ಬೆಳೆಯುತ್ತ ಯೌವ್ವನ ಪ್ರಾಪ್ತವಾಯಿತಲ್ಲ! ನಮನಿಮಗೆಲ್ಲ ಇರುವಂತೇ ಹುಡುಗಿಯರ ಮೇಲೆ ಕಣ್ಣು! ಅದು ಆತನ ತಪ್ಪಲ್ಲ ಆತನ ವಯೋಮಾನದ ತಪ್ಪು;ಮೂಲದಲ್ಲಿ ಎಲ್ಲದರ ಸೃಷ್ಟಿಕರ್ತನೇ ಆತನಾದರೂ ಇಲ್ಲಿ ಅದೇ ಸೃಷ್ಟಿಯ ಮಗುವಾಗಿ ಎಲ್ಲಾ ಮನುಜರಂತೇ ಕಷ್ಟ-ಸುಖವನ್ನು ಅನುಭವಿಸಿ ತೋರಿಸುತ್ತಿದ್ದ. ಅದಕ್ಕಾಗಿಯೇ ತನ್ನ ಮೂಲರೂಪವನ್ನು ಮರೆತು ಇಲ್ಲಿ ಕೇವಲ ಕೃಷ್ಣನಾಗಿಯೇ ಇರಲು ಬಯಸಿದ. ಹುಡುಗಿಯರಿಗೂ ಅಷ್ಟೇ: ಒಳಗೊಳಗೇ ತಮ್ಮ ಹೀರೋ ವನ್ನು ಬಯಸುವವರು ಅವರು. ಆತನ ಇರುವಿಕೆಯ ಪ್ರಭಾವವೇ ಹಾಗಿತ್ತು. ಆತ ಬಾರದಿದ್ದರೆ ಬದುಕು ನೀರಸವೆನಿಸುತ್ತಿತ್ತು. ಹೀಗಾಗಿ ಹೊರಗೆ ತೋರಿಕೆಗೆ ಬೆಣ್ಣೆಕಳ್ಳ, ಹೆಂಗಸರ ಮಳ್ಳ ಅಂತೆಲ್ಲಾ ಕರೆದರೂ ಆತ ತಮ್ಮ ಜೊತೆಗೇ ಇರಲಿ ಎಂಬುದು ಜನರೆಲ್ಲರ ’ಒಳ ಅಂಬೋಣ’;ಒಳತೋಟಿ, ಆತನನ್ನು ಬಿಟ್ಟು ಇನ್ನಿರಲಾರದ ಅಸಾಧ್ಯ ಆತ್ಮಾನುಸಂಧಾನ! ಈತನ ಪ್ರೀತಿ ಸ್ನೇಹಕ್ಕೆ ಗಂಟುಬಿದ್ದವರು ಬರೇ ಮಕ್ಕಳಲ್ಲ, ಹುಡುಗಿಯರಲ್ಲ, ಇಡೀ ಜನಸಮುದಾಯ. ಕಂಡವರನ್ನೆಲ್ಲಾ ತನ್ನ ಆಪ್ತವಲಯಕ್ಕೆ ಕಾಂತದಂತೆ ಎಳೆಯುತ್ತಿದ್ದ ಆತನ ವರ್ಚಸ್ಸು ಬಹಳ ಅಪರೂಪದ್ದು.


ನಡುನಡುವೆ ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಕಣಿಸಿಕೊಳ್ಳ ಹತ್ತಿದ ಈ ಕಪಟನಾಟಕ ರಂಗ ಆಡಿದ ಗಾರುಡೀ ವಿದ್ಯೆ ಕಮ್ಮಿಯದೇನಲ್ಲ. ಸುಧಾಮನ ಮಿತ್ರತ್ವಕ್ಕೂ ಕೌರವನ ಶತ್ರುತ್ವಕ್ಕೂ ಎಲ್ಲೆಲ್ಲಿ ಹೇಗೇಗೆ ನಡೆದುಕೊಳ್ಳಬೇಕೆಂದು ತೋರಿಸಿದ ಈತ ಬಹುದೊಡ್ಡ ಮ್ಯಾನೇಜಮೆಂಟ್ ಗುರು! ಆತ ಗೆಳೆಯನೆಂದರು ಕೆಲವರು, ಆತ ಚೋರನೆಂದರು ಹಲವರು, ಆತ ನಮ್ಮಾತನೇ ಎಂದರು ಇನ್ನೂ ಹಲವರು, ಆತ ಗೋವಳರವ ಎಂದು ಎದೆತಟ್ಟಿಕೊಂಡರು ಗೋಪಬಾಲರು, ಆತನ ಅಂಗಸೌಷ್ಠವ ನೋಡಿ ಸೋತರು ಗೋಪಿಕೆಯರು, ಆತನ ಬಾಲ್ಯವನ್ನು ನೆನೆದರು ಕುಚೇಲನಂಥವರು, ಆತನ ಪಾದಧೂಳಿಯ ಬಯಸಿದರು ವಿದುರನಂಥವರು, ಆತನ ಸಂಧಾನವನ್ನು ಅನುಮೋದಿಸಿದರು ಪಾಂಡುಕುವರರಂಥವರು, ಆತನ ಪೂರ್ಣರೂಪದ ಸ್ವಾನುಭವ ಬಯಸಿದರು ಭೀಷ್ಮನಂಥವರು, ಆತನ ಗೀತೋಪದೇಶವನ್ನು ಬಯಸಿದರೂ ಮೂರುಲೋಕದ ಗಂಡ-ಗಾಂಡೀವಿ ಎಂದೆನಿಸಿಯೂ ಹಳಹಳಿಸಿ ಹುಳ್ಳಗಾದವರು ಮತ್ತು ದಿವ್ಯಚಕ್ಷು ಅವನಿಂದಲೇ ಪಡೆದು ಆತನ ಸಾಕ್ಷಾತ್ಕಾರ ಪಡೆದವರು, ಪಡೆಯ ಬಯಸಿದವರು ಅರ್ಜುನನಂಥವರು!


ಅಂತೂ ಆತ ಎಲ್ಲರಿಗೂ ಒಂದಿಲ್ಲೊಂದು ಕಾರಣದಿಂದ ಬೇಕಾಗಿದ್ದ! ಸಹಿಸಲಾರೆವೆಂದು ಹೊಟ್ಟೆಕಿಚ್ಚುಪಡುವವರೂ ವಹಿಸಿಕೊಂಡು ಮಾತನಾಡುವುದು ಆತನಿಗಿದ್ದ ಗರಿಮೆ! ಯಾರನ್ನೂ ಕಡೆಗಣಿಸದೇ ಎಲ್ಲರ ಮಧ್ಯೆ ತಾನೇನೂ ಅಲ್ಲವೇನೋ ಎನ್ನುವಂತೇ ಜೀವಿಸಿ, ಕಮಲಪತ್ರದ ಮೇಲಿನ ನೀರ ಹನಿಯಂತೆ ಯಾವುದನ್ನೂ ಅಂಟಿಸಿಕೊಳ್ಳದೇ ಬದುಕಿದ ಬಹುಚಾಣಾಕ್ಷ ಮನುಷ್ಯ ಶ್ರೀಕೃಷ್ಣ. ಕಷ್ಟವನ್ನು ಬಾಯಾರೆ ಹೇಳಿಕೊಳ್ಳಲಾಗದ ಸುಧಾಮನ ಹರಕು ಪಂಚೆಯ ಹಿಡಿಯವಲಕ್ಕಿಯನ್ನೇ ಉಡಿತುಂಬ ಬೇಡಿ ತಿಂದು ಪರೋಕ್ಷ ಬಾಲ್ಯ ಸ್ನೇಹಿತನ ಬಡತನದ ಬವಣೆಯನ್ನೆಲ್ಲ ತಿಂದುಮುಗಿಸಿ, ಆತನಿಗೆ ಅಪ್ರತಿಮವಾದ ಬಂಗಲೆಯನ್ನೂ ಸ್ವರ್ಣಾಭರಣಗಳೇ ಮೊದಲಾದ ಅನರ್ಘ್ಯರತ್ನಗಳನ್ನೂ, ಬದುಕು ಪೂರ್ತಿ ಸಾಕಾಗುವ ಅಷ್ಟೈಶ್ವರ್ಯಗಳನ್ನೂ ದಯಪಾಲಿಸಿದ ಸುಮಧುರ ಸ್ನೇಹಜೀವಿ ಶ್ರೀಕೃಷ್ಣ. ರಾಧೆ-ರುಕ್ಮಿಣಿ ಮೊದಲಾದ ಹಲವು ಹೆಂಗಳೆಯರಲ್ಲಿ ಯಾರಿಗೂ ಭಾರವಾಗದಂತೇ, ಯಾರಿಗೂ ಅತಿಸುಲಭವಾಗದಂತೇ ಒಂದೇ ಹದದಲ್ಲಿ ತನ್ನ ಭಾವಮಿಳಿತವನ್ನು ಮೇಳೈಸಿದ ಮಹಾನ್ ಗಂಡ ಶ್ರೀಕೃಷ್ಣ. ಮಗುದೊಮ್ಮೆ ಭಾವತೀವ್ರತೆಯಿಂದ ಕರುಣಾರಸಪೂರಿತನಾಗಿ ಮಡದಿ ಸತ್ಯಭಾಮೆಗೆ ದೇವಲೋಕದ ಪಾರಿಜಾತವನ್ನೇ ಧರೆಗಿಳಿಸಿ ತಂದ ಉತ್ಕೃಷ್ಟ ಲವರ್ ಪ್ರೇಮಕೃಷ್ಣ. ಶ್ರೀರಾಮನ ಅನೇಕ ಅಂಶಗಳನ್ನು ತನ್ನಲ್ಲಿ ಹುದುಗಿಸಿಕೊಂಡೂ ರಾಮನಾಗದೇ ತನ್ನತನವನ್ನೇ ಬದುಕಿ ಈ ರೀತಿಯೇ ಬೇರೆ ಎಂದು ತೋರಿದ ಅಪ್ಪಟ ಯಾದವಕುಲತಿಲಕ ’ರಾಮಕೃಷ್ಣ’!



ಹೀಗೇ ಒಂದೇ ಎರಡೇ ವ್ಯಾಖ್ಯಾನಿಸಿದರೆ ಜಗವನ್ನೇ ತನ್ನ ಉಡಿಯಲ್ಲಿ ತುಂಬಿ ತಾಯಿಗೇ ಬಾಯಗಲಿಸಿ ಮೂರ್ಜಗವನ್ನು ತೋರಿಸಿದ್ದನ್ನು ನೆನೆಯಬೇಕಾಗುತ್ತದೆ! ಇದು ಮುಗಿಯದ ವಿಷಯ. ಸದ್ಯಕ್ಕೆ ಸಾಕು ಎಂದು ಇಲ್ಲಿಗೆ ಅಲ್ಪ ವಿರಾಮ ಹಾಡುತ್ತೇನೆ. ಮತ್ತೆ ಕೃಷ್ಣನ ಬಗ್ಗೆ ಹೃದಯದ ಕರೆ ಬಂದಾಗ ಹೀಗೇ ಬದುಕಿನಾದ್ಯಂತ ಅಗಾಗ ಆಗಾಗ ಬರೆಯುತ್ತಲೇ ಇರುತ್ತೇನೆ, ಯಾಕೆಂದರೆ ’ಆತ ನಮ್ಮವನೇ’! ಬಾಲ್ಯದಲ್ಲಿ ನಮ್ಗೆ ಶಾಲೆಗೆ ಹೋಗುವಾಗ ಚಕ್ಕುಲಿ,ಉಂಡೆಗಳಿತ್ತು ಚಡ್ಡಿಯ ಜೇಬು ತುಂಬಿಸಿದ ಆತ ಇಂದಿಗೂ ಎಂದಿಗೂ ನಮ್ಮಾತ್ಮೀಯ! ಅತ್ಮೀಯ ಸ್ನೇಹಿತರೇ, ಹಲವು ರೂಪಗಳಲ್ಲಿ ಮೆರೆದ ನಮ್ಮ ಬಾಲಗೋಪಾಲ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಇಂದಿಗೂ ನಮ್ಮೆಲ್ಲರ ಮನೆಗಳಲ್ಲಿ ನಾವು ಮಕ್ಕಳಿಗೆ ಮೊದಲ ವೇಷ ಹಾಕುವುದು ಬಾಲಕೃಷ್ಣನದ್ದೇ ಅಲ್ಲವೇ? ಆತನ ನೆನಪಿನಲ್ಲಿ ನಮ್ಮ ಅನುಭೂತಿಗಾಗಿ, ಕೃಷ್ಣನನ್ನೇ ಮುಟ್ಟಿದಂಥ ಅನುಭವ ಪಡೆಯಲಾಗಿ ಅಲಂಕರಿಸಿದ ಮಕ್ಕಳ ಕೆನ್ನೆ,ಗಲ್ಲ,ಸೊಂಟ ಇವನ್ನೆಲ್ಲ ಚಿವುಟುವುದು ಮನ ನೆನೆವ ಆ ಅತ್ಮೀಯ ಸ್ಪರ್ಶದ ಆನಂದಾನುಭೂತಿಗಾಗಿ ಸರಿಯಷ್ಟೇ? ಆ ಬಾಲಕೃಷ್ಣನನ್ನೊಮ್ಮೆ ನೆನೆಸಲು ಆತನ ಹುಟ್ಟಿದ ದಿನವನ್ನು ಸ್ಮರಿಸಲು, ಆತನಿಗೊಮ್ಮೆ ’ಹ್ಯಾಪಿ ಬರ್ತ್ ಡೇ ಟೂ ಯೂ ಬೆಣ್ಣೆಕಳ್ಳಾ! ’ ಎನ್ನಲು ತೆರಳೋಣ ಈ ಹಾಡಿನ ಮೂಲಕ---


ನಮ್ಮನೆಯ ಶ್ರೀಕೃಷ್ಣ !

ಗೋಕುಲ ಜನರನು ಕಾಯುವ ನೆಪದಲಿ
ಯದುಕುಲದುದಿಸುತ ಬಂದಾ ಗೋವಿಂದಾ || ಪ ||

ಕಣಕಣದಲು ಮೊಗೆ ಮೊಗೆಮೊಗೆದರ್ಪಿಸಿ
ಝಣ ಝಣ ಗೆಜ್ಜೆಯ ಕಟ್ಟಿ ತಾ ಕುಣಿದು
ಚಿಣಿಕೋಲ್ಚಂಡು ಬುಗುರಿಯನಾಡುತ
ಅಣಕವಾಡುತ ಎಲ್ಲರ ಮನಸೆಳೆದನೇ || ೧ ||

ಮೊಸರು ಕುಡಿಕೆಗಳ ಕಸುವಲಿ ಇಳಿಸುತ
ಹೆಸರು ತೋರದೆ ನವನೀತವ ಕದ್ದ
ಕೆಸರಲ್ಲಿಹ ಕಾಳೀಯನ ಮರ್ದಿಸಿ
ಉಸಿರು ಬಿಗಿಹಿಡಿಸಿದಾ ಗಾರುಡಿಗನೇ || ೨ ||

ಗೋವಳ ಗೊಲ್ಲ ಮೆಲ್ಲಗೆ ಕೊಳಲೂದುತ
ಆವುಗಳೆಲ್ಲವ ಹತ್ತಿರ ಕರೆದೂ
ತಾವರಿಯದ ಹೊಸಲೋಕವ ತೋರಿಸಿ
ಜೀವಸಂಕುಲಕೆ ಹೊಸ ಕಳೆ ಕಟ್ಟಿದ ||೩||

ನೀಲವರ್ಣ ಅರ್ಧನಿಮೀಲಿತ ನೇತ್ರದಿ
ನೀಳವೇಣಿ ರಾಧೆಯ ಮೃದುಹೃದಯಕೆ
ಗಾಳಹಾಕಿ ತನ್ನರಸಿಯ ರಮಿಸುತ
ಪಾಲನೇತ್ರ ಸಖ ಲಾಲಿಹಾಡಿದಾ || ೪ ||

ವಧಿಸಿ ಕಂಸನ ಕೌರವಾದಿಗಳ
ವಿಧಿಸಿ ಪಟ್ಟಪದ ಕುಂತೀಸುತರಿಗೆ
ಬೋಧಿಸಿ ಗೀತೆಯ ಭಾರತ ಜನರಿಗೆ
ಶೋಧಿಸಿ ಪಾರೀಜಾತ ತಂದವನೇ || ೫ ||


ಕರಾರವಿಂದೇನ ಪದಾರವಿಂದಂ
ಮುಖಾರವಿಂದೇ ವಿನಿವೇಶಯಂತಮ್ |
ವಟಸ್ಯ ಪತ್ರಸ್ಯ ಪುಟೇ ಶಯಾನಂ
ಬಾಲಂ ಮುಕುಂದಂ ಮನಸಾ ಸ್ಮರಾಮಿ ||


Tuesday, August 31, 2010

ಶ್ರಾವಣ ಭಾನುವಾರ!!


ಶ್ರಾವಣ ಭಾನುವಾರ!!

[ನವ್ಯ-ಕಾವ್ಯ ೫೦ : ೫೦ ]
ಬಹುತೇಕರು ಅಂದಿಕೊಂಡಿರುವುದು ಇಂದಿನ ನವ್ಯಕಾವ್ಯವನ್ನು ಕವನ ರೂಪದಲ್ಲಿ ಬರೆಯಲು ಸಾಧ್ಯವಿಲ್ಲ ಎಂದು. ಆದರೆ ಸಮಯೋಕ್ತ ಶಬ್ದ ಲಾಲಿತ್ಯದಿಂದ ಹದಹಿಡಿದು ಬರೆದಾಗ ನವ್ಯವೂ ಕೂಡ ಮಜಕೊಡುವ ಕಾವ್ಯವಾಗುತ್ತದೆ ಎಂಬುದನ್ನು ತೋರಿಸಲು, ತಮ್ಮೆಲ್ಲರ ಮುಂದೆ ಇಡಲು ಉದ್ಯುಕ್ತನಾಗಿದ್ದೇನೆ. ನಿಮ್ಮ ಯಾವುದೇ ಭಾವಗಳಿರಲಿ ಅವುಗಳನ್ನು ಕವನವಾಗಿಸಬಹುದು! ಅಂತಹ ಕವನಗಳು ಕೆಲವೊಮ್ಮೆ ಪ್ರಾಕಾರಗಳಲ್ಲಿ ಬದಲೆನಿಸಿದರೂ ರಾಗದೊಂದಿಗೆ ಎಲ್ಲರನ್ನೂ ರಂಜಿಸಲು ಅಣಿಯಾಗುತ್ತವೆ. ಹಾಡಲಾಗದ ಕವಿತೆಗಿಂತ ಹಾಡಿಕೊಂಡು ಗುನುಗುನಿಸಬಹುದಾದ ಕವನ ಬರೆದರೆ ಬಹಳ ಜನರನ್ನು ಇಂದಿಗೂ ಅದು ತಲ್ಪುತ್ತದೆ ಎಂಬುದು ನನ್ನ ಅನಿಸಿಕೆ. ಅನೇಕ ಸಿನಿಮಾ ಹಾಡುಗಳಲ್ಲಿ ಸತ್ವರಹಿತವಾಗಿದ್ದನ್ನೂ ಹಲವೊಮ್ಮೆ ಕೇವಲ ರಾಗದಿಂದ ಮತ್ತು ಜೊತೆ ಸಂಗೀತದಿಂದ ನಾವು ಇಷ್ಟಪಟ್ಟು ಆಗಾಗ ಗುನುಗುನಿಸುತ್ತೇವಲ್ಲ ? ಅದೇ ರೀತಿಯಲ್ಲಿ ಸತ್ವಯುತವಾದ ಹೂರಣವನ್ನು ಶಬ್ದಗಳ ಕಣಕದಲ್ಲಿ ತುಂಬಿದಾಗ ಹದನಾದ ಹಾಗೂ ರುಚಿಯಾದ ಹೋಳಿಗೆ ಹೊರಬರಬಹುದಲ್ಲ! ಈ ದಿಸೆಯಲ್ಲಿ ಒಂದಡಿ ಮುಂದಿಟ್ಟು ನಿಮಗೆ ಕೊಡುತ್ತಿರುವ ಡಯಾ-ಹೋಳಿಗೆ [ಸ್ವೀಟು ಕಮ್ಮಿ]ಇದು ಎಂದುಕೊಂಡರೆ ತಪ್ಪೇ ? ತಿಂದು ನೋಡಿ, ಜೀರ್ಣವೋ-ಅಜೀರ್ಣವೋ, ವಾಂತಿಯೋ-ಭೇದಿಯೋ, ಕೆಮ್ಮೋ-ದಮ್ಮೋ ಅಂತೂ ನಿಮ್ಮ ಅಭಿಪ್ರಾಯವನ್ನು ಕೀಬೋರ್ಡ್ ಜಜ್ಜಿ ಗುಜರಾಯಿಸಲು ನೇರ ದಾರಿಯಿದೆ, ನಿಮಗಿದೋ ರತ್ನಗಂಬಳಿ ಮನಸಾ ಹಾಸಿದ್ದೇನೆ--ಹೀಗೆ ದಯಮಾಡಿಸಿ >>


ನವ್ಯ

ಮೂರುಮುಕ್ಕಾಲು ಗಂಟೆ ತಿಣುಕಿ ತಿಣುಕಿ
ಬರೆದಿದ್ದು ಮೂರೇಸಾಲು
ಸಾಕು ನಮ್ಮಂಥವರ ಹಣೆಬರಹವೇ
ಹೀಗೆಂದು ಬಗೆವಾಗ
ನೆರೆಮನೆಯ ನಾಯಿ ಬಾಯಿಗೆಬೀಗವೇ ಇರಲಿಲ್ಲ
ಬೇಕಾದ ಹಾಗೆ ಬೊಗಳುತ್ತಿತ್ತು
ರೇಡಿಯೋದಲ್ಲಿ ಅಶ್ವಥ್ ಹಾಡು ಶ್ರಾವಣ ಬಂತು ನಾಡಿಗೆ
ಕೆಳಗಿನ ಮನೆಯಲ್ಲಿ ಹುರಿದ ಮೀನಿನ ಕಮಟು ವಾಸ್ನೆ
ಅಷ್ಟರಲ್ಲೇ ಮೊಬೈಲಿಗೆ ಕಾಲು
ಬಾಗಿಲ ಬೆಲ್ಲು ರಿಂಗಣಿಸಿದ ಸದ್ದು
ಅಮ್ಮಾ ಹೂವು ಎಂಬಾಕೆಯ ಕೂಗನ್ನಾಲಿಸುತ್ತ ಹೊರನಡೆದರೆ
ಮೇಲಿನ ಮನೆಯ ಕಪ್ಪು ಬೆಕ್ಕು ದುರುಗುಟ್ಟಿ ಕಂಗಾಲಾಗಿ ನೋಡಿ
ಮಿಯಾಂವ್ ಎನ್ನುತ್ತ ಹೊರಟೇ ಹೋಯಿತು

೯ ಮೊಳದ ಧೋತಿ ಉಟ್ಟ ಸುಬ್ಬಾ ಭಟ್ಟರು
ಧಾರೆಪೂಜೆಗೆ ಬನ್ನಿ ಅಂದಿದ್ದಕ್ಕೆ ಮಡಿಯಾಗಿ ಬಂದಿದ್ದರು
ರಾತ್ರಿಯಿಂದ ಯಾಕೋ ತಲೆನೋವು ಪೂಜೆಬೇಡವೆಂದು
ಅಟ್ಟಿಬಿಡಲೇ ಎಂದುಕೊಳ್ಳುವಾಗ
ನೀರು ಬಿಸಿ ಇದೆ ನೀವು ಹೋಗಿ ಎಂದ ಮಡದಿಯ ಮಾತಿಗೆ
ಎದುರಾಡದ ಪ್ರಾಮಾಣಿಕ ನಾನು!
ರಸ್ತೆಯಲ್ಲಿ ಯಾವುದೋ ಕಾರು ಬುರ್ರನೆ ಬಂದು ನಿಂತ ಶಬ್ದ
ಬಹಳದಿನವಾಯಿತು ಇಲ್ಲೇ ಬಂದಿದ್ದೆವು
ನಿಮ್ಮನ್ನೊಮ್ಮೆ ನೋಡಿಹೋಗೋಣ ಎಂದು ಬಂದೆವು ಎಂದವರ
ಮುಖನೋಡುತ್ತ ನಾವು ಕಕ್ಕಾವಿಕ್ಕಿ
ಕೂರಿಸಿ ಹೊರ ಬಾಗಿಲು ಹಾಕಿಬರಲು ಹೋದರೆ
ಸಾಬ್ ಎನ್ನುತ್ತ ದೀನಸ್ವರ ಹೊರಡಿಸುವ ಗೂರ್ಖ ನಿಂತಿದ್ದ
ಅದೇ ಕ್ಷಣ ಪೇಪರಿನವ ಹಾಲಿನವ ಎಲ್ಲಾ ಬಂದರು
ಎಲ್ಲರಿಗೂ ಬೇಕು ಕಾಸು ಯಾರಿಗೆ ಬೇಡ ಎಂದುಕೊಳ್ಳುವಷ್ಟರಲ್ಲೇ
ಬಕ್ಷೀಸು ಕೇಳಲು ಕಾರ್ಪೋರೇಷನ್ ಕಸಗುಡಿಸುವವ ಬಂದಿದ್ದ
ಎಲ್ಲರಿಗೂ ದುಡ್ಡುಕೊಟ್ಟು ಕಳುಹಿಸಿದ ಮೇಲೆ ಪೂಜೆಗೆ ಮನಸ್ಸಿರಲಿಲ್ಲ!
ಶ್ರಾವಣದ ಪೂಜೆಗೆ ಅಂತೂ ಮುಹೂರ್ತ ಮಾತ್ರ ಕೂಡಿ ಬಂದಿತ್ತು.

ಅರ್ಧಘಂಟೆಯೂ ಆಗಿರಲಿಲ್ಲ
ಭಟ್ಟರ ಮೊಬೈಲಿಗೆ ಕಾಲು
ಮಂತ್ರದ ಮಧ್ಯೆಯೇ ಅಲ್ಲೇಲ್ಲೋ ಯಾರಿಗೋ
ಅರ್ಜೆಂಟು ಸತ್ಯನಾರಯಣ ಪೂಜೆ ಮಾಡಿಸುವ ತಲುಬು
ಮಂಗಳಾರತಿಗೂ ಮುನ್ನ ಮತ್ತೆ ಬಾಗಿಲ ಬೆಲ್ಲು
ಅಮ್ಮಾ ನಾವು ಯುರೇಕಾ ಫೋರ್ಬ್ಸ್ ನಿಂದ ಬಂದಿರೋದು
ಥೂ ಇವನ ಪೂಜೆಗೂ ಬಿಡುವುದಿಲ್ಲ ಎಂದೆನಿಸುವಷ್ಟರಲ್ಲೇ
ಎಲ್.ಐ.ಸಿ ಏಜೆಂಟ್ ಗೋವಿಂದ ಬಂದಿದ್ದ
ಇವತ್ತು ಬಹಳ ಬ್ಯೂಸಿ ಮತ್ತೆ ನೋಡೋಣವೆಂದು
ಪ್ರಸಾದಕ್ಕೆ ಕೂತುಕೊಳ್ಳಲು ಹೇಳಿದೆ
ಸ್ವಾಮೀ ಶನಿಮಹಾತ್ಮನ ದೇವಸ್ಥಾನದಲ್ಲಿ
ಅನ್ನದಾನ ಇಟ್ಟ್ಕೊಂಡಿದೀವಿ ತಮ್ಮಿಂದಾದ ದೇಣಿಗೆ ಕೊಡಿ
ಎನ್ನುತ್ತ ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಗಳನ್ನು
ಇಟ್ಟುಕೊಂಡಿದ್ದ ಕಪ್ಪು ಜನ ಬಂದಿದ್ದರು
ಇನ್ನೇನು ಅವರನ್ನೂ ಹತ್ತು ರೂಪಾಯಿ ಕೊಟ್ಟು ಸಾಗಹಾಕಿದಾಗ
ಅನಾಥಾಶ್ರಮದ ಗಾಡಿ ಬಂತು
ಹಳೆಯ ಬಟ್ಟೆ ದೇಣಿಗೆ ವಗೈರೆ ಏನೆಲ್ಲಾ ಕೊಡಲು ಸಾಧ್ಯ ಕೊಡಿ
ಎಲ್ಲರನ್ನೂ ಸಂಭಾಳಿಸಿ ಕಳಿಸುವಾಗ ಸುಸ್ತೋ ಸುಸ್ತು
ಮತ್ತೆ ಎಫ್
. ಎಮ್ ರೈನ್ಬೋದಲ್ಲಿ ಹಾಡು ಬರುತ್ತಿತ್ತು
ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೇ....ಓ ಬಂತು ಶ್ರಾವಣ!

-------------

ಕಾವ್ಯ

ಶ್ರಾವಣದಿ ಒಂದು ಭಾನುವಾರದಲಿ ಪೂಜೆಯನು
ನಾವೆಣಿಸಿದಂತೆ ನಡೆಸಲು ಇಷ್ಟಪಟ್ಟು
ಆವರಣ ಗುಡಿಸಿ ಮನೆಯೆಲ್ಲವನು ಶುಚಿಗೊಳಿಸಿ
ಕಾರಣವ ಹೇಳಿ ಬಾಕಿ ಕೆಲಸಗಳ ನಿಲಿಸಿ

ಹೊತ್ತಾರೆ ಎದ್ದು ಕಾವ್ಯವ ಬರೆಯೆ ತಿಣುತಿಣುಕಿ
ಮತ್ತೆ ಮೂರೇ ಸಾಲು ಬರೆದು ಮುಗಿಸಿ
ನೆತ್ತಿಯಲಿ ಬರೆದಿರುವುದೇ ಇಷ್ಟು ಇರುವಾಗ
ಒತ್ತಿ ಮನವನು ಬರೆಯಲೇನದುಪಯೋಗ ?

ನೆರೆಮನೆಯ ನಾಯಿ ಬಾಯಿಗೆ ಬೀಗವೇ ಇಲ್ಲ
ಹೊರಮನೆಯ ರೇಡಿಯೋದಲಿ ಅಶ್ವತ್ಥ್ ಹಾಡು
ಇರುವ ಹಲವನು ಮರೆಸಿ ಬಂತು ಶ್ರಾವಣವೆಂಬ
ವರಕವಿಯ ಕಾವ್ಯವದು ಸಡಿಲಿಸಿತು ಮೂಡು!

ಕೆಳಮನೆಯ ಕಡೆಯಿಂದ ಕರಿದ ಮೀನಿನ ಕಮಟು
ಕಳವಳಿಸಿ ಕೇಳುವಿರೆ ನಮ್ಮ ಗೋಳುಗಳ ?
ಒಳಗೆ ಜಂಗಮವಾಣಿ ಮೊಳಗಿರಲು ಅಬ್ಬರದಿ
ಬೆಳಗಿನಲೇ ಹೊರ ಗಂಟೆಯುಲಿತ ಕೇಳಿದೆವು !

ಹೂವಮಾರುವ ಹುಡುಗಿ " ಆಮ್ಮಾ ಹೂವು" ಎನಲು
ಭಾವ ಭಯದಲಿ ಕಪ್ಪನೆ ಬೆಕ್ಕು ಹೆದರಿ
ಆವ ಗಂಡಾಂತರವೋ ಎಂದು ಮಿಯಾಂವ್ ಎನುತ
ಕಾವೇರಿ ತಲೆಗೆ ಓಡಿತ್ತು ಮೇಲ್ಮನೆಗೆ !

ಒಂಬತ್ತು ಮೊಳದ ಧೋತಿಯನುಟ್ಟ ಸುಬ್ಭಟ್ಟರ್
ಒಂಬತ್ತಕೂ ಮುನ್ನ ಮಡಿಯಾಗಿ ಬಂದ್ರು
ತುಂಬಿತ್ತು ಗೊಂದಲವು ತಲೆನೋವು ಮೈಭಾರ
ಎಂಬಕಾರಣ ಹೇಳಿ ಅಟ್ಟಿಬಿಡಲೇನು ?

ನೀರುಬಿಸಿ ಇದೆಯೆಂದಾಗ ಮಡದಿಯೆಡೆಗೋಗೊಟ್ಟೆ
ನಾರಿಮಣಿಯವಳಿಗೆದುರಾಡುವವನಲ್ಲ
ದಾರಿಯಲಿ ಕಾರೊಂದು ಬುರ್ರೆನಿಸಿ ನಿಂತಿತ್ತು
ಆರು ಬಂದಿರಬಹುದು ಈ ನಮ್ಮ ಮನೆಗೆ ?

ಬಹಳದಿನವಾಯಿತೆನ್ನುತ ನೋಡಬಂದವರ
ಗಹನವಾದರ್ಥದಲಿ ನೋಡಿ ಕುಳ್ಳಿರಿಸಿ
ಬಹರಿಲ್ಲ ಇನ್ಯಾರು ಎನುತ ಬಾಗಿಲ ಹಾಕೆ
ಬಹು ದೀನ ಸ್ವರದಲ್ಲಿ " ಸಾಬ್ " ಎಂದ ಗೂರ್ಖ !

ಹಾಲಿನವ ಬಂದ ದಿನಪತ್ರಿಕೆವಯನೂ ಬಂದ
ಕಾಲವಿದು ಕಾಸು ಯಾರಿಗೆ ಬೇಡ ಹೇಳಿ ?
ಬಾಲವಾಡಿಪ ನಾಯಿಯತೆರದಿ ಆ ಕಸದವನು
ಕಾಲೂರೆ ಬಕ್ಷೀಸು ಕೊಟ್ಟುಮುಗಿಸಿದೆನು

ಮನಕೆ ನೆಮ್ಮದಿಯಿಲ್ಲ ಪೂಜೆಗೆ ಮನಸಿಲ್ಲ
ಘನ ಶ್ರಾವಣದ ಕಾಲ ಮೂರ್ತ ಬಂದಿಹುದು
ಗುನುಗುನಿಸಿ ಮಂತ್ರಪಠಿಸುತಲಿದ್ದ ಭಟ್ಟರಿಗೆ
ಪುನರಪೀ ಜಂಗಮದ ವಾಣಿಗಳು ಮೊಳಗೆ !

"ಬನ್ನಿ ಭಟ್ಟರೆ ತಾವು ಸತ್ಯನಾರಾಯಣನ
ತನ್ನಿ ಮನೆಗೈತಂದು ಪೂಜೆ ತ್ವರಿತದಲಿ " !
ಮನ್ನಿಸುನೀ ಹೇ ಪ್ರಭುವೆ ಮಂಗಳಾರತಿಗೈವೆ
ಮುನ್ನ ಬಾಗಿಲ ಗಂಟೆ ಮತ್ತೆ ರಿಂಗಣಿಸೆ !

" ಅಮ್ಮಾ " ಎನುತಲಿದ್ದ ಯುರೇಕಾ ಫೋರ್ಬ್ಸಿನವ
"ಸುಮ್ಮನೇ ಹೋಗಯ್ಯ" ಎನುತಿರುವ ವೇಳೆ
ಚಿಮ್ಮಿ ಬಂದಾ ನಮ್ಮ ಎಲ್.ಐ.ಸಿ.ಗೋವಿಂದ
ಒಮ್ಮೆ ಕೂತಿರು ಪ್ರಸಾದಕೆ ಬ್ಯೂಸಿಯೆಂದೆ

ಎರಡೂ ಕಿವಿಗಳ ಮೇಲೆ ತುಳಸಿ ಸಿಂಬೆಯನಿಟ್ಟ
ಕರಡು ಪುಸ್ತಕ ಹಿಡಿದ ಕಪ್ಪು ಜನ ಬರಲು
ದೊರೆಸಾನಿ ಕೇಳಿರಲು ಬಂದವರ ಅಹವಾಲು
" ವರಶನೈಶ್ಚರನ ಸನ್ನಿಧಿಗೆ ದೇಣಿಗೆಯ " !

ಕೊಟ್ಟು ಹತ್ತು ರೂಪಾಯಿ ಭಕ್ತಿಯಲಿ ಕೈಮುಗಿದು
ಒಟ್ಟಿನಲಿ ಸಾಗಹಾಕಲು ಬೇಗನವರ
ಬಟ್ಟೆ-ಹಳೆಯದು ಮತ್ತು ದೇಣಿಗೆಯ ಪ್ರಾರ್ಥಿಸುತ
ಕಟ್ಟಕಡೆಯಲಿ ಕಂಡರನಾಥಾಶ್ರಮದವರು

ಎಲ್ಲರನೂ ತಕ್ಕಂತೆ ಉಪಚರಿಸಿ ಕಳಿಸುತ್ತ
ಒಲ್ಲೆನೆನ್ನುವ ಮನದಿ ಹರಿಯ ಧ್ಯಾನಿಸುತ
ಘಲ್ಲೆನುವ ಹಾಡಿನಾ ಹರಹು ಎಫ್.ಎಮ್. ರೈನ್ಬೋದಲಿ
ಅಲ್ಲಿ ಬಂದಿತು ಮತ್ತೆ "ಶ್ರಾವಣ..ಬಂತು " !

Monday, August 30, 2010

ಹಸಿರ ಅರಮನೆ


ಹಸಿರ ಅರಮನೆ

ಹಸಿರು ಕಾನನದ ನಡುವಿರುವ ಹಳೆ ಮನೆಯಲ್ಲಿ
ನಸುಬೆಳಕಿನಲಿ ಕುಳಿತು ಚಹ ಕುಡಿವ ಮನಕೆ
ಪಿಸುಮಾತನರಗಿಣಿಯು ಪಂಜರದಿ ಕೂಗಿರಲು
ಹೊಸ ಆಸೆ ಗರಿಗೆದರಿ ಹಾರತೊಡಗಿದೆನು

ಅಲ್ಲಿ ಜಂಜಡವಿಲ್ಲ ಜಡಹಿಡಿದ ಬದುಕಲ್ಲ
ನಲ್ಲಿ ನೀರಿಗೆ ಕಾಯ್ವ ನ್ಯೂನತೆಯು ಇಲ್ಲ
ಬಲ್ಲವರು ಬಹಳಿಹರು ಬದುಕ ತೋರಿಸುವುದಕೆ
ಸಲ್ಲದಾಮಿಷಗಳಾ ಗೊಡವೆ ಬಹದಲ್ಲ

ನೀರವದ ಇಳೆಯಲ್ಲಿ ಜುಳುಜುಳು ನಿನಾದಿಸುತ
ಆರೂರ ಸುತ್ತರಿವ ಬೆಳ್ನೊರೆಯ ತೊರೆಗಳ್
ಮೇರೆ ಮೀರಿದ ಸುಖದ ನೋಂಪಿಯದ ಭುಂಜಿಸಲು
ನೂರೆಂಟು ಸಂಗ್ತಿಗಳು ಕಣ್ಣ ತುಂಬುವವು

ಒತ್ತಡದ ದಿನವಿಲ್ಲ ಹತ್ತಿರದ ಒಡನಾಟ
ನೆತ್ತಿಯಲೆ ತುಂಬಿ ತೊನೆಯುವ ಹಣ್ಣು ಗಿಡಗಳ್
ಮತ್ತೆ ನೇಸರನ ಕಿರು ಕಿರು ನೋಟ ಕೆಲದಿನದಿ
ಒತ್ತಟ್ಟಿಗಿರುವರಲಿ ಹಬ್ಬದಾಚರಣೆ

ವಿದ್ಯುತ್ತು ಬೇಡೆಮಗೆ ನಾವೇ ತಯಾರಿಪೆವು
ಗದ್ಯ-ಪದ್ಯವನೋದೆ ಸಮಯ ಬಹಳಿಹುದು
ವಿದ್ಯೆಗಳ ಆಗರವು ಬದುಕನಾಲಂಗಿಸುತ
ಸಾದ್ಯಂತ ಸಂಸ್ಕೃತಿಯ ತವರು ನಮದಿಹುದು

ಬೆಳಗು ಬೈಗಿನ ವೇಳೆ ನಿತ್ಯವೂ ನಮಿಸುತ್ತ
ಉಳುಮೆಮಾಡುತ ಭೂಮಿ ಫಲವ ಪಡೆಯುವೆವು
ನಳನಳಿಸಿ ಬೆಳೆದಿರುವ ಹೂ ಗಿಡಗಳಂದದಲಿ
ಒಳಗೊಳಗೆ ಸಂತಸವು ತುಂಬಿ ಹರಿದಿಹುದು

Sunday, August 29, 2010

ಬೆಳೆಯದ ಪೈರು !!



ಬೆಳೆಯದ ಪೈರು
!!

[ ಹಳೆಯಬೇರು-ಹೊಸಚಿಗುರು ತತ್ವದ ಆಧಾರದಲ್ಲಿ, ಇಂಡಿಪಾಪ್ ವಿಧದಲ್ಲಿ ಗಿಟಾರ್ ಹಿಡಿದು ಹಾಡಿಕೊಳ್ಳಲು ಬರುವ ಹಾಡು, ಯಾವುದೇ ಗುರಿಯಿಲ್ಲದೇ ಎಲ್ಲವನ್ನೂ ಪ್ರಯತ್ನಿಸಿ ಮಾಡಲು ಹೊರಟು ವಿಫಲನಾದಾಗ ಏನಾಗುತ್ತದೆ ಎಂದು ತಿಳಿಸುತ್ತದೆ, ಸ್ವಲ್ಪಮಜಾ-ಸ್ವಲ್ಪ ಸಂದೇಶ, ೫೦-೫೦: ಕುಚ್ ಖಟ್ಟಾ- ಕುಚ್ ಮೀಠಾ, ಓದಿ ಎಂಜಾಯ್ ಮಾಡಿ !]


ಹತ್ತಾರು ಪೇಜು ಗೀಚಿ ಗೀಚಿ
ಹರಿದು ಬಿಟ್ಟೆನಾ
ಕುವೆಂಪುವಾಗೆ ಕವಿ ಬೇಂದ್ರೆಯಾಗೆ !
ಮತ್ತಾರು ಸೂತ್ರ ಹೆಣೆದು ಹೆಣೆದು
ಕೂತು ಬಿಟ್ಟೆನಾ
ವಿಜ್ಞಾನಿಯಾಗೆ ನಾಸಾಕ್ಕೆ ಹೋಗೆ !||ಪ||

ಬರಿ ಪಾತ್ರೆ ಏನದಿಲ್ಲ
ಬತ್ತಳಿಕೆ ಖಾಲಿ ಇದ್ಯಲ್ಲ
ಮತ್ತೇನುಮಾಡೆ ತೋಚದಾಗಿ
ಮಂಚಹಿಡಿದು ಮಲಗಿ ಬಿಟ್ಟೆನಾ ಟರಂಟ...ರಂಟ.. ಟರಂಟ ...ರಂಟ || ಅನು ಪ||

ಅತ್ತಿತ್ತ ನೋಡಿ ಕುಣಿದು ಕುಣಿದು
ಕುಸಿದು ಬಿಟ್ಟೆನಾ
ಜಾಕ್ಸನ್ನನಾಗೆ ಪ್ರಭುದೇವನಾಗೆ!
ಸುತ್ತುತ್ತ ಕೊಳಲ ಊದಿ ಊದಿ
ಕಾದು ಬಿಟ್ಟೆನಾ
ಗೋಡ್ಕಿಂಡಿ ಯಾಗೆ ಹರಿಪ್ರಸಾದರಾಗೆ !

ನಡುರಾತ್ರಿ ತಾಲೀಮಿನಲಿ
ನಡುಗಿತ್ತು ಭೂಮಿಯೆಲ್ಲ !
ಪಡಪೋಶಿ ನೀನು ಎಂದಘಳಿಗೆ
ಬೇಸರಾಗಿ ಕಂಡದಾರಿ ಹಿಡಿದುಬಿಟ್ಟೆನಾ ಟರಂಟ...ರಂಟ..
ಟರಂಟ...ರಂಟ ||೧||

ಕತ್ತೆತ್ತಿ ಬಿಡದೆ ಆಡಿ ಆಡಿ
ದಣಿದು ಬಿಟ್ಟೆನಾ
ರೆಹಮಾನನಾಗೆ ಮನೋಮೂರ್ತಿಯಾಗೆ !
ಒತ್ತಟ್ಟಿಗಿಷ್ಟು ಪ್ಯಾಂಟು ಶರ್ಟು
ತಂದು ಇಟ್ಟೆನಾ
ಅಮಿತಾಭನಾಗೆ ಅಮೀರ್ಖಾನನಾಗೆ !

ಸಂಗೀತ ನಟನೆಗಳಲಿ
ಒಟ್ಟಾಯ್ಸಿ ತಿಳಿಯಲಿಲ್ಲ
ಮಂಗಣ್ಣ ನೀನು ಮನೆಗೆ ಹೋಗು
ಎಂದವೇಳೆ ಚಪ್ಲಿಬಿಟ್ಟು ಓಡಿಹೋದೆನಾ ಟರಂಟ..ರಂಟ ಟರಂಟ.. ರಂಟ ||೨||

ಹೊತ್ತಗೆಯ ತೆರೆದು ಓದಿ ಓದಿ
ಕೂಚು ಬಟ್ಟನಾ
ವೈದ್ಯನಾಗೆ ತಂತ್ರಜ್ಞಾನಿಯಾಗೆ !
ಇಪ್ಪತ್ತು ಸರ್ತಿ ನಿಂತು ನಿಂತು
ಬಿದ್ದುಬಿಟ್ಟೆನಾ
ಮಂತ್ರಿಯಾಗೆ ಪ್ರಧಾನಿಯಾಗೆ !

ಓದಿದ್ದು ಹತ್ತಲಿಲ್ಲ
ಇಪ್ಪತ್ತು ಕೋಟಿಯಿಲ್ಲ
ನೀ ವೇಸ್ಟು ಎನಲು ಸೋತಮುಖವ
ಸಣ್ಣಗಾಗಿ ಹೊತ್ತುಬಿಟ್ಟೆನಾ ಟರಂಟ... ರಂಟ ಟರಂಟ... ರಂಟ || ೩ ||

ಉತ್ತುತ್ತ ಹೊಲವ ಬಿತ್ತು ಬಿತ್ತು
ಬೆಳೆಯದಾದೆ ನಾ
ರೈತನಾಗೆ ಅನ್ನಬೇಗೆ ನೀಗೆ !
ಹತ್ತೇರಿ ಮೇಲೆ ಹೋಗಿ ಹೋಗಿ
ತಪವಗೈಯ್ಯದಾದೆ ನಾ
ಸ್ವಾಮಿರಾಮನಾಗೆ ವಿಶ್ವಾಮಿತ್ರನಾಗೆ !

ಹುತ್ತದೊಳಗೆ ಇರುವ ಹಾವು
ಮತ್ತೇರಿ ಮರೆತು ಮೆರೆದು
ನೆತ್ತಿ ಹಿಡಿದು ಕತ್ತಲಾಗೆ
ಅತ್ತುಕರೆದು ಸತ್ತುಹೋದೆನಾ ಟರಂಟ.. ರಂಟ ಟರಂಟ... ರಂಟ || ೪ ||

Saturday, August 28, 2010

ಬಸವನ ಪಾಲು !!


ಬಸವನ ಪಾಲು !!

ಸುಬ್ರಹ್ಮಣ್ಯನನ್ನು ಕಂಡ್ರೆ ನನಗೆ ಅಷ್ಟಕ್ಕಷ್ಟೇ ಆಗಿಬಿಟ್ಟಿತ್ತು. ಆಗೆಲ್ಲ ಮತ್ತೆಮತ್ತೆ ನಾವು ಶಾಲೆಗಳಲ್ಲಿ ಟೂ ಬಿಡುತ್ತಿದ್ದೆವು. ಟೂ ಬಿಡುವಾಗ ತೋರುಬೆರಳು ಮತ್ತು ಮಧ್ಯಬೆರಳುಗಳ ತುದಿಯನ್ನು ಪರಸ್ಪರ ಸೇರಿಸಿ ಒಬ್ಬ ಹಿಡುಕೊಳ್ಳುವುದು ಇನ್ನೊಬ್ಬ ಆತನ ತೋರುಬೆರಳನ್ನು ಹಾಗೆ ಸೇರಿಸಿ ಉಂಟಾದ ಸಂದಿನಲ್ಲಿ ಹಾಕಿ ಎಳೆಯುವುದು. ಒಂದೊಮ್ಮೆ ಹಾಗೆ ತೋರುಬೆರಳನ್ನು ತೂರಿಸಿ ಎಳೆಯುವ ಬದಲು ಎರಡೂ ಬೆರಳನ್ನು ಒತ್ತಿ ಹಿಡಿದರೆ ಅದು ಮತ್ತೆ ದೋಸ್ತಿ ಅಂತರ್ಥವಾಗಿತ್ತು. ಮಕ್ಕಳಾದ ನಮ್ಮ ಮನಸ್ಸಿಗೆ ಏನಾದರೂ ಚಿಕ್ಕಪುಟ್ಟ ಅಡತಡೆಬಂದರೂ ಅದನ್ನು ಬಗೆಹರಿಸಿಕೊಳ್ಳಲು ಸುಲಭದ ಉಪಾಯ ಟೂ ಬಿಟ್ಟು ಚಡಪಡಿಸುವಂತೇ ಮಾಡುವುದು ಇಲ್ಲಾ ರಾಜಿಸೂತ್ರದಿಂದ ಏನಾದರೂ ಸುಖವಿದ್ದರೆ ದೋಸ್ತಿ ಪುನರುಜ್ಜೀವನಗೊಳಿಸುವುದು ನಮ್ಮ ನಿತ್ಯ ಕೈಂಕರ್ಯ!

ಟೂ ಬಿಟ್ಟಾಗ ನಾವು ಪಾಂಡವ ಕೌರವರಂತೇ ಆಗುತ್ತಿದ್ದೆವು! ನಮ್ಮ ಮಧ್ಯೆ ಕೃಷ್ಣ ಮತ್ತು ಶಕುನಿಯಂತಹ ಹಲವಾರು ಪಾತ್ರಗಳು ಕೆಲಸಮಾಡುತ್ತಿದ್ದವು. ಕಾಲಾನುಸಾರ ನಮ್ಮ ಚೆಡ್ಡಿಯ ಕಿಸೆ[ಜೇಬು]ಯಲ್ಲಿ ಇದ್ದ ಸುಟ್ಟ ಹುಳಿಸೇ ಬೀಜ, ಮಾವಿನ ಮಿಡಿ, ಚಕ್ಕುಲಿತುಂಡು, ಬಿಂಬಲಕಾಯಿ, ನೆಲ್ಲಿಕಾಯಿ, ಸುಟ್ಟ ಗೇರುಬೀಜ ಮುಂತಾದುವುಗಳನ್ನು ಆಗಾಗ ನಮ್ಮಿಂದ ಸಲ್ಸಲ್ಪ ಪಡೆದು ತಿಂದ ಒಬ್ಬಿಬ್ಬರು ಆಶ್ರಯವಿತ್ತ ಕೌರವನನ್ನು ಕರ್ಣ ಗೌರವಿಸಿದಂತೇ ಬಹಳ ಗೌರವದಿಂದ ಕಾಣುತ್ತಿದ್ದರು. ಅವರು ಹೇಗಿದ್ದರೂ ನಮ್ಮ ಪಕ್ಷಎಂಬುದು ನಮಗೆ ತಿಳಿದೇ ಇರುತ್ತಿತ್ತು. ಅದೂ ಕಾಲದಲ್ಲಿ ನಮ್ಮೂರಲ್ಲಿ ಯಕ್ಷಗಾನಗಳಲ್ಲಿ ರಾಮಾಯಣ-ಮಹಾಭಾರತದಕಥೆಗಳನ್ನು ನಾವು ನೋಡುತ್ತಿದ್ದುದರಿಂದ ನಮಗೆ ಬಹುತೇಕ ಕಥೆಗಳು ಮನದಲ್ಲಿ ಚಿತ್ರಿತವಾಗುತ್ತಿದ್ದವು. ಇಂತಹ ಮಹತ್ಕಾರ್ಯಮಾಡುವ ಯಕ್ಷಗಾನಕ್ಕೆ ಒಮ್ಮೆ ನಮ್ಮ ಜೈ ಹೋ ಸಲ್ಲಿಸೋಣ. ನಮ್ಮಲ್ಲಿ ನಾವು ಆಗದವರಿಗೆ ಕೆಲವು ಹೆಸರುಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿತ್ತು. ಕೆಪ್ಪಸೀನ, ಶಾಸ್ತ್ರಿ, ಅವಲಕ್ಕಿ-ಮೊಸರು, ಮಾಯ್ನಗೊರಟೆ, ಗೆರಟೆ[ಕರಟ], ಆಟ್ಮಾಣಿ, ಕನಕಾಂಗಿ.....ಹೀಗೇ ತರಾವರಿ ಹೆಸರುಗಳು ಅವರವರ ಅಂದಿನ ವ್ಯಕ್ತಿತ್ವಾನುಸಾರ ಕೊಡಲ್ಪಡುತ್ತಿದ್ದವು. ನಿಷೇಧಾಜ್ಞೆಯನ್ನು ಮರಳಿ ಪಡೆದಂತೆ ರಾಜಿಯಾದಮೇಲೆ ಹೆಸರುಗಳನ್ನು ಅಳಿಸಿಹಾಕಲಾಗುತ್ತಿತ್ತು ಮತ್ತು ಇನ್ನು ಮುಂದೆ ಯಾರೂ ಅಂತಹ ಹೆಸರನ್ನು ಆತನಿಗೆ ಇಟ್ಟುಕರೆಯಬಾರದು ಎಂಬುದಾಗಿ ಸಭೆಕರೆದು ಹೇಳುತ್ತಿದ್ದೆವು.

ಸಭೆ ಎಂದುಬಿಟ್ಟರೆ ಸುಮ್ಮನೇ ಏನೋ ಅಂತ ತಿಳಿಯಬೇಡಿ! ಇಂದಿನ ವಿಧಾನಸೌಧದಲ್ಲಿ ನಡೆಯುವ ಶಾಸಕಾಂಗ ಸಭೆಗಾದ್ರೂಶಿಸ್ತಿಲ್ಲದೇ ಇರಬಹುದು ನಮ್ಮಲ್ಲಿನ ಸಭೆಗೆ ಮಾತ್ರ ಬಹಳ ಶಿಸ್ತು,ಬಹಳ ನಿಯಮ. ಬಹುಶಃ ಸಮಯಪಾಲನೆ ಭಾರತದಲ್ಲಿ ಸರಿಯಾಗಿ ನಡೆಯುತ್ತಿದ್ದಿದ್ದರೆ ಅದು ನಮ್ಮ ಅಂದಿನ ಸಭೆಗಳಲ್ಲೂ ಬಹಳ ಅಚ್ಚುಕಟ್ಟಾಗಿ ಇತ್ತು. ಗುಣ ಸ್ವಭಾವಗಳಲ್ಲಿ ಸ್ವಲ್ಪ ವರ್ಚಸ್ಸನ್ನು ಬೀರುವವ್ಯಕ್ತಿ[ಹುಡುಗ] ಸಭೆಗಳಿಗೆ ಅಘೋಷಿತ ಅಧ್ಯಕ್ಷನಾಗುತ್ತಿದ್ದ. ಅಧ್ಯಕ್ಷರಿಗೆ ಮರದ ಕೆಳಗಿನ ಅಗಲ ಕಲ್ಲಿನ ಬೆಂಚು ಅಥವಾ ದೇವಸ್ಥಾನದ ಪೌಳಿಯ ಒಂದು ಎತ್ತರದ ಭಾಗ ಕುಳಿತುಕೊಳ್ಳುವ ಆಸನವಾಗಿ ಪರಿಣಮಿಸುತ್ತಿತ್ತು. ನಂತರ ಮಕ್ಕಳ ಗುಂಪಿನಲ್ಲೇಒಬ್ಬ ಬಂದು ಅಲ್ಲಿಯವರೆಗಿನ ಆಗುಹೋಗುಗಳನ್ನು ಅಧ್ಯಕ್ಷರ ಸಮಕ್ಷಮ ಮಿಕ್ಕುಳಿದ ಎಲ್ಲಾ ಮಕ್ಕಳಿಗೆ ತಿಳಿಯುವಂತೆ ಹೇಳುತ್ತಿದ್ದ. ಕೆಲವೊಂದು ವಿಚಾರಗಳಲ್ಲಿ ಅಧ್ಯಕ್ಷರು ತಾನೇ ನಿರ್ಧಾರ ತೆಗೆದುಕೊಂಡರೂ ಇನ್ನು ಕೆಲವು ಸನ್ನಿವೇಶಗಳಲ್ಲಿ ಎಲ್ಲಾ ಮಕ್ಕಳನ್ನೂಕೇಳಿ ಆಮೇಲೆ ಬಹುಮತ ಬಂದದ್ದನ್ನು ತೀರ್ಮಾನವೆಂದು ಪ್ರಕಟಿಸುವ ಪ್ರಜಾಪ್ರಭುತ್ವವಿತ್ತು! ಅಕಸ್ಮಾತ್ ಯಾರಾದರೊಬ್ಬ ತಪ್ಪುಮಾಡಿ, ಹೇಳಿದರೂ ಸುಧಾರಿಸಿಕೊಳ್ಳಲಿಲ್ಲ ಎಂದಾದಲ್ಲಿ ಅಂದು ಮಕ್ಕಳ ಗುಂಪಿನಿಂದ ಆತನನ್ನು ಹೊರಹಾಕಲಾಗುತ್ತಿತ್ತು. ಮುಖಗರಿದ ಬೆಕ್ಕಿನ ಥರ ಸಣ್ಣಗೆ ಮನಸ್ಸಲ್ಲೇ ಕುರುಗುಡುತ್ತ ಆತ ನಿಧಾನವಾಗಿ ಭಾರವಾದ ಹೆಜ್ಜೆಗಳೊಂದಿಗೆ ಮನೆಗೆ ಮರಳುತ್ತಿದ್ದ. ಪ್ರಾಯಶಃ ಅಂದು ಮನೆಯಲ್ಲಿ ಆತ ಊಟವನ್ನೂ ಸೇವಿಸದೇ ಹಾಗೇ ಮಲಗುತ್ತಿದ್ದನೋ ಏನೋ ಅರಿವಿಲ್ಲ. ಆಮೇಲೆ ದಿನವೊಪ್ಪತ್ತು ತಡೆದು ತಾನಿನ್ನು ತಪ್ಪುಮಾಡುವುದಿಲ್ಲ ಎಂದುಕೃಷ್ಣ ಮುಖಾಂತರ ಹೇಳಿಕಳಿಸಿದ್ದು ಅಧ್ಯಕ್ಷರ ಕಿವಿಗೆ ಬಿದ್ದಮೇಲೆ ಮರುಪಂಚಾಯತಿ ಕರೆದು ಪುನಃ ನಮ್ಮ ಪಕ್ಷದ ನೀತಿ-ನಿಯಮಗಳನ್ನೂ, ರೀತಿ-ರಿವಾಜುಗಳನ್ನೂ ಒಪ್ಪಿಕೊಂಡರೆ ಮಾತ್ರ ಪ್ರಾಥಮಿಕ ಸದಸ್ಯತ್ವ ಲಭಿಸುತ್ತಿತ್ತು!

ನಾವು ಆಡದ ಆಟಗಳೇ ಇಲ್ಲ ಸ್ವಾಮೀ! ಕಬಡ್ಡಿ[ಸುರಗುದ್ದು], ಖೋ ಖೋ, ಸಂಗೀತಖುರ್ಚಿ, ಹಾಣೆಗೆಂಡೆ[ಚಿನ್ನಿ-ದಾಂಡು]ಕುಂಟ್ಲಿಪಿ[ಚೌಕಾಬಾರ್], ಚನ್ನೆಮಣೆ, ಮರಕೋತಿ, ಕಳ್ಳ-ಪೋಲೀಸ್, ಕಣ್ಣಾಮುಚ್ಚಾಲೆ, ಕಿವ್ರ್ ಬಿಟ್ ಕಿವ್ರ್ಯಾರು ?, ಕೇರಮ್ಮು, ಲಗೋರಿ .....ಒಂದೇ ಎರಡೇ ನೀವೆಣಿಸಿರಬಹುದು ಹಳ್ಳಿಗಳಲ್ಲಿ ಆಟವೇ ಇಲ್ಲ ಅಂತ, ಆದ್ರೆ ಗ್ರಾಮೀಣ ಕ್ರೀಡೆಗಳಷ್ಟು ಖುಷಿತರುವ ಕ್ರೀಡೆಗಳು ಪಟ್ಟಣಗಳಲ್ಲಿಲ್ಲ! ಆಡಿ ಬೇಜಾರಾದಾಗ ನಾಟಕ, ಯಕ್ಷಗಾನದ ತಾಲೀಮು ಮಾಡಿಕೊಂಡು ಕೆಲವಾರುದಿನಗಳ ಅಂತರದಲ್ಲಿ ಬಹಳ ದೊಡ್ಡಪ್ರಮಾಣದಲ್ಲಿ ಅದನ್ನು ಪ್ರಯೋಗಿಸುತ್ತಿದ್ದೆವು;ನಾವೇ ವೀಕ್ಷಕರು, ನಾವೇ ಪ್ರೇಕ್ಷಕರು, ನಾವೇಪ್ರಾಯೋಜಕರು ಆಯೋಜಕರು ಎಲ್ಲಾ! ಇವತ್ತು ಬೆಂಗಳೂರಿಂತಹ ನಗರಗಳಲ್ಲಿ ಸಾವಿರ ಸಾವಿರ ಖರ್ಚುಮಾಡಿ ಮಾಡಿದರೂ ನಿಜವಾದ ರಂಗೇರಿಸದ ಅಸಾಧ್ಯನಭೂತೋ ನಭವಿಷ್ಯತಿಎನಿಸುವ ಪಾತ್ರಗಳಲ್ಲಿ ಮಿಂಚಿದ ನಾನೇ ಬರೆಯುತ್ತಿದ್ದೇನೆಏನಂದುಕೊಂಡಿದ್ದೀರಿ ನೀವು?! ವಲಲ, ವಿಕ್ರಮಾದಿತ್ಯ, ಬಲಿಚಕ್ರವರ್ತಿ, ಎಂತೆಂತಹ ರಸವತ್ತಾದ ಪಾತ್ರಗಳವು, ನಾನುಏನನ್ನಾದರೂ ಮರೆತೇನು ಅವನ್ನು ಮರೆಯಲು ಸಾಧ್ಯವೇ ಇಲ್ಲ! ಸೈರಂಧ್ರಿಯನ್ನು ಸಮಾಧಾನಿಸುವ ವಲಲನ ಕೋಪ ಉಕ್ಕೇರಿದಾಗ ಅಕಟಕಟಾ ಎಲವೋ ಕೀಚಕಾ ನಿಲ್ಲು ಮಾಡಿಸುತ್ತೇನೆ........ಸ್ವಲ್ಪ ಇರಿ, ಇಲ್ಲಿ ಕೀಬೋರ್ಡೇ ಒಡೆದು ಹೋಯಿತೋ ಏನೋ ಪರೀಕ್ಷಿಸುತ್ತೇನೆ! ಪಾತ್ರಮುಗಿಸಿದ ಬಹುದಿನಗಳ ಕಾಲ ಪಾತ್ರದ ಪ್ರಭಾವ ಅಥವಾ ಭಾವಾವೇಶ ನಮ್ಮಲ್ಲೇ ಹುದುಗಿರುತ್ತಿತ್ತು. ಸುತ್ತಲು ಸೇರುವ ನಮ್ಮ ಮಿತ್ರರಲ್ಲಿ ಎಲ್ಲರೂ ಅಂತಹ ಪಾತ್ರವನ್ನು ಮಾಡಲು ಇಷ್ಟಪಡುತ್ತಿದ್ದರು ಆದರೆ ಹೇಗೆ ಪಾತ್ರಪೋಷಣೆಮಾಡಬೇಕೆಂದು ತಿಳಿಯದೇ ಅಂತಹ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹೀಗಾಗಿ ನನಗೇ ಅಂತ ಮೀಸಲಿಡುವಪಾತ್ರಗಳೇ ಇದ್ದವು. ಪಾತ್ರಮಾಡಿದ್ದನ್ನು ನೋಡಿದವರು ಕೆಲವರೇ ಆದರೂ " ಅಬ್ಬಾ ವಿ.ಆರ್.ಭಟ್ ಹ್ಯಾಂಗ್ ಮಾಡ್ತಾಮಾರಾಯ " ಎಂದು ನನಗೆ ಕೇಳಿಸುವಂತೇ ಇತರಮಕ್ಕಳಿಗೆ ಹೇಳಿ ಪರೋಕ್ಷ ನನ್ನಿಂದ ಸಿಗಬಹುದಾದ ಯಾವುದೋ ಸಹಾಯಕ್ಕೆ ಪೀಠಿಕೆಹಾಕಿಕೊಳ್ಳುತ್ತಿದ್ದರು. ಹೀಗೇ ಮೊದಲಿನಿಂದಲೂ ನಾವು ಕಲಾವಿದರೆನ್ನಿಸಿ ಪಾತ್ರಮಾಡಿ ಮುಗಿಸಿಬಿಟ್ಟಿದ್ದೇವೆ, ಈಗ ಅದನ್ನುಬರೆಯುವುದು ಮಾತ್ರ ಉಳಿದಿದೆ!

ನಮಗೆ ಶ್ರೀಕೃಷ್ಣ, ಗಣೆಶ ಎಲ್ಲಾ ದೇವರುಗಳು ಬಹಳ ಪ್ರೀತಿ. ಅವರ ಇರುವಿಕೆಯಿಂದ, ಬರುವಿಕೆಯಿಂದ ನಮಗೊಂದಷ್ಟು ಅವರ 'ಪ್ರಸಾದಕೆಲವು ದಿನ ಸಿಗುತ್ತಿತ್ತು. ತರತರದ ಉಂಡೆಗಳು, ಚಕ್ಕುಲಿ, ಮೋದಕ ಇವೇ ಮೊದಲಾದವು ನಮ್ಮ ಕಿಸೆಯಲ್ಲಿ ತಿಂಗಳೊಪ್ಪತ್ತು ಸದಾ ಸಿಗುವಂತಹ ತಿನಿಸುಗಳು. ಕಿಸೆಯೆಲ್ಲ ಎಣ್ಣೆಮಯವಾಗಿ ಬಿಸಿನೀರಲ್ಲಿ ಅದ್ದಿ ತೊಳೆದು ಹಾಕಿದ ಮೇಲೂ ಜಿಡ್ಡುಹೋಗದೇ ಬಿಳಿಯ ಗಡ್ಡಬರುವಷ್ಟರ ಮಟ್ಟಿಗೆ ನಮ್ಮ ಚಡ್ಡಿ ಕಿಸೆಗಳು ಎಣ್ಣೆಪ್ರಿಯವಾಗಿದ್ದವು! ಕೆಲವೊಮ್ಮೆ ಅಲ್ಲಲ್ಲೇ ತೂತುಬಿದ್ದು ನಮಗೆ ನಷ್ಟವಾಗುವ ಸಂಭವನೀಯತೆ ಕೂಡ ಇತ್ತು. ಹಾಗೊಮ್ಮೆ ನಷ್ಟವಾದ ಸಮಯದಲ್ಲಿ ಬೇರೆ ಮಕ್ಕಳಿಂದ ಮಮೂಲಿ ಪಡೆದು ನಷ್ಟಭರ್ತಿಯಾಗುತ್ತಿತ್ತು! ಇಲ್ಲಿ ಅನೇಕಬಾರಿ ನೀನನಗಾದರೆ ನಾನಿನಗೆ ಎಂಬ ಪ್ರಿನ್ಸಿಪಲ್ಲು ವರ್ಕ್ ಆಗುತ್ತಿತ್ತು. ಉಂಡೆಗಳ ಸಂಖ್ಯೆಕಡಿಮೆಯಿದ್ದಾಗ ಯಥಾವತ್ ಕಾಗೆ ಎಂಜಲು[ಗುಬ್ಬಿ ಎಂಜಲು]ಇತ್ಯಾದಿ ಸಮೀಕರಣ ಬಳಸುತ್ತಿದ್ದೆವು. ಹೀಗಾಗಿ ಚಕ್ಕುಲಿ ಕೋಡುಬಳೆ ನೀಡುವ ಗಣಪ ಮತ್ತು ಕೃಷ್ಣ ನಮ್ಮಂತೆಯೇ ಮೊದಲು ತಿಂದುನೀವು ಇಂಥಾದ್ದನ್ನೇ ಮಾಡಿ ಮಕ್ಕಳಿಗೆ ಕೊಡಿಎಂದು ಹರಸಿಹೋಗಿದ್ದು ಪ್ರತೀವರ್ಷಮರಳಿ ಮರಳಿ ಬಂದು ನಮಗೆ ಹರುಷ ತರುತ್ತಿದ್ದರು. ನಮಗೆ ಪೂಜೆಗಳ ಜೊತೆಜೊತೆಗೇ ಎದುರಿಗಿಡುವ ನೈವೇದ್ಯದ ಕಾಯಸ್ಸುಜಾಸ್ತಿ! ಇಂಥಿಂಥಾ ಒಳ್ಳೆಯ ನೈವೇದ್ಯ ಕೊಡುವ ಇಬ್ಬರು ದೇವರು ಸದಾ ಸುಖವಾಗಿರಲಿ, || ತಿಂಡಿದಾತಾ ಸುಖೀಭವ ||

ಕಾರ್ತೀಕಮಾಸದಲ್ಲಿ ದೇವಸ್ಥಾನಗಳಲ್ಲಿ ದೀಪೋತ್ಸವ ಅಥವಾ ದೀಪಾರಾಧನೆ ಯಾನೇ ಕಾರ್ತೀಕ ನಡೆಯುತ್ತಿತ್ತಲ್ಲ ಆಗೆಲ್ಲಈಗಲೂ] ದೇವರ ಮುಂದೆ ಅಷ್ಟು ದೂರದಲ್ಲಿ ಇರುವ ದೇವರ ವಾಹನಗಳ ಮುಂದೆ ಪನವಾರಕ್ಕೆ ಮಾಡಿದ ಪದಾರ್ಥಗಳನ್ನು ಒಂದಷ್ಟು ಬಾಳೆಲೆಯಲ್ಲಿ ಹಾಕಿಡುತ್ತಿದ್ದರು. ವಿಷ್ಣುವಿನ ದೇವಸ್ಥಾನವಾದರೆ ಗರುಡನ ಮುಂದೆ ಈಶ್ವರನ ದೇವಾಲಯವಾದರೆ ನಂದಿಯ[ಬಸವ]ಮುಂದೆ ಹಾಗೆ ನೈವೇದ್ಯ ಇರಿಸುತ್ತಿದ್ದರು. ಕಾರ್ತೀಕಮಾಸದಲ್ಲಿ 'ಅಧ್ಯಕ್ಷರೂ' ಸೇರಿದಂತೆ ಇಡೀ ಮಕ್ಕಳ ಸಮಿತಿಅಲ್ಲಿಯೇ ಇರುತ್ತಿತ್ತು. ಯಾರಾದರೂ ಬರಲಿಲ್ಲ ಅಂದರೆ ಒಂದೋ ಹುಷಾರಿಲ್ಲ ಇಲ್ಲಾ ಅಜ್ಜನಮನೆಗೋ ಎಲ್ಲೋ ಹೋಗಿದ್ದಾರೆಎಂದರ್ಥ. ಹಾಗೆ ಹೋದ ಮಕ್ಕಳು ದೀಪೋತ್ಸವ ತಪ್ಪಿಹೋಗಿದ್ದಕ್ಕೆ ಮರುಗುತ್ತಿದ್ದರು. ದೀಪೋತ್ಸವದಲ್ಲಿ ಹಣತೆ ಹಚ್ಚುವುದೊಂದು ಖುಷಿಯಾದರೆ ಕೆಲವರು [ದೀಪೋತ್ಸವ ನಡೆಸುವ ಯಜಮಾನರು] ಪಟಾಕಿಗಳನ್ನೂ ತರುತ್ತಿದ್ದರು. ನಮಗೆ ಅದರಲ್ಲೂ ಚೂರುಪಾರು ಪಾಲಿಗೆ ಬರುತ್ತಿತ್ತು. ಅದನ್ನು ಸಿಡಿಸಿದಾಗ ಮನದಲ್ಲಿ ಬ್ರಹ್ಮಾನಂದ! ಅಂತೂ ಎಲ್ಲೂ ನಾವು ಸುಮ್ಮನೇ ಕುಳಿತವರಲ್ಲ! ದೇವಸ್ಥಾನಗಳಲ್ಲಿ ದೇವರು ಯಾಕೆ ವಾಹನವನ್ನು ಮುಂದೆ ನಿಲ್ಲಿಸಿದ್ದಾನೆ ಗೊತ್ತೇ ? ಪಾಪ ನಮ್ಮಂತಹ ಮಕ್ಕಳು ಗರ್ಭಗುಡಿಗೇ ನುಗ್ಗಿ ಅವನ ತಿಂಡಿಯನ್ನೇ ಕದ್ದರೆ ಕಷ್ಟ ಹೀಗಾಗಿ ವಾಹನದವರು ಏನಾದ್ರೂ ಮಾಡಿಕೊಳ್ಳಲಿ ಅಂತ ಇರಬೇಕು ಎಂಬುದು ಇಂದು ನಮಗೆ ಹೊಳೆದ ವಿಷಯ! ಏನೂ ಇರಲಿ ದೇವರು ವಿಷಯದಲ್ಲೂ ದೊಡ್ಡವನೇ: ನಮ್ಮಂತಹ ಮಕ್ಕಳಿಗೆ ಏನಾದ್ರೂ ಸ್ವಲ್ಪ ಸಿಗಲಿ ಎನ್ನುವ ಉದ್ದೇಶವನ್ನು ಇಟ್ಟುಕೊಂಡೇ ಮಾತಾಡದ ತನ್ನ ವಾಹನವನ್ನು ಎದುರಿಗೆ ಬಿಟ್ಟಿದ್ದಾನೆ.

ಇಂತಹ ವಾಹನಗಳ ಎದುರಿಗೆ ಇಡುವ ನೈವೇದ್ಯ ಅದು ನಮ್ಮ ಪಾಲಿಗೆ ಸಿಗುವ ಬೋನಸ್ಸು ! ನಮ್ಮಲ್ಲೇ ಕೆಲವೊಮ್ಮೆ ಮೊದಲುಹೇಳಿದ ಟೂ ಬಿಡುವ ವ್ಯಾಪಾರ ಎರಡು ಪಂಗಡಗಳಾಗಿಬಿಟ್ಟರೆ ಅಲ್ಲಿ ಸ್ವಲ್ಪ ಸಮಸ್ಯೆ ಕಾಡುತ್ತದೆ. ಸಿಗುವ ಬೋನಸ್ಸನ್ನು ಯಾರುಪಡೆಯಬೇಕು ಎಂಬುದಾಗಿ. ಹೀಗೇ ನಮ್ಮ ಈಶ್ವರ ದೇವಸ್ಥಾನದಲ್ಲಿ ಅರ್ಚಕರ ಮಗನೊಬ್ಬನಿದ್ದ. ನಮ್ಮ ಓರಗೆಯವನೇ ಅನ್ನಿ. ಆತಬೆಕ್ಕುಗಳಿಗೆ ಮಂಗ ಬೆಣ್ಣೆ ತೂಕ ಮಾಡಿಕೊಟ್ಟಂತೇ ತಾನು ಪಾಲು ಹಂಚಲು ಬರುತ್ತಿದ್ದ. ಬಂದಾತ ಪಾಲಿನಲ್ಲಿ ಅರ್ಧಕ್ಕಿಂತ ಹೆಚ್ಚುತಾನೇ ಎತ್ತಿಟ್ಟುಕೊಂಡು ಮಿಕ್ಕುಳಿದದ್ದನ್ನು ಕೊಡುತ್ತಿದ್ದ. ಇದು ಯಾವ ನ್ಯಾಯ ಹೇಳಿ. ಅದಕ್ಕೇ ನಾವು ಬಹಳ ಉಪಾಯ ಮಾಡಿ ಬಸವನ ಪಾಲನ್ನು ಆತನಿಗೆ ತಿಳಿಯದ ಹಾಗೇ 'ಹೊಡೆಯಲು' ಪ್ರಯತ್ನಿಸಿದೆವು. ಮೊದಲು ಎಲ್ಲರೂ ಟೂ ಬಿಡುವುದನ್ನು ಕಮ್ಮಿಮಾಡಿಕೊಂಡು ನಮ್ಮಲ್ಲೇ ಒಗ್ಗಟ್ಟು ಸಾಧಿಸಿಕೊಂಡೆವು. ನಂತರ ದೀಪೋತ್ಸವದ ಮಂಗಳಾರತಿ ಮುಗಿದು ಅರ್ಚಕರು ಪ್ರಸಾದವನ್ನು ಹೊರ ತರುವಷ್ಟರಲ್ಲಿ ಬಸವನ ಪಾಲು ನಾಪತ್ತೆಮಾಡಲು ಪ್ರಯತ್ನಿಸಿದೆವು. ವರ್ಕ್ ಔಟ್ ಆಯಿತು. ಅರ್ಚಕರಿಗೆ ಹೇರಳವಾಗಿ ಪ್ರಸಾದ ಕೊಡುತ್ತಿದ್ದುದರಿಂದ ಮಗನಿಗೆ ಅಲ್ಲಿ ಸಿಕ್ಕೇ ಸಿಗುತ್ತಿತ್ತು. ಆದರೂ ಬಡಪಾಯಿಗಳಾದ ನಮ್ಮ ಪಾಲನ್ನು ಆತ ಪಾಲುಹಂಚಲು ಪಡೆವ ಕಮಿಶನ್ ಜಾಸ್ತಿಯಾಗಿತ್ತು. ಅದಕ್ಕೇ ಅನ್ನುವುದು ಒಗ್ಗಟ್ಟಿನಲ್ಲಿ ಬಲವಿದೆ, ಇದನ್ನು ನಾವು ಬಸವನ ಪಾಲಿನ ಮುಖಾಂತರ ಸಾಕ್ಷೀಕರಿಸಿದ್ದೇವೆ! ಕೋಪಬಂದರೆ " ಬಸವನ ಪಾಲು ತಿಂದವ್ರೇ " ಅಂತ ಬೈಬೇಡಿ-ನಾವು ಬಹಳ ಜನ ಇದ್ದೇವೆ ಹುಷಾರು ಹಾಂ, ನಿಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ ಹೇಳಿಬಸವನ ಪಾಲಿಗೆ ವ್ಯವಸ್ಥೆಮಾಡೋಣ,ಹೋಗಿ ಬರಲೇ ? ನಮಸ್ಕಾರ.

Friday, August 27, 2010

ಪರಿಹಾರ


ಪರಿಹಾರ

ಪರಿಹಾರ ಬಯಸುವನೇ ನಿನ್ನ ಸಮಸ್ಯೆಗಳ
ಸರಿಯಾಗಿ ತೆರೆದು ಬೇರ್ಪಡಿಸು ಮನದಿ
ಹರವಾದ ಎದೆಯಲ್ಲೇ ಪರತತ್ವ ಅಡಗಿಹುದು
ಗುರುತು ಹಿಡಿ ಅನುಗಾಲ ನೆನೆಸುತ ವಿಧಿ

ಇಡಿಯ ವಿಶ್ವದ ತುಂಬಾ ಕೋಟಿಕೋಟಿಯ ಜನರು
ಒಡಲಾಳ ಹೊತ್ತುರಿಯೆ ಯಾರು ಬಹರಿಲ್ಲಿ !
ಅಡಿಗಡಿಗೆ ಸಂತಸದ ಪಕ್ವಾನ್ನ ನೀ ಬಡಿಸೆ
ಸಡಗರವು ದಿನವೆಲ್ಲ ಗೆಳೆಯರುಂಟಿಲ್ಲಿ !

ಒಮ್ಮೆ ಜೀವನದಲ್ಲಿ ಕಮ್ಮಿ ಸಂಪಾದಿಸಿರೆ
ನಮ್ಮದೆನ್ನುವ ಬದುಕಿಗದೆ ಮೌಲ್ಯವಿಲ್ಲ
ಜುಮ್ಮೆನುವ ಸಿರಿಯೊಡೆದು ಕಣ್ಣ ಕೋರೈಸುತಿರೆ
ತಮ್ಮವರು ನೀವೆಂಬ ಮೌಲ್ಯವಿಹುದಲ್ಲ !

ಯಾಕೆ ನೀನೀರೀತಿ ದೇಖರಿಕೆ ಇಲ್ಲದಲೆ
ಸಾಕಷ್ಟು ದುಡಿದಿಲ್ಲವೆಂಬ ಬಿರುದುಗಳು !
ಬೇಕಾದ ಫಲವನ್ನು ಕೊಡದೆ ಆಡಿಸುತಿರುವ
ನೀ ಕಾಣದಾ ಶಕ್ತಿ ಹುದುಗಿಕುಳಿತಿಹುದು

ನಮ್ಮ ಪೂರ್ವದ ಕರ್ಮ ನಾವು ಪಡೆದಿಹ ಸಾಲ
ಸುಮ್ಮನಿರಗೊಡದೆಮ್ಮ ಹರಿದು ತಿನ್ನುವುದು !
ಒಮ್ಮತಕೆ ಒಗ್ಗದಾ ಮನವು ಹತ್ತೆಣಿಸುತ್ತ
ನಮ್ಮಾತ್ಮ ಶಕ್ತಿಯನೆ ಕಳೆಗುಂದಿಸಿಹುದು

ಬಾರೋ ಆಚೆಗೆ ಇಲ್ಲಿ ಬಾ ಹೊರಗೆ ಧ್ಯಾನಿಸುತ
ದೂರದಲಿ ನಿಂತೊಮ್ಮೆ ನೋಡು ನಿನ್ನತನ !
ಆರಂಭಶೂರತನ ಇಲ್ಲದಲೆ ಅನುಭವಿಸು
ಪ್ರಾರಬ್ಧಕರ್ಮಗಳ ತೊಳೆಯೇ ಪ್ರತಿದಿನ

Thursday, August 26, 2010

ಈ ಭೂಮಿ ಬಣ್ಣದ ಬುಗುರಿ......

ನಮ್ಮ ಡ್ಡೆ : ಟೀ ಹೋಟ್ಲು [ತಿರುಪತಿ ರೆಸ್ಟಾರೆಂಟ್ !]

ಈ ಭೂಮಿ ಬಣ್ಣದ ಬುಗುರಿ......


" ಏನ್ ಸರ್ ಏನ್ ಕೊಡ್ಲಿ ? "

" ಏನೈತೆ ತಿನ್ನಾಕೆ ? "

" ಇಡ್ಲಿ, ಸಾಂಬಾರ್ ಬಿಸಿಇದೆ[ಸ್ವಗತ:ಇಡ್ಲಿ ನಿನ್ನೇದು ಸಾಂಬಾರ್ ಮಾತ್ರ ಬಿಸಿ ಐತೆ], ಪರೋಟ, ಪೂರಿ, ಚಪಾತಿ, ಕೇಸ್ರಿಬಾತು, ಖಾರಾಬಾತು, ರೈಸ್ ಬಾತು ದೋಸೆ-ಪ್ಲೇನ್ ಸೆಟ್ ಮಸಾಲೇ "

"ಒಂದು ರೈಸ್ ಬಾತ್ ಕೊಡಪ್ಪಾ "

" ಆಯ್ತು ಸರ್ ಕೊಟ್ಟೆ "

" ಏನಪ್ಪಾ ಇದು ಈ ಥರ ಸ್ಮೆಲ್ಲು ಹಳ್ಸೋಗಿರೋ ಅನ್ನಕ್ಕೆ ಒಗ್ಗರಣೆ ಹಾಕ್ಬುಟ್ರಾ ? "

" ಇರಿ ಸರ್ ನಮ್ ಅಣ್ಣವ್ನೆ ಕೇಳ್ಕಂಬತ್ತೀನಿ "

--------------

" ಲೇ ಒಂದ್ ಕಾಪಿ ಕೊಡಪ್ಪಾ "

" ಅಣಾ ಒಂದ್ ಕಾಪಿ "

" ತಗಂಡೋಗ್ಲಾ ಸಿವಾ ರೆಡಿ ಅದೆ ಕೊಟ್ಬುಟ್ ಅಂಗೇ ಬಿಲ್ಲಿಸ್ಕ "

" ಸಾರ್ ಕಾಪಿ ತಗೊಳಿ "

" ಏನಯ್ಯಾ ಇದು ಕಾಪಿನೋ ಟೀನೋ ಒಂದ್ಸಲ ಕುಡ್ದ್ರೆ ಕಾಪಿ ಸ್ಮೆಲ್ಲು ಇನ್ನೊಂದ್ಸಲ ಕುಡ್ದ್ರೆ ಟೀ ಸ್ಮೆಲ್ಲು "

"ಅದೇ ನಮ್ಮೋಟ್ಲು ಸ್ಪೆಸಲ್ಲು "

------------

" ಅಣಾ ನಿಮ್ ಕೋಳಿ ಯಾಕೆ ಕೂಗ್ಲೇ ಇಲ್ಲ "

" ಇದ್ರಲ್ವೇನೋ ಕೊಗಕೆ "

" ಎಲ್ ’ಪಾದ’ಯಾತ್ರೆಗೆ ಹೋಗೈತಾ "

" ಹಾಂಗಂದ್ರೇನ್ಲಾ ಸಿವಾ ? ಮನಸ್ರು ಮಾತ್ರ ಪಾದಯಾತ್ರೆ ಮಾಡ್ತರೆ ಅಂತ ಕೇಳೀನಿ "

" ಅಣಾ ನೀ ಕೋಳಿ ಮುಗ್ಸುತ್ಲೂ ಅದ್ರ ಕಾಲೈತಲ್ಲಾ ಅದುನ್ನಾ ಚೀನಾಕ್ಕಳಸ್ತವ್ರೆ, ಸಾನೆ ಡಿಮ್ಯಾಂಡೈತೆ "

" ಮೊದ್ಲೇ ಹೇಳೋದಲವೇನ್ಲಾ ಮೂದೇವೀ "

"ಯಾಕೆ ಏನಾಯ್ತಣಾ ? "

" ಕಸದ್ ಬುಟ್ಟೀನಾಗಿಟ್ಟಿದ್ನಾ ಈಗ್ತಾನೇ ಕಾರ್ಪುರೇಸ್ನವ ಬಂದು ತನ್ ಗಾಡೀಲಾಕಂಬುಟ್ ಹೋದ, ಥೂ ಹೊಟ್ಟೆ ಉರ್ದೋಯ್ತು "

" ಯಾಕಣೋ ಪಾಪ ಕಸಕ್ಬಿಸಾಕಿದ್ನೆಲ್ಲಾ ತಿನ್ನಾಕ್ ಕೊಡೊದಾ ? "

" ಇನ್ನೇನ್ಲಾ ಜಗತ್ತು ? ನಾವ್ ಮದ್ಲ್ ಬದೀಕ್ಕಾ ಬೇಕು, ಬದೀಕ್ಕಬೇಕೂಂದ್ರೆ ಕಾಸ್ ಮಾಡ್ಕಬೇಕು, ಕಾಸ್ ಮಡ್ಕಬೇಕೂಂದ್ರೆ ಇಂತಿಂಥಾ ವೈನಾದ್ ಕೆಲ್ಸಾನೆಲ್ಲ ಮಾಡ್ತಾ ಇರ್ಬೇಕಾಯ್ತದೆ "

------------

" ಅಣಾ ಕಾರ್ಪೋರೇಸ್ನವ ಬಂದಿದ್ದ, ಅಲ್ಲೈತಲ್ಲ ಆ ಪ್ಲಾಸ್ಟಿಕ್ ಡ್ರಮ್ನಾಗೆ ಏನೈತೆ ಅಂದ "

" ಹೌದೇನ್ಲಾ ನೀ ಏನಂದೆ ? "

" ಏನಿಲ್ಲಾ ಸೋಮಿ ಅದೆಲ್ಲಾ ನಮ್ ಹೋಟಲ್ನಾಗೆ ತಿಪ್ಪೆಗ್ ಬಿಸಾಕೋದ್ನ ಹಾಕಿದ್ದು, ಕಳ್ಸಾಕಾಗಿರ್ಲಿಲ್ಲ ಅದ್ಕೇ ಹಂಗೈತೆ ಅಂದೆ "

" ಅಲ್ಲಯ್ಯಾ ನಿಂಗಿದೆಲ್ಲಾ ಬ್ಯಾಡ ನಿನ್ ಅಣ್ಣವ್ನಲ್ಲಾ ಅವನ್ತಾವ ನಾವ್ ಬಂದಿದ್ ಯೋಳ್ಬುಡು, ಬಂದ್ ನಮ್ನ ನೋಡ್ಕಂಡ್ರೆ ಸರಿ ಇಲ್ಲಾಂದ್ರೆ ಗುಲ್ಲೆಬ್ಬ್ಸಿ ಗಲಾಟ್ಯಾಗೋತದೆ ಅಂತ ಗದರ್ಬುಟ್ಟು ಹೊಂಟೋದ, ಅಣ ಯಾಕಣ ? "

" ಅದ್ರಿಂದ ಬಟ್ಟಿ ಇಳಸ್ತಾರಲೇ ಬುದ್ದು, ಚೆನ್ನಾಗ್ ಹುಳಿ ಬಂದಿರ್ತದೆ ನೋಡು, ಅದ್ನೆಲ್ಲಾ ಸಲ್ಪ ಮಿಕ್ಸ್ ಮಾಡ್ಕೆಂಡು ಅದ್ಕಿನ್ಸಲ್ಪಾ ಅದೇನೇನೋ ಆಕಿ ಕುದ್ಸಿ ಭಾಳಾ ರುಚಿ ಇರೋ ಭಟ್ಟಿ ಮಾಡ್ತರೆ, ಅದ್ನ ತುಂಬಾ ಜನ ಕೂಲ್ಯೋರೆಲ್ಲ ಕುಡೀತವೆ, ಒಂದ್ಕಿತಾ ರುಚಿ ಕಂಡ್ರೆ ಮತ್ ಬಿಡಾಕಿಲ್ಲ, ಅದೆಲ್ಲಾ ನಿಂಗ್ ಬ್ಯಾಡ ನಾ ಇಲ್ಲೇ ಸಲ್ಪ ಕಾರ್ಪುರೇಸ್ನ ತಾವ ಹೋಗ್ ಬತ್ತೀನಿ ಅವನೇನಾನಾ ಜರ್ ಇಲ್ಲಗ್ ಬಂದ್ರೆ ನಂಗೊಂದ್ ಪೋನಾಕು "

------------

" ತಿನ್ಲಾ ಸಿವಾ ಯಾಕಂಗ್ ನೋಡ್ತಾಯ್ಕಂಡೆ "

" ಏನಿಲ್ಲಾ ಇದ್ನ ಹೆಂಗೆ ತಿಂಬೋದು ಅಂತ ತಿಳ್ಯಾಕಿಲ್ಲ ಅದಕ್ಕೇ "

" ಯಾಕೋ ಪಸ್ಟ್ ಟೈಮಾ ನೀ ಬೆಂಗ್ಳೂರ್ಗ್ ಬತ್ತಾ ಇರೋದು ? "

" ಒದಣಾ ನಾ ಮೊದಲ್ನೇ ಸರ್ತಿ ಬಂದಿವ್ನಿ ಇದ್ಯೇನಣಾ ಇದು ? "

" ಸಣ್ಣಕ್ಕೇಳೋ ಪೆದ್ದೆ, ನೀ ಆತರ ದೊಡ್ಕೆ ಬೊಗಳ್ದ್ರೆ ನಮ್ ಗೌರವ್ಕೇ ಕಮ್ಮಿ, ಇದುಕ್ಕೆ ಪಿಡ್ಜಾ ಪಿಡ್ಜಾ ಅಂತರೆ ಬೋ ಚೆನ್ನಾಗಿರ್ತೈತೆ ತಿನ್ನಕೆ "

" ಬಿಚ್ಚಕೋದ್ರೆ ದಾರ್ ದಾರ್ದ್ ಥರ ಎಳ್ಕೊಂಡೇ ಬರ್ತೈತಣೋ ನಂಗ್ಯಾಕೋ ಬ್ಯಾಡಾಗ್ಬುಟ್ಟದೆ "

" ಏನಾಯಾಕಿಲ್ಲ ತಿನ್ನೋ ಎಂಥಾ ರುಚಿ ಗೊತ್ತೇನ್ಲಾ ಮುಂಡೇದೆ ಒಂದ್ ಪಿಡ್ಜಾ ತಿಂದ್ ನೈಂಟಿ ಹಾಕ್ಕೊಂಬುಟ್ರೆ ಜಗತ್ತೇ ಸುಂದರ, ನಾವೆಲ್ಲಾ ಆಗ ಇಲ್ಲೇ ಇದ್ರೂ ಫಾರಿನ್ನಾಗಿದ್ದಂಗೇ "

--------------

" ಏಲ್ಲೋಗಿದ್ಯಯ್ಯ ಇಷ್ಟೊತ್ತು "

" ಹಲ್ಲಿ ನಯ್ನ ಸಭಾಂಗಣ್ದಾಗೆ ಜಲನಯ್ನ ಮೇಡಂ ಬತ್ತರೆ ಅಂತ ಸುದ್ದಿ ಇತ್ಕಣಣ್ಣೋ ಅದ್ಕೇ ನೋಡವಾ ಅಂತ ಹೋದೆ "

" ಬಂದವ್ರಾ ? ನೀ ಹೇಳಿದ್ರೆ ನಾನೂ ಬತ್ತಿದ್ನಲ್ಲೋ ಅದೆಂಗಿದ್ರು ನೋಡಾಕಾಯ್ತಿತ್ತು "

" ಇಲ್ಕಣಣೋ ಅದು ಮೇಡಂ ಅಲ್ಲಾ ಯಾರೋ ಸಾರು ಬಂದಿರೋದು, ನಂಗ್ಯಾರೋ ತಪ್ಪೇಳ್ಬುಟ್ಯವ್ರೆ "

" ಹೋಗ್ಲಿ ಒಂದೇ ಚಾಕ್ಲೇಟೈತೆ ಒಸಿ ಕಾಗೆ ಎಂಜ್ಲಮಾಡೀನಿ ತಕಾ ತಿನ್ನು ಒಂಚೂರ "

" ಅಲ್ಲಣೋ ಗುಬ್ಬಿ ಎಂಜ್ಲು ಅಂದ್ರೇನು ? ಅಲ್ಲಿ ಆ ಪಟೆ ಬೋಲ್ಡಾಕಿದ್ರು "

" ಗುಬ್ಬಿ ಎಂಜ್ಲು ಅಂದ್ರೆ ನಂಗೊತ್ತಿಲ್ಲಪ್ಪ ನೀ ಹಲ್ಲೇ ಯಾರ್ನಾರ ಕೇಳಿರೋದು "

" ಇಲ್ಲಣೋ ಕೇಳ್ದೆ ಅದೇನೋ ಪುಸ್ತಕುಕ್ಕೇ ಆ ಹೆಸ್ರಂತೆ, ಸಿರ್ಸಿ ಕಡೀಗೆಲ್ಲ ಹಂಗೇ ಅಂತಾರಂತೆ ಕಾಗೆ ಎಂಜ್ಲಗೆ"

" ಹಂಗ್ ಬೇರೆ ಐತಾ, ವೈನಾತು ಬಿಡು ಕಾಗೆ ಎಸ್ರು ಚಂದಾಯಾಕಿಲ್ಲ ಅದ್ಕೇ ಗುಬ್ಬಿ ಅಂದ್ರೇನೆ ಸರಿ"

" ಅದ್ಯಾರೋ ಬೇನಾಮಿ ಬೆರ್ಚಪ್ಪ ಅಂತಾ ಬಂದವ್ನಂತೆ ಬಾಳ ಕಿಲಾಡಿ ಅಂತಂದ್ರು "

" ಹೋಗ್ಲಿ ಅವ್ನಿಸ್ಯ ಇಲ್ಲ್ಯಾಕ್ಲ ನಮ್ಗೆ? "

" ಅಲ್ಲ ಕಣಣೋ ಪಾಪ ಹವ್ರು ಹಷ್ಟ್ ಕಷ್ಟಾಪಟ್ಟು ಪಂಕ್ಸನ್ ಮಾಡ್ಯವ್ರೆ ಆ ಮನ್ಸ ಅದೇನೇನೋ ಇರುದ್ದ ಬರ್ದವ್ನಂತೆ "

" ಬೇನಾಮಿ ತಾನೇ ಹೋತಾನೆ ಸುಮ್ಕಿರಲೋ ಎಂತೆಂಥಾ ದಾಕ್ಲೆ ಇರೋ ಹತ್ತತ್ ಹೆಸ್ರಿಟ್ಗಂಡವ್ರೆ ಇದಾನ್ ಸೌದ್ದಗೆ ಎಣಗಾಡ್ತವ್ರೆ ಇನ್ ಈ ಬೇನಾಮಿ ಜನ ಎಲ್ಲಾ ಬಾಳ್ ದಿವ್ಸ ಇರಾಕಿಲ್ಲ ಬಿಡು "


---------------

"ಯಾಕೋ ಎರಡ್ದಿನದಿಂದ ಮಳೆ ಬರೋ ಅಂಗೈತೆ ಅಲ್ವೇನಣಾ ? "

" ಹಾಂ ನಮ್ ಯಡ್ಯೂರಣ್ಣ ಸಾನೆ ಕಣ್ಣೀರ್ ಹಾಕ್ತರೆ ಅದ್ಕೇಯ ದೇವರ್ಗೆ ಬೇಜಾರಾಗಿ ಹೋಕ್ಕಳ್ಳಿಬುಡು ಒಂದಷ್ಟ್ ದಿನ ಅಂತಾ ಮಳೆ ಬೀಳುಸ್ತನೆ "

" ಮೋಡ ಬಿತ್ನೆ ಅಂತೆಲ್ಲಾ ಅಂತಿದ್ರಲ್ಲ ಅದೆಲ್ಲಾ ಇಲ್ವೇನಣಾ ಈಗ ? "

" ಈಗ ಬಿತ್ನೆ ಗಿತ್ನೆ ಮಾಡಕೆ ಸರಕಾರದ್ ತಾವ ತಾಕತ್ತಿಲ್ಲ ಕಣ್ಲಾ, ಮತ್ತೇನಾರ ಮಾಡಾಕೊಂಟು ಯಡವಟ್ಟಾಗೋದ್ರೆ ಇರೋದ್ ಪಕ್ಸ್ದೋರು ಹುಡ್ಕ್ತಾ ಕುಂತವ್ರೆ ಅದ್ಕೇ ಮಾಡಾಕಿಲ್ಲ"

" ಗೋ ಅತ್ಯೆ ನಿಸೇಧಕ್ಕೆ ಬೈಬಲ್ನಾಗೇ ನಿಸೇಧ ಅದ್ಯಂತೆ, ಮನ್ಸಾಗುಟ್ಟದ್ ಮ್ಯಾಗೆ ನೀ ಏನ್ ಬೇಕಾರೂ ಮಾಡ್ಕ, ಈ ಗಾಳಿ, ನೀರು, ಗಿಡ-ಮರ, ಪ್ರಾಣಿ, ಪಕ್ಸಿ ಎಲ್ಲಾ ನಿಂಗೇಯ ಅಂದವ್ರಂತೆ, ಅದ್ನ ಸದ್ಬಳಕೆ ಮಾಡ್ಕೋ ಅಂದವ್ರಂತೆ "

" ಹೋದ್ಕಣೋ ನಿಂಗರ್ಥಾಯಾಕಿಲ್ಲ ಆಲ್ ಕುಡೀವಷ್ಟು ಕುಡ್ಕಂಡು, ಮತ್ತಷ್ಟ್ ಆಲ್ ಇಂಡ್ಬುಟ್ ಮಡೀಕಂಡು ಗೋ ನ ಚೆನ್ನಾಗಿ ಕತ್ತರ್ಸಿ ಒಂಚೂರು ಬಿಡ್ದಲೇ ತಿಂದ್ಬುಡು ಎಲ್ಲಾ ನಿಂಗೇಯ ಅಂತ ಬರದವ್ರಂತೆ ಅದ್ಕೇಯ ತಮ್ ಅಮ್ದೀರ್ನ ತಿನ್ನಾಕಾಯಾಕಿಲ್ಲ ನೋಡು ಇಂಗಾಗಿ ಹಸಾನಾದ್ರು ಹೊಡ್ಕಂಡು ತಿನ್ನಾವ ಅಂತ ಹೇಳ್ಯವ್ರೆ "

" ಬೈಬಲ್ ನಾಗೆ ಇರೋ ರೂಲು ಗಣಿಧಣಿಗಳ್ಗೂ ಬತ್ತದೆ, ಯಾಕೆಂದ್ರೆ ಈ ಭೂಮಿ,ಗಾಳಿ,ನೀರು ಇದೆಲ್ಲಾ ನಿಂದೇಯಾ ಅಂದವ್ರಲ್ಲ, ಇರೋದ ಮಾಡ್ಬಾರ್ದು, ಇರೋದ ಮಾಡುದ್ರೆ ಪ್ರಜಾಪ್ರಬುತ್ವ ಒಂಟೋಯ್ತದೆ ಅಲ್ವೇನಣಾ ? "

" ಅದ್ಕೇ ಅಲ್ವೇನ್ಲಾ ನಮ್ಮಲ್ಲಿ ಹಿಂತಾದ್ನೆಲ್ಲಾ ಮಡೀಕಂಡಿರಾದು. ಮಗಾ ಮಗಾ ಹಂತ ಅಪ್ಪ-ಅಮ್ಮ ಬೆಳುಸ್ತರೆ, ದೊಡ್ಡಾಗುತ್ಲೆ ಮಗ ಅಪ್ಪ-ಅಮ್ಮುನ್ನ ನಾಯಿಮರಿ ಬಿಟ್ಟಂಗೆ ರುದ್ಧಾಸ್ರಮಕ್ಕೆ ಬಿಟ್ಟು ಬತ್ತನೆ. ಮಗಂಗೆ ಒಂದೇ ಜೀವ್ನ ಇರಾದು, ಅದ್ನ ಹೆಂಜಾಯ್ ಮಾಡೋದ್ಬೇಡ್ವೇನ್ಲಾ ಸಿವಾ, ಇದೇ ತತ್ವಾನೇ ಬೈಬಲ್ನಾಗೆ ಹೇಳವ್ರೆ ಹಂತ ಅವರ್ಯಾರೋ ಹೇಳವ್ರೆ "

----------------

" ರಾಘುವೇಂದ್ರ ಸ್ವಾಮ್ಗೋಳ್ ಆರಾಧ್ನ್ಯಂತೆ ಹಂಗಂದ್ರೇನಣಾ ? "

" ಛೆ ನೀ ಇದ್ದೂ ವೇಷ್ಟು ಕಣೋ, ನಿಂಗೇನೂ ತಿಳ್ಯಾಕಿಲ್ಲ ಬಿಡು, ಕೆಲ್ಸಿಲ್ಲಾದ್ ಪುರೋಯ್ತ್ರು ಪೂಜೆ ಮಾಡ್ಸಕೆ ಒಂದ್ ಸೋಮಿ ಮಡ್ಗವರೆ, ಜನ್ರಿಗೂ ಬುದ್ದಿಲ್ಲ, ಅಲ್ಯಾರೋ ಸ್ವಾಮ್ಗೋಳು ಇದ್ರಂತೆ ಮುಂಚೆ "

" ಈಗೆಲ್ಲೋದ್ರೂ ಹವ್ರೂ"

" ಹವ್ರು ಜೀವಂತ ಸಮಾಧಿ ಕಟ್ಟಸಕ್ಯಬುಟ್ಟವ್ರಂತೆ ಅಂತ ಹಿವ್ರೆಲ್ಲಾ ಬಡ್ಕತರೆ ಆದ್ರೆ ಅವ್ರಿಲ್ಲೇ ಬಂದ್ಬುಟ್ಟರೆ "

" ಕಲಿಗಾಲ ಅಲ್ವೇನ್ಲ ಜಾಸ್ತಿದಿನ ಸಮಾಧಿ ಅಂತ ಕೂತ್ರೆ ಜನ ಬರಾಕಿಲ್ಲ-ಜಾಸ್ತಿ ದುಡ್ ಸಿಗಾಕಿಲ್ಲ ಹಂತ ತಿಳ್ದಿದ್ದೇ ಇವೇಕಾನಂದ ಹಂತ ಹೊಳ್ಳೇ ಎಸ್ರ ಮಡೀಕಂಡು ಮಾನವ ಅಕ್ಕು ಪರಿಷತ್ತು ಹಂತಾವ ಒಂದ್ ಆಪೀಸ್ ಮಾಡ್ಕಂಡವ್ರೆ "

" ನೀ ಸುಳ್ಳಾದ್ರು ಏಳ್ತೀಯಣೋ "

" ಏ ಇಲ್ಲ ಕಣ್ಲಾ ಟಿವಿನಾಗೆ ತೋರ್ಸಿಲ್ವೆ, ನಾನೇ ಖುದ್ದಾಗ್ ನೋಡಿದ್ದು "

" ಹದ್ರಿಂದ ಇವೇಕಾನಂದ್ಗೆ ಹೇನ್ ಪ್ರಯೋಜ್ನ ? "

" ಮಾನವ ಅಕ್ಕು ಅಂತ ಸರ್ಕಾರೀ ಸಬ್ ರಜಿಸ್ತ್ರಿ ತಿರುಗ್ದಾಂಗೆ ತಿರೀಕಂಡು ಜನರಿಗೆಲ್ಲ ಹಲ್ಲಲ್ಲಿ ಬೆದ್ರಕೆ ಆಕಿ ದುಡ್ ವಸೂಲಿ ಮಾಡ್ಕಳಾದು, ಮಳೆ ಬೀಳೂತ್ಲೂವೆ ಆಪೀಸ್ನಾಗ್ ಕುತ್ಗಂಡು ಆದುಡ್ನ ಮೇಯದು "

" ಓ ಇದ್ಬೇರೆ ನಿತ್ಯಾನಂದ ಹಂತೀಯೇನು ? "

" ಹಾಂ ಹೊಂಥರಾ ಅಂಗೇ ಹನ್ಕ "

Wednesday, August 25, 2010

ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ


ಬಂದೆಯಾ ಗುರುರಾಯಾ .....ದಯಮಾಡಿಸು ಮಹನೀಯ

ಶ್ರಾವಣ ಮಾಸವೇ ಹೀಗೆ! ಒಂದಿಲ್ಲೊಂದು ಹಬ್ಬ, ಸಡಗರ, ಪೂಜೆ ನಡೆದೇ ಇರುತ್ತದೆ. ಅದರಲ್ಲೂ ಹಳ್ಳಿಗಳಲ್ಲಿ ನಿಸರ್ಗದ ಮಡಿಲಲ್ಲಿ ಬೆಳ್ಳಂಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಬಹುಬೇಗ ಎದ್ದು, ಸುರಿವ ಸೋನೆಮಳೆಯಲ್ಲಿ ಕೊಡೆಹಿಡಿದು ಸಲ್ಸಲ್ಪ ಮೈಗೆ ಹಾರುವ ಮಳೆಯ ಹನಿಗಳನ್ನು ಸಹಿಸಿಕೊಂಡು ದೇವಸ್ಥಾನ, ಮಠ ಇಂತಹ ಜಾಗಗಳಲ್ಲಿ ನಡೆಯುವ ಪೂಜೆ-ಪುನಸ್ಕಾರಗಳಿಗೆ ಹೋಗುವುದು ಬಲು ಹಿತಕರ ಸಂಗತಿ. ಅಲ್ಲಿನ ಹೋಮದ ಧೂಮ, ಕರ್ಪೂರದ ಆರತಿಯ ಪರಿಮಳ, ಬಳಸಿದ ಮಂಗಳ ದ್ರವ್ಯಗಳ ಸುಗಂಧ, ತುಪ್ಪದ ಜ್ಯೋತಿಯಿಂದ ಹೊರಸೂಸುವ ಅಪ್ಪಟ ದೀಪದ ಅಗರು, ಹಲವು ವಿಧದ ಬಣ್ಣ ಬಣ್ಣದ ಹೂಗಳ ಅಲಂಕಾರ, ಥರಥರದ ರಂಗೋಲಿ ಇವನ್ನೆಲ್ಲಾ ನೆನೆಸಿಕೊಂಡರೆ ಒಂದೊಮ್ಮೆ ನಾವೌ ಇಂತಹ ದೃಶ್ಯಗಳನ್ನು ಪ್ರತ್ಯಕ್ಷ ನೋಡಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಮನಸ್ಸು ಬೇಸರಗೊಳ್ಳುತ್ತದೆ ಎಂದರೆ ತಪ್ಪಲ್ಲ.

ಪ್ರಾಯಶಃ ಇದು ಆಸ್ತಿಕರಿಗೆ ಮಾತ್ರ. ನಾಸ್ತಿಕರಿಗೆ ದೇವರು-ದಿಂಡರ ರಗಳೆಯೇ ಇಲ್ಲ ಅಥವಾ ಅವರ ಲೆಕ್ಕದಲ್ಲಿ ಇದೆಲ್ಲಾ ಒಂದು ರಗಳೆ. ಜೀವನದಲ್ಲಿ ಪೂರ್ವಜ್ನ್ಮದ ಸುಕೃತದಿಂದ ಅಂತಹ ದೊಡ್ಡ ತೊಂದರೆ ಅನುಭವಿಸಿರುವುದಿಲ್ಲ, ಯಾವುದೇ ಕಾಯಿಲೆ-ಕಸಾಲೆಗಳಿಗೆ ಈಡಾಗಿರುವುದಿಲ್ಲ ಮತ್ತು ಅವರು ಮುಟ್ಟಿದ್ದೆಲ್ಲಾ ಹೊನ್ನಾಗುವಂತ ಯೋಗವನ್ನು ಪಡೆದಿರುತ್ತಾರೆ--ಹೀಗಾಗಿ ಅವರಿಗೆ ಈ ಜನ್ಮದಲ್ಲಿ ದೇವರ ಅಸ್ಥಿತ್ವವಾಗಲೀ ಅವಶ್ಯಕತೆಯಾಗಲೀ ಬಂದಿರುವುದಿಲ್ಲ-ಬೇಕಾಗಿರುವುದಿಲ್ಲ. ಯಾವಾಗ ತಿರುಗುವ ಯಂತ್ರ ನಿಂತುಕೊಂಡಿತೋ, ಚಲಿಸುವ ಗಾಲಿ ಹೂತು ಹೋಯಿತೋ, ಮನೆಯಲ್ಲಿ ಅನಾರೋಗ್ಯ, ವಿರಸ, ಆರ್ಥಿಕ ನಷ್ಟ ಉಂಟಾಯಿತೋ ಆ ಘಳಿಗೆಯಿಂದ ನಮ್ಮ ಸರಕಾರೀ ಬಸ್ಸುಗಳ ಬೋರ್ಡು ಬದಲಾದ ಹಾಗೇ ತಾವೂ ಆಸ್ತಿಕರೇ ಎಂಬ ಪೋಸುಕೊಡುತ್ತ ಬರುತ್ತಾರೆ. ದೇವರೆಂಬ ದೇವರಿಗೆ ಇವರ ಬೇರು-ಬಿತ್ತು ಎಲ್ಲಾ ಗೊತ್ತಿರುವುದಿಲ್ಲವೇ ! ಯಾವಾಗ ಆ ಘಳಿಗೆಯಲ್ಲಿ ಮಾತ್ರ ನೆನೆಯ ಬರುತ್ತಾರೋ ಅಂಥವರನ್ನು ಇನ್ನೂ ಪರೀಕ್ಷೆಗೊಳಪಡಿಸುವ ಅದ್ಬುತ ಚೈತನ್ಯವೇ ದೇವರು. ಇಂತಹ ಅರ್ಜೆಂಟಿಗೆ ದೇವರ ದಾಸರಾಗುವವರನ್ನು ನೆನೆದು ನಮ್ಮ ಪೂರ್ವಜರು ’ ಸಂಕಟ ಬಂದಾಗ ವೆಂಕಟರಮಣ’ ಎಂಬ ಗಾದೆ ಮಾಡಿದರು! ನಾಸ್ತಿಕರಲ್ಲಿ ನಾನು ಯಾವಾಗಲೂ ಕೇಳುತ್ತಿದ್ದುದು ಎರಡೇ ಪ್ರಶ್ನೆ- ಮೊದಲನೆಯದು: ಆಕಾಶ ಕಾಯಗಳನ್ನು ಗುರುತ್ವಾಕರ್ಷಣ ಶಕ್ತಿಯಿಂದ ಸರಿಯಾದ ಹಿಡಿತದಲ್ಲಿ ನಿಯಂತ್ರಿಸಿಡುವ ಶಕ್ತಿ ಯಾವುದು ? [ ಹಾಗೆ ಕರೆಯುವ ಆ ಗುರುತ್ವಾಕರ್ಷಣ ಶಕ್ತಿ ಹೇಗೆ ಹುಟ್ಟಿಕೊಳ್ಳುತ್ತದೆ ? ] ಎರಡನೇದು: ಆತ್ಮವೆಂಬ ಚೈತನ್ಯ ದೇಹಕ್ಕೆ ಬರುವ ಮೊದಲು ಎಲ್ಲಿರುತ್ತದೆ? ಯಾವ ರೂಪದಲ್ಲಿರುತ್ತದೆ ? ಸತ್ತಮೇಲೆ ಎಲ್ಲಿಗೆ ಹೋಗುತ್ತದೆ ?

ಜನಸಾಮಾನ್ಯರಲ್ಲಿ ನಾವು ಹುಟ್ಟಿದ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡರೆ ಸತ್ತದಿನವನ್ನು ದುಃಖದಿಂದ ಶ್ರಾದ್ಧವಾಗಿ ಆಚರಿಸುತ್ತೇವೆ. ಸಾಧು-ಸಂತ, ಸನ್ಯಾಸಿಗಳೂ ಯತಿಗಳೂ ಹುಟ್ಟಿದ ಮತ್ತು ಕಾಲವಾದ ಎರಡೂ ದಿನಗಳು ನಮಗೆ ಸಂಭ್ರಮಾಚರಣೆಯ ದಿನಗಳೇ ಆಗಿರುತ್ತವೆ. ಯಾಕೆಂದರೆ ಮಹಾತ್ಮರ ಹುಟ್ಟು ಮತ್ತು ಸಾವುಗಳೇ ಹಾಗೆ. ಅವರೆಲ್ಲ ಕಾರಣವಿಲ್ಲದೇ ಹುಟ್ಟುವುದೂ ಇಲ್ಲ, ಕಾಲವಾಗುವುದೂ ಇಲ್ಲ! ಹಾಗಾದರೆ ಅವರ ಹುಟ್ಟು-ಸಾವಿಗೆ ಏನುಕಾರಣ ಎಂದು ಅಂದಾಜಿಸಹೊರಟರೆ ನಮಗೆ ಸಿಗುವ ಸಾಮಾನ್ಯ ಉತ್ತರ ’ಜಗದೋದ್ಧಾರ’ ಅರ್ಥಾತ್ ಜಗತ್ತಿನ ಕೆಲವು ಭೂ ಪ್ರದೇಶಗಳಲ್ಲಿ ತಮ್ಮ ಕಾರ್ಯವನ್ನು ಹಮ್ಮಿಕೊಂಡು ಜನರಿಗೆ ಒಳಿತನ್ನು ಮಾಡಲೋಸುಗ ಅವರು ಅಂಶಾಂಶಾವತಾರಿಗಳಾಗಿ ಭೂಮಿಯ ಮೇಲೆ ಅವತರಿಸುತ್ತಾರೆ. ಹೀಗೆ ಅವತರಿಸಿದ ಆ ಮಹನೀಯರು ಒಂದಷ್ಟು ಕಾಲ ಭುವಿಯಲ್ಲಿದ್ದು ಅಲ್ಲಿ ತಮ್ಮ ಸೇವೆಗೈದು ಪೂರ್ವನಿಗದಿತ ಸಮಯಕ್ಕೆ ಸರಿಯಾಗಿ ದೇಹಾಂತ್ಯವನ್ನು ಕಾಣುತ್ತಾರೆ. ಅವರ ಆ ಭೌತಿಕ ಕಾಯದಿಂದ ಅವರ ಆತ್ಮ ಹೊರಟು ನಡೆದರೂ ಅವರ ಪಾರ್ಥಿವ ಶರೀರವನ್ನು ಸಮಾಧಿಮಾಡಿದ ಸ್ಥಳದಲ್ಲಿ ಅವರ ತಪದ ಪ್ರಭೆ ಅಡಗಿರುತ್ತದೆ. ಸಮಾಧಿಯಲ್ಲಿರುವ ಅವರ ಭೌತಿಕ ಶರೀರದ ಅವಶೇಷಗಳು ನಾವಿವತ್ತು ಹೇಳುವ ಕಾಸ್ಮಿಕ್ ರೇಡಿಯೇಶನ್ ಉಂಟುಮಾಡುತ್ತಿರುತ್ತವೆ. ಹೀಗೇ ಕಾಲವಾದ ಸನ್ಯಾಸಿ ಜನರ ನೆನಪಿನಲ್ಲಿ ಅವರು ಸಮಾಧಿಸ್ಥರಾದ ಆ ಮಿತಿಯಂದು ಪ್ರತೀ ವರ್ಷ ಅವರ ಯತಿಶ್ರಾದ್ಧವನ್ನು ವಿದ್ವಜ್ಜನರು ಸೇರಿ ವಿಧಿವತ್ತಾಗಿ ವೇದಮಂತ್ರಗಳೊಂದಿಗೆ ಆಚರಿಸುತ್ತಾರೆ-ಇದೇ ’ಆರಾಧನೆ’ ಎಂದು ಕರೆಸಿಕೊಳ್ಳುತ್ತದೆ.



ನಮ್ಮ ಇಂದಿನ ಈ ಯುಗದಲ್ಲಿ ಒಂದೆರಡು ಸನ್ಯಾಸಿಗಳ ಸಜೀವ ಸಮಾಧಿಗಳು ನಮಗೆ ನೋಡ ಸಿಗುತ್ತವೆ. ಒಂದು ಶೃಂಗೇರಿಯ ಶ್ರೀ ವಿದ್ಯಾಶಂಕರ ದೇಗುಲ.ಸರಿಸುಮಾರು ಹನ್ನೆರಡನೇ ಶತಮಾನದ ಅಂತ್ಯಭಾಗದಲ್ಲಿ ನೂರಾ ಐದು ವರ್ಷಗಳ ವರೆಗೆ ದೇಹದಿಂದಿದ್ದ ಶ್ರೀ ವಿದ್ಯಾಶಂಕರ ಮಹಾಸ್ವಾಮಿಗಳು ತಪಸ್ಸಿನಲ್ಲಿ ಬಹಳ ಉತ್ತುಂಗಕ್ಕೆ ಏರಿದವರು. ಅವರ ನಂತರದಲ್ಲಿ ಬಂದ ಶ್ರೀ ವಿದ್ಯಾರಣ್ಯ ಮಹಾಮುನಿಗಳು [ಹಂಪೆ ಮತ್ತು ವಿಜಯನಗರಕ್ಕೆ ಕಾರಣೀಭೂತರಾದವರು] ವಿದ್ಯಾಶಂಕರ ದೇಗುಲವನ್ನು ಕಟ್ಟಿಸಿದರು ಎನ್ನುತ್ತವೆ ಶೃಂಗೇರಿ ಮಠದ ದಾಖಲೆಗಳು. ಇಲ್ಲಿನ ವಿಶೇಷವೆಂದರೆ ಸೂರ್ಯರಶ್ಮಿ ಒಂದೊಂದು ಋತುವಿನಲ್ಲೂ ಅಲ್ಲಿರುವ ವಿವಿಧ ಮಧ್ಯಭಾಗದ ಬಾಗಿಲು ಮತ್ತು ಕಿಟಕಿಗಳ ಮೂಲಕ ಹಾದು ದೇವಸ್ಥಾನದ ಒಳಗೆ ಹೋಗಿ ಲಿಂಗವನ್ನು ದರ್ಶಿಸುತ್ತವೆ, ಇಲ್ಲಿನ ಹನ್ನೆರಡು ಕಂಬಗಳು ಹನ್ನೆರಡು ರಾಶಿಗಳನ್ನು ಬಿಂಬಿಸುತ್ತವೆ. ವಿದ್ಯಾ ಶಂಕರರಿಗೆ ನಮಸ್ಕರಿಸಿ ಇನ್ನೊಬ್ಬ ಮುನಿಯ ಬಗ್ಗೆ ತಿಳಿಯೋಣ.

ಮತ್ತೊಂದು, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಂದಿರ. ತಮ್ಮ ಸಾಧನೆ ಮುಗಿದ ಮೇಲೆ ಅರೆಘಳಿಗೆಯೂ ನಿಲ್ಲದ ಈ ಮುನಿಜನ ತಮ್ಮ ಸ್ವ ಇಚ್ಛೆಯಿಂದ ಸಮಾಧಿಯ ಆಳದಲ್ಲಿ ಪದ್ಮಾಸೀನರಾಗಿ ಕುಳಿತು ಮೇಲೆ ತಮ್ಮನ್ನು ಮುಚ್ಚಿಬಿಡುವಂತೆ ತಮ್ಮ ಶಿಷ್ಯಂದಿರಿಗೆ ಆಜ್ಞಾಪಿಸುತ್ತಾರೆ. ಇದು ಶಿಷ್ಯಂದಿರನ್ನು ಚಣಕಾಲ ದುಃಖಕ್ಕೆ ಈಡುಮಾಡಿದರೂ ಗುರುವಾಜ್ಞೆಯನ್ನು ಮೀರಲಾಗದ ಶಿಷ್ಯರು ಹಾಗೆ ಮಾಡುತ್ತಾರೆ. ಅಂತಹ ಕೊನೇಘಳಿಗೆಯಲ್ಲಿ ಗುರು-ಶಿಷ್ಯರ ಮಾತುಕತೆ ನಡೆದು ಶಿಷ್ಯರ ಅನುವು-ಆಪತ್ತಿನಲ್ಲಿ ಗುರುವು ಸಹಕರಿಸುವುದಾಗಿ ಭರವಸೆ ನೀಡುತ್ತಾರೆ. ಇಂತಹ ಹೃದಯವಿದ್ರಾವಕ ಸನ್ನಿವೇಶದಲ್ಲಿ ಸಮಾಧಿಸ್ಥರಾಗುವ ಮುನಿಜನರು ತಮ್ಮ ದಿವ್ಯಚೈತನ್ಯದಿಂದ ಬಹುಕಾಲ ಅಲ್ಲಿ ಸುಪ್ತಸ್ಥಿತಿಯಲ್ಲಿ ನೆಲೆಸಿ ಭಕ್ತರನ್ನು ಹರಸುತ್ತಿರುತ್ತಾರೆ. ಈ ದಿವ್ಯ ಚೈತನ್ಯ ಸ್ವರೂಪೀ ಮುನಿಜನರು ಕಾಲವಾದ ದಿನವನ್ನು ಹಬ್ಬದ ರೀತಿ ಆಚರಿಸುವುದೇ ಪುಣ್ಯ.


ಬಹುತೇಕರಿಗೆ ಗುರುವಾಗಿ, ಬಹಳ ಜನಪ್ರಿಯರಾಗಿ, ಜನರ ಭಾವನೆಗಳಿಗೆ ತ್ವರಿತ ಸ್ಪಂದಿಸಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೩೯ನೇ ಆರಾಧನೆ ಇಂದು ನಡೆಯುತ್ತಿದೆ. ಅಂದರೆ ಇಂದಿಗೆ ೩೩೯ ವರ್ಷಗಳ ಹಿಂದೆ ಗುರುರಾಯರು ಬದುಕಿದ್ದರು, ನಮ್ಮಂತಹ ಜನರೊಟ್ಟಿಗೆ ಮನುಷ್ಯದೇಹದಿಂದ ತಿರುಗಾಡುತ್ತ ಜಪತಪಾದಿ ಹಲವು ಅನುಷ್ಠಾನದಲ್ಲಿದ್ದರು. ಆದರೆ ನಾವೇ ಹತಭಾಗ್ಯರು-ಅವರನ್ನು ನೇರವಾಗಿ ನೋಡಲಿಲ್ಲ, ಒಂದೊಮ್ಮೆ ನೋಡಿದ್ದರೂ ನಮಗದರ ಅರಿವಿಲ್ಲ! ಬದುಕಿದ್ದಾಗಲೇ ಸಮಾಧಿಮಾಡಿಸಿಕೊಂಡರೂ ತದನಂತರವೂ ಜನರಿಗೆ ಅಲ್ಲಿಂದಲೇ ಸಹಾಯ ಹಸ್ತನೀಡಿದ ಗುರುವು ತನ್ನ ವೈಯಕ್ತಿಕ ಬದುಕನ್ನ ಕಡೆಗಣಿಸಿ ಸಮಾಜಕ್ಕಾಗಿ ತನ್ನ ಬದುಕನ್ನು ಧಾರೆ ಎರೆದಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಬೇಸರಗೊಂಡು ಬಾವಿಗೆ ಹಾರಿ ಪ್ರಾಣತೆತ್ತ ಪೂರ್ವಾಶ್ರಮದ ಸಹಧರ್ಮಿಣಿಗೆ ಮೋಕ್ಷವನ್ನು ಕರುಣಿಸಿದ್ದಾರೆ. ಲೌಕಿಕದ ಹಲವು ಜನರಿಗೆ ಇದೆಲ್ಲಾ ಅರ್ಥವಿಹೀನವೆನಿಸಿದಂತೆ ಕಂಡರೂ ಸನ್ಯಾಸಿಗಳಿಗೆ ಅವರ ಆತ್ಮಜ್ಞಾನ ಎಲ್ಲವನ್ನೂ ಹೇಳುತ್ತದೆ. ಯಾವುದನ್ನು ತೊರೆಯಲಾಗದೋ ಅಂತಹ ವ್ಯಾಮೋಹವನ್ನೇ ಹಿಂದಕ್ಕೆ ಹಾಕಿ ತಾನು ಮುನ್ನಡೆದರು ಶ್ರೀ ರಾಘವೇಂದ್ರರು.

ಹಲವಾರು ಜನರು ವಿವಿಧ ರೀತಿಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತ ಅವರನ್ನು ನೆನೆದು ಫಲವನ್ನು ಪಡೆದಿದ್ದಾರೆ. ಇಂತಹ ಸದ್ಗುರುವಿನ ಸ್ಮರಣೆ ಇವತ್ತಿನ ಭಕ್ತಿಸಿಂಚನದಲ್ಲಿ-

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ಋತಾಯಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||


ತುಂಗೆಯ ದಡದಲಿ ಮನೆಮಾಡಿಹ
ಮಹನೀಯ ಮುನಿಯೆ ನಿನ್ನನು ನೆನೆವೆ
ಅಂಗಳದಲಿ ಚಿತ್ರವು ಎದುರಾಗಲು
ಒಮ್ಮೆ ನಿನಗೆ ನಾ ಕೈಮುಗಿವೆ

ಮಂಚಾಲೆಯ ಆ ಊರಲಿ ನೆಲೆಸುತ
ಸಂಚಿತ ವ್ಯಾಧಿಗಳನು ಕಳೆದೆ
ಅಂಚೆಯ ತೆರದಲಿ ಭಕುತರ ದೂರನು
ಕೊಂಚವೂ ಬಿಡದೆ ಆಲಿಸುವೆ

ವೀಣಾಗಾನ ವಿನೋದನೆ ನುತಿಸಲು
ತ್ರಾಣವು ಯುಕ್ತಿಯು ನಮಗಿಲ್ಲ
ಪ್ರಾಣದೇವನೆಂದೆನಿಸಿದ ಗುರುವರ
ಗಾಣದ ಎತ್ತುಗಳ್ ನಾವೆಲ್ಲ !

ಜನನೊಂದರು ಸ್ವೀಕರಿಸೆ ಸಮಾಧಿಯ
ಮನಬೇಗುದಿ ತಾಳದೆ ಅಂದು
ಅನುದಿನ ಜನಸಮುದಾಯವ ಹರಸುವ
ಘನಮಹಿಮನೆ ಜಯನಮೋ ಎಂದು

ಆರಾಧಿಸುವೆವು ಭಾವ ತರಂಗದಿ
ನಾರಯಣ ರೂಪನೆ ನಮನ
ಕಾರಣಗಳ ನೀ ಹೇಳದೆ ಮನ್ನಿಸು
ಘೋರದುರಿತಗಳ ಕಳೆದು ದಿನಾ

ಬ್ರಹ್ಮಾನಂದಂ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ವಮಸ್ಯಾದಿ ಲಕ್ಷ್ಯಮ್ |
ಏಕಂ
ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂತಂ
ಭಾವಾತೀತಂ
ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

Tuesday, August 24, 2010

ಮನದ ರಶ್ಮಿ

ಕಲ್ಪನಾ ಚಿತ್ರ : ರಾಜಾ ರವಿವರ್ಮ ವಿರಚಿತ , ಚಿತ್ರ ಕೃಪೆ : ಅಂತರ್ಜಾಲ

ಜೀವನದಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಆದರೆ ನಮ್ಮ ಜೊತೆ ತಮ್ಮನ್ನು ಅರ್ಧಭಾಗವಾಗಿ ಹಂಚಿಕೊಳ್ಳುವ ಅರ್ಧಾಂಗಿಯನ್ನು ನಾವು ಕೃತಜ್ಞತೆಯಿಂದ ಕಂಡರಷ್ಟೇ ನಮ್ಮ ಪಾತ್ರ ತುಂಬಿಬರುತ್ತದೆ. ನಮಗಾಗಿ ಹುಟ್ಟಿದ ಮನೆಯನ್ನು ಬಿಟ್ಟು, ನಮ್ಮ ಬದುಕಿನ ಕಷ್ಟಕೋಟಲೆಗಳಲ್ಲಿ ನಮ್ಮನುವರ್ತಿಯಾಗಿ, ನಮ್ಮ ನೋವು-ನಲಿವನ್ನು ಹಂಚಿಕೊಂಡು, ನಮ್ಮ ಕೆಲಸಗಳನೇಕವನ್ನು ಮಾಡಿಕೊಟ್ಟು, ನಮಗೆ ಬೇಕುಬೇಕಾದ ತಿಂಡಿತಿನಿಸು ಮಾಡಿಬಡಿಸಿ, ನಮ್ಮ ಮುಂದಿನ ಕುಡಿಗಳಿಗೆ ಅಮ್ಮನಾಗಿ-ಹೊತ್ತು, ಹೆತ್ತು, ಸಲಹಿ, ಬೆಳೆಸಿ, ಅವರ ಬೇಕು-ಬೇಡಗಳನ್ನೂ ಗಣನೆಗೆ ತೆಗೆದುಕೊಂಡು ಹೀಗೇ ಹಲವು ಹತ್ತು ಕಾರ್ಯಗಳಲ್ಲಿ ಜೋಡಿ ಎತ್ತಿನಂತೇ ನಮಗೆ ಹೆಗಲುಗೊಡುವ ಹೆಂಡತಿಯ ಪಾತ್ರ ನಿಜಕ್ಕೂ ಬಹಳ ದೊಡ್ಡದು.


ಇಚ್ಛೆಯನರಿತು ನಡೆವ ಸತಿಯಾಗೆ
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ | ಸರ್ವಜ್ಞ

----ಇದು ಸರ್ವಜ್ಞ ಹೇಳಿದ್ದು. ಅದರಂತೇ ಈ ವಿಷಯದಲ್ಲಿ ನನಗೆ ನನ್ನ ಇಚ್ಛೆಯನ್ನರಿತು ನಡೆಯುವ ಸತಿ ಸಿಕ್ಕಿದ್ದಾಳೆ ಎಂದು ಹೆಮ್ಮೆಯಿಂದ ನಿಮ್ಮೆದುರಲ್ಲಿ ಬೀಗಲು ನಾಚಿಕೆಯೇನಿಲ್ಲ! ದಿನಾಲೂ ಓದುಗ ಮಿತ್ರರಿಗೆ ನಾನು ಉಣಬಡಿಸುವ ಬರಹಗಳ ಹಿಂದೆ ಅವಳ ತ್ಯಾಗ ಬಹಳವಿದೆ. ಅವಳಜೊತೆಗೆ ಕಳೆಯಬಹುದಾದ ಸಮಯವನ್ನು ಮೊಟಕುಗೊಳಿಸಿ ಸರಿರಾತ್ರಿ ೧ ಘಂಟೆಯವರೆಗೆ ಬರೆಯುತ್ತ ಕೂರುವ ನನಗೆ ಏನೊಂದೂ ಕಮಕ್ ಕಿಮಕ್ ಎನ್ನದೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾಳೆ ನನ್ನ ರಶ್ಮಿ. ಅವಳು ನನ್ನ ಬಾಳಿಗೆ, ನನ್ನ ಪಾಲಿಗೆ ’ರಶ್ಮಿ’ಯೇ ಸರಿ.

ಕರ್ನಾಟಕ ಸಂಗೀತವನ್ನು ಅಭ್ಯಸಿಸಿ ತನ್ನ ಇಂಪಾದ ಕಂಠದಿಂದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ.,ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವಿ., ಕುವೆಂಪು, ನಿಸಾರ್ ಅಹಮ್ಮದ್ ಮೊದಲಾದವರ ಕವನಗಳ ಜೊತೆ ನನ್ನ ಹಲವು ಹಾಡುಗಳನ್ನೂ ನನಗಾಗಿ ನಾನು ಕೇಳಿದಾಗ ಹಾಡಿ ರಂಜಿಸುವ ಆಕೆಗೆ ಈ ದಿನ ಹುಟ್ಟಿದ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಎಂಟುವರ್ಷಗಳಿಂದ ನನ್ನ ಬಿಡಿಸಲಾರದ ಭಾಗವಾದ ಆಕೆಯ ಹಾಗೂ ನನ್ನ ಮದುವೆಯ ಕಾಲದ ಕೆಲವು ನೆನಪಿನ ತುಣುಕುಗಳನ್ನು ಮತ್ತು ಮಗ ’ಶುಭಾಂಗ’ನ ಬಗೆಗೂ ಸೇರಿದಂತೆ ಇದೊಂದು ದಾಂಪತ್ಯ ಗೀತೆಯನ್ನು ಬರೆದಿದ್ದೇನೆ. ಇದನ್ನು ನನ್ನ ವಿಶಾಲ ಕುಟುಂಬದವರಾದ ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತದೆ. ಬನ್ನಿ ಅನುಭವಿಸಿ, ನಮ್ಮ ಜೀವನದ ಸವಿನೆನಪುಗಳನ್ನು--

ಮನದ ರಶ್ಮಿ

ನೆನಪಿನಂಗಳದಲ್ಲಿ ಮನವನ್ನು ಆಡಬಿಡೆ
ಬನಸಿರಿಯ ಸೊಬಗಂತೆ ಮೆರೆವ ಪುಟಗಳನು
ಅನಿತರೋಳ್ ಎನ್ನೊಡತಿ ಸೂರ್ಯ’ರಶ್ಮಿ’ಯ ತೆರದಿ
ಘನತರಂಗಗಳೆಬ್ಬಿ ನಗುವ ಚಿಮ್ಮಿದಳು

ಎಂಟುವರ್ಷಕು ಮುನ್ನ ನಾನ್ಯಾರೋ ಅವಳ್ಯಾರೋ
ಗಂಟುಬೀಳುವ ಕನಸು ನಮ್ಮಲಿರಲಿಲ್ಲ!
ನಂಟಾಯ್ತು ಆ ಜೀವ ನನ್ನೊಡನೆ ತಾ ನಡೆದು
ಕುಂಟು ನೆಪವದು ಸಾಕು ಒಮ್ಮೆ ಮುದ್ದಿಸಲು

" ಹೋಗಿ, ನಾ ಬರಲಾರೆ ಇದೇ ಮೊದಲು ಇದೇ ಕೊನೆಯು "
ಆಗ ನಾ ಗದರಿಸಿದೆ ನನ್ನ ಪಾಲಕರ
" ಬೇಗ ನೀ ಬಂದೊಮ್ಮೆ ನೋಡಿ ಹೋಗಿಬಿಡೆನುತ "
ರಾಗದಲಿ ಮೆದುಗೊಳಿಸಿ ನಡೆತಂದರೆನ್ನ !

ಸಾಗರದ ಈ ಹುಡುಗಿ ವೇಗದಲಿ ಮನಕದ್ದು
ಜಾಗರಣೆ ಕೂರಿಸಿದಳೆನ್ನ ಹಲವುದಿನ !
’ಜಾಗ’ ತುಂಬುವ ಮುಗುದೆ ಇವಳೇ ಸರಿಯೆಂದೆನಿಸಿ
ಬೀಗ ರವಾನಿಸಿದೆ ಹೃದಯದಿಂ ಸುದಿನ

ಬೀಗರೊಪ್ಪುತ ಹೊತ್ತಗೆಯ ತೆಗೆದು ದಿನಗುಣಿಸಿ
’ಮೇ’ಗಾಯ್ತು ತಿಥಿಮಿತಿಯ ತಾರಾನುಕೂಲ
ಸಾಗಾಟ ನಡೆದಿತ್ತು ನಡುವಲ್ಲಿ ನಮ್ಮೊಳಗೆ:
’ಮೇಘ ಸಂದೇಶ’ವಿಹ ಪ್ರೇಮ ಪತ್ರಗಳ !

ಪೆಪೆಪೆಪೆ ಮಂಗಳದ ವಾದ್ಯಗಳು ಮೊಳಗಿರಲು
ತಪಪಪಪ ಸಾವಿರದ ಚಪ್ಪಾಳೆ ತಟ್ಟಿ
ಹಿಪಿಪಿಪಿಪಿ ನಗೆಗಡಲ ಗದ್ದಲದ ಮಂಟಪದಿ
ಟಪಪಪಪ ಅಕ್ಷತೆಗಳುದುರಿ ಹರಸಿದವು

ಗಣಪ ಈಶ್ವರ ’ವಿಷ್ಣು’ ಎಲ್ಲ ದೈವಗಳನ್ನು
ಗಣನೆಯಲಿ ತಂದು ಶೋಧಿಸುತಿಟ್ಟ ಹೆಸರು
ಕೆಣಕುವನು ಆಗಾಗ ಕೈಕಾಲು ಮೈ ಹತ್ತಿ
ಅಣಕಿಸುತ ನಾಲ್ಕುವರೆ ವಯದ ’ಶುಭಾಂಗ’