ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 8, 2013

ಶಿಕ್ಷಕ ಅಂದು-ಇಂದು

ಶಿಕ್ಷಕ ಅಂದು-ಇಂದು
[ದಯವಿಟ್ಟು ಗಮನಿಸಿ: ಇಂದಿನ ದಿನಮಾನದಲ್ಲಿ ಶಿಕ್ಷಕರಲ್ಲೂ ಎಡಪಂಥೀಯರು ತಯಾರಾಗಿದ್ದಾರೆ; ಸರಕಾರೀ ಶಾಲೆ-ಕಾಲೇಜುಗಳಲ್ಲಿ ಅವರದ್ದೇ ಮೇಲುಗೈ. ಹೀಗಿರುವಾಗ ಗುಣಮಟ್ಟದ ಶಿಕ್ಷಣ ಎಂಬುದು ಕನಸಿನ ಮಾತು. ಉತ್ತಮ ಶಿಕ್ಷಕರು ಇಲ್ಲವೆಂದಲ್ಲ, ಅವರಿಗೆ ಪ್ರಾಧಾನ್ಯತೆ ಸಿಗುವುದಿಲ್ಲ. ಶಿಕ್ಷಕ ಮಿತ್ರರೂ ಬಂಧುಗಳೂ ಇದ್ದೀರಿ-ಇದು ಎಲ್ಲರಿಗೂ ಅನ್ವಯವಲ್ಲ ಎಂಬುದನ್ನು ತಮ್ಮಗಳ ಗಮನಕ್ಕೆ ತರುತ್ತಿದ್ದೇನೆ. ಉತ್ತಮ ಶಿಕ್ಷಕರಿಂದ ಕ್ಷಮೆಯಿರಲಿ. ]


[ಚಿತ್ರಗಳ  ಋಣ : ಅಂತರ್ಜಾಲ]
ಶಿಕ್ಷಕ ಅಂದು

ಅರಿತು ತನ್ನೊಳಗಷ್ಟು ಓದುತ್ತ ಗ್ರಂಥಗಳ
ಬೆರೆತು ಸುಜ್ಞಾನಿಗಳೊಡನಾಡಿ ಕಲಿಯುತಲಿ
ಪರಿತಪಿಸಿ ಚಿಂತಿಸುತ ಗಹನವಿದ್ಯೆಗಳನ್ನು
ನುರಿತನಾದವ ಗುರುವು | ಜಗದಮಿತ್ರ 

ಹಂಬಲಿಸಿ ಹಲವು ಹೊತ್ತಗೆಗಳನ್ ಹಗಲಿರುಳು
ತುಂಬಿಸುತಲಾಮನಕೆ ಆಯ್ದ ಸಂಗತಿಯ
ನಂಬಿಬಂದಿಹ ಶಿಷ್ಯ-ವಿದ್ಯಾರ್ಥಿಗಣಕಿಷ್ಟು
ಇಂಬುಗೊಡುವನು ಗುಣಕೆ | ಜಗದಮಿತ್ರ

ಹಳೆಯ ದಿರಿಸಲೆ ತನ್ನ ಬಡತನವ ಮರೆಮಾಚಿ
ಹೊಳೆಯುತಿದ್ದಾವ್ಯಕ್ತಿ ಜ್ಞಾನಮಂಟಪದೊಳ್
ಕಳೆಕಳೆಯ ತೇಜಸ್ಸು ಓಜಸ್ಸು ಪರಿಪಕ್ವ
ಬೆಳೆತೆಗೆದ ಮುಖವಗಲ | ಜಗದಮಿತ್ರ

ಮರದಡಿಗೊ ಮಂದಿರದ ಚಾವಡಿಯಲಲ್ಲೆಲ್ಲೊ
ಸ್ಥಿರಗೊಳಿಸಿ ತನುಮನವ ಕುಳಿತು ಬೋಧಿಸುವ
"ಹರವಾದ ಹರಿವಾಣವೀಭೂಮಿ ವೈಶಾಲ್ಯ 
ತೆರೆದಷ್ಟು ತಿರೆ ಗೂಢ " | ಜಗದಮಿತ್ರ  

ಅರ್ಥಚಿಂತನೆಯಲ್ಲಿ ಸಮಯ ವ್ಯಯಿಸದೆ ಇಹದಿ
ವ್ಯರ್ಥ ಜೀವನವೆಂದು ವೃತ್ತಿ ಹಳಿಯದಲೆ
ಪಾರ್ಥಗಂ ಭಗವಂತ ಗೀತೆ ಪೇಳಿದರೀತಿ
ಸಾರ್ಥಕವು ಗುರುತನವು | ಜಗದಮಿತ್ರ  



ಶಿಕ್ಷಕ ಇಂದು

ಮಸ್ತಕವ ವಸ್ತುಗಳಿಂ  ಕಸದತೊಟ್ಟಿಯ ಮಾಡಿ
ಪುಸ್ತಕಗಳೇಕಿನ್ನು ಸಾಕೆಂದು ಬಗೆದು
ವಾಸ್ತವದಿ ಕಡುಮೂರ್ಖ ಉದರಪೋಷಕ ವೇಷ!
ಜಾಸ್ತಿಯೋದದ ಧನಿಕ | ಜಗದಮಿತ್ರ    

ದಿನವಿಡೀ ತಿರುಗುತ್ತ ತರಗತಿಗೆ ಶಾಸ್ತ್ರಕ್ಕೆ!
ಕನವರಿಸಿ ಹಣರಾಶಿ ಮುಂಭಡ್ತಿಗಳನಂ 
ತನುಕೊಡಹಿ ದೂರವಾಹಿನಿ ನೋಳ್ಪ ನಿಶೆಯಲ್ಲಿ
ಕನಸಿಗನು ರಸಿಕಮಣಿ | ಜಗದಮಿತ್ರ

ಹೊಸಹೊಸಾ ಬಟ್ಟೆಗಳು ಅತ್ತರು ಸುಗಂಧಗಳು
ನಸುಕಿನಿಂದಲೆ ಮೊಳಗ್ವ ಚರವಾಣಿ ಕರೆಗಳ್ !
ಕಸುವಿಟ್ಟು ತೆರೆಳುವನು ಶಾಸಕರ ಸದನಕ್ಕೆ
ವಿಷಯ: ವರ್ಗಾವರ್ಗಿ | ಜಗದಮಿತ್ರ

ಮೂರು ಅಕ್ಷರವಿಲ್ಲ ನಾಲಿಗೆಯ ಸೀಳಿದರೆ
ನಾರುವುದು ನಾಲಿಗೆಯು ವಿಷಯ ವಾಸನೆಯಿಂ
ದೂರಿದರೆ ಕಾರುವನು ಖಾರ ಕೆಂಡದ ಅಗುಳು
ಜಾರುವನು ಶಿಕ್ಷಕನೆ? ಜಗದಮಿತ್ರ   

ಅರಿವು ಮೊದಲೇ ಇಲ್ಲ ರೀತಿ-ನೀತಿಗಳಿಲ್ಲ
ಬರೆದ-’ಪದವಿ’ಗಳಷ್ಟೆ ಅರ್ಹತೆಯು ಅವಗೆ !
ಧರೆಯ ದುಃಖದ ಗೊಡವೆ ಮರೆತ ನಾಸ್ತಿಕವಾದ
ದೊರೆತನಕೆ ಮಿಗಿಲುಂಟೆ?  ಜಗದಮಿತ್ರ