ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 1, 2014

ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ದ ಸುತ್ತ.

ಚಿತ್ರಗಳ ಋಣ: ಅಂತರ್ಜಾಲ
ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ದ ಸುತ್ತ.

ಅಡುಗೆಯನ್ನೂ,  ಉಪ್ಪಿನಕಾಯಿಯನ್ನೂ ಅದದೇ ತೆರನಾದ ಮೂಲವಸ್ತು-ಪರಿಕರಗಳನ್ನು ಬಳಸಿ, ಹಲವು ಜನ ತಯಾರಿಸುತ್ತಾರೆ; ಅವುಗಳಲ್ಲಿ ಒಂದರಂತೆ ಇನ್ನೊಂದು ಡಿಟ್ಟೋ ಇರುವುದಿಲ್ಲ. ಶಿಲೆಗಳಲ್ಲಿ ಕಲೆಗಳರಳುವುದು, ರಂಗಗಳಲ್ಲಿ ಪಾತ್ರಗಳು ಜೀವಂತಿಕೆ ಪಡೆದುಕೊಳ್ಳುವುದು,  ಜೀವರಹಿತ ವಾದ್ಯಪರಿಕರಗಳಲ್ಲಿ ಜೀವವಿದೆಯೆಂಬಷ್ಟು ಚೈತನ್ಯ ಉಕ್ಕಿ ಹರಿಯುವುದು, ಇಲ್ಲೆಲ್ಲವೂ ಹಾಗೆಯೇ. ಒಬ್ಬೊಬ್ಬರದೂ ವಿಭಿನ್ನ ಮತ್ತು ವಿಶಿಷ್ಟ. ಹಿಂದಿನ ಕವಿಗಳು ವಿಕೃತಮನಸ್ಸನ್ನು ಮಾತ್ರ ಹೊಂದಿರಲಿಲ್ಲ ಎಂಬುದು ಬಹಳ ಸಮಾಧಾನ ಯಾಕೆಂದರೆ ಅಂದು ರಾಜರ ಕಾಲವಾಗಿತ್ತು. ಕೃತಿಗಳಲ್ಲಿ ತಪ್ಪಿದ್ದರೆ ಕವಿಗಳಿಗೂ ಶಿಕ್ಷೆಯಾಗುತ್ತಿತ್ತು, ಕೃತಿಗಳು ಸಂಪದ್ಭರಿತವಾಗಿದ್ದರೆ ಯಥಾಯೋಗ್ಯ ಸನ್ಮಾನ-ಪುರಸ್ಕಾರಗಳು ನಡೆಯುತ್ತಿದ್ದವು. ಅಂತಹ ಸವಾಲುಗಳನ್ನು ಎದುರಿಸಲು ಸಿದ್ಧನಾಗುವ ವಿಶಾಲ ಅಧ್ಯಯನದ ಹಿನ್ನೆಲೆಯುಳ್ಳ ವ್ಯಕ್ತಿ  ಮಾತ್ರ ಕವಿಯಾಗುತ್ತಿದ್ದ. ಮಂಡಿಸುವ ವಿಷಯಗಳ ಮೇಲೆ ಆತನಿಗೆ ಅಪಾರವಾದ ಪ್ರೌಢಿಮೆ ಇರುತ್ತಿತ್ತು.  ಎದುರುವಾದಿಗಳಾಗಿ ಬರಬಹುದಾದ ಅನ್ಯ ಪಂಡಿತರಿಗೆ ಆತ ಉತ್ತರಹೇಳಬೇಕಾಗಿತ್ತು.

ದೇವಪುರದ ಲಕ್ಷ್ಮೀಶ ಮಹಾಕವಿಯ ಕಾಲಮಾನ 16-17 ಶತಮಾನವೆಂದು ಹೇಳಲಾಗುತ್ತದೆ. ಕುಮಾರವ್ಯಾಸ ಭಾರತದ ನಂತರ ಲಕ್ಷ್ಮೀಶ ’ಜೈಮಿನಿ ಭಾರತ’ವನ್ನು ಬರೆದ.  ಹಿಂದಿನ ಕವಿಗಳ ಇನ್ನೊಂದು  ವಿಶಾಲ ಬುದ್ಧಿಯೆಂದರೆ ಪೂರ್ವಸೂರಿಗಳನ್ನು ಚೆನ್ನಾಗಿ ಓದಿಕೊಳ್ಳುವುದು. ಕಾಲಘಟ್ಟಗಳಲ್ಲಿ ತಾಲಪತ್ರಗಳಲ್ಲೇ ಬರೆಯಲ್ಪಡುತ್ತಿದ್ದ ಕೃತಿಗಳನ್ನು ಇಂದಿನಂತೆ ಪುಸಕ್ಕನೆ ಕಾಪಿ, ಪೇಸ್ಟ್ ಮಾಡಲು ಸಾಧ್ಯವಿರಲಿಲ್ಲ, ಬರೆಯಲು ಅತ್ಯುತ್ತಮವೆಂಬ ಉಪಕರಣಗಳಾಗಲೀ, ವಿದ್ಯುತ್ತಾಗಲೀ ಇರಲಿಲ್ಲ. ಹಗಲಿನ ಬೆಳಕಿನಲ್ಲೇ, ಸಾಮಾನ್ಯವಾಗಿ ದೇವಾಲಯಗಳ ಪೌಳಿಯಲ್ಲಿ, ಸ್ನಾನ ಮಾಡಿಕೊಂಡು ಕುಳಿತು ಬರೆಯುತ್ತಿದ್ದರು. ಅಂತಹ ಸನ್ನಿವೇಶಗಳಲ್ಲೂ ಕವಿತ್ವವನ್ನು ಉದ್ದೀಪಿಸಿಕೊಂಡು ಬರೆಯುವುದು ಶ್ರಮದಾಯೀ ಕೆಲಸವಾಗಿತ್ತು.

ಕವಿ ಲಕ್ಷ್ಮೀಶ ಬರೆದ ’ಜೈಮಿನಿ ಭಾರತ’ದ ಪ್ರಥಮ ಮುದ್ರಣ 1932ರಲ್ಲಿ ಬೆಂಗಳೂರಿನ ಒಕ್ಕಲಿಗರ ಸಂಘದ ಪ್ರೆಸ್ಸಿನಲ್ಲಿ ನಡೆಯಿತೆಂದು ತಿಳಿದುಬರುತ್ತದೆ. ಅಂದಿಗೆ  ಈ ಹೊತ್ತಗೆಗೆ ಮಾರುಕಟ್ಟೆಯಲ್ಲಿಟ್ಟ  ಗೌರವಮೌಲ್ಯ 5 ರೂಪಾಯಿಗಳು. ಪ್ರಥಮ ಮುದ್ರಣದಲ್ಲಿ 2500 ಪ್ರತಿಗಳನ್ನು ಅಚ್ಚು ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಶೀರ್ಷಿಕಾ ಪುಟದಲ್ಲಿ `ದೇವಪುರದ ಲಕ್ಷ್ಮೀಶ ಮಹಾಕವಿ ವಿರಚಿತ ಕರ್ಣಾಟಕ ಜೈಮಿನಿ ಭಾರತವು,  ವೇದಮೂರ್ತಿ ಪಂಡಿತ ಕೆ. ನಂಜುಂಡ ಶಾಸ್ತ್ರಿಗಳಿಂದಲೂ, ಬ್ರಹ್ಮಶ್ರೀ  ಹೆಡ್ಮಾಸ್ಟರ್ ಹೆಚ್ ನಾಗಪ್ಪನವರಿಂದಲೂ,  ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ ವಿಶೇಷಗಳು, ವಿಶೇಷಾರ್ಥಗಳು ಇವುಗಳೊಡನೆ ಬರೆಯಲ್ಪಟ್ಟು, ಇದರ ಸರ್ವಾಧಿಕಾರವನ್ನು ಬೆಂಗಳೂರು ಸಿಟಿಯ ಚಿಕ್ಕಪೇಟೆ ಶ್ರೀ ಸರಸ್ವತಿ ರತ್ನಾಕರ ಬುಕ್ಕು ಡಿಪೋ ಸರ್ವಾಧಿಕಾರಿ ಟಿ.ಎನ್. ಶ್ರೀನಿವಾಸ ಶೆಟ್ಟರಿಗೆ ಕೊಡಲಾಗಿದೆ’ ಎನ್ನುವ ಒಕ್ಕಣೆ ಇದೆ.



ಇದರ ಆಹಾರ್ಯ ಹೀಗಿದೆ: ಚತುಷ್ಕ ಡೆಮಿ ಆಕಾರದ ಈ ಕೃತಿಯಲ್ಲಿ 12+940 ಪುಟಗಳಿವೆ. ಇದರ ಸಂಪಾದಕರಲ್ಲೊಬ್ಬರಾದ ಹೆಚ್. ನಾಗಪ್ಪನವರು,  ಬೆಂಗಳೂರು ಮಹಾನಗರದ, ವಿಶ್ವೇಶ್ವರಪುರದಲ್ಲಿರುವ  ಪ್ರೈಮರಿ ಬಾಯ್ಸ ಸ್ಕೂಲ್ನಲ್ಲಿ  ಹೆಡ್ಮಾಸ್ಟರ್ ವೃತ್ತಿ ನಿರ್ವಹಿಸಿದ್ದು, ಇವರ 8 ಪುಟಗಳ ಉಪಯುಕ್ತ ಉಪೋದ್ಘಾತ ಹಾಗೂ ಸೂಚನೆ ಈ ಪುಸ್ತಕದಲ್ಲಿ ಅಡಕವಾಗಿದೆ.  ರಕ್ಷಾಪುಟಗಳ ಒಳಮೈಯ್ಯಲ್ಲಿ, ಆ ಕಾಲಕ್ಕೆ ಶ್ರೀ ಸರಸ್ವತೀ ರತ್ನಾಕರ ಬುಕ್ ಡಿಪೋ ಪ್ರಕಟಿಸಿದ್ದ, ಭಾರತಿ ಸಂಪಂಗಿರಾಮ ವಿರಚಿತ ’ಶ್ರೀಮದ್ವಾಲ್ಮೀಕಿ ರಾಮಾಯಣ ಕಥಾಸಂಗ್ರಹಂ’, ’ಸಚಿತ್ರ ಶುಕಸಪ್ತತಿ 70 ಕಥೆಗಳು’, ’ಭಟ್ಟಿ ವಿಕ್ರಮಾದಿತ್ಯರಾಯನ ಕಥೆಗಳು’, ’ಶ್ರೀಮದ್ಭಗವದ್ಗೀತಾ’ ಹಾಗೂ ’ಸಚಿತ್ರ ಮಹಾಭಕ್ತಿ ವಿಜಯವು’- ಎಂಬ ಐದು ಪುಸ್ತಕಗಳ ಜಾಹೀರಾತುಗಳಿವೆ.

ಕನ್ನಡದಲ್ಲಿ ಕುಮಾರವ್ಯಾಸ ಭಾರತದ ನಂತರ, ಮಹಾಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ವು ಅತ್ಯಂತ ಜನಪ್ರಿಯ ಕಾವ್ಯ ಎನಿಸಿತ್ತು. ಇದೇ ರೀತಿಯ ಮತ್ತೊಂದು ಕಾವ್ಯವೆಂದರೆ ರಾಘವಾಂಕ ಕವಿಯ ’ಹರಿಶ್ಚಂದ್ರ ಕಾವ್ಯ’. ಅತ್ಯಾಶ್ಚರ್ಯಕರ ಸಂಗತಿ ನೋಡಿ: ಟೀಕೆ ತಾರ್ತ್ಪಯಗಳೊಂದಿಗಿನ ಜೈಮಿನಿ ಭಾರತದ ಪ್ರಕಟಣೆಗೆ ಕನ್ನಡದಲ್ಲಿ ಅಂದು ನಾಂದಿ ಹಾಡಿದವನು ಜರ್ಮನಿಯ ಹರ್ಮನ್ ಮೋಗ್ಲಿಂಗ್! ಈತ 1848ರಲ್ಲಿ ಮೊದಲಬಾರಿಗೆ ಮಂಗಳೂರಿನಲ್ಲಿ, ವ್ಯಾಖ್ಯಾನದೊಂದಿಗೆ ಮೋಗ್ಲಿಂಗ್ `ಜೈಮಿನಿ ಭಾರತ’ದ ಕೆಲವು ಸಂಧಿಗಳನ್ನು ಕಲ್ಲಚ್ಚು ಮುದ್ರಣದಲ್ಲಿ ಪ್ರಕಟಿಸಿದನು!! ಇದಕ್ಕೆ ನಿಮ್ಮಿಂದೊಂದು ಚಪ್ಪಾಳೆಯಿರಲಿ. ನಂತರ 1852ರಲ್ಲಿ ಡೇನಿಯಲ್ ಸ್ಯಾಂಡರ್ಸನ್, 1873ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು, 1875ರಲ್ಲಿ ಹೊಳಕಲ್ಲು ಶ್ರೀನಿವಾಸ ಪಂಡಿತರು, 1875ರಲ್ಲಿ ವೆಂಕಟ ರಂಗೋ ಕಟ್ಟಿ, 1887ರಲ್ಲಿ ಮಿಸರ ಗೌರೀಶಂಕರ ರಾಮಪ್ರಸಾದ, 1888ರಲ್ಲಿ ಮೂರು ಭಾಗಗಳಲ್ಲಿ ದಕ್ಷಿಣಾಮೂರ್ತಿ ಶಾಸ್ತ್ರಿಗಳು, 1889ರಲ್ಲಿ ಎಂ.ಆರ್. ಅಣ್ಣಾಜಿ ರಾವ್,  1893ರಲ್ಲಿ ಕೃಷ್ಣರಾವ್ ಬಾಳಾಜಿ ರಾವ ಬೆಂಡಗೇರಿ, 1897ರಲ್ಲಿ ಬಿ.ಎಂ. ಸಿದ್ಧಲಿಂಗಶಾಸ್ತ್ರಿ- ಈ ಮುಂತಾದವರು ಜೈಮಿನಿ ಭಾರತವನ್ನು ಬಿಡಿಯಾಗಿ, ಇಡಿಯಾಗಿ ಟೀಕೆ, ಅರ್ಥಗಳೊಂದಿಗೆ ಕಲ್ಲಚ್ಚಿನಲ್ಲಿಯೇ  ಪ್ರಕಟಿಸಿದ್ದಾರೆ. [ಕಲ್ಲಚ್ಚು ಎಂದರೇನೆಂದು ಹುಡುಕುತ್ತಿದ್ದೇನೆ,  ವಿವರ ಗೊತ್ತಿದ್ದರೆ ಕೃಪಯಾ ಯಾರಾದರೂ ತಿಳಿಸುವುದು]

ತೀರಾ ಇತ್ತೀಚೆಗೆ 2010ರಲ್ಲಿ,  ಸದರೀ ’ಜೈಮಿನಿ ಭಾರತ’ದ  ಮೂಲ-ತಾತ್ಪರ್ಯಗಳನ್ನು ಗಂಜೀಫಾ ಕಲೆಯೊಂದಿಗೆ, ಸಚಿತ್ರವಾಗಿ ಪ್ರಸ್ತುತ ಪಡಿಸಿದವರು ಅ.ರಾ.ಸೇತೂರಾಮ ರಾವ್;  ಅವರ ಈ ಬೃಹತ್ ಕೃತಿಯನ್ನು ಬೆಂಗಳೂರಿನ `ಕಾಮಧೇನು ಪುಸ್ತಕ ಭವನ’ ಪ್ರಕಟಿಸಿತು. ಇವೆಲ್ಲದರ ಜೊತೆಜೊತೆಗೆ,  ಲಕ್ಷ್ಮೀಶನ ವಾರ್ಧಕ ಷಟ್ಪದಿ ಪದ್ಯರೂಪದ ’ಜೈಮಿನಿ ಭಾರತವನ್ನು’ ಟೀಕೆ ತಾರ್ತ್ಪಯಗಳಿಲ್ಲದ ಮೂಲರೂಪದಲ್ಲಿ,  ಸಾಕಷ್ಟು ಜನ ವಿದ್ವಾಂಸರು ಸಂಪಾದಿಸಿದ್ದಾರೆ. ಇವೆಲ್ಲವೂ  ಲಕ್ಷ್ಮೀಶನ ಪ್ರಸ್ತುತತೆಗೂ ಕಾವ್ಯದ ಸುದೀರ್ಘ ಜೀವಂತಿಕೆಗೂ, ಜನಪ್ರಿಯತೆಗೂ ಮತ್ತು  ಆಯಾ ವಿದ್ವಾಂಸರ ವಿದ್ವತ್ತಿಗೂ ಸಿಗಬಹುದಾದ ನಿದರ್ಶನಗಳಾಗಿವೆ.

1932 ರಲ್ಲಿ ಮುದ್ರಣವಾಗಿದ್ದ ಕೃತಿಯಲ್ಲಿ, 34 ಸಂಧಿಗಳಲ್ಲಿ 1906 ವಾರ್ಧಕ ಷಟ್ಪದಿಗಳಿಗೆ ಪ್ರತಿಯೊಂದು ಪದ್ಯಕ್ಕೂ ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ, ಅಲಂಕಾರಾದಿ ಆಭೂಷಣಗಳನ್ನೂ ಪದಗಳ ವಿಶಿಷ್ಟ ಧ್ವನ್ಯಾರ್ಥಸಹಿತ ನೀಡಲಾಗಿದೆ. ಕೃತಿಯ ಕೊನೆಯೊಳಗೆ ಒಂದು ಕಂದಪದ್ಯವಿದೆ:

ಕನ್ನಡಜೈಮಿನಿಭಾರತ                                                                        
ಕುನ್ನತತಾರ್ತ್ಪಯಟೀಕೆಸಕಲಾರ್ಥಗಳಿಂ                          
ಚೆನ್ನೆನೆಮೆರೆದುದುಗುಣಸಂ                                        
ಪನ್ನತೆಯಿಂದಾಂಗೀರಸದಶುಭವತ್ಸರದೊಳ್        

ಕೃತಿಯ ಮೊದಲ 18 ಸಂಧಿಗಳಿಗೆ ವೇದಮೂರ್ತಿ ಕಡಬದ ನಂಜುಂಡ ಶಾಸ್ತ್ರಿಗಳೂ ನಂತರದ 16 ಸಂಧಿಗಳಿಗೆ ಹೆಡ್ಮಾಸ್ಟರ್ ಹೆಚ್.ನಾಗಪ್ಪ ಅವರೂ ಟೀಕಾತಾರ್ತ್ಪಯ ಬರೆದಿರುವುದು ಕಾಣುತ್ತದೆ. ಹೆಚ್.ನಾಗಪ್ಪನವರ ಉಪೋದ್ಘಾತದಲ್ಲಿ: `"ಮರಾಶ್ರೀ ಟಿ. ಯನ್. ಶ್ರೀನಿವಾಸಶೆಟ್ಟರವರು, ಕಡಬದ ನಂಜಂಡಶಾಸ್ತ್ರಿಗಳಿಂದಲೆ ಟೀಕಾ ತಾರ್ತ್ಪಯ ವಿಶೇಷ ವಿಷಯಗಳೊಡನೆ ಅಲಂಕಾರ ವಿವರಣೆ ಸಹಿತವಾಗಿ ಟೀಕೆಯನ್ನು ಬರೆಸಿ ಮುದ್ರಿಸುತ್ತಾ ಬಂದರು. ಈ ಕಾರ್ಯವು ಅರ್ಧ ಭಾಗ ಕೈಗೂಡಿ ಹದಿನೆಂಟನೆಯ ಸಂಧಿಗೆ ಟೀಕೆ ಬರೆಯುತ್ತಿದ್ದಾಗ, ದುರ್ದೈವಹತರಾಗಿ ನಂಜುಂಡಶಾಸ್ತ್ರಿಗಳು ಅಕಾಲ ಮರಣಕ್ಕೆ ಗುರಿಯಾಗಿ, ಇದ್ದಕ್ಕಿದ್ದ ಹಾಗೆ ಸತ್ತು ಹೋದರು. ಹೀಗಾದ ಮೇಲೆ, ಕಾಕತಾಳನ್ಯಾಯದಂತೆ ಕನ್ನಡಿಗರ ಸೇವೆ ಸತ್ಕಾರಗಳನ್ನು ಪರೋಕ್ಷದಲ್ಲಿ ಮಾಡುತ್ತಿದ್ದ ನನ್ನನ್ನು ಹುರಿದುಂಬಿಸಿ, ಮುಂದಿನ ಟೀಕೆಯನ್ನು ಬರೆಯುವ ಭಾರವನ್ನು ನನ್ನ ಮೇಲೆ ಹೊರಿಸಿ, ಭಗವದಾಜ್ಞೆಯಂತೆ ಅಪ್ರಾರ್ಥಿತವಾಗಿ ಬಂದ ಈ ಸುಸಂಧಿಯನ್ನು ಬಿಡಬಾರದೆಂದು ನಾನು ಕಾರ್ಯವನ್ನು ಪ್ರಾರಂಭಿಸಿದೆನು" ಎಂಬ ಹೇಳಿಕೆ ನಾಗಪ್ಪನವರ ವಿನಮ್ರ-ವಿಧೇಯ ಸ್ವಭಾವ ಮತ್ತು ಸಮಾಜಹಿತ-ಕಾಳಜಿಯನ್ನು ತೋರುತ್ತದೆ.

ನಂಜುಂಡಶಾಸ್ತ್ರಿಗಳು ಮತ್ತು ತಾವು[ನಾಗಪ್ಪನವರು] ಇಬ್ಬರೂ ಸೇರಿ ಇದಕ್ಕೆ ಟೀಕೆ ತಾರ್ತ್ಪಯಗಳನ್ನು ಏಕೆ ಬರೆಯಬೇಕಾಯ್ತೆಂಬ ಸಂದರ್ಭವನ್ನು ಸಹ ತಿಳಿಸಿದ್ದಾರೆ.  1931ಕ್ಕೂ  ಮುಂಚೆ, ಬೆಳ್ಳಾವೆ ವೆಂಕಟನಾರಾಯಣಪ್ಪನವರಿಗೆ ’ಪಂಪ ಭಾರತ’ವನ್ನು ಶಾಸ್ತ್ರೀಯವಾಗಿ ಗ್ರಂಥಸಂಪಾದನೆ ಮಾಡಲು ಪ್ರಸ್ತುತ ಕೃತಿಯ ವ್ಯಾಖ್ಯಾನಕಾರರಾದ ಕಡಬದ ನಂಜುಂಡಶಾಸ್ತ್ರಿಗಳು ನೆರವು ನೀಡಿದ್ದರು ಎಂಬುದನ್ನು ಅವರು ಉಲ್ಲೇಖಿಸಿ, ಈರ್ವರ ವಿಭಿನ್ನ ದೃಷ್ಟಿಕೋನಗಳಿಂದ ಬರೆಯಲ್ಪಡುವ ಟೀಕಾತಾತ್ಪರ್ಯ ಹಲವರಿಗೆ ರಂಜನೀಯವಗಬಹುದೆಂಬ ಅನಿಸಿಕೆಯಿಂದ ಹಾಗೆ ಮಾಡಿದ ಕುರುಹನ್ನು ನೀಡಿದ್ದಾರೆ.

ಅನುಕ್ರಮವಾಗಿ ಪದ್ಯ,  ಪ್ರತಿಪದಾರ್ಥ,  ಭಾವಾರ್ಥ,  ವಿಶೇಷಾಂಶ-ಈ ಕ್ರಮದಲ್ಲಿ ಪ್ರತಿಯೊಂದು ಪದ್ಯಕ್ಕೂ ಟೀಕಾತಾತ್ಪರ್ಯಗಳಿವೆ. ಸದರೀ ಮಹಾಕಾವ್ಯದ  ಸಹಜಾರ್ಥ ಮತ್ತು ಪದಗಳ ಗೂಡಾರ್ಥಗಳನ್ನು ಸವಿಯಲು ಇದು ಸಹಾಯಕವಾಗುತ್ತದೆ. ಪ್ರತಿಪದಾರ್ಥ ನೀಡುವಾಗ, ಮೂಲ ಪದ್ಯದಲ್ಲಿರುವ ಒಟ್ಟು ಅರ್ಥಘಟಕಗಳನ್ನು ಸಂಖ್ಯೆಯನ್ನು ಸೂಚಿಸುವ ಮೂಲಕ ನಿರ್ದೇಶಿಸಿರುತ್ತಾ ಹೋಗುತ್ತಾರೆ. ಉದಾಹರಣೆಗೆ:

ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ 
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ 
ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೇ |
ಆವಗಂ ಸರಸ ಕರುಣಾಮೃತದ ಕಲೆಗಳಿಂ 
ತೀವಿದೆಳೆನಗೆಯ ಬೆಳ್ದಿಂಗಳಂ ಪಸರಿಸುವ 
ದೇವಪುರನಿಲಯ ಲಕ್ಷ್ಮೀರಮಣನಾಸ್ಯಚಂದ್ರಾನಂದವೆಮಗೀಯಲೀ ||

ಪ್ರತಿಪದಾರ್ಥ:1.ಶ್ರೀವಧುವಿನ-ಲಕ್ಷ್ಮೀದೇವಿಯ, ಅಂಬಕ-ಕಣ್ಣೆಂಬ, ಚಕೋರಕಂ-ಚಕೋರ ಪಕ್ಷಿಯು, ಪೊರೆಯೆ-ಆನಂದವನ್ನು ಪಡೆಯಲು, ಭಕ್ತಾವಳಿಯ-ಭಕ್ತ ಸಮೂಹದ, ಹೃತ್-ಮನಸ್ಸೆಂಬ, ಕುಮುದ-ಬಿಳಿಯ ನೆಯ್ದಿಲೆಯ, ಕೋರಕಂ-ಮೊಗ್ಗು, ಬಿರಿಯೆ-ಅರಳಲು (ವಿಕಾಸಗೊಳ್ಳಲು), 2. ಜಗತೀ ವಲಯದ-ಭೂಮಂಡಲದ, ಅಮಲ-ನಿರ್ಮಲವಾದ, 3. ಸೌಭಾಗ್ಯ-ಐಶ್ವರ್ಯವೆಂಬ, 4. ರತ್ನಾಕರಂ-ಸಮುದ್ರವು, ಪೆರ್ಚಿನಿಂ-ವೃದ್ಧಿಯಿಂದ, 5 ಮೇರೆವರಿಯೆ-ದಡವನ್ನು ಮೀರಿ ಉಕ್ಕಲು, ಆವಗಂ-ಯಾವಾಗಲೂ, ಸರಸ-ರಸವತ್ತಾದ, ಕರುಣಾ-ದಯೆಯೆಂಬ, 6.ಅಮೃತದ, 7. ಕಲೆಗಳಿಂ-(ಅಂಶ) ಕಳೆಗಳಿಂದ, ತೀವಿದ-ತುಂಬಿದ, ಎಳನಗೆಯ-ಕಿರುನಗೆಯೆಂಬ, ಬೆಳ್ದಿಂಗಳಂ, ಪಸರಿಸುವ-ಹರಡುವ, ದೇವಪುರ-ದೇವನೂರಿನಲ್ಲಿ, ನಿಲಯ-ನೆಲೆಗೊಂಡಿರುವ, ಲಕ್ಷ್ಮೀರಮಣನ-ಲಕ್ಷ್ಮೀಕಾಂತಸ್ವಾಮಿಯ, 8. ಆಸ್ಯಚಂದ್ರ-ಮುಖವೆಂಬ ಚಂದ್ರನು, ಎಮಗೆ-ನಮಗೆ, ಆನಂದವ-ಹರ್ಷವನ್ನು, ಈಯಲಿ-ಕೊಟ್ಟು (ರಕ್ಷಿಸಲಿ).

ಪದ್ಯದ ಭಾವಾರ್ಥ: ಲಕ್ಷ್ಮೀದೇವಿಯ ನೇತ್ರಗಳೆಂಬ ಚಕೋರ ಪಕ್ಷಿಗಳಿಗೆ ಹರ್ಷವನ್ನುಂಟುಮಾಡುತ್ತಲೂ, ಭಗವದ್ಭಕ್ತರ ಮನಸ್ಸೆಂಬ ನೈದಿಲೆಗಳನ್ನು ಅರಳಿಸಿ ವಿಸ್ತಾರಪಡಿಸುತ್ತಲೂ, ವಿಸ್ತಾರವಾದ ಈ ಭೂಮಂಡಲದ ಐಶ್ವರ್ಯವೆಂಬ ಸಮುದ್ರವು ಉಬ್ಬಿ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ, ಸರ್ವದಾ ರಸಯುಕ್ತವಾದ ಕರುಣೆಯೆಂಬ ಅಮೃತ ಕಳೆಗಳಿಂದ ತುಂಬಿಮುಗುಳ್ನಗೆಯೆಂಬ ಬೆಳ್ದಿಂಗಳನ್ನು ಎಲ್ಲೆಡೆಗಳಲ್ಲಿಯೂ ಹರಡಿ ಬೆಳಗುತ್ತಲೂ ಇರುವ, ದೇವನೂರಿನಲ್ಲಿ ನೆಲೆಸಿರುವ ಲಕ್ಷ್ಮೀರಮಣಸ್ವಾಮಿಯ ಮುಖವೆಂಬ ಚಂದ್ರನು ನಮಗೆ ಸಂತೋಷವನ್ನುಂಟು ಮಾಡಲಿ.

ಚಂದ್ರನು ಹೇಗೆ ಅಮೃತಮಯವಾದ ತನ್ನ ಹದಿನಾರು ಕಳೆಗಳನ್ನೂ ಬೆಳ್ದಿಂಗಳ ರೂಪದಲ್ಲಿ ಲೋಕದಲ್ಲೆಲ್ಲಾ ಹರಡಿ ಚಕೋರ ಪಕ್ಷಿಗೆ ನೇತ್ರಾನಂದವನ್ನುಂಟು ಮಾಡುತ್ತಲೂ, ಬಿಳಿಯ ನೆಯ್ದಿಲೆಗಳನ್ನು ಅರಳುವಂತೆ ಮಾಡುತ್ತಲೂ, ಸಮುದ್ರವು ಸಂತೋಷದಿಂದ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ ಇರುವನೋ ಹಾಗೆ, ಲಕ್ಷ್ಮೀದೇವಿಯ ಕಣ್ಣುಗಳಿಗೆ ಹರ್ಷವನ್ನುಂಟು ಮಾಡುತ್ತಲೂ, ಭಕ್ತರ ಮನಸ್ಸು ಆನಂದದಿಂದ ವಿಸ್ತಾರಗೊಳ್ಳುವಂತೆ ಮಾಡುತ್ತಲೂ, ಪ್ರಪಂಚದ ಐಶ್ವರ್ಯವು ಅಭಿವೃದ್ಧಿ ಹೊಂದುವಂತೆ ಮಾಡುತ್ತಲೂ, ಮುಗುಳ್ನಗೆಯಿಂದ ಶೋಭಿಸುತ್ತಿರುವ ತನ್ನ ಕೃಪಾಕಟಾಕ್ಷವನ್ನು ಯಾವಾಗಲೂ ಪ್ರಸರಿಸುತ್ತಿರುವ ಶ್ರೀ ಲಕ್ಷ್ಮೀರಮಣಸ್ವಾಮಿಯ ದಿವ್ಯಮುಖವು, ನಮ್ಮೆಲ್ಲರಿಗೂ ಹರ್ಷವನ್ನುಂಟುಮಾಡಲಿ.

-ಇಂತೀಪರಿಯಲ್ಲಿ, ಪ್ರತಿಯೊಂದೂ ಪದದ, ಪದ್ಯದ ಅರ್ಥವನ್ನು, ಸುಲಭವಾಗಿ ಗ್ರಹಿಸುವುದಕ್ಕೆ ಅನುಕೂಲವಾಗುವಂತಹ ವ್ಯತ್ಪತ್ತಿಗಳನ್ನು ಸದರೀ ವ್ಯಾಖ್ಯಾನಕಾರರು ಸಮಗ್ರವಾಗಿ ನೀಡಿರುವುದರಿಂದ, ಕಾವ್ಯಾನುಭವದ ಸ್ವೋಪಜ್ಞತೆಯ ’ಸೌಂದರ್ಯ ಲಹರಿ’ಯ ದರ್ಶನವನ್ನು ಪಡೆದುಕೊಳ್ಳಲು ಈ ಕ್ರಮವು ಸ್ವಾಧ್ಯಾಯಿಗಳಿಗೆ ಬಹಳ ಅನುಕೂಲಕರವಾಗಿದೆ.ಇತ್ತೀಚೆಗೆ ವಿಧಿವಶರಾದ ಮಹಾಮಹೋಪಾಧ್ಯಾಯ ವಿದ್ವಾನ್ ಎನ್.ರಂಗನಾಥ ಶರ್ಮರು  ಕವಿ ಲಕ್ಷ್ಮೀಶನ ’ಜೈಮಿನಿ ಭಾರತ’ ಕೃತಿಗೆ ತನ್ನ ಯೋಗದಾನವನ್ನು ಮಾಡಿದ್ದಾರೆ ಎಂಬುದನ್ನೂ ಮರೆಯುವಂತಿಲ್ಲ.    ಇಂದು ಸಂಶೋಧನಾ ಗ್ರಂಥಗಳನ್ನು ಬರೆಯುವ ಹಲವರು ಇಂತಹ ಅದ್ಭುತ ಕಾವ್ಯವಸ್ತುಗಳನ್ನು ಕೈಗೆತ್ತಿಕೊಂಡರೆ ಅವರಿಗೆ ಸರ್ಟಿಫಿಕೇಟ್ ಜ್ಞಾನದ ಹೊರತಾದ ನಿಜವಾದ ದಿವ ರಸಾನುಭೂತಿಯೂ ಪ್ರಾಪ್ತವಾಗುತ್ತಿತ್ತು ಎನ್ನಬಹುದು.