ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, August 17, 2011

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!


ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ!!
[ಮುಂದುವರಿದ ಭಾಗ]

ಹಾಗೆ ಪೂಜಾಕೈಂಕರ್ಯಕ್ಕೆ ಎಲ್ಲವೂ ಸಿದ್ಧವಾದಮೇಲೆ ದೇವರಿಗೆ ಅನ್ನವನ್ನು ಬೇಯುವುದಕ್ಕೆ ಇಟ್ಟು ಅರ್ಚನೆ ಆರಂಭಗೊಳಿಸಲು ಕವಾಟು ತೆಗೆಯುತ್ತಿದ್ದರು. ಕವಾಟುತೆಗೆದು ಹಿಂದಿನದಿನದ ಹೂವು-ಹಣ್ಣು ಇತ್ಯಾದಿ ಏನಾದರೂ ಬಿದ್ದಿದ್ದರೆ ಅದನ್ನೆಲ್ಲಾ ಹೆಕ್ಕಿ ಸ್ವಚ್ಛಗೊಳಿಸಿ, ಮನೆಯಿಂದ ತಂದ ಗೋಮಯ ಚಿಕ್ಕಭಾಗವನ್ನು ನೀರಿನಲ್ಲಿ ಅದ್ದಿ ಗರ್ಭಗುಡಿಯ ಹೊರಭಾಗಗಳಿಗೆ ಪ್ರೋಕ್ಷಿಸಿ ಶುದ್ಧೀಕರಣ ಮುಗಿಸುತ್ತಿದ್ದರು. ನಿಧಾನವಾಗಿ ಲೋಕದ ಸಮಸ್ತರಿಗೂ ತಂತಮ್ಮ ಕುಟುಂಬ-ಬಂಧುವರ್ಗ, ಬಳಗ ಇವರೆಲ್ಲರಿಗೂ ಧರ್ಮ-ಅರ್ಥ-ಕಾಮ-ಮೋಕ್ಷ ಚತುರ್ವಿಧ ಪುರುಷಾರ್ಥಗಳು ಸಿದ್ಧಿಸಲಿ ಮತ್ತು ಆರೋಗ್ಯನಿರ್ವಿಘ್ನತೈಶ್ವರ್ಯ ಜ್ಞಾನ ಪ್ರಾಪ್ತಿ ಎಂಬೀ ಬೇಡಿಕೆಗಳನ್ನೊಳಗೊಂಡ ಸಂಕಲ್ಪ ಮಾಡಿ ದೇವರನ್ನು ಪೂಜೆಗೆ ಅಣಿಗೊಳಿಸುತ್ತಿದ್ದರು.

ಚನ್ನಕೇಶವನ ಗರ್ಭಗುಡಿಯ ಒಳಭಾಗದಲ್ಲಿ ಹತ್ತಿಸಿದ ದೀಪ-ಧೂಪಗಳು ಅದಾಗಲೇ ತಮ್ಮ ಅಡರನ್ನು ಪಸರಿಸುತ್ತಿದ್ದವು. ದೀಪದ ಮಂದ ಬೆಳಕಿನಲ್ಲಿ ಶಿಶುವೊಂದು ತೊಟ್ಟಿಲಲ್ಲಿ ಎದ್ದಿತೋ ಎಂಬಂತೇ ಹಸನ್ಮುಖೀ ಕೇಶವ ಅರ್ಘ್ಯ-ಪಾದ್ಯಾದಿ ಪಂಚೋಪಚಾರಗಳನ್ನು ಸ್ವೀಕರಿಸಿ ಅಭಿಷೇಕಕ್ಕೆ ತಯಾರಾಗುತ್ತಿದ್ದ. ಬಾವಿಯಿಂದ ಕೊಡಗಳೆರಡರಲ್ಲಿ ನೀರನ್ನು ತಂದು ನಿಧಾನವಾಗಿ ಪುರುಷಸೂಕ್ತದಿಂದ ಅಭಿಷೇಕ ಮುಂದುವರಿಯುತ್ತಿತ್ತು. ದೇವರ ವಿಗ್ರಹಕ್ಕೆ ಕೊಡಪಾನ ಅಥವಾ ಯಾವುದೇ ಪರಿಕರಗಳು ತಾಗಿ ಘಾಸಿಯಾಗಬಾರದೆಂಬ ಕಾಳಜಿಯಿಂದ ಮುಂಜಿಯಾದರೂ ಸುಮಾರು ೧೬ ವರ್ಷದೊಳಗಿನ ಮಕ್ಕಳಿಗೆ ಒಳಗೆ ಪ್ರವೇಶ ಇರುತ್ತಿರಲಿಲ್ಲ ಎಂಬುದು ಗಮನಾರ್ಹ.

ಶ್ರೀಸೂಕ್ತ, ಪುರುಷಸೂಕ್ತ, ನಾರಾಯಣ ಸೂಕ್ತ ಮೊದಲಾದ ಹಲವಾರು ಮಂತ್ರಗಳಿಂದ ಅಭಿಷೇಚಿಸಿಕೊಂಡ ಕೇಶವ ಈಗ ನಿಧಾನಕ್ಕೆ ಶುಚಿಯಾದ ಬಟ್ಟೆಯಿಂದ ಮೈ ಒರೆಸಿಕೊಳ್ಳಲ್ಪಟ್ಟು ಮಂಗಲದ್ರವ್ಯಗಳನ್ನು ಪೂಸಿಸಿಕೊಳ್ಳುತ್ತಿದ್ದಾನೆ. ಶ್ರೀಗಂಧ, ರಕ್ತಚಂದನ, ಕುಂಕುಮ, ಅರಿಷಿನ, ಅಕ್ಷತೆಯೇ ಮೊದಲಾದ ಮಂಗಲದ್ರವ್ಯಗಳು ಸಮರ್ಪಣೆಗೊಂಡ ನಂತರ ಅಡಕೆ ಶಿಂಗಾರದಿಂದ ಸಣ್ಣ ಅಲಂಕಾರಮಾಡಿ ಒಂದು ಚಿಕ್ಕ ಆರತಿಮಾಡುತ್ತಿದರು. ಆಗೆಲ್ಲಾ ಬರುವ ಸುತ್ತಲ ದೂರದ ಹಳ್ಳಿಗಳ ಭಕ್ತಾದಿಗಳು ಬಂದು ಸೇರುತ್ತಿದ್ದರು. ಬರುವವರು ಖಾಲೀ ಕೈಲಿ ಬರುತ್ತಿರಲಿಲ್ಲ. ಕೆಲವರು ಹಾಲು, ಕೆಲವರು ಅಕ್ಕಿ, ಬಾಳೇಹಣ್ಣು, ತೆಂಗಿನಕಾಯಿ, ತಾವ್ತಾವು ಬೆಳೆದ ಹಿತ್ಲಕಾಯಿ,ಕಬ್ಬು ಹೀಗೇ ಒಂದೇ ಎರಡೇ ತರಾವರಿ ಕೊಡುಗೆಗಳನ್ನು ತಮ್ಮ ಭಕ್ತಿಗನುಗುಣವಾಗಿ ಅವರೆಲ್ಲಾ ತರುತ್ತಿದ್ದರು.

ಕೇಶವನ ವೈಶಿಷ್ಟ್ಯ ಎಂದರೆ ಆತ ಮಾತನಡುವ ದೇವರೆಂದೇ ಖ್ಯಾತಿ !! ಅಂದರೆ ಮಾತನಾಡುವುದಲ್ಲ ಬದಲಾಗಿ ಭಕ್ತರು ಕೇಳಿದ ಪ್ರಶ್ನೆಗಳಿಗೆ ಆತ ಉತ್ತರಿಸುತ್ತಿದ್ದ. ಆತನ ಮುಂದೆ ಎರಡು ಕಾಯಿಗಳನ್ನೊಡೆದು ಪ್ರಶ್ನೆ ಕೇಳುವಾತ ತಂದ ಶಿಂಗಾರವನ್ನು ಅಮೃತ ಕಲಶ ಹಿಡಿದ ಬಲಗೈಮೇಲೆ ಅರ್ಧ ಮತ್ತು ಎಡಗೈ ಸಂದಿನಲ್ಲಿ ಅರ್ಧ ಇಡುತ್ತಿದ್ದರು.

" ಸ್ವಾಮೀ ಚನ್ನಕೇಶವ ದೇವಪ್ಪ ಎಂಬ ಭಕ್ತ ತನ್ನ ಮಗಳಿಗೆ ಗಂಡೊಂದನ್ನು ನೋಡಿದ್ದಾಗಿ ಆ ಸಂಬಂಧ ಉತ್ತಮ ಅದನ್ನು ಮಾಡಿಕೊಂಡರೆ ಮುಂದೆ ಜೀವನ ಒಳ್ಳೇದಾಗಿ ನಡೀತದೆ ಅಂತ ತಮಗನಿಸಿದರೆ ಮಹಾಸನ್ನಿಧಾನದ ಬಲಭಾಗದಿಂದ ಪ್ರಸಾದವಾಗಬೇಕು ಅದಿಲ್ಲಾ ಆ ಸಂಬಂಧ ಬೇಡಾ ಎಂಬುದು ತಮ್ಮ ಅಣತಿಯಾದರೆ ಎಡದಿಂದ ಅಪ್ಪಣೆಕೊಡಿಸಬೇಕು ಎಂದು ವಿನೀತನಾಗಿ ತಮ್ಮ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡ್ತಾನೆ ಗುರುದೇವರು ತಮ್ಮ ಚಿತ್ತಕ್ಕಿದ್ದಿದ್ದನ್ನು ಕರುಣಿಸುವಂತಾಗಲಿ "

ಹೀಗೇ ಹಲವಾರು ಕಾರಣಗಳಿಗೆ/ಸಮಸ್ಯೆಗಳಿಗೆ ಪ್ರಸಾದ ಕೇಳುತ್ತಿದ್ದರು. ಕೆಲವೊಮ್ಮೆ ಕೇಳುತ್ತಿರುವಾಗಲೇ ಬಸಕ್ಕನೆ ಪೂರ್ತಿಯಾಗಿ ಬಲದಿಂದಲೋ ಅಥವಾ ಎಡದಿಂದಲೋ ಬೀಳುವ ಪ್ರಸಾದ ಇನ್ನು ಕೆಲವೊಮ್ಮೆ ಗಂಟೆಗಟ್ಟಲೆ ಕಾಯಿಸುವುದೂ ಇತ್ತು. ಕೇಳಿದ ಪ್ರಶ್ನೆಯಲ್ಲಿ ದ್ವಂದ್ವ ಇದ್ದರೆ ಅದನ್ನು ಎರಡು ಪ್ರತ್ಯೇಕ ಪ್ರಶ್ನೆ ಮಾಡಬೇಕಾಗಿ ಬರುತ್ತಿತ್ತು. ಕೆಲವೊಮ್ಮೆಯಂತೂ ಭಾರವಾದ ಶಿಂಗಾರದ ಅತೀ ಚಿಕ್ಕ ಎಳೆಯೊಂದು ಬಿಟ್ಟು ಮಿಕ್ಕೆಲ್ಲಾ ಭಾಗ ಕೆಳಗೆ ನೇತಾಡುವುದು ಕಾಣುತಿತ್ತು ಆದರೂ ಬೀಳುತ್ತಿರಲಿಲ್ಲ !! ನಾನೇ ಸ್ವತಃ ನೋಡಿದಂತೇ ಸಾವಿರಾರು ಭಕ್ತರು ಪ್ರಸಾದದಿಂದ ಪರಿಹಾರ ಕಾಣುತ್ತಿದ್ದರು. " ಬೆಂಗಳೂರಿನಲ್ಲಿ ಉದ್ಯೋಗ ಮಾಡಬೇಕೆನ್ನುವ ಆಸೆ, ಹೋದರೆ ಅನುಕೂಲವಾಗುವುದೋ ಅಥವಾ ಇಲ್ಲವೋ " ಎಂಬುದಕ್ಕೂ ಕೂಡ ಭಗವಂತ ಉತ್ತರಿಸುತ್ತಿದ್ದ !!

ಇನ್ನೊಂದು ವಿಶೇಷ ಎಂದರೆ ಭಗವಂತನ ಸನ್ನಿಧಿಯಲ್ಲಿ ಒಂದಿಬ್ಬರಿಗೆ ಮೈಮೇಲೆ ದರ್ಶನಕೂಡ ಬರುತ್ತಿತ್ತು. ಅದು ಹಾಗೆಲ್ಲಾ ದಿನವಿಡೀ ಬರುವುದಲ್ಲ, ಯಾರಿಗಾದರೂ ಮೌಖಿಕ ಉತ್ತರಗಳು ಬೇಕಾದಾಗ ದರ್ಶನಪಾತ್ರಿಗಳನ್ನು ಪೂಜಾರಿಗಳು ಕರೆತರುತ್ತಿದ್ದರು. ದೇವರಲ್ಲಿ ಪ್ರಾರ್ಥಿಸಿ ಕಾಯೊಡೆದು, ಶಿಂಗಾರವನ್ನು ದೇವರಿಗೆ ಏರಿಸಿ ತೆಗೆದು ಅದನ್ನು ಪಾತ್ರಿಯ ಕೈಗೆ ಕೊಟ್ಟು ತೀರ್ಥ ಹೊಡೆದಾಗ ಪಾತ್ರಿ ನಿಂತಲ್ಲೇ ಆವೇಶಭರಿತನಾಗುತ್ತಿದ್ದ!! ಎದುರಿಗಿನ ಭಕ್ತ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದ. ೩೦-೬೦ನಿಮಿಷಗಳ ವರೆಗೆ ನಡೆಯುವ ದರ್ಶನ ಯಾವಾಗ ಪ್ರಮುಖಪ್ರಶ್ನೆಗಳು ನಿಂತವೋ ಆಗ ಇಳಿದುಹೋಗುವಂತೇ ಮತ್ತೆ ಪೂಜೆಯವರು ಪಾತ್ರಿಗೆ ತೀರ್ಥಹೊಡೆಯುತ್ತಿದ್ದರು.

ಕೊಂಕಣ ತೋಟವೆಂಬ ಒಂದು ಸುಂದರ ತಾಣಕೂಡ ಅಲ್ಲಿಗೆ ಹತ್ತಿರವಿತ್ತು. ಅದು ಕೇಶವನ ಗಣಗಳ ಜಾಗವಂತೆ!! ಭೂತ-ಪಿಶಾಚಿಗಳಿಂದ ಬಳಲುವವರು ಅಲ್ಲಿಗೆ ಪೂಜೆ ಹರಕೆ ಹೊರುತ್ತಿದ್ದರು. ಎತ್ತರದ ಮರದ ಬೀಳಲುಗಳು ಬೆತ್ತದ ಬಲೆಗಳಿಂದ ಆವೃತವಾದ ಅ ಜಾಗದಲ್ಲಿ ನಾಗರಕಲ್ಲುಗಳೂ ಇದ್ದವು. ನಾಗ, ಚೌಡಿ, ಭೂತ ಇನ್ನೂ ಹಲವು ಏನೇನೋ ಎಲ್ಲವನ್ನೂ ಸೇರಿಸಿ ಒಂದೇ ಜಾಗದಲ್ಲಿ ಪೂಜೆ ನಡೆಯುತ್ತಿತ್ತು.

" ಯಾರ್ದಾದ್ರೂ ಕೊಂಕಣ ತೋಟದ ಚರು ಅದ್ಯನ್ರೋ ? ಇದ್ರೆ ಬೇಗ್ ಹೇಳಿ ತಡ ಆಗ್ತದೆ " ಅಂತ ಅರ್ಚಕರು ಕೇಳಿದಾಗ ನಿಧಾನವಾಗಿ ಅಕ್ಕಿತಂದವರಲ್ಲಿ ಕೆಲವರು

" ಒಡ್ಯಾ ನಮ್ದೊಂದ್ ಪೂಜದೆ"

" ನಂದೊಂದ್ ಅದೆ "

ಎನ್ನುತ್ತಾ ಹೆಸರು ಹೇಳುತ್ತಿದ್ದರು. ಅವರವರ ಹೆಸರಿನಲ್ಲಿ ಪಡಸಾಲೆಯಲ್ಲಿ ಪ್ರತ್ಯೇಕ ಅನ್ನದ ಚರುಗಳನ್ನು ಬೇಯಿಸಲು ಇಡಲಾಗುತ್ತಿತ್ತು.


ಇಷ್ಟೆಲ್ಲಾ ಆಗುವ ಹೊತ್ತಿಗೆ ಕನಿಷ್ಠ ಮಧ್ಯಾಹ್ನ ೨ಘಂಟೆ. ಈಗ ಚನ್ನಕೇಶವನಿಗೆ ಪೂರ್ಣಾಲಂಕಾರ : ಭಕ್ತರು ಹೊತ್ತುತಂದ ಜಾಜಿ-ಜೂಜಿ, ಮರುಗ, ಸೇವಂತಿಗೆ, ಡೇರೆ, ದಾಸವಾಳ, ಮಲ್ಲಿಗೆ, ಇರುವಂತಿಗೆ, ಸಂಪಿಗೆ ಹೀಗೇ ವಿಧವಿಧದ ಹೂಗಳಿಂದ, ಅಡಕೆ ಶಿಂಗಾರದಿಂದ, ಬಿಲ್ವಪತ್ರೆ, ತುಳಸೀ ಕುಡಿಗಳು ಮೊದಲಾದವುಗಳಿಂದ ಚಿನ್ನ ಬೆಳ್ಳಿಯ ಆಭರಣ ಹಾಕಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಶೋಭಿಸುತ್ತಿದ್ದ ಭಗವಂತ. ನಿತ್ಯವೂ ಅನ್ನದ ಜೊತೆ ಒಂದು ಪರಮಾನ್ನ ನೈವೇದ್ಯ ಭಗವಂತನಿಗೆ ! ನೈವೇದ್ಯಗಳು ಬಂದು ಗರ್ಭಗುಡಿಯಲ್ಲಿ ಕೂತಮೇಲೆ ಮಂಗಳಾರತಿ. ಏಕಾರತಿ, ಸಸ್ಯಜನ್ಯ ನೈಜ ಹಾಲ್ಮಡ್ಡಿಯ ಧೂಪವನ್ನು ಕೆಂಡದ ಆರತಿಗೆ ಹಾಕುತ್ತಿದ್ದರು. ಇಡೀ ವಾತಾವರಣ ಪರಿಮಳಮಯವಾಗುತ್ತಿತ್ತು. ಏಕಾರತಿಯಾಗಿ ನೈವೇದ್ಯ ಅರ್ಪಣೆಯಾಗುವಾಗ ಮಧ್ಯೆ ಒಮ್ಮೆ ಬಾಗಿಲು ಹಾಕುವ ವೈವಾಟಿತ್ತು: ದೇವರು ಉಣ್ಣಬೇಕಲ್ಲ? ಅರ್ಚಕರು ಹೊರವಲಯ ಒಂದು ಸುತ್ತು ಮಂತ್ರ ಹೇಳುತ್ತಾ ಸುತ್ತಿಬಂದು ಮತ್ತೆ ಬಾಗಿಲು ತೆರೆಯುತ್ತಿದ್ದರು. ಆಗ ಇಟ್ಟ ನೈವೇದ್ಯ ವಿಸರ್ಜಿಸಿ ಎದುರಿನ ಸ್ಥಳವನ್ನು ತೀರ್ಥದಿಂದ ಶುಚಿಗೊಳಿಸಿ ನಂತರ ಫಲ-ತಾಂಬೂಲ ಹಣ್ಣು ಹಂಪಲು ನೈವೇದ್ಯ. ಇದೆಲ್ಲಾ ಮುಗಿದಮೇಲೆ ಮಹಾಮಂಗಲಾರತಿ. ನಾಕಾರು ಆರತಿಗಳು ನಡೆಯುವಾಗ ಭಕ್ತರೇ ಹರಕೆಮಾಡಿ ತಂದು ಹಾಕಿದ್ದ ಸಾವಿರಾರು ಗಂಟೆಗಳನ್ನು ಹೊರಗೆ ಆರತಿಗೆ ನಿಂತ ಜನ ಬಡಿಯುತ್ತಿದ್ದರು. ಶಂಖ, ಜಾಗಟೆ ಎಲ್ಲಾ ಸೇರಿ ಇಡೀ ವಾತಾವರಣ ಓಕಾರಮಯವಾಗಿ ೧೫ ನಿಮಿಷ ನಮಗೆ ಭೂಮಿ ಮರೆತುಹೋಗುತ್ತಿತ್ತು.

ಆರತಿ ಮುಗಿದಮೇಲೆ ಹೊರಗೆ ಬಾಗಿಲ ಜಟ್ಗಗಳಿಗೆ ಪೂಜೆ ಆರತಿ ನಡೆಯುತ್ತಿತ್ತು. ಆರತಿ ಮುಗಿಸಿದ ನಂತರ ಅದಾಗಲೇ ಚಿಕ್ಕ ಅಷ್ಟಾಂಗಸೇವೆಯೂ ನಡೆಯುತ್ತಿತ್ತು. ತಾಳ, ಶಂಖ ಮೊದಲಾದವುಗಳನ್ನು ವಿಶಿಷ್ಟವಾಗಿ ಬಡಿದು, ನರ್ತಿಸಿ ಕೇಶವನನ್ನು ಪ್ರಸನ್ನೀಕರಿಸಿದ ಅರ್ಚಕರು ಎಲ್ಲರಪರವಾಗಿ ಅಂದಿನ ಪೂಜಾ ಸಮರ್ಪಣೆಗೈದು ಗೊತ್ತಿದ್ದೋ ಗೊತ್ತಿರದೆಯೋ ನಡೆದಿರಬಹುದದ ಅಪರಾಧಗಳಿಗೆ ಕ್ಷಮೆಯಾಚಿಸಿ ಪುಷ್ಪಾಂಜಲಿ ಅರ್ಪಿಸುತ್ತಿದ್ದರು. ಪ್ರಸಾದದ ಹೂಗಳನ್ನು ತೆಗೆದು ದೊಡ್ಡ ಹರಿವಾಣದಲ್ಲಿ ಇರಿಸಿಕೊಂಡು ತೀರ್ಥದ ಗಿಂಡಿ ಹಿಡಿದು ಹೊರಗೆ ಬರುತ್ತಿದ್ದರು. ಕಾದಿರುವ ಎಲ್ಲರಿಗೂ ತೀರ್ಥ-ಪ್ರಸಾದ ಕಾಯಿಕಡಿ-ಹಣ್ಣು-ಹಂಪಲು ಕೊಟ್ಟಮೇಲೆ ಕೊಂಕಣ ತೋಟದ ಪೂಜೆಗೆ ಸಂಬಂಧಪಟ್ಟ ಜನರೊಟ್ಟಿಗೆ ಅರ್ಚಕರು ಮಡಿಯಲ್ಲೇ ಚರುವನ್ನು ಹೊತ್ತು ಪೂಜಾಸಾಮಗ್ರಿಗಳನ್ನೂ ಇಟ್ಟುಕೊಂಡು ತೆರಳುತ್ತಿದ್ದರು.

ಕೊಂಕಣತೋಟದಲ್ಲಿ ಬಿದ್ದಿರುವ ಕಸಪಸಾಗಳನ್ನೆಲ್ಲಾ ತೆಗೆದುಹಾಕಿ ನೀರು ಎರೆದು ಅಭಿಷೇಕ ಮತ್ತೆ ಗಂಧ-ಪುಷ್ಪಾದಿಗಳಿಂದ ಅರ್ಚನೆ ನಡೆಯುತ್ತಿತ್ತು. ಆರತಿಯಾದಮೇಲೆ ತಂದಿರುವ ಅನ್ನವನ್ನು ನೈವೇದ್ಯಮಾಡಿ ಅಲ್ಲೇ ಬಾಳೆಲೆಯಲ್ಲಿ ಬಲಿಹಾಕಲಾಗುತ್ತಿತ್ತು.

" ಓಹೊಹೋ ಪುನ್ನೂರು ನಾಗಮ್ಮ, ಚೌಡಮ್ಮಾ ನಾಗದೇವತೆ,ಕೀಳು ಕೊಂಕಣತೋಟದ ದೇವತಾ ಗಣಗಳೇ ಭಕ್ತನಾದ ದೇವಪ್ಪ ಕೊಟ್ಟ ಪೂಜೆಯಿಂದ ಸಂಪ್ರೀತಗೊಂಡು ಆತನ ಕುಟುಂಬಕ್ಕೆ ಹಲವಾರು ದಿನಗಳಿಂದ ತೊಂದರೆ ಕೊಡುತ್ತಿರುವ ಗಾಳೀ ಉಪದ್ರವವನ್ನು ಬ್ಯಾಟ ಮೊಖವಾಗಿ ಬಂದೋಸ್ತು ಮಾಡಿಕೊಡಬೇಕು ಅಂತ ಪ್ರಾರ್ಥಿಸ್ತಾನೆ. ಸ್ವಾಮೀ ಚನ್ನಕೇಶವನ ಅಪ್ಪಣೆಯಂತೇ ನಿಮ್ಮೆದುರು ಮಂಡಿಯೂರಿ ನಿಮಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಳ್ತಾ ಇದ್ದಾನೆ ಆತನ ಮನದಿಚ್ಛೆಯನ್ನು ಪೂರೈಸಿ ಆಗುತ್ತಿರುವ ತೊಂದರೆಗಳಿಂದ ಆತನನ್ನು ಬಂಧಮುಕ್ತಗೊಳಿಸಿ ಗಾಳೀ ಉಪದ್ರವವನ್ನು ಇನ್ಮೇಲೆ ತಮ್ಮ ಸುಪರ್ದಿಗೆ ತೆಗೆದುಕೊಂಡು ಇಲ್ಲೇ ನಿಗ್ರಹಿಸಬೇಕಾಗಿ ಪಾರ್ಥಿಸ್ತಾ ಇದ್ದಾನೆ, ಅನುಗ್ರಹಮಾಡಿ "

ಹಣ್ಣು-ಕಾಯಿ, ಚರು ಪೂಜೆ ಎಲ್ಲವನ್ನೂ ಸ್ವೀಕರಿಸಿದ ಆ ದೇವತೆಗಳು, ಭೂತಗಣಗಳು ಪ್ರಸನ್ನವಾಗಿ ತಲೆದೂಗುತ್ತಿದ್ದವೋ ಏನೋ ಅಂತೂ ಆ ದಿನದಿಂದಲೇ ಪೂಜಿಸಿದ ಭಕ್ತರ ತೊಂದರೆಗಳು ಮಾಯವಾಗುತ್ತಿದ್ದವು.


ಇದೆಲ್ಲಾ ಮುಗಿದು ಪ್ರಸಾದ ವಿತರಣೆಯಾದ ಮೇಲೆ ಅರ್ಚಕರು ದೇವಳದ ಪಡಸಾಲೆಗೆ ಬರುತ್ತಿದ್ದರು. ಆಗ ಜೊತೆಗಿರುವ ಸಹಾಯಕರು ಏನಾದರೂ ಹೀರೇಕಾಯಿ ಗೊಜ್ಜೋ ಸೂಜಮೆಣಸಿನ ಚಟ್ನಿಯೋ ಮಾಡಿರುತ್ತಿದ್ದರು. ಕೇಶವನ ಮುಂದೊಮ್ಮೆ ತೆರಳಿ ಕವಾಟು ಹಾಕಿಬಿಟ್ಟರೆ ಇನ್ನು ನಾಳೆಯೇ ಪೂಜೆ. ಅಲ್ಲೀವರೆಗೆ ಕೇಶವನಿಗೆ ವಿಶ್ರಾಂತಿ. ಚುರ್ರೆನ್ನುವ ಹೊಟ್ಟೆಗೆ ನೈವೇದ್ಯಮಾಡಿದ ಅನ್ನ-ಸಹಾಯಕರು ರುಬ್ಬಿಟ್ಟ ಗೊಜ್ಜು, ಸ್ವಲ್ಪ ಪರಮಾನ್ನ, ಜೊತೆಗೆ ತಂದುಕೊಂಡಿದ್ದರೆ ಮಜ್ಜಿಗೆ ಇವು ಇಳಿಯುತ್ತಿದ್ದವು. ಅರ್ಚಕರ ಕುಟುಂಬವುಳಿದು ಇನ್ನಿತರ ಜನ ಊಟಕ್ಕೆ ನಿಂತರೆ ಅವರಿಗೆ ಅರ್ಚಕರು ಮತ್ತು ಸಹಾಯಕರೇ ದೇವಳದ ಹೊರವಲಯದಲ್ಲಿ ಇರುವ ಚಿಕ್ಕ ಕೊಠಡಿಯೊಂದರಲ್ಲಿ ಊಟ ಬಡಿಸುತ್ತಿದ್ದರು.

ಪೂಜೆ ಮುಗಿಸಿ ಮರಳುವಾಗ ಭಕ್ತರು ಅರ್ಚಕರಿಗೆ ಏನಾದ್ರೂ ಚಿಲ್ಲರೆ ಕಾಣಿಕೆ ಕೊಟ್ಟು ಹೋಗುತ್ತಿದ್ದರು. ಹೀಗೇ ಇಡೀ ದಿನ ಪೂಜೆಗೇ ಮೀಸಲಾಗಿ ಮನೆಗೆ ಮರಳುವಾಗ ಮೂಡಿದ ದೇವರು ಮುಳುಗುವತ್ತ ದಾಪುಗಾಲು ಹಾಕಿ ತೆರಳಿಬಿಡುತ್ತಿದ್ದ. ಹೀಗೆ ನಡೆದಿತ್ತು ಹವ್ಯಕರ ಹಳ್ಳಿಗಳಲ್ಲಿ ದೈವಾರಾಧನೆ. ಇದೂ ಅಲ್ಲದೇ ಕೆಲವೊಮ್ಮೆ ವಿಶೇಷ ಹೋಮ-ಹವನ-ಪಾರಾಯಣ ಅಂತ ಹಲವು ಪ್ರಮುಖ ಘಟ್ಟಗಳೂ ಇರುತ್ತಿದ್ದವು.

ಬರಹ ಬಹಳ ಉದ್ದವಾಗಿರುವುದರಿಂದ ಮುಂದಿನ ಕಂತಿನಲ್ಲಿ ಮುಗಿಸುವುದಕ್ಕೆ ತಮ್ಮ ಅಪ್ಪಣೆ ಬಯಸುತ್ತೇನೆ, ನಮಸ್ಕಾರ.