ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 18, 2011

ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!


ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ !!

[ಕೊನೆಯ ಕಂತು]

ಹೀಗೆ ನಡೆದಿದ್ದ ಹವ್ಯಕರ ಆ ದಿನಗಳಲ್ಲಿ ವ್ಯಾವಹಾರಿಕ ಉಬ್ಬರವಿಳಿತಗಳಿರಲಿಲ್ಲ. ಪರಮಾತ್ಮ ಕೊಟ್ಟುದರಲ್ಲಿ ಸಂತಸಮಯ ಜೀವನವನ್ನು ತಮ್ಮದೇ ಸಹಜ ಶೈಲಿಯಲ್ಲಿ ನಡೆಸಿಬಂದ ಜನ ಹವ್ಯಕರು. ಸುಮಾರು ೧೮ನೇ ಶತಮಾನಕ್ಕೂ ಮುಂಚೆ ಧಣಿ ಕೊಟ್ಟ ಭೂಪ್ರದೇಶ ಹೇರಳವಾಗಿತ್ತು. ಜನಸಂಖ್ಯೆ ಕಮ್ಮಿಇತ್ತು. ಯಾವಾಗ ಒಬ್ಬೊಬ್ಬ ಅಪ್ಪನಿಗೆ ಎಂಟು ಹತ್ತು ಮಕ್ಕಳು ಜನಿಸಿದರೋ ಸಂಸಾರ ಬೆಳೆಯಲಾರಂಭಿಸಿತು; ಭೂಪ್ರದೇಶ ಕಮ್ಮಿಯಾಯಿತು. ಉಪಜೀವನಕ್ಕೆ ಮೂಲ ಆಸರೆಯಾದ ಭಾಗಾಯಿತ, ತರಿ ಜಮೀನುಗಳು ಸಾಲದಾಗುತ್ತಾ ಬಂತು. ಆಗ ಹವ್ಯಕರ ಕೆಲವು ಕುಟುಂಬಗಳು ಗ್ರಾಮದಿಂದ ಗ್ರಾಮಕ್ಕೆ ವಲಸೆ ಸಾಗುತ್ತಾ ಅಲ್ಲೆಲ್ಲಾದರೂ ತಮ್ಮ ಉಪಜೀವಿತಕ್ಕೆ ಅನುಕೂಲವಾಗುವುದೋ ಎಂದು ಹುಡುಕಹತ್ತಿದರು.

ರಾಜಾಶ್ರಯ ಬಹುಹಿಂದೆಯೇ ಕೈತಪ್ಪಿ ಹೋದುದರಿಂದ ಉಪಜೀವಿತಕ್ಕೆ ಬೇಕಾಗುವ ಆರ್ಥಿಕ ವ್ಯವಸ್ಥೆಯನ್ನು ಇವರೇ ಹುಡುಕಿಕೊಳ್ಳಬೇಕಿತ್ತು. ಸ್ವಾಭಿಮಾನಿಗಳಾದ ಹವ್ಯಕರು ಯಾರಿಂದಲೂ ಸಹಾಯವನ್ನು ಅಪೇಕ್ಷಿಸಿ ಕೈ ಒಡ್ಡಿದವರಲ್ಲ ! ತಮ್ಮ ಕೆಲಸಕ್ಕೆ ತಕ್ಕ ಸಂಭಾವನೆ ಸಿಗುವುದೇ ಎಂಬ ಹುಡುಕುವಿಕೆಯನ್ನೂ ಬಿಟ್ಟವರಲ್ಲ!! ಅವಿಭಕ್ತ ಕುಟುಂಬವಿದ್ದಾಗ ಮನೆಯ ಎಲ್ಲಾ ಸದಸ್ಯರೂ ಹೊಲಗದ್ದೆಗಳಲ್ಲಿ ಒಟ್ಟಾಗಿ ದುಡಿಯುತ್ತಿದ್ದರು. ಒಂದು ಕಡೆ ಹೋಮ-ಹವನ,ಪೂಜೆ ಇನ್ನೊಂದು ಕಡೆ ಭೂಮಿತಾಯಿಯ ಆರಾಧನೆ. ಹೀಗೇ ಜೀವನ ಸಾಗಿತ್ತು. ಜನಸಂಖ್ಯೆ ಜಾಸ್ತಿಯಾಗಿ ಮಕ್ಕಳಿಗೆ ಅಪ್ಪ ಹಿಸ್ಸೆ ಕೊಡುವಾಗ ಎಕರೆಗಟ್ಟಲೆ ಇರುವ ಭಾಗಾಯ್ತ, ತರಿ ಎಲ್ಲಾ ಗುಂಟೆ ಲೆಕ್ಕದಲ್ಲಿ ಇಳಿಯಹತ್ತಿದವು. ಒಂದುಕಾಲದಲ್ಲಿ ಎಂಟು ಜನ ಅಣ್ಣ-ತಮ್ಮಂದಿರ ಒಟ್ಟುಕುಟುಂಬದ ಆಸ್ತಿಯಾಗಿದ್ದ ೮ ಎಕರೆ ಭೂಮಿ ಈಗ ಒಡೆದ ಒಂದೊಂದು ಎಕರೆಗೆ ಇಳಿಯಿತು. ಹೀಗೇ ಬರುಬರುತ್ತಾ ಕೃಷಿಭೂಮಿಯ ಜಾಗ ಒಡೆದು ಒಡೆದು ಹೋಳಾಗುತ್ತಾ ಹೋಳಾಗುತ್ತಾ ಜಮೀನೂ ಚಿಕ್ಕದು ಬರುವ ಆದಾಯವೂ ಕಮ್ಮಿ ಎಂಬಂತಾಗಿ ಜೀವನಕ್ಕೆ ಅನಾನುಕೂಲವಾಗತೊಡಗಿತು.

ಇಂತಹ ಸನ್ನಿವೇಶದಲ್ಲಿ ೧೮ನೇ ಶತಮನದ ಆದಿಭಾಗದಲ್ಲಿ ಕೆಲವು ಕುಟುಂಬದ ಅಣ್ಣ-ತಮ್ಮಂದಿರು ಮುಂಬೈಯೆಡೆಗೆ ಮುಖಮಾಡಿದರು. ಇನ್ನೂ ಕೆಲವರು ವೈದ್ಯ ಮತ್ತು ತಾಂತ್ರಿಕ ಶಿಕ್ಷಣವನ್ನು ಪಡೆದು ನಗರಗಳಲ್ಲಿ ನೆಲೆಸಿದರು. ಕ್ರಮೇಣ ಕ್ರಮೇಣ ಅವಿಭಕ್ತ ಕುಟುಂಬ ಒಡೆಯುವ ಬದಲು ಹಿರಿಯಣ್ಣನೋ ಕಿರಿತಮ್ಮನೋ ಬಿಟ್ಟು ಮಿಕ್ಕುಳಿದವರು ಚೆನ್ನಾಗಿ ಓದಿಕೊಂಡು ವಿವಿಧ ನಗರಗಳಲ್ಲಿ, ವಿದೇಶಗಳಲ್ಲಿ ಉದ್ಯೋಗಗಳನ್ನು ಕಂಡುಕೊಂಡರು. ಹಾಗೇ ಬೇರೇ ಬೇರೇ ಉದ್ಯೋಗಗಳನ್ನು ಮಾಡುವ ಹವ್ಯಕರ ಜೀವನ ಮಟ್ಟಕೂಡ ಸುಧಾರಿಸಿತು. ಊರಮನೆಗಳಲ್ಲಿ ಕಾಣದ ಆಧುನಿಕ ಸೌಲಭ್ಯಗಳು, ಪರಿಕರಗಳು ಈ ಉದ್ಯೋಗಸ್ಥರ ಮನೆಗಳಲ್ಲಿದ್ದವು. ಇದೇ ಸಮಯಕ್ಕೆ ಹವ್ಯಕರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕೂಡ ಜಾಸ್ತಿಯಿತ್ತು. ಹೆತ್ತೊಡಲು ಬೆಳೆವ ಕರುಳ ಬಳ್ಳಿಯನ್ನು ಸದೃಢವಾದ ಮರವೊಂದಕ್ಕೆ ಹಬ್ಬಿಸಲು ಪರದಾಡಬೇಕಾದಂಥ ಪರಿಸ್ಥಿತಿ ಉದ್ಭವವಾಯಿತು. ನಗರವಾಸಿಗಳು ತಮಗೆ ಹುಡುಗಿ ಚೆನ್ನಾಗಿರಬೇಕೆಂದೂ, ವಿದ್ಯಾರ್ಹತೆ ಜಾಸ್ತಿ ಇರಬೇಕೆಂದೂ ತಾಕೀತುಮಾಡಿದರು; ಹಳ್ಳಿಗಳಲ್ಲಿ ಅವರ ಮನೆಮೂಲದಲ್ಲಿ ಹಿರಿಯರು ಜಾತಕ ಮೇಳಮೇಳೀ ಸರಿಯಾಗಬೇಕೆಂದರು.

ಆ ಕಾಲಘಟ್ಟದಲ್ಲಿ ಹಳ್ಳಿಗರ ಪ್ರತೀ ಮನೆಯಲ್ಲೂ ಲಂಗದಾವಣಿ ಇದ್ದೇ ಇರುತ್ತಿತ್ತು! ಯಾಕೆಂದರೆ ಪ್ರತೀ ಮನೆಯಲ್ಲೂ ಒಬ್ಬಳಲ್ಲಾ ಒಬ್ಬಳು ಹೆಣ್ಣುಮಗಳು ಬೆಳೆಯುತ್ತಾ ಇರ್ತಾ ಇದ್ದಳು. ಅಕ್ಕ-ಪಕ್ಕದ ದಾಯಾದರಲ್ಲಿ ಹುಳುಕು ಉಪದ್ರವಗಳೂ ಜಾಸ್ತಿ ಇದ್ದವು. ಪಕ್ಕದ ಮನೆಗೆ ಹೆಣ್ಣು ನೋಡಲು ಬಂದ ಯಾವುದೋ ಊರಿನ ಗಂಡಿನ ಕಡೆಯವರಿಗೆ ಹೇಗಾದರೂ ಮಾಡಿ ತಪ್ಪುಕಲ್ಪನೆ ಬರಿಸಿ ಮದುವೆ ನಡೆಯದಂತೇ ನೋಡಿಕೊಂಡದ್ದರಲ್ಲಿ ರಕ್ಕಸ ಸಂತಸವನ್ನು ಅನುಭವಿಸುವ ಅಜ್ಜ-ಅಜ್ಜಿಯಂದಿರೂ ಇದ್ದರು! ಕೆಲವರು ಒಳ್ಳೆಯವರೂ ಇದ್ದರು. ಹೆಣ್ಣು ನೋಡಿ ನಿಕ್ಕಿ ಮಾಡಿಕೊಂಡು ಹೋದರೂ ಆಮೇಲೆ ಸಂಬಂಧಿಕರಲ್ಲಿ ಯಾರೋ ಮುದುಕರು ಕವಚ ಒಗೆದುಬಿಟ್ಟರೆ ’ಓಹೊಹೋ ಅಪಶಕುನ ಅಪಶಕುನ ’ ಎನ್ನುತ್ತಾ ಸಂಬಂಧವನ್ನು ಮುರಿದುಕೊಳ್ಳುವ ಸಂಭವನೀಯತೆ ಬಹಳವಾಗಿತ್ತು. ಲಗ್ನಪತ್ರಿಕೆ ಮುದ್ರಿತವಾಗಿ ಹಂಚಲ್ಪಟ್ಟಮೇಲೆ ಯಾರೋ ತೀರಿಹೋದರೆಂಬ ಕಾರಣಕ್ಕೆ ಹೆಣ್ಣೊಬ್ಬಳನ್ನು ನಿರಾಕರಿಸಿದ ವ್ಯಕ್ತಿಯನ್ನು ನಾನೇ ಚಿಕ್ಕವನಿರುವಾಗ ನಮ್ಮ ಪಕ್ಕದಮನೆಯಲ್ಲಿ ಕಂಡಿದ್ದೆ ಎಂದಮೇಲೆ ಅದಕ್ಕೂ ಹಿಂದೆ ಕಾಲಮಾನದಲ್ಲಿ ಈ ವಿಷಯಕವಾಗಿ ಮತ್ತೂ ಅಂಧಕಾರವಿತ್ತು!!

ಬಡತನದಲ್ಲಿ ಏಳೆಂಟು ಹೆಣ್ಣುಮಕ್ಕಳನ್ನು ಹಡೆದ ಕನ್ಯಾಪಿತೃಗಳು ಒಬ್ಬಿಬ್ಬರನ್ನು ಮದುವೆಮಾಡುವಾಗಲೇ ಹೈರಾಣಾಗುತ್ತಿದ್ದರು. ನೆತ್ತಿಯ ಕೂದಲು ಉದುರಿ ಮಿಕ್ಕುಳಿದ ಕೂದಲು ಬೆಳ್ಳಿಯ ಮೆರುಗನ್ನು ಹೊಂದುವತ್ತ ಸಾಗುತ್ತಿದ್ದವು! ಹೊಲಿಗೆ, ಸಂಗೀತ, ಅಡುಗೆ, ಚಿತ್ರಕಲೆ, ಕೊಟ್ಟಿಗೆ ಕೆಲಸ, ಮನೆವಾರ್ತೆ ಹೀಗೇ ಹಲವು ಕೆಲಸಗಳನ್ನು ಕಲಿತಿದ್ದರೂ ಹೆಣ್ಣುಮಕ್ಕಳಿಗೆ ತಕ್ಕ ವರಸಾಮ್ಯ ಕೂಡಿಬರುತ್ತಿರಲಿಲ್ಲ. ಕೆಲವೊಮ್ಮೆ ಈ ಸನ್ನಿವೇಶ ’ ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ......’ ಎಂಬ ನರಸಿಂಹಸ್ವಾಮಿಯವರ ಹಾಡನ್ನು ನೆನಪಿಗೆ ತರುತ್ತದೆ. ಗಂಡುಗಳ ಆಯ್ಕೆಯಲ್ಲಿ ಆ ಸ್ಪರ್ಧೆಯಲ್ಲಿ ಸ್ಪುರದ್ರೂಪಿಗಳಲ್ಲದವರು, ನಕ್ಷತ್ರ ದೋಷವುಳ್ಳವರು, ಹಳ್ಳಿಯ ಪಕ್ಕದಮನೆಯ ರಾಜಕೀಯದಿಂದ ಅಪವಾದ ಹೊತ್ತವರು ಕಂಕಣಭಾಗ್ಯಕಾಣದೇ ಹಾಗೇ ಮುದುಕಾದರು! ಎಷ್ಟೋ ಜನ ಹೆಂಗಸರು ಮದುವೆಯ ನಂತರ ನಡೆದ ಹಳ್ಳಿಗರ ಹಿತ್ತಾಳೆ ಕಿವಿಯೂದುವ ತಂತ್ರದಿಂದ ತಮ್ಮ ಗಂಡಂದಿರನ್ನೇ ಕಳೆದುಕೊಳ್ಳಬೇಕಾಗಿ ಬಂತು.

ಹವ್ಯಕ ಹಳ್ಳಿಗರಲ್ಲಿ ಕೃಷಿ ಕೆಲಸಮಾಡುವ ಚೈತನ್ಯ ಇಳಿಯುತ್ತಾ ಹೋಯಿತು. ಗೇರುಸೊಪ್ಪೆಯ ಜಡ್ಡಕ್ಕಿ ಥರದ ಅಕ್ಕಿಯನ್ನು ಉಂಡು ಜೀರ್ಣಿಸುವ ಆಳುಗಳು ಇಲ್ಲವಾದರು! ಹೊತ್ತಿಗೆ ತಕ್ಕ ಮೈಮುರಿದು ಕೆಲಸಮಾಡಿ ಸಬಲರಾಗಿದ್ದ ಜನ ನಿಧಾನವಾಗಿ ಬೇರೇ ಆಳು-ಕಾಳಿನ ಸೌಲಭ್ಯಕ್ಕಾಗಿ ತಡಕಾಡಿದರು. ಈ ನಡುವೆ ಸಮಾಜದ ಇತರೆ ವರ್ಗಗಳ ಕೆಲಸಗಾರರು ಹವ್ಯಕರ ಹೊಲ-ಮನೆಗಳಲ್ಲಿ ಕೆಲಸಕ್ಕೆ ಬರತೊಡಗಿದರು. ಸಂಬಳಕ್ಕೆ ಬರುತ್ತಿದ್ದ ಕೆಲಸಗಾರರು ಕಾಲಾನುವರ್ತಿಗಳಾಗಿ ತಮ್ಮ ಉದರಂಭರಣೆಗಾಗಿ ಹೆಚ್ಚಿನ ಆದಾಯವನ್ನು ಕೋರತೊಡಗಿದರು. ಹವ್ಯಕರು ಬಹುವಾಗಿ ನಂಬಿದ್ದ ಅಡಕೆಗೆ ಅವರು ನಿರೀಕ್ಷಿಸಿದ ದರ ಸಿಗಲಿಲ್ಲ. ದರ ಕುಸಿಯುತ್ತಲೇ ಇತ್ತು, ದಿನಸಿಸಾಮನುಗಳ ಮತ್ತು ಕೂಲಿಯಾಳುಗಳ ಧಾರಣೆ ಜಾಸ್ತಿಯಾಗುತ್ತಲೇ ಇತ್ತು. ಹಲವರು ಸಾಲ-ಸೋಲಮಾಡಿ ಬದುಕಬೇಕಾದ ಕಾಲಬಂತು. ಮರ್ಯಾದೆಯಿಂದ ಜೀವನನಡೆಸುವುದೇ ಕಷ್ಟವಾಗತೊಡಗಿದಾಗ ಬಹಳ ಜನ ಹಳ್ಳಿಗಳನ್ನೇ ತೊರೆಯುವ ಇರಾದೆ ಹೊಂದಿದರು.

ಆದರೂ ಹಳ್ಳಿಗಳಲ್ಲಿ ಅನೇಕರು ಇನ್ನೂ ಕೂಡುಕುಟುಂಬದ ಆಸ್ತಿಯನ್ನು ಹೊಂದಿದ್ದರು. ಹಾಗೆಲ್ಲಾ ಬಿಟ್ಟುಹೊರಡಲು ಮನಸ್ಸಾಗುತ್ತಿರಲಿಲ್ಲ. ಈ ನಡುವೆ ನಗರಗಳಲ್ಲಿ-ಪಟ್ಟಣಗಳಲ್ಲಿ ಸರಕಾರೀ ಯಾ ಖಾಸಗೀ ನೌಕರಿಮಾಡುವ ಮಂದಿ ಈ ಜೀವನವೇ ಸಸಾರವೆಂದರು. ಆ ಯುವಕರು ತಮಗೆ ತಮ್ಮ ಹಾಗೇ ನೌಕರಿಮಾಡುವ ಮಹಿಳೆಯಿದ್ದರೇ ಮದುವೆಯಾಗುವುದಾಗಿ ಹೇಳಿದರು. ಹವ್ಯಕರ ಮದುವೆಗಳು ನೌಕರೀ ಅವಲಂಬಿತವಾಗತೊಡಗಿದ್ದು ಆಗಲೇ! ಮತ್ತೆ ಹೆಣ್ಣು ಹೆತ್ತವರಿಗೆ ಹೊಸ ಸನ್ನಿವೇಶ. ಏಗುತ್ತಾ ಏಗುತ್ತಾ ನಡೆಯುವ, ಬೇಸರಗೊಳ್ಳುವ ಅಪ್ಪಯ್ಯನ ಮುಖದ ಗೆರೆಗಳನ್ನು ಅವಲೋಕಿಸಿದ ಅನೇಕ ಹೆಣ್ಣುಮಕ್ಕಳು ಸ್ವಯಂ ನಿರ್ಧಾರದಿಂದ ಮದುವೆಯೆಂಬ ವಿಷಯವನ್ನೇ ಮರೆತುಬಿಟ್ಟರು, " ಅಪ್ಪಯ್ಯಾ ನೀ ಏನ್ ಹೆದ್ರಡ ಹುಟ್ಟಸಿದ ದೇವ್ರು ಹುಲ್ಲು ಮೇಯಸ್ತ್ನಿಲ್ಲೆ , ನಂಗೊ ಮಹಿಳಾಮಂಡ್ಳಿ ಸೇರಿ ಏನಾದ್ರೂ ಕೆಲಸ ಮಾಡ್ಕಂಡು ಜೀವನ ನಡೆಸ್ಕಂಡ್ ಹೋಗ್ತ್ಯ " ಎಂದುಬಿಟ್ಟರು. ಅಲೆದು ಸವೆದು ತೂತಾದ ಹವಾಯಿಯನ್ನು ಅಂಗಳದ ತುದಿಯಲ್ಲಿ ಕಳಚಿಟ್ಟ ಅಪ್ಪಯ್ಯ ಕುಸಿದು ಕೂರುವ ಮೊದಲೇ ನೂರಾರು ಜಾತಕಪ್ರತಿಗಳ ಕಟ್ಟುಗಳಿದ್ದ ಪ್ಲಾಸ್ಟಿಕ್ [ದಾರದ]ಕೈ ಚೀಲವನ್ನೂ ಬಿಸಿಲಲ್ಲಿ ತಿರುಗಿ ಬಿಳಿಯ ಡಿಸ್ಟೆಂಪರ್ ಹಚ್ಚಿದಂತೇ ಕಾಣುವ ಮರದಕಾವಿನ ಕೊಡೆಯನ್ನೂ ಆತನ ಎರಡೂ ಕೈಗಳಿಂದ ತೆಗೆದಿರಿಸಿ ಇನ್ನುಮೇಲೆ ಆ ಗೋಳೇ ಬೇಡಾ ಎಂದುಬಿಟ್ಟರು!

ಹೆಣ್ಣು ಹೆತ್ತವರ ತಾಪತ್ರಯದ ಅನುಭವವಿರುವ ಆ ಕಾಲದ ಹೊಸಜೋಡಿಗಳು [ಸರಿಸುಮಾರು ೨೦-೨೫ ವರ್ಷಗಳ ಹಿಂದೆ] ಗರ್ಭಧರಿಸಿದ ಮೂರು ತಿಂಗಳಾಗುತ್ತಿದ್ದಂತೇ ಭ್ರೂಣಪರೀಕ್ಷೆಯ ಕಳ್ಳ ಯಂತ್ರಗಳು ಆ ಕಡೆ ಉಡುಪಿ, ಈ ಕಡೆ ಶಿರಸಿ , ಮತ್ತೊಂದೆಡೆ ಶಿವಮೊಗ್ಗಾಕ್ಕೆ ಬಂದಿದ್ದನ್ನು ತಿಳಿದು ಕದ್ದೂಮುಚ್ಚಿ ಅಲ್ಲಿಗೆ ಹೋಗಿ ಸ್ಕ್ಯಾನಿಂಗ್ ನಡೆಸಿದವು! ಮನೆಯ ಅಜ್ಜ-ಅಜ್ಜಿಗೆ ಗೊತ್ತಿರದ ಗೌಪ್ಯದಲ್ಲೇ ವ್ಯವಹಾರಗಳು ಮುಗಿದುಹೋಗುತ್ತಿದ್ದವು. ಅಸಂಖ್ಯಾತ ಹೆಣ್ಣು ಭ್ರೂಣಗಳು ಜನ್ಮ ಕಾಣಲೇ ಇಲ್ಲ! " ಡಾಕ್ಟ್ರೇ, ಗಂಡಾದರೆ ಬಿಡಿ ಹೆಣ್ಣಾದ್ರೆ ಬೇಡ ತೆಗೆದ್ಬುಡಿ " ಎಂದು ನಿರ್ದಾಕ್ಷಿಣ್ಯವಾಗಿ ಹೇಳತೊಡಗಿದರು. ಮಕ್ಕಳ ಭಾಗ್ಯವನ್ನೇ ಕಾಣದ ಕೆಲವು ಜನಮಾತ್ರ ತಮಗೆ ಹೆಣ್ಣೋ ಗಂಡೋ ಯಾವುದೇ ಜನಿಸಿದರೂ ಸರಿ ಅಂತ ಹಾಗೇ ಬಿಟ್ಟಿದ್ದಕ್ಕೆ ಅಲ್ಲಲ್ಲಿ ಕೆಲವು ಹೆಣ್ಣುಮಕ್ಕಳು ಜನಿಸಿದರು ಬಿಟ್ಟರೆ ಆಗ ಹುಟ್ಟಿದವರೆಲ್ಲಾ ಗಂಡುಗೂಳಿಗಳೇ !!

ಮತ್ತೊಂದು ಹತ್ತು ವರ್ಷ ಕಳೆದ ಮೇಲೆ ಸರಕಾರ ಭ್ರೂಣಪರೀಕ್ಷೆಯ ಮೇಲೆ ನಿಷೇಧ ಹೇರಿತು. ಕೃಷ್ಣಭಾವ, ರಘುಮಾವ, ರಾಧಾಕೃಷ್ಣ ಹೆಗಡೆ ಹೀಗೇ ಅನೇಕ ಹವ್ಯಕ ಬಾವಯ್ಯಂದಿರು ಒಳಗೊಳಗೇ ಸರಕಾರವನ್ನು ಬೈದುಕೊಂಡರು! ಆದರೂ ಕೆಲವು ವೈದ್ಯರು ಗುಟ್ಟಾಗಿ ಅಲ್ಲಲ್ಲಿ ಆಪರೇಟ್ ಮಾಡುತ್ತಲೇ ಇದ್ದರು ! ವಿಧಿಯಿಚ್ಛೆಯಲ್ಲಿ ಬದುಕುಳಿಯಬೇಕೆಂಬ ಭ್ರೂಣಗಳು ಬದುಕಿದವು ಈಗ ಅವುಗಳೆಲ್ಲಾ ಮದುವೆ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮಧ್ಯಸ್ಥಿಕೆಯಲ್ಲಿ ವ್ಯವಹಾರಕ್ಕೆ ನಿಂತಿವೆ.

೨೦-೨೫ ವರ್ಷಗಳ ಹಿಂದೆ ಜನಿಸಿ ಪದವಿ ಸಂಪಾದಿಸಿದ ಗಂಡುಗಳ ಜೊತೆಗೆ ಜನಿಸಿದ ಅಥವಾ ಅವರ ಓರಗೆಯ ಅನೇಕರು ವೃದ್ಧಾಪ್ಯದ ತಾಯಿ-ತಂದೆಗಳೆನ್ನುವ ಕಾರಣಕ್ಕೋ ಒಬ್ಬನೇ ಮಗನೆನ್ನುವ ಕಾರಣಕ್ಕೋ ಅಥವಾ ಆಧುನಿಕ ವಿದ್ಯೆ ಇಷ್ಟವಿಲ್ಲದೆಯೋ ತಕ್ಕಮಟ್ಟಿನ ಕಾಲೇಜು ವ್ಯಾಸಂಗ ಮುಗಿಸಿ ಹಳ್ಳಿಗಳಲ್ಲೇ ಉಳಿದರು. ಅದೇ ವಯಸ್ಸಿನ ಅಥವಾ ಅವರಿಗಿಂತಲೂ ಕಿರಿಯರು ತಾಂತ್ರಿಕ ಯಾ ವೈದ್ಯ ಪದವಿ ಮುಗಿಸಿ ನಗರ ಸೇರಿದರು. ತಾಂತ್ರಿಕ ಪದವಿ ಮುಗಿಸಿದವರಿಗೆ ಗಣಕ ತಂತ್ರಜ್ಞಾನ ಅತೀ ಸುಲಭದ ಮಾರ್ಗವಯಿತು. ಹವ್ಯಕರು ಸಹಜವಾಗಿ ಅತೀ ಬುದ್ಧಿವಂತರು, ತೀಕ್ಷ್ಣಮತಿಯುಳ್ಳವರು, ಕುಶಾಗ್ರಮತಿಗಳು ಎಂದೆಲ್ಲಾ ಅನಿಸಿಕೊಂಡಿದ್ದಾರೆ. ಇವತ್ತು ಹವ್ಯಕರಿಲ್ಲದ ರಂಗಗಳೇ ಇಲ್ಲ! ತಾವಿರುವ ರಂಗಗಳಲ್ಲಿ ಬಹುತೇಕ ಮುಂಚೂಣಿಯಲ್ಲೇ ಇರುತ್ತಾರೆ !!

ಊರಮನೆಯಲ್ಲಿರುವ ಈಗಿನ ಯುವಕರು ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಕಷ್ಟಪಟ್ಟು ಮಾಡಿಕೊಂಡರು. ಮನೆಗೆ ಫ್ರಿಜ್, ವಾಶಿಂಗ್ ಮಶಿನ್, ಫ್ಯಾನ್, ಫೋನ್, ಟಿವಿ ಎಲ್ಲಾ ಸೌಕರ್ಯಗಳೂ ಬಂದವು, ಓಡಾಡಲು ವಾಹನಗಳೂ ಬಂದವು. ಆದರೆ ಹೆಣ್ಣುಕೊಡುವವರು ಮಾತ್ರ ದಿಕ್ಕಿಲ್ಲ!! ಮದುವೆಗೆ ತಯಾರಾಗಿರುವ ಹೆಣ್ಣುಮಕ್ಕಳ ಮತ್ತು ಗಂಡುಮಕ್ಕಳ ಸಂಖ್ಯೆಯಲ್ಲಿ ಗಣನೀಯ ವ್ಯಾತ್ಯಾಸ ಇತ್ತು. ಬೇಡಿಕೆಗೂ ಪೂರೈಕೆಗೂ ವ್ಯತ್ಯಾಸವಾದರೆ ಮಾರುಕಟ್ಟೆ ಏನಾಗುತ್ತದೆ ಎಂಬುದು ತಮಗೆಲ್ಲಾ ತಿಳಿದಿದೆಯಷ್ಟೇ? ಅಪ್ಪಯ್ಯನ ಆದರಣೆಯಿಂದ ಆದ್ಯತೆಪಡೆದು ’ಬೇರೆಮನೆಗೆ ಹೋಗುವವಳು’ ಎಂದು ಹಲವು ರೀತಿಯಲ್ಲಿ ಪ್ರೋತ್ಸಾಹ ಪಡೆದು ಉನ್ನತ ವ್ಯಾಸಂಗ ಮುಗಿಸಿದ ಹಲವು ಹುಡುಗಿಯರು ಅಪ್ಪ-ಅಮ್ಮನಿಗೆ ಬೈಬೈ ಹೇಳಿ ಅಲ್ಲೇ ಲವ್ವಿ-ಡವ್ವಿ ಮಾಡಿಕೊಂಡು ಹಾರಿಹೋದವು!! ಅಪ್ಪ-ಅಮ್ಮನ ಮಾತನ್ನು ಮೀರದ ತಂಗ್ಯಮ್ಮಗಳು

೧. ಮದುವೆಯಾಗುವಾತ ಚಂದ ಇರಬೇಕು.
೧. (ಬ) ಆತ ಸಾಪ್ಟ್‍ವೇರ್ ತಂತ್ರಜ್ಞನೇ ಆಗಿರಬೇಕು ಅಥವಾ ವೈದ್ಯನಾಗಿರಬೇಕು.
೨. ಆತನಿಗೆ ಅಣ್ಣ-ತಮ್ಮ ಇರಬಾರದು.
೩. ಅಕ್ಕ-ತಂಗಿ ಇದ್ದರೆ ಬಂದ್ರೂ ಬೇಗ ಅವರವರ ಊರಿಗೆ ಹೋಗಿಬಿಡಬೇಕು.
೪. ಆತನ ಅಪ್ಪ-ಅಮ್ಮ ಜೀವಿತದಲ್ಲಿ ಇಲ್ಲದಿದ್ದರೇ ಒಳ್ಳೆಯದು, ಇದ್ದರೆ ಅವರಪಾಡಿಗೆ ಅವರು ಹಳ್ಳಿಮನೆಯಲ್ಲಿರಬೇಕು.
೫. ಮದುವೆಯಾಗುವಾತ ತನ್ನ[ಹುಡುಗಿಯ] ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು.
೬. ತನ್ನ [ಹುಡುಗಿಯ] ಅಕ್ಕ-ತಂಗಿ ಬಂದರೆ ಅವರನ್ನು ಆದರದಿಂದ ಕಾಣಬೇಕು.
೭. ತನ್ನ[ಹುಡುಗಿಯ] ಅಣ್ಣ-ತಮ್ಮ ಇದ್ದರೆ ಅವರನ್ನೆಲ್ಲಾ ಯಥಾಯೋಗ್ಯ ಅನುಕೂಲದಲ್ಲಿಡಲು ಸಹಕರಿಸಬೇಕು.
೮ ವಾಸಕ್ಕೆ ಬಾಡಿಗೆಮನೆಯಾದರೂ ಕೊನೇಪಕ್ಷ ಬೆಂಗಳೂರಿನಂತಹ ಊರಲ್ಲಿ ಒಂದು ಸೈಟು ಇರಬೇಕು.
೯ ತಿರುಗಾಡಲು ಮಾರುತಿ ೮೦೦, ವ್ಯಾನು ಹೊರತುಪಡಿಸಿ ಯಾವುದದರೂ ಹೊಸ ಕಾರು ಇರಬೇಕು.
.
.
.
.
.
.
ನನಗೆ ಮುಕ್ತ ಸ್ವಾತಂತ್ರ್ಯ ಇರಬೇಕು !!

ಜೈ ಭಜರಂಗಬಲಿ !! ಈಈಈಷ್ಟುದ್ದ ಕರಾರುಗಳುಳ್ಳ ಪತ್ರಹಿಡಿದು ಮಾರುಕಟ್ಟೆಗೆ ನುಗ್ಗಿದವು. ಜಾತಕ ಕೊಡುವ ಬದಲು ಹುಡುಗನ ಜಾತಕವನ್ನೇ ಕೇಳುವ ಆತನ ಜಾತಕ ಜಲಾಡುವವರೆಗೂ ಬೆಳೆದರು! ಎಷ್ಟೋ ಹುಡುಗರು ಕಿಬ್ಬದಿಯ ಕೀಲು ಮುರಿದ ಅನುಭವವಾಗಿ ತಾವೂ ಬೇರೇ ಜನಾಂಗದ ಹುಡುಗಿಯರೊಟ್ಟಿಗೆ ಲವ್ವಿ-ಡವ್ವಿ ಹಾಡಿದರು. ಊರಮನೆಯಲ್ಲಿರುವ ಪಾಪದ ಹುಡುಗರು ಮೇಲೆ-ಕೆಳಗೆ ನೋಡುತ್ತಾ ಅಲ್ಲೊಬ್ಬ ಹುಡುಗಿಯಿದ್ದಾಳೆ ನೋಡಬೇಕು ಇಲ್ಲೊಬ್ಬ ಹುಡುಗಿಯಿದ್ದಾಳೆ ಕೇಳಬೇಕು ಎಂದುಕೊಳ್ಳುತ್ತಾ ಹಲವತ್ತುಕೊಳ್ಳತೊಡಗಿದರು. ದಲ್ಲಾಲಿಗಳು ಎರಡೂ ಕಡೆ ಕುಳಿತು ಅಡ್ವಾನ್ಸು ಪಡೆದು ಬರೋಬ್ಬರಿ ಚಾ ಕಾಫಿ ತಿಂಡಿ ಹೀರಿ ಓಡಾಡಿಕೊಂಡು ವಧುದಕ್ಷಿಣೆಯ ವರೆಗೂ ನಡೆಯಹತ್ತಿತು.

ಕಲಿತ [ಓದಿದ] ಹುಡುಗಿಯರನೇಕರು " ಜಾತಿಯೇನು ಮಹಾ ಗೋತ್ರವೇನು ಮಹಾ ಅಪ್ಪಯ್ಯಾ ? ಅವಂಗೆ ಆಸ್ತಿ ಎಷ್ಟಿದ್ದು ಗೊತ್ತಿದ್ದೋ ? " ಎಂದು ಅಪ್ಪ-ಅಮ್ಮನ ಬಾಯಿಮುಚ್ಚಿಸಿ ಬೇರೇ ಜನಾಂಗದವರನ್ನು ಮದುವೆಯಾದರು!! ಮದುವೆಯಾಗಿ ಆರೇಳುತಿಂಗಳಲ್ಲೇ ಗಂಡಕೊಡುವ ಬವಣೆಗಳನ್ನು ಹೇಳಿಕೊಳ್ಳುವವರೂ, ಹೇಳಿಕೊಳ್ಳಲೂ ಆರದೇ ಪರಿತಾಪಪಡುವವರೂ ಕಂಡುಬಂದರು. ಹಲವು ವಿಚ್ಛೇದನಗಳೂ ನಡೆದವು. ವಿಚ್ಛೇದಿತ ಹೆಣ್ಣುಮಕ್ಕಳು ತಮ್ಮ ಅನುಭವದಿಂದ known Devil is better than unknown Angel ಎಂದರು. ಉದಾರ ಮನದ ಹವ್ಯಕ ಹುಡುಗರು ವಿಚ್ಛೇದಿತ/ಮಕ್ಕಳಿರುವ ಹೆಂಗಸರನ್ನೂ ಮದುವೆಯಾದರು-ಅದೂ ಮಹಾನಗರಗಳಲ್ಲೇ ಕಂಡ ಸತ್ಯ !!

ದಲ್ಲಾಲಿಗಳ ಧಾರಣಮಟ್ಟ ಏರುತ್ತಾ ಹೋಯ್ತು. ಅತ್ತಕಡೆ ಪಾಲಕರಿಗೆ ಕಲಿತ ಹೆಣ್ಣುಗಳು ನೀಡುವ ಕರಾರುಗಳ ಪಟ್ಟಿಯೂ ಊದ್ದುದ್ದ ಬೆಳೆಯ ತೊಡಗಿತ್ತು. ಕೆಲವೊಮ್ಮೆ ಹವ್ಯಕ ಕನ್ಯಾಪಿತೃಗಳ ಸೊಕ್ಕನ್ನು ದಮನಿಸಲು ದಲ್ಲಾಲಿಗಳು ರಾಜ್ಯದ ಯಾವ್ಯವುದೋ ಭಾಗಗಳಿಂದ " ಇವರೇ ಆ ಬ್ರಾಹ್ಮಣರು ಇವರೇ ಈ ಬ್ರಾಹ್ಮಣರು " ಎಂದು ಸುಳ್ಳು ಸೃಷ್ಟಿಸಿ ಹಳ್ಳೀ ಹುಡುಗರಿಗೆ ಮದುವೆ ಮಾಡಿಸಿ ಹಣಎಣಿಸಿಕೊಂಡು ಹೋದರು. ಅಂತಹ ಅನೇಕ ಮದುವೆಗಳೂ ಮುರಿದುಬಿದ್ದವು! ಇಂತಹ ಸಂದರ್ಭವನ್ನು ದೂರದಲ್ಲಿ ನೋಡುತ್ತಿದ್ದ ಶಿರಸಿಯ ಹೆಗಡೆಯವರು ಮಾರ್ಮಿಕವಾಗಿ ಸಮಾಜಕ್ಕೆ ಒಂದು ಚುಚ್ಚುಮದ್ದು ಕೊಟ್ಟರು! ಅದೇ ’ಅಪ್ಪಯ್ಯ ಯಂಗೆ ಬೇಕು ಚಂದಾಗಿದ್ದಂವ ...’ !!

ಅತ್ಯಂತ ಸುಶಿಕ್ಷಿತ, ಸದ್ಗುಣಶೀಲ ಸಮಾಜವಾದ ಹವ್ಯಕರಲ್ಲಿ ಈಗಲೂ ಈ ಗೋಳು ಮುಗಿದಿಲ್ಲ. ಅತಿಯಾಗಿ ಓದಿದ ಹೆಣ್ಣುಮಕ್ಕಳು ಆಕಾಶಕ್ಕೆ ಏಣಿ ಹಚ್ಚಿದ್ದಾರೆ!! ಹಳ್ಳಿಗಳಲ್ಲಿ ಸದ್ಗುಣಿಗಳಾಗಿ ಮಾತಾ-ಪಿತೃಗಳನ್ನು ಪಾಲಿಸುತ್ತಾ ದಿನಗಳೆಯುತ್ತಿರುವ ಪಾಪದ ಗಂಡುಕೂಸುಗಳನ್ನು ಕೇಳುವವರೇ ಇಲ್ಲ! ಮದುವೆಯ ವಯಸ್ಸು ಮೀರಿದಮೇಲೆ ಅದು ಬೇಕೆನಿಸುವುದೇ ಇಲ್ಲ ಎಂಬುದು ಕೆಲವರ ಅಭಿಪ್ರಾಯ. ಜೀವಿತದಲ್ಲಿ ಅದೂ ವೃದ್ಧಾಪ್ಯದಲ್ಲಿ ಜೀವನದ ಕಷ್ಟ-ಸುಖಗಳನ್ನು ಹಂಚಿಕೊಳ್ಳಲಿಕ್ಕೆ ಪಾಲುದಾರರ ಅವಶ್ಯಕತೆ ಕಂಡುಬರುತ್ತದೆ; ಯಾಕೆಂದರೆ ಎಲ್ಲರೂ ಸನ್ಯಾಸಿಗಳೇನಲ್ಲ!! ಆ ಬಂಧ ಎಳವೆಯಲ್ಲೇ ಮದುವೆಯ ಹರೆಯದಲ್ಲೇ ಗಟ್ಟಿಯಾಗಿದ್ದರೆ ಅದು ತರುವ ಸಂತಸವೇ ಬೇರೇ ಇರುತ್ತದೆ, ಅದಿಲ್ಲಾ ಅನಿವಾರ್ಯವಾಗಿ ಆತುಕೊಳ್ಳುವ ರೀತಿಯಲ್ಲಿ ಮುಪ್ಪಿನಲ್ಲೋ ಮಧ್ಯವಯದಲ್ಲೋ ’ ಅಂತೂ ಮದುವೆಯ ಶಾಸ್ತ್ರ ಆಯಿತಪ್ಪ’ ಎಂಬ ಅನಿಸಿಕೆಯಲ್ಲಿ ಮಾಡಿಕೊಂಡವರಿಗೆ ಅದು ಅಷ್ಟಕ್ಕಷ್ಟೇ!

ಅಂದಹಾಗೇ ಕಾನುಗೋಡು ಚನ್ನಕೇಶವನಿಗೆ ಪಾಳಿಯಲ್ಲಿ ಪೂಜೆಮಾಡಲು ಇವತ್ತು ಹವ್ಯಕ ಹುಡುಗರಿಲ್ಲ!! ಪೂಜೆ ಯಾರಿಗೆ ಬೇಕಾಗಿದೆ ಹೇಳಿ ? ಮನೆಗಳಲ್ಲಿ ದೀಪಹಚ್ಚಬೇಕಾದ ಹೆಣ್ಣುಗಳೇ ಮರೆಯಾಗುತ್ತಿರುವಾಗ ಮಿಕ್ಕುಳಿದದ್ದು ಆಮೇಲೆ ಅಲ್ಲವೇ? ಸದ್ಯಕ್ಕೆ ಚನ್ನಕೇಶವನ ಪೂಜೆಗೆ ಸಂಬಳದಮೇಲೆ ಹವ್ಯಕ ಭಟ್ಟರೊಬ್ಬರನ್ನು ನೇಮಿಸಿದ್ದಾರೆ-ಚನ್ನಕೇಶವ ಉಪವಾಸ ಬೀಳಲಿಲ್ಲ!! ಅಲ್ಲೀಗ ದಾರಿಯ ಇಕ್ಕೆಲಗಳಿರಲಿ ದೇವಸ್ಥಾನದ ಸುತ್ತಲೂ ಇರುವ ಕಾಡುಗಳೆಲ್ಲಾ ನಾಶವಾಗಿ ದೇವಸ್ಥಾನ ಊರೊಳಗೆ ಹೊಕ್ಕಹಾಗಿದೆ. ಕಾಡು ನಾಡಾಗಿದೆ, ನಾಡಿನ ಜನತೆಗೆ ದೇವರು ಬೇಡವಾಗಿದ್ದಾನೆ!! ಅಲ್ಲಿನ ಮೂಲದವರೆಲ್ಲಾ ಅದೂ ಇದೂ ಓದಿಕೊಂಡು ನಗರಗಳತ್ತ ಬಿಜಯಂಗೈದಿದ್ದಾರೆ- ಅರಸಿಯರನ್ನು ಅರಸಬೇಕಲ್ಲಾ-ಹೀಗಾಗಿ!!

ಹವ್ಯಕ ಮುಖಂಡರನೇಕರು ಇದೊಂದು ನಮ್ಮ ಸಮಾಜದ ಪಿಡುಗು ಎಂದು ಮೇಜು ಗುದ್ದುವುದು ಬಿಟ್ಟರೆ ಕ್ರಿಯಾತ್ಮಕವಾಗಿ " ಎಮ್ಮನೆ ತಂಗ್ಯೊಂದು ಎಂ.ಬಿ.ಏ ಮಾಡಿದ್ದು ಮಾರಾಯ ಎಲ್ಲಾದ್ರೂ ಹುಡುಗ್ರಿದ್ವನ ? " ಎಂಬ ಮಾತನ್ನೇ ಆಡುತ್ತಾರೆ. ಬೆಕ್ಕಿಗೆ ಗಂಟೆಕಟ್ಟುವ ಕೆಲಸ ಯಾವ ಇಲಿಗೂ ಬೇಡದ್ದು ಅಲ್ಲವೇ? ತಿರುಗಿದ ಕಾಲಚಕ್ರದ ಹಲ್ಲಿಗೆ ಸಿಕ್ಕ ಹವ್ಯಕ ಸಮಾಜದ ಗಂಡುಕೂಸುಗಳನ್ನು ನೆನೆಯುತ್ತಾ ಒಮ್ಮೆ ನೆನೆಪಿಗೆ ಬಂದಿದ್ದು ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಹೆಣ್ಣುಮಕ್ಕಳನ್ನಾದರೂ ಹವ್ಯಕ ಮುಖಂಡರು ಕರೆತಂದು ನಮ್ಮ ಹುಡುಗರ ಆಶಯವನ್ನು ನೆರವೇರಿಸಬಹುದಿತ್ತು. ಆದರೆ ಯಾರದೋ ಮನೆಯ ಜವಾಬ್ದಾರಿ ಯಾರಿಗೆ ಬೇಕು ಎಂದು ತಂತಮ್ಮಲ್ಲೇ ಒಳತೋಟಿ ಹೊಂದಿರುವ ಹವ್ಯಕ ಬುದ್ಧಿವಂತರಿಗೆ ಹೆಚ್ಚಿಗೆ ಏನನ್ನು ಹೇಳಲು ಸಾಧ್ಯ ಹೇಳಿ ?

ಹುಟ್ಟಿದ ಪ್ರತೀ ಜೀವಿಗೂ ಜಗದಲ್ಲಿ ಅದರ ನ್ಯಾಚುರಲ್ ಹ್ಯಾಬಿಟಾಟ್ ಅಂತ ಇರುತ್ತದೆ ಅಲ್ಲವೇ? ಅದು ಜನಾಂಗಗಳಲ್ಲಿ, ಪ್ರಭೇದಗಳಲ್ಲಿ ಪ್ರವಹಿಸುವ ವೈಖರಿಯೇ ಬೇರೇ ಬೇರೆ. ಹವ್ಯಕ ಬ್ರಾಹ್ಮಣ ಹುಡುಗಿಯೊಬ್ಬಳು ಕುರಿಯ ತಲೆಗೆ ಮಸಾಲೆ ಅರೆಯುವ ಕೆಲಸವನ್ನಾಗಲೀ ಅಥವಾ ಮಾಂಸಾಹಾರೀ ವಂಶದಿಂದ ಬಂದ ಕುವರಿಯೊಬ್ಬಳು ದಿನನಿತ್ಯ ಮುಟ್ಟು-ಮಡಿ, ಹೋಮ-ಹವನ, ಉಪವಾಸ-ವ್ರತ ಇತ್ಯಾದಿಗಳಲ್ಲಿ ತೊಡಗಿಕೊಳ್ಳುವುದಾಗಲೀ ಅವರವರ ನ್ಯಾಚುರಲ್ ಹ್ಯಾಬಿಟಾಟಿಗೆ ವಿರುದ್ಧವಾಗಿರುತ್ತದೆ! ಪ್ರಾಯದ ದೇಹ ಕಸುವಿನಲ್ಲಿ ಹೆಚ್ಚೆಂದರೆ ವರ್ಷಾರುತಿಂಗಳು ಹೊಂದಿಕೊಂಡರೂ ಕ್ರಮೇಣ ಆ ಮೂಲ ಜೀನ್ಸ್ ಆ ಮೂಲ ಕ್ರೋಮೋಸೋಮ್ ತನ್ನ ಮೂಲ ಸಂಸ್ಕಾರವನ್ನೇ ಅನುಸರಿಸುತ್ತದೆ! ಪ್ರವಾಹದ ವಿರುದ್ಧ ಈಜುವವರ ಗತಿ ಗೊತ್ತಿದೆಯಲ್ಲಾ ಹಾಗೇ ಇಲ್ಲೂ ಮನದ ಪ್ರವಾಹದ ವಿರುದ್ಧ ಈಜಲಾಗದ ಯಾವುದೋ ಘಳಿಗೆಯಲ್ಲಿ ಮದುವೆ ವಿಚ್ಛೇದನದಲ್ಲಿ ಪರ್ಯವಸಾನಗೊಳ್ಳುತ್ತದೆ! ಹೀಗೆಲ್ಲಾ ರಾಮಾಯಣವಾಗುವ ಬದಲು ಹವ್ಯಕರು ಹವ್ಯಕರನ್ನೇ ವರಿಸಲಿ! ಹತ್ತು ಹೆಚ್ಚೋ ಕಮ್ಮಿಯೋ ಸಮಾಜಿಕ ಹೊಂದಾಣಿಕೆಯಲ್ಲಿ ವ್ಯತ್ಯಾಸವಾಗುವುದಿಲ್ಲ! ಹವ್ಯಕ ಗಂಡುಗಳು ಹಣದಾಹಿಗಳಲ್ಲ, ಕೊಲೆಗಡುಕರಲ್ಲ! ಹವ್ಯಕ ಹುಡುಗರು ತುಂಬಾ ಸುಸಂಸ್ಕೃತರೂ ಗುಣಾಢ್ಯರೂ ಆಗಿದ್ದಾರೆ. ಆಸರೆಗಾಗಿ ಅರಸಿ ಬರುವ ’ಅರಸಿ’ಯನ್ನು ಈಗಿನವರಂತೂ ’ಅರಸಿ’ಗೆ ತಕ್ಕ ಸೌಲಭ್ಯಗಳಿಂದ ಪೋಷಿಸುತ್ತಾರೆ! ಈ ಸದಾಶಯವನ್ನು ಸಾರುತ್ತಾ ಹವ್ಯಕ ಕನ್ಯಾಪಿತೃಗಳಲ್ಲಿ ಈ ಬಿನ್ನಹವನ್ನು ಮುಂದಿಡುತ್ತಾ ಮತ್ತೊಮ್ಮೆ ನಿಮಗೆ ಅದೇ ಹಾಡನ್ನು ಕೇಳಿಸುತ್ತಿದ್ದೇನೆ, ನಮಸ್ಕಾರ.