ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 7, 2011

ಇರುವುದೊಂದೇ ಭೂಮಿ ಉರಿವುದೊಂದೇ ದೀಪ


ಇರುವುದೊಂದೇ ಭೂಮಿ ಉರಿವುದೊಂದೇ ದೀಪ

ಟಪಟಪಟಪ ಹನಿಗಳನ್ನು ಮುಂಗಾರಿನ ಆರಿದ್ರಾ ಮಘಾ ಹುಬ್ಬಾ ನಕ್ಷತ್ರದ ಮಳೆಗಳು ಹನಿಸುತ್ತಿರುವಾಗಲೇ ಅಜ್ಜಿ ಕಂಬಳಿ ಕೊಪ್ಪೆ ಹಾಕಿಕೊಂಡು ಮನೆಯ ಎಡಪಾರ್ಶ್ವದಲ್ಲಿ ಎತ್ತರದಲ್ಲಿ ಇದ್ದ ಚಿಕ್ಕ ಹಿತ್ತಿಲ ಕಡೆಗೆ ಸಣ್ಣ ಕತ್ತಿ ಹಿಡಿದು ಹೋಗುತ್ತಿದ್ದಳು. ಅಜ್ಜಿ ಹೊರಗಡೆ ಹೊರಟಳೆಂದರೆ ಮಕ್ಕಳ ಮೆರವಣಿಗೆ ಜೊತೆಗೆ ಹೊರಟಿತೆಂದೇ ಅರ್ಥ. ಯಾರೇ ತಪ್ಪಿಸಿಕೊಂಡರೂ ನಾನು ಮಾತ್ರ ಅಜ್ಜಿಯ ಜೊತೆ ಹಿತ್ತಿಲಕಡೆ ಅಡಕೆ ತೋಟದ ಕಡೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಜಾರುವ ಏರಿಯ ಕಲ್ಲು [ಲ್ಯಾಟರೈಟ್]ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋಗುವಾಗ ಅಜ್ಜಿಯ ಕೈಲಿ ಹಲವು ಸಾಮಾನುಗಳಿರುವುದರಿಂದ ಕೆಲವೊಮ್ಮೆ ನಮ್ಮ ಕೈಗಳನ್ನು ಹಿಡಿದುಕೊಂಡು ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ಜಾರೆಯಲ್ಲಿ ಮೆಟ್ಟಿಲು ಜಾರಿ ಕುಂಡೆಗೆ ಹೊಡೆತ ಬಿದ್ದು ಕಾಲಿಗೆ ಗೀರಿನ ಗಾಯವಾಗಿ ಆ ನೋವಲ್ಲೂ ಅಜ್ಜಿಯ ಬೆನ್ನು ಹತ್ತದೇ ಬಿಡುತ್ತಿರಲಿಲ್ಲ. " ಬ್ಯಾಡ ಮಗ್ನೇ ಮಳೆ ಬೇರೆ ಬರ್ತಾ ಇದೆ ಜಾರ್ಕೆ ಬೇರೆ ಮನೆಗೆ ಹೋಗು ನಾನು ಸಣ್ಣ ಕೆಲ್ಸ ಮುಗಿಸಿ ಬೇಗ ಬತ್ತೆ ಅಕ್ಕಾ ? " ಎಂಬ ಹೇಳಿಕೆಗಳನ್ನೆಲ್ಲಾ ಸಾರಾಸಗಾಟಾಗಿ ತಿರಸ್ಕರಿಸಿದ ’ತೇನಸಿಂಗರು’ ನಾವು !

ಹಿತ್ತಿಲಿಗೆ ಹೋದ ಅಜ್ಜಿ ಮಳೆಗಾಲದ ಆರಂಭದಲ್ಲಿ ಮಣ್ಣು ಪೇರಿಸಿ ಅದರಲ್ಲಿ ಹಾಕಿದ್ದ ಮೊಗೆ[ಮಂಗಳೂರು ಸೌತೆ], ಸೌತೆ, ಹೀರೆ ಇತ್ಯಾದಿ ಹಿತ್ಲಕಾಯಿಗಳ ಬಳ್ಳಿ ಅದಾಗಲೇ ಮೊಳಕೆಯೊಡೆದು ಗುಂಗುರು ಗುಂಗುರು ಪಾದಗಳನ್ನೆಲ್ಲಾ ನೆಲಕ್ಕೆ ಊರಿ ಹಬ್ಬಿದ್ದನ್ನು ನೋಡಿ ಸಂತಸಪಡುತ್ತಿದ್ದಳು. ಹಸಿರಾದ ಬಳ್ಳಿಗಳು ಠುಂ ಠುಂ ಮೈದುಂಬಿ ಊರಗಲ ಅಡ್ಡಾದಿಡ್ಡಿ ಹರದಾಡಿ ಬೆಳೆಯತೊಡಗುತ್ತಿದ್ದವು. ಅವುಗಳ ಮಾರ್ಗವನ್ನು ನಿರ್ದೇಶಿಸುವ ಸಲುವಾಗಿ ಅಜ್ಜಿ ಅಲ್ಲಿಗೆ ಆಗ ಹೋಗುತ್ತಿದ್ದಳು. ಬೆಟ್ಟದಲ್ಲಿ ಸಿಗುವ ಹಸಿರು ಗಿಡಗಂಟಿಗಳ ಪಕ್ಕೆಗಳ ಗುಜರನ್ನು ಯಾರೋ ಆಳುಗಳು ಕೊಟ್ಟಿಗೆಗೆ ಸೊಪ್ಪು ತರುವಾಗ ಕಾಡೀ ಕಾಡೀ ತರಿಸಿಕೊಂಡು ಅವು ಕೈಗೆ ಸಿಕ್ಕಿದ ಮಾರನೇ ದಿನ ಈ ಕೆಲಸ ನಡೆಯುತ್ತಿತ್ತು. ಹರೆಯುವ ಬಳ್ಳಿಗಳ ಇಕ್ಕೆಲಗಳಲ್ಲಿ ಎತ್ತರದ ಅಡಕೆ ದಬ್ಬೆಗಳನ್ನು ಹೂತು ಮೇಲೆ ಅಡ್ಡಡ್ಡ ಮತ್ತೊಂದು ಅಡಕೆ ದಬ್ಬೆ ಕಟ್ಟಿ ಮಧ್ಯೆ ಸಾಲಾಗಿ ಗುಜರುಗಳನ್ನು ಆನಿಸಿ ಕಟ್ಟಿದರೆ ಬೆಳೆಯುವ ಬಳ್ಳಿಗಳು ಗುಜರಿನ ಆಸರೆಯನ್ನು ಪಡೆದು ಮೇಲಕ್ಕೆ ಹಬ್ಬುತ್ತಿದ್ದವು.

ಹಬ್ಬಿದ ಬಳ್ಳಿಗಳಿಗೆ ತಿಂಗಳಲ್ಲೇ ಬಿಳಿ/ಹಳದಿ ಹೂವುಗಳು ಆಮೇಲೆ ನಿಧಾನಕ್ಕೆ ಹೂವು ಉದುರಿಬೀಳುವ ಸಮಯದಲ್ಲೇ ಅದರ ಹಿಂಭಾಗಕ್ಕೆ ಅಂಟಿಕೊಂಡೇ ಬರುವ ಚಿಕ್ಕ ಚಿಕ್ಕ ಪೀಚುಗಾಯಿಗಳು. ಅಲ್ಲಲ್ಲಿ ಹಾಗೆ ಕಾಣುವ ಪೀಚುಗಾಯಿಗಳನ್ನು ನೋಡಿದಾಗ ಅಜ್ಜಿಯ ಕಣ್ಣುಗಳಲ್ಲಿ ಮುಖದಲ್ಲಿ ಅರಳುವ ಸಂತಸದ ಆ ಭಾವ ಇವತ್ತಿಗೂ ಮರೆಯಲಾಗದ್ದು, ಚಿತ್ರದಲ್ಲೋ ಕವನದಲ್ಲೋ ಕಟ್ಟಿಡಲಾಗದ್ದು. ಬೆಟ್ಟದಲ್ಲಿ ಆಡುವ ಕೋಡಗಳು[ಮಸಿಮಂಗಗಳು] ಹಾರುತ್ತಾ ಜೀಕುತ್ತಾ ಊರಕಡೆ ಬರುವ ವಾಡಿಕೆಯಂತೂ ಇದ್ದೇ ಇತ್ತು. ತೋಟದ ಬದುವಿನಲ್ಲಿ ಬೆಳೆದ ಬಾಳೆಯ ಗೊನೆಗಳನ್ನೂ ಹಿತ್ತಲಲ್ಲಿ ಇರುವ ಬೇರಹಲಸು, ಪಪ್ಪಾಯಿ ಕಾಯಿಗಳನ್ನೂ ಜೊತೆಗೆ ಸಿಗಬಹುದಾದ ಇನ್ನಿತರ ಹಣ್ಣು-ಕಾಯಿಗಳನ್ನು ತಿನ್ನಲು ವಕ್ಕರಿಸುವ ಕೋಡಗಳು ಬಂದರೆ ಹಾಗೆಲ್ಲಾ ಮುಗಿಸದೇ ಬಿಡುವ ಪ್ರಾಣಿಗಳೇ ಅಲ್ಲ! ಮಂಗ ಹೊಕ್ಕ ಬಾಳೆತೋಟ ಎಂಬ ಗಾದೆಯೇ ಇದೆಯಲ್ಲಾ ? ಹಾಗೆ ಹಾರಿಬರುವ ಕೋಡಗಳು ಹಿತ್ತಲ ಪೀಚುಗಾಯಿಗಳನ್ನು ಎತ್ತಿಕೊಂಡು ಬಳ್ಳಿಗಳ ಬೆಳವಣಿಗೆಗೆ ಹಾಕಿದ ಚಪ್ಪರ ಮುರಿದು ಅನಾಚಾರವೆಸಗಿ ಹೋಗುವ ದಿನಗಳೂ ಇದ್ದವು.

ಕೋಡಗಳು ಬಂದ ಸುದ್ದಿ ಯಾರಾದರೊಬ್ಬರ ಕಣ್ಣಿಗೆ ಕಂಡು ಹಬ್ಬುತ್ತಿದ್ದಂತೇ ಜಾಗಟೆ ಬಡಿದು ಬರೇ ಪುಸ್ಸೆನ್ನುವ ಥಂಡಿಹಿಡಿದ ಲಕ್ಷ್ಮೀಪಟಾಕಿ ಹಚ್ಚಿ ವಿಚಿತ್ರವಾಗಿ ನಾವೆಲ್ಲಾ ಹುಯ್ಕೋ ಹುಯ್ಕೋ ಹಾಕಿ ಗಂಟಲು ಬಿದ್ದುಹೋಗುವ ವರೆಗೂ ಕೂಗಿ ಊರಿಗೆ ಊರೇ ಪುಕ್ಕಟೆ ಜಾತ್ರೆ ಅನುಭವಿಸುವ ರೀತಿ ಆಗಿಬಿಡುತ್ತಿತ್ತು. ಕೆಲವೊಮ್ಮೆ " ಅಮ್ಮಾ ಮಂಗ ಬಂದದ್ರೋ " ಎಂದು ಎಚ್ಚರಿಸಿದ ಆಳುಗಳೂ ಕೋಡಗಳನ್ನು ಓಡಿಸಲಿಕ್ಕೆ ಸಹಾಯ ಮಾಡಬೇಕಾದ ಪರಿಸ್ಥಿತಿ ಇತ್ತು. ಒಂದು ಗುಂಪಿನಲ್ಲಿ ಕನಿಷ್ಠ ೧೮-೨೦ ಕೋಡಗಳು ಇರುತ್ತಿದ್ದವು. ಅಂತೂ ಹೆದರಿಸಿದ ಮೇಲೆ ಆ ಗಡಿಬಿಡಿಯಲ್ಲೂ ಪೀಚುಗಾಯಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಹಾರಿಹೋಗಿ ಮನೆಗಳ ಹಂಚಿನಮೇಲೆ ಕೂತುಬಿಡುತ್ತಿದ್ದವು.

ಹಾರುವಾಗ ಹಂಚು ಒಡೆದು ಮನೆಯೊಳಗೆಲ್ಲಾ ಮಳೆ ನೀರು ಸುರಿಯುವುದೂ ಇತ್ತು. ಹಾಗೊಮ್ಮೆ ಹಂಚು ಒಡೆದರೆ ದುರಸ್ತಿ ಅಥವಾ ಬದಲಾಯಿಸುವ ಕೆಲಸ ನಡೆಸುವುದೇ ಕಷ್ಟವಾಗುತ್ತಿತ್ತು. ಕೋಡಗಳ ಉಪದ್ವ್ಯಾಪ ಜಾಸ್ತಿಯಾದಾಗ ಮನೆಯ ಬಾಕಿಜನ ಅಜ್ಜಿಯ ಹಿತ್ತಿಲನ್ನೇ ಗುರಿಯಾಗಿಸಿ ಅಣಕಿಸುತ್ತಿದ್ದರು. ಒತ್ತಾಸೆಯಿಂದ ಬೆಳೆಸಿದ ಹಿತ್ತಿಲಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋದಾಗ ಅಜ್ಜಿಯ ಮುಖದಲ್ಲಿನ ಆ ನೋವಿನ ಕ್ಷಣಗಳೂ ಗೋಚರಿಸುತ್ತಿದ್ದವು. ಅಜ್ಜಿಯ ಅಂದಿನ ನೋವಿನಲ್ಲಿ ನಾವೂ ಸಹಭಾಗಿಗಳೇ ಬಿಡಿ; ಅದು ಅವರಿಗೂ ಗೊತ್ತು. " ಥೂ ದರಿದ್ರ ಕೋಡ ಎಲ್ಲಿತ್ತೋ ಸಾಯಕ್ಕೆ ಬಂದೆಲ್ಲಾ ಹಾಳ್ಮಾಡ್ಬುಡ್ತು " ಎನ್ನುತ್ತಾ ಬಿದ್ದ ಚಿಕ್ಕಮಕ್ಕಳೆದುರಲ್ಲಿ ನೆಲವನ್ನು ಗುದ್ದಿ " ನೋಡು ಈ ನೆಲಕ್ಕೆ ಹೊಡದೆ ಸುಮ್ನಿರು " ಎಂದು ಪುಸಲಾಯಿಸಿದ ರೀತಿ ಅಜ್ಜಿಗೆ ನಮ್ಮದೇ ಸಾಂತ್ವನ ಕೊಡುವ ವೈವಾಟಿತ್ತು!


ಎಳೆಯ ಸೌತೇ ಕಾಯಿಗಳು ತಿನ್ನಲು ಬಲುರುಚಿ ಅಲ್ವೇ ? ನಮ್ಮಲ್ಲಿ ಎಳೆಯ ಸೌತೇಕಾಯಿಗಳನ್ನು ಕೊಯ್ಯಲು ಬಿಡುತ್ತಿರಲಿಲ್ಲ. ಕೃಷ್ಣಾಷ್ಟಮಿಯ ದಿನ ಮೊದಲನೇ ಸೌತೇಕಾಯಿ ಕೋಸಂಬರಿ ಕೃಷ್ಣಯ್ಯನಿಗೆ ಕೊಟ್ಟಾದಮೇಲೇ ನಾವೆಲ್ಲಾ ಸೌತೆಕಾಯಿ ತಿನ್ನುವ ಅಲಿಖಿತ ಕಾಯ್ದೆಯೂ ಜಾರಿಯಲ್ಲಿತ್ತು. ಎಷ್ಟೆಂದರೂ ಉಂಡೆ ಕೊಡಿಸುವ ಕೃಷ್ಣಯ್ಯ ನಮಗೂ ಪ್ರೀತಿಯೇ ಅಂದ್ಕಳಿ. ಆದರೂ ಚಪ್ಪರದಲ್ಲಿ ಅಲ್ಲಲ್ಲಿ ಕಣ್ಣುಮಿಟುಕಿಸಿ ಜೋತಾಡುವ ಎಳೆಯ ಸೌತೇಮಿಡಿಗಳು ನಮ್ಮನ್ನು ಕೃಷ್ಣಾಷ್ಟಮಿಗೂ ಮೊದಲೇ ತಮ್ಮತ್ತ ಕರೆದುಬಿಡುತ್ತಿದ್ದವು! ಕೃಷ್ಣಯ್ಯ ಬೆಣ್ಣೆಕದ್ದ ಕಥೆಯನ್ನೆಲ್ಲಾ ಕೇಳುತ್ತಿದ್ದ ನಮಗೆ ಸೌತೇ ಮಿಡಿಗಳಲ್ಲಿ ಕೆಲವನ್ನು ಹಾರಿಸಿಬಿಟ್ಟರೆ ಎಂಬ ಆಲೋಚನೆ ಬಂದಿದ್ದೇ ತಡ ಅದನ್ನು ಪ್ರಾಯೋಗಿಕವಾಗಿ ಮಾಡಿ ಆಮೇಲೆ ಅದನ್ನೇ ಪಕ್ಕಾಮಾಡಿ ಲೆಕ್ಕತಪ್ಪಿಸಿ ತಿನ್ನುವುದೂ ಆಗೋಯ್ತು. ಹಾವುರಾಣಿ, ಹಸಿರು ಬಣ್ಣದ ಕಣ್ಕುಟ್ಟುವ ಹಾವು ಇವೆಲ್ಲಾ ಚಪ್ಪರದ ಬಳಗದವರು ಎನ್ನಬೇಕೇನೋ. ಅವುಗಳಮೇಲೆ ತಪ್ಪು ಹೊರಿಸಿ ಎಲ್ಲೋ ಅವುಗಳೇ ಎಳೆಯ ಮಿಡಿಗಳನ್ನು ಕಚ್ಚಿ ಉದುರಿಸಿದವೇನೋ ಎಂಬಂತೇ ಅಜ್ಜಿಯೆದುರು ಸಂಭಾವಿತ್ಗೆ ಮೆರೆದ ಜನ ನಾವು...ಎಷ್ಟೆಂದರೂ ಮಕ್ಕಳಲ್ಲವೇ? ಹಾಗಂತ ಮಿಡಿಗಳನ್ನು ಲಪಟಾಯಿಸುವಾಗ [ ಬೇಡ ಬೇಡ 'ಲಪಟಾಯಿಸು' ಶಬ್ದ ಯಾಕೋ ಹೆಚ್ಚಿನ ತೂಕದ್ದು ಎನಿಸುತ್ತದೆ ಸಾಮಾನ್ಯದ್ದನ್ನೇ ಬಳಸೋಣ], ಹಾರಿಸುವಾಗ ಒಂದೆರಡು ಬಾರಿ ಅನುಮಾನಾಸ್ಪದವಾಗಿ ಬಂದ ಅಜ್ಜಿಕೈಗೆ ಸಿಕ್ಕಾಕಿಕೊಂಡು ಮುಖ ಬಿಳಿಚಿಕೊಂಡ ವ್ಯಕ್ತಿಗಳೂ ನಾವೇ ಬಿಡಿ! ಆಮೇಲೆ ನಮಗೆ ಮಿಡಿಸೌತೆ ಪ್ರೀತಿಯೆಂಬ ಕಾರಣಕ್ಕೆ ಆಗಾಗ ಕೆಲವು ಮಿಡಿಗಳು ಅಜ್ಜಿಯ ಕೃಪೆಯಿಂದ ದೊರೆಯುತ್ತಿದ್ದವು.

ಚಪ್ಪರದಮೇಲೆ ಕಣ್ಣುಕುಟ್ಟುವ ಹಸಿರು ಹಾವು ಇರುತ್ತಿತ್ತಲ್ಲಾ ಅದು ತೆಳ್ಳತೆಳ್ಳಗೆ ಇರುವ ಸೈಜ್ ಜೀರೋ ಹಾವು! ಮನುಷ್ಯರ ಕಣ್ಣಿಗೇ ಗುರಿಯಿಟ್ಟು ಹಾರಿಬಿಡುತ್ತದಂತೆ ಅದು, ಅಪ್ಪಾ ನಮೆಗೆಲ್ಲಾ ಅದನ್ನು ಕಂಡರೇ ಒಂಥರಾ ಹೆದರಿಕೆ, ಆದರೂ ಸಣ್ಣಗಿರುವುದರಿಂದಲೋ ಏನೋ ತೀರಾ ಜಾಸ್ತಿ ಭಯವೂ ಆಗುತ್ತಿರಲಿಲ್ಲ. ಅಜ್ಜಿಯ ಕಥೆಗಳಲ್ಲಿ ಹಾವು ಚೇಳು ಉಡಮೊದಲಾದ ಹಲವಾರು ಜೀವ ವೈವಿಧ್ಯಗಳು, ಸರೀಸೃಪಗಳು, ಸಸ್ತನಿಗಳ ವರ್ಣನೆಯಿರುತ್ತಿತ್ತು. ಇಂತಿಂಥಾ ಪ್ರಾಣಿ ಇಂತಿಂಥಲ್ಲಿ ವಾಸವಿರುತ್ತದೆ, ಅದು ಇಂತಿಂಥಾ ಆಹಾರ ತಿನ್ನುತ್ತದೆ ಎಂಬೆಲ್ಲಾ ಮಾಹಿತಿ ನಮಗೆ ಸಿಕ್ಕಿಬಿಡುತ್ತಿತ್ತು. ಮೊದಲಾಗಿ ಶತಪದಿ ಸಹಸ್ರಪದಿ ಹೊರಗಡೆ ಜಗುಲಿಗೆ ದೌಡಾಯಿಸಿದಾಗ ಹೆದರಿದ್ದ ನಾವು ಆಮೇಲಾಮೇಲೆ ಸಣ್ಣ ಸಾಮಾನ್ಯ ಪ್ರಾಣಿಗಳಿಗೆಲ್ಲಾ ಕ್ಯಾರೇ ಮಾಡ್ತಿರಲಿಲ್ಲ ಬಿಡಿ. ಜಗುಲಿ ಕಟ್ಟೆಗೆ ಹರೆದು ಬರುವ ಚೋರಟೆ[ಸಹಸ್ರಪದಿ] ಹಿಸ್ಗ[ಬಸವನ ಹುಳು] ಇವನ್ನೆಲ್ಲಾ ಕಾಲಲ್ಲೇ ಸರಿಸಿ ಬಿಸಾಕಿದ ಅಸಾಮಾನ್ಯ ಧೈರ್ಯಶಾಲಿಗಳು ನಾವು, ಏನ್ತಿಳ್ಕೊಂಡಿದೀರಿ !

ಹೊಯ್ಸಳರಿಗಿಂತಲೂ ನಮ್ಮ ತೂಕ ತುಸು ಜಾಸ್ತಿಯೇ ಎಂದುಕೊಳ್ಳುತ್ತಿರುವಾಗಲೇ ಹೊಸ ಸಂಗತಿಯೊಂದು ನಮ್ಮ ಉಡದಾರವನ್ನೇ ಸಡಿಲುಮಾಡಿಬಿಟ್ಟಿತ್ತು ! ಮೂರ್ತಜ್ಜನ ಮನೆ ಅನಂತ ಅತ್ಯಂತ ಸ್ಫುರದ್ರೂಪಿ ಹುಡುಗ. ಓರಗೆಯಲ್ಲಿ ನಮಗಿಂತ ತುಸು ಹಿರಿಯ. ಶಾಲೆಯಲ್ಲಿ ನಮಗೂ ಅವನಿಗೂ ನಾಕು ಕ್ಲಾಸುಗಳ ಅಂತರ; ನಾವೆಲ್ಲಾ ಒಂದನೇ ತರಗತಿ ಇದ್ದಾಗ ಅತ ೫ನೇ ತರಗತಿ ಓದುತ್ತಿದ್ದ. ಹೀಗೇ ಆಡುತ್ತಾ ಇದ್ದವ ಬಚ್ಚಲುಮನೆಯಲ್ಲಿ [ಹಳ್ಳಿಯ ಮನೆಗಳಲ್ಲಿ ಬಚ್ಚಲು ಮನೆ ಮನೆಯ ಹೊರಗಡೆ ಪ್ರತ್ಯೇಕ ಜಾಗದಲ್ಲಿರುತ್ತಿತ್ತು. ಅಲ್ಲಿ ರಾತ್ರಿ ವಿದ್ಯುದ್ದೀಪವಾಗಲೀ ಮತ್ಯಾವುದೇ ದೊಡ್ಡ ಬೆಳಕಿನ ವ್ಯವಸ್ಥೆಯಾಗಲೀ ಇರುತ್ತಿರಲಿಲ್ಲ. ಹಗಲು ಹೊತ್ತಿನಲ್ಲೇ ಮೋಡ ಕಪ್ಪುಗಟ್ಟಿದಾಗ ಒಳಗಡೆ ಕತ್ತಲೆ ಇರುತ್ತಿತ್ತು.] ಗೋಡೆಯಲ್ಲಿ ಬಿಲವೊಂದಿತ್ತಂತೆ. ಅದರಲ್ಲಿ ಕಡ್ಡಿ ಹಾಕಿ ಆಡುತ್ತಿರುವಾಗ ಏನೋ ಕಚ್ಚಿದಂತಾಗಿ ಕೂಗಿಕೊಂಡನಂತೆ. ಪಾಲಕರು ಬಂದು ನೋಡುತ್ತಾರೆ ಹಾವುಕಡಿದ ಗುರುತು ಆತನ ಬೆರಳಿನ ಮೇಲೆ ಮೂಡಿತ್ತು.

ಮರುಕ್ಷಣ ಕಂಗಾಲಾದ ಪಾಲಕರು ಮಗನನ್ನು ದೂರದ ಆಸ್ಪತ್ರೆ [ಆಗಷ್ಟೇ ತಾಲೂಕು ಪ್ರದೇಶದಲ್ಲಿ ಕ್ಲಿನಿಕ್ಕುಗಳು ಆರಂಭವಾಗಿದ್ದವು]ಎತ್ತಿಕೊಂಡು ಹೋದರು. ಬಾಡಿಗೆ ವಾಹನ ತರಿಸಿ ಅದರಲ್ಲಿ ಹೋಗುವ ವರೆಗೆ ಅನಂತನ ಮೈ ಕಪ್ಪುಗಟ್ಟುತ್ತಾ ಸಾಗಿತ್ತು. ಆಸ್ಪತ್ರೆಗೆ ಹೋದ ಪಾಲಕರು ವೈದ್ಯರನ್ನು ಕಂಡು ಏನೇ ಪ್ರಯತ್ನಮಾಡಿದರೂ ನೊರೆಯುಗುಳಿದ ಅನಂತ ಅನಂತದಲ್ಲಿ ಲೀನವಾಗೇಬಿಟ್ಟ. ಸತ್ತ ಅನಂತನ ಕಳೇಬರ ಹೊತ್ತು ಊರಿಗೆ ಮರಳಿದ ಪಾಲಕರ ರೋದನ ಮತ್ತು ವೇದನೆ ನಮಗೆಲ್ಲಾ ಆ ಕಾಲಕ್ಕೆ ಅಷ್ಟೆಲ್ಲಾ ಅರ್ಥವಾಗದ್ದು. ರೋಷದಿಂದ ಊರಜನ ಬಚ್ಚಲುಮನೆಯ ಗೋಡೆಯನ್ನು ಅಗೆದು ಅಡಗಿದ್ದ ಕೃಷ್ಣಸರ್ಪ[ಕಾಳಿಂಗ]ವನ್ನು ಹೊರಗೆಳೆದು ಕೊಂದೇಬಿಟ್ಟರಂತೆ. ಊರಲ್ಲಿ ಆಗೆಲ್ಲ ಒಬ್ಬರಿಗೊಬ್ಬರು ತುಂಬಾ ಆಪ್ತರಾಗಿದ್ದರು; ಈಗಿನಂತೇ ಬೀಜೇಪಿ, ಜೇಡಿಎಸ್ಸು, ಕಾಂಗ್ರೆಸ್ಸು ವಗೈರೆ ಇರಲಿಲ್ಲ. ನೋವು-ನಲಿವುಗಳಲ್ಲಿ ಪರಸ್ಪರ ಭಾಗಿಗಳು, ಊರಮಂದಿ ಪರಸ್ಪರ ಕಷ್ಟಸುಖಕ್ಕೆ ಆಗಿಬರುತ್ತಿದ್ದರು. ಊರಜನೆರಲ್ಲಾ ಸೇರಿ ಸತ್ತ ಅನಂತನಿಗೆ ಅಂತಿಮ ಗೌರವವನ್ನೂ ಸಮರ್ಪಿಸಿ ಆತನ ಕಳೇಬರವನ್ನು ನೆಲದಲ್ಲಿ ಹೂಳಿದರು ಎಂಬುದು ಮಕ್ಕಳಾದ ನಮಗೆ ತಿಳಿದ ಸಂಗತಿ.

ಈ ಲೋಕದಲ್ಲಿ ಅರಳಬೇಕಾಗಿದ್ದ ಸುಂದರ ಮಗುವನ್ನು ಹಾವೊಂದು ಬಲಿಪಡೆದಿತ್ತು. ಅಲ್ಲಿ ಮಗುವಿನ ತಪ್ಪೂ ಇರಲಿಲ್ಲ, ಹಾವಿನ ತಪ್ಪೂ ಇರಲಿಲ್ಲ. ಪಾಲಕರ ನಿರ್ಲಕ್ಷ್ಯ ಎನ್ನಲೂ ಬರುವುದಿಲ್ಲ; ಅದು ವಿಧಿಯಿಚ್ಛೆ ಅಷ್ಟೇ. ಹಾವು ತನ್ನನ್ನು ರಕ್ಷಿಸಿಕೊಳ್ಳಲು ಬಿಲದಲ್ಲಿ ಹುದುಗಿತ್ತು, ಮಗು ಆಟವಡುತ್ತಾ ಸಹಜವಾಗಿ ಬಿಲಕ್ಕೆ ಕೋಲು ತೂರಿತ್ತು, ಮಗು ಆಡಿಕೊಂಡಿದೆ ಎಂದು ಸುಮ್ಮನಿದ್ದ ಪಾಲಕರು ತಂತಮ್ಮ ನಿತ್ಯದ ಕೆಲಸದಲ್ಲಿ ತೊಡಗಿಕೊಂಡಿದ್ದರು--ನೀವೇ ಹೇಳಿ ಇಲ್ಲಿ ಯಾರದು ತಪ್ಪು? ಅಂತೂ ನಮ್ಮೆಲ್ಲರ ಪ್ರೀತಿಯ ಗೆಳೆಯ ಅನಂತ ಕಾಣದ ಲೋಕಕ್ಕೆ ಮರಳಿಯೇ ಬಿಟ್ಟಿದ್ದ. ನಿನ್ನೆಯವರೆಗೆ ಕಂಡಿದ್ದ, ಒಟ್ಟಿಗೇ ಶಾಲೆಯ ಬಿಡುವಿನಲ್ಲಿ ಆಡಿದ್ದ ಅನಂತ ಸತ್ತುಹೋದ ಎಂಬ ಸಂಗತಿ ಜೀರ್ಣಮಾಡಿಕೊಳ್ಳಲು ಎಳೆಯ ಮನಸ್ಸಿನ ನಮಗೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಬಹಳ ಕಾಲ ಆ ನೆನಪು ನಮಗೇ ಕಾಡುತ್ತಿತ್ತು-ಈಗಲೂ ಬರೆಯುತ್ತಿದ್ದೇನೆ ಎಂದಮೇಲೆ ನಿಮಗೆ ಅರ್ಥವಾಗಬೇಕು!

ಬದಲಾದ ಇಂದಿನ ಪರಿಸರದಲ್ಲಿ ಪೇಟೆ ಪಟ್ಟಣಗಳಲ್ಲಿ ವರ್ಗಾ ವರ್ಗೀ ಆಗಿಹೋಗುವ ಸರಕಾರೀ ಯಾ ಖಾಸಗೀ ನೌಕರರ ಚಿಕ್ಕಮಕ್ಕಳಲ್ಲಿ ಕಲಿಯುವ ಶಾಲೆಗಳನ್ನು ಅನಿವಾರ್ಯವಾಗಿ ಬದಲಾಯಿಸಿದಾಗ, ಅನ್ಯೋನ್ಯ ಸ್ನೇಹಿತರು ಅಗಲಬೇಕಾಗಿ ಬಂದಾಗ ಹೇಳಿಕೊಳ್ಳಲಾಗದ ನೋವು ಅನುಭವಿಸಬೇಕಾಗಿ ಬರುತ್ತದೆ. ನೋವು ದೊಡ್ಡದಲ್ಲದಿದ್ದರೂ ಮಕ್ಕಳ ಮನಸ್ಸಿನಲ್ಲಿ ಅದು ಕಾಡುತ್ತದೆ, ಮುಂದೆ ಜೀವನದ ದಾರಿಯಲ್ಲಿ ಎಲ್ಲೋ ಒಮ್ಮೆ ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರು ಸಿಕ್ಕಿದರೆ ಸಿಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಮಕ್ಕಳಲ್ಲಿ ಜಾತಿ-ಮತಗಳ ಗೊಂದಲವಿರುವುದಿಲ್ಲ. ಶ್ರೀಮಂತ, ಬಡವ ಎಂಬ ಭಾವನೆಗಳೂ ಇರುವುದಿಲ್ಲ. ಅವರೆಲ್ಲಾ ಒಂದೇ--ಆಡಬೇಕೋ ಆಡಬೇಕು, ಒಟ್ಟಾಗಿ ಇದ್ದು ಸಂತಸಪಡಬೇಕು. ಆವೆಮಣ್ಣಲ್ಲಿ ಮನೆ ಕಟ್ಟಬೇಕು, ಅದೇ ಮಣ್ಣಿನಲ್ಲಿ ಉಂಡೆ, ಕಜ್ಜಾಯ[ಅತ್ರಾಸ], ಕೋಡುಬಳೆ, ಚಕ್ಕುಲಿ ಎಲ್ಲವನ್ನೂ ಮಾಡಬೇಕು. ವೈದ್ಯ-ರೋಗಿ, ಕಳ್ಳ-ಪೋಲೀಸ್, ಅವಲಕ್ಕಿ-ತವಲಕ್ಕಿ, ಹಾಣೆಗೆಂಡೆ[ಚಿನ್ನಿದಾಂಡು], ಹುತುತು[ಕಬಡ್ಡಿ] ಖೋಖೋ, ಮರಕೋತಿ ಹೀಗೇ ಆಡಿದ ಯಾವುದನ್ನೂ ಮರೆಯಲಾರವು. ವಿಶಾಲಸಾಗರ ದಡದ ಮರಳಿನಲ್ಲಿ ಬೆರಳಿಂದ ಹೆಸರನ್ನು ಕೊರೆದು ಅಲೆಬಂದು ಅದು ಅಳಿಸುವುದನ್ನು ನೋಡುವ ಕೌತುಕ ಮಿಳಿತ ಆನಂದ ಬಲಿತ ಮನಸ್ಸುಗಳಲ್ಲಿ ಇರುವುದಿಲ್ಲ! ಹತ್ತುಸಾವಿರದ ಕಂತೆಯನ್ನು ಆಟದ ಸಾಮಾನುಗಳ ಪಕ್ಕಕ್ಕೆ ಇಟ್ಟರೆ ಅವು ಅದನ್ನು ಮೂಸೂ ನೋಡುವುದಿಲ್ಲ, ಮಕ್ಕಳಿಗೆ ದುಡ್ಡಿನ ವ್ಯಾಮೋಹ ಇರುವುದಿಲ್ಲ. ಮಕ್ಕಳು ಎಂದಿದ್ದರೂ ಮಕ್ಕಳೇ. ಬಾಲ್ಯಕಾಲದಲ್ಲಿ ಕೃಷ್ಣ-ಕುಚೇಲ ಗೆಳೆಯರಾಗಿದ್ದುದು ಬಡತನಕ್ಕೆ ಪರಮೋಚ್ಚ ಉದಾಹರಣೆಯಾದ ಸುದಾಮನ ಹಿಡಿಯವಲಕ್ಕಿಯನ್ನೇ ತಿಂದು ಸ್ವರ್ಣ ಸೌಧವನ್ನೇ ಅನುಗ್ರಹಿಸಿದ ಗೆಳೆಯ ಕೃಷ್ಣನನ್ನು ಯಾರುತಾನೇ ಮರೆಯಲು ಸಾಧ್ಯ?

ಈಗಿನ ಸಮಾಜದಲ್ಲಿ ಜನ ಬಡಿದಾಡುವುದನ್ನು ನೋಡಿದರೆ ಒಮ್ಮೊಮ್ಮೆ ಹೀಗೊಂದು ಅನಿಸಿಕೆಯ ಉದ್ಭವವಾಗುತ್ತದೆ :

ಇರುವುದೊಂದೇ ಭೂಮಿ ಉರಿವುದೊಂದೇ ದೀಪ[ಅಗ್ನಿ]
ಹರಿವುದೊಂದೇ ನೀರು ತಿರುವುದದೆ ಗಾಳಿ
ತೆರೆ ಬೆಳ್ಳಿ ಬೆಳಕಿನದು ಆಗಸದ ಅವಕಾಶ
ಮರೆತವಗೆ ಮತಭೇದ | ಜಗದಮಿತ್ರ

ಸರಿಯಾಗಿರುವಾಗ ಮನುಷ್ಯ ಮನುಷ್ಯರಲ್ಲಿ ಜಾತಿ-ಮತ ಜನಾಂಗಗಳೆಂಬ ಹಲವು ಭೇದಗಳನ್ನು ಕಾಣುತ್ತೇವೆ. ನಿಸರ್ಗವೇ ತಿರುಗಿಬಿದ್ದಾಗ ಎಲ್ಲವನ್ನೂ ಬಿಟ್ಟು ಮನುಷ್ಯ ಮನುಷ್ಯತ್ವಕ್ಕೆ ಬೆಲೆಕೊಡುತ್ತಾನೆ. ಅಲ್ಲೀವರೆಗೂ ಹಾರಾಟ ತಪ್ಪಿದ್ದಲ್ಲ. ಅಲೆಕ್ಸಾಂಡರ್ ಇಡೀ ಜಗತ್ತನ್ನೇ ಗೆದ್ದವನಾದರೂ ಆತನ ಮನಸ್ಸನ್ನು ಗೆಲ್ಲಲು ಆತನಿಂದಲೇ ಆಗಲಿಲ್ಲ. ಈ ಲೋಕದ ಜಗಳ, ದೊಂಬಿ, ಗಲಾಟೆ, ಮುಷ್ಕರ, ಧರಣಿ, ಹಿಂಸೆ ಈ ಎಲ್ಲಾ ಮೂರು ಪ್ರಮುಖ ಉದ್ದೇಶಗಳ ಸುತ್ತ ಘಟಿಸುತ್ತವೆ. ಹೆಣ್ಣು, ಹೊನ್ನು, ಮಣ್ಣು--ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಅದನ್ನು ಬಿಡಲು ಸಾಮಾನ್ಯ ಮನುಷ್ಯರಿಂದ ಸಾಧ್ಯವಾಗುವುದಿಲ್ಲ.

ಗೆಳೆತನದ ಪರಿಧಿಯಲ್ಲಾದರೂ ಈ ವಿಷಯಾಸಕ್ತಿಗೆ[ಇಂದ್ರಿಯಾಸಕ್ತಿಗೆ] ಕಡಿವಾಣ ಬೀಳಲಿ, ಸ್ನೇಹಿತರೇ ಅಧಿಕವಾದಾಗ ದ್ವೇಷ-ವೈಷಮ್ಯ ಕಮ್ಮಿಯಾಗುತ್ತದೆ ಎಂಬ ಭಾವನೆ ಮೂಡುತ್ತದೆ. ಸಹಜವಷ್ಟೇ ? ನನ್ನೆಲ್ಲಾ ಮಿತ್ರರಿಗೂ ಸ್ನೇಹಿತರ ದಿನದ ಶುಭಾಶಯಗಳು, ಧನ್ಯವಾದಗಳು.