ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, September 24, 2012

ಬೇಕು ಕೃಷ್ಣಚಂದ್ರಮ

 ಚಿತ್ರಋಣ : ಅಂತರ್ಜಾಲ
ಬೇಕು ಕೃಷ್ಣಚಂದ್ರಮ 

ಬೇಕು ಬೇಕು ಬೇಕು ರಾಧೆ ಬೇಕು ಕೃಷ್ಣಚಂದ್ರಮ
ಸಾಕೆನ್ನಲು ಸಾಧ್ಯವಿಲ್ಲ ಲೋಕಕದುವೆ ಸಂಭ್ರಮ !
ನಾಕದಿಂದ ಭುವಿಗೆ ಬಂದು ಆ ಕರುಣಿಯು ರಥದಿ ನಿಂದು
ಚಾಕರಿಗಳ ಬಿಡಿಸಿ ಪೇಳ್ದ ಸಾಕಾರ ವಿಹಂಗಮ || ಪ ||

ಪೀಕುತಿರುವ ದುಷ್ಟಜನರ ನೂಕಿ ಪಾತಾಳದೆಡೆಗೆ
ದೇಖರೇಖಿ ನೋಡಿಕೊಳಲು ವಾಸುದೇವ ಸತತವೂ
ಬಾಕಿಯಿರುವ ಕಷ್ಟಗಳನು ನಾಕು ನಾಕು ಕೈಗಳಿಂದ
ಸೋಕಿಸುತ್ತ ಹರಿಸಿ ಹರಿಯು ಹರಣ ಹಸನುಗೊಳಿಸಲು  || ೧ ||

ತಾಕಿಸುತ್ತ ಬೆರಳ ತುದಿಯ ತಪ್ಪಿಸಿ ಅರಿ ಶರದ ಗುರಿಯ
ಚಾಕಚಕ್ಯತೆಯನು ಮೆರೆವ ಶ್ರೀ ಮುರಾರಿ ಮುದದೊಳು
ತೇಕಿದಣಿದು ಇಹವ ತೊರೆವ ಪೂತನಿಗಳ ಹಾಲುಕುಡಿಯೆ
ಪಾಖಂಡೀ ದಂಡು ನಡುಗೆ ಆ ಮಾಧವ ಭರದೊಳು || ೨ ||

ಪಾಕದಚ್ಚುಬೆಲ್ಲ ಉಂಡೆ ರಾಶಿರಾಶಿಯರಳ ಕಂಡೆ
ಸಾಕಷ್ಟಿದೆ ತಿನ್ನಗೊಡಲಖಂಡ ಭರತವರ್ಷದಿ
ಮೂಕ ಅರ್ಜಿ ಹಿಡಿದುಬಂದೆ ಯಾಕೆ ಬಾರನೆಂದುಕೊಂಡೆ
ಲೋಕನಾಯಕನಿಗೆ ಕಾದೆ ಬದುಕಿ ಬಹಳ ವರ್ಷದಿ || ೩ ||