ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 1, 2010

ನಿಮ್ಮ ಮುಖದಲಿ ನಗುವದರಳಿದರೆ ಸಾಕೆನಗೆ


[ಚಿತ್ರಗಳ ಋಣ : ಅಂತರ್ಜಾಲ ]

ಮನುಷ್ಯ ಸ್ವಾರ್ಥರಹಿತನಾಗಿ ವಿಶ್ವವೇ ತನ್ನ ಕುಟುಂಬ ಎಂಬರೀತಿಯಲ್ಲಿ ನಡೆದುಕೊಂಡರೆ ಆಗ ಅದರ ಅನುಭವವೇ ಬೇರೆ! ನಾವು ಬಾಯಲ್ಲಿ ಹೇಳಿಬಿಡುತ್ತೇವೆ-ನಾವು ಹಾಗೇ ಇದ್ದೇವೆ ಎಂದು, ಇಲ್ಲ ನೀವೇ ವಿಚಾರಿಸಿಕೊಳ್ಳಿ ನಿಮ್ಮ ಮನಸ್ಸನ್ನು, ಇಂದು ಹಣ್ಣಿನ ಅಂಗಡಿಯಲ್ಲಿ ಹೊಸಥರದ ಹಣ್ಣುಬಂದರೆ ಸ್ಥಿತಿವಂತರಾದನಾವು ಒಮ್ಮೆಲೇ " ಏ ಎಲ್ಲಾ ನಮಗೇ ಇರ್ಲಪ್ಪಾ , ಕವರಲ್ಲಿ ಹಾಕಿ ಪ್ಯಾಕ್ ಮಾಡಿಬಿಡು " -ಎನ್ನುತ್ತೇವೆ, ಇದನ್ನು ಮನುಷ್ಯ ಸಹಜ ಬಯಕೆ ಎನ್ನುತ್ತೇವೆ, ನಮ್ಮ ಥರದಲ್ಲೇ ಹಲವರು ಪಕ್ಕದಲ್ಲಿ ನಿಂತಿರುವವರು ಅಂತಹ ಹಣ್ಣನ್ನು ಬಯಸಿರಬಹುದು, ಅವರಿಗೂ ಬೇಕೆನಿಸಿರಬಹುದು ಆದರೆ ಆ ಗ್ರಹಿಕೆ ನಮಗಿಲ್ಲ. ಮನೆಯಲ್ಲಿ ಸಿಹಿತಿಂಡಿ ಮಾಡಿದಾಗ ಎಲ್ಲವೂ ನನಗಿರಲಿ ಅಥವಾ ಜಾಸ್ತಿ ನನಗಿರಲಿ- ಇದು ನಮ್ಮ ಹಪಹಪಿಕೆ, ಇದು ಜಿವ್ಹಾಚಾಪಲ್ಯ. ಇಂತಹ ತಾನು-ತನ್ನದು-ತನಗಿರಲಿ-ತನ್ನ ಕುಟುಂಬಕ್ಕೆ ಮಾತ್ರವಿರಲಿ ಎಂಬ ಬಯಕೆಯನ್ನ ಈ ಸಣ್ಣತನವನ್ನ ತೋರೆಯುವುದೇ ' ಪ್ರತ್ಯಾಹಾರ ' . ನಮ್ಮ ಪೂರ್ವಜರು, ಸಾಧಕರು,ಋಷಿಮುನಿಗಳು ತಮ್ಮನ್ನೇ ವಿಶ್ವಕ್ಕೆ ಸಮರ್ಪಿಸಿಕೊಂಡು ತನ್ಮೂಲಕ ಕಂಡ ಅಷ್ಟಾಂಗಯೋಗದ ಒಂದು ಹಂತ. ಯೋಗವೆಂದರೆ ಯೋಗಾಸನಮಾತ್ರವಲ್ಲ, ಅದು ಮನಸ್ಸನ್ನ ಪಕ್ವವಾಗಿಸುವ ಎಂಟು ಹಂತದ ಪ್ರಕ್ರಿಯೆ; ಅದು ಎಲ್ಲರಿಂದಲೂ ಸಾಧ್ಯವಿಲ್ಲ.ಆದರೂ ನಮ್ಮೊಳಗಿನ ಕೆಲವು ಅನವಶ್ಯಕ -ಅತಿರೇಕದ ಕೊಳ್ಳುಬಾಕತನವನ್ನು, ಬಯಕೆಗಳನ್ನು-ಕಾಮೆನೆಗಳನ್ನು ಜಯಿಸೋಣ-ಅದೇ ನಿಜವಾದ ಕಾಮದಹನ !

ಯಮ,ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಹಂತಗಳಿಂದ ದೇಹ-ಮನಸ್ಸಿನ ಶುದ್ಧೀಕರಣ ಕ್ರಿಯೆ ನಡೆಸಲ್ಪಡುತ್ತದೆ. ಹೇಗೆ ನಾವು ಕುಡಿಯುವ ನೀರನ್ನು ಶೋಧಿಸಿ,ಸೋಸಿ ಶುದ್ಧವಾಗಿಸುತ್ತೆವೋ ಹಾಗೇ ನಮ್ಮ ಜನ್ಮಜಾತ ಮೇಳೈಸಿದ ನಮ್ಮ ಕರ್ಮದ-ಅದರ ಫಲದ ಬಾಧ್ಯತೆಗಳನ್ನು ತೊಡೆದುಹಾಕಲು ಈ ಅಷ್ಟಾಂಗಯೋಗವೆಂಬ ಪ್ರಕ್ರಿಯೆ ಬಹಳ ಪ್ರಸ್ತುತ ಮತ್ತು ಅತೀ ಉತ್ತಮ ಮಾರ್ಗ ಕೂಡ, ಇದನ್ನು ಅನುಸರಿಸುತ್ತ ಹಲವಾರು ರೋಗ-ರುಜಿನಗಳನ್ನು ನಾವು ಕಳೆದುಕೊಂಡು ಶುದ್ಧರಾಗುತ್ತೇವೆ; ಅಷ್ಟೇ ಏಕೆ ಸರಿಯಾಗಿ ಅನುಸರಿಸಿದರೆ ರೋಗಗಳು ಹತ್ತಿರ ಸುಳಿಯುವುದೇ ಇಲ್ಲ. ಆದರೆ ಇದು ಕಟ್ಟುನಿಟ್ಟಿನ ಕಷ್ಟ ಮಾರ್ಗ, ಇದನ್ನು ಸಂಪೂರ್ಣವಾಗಿ ಅನುಸರಿಸಲು ಜನಸಾಮಾನ್ಯನಿಂದ ಸ್ವಲ್ಪ ಕಷ್ಟಸಾಧ್ಯ, ಹೀಗಾಗಿ ಅವು ಸಾರುವ ತತ್ವಗಳನ್ನಾದರೂ ಅನುಸರಿಸೋಣ.

ಎಲ್ಲಿ ವಿಶ್ವಬ್ರಾತೃತ್ವ ಇರುತ್ತದೋ ಅಲ್ಲಿ ಮೇಲು-ಕೀಳೆಂಬ ಭೇದ ಇರುವುದಿಲ್ಲ, ಹೊಂದಾಣಿಕೆಯೇ ಜೀವನದ ಸೂತ್ರವಾಗಿರುತ್ತದೆ. ನಮ್ಮಲ್ಲಿ ದೊಡ್ಡತನ ಒಡಮೂಡಿದಾಗ ಅಲ್ಲಿ ಜಗಳಕ್ಕೆ ಆಸ್ಪದವಿರುವುದಿಲ್ಲ. ಇದಕ್ಕೆ ಒಂದು ಸಣ್ಣ ಉದಾಹರಣೆ ಕಾಗೆ, ಒಂದು ಕಾಗೆ ಎಲ್ಲಾದರೂ ಏನನ್ನಾದರೂ ತಿನ್ನುವ ವಸ್ತುವನ್ನು ಕಂಡರೆ ಅದು ತನ್ನ ಬಳಗವನ್ನೆಲ್ಲಾ ಕೂಗಿ ಕರೆದು, ಅವುಗಳೆಲ್ಲ ಬಂದಮೇಲೆ ಒಟ್ಟಾಗಿ ಸ್ವೀಕರಿಸುತ್ತವೆ. ಹೀಗೇ ನಮಗೆ ಮಾತ್ರ ಇರಲಿ, ನನ್ನದು, ನನ್ನ ಮನೆ-ನನ್ನ ಕಾರು, ನನ್ನ ತೋಟ --ಈ 'ನಾನು' ಮತ್ತು 'ನನ್ನದು' ಪರಿಧಿಯನ್ನು ಮಾನಸಿಕವಾಗಿ ಸ್ವಲ್ಪ ಆಚೆ ಇಟ್ಟಾಗ ಸಿಗುವ ಆನಂದವೇ ಬೇರೆ. ಅಲ್ಲಿ ಸ್ವಾರ್ಥವಿರುವುದಿಲ್ಲ, ಎಲ್ಲರಮೇಲೆ ಪ್ರೇಮವಿರುತ್ತದೆ, ಪ್ರೀತಿಯಿರುತ್ತದೆ, ಇಂತಹ ಪ್ರೇಮ ನಮ್ಮೆಲ್ಲರಲ್ಲಿ ಪರಸ್ಪರ ಬೆಸುಗೆಯನ್ನು ಹಾಕುತ್ತದೆ, ಯಾರೂ ಕಚ್ಚಾಡಲಾರೆವು, ಯಾರೂ ಯಾರನ್ನೂ ದೂರಮಾಡಲಾರೆವು ಎಂಬ ಭಾವನೆ ಹೊರ ಹೊಮ್ಮುತ್ತದೆ. ಇರವುದನ್ನು ಹಂಚಿತಿನ್ನುವ ಪ್ರವೃತ್ತಿ ಬೆಳೆಯುತ್ತದೆ. ಬೇರೆಯವರ ಕಷ್ಟ-ಸುಖಕ್ಕಾಗುವ ಮನೋಭಾವ ಬರುತ್ತದೆ, ಎಲ್ಲರ ಮುಖದಲ್ಲಿ ನಗು ಸದಾ ಇರಲಿ ಎಂಬ ಅನಿಸಿಕೆ ನಮ್ಮೊಳಗೇ ಗುನು ಗುನಿಸುತ್ತಿರುತ್ತದೆ, ಇದು ಎಲ್ಲರಲ್ಲಿರಲಿ ಎಂಬುದೇ 'ನನ್ನದಲ್ಲದ' ನನ್ನ ಈ ಕವನದ ಆಶಯ. ಹೋಳಿಯ ಬಣ್ಣ- ಸಂತೋಷ -ಸಂಭ್ರಮ ಸದಾ ನಮ್ಮ ಜೀವನತುಂಬಾ ತುಂಬಿರಲಿ ಎಂಬ ಹಾರೈಕೆಯೊಂದಿಗೆ --


ನಿಮ್ಮ ಮುಖದಲಿ ನಗುವದರಳಿದರೆ ಸಾಕೆನಗೆ


ನಿಮ್ಮ ಮುಖದಲಿ ನಗುವದರಳಿದರೆ ಸಾಕೆನಗೆ
ನನ್ನ ನೋವನು ಮರೆವೆ ಅದರ ಒಳಗೆ
ಭಿನ್ನವೆಲ್ಲಿಹುದು ವಸುದೈವ ಕುಟುಂಬವು ನಮದು
'ನನ್ನ' ಕಳೆದೆನು ಬರುತ ಹೊರಗೆ ಇಳೆಗೆ

ಹಲವನ್ನು ಎಣಿಸಿದಿರಿ ಕೆಲವನ್ನು ಗುಣಿಸದಿರಿ
ಹೊಲಮನೆಯ ಜೀವನದಿ ತತ್ವವಿಹುದು
ಒಲವು ತಾನಾಗಿ ಹರಿದಿರೆ ವಿಶ್ವ ತುಂಬೆಲ್ಲ
ಗೆಲುವ ಸಾರುತ ಬರುವ ದೈವವಿಹುದು

ಹಿಂಸಿಪುದು ಬೇಡೆಮಗೆ ಅದುತರುವ ದುಃಖ ಬೇಡ
ಕಂಸರಾಜನ ಕಥೆಯ ಮರುಕಳಿಕೆ ಬೇಡ
ಹಂಸಕ್ಷೀರದ ನ್ಯಾಯ ಜಾಣ್ಮೆ ಮೇಳೈಸಿರಲಿ
ಪುಂಸವನದಲೇ ಬರಲಿ ನಮಗೆ ತಿಳುವಳಿಕೆ

ಇಲ್ಲಿ ವೈರಿಗಳಿಲ್ಲ ಇಲ್ಲಿ ದೊಂಬಿಗಳಿಲ್ಲ
ಬಲ್ಲಜನರನು ಕೇಳಿ ಎಲ್ಲಾ ಹತ್ತಿರವು
ಮಲ್ಲಿನಾಥನ ಮುಡಿಗೆ ಮಲ್ಲಿಗೆಯ ಹೂ ತರಲು
ಎಲ್ಲ ಕೆಲಸದಿ ನಾವು ತೊಡಗಿಕೊಂಡಿಹೆವು

ಮೇಲುಕೀಳೆಂಬ ಭಾವವ ಮಾರು ದೂರಿಡುತ
ಸಾಲು ದೀಪವ ಹಚ್ಚಿ ಮನದಿ ಮುದದಿ
ಕಾಲ ಕಾಲಕು ನಮ್ಮ ನಾವ್ ತಿದ್ದಿ ಮುನ್ನಡೆದು
ನಾಲೆ ತುಂಬಲಿ ಜ್ಞಾನನೀರ ಹರಿವಿನಲಿ

ಅಣ್ಣತಮ್ಮರು ಅಕ್ಕ ತಂಗಿಯರು ನಾವಾಗೆ
ಬಣ್ಣಿಸಲು ಬಹಳ ಖುಷಿ ನಮ್ಮ ಸಂಪದವ
ಕಣ್ಣನೀರನು ಒರೆಸೆ ನಮಗಿಹುದು ಕೈ ಹಲವು
ಬಣ್ಣ ಹಚ್ಚುವ ಬನ್ನಿ ಬದುಕು ತುಂಬಾ